: ಸೌಜನ್ಯ “ಬೆಳಗು”

ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಯಾವ ಲೌಕಿಕ ಭೋಗಭಾಗ್ಯವನ್ನು ಬಯಸಿ ಪಡೆದವರಲ್ಲ ; ಆದರೆ ಅವರ ಅಧ್ಯಾತ್ಮ ಪರಿವಾರದಲ್ಲಿಯ ಅವರ ಶಿಷ್ಯ ಸಂಪತ್ತು ಅಪರಿಮಿತವಾದುದು, ಲೋಕೋತ್ತರವಾದುದು. ಅವರು ತಮ್ಮ ಸಮಾಜಸೇವೆಯ ಕನಸನ್ನು ಲೋಕಹಿತಸಾಧನೆಯ ಆದರ್ಶವನ್ನೂ ಪೂರ್ಣ ಮಾಡುವ ಹಿರಿಯ ಹೊಣೆಗಾರಿಕೆಯನ್ನು ಮಂದಿರದ ಸಾಧಕರ ಮೇಲೆ ಕಾರ್ಯಕರ್ತರ ಮೇಲೆ ಬಿಟ್ಟು ಬಯಲಾದರು. ಅವರ ಸೇವಾಭಾವದ ಕಮ್ಮಟವಾದ ಮಂದಿರದಲ್ಲಿ ದೀಕ್ಷಿತರಾದ ಶ್ರೀಗಳವರು, ಸಂಗೀತಗಾರರು, ಕಲಾವಂತರು, ಅನುಭವಿಗಳು, ಸಂಶೋಧಕರು, ಶಾಸ್ತ್ರಿಗಳು ಶಿಕ್ಷಕರು ಮುಂತಾಗಿ ದಕ್ಷರಾದ ಕಾರ್ಯಕರ್ತರು ಈ ಲೋಕಸೇವೆಯ ಭಾರವನ್ನು ಹೊತ್ತು ಅನೇಕ ಮುಖವಾಗಿ  ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಇವರ ರೂಪದಲ್ಲಿ ಶ್ರೀಗಳವರ ಕಾರ್ಯಶಕ್ತಿ ಪ್ರಭೆಯ ಕಿರಣಗಳು ಅಲ್ಲಲ್ಲಿ ಮೂಡಿ ನಾಡಬಾನನ್ನು ಬೆಳಗಿದ್ದಾವೆ. ಮಂದಿರದ ಫಲಿತಾಂಶಗಳ ಪ್ರತ್ಯಕ್ಷ ದಿಗ್ದರ್ಶನವನ್ನು ನಾಡಿನ ಸರ್ವತೋಮುಖವಾದ ಏಳ್ಗೆಗೆ ವಿನಿಯೋಗವಾಗುತ್ತಿರುವ ಶ್ರೀಗಳವರ ಈ ಶಿಷ್ಯ ಸಂಪತ್ತಿನಲ್ಲಿ ಕಾಣಬಹುದಾಗಿದೆ.

(ಕ್ರಿ. ಶ. ೧೯೦೯)

.

೧).ಸವದತ್ತಿಯ ಶ್ರೀ ನಿ. ಪ್ರ. ಅಪ್ಪಯ್ಯ (ಶಿವಲಿಂಗ) ಸ್ವಾಮಿಗಳು: ಸವದತ್ತಿಯ ಶ್ರೀ .ನಿ ಪ್ರ.ಅಪ್ಪಯ್ಯ ಸ್ವಾಮಿಗಳು ಹಾನಗಲ್ಲ ಶ್ರೀಗಳವರ ಶಿಷ್ಯ ಸಂಪತ್ತಿಯ ಭಾಂಡಾರದಲ್ಲಿ  ಮುಕುಟಮಣಿಯಾಗಿ ರಾರಾಜಿಸಿದರು. ಅವರು ಮುಧೋಳ ಸ್ವತಂತ್ರಿ ಮಠದಲ್ಲಿ ಬಿದರಿ ಕುಮಾರ ಶಿವಯೋಗಿಗಳ ಕರುಣೆಯ ಕಂದರಾಗಿ ಶಾ. ಶ. ೧೮೧೬ನೆಯ ಕಾರ್ತಿಕ ಶು. ೧ನೇ ಶುಭದಿನ ಜನಿಸಿದರು. ವಟು ಮಹಾಲಿಂಗಾರ್ಯ ಗುರುಪುತ್ರನಾಗಿಯೆ ಬೆಳೆದನು . ಬಾಲ್ಯದಲ್ಲಿಯೆ ಬಿದರಿ ಶ್ರೀಗಳವರು ಮಹಾಲಿಂಗಾರ್ಯನನ್ನು ತಮಗೆ ಬೇಕೆಂದು ಕರೆತಂದರು. ‘ಅಪ್ಪಯ್ಯ’ನೆಂದು ಪ್ರೀತಿಯಿಂದ ಕಂಡರು. ಅಪ್ಪಯ್ಯ ದೇವರ ಶಿಕ್ಷಣದ ಭಾರ ಹಾನಗಲ್ಲ ಶ್ರೀಗಳವರದಾಯಿತು. ಅಪ್ಪಯ್ಯ ದೇವರು ಕೆಲವು ವರ್ಷ ಹಾವೇರಿಯ ಹುಕ್ಕೇರಿಮಠದ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ೧೯೦೯ ರಲ್ಲಿ ಶಿವಯೋಗ ಸಾಧಕರಾದರು. ೧೫ ವರ್ಷ ಶಿವಯೋಗ ಮತ್ತು ಶಿವಾನುಭವ ಶಿಕ್ಷಣ ಪಡೆದರು. ಹಾವೇರಿ ಶ್ರೀಗಳವರಿಂದ ಅನುಗ್ರಹ ಹೊಂದಿ ಕಾಲು ನಡಿಗೆಯಿಂದ ಎಡೆಯೂರ ಶ್ರೀ ಕ್ಷೇತ್ರದ ಯಾತ್ರೆಯನ್ನು ಮಾಡಿ ಶ್ರೀ ಸಿದ್ಧಲಿಂಗ ಶಿವಯೋಗಿಯ ದರ್ಶನ ಪಡೆದರು. ಅಂದಿನಿಂದ ಶಿವಯೋಗದಲ್ಲಿ ಸಿದ್ದಿ ಪಡೆಯುವ ಹಂಬಲ ಬಲವಾಯಿತು. ಸವದತ್ತಿಯ ಕಲ್ಮಠಕ್ಕೆ  ಅಧಿಕಾರಿಗಳಾದ ಮೇಲೆ ಬಿದರಿ ಗುರುವರ್ಯರು ತಪಗೈದು ಸಿದ್ಧಿಪಡೆದ ನವಿಲುತೀರ್ಥ’ದಲ್ಲಿ ಅನುಷ್ಠಾನ ಮಾಡಿದರು. ಅವರ ಶಿವಯೋಗ ಸಿದ್ಧಿಯನ್ನು ಕಂಡು ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರಿಗೆ ಅಮಿತಾನಂದವಾಯಿತು. ಅಪ್ಪಯ್ಯ ಸ್ವಾಮಿಗಳು ಗುರುಪುತ್ರರಾಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರದೂ ಅಪಾರವಾದ ಪ್ರೇಮ. ಹಾವೇರಿ ಶ್ರೀಗಳವರು ಅವರ ನೆನಹಿಗಾಗಿಯೇ ‘ಶಿವಲಿಂಗ ವಿಜಯ’ ಮುದ್ರಣ ಮಂದಿರವನ್ನು ಸ್ಥಾಪಿಸಿದ್ದರಂತೆ ಎಳೆಯ ವಯಸ್ಸಿನಲ್ಲಿಯೆ ಶ್ರೀ ಅಪ್ಪಯ್ಯ ಸ್ವಾಮಿಗಳ ಜೀವನ ಫಲ ಶಿವಯೋಗ ನಿಷ್ಪತ್ತಿ ಪಡೆದು ಪರಿಪಕ್ವವಾಗಿತ್ತು, ಅದನ್ನು ಶಕೆ ೧೮೪೬ ಮಾರ್ಗಶಿರ ಶು. ೭(ಕ್ರಿ.ಶ.೧೯೨೪) ರಂದು ಶಿವ ತನಗೆ ಬೇಕೆಂದು ಎತ್ತಿಕೊಂಡ.

೨). ಗುಳೇದಗುಡ್ಡದ ಶ್ರೀ ನಿ. ಪ್ರ. ಒಪ್ಪತ್ತಿನ ಸ್ವಾಮಿಗಳು :ಗುಳೇದಗುಡ್ಡದ ಶ್ರೀ ನಿ.ಪ್ರ. ಒಪ್ಪತ್ತಿನ ಸ್ವಾಮಿಗಳು ಮಂದಿರದಲ್ಲಿ ಶಿಕ್ಷಣ ಪಡೆದು ಒಪ್ಪತ್ತೇಶ್ವರ ಮಠಕ್ಕೆ ಅಧಿಕಾರಿಗಳಾಗಿ ಹೋದ ಮೇಲೆಯೂ ಸಂಸ್ಥೆಯ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದರು. ಅವರು ಪ್ರತಿವರ್ಷ ಭಿಕ್ಷೆ ಮಾಡಿ ಮಂದಿರದ ದಾಸೋಹ ಕಾರ್ಯಕ್ಕೆ ನೆರವಾಗಿದ್ದರು. ಶಿವರಾತ್ರಿಯ ಉತ್ಸವದಲ್ಲಿ ಅವರ ನೇತೃತ್ವದಲ್ಲಿ ದಾಸೋಹದಲ್ಲಿ ಶಿವಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದ್ದಿತು. ಅವರು ಖಿಲವಾದ ತಮ್ಮ ಮಠವನ್ನು ಬಹಳ ಅಭಿವೃದ್ಧಿಗೆ ತಂದಿದ್ದರು.

೩) ಬಾಗಲಕೋಟೆಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು:ಬಾಗಲಕೋಟೆಯ ಶ್ರೀ ನಿ.ಪ್ರ .ಶಿವಮೂರ್ತಿ ಸ್ವಾಮಿಗಳು ಚರಂತಿಮಠದ ಅಧಿಕಾರಿಗಳಾಗಿ ಮಂದಿರದಲ್ಲಿ ೨೦ ವರ್ಷ ಶಿಕ್ಷಣ ಪಡೆದವರು, ಹಾನಗಲ್ಲ ಶ್ರೀಗಳವರ ಅಪ್ಪಣೆಯಂತೆ ಅವರು ಅನಂತಪುರ-ಕೆಳದಿ ಪ್ರಾಂತದಲ್ಲಿ ಕೀರ್ತನ- ಪ್ರವಚನಗಳನ್ನು ಮಾಡಿಸಿ ಶಿವಾನುಭವ ಪ್ರಸಾರವನ್ನು ಕೈಕೊಂಡರು. ಕಪನಳ್ಳಿಯಲ್ಲಿ ಅನುಷ್ಠಾನವನ್ನು ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದಿದ್ದರು. ಅನಂತಪುರದ ಶ್ರೀ ಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ  ಆ ಸಂಸ್ಥಾನಮಠದ ವ್ಯವಸ್ಥೆಯನ್ನು ಕೆಲವು ವರ್ಷ ನೋಡಿಕೊಂಡಿದ್ದರು; ಅದರ ಅಭಿವೃದ್ಧಿಯನ್ನು ಮಾಡಿದರು. ಬಾಗಲಕೋಟೆಯಲ್ಲಿರುವ ‘ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ’ ಕ್ಕೆ ೮-೧೦ ಸಾವಿರ ರೂಪಾಯಿ ಬೆಲೆ ಬಾಳುವ ತಮ್ಮ ಮಠದ ಜಮೀನನ್ನು ದಾನವಾಗಿ ದಯಪಾಲಿಸಿ ವಿದ್ಯಾದಾನದ ಕಾರ್ಯಕ್ಕೆ ಪ್ರೋತ್ಸಾಹವಿತ್ತರು. ಶ್ರೀಗಳವರು ಯಾವಾಗಲೂ ಶಿವಯೋಗಮಂದಿರದ ಅಭಿವೃದ್ಧಿಯ ಕಾರ್ಯಗಳಲ್ಲಿ ಅಭಿಮಾನದಿಂದ ಸಹಕರಿಸುತ್ತಿದ್ದರು. ಶ್ರೀಗಳವರೆ ಬಾಗಲಕೋಟೆಯ ಕರವೀರಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಎರಡು ಮಠಗಳ ಪ್ರಗತಿಯ ಬಗ್ಗೆ ಉಪಾಯಗಳನ್ನು ಕೈಕೊಂಡಿದ್ದರು. ಅನಿರೀಕ್ಷಿತವಾಗಿ ಕ್ರಿ.ಶ. ೧೯೪೭ರಲ್ಲಿ ಲಿಂಗೈಕ್ಯರಾದರು.

)ಕಂಚುಕಲ್ಲ-ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು: ಕಂಚುಕಲ್ಲ -ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ದೊಡ್ಡಮಠದ ಅಧಿಕಾರಿಗಳಾಗಿದ್ದರು. ಜಿ. ಚಿಕ್ಕಮಗಳೂರ ಕಡೂರ ತಾಲೂಕಿನ ಕೆ. ಬಿದರೆಯ ದೊಡ್ಡಮಠ ಹೆಸರಾದ ಗುರುಪೀಠ. ಈ ಮಠದ ಅನೇಕ ತಪಸ್ವಿಗಳ ಪ್ರಾಚೀನ ಪರಂಪರೆಯಲ್ಲಿ ಲಿಂ. ಶ್ರೀ ದೊಡ್ಡಜ್ಜಯ್ಯನವರು ಬಹಳ ಕೀರ್ತಿ ಪಡೆದ ಮಹಿಮರು. ಅವರ ಉತ್ತರಾಧಿಕಾರಿಗಳೆ ಮರುಳಸಿದ್ದ ದೇವರು. ಅವರು ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಯೋಗವಿದ್ಯೆಯ ಶಿಕ್ಷಣ ಪಡೆದರು. ಷಟ್ಕರ್ಮಗಳಲ್ಲಿ ನಿಪುಣರಾಗಿ ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ರಲ್ಲಿ ನಾಶಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ತಾನದ ಯೋಗಿಗಳೆಲ್ಲ ಸೇರಿದ್ದರು. ಹಾನಗಲ್ಲ ಶ್ರೀಗಳವರು ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ಧಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ  ಯೋಗಸಾಧನೆಯನ್ನು ಕಂಡು ಅಪ್ರತಿಭರಾದರು; ಶ್ರೀ ಪಟ್ಟದ್ದೇವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು; ‘ಯೋಗರಾಜ’ರೆಂದು ಬಿರುದುಕೊಟ್ಟು ಮನ್ನಿಸಿದರು. ಮಂದಿರದ ಸಾಧಕರು ಯೋಗಸಿದ್ಧರಾಗಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲಬೇಕು. ಅವರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಕೂಡ ಆಶ್ಚರ್ಯಪಡುತ್ತಿದ್ದರು.

 ಅವರು ಶಿವಯೋಗದಲ್ಲಿಯೂ ಸಿದ್ಧಿಪಡೆದವರು. ಸಾವಿರಾರು ಜನ ಶಿಷ್ಯರಿಗೆ ಶಿವದೀಕ್ಷೆಯನ್ನು ದಯುಪಾಲಿಸಿದರು. ಎಡಹಳ್ಳಿಯ ಶ್ರೀ ಮಲ್ಲಪ್ಪ ದೇಸಾಯರಿಗೆ ದೀಕ್ಷಾಗುರುಗಳಾಗಿದ್ದರು. ಶ್ರೀ ಪಟ್ಟದ್ದೇವರು ಮಂದಿರದ ಸೇವೆಯನ್ನು ಮಾಡುತ್ತಲೆ ದಿನಾಂಕ ೨೭-೬-೧೯೩೧ ರಲ್ಲಿ ಗಿರಿಯಾಪುರ (ಜಿ. ಚಿಕ್ಕಮಗಳೂರು) ದಲ್ಲಿ ಲಿಂಗೈಕ್ಯರಾದರು.

೫)ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು:ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಕುಷ್ಟಗಿ ತಾಲೂಕಿನ ವ್ಯಾಕರಣನಾಳ ಮತ್ತು ಮುದಗಲ್ಲ ಹಿರೇಮಠಗಳ ಅಧಿಕಾರಿಗಳಾಗಿದ್ದರು. ಅವರು ಮಂದಿರದಲ್ಲಿಯೆ ಸಂಸ್ಕೃತ ಪ್ರೌಢಶಿಕ್ಷಣ ಪಡೆದು ಸಾಧಕರಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಂದಿರದ ಸಾಧಕರ ಮತ್ತು ವಟುಗಳ ಪಾಲಕರಾಗಿ ಒಳ್ಳೆ ಶಿಸ್ತಿನಿಂದ ವ್ಯವಸ್ಥೆಯನ್ನು  ನೋಡಿಕೊಂಡಿದ್ದರು. ಅವರು ಆಶುಕವಿಗಳಾಗಿದ್ದರು. ಸಂಸ್ಕೃತದಲ್ಲಿ ಅನೇಕ ಸ್ತೋತ್ರಪರ ಅಷ್ಟಕಗಳನ್ನು ರಚಿಸಿದ್ದಾರೆ. ಅವರು ಯೋಗಸಾಧನೆಯಲ್ಲಿಯೂ ಉತ್ತಮ ಪ್ರಗತಿಯನ್ನು ಪಡೆದಿದ್ದರು. ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯ ಮುಮುಕ್ಷುಗಳಿಗೂ ಯೋಗಸಾಧನೆ ಮತ್ತು ಧರ್ಮಗಳ ವಿಷಯವಾಗಿ ಬೋಧಿಸುವಷ್ಟು ದಕ್ಷರಾಗಿದ್ದರು. ಪುರಾಣ-ಪ್ರವಚನ ಪಟುಗಳಾಗಿದ್ದರು. ಹಾನಗಲ್ಲ ಶ್ರೀಗಳವರು ವ್ಯಾಕರಣಾಳ ಪಟ್ಟಾಧ್ಯಕ್ಷರ ಮೇಲೆಯೆ ಮಂದಿರದ ವ್ಯವಸ್ಥೆಯನ್ನು ವಹಿಸಿ ನಿಶ್ಚಿಂತರಾಗಿ ಭಿಕ್ಷೆಯಲ್ಲಿರುತ್ತಿದ್ದರು. ಸಂಸ್ಥೆಯ ಹಿತವೇ ತಮ್ಮ ಹಿತವೆಂದು ಭಾವಿಸಿ ನಿಸ್ಪೃಹವಾಗಿ ಸಂಸ್ಥೆಗೆ ಶ್ರಮಿಸುತ್ತಿದ್ದ ಶ್ರೀ ಪಟ್ಟಾಧ್ಯಕ್ಷರು ೧೯೧೯ ರಲ್ಲಿ ಇನ್‌ಫ್ಲ್ಯಎಂಜಾದಿಂದ ಲಿಂಗೈಕ್ಯರಾದರು. ಅವರ ಗದ್ದುಗೆ ಮಂದಿರದಲ್ಲಿಯೇ ಇದೆ.

೬) ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು: ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ಗವಿಮಠದ ಅಧಿಪತಿಗಳು. ಅವರು ನವಿಲುಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಜನ್ಮತಾಳಿ ನವಿಲುಗುಂದ ಗವಿಮಠಾಧೀಶರಾದ ಲಿಂ. ಸಿದ್ದಲಿಂಗ ಸ್ವಾಮಿಗಳ ಕೃಪಾಬಲದಿಂದ ಶಿವಯೋಗ ಮಾರ್ಗದಲ್ಲಿ ದೀಕ್ಷೆ ಪಡೆದರು.

 ನವಿಲುಗುಂದ ಗವಿಮಠದ ಮೂಲಕರ್ತೃಗಳು ಶ್ರೀ ಜಡೆಸ್ವಾಮಿಗಳು; ಚಿತ್ರದುರ್ಗ ಪೀಠದ ಪರಂಪರೆಯವರು. ಮುನ್ನೂರು ವರ್ಷಗಳ ಹಿಂದೆ ಇಲ್ಲಿಯೇ ಒಂದು ಗುಡಿಸಲಲ್ಲಿ ತಪೋನುಷ್ಠಾನ ಮಾಡಿ ಭಾವಿಯಲ್ಲಿ ನೀರು ಬರಿಸಿದ ಪವಾಡ ತೋರಿದರು. ಅವರ ಸ್ಮಾರಕವಾಗಿ ಜೈನಮತದ ಗೌಡರು ಚಿಕ್ಕ ಮಠವೊಂದನ್ನು ಕಟ್ಟಿಸಿ ಭೂಮಿಯನ್ನು ದಾನವಾಗಿ ಕೊಟ್ಟು ಅನುಷ್ಠಾನಕ್ಕೆ ಅನುಕೂಲ ಮಾಡಿದರು.

 ಹಾನಗಲ್ಲ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀ ಬಸವಲಿಂಗ ದೇಶಿಕರು ಮಂದಿರದಲ್ಲಿ ಪಂ. ಸೋಮನಾಥ ಶಾಸ್ತ್ರಿಗಳು, ಉಮಚಗಿಯ ಪಂ. ಶಂಕರಶಾಸ್ತ್ರಿಗಳು, ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ವೇದಾಂತ, ತರ್ಕ ಮತ್ತು ಸಾಹಿತ್ಯ ವಿಷಯಗಳ ಅಧ್ಯಯನ ಮಾಡಿದರು. ಯೋಗದಲ್ಲಿಯೂ ಸಾಧನೆ ಮಾಡಿದರು. ೧೯೨೧ರಲ್ಲಿ ಶ್ರೀ ಗವಿಮಠಕ್ಕೆ ಬಂದ ಬಳಿಕ ಶಿವಯೋಗ ಮಂದಿರಕ್ಕೆ ಕಾಣಿಕೆಯೆಂದು ಸುಮಾರು ಎಂಟು ಸಾವಿರ ರೂಪಾಯಿಗಳನ್ನು ಐದುವರೆ ಕೂರಿಗೆ ಭೂಮಿಯನ್ನು ನವಿಲುಗುಂದ ಭಕ್ತರಿಂದ ಪಡೆದು ಅರ್ಪಿಸಿದರು. ಪಂ. ಪಂಚಾಕ್ಷರ ಗವಾಯಿಗಳಿಗೆ ಮಿರ್ಜಿಯ ನೀಲಕಂಠ ಬುವಾ ಅವರಿಂದ ಸಂಗೀತ ಪಾಠವನ್ನು ಮಠದ ವತಿಯಿಂದ ಹೇಳಿಸಿದರು. ಕೆಲವು ಕಾಲ ಗವಾಯಿಗಳ ಸಂಗೀತ ಪಾಠಸಾಲೆಗೆ ಮಠದಲ್ಲಿಯೇ ಆಶ್ರಯ ನೀಡಿದರು. ಶಿವಯೋಗ ಮಂದಿರಕ್ಕೆ ಆರ್ಥಿಕ ಬಿಕ್ಕಟ್ಟು ಬಂದಾಗಲೆಲ್ಲ ಭಿಕ್ಷೆಯ ರೂಪದಿಂದ ಸಹಾಯ ನೀಡಿ ಸಂಸ್ಥೆಯ ಯೋಗಕ್ಷೇಮದಲ್ಲಿ ಭಾಗಿಗಳಾಗಿದ್ದಾರೆ.

ಶ್ರೀಗಳವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಥಾನಮಾನಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನʼ ಕನ್ನಡ ಸಾಹಿತ್ಯ ಪರಿಷತ್ತಿʼನ ಕಾರ್ಯಕಾರಿ ಮಂಡಲದ ಸದಸ್ಯರಾಗಿ ‘ಉತ್ತರ ಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿ’ಯ ಅಧ್ಯಕ್ಷರಾಗಿ, ʼಕರ್ನಾಟಕ ವಿದ್ಯಾವರ್ಧಕ ಸಂಘ’ ದ ಉಪಾಧ್ಯಕ್ಷರಾಗಿ ಮತ್ತು ೧೯೨೨ ರಿಂದ ಇದುವರೆಗೆ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷರಾಗಿಯೂ, ಕೆಲವು ವರ್ಷ ಮ್ಯಾನೇಜಿಂಗ ಟ್ರಸ್ಟಿಗಳಾಗಿಯೂ ಕಾರ್ಯ ಮಾಡಿ ಅನೇಕ ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾಗಿದ್ದಾರೆ. ಬಾಗಲಕೋಟೆ ಬಸವೇಶ್ವರ ಕಾಲೇಜು ಪ್ರಾರಂಭವಾದಂದಿನಿಂದ ಇದುವರೆಗೂ ಬಾಗಲಕೋಟೆಯ ‘ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವರು. ೧೯೨೪ ರಲ್ಲಿ ‘ಲಿಂಗ’ ಮತ್ತು ೧೯೨೮ ರಲ್ಲಿ ‘ಗುರು’ ವಿಷಯಗಳನ್ನು ಕುರಿತು ಪುಸ್ತಕಗಳನ್ನು ಬರೆದರು. ೧೯೩೩ ರಿಂದ ೧೯೩೭ರ ವರೆಗೆ ಶಿವಯೋಗ ಮಂದಿರದ ಪರವಾಗಿ ಪುಣೆ, ಬೆಂಗಳೂರು, ಮೈಸೂರು, ವಿಜಾಪುರ ಮೊದಲಾದ ಕಡೆ ಪ್ರಯಾಣ ಮಾಡಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಕಾರ್ಯವನ್ನು ಮಾಡಿದರು.  ೧೯೪೧ ರಲ್ಲಿ ಶ್ರೀಮಠದಲ್ಲಿ ʼಉತ್ತರ ಕರ್ನಾಟಕ ಪ್ರಾಂತೀ  ಸಾಹಿತ್ಯ ಸಮ್ಮೇಲನ’ವನ್ನು ಜರುಗಿಸಿದರು. ಶಿವಯೋಗ ಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ  ವಾಚನಾಲಯವನ್ನು ಸ್ಥಾಪಿಸಿ, ದಾನಿಗಳಿಂದ ಗ್ರಂಥಗಳನ್ನು ಶೇಖರಿಸಿದರು. ‘ಸುಕುಮಾರ’ ಕೈಬರಹ ಮಾಸಿಕವನ್ನು ಹೊರಡಿಸಿದರು. ʼಆರ್ಯಧರ್ಮ ಪ್ರದೀಪಿಕೆ’ಯಲ್ಲಿ ವೀರಶೈವ ಧರ್ಮದ ಬಗೆಗೆ ವಿವೇಚನಾತ್ಮಕ ಲೇಖನ ಬರೆದರು.

೧೯೪೨ರ ಜೂನ ೧೫ನೆಯ ದಿನಾಂಕದಲ್ಲಿ ಧಾರವಾಡದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಹೋಗಿ ಶಿವಾನುಭವ ಸಂಘದ ಸ್ಥಾಪನೆಯ ಬಗ್ಗೆ ವಿಚಾರ ಮಾಡಿ ಅಲ್ಲಿಯೇ ‘ಶಿವಾನುಭವ ಸಂಸ್ಥೆ’ಯನ್ನು ಪ್ರಾರಂಭಿಸಿದರು. ೧೯೪೩ನೆಯ ನವಂಬರ ದಿನಾಂಕ ೧೪ ರಂದು ಬಸವೇಶ್ವರ ಕಾಲೇಜನ್ನು ತೆರೆಯುವ ಬಗ್ಗೆ ಆಲೋಚನಾ ಕಮೀಟಿಯನ್ನು ಕರೆದು, ನಿರ್ಧರಿಸಿ ಬಾಗಲಕೋಟೆ ಮತ್ತು ಇತರ ಪಟ್ಟಣಗಳ ಗ್ರಾಮಗಳ ಮಹಾಜನರ ಸಹಕಾರ-ಸಹಾಯದಿಂದ ಬಾಗಲಕೋಟೆಯಲ್ಲಿಯೆ ಬಸವೆ ಕಾಲೇಜನ್ನು ಸ್ಥಾಪಿಸಿದರು.

 ಶ್ರೀಗಳವರು ೧೯೪೫ರ ಫೆಬ್ರುವರಿ ದಿನಾಂಕ ೮-೯ ರಿಂದ ‘ಸರ್ವಧರ್ಮ ಸಮ್ಮೇಲನ’ವನ್ನು ಗವಿಮಠದಲ್ಲಿ ಸೇರಿಸಿ ಇದುವರೆಗೂ ಅದನ್ನು ಪ್ರತಿವರ್ಷ ನಡೆಯಿಸಿಕೊಂಡು ಬಂದಿರುವರು. ಧರ್ಮದ ವ್ಯಾಪಕ ಭಾವನೆಯನ್ನು ಜನತೆಯಲ್ಲಿ ಮೂಡಿಸಿರುವರು. ಶ್ರೀ ಮಠದಲ್ಲಿ ಒಂದು ಫ್ರೀ ಬೋರ್ಡಿಂಗನ್ನು ಮತ್ತು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ನಡೆಯಿಸುತ್ತಿರುವರು. ಪ್ರತಿವರ್ಷ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯನ್ನು ಏರ್ಪಡಿಸಿ ಅದರ ಅಂಗವಾಗಿ ಶಿವಾನುಭವ ಸಮ್ಮೇಲನ, ಒಕ್ಕಲುತನ ಪರಿಷತ್ತು ಸಹಕಾರಿ ಪರಿಷತ್ತು ಮಹಿಳಾ ಗೋಷ್ಠಿಗಳನ್ನು ಜರುಗಿಸಿ ನಾಡಿನ ಜನತೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಜನಜಾಗ್ರತಿಯನ್ನುಂಟು ಮಾಡುತ್ತಲಿರುವರು.೭)ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು :ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳು, ಅವರು ಮೊದಲು ಬಾಗಲಕೋಟೆಯ ಕರವೀರಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆದರು. ಅವರು ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡಿದ್ದಲ್ಲದೆ ಕಪನಳ್ಳಿ ಮೊದಲಾದ ಶಾಖಾಮಂದಿರಗಳಲ್ಲಿ ಅನುಷ್ಠಾನವನ್ನು ಮಾಡಿದರು. ಅವರು ೧೯೩೩ ನೆಯ ಇಸ್ವಿಯವರೆಗೂ ಶಿವಯೋಗ ಮಂದಿರದಲ್ಲಿಯೇ ಇದ್ದು ಮಂದಿರದ ಒಕ್ಕಲುತನ-ಗೋಶಾಲೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹಾದೇವ ದೇಶಿಕರ ಹಿರಿಯತನದಲ್ಲಿ ಮಂದಿರದ ಒಕ್ಕಲುತನವು ಬಹಳ ಪ್ರಗತಿಯನ್ನು ಪಡೆದಿತ್ತು ಅವರು ಕೆಲವು ವರ್ಷ ಕೆಳದಿಯ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಈಗ ಕುರವತ್ತಿಯಲ್ಲಿ ತೋಂಟದಾರ್ಯ ಮಠದ ಜೀರ್ಣೋದ್ಧಾರವನ್ನು ಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಹಾನಗಲ್ಲ ವಿರಕ್ತಮಠದ ಜೀರ್ಣೋದ್ಧಾರವನ್ನು ಮಾಡಿ ಸೇವೆ ಸಲ್ಲಿಸಿದವರು

: ಸೌಜನ್ಯ “ಬೆಳಗು”

ಶಿವಯೋಗಮಂದಿರದ ಶಾಖೆಗಳನ್ನು ಅಲ್ಲಲ್ಲಿ ಸ್ಥಾಪಿಸಿ ಅವುಗಳ ಮೂಲಕ ಶಿವಾನುಭವದ ಬೋಧೆಯಾಗುವಂತೆ ಮಾಡುವದು ಸಂಸ್ಥೆಯ ಉದ್ದೇಶಗಳಲ್ಲಿ ಒಂದು. ಅದರ ಸಾಧನೆಗಾಗಿ ಶ್ರೀಗಳವರು ನಾಡಿನ ಮೂಲೆ ಮೂಲೆಯಲ್ಲೆಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಮಂದಿರದ ಶಾಖಾ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಮೊಗ್ಗ, ಧಾರವಾಡ, ರಾಯಚೂರು ಮೊದಲಾದ ದೂರದ ಜಿಲ್ಲೆಗಳಲ್ಲಿಯೂ ಜನತೆಯು ಶಿವಯೋಗ ಮಂದಿರದ ಪ್ರಭಾವಕ್ಕೆ ಒಳಗಾಗಿ ತಮ್ಮ ಬಾಳನ್ನು  ಹಸನಗೊಳಿಸಿಕೊಳ್ಳಲೆಂಬ ಶ್ರೀಗಳವರ ಲೋಕಹಿತ ಭಾವನೆ ಕಪನಳ್ಳಿ, ನಿಡಗು೦ದಿ-ಕೊಪ್ಪ, ರಾಮಗಡ್ಡಿ, ಹಿರೇಹಾಳ ಮತ್ತು ಬದಾಮಿ ಗ್ರಾಮಗಳಲ್ಲಿ ರೂಪುಗೊಂಡಿತು. ಅಲ್ಲಿ ಶಾಖಾ ಶಿವಯೋಗಮಂದಿರಗಳ ಸ್ಥಾಪನೆಯಾಯಿತು.

ಶಾಖಾ ಶಿವಯೋಗಮಂದಿರ, ನಿಡಗುಂದಿಕೊಪ್ಪ

ಶಿವಯೋಗಮಂದಿರದ ಭಿಕ್ಷೆಗಾಗಿ ೧೯೧೪ ನೆಯ ಇಸ್ವಿಯಲ್ಲಿ ನಿಡಗುಂದಿ (ತಾ. ರೋಣ, ಜಿ. ಧಾರವಾಡ) ಗ್ರಾಮಕ್ಕೆ ಲಿಂ. ಪರಮಪೂಜ್ಯ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರು ದಯಮಾಡಿಸಿದ್ದರು. ಹಾವೇರಿ ಶ್ರೀ ನಿ. ಪ್ರ. ಶಿವಬಸವ ಮಹಾಸ್ವಾಮಿಗಳವರ ಪೂಜೆಗೆ ಏರ್ಪಾಟು ಮಾಡಿದ ಮನೆಯ ಕಿಡಕಿ ಮತ್ತು ಬಾಗಿಲುಗಳಲ್ಲಿ ಜನ ಶ್ರೀಗಳವರ ಲೀಲಾಮಯ ಪೂಜೆಯನ್ನು ನೋಡುವ ಕುತೂಹಲದಿಂದ ಇಣಿಕಿ ನೋಡಹತ್ತಿದರು. ಈ ಜನ ಜಂಗುಳಿಯನ್ನು ಕಂಡು ಹಾವೇರಿ ಶ್ರೀಗಳವರು ಬಹಳ ಬೇಸರಗೊಂಡರು. ಪೂಜೆ ಅರ್ಪಣ ಮುಗಿದ ಮೇಲೆ ಅವರು ಲೀಲಾಮಯವಾಗಿ ಹಾನಗಲ್ಲ ಶ್ರೀಗಳವರನ್ನು ಕುರಿತು ʼʼತಾವು ಈ ಮರುಳ ಜನರನ್ನು ಬೇಡಿ ಶಿವಯೋಗ ಮಂದಿರವನ್ನು ಬೆಳೆಸಲು ಯತ್ನಿಸುವಿರಲ್ಲವೆ ? ಅದರ ಪರಿಣಾಮವಿದು; ಇಂದು ನಮ್ಮ ಶಿವಪೂಜೆಗೆ ಕೊರತೆಯನ್ನುಂಟು ಮಾಡಿತು. ಇನ್ನು ಜನವನ್ನು ಬೇಡುವದಾದರೆ ತಮ್ಮ ಶಿವಯೋಗಮಂದಿರ ತಮಗೆ ಇರಲಿ, ಶಿವನನ್ನೆ ಬೇಡಿ ಶಿವಮಂದಿರವನ್ನು ಕಟ್ಟುವೆ.” ಎಂದು ಅಪ್ಪಣೆ ಕೊಡಿಸಿ ಅಂದೇ ಕೊಪ್ಪದ ನೆರೆಯ ಹಳ್ಳದ ಪ್ರಶಾಂತ ಸ್ಥಳದಲ್ಲಿ ಬಿಲ್ವವೃಕ್ಷದ ಅಡಿಯಲ್ಲಿ ಜೋಪಡಿಯನ್ನು ಹಾಕಿಸಿಕೊಂಡು ಅನುಷ್ಠಾನಕ್ಕೆ ಕುಳಿತರು. ಮೂರು   ತಿಂಗಳವರೆಗೆ ಲಿಂಗಾನಂದದಲ್ಲಿ ತನ್ಮಯರಾಗಿದ್ದರು. ಈ ಸ್ಥಾನ ಶ್ರೀಗಳವರ ಮನಕ್ಕೆ ನೆಮ್ಮದಿಯನ್ನು ತಂದುಕೊಟ್ಟಿತು. ಮುಂದೆ ಮಳೆಗಾಲ ಬಂದಿತು ಭಕ್ತರ ಆಗ್ರಹದ ಮೇರೆಗೆ ಶ್ರೀಗಳವರು ಹಾನಗಲ್ಲ, ಹಾಲಕೆರೆ ಮತ್ತು ರೋಣದ ಶ್ರೀಗಳವರನ್ನು ಕರೆಯಿಸಿಕೊಂಡು ಆ ಸ್ಥಾನದಲ್ಲಿಯೇ ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವ ನಿರ್ಧಾರವನ್ನು ಸೂಚಿಸಿದರು. ಹಾನಗಲ್ಲ ಶ್ರೀಗಳವರಿಗೆ ಹಾವೇರಿ ಶ್ರೀಗಳವರ ತಪಃಪ್ರಭಾವವನ್ನು ಕಂಡು ಹಿಡಿಸಲಾರದಷ್ಟು ಆನಂದವಾಯಿತು. ಅವರೇ ಅನುಷ್ಠಾನದ ಆರಾಧನೆ ಮಾಡಿಸಿ ೧೯೧೪ ನೆಯ ಇಸ್ವಿಯ ಬಸವಜಯಂತಿಯ ಶುಭ ದಿನದಲ್ಲಿ ಶಾಖಾಮಂದಿರದ ಅಡಿಗಲ್ಲನ್ನು ಇಡಿಸಿದರು. ಅಂದೇ ಸಂಗೀತ ಶಾಲೆಯ ಪ್ರಾರಂಭೋತ್ಸವವೂ ವಿಜೃಂಭಣೆಯಿಂದ, ಉತ್ಸಾಹದಿಂದ ಜರುಗಿತು. ಶ್ರೀ ಪಂಚಾಕ್ಷರ ಗವಾಯಿಗಳ ಆನಂದಕ್ಕೆ ಅಂದು ಮೇರೆ ಇಲ್ಲವಾಗಿತ್ತು .

ಆಲೂರ ಸದ್ಭಕ್ತರು ಮಂದಿರದ ಅನುಕೂಲತೆಗೆ ಯೋಗ್ಯ ಕ್ಷೇತ್ರವನ್ನು ಒದಗಿಸಿಕೊಟ್ಟರು. ಶಾಖಾ ಮಂದಿರವು ನಿರಾತಂಕವಾಗಿ ನಡೆಯಲೆಂಬ ಘನವಾದ ಉದ್ದೇಶದಿಂದ ಕೊಪ್ಪ ಮತ್ತು ಹಾಲಕೆರೆ ಗ್ರಾಮಗಳ ಸದ್ಭಕ್ತರು ೬೦ ಎಕರೆ ಜಮೀನುಗಳನ್ನು  ದಾನವಾಗಿ ಕೊಟ್ಟರು. ೩-೪ ವರ್ಷಗಳಲ್ಲಿಯೇ ಶ್ರೀಗಳವರ ಅನುಷ್ಠಾನದ ಪ್ರಭಾವದಿಂದ ಆ ಭೂಮಿ ಪುಣ್ಯ ಕ್ಷೇತ್ರವಾಗಿ ಕಂಗೊಳಿಸಿತು. ಕಲ್ಯಾಣದ ದೇಶಿಕರಿಗೆ ಇಲ್ಲಿಯೇ ನಿರಾಭಾರಿ  ಚರಪಟ್ಟಾಧಿಕಾರವನ್ನು ನೆರವೇರಿಸಲಾಯಿತು. ಅವರು ಮೂರು ವರ್ಷ ಇಲ್ಲಿಯೇ ಅನುಷ್ಠಾನ ಮಾಡಿದರು. ನಂತರ ಇಲ್ಲಿಯೇ ಶ್ರೀ ಮಹಾದೇವ ಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು ಮೊದಲಾದವರು ಕೆಲವು ಕಾಲ ಶಿವಯೋಗಾನುಷ್ಠಾನ ಮಾಡಿ ಸಿದ್ಧಿಪಡೆದರು. ಆ ಮೇಲೆ ಕ್ರಿ.ಶ. ೧೯೨೪ರಲ್ಲಿ ಹಾನಗಲ್ಲ ಮಹಾ ಸ್ವಾಮಿಗಳವರು ಮ೦ದಿರದ ಸಾಧಕರಾದ ಶ್ರೀ ಗೋಕಾಕ ದೇಶಿಕರವರನ್ನು ಇಲ್ಲಿಗೆ ಕರೆತಂದರು. “ಹಾವೇರಿಯ ಶ್ರೀ ಶಿವಬಸವ ಸ್ವಾಮಿಗಳು ಶಿವನನ್ನು ಬೇಡಿ ಈ ಶಿವಯೋಗಾಶ್ರಮವನ್ನು ಕಟ್ಟಿದ್ದಾರೆ. ಇಲ್ಲಿ ನೀವು ೧೨ ವರ್ಷ ಬಿಡದೆ ಶಿವಯೋಗ ತಪಸ್ಸನ್ನು ಆಚರಿಸಬೇಕು; ಆಗ ಈ ಆಶ್ರಮ ಜಾಗ್ರತ ಕ್ಷೇತ್ರವಾಗುತ್ತದೆ. ಅದರಿಂದ ನಿಮ್ಮ ಉದ್ಧಾರ ಮತ್ತು ಸಮಾಜದ ಉದ್ಧಾರವೂ ಆಗುವದು.” ಎಂದು ಅಪ್ಪಣೆ ಕೊಡಿಸಿ ಅವರ ಅನುಷ್ಠಾನಕ್ಕೆ ಪ್ರೇರಣೆಯನ್ನಿತ್ತರು. ಅಂತೆಯೆ ಗೋಕಾಕ ದೇಶಿಕರು ಶಿವಯೋಗದಲ್ಲಿ ಸಿದ್ಧಿ ಪಡೆದರು; ಶ್ರೀಗಳವರ ಧೈಯವನ್ನು ಬಿಡದೆ ಸಾಧಿಸಿದರು. ಅವರೇ ಮುಂದೆ ಆ ಆಶ್ರಮದ   ಅಧಿಕಾರಿಗಳಾಗಿ ಭಕ್ತರ ಭಕ್ತಿಯನ್ನು ಕೈಕೊಂಡು ಅದರ ಸರ್ವಾಂಗಸುಂದರ ಅಭಿವೃದ್ಧಿಯನ್ನು ಮಾಡಿರುವರು. ಅವರ ಪೂಜೆಯ ಪ್ರಭಾವದಿಂದ ಈ ಕ್ಷೇತ್ರ ಪ್ರತಿದಿನವೂ ನೂರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರಾರಂಭದಲ್ಲಿ ಈ ಮಂದಿರಕ್ಕೆ ಕೊಪ್ಪ ಮತ್ತು ಹಾಲಕೆರೆಯ ಸದ್ಭಕ್ತರು ಬಹುಮುಖವಾಗಿ ಸಹಾಯ ಸಲ್ಲಿಸಿದ್ದರು. ಕೊಪ್ಪ ಗ್ರಾಮದ ಭಕ್ತರು ೨೮೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಶಾಖಾ ಮಂದಿರದ ಆರ್ಥಿಕ ಕೊರತೆಯನ್ನು ನೀಗಿಸಿದರು; ೧೬ ಜನ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗದ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದರು. ಕೆಲವು ನಿಷ್ಠಾವಂತ ಭಕ್ತರು ಶಿವಯೋಗಮಂದಿರದ ಹೆಸರಿನಿಂದ ಗೋದಿ ಬಿತ್ತಿ ಅದರಿಂದ ಬಂದ ಬೆಳೆಯನ್ನು ಶಿವಾರ್ಪಣ ಬುದ್ಧಿಯಿಂದ ಈ ಮಂದಿರಕ್ಕೆ ಅರ್ಪಿಸಿದ್ದರು. ಹಾಲಕೆರೆಯ ಶ್ರೀ ಬಸವನಗೌಡ ಪಾಟೀಲ ಅವರು ಈ ಶಾಖಾ ಮಂದಿರದ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳುತ್ತಿದ್ದರು.

ರಾಮಗಡ್ಡಿಯ ಶಾಖಾಮಂದಿರ

ರಾಮಗಡ್ಡಿ (ಜಿ. ರಾಯಚೂರು) ಯಲ್ಲಿ ಶಾ. ಶ. ೧೮೩೬ (ಕ್ರಿ.ಶ.೧೯೧೪)  ನೆಯ ಆನಂದನಾಮ ಸಂವತ್ಸರದ ಮಾಘ ಶು. ೧೪ ರಂದು ಶ್ರೀ ಸಿದ್ಧಲಿಂಗಸ್ವಾಮಿಗಳು ಉರ್ಫ ಚೋಳೇಂದ್ರಸ್ವಾಮಿಗಳು ಅವರಿಂದ ಒಂದು ಶಿವಯೋಗಾಶ್ರಮವು ಸ್ಥಾಪಿತವಾಯಿತು. ಈ ಸ್ಥಾನ ನದಿಯ ನಡುಗಡ್ಡೆಯಲ್ಲಿ ರಮ್ಯವಾದ ಫಲವತ್ತಾದ ಪ್ರದೇಶದಲ್ಲಿದೆ. ಈಗ ನೀರಡಗುಂಭದ ಪಶ್ಚಿಮಾದ್ರಿಮಠದ ಅಧಿಪತಿಗಳಾದ ಶ್ರೀ ನಿ.ಪ್ರ. ಸಿದ್ದಲಿಂಗಸ್ವಾಮಿಗಳು ಆ ಆಶ್ರಮದ ಅಧಿಕಾರವನ್ನು ವಹಿಸಿಕೊಂಡಿರುವರು. ಪ್ರಾರಂಭದಲ್ಲಿ ಇಲ್ಲಿ ಐದು ಜನ ಸಾಧಕರು ಮತ್ತು ೧೫ ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು ಇದ್ದರು. ಇಲ್ಲಿಂದ ಇದುವರೆಗೆ ೯ ಜನ  ಮೂರ್ತಿಗಳು ಯೋಗ ಧರ್ಮಗಳ ಶಿಕ್ಷಣ ಪಡೆದು ಆಯಾ ಪ್ರಾಂತಗಳಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ೭- ೮ ಜನ ಶಾಸ್ತ್ರಿಗಳು ಇಲ್ಲಿಂದಲೇ ವೈದಿಕಾದಿ ಶಿಕ್ಷಣ ಪಡೆದು ಅಲ್ಲಲ್ಲಿ ಅಧ್ಯಾಪಕರಾಗಿದ್ದಾರೆ.” ಈಗ ಇಲ್ಲಿ ಮಂದಿರದಿಂದಲೇ ಶಿಕ್ಷಣ ಪಡೆದ ಶ್ರೀ ಶಿವಪುತ್ರ ದೇವರು ನೀರಡಗುಂಭ ಶ್ರೀಗಳವರ ಮಾರ್ಗದರ್ಶನದಲ್ಲಿ ಅಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಿವಯೋಗಾಶ್ರಮ ಕಪನಳ್ಳಿ

ಹಾನಗಲ್ಲ ಶ್ರೀಗಳವರು ಮಲೆನಾಡಿಗೆ ದಯಮಾಡಿದ್ದರು. ಅನಂತಪುರದ ಮುರಘಾಮಠದಲ್ಲಿ ಬಿಡಾರವಾಗಿತ್ತು, ಆಗ ಗುತ್ತಲದ ಶ್ರೀಗಳವರು ಮತ್ತು ಕೆಳದಿಯ ಶ್ರೀ ರೇವಣಸಿದ್ಧ ಪಟ್ಟಾಧ್ಯಕ್ಷರು ದಯ ಮಾಡಿಸಿದ್ದರು. ಈ ತ್ರಿಮೂರ್ತಿಗಳು ಹಾನಗಲ್ಲ ಶ್ರೀಗಳವರಲ್ಲಿ ತಾವು ಶಿವಯೋಗಮಂದಿರವನ್ನು ಸ್ಥಾಪಿಸಿ ಇದುವರೆಗೆ ಬಯಲು ಸೀಮೆಯಲ್ಲಿ ಸಾಕಷ್ಟು ಜನಜಾಗ್ರತಿಯನ್ನುಂಟು ಮಾಡಿದಿರಿ. ಇನ್ನು ಮಲೆನಾಡಿನಲ್ಲಿಯ ಜನಗಳ ಸುಧಾರಣೆಗಾಗಿ ಒಂದು ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಹಾನಗಲ್ಲ ಶ್ರೀಗಳವರು ಒಪ್ಪಿ ಅಲ್ಲಿಯ ಭಕ್ತರ ಅಪೇಕ್ಷೆಯಂತೆ ಅನಿಮಿಷ ದೇವರ ತಪೋಭೂಮಿಯಾದ ಕಪನಳ್ಳಿ(ಜಿ, ಶಿವಮೊಗ್ಗ ತಾ. ಶಿಕಾರಿಪುರ)ಯ ನೆರೆಯಲ್ಲಿ ದಿನಾಂಕ ೧೦-೩-೧೯೧೭ ರಲ್ಲಿ ‘ಶಿವಯೋಗಾಶ್ರಮ’ವನ್ನು ಸ್ಥಾಪಿಸಿದರು. ಅನಂತಪುರದ ಜ. ಲಿಂಗಮಹಾಸ್ವಾಮಿಗಳು, ಗುತ್ತಲದ ಶ್ರೀರುದ್ರ ಸ್ವಾಮಿಗಳು, ಕೆಳದಿ, ಸಾಲೂರು, ತ್ಯಾವಣಗಿ ಮೊದಲಾದ ಊರುಗಳ ಪಟ್ಟ ಚರಮೂರ್ತಿಗಳು, ಶಿಕಾರಿಪುರ ಮೊದಲಾದ ಗ್ರಾಮಗಳ ಸದಭಕ್ತರೂ ಸೇರಿ ಹಾವೇರಿ ಶ್ರೀಗಳವರ ನೇತೃತ್ವದಲ್ಲಿ ಶಿವಯೋಗಾಶ್ರಮದ ಆರಂಭೋತ್ಸವವನ್ನು ವೈಭವದಿಂದ ಸಾಂಗಗೊಳಿಸಿದರು. ಸಾವಿರಾರು ಜನ ಸೇರಿತ್ತು, ನಿತ್ಯ ದಾಸೋಹ ನಡೆಯಿತು. ಅದರೊಂದಿಗೆ ಜ್ಞಾನದಾಸೋಹವೂ ಅಖಂಡವಾಗಿ ಸಾಗಿತು. ಮಲೆನಾಡಿನ ಜನರಲ್ಲಿ ಎಂದಿಲ್ಲದ ಭಕ್ತಿ ವಿಶ್ವಾಸಗಳು ಮೈದಾಳಿದ್ದವು.

ಈ ಆಶ್ರಮವು ಸುರಕ್ಷಿತವಾಗಿ ಸಾಗಲೆಂದು ಶಿಕಾರಿಪುರದ ಶ್ರೀ ಹೊನ್ನಪ್ಪ ಶೆಟ್ಟರ ಚನ್ನಪ್ಪನವರು ೧೦ ಸಾವಿರ ರೂಪಾಯಿಗಳ ಮೂಲ ನಿಧಿಯನ್ನು ಅರ್ಪಿಸಿ ಅದರ ಬಡ್ಡಿಯಿಂದ ಆಶ್ರಮದ ದೈನಿಕ ವೆಚ್ಚವು ಸಾಗುವಂತೆ ಏರ್ಪಡಿಸಿದ್ದರು.

 ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಶ್ರೀ ಮಹಾದೇವ ದೇಶಿಕರು ಮಂದಿರದ ೫-೬ ಜನ ಸಾಧಕರೊಂದಿಗೆ ಆಶ್ರಮದಲ್ಲಿ ಅನುಷ್ಠಾನ ಮಾಡುತ್ತಿದ್ದರು. ಹುಬ್ಬಳ್ಳಿ ಶ್ರೀ ಶಿವಮೂರ್ತಿ ಸ್ವಾಮಿಗಳು, ಇಲಕಲ್ಲ ಶ್ರೀ ಮಹಾಂತ ದೇಶಿಕರು, ಬಾಗಿಲುಕೋಟೆಯ ಶ್ರೀ ಶಿವಮೂರ್ತಿ ಸ್ವಾಮಿಗಳು ಮೊದಲಾದ ಶಿವಯೋಗಿಗಳೊಡನೆ ಶ್ರೀ ಮಹಾದೇವ ದೇಶಿಕರು (ಈಗ ಕುರವತ್ತಿ ಶ್ರೀಗಳು) ಲಿಂಗಾಣತಿಯಿಂದ ಬಂದುದನ್ನು ಸ್ವೀಕರಿಸುತ್ತ ಸಂಕಲ್ಪ ಪೂರ್ವಕವಾಗಿ ಒಂದು ಕೋಟಿ ಮಹಾಮಂತ್ರ ಜಪವನ್ನು ಮಾಡಿ ಶ್ರೀ ಗಳವರ ಆಶೆಯನ್ನು ಸಫಲಗೊಳಿಸಿದರು.

 ಹಳೇ ಪಟ್ಟಣದ ಹಾಲಪ್ಪ ಶೆಟ್ಟರು ಮುಂತಾದ ಸದ್ಭಕ್ತರು ಆಶ್ರಮಕ್ಕೆ ಹತ್ತು ಉತ್ತಮ ಹಸುಗಳನ್ನು ಕೊಟ್ಟರು. ಉಳಿದ ಭಕ್ತರೂ ಗೋದಾನ ಮಾಡಿದರು. ಕೆಲವು ದಿನಗಳಲ್ಲಿ ಆಶ್ರಮದ ಗೋಸಂತತಿಯು ಎರಡು ನೂರಕ್ಕೆ ಮಿಕ್ಕಿತು. ಒಳ್ಳೆಯ ತಳಿಯ ಆಕಳುಗಳ ಪೀಳಿಗೆ ಹೆಚ್ಚಿತು. ಈಗಲೂ ಆಶ್ರಮದಲ್ಲಿ ಗೋರಕ್ಷಣೆಯ ಕಾರ್ಯ ನಿರಾಬಾಧವಾಗಿ ನಡೆದಿದೆ.

ಈ ಆಶ್ರಮವನ್ನು ಸ್ಥಾಪಿಸುವ ಮುಂಚೆ ಈ ಪ್ರಾಂತದ ಜನತೆಯಲ್ಲಿ ಮೌಡ್ಯವು ಮನೆ  ಮಾಡಿಕೊಂಡಿತ್ತು. ಜನತೆಯು ವೀರಶೈವರ ನಿಜಾಚರಣೆಯನ್ನು ಮರೆದಿತ್ತು ಇದನ್ನು ಕಂಡು ಜನರಿಗೆ ವೀರಶೈವಾಚಾರ ಮಾರ್ಗದ ಬೋಧೆ ಮಾಡಲು ಪೂಜ್ಯರಾದ ಹಾವೇರಿ ಮತ್ತು ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಶ್ರಮವಹಿಸಿ ಅನಂತಪುರದ ಶ್ರೀಗಳು ಮತ್ತು ಕೆಳದಿ ಪಟ್ಟಾಧ್ಯಕ್ಷರರೊಡನೆ ಆಲೋಚಿಸಿ ಸಾಗರ, ಶಿರಿಯಾಳಕೊಪ್ಪ ಸಿದ್ದಾಪುರ ಮತ್ತು ಬಂಕಾಪುರ ಗ್ರಾಮಗಳಲ್ಲಿ ಧರ್ಮೋತ್ತೇಜಕ ಸಭೆಗಳನ್ನು ನಡೆಯಿಸಿದರು; ಪುರಾಣ ಕೀರ್ತನಗಳಿಂದ ಜನರು ಸದಾಚರಣೆಯಲ್ಲಿ ನಡೆಯುವಂತೆ ಮಾಡಿದರು.

  ಶಿರಿಯಾಳ ಕೊಪ್ಪದಲ್ಲಿ ಹಾನಗಲ್ಲ ಶ್ರೀಗಳವರು ಮೂರು ತಿಂಗಳುಗಳ ವರೆಗೆ ಶ್ರೀ ನಿಜಗುಣಾರ್ಯರ ಗ್ರಂಥಗಳ ಪ್ರವಚನಗಳನ್ನು ನಡೆಯಿಸಿ ಬೋಧವಿತ್ತು ಜನರ ನಡೆ ನುಡಿಗಳನ್ನು ತಿದ್ದಿದರು; ಸಾವಿರಾರು ಮಾಹೇಶ್ವರ ಭಕ್ತ ವಟುಗಳಿಗೆ ವೀರಶೈವದೀಕ್ಷೆಯ ಸಂಸ್ಕಾರವನ್ನು ಮಾಡಿಸಿ ಶಿವಪೂಜಾ ವಿಧಾನವನ್ನು ಬೋಧಿಸಿದರು. ತೊಗರಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ದೊಡ್ಡ ಸಭೆಯನ್ನು ಸೇರಿಸಿ ವೀರಶೈವ ಮತತತ್ವಗಳ ಪ್ರಸಾರವನ್ನು ಮಾಡಿ ಜನರಲ್ಲಿ ಅರಿವಿನ ಬೆಳಗು ಮೂಡುವಂತೆ ಮಾಡಿದರು. ಶಿರಿಯಾಳಕೊಪ್ಪದ ಹತ್ತಿರ ಬಿಳುವಾಣಿ ಮರಡಿಮಠದಲ್ಲಿ ಮೂರು ತಿಂಗಳು ವಾಸ್ತವ್ಯ ಮಾಡಿ ಶ್ರೀಗಳವರು ಈ ಪ್ರಾಂತದ ಭಕ್ತ ಮಾಹೇಶ್ವರರನ್ನು ಕೂಡಿಕೊಂಡು ‘ಶಿವಾನುಭವ’ ಶಾಸ್ತ್ರವನ್ನು ಶ್ರೀ ಕಬ್ಬೂರ ಶರಣರಿಂದ ಜನರಿಗೆ ಬೋಧೆ ಮಾಡಿಸಿದರು. ಅನೇಕರು ದೀಕ್ಷೆ-ಅನುಗ್ರಹಗಳನ್ನು ಪಡೆದರು. ಹೀಗೆ ಶಿವಯೋಗಾಶ್ರಮವು ಸ್ಥಾಪಿತವಾದಂದಿನಿಂದ ಮಲೆನಾಡಿನಲ್ಲಿ ಅನೇಕ ರೀತಿಯಿಂದ ಧರ್ಮಜಾಗೃತಿಯ ಕಾರ್ಯಗಳು ನಡೆದು ಜನತೆಯಲ್ಲಿ ಆಸ್ತಿಕಭಾವನೆ ಒಡಮೂಡುವಂತಾಯಿತು. ಶ್ರೀ ಹಾಲಪ್ಪಶೆಟ್ಟರು ಒಡಕುಹೊಳೆಯಲ್ಲಿ ಸವದತ್ತಿಯ ಶ್ರೀಗಳವರಲ್ಲಿದ್ದು ಅನುಷ್ಠಾನದ ಕ್ರಮ ತಿಳಿದುಕೊಂಡು ಬಂದು ಕಪನಳ್ಳಿಯಲ್ಲಿ ಅನುಷ್ಠಾನ ಮಾಡುತ್ತ  ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಈಗ ಶಿವಯೋಗಾಶ್ರಮದಲ್ಲಿ ಶ್ರೀ ನಿ.ಪ್ರ. ರುದ್ರಮುನಿಸ್ವಾಮಿಗಳು ಪೂಜ್ಯರ ಉದ್ದೇಶಗಳಂತೆ ಗೋರಕ್ಷಣೆ, ಒಕ್ಕಲುತನ ಮೊದಲಾದ ಕಾಯಕಗಳಿಗೆ ಉತ್ತೇಜನ ಕೊಟ್ಟು ಅನುಷ್ಠಾನ ಮಾಡುತ್ತ ಜನರಲ್ಲಿ ನೀತಿ ಸದಾಚಾರಗಳು ನೆಲೆಗೊಳ್ಳುವಂತೆ ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಆಶ್ರಮಕ್ಕೆ ಸ್ಥಿರವಾದ ಕಟ್ಟಡಗಳಿರಲಿಲ್ಲ. ಶ್ರೀಗಳವರು ಅಂದವಾದ ನೂತನ ಮಠವನ್ನು ಕಟ್ಟಿಸಿ ಆಶ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ.

ಹಿರೇಹಾಳದಲ್ಲಿ ಮಂದಿರ

ಹಿರೇಹಾಳು (ತಾ. ರೋಣ ಜಿ. ಧಾರವಾಡ) ಗ್ರಾಮ ಶಿವಯೋಗಮಂದಿರಕ್ಕೆ ಬಹಳ ದೂರದಲ್ಲಿಲ್ಲ. ಅಲ್ಲಿಯ ಭಕ್ತರ ಆಗ್ರಹದಂತೆ ಶ್ರೀಗಳವರು ಅಲ್ಲಿ ಅನುಷ್ಠಾನ ಮಾಡಲು ಒಬ್ಬ ಸಾಧಕರನ್ನು ಕಳಿಸಿದರು.  ಶ್ರೀ ನಿರಂಜನ ಸಿದ್ಧಲಿಂಗಸ್ವಾಮಿಗಳ ಅನುಷ್ಠಾನದ ಪ್ರಭಾವದಿಂದ ಹಿರೇಹಾಳದಲ್ಲಿ ಶಾಖಾಶಿವಯೋಗ ಮಂದಿರದ ಸ್ಥಾಪನೆಯಾಯಿತು. ಅಲ್ಲಿ ಯಾವಾಗಲೂ ಒಬ್ಬ ಸಾಧಕರು ಇದ್ದು ಶಿವಯೋಗದೊಂದಿಗೆ ಜನರಲ್ಲಿ ಪ್ರವಚನಾದಿಗಳಿಂದ ಧರ್ಮಪ್ರಸಾರವನ್ನು ಮಾಡಲು ಅನುಕೂಲತೆಗಳನ್ನು ಅಲ್ಲಿಯ ಭಕ್ತರು ಕಲ್ಪಿಸಿಕೊಟ್ಟಿದ್ದರು.*

ಬದಾಮಿಯ ಶಾಖಾಮಂದಿರ

ಮಂದಿರಕ್ಕೆ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ ಅಧಿಕಾರಿಗಳಲ್ಲಿ  ರಾ. ಬ. ಕಿತ್ತೂರ ರೇವಣಸಿದ್ಧಪ್ಪಯ್ಯನವರೂ (Retired D.D.C.) ಒಬ್ಬರು. ಅವರ ಧರ್ಮಪ್ರೇಮ ಸಮಾಜಾಭಿಮಾನಿಗಳ ಗುರುತೆಂದು ಶಿವಯೋಗಮಂದಿರದ ಅಭಿಮಾನಿಗಳು ಹಿತಚಿಂತಕರೂ ಧರ್ಮ ಕಾರ್ಯಕ್ಕೆಂದು ಬದಾಮಿಯಲ್ಲಿ ಶಾಖಾ ಶಿವಯೋಗಮಂದಿರವನ್ನು ಶಾ.ಶ. ೧೮೪೮ (ಕ್ರಿ.ಶ. ೧೯೨೬) ರಲ್ಲಿ ಸ್ಥಾಪಿಸಿದರು. ಈ ಕಾರ್ಯದಲ್ಲಿ ಇಲಕಲ್ಲ ಶ್ರೀ ಮಹಾಂತಸ್ವಾಮಿಗಳು, ಶ್ರೀ ಜಡೇಸಿದ್ದಲಿಂಗಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಅಲ್ಲಲ್ಲಿ ಸಂಚರಿಸಿ ನಿಧಿಸಂಗ್ರಹ ಮಾಡಿದರು. ಅಂದವಾದ ಶಿವಾನುಭವ ಮಂಟಪವನ್ನು ಕಟ್ಟಿಸಿದರು. ಈ ಕಾರ್ಯದಲ್ಲಿ ಶ್ರೀ ಕಿತ್ತೂರ ಸಾಹೇಬರಲ್ಲಿ ವಿಶ್ವಾಸವುಳ್ಳ ಅನೇಕ ಜನರು ಸಹಾಯಸಲ್ಲಿಸಿದರು.   ಹುಬ್ಬಳ್ಳಿಯ ಶ್ರೀ ಬಸವಶೆಟ್ಟೆಪ್ಪ ನೀಲಿ ಅವರು ಒಂದು ಉತ್ತಮ ಭಾವಿಯನ್ನು ಕಟ್ಟಿಸಿದರು.  ಇಲ್ಲಿ ಪ್ರವಾಸಿ ಭಕ್ತರ ಮಾಹೇಶ್ವರ ಶಿವಪೂಜೆಗೆ ಪ್ರಸಾದಕ್ಕೆ ಅನುಕೂಲತೆಗಳನ್ನು ಊರ ಪ್ರಮುಖರು ಒದಗಿಸಿಕೊಟ್ಟರು.

 ಈ ಶಾಖಾಮಂದಿರದ ಸ್ಥಾಪನೆಯಿಂದ ಬದಾಮಿಯ ಭಕ್ತರಿಗೆ ಬಹಳ ಅನುಕೂಲವಾಯಿತು. ಆಗಾಗ ಇಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನಗಳಿಂದ ಜ್ಞಾನ ಪ್ರಸಾರವು ಜನತೆಯಲ್ಲಿ ಜಾಗ್ರತಿಯನ್ನು ತಂದಿತು ಇಲ್ಲಿ ಭಾವಿಯ ನೀರಿನ ಉಪಯೋಗಪಡೆದು ಒಂದು ಹಣ್ಣಿನ ತೋಟವನ್ನು ಬೆಳೆಸಿದ್ದರು. ಬಿಲ್ವಪತ್ರಿಯ ಬನವೂ ಇದೆ. ಕೆಲವು ವರ್ಷ ಇಲ್ಲಿ ಇಂಗ್ಲೀಷ ಶಾಲೆಯೂ ನಡೆಯಿತು. ಬದಾಮಿಯ ಶಾಲಾಮಂದಿರದಲ್ಲಿ ಮಂದಿರದ ಶ್ರೀಗಳವರು ಮತ್ತು ಪ್ರವಾಸಿ ಜನರು ತಂಗುವದಕ್ಕೆ ಅನುಕೂಲತೆಯನ್ನು ಕಲ್ಪಿಸಲಾಗಿದೆ.

 ಈ  ಶಾಖಾಶಿವಯೋಗಮಂದಿರಗಳೆಲ್ಲ ಶ್ರೀಗಳವರ ಕರ್ತೃತ್ವ ಶಕ್ತಿಯ ಜೀವಂತ ಪ್ರಮಾಣಗಳಾಗಿವೆ. ಶ್ರೀಗಳವರು ಮಂದಿರದ ಸಾಧಕರಿಗೆ ಕೇವಲ ಅನುಕೂಲ ಮಠಗಳಿಗೆ ಅಧಿಕಾರಿಗಳಾಗಲು ಪ್ರೇರಣೆಯನ್ನು ಕೊಡದೆ ಅವರು ತಮ್ಮ ತಪೋಬಲದಿಂದ ಹೊಸ ಮಂದಿರಗಳನ್ನೇ ಅಶ್ರಮಗಳನ್ನೇ ಸ್ಥಾಪಿಸಿ ತ್ಯಾಗಮಯ ಜೀವನವನ್ನು ಸಾಗಿಸುವಂತೆ ಬೋಧಿಸುತ್ತಿದ್ದರು. ಈ ಆಶ್ರಮಗಳೆಲ್ಲ ಮಂದಿರದ ಶಿವಯೋಗಿ ಸಾಧಕರ ಅನುಷ್ಠಾನ ಪ್ರಭಾವದ ಪರಿಣಾಮವಾಗಿಯೇ ಮೈದಾಳಿ ಬಂದಿವೆ, ಬರುತ್ತಿವೆ. ಅವುಗಳ ಮುಖಾಂತರ ಅನೇಕ ಬಗೆಯಾಗಿ ಜನತಾ ಜಾಗ್ರತಿಯ ಮಹಾಕಾರ್ಯಗಳು ಯಶಸ್ವಿಯಾಗಿ ಕೈಗೂಡಿವೆ.

ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು.

ಚಾಲ: ʼʼನೋಡಿರಿಲ್ಲಿದೆ. ಶಿವನ ಮಂದಿರʼʼ ಎಂಬಂತೆ,

ಬೇವು ಬೆಲ್ಲದ ಬೆರಕ ಸರಿಸಮ | ಮಾಡಿರೆನುವ ಯುಗಾದಿಯು ||

ʼʼಜೀವಿ ತಾ೦ ಸುಖ ದುಃಖ ಸಹಿಸಲಿ” ಎಂಬುದಿದುವೆ ಯುಗಾದಿಯು ||

ಯುಗ-ಯುಗಾಂತರ, ಕಾಲ ಗಣನೆಗೆ | ಯುಗದ ಆದಿ-ಯುಗಾದಿಯು ||

ನಗು.ವಸಂತದ ಚೈತ್ರಶುದ್ಧದ | ಮೊದಲ ದಿನವೆ ಯುಗಾದಿಯು ||

ಆ ಪರಮನವತಾರದೆಣಿಕೆಗೆ | ನಾಮವಿಹ ಯುಗ ನಾಲ್ಕಿವೆ ||

ದ್ವಾಪರ.ತ್ರೇತಾ.ಕೃತ.ಕಲಿಯು | ಎಂಬ ಯುಗಗಳು ನಾಲ್ಕಿವೆ | |

” ಕಲಿ. ಯುಗೇ…. ವೈವಶ್ವತಾಭಿಧ | ಮನು “ವಿನದಿದು ಯುಗಾದಿಯು ||

ಕಲಿತ, ಕಲಿಯುವ, ಕಲಿಸಬಯಸುವ | ಸರ್ವ ಜನರ ಯುಗಾದಿಯು  | |

ನೂರು ವರ್ಷದ ಜೀವಿ : ಮನುಜಗೆ | ಯುಗದ ಅರ್ಥವು ವರ್ಷವು ||

ಆರು ಋತುಗಳ ಮೊದಲ ಋತುವಿನ | ಮೊದಲ ದಿನ ಚಿರ ಹರ್ಷವು  ||

ಶಾಲಿ.ವಾಹನ.ಶಕದ ಮೊದಲಿನ | ಮೊದಲ ದಿನವೆ ಯುಗಾದಿಯು ||

ಬಾಲಿಕಾ. ಸಮ.ಮನದ ನಿರ್ಮಲ | ಚಿಗುರ ಚಲುವೆ ಯುಗಾದಿಯು ||

ಭುವಿಯ ಮಧ್ಯದ ರೇಖೆ ಮೇಲ್ಗಡೆ | ಸೂರ್ಯ ಬರಲು ಯುಗಾದಿಯು ||

ನವ.ನವೀನತೆ ಬಿಸಿಯ ಬೀಸುವ |ಸೂರ್ಯನಿಂದ ಯುಗಾದಿಯು ||

ಚೈತ್ರದಾದಿಯು : ಫಾಲ್ಗುಣಾ೦ತ್ಯವು | ಮಧ್ಯ ಕಾಲ ಯುಗಾದಿಯು ||

ಜಾತ್ರೆ.ರಥಕಿಹ ಧ್ವಜಗಳಂತೆಯೆ | ಚಿಗಿತ ಗಿಡದ ಯುಗಾದಿಯು ||

ಧರ್ಮ.ಶಾಸ್ತ್ರವು, ಕಾಲ.ಧರ್ಮವು | ತಿಳಿಪುದೊಂದೇ ಕಾಲವು ||

ಕರ್ಮ-ಗತಿ-ಮತಿ.ಸಿದ್ದಿ ಬಯಸಲು | ಯುಗದ ಆದಿ ಸುಕಾಲವು ||

ರಾಮಚಂದ್ರನು ಪಟ್ಟ ಕೇರಿದ್ದ | ಪರ್ವ ದಿನವೆ ಯುಗಾದಿಯು ||

ಭೂಮಿ,ಪಾಲಕ : ಶಾಲಿ.ವಾಹನ | ಮೆಚ್ಚಿ ಪೇಳ್ದ ಯುಗಾದಿಯು ||

ಹಾನುಗಲ್ಲ ಕುಮಾರ ಯೋಗಿಯು | ಯೋಗ ತಿಳಿಪ ಯುಗಾದಿಯು ||

ಜ್ಞಾನ ಕರ್ಮದ ಸಮ.ಸಮುಚ್ಚಯ | ಸಾರುತಿರುವ ಯುಗಾದಿಯು ||

* ಮೂರುವರೆ ಶುಭ ದಿನ ‘ದ ವರ್ಷಕೆ | ಮೊದಲ ಹಬ್ಬ ಯುಗಾದಿಯು ||

ಚಾರು.ಲತೆ ಗಿಡ ಪಲ್ಲವಿಪ ತೆರ | ಮಾಡುವುದಿದೆ ಯುಗಾದಿಯು ||

ಆ ಶಿಲಾ.ಯುಗ, ಈ ಕಲಾ.ಯುಗ | ಹಸಿರು ಗಿಡದ ಯುಗಾದಿಯು  ||

ಈಶ.ರವಿ.ಶಶಿ. ಕೃಪೆಯಿರುವನಕ | ಮುಂದುವರೆವ ಯುಗಾದಿಯು ||

ಯುಗ.ಯುಗಾಂತರ. ಸೌಖ್ಯ.ದಾಯಕ | ಯುಗದ ಆದಿ=ಯುಗಾದಿಯು ||

ಜಗಕೆ ಶಿವ=ʼʼಗುರುಮೂರ್ತಿ ʼʼಕರುಣಿಪ | ಕೃಪೆಯ ಚಿಹ್ನ ಯುಗಾದಿಯು ||

ಡಾ|| – ʼಗುರುಸಿದ್ದ ದೇವ’ ಕೆಳದಿ

ಸಂಗನಬಸವದೇವರು, ಎಂ.ಎ.ವಾರಣಾಸಿ

(  ಲಿಂ :ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ವಾರಣಾಸಿಯಲ್ಲಿ ವ್ಯಾಸಂಗ ಸಮಯದಲ್ಲಿ ಬರೆದ ಲೇಖನ)

ಸಂಗ್ರಹ ಸೌಜನ್ಯ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಯೋಗವೆಂದರೇನು ? ಈ ಪ್ರಶ್ನೆಗೆ ಸರ್ವಸಮ್ಮತ ಉತ್ತರವನ್ನೀಯುವದು ಅಸಂಭವ. ನಮ್ಮ ಆಚಾರ್ಯರು ಯೋಗ ಶಬ್ದದ ವ್ಯಾಖ್ಯೆಯನ್ನು ನಾನಾ ಪ್ರಕಾರವಾಗಿ ಮಾಡಿದ್ದಾರೆ, ಭಾಷಾವಿಜ್ಞಾನಿಗಳ ಪ್ರಕಾರ ಭಾರತದ ಅತ್ಯಂತ ಪ್ರಾಚೀನಗ್ರಂಥವಾದ ಋಗ್ವೇದದಲ್ಲಿ ರಥಕ್ಕೆ ಹೂಡುವ ಪಶುಗಳ ಬಂಧನಕ್ಕೆ ಯೋಗ ವೆಂದು ಹೇಳಲಾಗಿದೆ. ಇದು ಯೋಗ ಶಬ್ದದ ಪ್ರಾಚೀನವಾದ ಅರ್ಥ, ಯದ್ಯಪಿ ಋಕ್‌ಸಂಹಿತೆಯ ಕೆಲವು ಕಡೆ ಯೋಗ, ಯೋಗಕ್ಷೇಮ ಶಬ್ದಗಳು ಬಂದಿವೆ. ಆದರೆ ಅವುಗಳ ಅರ್ಥ ಯೋಗಸೂತ್ರ, ಉಪನಿಷತ್ತು, ಹಾಗೂ ಮಹಾಭಾರತಗಳಲ್ಲಿ ಕೊಡುವ ಅರ್ಥಕ್ಕಿಂತ ಅತ್ಯಂತ ಭಿನ್ನವಾಗಿದೆ.

ಪ್ರಾಚೀನ ವೈದಿಕಗ್ರಂಥಗಳಲ್ಲಿ ಯೋಗಶಬ್ದದ ಘನಿಷ್ಠ ಸಂಬಂಧವು ತಪಸ್ಸು, ಯಜ್ಞ, ಜಾದು, ತಂತ್ರ, ಮಂತ್ರ ಶಬ್ದಗಳ ಜೊತೆಗೆ ಇತ್ತೆಂದು ವೇದ್ಯವಾಗುತ್ತದೆ. ಇದಲ್ಲದೇ ಐತಿಹಾಸಿಕ ಯುಗದಲ್ಲಿ ತಪಸ್ಸಿನಿಂದ ಪ್ರಾಪ್ತವಾಗುವ ಶಕ್ತಿಗಳ ಮತ್ತು ಧ್ಯಾನದಿಂದ ಸಿದ್ಧಿಸಿದ ಸಿದ್ಧಿಗಳ ಅರ್ಥದಲ್ಲಿ ಯೋಗಶಬ್ದದ ಪ್ರಯೋಗವು ಕಂಡು ಬರುತ್ತದೆ.

ಹರಪ್ಪಾ ಮೊಹಂಜೋದಾರೊ ಸಂಸ್ಕೃತಿಯ ಸಮಯದಲ್ಲಿ ಯೋಗ ಮತ್ತು ಧ್ಯಾನ ಶಬ್ದಗಳ ಪ್ರಯೋಗದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಕಾಲದಲ್ಲಿ ದೊರೆತ ಕೆಲವು ನಾಣ್ಯಗಳ ಮೇಲೆ ಮತ್ತು ಪಾಷಾಣಖಂಡಗಳ ಮೇಲೆ ಕೆತ್ತಿದ ಧ್ಯಾನಸ್ಥ ಪುರುಷರನ್ನು ತಪಸ್ವಿಗಳನ್ನು ನೋಡಬಹುದು. ಅತಃ ಯೋಗ ಪರಂಪರೆಯು ಐದುಸಾವಿರ ವರ್ಷಗಳ ಪೂರ್ವದಲ್ಲಿ ಊರ್ಜಿತಾವಸ್ಥೆಯಲ್ಲಿ ಇತ್ತೆಂದು ಖಚಿತವಾಗಿ ಹೇಳಬಹುದು.

ವೈದಿಕಮಧ್ಯಕಾಲವು ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ಸಂಗಮ ಕಾಲವು. ಈ ಸಂಗಮದ ಪ್ರಭಾವವು ಜೈನ, ಬೌದ್ಧ, ಸಾಂಖ್ಯ, ಆಜೀವಿಕ ಮತ್ತು ಪ್ರಾಚೀನ ಉಪನಿಷತ್ತುಗಳ ಮೇಲೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಮೋಕ್ಷಪಾಯವಾದ ಯೋಗಮಾರ್ಗದಲ್ಲಿ ಸರ್ವಜಾತೀಯ ಮುಮುಕ್ಷಗಳಿಗೆ ಪ್ರವೇಶ ಸಿಗಬೇಕಾದರೆ ಈ ಎರಡೂ ಸಂಸ್ಕೃತಿಗಳ ಸಂಗಮದ (ಸಮ್ಮಿಶ್ರಣ) ಪರಿಣಾಮವೆಂದೇ ಹೇಳಬಹುದು. ಆದರೆ ಈ ಉದಾರತೆಯು ವೀರಶೈವ, ಜೈನ, ಬೌದ್ಧ ಧರ್ಮಗಳಲ್ಲಿ ಮೊದಲಿನಿಂದಲೂ ವಿದ್ಯಮಾನವಾಗಿತ್ತು, ಬ್ರಾಹ್ಮಣಪರಂಪರೆಯಲ್ಲಿ ಮಾತ್ರ ಈ ಪ್ರಗತಿಶೀಲ ವಿಚಾರವು ಕಾಲಾಂತರದಲ್ಲಿ ಪ್ರವೇಶ ಮಾಡಿತು.

ಐತಿಹಾಸಿಕ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಯೋಗವು ಶ್ರಮಣಯೋಗ ಬ್ರಾಹ್ಮಣಯೋಗವೆಂದು ಎರಡು ಪ್ರಕಾರ, ಶ್ರಮಣಯೋಗವು ಅನೇಶ್ವರವಾದಿಯಾದರೆ, ಬ್ರಾಹ್ಮಣಯೋಗವು ಬ್ರಹ್ಮಾತ್ಮವಾದಿಯು, ಈಶ್ವರವಾದಿಯು ಮತ್ತು ಪುರುಷವಾದಿಯೂ ಆಗಿದೆ. ವೈದಿಕಮಧ್ಯಕಾಲದಲ್ಲಿ ಸಾಂಖ್ಯ ಮತ್ತು ಯೋಗದ ಮೇಲೆ ಸೇಶ್ವರಿವಾಖ್ಯೆಗಳ ರಚನೆಯ ನಂತರ ಇವೆರಡುಗಳ ಗಣನೆಯು ಷಡ್‌ದರ್ಶನ ಗಳಲ್ಲಿ ಪ್ರಾರಂಭವಾಯಿತು.

ಮಹಾಭಾರತದ ಶಾಂತಿಪರ್ವದಲ್ಲಿ ಸಂಕಲಿತ ಯೋಗ ವಿಷಯಕ ಸಾಮಗ್ರಿಯು ಪ್ರಾಚೀನಕಾಲದಿಂದ ಕೇಳುತ್ತ ಬಂದಿರುವ ವಿವಿಧ ಕಥನಗಳನ್ನು ಆಶ್ರಯಿಸಿದೆ. ಕಾರಣ ಕ್ರಿ.ಶ. ಪೂರ್ವ ೬ ಅಥವಾ ೫ ನೆಯ ಶತಮಾನದ ಯೋಗಪರಂಪರೆಯನ್ನು ತಿಳಿಯ ಬೇಕಾದರೆ ಪ್ರಾಚೀನ ಪಾಲೀಸೂತ್ರಗಳನ್ನು ಉಪನಿಷತ್ತುಗಳನ್ನು ಹಾಗೂ ಜೈನಸೂತ್ರ ಗಳನ್ನು ಆಶ್ರಯಿಸಬೇಕು. ಪ್ರಾಚೀನ ಪಾಲೀಸಾಹಿತ್ಯವು ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಆ ಮೂರು ಭಾಗಗಳು ವಿನಯಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕಗಳೆಂದು ಕರೆಯಲ್ಪಡುತ್ತಿವೆ. ಅಶೋಕನ ಸಮಯದಲ್ಲಿ ರಚಿತ ಸುತ್ತಪಿಟಕದ ಖುದ್ದಕನಿಕಾಯಗಳಲ್ಲಿ ಬೌದ್ಧ ಯೋಗ ವಿಷಯಕ ಸಾಮಗ್ರಿಯು ಪರ್ಯಾಪ್ತವಾಗಿ ದೊರೆಯುತ್ತದೆ. ಭಗವಾನ ಗೌತಮಬುದ್ದನು ಪೂರ್ವಾಶ್ರಮದಲ್ಲಿ ಅತ್ಯಂತ ಕಠೋರವಾದ ಯೋಗಸಾಧನೆಯನ್ನು ಮಾಡಿದನೆಂದು ಪ್ರತೀತಿ ಇದೆ. ಇಷ್ಟೆ ಅಲ್ಲ, ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ ಕೇವಲ ಅಸ್ಥಿ ಪಂಜರವೂ ಆದ ಆತನ ಶಿಲಾಪ್ರತಿಮೆಗಳು ಇನ್ನೂ ಅನೇಕ ಕಡೆಗೆ ದೊರೆಯುವವು. ಆ ಕಾಲದಲ್ಲಿ ಅವನು ಸರ್ವಶ್ರೇಷ್ಠಯೋಗಿ ಮತ್ತು ಧ್ಯಾನಮಾರ್ಗದ ಸರ್ವಶ್ರೇಷ್ಟ ಉಪದೇಶಕನೆಂದು ಪಾಲಿಸಾಹಿತ್ಯವು ಘೋಷಿಸುತ್ತದೆ.

ನಿರ್ವಾಣಧಾತು(ಧರ್ಮ ಧಾತುವಿನ ಪ್ರಾಪ್ತಿಯೇ ಬೌದ್ಧಯೋಗದ ಪರಮೋದ್ದೇಶ. ಈ ಯೋಗದಲ್ಲಿ ಸ್ಮೃತಿ, ಧ್ಯಾನ ಸಮಾಧಿ, ಶಮಥ, ವಿಪಶ್ಯನಾ ಮೊದಲಾದವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಬೌದ್ಧಯೋಗದ ಅಷ್ಟಾಂಗಗಳಲ್ಲಿ ೪ ಸಮ್ಯಕ್ ದೃಷ್ಟಿಗೆ ಪ್ರಥಮಸ್ಥಾನವಿದೆ, ಹಾಗೂ ಬೌದ್ಧರ ದಾರ್ಶನಿಕ ಪಕ್ಷವು ಸಮಾವೇಶಗೊಂಡಿದೆ. ಬೌದ್ಧರ ಅನೇಕ ಗ್ರಂಥಗಳಲ್ಲಿ ನಾನಾ ಪ್ರಕಾರದ ಧ್ಯಾನ-ಸಮಾಧಿಗಳ ವರ್ಣನೆಯು ಮತ್ತು ಅನೇಕ ಯೋಗಿಗಳ ಉಲ್ಲೇಖವು ಆ ಕಾಲದ ಭವ್ಯಯೋಗಪರಂಪರೆಯನ್ನು ಸೂಚಿಸುತ್ತದೆ.

ಯೋಗಪರಂಪರೆಯ ಇತಿಹಾಸದಲ್ಲಿ ಪತಂಜಲಿ ಮಹರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ಅವನ ಕಾಲ ೩ನೆಯ ಶತಮಾನ, ಅವನ ಕಾಲದಲ್ಲಿಯೇ ಯೋಗವು ವ್ಯಾವಹಾರಿಕ ಮಾರ್ಗದಿಂದ ಐಶ್ವರೀಯ ದಾರ್ಶನಿಕ ಸ್ವರೂಪವನ್ನು ಮೈದಾಳಿತು * ಯೋಗಸೂತ್ರ”ದಲ್ಲಿ ಉಪನಿಷದ್‌ದಾಂತ, ಸಾಂಖ್ಯ ಮತ್ತು ಪ್ರಾಚೀನಯೋಗ ಪದ್ಧತಿಯ ಸಮನ್ವಿತ ರೂಪವನ್ನು ನಿರೂಪಿಸಲು ಪ್ರಯಾಸಮಾಡಲಾಯಿತು. “ಯೋಗಶ್ಚಿತ್ತವೃತ್ತಿ ನಿರೋಧಃ ” ವೆಂಬ ವ್ಯಾಖ್ಯೆಯು ಸರ್ವತ್ರ ಪ್ರಾಸಾರವಾಯಿತು.

ಪಾತಂಜಲಯೋಗದ ಪರಮಲಕ್ಷ್ಯವು ವಿವೇಕಖ್ಯಾತಿ, ಭೇದಜ್ಞಾನವೇ ವಿವೇಕ ಖ್ಯಾತಿ. ಇದರ ಪ್ರಾಪ್ತಿಗಾಗಿ ಏಕಾಗ್ರಭೂಮಿಯ ಅನುಸಂಧಾನ ಪರಮಾವಶ್ಯಕ ವಾಗಿದೆ. ಸಾಧಕನು ಏಕಾಗ್ರಭೂಮಿಯ ಅನುಸಂಧಾನದಿಂದ ನಿರೋಧಭೂಮಿಯಲ್ಲಿ ಪ್ರವೇಶಮಾಡುವನು, ಅಲ್ಲಿ ಅವನಿಗೆ ಪ್ರಕೃತಿ ಪುರುಷರ ವಿಯೋಗಾವಸ್ಥೆಯ ಅನುಭವವು ಆಗುವದು. ಈ ಅನುಭವವು ನಿರ್ಮಲ ಪುರುಷನ ಅನುಭವವು ಇದುವೇ ಸಮಾಧಿ. ಪಾತಂಜಲ ಯೋಗಾನುಸಂಧಾನದಲ್ಲಿ ವ್ಯಷ್ಟಿಗತ ಮತ್ತು ಸಮಷ್ಟಿಗತ ರೂಪದ ಅಸ್ತಿತ್ವಕ್ಕೆ ಸ್ಥಾನವಿಲ್ಲ. ಕಾರಣ ಪ್ರಭುದೇವರು ಇದಕ್ಕೆ ಅಳಿದುಕೊಡುವ ಯೋಗವೆಂದು ಕರೆದಿದ್ದಾರೆ.

ಶೈವಶಾಸ್ತ್ರಗಳು ಮೊದಲಿನಿಂದಲೂ ಯೋಗಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿವೆ. ಪಾಶುಪತಸೂತ್ರದಲ್ಲಿ ಯೋಗವು ಐದು ತತ್ವಗಳಲ್ಲಿ ಒಂದಾಗಿದೆ ಎಂದು ಉಕ್ತವಾಗಿದೆ. ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ, ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಇರುತ್ತದೆ. ಇದರಿಂದ ಆಗಮ ವಾಙ್ಮಯದಲ್ಲಿ ಯೋಗಕ್ಕಿದ್ದ ಮಹತ್ವವು ಸ್ಪಷ್ಟವಾಗುವದು. ಸುಪ್ರಭೇದಾಗಮ ಮತ್ತು ಈಶಾನ ಶಿವಯೋಗಿಗಳ * ಈಶಾನ ಶಿವ ಗುರುದೇವ ಪದ್ಧತಿ “ಗಳಲ್ಲಿ ವರ್ಣಿತವಾದ ಯೋಗವು ಯೋಗ ದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ. ಆದರೂ ಕಿಂಚಿತ್‌ ವ್ಯತ್ಯಾಸ ಇಲ್ಲದೇ ಇಲ್ಲ. ಈಶ್ವರನ ಪ್ರತಿಬಿಂಬವನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ, ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರೀಕರಿಸಿ ಧ್ಯಾನವನ್ನು ಬರಿಸಿ ಸಮಾಧಿ ಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುತ್ತದೆ. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿ ಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವದೊಂದು ಅದರ

ವೈಶಿಷ್ಟ್ಯ.

ಶಿವಯೋಗ ಪ್ರದೀಪಕಾರರು ಯೋಗವನ್ನು ಮಂತ್ರಯೋಗ, ಲಯಯೋಗ. ಹಠಯೋಗ, ರಾಜಯೋಗ ಶಿವಯೋಗವೆಂದು ಐದುವಿಧವಾಗಿ ಹೇಳುವರು. ಓಂಕಾರ ಮೊದಲಾದ ಮಂತ್ರಗಳನ್ನು ಜಪಿಸುವವರು ಮಂತ್ರ ಯೋಗಿಗಳೆಂದೂ, ಮನೋಮಾರುತನೊಡನೆ ಕೂಡುವ ಚಿತ್ರವನ್ನು ಆತ್ಮಧೇಯದಲ್ಲಾಗಲಿ ಅಥವಾ ನಾದದಲ್ಲಾಗಲಿ ತಲ್ಲೀನವನ್ನಾಗಿ ಮಾಡುವವರು ಲಯಯೋಗಿಗಳೆಂದೂ ಅಷ್ಟಾಂಗ ಮಾರ್ಗಗಳಿಂದಲೂ ಮುದ್ರಾಕರಣ ಬಂಧಗಳಿಂದಲೂ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿಗಳೆಂದೂ, ಮನೋವೃತ್ತಿ ಯಿಲ್ಲದವರೂ, ಜ್ಞಾನದಿಂದ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದವರೂ, ರಾಜ ಯೋಗಿಗಳೆಂದೂ, ೧೦ ಶಿವಜ್ಞಾನ, ಶಿವಭಕ್ತಿ ಮತ್ತು ಶಿವಧ್ಯಾನದಿಂದ ಕೂಡಿದ ಶಿವಾರ್ಚನೆಯನ್ನು ಮಾಡುವವರು ಶಿವಯೋಗಿಗಳೆಂದೂ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ಶಿವಯೋಗವೇ ಮಿಗಿಲಾದುದು. ಯದೃಪಿ ರಾಜ ಯೋಗಕ್ಕೂ ಶಿವಯೋಗಕ್ಕೂ, ನಿಜವಾಗಿ ಭೇದವಿಲ್ಲವೆಂದು ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಯ ಸಲುವಾಗಿ ಭೇದವು ಹೇಳಲ್ಪಟ್ಟಿದೆ ಎಂದು ಶಿವಯೋಗ ಪ್ರದೀಪಕಾರ ಮತ. ಆದರೆ ಪ್ರಭುದೇವರು ಕೆಳಗಿನ ವಚನದಿಂದ ಎರಡೂ ಯೋಗಗಳಲ್ಲಿ ಮಹದಂತರವಿದೆಯೆಂದು ವ್ಯಕ್ತವಾಗದೇ ಇರಲಾರದು,

ಅಷ್ಟಾಂಗಯೋಗದಲ್ಲಿ ಯಮನಿಯಮಾ ಆಸನ ಪ್ರಾಣಾಯಾನು ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂದು ಎರಡು ಯೋಗ ಉಂಟು,

ಅಲ್ಲಿ ಅಳಿದು ಕೂಡುವದೊಂದು ಯೋಗ, ಅಳಿಯದೇ ಕೂಡುವದೊಂದು ಯೋಗ,

ಈ ಎರಡೂ ಯೋಗದೊಳಗೆ ಅಳಿಯದೇ ಕೂಡುವ ಯೋಗವರಿದು ಕಾಣಾ ಗುಹೇಶ್ವರಾ?”

ಇಲ್ಲಿ ಅಳಿದುಕೂಡುವ ಯೋಗ ಮತ್ತು ಉಳಿದು ಕೊಡುವ ಯೋಗದ ಬಗ್ಗೆ ಸಂಕ್ಷಿಪ್ತವಾಗಿ ವಿವೇಚಿಸೋಣ. ಪತಂಜಲಿಯ ರಾಜಯೋಗವೇ ಅಳಿದು ಕೊಡುವ ಯೋಗ. ಅಲ್ಲಿದು ಕೂಡುವ ಯೋಗದಲ್ಲಿ ಬ್ರಹ್ಮಸಾಕ್ಷಾತ್‌ಕಾರವಾದ ನಂತರ ಜೀವದ ಅಸ್ತಿತ್ವವೇ ಉಳಿಯಲಾರದು. ಅರ್ಥಾತ್ ಮುಕ್ತಾವಸ್ಥೆಯಲ್ಲಿ ಜೀವನಿಗೆ ತನ್ನ ಸ್ವರೂಪದ ಬೋಧವು ಆಗಲಾರದು. ತನ್ನ ಸ್ವರೂಪದ ಬೋಧವಿಲ್ಲದ ಪರಬ್ರಹ್ಮ ಸಾಕ್ಷಾತ್ಕಾಕಾರ ಸಾಧನವಾದ ರಾಜಯೋಗವು- ಸರ್ವಶ್ರೇಷ್ಠಯೋಗವು ಆಗಬಹುದೆ ! ಕಾರಣ ಅಲ್ಲಮಪ್ರಭುದೇವರು ಈ ಯೋಗವನ್ನು ಖಂಡಿಸಿದ್ದಾರೆ.

ಉಳಿದು ಕೂಡುವ ಯೋಗವೇ ಶಿವಯೋಗ, ಶಿವಯೋಗದಲ್ಲಿ ಅಂಗನಿಗೆ ತನ್ನ ಸ್ವರೂಪದ ಬೋಧವು ಇರುತ್ತದೆ. ಕಾರಣ ಪ್ರಭುದೇವರು ಇದಕ್ಕೆ ಉಳಿದುಕೂಡುವ ಯೋಗವೆಂದು ಕರೆದಿದ್ದಾರೆ. ಶಿವಯೋಗದಲ್ಲಿ ಸಾಮರಸ್ಯಕ್ಕೆ ಅತಿಮಹತ್ವವಿದೆ. ಸಮಾನ ಅಸ್ತಿತ್ವಗಳಾದ ಎರಡರ (ಅಂಗ ಲಿಂಗ) ಹೊಂದಾಣಿಕೆಯೇ ಸಾಮರಸ್ಯ, ಸಾಮರಸ್ಯವು ಭಾವಗತ ಸಾಮರಸ್ಯ, ಜ್ಞಾನಗಳ ಸಾಮರಸ್ಯ, ಸ್ವರೂಪಗತ ಸಾಮರಸ್ಯ ವೆಂದು ಮೂರು ಪ್ರಕಾರವಾಗಿವೆ. ಹಲವಾರು ತಾಂತ್ರಿಕಯೋಗಗಳು ಜ್ಞಾನಗತ ಮತ್ತು ಭಾವಗತ ಸಾಮರಸ್ಯದಲ್ಲಿ ಇತಿಶ್ರೀಯನ್ನು ಹೊಂದಿದರೆ ಕೆಲವು ಶೈವಯೋಗ ಗಳು ಸ್ವರೂಪಗತ ಸಾಮರಸ್ಯದಲ್ಲಿ ಮುಕ್ತಾಯಗೊಳ್ಳುತ್ತವೆ. ಈ ಎಲ್ಲ ಯೋಗಗಳು ಅಪೂರ್ಣಗಳಾಗಿವೆ. ಉಪರೋಕ್ತ ಮೂರು ಪ್ರಕಾರದ ಸಾಮರಸ್ಯಗಳು ಶಿವಯೋಗ ದಲ್ಲಿ ಪ್ರಾಪ್ತವಾಗುತ್ತವೆ. ಈ ತ್ರಿವೇಣಿ ಸಂಗಮವು ಶಿವಯೋಗವನ್ನು ಬಿಟ್ಟು ಇನ್ನುಳಿದ ಯಾವ ಯೋಗದಲ್ಲಿಯೂ ಆಗಲು ಸಾಧ್ಯವಿಲ್ಲ, ಜೀವಸ್ವರೂಪದ ಕೇಂದ್ರಬಿಂದುವಿನಿಂದ ಸತ್ಯಾನ್ವೇಷಣ ಪ್ರಾರಂಭವಾಗಿ ಮನಃ ಅದೇ ಬಿಂದುವಿನಲ್ಲಿ ಸಮ ಸ್ವರೂಪ ವನ್ನು ಕಾಣುವದೇ ಪೂರ್ಣತತ್ವವೆನಿಸಿಕೊಳ್ಳುತ್ತದೆ, ಅಂಗಭವದಿಂದ ಲಿಂಗದ ಕಲೆಗಳನ್ನು ಭಕ್ತಗಳನ್ನು ಅಳವಡಿಸಿಕೊಂಡು ಅಂಗಗತಸ್ವರೂಪವನ್ನೇ ಲಿಂಗಗಳಸ್ವರೂಪವೆಂದು ಭಾವಿಸುವುದೇ ಪೂರ್ಣತ್ವ, ಇದುವೇ ಶಿವಯೋಗ ಇದುವೇ ಪರಮಯೋಗ.

ಶಿವಯೋಗದ ಪ್ರಾಚೀನತೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಗಮ ವಾಙ್ಮಯದಲ್ಲಿ ಶಿವಯೋಗ ಶಬ್ದದ ಪ್ರಯೋಗವು ಕಂಡುಬರುತ್ತದೆ. ಪ್ರಾಚೀನ ಶೈವಾಚಾರ್ಯರು ತಮ್ಮನ್ನು ಶಿವಯೋಗಿಗಳೆಂದು ಕರೆದುಕೊಂಡಿದ್ದಾರೆ. ಸೋಮಾ ನಂದನು ನಿರಂತರ ಶಿವಸಮಾವೇಶ ಭಾವದಲ್ಲಿ ಇರುವೆನೆಂದು ಹೇಳಿಕೊಂಡಿರುತ್ತಾನೆ. ಹಾಗೆ ಶಿವಯೋಗವು ಬಹುಪ್ರಾಚೀನದವರೆಗೆ ಹೋಗುತ್ತದೆ. ಆದರೆ ಮೊಟ್ಟಮೊದಲು ಅದರ ನಿಶ್ಚಿತ ರೂಪವನ್ನು ಸಿದ್ಧಾಂತಶಿಖಾಮಣಿ ಮತ್ತು ಶಿವಯೋಗ ಪ್ರದೀಪಿಕೆಯಲ್ಲಿ ಕಾಣುತ್ತೇವೆ.

ಯೋಗ ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ನಿರೂಪಿಸಲಾಯಿತು. ಇಂದು ಶಾಂತಮಯ ಜೀವನಕ್ಕಾಗಿ ಯೋಗವು ಅತ್ಯಾವಶ್ಯಕವಾಗಿವೆ. ಕೇವಲ ಭೌತಿಕ ಉನ್ನತಿಯಿಂದ ಜೀವನದಲ್ಲಿ ಪರಮಶಾಂತಿಯು ಸಿಗಲಾರದು. ಕಾರಣ ಯೋಗ ಕಲಿಸುವ ಶಾಲೆಗಳನ್ನು ನಮ್ಮ ಸಮಾಜದ ಧರ್ಮಗುರುಗಳು ಸ್ಥಾಪಿಸಬೇಕಾಗಿ ಸವಿನಯಪ್ರಾರ್ಥನೆ:

ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ,

( ಪೂಜ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

ಬೆಕ್ಕಿನ ಕಲ್ಮಠ ಶಿವಮೊಗ್ಗ ಹುಬ್ಬಳ್ಳಿಯ ವ್ಯಾಸಂಗ ಸಮಯದಲ್ಲಿ ಬರೆದಿದ್ದು)

ʼʼಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ, ಆ ಶರಣ ಬಂದು ಶಿವಪುರವ ಕೈಲಾಸ ಮಾಡಿ ರುದ್ರಗಣ, ಪ್ರಮಥಗಣಂಗರೆಲ್ಲರ ಹಿಡಿತಂದು, ಅಸಂಖ್ಯಾತರೆಂದು ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಳವ ಶೈತದೃಷ್ಟ ಪವಾಡದಿಂದ ಮೆರೆದು ತೋರಿ, ಜಗವರಿಯ ಶಿವಾಚಾರದ ಧ್ವಜವನೆತ್ತಿಸಿ, ಮರ್ತ್ಯಲೋಕ ಶಿವಲೋಕವೆರಡಕ್ಕೆ

ನಿಚ್ಚಣಿಕೆಯಾದನು……. ನೋಡಾ ಸಿದ್ದರಾಮಯ್ಯ

ಇದು ಪ್ರಭುದೇವರ ವಚನ; ಬಸವಣ್ಣನವರನ್ನು ಕುರಿತದ್ದು. ಇಂದಿಗೆ ಎಂಟು ನೂರು ವರ್ಷಗಳಾಚೆ : ಇಂದು ಪ್ರಗತಿ, ಕ್ರಾಂತಿ ಅನ್ನುವುದೆಲ್ಲ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು; ಅದೊಂದು ವಿಸ್ಮಯಕಾರಕ ಕ್ರಾಂತಿ, ಕನ್ನಡ ನಾಡಿನಲ್ಲಿ,  ಕನ್ನಡಿಗರಿಂದ, ಕನ್ನಡದ ಮೂಲಕ, ಬರಿ ಹನ್ನೆರಡು ವರ್ಷಗಳಲ್ಲಿ ಈ ಕ್ರಾಂತಿ : ಧರ್ಮ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಹೊಸ ಜೀವ ತುಂಬಿತು; ಈ ನಾಡು ಬೆಳಗಿನ ಭೂಮಿಯಾಯಿತು. ಚಂದನದ ಸನ್ನಿಧಿಯಿಂದ ಬೇವು- ಬೆಬ್ಬುಲಿ ಮರಗಳು ಪರಿಮಳಿತವಾಗುವಂತೆ : ಶರಣರ ಸಂಗದಿಂದ ಪಾಮರರು ಪೂತಾತ್ಮರಾದರು, ಕೀಳು ಕಸಬು ಕಾಯಕವಾಯಿತು. ಜನವಾಣಿ ದೇವವಾಣಿಯಾಯಿತು, ಹಾಳು ಹೆಣ್ಣು ಕಪಿಲಸಿದ್ಧ ಮಲ್ಲಿಕಾರ್ಜುನವಾಯಿತು, ಕತ್ತಲೆ ಸತ್ತು ಬೆಳಕು ಬೀದಿವರಿಯಿತು. ಇದರಿಂದ ಪ್ರಪಂಚವೇ ಬೆರಗಾಗಿ, ಕನ್ನಡ ನಾಡನ್ನು ನೋಡುವಂತಾಯಿತು.

ಇಂತಹದೇ ಒಂದು ಪ್ರಸಂಗ : ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ, ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಸಂಕ್ರಮಣ ಕಾಲದಲ್ಲಿ ನಡೆಯಿತು. ೧೨ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣ ಅಧ್ವರ್ಯುವಾದರೆ, ಈ ಕಾಲದಲ್ಲಿ ಒಬ್ಬ ವೀರ ಸನ್ಯಾಸಿಯ ನೇತೃತ್ವದಲ್ಲಿ ನಾಡು ಹೊಸ ಬೆಳಗನ್ನು ಕಂಡಿತು. ಆ ಸನ್ಯಾಸಿಯ ಪ್ರೇರಣೆಯಿಂದ ಸತ್ತಂತವರು ಬಡಿದೆಚ್ಚತ್ತರು, ಕಚ್ಚಾಡುವವರು ಒಲಿದು ಒಂದಾದರು, ಒಟ್ಟಿಗೆ ಬಾಳುವ ಹದನನು ಕಲಿತರು. ಆ ಮಹಾನುಭಾವ ಭಕ್ತಿಯಲ್ಲಿ ಬಸವಣ್ಣನಾಗಿ, ಜ್ಞಾನದಲ್ಲಿ ಚನ್ನಬಸವಣ್ಣನಾಗಿ, ವೈರಾಗ್ಯದಲ್ಲಿ ಪ್ರಭುದೇವನಾಗಿ, ಉಳಿದ ಕಾಯಕಂಗಳಲ್ಲಿ ಶಿವಶರಣರಂಶನಾಗಿ ಕಂಗೊಳಿಸಿದ ಆ ಕಾರುಣ್ಯಮೂರ್ತಿಯೇ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು.

* ಭೂತಿ, ವಿಭೂತಿಯಾಯಿತು ʼʼ :

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಬಸವಯ್ಯ- ನೀಲಮ್ಮ ದಂಪತಿಗಳ ಚಿದ್ಗರ್ಭದಿಂದ, ಕ್ರಿ. ಶ. ೧೮೬೭ ರಲ್ಲಿ ಶ್ರೀಗಳು ಜನಿಸಿದರು. ಬಡತನದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಹಾಲಯ್ಯ : ʼʼಜಗತ್ತೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬʼʼ ಎಂಬ ಉದಾತ್ತ ತತ್ತ್ವವೇ ಮೂರ್ತಿವೆತ್ತಂತಿದ್ದ ಈ ಮಹಾನುಭಾವ, ಒಂದು ಕುಟುಂಬದ ಉದ್ಧಾರಕ್ಕೆ ಹೇಗೆ ನಿಂತಾನು. ಮನೆಯನ್ನು ತೊರೆದು, ಹುಬ್ಬಳ್ಳಿಗೆ ಬಂದು, ಆರೂಢಮಠದಲ್ಲಿದ್ದು, ಶಾಸ್ತ್ರಾಭ್ಯಾಸ ಮಾಡಿ, ಮುಂದೆ ಎಳಂದೂರು ಬಸವಲಿಂಗ ಸ್ವಾಮಿಗಳ ಶಿಷ್ಯತ್ವವನ್ನು ಪರಿಗ್ರಹಿಸಿ, ವಿದ್ಯಾ ವಿನಯಸಂಪನ್ನನಾಗಿ, ಯೋಗಾಸನ ಬಲ್ಲಿದನಾಗಿ ನಂತರದ, ದೀರ್ಘಕಾಲದ ತಪಸ್ಸಿನ ಪ್ರಭಾವ ಎಲ್ಲೆಡೆ ಚಲ್ಲವರಿಯಿತು. ಹಾನಗಲ್ಲ ವಿರಕ್ತ ಮಠ ಇವರ ಬರವನ್ನು ಹಾರೈಸಿತ್ತು. ಹಿರಿಯರ ಕೋರಿಕೆಯ ಮೇರೆಗೆ ಅಧಿಕಾರವನ್ನು ಹೊಂದಿ, ಹಾಲಯ್ಯ : ಹಾನಗಲ್ಲ ಕುಮಾರ ಸ್ವಾಮಿಗಳಾದರು. ಭೂತಿ, ವಿಭೂತಿಯಾಯಿತು.

 ಹಾನಗಲ್ಲ ಕುಮಾರ ಶಿವಯೋಗಿಗಳು : ಸಮಾಜಕ್ಕೊಂದು ಪರಿವರ್ತನೆಯ ಕಾಲ. ಅವರ ವಿದ್ಯುತ್ ಸ್ಪರ್ಷದಿಂದ ಸತ್ತಂತಿರುವವರು ಮರು ಹುಟ್ಟು ಪಡೆದರು, ಮೂಕರಾದವರು ವಾಗ್ಮಿಗಳಾದರು, ಪಾಪಿಗಳು ಪವಿತ್ರರಾದರು, ಕುರುಡರಿಗೆ ಕಣ್ಣು ಬಂದಿತು, ದುರ್ಬಲರು ಭೀಮ ಬಲರಾದರು. ಅವರದು ಅದ್ಭುತ ಶಕ್ತಿ; ಅದು ನಾಡಿಗೆ ನಾಡನ್ನೇ ಹಿಡಿದೆತ್ತಿತು. ಅವರು ಗೈದ ಮಹತ್ತರ ಕಾರ್ಯಗಳಲ್ಲಿ : ಅಖಿಲ ಭಾರತ ವೀರಶೈವ ಮಹಾ ಸಭೆ ಹಾಗೂ ಶಿವಯೋಗ ಮಂದಿರಗಳ ಸ್ಥಾಪನೆ ಪ್ರಮುಖವಾದವುಗಳು. ಇವೆರಡೂ ವೀರಶೈವ ಸಮಾಜ ಪುರುಷನ ಶ್ವಾಸಕೋಶಗಳು.

*ʼʼ ವೀರಶೈವ ಮಹಾ ಸಭೆ ʼʼ:

ಪಾಶ್ಚಾತ್ಯ ಶಿಕ್ಷಣದ ಯಾವ ಗಾಳಿಯ ಸೋ೦ಕಿಲ್ಲದ ಶ್ರೀಗಳು, ಯಾವ ಸಮಾಜದಲ್ಲಿ ಸಾರ್ವಜನಿಕ ಸಮ್ಮೇಲನ ನಡೆಯದಿದ್ದ ಕಾಲದಲ್ಲಿ, ೬೫ ವರ್ಷಗಳ ಹಿಂದೆ ಜನಾಂಗವು ಮಲಗಿದ್ದ ಕಾಲದಲ್ಲಿ, ಸಮಾಜಕ್ಕೊಂದು ವ್ಯವಸ್ಥಿತ ಸಂಘಟಿತ ರೂಪ ಕೊಡಲು, ನವ ಚೈತನ್ಯ ತುಂಬಲು ಏಕಮೇವ ಸಾಧನವಾದ, ಅಖಿಲ ಭಾರತ ವೀರಶೈವ ಮಹಾ ಸಭೆಯನ್ನು ಸಮಾಜದ  ಪ್ರಮುಖರನ್ನೊಳಗೊಂಡು ೧೯೦೪ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿ, ಪ್ರಥಮ ಅಧಿವೇಶನ ನಡೆಸಿದುದು ನಿಜಕ್ಕೂ ಅಚ್ಚರಿಯನ್ನುಂಟುಮಾಡುವದು ಮತ್ತು ಶ್ರೀಗಳಲ್ಲಿದ್ದ ಅದ್ವಿತೀಯವಾದ ಮುಂದಾ ಲೋಚನೆಯ ದ್ಯೋತಕವಾದುದು. ಈ ಮಹಾ ಸಭೆಯಿಂದ ಆದ ಪ್ರಯೋಜನಗಳು ಅನೇಕ. ಲಿಂಗಾಯತ ವಿದ್ಯಾವರ್ಧಕ ಪಂಡ ಏರ್ಪಟ್ಟು, ವೀರಶೈವರಿಗೆ ಇಂಗ್ಲೀಷ್  ವಿದ್ಯಾಭ್ಯಾಸಕ್ಕೆ ಸಹಾಯವಾಯಿತು; ವೀರಶೈವರ ಅಭಿವೃದ್ಧಿಗೆ ನಿಧಿ ಏರ್ಪಟ್ಟಿತ್ತು. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಜಾಗ್ರತಿಗೆ ಸಹಕಾರಿಯಾಯಿತು.

“ʼ ಶಿವಯೋಗಮಂದಿರ ʼʼ :

ಸಮಾಜದ ಪ್ರಗತಿಯನ್ನು ಬಯಸುವ ಕುಮಾರ ಶಿವಯೋಗಿಗಳು, ವೀರಶೈವ ಆಚಾರ ವಿಚಾರಗಳು ಶುದ್ಧವಾಗಿ ಇರಬೇಕಾದರೆ, ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡುಪಾಗಿಡಬಲ್ಲ, ಶಿವಯೋಗಿ ಸಿದ್ಧರ ಸಮೂಹವೊಂದು ಸಿದ್ಧವಾಗುವ ವರೆಗೆ, ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡಿದ್ದರು. ಗುರು. ಜಂಗಮರು ; ತಜ್ಞರೂ, ಸುಶುಕ್ಷಿತರು, ನಡೆ ನುಡಿ ಗಳಲ್ಲಿ ಶುದ್ಧರೂ, ಶಿವಯೋಗದಲ್ಲಿ ನಿಷ್ಠರೂ ಆಗಿರಬೇಕೆಂದೂ, ಪ್ರತಿಭಾಶಾಲಿ ಭಕ್ತರನ್ನು, ಶಿವಾನು ಭವಿಗಳನ್ನು ತಯಾರು ಮಾಡುವ ಘನವಾದ ಉದ್ದೇಶ ಈಡೇರಬೇಕಾದರೆ, ಒಂದು ಯೋಗ ಮಂದಿರ ಸ್ಥಾಪಿಸಬೇಕೆಂದು ಸಂಕಲ್ಪಿಸಿ, ಒ೦ಟಮುರಿ ದೇಸಾಯರ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕನೆ ಅಧಿವೇಶನದಲ್ಲಿ ನಿಶ್ಚಯಿಸಲಾಯಿತು. ಇಲಕಲ್ಲ ವಿಜಯ ಮಹಾಂತಸ್ವಾಮಿಗಳು ತೋರಿದ ಕೊಟ್ಟೂರು ಬಸವೇಶ್ವರ ತಪೋವನ, ಬನಶಂಕರಿ-ಮಹಾಕೂಟ ಇವುಗಳ ಮಧ್ಯದಲ್ಲಿ, ಮಲಾಪಹಾರಿ ದಂಡೆಯ ಮೇಲೆ ಕ್ರಿ. ಶ. ೧೯೦೯ ರಲ್ಲಿ ಶಿವಯೋಗ ಮಂದಿರ ಸ್ಥಾಪನೆಯಾಯಿತು.

 ಇಂದಿನಿಂದ, ಕುಮಾರ ಶಿವಯೋಗಿಗಳ ಕಾರ್ಯಕ್ಷೇತ್ರ ಸಮಾಜವಾದರೆ : ಕೇಂದ್ರ ಬಿಂದು ಶಿವಯೋಗಮಂದಿರವಾಯಿತು. ವಟುಗಳು ಬಂದರು, ಯೋಗಪಟುಗಳಾಗತೊಡಗಿದರು; ಜನತೆಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಕೈದೀವಿಗೆಯಾದರು. ಕುಮಾರ ಶಿವಯೋಗಿ ಗಳು ಯಾವ ಪೀಠಕ್ಕೂ ಜಗದ್ಗುರುಗಳಾಗಲಿಲ್ಲ; ಆದರೆ, ಜಗದ್ಗುರುಗಳಂಥವರನ್ನು ತಯಾರು ಮಾಡುವ ಸಂಸ್ಥೆ ಕಟ್ಟಿದರು. ಧರ್ಮ ಪ್ರಸಾರಕ್ಕೆ ಯೋಗ್ಯ ಸಾಧನ : ಕೀರ್ತನ, ಪುರಾಣ. ಇಂತಹ ಕಲೆಯನ್ನು  ಪುನರುಜೀವನಗೊಳಿಸುವದರೊಂದಿಗೆ, ಅನೇಕ ಅಂಗಹೀನ ಬಡ ಮಕ್ಕಳಿಗೆ ಕಲ್ಯಾಣವಾಗುವದೆಂದು ತಿಳಿದರು. ಶಾಸ್ತ್ರಕಾರರು, ಕವಿಗಳು, ಗವಾಯಿಗಳು, ವೈದ್ಯರೂ, ಸಿದ್ಧರೂ, ಭಕ್ತರೂ, ಮುಕ್ತರೂ ಸಾಲು ಸಾಲಾಗಿ ಶಿವಯೋಗ ಮಂದಿರವೆಂಬ ಗರಡೀ ಮನೆಯಿಂದ ಹೊರಬಂದರು. ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಇಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಗ್ರಂಥ ಸಂಗ್ರಹ, ಹುಳಹತ್ತಿ ಹಾಳಾಗುತ್ತಿದ್ದ ತಾಡವೋಲೆಗಳನ್ನು ಸಂಗ್ರಹಿಸಿ ಸಂಶೋಧಿಸಿದರು. ಶಿವಯೋಗಮಂದಿರ ಶಿವ ಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಭಸ್ಮಲಿಂಗಗಳ ತಯಾರು ಮಾಡಿದರು. ಕೃಷಿ ಸಂವರ್ಧನ, ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಖಾದಿ ಪ್ರೋತ್ಸಾಹ, ಒಂದೇ ಎರಡೇ, ಹೀಗೆ ರಾಷ್ಟ್ರ ನಿರ್ಮಾಣಕಾರ ಭರದಿಂದ ಸಾಗಿತು. ಸಂಸ್ಥೆಯಿಂದ ಪತ್ರಿಕೆಗಳು ಪ್ರಕಟವಾದವು. ವ್ಯಾಪಾರ, ಉದ್ದಿಮೆ, ಎಲ್ಲ ರಂಗದಲ್ಲಿ ಕೈಯಾಡಿಸಿದ ಮಹಾಗಾರುಡಿಗರಾದ, ಕುಮಾರ ಶಿವಯೋಗಿಗಳಿಂದ ಒಟ್ಟಿನಲ್ಲಿ ಹೊಸ ಹುಟ್ಟೋಂದು ತಲೆದೋರಿತು.

ಲಿಂಗವನ್ನಿ ಲಿಂಗೈಕ್ಯವೆನ್ನಿʼʼ:

ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.

 ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ  ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.

ಕವಿರತ್ನ ದ್ಯಾಂಪುರ ಚನ್ನಕವಿಗಳು

ಶಾರ್ದೂಲ ವಿಕ್ರೀಡಿತ :

ಶ್ರೀಮನ್ನಿತ್ಯ ನಿರಂಜನ ಪ್ರಭು ಕುಲಾಂಭೋರಾಶಿ ರಾಕಾಸುಧಾ

ಧಾಮಂ ಧರ್ಮಸುಧಾರಕವ್ರಜಲಲಾಮಂ ದಿವ್ಯ ಶೀಲಾನ್ವಿತಂ

ಕಾಮಕ್ಲೇಶ ವಿಭಂಗನೂರ್ಜಿತ ಕೃಪಾಪಾಂಗಂ ಪ್ರಬೋಧಾಕರಂ

ಪ್ರೇಮಂದಾಳ್ಧೆನಗೀಗೆ ಭಕ್ತಿ ಪದಮಂ ನಿಚ್ಚಂ ಕುಮಾರೇಶ್ವರಂ    ||೧||

ಚಂಪಕಮಾಲಾ :

ಅನುಪಮ ಜಂಗಮಾಶ್ರಮಕೆ ಸಲ್ಲುವ ಲಾಂಛನವಾ ಪವಿತ್ರ ಲಾಂ

ಛನಕೊರೆಯಪ್ಪ ವರ್ತನಮದಕ್ಕೆಣೆಯಾಗುವ ಚಿತ್ತ ವೃತ್ತಿಯಾ

ಮನಸಿಗೆ ತಕ್ಕ ದಿವ್ಯ ಶಿವಲಿಂಗದ ಪೂಜೆಯದಕ್ಕೆ ಸಲ್ವ ಚಿ –

ದ್ಘನತರ ಶಾಂತಿ ನಿನ್ನೊಳೊಡಮೂಡಿದುದೈ ಜಗದೇಕನಾಯಕಾ     ||೨||

ಮತ್ತೇಭವಿಕ್ರೀಡಿತ :

ಘನದುಃಖಾನಲನಿಂದ ಬೇವ ಜನರಂ ಕಂಡಾತ್ಮದೊಳ್ಕಂದಿ ಸು-

ಮ್ಮನೆ ಗೋಳಾಡುವದೇತಕೆ ನೀವು ಶಿವಲಿಂಗಾರಾಧನಂ ಗೈಯಿರೈ

ಮನಮಂ ನೋಯಿಪ  ಕಷ್ಟಗಳ್ತೊಲಗಿ ತಾನೇ ಸೌಖ್ಯವೈತರ್ಪುದೆಂ –

ದನುವಿಂ ಬೋಧಿಸಿ ಕಾಯ್ದೆ ಕಕ್ಕುಲತೆಯಿಂ ಶ್ರೀಮತ್ಕುಮಾರೇಶ್ವರಾ     ||೩||

ಶಿವಲಿಂಗಾರ್ಚನೆಗೈದೆ ಮಾಣದೆ ಚಿದಾನಂದಾರ್ಥಮಿ ಪೂಜೆಯೇ

ಶಿವಯೋಗೋತ್ಸವಮೆಂದು ನಂಬಿ ಶಿವಭಾವಂ ಬೆತ್ತು ನೀನಾವಗಂ

ಕವಿದೀ ಕ್ಷುತ್ತೃಷೆಯಂ ನಿವಾರಿಪ ನಿಮಿತ್ತಂ ಪೂಜೆಯಂ ಮಾಡದೆ

ಶಿವಯೋಗೀಶ್ವರನೆಂದು ಕೀರ್ತಿವಡೆದೈ ಶ್ರೀಮತ್ಕುಮಾರೇಶ್ವರಾ    ||೪||

ಶಿವಲಿಂಗಾರ್ಚನೆ ರೋಗಕೌಷಧಮಿದೇ ಚಿಂತಾಲತಾಛೇದಕಂ

ಶಿವಲಿಂಗಾರ್ಚನೆ ಸರ್ವಸಿದ್ಧಿದಮಿದೇ ಸಾಯುಜ್ಯಭಾಗ್ಯಾಯನಂ

ಶಿವಲಿಂಗಾರ್ಚನೆ ಸತ್ಕೃತಾರ್ಥತೆಯಿದೇ ಸಂತೋಷ ಜನ್ಮಾಲಯಂ

ಶಿವಲಿಂಗಾರ್ಚನೆ ಗೈವುದಾಗಳೆನುತಂ ಪೇಳ್ದೈ ಕುಮಾರೇಶ್ವರಾ   ||೫||

 ನಿನ್ನಂತೆಮ್ಮಯ ಧರ್ಮದುನ್ನತಿಗೆ ಯತ್ನ೦ಗೈದರಾರ್ನ್ಯಾಯದಿಂ

ನಿನ್ನಂತೆಮ್ಮಭಿಮಾನದಗ್ಗಳಿಕೆಯಿಂದಾತ್ಮಾರ್ಪಣಂ ಗೈದರಾರ್

ನಿನ್ನಂ ಪೋಲ್ವ ಶಿವಾನುಭಾವಿಗಳದಾರ್ನೀನೇ ವಿರಕ್ತೋತ್ತಮಂ

ನಿನ್ನಿಂದಾದುದು ಮಂಗಲೋದಯಮೆಲೈ ಶ್ರೀಮತ್ಕುಮಾರೇಶ್ವರಾ     ||೬||

ಅನುರಾಗಂಮಿಗೆ ಚಿತ್ಕಲಾತ್ಮಕ ಮಹಾಲಿಂಗಾನುಸಂಧಾನದಿಂ

ದನಿಶಂ ಭಾಸುರಲಿಂಗವಾಗಿ ಪೊರೆದೈ ಸದ್ಧರ್ಮಮಂ ಯತ್ನದಿಂ

ನಿನಗಿನ್ನೆತ್ತಣ ಹುಟ್ಟು ಸಾವು ಮಲಮಾಯಾಮುಖ್ಯಪಾಶವ್ರಜಂ

ಘನಯೋಗಾಭ್ಯುದಯ ಪ್ರಭಾವವಿದು ಕೇಳ್ ಶ್ರೀಮತ್ಕುಮಾರೇಶ್ವರಾ    ||೭||

ಬೇಡುವದಲ್ಲ ಮಂದಿಯನು ಧರ್ಮಸುಧಾರಣೆಗಾಗಿ ದೇವರಂ

ಬೇಡುವದೊಳ್ಳಿತಾವನಿತು ಶಕ್ತಿ ಸಮನ್ವಿತರಲ್ಲ ಮಾಳ್ಪುದೇಂ

ನೀಡುವ ಜಂಗಮರ್ನರರ ಬೇಡುವದೆತ್ತಣ ಸುದ್ದಿಯೆಂದು ನೀ-

ನಾಡುತಲಿರ್ದೆ ಮುಚ್ಚಿಕೊಳದಾತ್ಮ ನಿರೀಕ್ಷಣೆಯಿಂ ಚರಾಧಿಪ    ||೮||

ನಿನ್ನಯ ಜನ್ಮವೇ ಜಗದೊಳಿಲ್ಲದನರ್ಘ್ಯ ಪವಿತ್ರ ಜನ್ಮವೈ

ನಿನ್ನಯ ಪುಣ್ಯ ಜೀವನವೆ ಧರ್ಮಸುಧಾರಣ ಭಾಗ್ಯ ಜೀವನಂ

ನಿನ್ನಮಲಪ್ರಯತ್ನವೆ ಮಹೇಶ ಮತೋತನ್ನತಿಯುತ್ ಪ್ರಯತ್ನವೈ

ನಿನ್ನಯ ಪೇರ್ಮೆಯಂ ಪಡೆವರಾರು ಧರಾತಲದೊಳ್ಚರಾಧಿಪ        ||೯||

ಎಮ್ಮ ಸಮಾಜವೆಂದಿಗೆ ಸುಧಾರಿಪುದಾವ ಮಹಾತ್ಮನಳ್ಕರಿಂ

ದೆಮ್ಮ ಸಮಾಜದೇಳ್ಗೆಯನು ಮಾಡುವನೈ ಸಿರಿವಿದ್ಯೆಯುದ್ಯಮಂ

ಎಮ್ಮ ಸಮಾಜದೊಳ್ಬೆಳೆಯಲಾವುದುಪಾಯಮದೆಂತು ಕಾಣ್ಬುದೋ   

ಎಮ್ಮ ಸಮಾಜಸೇವೆ ಕೃತಕೃತ್ಯತೆಯೆಂದು ನೆಗಳ್ದೆ ಜಂಗಮಾ    ||೧೦||

ನೀನೆ ದಯಾಳು ನಿನ್ನ ವಚನಂ ನಿಗಮಾಗಮದರ್ಥಸಾರವೈ

ನೀನೆ ವಿರಾಗಿ ನಿನ್ನತುಲ ಶೀಲವೆ ಸತ್ಪ್ರಮಥೇಂದ್ರ ಸಮ್ಮತಂ

ನೀನೆ ಗುಣಾಬ್ಧಿ ನಿನ್ನ ಮಲವೃತ್ತಿಯೆ ಲೋಕವಿತಾನಪಾವನಂ

ನೀನೆ ವಿಚಾರಿ ನಿನ್ನ ಸರಿಯಾರು ವಿರಾಟ್ಪುರದೀಶಯೋಗಿಯೆ     ||೧೧||

ಚಂಪಕಮಾಲಾ :

ಬೆಳಿಸುವಳೂಡಿ ಮಾತೆ ಮಗನಾವಗನಾತಗೆ ಪೇಳ್ದು ಬುದ್ಧಿಯಂ

ಕಲಿಸುವನಯ್ಯನೊಲ್ದು ಮಗನೆಂಬ ಮರುಂಕದೊಳನ್ಯ ಪುತ್ರರಂ

ಬಳೆಯಿಸಿ ಬುದ್ಧಿಗೊಟ್ಟು ಶಿವಯೋಗ ಸುಧಾರಸ ಪಾನದಿಂ ಕರಂ

ಸಲಹಿದೆ ನೀನೆ ಮಾತೆ ಪಿತರೈ ವಟು ವರ್ಗಕೆ ಯೋಗಿವಲ್ಲಭ     ||೧೨||

ವಿತತ ಶಿವಾನುಭವ ಸುಖಚರ್ಚೆಯ ನಿನ್ನಯ ವೃತ್ತಿಯಾಗಿ ಸ-

ನ್ನುತ ಶಿವಲಿಂಗದರ್ಚನೆಯ ಸುವ್ರತಮಾಗಿರುತಿರ್ದುಮೊಳ್ಪಿನಿಂ

ಮತಹಿತ ಕಾರ್ಯಮಂ ಬಿಡದೆ ನೀನದರೊಳ್ನೆರೆನೋಡಿ ಮಾಡಿದೈ

ಕ್ಷಿತಿಯೊಳು ನಿನ್ನ ಜಾಣ್ಮೆಯಿದು ಚಿದ್ಘನರೂಪ ಸದಾಶಿವಪ್ರಭು     ||೧೩||

ತ್ಪಲ ಮಾಲಾ :

ಕಾಯವಿಕಾರವಿಲ್ಲ ಮನದುಲ್ಬಣವಿಲ್ಲ ಮದಾಳಿಯಿಲ್ಲವಾ

ವಾಯುಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲವಾವಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ-

ಪಾಯಮದಿಲ್ಲ ನಿನ್ನೊಳೆ ಮಹಾಪ್ರಭುಲಿಂಗ ಕುಮಾರಯೋಗಿಯೆ     ||೧೪||

ನಿನ್ನಯ ಮೂರ್ತಿಯನ್ನೆರಡು ಕಣ್ಣೊಳು ಕಟ್ಟಿಹುದಾರ್ಯ ಚೆಲ್ವಿನಿಂ

ನಿನ್ನಯ ತತ್ವಪೂರಿತ ಮೃದೂಕ್ತಿಗಳೆನ್ನ ವಿಚಾರಭಾವದೊಳ್

ಸನ್ನುತ ಶಾಂತಿಯಂ ಕುಡುತಲಿರ್ಪುವು ನಿನ್ನಯ ರೀತಿನೀತಿಗಳ್

ನನ್ನಿಯೊಳೆನ್ನನೆಚ್ಚರಿಪವಾತ್ಮದೆ ನಿಂದು ಕುಮಾರಯೋಗಿಯೆ    ||೧೫||

ನಿನ್ನನು ಪಾಡುವೀರಸನೆ ನಿನ್ನದು ದೇವ ಮಹಾನುಭಾವ ಕೇ-

ಳ್ನಿನ್ನನು ಜಾನಿಪೀ ಮನವೆ ನಿನ್ನದು ನೋಡು ತ್ರಿತಾಪಲೋಪಕ

ನಿನ್ನಯ ರೂಪಮಂ ತಿಳಿವ ಮನ್ಮತಿ ನಿನ್ನದು ಲಿಂಗಭಾವವೇ

ನಿನ್ನದು ನಿನ್ನದಯ್ಯ ಕರುಣಾಳು ಕುಮಾರ ಮಹಾಯತೀಶ್ವರಾ    ||೧೬||

ಕಂದ :

ಪೂಜಾರ್ಪಣಾನುಭವಮಂ

ರಾಜಿತಶಿವಭಾವ ಪೂರ್ಣಮೆನೆ ಮಾಡುತ್ತಂ

ಓಜೆಮಿಗೆ ಬಾಳ್ದಯತಿಕುಲ

ರಾಜಂ ನೀನಲ್ತೆ ಯೋಗನಿಷ್ಠ ಕುಮಾರಾ    ||೧೭||

ಚರದೇವ ನಿನ್ನ ನಾಮಂ

ವರಮಂತ್ರಂ ನಿನ್ನ ರೂಪವೀಶ್ವರರೂಪಂ

ಪುರುಷಾರ್ಥಕಾರಣಂ ನಿ-

ನ್ನುರುತರ ಕರುಣಾಕಟಾಕ್ಷದೀಧಿತಿ ಯತಿಪ    ||೧೮||

ಚಂಪಕ ಮಾಲಾ

ಘನತರಮುಕ್ತಿಗಿಂದ ಸ್ವಸಮಾಜದ ಸೇವೆಯೆ ಶ್ರೇಷ್ಠವೆಂದು ನೀ-

ನನವರತಂ ಸಮರ್ಪಿಸಿದೆ ನಿನ್ನ ಸಮಾಜಕೆ ಸರ್ವ ವಸ್ತುವಂ

ಕೊನೆಯೊಳು ನಮ್ಮ ಧರ್ಮ ಸುಸಮಾಜ ಸಮಾಜ ಸಮಾಜವೆಂದು ಬ-

ಲ್ಕನವರಿಸುತ್ತಲಿರ್ದೆ ಶಿವಧರ್ಮ ಸಮಾಜದ ನೇಹಮೆಂತುಟೊ    ||೧೯||

 ಕಂದ :

ಜಯ ಪರತರಚಿತ್ಸುಖಮಯ

ಜಯಜಯ ನೀರಂಜನಾಲಮಾನ್ವದೇವ

ಜಯ ವೀರಶೈವ ಬಾಂಧವ

ಜಯಜಯ ಲಿಂಗಾಂಗ ಸಾಮರಸ್ಯ ರಸಜ್ಞ

ಶ್ರೀ ಚೆನ್ನಕವಿ

 

ಭವ್ಯ ಕೃತಿಗೆ-ದಿವ್ಯ ವ್ಯಾಖ್ಯಾನ

ಪುಸ್ತಕದ ಹೆಸರು : ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ (ಕವಿರತ್ನ ದ್ಯಾಂಪುರ ಚೆನ್ನಕವಿ ಕೃತ)
ವ್ಯಾಖ್ಯಾನ : ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು
ಪ್ರಕಾಶಕರು : ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜಯಂತಿ ಸಮಿತಿ
ಮುದ್ರಣ: ೨೦೨೨ ಪು. ೬೫೨
ಬೆಲೆ: ರೂ. ೧೫೦೦
ಸಂಪರ್ಕವಾಣಿ : ೮೩೧೦೨೭೬೪೪೨

ಪ್ರತಿಭೆ-ಪಾಂಡಿತ್ಯ-ವಿದ್ವತ್ತುಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದಲ್ಲಿರುವ ಕನ್ನಡಿಗರಿಗೆ ಅಲ್ಲೊಂದು ಇಲ್ಲೊಂದು ಆಶಾಕಿರಣಗಳು ಗೋಚರಿಸುತ್ತಿವೆ. ಕನ್ನಡ ಭಾಷೆ ಸಂಸ್ಕೃತಿಯ ಸಮೃದ್ಧಿಗಾಗಿ ಪರಿಶ್ರಮಿಸುವ ಯುವ ವಿದ್ವಾಂಸರ ಪಡೆ ಇಂದಿಗೂ ಕಾರ್ಯನಿರತವಾಗಿದೆ ಎಂಬುದಕ್ಕೆ ಪ್ರಸ್ತುತ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವ್ಯಾಖ್ಯಾನಿಸಿದ ‘ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯೇ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ.  ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್ಥ-ಭಾವ-ಉದ್ದೇಶಗಳನ್ನು ವಿವರಿಸಿ ಹೇಳುವುದಕ್ಕಾಗಿ ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅದಿಕರಣ, ಕೃತಕ, ತಾತ್ಪರ್ಯ ನಿರ್ಣಯಗಳೆಂಬ ವಿವಿಧ ಪ್ರಕಾರಗಳನ್ನು ರೂಪಿಸಲಾಗಿದೆ. ಆದರೆ ಕನ್ನಡ ಕೃತಿಗಳಿಗೆ ವ್ಯಾಖ್ಯಾನ ಬರೆದ ವೀರಶೈವ ಲಿಂಗಾಯತ ವ್ಯಾಖ್ಯಾನಕಾರರು ಇದಕ್ಕಾಗಿ ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿದ್ದರೂ ಇವೆಲ್ಲ ವಿವಿಧ ಪ್ರಕಾರಗಳಲ್ಲ, ‘ಟೀಕೆ’ಯನ್ನು ಸೂಚಿಸುವ ಪರ್ಯಾಯ ಪದಗಳು. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ ಅಥವಾ ‘ಟೀಕು’ ಪದವೇ ಅಧಿಕವಾಗಿ ಬಳಕೆಗೊಂಡಿರುವುದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜದ ಪ್ರಸಿದ್ಧ ದೊರೆ ಪ್ರೌಢದೇವರಾಯ ಕಾಲದಲ್ಲಿ ಈತನ ಮಂತ್ರಿಗಳಾದ ಲಕ್ಕಣ-ಜಕ್ಕಣರ ರಾಜರಕ್ಷೆ ಹಾಗೂ ನೂರೊಂದು ವಿರಕ್ತರ ಧರ್ಮರಕ್ಷೆಗಳಲ್ಲಿ ಈ ಕೆಲಸ ವ್ಯಾಪಕವಾಗಿ ಮುನ್ನಡೆಯುವಂತಾಯಿತು. ಆಮೇಲೆ ಏಳುನೂರೊಂದು ವಿರಕ್ತರ ಸಮಯದಲ್ಲಿ ಈ ವ್ಯಾಖ್ಯಾನ ಕಾರ್ಯಕ್ಕೆ ಪವನವೇಗ ಸಂಪ್ರಾಪ್ತವಾಯಿತು. ಏಳುನೂರೊಂದು ವಿರಕ್ತರ ಅಧಿಪತಿ ತೋಂಟದ ಸಿದ್ಧಲಿಂಗದೇವ, ಆತನ ಶಿಷ್ಯ-ಪ್ರಶಿಷ್ಯರಾದ ಚೆನ್ನದೇವ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಎಳಂದೂರು ಪರ್ವತ ಶಿವಯೋಗಿ, ಸೋಮಶೇಖರ ಶಿವಯೋಗಿ ಮೊದಲಾದವರು ಹಾಗೂ ಇತರರು ಈ ವ್ಯಾಖ್ಯಾನ ರಚನಾಕರ‍್ಯವನ್ನು  ಮುಂದುವರಿಸಿ, ಅದನ್ನು `ಕಾಯಕ’ದ ಮಟ್ಟಕ್ಕೆ ಮುಟ್ಟಿಸಿದರು. ಇದಲ್ಲದೆ ವ್ಯಾಖ್ಯಾನ ಮಾಡುವುದನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡ `ಟೀಕಿನ ಗುರುಪಾದ ಸ್ವಾಮಿ’ಯಂಥವರಿಗೂ `ವ್ಯಾಖ್ಯಾನದ ಕರ‍್ಯಾಗಾರ’ಗಳೆನಿಸಿದ `ಟೀಕಿನಮಠ’ಗಳೂ ಈ ವ್ಯಾಖ್ಯಾನ ಸಾಹಿತ್ಯದ ಬೆಳವಣಿಗೆಗೆ ಬೆಂಬಲವಾಗಿ, ಬೆಳಕಾಗಿ ನಿಂತವು. ಇದು ವೀರಶೈವ ವ್ಯಾಖ್ಯಾನಗಳ ಸಹಾಯವಿಲ್ಲದೆ ಶಾಸ್ತç ಕೃತಿಗಳ ಅಧ್ಯಯನ ಬಹಳ ಕಷ್ಟವಾಗಿ ಪರಿಣಮಿಸಿದುದರಿಂದ ಇವುಗಳ (ವ್ಯಾಖ್ಯಾನದ) ರಚನಾಕರ‍್ಯ ಕಾಲದಿಂದ ಕಾಲಕ್ಕೆ ಅನಿವರ‍್ಯವಾಗಿ ಬೆಳೆಯುವಂತಾಯಿತು. ಈ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮುಂದುವರಿಸಿದ ಶ್ರೇಯಸ್ಸು ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳಿಗೆ ಸಲ್ಲುತ್ತದೆ. ಕಬ್ಬಿಣದ ಕಡಲೆಯಂತಿದ್ದ ಚೆನ್ನಕವಿಗಳ ಈ ಪುರಾಣಕ್ಕೆ ಸರಳವಾದ ಭಾಷ್ಯವನ್ನು ಶ್ರೀಗಳು ರಚಿಸಿದ್ದಾರೆ. 
ಇಪ್ಪತ್ತನೆಯ ಶತಮಾನದ ಆರಂಭ ಘಟ್ಟದಲ್ಲಿ ಕನ್ನಡ ನಾಡಿನಲ್ಲಿ ಧರ್ಮ ಸಂಸ್ಕೃತಿಗಳ ಕುರಿತಾದ ಅರಿವು ಮೂಡಿರಲಿಲ್ಲ. ಪರಧರ್ಮೀಯರು ತಮ್ಮ ಧರ್ಮದ ಪ್ರಭಾವವನ್ನು ಬೀರಿ ಧರ್ಮಾಂತರ-ಮತಾಂತರದಂತಹ ಕಾರ್ಯದಲ್ಲಿ ತೊಡಗಿದ್ದರು. ಇದು ಮುಂದುವರೆದಿದ್ದರೆ, ಈ ನಾಡಿನಲ್ಲಿ ಹುಟ್ಟಿ ಬೆಳೆದ ಧರ್ಮ-ಪಂಥಗಳು ಗಂಡಾಂತರಕ್ಕೀಡಾಗುವ ಅಪಾಯವಿತ್ತು. ಇದಲ್ಲದೆ ಲಿಂಗಾಯತ ಸಮಾಜ ಬಾಂಧವರು ತಮ್ಮ ಧರ್ಮ ಸಂಸ್ಕೃತಿಯ ಆಚಾರ-ವಿಚಾರಗಳನ್ನು ತ್ಯಜಿಸಿ, ಇತರ ಸಂಪ್ರದಾಯದತ್ತ ವಾಲತೊಡಗಿದ್ದರು. ಈ ಉಭಯ ಸಂಕಟಗಳಿಂದ ಪಾರು ಮಾಡಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಗ್ರಗಣ್ಯರು. ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗಮಂದಿರದಂತಹ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಸಮಾಜ ಸಂಸ್ಕೃತಿಗಳನ್ನು ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂಥ ಮಹಾಮಹಿಮರ ಚರಿತೆಯನ್ನು ಕವಿರತ್ನ ದ್ಯಾಂಪುರ ಚೆನ್ನಕವಿಗಳು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವುದು ಗಮನಿಸುವ ಅಂಶ.  ದ್ಯಾಂಪುರದ ಚೆನ್ನಕವಿಗಳು  ಗದುಗಿನ ಸಮೀಪದ ದ್ಯಾಂಪುರದಲ್ಲಿ ಕ್ರಿ.ಶ. ೧೮೭೯ ರ ಸುಮಾರಿಗೆ ಜನಿಸಿದರು. ಕನ್ನಡದಲ್ಲಿ ಪ್ರಸಿದ್ಧ ಕಾವ್ಯಗಳಾದ ಶಬರಶಂಕರವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಮೊದಲಾದವುಗಳನ್ನು ಆಸ್ಥೆಯಿಂದ ಅಭ್ಯಾಸ ಮಾಡಿ, ಕಾವ್ಯ ಸಾಹಿತ್ಯದಲ್ಲಿ ಪರಿಣತೆಯನ್ನು ಪಡೆದರು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹದಿನಾರು ವರ್ಷ ಕೆಲಸ ಮಾಡಿದರು. ಆ ಸಮಯದಲ್ಲಿ ವೀರಶೈವ ಮಹಾಸಭೆ, ಶಿವಯೋಗಮಂದಿರ ಮೊದಲಾದ ಸಂಸ್ಥೆಗಳ ಆಧಾರಸ್ತಂಭರಾಗಿ ವೀರಶೈವರಲ್ಲಿ ಧರ್ಮ, ಆಚಾರ, ನೀತಿಗಳು ನೆಲೆಗೊಳ್ಳುವಂತೆ ಶ್ರೀ.ಮ.ನಿ.ಪ್ರ.ಹಾನಗಲ್ಲ ಕುಮಾರ ಸ್ವಾಮಿಗಳವರು ಅವಿಶ್ರಾಂತವಾಗಿ ಪರಿಶ್ರಮಪಡುತ್ತಲಿದ್ದರು. ಶ್ರೀಗಳವರ ಅಪ್ಪಣೆಯಂತೆ ಚೆನ್ನಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು. ಈ ಅವಧಿಯು ಅವರ ಕಾವ್ಯ ನಿರ್ಮಾಣಕ್ಕೆ ಹೆಚ್ಚು ಅನುಕೂಲತೆಯನ್ನೊದಗಿಸಿಕೊಟ್ಟಿತು. ಅವರ ಒಳ್ಳೆಯ ಕೃತಿಗಳೆಲ್ಲ ಈ ಕಾಲದಲ್ಲಿಯೇ ರಚಿತವಾದವು. ಇವುಗಳಲ್ಲಿ ಒಂಬತ್ತು ಪುರಾಣಗಳು ವಾರ್ಧಿಕ ಷಟ್ಪದಿಯಲ್ಲಿವೆ. ಉಳಿದ ಸುಮಾರು ಹನ್ನೆರಡು ಕೃತಿಗಳು ಶತಕ ಹಾಗೂ ಹಾಡು ಗಬ್ಬಗಳ ರೂಪದಲ್ಲಿ ರಚಿತವಾಗಿವೆ. ಚೆನ್ನಕವಿಗಳು ಹೆಮ್ಮರಡ್ಡಿ ಮಲ್ಲಮ್ಮನ ಪುರಾಣ, ಹುಚ್ಚೇಶ್ವರ ಪುರಾಣ, ಬಾಲಲೀಲಾ ಮಹಾಂತ ಶಿವಯೋಗಿ ಪುರಾಣಗಳನ್ನು ರಚಿಸಿದರು. ಆದರೆ ಮುಂದೆ ತಮ್ಮ ಸಮಕಾಲೀನ ಮಹಾತ್ಮರ ಚರಿತ್ರೆ ಬರೆಯಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡಿತು. ನಾಲ್ವತ್ತವಾಡದ ವೀರೇಶ್ವರ ಶರಣರು, ಹಾನಗಲ್ಲ ಕುಮಾರ ಸ್ವಾಮಿಗಳು ಮೊದಲಾದವರನ್ನು ಪುರಾಣ ಕಾವ್ಯಗಳನ್ನು ರಚಿಸಿದರು. ತಮ್ಮ ನಡುವೆ ಇರುವ ಈ ಮಹಾತ್ಮರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಕಾವ್ಯಮಾಧ್ಯಮದಲ್ಲಿ ದಾಖಲಿಸಿದರೆ ಬಹುಕಾಲ ಉಳಿಯಬಲ್ಲದೆಂಬ ನಂಬಿಕೆ ಚೆನ್ನಕವಿಗಳಿಗಿತ್ತು. 
ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ತಮ್ಮ ಪುರಾಣ ರಚನೆಯ ವಿಷಯ ತಿಳಿದಾಗ, ಚೆನ್ನಕವಿಗಳನ್ನು ಕರೆದು, ಮಹಾತ್ಮರ ಚರಿತ್ರೆಯನ್ನು ಬರೆಯುವಂತವನಾಗು, ನಮ್ಮಂತವರ ಬಗ್ಗೆ ಬರೆಯಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಿದ್ದೂ ಚೆನ್ನಕವಿಗಳು ಶ್ರೀಗಳು ಲಿಂಗೈಕ್ಯರಾದ ನಂತರ ಪುರಾಣ ರಚನೆಗೆ ತೊಡಗಿಕೊಂಡರು. ಆದರೆ ಪುರಾಣವನ್ನು ಪೂರ್ಣ ಮಾಡುವುದು ಅವರಿಂದ ಸಾಧ್ಯವಾಗಲಿಲ್ಲ. ಕೊನೆಯ ಎರಡು ಸಂಧಿಗಳಿರುವಾಗಲೇ ಲಿಂಗೈಕ್ಯರಾದರು. ಪುಟ್ಟರಾಜ ಕವಿ ಗವಾಯಿಗಳು ಮತ್ತು ಹುಕ್ಕೇರಿ ಸದಾಶಿವ ಶಾಸ್ತಿçಗಳು ಮತ್ತೆರೆಡು ಸಂಧಿಗಳನ್ನು ಬರೆದು, ಪುರಾಣವನ್ನು ಪೂರ್ಣಗೊಳಿಸಿದರು. 
“ಚೆನ್ನಕವಿಗಳು ಮಹಾಸ್ವಾಮಿಗಳವರ ಜೀವನವನ್ನೂ ಅವರಿಂದಾದ ಮಹತ್ಕಾರ್ಯಗಳನ್ನೂ ವಾರ್ಧಕ ಷಟ್ಪದಿಯಲ್ಲಿ ವರ್ಣಿಸಿದ್ದಾರೆ. ಈ ಕಾವ್ಯದ ಪ್ರತಿಯೊಂದು ಸಂಧಿಯ ಆದಿಯಲ್ಲಿ ಬರುವ ಶಿವಸ್ತುತಿಪರವಾದ ಪದ್ಯಗಳು ಸುಂದರವಾಗಿವೆ. ಕಾವ್ಯ ಶೈಲಿ ಸರಳವೂ ಸ್ವಾಭಾವಿಕವೂ ಆಗಿದೆ. ಶ್ರೀಗಳವರ ಜೀವನವೆ ಒಂದು ಪವಾಡವಾಗಿದೆ. ಆದುದರಿಂದ ಉಳಿದ ಪುರಾಣಗಳಲ್ಲಿರುವಂತೆ ಈ ಪುರಾಣದಲ್ಲಿ ಕವಿಗಳು ಪವಾಡಗಳಿಗೆ ಆಸ್ಪದ ಕೊಟ್ಟಿಲ್ಲ. ಇಲ್ಲಿ ಶ್ರೀಗಳವರ ಜೀವನ ಸ್ಫುಟವಾಗಿ ಮೂಡಿದೆ. ಹದಿನೆಂಟು ವರ್ಣನೆಗಳಿಗೆ ಇಲ್ಲಿ ಸ್ಥಳವಿಲ್ಲ. ಕಥಾನಾಯಕನು ವೈರಾಗ್ಯಶೀಲನೂ, ಯೋಗಿಯೂ, ಮಹಾತಪಸ್ವಿಯೂ ಆಗಿರುವದರಿಂದ ಲೋಕಹಿತದ ಕಡೆಗೆ ಕವಿಯು ದೃಷ್ಟಿಯನ್ನು ಹೆಚ್ಚಾಗಿ ಹಾಕಿದ್ದಾನೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಭಕ್ತಿಯ ಪ್ರಭಾವವನ್ನು ಹೇಳಿ ಜನತೆಯನ್ನು ಭಕ್ತಿಮಾರ್ಗದ ಕಡೆಗೆ ಒಯ್ಯುವ ಸಂಪ್ರದಾಯವಿದೆ. ಆದರೆ ಈ ಪುರಾಣದಲ್ಲಿ ನಾಯಕನ ಕರ್ತೃತ್ವ ಶಕ್ತಿಯಿಂದ ಸಮಾಜಹಿತದ ಘನವಾದ ಕಾರ್ಯಗಳು ಜರುಗಿರುವದರಿಂದ ಶ್ರೋತೃಗಳ ದೃಷ್ಟಿಯು ವಿಶಾಲವಾಗಿ ಲೋಕಹಿತದ ಕಡೆಗೆ ಒಲಿಯುವಂತಿದೆ. ಇದು ಕವಿಯ ಕೊನೆಯ ಕೃತಿಯಾದುದರಿಂದ ಇದಕ್ಕೂ ಮೊದಲಿನ ಕೃತಿಗಳಿಗೂ ಮಹದಂತರವಿದೆ. ಈ ಕಾವ್ಯದಲ್ಲಿ ಕವಿಯು ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರಗಳಿಗೆ ಬಲೆಬೀಳದೆ ಉಪಮೆ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅರ್ಥಾಲಂಕಾರಗಳನ್ನು ಮಿತವಾಗಿ ಹಿತವಾಗಿ ಉಪಯೋಗಿಸಿದ್ದಾನೆ. ಇದು ಈ ಕಾವ್ಯದ ವೈಶಿಷ್ಟö್ಯ. ಈ ಕಾವ್ಯದ ಆರಂಭದಲ್ಲಿ

ಇದು ರಸಿಕಮಾದ ಕಾದಂಬರಿಯ ಕತೆಯಲ್ಲ
ವಿದು ಕಲಿಗಳಿತಿಹಾಸಮಲ್ಲ ಕಲ್ಪಿತವಲ್ಲ
ವಿದಿರೊಳಪ್ರಾಸಂಗಿಕಾಸAಭವಾಸತ್ಯದೋಷ ವಿಷಯಂಗಳಿಲ್ಲ
ಪುದಿದ ಮಾಯಾ ಮೋಹ ಮೋಸದಿಂ ಕಂಗೆಟ್ಟು
ಕುದಿವ ಮಾನವರನೆಚ್ಚರಿಸಿ ಪಾಲಿಸಲುಳ್ಳ
ಸದಮಲ ಜ್ಞಾನ ವೈರಾಗ್ಯ ಭಕ್ತಿಗಳ ಸೊಂಪಿನ ಸುಗ್ಗಿ ಬಗೆಗೊಳಿಪುವು |೧|
ಎಂದು ಹೇಳಿರುವನು. ಈ ಮಾತನ್ನು ಕವಿಯು ಅಕ್ಷರಶಃ ಪಾಲಿಸಿರುವನು.” ಎಂಬ ಖ್ಯಾತ ವಿದ್ವಾಂಸರಾದ ಡಾ. ಶಿ. ಚೆ. ನಂದೀಮಠ ಅವರ ನುಡಿ ಅಕ್ಷರಶಃ ನಿಜ.
ಈ ಪುರಾಣದಲ್ಲಿ ಒಟ್ಟು ೨೨ ಸಂಧಿಗಳು, ೮೫೭ ಪದ್ಯಗಳಿವೆ. ರಾಘವಾಂಕನ ತರುವಾಯ ವಾರ್ಧಕ ಷಟ್ಪದಿಯನ್ನು ಪರಿಣಾಮಕಾರಿಯಾಗಿ ಬಳಸಿದ ಶ್ರೇಯಸ್ಸು ಚೆನ್ನಕವಿಗಳಿಗೆ ಸಲ್ಲುತ್ತದೆ. ಈ ಪುರಾಣವನ್ನು ಆಧುನಿಕ ಶಿಕ್ಷಣ ಪಡೆದವರು ಓದುವುದು ತುಂಬಾ ಕಷ್ಟಸಾಧ್ಯ. ಅದಕ್ಕಾಗಿ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಪ್ರತಿಪದಾರ್ಥ ಮತ್ತು ಭಾವಾರ್ಥಗಳೆರಡನ್ನೂ ನೀಡಿ ಓದುಗರ ಕೈಗೆ ನೀಡಿದ್ದಾರೆ.
ಚೆನ್ನಕವಿಗಳ ಪಾಂಡಿತ್ಯಕ್ಕೆ ಸಮನಾದ ಸರಳಾನುವಾದವನ್ನು ಬರೆದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಎಳೆಯ ವಯಸ್ಸಿನಲ್ಲಿಯೇ ಹಾನಗಲ್ಲ ಕುಮಾರೇಶ್ವರ ಪುರಾಣವನ್ನು ಪ್ರವಚನ ಮಾಡಿದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮಾಡಿರುವ ಅವರು ಹಾನಗಲ್ಲ ಕುಮಾರ ಶಿವಯೋಗಿಗಳವರನ್ನು ಕುರಿತು ಈಗಾಗಲೇ ಇಂಗ್ಲಿಷ್ ಭಾಷೆಯಲ್ಲೊಂದು ಕೃತಿರತ್ನವನ್ನು ರಚಿಸಿದ್ದಾರೆ. ಈಗ ಚೆನ್ನಕವಿಗಳ ವಾರ್ಧಕ ಷಟ್ಪದಿಯ ಮಹಾಕಾವ್ಯಕ್ಕೆ ಅತ್ಯಂತ ಹೃದ್ಯವಾದ ಶೈಲಿಯಲ್ಲಿ ಭಾವಾರ್ಥವನ್ನು ನೀಡಿದ್ದಾರೆ. ಚೆನ್ನಕವಿಗಳದು ಹರಿಹರ-ರಾಘವಾಂಕರ ಉದಿತೋದಿತ ಶೈಲಿ, ಈ ಶೈಲಿಗೆ ಪೂರಕವಾದ ಭಾಷೆಯನ್ನು ಬಳಸಿ, ಜನಸಾಮಾನ್ಯರಿಗೂ ಈ ಮಹಾಕಾವ್ಯ ಅರ್ಥವಾಗುವಂತೆ ಮಾಡುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ. ಪೂಜ್ಯರ ಸಾಹಿತ್ಯ ಪ್ರೀತಿ, ಲೋಕಾನುಭವ, ಅಸಂಖ್ಯ ಗ್ರಂಥಾವಲೋಕನ, ವಾಙ್ಮಯ ತಪಸ್ಸು, ಚಿಂತನ ಮಂಥನಗಳು ಇಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ ,

ಪವಿತ್ರ ಸಪ್ಟಂಬರ್‌ ತಿಂಗಳು ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳು  ಭುವಿಗೆ ಅವತರಿಸಿ ಬಂದ ವಿಷೇಶ ತಿಂಗಳು.

“ಕತ್ತಲುಂಡ ಸಮಾಜಕ್ಕೆ ಬೆಳಕಾಗಿ ಬಂದ ಶಿವಯೋಗಿಗಳ ಕುರಿತು ಈ ತಿಂಗಳು ಪ್ರಕಟಿಸಿದ ವಿಶೇಷ ಲೇಖನಗಳಲ್ಲಿ ಒಂದಾದ “ಋಣ ವಿಮುಕ್ತರು” ಲೇಖನದ ಈ ಸಾಲುಗಳು ಅತ್ಯಂತ ಅರ್ಥಪೂರ್ಣ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಸಪ್ಟಂಬರ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಪರ ಶಿವಯೋಗದ ಸಾರ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಹಾನಗಲ್ಲ ಕುಮಾರಸ್ವಾಮಿಗಳು • ಬಿ. ಶಿವಮೂರ್ತಿ ಶಾಸ್ತ್ರಿ
  4. ಹಾನಗಲ್ಲ ಕುಮಾರ ಶಿವಯೋಗಿಗಳು • ಪಂಡಿತ ನಾಗಭೂಷಣ ಶಾಸ್ತ್ರಿಗಳು.
  5. ಋಣವಿಮುಕ್ತರು *ಡಾ. ಬಸವರಾಜ ಜಗಜಂಪಿ
  6. ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೂ ಶಿಕ್ಷಣ ಪ್ರಸಾರವೂ • ಶ್ರೀ ಶಿ. ಫ. ಮರಡೂರ ಧಾರವಾಡ
  7. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೂ ಪ್ರಾಣಿದಯೆಯೂ • ಶ್ರೀ ಆನೆಕೊಂಡದ ಮುಪ್ಪಣ್ಣನವರು, ಡಾವಣಗೆರೆ
  8. ಕುಮಾರ ಮಹಾಸ್ವಾಮಿಗಳು : ಮಹಿಳೆಯರ ಹಿತಚಿಂತಕರು • ಡಾ. ಗುರುದೇವಿ ಹುಲೆಪ್ಪನವರಮಠ
  9. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಭೂಪ)

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ  || 1 ||

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ          || 2 ||

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ      || 3 ||

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ     || 4 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪಂಚೇಂದ್ರಿಯಗಳ ಪಂಚವಿಷಯ

೧. ಶ್ರೋತ್ರೇಂದ್ರಿಯ – ಶಬ್ದವಿಷಯ

ಸವಣರಾ ಪೇಟೆಯೊಳು | ದಿವಸ ಸಂತೆಯ ಶಬ್ದ

ನಿವಹ ಪೂರೈಸಿ- ದನೇಕಾಂತದೊಳೆನ್ನ

ನವಧರಿಸು ಗುರುವೆ ಕೃಪೆಯಾಗು   ||೬೬ ||

ಹರಭಕ್ತನಾದ ಶಿವಕವಿಯು ವೃತ್ತಿಯಲ್ಲಿ ಹರದನಾಗಿದ್ದನು. ಅಂತೆಯೇ ಅವನಿಗೆ ದೇಶದ ಅನೇಕ ವ್ಯಾಪಾರಿ ಸ್ಥಳಗಳ  ಅನುಭವವಿತ್ತು. ಆ ಸ್ಥಳಗಳ ನಾಮ. ನಿರ್ದೆಶಮಾಡುತ್ತ ದ್ವಂದ್ವಾರ್ಥದಲ್ಲಿ ಪಂಚೇಂದ್ರಿಯಗಳ ಪಂಚ  ವಿಷಯಗಳನ್ನು  ಪ್ರತಿಪಾದಿಸಿದ್ದಾನೆ

ಶ್ರೋತ್ರ, ತ್ವಕ್, ನೇತ್ರ, ಜಿಹ್ವಾ, ಘ್ರಾಣಗಳೆಂಬ ಪಂಚಜ್ಞಾನೇಂದ್ರಿಯಗಳಿಗೆ  ಶಬ್ದ, ಸ್ಪರ್ಶ, ರೂಪ, ರಸ,  ಗಂಧಗಳೆಂಬ ಪಂಚತನ್ಮಾತ್ರೆಗಳೇ ಪಂಚವಿಷಯ ಗಳಾಗುತ್ತವೆ. ಈ ಪಂಚಜ್ಞಾನೇಂದ್ರಿಯಗಳು ಪಂಚವಿಷಯಗಳಿಗಾಗಿ ಬಯಸಿ ಜೀವನನ್ನು ಕಾಮ, ಕಾಲರ ಬಲೆಗೆ ಬೀಳಿಸುತ್ತವೆ. ತನ್ನ ಇಂದ್ರಿಯಗಳೇ ತನ್ನನ್ನು ಆ ಮಾಯಾಬಲೆಯಲ್ಲಿ ಸಿಕ್ಕಿಸುವ ಮಾತು ವಿಚಾರಣೀಯವಾಗಿದೆ. ಇದು ಲೋಕದ ವೈಚಿತ್ರ್ಯ.. ಬ್ರಹ್ಮಸೃಷ್ಟಿಯ ಚಾರಿತ್ರ. ಶಿವಕವಿಯು ಒಂದೊಂದು ವಿಷಯದ ವಿವರಣೆಯನ್ನು ಅಸಾಧಾರಣ ಬುದ್ಧಿ ಶಕ್ತಿಯಿಂದಲೇ ವಿವರಿಸಿದ್ದಾನೆ. ಪ್ರಥಮದಲ್ಲಿ ಶ್ರೋತ್ರೇಂದ್ರಿಯ ಗ್ರಾಹ್ಯವಾದ ‘ಶಬ್ದ’  ವಿಷಯವನ್ನು ಕುರಿತು ಹೇಳಿದ್ದಾನೆ. ಈ ತ್ರಿಪದಿಯಲ್ಲಿ ಶಬ್ದಶ್ಲೇಷವೂ ಇದೆ. ಮತ್ತು ಪರಮತ ಖಂಡನಾಪೂರ್ವಕ ಸ್ವಮತ ಸಮರ್ಥನೆಯೂ ಆಗಿದೆ.

ಮೊದಲನೆಯ ಅರ್ಥ ಸವಣೂರಿನ ಪರವಾಗಿದೆ. ಈ ಶರಣಕವಿಯ ಸಮ ಕಾಲದಲ್ಲಿ ಇಂದಿನ ಧಾರವಾಡ ಜಿಲ್ಲೆಯ ಸವಣೂರು ನವಾಬನ ಸಂಸ್ಥಾನವಾಗಿತ್ತು. ಅದು ವ್ಯಾಪಾರಕ್ಕೆ ಪ್ರಸಿದ್ಧ ಸ್ಥಳವೂ ಆಗಿತ್ತು. ದಿನನಿತ್ಯದ ವ್ಯವಹಾರಕ್ಕಿಂತಲೂ ಸಂತೆಯ ವ್ಯವಹಾರವು ವಿಶೇಷವಾಗಿತ್ತು. ಸುತ್ತಲಿನ ಜನರು ನಿಶ್ಚಿತ ದಿನ ಸಂತೆಯನ್ನು ಮಾಡಲು ಸೇರುತ್ತಾರೆ. ಸಂತೆಯೆಂದ ಮೇಲೆ ಕೇಳುವದೇನು ? ಗದ್ದಲವೇ ಗದ್ದಲ ! ಶಬ್ದಗಳ ಸುರಿಮಳೆ ; ಕೂಗಾಟಗಳ, ಕಿರುಚಾಟಗಳ, ಅಬ್ಬರ ! ಒಂದೆಡೆ ಖರೀದಿ ಮಾಡುವವರ ಚೌಕಸಿ, ಇನ್ನೊಂದೆಡೆ ಮಾರುವವರ ವಸ್ತುವಿನ ಬಣ್ಣನೆ. ಹೀಗೆ ಅನೇಕ ರೀತಿಯ ವ್ಯಾವಹಾರಿಕ ಮಾತುಗಳು ಕೇಳುವವರಿಗೆ ಬಲು ಬೇಜಾರು. ಆದರೇನು ಮಾಡುವದು ?

ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ?”

 ಎನ್ನುವ ಅಕ್ಕನ ಮಾತಿನಂತೆ ಹೆದರದೆ, ಬೆದರದೆ, ಬೇಸರಗೊಳ್ಳದೆ ಧೈರ್ಯದಿಂದ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಸಂತೆಯ ವ್ಯವಹಾರವನ್ನು ಮುಗಿಸಿಕೊಳ್ಳ ಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

 ಇನ್ನೊಂದರ್ಥದಲ್ಲಿ ಸವಣರೆಂದರೆ ಜೈನ ಸನ್ಯಾಸಿಗಳು, ಆ ಸನ್ಯಾಸಿಗಳಿರುವ ಸ್ಥಾನಕ್ಕೇನೇ ‘ಸವಣರಾಪೇಟೆ’ಯೆನ್ನುವರು. ಶ್ರವಣ ಶಬ್ದದ ತದ್ಭವವೇ ‘ಸವಣ’. ಶ್ರವಣವೆಂದರೆ ಕೇಳುವದು. ಕಿವಿಯಿಂದ ಕೇಳುವ ಕೆಲಸವೇ ಮುಖ್ಯವಾಗಿಯುಳ್ಳವನು ಸವಣನೆನಿಸಿಕೊಳ್ಳುತ್ತಾನೆ. ಇವನು ಸವಣನೆನಿಸಿದರೂ ಲೌಕಿಕ ವ್ಯಾವಹಾರಿಕ ಶಬ್ದ ಬಳಕೆಯಿಂದ ಏಕತೆಯನ್ನು  ಸಾಧಿಸುವದಕ್ಕಾಗುವದಿಲ್ಲ. ಅವರದು ಅನೇಕಾಂತ ಸಿದ್ಧಾಂತ. ಕಾರಣ ಶಿವಕವಿಯು ಸವಣರ ಅನೇಕಾಂತತೆಯನ್ನು ಪರಿಹರಿಸಿ ಏಕಾಂತತೆಯನ್ನು ಸದ್ಗುರುವಿನಲ್ಲಿ ಕೇಳಿದ್ದಾನೆ. ಏಕಾಂತತೆಯಿಂದ ಶಬ್ದಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.

ಈ ಬಸವಲಿಂಗ ಶರಣರ ಕಾಲಕ್ಕೆ ಜೈನಮತದ ಪ್ರಭಾವ ಎದ್ದು ಕಾಣುತ್ತದೆ. ಆ ಜೈನ ದರ್ಶನದಲ್ಲಿ ‘ಸ್ಯಾದ್ವಾದ’ ಅಥವಾ ಅನೇಕಾಂತವಾದವೆಂಬುದು ಪ್ರಸಿದ್ಧವಾಗಿದೆ. ಇವರು ನಾಸ್ತಿಕ ಮತದವರು. ದೇವನ ಅಸ್ತಿತ್ವವನ್ನು ಒಪ್ಪುವದಿಲ್ಲ. ಮತ್ತು ವೇದಗಳನ್ನು ಮನ್ನಿಸುವದಿಲ್ಲ. ಲೌಕಿಕ ವ್ಯವಹಾರದಲ್ಲಿ ಪ್ರತಿಯೊಂದು ವಸ್ತುವಿನ ಅನಂತ ಧರ್ಮವನ್ನು ಕಾಣುತ್ತಾರೆ. ಹೇಗೆಂದರೆ ಬಹು ಭ್ರಾಂತಿಗಳಿಂದ ಕೂಡಿದ ಮನುಷ್ಯನಿಗೆ ಪ್ರತಿಯೊಂದು ವಸ್ತುವಿನ ಸಮಸ್ತ ಧರ್ಮಗಳ ಯಥಾರ್ಥ ಜ್ಞಾನವನ್ನು ಹೊಂದುವ ಸಾಮರ್ಥ್ಯವಿರುವದಿಲ್ಲ. ಅವನಲ್ಲಿ ಕೇವಲ ಆಂಶಿಕ ಜ್ಞಾನವಿರಬಹುದು. ಆದರೆ ಮುಖ್ಯವಾಗಿ ಕೈವಲ್ಯ ಜ್ಞಾನವಾಗುವವರೆಗೆ ಅವನಲ್ಲಿ ಅನೇಕಾಂತತೆಯೇ ಇರುವದು.

ಉದಾಹರಣಾರ್ಥವಾಗಿ ಒಂದು ವಸ್ತುವಿನ ಬಗ್ಗೆʼʼ ಸ್ಯಾತ್ ಸತ್” ಇದು ಸತ್ ಆಗಿರಬಹುದೆಂಬ ವಿಚಾರ  ಪ್ರಾರಂಭವಾಗುವದರಿಂದ ಇದಕ್ಕೆ ‘ಸ್ಯಾದ್ವಾದ’ವೆಂಬ ಹೆಸರು ಬಂದಿದೆ. ಈ ತತ್ತ್ವವನ್ನು ಪಂಡಿತ ಬಲದೇವ ಉಪಾಧ್ಯಾಯರ *ಭಾರತೀಯ ದರ್ಶನ” ದಲ್ಲಿ ಸ್ಪಷ್ಟವಾಗಿ ಕಾಣಬಹುದು. “ವರ್ತಮಾನ ದೇಶ ಮತ್ತು ಕಾಲವನ್ನು ವಿಚಾರ ಮಾಡುವರಿಂದ ನಾವು ಘಟದ ಸತ್ ಅನ್ನು ಅನುಭವಿಸುತ್ತೇವೆ. ಆದರೆ ಈ ಸತ್ ತ್ರೈಕಾಲಿಕ ಸತ್ಯವಲ್ಲ. ಆದರೆ ಸಾಪೇಕ್ಷಿಕ ಸತ್ಯವಾಗುತ್ತದೆ. ಅಂದರೆ ಸದ್ಯ ಇದ್ದ ಕೊಡವು ಇನ್ನೊಂದು ಕ್ಷಣದಲ್ಲಿ ಇರಲಿಕ್ಕಿಲ್ಲ ಅಥವಾ ಹೊರಗಿದ್ದುದು ಒಳಗೆ ಹೋಗಿರಬಹುದು. ಮತ್ತು ಅದು ಇದೂ ಅದರ ಆಕಾರದ ಬಗ್ಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ. ಇತ್ಯಾದಿ ರೂಪದಿಂದ ಯಥಾರ್ಥ ಜ್ಞಾನವಾಗುವದಿಲ್ಲವೆಂಬುದು ಸವಣರ ಮತ. ಈ ಸ್ವರೂಪವನ್ನೇ ಏಳು ತೆರನಾಗಿ ವಿವರಿಸುತ್ತಾರೆ.

೧) ಸ್ಯಾದಸ್ತಿ – ಯಾವದೋ ಪ್ರಕಾರದಲ್ಲಿದೆ.

೨) ಸ್ಯಾನ್ನಾಸ್ತಿ – ಯಾವದೋ ಪ್ರಕಾರದಲ್ಲಿ ಇಲ್ಲ.

೩) ಸ್ಯಾದಸ್ತಿಚ ನಾಸ್ತಿ ಚ – ಹೇಗೋ ಇದೆ ಮತ್ತು ಇಲ್ಲ.

೪)ಸ್ಯಾದವಕ್ತವ್ಯಂ – ಹೇಗೋ ವರ್ಣನಾತೀತವಾಗಿದೆ.

೫)ಸ್ಯಾದಸ್ತಿ ಚ ಅವಕ್ತವ್ಯಂಚ –  – ಹೇಗೋ ಇದೆ. ಮತ್ತು ವರ್ಣನಾತೀತವಾಗಿದೆ.

೬)ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇಲ್ಲ. ಮತ್ತು ವರ್ಣನಾತೀತವಾಗಿದೆ.

೭)ಸ್ಯಾದಸ್ತಿಚ ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇದೆ, ಇಲ್ಲ ಮತ್ತು ವರ್ಣನಾ ತೀತವಾಗಿದೆ. ಹೀಗೆ ಸಪ್ತಪ್ರಕಾರದ ನ್ಯಾಯದಿಂದ ಅನೇಕಾಂತತೆಯನ್ನು ಸಿದ್ಧಿಸಿ ತೋರುತ್ತಾರೆ. ಅನೇಕಾಂತತೆಯನ್ನು ಹೇಳುವ ಸವಣರು ಸ್ಥಿರತೆಯಿಲ್ಲದೆ ಲೋಕ ವ್ಯವಹಾರದ ತೊಳಲಾಟದಲ್ಲಿ ಬೀಳಬೇಕಾಗುವದು. ಶಾಂತಿ-ಸಮಾಧಾನ ಗಳ-ಸ್ಥಿರತ್ವಗಳ ಸುಳಿವು ಇಲ್ಲದಾಗುವದು.

ಆತ್ಮ ತತ್ತ್ವವನ್ನು ತಿಳಿಯಲು ಶ್ರವಣವು ಮುಖ್ಯ ಸಾಧನವಾಗಿದೆ. ಯಾಜ್ಞವಲ್ಕ್ಯರು ಮೈತ್ರಾದೇವಿಗೆ –

ಆತ್ಮಾವಾರೇ ದ್ರಷ್ಟವ್ಯಃ

ಶ್ರೋತವ್ಯೋ ಮಂತವೋ ನಿಧಿಧ್ಯಾಸಿತವ್ಯಃ|

ಆತ್ಮನನ್ನು ಕಾಣುವ (ಪ್ರತ್ಯಕ್ಷ ಮಾಡಿಕೊಳ್ಳುವ) ಸಾಧನಗಳೆಂದರೆ ೧ ಶ್ರವಣ ೨ ಮನನ ೩ ನಿಧಿಧ್ಯಾಸನಗಳೆಂದು ತ್ರಿವಿಧ ಸಾಧನೆಗಳನ್ನು ತಿಳಿಸಿದ್ದಾರೆ. ಈ ಮೊದಲನೆಯ ಶ್ರವಣ ಕ್ರಿಯೆಗೆ ಸಾಧನವಾದುದು ಶ್ರೋತ್ರೇಂದ್ರಿಯವಾಗಿದೆ. ಶ್ರೋತ್ರವು ಆಕಾಶ ತತ್ತ್ವದ ಅಗ್ನಿಯಿಂದ ಉತ್ಪನ್ನವಾಗಿದ್ದು ಅದಕ್ಕೆ ದಶದಿಕ್ಕುಗಳೇ ಅಧಿದೇವತೆಗಳಾಗಿವೆ. ಶ್ರೋತ್ರಕ್ಕೆ ಶಬ್ದವೇ ವಿಷಯ. ಅಕ್ಷರಾತ್ಮಕ, ಅನಕ್ಷರಾತ್ಮಕವೆಂದು ಎರಡು ಶಬ್ದದ ಭೇದಗಳು, ಅಕ್ಷರಾತ್ಮಕವಾದ ಶಬ್ದವು ಮಂತ್ರರೂಪವಾಗಬೇಕು. ಲೌಕಿಕ ಶಬ್ದಗಳಿಂದ  ಜೀವನದಲ್ಲಿ ಸಮಾಧಾನವಿಲ್ಲ. ಶ್ರೋತ್ರೇಂದ್ರಿಯಕ್ಕೆ ಅಧ್ಯಾತ್ಮಿಕ ಶಬ್ದ ಶ್ರವಣವೇ ಭೂಷಣವು. ಇಂಥ ಶ್ರವಣವು ನವವಿಧ ಭಕ್ತಿಗಳಲ್ಲಿ ಮೊದಲನೆಯದಾಗಿದೆ. ಆತ್ಮತತ್ತ್ವವನ್ನು ತಿಳಿಸುವ ಶಬ್ದವು ಅಧ್ಯಾತ್ಮಿಕವಾದರೆ ಆತ್ಮನನ್ನು ತಿಳಿಸುವ ಶಬ್ದವು ಮಂತ್ರವಾಗಿದೆ. ಅಂಥ ಮಂತ್ರವು ಸದ್ಗುರುವಿನಿಂದ ದೊರೆಯಲು ಸಾಧ್ಯ. ಸದ್ಗುರು ಕೃಪೆಯಿಂದ ದೊರೆತ ಮಂತ್ರವು ಜೀವನವನ್ನೇ ಪಾವನಗೊಳಿಸಿ ದೇವರನ್ನಾಗಿಸುತ್ತದೆ.

ಲೌಕಿಕ ವ್ಯಾವಹಾರಿಕ ಶಬ್ದಗಳಿಂದ ಅನೇಕಾಂತತೆಯನ್ನು ದೂರ ಮಾಡಲು ಮಂತ್ರಾನುಸಂಧಾನದಿಂದ ಮಾತ್ರ  ಸಾಧ್ಯವಾಗುವದು. ಇದರಿಂದಲೇ ಏಕಾಂತತೆ ದೊರೆಯುವದು. ಶಿವನಲ್ಲಿ ಏಕನಿಷ್ಠೆಯೂ ಬೆಳೆಯುವದು. ಇಂತಾದರೆ  ಜ್ಞಾನೇಂದ್ರಿಯ ವಾದ ಈ ಶ್ರೋತ್ರೇಂದ್ರಿಯವು ಸಾರ್ಥಕವಾಗುವದು

. ಮಾನವನ ಉಪಯೋಗಕ್ಕಾಗಿ ಲಭ್ಯಗಳಾದ ಪಂಚ ಜ್ಞಾನೇಂದ್ರಿಯಗಳು ಶಿವನ ಮಹಾ ಕೊಡುಗೆಯೆನಿಸಿವೆ. ಇವುಗಳಲ್ಲೊಂದು ಇಂದ್ರಿಯವು ಊನವಾದರೆ ಜೀವನವೇ  ಅಸ್ತವ್ಯಸ್ತವಾಗುವದು. ಈ ಜ್ಞಾನೇಂದ್ರಿಯಗಳನ್ನು ಕೇವಲ ಲೌಕಿಕ ವಿಷಯಗಳತ್ತ ಬಳಸಿದರೆ ಜೀವನಿಗೆ ಬಂಧನವು ನಿಶ್ಚಿತ. ಕಾರಣ, ಇಂದ್ರಿಯಗಳ ವಿಷಯವು ಮೇಲೆ ವಿವರಿಸಿದಂತೆ ಅಧ್ಯಾತ್ಮಿಕವಾಗಬೇಕು. ಒಂದೊಂದು ಇಂದ್ರಿಯದ ವಿಷಯವೇ ಒಂದೊಂದು ಜೀವಿಯ ಹಾನಿಗೆ ಕಾರಣವಾಗಿರುವಾಗ ಐದಿಂದ್ರಿಯಗಳ ಭೋಗವನ್ನು ಹೊಂದುವ ಜೀವನು ಬಾಳಿ ಉಳಿಯುವ ಬಗೆಯೆಂತು.

…….. ಶ್ರವಣೇಂದ್ರಿಯ ವಿಷಯದಿಂದೆ

ಎರಳೆ ಕೆಡುವದು ಬೇಟೆಗಾರನ ಸರಳಿನಲ್ಲಿ;

ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ

ಬಂಧನಕ್ಕೊಳಗಾದವು,

ಇಂತಪ್ಪ ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ

ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರ”

ಎಂದು ಷಣ್ಮುಖ ಶಿವಯೋಗಿಗಳು ಹೇಳಿದ ಮಾತು ಮಾರ್ಮಿಕವಾಗಿದೆ. ಇಲ್ಲಿ  ಶ್ರವಣೇಂದ್ರಿಯ ಪ್ರಬಲವಾದ ಜಿಂಕೆಯು ಬೇಟೆಗಾರನ ಕೊಳಲಿನ ನಾದಕ್ಕೆ ಮರುಳಾಗಿ ಅವನ ಬಾಣಕ್ಕೆ ಆಹುತಿಯಾಗುತ್ತದೆ. ಪಂಚೇಂದ್ರಿಯಗಳ ಸ್ಫುರಣವುಳ್ಳ ಜೀವಾತ್ಮನು ಪಂಚ ವಿಷಯಗಳ ಬಲೆಯಲ್ಲಿ ಬಿದ್ದರೆ ಸಾಯುವದು ಖಂಡಿತ. ಅದು ಕಾರಣ ಜ್ಞಾನೇಂದ್ರಿಯಗಳನ್ನು ಆಜ್ಞಾನದಿಂದ ವಿಷಯಗಳಲ್ಲಿ ಬಂಧಿಸುವದು ಸರ್ವಥಾ ವಿಹಿತವಲ್ಲ.

ಶಿವಕವಿಯು ಪ್ರಥಮತಃ ಇಲ್ಲಿ ಶ್ರೋತ್ರೇಂದ್ರಿಯಕ್ಕೆ ಕಾರಣವಾದ ಲೌಕಿಕ ಸಂತೆಯ ಶಬ್ದಗಳನ್ನು ಕೇಳಿ ಕೇಳಿ ಏಕಾಂತತೆಯನ್ನು ಕಳೆದುಕೊಳ್ಳುವದು ಬೇಡವೆಂದಿದ್ದಾನೆ. ಸಂತೆಯ ಶಬ್ದಗಳು ಎಷ್ಟು ನಿಷ್ಪ್ರಯೋಜಕಗಳೋ ; ಅದರಿಂದ ದೊರೆಯುವ ಅನೇಕಾಂತತೆಯೂ ನಿರುಪಯುಕ್ತವಾದುದು. ಉಪಯೋಗವಿಲ್ಲದ ವ್ಯವಹಾರಿಕ ಮಾತುಗಳನ್ನಾಡಿ ಮತ್ತು ಅಂಥವುಗಳನ್ನು ಕೇಳುವದೂ ಜೀವನದಲ್ಲಿ ವ್ಯರ್ಥಸಮಯ ಇದೆಲ್ಲವನ್ನು ಜ್ಞಾನೇಂದ್ರಿಯವಾದ ಕರ್ಣಕ್ಕೆ ಶ್ರೀ ಗುರುವಿನ ಕೃಪೆಪಡೆದು ಶಬ್ದವನ್ನೇ ಮಂತ್ರಮಯ ವಾಗಿಸಿಕೊಳ್ಳುವ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.

ಪರಮಗುರುವೆ ! ಮಂತ್ರೋಪದೇಶವನ್ನು ಮಾಡಿ ಶ್ರವಣೇಂದ್ರಿಯವನ್ನು ಸಾರ್ಥಕಗೊಳಿಸು. ಸಕಲ ನಿರರ್ಥಕ ಶಬ್ದಗಳನ್ನು ತ್ಯಜಿಸಿ ಆತ್ಮೋದ್ಧಾರದ ನುಡಿಗಳನ್ನು ಓಂಕಾರನಾದವನ್ನು ಶಬ್ದ ಪ್ರಸಾದವನ್ನಾಗಿ ಭೋಗಿಸುವ ಕಲೆಯನ್ನು ಕಲಿಸಿ ಉದ್ಧರಿಸು.

೨.   ತ್ವಗಿಂದ್ರಿಯ – ಸ್ಪರ್ಶವಿಷಯ

ಗಾಳಿ ಪೂಜೆಯ ಗುಡ್ಡ | ವಾಳುಮಟ್ಟಿಹುದು ಈ

ರೇಳು ಲೋಕವನು – ತಾಳಿಕೊಂಡಿಹುದೆಂದು

ಹೇಳುವರು ಗುರುವೆ ಕೃಪೆಯಾಗು  ||೬೭||

ವಾಯುತತ್ತ್ವದ ಜ್ಞಾನೇಂದ್ರಿಯ ತ್ವಕ್, ಅದಕ್ಕೆ ಗೋಚರಿಸುವ ವಿಷಯ ಸ್ಪರ್ಶನ. ಅಲ್ಲಿ ಚಂದ್ರನು ಅಧಿದೇವತೆಯಾಗಿದ್ದಾನೆ. ಸ್ಪರ್ಶವಿಷಯವು ಶೀತ, ಉಷ್ಣ, ಮೃದು, ಕಠಿಣವೆಂದು ನಾಲ್ಕು ತೆರನಾಗುತ್ತದೆ. ಎಲ್ಲ ವಸ್ತುಗಳ ವಿವಿಧ ಸ್ಪರ್ಶವು ತ್ವಗಿಂದ್ರಿಯಕ್ಕೆ ಗೊತ್ತಾಗುತ್ತದೆ. ಹೀಗೆ ಗಾಳಿ ಮತ್ತು ಸ್ಪರ್ಶ ವಿಷಯದ ವಿವೇಚನೆ ಈ ತ್ರಿಪದಿಯಲ್ಲಿ ಬಂದಿದೆ. ಇಲ್ಲಿಯೂ ಶ್ಲೇಷಾರ್ಥವಿದೆ.  ಶ್ಲೇಷವೆಂದರೆ ಕೂಡಿದ್ದು, ಎರಡು ಅಥವಾ ಅನೇಕಾರ್ಥಗಳಿಂದ ಕೂಡಿದೆಯೆಂದರ್ಥ.

ಭಾರತೀಯ ಧಾರ್ಮಿಕ ಜೀವನದಲ್ಲಿ ಬಹು ಭಾವುಕ ಪರಂಪರೆಗಳು ಬೆಳೆದು ಬಂದಿವೆ. ಕೆಲವು ತಾತ್ವಿಕವಾಗಿಯೂ, ಹಲವು ಅಧ್ಯಾತ್ಮಿಕವಾಗಿಯೂ, ಇನ್ನಷ್ಟು ಮೂಢನಂಬಿಕೆಯುಳ್ಳವುಗಳೂ ಆಗಿವೆ. ಆದಿಮಾನವನಿಗೆ ದೈವತ್ವದ ಕಲ್ಪನೆ ಬಂದಾಗಿನಿಂದಲೂ ಬಹುಶಃ ಪಂಚಭೂತಗಳನ್ನು ದೇವರೆಂದು ನಂಬಿ ಪೂಜಿಸುವ ಇತಿಹಾಸವುಂಟು. ಅದು ಇಂದಿಗೂ ಹೊರತಾಗಿಲ್ಲ. ಭೂಮಿಯನ್ನು ಭೂತಾಯಿ ಯೆಂತಲೂ ; ಜಲವನ್ನು ಗಂಗಾಮಾತೆಯೆಂತಲೂ ; ಅಗ್ನಿಯನ್ನು ಅಗ್ನಿ ದೇವನೆಂದೂ, ಯಜ್ಞದ ದೂತನೆಂತಲೂ; ಗಾಳಿಯನ್ನು ಮತ್ತು ಆಕಾಶವನ್ನು ಪೂಜಿಸುವ ರೂಢಿ ಬೆಳೆದುಬಂದಿದೆ. ಇಲ್ಲಿ ಪ್ರಸ್ತುತ ವಿಷಯ ಗಾಳಿಗೆ ಸಂಬಂಧಿಸಿದೆ.

ಗಾಳಿಯು ಸಕಲ ಪ್ರಾಣಿಗಳಿಗೂ ಪ್ರಾಣಸ್ವರೂಪವಾಗಿದೆ. ಇದು ಕಣ್ಣಿಗೆ ಕಾಣದಿದ್ದರೂ ಸ್ಪರ್ಶದಿಂದ ಮಾತ್ರತಿಳಿದು ಬರುತ್ತದೆ. ಇದರ ಶಕ್ತಿ ಅದ್ಭುತವಾದುದು. ಆದರೆ ಗಾಳಿಯನ್ನು ತಡೆಯುವ ಶಕ್ತಿ ಪರ್ವತಕ್ಕೆ ಮಾತ್ರವುಂಟು. ಪರ್ವತದ ಮೇಲೆ ಹೋದಾಗ ಗಾಳಿಯ ಹೆಚ್ಚಿನ ಅನುಭವ ಬರುವದು. ಅಂತೆಯೇ ಪರಮಪೂಜ್ಯ ಗುರುವರರಾದ ಶ್ರೀ ಜಗದ್ಗುರು ಅನ್ನದಾನಿ ಮಹಾಶಿವಯೋಗಿಗಳು ಮೇಲಕ್ಕೆ ಹೋದಂತೆ ಗಾಳಿ ಬಹಳ’ ಎಂದು ಅಧ್ಯಾತ್ಮಿಕವಾಗಿಯೂ, ಲೌಕಿಕವಾಗಿಯೂ ಅಪ್ಪಣೆ ಮಾಡುತ್ತಿದ್ದರು. ಪರ್ವತಶಿಖರದಲ್ಲಿ ಗಾಳಿಬಹಳವಾದಂತೆ ಮೇಲ್ಮಟ್ಟದ ಜೀವನದಲ್ಲಿ ವಿಪತ್ತುಗಳೂ ಬಹಳ.

ವ್ಯಕ್ತವಾದ ಗಾಳಿಯನ್ನು ಪೂಜಿಸಲು ಗುಡ್ಡವು ಅನುಕೂಲಕರವಾಗುವದರಿಂದ ಅದನ್ನೇ ಜನರು ಅವಲಂಬಿಸುತ್ತ ಬಂದಿದ್ದಾರೆ. ಗಾಳಿಗೆ ವ್ಯವಹಾರದಲ್ಲಿ ದೆವ್ವ ಮತ್ತು ಭೂತ-ಪಿಶಾಚವೆಂತಲೂ ಕರೆಯುತ್ತಾರೆ. ಈ ಭೂತ-ಪಿಶಾಚಗಳ ಬಗ್ಗೆಯೂ ಬಹುರಂಜಕ ಕಥಾನಕಗಳುಂಟು. ಅವುಗಳು ಸ್ಮಶಾನಗಳಲ್ಲಿ ಪರ್ವತಗಳ ಗುಹೆಗಳಲ್ಲಿ ವಾಸಮಾಡುತ್ತವೆಂತಲೂ ಕೆಲವರ ನಂಬಿಕೆ. ಯಥಾರ್ಥಜ್ಞಾನವಿಲ್ಲದ, ಆತ್ಮಜ್ಞಾನ  ರಹಿತರಾದ ಜನರು ಅವು ನಮ್ಮನ್ನು ಕಾಡಬಾರದೆಂದು ಪೂಜಿಸುವ ರೂಢಿಯೂ ಬಂದಿದೆ. ಈ ಮಾತಿಗೆ ಭೂಮಂಡಲದ ಬಹುಜನರು ಭಯಗ್ರಸ್ತರಾಗುತ್ತ (ಅವುಗಳಿಗೆ) ಮಾರುಹೋಗಿದ್ದಾರೆ. ಇಂಥ ಹದಿನಾಲ್ಕು ಭೂಮಂಡಲಗಳನ್ನು ಪರ್ವತಗಳು ಧರಿಸಿರುತ್ತವೆಂಬುದನ್ನು ಅನುಭವಿಗಳು ಉಸುರುತ್ತಾರೆ. ಅಮರ ಕೋಶಕಾರನು

ಮಹೀಧ್ರೇ ಶಿಖರಿಕ್ಷ್ಮಬೃತ್ ಅಹಾರ್ಯಧರ ಪರ್ವತಾ : 1 (೨-೨-೧)

 ಎಂದಿದ್ದಾನೆ ಮಹೀಧರ, ಕ್ಷ್ಮಬೃತ್, ಅಥವಾ ಭೂಭ್ರತ್ ಪದಗಳು ಮೇಲಿನ ಮಾತನ್ನೇ ವಿಶದೀಕರಿಸುತ್ತವೆ. ಪರ್ವತವು ಭೂಮಿಯನ್ನು ಹೊತ್ತುಕೊಂಡಿರುವು ದೆಂದರ್ಥವಾಗುವದು.

ಇನ್ನೊಂದರ್ಥದಲ್ಲಿ ಗುಡ್ಡವೆಂದರೆ ದೇಹ, ಅದರಲ್ಲಿ ವಾಯುವಿಕಾರಗಳುಂಟು. ಮಾನವರಿಗೆ ಗಾಳಿಯು  ಪ್ರಾಣದಾಯಕವಾಗಿರುವಂತೆ ಬಾಹ್ಯದಲ್ಲಿ ಸೌಮ್ಯವಾದ ಉಷ್ಣ ಮತ್ತು ತಂಪು ಸ್ಪರ್ಶದಿಂದ ಸಂತಸದಾಯಕವಾಗಿದೆ.  ಶರೀರದಲ್ಲಿ ವಾಯು ವಿಕಾರಗಳಾಗಿ ದುಃಖದಾಯಕವೂ ಆಗುವದು. ಒಮ್ಮೊಮ್ಮೆ ಗಾಳಿಯ (ಭೂತ-ಪಿಶಾಚಗಳ) ಪ್ರವೇಶವೂ ಕೆಲವರಿಗೆ ಆಗುವದುಂಟು. ಇಂಥ ಭೂತಗಳಿಂದ ಕೂಡಿದ ದೇಹ ವೆಂತಲೂ ಇಲ್ಲಿ ಅರ್ಥೈಸಬೇಕಾಗುವದು. ಶರೀರದಲ್ಲಿ ಗಾಳಿಯ ಪೂಜೆಯೆಂದರೆ ವಿಷಯ ವಾಸನಾರಾಧನೆಯ ಗೌರವವೆಂದಾಗುವದು. ವಿಷಯ ವಾಸನೆಯನ್ನು ಇರಿಸಿಕೊಳ್ಳದ ದೇಹಗುಡ್ಡ ಅಪರೂಪ. ಈ ದೇಹಗುಡ್ಡದ ಎತ್ತರ ಒಂದೇ ಆಳಿನ ಪ್ರಮಾಣದಲ್ಲಿದೆ. ಹೊರಗಿನ ಆಕಾರ ಚಿಕ್ಕದಾದರೂ ಅಂತರಂಗದ ವಿಸ್ತಾರ ಅಪಾರ. ಆದ್ದರಿಂದ ಈ ಆಳುಮಟ್ಟದ ದೇಹಪರ್ವತದಲ್ಲಿ ಈರೇಳು (ಹದಿನಾಲ್ಕು) ಲೋಕಗಳು  ತಾಳಿಕೊಂಡು ಬಂದಿವೆ. ಅಂದರೆ ಬ್ರಹ್ಮಾಂಡದಂತೆ ಪಿಂಡಾಂಡದಲ್ಲಿಯೂ ಹದಿನಾಲ್ಕು ಭುವನ ಗಳಿರುತ್ತವೆಂಬ ಮಾತನ್ನು ೧೮ ನೇ ತ್ರಿಪದಿಯಲ್ಲಿ ಅರಿತಿದ್ದೇವೆ. ಚನ್ನಬಸವಣ್ಣನವರು –

ಈರೇಳು ಲೋಕವನು ಒಡಲೊಳಗಿಟ್ಟುಕೊಂಡು

ಲಿಂಗರೂಪಾಗಿ ಭಕ್ತನ ಕರಸ್ಥಲಕ್ಕೆ ಬಂದು

ಪೂಜೆಗೊಂಡಿತ್ತು ನೋಡಾ….

ಎಂದಿದ್ದಾರೆ. ಲಿಂಗ ಮತ್ತು ಅಂಗಕ್ಕೆ ಅಭೇದವಿಲ್ಲವೆ ?

ಶರೀರಿಯು ಪ್ರಾಣವಾಯುವಿನಿಂದಲೇ ಬದುಕುತ್ತಿರುವದರಿಂದ ಅದನ್ನು ಗೌರವಿಸಬೇಕಾದ್ದು ಯೋಗ್ಯವೇ ಇದೆ. ಕೇವಲ ಗಾಳಿಯನ್ನು ಪೂಜಿಸಿ ಸ್ಪರ್ಶಸುಖಕ್ಕಾಗಿ ಆಶೆಪಟ್ಟರೆ ಅಧ್ಯಾತ್ಮಸಾಧನೆ ಸಿದ್ಧಿಸಲಾರದು. ಗಾಳಿಯ ಚಂಚಲತೆಯನ್ನು ನೀಗಿಸಿ ಸ್ಥಿರತೆಯನ್ನು ಸಾಧಿಸಿದರೆ ಮಾತ್ರ ಪ್ರಾಣಲಿಂಗಾನುಸಂಧಾನವು ಸಮನಿಸುವದು. ೫೯ನೇಯ ತ್ರಿಪದಿಯ ತಿರುಳಿನಲ್ಲಿ ಪ್ರಸ್ತಾಪಿಸಿದಂತೆ ಈ ವಾಯುವು ಶರೀರ ತುಂಬೆಲ್ಲ ಹರಿದಾಡಿ ಕಾಯವನ್ನು ಕಂಗೆಡಿಸುತ್ತದೆ. ಭಕ್ತಿಯ ಬಟ್ಟೆಯನ್ನು ಬಯಲಾಗಿಸುತ್ತಿದೆ. ತ್ವಕ್ಕು (ಚರ್ಮವು) ದೇಹವನ್ನೆಲ್ಲ ವ್ಯಾಪಿಸಿರುತ್ತದೆ. ಇದು ಜೀವನ ತೊಗಲಿನ ಚೀಲದಂತಾಗಿದೆ.  .. ಈ ತ್ವಗಿಂದ್ರಿಯವು ಸ್ಪರ್ಶ ಸುಖಕ್ಕಾಗಿ ಆಶಿಸುತ್ತದೆ. ಜೀವಾತ್ಮನು ಸ್ಪರ್ಶಸುಖ ಬಯಸಿ ಬಂಧನದಲ್ಲಿ ಸಿಲುಕುತ್ತಾನೆ.

ನಿಜಗುಣರು –

ತೊಗಲತಿತ್ತಿಗೆ ಸಮನಾದ ಕಾಯದೊಳು ಕಂ-

ಡಿಗಳು ತೆಗದಿರೆ ಪಲವವರೊಳಗೆ |

ಸಂಗತಿಯನುಳ್ಳ ಮಾರುತನಿರ್ದು ತೊಗಲದೆ |

ಸೊಗಸುದೋರುವ ಸೋಜಿಗವನು ಕಂಡು || ಜೀವ. ಸಂ. ಸ್ಥಳ – ೧೯ |

“ಕೈವಲ್ಯಪದ್ಧತಿ’ಯಲ್ಲಿ ”ತೊಗಲಿನ ಚೀಲದಂತೆ ಇರುವ ದೇಹಕ್ಕೆ ಕೆಲವು ತೂತು ಗಳನ್ನು ಮಾಡಿ ಅದರಲ್ಲಿ ವಾಯು ಧಾರಾಳವಾಗಿ ಸಂಚಾರಮಾಡುತ್ತಿರುವವರಿಗೆ ಅನೇಕ ಸೋಜಿಗಳನ್ನು ಕಾಣುವಿ’ಯೆಂದು ತೊಗಲಿನ ಚೀಲವಾದ ದೇಹಕ್ಕೆ ಗಾಳಿಯು  ಆಧಾರವೆಂದು ಅಭಿಪ್ರಾಯ ಪಟ್ಟಿರುವರು. ಗಾಳಿಯ ಸ್ಪರ್ಶ ಒಳ-ಹೊರಗೂ ಹಿತವಾಗುತ್ತದೆ. ಆದರೆ ಅತಿಯಾದರೆ ತೊಂದರೆದಾಯಕವೇ ಆಗುವದು. ಹೊರ ಚರ್ಮದ ಬಣ್ಣವನ್ನು ಕಂಡು( ಇನ್ನೊಂದು) ಆ ಚರ್ಮವನ್ನು ಸ್ಪರ್ಶಿಸುವ ಆಶೆಯನ್ನು ಪ್ರಕೃತಿಯು ಹುಟ್ಟಿಸುತ್ತದೆ. ಷಣ್ಮುಖಶ್ರೀಗಳು –

ಬಣ್ಣದ ಚರ್ಮದ ಹೆಣ್ಣಿನಂಗದ ಕೂಟಸುಖ ಸವಿಯೆಂದು

ಮನವೆಳಸುವ ಕಣ್ಣಗೆಟ್ಟಣ್ಣಗಳು ನೀವು ಕೇಳಿರೊ !

ಹೆಣ್ಣಿನಿಂದೇನು ಸುಖವುಂಟು ಎಡ್ಡಪ್ರಾಣಿಗಳಿರಾ !

ಹೇಸಿಕೆಯ ಕಿಸುಕುಳದ ಕೀವು ತುಂಬಿ ಒಸರುವ,

ಹಸಿಯ ಘಾಯದಲ್ಲಿ ವಿಷಯಾತುರತೆಯಿಂದ ಬಿದ್ದು

ಮತಿಮಸಳಿಸಿ, ಮುಂದುಗಾಣದೆ ಮುಳುಗಾಡು

ತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರ.

ಎಂದು ಬಹುಮಾರ್ಮಿಕವಾಗಿ ಸ್ಪರ್ಶವಿಷಯ ಸುಖವನ್ನು ವಿಡಂಬಿಸಿದ್ದಾರೆ. ಮತ್ತು ಇನ್ನೊಂದೆಡೆ ಕೇವಲ ಸ್ಪರ್ಶಸುಖಕ್ಕೆ ಆಶಿಸಿ ಕೆಡುವ ಪ್ರಾಣಿ ‘ಗಜ’ದ ಗತಿಯನ್ನು ಅವಲೋಕಿಸಿ –

ತ್ವಗಿಂದ್ರಿಯ ವಿಷಯದಿಂದ ಗಜವು

ಕೆಡುವದು ರಾಜನ ಕೃತಕದಲ್ಲಿ

ಎಂದು ಮರುಗಿದ್ದಾರೆ. ರಾಜರು ತಮ್ಮ ಉಪಯೋಗಕ್ಕಾಗಿ ಆನೆಗಳನ್ನು ಹಿಡಿಯಲು ಅಡವಿಯಲ್ಲಿ ತಗ್ಗು ತೆಗೆದು ಮೇಲೆ ಚಪ್ಪರಹಾಕಿ ಹುಲ್ಲನ್ನು ಬೆಳೆಯಿಸುವರು. ಎಳೆಯ ಹಸುರಾದ ಹುಲ್ಲಿಗಾಗಿ ಆಶಿಸಿದ ಗಜವು ತಗ್ಗಿನಲ್ಲಿ ಬೀಳುವದು. ಜ್ಞಾನಿಯಾದ ಮಾನವನು ಒಂದೊಂದು ಇಂದ್ರಿಯದ ಸುಖಕ್ಕಾಗಿ ಬಯಸದೆ ಆತ್ಮದ ಅರಿವನ್ನು ಮಾಡಿಕೊಳ್ಳಬೇಕು. ಅಂದರೆ ತ್ವಕ್ಕಿನ ಜಡತ್ವವು ನಾಶನಾಗಬೇಕಾದರೆ ಆ ತ್ವಗಿಂದ್ರಿಯವನ್ನು ಜಂಗಮಲಿಂಗವನ್ನಾಗಿಸಬೇಕು. ಆಗ ಸ್ಪರ್ಶ ವಿಷಯವು  ಪ್ರಸಾದವಾಗುವದು. ತ್ವ ಕ್ಕು ಜಂಗಮಲಿಂಗಕ್ಕೆ ಮುಖನಾಗಬೇಕು. ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿ ಭೋಗಿಸಬೇಕು. ಇಂಥ ಶಕ್ತಿಯು ಶ್ರೀಗುರು ಕರುಣೆಯಿಂದ ಮಾತ್ರ ಪಡೆಯಲು ಬರುತ್ತದೆ.

ಗುರುವಿಗೆ ನಮ್ಮ ತನುವನ್ನರ್ಪಿಸಬೇಕು. ಶರೀರದಿಂದ ಗುರುವಿನ ಸೇವೆಯನ್ನು ತಪ್ಪದೆ ಮಾಡಬೇಕು. ಅದರಿಂದ ಗುರುಕೃಪೆಯಾಗುವದು. ಗುರುಕರುಣೆಯಿಂದ ವಾಯುವನ್ನು ನಿಲ್ಲಿಸಿ ಮನವನ್ನು ಮಹಾಲಿಂಗದಲ್ಲಿ ನೆಲೆಗೊಳಿಸಿ ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿಸಿ ಶೀತ-ಉಷ್ಣ ಮೃದು-ಕಠಿಣಗಳ ತಾರತಮ್ಯವನ್ನು ಸಮನ್ವಯಗೊಳಿಸುವ-ಶಕ್ತಿಯನ್ನು ಸಂಪಾದಿಸ ಬೇಕು ಪರಮಗುರುವೆ ! ನೀನು ಕರುಣೆದೋರು. ಅದರಿಂದ –

“ಎನ್ನ ತ್ವಕ್ಕದು ಚಲುವ ನಿನ್ನ ಚರಣವ ತೊಳೆವ

ಮನ್ನಣೆಯ ತೊತ್ತಾಗಿ ಇರ್ಪ್ಪುದಯ್ಯ’ʼ

ಎಂದು ಷಡಕ್ಷರಿ ಕವಿಗಳು ಹಾಡಿಹರಿಸಿದಂತೆ ಸಫಲತೆಯನ್ನು ಪಡೆಯಲಾಗುವದು.

೩. ನೇಂದ್ರಿಯ – ರೂಪ ವಿಷಯ

ಹುಬ್ಬಳ್ಳಿ ಪೇಟೆಯೊಳು | ಕಬ್ಬಿನ ಕೈಮಾರಾಟ

ಇಬ್ಬರೊಂದಾಗಿ – ಉಬ್ಬಿಮಾರಲು ಲಾಭ

ಹಬ್ಬಿತೈ ಗುರುವೆ ಕೃಪೆಯಾಗು  ||೬೮||

ಅಗ್ನಿತತ್ತ್ವದ ನೇಂದ್ರಿಯಕ್ಕೆ ಸೂರ್ಯನೇ ಅಧಿದೇವತೆ. ಕಣ್ಣಿನ ವಿಷಯ ರೂಪು. ಶ್ವೇತ (ಬಿಳಿ) ಪೀತ (ಹಳದಿ) ಹರಿತ (ಹಸಿರು) ಕಪೋತ (ಮಾಸ) ಮಾಂಜಿಷ್ಟ (ಕಂದು, ಕೆಂಪು) ಕೃಷ್ಣ (ಕಪ್ಪು) ಗಳೆಂದು ರೂಪಿನಲ್ಲಿ ಆರು ವಿಧ. ಈ ತ್ರಿಪದಿಯಲ್ಲಿ ನೇತ್ರದ ವ್ಯವಹಾರ ಹಾಗೂ ರೂಪ ವಿಷಯದ ವಿಚಾರ ಸುಂದರವಾಗಿ ಬಂದಿದೆ.

ಹಿಂದೆ ತಿಳಿಸಿದಂತೆ ಶಿವಕವಿಯು ವ್ಯಾಪಾರಿಯಾಗಿದ್ದುದರಿಂದ ಪೇಟೆಗಳ ಪರಿಚಯ ವ್ಯಾಪಕವಾಗಿದೆ. ಹುಬ್ಬಳ್ಳಿ ಪೇಟೆ ಬಹುದಿನಗಳಿಂದಲೂ ಪ್ರಸಿದ್ಧ. ಅದರ ಪರಿಚಯವಿಲ್ಲದವನು ತೀರ ವಿರಳ. ಆಗ ಸಕ್ಕರೆಯ ಕಾರಖಾನೆಗಳಿಲ್ಲದ ಕಾಲ. ಕೇವಲ ತಿನ್ನುವ ಬಿಳೆ ಕಬ್ಬುಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಸಂತೆಗಳಲ್ಲಿಯೂ ಕಬ್ಬಿನ ಮಾರಾಟ ನಡೆಯುತ್ತಿತ್ತು. ಹುಬ್ಬಳ್ಳಿಯೆಂದ ಮೇಲೆ ಕೇಳಬೇಕೆ ? ಕಬ್ಬಿನ  ಮಾರಾಟ ಕೈ ಮೇಲೆಯೇ ನಡೆಯುತ್ತಿತ್ತು. ಕೈ ಮಾರಾಟವೆಂದರೆ ಮಾರುವವನು ತನ್ನ ಸಾಮಾನುಗಳನ್ನು ಹೊರತೆಗೆದು ಕೈಯಲ್ಲಿ ಹಿಡಿಯುತ್ತಲೇ ಮಾರಾಟವಾಗುವದು.   ಗಿರಾಕಿಗಳಿಗಾಗಿ ಕಾಯ್ದು ನಿಲ್ಲುವ ಅವಸರವಿರುವದಿಲ್ಲ. ಗ್ರಾಹಕರು ಹೇರಳವಾಗಿರುವ ದರಿಂದ ತಡವಿಲ್ಲದೆ ಸರಕು ಮಾರಾಟವಾಗುತ್ತಿತ್ತು. ಅದರಿಂದ ಕೊಡುವವನಿಗೂ, ಕೊಳ್ಳುವವನಿಗೂ ತೀರದ ಉತ್ಸಾಹವಾಗುವದು ಸಹಜ. ಇದು ಹೊರನೋಟದ  ಕಬ್ಬಿನ ವ್ಯಾಪಾರವಾದರೆ ಅಧ್ಯಾತ್ಮಿಕ ಕಬ್ಬಿನ ವ್ಯಾಪಾರ ಬಹು ಮಾರ್ಮಿಕವಾಗಿದೆ.

 ಹುಬ್ಬಳಿಯೆಂದರೆ = ಹುಬ್ಬಿನ ಬಳ್ಳಿ (ಹುಬ್+ಬಳ್ಳಿ), ಬಳ್ಳಿಯಂತಿರುವ ಹುಬ್ಬು. ಈ ಹುಬ್ಬುಗಳ ವ್ಯವಹಾರವೇ ಹುಬ್ಬಳ್ಳಿಯ ಪೇಟೆ, ಎರಡು ಹುಬ್ಬುಗಳ ಮೂಲಕ ನಡೆಯುವ ವ್ಯಾಪಾರ ಕಾಮಕೇಳಿ. ೪೪ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಕಾಮನಿಗೆ ಹುಬ್ಬುಗಳೇ ಬಿಲ್ಲು, ಅರಳುಗಂಗಳೇ ಬಾಣವೆಂದು ಅರಿತಿದ್ದೇವೆ. ಕಾಮಿಗಳು ಹುಬ್ಬುಗಳನ್ನು ಕುಣಿಸಿ (ಹಾರಿಸಿ) ಕುಡಿನೋಟಗಳನ್ನು ಬೀರಿ ಎಂಥ ಧೀರನ ಮನವನ್ನಾದರೂ ಸೆಳೆಯುತ್ತಾರೆ. ಹುಬ್ಬು ಮತ್ತು ಕಣ್ಣುಗಳ ಕಾಮ ಚೇಷ್ಟೆ ಕಬ್ಬಿನಂತೆ ರಸಿಕರಿಗೆ ರುಚಿಯಾಗಿರುತ್ತದೆ. ಈ ವ್ಯಾಪಾರದಲ್ಲಿ ಬಾಹ್ಯ ಪ್ರಪಂಚವನ್ನೇ ಮರೆಯುತ್ತಾರೆ. ಪರಸ್ಪರ ಪ್ರೇಮಿಗಳಲ್ಲಿ ಈ ಮನಸಿಜನ ವ್ಯಾಪಾರವು ಹೆಚ್ಚಿದರೆ. ಭೋಗದ ಲಾಭ ಬೆಳೆಯುವದು. ಅದು ಅತಿಯಾಗಿ ಬೆಳೆದರೆ ವೈಷಯಿಕವಾಸನೆ  ವ್ಯಾಪಿಸುವದು

ಹಿಂದೀ ಸಾಹಿತ್ಯದ ರಸಿಕ ಚಕ್ರವರ್ತಿಯೆನಿಸಿದ ಶೃಂಗಾರ ಕವಿಯೆಂದು ಪ್ರಖ್ಯಾತಿ ಪಡೆದ ‘ಬಿಹಾರಿಯು’ ತನ್ನ ‘ಸತಸಯಿ’ಯಲ್ಲಿ ಪ್ರಣಯಿಗಳ ನಯನ ಮತ್ತು ಹುಬ್ಬುಗಳ ವ್ಯಾಪಾರದ ವರ್ಣನೆಯನ್ನು ಸುಂದರವಾಗಿ ಮಾಡಿದ್ದಾನೆ .

*”ಕಹತ ನಟತ, ರೀಝತ, ಖಜತ, ಮಿಲತ, ಖಿಲತ, ಲಜಿಯಾತ |

ಭರೆ ಭೌನಮೇಂ ಕರತ ಹೈ ನೈನನ ಹೀ ಸೋಂ ಬಾತ. ||

‘ಕಾಮಾತುರಾಣಾಂ ನ ಭಯಂ ನ ಲಜ್ಜ್ಯಾʼʼಕಾಮಾತುರರಾದ ಕಾಮಿಗಳಿಗೆ  ಭಯವೆಲ್ಲಿ? ಯಾವುದೂ ಇರುವದಿಲ್ಲ. ಪ್ರೇಮಿಗಳು ಜನನಿಬಿಡವಾದ ಸಭಾ  ಭವನದಲ್ಲಿಯೂ ಸಹ ತಮ್ಮ ಪ್ರೇಮಾಲಾಪವನ್ನು ಮಾಡುತ್ತಾರೆ. ಇವರ ಸಂಭಾಷಣೆ ಶಬ್ದಗಳಿಂದಲ್ಲ. ಕೇವಲ  ಕಣ್ಣೋಟಗಳಿಂದ, ಸಂಭಾಷಣೆಗಳಲ್ಲಿಯೂ ಆಕರ್ಷಣೆಯಿದೆ, ರಸಿಕತೆಯಿದೆ. ನಾಯಕನು ಕಣ್ಣು ಸನ್ನೆಯಿಂದ ಪ್ರಿಯತಮಳನ್ನು ಕೇಳುತ್ತಾನೆ. ಅವಳು ಕೃತ್ರಿಮ ನಟನೆಯಿಂದ ಅನುಮತಿ ನೀಡುವದಿಲ್ಲ. ಇದು ಅವನಿಗೆ ಸಂತಸಪಡಿಸುತ್ತದೆ. ಆದರೆ ಆಕೆಗೆ ಸಿಟ್ಟು ಬರುತ್ತದೆ. ಆಗ ಒಬ್ಬರಿಗೊಬ್ಬರು ನೋಡುವದರಿಂದ ಇಬ್ಬರ ನೇತ್ರಗಳು ಒಂದಾಗುತ್ತವೆ. ಮುಖ ಅರಳುತ್ತದೆ. ಜನತೆಯ ಕಲ್ಪನೆ ಬಂದು ಅವಳು ತಕ್ಷಣ ನಾಚಿಕೊಳ್ಳುತ್ತಾಳೆ. ಹೀಗೆ ಕಾಮಿಗಳು ಯಾವ ಪರವೆಯಿಲ್ಲದೆ ತಮ್ಮ ಚೇಷ್ಟೆಯನ್ನು ಆಡುತ್ತಿರುತ್ತಾರೆ.

ಕನ್ನಡದ ಮಹಾಕವಿ ಚಾಮರಸನೂ ಸಹ ಕಾಮಿನಿಯರಿಗೆ ಕಂಗಳ ಮಾತು  ಸಹಜವೆಂದು ಬಣ್ಣಿಸಿದ್ದಾನೆ. ”ಪ್ರಭುಲಿಂಗಲೀಲೆ’ಯಲ್ಲಿ –

ಕಂಗಳಲಿ ಮಾತುಗಳು ತಿಳಿವೊಡೆ

ಕಂಗಳಲಿ ಮಾಟಗಳು ಬಗೆವೊಡೆ

ಕಂಗಳಲಿ ಸಮ್ಮೋಹಗಳು ಕಂಗಳಲಿ ನೇಹಗಳು |

ಕಂಗಳಲಿ ಸರ್ವಪ್ರಪಂಚುಗ –

ಳಂಗನೆಯರಿಗೆ ಸಹಜವೆಂದೆನೆ

ಕಂಗಳಿಂದಾ ವಿಮಳೆ ಸೂಚಿಸಲರಿದಳಾ ಮಾಯೆ

ವಿಮಳೆ ಮತ್ತು ಮಾಯಾದೇವಿಯರ ಮಾತು ಕಂಗಳ ಸಂಜ್ಞೆಯಿಂದ ನಡೆದ ಪ್ರಸಂಗವನ್ನು ಇಲ್ಲಿ ವರ್ಣಿಸಲಾಗಿದೆ.

ಕಣ್ಣುಗಳ ಕಾಮಚೇಷ್ಟೆಯು ಉಚ್ಚೃಂಖಲತೆಯನ್ನು ಹೊಂದಿದರೆ ಸಾಮಾಜಿಕ ಜೀವನವೇ ವ್ಯತ್ಯಸ್ತವಾಗುವದು. ಇಂದಿನ ಸ್ಟೇಚ್ಛಾ ಮನೋಭಾವವುಳ್ಳವರಲ್ಲಿ ಮತ್ತು ನಾಟಕ-ಚಲನಚಿತ್ರಗಳಲ್ಲಿ ಈ ವ್ಯವಹಾರ ಅತಿಯಾಗಿ ಕಾಣುತ್ತದೆ. ಇದರ ಪರಿಣಾಮ ಊಹಿಸಲಸಾಧ್ಯವಾಗಿದೆ.

*ವಿಶ್ವಾಮಿತ್ರ – ಪರಾಶರ ಪಭೃತಯೋ ವಾತಾಂಬುಪರ್ಣಾಶನಾಃ |

ತೇSಪಿ ಸ್ತ್ರೀ ಮುಖ ಪಂಕಜಂ ಸುಲಲಿತಂ ದೃಷ್ಟ್ವೈ ಮೋಹಂ ಗತಾಃ |

“ಕೇವಲ ಒಣಗಿದ ಎಲೆ ನೀರುಗಳನ್ನು ತಿಂದ ವಿಶ್ವಾಮಿತ್ರ ಪರಾಶರ ಮೊದಲಾದ ಮುನಿಗಳು ಸಹ ಸುಂದರವಾದ ಸ್ತ್ರೀಯರ ಮುಖಕಮಲವನ್ನು ಕಂಡು ಮೋಹಿತರಾದರೆಂದು ಭರ್ತೃಹರಿಯು ಹೇಳಿರುವಾಗ ಇನ್ನುಳಿದ ಸಾಮಾನ್ಯ ಮಾನವರ ಪಾಡೇನು

ನೇತ್ರವು ಸುಂದರ ರೂಪಕ್ಕಾಗಿ ಕಾತುರ ಪಡುತ್ತಿದೆ. ಚರ್ಮದ ಚೀಲವೆನಿಸಿದ ದೇಹದ ಬಣ್ಣ, ಹಾಗೂ ಯೌವನದ ಉಬ್ಬುಗಳನ್ನು ನಿರೀಕ್ಷಿಸ ಬಯಸುತ್ತದೆ. ಈ ರೂಪ ಸ್ಥಿರವಾದುದಲ್ಲ. ಮಹಾಪೂರವಿಳಿದ ನದಿಯಂತೆ ಯೌವನವು ಜಾರಿಹೋದ ಮೇಲೆ ರೂಪ ವಿರೂಪವಾಗುವದು. ಇದು

ಕಿಸುಕುಳದ, ಕೀವುರಕ್ತದ, ಒಸೆದು ತುಂಬಿದ

ಮಲಮೂತ್ರದ ರಂಜನ ಮುಸುಕಿದ

ಮಾಂಸ ಅಸ್ತಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ

ಹುಸಿಯ ತನುವ ಮೆಚ್ಚಿ ಪಶುಪತಿ ನಿಮ್ಮ ನಾನು ಮರೆದೆನಯ್ಯ

ಅಖಂಡೇಶ್ವರಾ

ಸುಡು ಸುಡು ಈ ದೇಹದ ರೂಪು

ನೋಡಿದಡೇನೂ ಹುರುಳಿಲ್ಲವಯ್ಯ

ಎಲುವು ಚರ್ಮ ನರ ಮಾಂಸ ಮಲ ಮೂತ್ರಯುಕ್ತವಾದ

ಅನಿತ್ಯ ದೇಹವ ನಚ್ಚಿ ನಿಮ್ಮ ನಿಜವ ಮರೆದು

ಭವಭಾರಿಯಾದೆನಯ್ಯ ಅಖಂಡೇಶ್ವರಾ

ಎಂದು ಷಣ್ಮುಖ ಶಿವಯೋಗಿಗಳು ದೈಹಿಕ ರೂಪದ ಅಸಾರತೆಯನ್ನು ಭವದ ಮೂಲವನ್ನು ತಿಳಿಸಿದ್ದಾರೆ. ಉಡುತಡಿಯ ನವಯೌವನವತಿಯಾದ ಅಕ್ಕನ ಸುಂದರ ರೂಪವನ್ನು ಮೋಹಿಸಿದ ಕೌಶಿಕರಾಜನಿಗೆ ಅಕ್ಕನು ದೇಹದ ಯಥಾರ್ಥ ರೂಪವನ್ನು  ಬಿತ್ತರಿಸಿ ಮಾಯಾ ಪರೆಯನ್ನೇ ಹರಿಯುತ್ತಾಳೆ –

ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ,

ಎಲುವಿನ ತಡಿಕೆ, ಕೀವಿನ ಹಡಿಕೆ,

ಸುಡಲೀ ದೇಹವ ಒಡಲುವಿಡಿದು ಕೆಡದಿರು

ಚನ್ನಮಲ್ಲಿಕಾರ್ಜುನನರಿ ಮರುಳೆ !

ಎಂದು ಹೇಳಿ ಸ್ವತಃ ತಾನೂ ದಿಗಂಬರೆಯಾಗಿ ವೀರವೈರಾಗ್ಯಶಾಲಿನಿಯಾಗಿ ಕೀರ್ತಿಕಾಯಳಾಗುತ್ತಾಳೆ. ದೀಪದ ರೂಪಕ್ಕಾಗಿ ಮೋಹಿಸುವ ಪತಂಗವು ಸುಟ್ಟು ಸಾಯುವಂತೆ ಮಾನವನು ನಾರಿಯರ ಹೊರಗಿನ ರೂಪಕ್ಕಾಗಿ ಮರುಳಾಗಿ   ಮನುಷ್ಯತ್ವವನ್ನು ಮಾರಿಕೊಳ್ಳುತ್ತಾನೆ.

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ

ಪಂಚ ಜ್ಞಾನೇಂದ್ರಿಯಗಳಲ್ಲಿ ನೇತ್ರವೇ ಮುಖ್ಯವಾಗಿದೆ. ಉಳಿದ ನಾಲ್ಕರಲ್ಲಿ ಯಾವುದಾದರೂ ಕೊರತೆಯಾದರೆ ನಡೆಯಬಹುದು.. ಕಣ್ಣಿಲ್ಲದಿದ್ದರೆ ಪರಾಧೀನನಾಗ ಬೇಕಾಗುವದು. ಶಿವನು ತನ್ನ ಸೃಷ್ಟಿಯ ಸೌಂದರ್ಯವನ್ನು ಸವಿಯಲು ನೇತ್ರವನ್ನಿತ್ತಿದ್ದಾನೆ. ಶಿವಲಿಂಗದಲ್ಲಿ ದೃಷ್ಟಿಯನ್ನಿರಿಸಲು ಕಣ್ಣಿರಿಸಿದ್ದಾನೆ (ಜೀವನಿಗೆ) ಆ ಕಣ್ಣೋಟ ಕಾಮುಕ ದೃಷ್ಟಿಯುಳ್ಳುದಾಗಬಾರದು. ನೇತ್ರದೃಷ್ಟಿಯನ್ನು, ಲಿಂಗಕಲೆಯನ್ನು ನೋಡಿ ಶಿವಮಯಗೊಳಿಸಬೇಕು. ಅಂದರೆ ಮಾತ್ರ ನೇತ್ರವು ಶಿವಲಿಂಗವಾಗುವದು. ನೋಡುವ ರೂಪವೆಲ್ಲ ಶಿವಸ್ವರೂಪವಾಗುವದು. ಈ ದೃಷ್ಟಿಯ ವಿಷಯದಲ್ಲಿ ಜ್ಞಾನಿಯಾದ ಚನ್ನಬಸವಣ್ಣನವರ ಕೆಳಗಿನ ಒಂದೇ ವಚನ ಸಾಕು –

ಲಿಂಗದ ಕಲೆ ಅಂತರಂಗಕ್ಕೆ ವೇಧಿಸುವ

ಹಲವು ಸಾಧನಂಗಳಲ್ಲಿ

ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯ.

ಕರದಿಷ್ಟ ಲಿಂಗದಿ, ತೆರೆದಿಟ್ಟ ದೃಷ್ಟಿ ಎವೆಹಳಚದಂತಿರ್ದಡೆ

 ಆ ಲಿಂಗವು ಕಂಗಳಲ್ಲಿ ವ್ಯಾಪಿಸುತ್ತಿಹುದು.

ಆ ಮಂಗಲಮಯವಾದ ಕಂಗಳಲ್ಲಿ ಮನವನಿರಿಸಿ

ಲಿಂಗ ನಿರೀಕ್ಷಣೆಯಿಂದ ನೆನೆಯಲು

ಆ ಲಿಂಗಮೂರ್ತಿ ಮನವನಿಂಬುಗೊಂಡು

ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು

ಬಳಿಕ ಮನೋಮಯ ಲಿಂಗವನು –

ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,

ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು

ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.

ಆ ಭಾವಲಿಂಗವನು ಎಡೆಬಿಡದೆ ಭಾವಿಸುತ್ತ

ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,

ಶರಣನು ನಿತ್ಯ ತೃಪ್ತನಾಗಿ ವಿರಾಜಿಸುತಿಪ್ಪನು.

ಇದೇ ನಮ್ಮ ಕೂಡಲ ಚನ್ನಸಂಗಯ್ಯನೊಡನೆ

ಕೂಡುವ ಪರಮೋಪಾಯವು.

ನೋಡಿದಿರಾ ! ದೃಷ್ಟಿಯ ಮಹತ್ವ ಅದೆಷ್ಟು ಅಪಾರವಾಗಿದೆ. ಪರಶಿವನ ಕೂಡುವ ಸಾಧನವೇ ದೃಷ್ಟಿ, ಶಿವನೇ ತಾನಾಗುವ ಸಾಧನವೂ ದೃಷ್ಟಿ, ಮೊಗ್ಗೆಯ ಮಾಯಿದೇವರೂ ಮಹದೈಪುರೀಶ್ವರ ಶತಕದಲ್ಲಿ –

ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊ |

ಳ್ಪಿಂಗದ ನಿಂದಭಾವದರೊಳ್ನೆಲೆಗೊಂಡ ಶಿವಾತ್ಮಲಿಂಗವಾ ।

ಲಿಂಗದೊಳಿರ್ದು ನಿತ್ಯಸುಖಿಯಾಗಿ ವಿರಾಜಿಸುವಂಗೆ ಬಾಹ್ಯ ಕ |

ರ್ಮಂಗಳವೇತಕಯ್ಯ ಪರಮ ಪ್ರಭುವೇ ಮಹದೈಪುರೀಶ್ವರಾ || ೫೨ |

ಇಷ್ಟ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳು ನೆಲೆನಿಂತರೆ ಶರಣನು ಚಿರ ಪರಿಣಾಮಿಯೆನಿಸುವನು. ನಿತ್ಯಸುಖಿಯಾಗುವನು. ಇಂಥವನಿಗೆ ಬಾಹ್ಯ ಕರ್ಮಗಳ ಅವಶ್ಯಕತೆಯೇ ಇಲ್ಲ. ಅಂದಮೇಲೆ ಪರಶಿವನು ದಯಪಾಲಿಸಿದ ನೇತ್ರವನ್ನು ಗುರು-ಲಿಂಗ-ಜಂಗಮರ ದರ್ಶನಕ್ಕಾಗಿ ಮೀಸಲಾಗಿಡಬೇಕು. ಶಿವಲಿಂಗ ನೋಡುವ ಕಣ್ಣಿನಲ್ಲಿ ಪರ ಸತಿಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಲಿಂಗವಿಲ್ಲದೆ ಸಂಯೋಗವಿಲ್ಲ. ಸಮರಸವಿಲ್ಲ. ಅದುಕಾರಣ ನೇತ್ರದ ನಿಜವನರಿದಾಚರಿಸಬೇಕು.

ಎಡ ನೇತ್ರದ ಈಡಾ ನಾಡಿಯೇ ಸತಿಯಾಗಿ ಬಲನೇತ್ರವಾದ ಪಿಂಗಳನಾಡಿಯು ಶಿವಲಿಂಗರೂಪಪತಿಯಾಗಿ ಸುಷುಮ್ನಾನಾಳವಾದ ಭ್ರೂ ಮಧ್ಯ (ಹುಬ್ ಬಳ್ಳಿ) ಪೇಟೆಯಲ್ಲಿ ಕೂಡಿದರೆ ಸಮರಸದ ನಿತ್ಯ ಸುಖಪ್ರಾಪ್ತಿಯಾಗಿ ನಿತ್ಯತೃಪ್ತತೆ ಲಭ್ಯವಾಗು ವದು. ಇಂಥ ತೃಪ್ತಿಗೆ ನಾಶವೆಂಬುದಿಲ್ಲ. ಈ ನಿತ್ಯತೃಪ್ತಿ ನೇತ್ರದ ದೃಷ್ಟಿಯೋಗದಿಂದ ಸಾಧ್ಯವೆಂಬುದನ್ನು ಮರೆಯದಿರಬೇಕು. ಓ ಗುರುವೆ ! ಎನ್ನ ನೇತ್ರದಲ್ಲಿ ಶಿವಲಿಂಗವನ್ನು ನೆಲೆಗೊಳಿಸಿ ರೂಪುಗಳನ್ನು ಶಿವಮಯಗೊಳಿಸಿ  ಭ್ರೂಮಧ್ಯದ ಅಜ್ಞಾಚಕ್ರದ ಎರಡೆಸಳಿನ ಕಮಲಮಧ್ಯದ ಮಹಾಲಿಂಗ ದರ್ಶನವನ್ನು ಮಾಡಿಸಿ ನಿತ್ಯ ಸುಖಿಯನ್ನಾಗಿಸು.

*

೪. ರಸನೇಂದ್ರಿಯ – ರಸ ವಿಷಯ

ಶಿರಹಟ್ಟಿಯೊಳಗೊಂದು | ಕರುವಿಲ್ಲದಾಕಳಿಗೆ

ಕರೆವ ಮೊಲೆಯಿಲ್ಲ ಕರೆದುಂಬುತಿದೆ ಗೋವು

ಕರಚೋದ್ಯ ಗುರುವೆ ಕೃಪೆಯಾಗು     || ೬೯ ||

ಇಲ್ಲಿ ರಸವಿಷಯದ ನಿರೂಪಣೆ ಬಂದಿದೆ. ರಸವನ್ನು ಗ್ರಹಿಸುವದು ಜಿಹ್ವೇಂದ್ರಿಯವು. ಇದಕ್ಕೆ ಅಪ್ಪುವೇ ಮಹಾಭೂತ. ವರುಣನೇ ಅಧಿದೇವತೆ. ಈ ಜಿಹ್ವೆ (ನಾಲಿಗೆ)ಗೆ ರಸವೇ ವಿಷಯವು. ಮಧುರ (ಸಿಹಿ) ಆಮ್ಲ (ಹುಳಿ) ತಿಕ್ತ (ಕಹಿ) ಕಟು (ಖಾರ) ಕಷಾಯ (ಒಗರು) ಲವಣ (ಉಪ್ಪು) ಗಳೆಂಬ ಆರು ರಸದ ಭೇದಗಳು. ಈ ತ್ರಿಪದಿಯಲ್ಲಿ ಪ್ರತಿಪಾದಿಸಿದ ರಸದ ವ್ಯಾಖ್ಯಾನವು ಅತ್ಯಂತ ನಿಗೂಢವಾಗಿದೆ. ಆಳವಾಗಿ ವಿಚಾರಿಸುವಂಥಹದೂ ಅಹುದು.

ಶಿರಹಟ್ಟಿಯೆಂಬುದು ಒಂದು ಊರಿನ ಹೆಸರಿರಬಹುದು. ಹಟ್ಟಿಯೆಂದರೆ ದನ ಕಟ್ಟುವ ಸ್ಥಳ, ಶಿರಪದವನ್ನು ಸಿರಿಯೆಂದುದಾಗಿ ತಿಳಿದರೆ ಸಂಪದ್ಯುಕ್ತವೆಂತಲೂ ಅರ್ಥವಾಗುವದು. ಶಿರಹಟ್ಟಿ-ಸಂಪದ್ಯುಕ್ತವಾದ ದನಗಳ ಸ್ಥಾನವು. ಹಿಂದಿನ ಕಾಲದಲ್ಲಿ ಗೋಧನವನ್ನು ಪ್ರಮುಖ ಸಂಪತ್ತನ್ನಾಗಿ ಪರಿಗಣಿಸುತ್ತಿದ್ದರು. ಪುರಂದರದಾಸರು ಹಾಡಿದ –

ನೀನಾರಿಗಾದೆಯೋ ಎಲೆಮಾನವ”

ಎನ್ನುವ ಪದದಿಂದ ಗೋವಿನ ಮಹತ್ವ ತಿಳಿಯದೇ ಇರದು. ಗೋವು ಪವಿತ್ರ ಪ್ರಾಣಿ, ಅದರ ಸೇವೆಗಾಗಿ ಅನೇಕ ಮಹಾನುಭಾವಿಗಳು ತಮ್ಮ ಜೀವನವೇ ಸವೆಸಿದ್ದಾರೆ. ರಘುಕುಲದ ದಿಲೀಪ ಮಹಾರಾಜನು ವಶಿಷ್ಠ ಮುನಿಗಳ ಅಪ್ಪಣೆಯಂತೆ ನಂದಿನಿಯ ಸೇವೆ ಮಾಡಿ ಪುತ್ರ ಫಲವನ್ನು ಪಡೆಯಲಿಲ್ಲವೆ ? ಇಂಥ ಗೋವುಗಳಿರುವ ಸ್ಥಳ ಶಿರಹಟ್ಟಿಯೇ ಸರಿ.

ಪೂಜ್ಯ  ಗುರುಗಳವರು ದನದ ಮನೆಗೆʼʼ ದ್ರವ್ಯದ ಮನೆ”ಯೆಂತಲೂ ಅಪ್ಪಣೆ ಮಾಡುತ್ತಿದ್ದರು. ಒಕ್ಕಲುತನ ಪ್ರಧಾನವಾದ ನಮ್ಮ ಭಾರತ ದೇಶವು ದನಗಳಿಗಾಗಿ ಪ್ರಾಶಸ್ಯ ನೀಡಿದೆ. ನೀಡಲೇಬೇಕು. ಬಸವನನ್ನು (ಎತ್ತನ್ನು) ದೇವರನ್ನಾಗಿ ಪೂಜಿಸುವ ಪರಂಪರೆಯೂ ಇದೆ. ಒಕ್ಕಲಿಗನನ್ನು ಮೇಲಕ್ಕೆತ್ತಿ ನಿಲ್ಲಿಸುವ ಎತ್ತು ಧರ್ಮ ಮೂರುತಿಯೂ ಆಗಿದೆ. ಕೃಷಿಕನಿಗೆ, ಸಾಧು-ಸತ್ಪರುಷರಿಗೆ, ಸತ್ಕಾರ್ಯಗಳಿಗೆ ಅತ್ಯುಪಯುಕ್ತವಾದ ಪ್ರಾಣಿ ಆಕಳು. ಅದರ ಹಾಲು ಭೂಲೋಕದ ಅಮೃತ ಅಂತೆಯೇ ಅನುಭವಿಗಳು ಪಾಲುಂಡು ಮೇಲುಂಬರೆ” ? ಎಂದು ವರ್ಣಿಸಿದ್ದಾರೆ. ಇಂಥ ಅಮೃತ ದೊರೆಯುವದು ಶಿರಹಟ್ಟಿಯಿಂದಲ್ಲವೇ ?

ಶಿವಕವಿ ಚಿತ್ರಿಸಿದ ನಮ್ಮ ಆಕಳು ವಿಚಿತ್ರವಾಗಿದೆ. ಇದಕ್ಕೆ ಕರುವಿಲ್ಲ. ಹಾಲು ಕರೆವ ಮೊಲೆಗಳಿಲ್ಲ. ಆದರೂ ತನ್ನ ಹಾಲು ಕರೆದು ತಾನೇ ಉಂಬುತ್ತಿದೆ. ಅಂದ ಮೇಲೆ ಕರಚೋದ್ಯವಲ್ಲದೆ ಮತ್ತೇನು ? ಆದರೆ ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ” ವೆಂದಿದ್ದಾರೆ ವಚನಕಾರರು. ಇಂಥ ಶರಣರ  ನಾಡಿನಲ್ಲಿ ಮೊಲೆಯಿಲ್ಲದೆಯೂ ಹಾಲು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ.   

ಲೌಕಿಕದಲ್ಲಿ ರಸವನ್ನು ಗ್ರಹಿಸುವ ರಸನೆಯು ಕೇವಲ ಭೌತಿಕ ರಸಗಳನ್ನು ಮಾತ್ರ ಅಸ್ವಾದಿಸುತ್ತದೆ .ಅದರೆ ಕವಿಯ ಅಭಿಪ್ರಾಯ ರಹಸ್ಯವಾಗಿದೆ . ಜಲತತತ್ತ್ವದ ಪಧಾರ್ಥಗಳೆಲ್ಲ ರಸಗಳೆನಿಸುತ್ತವೆ .ಈ ರಸಗಳಿಗಿಂತಲೂ ಭಿನ್ನವಾದ ಎರಡು ರಸಗಳನ್ನು ಅನುಬವಿಗಳು ತಿಳಿಸಿಸ್ಸಾರೆ .ಒಂದು ಕಾವ್ಯತ್ಮಕವಾದ ರಸ ,ಇನ್ನೊಂದು ಬ್ರಹ್ಮಾನಂದ ರಸ; “ರಸೋ ವೈ ಸಃ” ಆ ಪರಬ್ರಹ್ಮ ವಸ್ತುವೂ ರಸ ಸ್ವರೂಪವೆಂದು ಶೃತಿ ಸಾರಿದೆ. ಕಾವ್ಯವಿಮಾಂಸಕರು ಕಾವ್ಯರಸಕ್ಕೆ ಬ್ರಹ್ಮಾನಂದ ಸಹೋದರವೆಂದು ಕರೆದಿದ್ದಾರೆ. ಕಾವ್ಯರಸವು ಪಾಠಕನನ್ನು ತನ್ಮಯತೆಯಲ್ಲಿ ಮುಳುಗಿಸುತ್ತದೆ. ಇದರಂತೆ ಯೋಗಿ ಮತ್ತು ಶಿವಯೋಗಿಗಳು ಸಮಾಧಿ ಸ್ಥಿತಿಯಲ್ಲಿ ಲಿಂಗಾನಂದ ರಸವನ್ನು ಅನುಭವಿಸುತ್ತಾರೆ. ಇವರಿಗೆ ದೊರೆತ ರಸವು ಸಾಕ್ಷಾತ್ ಅಮೃತ ರಸ, ಈ ರಸದ ರುಚಿಯನ್ನೇ ಶಿವಕವಿಯು ರಚಿಸಿದ್ದಾನೆ.

 ಶಿರಹಟ್ಟಿಯೆಂದರೆ ಶಿರಸ್ಸು (ತಲೆ); ಮಸ್ತಕದಲ್ಲಿ ಸಹಸ್ರದಳ ಕಮಲವಿದೆ. ದೊಡ್ಡ ಮಿದುಳು ಮತ್ತು ಸಣ್ಣ ಮಿದುಳು ಕಡಗೋಲಿನ ಮುದ್ದೆಯಂತೆ ಅನಂತನಿರಿಗೆ (ಮಡಿಕೆ)ಗಳಿಂದ ಕೂಡಿದೆಯೆಂಬ ಮಾತನ್ನು ಇಂದಿನ ಶಾರೀರಿಕ ತಜ್ಞರೂ ಒಪ್ಪಿದ್ದಾರೆ. ಅದಕ್ಕಾಗಿ ಇದನ್ನು ಸಾವಿರದಳ ಕಮಲವೆಂದು ಶಾಸ್ತ್ರಕಾರರು ಕರೆದುದು ತರ್ಕಬದ್ಧ ವಾಗಿದೆ. ಮನುಷ್ಯನ ಜ್ಞಾನದ ವ್ಯವಹಾರವೆಲ್ಲ ಇಲ್ಲಿಂದಲೇ ನಡೆಯುತ್ತದೆ. ಶಿವಯೋಗದಲ್ಲಿ ಬಲ್ಲಿದನಾದ ಸದ್ಗುರುವು ಶಿಷ್ಯನ ಈ ಪಶ್ಚಿಮ ಶಿಖಾಚಕ್ರ ಮಧ್ಯದ ಮಹಾ ಚೈತನ್ಯವನ್ನು ಹೊರತೆಗೆದು ಅಂಗೈಯಲ್ಲಿ ಲಿಂಗವನ್ನಾಗಿ ಕರುಣಿಸುತ್ತಾನೆ. ಶಿರಸ್ಸಿನಲ್ಲಿ ಒಟ್ಟು ಮೂರು ಚಕ್ರಗಳನ್ನು ಕಂಡು ಹಿಡಿದಿದ್ದಾರೆ. ನಡುದಲೆಯಲ್ಲಿ ಬ್ರಹ್ಮ ಅಥವಾ ಸಹಸ್ರಚಕ್ರವೆಂದೂ ಮಸ್ತಕಾಗ್ರದಲ್ಲಿ ಶಿಖಾಚಕ್ರವೆಂದೂ, ತಲೆಯ ಹಿಂಭಾಗದಲ್ಲಿ  ಪಶ್ಚಿಮಚಕ್ರವೆಂದೂ ಗುರುತಿಸಿದ್ದಾರೆ. ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ನವಕಲ್ಯಾಣ ಮಠದ ಶ್ರೀಗಳವರು (ಪುಟ ೩೧ರಲ್ಲಿ) ಸಹಸ್ರಾರದಲ್ಲಿ ಅಮೃತಲಿಂಗವಿಹುದು. ಯೋಗಿಯು ಅದನ್ನು ಲಕ್ಷಿಸಿ ಅಮೃತರಸ ಪಾನಮಾಡಿ ಜನನ-ಮರಣಗಳನ್ನು ನೀಗುವನು. ಎಂದು ತಿಳಿಸಿದ್ದಾರೆ. ಅಲ್ಲಮಪ್ರಭುದೇವರು

  “ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲೆ ಸಹಸ್ರದಳ ಪದ್ಮ

 ಅಲ್ಲಿ ಅಮೃತವಿಹುದು.

. ಅಲ್ಲಿ ಓಂಕಾರ ಸ್ವರೂಪನಾಗಿ ಗುಹೇಶ್ವರ ಲಿಂಗವು ಸದಾ ಸನ್ನಿಹಿತನು”

ಎಂದು ಅಪ್ಪಣೆ ಮಾಡಿರುವರು

 ಆಧುನಿಕ ಶರೀರ ವಿಜ್ಞಾನಿಗಳು ತಲೆಬುರುಡೆಯನ್ನು ಎರಡು ಭಾಗಗಳಲ್ಲಿ ವಿಭಾಗಿಸುತ್ತಾರೆ. ಮುಂಭಾಗದಲ್ಲಿ “ ಪಿಟ್ಯುಟರಿ ಗ್ರಂಥಿʼ’ಯೆಂದೂ ಹಿಂಭಾಗದಲ್ಲಿ “ಪೀನಿಯಲ್‌ಗ್ರಂಥಿ”ಯೆಂತಲೂ ಪರಿಶೋಧಿಸಿದ್ದಾರೆ. ಈ ಪೀನಿಯಲ್ ಗ್ರಂಥಿಯು

ಒಂದು ಸಣ್ಣ ಉದ್ದಿನ ಬೇಳೆಯಷ್ಟು ಎಂದರೆ ಇಂಚಿನ ಎಂಟನೆಯ ಒಂದು ಭಾಗದಷ್ಟಿದ್ದು ನೆರೆ ಬಣ್ಣದ್ದಿರುತ್ತದೆ. ‘ಪಿಟ್ಯುಟರಿ’ ಗ್ರಂಥಿಯು ಮಾಗಿದ ಒಂದು ಸಣ್ಣ ಕವಳೆಹಣ್ಣಿನ ಗಾತ್ರದ್ದಿದ್ದು ಮಿದುಳಿಗೆ ಜೋಡಿಸಲ್ಪಟ್ಟಿರುತ್ತದೆ. ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಗಳಲ್ಲಿ ಹುದುಗಿರುವ ಸಾಮರ್ಥ್ಯದ ವಿಕಾಸದ ಮುಖಾಂತರವಾಗಿ ಹೊಸ ಹೊಸ ಮತ್ತು ಅತಿ ಉಚ್ಚವಾದ ಜ್ಞಾನವು ಎಂದರೆ ಸ್ವಯಂ ಪ್ರಭೋಧವು, ಸ್ವಾನುಭಾವವು ಒಡಮೂಡುವದೆಂದು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುತ್ತಿದೆ” (ಶಿವಯೋಗ ರಹಸ್ಯದ ೪-೫ ಪುಟ) ಇಂಥ ಸಣ್ಣ ಮೆದುಳಿಗೆ ಆಕಸ್ಮಿಕವಾಗಿ ಪೆಟ್ಟು ಬಿದ್ದರೆ ಜ್ಞಾನ ಶೂನ್ಯವಾಗುವದು. ಇದು ಸಕಲರಿಗೂ ಅನುಭವ ಗಮ್ಯವಾಗಿದೆ.

ಸಣ್ಣ ಮೆದುಳಿಗೆ ಎಲ್ಲ ಜ್ಞಾನತಂತುಗಳು ಜೋಡಿಸಲ್ಪಟ್ಟಿರುತ್ತವೆ. ಈ ಜ್ಞಾನ ತಂತು (ನಾಡಿ)ಗಳೆಂಬ ಆಕಳುಗಳನ್ನು ಕಟ್ಟಿದ (ಹಟ್ಟಿ ಕೇಂದ್ರ) ಸ್ಥಾನ ಸಹಸ್ರಾರ ಅಥವಾ ಸಹಸ್ರದಳಕಮಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಯೌಗಿಕ ವಿಚಾರವೆಂದರೆ ಶರೀರದಲ್ಲಿ ಕುಂಡಲಿನೀ ಶಕ್ತಿಯಿರುತ್ತದೆ. ಇದು* ಬೆನ್ನು ಹುರಿಯ ಕೆಳಗಿನ ತುದಿಯಲ್ಲಿ ಸುಪ್ತವಾಗಿ ಸುರುಳಿಯಾಗಿ  ಅವಿತುಕೊಂಡಿರುತ್ತದೆ. ಈ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿದರೆ ನವಚೈತನ್ಯವು ಸ್ಪುರಿಸುವದು. ಜಾಗ್ರತವಾದ ಕುಂಡಲಿನೀ ಶಕ್ತಿಯು ಮೇರುದಂಡದ ಅಥವಾ ಬೆನ್ನು ಹುರಿಯ ಮುಖಾಂತರವಾಗಿ ಮಾರ್ಗಕ್ರಮಣ ಮಾಡಿ ಎರಡು ಹುಬ್ಬುಗಳ ನಡುವಿನ ಅಜ್ಞಾ ಚಕ್ರಕ್ಕೆ ಬಂದು ನಿಲ್ಲುವದು. ಇದಕ್ಕೇನೇ ಕುಂಡಲಿನೀ ಶಕ್ತಿಯ ಊರ್ಧ್ವಗಮನವೆನ್ನುವರು.” ಅದಕ್ಕೆ  ಉನ್ಮನವೆಂತಲೂ ಇನ್ನೊಂದು ಹೆಸರು. ಇಂಥ ಕುಂಡಲಿನಿಯೇ ಇಲ್ಲಿಯ ಗೋವು. ಇದಕ್ಕೆ ಅದಾವ ಕರುವಿಲ್ಲ. ಕರೆವ ಮೊಲೆಯೂ ಇಲ್ಲ. ಆದರೂ ಸಹಸ್ರಾರದಲ್ಲಿ ಅಮೃತ ಬಿಂದುವನ್ನು ಸುರಿಸುವದು. ಅಂದರೆ ಅಂಗನು ಲಿಂಗದ ಶಕ್ತಿಯನ್ನರಿತು ದೃಷ್ಟಿಯೋಗದಿಂದ ಸಮರಸದ ಕೂಟದಲ್ಲಿ ಆನಂದಭರಿತನಾಗುವನು.

 ಇಂಥ ಅಮೃತವನ್ನು ಸವಿಯುವದು ಸಾಮಾನ್ಯವಾದ ಮಾತಲ್ಲ. ಅಲ್ಪರ  ಶಕ್ತಿಯೂ ಅಲ್ಲ. ಇದು ಸಕಲರಿಗೆ ಸಾಧ್ಯವಾಗುವದೂ ಇಲ್ಲ. ಅಂದಮೇಲೆ ಆಶ್ಚರ್ಯ ವಲ್ಲದೆ ಮತ್ತೇನು ? ಸಹಸ್ರಾರದ ಸವಿಯನ್ನು ಸವಿಯಬಲ್ಲವನು ಐಕ್ಯಾಂಗನು. ಶರಣಸತಿಯು ಮಹಾಲಿಂಗಪತಿಯ ಸಮರಸದಲ್ಲಿ ಐಕ್ಯನಾಗಿ ನಿತ್ಯಮುಕ್ತನಾಗುವನು.

ಮುಂಡರಗಿಯ ಮೂಲಕರ್ತೃಗಳಾದ ಅನ್ನದಾನೀಶ್ವರರು ಹಾಗೂ ಎಡೆಯೂರ ತೋಂಟದ ಸಿದ್ಧಲಿಂಗರು ಸಹಸ್ರಾರದ ಸವಿಯನ್ನು ಸವಿದು ಅನಂತಕಾಲ ತಪಗೈದ ಉದಾಹರಣೆಗಳಿವೆ.

 ಸದ್ಗುರು ಕರುಣೆಯಿಂದ ಶಿವಲಿಂಗವನ್ನು ಪಡೆದು ‘ಕರಣ ಹಸಿಗೆ’ಯನ್ನು ಅರಿತು ಕುಂಡಿಲಿನಿ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಹಸ್ರದಳ ಪದ್ಮದ ಮಹಾಲಿಂಗವನ್ನು ಕಂಡು ಅಕ್ಷಯವಾದ ಅಮೃತರಸವನ್ನು ಸವಿಯುವದು  (ಜೀವಾತ್ಮನ) ಸದ್ಭಕ್ತನ ಪರಮ ಕರ್ತವ್ಯವಾಗಿದೆ. ಇದೆಲ್ಲವೂ ಗುರುಕೃಪೆಯಿಲ್ಲದೆ ಆಗದು. ಓ ಗುರುವೆ ! ಅಂಥ ಅಮೃತವನ್ನು ಸವಿಯುವ ಸೌಭಾಗ್ಯವನ್ನು ಅನುಗ್ರಹಿಸಿ ಸಲಹು.

*

೫. ಫ್ರಾಣೇಂದ್ರಿಯ – ಗಂಧವಿಷಯ

ಪಂಪಾಕ್ಷೇತ್ರದೊಳೊಂದು | ಸಂಪಿಗೆಯ ನನೆಯುಂಟು

ಕಂಪುಂಟು ಗಾಳಿ ತಂಪುಂಟೊಳಗಿಂಚಿನ**

ಗುಂಪುಂಟು ಗುರುವೆ ಕೃಪೆಯಾಗು   II ೭೦ II

 ಪಂಚಜ್ಞಾನೇಂದ್ರಿಯದ ಪಂಚವಿಷಯಗಳಲ್ಲಿ ಕೊನೆಯದು ಗಂಧತತ್ತ್ವ; ಗ೦ಧವಿಷಯ. ಗಂಧವನ್ನು ಗ್ರಹಿಸುವ ಇಂದ್ರಿಯ ನಾಶಿಕ. ಇದಕ್ಕೆ ಪೃಥ್ವಿಯೇ ಮಹಾಭೂತ. ಅಶ್ವಿನಿ ಅಧಿದೇವತೆ ; ಅಲ್ಲಿ ಗಂಧವಿಷಯವು ಸುಗಂಧ, ದುರ್ಗಂಧ ವೆಂದು ಇಬ್ಬಗೆಯಾಗುತ್ತದೆ.

ಶಿವಕವಿಯು ಪ್ರತಿಯೊಂದು ವಿಷಯವನ್ನು ಚಮತ್ಕಾರಿಕ ರೀತಿಯಲ್ಲಿ ಪ್ರತಿಪಾದಿಸಿದಂತೆ ; ಇಲ್ಲಿ ತನ್ನ ಶಿವಕ್ಷೇತ್ರ ದರ್ಶನದ ಪರಿಚಯವನ್ನು ಮಾಡಿಸುತ್ತ ಗಂಧ ವಿಷಯವನ್ನು ಮತ್ತು ಘ್ರಾಣೇಂದ್ರಿಯದ ತತ್ತ್ವವನ್ನು ಬಿತ್ತರಿಸಿದ್ದಾನೆ. *

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಸಿದ್ಧವಾದುದು ಪಂಪಾಕ್ಷೇತ್ರ. ಅಲ್ಲಿ ವಿರೂಪಾಕ್ಷನ ದರ್ಶನ, ಆ ಕ್ಷೇತ್ರದಲ್ಲಿ ಪಂಪಾಸರೋವರ, ಉದ್ಯಾನಗಳು ಎದ್ದು ಕಾಣುತ್ತಿವೆ. ಇದು ರಾಜನಿರ್ಮಿತ ಮತ್ತು ರಾಜರಕ್ಷಿತವಾದ ಮೇಲೆ ಕೇಳಬೇಕೇನು ? ಇದರ ವರ್ಣನೆಯನ್ನು ಅಷ್ಟಭಾಷಾ ಕವಿಯೆನಿಸಿದ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನೆಯ ಚಂಪೂ ಕಾವ್ಯವನ್ನು ಓದಿಯೇ ಆನಂದಪಡಬೇಕು. ಹಂಪೆಯ ಕ್ಷೇತ್ರದಲ್ಲಿರುವದು ಪಂಪಾಸರೋವರ. ಅದರ ಸುತ್ತಲಿನ ವನದಲ್ಲಿ  ಸಂಪಿಗೆಯ ಮರಗಳ ಸಮೂಹ. ಅವುಗಳ ಸಂಪಿಗೆ ಪುಷ್ಪದ ಮಕರಂದ ಸುತ್ತಲೂ ಪಸರಿಸಿದೆ. ಆ ಸುಗಂಧವು ಗಾಳಿಯನ್ನಾವರಿಸಿ ಸರೋವರದ ತಂಪಿನೊಡನೆ, ಗಿಳಿ ವಿಂಡುಗಳ ಇಂಚರದೊಡನೆ ಸಮರಸವಾಗಿ ಕಂಪನ್ನು ಬೀರುತ್ತಿದೆ..  ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಳ್ಳುವವರಿಗೆ ಆ ಕಂಪು ತನ್ಮಯತೆಯನ್ನು ಹುಟ್ಟಿಸುತ್ತದೆ. ಸಂಪಿಗೆಯ ಪುಷ್ಪವು ಬಲುಸುಗಂಧ. ಅದು ಮೊಗ್ಗಾದಾಗಿನಿಂದ ಮಾಗುವವರೆಗೆ ತನ್ನ ಸೌಗಂಧವನ್ನು ಸೂಸುತ್ತದೆ. ಕನ್ನಡಾಂಬೆಯ ಸಿರಿಮುಡಿಗೆ ಸಂಪಿಗೆಯ ಸುಗಂಧ ಸೌಂದರ್ಯವನ್ನೀಯುತ್ತ ಬಂದಿದೆ. ಇದೆಲ್ಲವೂ ಬಾಹ್ಯ ಸೌಗಂಧದ ಪರಿ.

 ಇನ್ನು ಅಂತರಂಗದ ಸುಗಂಧದ ಸೌರಭ ಹೀಗಿದೆ. ಪಂಪಾಕ್ಷೇತ್ರವೆಂದರೆ ಶರೀರ. ಈ ಕ್ಷೇತ್ರದಲ್ಲಿರುವ ಮಹಾಚೈತನ್ಯವೇ ಪಂಪಾಪತಿ ವಿರೂಪಾಕ್ಷ. ಇಲ್ಲಿರುವ ಸರೋವರ ಸದ್ಗುರುವಿನ ಕಾರುಣ್ಯರಸರೂಪಾದುದು. ಈ ಕಾರುಣ್ಯರಸದ ಸರಸ್ಸಿನ ಪರಿಸರದಲ್ಲಿರುವ ವನವೇ ಜ್ಞಾನೇಂದ್ರಿಯಗಳ ಗುಂಪು. ಅದರಲ್ಲಿ ಸಂಪಿಗೆಯ ಮೊಗ್ಗಿನಂತಿರುವದು ಘ್ರಾಣೇಂದ್ರಿಯವು. ಇದು ಗಂಧಗ್ರಾಹಕವಾಗಿರುವದರಿಂದ ಸಂಪಿಗೆಯ  ಸಾದೃಶ್ಯವನ್ನು ಹೊಂದಿದೆ. ನಾಶಿಕವು ಪೃಥ್ವಿಯ ತತ್ತ್ವದಿಂದಾದ ಕಾರಣ ಭಕ್ತಾಂಗವೆನಿಸುವದು. ಭಕ್ತನು ನಡೆದು  (ಆಚರಿಸಿ)ತೋರುವ ಸದಾಚಾರವೇ ಸುಗಂಧದ ಕಂಪು. ಮೂಗಿನಲ್ಲಿ ಚಂದ್ರನಾಡಿಯಿರುವದರಿಂದ ತಂಪೂ ಇದೆ. ಈ ದೇಹ ಕ್ಷೇತ್ರವಾದ ಮೇಲೆ ಪಂಚಾಚಾರಗಳ ಕಂಪೂ ಹಬ್ಬಿ ಶಿವನ ಸಾಕ್ಷಾತ್ಕಾರಕ್ಕೆ ಕಾರಣವಾಗುವದು.’’ ಎನ್ನ ಸದ್ಗುಣ ಗಂಧ’’ವೆಂದು ಮುಪ್ಪಿನಾರ್ಯರು ಹಾಡಿದ್ದು ಅರ್ಥಪೂರ್ಣವಾಗಿದೆ. ಇಲ್ಲಿ ‘ಗಿಂಚಿನ ಪದಕ್ಕಿಂತಲೂ ‘ಗಿಂಪಿನ’ ಪದ ಶೋಭಾಯ ಮಾನವೂ ಸಮಂಜಸವೂ ಆಗುವದು.

ವೀರಶೈವರ ಷಟ್‌ಸ್ಥಲ ಸಿದ್ಧಾಂತದಲ್ಲಿ ಶಿವಜ್ಞಾನ ಶಿವಕ್ರಿಯೆಗಳ ಸಮನ್ವಯವಿದೆ. ಇದಕ್ಕೆ ಜ್ಞಾನ ಕ್ರಿಯೆಗಳ ಸಮ-ಸಮುಚ್ಛಯ ತತ್ತ್ವವೆಂತಲೂ ಕರೆಯುವರು. ವೀರಶೈವನಿಗೆ ಅಷ್ಟಾವರಣವೇ ಅಂಗವಾದರೆ ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮವಾಗಿವೆ. ಈ ಅಷ್ಟಾವರಣಾಂಗನು ಪಂಚಾಚಾರಗಳನ್ನು ಪ್ರಾಣವನ್ನಾಗಿಸಿದರೇನೇ ಆತ್ಮನ ಸಂದರ್ಶನವಾಗುವದು. ಮೊದಲು ಆಚಾರ ಅಳವಡಬೇಕು. ಕ್ರಿಯೆ ನಡೆಯಲ್ಲಿ ಬರಬೇಕು. ಅನುಭಾವಿಗಳು –

ಆಚಾರಃ ಪರಮೋ ಧರ್ಮ: ಆಚಾರಃ ಪರಮಂ ತಪಃ ।

ಆಚಾರವೇ ಶ್ರೇಷ್ಠ ಧರ್ಮ ಹಾಗೂ ತಪಸ್ಸೆಂದು ಪ್ರತಿಪಾದಿಸಿದ್ದಾರೆ. ಪಂಚಾಚಾರದ ಸ್ವರೂಪವನ್ನು, ಮತ್ತು ಅದರ ಮಹತ್ವವನ್ನು ಚನ್ನಬಸವಣ್ಣನವರು~

ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ

ನೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ;

ಲಿಂಗವನಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ,

ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗ ಜಂಗಮಕ್ಕೆ ನೀಡಿ

ಸತ್ಯ-ಶುದ್ಧನಾಗಿಹುದೆ ಸದಾಚಾರ,

ಶಿವಭಕ್ತರಲ್ಲಿ ಕುಲಗೋತ್ರ ಜಾತಿವರ್ಣಾಶ್ರಮವನರಸದೆ

ಅವರೊಕ್ಕುದ ಕೊಂಬುದೆ ಶಿವಾಚಾರ

ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ

ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ

ಭಕ್ತಿಯಿಂದ ಆಚರಿಸುವದೆ ಭೃತ್ಯಾಚಾರ

ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ

ಪ್ರಭುವೇ ! ಕೂಡಲ ಚನ್ನಸಂಗಮದೇವಾ’ (೧೧೫೯)

ಇದಕ್ಕೂ ಸ್ಪಷ್ಟವಾದ ರೀತಿಯಲ್ಲಿ – ಮತ್ತೊಂದು ವಚನ.

ಅಯ್ಯಾ ! ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ

ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ

ಭಕ್ತನಾದಡೆ ಸತ್ಯ ಶುದ್ಧ ಕಾಯಕವ ಮಾಡಿ,

ಮಾಹೇಶನಾದಡೆ ಸತ್ಯ ಶುದ್ಧ ಭಿಕ್ಷವ ಬೇಡಿ

ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು

ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರ ವೆಂಬೆನಯ್ಯಾ

ಗುರು-ಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ,

ಪರಶಿವಲಿಂಗವೆಂದು ಭಾವಿಸಿ,

ಅರ್ಥಪ್ರಾಣಾಭಿಮಾನವನರ್ಪಿಸುವುದೆ ಶಿವಚಾರವೆಂಬೆನಯ್ಯಾ

ಅಷ್ಟಾವರಣಂಗಳ ಮೇಲೆ ಅನ್ಯರಿಂದ ಕುಂದು-ನಿಂದೆಗಳು

ಬಂದು ತಟ್ಟದಲ್ಲಿ ಗಣಸಮೂಹವನೊಡಗೂಡಿ

ಆ ಸ್ಥಲವ ತ್ಯಜಿಸುವದೆ ‘ಗಣಾಚಾರ’ವೆಂಬೆನಯ್ಯ

…………ಷಟ್‌ಸ್ಥಲ ಮಾರ್ಗದಲ್ಲಿ ನಿಂದ

ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ,

ಅವರಿದ್ದ ಸ್ಥಳಕ್ಕೆ ಹೋಗಿ, ತನು-ಮನ-ಧನಂಗಳ ಸಮರ್ಪಿಸಿ

ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ

ಪ್ರತ್ಯುತ್ತರವ ಕೊಡದಿರ್ಪುದೆ ‘ಭೃತ್ಯಾಚಾರ’ವೆಂಬೆನಯ್ಯಾ?

ಎಂದು ಪಂಚಾಚಾರದ ಸೂಕ್ಷ್ಮತೆಯನ್ನು ಸಾರಿದ್ದಾರೆ. ಇಂತಹ ಪ್ರಾಣಸ್ವರೂಪವಾದ ಪಂಚಾಚಾರಗಳನ್ನು ಅಳವಡಿಸಿಕೊಳ್ಳುವದೇ ಭಕ್ತತನದ ಪರಮ ಸೌಗಂಧ ಎನಿಸುವದು.

ಲಿಂಗಾಚಾರದಿಂ ತನುಶುದ್ಧವಾಗಿತ್ತು ನೋಡಾ !

ಸದಾಚಾರದಿಂ ಮನಶುದ್ದವಾಯಿತ್ತು ನೋಡಾ

ಶಿವಚಾರದಿಂ ಧನಶುದ್ಧವಾಯಿತ್ತು ನೋಡಾ |

ಗಣಾಚಾರದಿಂ ನಡೆ ಶುದ್ಧವಾಗಿತ್ತು ನೋಡಾ !

ಭೃತ್ಯಾಚಾರದಿಂ ನುಡಿ ಶುದ್ಧವಾಯಿತ್ತು ನೋಡಾ !

ಪಂಚಾಚಾರಗಳಿಂದ ಜೀವನು ಶಿವನಾಗುವನು ನೋಡಾ !

ಮೃಡಗಿರಿಯ ಅನ್ನದಾನೀಶ (ಸ.ವ.ಸಂ. ೪೨೦)

ಪಂಚಾಚಾರಗಳಿಂದ ತನು-ಮನ-ಧನ-ನಡೆ-ನುಡಿಗಳು ಶುದ್ಧವಾಗಿ ಶಿವನಾಗು ವದರಲ್ಲಿ ಸಂದೇಹವಿಲ್ಲ. ಪುಷ್ಪಪರಿಮಳ ಅಭಿನ್ನವಾಗಿರುವಂತೆ ಅಂಗಲಿಂಗಗಳ ಸಮರಸವಾಗುವದು. ಸದ್ಗುಣಾಚಾರದ ಸೌಗಂಧ ಎಲ್ಲೆಡೆಯೂ ಪಸರಿಸಬಲ್ಲುದು.

ಪೃಥ್ವಿಯು ಪಂಚತನ್ಮಾತ್ರೆಗಳಿಂದ ಕೂಡಿದ್ದರೂ ಗಂಧ ಪ್ರಧಾನವಾಗಿದೆ. ಗಂಧವಿಲ್ಲದ ವಸ್ತು ನಿರರ್ಥಕ. ಪ್ರತಿಯೊಂದಂಶದಲ್ಲಿಯೂ ತನ್ನದೇ ಆದ ಗಂಧವಿರುತ್ತದೆ. ಗಂಧವಿರಹಿತವಾದರೆ ಆ ವಸ್ತುವಿಗೆ ಬೆಲೆಯಿಲ್ಲದಾಗುವದು. ಮತ್ತು ಗಂಧ ವಿಕೃತವಾದರೂ ಸರಿಯಲ್ಲ. ಗಂಧ ಪದಾರ್ಥವು ಜೀವನಕ್ಕೆ ಅತ್ಯವಶ್ಯಕವಾಗಿದೆ. ಪೂಜೆಯ ಸಾಮಗ್ರಿಯಲ್ಲಿ ಗಂಧವೂ  ಒಂದು.

“ಸುಗಂಧಂ ಪುಷ್ಟಿ ವರ್ಧನಮ್

ಸುಗಂಧವು ಶರೀರಕ್ಕೆ ಪುಷ್ಟಿಯನ್ನು, ತುಷ್ಟಿಯನ್ನು ಕೊಡುತ್ತದೆ. ಈ ಗಂಧವು

ಸೌಮ್ಯವಾಗಿರಬೇಕು. ಅದರಲ್ಲಿ ತೀವ್ರತೆಯಿರಬಾರದು. ಪ್ರಾಕೃತಿಕ ಗಂಧವು ಪ್ರಕೃತಿಗೆ ಹಿತಕರವಾಗುತ್ತದೆ. ಕೃತ್ರಿಮ ಗಂಧದಿಂದ ವಿಕಾರ ಬೆಳೆಯುತ್ತದೆ. ಇದರಿಂದ ನಾಶಿಕಕ್ಕೂ ಕುಂದು. ಅತಿಸುಗಂಧವನ್ನು ವಾಸಿಸುವ ಘ್ರಾಣವು ತನ್ನ ಶಕ್ತಿಯನ್ನು ಕಳೆದುಕೊಳ್ಳುವದು. ಮೋಹಕಗಂಧವು ಜೀವನವನ್ನೇ ಕೆಡಿಸುತ್ತದೆ.

“ಘ್ರಾಣೇಂದ್ರಿಯ ವಿಷಯದಿಂದ ಭ್ರಮರ ಕೆಡುವದು

ಸಂಪಿಗೆಯ ಪುಷ್ಪದಲ್ಲಿ

ಸಂಪಿಗೆಯ ಸೌಗಂಧವನ್ನು ಮೋಹಿಸಿ ಭ್ರಮರವು ಕಷ್ಟಕ್ಕೀಡಾಗುತ್ತದೆಂದು ಷಣ್ಮುಖ ಶಿವಯೋಗಿಗಳು ಉಪದೇಶಿಸಿದ್ದಾರೆ. ಗಂಧ ಸುಗಂಧವಾಗಬೇಕೇ ವಿನಾ ಅತಿಗಂಧ ವಾಗಲಿ, ದುರ್ಗಂಧವಾಗಲಿ ಆಗಬಾರದು. ಮೋಹಕ ಗಂಧವನ್ನು ವಾಸಿಸುವ ನಾಶಿಕಕ್ಕೆ ನೆಗಡಿಯಾಗಲೆಂದು ಷಡಕ್ಷರಿಗಳು ಮಾರ್ಮಿಕವಾಗಿ ಹಾಡಿದ್ದಾರೆ.

ಅಂಗನೆಯರು ತೊಡೆದು ಸೂಡಿ

ದಂಗಪುಷ್ಪ ವಾಸಿಸುವೊಡೆ

ಹಿಂಗದೆನ್ನ ನಾಸಪುಟಕೆ ನೆಗಡಿಯಾಗಲಿ |

ಮಂಗಳಾತ್ಮ ಷಡಕ್ಷರಿಯ

ಲಿಂಗದಂಘ್ರಿಗಿತ್ತ ಕುಸುಮ

ಹಾಂಗೆ ವಾಸಿಸುವರೆ ಘ್ರಾಣವಿಕಸವಾಗಲೆ

ಅಂಗನೆಯರು ಪೂಸಿಕೊಂಡ ಗಂಧದಿಂದ ವಿಕಾರವಾದರೆ ಮಂಗಳಾತ್ಮಕ ಮಹಾಲಿಂಗಕ್ಕರ್ಪಿಸಿದ ಪುಷ್ಪ ಪರಿಮಳವು ಜೀವನ ವಿಕಾಸಕ್ಕೆ ಕಾರಣವೆಂಬುದನ್ನು ಅರಿಯಬೇಕು. ಮೋಹಕ ಗಂಧವನ್ನು ಮೋಹಿಸುವ ನಾಸಿಕದ ಕ್ರಿಯೆಯನ್ನು ಶಿವನತ್ತ ತಿರುಗಿಸಬೇಕು ನಾಶಿಕದಲ್ಲಿ ಆಚಾರಲಿಂಗವಿರುವದರಿಂದ  ಸದ್ಭಾವನೆಯಿಂದ ಸದಾಚಾರದಲ್ಲಿ ಗಂಧವನ್ನು ಸುಗಂಧ ಪ್ರಸಾದವಾಗಿ ಸ್ವೀಕರಿಸುವದನ್ನು ಕಲಿತರೆ ತುಷ್ಟಿ-ಪುಷ್ಟಿಗಳೆರಡೂ ಲಭಿಸುತ್ತವೆ. ಓ ಗುರುವೆ ! ಇಂಥ ಗಂಧದ ಕಂಪನ್ನು ಸ್ವೀಕರಿಸಿ ಆನಂದಿಸುವ ಅನುವನ್ನು ನೀಡು