ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯರಿಗೆ ನನ್ನ ನಮಸ್ಕಾರಗಳು.
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮಶಿಷ್ಯ ರಾದ ಪೂಜ್ಯ ಲಿಂ. ಪಂಚಾಕ್ಷರಿ ಗವಾಯಿಗಳ ಪುಣ್ಯ ತಿಥಿ ಮತ್ತು ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ “ಸುಕುಮಾರ” ಸಂಗೀತ ವಿಶೇಷ ಸಂಚಿಕೆಯನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.
ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ. ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ ಕಣ್ಣು ತೆರೆದು ನೋಡಿ, ಕಿವಿ ತುಂಬ ಕೇಳಿ ,ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಪಂಚಾಕ್ಷರಿ ಗವಾಯಿಗಳವರು ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು. ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.
ಈ ಪಾವನ ಸಮಯದಲ್ಲಿ ನವದೆಹಲಿಯ ಹಾನಗಲ್ಲ ಶ್ರಿ ಕುಮಾರ ಶಿವಯೋಗಿ ಸೇವಾ ಸಮಿತಿ ಅರ್ಪಿಸಿದ ಕವಿರತ್ನ ಚನ್ನಕವಿಗಳು ವಿರಚಿತ ಶ್ರೀಕುಮಾರೇಶ್ವರ ನಾಮಾವಳಿ ಸಂಗೀತ ಧ್ವನಿ ಸುರಳಿಯನ್ನು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ. ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತ ದಿಂದ ಶ್ರೀ ಶಿವಯೋಗಮಂದಿರದಲ್ಲಿ ಲೋಕಾರ್ಪಣೆ ಗೊಂಡಿದ್ದು ವಿಶೇಷ ವಾಗಿತ್ತು.
ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕಾವ್ಯ ಚಿತ್ತದ ರಾಗ ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಧಾರವಾಹಿ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ..
ಸಂಗೀತ ಕ್ಷೇತ್ರಕ್ಕೆ ಶಿವಯೋಗಮಂದಿರದ ಕೊಡುಗೆಗಳು : ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ
ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶ್ರೀಗಳವರ ಸಂಗೀತ ಸಂಪ್ರೀತಿ. ಲೇಖಕರು :ಲಿಂ. – ಪಂ. ಪುಟ್ಟರಾಜ ಗವಾಯಿಗಳು
ಪುಣ್ಯಸ್ಮರಣೆ ಪೂಜ್ಯ ಪಂಚಾಕ್ಷರಿ ಗವಾಯಿಗಳು .ಲೇಖಕರು ಶ್ರೀ ಶಿರೀಷ ಜೋಶಿ ಸೌಜನ್ಯ: ಸುಕುಮಾರ ದೀಪ್ತಿ .ಸಂಪಾದಕರು ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ
ಕಲಾಯೋಗಿ ಲೇಖಕರು : – ಶ್ರೀ ಗಂಗಾಧರ ಶಾಸ್ತ್ರಿಗಳು, ಚಿತ್ತರಗಿ.
ನಾದ-ಲೇಖಕರು : ಶ್ರೀ ರಾಮೇಶ್ವರ ಬಿಜ್ಜರಗಿ ಸೊಲ್ಲಾಪುರ
Guru – Supriya Antin Kaddargi Vice President, JP Morgan Chase Bank Greater Chicago.USA
ಸಂಗೀತವೆಂಬ ಜೀವನ ಚೈತನ್ಯ ಲೇಖಕರು : ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ
ನೆನಪು : ಶಿವಯೋಗಮಂದಿರದ ತೆಂಗಿನ ಗಿಡಗಳು ಮತ್ತು ಲಿಂ. ಪೈಲವಾನ ವೀರಭದ್ರಪ್ಪನವರು ಮೂಲ ಲೇಖಕರು ಶ್ರೀ ಕಿಶನ್.ಕುಲಕರಣಿ ಕುಷ್ಟಗಿ ಸಂಗ್ರಹ : ಶ್ರೀ ಕುಮಾರ ಹಿರೇಮಠ ಮತ್ತು ಶ್ರೀ ರವಿ ಹುಲಕೋಟೆ
ಸಂಗೀತ ಸಂಚಿಕೆಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವಿರಚಿತ ಕಾವ್ಯಗಳನ್ನು ಸುಶ್ರಾವ್ಯ ವಾಗಿ ಹಾಡಿದ ತುಮಕೂರಿನ ಶ್ರೀ ಸಿದ್ದೇಂದ್ರಕುಮಾರ ಹಿರೇಮಠ ಅವರಿಗೆ ಕೃತಜ್ಞತೆಗಳು
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಅಗಸ್ಟ ೨೦೨೧ ರ ಸಂಚಿಕೆ
೪. ಗುರು ಕೃಪೆಯ ಅವಶ್ಯಕತೆ
ಘಂಟೆಯನು ಪಿಡಿದೋರ್ವ | ಟೆಂಟೆಣಿಸಲು ನಾದ
ಮುಂಟಲ್ಲದುಳಿದು ತಾನಾಗಿಯೇ ನುಡಿಯುವ
ದುಂಟೆ ಶ್ರೀ ಗುರುವೆ ಕೃಪೆಯಾಗು || ೧೧ ||
ಗುರುಮಹತ್ವವನ್ನು ಗುರುಪಾದಪದ್ಮ ಸನ್ನಿಧಿಯ ಮಹಿಮೆಯನ್ನು ಅರಿತ ಮೇಲೆ, ಗುರುಕೃಪೆಯ ಅವಶ್ಯಕತೆಯು ಸ್ಪಷ್ಟವಾಗುತ್ತದೆ. ಜೀವನು ಸ್ವತಂತ್ರನಲ್ಲ.ಒಂದಿಲ್ಲೊಂದು ರೀತಿಯ ಅಪ್ಪಣೆಯನ್ನು ಪಾಲಿಸಲೇ ಬೇಕಾಗುವದು. ಗೃಹಸ್ಥನಾದವನು ಗುರು-ಹಿರಿಯರ ಮಾತನ್ನು ಕೇಳಬೇಕು. ಹೆಂಡತಿಯಾದವಳು ಪತಿಯಿಚ್ಛೆಯಂತೆ ನಡೆಯಬೇಕು. ಪುತ್ರನಾದವನು ಮಾತಾ-ಪಿತೃಗಳ ಅನುಜ್ಞೆಯನ್ನು ಪಾಲಿಸಬೇಕು. ‘ತೇನ ವಿನಾ ತೃಣಮಪಿ ನ ಚಲತಿ” ಪರಮಾತ್ಮನ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯಾದರೂ ಅಲುಗಾಡದೆಂಬ ಉಪನಿಷದ್ವಾಕ್ಯವು ಮಹತ್ವಪೂರ್ಣವಾಗಿದೆ. ಯಾವುದಕ್ಕಾದರೂ ಪ್ರೇರಣೆ ಅವಶ್ಯಬೇಕು.
ದೇವರ ದರ್ಶನಕ್ಕಾಗಿ ಬಂದ ಭಕ್ತನು ಘಂಟೆಯನ್ನು ಬಾರಿಸುತ್ತಿರಲು ಅದು ನಾದಗೈಯುತ್ತಿದೆ. ಘಂಟೆಯನ್ನು ಟೆಂಟೆಣಿಸದೆ ಇದ್ದರೆ ನಾದ ಹೊರ ಹೊಮ್ಮದು. ತಾನಾಗಿ ಅದು ಎಂದೂ ನುಡಿಯುವದಿಲ್ಲ. ಘಂಟೆಗೊಬ್ಬ ಪ್ರೇರಕ ಬೇಕೇ ಬೇಕು.ಪ್ರೇರಕನಿಲ್ಲದೆ ಘಂಟೆ ಸಾರ್ಥಕವಾಗದು. ಅದರಂತೆ ಈ ದೇಹವೆಂಬುದೊಂದು ಘಂಟೆ. ಇದರಲ್ಲಿ ನಾದವುಂಟಾದರೂ ಸ್ವತಃ ನುಡಿಯದು, ನುಡಿಸುವ ಕರ್ತನು ಬೇಕು.ಅವನೇ ಸದ್ಗುರು. ಗುರುನಾಥನು ಸಂಸ್ಕಾರಮಾಡಿ ಕರುಣೆಯಿಂದ ಮಂತ್ರೋಪದೇಶ ಮಾಡಿದಲ್ಲದೆ ಪ್ರಣವನಾದವು ಹೊರಹೊಮ್ಮದು. ಗುರೂಪದೇಶ ಮಾಡಿದ ಮಂತ್ರವು ಜಪಕ್ಕೆ ಯೋಗ್ಯವಾಗುವದು. ಅಂದಮೇಲೆ ಗುರುಕೃಪೆ ಅವಶ್ಯವಾಗಿಬೇಕು.
ದೇವಾಲಯದೊಳಗಿನ ಘಂಟೆಯನ್ನು ದೇವರು ನುಡಿಸಲಾರ. ನುಡಿಸಿದರೆ ಮಾತ್ರ ನಾದವನ್ನು ಕೇಳಬಲ್ಲ, ಹಾಗೇ ಶ್ರೀ ಗುರುವೆ ! ನೀನು ಶರಣಕರ್ತನು. ನನ್ನ ದೇಹ ಘಂಟೆಯನ್ನು ನುಡಿಯುವಂತೆ ಮಾಡು. ಯಾಕೆಂದರೆ ಅದು ತಾನಾಗಿಯೇ ನುಡಿಯ ಲಾರದು. ನುಡಿಸುವದು ನಿನ್ನ ಧರ್ಮ. ನೀನುಡಿಸಿದಂತೆ ನುಡಿಯುವದು ನನ್ನ ಧರ್ಮ,ಈ ವಿಚಾರವನ್ನೇ ಇನ್ನೂ ನಾಲ್ಕು ನುಡಿಗಳಿಂದ ವಿಸ್ತಾರಗೊಳಿಸಿದ್ದಾನೆ. ಸಮಂಜಸವಾದ ಉದಾಹರಣೆಗಳಿಂದ ತನ್ನ ವಾದವನ್ನು ಸಮರ್ಥನಗೊಳಿಸುತ್ತಾನೆ.
ವೀಣಾನೂತನ ಶಬ್ದ | ಪಾಣಿಯಿಂದೊಗೆವಂತೆ
ಜಾಣ ಶ್ರೀ ಗುರುವೆ ನೀಂ ನುಡಿಸಿದಂತೆ ನಾಂ
ಮಾಣದಲೆ ನುಡಿವೆ ಕೃಪೆಯಾಗು || ೧೨ ||
ಸಜ್ಜುಗೊಳಿಸಿದ ವೀಣೆಯನ್ನು ಬೆರಳಿನಿಂದ ಮಿಡಿದರೆ ತಂತಿಯ ಇಂಚರ ಇಂಪುಗೊಡುವದು. ವೀಣೆಯನ್ನು ನುಡಿಸಲು ಎಲ್ಲರಿಗೂ ಬಾರದು. ಜಾಣನು ಮಾತ್ರ ವೀಣೆಯನ್ನು ತಕ್ಕಂತೆ ನಿನದಿಸಬಲ್ಲ. ವೀಣೆಯು ಸ್ವಂತವಾಗಿ ನುಡಿಯುವದಿಲ್ಲ.ವೀಣಾವಾದಕನಿಂದಲೇ ವೀಣೆಯ ಯೋಗ್ಯತೆ ವ್ಯಕ್ತವಾಗುವದು. ಕಾಯವೆಂಬುದೊಂದು ವೀಣೆ. ಇದು ಜೀವಂತ ತಂಬೂರಿ. ಇದನ್ನು ಶೃತಿ ಗೊಳಿಸಬಲ್ಲ ಜಾಣನು ಗುರುದೇವನೇ, ಸದ್ಗುರುನಾಥನು ಕೆಡುವ ಕಾಯವನ್ನು ಸಂಸ್ಕಾರದಿಂದ ಕಾಯಕಲ್ಪ ಮಾಡಬಲ್ಲನು, ನಾದವನ್ನು ಹೊರಡಿಸಬಲ್ಲನು. ಶರಣಕವಿಯು ಕುಪಿತನಾದ ಗುರುನಾಥನನ್ನು ‘ಜಾಣಶ್ರೀಗುರುವೆ’ಯೆಂದು ನುಡಿಸಿ ಪ್ರಸನ್ನಗೊಳಿಸಲು ಪ್ರಯತ್ನಿಸಿದ್ದು ಧ್ವನಿತವಾಗುತ್ತದೆ. ಹೇ ಗುರುವೆ ! ನೀನು ಸಮರ್ಥನು ಮತ್ತು ಜಾಣನು. ನಾನು ತಪ್ಪಿರಬಹುದು. ಇನ್ನು ಮುಂದೆ ನೀನು ನುಡಿಸಿದಂತೆ ನಾನು ತಪ್ಪದಲೆ ನುಡಿಯುವೆನೆಂದು ಕೃಪೆ ಕೇಳಿದ್ದಾನೆ. ಕಾಯವನ್ನು ದಂಡಿಗೆಯನ್ನಾಗಿಸಿ ನರಗಳನ್ನು ತಂತಿಯನ್ನು ಮಾಡಿ ಓಂಕಾರ ನಾದವನ್ನು ಝೇಂಕರಿಸುವಂತೆ ಪ್ರಾರ್ಥಿಸಿದ್ದಾನೆ.
ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ –
ಎನ್ನ ಕಾಯವ ದಂಡಿಗೆಯ ಮಾಡಯ್ಯಾ !
ಎನ್ನ ಶಿರವ ಸೋರೆಯ ಮಾಡಯ್ಯಾ |
ಎನ್ನ ನರವ ತಂತಿಯ ಮಾಡಯ್ಯ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಹಾಡಯ್ಯಾ
ಉರದಲೊತ್ತಿಬಾರಿಸು ಕೂಡಲ ಸಂಗಮದೇವಾ (೪೯೮)
ಎಂದು ಅನನ್ಯವಾಗಿ ಬೇಡಿಕೊಂಡಿದ್ದಾರೆ. ಭಕ್ತಶಿರೋಮಣಿ ರಾವಣನು ಈ ರೀತಿ ಮಾಡಿ ಪರಮಾತ್ಮನ ಕೃಪೆ ಪಡೆದು ಆತ್ಮಲಿಂಗವನ್ನು ಪಡೆದ ವೃತ್ತಾಂತ ಪುರಾಣ ಗಳಿಂದ ವೇದ್ಯವಾಗುತ್ತದೆ.
ಗುಡಿಮಾತಿಗೊಮ್ಮೆ ಮಾ | ರ್ನುಡಿಯ ತಾ ಕೊಡುವಂತೆ
ಒಡೆಯ ನೀ ಹೊಕ್ಕು ನುಡಿಗೊಟ್ಟ ಪರಿಯೊಳಾಂ
ನುಡಿವೆನೈ ಗುರುವೆ ಕೃಪೆಯಾಗು || ೧೩ ||
ಗುಡಿ-ಗುಂಡಾರಗಳು ಬಂದ ಭಕ್ತರ ಮಾತು ಮಾತಿಗೊಮ್ಮೆ ಮರುಧ್ವನಿಯನ್ನು ಮಾಡುತ್ತವೆ. ಮಾತನಾಡದಿದ್ದರೆ ಪ್ರತಿಧ್ವನಿ ಕೇಳಿಸಲಾರದು. ಗುಡಿಗೆ ಯಾರೂ ಬಾರದಿದ್ದಾಗ ದೇವಮಂದಿರವು ಶಾಂತವಾಗಿರುತ್ತದೆ. ಸಾಮಾನ್ಯವಾಗಿ ದೇವಮಂದಿರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಗಳು ಪ್ರತಿಧ್ವನಿಸುವಂತೆ; ಮಣ್ಣಿನ ಮನೆಗಳಾಗಲಿ, ಗುಡಿಸಲಗಳಾಗಲಿ, ಮರುಧ್ವನಿ ಯನ್ನು ಕೊಡಲಾರವು. ಪ್ರತಿಧ್ವನಿಸುವದಕ್ಕೂ ಯೋಗ್ಯತೆಬೇಕು.
ದೇಹ ದೇಗುಲವಾಗಬೇಕು. ದೇಗುಲದಲ್ಲಿ ದೇವನ ಪ್ರತಿಷ್ಠೆಯಾಗಬೇಕು. ಅಲ್ಲಿ ಮಾರ್ನುಡಿ ಕೇಳಬರುತ್ತದೆ. ದೇಹವು ದೇಗುಲವಾಗದಿದ್ದರೆ ಮಾರ್ನುಡಿಗೆ ಅವಕಾಶವಿಲ್ಲ.ಗುಡಿಯಲ್ಲಿ ಒಡೆಯನ ವಾಸವಿರದಿದ್ದರೆ ಮಾರ್ನುಡಿಯ ಮಹತ್ವ ವೆನಿಸಲಾರದು.ಹೊರಗಿನ ಗುಡಿ ನಿರ್ಜಿವವಾದುದು, ಜಡವಾದುದು. ಆದರೂ ಅದು ಪ್ರತಿಧ್ವನಿ ಸುತ್ತದೆ. ಈ ದೇಹ ಗುಡಿ ಸಜೀವವಾದುದು, ಅದು ನಿನ್ನಿಂದ ಮಾತ್ರ ಸಾಧ್ಯ. ಗುರು ಕೃಪೆಯಿಂದಲೇ ದೇಹವು ಸಜೀವವಾಗುವದು. ಲಿಂಗಸಂಸ್ಕಾರದಿಂದ ದೇಹದ ಜಡತ್ವವು ದೂರವಾಗುವದು. ಅಂಗವೆನಿಸಿ ಲಿಂಗವಾಗಲು ಯೋಗ್ಯವಾಗುವದು. ಗುರುಕೃಪೆಯ ಬಲದಿಂದ ಬಂದ ಲಿಂಗವು ಗುರುರೂಪಲ್ಲದೆ ಬೇರಲ್ಲ. ಪುತ್ರನಲ್ಲಿ ಪಿತನ ಪ್ರತಿರೂಪವಿರುವಂತೆ ಲಿಂಗದಲ್ಲಿ ಗುರುವಿನ ಶಕ್ತಿ ಅಡಕವಾಗಿರುತ್ತದೆ. ಅಂಗಕ್ಕೂ ಮತ್ತು ಲಿಂಗಕ್ಕೂ ಒಡೆಯನು ಸದ್ಗುರುವು. ಓ ಗುರುವೆ ! ಒಡೆಯನೆ ನನ್ನ ದೇಹಗುಡಿಯಲ್ಲಿ ನೀನು ವಾಸವಾಗಿ ಶಿವಧ್ಯಾನವನ್ನು ಪ್ರತಿಧ್ವನಿಸುವಂತೆ ಮಾಡು. ನೀನು ನುಡಿದಂತೆ ನಾನು ಅವಶ್ಯವಾಗಿ ಪಡಿನುಡಿಯುವೆ; ಕೃಪೆಮಾಡು.
ಇಲ್ಲಿ ಶಿವಕವಿಯು ಶಿಷ್ಯನ ಅರ್ಹತೆಯನ್ನು ವ್ಯಕ್ತಮಾಡಿದ್ದಾನೆ. ನಾನು ನಿನ್ನ ಕೃಪೆಗೆ ಪಾತ್ರನಾಗಲು ಯೋಗ್ಯನಾಗಿದ್ದೇನೆಂಬುದನ್ನು ಅಭಿವ್ಯಂಜಿಸಿದ್ದಾನೆ. ನಿನ್ನ ಕೃಪಾ ಬಲದಿಂದ ನನ್ನ ದೇಹ ದೇವಾಲಯವಾಗಿದೆ. ಅಲ್ಲದೆ ನೀನು ನುಡಿದಂತೆ ಅನುಸರಿಸಬಲ್ಲೆನೆಂಬುದನ್ನು ತೋರಿಸಿಕೊಟ್ಟಿದ್ದಾನೆ.ಗುರು ಹೇಳಿಕೊಟ್ಟಿದ್ದನ್ನು ಗ್ರಹಿಸದ ಶಿಷ್ಯನು ಮುಂದುವರೆಯಲಾರನು. ಮುನ್ನಡೆಯದಿದ್ದರೆ ಗುರಿ ದೊರಕದು. ಗುರುವಾಕ್ಯವನ್ನು ಗ್ರಹಿಸುವ ಅಧಿಕಾರಿಯಾಗುವದು ಅವಶ್ಯವಿದೆ. ಗುರೂಪದೇಶವನ್ನು ಅರ್ಥೈಸಿಕೊಂಡು ಅನುಸರಿಸುವಲ್ಲಿಯೇ ಗುರುಕೃಪೆ ಇದೆ. ನಚಿಕೇತನಿಗೆ ಯಮನು ತಿಳಿಸಿದ ಈ ಮಾತು ಗಮನಾರ್ಹವಾಗಿದೆ. ಪರಮಾತ್ಮ ತತ್ವವನ್ನು ಹೇಳುವ ಗುರುಗಳು ದುರ್ಲಭ, ಹೇಳಿದರೂ ಕೇಳಿ ತಿಳಿದುಕೊಳ್ಳುವ ಶಿಷ್ಯರೂ ದುರ್ಲಭವೇ.” ಶಿಷ್ಯನ ಗ್ರಹಣ ಶಕ್ತಿ ಸ್ತುತ್ಯವಾಗಿದೆ.
ಯಂತ್ರವಾಹಕನ ಹ | ಸ್ತಾಂತ್ರಬೊಂಬೆಯದು ಪರ
ತಂತ್ರದಿಂದಾಡುವಂತೆನ್ನಾಡಿಸುವ ಸ್ವ-
ತಂತ್ರ ಶ್ರೀಗುರುವೆ ಕೃಪೆಯಾಗು || ೧೪||
ಜಗತ್ತಿನಲ್ಲಿ ಸ್ವತಂತ್ರವಾದುದು ಯಾವುದೂ ಇಲ್ಲವೆಂದು ಈಗಾಗಲೇ ನಿರೂಪಿಸ ಲಾಗಿದೆ. ಎಲ್ಲವೂ ಪರತಂತ್ರವನ್ನು ಹೊಂದಿದ್ದರೆ, ಗುರುದೇವನು ಮಾತ್ರ ಸರ್ವತಂತ್ರ ಸ್ವತಂತ್ರನಾಗಿದ್ದಾನೆ. ಗುರುವು ತನ್ನ ಶಿಷ್ಯರಿಗೆ ಚಾಲನೆ ಕೊಡಬಲ್ಲನು. ಕೈಯೊಳಗಿನ ಕೀಲುಗೊಂಬೆಯು ಯಂತ್ರವಾಹಕನ (ಚಾಲಕನ) ಅಧೀನದಲ್ಲಿ ಕುಣಿಯುವದು.ಅವನ ಚಾಲನೆಯಂತೆ ತನ್ನ ಆಟವನ್ನು ತೋರಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಬಲ್ಲುದು. ಯಂತ್ರವಾಹಕನಂತೆ ಗುರುದೇವನು ಶಿಷ್ಯರೆಂಬ ಗೊಂಬೆಗಳನ್ನು ಆಡಿಸುತಾನೆ. ಸದ್ಗುರುವಿನ ಸೂತ್ರವನ್ನು ಹೊಂದಿದವರು ತಮ್ಮ ಸಮೀಚೀನವಾದ ಆಟವನ್ನುಪ್ರದರ್ಶಿಸಿ ಪ್ರಶಂಸೆಯನ್ನು ಪಡೆಯಬಹುದು. ಇಹಲೋಕದಲ್ಲಿ ಸಲ್ಲಿ ಪರಲೋಕದಲ್ಲಿಯೂ ಮನ್ನಣೆ ಪಡೆಯಬಹುದು.
ಓ ಗುರುವೇ! ನೀನು ಸ್ವತಂತ್ರನು, ನಾನು ನಿನ್ನ ತಂತ್ರದಲ್ಲಿ ನಡೆಯುವವನು.ನಿನ್ನ ನುಡಿಯೇ ನನ್ನ ನುಡಿಯಾಗಬೇಕು. ನಿನ್ನ ನಡೆಯೇ ನನ್ನ ನಡೆಯಾಗಬೇಕು.“ಮಹಾಜನೋ ಯೇನ ಗತ: ಸಃ ಪಂಥಾಃ?” ಮಹಾತ್ಮರು ನಡೆದುಹೋದ ಬಟ್ಟೆಯೇ ನಮ್ಮದಾಗಬೇಕು.
ನೀತಿಕಾರರು –
ಅನುಗಂತುಂ ಸತಾಂ ವರ್ತ್ಮ
ಕೃತ್ಸ್ನಂ ಯದಿನ ಶಕ್ಯತೇ |
ಸ್ವಲ್ಪಮಪ್ಯನುಗಂತವ್ಯೋ
ಮಾರ್ಗಸ್ಥೋ ನಾವಸೀದತಿ ||
ಮಹಾತ್ಮರ ಸನ್ಮಾರ್ಗವನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೆ ಸ್ವಲ್ಪಾದರೂ ಅನುಸರಿಸುವ ವ್ಯಕ್ತಿಯು ಮುಗ್ಗರಿಸಲಾರನು ಕ್ಲೇಶವನ್ನು ಹೊಂದುವದಿಲ್ಲವೆಂದು ಹೇಳಿದ್ದಾರೆ.
ಬಸವಲಿಂಗ ಶರಣರು ಮೊದಲಿನ ಪದ್ಯದಲ್ಲಿ ನುಡಿ ನಿರಹಂಕಾರವನ್ನು ನಿರ್ವಚಿಸಿ ಇಲ್ಲಿ ನಡೆಯ ನಿರಭಿಮಾನವನ್ನು ನಿರ್ವಚನ ಮಾಡಿದ್ದಾರೆ. ಶಿಷ್ಯನಾದವನು ಸದ್ಗುರುವಿನ ನುಡಿ-ನಡೆಯನ್ನು ಚಾಚೂ ತಪ್ಪದಂತೆ ಅನುಸರಿಸಬೇಕೆಂಬುದು ಸ್ಪಷ್ಟವಾಗುತ್ತಿದೆ. ಓ ಗುರುತಂದೆಯೇ ! ನಿನ್ನ ನುಡಿ-ನಡೆಯನ್ನು ಅನುಸರಿಸುವಂತೆ ಅನುಗ್ರಹಿಸು.
ಸ್ವಾನುಭಾವದ ನೆಲೆಯ | ನಾನೇನ ಬಲ್ಲೆನೈ
ನೀನೆ ಒಳಪೊಕ್ಕು ಏನ ನುಡಿಸಿದೊಡದನೆ
ನಾ ನುಡಿವೆ ಗುರುವೆ ಕೃಪೆಯಾಗು || ೧೫ ||
ನುಡಿ ಮತ್ತು ನಡೆಯ ಸಮನ್ವಯವನ್ನು ಪ್ರತಿಪಾದಿಸುತ್ತಾರೆ. ಸಮನ್ವಯ ಸಿದ್ಧಾಂತವು ಸುಖದಾಯಕವಾಗಿರುತ್ತದೆ. ಬಸವಾದಿ ಪ್ರಮಥರು ತೋರಿದ ಸಿದ್ಧಾಂತ ಸಮನ್ವಯ ಪೂರಕವಾದುದು. “ನುಡಿದಂತೆ ನಡೆ; ಇದೇ ಜನ್ಮ ಕಡೆ” ಎಂದು ತಮ್ಮ ಸ್ವಾನುಭಾವದ ಸವಿಯನ್ನು ಸೂರೆಗೊಳಿಸಿದರು. ಉತ್ತಮ ತಿಳುವಳಿಕೆಯಂತೆ ಆಚರಿಸುವದೇ ಅನುಭವ. ತನ್ನ ಅರುವಿನಂತೆ ಆಚರಿಸಿ ಆನಂದಪಡುವದೇ ಸ್ವಾನುಭಾವ, ನಡೆನುಡಿಯೊಂದಾಗುವದೇ ಅಥವಾ ನುಡಿ-ನಡೆಯೊಂದಾಗುವದೇ ಸ್ವಾನುಭಾವ. ತನ್ನ ಸ್ವರೂಪವನ್ನು ಸತ್ಯ ಶಿವ-ಸ್ವರೂಪವಾಗಿ ತಿಳಿದು ಸುಂದರವಾಗಿ ನಡೆಯುವದೇ ಸ್ವಾನುಭವವೆಂದು ಹೇಳಬಹುದು.ನಿಜಗುಣಾರ್ಯರು ”ಶಾಂತರೊಸೆದಹುದೆಂದು ಬಣ್ಣಿಸುವ ವರ್ತನೆ” ಎಂಬುದಾಗಿ ಸ್ವಾನುಭವದ ವ್ಯಾಖ್ಯೆಯನ್ನು ಮಾಡಿರುವರು.
ಗುರುವೆ ! ಇಂಥ ಸ್ವಾನುಭವದ ನೆಲೆಯನ್ನು ನಾನರಿಯೆ. ಅರಿವು ಆಚರಣೆ ರೂಪ ಅನುಭವವೇ ನೀನಾಗಿರುವೆ, ಸ್ವಾನುಭವವೇ ನಿನ್ನ ನಿಜರೂಪ. ನಿನ್ನ ನುಡಿ ಮತ್ತು ನಡೆಯಲ್ಲಿ ಸಮನ್ವಯವಿದೆ. ಸಾಮಾನ್ಯ ಜೀವನಾದ ನನಗೆ ಅದು ಹೇಗೆ ಸಾಧ್ಯ ? ನೀನು ನನ್ನ ಒಳಹೊಕ್ಕು ಏನನ್ನಾದರೂ ನುಡಿಸು, ನುಡಿಸಿದಂತೆ ನುಡಿಯಬಲ್ಲೆ. ಗುರುವಚನದಿಂದಧಿಕ ಸುಧೆಯಿಲ್ಲ. ನಿನ್ನ ವಚನಾಮೃತದಲ್ಲಿ ಮಿಂದು ಮರಣ ವನ್ನು ಗೆಲ್ಲಬಲ್ಲೆ. ನಿನ್ನ ಆಶೀರ್ವಾಣಿ ಪರುಷಮಯವಾದುದು. ಸದ್ಗುರುವೆ ! ನಿನ್ನ ಶಕ್ತಿಪಾತವನ್ನುಂಟು ಮಾಡಿ ನನ್ನ ನಡೆ-ನುಡಿಗಳನ್ನು ಉತ್ತಮಗೊಳಿಸು ; ಸಮನ್ವಯ ಗೊಳಿಸುವಂತೆ ಕರುಣಿಸು.
ಲೇಖಕರು ಶ್ರೀ ಶಿರೀಷ ಜೋಶಿ, ಬೆಳಗಾವಿ ಸೌಜನ್ಯ : ಸುಕುಮಾರ ದೀಪ್ತಿಸಂಪಾದಕರು : ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ
ಕಾಡಶೆಟ್ಟಿಹಳ್ಳಿ ಹಾವೇರಿ ಜಿಲ್ಲೆಯಲ್ಲಿರುವ ಚಿಕ್ಕ ಹಳ್ಳಿ ಈ ಊರಿನ ಬಡ ದಂಪತಿಗಳು ಗುರುಪಾದಯ್ಯ – ನೀಲಮ್ಮನವರು,ಇವರಿಗೆ ಜನಿಸಿದ ಮಗು (2ನೆಯ ಫೆಬ್ರುವರಿ, 1892) ಹುಟ್ಟಿನಿಂದಲೆ ಕುರುಡು ಇವರಿಗೆ ಜನಿಸಿದ ಮೊದಲ ಮಗ ಗುರುಬಸವಯ್ಯನಿಗೂ ಹುಟ್ಟುಕುರುಡು ದಂಪತಿಗಳಿಗೆ ಎರಡನೆಯ ಮಗನೂ ಕುರುಡಾಗಿರುವುದು ತೀವ್ರ ನಿರಾಸೆಯನ್ನು ತಂದಿತು. ಮಗುವಿಗೆ ಗದಿಗೆಯ್ಯನೆಂದು ಹೆಸರಿಟ್ಟರು. ಮಗುವಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪ್ರಾಣ. ಎಲ್ಲರ ಅನುಕಂಪವನ್ನು ಉಂಡು ಬೆಳೆಯುತ್ತಿದ್ದ ಗದಿಗೆಯ್ಯ ಸಂಗೀತದಲ್ಲಿ ತನ್ನ ಪ್ರಾಣವನ್ನೇ ಇಟ್ಟುಕೊಂಡವನು. ಗುರಬಸವಯ್ಯ ಹಾಗೂ ಗದಿಗೆಯ್ಯ ಒಟ್ಟಿಗೆ ಹಾಡುತ್ತಿದ್ದರೆ ಅದನ್ನು ಕೇಳಿ ಊರ ಜನ ಸಂತೋಷ ಪಡುತ್ತಿದ್ದರು.
ಇದೇ ಸುಮಾರಿಗೆ ಹಾನಗಲ್ಲ ಕುಮಾರಸ್ವಾಮಿಗಳು ಊರೂರಿಗೆ ಸಂಚರಿಸಿ ವೀರಶೈವ ಧರ್ಮದ ಪ್ರಚಾರ ಕಾರ್ಯ ಹಾಗೂ ಜನರಲ್ಲಿ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಕಾಡಶೆಟ್ಟಿಹಳ್ಳಿಗೆ ಹೆಕ್ಕಲು ಬಸವೇಶ್ವರ ಜಾತ್ರೆಗೆ ಬಿಜಯಂಗೈಯಲಿರುವ ಸುದ್ದಿ ಪ್ರಾಪ್ತವಾಯಿತು. ಹಳ್ಳಿ ಜಾತ್ರೆಯ ನಿರೀಕ್ಷೆಯಲ್ಲಿ ಸಡಗರದಿಂದ ತುಂಬಿತ್ತು. ಸ್ವಾಮಿಗಳ ಆಗಮನದ ವಾರ್ತೆ ಆ ಸಡಗರವನ್ನು ಇಮ್ಮಡಿಸಿತು. ಊರು ತನ್ನಷ್ಟಕ್ಕೆ ತಾನೇ ಶೃಂಗಾರಗೊಂಡಿತು. ಸ್ವಾಮಿಗಳು ದಯಮಾಡಿಸಿದರು. ಅವರ ಸ್ವಾಗತಕ್ಕೆ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗುರುಬಸವಯ್ಯ ಹಾಗೂ ಗದಿಗೆಯ್ಯ ಉತ್ತಮವಾಗಿ ಹಾಡಿ ಸ್ವಾಮಿಗಳ ಮನಸೆಳೆದರು!
ಬಾಲಕರೀರ್ವರ ಸಂಗೀತಾಸಕ್ತಿಯನ್ನು ಕಂಠಸಿರಿಯನ್ನು ಭಾವಪರವಶತೆಯನ್ನು ಗಮನಿಸಿದ ಶ್ರೀಗಳು ಮಕ್ಕಳ ಬಗೆಗೆ ವಿಚಾರಿಸಿ ವಿಷಯವನ್ನರಿತರು. ತಂದೆ ತಾಯಿಗಳನ್ನು ಕರೆಸಿ ಹೇಳಿದರು-
‘ಈ ಮಕ್ಕಳನ್ನು ನಮಗೆ ಕೊಡಿ. ಅವರ ಭವಿಷ್ಯವನ್ನು ನಾವು ರೂಪಿಸುತ್ತೇವೆ
ಹೆತ್ತ ಕರುಳು ಚುರ್ರೆಂದಿತು. ಗುರುಪಾದಯ್ಯನವರು ಧೈರ್ಯದಿಂದ ಮಕ್ಕಳನ್ನು ಶ್ರೀಗಳ ಉಡಿಯಲ್ಲಿ ಹಾಕುವ ನಿರ್ಧಾರ ಕೈಕೊಂಡರು. ಈಗಾಗಲೇ ಗುರುಬಸವಯ್ಯನಿಗೆ ಬಾಲ್ಯ ವಿವಾಹವಾಗಿರುವುದನ್ನು ಅರಿತ ಶ್ರೀಗಳು ಅವನನ್ನು ತಿರುಗಿ ಕಳುಹಿಸುವುದಾಗಿ ಹೇಳಿ ಮಕ್ಕಳನ್ನು ಶಿವಯೋಗಮಂದಿರಕ್ಕೆ ಕರೆದೊಯ್ದರು.
ಹಾನಗಲ್ಲಿನ ಶಿವಯೋಗ ಮಂದಿರದ ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುವುದು ಬಾಲಕರೀರ್ವರಿಗೂ ಮೊದಮೊದಲು ತೊಂದರೆದಾಯಕವೆನಿಸಿತು. ಮಂದಿರದ ತ್ರಿಕಾಲ ಪೂಜಾ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸುವ ಭಾಗ್ಯ ಇಬ್ಬರಿಗೂ ದೊರಕಿತು.ಕುಮಾರ ಸ್ವಾಮಿಗಳ ಉದ್ದೇಶ ಬೇರೆಯೇ ಆಗಿತ್ತು. ಇಬ್ಬರೂ ಸಹೋದರರು ಒಳ್ಳೆಯ ಶರೀರವನ್ನು ಹೊಂದಿದ ಪ್ರಯುಕ್ತ ಅವರು ಸಂಗೀತಗಾರರಾಗಿ ರೂಪುಗೊಳ್ಳಬೇಕೆಂದು ಅಪೇಕ್ಷಿಸಿದರು. ಇದೇ ಸಮಯಕ್ಕೆ ತಂಜಾವೂರಿನಲ್ಲಿ ಸಂಗೀತ ಕಲಿತ ಗವಾಯಿಗಳೊಬ್ಬರು ಅಕಸ್ಮಾತ್ತಾಗಿ ಹಾನಗಲ್ಲಿಗೆ ಆಗಮಿಸಿದರು. ತಂಜಾವೂರಿನ ಗವಾಯಿಗಳು ಒಳ್ಳೆಯ ಸಂಗೀತಗಾರರಾಗಿದ್ದಂತೆ ಉತ್ತಮ ಶಿಕ್ಷಕರೂ ಆಗಿದ್ದರು. ಅವರು ಬಾಲಕದ್ವಯರಿಗೆ ಕರ್ನಾಟಕಿ ಸಂಗೀತವನ್ನು ಹೇಳಿಕೊಡಲಾರಂಭಿಸಿದರು.
ಪಂಚಾಕ್ಷರಿ ಗವಯಿಗಳು ಕಲಿಯುವ ಸಮಯದಲ್ಲಿ ಉತ್ತರಕರ್ನಾಟಕವೂ ಕರ್ನಾಟಕಿ ಸಂಗೀತದ ಕಂಪನ್ನೇ ಹೊಂದಿತ್ತು. ಇಲ್ಲಿ ಹಿಂದುಸ್ತಾನಿ ಸಂಗೀತ ಅದೇ ತಾನೆ ಕಾಲಿಡುತ್ತಿದ್ದರಿಂದ ಮತ್ತು ಆ ಕಾಲಕ್ಕೆ ಅದರ ವ್ಯಾಪ್ತಿ ಕೇವಲ ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಿಗೆ ಸೀಮಿತವಾದ್ದರಿಂದ ಹಾನಗಲ್ಗಳಂಥ ಊರುಗಳಲ್ಲಿ ಹಿಂದುಸ್ತಾನಿ ಸಂಗೀತ ಇನ್ನೂ ಪ್ರವೇಶ ಮಾಡಿರಲಿಲ್ಲ!. ನಲ್ವಡಿ ಕೃಷ್ಣರಾಜ ಒಡೆಯರರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣವಾಗಿ ಉತ್ತರ ಭಾರತದಿಂದ ಅಥವಾ ಪುಣೆ ಮುಂಬಯಿಗಳಿಂದ ಮೈಸೂರಿಗೆ ಹೋಗುತ್ತಿದ್ದ ಗವಾಯಿಗಳು ಹುಬ್ಬಳ್ಳಿ ಧಾರವಾಡ ಬೆಳಗಾವಿಗಳಲ್ಲಿ ಕೆಲವು ಕಾಲ ತಂಗಿ, ಇಲ್ಲಿ ತಮ್ಮ ಕಚೇರಿಗಳನ್ನು ನೀಡಿ ಮುಂದೆ ಸಾಗುತ್ತಿದ್ದರು. ಹೀಗಾಗಿ ಈ ಭಾಗದ ಜನರಿಗೆ ಹಿಂದುಸ್ತಾನಿ ಸಂಗೀತ ಪ್ರಿಯವಾಗತೊಡಗಿತು. ಪಿತ್ರೆ ವಕೀಲರಂಥ ಕೆಲವು ಉತ್ಸಾಹಿ ಯುವಕರು ಕಲಿಯಲು ಸನ್ನದ್ಧರಾದರು. ಹೀಗೆ ಹಿಂದುಸ್ತಾನಿ ಸಂಗೀತ ಉತ್ತರಕರ್ನಾಟಕದಲ್ಲಿ ಪ್ರವೇಶ ಪಡೆಯಿತು. ಇತರ ಅನೇಕ ವಿದ್ವಾಂಸರು, ಗವಾಯಿಗಳು ಈ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಬೆಳೆಯಲು ಕಾರಣರಾದರು. ನತ್ಥನಖಾನ ಭಾಸ್ಕರ ಭುವಾ ,ಬಖಲೆ, ಉಸ್ತಾದ ಅಬ್ದುಲ್ ಕರೀಂಖಾನ, ಸಿತಾರಿಯಾ ರೆಹಮತ್ಖಾನ್ ಮೊದಲಾದವರು ಈ ಕಾರ್ಯವನ್ನು ಸಮರ್ಗವಾಗಿ ಮಾಡಿದರು. ಮುಂದೆ ಸವಾಯಿಗಂಧರ್ವರಂಥ ಅನೇಕ ಪಭೃತಿಗಳು ಅದನ್ನು ಬೆಳೆಸಿದರು.
ಆ ಕಾಲದಲ್ಲಿ ಕೆಲವು ಸಂಸ್ಥೆಗಳೂ ಉತ್ತರಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ನೆಲೆಗೊಳ್ಳಲು ಕಾರಣವಾದವು. ಉತ್ತರಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಮರಾಠಿ ನಾಟಕ ಕಂಪನಿಗಳು, ಇಲ್ಲಿಯ ಹುಟ್ಟಿ ಬೆಳೆದ ಕನ್ನಡ ನಾಟಕ ಕಂಪನಿಗಳು ತಮ್ಮ ರಂಗಗೀತೆಗಳ ಮುಖಾಂತರ ಇಲ್ಲಿನ ಜನರಲ್ಲಿ ಹಿಂದುಸ್ತಾನಿ ಸಂಗೀತದ ಅಭಿರುಚಿಯನ್ನೂ ಆಸಕ್ತಿಯನ್ನೂ ಬೆಳೆಸಿದುವು. ಪಂ.ಭಾಸ್ಕರ್ ಬುವಾ ಬಖಲೆಯವಗೆ ಎಂಟು ವರ್ಷಗಳ ಕಾಲ ಆಶ್ರಯ ನೀಡಿದ ಧಾರವಾಡದ ಟ್ರೈನಿಂಗ್ ಕಾಲೇಜು ಹಾಗೂ ಭೂಗಂಧರ್ವ ರೆಹಮತ್ಖಾನ್ ಮತ್ತು ಕಬೀರದಾಸರಿಗೆ ಆಶ್ರಯ ನೀಡಿದ ಸಿದ್ದಾರೂಢ ಶ್ರೀಮಠಗಳೂ ಹಿಂದುಸ್ತಾನಿ ಸಂಗೀತ ಇಲ್ಲಿ ಬೆಳೆಯಲು ಕಾರಣವಾದವು.
ಪಂಚಾಕ್ಷರಿಗವಾಯಿಗಳು ಕಲಿಯುವ ಸಮಯದಲ್ಲಿ ಹಿಂದುಸ್ತಾನಿ ಸಂಗೀತ ಹಾನಗಲ್ಲನ್ನು ಪ್ರವೇಶಿಸಿರಲಿಲ್ಲವಾಗಿ ಮತ್ತು ಅದನ್ನು ಕಲಿಸುವವರು ದುರ್ಮಿಳರಾದ್ದರಿಂದ ಅವರು ತಂಜಾವೂರಿನ ಗವಾಯಿಗಳಲ್ಲಿ ಕರ್ನಾಟಕ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು,ಅವರು ಬಾಲಕರಿಗೆ ಮೊದಲು ಶೃತಿ ಪರಿಚಯವನ್ನು ಮಾಡಿಕೊಟ್ಟರು. ಸ್ವರ ಲಯಗಳ ಬಗೆಗೆ ತಿಳಿಸಿದರು. ಕರ್ನಾಟಕಿ ಸಂಗೀತವು ತಾಲ ಪ್ರಧಾನವಾದ್ದರಿಂದ ತಾಲ ಜ್ಞಾನ ಅತ್ಯಂತ ಮಹತ್ವದ ಸಂಗತಿಯಾಗಿದೆ. ತಾಲ ಬದ್ಧವಾಗಿ ಹಾಡುವುದು ಅಲ್ಲಿ ಅತ್ಯಂತ ಮುಖ್ಯವಾಗುತ್ತದೆ.ಮಕ್ಕಳಿಬ್ಬರೂ ತೊಡೆ ತಟ್ಟಿಕೊಂಡು ಚಪ್ಪಾಳೆ ತಟ್ಟಿಕೊಂಡು ತಾಲ ಬದ್ಧವಾಗಿ ಹಾಡುವುದನ್ನು ಮೊದಲು ಕಲಿತರು. ನಂತರ ಪ್ರಾರಂಭವಾದದ್ದು ಜಂಟಿ ಸ್ವರಗಳನ್ನು ಹೇಳುವುದು. ಅವುಗಳನ್ನು ತಾಲಬದ್ಧವಾಗಿ ಪ್ರಸ್ತುತ ಪಡಿಸುವುದನ್ನು ರೂಢಿಸಿಕೊಂಡರು. ಈಗಲೂ ಜಂಟಿ ಸ್ವರಗಳನ್ನು ಹೇಳುವುದು ಅತ್ಯಂತ ಕಠಿಣವೆಂದೇ ಭಾವಿಸಲಾಗುತ್ತದೆ. ಅಂಥದನ್ನು ಬಾಲಕರಿಬ್ಬರೂ ಸುಲಭವಾಗಿ ಕಲಿತರು. ಸ್ವರ, ಸಂಗತಿ,ಜಟಿಲ ತಾಳ, ಲಯಗಳ ಗತಿ, ಗಮನಗಳನ್ನು ಆತ್ಮಸಾತ್ ಮಾಡಿಕೊಂಡರು. ತಂಜಾವೂರಿನ ಗವಾಯಗಳು ಗದಿಗೆಯ್ಯ ಹಾಗೂ ಗುರುಬಸವಯ್ಯನವರಿಗೆ ಕರ್ನಾಟಕ ಸಂಗೀತದ ಭದ್ರ ಬುನಾದಿಯನ್ನು ಹಾಕಿದರು. ಅವರ ಕಲಿಕೆ ಎಷ್ಟು ಕ್ಷಿಪ್ರವಾಗಿತ್ತೆಂದರೆ ಒಂದೆರಡು ವರ್ಷಗಳಲ್ಲಿ ಕಲಿಯಬೇಕಾದುದನ್ನು ಕೇವಲ ಆರು ತಿಂಗಳಲ್ಲಿ ಮುಗಿಸಿದರು. ಮುಂದೆ ಕೆಲವು ದಿನಗಳ ತರುವಾಯ ಅನಿವಾರ್ಯ ಕಾರಣಗಳಿಂದ ತಂಜಾವೂರಿನ ಗವಾಯಿಗಳು ಮರಳಿದರು. ಇವರ ಪ್ರಗತಿಯನ್ನು ಗಮನಿಸುತ್ತಿದ್ದ ಹಾನಗಲ್ ಕುಮಾರಸ್ವಾಮಿಗಳಿಗೆ ಸಂತೃಪ್ತಿಯಾಗಿತ್ತು. ಬಾಲಕರ ಸಂಗೀತ ಶಿಕ್ಷಣ ಮುಂದುವರಿಯಬೇಕೆಂದು ಅವರು ಅಪೇಕ್ಷಿಸಿದರು.
ಹೊಸಪೇಟೆಯಲ್ಲಿ ಒಬ್ಬ ಗವಾಯಿ ಇರುವುದು ಕುಮಾರಸ್ವಾಮಿಗಳಿಗೆ ತಿಳಿಯಿತು. ಹೊಸಪೇಟೆಯ ಗವಾಯಿ ಭೀಮರಾಯರನ್ನುಹಾನಗಲ್ಲಿಗೆ ಬರಮಾಡಿಕೊಂಡು ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳಿಗೆ ಸಂಗೀತ ಕಲಿಸುವಂತೆ ಸೂಚಿಸಿದರು. ಬಾಲಕರಿಬ್ಬರ ಸಂಗೀತ ಶಿಕ್ಷಣ ಮತ್ತೆ ಮುಂದಡಿಯಿಟ್ಟಿತು. ಭೀಮರಾಯರು ಮಕ್ಕಳ ಪ್ರತಿಭೆಯನ್ನು ಕಂಡು ಸಂತಸ ಪಟ್ಟರು. ಆತ್ಮೀಯತೆಯಿಂದ ಅವರಿಗೆ ಸಂಗೀತವನ್ನು ಹೇಳಿಕೊಡಲು ಉಪಕ್ರಮಿಸಿದರು. ಆದರೆ, ಇವರಿಗೂ ಬಹುಕಾಲ ಕಲಿಸುವ ಯೋಗವಿರಲಿಲ್ಲ, ಹಾನಗಲ್ಲಿನ ಹವೆಯು ಆಗಿ ಬರದ ಕಾರಣದಿಂದ ಭೀಮರಾಯರು ಹೊಸಪೇಟೆಗೆ ಮರಳಿದರು.
ಶಿರಾಳಕೊಪ್ಪದಲ್ಲಿ ಗದಿಗೆಯ್ಯನೆಂಬ ಸಂಗೀತಗಾರರಿದ್ಧ ವಾರ್ತೆ ತಿಳಿಯುತ್ತಲೇ ಅಲ್ಲಿಗೆ ಧಾವಿಸಿದ ಕುಮಾರಸ್ವಾಮಿಗಳು ಮಕ್ಕಳಿಗೆ ಸಂಗೀತ ಹೇಳಿಕೊಡಲು ಅವರನ್ನು ಒಪ್ಪಿಸಿದರು. ಮಕ್ಕಳಿಬ್ಬರೂ ಶಿರಾಳಕೊಪ್ಪದಲ್ಲಿಯೇ ಉಳಿಯಲು ವಸತಿಯ ಹಾಗೂ ಊಟದ ವ್ಯವಸ್ಥೆ ಮಾಡಿದರು. ಗದಿಗೆಯ್ಯನವರು ಮಕ್ಕಳಿಗೆ ಎಂಟು ವರ್ಷಗಳ ಕಾಲ ಸಂಗೀತವನ್ನು ಕಲಿಸಿದರು. ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಮಕ್ಕಳಿಗೆ ನಿರ್ವಂಚನೆಯಿಂದ ಧಾರೆ ಎರೆದರು. ಎಂಟು ವರ್ಷಗಳ ಅವಧಿಯಲ್ಲಿ ಮಕ್ಕಳಿಬ್ಬರೂ ಸಾಕಷ್ಟು ಸಾಧನೆಯನ್ನು ಮಾಡಿದರು.ಸ್ವತಂತ್ರವಾಗಿ ಕಚೇರಿಗಳನ್ನು ಮಾಡುವಷ್ಟು ಸಂಗೀತವನ್ನು ಸಿದ್ಧಿಸಿಕೊಂಡರು.ಗದಿಗೆಯ್ಯನವರು ಪ್ರಾಮಾಣಿಕವಾಗಿ ಒಂದು ಅಭಿಪ್ರಾಯವನ್ನು ಕುಮಾರಸ್ವಾಮಿಗಳ ಮುಂದಿಟ್ಟರು. ಅವರೆಂದರು, ‘ಬುದ್ಧಿ ನಾನು ಕಲಿಸುವುದೆಲ್ಲವೂ ಮುಗಿದಿದೆ. ಮಕ್ಕಳ ಬುದ್ದಿ ಎಂದಿಗೂ ತುಂಬಲಾರದ ಇಂಗು ಭೂಮಿ. ನಾನು ಹಾಕಿದ್ದೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅವರ ಜ್ಞಾನ ತೃಷೆ ಹಿಂಗಲಾರದು. ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿಗೆ ಕಳಿಸುವುದು ವಾಸಿ, ನಾನು ಮಕ್ಕಳನ್ನು ಮರಳಿ ತಮ್ಮ ಸಾನಿಧ್ಯಕ್ಕೆ ಒಪ್ಪಿಸುತ್ತಿದ್ದೇನೆ’ ಕುಮಾರಸ್ವಾಮಿಗಳು ಮಕ್ಕಳನ್ನು ಮೈಸೂರಿಗೆ ಕಳಿಸುವಲ್ಲಿ ಕೆಲವು ಕಾಲಾವಕಾಶ ಬೇಕಾಗುತ್ತದೆ ಎಂದು ಯೋಚಿಸಿ ಅವರನ್ನು ನೆಲವಿಗಿಹಳ್ಳಿಗೆ ಕಳುಹಿದರು. ಅಲ್ಲಿ ಕಾಲರಾ ಬೇನೆಗೆ ತುತ್ತಾದ ಗುರುಬಸವಯ್ಯ ಕೊನೆಯುಸಿರೆಳೆದರು. ಇದರಿಂದ ಗದಿಗಯ್ಯನಿಗೆ ಬಹು ದುಃಖವಾಯಿತು. ಶ್ರೀಗಳು ಬಂದು ಸಾಂತ್ವನವನ್ನು ಕೇಳಿದರು.
ಮುಂದೆ ಕೆಲವೇ ದಿನಗಳಲ್ಲಿ ಗದಿಗೆಯ್ಯನನ್ನು ಮೈಸೂರಿಗೆ ಉನ್ನತ ಸಂಗೀತ ಶಿಕ್ಷಣಕ್ಕಾಗಿ ಕಳುಹಿಸುವ ಏರ್ಪಾಟು ಮಾಡಿದರು.ಮೈಸೂರಿನಲ್ಲಿ ಗದಿಗಯ್ಯನ ಜೀವನ ಸುಖದ ಸುಪ್ಪತ್ತಿಗೆಯನೂ ಆಗಿರಲಿಲ್ಲ, ಮನಿಪ್ತ ಗೌರಿಶಂಕರ ಸ್ವಾಮಿಗಳಲ್ಲಿ ಉಳಿದುಕೊಂಡು ಸಂಗೀತ ಕಲಿಯುತ್ತಿದ್ದರೂ ಅವರಿಗೆ ಭಾರವಾಗದೆಂಬ ಕಾರಣದಿಂದ ತಂಬೂರಿ ಸಾಥಿ ಮಾಡಿ, ಭಜನೆಗಳನ್ನು ಹಾಡಿ, ಕೀರ್ತನೆಗಳನ್ನುಹೇಳಿ ಚರಿತಾರ್ಥದ ವ್ಯವಸ್ಥೆ ಮಾಡಿಕೊಂಡರು.
ಶ್ರೀ.ಮ.ನಿ.ಪ್ರ. ಗೌರಿಶಂಕರ ಸ್ವಾಮಿಗಳು ಗದಿಗೆಯ್ಯನ ವ್ಯಕ್ತಿತ್ವದಿಂದ ತುಂಬ ಪ್ರಭಾವಿತರಾದರು. ಆತನ ನಡೆ, ನುಡಿ, ಚಿತ್ತಾಕರ್ಷಕ ವ್ಯಕ್ತಿತ್ವ ಮನೋಭೂಮಿಕೆ, ಸಾತ್ವಿಕತೆ ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರಿದವು. ಅವನ ಮೇಲೆ ಇನ್ನಿಲ್ಲದ ವಾತ್ಸಲ್ಯ ಮೂಡಿತು.ಸಂಗೀತದಲ್ಲಿ ಸಿದ್ಧಿ ಪಡೆಯಲು ಬಂದಿರುವ ಈತನಿಗೆ ಗದಿಗೆಯ್ಯನೆಂಬ ಅಭಿಧಾನ ಸಲ್ಲದು, ಶಿವನು ಸಂಗೀತ ಪ್ರಿಯನಾದ್ದರಿಂದ ಶಿವನ ಹೆಸರೇ ಇವನಿಗೆ ಯೋಗ್ಯವೆಂದು ಭಾವಿಸಿ `ಪಂಚಾಕ್ಷರಿ’ ಎಂದು ಕರೆದರು. ಮೊದಲ ಸಲ ಗದಿಗೆಯ್ಯನನ್ನು ಹಾಗೆ ಕರೆದಾಗ ಅವನಿಗೂ ಅರ್ಥವಾಗಲಿಲ್ಲ. ನಂತರ, ಶ್ರೀಗಳೇ ತಿಳಿಸಿ ಹೇಳಿದಾಗ ಆತ ಅನಂದಗೊಂಡ. ಅಂದಿನಿಂದ ಗದಿಗೆಯ್ಯ ಎಂಬುದು ಮರೆಯಾಗಿ ಪಂಚಾಕ್ಷರಿ’ ಎಂಬುದು ಹೆಸರಾಯಿತು.
ಹೊಟ್ಟೆಯ ಹಸಿವು ಪಂಚಾಕ್ಷರಿಯನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಸಂಗೀತದ ಹಸಿವು ಮಾತ್ರ ತಡೆಯಲಾರದಂತಿತ್ತು,ಪಂಚಾಕ್ಷರಿಯ ವ್ಯಕ್ತಿತ್ವದಿಂದ, ಹಾಡುಗಾರಿಕೆಯಿಂದ ಪ್ರಭಾವಿತರಾದ ಬಿಡಾರಂ ಕೃಷ್ಣಪ್ಪನವರು ಸಂಗೀತ ಕಲಿಸಲು ಒಪ್ಪಿಕೊಂಡರು.ಕಲವು ಕಾಲ ಅವರಲ್ಲಿ ಸಂಗೀತದ ಅಧ್ಯಯನ ನಡೆಯಿತಾದರೂ ಅವರಿಗೆ ಬಂದ ಕೌಟುಂಬಿಕ ತೊಂದರೆಗಳಿಂದಾಗಿ ಪಿಟೀಲು ವೆಂಕಟರಮಣಯ್ಯನವರಲ್ಲಿ ಪಂಚಾಕ್ಷರಿಯ ಸಂಗೀತದ ತಾಲೀಮು ಮುಂದುವರಿಯಿತು. ಸ್ವತಃ ಬಿಡಾರಂ ಕೃಷ್ಣಪ್ಪನವರು ಮುಂದೆ ನಿಂತು ಪಂಚಾಕ್ಷರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದರು. ವೆಂಕಟರಮಣಯ್ಯನವರು ಅತ್ಯಂತ ಮುತುವರ್ಜಿಯಿಂದ ಸಂಗೀತ ಶಿಕ್ಷಣ ನೀಡಿದರು. ವೆಂಕಟರಮಣಯ್ಯನವರಲ್ಲಿ ಕಲಿಯಲಾರಂಭಿಸಿದ ನಂತರ ಪಂಚಾಕ್ಷರಿಗೆ ಕರ್ನಾಟಕಿ ಸಂಗೀತದ ಉನ್ನತ ಮಟ್ಟದ ಜ್ಞಾನವು ಪ್ರಾಪ್ತಿಯಾಯಿತು. ಪಂಚಾಕ್ಷರಿ ಶ್ರಮ ವಹಿಸಿ ಕಲಿತನು. ಮೈಸೂರಿನಲ್ಲಿದ್ದ ನಾಲ್ಕು ವರ್ಷಗಳ ಕಾಲ ತಪಸ್ಸಿನಂತೆ ಕಳೆದು ಸಂಗೀತದಲ್ಲಿ ಸ್ವತಃ ಉನ್ನತ ಮಟ್ಟವನ್ನು ತಲುಪಿದ್ದು ಸಾಮಾನ್ಯ ಸಾಧನೆಯೇನಲ್ಲ
ಈ ನಾಲ್ಕು ವರ್ಷಗಳು ಪಂಚಾಕ್ಷರಿಯ ಜೀವನದಲ್ಲಿ ಸಂಗೀತದ ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲ ಘಟ್ಟ.ಈ ಕಾಲಾವಧಿಯಲ್ಲಿ ಗುರುವಿನ ಮುಖದಿಂದ ನೇರವಾಗಿ ಸಂಗೀತವನ್ನು ಕಲಿತದ್ದು ಒಂದು ಭಾಗ, ಇನ್ನೊಂದು ಮಹತ್ವದ ಭಾಗವೆಂದರೆ, ಮೈಸೂರಿನಲ್ಲಿ ಇರುವಷ್ಟು ಕಾಲವೂ ಉನ್ನತ ಮಟ್ಟದ ಅನೇಕ ಕಲಾವಿದರ ಸಂಗೀತವನ್ನು ಕೇಳುವ ಸದಾವಕಾಶ ಪಂಚಾಕ್ಷರಿಗೆ ಲಭ್ಯವಾಯಿತು. ಇದರಿಂದಾಗಿ ಅವನ ಸಂಗೀತಕ್ಕೆ ಒಂದು ಹೊಸ ಆಯಾಮ, ಮೆರಗು ಬಂದಿತು. ಕರ್ನಾಟಕಿ ಸಂಗೀತದ ಅನೇಕ ಮಹತ್ವದ ಸೂಕ್ಷ್ಮ ಸಂಗತಿಗಳು ಹೊಳೆದುದು ಇದೇ ಅವಧಿಯಲ್ಲಿ ವಿವಿಧ ಕಲಾವಿದರಿಂದ ಅನೇಕ ಮಹತ್ವದ ಕೀರ್ತನೆಗಳನ್ನು ಸಂಗ್ರಹಿಸಿದ್ದಲ್ಲದೇ ಹಾಡುಗಾರಿಕೆಯ ಮರ್ಮವನ್ನು ತಿಳಿಯಲು ಸಾಧ್ಯವಾಯಿತು.
ಮೈಸೂರಿನಲ್ಲಿರುವಾಗ ಅನೇಕ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ಮಾಡುವ ಅವಕಾಶ ಪಂಚಾಕ್ಷರಿಗೆ ಲಭಿಸಿತು. ಹೀಗೆ ಅವಕಾಶ ದೊರೆತ ಎಲ್ಲ ಸಂದರ್ಭಗಳಲ್ಲೂ ತಾನೊಬ್ಬ ಪ್ರಬುದ್ಧ ಕಲಾವಿದನೆಂಬುದನ್ನು ಸಾಬೀತುಪಡಿಸಿದ. ಮೈಸೂರಿನ ಜನತೆ ಪಂಚಾಕ್ಷರಿಯನ್ನು ಸಂಗೀತದ ಘನ ವಿದ್ವಾಂಸನೆಂದು ಮನ್ನಿಸಿತು. ವಿದ್ಯಾರ್ಥಿಯಾಗಿ ಮೈಸೂರು ನಗರಕ್ಕೆ ಕಾಲಿಟ್ಟ ಗದಿಗೆಯ್ಯ ಪಂಚಾಕ್ಷರಿ ಎನಿಸಿಕೊಂಡು,ವಿದ್ವಾಂಸನಾಗಿ ರೂಪುಗೊಂಡ
ಉಸ್ತಾದ ವಹೀದಖಾನರು ಕಿರಾಣಾ ಘರಾಣೆಯವರು. ಉಸ್ತಾದ ಅಬ್ದುಲ್ ಕರೀಂಖಾನರ ನಂತರ ಮೇರುಖಂಡದ ಗಾಯಕರು ಎಂದು ಹೆಸರುವಾಸಿಯಾದವರು. ಇವರ ಶಿಷ್ಯ ಉಸ್ತಾದ ಅಮೀರಖಾನರು ಸಹ ಅದೇ ಖ್ಯಾತಿಯನ್ನು ಪಡೆದರು. ಇವರ ಶಿಷ್ಯರಲ್ಲಿ ಹೀರಾಬಾಯಿ ಬಡೋದೇಕರ್, ಶ್ರೀಮತಿ ಬೇಗಂ ಆಖೈರಿ, ಮುನ್ನಿಭಾಯಿ, ಹಾಗೂ ಪ. ಬಸವರಾಜ ರಾಜಗುರು ಪ್ರಸಿದ್ಧರಾಗಿದ್ದಾರೆ. ಇಂಥ ಶ್ರೇಷ್ಠ ತರಗತಿಯ ಗವಾಯಿಯನ್ನು ಹುಡುಕಿ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗಮಂದಿರಕ್ಕೆ ಬರಮಾಡಿಕೊಂಡರು. ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕುಮಾರಸ್ವಾಮಿಗಳು ಉಸ್ತಾದ ವಹೀದಖಾನರು ಸದಾಕಾಲ ಹರ್ಷಚಿತ್ತರಾಗಿರುವಂತೆ ನಿಗಾ ವಹಿಸಿದರು. ಅವರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನೂ ಒದಗಿಸಿದರು. ಅವರಿಗೆ ಪ್ರತಿತಿಂಗಳೂ ನೂರೈವತ್ತು ರೂಪಾಯಿಗಳ ಸಂಬಳ ನಿಗದಿಯಾಯಿತು.
ಒಂದು ಶುಭದಿನ ಉಸ್ತಾದ ವಹೀದಖಾನರು ಪಂಚಾಕ್ಷರಿಗವಯಿಗಳಿಗೆ ಸಂಗೀತದ ತಾಲೀಂನ್ನು ಪ್ರಾರಂಭಿಸಿದರು. ಈಗಾಗಲೇ ಹಿಂದುಸ್ತಾನಿ ಸಂಗೀತದಲ್ಲಿ ಸ್ವಪ್ರಯತ್ನದಿಂದ ಒಂದಿಷ್ಟು ಕೃಷಿ ಮಾಡಿಕೊಂಡಿದ್ದ ಪಂಚಾಕ್ಷರಿಗಮಯಿಗಳಿಗೆ ಕಲಿಸುವ ವಹೀದಖಾನರಿಗೆ ಯಾವ ತೊಂದರೆಯೂ ಆಗಲಿಲ್ಲ. ಪಂಚಾಕ್ಷರಿಗವಾಯಿಗಳು ಸೂಕ್ಷ್ಮ ಗ್ರಾಹಿಗಳು. ಗುರುವಿನ ಮುಖೇನ ಪ್ರಾಪ್ತವಾದ ಸಂಗೀತದ ಸುಧಾರಸವನ್ನು ಆನಂದದಿಂದ ಸ್ವೀಕರಿಸಿದರು. ನಾಲ್ಕುವರುಷಗಳ ಅವಿರತ ತಾಲೀಮಿನಲ್ಲಿ ಅವರೊಬ್ಬ ಪ್ರಬುದ್ಧ ಹಿಂದುಸ್ತಾನಿ ಗಾಯಕರಾಗಿ ರೂಪುಗೊಂಡರು.
ಇಷ್ಟೆಲ್ಲ ಉನ್ನತಿಗೇರಿದ್ದರೂ ಪಂಚಾಕ್ಷರಿಗವಯಿಗಳಿಗೆ ಮಾತ್ರ ಹಿಂದುಸ್ತಾನಿ ಸಂಗೀತದಲ್ಲಿ ತಾವು ಸಾಧಿಸಬೇಕಾದುದು ಇನ್ನೂ ಇದೆ ಎಂದೇ ಅನ್ನಿಸತೊಡಗಿತು. ಹೀಗಾಗಿ ಕೆಲವು ಕಾಲ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಆಗ ಸಂಗೀತಗಾರರಿಂದ ತುಂಬಿ ತುಳುಕುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಅನೇಕ ಸಂಗೀತಗಾರರು ಇಲ್ಲಿ ನೆಲೆಸಿದ್ದರು. ಸವಾಯಿಗಂಧರ್ವರ ಶಿಷ್ಯ ಕಾಗಲಕರಬುವಾ, ಗಾಯಕರಾದ ಉಮಾಮಹೇಶ್ವರಬುವಾ, ಉತ್ತರಕರಬುವಾ, ಬಾಬೂರಾವ ರಾಣೆ, ಹಾರ್ಮೋನಿಯಂ ಶಿಕ್ಷಕರಾದ ರಾಜವಾಡೆಬುವಾ, ಗೋವಿಂದರಾವ ಗಾಯಕವಾಡ, ವಿಟ್ಠಲರಾವ ಕೋರಗಾಂವಕರ ಮೊದಲಾದವರಿದ್ದರು. ಶಿವರಾಮಬುವಾ ವಝೆ ಎಂಬ ಅಪ್ರತಿಮ ಗಾಯಕ ಕೂಡ ಆಗ ಬೆಳಗಾವಿಯಲ್ಲಿಯೇ ನೆಲೆಸಿದ್ದರು. ಇವರೆಲ್ಲರಿಗೂ ಕಳಶಪ್ರಾಯರಾಗಿ ರಾಮಕೃಷ್ಣಬುವಾ ವಝೆ ಬೆಳಗಾವಿಯಲ್ಲಿದ್ದರು. ಇಂಥ ನಗರಕ್ಕೆ ಪಂಚಾಕ್ಷರಿ ಗವಾಯಿಗಳು ಕಲಿಯಲು ಬರುವ ವ್ಯವಸ್ಥೆ ಆಯಿತು. ನಾಗನೂರು ಶಿವಬಸವಸ್ವಾಮಿಗಳ ಶ್ರೀಮಠದಲ್ಲಿ ಪಂಚಾಕ್ಷರಿಗವಾಯಿಗಳ ವಾಸ್ತವ್ಯದ ವ್ಯವಸ್ಥೆಯಾಯಿತು. ಗ್ವಾಲಿಯರ್ ಘರಾಣೆಯ ಅಧ್ವರ್ಯು ಎನಿಸಿದ ಪಂ.ರಾಮಕೃಷ್ಣಬುವಾ ವಝೆಯವರಲ್ಲಿ ಹಾಗೂ ಪ್ರೌಢ ದರ್ಜೆಯ ಗಾಯಕರೆನಿಸಿದ ಬಾಬೂರಾವ ರಾಣೆಯವರಲ್ಲಿ ಪಂಚಾಕ್ಷರಿಗವಾಯಿಗಳು ಕೆಲವು ಕಾಲ ಸಂಗೀತಾಧ್ಯಯನ ಮಾಡಿದರು.
ಪಂಚಾಕ್ಷರಿಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮೀಸಲಾಯಿತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ಧೃಡವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಹೀಗಾಗಿ ಅವರು ಸುರೇಶಬಾಬು ಮಾನೆಯವರಲ್ಲಿಯೂ ಸಂಗೀತ ಕಲಿತರು.ಇದಿಷ್ಟೇ ಸಾಲದೆಂಬಂತೆ ವಾದನಗಳ ಕಡೆಗೂ ವಾಲಿದರು. ಬಳ್ಳಾರಿ ರಾಘವಾಚಾರ್ಯರಲ್ಲಿ ಪಿಟೀಲು ನುಡಿಸುವದನ್ನು ಕಲಿತರು.
ವಾದನವನ್ನು ಕಲಿಯಲು ಪಂಚಾಕ್ಷರಿಗವಾಯಿಗಳಿಗೆ ಸೂಚಿಸಿದವರು ಹಾನಗಲ್ಲ ಕುಮಾರಸ್ವಾಮಿಗಳೇ! ಒಮ್ಮೆ ಅವರು ಹೇಳಿದರು-ನೀನು ಈಗಾಗಲೇ ಉಭಯಗಾನ ವಿಶಾರದನೆನಿಸಿರುವೆ. ಇವುಗಳ ಜೊತೆಗೆ ವಾದನದಲ್ಲಿಯೂ ಒಂದಿಷ್ಟು ಸಾಧಿಸು.’ ಅಂದಿನಿಂದ ಅವರು ವಾದನಕಲೆಯತ್ತಲೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಪಿಟೀಲು, ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸತೊಡಗಿದರು. ತಬಲಾ ಕಲಿಯುವ ಬಗೆಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಆದರೆ ತಬಲಾವಾದನವನ್ನು ಕಲಿಸುವ ಗುರು ದೊರೆಯಬೇಕಲ್ಲ! ಆಗ ಬೆಳಗಾವಿಯಲ್ಲಿ ಶಹಾಪೂರ ಮಲ್ಲೇಶಪ್ಪನೆಂಬುವವರು ಶ್ರೇಷ್ಠ ತಬಲಾವಾದಕರೆಂದು ಹೆಸರುವಾಸಿಯಾಗಿದ್ದರು. ತಮ್ಮ ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು. ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಶಹಾಪುರದ ಮಲ್ಲೇಶಪ್ಪನವರಲ್ಲಿ ತಬಲಾವಾದನ ಕಲಿಯುವಂತೆ ಕಳುಹಿಸಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತುಬಂದ ನಂತರ ಪಂಚಾಕ್ಷರಿಗವಯಿಗಳು ಅವನನ್ನ ತಮ್ಮ ಗುರುವೆಂದು ಭಾವಿಸಿ ತಬಲಾವಾದನವನ್ನು ಅಧ್ಯಯನ ಮಾಡಿದರು. ತಮ್ಮ ಶಿಷ್ಯನನ್ನೇ ಗುರುವೆಂದು ಭಾವಿಸುವ ಹೃದಯವಂತಿಕೆ ಸಂಗೀತಗಾರರಲ್ಲಿ ಕಂಡು ಬರುವುದು ವಿರಳವೇ ಸರಿ!
ಪಂಚಾಕ್ಷರಿಗಳು ತಮ್ಮ ತಬಲಾವಾದನದಲ್ಲಿಯೂ ವಿಶಿಷ್ಟತೆಯನ್ನು ಮೆರೆಯುತ್ತಿದ್ದು, ಎಲ್ಲರೂ ಬಲಗೈಯಿಂದ ತಬಲಾ ನುಡಿಸಿದರೆ,ಇವರು ಎಡಗೈಯಿಂದ ನುಡಿಸುತ್ತಿದ್ದರು. ಬಲಗೈ ಡಗ್ಗಾ ನುಡಿಸುತ್ತಿತ್ತು. ಸಾಮಾನ್ಯವಾಗಿ ಬಲಗೈಯನ್ನು ಸಂಗೀತಗಾರರು ಜತನವಾಗಿರಿಸಿ ಕೊಳ್ಳುತ್ತಾರೆ. ಆ ಕೈ ತಂಬೂರಿ ಮೀಟಲು, ಹಾರ್ಮೋನಿಯಂನ ಸ್ವರಗಳನ್ನು ನುಡಿಸಲು, ಪಿಟೀಲಿನ ಕಮಾನು ತೀಡಲು ಪ್ರಯೋಜನ ಕಾರಿಯಾಗುತ್ತದೆ. ಆದರೆ, ತಬಲಾವಾದನದಲ್ಲಿಯೂ ಬಲಗೈಯನ್ನೇ ಪ್ರಧಾನವಾಗಿ ಬಳಸಿದರೆ, ತಬಲಾವಾದನದಲ್ಲಿ ಹೆಚ್ಚಿನ ಮಾತ್ರೆಗಳು ತಬಲಾದ ಮೇಲೆಯೇ ನುಡಿಸಲ್ಪಡುವುದರಿಂದ ಅದಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಪಂಚಾಕ್ಷರಿಗವಾಯಿಗಳು ಎಡಗೈಯಿಂದ ತಬಲಾ ನುಡಿಸುವುದನ್ನು ರೂಢಿಸಿಕೊಂಡರು. ಪಂಚಾಕ್ಷರಿಗವಾಯಿಗಳ ಸಾಧನ ಎಂಥಹದ್ದೆಂದರೆ, ಅವರು ಕೆಲವೇ ದಿನಗಳಲ್ಲಿ ತಬಲಾ,ಪಿಟೀಲು, ಹಾರ್ಮೊನಿಯಂ, ಪಖಾವಜ್, ಸಾರಂಗಿ, ದಿಲ್ರುಬಾ, ಕೊಳಲು, ಹಾಯಿವಾದನಗಳನ್ನು ನುಡಿಸುವಲ್ಲಿ ನಿಷ್ಣಾತರೆನಿಸಿದರು.
ಆಗ ಪಂಚಾಕ್ಷರಿ ಗವಾಯಿಗಳಿಗೆ ಸುಮಾರು ಐವತ್ತು ಜನ ಶಿಷ್ಯರಿದ್ದರು. ಅವರಲ್ಲಿ ಕೆಲವರು ಸಂಸಾರಿಯಾಗುವ ತಯಾರಿಯಲ್ಲಿದ್ದವರು.ಮತ್ತು ಇನ್ನು ಕೆಲವರು ಆಗಲೇ ಸಂಸಾರಿಯಾದವರು. ಶಿವಯೋಗಮಂದಿರವು ವೀರಶೈವ ಮಠಾಧೀಶರಾಗುವವರಿಗೆ ಯೋಗ್ಯ ಶಿಕ್ಷಣ ನೀಡುವ ಕೇಂದ್ರವಾದ್ದರಿಂದ ಅಲ್ಲಿ ಸಂಸಾರಸ್ಥರಿಗೆ ತಂಗಲು ಅವಕಾಶವಿರಲಿಲ್ಲ. ಅಲ್ಲದೆ ಶಿವಯೋಗಮಂದಿರದಲ್ಲಿದ್ದು ಪಂಚಾಕ್ಷರಿಗವಾಯಿಗಳು ಸಂಗೀತಪಾಠ ಮಾಡುವುದು ಕೆಲವರಿಗೆ ಸರಿ ಬರಲಿಲ್ಲ.ಕೆಲವರು ಹಾನಗಲ್ಲ ಕುಮಾರಸ್ವಾಮಿಗಳವರೆಗೂ ದೂರನ್ನು ಒಯ್ದರು. ಈ ಸಂಗತಿ ಅವರನ್ನು ಚಿಂತೆಗೀಡುಮಾಡಿತು. ಇದುವರೆಗೂ ಮಗನಂತೆ ಜೋಪಾನ ಮಾಡಿದ ಪೂಚಾಕ್ಷರಿಯನ್ನು ಇದ್ದಕ್ಕಿದ್ದ ಹಾಗೆ ಶಿವಯೋಗಮಂದಿರದಿಂದ ಹೊರಗೆ ಕಳಿಸುವುದು ಮಾನಸಿಕವಾಗಿ ಸಹಿಸಲಸಾಧ್ಯವಾದ ವಿಷಯವಾಗಿತ್ತು. ಆದರೆ, ಶಿವಯೋಗಮಂದಿರದ ವಟುಗಳು ನೀಡಿದ ದೂರಿನಲ್ಲಿಯೂ ತಥ್ಯವಿತ್ತು. ಇದು ಹಾನಗಲ್ಲ ಕುಮಾರಸ್ವಾಮಿಗಳಿಗೆ ಧರ್ಮಸಂಕಟದ ವಿಷಯವಾಗಿತ್ತು. ಕೊನೆಗೆ ಅವರು ಪಂಚಾಕ್ಷರಿಗವಾಯಿಗಳನ್ನು ಹಾರೈಸಿ ಬೀಳ್ಕೊಡುವ ನಿರ್ಧಾರಕ್ಕೆ ಬಂದರು. ಒಂದು ದಿನ ಪಂಚಾಕ್ಷರಿಗವಾಯಿಗಳನ್ನು ಕರೆದು ಹೇಳಿದರು- ‘ಪಂಚಾಕ್ಷರಿ, ನೀನು ಕೇವಲ ಕೆಲವರಿಗೆ ಸೀಮಿತವಾಗಬಾರದು. ನಿನ್ನ ಸಂಗೀತ ಲೋಕಾರ್ಪಣವಾಗಬೇಕು. ನೀನು ಸಮಾಜದ ಮಗನಾದ್ದರಿಂದ ಸಮಸ್ತ ಸಮಾಜಕ್ಕೂ ನಿನ್ನ ಸಂಗೀತ ಸಲ್ಲತಕ್ಕದ್ದು. ಆದ್ದರಿಂದ ನೀನು ನಿನ್ನ ಶಿಷ್ಯರೊಂದಿಗೆ ಸಂಗೀತ ಯಾತ್ರೆಯನ್ನು ಪ್ರಾರಂಭಿಸು. ಯಾವುದಕ್ಕೂ ಧೃತಿಗೆಡುವ ಕಾರಣವಿಲ್ಲ. ನಿನ್ನ ಬೆಂಬಲಕ್ಕೆ ನಾವಿದ್ದೇವೆ.’
ಓರ್ವ ಅಂಧ ಕಲಾವಿದ, ಜಗತ್ತನ್ನೇ ನೋಡದೆ, ಕುಮಾರಸ್ವಾಮಿಗಳ ಅಕ್ಕರೆಯಲ್ಲಿ ಬೆಳೆದ ಕೂಸು. ಇದ್ದಕ್ಕಿದ್ದ ಹಾಗೆ ಸಮಾಜದ ದಾರುಣ ಹೊಡೆತಕ್ಕೆ ತೆರೆದುಕೊಳ್ಳುವುದು ಕಲ್ಪಿಸಿಕೊಳ್ಳಲಾರದ ಸಂಗತಿಯಾಗಿತ್ತು. ಶಿವಯೋಗಮಂದಿರದಲ್ಲಿಯೇ ಉಳಿಸಿಕೊಳ್ಳುವಂತೆ ಗುರುಗಳನ್ನು ಪರಿಪರಿಯಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಆದರೆ, ಅದು ಅನಿವಾರ್ಯವೂ ಆಗಿತ್ತು, ಪಂಚಾಕ್ಷರಿಗವಾಯಿಗಳು ಕುಮಾರಸ್ವಾಮಿಗಳ ಆಶೀರ್ವಾದದ ಅಕ್ಷಯನಿಧಿಯೊಂದಿಗೆ ತಮ್ಮ ಶಿಷ್ಯರನ್ನು ಕಟ್ಟಿಕೊಂಡು ಶಿವಯೋಗಮಂದಿರದಿಂದ ಹೊರಬಿದ್ದರು.
ಹಾನಗಲ್ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಯನ್ನು ಬೀಳ್ಕೊಡುವಾಗ ಮಾರ್ಗದರ್ಶನ ಪರವಾದ ಕೆಲವು ಮಾತುಗಳನ್ನು ಹೇಳಿದರು. ಸಂಗೀತವನ್ನು ಸಮಾಜ ಸೇವೆಯ ಮಂತ್ರವನ್ನಾಗಿ ಉಪಯೋಗಿಸುವಂತೆಯೂ, ಸರ್ವಧರ್ಮದ ವಿದ್ಯಾರ್ಥಿಗಳಿಗೆ ಅದರಲ್ಲೂ ಅಂಧ ಮತ್ತು ವಿಕಲಾಂಗ ಮಕ್ಕಳಿಗೆ ಅಕ್ಕರತೆಯಿಂದ ಸಂಗೀತವನ್ನು ಕಲಿಸುವಂತೆಯೂ ಉಪದೇಶಿಸಿದರು. ಸಮಾಜಕಲ್ಯಾಣಕ್ಕಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮಗಳಿಗೆ ಹಣ ಕೇಳದಿರುವಂತೆ ಸೂಚಿಸಿದರು. ‘ಇಷ್ಟೇ ಹಣವನ್ನು ಕೊಡಬೇಕೆಂದು ಕರಾರು ಹಾಕಬೇಡ, ನಿನಗೆ ಹಣದ ಅಡಚಣೆಯಿದ್ದಾಗ ನನ್ನನ್ನು ನೆನಪಿಸಿಕೋ. ನಿನ್ನ ಸದ್ಭಕ್ತರ ನೆರವಿನಿಂದ, ಅವರ ಸಹಾಯ ಸಹಕಾರದಿಂದ ಸಂಗೀತ ಶಾಲೆಯನ್ನು ನಡೆಸು ಕುಮಾರಸ್ವಾಮಿಗಳ ಈ ಮಾತಿಗೆ ಪಂಚಾಕ್ಷರಿಗವಾಯಿಗಳು ಪ್ರತಿಯಾಗಿ ಏನನ್ನೂ ಹೇಳದೇ, ಅವರ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುವುದಾಗಿ ವಚನವಿತ್ತರು. ಮತ್ತು ತಾವಿತ್ತ ವಚನದಂತೆ ನಡೆದುಕೊಂಡರು.
ಪಂಚಾಕ್ಷರಿ ಗವಾಯಿಗಳು ಮೊದಲಿನಿಂದಲೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡವರು, ನಾಟಕಗಳ ಬಗೆಗೆ ವಿಶೇಷ ಪ್ರೀತಿಯಿದ್ದವರು, ನಾಟಕಗಳ ಮೂಲಕವೇ ಹಿಂದುಸ್ತಾನಿ ಸಂಗೀತದ ಒಳತಿರುಳನ್ನು ಅರಿಯಲು ಪ್ರಯತ್ನಿಸಿದವರು. ಲಿಂಗದಳ್ಳಿಯಲ್ಲಿ ಗವಾಯಿಗಳ ಸಂಗೀತಶಾಲೆ ಬೀಡು ಬಿಟ್ಟಾಗ ನಾಟಕ ಕಂಪನಿಯೊಂದನ್ನು ಪ್ರಾರಂಭಿಸುವ ವಿಚಾರ ಸುಳಿಯಿತು. ಲಿಂಗದಳ್ಳಿಯ ಭಕ್ತರು. ಕಲಾಪ್ರೇಮಿಗಳು, ಎಲ್ಲ ಬಗೆಯ ಸಹಾಯವನ್ನೂ ನೀಡಲು ಸಿದ್ಧರಾದರು. ಇದಕ್ಕೆ ಹಾನಗಲ್ಲ ಕುಮಾರಸ್ವಾಮಿಗಳ ಕೃಪಾಶೀರ್ವಾದವೂ ದೊರೆಯಿತು. ಹೀಗೆ ಪಂಚಾಕ್ಷರಿಗವಯಿಗಳ ನೇತೃತ್ವದಲ್ಲಿ ‘ಶ್ರೀ ಮಳೇಮಲ್ಲೇಶ್ವರ ಸಂಗೀತ ನಾಟಕ ಮಂಡಳಿ’ ಉದಯಿಸಿತು.
ಪ್ರಾರಂಭದಲ್ಲಿ ನಾಟಕ ಕಂಪನಿಗೆ ಒಳ್ಳೆಯ ಉತ್ತೇಜನ ದೊರೆಯಿತು. ಆಗಿನ ನಾಟಕಗಳಲ್ಲಿ ಸಂಗೀತಕ್ಕೆ ಒಳ್ಳೆಯ ಮಹತ್ವವಿದ್ದುದರಿಂದ, ಗವಾಯಿಗಳ ಕಂಪನಿಯಲ್ಲಿ ಒಳ್ಳೆಯ ಸಂಗೀತಗಾರರಿದ್ದುದರಿಂದ ನಾಟಕಗಳು ಆರ್ಥಿಕವಾಗಿಯೂ ಯಶಸ್ವಿಯಾದುವು.ಗವಾಯಿಗಳ ಕಂಪನಿಯು ಡಾ.ಪುಟ್ಟರಾಜ ಗವಯಿಗಳು ರಚಿಸಿದ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿತ್ತು. ಗವಾಯಿಗಳ ಕಂಪನಿಯು ಅಧ್ಯಾತ್ಮಿಕ ಮಹತ್ವವುಳ್ಳ ನಾಟಕಗಳೆಡೆಗೆ ಹೆಚ್ಚಿನ ಮಹತ್ವ ನೀಡಿತು. ಗವಾಯಿಗಳ ಕಂಪನಿಯಲ್ಲಿ ಸ್ತ್ರೀಯರಿಗೆ ಅವಕಾಶವಿರಲಿಲ್ಲ, ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಕಂಪನಿಗೆ ಪ್ರಾರಂಭದಲ್ಲಿ ಒಳ್ಳೆಯ ಆದಾಯ ಪ್ರಾಪ್ತವಾದರೂ ಕುರವತ್ತಿ ಕ್ಯಾಂಪಿನಲ್ಲಿರುವಾಗ ಪರಿಕರಗಳನ್ನು ಒತ್ತೆಯಿಡುವ ಪ್ರಸಂಗ ಬಂತು. ಬೇರೆ ಕಂಪನಿಗಳು ಭರ್ಜರಿ ಸೆಟ್ಟುಗಳೊಂದಿಗೆ ನಾಟಕಗಳನ್ನು ಪ್ರದರ್ಶಿಸುತ್ತಿರುವಾಗ ಅವುಗಳೆಡಗೆ ಜನತೆ ಆಕರ್ಷಿತವಾಗುವುದು ಸಾಮಾನ್ಯವಾಗಿತ್ತು. ಗವಾಯಿಗಳ ಕಂಪನಿಯಲ್ಲಿ ಅಭಿನಯ ಹಾಗೂ ಸಂಗೀತವೇ ಪ್ರಧಾನವಾದ ಕಾರಣದಿಂದ ಭರ್ಜರಿ ಸೆಟ್ಟುಗಳಿಗೆ ಮಹತ್ವವಿರಲಿಲ್ಲ. ಕಂಪನಿಗಾದ ನಷ್ಟವನ್ನು ಗವಾಯಿಗಳು ಸಂಗೀತ ಕಚೇರಿಗಳಲ್ಲಿ ಹಾಡಿ ತುಂಬಿಕೊಟ್ಟರು. ಒತ್ತೆಯಿಟ್ಟ ಪರಿಕರಗಳನ್ನು ಬಿಡಿಸಿಕೊಂಡರು. ಅಲ್ಲಿಂದ ಮುಂದೆ ಅವರು ನಾಟಕದ ಉಸಾಬರಿ ಸಾಕೆಂದು ಬಿಟ್ಟುಬಿಟ್ಟರು. ಮತ್ತೆ ತಮ್ಮ ಸಾಧನೆಯನ್ನು ಸಂಗೀತದಲ್ಲಿಯೇ ಕೇಂದ್ರೀಕರಿಸಿದರು.
ನರಗುಂದದ ನಾಗರಿಕರು ಗವಾಯಿಗಳಿಗೆ ಮತ್ತೊಮ್ಮೆ ನಾಟಕ ಕಂಪನಿಯನ್ನು ಸ್ಥಾಪಿಸುವಂತೆ ಒತ್ತಾಯಿಸತೊಡಗಿದರು. ಗವಾಯಿಗಳಿಗೆ ನಾಟಕ ಕಂಪನಿ ಸ್ಥಾಪಿಸುವ ಮನಸ್ಸು ಎಳ್ಳಷ್ಟೂ ಇರಲಿಲ್ಲ. ಆದರೆ, ನರಗುಂದದ ಜನರ ಒತ್ತಾಯಕ್ಕೆ ಅವರು ಮಣಿಯಲೇಬೇಕಾಯಿತು.ಈ ಕಂಪನಿಯ ಸ್ಥಾಪನೆಯಲ್ಲಿ ನರಗುಂದದ ನಾಗಭೂಷಣ ಶ್ರೀಗಳು ಮಹತ್ತರ ಪಾತ್ರವನ್ನು ವಹಿಸಿದರು. ಕಂಪನಿಯ ಮೊದಲ ನಾಟಕವಾಗಿ ಪುಟ್ಟರಾಜ ಗವಾಯಿಗಳು ಬರೆದ ‘ಶ್ರೀ ಸಿದ್ಧರಾಮೇಶ್ವರ’ ನಾಟಕವನ್ನು 1940ರ ವಿಜಯ ದಶಮಿಯಂದು ಪ್ರಯೋಗಿಸಲಾಯಿತು.
ಪಂಚಾಕ್ಷರಿಗವಾಯಿಗಳ ಕಂಪನಿಯಲ್ಲಿ ಗದಿಗೆಯ್ಯ ಬೀಳಗಿ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ದೊಡ್ಡಬಸವಾರ್ಯ ಆರಿಬೆಂಚಿ, ಚೆನ್ನಬಸವಯ್ಯ ನರೇಗಲ್ ಮೊದಲಾದವರು ತಮ್ಮ ಸಮರ್ಥ ಅಭಿನಯ ಹಾಗೂ ಸುಮಧುರ ಸಂಗೀತದಿಂದ ನಾಟಕದ ಯಶಸ್ಸಿಗೆ ಕಾರಣರಾದರು. ಸ್ವತಃ ಪಂಚಾಕ್ಷರಿ ಗವಾಯಿಗಳು ತಬಲಾ ಹಾಗೂ ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ನುಡಿಸಿ ಹೆಚ್ಚಿನ ಮೆರಗು ತುಂಬುತ್ತಿದ್ದರು. ನಾಟಕ ಎಷ್ಟು ಸೊಗಸಾಗಿತ್ತೆಂದರೆ, ಜನ ಮತ್ತೆ ಮತ್ತೆ ನಾಟಕ ನೋಡಿದರು. ನಾಟಕ ಕಂಪನಿಯಿಂದಾಗಿ ಗವಾಯಿಗಳು ಋಣ ಮುಕ್ತರಾದರು.
ಪಂಚಾಕ್ಷರಿ ಗವಾಯಿಗಳ ವಿದ್ವತ್ತನ್ನು ಮನ್ನಿಸಿ ಅನೇಕರು ಅವರಿಗೆ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ‘ಉಭಯಗಾನ ವಿಶಾರದ’ ಎಂಬುದು ಅವರ ಜನಪ್ರಿಯ ಬಿರುದು. ಈ ಬಿರುದನ್ನು ಹಾನಗಲ್ ಕುಮಾರಸ್ವಾಮಿಗಳೇ ಪಂಚಾಕ್ಷರಿ ಗವಾಯಿಗಳಿಗೆ ಕರುಣಿಸಿದರು. ಈ ಬಿರುದನ್ನು ದಯಪಾಲಿಸಿದ್ದರ ಹಿಂದೆ ಒಂದು ಕತೆಯಿದೆ. ಕೆಲವರು ಗವಯಗಳ ವಿಷಯದಲ್ಲಿ ವಿನಾಕಾರಣ ಮಾತ್ಸರ್ಯವನ್ನು ತಾಳಿದ್ದರು. ಅವರಿಗೆ ದೊರೆಯುತ್ತಿದ್ದ ಮನ್ನಣೆ, ಗೌರವಗಳನ್ನು ಕಂಡು ಸಹಿಸದ ಕೆಲವರು ಇಲ್ಲಸಲ್ಲದ ಟೀಕೆಗಳನ್ನು ಪ್ರಾರಂಭಿಸಿದರು.
ಇದನ್ನು ತೊಡೆಯುವುದಕ್ಕಾಗಿ ಹಾನಗಲ್ ಕುಮಾರಸ್ವಾಮಿಗಳು 1915ರಲ್ಲಿ ಒಂದು ಸಂಗೀತ ವಿದ್ವದ್ ಗೋಷ್ಠಿಯನ್ನು ಕರೆದರು. ಇದಕ್ಕಾಗಿ ನಾಡಿನ ಶ್ರೇಷ್ಠ ಸಂಗೀತಗಾರರೆಲ್ಲ ಆಮಂತ್ರಿತರಾದರು. ಮೂರುದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ಸಂಗೀತದ ಅತ್ಯಂತ ಜಟಿಲ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲದಕ್ಕೂ ಗವಾಯಿಗಳು ಸಮರ್ಥ ಉತ್ತರಗಳನ್ನು ದಯಪಾಲಿಸಿದರು. ಗೋಷ್ಠಿಯ ಕೊನೆಗೆ ಗವಾಯಿಗಳು ಸಂಗೀತದ ಅತ್ಯಂತ ಕ್ಲಿಷ್ಟಕರ ರಾಗಗಳನ್ನು, ಸ್ವರಮಾಲಿಕೆಗಳನ್ನು ಮೂರುದಿನವೂ ಪ್ರಸ್ತುತ ಪಡಿಸಿದರು. ಗೋಷ್ಠಿಯ ಕೊನೆಗೆ ಎಲ್ಲರೂ ಗವಾಯಿಗಳ ಪಾಂಡಿತ್ಯವನ್ನು ಹೊಗಳಿದರು. ಮತ್ಸರ ಪಟ್ಟು ಅಪಪ್ರಚಾರ ಮಾಡುತ್ತಿದ್ದವರಿಗೆ ಮುಖಭಂಗವಾಯಿತು. ಇದೇ ಸಂದರ್ಭದಲ್ಲಿ ಅವರಿಗೆ ‘ ಉಭಯಗಾನ ವಿಶಾರದ’ ಎಂಬ ಬಿರುದನ್ನು ದಯಪಾಲಿಸಲಾಯಿತು. ‘ಸಂಗೀತ ರತ್ನ’, ‘ಸಂಗೀತ ಸಾಮ್ರಾಟ’, ‘ಗಾನಯೋಗಿ’ ಭೂ ಗಂಧರ್ವಚಂದ್ರ’ ಮೊದಲಾದ ಬಿರುದುಗಳಿಂದ ಗವಾಯಿಗಳು ಅಲಂಕೃತರಾದರು.
1929ರಲ್ಲಿ ವಿಜಾಪುರದ ಸಿದ್ದೇಶ್ವರ ಸಂಸ್ಥೆಯು ಗವಾಯಿಗಳಿಗೆ ‘ಗಾನಕಲಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು. 1935ರಲ್ಲಿ ರಂಭಾಪುರಿ ಪೀಠಾಧೀಶ್ವರ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರು ಸಂಗೀತ ಸಾಗರ’ ಎಂಬ ಬಿರುದನ್ನಿತ್ತು ಗೌರವಿಸಿದರು.1938ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರೈವ ಮಹಾಸಮ್ಮೇಳನದಲ್ಲಿ ಗಾಯನಾಚಾರ್ಯ’ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. 1939ರಲ್ಲಿ ಹೊಂಬಳದ ಜ್ಞಾನವರ್ಧಕ ವಾಚನಾಲಯ ಮಂಡಳಿಯು ಗವಾಯಿಗಳಿಗೆ ಸಂಗೀತ ಸುಧಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು.
ಹೀಗೆ ಅನೇಕ ಮಾನಸಮ್ಮಾನಗಳನ್ನು ಪಡೆದ ಗವಾಯಿಗಳು ಸಂಗೀತ ಸಾಧನೆ ಮತ್ತು ಬೋಧನೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಂಗೀತ ಅವರ ಜೀವನದ ಉಸಿರಾಗಿತ್ತು. ಈ ಪ್ರಸಂಗವನ್ನು ಗಮನಿಸಿ,ಗವಾಯಿಗಳಿಗೆ ನೆಚ್ಚಿನ ಕೆಲವು ವಸ್ತುಗಳಿದ್ದವು. ಅವುಗಳಲ್ಲಿ ದೊಡ್ಡ ಗಾತ್ರದ ತಾಮ್ರದ ತಂಬಿಗೆಯೂ ಒಂದು. ಅವರು ಸಂಚಾರ ದಲ್ಲಿದ್ದಾಗಲೂ ಕೂಡ ಅದವರ ಜೊತೆ ಇರಲೇ ಬೇಕಿತ್ತು. ಒಮ್ಮೆ ಯಾರದೋ ಅಚಾತುರ್ಯದಿಂದ ಈ ತಂಬಿಗೆ ಕಳೆದು ಹೋಯಿತು. ಗವಯಿಗಳು ತೀರ ಹಳಹಳಿಸಿದರು. ಅನೇಕ ವರ್ಷಗಳಿಂದ ಜೊತೆಗಿದ್ದ ತಂಬಿಗೆ ಇಲ್ಲವಾದುದು ಗವಾಯಿಗಳ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿತು. ಗುರುಗಳ ಈ ಅವಸ್ಥೆಯನ್ನು ಕಂಡು ಶಿಷ್ಯರು ವಾರಪೂರ್ತಿ ಅದಕ್ಕಾಗಿ ಹುಡುಕಾಟ ನಡೆಸಿದರು. ತಂಬಿಗೆ ಪತ್ತೆಯಾಗಲಿಲ್ಲ. ಆದರೂ ಮನದ ಮೂಲೆಯೊಂದರಲ್ಲಿ ಅದಿಲ್ಲವೆಂಬ ಭಾವ ಮನೆಮಾಡಿಕೊಂಡೇ ಇತ್ತು.
ಕೆಲವು ದಿನಗಳ ತರುವಾಯ ಒಮ್ಮ ಗುರುಗಳು ತಮ್ಮ ಸಂಚಾರವನ್ನು ಮುಗಿಸಿಕೊಂಡು ಬರುವಾಗ ಇದ್ದಕ್ಕಿದ್ದ ಹಾಗೆ ಒಂದು ನಾದ ಅವರನ್ನು ತಡೆದು ನಿಲ್ಲಿಸಿತು. ಮತ್ತೊಮ್ಮೆ ಗಮನವಿಟ್ಟು ಆ ನಾದವನ್ನು ಆಲಿಸಿದರು. ಹೌದು ಅದು ತಮ್ಮ ತಂಬಿಗೆಯ ನಾದವೇ ಸಂಶಯವಿಲ್ಲ! ಕೂಡಲೇ ಶಿಷ್ಯರನ್ನು ಕರೆದು ಅದನ್ನು ತರುವಂತೆ ಹೇಳಿದರು. ಮನೆಯೊಂದರಲ್ಲಿ ಅಳುತ್ತಿದ್ದ ಮಗುವನ್ನು ರಮಿಸಲು ಓರ್ವ ಅಜ್ಜಿ ಗವಾಯಿಗಳ ತಂಬಿಗೆಯನ್ನು ಬಾರಿಸಿ ಆಟವಾಡಿಸುತ್ತಿದ್ದಳು. ಶಿಷ್ಯರು ಆ ತಂಬಿಗೆಯ ವಿಚಾರ ಹೇಳಲು ಅಜ್ಜಿ ಗವಾಯಿಗಳಲ್ಲಿಗೆ ಬಂದು ತಂಬಿಗೆಯನ್ನು ಒಪ್ಪಿಸಿ ಕ್ಷಮೆಯಾಚಿಸಿದಳು.
ಗವಾಯಿಗಳ ನಾದಗ್ರಹಣ ಶಕ್ತಿ ಇಷ್ಟೊಂದು ಸೂಕ್ಷ್ಮವಾಗಿತ್ತು.
ಸಂಗೀತವನ್ನೇ ಅವರು ಬದುಕಿದರು. ಬದುಕಿನ ಕೊನೆಯಕ್ಷಣದವರೆಗೂ ಸಂಗೀತಕ್ಕಾಗಿ ಅವರ ಜೀವನ ತುಡಿಯುತ್ತಲೇ ಇತ್ತು.1944ರಲ್ಲಿ ಮೃತ್ಯುಂಜಯ ಶ್ರೀಗಳ ಅಪ್ಪಣೆಯ ಮೇರೆಗೆ ಧಾರವಾಡ ಮುರುಘಾಮಠದಲ್ಲಿ ಶ್ರಾವಣ ಮಾಸದ ಸಂಗೀತ ಸೇವೆಯನ್ನು ಸಲ್ಲಿಸಿದರು. ಅಂದು ಮಿಯಾ ಮಲ್ದಾರ ರಾಗದಲ್ಲಿ ಕರೀಮ ನಾಮ ತೇರೋ’ ಬಡಾಖ್ಯಾಲ್ ಬಂದಿಶ್ನ್ನು ಹಾಗೂ ‘ಉಮಢಫುಮಢ ಘನ ಗರಜೆ’ ಬಂದಿಶ್ಯದಲ್ಲಿ ಛೋಟಾಖ್ಯಾಲ್ನ್ನು ಹಾಡಿದರು. ಅಲ್ಲಿಂದ ಬರುವಾಗ ಶ್ರೀಗಳಲ್ಲಿ ಅವರು ವಿನಂತಿಸಿ ಕೊಂಡರು ಈ ಜೀವನದಲ್ಲಿ ಇಷ್ಟು ಸಾಕು. ನನ್ನನ್ನು ತಮ್ಮ ಪಾದಗಳಲ್ಲಿ ಕರೆದುಕೊಳ್ಳಿ’ ಶ್ರೀಗಳು ಅವರ ಈ ಬೇಡಿಕೆಯಿಂದ ಗಂಭೀರರಾದರು ಮತ್ತು ಹೇಳಿದರು
‘ಗವಾಯಿಗಳೇ, ಕುಮಾರೇಶನ ಕರೆ ಇನ್ನೂ ಬಂದಿಲ್ಲ. ನೀವಿನ್ನೂ ಬಾಳಿ, ಸಂಗೀತವನ್ನು ಬೆಳಗಬೇಕಾದವರು
ಬಹುಶಃ ಅದೇ ಅವರ ಕೊನೆಯ ಸಂಗೀತ ಕಚೇರಿ,
ಗದುಗಿಗೆ ಬರುತ್ತಲೇ ನಾಟಕ ಕಂಪನಿಯೊಂದಿಗಿದ್ದ ಪುಟ್ಟರಾಜ ಗವಾಯಿಗಳನ್ನು ಕರೆಸಿದರು. ಅವರು ಬರುವುದರೊಳಗಾಗಿ ಮೃತ್ಯುಪತ್ರ ಸಿದ್ಧವಾಗಿತ್ತು. ವೀರೇಶ್ವರ ಪುಣ್ಯಾಶ್ರಮವನ್ನು ಪುಟ್ಟರಾಜ ಗವಾಯಿಗಳ ಹೆಸರಿಗೆ ವರ್ಗಾಯಿಸಿಯಾಗಿತ್ತು. ಎಲ್ಲವನ್ನೂ ಅವರಿಗೆ ತಿಳಿಸಿ ಹೇಳಿದರು.
ಗವಾಯಿಗಳು ತಮಗಿರುವ ಅನಾರೋಗ್ಯದಿಂದ ಹೊರಬರುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ್ದರು. ಡಾ.ಮುನ್ಶಿಯವರು ಶಸ್ತ್ರ ಚಿಕಿತ್ಸೆಯಾದರೆ ಗವಾಯಿಗಳು ಬದುಕುವರೆಂದರು. ಆದರೆ ಗವಾಯಿಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ತಮ್ಮ ಅವತಾರವನ್ನು ಸಮಾಪ್ತಿ ಮಾಡುವ ಸಂಕಲ್ಪ ಮಾಡಿಯಾಗಿತ್ತು. 1944, ಜೂನ್ 14ನೆಯ ದಿನ, ಪಂಚಾಕ್ಷರಿ ಗವಾಯಿಗಳು ಕುಮಾರೇಶ್ವರನಲ್ಲಿ ಲೀನವಾದರು.ಅವರ ಗಂಧರ್ವಗಾನ ಈಗಲೂ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೇಳಿ ಬರುತ್ತಲೇ ಇದೆ!
ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ
ಶಿವಯೋಗ ಶಾಖಾಮಂದಿರದಲ್ಲಿ ೧೯೧೪ರಲ್ಲಿ ಸ್ಥಾಪನೆಯಾದ ಸಂಗೀತಶಾಲೆಯು ಶಿವಯೋಗಮಂದಿರದ ಉದ್ದೇಶವನ್ನು ಮತ್ತು ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಆಶಯವನ್ನು ಪರಿಣಾಮಕಾರಿಯಾಗಿ ಪೂರೈಸಿದ ಅಂಗಸಂಸ್ಥೆಯಾಗಿದೆ. ಸಂಗೀತದಂಥ ಪ್ರಭಾವಪೂರಿತ ಅಂಶಗಳನ್ನುತನ್ನೊಂದಿಗಿರಿಸಿಕೊಂಡಿದ್ದ ಈ ಸಂಸ್ಥೆಯು ಲೋಕವಿಖ್ಯಾತವಾಗಿದ್ದು ಇದರ ಬಹುಮುಖ್ಯಶಕ್ತಿಯಾದರೆ ನಿಡಗುಂದಿಕೊಪ್ಪ ಶಾಖಾಮಠದಲ್ಲಿ ಸ್ಥಾಪನೆಯಾಗಿ, ಅಲ್ಲಿಯೇ ಸ್ಥಾಯಿಯಾಗಿ ಉಳಿಯದೇ ಸಂಚಾರಿಯಾಗಲು ಒಂದು ನೇತ್ಯಾತ್ಮಕ ಕಾರಣವೂ ಇದೆ. ಶಿವಯೋಗ, ಆಧ್ಯಾತ್ಮಸಾಧನೆ, ವಿರಕ್ತಿ, ತುಂಬು ವಿರ್ನಿಪ್ತತೆ, ಸಾಮುದಾಯಕ ತೊಡಗಿಸಿಕೊಳ್ಳುವಿಕೆಯಲ್ಲಿ ತೋರಿಸುವ ಸಮತೋಲನ- ‘ಇಂಥ ಅಂತರಂಗ ಸಾಧನೆಯ ಶಿವಯೋಗಮಂದಿರ ಕೇಂದ್ರದಲ್ಲಿ ವಿಲಾಸಿಗಳಿಗೆ ಪ್ರಿಯವಾದ ಸಂಗೀತದಂಥ ಅಭಿರುಚಿಯು ಎಂಬ ಅಭಿಪ್ರಾಯ ಮೂಡಿ ಬಂದಾಗ ಸಂಗೀತಶಾಲೆಯು ಸ್ಥಾಯಿಸಮಿತಿಯೊಂದನ್ನು ರಚಿಸಿಕೊಂಡು ಸಂಚಾರಿ ಸಂಗೀತಶಾಲೆಯನ್ನು ಪುನರ್ಸ್ಥಾಪಿಸಿಕೊಂಡಿತು.
ಗದಿಗೆಯ್ಯನು ತನ್ನ ಗುರುಗಳಾದ ಎಮ್ಮಿಗನೂರಮಠದ ಗದಿಗೆಯ್ಯನವರಿಂದ ಸಂಗೀತವನ್ನು ಕಲಿತು ಪಂಚಾಕ್ಷರಿ’ ನಾಮಕರಣಗೊಂಡು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ‘ಜೋಳಿಗೆ’ ಅಭಿವೃದ್ಧಿ ಕಂಡು ೧೯೦೮ ಬಾಗಲಕೋಟೆಯ ನಾಲ್ಕನೆಯ ಶ್ರೀ ಮದ್ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ‘ಗವಾಯಿ’ ಎಂಬ ಅಭಿಧಾನವನ್ನು ಹೊಂದಿ ಸಂಗೀತದ ಹೊಸಅಲೆಯನ್ನೇ ಹರಿಸಿದ ಕೀರ್ತಿ “ಪಂಚಾಕ್ಷರಿಗವಾಯಿ’ಗಳಿಗೆ ಸಲ್ಲುತ್ತದೆ. ೧೯೨೯ರಲ್ಲಿ ವಿಜಾಪುರ ಸಿದ್ದೇಶ್ವರ ಸಂಸ್ಥೆ ನೀಡಿದ ‘ಗಾನಕಲಾನಿಧಿ’, ೧೯೩೫ರಲ್ಲಿ ಬಾಳೇಹಳ್ಳಿಯ ರಂಭಾಪುರಿ ವೀರಸಿಂಹಾಸನ ಸಂಸ್ಥಾನದ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೀಡಿದ ‘ಸಂಗೀತಸಾಗರ’, ೧೯೩೮ರಲ್ಲಿ ಎಸ್. ಎಸ್. ಬಸವನಾಳರ ಅಧ್ಯಕ್ಷತೆಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಅವರಿಗೆ ಸಿಕ್ಕ ಗಾಯನಾಚಾರ್ಯ’, ಈ ಗೌರವ ಪುರಸ್ಕಾರಗಳು ಪಂಚಾಕ್ಷರಿ ಗವಾಯಿಗಳಿಗೆ ಲಭಿಸಿದ ಗೌರವಗಳಷ್ಟೇ ಅಲ್ಲ ; ಅವು ಕರ್ನಾಟಕ ಸಂಗೀತ ಚರಿತ್ರೆ ಹರಿದು ಬಂದ ಚಾರಿತ್ರಿಕ ಕಾಲಘಟ್ಟದ ಅಭಿಜ್ಞೆಗಳು ! ೧೯೪೪ರ ಜೂನ್ ೧೧ರಂದು ಲಿಂಗೈಕ್ಯರಾದ ಗವಾಯಿಗಳು ಜಾತ್ಯತೀತರಾಗಿ ಸಂಗೀತಜ್ಞಾನವುಂಟು ಮಾಡಿದ್ದು ಶಿವಯೋಗಮಂದಿರದ ಶ್ರೇಷ್ಠ ಉತ್ಪಾದನೆಗಳಲ್ಲಿ ಒಂದು ಎಂಬುದಕ್ಕೆ ನಿದರ್ಶನವಾಗಿದೆ.
ಸಂಗೀತಶಾಲೆಯ ಶಿಷ್ಯ ಬಳಗವೂ ಶ್ರೇಷ್ಟ ಮಟ್ಟದ್ದೇ ! ಪಂಚಾಕ್ಷರಿ ಗವಾಯಿಗಳ ಆಪ್ತ ಮತ್ತು ಪಟ್ಟದ ಶಿಷ್ಯರಲ್ಲಿ ಒಬ್ಬರಾದ ಪುಟ್ಟರಾಜ ಗವಾಯಿಗಳು ; ಅವರ ಸಂಗೀತ ಪರಂಪರೆಯನ್ನು ಗೌರವಾನ್ವಿತವಾಗಿಮುಂದುವರೆಸಿದವರು. ೩ ನೇ ಮಾಚ್ ೧೯೧೪ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನ್ಮ ತಾಳಿದ ಇವರು ಜನ್ಮಾಂಧರು. ತಮ್ಮ ಹತ್ತನೆಯ ವರ್ಷ ವಯಸ್ಸಿನಲ್ಲಿ ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ತಮ್ಮ ಗುರುಗಳ ಕೃಪಾಪೋಷಣೆಯಲ್ಲಿ ಉತ್ತರಾದಿ, ದಕ್ಷಿಣಾದಿ ಸಂಗೀತ ವಿದ್ಯೆಗಳಲ್ಲಿ ನಿಷ್ಣಾತರಾದರು. ಪಂ. ರೇವಣಸಿದ್ದ ಶಾಸ್ತ್ರಿಗಳವರಿಂದ ಸಂಸ್ಕೃತ ಕಲಿತು ಸಾಹಿತ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಆಸಕ್ತಿ ಹೊಂದಿದರು. ಪಂಚಕಾವ್ಯಗಳು, ಶಾಕುಂತಲಾದಿ ನಾಟಕಗಳು, ಮೊದಲಾದ ಸಾಹಿತ್ಯಕೃತಿಗಳು ಕಂಠಸ್ಥವಾಗಿದ್ದವು. ರಾಜಶೇಖರವಿಳಾಸ ಮೊದಲಾದ ಕಾವ್ಯಗಳನ್ನು ಓದಿಸಿ, ಕೇಳಿ ಮನನ ಮಾಡಿಕೊಂಡಿದ್ದರು. ಅವರ ಧಾರಣಶಕ್ತಿ ಅದ್ಭುತವಾದುದು. ಸಂಗೀತ ಸಾಹಿತ್ಯಗಳಲ್ಲದೆ ಕವಿತ್ವವನ್ನು ಹೊಂದಿದ್ದ ಇವರು ಪಂಚಾಕ್ಷರಿ ಗವಾಯಿಗಳ ನಿಜವಾರಸುದಾರರು.
ಗದಿಗೆಪ್ಪ ಗವಾಯಿಗಳ (ಕಮತಗಿ) – ಪಂಚಾಕ್ಷರ ಗವಾಯಿಗಳ ಪ್ರೀತಿಯ ಶಿಷ್ಯರು, ದಕ್ಷಿಣಾದಿ -ಉತ್ತರಾದಿ ಸಂಗೀತಗಳೆರಡನ್ನು ಸಾಧಿಸಿದವರು. ಸ್ಥಾನಿಕ ಸಂಗೀತ ಶಾಲೆಯಲ್ಲಿದ್ದು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ತಮ್ಮ ಗುರುಗಳ ಕೃಪಾಶ್ರಯದಲ್ಲಿದ್ದು ಸಂಗೀತಕಲೆಯ ಪ್ರಸಾರಕ್ಕಾಗಿ ನಿರಪೇಕ್ಷರಾಗಿ ದುಡಿದ ಆದರ್ಶಸಂಗೀತಶಿಕ್ಷಕರು.
ಬಂಕಾಪುರದ ಶಂಕರರಾವ್ ದೀಕ್ಷಿತ – ತಮ್ಮ ಗುರುಗಳಿಂದ ದಕ್ಷಿಣಾದಿ ಉತ್ತರಾದಿ ಸಂಗೀತ ಶಿಕ್ಷಣ ಪಡೆದು ಆಕಾಶವಾಣಿ ಕಲಾವಿದರಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಸಂಗೀತ ಕಲಾರಾಧನೆಯನ್ನು ಮಾಡಿ ಗುರುವಿಗೂ ಮಂದಿರಕ್ಕೂ ಕೀರ್ತಿ ತಂದವರು.
ಹಾಲಗಿ ಮರುಳ ಸದಾಶಿವಯ್ಯ – ಪಿಟೀಲು ವಾದಕರೂ ಕವಿಗಳೂ ಆಗಿದ್ದ ಇವರು ‘ಶಿವಯೋಗ ಮಂದಿರ’ ಕುರಿತು ‘ವರಮಠಾಧೀಶ’ ಮುದ್ರಿಕೆಯಲ್ಲಿ ಭಜನೆ ಪದಗಳನ್ನು ರಚಿಸಿದ್ದರು.ಹಾವೇರಿಯ ಹುಕ್ಕೇರಿ ಮಠದಲ್ಲಿ ಸಂಗೀತ ಶಿಕ್ಷಕರಾಗಿದ್ದರು.
ಲಕಮಾಪುರದ ಜಯದೇವ ಗವಾಯಿಗಳು ಹಿರೇಮಠ ಒಂಭತ್ತು ವರ್ಷಗಳವರೆಗೆ (೧೯೧೫-೧೯೨೪) ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ತಮ್ಮ ಗುರುಗಳಿಂದ ದಕ್ಷಿಣಾದಿ ಸಂಗೀತದಲ್ಲಿ ನೈಪುಣ್ಯಹೊಂದಿದ್ದರು. ವೀಣೆ, ಸಿತಾರ, ಪಿಟೀಲು, ಜಲತರಂಗ ಮೊದಲಾದ ವಾದ್ಯಗಳಲ್ಲಿಪರಿಣಿತರಾಗಿದ್ದ ಇವರು ಕೆಲವು ವರ್ಷ ಬ್ಯಾಡಗಿಯಲ್ಲಿಯೂ ನಂತರ ಹಾವೇರಿಯಲ್ಲಿಯೂ ಸಂಗೀತ ಶಿಕ್ಷಕರಾಗಿ ನೂರಾರು ಜನ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಇವರ ಶಿಷ್ಯರಾಗಿದ್ದ ಗುರುಶಾಂತಯ್ಯ ಗವಾಯಿಗಳು ಮೈಸೂರಿನಲ್ಲಿ ಆಸ್ಥಾನ ಸಂಗೀತ ಕಛೇರಿ ನಡೆಸಿ ಬಹುಮಾನಿತರಾಗಿದ್ದರು. ೧೯೩೬ ರಿಂದ ೧೯೫೬ರ ವರೆಗೆ ದಾವಣಗೆರೆಯಲ್ಲಿ ಶಾರದಾ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಸಂಗೀತ ವಿದ್ಯಾದಾನವನ್ನು ಮುಂದುವರೆಸಿದರು.
ಮರೋಳ ಹಿರೇಮಠದ ಸದಾಶಿವಾಚಾರ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳವರಲ್ಲಿಹತ್ತು ವರ್ಷ ಸಂಗೀತಾಭ್ಯಾಸ ಕೈಗೊಂಡು ಸಂಗೀತಕಲೆಯನ್ನು ಸಾಧಿಸಿದವರು. ತಮ್ಮ ಗುರುಗಳಿಂದ ‘ಗಾಯನಕುಶಲ’ ರೆಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯಲ್ಲಿ ಮನ್ನಣೆ, ಎಡೆಹಳ್ಳಿಯ ಮಲ್ಲಪ್ಪ ದೇಸಾಯ ಮತ್ತು ಸೊನ್ನದ ದೇಸಾಯಿಯವರ ಮನೆಗಳಲ್ಲಿ ಸಂಗೀತ ಗೋಷ್ಠಿ ನಡೆಸಿದ್ದು ಪ್ರಮುಖ ಘಟನೆಗಳು, ಶಿರಿಯಾಳಕೊಪ್ಪದಲ್ಲಿ ಸಂಗೀತಶಾಲೆ ಸಂಗೀತ ಶಾಲೆಯ ಬಳಗ ಸ್ಥಾಪಿಸಿ, ಉತ್ತರಾದಿ-ದಕ್ಷಿಣಾದಿ ಸಂಗೀತ ಶಾಸ್ತ್ರಿಗಳನ್ನು ಶೋಧಿಸಿ ವಿಷ್ಣು ನಾರಾಯಣ, ಭಾತಖಂಡೆ ಮತ್ತು ನಾರದಮುನಿ ‘ಸ್ವರಪ್ರಸ್ತಾರಸಾಗರ’ ಮುಂತಾದ ಗ್ರಂಥಗಳ ಸಾರವನ್ನು ಕುರಿತ ಕನ್ನಡದಲ್ಲಿ ಸಂಗ್ರಹ ಕೃತಿರಚಿಸಿದ್ದರು.
ಆನ್ನದಾನಯ್ಯಸ್ವಾಮಿ ಹಿರೇಮಠ – ತಮ್ಮ ಗುರುಗಳಿಂದ ಕರ್ನಾಟಕೀ ಸಂಗೀತವನ್ನು ಕಲಿತವರು ಸಾಹಿತ್ಯ ಮತ್ತು ಕೀರ್ತನೆಗಳಲ್ಲಿ ನೈಪುಣ್ಯ ಪಡೆದಿದ್ದ ಇವರು ಗದಗಿನ ‘ವೀರಶೈವ ಪುಣ್ಯಾಶ್ರಮ ಸಂಗೀತ ವಿದ್ಯಾಲಯ’ದ ವ್ಯವಸ್ಥಾಪಕರಾಗಿ ಪುಟ್ಟರಾಜಗವಾಯಿಗಳವರಿಗೆ ನೆರವಾಗಿದ್ದರು. ಗವಾಯಿಗಳ ನಾಟಕ ಮಂಡಳಿಯನ್ನು ದಕ್ಷತೆಯಿಂದ ನಡೆಯಿಸಿಕೊಂಡು ಬಂದಿದ್ದರು.
ಹುಬ್ಬಳ್ಳಿಯ ಶಿವಲಿಂಗಯ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳಲ್ಲಿ ದಕ್ಷಿಣಾದಿ ಸಂಗೀತವನ್ನುಅಭ್ಯಾಸ ಮಾಡಿದ್ದು, ಇವರು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರಮಠದ ಸಂಗೀತವಿದ್ಯಾಲಯದಲ್ಲಿಕೆಲವು ವರ್ಷ ಸಂಗೀತ ಅಧ್ಯಾಪಕರಾಗಿದ್ದರು. ಶಿವಶರಣರ ವಚನಗಳಿಗೆ ರಾಗ ಪ್ರಸ್ತಾರ ಹಾಕಿ ಸುಕುಮಾರ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ರುದ್ರಪ್ಪ ಗವಾಯಿ ಕುರ್ತುಕೋಟಿ ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕ ಸಂಗೀತಾಭ್ಯಾಸ ಮಾಡಿ ನಿಪುಣರಾಗಿದ್ದರು. ಶಿವಯೋಗಮಂದಿರಕ್ಕೆ ಸಂಬಂಧಿಸಿದಂತೆ ಭಜನೆ, ಲಾವಣಿಗಳನ್ನು ರಚಿಸಿ,ಮಂದಿರದ ಜಾತ್ರೆಯಲ್ಲಿ ಕ್ರಿಯಾಶೀಲರಾಗಿರುತ್ತಿದ್ದರು.
ಬಸವರಾಜ ರಾಜಗುರು ಪಂಚಾಕ್ಷರ ಗವಾಯಿಗಳ ಮತ್ತೊಬ್ಬ ಪರಮಾಪ್ತ ಶಿಷ್ಯ.ಆನುವಂಶಿಕವಾಗಿದ್ದ ಸಂಗೀತಕಲೆಯನ್ನು ವಿಕಾಸಗೊಳಿಸಲೆಂದು ಎಳೆಯ ವಯಸ್ಸಿನಲ್ಲಿಯೇ ತಂದೆಯ ಪ್ರೇರಣೆಯಂತೆ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ಪಂಚಾಕ್ಷರ ಗವಾಯಿಗಳ ನೆಚ್ಚಿನ ಶಿಷ್ಯರಾದರು. ಹನ್ನೆರಡು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ಮೊದಲು ದಕ್ಷಿಣಾದಿಯಲ್ಲಿಆನಂತರ ಉತ್ತರಾದಿಯಲ್ಲಿ ಅಧಿಕಾರ ಪಡೆದರು. ‘ಗಾಯನಕೋಕಿಲ’, ‘ಸಂಗೀತಸುಧಾರಕ’, ‘ಸಂಗೀತ ರತ್ನ’ ಇವರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.
ಹಾವೇರಿಯ ಮೃತ್ಯುಂಜಯ ಪುರಾಣಿಕಮಠ- ಗುರುಗಳಲ್ಲಿ ಹನ್ನೆರಡು ವರ್ಷಗಳ ಕಾಲ ಉತ್ತರಾದಿ ಸಂಗೀತಶಿಕ್ಷಣ ಪಡೆದು ನಿಷ್ಣಾತರಾದರು. ಹಾವೇರಿಯಲ್ಲಿ ಸಂಗೀತಶಾಲೆ ಆರಂಭಿಸಿ, ಶರಣರ ವಚನಗಳನ್ನುಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು.
ಬಸವರಾಜ ಪುರಾಣಿಕ – ಗುರುಗಳಲ್ಲಿ ಹತ್ತು ವರ್ಷಗಳ ಸಂಗೀತಾಭ್ಯಾಸ, ಗುರುಬಸವಾರ್ಯಹಿರೇಮಠ – ೧೯೨೦ ರಿಂದ ೧೯೩೦ ರ ವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸ.ಗ್ವಾಲಿಯರ್ ಫರಾಣೆಯ ನೀಲಕಂಠ ಬುವಾ ಅವರಲ್ಲಿ ಶಿಕ್ಷಣ ಪಡೆದು ಭಾರತದ ಪ್ರಮುಖ ಪಟ್ಟಣಗಳಲ್ಲಿಸಂಗೀತ ಕಛೇರಿಗಳನ್ನು ನಡೆಸಿ ‘ಸಂಗೀತ ರತ್ನ’, ‘ಸಂಗೀತ ವಿಶಾರದ’ ಪುರಸ್ಕಾರ ಪಡೆದರು. ಇವರೂ ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದೂ ಅಲ್ಲದೇ ಉತ್ತರಾದಿ ಸಂಗೀತದಲ್ಲಿ ಜನಪ್ರಿಯ ಅನೇಕ ರಾಗಗಳನ್ನು ಸಂಗೀತ ವಿದ್ಯೆ’ ಕೃತಿ ರಚಿಸಿ ನಿರೂಪಿಸಿದ್ದಾರೆ.
ಸಿದ್ದರಾಮ ಜಂಬಲದಿನ್ನಿ ಪಂಚಾಕ್ಷರ ಗವಾಯಿಗಳಲ್ಲಿ ಎಂಟು ವರ್ಷ ಸಂಗೀತಾಭ್ಯಾಸ ಮಾಡಿದವರು. ಹಲವು ವರ್ಷ ಅಲ್ಲಿಯೇ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದವರು. ತಬಲಾ ಹಾರ್ಮೋನಿಯಂ ವಾದ್ಯಗಳಲ್ಲಿ ನಿಪುಣರಾಗಿದ್ದ ಇವರು ನಿಜಗುಣಶಿವಯೋಗಿಗಳ, ಶರೀಫರ ತತ್ತ್ವಪದಗಳನ್ನು ವಚನಗಳನ್ನು ಗಾಯನ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಚಿತ್ತರಗಿ ಗಂಗಾಧರ ಶಾಸ್ತ್ರಿಗಳು – “ಕೀರ್ತನಾಚಾರ್ಯ’ ವಿಶೇಷಣದಲ್ಲಿಯೇ ಗುರುತಿಸಲ್ಪಡುತ್ತಿದ್ದ ಕನ್ನಡಭಾಷೆಗಳಲ್ಲಿ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳವರಲ್ಲಿ ಶಿಷ್ಯತ್ವ ಪಡೆದು ಉತ್ತರಾದಿ ಸಂಗೀತವನ್ನು ಸಾಹಿತ್ಯವನ್ನು ಪಡೆದ ಕೀರ್ತನ-ಪುರಾಣ- ಪ್ರವಚನಗಳಲ್ಲಿ ನೈಪುಣ್ಯ ಸಂಪಾದಿಸಿದರು.
ಚಿತ್ತರಗಿಯ ಮುಪ್ಪಯ್ಯಸ್ವಾಮಿ-ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರವೇ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡ ಕಲಾವಂತರು. ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ದಲ್ಲಿ ಬಲಗೈಯಂತೇ ಇದ್ದವರು.
ಹಾವೇರಿಯ ಚಂದ್ರಶೇಖರಸ್ವಾಮಿ ಪುರಾಣಿಕಮಠ – ಎಂಟು ವರ್ಷ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಅಭ್ಯಾಸ ಮಾಡಿದ್ದ ಇವರು, ಇಂಪಾದ ಕಂಠಕ್ಕೆ ಅನುರೂಪವಾದ ಶಾಸ್ತ್ರಾಭ್ಯಾಸ ಮಾಡಿದವರು.ಭೈರಾಪುರದ ರುದ್ರಮುನಿ ಸಾಲಿಮಠ ಮಂದಿರದ ಪಾಠಶಾಲೆಯಲ್ಲಿ ಉತ್ತರಾದಿ ಶಾಸ್ತ್ರೀಯ ಸಂಗೀತವನ್ನು ಕಲಿತವರು. ಹಾರ್ಮೋನಿಯಂ, ಪಿಟೀಲು ವಾದ್ಯಗಳಲ್ಲಿ ನೈಪುಣ್ಯ ಪಡೆದವರು. ಗಮಕ ಕಲೆಯಲ್ಲಿ ನಿಷ್ಣಾತರಾಗಿದ್ದ ಇವರು, ವಚನಗಳಲ್ಲಿ ಭಾವಗೀತೆಗಳ ಧಾಟಿಯಲ್ಲಿ ಪ್ರಯೋಗಾತ್ಮಕವಾಗಿ ಹಾಡಿ ಹೆಸರು ಮಾಡಿದ್ದರು.
ಜಾಲಿಬೆಂಚಿಯ ದೊಡ್ಡಬಸವಾರ್ಯ ೧೯೩೮ ರಿಂದ ೧೯೪೮ ವರೆಗೆ ಪಂಚಾಕ್ಷರ ಗವಾಯಿಗಳವರಲ್ಲಿ ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದವರು. ಮಧುರ ಕಂಠದ ಇವರು ಪ್ರಸಿದ್ಧ ಪಿಟೀಲು ವಾದಕರು ; ವಚನಗಾಯನದಲ್ಲಿ ಹೆಸರು ಮಾಡಿದ್ದ ಇವರು, ಬಾಗಲಕೋಟೆಯ ‘ಶಾರದಾ ಸಂಗೀತವಿದ್ಯಾಲಯ ಸಂಚಾಲಕರು ಗಂಗಾಧರ ಸ್ವಾಮಿಗವಾಯಿ ಜುಕ್ತಿಮಠ ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿಸಂಗೀತವನ್ನು ಅಭ್ಯಾಸ ಮಾಡಿ, ವಿಜಾಪುರದ ಬಾಲಕಿಯರ ಸರಕಾರಿ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಉತ್ಸಾಹಿ ಕಾರ್ಯಕರ್ತರು ಆಗಿದ್ದ ಇವರು ‘ಕರ್ನಾಟಕ ಪ್ರಾದೇಶಿಕ ಸಂಗೀತ ಸೇವಾಸಮಿತಿ’ ಸಂಸ್ಥೆಯ ಸಂಚಾಲಕರಾಗಿ ಕೆಲವು ಯೋಜನಾಬದ್ಧ ಕಾರ್ಯಗಳನ್ನು ಮಾಡಿದರು.
ದೇವಗಿರಿಯ ಶಿವಮೂರ್ತಿ ಶಾಸ್ತ್ರಿಗಳು ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿ ಗಾಯನ ಸಂಗೀತ ಮತ್ತು ಹಾರ್ಮೋನಿಯಂ ವಾದನ ಸಂಗೀತದಲ್ಲಿ ಸಾಧನೆ ಮಾಡಿದರು. ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಘ’ ದಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಮುರುಡಯ್ಯಸ್ವಾಮಿ ಗವಾಯಿ ಹಿರೇಮಠ ಗಾಯನ, ಹಾರ್ಮೋನಿಯಂ, ನಾಟ್ಯಕಲೆಯಲ್ಲಿಯೂ, ಬಸವಲಿಂಗಪ್ಪ ಗವಾಯಿ ಹೂಗಾರ – ಸಂಗೀತ ವಾದ್ಯಗಳಲ್ಲಿ ನೈಪುಣ್ಯ ಪಡೆದಿದ್ದರು.
ಆರ್. ವಿ. ಶೇಷಾದ್ರಿ ಗವಾಯಿಗಳು – ೧೯೪೦ ರಿಂದ ಪಂಚಾಕ್ಷರ ಗವಾಯಿಗಳ ಶಿಷ್ಯರಾಗಿದ್ದಇವರು, ಹಾರ್ಮೊನಿಯಂ, ತಬಲಾ, ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಪ್ರಚಾರಮಾಡಿದ್ದರು. ಬೆಂಗಳೂರು ನಗರದಲ್ಲಿ ತಮ್ಮ ಗುರುಗಳಾದ ‘ಪಂಚಾಕ್ಷರ ಗವಾಯಿಗಳವರ ಕೃಪಾಪೋಷಿತ ಶ್ರೀ ಅರವಿಂದ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಸಂಗೀತ ವಿದ್ಯೆಯ ಪ್ರಚಾರವನ್ನು ಕೈಗೊಂಡರು. ‘ಗಾಯನಗಂಗಾ’ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿ ಅದರ ಮುಖಾಂತರ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ವಿದ್ಯೆಯ ಬಗ್ಗೆ ಅಭಿರುಚಿಯುಂಟಾಗುವಂತೆ ಮಾಡಿದ್ದರು.
ರಂಗಪ್ಪ ಮಾಸ್ತರ ಗುಡೂರು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತು ವರ್ಷಗಳವರೆಗೆ (೧೯೩೫-೧೯೪೪) ಶಿಕ್ಷಣ ಪಡೆದು ಶಹನಾಯಿ, ಕೊಳಲು, ಸುಂದರಿ, ಕ್ಲಾರೋನೆಟ್, ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳಲ್ಲಿ ನಿಪುಣತೆಯನ್ನು ಸಂಪಾದಿಸಿದರು. ಅವರ ಶಿಷ್ಯರಾದ ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ನಾಡಿನಾದ್ಯಂತ ಸಂಚರಿಸಿ ಅನೇಕ ಕಲಾಪ್ರೇಮಿಗಳಿಂದ ಪ್ರಶಸ್ತಿಸಂಪಾದಿಸಿದರು. ಗುಡೂರಿನಲ್ಲಿ (ಹುನಗುಂದ ತಾಲೂಕು) ಸಂಗೀತಶಾಲೆಯನ್ನು ಸ್ಥಾಪಿಸಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಉದ್ದೇಶವನ್ನು ಮುಂದುವರೆಸಿದರು.
ಮಲ್ಕಾಪುರದ ದೊಡ್ಡಬಸವಾರ್ಯಗವಾಯಿಗಳು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತುವರ್ಷಗಳವರೆಗೆ ಸಂಗೀತ ಶಿಕ್ಷಣ ಪಡೆದ ಇವರು ಪುಟ್ಟರಾಜ ಗವಾಯಿಗಳಿಂದ ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳ ಅಭ್ಯಾಸ ಮಾಡಿದರು. ಆದವಾನಿ ಪ್ರಾಂತದಲ್ಲಿ ಸಂಗೀತ ಪ್ರಚಾರ ಮಾಡಿದರು.
ಪಂಚಾಕ್ಷರಸ್ವಾಮಿ ಪಂಚಾಕ್ಷರ ಮಠ ಮತ್ತಿಗಟ್ಟಿ – ಸಂಗೀತ ವಾತಾರಣದಲ್ಲಿಯೇ ಹುಟ್ಟಿ ಬೆಳೆದ ಇವರು ತಂದೆ ಮತ್ತು ಚಿಕ್ಕಪ್ಪಂದಿರ ಪ್ರೇರಣೆಯಿಂದ ೧೯೩೮ ರಿಂದ ಪಂಚಾಕ್ಷರ ಗವಾಯಿಗಳವರ ಆಶ್ರಯ ಪಡೆದರು. ಏಕನಿಷ್ಠೆ ಸತತ ಪರಿಶ್ರಮಗಳಿಗೆ ಹೆಸರು ಮಾಡಿದ್ದ ಇವರು ಪುಟ್ಟರಾಜ ಗವಾಯಿಗಳಲ್ಲಿಯೂ ಏಳು ವರ್ಷಗಳವರೆಗೆ ಉತ್ತರಾದಿ ಸಂಗೀತ ಅಭ್ಯಾಸ ಮಾಡಿ, ಗುರುಗಳ ಅಪ್ಪಣೆಯಂತೆ ಸಂಗೀತ ಶಾಲೆಯ ಶಿಕ್ಷಕರಾಗಿದ್ದರು.
ಪ್ರಭಯ್ಯ ಅಡಿವೆಯ್ಯ ಸಾಲಿಮಠ, ದಾಟನಾಳ ೧೯೩೮ ರಿಂದ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತವನ್ನು ಅಭ್ಯಾಸಿಸಿದ ಇವರು, ಪುಣೆಯ ‘ಅಖಿಲಭಾರತ ಗಾಂಧರ್ವ ಮಹಾಮಂಡಲದ “ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ಕರಿಯಪ್ಪ ಶಿವಪ್ಪ ಮಲ್ಲಾಪುರ ಇವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳ ಶಿಷ್ಯತ್ವವನ್ನು ಪಡೆದು ತಮ್ಮ ತಾತನ ಚರ್ಮವಾದ್ಯದ ಪರಿಣತಿಯಲ್ಲಿ ನಿಪುಣರಾದರು. ಅನುವಂಶಿಕ ಸಂಸ್ಕಾರದ ಜೊತೆಗೆ ಗವಾಯಿಗಳ ಶಿಕ್ಷಣವೂ ಗಟ್ಟಿಗೊಳಿಸಿದ್ದರ ಪರಿಣಾಮವಾಗಿ ಕಾಶಿಯಲ್ಲಿ ಭಾರತದ ಸುಪ್ರಸಿದ್ಧ ತಬಲಾವಾದಕರಾಗಿದ್ದ ಅನೋಖಿಲಾಲ್ ಅವರಲ್ಲಿ ನಾಲ್ಕು ವರ್ಷ ವಾದನಕಲೆಯನ್ನು ಸುಧಾರಿಸಿಕೊಂಡರು.
ಕೊಟ್ಟೂರುಸ್ವಾಮಿ ಗವಾಯಿಗಳು, ಚಿಗಟೇರಿ-ಗವಾಯಿಗಳಲ್ಲಿ ಹತ್ತುವರ್ಷ ಗಾಯನ, ವಾದ್ಯ,ಜ್ಯೋತಿಷ್ಯವನ್ನು ಕುರಿತು, ‘ಪಂಚಾಕ್ಷರ ಸಂಗೀತ ವಿದ್ಯಾಲಯ ಸ್ಥಾಪನೆ ಬಳ್ಳಾರಿ ಭಾಗದಲ್ಲಿ ಸಂಗೀತದ ಅಭಿರುಚಿಯನ್ನುಂಟು ಮಾಡಿದರು.
ಸಿದ್ದೇಶಕುಮಾರ ತೆಲಗಿ-ಪಂಚಾಕ್ಷರ ಗವಾಯಿಗಳ ಪ್ರತಿಭಾವಂತ ಶಿಷ್ಯರಲ್ಲಿ ಒಬ್ಬರಾದ ಇವರು ತಮ್ಮ ಗುರುಗಳಲ್ಲಿ ಹತ್ತುವರ್ಷಗಳ ನಿರಂತರ ಈ ವಿದ್ಯೆಯ ಸಾಧನೆ ಮಾಡಿದ್ದರು. ಬಿ. ಮರಿಯಪ್ಪ,ರೋಣ-ಪ್ರಸಿದ್ಧ ಭಜಂತ್ರಿ ಮನೆತನದ ಇವರು, ತಮ್ಮ ಆನುವಂಶಿಕಕಲೆಯನ್ನು ಅಳವಡಿಸಿಕೊಂಡಿದ್ದರು. ಗವಾಯಿಗಳಲ್ಲಿ ಶಹನಾಯಿ, ಕೊಳಲು ವಾದ್ಯಗಳಲ್ಲಿ ಪರಿಣತಿಯಿತ್ತು ಪಂಚಾಕ್ಷರ ಗವಾಯಿಗಳ ನಿತ್ಯದ ಬೆಳಗಿನ ಶಿವಪೂಜೆಯ ವೇಳೆಯಲ್ಲಿ ಶಹನಾಯಿ, ಕೊಳಲುಗಳನ್ನು ಇಂಪಾಗಿಯೇ ನುಡಿಸುತ್ತಿದ್ದರು. ಗುರುವಿನ ಅನುಗ್ರಹವಾಗಿ ಸಾಕಷ್ಟು ಪಾಂಡಿತ್ಯ ಮತ್ತು ಕಲೆಯನ್ನು ಸಂಪಾದಿಸಿದ್ದರು. ಕೆಲವು ವರ್ಷಗಳ ಕಾಲ ಗುರುಗಳ ಸಂಗೀತ ವಿದ್ಯಾಲಯದಲ್ಲಿಯೆ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಿದ್ದರಾಮಸ್ವಾಮಿ ಕೊರವಾರ-ಪಂಚಾಕ್ಷರ ಗವಾಯಿಗಳ ಕೃಪೆಯಲ್ಲಿಯೇ ಬೆಳೆದವರು ತಮ್ಮದೈವದತ್ತವಾದ ಪ್ರತಿಭೆಯನ್ನು ಪುಟ್ಟರಾಜ ಗವಾಯಿಗಳ ತಾರುಣ್ಯದಲ್ಲಿ ಮತ್ತಷ್ಟ ಸುಧಾರಿಸಿಕೊಂಡರು.ಎಲ್ಲಪ್ಪ ಅಮರಗೋಳ-ಕರ್ನಾಟಕದ ಪ್ರಸಿದ್ಧ ಶಹನಾಯಿ ವಾದನ ಪಟುಗಳಾಗಿ ಹೆಸರು ಮಾಡಿದ ಇವರು ಪಂಚಾಕ್ಷರಿ ಗವಾಯಿಗಳ ಮತ್ತು ಪುಟ್ಟರಾಜ ಗವಾಯಿಗಳಲ್ಲಿ ವಾದನಕಲೆಯಲ್ಲಿ ಪರಿಣಿತ ಪಡೆದರು. ಆನಂತರ ಕಾಶಿಗೆ ಹೋಗಿ ಭಾರತದ ಪ್ರಸಿದ್ಧ ಶಹನಾಯಿವಾದಕರಾಗಿದ್ದ ಉಸ್ತಾದ ಬಿಸ್ಮಿಲ್ಲಾಖಾನ್ ಅವರಲ್ಲಿಶಹನಾಯಿವಾದನ ಕಲೆಯನ್ನು ವಿಶೇಷವಾಗಿ ಅಭ್ಯಾಸ ಮಾಡಿದ್ದರು.
ಅರ್ಜುನಸಾ ವೆಂಕೋಸಾ ನಾಕೋಡ-೧೯೪೧ ರಿಂದ ೧೯೪೭ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಕಿರಾಣಾ ಘರಾಣೆಯ ಶೈಲಿಯಲ್ಲಿ ಒಳ್ಳೆಯ ಸಂಗೀತಗಾರರೆಂದು ಹೆಸರು ಮಾಡಿದರು.
ಬಸವರಾಜ ತಾಳಕೇರಿ-ಚಿಕ್ಕಂದಿನಲ್ಲಿಯೇ ತನ್ನ ಸಂಗೀತದ ಆಸಕ್ತಿ-ಪ್ರತಿಭೆಯನ್ನು ತೋರಿಸಿದ್ದ ಇವರು ಮೃತ್ಯುಂಜಯಸ್ವಾಮಿ ಪುರಾಣಿಕಮಠ ಇವರ ನೆರವಿನಿಂದ ೧೯೪೧ರಲ್ಲಿ ಮಂದಿರದ ಸಂಗೀತ ಶಾಲೆಗೆ ಸೇರಿದರು.
ಸಂಗಮೇಶ್ವರ ಪಾಟೀಲ ಗೂಡೂರು-ಪಂಚಾಕ್ಷರ ಗವಾಯಿಗಳಲ್ಲಿ ಹತ್ತು ವರ್ಷ ಸಂಗೀತ, ವಾದ್ಯಶಿಕ್ಷಣ ಅಭ್ಯಾಸ ಮಾಡಿ ಆನಂತರ ಹೈದರಾಬಾದಿನ ‘ವಿವೇಕ ವರ್ಧಿನಿ ಸಂಗೀತಶಾಲೆ’ಯಲ್ಲಿ ಸಿತಾರ ಶಿಕ್ಷಕರಾಗಿದ್ದರು. ಚನ್ನಬಸವಯ್ಯ ಜೇಕಿನಕಟ್ಟೆ, ಬೊಮ್ಮನ ಹಳ್ಳಿ-ಪಂಚಾಕ್ಷರ ಗವಾಯಿಗಳ ನೆಚ್ಚಿನ ತಬಲಾ ವಾದನದ ಶಿಷ್ಯರಲ್ಲಿ ಇವರೂ ಒಬ್ಬರು. ತಮ್ಮ ಗುರುಗಳ ಸೇವೆಯನ್ನು ಮಾಡುತ್ತಲೇ ತಬಲ ವಾದನ ಕಲೆಯನ್ನು ಸತತ ಹನ್ನೆರಡು ವರ್ಷಗಳವರೆಗೆ ಸಾಧಿಸಿದರು. ಪ್ರತಿವರ್ಷದ ಶಿವರಾತ್ರಿಯ ಕಾಲಕ್ಕೆ ಮಂದಿರದ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೇ ಸೇವೆ ಸಲ್ಲಿಸುತ್ತಿದ್ದ ಇವರು ಒಬ್ಬ ಸಾತ್ವಿಕ ಕಲಾವಂತರು.
ಪಂಪಾಪತಿಸ್ವಾಮಿ ಗವಾಯಿ ಒಡೆಯರ ಗೋವಿಂದವಾಡ-ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಸಂಗೀತಾಭ್ಯಾಸ ಮಾಡಿ ತಮ್ಮ ಶಿಷ್ಯವೃತ್ತಿಯನ್ನು ಪುಟ್ಟರಾಜಗಳವರಲ್ಲಿಯೂ ಮುಂದುವರೆಸಿದರು.
ನಂಜುಂಡಯ್ಯ ಗಿರಿಯಾಪುರ-ಪಂಚಾಕ್ಷರ ಗವಾಯಿಗಳಲ್ಲಿ ತಬಲವಾದನ ಕುರಿತು ಚಿಕ್ಕಮಂಗಳೂರಿನಲ್ಲಿದ್ದುಕೊಂಡು ಮಲೆನಾಡು ಪರಿಸರದಲ್ಲಿ ಸಂಗೀತಕಲೆಯನ್ನು ಬೆಳೆಸಿದರು. ಬಸವಲಿಂಗ ಭೀಮರಾವ್ ಪೂಜಾರಿ-ಗವಾಯಿಗಳ ಸನ್ನಿಧಿಯಲ್ಲಿದ್ದು ತಮ್ಮ ಕಲಾಭಿರುಚಿಯಂತೆ ಹಿಂದೂಸ್ಥಾನೀ-ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ, ತಮ್ಮ ಗುರುಗಳ ಅಪ್ಪಣೆಯಂತೆ ನಾಡಿನಾದ್ಯಂತ ಸಂಚರಿಸಿ ಸಂಗೀತ ಪ್ರಸಾರ ಕಾರ್ಯವನ್ನು ಕೈಗೊಂಡರು. ಆಲಮೋಲದಲ್ಲಿ ಬಸವೇಶ್ವರ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಮುಂದಿನ ಜನಾಂಗಕ್ಕೆ ಸಂಗೀತಾಭಿರುಚಿಯನ್ನು ಬೆಳೆಸಿದರು.
ವೆಂಕಪ್ಪ ರೋಣ-ಪಂಚಾಕ್ಷರ ಗವಾಯಿಗಳ ಬದುಕಿನ ಕೊನೆಯ ಘಟ್ಟದಲ್ಲಿ ಸಂಗೀತನಾಟ್ಯಕಲೆಗಳ ಅಧ್ಯಯನ ಮಾಡಿದವರು. ೧೯೪೩ ರಲ್ಲಿ ಕೊಪ್ಪಳದಲ್ಲಿ ಗರೂಡ ಸದಾಶಿವರಾಯರೊಂದಿಗೆ ‘ಸತ್ಯಸಂಕಲ್ಪ’ ನಾಟಕದಲ್ಲಿ ಹಿರಣ್ಯಗರ್ಭಾಚಾರ್ಯರ ಪಾತ್ರವನ್ನು ಅಭಿನಯಿಸದಾಗ ಇವರ ಹಾಸ್ಯಾಭಿನಯವನ್ನು ಬಹುವಾಗಿ ಮೆಚ್ಚಿದ ಗರೂಡರು ‘ನಟಶ್ರೇಷ್ಠ’ ಎಂದು ಉದ್ಗಾರ ತೆಗೆದು ಪ್ರೋತ್ಸಾಹಿಸಿದ್ದರು. ಪಂಚಾಕ್ಷರ ಗವಾಯಿಗಳ ಸಮ್ಮುಖದಲ್ಲಿಯೇ ಆದ ಈ ಅನುಭವ ಗುರು-ಶಿಷ್ಯರಿಬ್ಬರಿಗೂ ಆನಂದ ಅತಿರೇಕವನ್ನುಂಟು ಮಾಡಿತ್ತು
ವೀರಭದ್ರಯ್ಯ ರಾಜಶೇಖರಯ್ಯ ಶಾಸ್ತ್ರಿ ಹಿರೇಮಠ-ತಮ್ಮ ಗುರುಗಳಿಂದ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದು ನಿಪುಣರಾಗಿದ್ದರು.
ಚನ್ನಬಸರಾಯನ ಬಸವಾರ್ಯ ಚಿಕ್ಕಮಠ, ಕಿರೇಸೂರು-೧೯೩೯–೧೯೪೪ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ತಬಲಾವಾದನ ಕುರಿತು ನಾಡಿನ ಶ್ರೇಷ್ಠ ತಬಲಾವಾದಕರೆಂದು ಹೆಸರು ಮಾಡಿದ್ದರು.
ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಸಂಗೀತಕ್ಕೆ ಮಹತ್ವ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಧರ್ಮಪ್ರಸಾರಕ್ಕೆ ಇದು ಒಂದು ಪ್ರಮುಖ ಅಂಗವಾಗುತ್ತದೆ ಎಂಬುದರಲ್ಲಿದೆ. ಶಿವಯೋಗಮಂದಿರ ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ಸಂಗೀತ ಮತ್ತು ಶಿವಕೀರ್ತನೆಕಾರರು ಮಂದಿರದ ಒಂದು ಯೋಜನಾಬದ್ಧಕಾರ್ಯಕ್ರಮಗಳಲ್ಲಿ ಒಂದಾಗಬೇಕೆಂದು ಯೋಚಿಸಿದ್ದರು. ವಚನ, ಶಾಸ್ತ್ರ, ಆಗಮ, ಉಪನಿಷತ್ತು ಭಾಷ್ಯ,ಸಾಹಿತ್ಯ-ನೀತಿಶಾಸ್ತ್ರಿಗಳು ಸಂಗೀತದ ಮೂಲಕ ಸಮ್ಮಿಳಿತವಾದರೆ ಧರ್ಮಪ್ರಸಾರದ ಬಹುಮುಖ್ಯ ಕಾರ್ಯವಾಗುತ್ತದೆ ಎಂಬ ವಿಚಾರ ಮಾಡಿದ್ದು ಸಹಜವಾಗಿದೆ. ಆದ್ದರಿಂದ ಶಿವಯೋಗಮಂದಿರದಲ್ಲಿ ಶಿವಕೀರ್ತನಕಾರರನ್ನು ತರಬೇತಿಗೊಳಿಸಿ ಅವರಿಂದ ನಾಡಿನ ಮೂಲೆ ಮೂಲೆಗಳಲ್ಲಿಯೂ ಧಾರ್ಮಿಕ ಪ್ರಸಾರವಾಗಿ ಭಕ್ತಜನರ ಬದುಕನ್ನು ಹಸನುಮಾಡುವಂತೆ ಅಣಿಗೊಳಿಸುವುದು. ಶಿವಯೋಗಮಂದಿರದಲ್ಲಿಪ್ರಮುಖವಾಗಿ ತರಬೇತಿ ಪಡೆದ ಶಿವಕೀರ್ತನಕಾರರೆಂದರೆ, ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳು,ಮಲ್ಲಿಕಾರ್ಜುನ ಶಾಸ್ತ್ರಿಗಳು, ಶಿವಣಗಿ; ಬಸವಲಿಂಗ ಶಾಸ್ತ್ರಿಗಳು, ಮತ್ತಿಕಟ್ಟೆ; ಇಂದುಧರ ಶಾಸ್ತ್ರಿಗಳು;ಶ್ರೀಕಂಠಶಾಸ್ತ್ರಿಗಳು, ನಲವಡಿ; ಸದಾಶಿವಶಾಸ್ತ್ರಿಗಳು, ಹುಕ್ಕೇರಿ; ಮಹಾಲಿಂಗಪ್ಪನವರು, ದಾವಣಗೆರೆ;ವೀರಯ್ಯ ಶಾಸ್ತ್ರಿಗಳು-ಹಿರೇಹಾಳ-ಪ್ರತಿವರ್ಷದ ಶಿವರಾತ್ರಿ ಉತ್ಸವಕಾಲಕ್ಕೆ ಶಿವಯೋಗಮಂದಿರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದರು.
ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳ ಹೆಸರು-ಶಿವಯೋಗಮಂದಿರದ ಸಂಗೀತ ಶಾಲೆ, ಕೀರ್ತನೆಗೆ ಸಂಬಂಧಿಸಿದಂತೆ ಮರೆಯಲಾಗದ ಹೆಸರು. ಅವರು ಸೊನ್ನದ ದೇಸಾಯಿಯವರಲ್ಲಿ ಪುರಾಣಿಕರಾಗಿದ್ದವರು.ಭಾವುಕ ರಸಿಕರು; ಸಂಗೀತದಲ್ಲಿ ನಿಷ್ಣಾತರು, ಮಧುರ ಕಂಠದ ಅವರು ಹಾನಗಲ್ಲ ಕುಮಾರಸ್ವಾಮಿಗಳ ಸನ್ನಿಧಿಯಲ್ಲಿದ್ದುಕೊಂಡು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಸಂಗ್ರಹಿಸಿ ತಿಳಿದುಕೊಂಡಿದ್ದರು. ಅವರು ಅಪ್ಪಣೆಯಂತೆ ಕೀರ್ತನ ರೂಪವಾಗಿ ಶಿವಧರ್ಮ ತತ್ವಗಳನ್ನು ಸಮಸ್ತ ಸಮಾಜಕ್ಕೆ ಮನವರಿಕೆಯಾಗುವಂತೆ ಬೋಧಿಸುತ್ತಿದ್ದರು. ಮೈಸೂರು, ಬೆಂಗಳೂರು, ಬಳ್ಳಾರಿ ಮೊದಲಾದ ಕಡೆಗಳಲ್ಲಿ ಸಂಚರಿಸಿ ಧರ್ಮಬೋಧೆ ಮಾಡಿದ್ದರು. (ಕೀರ್ತನವಿಶಾರದ’ರೆಂದು ಪ್ರಸಿದ್ದಿ ಪಡೆದರು. ೧೯೧೯ ರಲ್ಲಿ ಗದುಗಿನ ಧರ್ಮಭಿಮಾನಿಗಳ ಅಪೇಕ್ಷೆಯ ಮೇರೆಗೆ ರಾಚೋಟಿ ದೇವಸ್ಥಾನದಲ್ಲಿ ಶ್ರಾವಣಮಾಸದ ಶಿವಕೀರ್ತನಗಳನ್ನು ಮಾಡಿದರು. ಅವರ ಕೀರ್ತನಗಳನ್ನು ಕೇಳಲು ಜನಸಮೂಹವೇ ಬರುತ್ತಿತ್ತುಉತ್ತಮಸಂಗೀತ, ತಿಳಿಹಾಸ್ಯ ಮತ್ತು ತತ್ವಿವೇಚನೆಗಳಿಂದ ಅವರ ಕೀರ್ತನೆಗಳು ಮನಕ್ಕೆ ಆಕರ್ಷಕವೆನಿಸುತ್ತಿದ್ದವು. ಬ್ಯಾಡಗಿ, ಕೊಲ್ಲಾಪುರ ಗಡಹಿಂಗ್ಲಜ, ಸಂಕೇಶ್ವರ, ಸೋಲಾಪುರ ಮೊದಲಾದ ಗಡಿನಾಡಿನಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ದಿವ್ಯಸಾನಿಧ್ಯದಲ್ಲಿದ್ದು ಶಿವಕೀರ್ತನರೂಪದಿಂದ ಧರ್ಮಬೋಧೆ ಮಾಡುತ್ತಿದ್ದರು.
೧೯೨೮ ರಲ್ಲಿ ಶಿವಯೋಗಮಂದಿರದಲ್ಲಿ ಶಿವನ ಧ್ಯಾನವನ್ನು ಮಾಡುತ್ತ ‘ಬೇರೊಂದು ಪದವಿಯನೊಲ್ಲೆ…’ ಎಂಬ ನಿಜಗುಣರ ಆಧ್ಯಾತ್ಮಪದವನ್ನು ವಟುಗಳಿಂದ ಹಾಡಿಸಿ ಕೇಳುತ್ತಲೇ ಲಿಂಗೈಕ್ಯರಾದರು. ಶರಣರಂತೆ ಬದುಕಿದ್ದ ಬಸವಲಿಂಗಶಾಸ್ತ್ರಿಗಳ ಬದುಕು ಒಂದು ನಿದರ್ಶನ.
ವೀರಯ್ಯ ಶಾಸ್ತ್ರಿಗಳು ಹಿರೇಹಾಳ-ಇಲಕಲ್ಲಿನ ಚಿತ್ತರಗಿ ಸಂಸ್ಥಾನಮಠದ ವಿಜಯಮಹಾಂತ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಮಠದ ವ್ಯವಸ್ಥೆಗಾಗಿ ಇಲಕಲ್ಲಿಗೆ ಆಗಮಿಸಿದ್ದರು. ಅಮರಾವತಿಯ ದೇಸಾಯಿಯವರ ಮನೆಯಲ್ಲಿ ವೀರಯ್ಯಶಾಸ್ತ್ರಿಗಳ ಮೊದಲ ಭೇಟಿಯಾದ ನಂತರ ಅವರ ಅಪ್ಪಣೆಯಂತೆ ಶಿಕ್ಷಕರಾಗಿದ್ದು ಶಾಸ್ತ್ರಿಗಳು ಆ ವೃತ್ತಿಯನ್ನು ಬಿಟ್ಟುಶಿವಕೀರ್ತನಕಾರರಾದರು. ಹಾನಗಲ್ಲ ಕುಮಾರ ಸ್ವಾಮಿಗಳೊಂದಿಗಿದ್ದಾಗ ಸಾಕಷ್ಟು ಮಾಹಿತಿ, ಧಾರ್ಮಿಕ ಜ್ಞಾನವನ್ನು ಸಂಪಾದಿಸಿ ಉತ್ತಮ ಶಿವಕೀರ್ತನಕಾರರಾದರು. ಬಿಡುವಿದ್ದಾಗ ಶಿವಯೋಗಮಂದಿರದಲ್ಲಿ ಅವರ ಸನ್ನಿಧಿಯಲ್ಲಿಯೇ ವೀರಶೈವಧರ್ಮ, ಸರ್ವಧರ್ಮ ಸಮನ್ವಯ ದೃಷ್ಟಿ, ಕನ್ನಡ ಸಂಸ್ಕೃತ ಗ್ರಂಥಗಳ ಅಭ್ಯಾಸ, ಇತ್ಯಾದಿಗಳಿಂದ ತಮ್ಮ ವಚನಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ತಮ್ಮ ಕೀರ್ತನಗಳಲ್ಲಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಬೋಧಿಸಿದ್ದ ವೀರಶೈವ ಅಧ್ಯಾತ್ಮ ವಿದ್ಯೆಯನ್ನು ಸಾಮಾನ್ಯ ಜನಮನಸ್ಸಿಗೆ ಹಿಡಿಸುವಂತೆ ತಿಳಿಹಾಸ್ಯದಲ್ಲಿ ವಿವೇಚಿಸುತ್ತಿದ್ದರು. ಅವರು ದ್ಯಾವಾಪುರದ ಮಹಾಲಿಂಗಯ್ಯ, ದ್ಯಾವಾಪುರದ ಬಸವಲಿಂಗಶಾಸ್ತ್ರಿ, ದ್ಯಾಂಪುರದ ಚೆನ್ನಕವಿ, ಪಂಚಾಕ್ಷರ ಗವಾಯಿಗಳು- ಇವರ ಸತ್ಸಂಗದಲ್ಲಿರುತ್ತಿದ್ದರು.
ಜಿ. ವೀರಾರ್ಯ ಶಾಸ್ತ್ರಿ ಹಿರೇಮಠ, ಸುರಕೋಡ– ಕನ್ನಡವ್ಯಾಸಂಗವನ್ನು ಪೂರೈಸಿ, ಗದಗಿನ ತೋಂಟದಾರ್ಯಮಠದ ಸಂಸ್ಕೃತಪಾಠಶಾಲೆಯಲ್ಲಿ ಸಂಸ್ಕೃತನಾಟಕ, ಶ್ರಾವ್ಯಗಳ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತವನ್ನು ಮತ್ತು ದ್ಯಾವಾಪುರದ ಬಸವಲಿಂಗಶಾಸ್ತ್ರಿಗಳಲ್ಲಿ ಕೀರ್ತನ ಕಲೆಯನ್ನು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳವರಿಂದ ಕೃಪಾಬಲದ ಉತ್ತಮ ಕೀರ್ತನ-ಸಂಗೀತಶಕ್ತಿಯನ್ನು ಪಡೆದ ಇವರು ಶಿವಯೋಗಮಂದಿರದಲ್ಲಿ ಶ್ರೇಷ್ಟಕೀರ್ತನಕಾರರಾಗಿ ಗುರುತಿಸಿಕೊಂಡಿದ್ದರು.
ಕಲ್ಲಿನಾಥ ನಾಥಶಾಸ್ತ್ರಿ ಹಿರೇಮಠ- ಪಂಚಾಕ್ಷರಗವಾಯಿಗಳಿಂದ ಸಂಗೀತವನ್ನು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಪ್ರೇರಣೆಯನ್ನು ಪಡೆದು ಶಿವಕೀರ್ತನಕಾರರೆನಿಸಿಕೊಂಡವರು. ಗುರುಲಿಂಗಶಾಸ್ತ್ರಿಗಳು,ಸಾಲಿಮಠ- ಪಂಚಾಕ್ಷರ ಗವಾಯಿಗಳಿಂದ ಮೂರುವರ್ಷಗಳ ಕಾಲ ಕೀರ್ತನ ಪುರಾಣ ಪ್ರವಚನ ಶಿಕ್ಷಣವನ್ನು ಪಡೆದು ನರಗುಂದ, ಹಾನಗಲ್ಲ ನೀಲಗುಂದ, ನಿಡಗುಂದಿಕೊಪ್ಪ, ಬಿದರಿ, ಬಾಗಲಕೋಟೆ, ಕೊತಬಾಳ, ಕೊಪ್ಪಳ, ಸೂಡಿ ಮೊದಲಾದ ಗ್ರಾಮಗಳಲ್ಲಿ ಕೀರ್ತನಕಾರರೆಂದು ಮನ್ನಣೆ, ಗೌರವ ಪಡೆದಿದ್ದರು. ಮಹಾದೇವಶಾಸ್ತ್ರಿಗಳು ಹಿರೇಮಠ, ಕೃಷ್ಣಪುರ-ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳವರಲ್ಲಿ ಪ್ರವೇಶ ಪಡೆದು ಹತ್ತುವರ್ಷಗಳ ಕಾಲ ಸಂಗೀತ-ಕೀರ್ತನಕಲೆಯನ್ನು ಕಲಿತು ‘ಕೀರ್ತನರತ್ನ’ ಎಂದು ಖ್ಯಾತಿ ಹೊಂದಿದ್ದರು.
ಸಿರಿಗೆರೆಯ ಶ್ರೀವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು-ಆರಂಭದಲ್ಲಿ ಕಂಪ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ- ಕನ್ನಡ ಅಭ್ಯಾಸ ಮಾಡಿ, ಕೆಲವು ವರ್ಷಗಳ ಕಾಲ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಪ್ರೇರಣೆಯಂತೆ, ಪಂಚಾಕ್ಷರ ಗವಾಯಿಗಳ ಸಂಗೀತಶಾಲೆಯಲ್ಲಿ ಸಂಗೀತ-ಕೀರ್ತನ ಕಲೆಗಳನ್ನು ಕುರಿತು ಶಿವಕೀರ್ತನಕಾರರೆಂದೂ ಹೆಸರು ಮಾಡಿದರು. ಅವರ ಪೂಜಾನಿಷ್ಠೆ, ಸಾತ್ವಿಕ ಸ್ವಭಾವ, ಪುರಾಣ ಪ್ರವಚನದಿಂದ ಪ್ರಭಾವ ಶಾಲಿಗಳಾಗಿದ್ದರು.
ಶ್ರೀಪವಾಡಬಸವೇಶ್ವರ ಪಟ್ಯಾಧ್ಯಕ್ಷರು, ನಾಗಠಾಣ-೧೯೧೪ರಿಂದಲೇ ಸಂಗೀತ ಸಾಹಿತ್ಯಗಳೊಂದಿಗೆ ಪಂಚಾಕ್ಷರ ಗವಾಯಿಗಳಲ್ಲಿಗೆ ಸೇರಿಕೊಂಡವರು. ಶಿವಪೂಜಾನಿಧ್ಯರು ಸರಳ ವೃತ್ತಿಯ ಪ್ರಭಾವಿ ಕೀರ್ತನಕಾರರು, ಪಂಚಾಕ್ಷರ ಗವಾಯಿಗಳು ಇವರನ್ನು ತಮ್ಮ ಕ್ರಿಯಾಮೂರ್ತಿಗಳು’ ಎಂದು ಮಾನಿಸುತ್ತಿದ್ದರು. ಪಂಚಾಕ್ಷರ ಗವಾಯಿಗಳು ಗದಗಿನಲ್ಲಿ ಲಿಂಗೈಕ್ಯರಾದಾಗ ಇವರು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗವಾಯಿಗಳ ಕ್ರಿಯಾಸಮಾಧಿಯನ್ನು ವಿಧಿಪ್ರಕಾರವಾಗಿ ನೆರವೇರಿಸಿದರು.
ಶಿವಯೋಗಮಂದಿರದಲ್ಲಿ ಸಂಗೀತದಂಥ ತನ್ಮಯತೆ ಹಾಗೂ ಭಾವುಕತೆಗೊಳಗಾಗುವ ಕಲೆಯ ಚಟುವಟಿಕೆಗಳನ್ನು ಪಂಚಾಕ್ಷರ ಗವಾಯಿಗಳು ಮತ್ತು ಅವರ ಬಳಗದ ಮೂಲಕ ಶಿವಧರ್ಮಪ್ರಸಾರಕ್ಕೆ ಬಳಸಿಕೊಂಡು ಕನ್ನಡನಾಡಿನಚರಿತ್ರೆಯಲ್ಲಿ ಒಂದು ಅಧ್ಯಾಯಕ್ಕೆ ಕಾರಣರಾದರು; ಪೂಜ್ಯ ಹಾನಗಲ್ಲಕುಮಾರಸ್ವಾಮಿಗಳು.ಧರ್ಮಪ್ರಸಾರವನ್ನು ಶಿವಕೀರ್ತನೆಯ ಮೂಲಕ ಸಮಸ್ತಸಮಾಜಕ್ಕೆ ಪ್ರಭಾವಶಾಲಿಯಾಗಿ ಮುಟ್ಟಿಸಿದ್ದು ಒಂದು ಪ್ರಯೋಗವಾಗಿದ್ದರೆ, ವೀರಶೈವಧರ್ಮದ ಶ್ರೇಷ್ಠತೆಯನ್ನು ಈ ಶತಮಾನದಲ್ಲಿಮತ್ತೊಂದು ವಿಭಿನ್ನ ಪರಿಣಾಮಕಾರಿ ಪ್ರಯೋಗ ಮೂಲಕ ಸಂವಹನಗೊಳಿಸಿದ್ದು ಇನ್ನೊಂದು ಕಾರ್ಯವಾಗಿದೆ.
ಶ್ರೀ ಹಾನಗಲ್ಲ ಕುಮಾರ ಶ್ರೀಗಳವರ ಬಾಹ್ಯ ಪ್ರಕೃತಿಯನ್ನು ಕಂಡು ಅವರಿಗೆ ಎರಡು ಕಣ್ಣುಗಳೆಂದು ಯಾರಾದರೂ ಹೇಳುವಂತೆ ಅವರ ಆತ್ಮವನ್ನು ಕಂಡವರು ಮೂರು ಕಣ್ಣುಳ್ಳವರೆಂದು ಹೇಳುತ್ತಿದ್ದರು. ಅವರ ದೃಷ್ಟಿ ವೈಶಾಲ್ಯ, ಕಾರ್ಯಬಾಹುಳ್ಯ, ಪ್ರಚಾರ ಪ್ರಾಚುರ್ಯಗಳನ್ನು ಕಂಡು ‘ಸಹಸ್ರಾಕ್ಷಃ ಸಹಸ್ರಪಾತ್’ ಎಂದು ಪುರುಷ ಸೂಕ್ತದಲ್ಲಿ ವರ್ಣಿತವಾಗಿರುವ ‘ವಿರಾಟ್’ ರೂಪವನ್ನು ನೆನೆದವರುಂಟು. ಅಂತೆಯೆ ಅವರನ್ನು “ವಿರಾಟ್ಪುರವರ ನಿವಾಸ’ ಎಂದು ಕವಿಗಳು ಅನ್ವರ್ಥಕವಾಗಿ ನುತಿಸಿದಂತಿದೆ. ಒಳಗಿನ ಒಂದು ಕಣ್ಣಿನಿಂದ ಗ್ರಹಿಸಿ, ಸಹಸ್ರ ದೃಷ್ಟಿಯಿಂದ ಸಮಾಲೋಚಿಸಿ ಕಾರ್ಯವನ್ನು ಕಾಯಕವನ್ನಾಗಿ ಮಾರ್ಪಡಿಸುವ ದಿವ್ಯ ಕರ್ತೃತ್ವ ಶಕ್ತಿ ಶ್ರೀಗಳವರು ಜೀವನ ವ್ಯವಹಾರಕ್ಕೆ ಬೇಕಾಗುವ ಕಣ್ಣುಗಳೆರಡು ಪ್ರಕೃತಿದತ್ತವಾಗಿ ಸಿಕ್ಕರೂ ಜೀವನೋದ್ದಾರಕ್ಕೆ ಬೇಕಾದ ಒಳಗಣ್ಣು ಎಲ್ಲರಿಗೂ ಇಲ್ಲದಿರುವದನ್ನು ಅರಿತೇ ಹಾನಗಲ್ಲ ಶ್ರೀಗಳವರು ವೈರಾಗ್ಯ ಮಲ್ಹಣಾರ್ಯರ ಸಂಕೇತವನ್ನು ಮನ್ನಿಸಿ ವೀರಶೈವ ಮಹಾಸಭೆಯನ್ನು ಕರೆದರು ; ಮತ್ತು ಶಿವಯೋಗಿ ಚಿತ್ತರಗಿ ಮಹಂತರ ಸೂಚನೆಯಂತೆ ಶಿವಯೋಗಮಂದಿರವನ್ನು ಬಹು ಎದೆಗಾರಿಕೆಯಿಂದ ಕಟ್ಟಿದರು. ಅದರಿಂದ ನಾಡಿನ ಬಹು ಭಾಗದ ಗುರು ಜಂಗಮರು ಶ್ರೀಗಳವರ ಗರಡಿಯ ಶಿಷ್ಯರಾಗಿ ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ, ವಿಶಾಲಬುದ್ದಿ, ಬ್ರಹ್ಮತೇಜೋವೃದ್ಧಿ ಮುಂತಾದ ಬಗೆ ಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಮೃತ್ಯುವನ್ನು ಒಡೆದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸುತ್ತಿದ್ದರು. ಸಮಾಜದ ಗುರುಗಳನ್ನು ತಯಾರಿಸಿದರೆ ಸಮಾಜವೇ ಮುಂದುವರಿಯುವದೆಂಬ ಶ್ರೀಗಳವರ ವಿಚಾರ ಕರಗತವಾಯಿತು.
ಇದು ಒಂದು ದೃಷ್ಟಿ. ಇನ್ನು ವಿಶಾಲದೃಷ್ಟಿ ಇದ್ದವರಿಗೆ ವಿಶಾಲಕ್ಷೇತ್ರ ಬೇಕು. ವಿಶ್ವವೇ ಪಾವನವಾಗಲೆಂಬ ಪರಮಾದರ್ಶದ ಅರುವಿದ್ದ ವಿಶ್ವಕುಟುಂಬಿ ಶ್ರೀಗಳವರಿಗೆ ಇಷ್ಟರಿಂದಲೇ ತೃಪ್ತಿಯಾಗಿರಲಿಲ್ಲ. ಗುರುಗಳ ಉಪದೇಶ ಬೀಜ ಸಾಮಾನ್ಯರ ಮನದಲ್ಲಿ ನಾಟಬೇಕಾದರೆ ರಸಾತ್ಮಕ ಸಾಹಿತ್ಯದ ಸಹಕಾರ ಬೇಕು ‘ಕಾಂತಾ ಸಮ್ಮಿತತಯಾ’ ಉಪದೇಶ ಸಾಹಿತ್ಯದ ಉದ್ದೇಶಗಳಲ್ಲಿ ಒಂದು. ಅದು ಫಲಕಾರಿಯಾಗಲು ಸಾಹಿತ್ಯ ಸಂಗೀತ ಸಮ್ಮಿಳಿತವಾಗಿರಬೇಕು. ಇದನ್ನರಿತ ಶ್ರೀಗಳವರು ಸಾಧಕರ ಯೋಗ ಶಿಕ್ಷಣದೊಂದಿಗೆ ಸಾಹಿತ್ಯ ಸಂಗೀತಗಳ ಪಾಠಕ್ರಮವನ್ನು ಯೋಜಿಸಿದರು.
ಶ್ರೀಗಳವರು ವೀರ ವಿರಕ್ತರಾಗಿಯೂ ಸಂಗೀತರಸದ ಮಧುರವನ್ನು ಸವಿದಿದ್ದರು. ನಿಜಗುಣರ ಪದಗಳನ್ನಷ್ಟೆ ಅಲ್ಲ, ಪ್ರಮಥರ ವಚನಗಳನ್ನು ಸಂಗೀತದಲ್ಲಿ ಸರಿಗೊಳಿಸಿ ನುಡಿಯಬೇಕೆಂಬುದು ಶ್ರೀಗಳವರ ಬಯಕೆಯಾಗಿದ್ದಿತು. ‘ಕೀರ್ತನಾಚಾರ್ಯ’ ಲಿಂ. ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳವರು ಶ್ರೀಗಳವರ ಪ್ರೇರಣೆಯಂತೆ ಈ ದಿಶೆಯಲ್ಲಿ ಅಪಾರ ಸೇವೆ ಸಲ್ಲಿಸಿದರು.
ಹೊರಗಣ್ಣಿಲ್ಲದ, ಆದರೆ ಕಂಚುಕಂಠದ ಮಿಂಚುಮೊಗದ ಕಾಡಶೆಟ್ಟಿಹಳ್ಳಿಯ ಗದಿಗೆಯ್ಯನವರಿಗೆ ಒಳಗಣ್ಣನಿತ್ತು ಅಪಾರ ಧನರಾಶಿ ಸುರಿದು ಸಂಗೀತ ಶಿಕ್ಷಣ ಕೊಡಿಸಿದವರು ಶ್ರೀಗಳವರ ಗದಿಗೆಯ್ಯನವರು ದಕ್ಷಿಣಾದಿ-ಉತ್ತರಾದಿ ಉಭಯ ಸಂಗೀತದಲ್ಲಿ ನೈಪುಣ್ಯ ಪಡೆದಿದ್ದರು ; ಬಾಗಿಲಕೋಟೆಯಲ್ಲಿ ಕೂಡಿದ ವೀರಶೈವ ಮಹಾಸಭೆಯಲ್ಲಿ ತತ್ತ್ವವನ್ನು ಸಂಗೀತಕ್ಕೆ ಮೇಳಯಿಸಿ ಹಾಡಿದಾಗ ಗದಿಗೆಯ್ಯನವರ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗಿದರು ; ಅಂದಿನಿಂದ ಅವರನ್ನು ‘ಪಂಚಾಕ್ಷರ ಗವಾಯಿ’ಗಳೆಂದು ಕರೆದು ಸಂತೋಷದಿಂದ ಸನ್ಮಾನಿಸಿದರು.
ನಾದ ಲಯಮುಖವಾಗಿ ಅಂತರಂಗವೆ ಬಹಿರಂಗವಾಗಿ ಪರಿಣಮಿಸುತ್ತದೆ, ವಿಕಾಸಗೊಳ್ಳುತ್ತದೆ.ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಾರವೆ ಸಂಗೀತ. ಅದು ಹೃದಯಲ್ಲಿ ಜನಿಸಿ, ಕಂಠದಲ್ಲಿ ರೂಪುಗೊಂಡು ಮುಖದಿಂದ ಹೊರಸೂಸಿ ಬರುತ್ತದೆ. ಅದುವೆ ಸತ್ಯ-ಶಿವ ಸುಂದರಮಯ ಸಂಗೀತವನ್ನು ವಿಲಾಸಸಾಧನವೆಂದು ಬಗೆಯದೆ ಬರಿಯ ಮನರಂಜನೆಗೆ ಬಳಸದೆ ಮನಸ್ಸಿನ ಶುದ್ದಿಗಾಗಿ ಚಿತ್ತವೃತ್ತಿನಿರೋಧಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಶ್ರೀಗಳವರು ಪಂಚಾಕ್ಷರ ಗವಾಯಿಗಳಿಗೆ ಉಪದೇಶಿಸುತ್ತಿದ್ದರು. ಅಂತೆಯೆ ಗವಾಯಿಗಳು ಪ್ರಪಂಚದ ವ್ಯಾಮೋಹಕ್ಕೆ ಬಲಿಬೀಳದೆ ಆಜನ್ಮ ನೈಷ್ಠಿಕ ಬ್ರಹ್ಮಚರವನ್ನು ಪರಿಪಾಲಿಸಲು ಸಮರ್ಥರಾದರು. ಅವರ ಜೀವನ ಸಂಗೀತಶಾಸ್ತ್ರದ ಉದಾತ್ತತೆಯನ್ನು ಪಾವಿತ್ರ್ಯವನ್ನು ಅಳಿಯದಂತೆ ಉಳಿಸಿ ಬೆಳೆಸಲು ಮೀಸಲಾಗಿದ್ದಿತು.ಧರ್ಮೋಪದೇಶಕ್ಕೆ ಸಾಧನಪ್ರಾಯಗಳಾದ ಕೀರ್ತನ-ಪುರಾಣ-ಪ್ರವಚನಗಳೆಲ್ಲ ಸಂಗೀತಮಯವಾಗಿರ ಬೇಕೆಂದು ಹೇಳಿ ಶ್ರೀಗಳವರು ಸಾಧಕರಿಗೆ ಅಂತಹ ಶಿಕ್ಷಣವನ್ನೇ ರೂಪಿಸಿದ್ದರು. ಶಿವಯೋಗಮಂದಿರದಲ್ಲಿಇಂದಿಗೂಅದು ನಡೆದು ಬಂದಿದೆ.
ಸಾಹಿತ್ಯವು ತತ್ರ್ಯಮಯವಾಗಿರಬೇಕು, ಸಂಗೀತವು ಭಕ್ತಿ ರಸಪೂರಿತವಾಗಿರಬೇಕು. ಶಿವಯೋಗಕ್ಕೆಶಿವಸಾಕ್ಷಾತ್ಕಾರಕ್ಕೆ ಸಾಹಿತ್ಯ ಸಂಗೀತಗಳೆರಡೂ ಸಾಧನವಾಗಬೇಕೆಂಬುದು ಶ್ರೀಗಳವರ ಮನೀಷೆಯಾಗಿದ್ದಿತು.ರಾಗದ ಸಂಕಣ್ಣ, ನಿಜಗುಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿ, ಸರ್ಪಭೂಷಣಯೋಗಿ,ಪುರಂದರದಾಸ ಮತ್ತು ಮೀರಾಬಾಯಿ ಮೊದಲಾದ ಸಂತರು ಸಾಹಿತ್ಯವನ್ನು ಸಂಗೀತಕ್ಕೆ ಇಳಿಸಿ ಭಕ್ತಿರಸವನ್ನಾಗಿ ಹರಿಸಿ ಮುಕ್ತಿಗೆ ಮಾರ್ಗ ಮಾಡಿಕೊಟ್ಟರು. ಅಂತೆಯೆ ಶ್ರೀಗಳವರು ಭಾಕಿಕ ಗೀತಗಳನ್ನುರಚಿಸಿ ಗವಾಯಿಗಳಿಂದ ಹಾಡಿಸಿದರು. ಅವುಗಳಿಗೆ ‘ಶಿವಯೋಗ’ದ ಅಚ್ಚಳಿಯದ ಮುದ್ರಿಕೆಯನ್ನೊತ್ತಿದರು.ಅವರೊಬ್ಬ ‘ರಸಋಷಿ’ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು.
“ಯೋಗಿ ನಿಜಾನಂದದೋಳು ನುಡಿಸುವ ವೀಣೆ ರಾಗರಸದ ತರಂಗಿಣಿ’ ಎಂದು ನಿಜಗುಣರು ಹಾಡಿದಂತೆ ನಾದಯೋಗಿಗಳಾದ ಹಾನಗಲ್ಲ ಶ್ರೀಗಳವರು ನಾಟ್ಯ-ಸಂಗೀತಕ್ಕೆ ಮಹತ್ವ ಕೊಟ್ಟು ಅದನ್ನುಬೆಳೆಸಿ ಉಳಿಸಿದರು. ಶ್ರೀಗಳವರು ಒಮ್ಮೆ ತಮ್ಮ ಮೆಚ್ಚುಗೆಯ ಶಿಷ್ಯರಾದ ನವಿಲುಗುಂದ ಶ್ರೀಗಳವರನ್ನು ನಾಟಕವನ್ನು ಕಲಿಸಲು ಹೋಗುವೆಯಾ?’ ಎಂದು ಕೇಳಿದ್ದರಂತೆ ; ಕಾವ್ಯಗಳಲ್ಲಿ ನಾಟಕವು ರಮಣೀಯವಾದುದು ; ನಾಟಕವೊಂದೆ ಭಿನ್ನಭಿನ್ನರುಚಿವುಳ್ಳ ರಸಿಕ ಜನರಿಗೆ ನಾನಾ ಬಗೆಯ ರಸದೂಟವನ್ನು ಬಡಿಸುವ ಸಾಧನವೆಂದು ಹೇಳಿದ ಮಹಾಕವಿ ಕಾಳಿದಾಸನ ಉಕ್ತಿಗಳನ್ನು ನೆನಪಿಗೆ ತಂದು ಕೊಡುತ್ತಿದ್ದರಂತೆ.ಸಾಮಾನ್ಯರು ನಾಟಕ ರಂಗವನ್ನು ಜೀವನೋಪಾಯವೆಂದು ಬಗೆದಿದ್ದಾರೆ. ಅದು ಜ್ಞಾನದಾಸೋಹವಾಗಿ ಸಾಗಿದರೆ ಸಮಾಜ ಹೊಸ ಬೆಳಗು ಕಂಡು ಪರಿಶುದ್ಧವಾಗುವದೆಂಬ ಶ್ರೀಗಳವರ ವಿಚಾರಸರಣಿ ತಾತ್ವಿಕ ಮತ್ತು ತಾರಕವಾಗಿದ್ದಿತು. ಅದಕಾಗಿಯೆ ಶ್ರೀಗಳವರು ಹಿತಮಿತವಾದ ಸಾಹಿತ್ಯರೂಪಕಗಳಲ್ಲಿ ಶರಣರ ಜೀವನ ಸಂದೇಶವನ್ನು ಜಗತ್ತಿನಲ್ಲಿ ಬೀರಬೇಕೆಂದು ಕವಿಗಳಿಗೆ ಪ್ರೇರಣೆಯನ್ನಿತ್ತರು.
ಎಲ್ಲರನ್ನೂ ಆಕರ್ಷಿಸಬಲ್ಲ ನಾಟಕ ರಂಗಭೂಮಿಯು ಶಿವಾನುಭವ ಮಂಟಪವಾದರೆ ಆಯುಷ್ಯದಲ್ಲಿಸಾಧಿಸುವ ಸಿದ್ಧಿಯನ್ನು ಆರು ತಿಂಗಳಲ್ಲಿ ಸಾಧಿಸಬಹುದೆಂದು ಶ್ರೀಗಳವರು ಬರೆದಿದ್ದರು. ಜಾತಿ-ವಯೋಮಾನಗಳನ್ನು ಮೇಲು-ಕೀಳುಗಳನ್ನು ಎಣಿಸದೆ ಎಲ್ಲರ ಮನವನ್ನು ಸೆಳೆದು ಜ್ಞಾನವನ್ನು ಸರಳವಾಗಿ ದಾನಮಾಡುವ ನಾಟಕ ಮಂಡಳಿಯೆ ಸಂಚಾರಿ ಪಾಠಶಾಲೆಯಾಗಬಹುದೆಂದು ತಿಳಿದು ಶ್ರೀಗಳು ಅದನ್ನುಕಾರ್ಯರೂಪಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಿದರು. ಆದರೆ ಹಳೆಯ ಮನ್ವಂತರದ ಪೀಳಿಗೆಗೆ ಅದು ಸರಿ ಕಾಣದಾಗಿತ್ತು. ನಾಟಕ ನೋಡುವದೇ ಪಾಪ, ಗೌರವಕ್ಕೆ ಕುಂದೆಂದು ಭಾವಿಸಿದ್ದ ಅಂದಿನ ಜಗತ್ತಿನಲ್ಲಿ ಶ್ರೀಗಳ ಬಯಕೆ ಬೇಗ ಫಲಿಸಲಿಲ್ಲವಾದರೂ ಅದು ಬರಡಾಗಲ್ಲ. ಮುಂದೆ ಕೆಲವು ವರುಷಗಳಲ್ಲಿಯೆ ಶ್ರೀ ಗವಾಯಿಗಳ ಸಂಗೀತ ಶಾಲೆಯು ಗದುಗಿನಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆಯಾಗಿ ಕವಲೊಡೆಯಿತು. ಅದರ ಫಲವಾಗಿ ಸಿದ್ದರಾಮೇಶ, ನಂಬಿಯಕ್ಕ ಶಿವಶರಣಿ ಮಲ್ಲಮ್ಮ, ಧನೇಶ ಚರಿತ್ರೆ, ಘಷ್ಯಾ ಮಂತ್ರಮಹ ರಾಜಶೇಖರ ಮೊದಲಾದ ತಾತ್ವಿಕ ಸಂಗೀತ ರೂಪಕಗಳನ್ನು ಶ್ರೀ ಗವಾಯಿಗಳ ಪಟ್ಟ ಶಿಷ್ಯರಾದ ಕನ್ನಡ-ಸಂಸ್ಕೃತ-ಹಿಂದಿ ಭಾಷೆಗಳಲ್ಲಿ ಪಂಡಿತರೂ ಉಭಯಗಾನವಿಶಾರದರೂ ಆದ ಶ್ರೀ ಪುಟ್ಟರಾಜ ಗವಾಯಿಗಳವರು ರಚಿಸಿ ಪ್ರಚುರಪಡಿಸಿದರು ;ಶ್ರೀಗಳವರ ಆಶೆಯನ್ನು ಫಲಿಸುವಂತೆ ಮಾಡಿದರು. ಅದರ ಪ್ರತಿಬಿಂಬವಾಗಿಯೆ ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ವು ಹೊರಬಿದ್ದು ನಾಡಿನ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಶ್ರೀಗಳ ಸಂದೇಶವನ್ನೇ ಬೀರುತ್ತಿದೆ. ಈ ನಾಟ್ಯ ಸಂಸ್ಥೆಯು ಬಗೆ ಬಗೆಯ ರೂಪಕಗಳಿಂದ ನೀತಿ-ಭಕ್ತಿ-ಧರ್ಮಜ್ಞಾನದ ತಿಳಿರಸವನ್ನೆ ಪ್ರೇಕ್ಷಕರಿಗೆ ಉಣಿಸಿ ಹದಿನಾಲ್ಕು ವರುಷಗಳಿಂದ ಅಖಂಡ ಕೀರ್ತಿಯನ್ನು ಸಂಪಾದಿಸಿದೆ, ರಂಗಭೂಮಿಯಲ್ಲಿ ಅಪೂರ್ವವಿಕ್ರಮವನ್ನು ಗಳಿಸಿದೆ. ಇದೆಲ್ಲಕ್ಕೆ ಪೂಜ್ಯ ಹಾನಗಲ್ಲ ಶ್ರೀಗಳವರ ಪ್ರೇರಣೆಯ ಕಾರಣ. ಶ್ರೀಗಳವರು ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಾರಣಿಕ ಶಿವಯೋಗಿಗಳಾಗಿದ್ದರು. ಅಂದು ಶ್ರೀಗಳವರ ಚಿತ್ತಭಿತ್ತಿಯಲ್ಲಿಮೂಡಿದ ಕಲೆಯು ಇಂದು ಬಹಿರಂಗವಾಗಿ ರಂಗಭೂಮಿಗಿಳಿದು ಜನಮನವನ್ನು ಪರಿಶುದ್ಧಗೊಳಿಸುತ್ತಿದೆ.
ಸಂಗೀತವು ಲಲಿತ ಕಲೆಗಳಲ್ಲಿ ಒಂದಾಗಿದೆ. ವಾಸ್ತುಶಿಲ್ಪ, ಮೂರ್ತಕಲೆ, ಚಿತ್ರಕಲೆ, ಸಂಗೀತ ಇವೆಲ್ಲ ಲಲಿತಕಲೆಗಳು. ಇವೆಲ್ಲವುಗಳಲ್ಲಿ ಸೌಂದರ್ಯ (ಲಾಲಿತ್ಯ)ವಿದೆ, ಆನಂದವನ್ನುಂಟುಮಾಡುವದೆ ಸೌಂದರ್ಯ.ಸುಂದರ ವಸ್ತುವು ನಮ್ಮ ಕಣ್ಮನಗಳನ್ನು ಆಕರ್ಷಿಸುತ್ತದೆ. ಸೌಂದರ್ಯ ಇಂದ್ರಿಯಗತ್ಯ. ವಾಸ್ತು-ಮೂರ್ತಿಚಿತ್ರಗಳಲ್ಲಿಯ ಸೌಂದರ್ಯದ ಅನುಭವಕ್ಕೆ ನೇತ್ರೇಂದ್ರಿಯ ಕಾರಣ, ಅವುಗಳಲ್ಲಿ ಆಕಾರ, ಭಾವಭಂಗಿ,ವರ್ಣ ರೇಖಾವಿನ್ಯಾಸವಿರುತ್ತವೆ. ಅವನ್ನು ಕಂಡು ಆನಂದಪಡಲು ಕಣ್ಣು ಬೇಕು. ಕಣ್ಣಿಲ್ಲದವರಿಗೆ ವಾಸ್ತು ಮೂರ್ತಿ ಚಿತ್ರಕಲೆಗಳ ಸೌಂದರ್ಯ ಶೂನ್ಯ. ಆದರೆ ಸಂಗೀತ ಕಲೆಯು ಶಬ್ದಮಯವಾದುದು. ಶಬ್ದ ಶ್ರುತಿಗಮ್ಯ, ಸಂಗೀತದಲ್ಲಿ ನಾದಮಾಧುರ್ಯವಿರುತ್ತದೆ. ಅದನ್ನು ಕೇಳಿಯೇ ಸವಿಯಬೇಕು. ಸಮ್ಯಕ್ ಗೀತ ಕೇಳುವ ರಸಿಕರಿಗೆ ಇಂಪಾಗುವಂತೆ ಹಾಡಲ್ಪಟ್ಟುದೆ ಸಂಗೀತವು. ಅಂತೆಯೆ, ಗೀತವು ರಸಪ್ರಧಾನವಾದ ಉತ್ತಮ ಕಲೆಯೆಂದು ಪ್ರಶಸ್ತಿಯನ್ನು ರಸಿಕರಿಂದ ಪಡೆದಿದೆ.
‘ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತ ಮುಚ್ಯತೆ’
ಎಂಬಂತೆ ಗೀತ, ವಾದ್ಯ, ನೃತ್ಯಗಳ ಸಮ್ಮೇಳವೆ ಸಂಗೀತವೆನಿಸುತ್ತದೆ. ಇಲ್ಲಿ ಗೀತಕ್ಕೆ ಮೊದಲನೆಯ ಸ್ಥಾನವಿದೆ. ಸಂಗೀತಕ್ಕೆ ರಸಾತ್ಮಕವಾದ ಕಾವ್ಯವೂ ಸಹಕಾರಿಯಾಗಿದೆ. ಗೀತವು ಶ್ರವ್ಯ ಕಾವ್ಯದ ಒಂದು ಪ್ರಕಾರ ಸ್ವರಯುಕ್ತವಾಗಿ ಹಾಡಿದ ಗೀತವು ಸುಶ್ರಾವ್ಯವಾಗಿ ಕೇಳುವವರಿಗೆ ಆನಂದವನ್ನುಂಟು ಮಾಡುತ್ತದೆ. ಸಂಗೀತದ ಸಹಾಯದಿಂದ ಕಾವ್ಯದ ಸ್ವಾರಸ್ಯ ಹೆಚ್ಚುತ್ತದೆ. ಕಾವ್ಯದಲ್ಲಿಯ ಛಂದಸ್ಸು ಸಂಗೀತದ ತಾಲ-ಲಯಗಳನ್ನೇ ಸೂಚಿಸುತ್ತದೆ. ಉಳಿದ ಕಾವ್ಯ ಪ್ರಕಾರಕ್ಕೆ ಸಂಗೀತವಿದ್ದೇ ತೀರಬೇಕೆಂಬ ನಿಯಮವಿಲ್ಲವಾದರೂ ಗಮಕಿಯು ಸಂಗೀತಜ್ಞನು ಹಾಡಿದ ಕಾವ್ಯ ರಸಮಯವಾಗಿರುತ್ತದೆ. ಸಂಗೀತದ ನೆರವಿನಿಂದ ಕಾವ್ಯದ ರಸಾತ್ಮಕತೆ ಸಹಜವಾಗಿ ಪ್ರಕಟವಾಗುತ್ತದೆ. ಗೀತಕ್ಕೆ ಸಂಗೀತವೆ ಪ್ರಾಣ. ಸಂಗೀತದಲ್ಲಿ ಗೀತಕ್ಕೆ ಗೌರವದ ಸ್ಥಾನವಿದೆ. ‘ಸಂಗೀತ ರತ್ನಾಕರ’ದಲ್ಲಿ
ನೃತ್ಯಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವೃತಿ ಚ |
ಆತೋ ಗೀತಂ ಪ್ರಧಾನಂ ತತ್ ತದಾದಾವಭಿಧೀಯತೆ ||
ನೃತ್ಯವು ವಾದ್ಯವನ್ನು ಅನುಸರಿಸುತ್ತದೆ. ವಾದ್ಯವು ಗೀತವನ್ನು ಆದುದರಿಂದ ಗೀತವೆ ಪ್ರಧಾನವು.ಅಂತೆಯೆ ಸ್ವರಶಾಸ್ತ್ರಕ್ಕೆ ಸಂಗೀತವೆಂಬ ಹೆಸರು ಮೊದಲಿನಿಂದಲೂ ಸಾರ್ಥಕವಾಗಿ ಬಂದಿದೆ. ಗೀತವಿಲ್ಲದ ಸಂಗೀತ ನಿರ್ಗೀತವಾಗಿ ನೀರಸವಾಗುವದು.
ಗೀತ-ವಾದ್ಯ-ನೃತ್ಯಗಳ ಸಮ್ಮಿಳನದಿಂದ ಸಂಗೀತವು ಸರ್ವಾಂಗ ಸುಂದರ ಕಲೆಯಾಗಿ ವಿಕಾಸಗೊಂಡಿದೆ.ಬಾಳುವೆಯಲ್ಲಿ ತಾಳ್ಮೆಯಿಲ್ಲದವರಿಗೂ ತನ್ಮಯತೆಯನ್ನು ತಂದು ಕೊಡುವ ತಾತ್ವಿಕ ಸತ್ಯವಿದೆ.ಸಂಗೀತದಲ್ಲಿ. ಶಿಶುವು, ಪಶುವೂ ಸಂಗೀತದ ನಾದ ಮಾಧುರ್ಯಕ್ಕೆ ಮನಸೋಲುತ್ತವೆ. ಅಳುವ ಕೂಸು ತಾಯ ಜೋಗುಳ ಕೇಳಿ ಸುಮ್ಮನಾಗುತ್ತದೆ. ಪುಂಗಿಯ ಇಂಪಾದ ನಾದಕ್ಕೆ ನಾಗರ ಹೆಡೆ ಎತ್ತಿ ತಲೆದೂಗುತ್ತದೆ.ಚಿಗರೆ ಹುಲ್ಲು ಮೆಲ್ಲುವದನ್ನು ಬಿಟ್ಟು ಮಂಜುಳ ನಾದಕ್ಕೆ ಕಿವಿಗೊಡುತ್ತದೆ. ಪ್ರಕೃತಿಯನ್ನೇ ಕರಗಿಸಿ ನೀರು ಮಾಡುವ ಮಹೋನ್ನತ ಶಕ್ತಿ ಸಂಗೀತದಲ್ಲಿದೆ. ಗಾಯಕನ ನಾದಲೀಲೆಯಲ್ಲಿ ರಾಗಮಾಲಿಕೆಯಲ್ಲಿ ಮೋಡದಿಂದ ಮಳೆ ತರಿಸುವ ಶಕ್ತಿಯಿದೆ, ನಂದಿದ ದೀಪವನ್ನು ಹೊತ್ತಿಸುವ ಸತ್ತ್ವವಿದೆ.
ಇಂತಹ ಅಗಾಧವಾದ ಸಂಗೀತ ಕಲೆಯ ಸದುಪಯೋಗ ಮಾಡಿಕೊಳ್ಳುವಲ್ಲಿ ಮಾನವನ ಯೋಗ್ಯತೆ ಕಂಡು ಬರುತ್ತದೆ. ಗಾನವಿದ್ಯೆಯು ಒಂದು ಸುಕರ್ಮವೆ. ಅದರಲ್ಲಿ ಅದ್ಭುತ ಕೌಶಲ್ಯವಿದೆ, ಸ್ವರ ಸಾಧನೆಯ ತಪಸ್ಸು ಇದೆ. ಅಂತೆಯೆ, ಅದೂ ಒಂದು ಉತ್ತಮ ಯೋಗವೆ. ಈ ಯೋಗವೂ ಚಿತ್ತವೃತ್ತಿಗಳ ನಿರೋಧವನ್ನು ಮಾಡಿ ಸಾಧಕನಿಗೆ ಮನಶ್ಯಾಂತಿಯನ್ನು ಕೊಡುತ್ತದೆ. ಹಠಯೋಗದಂತೆ ಇದು ಕಠಿಣವಲ್ಲ, ನೀರಸವಲ್ಲ.ಮಾನವನು ಸಂಗೀತ ವಿದ್ಯೆಯಿಂದ ಲೌಕಿಕ ಪಾರಮಾರ್ಥವೆರಡನ್ನೂ ಸಾಧಿಸಬಹುದು. ಭಕ್ತಿಯಿಂದ ಒಲಿದು ಹಾಡಿದ ಗೀತದಲ್ಲಿ ಬಾಹ್ಯ ವೃತ್ತಿಯನ್ನು ಬದಲಿಸಿ ಮಾನವನನ್ನು ಸದ್ಭಾವದತ್ತ ಒಯ್ಯುವ ಬಲವಿದೆ.
ಭಾರತೀಯ ಸಂಗೀತದ ಕ್ಷೇತ್ರವು ಬಹು ವಿಶಾಲವಾಗಿದೆ. ಭಾರತೀಯ ಜನ ಜೀವನದಲ್ಲಿ ಸಂಗೀತವು ಒಂದು ಅಸಾಧಾರಣವಾದ ಆನಂದದಾಯಕ ಸಾಧನೆಯಾಗಿದೆ, ವಿನೋದ-ಮನರಂಜನೆಗಳ ಪರಮೋಪಾಯ ವಾಗಿದೆ. ಸಂಗೀತವು ನಿತ್ಯದ ಜನಜೀವನದಲ್ಲಿ ನವಚೈತನ್ಯವನ್ನು ತರುವ ಒಂದು ಉತ್ತಮ ಬಗೆಯಾಗಿದೆ.ಸಾಮವೇದವು ಸಂಗೀತಮಯವಾಗಿದೆ. ಉಪನಿಷತ್ತು ನಾದವನ್ನು ಬ್ರಹ್ಮವೆಂದು ಸಂಬೋಧಿಸಿದೆ.ನಾದದಲ್ಲಿ ಆನಂದವಿದೆ. ಆನಂದವು ಬ್ರಹ್ಮನ ಐದು ಲಕ್ಷಣಗಳಲ್ಲಿ ಒಂದು. ನಾದಾನುಸಂಧಾನದಿಂದ ಮಾನವನು ಅಕ್ಷರನನ್ನು ಕಾಣಬಹುದಾಗಿದೆ, ಅಮೃತತ್ವವನ್ನು ಪಡೆಯ ಬಹುದಾಗಿದೆ.
ಭಾರತೀಯರ ಭವ್ಯ ದೃಷ್ಟಿಯಲ್ಲಿ ಸಂಗೀತವು ಬರಿಯ ಕಲೆಯಲ್ಲ, ಮನರಂಜನೆಯನ್ನು ಮಾಡುವ ಸಾಧನ ಮಾತ್ರವಲ್ಲ. ಅದು ಮುಕ್ತಿಯ ಪರಮೋತ್ಕೃಷ್ಠ ಸಾಧನವೂ ಅಹುದು. ಅಂತೆಯೆ, ಅದಕ್ಕೆ ಕಲೆಗಳಲ್ಲಿ ಅತ್ಯುನ್ನತ ಸ್ಥಾನವಿದೆ. ಅದು ದಾನ-ಯಜ್ಞ ಜಪಾದಿಗಳನ್ನೂ ಮೀರಿ ನಿಂತಿದೆ.
ತ್ರಿವರ್ಗಫಲದ್ಯಾ: ಸರ್ವೆ ಜ್ಞಾನಯಜ್ಞಜಪಾದಯಃ |
ಏಕಂ ಸಂಗೀತ ವಿಜ್ಞಾನಂ ಚತುರ್ವಗ್ರಫಲಪ್ರದಂ ||
ಸಂಗೀತ ಮೋಕ್ಷವನ್ನೊಳಗೊಂಡ ನಾಲ್ಕು ಪುರುಷಾರ್ಥಗಳಿಗೂ ಸಾಧನವಾಗಿದೆ. ಆದುದರಿಂದ,ಅದನ್ನು ನಾವು ಪುರುಷಾರ್ಥ ಸಾಧನಗಳಲ್ಲಿ ಪರಮೋತ್ತಮವಾದುದೆಂದು ಗ್ರಹಿಸಬಹುದಾಗಿದೆ.ಭಕ್ತಿಗೂ ಗೀತೆಗೂ ನಿಕಟವಾದ ಸಂಬಂಧವಿದೆ. ಕನ್ನಡ ಸಾಹಿತ್ಯದಲ್ಲಿ ಗೀತಗಳ ಪರಂಪರೆಗೆ ವೀರಶೈವ ಕವಿಗಳೇ ಮೂಲ ಕರ್ತೃಗಳು, ವೀರಶೈವ ಸಾಹಿತ್ಯದಲ್ಲಿ ಅವುಗಳಿಗೆ ‘ಸ್ವರವಚನ’ವೆಂಬ ಅನ್ವರ್ಥಕ ಅಭಿಧಾನ ಒಪ್ಪುತ್ತದೆ. ಶಿವಶರಣರು ವಚನ ಸಾಹಿತ್ಯವನ್ನಲ್ಲದೆ ಈ ಅನುಭವ ಗೀತೆಗಳನ್ನು ಹಾಡಿ ಶಿವನೊಲುಮೆಯನ್ನು ಪಡೆದಿದ್ದಾರೆ. ಈ ಪರಂಪರೆಯನ್ನು ತಮ್ಮ ಅನುಭಾವ ಮತ್ತು ಸಂಗೀತ ಪ್ರತಿಭೆಯಿಂದ ಅಚ್ಚಳಿಯದೆ ಉಳಿಸಿ ಬೆಳೆಸಿದ ಶ್ರೇಯಸ್ಸು ಶ್ರೀ ನಿಜಗುಣ ಶಿವಯೋಗಿಗಳವರದು. ಹರಿದಾಸರ ಕೀರ್ತನಗಳಿಗೂ ಕನ್ನಡ ಗೀತ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ.ಅನನ್ಯ ಭಾವದಿಂದ ದೇವನ ನಾಮವನ್ನು ಹಾಡುವದೂ ಭಕ್ತಿಯ ಒಂದು ಪ್ರಕಾರವಾಗಿದೆ. ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ಬಸವಣ್ಣನವರ ವಚನ ಭಕ್ತಿಗೀತಗಳ ಮಹತಿಯನ್ನು ಒತ್ತಿ ಹೇಳುವಂತಿದೆ. ಕರ್ನಾಟಕವು ಕಲೆಗಳಿಗೆ ತವರು ಮನೆಯಾಗಿದೆ. ಸಂಗೀತಕಲೆಗೂ ಕರ್ನಾಟಕವೆ ಜನ್ಮಭೂಮಿ. ಎಲ್ಲ ಗಾಯಕರೂ ಮೊದಲು ವಾತಾಪಿ (ಬದಾಮಿ)ಯ ಗಣಪತಿಯನ್ನೇ ಪ್ರಾರ್ಥಿಸುವ ಸಂಪ್ರದಾಯ ಸನಾತನವಾಗಿ ನಡೆದು ಬಂದಿದೆ. ಶ್ರೀ ನಿಜಗುಣ, ತ್ಯಾಗರಾಜ ಮತ್ತು ಕನಕದಾಸ ಮೊದಲಾದ ಯೋಗಿಗಳ ಮತ್ತು ಸಂತರ ಭಕ್ತಿ ರಸಪೂರ್ಣವಾದ ಪದಗಳು ಪ್ರತಿಯೊಬ್ಬ ಗಾಯಕನ ಕಂಠದಿಂದ ಇಂದಿಗೂ ಕೇಳಿ ಬರುತ್ತಿವೆ.
ಭಾರತೀಯ ಸಂಗೀತದಲ್ಲಿ ಔತ್ತರೇಯ (ಹಿಂದುಸ್ತಾನಿ) ಮತ್ತು ದಕ್ಷಿಣಾದಿ (ಕರ್ನಾಟಕ) ಎಂದು ಎರಡು ಪದ್ಧತಿಗಳಿವೆ. ಈ ಸಂಪ್ರದಾಯಗಳಲ್ಲಿ ಶಾಸ್ತ್ರೀಯವಾಗಿ ವ್ಯತ್ಯಾಸಗಳಿವೆಯಾದರೂ ಕಲಾತ್ಮಕವಾಗಿ ಭೇದವಿಲ್ಲ. ಉಭಯ ಗಾನದಿಂದ ರಸಿಕನು ಸಮಾನವಾದ ರಸಾನುಭವವನ್ನು ಪಡೆಯಬಹುದು.ಕಲ್ಲುಸಕ್ಕರೆಯ ಯಾವ ಭಾಗವನ್ನು ಆಸ್ವಾದಿಸಿದರೂ ಅದು ಸವಿಯಾಗಿಯೇ ಸುಮಧುರವಾಗಿಯೆ ಇರುವಂತೆ ಭಾರತೀಯ ಗಾನದ ಯಾವ ಪದ್ಧತಿಯನ್ನೂ ಆಲಿಸಿದರೂ ಆನಂದದಾಯಕವೆ. ಯಾವುದೇ ಪದ್ಧತಿಯನ್ನು ಅನುಸರಿಸಲಿ, ಗಾಯಕನಿಗೆ ಮಧುರಕಂಠ ಅನಿವಾರ್ಯ. ಕಂಠ ಮಾಧುರ್ಯ ಗಾಯಕನ ದೈವದತ್ತವಾದ ದೇಣಿಗೆ, ಜೊತೆಗೆ ವಿದ್ವತ್ ಪ್ರತಿಭೆಯೂ ಬೇಕು. ಹಿಂದುಸ್ತಾನಿ ಸಂಗೀತಜ್ಞರು ಧ್ವನಿಯ ಮಾಧುರ್ಯಕ್ಕೆ ವಿಶೇಷ ಗಮನಕೊಡುತ್ತಾರೆ. ಕರ್ನಾಟಕೀಯ ಗಾಯಕರು ವಿದ್ವತ್ತಿಗೆ ಹೆಚ್ಚಿನ ಮನ್ನಣೆಯನ್ನು ಕೊಡುತ್ತಾರೆ. ಅಂದರೆ, ದಾಕ್ಷಿಣಾತ್ಯರಿಗೆ ಮಧುರವಾದ ಕಂಠ ಹಾಗೂ ಔತ್ತರೇಯರಿಗೆ ವಿದ್ವತ್ತು ಇಲ್ಲವೆಂಬ ಭಾವವಲ್ಲ. ಎಷ್ಟೋ ಕರ್ನಾಟಕೀಯ ಸಂಗೀತಜ್ಞರು ತಮ್ಮಲ್ಲಿ ಅಷ್ಟೊಂದು ಕಂಠ ಮಾಧುರ್ಯವಿರದಿದ್ದರೂ ವಿದ್ವತ್ ಪ್ರತಿಭೆಯಿಂದಾಗಿ ವಿದ್ವಾಂಸರ ಮನ್ನಣೆಗೆ ಪಾತ್ರರಾಗುತ್ತಾರೆ, ರೀಜಿಸಿಕೊಳ್ಳುತ್ತಾರೆ. ಅದೇ ಪ್ರಕಾರ, ಹಿಂದುಸ್ತಾನಿ ಸಂಗೀತದ ಗವಾಯಿಯು ಶಾಸ್ತ್ರೀಯವಾಗಿ ಪಳಗಿರದಿದ್ದರೂ ಮಧುರವಾದ ಧ್ವನಿಯಿಂದ ಪರಿಪೂರ್ಣನಾಗಿ, ಆ ಶ್ರುತಿಯಲ್ಲಿಯೇ ತನ್ಮಯತೆಯನ್ನು ತಾಳಿ ನಿಂದು ನಾದಾನುಸಂಧಾನಿಯಾಗಿ ಶೋತೃಗಳೆಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಾನೆ. ಯಾವುದೇ ಗಾಯಕನಾಗಲಿ ಅವನು ಸಂಗೀತ ಪ್ರಪಂಚದಲ್ಲಿ ಗಣ್ಯತೆ ಪಡೆಯಲು ಸಾಧನೆಯನ್ನು ಮಾಡಿ ಪ್ರತಿಭೆಯನ್ನು ಶಕ್ತಿಯನ್ನು ಗಳಿಸಲೇಬೇಕು.
ಅದೊಂದು ಸಮಯ. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಧಾರ್ಮಿಕ ಕ್ರಾಂತಿಯ ಪತಾಕೆಯು ನಾಡಿನ ತುಂಬೆಲ್ಲ ತನ್ನದೆ ಆದ ಆತ್ಮಶಕ್ತಿಯ ಪ್ರಭಾವದಿಂದ ಹಾರಾಡುತ್ತಲಿತ್ತು.ಶ್ರೀಗಳು ಖಿಲವಾಗಿದ್ದ ಸಮಾಜದ ಪರಿಪೂರ್ಣ ಪ್ರಗತಿಯತ್ತ ತಮ್ಮ ಕೃಪಾದೃಷ್ಟಿಯನ್ನಿಟ್ಟಿದ್ದರು. ಅವರ ಆ ದೃಷ್ಟಿಯಲ್ಲಿ ವೈಶಿಷ್ಟ್ಯವಿತ್ತು. ವೈಶಾಲ್ಯವಿತ್ತು; ಜನತೆಯ ಬರಿದಾದ ಬಾಳಿಗೆ ಬೆಳಗನ್ನು ಕೊಡುತ್ತಲಿತ್ತು.ಅವರ ಉದಾತ್ತ ಉಪದೇಶಗಳ ಸಾಮರ್ಥ್ಯದಿಂದ ಜನಾಂಗವೇ ಚೇತರಿಸಿಕೊಂಡು ಏಳುವಂತಾಯಿತು.
ಶ್ರೀಗಳವರಿಗೆ ಸಂಗೀತ ಬಾರದೇ ಇದ್ದರೂ ಬಹುವಾಗಿ ಬಲ್ಲವರಾಗಿದ್ದರು. ಸರಾಗವಾಗಿ ಹಾಡುವ ಹಂಬಲವಿಲ್ಲದಿದ್ದರೂ ; ಸುಖವಾಗಿ ಸರಸವಾಗಿ ಹಾಡುವ ಗಾಯಕರಿಂದ ಕೇಳುವ ಅಭಿರುಚಿ ಇತ್ತು. ಹೊಸ ಹೊಸ ರಾಗಗಳಲ್ಲಿ ಭಾವ ಗೀತೆಗಳನ್ನು ರಚಿಸಿರುವುದು ಅವರ ನಾದಾನುಸಂಧಾನವನ್ನು ಸಂಗೀತ ಪ್ರೇಮವನ್ನುಸೂಚಿಸುತ್ತದೆ. ಅವರ ಪ್ರಾರ್ಥನೆಯ ಪ್ರತಿಯೊಂದು ಪದ್ಯವೂ ಭಾವಗರ್ಭಿತವಾಗಿದೆ, ನೀತಿಯುಕ್ತವಾಗಿದೆ, ಸಂಗೀತಮಯವಾಗಿದೆ. ಅವರ ಗೀತಗಳು ಇಂದಿನ ಜನಾಂಗಕ್ಕೆ ದಾರಿದೀಪಗಳಾಗಿವೆ, ಧ್ವನಿಮುದ್ರಿಕೆಗಳಾಗಿವೆ.ವಿರಾಗಿ ಶ್ರೀಗಳವರಿಗೆ ಸಂಗೀತದಲ್ಲಿ ಸಂಪೂರ್ಣ ಅನುರಾಗವಿದ್ದಿತು. ಸಂಗೀತ ಕಲಾಭಿವೃದ್ಧಿಗೆ ಅವರು ಮಾಡಿದ ಸಹಾಯ ಸಂಪತ್ತಿಸಣ್ಣದಲ್ಲ. ಭಾರತೀಯ ಕಲೆಗಳ ಪುನರುದ್ಧಾರವಾಗಬೇಕು, ಪ್ರಚಾರವಾಗಬೇಕೆಂದು ಶ್ರೀಗಳು ಅಹೋರಾತ್ರಿ ಕಾರ್ಯಮಾಡಿದ ಕಲಾಭಿಮಾನಿಗಳು.
ಶ್ರೀ ಕುಮಾರ ಮಹಾಸ್ವಾಮಿಗಳವರು ಹಾನಗಲ್ಲ ತಾಲೂಕಿನಲ್ಲಿ ಭಿಕ್ಷೆಗೆಂದು ದಯಮಾಡಿಸಿದ್ದರು.ಕಾಡಶೆಟ್ಟಿಹಳ್ಳಿಯ ಹಿರಿಯಮಠದ ಅಯ್ಯಪ್ಪನವರು ಇಬ್ಬರು ಹುಟ್ಟು ಕುರುಡ ಮಕ್ಕಳನ್ನು ಕರೆದುಕೊಂಡು ಶ್ರೀಗಳವರ ಸನ್ನಿಧಾನಕ್ಕೆ ಬಂದರು; ದೀರ್ಘದಂಡ ನಮಸ್ಕಾರ ಮಾಡಿ “ಬುದ್ದಿ, ಈ ಕುರುಡ ಮಕ್ಕಳನ್ನು ಸಲುಹುವ ಶಕ್ತಿ ನನಗೆ ಸಾಲದು. ನಾನೊಬ್ಬ ಬಡಪಾಯಿ ಜಂಗಮ, ತಾವು ಈ ನಿರ್ಭಾಗ್ಯ ಮಕ್ಕಳ ಮೇಲೆ ದಯೆತೋರಿ ರಕ್ಷಿಸಬೇಕು’ ಎಂದು ದೈನ್ಯದಿಂದ ಬೇಡಿಕೊಂಡರು. ದೀನರ ದುಃಖವನ್ನು ಕಂಡು ದಯಾಳು ಶ್ರೀಗಳವರ ಮನಸ್ಸು ಬಿಸಿಗೆ ತಾಕಿದ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು, ಸಮಯೋಚಿತವನ್ನರಿತು ಸಹಾಯ ಸಹಕಾರಗಳನ್ನು ನೀಡುತ್ತಲಿತ್ತು. ಇದು ಸ್ವಾಮಿತ್ವದ ಲಕ್ಷಣ. ಶ್ರೀಗಳವರು ಆ ಜನ್ಮಾಂಧ ಕಂದರನ್ನು ಮುಂದಕ್ಕೆ ಕರೆದು ವಾತ್ಸಲ್ಯದಿಂದ ಮೈದಡವಿ ಹಾಡಿಸಿ ನೋಡಿದರು; ಅವರ ಇಂಪಾದ ಹಾಡನ್ನು ಕೇಳಿ ಹರುಷಿತರಾದರು. ಇಬ್ಬರೂ ಚೆನ್ನಾಗಿ ಹಾಡುತ್ತಾರೆ. ಇವರಿಗೆ ಒಳ್ಳೆಯ ಭವಿಷ್ಯವಿದೆ. ಇವರು ಭಾಗ್ಯವಂತರು.ಇವರನ್ನು ನಮಗೆ ಒಪ್ಪಿಸಿಬಿಡು. ಚಿಂತಿಸುವದು ಬೇಡ.” ಎಂದು ಅಭಯವಿತ್ತರು. ಆ ಬಡ ಜಂಗಮಯ್ಯ ಮಕ್ಕಳನ್ನು ನಿರ್ಭಾಗ್ಯರೆಂದು ಬಗೆದಿದ್ದರು; ಆದರೆ ಕೃಪಾಳು ಶ್ರೀಗಳವರದೃಷ್ಟಿಯಿಂದ ಅವರು ಪುಣ್ಯವಂತ ರಾಗಿರುವದನ್ನು ಕಂಡು ಅಚ್ಚರಿಪಡುವಂತಾಯಿತು.
ಹಣ್ಣಿನ ಗುಣವನ್ನು ಹೀಚಿನಲ್ಲಿಯೆ ಗುರುತಿಸುವಂತೆ ಶ್ರೀಗಳವರು ಆ ಅನಾಥ ಕುಮಾರರ ಭಾವಿ ಜೀವನದ ರೂಪುರೇಷೆಯನ್ನು ತಮ್ಮ ದಿವ್ಯದೃಷ್ಟಿಯಲ್ಲಿ ಕಂಡುಕೊಂಡರು. ಕಣ್ಣಿಲ್ಲದಿದ್ದರೂ ಆ ಬಾಲಕರಿಗೆ ಮಂಜುಳವಾದ ಕಂಠವಿತ್ತು. ಅವರನ್ನು ತಮ್ಮ ಖಾಸಾ ಪರಿವಾರಕ್ಕೆ ಸೇರಿಸಿಕೊಂಡರು; ಅವರ ಸಂಗೀತವಿದ್ಯಾಭ್ಯಾಸಕ್ಕೆ ಪ್ರಾರಂಭಿಸಿದರು. ಅವರಿಬ್ಬರ ಸಂಗೀತಾಭಿರುಚಿಯನ್ನು ಎಳೆಯ ವಯಸ್ಸಿನಲ್ಲಿಯೇ ಕಂಡು ಶ್ರೀಗಳವರೆಗೆ ತುಂಬಾ ಸಂತೋಷವೆನಿಸಿತು. ಅವರ ಹೆಚ್ಚಿನ ಸಂಗೀತ ವಿದ್ಯೆಯ ವ್ಯಾಸಂಗಕ್ಕೆ ಉದಾರ ಸಹಾಯ ನೀಡಿ ಕರ್ನಾಟಕ ಸಂಗೀತವನ್ನು ಹೇಳಲು ನುರಿತ ಶಿಕ್ಷಕರೊಬ್ಬರನ್ನು ನೇಮಿಸಿದರು. ಅವರಿಬ್ಬರು ಲವಕುಶರಂತೆ ಜೊತೆಯಾಗಿ ಶ್ರೀಗಳವರ ಕೃಪಾಛತ್ರದಲ್ಲಿ ನಕ್ಕು ನಲಿದು ಸಂಗೀತ ಪಾಠವನ್ನು ಕಲಿಯುತ್ತಿದ್ದರು.ದುರ್ದೈವದಿಂದ ಹಿರಿಯ ಬಾಲಕನು ತೀರಿಕೊಂಡನು. ಶ್ರೀಗಳವರು ಕುಮಾರನ ಅಕಾಲ ಮೃತ್ಯುವನ್ನು ನೆನೆದು ಬಹಳ ದುಃಖಿಸಿದರು. ಉಳಿದ ಕುಮಾರನಿಗೆ ಸರಿಯಾದ ಶಿಕ್ಷಣದ ವ್ಯವಸ್ಥೆಯನ್ನು ಮಾಡಿಸಿದರು. ಅವನು ಭಾರತಕ್ಕೆ ಹೆಸರಾಂತ ಗಾಯನ ವಿಶಾರದನಾಗಬೇಕು. ಅವನಿಂದ ನಾಡಿನಲ್ಲಿ ಸಂಗೀತ ವಿದ್ಯೆಯ ಉದ್ಧಾರ ವಾಗಬೇಕು, ಪ್ರಸಾರವಾಗಬೇಕೆಂಬ ಕನಸನ್ನು ಕಟ್ಟಿದ್ದರು. ಅದಕ್ಕಾಗಿ ಪಂಚಾಕ್ಷರಯ್ಯನವರಿಗೆ ಮಿರ್ಜಿಯ ನೀಲಕಂಠ ಬುವಾ ಅವರಲ್ಲಿಯೂ ಹಿಂದುಸ್ತಾನಿ ಸಂಗೀತದ ಕ್ರಮವರಿತ ಶಿಕ್ಷಣವನ್ನು ಕೊಡಿಸಿದರು. ಅದಕ್ಕೂಪೂರ್ವದಲ್ಲಿ ಶಿರಿಯಾಳಕೊಪ್ಪದ ಪಂ. ಗದ್ದಿಗೆಯ್ಯ ಗವಾಯಿಗಳವರಲ್ಲಿ ಕರ್ನಾಟಕ ಸಂಗೀತದ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು. ಹೀಗೆ ಶ್ರೀಗಳವರ ಕೃಪೆಯಿಂದ ಪಂಚಾಕ್ಷರಯ್ಯನವರು ಉಭಯ ಸಂಗೀತವಿಶಾರದರಾದರು. ಶ್ರೀಗಳವರು ಅವರ ಶಿಕ್ಷಣಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ಅಂದಿನ ಕಾಲದಲ್ಲಿ ವಿನಿಯೋಗಿಸಿದ್ದು ಸಣ್ಣ ಸಾಹಸವಲ್ಲ, ಸಾಮಾನ್ಯರ ಶಕ್ತಿಯಲ್ಲ.
ಶ್ರೀಗಳವರ ಅಪ್ಪಣೆಯಂತೆ ಶ್ರೀ ಪಂಚಾಕ್ಷರ ಗವಾಯಿಗಳು ಆಜನ್ಮ ಬ್ರಹ್ಮಚಾರಿಗಳಾಗಿ ಪೂಜಾನಿಷ್ಠರಾಗಿ ಉಳಿದರು. ಪೂಜ್ಯರ ಮಾರ್ಗದರ್ಶನದಂತೆ ಸಂಗೀತದ ಪ್ರಸಾರ ಕಾರ್ಯವನ್ನು ಕೈಕೊಂಡು ಶ್ರೀ ಗವಾಯಿಗಳು ಇಡಿಯ ನಾಡಿನ ಮೂಲೆ ಮೂಲೆಯಲ್ಲಿ ಸಂಚರಿಸಿದರು. ಶಿವಯೋಗಮಂದಿರದಲ್ಲಿ ಸಂಗೀತ ಮಹಾವಿದ್ಯಾಲಯ’ ಅವರಿಂದಲೇ ಸ್ಥಾಪಿತವಾಗಿತ್ತು. ಸಂಚಾರಿ ಪಾಠಶಾಲೆ ಬೇರೆ. ಅವರೊಂದಿಗೆ ಯಾವಾಗಲೂ ೨೫-೩೦ ಕುರುಡ ವಿದ್ಯಾರ್ಥಿಗಳು ಸಂಗೀತ ಪಾಠವನ್ನು ಕಲಿಯಲು ಇರುತ್ತಿದ್ದರು. ಸಂಗೀತ ವಿದ್ಯೆಯನ್ನು ಜಾತಿ-ಮತ-ಪಂಥಗಳ ಭೇದಭಾವನೆಯಿಲ್ಲದೆ ಎಲ್ಲರಿಗೂ ಉಚಿತವಾಗಿ ಕೊಟ್ಟು ನಾಡ ನುಡಿಯ ಸೇವೆಮಾಡಬೇಕೆಂದು ಶ್ರೀಗಳವರ ಕಟ್ಟಪ್ಪಣೆಯಾಗಿತ್ತು. ಅದನ್ನು ಶ್ರೀ ಗವಾಯಿಗಳು ಕೊನೆಯ ವರೆಗೂ ಪಾಲಿಸಿದರು. ಅದೇ ಆದರ್ಶವನ್ನು ಇಟ್ಟುಕೊಂಡು ಅವರೇ ಗದಗಿನಲ್ಲಿ ಸ್ಥಾಪಿಸಿದ ‘ಸಂಗೀತ ವಿದ್ಯಾಲಯ’ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದಿಗೂ ಸರಾಗವಾಗಿ ನಡೆಯುತ್ತಿರುವುದಕ್ಕೆ ಶ್ರೀಗಳವರ ಅನುಗ್ರಹವೇ ಕಾರಣ.
ಶ್ರೀ ಪಂಚಾಕ್ಷರ ಗವಾಯಿಗಳವರ ಪ್ರತಿಭೆ ನಾಡಿನ ತುಂಬೆಲ್ಲ ಬೆಳಗಿತು. ಭಾರತದಲ್ಲೆಲ್ಲ ಅವರ ಜಯಭೇರಿಯನ್ನು ಅವರ ನೂರಾರು ಜನ ಶಿಷ್ಯರು ಮೊಳಗಿಸಿದರು. ಶ್ರೀ ಗವಾಯಿಗಳು ‘ಉಭಯಗಾನಾಚಾರ್ಯ’ರೆಂದು ನಾಡಿನ ಎಲ್ಲ ವಿದ್ವಾಂಸರಿಂದ ಕಲಾ ಪ್ರೇಮಿಗಳಿಂದ ಪ್ರಶಸ್ತಿ ಮನ್ನಣೆಗಳನ್ನು ಪಡೆದು ಪರಮಪೂಜ್ಯ ಶ್ರೀಗಳವರ ಕೀರ್ತಿಯನ್ನು ದಿಗಂತವಾಗಿ ಒಯ್ದರು ; ಶ್ರೀಗಳವರ ಕನಸನ್ನು ನನಸಾಗಿಸಿದರು. ಈಗ ಕನ್ನಡ ನಾಡಿನಲ್ಲಿ ಹಿಂದುಸ್ತಾನಿ ಸಂಗೀತದ ಪ್ರಸಾರವಾಗಿರುವದಕ್ಕೆ ಅವರೇ ಕಾರಣರು. ಅವರ ಕೈಯಲ್ಲಿ ಪಳಗಿದ ಹಲವಾರು ಪ್ರತಿಭಾವಂತ ಕಲೆಗಾರರು ಸಂಗೀತವಿದ್ಯೆಯ ಬಗೆಗೆ ಜನತೆಯಲ್ಲಿ ಗೌರವವನ್ನು ಅಭಿರುಚಿಯನ್ನು ಹುಟ್ಟಿಸಿದ್ದಾರೆ; ಸಂಗೀತ ಕಲೆಯ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದಿದ್ದಾರೆ. ಇದಕ್ಕೆಲ್ಲ ಪರಮಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಸಂಗೀತ ಸಂಪ್ರೀತಿಯೆ ಕಾರಣವಾಯಿತು.
( ಈ ಲೇಖನದ ಮುಖ್ಯ ಉದ್ದೇಶವೇನೆಂದರೆ ಸಂಗೀತದಲ್ಲಿ ಬರುವ ಪದಗಳ ಅರ್ಥ ತಿಳಿದುಕೊಳ್ಳುವದಾಗಿದೆ. ಚಿಕ್ಕ ಮಕ್ಕಳ ಸಂಗೀತ ಸ್ಪರ್ಧೆಯನ್ನು ದೂರ ದರ್ಶನದಲ್ಲಿ ವೀಕ್ಷಿಸುವಾಗ ಪರೀಕ್ಷಕರು ಏನಾದರೊಂದು ತಿದ್ದುಪಡೆ ಸೂಚಿಸುತ್ತಾರೆ. ಆಗ ನಮಗೆ ಸಂಗೀತದಲ್ಲಿ ಉಪಯೋಗಿಸಲಾಗುವ ಪದಗಳ ಅರ್ಥ ತಿಳಿಯುವದಿಲ್ಲ “ಸ್ವಲ್ಪಮಟ್ಟಿಗದರೂ ಇದನ್ನು ತಿಳಿದುಕೊಳ್ಳಬೇಕೆಂಬ” ನಿರ್ಧಾರದಿಂದ ಸ್ವಲ್ಪಮಟ್ಟಿಗೆ ಲೇಖಕರು ಸಂಗ್ರಹಿಸಿರುವರು . ಅಧ್ಯಾತ್ಮದಲ್ಲಿಯೂ ಈ ನಾದದ ಮಹತ್ವವಿರುವುದನ್ನು ತಿಳಿದುಕೊಂಡೆ. ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಬಯಕೆಯೂ ಲೇಖಕರಿಗಿದೆ)
ಅಸಂಖ್ಯ ಗ್ರಹಗಳು ಮತ್ತು ಅಗಣಿತ ತಾರೆಗಳನ್ನೊಳಗೊಂಡ ಈ ಜಗತ್ತಿಗೆ ನಾದವೇ ಮೂಲ ಕಾರಣ. ಅಚೇತನನಾದ ಶಿವನಿಗೆ ಜಗ ನಿರ್ಮಾಣಮಾಡಬೇಕೆಂಬ ಕಲ್ಪನೆ ತಲೆದೋರಿದಾಗ ಸೂಕ್ಷ್ಮ ಕಂಪನ ಉತ್ಪನ್ನವಾಯಿತು. ಆ ಕಂಪನದಿಂದ ಓಂಕಾರ ನಾದ ಹುಟ್ಟಿತು. ಆ ಓಂಕಾರ ನಾದವೆ ಜಗ ನಿರ್ಮಾಣಕ್ಕೆ ಕಾರಣವಾಯಿತು. ಈ ಓಂಕಾರ ನಾದವು ಅ ಉ ಮ ಅಕ್ಷರಗಳನ್ನೊಳಗೊಂಡಿದೆ. “ಅ” ವು ಶಿವನ ಪ್ರತಿಕವಾದರೆ “ಮ” ಶಕ್ತಿಯ ಪ್ರತೀಕವಾಗಿದ್ದು “ಉ” ಈ ಶಿವ ಶಕ್ತಿಯರ ಸಂಪುಟ ವಾಗಿದೆ. ಈ ಶಿವ ಶಕ್ತಿಯರ ಸಂಪುಟದಿಂದ ಉತ್ಪನ್ನವಾದುದೆ ಓಂಕಾರ ನಾದ. ಇದರಿಂದ ಜಗವೆಲ್ಲ ನಾದಾತ್ಮಕ ವಾಗಿದೆ. ಅದು ಪರಂಜ್ಯೋತಿಯಾಗಿದ್ದು ಪರಬ್ರಹ್ಮಸ್ವರೂಪವಾಗಿದೆ.
ನಾದವೆಂದರೆ ಇಂಪಾದ ಧ್ವನಿ. ಧ್ವನಿಯಲ್ಲಿ ಸಂಗೀತಮಯ ಧ್ವನಿ(Musical sound) ಮತ್ತು ಅಸಂಗೀತಮಯ ಧ್ವನಿ (Non musical sound) ಎಂಬ ಎರಡು ಪ್ರಕಾರಗಳು. ಅಸಂಗೀತಮಯ ಧ್ವನಿ ಕರ್ಕಶವಾಗಿದ್ದು ಇದನ್ನು ಯಾರೂ ಪ್ರೀತಿಸುವದಿಲ್ಲ. ಸಾಮಾನ್ಯವಾಗಿ ಸಂಗೀತಮಯ ಧ್ವನಿಯೇ ನಾದವೆನಿಸುತ್ತದೆ. ನಾದವಿಲ್ಲದೆ ಗೀತೆ, ಸ್ವರ, ರಾಗ ಇತ್ಯಾದಿ ಯಾವುದೂ ಸಾಧ್ಯವಿಲ್ಲ.
ನಾದದಲ್ಲಿ ಎರಡು ವಿಧಗಳಿವೆ.
ಆಹಾತ.
ಅನಾಹತ.
ಆಹತ ನಾದ ಸಂಗೀತಕ್ಕೆ ಉಪಯುಕ್ತವಾಗಿದ್ದು ಅನಾಹತನಾದ ಸಂಗೀತಕ್ಕೆ ಉಪಯುಕ್ತವಾಗಿಲ್ಲ.
ಅನಾಹತ ನಾದ:
ಇದು ನಾಭಿ ಕಮಲದಲ್ಲಿ ಸ್ಥಿತವಾಗಿದ್ದು ಆಘಾತ ವಿಲ್ಲದೆ ಉತ್ಪನ್ನವಾಗುತ್ತದೆ. ಈ ನಾದವು ಜನ ಸಾಮಾನ್ಯರಿಗೆ ಕೇಳಿಸುವದಿಲ್ಲ.” ನಾದ ಬಿಂದು” ಉಪನಿಷತ್ತಿನಲ್ಲಿ ನಾದಾನುಸಂಧಾನವೆಂಬ ಕಠಿಣ ಸಾಧನೆಯ ವಿವರ ವಿದೆ.. ಈ ಸಾಧನೆ ಮಾಡಿದ ಸಿದ್ಧ ಪುರುಷರು ಮಾತ್ರ ಅನಾಹತ ನಾದವನ್ನು ಕೇಳಬಹುದು. ಈ ಬಗ್ಗೆ ಪರಮ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಒಂದು ತ್ರಿವಿಧಿ ಹೀಗಿದೆ.
ಕೇಳು ಕೇಳೆಲೆ ಮನವೆ l ನಾಲಿಗಿಲ್ಲದ ಗಂಟೆl
ಓಲೈಸಿ, ನಾದ- ಮಾಡುವದು, ಧರ್ಮದಿಂ-l
ದಾಲಿಸೈ, ಎನಿಸು, ಜಡೆಯೊಡೆಯ! l
ಎಲೆ ಮನವೆ ನಾಲಿಗೆ ಇಲ್ಲದ ಗಂಟೆ ಅಂದರೆ ಆಘಾತವಿಲ್ಲದೆ ಬಾರಿಸುವ ಗಂಟೆಯ ನಾದವನ್ನು ನಾನು ಕೇಳುವಂತೆ ಮಾಡು ಎಂದು ಪ್ರಾರ್ಥಿಸಿದ್ದಾರೆ. ಇಲ್ಲಿ ಇನ್ನೂ ಒಂದು ಸಂಗತಿ ಅಂದರೆ ಧರ್ಮದಿಂದಾಲೈಸು ಅನ್ನುತ್ತಾರೆ ಅಂದರೆ ಲಕ್ಷ್ಯಕೊಟ್ಟು ಕೇಳು ಎಂದಾಗುತ್ತದೆ.
ನಾಲಿಗೆ ಇಲ್ಲದ ಗಂಟೆ ನಾದ ಮಾಡಲು ಸಾಧ್ಯವೇ ಇಲ್ಲ. ಆದರೆ ಪೂಜ್ಯರು ಇಲ್ಲಿ ಹೇಳಿದ ನಾದಕ್ಕೆ ಗಂಟೆಯೇ ಬೇಕಾಗಿಲ್ಲ.! ಈ ಸಾಧನೆಯಲ್ಲಿ ಸಾಧಕನು ಪ್ರಶಾಂತವಾದ ಸ್ಥಳದಲ್ಲಿ ಸ್ಥಿರವಾಗಿ ಕುಳಿತು ತನ್ನ ಕಣ್ಣು, ಬಾಯಿ, ಕಿವಿ, ಮನಸ್ಸು ಅಂತರ್ಮುಖವಾಗಿಸಿ ಒಳಗಿನ ಧ್ವನಿ ಅಂದರೆ ಅಂತರ್ನಾದ ಕೇಳಲು ಪ್ರಯತ್ನಿಸಬೇಕು. ಸಾಧಕನ ಸಾಧನೆ ಮುಂದುವರೆದಂತೆ ಹಂತಹಂತವಾಗಿ ದಶವಿಧ ಅಂದರೆ ಹತ್ತು ಪ್ರಕಾರದ ನಾದಗಳು ಕೇಳಿಸುತ್ತವೆ. ಪ್ರಥಮದಲ್ಲಿ ಭ್ರಮರಿ ನಾದ ಅದಾದ ಮೇಲೆ, ವೀಣೆಯ ನಾದ, ಅದಾದಮೇಲೆ ಕ್ರಮೇಣ ಘಂಟಾ ನಾದ, ಭೇರಿ ನಾದ,ಮೇಘ ನಾದ , ಪ್ರಣವ ನಾದ, ದಿವ್ಯನಾದ, ಸಿಂಹನಾದ, ಶರಭ (ಒಂದು ಭಯನಕವಾದ ಪ್ರಾಣಿ)ನಾದ,ಮಹಾ ನಾದ. ಈ ದಶವಿಧ ನಾದಗಳನ್ನು ಕೇಳಿ ಸಾಧಕನು ಧನ್ಯನಾಗುತ್ತಾನೆ. ಈ ನಾದಗಳು ಧ್ಯಾನದ ಏಕಾಗ್ರತೆಯಲ್ಲಿ ಸಾಧಕನಿಗೊಬ್ಬನಿಗೇ ಕೇಳಿಸುತ್ತವೆ. ಅಕ್ಕಪಕ್ಕದವರಿಗೆ ಕೇಳಿಸುವದಿಲ್ಲ. ನಾದಸಾಧನೆಯಿಂದ ಅನೇಕ ಸಿದ್ಧಿಗಳು ಪ್ರಾಪ್ತವಾಗುತ್ತವೆ.
ಆಹತ ನಾದ.:
ಇದನ್ನು ಜನಸಾಮಾನ್ಯರು ಕೇಳಬಹುದಾಗಿದೆ.
ಇದೇ ಸಂಗೀತಮಯ ಧ್ವನಿ. ಇದರಲ್ಲಿ ಸ್ವರ ಉತ್ಪನ್ನವಾಗುತ್ತದೆ.
ಸ್ವರ:
ಯಾವುದನ್ನು ಕೇಳಿದಾಗ ಮನಸ್ಸು ಪ್ರಫುಲ್ಲಿತವಾಗುತ್ತದೋ ಅದು ಸ್ವರ ಅನಿಸುತ್ತದೆ.
ಸಂಗೀತದಲ್ಲಿ ಯಾವ ಶಬ್ದಕ್ಕೆ ನಿಶ್ಚಿತವಾದ ರೂಪವಿದೆ ಮತ್ತು ಅದರ ಕೋಮಲತೆ, ಅಥವಾ ತೀವ್ರತೆ ಅಥವಾ ಏರಿಳಿತಗಳನ್ನು ಕೇಳಿ ಸಹಜವಾದ ಅನುಭೂತಿಯಾಗುತ್ತದೆ ಅದು ಸ್ವರವೆನಿಸುತ್ತದೆ.
ಈ ಸ್ವರಗಳ ಕೋಮಲತೆ, ತೀವ್ರತೆ, ಮತ್ತು ಏರಿಳಿತಗಳ ಅನುಸಾರವಾಗಿ ಭಾರತೀಯ ಸಂಗೀತದಲ್ಲಿ ಏಳು ಸ್ವರಗಳನ್ನು ಗುರುತಿಸಲಾಗಿದೆ. ಅವುಗಳಾವವೆಂದರೆ,
ಷಡ್ಜ,ಋಷಭ,ಗಾಂಧಾರ,ಮಧ್ಯಮಾ,ಪಂಚಮ,
ಧೈವತ ಮತ್ತು ನಿಷಾದ.
ಸಾ, ರೇ, ಗ, ಮ, ಪ, ಧ, ನಿ.
ಸಂಗೀತ ಶಾಸ್ತ್ರದಲ್ಲಿ ಈ ಸ್ವರಗಳನ್ನು ಅವುಗಳ ಕಂಪನ ಸಂಖ್ಯೆಯ(ಕಂಪನ ಪಟ್ಟಿ) ಮೇರೆಗೆ ಅಳೆಯಲಾಗುತ್ತದೆ.
256 ಕಂಪನಗಳಾದರೆ ಷಡ್ಜ,
298 ಕಂಪನಗಳಾದರೆ ಋಷಭ,
320 ಕಂಪನಗಳಾದರೆ ಗಾಂಧಾರ,— ಹೀಗೆ
ಹೆಚ್ಚುತ್ತ ಹೋಗಿ ಕೊನೆಗೆ
480 ಕಂಪನಗಳಾದರೆ ನಿಷಾದ.
ಹೀಗೆ ಕಂಪನ ಹೆಚ್ಚಿಗೆ ಆದಂತೆ ಸ್ವರ ಏರುತ್ತ ಹೋಗುತಗದೆ. ಈ ಸ್ವರಗಳ ಸಂಖ್ಯೆ ಏಳು ಆಗಿರುವದರಿಂದ ಆ ಸಮೂಹಕ್ಕೆ ” ಸಪ್ತಕ” ಎಂತಲೂ ಹೇಳುತ್ತಾರೆ.
ಈ ಸ್ವರಗಳು ಕಂಠದಿಂದ ಹೊರ ಬಂದರೂ ಬೇರೆ ಬೇರೆ ಸ್ಥಾನಗಳಲ್ಲಿ ಹುಟ್ಟುತ್ತವೆ.
ಮೊದಲನೆಯ ಸ್ವರ ಮೂಗು, ಕಂಠ, ಉರ (ಎದೆ), ಅಂಗಳ, ನಾಲಿಗೆ, ಮತ್ತು ಹಲ್ಲು ಈ ಆರು ಸ್ಥಳಗಳಲ್ಲಿ ಹುಟ್ಟುವಾದರಿಂದ ಅದಕ್ಕೆ ಷಡ್ಜ ಅನ್ನುತ್ತಾರೆ.ಎರಡನೆಯ ಸ್ವರ ನಾಭಿಯಿಂದ ನೆತ್ತಿಯವರೆಗೆ ತಲ್ಪುವದರಿಂದ ಋಷಭ ಅನ್ನುತ್ತಾರೆ.
ಇದಲ್ಲದೆ ಪ್ರಾಚೀನ ಋಷಿಗಳಪ್ರಕಾರ ಈ ಸಪ್ತ ಮೂಲ ಸ್ವರಗಳಲ್ಲಿ ಒಂದೊಂದು ಬಣ್ಣ ಮತ್ತು ಹಕ್ಕಿ ಅಥವಾ ಪ್ರಾಣಿಗಳ ಕೂಗಿದೆ.
ಮ- ಹಳದಿ ಮಿಶ್ರಿತ ಬಿಳಿ ಬಣ್ಣ ಮತ್ತು ಕ್ರೌoಚ ಪಕ್ಷಿಯ ಕೂಗು.
ಪ – ಕಪ್ಪು ಬಣ್ಣ ಮತ್ತು ಬುಲ್ ಬುಲ್ ಪಕ್ಷಿಯ ಕೂಗು.
ಧ- ಹಳದಿ ಬಣ್ಣ ಮತ್ತು ಕುದುರೆಯ ಕೂಗು.
ನಿ- ಎಲ್ಲ ಬಣ್ಣಗಳ ಸಮ್ಮೇಳ ಮತ್ತು ಆನೆ ಕೂಗು.
ಸಂಗೀತ
” ಔಚಿತ್ಯಪೂರ್ಣ ನಿರಂತರ ಗಾಯನವೇ ಸಂಗೀತ”ವೆನಿಸುತ್ತದೆ.
ಇನ್ನೂ ಒಂದು ಕಡೆಗೆ ” ಆಸಕ್ತಿ ಉತ್ಪನ್ನ ಮಾಡುವ ಸುವ್ಯವಸ್ಥಿತ ಧ್ವನಿಯೇ ಸಂಗೀತ’ ವೆನಿಸುತ್ತದೆ.ಎಂದು ಹೇಳಲಾಗಿದೆ.
ಗಾಯನ, ವಾದನ ಮತ್ತು ನೃತ್ಯ ಸೇರಿ ಸಂಗೀತವಾಗುತ್ತದೆಂದೂ ಹೇಳಲಾಗಿದೆ.
ಗಾಯನ ಮಾನವನಿಗೆ ಸ್ವಾಭಾವಿಕವಾಗಿ ಬರುತ್ತದೆ. ಬಹುಶಃ ಈ ಭೂಮಿಯಮೇಲೆ ಗಾಯನ ಮಾಡಲಾರದ ವ್ಯಕ್ತಿ ( ಮೂಕನನ್ನು ಬಿಟ್ಟು) ಸಿಗಲಾರನೆನ್ನಬಹುದು.
ಸಾಮ ವೇದದಲ್ಲಿ ಸಂಗೀತ ಶಾಸ್ತ್ರವನ್ನು ಕುರಿತು ವಿಶ್ವದಲ್ಲಿಯೇ ಅತೀ ಪ್ರಾಚೀನವಾದ ಬರವಣಿಗೆ ಕಂಡು ಬರುತ್ತದೆ. ” ಬ್ರಹ್ಮ, ವಿಷ್ಣು, ಮಹೇಶ ಈ ತ್ರಿಮೂರ್ತಿಗಳು ಮೊದಲ ಸಂಗೀತಕಾರರು. ಶಿವನು ನಟರಾಜನ ರೂಪದಲ್ಲಿ ತಾಂಡವ ನೃತ್ಯ ಮಾಡುತ್ತ ಲಯಕ್ಕೆ ಕಾರಣನಾದ. ಬ್ರಹ್ಮ ತಾಳ ಬಡಿಯುತ್ತಿದ್ದರೆ ವಿಷ್ಣು ಮೃದಂಗ ನುಡಿಸುತ್ತಿದ್ದನಂತೆ. ಶಿವನ ಲಯಕ್ಕನುಗುಣವಾಗಿ ಅವರಿಬ್ಬರ ಸಂಗೀತ ಇರುತ್ತಿತ್ತು. ಸರಸ್ವತಿ ದೇವಿಯ ಕೈಯಲ್ಲಿರುವ ವೀಣೆ ಎಲ್ಲ ತಂತು ವಾದ್ಯಗಳಿಗೆ ಮಾತೃ ಎನಿಸಿದೆ. ವಿಷ್ಣು ಕೃಷ್ಣಾವತಾರದಲ್ಲಿ ಕೊಳಲಿನಿಂದ ಮಾಯೆಯ ಭ್ರಾoತಿಯಿಂದ ಅಲೆಯುತ್ತಿರುವ ಮಾನವರ ಆತ್ಮಗಳನ್ನು ತಮ್ಮ ವಾಸ್ತವ ನೆಲೆಗೆ ಹಿಂತಿರುವಂತೆ ಪರವಶ ಗೊಳಿಸುವ ಗಾನವನ್ನು ನುಡಿಸುತ್ತಾನೆ.
ರಾಗ:
ರಾಗವೆಂದರೆ ಸ್ವರಗಳನ್ನು ಒಂದು ವಿಶಿಷ್ಟ ಧ್ವನಿ ಸಮೂಹದಲ್ಲಿ ಹೊಂದಿಸುವದು. ಇದರಿಂದ ಕೇಳುವವನ ಮನ ಆನೊಂದುಲ್ಲಾಸ ಭರಿತ ವಾಗುತ್ತದೆ.
ಭಾರತೀಯ ಸಂಗೀತದಲ್ಲಿ ಮೂಲತಃ ಆರು ರಾಗಗಳಿವೆ. ಪ್ರತಿಯೊಂದು ರಾಗಕ್ಕೂ ಆರಾರು ರಾಗಿಣಿಯರು ಅಂದರೆ ಒಟ್ಟು ಮೂವತ್ತಾರು ರಾಗಿಣಿಯರು ಮತ್ತು ಆರಾರು ರಾಜಪುತ್ರರು ಇರುತ್ತಾರೆ.
ಈ ರಾಗಗಳನ್ನು ದಿನದ, ವರ್ಷದ ಅಥವಾ ಋತುವಿನ ವಿಶಿಷ್ಟ ಸಮಯದಲ್ಲಿ ನುಡಿಸಬೇಕು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಅವುಗಳಿಗೆ ಸಾಮರ್ಥ್ಯ ಕೊಡುವ ದೇವತೆಗಳು ಹೊಂದಿಕೊಳ್ಳುತ್ತಾರೆ.
1. ಹಿಂದೊಳ ರಾಗ:
ವಿಶ್ವಪ್ರೇಮ ಭಾವ ಉದ್ಬೋಧ ಗೊಳಿಸಲು ವಸಂತ ಋತುವಿನ ಆದಿಯಲ್ಲಿ ನುಡಿಸುತ್ತಾರೆ.
2. ದೀಪಕ ರಾಗ :
ದಯೆಯನ್ನು ಉದ್ದೀಪನ ಗೊಳಿಸಲು ಬೇಸಿಗೆಯಲ್ಲಿ ಸಂಜೆಯ ವೇಳೆಗೆ ನುಡಿಸಲ್ಪಡುತ್ತದೆ.
3. ಮೇಘ ರಾಗ:
ಧೈರ್ಯವನ್ನು ಆಹ್ವಾನಿಸಲು ಮಳೆಗಾಲದಲ್ಲಿ ನಡು ಹಗಳಲ್ಲಿ ಹಾಡುವ ರಾಗ.
4.ಭೈರವಿ ರಾಗ:
ಶಾಂತಿ ಸ್ಥಾಪಿಸಲು ಆಗಸ್ಟ್ , ಸಪ್ಟೆಂಬರ್, ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರಾಥ:ಕಾಲ ಹಾಡುವ ರಾಗ.
5. ಶ್ರೀ ರಾಗ :
ಶುದ್ಧ ಪ್ರೇಮವನ್ನು ಪಡೆಯಲು ಶರತ್ ಋತುವಿನಲ್ಲಿ ಬೆಳಗಿನ ಸಮಯ ಹಾಡುವ ರಾಗ.
6. ಮಾಲ ಕಂಸ ರಾಗ:
ವೀರ್ಯಕ್ಕಾಗಿ ಚಳಿಗಾಲದ ನಡುರಾತ್ರಿ ಹಾಡುವ ರಾಗ.
ತಾಲ:
ಸಂಗೀತವನ್ನು ವಿಶಿಷ್ಟ ಸಮಯದಲ್ಲಿ (time ) ಬಂಧಿಸುವದು. ಇದು ಸoಗೀತದಲ್ಲಿ ವ್ಯತಿತವಾಗುವ ಸಮಯವನ್ನು ಅಳೆಯುವ ಮಾಧ್ಯಮ ವಾಗಿದೆ.
ಲಯ:
ಎರಡು ಸ್ವರಗಳ ಮಧ್ಯದ ಅಂತರ. ಮತ್ತು ಹಾಡುವ ಗತಿ ಮತ್ತು ಏರಿಳಿತಗಳನ್ನು ನಿರ್ದೇಶಿಸುತ್ತದೆ.
A Guru is an enlightened preceptor – one who can eradicate darkness and bring about right wisdom in the journey of life. The word ‘Guru’ is derived from Sanskrit, wherein the syllable ‘Gu’ denotes darkness referring to the spiritual ignorance mankind is inflicted with and the syllable ‘Ru’ represents the spiritual knowledge that eradicates this ignorance. In the Lingayat Dharma, the spiritual Guru is the first of the 8 shields of Ashtavaranas, from whose light we all seek to enhance our vision with. Guru parampare has been deep rooted in the Hindu philosophy from times of ancient history and yet with many, the association with a true Guru goes unrealized.
Back in the days, it was not uncommon for young children to be drawn to Gurus and develop impeccable personalities thereby. Every Guru too has had other Gurus who played prime roles in shaping the personality of disciples. Basavanna, for instance, nurtured his spirituality and gave it the much needed direction and force with guidance from Ishanya Guru of Kudalasangama when he left home at a very young age. Comprehensible only by dint of association, a disciple can discover that the relationship with the Guru is extraordinary where he can learn, serve and seek answers to the most profound questions that have crossed the mind. It is a journey of constant learning where knowledge, fearlessness and simplicity get institutionalized in the disciple. A Guru in the Lingayat Dharma not only initiates spirituality through the rite of LingaDeeksha but also encourages the disciple as a philosopher to go farther in the right realm. With a Guru everything is unbiased. A Guru’s interest lies in uplifting the disciple from ignorance and making him a better soul. His direction is to adopt only the good and develop the clarity to discern the bad to be able to overcome it.
There are multiple facets of taking to a Guru. There could be one or multiple along the path of life. Not everything directed by a Guru will be easy to adopt; the direction shown could be one where by an arduous experience only one would learn the answers sought. The journey with a Guru can be challenging but will certainly be fulfilling. All along, the Guru will stand by, sometimes putting us to test and at other times forgiving and reguiding. The onus of recognizing a genuine Guru lies with the disciple and for that disciple, it is important to identify with the Guru before taking to Him. Merely preaching, resolving an impending problem, curing an ailment or just exhibiting mystical powers cannot be the traits of a genuine Guru. A genuine Guru sets an example and instills faith, goodness, mental strength while bringing us closer to God or the supreme truth. The amount of discipline and tenacity with which a Guru becomes spiritually illumined while abstaining from the worldly pleasures is admirable and hard to achieve. As the vachana describes below, a Guru empowers us to experience God.
The power of knowledge destroys ignorance;
The power of light dissipates darkness;
The power of truth is foe of all untruth;
The power of alchemy enriches ordinary metals;
The sharana’s experience of God is the sole cure of worldliness;
Lord Kudala Sangamadeva
Alongside, is the responsibility of the disciple to first deserve the Guru by submitting himself with no ego or intent of concrete benefits. In a disciple need to be strong unconditional traits of respect, commitment, devotion and obedience. Service to the Guru is also an important aspect the disciple must inculcate since it is an entirely incorrect notion of having to benefit from the Guru without serving Him. It is up to the disciple to draw the most and benefit from the divinity of his Guru.
While being blessed with a Guru is very fortunate, in times of today when we have all migrated to far off lands, it may not be that feasible to always be around an able Guru who will lead the light. But it is certainly achievable to initiate a spark in ourselves to understand the various Gurus that history holds and has been witness to. There are exemplary saints serving the society day and night today and also works of previous Gurus laid out as books or vachanas, which initiate, affirm and bring about the right frame of mind. Visiting these Gurus in India or other parts of the world, learning more about the work they have done and the methods they adopted to impart spirituality, or mere reading on the Gurus who have uplifted mankind in their own ways, will be a very humbling and educative experience. It will render our outlook broader, and perspectives and corresponding deeds more spiritual and meaningful. This initial step of beginning the research on Gurus could open insightful spiritual avenues for humanity to realize in the times to come. Introducing the same to our children, will rightly reinstate a Guru’s existence.
Gurur Brahma Gurur Vishnuhu
Gurur Devo Maheswaraha
Gurur Saakshaat Parabhrahma
Tasmai Sri Gurave Namaha The Guru is Brahma, Vishnu and Shiva. The Guru is the Absolute. I bow before you
ಅಸ್ತಿತ್ವದ ಶ್ರೇಷ್ಠ ಅಭಿವ್ಯಕ್ತಿಯೇ ಕಲೆಯಾಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ವ್ಯಕ್ತಿಯ ಸ್ವಭಾವ, ಸಂಸ್ಕೃತಿ, ಬೆಳೆದುಬಂದ ರೀತಿ ಮತ್ತು ಜಗತ್ತನ್ನು ಗ್ರಹಿಸುವ ಪರಿ ಇವೆಲ್ಲವುಗಳೂ ಆತನ ಅಭಿವ್ಯಕ್ತಿಯ ಮೇಲೆ ಪ್ರಭಾವ ಹೊಂದಿರುತ್ತವೆ.
ವಾಸ್ತವವಾಗಿ ಈ ಜೀವನವು ಕಲೆಗೆ ಆಧಾರವಾಗಿದ್ದರೆ, ಕಲೆಯು ಜೀವನವನ್ನು ಶ್ರೀಮಂತಗೊಳಿಸುತ್ತದೆ. ಈ ಕಾರಣದಿಂದಲೇ ಜೀವನ ಮತ್ತು ಕಲೆ ಒಂದಕ್ಕೊಂದು ಪೂರಕವಾಗಿವೆ.
ಕಲೆಗಳಲ್ಲಿಯೇ ಸಂಗೀತವು ಅತ್ಯಂತ ಉತ್ಕೃಷ್ಟವಾದದ್ದು.ಏಕೆಂದರೆ ಧರ್ಮಕ್ಕೆ ಮೂಲ ಮತ್ತು ಆಧಾರವಾದದ್ದು ‘ಕರುಣೆ’,ಇದೇ ನಮ್ಮ ಮೂಲ ಸ್ವಭಾವ, ಇದು ತೀವ್ರವಾಗಿ ಪ್ರಕಟಗೊಳ್ಳುವುದೇ ಸಂಗೀತದ ಮೂಲಕ. ಒಂದು ಹಂತದಲ್ಲಿ ಪ್ರೀತಿಯು ಮೊಗ್ಗಿನಂತೆ ಕಂಡುಬಂದರೆ ಕಾರುಣ್ಯವೆನ್ನುವುದು ಪರಿಪೂರ್ಣ ಅರಳುವಿಕೆಯಾಗಿದೆ. ಈ ಪ್ರೀತಿ ಮತ್ತು ಕಾರುಣ್ಯಗಳ ಹಾಗು ನಮ್ಮ ಎಲ್ಲ ಬಗೆಯ ಭಾವಗಳ ಪರಿಪೂರ್ಣ ಅಭಿವ್ಯಕ್ತಿಯ ಸಾಧ್ಯತೆ ಇರುವುದು ಸಂಗೀತ ದಲ್ಲಿ ಮಾತ್ರ. ಸಂಗೀತದ ಅಗಾಧತೆ ಅರ್ಥಮಾಡಿಕೊಳ್ಳುವಂಥದ್ದಲ್ಲ, ಬದಲಾಗಿ ಭಾವಿಸುವಂಥದ್ದು, ಅನುಭವಿಸುವಂಥದ್ದು ಹಾಗೆಯೇ ನಮ್ಮಲ್ಲಿ ನಾವು ಒಂದಾಗುವಂಥದ್ದು. ಇದೇ ನೈಜ ಜೀವನವಾಗಿದೆ.
ಸಂಗೀತವು ಕೇವಲ ಒಂದು ಕಲೆ ಅಷ್ಟೇ ಅಲ್ಲ, ಅದು ವಿಜ್ಞಾನವೂ ಆಗಿದೆ.ಏಕೆಂದರೆ ಅದನ್ನು ನಾವು ಪ್ರಯೋಗಕ್ಕೆ ಮತ್ತು ಸಂಶೋಧನೆಗೆ ಒಳಪಡಿಸಬಹುದು. ಸಂಗೀತ ಚಿಕಿತ್ಸೆ ಮೂಲಕ ಎಷ್ಟೊಂದು ರೋಗಿಗಳ ಕಾಯಿಲೆಗಳು ವಾಸಿಯಾಗಿರುವುದನ್ನು ನಾವು ದಿನ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.
ಸಂಗೀತವು ಅತ್ಯಂತ ಶ್ರೇಷ್ಠ ಶಿಕ್ಷಣವಾಗಿದ್ದು ವ್ಯಕ್ತಿಗೆ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತದೆ. ಈ ಸಾಧ್ಯತೆ ಇರುವುದು ಬಹುಷಹ ಸಂಗೀತಕ್ಕೆ ಮಾತ್ರ. ನಾವು ದಿನನಿತ್ಯ ಎಷ್ಟೊಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಆದರೆ ನಾವು ಯಾವುದೇ ಕೆಲಸ ಅಥವಾ ಕ್ರಿಯೆಯನ್ನು ಅಖಂಡವಾಗಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದ ಅಂಗಾಂಗಗಳು ಕೆಲಸದಲ್ಲಿ ನಿರತವಾದಾಗ ಮನಸ್ಸು ಬೇರೊಂದನ್ನು ವಿಚಾರ ಮಾಡುತ್ತದೆ, ಅಲ್ಲಿ ಭಾವವೆಂಬುದು ಇರುವುದೇ ಇಲ್ಲ. ಇನ್ನು ಇವೆಲ್ಲವುಗಳಿಗೆ ಸಾಕ್ಷೀಭೂತವಾಗಿ ನಿಲ್ಲುವ ಪ್ರಜ್ಞೆ ಬಹಳ ದೂರದ ಮಾತು.
ಸಂಗೀತ ಒಂದೇ ನಮ್ಮ ಎಲ್ಲ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ವಲಯಗಳಲ್ಲಿ ಒಂದು ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ಒಂದು ಸಾಮರಸ್ಯ ಅಥವಾ ಒಂದು ಅಖಂಡ ಸ್ಥಿತಿಯು ವ್ಯಕ್ತಿಯಲ್ಲಿ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ. ಏಕೆಂದರೆ ಅದೇ ಆತನ ಮೂಲ ಸ್ಥಿತಿಯಾಗಿದೆ. ಯಾವ ಪ್ರೀತಿ ಮತ್ತು ಶಾಂತಿಗಾಗಿ ಜಗತ್ತು ಹಾತೊರೆಯುತ್ತದೆಯೋ, ಹೋರಾಡುತ್ತದೆಯೋ ಅದು ಸಂಗೀತದ ಮೂಲಕ ತನಗೆ ಸುಮ್ಮನೆ ಲಭಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ‘ ಸಬ್ ಹೈ ಅಪೂರ್ಣ ಸಂಗೀತ ಬಿನಾ ‘ ಎಂಬ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.
ನಾವೆಲ್ಲ ಅಸ್ತಿತ್ವವಿಲ್ಲದ ಸತ್ಯಗಳನ್ನು ಸತ್ಯವೆಂದು ಭಾವಿಸಿ ಒಂದು ಸೀಮಿತ ಜಗತ್ತಿನಲ್ಲಿ ಬದುಕುತ್ತೇವೆ. ಜಾತಿ, ಧರ್ಮ, ದೇಶ, ಭಾಷೆ, ನೆಲ, ಜಲ ಮೊದಲಾದ ಸೀಮಿತ ಚೌಕಟ್ಟಿನೊಳಗೆ ಬದುಕುವ ವಿಭಜಿತ ಮನಸ್ಥಿತಿಗೆ ಸಂಗೀತವು ಎಲ್ಲರನ್ನೂ ಒಂದುಗೂಡಿಸುವ ಒಂದು ಸೇತುವೆಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸಂಗೀತವೆನ್ನುವುದು ಒಂದು ವಿಶ್ವಭಾಷೆ.
ಜೀವನವನ್ನು ಸಚೇತನಗೊಳಿಸುವ ಸೃಜನಶೀಲತೆ ಸಂಗೀತದ ಮೂಲಕ ಹೊರಹೊಮ್ಮುತ್ತದೆ. ಸಂಗೀತವು ಭಾಷಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಗ್ರಹಿಕೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಸಾಮಾಜಿಕ ಗುಂಪಿನಲ್ಲಿ ಸಾಮರಸ್ಯ ಉಂಟುಮಾಡಿ, ಸಾಮಾಜಿಕ ಕೌಶಲಗಳನ್ನು ಕಲಿಸುತ್ತದೆ ಹಾಗೆ ಮನಸ್ಸಿನ ಒತ್ತಡ ನಿವಾರಿಸಿ ಒಳ್ಳೆಯ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ.
ಹಾಗಾದರೆ ನಮಗೆ ಇಲ್ಲೊಂದು ಪ್ರಶ್ನೆ ಮೂಡುತ್ತದೆ, ಅದೇನೆಂದರೆ ಎಲ್ಲ ಪ್ರಕಾರದ ಸಂಗೀತವು ಶ್ರೇಷ್ಠತೆಯುಳ್ಳದ್ದಾಗಿದೆಯೇ? ಎಂಬುದು. ಇಲ್ಲ, ಏಕೆಂದರೆ ಯಾವ ಸಂಗೀತದಿಂದ ಮನಸ್ಸು ವ್ಯಾಕುಲತೆಗೆ, ಪ್ರಕ್ಷುಬ್ಧತೆಗೆ, ಚಿಂತೆಗೆ, ಬಯಕೆಗೆ, ಅಸಮಧಾನಕ್ಕೆ ಒಳಗಾಗುತ್ತದೆಯೋ ಅದು ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ.ಈ ತೆರನಾದ ಸಂಗೀತವು ತಿರಸ್ಕಾರ್ಹವಾದುದು. ಯಾವ ಸಂಗೀತವನ್ನು ಹಾಡುವುದರಿಂದ, ನುಡಿಸುವುದರಿಂದ, ಆಲಿಸುವುದರಿಂದ, ಮನಸ್ಸು ಪ್ರಸನ್ನಗೊಳ್ಳುತ್ತದೆಯೋ, ಆನಂದ ಪಡೆಯುತ್ತದೆಯೋ, ಹಾಗೆಯೇ ಮನಸು, ಭಾವ, ಬುದ್ಧಿ, ಶುದ್ಧತೆಗೆ ಒಳಗಾಗುತ್ತವೆಯೋ ಅದು ಮಾತ್ರ ಉತ್ಕೃಷ್ಟ ಮಟ್ಟದ ಸಂಗೀತವಾಗಿರುತ್ತದೆ.
ಒಟ್ಟಾರೆಯಾಗಿ ವ್ಯಕ್ತಿಯನ್ನು ಪೂರ್ಣತ್ವದೆಡೆಗೆ ಮುನ್ನಡೆಸುವಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ಪ್ರಕಾರಗಳು ಬಹಳ ಪ್ರಮುಖ ಪಾತ್ರವಹಿಸಿರುವದನ್ನು ನಾವು ಇಲ್ಲಿ ಸ್ಮರಿಸಬಹುದು.