ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ ,

ಪವಿತ್ರ ಸಪ್ಟಂಬರ್‌ ತಿಂಗಳು ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳು  ಭುವಿಗೆ ಅವತರಿಸಿ ಬಂದ ವಿಷೇಶ ತಿಂಗಳು.

“ಕತ್ತಲುಂಡ ಸಮಾಜಕ್ಕೆ ಬೆಳಕಾಗಿ ಬಂದ ಶಿವಯೋಗಿಗಳ ಕುರಿತು ಈ ತಿಂಗಳು ಪ್ರಕಟಿಸಿದ ವಿಶೇಷ ಲೇಖನಗಳಲ್ಲಿ ಒಂದಾದ “ಋಣ ವಿಮುಕ್ತರು” ಲೇಖನದ ಈ ಸಾಲುಗಳು ಅತ್ಯಂತ ಅರ್ಥಪೂರ್ಣ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಸಪ್ಟಂಬರ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಪರ ಶಿವಯೋಗದ ಸಾರ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಹಾನಗಲ್ಲ ಕುಮಾರಸ್ವಾಮಿಗಳು • ಬಿ. ಶಿವಮೂರ್ತಿ ಶಾಸ್ತ್ರಿ
  4. ಹಾನಗಲ್ಲ ಕುಮಾರ ಶಿವಯೋಗಿಗಳು • ಪಂಡಿತ ನಾಗಭೂಷಣ ಶಾಸ್ತ್ರಿಗಳು.
  5. ಋಣವಿಮುಕ್ತರು *ಡಾ. ಬಸವರಾಜ ಜಗಜಂಪಿ
  6. ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೂ ಶಿಕ್ಷಣ ಪ್ರಸಾರವೂ • ಶ್ರೀ ಶಿ. ಫ. ಮರಡೂರ ಧಾರವಾಡ
  7. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೂ ಪ್ರಾಣಿದಯೆಯೂ • ಶ್ರೀ ಆನೆಕೊಂಡದ ಮುಪ್ಪಣ್ಣನವರು, ಡಾವಣಗೆರೆ
  8. ಕುಮಾರ ಮಹಾಸ್ವಾಮಿಗಳು : ಮಹಿಳೆಯರ ಹಿತಚಿಂತಕರು • ಡಾ. ಗುರುದೇವಿ ಹುಲೆಪ್ಪನವರಮಠ
  9. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಭೂಪ)

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ  || 1 ||

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ          || 2 ||

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ      || 3 ||

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ     || 4 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪಂಚೇಂದ್ರಿಯಗಳ ಪಂಚವಿಷಯ

೧. ಶ್ರೋತ್ರೇಂದ್ರಿಯ – ಶಬ್ದವಿಷಯ

ಸವಣರಾ ಪೇಟೆಯೊಳು | ದಿವಸ ಸಂತೆಯ ಶಬ್ದ

ನಿವಹ ಪೂರೈಸಿ- ದನೇಕಾಂತದೊಳೆನ್ನ

ನವಧರಿಸು ಗುರುವೆ ಕೃಪೆಯಾಗು   ||೬೬ ||

ಹರಭಕ್ತನಾದ ಶಿವಕವಿಯು ವೃತ್ತಿಯಲ್ಲಿ ಹರದನಾಗಿದ್ದನು. ಅಂತೆಯೇ ಅವನಿಗೆ ದೇಶದ ಅನೇಕ ವ್ಯಾಪಾರಿ ಸ್ಥಳಗಳ  ಅನುಭವವಿತ್ತು. ಆ ಸ್ಥಳಗಳ ನಾಮ. ನಿರ್ದೆಶಮಾಡುತ್ತ ದ್ವಂದ್ವಾರ್ಥದಲ್ಲಿ ಪಂಚೇಂದ್ರಿಯಗಳ ಪಂಚ  ವಿಷಯಗಳನ್ನು  ಪ್ರತಿಪಾದಿಸಿದ್ದಾನೆ

ಶ್ರೋತ್ರ, ತ್ವಕ್, ನೇತ್ರ, ಜಿಹ್ವಾ, ಘ್ರಾಣಗಳೆಂಬ ಪಂಚಜ್ಞಾನೇಂದ್ರಿಯಗಳಿಗೆ  ಶಬ್ದ, ಸ್ಪರ್ಶ, ರೂಪ, ರಸ,  ಗಂಧಗಳೆಂಬ ಪಂಚತನ್ಮಾತ್ರೆಗಳೇ ಪಂಚವಿಷಯ ಗಳಾಗುತ್ತವೆ. ಈ ಪಂಚಜ್ಞಾನೇಂದ್ರಿಯಗಳು ಪಂಚವಿಷಯಗಳಿಗಾಗಿ ಬಯಸಿ ಜೀವನನ್ನು ಕಾಮ, ಕಾಲರ ಬಲೆಗೆ ಬೀಳಿಸುತ್ತವೆ. ತನ್ನ ಇಂದ್ರಿಯಗಳೇ ತನ್ನನ್ನು ಆ ಮಾಯಾಬಲೆಯಲ್ಲಿ ಸಿಕ್ಕಿಸುವ ಮಾತು ವಿಚಾರಣೀಯವಾಗಿದೆ. ಇದು ಲೋಕದ ವೈಚಿತ್ರ್ಯ.. ಬ್ರಹ್ಮಸೃಷ್ಟಿಯ ಚಾರಿತ್ರ. ಶಿವಕವಿಯು ಒಂದೊಂದು ವಿಷಯದ ವಿವರಣೆಯನ್ನು ಅಸಾಧಾರಣ ಬುದ್ಧಿ ಶಕ್ತಿಯಿಂದಲೇ ವಿವರಿಸಿದ್ದಾನೆ. ಪ್ರಥಮದಲ್ಲಿ ಶ್ರೋತ್ರೇಂದ್ರಿಯ ಗ್ರಾಹ್ಯವಾದ ‘ಶಬ್ದ’  ವಿಷಯವನ್ನು ಕುರಿತು ಹೇಳಿದ್ದಾನೆ. ಈ ತ್ರಿಪದಿಯಲ್ಲಿ ಶಬ್ದಶ್ಲೇಷವೂ ಇದೆ. ಮತ್ತು ಪರಮತ ಖಂಡನಾಪೂರ್ವಕ ಸ್ವಮತ ಸಮರ್ಥನೆಯೂ ಆಗಿದೆ.

ಮೊದಲನೆಯ ಅರ್ಥ ಸವಣೂರಿನ ಪರವಾಗಿದೆ. ಈ ಶರಣಕವಿಯ ಸಮ ಕಾಲದಲ್ಲಿ ಇಂದಿನ ಧಾರವಾಡ ಜಿಲ್ಲೆಯ ಸವಣೂರು ನವಾಬನ ಸಂಸ್ಥಾನವಾಗಿತ್ತು. ಅದು ವ್ಯಾಪಾರಕ್ಕೆ ಪ್ರಸಿದ್ಧ ಸ್ಥಳವೂ ಆಗಿತ್ತು. ದಿನನಿತ್ಯದ ವ್ಯವಹಾರಕ್ಕಿಂತಲೂ ಸಂತೆಯ ವ್ಯವಹಾರವು ವಿಶೇಷವಾಗಿತ್ತು. ಸುತ್ತಲಿನ ಜನರು ನಿಶ್ಚಿತ ದಿನ ಸಂತೆಯನ್ನು ಮಾಡಲು ಸೇರುತ್ತಾರೆ. ಸಂತೆಯೆಂದ ಮೇಲೆ ಕೇಳುವದೇನು ? ಗದ್ದಲವೇ ಗದ್ದಲ ! ಶಬ್ದಗಳ ಸುರಿಮಳೆ ; ಕೂಗಾಟಗಳ, ಕಿರುಚಾಟಗಳ, ಅಬ್ಬರ ! ಒಂದೆಡೆ ಖರೀದಿ ಮಾಡುವವರ ಚೌಕಸಿ, ಇನ್ನೊಂದೆಡೆ ಮಾರುವವರ ವಸ್ತುವಿನ ಬಣ್ಣನೆ. ಹೀಗೆ ಅನೇಕ ರೀತಿಯ ವ್ಯಾವಹಾರಿಕ ಮಾತುಗಳು ಕೇಳುವವರಿಗೆ ಬಲು ಬೇಜಾರು. ಆದರೇನು ಮಾಡುವದು ?

ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ?”

 ಎನ್ನುವ ಅಕ್ಕನ ಮಾತಿನಂತೆ ಹೆದರದೆ, ಬೆದರದೆ, ಬೇಸರಗೊಳ್ಳದೆ ಧೈರ್ಯದಿಂದ ಸ್ಥಿರತೆಯನ್ನು ಕಾಯ್ದುಕೊಂಡು ತನ್ನ ಸಂತೆಯ ವ್ಯವಹಾರವನ್ನು ಮುಗಿಸಿಕೊಳ್ಳ ಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

 ಇನ್ನೊಂದರ್ಥದಲ್ಲಿ ಸವಣರೆಂದರೆ ಜೈನ ಸನ್ಯಾಸಿಗಳು, ಆ ಸನ್ಯಾಸಿಗಳಿರುವ ಸ್ಥಾನಕ್ಕೇನೇ ‘ಸವಣರಾಪೇಟೆ’ಯೆನ್ನುವರು. ಶ್ರವಣ ಶಬ್ದದ ತದ್ಭವವೇ ‘ಸವಣ’. ಶ್ರವಣವೆಂದರೆ ಕೇಳುವದು. ಕಿವಿಯಿಂದ ಕೇಳುವ ಕೆಲಸವೇ ಮುಖ್ಯವಾಗಿಯುಳ್ಳವನು ಸವಣನೆನಿಸಿಕೊಳ್ಳುತ್ತಾನೆ. ಇವನು ಸವಣನೆನಿಸಿದರೂ ಲೌಕಿಕ ವ್ಯಾವಹಾರಿಕ ಶಬ್ದ ಬಳಕೆಯಿಂದ ಏಕತೆಯನ್ನು  ಸಾಧಿಸುವದಕ್ಕಾಗುವದಿಲ್ಲ. ಅವರದು ಅನೇಕಾಂತ ಸಿದ್ಧಾಂತ. ಕಾರಣ ಶಿವಕವಿಯು ಸವಣರ ಅನೇಕಾಂತತೆಯನ್ನು ಪರಿಹರಿಸಿ ಏಕಾಂತತೆಯನ್ನು ಸದ್ಗುರುವಿನಲ್ಲಿ ಕೇಳಿದ್ದಾನೆ. ಏಕಾಂತತೆಯಿಂದ ಶಬ್ದಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.

ಈ ಬಸವಲಿಂಗ ಶರಣರ ಕಾಲಕ್ಕೆ ಜೈನಮತದ ಪ್ರಭಾವ ಎದ್ದು ಕಾಣುತ್ತದೆ. ಆ ಜೈನ ದರ್ಶನದಲ್ಲಿ ‘ಸ್ಯಾದ್ವಾದ’ ಅಥವಾ ಅನೇಕಾಂತವಾದವೆಂಬುದು ಪ್ರಸಿದ್ಧವಾಗಿದೆ. ಇವರು ನಾಸ್ತಿಕ ಮತದವರು. ದೇವನ ಅಸ್ತಿತ್ವವನ್ನು ಒಪ್ಪುವದಿಲ್ಲ. ಮತ್ತು ವೇದಗಳನ್ನು ಮನ್ನಿಸುವದಿಲ್ಲ. ಲೌಕಿಕ ವ್ಯವಹಾರದಲ್ಲಿ ಪ್ರತಿಯೊಂದು ವಸ್ತುವಿನ ಅನಂತ ಧರ್ಮವನ್ನು ಕಾಣುತ್ತಾರೆ. ಹೇಗೆಂದರೆ ಬಹು ಭ್ರಾಂತಿಗಳಿಂದ ಕೂಡಿದ ಮನುಷ್ಯನಿಗೆ ಪ್ರತಿಯೊಂದು ವಸ್ತುವಿನ ಸಮಸ್ತ ಧರ್ಮಗಳ ಯಥಾರ್ಥ ಜ್ಞಾನವನ್ನು ಹೊಂದುವ ಸಾಮರ್ಥ್ಯವಿರುವದಿಲ್ಲ. ಅವನಲ್ಲಿ ಕೇವಲ ಆಂಶಿಕ ಜ್ಞಾನವಿರಬಹುದು. ಆದರೆ ಮುಖ್ಯವಾಗಿ ಕೈವಲ್ಯ ಜ್ಞಾನವಾಗುವವರೆಗೆ ಅವನಲ್ಲಿ ಅನೇಕಾಂತತೆಯೇ ಇರುವದು.

ಉದಾಹರಣಾರ್ಥವಾಗಿ ಒಂದು ವಸ್ತುವಿನ ಬಗ್ಗೆʼʼ ಸ್ಯಾತ್ ಸತ್” ಇದು ಸತ್ ಆಗಿರಬಹುದೆಂಬ ವಿಚಾರ  ಪ್ರಾರಂಭವಾಗುವದರಿಂದ ಇದಕ್ಕೆ ‘ಸ್ಯಾದ್ವಾದ’ವೆಂಬ ಹೆಸರು ಬಂದಿದೆ. ಈ ತತ್ತ್ವವನ್ನು ಪಂಡಿತ ಬಲದೇವ ಉಪಾಧ್ಯಾಯರ *ಭಾರತೀಯ ದರ್ಶನ” ದಲ್ಲಿ ಸ್ಪಷ್ಟವಾಗಿ ಕಾಣಬಹುದು. “ವರ್ತಮಾನ ದೇಶ ಮತ್ತು ಕಾಲವನ್ನು ವಿಚಾರ ಮಾಡುವರಿಂದ ನಾವು ಘಟದ ಸತ್ ಅನ್ನು ಅನುಭವಿಸುತ್ತೇವೆ. ಆದರೆ ಈ ಸತ್ ತ್ರೈಕಾಲಿಕ ಸತ್ಯವಲ್ಲ. ಆದರೆ ಸಾಪೇಕ್ಷಿಕ ಸತ್ಯವಾಗುತ್ತದೆ. ಅಂದರೆ ಸದ್ಯ ಇದ್ದ ಕೊಡವು ಇನ್ನೊಂದು ಕ್ಷಣದಲ್ಲಿ ಇರಲಿಕ್ಕಿಲ್ಲ ಅಥವಾ ಹೊರಗಿದ್ದುದು ಒಳಗೆ ಹೋಗಿರಬಹುದು. ಮತ್ತು ಅದು ಇದೂ ಅದರ ಆಕಾರದ ಬಗ್ಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ. ಇತ್ಯಾದಿ ರೂಪದಿಂದ ಯಥಾರ್ಥ ಜ್ಞಾನವಾಗುವದಿಲ್ಲವೆಂಬುದು ಸವಣರ ಮತ. ಈ ಸ್ವರೂಪವನ್ನೇ ಏಳು ತೆರನಾಗಿ ವಿವರಿಸುತ್ತಾರೆ.

೧) ಸ್ಯಾದಸ್ತಿ – ಯಾವದೋ ಪ್ರಕಾರದಲ್ಲಿದೆ.

೨) ಸ್ಯಾನ್ನಾಸ್ತಿ – ಯಾವದೋ ಪ್ರಕಾರದಲ್ಲಿ ಇಲ್ಲ.

೩) ಸ್ಯಾದಸ್ತಿಚ ನಾಸ್ತಿ ಚ – ಹೇಗೋ ಇದೆ ಮತ್ತು ಇಲ್ಲ.

೪)ಸ್ಯಾದವಕ್ತವ್ಯಂ – ಹೇಗೋ ವರ್ಣನಾತೀತವಾಗಿದೆ.

೫)ಸ್ಯಾದಸ್ತಿ ಚ ಅವಕ್ತವ್ಯಂಚ –  – ಹೇಗೋ ಇದೆ. ಮತ್ತು ವರ್ಣನಾತೀತವಾಗಿದೆ.

೬)ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇಲ್ಲ. ಮತ್ತು ವರ್ಣನಾತೀತವಾಗಿದೆ.

೭)ಸ್ಯಾದಸ್ತಿಚ ಸ್ಯಾನ್ನಾಸ್ತಿಚ ಅವಕ್ತವ್ಯಂ ಚ – ಹೇಗೋ ಇದೆ, ಇಲ್ಲ ಮತ್ತು ವರ್ಣನಾ ತೀತವಾಗಿದೆ. ಹೀಗೆ ಸಪ್ತಪ್ರಕಾರದ ನ್ಯಾಯದಿಂದ ಅನೇಕಾಂತತೆಯನ್ನು ಸಿದ್ಧಿಸಿ ತೋರುತ್ತಾರೆ. ಅನೇಕಾಂತತೆಯನ್ನು ಹೇಳುವ ಸವಣರು ಸ್ಥಿರತೆಯಿಲ್ಲದೆ ಲೋಕ ವ್ಯವಹಾರದ ತೊಳಲಾಟದಲ್ಲಿ ಬೀಳಬೇಕಾಗುವದು. ಶಾಂತಿ-ಸಮಾಧಾನ ಗಳ-ಸ್ಥಿರತ್ವಗಳ ಸುಳಿವು ಇಲ್ಲದಾಗುವದು.

ಆತ್ಮ ತತ್ತ್ವವನ್ನು ತಿಳಿಯಲು ಶ್ರವಣವು ಮುಖ್ಯ ಸಾಧನವಾಗಿದೆ. ಯಾಜ್ಞವಲ್ಕ್ಯರು ಮೈತ್ರಾದೇವಿಗೆ –

ಆತ್ಮಾವಾರೇ ದ್ರಷ್ಟವ್ಯಃ

ಶ್ರೋತವ್ಯೋ ಮಂತವೋ ನಿಧಿಧ್ಯಾಸಿತವ್ಯಃ|

ಆತ್ಮನನ್ನು ಕಾಣುವ (ಪ್ರತ್ಯಕ್ಷ ಮಾಡಿಕೊಳ್ಳುವ) ಸಾಧನಗಳೆಂದರೆ ೧ ಶ್ರವಣ ೨ ಮನನ ೩ ನಿಧಿಧ್ಯಾಸನಗಳೆಂದು ತ್ರಿವಿಧ ಸಾಧನೆಗಳನ್ನು ತಿಳಿಸಿದ್ದಾರೆ. ಈ ಮೊದಲನೆಯ ಶ್ರವಣ ಕ್ರಿಯೆಗೆ ಸಾಧನವಾದುದು ಶ್ರೋತ್ರೇಂದ್ರಿಯವಾಗಿದೆ. ಶ್ರೋತ್ರವು ಆಕಾಶ ತತ್ತ್ವದ ಅಗ್ನಿಯಿಂದ ಉತ್ಪನ್ನವಾಗಿದ್ದು ಅದಕ್ಕೆ ದಶದಿಕ್ಕುಗಳೇ ಅಧಿದೇವತೆಗಳಾಗಿವೆ. ಶ್ರೋತ್ರಕ್ಕೆ ಶಬ್ದವೇ ವಿಷಯ. ಅಕ್ಷರಾತ್ಮಕ, ಅನಕ್ಷರಾತ್ಮಕವೆಂದು ಎರಡು ಶಬ್ದದ ಭೇದಗಳು, ಅಕ್ಷರಾತ್ಮಕವಾದ ಶಬ್ದವು ಮಂತ್ರರೂಪವಾಗಬೇಕು. ಲೌಕಿಕ ಶಬ್ದಗಳಿಂದ  ಜೀವನದಲ್ಲಿ ಸಮಾಧಾನವಿಲ್ಲ. ಶ್ರೋತ್ರೇಂದ್ರಿಯಕ್ಕೆ ಅಧ್ಯಾತ್ಮಿಕ ಶಬ್ದ ಶ್ರವಣವೇ ಭೂಷಣವು. ಇಂಥ ಶ್ರವಣವು ನವವಿಧ ಭಕ್ತಿಗಳಲ್ಲಿ ಮೊದಲನೆಯದಾಗಿದೆ. ಆತ್ಮತತ್ತ್ವವನ್ನು ತಿಳಿಸುವ ಶಬ್ದವು ಅಧ್ಯಾತ್ಮಿಕವಾದರೆ ಆತ್ಮನನ್ನು ತಿಳಿಸುವ ಶಬ್ದವು ಮಂತ್ರವಾಗಿದೆ. ಅಂಥ ಮಂತ್ರವು ಸದ್ಗುರುವಿನಿಂದ ದೊರೆಯಲು ಸಾಧ್ಯ. ಸದ್ಗುರು ಕೃಪೆಯಿಂದ ದೊರೆತ ಮಂತ್ರವು ಜೀವನವನ್ನೇ ಪಾವನಗೊಳಿಸಿ ದೇವರನ್ನಾಗಿಸುತ್ತದೆ.

ಲೌಕಿಕ ವ್ಯಾವಹಾರಿಕ ಶಬ್ದಗಳಿಂದ ಅನೇಕಾಂತತೆಯನ್ನು ದೂರ ಮಾಡಲು ಮಂತ್ರಾನುಸಂಧಾನದಿಂದ ಮಾತ್ರ  ಸಾಧ್ಯವಾಗುವದು. ಇದರಿಂದಲೇ ಏಕಾಂತತೆ ದೊರೆಯುವದು. ಶಿವನಲ್ಲಿ ಏಕನಿಷ್ಠೆಯೂ ಬೆಳೆಯುವದು. ಇಂತಾದರೆ  ಜ್ಞಾನೇಂದ್ರಿಯ ವಾದ ಈ ಶ್ರೋತ್ರೇಂದ್ರಿಯವು ಸಾರ್ಥಕವಾಗುವದು

. ಮಾನವನ ಉಪಯೋಗಕ್ಕಾಗಿ ಲಭ್ಯಗಳಾದ ಪಂಚ ಜ್ಞಾನೇಂದ್ರಿಯಗಳು ಶಿವನ ಮಹಾ ಕೊಡುಗೆಯೆನಿಸಿವೆ. ಇವುಗಳಲ್ಲೊಂದು ಇಂದ್ರಿಯವು ಊನವಾದರೆ ಜೀವನವೇ  ಅಸ್ತವ್ಯಸ್ತವಾಗುವದು. ಈ ಜ್ಞಾನೇಂದ್ರಿಯಗಳನ್ನು ಕೇವಲ ಲೌಕಿಕ ವಿಷಯಗಳತ್ತ ಬಳಸಿದರೆ ಜೀವನಿಗೆ ಬಂಧನವು ನಿಶ್ಚಿತ. ಕಾರಣ, ಇಂದ್ರಿಯಗಳ ವಿಷಯವು ಮೇಲೆ ವಿವರಿಸಿದಂತೆ ಅಧ್ಯಾತ್ಮಿಕವಾಗಬೇಕು. ಒಂದೊಂದು ಇಂದ್ರಿಯದ ವಿಷಯವೇ ಒಂದೊಂದು ಜೀವಿಯ ಹಾನಿಗೆ ಕಾರಣವಾಗಿರುವಾಗ ಐದಿಂದ್ರಿಯಗಳ ಭೋಗವನ್ನು ಹೊಂದುವ ಜೀವನು ಬಾಳಿ ಉಳಿಯುವ ಬಗೆಯೆಂತು.

…….. ಶ್ರವಣೇಂದ್ರಿಯ ವಿಷಯದಿಂದೆ

ಎರಳೆ ಕೆಡುವದು ಬೇಟೆಗಾರನ ಸರಳಿನಲ್ಲಿ;

ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ

ಬಂಧನಕ್ಕೊಳಗಾದವು,

ಇಂತಪ್ಪ ಪಂಚೇಂದ್ರಿಯ ವಿಷಯ ವ್ಯಾಪಾರದಲ್ಲಿ

ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರ”

ಎಂದು ಷಣ್ಮುಖ ಶಿವಯೋಗಿಗಳು ಹೇಳಿದ ಮಾತು ಮಾರ್ಮಿಕವಾಗಿದೆ. ಇಲ್ಲಿ  ಶ್ರವಣೇಂದ್ರಿಯ ಪ್ರಬಲವಾದ ಜಿಂಕೆಯು ಬೇಟೆಗಾರನ ಕೊಳಲಿನ ನಾದಕ್ಕೆ ಮರುಳಾಗಿ ಅವನ ಬಾಣಕ್ಕೆ ಆಹುತಿಯಾಗುತ್ತದೆ. ಪಂಚೇಂದ್ರಿಯಗಳ ಸ್ಫುರಣವುಳ್ಳ ಜೀವಾತ್ಮನು ಪಂಚ ವಿಷಯಗಳ ಬಲೆಯಲ್ಲಿ ಬಿದ್ದರೆ ಸಾಯುವದು ಖಂಡಿತ. ಅದು ಕಾರಣ ಜ್ಞಾನೇಂದ್ರಿಯಗಳನ್ನು ಆಜ್ಞಾನದಿಂದ ವಿಷಯಗಳಲ್ಲಿ ಬಂಧಿಸುವದು ಸರ್ವಥಾ ವಿಹಿತವಲ್ಲ.

ಶಿವಕವಿಯು ಪ್ರಥಮತಃ ಇಲ್ಲಿ ಶ್ರೋತ್ರೇಂದ್ರಿಯಕ್ಕೆ ಕಾರಣವಾದ ಲೌಕಿಕ ಸಂತೆಯ ಶಬ್ದಗಳನ್ನು ಕೇಳಿ ಕೇಳಿ ಏಕಾಂತತೆಯನ್ನು ಕಳೆದುಕೊಳ್ಳುವದು ಬೇಡವೆಂದಿದ್ದಾನೆ. ಸಂತೆಯ ಶಬ್ದಗಳು ಎಷ್ಟು ನಿಷ್ಪ್ರಯೋಜಕಗಳೋ ; ಅದರಿಂದ ದೊರೆಯುವ ಅನೇಕಾಂತತೆಯೂ ನಿರುಪಯುಕ್ತವಾದುದು. ಉಪಯೋಗವಿಲ್ಲದ ವ್ಯವಹಾರಿಕ ಮಾತುಗಳನ್ನಾಡಿ ಮತ್ತು ಅಂಥವುಗಳನ್ನು ಕೇಳುವದೂ ಜೀವನದಲ್ಲಿ ವ್ಯರ್ಥಸಮಯ ಇದೆಲ್ಲವನ್ನು ಜ್ಞಾನೇಂದ್ರಿಯವಾದ ಕರ್ಣಕ್ಕೆ ಶ್ರೀ ಗುರುವಿನ ಕೃಪೆಪಡೆದು ಶಬ್ದವನ್ನೇ ಮಂತ್ರಮಯ ವಾಗಿಸಿಕೊಳ್ಳುವ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.

ಪರಮಗುರುವೆ ! ಮಂತ್ರೋಪದೇಶವನ್ನು ಮಾಡಿ ಶ್ರವಣೇಂದ್ರಿಯವನ್ನು ಸಾರ್ಥಕಗೊಳಿಸು. ಸಕಲ ನಿರರ್ಥಕ ಶಬ್ದಗಳನ್ನು ತ್ಯಜಿಸಿ ಆತ್ಮೋದ್ಧಾರದ ನುಡಿಗಳನ್ನು ಓಂಕಾರನಾದವನ್ನು ಶಬ್ದ ಪ್ರಸಾದವನ್ನಾಗಿ ಭೋಗಿಸುವ ಕಲೆಯನ್ನು ಕಲಿಸಿ ಉದ್ಧರಿಸು.

೨.   ತ್ವಗಿಂದ್ರಿಯ – ಸ್ಪರ್ಶವಿಷಯ

ಗಾಳಿ ಪೂಜೆಯ ಗುಡ್ಡ | ವಾಳುಮಟ್ಟಿಹುದು ಈ

ರೇಳು ಲೋಕವನು – ತಾಳಿಕೊಂಡಿಹುದೆಂದು

ಹೇಳುವರು ಗುರುವೆ ಕೃಪೆಯಾಗು  ||೬೭||

ವಾಯುತತ್ತ್ವದ ಜ್ಞಾನೇಂದ್ರಿಯ ತ್ವಕ್, ಅದಕ್ಕೆ ಗೋಚರಿಸುವ ವಿಷಯ ಸ್ಪರ್ಶನ. ಅಲ್ಲಿ ಚಂದ್ರನು ಅಧಿದೇವತೆಯಾಗಿದ್ದಾನೆ. ಸ್ಪರ್ಶವಿಷಯವು ಶೀತ, ಉಷ್ಣ, ಮೃದು, ಕಠಿಣವೆಂದು ನಾಲ್ಕು ತೆರನಾಗುತ್ತದೆ. ಎಲ್ಲ ವಸ್ತುಗಳ ವಿವಿಧ ಸ್ಪರ್ಶವು ತ್ವಗಿಂದ್ರಿಯಕ್ಕೆ ಗೊತ್ತಾಗುತ್ತದೆ. ಹೀಗೆ ಗಾಳಿ ಮತ್ತು ಸ್ಪರ್ಶ ವಿಷಯದ ವಿವೇಚನೆ ಈ ತ್ರಿಪದಿಯಲ್ಲಿ ಬಂದಿದೆ. ಇಲ್ಲಿಯೂ ಶ್ಲೇಷಾರ್ಥವಿದೆ.  ಶ್ಲೇಷವೆಂದರೆ ಕೂಡಿದ್ದು, ಎರಡು ಅಥವಾ ಅನೇಕಾರ್ಥಗಳಿಂದ ಕೂಡಿದೆಯೆಂದರ್ಥ.

ಭಾರತೀಯ ಧಾರ್ಮಿಕ ಜೀವನದಲ್ಲಿ ಬಹು ಭಾವುಕ ಪರಂಪರೆಗಳು ಬೆಳೆದು ಬಂದಿವೆ. ಕೆಲವು ತಾತ್ವಿಕವಾಗಿಯೂ, ಹಲವು ಅಧ್ಯಾತ್ಮಿಕವಾಗಿಯೂ, ಇನ್ನಷ್ಟು ಮೂಢನಂಬಿಕೆಯುಳ್ಳವುಗಳೂ ಆಗಿವೆ. ಆದಿಮಾನವನಿಗೆ ದೈವತ್ವದ ಕಲ್ಪನೆ ಬಂದಾಗಿನಿಂದಲೂ ಬಹುಶಃ ಪಂಚಭೂತಗಳನ್ನು ದೇವರೆಂದು ನಂಬಿ ಪೂಜಿಸುವ ಇತಿಹಾಸವುಂಟು. ಅದು ಇಂದಿಗೂ ಹೊರತಾಗಿಲ್ಲ. ಭೂಮಿಯನ್ನು ಭೂತಾಯಿ ಯೆಂತಲೂ ; ಜಲವನ್ನು ಗಂಗಾಮಾತೆಯೆಂತಲೂ ; ಅಗ್ನಿಯನ್ನು ಅಗ್ನಿ ದೇವನೆಂದೂ, ಯಜ್ಞದ ದೂತನೆಂತಲೂ; ಗಾಳಿಯನ್ನು ಮತ್ತು ಆಕಾಶವನ್ನು ಪೂಜಿಸುವ ರೂಢಿ ಬೆಳೆದುಬಂದಿದೆ. ಇಲ್ಲಿ ಪ್ರಸ್ತುತ ವಿಷಯ ಗಾಳಿಗೆ ಸಂಬಂಧಿಸಿದೆ.

ಗಾಳಿಯು ಸಕಲ ಪ್ರಾಣಿಗಳಿಗೂ ಪ್ರಾಣಸ್ವರೂಪವಾಗಿದೆ. ಇದು ಕಣ್ಣಿಗೆ ಕಾಣದಿದ್ದರೂ ಸ್ಪರ್ಶದಿಂದ ಮಾತ್ರತಿಳಿದು ಬರುತ್ತದೆ. ಇದರ ಶಕ್ತಿ ಅದ್ಭುತವಾದುದು. ಆದರೆ ಗಾಳಿಯನ್ನು ತಡೆಯುವ ಶಕ್ತಿ ಪರ್ವತಕ್ಕೆ ಮಾತ್ರವುಂಟು. ಪರ್ವತದ ಮೇಲೆ ಹೋದಾಗ ಗಾಳಿಯ ಹೆಚ್ಚಿನ ಅನುಭವ ಬರುವದು. ಅಂತೆಯೇ ಪರಮಪೂಜ್ಯ ಗುರುವರರಾದ ಶ್ರೀ ಜಗದ್ಗುರು ಅನ್ನದಾನಿ ಮಹಾಶಿವಯೋಗಿಗಳು ಮೇಲಕ್ಕೆ ಹೋದಂತೆ ಗಾಳಿ ಬಹಳ’ ಎಂದು ಅಧ್ಯಾತ್ಮಿಕವಾಗಿಯೂ, ಲೌಕಿಕವಾಗಿಯೂ ಅಪ್ಪಣೆ ಮಾಡುತ್ತಿದ್ದರು. ಪರ್ವತಶಿಖರದಲ್ಲಿ ಗಾಳಿಬಹಳವಾದಂತೆ ಮೇಲ್ಮಟ್ಟದ ಜೀವನದಲ್ಲಿ ವಿಪತ್ತುಗಳೂ ಬಹಳ.

ವ್ಯಕ್ತವಾದ ಗಾಳಿಯನ್ನು ಪೂಜಿಸಲು ಗುಡ್ಡವು ಅನುಕೂಲಕರವಾಗುವದರಿಂದ ಅದನ್ನೇ ಜನರು ಅವಲಂಬಿಸುತ್ತ ಬಂದಿದ್ದಾರೆ. ಗಾಳಿಗೆ ವ್ಯವಹಾರದಲ್ಲಿ ದೆವ್ವ ಮತ್ತು ಭೂತ-ಪಿಶಾಚವೆಂತಲೂ ಕರೆಯುತ್ತಾರೆ. ಈ ಭೂತ-ಪಿಶಾಚಗಳ ಬಗ್ಗೆಯೂ ಬಹುರಂಜಕ ಕಥಾನಕಗಳುಂಟು. ಅವುಗಳು ಸ್ಮಶಾನಗಳಲ್ಲಿ ಪರ್ವತಗಳ ಗುಹೆಗಳಲ್ಲಿ ವಾಸಮಾಡುತ್ತವೆಂತಲೂ ಕೆಲವರ ನಂಬಿಕೆ. ಯಥಾರ್ಥಜ್ಞಾನವಿಲ್ಲದ, ಆತ್ಮಜ್ಞಾನ  ರಹಿತರಾದ ಜನರು ಅವು ನಮ್ಮನ್ನು ಕಾಡಬಾರದೆಂದು ಪೂಜಿಸುವ ರೂಢಿಯೂ ಬಂದಿದೆ. ಈ ಮಾತಿಗೆ ಭೂಮಂಡಲದ ಬಹುಜನರು ಭಯಗ್ರಸ್ತರಾಗುತ್ತ (ಅವುಗಳಿಗೆ) ಮಾರುಹೋಗಿದ್ದಾರೆ. ಇಂಥ ಹದಿನಾಲ್ಕು ಭೂಮಂಡಲಗಳನ್ನು ಪರ್ವತಗಳು ಧರಿಸಿರುತ್ತವೆಂಬುದನ್ನು ಅನುಭವಿಗಳು ಉಸುರುತ್ತಾರೆ. ಅಮರ ಕೋಶಕಾರನು

ಮಹೀಧ್ರೇ ಶಿಖರಿಕ್ಷ್ಮಬೃತ್ ಅಹಾರ್ಯಧರ ಪರ್ವತಾ : 1 (೨-೨-೧)

 ಎಂದಿದ್ದಾನೆ ಮಹೀಧರ, ಕ್ಷ್ಮಬೃತ್, ಅಥವಾ ಭೂಭ್ರತ್ ಪದಗಳು ಮೇಲಿನ ಮಾತನ್ನೇ ವಿಶದೀಕರಿಸುತ್ತವೆ. ಪರ್ವತವು ಭೂಮಿಯನ್ನು ಹೊತ್ತುಕೊಂಡಿರುವು ದೆಂದರ್ಥವಾಗುವದು.

ಇನ್ನೊಂದರ್ಥದಲ್ಲಿ ಗುಡ್ಡವೆಂದರೆ ದೇಹ, ಅದರಲ್ಲಿ ವಾಯುವಿಕಾರಗಳುಂಟು. ಮಾನವರಿಗೆ ಗಾಳಿಯು  ಪ್ರಾಣದಾಯಕವಾಗಿರುವಂತೆ ಬಾಹ್ಯದಲ್ಲಿ ಸೌಮ್ಯವಾದ ಉಷ್ಣ ಮತ್ತು ತಂಪು ಸ್ಪರ್ಶದಿಂದ ಸಂತಸದಾಯಕವಾಗಿದೆ.  ಶರೀರದಲ್ಲಿ ವಾಯು ವಿಕಾರಗಳಾಗಿ ದುಃಖದಾಯಕವೂ ಆಗುವದು. ಒಮ್ಮೊಮ್ಮೆ ಗಾಳಿಯ (ಭೂತ-ಪಿಶಾಚಗಳ) ಪ್ರವೇಶವೂ ಕೆಲವರಿಗೆ ಆಗುವದುಂಟು. ಇಂಥ ಭೂತಗಳಿಂದ ಕೂಡಿದ ದೇಹ ವೆಂತಲೂ ಇಲ್ಲಿ ಅರ್ಥೈಸಬೇಕಾಗುವದು. ಶರೀರದಲ್ಲಿ ಗಾಳಿಯ ಪೂಜೆಯೆಂದರೆ ವಿಷಯ ವಾಸನಾರಾಧನೆಯ ಗೌರವವೆಂದಾಗುವದು. ವಿಷಯ ವಾಸನೆಯನ್ನು ಇರಿಸಿಕೊಳ್ಳದ ದೇಹಗುಡ್ಡ ಅಪರೂಪ. ಈ ದೇಹಗುಡ್ಡದ ಎತ್ತರ ಒಂದೇ ಆಳಿನ ಪ್ರಮಾಣದಲ್ಲಿದೆ. ಹೊರಗಿನ ಆಕಾರ ಚಿಕ್ಕದಾದರೂ ಅಂತರಂಗದ ವಿಸ್ತಾರ ಅಪಾರ. ಆದ್ದರಿಂದ ಈ ಆಳುಮಟ್ಟದ ದೇಹಪರ್ವತದಲ್ಲಿ ಈರೇಳು (ಹದಿನಾಲ್ಕು) ಲೋಕಗಳು  ತಾಳಿಕೊಂಡು ಬಂದಿವೆ. ಅಂದರೆ ಬ್ರಹ್ಮಾಂಡದಂತೆ ಪಿಂಡಾಂಡದಲ್ಲಿಯೂ ಹದಿನಾಲ್ಕು ಭುವನ ಗಳಿರುತ್ತವೆಂಬ ಮಾತನ್ನು ೧೮ ನೇ ತ್ರಿಪದಿಯಲ್ಲಿ ಅರಿತಿದ್ದೇವೆ. ಚನ್ನಬಸವಣ್ಣನವರು –

ಈರೇಳು ಲೋಕವನು ಒಡಲೊಳಗಿಟ್ಟುಕೊಂಡು

ಲಿಂಗರೂಪಾಗಿ ಭಕ್ತನ ಕರಸ್ಥಲಕ್ಕೆ ಬಂದು

ಪೂಜೆಗೊಂಡಿತ್ತು ನೋಡಾ….

ಎಂದಿದ್ದಾರೆ. ಲಿಂಗ ಮತ್ತು ಅಂಗಕ್ಕೆ ಅಭೇದವಿಲ್ಲವೆ ?

ಶರೀರಿಯು ಪ್ರಾಣವಾಯುವಿನಿಂದಲೇ ಬದುಕುತ್ತಿರುವದರಿಂದ ಅದನ್ನು ಗೌರವಿಸಬೇಕಾದ್ದು ಯೋಗ್ಯವೇ ಇದೆ. ಕೇವಲ ಗಾಳಿಯನ್ನು ಪೂಜಿಸಿ ಸ್ಪರ್ಶಸುಖಕ್ಕಾಗಿ ಆಶೆಪಟ್ಟರೆ ಅಧ್ಯಾತ್ಮಸಾಧನೆ ಸಿದ್ಧಿಸಲಾರದು. ಗಾಳಿಯ ಚಂಚಲತೆಯನ್ನು ನೀಗಿಸಿ ಸ್ಥಿರತೆಯನ್ನು ಸಾಧಿಸಿದರೆ ಮಾತ್ರ ಪ್ರಾಣಲಿಂಗಾನುಸಂಧಾನವು ಸಮನಿಸುವದು. ೫೯ನೇಯ ತ್ರಿಪದಿಯ ತಿರುಳಿನಲ್ಲಿ ಪ್ರಸ್ತಾಪಿಸಿದಂತೆ ಈ ವಾಯುವು ಶರೀರ ತುಂಬೆಲ್ಲ ಹರಿದಾಡಿ ಕಾಯವನ್ನು ಕಂಗೆಡಿಸುತ್ತದೆ. ಭಕ್ತಿಯ ಬಟ್ಟೆಯನ್ನು ಬಯಲಾಗಿಸುತ್ತಿದೆ. ತ್ವಕ್ಕು (ಚರ್ಮವು) ದೇಹವನ್ನೆಲ್ಲ ವ್ಯಾಪಿಸಿರುತ್ತದೆ. ಇದು ಜೀವನ ತೊಗಲಿನ ಚೀಲದಂತಾಗಿದೆ.  .. ಈ ತ್ವಗಿಂದ್ರಿಯವು ಸ್ಪರ್ಶ ಸುಖಕ್ಕಾಗಿ ಆಶಿಸುತ್ತದೆ. ಜೀವಾತ್ಮನು ಸ್ಪರ್ಶಸುಖ ಬಯಸಿ ಬಂಧನದಲ್ಲಿ ಸಿಲುಕುತ್ತಾನೆ.

ನಿಜಗುಣರು –

ತೊಗಲತಿತ್ತಿಗೆ ಸಮನಾದ ಕಾಯದೊಳು ಕಂ-

ಡಿಗಳು ತೆಗದಿರೆ ಪಲವವರೊಳಗೆ |

ಸಂಗತಿಯನುಳ್ಳ ಮಾರುತನಿರ್ದು ತೊಗಲದೆ |

ಸೊಗಸುದೋರುವ ಸೋಜಿಗವನು ಕಂಡು || ಜೀವ. ಸಂ. ಸ್ಥಳ – ೧೯ |

“ಕೈವಲ್ಯಪದ್ಧತಿ’ಯಲ್ಲಿ ”ತೊಗಲಿನ ಚೀಲದಂತೆ ಇರುವ ದೇಹಕ್ಕೆ ಕೆಲವು ತೂತು ಗಳನ್ನು ಮಾಡಿ ಅದರಲ್ಲಿ ವಾಯು ಧಾರಾಳವಾಗಿ ಸಂಚಾರಮಾಡುತ್ತಿರುವವರಿಗೆ ಅನೇಕ ಸೋಜಿಗಳನ್ನು ಕಾಣುವಿ’ಯೆಂದು ತೊಗಲಿನ ಚೀಲವಾದ ದೇಹಕ್ಕೆ ಗಾಳಿಯು  ಆಧಾರವೆಂದು ಅಭಿಪ್ರಾಯ ಪಟ್ಟಿರುವರು. ಗಾಳಿಯ ಸ್ಪರ್ಶ ಒಳ-ಹೊರಗೂ ಹಿತವಾಗುತ್ತದೆ. ಆದರೆ ಅತಿಯಾದರೆ ತೊಂದರೆದಾಯಕವೇ ಆಗುವದು. ಹೊರ ಚರ್ಮದ ಬಣ್ಣವನ್ನು ಕಂಡು( ಇನ್ನೊಂದು) ಆ ಚರ್ಮವನ್ನು ಸ್ಪರ್ಶಿಸುವ ಆಶೆಯನ್ನು ಪ್ರಕೃತಿಯು ಹುಟ್ಟಿಸುತ್ತದೆ. ಷಣ್ಮುಖಶ್ರೀಗಳು –

ಬಣ್ಣದ ಚರ್ಮದ ಹೆಣ್ಣಿನಂಗದ ಕೂಟಸುಖ ಸವಿಯೆಂದು

ಮನವೆಳಸುವ ಕಣ್ಣಗೆಟ್ಟಣ್ಣಗಳು ನೀವು ಕೇಳಿರೊ !

ಹೆಣ್ಣಿನಿಂದೇನು ಸುಖವುಂಟು ಎಡ್ಡಪ್ರಾಣಿಗಳಿರಾ !

ಹೇಸಿಕೆಯ ಕಿಸುಕುಳದ ಕೀವು ತುಂಬಿ ಒಸರುವ,

ಹಸಿಯ ಘಾಯದಲ್ಲಿ ವಿಷಯಾತುರತೆಯಿಂದ ಬಿದ್ದು

ಮತಿಮಸಳಿಸಿ, ಮುಂದುಗಾಣದೆ ಮುಳುಗಾಡು

ತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರ.

ಎಂದು ಬಹುಮಾರ್ಮಿಕವಾಗಿ ಸ್ಪರ್ಶವಿಷಯ ಸುಖವನ್ನು ವಿಡಂಬಿಸಿದ್ದಾರೆ. ಮತ್ತು ಇನ್ನೊಂದೆಡೆ ಕೇವಲ ಸ್ಪರ್ಶಸುಖಕ್ಕೆ ಆಶಿಸಿ ಕೆಡುವ ಪ್ರಾಣಿ ‘ಗಜ’ದ ಗತಿಯನ್ನು ಅವಲೋಕಿಸಿ –

ತ್ವಗಿಂದ್ರಿಯ ವಿಷಯದಿಂದ ಗಜವು

ಕೆಡುವದು ರಾಜನ ಕೃತಕದಲ್ಲಿ

ಎಂದು ಮರುಗಿದ್ದಾರೆ. ರಾಜರು ತಮ್ಮ ಉಪಯೋಗಕ್ಕಾಗಿ ಆನೆಗಳನ್ನು ಹಿಡಿಯಲು ಅಡವಿಯಲ್ಲಿ ತಗ್ಗು ತೆಗೆದು ಮೇಲೆ ಚಪ್ಪರಹಾಕಿ ಹುಲ್ಲನ್ನು ಬೆಳೆಯಿಸುವರು. ಎಳೆಯ ಹಸುರಾದ ಹುಲ್ಲಿಗಾಗಿ ಆಶಿಸಿದ ಗಜವು ತಗ್ಗಿನಲ್ಲಿ ಬೀಳುವದು. ಜ್ಞಾನಿಯಾದ ಮಾನವನು ಒಂದೊಂದು ಇಂದ್ರಿಯದ ಸುಖಕ್ಕಾಗಿ ಬಯಸದೆ ಆತ್ಮದ ಅರಿವನ್ನು ಮಾಡಿಕೊಳ್ಳಬೇಕು. ಅಂದರೆ ತ್ವಕ್ಕಿನ ಜಡತ್ವವು ನಾಶನಾಗಬೇಕಾದರೆ ಆ ತ್ವಗಿಂದ್ರಿಯವನ್ನು ಜಂಗಮಲಿಂಗವನ್ನಾಗಿಸಬೇಕು. ಆಗ ಸ್ಪರ್ಶ ವಿಷಯವು  ಪ್ರಸಾದವಾಗುವದು. ತ್ವ ಕ್ಕು ಜಂಗಮಲಿಂಗಕ್ಕೆ ಮುಖನಾಗಬೇಕು. ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿ ಭೋಗಿಸಬೇಕು. ಇಂಥ ಶಕ್ತಿಯು ಶ್ರೀಗುರು ಕರುಣೆಯಿಂದ ಮಾತ್ರ ಪಡೆಯಲು ಬರುತ್ತದೆ.

ಗುರುವಿಗೆ ನಮ್ಮ ತನುವನ್ನರ್ಪಿಸಬೇಕು. ಶರೀರದಿಂದ ಗುರುವಿನ ಸೇವೆಯನ್ನು ತಪ್ಪದೆ ಮಾಡಬೇಕು. ಅದರಿಂದ ಗುರುಕೃಪೆಯಾಗುವದು. ಗುರುಕರುಣೆಯಿಂದ ವಾಯುವನ್ನು ನಿಲ್ಲಿಸಿ ಮನವನ್ನು ಮಹಾಲಿಂಗದಲ್ಲಿ ನೆಲೆಗೊಳಿಸಿ ಸ್ಪರ್ಶವನ್ನು ಸ್ಪರ್ಶಪ್ರಸಾದವನ್ನಾಗಿಸಿ ಶೀತ-ಉಷ್ಣ ಮೃದು-ಕಠಿಣಗಳ ತಾರತಮ್ಯವನ್ನು ಸಮನ್ವಯಗೊಳಿಸುವ-ಶಕ್ತಿಯನ್ನು ಸಂಪಾದಿಸ ಬೇಕು ಪರಮಗುರುವೆ ! ನೀನು ಕರುಣೆದೋರು. ಅದರಿಂದ –

“ಎನ್ನ ತ್ವಕ್ಕದು ಚಲುವ ನಿನ್ನ ಚರಣವ ತೊಳೆವ

ಮನ್ನಣೆಯ ತೊತ್ತಾಗಿ ಇರ್ಪ್ಪುದಯ್ಯ’ʼ

ಎಂದು ಷಡಕ್ಷರಿ ಕವಿಗಳು ಹಾಡಿಹರಿಸಿದಂತೆ ಸಫಲತೆಯನ್ನು ಪಡೆಯಲಾಗುವದು.

೩. ನೇಂದ್ರಿಯ – ರೂಪ ವಿಷಯ

ಹುಬ್ಬಳ್ಳಿ ಪೇಟೆಯೊಳು | ಕಬ್ಬಿನ ಕೈಮಾರಾಟ

ಇಬ್ಬರೊಂದಾಗಿ – ಉಬ್ಬಿಮಾರಲು ಲಾಭ

ಹಬ್ಬಿತೈ ಗುರುವೆ ಕೃಪೆಯಾಗು  ||೬೮||

ಅಗ್ನಿತತ್ತ್ವದ ನೇಂದ್ರಿಯಕ್ಕೆ ಸೂರ್ಯನೇ ಅಧಿದೇವತೆ. ಕಣ್ಣಿನ ವಿಷಯ ರೂಪು. ಶ್ವೇತ (ಬಿಳಿ) ಪೀತ (ಹಳದಿ) ಹರಿತ (ಹಸಿರು) ಕಪೋತ (ಮಾಸ) ಮಾಂಜಿಷ್ಟ (ಕಂದು, ಕೆಂಪು) ಕೃಷ್ಣ (ಕಪ್ಪು) ಗಳೆಂದು ರೂಪಿನಲ್ಲಿ ಆರು ವಿಧ. ಈ ತ್ರಿಪದಿಯಲ್ಲಿ ನೇತ್ರದ ವ್ಯವಹಾರ ಹಾಗೂ ರೂಪ ವಿಷಯದ ವಿಚಾರ ಸುಂದರವಾಗಿ ಬಂದಿದೆ.

ಹಿಂದೆ ತಿಳಿಸಿದಂತೆ ಶಿವಕವಿಯು ವ್ಯಾಪಾರಿಯಾಗಿದ್ದುದರಿಂದ ಪೇಟೆಗಳ ಪರಿಚಯ ವ್ಯಾಪಕವಾಗಿದೆ. ಹುಬ್ಬಳ್ಳಿ ಪೇಟೆ ಬಹುದಿನಗಳಿಂದಲೂ ಪ್ರಸಿದ್ಧ. ಅದರ ಪರಿಚಯವಿಲ್ಲದವನು ತೀರ ವಿರಳ. ಆಗ ಸಕ್ಕರೆಯ ಕಾರಖಾನೆಗಳಿಲ್ಲದ ಕಾಲ. ಕೇವಲ ತಿನ್ನುವ ಬಿಳೆ ಕಬ್ಬುಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಸಂತೆಗಳಲ್ಲಿಯೂ ಕಬ್ಬಿನ ಮಾರಾಟ ನಡೆಯುತ್ತಿತ್ತು. ಹುಬ್ಬಳ್ಳಿಯೆಂದ ಮೇಲೆ ಕೇಳಬೇಕೆ ? ಕಬ್ಬಿನ  ಮಾರಾಟ ಕೈ ಮೇಲೆಯೇ ನಡೆಯುತ್ತಿತ್ತು. ಕೈ ಮಾರಾಟವೆಂದರೆ ಮಾರುವವನು ತನ್ನ ಸಾಮಾನುಗಳನ್ನು ಹೊರತೆಗೆದು ಕೈಯಲ್ಲಿ ಹಿಡಿಯುತ್ತಲೇ ಮಾರಾಟವಾಗುವದು.   ಗಿರಾಕಿಗಳಿಗಾಗಿ ಕಾಯ್ದು ನಿಲ್ಲುವ ಅವಸರವಿರುವದಿಲ್ಲ. ಗ್ರಾಹಕರು ಹೇರಳವಾಗಿರುವ ದರಿಂದ ತಡವಿಲ್ಲದೆ ಸರಕು ಮಾರಾಟವಾಗುತ್ತಿತ್ತು. ಅದರಿಂದ ಕೊಡುವವನಿಗೂ, ಕೊಳ್ಳುವವನಿಗೂ ತೀರದ ಉತ್ಸಾಹವಾಗುವದು ಸಹಜ. ಇದು ಹೊರನೋಟದ  ಕಬ್ಬಿನ ವ್ಯಾಪಾರವಾದರೆ ಅಧ್ಯಾತ್ಮಿಕ ಕಬ್ಬಿನ ವ್ಯಾಪಾರ ಬಹು ಮಾರ್ಮಿಕವಾಗಿದೆ.

 ಹುಬ್ಬಳಿಯೆಂದರೆ = ಹುಬ್ಬಿನ ಬಳ್ಳಿ (ಹುಬ್+ಬಳ್ಳಿ), ಬಳ್ಳಿಯಂತಿರುವ ಹುಬ್ಬು. ಈ ಹುಬ್ಬುಗಳ ವ್ಯವಹಾರವೇ ಹುಬ್ಬಳ್ಳಿಯ ಪೇಟೆ, ಎರಡು ಹುಬ್ಬುಗಳ ಮೂಲಕ ನಡೆಯುವ ವ್ಯಾಪಾರ ಕಾಮಕೇಳಿ. ೪೪ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಕಾಮನಿಗೆ ಹುಬ್ಬುಗಳೇ ಬಿಲ್ಲು, ಅರಳುಗಂಗಳೇ ಬಾಣವೆಂದು ಅರಿತಿದ್ದೇವೆ. ಕಾಮಿಗಳು ಹುಬ್ಬುಗಳನ್ನು ಕುಣಿಸಿ (ಹಾರಿಸಿ) ಕುಡಿನೋಟಗಳನ್ನು ಬೀರಿ ಎಂಥ ಧೀರನ ಮನವನ್ನಾದರೂ ಸೆಳೆಯುತ್ತಾರೆ. ಹುಬ್ಬು ಮತ್ತು ಕಣ್ಣುಗಳ ಕಾಮ ಚೇಷ್ಟೆ ಕಬ್ಬಿನಂತೆ ರಸಿಕರಿಗೆ ರುಚಿಯಾಗಿರುತ್ತದೆ. ಈ ವ್ಯಾಪಾರದಲ್ಲಿ ಬಾಹ್ಯ ಪ್ರಪಂಚವನ್ನೇ ಮರೆಯುತ್ತಾರೆ. ಪರಸ್ಪರ ಪ್ರೇಮಿಗಳಲ್ಲಿ ಈ ಮನಸಿಜನ ವ್ಯಾಪಾರವು ಹೆಚ್ಚಿದರೆ. ಭೋಗದ ಲಾಭ ಬೆಳೆಯುವದು. ಅದು ಅತಿಯಾಗಿ ಬೆಳೆದರೆ ವೈಷಯಿಕವಾಸನೆ  ವ್ಯಾಪಿಸುವದು

ಹಿಂದೀ ಸಾಹಿತ್ಯದ ರಸಿಕ ಚಕ್ರವರ್ತಿಯೆನಿಸಿದ ಶೃಂಗಾರ ಕವಿಯೆಂದು ಪ್ರಖ್ಯಾತಿ ಪಡೆದ ‘ಬಿಹಾರಿಯು’ ತನ್ನ ‘ಸತಸಯಿ’ಯಲ್ಲಿ ಪ್ರಣಯಿಗಳ ನಯನ ಮತ್ತು ಹುಬ್ಬುಗಳ ವ್ಯಾಪಾರದ ವರ್ಣನೆಯನ್ನು ಸುಂದರವಾಗಿ ಮಾಡಿದ್ದಾನೆ .

*”ಕಹತ ನಟತ, ರೀಝತ, ಖಜತ, ಮಿಲತ, ಖಿಲತ, ಲಜಿಯಾತ |

ಭರೆ ಭೌನಮೇಂ ಕರತ ಹೈ ನೈನನ ಹೀ ಸೋಂ ಬಾತ. ||

‘ಕಾಮಾತುರಾಣಾಂ ನ ಭಯಂ ನ ಲಜ್ಜ್ಯಾʼʼಕಾಮಾತುರರಾದ ಕಾಮಿಗಳಿಗೆ  ಭಯವೆಲ್ಲಿ? ಯಾವುದೂ ಇರುವದಿಲ್ಲ. ಪ್ರೇಮಿಗಳು ಜನನಿಬಿಡವಾದ ಸಭಾ  ಭವನದಲ್ಲಿಯೂ ಸಹ ತಮ್ಮ ಪ್ರೇಮಾಲಾಪವನ್ನು ಮಾಡುತ್ತಾರೆ. ಇವರ ಸಂಭಾಷಣೆ ಶಬ್ದಗಳಿಂದಲ್ಲ. ಕೇವಲ  ಕಣ್ಣೋಟಗಳಿಂದ, ಸಂಭಾಷಣೆಗಳಲ್ಲಿಯೂ ಆಕರ್ಷಣೆಯಿದೆ, ರಸಿಕತೆಯಿದೆ. ನಾಯಕನು ಕಣ್ಣು ಸನ್ನೆಯಿಂದ ಪ್ರಿಯತಮಳನ್ನು ಕೇಳುತ್ತಾನೆ. ಅವಳು ಕೃತ್ರಿಮ ನಟನೆಯಿಂದ ಅನುಮತಿ ನೀಡುವದಿಲ್ಲ. ಇದು ಅವನಿಗೆ ಸಂತಸಪಡಿಸುತ್ತದೆ. ಆದರೆ ಆಕೆಗೆ ಸಿಟ್ಟು ಬರುತ್ತದೆ. ಆಗ ಒಬ್ಬರಿಗೊಬ್ಬರು ನೋಡುವದರಿಂದ ಇಬ್ಬರ ನೇತ್ರಗಳು ಒಂದಾಗುತ್ತವೆ. ಮುಖ ಅರಳುತ್ತದೆ. ಜನತೆಯ ಕಲ್ಪನೆ ಬಂದು ಅವಳು ತಕ್ಷಣ ನಾಚಿಕೊಳ್ಳುತ್ತಾಳೆ. ಹೀಗೆ ಕಾಮಿಗಳು ಯಾವ ಪರವೆಯಿಲ್ಲದೆ ತಮ್ಮ ಚೇಷ್ಟೆಯನ್ನು ಆಡುತ್ತಿರುತ್ತಾರೆ.

ಕನ್ನಡದ ಮಹಾಕವಿ ಚಾಮರಸನೂ ಸಹ ಕಾಮಿನಿಯರಿಗೆ ಕಂಗಳ ಮಾತು  ಸಹಜವೆಂದು ಬಣ್ಣಿಸಿದ್ದಾನೆ. ”ಪ್ರಭುಲಿಂಗಲೀಲೆ’ಯಲ್ಲಿ –

ಕಂಗಳಲಿ ಮಾತುಗಳು ತಿಳಿವೊಡೆ

ಕಂಗಳಲಿ ಮಾಟಗಳು ಬಗೆವೊಡೆ

ಕಂಗಳಲಿ ಸಮ್ಮೋಹಗಳು ಕಂಗಳಲಿ ನೇಹಗಳು |

ಕಂಗಳಲಿ ಸರ್ವಪ್ರಪಂಚುಗ –

ಳಂಗನೆಯರಿಗೆ ಸಹಜವೆಂದೆನೆ

ಕಂಗಳಿಂದಾ ವಿಮಳೆ ಸೂಚಿಸಲರಿದಳಾ ಮಾಯೆ

ವಿಮಳೆ ಮತ್ತು ಮಾಯಾದೇವಿಯರ ಮಾತು ಕಂಗಳ ಸಂಜ್ಞೆಯಿಂದ ನಡೆದ ಪ್ರಸಂಗವನ್ನು ಇಲ್ಲಿ ವರ್ಣಿಸಲಾಗಿದೆ.

ಕಣ್ಣುಗಳ ಕಾಮಚೇಷ್ಟೆಯು ಉಚ್ಚೃಂಖಲತೆಯನ್ನು ಹೊಂದಿದರೆ ಸಾಮಾಜಿಕ ಜೀವನವೇ ವ್ಯತ್ಯಸ್ತವಾಗುವದು. ಇಂದಿನ ಸ್ಟೇಚ್ಛಾ ಮನೋಭಾವವುಳ್ಳವರಲ್ಲಿ ಮತ್ತು ನಾಟಕ-ಚಲನಚಿತ್ರಗಳಲ್ಲಿ ಈ ವ್ಯವಹಾರ ಅತಿಯಾಗಿ ಕಾಣುತ್ತದೆ. ಇದರ ಪರಿಣಾಮ ಊಹಿಸಲಸಾಧ್ಯವಾಗಿದೆ.

*ವಿಶ್ವಾಮಿತ್ರ – ಪರಾಶರ ಪಭೃತಯೋ ವಾತಾಂಬುಪರ್ಣಾಶನಾಃ |

ತೇSಪಿ ಸ್ತ್ರೀ ಮುಖ ಪಂಕಜಂ ಸುಲಲಿತಂ ದೃಷ್ಟ್ವೈ ಮೋಹಂ ಗತಾಃ |

“ಕೇವಲ ಒಣಗಿದ ಎಲೆ ನೀರುಗಳನ್ನು ತಿಂದ ವಿಶ್ವಾಮಿತ್ರ ಪರಾಶರ ಮೊದಲಾದ ಮುನಿಗಳು ಸಹ ಸುಂದರವಾದ ಸ್ತ್ರೀಯರ ಮುಖಕಮಲವನ್ನು ಕಂಡು ಮೋಹಿತರಾದರೆಂದು ಭರ್ತೃಹರಿಯು ಹೇಳಿರುವಾಗ ಇನ್ನುಳಿದ ಸಾಮಾನ್ಯ ಮಾನವರ ಪಾಡೇನು

ನೇತ್ರವು ಸುಂದರ ರೂಪಕ್ಕಾಗಿ ಕಾತುರ ಪಡುತ್ತಿದೆ. ಚರ್ಮದ ಚೀಲವೆನಿಸಿದ ದೇಹದ ಬಣ್ಣ, ಹಾಗೂ ಯೌವನದ ಉಬ್ಬುಗಳನ್ನು ನಿರೀಕ್ಷಿಸ ಬಯಸುತ್ತದೆ. ಈ ರೂಪ ಸ್ಥಿರವಾದುದಲ್ಲ. ಮಹಾಪೂರವಿಳಿದ ನದಿಯಂತೆ ಯೌವನವು ಜಾರಿಹೋದ ಮೇಲೆ ರೂಪ ವಿರೂಪವಾಗುವದು. ಇದು

ಕಿಸುಕುಳದ, ಕೀವುರಕ್ತದ, ಒಸೆದು ತುಂಬಿದ

ಮಲಮೂತ್ರದ ರಂಜನ ಮುಸುಕಿದ

ಮಾಂಸ ಅಸ್ತಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ

ಹುಸಿಯ ತನುವ ಮೆಚ್ಚಿ ಪಶುಪತಿ ನಿಮ್ಮ ನಾನು ಮರೆದೆನಯ್ಯ

ಅಖಂಡೇಶ್ವರಾ

ಸುಡು ಸುಡು ಈ ದೇಹದ ರೂಪು

ನೋಡಿದಡೇನೂ ಹುರುಳಿಲ್ಲವಯ್ಯ

ಎಲುವು ಚರ್ಮ ನರ ಮಾಂಸ ಮಲ ಮೂತ್ರಯುಕ್ತವಾದ

ಅನಿತ್ಯ ದೇಹವ ನಚ್ಚಿ ನಿಮ್ಮ ನಿಜವ ಮರೆದು

ಭವಭಾರಿಯಾದೆನಯ್ಯ ಅಖಂಡೇಶ್ವರಾ

ಎಂದು ಷಣ್ಮುಖ ಶಿವಯೋಗಿಗಳು ದೈಹಿಕ ರೂಪದ ಅಸಾರತೆಯನ್ನು ಭವದ ಮೂಲವನ್ನು ತಿಳಿಸಿದ್ದಾರೆ. ಉಡುತಡಿಯ ನವಯೌವನವತಿಯಾದ ಅಕ್ಕನ ಸುಂದರ ರೂಪವನ್ನು ಮೋಹಿಸಿದ ಕೌಶಿಕರಾಜನಿಗೆ ಅಕ್ಕನು ದೇಹದ ಯಥಾರ್ಥ ರೂಪವನ್ನು  ಬಿತ್ತರಿಸಿ ಮಾಯಾ ಪರೆಯನ್ನೇ ಹರಿಯುತ್ತಾಳೆ –

ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ,

ಎಲುವಿನ ತಡಿಕೆ, ಕೀವಿನ ಹಡಿಕೆ,

ಸುಡಲೀ ದೇಹವ ಒಡಲುವಿಡಿದು ಕೆಡದಿರು

ಚನ್ನಮಲ್ಲಿಕಾರ್ಜುನನರಿ ಮರುಳೆ !

ಎಂದು ಹೇಳಿ ಸ್ವತಃ ತಾನೂ ದಿಗಂಬರೆಯಾಗಿ ವೀರವೈರಾಗ್ಯಶಾಲಿನಿಯಾಗಿ ಕೀರ್ತಿಕಾಯಳಾಗುತ್ತಾಳೆ. ದೀಪದ ರೂಪಕ್ಕಾಗಿ ಮೋಹಿಸುವ ಪತಂಗವು ಸುಟ್ಟು ಸಾಯುವಂತೆ ಮಾನವನು ನಾರಿಯರ ಹೊರಗಿನ ರೂಪಕ್ಕಾಗಿ ಮರುಳಾಗಿ   ಮನುಷ್ಯತ್ವವನ್ನು ಮಾರಿಕೊಳ್ಳುತ್ತಾನೆ.

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ

ಪಂಚ ಜ್ಞಾನೇಂದ್ರಿಯಗಳಲ್ಲಿ ನೇತ್ರವೇ ಮುಖ್ಯವಾಗಿದೆ. ಉಳಿದ ನಾಲ್ಕರಲ್ಲಿ ಯಾವುದಾದರೂ ಕೊರತೆಯಾದರೆ ನಡೆಯಬಹುದು.. ಕಣ್ಣಿಲ್ಲದಿದ್ದರೆ ಪರಾಧೀನನಾಗ ಬೇಕಾಗುವದು. ಶಿವನು ತನ್ನ ಸೃಷ್ಟಿಯ ಸೌಂದರ್ಯವನ್ನು ಸವಿಯಲು ನೇತ್ರವನ್ನಿತ್ತಿದ್ದಾನೆ. ಶಿವಲಿಂಗದಲ್ಲಿ ದೃಷ್ಟಿಯನ್ನಿರಿಸಲು ಕಣ್ಣಿರಿಸಿದ್ದಾನೆ (ಜೀವನಿಗೆ) ಆ ಕಣ್ಣೋಟ ಕಾಮುಕ ದೃಷ್ಟಿಯುಳ್ಳುದಾಗಬಾರದು. ನೇತ್ರದೃಷ್ಟಿಯನ್ನು, ಲಿಂಗಕಲೆಯನ್ನು ನೋಡಿ ಶಿವಮಯಗೊಳಿಸಬೇಕು. ಅಂದರೆ ಮಾತ್ರ ನೇತ್ರವು ಶಿವಲಿಂಗವಾಗುವದು. ನೋಡುವ ರೂಪವೆಲ್ಲ ಶಿವಸ್ವರೂಪವಾಗುವದು. ಈ ದೃಷ್ಟಿಯ ವಿಷಯದಲ್ಲಿ ಜ್ಞಾನಿಯಾದ ಚನ್ನಬಸವಣ್ಣನವರ ಕೆಳಗಿನ ಒಂದೇ ವಚನ ಸಾಕು –

ಲಿಂಗದ ಕಲೆ ಅಂತರಂಗಕ್ಕೆ ವೇಧಿಸುವ

ಹಲವು ಸಾಧನಂಗಳಲ್ಲಿ

ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯ.

ಕರದಿಷ್ಟ ಲಿಂಗದಿ, ತೆರೆದಿಟ್ಟ ದೃಷ್ಟಿ ಎವೆಹಳಚದಂತಿರ್ದಡೆ

 ಆ ಲಿಂಗವು ಕಂಗಳಲ್ಲಿ ವ್ಯಾಪಿಸುತ್ತಿಹುದು.

ಆ ಮಂಗಲಮಯವಾದ ಕಂಗಳಲ್ಲಿ ಮನವನಿರಿಸಿ

ಲಿಂಗ ನಿರೀಕ್ಷಣೆಯಿಂದ ನೆನೆಯಲು

ಆ ಲಿಂಗಮೂರ್ತಿ ಮನವನಿಂಬುಗೊಂಡು

ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು

ಬಳಿಕ ಮನೋಮಯ ಲಿಂಗವನು –

ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,

ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು

ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.

ಆ ಭಾವಲಿಂಗವನು ಎಡೆಬಿಡದೆ ಭಾವಿಸುತ್ತ

ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,

ಶರಣನು ನಿತ್ಯ ತೃಪ್ತನಾಗಿ ವಿರಾಜಿಸುತಿಪ್ಪನು.

ಇದೇ ನಮ್ಮ ಕೂಡಲ ಚನ್ನಸಂಗಯ್ಯನೊಡನೆ

ಕೂಡುವ ಪರಮೋಪಾಯವು.

ನೋಡಿದಿರಾ ! ದೃಷ್ಟಿಯ ಮಹತ್ವ ಅದೆಷ್ಟು ಅಪಾರವಾಗಿದೆ. ಪರಶಿವನ ಕೂಡುವ ಸಾಧನವೇ ದೃಷ್ಟಿ, ಶಿವನೇ ತಾನಾಗುವ ಸಾಧನವೂ ದೃಷ್ಟಿ, ಮೊಗ್ಗೆಯ ಮಾಯಿದೇವರೂ ಮಹದೈಪುರೀಶ್ವರ ಶತಕದಲ್ಲಿ –

ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊ |

ಳ್ಪಿಂಗದ ನಿಂದಭಾವದರೊಳ್ನೆಲೆಗೊಂಡ ಶಿವಾತ್ಮಲಿಂಗವಾ ।

ಲಿಂಗದೊಳಿರ್ದು ನಿತ್ಯಸುಖಿಯಾಗಿ ವಿರಾಜಿಸುವಂಗೆ ಬಾಹ್ಯ ಕ |

ರ್ಮಂಗಳವೇತಕಯ್ಯ ಪರಮ ಪ್ರಭುವೇ ಮಹದೈಪುರೀಶ್ವರಾ || ೫೨ |

ಇಷ್ಟ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳು ನೆಲೆನಿಂತರೆ ಶರಣನು ಚಿರ ಪರಿಣಾಮಿಯೆನಿಸುವನು. ನಿತ್ಯಸುಖಿಯಾಗುವನು. ಇಂಥವನಿಗೆ ಬಾಹ್ಯ ಕರ್ಮಗಳ ಅವಶ್ಯಕತೆಯೇ ಇಲ್ಲ. ಅಂದಮೇಲೆ ಪರಶಿವನು ದಯಪಾಲಿಸಿದ ನೇತ್ರವನ್ನು ಗುರು-ಲಿಂಗ-ಜಂಗಮರ ದರ್ಶನಕ್ಕಾಗಿ ಮೀಸಲಾಗಿಡಬೇಕು. ಶಿವಲಿಂಗ ನೋಡುವ ಕಣ್ಣಿನಲ್ಲಿ ಪರ ಸತಿಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಲಿಂಗವಿಲ್ಲದೆ ಸಂಯೋಗವಿಲ್ಲ. ಸಮರಸವಿಲ್ಲ. ಅದುಕಾರಣ ನೇತ್ರದ ನಿಜವನರಿದಾಚರಿಸಬೇಕು.

ಎಡ ನೇತ್ರದ ಈಡಾ ನಾಡಿಯೇ ಸತಿಯಾಗಿ ಬಲನೇತ್ರವಾದ ಪಿಂಗಳನಾಡಿಯು ಶಿವಲಿಂಗರೂಪಪತಿಯಾಗಿ ಸುಷುಮ್ನಾನಾಳವಾದ ಭ್ರೂ ಮಧ್ಯ (ಹುಬ್ ಬಳ್ಳಿ) ಪೇಟೆಯಲ್ಲಿ ಕೂಡಿದರೆ ಸಮರಸದ ನಿತ್ಯ ಸುಖಪ್ರಾಪ್ತಿಯಾಗಿ ನಿತ್ಯತೃಪ್ತತೆ ಲಭ್ಯವಾಗು ವದು. ಇಂಥ ತೃಪ್ತಿಗೆ ನಾಶವೆಂಬುದಿಲ್ಲ. ಈ ನಿತ್ಯತೃಪ್ತಿ ನೇತ್ರದ ದೃಷ್ಟಿಯೋಗದಿಂದ ಸಾಧ್ಯವೆಂಬುದನ್ನು ಮರೆಯದಿರಬೇಕು. ಓ ಗುರುವೆ ! ಎನ್ನ ನೇತ್ರದಲ್ಲಿ ಶಿವಲಿಂಗವನ್ನು ನೆಲೆಗೊಳಿಸಿ ರೂಪುಗಳನ್ನು ಶಿವಮಯಗೊಳಿಸಿ  ಭ್ರೂಮಧ್ಯದ ಅಜ್ಞಾಚಕ್ರದ ಎರಡೆಸಳಿನ ಕಮಲಮಧ್ಯದ ಮಹಾಲಿಂಗ ದರ್ಶನವನ್ನು ಮಾಡಿಸಿ ನಿತ್ಯ ಸುಖಿಯನ್ನಾಗಿಸು.

*

೪. ರಸನೇಂದ್ರಿಯ – ರಸ ವಿಷಯ

ಶಿರಹಟ್ಟಿಯೊಳಗೊಂದು | ಕರುವಿಲ್ಲದಾಕಳಿಗೆ

ಕರೆವ ಮೊಲೆಯಿಲ್ಲ ಕರೆದುಂಬುತಿದೆ ಗೋವು

ಕರಚೋದ್ಯ ಗುರುವೆ ಕೃಪೆಯಾಗು     || ೬೯ ||

ಇಲ್ಲಿ ರಸವಿಷಯದ ನಿರೂಪಣೆ ಬಂದಿದೆ. ರಸವನ್ನು ಗ್ರಹಿಸುವದು ಜಿಹ್ವೇಂದ್ರಿಯವು. ಇದಕ್ಕೆ ಅಪ್ಪುವೇ ಮಹಾಭೂತ. ವರುಣನೇ ಅಧಿದೇವತೆ. ಈ ಜಿಹ್ವೆ (ನಾಲಿಗೆ)ಗೆ ರಸವೇ ವಿಷಯವು. ಮಧುರ (ಸಿಹಿ) ಆಮ್ಲ (ಹುಳಿ) ತಿಕ್ತ (ಕಹಿ) ಕಟು (ಖಾರ) ಕಷಾಯ (ಒಗರು) ಲವಣ (ಉಪ್ಪು) ಗಳೆಂಬ ಆರು ರಸದ ಭೇದಗಳು. ಈ ತ್ರಿಪದಿಯಲ್ಲಿ ಪ್ರತಿಪಾದಿಸಿದ ರಸದ ವ್ಯಾಖ್ಯಾನವು ಅತ್ಯಂತ ನಿಗೂಢವಾಗಿದೆ. ಆಳವಾಗಿ ವಿಚಾರಿಸುವಂಥಹದೂ ಅಹುದು.

ಶಿರಹಟ್ಟಿಯೆಂಬುದು ಒಂದು ಊರಿನ ಹೆಸರಿರಬಹುದು. ಹಟ್ಟಿಯೆಂದರೆ ದನ ಕಟ್ಟುವ ಸ್ಥಳ, ಶಿರಪದವನ್ನು ಸಿರಿಯೆಂದುದಾಗಿ ತಿಳಿದರೆ ಸಂಪದ್ಯುಕ್ತವೆಂತಲೂ ಅರ್ಥವಾಗುವದು. ಶಿರಹಟ್ಟಿ-ಸಂಪದ್ಯುಕ್ತವಾದ ದನಗಳ ಸ್ಥಾನವು. ಹಿಂದಿನ ಕಾಲದಲ್ಲಿ ಗೋಧನವನ್ನು ಪ್ರಮುಖ ಸಂಪತ್ತನ್ನಾಗಿ ಪರಿಗಣಿಸುತ್ತಿದ್ದರು. ಪುರಂದರದಾಸರು ಹಾಡಿದ –

ನೀನಾರಿಗಾದೆಯೋ ಎಲೆಮಾನವ”

ಎನ್ನುವ ಪದದಿಂದ ಗೋವಿನ ಮಹತ್ವ ತಿಳಿಯದೇ ಇರದು. ಗೋವು ಪವಿತ್ರ ಪ್ರಾಣಿ, ಅದರ ಸೇವೆಗಾಗಿ ಅನೇಕ ಮಹಾನುಭಾವಿಗಳು ತಮ್ಮ ಜೀವನವೇ ಸವೆಸಿದ್ದಾರೆ. ರಘುಕುಲದ ದಿಲೀಪ ಮಹಾರಾಜನು ವಶಿಷ್ಠ ಮುನಿಗಳ ಅಪ್ಪಣೆಯಂತೆ ನಂದಿನಿಯ ಸೇವೆ ಮಾಡಿ ಪುತ್ರ ಫಲವನ್ನು ಪಡೆಯಲಿಲ್ಲವೆ ? ಇಂಥ ಗೋವುಗಳಿರುವ ಸ್ಥಳ ಶಿರಹಟ್ಟಿಯೇ ಸರಿ.

ಪೂಜ್ಯ  ಗುರುಗಳವರು ದನದ ಮನೆಗೆʼʼ ದ್ರವ್ಯದ ಮನೆ”ಯೆಂತಲೂ ಅಪ್ಪಣೆ ಮಾಡುತ್ತಿದ್ದರು. ಒಕ್ಕಲುತನ ಪ್ರಧಾನವಾದ ನಮ್ಮ ಭಾರತ ದೇಶವು ದನಗಳಿಗಾಗಿ ಪ್ರಾಶಸ್ಯ ನೀಡಿದೆ. ನೀಡಲೇಬೇಕು. ಬಸವನನ್ನು (ಎತ್ತನ್ನು) ದೇವರನ್ನಾಗಿ ಪೂಜಿಸುವ ಪರಂಪರೆಯೂ ಇದೆ. ಒಕ್ಕಲಿಗನನ್ನು ಮೇಲಕ್ಕೆತ್ತಿ ನಿಲ್ಲಿಸುವ ಎತ್ತು ಧರ್ಮ ಮೂರುತಿಯೂ ಆಗಿದೆ. ಕೃಷಿಕನಿಗೆ, ಸಾಧು-ಸತ್ಪರುಷರಿಗೆ, ಸತ್ಕಾರ್ಯಗಳಿಗೆ ಅತ್ಯುಪಯುಕ್ತವಾದ ಪ್ರಾಣಿ ಆಕಳು. ಅದರ ಹಾಲು ಭೂಲೋಕದ ಅಮೃತ ಅಂತೆಯೇ ಅನುಭವಿಗಳು ಪಾಲುಂಡು ಮೇಲುಂಬರೆ” ? ಎಂದು ವರ್ಣಿಸಿದ್ದಾರೆ. ಇಂಥ ಅಮೃತ ದೊರೆಯುವದು ಶಿರಹಟ್ಟಿಯಿಂದಲ್ಲವೇ ?

ಶಿವಕವಿ ಚಿತ್ರಿಸಿದ ನಮ್ಮ ಆಕಳು ವಿಚಿತ್ರವಾಗಿದೆ. ಇದಕ್ಕೆ ಕರುವಿಲ್ಲ. ಹಾಲು ಕರೆವ ಮೊಲೆಗಳಿಲ್ಲ. ಆದರೂ ತನ್ನ ಹಾಲು ಕರೆದು ತಾನೇ ಉಂಬುತ್ತಿದೆ. ಅಂದ ಮೇಲೆ ಕರಚೋದ್ಯವಲ್ಲದೆ ಮತ್ತೇನು ? ಆದರೆ ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ” ವೆಂದಿದ್ದಾರೆ ವಚನಕಾರರು. ಇಂಥ ಶರಣರ  ನಾಡಿನಲ್ಲಿ ಮೊಲೆಯಿಲ್ಲದೆಯೂ ಹಾಲು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ.   

ಲೌಕಿಕದಲ್ಲಿ ರಸವನ್ನು ಗ್ರಹಿಸುವ ರಸನೆಯು ಕೇವಲ ಭೌತಿಕ ರಸಗಳನ್ನು ಮಾತ್ರ ಅಸ್ವಾದಿಸುತ್ತದೆ .ಅದರೆ ಕವಿಯ ಅಭಿಪ್ರಾಯ ರಹಸ್ಯವಾಗಿದೆ . ಜಲತತತ್ತ್ವದ ಪಧಾರ್ಥಗಳೆಲ್ಲ ರಸಗಳೆನಿಸುತ್ತವೆ .ಈ ರಸಗಳಿಗಿಂತಲೂ ಭಿನ್ನವಾದ ಎರಡು ರಸಗಳನ್ನು ಅನುಬವಿಗಳು ತಿಳಿಸಿಸ್ಸಾರೆ .ಒಂದು ಕಾವ್ಯತ್ಮಕವಾದ ರಸ ,ಇನ್ನೊಂದು ಬ್ರಹ್ಮಾನಂದ ರಸ; “ರಸೋ ವೈ ಸಃ” ಆ ಪರಬ್ರಹ್ಮ ವಸ್ತುವೂ ರಸ ಸ್ವರೂಪವೆಂದು ಶೃತಿ ಸಾರಿದೆ. ಕಾವ್ಯವಿಮಾಂಸಕರು ಕಾವ್ಯರಸಕ್ಕೆ ಬ್ರಹ್ಮಾನಂದ ಸಹೋದರವೆಂದು ಕರೆದಿದ್ದಾರೆ. ಕಾವ್ಯರಸವು ಪಾಠಕನನ್ನು ತನ್ಮಯತೆಯಲ್ಲಿ ಮುಳುಗಿಸುತ್ತದೆ. ಇದರಂತೆ ಯೋಗಿ ಮತ್ತು ಶಿವಯೋಗಿಗಳು ಸಮಾಧಿ ಸ್ಥಿತಿಯಲ್ಲಿ ಲಿಂಗಾನಂದ ರಸವನ್ನು ಅನುಭವಿಸುತ್ತಾರೆ. ಇವರಿಗೆ ದೊರೆತ ರಸವು ಸಾಕ್ಷಾತ್ ಅಮೃತ ರಸ, ಈ ರಸದ ರುಚಿಯನ್ನೇ ಶಿವಕವಿಯು ರಚಿಸಿದ್ದಾನೆ.

 ಶಿರಹಟ್ಟಿಯೆಂದರೆ ಶಿರಸ್ಸು (ತಲೆ); ಮಸ್ತಕದಲ್ಲಿ ಸಹಸ್ರದಳ ಕಮಲವಿದೆ. ದೊಡ್ಡ ಮಿದುಳು ಮತ್ತು ಸಣ್ಣ ಮಿದುಳು ಕಡಗೋಲಿನ ಮುದ್ದೆಯಂತೆ ಅನಂತನಿರಿಗೆ (ಮಡಿಕೆ)ಗಳಿಂದ ಕೂಡಿದೆಯೆಂಬ ಮಾತನ್ನು ಇಂದಿನ ಶಾರೀರಿಕ ತಜ್ಞರೂ ಒಪ್ಪಿದ್ದಾರೆ. ಅದಕ್ಕಾಗಿ ಇದನ್ನು ಸಾವಿರದಳ ಕಮಲವೆಂದು ಶಾಸ್ತ್ರಕಾರರು ಕರೆದುದು ತರ್ಕಬದ್ಧ ವಾಗಿದೆ. ಮನುಷ್ಯನ ಜ್ಞಾನದ ವ್ಯವಹಾರವೆಲ್ಲ ಇಲ್ಲಿಂದಲೇ ನಡೆಯುತ್ತದೆ. ಶಿವಯೋಗದಲ್ಲಿ ಬಲ್ಲಿದನಾದ ಸದ್ಗುರುವು ಶಿಷ್ಯನ ಈ ಪಶ್ಚಿಮ ಶಿಖಾಚಕ್ರ ಮಧ್ಯದ ಮಹಾ ಚೈತನ್ಯವನ್ನು ಹೊರತೆಗೆದು ಅಂಗೈಯಲ್ಲಿ ಲಿಂಗವನ್ನಾಗಿ ಕರುಣಿಸುತ್ತಾನೆ. ಶಿರಸ್ಸಿನಲ್ಲಿ ಒಟ್ಟು ಮೂರು ಚಕ್ರಗಳನ್ನು ಕಂಡು ಹಿಡಿದಿದ್ದಾರೆ. ನಡುದಲೆಯಲ್ಲಿ ಬ್ರಹ್ಮ ಅಥವಾ ಸಹಸ್ರಚಕ್ರವೆಂದೂ ಮಸ್ತಕಾಗ್ರದಲ್ಲಿ ಶಿಖಾಚಕ್ರವೆಂದೂ, ತಲೆಯ ಹಿಂಭಾಗದಲ್ಲಿ  ಪಶ್ಚಿಮಚಕ್ರವೆಂದೂ ಗುರುತಿಸಿದ್ದಾರೆ. ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ನವಕಲ್ಯಾಣ ಮಠದ ಶ್ರೀಗಳವರು (ಪುಟ ೩೧ರಲ್ಲಿ) ಸಹಸ್ರಾರದಲ್ಲಿ ಅಮೃತಲಿಂಗವಿಹುದು. ಯೋಗಿಯು ಅದನ್ನು ಲಕ್ಷಿಸಿ ಅಮೃತರಸ ಪಾನಮಾಡಿ ಜನನ-ಮರಣಗಳನ್ನು ನೀಗುವನು. ಎಂದು ತಿಳಿಸಿದ್ದಾರೆ. ಅಲ್ಲಮಪ್ರಭುದೇವರು

  “ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲೆ ಸಹಸ್ರದಳ ಪದ್ಮ

 ಅಲ್ಲಿ ಅಮೃತವಿಹುದು.

. ಅಲ್ಲಿ ಓಂಕಾರ ಸ್ವರೂಪನಾಗಿ ಗುಹೇಶ್ವರ ಲಿಂಗವು ಸದಾ ಸನ್ನಿಹಿತನು”

ಎಂದು ಅಪ್ಪಣೆ ಮಾಡಿರುವರು

 ಆಧುನಿಕ ಶರೀರ ವಿಜ್ಞಾನಿಗಳು ತಲೆಬುರುಡೆಯನ್ನು ಎರಡು ಭಾಗಗಳಲ್ಲಿ ವಿಭಾಗಿಸುತ್ತಾರೆ. ಮುಂಭಾಗದಲ್ಲಿ “ ಪಿಟ್ಯುಟರಿ ಗ್ರಂಥಿʼ’ಯೆಂದೂ ಹಿಂಭಾಗದಲ್ಲಿ “ಪೀನಿಯಲ್‌ಗ್ರಂಥಿ”ಯೆಂತಲೂ ಪರಿಶೋಧಿಸಿದ್ದಾರೆ. ಈ ಪೀನಿಯಲ್ ಗ್ರಂಥಿಯು

ಒಂದು ಸಣ್ಣ ಉದ್ದಿನ ಬೇಳೆಯಷ್ಟು ಎಂದರೆ ಇಂಚಿನ ಎಂಟನೆಯ ಒಂದು ಭಾಗದಷ್ಟಿದ್ದು ನೆರೆ ಬಣ್ಣದ್ದಿರುತ್ತದೆ. ‘ಪಿಟ್ಯುಟರಿ’ ಗ್ರಂಥಿಯು ಮಾಗಿದ ಒಂದು ಸಣ್ಣ ಕವಳೆಹಣ್ಣಿನ ಗಾತ್ರದ್ದಿದ್ದು ಮಿದುಳಿಗೆ ಜೋಡಿಸಲ್ಪಟ್ಟಿರುತ್ತದೆ. ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಗಳಲ್ಲಿ ಹುದುಗಿರುವ ಸಾಮರ್ಥ್ಯದ ವಿಕಾಸದ ಮುಖಾಂತರವಾಗಿ ಹೊಸ ಹೊಸ ಮತ್ತು ಅತಿ ಉಚ್ಚವಾದ ಜ್ಞಾನವು ಎಂದರೆ ಸ್ವಯಂ ಪ್ರಭೋಧವು, ಸ್ವಾನುಭಾವವು ಒಡಮೂಡುವದೆಂದು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುತ್ತಿದೆ” (ಶಿವಯೋಗ ರಹಸ್ಯದ ೪-೫ ಪುಟ) ಇಂಥ ಸಣ್ಣ ಮೆದುಳಿಗೆ ಆಕಸ್ಮಿಕವಾಗಿ ಪೆಟ್ಟು ಬಿದ್ದರೆ ಜ್ಞಾನ ಶೂನ್ಯವಾಗುವದು. ಇದು ಸಕಲರಿಗೂ ಅನುಭವ ಗಮ್ಯವಾಗಿದೆ.

ಸಣ್ಣ ಮೆದುಳಿಗೆ ಎಲ್ಲ ಜ್ಞಾನತಂತುಗಳು ಜೋಡಿಸಲ್ಪಟ್ಟಿರುತ್ತವೆ. ಈ ಜ್ಞಾನ ತಂತು (ನಾಡಿ)ಗಳೆಂಬ ಆಕಳುಗಳನ್ನು ಕಟ್ಟಿದ (ಹಟ್ಟಿ ಕೇಂದ್ರ) ಸ್ಥಾನ ಸಹಸ್ರಾರ ಅಥವಾ ಸಹಸ್ರದಳಕಮಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಯೌಗಿಕ ವಿಚಾರವೆಂದರೆ ಶರೀರದಲ್ಲಿ ಕುಂಡಲಿನೀ ಶಕ್ತಿಯಿರುತ್ತದೆ. ಇದು* ಬೆನ್ನು ಹುರಿಯ ಕೆಳಗಿನ ತುದಿಯಲ್ಲಿ ಸುಪ್ತವಾಗಿ ಸುರುಳಿಯಾಗಿ  ಅವಿತುಕೊಂಡಿರುತ್ತದೆ. ಈ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿದರೆ ನವಚೈತನ್ಯವು ಸ್ಪುರಿಸುವದು. ಜಾಗ್ರತವಾದ ಕುಂಡಲಿನೀ ಶಕ್ತಿಯು ಮೇರುದಂಡದ ಅಥವಾ ಬೆನ್ನು ಹುರಿಯ ಮುಖಾಂತರವಾಗಿ ಮಾರ್ಗಕ್ರಮಣ ಮಾಡಿ ಎರಡು ಹುಬ್ಬುಗಳ ನಡುವಿನ ಅಜ್ಞಾ ಚಕ್ರಕ್ಕೆ ಬಂದು ನಿಲ್ಲುವದು. ಇದಕ್ಕೇನೇ ಕುಂಡಲಿನೀ ಶಕ್ತಿಯ ಊರ್ಧ್ವಗಮನವೆನ್ನುವರು.” ಅದಕ್ಕೆ  ಉನ್ಮನವೆಂತಲೂ ಇನ್ನೊಂದು ಹೆಸರು. ಇಂಥ ಕುಂಡಲಿನಿಯೇ ಇಲ್ಲಿಯ ಗೋವು. ಇದಕ್ಕೆ ಅದಾವ ಕರುವಿಲ್ಲ. ಕರೆವ ಮೊಲೆಯೂ ಇಲ್ಲ. ಆದರೂ ಸಹಸ್ರಾರದಲ್ಲಿ ಅಮೃತ ಬಿಂದುವನ್ನು ಸುರಿಸುವದು. ಅಂದರೆ ಅಂಗನು ಲಿಂಗದ ಶಕ್ತಿಯನ್ನರಿತು ದೃಷ್ಟಿಯೋಗದಿಂದ ಸಮರಸದ ಕೂಟದಲ್ಲಿ ಆನಂದಭರಿತನಾಗುವನು.

 ಇಂಥ ಅಮೃತವನ್ನು ಸವಿಯುವದು ಸಾಮಾನ್ಯವಾದ ಮಾತಲ್ಲ. ಅಲ್ಪರ  ಶಕ್ತಿಯೂ ಅಲ್ಲ. ಇದು ಸಕಲರಿಗೆ ಸಾಧ್ಯವಾಗುವದೂ ಇಲ್ಲ. ಅಂದಮೇಲೆ ಆಶ್ಚರ್ಯ ವಲ್ಲದೆ ಮತ್ತೇನು ? ಸಹಸ್ರಾರದ ಸವಿಯನ್ನು ಸವಿಯಬಲ್ಲವನು ಐಕ್ಯಾಂಗನು. ಶರಣಸತಿಯು ಮಹಾಲಿಂಗಪತಿಯ ಸಮರಸದಲ್ಲಿ ಐಕ್ಯನಾಗಿ ನಿತ್ಯಮುಕ್ತನಾಗುವನು.

ಮುಂಡರಗಿಯ ಮೂಲಕರ್ತೃಗಳಾದ ಅನ್ನದಾನೀಶ್ವರರು ಹಾಗೂ ಎಡೆಯೂರ ತೋಂಟದ ಸಿದ್ಧಲಿಂಗರು ಸಹಸ್ರಾರದ ಸವಿಯನ್ನು ಸವಿದು ಅನಂತಕಾಲ ತಪಗೈದ ಉದಾಹರಣೆಗಳಿವೆ.

 ಸದ್ಗುರು ಕರುಣೆಯಿಂದ ಶಿವಲಿಂಗವನ್ನು ಪಡೆದು ‘ಕರಣ ಹಸಿಗೆ’ಯನ್ನು ಅರಿತು ಕುಂಡಿಲಿನಿ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಹಸ್ರದಳ ಪದ್ಮದ ಮಹಾಲಿಂಗವನ್ನು ಕಂಡು ಅಕ್ಷಯವಾದ ಅಮೃತರಸವನ್ನು ಸವಿಯುವದು  (ಜೀವಾತ್ಮನ) ಸದ್ಭಕ್ತನ ಪರಮ ಕರ್ತವ್ಯವಾಗಿದೆ. ಇದೆಲ್ಲವೂ ಗುರುಕೃಪೆಯಿಲ್ಲದೆ ಆಗದು. ಓ ಗುರುವೆ ! ಅಂಥ ಅಮೃತವನ್ನು ಸವಿಯುವ ಸೌಭಾಗ್ಯವನ್ನು ಅನುಗ್ರಹಿಸಿ ಸಲಹು.

*

೫. ಫ್ರಾಣೇಂದ್ರಿಯ – ಗಂಧವಿಷಯ

ಪಂಪಾಕ್ಷೇತ್ರದೊಳೊಂದು | ಸಂಪಿಗೆಯ ನನೆಯುಂಟು

ಕಂಪುಂಟು ಗಾಳಿ ತಂಪುಂಟೊಳಗಿಂಚಿನ**

ಗುಂಪುಂಟು ಗುರುವೆ ಕೃಪೆಯಾಗು   II ೭೦ II

 ಪಂಚಜ್ಞಾನೇಂದ್ರಿಯದ ಪಂಚವಿಷಯಗಳಲ್ಲಿ ಕೊನೆಯದು ಗಂಧತತ್ತ್ವ; ಗ೦ಧವಿಷಯ. ಗಂಧವನ್ನು ಗ್ರಹಿಸುವ ಇಂದ್ರಿಯ ನಾಶಿಕ. ಇದಕ್ಕೆ ಪೃಥ್ವಿಯೇ ಮಹಾಭೂತ. ಅಶ್ವಿನಿ ಅಧಿದೇವತೆ ; ಅಲ್ಲಿ ಗಂಧವಿಷಯವು ಸುಗಂಧ, ದುರ್ಗಂಧ ವೆಂದು ಇಬ್ಬಗೆಯಾಗುತ್ತದೆ.

ಶಿವಕವಿಯು ಪ್ರತಿಯೊಂದು ವಿಷಯವನ್ನು ಚಮತ್ಕಾರಿಕ ರೀತಿಯಲ್ಲಿ ಪ್ರತಿಪಾದಿಸಿದಂತೆ ; ಇಲ್ಲಿ ತನ್ನ ಶಿವಕ್ಷೇತ್ರ ದರ್ಶನದ ಪರಿಚಯವನ್ನು ಮಾಡಿಸುತ್ತ ಗಂಧ ವಿಷಯವನ್ನು ಮತ್ತು ಘ್ರಾಣೇಂದ್ರಿಯದ ತತ್ತ್ವವನ್ನು ಬಿತ್ತರಿಸಿದ್ದಾನೆ. *

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಸಿದ್ಧವಾದುದು ಪಂಪಾಕ್ಷೇತ್ರ. ಅಲ್ಲಿ ವಿರೂಪಾಕ್ಷನ ದರ್ಶನ, ಆ ಕ್ಷೇತ್ರದಲ್ಲಿ ಪಂಪಾಸರೋವರ, ಉದ್ಯಾನಗಳು ಎದ್ದು ಕಾಣುತ್ತಿವೆ. ಇದು ರಾಜನಿರ್ಮಿತ ಮತ್ತು ರಾಜರಕ್ಷಿತವಾದ ಮೇಲೆ ಕೇಳಬೇಕೇನು ? ಇದರ ವರ್ಣನೆಯನ್ನು ಅಷ್ಟಭಾಷಾ ಕವಿಯೆನಿಸಿದ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನೆಯ ಚಂಪೂ ಕಾವ್ಯವನ್ನು ಓದಿಯೇ ಆನಂದಪಡಬೇಕು. ಹಂಪೆಯ ಕ್ಷೇತ್ರದಲ್ಲಿರುವದು ಪಂಪಾಸರೋವರ. ಅದರ ಸುತ್ತಲಿನ ವನದಲ್ಲಿ  ಸಂಪಿಗೆಯ ಮರಗಳ ಸಮೂಹ. ಅವುಗಳ ಸಂಪಿಗೆ ಪುಷ್ಪದ ಮಕರಂದ ಸುತ್ತಲೂ ಪಸರಿಸಿದೆ. ಆ ಸುಗಂಧವು ಗಾಳಿಯನ್ನಾವರಿಸಿ ಸರೋವರದ ತಂಪಿನೊಡನೆ, ಗಿಳಿ ವಿಂಡುಗಳ ಇಂಚರದೊಡನೆ ಸಮರಸವಾಗಿ ಕಂಪನ್ನು ಬೀರುತ್ತಿದೆ..  ವಿರೂಪಾಕ್ಷೇಶ್ವರನ ದರ್ಶನ ಮಾಡಿಕೊಳ್ಳುವವರಿಗೆ ಆ ಕಂಪು ತನ್ಮಯತೆಯನ್ನು ಹುಟ್ಟಿಸುತ್ತದೆ. ಸಂಪಿಗೆಯ ಪುಷ್ಪವು ಬಲುಸುಗಂಧ. ಅದು ಮೊಗ್ಗಾದಾಗಿನಿಂದ ಮಾಗುವವರೆಗೆ ತನ್ನ ಸೌಗಂಧವನ್ನು ಸೂಸುತ್ತದೆ. ಕನ್ನಡಾಂಬೆಯ ಸಿರಿಮುಡಿಗೆ ಸಂಪಿಗೆಯ ಸುಗಂಧ ಸೌಂದರ್ಯವನ್ನೀಯುತ್ತ ಬಂದಿದೆ. ಇದೆಲ್ಲವೂ ಬಾಹ್ಯ ಸೌಗಂಧದ ಪರಿ.

 ಇನ್ನು ಅಂತರಂಗದ ಸುಗಂಧದ ಸೌರಭ ಹೀಗಿದೆ. ಪಂಪಾಕ್ಷೇತ್ರವೆಂದರೆ ಶರೀರ. ಈ ಕ್ಷೇತ್ರದಲ್ಲಿರುವ ಮಹಾಚೈತನ್ಯವೇ ಪಂಪಾಪತಿ ವಿರೂಪಾಕ್ಷ. ಇಲ್ಲಿರುವ ಸರೋವರ ಸದ್ಗುರುವಿನ ಕಾರುಣ್ಯರಸರೂಪಾದುದು. ಈ ಕಾರುಣ್ಯರಸದ ಸರಸ್ಸಿನ ಪರಿಸರದಲ್ಲಿರುವ ವನವೇ ಜ್ಞಾನೇಂದ್ರಿಯಗಳ ಗುಂಪು. ಅದರಲ್ಲಿ ಸಂಪಿಗೆಯ ಮೊಗ್ಗಿನಂತಿರುವದು ಘ್ರಾಣೇಂದ್ರಿಯವು. ಇದು ಗಂಧಗ್ರಾಹಕವಾಗಿರುವದರಿಂದ ಸಂಪಿಗೆಯ  ಸಾದೃಶ್ಯವನ್ನು ಹೊಂದಿದೆ. ನಾಶಿಕವು ಪೃಥ್ವಿಯ ತತ್ತ್ವದಿಂದಾದ ಕಾರಣ ಭಕ್ತಾಂಗವೆನಿಸುವದು. ಭಕ್ತನು ನಡೆದು  (ಆಚರಿಸಿ)ತೋರುವ ಸದಾಚಾರವೇ ಸುಗಂಧದ ಕಂಪು. ಮೂಗಿನಲ್ಲಿ ಚಂದ್ರನಾಡಿಯಿರುವದರಿಂದ ತಂಪೂ ಇದೆ. ಈ ದೇಹ ಕ್ಷೇತ್ರವಾದ ಮೇಲೆ ಪಂಚಾಚಾರಗಳ ಕಂಪೂ ಹಬ್ಬಿ ಶಿವನ ಸಾಕ್ಷಾತ್ಕಾರಕ್ಕೆ ಕಾರಣವಾಗುವದು.’’ ಎನ್ನ ಸದ್ಗುಣ ಗಂಧ’’ವೆಂದು ಮುಪ್ಪಿನಾರ್ಯರು ಹಾಡಿದ್ದು ಅರ್ಥಪೂರ್ಣವಾಗಿದೆ. ಇಲ್ಲಿ ‘ಗಿಂಚಿನ ಪದಕ್ಕಿಂತಲೂ ‘ಗಿಂಪಿನ’ ಪದ ಶೋಭಾಯ ಮಾನವೂ ಸಮಂಜಸವೂ ಆಗುವದು.

ವೀರಶೈವರ ಷಟ್‌ಸ್ಥಲ ಸಿದ್ಧಾಂತದಲ್ಲಿ ಶಿವಜ್ಞಾನ ಶಿವಕ್ರಿಯೆಗಳ ಸಮನ್ವಯವಿದೆ. ಇದಕ್ಕೆ ಜ್ಞಾನ ಕ್ರಿಯೆಗಳ ಸಮ-ಸಮುಚ್ಛಯ ತತ್ತ್ವವೆಂತಲೂ ಕರೆಯುವರು. ವೀರಶೈವನಿಗೆ ಅಷ್ಟಾವರಣವೇ ಅಂಗವಾದರೆ ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮವಾಗಿವೆ. ಈ ಅಷ್ಟಾವರಣಾಂಗನು ಪಂಚಾಚಾರಗಳನ್ನು ಪ್ರಾಣವನ್ನಾಗಿಸಿದರೇನೇ ಆತ್ಮನ ಸಂದರ್ಶನವಾಗುವದು. ಮೊದಲು ಆಚಾರ ಅಳವಡಬೇಕು. ಕ್ರಿಯೆ ನಡೆಯಲ್ಲಿ ಬರಬೇಕು. ಅನುಭಾವಿಗಳು –

ಆಚಾರಃ ಪರಮೋ ಧರ್ಮ: ಆಚಾರಃ ಪರಮಂ ತಪಃ ।

ಆಚಾರವೇ ಶ್ರೇಷ್ಠ ಧರ್ಮ ಹಾಗೂ ತಪಸ್ಸೆಂದು ಪ್ರತಿಪಾದಿಸಿದ್ದಾರೆ. ಪಂಚಾಚಾರದ ಸ್ವರೂಪವನ್ನು, ಮತ್ತು ಅದರ ಮಹತ್ವವನ್ನು ಚನ್ನಬಸವಣ್ಣನವರು~

ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ

ನೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ;

ಲಿಂಗವನಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ,

ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗ ಜಂಗಮಕ್ಕೆ ನೀಡಿ

ಸತ್ಯ-ಶುದ್ಧನಾಗಿಹುದೆ ಸದಾಚಾರ,

ಶಿವಭಕ್ತರಲ್ಲಿ ಕುಲಗೋತ್ರ ಜಾತಿವರ್ಣಾಶ್ರಮವನರಸದೆ

ಅವರೊಕ್ಕುದ ಕೊಂಬುದೆ ಶಿವಾಚಾರ

ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ

ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ

ಭಕ್ತಿಯಿಂದ ಆಚರಿಸುವದೆ ಭೃತ್ಯಾಚಾರ

ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ

ಪ್ರಭುವೇ ! ಕೂಡಲ ಚನ್ನಸಂಗಮದೇವಾ’ (೧೧೫೯)

ಇದಕ್ಕೂ ಸ್ಪಷ್ಟವಾದ ರೀತಿಯಲ್ಲಿ – ಮತ್ತೊಂದು ವಚನ.

ಅಯ್ಯಾ ! ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ

ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ

ಭಕ್ತನಾದಡೆ ಸತ್ಯ ಶುದ್ಧ ಕಾಯಕವ ಮಾಡಿ,

ಮಾಹೇಶನಾದಡೆ ಸತ್ಯ ಶುದ್ಧ ಭಿಕ್ಷವ ಬೇಡಿ

ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು

ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರ ವೆಂಬೆನಯ್ಯಾ

ಗುರು-ಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ,

ಪರಶಿವಲಿಂಗವೆಂದು ಭಾವಿಸಿ,

ಅರ್ಥಪ್ರಾಣಾಭಿಮಾನವನರ್ಪಿಸುವುದೆ ಶಿವಚಾರವೆಂಬೆನಯ್ಯಾ

ಅಷ್ಟಾವರಣಂಗಳ ಮೇಲೆ ಅನ್ಯರಿಂದ ಕುಂದು-ನಿಂದೆಗಳು

ಬಂದು ತಟ್ಟದಲ್ಲಿ ಗಣಸಮೂಹವನೊಡಗೂಡಿ

ಆ ಸ್ಥಲವ ತ್ಯಜಿಸುವದೆ ‘ಗಣಾಚಾರ’ವೆಂಬೆನಯ್ಯ

…………ಷಟ್‌ಸ್ಥಲ ಮಾರ್ಗದಲ್ಲಿ ನಿಂದ

ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ,

ಅವರಿದ್ದ ಸ್ಥಳಕ್ಕೆ ಹೋಗಿ, ತನು-ಮನ-ಧನಂಗಳ ಸಮರ್ಪಿಸಿ

ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ

ಪ್ರತ್ಯುತ್ತರವ ಕೊಡದಿರ್ಪುದೆ ‘ಭೃತ್ಯಾಚಾರ’ವೆಂಬೆನಯ್ಯಾ?

ಎಂದು ಪಂಚಾಚಾರದ ಸೂಕ್ಷ್ಮತೆಯನ್ನು ಸಾರಿದ್ದಾರೆ. ಇಂತಹ ಪ್ರಾಣಸ್ವರೂಪವಾದ ಪಂಚಾಚಾರಗಳನ್ನು ಅಳವಡಿಸಿಕೊಳ್ಳುವದೇ ಭಕ್ತತನದ ಪರಮ ಸೌಗಂಧ ಎನಿಸುವದು.

ಲಿಂಗಾಚಾರದಿಂ ತನುಶುದ್ಧವಾಗಿತ್ತು ನೋಡಾ !

ಸದಾಚಾರದಿಂ ಮನಶುದ್ದವಾಯಿತ್ತು ನೋಡಾ

ಶಿವಚಾರದಿಂ ಧನಶುದ್ಧವಾಯಿತ್ತು ನೋಡಾ |

ಗಣಾಚಾರದಿಂ ನಡೆ ಶುದ್ಧವಾಗಿತ್ತು ನೋಡಾ !

ಭೃತ್ಯಾಚಾರದಿಂ ನುಡಿ ಶುದ್ಧವಾಯಿತ್ತು ನೋಡಾ !

ಪಂಚಾಚಾರಗಳಿಂದ ಜೀವನು ಶಿವನಾಗುವನು ನೋಡಾ !

ಮೃಡಗಿರಿಯ ಅನ್ನದಾನೀಶ (ಸ.ವ.ಸಂ. ೪೨೦)

ಪಂಚಾಚಾರಗಳಿಂದ ತನು-ಮನ-ಧನ-ನಡೆ-ನುಡಿಗಳು ಶುದ್ಧವಾಗಿ ಶಿವನಾಗು ವದರಲ್ಲಿ ಸಂದೇಹವಿಲ್ಲ. ಪುಷ್ಪಪರಿಮಳ ಅಭಿನ್ನವಾಗಿರುವಂತೆ ಅಂಗಲಿಂಗಗಳ ಸಮರಸವಾಗುವದು. ಸದ್ಗುಣಾಚಾರದ ಸೌಗಂಧ ಎಲ್ಲೆಡೆಯೂ ಪಸರಿಸಬಲ್ಲುದು.

ಪೃಥ್ವಿಯು ಪಂಚತನ್ಮಾತ್ರೆಗಳಿಂದ ಕೂಡಿದ್ದರೂ ಗಂಧ ಪ್ರಧಾನವಾಗಿದೆ. ಗಂಧವಿಲ್ಲದ ವಸ್ತು ನಿರರ್ಥಕ. ಪ್ರತಿಯೊಂದಂಶದಲ್ಲಿಯೂ ತನ್ನದೇ ಆದ ಗಂಧವಿರುತ್ತದೆ. ಗಂಧವಿರಹಿತವಾದರೆ ಆ ವಸ್ತುವಿಗೆ ಬೆಲೆಯಿಲ್ಲದಾಗುವದು. ಮತ್ತು ಗಂಧ ವಿಕೃತವಾದರೂ ಸರಿಯಲ್ಲ. ಗಂಧ ಪದಾರ್ಥವು ಜೀವನಕ್ಕೆ ಅತ್ಯವಶ್ಯಕವಾಗಿದೆ. ಪೂಜೆಯ ಸಾಮಗ್ರಿಯಲ್ಲಿ ಗಂಧವೂ  ಒಂದು.

“ಸುಗಂಧಂ ಪುಷ್ಟಿ ವರ್ಧನಮ್

ಸುಗಂಧವು ಶರೀರಕ್ಕೆ ಪುಷ್ಟಿಯನ್ನು, ತುಷ್ಟಿಯನ್ನು ಕೊಡುತ್ತದೆ. ಈ ಗಂಧವು

ಸೌಮ್ಯವಾಗಿರಬೇಕು. ಅದರಲ್ಲಿ ತೀವ್ರತೆಯಿರಬಾರದು. ಪ್ರಾಕೃತಿಕ ಗಂಧವು ಪ್ರಕೃತಿಗೆ ಹಿತಕರವಾಗುತ್ತದೆ. ಕೃತ್ರಿಮ ಗಂಧದಿಂದ ವಿಕಾರ ಬೆಳೆಯುತ್ತದೆ. ಇದರಿಂದ ನಾಶಿಕಕ್ಕೂ ಕುಂದು. ಅತಿಸುಗಂಧವನ್ನು ವಾಸಿಸುವ ಘ್ರಾಣವು ತನ್ನ ಶಕ್ತಿಯನ್ನು ಕಳೆದುಕೊಳ್ಳುವದು. ಮೋಹಕಗಂಧವು ಜೀವನವನ್ನೇ ಕೆಡಿಸುತ್ತದೆ.

“ಘ್ರಾಣೇಂದ್ರಿಯ ವಿಷಯದಿಂದ ಭ್ರಮರ ಕೆಡುವದು

ಸಂಪಿಗೆಯ ಪುಷ್ಪದಲ್ಲಿ

ಸಂಪಿಗೆಯ ಸೌಗಂಧವನ್ನು ಮೋಹಿಸಿ ಭ್ರಮರವು ಕಷ್ಟಕ್ಕೀಡಾಗುತ್ತದೆಂದು ಷಣ್ಮುಖ ಶಿವಯೋಗಿಗಳು ಉಪದೇಶಿಸಿದ್ದಾರೆ. ಗಂಧ ಸುಗಂಧವಾಗಬೇಕೇ ವಿನಾ ಅತಿಗಂಧ ವಾಗಲಿ, ದುರ್ಗಂಧವಾಗಲಿ ಆಗಬಾರದು. ಮೋಹಕ ಗಂಧವನ್ನು ವಾಸಿಸುವ ನಾಶಿಕಕ್ಕೆ ನೆಗಡಿಯಾಗಲೆಂದು ಷಡಕ್ಷರಿಗಳು ಮಾರ್ಮಿಕವಾಗಿ ಹಾಡಿದ್ದಾರೆ.

ಅಂಗನೆಯರು ತೊಡೆದು ಸೂಡಿ

ದಂಗಪುಷ್ಪ ವಾಸಿಸುವೊಡೆ

ಹಿಂಗದೆನ್ನ ನಾಸಪುಟಕೆ ನೆಗಡಿಯಾಗಲಿ |

ಮಂಗಳಾತ್ಮ ಷಡಕ್ಷರಿಯ

ಲಿಂಗದಂಘ್ರಿಗಿತ್ತ ಕುಸುಮ

ಹಾಂಗೆ ವಾಸಿಸುವರೆ ಘ್ರಾಣವಿಕಸವಾಗಲೆ

ಅಂಗನೆಯರು ಪೂಸಿಕೊಂಡ ಗಂಧದಿಂದ ವಿಕಾರವಾದರೆ ಮಂಗಳಾತ್ಮಕ ಮಹಾಲಿಂಗಕ್ಕರ್ಪಿಸಿದ ಪುಷ್ಪ ಪರಿಮಳವು ಜೀವನ ವಿಕಾಸಕ್ಕೆ ಕಾರಣವೆಂಬುದನ್ನು ಅರಿಯಬೇಕು. ಮೋಹಕ ಗಂಧವನ್ನು ಮೋಹಿಸುವ ನಾಸಿಕದ ಕ್ರಿಯೆಯನ್ನು ಶಿವನತ್ತ ತಿರುಗಿಸಬೇಕು ನಾಶಿಕದಲ್ಲಿ ಆಚಾರಲಿಂಗವಿರುವದರಿಂದ  ಸದ್ಭಾವನೆಯಿಂದ ಸದಾಚಾರದಲ್ಲಿ ಗಂಧವನ್ನು ಸುಗಂಧ ಪ್ರಸಾದವಾಗಿ ಸ್ವೀಕರಿಸುವದನ್ನು ಕಲಿತರೆ ತುಷ್ಟಿ-ಪುಷ್ಟಿಗಳೆರಡೂ ಲಭಿಸುತ್ತವೆ. ಓ ಗುರುವೆ ! ಇಂಥ ಗಂಧದ ಕಂಪನ್ನು ಸ್ವೀಕರಿಸಿ ಆನಂದಿಸುವ ಅನುವನ್ನು ನೀಡು

• ಬಿ. ಶಿವಮೂರ್ತಿ ಶಾಸ್ತ್ರಿ

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)

• ಪಂಡಿತ ನಾಗಭೂಷಣ ಶಾಸ್ತ್ರಿಗಳು

ಭಾರತ ದೇಶದ ಅದರಲ್ಲಿಯೂ ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಅನಾದಿ ಕಾಲದಿಂದಲೂ ಅಸಂಖ್ಯ ಮಹಾಪುರುಷರು ಮೇಲಿಂದ ಮೇಲೆ ಜನ್ಮವೆತ್ತುತ್ತಲೇ ಬಂದಿರುವರೆಂಬ ಬಗೆಗೆ ಪ್ರಾಜ್ಞಭಾರತೀಯರಿಗೆಲ್ಲ ವಿದಿತವಾದ ಸಂಗತಿಯೇ ಆಗಿದೆ. ಶಾಂತಸ್ವಭಾವದ ಆ ಮಹಾಪುರುಷರೆಲ್ಲರೂ ವಸಂತಮಾಸದಂತೆ ಲೋಕ ಹಿತವನ್ನು ಸಾಧಿಸುವಲ್ಲಿಯೇ ತಮ್ಮ  ಕೃತಕೃತ್ಯತೆಯನ್ನು ಕಂಡುಕೊಳ್ಳುವಂತಹ ನಿರ್ಮಲ ಹೃದಯದವರು. ಆತ್ಮವಿಸ್ಮೃತಿ ರೂಪ ಮರಣವನ್ನು ಹೊಂದಿದ ಜನಾಂಗದಲ್ಲಿ ಆತ್ಮ ಸಂಸ್ಕೃತಿರೂಪ ಜೀವ ಕಳೆಯನ್ನು ತುಂಬುವ ಮಹಾ ಕಾರ್ಯವು ಮಹಾಪುರುಷೇತರರಿಂದ ಎಂದೆಂದೂ ಸಾಧ್ಯವಾದದ್ದು. ಅವಿಚಾರದ ತಮಸ್ಸು ಮುಸುಕಿದ ಜನಾಂಗದ ಹೃದಯ ಪದ್ಯದಲ್ಲಿ ಸುವಿಚಾರದ ನಂದಾದೀಪವನ್ನು ಹಚ್ಚಿ ಬೆಳಗುವ ಪ್ರಯತ್ನ ಮಾಡುವ ಮಹಾಪುರುಷರ ಜೀವನ ಚರಿತ್ರೆಗಳು ಭಾರತೀಯ ಧಾರ್ಮಿಕೇತಿಹಾಸಗಳಲ್ಲಿ ತುಂಬ ಕಂಡು  ಬರುವವು. ನಿಜವಾಗಿಯೂ ಇಂತಹ ಮಹಾಪುರುಷರ ಇತಿಹಾಸಗಳೇ ಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯ ಹೆಚ್ಚಳವನ್ನು ನಿಚ್ಚಳವಾಗಿ ತೋರಿಸಿಕೊಡುವವು. ನಡೆಶುಚಿ, ನುಡಿಶುಚಿ, ಮನಶುಚಿ, ತನುಶುಚಿ, ಭಾವಶುಚಿ ಈ  ಪಂಚಶುಚಿಗಳನ್ನೊಳಗೊಂಡ ಮಹಾತ್ಮರಲ್ಲಿ ಕಂಡು ಬರುವ ಸಂಪತ್ತೆಂದರೆ ಪಾವಿತ್ರ್ಯ, ಪ್ರೇಮ, ತ್ಯಾಗ ಇಂಥವರ ಬಗೆಗೆ ಧಾರ್ಮಿಕ ಜನತೆ  ಇಟ್ಟುಕೊಂಡ ಪ್ರೇಮಾಭಿಮಾನ ಗೌರವಗಳು ಅಸದೃಶವಾದವು. ಕೇವಲ ಜಡಸಂಪತ್ತಿನ ವ್ಯಾಮೊಹದಲ್ಲಿ ಮಗ್ನರಾಗಿದ್ದ ಮಹಾ ಮಹಾ ಚಕ್ರವರ್ತಿಗಳ ಪಲ್ಲಕ್ಕಿಗಳನ್ನು ಹೊರುವ ಪ್ರಸಂಗ ಬಂದಾಗ ಪೂರ್ಣ ಹಿಂಜರಿಯುತ್ತಿದ್ದ ವ್ಯಕ್ತಿಗಳು ಸತ್ಪುರುಷರನ್ನು ಪಲ್ಲಕಿಯಲ್ಲಿ ಕೂಡ್ರಿಸಿ ಹೊತ್ತು ನಡೆಯುವ ಪ್ರಸಂಗವೊದಗಿ ಬಂದಾಗ ಅಹೋಭಾಗ್ಯವೆಂದು ಭಾವಿಸುತ್ತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಧಾವಿಸಿ ಬರುವ ದೃಶ್ಯವು ಅಚ್ಚರಿಯದೇನಲ್ಲ. ನಿಜವಾದ ಧಾರ್ಮಿಕ ಪ್ರಜ್ಞೆಯನ್ನು ಕಳಕೊಂಡು ಅಪಮಾರ್ಗದಲ್ಲಿ ಸಾಗಿ ತೀರ ಅವನತಿಯನ್ನು ಹೊಂದುತ್ತಿದ್ದ ವ್ಯಕ್ತಿಗಳನ್ನು ಕಣ್ಣಾರೆ ಕಂಡ ಮಹಾಪುರುಷರು ಸುಮ್ಮನೆ ಕಣ್ಣು ಬಡಿಯುತ್ತ ಕುಳಿತುಕೊಳ್ಳಲು ಎಂದೂ ಮನಸ್ಸು ಮಾಡರು. ಅವರ ನಿಜವಾದ  ಪೂಜೆಯೆಂಬುದು ಪರಹಿತಕಾರ್ಯವೇ ಆಗುವದು.

ಸಂತೋಷಂ ಜನಯೆತ್ ಪ್ರಾಜ್ಞಸ್ಥದೇವೇಶ್ವರ ಪೂಜನಂ ।

ಸಕರ್ಮಣಾ ತಮಭ್ಯರ್ಚ್ಯ ಸಿದ್ದಿಂ ವಿಂದತಿ ಮಾನವಃ

ಇವೇ ಮೊದಲಾದ ಸೂಕ್ತಿಗಳು ಸತ್ಪುರುಷರ ನೈಜ ಜೀವನದ ಪರಿಚಾಯಕವಾಗಿರುವವು.

ಇಂತಹ ಮಹಾಪುರುಷರ ಪಂಕ್ತಿಯಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸರ್ವಾತ್ಮನಾ ಪಡೆದುಕೊಂಡವರು. ಇವರು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಅನಾದಿ ಸಂಸಿದ್ಧವಾದ ವೀರಶೈವ ಧರ್ಮದ ಪುನರುತ್ಥಾನ ಮಹಾಕಾರ್ಯವು ನಡೆಯಬೇಕಾದಾಗ ಸಮರ್ಥ ಕಾರಣಿಕ ಮಹಾಪುರುಷ ರೂಪದಲ್ಲಿ ಕಾಣಿಸಿಕೊಂಡರು.

ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ನಡಬಿಗಿದು ನಿಂತುಕೊಂಡದ್ದಷ್ಟೇ ತಡ ಸಮಾಜದ ನಾಡಿನ ಜನರೆಲ್ಲರೂ ಶಿವಯೋಗಿಗಳಿಗೆ ತಮ್ಮ ಹಾರ್ದಿಕ ಭಕ್ತಿ ಭಾವಗಳನ್ನು ಸಮರ್ಪಿಸಲು ಮುಂದಾಗಿಯೇ ಬಿಟ್ಟರು. ಇಂಥ ಪ್ರಸಂಗದಲ್ಲಿಯೂ ಪೂಜ್ಯ ಶಿವಯೋಗಿಗಳು ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳುತ್ತ ಸ್ವಕರ್ತವ್ಯಗಳಲ್ಲಿಯೇ ತನ್ಮಯರಾಗಿ ಬಿಡುತ್ತಿದ್ದರಲ್ಲದೆ ಜನರಿಂದ ಬರುವ ಮಾನಮರ್ಯಾದೆಗಳ ಬಗ್ಗೆ ತಮ್ಮ ಚಿತ್ತವನ್ನು ಎಷ್ಟೋ ಹರಿಸುತ್ತಿರಲಿಲ್ಲ. ಇದು ಶಿವಯೋಗಿಗಳ ಮಹಾವ್ಯಕ್ತಿತ್ವವನ್ನು ಎತ್ತಿ ತೋರಿಸುವದಾಗಿತ್ತು. ಜನರು ನೀಡುವ ಮಾನಮಯ್ಯಾದೆಗಳತ್ತ ತಮ್ಮ ದೃಷ್ಟಿಯನ್ನು ಸದಾ ಹರಿಸುವ ವ್ಯಕ್ತಿಗಳು ಜನತೆಯ ಹಿತವನ್ನು ಸಾಧಿಸುವ ಸಾಮರ್ಥ್ಯವನ್ನು ಕಳೆದುಕೊಂಡವರೇ ಆಗುವರು, ಜನಸೇವೆಯನ್ನು ಜಗದೀಶನ ಸೇವೆಯೆಂದು ನಂಬಿದ್ದ ಬಸವಾದಿ ಪ್ರಮಥರು ಅನ್ಯರ ಹೊಗಳಿಕೆಯನ್ನು ಆತ್ಮಪ್ರಗತಿಯಲ್ಲಿ ದೊಡ್ಡ ವಿಘ್ನಕಾರಿಯೆಂದು ತಿಳಿಯುತ್ತಿದ್ದರೆಂಬುದನ್ನು ಅವರ ವಾಣಿಯಿಂದಲೇ ತಿಳಿದು ಬರುವದು. “ಎನ್ನವರೆನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕಿಕ್ಕಿದರು” ಎಂದು ಹೇಳುವ ಭಾವ ಎಷ್ಟು ಜನ ಪರಹಿತ ಸಾಧಕರೆಂಬವರಲ್ಲಿರುವದೋ ನೋಡಬೇಕು.

 ಅನಾದಿ ಸಂಸಿದ್ಧವಾದ ವೀರಶೈವ ಧರ್ಮವನ್ನು ಎತ್ತಿ ಹಿಡಿಯುವ ಮಹಾಕಾರ್ಯಗಳಲ್ಲಿ ತೊಡಗಿದ ಕುಮಾರ ಶಿವಯೋಗಿಗಳಿಗೆ ಸರ್ವಾತ್ಮಭಾವದಿಂದ ವರ್ತಿಸುವದಕ್ಕಿಂತ ಮತ್ತಾವುದೂ ಅವರಿಗೆ ಗೋಚರಿಸುತ್ತಿರಲಿಲ್ಲ. ಧರ್ಮ ಹಾಗೂ ಸಮಾಜದ ಪುನರುತ್ಥಾನ ಕಾರ್ಯದಲ್ಲಿ ಸಮಯ ಕಳೆಯುವಲ್ಲಿ ದೊರೆಯುವ ಆನಂದ ಅಪರಿಮಿತವಾದುದು.

ಪೂಜ್ಯ ಶಿವಯೋಗಿಗಳು ತಾವು ಕೈಕೊಂಡ ಕಾರ್ಯಗಳಲ್ಲಿ ಅತ್ಯಂತ ಮಹತ್ವ ಪಡೆದವೆರಡು. ಅವೇ ಅ – ಭಾ. ವೀರಶೈವ ಮಹಾಸಭೆ, ಮತ್ತು ಶಿವಯೋಗ ಮಂದಿರ, ಮೊದಲನೆಯದು ವೀರಶೈವ ಸಮಾಜ ಪುರುಷನ ಸರ್ವತೋಮುಖವಾದ ಬಾಹ್ಯ ಸುಧಾರಣೆಯ ಸಾಧನಗಳ ಬಗೆಗೆ ಕೂಲಂಕಷವಾಗಿ ವಿಚಾರಿಸಿ ನಿರ್ಣಯಿಸಲು ಉಪಾಯಪೂರಿತವಾಗಿತ್ತು. ಎರಡನೆಯದು ಸಮಾಜ ಪುರುಷನ ಅಂತರಂಗದ ಪಾವನತೆ ಹಾಗೂ ಸ್ಥಿರತೆಯನ್ನುಂಟು ಮಾಡಿ ಆತ್ಮಾನುಭೂತಿಯ ಮಹಾ ಬೆಳಕನ್ನು ಬೆಳಗಲು ಸಾಧನಭೂತವಾಗಿತ್ತು. ಇವೆರಡು ಮಹಾಕಾರ್ಯಗಳನ್ನು ವೀಕ್ಷಿಸುವವರಿಗೆ ಕುಮಾರ ಶಿವಯೋಗಿಗಳು ಎಂಥ ಕರ್ಮಕೌಶಲ್ಯ ಪಡೆದವರಾಗಿದ್ದರೆಂಬ ಕಲ್ಪನೆಯು  ಸಹಜವಾಗಿಯೇ ಮೂಡಿ ಬರದಿರಲಾರದು. ಇನ್ನೊಂದು ದೊಡ್ಡ ವ್ಯಕ್ತಿಗಳ ಬಗೆಗೆ ತಿಳಿದುಕೊಳ್ಳುವದು ಅತ್ಯವಶ್ಯವಾಗಿದೆ. ಅವರು ಹೊರಗೆ ನಿರ್ಧನಿಕರಾಗಿ ಕಂಡು ಬಂದರು ಅಂತಸ್ಸತ್ವದ ಬಲದಿಂದ ಎಂಥ ಕಠಿಣ ಕಾರ್ಯಗಳನ್ನೂ ಸುಲಭವಾಗಿಯೇ ಸಾಧಿಸಬಲ್ಲರೆಂಬುವದು.

ಕ್ರಿಯಾಸಿದ್ದಿಃ:ಸತ್ವೇ ಭವತಿ ಮಹಾತಾಂನೋಪಕರಣೇ”

ಎಂಬ ಸೂಕ್ತಿಯು ಮಹಾಪುರುಷರ ದಿವ್ಯವ್ಯಕ್ತಿತ್ವದ ಸುಂದರ ಶಬ್ದ ಚಿತ್ರವೇ ಆಗಿರುವದು. ಬೇಕಾದಷ್ಟು ಉಪಕರಣಗಳ ಅನುಕೂಲವಿದ್ದಾಗಲು ಯಾವ ಮಹಾಕಾರ್ಯವನ್ನು ಸಾಧಿಸದ, ಯಾವ ಉಪಕರಣಗಳ ಅನುಕೂಲವಿಲ್ಲದಿದ್ದಾಗಲೂ ಮಹಾ ಮಹಾ ಕಾರ್ಯಗಳನ್ನು ಸಾಧಿಸುವವರನ್ನು ನಾವು ಕಂಡದ್ದುಂಟು. ಇದಕ್ಕೆಲ್ಲ ಅಂತಸ್ಸತ್ವದ ಇರುವಿಕೆ ಕಾರಣ.

ಕುಮಾರ ಶಿವಯೋಗಿಗಳು ತಮ್ಮ ಅಂತಸ್ಸತ್ವದ ಪ್ರಭಾವದಿಂದಲೇ ಎಲ್ಲ ಮಹಾ ಕಾರ್ಯಗಳನ್ನು ಸುಲಭವಾಗಿಯೇ ನಿರ್ವಹಿಸುವವರಾಗಿದ್ದರು. ಇವತ್ತಿಗೂ ಅವರು ನಿರ್ಮಿಸಿದ ಉಭಯ ಸಂಸ್ಥೆಗಳು ಅವರ ಅಂತಸ್ಸತ್ವದ ಪ್ರತೀಕವಾಗಿ  ಉಳಿದುಕೊಂಡಿರುವವು

ಕುಮಾರ ಶಿವಯೋಗಿಗಳು ತಮಗಿಂತ ಪೂರ್ವದಲ್ಲಿ ಆಗಿ ಹೋದ ಬಸವಾದಿ ಪ್ರಮಥರು, ರೇಣುಕಾದ್ಯಾಚಾರ್ಯರು, ಪ್ರಭು ಮೊದಲಾದ ನಿರಂಜನ ಮೂರ್ತಿಗಳು ಯಾವ ಧರ್ಮದ ಏಳ್ಗೆಗಾಗಿ ಅನವರತ ಪ್ರಯತ್ನಿಸಿದರೊ ಅಂತಹ ವೀರಶೈವ ಧರ್ಮದ ರಕ್ಷಣೆಯೇ ಕುಮಾರ ಶಿವಯೋಗಿಗಳ ಜೀವನದ ಚರಮ-ಪರಮ ಗುರಿಯಾಗಿತ್ತು. ಸಮಾಜದಲ್ಲಿ ಮಠಗಳು, ಮಠಾಧಿಪತಿಗಳು ಇರುವದು ಜನಾಂಗದ ಕಲ್ಯಾಣೈಕ ದೃಷ್ಟಿಯಿಂದಲ್ಲವೇ ! ಅದು ಸಾಧ್ಯವಾಗಬೇಕಾದರೆ ಮಠಾಧಿಕಾರಿಗಳು ಸಚ್ಚರಿತ್ರರೂ, ತತ್ತ್ವವೇತ್ತರೂ ಕಾರ್ಯತತ್ಪರರೂ ಆಗಿರಲೇಬೇಕೆಂಬುದು ನಿರ್ವಿವಾದವಾಗಿರುವದು. ಇಂಥ ಮಹಾ ವ್ಯಕ್ತಿಗಳನ್ನು ಸಿದ್ಧಪಡಿಸುವದಕ್ಕಾಗಿ ಪ್ರಯತ್ನಿಸಿದ್ದು ಕುಮಾರ ಶಿವಯೋಗಿಗಳ ದೂರದರ್ಶಿತ್ವ ಹಾಗೂ ಕಾರಣಿಕ ಮಹಾಪುರುಷತ್ವದ ದ್ಯೋತಕವಲ್ಲದೆ ಮತ್ತೇನು !

 ಶಿವಯೋಗ ಮಂದಿರ ಸಂಸ್ಥೆಯು ಭಾರತದ ಅಧ್ಯಾತ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವದು. ಇಂತಹ ಸಂಸ್ಥೆಯನ್ನು ಕಟ್ಟಿದವರ ಬಗ್ಗೆ ಅವರ ಸಮಕಾಲೀನರಾದ ಅನೇಕ ಪೂಜ್ಯ ಮಹಾಸ್ವಾಮಿಗಳು ಕುಮಾರ ಶಿವಯೋಗಿಗಳ ಬಗೆಗೆ ಗೌರವ ಬುದ್ಧಿಯನ್ನಿಟ್ಟುಕೊಂಡದ್ದೇನೂ ಅಚ್ಚರಿ ಸಂಗತಿಯಲ್ಲ. ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು, ಇಲಕಲ್ಲ ವಿಜಯಮಹಾಂತ ಶಿವಯೋಗಿಗಳು, ಹಾಲಕೆರೆಯ ಶ್ರೀ ಅನ್ನದಾನ ಶಿವಯೋಗಿಗಳು ಮತ್ತು ಸೊಲ್ಲಾಪುರದ ಶ್ರೀ ವೀರೇಶ ಶಿವಶರಣರು ಮೊದಲಾದವರು ಕುಮಾರ ಶಿವಯೋಗಿಗಳ ಬಗೆಗೆ ಹಾರ್ದಿಕ ಪ್ರೇಮಾದರಗಳನ್ನು ತೋರಿಸುತ್ತಲಿದ್ದರೆಂಬುದನ್ನು ಪ್ರತ್ಯಕ್ಷ ನೋಡಿದವರು ಕೆಲವರಿನ್ನೂ ಬದುಕಿಕೊಂಡಿರುವರು.

  ನಾವು ೧೯೨೫ನೆಯ ಸಾಲಿನಲ್ಲಿ ಕಾಶೀಕ್ಷೇತ್ರಕ್ಕೆ ಉಚ್ಚ ಶಿಕ್ಷಣಕ್ಕಾಗಿ ಹೊರಡುವ ಪ್ರಸಂಗದಲ್ಲಿ ಹಾಲಕೆರೆಯ ಶ್ರೀಮದನ್ನದಾನಿಮಹಾಸ್ವಾಮಿಗಳು ನಮಗೆ ಅಪ್ಪಣೆಕೊಡಿಸಿದ್ದು ಹೀಗೆ –

 ‘ಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದೇ ನೀವು ಕಾಶೀ ಕ್ಷೇತ್ರಕ್ಕೆ ಹೊರಡಬೇಕು’ ಹಾಗೆ ಪೂಜ್ಯರ ಅಪ್ಪಣೆಯಾಗಬೇಕಾದರೆ ಹಾನಗಲ್ಲ ಪೂಜ್ಯ ಮಹಾಸ್ವಾಮಿಗಳಲ್ಲಿ ಅವರಿಗೆ ನಂಬಿಗೆಯಿದ್ದಿತೆಂಬುದು ವ್ಯಕ್ತವಾಗುವದು ಆದರೆ ನಮಗಾಗ ಅನುಕುಲವಾಗದ್ದಕ್ಕೆ ಹಾಗೇ ಹೊರಡುವ ಪ್ರಸಂಗ ಬಂತು. ಪುನಃ ಮಾರನೆಯ ವರ್ಷ ಕಾಶಿಯಿಂದ ಬಂದಾಗ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನ ಪಡೆದುಕೊಂಡದ್ದು ಇಲಕಲ್ಲ ಮಠಕ್ಕೆ ದೋಟ್ಯಾಳ ದೇವರನ್ನು ಅಧಿಕಾರಿಗಳನ್ನಾಗಿ ಮಾಡುವ ಶುಭಸನ್ನಿವೇಶದಲ್ಲಿ ಶಿವಯೋಗ ಮಂದಿರದಿಂದ ಒಂದೇ ವಾಹನದಲ್ಲಿ ಕುಮಾರ ಶಿವಯೋಗಿಗಳ ಅನ್ನದಾನಿ ಮಹಾಸ್ವಾಮಿಗಳ ಕೂಡ ಇಲಕಲ್ಲಿಗೆ ಹೋದದ್ದು ನನ್ನ ಅಹೋ ಭಾಗ್ಯವೆಂದು ಭಾವಿಸಿದೆ.

ಶ್ರೀ ಕುಮಾರ ಶಿವಯೋಗಿಗಳಂಥ ಮಹಾವ್ಯಕ್ತಿಗಳಿಗೆ ಜನ್ಮಕೊಡುವಂತಹ ಭಾಗ್ಯ ಪಡೆದ ಕನ್ನಡಮ್ಮನಿಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ! ಮತ್ತೊಮ್ಮೆ ಕುಮಾರಶಿವಯೋಗಿಗಳು ಮೈದೋರಿ ವೀರಶೈವ ಸಮಾಜವನ್ನು ಎತ್ತಿ ಹಿಡಿಯುವ ಮಹಾಕಾರ್ಯವನ್ನೆಸಗುವಂತೆ ಕರುಣಿಸಲೆಂದು ಅನನ್ಯಭಾವದಿಂದ ಜಗಚ್ಚಾಲಕನಾದ ಮಹಾದೇವನನ್ನು ಪ್ರಾರ್ಥಿಸಲಾಗುವದು

ಡಾ. ಬಸವರಾಜ ಜಗಜಂಪಿ

ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.

ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.

ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.

ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು

‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು. 

ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ  ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.

ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.

ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ  ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.

ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?

 ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.

ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.

ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.

ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ  ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.

ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.

 ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು  ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ  ಸ್ವಾಮಿಗಳೊಂದಿಗೆ ಚರ್ಚಿಸುತ್ತ  ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು.  , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ  ದೇಶಿಕರೆನಿಸಿದರು.

ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.

ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.

ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.

ಮಠಾಧಿಕಾರವನ್ನು ಅವರೆಂದೂ  ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ  ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.

ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.

 ಶ್ರೀಗಳ ದೂರದರ್ಶಿತ್ವ ತುಂಬ  ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ  ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು  ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ  ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು

. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.

ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.

ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.

ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ,  ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.

ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.

ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು,  ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:

೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.

• ಶ್ರೀ ಶಿ. ಫ. ಮರಡೂರ ಧಾರವಾಡ

ಸ್ವಾರ್ಥೋ ಯಸ್ಯ ಪರಾರ್ಥ ಏವ ಸಃ ಪುಮಾನ್ ಏಕಃ ಸತಾಂ ಅಗ್ರಣೀಃ ||

(ಅರ್ಥ : ಪರಹಿತವೇ ತನ್ನ ಹಿತವೆಂದು ತಿಳಿದು ಆಚರಿಸುವ ಮಹಾಪುರುಷನೇ ಸಜ್ಜನ (ಸಂತ) ರಲ್ಲಿ ಶ್ರೇಷ್ಠನು.)

ಶ್ರೀಗಳವರು ತಮ್ಮ ಮಾನವ ಜನ್ಮ ಯಾತ್ರೆಯನ್ನೆಲ್ಲ ಸಮಾಜ ಸೇವೆಯಲ್ಲಿಯೇ ಕಳೆದು ತಮ್ಮ ಅವತಾರ ಕೃತ್ಯವನ್ನು ಮುಗಿಸಿ, ಅಂತರ್ಧಾನರಾಗಿರುವರು. ಶ್ರೀಗಳವರ ಪರಶಿವ ಸಾಕ್ಷೀಭೂತವಾದ ಅವಿಶ್ರಾಂತಶ್ರಮದ ಕೃತ್ಯಗಳಿಂದ ಸಮಾಜದಲ್ಲಿ ವಿಚಿತ್ರವಾದ  ಜಾಗೃತಿಯು ಉತ್ಪನ್ನವಾಗಿರುವದು; ವೀರಶೈವ ಸಮಾಜದ ಎಲ್ಲೆಡೆಗಳಲ್ಲಿಯೂ ನವಚೈತನ್ಯವು ತಲೆದೋರಿರುವದು; ನಾವು ಯಾರು ? ನಮ್ಮ ಕರ್ತವ್ಯವೇನು ? ಎಂಬ ಅರಿವು ಸ್ವಾಮಿಗಳಲ್ಲಿಯೂ, ಶಿಷ್ಯರಲ್ಲಿಯೂ, ಅಶಿಕ್ಷಿತ ಸುಶಿಕ್ಷಿತರಲ್ಲಿಯೂ ಮೊಳೆಯೊಡೆ ದಿರುವದು; ವೀರಶೈವರೆಲ್ಲರು ತಮ್ಮ ಇರವನ್ನರಿತು ಅರಬಡಿಸಿ ತಿದ್ದಿಕೊಳ್ಳಹತ್ತಿರುವದು; ಶ್ರೀಗಳವರು ಲಿಂಗೈಕ್ಯರಾಗಿ ಹೋಗಿದ್ದರೂ ಕೂಡ, ಅವರಿಂದ ಸಮಾಜದಲ್ಲಿ ಉಂಟಾದ ಜಾಗೃತಿಯ ಪ್ರಕಾಶವು  ಝಗಝಗಿಸುತ್ತಿರುವದು; ಶ್ರೀಗಳಂಥ ವಿಭೂತಿಗಳ ದಿವ್ಯಲೀಲೆ (ಕೃತಿ)ಗಳ ರಹಸ್ಯದ ಸಿಂಹಾವಲೋಕನವನ್ನು ಆಗಾಗ್ಗೆ ಮಾಡುತ್ತ ನಮ್ಮ ಜೀವಿತದ ಕರ್ತವ್ಯಗಳ ಹಾದಿಯನ್ನು ಕಂಡು ಹಿಡಿಯುವದು ನಮ್ಮೆಲ್ಲರ ಕರ್ತವ್ಯವಾಗಿರುವದು. ಆದುದರಿಂದ, ಪ್ರಸ್ತುತ ಲೇಖದಲ್ಲಿ ಶ್ರೀಗಳವರಿಂದ ವೀರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವು ಹೇಗಾಯಿತೆಂಬುದರ ಸಂಕ್ಷಿಪ್ತ ಸಿಂಹಾವಲೋಕನವು ಮಾಡಲ್ಪಟ್ಟಿರುವುದು.

ಶ್ರೀಗಳವರಿಂದ ಸಮಾಜದಲ್ಲಿ ಶಿಕ್ಷಣದ ಪ್ರಸಾರವು ಹೇಗಾಯಿತೆಂಬುದರ ನಿಜವಾದ ಕಲ್ಪನೆಯಾಗಬೇಕಾದರೆ, ಶ್ರೀಗಳವರು ಸಮಾಜ ಸೇವೆಯ ಸೂತ್ರವನ್ನು ವಹಿಸಿ, ಕರ್ತವ್ಯ ರಂಗಸ್ಥಲದ ಮೇಲೆ ಸೂತ್ರಧಾರರಾಗಿ ನಿಂತ ಕಾಲಕ್ಕೆ ವೀರಶೈವ ಸಮಾಜದ ಸ್ಥಿತಿಯು ಹೇಗಿತ್ತೆಂಬ ಸಂಗತಿಯು ಗೊತ್ತಿರಲಿಕ್ಕೆ ಬೇಕಾಗುವದು. ಆದಕಾರಣ ಆಗಿನ ಆಂದರೆ ೩೦-೪೦ ವರ್ಷಗಳ ಹಿಂದಿನ ಸಮಾಜದ ಸ್ಥಿತಿಗತಿಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.

 ಒಂದಾನೊಂದು ಕಾಲದಲ್ಲಿ ನಮ್ಮ ಈ ವೀರಶೈವ ಸಮಾಜವು ಒಳ್ಳೆ ಸುವ್ಯವಸ್ಥಿತವಾದ ಸುಸ್ವರೂಪದಲ್ಲಿತ್ತೆಂಬುದಕ್ಕೆ ನಮ್ಮ ಸಮಾಜದ ಸರ್ವಾಂಗ ಸುಂದರವಾದ ರಚನೆಯೇ ಪ್ರತ್ಯಕ್ಷ ಸಾಕ್ಷಿಯಾಗಿರುವದು. ಈ ಸಮಾಜ ರಚನೆಯಲ್ಲಿ ವ್ಯಕ್ತಿಯ ಆಚಾರ ವಿಚಾರಗಳಿಗೆ ಮಹತ್ವವೇ ಇರುವದಿಲ್ಲ. ನಮ್ಮ ಸಮಾಜದಲ್ಲಿ ಪಂಚ ಧರ್ಮಪೀಠಗಳಿರುವವು. ಆ ಪೀಠಗಳು ಕಾಶಿ, ಹಿಮವತ್ಕೇದಾರ, ಶ್ರೀಶೈಲ, ರಂಭಾಪುರಿ, ಉಜ್ಜಯನಿ ಮೊದಲಾದ ಭರತಖಂಡದೊಳಗಿನ ಪುಣ್ಯಕ್ಷೇತ್ರಗಳಲ್ಲಿ ನೆಲೆಸಿ ಕಂಗೊಳಿಸುತ್ತಿರುವವು. ಈ ಪೀಠಾಚಾರ್ಯರು ದೇಶದಲ್ಲೆಲ್ಲ ಸಂಚರಿಸಿ, ಭಕ್ತವೃಂದದ ಅನುಮತಿಯಿಂದ ಸಮಾಜದಲ್ಲಿ ಧರ್ಮಚ್ಯುತಿಯಾಗದಂತೆ ವ್ಯವಸ್ಥೆಯನ್ನಿಡುವದೂ, ಭಕ್ತಕೋಟಿಯಿಂದ ದೊರೆತ ಕಾಣಿಕೆಯಿಂದ ಧರ್ಮೊತ್ಕರ್ಷದ ಕಾರ್ಯವನ್ನು ನೆರವೇರಿಸುವದೂ ಇವರ ಕರ್ತವ್ಯಗಳಾಗಿರುವವು. ಒಳನಾಡಿನಲ್ಲಿ ಪಟ್ಟದ ಸ್ವಾಮಿಗಳು ಹಾಗೂ ಚರಮೂರ್ತಿಗಳು ಎಂಬ ಪೀಠಾಚಾರ್ಯರ ಪ್ರತಿನಿಧಿಗಳಿರುವರು ಪೀಠಾಚಾರ್ಯರ ಅನುಜ್ಞೆಯಂತೆ ಸಮಾಜದ ಧಾರ್ಮಿಕ ಕಾರ್ಯಗಳನ್ನು ಮಾಡುವದೂ, ಭಕ್ತರಲ್ಲಿ ಶಿಕ್ಷಣ ಪ್ರಸಾರವಾಗುವ ಯೋಜನೆಯನ್ನು  ನಿಯೋಜಿಸುವದೂ ಭಕ್ತರಿಂದ ದೊರೆತ ಕಾಣಿಕೆಯಿಂದ ಅತಿಥಿ ಅಭ್ಯಾಗತರನ್ನು ಉಪಚರಿಸುವದೂ; ಇವರ ಕರ್ತವ್ಯಗಳು. ಇದಲ್ಲದೆ ಊರೂರಿಗೆ ಮಠದಯ್ಯನವರು, ಮಠಪತಿ,   ಗಣಾಚಾರಿ, ಸ್ಥಾವರ, ಕುಮಾರ ಎಂಬ ಹೆಸರಿನ ಉಪಾಚಾರ್ಯರಿರುವರು. ಗ್ರಾಮದೊಳಗಿನ ಶೆಟ್ಟಿ, ಬಣಕಾರ, ಗ್ರಾಮಾಧಿಕಾರಿಗಳು ಇವರೆಲ್ಲರ ಸಹಾಯದಿಂದ ಧರ್ಮದ ಕಾರ್ಯಗಳನ್ನು ನೆರವೇರಿಸುವದು ಇವರ ಕರ್ತವ್ಯವು. ಇದಲ್ಲದೆ, ಅಲ್ಲಲ್ಲಿಗೆ ವಿರಕ್ತ ಸ್ವಾಮಿಗಳಿರುವರು. ಇವರು ಕೇವಲ ಶಿವಯೋಗ ಸಂಪನ್ನರಾಗಿ ಭಕ್ತರಿಗೆ ಶಿವಾನುಭವದ ಉಪದೇಶವನ್ನು ಮಾಡತಕ್ಕದ್ದು. ಇವರೆಲ್ಲರಿಗೂ ಆಗಿನ ಕಾಲದ ಅರಸರಿಂದ ಸ್ವಾಸ್ತವೃತ್ತಿಗಳು ದೊರೆದಿರುವವು. ಈ  ಸಮಾಜದ ವ್ಯವಸ್ಥೆಯು ಅರಸರಿಗೂ ಪ್ರಜೆಗಳಿಗೂ ಕೂಡಿಯೇ ಹಿತಕರವಾದು ದರಿಂದಲೇ ಸ್ವಾಸ್ತವೃತ್ತಿಗಳ ಮಾನಮನ್ಯತೆಗಳು ದೊರೆದಿರಲಿಕ್ಕೆ ಬೇಕು. ಈ ಪ್ರಕಾರ ಸುಂದರವಾದ ಸಮಾಜ ವ್ಯವಸ್ಥೆಯು ಯಾವ ಕಾಲಕ್ಕೆ ಯಾರಿಂದ ಆಯಿತೆಂಬುದಕ್ಕೆ ಐತಿಹಾಸಿಕ ಪ್ರಮಾಣಗಳು ಇನ್ನೂ ಉಪಲಬ್ದವಾಗಿಲ್ಲ. ಆದರೆ ಸಮಾಜೋದ್ಧಾರ ಕರಾದ ಶ್ರೀ ಬಸವೇಶ್ವರರಿಂದ ಈ ಸಮಾಜ ವ್ಯವಸ್ಥೆಯು ಹೆಚ್ಚು ದೃಢವಾಯಿತು.

ಕಾಲಗತಿಯಿಂದ ಭರತಖಂಡಕ್ಕೆ ಹ್ರಾಸ ಕಾಲವು ಒದಗಲು ನಮ್ಮ ವೀರಶೈವ ಸಮಾಜವೂ ಅದಕ್ಕೆ ತುತ್ತಾಯಿತು. ಮುಸಲ್ಮಾನ ಬಾದಶಹರ ನೂಕುನುಗ್ಗಲಿನ ಆಳ್ವಿಕೆಯಿಂದಲೂ, ಪೇಶವೆಯರ ಪರಮತದ ಸಹಿಷ್ಣುತೆಯ ಒತ್ತಾಳಿಕೆಯಿಂದಲೂ ವೀರಶೈವ ಸಮಾಜದ ಬಂಧನಗಳು ಸಡಿಲಾಗಿ, ಸಮಾಜವು ಲಿಕಿ ಲಿಕಿಯಾಗಿ ಹೋಯಿತು. ದೊಡ್ಡ ದೊಡ್ಡ ಮಠದ ಸ್ವಾಮಿಗಳು ತಮ್ಮ ಕರ್ತವ್ಯಗಳನ್ನು ಮರೆತು ಹೊನ್ನು, ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲದ ಬಲೆಗೆ ಬಿದ್ದು ಸಾಮಾನ್ಯರಂತೆ ವರ್ತಿಸ ತೊಡಗಿದ್ದರು; ಉಳಿದವರು ಅಶಿಕ್ಷಿತರಾಗಿ ಕಾಡಾದಿಗಳನ್ನು  ಹೋಲಹತ್ತಿದ್ದರು: ವೀರಶೈವ ಧರ್ಮದ ಪ್ರಾಣವಾದ ಇಷ್ಟಲಿಂಗದ ಅರಿವು ಕೂಡ ಇಲ್ಲದಂತಾಗತೊಡಗಿತ್ತು . ವೀರಶೈವರ ಮದುವೆ ಮೊದಲಾದ ಧಾರ್ಮಿಕ ಕಾರ್ಯಗಳು – ಜೋಯಿಸರೆಂಬ ಪರಮತಿಯರ ಕೈಸೇರಿ ಹೋಗಿದ್ದವು; ವೀರಶೈವರ ಕೆಲ ಕೆಲವು ಪುಣ್ಯ ಕ್ಷೇತ್ರಗಳ  ಗಡಿಗುಂಡಾರಗಳು ಅನ್ಯರ ಪಾಲಾಗಿ ಹೋಗಿದ್ದುವು, ಒಟ್ಟಿಗೆ ವೀರಶೈವ ಸಮಾಜದ ಅಳಿಗಾಲವೆ ಬಂದು ಹೋಗಿತ್ತು.

ಮುಂದೆ ಬ್ರಿಟಿಷ್ ಸಾಮ್ರಾಜ್ಯದ ಸುಧಾರಣೆಗಳು ತಲೆಯೆತ್ತಿ ಶಿಕ್ಷಣ ಪ್ರಸಾರವು ಒತ್ತರದಿಂದ ಸಾಗತೊಡಗಿತು . ನಮ್ಮ ಸಮಾಜವು ವಿದ್ಯೆಯಲ್ಲಿ ತೀರಾ ಹಿಂದಿರುವದನ್ನು ಕಂಡು ಕೈ. ವಾ. ಡೆಪ್ಯುಟಿ ಚೆನ್ನಪ್ಪನವರು, ಕೈ.ವ. ಗಿಲಿಗಿಂಚಿ ಗುರುಸಿದ್ದಪ್ಪನವರು, ದಿ. ಬ. ಅರಟಾಳ ಸಾಹೇಬರು  ವೀರಶೈವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರವಾದ ಅನೇಕ ಪ್ರಯತ್ನಗಳನ್ನು ಮಾಡಿದರು. ಈ ಮಹಿನೀಯರಿಂದ ವೀರಶೈವ ಸಮಾಜವು ಬಹು ಉಪಕೃತವಾಗಿರುವರು

 ಇದೇ ಸಂದಿಗೆ ಶ್ರೀಗಳವರು ತಪಸ್ಸಿದ್ದ  ಶಿವಯೋಗಿಗಳಿಂದ ಪವಿತ್ರವಾದ ಹಾನಗಲ್ಲ ಮಠಕ್ಕೆ ಸ್ವಾಮಿಗಳಾದರು. ಶ್ರೀಗಳವರು ಹಾನಗಲ್ಲ ಮಠದ ಅಧಿಕಾರವನ್ನು ಕೈಕೊಳ್ಳುವದಕ್ಕಿಂತ ಮೊದಲೇ ದೇಶದಲ್ಲೆಲ್ಲ ಸಂಚರಿಸಿ ಸಮಾಜದ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡಿದ್ದರು. ಇಂಥ ಪತಿತ ಸಮಾಜದ ಸೇವೆಯನ್ನು ಮಾಡುವುದೇ ತಮ್ಮ ಜೀವಿತದ ಕರ್ತವ್ಯವೆಂತಲೂ, ಆತ್ಮಶಾಂತಿಯ ಸಾಧನವೆಂತಲೂ ಮೊದಲೇ ದೃಢ ಸಂಕಲ್ಪವನ್ನು ಮಾಡಿಕೊಂಡಂತೆ ತೋರುತ್ತದೆ. ಸ್ವಾಮಿತ್ವವನ್ನು ವಹಿಸಿದ ಕೂಡಲೆ ವೀರಶೈವ ಧರ್ಮದ ಜೀರ್ಣೋದ್ದಾರದ ಕಾರ್ಯವನ್ನು ಕೈಕೊಂಡು ಅದಕ್ಕನುಗುಣವಾದ ಲೋಕ ಶಿಕ್ಷಣ ಪ್ರಾರಂಭಿಸಿದರು.

 ಶಿಕ್ಷಣ ಪ್ರಸಾರಕ್ಕೆ (೧) ಪಾಠಶಾಲೆಗಳು (೨) ವಾಚನ ಮಂದಿರಗಳು (2) ವ್ಯಾಖ್ಯಾನಗಳು, ಪುರಾಣಗಳು, ಶಿವಕೀರ್ತನೆಗಳು, ಪ್ರವಚನಗಳು (5) ವಾರಪತ್ರಿಕೆ ,ಮಾಸ ಪತ್ರಿಕೆಗಳು (5) ಗ್ರಂಥಗಳ ಸಂಶೋಧನವು ಹಾಗೂ ಗ್ರಂಥ ಪ್ರಸಾರವು ಇವೇ ಪ್ರಮುಖ ಸಾಧನಗಳಾಗಿರುವವು. ಶ್ರೀಗಳವರು ಎಲ್ಲ  ಸಾಧನಗಳಿಂದ ವಿರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು

೧. ಪಾಠಶಾಲೆಗಳು –  ಸರಕಾರದವರು ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು   ಸ್ಥಾಪಿಸಿ  ಶಕ್ಷಣವನ್ನು ಕೊಡಲಾರಂಭಿಸಿದ್ದರು .ಆದರೆ ಧಾರ್ಮಿಕ ಶಿಕ್ಷಣಕ್ಕೆ ಮೂಲಾಧಾರವಾದ ಸಂಸ್ಕೃತ ವಿದ್ಯಾಭ್ಯಾಸದ  ಸಂಸ್ಥೆಗಳು ಮಾತ್ರ ಅತಿ ವಿರಳವಾಗಿದ್ದು, ಎಲ್ಲಿಯಾದರೂ ಒಂದೆರಡು ಸಂಸ್ಥೆಗಳಿದ್ದರೆ ಅವುಗಳಲ್ಲಿ ವೀರಶೈವರಿಗೆ ಪ್ರವೇಶವೇ ಇದ್ದಿಲ್ಲ. ವೀರಶೈವರನ್ನು ಶೂದ್ರಕೋಟೆಯಲ್ಲಿ ಗಣಿಸಿ ಬಿಟ್ಟಿದ್ದರು. ಸಂಸ್ಕೃತ ವಿದ್ಯೆಯೇ ಇಲ್ಲದ್ದರಿಂದ ವೀರಶೈವರ ಧರ್ಮದ ಜ್ಞಾನವೂ ಲಯವಾಗುತ್ತ ನಡೆದಿತ್ತು. ಶ್ರೀಗಳವರು  ಈ ಶೋಚನೀಯ ಸ್ಥಿತಿಯನ್ನು ಅವಲೋಕಿಸಿ, ವೀರಶೈವ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸುವ ಪ್ರಯತ್ನವನ್ನು ಮೊದಲು ಕೈಕೊಂಡರು. ಇಂದಿಗೆ ೨೦-೩೦ ವರ್ಷಗಳ  ಹಿಂದೆ ವೀರಶೈವರಲ್ಲಿ ಸಂಸ್ಕೃತ ಪಾಠಶಾಲಾ ಸ್ಥಾಪನೆಯ ಒಂದು ಯುಗವು ಪ್ರಾರಂಭವಾಗಿತ್ತು. ಎಲ್ಲಿ ನೋಡಿದರೂ ಸಂಸ್ಕೃತ ಪಾಠಶಾಲೆಗಳೇ ತೋರುತ್ತಿದ್ದವು.ಈ ಚಲನವಲನಕ್ಕೆ ಶ್ರೀಗಳವರ ಪ್ರಯತ್ನವೇ ಕಾರಣವೆಂದು ಹೇಳಬಹುದು. ಪ್ರಾಕೃತಕ್ಕೆ ವೀರಶೈವರಲ್ಲಿ ನ್ಯಾಯ, ವ್ಯಾಕರಣ, ವೇದ, ವೇದಾಂತಗಳಲ್ಲಿ ಘನಪಂಡಿತರಾದ ಎಷ್ಟೋ ಜನ ಶಾಸ್ತ್ರಿಗಳು ಉದಯರಾಗಿರುವರು. ಕಾಶಿ, ಕಲಕತ್ತಾ ಮೊದಲಾದ ಕಡೆಯ ಸಂಸ್ಕೃತ ವಿದ್ಯಾಪೀಠಗಳಲ್ಲಿ ವೀರಶೈವ ವಿದ್ಯಾರ್ಥಿಗಳು ಕಂಗೊಳಿಸುತ್ತಿರುವರು. ಶ್ರೀಗಳವರಿಂದ ಪರಿಪೋಷಿತರಾದ ಎಷ್ಟೋ ಜನರು ಸಂಸ್ಕೃತದಲ್ಲಿ ಘನವಿದ್ವಾಂಸರಾಗಿರುವರು.

ವೀರಶೈವ ಧಾರ್ಮಿಕ ಕಾರ್ಯಗಳನ್ನು ಮಾಡಿಸುವ ಜ್ಞಾನವನ್ನು ಮಾಡಿ ಕೊಡುವದರ ಸಲುವಾಗಿ ಶ್ರೀಗಳವರು ವೀರಶೈವ ವೈದಿಕ  ಪಾಠಶಾಲೆಗಳನ್ನು ಏರ್ಪಡಿಸಿದರು. ಈ ಪ್ರಯತ್ನದಿಂದ ಗ್ರಾಮದ ಮಠಸ್ಥರು ತಮ್ಮ ವೈದಿಕ ಕಾರ್ಯಗಳೆಲ್ಲ ತಾವೇ ಸಾಗಿಸಹತ್ತಿದರು. ವೀರಶೈವರ ಧಾರ್ಮಿಕ ಕಾರ್ಯಗಳನ್ನು ಮಾಡುವದೂ ತಮ್ಮ ಹಕ್ಕೆಂದು ಅನ್ಯಾಯದಿಂದ  ಭಾವಿಸಿಕೊಂಡಿದ್ದ ಜೋಯಿಸರು ವೀರಶೈವರ ಈ ಪ್ರಗತಿಯನ್ನು ನೋಡಿ ಅಸೂಯೆಯಿಂದ ತಳಮಳಿಸಹತ್ತಿದರು. ತಡೆಯಲಾರದೆ “ವೀರಶೈವರು ತಮ್ಮ ಬಾಧ್ಯತೆಗೆ ಭಂಗವನ್ನುಂಟು ಮಾಡಿದರೆಂದುʼʼ ನ್ಯಾಯ ಸಭೆಯಲ್ಲಿ ದೂರಿಟ್ಟರು. ಶ್ರೀಗಳವರು ಇಂಥ ಜೊಳ್ಳು ಬೆದರಿಕೆಗಳಿಗೆ ಮಣಿಯದೆ, ಇಂಥ ಪ್ರಸಂಗಗಳು ಒದಗಿದಲ್ಲೆಲ್ಲ ತಾವೇ ಹೋಗಿ ನಿಂತು, ನ್ಯಾಯಾಧೀಶರಿಗೆ ವೀರಶೈವ ಧರ್ಮದ ನಿಜಸ್ಥಿತಿಯ ಜ್ಞಾನವನ್ನು ಪೂರೈಸಿಕೊಟ್ಟು, ಜೋಯಿಸರ ಹಕ್ಕುಗಳು ಪರಧರ್ಮದವರ ಮೇಲೆ ನಡೆಯುವದು ಎಂಥ ಭಯಂಕರ ಅನ್ಯಾಯ ವೆಂಬುದನ್ನು ಜನತೆಯ ಅನುಭವಕ್ಕೆ ತಂದುಕೊಟ್ಟರು. ಪ್ರಕೃತಕ್ಕೆ ವೀರಶೈವರ ಧರ್ಮ ಕಾರ್ಯಗಳಲ್ಲಿ ಹಣಿಕಿ ನೋಡುವ ಎದೆಯು ಸಹ ಪರಸಮಯದವರಲ್ಲಿ  ಇಲ್ಲದಂತಾಗಿರುವದು.

ವೈದಿಕ ಜ್ಞಾನದಂತೆ ವೀರಶೈವರಿಗೆ ಜ್ಯೋತಿಷ್ಯ ಜ್ಞಾನದ ಅವಶ್ಯಕತೆಯು ಉಂಟೆಂದು ತಿಳಿದು, ಜ್ಯೋತಿಷ್ಯ ಪಾಠಶಾಲೆಗಳನ್ನು ಏರ್ಪಡಿಸುವ ಉಪಕ್ರಮವೂ ಶ್ರೀಗಳವರಿಂದಲೇ ಪ್ರಾರಂಭವಾಯಿತು. ಈಗ ವೀರಶೈವ ಜ್ಯೋತಿಷ್ಯರನೇಕರು  ಪಂಚಾಂಗಗಳನ್ನು ಕೂಡ ಬರೆಯುತ್ತಿರುವರು. ಕೆಲ ಕೆಲವರು ಜ್ಯೋತಿರ್ಗಣಿತದಲ್ಲಿ ನಿಷ್ಣಾತರಾಗಿರುವರು.

ನಮ್ಮ ವೀರಶೈವ ಸಮಾಜದಲ್ಲಿ ವಿರಕ್ತ ಸ್ವಾಮಿಗಳೂ ಪಟ್ಟಚರಾಧಿಕಾರಿಗಳೂ ಹೇರಳವಾಗಿದ್ದಾರೆ. ಈ ಎಲ್ಲ ಸ್ವಾಮಿಗಳು ಆಜನ್ಮ ಬ್ರಹ್ಮಚಾರಿಗಳಾಗಿರಬೇಕೆಂದು ಧರ್ಮದ ಕಟ್ಟಪ್ಪಣೆಯೂ ಇರುವದು. ಪೂರ್ವ ವಯಸ್ಸಿನಲ್ಲಿ ಯೋಗ್ಯವಾದ ಶಿಕ್ಷಣವೂ, ಸಂಸ್ಕಾರವೂ ಇಲ್ಲದೆ, ಆಜನ್ಮ ಬ್ರಹ್ಮಚಾರಿಯಾಗಿರುವದು ದುಸ್ಸಾಧ್ಯವಾದ ಸಂಗತಿಯು. ಈ ಪ್ರಕಾರದ ಶಿಕ್ಷಣವೂ ಸಂಸ್ಕಾರ ಇಲ್ಲದುದರಿಂದ ಬಹು ಜನ  ಸ್ವಾಮಿಗಳು ಹೊನ್ನು, ಹೆಣ್ಣು ಮಣ್ಣಿನ ಮೋಹಪಾಶದಲ್ಲಿ ಸಿಕ್ಕು, ಪವಿತ್ರವಾದ ಆಶ್ರಮವನ್ನು ಅಪವಿತ್ರಗೊಳಿಸಿ ಬಿಟ್ಟಿದ್ದರು. ಪುಣ್ಯಕ್ಷೇತ್ರಗಳೆನಿಸಿಕೊಳ್ಳುವ ಮಠಗಳನ್ನು ಶಾಪದ ನೆಲೆವೀಡುಗಳನ್ನು ಮಾಡಿಬಿಟ್ಟಿದ್ದರು. ಸಮಾಜೋದ್ಧಾರಕರಾದ ಸ್ವಾಮಿಗಳು ಸಮಾಜ ವಿಧ್ವಂಸಕರಾಗಿ ಬಿಟ್ಟಿದ್ದರು. ಈ ಹೀನಾವಸ್ಥೆಯನ್ನು ಕಂಡು, ಪರಸಮಯ ದವರು ಚಪ್ಪಳೆಯನ್ನಿಕ್ಕಿ ನಗೆಯಾಡುತ್ತಿದ್ದರು. ಅತ್ಯಸಹ್ಯವಾದ ಸ್ಥಿತಿಯನ್ನು ನೋಡಿ ಶ್ರೀಗಳವರು ತಲ್ಲಣಗೊ೦ಡು,  ಗುರುವರ್ಗದವರಿಗೆ ಯೋಗ್ಯವಾದ ಶಿಕ್ಷಣವನ್ನು ಕೊಟ್ಟು ಸಂಸ್ಕೃತಿಗೊಳಿಸುವ ಗುರುಕುಲವೊಂದು ಇರಬೇಕೆಂದು ವೀರಶೈವ ಮಹಾಸಭೆಯಲ್ಲಿ ನಿರ್ಣಯವನ್ನು ಮಾಡಿಸಿಕೊಂಡು ಶಿವಯೋಗಮಂದಿರದ ಸ್ಥಾಪನೆಯನ್ನು ಮಾಡಿರುವರು. ಈ ಮಂದಿರದಲ್ಲಿ ಸುಸಂಸ್ಕೃತರಾದ ಎಷ್ಟೋಜನ ಸ್ವಾಮಿಗಳು ಸ್ವಾಮಿತ್ವಕ್ಕೆ ಸಲ್ಲುವಂತೆ ಸದಾಚಾರದಿಂದ ನಡೆದು, ಮಂದಿರದ ಬಿಳ್ಜಸ (ಧವಲ ಕೀರ್ತಿ)ವನ್ನು ನಾಲ್ದೆಶೆಗಳಲ್ಲಿ ಪಸರಿಸಹತ್ತಿರುವರು. ಮಂದಿರದ ಸ್ಥಾಪನೆಯ ಸಲುವಾಗಿ ಶ್ರೀಗಳವರು ಹಗಲಿರುಳೆನ್ನದೆ ದುಡಿಯಬೇಕಾಯಿತು. ‘ಶ್ರೇಯಾಂಸಿ ಬಹು ವಿಘ್ನಾʼನಿ ಎಂಬ ಉಕ್ತಿಯಂತೆ ಮಂದಿರ ಸ್ಥಾಪನೆಯ ಕಾರ್ಯದಲ್ಲಿ ಅಸಂಖ್ಯ ವಿಘ್ನಗಳು ಬಾಯ್ದೆರೆದು ನಿಂತವು. ಎಷ್ಟೋ ಜನ ಸುಶಿಕ್ಷಿತ ವೀರಶೈವರು ಕೂಡ ಒಂದಿಲ್ಲೊಂದು ತರದಿಂದ ಮಂದಿರ ಸ್ಥಾಪನೆಯ ಬಗ್ಗೆ ಜನತೆಯಲ್ಲಿ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರದರ್ಶಿಸುತ್ತಿದ್ದರು. ಸ್ವಾರ್ಥ ಪರಾಯಣರಾದ ಎಷ್ಟೋ ಜನ ಗುರುವರ್ಗದವರು ಈ ಕಾರ್ಯಕ್ಕೆ ಕಡುಹಗೆಗಳೇ ಆಗಿದ್ದರು. ಶ್ರೀಗಳವರು ಇಂಥ ಎಡರುಗಳಿಗೆ ಅಳುಕಲಿಲ್ಲ. ಕೈಕೊಂಡ ಕಾರ್ಯದಿಂದ ಹಿಂಜರಿಯಲಿಲ್ಲ. ಪರಶಿವನ ಮೇಲೆಯೂ ಗುರುವಾಕ್ಯದ ಮೇಲೆಯೂ ನಂಬಿಗೆಯನ್ನಿಟ್ಟು ತಮ್ಮ ಹುಟ್ಟು ಗುಣಕ್ಕನುಸರಿಸಿ ಪೆಟ್ಟುಗಳು ಬಡಿಬಡಿದಂತೆ ಶ್ರೀಗಳವರು ಹೆಚ್ಚು ಹೆಚ್ಚು ಗಟ್ಟಿಯಾಗಿ ಕೈಕೊಂಡ ಕಾರ್ಯವನ್ನು ಪೂರ್ಣ ಸಿದ್ಧಿಗೊಯ್ದರು.

ಅಡಿಯ ಮುಂದಿಡೆ ಸ್ವರ್ಗ |

ಅಡಿಯಹಿಂದಿಡೆ ನರಕ |

ಅಡಿಗಶ್ವ ಮೇಧ ಫಲ ಧರ್ಮ ಕಾರ್ಯಕ್ಕೆ 1

ಮಡಿಯಲೇ ಬೇಕು ಸರ್ವಜ್ಞ |

ಎ೦ಬ ಉಕ್ತಿಯನ್ನು ಆಗಾಗ್ಗೆ ಆಡಿ ತೋರಿಸಿ ಈ ಧರ್ಮ ಕಾರ್ಯವನ್ನು ನೇರವೇರಿಸಿದರು. ಈ ಕಾರ್ಯದಲ್ಲಿ ಶ್ರೀಗಳವರು ಪ್ರಕಟಗೊಳಿಸಿದ ದೃಢ ನಿಶ್ಚಯವೂ ಕ್ರಮ ಸಾಹಸಗಳೂ ಅವರ್ಣೀಯವಾಗಿರುವವು. ಶ್ರೀಗಳವರ ತಪಃ ಪ್ರಭಾವದಿಂದ ಹುಲಿಕರಡಿಗಳ ಆವಾಸಕ್ಕೆ ತಕ್ಕದಾದ ಆ ಕಾಡಡವಿಯು ಈಗ ಶಿವಯೋಗಿಗಳ ನೆಲವೀಡಿಕೆ ಸಲ್ಲುವಂಥ ಸೈಪಿನ (ಪುಣ್ಯದ) ಸೀಮೆಯಾಗಿರುವದು. ಶ್ರೀಗಳವರು ಶಿವಯೋಗಮಂದಿರದ ಕಾರ್ಯವು ಸುಲಲಿತವಾಗಿ ಸಾಗುವಂತೆ ಲಕ್ಷಾವಧಿ ರೂಪಾಯಿಗಳ ಬೆಲೆಯುಳ್ಳ ಆಸ್ತಿಯನ್ನು ಮಾಡಿಟ್ಟಿರುವರು. ಶ್ರೀಗಳಿರುವವರೆಗೆ  ಜನರು ಮಂದಿರದ ಬಗ್ಗೆ ಮನಸ್ಸು ಹಾಕದಿದ್ದರೂ ಸಾಗಿ ಹೋಯಿತು. ಇನ್ನು ಮೇಲೆ  ಪ್ರತ್ಯೇಕ ಸುಶಿಕ್ಷಿತ ವೀರಶೈವನು ಮಂದಿರದ ವಿಷಯಕ್ಕೆ ಆಲೋಚಿಸಲೇ ಬೇಕಾಗಿರುವದು. ಎಷ್ಟೋ ಜನ ಗುರುವರ್ಗದವರು ಸಂಕುಚಿತ ವಿಚಾರಗಳಿಂದ ಶಿವಯೋಗ ಮಂದಿರದ ಕಡೆಗೆ ಹೊರಳಿ ಕೂಡ ನೋಡಿರುವದಿಲ್ಲ. ಮಂದಿರವು ಶ್ರೀಗಳವರದಲ್ಲ, ವೀರಶೈವ ಸಮಾಜದ್ದು, ಅದು ಯಾವ ಸಮಯ ನಿದರ್ಶಕವಾದ ಮಠವಲ್ಲ ಗುರುಗಳಾಗತಕ್ಕವರಿಗೆ ಶಿಕ್ಷಣವನ್ನು ಕೊಡುವಂಥ ಒಂದು ಸಂಸ್ಥೆಯು, ಅಹಂಕಾರ ಮಮಕಾರಗಳನ್ನು ಮೆಟ್ಟಿ ನಿಂತಿದ್ದ ಶ್ರೀಗಳವರು ಮಂದಿರದಲ್ಲಿ ತಮ್ಮ ಸಂಬಂಧವನ್ನೇ ಇಟ್ಟುಕೊಂಡಿರುವದಿಲ್ಲ. ಯೋಗ್ಯ ಗುರುಗಳು ಮಂದಿರದಿಂದ ಸಿದ್ಧರಾಗಿ ಹೋದದ್ದನ್ನು ಕಣ್ಣಾರೆ ಕಂಡು ಧನ್ಯರಾಗಬೇಕೆಂಬುದೊಂದೇ ಸಂಬಂಧವನ್ನು ಶ್ರೀಗಳವರು ಇಟ್ಟುಕೊಂಡಿದ್ದರು. ಈ ಮನೋರಥವನ್ನು  ಸಫಲಗೊಳಿಸುವ ಭಾರವು ವೀರಶೈವ ಸಮಾಜದ ಮೇಲಿರುವದು.

ಶ್ರೀಗಳವರು ಸಂಸ್ಕೃತ ವಿದ್ಯಾಭ್ಯಾಸವೊಂದಕ್ಕೆ ಲಕ್ಷ್ಯವಿಟ್ಟು, ಉಳಿದ ವಿದ್ಯಾಭ್ಯಾಸಗಳನ್ನು ಅಲಕ್ಷಿಸಲಿಲ್ಲ. ಶ್ರೀಗಳವರಿಂದ ಆಶ್ರಯ ಹೊಂದಿದ ಎಷ್ಟೋ ಜನ ಆಂಗ್ಲ ವಿದ್ಯಾಭೂಷಿತರಾದ ಪದವೀಧರರಿರುವರು. ಇಂಗ್ಲೀಷವನ್ನು ಕಲಿತು ಅಪಕ್ವ ವಿಚಾರಗಳಿಂದ ಧರ್ಮ ಲಂಡರು ಮಾತ್ರ ಆಗಬಾರದೆಂದು ಶ್ರೀಗಳವರ ಆಗ್ರಹವಿತ್ತು ಧರ್ಮ ನಿಷ್ಠರಾದ ಪದವೀಧರರು ಉದಯರಾಗಿ, ದ್ವೀಪದ್ವೀಪಾಂತರ ಗಳಲ್ಲಿ ಸಂಚರಿಸಿ, ವೀರಶೈವರ ಇರವನ್ನು ಜಗತ್ತಿನ ನಿದರ್ಶನಕ್ಕೆ ತಂದು ಕೊಡಬೇಕೆಂದು ಶ್ರೀಗಳವರ ಮನೀಷೆಯು ಇತ್ತು. ವೀರಶೈವ ಧರ್ಮವು ರಾಷ್ಟ್ರ ಧರ್ಮವಾಗಲಿಕ್ಕೆ ತಕ್ಕ ಧರ್ಮವಿರುವದೆಂದು ಶ್ರೀಗಳವರ ನಿಶ್ಚಯವಿತ್ತು  ಕೈ. ವಾ. ವೀರಬಸವಶ್ರೇಷ್ಠಿಯವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಬೇಕೆಂದು ಶ್ರೀಗಳವರು ಪ್ರಯತ್ನಿಸಿದರು. ಕಾರಣಾಂತರಗಳಿಂದ ಶ್ರೀಗಳವರ ಈ ಕೋರಿಕೆಯು ಕೊನೆಗಾಣದೆ ಉಳಿಯಿತು.

ಶ್ರೀಗಳವರು ಪ್ರಾಥಮಿಕ ಶಿಕ್ಷಣವನ್ನಂತೂ ವಿಶೇಷವಾಗಿ ಪ್ರೀತಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣವೇ ಸಾಮಾನ್ಯ ಜನರನ್ನು ತಿದ್ದುವ ಸಾಧನವೆಂಬುದನ್ನು ಮರೆತು ಬಿಟ್ಟಿದ್ದಿಲ್ಲ. ಹಿಂದುಸ್ಥಾನದಲ್ಲಿ ಬ್ರಿಟಿಷ್ ಸರಕಾರದಿಂದ ಪ್ರಾಥಮಿಕ ಶಾಲೆಗಳು ಸ್ಥಾಪನ ವಾಗಿದ್ದರೂ ಶ್ರೀಗಳವರು ಹೋದ ಹೋದಲ್ಲಿ ವೀರಶೈವ ಶಿಕ್ಷಕರನ್ನು ಕರಿಸಿಕೊಂಡು ವೀರಶೈವ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುವಂತೆ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಹೇಗೆ ಕೊಡಬೇಕೆಂಬುದನ್ನು ಉಪದೇಶಿಸದೆ ಬಿಡಲಿಲ್ಲ. ಇಷ್ಟಕ್ಕೆ ಶ್ರೀಗಳವರಿಗೆ ತೃಪ್ತಿಯಾಗದೆ, ಶಿವಯೋಗಮಂದಿರದಲ್ಲಿ ವೀರಶೈವ ಶಿಕ್ಷಕ ಸಮ್ಮೇಲನವನ್ನು ಪ್ರತಿವರ್ಷ ಮಾಡುವ ಕಾರ್ಯವನ್ನು ಉಪಕ್ರಮಿಸಿದರು. ಒಂದು ವರ್ಷ ಅದರಂತ ಸಮ್ಮೇಲನ ಕಾರ್ಯವೂ ಕೊನೆಗೊಂಡಿತು. ದ್ರವ್ಯದ ಅಡಚಣಿಯಿಂದಲೂ, ವೀರಶೈವರಲ್ಲಿ ಸಮಾಜಾಭಿಮಾನದ ಅಂಕುರವೇ ಇಲ್ಲದೆ ಇರುವದರಿಂದಲೂ ಶ್ರೀಗಳವರು ಈ ಪ್ರಯತ್ನದಲ್ಲಿಯೂ ಸಂತೃಪ್ತರಾಗಲಿಲ್ಲ. ಆದರೂ, ಶ್ರೀಗಳವರು  ಇಷ್ಟಕ್ಕೆ ಹತಾಶರಾಗಿ ಕೂಡ್ರಲಿಲ್ಲ. ಮೊಗಲಾಯಿಯಲ್ಲಿ ಪ್ರಾಥಮಿಕ  ಶಾಲೆಗಳ ಪ್ರಸಾರವಿಲ್ಲದ್ದನ್ನು ಕಂಡು ಶಿವಯೋಗಮದಿರದಲ್ಲಿ ಶಿಕ್ಷಕರನ್ನು ತಯಾರಿಸಿ,, ಅಲ್ಲಲ್ಲಿಗೆ ಊರಮನೆ (ಗಾಂವಠಿ) ಶಾಲೆಗಳನ್ನು ನೆಲೆಗೊಳಿಸುವ ಉಪಕ್ರಮವನ್ನು ನಡೆಸಿದ್ದರು.ಉಂಡಮಾನನ್ನು ಗರು ಸಮಾಜ ಕಂಟಕರಾದ ಜನರಿಂದ ಈ ಕಾರ್ಯದಲ್ಲಿಯೂ  ಅಡ್ಡಿಗಳುಂಟಿದವು . ಕರ್ತವ್ಯ ದಕ್ಷರಾದ ವೀರಶೈವ ಶಿಕ್ಷಕರನ್ನು ಕಂಡ ಕೂಡಲೇ ಶ್ರೀಗಳವರು ಆನಂದ ಪರವಶರಾಗಿ ಹೋಗುತ್ತಿದ್ದರು. ಅಂಥವರ ಉತ್ಕರ್ಷದ ಚಿಂತನವನ್ನೇ ಮಾಡತೊಡಗುತ್ತಿದ್ದರು. ಇಂಥ ನಿಸ್ವಾರ್ಥ ಬುದ್ಧಿಯ ಸಮಾಜ ಸೇವಾ ತತ್ಪರ ಸ್ವಾಮಿಗಳು, ದೊರೆಯುವದು ಅತಿ ದುರ್ಲಭವು ! ಧನ್ಯಕುಮಾರ ಗುರುದೇವಾ ನೀನೇ ಧನ್ಯನು !!

ಮಾನವ ಪ್ರಾಣಿಗೆ ಅಗತ್ಯವಾದ ಅನುಕೂಲತೆಗಳೂ ಜಗತ್ತಿನ ಸರ್ವ ಸುಧಾರಣಾ ಕಾರ್ಯಗಳೂ ವೀರಶೈವ  ಸಮಾಜದಲ್ಲಿರಬೇಕೆಂದು ಶ್ರೀಗಳವರ ಉತ್ಕಟೇಚ್ಛೆಯಿತ್ತು. ಪಾಶ್ಚಾತ್ಯ ಔಷಧಿಗಳಲ್ಲಿ ನಿಷಿದ್ಧವಾದ ದ್ರವ್ಯಗಳಿರುತ್ತವೆ. ಹಾಗೂ ಕೇವಲ ಭಿನ್ನವಾಯುಗುಣದಲ್ಲಿ ಉತ್ಪನ್ನವಾದ ವನಸ್ಪತಿಗಳಿರುತ್ತವೆ. ಆದುದರಿಂದ, ನಮ್ಮ ದೇಶದ ರೋಗಪ್ರತೀಕಾರಕ್ಕೆ ಈ ಔಷಧಿಗಳು ಗ್ರಾಹ್ಯವಾದವುಗಳಲ್ಲವೆಂದು ಶ್ರೀಗಳವರ ವಿಚಾರಗಳಿದ್ದವು. ಈ ಕೊರತೆಯನ್ನು ನೀಗುವದಕ್ಕಾಗಿ ಶಿವಯೋಗ ಮಂದಿರದಲ್ಲಿ ಒಂದು ಆಯುರ್ವೇದ ಶಾಲೆಯನ್ನು ಏರ್ಪಡಿಯುವ ಪ್ರಯತ್ನವನ್ನು ಶ್ರೀಗಳವರು ನಡೆಸಿದರು. ದುಡ್ಡಿಲ್ಲದ್ದರಿಂದ ಈ ಕಾರ್ಯವೂ ಪೂರ್ಣ ಸಿದ್ದಿಸದೆ ಉಳಿಯಿತು. ಆದರೂ ಮಂದಿರದಲ್ಲಿ ದೇಶೀಯ ವೈದ್ಯದಲ್ಲಿ ತಜ್ಞರಾದ ವೈದ್ಯರನಿಟ್ಟು ಅವರಿಂದ ಶಿಕ್ಷಣವನ್ನು ಕೊಡಿಸುವ ಕಾರ್ಯವನ್ನು ಶ್ರೀಗಳವರು ಸಣ್ಣಪ್ರಮಾಣದಿಂದ ನಡಿಸದೆ ಬಿಡಲಿಲ್ಲ. ಇಂಥ ವೈದ್ಯರಿಗೆ ಸಹಾಯವನ್ನು ಒದಗಿಸಿಕೊಟ್ಟು ಅವರನ್ನು ಪ್ರೋತ್ಸಾಹಿಸುವದರಲ್ಲಿ ಶ್ರೀಗಳವರು ಹಿಂದೆ ಮುಂದೆ ನೋಡಲಿಲ್ಲ.

ಔದ್ಯೋಗಿಕ ಶಿಕ್ಷಣದ ಬಗ್ಗೆ ಪ್ರಯತ್ನಿಸುವದನ್ನು ಶ್ರೀಗಳವರು ಬಿಡಲಿಲ್ಲ ಶಿವಯೋಗ ಮಂದಿರದಲ್ಲಿ ಶಾಸ್ತ್ರೀಯ ಪದ್ಧತಿಯಂತೆ ಮಾದರಿಯ ಹೊಲವನ್ನು (ಫಾರ್ಮ) ಮಾಡಿಸುವ ಪ್ರಯತ್ನವನ್ನು ನಡಿಸಿದರು. ಗೋಶಾಲೆಗಳನ್ನು ಏರ್ಪಡಿಸಿದರು  ಬಾಗಲಕೋಟೆಯಲ್ಲಿ ಮಂದಿರದ ದ್ರವ್ಯದಿಂದ ಒಂದು ಜಿನಿಂಗ ಫ್ಯಾಕ್ಟರಿಯನ್ನು ನಿರ್ಮಾಣ ಮಾಡಿಸಿರುವರು. ಅದು ಅತ್ಯುತ್ತಮವಾಗಿ ಲಾಭದಾಯಕವೂ ವೀರಶೈವರಿಗೆ ಉದ್ಯೋಗ ಮಾರ್ಗದರ್ಶಕವೂ ಆದ ಸಂಸ್ಥೆಯಾಗಿ  ಕಂಗೊಳಿಸುತ್ತಿರುವದು. ಮೈಸೂರ ಸೀಮೆಯ ಕಪ್ಪನಹಳ್ಳಿ ಎಂಬ ಗ್ರಾಮದಲ್ಲಿ ಎಂಜಿನ್ನದ ಸಹಾಯದಿಂದ ನೀರನ್ನು ಹಾಯಿಸಿ, ಕಬ್ಬಿನ ಬೆಳೆಯನ್ನು ತೆಗೆದುಕೊಳ್ಳುವ ಕೆಲಸವನ್ನು ಶ್ರೀಗಳವರು ನಡಿಸಿದರು. ಈ ಕಾರ್ಯವೂ ಯಶಸ್ವಿಯಾಗಿರುವುದು. ಇಂಥ ಉದ್ಯೋಗಗಳಲ್ಲದೆ ವೀರಶೈವರಿಗೆ ಅತ್ಯಗತ್ಯವಾದ ಭಸ್ಮ, ಲಿಂಗಪೀಠ, ಶಿವದಾರ ಮೊದಲಾದ ಸಣ್ಣ ಪುಟ್ಟ ಉದ್ಯೋಗಗಳಿಗೂ ಶ್ರೀಗಳವರು ಬಹಳ ಉತ್ತೇಜನವನ್ನು ಕೊಟ್ಟರು.

ಶಿವಯೋಗಮಂದಿರದಲ್ಲಿ ಮಹಿಳಾ ಪರಿಷತ್ತನ್ನು ನೆರೆಯಿಸಿ, ಸ್ತ್ರೀ ಶಿಕ್ಷಣಕ್ಕೆ ಉತ್ತೇಜನವನ್ನು ಕೊಡುವ ಕಾರ್ಯಕ್ರಮವು ನಡದೇ  ಇರುವದು. ವೀರಶೈವರಲ್ಲಿ ಆದರ್ಶ ಸ್ತ್ರೀ ಪುರುಷರು ತಲೆದೋರುವದಕ್ಕೆ ಮಾಡತಕ್ಕ ಪ್ರಯತ್ನಗಳನ್ನೆಲ್ಲ ಶ್ರೀಗಳವರು ಮಾಡಿಬಿಟ್ಟರು. ಶ್ರೀಗಳವರಿಗೆ ಪರಶಿವನು ದಯಪಾಲಿಸಿದ ಮೇಧಾಶಕ್ತಿಗೂ, ನಿಸ್ಸ್ವಾ ರ್ಥಯುಕ್ತವಾದ ಪರೋಪಕಾರ ಬುದ್ದಿಗೂ, ಧನಸಹಾಯವೂ ಜನಸಹಾಯವೂ ಜೋಡಾಗಿದ್ದರೆ ವೀರಶೈವ ಸಮಾಜದಲ್ಲಿ ಕುಮಾರ ಸೃಷ್ಟಿಯೆಂಬ ಒಂದು ಸರ್ವಾಂಗ ಸುಂದರವಾದ ಹೊಸ ಸೃಷ್ಟಿಯ ಕಂಗೊಳಿಸುತ್ತಿತ್ತೆಂದು ಹೇಳಿದರೆ, ಅತಿಶಯೋಕ್ತಿಯಾಗಲಾರದು.

ವ್ಯಾಖ್ಯಾನಾದಿಗಳು : ಶ್ರೀಗಳವರು ಅನೇಕ ಪ್ರಕಾರದ ಸಭೆಗಳನ್ನು ಏರ್ಪಡಿಸಿ, ಅನುಭವಿಕರಾದ ವಿದ್ವಜ್ಜನರಿಂದ ವ್ಯಾಖ್ಯಾನ ಕೊಡಿಸಿ, ಒಳ್ಳೇ ಒತ್ತರದಿಂದ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು. ವೀರಶೈವ ಮಹಾಸಭೆಯಾದರೂ ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಕೆಲವು ವರ್ಷ ಅತಿ ವೈಭವದಿಂದ ನಿರ್ವಿಘ್ನವಾಗಿ ನೆರವೇರಿತು. ಆ ಮಹಾಸಭೆಗೆ ಶ್ರೀಗಳವರ ಸಂಬಂಧ ತಪ್ಪಿದ ಕೂಡಲೇ ಕಲ್ಲಾಪಿಲ್ಲಿ ಯಾಗಿ ಕೂತಿರುವದು. ಶ್ರೀಗಳವರು ಸಭೆಗಳಲ್ಲಿ ಮಾತ್ರ ಕೆಲಸವನ್ನು ಮಾಡಿ ಉಳಿದ ವೇಳೆಯಲ್ಲಿ ಕೈಮುಚ್ಚಿಕೊಂಡು ಕೂಡುತಿದ್ದಿಲ್ಲ. ಸಭೆಗಳಲ್ಲಾದ ಗೊತ್ತುವಳಿಯನ್ನು ಬಳಿಕೆಯಲ್ಲಿ ತರತಕ್ಕ ಉಪಾಯಗಳನ್ನು ಆ ಕೂಡಲೇ ಆರಂಭಿಸುತ್ತಿದ್ದರು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಜನಸ್ತೋಮವು ಕೂಡಿಯೇ ಕೂಡುತ್ತಿತ್ತು. ಇಂಥ  ಸುಸಮಯವನ್ನು ಎಂದೂ ವ್ಯರ್ಥವಾಗಿ ಹೋಗಗೊಡುತ್ತಿದ್ದಿಲ್ಲ. ಆ ಕಾಲಕ್ಕೆ ಪುರಾಣ ಪ್ರವಚನಗಳಾಗಲಿ, ವ್ಯಾಖ್ಯಾನ ಕೀರ್ತನಗಳಾಗಲಿ ನಡದೇ ತೀರುತ್ತಿದ್ದವು. ಇದರಿಂದ ಜನರಿಗೆ ಅನೇಕ ವಿಷಯಗಳ ಶಿಕ್ಷಣವು ಸಹಜವಾಗಿಯೇ ದೊರೆಯುತ್ತಿತ್ತು.ʼʼ ಶ್ರೀಗಳಿದ್ದಲ್ಲಿ ಸಭೆಗಳು” ಎಂಬ ನಾಣ್ಣುಡಿಯೇ ಜನತೆಯಲ್ಲಿ ಉತ್ಪನ್ನವಾಗಿ ಹೋಗಿತ್ತು.

ಶಿವಕೀರ್ತನಗಳು : ವೀರಶೈವರಲ್ಲಿ ಕೀರ್ತನಕಾರರೇ ಇದ್ದಿದ್ದಿಲ್ಲ; ಲೋಕ ಶಿಕ್ಷಣಕ್ಕೆ ಶಿವಕೀರ್ತನಗಳೂ ಒಳ್ಳೇ ಸಹಾಯಕಾರಿಗಳಾದುದರಿಂದ ಶ್ರೀಗಳವರು ಕೀರ್ತನಗಳ ಪ್ರಸಾರವನ್ನು ಪ್ರಾರಂಭಿಸಿದರು. ಶಿವಯೋಗಮಂದಿರವು ಅಸ್ತಿತ್ವದಲ್ಲಿ ಬಂದ ಕೂಡಲೇ ಕೀರ್ತನಕಾರರಿಗೆ ಬೇಕಾದ ಅನುಕೂಲತೆಗಳನ್ನು ಶ್ರೀಗಳವರು ಒದಗಿಸಿಕೊಟ್ಟರು. ಗಾಯನ ಶಾಲೆಯನ್ನೇರ್ಪಡಿಸಿ, ಕೀರ್ತನಕಾರರಿಗೆ ಸಂಗೀತದ ಜ್ಞಾನವನ್ನು ಮಾಡಿಸಿ ಕೊಡಹತ್ತಿದರು. ವೀರಶೈವ ಧರ್ಮದ ಮರ್ಮವನ್ನು ತಾವೇ ಅವರಿಗೆ ಹೇಳುತ್ತಿದ್ದರು. ಕೀರ್ತನಗಳು ಸಮಾಜ ಸುಧಾರಣೆಗೆ ಅನುಕೂಲವಾಗುವಂತೆ ಯಾವ ಧೈಯದಿಂದ ಸಾಗತಕ್ಕದ್ದೆಂಬುದನ್ನು ವಾದಪ್ರವಾಹಗಳಿಂದ ಗೊತ್ತು ಮಾಡಿಕೊಟ್ಟರು. ಶ್ರೀಗಳವರ ಪ್ರಯತ್ನದಿಂದ ವೀರಶೈವರಲ್ಲಿ ಅಸಂಖ್ಯ ಶಿವಯೋಗ ಕೀರ್ತನಕಾರರು ಮುಂದುವರಿದರು. ಅವರಲ್ಲಿ ಕೆಲಕೆಲವರಂತೂ ಅದ್ವಿತೀಯ ಕೀರ್ತನಕಾರರೆನಿಸಿಕೊಂಡಿರುವರು. ಕೀರ್ತನಗಳ ಪ್ರಸಾರದಿಂದ ವೀರಶೈವರಲ್ಲಿ ಅನೇಕ ವಿಷಯಗಳ ಜ್ಞಾನವಾಗಿ ಜಾಗೃತಿಯು ನೆಲೆಗೊಂಡಿತು. ಶಿವಕೀರ್ತನವೆಂಬ ಶಬ್ದವು ಕನ್ನಡ ವಾಙ್ಮಯದಲ್ಲಿ ಶ್ರೀಗಳವರಿಂದಲೆ ಹೊಸದಾಗಿ ಸೇರಿತೆಂದು ಹೇಳಬಹುದು.

 ಉಪದೇಶಕರು : ಜನತೆಯಲ್ಲಿ ಶಿಕ್ಷಣ ಪ್ರಸಾರವಾಗಲಿಕ್ಕೆ ಕ್ರಿಶ್ಚಿನ್ ಮಿಶನರಿಗಳಂತ್ತೆ ಕಾರ್ಯಾರಂಭವನ್ನು ಮಾಡಿದರು.  ಉಪದೇಶಕರನ್ನು ನೇಮಿಸಬೇಕೆಂದು ಶ್ರೀಗಳವರ ವಿಚಾರವಿತ್ತು. ಅದರಂತೆ, ಕೈ.ವಾ. ವೀರಬಸವ ಶ್ರೇಷ್ಠಿಯವರು ಈ ಉಪದೇಶಕ ಕಾರ್ಯವನ್ನು ಶಿವಯೋಗಮಂದಿರದ ಪಕ್ಷದಿಂದಲೇ ಕೆಲವು ವರ್ಷ ಮಾಡಿದರು. ದುಡ್ಡಿನ ಅಡಚಣಿಯಿಂದ ಈ ಸ್ತುತ್ಯ ಕಾರ್ಯವು ಅಷ್ಟಕ್ಕೇ  ನಿಂತುಹೋಯಿತು.

ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು : ಶ್ರೀಗಳವರು ವೀರಶೈವರ ಶಿಕ್ಷಣ ಪ್ರಸಾರಕ್ಕೆ ವಾರ ಪತ್ರಿಕೆಗಳ ಹಾಗೂ ಮಾಸ ಪತ್ರಿಕೆಗಳ ಉಪಯೋಗವನ್ನು ಮಾಡಿಕೊಳ್ಳದೆ ಬಿಡಲಿಲ್ಲ. ಆರಂಭದಲ್ಲಿ ಮೈಸೂರ ಸ್ಟಾರ ಪತ್ರಿಕೆಯೊಂದೇ ನಮ್ಮ ಸಮಾಜದಲ್ಲಿ ಹೊರಡುತ್ತಿತ್ತು, ಉತ್ತರ ಕರ್ನಾಟಕದಲ್ಲಿ ಶ್ರೀಗಳವರ ಉಪದೇಶದಿಂದ ಆ ವಾರ ಪತ್ರಿಕೆಯ ಪ್ರಸಾರವು ಹೆಚ್ಚಾಯಿತು. ಧರ್ಮತರಂಗಿಣಿ ಎಂಬ ಮಾಸ ಪತ್ರಿಕೆಯು ಕೇವಲ ಶ್ರೀಗಳವರ ಕೃಪೆಯ ಬಲದಿಂದಲೇ ನಡೆದಿತ್ತು. ಕರ್ನಾಟಕದಲ್ಲಿ ಧರ್ಮತರಂಗಿಣಿಯು ಪ್ರವೇಶಿಸದ ವೀರಶೈವರ ಮನೆಗಳೇ ಇದ್ದಿಲ್ಲವೆಂದು ಹೇಳಬಹುದು. ಈ ಪತ್ರಿಕೆಗಳಿಗೆ ಸಮಾಜ ಹಿತವಾಗುವಂಥ ಸೂಚನೆಗಳನ್ನು ಶ್ರೀಗಳವರು ಸಕಾಲಕ್ಕೆ ತಿಳಿಸುತ್ತಲೇ ಇದ್ದರು.

ಪ್ರಾಚೀನ ಗ್ರಂಥಗಳ ಸಂಶೋಧನವೂ ಹೊಸ ಗ್ರಂಥಗಳ ಪ್ರಸಾರವೂ : ಲೋಕ ಶಿಕ್ಷಣಕ್ಕೆ ಗ್ರಂಥ ಭಾಂಡಾಗಾರವು ಒಳ್ಳೇ ಬಲವಾದ ಸಾಧನವಾಗಿರುವದು. ರಾಜಾಶ್ರಯವು ತಪ್ಪಿ ಹೋದುದರಿಂದಲೂ, ಪರಮತದವರ ಮತ್ಸರದಿಂದಲೂ ವೀರಶೈವ ಪ್ರಾಚೀನ ಗ್ರಂಥಗಳು ಉಪಲಬ್ಧವಿಲ್ಲದೆ ಹೋಗಿದ್ದವು. ಆದುದರಿಂದ ಪ್ರಾಚೀನ ಗ್ರಂಥಗಳ ಸಂಶೋಧನಕ್ಕಾಗಿ ಒಂದು ಮಂಡಲವನ್ನೇರ್ಪಡಿಸಬೇಕೆಂದು ಸ್ವಾಮಿಗಳು ಪ್ರಯತ್ನಿಸಿದರು. ಜನಸಹಾಯ ಧನಸಹಾಯಗಳು ದೊರೆಯದ್ದರಿಂದ ಈ ಕಾರ್ಯವು ಪೂರ್ಣಸಿದ್ಧಿಗೆ ಹೋಗಲಿಲ್ಲ. ಆದರೂ, ಶ್ರೀಗಳವರು ತ್ರಾವಣಕೋರ ಮೊದಲಾದ ಸ್ಥಲಗಳಿಗೆ ಶಾಸ್ತ್ರಿಗಳನ್ನು ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ, ಅವುಗಳ ಸಂಶೋಧವನ್ನು ಮಾಡಿಸಿರುವರು. ಶ್ರೀಗಳವರ ಪ್ರಯತ್ನದ ಪ್ರಭಾವದಿಂದಲೆ ಮೂಲಿಗುಂಪಾಗಿ ಹುಳದ ಬಾಯಿಗೆ ತುತ್ತಾಗಿ ಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಶಿವಯೋಗಮಂದಿರದಲ್ಲಿ ವಚನ ಗ್ರಂಥಗಳ ಭಂಡಾರವೇ ಏರ್ಪಟ್ಟಿರುವದು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತ ಹಸ್ತದಿಂದ ಸಹಾಯವನ್ನು ಮಾಡುತ್ತಿದ್ದರು. ಸಣ್ಣ ಸಣ್ಣ ಧರ್ಮಗ್ರಂಥಗಳನ್ನು ಮುದ್ರಿಸಿ, ಮಿಶನರಿಗಳಂತೆ ಒಂದೆರಡು ದುಡ್ಡುಗಳಿಗೆ ಅವು ದೊರೆಯುವಂತೆ ಮಾಡಬೇಕೆಂದು ಶ್ರೀಗಳವರ ವಿಚಾವಿತ್ತು ಆದರೆ ಮಾಡತಕ್ಕ ಕೆಲಸಗಳು ಹೆಚ್ಚಾಗಿ ದುಡ್ಡಿನ ಅಡಚಣಿಯು ಬೆಳೆದದ್ದರಿಂದ ಇಂಥ ಮಹತ್ತರ ಕಾರ್ಯಗಳು ಸಹ ನಿರುಪಾಯದಿಂದ ಅಷ್ಟಕ್ಕೆ ನಿಂತವು.

 ವಾಚನ ಮಂದಿರಗಳು : ಆರಂಭದಲ್ಲಿ ಶ್ರೀಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದವು.

 ನೈತಿಕ ಶಿಕ್ಷಣ : ನೈತಿಕ ಶಿಕ್ಷಣಕ್ಕೆ ಶ್ರೀಗಳವರು ಹೆಚ್ಚು ಮಹತ್ವವನ್ನು ಕೊಡುತ್ತಿದ್ದರು. ಎಂಥ ದೊಡ್ಡ ಸ್ವಾಮಿಯಾಗಿರಲಿ, ವಿದ್ವಾಂಸನಿರಲಿ, ಶ್ರೀಮಂತನಿರಲಿ, ಅಧಿಕಾರಿಯೇ ಇರಲಿ, ಅವರಲ್ಲಿ ಶೀಲ (ನೀತಿ) ಒಂದಿಲ್ಲದಿದ್ದರೆ ನಿರುಪಯುಕ್ತ ಮನುಷ್ಯನೆಂದೇ ಶ್ರೀಗಳವರು ತಿಳಿಯುತ್ತಿದ್ದರು. ಅಂಥ ಮನುಷ್ಯರಿಗೆ ಶ್ರೀಗಳವರಲ್ಲಿ ಬೆಲೆಯು ಬರುತ್ತಿದ್ದಿಲ್ಲ. ನೀತಿ ಶಿಕ್ಷಣದ ಪಾಠವನ್ನು ಪಡೆಯಲಿಕ್ಕೆ ಶ್ರೀಗಳವರೇ ಪ್ರತ್ಯಕ್ಷ ವಸ್ತುವಾಗಿದ್ದರು. ಶ್ರೀಗಳವರು ತಮ್ಮ ಪ್ರತ್ಯಕ್ಷವಾದ ಆಚರಣೆಯಿಂದ ನೀತಿಬೋಧದ ಪಾಠವನ್ನು ಎಲ್ಲರಿಗೂ ಅಪ್ರತ್ಯಕ್ಷವಾಗಿ ಬೋಧಿಸುತ್ತಿದ್ದರು. ಶ್ರೀಗಳವರು ನೀತಿಯ ಸಾಕಾರ ಮೂರ್ತಿಯೇ ಆಗಿದ್ದರೆಂದು ಹೇಳಿದರೆ ಅತಿಶಯೋಕ್ತಿಯಾಗದು. ಶ್ರೀಗಳಲ್ಲಿಯ ಧೈರ್ಯಸ್ಥೈರ್ಯಗಳು, ಪರೋಪಕಾರ ಪರಾಯಣತೆಯು, ವಿರತಿ ವಿತರಣೆಗಳು ನಿರಭಿಮಾನ ನಿಸ್ವಾರ್ಥತೆಗಳು, ಶಾಂತಿದಾಂತಿಗಳು ಭೂತದಯೇ, ಅತ್ಯುಜ್ವಲವಾದ ಬ್ರಹ್ಮಚರ್ಯ, ಇವೇ ಮೊದಲಾದ ಸದ್ಗುಣಗಳು ಲೋಕೋತ್ತರ ವಾಗಿದ್ದವು!! ಶ್ರೀಗಳಲ್ಲಿ ಸಹಜವಾಗಿಯೇ ವಾಸವಾಗಿರುತ್ತಿದ್ದ ಈ ಸದ್ಗುಣಗಳ ಸಮುಚ್ಚಯದಿಂದ ಉದ್ಭವಿಸಿದ ಗುಪ್ತ ಶಕ್ತಿಯು ಅಸಂಖ್ಯ ವೀರಶೈವರನ್ನು ಸನ್ಮಾರ್ಗ ಪ್ರವೃತ್ತರನ್ನು ಮಾಡದೆ ಬಿಡಲಿಲ್ಲ. ದುರುಳ ವೇದಾಂತಿಗಳಿಂದ ಸಮಾಜದಲ್ಲಿ ಆಗುತ್ತಿರುವ ಧರ್ಮಲೋಪವನ್ನು ನೀತಿ ಬಾಹ್ಯ ಆಚರಣೆಗಳನ್ನು ಶ್ರೀಗಳವರು ಯುಕ್ತಿ  ಪ್ರಯಕ್ತಿಗಳಿಂದಲೂ, ಶಾಸ್ತ್ರಾಧಾರದಿಂದಲೂ ಖಂಡಿಸಿ ಬಿಟ್ಟಿದ್ದರು. ದೇಶದಲ್ಲೆಲ್ಲ ಸಂಚರಿಸಿ, ಆ ದುರುಳರಿಂದ ಆಗುವ ಅನರ್ಥ ಪರಂಪರೆಗಳನ್ನು ಜನತೆಯ ನಿದರ್ಶನಕ್ಕೆ ತಂದು ಕೊಟ್ಟು, ದುರುಳರ ಬಗ್ಗೆ ಜನತೆಯಲ್ಲಿ ತಿರಸ್ಕಾರವನ್ನು ಕಂಡು ಶ್ರೀಗಳವರು ಮರಮರನೆ ಮರಗುತ್ತಿದ್ದರು. ಪ್ರಮರ್ಥವರ್ಗದ ನಿಂದೆಯನ್ನು ಕೇಳಿ ಉದ್ವೇಗ ಚಿತ್ತರಾಗಿ, ತಮ್ಮ ಶಕ್ತಿ ಸರ್ವಸ್ವವನ್ನೆಲ್ಲ ಧಾರೆಯೆರೆದು ಈ ಕಲಹವನ್ನು ಶಾಂತಿಗೊಳಿಸಬೇಕೆಂದು ಆತುರಪಡುತ್ತಿದ್ದರು. ದೊಡ್ಡದೊಂದು ಸಭೆಯನ್ನೇರ್ಪಡಿಸಿ, ಶಾಸ್ತ್ರಾಧಾರಗಳಿಂದ ಈ ಕಲಹದ ನಿರ್ಣಯವನ್ನು ಮಾಡಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು. ಆದರೆ ಸಮಾಜದ ದುರ್ದೈವವು ಶ್ರೀಗಳವರ ಈ ಕಾರ್ಯವನ್ನು ನೆರವೇರಗೊಡಲಿಲ್ಲ. ಶ್ರೀಗಳವರು ಈ ಮೇರೆಗೆ ಸಮಾಜದಲ್ಲಿ ನೀತಿಯ ಪ್ರಸಾರವನ್ನು ಮಾಡಲು ಪ್ರಯತ್ನಿಸಿದರು. 

ಪರಿಣಾಮ : ಶ್ರೀಗಳವರ ಪ್ರಯತ್ನದಿಂದ ವೀರಶೈವರೊಳಗಿನ ಹಲಕೆಲವು ಕೆಟ್ಟ ರೂಢಿಗಳು ಅಳಿದುಹೋದವು. ವೀರಶೈವ ಧರ್ಮವು ವೇದ ಸಮ್ಮತವಾದ ಸರ್ವೋತ್ಕೃಷ್ಟ ಧರ್ಮವೆಂದು ಪರಮತದವರಿಗೂ ಮನವರಿಕೆಯಾಯಿತು. ವೀರಶೈವರಂತೂ ತಮ್ಮ ಧರ್ಮದ ಉತ್ಕೃಷ್ಟತೆಯನ್ನು ನೆನೆಸಿ (ಸ್ಮರಿಸಿ) ಅಭಿಮಾನದಿಂದ ತಲೆಯೆತ್ತಿ ನಡೆಯುವಂತಾಯಿತು.  ವೀರಶೈವರಲ್ಲಿ ಜಾಗೃತಿಯು ಉತ್ಪನ್ನವಾಗಿ: ಧಾರ್ಮಿಕ ಸಾಮಾಜಿಕ ಸುಧಾರಣೆಗಳ ಕುರುಹುಗಳು  ತಲೆದೋರಹತ್ತಿರುವವು. (ಪರಶಿವನ ಕೃಪೆಯಿಂದ ಅವೆಲ್ಲವುಗಳ ಯೋಗ್ಯ ನಿರ್ಣಯವು ಬೇಗನೆ ಆಗಲಿಕ್ಕೆ ಬೇಕಾಗಿರುವದು.). ಸಮಾಜದಲ್ಲಿ ಧಾರ್ಮಿಕ ಬೌದ್ಧಿಕ, ಸಾಮಾಜಿಕ, ಔದ್ಯೋಗಿಕ ಶಿಕ್ಷಣಗಳ ಪ್ರಸಾರವಾಯಿತು

ಖಂಡಿಸದೆ ಕರಣವನು |

ದಂಡಿಸದೆ ದೇಹವನು |

ಉಂಡುಂಡು ಸ್ವರ್ಗಕೈದಲಿಕ್ಕದನೇನು |

ರಂಡೆಯಾಳುವಳೆ ಸರ್ವಜ್ಞ |

 ಎಂಬ ಸರ್ವಜ್ಞ ಕವಿಯ ವೀರವಾಣಿಯ ಸತ್ಯತೆಯನ್ನು ಶ್ರೀಗಳವರು ತಮ್ಮ ಆಚರಣೆಯಿಂದ ಜನತೆಯ ಅನುಭವಕ್ಕೆ ತಂದು ಕೊಟ್ಟರು. ಇಂದ್ರಿಯಗಳ ನಿಗ್ರಹವೂ ದೇಹ ದಂಡನೆಯೂ ಇಲ್ಲದೆ ಐಹಿಕ ಪಾರಲೋಕಿಕ ಕಾರ್ಯಗಳೆಂದೂ ಸಿದ್ಧವಾಗಲಾರ ವೆಂಬ ತಮ್ಮ ಪ್ರತ್ಯಕ್ಷ ಪ್ರಯೋಗವನ್ನು ಶ್ರೀಗಳವರು ಸಮಾಜದೆದುರಿಗಿಟ್ಟು ಹೋಗಿರುವರು. ಶ್ರೀಗಳವರ ಉದಾಹರಣೆಯಿಂದ ಸರ್ವಜ್ಞ ಕವಿಯ ಮೇಲಿನ ನೀತಿಯ ರಹಸ್ಯವನ್ನರಿತು ಶ್ರೀಗಳವರು ಒಡ್ಡಿದ ಅನೇಕ ಸಾಮಾಜಿಕ ಕಾರ್ಯಗಳನ್ನು ಪುರೋವೃದ್ಧಿಗೆ ಒಯ್ಯುವುದು ಪ್ರತ್ಯೇಕ ಸುಶಿಕ್ಷಿತ ವೀರಶೈವನ ಕರ್ತವ್ಯವಾಗಿರುವದು. ಇಂತಹ ಸದ್ಭುದ್ಧಿಯನ್ನು ಪರಮಾತ್ಮನು ದಯಪಾಲಿಸಲೆಂದೂ, ವೀರಶೈವ ಸಮಾಜವು ಅಂತಹ ಸುಯೋಗವನ್ನು ಕಣ್ಣಾರೆ ಕಂಡು ಅನಂದಿಸುವ ಸುಸಮಯವು ಬೇಗನೆ ಪ್ರಾಪ್ತವಾಗಲೆಂದು ಪರಶಿವನನ್ನು ಅನನ್ಯಭಾವದಿಂದ ಪ್ರಾರ್ಥಿಸಿ ,ಸಮಾಜ ಸೇವಾರೂಪ ತಪಸ್ಸಿನಿಂದ ಪರಮ ಪವಿತ್ರವಾದ ಶ್ರೀಗಳವರ ದಿವ್ಯ ಪಾದಾರವಿಂದಗಳಿಗೆ ಲೇಖನ ರೂಪವಾದ ಈ ಅನಂತ ಪ್ರಣಾಮಗಳನ್ನು ಸಮರ್ಪಿಸುವೆನು.

• ಶ್ರೀ ಆನೆಕೊಂಡದ ಮುಪ್ಪಣ್ಣನವರು, ಡಾವಣಗೆರೆ

ಜಗತ್ತಿನಲ್ಲಿ ಅನೇಕ ವಿಧವಾದ ಸತ್ಕಾರ್ಯಗಳನ್ನು ಮಾಡುತ್ತಿರುವರಾದಾಗ್ಯೂ ಭೂತ ದಯಾ ಪರರೂ, ಅಹಿಂಸಾಭಿಮಾನಿಗಳು ಆಗಿರುವುದು ಬಹು ಅಪರೂಪ ವಾಗಿದೆ. ಹೀಗೆಂದ ಮಾತ್ರಕ್ಕೆ ಪ್ರಾಣಿಗಳನ್ನು ಕೊಲ್ಲಲು ಅಥವಾ ಕೊಲ್ಲಿಸಲು ಸಹಾಯಕರಾಗಿರುವರೆಂದು ನನ್ನ ಅಭಿಪ್ರಾಯವಲ್ಲ. ಆದರೆ ಪ್ರಾಣಿಗಳಿಗೊದಗಿರುವ ಸಂಕಟವನ್ನು ಪರಿಹರಿಸಲು ಯತ್ನಿಸುವುದಿಲ್ಲ. ಈ ಕಾರಣದಿಂದಲೇ ವ್ಯವಸಾಯವೇ ಪ್ರಾಧಾನ್ಯವಾಗಿರುವ ಈ ನಮ್ಮ ಭರತಖಂಡದಲ್ಲಿ ವ್ಯವಸಾಯಕ್ಕೆ ಮುಖ್ಯಾಧಾರದ ಹೋರಿ, ಗೋವು ಮೊದಲಾದವುಗಳು ಬಹಳ ಕಡಿಮೆಯಾಗಿ ನಮ್ಮ ವ್ಯವಸಾಯವು ಕೇವಲ ನಿಕೃಷ್ಟ ಸ್ಥಿತಿಗೆ ಬಂದಿದೆ. ಇನ್ನೂ ಕೆಲವು ಕಾಲದವರೆಗೂ ದೇಶದಲ್ಲಿ ಗೋವಧೆಯು ನಿರ್ವಿಘ್ನವಾಗಿ ನಡೆದಲ್ಲಿ ಈಗಿರುವ ಅಲ್ಪಸ್ವಲ್ಪ ಪ್ರಾಣಿಗಳೂ ಸಹಕಟುಗರ ಪಾಲಾಗಿ ನಮ್ಮ ವ್ಯವಸಾಯಕ್ಕೆ ಬಹುತೊಂದರೆ ಬರುವ ಪ್ರಸಂಗವಿದೆ.

 ಯಾವ ನಮ್ಮ ಪೂರ್ವಿಕರು ಹಾಲು, ಮೊಸರು ಮತ್ತು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳ ಸೇವನೆಯಿಂದ ದೃಢಾಂಗರಾಗಿ ಹೆಚ್ಚು ಕಾಲ ಬದುಕುತ್ತಿದ್ದರೋ ಅದೇ ವಂಶದವರಾದ ನಾವು ಹಾಲು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳಿಲ್ಲದೆ ಸಚಿವ ಹೆಣಗಳಂತಾಗಿ ಅಕಾಲ ಮರಣವನ್ನು ಹೊಂದುತ್ತಿರುವವು, ಶಿಶುಗಳ ಮರಣ ಸಂಖ್ಯೆಯಂತೂ ಮಿತಿಮೀರಿತು. ಈಗ ದೊರೆಯುವ ಹಾಲೆಂದರೆ ಕಾಲುವಾಸಿ ಹಾಲಿಗೆ ಮುಕ್ಕಾಲುವಾಸಿ ನೀರನ್ನು ಬೆರೆಯಿಸಿದ ಹಾಲೇ! ದನಗಳು ಯಥೇಚ್ಛವಾಗಿದ್ದಾಗ ಹಾಲು ತುಪ್ಪಗಳಿಂದ ಕೈ ತೊಳೆಯುತ್ತಿದ್ದವರು ಈಗ ಎಳೆ ಮಕ್ಕಳಿಗೆ ಅಥವಾ ರೋಗಿಗಳಿಗೆ ಸ್ವಲ್ಪ ಹಾಲು ಬೇಕೆಂದರೂ ದೊರೆಯುವುದೇ ದುರ್ಲಭವಾಗಿದೆ. ಈಗ ನಮಗೆ ಹಾಲು ತುಪ್ಪಗಳೆಂದರೆ ಪರದೇಶಗಳಿಂದ ಪೆಟ್ಟಿಗೆಗಳಲ್ಲಿ ಪ್ಯಾಕಾಗಿ ಬರುವ Condensed milk (ಕಂಡೆನ್ಸ್ಡ ಹಾಲು) Vegetable ghee (ಸಸ್ಯಗಳಿಂದ ತಯಾರಿಸಿದ ತುಪ್ಪ) ಇವುಗಳೇ ಗತಿಯಾಗಿವೆ. ಇಂತಹ ದುಸ್ಥಿತಿಯು ನಮಗೆ ಬರಲು ಕಾರಣವೆಂದರೆ ನಾವು ದನಗಳ ವಿಷಯದಲ್ಲಿ ನಿರ್ದಯರಾಗಿ ಅವುಗಳನ್ನು ಕಟುಗರಿಗೆ ಕೊಡುವದ ಕಾರಣವಾಗಿದೆ.

ನಮ್ಮ ದೇಶಕ್ಕೊದಗಿರುವ ದನಗಳ ಸಂಹಾರವೆಂಬ ಮಹಾಮಾರಿಯನ್ನು ತಪ್ಪಿಸದ ಹೊರ್ತು ನಮ್ಮಗಳ ಏಳ್ಗೆಗಾಗಿ ದೇಶಾಭ್ಯುದಯಕ್ಕಾಗಲೀ ಮಾರ್ಗವೇ  ಇಲ್ಲದಂತಾಗಿದೆ. ದೇಶದಲ್ಲಿ ನಡೆದಿರುವ ಇಂತಹ ಅನ್ಯಾಯವನ್ನು   ನೋಡಿಯೂ ನೋಡದವರಂತೆ ಸುಮ್ಮನಿರುವುದೆಂದರೆ ನಮ್ಮ ಕಾಲಮೇಲೆ ನಾವೇ ಕಲ್ಲು ಹಾಕಿಕೊಂಡಂತೆಯೇ ಸರಿ. ದೇಶಾಭ್ಯುದಯಕ್ಕೆ ಮಹಾ ಅನರ್ಥಕಾರಿಯಾದ ಮೇಲ್ಕಂಡ ದುರಭ್ಯಾಸವನ್ನು ನಿಲ್ಲಿಸುವುದು ಪರಮ ಕರ್ತವ್ಯವಾಗಿದ್ದರೂ ಅನೇಕರು ಆ ಕಡೆಗೆ ಲಕ್ಷಕೊಡದಿರುವುದು ವಿಷಾದಕರವಾದ ಸಂಗತಿಯಾಗಿದೆ. ಕಾಯಿದೆ ಕೌನ್ಸಿಲ್‌ ಮೆಂಬರಗಳೂ ಸಭ್ಯ ಗೃಹಸ್ಥರೂ ಕೊಂಚ ಪ್ರಯತ್ನಪಟ್ಟು ಈ ಅನರ್ಥವನ್ನು ತಪ್ಪಿಸುವುದು ಅತ್ಯಾವಶ್ಯಕ. ಗುರುಗಳೆಂಬುವರೂ ಸಹ ಈ ವಿಷಯದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದಂತ್ತೆ ಭಕ್ತರಲ್ಲಿ ಜಾಗೃತಿಯನ್ನು ಉತ್ಪನ್ನ ಮಾಡಬೇಕು.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಭೂತ ದಯಾಪರರಾಗಿದ್ದರಲ್ಲದೆ ತಮ್ಮ ನಿತ್ಯ ಕರ್ಮಗಳ ಜೊತೆಗೆ ಪ್ರಾಣಿಗಳ ಸಂಕಟ ನಿವಾರಣೆ ಮಾಡುವ ವೃತ್ತಿಯನ್ನು ಕೈಕೊಂಡಿದ್ದರು. ಆಗಾಗ್ಗೆ ಶಿಷ್ಯರಿಗೆ ಪ್ರಾಣಿದಯೆಯ ವಿಷಯವಾಗಿ ಉಪದೇಶಿಸಿ ಯಾವ ಪ್ರಾಣಿಯೇ ಆಗಲಿ ಸಂಕಟದಿಂದ ಪರಿತಪಿಸುತ್ತಿದ್ದರೆ ಅದರ ಕಷ್ಟವನ್ನು ತಪ್ಪಿಸದೆ ಮುಂದಿನ ಕಾರ್ಯದಲ್ಲಿ ಉದ್ಯುಕ್ತರಾಗುತ್ತಿರಲಿಲ್ಲ. ಮೂಕ ಪ್ರಾಣಿಗಳ ವಿಷಯದಲ್ಲಿ ಬಹು ಕನಿಕರವುಳ್ಳವರಾಗಿದ್ದರು. ಅವುಗಳ ರಕ್ಷಣೆಗಾಗಿ ತಮ್ಮ ಕೈಯಿಂದ ಸಹಾಯವನ್ನೆಲ್ಲಾ ಮಾಡುತ್ತಿದ್ದರು. ಇವರು ಆಗಾಗ್ಗೆ ಅಹಿಂಸಾ ಬೋಧಕರನ್ನು ಕರೆಯಿಸಿ ಅವರಿಂದ ಜನಗಳಿಗೆ ಉಪದೇಶಿಸುತ್ತಿದ್ದರು. ಎಲ್ಲಿಯಾದರೂ ಅಹಿಂಸಾ ಬೋಧಕರು ಬಂದರೆ ಅವರನ್ನು ಕರೆಯಿಸಿ ಅವರಿಗೆ ಪ್ರೋತ್ಸಾಹಿಸುತ್ತಿದ್ದರು.

ನಮ್ಮ ಸಂಘದ ಪ್ರಚಾರಕರು ಯಮನೂರು ದೇವಿ ಜಾತ್ರೆಗೆ ಪ್ರಚಾರಕ್ಕೆ ಹೋದಾಗ ಅವರನ್ನು ಬರಮಾಡಿಕೊಂಡು ಅಹಿಂಸೆಯ ವಿಷಯವಾಗಿ ವ್ಯಾಖ್ಯಾನ ಮಾಡಿಸಿ ಪ್ರೋತ್ಸಾಹಾರ್ಥವಾಗಿ  ಧನಸಹಾಯ ಮಾಡಿದವರೂ ಈ ಮಹಾಸ್ವಾಮಿಗಳೇ. ಅನೇಕ ಕಡೆಯಲ್ಲಿ ನಡೆಯುತ್ತಿದ್ದ ಹಿಂಸಾಯುಕ್ತವಾದ ದೇವಿ ಜಾತ್ರೆಗಳಲ್ಲಿ ಹಿಂಸೆಯನ್ನು ತಪ್ಪಿಸಲು ಸಹಾಯಕಾರಿಗಳಾಗಿದ್ದರು. ಇವರು ತಮ್ಮ ಆಧಿಪತ್ಯದಲ್ಲಿ ಜರುಗುತ್ತಿದ್ದ ಮುದೇನೂರ ಜಾತ್ರೆಗೆ ನಮ್ಮ ಸಂಘದ ಪ್ರಚಾರಕರನ್ನು ಕರೆಯಿಸಿಕೊಂಡು ಜನಗಳಲ್ಲೆಲ್ಲಾ ಅಹಿಂಸಾ ತತ್ವವನ್ನು ಹರಡಲು ಏರ್ಪಾಟು ಮಾಡಿದ್ದರು. ಅಲ್ಲದೆ ಮುದೇನೂರಲ್ಲಿ ಸೇರುತ್ತಿದ್ದ ಜಾತ್ರೆಯಲ್ಲಿ ಉತ್ತಮವಾದ ಹೋರಿಗಳ ವಿನಹ ಕಟುಗರಿಗೆ ದೊರೆಯ ಬಹುದಾದ ಬಡಕು ಪ್ರಾಣಿಗಳು ಬಹಳ ಮಟ್ಟಿಗೂ ಬರದಂತೆ ಏರ್ಪಾಟು ಮಾಡಿದ್ದರು. ತಾವು ಶಿವೈಕ್ಯರಾಗುವ ೮-೧೦ ದಿವಸ ಮುಂಚಿತವಾಗಿ ಡಾವಣಗೆರೆಗೆ ದಯಮಾಡಿಸಿ, ಮುದೇನೂರಲ್ಲಿ ಸೇರುವ ದನದ ಜಾತ್ರೆಯಲ್ಲಿ ಪ್ರಚಾರದ ಕೆಲಸವನ್ನು ನಡೆಯಿಸಲು ನಮ್ಮ ಪ್ರಚಾರಕರನ್ನು ಸಂಗೀತ, ವ್ಯಾಖ್ಯಾನ, ಮ್ಯಾಜಿಕ್ ಲ್ಯಾಂಟರ್ನ ಮೊದಲಾದವುಗಳ ಮೂಲಕ ಅಹಿಂಸಾ ತತ್ವವನ್ನು ಪ್ರಸಾರಪಡಿಸಲು ವ್ಯವಸ್ಥೆ ಕರೆದುಕೊಂಡು ಹೋಗಿ ಮಾಡಿದವರೂ ಈ ಮಹಾಸ್ವಾಮಿಗಳೇ.

ಈ ಪ್ರಕಾರ ಈ ಮಹಾಸ್ವಾಮಿಗಳು ಅನೇಕ ರೀತಿಗಳಿಂದ ಪ್ರಾಣಿದಯೆ ವಿಷಯದಲ್ಲಿ ಸಹಾಯಕರಾಗಿದ್ದರಲ್ಲದೆ ಕೇವಲ ಭೂತ ದಯಾಪರರಾಗಿ ”ಅಹಿಂಸಾ ಪರಮೋಧರ್ಮ’ ಎಂಬ ತತ್ವವನ್ನು ಜನಸಾಮಾನ್ಯರಲ್ಲೆಲ್ಲಾ ಪ್ರಸಾರಗೊಳಿಸಿದರು. ಇವರ ಅಗಲುವಿಕೆಯಿಂದ ಮೂಕ ಪ್ರಾಣಿಗಳು ತಾಯಿಯನ್ನು ಕಳೆದುಕೊಂಡ ಕರುವಿನಂತೆ ವ್ಯಸನ ಪಡುತ್ತಿರುವುವು. ದಯಾಮಯನಾದ ಭಗವಂತನು ಸರ್ವರಿಗೂ ಸರ್ವ ಪ್ರಾಣಿಗಳನ್ನು ರಕ್ಷಿಸುವ ಸದ್ಭುದ್ಧಿಯನ್ನು ಕೊಟ್ಟು ಮಹಾಸ್ವಾಮಿಗಳವರು ಕೈಕೊಂಡಿದ್ದ ಕಾರ್ಯವು ಜಯಪ್ರದವಾಗುವಂತೆ ಕರುಣಿಸಲಿ !

* * *

• ಡಾ. ಗುರುದೇವಿ ಹುಲೆಪ್ಪನವರಮಠ

‘ಹೆಣ್ಣು ಮನುಕುಲಕ್ಕೆ ಕಕುಲಾತಿ ನೀಡಿರುವ ಮಧುರ ಹಣ್ಣು’ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಮುದ್ದಾಗಿ ಉದ್ಗರಿಸಿರುವಂತೆ ಹೆಣ್ಣು ತನ್ನ ಕೈಹಿಡಿದವರನ್ನು, ಒಡಲಕುಡಿಗಳನ್ನು, ಒಡಲು ನೀಡಿದವರನ್ನು ಅನುನಯದಿಂದ ಕಂಡು, ಅಂತಃಕರುಣೆ ಅನುಕಂಪದ ಸಿಂಚನೆ ಮಾಡಿಸುತ್ತ,  ಅವರ ನರಳಿಕೆಗೆ ಕೊರಳು ನೀಡಿ, ನೋವ ನೆವರಿಕೆಗೆ ಬೆರಳು ನೀಡಿ ತನ್ನೆಲ್ಲವನ್ನೂ ತ್ಯಾಗಮಾಡುವ ಕ್ಷಮಯಾಧರಿತ್ರಿ, ಮನುಕುಲದ ಕಕುಲಾತಿಯ ಸಾಂದ್ರ ಕೇಂದ್ರ, ಅವಳಿಲ್ಲದ ಜಗತ್ತು, ಜೀವನ ಅರ್ಥಹೀನ ಅಲ್ಲದೆ ಭಯಂಕರ. ಅದನ್ನೇ ಸರ್ವಜ್ಞ ಕವಿ ‘ಹೆಣ್ಣಿಲ್ಲದವನ ಸಂಸಾರ ಮಳಲೊಳಗೆ ಎಣ್ಣೆ ಹೊಯ್ದಂತೆ’ ಎಂದು ತೀರ್ಪು ನೀಡಿದ್ದುಂಟು.

ಈ ಭುವನದ ಸಮಸ್ತ ಬೆಳಕೇ ಆದ, ಭಾಗ್ಯವೇ ಆದ ಮಹಿಳೆಯನ್ನು ಕ್ರೈಸ್ತ ಧರ್ಮ ಈ ಭೂಮಿಗೆ ಪಾಪವನ್ನು ಹೊತ್ತು ತಂದವಳು ಎಂದು ಆರೋಪಿಸಿತು. ಶ್ರೇಷ್ಠ ತತ್ವಜ್ಞಾನಿ ಪ್ಲೇಟೋ ಒಂದು ಸಂದರ್ಭದಲ್ಲಿ ‘ಥ್ಯಾಂಕ ಗಾಡ್’ ನಾನು ಹೆಣ್ಣಾಗಿ ಹುಟ್ಟಲಿಲ್ಲ, ಎಂದುದ್ಧರಿಸಿ ತಾನು ಗಂಡಾಗಿ ಜನ್ಮತಳೆದದ್ದಕ್ಕೆ ಅಭಿಮಾನ ಆನಂದ ಪಟ್ಟ, ಭಗವಾನ್ ಬುದ್ಧ, ಮೊದಮೊದಲು ಮಹಿಳೆಯರನ್ನು ಬೌದ್ಧ ಸಂಘಗಳಿಗೆ ನಿರಾಕರಿಸಿ ಅವರು ಮೋಕ್ಷ ಸಾಧನೆಗೆ ತೊಡಕು ಸೇರಿಸಿಕೊಳ್ಳಲು ಎಂದು ಕಾರಣ ನೀಡಿ ತಾನೇ ಸ್ವತಃ ಮನೆ, ಮಡದಿ, ಮಗುವನ್ನು ತೊರೆದು ನಡೆದ. ಜೈನ ಧರ್ಮದ ನಯಸೇನ, ಕಾವ್ಯದಲ್ಲಿ ಬಳಸುವ ಭಾಷೆಯ ಬಗೆಗೆ ಕ್ರಾಂತಿಕಾರಿ ಮನೋಭಾವ ವ್ಯಕ್ತಪಡಿಸಿದವ ಸ್ತ್ರೀ ಕುರಿತು ತನ್ನ ಅಂದರೆ ಜೈನಧರ್ಮದ ನಿಲುವನ್ನು ಸ್ಪಷ್ಟ ಪಡಿಸುವಾಗ ಮಾತ್ರ ಮೂಢನಂತೆ.

ಎನಿಸುಜ್ವಳ ಮಾದೊಡೆಂ

ರವಿಯ ತೇಜಂ ಚಂದ್ರನ ಗೆಲ್ಲುಮೆ

ಪೆಣ್ಣಿನಿತೊಳ್ಳಿದಳಾದೊಡೆ ಪುರುಷನೊಳಾದ

ಮಹಾಗಣಂಗಳು ಸೋಲ್ತಪಳೆ?

ಗಂಡಾಗಿ ಹುಟ್ಟಿದಾಗಲೇ ಹೆಣ್ಣಿಗೆ ಮುಕ್ತಿ, ಅವಳೆಷ್ಟೇ ಒಳ್ಳೆಯವಳಾದರೂ ಪುರುಷನನ್ನು ಸರಿಗಟ್ಟಲಾರಳು ಎಂದೆಲ್ಲ ಸಾರಿದ.

 ‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಸ್ತ್ರೇಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಅವಳು ಯಾವಾಗಲೂ ಪುರುಷನ ಆಶ್ರಯದಲ್ಲೇ ಇರತಕ್ಕವಳು, ಧಾರ್ಮಿಕ ಸ್ವಾತಂತ್ರ್ಯವಂತೂ   ಮೊದಲು ಇಲ್ಲ ಎಂದು ಸಾರಿದ ಮನು-ಅತ್ರಿಯಂತಹ ಶಾಸ್ತ್ರಕಾರರು ವೈಷ್ಣವ ಧರ್ಮದ ನಿಲುವನ್ನು ಸ್ಪಷ್ಟಪಸಿದರು. ಹೆಣ್ಣಿನ ಮೇಲೆ ತನಗೆ ಜನ್ಮ ಜನ್ಮಾಂತರದ ದ್ವೇಷವಿರುವವರ ಹಾಗೆ ಮನು, ಪುರುಷ ಎದುರಿನಲ್ಲಿರುವಾಗ ಹೆಣ್ಣು ‘ಮಲಗಬಾರದು, ಆಕಳಿಸಬಾರದು, ನಗಬಾರದು ಮೈಮುರಿಯಬಾರದು, ಇತ್ಯಾದಿ ಪಟ್ಟಿಯನ್ನೆ ನೀಡಿ ಅವಳ ಪ್ರತಿಯೊಂದು ಚಲನವಲನಗಳನ್ನು ನಿಯಂತ್ರಿಸಿದ.

ಯಾರು ಧರ್ಮಗುರುಗಳ, ಸಮಾಜಸುಧಾರಕರ ಸ್ಥಾನದಲ್ಲಿದ್ದು ಜನರ ರೀತಿ ನಡವಳಿಕೆಗಳನ್ನು ತಿದ್ದಬೇಕಾಗಿತ್ತೋ, ಜನಮನದಲ್ಲಿ ಸ್ತ್ರೀ ಕುರಿತಾಗಿ ಗೌರವದ ಭಾವ ತುಂಬಬೇಕಾಗಿತ್ತೋ ಅಂಥವರೇ ಸ್ತ್ರೀ ಕುರಿತಾಗಿ ಇಂಥ ಅಸಂಬದ್ಧ, ಅನುಚಿತ ಹೇಳಿಕೆಗಳನ್ನು ನೀಡತೊಡಗಿದಾಗ ಅಂದಿನ ಸಮಾಜ ಮಹಿಳೆಯನ್ನು ಹೇಗೆ ನಡೆಸಿಕೊಂಡಿರಬೇಕು? ಧರೆಯೇ ಹತ್ತಿ ಉರಿಯತೊಡಗಿದಾಗ, ಕಾಪಾಡಬೇಕಾದ ಕೈಗಳೇ ಕೊಲ್ಲತೊಡಗಿದಾಗ ಅಮೃತವೇ ವಿಷವಾಗತೊಡಗಿದಾಗ ಮಹಿಳೆ ಎಷ್ಟು ಎಂಥ ನೋವನ್ನು ಅನುಭವಿಸರಬೇಡ? ಯಾವ ತಪ್ಪನ್ನೂ ಮಾಡದೇ ವಿನಾಕಾರಣ ಇಂಥ ಅಪವಾದ ಆರೋಪಗಳ ಪಟ್ಟಿಯನ್ನಂಟಿಸಿಕೊಂಡು ಗಾಸಿಗೊಂಡಿದ್ದು ಎಷ್ಟು ದುರದೃಷ್ಟಕರ!

ಮಹಿಳೆಯರ ಅಂತರಂಗದ ಈ ನೋವ ದನಿ ಕೇಳಿಸಿತೋ ಏನೋ, ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಪ್ರಮಥರು ಈ ನಾಡಿನಲ್ಲಿ ಅವತಾರವೆತ್ತಿದರು. ಅನೇಕ ಆರೋಪ, ಅಪವಾದಗಳ ಕೊಳೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಅವಳನ್ನು ಪ್ರೀತಿಯಿಂದ ಕೈ ಹಿಡಿದು ಮೇಲೆತ್ತಿ, ಅವಳಲ್ಲಿ ಸ್ವಾತಂತ್ರ್ಯ ಸಮಾನತೆಯ ಉಸಿರು ತುಂಬಿದರು. ಕಲ್ಯಾಣ ಪಟ್ಟಣದ ಅನುಭವ ಮಂಟಪದಲ್ಲಿ ತಮ್ಮ ಸರಿಸಮಾನ ಸ್ಥಾನಮಾನಗಳನ್ನು ನೀಡಿ, ಅವಳ ಸಾಧನೆಯನ್ನು ನಿಬ್ಬೆರಗಾಗಿ ನೋಡಿ ಮನವಾರೆ ಮೆಚ್ಚಿಕೊಂಡು, ಹೃದಯಾರೆ ಅಭಿಮಾನಪಟ್ಟು ಕೈಮುಗಿದರು. ಶರಣರ ಗುರುವಾಗಿದ್ದ ಅಲ್ಲಮಪ್ರಭುಗಳು ಸ್ತ್ರೀ ಕುಲವನ್ನು ಪ್ರತಿನಿಧಿಸಿದ ಮಹಾದೇವಿಯಕ್ಕನ ಪಾದಗಳಿಗೆ ನಮೋ ನಮೋ ಎಂದುದ್ಗರಿಸಿ ಗೌರವ ಸೂಚಿಸಿದರು. ಜೇಡರ  ದಾಸಿಮಯ್ಯನಂತಹ ಶರಣರು-

ಮೊಲೆ ಮುಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ

ಎಂದು ಸಾರಿ ವ್ಯಕ್ತಿಯ ಬಾಹ್ಯಸ್ವರೂಪಕ್ಕಾಗಲೀ, ಜಾತಿ ಲಿಂಗಗಳಿಗಾಗಲೀ ಮಹತ್ವವನ್ನಂಟಿಸದೇ ಆತ್ಮಿಕ ಅಸ್ತಿತ್ವಕ್ಕೆ ಸ್ಥಾನ ಮಾನ ನೀಡಿದರು. ಭಗವಂತನ ಮಹತ್ವದ ಸೃಷ್ಟಿಯಾದ ಮಹಿಳೆಯನ್ನು ಕಾಣುವ, ನಡೆಸಿಕೊಳ್ಳುವ ರೀತಿಗೆ, ನೀತಿಗೆ, ಜಗತ್ತಿಗೆ ಮಾದರಿಯಾದರು. ಮಹಿಳಾ ಕುಲದವರ ಗೌರವ ಕೃತಜ್ಞತೆಗಳಿಗೆ ನಿತ್ಯ ನಿರಂತರವೂ ಪಾತ್ರರಾದರು.

ಇಂಥ ಉದಾತ್ತ ಮನೋಸಂಸ್ಕೃತಿಯ ಶರಣರ ಮುಡಿಗೆ ಹೂ ತಂದ ಶ್ರೇಷ್ಠ ಸಂತತಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರು ಮಹಿಳೆಯರ ನೇರ ಮುಖಾವಲೋಕನ ಮಾಡಿರದಿದ್ದರೂ ತಮ್ಮ ಒಳಗಣ್ಣಿನಿಂದ ಅವರ ಬದುಕಿನ ಎಲ್ಲಾ ಮಗ್ಗಲುಗಳ ಸಮಸ್ಯೆ-ಚಿಂತೆಗಳನ್ನು ಅರಿತ ಪ್ರಜ್ಞಾವಂತ ಶಿವಯೋಗಿಗಳು. ಒಂದು ಜನಾಂಗದ ಮುಂದುವರಿಕೆಯಲ್ಲಿ, ಜನಾಂಗದುನ್ನತಿಯಲ್ಲಿ, ಕೌಟುಂಬಿಕ ಶಾಂತಿ, ಸುಖ, ನೆಮ್ಮದಿಯ ಸ್ಥಾಪನೆಯಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ, ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಪರಿಪೂರ್ಣ ಕಲ್ಪನೆ ಅವರಿಗಿತ್ತು. ಅವರ ಸಮಾಜೋನ್ನತಿ, ಜಾಗ್ರತಿಯ ಮಹಾಮಣಿಹದ ಹಿಂದೆ ಸಮಾಜದ ಒಂದು ಕಣ್ಣಾದ ಮಹಿಳೆಯ ಉದ್ಧಾರವೂ, ಜಾಗೃತಿಯೂ ಅಡಗಿತ್ತೆಂಬುದನ್ನು ಮರೆಯುವಂತಿಲ್ಲ.

ಸಮಾಜದ ನೆಮ್ಮದಿಗೆ ಕೌಟುಂಬಿಕ ನೆಮ್ಮದಿ ಅತ್ಯವಶ್ಯ-ಕೌಟುಂಬಿಕ ನೆಮ್ಮದಿಗೆ ಪತಿಪತ್ನಿಯರಿಬ್ಬರೂ ಅನ್ನೋನ್ಯವಾಗಿ, ಸಮರಸದಿಂದ ಇರಬೇಕಾದದ್ದು ಅನಿವಾರ್ಯ ಎಂದರಿತಿದ್ದ ಅವರು ತಾವು ವಾಯು ಸಂಚಾರದಲ್ಲಿದ್ದಾಗ ಯಾವುದಾದರೂ ಮನೆಯಿಂದ ಸ್ತ್ರೀಯ ಅಳುವ ನರಳುವ ದನಿ ಕೇಳಿ ಬಂದಿತೆಂದರೆ ಪುರುಷನ ದಬ್ಬಾಳಿಕೆ, ಕ್ರೌರ್ಯದ ನಡವಳಿಕೆಯ ಶಬ್ದ ಕೇಳಿತೆಂದರೆ ಕಂದನ ರಕ್ಷಣೆಗೆ ಧಾವಿಸುವ ತಾಯಿಯೋಪಾದಿಯಲ್ಲಿ ಅಂಥ ಮನೆಯೊಳಕ್ಕೆ ಧಾವಿಸಿ  ಸತಿಪತಿಗಳಿಬ್ಬರೂ ಹೀಗೆಲ್ಲ ಕಿತ್ತಾಡಬಾರದು, ಇಬ್ಬರೂ ಸಮರಸದಿಂದ ಇರ್ಬೇಕು.

ಕೇಳಿರಯ್ಯ ಮಾನವರ

ಗಂಡ ಹೆಂಡಿರ ಮನಸ್ಸು ಒಂದಾದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ

ಗಂಡ ಹೆಂಡಿರ ಮನಸ್ಸು ಬೇರಾದರೆ

ಗಂಜಳದೊಳಗೆ ಹಂದಿ ಹೊರಳಾಡಿ

ಒಂದರ ಮೇಲೊಂದು ಬಂದು ಮೂಸಿದ ಹಾಗೆ

ಎಂದು ನಮ್ಮ ಅಂಬಿಗರ ಚೌಡಯ್ಯನವರು ಅಪ್ಪಣೆ ಕೊಡಿಸಿದ್ದುಂಟು. ಪತ್ನಿ ಮಾಡಿದ ತಪ್ಪು ಮಾತ್ರ ತಪ್ಪೆ? ಅವಳಿಗೆ ಮಾತ್ರ ಶಿಕ್ಷೆಯೆ? ನೀನು ಮಾಡುವ ತಪ್ಪಿಗೆ ಶಿಕ್ಷೆ ಕೊಡುವವರು ಯಾರು?

ಸತಿಯ ಗುಣವ ಪತಿ ನೋಡಬೇಕಲ್ಲದೆ

ಪತಿಯ ಗುಣವ ಸತಿ ನೋಡಬಹುದೇ ಎಂಬರು

ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?

ಪತಿಯಿಂದ ಬಂದು ಸೋಂಕು ಸತಿಗೆ ಕೇಡಲ್ಲವೇ?

ಎಂದು ಢಕ್ಕೆಯ ಬೊಮ್ಮಯ್ಯನವರು ಬಹಳ ಹಿಂದೆಯೇ ಕೇಳಿದ್ದಾರೆ. ಪತ್ನಿ ಮಾಡುವ ತಪ್ಪನ್ನಷ್ಟೇ ನೋಡಿ ಶಿಕ್ಷಿಸುವುದು ಅನ್ಯಾಯ. ಯಾರೇ ತಪ್ಪ ಮಾಡಿದರೂ ಅದರಿಂದಾಗುವ ಕೆಡಕು ಇಬ್ಬರನ್ನೂ ತಟ್ಟುತ್ತದೆ. ಸತಿ ಮಾತ್ರ ತಪ್ಪ ಮಾಡದೇ ಪರಿಶುದ್ಧಳಾಗಿರಬೇಕು, ಪತಿ ಏನು ಮಾಡಿದರೂ ನಡೆಯುತ್ತದೆ. ಅವನು ಕೊಡುವ ಕಷ್ಟಗಳನ್ನೆಲ್ಲ ಆಕೆ ಸಹಿಸಿಕೊಂಡು ತೆಪ್ಪಗಿರಬೇಕು ಎನ್ನುವ ಸಂಪ್ರದಾಯವಾದಿ ನಿಲುವಿನ ವಿರೋಧಿಯಾಗಿದ್ದರು. ಪ್ರಗತಿಪರ ವಿಚಾರಧಾರೆಯ, ಮಹಿಳಾ ಕುಲ ಹಿತಚಿಂತಕರಾಗಿದ್ದ ಹಾನಗಲ್ಲ ಪೂಜ್ಯರು ಶರಣರಂತೆ ಸಮಾಜದಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸರಿ ಸಮಾನವಾದ ಸ್ಥಾನಮಾನಗಳಿರಬೇಕು. ಮಹಿಳೆಯ ಶೋಷಣೆ ಯಾರಿಂದಲೂ ನಡೆಯಬಾರದು ಅನ್ನುವ ಅಭೀಪ್ಸೆ ಹಾನಗಲ್ಲ ಶ್ರೀಗಳದಾಗಿತ್ತು.

ಅಂದಿನ ಸಮಾಜದಲ್ಲಿ ಹಳೆಯ ತಲೆಮಾರಿನ ಸಂಪ್ರದಾಯ ಶರಣರು ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯಕ್ಕೆ ಲಕ್ಷ ನೀಡಿರಲಿಲ್ಲ. ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳನ್ನು ಕಲ್ಪಿಸಿರಲಿಲ್ಲ. ಬಸವಾದಿ ಪ್ರಮಥರು ಧರ್ಮವನ್ನು ಒಳಗೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಪುರುಷನ ಸರಿಸಮಾನ ಸ್ಥಾನ ಮಾನ ನೀಡಿದ್ದನ್ನು ಮನಗಂಡ ಹಾನಗಲ್ಲ ಕುಮಾರೇಶ್ವರರು ೧೯೦೪ರಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಅಧ್ಯಕ್ಷತೆಯಲ್ಲಿ ಲಿಂಗಾಯತ ಸಮಾಜದ ಸಂಘಟನೆಗಾಗಿ “ಅಖಿಲ ಭಾರತ ವೀರಶೈವ ಮಹಾಸಭೆ’ಯನ್ನು ಒಂದು ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ‘ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿ ಮಹಾಸಭೆಯ ಅಂಗವಾಗಿ ಮಹಿಳೆಯ ಕಲ್ಯಾಣ ಸಾಧನೆಗೆ ‘ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತನ್ನು ಸ್ಥಾಪಿಸಿದರು. ಮಹಿಳೆ ಸಮಾಜದ ಒಂದು ಪ್ರಮುಖ ಘಟಕ. ಅವಳ ಕ್ಷೇಮಾಭಿವೃದ್ಧಿಯಲ್ಲಿ ಸಮಾಜದ ಕ್ಷೇಮಾಭಿವೃದ್ಧಿ ಅಡಗಿದೆ ಎನ್ನುವ ಮಹತ್ವದ ಅಂಶವನ್ನು ಮನಗಂಡ ಪೂಜ್ಯರು ಮಹಿಳೆಯರ ಶಿಕ್ಷಣಕ್ಕೂ ಏರ್ಪಾಡು ಮಾಡಿದರು.

ಶಿವಯೋಗಮಂದಿರದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅದ್ದೂರಿಯಿಂದ ಜರುಗುತ್ತಿದ್ದ ಯಾತ್ರಾ ಮಹೋತ್ಸವದ ಹಲವಾರು ಸಭೆಗಳಲ್ಲಿ ಪೂಜ್ಯರು ‘ಮಹಿಳಾ ಸಭೆ’ಗಳನ್ನು ಪ್ರತ್ಯೇಕವಾಗಿ ಏರ್ಪಡಿಸಿ ಸಮಾಜದ ಮಹಿಳೆಯರು ಭಾಗಿಗಳಾಗಲು ಅವಕಾಶ ಕಲ್ಪಿಸಿದರು. ಸಂಸ್ಥೆಯ ಪ್ರಶಾಂತವಾದ ತಪೋವನದಲ್ಲಿ ವರ್ಷದ ಹನ್ನೆರಡು ತಿಂಗಳುಗಳಲ್ಲಿ ತಮ್ಮ ಪಾಲಿಗೆ ಬಂದ ೨- ೩ ದಿನಗಳನ್ನು ಮಹಿಳೆಯರು ಅಂದು ವ್ಯರ್ಥವಾಗಿ ಕಳೆಯದೇ ಸಮಾಜದ ಉನ್ನತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಕುರಿತು ಚರ್ಚೆ, ಗೋಷ್ಠಿ, ಭಾಷಣಗಳನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿದರು. ೧೯೧೪ರಲ್ಲಿ ಶ್ರೀಮತಿ ಶಾಂತಮ್ಮ ಕಣಬರಗಿಮಠ ಅನ್ನುವ ಶರಣೆಯರ ಅಧ್ಯಕ್ಷತೆಯಲ್ಲಿ ಲಿಂಗಾಯತ ಮಹಿಳಾ ಪರಿಷತ್ತು ಕೂಡಿತ್ತು ಇದರಲ್ಲಿ ಸುಮಾರು ೨೦೦ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

 ಆ ಸಂದರ್ಭದಲ್ಲಿ ಸೇರಿದ್ದ ಮಹಿಳೆಯರು ನಾಡಿನ ಧರ್ಮ, ಶಿಕ್ಷಣ, ಪಶುಸಂಗೋಪನ, ಕೃಷಿ ಮುಂತಾದ ವಿಷಯಗಳ ಕುರಿತು ಮಹಿಳೆ ಈ ಕ್ಷೇತ್ರಗಳಲ್ಲಿ ಆಡಬಹುದಾದ ಪಾತ್ರದ ಕುರಿತು ವ್ಯಾಪಕವಾಗಿ ಚರ್ಚಿಸಿದರು. ಯಾತ್ರಾ ಸಂದರ್ಭದಲ್ಲಿ ಏರ್ಪಡುತ್ತಿದ್ದ ಮಹಿಳಾ ಸಭೆಗಳು ವಿಶೇಷವಾಗಿ ಸೊಲ್ಲಾಪುರದ ಶ್ರೀಮತಿ ಭಾಗೀರಥಿಬಾಯಿ ಪಾಟೀಲ ಅವರ ನೇತೃತ್ವ, ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದವು. ಪ್ರತ್ಯೇಕವಾಗಿ ಮಹಿಳೆಯರಿಗೆ ಶಿವಭಜನೆ, ಶಿವಕೀರ್ತನೆಗಳ ಏರ್ಪಾಡೂ ಇರುತ್ತಿತ್ತು. ಮಹಿಳೆಯರ ಸಾಂಸ್ಕೃತಿಕ ಬೆಳವಣಿಗೆಗೆ ಇಲ್ಲಿ ವಿಶೇಷ ಪುರಸ್ಕಾರ ಇತ್ತು. ಇಂಥ ಸಭೆಗಳು ಮೂರ್ನಾಲ್ಕು ವರ್ಷ ಮಾತ್ರ ವ್ಯವಸ್ಥಿತವಾಗಿ ಜರುಗಿದರೂ ಸಮಾಜದಲ್ಲಿ ಸಾಕಷ್ಟು ಪ್ರಗತಿಯ ಚಿಹ್ನೆಗಳು ಕಾಣಿಸಿಕೊಂಡವು.

ಕಾವ್ಯದಲ್ಲಿ ನಾಟಕ ರಮ್ಯ ಎಂದುಸುರಿದ ಕಾಳಿದಾಸನ ವಾಣಿಯಂತೆ ರಮ್ಯ ಕಾವ್ಯವೆಂದು ಗುರುತಿಸಲ್ಪಡುವ ನಾಟಕ ಮಾಧ್ಯಮವನ್ನು ಜೀವನೋಪಾಯಕ್ಕಾಗಿ ಬಳಸದೇ ಜ್ಞಾನದಾಸೋಹ ಮಾದ್ಯಮವನ್ನಾಗಿ ಬಳಸಿದರೆ ಸಮಾಜ ಪರಿಶುದ್ಧವಾಗಬಲ್ಲುದು ಜಾಗೃತವಾಗಬಲ್ಲುದು ಎಂಬ ನಿಲುವು ಹಾನಗಲ್ಲ  ಪೂಜ್ಯರದಾಗಿದ್ದರಿಂದ ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆ’ ತಲೆಯೆತ್ತುವಂತೆ ಮಾಡಿದರು. ನಮ್ಮ ನಾಡಿನ ಮಹಿಳೆಯರಲ್ಲಿ ಬೋಧಕ ವರ್ಗ ತಯಾರಾಗಬೇಕು, ಮಹಿಳೆಯರು ಶರಣೆ ನೀಲಾಂಬಿಕೆ, ಲಕ್ಕಮ್ಮ, ಕಲ್ಯಾಣಮ್ಮ, ಗಂಗಾಂಬಿಕೆಯರ ಆದರ್ಶ ನಡೆ-ನುಡಿಗಳಿಂದ ಪ್ರಭಾವಿತರಾಗಬೇಕು. ಹೇಮರೆಡ್ಡಿ ಮಲ್ಲಮ್ಮನಂತೆ ಸತಿ ಸಾಧ್ವಿಯರಾಗಬೇಕು ಎಂಬ ಹಂಬಲದಿಂದ ಶರಣೆಯರ ಜೀವನ ಸಾಧನೆಗಳನ್ನಾಧರಿಸಿದ ಸಂಗೀತ ರೂಪಕ ನಾಟಕಗಳನ್ನು ಪ್ರದರ್ಶಿಸುವಂತೆ ಪಂ. ಪುಟ್ಟರಾಜ ಗವಾಯಿಗಳವರಿಗೆ ಪ್ರೇರಣೆ ನೀಡಿದರು. ಪುಟ್ಟರಾಜ ಗವಾಯಿಗಳು ಪೂಜ್ಯರ ಅಭೀಷ್ಟೆಯನ್ನು ಈಡೇರಿಸಿದರು.

ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ

ಕಾಮಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ

ನಿನ್ನೊಡವೆಯೆಂಬುದು ಜ್ಞಾನರತ್ನ

ಎಂದ ಅಲ್ಲಮರ ವಾಣಿಯನ್ನು ಅಚ್ಚುಕಟ್ಟಾಗಿ ಆಚರಣೆಯಲ್ಲಿ ತಂದು ಆದರ್ಶ ಕಲ್ಪಿಸಿದವರು ಹಾನಗಲ್ಲ ಶ್ರೀಗಳು, ‘ಕಾಮವೇ ನಿಲ್ಲು, ಕ್ರೋಧವೇ ನಿಲ್ಲು ಚೆನ್ನಮಲ್ಲಿಕಾರ್ಜುನನ ಒಲುಮೆಯ ಸಂದೇಶ ಒಯ್ಯುತ್ತಿದ್ದೇನೆ’ ಎಂದಕ್ಕನಂತೆ ಪೂಜ್ಯರು ಲೌಕಿಕ ಆಕರ್ಷಣೆಗಳನ್ನೆಲ್ಲ ತಡೆದು ನಿಲ್ಲಿಸಿ, ಸಮಾಜೋದ್ಧಾರದಂತಹ ಪರಮ ಪವಿತ್ರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಸಮಷ್ಟಿ ಕಲ್ಯಾಣಕ್ಕೆ ಅರ್ಪಿಸಿಕೊಂಡವ, ವಿಶ್ವಕುಟುಂಬಿಯಾದವ, ಮನುಷ್ಯನನ್ನು ಸ್ವಾರ್ಥಿಯನ್ನಾಗಿ ಸಂಕುಚಿತ ಮತಿಯನ್ನಾಗಿ ಮಾಡುವ ವ್ಯಷ್ಟಿ ಸುಖದ ಮೂಲಗಳು ಲಕ್ಷ್ಯವೀಯಬಾರದು ಎನ್ನುವ ಉದಾತ್ತ ತಿಳಿವಳಿಕೆ ಅವರದಾಗಿತ್ತು. ವಿರಾಗದ ವಿಂದ್ಯರಾಗಿದ್ದ ಪೂಜ್ಯರು ‘ಹರಿವ ಹಾವಿಗಂಜೆ, ಉರಿವ ನಾಲಗೆಗಂಜೆ, ಒಂದಕ್ಕಂಜುವೆ ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬ ಜೀಜಿಗಂಜುವೆ’ ಎಂದ ಶರಣರ ವಾಣಿಯೇ ತಾವಾಗಿದ್ದರು, ಜನತಾ ಜನಾರ್ಧನನ ಸೇವೆಗೆ ತಮ್ಮನ್ನರ್ಪಿಸಿಕೊಂಡಿದ್ದ ಪೂಜ್ಯರು ಸಂಸಾರ ವಿಷಯಗಳಿಗೆ ಸಂಬಂಧಿಸಿದ ರೂಪ, ರಸ, ಗಂಧ ಸ್ಪರ್ಶಗಳಿಗೆ ಕಿವುಡರಾಗಿದ್ದರು. ಕುರುಡರಾಗಿದ್ದರು. ತಾವು ಆಯ್ದುಕೊಂಡ ಬದುಕಿನ ಬಟ್ಟೆಯ ದಾರಿಯ ಬಗೆಗೆ ಅವರಲ್ಲಿ ಅಪಾರ ನಿಷ್ಠೆ, ಪ್ರೀತಿ ಇತ್ತು.

ಸಮಷ್ಟಿ ಸುಖವನ್ನು ಸಾಧಿಸುವವ ಯಾವ ಸಂದರ್ಭದಲ್ಲಿಯೂ ವ್ಯಷ್ಟಿ ಸುಖದ ಮೂಲಗಳಿಗೆ ಮಾರುಹೋಗಬಾರದು ಎನ್ನುವ ಇಂಗಿತದ ಪೂಜ್ಯರು ಶಿವಯೋಗಮಂದಿರದಲ್ಲಿ ಸಾಧಕ ವಟುಗಳನ್ನು ಶಿಸ್ತು ಸಂಯಮದಿಂದ ಬೆಳೆಸಿದರು. ಒಮ್ಮೆ ಶಿವಯೋಗ ಮಂದಿರ ನೋಡಬಂದ ಸ್ತ್ರೀ ಸಮೂಹವನ್ನು ವಟುಗಳು ಸಾಧನೆ ಮಾಡುತ್ತಿದ್ದ ಕಟ್ಟಡದತ್ತ ಹೋಗಲು ಅವಕಾಶ ನೀಡಲಿಲ್ಲ. ವಟುಗಳ ಮನಸ್ಸು ವಿಚಲಿತರಾಗಿ ಅವರು ತಮ್ಮ ಘನಸಾಧನೆಯ ಪಥದಿಂದ ಹಿಂತೆಗೆಯಬಾರದು ಅವರ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಗೆ ಆಕರ್ಷಣೆಗಳು ಮಾರಕ ಎನ್ನುವ ತಿಳಿವಳಿಕೆ ಅವರದಾಗಿತ್ತು. ತಾವು ವಾಯು ಸಂಚಾರದಲ್ಲಿದ್ದಾಗ ಪತಿಪತ್ನಿಯರ ಜೋಡಿ ಕಣ್ಣಿಗೆ ಬಿದ್ದರೆ ಅವರು ಮರೆಯಾಗುವವರೆಗೆ ನಿಂತು ಮುಂದೆ ಸಾಗುತ್ತಿದ್ದರು. ಸರ್ವೇಂದ್ರಿಯ ವಿಜಯಿಯಾಗಿದ್ದರೂ ಪೂಜ್ಯರು ವ್ಯಕ್ತಿಗತ ಮೋಹ-ಮಾಯೆಗಳ ಎಳೆತ ಸೆಳೆತಗಳಿಂದ ದೂರವಿರುತ್ತಿದ್ದರು.

ಎಲ್ಲ ವಿಜಯಗಳಲ್ಲಿ ಶ್ರೇಷ್ಠವಾದ ವಿಜಯ, ಇಂದ್ರಿಯ ವಿಜಯ ಎಂದು ಬೈಬಲ್‌ನಲ್ಲಿ ಹೇಳಿರುವಂತೆ ‘ಇಂದ್ರ ವಿಜಯಿಗುಂ ಇಂದ್ರಿಯ ವಿಜಯಿ ಮೇಲಲ್ತೆ? ಎಂದು ಕೇಳಿದ ಮಹಾಪತಿವ್ರತೆ ಮಂಡೋದರಿಯ ಅನುಭವವಾಣಿಯಂತೆ ಪೂಜ್ಯರು ತಮ್ಮ ಇಂದ್ರಿಯಗಳ ಮೇಲೆ ಅತ್ಯದ್ಭುತ ವಿಜಯ ಸಾಧಿಸಿದ್ದರು. ಅಂತೆಯೇ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಳ್ಳುವುದು ಸಾಧ್ಯವಾಯಿತು.

ಅದಕ್ಕೇ ಬ್ರಹ್ಮಾಂಡ ಯುದ್ಧದಲ್ಲಿ ಗೆದ್ದ ವೀರರು ಅಧಿಕ ಆದರೆ ಪಿಂಡಾಂಡ ಯುದ್ಧದಲ್ಲಿ ಗೆದ್ದ ಕಡುಗಲಿಗಳು ಸಿಕ್ಕುವುದು ಅಪರೂಪ. ಸುತ್ತಲೂ ಅಬೇಧ್ಯವಾದ, ಅಜೇಯವಾದ ಸಂಯಮದ ಕೋಟೆಯನ್ನು ಕಟ್ಟಿಕೊಂಡು ಅನ್ವರ್ಥಕ ಬದುಕು ಬದುಕುವ ವೀರವಿರಾಗಿಗಳು ಕೈಬೆರಳಿನಿಂದ ಎಣಿಸುವಷ್ಟು ಅಂಥವರಲ್ಲಿ ಹಾನಗಲ್ಲ ಶ್ರೀಗಳು ಅದ್ವಿತೀಯರು.

ಎಳೆವಯದಲ್ಲೇ ತಾಯಿಯ ಮೋಹ ಮಮತೆಯನ್ನು, ಯೌವ್ವನದಲ್ಲಿ ಸಂಸಾರದ ಮಾಯೆಯನ್ನು ತಿರಸ್ಕಾರದಿಂದಲ್ಲ, ಆಳವಾದ ತಿಳುವಳಿಕೆಯಿಂದ, ಸಂಯಮದಿಂದ ಗೆದ್ದ ಹಾನಗಲ್ಲ ಕುಮಾರೇಶ್ವರರು ಅರಿಷಡ್ವರ್ಗಗಳನ್ನು ನಿಜವಾಗಿಯೂ ಸುಟ್ಟು ಕೆಂಡಮಾಡಿದ ಸಂಕೇತವಾಗಿ ಕಾವಿಯನ್ನು ಹೊದ್ದಿದ್ದರು. ಕಾವಿಯ ಬಟ್ಟೆಯ ಮೇಲ್ಮೆಯನ್ನು ಮೆರೆದವರು. ಸ್ತ್ರೀಯರಿಂದ ದೂರವಿದ್ದರೂ ಅವರ ಸರ್ವತೋಮುಖ ಕಲ್ಯಾಣದ ಕುರಿತು ಹಗಲಿರುಳು ಚಿಂತಿಸಿದರು. ಕ್ರಿಯಾತ್ಮಕವಾಗಿ ಶ್ರಮಿಸಿದರು. ಹೆಣ್ಣಿನಲ್ಲಿ ಹರನನ್ನು ಕಂಡು ಕೈ ಮುಗಿದರು. ಸಾಧಕ ವರ್ಗಕ್ಕೆ ಆದರ್ಶವನ್ನು ತೋರಿಸಿಕೊಟ್ಟವರು. ಮಹಿಳೆಯರ ಸರ್ವತೋಮುಖ ಉದ್ಧಾರಕ್ಕೆ ಚಿಂತಿಸಿದ ಕಳಕಳಿ ತೋರಿದ ಮಾಯೆಯನ್ನು ಗೆದ್ದ ಮಹೇಶ್ವರರು ಲಿಂ, ಹಾನಗಲ್ಲ ಕುಮಾರ ಮಹಾಸ್ವಾಮಿಗಳು.