
೨೫–೦೧–೨೦೨೬ರ ಪವಿತ್ರ ರಥಸಪ್ತಮಿ ದಿನದಂದು, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಸಂಸ್ಥಾಪಿಸಿದ ಶ್ರೀ ಶಿವಯೋಗಮಂದಿರವು ತನ್ನ ೧೧೭ನೇ ಸಂಸ್ಥಾಪನಾ ದಿನವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಈ ಐತಿಹಾಸಿಕ ಸಂದರ್ಭದಲ್ಲಿ, ಶಿವಯೋಗ ಪರಂಪರೆಯ ಬೆಳವಣಿಗೆಯಲ್ಲಿ ಅನನ್ಯ ಪಾತ್ರವಹಿಸಿದ ಮಹಾನ್ ವಿದ್ವಾಂಸರ ಸ್ಮರಣೆ ಸ್ವಾಭಾವಿಕವಾಗಿ ಮನಸ್ಸನ್ನು ಆವರಿಸುತ್ತದೆ.
೧೯೦೯ರಲ್ಲಿ ಪರಮಪೂಜ್ಯ ಚಿತ್ತರಗಿಯ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಗುರುತಿಸಿದ ಪವಿತ್ರ ಸ್ಥಳದಲ್ಲೇ, ಶ್ರೀ ಶಿವಯೋಗಮಂದಿರದ ಶಿಲಾವಿನ್ಯಾಸ ಸಮಾರಂಭ ನಡೆಯಿತು.
ಈ ಮಹತ್ವದ ಧಾರ್ಮಿಕ ವಿಧಿವಿಧಾನವನ್ನು, ಬಳ್ಳಾರಿಯ ಶ್ರೀ ಸಕ್ಕರೆ ಕರಡೆಪ್ಪನವರ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯ ಪೂಜ್ಯರ ಸಹಪಾಠಿಯಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು, ಪೂಜ್ಯರ ಅಪ್ಪಣೆಯಂತೆ ಮಾಘಮಾಸದ ರಥಸಪ್ತಮಿ ತಿಥಿಯಲ್ಲಿ ಪೌರೋಹಿತ್ಯ ವಹಿಸಿ ನೆರವೇರಿಸಿದರು. ಈ ಘಟನೆ, ಶಿವಯೋಗ ಪರಂಪರೆಯೊಂದಿಗೆ ಅವರ ಆಳವಾದ ಬಾಂಧವ್ಯವನ್ನು ,ಅವರ ಪ್ರಾಮಾಣಿಕ ನಿಷ್ಠೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಮಹಾಮೇಧಾವಿಗಳಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ನಿಜಾರ್ಥದಲ್ಲಿ ‘ವಿದ್ಯಾ ಪರ್ವತ’ವೇ ಆಗಿದ್ದರು. ಸಂಸ್ಕೃತ ಭಾಷೆಯಲ್ಲಿ ಅಪಾರ ಪ್ರಭುತ್ವ ಸಾಧಿಸಿದ್ದ ಅವರು, ಅನೇಕ ಸಂಸ್ಕೃತ ಕೃತಿಗಳನ್ನು ರಚಿಸುವ ಮೂಲಕ ತಮ್ಮ ಆಳವಾದ ಪಾಂಡಿತ್ಯ, ತಾತ್ವಿಕ ದೃಷ್ಟಿ ಮತ್ತು ಶಾಸ್ತ್ರೀಯ ಶಿಸ್ತುಗಳನ್ನು ಪ್ರಕಟಿಸಿದ್ದಾರೆ. ಅವರ ಬರಹಗಳಲ್ಲಿ ಭಾಷೆಯ ಸೌಂದರ್ಯ ಮಾತ್ರವಲ್ಲದೆ, ಯೋಗ, ಶೈವಸಿದ್ಧಾಂತ ಮತ್ತು ಆತ್ಮಾನುಭವದ ಸುಗಂಧವೂ ಸ್ಪಷ್ಟವಾಗಿ ಅನುಭವವಾಗುತ್ತದೆ.
ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳಿಗೆ ಲಭಿಸಿದ “ವಿದ್ಯಾ ಪರ್ವತ” ಎಂಬ ಉಪನಾಮವು ಕೇವಲ ಗೌರವ ಸೂಚಕ ಪದವಿಯಲ್ಲ; ಅದು ಅವರ ಜೀವನ, ಸಾಧನೆ ಮತ್ತು ತಾತ್ವಿಕ ಸ್ಥಿತಿಯನ್ನು ಸಾರುವ ಆಳವಾದ ರೂಪಕವಾಗಿದೆ. ಪರ್ವತ ಎಂಬುದು ಭಾರತೀಯ ಚಿಂತನಾ ಪರಂಪರೆಯಲ್ಲಿ ಸ್ಥೈರ್ಯ, ಗಂಭೀರತೆ, ಸ್ಥಿರತೆ ಮತ್ತು ಶಾಶ್ವತತೆಯ ಸಂಕೇತ. ಅದಕ್ಕೆ ವಿದ್ಯೆ ಎಂಬ ಶಬ್ದವು ಸೇರಿದಾಗ, ಈ ಉಪನಾಮವು ತಾತ್ವಿಕವಾಗಿ ಇನ್ನಷ್ಟು ವಿಶಾಲಾರ್ಥವನ್ನು ಪಡೆಯುತ್ತದೆ.
“ವಿದ್ಯಾ ಪರ್ವತ” ಎಂಬ ಪದವು ಮತ್ತೊಂದು ಅರ್ಥವನ್ನೂ ಹೊರುತ್ತದೆ. ಪರ್ವತವು ನದಿಗಳಿಗೆ ಮೂಲವಾಗುವಂತೆ, ಪರ್ವತ ಶಾಸ್ತ್ರಿಗಳ ವಿದ್ಯೆ ಅನೇಕ ಶಿಷ್ಯರು, ಜಿಜ್ಞಾಸುಗಳು ಮತ್ತು ಸಮಾಜದ ಗಣ್ಯರಿಗೆ ಜ್ಞಾನಧಾರೆಯಾಗಿ ಹರಿಯಿತು. ಅವರ ಉಪನ್ಯಾಸಗಳು, ಜ್ಞಾನಸತ್ರಗಳು ಮತ್ತು ತಾತ್ವಿಕ ಚರ್ಚೆಗಳು ಅನೇಕರ ಮನಸ್ಸಿನ ಸಂಶಯಗಳನ್ನು ನಿವಾರಿಸಿ, ಬೌದ್ಧಿಕ ಸ್ಪಷ್ಟತೆಯನ್ನು ನೀಡಿದವು. ಅಂದರೆ ಅವರು ವಿದ್ಯೆಯ ಸಂಗ್ರಹ ಮಾತ್ರವಲ್ಲ; ವಿದ್ಯೆಯ ಪ್ರಸರಣದ ಕೇಂದ್ರವಾಗಿದ್ದರು.
ಇನ್ನೊಂದು ತಾತ್ವಿಕ ಆಯಾಮದಲ್ಲಿ ನೋಡಿದರೆ, ಪರ್ವತ ಎಂದರೆ ಆಶ್ರಯ. ದಾರಿ ತಪ್ಪಿದವರಿಗೆ ದಿಕ್ಕು ತೋರಿಸುವ ಸಂಕೇತ. ಪರ್ವತ ಶಾಸ್ತ್ರಿಗಳು ತಮ್ಮ ಕಾಲದಲ್ಲಿ ಧಾರ್ಮಿಕ ಗೊಂದಲಗಳು, ಸಾಮಾಜಿಕ ವಿವಾದಗಳು ಮತ್ತು ತಾತ್ವಿಕ ಸಂಶಯಗಳ ಮಧ್ಯೆ ನಿಂತು, ಶಾಸ್ತ್ರಾಧಾರಿತ ಸ್ಪಷ್ಟತೆಯನ್ನು ನೀಡಿದರು. ಪರಳಿ ಪ್ರಕರಣದಂತಹ ಸಂದರ್ಭಗಳಲ್ಲಿ ಅವರು ಸಮಾಜಕ್ಕೆ ಆಧಾರವಾಗಿ ನಿಂತರು. ಈ ಅರ್ಥದಲ್ಲಿಯೂ ಅವರು “ವಿದ್ಯಾ ಪರ್ವತ” — ಆಶ್ರಯದ ವಿದ್ಯೆ.
ಹೀಗಾಗಿ “ವಿದ್ಯಾ ಪರ್ವತ” ಎಂಬ ಉಪನಾಮವು ಪರ್ವತ ಶಾಸ್ತ್ರಿಗಳ ವ್ಯಕ್ತಿತ್ವದ ಮೂರು ಮೂಲ ಆಯಾಮಗಳನ್ನು ಸೂಚಿಸುತ್ತದೆ:
ಸ್ಥಿರವಾದ ಜ್ಞಾನ, ಪ್ರಸರಣಶೀಲವಾದ ಬೋಧನೆ ಮತ್ತು ಅನುಭವದಲ್ಲಿ ಲೀನವಾದ ತತ್ತ್ವಸಾಧನೆ. ಈ ಮೂರೂ ಒಂದಾಗಿ ಸೇರಿ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳನ್ನು ವೀರಶೈವ ತತ್ತ್ವಪರಂಪರೆಯ ಅಳಿಯದ ಶಿಖರವಾಗಿ ಸ್ಥಾಪಿಸುತ್ತವೆ.
ಪಂಡಿತ ಪರ್ವತ ಶಾಸ್ತ್ರಿಗಳ ಜನ್ಮಸ್ಥಳ ಕಂದಗಲ್ಲು. ಈ ಗ್ರಾಮ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ. ಅವರು ಅಲ್ಲಿನ ಶೀಲವಂತ ಮಠದ ಪರಂಪರೆಗೆ ಸೇರಿದವರು. ಪರ್ವತ ಶಾಸ್ತ್ರಿಗಳ ತಾಯಿ ನೀಲಮ್ಮಾ, ತಂದೆ ಶಿವಬಸವ ಶಾಸ್ತ್ರಿಗಳು. ಶ್ರೀಮನೃಪಶಾಲಿವಾಹನ ಶಕೆ ೧೭೭೬ರಲ್ಲಿ (ಕ್ರಿ.ಶ. ೧೮೫೪) ಅವರು ಜನಿಸಿದರೆಂದು ತಿಳಿದುಬರುತ್ತದೆ. ಅವರ ಧರ್ಮಪತ್ನಿ ಬಸವಮ್ಮಾ. ಈ ದಂಪತಿಗಳಿಗೆ ಚನ್ನವೀರ ಶಾಸ್ತ್ರಿ ಮತ್ತು ನೀಲಮ್ಮಾ ಎಂಬ ಇಬ್ಬರು ಮಕ್ಕಳು.
ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಂದಗಲ್ಲಿನಲ್ಲಿಯೇ ಪೂರ್ಣಗೊಳಿಸಿ, ಪ್ರೌಢಶಿಕ್ಷಣಕ್ಕಾಗಿ ಬಳ್ಳಾರಿಯಲ್ಲಿ ಸಕ್ಕರಿ ಕರಡೆಪ್ಪನವರಿಂದ ಸ್ಥಾಪಿತವಾಗಿದ್ದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯಲ್ಲಿ ಪ್ರವೇಶ ಪಡೆದರು. ಈ ಪಾಠಶಾಲೆಯೇ ಅವರ ಜೀವನದ ಬೌದ್ಧಿಕ ರೂಪುಗೊಳಿಕೆಗೆ ಗಟ್ಟಿಯಾದ ನೆಲೆಯಾಗಿ ಪರಿಣಮಿಸಿತು.
ಮೂಲತಃ ಹತ್ತಿ ವ್ಯಾಪಾರಿಯಾಗಿದ್ದರೂ, ವೀರಶೈವ ಲಿಂಗಾಯತ ಸಮುದಾಯದ ಶ್ರೇಷ್ಠ ಸಮಾಜಸೇವಕರಾಗಿದ್ದ ಕರಡೆಪ್ಪನವರು ಬ್ರಿಟಿಷ್ ಸರ್ಕಾರದಿಂದ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳು ಹಾಗೂ ಟೆಲಿಗ್ರಾಫ್ ಕಂಬಗಳ ಜೋಡಣೆ ಮುಂತಾದ ಗುತ್ತಿಗೆಗಳನ್ನು ಪಡೆದಿದ್ದರು. ೧೮೬೬ರಲ್ಲಿ ಬಳ್ಳಾರಿ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾದ ಸಂದರ್ಭದಲ್ಲಿ, ತಮ್ಮ ಸ್ವಂತ ಹಣದಿಂದ ಹಲವು ತಿಂಗಳುಗಳ ಕಾಲ ಸಾವಿರಾರು ಜನರಿಗೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿ ಮಾನವೀಯತೆಯ ದೀಪವಾಗಿ ನಿಂತರು. ಸಮಾಜಸೇವಕ, ದಾನಿ ಹಾಗೂ ಶಿಕ್ಷಣಪ್ರೇಮಿಯಾಗಿದ್ದ ಕರಡೆಪ್ಪನವರ ಸೇವೆಯನ್ನು ಗೌರವಿಸಿ ಬ್ರಿಟನ್ ರಾಣಿಯವರು ಅವರಿಗೆ “ರಾವ್ ಬಹಾದೂರ್” ಎಂಬ ಗೌರವ ಪ್ರಶಸ್ತಿಯನ್ನು ನೀಡಿದ್ದರು.

ಕರಡೆಪ್ಪನವರ ಮಹತ್ವದ ಕೊಡುಗೆಗಳಲ್ಲಿ ಪ್ರಮುಖವಾದುದು—ಕನ್ನಡ ನಾಡಿನ ಮೊದಲ ಸಂಸ್ಕೃತ ಪಾಠಶಾಲೆಯೊಂದನ್ನು ಸ್ಥಾಪಿಸಿ, ಬ್ರಾಹ್ಮಣೇತರರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ ಧೈರ್ಯಶಾಲಿ ಸಾಮಾಜಿಕ ಕ್ರಮ. ಅವರು ವಿಭೂತಿ ಕಣಜವನ್ನು ನಿರ್ಮಿಸಿ, ಅದರ ಮೂಲಕ ಶಾಶ್ವತ ನಿಧಿಯನ್ನೂ ಸಂಗ್ರಹಿಸಿದ್ದರು. ಕರಡೆಪ್ಪನವರ ಮೂಲ ಹೆಸರು ಸಕ್ಕರಿ ಬಸಪ್ಪ. ಬಾಲ್ಯದಲ್ಲಿಯೇ ಅವರಲ್ಲಿದ್ದ ಅಪಾರ ಸೇವಾಭಾವವನ್ನು ಗುರು ಮರಿಸ್ವಾಮಿಗಳು ಗಮನಿಸಿ, “ಈತ ತನ್ನ ಮತವನ್ನು, ಗುರು–ಲಿಂಗ–ಜಂಗಮವನ್ನು ಕರಡಿಯಂತೆ ತಬ್ಬಿಕೊಳ್ಳುವನು” ಎಂದು ಆಶೀರ್ವದಿಸಿ ‘ಕರಡಿ’ ಎಂದು ಕರೆಯಲಾರಂಭಿಸಿದರು. ಮುಂದೆ ಅದೇ ಹೆಸರು ಅವರ ಗುರುತಾಗಿಬಿಟ್ಟಿತು.
ಇಂತಹ ಮಹಾನುಭಾವಿ ಶರಣ ಕರಡೆಪ್ಪನವರು ಸ್ಥಾಪಿಸಿದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ” ಸಂಸ್ಕೃತ ಮತ್ತು ಕನ್ನಡ ವಾಙ್ಮಯದ ಸಮೃದ್ಧ ಸಿರಿಯನ್ನು ವಿದ್ಯಾರ್ಥಿ ವೃಂದಕ್ಕೆ ಹಂಚುವ ಮಹತ್ವದ ಕೇಂದ್ರವಾಗಿತ್ತು. ಸದಾಚಾರ, ಶಿಸ್ತು ಮತ್ತು ವಿದ್ಯಾಸಂಪತ್ತಿಯನ್ನು ಸಂಪಾದಿಸಲು ನಮ್ಮ ನಾಡಿನ ನಾನಾಭಾಗಗಳಿಂದ ಅನೇಕ ಚರವರ್ಯರು, ಪಂಡಿತರು ಮತ್ತು ಶಾಸ್ತ್ರಿಗಳು ತಂಡೋಪತಂಡವಾಗಿ ಈ ಪಾಠಶಾಲೆಗೆ ಆಗಮಿಸುತ್ತಿದ್ದರು.
ಉಜ್ಜಯಿನಿಯ ಜಗದ್ಗುರು ಚನ್ನ ಬಸವದೇಶಿಕೇಂದ್ರ ಸ್ವಾಮಿಗಳು, ಚಿತ್ರರಗಿ–ಇಳಕಲ್ಲದ ವಿಜಯ ಮಹಾಂತಸ್ವಾಮಿಗಳು, ಬಳ್ಳಾರಿಯ ಜಗದ್ಗುರು ಕೊಟ್ಟೂರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶಿವಬಸವ ಸ್ವಾಮಿಗಳು ಮೊದಲಾದವರು ಪಂಡಿತ ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಈ ವಿದ್ಯಾವಂತ ಸಮೂಹದ ಮಧ್ಯೆಯೂ ಪಂಡಿತ ಪರ್ವತ ಶಾಸ್ತ್ರಿಗಳು ಅತ್ಯಂತ ಮೇಧಾವಿಗಳೆಂದೂ, ಕವಿ ಪ್ರತಿಭಾಸಂಪನ್ನರೆಂದೂ ವಿಶೇಷ ಗೌರವ ಪಡೆದಿದ್ದರು. ಇದೇ ಪಾಠಶಾಲೆಯಲ್ಲಿ ಅವರು ಕನ್ನಡ, ಸಂಸ್ಕೃತ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಪ್ರತಿಮ ಪರಿಣತಿಯನ್ನು ಗಳಿಸಿ, ಮುಂದಿನ ತಾತ್ವಿಕ–ಸಾಹಿತ್ಯಿಕ ಸಾಧನೆಗೆ ದೃಢವಾದ ಅಡಿಪಾಯವನ್ನು ಹಾಕಿಕೊಂಡರು.
ಬಳ್ಳಾರಿಯ ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ಬಳಿಕ, ಪಂಡಿತ ಪರ್ವತ ಶಾಸ್ತ್ರಿಗಳು ಸ್ವಗ್ರಾಮವಾದ ಕಂದಗಲ್ಲಿಗೆ ಮರಳಿ ಕೆಲಕಾಲ ಅಲ್ಲಿಯೇ ವಾಸಿಸಿದರು. ನಂತರ ಜೀವನದ ಮುಂದಿನ ಹಂತದಲ್ಲಿ ಅವರು ರಾಯಚೂರು ಜಿಲ್ಲೆಯ ಗೆಜ್ಜಲಗಟ್ಟಿಯನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಂಡರು. ಆದರೆ ಜೀವನದ ಅಂತಿಮ ಕ್ಷಣಗಳಲ್ಲಿ ಪುನಃ ತಮ್ಮ ಜನ್ಮಭೂಮಿಯನ್ನೇ ಸ್ಮರಿಸಿ, ಕಂದಗಲ್ಲ ಗ್ರಾಮಕ್ಕೆ ಮರಳಿ ಅಲ್ಲಿಯೇ ಶಿವೈಕ್ಯರಾದರು. ಇಂದಿಗೂ ಅವರ ಸಮಾಧಿ ಕಂದಗಲ್ಲ ಗ್ರಾಮದಲ್ಲಿಯೇ ಇರುವುದರಿಂದ, ಆ ಸ್ಥಳವು ಅವರ ಜೀವನ–ಸಾಧನೆಯ ಶಾಶ್ವತ ಸ್ಮಾರಕವಾಗಿ ಉಳಿದಿದೆ.
ಪರಮ ಮಹಿಮಶಾಲಿಗಳೂ, ತಪಸ್ವಿಗಳೂ ಆಗಿದ್ದ ಚಿತ್ತರಗಿ–ಇಳಕಲ್ಲ ಮಠದ ವಿಜಯ ಮಹಾಂತರು, ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಪರ್ವತ ಶಾಸ್ತ್ರಿಗಳ ಅಪಾರ ಪಾಂಡಿತ್ಯ, ತಾತ್ವಿಕ ಆಳ ಮತ್ತು ವಿದ್ಯಾ ಪ್ರಭಾಪುಂಜದಿಂದ ಆಳವಾಗಿ ಪ್ರಭಾವಿತರಾದ ವಿಜಯ ಮಹಾಂತರು, ಹುನಗುಂದ ಮಠದಲ್ಲಿ ಸ್ಥಾಪಿತವಾಗಿದ್ದ ಸಂಸ್ಕೃತ ಪಾಠಶಾಲೆಗೆ ಪಂಡಿತ ಪರ್ವತ ಶಾಸ್ತ್ರಿಗಳನ್ನು ಪ್ರಧಾನ ಅಧ್ಯಾಪಕರಾಗಿ ನೇಮಿಸಿಕೊಂಡರು. ಈ ನೇಮಕವು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲದೆ, ವಿದ್ಯೆಗೆ ನೀಡಿದ ಗೌರವದ ಸ್ಪಷ್ಟ ಪ್ರತಿಬಿಂಬವಾಗಿತ್ತು.

ಪಂಡಿತರು ಸುಗಮವಾಗಿ ವಿದ್ಯಾದಾನದಲ್ಲಿ ತೊಡಗಿಸಿಕೊಳ್ಳುವಂತೆ ಅಗತ್ಯವಿದ್ದ ಎಲ್ಲ ಸೌಲಭ್ಯಗಳನ್ನು ವಿಜಯ ಮಹಾಂತರು ಒದಗಿಸಿದರು. ಅದಲ್ಲದೆ, ಸಂಭಾವನಾರೂಪವಾಗಿ ಪ್ರತಿವರ್ಷ ಐದು ನೂರು ರೂಪಾಯಿಗಳ ಗೌರವ ವೇತನವನ್ನು ದಯಪಾಲಿಸುತ್ತಿದ್ದರು. ಪಂಡಿತರು ಸೇವೆಯಿಂದ ನಿವೃತ್ತಿಹೊಂದಿದ ನಂತರವೂ, ಆ ಗೌರವ ವೇತನವನ್ನು ಆಜೀವಪರ್ಯಂತ ತಪ್ಪದೆ ನೀಡಿದ್ದು, ಗುರು–ಶಿಷ್ಯ ಪರಂಪರೆಯ ಅಪರೂಪದ ಉದಾಹರಣೆಯಾಗಿದೆ. ಪರ್ವತ ಶಾಸ್ತ್ರಿಗಳು ಈ ಅನುಗ್ರಹವನ್ನು ಭಕ್ತಿ ಮತ್ತು ಕೃತಜ್ಞತೆಯೊಂದಿಗೆ ಗುರುಕೃಪೆಯೆಂದು ಸ್ವೀಕರಿಸಿ, ತಮ್ಮ ವಿದ್ಯಾಸಾಧನೆಯನ್ನು ಇನ್ನೂ ಶ್ರದ್ಧೆಯಿಂದ ಮುಂದುವರಿಸಿದ್ದರು.
ಪೂಜ್ಯ ಇಳಕಲ್ಲ ವಿಜಯ ಮಹಂತರರು, ಗುಡದೂರ ದೊಡ್ಡಯ್ಯನವರು, ಸಂತೆಕೊಲ್ಲರ ಘನಮಠಾರ್ಯರು, ಸೊಲ್ಲಾಪುರದ ವೀರೇಶ್ವರ ಶರಣರು ಹಾಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸನ್ನಿಧಿ ಮತ್ತು ಸಾನ್ನಿಧ್ಯದಿಂದ ಪಂಡಿತ ಪರ್ವತ ಶಾಸ್ತ್ರಿಗಳು ಶಿವಾನುಭವ ಶಾಸ್ತ್ರದ ಪರಮ ರಹಸ್ಯವನ್ನು ಆಳವಾಗಿ ಮನನ ಮಾಡಿಕೊಂಡಿದ್ದರು. ಈ ಮಹಾಪುರುಷರ ಸಂಪರ್ಕವು ಅವರ ತತ್ತ್ವಚಿಂತನೆಗೆ ದಿಕ್ಕು ನೀಡಿದ್ದು, ಅನುಭವ–ಅನುಸಂಧಾನದ ಮೂಲಕ ಶಿವತತ್ತ್ವವನ್ನು ಗ್ರಹಿಸುವ ದೃಷ್ಟಿಯನ್ನು ಮತ್ತಷ್ಟು ಪಕ್ವಗೊಳಿಸಿತು.
ಪರ್ವತ ಶಾಸ್ತ್ರಿಗಳ ಪಾಂಡಿತ್ಯ ಕೇವಲ ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಸಮಾಜದ ವಿವಿಧ ವರ್ಗಗಳೊಂದಿಗೆ ನಡೆದ ತತ್ವಾರ್ಥ ಚರ್ಚೆಗಳ ಮೂಲಕ ಇನ್ನಷ್ಟು ವಿಸ್ತಾರಗೊಂಡಿತು. ಸರ್ವಶ್ರೀ ಕಂದಗಲ್ಲ ನಾಡಗೌಡರು, ಗೆಜ್ಜಲಗಟ್ಟಿ ಸಂಸ್ಥಾನದ ಜಹಗೀರದಾರ ವೆಂಕಟರಾಯರು, ತಾಳೀಕೋಟಿಯ ಶ್ರೀಮಂತರು, ವಿಶ್ವಕರ್ಮ ಸಮಾಜದ ದೇವಗಿರಿ ಲಕ್ಷ್ಮಯ್ಯನವರು, ಸಜ್ಜಲಗುಡ್ಡದ ಶರಣಮ್ಮನವರು, ಸೊಲ್ಲಾಪುರದ ವಾರದ ಮಲ್ಲಪ್ಪನವರು ಸೇರಿದಂತೆ ಸಮಾಜದ ಅನೇಕ ಗಣ್ಯರು ಪರ್ವತ ಶಾಸ್ತ್ರಿಗಳೊಂದಿಗೆ ತಾತ್ವಿಕ ಸಂವಾದಗಳಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಈ ಚರ್ಚೆಗಳಲ್ಲಿ ಪರ್ವತ ಶಾಸ್ತ್ರಿಗಳ ಪ್ರಕಾಂಡ ಪಾಂಡಿತ್ಯ, ವಿಷಯವನ್ನು ಸರಳವಾಗಿ ನಿರೂಪಿಸುವ ಶೈಲಿ ಹಾಗೂ ವಾಗೈಖರಿಯ ಸೌಂದರ್ಯವನ್ನು ಮೆಚ್ಚಿ ಆನಂದಭರಿತರಾಗುತ್ತಿದ್ದರು.
ಪಂಡಿತ ಪರ್ವತ ಶಾಸ್ತ್ರಿಗಳು ಜ್ಞಾನವನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೇ, ಹೊಸಪೇಟೆ, ಹಂಪಿ, ಕೊಡಗಲಿ, ಲಿಂಗಸೂಗುರು, ಇಳಕಲ್ಲು ಮುಂತಾದ ಗ್ರಾಮಗಳಲ್ಲಿ ಜ್ಞಾನಸತ್ರಗಳನ್ನು ಏರ್ಪಡಿಸುತ್ತಾ, ಬಸವಪುರಾಣ ಪ್ರವಚನಗಳನ್ನು ಮಾಡುತ್ತಾ, ಜಿಜ್ಞಾಸುಗಳಿಗೆ ತತ್ತ್ವಬೋಧೆ ನೀಡುತ್ತಾ ನಮ್ಮ ನಾಡಿನ ನಾನಾ ಭಾಗಗಳಲ್ಲಿ ಪ್ರವಾಸ ಕೈಗೊಂಡರು. ಈ ಪ್ರವಚನಗಳು ಕೇವಲ ಧಾರ್ಮಿಕ ಉಪನ್ಯಾಸಗಳಾಗಿರದೆ, ಜನಸಾಮಾನ್ಯರ ಜೀವನಕ್ಕೆ ತಾತ್ವಿಕ ಸ್ಪಷ್ಟತೆ ನೀಡುವ ಅನುಭವಪಾಠಗಳಾಗಿದ್ದವು.
ಪರಳಿ ಪ್ರಕರಣದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಪಾತ್ರ
ಪರಳಿ ಎಂಬುದು ಹೈದ್ರಾಬಾದ್ ಸಂಸ್ಥಾನದ ಮರಾಠಿ ಪ್ರದೇಶದಲ್ಲಿರುವ, ಇಂದಿನ ಪರಭಣಿ ಜಿಲ್ಲೆಯ ಸಣ್ಣ ಗ್ರಾಮ. ಇಲ್ಲಿ ಸ್ಥಿತವಾಗಿರುವ ವೈಜನಾಥ (ವೈದ್ಯನಾಥ) ದೇವಾಲಯವು ಅಪಾರ ಖ್ಯಾತಿಯನ್ನು ಹೊಂದಿದ್ದು, ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ನೈಜನಾಥೇಶ್ವರ ಲಿಂಗವು ಅಲ್ಲಿ ಪ್ರತಿಷ್ಠಿತವಾಗಿದೆ. ಪ್ರಾಚೀನ ಕಾಲದಿಂದಲೂ ಈ ವೈಜನಾಥ ಲಿಂಗದ ಪೂಜಾದಿ ವ್ಯವಸ್ಥೆ ವೀರಶೈವ ಜನಾಂಗದ ಅಧೀನದಲ್ಲಿಯೇ ನಡೆದುಕೊಂಡು ಬಂದಿತ್ತು.
ಆದರೆ ಕಾಲಕ್ರಮೇಣ ಕೆಲ ಪರವಾದಿಗಳು, ವೀರಶೈವ ಸಮಾಜಕ್ಕೆ ವೈಜನಾಥ ಲಿಂಗಕ್ಕೆ ಅರ್ಚನೆ ಮಾಡುವ ಹಕ್ಕಿಲ್ಲವೆಂಬ ಅನುಮಾನವನ್ನು ಸೃಷ್ಟಿಸಿ, ಈ ವಿಷಯವನ್ನು ವಿವಾದದ ರೂಪಕ್ಕೆ ತಳ್ಳಿದರು. ಈ ಗಂಭೀರ ವಿವಾದವು ಕೊನೆಗೆ ಹೈದ್ರಾಬಾದ್ ಸಂಸ್ಥಾನದ ಉಚ್ಚನ್ಯಾಯಾಲಯವಾದ ‘ಉಮರ ಮಜಹಬಿ’ ನ್ಯಾಯಾಲಯದ ಮೆಟ್ಟಿಲೇರಿತು. ಇದು ಕೇವಲ ಧಾರ್ಮಿಕ ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ; ವೀರಶೈವ ಸಮಾಜದ ಗೌರವ, ಪರಂಪರೆ ಮತ್ತು ಅಸ್ತಿತ್ವದ ಪ್ರಶ್ನೆಯಾಗಿ ರೂಪುಗೊಂಡಿತು.
ಈ ಪ್ರಕರಣದಲ್ಲಿ ವೀರಶೈವ ಸಮಾಜದ ಪರವಾಗಿ ಅಪಾರ ಆರ್ಥಿಕ ಸಹಾಯದ ಜೊತೆಗೆ, ವೀರಶೈವರಿಗೆ ವೈಜನಾಥ ಲಿಂಗವನ್ನು ಪೂಜಿಸುವ ಹಕ್ಕು ಶಾಸ್ತ್ರಸಮ್ಮತವಾಗಿಯೇ ಇದೆ ಎಂಬುದನ್ನು ಸಂಸ್ಕೃತ ಶಾಸ್ತ್ರಾಧಾರಗಳಿಂದ ಸಾಬೀತುಪಡಿಸುವ ಅಗತ್ಯವಿತ್ತು. ಇದಕ್ಕಾಗಿ ಉನ್ನತ ಮಟ್ಟದ ಸಂಸ್ಕೃತ ಪಾಂಡಿತ್ಯ, ಶಾಸ್ತ್ರೀಯ ಉದಾಹರಣೆಗಳು ಹಾಗೂ ಪ್ರಾಮಾಣಿಕ ವಿದ್ವಾಂಸರ ಸಹಕಾರ ಅತ್ಯಾವಶ್ಯಕವಾಗಿತ್ತು. ವೀರಶೈವ ಸಮಾಜದ ಮಾನರಕ್ಷಣೆಯ ಘಟ್ಟ ಇದಾಗಿತ್ತು.

ಈ ಸನ್ನಿವೇಶದಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ನೇತೃತ್ವವಹಿಸಿ, ಯಾವುದೇ ಬೆಲೆಯನ್ನಾದರೂ ತೀರಿಸಿ ಈ ಹೋರಾಟವನ್ನು ಜಯಿಸಲೇಬೇಕೆಂಬ ದೃಢನಿಶ್ಚಯದೊಂದಿಗೆ ಕಾರ್ಯೋನ್ಮುಖರಾದರು. ಪರವಾದಿಗಳು ಪುಣೆ ಮೊದಲಾದ ನಗರಗಳಿಂದ ಪ್ರಸಿದ್ಧ ಸಂಸ್ಕೃತ ಪಂಡಿತರನ್ನು ಕರೆಸಿಕೊಂಡಿದ್ದರೆ, ಹಾನಗಲ್ಲ ಶ್ರೀಗಳು ವೀರಶೈವ ಪಂಡಿತ ಮಂಡಳಿಯನ್ನೇ ಸಂಘಟಿಸಿಕೊಂಡು ಹೈದ್ರಾಬಾದಿಗೆ ತೆರಳಿದರು.

ಈ ಪಂಡಿತ ಮಂಡಳಿಯಲ್ಲಿ ಚೌಡದಾನಪುರ ಸಂಸ್ಥಾನಮಠದ ಸರ್ವಶ್ರೀ ವಿರೂಪಾಕ್ಷ ವಡೆಯರು, ಪಂಡಿತ ರೇವಣಸಿದ್ದ ಶಾಸ್ತ್ರಿಗಳು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಆಸ್ಥಾನವಿದ್ವಾನ್ ಪಿ.ಆರ್. ಕರಿಬಸವ ಶಾಸ್ತ್ರಿಗಳು, ಶಿರ್ಸಿ ಗುರುಶಾಂತ ಶಾಸ್ತ್ರಿಗಳು, ಪಂಡಿತ ಸೋಮನಾಥ ಶಾಸ್ತ್ರಿಗಳು ಮತ್ತು ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ಪ್ರಮುಖರಾಗಿದ್ದರು. ವೀರಶೈವ ಸಮಾಜದ ಪರವಾಗಿ ರಾಯ ಹೇಮಚಂದ್ರ ವಕೀಲರು, ರಾಯ ವಿಶ್ವೇಶ್ವರನಾಥರು, ಶ್ರೀ ಸೋಮೇಶ್ವರರಾವ ವಕೀಲರು, ಶರಣಯ್ಯ ಸ್ವಾಮಿ ವಕೀಲರು, ಶ್ರೀ ಸಂಗ್ರಾಮಪ್ಪ ವಕೀಲರು ಮೊದಲಾದವರು ವಕಾಲತ್ತು ವಹಿಸಿದ್ದರು.
ಈ ವಿದ್ವಾಂಸರು ಮತ್ತು ವಕೀಲರು ಸೇರಿ ಶಾಸ್ತ್ರೋಕ್ತ ಪ್ರಮಾಣಗಳು, ಪುರಾಣೋಕ್ತ ಉಲ್ಲೇಖಗಳು ಹಾಗೂ ಸಶಕ್ತ ಶಾಸ್ತ್ರೀಯ ಉದಾಹರಣೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿ, ದೃಢವಾದ ವಾದವನ್ನು ಮುಂದಿಟ್ಟರು. ಈ ಸಮಗ್ರ, ಸಂಘಟಿತ ಮತ್ತು ತಾತ್ವಿಕ ಹೋರಾಟದ ಫಲವಾಗಿ ವೀರಶೈವ ಸಮಾಜಕ್ಕೆ ನ್ಯಾಯ ದೊರಕಿತು; ಪ್ರಕರಣದಲ್ಲಿ ವೀರಶೈವ ಪಕ್ಷವು ವಿಜಯ ಸಾಧಿಸಿತು.
ಈ ಐತಿಹಾಸಿಕ ಹೋರಾಟದಲ್ಲಿ ಪಂಡಿತ ಕಂದಗಲ್ಲ ಪರ್ವತ ಶಾಸ್ತ್ರಿಗಳು ಅವಿಶ್ರಾಂತ ಶ್ರಮವಹಿಸಿ, ಶಾಸ್ತ್ರಾಧಾರಿತ ಪ್ರಮಾಣಗಳನ್ನು ಸಂಗ್ರಹಿಸಿ ಒದಗಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿದರು. ಅವರ ಪಾಂಡಿತ್ಯ, ಸ್ಮರಣಶಕ್ತಿ ಮತ್ತು ಶಾಸ್ತ್ರಸಿದ್ಧತೆಯೇ ಈ ವಾದಕ್ಕೆ ಬಲ ನೀಡಿದ ಮೂಲಾಧಾರಗಳಾಗಿದ್ದವು.
ಈ ಪ್ರಕರಣದ ನಿಮಿತ್ತ ಹೈದ್ರಾಬಾದಿನಲ್ಲಿ ವಾಸ್ತವ್ಯ ಮಾಡಿದ ಸಮಯದಲ್ಲಿ, ಅಂದಿನ ಹೈದ್ರಾಬಾದ್ ನವಾಬರಾದ ಅಲಾ ಹಜರತ್ ಸಾಹೇಬರು ಪಂಡಿತ ಪರ್ವತ ಶಾಸ್ತ್ರಿಗಳ ಖ್ಯಾತಿಯನ್ನು ಕೇಳಿ, ಅವರನ್ನು ತಮ್ಮ ಸದರ ದರ್ಬಾರಕ್ಕೆ ಆಹ್ವಾನಿಸಿ, ಅವರ ಅಪಾರ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದರೆಂದು ತಿಳಿದುಬರುತ್ತದೆ. ಇದು ಪಂಡಿತ ಪರ್ವತ ಶಾಸ್ತ್ರಿಗಳ ವಿದ್ಯಾ ಗೌರವವು ಧರ್ಮ–ಜಾತಿ–ರಾಜಕೀಯ ಸೀಮೆಗಳನ್ನು ಮೀರಿ ಬೆಳಗಿದ್ದುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಅತ್ಯಂತ ಮೇಧಾವಿಗಳೂ, ಪ್ರಕಾಂಡ ಪಂಡಿತರೂ, ಕವಿ ಪ್ರತಿಭಾಸಂಪನ್ನರೂ ಆಗಿದ್ದ ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಸುಮಾರು ಎಪ್ಪತ್ತೆರಡು ವರ್ಷಗಳ ಕಾಲ ಸಮೃದ್ಧ, ಸಾರ್ಥಕ ಮತ್ತು ತಪೋಮಯ ಜೀವನವನ್ನು ನಡೆಸಿ, ಶಕ ೧೮೪೮ರಲ್ಲಿ (ಕ್ರಿ.ಶ. ೧೯೨೬) ತಮ್ಮ ಜನ್ಮಭೂಮಿಯಾದ ಕಂದಗಲ್ಲ ಗ್ರಾಮದಲ್ಲಿಯೇ ಶಿವೈಕ್ಯರಾದರು.
ತಮ್ಮ ಅಂತಿಮ ಕ್ಷಣಗಳಲ್ಲಿ, ತಾವು ಸ್ವತಃ ರಚಿಸಿದ್ದ ಮಹಾಮಹಿಮರಾದ ಚಿತ್ತರಗಿ ವಿಜಯ ಮಹಾಂತೇಶ್ವರರ ಅಷ್ಟಕವನ್ನು, ಇಳಕಲ್ಲ ಹಿರೇಮಠದ ಗುರು ಬಸವ ಶಾಸ್ತ್ರಿಗಳಿಗೆ ತಾರಸ್ವರದಲ್ಲಿ ಹಾಡುವಂತೆ ವಿನಂತಿಸಿ, ತಮ್ಮ ಮನಸ್ಸನ್ನು ಮಹಾಲಿಂಗದಲ್ಲಿ ಲೀನಗೊಳಿಸಿದರು. ಪರಶಿವ ಧ್ಯಾನದಲ್ಲಿ ಮಗ್ನರಾದ ಅವರು, ಇಹಲೋಕದ ಎಲ್ಲ ಬಂಧನಗಳನ್ನು ಮೀರಿ ಪರಂಧಾಮವನ್ನು ಸೇರುವ ಅಪೂರ್ವ ಕ್ಷಣವನ್ನು ಸಾಧಿಸಿದರು. ಮಹಾಕವಿಯ ದೇಹ ನಶ್ವರವಾದರೂ, ಅವರ ಅಶರೀರವಾಣಿ ಸ್ವರಚಿತ ಗ್ರಂಥರಾಶಿಗಳಲ್ಲಿ ಅನುರಣಿತವಾಗಿ ಅಮರವಾದುದು.
ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ತಾತ್ವಿಕ ಸಾಧನೆಯ ಶಿಖರದಂತೆ ಕಾಣುತ್ತದೆ:
ಅಧಾರಾದಿಂ ಪಶ್ಚಿಮಾಂತವಿಲಸತ್ ಚಕ್ರಾಬ್ಜ ಪತ್ರೋಜ್ವಲತ್
ಪ್ರಾಣೋಪಸ್ಕೃತ-ಲಿಂಗಜಿತ್ಸುಖ-ಸುಧಾಸ್ವಾದಾತಿ ಮೋದಾಬುಂಧಿಮ್ ।
ಪಿಂಡಾದಿಸ್ಥಲಬೋಧ-ಸಾಧನಕಲಾ ಭೂಷಾಚ್ಛಭಾಷಾನಿಧಿಂ
ನಿಶ್ಚಿಂತಂ ನಿರುಪಪ್ಲವಂ ನಿರುಪಮಂ ನಿತ್ಯಂ ವಿನುತ್ಯಂ ಮುದಾ ।
ವಂದೇ ತಂ ಸತತಂ ಕೃಪಾರಸಲಸತ್ ಸ್ವಂತಂ ಮಹಾಂತಂ ಪ್ರಭುಮ್ ॥
ಈ ಶ್ಲೋಕದಲ್ಲಿ ಕವಿ ಪರಮಾತ್ಮಸ್ವರೂಪಿಯಾದ ಮಹಾಂತ ಪ್ರಭುವನ್ನು ಭಕ್ತಿಪೂರ್ವಕವಾಗಿ ವಂದಿಸುತ್ತಾನೆ. ಮೂಲಾಧಾರದಿಂದ ಸಹಸ್ರಾರವರೆಗೆ—ಅಂದರೆ ಆಧಾರದಿಂದ ಪಶ್ಚಿಮಾಂತವರೆಗೆ—ಪ್ರಕಾಶಿಸುವ ಚಕ್ರಕಮಲಗಳ ದೀಪ್ತಿಯಿಂದ ಉಜ್ವಲರಾಗಿರುವ ಪ್ರಭುವಿನ ಸ್ವರೂಪವನ್ನು ಇಲ್ಲಿ ಕವಿ ಚಿತ್ರಿಸುತ್ತಾನೆ. ಪ್ರಾಣಶಕ್ತಿಯಿಂದ ಪೋಷಿತವಾದ ಲಿಂಗತತ್ತ್ವವನ್ನು ಜಯಿಸಿ, ಅಮೃತಸದೃಶ ಪರಮಾನಂದವನ್ನು ಅನುಭವಿಸಿ, ಅದರಲ್ಲಿ ಮುಳುಗಿ ಮೋದದಿಂದ ತುಂಬಿರುವ ಆನಂದಸ್ವರೂಪಿಯೇ ಆ ಮಹಾಂತ.
ಪಿಂಡ–ಸ್ಥಳ–ತತ್ತ್ವಗಳ ಬೋಧನೆಗೆ ಸಾಧನವಾಗುವ ಸೂಕ್ಷ್ಮ ಕಲೆಯಿಂದ ಅಲಂಕರಿತರಾಗಿ, ಶುದ್ಧ ಮತ್ತು ಸ್ಪಷ್ಟವಾದ ಭಾಷಾರಸನಿಧಿಯಾಗಿರುವವರು ಅವರು. ಯಾವುದೇ ಚಿಂತೆ ಇಲ್ಲದವರು, ಯಾವುದೇ ಉಪಾಧಿ ಅಥವಾ ಮಿತಿಗಳಿಂದ ಬಂಧಿತರಾಗದವರು, ಅಪೂರ್ವರು, ಅಪ್ರತಿಮರು, ನಿತ್ಯವೂ ಸ್ತುತಿಸಲ್ಪಡುವವರು, ಆನಂದದಿಂದ ಸದಾ ವಂದನೀಯರು. ಅಂತಹವರು ಕೃಪಾರಸದಿಂದ ತುಂಬಿ ಉಕ್ಕುವ, ನಮ್ಮ ಆತ್ಮದ ಅಂತರಾಳದಲ್ಲಿಯೇ ವಾಸಿಸುವ ಮಹಾತ್ಮನಾದ ಮಹಾಂತ ಪ್ರಭು. ಆ ಪ್ರಭುವನ್ನು ನಾನು ಸದಾ ಭಕ್ತಿಯಿಂದ ವಂದಿಸುತ್ತೇನೆ ಎಂಬುದು ಈ ಶ್ಲೋಕದ ಪರಮಾರ್ಥ.
ಈ ಮಹಾಂತಸ್ತುತಿ ಕೇವಲ ಒಂದು ಕಾವ್ಯವಲ್ಲ; ಅದು ಪಂಡಿತ ಪರ್ವತ ಶಾಸ್ತ್ರಿಗಳ ಜೀವನಾನುಭವದ ಸಾರ, ಶಿವಾನುಭವ ಶಾಸ್ತ್ರದ ಸಿದ್ಧಾಂತ ಮತ್ತು ಆತ್ಮಸಾಧನೆಯ ಅಂತಿಮ ಘೋಷಣೆಯಾಗಿದೆ. ಹೀಗೆ, ವಿದ್ಯೆ ಮತ್ತು ಅನುಭವವನ್ನು ಒಂದಾಗಿ ಬೆಸೆಯುವ ಮೂಲಕ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ವೀರಶೈವ ತತ್ತ್ವಪರಂಪರೆಯಲ್ಲಿ ಅಳಿಯದ ಬೆಳಕಾಗಿ ಉಳಿದಿದ್ದಾರೆ.
ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಸಂಸ್ಕೃತ ಸಾಹಿತ್ಯ ರಚನೆಗಳು
ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಕೇವಲ ಮಹಾನ್ ತಾತ್ವಿಕರು ಮಾತ್ರವಲ್ಲ; ಸಂಸ್ಕೃತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ಪ್ರಭುತ್ವ ಸಾಧಿಸಿದ ಅಪೂರ್ವ ವಿದ್ವಾಂಸರಾಗಿದ್ದರು. ಚಂಪೂ ಪ್ರಬಂಧಗಳಿಂದ ಹಿಡಿದು ಅಷ್ಟಕ, ಗೀತೆ, ಸುಭಾಷಿತ ಹಾಗೂ ಸ್ತೋತ್ರ ರಚನೆಗಳವರೆಗೆ ಅವರ ಕೃತಿಗಳು ವ್ಯಾಪಕವಾಗಿದ್ದು, ಶಿವಾನುಭವ–ಶೈವಸಿದ್ಧಾಂತ–ಶರಣ ಪರಂಪರೆಯ ಸುಗಂಧವನ್ನು ಹೊತ್ತಿವೆ.
೧. ಬೃಹದ್ಗ್ರಂಥಗಳು (ಚಂಪೂ ಪ್ರಬಂಧಗಳು)
ಪಂಡಿತ ಪರ್ವತ ಶಾಸ್ತ್ರಿಗಳ ಬೃಹದಾಕಾರದ ಕೃತಿಗಳು ಅವರ ಕಾವ್ಯಪ್ರತಿಭೆ, ಕಥನಶೈಲಿ ಹಾಗೂ ಶಾಸ್ತ್ರೀಯ ಪಾಂಡಿತ್ಯವನ್ನು ಸಮಗ್ರವಾಗಿ ಪ್ರತಿಬಿಂಬಿಸುತ್ತವೆ.
- ಕರಡೀಶ ಚರಿತಾಮೃತ ಚಂಪೂ ಪ್ರಬಂಧಃ
- ಚಿತ್ರಗಿ–ಶ್ರೀಮನ್ಮಹಾಂತೇಶ ಚರಿತ ಚಂಪೂ ಪ್ರಬಂಧಃ
ಈ ಎರಡು ಚಂಪೂ ಕೃತಿಗಳು ಗದ್ಯ–ಪದ್ಯಗಳ ಸುಂದರ ಸಂಯೋಜನೆಯೊಂದಿಗೆ ಶರಣ ಮಹಾತ್ಮರ ಜೀವನ, ತಪಸ್ಸು ಮತ್ತು ತತ್ತ್ವವನ್ನು ಕಾವ್ಯಮಯವಾಗಿ ಚಿತ್ರಿಸುತ್ತವೆ.
೨. ಸುಭಾಷಿತ ಸಾಹಿತ್ಯ
- ಸುಭಾಷಿತ ಸುಧಾ ಝರೀ
ನೀತಿ, ವೈರಾಗ್ಯ, ಜೀವನಾನುಭವ ಮತ್ತು ತಾತ್ವಿಕ ಚಿಂತನೆಗಳನ್ನು ಸಂಕ್ಷಿಪ್ತ, ಸುಂದರ ಮತ್ತು ಸ್ಮರಣೀಯ ಶ್ಲೋಕಗಳ ಮೂಲಕ ಹೇಳುವ ಈ ಕೃತಿ, ಪಂಡಿತ ಪರ್ವತ ಶಾಸ್ತ್ರಿಗಳ ಸೂಕ್ಷ್ಮಾವಲೋಕನ ಶಕ್ತಿಗೆ ಸಾಕ್ಷಿಯಾಗಿದೆ.
೩. ಅಷ್ಟಕ ಕೃತಿಗಳು
ಅಷ್ಟಕ ಸಾಹಿತ್ಯದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳು ವಿಶೇಷ ಸಾಧನೆ ಮಾಡಿದ್ದು, ಶರಣರು, ಯತಿಗಳು, ದೇವತೆಗಳು ಮತ್ತು ಶಿವಾನುಭವ ತತ್ತ್ವಗಳನ್ನು ಭಕ್ತಿಭಾವಪೂರ್ಣವಾಗಿ ವರ್ಣಿಸಿದ್ದಾರೆ. ಅವರ ಪ್ರಮುಖ ಅಷ್ಟಕಗಳು ಇಂತಿವೆ:
- ಅಂಬಾಷ್ಟಕಮ್
- ಗಿರಿ ಶ್ರೀ ಮಲ್ಲಿಕಾರ್ಜುನ ಮಹಾಷ್ಟಕಮ್
- ನಾಗಭೂಷಣ ಘನಮಠವರಭವಾಷ್ಟಕಮ್
- ಶರಣ ಬಸವ ರಾಜಾಷ್ಟಕಮ್
- ಶರಣ ಬಸವ ಸದಷ್ಟಕಮ್
- ಶ್ರೀ ಕೃಷ್ಣಾ–ಮಲಹಾರಿಣೀ, ಶ್ರೀ ಸಂಗಮೇಶ್ವರ ಮಹಾಷ್ಟಕಮ್
- ಶ್ರೀ ಕೋಲೂರ ಸೂರಿ ನಿವಾಸ ವೃಷೇಂದ್ರಾಷ್ಟಕಮ್
- ಶ್ರೀ ಗಿರಿಪುರ (ಗುಡದೂರು) ದೊಡ್ಡ ಪಾರ್ಯ ಪಂಚರತ್ನ ಸ್ತವಃ
- ಶ್ರೀ ದಕ್ಷಿಣಾಮೂರ್ತಿ ಘನಾಷ್ಟಕಮ್
- ಶ್ರೀ ಭವಾಲದಿ ಮಹಾಂತಸ್ವಾಮಿ ಪ್ರಭಾವ ರುಚಿರಾಷ್ಟಕಮ್
- ಶ್ರೀ ಮಚ್ಚಿತ್ರಗಿ: ಶ್ರೀ ಮಹಾಂತ ಯತಿರಾಜವರಾಷ್ಟಕಮ್
- ಶ್ರೀ ಮಲ್ಲಿಕಾರ್ಜುನ ವರಾಷ್ಟಕಮ್
- ಶ್ರೀ ಸಿದ್ಧರಾಮ ಶಿವಯೋಗಿ ವರಾಷ್ಟಕಮ್
- ಶ್ರೀ ಸಿದ್ಧವರ್ಯಾಷ್ಟಕಮ್
ಈ ಅಷ್ಟಕಗಳಲ್ಲಿ ಭಕ್ತಿ, ಶಾಸ್ತ್ರ, ಅನುಭವ ಮತ್ತು ಕಾವ್ಯ—all ಒಂದಾಗಿ ಬೆಸೆದಿರುವುದು ಪಂಡಿತ ಪರ್ವತ ಶಾಸ್ತ್ರಿಗಳ ವಿಶೇಷತೆ.
೪. ಗೀತೆಗಳು
ಸಂಗೀತಾತ್ಮಕ ಲಯ, ಭಕ್ತಿರಸ ಮತ್ತು ಸುಲಭ ಪಠ್ಯಶೈಲಿಯೊಂದಿಗೆ ರಚಿತವಾದ ಪರ್ವತ ಶಾಸ್ತ್ರಿಗಳ ಗೀತೆಗಳು ದೇವಾಲಯ ಹಾಗೂ ಸತ್ಸಂಗಗಳಲ್ಲಿ ಹಾಡಲು ಯೋಗ್ಯವಾಗಿವೆ.
- ಅಂಬೇ ಗಜೇಂದ್ರ ಬಾಲೇ ಪಾಲಯ
- ಅಂಬೇ ಪಾಹಿ
- ಜಯ ಜಯ ಗಿರಿಜಾವರ
- ಜಯ ಹೈಮವತೀ ಹೃದೇ
- ತುಂಗ ಮಹಿಮಾಂಕ ಘನಮಂಗಲಮ್
- ಮಂಗಲಂ ಭವತು ಮಹೇಶ
- ಮಂಗಲಂ ಭವಾನಿ
- ಮಂಗಲಂ ಸಂಗಮೇಶ್ವರ
೫. ದೊರೆಯದೇ ಉಳಿದ ಕೃತಿಗಳು
ಇತಿಹಾಸದ ಪ್ರವಾಹದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಕೆಲವು ಕೃತಿಗಳು ಲಭ್ಯವಾಗದೆ ಉಳಿದಿರುವುದು ವಿಷಾದಕರ ಸಂಗತಿ. ಆದರೆ ಗ್ರಂಥಸೂಚಿಗಳಲ್ಲಿ ಉಲ್ಲೇಖವಾಗಿರುವ, ಇಂದಿಗೂ ಅನ್ವೇಷಣೆಗೆ ಕಾಯುತ್ತಿರುವ ಕೃತಿಗಳು ಇಂತಿವೆ:
- ಅಮರೇಶ್ವರಾಷ್ಟಕಮ್
- ಪರಶಿವ ಜಂಗಮ ಸಂದರ್ಶನ ಸ್ತೋತ್ರಮ್
- ಪಂಚಮ ಜಾರ್ಜ ಸಮುದ್ರ ಬಂಧನಮ್
ಉಪಸಂಹಾರ
ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನ ಮತ್ತು ಸಾಧನೆಗಳನ್ನು ಅವಲೋಕಿಸಿದಾಗ, ಅವರು ಕೇವಲ ಒಬ್ಬ ಸಂಸ್ಕೃತ ಪಂಡಿತರಾಗಿರಲಿಲ್ಲ; ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳಿಗೆ ದಿಕ್ಕು ನೀಡಿದ ಮಹಾನ್ ಚೇತನರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಿದ್ಯೆ, ತಪಸ್ಸು, ಅನುಭವ ಮತ್ತು ಸಮಾಜಜವಾಬ್ದಾರಿ—ಈ ನಾಲ್ಕೂ ಗುಣಗಳು ಅವರಲ್ಲಿ ಸಹಜವಾಗಿ ಒಟ್ಟಾಗಿ ಲೀನವಾಗಿದ್ದವು.
ಕಂದಗಲ್ಲ ಎಂಬ ಸಣ್ಣ ಗ್ರಾಮದಿಂದ ಹೊರಟು, ಬಳ್ಳಾರಿಯ ಗುರುನಿವಾಸ ಸಂಸ್ಕೃತ ಪಾಠಶಾಲೆ, ಹುನಗುಂದ ಮಠದ ಶೈಕ್ಷಣಿಕ ಸೇವೆ, ನಾಡಿನ ನಾನಾಭಾಗಗಳಲ್ಲಿ ನಡೆದ ಜ್ಞಾನಸತ್ರಗಳು ಮತ್ತು ಬಸವಪುರಾಣ ಪ್ರವಚನಗಳವರೆಗೆ ಅವರ ಪಯಣ ನಿರಂತರವಾದ ಜ್ಞಾನಯಾತ್ರೆಯಾಗಿತ್ತು. ಪರ್ವತ ಶಾಸ್ತ್ರಿಗಳ ಪಾಂಡಿತ್ಯವು ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಜೀವಂತ ಅನುಭವವಾಗಿ ಸಮಾಜದೊಳಗೆ ಹರಿದಿತು.
ಪರಳಿ ಪ್ರಕರಣದಂತಹ ಐತಿಹಾಸಿಕ ಹೋರಾಟದಲ್ಲಿ ಅವರು ವೀರಶೈವ ಸಮಾಜದ ಮಾನರಕ್ಷಣೆಗೆ ಶಾಸ್ತ್ರಾಧಾರಿತ ಶಕ್ತಿಯನ್ನು ಒದಗಿಸಿ, ಧರ್ಮ ಮತ್ತು ನ್ಯಾಯ ಒಂದೇ ತ್ರಾಸಿನ ಮೇಲೆ ನಿಲ್ಲಬಹುದೆಂಬುದನ್ನು ಸಾಬೀತುಪಡಿಸಿದರು. ಈ ಸಂದರ್ಭದಲ್ಲಿ ಅವರ ಶ್ರಮ, ತಾತ್ವಿಕ ಧೈರ್ಯ ಮತ್ತು ಸ್ಮರಣಶಕ್ತಿ ವೀರಶೈವ ಪರಂಪರೆಯ ಅಸ್ತಿತ್ವಕ್ಕೆ ಬಲವಾದ ಆಧಾರವಾಯಿತು.
ಚಂಪೂ ಪ್ರಬಂಧಗಳು, ಅಷ್ಟಕಗಳು, ಗೀತೆಗಳು ಮತ್ತು ಸುಭಾಷಿತಗಳ ಮೂಲಕ ಪಂಡಿತ ಪರ್ವತ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದರು. ಅವರ ಕೃತಿಗಳಲ್ಲಿ ಕಾವ್ಯಸೌಂದರ್ಯ ಮಾತ್ರವಲ್ಲದೆ, ಶಿವಾನುಭವ ತತ್ತ್ವದ ಆಳವಾದ ಸ್ಪಂದನವೂ ಮೇಳೈಸಿದೆ. ವಿಶೇಷವಾಗಿ ಅವರ ಅಂತಿಮ ಕ್ಷಣಗಳಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ಜೀವನಸಾಧನೆಯ ಪರಮಾರ್ಥವನ್ನು ಸಾರುವ ಆತ್ಮಘೋಷಣೆಯಂತಿದೆ.
ಶಿವಾನುಭವ ಶಾಸ್ತ್ರವನ್ನು ಕೇವಲ ತಾತ್ವಿಕ ವಾದವಾಗಿ ಅಲ್ಲದೆ, ಬದುಕಿನ ಅನುಭವವಾಗಿ ಜೀವಿಸಿದ ಪಂಡಿತ ಪರ್ವತ ಶಾಸ್ತ್ರಿಗಳು, ಗುರು–ಲಿಂಗ–ಜಂಗಮ ಪರಂಪರೆಯ ಜೀವಂತ ಪ್ರತಿನಿಧಿಗಳಾಗಿದ್ದರು. ಅವರ ದೇಹ ನಶ್ವರವಾದರೂ, ಅವರ ವಾಣಿ, ಕೃತಿ ಮತ್ತು ತತ್ತ್ವಚಿಂತನೆಗಳು ಇಂದಿಗೂ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತ ವಾಙ್ಮಯದಲ್ಲಿ ಅಳಿಯದ ಬೆಳಕಾಗಿ ಪ್ರಕಾಶಿಸುತ್ತಿವೆ.
ಇಂದು ಅವರ ಸ್ಮರಣೆ ಕೇವಲ ಭೂತಕಾಲದ ಗೌರವವಲ್ಲ; ಅದು ವರ್ತಮಾನ ಮತ್ತು ಭವಿಷ್ಯಕ್ಕೆ ದಿಕ್ಕು ತೋರಿಸುವ ಜ್ಞಾನಸ್ಮರಣೆ. ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನವು, ವಿದ್ಯೆ ಸಮಾಜಸೇವೆಗೆ, ಭಕ್ತಿ ಮಾನವೀಯತೆಗೆ ಮತ್ತು ಅನುಭವ ಆತ್ಮೋದ್ಧಾರಕ್ಕೆ ದಾರಿಯಾಗಬೇಕು ಎಂಬ ಶಾಶ್ವತ ಸಂದೇಶವನ್ನು ನಮಗೆ ನೀಡುತ್ತದೆ.
ಗ್ರಂಥ ಋಣ
- ಸುಭಾಷಿತ ಸುಧಾ ಝರೀ – ಸಂಪಾದಕರು: ಶ್ರೀ ಎ. ಎಲ್. ಹಿರೇಮಠ
- ಬೆಳಗು ಪ್ರಕಾಶನ, ಶ್ರೀ ಶಿವಯೋಗಮಂದಿರ
- ವೀರಶೈವ ವೇದಾಧಿಕಾರ ವಿಜಯಲೇಖ – ಶ್ರೀ ನಂಜುಡಾರಾಧ್ಯ

























Total views : 23797