ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಸಹೃದಯ ಓದುಗರಿಗೆ ,

ಕಳೆದ ಸಪ್ಟಂಬರ ತಿಂಗಳು ಪೂರ್ತಿ ಕರ್ನಾಟಕ , ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿ ಜರುಗಿದ ಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳ ಜಯಂತಿ ಮಹೋತ್ಸವ ಅಭೂತಪೂರ್ವವಾಗಿದ್ದವು.

ಪೂಜ್ಯಜಗದ್ಗುರು  ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬರೆದ ಲೇಖನದ ಸಾಲುಗಳು ಅತ್ಯಂತ ಅರ್ಥಗರ್ಭಿತ

ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.

 ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ  ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.

ಅಕ್ಟೋಬರ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಬೋಧವ ಕೊಡು ದೇವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗಮಂದಿರದ ಮೊದಲ ಸಪ್ತರ್ಷಿಗಳು : ಸೌಜನ್ಯ “ಬೆಳಗು”
  4. ಶಾಖಾ ಶಿವಯೋಗಮಂದಿರಗಳು : ಸೌಜನ್ಯ “ಬೆಳಗು”
  5. ಯುಗಾದಿ ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು
  6. ಯೋಗಪರಂಪರೆಯ ಇತಿಹಾಸ
  7. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ
  8. ಸದಾಶಿವ ಲೀಲೆ ; ಕವಿರತ್ನ ದ್ಯಾಂಪುರ ಚನ್ನಕವಿಗಳು
  9. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಭೀಮಪಲಾಸ)

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಇಕ್ಕೇರಿ ಚೌಬೀದಿಯೊ | ಳಿಕ್ಕಿದ ಫಲ ಸರಕು

ತಕ್ಕೊಂಡು ಮಾರಿ ಮಿಕ್ಕಲಾಭವದೆನಗೆ

ಸಿಕ್ಕದ್ದೆ ಗುರುವೆ ಕೃಪೆಯಾಗು  ||೭೧ ||

ಪಂಚಜ್ಞಾನೇಂದ್ರಿಯಂಗಳ ಪಂಚವಿಷಯಗಳನ್ನು ವಿವರಿಸಿದ ಮೇಲೆ ಅಂತಕರಣ ಚತುಷ್ಟಯವನ್ನು ಸೂಚಿಸಿದ್ದಾನೆ. ಪಂಚಜ್ಞಾನೇಂದ್ರಿಯಗಳಿಗೆ ಮತ್ತು ಅಂತಃಕರಣ ಚತುಷ್ಟಯಕ್ಕೆ ಸಮೀಪ ಸಂಬಂಧವಿದೆ. ಇಲ್ಲಿ ಶಿವಕವಿಯ ಐತಿಹಾಸಿಕ ಪ್ರಜ್ಞೆಯೂ ವ್ಯಕ್ತವಾಗಿದೆ.

ವಿಜಯನಗರ ಸಾಮ್ರಾಜ್ಯವು ಅಸ್ತಂಗತವಾಗುವ ಸಮಯಕ್ಕೆ ಕೀರ್ತಿವೆತ್ತ ಕನ್ನಡಿಗರ ಹೆಮ್ಮೆಯ ರಾಜ್ಯ ಕೆಳದಿ ಅರಸರದು. ಸುಮಾರು ಕ್ರಿ. ಶ. ೧೫೦೦ ರಿಂದ ೧೭೬೩ರ ವರೆಗೆ ಸಮೃದ್ಧಿಯಿಂದ, ಧೀರತನದಿಂದ, ಉದಾರತನದಿಂದ ಹಾಗೂ ಧರ್ಮದಿಂದ ಆಳಿದ, ಬಾಳಿದ ಶ್ರೇಯಸ್ಸು ಈ ರಾಜರದು. ಕೆಳದಿ, ಇಕ್ಕೇರಿ ಮತ್ತು ಬಿದನೂರು ಎಂದು ಮೂರು ರಾಜಧಾನಿಗಳಲ್ಲಿ ರಾಜ್ಯವಾಳಿದರು. ಇಕ್ಕೇರಿಯು ಶಿವಮೊಗ್ಗಾ ಜಿಲ್ಲೆಯ ಸಾಗರಕ್ಕೆ ಮೂರು ಮೈಲು ದೂರದಲ್ಲಿದೆ. ಇಲ್ಲಿ ಅಘೋರೇಶ್ವರ ದೇವಾಲಯವು ದರ್ಶನೀಯವಾಗಿದೆ. ದೇವಸ್ಥಾನದ ಮುಂದಿನ ನಂದಿಯ ವಿಗ್ರಹವು ಭವ್ಯವೂ ಬೃಹತ್ತೂ ಆಗಿದೆ. ಕೆಳದಿ ಅರಸರಲ್ಲಿ ಶಿವಪ್ಪನಾಯಕನು ಅತ್ಯಂತ ಶೂರನೂ, ಧಾರ್ಮಿಕನೂ, ಶಿಸ್ತಿನವನೂ, ಹಾಗೂ ಪ್ರಜಾವತ್ಸಲನೂ ಆಗಿದ್ದನು. ಇವನ ಕಾಲದಲ್ಲಿ ಭೂಕಂದಾಯದಲ್ಲಿ ಸುಧಾರಣೆಯಾದುದಲ್ಲದೆ ಕೆಲವು ಬೆಲೆಯುಳ್ಳ ವಸ್ತುಗಳಿಗೆ ಕರಹಾಕುವ ಪದ್ಧತಿ ಪ್ರಾರಂಭವಾಯಿತು.

 ಇಕ್ಕೇರಿಯು ಆರನೆಯ ಅರಸನಾದ ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಅತ್ಯಂತ ಅಭಿವೃದ್ಧಿ ಪಡೆದ ನಗರವಾಗಿತ್ತು. ಆದ್ದರಿಂದ ಅಲ್ಲಿ ಸುಂದರವಾದ ಚೌಬೀದಿ ( ಚತುಷ್ಪಥ)ಗಳಿದ್ದವು “ಇಕ್ಕೇರಿ ವರಹ” (ಸುವರ್ಣನಾಣ್ಯ)ಗಳೆಂದು ಆ ಪಟ್ಟಣದ ಪತನದ ನಂತರವೂ ಕರೆಯಲ್ಪಡುತ್ತಿದ್ದುದು ಇಕ್ಕೇರಿಯ ಪ್ರಸಿದ್ಧಿಗೆ ನಿದರ್ಶನವಾಗಿದೆ. ಇಲ್ಲಿ ಅಡಿಕೆ, ಮೆಣಸು, ಯಾಲಕ್ಕಿ, ಭತ್ತ, ಕಬ್ಬು ಮೊದಲಾದ ಬೆಲೆಬಾಳುವ ಫಲ ಸರಕು ಬರುತ್ತಿತ್ತು. ವ್ಯಾಪಾರವು ಭರದಿಂದ ಸಾಗುತ್ತಿತ್ತು. ಪರಪ್ರಾಂತಗಳಿಗೂ ಅಲ್ಲಿಂದ ರವಾನೆಯಾಗುತ್ತಿತ್ತು. ಅಲ್ಲಿಯ ಮಾಲನ್ನು ಅಲ್ಲೇ ಖರೀದಿ ಮಾಡಿ ವ್ಯಾಪಾರ (ಮಾರಾಟ) ಮಾಡಿದರೂ ಹೆಚ್ಚಿನ ಲಾಭ ದೊರೆಯುತ್ತಿತ್ತು. ಆದರೆ ಅದು ಕರಕೊಡುವದಕ್ಕೆ ಸರಿಹೋಗುತ್ತಿತ್ತು. ಇದರಿಂದ ಕೊನೆಗೆ ಹೆಚ್ಚಿನ ಲಾಭ ಉಳಿಯುತ್ತಿರಲಿಲ್ಲ. ಆ ಅರಸರು ಅತಿ ಲಾಭ ಬಡಕರಿಗೆ ಅವಕಾಶವಿತ್ತಿರಲಿಲ್ಲವೆಂಬುದೂ ಧ್ವನಿತವಾಗುತ್ತದೆ.

ಕೆಳದಿ ಅರಸರ ಇಕ್ಕೇರಿ ಶಿವಕವಿಗೊಂದು ಮಾಧ್ಯಮ ಮಾತ್ರ. ಇಲ್ಲಿಯ ಇಕ್ಕೇರಿ ಯೆಂದರೆ ಶರೀರ, ಈ ಇಕ್ಕೇರಿಯು ಶೂರತನ, ಉದಾರತನ, ಶಿಸ್ತು, ಧಾರ್ಮಿಕತನಗಳಿಗೂ ಆಶ್ರಯದಾಗಿದೆ. ಇಲ್ಲಿಯೂ ಚೌಬೀದಿ ಅಥವಾ ಚತುಷ್ಪಥವಿದೆ. ಅಂದರೆ ನಾಲ್ಕು ದಾರಿಗಳಿಂದ ಕೂಡಿದೆ. ಎರಡು ಹಲ್ಲಿನಸಾಲು ಮತ್ತು ಎರಡು ತುಟಿಗಳಿಂದ ಕೂಡಿದ ಬಾಯಿಯೇ ಚೌಬೀದಿ. ಇನ್ನೊಂದು ತೆರನಾಗಿ ಅರ್ಥೈಸಿದರೆ ಇನ್ನೂ ಸುಂದರವಾದ ಭಾವ ಬರುತ್ತದೆ. ಶರೀರದಲ್ಲಿ ಕಾಣುವ ಪಂಚಜ್ಞಾನೇಂದ್ರಿಯ ಗಳಿದ್ದರೆ ಕಾಣದ ಆದರೆ ಅತಿ ಮಹತ್ವದ ನಾಲ್ಕು ಅಂತಃಕರಣಗಳಿವೆ. ಅವುಗಳನ್ನು ಮನ, ಬುದ್ಧಿ, ಚಿತ್ತ, ಅಹಂಕಾರಗಳೆಂದು ಕರೆಯುತ್ತಾರೆ. ಇವುಗಳೇ ಕರ್ಮೇಂದ್ರಿಯ ಹಾಗೂ ಜ್ಞಾನೇಂದ್ರಿಯಗಳ ಕಾರ್ಯವನ್ನು ಪ್ರೇರೇಪಿಸುತ್ತವೆ.

ಮನಸ್ಸು ವಾಯುಮಯವಾಗಿದ್ದು ಸಂಕಲ್ಪ ವಿಕಲ್ಪದಿಂದ ಕೂಡಿದೆ. ಬುದ್ಧಿಯು ಜಲದಿಂದ ಹುಟ್ಟಿರುತ್ತದೆ. ಇದಕ್ಕೆ ನಿಶ್ಚಯಿಸುವ ಗುಣವಿದೆ. ಚಿತ್ತವು ಪೃಥ್ವಿತತ್ತ್ವದಿಂದಾಗಿದ್ದು ಸ್ಥಿರದಿಂದ ಅವಧರಿಸಿ ಆನಂದಿಸುತ್ತದೆ. ಅಹಂಕಾರವು ಅಗ್ನಿ ತತ್ತ್ವದಿಂದ ಹುಟ್ಟಿದ್ದು ಅಹಂಭಾವದಿಂದ ಅಹಂಕರಿಸುತ್ತದೆ.ʼʼ ವೇದಾಂತ ಸಾರʼʼ ಗ್ರಂಥದಲ್ಲಿ –

ಬುದ್ಧಿರ್ನಾಮ ನಿಶ್ಚಯಾತ್ಮಿಕಾಂತಃಕರಣವೃತ್ತಿಃ |

ಮನೋನಾಮ ಸಂಕಲ್ಪ ವಿಕಲ್ಪಾತ್ಮಿಕಾಂತಃಕರಣ ವೃತ್ತಿಃ |

ಅನಯೋರೇವ ಚಿತ್ತಾಹಂಕಾರಯೋರಂತರ್ಭಾವಃ ||ʼʼ

“ಬುದ್ಧಿಯೆಂಬುದು ನಿಶ್ಚಯ ಸ್ವಭಾವದ ಆಂತಃಕರಣ ವೃತ್ತಿಯು ಮನಸ್ಸೆಂಬುದು ಸಂಕಲ್ಪ ವಿಕಲ್ಪಗಳ ಸ್ವಭಾವದ ಅಂತಃಕರಣ ವೃತ್ತಿಯು. ಈ ಮನೋ ಬುದ್ಧಿಗಳಲ್ಲೇ ಚಿತ್ತ ಮತ್ತು ಅಹಂಕಾರಗಳು ಅಂತರ್ಭೂತವಾಗುತ್ತವೆಂದು ತಿಳಿಸಿದೆ. ಸಾಮಾನ್ಯವಾಗಿ ಯಾವುದೇ ವಿಷಯಕ್ಕೆ ವಿಚಾರ ಬಂದರೆ ಮೊದಲು ಮನಸ್ಸು ಸಂಕಲ್ಪ ವಿಕಲ್ಪ ಮಾಡುತ್ತದೆ- “ಹೌದೋ ಅಲ್ಲೋ ಎಂದುದಾಗಿ.” ಆಗ ಅಹಂಕಾರವು ಗರ್ವಿಸುತ್ತದೆ.-ʼ ಇದು ನನಗೆ ಮೊದಲೇ ತಿಳಿದಿತ್ತು’ ಎಂದು. ನಂತರ ಬುದ್ಧಿಯ ಸಾರಾಸಾರ  ವಿಚಾರದಿಂದ, ನಿಶ್ಚಯಿಸಿದರೆ ಚಿತ್ತವು ಅದರ ಆನಂದವನ್ನು ಅನುಭವಿಸುತ್ತದೆ. ಹೀಗೆ ಅಂತಃಕರಣಗಳ ವೃತ್ತಿಯು ವ್ಯಕ್ತವಾಗುತ್ತದೆ. ʼʼಅಂತಃಕರಣ  ಪರಿಶುದ್ಧಗೊಳಿಸುವದಕ್ಕಾಗಿಯೇ ಶಾಶ್ವತ ಪ್ರಾದುರ್ಭಾವವಾಗಿದೆ”  ಯೆಂದು ಅನುಭವಿಗಳು ನಿರೂಪಿಸುತ್ತಾರೆ. ಶಿವಕವಿಗಳು ಇಲ್ಲಿ ಪ್ರಸ್ತುತ ಅಂತಃಕರಣ ಚತುಷ್ಟಯವನ್ನು ಪರಿಶುದ್ಧಗೊಳಿಸುವ ಪರಿಯನ್ನು ಅವುಗಳ ಸಾರ್ಥಕತೆಯನ್ನು ಪ್ರತಿಪಾದಿಸಿದ್ದಾರೆ.

ಮನ, ಬುದ್ಧಿ, ಅಹಂಕಾರಗಳ ಸಮ್ಮಿಲಿತವಾದ ಸತ್ಕಾರ್ಯವು ಚಿತ್ತಕ್ಕೆ ಆನಂದವನ್ನು ಕೊಡಬಲ್ಲುದು. ಕೇವಲ ವೈಷಯಿಕವಾಗಿ ಜೀವಭಾವದಿಂದ ಜೀವನ ಮುಂದುವರೆದರೆ ಎಂದಿಗೂ ಪಾವನವಾಗದು. ಗುರಿಯನ್ನು ಸಾಧಿಸಲು ಶಕ್ಯವಿಲ್ಲ. ಮನಸ್ಸಿನ ಚಂಚಲತೆ ಮಾನವನನ್ನು ಕೀಳುಗೊಳಿಸುತ್ತದೆ. ಅಹಂಕಾರವು ಗುರಿಯನ್ನು ನಿರ್ಮೂಲಗೊಳಿಸುತ್ತದೆ. ದುರ್ಬುದ್ಧಿಯು ದುಃಖಿಯನ್ನಾಗಿಸಿದ ಮೇಲೆ ಚಿತ್ತಕ್ಕೆಲ್ಲಿಯ ಆನಂದ ? ಅಂತೆಯೇ ನಿಜಗುಣರ ”ಕೈವಲ್ಯ ಪದ್ಧತಿ”ಯಲ್ಲಿ

ತಡೆವುದಾಗದು ತನಗಗಣಿತ ವಿಷಯದೊ |

ಳೆಡೆಯಾಡುವತಿ ಚಪಲತೆಯ ಚಿತ್ತವನು ||’

”ಮನ-ಬುದ್ಧಿ-ಅಹಂಕಾರಗಳ ತಾಕಲಾಟದಲ್ಲಿ, ಅಗಣಿತ ವಿಷಯಂಗಳಲ್ಲಿ ಎಡೆಯಾಡುವ ಚಿತ್ತದ ಚಪಲತೆಯನ್ನು ತಡೆಯುವದಕ್ಕಾಗುವದಿಲ್ಲ’ʼ ವೆಂಬ ಮಾತುಗಳು ಮಾರ್ಮಿಕವಾಗಿವೆ. ಮನನೀಯವಾಗಿವೆ. ಮನ ಮುಮ್ಮೊದಲು ಆಶಿಸುತ್ತದೆ. ಅಲ್ಪಬುದ್ಧಿಯು ಆಶೆಗೆ ಪ್ರಚೋದನವನ್ನೀಯುತ್ತದೆ. ಅಹಂಕಾರವು ಧೃತಿಗೆಡಿಸಿ ಚಿತ್ತವನ್ನು ಅಸ್ಥಿರಗೊಳಿಸುವದು. ಅದುಕಾರಣ ಈ ಚತುಷ್ಪಥವೆನಿಸಿದ ಅಂತಃಕರಣ ಚತುಷ್ಟಯವನ್ನು ಪಳಗಿಸಬೇಕು. ಮನಬಯಸಿದುದಕ್ಕೆ ಅವಕಾಶ ವೀಯದೇ  ಸನ್ಮನದಿಂದ ಅಥವಾ ಸುಮನದಿಂದ ಶಿವನು ಕರುಣಿಸಿದ ಪದಾರ್ಥಗಳನ್ನು ಗುರು-ಲಿಂಗ-ಜಂಗಮಕ್ಕೆ ಸಲ್ಲಿಸಿ  ಶೇಷಪ್ರಸಾದವನ್ನು ಸವಿಯಬೇಕು. ಇದನ್ನರಿಯದೆ ದೇಹವೆಂಬ ಇಕ್ಕೇರಿಯ ಚೌಬೀದಿಯೆನಿಸಿದ ಬಾಯಲ್ಲಿ ಅಂತಃಕರಣಗಳ ಬಯಕೆಯಂತೆ ಸಿಕ್ಕ ಸಿಕ್ಕ ಪದಾರ್ಥಗಳನ್ನು ಪರಿಶುದ್ಧಗೊಳಿಸದೆ, ಸಂಸ್ಕರಿಸದೆ, ಜೀವಭಾದದಿಂದ ತುಂಬಿದರೆ ಅದೆಲ್ಲವೂ ಹಾನಿಯಾಗುವದು ಖಂಡಿತ. ತನ್ನ ಜೀವಕ್ಕಾಗಿ ಉಪಯೋಗಿಸಿದ ಪದಾರ್ಥಗಳೆಲ್ಲ ಮರುದಿನ ಮಣ್ಣಾಗುವದು ನಿಶ್ಚಿತವಿದೆ. ಶಿವನಿತ್ತ ಪದಾರ್ಥಗಳನ್ನು ಶಿವನಿಗರ್ಪಿಸದೆ ಭುಂಜಿಸಿದರೆ ಜೀವಾತ್ಮನ ಮಲಿನವೃತ್ತಿಯೇ ಬೆಳೆಯುವದು. ಶಾಂತಿ ಸಮಾಧಾನಗಳು ಸಿಕ್ಕವು. ಮನದ ಮುಂದಣ ಆಶೆಯು ಮಾಯೆಯಾಗಿ ಬಂಧಿಸುವದು. ಆ ಕರಣಗಳ ಅಧೀನದಲ್ಲಿ ನಡೆದರೆ ಅವುಗಳ ಉಪಟಳವು ಅಡಗುವದಿಲ್ಲ. ಅದಕ್ಕಾಗಿ ಬಾಲಲೀಲಾ ಮಹಾಂತರಂಥವರೂ ತಮ್ಮ “ಕೈವಲ್ಯ ದರ್ಪಣ’ ದಲ್ಲಿ –

ʼ’ಕರಣಗುಣಗಳುರುವಣಿಗೆಯನು ತಾಳೆ,

ಪೊರೆಯೋ ಬೇಗನೆʼʼ

 ಎಂದು ಶಿವನಲ್ಲಿ ಮೊರೆಯಿಟ್ಟಿದ್ದಾರೆ. ಇಂಥ ಮಹಾನುಭಾವರೇ ಕರಣಂಗಳ ಉರುವಣಿಗೆಯನ್ನು ತಾಳದಾದ ಮೇಲೆ ಪಾಮರರ ಪಾಡೇನು ? ಕೆಳಗಿನ ವಚನದಲ್ಲಿ ಅಣ್ಣ ಬಸವಣ್ಣನವರು ಅಂತಃಕರಣ ವೃತ್ತಿಗಳನ್ನು ಪರಿಶುದ್ಧಗೊಳಿಸುವ ರೀತಿಯನ್ನು ವಿಶದಪಡಿಸಿದ್ದಾರೆ.

ಮೌನದಲುಂಬುದು ಆಚಾರವಲ್ಲ.

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡರೆ.

ಶಿವನಿತ್ತ ಪದಾರ್ಥಗಳನ್ನು ಶಿವರೂಪಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸದೆ ಭೋಗಿಸಬಾರದು. ತ್ರಿವಿಧಕ್ಕರ್ಪಿಸಿ ಪ್ರಸಾದವನ್ನಾಗಿಸಿ ಶಿವಲಿಂಗವನ್ನು ಧ್ಯಾನಿಸುತ್ತ ಸ್ವೀಕರಿಸಿದರೆ ಕರಣವೃತ್ತಿಗಳು ಪರಿಪಾಕಗೊಳ್ಳುವವು. ಮಿಕ್ಕಪ್ರಸಾದದ ಲಾಭ ಸಿಕ್ಕದೇ ಹೋಗುವದಿಲ್ಲ. ಅವಶ್ಯವಾಗಿ ಆ ಪ್ರಸಾದ ಪ್ರಾಪ್ತಿಯ ಫಲ ಪ್ರಸನ್ನತೆಯನ್ನು ನೀಡುವದು. ಚಿರಶಾಂತಿಯು ಸಿಕ್ಕುವದು. ಪರಮ ನಿರಂಜನ ಗುರುವೆ ! ಅಂತಃಕರಣಗಳನ್ನು ಸಂತೃಪ್ತಗೊಳಿಸುವ ಪ್ರಸಾದ ಪರಿಯನ್ನು ತಿಳುಹಿ ಕಾಪಾಡು.

ʼʼಇಕ್ಕೇರಿ ಚೌಬೀದಿ’ಗೆ ಯೋಗರೂಢವಾದ ಇನ್ನೊಂದು ಅರ್ಥವನ್ನು ಗ್ರಹಿಸಬಹುದು. ಈಡಾ-ಪಿಂಗಳಾ ನಾಡಿಗಳ ದ್ವಾರವೇ ಇಕ್ಕೇರಿ. ನಾಭಿಮಂಡಲದಿಂದ ಹೊರಹೊರಟ ಇಕ್ಕೇರಿಯು ಭ್ರೂಮಧ್ಯದ ‘ಅಜ್ಞಾ ಚಕ್ರಕ್ಕೆ ಬಂದು ಸೇರುವದು. ಈಡಾ-ಪಿಂಗಳಾ (ಚಂದ್ರ-ಸೂರ್ಯ) ನಾಡಿರೂಪದ ಕಣ್ಣುಗಳೆರಡು ಕಿವಿಗಳೆರಡು ಭ್ರೂಮಧ್ಯದಲ್ಲಿ ಸೇರುತ್ತಿರಲು ಚೌಬೀದಿಯೆನಿಸುವದು. ಅಥವಾ ಎರಡೂ ನೇತ್ರಗಳು ಭ್ರೂಮಧ್ಯದಲ್ಲಿ ಸುಷುಮ್ಮೆಯಲ್ಲಿ ಬೆರೆದು ಬ್ರಹ್ಮರಂದ್ರಕ್ಕೇರುವ ತ್ರಿಕೂಟವೆಂತಲೂ ಕರೆಯುವರು. ಈ ವಿಚಾರದಲ್ಲಿ ಸರ್ಪಭೂಷಣ ಶಿವಯೋಗಿಗಳ ಯೋಗಪ್ರತಿ ಪಾದನಸ್ಥಲದ ಈ ಭಾವಗೀತೆ ಅರ್ಥಪೂರ್ಣವಾಗಿದೆ.

ಭೂಧಿಸೆನ್ನನು ಗುರುವೆ ! ನಿನ್ನಯ  ದಿವ್ಯ.

ಪಾದವನಂಬಿರುವೆ

ವೇದಾಂತದೊಳು ಗೋಪ್ಯವಾದ ತತ್ತ್ವವನೆ ಸಂ |

ಪಾದಿಸಿ ಮನದಿ ವಿ | ನೋದಿಸಿ ಸುಖಿಸೆಂದು        ||ಪ||

ತಲೆವಾಗಿ ಬೆಳೆದಿರುವ | ಪಂಕೇಜದ

ದಳದೆ ತಿರುಗುತಿರುವ

ಕಳಹಂಸ ಶಿಶುವಿನ | ಸುಳುಹನು ತಡೆದು ತ

ನಳಿನದ ಕರ್ಣಿಕೆ | ಯೊಳು ನಿಂತು ನಲಿಯೆಂದು       ||೧||

 ಆದಿಯಂತ್ಯವ ಭೇದಿಸಿ | ನಿರ್ಗುಣವಾದ

ನಾದಿಬ್ರಹ್ಮವ ಸಾಧಿಸಿ

ಹಾದಿನಾಲ್ಕರ ನಡು | ವೇದಿಕೆಯೊಳು ಕುಳಿತು

ಮೋದದಿ ದಶವಿಧ | ನಾದವ ಕೇಳೆಂದು                 ||೨||

ಮೂಲಕುಂಡಲಿಯನೆತ್ತಿ | ಅಗ್ನಿಯದ

ಮೇಲಣ ನೆಲೆಗೆ ಹತ್ತಿ

ಸಾಲಿಟ್ಟು ಸುರಿತಿರ್ಪ | ಹಾಲನೆ ಸವಿದುಂಡು

ನೀಲಜ್ಯೋತಿಯ ದಿವ್ಯ | ಜ್ವಾಲೆಯೊಳ್ ಬೆಳಗೆಂದು || ೩ ||

ಸರ್ಪಭೂಷಣರು ತಾವು ಅನುಭವಿಸಿ ಕಂಡುಂಡ ಸವಿಯನ್ನು ಶ್ರೀ ಗುರುವಿಗೆ ಬೋಧಿಸೆಂದು ಬೇಡಿಕೊಂಡಿದ್ದಾರೆ. ಯೋಗವಿಚಾರ ಬಹುಗೋಪ್ಯವಾದುದು. ರಹಸ್ಯವನ್ನು ಭೇದಿಸುವ ಅಪಾರವಾದ ಧೀಶಕ್ತಿಬೇಕು. ಮುಂದೆ ಪ್ರತಿಪಾದಿಸಲ್ಪಡುವ (೮೮ನೇಯ ತ್ರಿಪದಿಯಲ್ಲಿ) ಹೃದಯ ಮಧ್ಯದ ಅನಾಹತಚಕ್ರದಲ್ಲಿ ದ್ವಾದಶದಳದ ಕಮಲವುಂಟು. ಆದರೆ ಅಷ್ಟದಳ ಕಮಲವು ಸ್ಪಷ್ಟವಾಗಿದ್ದು ನಾಲ್ಕು ದಳಗಳು ಗೋಪ್ಯವಾಗಿವೆ. ಅಂತೆಯೇ ಹೃದಯದಲ್ಲಿ ಅಷ್ಟದಳದ ಕಮಲವೆಂಬುದಾಗಿಯೇ ವೇದಾಂತಗಳು ಪ್ರತಿಪಾದಿಸಿದ್ದುಂಟು. ಅಷ್ಟದಳ ಕಮಲವು ಹೃದಯದಲ್ಲಿ ಬಾಳೆಯ ಹೂವಿನಂತೆ ತಲೆಕೆಳಗೆ ಮಾಡಿಕೊಂಡು ಬೆಳೆದಿದೆ. ಈ ಅಷ್ಟದಳಗತ ಜೀವಹಂಸನು ಆಜ್ಞಾನಿಯಾಗಿ ದಳಕ್ರಮಾನುಸಾರವಾದ ಭಿನ್ನ ಭಿನ್ನಸ್ಥಿತಿಯನ್ನು ಹೊಂದಿ ತಿರುಗುತ್ತಿರುವನು. ಆ ತಿರುಗಾಟವನ್ನು ತಡೆದು ಆ ಕಮಲಮಧ್ಯದ ನಾಲ್ಕು ದಳಗಳಲ್ಲಿ ನಿಶ್ಚಲವಾಗಿರುವ ಪರಮಾತ್ಮನನ್ನು ಅರಿತು ಸುಖಿಸಬೇಕು. ಇದಕ್ಕೆ ಸಾಧನವಾದ ಷಟ್‌ಚಕ್ರಗಳನ್ನು ಅರಿಯಬೇಕು. ಆಧಾರದಿಂದ ಅಗ್ನಿಯದವರೆಗೂ ಭೇದಿಸಿ ನಡೆದು ನಿರ್ಗುಣವೂ ಅನಾದಿಯೂ ಆದ ಬ್ರಹ್ಮತತ್ತ್ವವನ್ನು ಸಾಧಿಸಿ ಹದಿನಾಲ್ಕರ ನಡುವಿನ ಅಗ್ನಿಯ ಚಕ್ರದ ಚತುಃಪೀಠದಲ್ಲಿ ಕುಳಿತು ಸಂಮೋದದಿಂದ ದಶವಿಧನಾದವ ಕೇಳಬೇಕು. ಮತ್ತು ನಾಭೀಸ್ಥಾನದಲ್ಲಿರುವ ಮೂಲಕುಂಡಲಿನೀ ಶಕ್ತಿಯನ್ನು ಸ್ಪುಟಗೊಳಿಸಿ ಅಗ್ನಿಯ ಚಕ್ರದಮೇಲಿರುವ ತ್ರಿಕೋಣಸ್ಥಾನದವರೆಗೂ ಹೋಗಿ, ಸುಷುಮ್ಮನಾಡಿಯೊಳಗಿಂದ ಹೊರಬರುವ ಚಿದಮೃತವನ್ನು ಪಾನಮಾಡಿ  ನೀಲಜ್ಯೋತಿಯ ದಿವ್ಯಪ್ರಕಾಶದಲ್ಲಿ ಮಹಾಬೆಳಕನ್ನು ಸಂಪಾದಿಸಬೇಕು. ಆದರೆ ಈ ಚತುಷ್ಪಥದಲ್ಲಿ ಸಿಕ್ಕುವ ದಿವ್ಯ ಪ್ರಕಾಶದ ಲಾಭ ಎಲ್ಲ ಯೋಗಿಗಳಿಗೆ ಲಭ್ಯವಾಗುವದಿಲ್ಲ. ಅಂತೆಯೇ ಶಿವಕವಿಗಳು “ಮಿಕ್ಕಲಾಭವದೆನಗೆ ಸಿಕ್ಕದೆ ಗುರುವೆ” ಎಂದು ಶ್ರೀ ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ. ಕೇವಲ ಚೌಬೀದಿಗೆ ಮುಟ್ಟಿದರೂ ಆಗದು.  ಅಲ್ಲಿಂದ ಬ್ರಹ್ಮರಂದ್ರಕ್ಕೇರಬೇಕು ಪುನಃ ಬ್ರಹ್ಮರಂದ್ರದಿಂದ ಇಳಿಯುವದು ಕಠಿಣ.ಅದಕ್ಕಾಗಿ ಇಂಥ ಲಾಭದಾಯಕವಲ್ಲದ ಕೃತಿಗಿಂತ ಶ್ರೀ ಗುರು ಕೃಪೆ ಪಡೆದು ಬ್ರಹ್ಮರಂಧ್ರದ ಮಹಾಚೈತನ್ಯವೆನಿಸಿದ ಇಷ್ಟಲಿಂಗವನ್ನು ಪಡೆದು ದೃಷ್ಟಿಯೋಗದಿಂದ ನಿರಂತರವಾದ ದಿವ್ಯಪ್ರಕಾಶವನ್ನು ಹಾಗೂ ತನ್ಮೂಲಕ ನಿತ್ಯಾನಂದವನ್ನು ಪಡೆಯಬೇಕು.

ಮಣ್ಣ ಮಟ್ಟಿಯ ಮೇಲೆ | ಕಣ್ಣ ಕುಪ್ಪೆಯ ದುರ್ಗ

ಬಣ್ಣ ಬಹಿರೂಪು – ಸಣ್ಣ ಬಾಗಿಲಿಗೆ ಮೂ

ವಣ್ಣವೈ ಗುರುವೆ ಕೃಪೆಯಾಗು    ||೨||

ಈ ತ್ರಿಪದಿಯಲ್ಲಿ ಗುಣತ್ರಯದ ಪ್ರತಿಪಾದನೆ ಬಂದಿದೆ. ಪಂಚಮಹಾ ಭೂತಗಳ ಪರಿಚಯ ಮಾಡಿಕೊಡುತ್ತ, ಅವುಗಳ ಪಂಚೀಕರಣವನ್ನು ನಿರೂಪಿಸಲಾಯಿತು. ಅದರ ಪರಿಪಾಕತೆಯಿಂದಲೇ ತನು ಜನಿಸಿ ಅನೇಕ ವಿಕಾರಗಳಿಗೆ ಬಲಿಯಾಗುವ ಬಗೆಯನ್ನು ಬಿತ್ತರಿಸಲಾಯಿತು. ದೇಹವಿಕಾರಗೊಳ್ಳಲು ಕಾರಣಗಳಾದ ಪಂಚೇಂದ್ರಿಯಗಳಿಗೆ ಗೋಚರಿಸುವ ಪಂಚ ವಿಷಯಗಳನ್ನು ಪ್ರಸ್ತಾಪಿಸಿ ನಂತರ ಅಂತಃಕರಣ ಚತುಷ್ಟಯವನ್ನು ಎತ್ತಿ ತೋರಿಸಲಾಯಿತು. ಈ ದೇಹ ಇವುಗಳಲ್ಲದೆ ಗುಣತ್ರಯ ವಿಭಾಗದಿಂದಲೂ ವಿಭಿನ್ನವಿಕಾರಗಳನ್ನು ಹೊಂದುತ್ತದೆಂಬುದನ್ನು ಶಿವಕವಿಯು ರಚನಾತ್ಮಕವಾಗಿ ಬಣ್ಣಿಸಿದ್ದಾನೆ.

‘ಕಣ್ಣ ಕುಪ್ಪೆ’ ಯೆಂಬುದೊಂದು ಮಲೆನಾಡಿನ ಊರು. ಆ ಮಲೆನಾಡಿನಲ್ಲಿ ಮಣ್ಣಿನ ಪರ್ವತಗಳೇ ಬಹಳ. ಈ ಕಣ್ಣಕುಪ್ಪೆಯ ದಿಬ್ಬ (ಪರ್ವತ)ದ ಮೇಲೆ ಕೋಟೆಯೊಂದಿದೆ. ಇದಕ್ಕೆ ಸಣ್ಣ ಸಣ್ಣ ಎರಡು ಬಾಗಿಲುಗಳಿವೆ. ಅವುಗಳ ಹೊರ ನೋಟ ಬಹು ಬಣ್ಣಗಳಿಂದ ರಂಜಿತವಾಗಿದೆ. ಆದರೆ ಬಾಗಿಲುಗಳಿಗೆ ಬಳೆದಿರುವ ಬಣ್ಣಗಳು ಮೂರೇ ಮೂರು. ಈ ದುರ್ಗ ಮಲೆನಾಡಿನಲ್ಲಿ  ನೆಲೆಸಿರುವದರಿಂದ ಸೃಷ್ಟಿಯ ಸೌಂದರ್ಯಕ್ಕೆ ಆಶ್ರಯವಾಗಿದೆ. ಸುತ್ತಮುತ್ತಲು ಮರಗಳಿರುವದರಿಂದ ಎಲೆಗಳ ಹಸಿರುಬಣ್ಣ ಅಲ್ಲದೆ ಹೂವುಗಳ ವಿವಿಧ ಬಣ್ಣಗಳು ಕಾಣುವದು ಸ್ವಾಭಾವಿಕ. ಬಾಗಿಲುಗಳ ಸಮೀಪಕ್ಕೆ ಹೋಗಿ ನೋಡಿದರೆ ಮೂರು ಬಣ್ಣಗಳು ಎದ್ದು ಕಾಣುತ್ತವೆ. ಇಲ್ಲಿ ಇದೊಂದು ಕೇವಲ ರೂಪಕ. ವಾಚ್ಯಾರ್ಥದ ಪರಿಚಾಯಕ.

ಈ ದೇಹವು ಪೃಥ್ವಿತತ್ತ್ವಪ್ರಧಾನವಾಗಿರುವದರಿಂದ ಮಣ್ಣುಮಯವಾಗಿದೆ ಕಾರಣ ಅದೇ ಮಣ್ಣು ಮಟ್ಟೆ. ಈ ಹಿಂದೆ ವಿವರಿಸಿದಂತೆ ಶರೀರದಲ್ಲಿ ಮೂಗು ಪೃಥ್ವಿ ತತ್ತ್ವಾಧಿಕ್ಯತೆಯಿಂದ ಉತ್ಪನ್ನವಾದುದು. ಈ ಮಣ್ಣು ಮಟ್ಟೆಯಾದ ಮೂಗು, ಅಲ್ಲದೆ ದಿಡದ ಮೇಲ್ಬಾಗದಲ್ಲಿರುವ ತಲೆಬುರುಡೆಯೇ ಭದ್ರಕೋಟೆಯಾಗಿದೆ. ಈ ಕೋಟೆಯಲ್ಲಿ ಸಣ್ಣ ಸಣ್ಣ ಬಾಗಿಲುಗಳೆಂದರೆ ಎರಡು ಕಣ್ಣು ಗುಡ್ಡಿಗಳು. ಇವುಗಳಲ್ಲಿ ಅನೇಕ ಬಣ್ಣ ಗೋಚರಿಸಿದಂತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ನಿಜವಾಗಿ ತೋರುವ ಬಣ್ಣಗಳು ಮೂರಾಗಿವೆ. ೧) ಬಿಳುಪು ೨) ಕೆಂಪು ೩) ಕಪ್ಪು . ಈ ಮೂರು ಬಣ್ಣಗಳು ಪ್ರಕೃತಿ ತತ್ತ್ವದ ತ್ರಿಗುಣಗಳಿಂದಲೇ ಬಂದಿವೆ. ಸತ್ತ್ವ ರಜ, ತಮಗಳೇ   ತ್ರಿಗುಣಗಳು, ಭಗವದ್ಗೀತೆಯಲ್ಲಿ –

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ |

ಸತ್ಚ, ರಜ, ತಮೋಗುಣಗಳು ಪ್ರಕೃತಿಯಿಂದ ಸಂಜನಿಸದವುಗಳೆಂದು ಪ್ರತಿಪಾದಿತ ವಾಗಿವೆ. ಸಾಂಖ್ಯತತ್ತ್ವಾನುಯಾಯಿಗಳೂ ತ್ರಿಗುಣಾತ್ಮಕ ಪ್ರಕೃತಿಯಿಂದಲೇ ಜಗದುತ್ಪತ್ತಿ ಯನ್ನು ಮನ್ನಿಸಿದ್ದಾರೆ.

ಈ ತ್ರಿಗುಣಾತ್ಮಕ ತತ್ತ್ವವು ಪ್ರತಿಯೊಂದು ಶರೀರದಲ್ಲಿ ವ್ಯಕ್ತವಾಗಿ ತೋರುತ್ತಿದೆ. ತ್ರಿಗುಣಗಳ ಪ್ರತ್ಯಕ್ಷ ಪರಿಚಯವು ಕಣ್ಣಿನಲ್ಲಿ ಗೋಚರಿಸುತ್ತದೆ. ಸಾತ್ವಿಕ ವ್ಯಕ್ತಿಯ ಕಣ್ಣುಗಳು ತೇಜಃಪುಂಜವಾಗಿ ಹೆಚ್ಚು (ಬಿಳುಪು) ಶುಭ್ರವಾಗಿರುತ್ತವೆ. ರಾಜಸಿಯ ನೇತ್ರಗಳು ಕೆಂಪಾಗಿರುತ್ತವೆ. ತಾಮಸಿಯ ಕಂಗಳು ಕಪ್ಪಾಗಿರುತ್ತವೆ. ಕಣ್ಣುಗಳ ರೂಪವೇ ತ್ರಿಗುಣಗಳ ಪ್ರತ್ಯಕ್ಷ ಸ್ವರೂಪ. ಈ ತ್ರಿಗುಣಗಳ ಗುಣ ಧರ್ಮವು ಬಹಳ ಭಿನ್ನ ಭಿನ್ನವಾಗಿದೆ. ಇದನ್ನು ಚನ್ನಬಸವಣ್ಣನವರು ‘ಕರಣ ಹಸಿಗೆ’ಯಲ್ಲಿ ಕೆಳಗಿನಂತೆ ವಿವರಿಸಿದ್ದಾರೆ

ಸತ್ಯಂ ಜ್ಞಾನಂ ತಪೋ ಮೌನಂ

ತೋಷಶ್ಯಾಂತಿರ್ವಿವೇಕಿತಾ |

ಉತ್ಸಾಹೋ ನಿಶ್ಚಯೋ ಧೈರ್ಯಂ

ಸಾತ್ವಿಕಸ್ಯ ಚ ಲಕ್ಷಣಮ್ ||ʼʼ

ಸತ್ಯ, ಜ್ಞಾನ, ತಪ, ಮೌನ, ಹರುಷ, ಶಮೆ, ವಿವೇಕ, ಸಾಹಸ, ನಿಶ್ಚಯ, ಧೈರ್ಯ, ಈ ಹತ್ತು ಗುಣಗಳುಳ್ಳವನೇ ಸಾತ್ವಿಕ ವ್ಯಕ್ತಿಯೆನಿಸುವನು.

ಗರ್ವಃ ಕ್ರೋಧೋಽತ್ಯಹಂಕಾರಃ

ಸತಿಸಂಗಃ ಪ್ರಲಾಪನಂ |

ಅಪ್ರಿಯಂ ದಂಭಮಾತ್ಸರ್ಯೌ

ರಾಜಸಸ್ಯ ಚ ಲಕ್ಷಣಮ್ ||”

“ಗರ್ವ, ಕ್ರೋಧ, ಅತಿಯಾದ ಅಹಂಕಾರ, ವಿಷಯಸಂಗ, ವಾದ, ಅಪ್ರಿಯ ವಚನ, ದಂಭ, ಮತ್ಸರ ಈ ಎಂಟು ಗುಣಗಳು ವ್ಯಕ್ತವಾಗಿ ತೋರುವ ವ್ಯಕ್ತಿಯೇ ರಾಜಸಿಯೆನಿಸುವನು.

ಅಜ್ಞಾನ ಮೋಹ ನಿದ್ರಾಶ್ಚ

ಚಾಪಲ್ಯಂ ಬುದ್ಧಿಹೀನತಾ |

ಪಾಪಿತ್ವಂ ಪರಬಾಧಿತ್ವಂ

ತಾಮಸಸ್ಯಚ ಲಕ್ಷಣಮ್ ||ʼʼ

.

ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ  ಪಾಪಿಷ್ಠತನ, ಪರನಿಂದೆ, ಪರಹಿಂಸೆ ಈ ಎಂಟು ತಾಮಸ ವ್ಯಕ್ತಿಯ ಗುಣಗಳು. ಈ ಗುಣಗಳಿಂದ ತಾಮಸಿತನವು ಪ್ರತ್ಯಕ್ಷವಾಗುತ್ತದೆ  

ಮನೋಮಂದಿರದಲ್ಲಿ ಮುಹೂರ್ತಗೊಂಡ ಅಹಂಕಾರ ವ್ಯಕ್ತಿಯು ಈ ಮೂರು ಗುಣಗಳನ್ನಾಶ್ರಯಿಸಿ ತನ್ನ ಇರುವಿಕೆಯನ್ನು ತೋರಿಸುತ್ತದೆ. ಸಾತ್ವಿಕನಿಗೆ ಸಾತ್ವಿಕಾಹಂಕಾರ ಮೈದೋರಿದರೆ ರಾಜಸನಿಗೆ ರಾಜಸಮಯವಾಗುತ್ತದೆ, ತಾಮಸಿಗೆ ಅಂಧಃಕಾರಮಯವಾಗಿರುತ್ತದೆ. ಸಾಧು ಸಜ್ಜನರು ಸಾತ್ವಿಕತೆಯ ಸಂಕೇತವಾದರೆ. ರಾಜಸನು ರಜೋಗುಣದ ದ್ಯೋತಕವಾಗಿದ್ದಾನೆ. ಅಜ್ಞನಾದ ಕೂಡ ಮಾನವನು  ತಾಮಸ ಗುಣದ  ಪ್ರತೀಕನೆನಿಸುತ್ತಾನೆ

ಸಂತಜ್ಞಾನೇಶ್ವರರು ಭಗವದ್ಗೀತೆಯ ೧೪ನೆಯ ಗುಣತ್ರಯ ವಿಭಾಗ ಯೋಗಾಧ್ಯಾಯದ ವ್ಯಾಖ್ಯಾನದಲ್ಲಿ ತ್ರಿಗುಣಗಳ ಯಥಾರ್ಥ ಸ್ವರೂಪವನ್ನು ಸುಂದರವಾಗಿ ವರ್ಣಿಸಿದ್ದಾರೆ – “ಅರಣ್ಯದಲ್ಲಿ ಬೇಡನು ಬಲೆಹಾಕಿ ಬೇಟೆಯ ಪ್ರಾಣಿಯನ್ನು ಹಿಡಿಯುವಂತೆಯೂ ಈ ಸತ್ವಗುಣವು ಜೀವನವನ್ನು ಸುಖ ಹಾಗೂ ಜ್ಞಾನ ಇವುಗಳ ಆಶೆಹಚ್ಚಿ ಹಿಡಿದೆಳೆದು ಬಂಧಿಸುವದು. ಬಳಿಕ ಜ್ಞಾನದ ಹೆಮ್ಮೆ ಪಡುವ ಜೀವನ ‘ನನ್ನಂಥ ಜ್ಞಾನಿಯು ಯಾವನೂ ಇಲ್ಲ ಎಂಬ ಪ್ರತಿಷ್ಠೆ ಮೆರೆಯಿಸುತ್ತ ಇರುವಾಗಲೇ ತನ್ನ ವಶದಲ್ಲಿದ್ದ ಆತ್ಮ ಸುಖವನ್ನು ಕಳೆದುಕೊಳ್ಳುವನು……. ಮತ್ತು ಆ ಸತ್ತ್ವ ಜೀವನುʼʼ ನನ್ನಂಥ ಭಾಗ್ಯವಾನರಿಲ್ಲ. ನನ್ನ ಹಾಗೆ ಸುಖಿಗಳಿಲ್ಲ.” ಮುಂತಾದ ವಿಕಾರಗಳ ಅಭಿಮಾನದಿಂದ ಹಿರಿಹಿರಿ ಹಿಗ್ಗುವನು. ಇಷ್ಟೇ ಅಲ್ಲ ನನ್ನಂಥ ವಿದ್ವಾಂಸನಾವನೂ ಇಲ್ಲೆಂದು ಹೇಳುವ ಅಭಿಮಾನವೆಂಬ ಭೂತವು ಅವನ ಮೈಯಲ್ಲಿ ಸೇರುವದು. ನಾನು ಸ್ವಯಂಜ್ಞಾನ  ಸ್ವರೂಪನಿರುವೆನೆಂಬುದನ್ನು ಮರೆತುದಕ್ಕೆ ಆ ಸತ್ವಜೀವನಿಗೆ ಏನೊಂದು ವಿಷಾದವೆನಿಸುವದಿಲ್ಲ. ಆದರೆ ಅನ್ಯ ವಿಷಯ ಜ್ಞಾನದಿಂದ ಮುಗಿಲೆತ್ತರವಾಗಿ ಉಬ್ಬುವನು.”

“ಈ ಗುಣವು ಜೀವನನ್ನು ಯಾವಾಗಲೂ ರಂಜನೆಗೊಳಿಸುತ್ತಿರುವದರಿಂದಲೇ ಇದಕ್ಕೆ ರಜೋಗುಣವೆಂಬ ಹೆಸರು ಬಂದಿದೆ. ಇದು ಕಾಮಾದಿ ವಿಕಾರಗಳ ಮೂರ್ತಿಯಾಗಿರುವದು. ಜೀವನದಲ್ಲಿ ಈ ಗುಣಾಂಶ ಸೇರಿತೆಂದರೆ ಕಾಮಾದಿಗಳು ತಮಗೆ ತಾನೇ ಬಂದು ಕೂಡಿಕೊಳ್ಳುವವು. ಆದುದರಿಂದ ಆಗ ರಜೋಗುಣಿಯ ಅನಿಯಂತ್ರಿತ ಮನೋರಾಜ್ಯ ಸುರುವಾಗುವುದು…. ರಜೋಗುಣಿಯ ಹವಣಿಕೆ ಹೆಚ್ಚಾಗಿ, ದುಃಖದಾಯಕ ಸಂಗತಿಗಳೂ ಕೂಡ ಅದಕ್ಕೆ ರುಚಿಯೆನ್ನಿಸುವವು. ಈ ರಜೋಗುಣ ಜೀವನಿಗೆ ಮೇರುಗಿರಿಯಷ್ಟು ಲಾಭವಾದರೂ ಇನ್ನೂ ಹೆಚ್ಚು ಲಾಭದ ಆಸೆ ಪಡುತ್ತಿರುವದು. ಹಾಗೂ ಆ ಜೀವವು ಕವಡೀ ಕಿಮ್ಮತ್ತಿನ ಲಾಭಕ್ಕಾಗಿ ಹಂಗು ದೊರೆದು  ಹೋರಾಡುವದು……. ಮತ್ತು ದೇಹಧಾರಿಯ ಶರೀರವನ್ನು ರಜೋಗುಣವೆಂಬ ದಾರುಣವಾದ ಬಂಧನದಿಂದ ಬಿಗಿಯುವದುʼʼ.

ʼʼಈ ಗುಣದ ಪರದೆಯಿಂದ ದೃಷ್ಟಿಯು ಮಂದವಾಗುವದು. ಈ ಗುಣವು ಮೋಹರಜನೀರೂಪ ಕರಿಯ ಮೋಡದಂತೆ ಇರುವದು. ಈ ಗುಣಕ್ಕೆ ಅಜ್ಞಾನವು ಎಲ್ಲ ಬಗೆಯಿಂದ ಸಹಾಯಕಾರಿಯಾಗಿರುವದು. ಅದರಿಂದಲೇ ಜಗತ್ತು ಮೋಹಗೊಂಡು ಕುಣಿಯ ಹತ್ತುವದು. ಈ ತಮೋಗುಣವು ಅವಿಚಾರದ ಮಹಾಮಂತ್ರವೂ, ಮೂಢತೆಯೆಂಬ ಮದಿರಾಪಾತ್ರೆಯೂ, ಇಲ್ಲವೆ ಜೀವನವನ್ನು ತುಂಡರಿಸುವ ಮೂರ್ತಿವಂತ ಮೋಹನಾಸ್ತ್ರವೂ ಆಗಿರುವದು. ಅರ್ಜುನಾ ! ಇದೇ ತಮೋಗುಣದ ಲಕ್ಷಣವುʼʼ.

ಈ ಮಾತುಗಳಿಂದ ತ್ರಿಗುಣಗಳ ಸ್ವರೂಪ ಸ್ಪಷ್ಟವಾಗದೇ ಇರದು. ತ್ರಿಗುಣಗಳ ಸ್ವರೂಪವನ್ನು ಪ್ರತ್ಯೇಕವಾಗಿ ವಿವಾದಿಸಿದ್ದಾರೆ. ಆಯಾ ಗುಣಗಳ ಪರಿಸರದಲ್ಲಿ ಅದೇ ಗುಣದ ಪ್ರಭಾವ ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಹಿಂದಿನ ಋಷಿಗಳ ಆಶ್ರಮದಲ್ಲಿ ಸಾತ್ವಿಕಗುಣದ ಪ್ರಭಾವದಿಂದ ಸ್ವಭಾವತಃ ವೈರವುಳ್ಳ ಪ್ರಾಣಿಗಳೂ ಸಹ ಪರಸ್ಪರ ಮಿತ್ರರಾಗಿ ಬಾಳಿದ್ದು ಎದ್ದು ಕಾಣುತ್ತದೆ. ಇದಕ್ಕೆ ವಶಿಷ್ಠರ, ಕಣ್ವ ಮುನಿಗಳ, ಕಾದಂಬರಿಯ ಜಾಬಾಲಿ ಮುನಿಪುಂಗವರ ಆಶ್ರಮದ ಉದಾಹರಣೆಗಳು ಕಾವ್ಯಗಳಲ್ಲಿ ಜೀವಂತವಾಗಿ ಉಳಿದಿವೆ. ಹಿಂದಿನ ಮಾತೇಕೆ ? ಪೂಜ್ಯರಾದ ಈ ಕೃತಿಕರ್ತರ ಗುರುವರರೆನಿಸಿದ ಲಿಂಗನಾಯಕನ ಹಳ್ಳಿ ಚನ್ನವೀರ ಮಹಾಶಿವಯೋಗಿಗಳ, ಅಥಣಿ, ಬದರಿ, ಹಾಗೂ ಮುಂಡರಗಿ ಮಹಾಸ್ವಾಮಿಗಳವರ ದಿವ್ಯ ಚರಿತ್ರೆಯಲ್ಲಿಯೂ ಕ್ರೂರ ಪ್ರಾಣಿಗಳು ಸೇವೆ ಸಲ್ಲಿಸಿದ ದೃಷ್ಟಾಂತಗಳು ದೃಗ್ಗೋಚರವಾಗುತ್ತವೆ.

ಇನ್ನು ಶೃಂಗಾರಿಕ ವ್ಯಕ್ತಿಗಳ ಪರಿಸರದಲ್ಲಿ ಕಾಮವಿಕಾರದ ದೃಷ್ಟಾಂತಕ್ಕೆ ಕೊರತೆಯಿಲ್ಲ. ನಿತ್ಯ ಜೀವನದಲ್ಲಿ ಬೇಕಾದಷ್ಟು ಪ್ರಸಂಗಗಳು ಕಾಣಬರುತ್ತವೆ. ತಾಮಸಗುಣದ ಪರಿಸರವಂತೂ ಅಂಧಕಾರದಲ್ಲೇ ಮುಳುಗಿಸುತ್ತದೆ. ಮಹಾಕವಿ ಚಾಮರಸನು ʼ’ಪ್ರಭುಲಿಂಗ ಲೀಲೆ”ಯಲ್ಲಿ ಮಾಯಾದೇವಿಯು ಪ್ರಾದುರ್ಭಾವ ವಾಗುತ್ತಲೇ ಮುನಿಶ್ರೇಷ್ಠರ ಧೀರಮನವೂ ಚಂಚಲವಾಯಿತೆಂಬ ವಿಚಾರ  ತಾಮಸಗುಣದ ಪರಾಕಾಷ್ಠತೆಯನ್ನು ತೋರಿಸುತ್ತದೆ. ಸಾತ್ವಿಕರಿಗೂ ಒಮ್ಮೊಮ್ಮೆ ಸಾತ್ವಿಕಾಹಂಕಾರದ ಪ್ರಸಂಗಗಳು ತೋರಿಬರುತ್ತವೆ. ಅನೇಕ ಮಹಾನುಭಾವರ ಜೀವನದಲ್ಲಿ ಇವನ್ನು ನೋಡಬಹುದು. ಜಗದಣ್ಣ, ಜಗಜ್ಯೋತಿ, ಭಕ್ತಿಕಿಂಕರರೆನಿಸಿದ ಬಸವಣ್ಣನವರಿಗೂ ಅನೇಕ ಸಲ ಸಾತ್ವಿಕಾಹಂಕಾರದ ಸುಳುಹು ಹೊರಸೂಸಿದೆ.

ತ್ರಿಗುಣಗಳ ಬಣ್ಣ ಅವರವರ ಮುಖಮಂಡಲದಿಂದಲೇ ಪ್ರಕಾಶಗೊಳ್ಳುತ್ತದೆ. ಸಾತ್ವಿಕನ ನೇತ್ರಗಳು ಶುಭ್ರವೂ ತೇಜಃಪುಂಜವಾಗಿದ್ದರೆ, ರಜೋಗುಣಿಯ ಕಣ್ಣಿನಲ್ಲಿ ಕೆಂಡದಂತೆ ಕೆಂಪು ಛಾಯೆ ಸುಳಿಯುತ್ತಿರುತ್ತದೆ. ತಾಮಸಿಯ ಕಂಗಳಂತೂ  ಕರಿ ಮೋಡದಂತೆ ಮುಸುಗಿರುತ್ತವೆ. ಅವನು ನೋಡಲೂ ಭಯಾನಕವಾಗಿಯೇ ಕಾಣುವನು. ಈ ರೀತಿಯಾಗಿ ಲೌಕಿಕರ ಬಾಳಿನಲ್ಲಿ ತ್ರಿಗುಣಗಳ ಏರಿಳಿತ ವ್ಯಕ್ತವಾಗುತ್ತದೆ. ಇಂಥ ಮೂವಣ್ಣಗಳೆನಿಸಿದ ಸತ್ತ್ವ, ರಜ-ತಮೋಗುಣಗಳ ಬಾಧೆಯನ್ನು ಸದ್ಗುರುವಿನ ಕೃಪೆಯಿಂದ ಸದ್ಬೊಧೆಯಿಂದ ಹಾಗೂ ಸದಾಚಾರದಿಂದ ನಿವಾರಿಸಿಕೊಳ್ಳಬಹುದು. ಈ ಎಲ್ಲ ತನುಬಾಧೆಗಳನ್ನು, ಇಂದ್ರಿಯ ಬಾಧೆಗಳನ್ನು ಸಹಿಸಲಾರದ ಜೀವನು ತತ್ತರಿಸಿ ಹೋಗುವನು. ಸಂಸಾರದ ಬೇಗೆಯಲ್ಲಿ ಬಳಲಿ ಬೆಂದು ನೊಂದು ಸದ್ಗುರುವನ್ನು ಶರಣಾಗತನಾಗಬೇಕೆಂಬುವ ಉಪಾಯ ಹೊಳೆಯದೆ ಇರದು.

ಶಿಲೆಯ ತೆಪ್ಪವನೇರಿ | ಜಲವ ದಾಂಟುವೆನೆಂಬ

ಬಲು ಮೂಢತನವ – ತೊಲಗಿಸುತ ನೀನೆನ್ನ

ಸಲಹು ಶ್ರೀ ಗುರುವೆ ಕೃಪೆಯಾಗು.       ||೭೩ ||

ವೀರಶೈವ ಷಟ್‌ಸ್ಥಲ (ಶಿವಾದ್ವೈತ) ಸಿದ್ಧಾಂತದಲ್ಲಿ ನೂರೊಂದು ಸ್ಥಲಗಳನ್ನು ಪ್ರತಿಪಾದಿಸಿದ್ದಾರೆ. ಇದಕ್ಕೆ ‘ಏಕೋತ್ತರ ಶತಸ್ಥಲ” ಎಂಬುದಾಗಿಯೂ ಹೆಸರಿದೆ. ಕಲ್ಲುಮಠದ ಪ್ರಭುದೇವರು ವಿರಚಿತ ‘ಲಿಂಗಲೀಲಾ ವಿಲಾಸ ಚಾರಿತ್ರ”ದಲ್ಲಿ ಒಟ್ಟಿಗೆ ಹದಿನಾರು ಸ್ಥಲಗಳನ್ನು ವಿವರಿಸಿ ಅವುಗಳಲ್ಲೇ ನೂರೊಂದು ಸ್ಥಲದ ವಿಷಯವನ್ನು ಕ್ರೋಢೀಕರಿಸಿರುವಂತೆ ಬಸವಲಿಂಗ ಶರಣರು ಈ ಗುರುಕರುಣ ತ್ರಿವಿಧಿಯ ಸ್ತೋತ್ರ ತ್ರಿಪದಿಯಲ್ಲಿಯೇ ಅಷ್ಟಾವರಣವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಇದರಲ್ಲಿಯೇ ಸಕಲ ತತ್ತ್ವದ ತಿರುಳನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಶ್ರೀ ಗುರುವಿನಲ್ಲಿ ಪ್ರಾರ್ಥನಾ ರೂಪವಾದ ಆದಿಮಂಗಲ ಗೈಯುತ್ತ ʼʼನ ಗುರೋರಧಿಕಂ, ನ ಗುರೋರಧಿಕಂ ಶೃತಿ ಶಾಸನತಃ ʼʼಎಂಬ ಕೃತಿ ವಚನವನ್ನು “ನಗುರೋರಧಿಕವೆಂದು‘ ಎಂಬ ತ್ರಿಪದಿಯಲ್ಲಿ ಪ್ರತ್ಯಕ್ಷ ಶಿವನಾದ ಗುರುವಿಗಿಂತ ಅಧಿಕವಿಲ್ಲ. ಶ್ರೀ ಗುರುವೆನಿಸಿದ ಪರಮ ನಿರಂಜನ ಗುರುವರನೇ ಪ್ರಧಾನ ಪುರುಷನೆಂದುʼʼ ಪಿಂಡಸ್ಥಲ’ʼದ ನಿರೂಪಣೆ ಮಾಡಿದ್ದಾನೆ. ಮುಂದೆ

ನರಜೀವಿಗಳಿಗೋರ್ವ | ಹರನೆ ಕಾರಣಕರ್ತ

ಶರಣ ಸಂತತಿಗೆ – ಗುರುವೆ ನೀ ಕರ್ತನೆಂದು”

 ಶರಣ ಸಂತತಿಯ ಕಾರಣದ ನಿರೂಪಣೆಯ ಮೂಲಕ ʼʼಪಿಂಡಜ್ಞಾ ʼʼನವನ್ನು ತೋರಿಸಿ ಕೊಡುತ್ತಾನೆ. ಮತ್ತು ಗುರುಕರುಣೆಯ ಅವಶ್ಯಕತೆ ಹಾಗೂ ಗುರುಕರ್ತವ್ಯದ ಮರ್ಮವನ್ನು ತಿಳಿಸಿದ್ದಾನೆ. ಸಿದ್ಧಾಂತ ಶಿಖಾಮಣಿಯ

ಜಾತಸ್ಯಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯಚ ʼʼ  ॥ ೫.೫೯

“ಹುಟ್ಟಿದ ಜೀವಿಗೆ ಮರಣ ನಿಶ್ಚಿತವಾಗಿದೆ. ಅದರಂತೆ ಸತ್ತವನಿಗೆ ಹುಟ್ಟು ನಿಶ್ಚಯವಾಗಿದೆ” ಯೆಂಬುಕ್ತಿಯಂತೆ ಜನನ-ಮರಣಗಳ ಚಕ್ರದಲ್ಲಿ ಸುಳಿದು ಘಾಸಿಯಾಗುವ ಜೀವನಿಗೆ ಕಾಮ-ಕಾಲ-ಮಾಯೆಗಳ ಮಿತಿಮೀರಿದ ಉಪಟಳದಿಂದ ಸಂಸಾರ ಹೇಯದ ಅರಿವು ದೃಢವಾಗಲೆಂದು, ಪಂಚಮಹಾಭೂತಗಳಿಂದ ಹುಟ್ಟಿದ ದೇಹಕ್ಕೆ ಅಂಟಿದ ಅನೇಕ ವಿಕಾರಗಳನ್ನು ಮತ್ತು ಪಂಚೇಂದ್ರಿಯಗಳು ಪಂಚವಿಷಯ ಗಳಿಗಾಗಿ ಹಾತೊರೆಯುವ ಪರಿಯನ್ನು, ಅಂತಃಕರಣ ಚತುಷ್ಟಯದ ಬಂಧನವನ್ನು, ತ್ರಿಗುಣಗಳ ತಾಕಲಾಟವನ್ನು ತಿಳಿಯಪಡಿಸಿದ್ದಾನೆ. ಇದೆಲ್ಲವನ್ನು ಅವಗಾಹನೆಗೆ ತಂದುಕೊಳ್ಳುವ ಎಂಥ ಪಾಮರ ಮಾನವನಿಗೂ ಸಂಸಾರಹೇಯಬರುವದು ಸ್ವಾಭಾವಿಕವಾಗಿದೆ. ವೈರಾಗ್ಯಭಾವ ಬಲಿದ ಮೇಲೆ ಈ ಘೋರತರ ಸಂಸಾರ ಸಾಗರವನ್ನು ದಾಟುವದು ಹೇಗೆಂಬ ವಿಚಾರವೂ ಸುಳಿದು ಗುರು ಕಾರುಣ್ಯದ ಹಂಬಲಹುಟ್ಟಿ ಸದ್ಗುರು ಸನ್ನಿಧಿಗೆ ಆಗಮಿಸಿ ಪರಿಪರಿಯಾಗಿ ಪ್ರಾರ್ಥಿಸುತ್ತಾನೆ.

ನದಿಯನ್ನು ದಾಟಲಿಚ್ಛಿಸುವ ನರನು ಈಸುಗುಂಬಳವನ್ನೋ, ಬೆಸೆದ ಡಬ್ಬಿಯನ್ನೋ, ತೆಪ್ಪವನ್ನೋ  ಸಾಧನವನ್ನಾಗಿಟ್ಟುಕೊಳ್ಳುತ್ತಾನೆ. ಅಜ್ಞಾನಿಯು ನದಿ ದಾಟಲು ಈ ಸಾಧನಗಳನ್ನು ಬದಿಗಿರಿಸಿ ಕಲ್ಲು ಕಟ್ಟಿಕೊಂಡು ನೀರಿಗೆ ಧುಮುಕಿದರೆ ಮುಳುಗುವದು ಖಂಡಿತ. ಬಾಲಕನೂ ಸಹ ಇದನ್ನು ನೋಡಿ ನಗದಿರಲಾರ. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿದ ಮೂರ್ಖನು ಮೇಲಕ್ಕೆ ಬರುವದೂ ಇಲ್ಲ. ಆದರೆ ರಾಮಾಯಣವನ್ನು ಓದಿದವರಿಗೆ ಅಥವಾ ಕೇಳಿದವರಿಗೆ ಈ ಮಾತು ಆಶ್ಚರ್ಯವನ್ನುಂಟು ಮಾಡಬಹುದು. ಸೀತೆಯನ್ನು ಕರೆತರುವದಕ್ಕಾಗಿ ರಾಮನು ಲಂಕಾ ನಗರಿಗೆ ಹೋಗಬೇಕಾಯಿತು. ಆ ಊರು ಸೇರಲು ಸಮುದ್ರ ಆತಂಕವೊಡ್ಡಿದೆ. ದಾಟುವ ಬಗೆ ಹೇಗೆಂದು ಚಿಂತಿಸುತ್ತಿರುವಾಗ ಬ್ರಹ್ಮಚಾರಿಯೂ ಆತ್ಮಜ್ಞಾನಿಯೂ ಅನನ್ಯ ಭಕ್ತಿವಂತನೂ, ಪರಾಕ್ರಮಿಯೂ ಆದ ಹನುಮಂತನು ಕಲ್ಲಿನ ಮೇಲೆ ದೇವನಾದ ರಾಮನ ಹೆಸರನ್ನು ಬರೆದು ಸಮುದ್ರದಲ್ಲಿ ಬಿಡುತ್ತಿರಲು ಅವೆಲ್ಲ ತೇಲಿ ಸೇತುವೆಗೆ ಸಾಧನವಾದವು. ರಾಮಚಂದ್ರನಿಗೆ ಆಶ್ಚರ್ಯವೆನಿಸಿ ಸ್ವತಃ ತಾನೇ ಕಲ್ಲು ಬಿಟ್ಟನು. ಅದು ಮುಳಗಿ ಹೋಯಿತು. ಭಗವಂತನನ್ನು ನಂಬಿ ಮಾಡಿದ ಕೆಲಸವು ಯಶಸ್ವಿಯಾಗುವದು. ನಾನೇ ದೊಡ್ಡವನು, ಸಮರ್ಥನು, ದೇವನೆಂಬ ಅಹಂಭಾವ ದಿಂದ ಮಾಡುವ ಕಾರ್ಯವು ಜಡವಾಗುವದು. ಜಡವಾಗಿ ತೇಲದೆ ಮುಳುಗಿ ಹೋಗುವದು. ಆ ಕಾರ್ಯ ಯಶಸ್ವಿಯಾಗದು. ಈ ಜಡತನವೇ ಸಂಸಾರದ ಪರಿಯಾಯವೆನಿಸಿದೆ.  –

ದೇಹದ ಉತ್ಪತ್ತಿಯ ಕಾಲಕ್ಕೇನೆ ಜಡತನದ ಸಂಘರ್ಷ ಪ್ರಾರಂಭವಾಗಿ ಜೀವನಾಂತ್ಯದವರೆಗೂ ತಪ್ಪದು. ಅದಿಲ್ಲದೆ ಜೀವನವಾಗದು. ‘ಪರಮಾರ್ಥಗೀತೆ’ ಯಲ್ಲಿ ನಿಜಗುಣಗರು

 “ಅಗಳೆ ಕೇಳಾ ರತಿಮಥನದೊಳು |

ಯೋಗವಹುದು ರೇತಂ ರಕ್ತದೊಳು ||

ಮತ್ತಾಯೋಗವಿಧಂ ತನುವಿಂಗೆ !

ಬಿತ್ತದರಿಂ ಸಂಸ್ಕೃತಿ ಜೀವಂಗೆ || ೪ | ೪ ||

“ತಂದೆ-ತಾಯಿಯ ರೇತೋ ರಕ್ತಗಳ ಸಂಯೋಗದಿಂದ ಶರೀರ ರಚನೆಯಾಗಿ, ಜೀವನು ‘ಈ ದೇಹವೇ ನನ್ನ’ದೆಂಬ ಬುದ್ಧಿಯಿಂದ ಪುಣ್ಯ-ಪಾಪಗಳನ್ನು ಮಾಡುತ್ತ  ದುಃಖಿತನಾಗಿ ಪುನಃ ಪುನಃ ಜನನ ಮರಣ ರೂಪ ಸಂಸಾರವನ್ನು ಹೊಂದುವನೆಂದು ಸಂಸಾರದ ರೀತಿಯನ್ನು ತಿಳಿಸಿದ್ದಾರೆ

ತನುವಿಕಾರ ಮನವಿಕಾರ ಜನನ-ಮರಣಸ್ಥಿತಿ ಕಾರಣ

ಹೊನ್ನತೋರಿದೆ ಜಗದ ಕಣ್ಣ ಮೊದಲಿಗೆ,

ಹೆಣ್ಣ ಸುಳಿಸಿದೆ ಜಗದ ಕಣ್ಣ ಮೊದಲಿಗೆ,

ಮಣ್ಣ ಹರವಿದೆ ಜಗದ ಕಣ್ಣ ಮೊದಲಿಗೆ,

ತನ್ನುವ ತಪ್ಪಿಸಿ ಜಗವ ಸಂಸಾರಕ್ಕೊಪ್ಪಿಸಿ

ನುಣ್ಣನೆ ಹೋದನುಪಾಯದಿ ಸೊಡ್ಡಳಾ !

ಕೆಲಸಕ್ಕೆ ಹೋಗುವ ತಂದೆ ತಾಯಿಗಳು ಮಕ್ಕಳಿಗೆ ಬಗೆಬಗೆಯ ಆಟಿಕೆಗಳನ್ನಿತ್ತು ತಾವು ಅವರಿಂದ ಬಿಡುಗಡೆಯಾಗುತ್ತಾರೆ. ಇದರಂತೆ ಪರಶಿವನು ತನ್ನಂಶೀಭೂತರಾದ ಜೀವಾತ್ಮರಿಗೆ ಹೊನ್ನು, ಹೆಣ್ಣು, ಮಣ್ಣುಗಳೆಂಬ ಸಾಂಸಾರಿಕ ವಿಷಯ ಸುಖಕ್ಕೆ ಮೆಚ್ಚಿಸಿ, ಮರುಳಗೊಳಿಸಿ ಕೊನೆಗೆ ಜನನ-ಮರಣಗಳನ್ನಾವರಿಸಿ ತಾನು ಮಾತ್ರ ಭವವಿರಹಿತನಾಗಿ ನಿರ್ಲಿಪ್ತನಾಗಿಯೇ ಸೊಡ್ಡಳ ಬಾಚರಸನ ಮಹಾದೇವನು ಮೆರೆಯುತ್ತಾನೆಂದು ಸೊಡ್ಡಳ ಬಾಚರಸರು ಸಂಸಾರದ ವಿಚಿತ್ರತೆಯನ್ನು ಚಿತ್ರಿಸಿದ್ದಾರೆ. ಶಿವನು ಲೀಲಾಮಯ ನಾಗಿದ್ದರೂ ಉಪಾಯದಿಂದ ನುಣ್ಣನೆ ನುಣುಚಿಗೊಂಡಿರುತ್ತಾನೆ.

ಇಂಥ ವಿಷಯ ಸಂಸಾರ ಸಾಗರ ಅಪಾರವಾಗಿದೆ. ಇದನ್ನು ಈಸಿ ಜಯಿಸುವದು ಬಲು ದುಸ್ತರವಾದುದು. ಅದರಲ್ಲಿಯೂ ಶಿವಕವಿ ನಿರೂಪಿಸಿರುವಂತೆ ಶಿಲೆಯ ತೆಪ್ಪವನೇರಿ ಜಲವದಾ೦ಟಲು ಪ್ರಯತ್ನಿಸುವದು ಅಸಾಧ್ಯಕಾರ್ಯವೇ ಸರಿ. ಶಿಲೆಯ ತೆಪ್ಪವೆಂದರೆ ಅಜ್ಞಾನದಿಂದ ಆವರಿಸಿದ ನನ್ನದೆಂಬ ಅಹಂಭಾವವುಳ್ಳ ಜಡದೇಹ. ಇಂಥ ಭಾರವಾದ ಶರೀರವನ್ನು ಕಟ್ಟಿಕೊಂಡು ವಿಷಮವಾದ ಸಂಸಾರ ಸಾಗರವನ್ನು ದಾಟುತ್ತೇನೆಂಬುದು ಮೂಢತನವಲ್ಲದೆ ಮತ್ತೇನು ? ಆದರೆ ಈ ತನುವಿಲ್ಲದೆ ಮುಕ್ತಿಯ ಮಾರ್ಗವೂ ಇಲ್ಲ. ಈ ವಿಷಯವನ್ನು ೫೫ನೆಯ ತ್ರಿಪದಿಯಲ್ಲಿ ಮನನ ಮಾಡಿಕೊಂಡಿದ್ದೇವೆ. ಮಾನವತನವು ಪರಮ ಪವಿತ್ರವಾದುದು. ಅಜ್ಞಾನದಿಂದ ಅದಕ್ಕೆ ಜಡತ್ವ ಜೋಡಾಗುತ್ತದೆ. ಇಂಥ ಜಡತ್ವವನ್ನು ಸದ್ಗುರು ಕರುಣೆಯಿಲ್ಲದೆ ನೀಗಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅದುಕಾರಣ ಗುರುಸನ್ನಿಧಿಯನ್ನು ಆಶ್ರಯಿಸಿ ಸದ್ಬೋಧೆಯಿಂದ ಅಜ್ಞಾನವನ್ನು ನೀಗಿಸಿಕೊಂಡು ತನುವಿನ ಜಡತ್ವವನ್ನು ಕಳೆದು ಕೊಳ್ಳಬೇಕು. ಸುಜ್ಞಾನಿಯಾಗಿ ಶಿವಲಿಂಗವನ್ನು ಪಡೆಯಬೇಕು. ಈ ಇಷ್ಟಲಿಂಗವೆಂಬ ತೆಪ್ಪವನ್ನು ಆಶ್ರಯಿಸಿದರೆ ಸಂಸಾರಸಾಗರ ಸಸಾರವಾದೀತು. ಸ್ವತಂತ್ರಸಿದ್ಧಲಿಂಗ ಯತಿಗಳು –

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ

ಅಂಧಕಾರ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ

ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿದ್ದರಯ್ಯಾ

ಅಡವಿಯ ಹೊಕ್ಕ ಶಿಶುವಿನಂತೆ.

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ,

ನಿಮ್ಮ ಕರುಣವಾಗದನ್ನಕ್ಕೆ ಬಳಲುತ್ತಿದ್ದರಯ್ಯಾ ಹೊಲಬನರಿಯದೆ”.

“ಅಜ್ಞಾನವೆಂಬ ಕತ್ತಲೆಯಲ್ಲಿ ದಾರಿಗಾಣದೆ; ಹೊಲಬನರಿಯದೆ ಜೀವಿಯು ಬಳಲುತ್ತಾನೆ. ಕಳವಳಗೊಳ್ಳುತ್ತಾನೆ. ಅರಣ್ಯವನ್ನು ಹೊಕ್ಕು ಶಿಶು ಕಿಂಕರ್ತವ್ಯ ಮೂಢವಾಗುವಂತೆ ಜೀವನು ಅಜ್ಞಾನದಿಂದ ಭ್ರಾಂತನಾಗುತ್ತಾನೆ. ಗುರುವಿನ ಕರುಣೆಯಾಗದೆ ಗುರಿಯನ್ನು ಗುರುತಿಸಲಾಗದು. ಅದುಕಾರಣ ಪರಶಿವ ಸ್ವರೂಪಿಯಾದ ಸದ್ಗುರುವಿನ ಕೃಪೆ ಅತ್ಯವಶ್ಯವಾಗಿ ಬೇಕೆಂಬುದನ್ನು ಮನನ ಮಾಡಿಕೊಟ್ಟಿದ್ದಾರೆ.

ಗುರುಕರುಣೆಯನ್ನು ಪಡೆಯಲಿಚ್ಛಿಸುವ ಜೀವಾತ್ಮನು ಶ್ರೀಗುರುಸನ್ನಿಧಿಗೆ ಬರಿಗೈಯಿಂದ ಹೋಗಬಾರದು. ಮುಮುಕ್ಷವಾದವನು-

ಸ ಗುರುಮೇವಾಭಿಗಚ್ಛೇತ್ ಸಮಿತ್‌ಪಾಣಿಃ

ಶ್ರೋತ್ರಿಯಂ ಬ್ರಹ್ಮನಿಷ್ಠಮ್ ।।”

ಮುಂಡಕೋಪನಿಷತ್ || ೧-೨–೧೨ ||

ದರ್ಭೆಯನ್ನು ಕೈಯಲ್ಲಿ ಹಿಡಿದುಕೊಂಡು (ಆತ್ಮನನ್ನು ಅರಿಯಲು) ಶಾಸ್ತ್ರನಿಷ್ಠನೂ ಬ್ರಹ್ಮವಿಜ್ಞಾನಿಯೂ ಆದ ಗುರುವನ್ನು ಹೊಂದಬೇಕೆಂಬ ಶ್ರುತಿಪ್ರಮಾಣದಂತೆ ಶಿವ ಕವಿಯು ತನ್ನ ಅಮಂಗಲ (ಅಜ್ಞಾನಯುತ) ಬುದ್ಧಿಯನ್ನು  ಕಳೆದುಕೊಳ್ಳುವದಕ್ಕಾಗಿಯೂ, ಪ್ರತ್ಯುತ್ತರ ನೀಡಿದ ಕಾರಣ ಗುರುಕೋಪವನ್ನು ಪರಿಹರಿಸಿಕೊಳ್ಳುವದಕ್ಕಾಗಿಯೂ ಭಕ್ತಿಯನ್ನೇ ಮುಂದಿಟ್ಟುಕೊಂಡು ಮಹಾಜ್ಞಾನ ನಿಧಿಯಾದ, ನಡೆನುಡಿಯೊಂದಾದ ನಿರಾಭಾರಿ ನಿರಂಜನಗುರು ಚನ್ನವೀರೇಶ್ವರನ ಸನ್ನಿಧಿಗೆ ಬಂದಿದ್ದಾನೆ. ಮೂಢತನವನ್ನು ತೊಲಗಿಸಲು ಪ್ರಾರ್ಥಿಸಿದ್ದಾನೆ. ಸದ್ಗುರುವನ್ನಲ್ಲದೆ, ಮತ್ತಿನ್ನಾರನ್ನು ಬೇಡಬೇಕು ! ಕಳೆದುಕೊಂಡಲ್ಲಿ ಹುಡುಕಿದರೆ ತನ್ನ ವಸ್ತು ದೊರೆಯುವಂತೆ ಆತ್ಮ ಜ್ಞಾನಿಯಲ್ಲಿಯೇ ಆತ್ಮಜ್ಞಾನವನ್ನು ಬೇಡಬೇಕು. ಸದ್ಗತಿಯನ್ನು ಸಾಧಿಸಬೇಕು. ಶಿವಕವಿಯ ಪ್ರಾರ್ಥನೆ ವ್ಯಕ್ತಿಗತವಾದುದಲ್ಲ. ಸಮಸ್ತ ಶಿಷ್ಯರಿಗೂ ಸಮನ್ವಯವಾಗುವಂಥಹದು. ಸಕಲರೂ ಇದನ್ನು ಅನುಸರಿಸಬೇಕು. ಆದರ್ಶವನ್ನಾಗಿ ಮಾಡಿಕೊಳ್ಳಬೇಕು.

ಕಾಯ ಕರ್ಮಗಳೆಂಬ | ಮಾಯ ಸಂಸಾರವನು

ಹೇಯವನೆ ಮಾಡಿ- *ಪ್ರಿಯದಿಂ ಪಾಲಿಸುವ

**ಐಯ್ಯ ಶ್ರೀಗುರುವೆ ಕೃಪೆಯಾಗು        ||೭೪ ||

ಪ್ರಿಯದಿಂದ ಪಾಲಿಸಯ್ಯ’ʼ ಎಂಬ ಪಾಠಾಂತರವೂ ಇದೆ. ‘ಪಾಲಿಸಯ್ಯ’ ಎಂಬ ಪದವು ಶಿಷ್ಯನ ಬೇಡಿಕೆಯನ್ನು ವ್ಯಕ್ತಗೊಳಿಸುತ್ತದೆ. ಹಿಂದಿನ ತ್ರಿಪದಿಯಲ್ಲಿʼʼ ಬಲು ಮೂಢತನವ- ತೊಲಗಿಸುತ ನೀನೆನ್ನ ಸಲಹು” ಎಂದು ಬಿನ್ನಹಮಾಡಿ ಕೊಂಡಮೇಲೆ ಶ್ರೀಗುರುವು ಅವಶ್ಯವಾಗಿ ಕರುಣೆದೋರುವನೆಂಬ ವಿಶ್ವಾಸ ಇಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿ ಈ ಮಾಯಾಸಂಸಾರವನ್ನು ಹೇಯಮಾಡಿ ನನ್ನನ್ನು ಪ್ರಿಯದಿಂ ಪಾಲಿಸುವ ಐಯ್ಯ ಶ್ರೀಗುರುವೆಂಬ ಪದಪ್ರಯೋಗವು ಸಮಂಜಸವೇ ಆಗಿದೆ. ಒಡೆಯನಾದ ಶ್ರೀಗುರು ಕೃಪೆಮಾಡುವನೆಂಬ ವಿಶ್ವಾಸ ಶಿಷ್ಯನಲ್ಲಿ ಅವಶ್ಯ ಬೇಕು. ನಂಬಿದವನಿಗೆ ಇಂಬು ದೊರೆಯುವದು.

ಕಾಯವು ತಂದೆ ತಾಯಿಗಳ ಸಂಯೋಗ ಕರ್ಮದಲ್ಲಿಯೇ ಜನಿಸುತ್ತದೆ. ಅದಕ್ಕಾಗಿ ಕಾಯದ ಉತ್ಪತ್ತಿಯಲ್ಲಿಯೇ ಕರ್ಮ ಬೆನ್ನುಹತ್ತಿದೆ. ಕಾಯದ ಕ್ರಿಯೆಗೆ ಅನೇಕ ಆಕಾರಗಳು ಅನುಸರಿಸುತ್ತವೆ. ಒಂಬತ್ತು ತಿಂಗಳು ಒಂಬತ್ತು ದಿನಕಳೆದ ಮೇಲೆ ಕಾಯವು ಕರ್ಮ ಭೂಮಿಯಲ್ಲಿ ಕಾಲಿಕ್ಕುತ್ತದೆ. ಶರೀರವು ಸಿದ್ಧವಾಗುವ ಪರಿಯನ್ನು ನಿಜಗುಣರು ತಮ್ಮ ಪರಮಾರ್ಥಗೀತೆಯ ನಾಲ್ಕನೆಯ ಗತಿಯಲ್ಲಿ ವಿವರಿಸಿದ್ದಾರೆ.

ಮಲವೆರಡವು ಬೆರದೊಂದು ದಿನಕ್ಕೆ |

ಕಲಲಂ ಬುದ್ಬುವೈದು ದಿನಕ್ಕೆ II

ಪತ್ತು ದಿನಕೆ ಕಂದಾಕೃತಿಯದಕೆ |

ಮತ್ತೆಯು ದಿನದಶ-ಪಂಚಕ ಬಲಿಕೆ ||

ತಲೆ ತೋಳ್ತೊಡೆ ಸರ್ವಾಂಗ ತತಿಗಳು |

ಬೆಳೆವವು ಚೌಮಾಸಾಂತ ಗತಿಯೊಳು ||

ನವಿರ ಕುಳಿಗಳೆಲುಗಳು ಚಲನೆಗಳು

ಸವನಿಪವೈದಾರೇಳ್ಮಾಸದೊಳು ||

ಪೂರ್ವಸ್ಮರಣಂ ಜನಿಪಾಯಾಸ |

 ಸಾರ್ವಮದೆಂಟು ನವಕ್ರಮ ಮಾಸ |

ಸೂತಿಮರುತನಿಂದಿದು ಜನಿಯಕ್ಕು

ಈ ತೆರದಿಂ ಪಿಂಡೋದಯವಕ್ಕು || ೫ ||

ತಂದೆ ತಾಯಿಗಳ ಮಲರೂಪಿ ರೇತೋರಕ್ತಗಳು ಕೂಡಿಕೊಂಡು ಮೊದಲನೆ ದಿನದಲ್ಲಿ ಕಲಲವಾಗುವದು. ಅಂದರೆ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣ ದಂತಾಗುವದು. ಐದನೇ ದಿನದಲ್ಲಿ ಗುಳ್ಳೆಗಳಾಕಾರವಾಗುವದು. ನಂತರ ಹತ್ತು  ದಿವಸಗಳಲ್ಲಿ ಅದು ಒಂದು ದುಂಡಗಡ್ಡೆ ಅಥವಾ ಅನ್ನದ ಉಂಡೆಯಂತಾಗುವದು. ಹದಿನೈದನೇ ದಿನಕ್ಕೆ ಸ್ವಲ್ಪು ಬೆಳೆದು ಉದ್ದಾಗುವದು. ಆ ಮೇಲೆ ಸುಮಾರು ನಾಲ್ಕು ತಿಂಗಳು ಮುಗಿಯುತ್ತಿರಲು ತಲೆ, ತೋಳು, ಕೈ, ಕಾಲುಗಳು, ಹೊಟ್ಟೆ ಮೊದಲಾದ ಅವಯವಗಳು ಹುಟ್ಟುವವು. ಮುಂದೆ ಐದು ಆರು ಏಳು ತಿಂಗಳುಗಳಲ್ಲಿ ಕೂದಲುಗಳು, ಹುಟ್ಟಿ (ಶರೀರಕ್ಕೆ ತೂತುಗಳು, ಎಲುವುಗಳು ಉಂಟಾಗುವವಲ್ಲದೆ ಚೇತನ ಪ್ರಾರಂಭವಾಗುವದು. ಮುಂದಿನ ಎಂಟನೇ ತಿಂಗಳಲ್ಲಿ ಜ್ಞಾನೋದಯವಾಗಿ ಹಿಂದಿನ ಜನ್ಮಂಗಳ ಸ್ಮರಣೆ ಹುಟ್ಟುವದು. ಗರ್ಭಾಶಯದ ಕಷ್ಟ ಪ್ರಾಪ್ತವಾಗುವದು. ೨೮ನೆಯ ತ್ರಿಪದಿಯ ವಿವರಣೆಯಲ್ಲಿ ವಿವರಿಸಿದಂತೆ ಜೀವನು ಶಿವನಲ್ಲಿ ಮೊರೆಯಿಡುವನು. ಅಂತೆಯೇ ಏಂಟನೆ ತಿಂಗಳಲ್ಲಿ ವೀರಶೈವರು ಗರ್ಭಸ್ಥಶಿಶುವಿಗೆ ಲಿಂಗ ಸಂಸ್ಕಾರ ಮಾಡಿಸುವರು) ನವಮಾಸಗಳು ತುಂಬುತ್ತಲೇ ಪ್ರಸೂತಿ ವಾಯುವಿನಿಂದ ಶರೀರವು ಭೂಮಿಯಲ್ಲಿ ಅವಿರ್ಭವಿಸುವದು. ಗರ್ಭವತಿಯಾದ ತಾಯಿಯು ಅತ್ಯಂತ ಜಾಗರೂಕಳಾಗಿ ಗರ್ಭದ ಶಿಶುವಿನ ರಕ್ಷಣೆ ಮಾಡಬೇಕಾಗುವದು. ಹೊಟ್ಟೆಯೊಳಗಿನ ಗರ್ಭವು ತಾಯಿಯ ಮನೋ ಮೂಲಕ ಅನೇಕ ವಿಷಯಗಳನ್ನು ಇಚ್ಛಿಸುತ್ತದೆ. ಇಂಥ ತಾಯಿಯ ಬಯಕೆಯನ್ನು ಪೂರೈಸಬೇಕಾಗುವದು. ಆ ಬಯಕೆಗಳನ್ನು ಪೂರ್ಣ ಮಾಡದಿದ್ದರೆ ಗರ್ಭವು ಅವಯವಗಳಿಂದ ಹೀನವಾಗಿಯೂ ಅಶಕ್ತವಾಗಿಯೂ  ಬುದ್ಧಿಮಾಂದ್ಯವುಳ್ಳದ್ದಾಗಿಯೂ ಬಹುಕಷ್ಟದಿಂದ ಹುಟ್ಟುತ್ತದೆಂದು ಅನುಭವಿಗಳು ಹೇಳುತ್ತಾರೆ. ಆದ್ದರಿಂದ ಗರ್ಭಿಣಿಯರಿಗೆ ಅನುಕೂಲ ಮಾಡಿಕೊಡಬೇಕು. ತಾಯಿಯು ಉತ್ತಮ ಭಾವನೆಗಳಿಂದ ಗರ್ಭವನ್ನು ಬೆಳೆಯಿಸಿ ಶ್ರೇಷ್ಠನಾದ ಪುತ್ರನನ್ನು ಪಡೆಯ ಬಹುದೆಂಬುದು ಅನೇಕ ಉದಾಹರಣೆಗಳಿಂದ ತಿಳಿದುಬರುತ್ತದೆ. ಧರ್ಮಾಭಿಮಾನವುಳ್ಳ ತಾಯಿಯು ಧರ್ಮಾತ್ಮನನ್ನು ಹಡೆಯುವಳು. ರಾಷ್ಟ್ರಾಭಿಮಾನವುಳ್ಳ ಮಾತೆಯು ರಾಷ್ಟ್ರೊದ್ಧಾರಕನನ್ನೇ ಹೆರುವಳು.

ಶಿವನಲ್ಲಿ ಪ್ರಾರ್ಥಿಸಿ ಹಿಂದಿನ ಕರ್ಮವನ್ನೆಲ್ಲ ಸ್ಮರಿಸಿ ಈ ಭವ ಸಾಕೆಂದು ಬೇಸತ್ತು ಶಿಶುವು ಸುಮ್ಮನೆ ಗರ್ಭಾಸನದಲ್ಲಿ ಕುಳಿತುಕೊಂಡಿರುತ್ತಿರಲು ಕೋಟಿಸಿಡ್ಲು ಹೊಡೆದಂತೆ ಪ್ರಸೂತಿಗಾಳಿಯ ಅಘಾತಕ್ಕೆ ಸಿಕ್ಕು ಕೆಳಮುಖಮಾಡಿ ಬಹು ಕಷ್ಟದಿಂದ ಜರಾಯು ಚೀಲವನ್ನು ಹರಿದು ಯೋನಿಯ ಮುಖಾಂತರ ಹೊರಬರುವದು. ಆ ವಾಯುವಿನ ಹೊಡೆತಕ್ಕೆ ಒಳಗಾಗಿ ಜ್ಞಾನವೆಲ್ಲ ಮರೆತುಹೋಗಿ ಅಜ್ಞಾನದಿಂದ ಬಾಧೆಗಳು  ಪ್ರಾರಂಭವಾಗುವವು. ಕಾಯ ಬೆಳೆದಂತೆ ಕರ್ಮಗಳನ್ನು ಮಾಡಬೇಕಾಗುವದು.  ಅದರಿ೦ದ ಸುಖ-ದುಃಖಗಳು ಲಭ್ಯವಾಗುವವು. ಈ ವಿಚಾರವನ್ನು ನಿಜಗುಣರು ಇದೇ”ಪರಮಾರ್ಥಗೀತೆ”ಯ ಆರನೆಯ ಗತಿಯಲ್ಲಿ –

ಕರ್ಮ ವ್ಯವಹಾರವೇ ಮುನ್ನವನು |

ಕರ್ಮವ ಮಾಡಿದನದರಿಂದವನು ||

ಜನನಾಂತರವನು ಬಿಡದೈದುವನು |

ಜನಿಸಿದ ಕರ್ಮ ಫಲವನುಣುತಿಹನು ||

ಅಂತಾ ಕರ್ಮವೆ ಕಾರಣಮಾಗಿ|

ಮುಂತಿಹ ಸೃಷ್ಟಿಯೆ ಕಾರ್ಯಮದಾಗಿ ||

ಆ ಕಾರ್ಯವು ಕಾರಣ ವಶವಾಗಿ |

ಲೋಕಂ ಕೆಡುವುದು ದುಃಖಿತಮಾಗಿ || ೬-೨ |

ಶರೀರಕ್ಕೆ ಕರ್ಮವೇ ಮುಖ್ಯ. ಈ ಕರ್ಮದಿಂದಲೇ ಜನನ ಮರಣ, ಸುಖ ದುಃಖಗಳೆಂಬ ವಿಚಾರವನ್ನು ಸರಳವಾಗಿ ಪ್ರತಿಪಾದಿಸಿರುವರು.

ದೇಹವನ್ನು ಧರಿಸಿದ ದೇಹಿಗೆ ಕರ್ಮಬಲದಿಂದ ದುಃಖತ್ರಯಗಳು ಉಂಟಾಗುವವು. ಈ ವಿಚಾರವನ್ನು ಸಿದ್ಧಾಂತ ಶಿಖಾಮಣಿ’ಯಲ್ಲಿ ಶಿವಯೋಗಿ ಶಿವಾಚಾರ್ಯರು-

ಕರ್ಮ ಮೂಲೇನ ದುಃಖೇನ ಪೀಡ್ಯಮಾನಸ್ಯದೇಹಿನಃ

ಆಧ್ಯಾತ್ಮಿಕಾದಿನಾ ನಿತ್ಯಂ ಕುತ್ರ ವಿಶ್ರಾಂತಿರವಾಪ್ಯತೇ || ೫೬೨ ॥

ಆಧ್ಯಾತ್ಮಿಕಂ ತು ಪ್ರಥಮಂ ದ್ವಿತೀಯಂ ಚಾಧಿಭೌತಿಕಮ್ |

ಆದಿದೈವಿಕಮನ್ಯಚ್ಚ ದುಖಃತ್ರಯಮಿದಂ ಸ್ಮೃತಮ್ || ೫೬೩ ||

ಎಂದು ಪ್ರತಿಪಾದಿಸಿದ್ದಾರೆ. ಜೀವನ ದುಃಖಕ್ಕೆ ಮೂಲವಾದದು ಕರ್ಮ. ಅದರಿಂದ ಪೀಡಿತನಾದ ದೇಹಿಗೆ ವಿಶ್ರಾಂತಿಯಿಲ್ಲ ; ಸುಖವಿಲ್ಲ. ಈ ಕರ್ಮಗಳು ಆಧ್ಯಾತ್ಮಿಕ, ಆಧಿಭೌತಿಕ ಹಾಗೂ ಆದಿದೈವಿಕವೆಂದು ಮೂಬಗೆಯಾಗಿವೆ. ಆಧ್ಯಾತ್ಮಿಕ ದುಃಖವು ಬಾಹ್ಯ-ಅಭ್ಯಂತರವೆಂದು ಇಬ್ಬಗೆ, ವಾತ-ಪಿತ್ತ ಶ್ಲೇಷ್ಮಾ (ಕಫ)ದಿಗಳಿಂದ ಉತ್ಪನ್ನ ವಾಗುವ ದುಃಖವೇ ಬಾಹ್ಯಾಧ್ಯಾತ್ಮಿಕ ದುಃಖವೆನಿಸಿಕೊಳ್ಳುವದು. ರಾಗ-ದ್ವೇಷ- ಕಾಮಕ್ರೋಧಾದಿಗಳಿಂದ ಉತ್ಪನ್ನವಾದ ದುಃಖವು ಅಭ್ಯಂತರ ಆಧ್ಯಾತ್ಮಿಕ ದುಃಖವೆನಿಸುವದು. ರಾಜ-ಮಾನವ- ಪಶು -ಮೃಗ -ಸರ್ಪ ಮೊದಲಾದ ಭೌತಿಕ ವಸ್ತುಗಳಿಂದಾಗುವ ದುಃಖಕ್ಕೆ ಆಧಿಭೌತಿಕವೆಂದು ಹೆಸರು. ಯಕ್ಷ, ರಾಕ್ಷಸ, ಭೂತ ಪಿಶಾಚಿ ನವಗ್ರಹ ಇತ್ಯಾದಿಗಳಿಂದಾಗುವ ದುಃಖವು ಅಧಿದೈವಿಕ ದುಃಖವೆಂದು ನಾಮ ಎಂದಿದೆ. ಸಾಂಖ್ಯರು ಸಹ ದುಃಖತ್ರಯವನ್ನು ಮನ್ನಿಸಿ ಇವುಗಳನ್ನು ಹೋಗಲಾಡಿಸುವದಕ್ಕಾಗಿಯೇ ಶಾಸ್ತ್ರದ ಪ್ರವೃತ್ತಿಯಾಗಿರುವದಾಗಿ ಹೇಳುತ್ತಾರೆ. ಸಾಂಖ್ಯತತ್ತ್ವಕೌಮುದಿ”ಯಲ್ಲಿ ಆಧ್ಯಾತ್ಮಿಕ ದುಃಖದ್ವಂದ್ವಕ್ಕೆ ಶಾರೀರಿಕ ಮಾನಸೆಕವೆಂದು ಕರೆದಿದ್ದಾರೆ. ಶರೀರವು ಬಾಹ್ಯವಸ್ತು, ಮನವು ಆಂತರಿಕವೇ ಆಗಿದೆ.

ಈ ತೆರನಾಗಿ ಮಾನವನಿಗೆ ತನ್ನ ಕಾಯ, ಕಾಯದಿಂದಾಗುವ ಕರ್ಮ ಮತ್ತು ಮಾಯಪಾಶ ಇವು ಬಂಧನಕಾರಿಯಾಗುವವು. ಅವನು ಅಲ್ಪಸುಖಕ್ಕಾಗಿ  ಅನಂತದುಃಖಗಳನ್ನು ಎದುರಿಸುತ್ತಾನೆ. ಎಂಥ ದುಃಖದಾಯಕ ಸಮಯದಲ್ಲಿಯೂ ಅತ್ಯಲ್ಪ ಸುಖಕ್ಕೆ ʼʼಹಾವಿನಬಾಯ ಕಪ್ಪೆ ಹಾರುವ ನೊಣಕ್ಕೆ ಆಶೆಮಾಡುವಂತೆ,ʼʼ ಹಂಬಲಿಸುವನು. *ಶೂಲವನೇರುವ ಕಳ್ಳ ಸಾಯುವನೆಂಬ ಪರಿವೆಯಿಲ್ಲದೆ ಹಾಲೋಗರಕ್ಕೆ ಆಶಿಸುವಂತೆ” ಜೀವಾತ್ಮನು ಅಧೋಮುಖ ಇಂದ್ರಿಯಗಳ ಚಾಪಲ್ಯದಿಂದ ವಿಷಯಗಳನ್ನೇ ಬಯಸಿ ಬಂಧಿತನಾಗುತ್ತಾನೆ. ವಿಷಯ ಸಾಮೀಪ್ಯದಲ್ಲಿ ಎಂಥ ದುಃಖವನ್ನಾದರೂ ತಾತ್ಕಾಲಿಕವಾಗಿ ಮರೆಯುವನು. ಈ ವಿಚಾರದಲ್ಲಿ ಶರಣ ಚಂದಿಮರಸನ ವಚನ ಅತ್ಯಂತ ಸುಂದರವಾದ ಉದಾಹರಣೆಯಾಗಬಲ್ಲುದು. ವಿಷಯ ಸುಖದ ಚಮತ್ಕಾರಿಕೆಯನ್ನು ಅವಲೋಕಿಸಬಹುದು.

ಬಟ್ಟೆಗೊಂಡು ವೋಗುತ್ತಿಪ್ಪ ಮನುಜನೊಬ್ಬ

ಹುಲಿ, ಕಾಡಗಿಚ್ಚು, ರಕ್ಕಸಿ ಕಾಡಾನೆಗಳು

 ನಾಲ್ಕು ದೆಸೆಯಟ್ಟುತ್ತ ಬರೆ ಕಂಡು,

 ಭರದಿಂದ ಹೋಗದೆಸೆಯಿಲ್ಲದೆ, ಭಾವಿಯ ಕಂಡು,

 ತಲೆಯನೂರಿ ಬೀಳುವಲ್ಲಿ, ಹಾವಕಂಡು,

 ಇಲಿಕಡಿದ ಬಳ್ಳಿಯ ಹಿಡಿದು ನಿಲೆ,

 ಜೇನ ಹುಳುಗಳು ಮೈಯನೂರುವಾಗ

ಮೂಗಿನ ತುದಿಯಲ್ಲಿ ಒಂದು ಹನಿ ಮಧು ಬಿಂದು ಬೀಳೆ;

ಆ ಮಧುವ ಕಂಡು ಹಿರಿದಪ್ಪ ದುಃಖವನ್ನೆಲ್ಲಾ ಸೈರಿಸಿ

ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ

ಈ ಸಂಸಾರ ಸುಖ, ವಿಚಾರಿಸಿ ನೋಡಿದಡೆ ದುಃಖದಾಗರ,

ಇದನರಿದು ಸಕಲವಿಷಯಗಳಲ್ಲಿ ಸುಖವಿಂತುಂಟೆಂದು

ನಿರ್ವಿಷಯನಾಗಿ ನಿಂದ ನಿಲುವು ಚಿಮ್ಮಲಿಗೆಯ ಚನ್ನರಾಮ

ಕಾಡಾರಣ್ಯದಲ್ಲಿ ಹೋಗುವ ಮನುಷ್ಯನಿಗೆ ಹುಲಿ, ಕಾಡಗಿಚ್ಚು, ರಾಕ್ಷಸಿ, ಕಾಡಾನೆ ನಾಲ್ಕು ದಿಕ್ಕಿನಲ್ಲಿಯೂ ಬೆನ್ನಟ್ಟಿ ಬರುತ್ತಿರಲಾಗಿ ಬೇರೆಲ್ಲಿಯೂ ಹೋಗದವನಾಗಿ ಹಾಳುಭಾವಿಯನ್ನು ನೋಡುತ್ತಾನೆ. ಇದುವೆ ತನಗೆ ರಕ್ಷಣೆ ನೀಡುವದೆಂದರಿದು ಬೀಳಲಿಚ್ಚಿಸಿದರೆ ಕೆಳಗೆ ಭಾವಿಯಲ್ಲಿ ಘಟಸರ್ಪ ಬುಸ್ಸೆಂದು ಆಡಹತ್ತಿದೆ. ತಕ್ಷಣವೇ ಬಳ್ಳಿಗೆ ಜೋತುಬೀಳುತ್ತಾನೆ. ಆದರೆ ಅದು ಇಲಿ ಕಡಿದು ಜರ್ಜರಿತವಾಗಿದೆ. ಇಂಥ  ಬಳ್ಳಿಗೇನೇ ಜೋತು ಬೀಳುವಾಗ ಮೈಗೆ ತಾಗಿದ ಜೇನುಹುಳಗಳ ಕಡಿತ, ಅದರಲ್ಲಿಯ ಜೇನು ಹುಟ್ಟಿನಿಂದ ಸುರಿದ ಒಂದು ತೊಟ್ಟು ಜೇನು ಮೂಗಿನ ತುದಿಗೆ ತಗಲಿಕೊಂಡಿತಂತೆ. ಅಂಥ ಭಯಾನಕ ದುಃಖಮಯ ಸಮಯದಲ್ಲಿ ಜೀವನ ಸುತ್ತೆಲ್ಲ ಆವರಿಸಿದ ದುಃಖತತಿಯನ್ನು ಮರೆತು ಆ ಜೇನ ಹನಿಯನ್ನು ಸವಿಯಲು ಅಶಿಸುತ್ತಾನೆ. ಇದುವೆ ಸಂಸಾರದ ವಿಚಿತ್ರವಾದ ಚಿತ್ರ. ಎಂಥ ಅದ್ಭುತ ದುಃಖ ಸಮೂಹ. ಇದು ನಿಜವಾಗಿಯೂ ದುಃಖದ ಸಾಗರವೇ ಸರಿ. ಸಾಸಿವೆಯೆಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡೆಂದು ಶರಣ ಸಾಹಿತ್ಯ ವಿವರಿಸಿದೆ. ಈ ಭವದುಃಖವನ್ನು ವಿಚಾರಿಸಿದರೆ ಈ ಸಂಸಾರ ಹೇಯವೆನಿಸುವದು ಸಹಜ.

ಇಂತಿರುವ ಸಂಸಾರದಹೇಯವನ್ನು ಮನಗ೦ಡು ವಿಚಾರವಂತನಾಗಿ ಚಿರಸುಖದ ತವರಾದ ಧರ್ಮಮಾರ್ಗದಲ್ಲಿ ಮುನ್ನಡೆಯುತ್ತ ವೈರಾಗ್ಯಶೀಲನಾದರೆ ಅವಶ್ಯವಾಗಿ ಅಂಥವನು ಮುಕ್ತನಾಗುವನು. ಆ ನಿಲವನ್ನು ಜನತೆಗೆಲ್ಲ ಮಾರ್ಗದರ್ಶನ ಮಾಡಬಲ್ಲವನೇ ಮಹಾನುಭಾವಿಯೆನಿಸುವನು. ಪರಮಗುರುವೆ ! ನಾನು ಈ ಕಾಯ-ಕರ್ಮ-ಮಾಯೆಯ ಹೇಯವನ್ನು ತಿಳಿದು ಜಿಗುಪ್ಸೆಗೊಂಡಿದ್ದೇನೆ. ನಿನ್ನ ಜ್ಞಾನ ಜ್ಯೋತಿಯಿಂದ ಎನ್ನ ಕರ್ಮವನ್ನು ಸುಟ್ಟು ಹಾಕಿ ಮಾಯಾ ಪಾಶದಿಂದ ಮುಕ್ತನನ್ನಾಗಿ ಮಾಡು. ಕಾಯದ ಕೊಳೆಯನ್ನು ಕಳೆದು ಕರಣಾಮೃತ ಸಿಂಚನೆಯಿಂದ ಶಿವಬಾಳನ್ನು ಚಿಗುರಿಸು. ನಿನ್ನದು ಅಪಾರಪ್ರೇಮ. ಆರ್ತಹೃದಯಿಗಳಿಗೆ ಬಲವಾದ ಆಸರ ನೀನು. ಶರಣಾಗತನಾದವನನ್ನು ಪ್ರೀತಿಯಿಂದ ಸಲಹುವ ಸದ್ಗುರು ನೀನು. ಎನ್ನನ್ನು ಹರಸು. ನಿನ್ನವನನ್ನಾಗಿರಿಸಿಕೋ. ಇದು ನಿನ್ನ ಧರ್ಮವಲ್ಲವೇ ?

 ಇಂತಪ್ಪ ಸಂಸಾರ | ಭ್ರಾಂತಿಯೊಳಿರ್ದವನನೇ-

ಕಾಂತದೊಳ್ಕರೆದು-ಮುಂತೆ ನೀ ಪರವಸ್ತು

ವಿಂತೆಂದ ಗುರುವೆ ಕೃಪೆಯಾಗು      ೭೫ ||

ಶಿವಕವಿಯು ಹಿಂದಿನ ತ್ರಿಪದಿಗಳಲ್ಲಿ ಸಾಂಸಾರಿಕ ಭ್ರಾಂತಿಯನ್ನು ವಿವರಿಸಿ ಜೀವನು ಈ ಭ್ರಾಂತಿಯ ಬಂಧನದಲ್ಲಿ ಬಂಧಿತನಾಗುವ ರೀತಿಯನ್ನು ತಿಳಿಸಿದನು. ಪೂರ್ವಪುಣ್ಯ ವಿಶೇಷದಿಂದ ತನ್ನ ಅಜ್ಞಾನವನ್ನು ಅರಿತು ಅದನ್ನು ಕಳೆದುಕೊಳ್ಳಲು ಈ ಸಂಸಾರ ಹೇಯವೆಂದು ಮನಗಂಡು, ಸಾಂಸಾರಿಕ ಭ್ರಾಂತಿಯನ್ನು ನಿರಸನ ಮಾಡಿಕೊಳ್ಳಲು ಸದ್ಗುರು ಸನ್ನಿಧಿಯನ್ನು ಬಯಸಿಬರುವನು. ಶುದ್ಧಾಂತಃಕರಣ ನಾಗಲು ಸದ್ಗುರುವಿನಲ್ಲಿ ಜೀವಾತ್ಮನು ಪ್ರಾರ್ಥಿಸುವನು;- ಗುರುವೆ ! ಇಲ್ಲಿಯ ವರೆಗೆ ವೈಷಯಿಕ ವ್ಯಾಮೋಹವು ಬಹಳ ದಿನಗಳಿಂದಲೂ ನನ್ನಲ್ಲಿ ಮನೆಮಾಡಿಕೊಂಡಿತ್ತು. ಅದಕ್ಕಾಗಿ ನಿನ್ನ ಸಾನ್ನಿಧ್ಯ ದೂರವಾಗಿತ್ತು, ಈ ಸಂಸಾರ ಭ್ರಾಂತಿಯು ಸ್ಥಿರವಾದುದಲ್ಲ. ಅದು ನಿನ್ನ ಕೃಪಾದೃಷ್ಟಿ ಬೀಳುತ್ತಲೆ ಕಳಚಿ ಹೋಗುವದು. ಸತ್ಪುರುಷರ ಸಹವಾಸದಿಂದ ಯಥಾರ್ಥ ವಸ್ತುವಿನ ತಿಳುವಳಿಕೆಯಾದರೆ ಅದು ಹಾರಿಹೋಗುವದು. ನಿನ್ನ ಬೋಧಾಮೃತ ಸಿಂಚನೆಯಿಂದ ಎನ್ನ ಜೀವನದಲ್ಲಿ ನವಚೈತನ್ಯ ತುಂಬುವದು. ಅಜ್ಞಾನವು ಸಂಪೂರ್ಣವಾಗಿ ನಾಶವಾಗುವದು. ಪೂಜ್ಯಪಾದರಾದ ಶಂಕರಾಚಾರ್ಯರು ಸಹ ಭಗವದ್ಗೀತಾ ಭಾಷ್ಯ’ ದಲ್ಲಿ –

ಭ್ರಾಂತಿಪ್ರತ್ಯಯ ನಿಮಿತ್ತ ಏವಾಯಂ ಸಂಸಾರಭ್ರಮಃ |

ನ ತು ಪರಮಾರ್ಥಃ ಇತಿ ಸಮ್ಯಗ್ ದರ್ಶನಾತ್ |

ಅತ್ಯಂತಮೇವ ಉಪರಮಃ | || ೧೮ – ೬೬ ||

“ಸಂಸಾರ ಭ್ರಮೆಯು ಭ್ರಾಂತಿ ಪ್ರತ್ಯಯದ (ದೇಹಾದಿಗಳಲ್ಲಿ ಕರ್ತೃತ್ವ, ಭೋಕೃತ್ವದ ತಪ್ಪು ತಿಳುವಳಿಕೆ) ನಿಮಿತ್ತದಿಂದಲೇ ಉಂಟಾಗಿರುತ್ತದೆಯೇ ಹೊರತು ಪರಮಾರ್ಥವಲ್ಲ. ಅಂದರೆ ಸತ್ಯವಾದುದಲ್ಲ. ಆದ್ದರಿಂದ ಇದು ಸರಿಯಾದ ತಿಳುವಳಿಕೆಯಿಂದ ಅತ್ಯಂತವಾಗಿ ನಾಶಹೊಂದುತ್ತದೆ.’ ಎಂದು ಪ್ರತಿಪಾದಿಸಿದ್ದಾರೆ. ಅದರಂತೆ ಸಂಸಾರವು ಹೇಯವೆಂಬುದನ್ನರಿತು ಪರಮ ಗುರುನಾಥನೇ ! ನಿನ್ನ ಪಾದಪದ್ಮಂಗಳಲ್ಲಿ ಶರಣಾಗತ ನಾಗಿದ್ದೇನೆ. ಕೃಪೆಮಾಡಿ ರಕ್ಷಿಸು.

ಶರಣಾಗತನಾದ ಶಿಷ್ಯನನ್ನು ಸದ್ಗುರು ದಯಾದೃಷ್ಟಿಯಿಂದ ಅವಲೋಕಿಸಿ ಕರುಣೆ ಬೀರುತ್ತಾನೆ.ʼʼ ಮಗು ! ನೀನು ಸಂಸಾರಭ್ರಾಂತಿಯೊಳಗಿದ್ದು ದುಃಖ ಪಟ್ಟಿರುವೆ. ಬಳಲಿರುವೆ. ಬೆಂದಿರುವೆ. ಬಾ ಒಳಗೆ” ಎಂದು ಸಮೀಪಕ್ಕೆ ಕರೆದು ಮೈದಡವಿ ಸಂತೈಸುತ್ತಾನೆ. ಆತ್ಮೀಯತೆಯಿಂದ ಕಲ್ಯಾಣ ಕೇಳುತ್ತಾನೆ. ಜನ ಗದ್ದಲದಿಂದ ಬೇರ್ಪಡಿಸಿ ಏಕಾಂತದಲ್ಲಿ ಕರೆದೊಯ್ಯುತ್ತಾನೆ. ಧೈರ್ಯವನ್ನು ದಯಪಾಲಿಸುತ್ತಾನೆ.

 ಬಳಲಿದವನನ್ನು ಸಂತೈಸಲು ಏಕಾಂತವಾಸ ಬಹಳ ಮುಖ್ಯ. ಇದು ಲೌಕಿಕಾನು ಭವವೂ ಹೌದು. ಶಾಸ್ತ್ರಶ್ರವಣಕ್ಕಾದರೂ ಏಕಾಂತವಾಸವು ಅತ್ಯವಶ್ಯಬೇಕು. ಯಾಕಂದರೆ ಸಂತೆಯಲ್ಲಿ ಶಾಸ್ತ್ರವನ್ನು ಹೇಳಬಾರದೆಂಬ ಲೋಕೋಕ್ತಿಯೂ ಉಂಟು. ಅದಕ್ಕಾಗಿ ಅನುಭವ ಗೋಷ್ಠಿಯನ್ನು ಪ್ರಶಾಂತ ವಾತಾವರಣದಲ್ಲಿ ನೆರವೇರಿಸಬೇಕು. ಗಹನವಾದ ವಿಷಯವನ್ನು ಕೇಳುವ ಶಿಷ್ಯನ ಮನಸ್ಸು ಚಂಚಲವಾದರೆ ಗುರುವಿನ ಶ್ರಮ ವ್ಯರ್ಥವಾಗುವದು. ಪ್ರಫುಲ್ಲಮನದಿಂದ ಗುರುವಚನವನ್ನು ಅರಿಯಲು ಏಕಾಂತವಾಸ, ಪರಿಪೂರ್ಣವಾದ ಏಕಾಗ್ರತೆಗಳೇ ಸಾಧನವಾಗುವವು. ಅದಕ್ಕಾಗಿ ಪ್ರಶಾಂತವಾದ ಏಕಾಂತದಲ್ಲಿ ನನಗೆ ನೀನು ʼʼಪ್ರಥಮತಃ ಪರಾತ್ಪರ ಪರಶಿವನೇ ಆಗಿದ್ದಿ. ಸಾಂಸಾರಿಕ ಭ್ರಾಂತಿಯಿಂದ ಅದನ್ನು ಮರೆತಿದ್ದಿ, ಅದಕ್ಕಾಗಿ ಪಡಬಾರದ ಕಷ್ಟಗಳನ್ನು ಅನುಭವಿಸಿರುವಿ” ಎಂದು ಕರುಣದಿಂದ ಬೋಧೆಗೈದೆ. ಓ ಕರುಣಾಕರನೆ ! ನಿನ್ನಂಥ ಪರಮ ಗುರುವನ್ನು ಪಡೆದ ನಾನು ಧನ್ಯನು. ಕೃತಾರ್ಥನು.

ಶ್ರದ್ಧಾವಾನ್ ಲಭತೇ ಜ್ಞಾನಮ್ ।”

ಗುರು ಶುಶ್ರೂಷಯಾ ವಿದ್ಯಾ |

ಶ್ರದ್ಧೆ (ವಿಶ್ವಾಸ) ಯುಳ್ಳವನು ಆತ್ಮಜ್ಞಾನವನ್ನು ಹೊಂದುವನು. ಮತ್ತು ಗುರು ಸೇವಾ ಫಲದಿಂದಲೂ ವಿದ್ಯಾರ್ಜನೆಯನ್ನು  ಮಾಡಿಕೊಳ್ಳಬಹುದೆಂಬ ಗೀತೋಕ್ತಿಗಳು ಅತ್ಯಂತ ಯಥಾರ್ಥವಾಗಿವೆ. ಸದ್ಗುರುವಿನ ಸೇವೆಯನ್ನು ಶ್ರದ್ಧಾಪೂರ್ವಕ ಮಾಡಬೇಕು. ಶ್ರೀಗುರುವಿನಲ್ಲಿ ಆಪ್ತ-ಅಂಗ-ಸ್ಥಾನ-ಸದ್ಭಾವಗಳೆಂಬ ಚತುರ್ವಿಧ ಸೇವೆಗಳನ್ನು ಸಮರ್ಪಿಸಬೇಕು. ಸಂತೃಪ್ತಿಗೊಳಿಸಬೇಕು. ಮಾತಿನಿಂದ ಗುರು ದೊರೆಯುವದಿಲ್ಲ.  ಗುಲಾಮತನ ಅವಶ್ಯಬೇಕು. ಕಿಂಕರನಾಗಬೇಕು. ಗೋವು ಕೀಳಿಂಗಲ್ಲದೆ ಹೈನ ಕರೆಯದು. ಗೋಸೇವೆ ಮಾಡಿ ಕಿಂಕರನಾಗಿ ಅದರ ಪಾದದಡಿ ಕುಳಿತರೇನೆ ಹಾಲು ಸಿಕ್ಕುವದು. ಅದರಂತೆ ಸದ್ಗುರುನಾಥನು ಸೇವೆಗೆ ಒಲಿದು ಕರುಣಾಮೃತವನ್ನು ಪಾನಮಾಡಿಸುವನು. ಆಗ ಸಂಸಾರ ಭ್ರಾಂತಿಯು ದಿಕ್ಕೆಟ್ಟು ಓಡಿಹೋಗುವದು. ಭ್ರಮೆಯಳಿದು ಭಕ್ತಿಭಾವ ಅಳವಡುವದು. ಧನ-ಕನಕ-ಕಾಮಿನಿಯರಲ್ಲಿಯ ವ್ಯಾಮೋಹವೇ  ಗುರುಸನ್ನಿಧಿಯಲ್ಲಿ ಪರಿಪಾಕಗೊಂಡು ಭಕ್ತಿಯಾಗುವದು.

 ಇಂಥ ಭಕ್ತಿಯಿಂದ ಮಾತ್ರ ಮುಕ್ತಿ, ಸಾಮರಸ್ಯ ಸಮನಿಸುವದು. “ಕ್ತೇ ಸಾಧ್ಯಂ ನ ಹಿ ಕಿಂಚಿದಸ್ತಿʼʼ ಭಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಶಿವಭಕ್ತಿಯು ಬೇಡನನ್ನು ಸಹ ಭಕ್ತ ಶ್ರೇಷ್ಠನನ್ನಾಗಿ ಮಾಡಲಿಲ್ಲವೆ ? ಭಕ್ತಿಯಿಂದಲೇ ಗುರುಸಾನಿಧ್ಯ ಲಭ್ಯವಾಗಿ ಸಂಸಾರಭ್ರಾಂತಿಯು ನಿರಸನವಾಗುವದು. ಗುರುಸಾನಿಧ್ಯದ ಮಹತ್ವ ಅಪಾರವಾದುದು. ಅಂಥ ಸಾನ್ನಿಧ್ಯವನ್ನು ಸಂಪಾದಿಸಿದ ಮನುಷ್ಯನೇ ಧನ್ಯನು, ಪುಣ್ಯನು.

*

: ಸೌಜನ್ಯ “ಬೆಳಗು”

ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಯಾವ ಲೌಕಿಕ ಭೋಗಭಾಗ್ಯವನ್ನು ಬಯಸಿ ಪಡೆದವರಲ್ಲ ; ಆದರೆ ಅವರ ಅಧ್ಯಾತ್ಮ ಪರಿವಾರದಲ್ಲಿಯ ಅವರ ಶಿಷ್ಯ ಸಂಪತ್ತು ಅಪರಿಮಿತವಾದುದು, ಲೋಕೋತ್ತರವಾದುದು. ಅವರು ತಮ್ಮ ಸಮಾಜಸೇವೆಯ ಕನಸನ್ನು ಲೋಕಹಿತಸಾಧನೆಯ ಆದರ್ಶವನ್ನೂ ಪೂರ್ಣ ಮಾಡುವ ಹಿರಿಯ ಹೊಣೆಗಾರಿಕೆಯನ್ನು ಮಂದಿರದ ಸಾಧಕರ ಮೇಲೆ ಕಾರ್ಯಕರ್ತರ ಮೇಲೆ ಬಿಟ್ಟು ಬಯಲಾದರು. ಅವರ ಸೇವಾಭಾವದ ಕಮ್ಮಟವಾದ ಮಂದಿರದಲ್ಲಿ ದೀಕ್ಷಿತರಾದ ಶ್ರೀಗಳವರು, ಸಂಗೀತಗಾರರು, ಕಲಾವಂತರು, ಅನುಭವಿಗಳು, ಸಂಶೋಧಕರು, ಶಾಸ್ತ್ರಿಗಳು ಶಿಕ್ಷಕರು ಮುಂತಾಗಿ ದಕ್ಷರಾದ ಕಾರ್ಯಕರ್ತರು ಈ ಲೋಕಸೇವೆಯ ಭಾರವನ್ನು ಹೊತ್ತು ಅನೇಕ ಮುಖವಾಗಿ  ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಇವರ ರೂಪದಲ್ಲಿ ಶ್ರೀಗಳವರ ಕಾರ್ಯಶಕ್ತಿ ಪ್ರಭೆಯ ಕಿರಣಗಳು ಅಲ್ಲಲ್ಲಿ ಮೂಡಿ ನಾಡಬಾನನ್ನು ಬೆಳಗಿದ್ದಾವೆ. ಮಂದಿರದ ಫಲಿತಾಂಶಗಳ ಪ್ರತ್ಯಕ್ಷ ದಿಗ್ದರ್ಶನವನ್ನು ನಾಡಿನ ಸರ್ವತೋಮುಖವಾದ ಏಳ್ಗೆಗೆ ವಿನಿಯೋಗವಾಗುತ್ತಿರುವ ಶ್ರೀಗಳವರ ಈ ಶಿಷ್ಯ ಸಂಪತ್ತಿನಲ್ಲಿ ಕಾಣಬಹುದಾಗಿದೆ.

(ಕ್ರಿ. ಶ. ೧೯೦೯)

.

೧).ಸವದತ್ತಿಯ ಶ್ರೀ ನಿ. ಪ್ರ. ಅಪ್ಪಯ್ಯ (ಶಿವಲಿಂಗ) ಸ್ವಾಮಿಗಳು: ಸವದತ್ತಿಯ ಶ್ರೀ .ನಿ ಪ್ರ.ಅಪ್ಪಯ್ಯ ಸ್ವಾಮಿಗಳು ಹಾನಗಲ್ಲ ಶ್ರೀಗಳವರ ಶಿಷ್ಯ ಸಂಪತ್ತಿಯ ಭಾಂಡಾರದಲ್ಲಿ  ಮುಕುಟಮಣಿಯಾಗಿ ರಾರಾಜಿಸಿದರು. ಅವರು ಮುಧೋಳ ಸ್ವತಂತ್ರಿ ಮಠದಲ್ಲಿ ಬಿದರಿ ಕುಮಾರ ಶಿವಯೋಗಿಗಳ ಕರುಣೆಯ ಕಂದರಾಗಿ ಶಾ. ಶ. ೧೮೧೬ನೆಯ ಕಾರ್ತಿಕ ಶು. ೧ನೇ ಶುಭದಿನ ಜನಿಸಿದರು. ವಟು ಮಹಾಲಿಂಗಾರ್ಯ ಗುರುಪುತ್ರನಾಗಿಯೆ ಬೆಳೆದನು . ಬಾಲ್ಯದಲ್ಲಿಯೆ ಬಿದರಿ ಶ್ರೀಗಳವರು ಮಹಾಲಿಂಗಾರ್ಯನನ್ನು ತಮಗೆ ಬೇಕೆಂದು ಕರೆತಂದರು. ‘ಅಪ್ಪಯ್ಯ’ನೆಂದು ಪ್ರೀತಿಯಿಂದ ಕಂಡರು. ಅಪ್ಪಯ್ಯ ದೇವರ ಶಿಕ್ಷಣದ ಭಾರ ಹಾನಗಲ್ಲ ಶ್ರೀಗಳವರದಾಯಿತು. ಅಪ್ಪಯ್ಯ ದೇವರು ಕೆಲವು ವರ್ಷ ಹಾವೇರಿಯ ಹುಕ್ಕೇರಿಮಠದ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ೧೯೦೯ ರಲ್ಲಿ ಶಿವಯೋಗ ಸಾಧಕರಾದರು. ೧೫ ವರ್ಷ ಶಿವಯೋಗ ಮತ್ತು ಶಿವಾನುಭವ ಶಿಕ್ಷಣ ಪಡೆದರು. ಹಾವೇರಿ ಶ್ರೀಗಳವರಿಂದ ಅನುಗ್ರಹ ಹೊಂದಿ ಕಾಲು ನಡಿಗೆಯಿಂದ ಎಡೆಯೂರ ಶ್ರೀ ಕ್ಷೇತ್ರದ ಯಾತ್ರೆಯನ್ನು ಮಾಡಿ ಶ್ರೀ ಸಿದ್ಧಲಿಂಗ ಶಿವಯೋಗಿಯ ದರ್ಶನ ಪಡೆದರು. ಅಂದಿನಿಂದ ಶಿವಯೋಗದಲ್ಲಿ ಸಿದ್ದಿ ಪಡೆಯುವ ಹಂಬಲ ಬಲವಾಯಿತು. ಸವದತ್ತಿಯ ಕಲ್ಮಠಕ್ಕೆ  ಅಧಿಕಾರಿಗಳಾದ ಮೇಲೆ ಬಿದರಿ ಗುರುವರ್ಯರು ತಪಗೈದು ಸಿದ್ಧಿಪಡೆದ ನವಿಲುತೀರ್ಥ’ದಲ್ಲಿ ಅನುಷ್ಠಾನ ಮಾಡಿದರು. ಅವರ ಶಿವಯೋಗ ಸಿದ್ಧಿಯನ್ನು ಕಂಡು ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರಿಗೆ ಅಮಿತಾನಂದವಾಯಿತು. ಅಪ್ಪಯ್ಯ ಸ್ವಾಮಿಗಳು ಗುರುಪುತ್ರರಾಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರದೂ ಅಪಾರವಾದ ಪ್ರೇಮ. ಹಾವೇರಿ ಶ್ರೀಗಳವರು ಅವರ ನೆನಹಿಗಾಗಿಯೇ ‘ಶಿವಲಿಂಗ ವಿಜಯ’ ಮುದ್ರಣ ಮಂದಿರವನ್ನು ಸ್ಥಾಪಿಸಿದ್ದರಂತೆ ಎಳೆಯ ವಯಸ್ಸಿನಲ್ಲಿಯೆ ಶ್ರೀ ಅಪ್ಪಯ್ಯ ಸ್ವಾಮಿಗಳ ಜೀವನ ಫಲ ಶಿವಯೋಗ ನಿಷ್ಪತ್ತಿ ಪಡೆದು ಪರಿಪಕ್ವವಾಗಿತ್ತು, ಅದನ್ನು ಶಕೆ ೧೮೪೬ ಮಾರ್ಗಶಿರ ಶು. ೭(ಕ್ರಿ.ಶ.೧೯೨೪) ರಂದು ಶಿವ ತನಗೆ ಬೇಕೆಂದು ಎತ್ತಿಕೊಂಡ.

೨). ಗುಳೇದಗುಡ್ಡದ ಶ್ರೀ ನಿ. ಪ್ರ. ಒಪ್ಪತ್ತಿನ ಸ್ವಾಮಿಗಳು :ಗುಳೇದಗುಡ್ಡದ ಶ್ರೀ ನಿ.ಪ್ರ. ಒಪ್ಪತ್ತಿನ ಸ್ವಾಮಿಗಳು ಮಂದಿರದಲ್ಲಿ ಶಿಕ್ಷಣ ಪಡೆದು ಒಪ್ಪತ್ತೇಶ್ವರ ಮಠಕ್ಕೆ ಅಧಿಕಾರಿಗಳಾಗಿ ಹೋದ ಮೇಲೆಯೂ ಸಂಸ್ಥೆಯ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದರು. ಅವರು ಪ್ರತಿವರ್ಷ ಭಿಕ್ಷೆ ಮಾಡಿ ಮಂದಿರದ ದಾಸೋಹ ಕಾರ್ಯಕ್ಕೆ ನೆರವಾಗಿದ್ದರು. ಶಿವರಾತ್ರಿಯ ಉತ್ಸವದಲ್ಲಿ ಅವರ ನೇತೃತ್ವದಲ್ಲಿ ದಾಸೋಹದಲ್ಲಿ ಶಿವಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದ್ದಿತು. ಅವರು ಖಿಲವಾದ ತಮ್ಮ ಮಠವನ್ನು ಬಹಳ ಅಭಿವೃದ್ಧಿಗೆ ತಂದಿದ್ದರು.

೩) ಬಾಗಲಕೋಟೆಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು:ಬಾಗಲಕೋಟೆಯ ಶ್ರೀ ನಿ.ಪ್ರ .ಶಿವಮೂರ್ತಿ ಸ್ವಾಮಿಗಳು ಚರಂತಿಮಠದ ಅಧಿಕಾರಿಗಳಾಗಿ ಮಂದಿರದಲ್ಲಿ ೨೦ ವರ್ಷ ಶಿಕ್ಷಣ ಪಡೆದವರು, ಹಾನಗಲ್ಲ ಶ್ರೀಗಳವರ ಅಪ್ಪಣೆಯಂತೆ ಅವರು ಅನಂತಪುರ-ಕೆಳದಿ ಪ್ರಾಂತದಲ್ಲಿ ಕೀರ್ತನ- ಪ್ರವಚನಗಳನ್ನು ಮಾಡಿಸಿ ಶಿವಾನುಭವ ಪ್ರಸಾರವನ್ನು ಕೈಕೊಂಡರು. ಕಪನಳ್ಳಿಯಲ್ಲಿ ಅನುಷ್ಠಾನವನ್ನು ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದಿದ್ದರು. ಅನಂತಪುರದ ಶ್ರೀ ಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ  ಆ ಸಂಸ್ಥಾನಮಠದ ವ್ಯವಸ್ಥೆಯನ್ನು ಕೆಲವು ವರ್ಷ ನೋಡಿಕೊಂಡಿದ್ದರು; ಅದರ ಅಭಿವೃದ್ಧಿಯನ್ನು ಮಾಡಿದರು. ಬಾಗಲಕೋಟೆಯಲ್ಲಿರುವ ‘ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ’ ಕ್ಕೆ ೮-೧೦ ಸಾವಿರ ರೂಪಾಯಿ ಬೆಲೆ ಬಾಳುವ ತಮ್ಮ ಮಠದ ಜಮೀನನ್ನು ದಾನವಾಗಿ ದಯಪಾಲಿಸಿ ವಿದ್ಯಾದಾನದ ಕಾರ್ಯಕ್ಕೆ ಪ್ರೋತ್ಸಾಹವಿತ್ತರು. ಶ್ರೀಗಳವರು ಯಾವಾಗಲೂ ಶಿವಯೋಗಮಂದಿರದ ಅಭಿವೃದ್ಧಿಯ ಕಾರ್ಯಗಳಲ್ಲಿ ಅಭಿಮಾನದಿಂದ ಸಹಕರಿಸುತ್ತಿದ್ದರು. ಶ್ರೀಗಳವರೆ ಬಾಗಲಕೋಟೆಯ ಕರವೀರಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಎರಡು ಮಠಗಳ ಪ್ರಗತಿಯ ಬಗ್ಗೆ ಉಪಾಯಗಳನ್ನು ಕೈಕೊಂಡಿದ್ದರು. ಅನಿರೀಕ್ಷಿತವಾಗಿ ಕ್ರಿ.ಶ. ೧೯೪೭ರಲ್ಲಿ ಲಿಂಗೈಕ್ಯರಾದರು.

)ಕಂಚುಕಲ್ಲ-ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು: ಕಂಚುಕಲ್ಲ -ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ದೊಡ್ಡಮಠದ ಅಧಿಕಾರಿಗಳಾಗಿದ್ದರು. ಜಿ. ಚಿಕ್ಕಮಗಳೂರ ಕಡೂರ ತಾಲೂಕಿನ ಕೆ. ಬಿದರೆಯ ದೊಡ್ಡಮಠ ಹೆಸರಾದ ಗುರುಪೀಠ. ಈ ಮಠದ ಅನೇಕ ತಪಸ್ವಿಗಳ ಪ್ರಾಚೀನ ಪರಂಪರೆಯಲ್ಲಿ ಲಿಂ. ಶ್ರೀ ದೊಡ್ಡಜ್ಜಯ್ಯನವರು ಬಹಳ ಕೀರ್ತಿ ಪಡೆದ ಮಹಿಮರು. ಅವರ ಉತ್ತರಾಧಿಕಾರಿಗಳೆ ಮರುಳಸಿದ್ದ ದೇವರು. ಅವರು ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಯೋಗವಿದ್ಯೆಯ ಶಿಕ್ಷಣ ಪಡೆದರು. ಷಟ್ಕರ್ಮಗಳಲ್ಲಿ ನಿಪುಣರಾಗಿ ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ರಲ್ಲಿ ನಾಶಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ತಾನದ ಯೋಗಿಗಳೆಲ್ಲ ಸೇರಿದ್ದರು. ಹಾನಗಲ್ಲ ಶ್ರೀಗಳವರು ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ಧಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ  ಯೋಗಸಾಧನೆಯನ್ನು ಕಂಡು ಅಪ್ರತಿಭರಾದರು; ಶ್ರೀ ಪಟ್ಟದ್ದೇವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು; ‘ಯೋಗರಾಜ’ರೆಂದು ಬಿರುದುಕೊಟ್ಟು ಮನ್ನಿಸಿದರು. ಮಂದಿರದ ಸಾಧಕರು ಯೋಗಸಿದ್ಧರಾಗಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲಬೇಕು. ಅವರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಕೂಡ ಆಶ್ಚರ್ಯಪಡುತ್ತಿದ್ದರು.

 ಅವರು ಶಿವಯೋಗದಲ್ಲಿಯೂ ಸಿದ್ಧಿಪಡೆದವರು. ಸಾವಿರಾರು ಜನ ಶಿಷ್ಯರಿಗೆ ಶಿವದೀಕ್ಷೆಯನ್ನು ದಯುಪಾಲಿಸಿದರು. ಎಡಹಳ್ಳಿಯ ಶ್ರೀ ಮಲ್ಲಪ್ಪ ದೇಸಾಯರಿಗೆ ದೀಕ್ಷಾಗುರುಗಳಾಗಿದ್ದರು. ಶ್ರೀ ಪಟ್ಟದ್ದೇವರು ಮಂದಿರದ ಸೇವೆಯನ್ನು ಮಾಡುತ್ತಲೆ ದಿನಾಂಕ ೨೭-೬-೧೯೩೧ ರಲ್ಲಿ ಗಿರಿಯಾಪುರ (ಜಿ. ಚಿಕ್ಕಮಗಳೂರು) ದಲ್ಲಿ ಲಿಂಗೈಕ್ಯರಾದರು.

೫)ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು:ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಕುಷ್ಟಗಿ ತಾಲೂಕಿನ ವ್ಯಾಕರಣನಾಳ ಮತ್ತು ಮುದಗಲ್ಲ ಹಿರೇಮಠಗಳ ಅಧಿಕಾರಿಗಳಾಗಿದ್ದರು. ಅವರು ಮಂದಿರದಲ್ಲಿಯೆ ಸಂಸ್ಕೃತ ಪ್ರೌಢಶಿಕ್ಷಣ ಪಡೆದು ಸಾಧಕರಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಂದಿರದ ಸಾಧಕರ ಮತ್ತು ವಟುಗಳ ಪಾಲಕರಾಗಿ ಒಳ್ಳೆ ಶಿಸ್ತಿನಿಂದ ವ್ಯವಸ್ಥೆಯನ್ನು  ನೋಡಿಕೊಂಡಿದ್ದರು. ಅವರು ಆಶುಕವಿಗಳಾಗಿದ್ದರು. ಸಂಸ್ಕೃತದಲ್ಲಿ ಅನೇಕ ಸ್ತೋತ್ರಪರ ಅಷ್ಟಕಗಳನ್ನು ರಚಿಸಿದ್ದಾರೆ. ಅವರು ಯೋಗಸಾಧನೆಯಲ್ಲಿಯೂ ಉತ್ತಮ ಪ್ರಗತಿಯನ್ನು ಪಡೆದಿದ್ದರು. ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯ ಮುಮುಕ್ಷುಗಳಿಗೂ ಯೋಗಸಾಧನೆ ಮತ್ತು ಧರ್ಮಗಳ ವಿಷಯವಾಗಿ ಬೋಧಿಸುವಷ್ಟು ದಕ್ಷರಾಗಿದ್ದರು. ಪುರಾಣ-ಪ್ರವಚನ ಪಟುಗಳಾಗಿದ್ದರು. ಹಾನಗಲ್ಲ ಶ್ರೀಗಳವರು ವ್ಯಾಕರಣಾಳ ಪಟ್ಟಾಧ್ಯಕ್ಷರ ಮೇಲೆಯೆ ಮಂದಿರದ ವ್ಯವಸ್ಥೆಯನ್ನು ವಹಿಸಿ ನಿಶ್ಚಿಂತರಾಗಿ ಭಿಕ್ಷೆಯಲ್ಲಿರುತ್ತಿದ್ದರು. ಸಂಸ್ಥೆಯ ಹಿತವೇ ತಮ್ಮ ಹಿತವೆಂದು ಭಾವಿಸಿ ನಿಸ್ಪೃಹವಾಗಿ ಸಂಸ್ಥೆಗೆ ಶ್ರಮಿಸುತ್ತಿದ್ದ ಶ್ರೀ ಪಟ್ಟಾಧ್ಯಕ್ಷರು ೧೯೧೯ ರಲ್ಲಿ ಇನ್‌ಫ್ಲ್ಯಎಂಜಾದಿಂದ ಲಿಂಗೈಕ್ಯರಾದರು. ಅವರ ಗದ್ದುಗೆ ಮಂದಿರದಲ್ಲಿಯೇ ಇದೆ.

೬) ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು: ನವಿಲುಗುಂದದ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ಗವಿಮಠದ ಅಧಿಪತಿಗಳು. ಅವರು ನವಿಲುಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಜನ್ಮತಾಳಿ ನವಿಲುಗುಂದ ಗವಿಮಠಾಧೀಶರಾದ ಲಿಂ. ಸಿದ್ದಲಿಂಗ ಸ್ವಾಮಿಗಳ ಕೃಪಾಬಲದಿಂದ ಶಿವಯೋಗ ಮಾರ್ಗದಲ್ಲಿ ದೀಕ್ಷೆ ಪಡೆದರು.

 ನವಿಲುಗುಂದ ಗವಿಮಠದ ಮೂಲಕರ್ತೃಗಳು ಶ್ರೀ ಜಡೆಸ್ವಾಮಿಗಳು; ಚಿತ್ರದುರ್ಗ ಪೀಠದ ಪರಂಪರೆಯವರು. ಮುನ್ನೂರು ವರ್ಷಗಳ ಹಿಂದೆ ಇಲ್ಲಿಯೇ ಒಂದು ಗುಡಿಸಲಲ್ಲಿ ತಪೋನುಷ್ಠಾನ ಮಾಡಿ ಭಾವಿಯಲ್ಲಿ ನೀರು ಬರಿಸಿದ ಪವಾಡ ತೋರಿದರು. ಅವರ ಸ್ಮಾರಕವಾಗಿ ಜೈನಮತದ ಗೌಡರು ಚಿಕ್ಕ ಮಠವೊಂದನ್ನು ಕಟ್ಟಿಸಿ ಭೂಮಿಯನ್ನು ದಾನವಾಗಿ ಕೊಟ್ಟು ಅನುಷ್ಠಾನಕ್ಕೆ ಅನುಕೂಲ ಮಾಡಿದರು.

 ಹಾನಗಲ್ಲ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀ ಬಸವಲಿಂಗ ದೇಶಿಕರು ಮಂದಿರದಲ್ಲಿ ಪಂ. ಸೋಮನಾಥ ಶಾಸ್ತ್ರಿಗಳು, ಉಮಚಗಿಯ ಪಂ. ಶಂಕರಶಾಸ್ತ್ರಿಗಳು, ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ವೇದಾಂತ, ತರ್ಕ ಮತ್ತು ಸಾಹಿತ್ಯ ವಿಷಯಗಳ ಅಧ್ಯಯನ ಮಾಡಿದರು. ಯೋಗದಲ್ಲಿಯೂ ಸಾಧನೆ ಮಾಡಿದರು. ೧೯೨೧ರಲ್ಲಿ ಶ್ರೀ ಗವಿಮಠಕ್ಕೆ ಬಂದ ಬಳಿಕ ಶಿವಯೋಗ ಮಂದಿರಕ್ಕೆ ಕಾಣಿಕೆಯೆಂದು ಸುಮಾರು ಎಂಟು ಸಾವಿರ ರೂಪಾಯಿಗಳನ್ನು ಐದುವರೆ ಕೂರಿಗೆ ಭೂಮಿಯನ್ನು ನವಿಲುಗುಂದ ಭಕ್ತರಿಂದ ಪಡೆದು ಅರ್ಪಿಸಿದರು. ಪಂ. ಪಂಚಾಕ್ಷರ ಗವಾಯಿಗಳಿಗೆ ಮಿರ್ಜಿಯ ನೀಲಕಂಠ ಬುವಾ ಅವರಿಂದ ಸಂಗೀತ ಪಾಠವನ್ನು ಮಠದ ವತಿಯಿಂದ ಹೇಳಿಸಿದರು. ಕೆಲವು ಕಾಲ ಗವಾಯಿಗಳ ಸಂಗೀತ ಪಾಠಸಾಲೆಗೆ ಮಠದಲ್ಲಿಯೇ ಆಶ್ರಯ ನೀಡಿದರು. ಶಿವಯೋಗ ಮಂದಿರಕ್ಕೆ ಆರ್ಥಿಕ ಬಿಕ್ಕಟ್ಟು ಬಂದಾಗಲೆಲ್ಲ ಭಿಕ್ಷೆಯ ರೂಪದಿಂದ ಸಹಾಯ ನೀಡಿ ಸಂಸ್ಥೆಯ ಯೋಗಕ್ಷೇಮದಲ್ಲಿ ಭಾಗಿಗಳಾಗಿದ್ದಾರೆ.

ಶ್ರೀಗಳವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಥಾನಮಾನಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನʼ ಕನ್ನಡ ಸಾಹಿತ್ಯ ಪರಿಷತ್ತಿʼನ ಕಾರ್ಯಕಾರಿ ಮಂಡಲದ ಸದಸ್ಯರಾಗಿ ‘ಉತ್ತರ ಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿ’ಯ ಅಧ್ಯಕ್ಷರಾಗಿ, ʼಕರ್ನಾಟಕ ವಿದ್ಯಾವರ್ಧಕ ಸಂಘ’ ದ ಉಪಾಧ್ಯಕ್ಷರಾಗಿ ಮತ್ತು ೧೯೨೨ ರಿಂದ ಇದುವರೆಗೆ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷರಾಗಿಯೂ, ಕೆಲವು ವರ್ಷ ಮ್ಯಾನೇಜಿಂಗ ಟ್ರಸ್ಟಿಗಳಾಗಿಯೂ ಕಾರ್ಯ ಮಾಡಿ ಅನೇಕ ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾಗಿದ್ದಾರೆ. ಬಾಗಲಕೋಟೆ ಬಸವೇಶ್ವರ ಕಾಲೇಜು ಪ್ರಾರಂಭವಾದಂದಿನಿಂದ ಇದುವರೆಗೂ ಬಾಗಲಕೋಟೆಯ ‘ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವರು. ೧೯೨೪ ರಲ್ಲಿ ‘ಲಿಂಗ’ ಮತ್ತು ೧೯೨೮ ರಲ್ಲಿ ‘ಗುರು’ ವಿಷಯಗಳನ್ನು ಕುರಿತು ಪುಸ್ತಕಗಳನ್ನು ಬರೆದರು. ೧೯೩೩ ರಿಂದ ೧೯೩೭ರ ವರೆಗೆ ಶಿವಯೋಗ ಮಂದಿರದ ಪರವಾಗಿ ಪುಣೆ, ಬೆಂಗಳೂರು, ಮೈಸೂರು, ವಿಜಾಪುರ ಮೊದಲಾದ ಕಡೆ ಪ್ರಯಾಣ ಮಾಡಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಕಾರ್ಯವನ್ನು ಮಾಡಿದರು.  ೧೯೪೧ ರಲ್ಲಿ ಶ್ರೀಮಠದಲ್ಲಿ ʼಉತ್ತರ ಕರ್ನಾಟಕ ಪ್ರಾಂತೀ  ಸಾಹಿತ್ಯ ಸಮ್ಮೇಲನ’ವನ್ನು ಜರುಗಿಸಿದರು. ಶಿವಯೋಗ ಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ  ವಾಚನಾಲಯವನ್ನು ಸ್ಥಾಪಿಸಿ, ದಾನಿಗಳಿಂದ ಗ್ರಂಥಗಳನ್ನು ಶೇಖರಿಸಿದರು. ‘ಸುಕುಮಾರ’ ಕೈಬರಹ ಮಾಸಿಕವನ್ನು ಹೊರಡಿಸಿದರು. ʼಆರ್ಯಧರ್ಮ ಪ್ರದೀಪಿಕೆ’ಯಲ್ಲಿ ವೀರಶೈವ ಧರ್ಮದ ಬಗೆಗೆ ವಿವೇಚನಾತ್ಮಕ ಲೇಖನ ಬರೆದರು.

೧೯೪೨ರ ಜೂನ ೧೫ನೆಯ ದಿನಾಂಕದಲ್ಲಿ ಧಾರವಾಡದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಹೋಗಿ ಶಿವಾನುಭವ ಸಂಘದ ಸ್ಥಾಪನೆಯ ಬಗ್ಗೆ ವಿಚಾರ ಮಾಡಿ ಅಲ್ಲಿಯೇ ‘ಶಿವಾನುಭವ ಸಂಸ್ಥೆ’ಯನ್ನು ಪ್ರಾರಂಭಿಸಿದರು. ೧೯೪೩ನೆಯ ನವಂಬರ ದಿನಾಂಕ ೧೪ ರಂದು ಬಸವೇಶ್ವರ ಕಾಲೇಜನ್ನು ತೆರೆಯುವ ಬಗ್ಗೆ ಆಲೋಚನಾ ಕಮೀಟಿಯನ್ನು ಕರೆದು, ನಿರ್ಧರಿಸಿ ಬಾಗಲಕೋಟೆ ಮತ್ತು ಇತರ ಪಟ್ಟಣಗಳ ಗ್ರಾಮಗಳ ಮಹಾಜನರ ಸಹಕಾರ-ಸಹಾಯದಿಂದ ಬಾಗಲಕೋಟೆಯಲ್ಲಿಯೆ ಬಸವೆ ಕಾಲೇಜನ್ನು ಸ್ಥಾಪಿಸಿದರು.

 ಶ್ರೀಗಳವರು ೧೯೪೫ರ ಫೆಬ್ರುವರಿ ದಿನಾಂಕ ೮-೯ ರಿಂದ ‘ಸರ್ವಧರ್ಮ ಸಮ್ಮೇಲನ’ವನ್ನು ಗವಿಮಠದಲ್ಲಿ ಸೇರಿಸಿ ಇದುವರೆಗೂ ಅದನ್ನು ಪ್ರತಿವರ್ಷ ನಡೆಯಿಸಿಕೊಂಡು ಬಂದಿರುವರು. ಧರ್ಮದ ವ್ಯಾಪಕ ಭಾವನೆಯನ್ನು ಜನತೆಯಲ್ಲಿ ಮೂಡಿಸಿರುವರು. ಶ್ರೀ ಮಠದಲ್ಲಿ ಒಂದು ಫ್ರೀ ಬೋರ್ಡಿಂಗನ್ನು ಮತ್ತು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ನಡೆಯಿಸುತ್ತಿರುವರು. ಪ್ರತಿವರ್ಷ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯನ್ನು ಏರ್ಪಡಿಸಿ ಅದರ ಅಂಗವಾಗಿ ಶಿವಾನುಭವ ಸಮ್ಮೇಲನ, ಒಕ್ಕಲುತನ ಪರಿಷತ್ತು ಸಹಕಾರಿ ಪರಿಷತ್ತು ಮಹಿಳಾ ಗೋಷ್ಠಿಗಳನ್ನು ಜರುಗಿಸಿ ನಾಡಿನ ಜನತೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಜನಜಾಗ್ರತಿಯನ್ನುಂಟು ಮಾಡುತ್ತಲಿರುವರು.೭)ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು :ಕುರವತ್ತಿ ಶ್ರೀ ನಿ. ಪ್ರ. ತೋಂಟದಾರ್ಯ (ಮಹಾದೇವ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳು, ಅವರು ಮೊದಲು ಬಾಗಲಕೋಟೆಯ ಕರವೀರಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆದರು. ಅವರು ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡಿದ್ದಲ್ಲದೆ ಕಪನಳ್ಳಿ ಮೊದಲಾದ ಶಾಖಾಮಂದಿರಗಳಲ್ಲಿ ಅನುಷ್ಠಾನವನ್ನು ಮಾಡಿದರು. ಅವರು ೧೯೩೩ ನೆಯ ಇಸ್ವಿಯವರೆಗೂ ಶಿವಯೋಗ ಮಂದಿರದಲ್ಲಿಯೇ ಇದ್ದು ಮಂದಿರದ ಒಕ್ಕಲುತನ-ಗೋಶಾಲೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹಾದೇವ ದೇಶಿಕರ ಹಿರಿಯತನದಲ್ಲಿ ಮಂದಿರದ ಒಕ್ಕಲುತನವು ಬಹಳ ಪ್ರಗತಿಯನ್ನು ಪಡೆದಿತ್ತು ಅವರು ಕೆಲವು ವರ್ಷ ಕೆಳದಿಯ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಈಗ ಕುರವತ್ತಿಯಲ್ಲಿ ತೋಂಟದಾರ್ಯ ಮಠದ ಜೀರ್ಣೋದ್ಧಾರವನ್ನು ಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಹಾನಗಲ್ಲ ವಿರಕ್ತಮಠದ ಜೀರ್ಣೋದ್ಧಾರವನ್ನು ಮಾಡಿ ಸೇವೆ ಸಲ್ಲಿಸಿದವರು

: ಸೌಜನ್ಯ “ಬೆಳಗು”

ಶಿವಯೋಗಮಂದಿರದ ಶಾಖೆಗಳನ್ನು ಅಲ್ಲಲ್ಲಿ ಸ್ಥಾಪಿಸಿ ಅವುಗಳ ಮೂಲಕ ಶಿವಾನುಭವದ ಬೋಧೆಯಾಗುವಂತೆ ಮಾಡುವದು ಸಂಸ್ಥೆಯ ಉದ್ದೇಶಗಳಲ್ಲಿ ಒಂದು. ಅದರ ಸಾಧನೆಗಾಗಿ ಶ್ರೀಗಳವರು ನಾಡಿನ ಮೂಲೆ ಮೂಲೆಯಲ್ಲೆಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಮಂದಿರದ ಶಾಖಾ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಮೊಗ್ಗ, ಧಾರವಾಡ, ರಾಯಚೂರು ಮೊದಲಾದ ದೂರದ ಜಿಲ್ಲೆಗಳಲ್ಲಿಯೂ ಜನತೆಯು ಶಿವಯೋಗ ಮಂದಿರದ ಪ್ರಭಾವಕ್ಕೆ ಒಳಗಾಗಿ ತಮ್ಮ ಬಾಳನ್ನು  ಹಸನಗೊಳಿಸಿಕೊಳ್ಳಲೆಂಬ ಶ್ರೀಗಳವರ ಲೋಕಹಿತ ಭಾವನೆ ಕಪನಳ್ಳಿ, ನಿಡಗು೦ದಿ-ಕೊಪ್ಪ, ರಾಮಗಡ್ಡಿ, ಹಿರೇಹಾಳ ಮತ್ತು ಬದಾಮಿ ಗ್ರಾಮಗಳಲ್ಲಿ ರೂಪುಗೊಂಡಿತು. ಅಲ್ಲಿ ಶಾಖಾ ಶಿವಯೋಗಮಂದಿರಗಳ ಸ್ಥಾಪನೆಯಾಯಿತು.

ಶಾಖಾ ಶಿವಯೋಗಮಂದಿರ, ನಿಡಗುಂದಿಕೊಪ್ಪ

ಶಿವಯೋಗಮಂದಿರದ ಭಿಕ್ಷೆಗಾಗಿ ೧೯೧೪ ನೆಯ ಇಸ್ವಿಯಲ್ಲಿ ನಿಡಗುಂದಿ (ತಾ. ರೋಣ, ಜಿ. ಧಾರವಾಡ) ಗ್ರಾಮಕ್ಕೆ ಲಿಂ. ಪರಮಪೂಜ್ಯ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರು ದಯಮಾಡಿಸಿದ್ದರು. ಹಾವೇರಿ ಶ್ರೀ ನಿ. ಪ್ರ. ಶಿವಬಸವ ಮಹಾಸ್ವಾಮಿಗಳವರ ಪೂಜೆಗೆ ಏರ್ಪಾಟು ಮಾಡಿದ ಮನೆಯ ಕಿಡಕಿ ಮತ್ತು ಬಾಗಿಲುಗಳಲ್ಲಿ ಜನ ಶ್ರೀಗಳವರ ಲೀಲಾಮಯ ಪೂಜೆಯನ್ನು ನೋಡುವ ಕುತೂಹಲದಿಂದ ಇಣಿಕಿ ನೋಡಹತ್ತಿದರು. ಈ ಜನ ಜಂಗುಳಿಯನ್ನು ಕಂಡು ಹಾವೇರಿ ಶ್ರೀಗಳವರು ಬಹಳ ಬೇಸರಗೊಂಡರು. ಪೂಜೆ ಅರ್ಪಣ ಮುಗಿದ ಮೇಲೆ ಅವರು ಲೀಲಾಮಯವಾಗಿ ಹಾನಗಲ್ಲ ಶ್ರೀಗಳವರನ್ನು ಕುರಿತು ʼʼತಾವು ಈ ಮರುಳ ಜನರನ್ನು ಬೇಡಿ ಶಿವಯೋಗ ಮಂದಿರವನ್ನು ಬೆಳೆಸಲು ಯತ್ನಿಸುವಿರಲ್ಲವೆ ? ಅದರ ಪರಿಣಾಮವಿದು; ಇಂದು ನಮ್ಮ ಶಿವಪೂಜೆಗೆ ಕೊರತೆಯನ್ನುಂಟು ಮಾಡಿತು. ಇನ್ನು ಜನವನ್ನು ಬೇಡುವದಾದರೆ ತಮ್ಮ ಶಿವಯೋಗಮಂದಿರ ತಮಗೆ ಇರಲಿ, ಶಿವನನ್ನೆ ಬೇಡಿ ಶಿವಮಂದಿರವನ್ನು ಕಟ್ಟುವೆ.” ಎಂದು ಅಪ್ಪಣೆ ಕೊಡಿಸಿ ಅಂದೇ ಕೊಪ್ಪದ ನೆರೆಯ ಹಳ್ಳದ ಪ್ರಶಾಂತ ಸ್ಥಳದಲ್ಲಿ ಬಿಲ್ವವೃಕ್ಷದ ಅಡಿಯಲ್ಲಿ ಜೋಪಡಿಯನ್ನು ಹಾಕಿಸಿಕೊಂಡು ಅನುಷ್ಠಾನಕ್ಕೆ ಕುಳಿತರು. ಮೂರು   ತಿಂಗಳವರೆಗೆ ಲಿಂಗಾನಂದದಲ್ಲಿ ತನ್ಮಯರಾಗಿದ್ದರು. ಈ ಸ್ಥಾನ ಶ್ರೀಗಳವರ ಮನಕ್ಕೆ ನೆಮ್ಮದಿಯನ್ನು ತಂದುಕೊಟ್ಟಿತು. ಮುಂದೆ ಮಳೆಗಾಲ ಬಂದಿತು ಭಕ್ತರ ಆಗ್ರಹದ ಮೇರೆಗೆ ಶ್ರೀಗಳವರು ಹಾನಗಲ್ಲ, ಹಾಲಕೆರೆ ಮತ್ತು ರೋಣದ ಶ್ರೀಗಳವರನ್ನು ಕರೆಯಿಸಿಕೊಂಡು ಆ ಸ್ಥಾನದಲ್ಲಿಯೇ ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವ ನಿರ್ಧಾರವನ್ನು ಸೂಚಿಸಿದರು. ಹಾನಗಲ್ಲ ಶ್ರೀಗಳವರಿಗೆ ಹಾವೇರಿ ಶ್ರೀಗಳವರ ತಪಃಪ್ರಭಾವವನ್ನು ಕಂಡು ಹಿಡಿಸಲಾರದಷ್ಟು ಆನಂದವಾಯಿತು. ಅವರೇ ಅನುಷ್ಠಾನದ ಆರಾಧನೆ ಮಾಡಿಸಿ ೧೯೧೪ ನೆಯ ಇಸ್ವಿಯ ಬಸವಜಯಂತಿಯ ಶುಭ ದಿನದಲ್ಲಿ ಶಾಖಾಮಂದಿರದ ಅಡಿಗಲ್ಲನ್ನು ಇಡಿಸಿದರು. ಅಂದೇ ಸಂಗೀತ ಶಾಲೆಯ ಪ್ರಾರಂಭೋತ್ಸವವೂ ವಿಜೃಂಭಣೆಯಿಂದ, ಉತ್ಸಾಹದಿಂದ ಜರುಗಿತು. ಶ್ರೀ ಪಂಚಾಕ್ಷರ ಗವಾಯಿಗಳ ಆನಂದಕ್ಕೆ ಅಂದು ಮೇರೆ ಇಲ್ಲವಾಗಿತ್ತು .

ಆಲೂರ ಸದ್ಭಕ್ತರು ಮಂದಿರದ ಅನುಕೂಲತೆಗೆ ಯೋಗ್ಯ ಕ್ಷೇತ್ರವನ್ನು ಒದಗಿಸಿಕೊಟ್ಟರು. ಶಾಖಾ ಮಂದಿರವು ನಿರಾತಂಕವಾಗಿ ನಡೆಯಲೆಂಬ ಘನವಾದ ಉದ್ದೇಶದಿಂದ ಕೊಪ್ಪ ಮತ್ತು ಹಾಲಕೆರೆ ಗ್ರಾಮಗಳ ಸದ್ಭಕ್ತರು ೬೦ ಎಕರೆ ಜಮೀನುಗಳನ್ನು  ದಾನವಾಗಿ ಕೊಟ್ಟರು. ೩-೪ ವರ್ಷಗಳಲ್ಲಿಯೇ ಶ್ರೀಗಳವರ ಅನುಷ್ಠಾನದ ಪ್ರಭಾವದಿಂದ ಆ ಭೂಮಿ ಪುಣ್ಯ ಕ್ಷೇತ್ರವಾಗಿ ಕಂಗೊಳಿಸಿತು. ಕಲ್ಯಾಣದ ದೇಶಿಕರಿಗೆ ಇಲ್ಲಿಯೇ ನಿರಾಭಾರಿ  ಚರಪಟ್ಟಾಧಿಕಾರವನ್ನು ನೆರವೇರಿಸಲಾಯಿತು. ಅವರು ಮೂರು ವರ್ಷ ಇಲ್ಲಿಯೇ ಅನುಷ್ಠಾನ ಮಾಡಿದರು. ನಂತರ ಇಲ್ಲಿಯೇ ಶ್ರೀ ಮಹಾದೇವ ಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು ಮೊದಲಾದವರು ಕೆಲವು ಕಾಲ ಶಿವಯೋಗಾನುಷ್ಠಾನ ಮಾಡಿ ಸಿದ್ಧಿಪಡೆದರು. ಆ ಮೇಲೆ ಕ್ರಿ.ಶ. ೧೯೨೪ರಲ್ಲಿ ಹಾನಗಲ್ಲ ಮಹಾ ಸ್ವಾಮಿಗಳವರು ಮ೦ದಿರದ ಸಾಧಕರಾದ ಶ್ರೀ ಗೋಕಾಕ ದೇಶಿಕರವರನ್ನು ಇಲ್ಲಿಗೆ ಕರೆತಂದರು. “ಹಾವೇರಿಯ ಶ್ರೀ ಶಿವಬಸವ ಸ್ವಾಮಿಗಳು ಶಿವನನ್ನು ಬೇಡಿ ಈ ಶಿವಯೋಗಾಶ್ರಮವನ್ನು ಕಟ್ಟಿದ್ದಾರೆ. ಇಲ್ಲಿ ನೀವು ೧೨ ವರ್ಷ ಬಿಡದೆ ಶಿವಯೋಗ ತಪಸ್ಸನ್ನು ಆಚರಿಸಬೇಕು; ಆಗ ಈ ಆಶ್ರಮ ಜಾಗ್ರತ ಕ್ಷೇತ್ರವಾಗುತ್ತದೆ. ಅದರಿಂದ ನಿಮ್ಮ ಉದ್ಧಾರ ಮತ್ತು ಸಮಾಜದ ಉದ್ಧಾರವೂ ಆಗುವದು.” ಎಂದು ಅಪ್ಪಣೆ ಕೊಡಿಸಿ ಅವರ ಅನುಷ್ಠಾನಕ್ಕೆ ಪ್ರೇರಣೆಯನ್ನಿತ್ತರು. ಅಂತೆಯೆ ಗೋಕಾಕ ದೇಶಿಕರು ಶಿವಯೋಗದಲ್ಲಿ ಸಿದ್ಧಿ ಪಡೆದರು; ಶ್ರೀಗಳವರ ಧೈಯವನ್ನು ಬಿಡದೆ ಸಾಧಿಸಿದರು. ಅವರೇ ಮುಂದೆ ಆ ಆಶ್ರಮದ   ಅಧಿಕಾರಿಗಳಾಗಿ ಭಕ್ತರ ಭಕ್ತಿಯನ್ನು ಕೈಕೊಂಡು ಅದರ ಸರ್ವಾಂಗಸುಂದರ ಅಭಿವೃದ್ಧಿಯನ್ನು ಮಾಡಿರುವರು. ಅವರ ಪೂಜೆಯ ಪ್ರಭಾವದಿಂದ ಈ ಕ್ಷೇತ್ರ ಪ್ರತಿದಿನವೂ ನೂರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರಾರಂಭದಲ್ಲಿ ಈ ಮಂದಿರಕ್ಕೆ ಕೊಪ್ಪ ಮತ್ತು ಹಾಲಕೆರೆಯ ಸದ್ಭಕ್ತರು ಬಹುಮುಖವಾಗಿ ಸಹಾಯ ಸಲ್ಲಿಸಿದ್ದರು. ಕೊಪ್ಪ ಗ್ರಾಮದ ಭಕ್ತರು ೨೮೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಶಾಖಾ ಮಂದಿರದ ಆರ್ಥಿಕ ಕೊರತೆಯನ್ನು ನೀಗಿಸಿದರು; ೧೬ ಜನ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗದ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದರು. ಕೆಲವು ನಿಷ್ಠಾವಂತ ಭಕ್ತರು ಶಿವಯೋಗಮಂದಿರದ ಹೆಸರಿನಿಂದ ಗೋದಿ ಬಿತ್ತಿ ಅದರಿಂದ ಬಂದ ಬೆಳೆಯನ್ನು ಶಿವಾರ್ಪಣ ಬುದ್ಧಿಯಿಂದ ಈ ಮಂದಿರಕ್ಕೆ ಅರ್ಪಿಸಿದ್ದರು. ಹಾಲಕೆರೆಯ ಶ್ರೀ ಬಸವನಗೌಡ ಪಾಟೀಲ ಅವರು ಈ ಶಾಖಾ ಮಂದಿರದ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳುತ್ತಿದ್ದರು.

ರಾಮಗಡ್ಡಿಯ ಶಾಖಾಮಂದಿರ

ರಾಮಗಡ್ಡಿ (ಜಿ. ರಾಯಚೂರು) ಯಲ್ಲಿ ಶಾ. ಶ. ೧೮೩೬ (ಕ್ರಿ.ಶ.೧೯೧೪)  ನೆಯ ಆನಂದನಾಮ ಸಂವತ್ಸರದ ಮಾಘ ಶು. ೧೪ ರಂದು ಶ್ರೀ ಸಿದ್ಧಲಿಂಗಸ್ವಾಮಿಗಳು ಉರ್ಫ ಚೋಳೇಂದ್ರಸ್ವಾಮಿಗಳು ಅವರಿಂದ ಒಂದು ಶಿವಯೋಗಾಶ್ರಮವು ಸ್ಥಾಪಿತವಾಯಿತು. ಈ ಸ್ಥಾನ ನದಿಯ ನಡುಗಡ್ಡೆಯಲ್ಲಿ ರಮ್ಯವಾದ ಫಲವತ್ತಾದ ಪ್ರದೇಶದಲ್ಲಿದೆ. ಈಗ ನೀರಡಗುಂಭದ ಪಶ್ಚಿಮಾದ್ರಿಮಠದ ಅಧಿಪತಿಗಳಾದ ಶ್ರೀ ನಿ.ಪ್ರ. ಸಿದ್ದಲಿಂಗಸ್ವಾಮಿಗಳು ಆ ಆಶ್ರಮದ ಅಧಿಕಾರವನ್ನು ವಹಿಸಿಕೊಂಡಿರುವರು. ಪ್ರಾರಂಭದಲ್ಲಿ ಇಲ್ಲಿ ಐದು ಜನ ಸಾಧಕರು ಮತ್ತು ೧೫ ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು ಇದ್ದರು. ಇಲ್ಲಿಂದ ಇದುವರೆಗೆ ೯ ಜನ  ಮೂರ್ತಿಗಳು ಯೋಗ ಧರ್ಮಗಳ ಶಿಕ್ಷಣ ಪಡೆದು ಆಯಾ ಪ್ರಾಂತಗಳಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ೭- ೮ ಜನ ಶಾಸ್ತ್ರಿಗಳು ಇಲ್ಲಿಂದಲೇ ವೈದಿಕಾದಿ ಶಿಕ್ಷಣ ಪಡೆದು ಅಲ್ಲಲ್ಲಿ ಅಧ್ಯಾಪಕರಾಗಿದ್ದಾರೆ.” ಈಗ ಇಲ್ಲಿ ಮಂದಿರದಿಂದಲೇ ಶಿಕ್ಷಣ ಪಡೆದ ಶ್ರೀ ಶಿವಪುತ್ರ ದೇವರು ನೀರಡಗುಂಭ ಶ್ರೀಗಳವರ ಮಾರ್ಗದರ್ಶನದಲ್ಲಿ ಅಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಿವಯೋಗಾಶ್ರಮ ಕಪನಳ್ಳಿ

ಹಾನಗಲ್ಲ ಶ್ರೀಗಳವರು ಮಲೆನಾಡಿಗೆ ದಯಮಾಡಿದ್ದರು. ಅನಂತಪುರದ ಮುರಘಾಮಠದಲ್ಲಿ ಬಿಡಾರವಾಗಿತ್ತು, ಆಗ ಗುತ್ತಲದ ಶ್ರೀಗಳವರು ಮತ್ತು ಕೆಳದಿಯ ಶ್ರೀ ರೇವಣಸಿದ್ಧ ಪಟ್ಟಾಧ್ಯಕ್ಷರು ದಯ ಮಾಡಿಸಿದ್ದರು. ಈ ತ್ರಿಮೂರ್ತಿಗಳು ಹಾನಗಲ್ಲ ಶ್ರೀಗಳವರಲ್ಲಿ ತಾವು ಶಿವಯೋಗಮಂದಿರವನ್ನು ಸ್ಥಾಪಿಸಿ ಇದುವರೆಗೆ ಬಯಲು ಸೀಮೆಯಲ್ಲಿ ಸಾಕಷ್ಟು ಜನಜಾಗ್ರತಿಯನ್ನುಂಟು ಮಾಡಿದಿರಿ. ಇನ್ನು ಮಲೆನಾಡಿನಲ್ಲಿಯ ಜನಗಳ ಸುಧಾರಣೆಗಾಗಿ ಒಂದು ಶಾಖಾ ಶಿವಯೋಗಮಂದಿರವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಹಾನಗಲ್ಲ ಶ್ರೀಗಳವರು ಒಪ್ಪಿ ಅಲ್ಲಿಯ ಭಕ್ತರ ಅಪೇಕ್ಷೆಯಂತೆ ಅನಿಮಿಷ ದೇವರ ತಪೋಭೂಮಿಯಾದ ಕಪನಳ್ಳಿ(ಜಿ, ಶಿವಮೊಗ್ಗ ತಾ. ಶಿಕಾರಿಪುರ)ಯ ನೆರೆಯಲ್ಲಿ ದಿನಾಂಕ ೧೦-೩-೧೯೧೭ ರಲ್ಲಿ ‘ಶಿವಯೋಗಾಶ್ರಮ’ವನ್ನು ಸ್ಥಾಪಿಸಿದರು. ಅನಂತಪುರದ ಜ. ಲಿಂಗಮಹಾಸ್ವಾಮಿಗಳು, ಗುತ್ತಲದ ಶ್ರೀರುದ್ರ ಸ್ವಾಮಿಗಳು, ಕೆಳದಿ, ಸಾಲೂರು, ತ್ಯಾವಣಗಿ ಮೊದಲಾದ ಊರುಗಳ ಪಟ್ಟ ಚರಮೂರ್ತಿಗಳು, ಶಿಕಾರಿಪುರ ಮೊದಲಾದ ಗ್ರಾಮಗಳ ಸದಭಕ್ತರೂ ಸೇರಿ ಹಾವೇರಿ ಶ್ರೀಗಳವರ ನೇತೃತ್ವದಲ್ಲಿ ಶಿವಯೋಗಾಶ್ರಮದ ಆರಂಭೋತ್ಸವವನ್ನು ವೈಭವದಿಂದ ಸಾಂಗಗೊಳಿಸಿದರು. ಸಾವಿರಾರು ಜನ ಸೇರಿತ್ತು, ನಿತ್ಯ ದಾಸೋಹ ನಡೆಯಿತು. ಅದರೊಂದಿಗೆ ಜ್ಞಾನದಾಸೋಹವೂ ಅಖಂಡವಾಗಿ ಸಾಗಿತು. ಮಲೆನಾಡಿನ ಜನರಲ್ಲಿ ಎಂದಿಲ್ಲದ ಭಕ್ತಿ ವಿಶ್ವಾಸಗಳು ಮೈದಾಳಿದ್ದವು.

ಈ ಆಶ್ರಮವು ಸುರಕ್ಷಿತವಾಗಿ ಸಾಗಲೆಂದು ಶಿಕಾರಿಪುರದ ಶ್ರೀ ಹೊನ್ನಪ್ಪ ಶೆಟ್ಟರ ಚನ್ನಪ್ಪನವರು ೧೦ ಸಾವಿರ ರೂಪಾಯಿಗಳ ಮೂಲ ನಿಧಿಯನ್ನು ಅರ್ಪಿಸಿ ಅದರ ಬಡ್ಡಿಯಿಂದ ಆಶ್ರಮದ ದೈನಿಕ ವೆಚ್ಚವು ಸಾಗುವಂತೆ ಏರ್ಪಡಿಸಿದ್ದರು.

 ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಶ್ರೀ ಮಹಾದೇವ ದೇಶಿಕರು ಮಂದಿರದ ೫-೬ ಜನ ಸಾಧಕರೊಂದಿಗೆ ಆಶ್ರಮದಲ್ಲಿ ಅನುಷ್ಠಾನ ಮಾಡುತ್ತಿದ್ದರು. ಹುಬ್ಬಳ್ಳಿ ಶ್ರೀ ಶಿವಮೂರ್ತಿ ಸ್ವಾಮಿಗಳು, ಇಲಕಲ್ಲ ಶ್ರೀ ಮಹಾಂತ ದೇಶಿಕರು, ಬಾಗಿಲುಕೋಟೆಯ ಶ್ರೀ ಶಿವಮೂರ್ತಿ ಸ್ವಾಮಿಗಳು ಮೊದಲಾದ ಶಿವಯೋಗಿಗಳೊಡನೆ ಶ್ರೀ ಮಹಾದೇವ ದೇಶಿಕರು (ಈಗ ಕುರವತ್ತಿ ಶ್ರೀಗಳು) ಲಿಂಗಾಣತಿಯಿಂದ ಬಂದುದನ್ನು ಸ್ವೀಕರಿಸುತ್ತ ಸಂಕಲ್ಪ ಪೂರ್ವಕವಾಗಿ ಒಂದು ಕೋಟಿ ಮಹಾಮಂತ್ರ ಜಪವನ್ನು ಮಾಡಿ ಶ್ರೀ ಗಳವರ ಆಶೆಯನ್ನು ಸಫಲಗೊಳಿಸಿದರು.

 ಹಳೇ ಪಟ್ಟಣದ ಹಾಲಪ್ಪ ಶೆಟ್ಟರು ಮುಂತಾದ ಸದ್ಭಕ್ತರು ಆಶ್ರಮಕ್ಕೆ ಹತ್ತು ಉತ್ತಮ ಹಸುಗಳನ್ನು ಕೊಟ್ಟರು. ಉಳಿದ ಭಕ್ತರೂ ಗೋದಾನ ಮಾಡಿದರು. ಕೆಲವು ದಿನಗಳಲ್ಲಿ ಆಶ್ರಮದ ಗೋಸಂತತಿಯು ಎರಡು ನೂರಕ್ಕೆ ಮಿಕ್ಕಿತು. ಒಳ್ಳೆಯ ತಳಿಯ ಆಕಳುಗಳ ಪೀಳಿಗೆ ಹೆಚ್ಚಿತು. ಈಗಲೂ ಆಶ್ರಮದಲ್ಲಿ ಗೋರಕ್ಷಣೆಯ ಕಾರ್ಯ ನಿರಾಬಾಧವಾಗಿ ನಡೆದಿದೆ.

ಈ ಆಶ್ರಮವನ್ನು ಸ್ಥಾಪಿಸುವ ಮುಂಚೆ ಈ ಪ್ರಾಂತದ ಜನತೆಯಲ್ಲಿ ಮೌಡ್ಯವು ಮನೆ  ಮಾಡಿಕೊಂಡಿತ್ತು. ಜನತೆಯು ವೀರಶೈವರ ನಿಜಾಚರಣೆಯನ್ನು ಮರೆದಿತ್ತು ಇದನ್ನು ಕಂಡು ಜನರಿಗೆ ವೀರಶೈವಾಚಾರ ಮಾರ್ಗದ ಬೋಧೆ ಮಾಡಲು ಪೂಜ್ಯರಾದ ಹಾವೇರಿ ಮತ್ತು ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಶ್ರಮವಹಿಸಿ ಅನಂತಪುರದ ಶ್ರೀಗಳು ಮತ್ತು ಕೆಳದಿ ಪಟ್ಟಾಧ್ಯಕ್ಷರರೊಡನೆ ಆಲೋಚಿಸಿ ಸಾಗರ, ಶಿರಿಯಾಳಕೊಪ್ಪ ಸಿದ್ದಾಪುರ ಮತ್ತು ಬಂಕಾಪುರ ಗ್ರಾಮಗಳಲ್ಲಿ ಧರ್ಮೋತ್ತೇಜಕ ಸಭೆಗಳನ್ನು ನಡೆಯಿಸಿದರು; ಪುರಾಣ ಕೀರ್ತನಗಳಿಂದ ಜನರು ಸದಾಚರಣೆಯಲ್ಲಿ ನಡೆಯುವಂತೆ ಮಾಡಿದರು.

  ಶಿರಿಯಾಳ ಕೊಪ್ಪದಲ್ಲಿ ಹಾನಗಲ್ಲ ಶ್ರೀಗಳವರು ಮೂರು ತಿಂಗಳುಗಳ ವರೆಗೆ ಶ್ರೀ ನಿಜಗುಣಾರ್ಯರ ಗ್ರಂಥಗಳ ಪ್ರವಚನಗಳನ್ನು ನಡೆಯಿಸಿ ಬೋಧವಿತ್ತು ಜನರ ನಡೆ ನುಡಿಗಳನ್ನು ತಿದ್ದಿದರು; ಸಾವಿರಾರು ಮಾಹೇಶ್ವರ ಭಕ್ತ ವಟುಗಳಿಗೆ ವೀರಶೈವದೀಕ್ಷೆಯ ಸಂಸ್ಕಾರವನ್ನು ಮಾಡಿಸಿ ಶಿವಪೂಜಾ ವಿಧಾನವನ್ನು ಬೋಧಿಸಿದರು. ತೊಗರಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ದೊಡ್ಡ ಸಭೆಯನ್ನು ಸೇರಿಸಿ ವೀರಶೈವ ಮತತತ್ವಗಳ ಪ್ರಸಾರವನ್ನು ಮಾಡಿ ಜನರಲ್ಲಿ ಅರಿವಿನ ಬೆಳಗು ಮೂಡುವಂತೆ ಮಾಡಿದರು. ಶಿರಿಯಾಳಕೊಪ್ಪದ ಹತ್ತಿರ ಬಿಳುವಾಣಿ ಮರಡಿಮಠದಲ್ಲಿ ಮೂರು ತಿಂಗಳು ವಾಸ್ತವ್ಯ ಮಾಡಿ ಶ್ರೀಗಳವರು ಈ ಪ್ರಾಂತದ ಭಕ್ತ ಮಾಹೇಶ್ವರರನ್ನು ಕೂಡಿಕೊಂಡು ‘ಶಿವಾನುಭವ’ ಶಾಸ್ತ್ರವನ್ನು ಶ್ರೀ ಕಬ್ಬೂರ ಶರಣರಿಂದ ಜನರಿಗೆ ಬೋಧೆ ಮಾಡಿಸಿದರು. ಅನೇಕರು ದೀಕ್ಷೆ-ಅನುಗ್ರಹಗಳನ್ನು ಪಡೆದರು. ಹೀಗೆ ಶಿವಯೋಗಾಶ್ರಮವು ಸ್ಥಾಪಿತವಾದಂದಿನಿಂದ ಮಲೆನಾಡಿನಲ್ಲಿ ಅನೇಕ ರೀತಿಯಿಂದ ಧರ್ಮಜಾಗೃತಿಯ ಕಾರ್ಯಗಳು ನಡೆದು ಜನತೆಯಲ್ಲಿ ಆಸ್ತಿಕಭಾವನೆ ಒಡಮೂಡುವಂತಾಯಿತು. ಶ್ರೀ ಹಾಲಪ್ಪಶೆಟ್ಟರು ಒಡಕುಹೊಳೆಯಲ್ಲಿ ಸವದತ್ತಿಯ ಶ್ರೀಗಳವರಲ್ಲಿದ್ದು ಅನುಷ್ಠಾನದ ಕ್ರಮ ತಿಳಿದುಕೊಂಡು ಬಂದು ಕಪನಳ್ಳಿಯಲ್ಲಿ ಅನುಷ್ಠಾನ ಮಾಡುತ್ತ  ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಈಗ ಶಿವಯೋಗಾಶ್ರಮದಲ್ಲಿ ಶ್ರೀ ನಿ.ಪ್ರ. ರುದ್ರಮುನಿಸ್ವಾಮಿಗಳು ಪೂಜ್ಯರ ಉದ್ದೇಶಗಳಂತೆ ಗೋರಕ್ಷಣೆ, ಒಕ್ಕಲುತನ ಮೊದಲಾದ ಕಾಯಕಗಳಿಗೆ ಉತ್ತೇಜನ ಕೊಟ್ಟು ಅನುಷ್ಠಾನ ಮಾಡುತ್ತ ಜನರಲ್ಲಿ ನೀತಿ ಸದಾಚಾರಗಳು ನೆಲೆಗೊಳ್ಳುವಂತೆ ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಆಶ್ರಮಕ್ಕೆ ಸ್ಥಿರವಾದ ಕಟ್ಟಡಗಳಿರಲಿಲ್ಲ. ಶ್ರೀಗಳವರು ಅಂದವಾದ ನೂತನ ಮಠವನ್ನು ಕಟ್ಟಿಸಿ ಆಶ್ರಮದ ಶೋಭೆಯನ್ನು ಹೆಚ್ಚಿಸಿದ್ದಾರೆ.

ಹಿರೇಹಾಳದಲ್ಲಿ ಮಂದಿರ

ಹಿರೇಹಾಳು (ತಾ. ರೋಣ ಜಿ. ಧಾರವಾಡ) ಗ್ರಾಮ ಶಿವಯೋಗಮಂದಿರಕ್ಕೆ ಬಹಳ ದೂರದಲ್ಲಿಲ್ಲ. ಅಲ್ಲಿಯ ಭಕ್ತರ ಆಗ್ರಹದಂತೆ ಶ್ರೀಗಳವರು ಅಲ್ಲಿ ಅನುಷ್ಠಾನ ಮಾಡಲು ಒಬ್ಬ ಸಾಧಕರನ್ನು ಕಳಿಸಿದರು.  ಶ್ರೀ ನಿರಂಜನ ಸಿದ್ಧಲಿಂಗಸ್ವಾಮಿಗಳ ಅನುಷ್ಠಾನದ ಪ್ರಭಾವದಿಂದ ಹಿರೇಹಾಳದಲ್ಲಿ ಶಾಖಾಶಿವಯೋಗ ಮಂದಿರದ ಸ್ಥಾಪನೆಯಾಯಿತು. ಅಲ್ಲಿ ಯಾವಾಗಲೂ ಒಬ್ಬ ಸಾಧಕರು ಇದ್ದು ಶಿವಯೋಗದೊಂದಿಗೆ ಜನರಲ್ಲಿ ಪ್ರವಚನಾದಿಗಳಿಂದ ಧರ್ಮಪ್ರಸಾರವನ್ನು ಮಾಡಲು ಅನುಕೂಲತೆಗಳನ್ನು ಅಲ್ಲಿಯ ಭಕ್ತರು ಕಲ್ಪಿಸಿಕೊಟ್ಟಿದ್ದರು.*

ಬದಾಮಿಯ ಶಾಖಾಮಂದಿರ

ಮಂದಿರಕ್ಕೆ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ ಅಧಿಕಾರಿಗಳಲ್ಲಿ  ರಾ. ಬ. ಕಿತ್ತೂರ ರೇವಣಸಿದ್ಧಪ್ಪಯ್ಯನವರೂ (Retired D.D.C.) ಒಬ್ಬರು. ಅವರ ಧರ್ಮಪ್ರೇಮ ಸಮಾಜಾಭಿಮಾನಿಗಳ ಗುರುತೆಂದು ಶಿವಯೋಗಮಂದಿರದ ಅಭಿಮಾನಿಗಳು ಹಿತಚಿಂತಕರೂ ಧರ್ಮ ಕಾರ್ಯಕ್ಕೆಂದು ಬದಾಮಿಯಲ್ಲಿ ಶಾಖಾ ಶಿವಯೋಗಮಂದಿರವನ್ನು ಶಾ.ಶ. ೧೮೪೮ (ಕ್ರಿ.ಶ. ೧೯೨೬) ರಲ್ಲಿ ಸ್ಥಾಪಿಸಿದರು. ಈ ಕಾರ್ಯದಲ್ಲಿ ಇಲಕಲ್ಲ ಶ್ರೀ ಮಹಾಂತಸ್ವಾಮಿಗಳು, ಶ್ರೀ ಜಡೇಸಿದ್ದಲಿಂಗಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಅಲ್ಲಲ್ಲಿ ಸಂಚರಿಸಿ ನಿಧಿಸಂಗ್ರಹ ಮಾಡಿದರು. ಅಂದವಾದ ಶಿವಾನುಭವ ಮಂಟಪವನ್ನು ಕಟ್ಟಿಸಿದರು. ಈ ಕಾರ್ಯದಲ್ಲಿ ಶ್ರೀ ಕಿತ್ತೂರ ಸಾಹೇಬರಲ್ಲಿ ವಿಶ್ವಾಸವುಳ್ಳ ಅನೇಕ ಜನರು ಸಹಾಯಸಲ್ಲಿಸಿದರು.   ಹುಬ್ಬಳ್ಳಿಯ ಶ್ರೀ ಬಸವಶೆಟ್ಟೆಪ್ಪ ನೀಲಿ ಅವರು ಒಂದು ಉತ್ತಮ ಭಾವಿಯನ್ನು ಕಟ್ಟಿಸಿದರು.  ಇಲ್ಲಿ ಪ್ರವಾಸಿ ಭಕ್ತರ ಮಾಹೇಶ್ವರ ಶಿವಪೂಜೆಗೆ ಪ್ರಸಾದಕ್ಕೆ ಅನುಕೂಲತೆಗಳನ್ನು ಊರ ಪ್ರಮುಖರು ಒದಗಿಸಿಕೊಟ್ಟರು.

 ಈ ಶಾಖಾಮಂದಿರದ ಸ್ಥಾಪನೆಯಿಂದ ಬದಾಮಿಯ ಭಕ್ತರಿಗೆ ಬಹಳ ಅನುಕೂಲವಾಯಿತು. ಆಗಾಗ ಇಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನಗಳಿಂದ ಜ್ಞಾನ ಪ್ರಸಾರವು ಜನತೆಯಲ್ಲಿ ಜಾಗ್ರತಿಯನ್ನು ತಂದಿತು ಇಲ್ಲಿ ಭಾವಿಯ ನೀರಿನ ಉಪಯೋಗಪಡೆದು ಒಂದು ಹಣ್ಣಿನ ತೋಟವನ್ನು ಬೆಳೆಸಿದ್ದರು. ಬಿಲ್ವಪತ್ರಿಯ ಬನವೂ ಇದೆ. ಕೆಲವು ವರ್ಷ ಇಲ್ಲಿ ಇಂಗ್ಲೀಷ ಶಾಲೆಯೂ ನಡೆಯಿತು. ಬದಾಮಿಯ ಶಾಲಾಮಂದಿರದಲ್ಲಿ ಮಂದಿರದ ಶ್ರೀಗಳವರು ಮತ್ತು ಪ್ರವಾಸಿ ಜನರು ತಂಗುವದಕ್ಕೆ ಅನುಕೂಲತೆಯನ್ನು ಕಲ್ಪಿಸಲಾಗಿದೆ.

 ಈ  ಶಾಖಾಶಿವಯೋಗಮಂದಿರಗಳೆಲ್ಲ ಶ್ರೀಗಳವರ ಕರ್ತೃತ್ವ ಶಕ್ತಿಯ ಜೀವಂತ ಪ್ರಮಾಣಗಳಾಗಿವೆ. ಶ್ರೀಗಳವರು ಮಂದಿರದ ಸಾಧಕರಿಗೆ ಕೇವಲ ಅನುಕೂಲ ಮಠಗಳಿಗೆ ಅಧಿಕಾರಿಗಳಾಗಲು ಪ್ರೇರಣೆಯನ್ನು ಕೊಡದೆ ಅವರು ತಮ್ಮ ತಪೋಬಲದಿಂದ ಹೊಸ ಮಂದಿರಗಳನ್ನೇ ಅಶ್ರಮಗಳನ್ನೇ ಸ್ಥಾಪಿಸಿ ತ್ಯಾಗಮಯ ಜೀವನವನ್ನು ಸಾಗಿಸುವಂತೆ ಬೋಧಿಸುತ್ತಿದ್ದರು. ಈ ಆಶ್ರಮಗಳೆಲ್ಲ ಮಂದಿರದ ಶಿವಯೋಗಿ ಸಾಧಕರ ಅನುಷ್ಠಾನ ಪ್ರಭಾವದ ಪರಿಣಾಮವಾಗಿಯೇ ಮೈದಾಳಿ ಬಂದಿವೆ, ಬರುತ್ತಿವೆ. ಅವುಗಳ ಮುಖಾಂತರ ಅನೇಕ ಬಗೆಯಾಗಿ ಜನತಾ ಜಾಗ್ರತಿಯ ಮಹಾಕಾರ್ಯಗಳು ಯಶಸ್ವಿಯಾಗಿ ಕೈಗೂಡಿವೆ.

ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು.

ಚಾಲ: ʼʼನೋಡಿರಿಲ್ಲಿದೆ. ಶಿವನ ಮಂದಿರʼʼ ಎಂಬಂತೆ,

ಬೇವು ಬೆಲ್ಲದ ಬೆರಕ ಸರಿಸಮ | ಮಾಡಿರೆನುವ ಯುಗಾದಿಯು ||

ʼʼಜೀವಿ ತಾ೦ ಸುಖ ದುಃಖ ಸಹಿಸಲಿ” ಎಂಬುದಿದುವೆ ಯುಗಾದಿಯು ||

ಯುಗ-ಯುಗಾಂತರ, ಕಾಲ ಗಣನೆಗೆ | ಯುಗದ ಆದಿ-ಯುಗಾದಿಯು ||

ನಗು.ವಸಂತದ ಚೈತ್ರಶುದ್ಧದ | ಮೊದಲ ದಿನವೆ ಯುಗಾದಿಯು ||

ಆ ಪರಮನವತಾರದೆಣಿಕೆಗೆ | ನಾಮವಿಹ ಯುಗ ನಾಲ್ಕಿವೆ ||

ದ್ವಾಪರ.ತ್ರೇತಾ.ಕೃತ.ಕಲಿಯು | ಎಂಬ ಯುಗಗಳು ನಾಲ್ಕಿವೆ | |

” ಕಲಿ. ಯುಗೇ…. ವೈವಶ್ವತಾಭಿಧ | ಮನು “ವಿನದಿದು ಯುಗಾದಿಯು ||

ಕಲಿತ, ಕಲಿಯುವ, ಕಲಿಸಬಯಸುವ | ಸರ್ವ ಜನರ ಯುಗಾದಿಯು  | |

ನೂರು ವರ್ಷದ ಜೀವಿ : ಮನುಜಗೆ | ಯುಗದ ಅರ್ಥವು ವರ್ಷವು ||

ಆರು ಋತುಗಳ ಮೊದಲ ಋತುವಿನ | ಮೊದಲ ದಿನ ಚಿರ ಹರ್ಷವು  ||

ಶಾಲಿ.ವಾಹನ.ಶಕದ ಮೊದಲಿನ | ಮೊದಲ ದಿನವೆ ಯುಗಾದಿಯು ||

ಬಾಲಿಕಾ. ಸಮ.ಮನದ ನಿರ್ಮಲ | ಚಿಗುರ ಚಲುವೆ ಯುಗಾದಿಯು ||

ಭುವಿಯ ಮಧ್ಯದ ರೇಖೆ ಮೇಲ್ಗಡೆ | ಸೂರ್ಯ ಬರಲು ಯುಗಾದಿಯು ||

ನವ.ನವೀನತೆ ಬಿಸಿಯ ಬೀಸುವ |ಸೂರ್ಯನಿಂದ ಯುಗಾದಿಯು ||

ಚೈತ್ರದಾದಿಯು : ಫಾಲ್ಗುಣಾ೦ತ್ಯವು | ಮಧ್ಯ ಕಾಲ ಯುಗಾದಿಯು ||

ಜಾತ್ರೆ.ರಥಕಿಹ ಧ್ವಜಗಳಂತೆಯೆ | ಚಿಗಿತ ಗಿಡದ ಯುಗಾದಿಯು ||

ಧರ್ಮ.ಶಾಸ್ತ್ರವು, ಕಾಲ.ಧರ್ಮವು | ತಿಳಿಪುದೊಂದೇ ಕಾಲವು ||

ಕರ್ಮ-ಗತಿ-ಮತಿ.ಸಿದ್ದಿ ಬಯಸಲು | ಯುಗದ ಆದಿ ಸುಕಾಲವು ||

ರಾಮಚಂದ್ರನು ಪಟ್ಟ ಕೇರಿದ್ದ | ಪರ್ವ ದಿನವೆ ಯುಗಾದಿಯು ||

ಭೂಮಿ,ಪಾಲಕ : ಶಾಲಿ.ವಾಹನ | ಮೆಚ್ಚಿ ಪೇಳ್ದ ಯುಗಾದಿಯು ||

ಹಾನುಗಲ್ಲ ಕುಮಾರ ಯೋಗಿಯು | ಯೋಗ ತಿಳಿಪ ಯುಗಾದಿಯು ||

ಜ್ಞಾನ ಕರ್ಮದ ಸಮ.ಸಮುಚ್ಚಯ | ಸಾರುತಿರುವ ಯುಗಾದಿಯು ||

* ಮೂರುವರೆ ಶುಭ ದಿನ ‘ದ ವರ್ಷಕೆ | ಮೊದಲ ಹಬ್ಬ ಯುಗಾದಿಯು ||

ಚಾರು.ಲತೆ ಗಿಡ ಪಲ್ಲವಿಪ ತೆರ | ಮಾಡುವುದಿದೆ ಯುಗಾದಿಯು ||

ಆ ಶಿಲಾ.ಯುಗ, ಈ ಕಲಾ.ಯುಗ | ಹಸಿರು ಗಿಡದ ಯುಗಾದಿಯು  ||

ಈಶ.ರವಿ.ಶಶಿ. ಕೃಪೆಯಿರುವನಕ | ಮುಂದುವರೆವ ಯುಗಾದಿಯು ||

ಯುಗ.ಯುಗಾಂತರ. ಸೌಖ್ಯ.ದಾಯಕ | ಯುಗದ ಆದಿ=ಯುಗಾದಿಯು ||

ಜಗಕೆ ಶಿವ=ʼʼಗುರುಮೂರ್ತಿ ʼʼಕರುಣಿಪ | ಕೃಪೆಯ ಚಿಹ್ನ ಯುಗಾದಿಯು ||

ಡಾ|| – ʼಗುರುಸಿದ್ದ ದೇವ’ ಕೆಳದಿ

ಸಂಗನಬಸವದೇವರು, ಎಂ.ಎ.ವಾರಣಾಸಿ

(  ಲಿಂ :ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ವಾರಣಾಸಿಯಲ್ಲಿ ವ್ಯಾಸಂಗ ಸಮಯದಲ್ಲಿ ಬರೆದ ಲೇಖನ)

ಸಂಗ್ರಹ ಸೌಜನ್ಯ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಯೋಗವೆಂದರೇನು ? ಈ ಪ್ರಶ್ನೆಗೆ ಸರ್ವಸಮ್ಮತ ಉತ್ತರವನ್ನೀಯುವದು ಅಸಂಭವ. ನಮ್ಮ ಆಚಾರ್ಯರು ಯೋಗ ಶಬ್ದದ ವ್ಯಾಖ್ಯೆಯನ್ನು ನಾನಾ ಪ್ರಕಾರವಾಗಿ ಮಾಡಿದ್ದಾರೆ, ಭಾಷಾವಿಜ್ಞಾನಿಗಳ ಪ್ರಕಾರ ಭಾರತದ ಅತ್ಯಂತ ಪ್ರಾಚೀನಗ್ರಂಥವಾದ ಋಗ್ವೇದದಲ್ಲಿ ರಥಕ್ಕೆ ಹೂಡುವ ಪಶುಗಳ ಬಂಧನಕ್ಕೆ ಯೋಗ ವೆಂದು ಹೇಳಲಾಗಿದೆ. ಇದು ಯೋಗ ಶಬ್ದದ ಪ್ರಾಚೀನವಾದ ಅರ್ಥ, ಯದ್ಯಪಿ ಋಕ್‌ಸಂಹಿತೆಯ ಕೆಲವು ಕಡೆ ಯೋಗ, ಯೋಗಕ್ಷೇಮ ಶಬ್ದಗಳು ಬಂದಿವೆ. ಆದರೆ ಅವುಗಳ ಅರ್ಥ ಯೋಗಸೂತ್ರ, ಉಪನಿಷತ್ತು, ಹಾಗೂ ಮಹಾಭಾರತಗಳಲ್ಲಿ ಕೊಡುವ ಅರ್ಥಕ್ಕಿಂತ ಅತ್ಯಂತ ಭಿನ್ನವಾಗಿದೆ.

ಪ್ರಾಚೀನ ವೈದಿಕಗ್ರಂಥಗಳಲ್ಲಿ ಯೋಗಶಬ್ದದ ಘನಿಷ್ಠ ಸಂಬಂಧವು ತಪಸ್ಸು, ಯಜ್ಞ, ಜಾದು, ತಂತ್ರ, ಮಂತ್ರ ಶಬ್ದಗಳ ಜೊತೆಗೆ ಇತ್ತೆಂದು ವೇದ್ಯವಾಗುತ್ತದೆ. ಇದಲ್ಲದೇ ಐತಿಹಾಸಿಕ ಯುಗದಲ್ಲಿ ತಪಸ್ಸಿನಿಂದ ಪ್ರಾಪ್ತವಾಗುವ ಶಕ್ತಿಗಳ ಮತ್ತು ಧ್ಯಾನದಿಂದ ಸಿದ್ಧಿಸಿದ ಸಿದ್ಧಿಗಳ ಅರ್ಥದಲ್ಲಿ ಯೋಗಶಬ್ದದ ಪ್ರಯೋಗವು ಕಂಡು ಬರುತ್ತದೆ.

ಹರಪ್ಪಾ ಮೊಹಂಜೋದಾರೊ ಸಂಸ್ಕೃತಿಯ ಸಮಯದಲ್ಲಿ ಯೋಗ ಮತ್ತು ಧ್ಯಾನ ಶಬ್ದಗಳ ಪ್ರಯೋಗದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಕಾಲದಲ್ಲಿ ದೊರೆತ ಕೆಲವು ನಾಣ್ಯಗಳ ಮೇಲೆ ಮತ್ತು ಪಾಷಾಣಖಂಡಗಳ ಮೇಲೆ ಕೆತ್ತಿದ ಧ್ಯಾನಸ್ಥ ಪುರುಷರನ್ನು ತಪಸ್ವಿಗಳನ್ನು ನೋಡಬಹುದು. ಅತಃ ಯೋಗ ಪರಂಪರೆಯು ಐದುಸಾವಿರ ವರ್ಷಗಳ ಪೂರ್ವದಲ್ಲಿ ಊರ್ಜಿತಾವಸ್ಥೆಯಲ್ಲಿ ಇತ್ತೆಂದು ಖಚಿತವಾಗಿ ಹೇಳಬಹುದು.

ವೈದಿಕಮಧ್ಯಕಾಲವು ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ಸಂಗಮ ಕಾಲವು. ಈ ಸಂಗಮದ ಪ್ರಭಾವವು ಜೈನ, ಬೌದ್ಧ, ಸಾಂಖ್ಯ, ಆಜೀವಿಕ ಮತ್ತು ಪ್ರಾಚೀನ ಉಪನಿಷತ್ತುಗಳ ಮೇಲೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಮೋಕ್ಷಪಾಯವಾದ ಯೋಗಮಾರ್ಗದಲ್ಲಿ ಸರ್ವಜಾತೀಯ ಮುಮುಕ್ಷಗಳಿಗೆ ಪ್ರವೇಶ ಸಿಗಬೇಕಾದರೆ ಈ ಎರಡೂ ಸಂಸ್ಕೃತಿಗಳ ಸಂಗಮದ (ಸಮ್ಮಿಶ್ರಣ) ಪರಿಣಾಮವೆಂದೇ ಹೇಳಬಹುದು. ಆದರೆ ಈ ಉದಾರತೆಯು ವೀರಶೈವ, ಜೈನ, ಬೌದ್ಧ ಧರ್ಮಗಳಲ್ಲಿ ಮೊದಲಿನಿಂದಲೂ ವಿದ್ಯಮಾನವಾಗಿತ್ತು, ಬ್ರಾಹ್ಮಣಪರಂಪರೆಯಲ್ಲಿ ಮಾತ್ರ ಈ ಪ್ರಗತಿಶೀಲ ವಿಚಾರವು ಕಾಲಾಂತರದಲ್ಲಿ ಪ್ರವೇಶ ಮಾಡಿತು.

ಐತಿಹಾಸಿಕ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಯೋಗವು ಶ್ರಮಣಯೋಗ ಬ್ರಾಹ್ಮಣಯೋಗವೆಂದು ಎರಡು ಪ್ರಕಾರ, ಶ್ರಮಣಯೋಗವು ಅನೇಶ್ವರವಾದಿಯಾದರೆ, ಬ್ರಾಹ್ಮಣಯೋಗವು ಬ್ರಹ್ಮಾತ್ಮವಾದಿಯು, ಈಶ್ವರವಾದಿಯು ಮತ್ತು ಪುರುಷವಾದಿಯೂ ಆಗಿದೆ. ವೈದಿಕಮಧ್ಯಕಾಲದಲ್ಲಿ ಸಾಂಖ್ಯ ಮತ್ತು ಯೋಗದ ಮೇಲೆ ಸೇಶ್ವರಿವಾಖ್ಯೆಗಳ ರಚನೆಯ ನಂತರ ಇವೆರಡುಗಳ ಗಣನೆಯು ಷಡ್‌ದರ್ಶನ ಗಳಲ್ಲಿ ಪ್ರಾರಂಭವಾಯಿತು.

ಮಹಾಭಾರತದ ಶಾಂತಿಪರ್ವದಲ್ಲಿ ಸಂಕಲಿತ ಯೋಗ ವಿಷಯಕ ಸಾಮಗ್ರಿಯು ಪ್ರಾಚೀನಕಾಲದಿಂದ ಕೇಳುತ್ತ ಬಂದಿರುವ ವಿವಿಧ ಕಥನಗಳನ್ನು ಆಶ್ರಯಿಸಿದೆ. ಕಾರಣ ಕ್ರಿ.ಶ. ಪೂರ್ವ ೬ ಅಥವಾ ೫ ನೆಯ ಶತಮಾನದ ಯೋಗಪರಂಪರೆಯನ್ನು ತಿಳಿಯ ಬೇಕಾದರೆ ಪ್ರಾಚೀನ ಪಾಲೀಸೂತ್ರಗಳನ್ನು ಉಪನಿಷತ್ತುಗಳನ್ನು ಹಾಗೂ ಜೈನಸೂತ್ರ ಗಳನ್ನು ಆಶ್ರಯಿಸಬೇಕು. ಪ್ರಾಚೀನ ಪಾಲೀಸಾಹಿತ್ಯವು ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಆ ಮೂರು ಭಾಗಗಳು ವಿನಯಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕಗಳೆಂದು ಕರೆಯಲ್ಪಡುತ್ತಿವೆ. ಅಶೋಕನ ಸಮಯದಲ್ಲಿ ರಚಿತ ಸುತ್ತಪಿಟಕದ ಖುದ್ದಕನಿಕಾಯಗಳಲ್ಲಿ ಬೌದ್ಧ ಯೋಗ ವಿಷಯಕ ಸಾಮಗ್ರಿಯು ಪರ್ಯಾಪ್ತವಾಗಿ ದೊರೆಯುತ್ತದೆ. ಭಗವಾನ ಗೌತಮಬುದ್ದನು ಪೂರ್ವಾಶ್ರಮದಲ್ಲಿ ಅತ್ಯಂತ ಕಠೋರವಾದ ಯೋಗಸಾಧನೆಯನ್ನು ಮಾಡಿದನೆಂದು ಪ್ರತೀತಿ ಇದೆ. ಇಷ್ಟೆ ಅಲ್ಲ, ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ ಕೇವಲ ಅಸ್ಥಿ ಪಂಜರವೂ ಆದ ಆತನ ಶಿಲಾಪ್ರತಿಮೆಗಳು ಇನ್ನೂ ಅನೇಕ ಕಡೆಗೆ ದೊರೆಯುವವು. ಆ ಕಾಲದಲ್ಲಿ ಅವನು ಸರ್ವಶ್ರೇಷ್ಠಯೋಗಿ ಮತ್ತು ಧ್ಯಾನಮಾರ್ಗದ ಸರ್ವಶ್ರೇಷ್ಟ ಉಪದೇಶಕನೆಂದು ಪಾಲಿಸಾಹಿತ್ಯವು ಘೋಷಿಸುತ್ತದೆ.

ನಿರ್ವಾಣಧಾತು(ಧರ್ಮ ಧಾತುವಿನ ಪ್ರಾಪ್ತಿಯೇ ಬೌದ್ಧಯೋಗದ ಪರಮೋದ್ದೇಶ. ಈ ಯೋಗದಲ್ಲಿ ಸ್ಮೃತಿ, ಧ್ಯಾನ ಸಮಾಧಿ, ಶಮಥ, ವಿಪಶ್ಯನಾ ಮೊದಲಾದವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಬೌದ್ಧಯೋಗದ ಅಷ್ಟಾಂಗಗಳಲ್ಲಿ ೪ ಸಮ್ಯಕ್ ದೃಷ್ಟಿಗೆ ಪ್ರಥಮಸ್ಥಾನವಿದೆ, ಹಾಗೂ ಬೌದ್ಧರ ದಾರ್ಶನಿಕ ಪಕ್ಷವು ಸಮಾವೇಶಗೊಂಡಿದೆ. ಬೌದ್ಧರ ಅನೇಕ ಗ್ರಂಥಗಳಲ್ಲಿ ನಾನಾ ಪ್ರಕಾರದ ಧ್ಯಾನ-ಸಮಾಧಿಗಳ ವರ್ಣನೆಯು ಮತ್ತು ಅನೇಕ ಯೋಗಿಗಳ ಉಲ್ಲೇಖವು ಆ ಕಾಲದ ಭವ್ಯಯೋಗಪರಂಪರೆಯನ್ನು ಸೂಚಿಸುತ್ತದೆ.

ಯೋಗಪರಂಪರೆಯ ಇತಿಹಾಸದಲ್ಲಿ ಪತಂಜಲಿ ಮಹರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ಅವನ ಕಾಲ ೩ನೆಯ ಶತಮಾನ, ಅವನ ಕಾಲದಲ್ಲಿಯೇ ಯೋಗವು ವ್ಯಾವಹಾರಿಕ ಮಾರ್ಗದಿಂದ ಐಶ್ವರೀಯ ದಾರ್ಶನಿಕ ಸ್ವರೂಪವನ್ನು ಮೈದಾಳಿತು * ಯೋಗಸೂತ್ರ”ದಲ್ಲಿ ಉಪನಿಷದ್‌ದಾಂತ, ಸಾಂಖ್ಯ ಮತ್ತು ಪ್ರಾಚೀನಯೋಗ ಪದ್ಧತಿಯ ಸಮನ್ವಿತ ರೂಪವನ್ನು ನಿರೂಪಿಸಲು ಪ್ರಯಾಸಮಾಡಲಾಯಿತು. “ಯೋಗಶ್ಚಿತ್ತವೃತ್ತಿ ನಿರೋಧಃ ” ವೆಂಬ ವ್ಯಾಖ್ಯೆಯು ಸರ್ವತ್ರ ಪ್ರಾಸಾರವಾಯಿತು.

ಪಾತಂಜಲಯೋಗದ ಪರಮಲಕ್ಷ್ಯವು ವಿವೇಕಖ್ಯಾತಿ, ಭೇದಜ್ಞಾನವೇ ವಿವೇಕ ಖ್ಯಾತಿ. ಇದರ ಪ್ರಾಪ್ತಿಗಾಗಿ ಏಕಾಗ್ರಭೂಮಿಯ ಅನುಸಂಧಾನ ಪರಮಾವಶ್ಯಕ ವಾಗಿದೆ. ಸಾಧಕನು ಏಕಾಗ್ರಭೂಮಿಯ ಅನುಸಂಧಾನದಿಂದ ನಿರೋಧಭೂಮಿಯಲ್ಲಿ ಪ್ರವೇಶಮಾಡುವನು, ಅಲ್ಲಿ ಅವನಿಗೆ ಪ್ರಕೃತಿ ಪುರುಷರ ವಿಯೋಗಾವಸ್ಥೆಯ ಅನುಭವವು ಆಗುವದು. ಈ ಅನುಭವವು ನಿರ್ಮಲ ಪುರುಷನ ಅನುಭವವು ಇದುವೇ ಸಮಾಧಿ. ಪಾತಂಜಲ ಯೋಗಾನುಸಂಧಾನದಲ್ಲಿ ವ್ಯಷ್ಟಿಗತ ಮತ್ತು ಸಮಷ್ಟಿಗತ ರೂಪದ ಅಸ್ತಿತ್ವಕ್ಕೆ ಸ್ಥಾನವಿಲ್ಲ. ಕಾರಣ ಪ್ರಭುದೇವರು ಇದಕ್ಕೆ ಅಳಿದುಕೊಡುವ ಯೋಗವೆಂದು ಕರೆದಿದ್ದಾರೆ.

ಶೈವಶಾಸ್ತ್ರಗಳು ಮೊದಲಿನಿಂದಲೂ ಯೋಗಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿವೆ. ಪಾಶುಪತಸೂತ್ರದಲ್ಲಿ ಯೋಗವು ಐದು ತತ್ವಗಳಲ್ಲಿ ಒಂದಾಗಿದೆ ಎಂದು ಉಕ್ತವಾಗಿದೆ. ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ, ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಇರುತ್ತದೆ. ಇದರಿಂದ ಆಗಮ ವಾಙ್ಮಯದಲ್ಲಿ ಯೋಗಕ್ಕಿದ್ದ ಮಹತ್ವವು ಸ್ಪಷ್ಟವಾಗುವದು. ಸುಪ್ರಭೇದಾಗಮ ಮತ್ತು ಈಶಾನ ಶಿವಯೋಗಿಗಳ * ಈಶಾನ ಶಿವ ಗುರುದೇವ ಪದ್ಧತಿ “ಗಳಲ್ಲಿ ವರ್ಣಿತವಾದ ಯೋಗವು ಯೋಗ ದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ. ಆದರೂ ಕಿಂಚಿತ್‌ ವ್ಯತ್ಯಾಸ ಇಲ್ಲದೇ ಇಲ್ಲ. ಈಶ್ವರನ ಪ್ರತಿಬಿಂಬವನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ, ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರೀಕರಿಸಿ ಧ್ಯಾನವನ್ನು ಬರಿಸಿ ಸಮಾಧಿ ಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುತ್ತದೆ. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿ ಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವದೊಂದು ಅದರ

ವೈಶಿಷ್ಟ್ಯ.

ಶಿವಯೋಗ ಪ್ರದೀಪಕಾರರು ಯೋಗವನ್ನು ಮಂತ್ರಯೋಗ, ಲಯಯೋಗ. ಹಠಯೋಗ, ರಾಜಯೋಗ ಶಿವಯೋಗವೆಂದು ಐದುವಿಧವಾಗಿ ಹೇಳುವರು. ಓಂಕಾರ ಮೊದಲಾದ ಮಂತ್ರಗಳನ್ನು ಜಪಿಸುವವರು ಮಂತ್ರ ಯೋಗಿಗಳೆಂದೂ, ಮನೋಮಾರುತನೊಡನೆ ಕೂಡುವ ಚಿತ್ರವನ್ನು ಆತ್ಮಧೇಯದಲ್ಲಾಗಲಿ ಅಥವಾ ನಾದದಲ್ಲಾಗಲಿ ತಲ್ಲೀನವನ್ನಾಗಿ ಮಾಡುವವರು ಲಯಯೋಗಿಗಳೆಂದೂ ಅಷ್ಟಾಂಗ ಮಾರ್ಗಗಳಿಂದಲೂ ಮುದ್ರಾಕರಣ ಬಂಧಗಳಿಂದಲೂ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿಗಳೆಂದೂ, ಮನೋವೃತ್ತಿ ಯಿಲ್ಲದವರೂ, ಜ್ಞಾನದಿಂದ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದವರೂ, ರಾಜ ಯೋಗಿಗಳೆಂದೂ, ೧೦ ಶಿವಜ್ಞಾನ, ಶಿವಭಕ್ತಿ ಮತ್ತು ಶಿವಧ್ಯಾನದಿಂದ ಕೂಡಿದ ಶಿವಾರ್ಚನೆಯನ್ನು ಮಾಡುವವರು ಶಿವಯೋಗಿಗಳೆಂದೂ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ಶಿವಯೋಗವೇ ಮಿಗಿಲಾದುದು. ಯದೃಪಿ ರಾಜ ಯೋಗಕ್ಕೂ ಶಿವಯೋಗಕ್ಕೂ, ನಿಜವಾಗಿ ಭೇದವಿಲ್ಲವೆಂದು ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಯ ಸಲುವಾಗಿ ಭೇದವು ಹೇಳಲ್ಪಟ್ಟಿದೆ ಎಂದು ಶಿವಯೋಗ ಪ್ರದೀಪಕಾರ ಮತ. ಆದರೆ ಪ್ರಭುದೇವರು ಕೆಳಗಿನ ವಚನದಿಂದ ಎರಡೂ ಯೋಗಗಳಲ್ಲಿ ಮಹದಂತರವಿದೆಯೆಂದು ವ್ಯಕ್ತವಾಗದೇ ಇರಲಾರದು,

ಅಷ್ಟಾಂಗಯೋಗದಲ್ಲಿ ಯಮನಿಯಮಾ ಆಸನ ಪ್ರಾಣಾಯಾನು ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂದು ಎರಡು ಯೋಗ ಉಂಟು,

ಅಲ್ಲಿ ಅಳಿದು ಕೂಡುವದೊಂದು ಯೋಗ, ಅಳಿಯದೇ ಕೂಡುವದೊಂದು ಯೋಗ,

ಈ ಎರಡೂ ಯೋಗದೊಳಗೆ ಅಳಿಯದೇ ಕೂಡುವ ಯೋಗವರಿದು ಕಾಣಾ ಗುಹೇಶ್ವರಾ?”

ಇಲ್ಲಿ ಅಳಿದುಕೂಡುವ ಯೋಗ ಮತ್ತು ಉಳಿದು ಕೊಡುವ ಯೋಗದ ಬಗ್ಗೆ ಸಂಕ್ಷಿಪ್ತವಾಗಿ ವಿವೇಚಿಸೋಣ. ಪತಂಜಲಿಯ ರಾಜಯೋಗವೇ ಅಳಿದು ಕೊಡುವ ಯೋಗ. ಅಲ್ಲಿದು ಕೂಡುವ ಯೋಗದಲ್ಲಿ ಬ್ರಹ್ಮಸಾಕ್ಷಾತ್‌ಕಾರವಾದ ನಂತರ ಜೀವದ ಅಸ್ತಿತ್ವವೇ ಉಳಿಯಲಾರದು. ಅರ್ಥಾತ್ ಮುಕ್ತಾವಸ್ಥೆಯಲ್ಲಿ ಜೀವನಿಗೆ ತನ್ನ ಸ್ವರೂಪದ ಬೋಧವು ಆಗಲಾರದು. ತನ್ನ ಸ್ವರೂಪದ ಬೋಧವಿಲ್ಲದ ಪರಬ್ರಹ್ಮ ಸಾಕ್ಷಾತ್ಕಾಕಾರ ಸಾಧನವಾದ ರಾಜಯೋಗವು- ಸರ್ವಶ್ರೇಷ್ಠಯೋಗವು ಆಗಬಹುದೆ ! ಕಾರಣ ಅಲ್ಲಮಪ್ರಭುದೇವರು ಈ ಯೋಗವನ್ನು ಖಂಡಿಸಿದ್ದಾರೆ.

ಉಳಿದು ಕೂಡುವ ಯೋಗವೇ ಶಿವಯೋಗ, ಶಿವಯೋಗದಲ್ಲಿ ಅಂಗನಿಗೆ ತನ್ನ ಸ್ವರೂಪದ ಬೋಧವು ಇರುತ್ತದೆ. ಕಾರಣ ಪ್ರಭುದೇವರು ಇದಕ್ಕೆ ಉಳಿದುಕೂಡುವ ಯೋಗವೆಂದು ಕರೆದಿದ್ದಾರೆ. ಶಿವಯೋಗದಲ್ಲಿ ಸಾಮರಸ್ಯಕ್ಕೆ ಅತಿಮಹತ್ವವಿದೆ. ಸಮಾನ ಅಸ್ತಿತ್ವಗಳಾದ ಎರಡರ (ಅಂಗ ಲಿಂಗ) ಹೊಂದಾಣಿಕೆಯೇ ಸಾಮರಸ್ಯ, ಸಾಮರಸ್ಯವು ಭಾವಗತ ಸಾಮರಸ್ಯ, ಜ್ಞಾನಗಳ ಸಾಮರಸ್ಯ, ಸ್ವರೂಪಗತ ಸಾಮರಸ್ಯ ವೆಂದು ಮೂರು ಪ್ರಕಾರವಾಗಿವೆ. ಹಲವಾರು ತಾಂತ್ರಿಕಯೋಗಗಳು ಜ್ಞಾನಗತ ಮತ್ತು ಭಾವಗತ ಸಾಮರಸ್ಯದಲ್ಲಿ ಇತಿಶ್ರೀಯನ್ನು ಹೊಂದಿದರೆ ಕೆಲವು ಶೈವಯೋಗ ಗಳು ಸ್ವರೂಪಗತ ಸಾಮರಸ್ಯದಲ್ಲಿ ಮುಕ್ತಾಯಗೊಳ್ಳುತ್ತವೆ. ಈ ಎಲ್ಲ ಯೋಗಗಳು ಅಪೂರ್ಣಗಳಾಗಿವೆ. ಉಪರೋಕ್ತ ಮೂರು ಪ್ರಕಾರದ ಸಾಮರಸ್ಯಗಳು ಶಿವಯೋಗ ದಲ್ಲಿ ಪ್ರಾಪ್ತವಾಗುತ್ತವೆ. ಈ ತ್ರಿವೇಣಿ ಸಂಗಮವು ಶಿವಯೋಗವನ್ನು ಬಿಟ್ಟು ಇನ್ನುಳಿದ ಯಾವ ಯೋಗದಲ್ಲಿಯೂ ಆಗಲು ಸಾಧ್ಯವಿಲ್ಲ, ಜೀವಸ್ವರೂಪದ ಕೇಂದ್ರಬಿಂದುವಿನಿಂದ ಸತ್ಯಾನ್ವೇಷಣ ಪ್ರಾರಂಭವಾಗಿ ಮನಃ ಅದೇ ಬಿಂದುವಿನಲ್ಲಿ ಸಮ ಸ್ವರೂಪ ವನ್ನು ಕಾಣುವದೇ ಪೂರ್ಣತತ್ವವೆನಿಸಿಕೊಳ್ಳುತ್ತದೆ, ಅಂಗಭವದಿಂದ ಲಿಂಗದ ಕಲೆಗಳನ್ನು ಭಕ್ತಗಳನ್ನು ಅಳವಡಿಸಿಕೊಂಡು ಅಂಗಗತಸ್ವರೂಪವನ್ನೇ ಲಿಂಗಗಳಸ್ವರೂಪವೆಂದು ಭಾವಿಸುವುದೇ ಪೂರ್ಣತ್ವ, ಇದುವೇ ಶಿವಯೋಗ ಇದುವೇ ಪರಮಯೋಗ.

ಶಿವಯೋಗದ ಪ್ರಾಚೀನತೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಗಮ ವಾಙ್ಮಯದಲ್ಲಿ ಶಿವಯೋಗ ಶಬ್ದದ ಪ್ರಯೋಗವು ಕಂಡುಬರುತ್ತದೆ. ಪ್ರಾಚೀನ ಶೈವಾಚಾರ್ಯರು ತಮ್ಮನ್ನು ಶಿವಯೋಗಿಗಳೆಂದು ಕರೆದುಕೊಂಡಿದ್ದಾರೆ. ಸೋಮಾ ನಂದನು ನಿರಂತರ ಶಿವಸಮಾವೇಶ ಭಾವದಲ್ಲಿ ಇರುವೆನೆಂದು ಹೇಳಿಕೊಂಡಿರುತ್ತಾನೆ. ಹಾಗೆ ಶಿವಯೋಗವು ಬಹುಪ್ರಾಚೀನದವರೆಗೆ ಹೋಗುತ್ತದೆ. ಆದರೆ ಮೊಟ್ಟಮೊದಲು ಅದರ ನಿಶ್ಚಿತ ರೂಪವನ್ನು ಸಿದ್ಧಾಂತಶಿಖಾಮಣಿ ಮತ್ತು ಶಿವಯೋಗ ಪ್ರದೀಪಿಕೆಯಲ್ಲಿ ಕಾಣುತ್ತೇವೆ.

ಯೋಗ ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ನಿರೂಪಿಸಲಾಯಿತು. ಇಂದು ಶಾಂತಮಯ ಜೀವನಕ್ಕಾಗಿ ಯೋಗವು ಅತ್ಯಾವಶ್ಯಕವಾಗಿವೆ. ಕೇವಲ ಭೌತಿಕ ಉನ್ನತಿಯಿಂದ ಜೀವನದಲ್ಲಿ ಪರಮಶಾಂತಿಯು ಸಿಗಲಾರದು. ಕಾರಣ ಯೋಗ ಕಲಿಸುವ ಶಾಲೆಗಳನ್ನು ನಮ್ಮ ಸಮಾಜದ ಧರ್ಮಗುರುಗಳು ಸ್ಥಾಪಿಸಬೇಕಾಗಿ ಸವಿನಯಪ್ರಾರ್ಥನೆ:

ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ,

( ಪೂಜ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

ಬೆಕ್ಕಿನ ಕಲ್ಮಠ ಶಿವಮೊಗ್ಗ ಹುಬ್ಬಳ್ಳಿಯ ವ್ಯಾಸಂಗ ಸಮಯದಲ್ಲಿ ಬರೆದಿದ್ದು)

ʼʼಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ, ಆ ಶರಣ ಬಂದು ಶಿವಪುರವ ಕೈಲಾಸ ಮಾಡಿ ರುದ್ರಗಣ, ಪ್ರಮಥಗಣಂಗರೆಲ್ಲರ ಹಿಡಿತಂದು, ಅಸಂಖ್ಯಾತರೆಂದು ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಳವ ಶೈತದೃಷ್ಟ ಪವಾಡದಿಂದ ಮೆರೆದು ತೋರಿ, ಜಗವರಿಯ ಶಿವಾಚಾರದ ಧ್ವಜವನೆತ್ತಿಸಿ, ಮರ್ತ್ಯಲೋಕ ಶಿವಲೋಕವೆರಡಕ್ಕೆ

ನಿಚ್ಚಣಿಕೆಯಾದನು……. ನೋಡಾ ಸಿದ್ದರಾಮಯ್ಯ

ಇದು ಪ್ರಭುದೇವರ ವಚನ; ಬಸವಣ್ಣನವರನ್ನು ಕುರಿತದ್ದು. ಇಂದಿಗೆ ಎಂಟು ನೂರು ವರ್ಷಗಳಾಚೆ : ಇಂದು ಪ್ರಗತಿ, ಕ್ರಾಂತಿ ಅನ್ನುವುದೆಲ್ಲ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು; ಅದೊಂದು ವಿಸ್ಮಯಕಾರಕ ಕ್ರಾಂತಿ, ಕನ್ನಡ ನಾಡಿನಲ್ಲಿ,  ಕನ್ನಡಿಗರಿಂದ, ಕನ್ನಡದ ಮೂಲಕ, ಬರಿ ಹನ್ನೆರಡು ವರ್ಷಗಳಲ್ಲಿ ಈ ಕ್ರಾಂತಿ : ಧರ್ಮ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಹೊಸ ಜೀವ ತುಂಬಿತು; ಈ ನಾಡು ಬೆಳಗಿನ ಭೂಮಿಯಾಯಿತು. ಚಂದನದ ಸನ್ನಿಧಿಯಿಂದ ಬೇವು- ಬೆಬ್ಬುಲಿ ಮರಗಳು ಪರಿಮಳಿತವಾಗುವಂತೆ : ಶರಣರ ಸಂಗದಿಂದ ಪಾಮರರು ಪೂತಾತ್ಮರಾದರು, ಕೀಳು ಕಸಬು ಕಾಯಕವಾಯಿತು. ಜನವಾಣಿ ದೇವವಾಣಿಯಾಯಿತು, ಹಾಳು ಹೆಣ್ಣು ಕಪಿಲಸಿದ್ಧ ಮಲ್ಲಿಕಾರ್ಜುನವಾಯಿತು, ಕತ್ತಲೆ ಸತ್ತು ಬೆಳಕು ಬೀದಿವರಿಯಿತು. ಇದರಿಂದ ಪ್ರಪಂಚವೇ ಬೆರಗಾಗಿ, ಕನ್ನಡ ನಾಡನ್ನು ನೋಡುವಂತಾಯಿತು.

ಇಂತಹದೇ ಒಂದು ಪ್ರಸಂಗ : ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ, ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಸಂಕ್ರಮಣ ಕಾಲದಲ್ಲಿ ನಡೆಯಿತು. ೧೨ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣ ಅಧ್ವರ್ಯುವಾದರೆ, ಈ ಕಾಲದಲ್ಲಿ ಒಬ್ಬ ವೀರ ಸನ್ಯಾಸಿಯ ನೇತೃತ್ವದಲ್ಲಿ ನಾಡು ಹೊಸ ಬೆಳಗನ್ನು ಕಂಡಿತು. ಆ ಸನ್ಯಾಸಿಯ ಪ್ರೇರಣೆಯಿಂದ ಸತ್ತಂತವರು ಬಡಿದೆಚ್ಚತ್ತರು, ಕಚ್ಚಾಡುವವರು ಒಲಿದು ಒಂದಾದರು, ಒಟ್ಟಿಗೆ ಬಾಳುವ ಹದನನು ಕಲಿತರು. ಆ ಮಹಾನುಭಾವ ಭಕ್ತಿಯಲ್ಲಿ ಬಸವಣ್ಣನಾಗಿ, ಜ್ಞಾನದಲ್ಲಿ ಚನ್ನಬಸವಣ್ಣನಾಗಿ, ವೈರಾಗ್ಯದಲ್ಲಿ ಪ್ರಭುದೇವನಾಗಿ, ಉಳಿದ ಕಾಯಕಂಗಳಲ್ಲಿ ಶಿವಶರಣರಂಶನಾಗಿ ಕಂಗೊಳಿಸಿದ ಆ ಕಾರುಣ್ಯಮೂರ್ತಿಯೇ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು.

* ಭೂತಿ, ವಿಭೂತಿಯಾಯಿತು ʼʼ :

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಬಸವಯ್ಯ- ನೀಲಮ್ಮ ದಂಪತಿಗಳ ಚಿದ್ಗರ್ಭದಿಂದ, ಕ್ರಿ. ಶ. ೧೮೬೭ ರಲ್ಲಿ ಶ್ರೀಗಳು ಜನಿಸಿದರು. ಬಡತನದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಹಾಲಯ್ಯ : ʼʼಜಗತ್ತೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬʼʼ ಎಂಬ ಉದಾತ್ತ ತತ್ತ್ವವೇ ಮೂರ್ತಿವೆತ್ತಂತಿದ್ದ ಈ ಮಹಾನುಭಾವ, ಒಂದು ಕುಟುಂಬದ ಉದ್ಧಾರಕ್ಕೆ ಹೇಗೆ ನಿಂತಾನು. ಮನೆಯನ್ನು ತೊರೆದು, ಹುಬ್ಬಳ್ಳಿಗೆ ಬಂದು, ಆರೂಢಮಠದಲ್ಲಿದ್ದು, ಶಾಸ್ತ್ರಾಭ್ಯಾಸ ಮಾಡಿ, ಮುಂದೆ ಎಳಂದೂರು ಬಸವಲಿಂಗ ಸ್ವಾಮಿಗಳ ಶಿಷ್ಯತ್ವವನ್ನು ಪರಿಗ್ರಹಿಸಿ, ವಿದ್ಯಾ ವಿನಯಸಂಪನ್ನನಾಗಿ, ಯೋಗಾಸನ ಬಲ್ಲಿದನಾಗಿ ನಂತರದ, ದೀರ್ಘಕಾಲದ ತಪಸ್ಸಿನ ಪ್ರಭಾವ ಎಲ್ಲೆಡೆ ಚಲ್ಲವರಿಯಿತು. ಹಾನಗಲ್ಲ ವಿರಕ್ತ ಮಠ ಇವರ ಬರವನ್ನು ಹಾರೈಸಿತ್ತು. ಹಿರಿಯರ ಕೋರಿಕೆಯ ಮೇರೆಗೆ ಅಧಿಕಾರವನ್ನು ಹೊಂದಿ, ಹಾಲಯ್ಯ : ಹಾನಗಲ್ಲ ಕುಮಾರ ಸ್ವಾಮಿಗಳಾದರು. ಭೂತಿ, ವಿಭೂತಿಯಾಯಿತು.

 ಹಾನಗಲ್ಲ ಕುಮಾರ ಶಿವಯೋಗಿಗಳು : ಸಮಾಜಕ್ಕೊಂದು ಪರಿವರ್ತನೆಯ ಕಾಲ. ಅವರ ವಿದ್ಯುತ್ ಸ್ಪರ್ಷದಿಂದ ಸತ್ತಂತಿರುವವರು ಮರು ಹುಟ್ಟು ಪಡೆದರು, ಮೂಕರಾದವರು ವಾಗ್ಮಿಗಳಾದರು, ಪಾಪಿಗಳು ಪವಿತ್ರರಾದರು, ಕುರುಡರಿಗೆ ಕಣ್ಣು ಬಂದಿತು, ದುರ್ಬಲರು ಭೀಮ ಬಲರಾದರು. ಅವರದು ಅದ್ಭುತ ಶಕ್ತಿ; ಅದು ನಾಡಿಗೆ ನಾಡನ್ನೇ ಹಿಡಿದೆತ್ತಿತು. ಅವರು ಗೈದ ಮಹತ್ತರ ಕಾರ್ಯಗಳಲ್ಲಿ : ಅಖಿಲ ಭಾರತ ವೀರಶೈವ ಮಹಾ ಸಭೆ ಹಾಗೂ ಶಿವಯೋಗ ಮಂದಿರಗಳ ಸ್ಥಾಪನೆ ಪ್ರಮುಖವಾದವುಗಳು. ಇವೆರಡೂ ವೀರಶೈವ ಸಮಾಜ ಪುರುಷನ ಶ್ವಾಸಕೋಶಗಳು.

*ʼʼ ವೀರಶೈವ ಮಹಾ ಸಭೆ ʼʼ:

ಪಾಶ್ಚಾತ್ಯ ಶಿಕ್ಷಣದ ಯಾವ ಗಾಳಿಯ ಸೋ೦ಕಿಲ್ಲದ ಶ್ರೀಗಳು, ಯಾವ ಸಮಾಜದಲ್ಲಿ ಸಾರ್ವಜನಿಕ ಸಮ್ಮೇಲನ ನಡೆಯದಿದ್ದ ಕಾಲದಲ್ಲಿ, ೬೫ ವರ್ಷಗಳ ಹಿಂದೆ ಜನಾಂಗವು ಮಲಗಿದ್ದ ಕಾಲದಲ್ಲಿ, ಸಮಾಜಕ್ಕೊಂದು ವ್ಯವಸ್ಥಿತ ಸಂಘಟಿತ ರೂಪ ಕೊಡಲು, ನವ ಚೈತನ್ಯ ತುಂಬಲು ಏಕಮೇವ ಸಾಧನವಾದ, ಅಖಿಲ ಭಾರತ ವೀರಶೈವ ಮಹಾ ಸಭೆಯನ್ನು ಸಮಾಜದ  ಪ್ರಮುಖರನ್ನೊಳಗೊಂಡು ೧೯೦೪ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿ, ಪ್ರಥಮ ಅಧಿವೇಶನ ನಡೆಸಿದುದು ನಿಜಕ್ಕೂ ಅಚ್ಚರಿಯನ್ನುಂಟುಮಾಡುವದು ಮತ್ತು ಶ್ರೀಗಳಲ್ಲಿದ್ದ ಅದ್ವಿತೀಯವಾದ ಮುಂದಾ ಲೋಚನೆಯ ದ್ಯೋತಕವಾದುದು. ಈ ಮಹಾ ಸಭೆಯಿಂದ ಆದ ಪ್ರಯೋಜನಗಳು ಅನೇಕ. ಲಿಂಗಾಯತ ವಿದ್ಯಾವರ್ಧಕ ಪಂಡ ಏರ್ಪಟ್ಟು, ವೀರಶೈವರಿಗೆ ಇಂಗ್ಲೀಷ್  ವಿದ್ಯಾಭ್ಯಾಸಕ್ಕೆ ಸಹಾಯವಾಯಿತು; ವೀರಶೈವರ ಅಭಿವೃದ್ಧಿಗೆ ನಿಧಿ ಏರ್ಪಟ್ಟಿತ್ತು. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಜಾಗ್ರತಿಗೆ ಸಹಕಾರಿಯಾಯಿತು.

“ʼ ಶಿವಯೋಗಮಂದಿರ ʼʼ :

ಸಮಾಜದ ಪ್ರಗತಿಯನ್ನು ಬಯಸುವ ಕುಮಾರ ಶಿವಯೋಗಿಗಳು, ವೀರಶೈವ ಆಚಾರ ವಿಚಾರಗಳು ಶುದ್ಧವಾಗಿ ಇರಬೇಕಾದರೆ, ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡುಪಾಗಿಡಬಲ್ಲ, ಶಿವಯೋಗಿ ಸಿದ್ಧರ ಸಮೂಹವೊಂದು ಸಿದ್ಧವಾಗುವ ವರೆಗೆ, ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡಿದ್ದರು. ಗುರು. ಜಂಗಮರು ; ತಜ್ಞರೂ, ಸುಶುಕ್ಷಿತರು, ನಡೆ ನುಡಿ ಗಳಲ್ಲಿ ಶುದ್ಧರೂ, ಶಿವಯೋಗದಲ್ಲಿ ನಿಷ್ಠರೂ ಆಗಿರಬೇಕೆಂದೂ, ಪ್ರತಿಭಾಶಾಲಿ ಭಕ್ತರನ್ನು, ಶಿವಾನು ಭವಿಗಳನ್ನು ತಯಾರು ಮಾಡುವ ಘನವಾದ ಉದ್ದೇಶ ಈಡೇರಬೇಕಾದರೆ, ಒಂದು ಯೋಗ ಮಂದಿರ ಸ್ಥಾಪಿಸಬೇಕೆಂದು ಸಂಕಲ್ಪಿಸಿ, ಒ೦ಟಮುರಿ ದೇಸಾಯರ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕನೆ ಅಧಿವೇಶನದಲ್ಲಿ ನಿಶ್ಚಯಿಸಲಾಯಿತು. ಇಲಕಲ್ಲ ವಿಜಯ ಮಹಾಂತಸ್ವಾಮಿಗಳು ತೋರಿದ ಕೊಟ್ಟೂರು ಬಸವೇಶ್ವರ ತಪೋವನ, ಬನಶಂಕರಿ-ಮಹಾಕೂಟ ಇವುಗಳ ಮಧ್ಯದಲ್ಲಿ, ಮಲಾಪಹಾರಿ ದಂಡೆಯ ಮೇಲೆ ಕ್ರಿ. ಶ. ೧೯೦೯ ರಲ್ಲಿ ಶಿವಯೋಗ ಮಂದಿರ ಸ್ಥಾಪನೆಯಾಯಿತು.

 ಇಂದಿನಿಂದ, ಕುಮಾರ ಶಿವಯೋಗಿಗಳ ಕಾರ್ಯಕ್ಷೇತ್ರ ಸಮಾಜವಾದರೆ : ಕೇಂದ್ರ ಬಿಂದು ಶಿವಯೋಗಮಂದಿರವಾಯಿತು. ವಟುಗಳು ಬಂದರು, ಯೋಗಪಟುಗಳಾಗತೊಡಗಿದರು; ಜನತೆಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಕೈದೀವಿಗೆಯಾದರು. ಕುಮಾರ ಶಿವಯೋಗಿ ಗಳು ಯಾವ ಪೀಠಕ್ಕೂ ಜಗದ್ಗುರುಗಳಾಗಲಿಲ್ಲ; ಆದರೆ, ಜಗದ್ಗುರುಗಳಂಥವರನ್ನು ತಯಾರು ಮಾಡುವ ಸಂಸ್ಥೆ ಕಟ್ಟಿದರು. ಧರ್ಮ ಪ್ರಸಾರಕ್ಕೆ ಯೋಗ್ಯ ಸಾಧನ : ಕೀರ್ತನ, ಪುರಾಣ. ಇಂತಹ ಕಲೆಯನ್ನು  ಪುನರುಜೀವನಗೊಳಿಸುವದರೊಂದಿಗೆ, ಅನೇಕ ಅಂಗಹೀನ ಬಡ ಮಕ್ಕಳಿಗೆ ಕಲ್ಯಾಣವಾಗುವದೆಂದು ತಿಳಿದರು. ಶಾಸ್ತ್ರಕಾರರು, ಕವಿಗಳು, ಗವಾಯಿಗಳು, ವೈದ್ಯರೂ, ಸಿದ್ಧರೂ, ಭಕ್ತರೂ, ಮುಕ್ತರೂ ಸಾಲು ಸಾಲಾಗಿ ಶಿವಯೋಗ ಮಂದಿರವೆಂಬ ಗರಡೀ ಮನೆಯಿಂದ ಹೊರಬಂದರು. ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಇಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಗ್ರಂಥ ಸಂಗ್ರಹ, ಹುಳಹತ್ತಿ ಹಾಳಾಗುತ್ತಿದ್ದ ತಾಡವೋಲೆಗಳನ್ನು ಸಂಗ್ರಹಿಸಿ ಸಂಶೋಧಿಸಿದರು. ಶಿವಯೋಗಮಂದಿರ ಶಿವ ಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಭಸ್ಮಲಿಂಗಗಳ ತಯಾರು ಮಾಡಿದರು. ಕೃಷಿ ಸಂವರ್ಧನ, ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಖಾದಿ ಪ್ರೋತ್ಸಾಹ, ಒಂದೇ ಎರಡೇ, ಹೀಗೆ ರಾಷ್ಟ್ರ ನಿರ್ಮಾಣಕಾರ ಭರದಿಂದ ಸಾಗಿತು. ಸಂಸ್ಥೆಯಿಂದ ಪತ್ರಿಕೆಗಳು ಪ್ರಕಟವಾದವು. ವ್ಯಾಪಾರ, ಉದ್ದಿಮೆ, ಎಲ್ಲ ರಂಗದಲ್ಲಿ ಕೈಯಾಡಿಸಿದ ಮಹಾಗಾರುಡಿಗರಾದ, ಕುಮಾರ ಶಿವಯೋಗಿಗಳಿಂದ ಒಟ್ಟಿನಲ್ಲಿ ಹೊಸ ಹುಟ್ಟೋಂದು ತಲೆದೋರಿತು.

ಲಿಂಗವನ್ನಿ ಲಿಂಗೈಕ್ಯವೆನ್ನಿʼʼ:

ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.

 ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ  ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.

ಕವಿರತ್ನ ದ್ಯಾಂಪುರ ಚನ್ನಕವಿಗಳು

ಶಾರ್ದೂಲ ವಿಕ್ರೀಡಿತ :

ಶ್ರೀಮನ್ನಿತ್ಯ ನಿರಂಜನ ಪ್ರಭು ಕುಲಾಂಭೋರಾಶಿ ರಾಕಾಸುಧಾ

ಧಾಮಂ ಧರ್ಮಸುಧಾರಕವ್ರಜಲಲಾಮಂ ದಿವ್ಯ ಶೀಲಾನ್ವಿತಂ

ಕಾಮಕ್ಲೇಶ ವಿಭಂಗನೂರ್ಜಿತ ಕೃಪಾಪಾಂಗಂ ಪ್ರಬೋಧಾಕರಂ

ಪ್ರೇಮಂದಾಳ್ಧೆನಗೀಗೆ ಭಕ್ತಿ ಪದಮಂ ನಿಚ್ಚಂ ಕುಮಾರೇಶ್ವರಂ    ||೧||

ಚಂಪಕಮಾಲಾ :

ಅನುಪಮ ಜಂಗಮಾಶ್ರಮಕೆ ಸಲ್ಲುವ ಲಾಂಛನವಾ ಪವಿತ್ರ ಲಾಂ

ಛನಕೊರೆಯಪ್ಪ ವರ್ತನಮದಕ್ಕೆಣೆಯಾಗುವ ಚಿತ್ತ ವೃತ್ತಿಯಾ

ಮನಸಿಗೆ ತಕ್ಕ ದಿವ್ಯ ಶಿವಲಿಂಗದ ಪೂಜೆಯದಕ್ಕೆ ಸಲ್ವ ಚಿ –

ದ್ಘನತರ ಶಾಂತಿ ನಿನ್ನೊಳೊಡಮೂಡಿದುದೈ ಜಗದೇಕನಾಯಕಾ     ||೨||

ಮತ್ತೇಭವಿಕ್ರೀಡಿತ :

ಘನದುಃಖಾನಲನಿಂದ ಬೇವ ಜನರಂ ಕಂಡಾತ್ಮದೊಳ್ಕಂದಿ ಸು-

ಮ್ಮನೆ ಗೋಳಾಡುವದೇತಕೆ ನೀವು ಶಿವಲಿಂಗಾರಾಧನಂ ಗೈಯಿರೈ

ಮನಮಂ ನೋಯಿಪ  ಕಷ್ಟಗಳ್ತೊಲಗಿ ತಾನೇ ಸೌಖ್ಯವೈತರ್ಪುದೆಂ –

ದನುವಿಂ ಬೋಧಿಸಿ ಕಾಯ್ದೆ ಕಕ್ಕುಲತೆಯಿಂ ಶ್ರೀಮತ್ಕುಮಾರೇಶ್ವರಾ     ||೩||

ಶಿವಲಿಂಗಾರ್ಚನೆಗೈದೆ ಮಾಣದೆ ಚಿದಾನಂದಾರ್ಥಮಿ ಪೂಜೆಯೇ

ಶಿವಯೋಗೋತ್ಸವಮೆಂದು ನಂಬಿ ಶಿವಭಾವಂ ಬೆತ್ತು ನೀನಾವಗಂ

ಕವಿದೀ ಕ್ಷುತ್ತೃಷೆಯಂ ನಿವಾರಿಪ ನಿಮಿತ್ತಂ ಪೂಜೆಯಂ ಮಾಡದೆ

ಶಿವಯೋಗೀಶ್ವರನೆಂದು ಕೀರ್ತಿವಡೆದೈ ಶ್ರೀಮತ್ಕುಮಾರೇಶ್ವರಾ    ||೪||

ಶಿವಲಿಂಗಾರ್ಚನೆ ರೋಗಕೌಷಧಮಿದೇ ಚಿಂತಾಲತಾಛೇದಕಂ

ಶಿವಲಿಂಗಾರ್ಚನೆ ಸರ್ವಸಿದ್ಧಿದಮಿದೇ ಸಾಯುಜ್ಯಭಾಗ್ಯಾಯನಂ

ಶಿವಲಿಂಗಾರ್ಚನೆ ಸತ್ಕೃತಾರ್ಥತೆಯಿದೇ ಸಂತೋಷ ಜನ್ಮಾಲಯಂ

ಶಿವಲಿಂಗಾರ್ಚನೆ ಗೈವುದಾಗಳೆನುತಂ ಪೇಳ್ದೈ ಕುಮಾರೇಶ್ವರಾ   ||೫||

 ನಿನ್ನಂತೆಮ್ಮಯ ಧರ್ಮದುನ್ನತಿಗೆ ಯತ್ನ೦ಗೈದರಾರ್ನ್ಯಾಯದಿಂ

ನಿನ್ನಂತೆಮ್ಮಭಿಮಾನದಗ್ಗಳಿಕೆಯಿಂದಾತ್ಮಾರ್ಪಣಂ ಗೈದರಾರ್

ನಿನ್ನಂ ಪೋಲ್ವ ಶಿವಾನುಭಾವಿಗಳದಾರ್ನೀನೇ ವಿರಕ್ತೋತ್ತಮಂ

ನಿನ್ನಿಂದಾದುದು ಮಂಗಲೋದಯಮೆಲೈ ಶ್ರೀಮತ್ಕುಮಾರೇಶ್ವರಾ     ||೬||

ಅನುರಾಗಂಮಿಗೆ ಚಿತ್ಕಲಾತ್ಮಕ ಮಹಾಲಿಂಗಾನುಸಂಧಾನದಿಂ

ದನಿಶಂ ಭಾಸುರಲಿಂಗವಾಗಿ ಪೊರೆದೈ ಸದ್ಧರ್ಮಮಂ ಯತ್ನದಿಂ

ನಿನಗಿನ್ನೆತ್ತಣ ಹುಟ್ಟು ಸಾವು ಮಲಮಾಯಾಮುಖ್ಯಪಾಶವ್ರಜಂ

ಘನಯೋಗಾಭ್ಯುದಯ ಪ್ರಭಾವವಿದು ಕೇಳ್ ಶ್ರೀಮತ್ಕುಮಾರೇಶ್ವರಾ    ||೭||

ಬೇಡುವದಲ್ಲ ಮಂದಿಯನು ಧರ್ಮಸುಧಾರಣೆಗಾಗಿ ದೇವರಂ

ಬೇಡುವದೊಳ್ಳಿತಾವನಿತು ಶಕ್ತಿ ಸಮನ್ವಿತರಲ್ಲ ಮಾಳ್ಪುದೇಂ

ನೀಡುವ ಜಂಗಮರ್ನರರ ಬೇಡುವದೆತ್ತಣ ಸುದ್ದಿಯೆಂದು ನೀ-

ನಾಡುತಲಿರ್ದೆ ಮುಚ್ಚಿಕೊಳದಾತ್ಮ ನಿರೀಕ್ಷಣೆಯಿಂ ಚರಾಧಿಪ    ||೮||

ನಿನ್ನಯ ಜನ್ಮವೇ ಜಗದೊಳಿಲ್ಲದನರ್ಘ್ಯ ಪವಿತ್ರ ಜನ್ಮವೈ

ನಿನ್ನಯ ಪುಣ್ಯ ಜೀವನವೆ ಧರ್ಮಸುಧಾರಣ ಭಾಗ್ಯ ಜೀವನಂ

ನಿನ್ನಮಲಪ್ರಯತ್ನವೆ ಮಹೇಶ ಮತೋತನ್ನತಿಯುತ್ ಪ್ರಯತ್ನವೈ

ನಿನ್ನಯ ಪೇರ್ಮೆಯಂ ಪಡೆವರಾರು ಧರಾತಲದೊಳ್ಚರಾಧಿಪ        ||೯||

ಎಮ್ಮ ಸಮಾಜವೆಂದಿಗೆ ಸುಧಾರಿಪುದಾವ ಮಹಾತ್ಮನಳ್ಕರಿಂ

ದೆಮ್ಮ ಸಮಾಜದೇಳ್ಗೆಯನು ಮಾಡುವನೈ ಸಿರಿವಿದ್ಯೆಯುದ್ಯಮಂ

ಎಮ್ಮ ಸಮಾಜದೊಳ್ಬೆಳೆಯಲಾವುದುಪಾಯಮದೆಂತು ಕಾಣ್ಬುದೋ   

ಎಮ್ಮ ಸಮಾಜಸೇವೆ ಕೃತಕೃತ್ಯತೆಯೆಂದು ನೆಗಳ್ದೆ ಜಂಗಮಾ    ||೧೦||

ನೀನೆ ದಯಾಳು ನಿನ್ನ ವಚನಂ ನಿಗಮಾಗಮದರ್ಥಸಾರವೈ

ನೀನೆ ವಿರಾಗಿ ನಿನ್ನತುಲ ಶೀಲವೆ ಸತ್ಪ್ರಮಥೇಂದ್ರ ಸಮ್ಮತಂ

ನೀನೆ ಗುಣಾಬ್ಧಿ ನಿನ್ನ ಮಲವೃತ್ತಿಯೆ ಲೋಕವಿತಾನಪಾವನಂ

ನೀನೆ ವಿಚಾರಿ ನಿನ್ನ ಸರಿಯಾರು ವಿರಾಟ್ಪುರದೀಶಯೋಗಿಯೆ     ||೧೧||

ಚಂಪಕಮಾಲಾ :

ಬೆಳಿಸುವಳೂಡಿ ಮಾತೆ ಮಗನಾವಗನಾತಗೆ ಪೇಳ್ದು ಬುದ್ಧಿಯಂ

ಕಲಿಸುವನಯ್ಯನೊಲ್ದು ಮಗನೆಂಬ ಮರುಂಕದೊಳನ್ಯ ಪುತ್ರರಂ

ಬಳೆಯಿಸಿ ಬುದ್ಧಿಗೊಟ್ಟು ಶಿವಯೋಗ ಸುಧಾರಸ ಪಾನದಿಂ ಕರಂ

ಸಲಹಿದೆ ನೀನೆ ಮಾತೆ ಪಿತರೈ ವಟು ವರ್ಗಕೆ ಯೋಗಿವಲ್ಲಭ     ||೧೨||

ವಿತತ ಶಿವಾನುಭವ ಸುಖಚರ್ಚೆಯ ನಿನ್ನಯ ವೃತ್ತಿಯಾಗಿ ಸ-

ನ್ನುತ ಶಿವಲಿಂಗದರ್ಚನೆಯ ಸುವ್ರತಮಾಗಿರುತಿರ್ದುಮೊಳ್ಪಿನಿಂ

ಮತಹಿತ ಕಾರ್ಯಮಂ ಬಿಡದೆ ನೀನದರೊಳ್ನೆರೆನೋಡಿ ಮಾಡಿದೈ

ಕ್ಷಿತಿಯೊಳು ನಿನ್ನ ಜಾಣ್ಮೆಯಿದು ಚಿದ್ಘನರೂಪ ಸದಾಶಿವಪ್ರಭು     ||೧೩||

ತ್ಪಲ ಮಾಲಾ :

ಕಾಯವಿಕಾರವಿಲ್ಲ ಮನದುಲ್ಬಣವಿಲ್ಲ ಮದಾಳಿಯಿಲ್ಲವಾ

ವಾಯುಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲವಾವಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ-

ಪಾಯಮದಿಲ್ಲ ನಿನ್ನೊಳೆ ಮಹಾಪ್ರಭುಲಿಂಗ ಕುಮಾರಯೋಗಿಯೆ     ||೧೪||

ನಿನ್ನಯ ಮೂರ್ತಿಯನ್ನೆರಡು ಕಣ್ಣೊಳು ಕಟ್ಟಿಹುದಾರ್ಯ ಚೆಲ್ವಿನಿಂ

ನಿನ್ನಯ ತತ್ವಪೂರಿತ ಮೃದೂಕ್ತಿಗಳೆನ್ನ ವಿಚಾರಭಾವದೊಳ್

ಸನ್ನುತ ಶಾಂತಿಯಂ ಕುಡುತಲಿರ್ಪುವು ನಿನ್ನಯ ರೀತಿನೀತಿಗಳ್

ನನ್ನಿಯೊಳೆನ್ನನೆಚ್ಚರಿಪವಾತ್ಮದೆ ನಿಂದು ಕುಮಾರಯೋಗಿಯೆ    ||೧೫||

ನಿನ್ನನು ಪಾಡುವೀರಸನೆ ನಿನ್ನದು ದೇವ ಮಹಾನುಭಾವ ಕೇ-

ಳ್ನಿನ್ನನು ಜಾನಿಪೀ ಮನವೆ ನಿನ್ನದು ನೋಡು ತ್ರಿತಾಪಲೋಪಕ

ನಿನ್ನಯ ರೂಪಮಂ ತಿಳಿವ ಮನ್ಮತಿ ನಿನ್ನದು ಲಿಂಗಭಾವವೇ

ನಿನ್ನದು ನಿನ್ನದಯ್ಯ ಕರುಣಾಳು ಕುಮಾರ ಮಹಾಯತೀಶ್ವರಾ    ||೧೬||

ಕಂದ :

ಪೂಜಾರ್ಪಣಾನುಭವಮಂ

ರಾಜಿತಶಿವಭಾವ ಪೂರ್ಣಮೆನೆ ಮಾಡುತ್ತಂ

ಓಜೆಮಿಗೆ ಬಾಳ್ದಯತಿಕುಲ

ರಾಜಂ ನೀನಲ್ತೆ ಯೋಗನಿಷ್ಠ ಕುಮಾರಾ    ||೧೭||

ಚರದೇವ ನಿನ್ನ ನಾಮಂ

ವರಮಂತ್ರಂ ನಿನ್ನ ರೂಪವೀಶ್ವರರೂಪಂ

ಪುರುಷಾರ್ಥಕಾರಣಂ ನಿ-

ನ್ನುರುತರ ಕರುಣಾಕಟಾಕ್ಷದೀಧಿತಿ ಯತಿಪ    ||೧೮||

ಚಂಪಕ ಮಾಲಾ

ಘನತರಮುಕ್ತಿಗಿಂದ ಸ್ವಸಮಾಜದ ಸೇವೆಯೆ ಶ್ರೇಷ್ಠವೆಂದು ನೀ-

ನನವರತಂ ಸಮರ್ಪಿಸಿದೆ ನಿನ್ನ ಸಮಾಜಕೆ ಸರ್ವ ವಸ್ತುವಂ

ಕೊನೆಯೊಳು ನಮ್ಮ ಧರ್ಮ ಸುಸಮಾಜ ಸಮಾಜ ಸಮಾಜವೆಂದು ಬ-

ಲ್ಕನವರಿಸುತ್ತಲಿರ್ದೆ ಶಿವಧರ್ಮ ಸಮಾಜದ ನೇಹಮೆಂತುಟೊ    ||೧೯||

 ಕಂದ :

ಜಯ ಪರತರಚಿತ್ಸುಖಮಯ

ಜಯಜಯ ನೀರಂಜನಾಲಮಾನ್ವದೇವ

ಜಯ ವೀರಶೈವ ಬಾಂಧವ

ಜಯಜಯ ಲಿಂಗಾಂಗ ಸಾಮರಸ್ಯ ರಸಜ್ಞ

ಶ್ರೀ ಚೆನ್ನಕವಿ

 

ಭವ್ಯ ಕೃತಿಗೆ-ದಿವ್ಯ ವ್ಯಾಖ್ಯಾನ

ಪುಸ್ತಕದ ಹೆಸರು : ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ (ಕವಿರತ್ನ ದ್ಯಾಂಪುರ ಚೆನ್ನಕವಿ ಕೃತ)
ವ್ಯಾಖ್ಯಾನ : ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು
ಪ್ರಕಾಶಕರು : ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜಯಂತಿ ಸಮಿತಿ
ಮುದ್ರಣ: ೨೦೨೨ ಪು. ೬೫೨
ಬೆಲೆ: ರೂ. ೧೫೦೦
ಸಂಪರ್ಕವಾಣಿ : ೮೩೧೦೨೭೬೪೪೨

ಪ್ರತಿಭೆ-ಪಾಂಡಿತ್ಯ-ವಿದ್ವತ್ತುಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದಲ್ಲಿರುವ ಕನ್ನಡಿಗರಿಗೆ ಅಲ್ಲೊಂದು ಇಲ್ಲೊಂದು ಆಶಾಕಿರಣಗಳು ಗೋಚರಿಸುತ್ತಿವೆ. ಕನ್ನಡ ಭಾಷೆ ಸಂಸ್ಕೃತಿಯ ಸಮೃದ್ಧಿಗಾಗಿ ಪರಿಶ್ರಮಿಸುವ ಯುವ ವಿದ್ವಾಂಸರ ಪಡೆ ಇಂದಿಗೂ ಕಾರ್ಯನಿರತವಾಗಿದೆ ಎಂಬುದಕ್ಕೆ ಪ್ರಸ್ತುತ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವ್ಯಾಖ್ಯಾನಿಸಿದ ‘ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯೇ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ.  ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್ಥ-ಭಾವ-ಉದ್ದೇಶಗಳನ್ನು ವಿವರಿಸಿ ಹೇಳುವುದಕ್ಕಾಗಿ ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅದಿಕರಣ, ಕೃತಕ, ತಾತ್ಪರ್ಯ ನಿರ್ಣಯಗಳೆಂಬ ವಿವಿಧ ಪ್ರಕಾರಗಳನ್ನು ರೂಪಿಸಲಾಗಿದೆ. ಆದರೆ ಕನ್ನಡ ಕೃತಿಗಳಿಗೆ ವ್ಯಾಖ್ಯಾನ ಬರೆದ ವೀರಶೈವ ಲಿಂಗಾಯತ ವ್ಯಾಖ್ಯಾನಕಾರರು ಇದಕ್ಕಾಗಿ ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿದ್ದರೂ ಇವೆಲ್ಲ ವಿವಿಧ ಪ್ರಕಾರಗಳಲ್ಲ, ‘ಟೀಕೆ’ಯನ್ನು ಸೂಚಿಸುವ ಪರ್ಯಾಯ ಪದಗಳು. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ ಅಥವಾ ‘ಟೀಕು’ ಪದವೇ ಅಧಿಕವಾಗಿ ಬಳಕೆಗೊಂಡಿರುವುದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜದ ಪ್ರಸಿದ್ಧ ದೊರೆ ಪ್ರೌಢದೇವರಾಯ ಕಾಲದಲ್ಲಿ ಈತನ ಮಂತ್ರಿಗಳಾದ ಲಕ್ಕಣ-ಜಕ್ಕಣರ ರಾಜರಕ್ಷೆ ಹಾಗೂ ನೂರೊಂದು ವಿರಕ್ತರ ಧರ್ಮರಕ್ಷೆಗಳಲ್ಲಿ ಈ ಕೆಲಸ ವ್ಯಾಪಕವಾಗಿ ಮುನ್ನಡೆಯುವಂತಾಯಿತು. ಆಮೇಲೆ ಏಳುನೂರೊಂದು ವಿರಕ್ತರ ಸಮಯದಲ್ಲಿ ಈ ವ್ಯಾಖ್ಯಾನ ಕಾರ್ಯಕ್ಕೆ ಪವನವೇಗ ಸಂಪ್ರಾಪ್ತವಾಯಿತು. ಏಳುನೂರೊಂದು ವಿರಕ್ತರ ಅಧಿಪತಿ ತೋಂಟದ ಸಿದ್ಧಲಿಂಗದೇವ, ಆತನ ಶಿಷ್ಯ-ಪ್ರಶಿಷ್ಯರಾದ ಚೆನ್ನದೇವ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಎಳಂದೂರು ಪರ್ವತ ಶಿವಯೋಗಿ, ಸೋಮಶೇಖರ ಶಿವಯೋಗಿ ಮೊದಲಾದವರು ಹಾಗೂ ಇತರರು ಈ ವ್ಯಾಖ್ಯಾನ ರಚನಾಕರ‍್ಯವನ್ನು  ಮುಂದುವರಿಸಿ, ಅದನ್ನು `ಕಾಯಕ’ದ ಮಟ್ಟಕ್ಕೆ ಮುಟ್ಟಿಸಿದರು. ಇದಲ್ಲದೆ ವ್ಯಾಖ್ಯಾನ ಮಾಡುವುದನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡ `ಟೀಕಿನ ಗುರುಪಾದ ಸ್ವಾಮಿ’ಯಂಥವರಿಗೂ `ವ್ಯಾಖ್ಯಾನದ ಕರ‍್ಯಾಗಾರ’ಗಳೆನಿಸಿದ `ಟೀಕಿನಮಠ’ಗಳೂ ಈ ವ್ಯಾಖ್ಯಾನ ಸಾಹಿತ್ಯದ ಬೆಳವಣಿಗೆಗೆ ಬೆಂಬಲವಾಗಿ, ಬೆಳಕಾಗಿ ನಿಂತವು. ಇದು ವೀರಶೈವ ವ್ಯಾಖ್ಯಾನಗಳ ಸಹಾಯವಿಲ್ಲದೆ ಶಾಸ್ತç ಕೃತಿಗಳ ಅಧ್ಯಯನ ಬಹಳ ಕಷ್ಟವಾಗಿ ಪರಿಣಮಿಸಿದುದರಿಂದ ಇವುಗಳ (ವ್ಯಾಖ್ಯಾನದ) ರಚನಾಕರ‍್ಯ ಕಾಲದಿಂದ ಕಾಲಕ್ಕೆ ಅನಿವರ‍್ಯವಾಗಿ ಬೆಳೆಯುವಂತಾಯಿತು. ಈ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮುಂದುವರಿಸಿದ ಶ್ರೇಯಸ್ಸು ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳಿಗೆ ಸಲ್ಲುತ್ತದೆ. ಕಬ್ಬಿಣದ ಕಡಲೆಯಂತಿದ್ದ ಚೆನ್ನಕವಿಗಳ ಈ ಪುರಾಣಕ್ಕೆ ಸರಳವಾದ ಭಾಷ್ಯವನ್ನು ಶ್ರೀಗಳು ರಚಿಸಿದ್ದಾರೆ. 
ಇಪ್ಪತ್ತನೆಯ ಶತಮಾನದ ಆರಂಭ ಘಟ್ಟದಲ್ಲಿ ಕನ್ನಡ ನಾಡಿನಲ್ಲಿ ಧರ್ಮ ಸಂಸ್ಕೃತಿಗಳ ಕುರಿತಾದ ಅರಿವು ಮೂಡಿರಲಿಲ್ಲ. ಪರಧರ್ಮೀಯರು ತಮ್ಮ ಧರ್ಮದ ಪ್ರಭಾವವನ್ನು ಬೀರಿ ಧರ್ಮಾಂತರ-ಮತಾಂತರದಂತಹ ಕಾರ್ಯದಲ್ಲಿ ತೊಡಗಿದ್ದರು. ಇದು ಮುಂದುವರೆದಿದ್ದರೆ, ಈ ನಾಡಿನಲ್ಲಿ ಹುಟ್ಟಿ ಬೆಳೆದ ಧರ್ಮ-ಪಂಥಗಳು ಗಂಡಾಂತರಕ್ಕೀಡಾಗುವ ಅಪಾಯವಿತ್ತು. ಇದಲ್ಲದೆ ಲಿಂಗಾಯತ ಸಮಾಜ ಬಾಂಧವರು ತಮ್ಮ ಧರ್ಮ ಸಂಸ್ಕೃತಿಯ ಆಚಾರ-ವಿಚಾರಗಳನ್ನು ತ್ಯಜಿಸಿ, ಇತರ ಸಂಪ್ರದಾಯದತ್ತ ವಾಲತೊಡಗಿದ್ದರು. ಈ ಉಭಯ ಸಂಕಟಗಳಿಂದ ಪಾರು ಮಾಡಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಗ್ರಗಣ್ಯರು. ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗಮಂದಿರದಂತಹ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಸಮಾಜ ಸಂಸ್ಕೃತಿಗಳನ್ನು ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂಥ ಮಹಾಮಹಿಮರ ಚರಿತೆಯನ್ನು ಕವಿರತ್ನ ದ್ಯಾಂಪುರ ಚೆನ್ನಕವಿಗಳು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವುದು ಗಮನಿಸುವ ಅಂಶ.  ದ್ಯಾಂಪುರದ ಚೆನ್ನಕವಿಗಳು  ಗದುಗಿನ ಸಮೀಪದ ದ್ಯಾಂಪುರದಲ್ಲಿ ಕ್ರಿ.ಶ. ೧೮೭೯ ರ ಸುಮಾರಿಗೆ ಜನಿಸಿದರು. ಕನ್ನಡದಲ್ಲಿ ಪ್ರಸಿದ್ಧ ಕಾವ್ಯಗಳಾದ ಶಬರಶಂಕರವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಮೊದಲಾದವುಗಳನ್ನು ಆಸ್ಥೆಯಿಂದ ಅಭ್ಯಾಸ ಮಾಡಿ, ಕಾವ್ಯ ಸಾಹಿತ್ಯದಲ್ಲಿ ಪರಿಣತೆಯನ್ನು ಪಡೆದರು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹದಿನಾರು ವರ್ಷ ಕೆಲಸ ಮಾಡಿದರು. ಆ ಸಮಯದಲ್ಲಿ ವೀರಶೈವ ಮಹಾಸಭೆ, ಶಿವಯೋಗಮಂದಿರ ಮೊದಲಾದ ಸಂಸ್ಥೆಗಳ ಆಧಾರಸ್ತಂಭರಾಗಿ ವೀರಶೈವರಲ್ಲಿ ಧರ್ಮ, ಆಚಾರ, ನೀತಿಗಳು ನೆಲೆಗೊಳ್ಳುವಂತೆ ಶ್ರೀ.ಮ.ನಿ.ಪ್ರ.ಹಾನಗಲ್ಲ ಕುಮಾರ ಸ್ವಾಮಿಗಳವರು ಅವಿಶ್ರಾಂತವಾಗಿ ಪರಿಶ್ರಮಪಡುತ್ತಲಿದ್ದರು. ಶ್ರೀಗಳವರ ಅಪ್ಪಣೆಯಂತೆ ಚೆನ್ನಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು. ಈ ಅವಧಿಯು ಅವರ ಕಾವ್ಯ ನಿರ್ಮಾಣಕ್ಕೆ ಹೆಚ್ಚು ಅನುಕೂಲತೆಯನ್ನೊದಗಿಸಿಕೊಟ್ಟಿತು. ಅವರ ಒಳ್ಳೆಯ ಕೃತಿಗಳೆಲ್ಲ ಈ ಕಾಲದಲ್ಲಿಯೇ ರಚಿತವಾದವು. ಇವುಗಳಲ್ಲಿ ಒಂಬತ್ತು ಪುರಾಣಗಳು ವಾರ್ಧಿಕ ಷಟ್ಪದಿಯಲ್ಲಿವೆ. ಉಳಿದ ಸುಮಾರು ಹನ್ನೆರಡು ಕೃತಿಗಳು ಶತಕ ಹಾಗೂ ಹಾಡು ಗಬ್ಬಗಳ ರೂಪದಲ್ಲಿ ರಚಿತವಾಗಿವೆ. ಚೆನ್ನಕವಿಗಳು ಹೆಮ್ಮರಡ್ಡಿ ಮಲ್ಲಮ್ಮನ ಪುರಾಣ, ಹುಚ್ಚೇಶ್ವರ ಪುರಾಣ, ಬಾಲಲೀಲಾ ಮಹಾಂತ ಶಿವಯೋಗಿ ಪುರಾಣಗಳನ್ನು ರಚಿಸಿದರು. ಆದರೆ ಮುಂದೆ ತಮ್ಮ ಸಮಕಾಲೀನ ಮಹಾತ್ಮರ ಚರಿತ್ರೆ ಬರೆಯಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡಿತು. ನಾಲ್ವತ್ತವಾಡದ ವೀರೇಶ್ವರ ಶರಣರು, ಹಾನಗಲ್ಲ ಕುಮಾರ ಸ್ವಾಮಿಗಳು ಮೊದಲಾದವರನ್ನು ಪುರಾಣ ಕಾವ್ಯಗಳನ್ನು ರಚಿಸಿದರು. ತಮ್ಮ ನಡುವೆ ಇರುವ ಈ ಮಹಾತ್ಮರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಕಾವ್ಯಮಾಧ್ಯಮದಲ್ಲಿ ದಾಖಲಿಸಿದರೆ ಬಹುಕಾಲ ಉಳಿಯಬಲ್ಲದೆಂಬ ನಂಬಿಕೆ ಚೆನ್ನಕವಿಗಳಿಗಿತ್ತು. 
ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ತಮ್ಮ ಪುರಾಣ ರಚನೆಯ ವಿಷಯ ತಿಳಿದಾಗ, ಚೆನ್ನಕವಿಗಳನ್ನು ಕರೆದು, ಮಹಾತ್ಮರ ಚರಿತ್ರೆಯನ್ನು ಬರೆಯುವಂತವನಾಗು, ನಮ್ಮಂತವರ ಬಗ್ಗೆ ಬರೆಯಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಿದ್ದೂ ಚೆನ್ನಕವಿಗಳು ಶ್ರೀಗಳು ಲಿಂಗೈಕ್ಯರಾದ ನಂತರ ಪುರಾಣ ರಚನೆಗೆ ತೊಡಗಿಕೊಂಡರು. ಆದರೆ ಪುರಾಣವನ್ನು ಪೂರ್ಣ ಮಾಡುವುದು ಅವರಿಂದ ಸಾಧ್ಯವಾಗಲಿಲ್ಲ. ಕೊನೆಯ ಎರಡು ಸಂಧಿಗಳಿರುವಾಗಲೇ ಲಿಂಗೈಕ್ಯರಾದರು. ಪುಟ್ಟರಾಜ ಕವಿ ಗವಾಯಿಗಳು ಮತ್ತು ಹುಕ್ಕೇರಿ ಸದಾಶಿವ ಶಾಸ್ತಿçಗಳು ಮತ್ತೆರೆಡು ಸಂಧಿಗಳನ್ನು ಬರೆದು, ಪುರಾಣವನ್ನು ಪೂರ್ಣಗೊಳಿಸಿದರು. 
“ಚೆನ್ನಕವಿಗಳು ಮಹಾಸ್ವಾಮಿಗಳವರ ಜೀವನವನ್ನೂ ಅವರಿಂದಾದ ಮಹತ್ಕಾರ್ಯಗಳನ್ನೂ ವಾರ್ಧಕ ಷಟ್ಪದಿಯಲ್ಲಿ ವರ್ಣಿಸಿದ್ದಾರೆ. ಈ ಕಾವ್ಯದ ಪ್ರತಿಯೊಂದು ಸಂಧಿಯ ಆದಿಯಲ್ಲಿ ಬರುವ ಶಿವಸ್ತುತಿಪರವಾದ ಪದ್ಯಗಳು ಸುಂದರವಾಗಿವೆ. ಕಾವ್ಯ ಶೈಲಿ ಸರಳವೂ ಸ್ವಾಭಾವಿಕವೂ ಆಗಿದೆ. ಶ್ರೀಗಳವರ ಜೀವನವೆ ಒಂದು ಪವಾಡವಾಗಿದೆ. ಆದುದರಿಂದ ಉಳಿದ ಪುರಾಣಗಳಲ್ಲಿರುವಂತೆ ಈ ಪುರಾಣದಲ್ಲಿ ಕವಿಗಳು ಪವಾಡಗಳಿಗೆ ಆಸ್ಪದ ಕೊಟ್ಟಿಲ್ಲ. ಇಲ್ಲಿ ಶ್ರೀಗಳವರ ಜೀವನ ಸ್ಫುಟವಾಗಿ ಮೂಡಿದೆ. ಹದಿನೆಂಟು ವರ್ಣನೆಗಳಿಗೆ ಇಲ್ಲಿ ಸ್ಥಳವಿಲ್ಲ. ಕಥಾನಾಯಕನು ವೈರಾಗ್ಯಶೀಲನೂ, ಯೋಗಿಯೂ, ಮಹಾತಪಸ್ವಿಯೂ ಆಗಿರುವದರಿಂದ ಲೋಕಹಿತದ ಕಡೆಗೆ ಕವಿಯು ದೃಷ್ಟಿಯನ್ನು ಹೆಚ್ಚಾಗಿ ಹಾಕಿದ್ದಾನೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಭಕ್ತಿಯ ಪ್ರಭಾವವನ್ನು ಹೇಳಿ ಜನತೆಯನ್ನು ಭಕ್ತಿಮಾರ್ಗದ ಕಡೆಗೆ ಒಯ್ಯುವ ಸಂಪ್ರದಾಯವಿದೆ. ಆದರೆ ಈ ಪುರಾಣದಲ್ಲಿ ನಾಯಕನ ಕರ್ತೃತ್ವ ಶಕ್ತಿಯಿಂದ ಸಮಾಜಹಿತದ ಘನವಾದ ಕಾರ್ಯಗಳು ಜರುಗಿರುವದರಿಂದ ಶ್ರೋತೃಗಳ ದೃಷ್ಟಿಯು ವಿಶಾಲವಾಗಿ ಲೋಕಹಿತದ ಕಡೆಗೆ ಒಲಿಯುವಂತಿದೆ. ಇದು ಕವಿಯ ಕೊನೆಯ ಕೃತಿಯಾದುದರಿಂದ ಇದಕ್ಕೂ ಮೊದಲಿನ ಕೃತಿಗಳಿಗೂ ಮಹದಂತರವಿದೆ. ಈ ಕಾವ್ಯದಲ್ಲಿ ಕವಿಯು ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರಗಳಿಗೆ ಬಲೆಬೀಳದೆ ಉಪಮೆ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅರ್ಥಾಲಂಕಾರಗಳನ್ನು ಮಿತವಾಗಿ ಹಿತವಾಗಿ ಉಪಯೋಗಿಸಿದ್ದಾನೆ. ಇದು ಈ ಕಾವ್ಯದ ವೈಶಿಷ್ಟö್ಯ. ಈ ಕಾವ್ಯದ ಆರಂಭದಲ್ಲಿ

ಇದು ರಸಿಕಮಾದ ಕಾದಂಬರಿಯ ಕತೆಯಲ್ಲ
ವಿದು ಕಲಿಗಳಿತಿಹಾಸಮಲ್ಲ ಕಲ್ಪಿತವಲ್ಲ
ವಿದಿರೊಳಪ್ರಾಸಂಗಿಕಾಸAಭವಾಸತ್ಯದೋಷ ವಿಷಯಂಗಳಿಲ್ಲ
ಪುದಿದ ಮಾಯಾ ಮೋಹ ಮೋಸದಿಂ ಕಂಗೆಟ್ಟು
ಕುದಿವ ಮಾನವರನೆಚ್ಚರಿಸಿ ಪಾಲಿಸಲುಳ್ಳ
ಸದಮಲ ಜ್ಞಾನ ವೈರಾಗ್ಯ ಭಕ್ತಿಗಳ ಸೊಂಪಿನ ಸುಗ್ಗಿ ಬಗೆಗೊಳಿಪುವು |೧|
ಎಂದು ಹೇಳಿರುವನು. ಈ ಮಾತನ್ನು ಕವಿಯು ಅಕ್ಷರಶಃ ಪಾಲಿಸಿರುವನು.” ಎಂಬ ಖ್ಯಾತ ವಿದ್ವಾಂಸರಾದ ಡಾ. ಶಿ. ಚೆ. ನಂದೀಮಠ ಅವರ ನುಡಿ ಅಕ್ಷರಶಃ ನಿಜ.
ಈ ಪುರಾಣದಲ್ಲಿ ಒಟ್ಟು ೨೨ ಸಂಧಿಗಳು, ೮೫೭ ಪದ್ಯಗಳಿವೆ. ರಾಘವಾಂಕನ ತರುವಾಯ ವಾರ್ಧಕ ಷಟ್ಪದಿಯನ್ನು ಪರಿಣಾಮಕಾರಿಯಾಗಿ ಬಳಸಿದ ಶ್ರೇಯಸ್ಸು ಚೆನ್ನಕವಿಗಳಿಗೆ ಸಲ್ಲುತ್ತದೆ. ಈ ಪುರಾಣವನ್ನು ಆಧುನಿಕ ಶಿಕ್ಷಣ ಪಡೆದವರು ಓದುವುದು ತುಂಬಾ ಕಷ್ಟಸಾಧ್ಯ. ಅದಕ್ಕಾಗಿ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಪ್ರತಿಪದಾರ್ಥ ಮತ್ತು ಭಾವಾರ್ಥಗಳೆರಡನ್ನೂ ನೀಡಿ ಓದುಗರ ಕೈಗೆ ನೀಡಿದ್ದಾರೆ.
ಚೆನ್ನಕವಿಗಳ ಪಾಂಡಿತ್ಯಕ್ಕೆ ಸಮನಾದ ಸರಳಾನುವಾದವನ್ನು ಬರೆದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಎಳೆಯ ವಯಸ್ಸಿನಲ್ಲಿಯೇ ಹಾನಗಲ್ಲ ಕುಮಾರೇಶ್ವರ ಪುರಾಣವನ್ನು ಪ್ರವಚನ ಮಾಡಿದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮಾಡಿರುವ ಅವರು ಹಾನಗಲ್ಲ ಕುಮಾರ ಶಿವಯೋಗಿಗಳವರನ್ನು ಕುರಿತು ಈಗಾಗಲೇ ಇಂಗ್ಲಿಷ್ ಭಾಷೆಯಲ್ಲೊಂದು ಕೃತಿರತ್ನವನ್ನು ರಚಿಸಿದ್ದಾರೆ. ಈಗ ಚೆನ್ನಕವಿಗಳ ವಾರ್ಧಕ ಷಟ್ಪದಿಯ ಮಹಾಕಾವ್ಯಕ್ಕೆ ಅತ್ಯಂತ ಹೃದ್ಯವಾದ ಶೈಲಿಯಲ್ಲಿ ಭಾವಾರ್ಥವನ್ನು ನೀಡಿದ್ದಾರೆ. ಚೆನ್ನಕವಿಗಳದು ಹರಿಹರ-ರಾಘವಾಂಕರ ಉದಿತೋದಿತ ಶೈಲಿ, ಈ ಶೈಲಿಗೆ ಪೂರಕವಾದ ಭಾಷೆಯನ್ನು ಬಳಸಿ, ಜನಸಾಮಾನ್ಯರಿಗೂ ಈ ಮಹಾಕಾವ್ಯ ಅರ್ಥವಾಗುವಂತೆ ಮಾಡುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ. ಪೂಜ್ಯರ ಸಾಹಿತ್ಯ ಪ್ರೀತಿ, ಲೋಕಾನುಭವ, ಅಸಂಖ್ಯ ಗ್ರಂಥಾವಲೋಕನ, ವಾಙ್ಮಯ ತಪಸ್ಸು, ಚಿಂತನ ಮಂಥನಗಳು ಇಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ