ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ಸುಕುಮಾರ ಬ್ಲಾಗ್‌ ನ ಎರಡನೇಯ ವಸಂತದ ಪಾದರ್ಪಣೆಯ ಮೊದಲ ಸಂಚಿಕೆಯನ್ನು ಅರ್ಪಿಸಲು ಸಂತಸವೆನಿಸುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ “ಸುಕುಮಾರ”ಹೊಸ ರೂಪದಲ್ಲಿ ಅನಾವರಣಗೊಳ್ಳಲಿದೆ.ಮೊದಲ ವಾರ್ಷಿಕೋತ್ಸವಕ್ಕೆ ಹಾರೈಕೆ,ಶ್ಲಾಘನೆ,ಮತ್ತು ಅತ್ಯುತ್ತಮ ಸಲಹೆಗಳನ್ನು ನೀಡಿದ ಪೂಜ್ಯರಿಗೆ ಹಾಗು ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು

ಜೂನ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಭೋದೇವ ಗಿರಿಜಾಧವ ಮುದವಿಲಸಿತ ಮದಹತ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೩ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಎಡೆಯೂರು ಸಿದ್ಧಲಿಂಗ ಶಿವಯೋಗಿ -ಲೇಖಕರು :ಹೀ.ಚಿ.ಶಾಂತವೀರಯ್ಯ
  4. ನಿಜಗುಣ ಶಿವಯೋಗಿ : -ಲೇಖಕರು  ವಿದ್ವಾನ್‌ ಜಿ.ವಿ.ಶಿವಸ್ವಾಮಿ.
  5. ಸರ್ಪಭೂಷಣ ಶಿವಯೋಗಿಗಳು -ಲೇಖಕರು  ಪ್ರೊ. ಜೆ.ಎಸ್.ಸಿದ್ದಲಿಂಗಯ್ಯ
  6. ಪಾದೋದಕ ಒಂದು ಅನಿಸಿಕೆ -ಲೇಖಕರು  ಡಾ. ಸ.ಜ.ನಾಗಲೋಟಮಠ
  7. ಮಹಿಳೆಯರ ಉನ್ನತಿಗಾಗಿ ಶರಣರು ಮಹೋನ್ನತ ಕಾರ್ಯ: ಅಖಿಲ ಭಾರತ ವೀರಶೈವ  ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ  ಸ್ಥಳ :ಕುಮಾರ ನಗರ ದಿ. ೨೨-೨-೧೯೬೦
  8. ಆಹಾರವೇ ಔಷಧಿ – ಔಷಧಿಯೇ ಆಹಾರ – ಒಂದು ವೈಜ್ಞಾನಿಕ ಪರಿಕಲ್ಪನೆ ಡಾ|| ಬಸವರಾಜ ಹಿರೇಮಠ
  9. ವಿಡಿಯೋ ೧ Shri Kumareshwara Life & Contributions  : Smt Supriya  Antin Kaddargi
  10. ವಿಡಿಯೋ ೨ Yuga Purusha Shri Hanagal Kumareshwara  (Hindi) by Smt Sapna Jain
  11. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಭೋದೇವ ಗಿರಿಜಾಧವ ಮುದವಿಲಸಿತ ಮದಹತ

(ರಾಗ – ಆನಂದಭೈರವಿ)

ಭೋದೇವ ಗಿರಿಜಾಧವ | ಮುದವಿಲಸಿತ ಮದಹತ |

ಇಂದ್ರಿಯಜಿತ | ಸಾಧು ಚರಿತ ‘ಆ’ ಜಯ |          || ಪ ||

ಸಂಪದಾಸುರದಿ ಚರಿಪ | ಪಾಪದಾಗರವಿಲೋಪ |

ಸುಪಥವೇ ಸುಪ್ರದೀಪ | ತಮರಜಗುಣವಿರಹಿತ |

ಸುಮನ ಸಹಿತ | ವಿಮಲರತ ‘ಆ’ ಭವ    || 1 ||

ಸಂತರಾಚರಣ ಸುಖವ | ಚಿಂತಿಪಾತ್ಮರ ಸುಭಾವ |

ಸಂತತಾನಂದವೀವ | ವರಗುರುಚರಣ ಕಮಲ |

ದಿರವೆ ಸಕಲ | ಚರಲೀಲಾ ‘ಆ’ ಗತ     || 2 ||

ಬಿಂದುನಾದ ಪರಯೋಗ | ದಿಂದಲಾದ ಶಿವಯೋಗಾ |

ನಂದದಾಚರಿಪ ಯೋಗ | ಜವದಿ ಕೊಡು ಪರಮೇಶ | ಭವವಿನಾಶ | ಸುವಿಲಾಸ ‘ಆ’ ಶಿವ       ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಭೂಮಿ ಬೀಜವ ಬಿತ್ತಿ | ಭೂಮಿಯನ್ನು ಬೆಳೆದೊಕ್ಕಿ

ಭೂಮಿಯನು ತೂರಲ್ಕೆ-ಭೂಮಿ ತಾ ಜೊಳ್ಳಾದು

ದೈ ಮಹಾಗುರುವೆ ಕೃಪೆಯಾಗು  II೬ I

ಮಹಾಚೈತನ್ಯನೂ, ಸರ್ವಜ್ಞನೂ, ಸ್ವಯಂಜ್ಯೋತಿ ಸ್ವರೂಪನೂ ಆದ ಮಹಾದೇವನ ಅಂಶ ಸ್ವರೂಪನಾದ ಜೀವಾತ್ಮನು ಸದ್ಗತಿಯನ್ನು ಕಾಣಲು ಪಡೆದ ತನುವು ಪಂಚಭೂತಮಯವಾದುದು. ಅದರ ಯಥಾರ್ಥತೆಯನ್ನರಿತರೆ ಅದ್ಭುತ ಸ್ವರೂಪದ ಅರಿವಾಗುವದೆಂಬುದನ್ನು ಮನದಂದು ಒಂದೊಂದು ಮಹಾಭೂತದ ಸ್ವರೂಪ ವಿಸ್ತಾರ ಮಾಡುತ್ತಾನೆ ಶಿವಕವಿಯು . ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇದೈದು ಮಹಾಭೂತಗಳು. ನೆಲತತ್ತ್ವದಲ್ಲಿ ಜಲ, ಅನಲ, ಅನಿಲ, ಆಕಾಶಗಳು  ಒಳಗೊಂಡಿರುತ್ತದೆ. ಅರ್ಥಾತ್ ಪೃಥ್ವಿಯು ಉಳಿದ ನಾಲ್ಕನ್ನು ಅಳವಡಿಸಿಕೊಂಡಿರುವದು. ಭೂಮಿಯ ಭಾಗ ಅರ್ಧವಿದ್ದರೆ ಉಳಿದ ನಾಲ್ಕು ಭೂತಗಳು ಎರಡೆರಡಾಣೆಯಂತ ಅರ್ಧ ಪ್ರಮಾಣದಲ್ಲಿ ಸಮಾವೇಶವಾಗುತ್ತವೆ. ನೆಲತತ್ತ್ವ ಪ್ರಧಾನವಾಗಿರುವದರಿಂದಲೇ ಎಲ್ಲ ವಸ್ತುಗಳು ಪೃಥ್ವಿಮಯನಾದ ಮಾನವನಿಗೆ ಹೆಚ್ಚು ಉಪಯೋಗವಾಗುತ್ತವೆ. ಈ ಭೂಮಿಯಲ್ಲಿಯೇ ಸಕಲ ಪದಾರ್ಥಗಳನ್ನು ಉತ್ಪನ್ನಗೊಳಿಸಲಾಗುವದು.

 ಭೂಮಿಯಲ್ಲಿ ಹುಟ್ಟಿ ಬೆಳದ ಬೀಜಗಳನ್ನು ಪುನಃ ಪುನಃ ಹದಮಾಡಿದ ಮಣ್ಣಿನಲ್ಲಿ ಬೆಳೆಯುತ್ತ ಹೋದಂತೆ ಆ ಭೂಮಿಯ ಶಕ್ತಿಯು ಕಡಿಮೆಯಾಗುವದಿಲ್ಲವೆ ? ಮೊದಲು ಒಂದು ವರುಷದಲ್ಲಿ ಒಂದೇ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಪೂರ್ವಕಾಲದಲ್ಲಿ ಬೆಳೆಯುತ್ತಿದ್ದ ಧಾನ್ಯಗಳಲ್ಲಿಯ ಗಂಧ ತತ್ತ್ವವನ್ನು ಇಂದಿನ ಅಧಿಕ ಇಳುವರಿಕೊಡುವ ಹೈಬ್ರಿಡ ತಳಿಗಳಲ್ಲಿ ಅಷ್ಟನ್ನು ಕಾಣುತ್ತಿಲ್ಲ. ಗಂಧವು ಬಹಳ  ಕಡಿಮೆಯಾಗಿದೆ. ನಿಸ್ಸತ್ವಹುಲ್ಲನ್ನು ತಿನ್ನುವ ದನಗಳ ಹೈನದಲ್ಲಿಯೂ ಸಹ ಸುಗಂಧ ಸೋರಿಹೋಗಿದೆ. ಅದಲ್ಲದೆ ಮೇಲಿಂದಮೇಲೆ ಬೆಳೆ ತೆಗೆಯುವದರಿಂದ ಭೂಮಿಯ ಶಕ್ತಿಯು ಕುಂದಿಹೋಗಿದೆ. ಯಾಕಂದರೆ ಗಂಧವುಳ್ಳುವಿಕೆಯೇ ಭೂಮಿಯ ಲಕ್ಷಣವಾಗಿದೆ. ಇದರ ಅಭಾವವನ್ನು ಇಂದು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ.

 ಪೃಥ್ವಿ ತತ್ತ್ವಪ್ರಧಾನವಾದುದು ಈ ಭೌತಿಕ ದೇಹವು. ಸ್ಥೂಲದೇಹಪುಷ್ಟಿಗೆ ಮೂಲಭೂತವಾದ ಅನ್ನದಿಂದ ಉತ್ಪನ್ನವಾದ ಪುರುಷನ ವೀರ್ಯಬೀಜವನ್ನು ಸ್ತ್ರೀಯಳ ದೇಹಭೂಮಿಯಲ್ಲಿ ಬಿತ್ತಲು ಮತ್ತೊಂದು (ಭೂಮಿ) ದೇಹವು ಹುಟ್ಟುವದು. ಹೀಗೆ ದೇಹಗಳ ಉತ್ಪತ್ತಿ ಮಾಡಿದ ಸ್ತ್ರೀ ಪುರುಷರ ದೇಹಭೂಮಿಗಳು ಶಕ್ತಿಹೀನವಾಗುವವು. ಶಿಥಿಲಗೊಳ್ಳುವವು. ಕಾರಣ ದೈಹಿಕಗುಣಗಳನ್ನು ಹೊಂದಿದ ಮಾನವನು ದೈಹಿಕಗುಣಗಳನ್ನೇ ಬಿತ್ತಿ ಬೆಳೆದರೆ ದೈವಿಕಗುಣಗಳು ಬೆಳೆಯುವದಿಲ್ಲ. ಅದು ಕಾರಣ ಈ ಶರೀರದ ಅನಿತ್ಯತೆಯನ್ನು ಅರಿತು ನಿತ್ಯತ್ವದ ದೈವೀಗುಣಗಳನ್ನು ಅಳವಡಿಸಿಕೊಳ್ಳಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

 “…..ಕೂಡಲ ಸಂಗಮದೇವರನೊಲಿಸಲು ಬಂದ

 ಪ್ರಸಾದ ಕಾಯವನು ಕೆಡಿಸಲಾಗದು’

 ಎಂದು ಅಣ್ಣನವರೂ ಬೋಧಿಸಿದ್ದಾರೆ. ಅನುಭವಿಗಳೂ

 ‘ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ |

ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯ ಧರ್ಮಸಂಗ್ರಹಃ  ||

ನಾಶಗುಣವುಳ್ಳ ಶರೀರವು ಅನಿತ್ಯ; ಸಂಪಾದಿಸಲ್ಪಡುವ ಧನ-ಕನಕಾದಿ ಸಂಪತ್ತು ಅಶಾಶ್ವತವಾಗಿದೆ. ಆದರೆ ನಿಶ್ಚಯವಾಗಿ ಬರುವಂಥಹದು ಮೃತ್ಯುವೆನಿಸಿದೆ. ಇದು ಯಾರನ್ನೂ ಬಿಡುವದಿಲ್ಲ.

 ‘ಜಾತಸ್ಯ ಮರಣಂ ಧೃವಂ’

 ಹುಟ್ಟಿದವನಿಗೆ ಸಾವು ನಿಶ್ಚಯವಾಗಿ ಬರುವದು. ಆದ್ದರಿಂದ ಅನಿತ್ಯವಾದ ದೇಹದಿಂದ ನಿತ್ಯವಾದ ಧರ್ಮಾಚರಣೆಯನ್ನು ಮಾಡಿ ಅಶಾಶ್ವತವಾದ ಸಂಪತ್ತಿನಿಂದ ಸತ್ಯವೆನಿಸಿದ ಧರ್ಮಕಾರ್ಯಗಳನ್ನು ಪೂರೈಸಿದರೆ ಅಮರತ್ವವನ್ನು ಆಶ್ರಯಿಸಬಹುದು. ನಿತ್ಯತ್ವವನ್ನು ಪಡೆಯಬಹುದು. ಶಾರೀರಿಕ ಸುಖಕ್ಕಾಗಿ ಹಾತೊರೆಯುವದರಿಂದ ಪುಣ್ಯಮಯವಾದ ಮಾನವಶರೀರವು ನಾಶವಾಗಿ ಹೋಗುವದು. ಸತ್ಪುರುಷರ ಶರಣರ ಆದರ್ಶವಿಡಿದು ಸನ್ಮಾರ್ಗದಲ್ಲಿ ನಡೆದರೆ ಜೊಳ್ಳಾಗುವ ಶರೀರದಿಂದ ಶಾಶ್ವತವಾದ ಕೀರ್ತಿಯನ್ನು ಪಡೆಯಬಹುದು. ಅನೇಕ ಮಹಾನುಭಾವಿಗಳ ಸ್ಥೂಲಕಾಯವು ಕಣ್ಣಿಗೆ ಕಾಣದಿದ್ದರೂ ಅವರ ಕೀರ್ತಿಶರೀರವು ಜಗತ್ತಿನಲ್ಲಿ ಸ್ಥಿರತ್ವವನ್ನು ಪಡೆದಿದೆ.

 ಪರಮಗುರುವೆ ! ಶಾರೀರಿಕಗುಣಗಳನ್ನು ಕಡಿಮೆ ಮಾಡಿ ಲಿಂಗಗುಣಗಳನ್ನು ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸು ಇದು ನಿಮ್ಮ ಧರ್ಮ

ನೀರು ಏರಿಯನೇರಿ | ನೀರಡಿಸಿ ಬಾಯಾರಿ

ನೀರು ನಿರ್ಗುಡಿದು ನೀರಡಿಸಿ ಸತ್ತಿತೈ

ನೀರ ಶ್ರೀ ಗುರುವೆ ಕೃಪೆಯಾಗು ||೫೭ ||

ಇಲ್ಲಿ ಜಲಭೂತದ ವಿಷಯ ವಿಸ್ತಾರಗೊಂಡಿದೆ. ನೀರು ದ್ರವಪದಾರ್ಥವು. ಹರಿದಾಡುವದು ಇದರ ಸ್ವಭಾವವು. ಹರಿದು ಹೋಗುವ ನೀರಿಗೆ ಏರಿ (ವಡ್ಡು)ಯನ್ನು ಹಾಕಿ ಕೆರೆಯನ್ನು ನಿರ್ಮಾಣಮಾಡುವರು. ಹರಿದು ಬಂದ ನೀರು ಏರಿಯಲ್ಲಿ ಇಂಗಿ ಬಿಸಿಲಿನಿಂದ ಒಣಗಿ ಹೋಗುವದು. ಸ್ಥಿರವಾಗಿ ಉಳಿಯುವದಿಲ್ಲ.

 ತಾತ್ವಿಕದೃಷ್ಟಿಯಿಂದ ಜಲತತ್ತ್ವವೇ ಬುದ್ಧಿಯೆನಿಸಬಹುದು. ಆದರೆ ಸಾದೃಶ್ಯ ದಿಂದ ನೀರಿನಂತೆ ಚಂಚಲವಾದುದು ಮನಸ್ಸು. ಈ ಸಂದರ್ಭದಲ್ಲಿ ಬುದ್ಧಿ ಮನಗಳೆರಡಕ್ಕೂ ಅರ್ಥವನ್ನು ಅನ್ವಯಿಸಬಹುದು ನೀರಿನಂತಿರುವ ಮನಸ್ಸು. ಏರಿಯಂದರೆ ದೇಹ. ಈ ದೇಹದಲ್ಲಿ ವ್ಯಾಪಿಸಿ ವಿಷಯ ಬಯಕೆಯೆಂಬ ನೀರನ್ನು ಕುಡಿದರೂ ಪುನಃ ಪುನಃ ಅದಕ್ಕಾಗಿಯೇ ಹಂಬಲಿಸಿ ನಿಜ-ಸುಖಸಂತೃಪ್ತಿಯನ್ನು ಕಾಣದೆ, ಬಾಯಾರಿಕೆ ತೀರದೆ ಶರೀರವು ನಾಶವಾದಾಗ ಮನವು ನಾಶವಾಗುವದಿಲ್ಲವೆ ? ಪಾತ್ರೆಯಲ್ಲಿ ಹಾಕಿದ ಎಣ್ಣೆಯನ್ನು ತೆಗೆದರೂ ಅದರ ವಾಸನೆಯು ಉಳಿಯುವಂತೆ, ಬುದ್ಧಿಗತವಾದ ವಾಸನೆಯು ಉಳಿದುಕೊಳ್ಳುವದು. ಆ ವಿಷಯ ವಾಸನೆಯನ್ನು ತೀರಿಸಿಕೊಳ್ಳಲು ಮತ್ತೆ ಮತ್ತೆ ಭವಕ್ಕೆ ಬರಬೇಕಾಗುವದು. ಈ ವಿಷಯ ವಾಸನೆಯು ಭೋಗದಿಂದ ತೃಪ್ತಿಯಾಗುವದೂ ಇಲ್ಲ. ಈ ವಿಚಾರವನ್ನು ೪೪ನೆಯ ತ್ರಿಪದಿಯ ವಿವರಣೆಯಲ್ಲಿ ವಿವೇಚಿಸಲಾಗಿದೆ.

 ಚಂಚಲವಾದ ಮನವನ್ನು ಸ್ಥಿರಗೊಳಿಸಿದರೆ ಪರಮನ ಇರುವನ್ನು ಅರಿಯಲು ಸಾಧ್ಯವಾಗುವದಲ್ಲದೆ, ಸ್ಥಿರಮನಸ್ಸಿನಿಂದ ಪರಶಿವನೇ ತಾನಾಗಬಲ್ಲನು. ಜ್ಞಾನಿಗಳು

 ರಸಶ್ಚ ಮನಸಶ್ಚೈ ಚಂಚಲತ್ವಂ ಸ್ವಭಾವತಃ |

 ರಸೋ ಬದ್ದೋ ಮನೋ ಬದ್ದೋ ಕಿಂ ನ ಸಿದ್ಧ್ಯತಿ ಭೂತಲೇ ||

 ರಸವೆಂದರೆ ನೀರು ಮತ್ತು ಪಾದರಸ. ಇಂದಿನಮಾನವನು ಹರಿಯುವ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಭೂಮಿಯನ್ನು ‘ಸುಜಲಾಂ ಸುಫಲಾಂ’ ಎಂದು ಬಣ್ಣಿಸುವಂತೆ ಸಾರ್ಥಕ ಮಾಡಹತ್ತಿದ್ದಾನೆ. ಜನತೆಯ ಹಸಿವನ್ನು ದೂರಮಾಡಲು ಹಸಿರು ಕ್ರಾಂತಿಗೆ ಕೈಯಿಕ್ಕಿದ್ದಾನೆ. ಅದರಂತೆ ಸ್ವಭಾವತಃ ಚಂಚಲವಾದವುಗಳು ಪಾದರಸ ಮತ್ತು ಮನಸ್ಸು . ಪಾದರಸವನ್ನು ಘಟ್ಟಿಗೊಳಿಸಿದರೆ ಚಿನ್ನವನ್ನಾಗಿ ಪರಿವರ್ತಿಸಬಹುದು. ಮನವನ್ನು ಸ್ಥಿರಗೊಳಿಸಿದರೆ ಮಹಾದೇವನನ್ನು ಕೂಡಬಹುದೆಂದು ತಿಳಿಸಿದ್ದಾರೆ. ಸ್ಥಿರಮನಸ್ಸಿನಿಂದ ಸಾಧ್ಯವಾಗ  ಸಿದ್ಧಿಯಿಲ್ಲವೆಂಬುದು ಅವರ ಅಭಿಪ್ರಾಯ. ವಿಷಯ ವಾಸನೆಯಲ್ಲಿ ಬದ್ಧವಾದ ಬುದ್ಧಿಯು ಪುನಃ ಪುನಃ ಭವಕ್ಕೆ ನೂಕುತ್ತದೆ. ಅದುಕಾರಣ ವಿಷಯ ನೀರಸನಾದ ಶ್ರೀಗುರುವಿನಲ್ಲಿ ಶರಣಾಗತನಾಗಬೇಕು. ಗುರುವು ಶಿಷ್ಯನ ತನು-ಮನ-ಬುದ್ಧಿ-ಭಾವಗಳನ್ನು ಪರಿಶುದ್ಧಗೊಳಿಸುತ್ತಾನೆ. ಸತ್ಕ್ರಿಯೆಗಳಿಂದ ತನುಶುದ್ಧವಾಗುವದು. ಶಿವಮಂತ್ರ ಜಪದಿಂದ ಮನ ಪಾವನಗೊಳ್ಳುವದು. ಸುಜ್ಞಾನ ದಿಂದ ಸುಬುದ್ಧಿಯಾಗುವದು. ಸದ್ವಿವೇಕದಿಂದ ಭಾವವು ಸದ್ಭಾವವಾಗುವದು. ವೈರಾಗ್ಯನಿಧಿ ಅಕ್ಕನು –

……….ಎನಗುಳ್ಳುದೊಂದು ಮನ,

ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ,

ಚನ್ನಮಲ್ಲಿಕಾರ್ಜುನದೇವ ! ಇನ್ನು ಭವವುಂಟೆ ?’

ಎಲ್ಲ ಇಂದ್ರಿಯಗಳಿಗೆ ಪ್ರಮುಖವಾದ ಹಾಗೂ ನೀರಿನಂತಿರುವ ಮನವೇ ಮುಖ್ಯವಾದುದು. ಅದು ನಿಮ್ಮಲ್ಲಿ ಬೆರೆದ ಬಳಿಕ ಭವವೆಂಬುದೇ ಇಲ್ಲವೆಂದು ಪ್ರತಿಪಾದಿಸಿದ್ದಾಳೆ. ಗುರುವೆ ! ಮನದ ಚಾಂಚಲ್ಯವನ್ನು ಕಳೆದು ವಿಷಯವಾಸನೆಯನ್ನು ಪರಿಹರಿಸಿ ಮನವು ಮಹಾಲಿಂಗದಲ್ಲಿ ಬೆರೆಯುವಂತೆ ಹರಸು.

ಇಲ್ಲಿ ಬಳಸಿದ ನೀರ” ಪದವು ಶ್ರೀಗುರುವಿಗೆ ಸಂಬೋಧನೆಯಾಗಿದೆ. ನೀರು ಮತ್ತು ನೀರ ಪದಗಳಲ್ಲಿ ಅದೆಷ್ಟು ಅಂತರ ! ನೀರು ವಿಷಯರಸವೆಂದು ಅಖಂಡೇಶ್ವರ ವಚನಗಳ ಭಕ್ತಸ್ಥಲದಲ್ಲಿ  ನಿರೂಪಿತವಾಗಿದೆ. *ಇನ್ನು ನೀರವೆಂದರೆ ವಿಷಯಗಳನ್ನು ನಿರಸನಮಾಡಿದವನು ಅಥವಾ ನೀರಸ ಮಾಡಿದವನು. ಅಲ್ಲದೆ ”ನೀರ’ ಪದವು ವ್ಯಕ್ತಿತ್ವವನ್ನೂ ಸೂಚಿಸುತ್ತದೆ. ಅಂಥವನು ಶ್ರೀಗುರುವಲ್ಲದೆ ಬೇರಲ್ಲ. ಶಿವಕವಿಯ ಈ ಪದಪ್ರಯೋಗವು ಅನುಭವಪೂರ್ಣವಾಗಿಯೂ, ಮಾರ್ಮಿಕವಾಗಿಯೂ ಬಳಕೆ ಗೊಂಡಿದೆ. ಶಬ್ದಸಂಪತ್ತಿಯನ್ನು ಸಮೃದ್ಧಗೊಳಿಸಿದೆ.

ಬೆಂಕಿ ಬೆಂಕಿಯ ಕೂಡಿ | ಲಂಕೆಯನು ಸುಟ್ಟು ಪಡಿ (ಪೊಡೆ)

ಲಂಕೆಗಂ ಹತ್ತಿ-ಅಂಕೆಯನು ಮೀರಿತೈ

ಬೆಂಕಿ ಶ್ರೀ ಗುರುವೆ ಕೃಪೆಯಾಗು      ||೫೮||

         ದೇವಾನುದೇವತೆಗಳನ್ನು   ಜಯಿಸಿದ್ದೇನೆಂಬ ರಾವಣನ ಅಹಂಕಾರವೆಂಬ ಬೆಂಕಿಯು, ರಾಮದೂತನಾಗಿ ಬಂದ ಹನುಮಂತನ ಕೋಪಯುಕ್ತವಾದ ಬಾಲಕ್ಕೆ   ಹತ್ತಿದ ಬೆಂಕಿಯು, ಇಡೀ ಲಂಕೆಯನ್ನು ಒಳ-ಹೊರಗೂ ಸುಟ್ಟು ಹಾಕಿತು. ರಾವಣನು ತನ್ನ ಅಹಂಕಾರ ಮತ್ತು ಸಿಟ್ಟುಗಳಿಂದ ತಾನು ಸತ್ತನಲ್ಲದೆ ಲಂಕಾ ನಗರಿಯನ್ನೂ ಸುಡಿಸಿದ. ತನ್ನ ಜೀವನ ಗುರಿಯೂ ಸಿಕ್ಕಲಿಲ್ಲ.

ಒಳಹೊಕ್ಕು ನೋಡಲು ಬೆಂಕಿಯೆಂದರೆ ಅಗ್ನಿತತ್ತ್ವದ ಅಹಂಕಾರವು, ಅದರೊಡ ಗೂಡಿದ ಜೀವಾತ್ಮನು ನಾನೇ ದೊಡ್ಡವನೆಂಬ ಭಾವವುಳ್ಳವನಾಗಿ; ಬೆಂಕಿಯ ಕೂಡಿ=ಕೋಪಾಗ್ನಿಯಿಂದ ಕೂಡಿ ಜ್ಯೋತಿರೂಪವಾದ ಶಿವಜ್ಞಾನವೆಂಬ ಲಂಕೆಯನ್ನುನಾಶಮಾಡಿಕೊಳ್ಳುವನು.ಶಿವಜ್ಞಾನವು ನಷ್ಟವಾದ ಮೇಲೆ ಶಿವಸಾಕ್ಷಾತ್ಕಾರ ಗುರಿಯು ಕೈಗೆಟಕದು.ಮತ್ತು ಜೀವಾತ್ಮನಿಗೆ ಹೊಟ್ಟೆಯ ಹಸಿವಿನ ಜಠರಾಗ್ನಿಯೂ ಕೂಡಿ ಕೋಪಾಗ್ನಿಯು ಮೇರೆ ತಪ್ಪಿಹೋಗುವದು ಅಂದರೆ ಅಹಂಕಾರಿ ಮನುಷ್ಯನಿಗೆ ಸಿಟ್ಟು ಬಂದಾಗ ಹಾಗೂ ಹಸಿವೆ  ತಲೆದೋರುತ್ತಿರಲು ಅವನನ್ನು ಸಮಾಧಾನ ಪಡಿಸುವದು ಬಲುಕಷ್ಟ. ಈ ಮಾತು ಸಾಮಾನ್ಯನಿಗೂ ಅನುಭವ ಗಮ್ಯವಾದುದೇ ಆಗಿದೆ ,

. ಒಲೆಹತ್ತಿ ಉರಿದರೆ ಆರಿಸಬಹುದು. ಧರೆಹತ್ತಿ ಉರಿದರೆ ಆರಿಸಲು ಬಾರದು. ಹುಲ್ಲಿನರಾಶಿಗೆ ಹತ್ತಿದ ಬೆಂಕಿಯನ್ನು ಆರಿಸಲು ಹೇಗೆ ಸಾಧ್ಯವಾಗುವದಿಲ್ಲವೋ ಹಾಗೆ ಅಹಂಕಾರಾಗ್ನಿಯು ಸ್ಥೂಲತನುವನ್ನು; ಕ್ರೋಧಾಗ್ನಿಯು ಸೂಕ್ಷ್ಮಶರೀರ (ಮನ) ವನ್ನು ಕ್ಷುಧಾಗ್ನಿಯು ತಾನಾರೆಂಬ ವಿವೇಕ ರೂಪ ಕಾರಣಶರೀರವನ್ನು ವ್ಯಾಪಿಸಿದರೆ; ಶಮನಮಾಡುವದು ಸಾಧ್ಯವಾಗುವದಿಲ್ಲ.

 ಅಗ್ನಿಯ ಮುಖದಲ್ಲಿ ಸಿಕ್ಕವಸ್ತುವೆಲ್ಲ ಸುಟ್ಟು ಭಸ್ಮವಾಗುವಂತೆ ಈ ಮೂರರ ಆಹುತಿಗೆ ಸಿಕ್ಕ ಮಾನವನು ನಾಶವಾಗುವದರಲ್ಲಿ ಯಾವ ಸಂದೇಹವಿಲ್ಲ.

 “ಅಹಂಕಾರವೆಂಬ ಮದಗಜವನೇರಿ

 ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವರನರಿಯದೆ

ನರಕಕ್ಕೆ ಭಾಜನರಾದಿರಲ್ಲಾ”

ಎಂದು ಅಣ್ಣನವರು ಅಹಂಕಾರಿಗಳನ್ನು ಕಂಡು ಮರುಗಿರುವರು. ನೀತಿಕಾರರು- ಕ್ರೋಧವನ್ನು ಕುರಿತು ಕೆಳಗಿನಂತೆ ಚೆನ್ನಾಗಿ ಬಿತ್ತರಿಸಿದ್ದಾರೆ.

ಕ್ರೋಧೋ ಮೂಲಮನರ್ಥಾನಾಂ

ಕ್ರೋಧಃ ಸಂಸಾರಬಂಧನಮ್ |

ಧರ್ಮಕ್ಷಯಕರಃ ಕ್ರೋಧಃ

ತಸ್ಮಾತ್ ಕ್ರೋಧಂ ವಿವರ್ಜಯೇತ್ ||

ಅನರ್ಥ ಪರಂಪರೆಗೆ, ಸಂಸಾರಬಂಧನಕ್ಕೆ ಕ್ರೋಧವೇ ಮೂಲವಾಗಿದೆ. ಇದು ಧರ್ಮವನ್ನೂ ನಾಶಮಾಡುವದರಿಂದ ಅದನ್ನು ತ್ಯಜಿಸಬೇಕು. ಕ್ರೋಧವೇ ನರಕದ ದ್ವಾರವೆಂದು ಕೃಷ್ಣನು ಗೀತೆಯಲ್ಲಿ ಅರ್ಜುನನಿಗೆ ತಿಳಿಸಿದ್ದಾನೆ. ಮಹಾಕವಿ ಭಾರವಿ ವಿರಚಿತ ‘ಕಿರಾತಾರ್ಜುನೀಯ” ಕಾವ್ಯದಲ್ಲಿ ಧರ್ಮರಾಯನು ಸಿಟ್ಟಿಗೆದ್ದ ತನ್ನ ತಮ್ಮನಾದ ಭೀಮಸೇನನಿಗೆ –

“ಅಪನೇಯಮುದೇತುಮಿಚ್ಛತಾ

ತಿಮಿರಂ ದೋಷಮಯಂ ಧಿಯಾ ಪುರಃ ।

ಅವಿಭಿದ್ಯ ನಿಶಾಕೃತಂ ತಮಃ

ಪ್ರಭಯಾ ನಾಂಶುಮತಾ ಪ್ಯುದೀಯತೇ || ೨ – ೩೬ ||

ಸೂರ್ಯನು ರಾತ್ರಿಯಲ್ಲಿದ್ದ ಕತ್ತಲೆಯನ್ನು ತನ್ನ ತೇಜಸ್ಸಿನಿಂದ ಕಳೆದಲ್ಲದೆ ಹುಟ್ಟುವದಿಲ್ಲ ಅರ್ಥಾತ್ ಉದಯವಾಗುವದಿಲ್ಲ. ಅದರಂತೆ ಅಭ್ಯುದಯವನ್ನು ಹೊಂದಲು ಬಯಕೆಯುಳ್ಳ ಪುರುಷನು ಕ್ರೋಧಮಯವಾದ ಕತ್ತಲೆಯ (ಅಜ್ಞಾನ)ನ್ನು ಜ್ಞಾನಬಲದಿಂದ ಮೊದಲು ತೆಗೆದು ಹಾಕಬೇಕೆಂದು ನೀತಿಯನ್ನು ತಿಳಿಸುತ್ತಾನೆ. ಇವೆಲ್ಲ ಮಾತುಗಳಿಗಿಂತಲೂ ಸುಂದರ ಶೈಲಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಅಣ್ಣ ಬಸವಣ್ಣನವರು –

“ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ !

ತನಗಾದ ಆಗೇನು ? ಅವರಿಗಾದಚೇಗೇನು ?

ತನುವಿನ ಕೋಪ ತನ್ನ ಹಿರಿತನದ ಕೇಡು.

ಮನದ ಕೋಪ ತನ್ನ ಅರುವಿನ ಕೇಡು.

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ

ನೆರೆಮನೆಯ ಸುಡದು ಕೂಡಲಸಂಗಮದೇವಾ “

ಎಂದು ತಿಳಿಸಿದ್ದಾರೆ. ತನ್ನ ತನುವಿನ ಕೋಪ ತನ್ನನ್ನೇ ನಾಶಮಾಡುವದಲ್ಲದೆ ತನ್ನ ಗೌರವವನ್ನು ಗಾಳಿಗೋಪುರ ಗೊಳಿಸುವದು. ಮನಸ್ಸಿನಲ್ಲಿ ಉತ್ಪನ್ನವಾದ ಕ್ರೋಧವು ಅಂತರಂಗದ ಆತ್ಮಜ್ಞಾನವನ್ನು ನಾಶಗೊಳಿಸುವದು. ತನ್ನ ಮನೆಗೆ ಹತ್ತಿದ ಬೆಂಕಿಯು ಪ್ರಥಮತಃ ತನ್ನ ಮನೆಯನ್ನು ಭಸ್ಮಗೊಳಿಸದೆ ಅನ್ಯರ ಗೃಹವನ್ನು ಮುಟ್ಟುವದಿಲ್ಲ. ಅದುಕಾರಣವೇ ಅನುಭವಿಗಳು, ಕೋಪವು ಚಾಂಡಾಲ ಸದೃಶವಾಗಿದೆಯೆಂದು ಬಣ್ಣಿಸಿದ್ದಾರೆ. ಅಕ್ರೋಧವು ಧರ್ಮದ ಚರಮ (ಹತ್ತನೆಯ) ಲಕ್ಷಣವೆಂದು ಮನುವು ಪ್ರತಿಪಾದಿಸಿದ್ದಾನೆ.

“ಕೋಪವೆಂಬುದು ಕೇಳು | ಪಾಪದಾ ನೆಲೆಗಟ್ಟು

ಕೂಪದೊಳು ನೇಣು ಹರಿದಂತೆ ನರಕದೊಳು

ಕೋಪಿ ತಾನಿಳಿವ ಸರ್ವಜ್ಞ (೫೨೯-ಉ. ಚನ್ನಪ್ಪ)

ಕನ್ನಡ ಜಾನಪದ ಕವಿಯ ವಿಚಾರ ಮನನೀಯವಾಗಿದೆ. ಹಗ್ಗಹರಿದು ಕೊಡವು ಭಾವಿಯಲ್ಲಿ ಬೀಳುವಂತೆ ಕೋಪಿಯು ನರಕದಲ್ಲಿ ಬೀಳುತ್ತಾನೆ. ಅದುಕಾರಣ ಅಹಂಕಾರ ಹಾಗೂ ಕ್ರೋಧಗಳನ್ನು ಕಳೆದಲ್ಲದೆ ಜ್ಞಾನೋದಯವಾಗುವದಿಲ್ಲ. ಧರ್ಮದ ಮರ್ಮ ತಿಳಿಯುವದೂ ಇಲ್ಲ. ಪರಮಜ್ಞಾನಿಯಾದ ಸದ್ಗುರು ಕರುಣೆಯಿಂದ ಇವುಗಳನ್ನು ಕಳೆದು ಕೊಂಡು ಜ್ಞಾನವನ್ನು ಪಡೆಯಬಹುದು.

 ಅಂತೆಯೇ ಶಿವಕವಿಯು ಬೆಂಕಿಸ್ವರೂಪನಾದ ಶ್ರೀಗುರುವೆ ! ಎನ್ನ ತನುವಿನ ಅಹಂಕಾರವನ್ನು, ತನ್ನನ್ನೇ ನಾಶಮಾಡುವ ಸಿಟ್ಟನ್ನು, ಒಡಲನ್ನೇ ಆಶ್ರಯಿಸಿಕೊಂಡು ವಿವೇಕವನ್ನು ನಾಶಮಾಡುವ ಕ್ಷುಧಾಗ್ನಿಯನ್ನು ನಾಶಮಾಡೆಂದು ಪ್ರಾರ್ಥಿಸಿದ್ದಾನೆ. ಮತ್ತು ಇವೆಲ್ಲವುಗಳನ್ನು ನಾಶಮಾಡುವಲ್ಲಿ ಸಮರ್ಥನೆಂಬರ್ಥವನ್ನು ವ್ಯಕ್ತಗೊಳಿಸಲು ಶ್ರೀ ಗುರುವನ್ನು ಬೆಂಕಿ ಶ್ರೀಗುರುವೆ” ಎಂದು ಸಂಭೋದಿಸಿದ್ದು ಅತ್ಯಂತ ಸಮೀಚೀನವಾಗಿದೆ.

ಗುರುಸೇವೆಯಿಂದ ತನುವಿನ ಅಹಂಕಾರವಳಿದು ಕಿಂಕರತೆ ಬಪ್ಪುದು. ಮನವನ್ನು ಲಿಂಗದಲ್ಲಿ ಲೀನಗೊಳಿಸುವದರಿಂದ ಕ್ರೋಧಾಗ್ನಿಯು ಶಾಂತವಾಗಿ ಸಮತೆ ಬಪ್ಪುದು. ತನ್ನ ಧನವನ್ನೆಲ್ಲ ದಾಸೋಹಗೈದು ಕ್ಷುಧಾಗ್ನಿಯನ್ನು ಶಮನಗೊಳಿಸಲು ಶೇಷ ಪ್ರಸಾದವನ್ನು ಪಡೆದರೆ ಸಂತೃಪ್ತಿ ಒಪ್ಪುದು.

ಹೀ.ಚಿ.ಶಾಂತವೀರಯ್ಯ

 

 

 

 ( ಚಿತ್ರಕಲೆ ಕೃಪೆ : ಶ್ರೀ ಬುಳ್ಳಾ ಅವರ ಮನೆ ಗದಗ)

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯದ ಮಹಾಪೂರ ಉಕ್ಕಿ ಹರಿದುದು ಹನ್ನೆರಡನೆಯ ಶತಮಾನದಲ್ಲಿ. ಒಂದೇ ಹೊತ್ತಿಗೆ ತಲೆದೋರಿದ ನಕ್ಷತ್ರ ಪುಂಜದಂತೆ, ವಚನಕಾರರು ಉದಯವಾದರು. ಈ ಯುಗದಲ್ಲಿ ವಚನಕಾರರಿಂದ ಸ್ಫೂರ್ತಿ ಪಡೆದು ವೀರಶೈವ ಪುನರುಜೀವನವನ್ನು ಮಾಡಿದ ಶರಣರೂ ಸಾಧಕರೂ ಆಗಿ ಹೋದರು. ಆನಂತರ ನಾಲೈದು ಶತಮಾನಗಳ ಕಾಲದ ವಿಸ್ತಾರದ ಅವಧಿಯಲ್ಲಿ ಐದಾರು ಜನ ವಚನಕಾರರು ಮಾತ್ರ ಆಗಿಹೋಗಿದ್ದಾರೆ. ಅವರಲ್ಲಿಯೂ ಹಿಂದಿನ ವಚನಕಾರರ ಅನುಕರಣವಿದೆ. ಸ್ವತಂತ್ರ ತೇಜಸ್ಸು ಕಂಡುಬರುವುದು ಹದಿನೈದನೇ ಶತಮಾನದ (೧೪೭೦) ಷಟ್‌ಸ್ಥಲಜ್ಞಾನಿ, ನಿರಂಜನ ಮೂರ್ತಿ ಜ್ಞಾನಯೋಗಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರು ಈ ಶತಮಾನದ ಹಿರಿಯ ಅನುಭಾವಿ, ವಚನಕಾರ, ಜಗದ್ದುರು

. ಶ್ರೀ ಸಿದ್ಧಲಿಂಗೇಶ್ವರರು ಕ್ರಿಸ್ತಶಕ ೧೪೧೯  ರಿಂದ ೧೪೭೮ ರವರೆಗೆ ಆಳಿದ ವಿಜಯನಗರದ ಅರಸರಾದ ಪ್ರೌಢದೇವರಾಯ ಮತ್ತು ವಿರೂಪಾಕ್ಷರಾಯನ ಕಾಲದಲ್ಲಿ ರಾಜಮನ್ನಣೆ ಪಡೆದಂತೆ ತಿಳಿದು ಬರುತ್ತದೆ. ಈತನ ವಿಚಾರವನ್ನು ವಿರೂಪಾಕ್ಷ ಪಂಡಿತನು  ತನ್ನ ಚನ್ನಬಸವ ಪುರಾಣದಲ್ಲಿ

 “ಪರಮಗೋಸಲ ಚನ್ನಬಸವೇಶ್ವರನ ಹಸ್ತ | ಸರಸಿರುವ ನಿರಂಜನ ಗಣೇಶ್ವರಂ | ಹರುಷದಿಂದೊಗೆದು ಸಿದ್ದೇಶನಾಮವನಾಂತು ಕಗ್ಗೆರೆಯ ತೋಂಟಕೈದಿ ! ಇರದೆ ನಂಬ್ಯಣ್ಣನೆಂಬಾತನತಿ ಭಕ್ತಿಯಿಂ | ಶರಣೆಂದು ಬಿನ್ನವಿಸಿಕೊಂಡೀಗ | ತಿರುಗಿ ಬಂದಾನೆ ಕರಕೋಂಡು  ಪೋದಪೆನೆಂದು ಕಗ್ಗೆರೆಗೆ ಪೋಗಲಾಗ | ಜಗಳದಿಂದೂರೊಡೆದು  ಪೋಗಿ ದಿವಸಕ್ಕೆ | ಮಗುಳೆ ಬರ್ಪನ್ನೆಗಂ ತೋಂಟ  ದೊಳಗೇನುಮಂ। ಬಗೆಯದೆ ಶಿವಧ್ಯಾನದಿಂದೆ ಪರವಶವನೈದಿರೆ ಗೆದಲೆ ಹುತ್ತವಿಕ್ಕೆ ! ಜಗವೆಲ್ಲಮತಿ ಚೋದ್ಯದಿಂ ನೋಡಿ  ಹುತ್ತಮಂ | ಬಗಿದು ಕಂಡಾಗ ತೋಂಟದ ಸಿದ್ಧಲಿಂಗ  ಗಣಿತ ಮಹಾಪುರುಷನೆಂದು ಪೂಜಿಸುವರು ಅಲ್ಲಲ್ಲಿ ಗಣನಾಥರುದಿಸಿ ಚರರೂಪಿನಿಂದ ಅಲ್ಲಲ್ಲಿ ಪೂಜೆಗೊಳುತೈದಿ | ತೋಂಟದ ಯತಿಯ ಸಾರಲು ಪ್ರೀತಿಯಿಂದ ತೋಂಟದಾರ್ಯರಾ ವಿರತರೋಳ್ ‌ ತತ್ವಾನುಭವಂಗಳಿಂ ಸೊಲ್ಲು ಸೊಲ್ಲಿಗೆ ಪರಮ ಷಟ್‌ಸ್ಥಲವನು ಸರ್ವರಾವಿರತರಾದರು ಸಿದ್ಧಲಿಂಗೇಶ್ವರಂ” (೬೩-೪೪, ೪೫, ೪೬) ಹೀಗೆ ವರ್ಣಿಸಿದ್ದಾನೆ.

ನಿರಂಜನ ಗಣೇಶ್ವರನ ಅಪರಾವತಾರವೆಂದು ಸಿದ್ಧಲಿಂಗ ಯತಿಯನ್ನು ಕರೆದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿ ಸಿದ್ಧಲಿಂಗನ ಗದ್ದುಗೆಗೆ ಕಟ್ಟಿದ ದೇವಾಲಯವಿದೆ. ಇದೊಂದು ಸುಕ್ಷೇತ್ರ, ಅಂದಿನ ವೀರಶೈವ ಕ್ಷೇತ್ರಗಳಲ್ಲಿ ಹಂಪೆ ಮೊದಲನೆಯದು, ಎಡೆಯೂರು ಎರಡನೆಯದು, ಇವರ ಶಿಷ್ಯ ಪರಂಪರೆ ಬಹುದೊಡ್ಡದು. ಹಾಗೆಯೇ ಗುರು ಪರಂಪರೆಯೂ ದೊಡ್ಡದು.

 ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸಮಾಧಿಸ್ಥರಾಗಿರುವ ಗೋಸಲ ಚನ್ನಬಸವೇಶ್ವರ ಮತ್ತು  ಸಿದ್ದಗಂಗೆಯಲ್ಲಿ ತಪಸ್ಸು ಮಾಡಿ ಸಿದ್ಧಗಂಗೆಯನ್ನು ಅನ್ವರ್ಥಗೊಳಿಸಿದ, ಸಿದ್ಧರ ಬೆಟ್ಟದಲ್ಲಿ ಸಮಾಧಿಸ್ಥರಾಗಿರುವ ಗೋಸಲ ಸಿದ್ದೇಶ್ವರರು ಇವರ ಗುರುಗಳು. ಇವರ ಶಿಷ್ಯ ಪರಂಪರೆಯಂತೂ ಬಹು ದೊಡ್ಡದು. ಸ್ವತಂತ್ರ ಸಿದ್ಧಲಿಂಗೇಶ್ವರ (ವಚನಕಾರ) ಗುಮ್ಮಳಾಪುರದ ಸಿದ್ಧಲಿಂಗೇಶ್ವರ (ಶೂನ್ಯ ಸಂಪಾದನೆಕಾರರು) ಇವರಲ್ಲಿ ಪ್ರಮುಖರು. ಅಲ್ಲದೆ ಎಡೆಯೂರು  ದೇವಾಲಯದಲ್ಲಿನ ಶಿಲಾ ಶಾಸನದಲ್ಲಿ ಹಲವರ ಹೆಸರುಗಳನ್ನು ಹೇಳಿದೆ.

ಮೈಸೂರು ಜಿಲ್ಲೆಯ ಹರದನಹಳ್ಳಿಯ ಈ ಹುಡುಗನ ಪೂರ್ವ ಇತಿಹಾಸ ತಿಳಿಯದು ತಂದೆ-ತಾಯಿ ಹೆಸರು ಗೊತ್ತಿಲ್ಲ. ೧೪೭೦ರಲ್ಲಿ ಜನನ, ಎಳಯಲ್ಲಿಯೇ ಯತಿಯಾಗಲು ಮನದಲ್ಲಿ ಸಮರ್ಥಗುರುವಿಗಾಗಿ ಹುಡುಕಾಡಿ ಗುಬ್ಬಿಯ ಗೋಸಲ ಚನ್ನಬಸವೇಶ್ವರರ ಹತ್ತಿರ ಬಂದರು. ಗುರುಗಳು ಕೇಳಿದರು. “ಏ ಹುಡುಗ ನೀನು ಯಾರು ? ಎಲ್ಲಿಂದ ಬಂದೆ ಎಂದು.” ಹುಡುಗ ಸಿದ್ದಲಿಂಗ ಉತ್ತರಿಸಿದ “ಅದನ್ನು ಕೇಳಲೆಂದೇ ನಾನು ತಮ್ಮಲ್ಲಿಗೆ ಬಂದೆ” ಎಂದ. ಗುರುಗಳು ಅವಾಕ್ಕಾದರೂ ಹುಡುಗನ ಬೆಡಗಿಗೆ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಇಡೀ ಜೀವ ಮಾನದುದ್ದಕ್ಕೂ ಸಿದ್ಧಲಿಂಗೇಶ್ವರರು ನಾನು ಯಾರು? ಎಲ್ಲಿಂದ ಬಂದೆ ಎಂಬುದಕ್ಕೆ ಉತ್ತರಿಸಿದ್ದಾರೆ.

`ತೋ(O)ಟ’ ಶಬ್ದಕ್ಕೆ ಅರ್ಥ ಬಂದುದೇ ಶಿವಯೋಗಿ ಸಿದ್ಧಲಿಂಗೇಶ್ವರರಿಂದ. ಕಗ್ಗೆರೆಯ ತೋಂಟದಲ್ಲಿ ಶಿವಯೋಗ ಸಮಾಧಿಯಲ್ಲಿ ಹನ್ನೆರಡು ವರ್ಷಗಳು ಇದ್ದದ್ದರಿಂದ ತೋಂಟದ – ಸಿದ್ಧಲಿಂಗ ಎಂದೂ, ಎಡೆಯೂರಿನಲ್ಲಿ ಸಮಾಧಿಸ್ಥರಾದುದರಿಂದ . ‘ಎಡೆಯೂರಪ್ಪ’ ಎಂಬ   ಹೆಸರುಗಳೂ  ಬಂದವು

ಇವರನ್ನು ಕುರಿತು ತೋಂಟದ ಸಿದ್ದೇಶ್ವರಪುರಾಣ-ಶಾಂತೇಶ ಕಾಲ೧೫೬೦ ಸಿದ್ಧೇಶ್ವರ ಪುರಾಣ-ವಿರಕ್ತ ತೋಂಟದಾರ್ಯ ಕಾಲ ೧೫೬೦, ಸಿದ್ಧಲಿಂಗ ಸಾಂಗತ್ಯ ಹೇರಂಬ ಕವಿ ಕಾಲ ೧೬೦೦ ಮತ್ತು ಸಿದ್ದೇಶ್ವರಪುರಾಣ ಸಿದ್ಧನಂಜೇಶ,  ಭಾವರತ್ನಾಭರಣ (೧೫೮೦), ತೋಂಟದ ಸಿದ್ಧೇಶ್ವರರ ರಗಳೆ ಮೊದಲಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.

ವೀರಶೈವ ಚೆರಿತ್ರೆಯಲ್ಲಿ ಆಚಾರ್ಯ ರೇವಣಸಿದ್ಧ, ಮಹಾತ್ಮಾ ಅಲ್ಲಮಪ್ರಭು ಮತ್ತು ಭಗವಾನ್ ತೋಂಟದ ಸಿದ್ಧಲಿಂಗರು ಅತ್ಯಂತ ಪ್ರಸಿದ್ಧರು. ಇವರು ನಿರಂಜನ ಗಣೇಶ್ವರನ ಅವತಾರವೆಂದು ಕರೆದಿದ್ದಾರೆ.

ವೀರಶೈವ ಸಿದ್ಧಾಂತವನ್ನು ಜನಜೀವನದಲ್ಲಿ ಇಳಿಸಿ ವಚನ ರೂಪದಲ್ಲಿ ಹೊರಹೊಮ್ಮಿಸುವ ಹೊಸ ಅನುಭವ ಮಂಟಪವೊಂದು ತಲೆಯೆತ್ತಿತು. ನಾಲ್ಕು ಶತಮಾನ ಮೌನ  ತಳೆದಿದ್ದ ವಚನ ವಾಙ್ಮಯ ಮಹಾತ್ಮಾ ಸಿದ್ಧಲಿಂಗೇಶ್ವರರಿಂದ ಮತ್ತೆ ಚಿಗುರೊಡೆಯಿತು,

 ಅಗಾಧವಾದ ಪಾಂಡಿತ್ಯ; ಆಳವಾದ ಅನುಭವ, ಅಪರಿಮಿತ ವಾದ ಗುರುಸೇವೆಗಳಿಂದ ಉದಿಸಿ ಬಂದ ಅವರ ವಚನಾಮೃತವೇ ಈ ಮಾತಿಗೆ ಸಾಕ್ಷಿ “ಷಟ್‌ಸ್ಥಲ ಜ್ಞಾನಸಾರಾಮೃತ’.

 ಇದರಲ್ಲಿ ೭೦೧ ವಚನಗಳು, ೭ ವೃತ್ತಗಳೂ ಇವೆ. ‘ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’ ಅಂಕಿತ. ೧೯೩೩ರಲ್ಲಿ ಹಾವೇರಿಯಲ್ಲಿ ೧೯೫೧ರಲ್ಲಿ ಮೈಸೂರಿನಲ್ಲಿ, ನಂತರ ಧಾರವಾಡ, ಮುರುಘಾಮಠದಲ್ಲಿ ಈಗ ಸಮಗ್ರ ವಚನ ಸಾಹಿತ್ಯ ಸಂಪುಟ ಬೆಂಗಳೂರಿನಲ್ಲಿ ಪ್ರಕಟವಾಗಿದೆ.

 “ಬ್ರಹ್ಮಾಂಡವೆಂಬ ತೋಟಕ್ಕೆ ಪ್ರಸಿದ್ಧ ಒಡೆಯರು ಜಗದ್ಗುರು ತೋಂಟದ ಸಿದ್ಧೇಶ್ವರರು. ಆ ಉದ್ಯಾನವನದಲ್ಲಿ ಮೂರ್ತಿ ಮಾಡಿ ತಮ್ಮ ಚಿದಂಗ ಸ್ವರೂಪವಾದ ಉತ್ತಂಡ ಮಾರ್ತಾಂಡ ಮೊದಲಾದ ಸದ್ಭಕ್ತ ಗಣಂಗಳು ಅಂದಾಚರಿಸಿ ನಿತ್ಯಾನಂದ ಶಿವ ಸುಖಿಗಳಾಗಲೆಂದು ಹಾಲುಕ್ಕಿ ಮೇಲುವುದು ತಮ್ಮ ಸ್ವಾನುಭಾವ ಸುಖದ ಪ್ರಸನ್ನ ವಾಕ್ಯಂಗಳೆಂ ಉಪದೇಶಿಸಿದ ಆರು ಸ್ಥಲಗಳ ಜ್ಞಾನದ ಸ್ವಾರಸ್ಯವೆಂಬ ಅಮೃತ” ಎಂಬ ವಿತರಣೆಯಿದೆ.

ಸಿದ್ಧಲಿಂಗೇಶ್ವರರು ಮೆರೆದ ಪವಾಡಗಳ ಮಾಲೆಯನ್ನೇ ಕವಿಗಳು ತಮ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ. ಹರದನಹಳ್ಳಿಯಲ್ಲಿ ನೀರಿನಿಂದ ದೀಪ ಉರಿಸಿದ್ದು, ಅರುಣಾದ್ರಿ ಕುಂಬಳೇಶ್ವರದಲ್ಲಿ ಅನೇಕ ಪವಾಡ ಮಾಡಿ, ತ್ರ್ಯಂಬಕೇಶ್ವರದಲ್ಲಿ  ಶಿವಲಿಂಗದೊಡನೆ ಮಾತನಾಡಿ, ವೈರಿಗಳಿಂದ ಹತನಾಗಿದ್ದ ತುರಷ್ಕರಾಜನನ್ನು ಬದುಕಿಸಿ ಮಹಾಬಲೇಶ್ವರಕ್ಕೆ ಬಂದು ಜೀವನದಿಯಾದ ಕೃಷ್ಣೆಯನ್ನು ವಂದಿಸಿ ಅದಕ್ಕೆ ಪ್ರವಾಹವನ್ನು ತಂದುಕೊಟ್ಟು ಉತ್ತುಂಗ ಯೋಗಿಯ ಗರ್ವವನ್ನ ಮುರಿದು ಅವನಿಗೆ ಉಪದೇಶ ಮಾಡಿ, ಉಳುಮೆಗೆ ಬಂದು ವೈಷ್ಣವ ಜನಾಂಗದ ಜೀಯನೊಡನೆ ವಾದ ಮಾಡಿ ಅವನನ್ನು ಸೋಲಿಸಿ ಮುಂದೆ ಜೈನರ ಕೇಂದ್ರವಾದ ಕಾರ್ಕಳಕ್ಕೆ ಬರಲು ಶ್ರವಣರನ್ನು ವಾದದಲ್ಲಿ ಗೆದ್ದು, ಚಂದ್ರದ್ರೋಣ ಪರ್ವತದಲ್ಲಿ  ಮಲ್ಲಿನಾಥನಿಂದ ಸತ್ಕಾರಪಡೆದು, ನಾಗಿಣಿ ನದೀತೀರದ ಕಗ್ಗೆರೆಗೆ ಬಂದು ಶಿವಯೋಗದಲ್ಲಿ ಸಮಾಧಿ ಸ್ಥನಾಗಿರಲು ಹುತ್ತ ಬೆಳೆದರೂ ಪರಿವೆಯಿಲ್ಲದೆ ಶಿವಯೋಗ ಚಕ್ರವರ್ತಿಯಾಗಿ ಪ್ರಸಿದ್ಧರಾಗಿ ‘ತೋಂಟದ ಸಿದ್ಧಲಿಂಗಯತಿ’ ಎಂದು ಖ್ಯಾತರಾಗಿ ತನ್ನನ್ನೇ ಕಚ್ಚಿ ಪ್ರಾಣ ಬಿಟ್ಟ ಹಾವಿಗೆ ಪುನರ್ ಜನ್ಮ ನೀಡಿ, ಭೂತಗಳ ಶಾಪವಿಮೋಚನೆ ಮಾಡಿ, ಗೌಡಿತಿಯ  ಭಕ್ತಿಯ ಹಾಲನ್ನು ಸೇವಿಸಿ, ಅಕಾಲದಲ್ಲಿ ನೇರಳೆಹಣ್ಣನ್ನು ಸೃಷ್ಟಿಸಿ, ಹೇರೂರಿನ ಲಿಂಗಣ್ಣನು ಬಡಿಸಿದ ವಿಷದ ಪಾಕವನ್ನು ಸೇವಿಸಿ, ತೆಂಗಿನ ಮರ ತಲೆ ಬಾಗಿ ನೀಡಿದ ಎಳನೀರನ್ನು ಕುಡಿದು, ಪರಶಿವನಿಂದ ಪರೀಕ್ಷಿಸಿಕೊಂಡು, ಹುಲಿಯೂರಿಗೆ ಬಂದಿದ್ದ ಉಪದ್ರವವನ್ನು ನೀಗಿ, ಜೇಡರ ಹುಳುವಾಗಿದ್ದ ಮುನಿ ಪುತ್ರನಿಗೆ ವಿಮೋಚನೆ ಮಾಡಿ ಸಹಸ್ರ ದಳದ ಬೆಟ್ಟ ತಾವರೆಯನ್ನು ಶಿವಲಿಂಗಕ್ಕೆ ಅರ್ಪಿಸಿ, ಪತಿವ್ರತೆಯ ಗಂಡನಿಗೆ ಜೀವದಾನ ಮಾಡಿ, ತಳಿಗೆಗಳ ಪವಾಡ ಮೆರೆದು, ಪಾದೋದಕವನ್ನು ಕಡೆಗಣಿಸಿದ ಭಕ್ತನೊಬ್ಬನ ಇಷ್ಟಲಿಂಗವನ್ನು ಬಯಲು ಮಾಡಿ, ಭಸ್ಮದ ಲಿಂಗವನ್ನು ಸ್ಪಟಿಕಲಿಂಗಮಾಡಿ, ತುಮಕೂರಿನಲ್ಲಿ ತುಂಬೆ ಹೂವಿನ ಮಳೆ ಕರೆದು, ಸತ್ತು ಹೋಗಿದ್ದ ಮಗು, ಎಮ್ಮೆ ಮತ್ತು ಕುದುರೆಗಳಿಗೆ ಜೀವದಾನ ಮಾಡಿ, ಕುರುಡನಿಗೆ ಕಣ್ಣು ಕೊಟ್ಟು, ಮಡಿಕೆಯ ಅನ್ನದಿಂದ ಐನೂರು ಮಂದಿಗೆ ದಾಸೋಹ ಮಾಡಿ ತೃಪ್ತಿ ಪಡಿಸಿ, ಶಿವಗಂಗೆಗೆ ಬಂದು ‘ದಕ್ಷಿಣಕಾಶಿಯೆನಿಸಿ ಶಿವಕ್ಷೇತ್ರ, ಕಗ್ಗೆರಿಗೆ ಬಂದು ಬೇಡ ಮತ್ತು ಮೊಲಗಳಿಗೆ ಜೀವದಾನ ಮಾಡಿ, ನಾಗಸಮುದ್ರದ ಶಿವಲಿಂಗದಿಂದ ದೇವಾಲಯದ ಬಾಗಿಲನ್ನು ತೆರೆದು, ಹೊಳಲಗುಂದದ ಮಾಯಿ ದೇವಿಯ ಭಕ್ತಿಯನ್ನು ಕೈಗೊಂಡು ಮಂಗಲದ ತೊರೆಯ ಪ್ರವಾಹದಲ್ಲಿ ದಾರಿ ಬಿಡಿಸಿ, ಎಡೆಯೂರಿಗೆ ಬಂದು ಸಿಡಿಲಿನ ಪೂಜೆ ಕೈಗೊಂಡು, ಪ್ರತಿವಾದಿಗಳಿಗೆ ಬುದ್ದಿ ಕಲಿಸಿ, ಕಳ್ಳತನ ಮಾಡಿದ ಹೆಂಗಸಿನ ಕೈ ಸ್ತಂಭನ ಮಾಡಿ ಆಕೆಗೆ ಉಪದೇಶವಿತ್ತು ಶಿವಶರಣೆಯಾಗುವಂತೆ ಪರಿವರ್ತಿಸಿ ಎಡೆಯೂರಿನ ಶ್ರೀಮಠದಲ್ಲಿ ಶಿವಚರಣರಲ್ಲಿ ಲೀನವಾದರು.

ಏಳುನೂರು ಚರಮೂರ್ತಿಗಳಿಗೆ ಗುರುವಾಗಿ ನೂರೊಂದು ವಿರಕ್ತರ ಗುಂಪಿಗೆ ಅಧ್ಯಕ್ಷರಾಗಿ, ಜನತೆಗೆ ಮಾರ್ಗದರ್ಶಕರಾಗಿ, ಧರ್ಮವನ್ನು ಮನೆ ಮನೆಗೆ, ಮನಮನಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಈ ಮಹತ್ತರ ಕಾರ್ಯದಲ್ಲಿ ಚರಮೂರ್ತಿಗಳೂ, ವಿರಕ್ತರೂ ಸಿದ್ಧಲಿಂಗೇಶ್ವರರ ಧರ್ಮ ಪ್ರಸಾರಕ್ಕೆ ನೆರವಾದರು. ಶಿವಗಂಗೆ, ಸಿದ್ಧಗಂಗೆ, ಸಿದ್ಧರಬೆಟ್ಟ, ತುಮಕೂರು, ಗೂಳೂರು ಗುಬ್ಬಿ, ನಾಗವಲ್ಲಿ, ಹೆಬ್ಬೂರು, ಹೇರೂರು, ಹುಲಿಯೂರು, ಗೊಡೆಕೆರೆ, ನಾಗಸಮುದ್ರ, ಕಗ್ಗೆರೆ, ಎಡೆಯೂರು ಮೊದಲಾದ ಪ್ರದೇಶಗಳು ಧಾರ್ಮಿಕ ಕೇಂದ್ರಗಳಾಗಿದ್ದುವು. ಕಳೆದು ಹೋಗಿದ್ದ ಹೊಸದೊಂದು ಅನುಭವ ಮಂಟಪವೇ ತಲೆಯೆತ್ತಿ ಮೆರೆಯಿತು.

“ಕಾಮದಿಂದ ಕರಗಿದೆನಯ್ಯಾ, ಕ್ರೋಧದಿಂದ  ಕೊರಗಿದೆನಯ್ಯಾ, ಲೋಭಮೋಹಗಳಿಂದ ಅತಿನೊಂದೆನಯ್ಯ,  ಮದ ಮತ್ಸರಗಳಿಂದ ಬೆದ-ಬೆದ ಬೆಂದೆನಯ್ಯಾ, ಅಹಂಕಾರ ಮಮಕಾರದಿಂದ ಮತಿಮಂದನಾಗಿರ್ದೆನಯ್ಯ  ಇದು ಕಾರಣ ಎನ್ನ ಕಾಮಾದಿ ಅರಿಷಡ್ವರ್ಗಗಳ ಕಳೆದು ಅಹಂಕಾರ ಮಮಕಾರದ ಮಣಿಸಿ ನಿರಹಂಕಾರಿ ಎಂದೆನಿಸಯ್ಯ ಮಹಾಲಿಂಗ ಗುರು ಶಿವ  ಸಿದ್ದೇಶ್ವರ ಪ್ರಭುವೇ” ಎಂದು ಕಾಮ, ಕ್ರೋಧ, ಲೋಭ  ಮೋಹ, ಮದ, ಮತ್ಸರ, ಅಹಂಕಾರ ಮತ್ತು  ಮಮಕಾರಗಳನ್ನು  ತೊರೆದು ವೈರಾಗ್ಯನಿಧಿ, ನಿರಂಜನಮೂರ್ತಿ ಪ್ರಣವ ಸ್ವರೂಪಿಗಳಾಗಿ ಖ್ಯಾತರಾಗಿದ್ದಾರೆ.

 ಗುರು-ಶಿಷ್ಯರ ಸಂಬಂಧವನ್ನು ಕುರಿತು ಹೀಗೆ ಹೇಳಿದ್ದಾನೆ “ತಂದೆಯ ಸಾಮರ್ಥ್ಯದಿಂದ ಹುಟ್ಟಿದ ಮಗನಿಗೆ ತಂದೆಯ ಸ್ವರೂಪವಲ್ಲದೆ ಬೇರೆ ಒಂದು ಸ್ವರೂಪವೆಂದು ತಿಳಿಯಲುಂಟೆ ಅಯ್ಯ, ಶಿವ ತಾನೇ ತನ್ನ ಸಾಮರ್ಥ್ಯವೇ ಒಂದೆರಡಾಗಿ ಗುರುವೆಂದೂ ಶಿಷ್ಯನೆಂದೂ ಆಯಿತೆಂದರೆ, ಆ ಗುರುವಿಂಗೂ ಶಿಷ್ಯಂಗೂ ಬೇರೆಯಿಟ್ಟು ನುಡಿಯಲಾಗದಯ್ಯ ಗುರುವಿನ ಅಂಗ ಶಿಷ್ಯ, ಶಿಷ್ಯನ ಅಂಗ ಗುರು, ಗುರುವಿನ ಪ್ರಾಣ ಶಿಷ್ಯ ಶಿಷ್ಯನ ಪ್ರಾಣ ಗುರು. ಈ ಗುರು ಶಿಷ್ಯ ಸಂಬಂಧ ಒಂದಾದ ಬಳಿಕ ಗುರು ಶಿಷ್ಯರೆಂದು ಬೇರೆಯಿಟ್ಟು ನುಡಿವ ಭ್ರಷ್ಟರ  ಏನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ ಇದಕ್ಕಿಂತ ಗುರು-ಶಿಷ್ಯರ ಸಂಬಂಧವನ್ನು ಚಿತ್ರಿಸುವುದು ಕಷ್ಟ

  ಸುಧೆಯೊಳಗೆ ವಿಷವುಂಟೆ, ಮಧುರದೊಳಗೆ  ಕಹಿಯುಂಟೆ ದಿನಮಣಿಯೊಳಗೆ ಕಪ್ಪುಂಟೇ, ಬೆಳದಿಂಗಳೊಳಗೆ ಕಿಚ್ಚುಂಟೇ, ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ, ಮಹಾಜ್ಞಾನ ಸ್ವರೂಪರಪ್ಪ ಶರಣರೇ ಶಿವಲಿಂಗವೆಂದರಿತ ಮಹಾತ್ಮರಿಗೆ ಸಂಕಲ್ಪಭ್ರಮೆಯುಂಟೆ. ಅದೇತರ ವಿಶ್ವಾಸ ಸುಡುಸುಡು ಮಹಾಲಿಂಗಗುರು ಶಿವ ಸಿದ್ದೇಶ್ವರ ಪ್ರಭುವೆ” ಎಂದು ಲೌಕಿಕ ಜ್ಞಾನವನ್ನು ಪ್ರಕಟಿಸಿದ್ದಾರೆ.

 ಹಾಲಿನಲ್ಲಿ ತುಪ್ಪವಿದೆ ಎಂದು ಹೇಳಿದರೆ ಯಾರೂ ನಂಬರು, ಹಾಲು ಕಾಸಿ ಅದಕ್ಕೆ ಹೆಪ್ಪಿಟ್ಟು ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ಕಾಸಿದರೆ ತುಪ್ಪ ಬರುವಂತೆ ದೇಹದ ಮರೆಗೊಂಡಿಪ್ಪ ಆತ್ಮನಂತೆ, ಶಕ್ತಿಯ ಮರೆಗೊಂಡಿಪ್ಪ ಶಿವನಂತೆ, ಕ್ಷೀರವ ಮರೆಗೊಂಡಿಪ್ಪ ತುಪ್ಪದಂತೆ, ವಾಚ್ಯವ ಮರೆಗೊಂಡಿಪ್ಪ ಅನಿರ್ವಾಚ್ಯದಂತೆ, ಲೋಕಾರ್ಥದೊಳಡಗಿಪ್ಪ ಪರಮಾರ್ಥದಂತೆ ಎನ್ನ ಆತ್ಮದೊಳಡಗಿಪ್ಪ ಪರಮಾರ್ಥ ತತ್ವವು, ಬೀಜದೊಳಡಗಿದ ವೃಕ್ಷದಂತೆ ಇದ್ದಿತಯ್ಯಾ ನಾನರಿಯದ ಮುನ್ನ ಸಂಬಂಧ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ ಎಂದು ದೇಹ- ಆತ್ಮನ ಸಂಬಂಧವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

 ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹಂಗೆ ಹಡೆವಳಯ್ಯಾ, ಲಿಂಗಕ್ಕೆ ನಾಚಿದಾತ ಶರಣ ನೆಂತಪ್ಪನಯ್ಯಾ, ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯಾ, ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯ ಲಜ್ಜೆಯಯ್ಯ ಅಹುದೋ ಅಲ್ಲವೋ ಏನೋ ಎಂತೋ ಎಂದು ಹಿಡಿವುತ್ತ ಬಿಡುತಿಪ್ಪ ಲಜ್ಞಾ ಭ್ರಾಂತಿ ಉಡುಗಿರಬೇಕಯ್ಯಾ ಗಂಡನ ಕುರುಹನರಿಯದಾಕೆಗೆ ಲಜ್ಜೆ ನಾಚಿಕೆ ಉಂಟಾದುದಯ್ಯ ಈ ಅರುಹು ಮರುಹೆಂಬ ಉಭಯ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳ್ಳಲುಂಟೆ ಅಯ್ಯಾ ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ ಎಂದು ಲೌಕಿಕವನ್ನು ಮೆರೆದಿದ್ದಾರೆ.

ಲಿಂಗಯ್ಯನನ್ನು ಅಂಗಯ್ಯನ ಮೇಲೆ ಧರಿಸಿ ಪೂಜಿಸುವ ಲಿಂಗವಂತರಿಗೆ ಅಂದರೆ ಇಷ್ಟಲಿಂಗಧಾರಿಗಳಿಗೆ “ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠಕಾಣಿರೋ ಲಿಂಗವ ಪೂಜಿಸುವ ಹಸ್ತವೇ ಶಿವಹಸ್ತ ಕಾಣಿರೋ ಲಿಂಗವಧರಿಸಿಪ್ಪಂಗವೇ ಲಿಂಗದಂಗವಾಗಿ ಲಿಂಗಕ್ಕೂ ಅಂಗಕ್ಕೂ ಭಿನ್ನವಿಲ್ಲ ಕಾಣಿರೋ  ಲಿಂಗಪ್ರಸಾದವ “ಕೊಂಬ ಪ್ರಾಣಲಿಂಗ ತಾ ಲಿಂಗಭರಿತವಾಗಿಪ್ಪ ಲಿಂಗದೇಹಿ ಪ್ರಾಣದೇಹಿಗೆ ಲಿಂಗಸಹ ಭೋಜನ ಮಾಡಬೇಕೆಂಬುದೆ ಸದಾಚಾರ ಹೀಂಗಲ್ಲದೆ ಅಂಗಕ್ಕೂ ಲಿಂಗಕ್ಕೂ ಭೇದಭಾವವ ಕಲ್ಪಿಸಿಕೊಂಡು ಲಿಂಗ ಸಹ   ಭೋಜನವ ಮಾಡಬಾರದೆಂಬ ಸಂದೇಹ ಸೂತಕ ಪ್ರಾಣಿಗಳಿಗೆ ಅಂಗದಲ್ಲಿ ಲಿಂಗವಿಲ್ಲ, ಮನದಲ್ಲಿ ಮಂತ್ರವಿಲ್ಲ ಪ್ರಾಣದಲ್ಲಿ ಪ್ರಸಾದವಿಲ್ಲ, ಪ್ರಸಾದವಿಲ್ಲದವರಿಗೆ ಮುಕ್ತಿಯೆಂಬುದೆಂದೂ ಇಲ್ಲ ನೀ ಸಾಕ್ಷಿಯಾಗಿ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ’ ಎಂದು ಅಂಗ ಲಿಂಗವಾಗುವ ನರ-ಹರನಾಗುವ ಈ ಲೋಕವೇ ಸ್ವರ್ಗಲೋಕವಾಗುವ ತಂತ್ರವನ್ನು ತಿಳಿಸಿ ಪ್ರತಿಯೊಬ್ಬರೂ ಲಿಂಗವಂತರಾಗಿ ಲಿಂಗವಂತರಾದ ಮೇಲೆ, ‘ಲಿಂಗಾಂಗಿ’ ಆಗ ಬೇಕು, ಮಾನವ ದೇವನಾಗಬೇಕು ಎಂದು ಬಹು ಸುಲಭವಾಗಿ “ಲಿಂಗಾಂಗ’ ರಹಸ್ಯ ಬಿಡಿಸಿದ್ದಾರೆ.

 ಈ ವಚನವಂತೂ ಅನಾಚಾರಿಗಳಿಗೆ ಗುರು; ಲಿಂಗ; ಜಂಗಮ, ಪಾದೋದಕ, ಪ್ರಸಾದಗಳಲ್ಲಿ ನಿಷ್ಠೆ ಇಲ್ಲದವರಿಗೆ ಬರಸಿಡಿಲಿನಂತೆ ಎರಗಿದೆ, “ಆಚಾರವಿಲ್ಲದ ಗುರುಭೂತ, ಆಚಾರವಿಲ್ಲದ ಲಿಂಗಶಿಲೆ, ಆಚಾರವಿಲ್ಲದ ಜಂಗಮ ಮಾನವ, ಆಚಾರವಿಲ್ಲದ ಪಾದೋದಕ ನೀರು, ಆಚಾರವಿಲ್ಲದ ಪ್ರಸಾದ ಎಂಜಲು, ಭಕ್ತಾದುಃಕರ್ಮಿ ಇದು ಕಾರಣ ಅಟ್ಟವನೇರುವುದಕ್ಕೆ ನಿಚ್ಚಣಿಗೆ ಸೋಪಾನವಯ್ಯ ಹರಪದವನೆಯ್ದುವರೆ ಶ್ರೀ ಗುರು ಹೇಳಿದ ಸಾದಾಚಾರವೇ ಸೋಪಾನವಯ್ಯಾ ಗುರೂಪದೇಶ ಮೀರಿ ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ ಎನಗೊಮ್ಮೆ ತೋರದಿರಯ್ಯ ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ?” ಎಂದು ಅಂತಹವರ ಮುಖ ದರ್ಶನ ಮಾಡಿಸಬೇಡ ಎಂದು ತನ್ನ ಆರಾಧ್ಯದೈವವನ್ನು ಪ್ರಾರ್ಥಿಸಿದ್ದಾರೆ.

ದೇವಸ್ಥಾನಕ್ಕೆ ಹೋಗುವಾಗ ಕೈಯಲ್ಲಿ ಒಯ್ಯುವುದು ಏನೆಂದು ಕೇಳಿದರೆ ‘ಹಣ್ಣುಕಾಯಿ’ ಎಂದು ಹೇಳುತ್ತಾರೆ. ಹಾಗೆಯೇ ಗುಡಿಯಿಂದ ಬರುವಾಗ ಏನೆಂದು ಕೇಳಿದರೆ ‘ಪ್ರಸಾದ’ ಎನ್ನುತ್ತಾರೆ. ಅಂದರೆ ‘ಹಣ್ಣು ಕಾಯಿ’ ಹೋಗಿ ಪ್ರಸಾದವಾದಂತೆ, ಆಚಾರದಿಂದ ನರ-ಹರನಾಗುತ್ತಾನೆ, ಹಾಗೆಯೇ ಪದಾರ್ಥ-ಪ್ರಸಾದವಾಗುತ್ತದೆ. ನೀರು-ಪಾದೋದಕ, ಜಡ ವಸ್ತುವಾದ ತಂತಿಯಲ್ಲಿ ವಿದ್ಯುತ್‌  ಸಂಚರಿಸಿದರೆ ಅವನೇ ಹರ, ಶಿವ, ಶರಣ ಎಂಬುದನ್ನು ಬಿಡಿಸಿ ತೋರಿಸಿದ್ದಾರೆ ಮೇಲಿನ ವಚನದಲ್ಲಿ,

 ಷಟ್‌ಸ್ಥಲಿಗಳಾಗುವವರು ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ, ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ, ವಿವೇಕದಲ್ಲಿ ಮತ್ಸರ, ಅರುಹಿನಲ್ಲಿ ಮಾಯೆಯನ್ನು ಹೊಂದಿರಬಾರದು. ಅರಿಷಡ್ವರ್ಗಗಳನ್ನೇ ಬಿಟ್ಟ ಶರಣರೇ ನಿಜವಾದ ಷಟ್‌ಸ್ಥಲಿಗಳು ಎಂದು ನುಡಿದಿದ್ದಾರೆ.

 ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ ಹಾಗೆಯೇ ಲಿಂಗವಿದ್ದ ಮನೆಯಲ್ಲಿ ಅಜ್ಞಾನವುಂಟೆ ಎಂದು ‘ಲಿಂಗಜ್ಯೋತಿ’ ತಮಸ್ಸನ್ನು, ಅಂಧಕಾರ, ಅಜ್ಞಾನ, ಅಭಾವಗಳನ್ನು ಕಳೆಯುವ  ಮಹತ್ತರವಾದ ಶಕ್ತಿಯ ಸಾಧನ ಎಂದು ತಿಳಿಸಿದ್ದಾರೆ,

 ಅವರ ಷಟ್‌ಸ್ಥಲ ಜ್ಞಾನ ಸಾರಾಮೃತ ವಚನಗ್ರಂಥದಲ್ಲಿ “ಷಟ್‌ಸ್ಥಲಸಾರ’ವನ್ನು ತಿಳಿತಿಳಿಯಾಗಿ ವಿವರಿಸಿದ್ದಾರೆ. ಇದರಲ್ಲಿ ಸ್ತೋತ್ರ ವಚನ ೯, ಸರ್ವ ಶೂನ್ಯ ನಿರಾಲಂಬ ಸ್ಥಳ ೭, ಶೂನ್ಯಲಿಂಗಸ್ಥಲ ೫, ನಿಃಕಲ ಲಿಂಗಸ್ಥಲ ೧೧, ಮಹಾಲಿಂಗಸ್ಥಲ ೫,ಅಂಗಲಿಂಗೋದ್ಭವಗ್ಧಲ ೨೫, ಪಂಚಮೂರ್ತಿಲಿಂಗಸ್ಥಲ ೧೧, ಪಿಂಡಸ್ಥಲ ೭, ಪಿಂಡಜ್ಞಾನಸ್ಥಲ ೨೫, ಸಂಸಾರಹೇಯಸ್ಥಲ. ೫೧, ಗುರುಕರುಣಸ್ಥಲ ೧೬, ಲಿಂಗಧಾರಣ ಸ್ಥಲ ೧೨, ವಿಭೂತಿ  ಸ್ಥಲ ೯, ರುದ್ರಾಕ್ಷಿಸ್ಥಲ ೩, ಪಂಚಾಕ್ಷರೀ ಸ್ಥಲ ೧೫, ಭಕ್ತಿಸ್ಥಲ. ೫೨, ಮಹೇಶ ೩೬, ಪ್ರಸಾದಿ ೩೩, ಪ್ರಾಣಲಿಂಗಿ ೧೧೦, ಶರಣ ೧೩೪, ಐಕ್ಯ ೧೧೦, ನಿರವಯಸ್ಥಲ ೧೫, ಅಂತುಸ್ಥಲ ೨೧ಕ್ಕಂ. ವಚನ ೭೦೧ಕ್ಕಂ ಮಂಗಳಂ” ಎಂದಿದ್ದಾರೆ.

ಮಹಾಗುರು ಶಿವಯೋಗಿ ಸಿದ್ಧಲಿಂಗೇಶ್ವರರ ವಚನಗಳು ಜನಸಾಮಾನ್ಯರಿಗೆ ಉಪದೇಶ ನೀಡುವ, ದೀಕ್ಷೆ ಕೊಡುವ, ಭಕ್ತರನ್ನು ಕೈಹಿಡಿದು ನಡೆಸುವ ಗುರುಗಳಿಗೆ, ಜಂಗಮರಿಗೆ, ದಾರ್ಶನಿಕರಿಗೆ ಹೆಚ್ಚಾಗಿ ಅನ್ವಯವಾಗುತ್ತವೆ.

“ಕರಣದ ಕತ್ತಲೆಯ ಸದಮಲದ ಬೆಳಗನುಟ್ಟು ಪರಿಹರಿಸಬೇಕು ನೋಡಿರೊ ಜವ್ವನದ ಹೊರಕುಂಚ ಕಣ್ಣಿಗೆ ತೋರುವ ಕಾಮಜಾಲಂಗಳ ಶಿವಜ್ಞಾನಾಗ್ನಿಯಲ್ಲಿ ಸಿಕ್ಕಿ ಸುಟ್ಟುರು ಭಸ್ಮವ ಧರಿಸಬಲ್ಲರೆ ಶರಣೆಂಬೆ ಉಳಿದವರೆಲ್ಲ ಪುಸಿಯೆಂಬೆ  ಕಾಣಾʼʼಎನ್ನುವ ವಚನ ಅಕ್ಕಮಹಾದೇವಿಯರ ‘ಕರಣದ ಕತ್ತಲೆಯ ಬೆಳಗನುಟ್ಟುಗೆಲಿದೆ’ ಎಂಬ ವಚನವನ್ನು ಅನುವಾದಿಸಿ ದಂತಿದೆ,  ‘ನಾದಪ್ರಿಯಂ ನಾದಮಯಂ ನಾದಲಿಂಗ ಮಹೇಶ್ವರಂ ಆದಿಮಧ್ಯಾಂತರಹಿತ ವೇದೊವೇದವಿದಂ ಪದಂ ಮಂತ್ರಮೂರ್ತಿ ಮಹಾರುದ್ರಂ ಓಮಿತಿ ಜ್ಯೋತಿರೂಪಕಂ ಹರಹರಾ ಶಿವಶಿವಾ ಜಯಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ  ಭಕ್ತವತ್ಸಲ ಮತ್ಪ್ರಾಣನಾಥ” ಎಂಬ ವಚನ ಬಸವಣ್ಣನವರ “ನಾದಪ್ರಿಯ ಶಿವನೆಂಬರು” ಎಂಬ ವಚನವನ್ನು ನೆನಪಿಗೆ ತರುತ್ತದೆ.

  ಲಿಂಗವಂತರು ಲಿಂಗಪೂಜೆಯನ್ನು ಏಕಾಂತವಾಗಿ ಮಾಡುತ್ತಾರೆ. ಆದರೆ ಅದರ ಫಲಮಾತ್ರ ಇಡೀ ನಾಡಿಗೆ. ಅಂದರೆ ಪೂಜೆ ಏಕಾಂತ ಅದರ ಫಲ ಮಾತ್ರ ಲೋಕಾಂತವಾಗಬೇಕು ಅನ್ನುತ್ತಾರೆ ಹಿರಿಯರು. ಆದರೆ ಇದು ನಾಗರಿಕತೆಯ    ಹೆಚ್ಚಳದಿಂದ ಪೂಜೆ ಲೋಕಾಂತ ಆದರೆ ಫಲ ಮಾತ್ರ ಏಕಾಂತ ಅಂದರೆ ಕೆಲವರಿಗೆ ಮಾತ್ರ ಸಿಗುತ್ತಿರುವುದನ್ನು ಇಂದು ಕಾಣಬಹುದು.

 ವೀರಶೈವ ಧರ್ಮದ ಪುನರುಜ್ಜೀವನದ ಮಹಾಚೇತನ ವೆಂದರೆ ಸಿದ್ಧಲಿಂಗ ಗುರು. ಅವರ ಶಿಷ್ಯ ಪರಂಪರೆ  ಧರ್ಮದ ಏಳಿಗೆ, ಸಮಾಜ ಮತ್ತು ಸಂಸ್ಕೃತಿಯ ಸುಧಾರಣೆಗಳು ನಿಜಕ್ಕೂ ಮನನೀಯವಾದವುಗಳು. ಅವರ ವಚನಗಳು ಭಾವಗೀತೆಯಂತೆ ಸೊಗಸಾಗಿವೆ, ಕಾವ್ಯಮಯವೂ, ಉಪ ದೇಶಾತ್ಮಕವೂ, ಧರ್ಮಪ್ರದವೂ ಆಗಿವೆ. ಅವರ ವಚನಗಳು ಅಂದಿನ ಜನಜೀವನದ ಪ್ರತಿಬಿಂಬವೂ ಆಗಿವೆ

. ತೋಂಟದ ಸಿದ್ಧಲಿಂಗೇಶ್ವರರು ಹಲವಾರು ಬೆಡಗಿನ ವಚನಗಳನ್ನೂ ಬರೆದಿದ್ದಾರೆ. “ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ ಫಲವಿಲ್ಲದೆ ಹಣ್ಣಿನ ರುಚಿಯ ಬಾಯಾಗುಣಬಲ್ಲರ ನೆಲಬೆಂದಿತ್ತು ತಲೆ ಸತ್ತಿತ್ತು ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ’.

“ಒಂದೆರಡಾಯಿತ್ತೆಂಬುವದು ಭ್ರಮೆ, ಎರಡು ಮೂರಾ ಯಿತ್ತೆಂಬುವದು ತಾ ಭ್ರಮೆ, ಮೂರು ಆರಾಯಿತ್ತೆಂಬುವದು ಮುನ್ನವೆ ಭ್ರಮೆ, ಎನಗೆ ಆರೂ ಇಲ್ಲ  ಮೂರೂ ಇಲ್ಲ ಉಭಯವು ಇಲ್ಲ, ಉಭಯವಳಿದು ಒಂದಾದೆನೆಂಬುವದು ಮುನ್ನವೇ ಅಲ್ಲ ಮುನ್ನ ಮುನ್ನವೆ ಪರವಸ್ತು ತಾನಾದ ಕಾರಣ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ ಎಂಬ ವಚನಗಳನ್ನು ಉದಾಹರಿಸಬಹುದು.

 ಎಡೆಯೂರು ತೋಂಟದ ಶ್ರೀ ಗುರು ಶಿವಯೋಗಿ ಸಿದ್ಧಲಿಂಗೇಶ್ವರರನ್ನು ಸ್ಮರಿಸಿದರೆ “ಅಳುರದು ಕಿಚ್ಚು ಮುಟ್ಟದು ವಿಪಾಹಿ ಮಹಾಗುರುವಿರ್ದ ನಾಡು ಬೆಳೆವುದು ಬೇಡಿದಂತೆ ಮಳೆಕೊಳ್ವುದು ಎನಿಪ್ಪ ಜಸಕ್ಕೆ ನೋಂತ ಶ್ರೀ ಗುರು ಶಿವಯೋಗಿ ಸಿದ್ಧಲಿಂಗೇಶ್ವರರಂ ಪೆಸರ್ಗೊಳ್ದುದು ಪುಣ್ಯಕಾರಕಂ” ಎಂದು ಶ್ರೀಗುರುವಿನ ಅಡಿ ಸೇರಿ ಧನ್ಯರಾಗೋಣ.

ವಿದ್ವಾನ್‌ ಜಿ.ವಿ.ಶಿವಸ್ವಾಮಿ

ನಮ್ಮ ರಾಜ್ಯವು ಧರ್ಮಸಮನ್ವಯದ ಪುಣ್ಯಭೂಮಿ. ಈ ನಾಡಿನಲ್ಲಿ ಅನೇಕ ಮಹಾತ್ಮರು, ಸಾಧು-ಸಂತರು, ಆಚಾರ್ಯರು, ಶಿವಶರಣರು ಆಗಾಗ್ಗೆ ಉದಯಿಸಿ ತಮ್ಮ ಆಧ್ಯಾತ್ಮಿಕ ತೇಜಸ್ಸಿನಿಂದ ಜನಸಾಮಾನ್ಯರನ್ನು ಉದ್ಧಾರ ಮಾಡಿರುವವರಲ್ಲಿ  ನಿಜಗುಣ ಶಿವಯೋಗಿಗಳೂ ಒಬ್ಬರು

 “ಜ್ಯೋತಿ ಬೆಳಗುತಿದೆ

ವಿಮಲ ಪರಂಜ್ಯೋತಿ ಬೆಳಗುತಿದೆ

ಮಾತು ಮನಂಗಳಿಂದತ್ತತ್ತ ಮೀರಿದ

ಸಾತಿಶಯದ ನಿರುಪಾಧಿಕ ನಿರ್ಮಲ

ಜ್ಯೋತಿ ಬೆಳಗುತಿದೆ”

ಎಂದು ಹೇಳಿ ಜನರಲ್ಲಿ ಇದ್ದ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದವರು ನಿಜಗುಣ ಶಿವಯೋಗಿಗಳು  ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನ್ನು ತುಂಬಿ ಬಸವಣ್ಣನೆಂಬ ಜ್ಯೋತಿ ಬೆಳಗಿಸಿದ ಮೇಲೆ ಅದು ಕಳೆಗುಂದುತ್ತಿದ್ದಾಗ ಮತ್ತೊಮ್ಮೆ ಆ ಜ್ಯೋತಿಗೆ ಅಧ್ಯಾತ್ಮಿಕ ತೈಲವನ್ನೆರೆದು ಹೊಸ ಬೆಳಕನ್ನು ಕೊಟ್ಟು ಆ ಜ್ಯೋತಿಯನ್ನು ನಾಡಿನಲ್ಲೆಲ್ಲಾ ಪ್ರಜ್ವಲಿಸುವಂತೆ ಮಾಡಿದ ಮಹಾತ್ಮರು  ನಿಜಗುಣ  ಶಿವಯೋಗಿಗಳು.

ನಿಜಗುಣರ ಕಾಲ ಮತ್ತು ಜೀವನವನ್ನು ಕುರಿತು ಹೇಳಬಹುದಾದ ಐತಿಹಾಸಿಕ ಆಧಾರಗಳು ಸಾಕಷ್ಟು ದೊರೆಯುವುದಿಲ್ಲ. ಅವರ ಕಾಲ  ದೇಶಾದಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ಅನೇಕ ವಿದ್ವಾಂಸರು ಇವರು ೧೬ನೇ ಶತಮಾನದಲ್ಲಿ ಇದ್ದಿರಬಹುದೆಂದು ಅಭಿಪ್ರಾಯ ಪಟ್ಟಿರುತ್ತಾರೆ.

 ಮೈಸೂರು ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿಗೆ ಸ್ವಲ್ಪ ದೂರದಲ್ಲಿ ಪ್ರಶಾಂತವಾಗಿ ಹರಿಯುತ್ತಿರುವ ಕಾವೇರಿ  ಕಪಿಲೆಗಳ ಸುಗಮವೆಂದು ಹೆಸರು ಪಡೆದಿರುವ ತಿರುಮಲಕೂಡಲ ಆಚೆಗೆ ಸ್ವಲ್ಪ ದೂರದಲ್ಲಿ ಶುಭುಲಿಂಗನ ಬೆಟ್ಟವಿದೆ.ಬೆಟ್ಟದ ಪ್ರದೇಶಕ್ಕೆ ಸೇರಿದಂತೆ ಇರುವ ಒಂದು ಸಣ್ಣಗ್ರಾಮ ಚಿಲಕವಾಡಿ.  ಅದರ ಮತ್ತೊಂದು ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕುಂತೂರು ಗ್ರಾಮವಿದೆ. ಇವೆರಡು ಗ್ರಾಮಗಳ ಎಲ್ಲೆಯಲ್ಲಿ ಇರುವುದೇ ಶಂಭುಲಿಂಗನ ಬೆಟ್ಟ, ಈ ಬೆಟ್ಟವು ಪವಿತ್ರವಾಗಿಯೂ ರಮಣೀಯವಾಗಿಯೂ ಇದ್ದು, ಸಾಧು-ಸಂತರ ತಪೋಕ್ಷೇತ್ರವಾಗಿ, ನಿಜಗುಣ ಶಿವಯೋಗಿಗಳ ಸಿದ್ಧಿಯ ತಾಣವಾಗಿದೆ. ಇಲ್ಲಿಯೇ ನಿಜಗುಣರು ತಪೋನುಷ್ಠಾನ ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದುಕೊಂಡು ಜ್ಞಾನಜ್ಯೋತಿಯಾದರು. ಈ ಬೆಟ್ಟದಲ್ಲಿ ಇಂದಿಗೂ ನಿಜಗುಣರ ಗುಹೆ ಮತ್ತು  ಶಂಭುಲಿಂಗನ ದೇವಾಲಯ ಇವೆ. ಈ ಸ್ಥಳದಲ್ಲಿ ಸುಂದರವಾದ ಪ್ರಾರ್ಥನಾ ಮಂದಿರ ನಿರ್ಮಾಣಮಾಡಿ, ನಿಜಗುಣ ಶಿವಯೋಗಿಗಳ ಅಮೃತಶಿಲೆ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇವರು ಕೊಳ್ಳೆಗಾಲದ ಸುತ್ತಮುತ್ತಲ ಪ್ರದೇಶಕ್ಕೆ  ರಾಜರಾಗಿದ್ದರೆಂದು ಕೆಲವು ಆಧಾರಗಳಿಂದ ತಿಳಿದು ಬರುತ್ತದೆ. ಇವರು ಬುದ್ಧನಂತೆ ರಾಜ್ಯ- ಕೋಶಾಧಿಗಳನ್ನು ತ್ಯಜಿಸಿ ಸನ್ಯಾಸಿಗಳಾದರು

ನಿಜಗುಣರು ಹೊರ ಪ್ರಪಂಚಕ್ಕೆ ರಾಜರಂತೆ ಕಂಡರೂ ಒಳಪ್ರಪಂಚದಲ್ಲಿ ತಪಸ್ವಿಗಳು, ರಾಜಭೋಗದಲ್ಲಿ ಯೋಗ ಬೀಜವನ್ನು ಬಿತ್ತಿ ಬೆಳಸಿದವರು. ಅವರ ಪ್ರಜಾನುರಾಗ, ದೀನ- ದಲಿತರ ಬಗ್ಗೆ ಅನುಕಂಪ, ಸಾಧು-ಸಂತರನ್ನು, ಶರಣರನ್ನು ಜಂಗಮರನ್ನು ಸಮಾನ ಭಾವನೆಯಿಂದ ಕಂಡು ಪೂಜಿಸಿದವರು. ಬಂದ ಯಾತ್ರಾರ್ಥಿಗಳಿಗೂ, ಗುರು ಜಂಗಮರಿಗೂ  ದಾಸೋಹವನ್ನು ನಡೆಸಿದ ಕಾಯಕ ನಿಷ್ಠರು,

 “ಶಿವಪಥವನರಿವಡೆ ಗುರುಪಥವೇ ಮೊದಲು’ ಎಂಬ ಬಸವಣ್ಣನವರ ನುಡಿಯನ್ನು ಅರಿತ ನಿಜಗುಣರು ತಮ್ಮ ಗುರುಗಳಾದ ಶ್ರೀ ಶಂಭುಲಿಂಗಸ್ವಾಮಿಗಳವರ ನೇತೃತ್ವದಲ್ಲಿ ಶಿವಾದ್ವೈತ ಸಿದ್ಧಾಂತವನ್ನು ಕುರಿತು ಜಿಜ್ಞಾಸೆ ನಡೆಸಿ, ಅವರ ಮಾರ್ಗದರ್ಶನದಲ್ಲಿ ಜ್ಞಾನವನ್ನು ಸಂಪಾದಿಸಿಕೊಂಡರು. ಮೆಚ್ಚಿನ ಶಿಷ್ಯನಾದ ನಿಜಗುಣರ ಅಭಿರುಚಿಯನ್ನು ಗಮನಿಸಿದ ಗುರು ಶಂಭುಲಿಂಗಸ್ವಾಮಿಗಳು ಶಿಷ್ಯನನ್ನು ವೈರಾಗ್ಯ ಮೂರ್ತಿಯನ್ನಾಗಿ ಪರಿವರ್ತಿಸಲು ಸಂಸಾರದಲ್ಲಿ ಇರುವ ದುಃಖ ಮತ್ತು ಅದರ ವ್ಯಾಮೋಹದಿಂದಾಗುವ ಅನರ್ಥಗಳನ್ನು ವಿವರಿಸಿ, ಶಿವಾದ್ವೈತ ತತ್ತ್ವಗಳನ್ನು ಮತ್ತು ಮೋಕ್ಷಪದವಿಯ ಮಾರ್ಗವನ್ನು . – ಬೋಧಿಸಿದರೂ ನಿಜಗುಣರ ಮನಸ್ಸು ಸಂಸಾರದಿಂದ ವಿಮುಖವಾಗಲಿಲ್ಲ.

 ಒಮ್ಮೆ ನಿಜಗುಣರು ಗುರುಗಳ ಬಳಿಗೆ ಹೋಗಿ, “ಏನು. ಮಾಡಲಿ – ಗುರುವೇ, ನಾನು ಸಂಸಾರವನ್ನು ತ್ಯಾಗ ಮಾಡಬೇಕೆನ್ನುತ್ತೇನೆ. ಆದರೆ ಸಂಸಾರ ನನ್ನನ್ನು ಬಿಡುತ್ತಿಲ್ಲ” ಎಂದರು, ಶಿಷ್ಯನ ಮನಸ್ಸನ್ನು ಅರಿತ ಗುರುಗಳು ಏನಾದರೂ ಮಾಡಿ   ಪರಿವರ್ತಿಸಬೇಕೆಂದು ಚಿಂತಿಸಿ, ಒಮ್ಮೆ ಊರು ಮುಂದೆ ಇರುವ ಮರವನ್ನು ಹೋಗಿ ತಬ್ಬಿಕೊಂಡು ನಿಂತುಬಿಟ್ಟರು. ರಾಜಗುರುಗಳ ವರ್ತನೆಯನ್ನು ಕಂಡ ಜನ ರಾಜನಿಗೆ ವರದಿ ಮಾಡಿದರು. ನಿಜಗುಣರು ಬಂದು ನೋಡಿ ಆಶ್ಚರ್ಯದಿಂದ ಗುರುಗಳನ್ನು ಕೇಳಿದರು, “ಇದೇನು ಗುರುವೇ ಹೀಗೆ ನಿಂತಿರುವಿರಿ?” ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಈ ಸಂಸಾರ ನಿನ್ನನ್ನು ಹಿಡಿದುಕೊಂಡು ಹೇಗೆ ಬಿಡುತ್ತಿಲ್ಲವೋ, ಹಾಗೆ ಈ ಮರವು ನನ್ನನ್ನು ಹಿಡಿದುಕೊಂಡು ಬಿಡುತ್ತಿಲ್ಲ’ ಎಂದರು. ಗುರುಗಳ ಈ ಮಾತು ನಿಜಗುಣರ ಮನಸ್ಸಿಗೆ ನಾಟಿತು. ಮನಸ್ಸಿನಲ್ಲಿ ವಿದ್ಯುತ್ ಹರಿದಂತಾಯಿತು. ಹೌದು ಗುರುದೇವ, ನಾನೆ ಸಂಸಾರವನ್ನು ಹಿಡಿದುಕೊಂಡು ಸಂಸಾರವು ನನ್ನನ್ನು ಹಿಡಿದುಕೊಂಡಿದೆ ಎನ್ನುತ್ತಿದ್ದೇನೆ”. ಇಲ್ಲದ ನೆಪವನ್ನು ಮಾನವರು ಹುಡುಕುತ್ತಾರೆ, ನನ್ನ ಅಜ್ಞಾನಕ್ಕೆ ಸರಿಯಾದ ಮಾರ್ಗವನ್ನೇ ತೋರಿದಿರಿ.

ಆರು ನಾನೆಂದು ವಿಚಾರಿಸು ವಿಷಮ ಸಂ-

ಸಾರವನು ಕನಸೆಂದರಿ |

ಮಾರಮರ್ದನ ಶಂಭುಲಿಂಗವನೊಲಿಸಿ ಗಂಭೀರ ಸುಖದೊಳಿರೆಂದರುಪುವ

 ಎಂದು ನುಡಿದು ರಾಜ್ಯ ಮಡದಿ ಮಕ್ಕಳನ್ನು ತ್ಯಜಿಸಿ, ಗುರುಗಳ ಮಾರ್ಗದರ್ಶನದಂತೆ ಜಂಗಮ ದೀಕ್ಷೆಯನ್ನು ಪಡೆದು ನಾಡನ್ನೇ ಪ್ರೀತಿಸುವ ಪರಮ ವೈರಾಗ್ಯ ಮೂರ್ತಿಗಳಾದರು

 ನಿಜಗುಣ ಶಿವಯೋಗಿಗಳು ಬಹುಮುಖ ಪ್ರತಿಭೆ ಯುಳ್ಳವರು. ಅಗಾಧವಾದ ವಿದ್ವತ್ತಿನಿಂದಲೂ, ತಪಶ್ಚರ್ಯ ದಿಂದಲೂ, ಶಾಸ್ತ್ರಗಳ ಅಭ್ಯಾಸ ಬಲದಿಂದಲೂ ಜ್ಞಾನನಿಧಿ ಯಾದರು. ಗದ್ಯ-ಪದ್ಯದಲ್ಲಿ ಅನೇಕ ಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

 ನಿಜಗುಣ ಶಿವಯೋಗಿಯು ಒಬ್ಬ ಸಾಮಾನ್ಯ ಕವಿ ಎಂದು ಹೇಳುವುದಕ್ಕಿಂತ ಒಬ್ಬ ದಾರ್ಶನಿಕ ಕವಿ ಎಂದು ಹೇಳಬೇಕಾಗುತ್ತದೆ. ಅವರ ಸಾಹಿತ್ಯ ಕೃಷಿ ವಿಫುಲವಾದದ್ದು. ಕನ್ನಡ ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದೂ ಆಗಿದೆ. ಇವರಿಗೆ ವೇದ, ಆಗಮ, ಉಪನಿಷತ್ತು, ಸ್ಮೃತಿಗಳಲ್ಲಿ ಪಾಂಡಿತ್ಯವಲ್ಲದೆ, ಪುರಾಣ, ಇತಿಹಾಸ, ಸಂಗೀತ, ವ್ಯಾಕರಣ, ತರ್ಕ, ಜ್ಯೋತಿಷ್ಯ, ಯೋಗಗಳಲ್ಲಿಯೂ ಪಾಂಡಿತ್ಯ ಇತ್ತು. ‘ವಿದ್ಯಾಸಂಪನ್ನ, ಸುಜ್ಞಾನ ಚಕ್ರವರ್ತಿ’ ಮುಂತಾದ ಬಿರುದಗಳು ನಿಜಗುಣರನ್ನು ಆಶ್ರಯಿಸಿ ಗೌರವ ಪಡೆದವೆಂದರೆ ಉತ್ಪ್ರೇಕ್ಷೆಯಾಗಲಾರದು.

ನಿಜಗುಣ ಶಿವಯೋಗಿಗಳ ಕೃತಿಗಳು

೧)ಕೈವಲ್ಯ ಪದ್ಧತಿ

೨)ಪರಮಾನುಭವ ಬೋಧೆ

೩)ಅನುಭವ ಸಾರ

೪)ಪರಮಾರ್ಥಗೀತೆ

೫)ಪಾರಮಾರ್ಥ ಪ್ರಕಾಶಿಕೆ

೬)ವಿವೇಕ ಚಿಂತಾಮಣಿ

೭)ಅರವತ್ತು ಮೂವರ ಪುರಾತನ ತ್ರಿವಿಧಿ

ಮತ್ತು ದರ್ಶನ ಸಾರ, ಆತ್ಮ ತರ್ಕ ಚಿಂತಾಮಣಿ ಈ ಎರಡು ಗ್ರಂಥಗಳು ಸಿಕ್ಕಿರುವುದಿಲ್ಲ. ಇವರ ಕೃತಿಗಳು ತೆಲಗು, ತಮಿಳು, ಸಂಸ್ಕೃತ, ಮರಾಠಿ ಭಾಷೆಗಳಿಗೂ ಭಾಷಾಂತರ ಗೊಂಡಿವೆ. ನಿಜಗುಣರ ಕೃತಿಗಳನ್ನು ಓದಿ ನೋಡಿದಾಗ ನಮಗೆ ಸಾಹಿತ್ಯ ಶ್ರೀಮಂತಿಕೆಯ ಗೋಚರವಾಗುತ್ತದೆ. ಅವರ ಕೃತಿಗಳು ಒಂದಕ್ಕೊಂದು ಪೂರಕವೆಂಬಂತೆ ತೋರುತ್ತವೆ, ಮುಮುಕ್ಷುಗಳು ಮೊದಲು ‘ಪಾರಮಾರ್ಥದ ಪ್ರಕಾಶ’ ತಿಳಿಯಬೇಕು. ಅದಕ್ಕೆ ‘ವಿವೇಕ ಚಿಂತಾಮಣಿ’ಯ ಅರಿವು ಬೇಕು. ಅದನ್ನು ಪಡೆದುಕೊಂಡ ನಂತರ ‘ಅನುಭವಸಾರ’ ಬೇಕು. ಅನುಭವದ ಸಾರವನ್ನು ಜೀರ್ಣಿಸಿಕೊಂಡು ಜ್ಞಾನಿಯು ‘ಪರಮಾರ್ಥಗೀತೆ’ಯನ್ನು ಆನಂದ ದಿಂದ ಹಾಡುತ್ತಾ ‘ಕೈವಲ್ಯ ಪದ್ಧತಿ’ಯನ್ನು ತಿಳಿದು ಅನುಭವಿಸಬೇಕು ಎಂಬುದು ಅವರ ಗ್ರಂಥಗಳ ಅಧ್ಯಯನದಿಂದ ತಿಳಿದು ಬರುತ್ತದೆ

. ‘ಕೈವಲ್ಯ ಪದ್ಧತಿ’ಯು ನಿಜಗುಣ ಶಿವಯೋಗಿಗಳ ಕೊನೆಯ ಕೃತಿರತ್ನವಾಗಿದೆ. ವೇದಾಂತ ತತ್ತ್ವಗಳನ್ನು ಬೋಧನೆ ಮಾಡುವಾಗ ‘ಪರಮಾನುಭವ’ವಿಲ್ಲದೆ ಬೋಧನೆ ಮಾಡಲಾಗುವುದಿಲ್ಲ. ಎಲ್ಲವನ್ನೂ ಗುರುಮುಖೇಣ ಅರಿಯಬೇಕು.

“ಶ್ರೀಗುರು ವಚನೋಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ…..

ಎಂದು ಒತ್ತಿಹೇಳಿದ್ದಾರೆ. ತಾವು  ಗುರುಮುಖದಿಂದ ತಿಳಿದ ತತ್ವಗಳನ್ನು ಅರಗಿಸಿಕೊಂಡು, ಶಿವಯೋಗ ಸಿದ್ಧಪುರುಷರಾಗಿ, ತಾವು ಗಳಿಸಿದ ಜ್ಞಾನವಾಹಿನಿಯನ್ನು ನಾಡಿನಲ್ಲೆಲ್ಲಾ ಹರಡಿಸಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತತ್ವಗಳನ್ನು ಉಪದೇಶಿಸಿರುವುದು ತಿಳಿದುಬರುತ್ತದೆ.  ಪುರಂದರದಾಸರು ‘ಪುರಂದರ ವಿಠಲ’ ಎಂತಲೂ ಅಕ್ಕಮಹಾದೇವಿ ‘ಚನ್ನಮಲ್ಲಿ ಕಾರ್ಜುನ’ ನೆಂತಲೂ, ಬಸವಣ್ಣನವರು ‘ಕೂಡಲ ಸಂಗಮದೇವ’ ನೆಂತಲೂ ತಮ್ಮ ವಚನಗಳ ಅಂತ್ಯದಲ್ಲಿ ಅಂಕಿತವನ್ನು ಹೇಳಿ ಕೊಂಡಿರುವರಂತೆ, ನಿಜಗುಣ ಶಿವಯೋಗಿಗಳೂ ಸಹ ‘ಶಂಭುಲಿಂಗ’  ಎಂದು ಅಂಕಿತವನ್ನು ಇಟ್ಟುಕೊಂಡಿದ್ದಾರೆ.

 ಉದಾಹರಣೆಗೆ

 : ಪ್ರಣವಾಕಾರದ ಗುಣಮೂರು ಮುಟ್ಟಿದ

 ಗಣನೆಗತೀತಾರ್ಥವನೆ ತೋರುವ ||

ಅಣುಮಾತ್ರ ಚಲನೆ ಇಲ್ಲದ ಮೋಕ್ಷ ಚಿಂತಾ |

 ಮಣಿಯೆನಿಸುವ ಶಂಭುಲಿಂಗವೆ ತಾನಾದ |

 ಎಂದು ಹಾಡಿದ್ದಾರೆ.

  ನಿಜಗುಣರ ಸಮಗ್ರ ಜೀವನ ಚರಿತ್ರೆಯಿಂದ ತಿಳಿದು ಬರುವುದೇನೆಂದರೆ ಅವರು ಒಬ್ಬ ದಕ್ಷ ಆಡಳಿತಗಾರರೂ | ಸಮಾಜ ಸುಧಾರಕರೂ, ಕವಿಗಳೂ, ದಾರ್ಶನಿಕರೂ, ತತ್ವನಿಷ್ಠರೂ | ಮಹಾತ್ಮರೂ ಆಗಿದ್ದರು. ಅವರೆಲ್ಲಿ ನಾವೆಲ್ಲಿ ? ಮಾನವರಾಗಿ | ಹುಟ್ಟಿ ಮಹಾಮಹಿಮರಾಗಿ ಮಾನವರ ಸರ್ವತೋಮುಖ ಪ್ರಗತಿಗಾಗಿ ದುಡಿದರು. ಅವರು ಬಡವ-ಬಲ್ಲಿದ, ಉಚ್ಚ  ನೀಚ ಎಂಬ ಭೇದ ಭಾವನೆಯನ್ನು ತೊಡೆದು ಹಾಕಲು, ಪ್ರಯತ್ನಿಸಿದರು ಶರಣರ ಜೀವನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದವರು.

 ದೇವರನ್ನು ನಂಬಬೇಕು,ದೇವ ಲೋಕವೆಂಬುದು ಅವು ಅಲ್ಲಿಯೂ ಇಲ್ಲ, ಅವೆಲ್ಲವೂ ಇಲ್ಲಿಯೇ ಇವೆ. ಸತ್ಯವನ್ನ ನುಡಿವುದೇ ದೇವಲೋಕ, ಮಿಥ್ಯವನ್ನ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ ಅನಾಚಾರವೇ ನರಕ, ಎಂದು ಬಸವಣ್ಣನವರು ನುಡಿದಿರುವ ವಚನದ ಸಾರವನ್ನು ತಿಳಿದು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅಧ್ಯಾತ್ಮಿಕ ರಂಗದ ಧೃವತಾರೆಯಾಗಿ ಮಿನುಗಿ, ಆಚರಣೆಯಲ್ಲಿ ನಡೆ ನುಡಿಗಳನ್ನು ಹೊ೦ದಾಗಿಸಿ ಸಮಾಜದ ಜನತೆಯನ್ನು ಕೈಹಿಡಿದು ನಡೆಸಿದವರು. ಅವರ ಉಪದೇಶಗಳು ಕಲುಷಿತ ವಾತಾವರಣದಲ್ಲಿ ಕಂಗೆಟ್ಟುನಿಂತ ಜೀವಿಗೆ ಶಾಂತಿ, ಸುಖ, ನೆಮ್ಮದಿಯನ್ನು ನೀಡುತ್ತವೆ. ನಿಜಗುಣ ಶಿವಯೋಗಿಗಳು ಬೋಧಿಸಿದ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ನಿಜಗುಣ ಶಿವಯೋಗಿಗಳ ಕೃತಿಗಳ ಪ್ರಭಾವ ಶ್ರೀ ಸರ್ಪಭೂಷಣ ಶಿವಯೋಗಿಗಳ ಮೇಲೆ ಆಗಿದೆ. ಅವರು ತಮ್ಮ ‘ಕೈವಲ್ಯ ಕಲ್ಪವಲ್ಲರಿ’ಯಲ್ಲಿ ನಿಜಗುಣರನ್ನು ಸ್ಮರಿಸಿರುತ್ತಾರೆ

ಪ್ರೊ. ಜೆ.ಎಸ್.ಸಿದ್ದಲಿಂಗಯ್ಯ

ಸರ್ಪಭೂಷಣ ಶಿವಯೋಗಿಗಳ ಹೆಸರು ನೆನಪಾಗುತ್ತಿದ್ದಂತೆ ಬೆಂಗಳೂರಿನ ೬೩ ಮಠಗಳಲ್ಲಿ ಧಾರ್ಮಿಕವಾಗಿಯೂ, ಸಾಹಿತ್ಯಕವಾಗಿಯೂ, ಮುಖ್ಯವಾದ ಎರಡು ಮಠಗಳು ನಮ್ಮ ಗಮನವನ್ನು ಸೆಳೆಯ ತೊಡಗುತ್ತವೆ. ಅವೆಂದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು. ಯಾವುದೇ ಒಂದು ಮಠದ ಅಥವಾ ಸಂಸ್ಥೆಯ ಹೆಸರು ಉಜ್ವಲವಾಗುವುದು ಆ ಮಠ ಕಾರಣವಾದ ಸಾಂಸ್ಕೃತಿಕ ಕ್ರಿಯೆಯಿಂದ . ಬೆಂಗಳೂರಿನಲ್ಲಿದ್ದ ೬೩ ಮಠಗಳಲ್ಲು ಧಾರ್ಮಿಕವಾದ ಹಾಗೂ ಶೈಕ್ಷಣಿಕವಾದ ಕಾರ್ಯಗಳು ನಡೆಯುತ್ತಲೇ ಇದ್ದವು. ಏಕೆಂದರೆ ಬೆಂಗಳೂರಿನ ಆ ಮಠಗಳು ಮಾಮೂಲುಪೇಟೆ, ಚಿಕ್ಕಪೇಟೆ, ಅರಳೇಪೇಟೆ, ಅಕ್ಕಿಪೇಟೆ, ದೊಡ್ಡಪೇಟೆ – ವಲಯಗಳಲ್ಲಿ ಸ್ಥಾಪಿತವಾಗಿದ್ದು ಅವುಗಳು ಹುಟ್ಟಿಕೊಂಡಿದ್ದ ಅಂದಿನ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾರ್ಗದರ್ಶನಕ್ಕಾಗಿ. ಆದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು ಈ ಎಲ್ಲ ಮಠಗಳಿಗಿಂತಲೂ ಅಧಿಕವಾದ ಸಾಹಿತ್ಯ ಸೇವೆಯನ್ನು ಮಾಡಿದವು.

ಒಂದರ್ಥದಲ್ಲಿ ತಿಪ್ಪಶಟ್ಟಿಮಠ ಮತ್ತು ಸರ್ಪಭೂಷಣ ಮಠಗಳಿಗೆ ಗುರು-ಶಿಷ್ಯ ಬಾಂಧವ್ಯವನ್ನು ಹೇಳಬಹುದು. ಏಕೆಂದರೆ ತಿಪ್ಪಶೆಟ್ಟಿ ಮಠಕ್ಕೆ ಗುರುಗಳಾಗಿ ಬಂದ ಶ್ರೀ ಗುರುಸಿದ್ಧ ಸ್ವಾಮಿಗಳು ಸರ್ಪಭೂಷಣರನ್ನು ರೂಪಿಸಿದ ಮಹಾಶಿಲ್ಪಿಗಳು. ಆದ್ದರಿಂದ ಈ ಎರಡು ಮಠಗಳು ಒಂದು ರೀತಿಯಲ್ಲಿ ಗುರುಶಿಷ್ಯರಂತಿದ್ದು ಗುರುಸಿದ್ಧಸ್ವಾಮಿಗಳ ವ್ಯಕ್ತಿತ್ವದಂತೆಯೇ ಸರ್ಪಭೂಷಣರ ವ್ಯಕ್ತಿತ್ವವೂ ಕೂಡ ಸಾಹಿತ್ಯ ಲೋಕದಲ್ಲಿಯೂ, ಪ್ರಮುಖವಾಗಿದೆ. ಗುರುಸಿದ್ಧರ ಶಿಷ್ಯರಾದರೂ ಸಪ್ಪಣ್ಣನವರು ಸೃಜನ ಪ್ರತಿಭೆಯಲ್ಲಿ ಗುರುಗಳನ್ನು ಮೀರಿಸಿದವರು. ಆದ್ದರಿಂದ ಸರ್ಪಭೂಷಣ ಶಿವಯೋಗಿಗಳನ್ನು ಕುರಿತು ಯೋಚಿಸುವಾಗ ಅವರು ಮಠದ ಅಧ್ಯಕ್ಷರಾದ ಧರ್ಮಗುರುಗಳಾಗಿ ಹೇಗೊ ಹಾಗೆಯೇ ಅಥವಾ ಅದಕ್ಕಿಂತಲೂ ಮಿಗಿಲಾಗಿ ಸಾಹಿತ್ಯ ಸೇವೆಯನ್ನು ಮಾಡಿದ ಶಿವಯೋಗಿಗಳಾಗಿ ನಮ್ಮ ಗಮನವನ್ನು ಸೆಳೆಯುತ್ತಾರೆ. ಎಡೆಯೂರ ಸಿದ್ಧಲಿಂಗ ಯತಿಗಳಂತೆ ಷಡಕ್ಷರ ದೇವನಂತೆ ಮಠಾಧಿಪತಿಗಳಾಗಿಯೂ ಸಾಹಿತ್ಯ ಸೇವೆಯಲ್ಲಿ ಮುಂದಾದವರು.

 ಸಪ್ಪಣ್ಣನವರು ಹುಟ್ಟಿದ್ದು ೧೭೯೫ರಲ್ಲಿ. ಲಿಂಗೈಕ್ಯರಾದದ್ದು ೧೮೩೯ರಲ್ಲಿ. ಕೇವಲ ೪೫ ವರ್ಷಗಳಷ್ಟು ಕಾಲ ಬದುಕಿದ್ದ ಸಪ್ಪಣ್ಣನವರು ಬಾಣಾವರದಿಂದ ಬಂದು ಬೆಂಗಳೂರಿನಲ್ಲಿ ನೆಲಸಿದ್ಧ ಮಲ್ಲಿಕಾರ್ಜುನಪ್ಪನವರ ಆರು ಮಕ್ಕಳಲ್ಲಿ ಒಬ್ಬರು. ಇವರ ತಾಯಿ ಚೆನ್ನಮ್ಮ,  ಸಪ್ಪಣ್ಣನವರನ್ನು ಸಪ್ಪಣ್ಣನವರು, ಸಪ್ಪಣ್ಣಪ್ಪನವರು, ಸಪ್ಪಣ್ಣಸ್ವಾಮಿಗಳು, ಸಪ್ಪಣ್ಣಾರ್ಯರು, ಸಪ್ಪಯ್ಯನವರು, ಸರ್ಪಭೂಷಣರು, ಸರ್ಪಭೂಷಣ ಶಿವಯೋಗಿಗಳು ಎಂದೆಲ್ಲ ವ್ಯವಹರಿಸುವುದುಂಟು.

 ಇಷ್ಟು ನಮಗೆ ಸಪ್ಪಣ್ಣನವರು ಹತ್ತಿರದವರಾದರು ಅವರ ಬಾಲ್ಯ, ವಿದ್ಯಾಭ್ಯಾಸಗಳ ಬಗೆಗೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಒಂದನೆಯದಾಗಿ ಸಪ್ಪಣ್ಣನವರು ಬಾಲ್ಯದಲ್ಲಿ ಅತ್ಯಂತ ಬುದ್ಧಿವಂತರೂ ತುಂಟರೂ ಆಗಿದ್ದರು ಎಂದು ಈ ವಿಷಯದಲ್ಲಿ ಶಿವಮೂರ್ತಿ ಶಾಸ್ತ್ರಿಗಳು ಸಪ್ಪಣ್ಣನವರು ಐದು ವರ್ಷದವರಾಗಿದ್ದಾಗ ಅವರ ತಂದೆ-ತಾಯಿಗಳು ಶ್ರೀಗುರುಸಿದ್ದ  ಸ್ವಾಮಿಗಳನ್ನು ತಮ್ಮ ಮಗನಿಗೆ ಬುದ್ಧಿ ಹೇಳಬೇಕೆಂದು ಪ್ರಾರ್ಥಿಸಿಕೊಂಡರೆಂದೂ ಗುರುಸಿದ್ಧಸ್ವಾಮಿಗಳು ಹಾಗೆ ಸಪ್ಪಣ್ಣನವರನ್ನು ಅಕ್ಕರೆಯಿಂದ ಮಾತಾಡಿಸಿದಾಗ ಅವರೇ ಪಾಠ ಹೇಳುವುದಾದರೆ ಆಗಲಿ ಎಂದರೆಂದೂ ಹೇಳುತ್ತಾರೆ  ಅದರಂತೆ ಸಪ್ಪಣ್ಣ ಗುರುಸಿದ್ಧ ಸ್ವಾಮಿಗಳ ಮಠದಲ್ಲಿ ಉಳಿದು  ೨೨ ವರ್ಷಗಳವರೆಗೆ ಶಿಕ್ಷಣ ಪಡೆದು ವೇದ, ಆಗಮ, ತರ್ಕ, ವ್ಯಾಕರಣ, ಛಂದಸ್ಸು, ಸಂಗೀತ ಹಾಗೂ ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರವನ್ನೆಲ್ಲ ಹೀರಿ ಗುರುಗಳ ಮೆಚ್ಚಿಗೆಗೆ ಪಾತ್ರರಾದರೆನ್ನುತ್ತಾರೆ. ಆದರೆ ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಈ ಘಟನೆಗೆ ಕಾರಣವಾದ ಸಪ್ಪಣ್ಣನ ಶಿಕ್ಷಣದ ಬಗ್ಗೆ ಮಾತಾಪಿತೃಗಳು ೬-೭ ವರ್ಷದವರೆಗಿದ್ದಾಗ ಗುರುಗಳಲ್ಲಿ ಪ್ರಸ್ಥಾಪಿಸಿದರೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ಅವರು ಸಪ್ಪಣ್ಣನವರು ಮನೆಯಲ್ಲಿದ್ದೇ ಮಠಕ್ಕೆ ಹೋಗಿ ಕಲಿಯುತ್ತಿದ್ದರೆಂದೂ ಬರುಬರುತ್ತ ಮಠದಲ್ಲಿಯೇ ಹೆಚ್ಚು ಕಾಲ  ಕಳೆಯಲಾರಂಭಿಸಿದರೆಂದೂ ಸೂಚಿಸುತ್ತಾರೆ.

ಮುಂದೆ ಸಪ್ಪಣ್ಣನವರು ವಿರಕ್ತಿಯನ್ನು ಸ್ವೀಕರಿಸಿದ ಬಗೆಗೂ ಈ ಇಬ್ಬರ ಹೇಳಿಕೆಗಳಲ್ಲೂ ಸ್ವಲ್ಪ ಭೇದವಿದೆ. ಶಾಸ್ತ್ರಿಗಳ ಪ್ರಕಾರ ಸಪ್ಪಣ್ಣನವರಿಗೆ ಯೌವನೋದಯ ವಾಗುತ್ತಿದ್ದಂತೆ ಅವರ ಮಾತಾ ಪಿತೃಗಳೇ ಅಲ್ಲದೆ ಬಂಧುಗಳು ಕೂಡ ಮದುವೆ ಮಾಡಿ ಗೃಹಸ್ಥಾಶ್ರಮಕ್ಕೆ ಸೇರಿಸಲು ವಿಶೇಷ ಪ್ರಯತ್ನ ಮಾಡಿದರೆಂದೂ ಸಪ್ಪಣ್ಣನವರ ಮನಸ್ಸಿನ ಆಶಯಂತೆ ಅವರ ಗುರುಗಳಾದ ಗುರುಸಿದ್ಧಸ್ವಾಮಿಗಳ ಮಧ್ಯೆ ಪ್ರವೇಶಿಸಿದ ಮೇಲೆ ಈ ಪ್ರಯತ್ನ ನಿಂತು ಹೋಯಿತೆಂದು ಹೇಳಲಾಗುತ್ತದೆ, ಮಲ್ಲಾಬಾದಿಯವರು ತಮ್ಮ ಮಠದಲ್ಲಿ ತಮ್ಮಿಂದ ವಿದ್ಯೆ ಕಲಿಯಲು ಬರುತ್ತಿದ್ದ ಸಪ್ಪಣ್ಣನವರ ವ್ಯಕ್ತಿತ್ವ, ಪ್ರತಿಭೆ ಹಾಗೂ ವಿರಕ್ತಾಶ್ರಮದಲ್ಲಿದ್ದ ಒಲವನ್ನು ಕಂಡು ತಾವೇ ಸಪ್ಪಣ್ಣನವರ ತಂದೆಯನ್ನು ನಿಮ್ಮ ಮಗನನ್ನು ನಮ್ಮ ಮಠಕ್ಕೆ ಮರಿಯಾಗಿ ನೀಡಿರೆಂದು ಕೇಳಿಕೊಂಡರೆಂದೂ, ಗುರುಗಳಿಂದಾಗಿಯೇ ಇಂದು ಘನತೆಯ ಸ್ಥಾನಕ್ಕೇರಿರುವ ತಮ್ಮ ಮಗನನ್ನು ಅವರು ಗುರುಗಳ ಇಚ್ಛೆಯಂತೆಯೇ ಮಠಕ್ಕೆ ಮರಿಯಾಗಿ ನೀಡಿದರೆಂದೂ ಮತ್ತೆ ಅವರ ಮಡದಿಯ ಒಪ್ಪಿಗೆಯನ್ನು ಇದಕ್ಕೆ ಪಡೆದಿದ್ದರೆಂದು ತಿಳಿಸುತ್ತಾರೆ.

ವ್ಯಾಪಾರಿಯೊಬ್ಬರ ಮಗನಾದ ಸಪ್ಪಣ್ಣ ಸರ್ಪಭೂಷಣ ಶಿವಯೋಗಿಯಾದದ್ದು ಹೀಗೆ, ಸಪ್ಪಣ್ಣನವರು ಕೇವಲ ಅಧ್ಯಯನ ತಪಸ್ಸು, ಆಚರಣೆ, ಇಷ್ಟರಿಂದಲೇ ಬೆಳೆದವರಲ್ಲ. ಇವುಗಳ ಜೊತೆಗೆ ಗುರುಗಳ ಅನುಮತಿಯನ್ನು ಪಡೆದು ೧೨ ವರುಷಗಳಷ್ಟು ದೀರ್ಘ ಕಾಲ ಕಾಶಿಯನ್ನೊಳಗೊಂಡು ಕರ್ನಾಟಕದ ತೀರ್ಥ ಕ್ಷೇತ್ರಗಳೆಲ್ಲವನ್ನು ಸಂದರ್ಶಿಸಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಂಡು ಲೋಕಾನುಭವವನ್ನು ಪಡೆದು ಮಾಗಿದ ವ್ಯಕ್ತಿತ್ವವನ್ನು ಪಡೆದವರಾದರು. ಇಷ್ಟೆಲ್ಲ ತೀರ್ಥ ಯಾತ್ರೆಯನ್ನು ಅವರು ಹಿಂಡನಗಲಿದ ಗಜದಂತೆ ಏಕಾಂಗಿ  ಮಾಡಿದರು. ಆದ್ದರಿಂದಲೇ ಈ ಯಾತ್ರಾವಧಿ ಅವರ ಧ್ಯಾನ, ಇಷ್ಟಲಿಂಗಾನುಸಂಧಾನ ಹಾಗು ಅನುಭಾವಗಳು ಮಾಗಿ ಆಚರಣೆಗೆ ವಿಶೇಷವಾದ ಶಕ್ತಿಯನ್ನು ತುಂಬಿದಂತೆ ತೋರುತ್ತದೆ.

ಯಾತ್ರಾವಧಿಯಲ್ಲಿ ನಡೆದ ಅನೇಕ ಘಟನೆಗಳು ರೂಪುಗೊಳ್ಳುತ್ತಿದ್ದ ಅವರ ಮಹಾನ್ ವ್ಯಕ್ತಿತ್ವದ ಹಲವಾರು ಮುಖಗಳನ್ನು ವ್ಯಂಜಿಸುವಂತೆ ತೋರುತ್ತವೆ.

ಉದಾಹರಣೆಗೆ ಕೆಲವು ಸಂಗತಿಗಳನ್ನು ಗಮನಿಸಬಹುದು. ಸಪ್ಪಣ್ಣನವರು ಚಿತ್ರದುರ್ಗದ ಮಠದಲ್ಲಿ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಪರ ಮತೀಯನೊಬ್ಬನು ವಾದದಲ್ಲಿ ಇನ್ನೇನು ಜಯಗಳಿಸುತ್ತಿರುವ ನೆಂದಾಗ ತಾವೇ ವಾದಕ್ಕಿಳಿದು ಪ್ರತಿವಾದಿಯನ್ನು ಗೆದ್ದುದು ಅವರ ಶಾಸ್ತ್ರಜ್ಞಾನ ಖಚಿತತೆ ಹಾಗು ತರ್ಕ ಪರಿಣತಿಗೆ ದ್ಯೋತಕವಾಗಿದೆ. ಹುಬ್ಬಳ್ಳಿಯ ಮಠ ಹಾಗೂ ಅಲ್ಲಮ ಪ್ರಭು ಸಂಪ್ರದಾಯದ ಉರುವ ಕೊಂಡದ ಗವಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲೂ  ಸಪ್ಪಣ್ಣನವರು ವಿದ್ವತ್ತು ಆಚರಣೆ, ಸಂಗೀತ ಮತ್ತು ಸೃಜನಶೀಲ ಪ್ರತಿಭೆ ಇವುಗಳೆಲ್ಲದರಿಂದ ಎಲ್ಲರ ಮೆಚ್ಚುಗೆಗೂ ಗೌರವಕ್ಕೂ ಕಾರಣರಾದದ್ದು ಅವರಲ್ಲಿದ್ದ ವಿನಯದಿಂದ ಎಂಬುದನ್ನು ಮರೆಯಲಾಗದು; ಸಪ್ಪಣ್ಣನವರು ಕ್ರಾಂತಿಕಾರಿಗಳು, ಸುರಪುರ ರಾಜ್ಯದ ಮಂತ್ರಿ ಲಿಂಗಣ್ಣ ತಮ್ಮನ್ನು ಶಿವಪೂಜೆಗೆಂದು ಆಹ್ವಾನಿಸಿದಾಗ ಅದಕ್ಕೆ ಒಪ್ಪಿದ ಸಪ್ಪಣ್ಣನವರು ಸುರಪುರದ  ಹಾದಿಯಲ್ಲಿದ್ದಾಗ ಶಿವಪೂಜಾ ಸಮಯವಾಗಲು ಹತ್ತಿರದಲ್ಲಿದ್ದ ಬಾವಿಯಲ್ಲಿ ಮಿಂದು ಇಷ್ಟ ಲಿಂಗಾನುಸಂಧಾನಕ್ಕೆ ಕುಳಿತ ಶಿವಯೋಗಿ ಇವರು, ಇವರಿಗಾಗಿ. ಕಾದಿದ್ದ ಮಂತ್ರಿ ಇವರು ಊರ ಹೊರಗಿನ ಬಾವಿಯ ಬಳಿಯೇ ಪೂಜಾನಿಷ್ಟರಾಗಿ ಕುಳಿತಿರುವುದನ್ನು ಸುದ್ದಿಗಾರರಿಂದ ತಿಳಿದು ಓಡೋಡಿ ಬಂದು “ಬುದ್ದಿ ಇದು ಹೊಲೆಯರ ಬಾವಿ, ಇಲ್ಲಿಯೇ ನೀವು ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ ಪಾಪಿ ನಾನು, ನನ್ನನ್ನು ಕ್ಷಮಿಸಿ” ಎಂದಾಗ, ಸಪ್ಪಣ್ಣ ದಾಸಿಮಯ್ಯನ ವಚನವನ್ನುದ್ಧರಿಸಿ ಹೊಲೆ ಎಂಬುದು ಹುಟ್ಟಿನಿಂದ ಬರುವ ಜಾತಿಯಲ್ಲ ಎಂದು ವಿಶದಪಡಿಸಿದ ಸಂಪ್ರದಾಯದವರು. ಅಷ್ಟೇ ಅಲ್ಲ ಅವರೊಮ್ಮೆ  ಶಿವಪೂಜೆಗೆ ಹೋಗುವಾಗ ಹೊಸ್ತಿಲಿನ ಹೊರಗೆ ತಮ್ಮ ಪೂರ್ವಾಶ್ರಮದ ಅತ್ತಿಗೆ ರಜಸ್ವಲೆ ಎಂದು ಹಾಗೆ ಕುಳಿತಿರುವುದಾಗಿ ತಿಳಿದಾಗ ಆಕೆಯನ್ನು ಒಳಕ್ಕೆ ಬರಹೇಳು ಪ್ರಕೃತಿ ಸಹಜವಾದುದು ಸೂತಕವಲ್ಲ; ಅಲ್ಲದೆ ನಮ್ಮ ಶರಣರದು ಸೂತಕವಿಲ್ಲದ  ಸಮಾಜ; ಎಂದ ನಿಚ್ಚಳವಾದ ಅರಿವಿನ ಮಹಾನುಭಾವರು ಅವರು. ಅಷ್ಟೆ ಅಲ್ಲ   ಇವರ ಇಷ್ಟಲಿಂಗಾನುಸಂಧಾನದ ದಿವ್ಯಾನುಭವವನ್ನು ಕಂಡ ೭೦೦ ಜನದಷ್ಟು ಅನ್ಯಧರ್ಮಿಯರು. ನಮಗೂ ಇಷ್ಟಲಿಂಗ ದೀಕ್ಷೆಯನ್ನು ನೀಡಿ ಎಂದು ಕೇಳಿದಾಗ ಅವರು ನಿಜವಾಗಿಯೂ ದೀಕ್ಷೆಗರ್ಹರಾಗಿರುವುದನ್ನು ಗಮನಿಸಿ ತಮ್ಮ ಸಮಾಜದ ಅನೇಕರು ಪ್ರತಿಭಟಿಸುತ್ತಿದ್ದರೂ ಅದನ್ನು ಲಕ್ಷಕ್ಕೆ ತಂದುಕೊಳ್ಳದೇ ಅವರಿಗೆಲ್ಲರಿಗೂ ಲಿಂಗದೀಕ್ಷೆ ದೊರಕಲು ಕಾರಣರಾದವರು. ಅವರ ಬದುಕಿನಲ್ಲಿ ಇಂಥ ಅನೇಕ ಮಹತ್ತರ ಘಟನೆಗಳು ನಡೆದದ್ದರಿಂದ ತೋಪಿನ ಮಠದ ಷಡಕ್ಷರ ಶಿವಯೋಗಿಗಳು ಆಚರಣೆ ಎಂದರೆ ಸಪ್ಪಣ್ಣವರ ಆಚರಣೆ ಅಥಣಿಯಪ್ಪಗಳ ಆಚರಣೆ ಎಂದು ಉದ್ಧರಿಸುವ ಮಟ್ಟದ ವ್ಯಕ್ತಿತ್ವ ಸಪ್ಪಣ್ಣನವರದು. ಈ ಕಾರಣದಿಂದಾಗಿಯೇ ಸಪ್ಪಣ್ಣನವರ ಬದುಕನ್ನು ಕುರಿತು ಹಲವಾರು ಪವಾಡಗಳು ಹುಟ್ಟಿಕೊಂಡಿವೆ.

ಸಪ್ಪಣ್ಣನವರು ತೀರ್ಥಯಾತ್ರೆಯನ್ನು ಮುಗಿಸಿ ಬಂದಾಗ ಅವರ ಗುರುಗಳಾದ ಗುರುಸಿದ್ಧ ಸ್ವಾಮಿಗಳಿಗಾದ ಆನಂದ ಅಷ್ಟಿಷ್ಟಲ್ಲ. ಬೆಂಗಳೂರಿಗೆ ಬಂದ ಸ್ವಲ್ಪ ಅವಧಿಯಲ್ಲಿಯೇ ಗುರುಸಿದ್ಧಸ್ವಾಮಿಗಳು ಲಿಂಗೈಕ್ಯರಾಗಲು ಮಠದ ಚರಮೂರ್ತಿಗಳು ಹಾಗೂ ಮಠಕ್ಕೆ ಸಂಬಂಧಿಸಿದ ಅಭಿಮಾನಿ ಭಕ್ತರು ಸಪ್ಪಣ್ಣನವರೇ ಈ ಮಠಕ್ಕೆ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಬೇಕೆಂದು ಒತ್ತಾಯ ಮಾಡಿದಾಗ ಅದಕ್ಕೊಪ್ಪದೆ ಮಠದಲ್ಲಿದ್ದ ಚಿಕ್ಕ ಗುರುಸಿದ್ಧಸ್ವಾಮಿಗಳನ್ನೇ ಮಠಾಧ್ಯಕ್ಷರಾಗುವಂತೆ ಮಾಡಿ, ತಾವು ತಮ್ಮ ಎಲ್ಲ ಸಮಯವನ್ನು ಅಧ್ಯಯನ, ಪ್ರವಚನ ಹಾಗೂ ಕಾವ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡ ವೀರ ಶಿವಯೋಗಿಗಳು,

 ಸಪ್ಪಣ್ಣನವರು ತಾವು ಪಡೆದಿದ್ದ ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೆಂದು ಸಂಕಲ್ಪ ಮಾಡಿದವರು. ಹೀಗಾಗಿ ಅವರ ಅಪಾರವಾದ ಅಧ್ಯಯನದಿಂದ ಪ್ರಾಪ್ತವಾದ ವಿದ್ವತ್ತು, ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರ, ಸಂಗೀತ ಪ್ರೌಢಿಮೆ, ಸಹಜವಾಗಿ ಉಕ್ಕ ತೊಡಗಿದ್ದ ಸೃಜನಶೀಲ ಪ್ರತಿಭೆ ಇವುಗಳಿಂದಾಗಿ ಸಪ್ಪಣ್ಣನವರ ಪ್ರವಚನಗಳಿಗೆ ಹಾಗು ವಾಗ್ಮಿತೆಗೆ ಒಂದು ಹೊಸ ಆಯಾಮ ಪ್ರಾಪ್ತವಾಗಿತ್ತು. ಕೇಳುವವರನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ಶಕ್ತಿ ಅವರ ಮಾತಿಗಿತ್ತು. ಲೋಕದ ಜನರನ್ನು ಕುರಿತಾದ ಅಂತಃಕರಣದಿಂದಾಗಿ ಅವರ ನುಡಿಗಳಲ್ಲಿ ಆತ್ಮೀಯತೆ ತುಂಬಿ ತುಳುಕುತ್ತಿತ್ತು.  ವಿದ್ವಾಂಸರಾದರೂ ಅವರ ಸರಳತೆ ಹಾಗೂ ವಿನಯಶೀಲತೆ ಅವರ ವ್ಯಕ್ತಿತ್ವಕ್ಕೆ ಅಯಸ್ಕಾಂತ ಶಕ್ತಿಯನ್ನು ನೀಡಿತ್ತು.  ಇದರಿಂದಾಗಿ ತಮ್ಮ ಗುರುಗಳು ಆಶೆಪಟ್ಟಿದ್ದಂತೆ ತಿಪ್ಪಶಟ್ಟಿಮಠಕ್ಕೆ ಇವರು ಅಧ್ಯಕ್ಷ ರಾಗದಿದ್ದರೂ ಗುರುಗಳ ಸಂಕಲ್ಪ ಮಾತ್ರ ಹುಸಿಯಾಗಲಿಲ್ಲ.  ತಿಪ್ಪಶೆಟ್ಟಿ ಮಠದ ನೆರವು, ತಮ್ಮ ಪ್ರವಚನಕ್ಕೆ ಹಾಗೂ ಮಾರ್ಗದರ್ಶನಕ್ಕೆ ಬಂದು ತಮ್ಮ  ಅಭಿಮಾನಿಗಳೆನಿಸಿದ್ದ ಭಕ್ತರು ನೀಡಿದ ಕಾಣಿಕೆಗಳು ಮತ್ತೆ ಮೈಸೂರರಸರಲ್ಲಿ ಉನ್ನತಾಧಿಕಾರದಲ್ಲಿದ್ದ ನಾಯಕರು ಪುಕ್ಕಟೆಯಾಗಿ ಸರ್ಕಾರದಿಂದ ಕೊಡಿಸಿದ ನಿವೇಶನ ಇವುಗಳ ನೆರವಿನಿಂದ ಸಪ್ಪಣ್ಣನವರು ಸರ್ಪಭೂಷಣ ಮಠವನ್ನು ಕಟ್ಟಲು ಒಪ್ಪಬೇಕಾಯಿತು. ಮತ್ತೆ ಆ ಮಠ ರೂಪಗೊಂಡದ್ದು ಅವರ ಶಿಷ್ಯರೂ ಹಾಗೂ ಅವರ ಉತ್ತರಾಧಿಕಾರಿಗಳೂ ಆದ  ಫಾಲಲೋಚನ ಸ್ವಾಮಿಗಳಿಂದ, ಫಾಲಲೋಚನ ಸ್ವಾಮಿಗಳಂತು ಮಳೆ, ಗಾಳಿ, ಬಿಸಿಲು ಎನ್ನದೆ ಮಠದ ಮತ್ತು ಮಠದ ಆವರಣದಲ್ಲಿರುವ ಓಂಕಾರೇಶ್ವರ ದೇವಾಲಯದ ಗೋಪುರಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಟ್ಟರು. ಒಂದು ಮಧ್ಯಾಹ್ನ ಸಪ್ಪಣ್ಣನವರು ಇಲ್ಲೇನು ನಡೆಯುತ್ತಿದೆ ಎಂದು ನೋಡಿದರೆ, ಉರಿಬಿಸಿಲಿನಲ್ಲಿ ಫಾಲಲೋಚನ ಸ್ವಾಮಿಗಳು ಇನ್ನೇನು ಮುಗಿಯಲಿದ್ದ ಓಂಕಾರೇಶ್ವರ ದೇವಾಲಯದ ಗೋಪುರದ ಉಸ್ತುವಾರಿ ನೋಡುತ್ತಿದ್ದಾರೆ, ಇನ್ನೊಂದು ವಾರದಲ್ಲಿ ಮಠದ ಕಳಸವೇ ಕಳಚಿ ಬೀಳಲಿರುವಾಗ ಈ ಗೋಪುರಕ್ಕೇಕೆ ? ಇಷ್ಟು ಕಷ್ಟ ಪಡುತ್ತಿದ್ದೀರಿ ? ಎಂದು ತಮಗರಿಯದೆ ನುಡಿದುಬಿಟ್ಟರು. ಸಪ್ಪಣ್ಣನವರು ತಮ್ಮ ಸಾವನ್ನು ಮುಂಗಂಡ ಶಿವಯೋಗಿಗಳೇ ಇರಬೇಕು. ಇದಾದ ಒಂದು ವಾರದಲ್ಲಿ ಶಿವಪೂಜೆಗೆ ಕುಳಿತ ಸಪ್ಪಣ್ಣನವರು ಇಷ್ಟಲಿಂಗಾನುಸಂಧಾನಕ್ಕೆ ಕುಳಿತು ಶಿವಯೋಗ ವನ್ನು ಸಾಧಿಸಿದರು. ಮತ್ತೆ ಮೇಲೇಳಲೇ ಇಲ್ಲ. ಅಂಥ ಘನ ಮಹಿಮರು ಸಪ್ಪಣ್ಣನವರು.

 ಸಪ್ಪಣ್ಣನವರು ಬೇರಾವ ಸಾಹಿತ್ಯ ಕೃತಿಗಳನ್ನು ರಚಿಸದಿದ್ದರೂ ಅವರ ವ್ಯಕ್ತಿತ್ವದ ಮಹಿಮೆಯಿಂದಾಗಿಯೂ ನಡೆಸಿದ ಪ್ರವಚನಗಳು ಹಾಗೂ ಜನಕ್ಕೆ ನೀಡಿದ ಮಾರ್ಗದರ್ಶನಗಳಿಂದಾಗಿಯೂ ಜನರ ಹೃದಯದಲ್ಲಿ ನೆಲಸಿದ  ಶಿವಯೋಗಿಗಳಾಗಿದ್ದರು. ಅವರು ಕನ್ನಡ-ಸಂಸ್ಕೃತ ಎರಡರಲ್ಲಿಯೂ ಪ್ರತಿಭಾ ಸಂಪನ್ನರೂ, ಕಾವ್ಯ ರಚನಾ ಸಮರ್ಥರೂ ಆಗಿದ್ದರು. ಎರಡು ಸಂಸ್ಕೃತ ಕೃತಿಗಳನ್ನು, ಒಂದು ಕನ್ನಡ ಕೃತಿಯನ್ನು ನೀಡಿದ್ದಾರೆ.

“ಭುಜಂಗಮಾಲಾ ಶಿವಸಂಕೀರ್ತನಂ” ಎಂಬುದು ಅವರ ಮೊದಲನೆಯ ಸಂಸ್ಕೃತ ಕಾವ್ಯಕೃತಿ. ೩೧ ವೃತ್ತಗಳನ್ನು ಒಳಗೊಂಡ ಈ ಕೃತಿಯನ್ನು ಇವರು ಪಂಚ ಚಾಮರ ವೃತ್ತದಲ್ಲಿ ರಚಿಸಿದ್ದಾರೆ. ಪಂಚ ಚಾಮರ ವೃತ್ತ ಸಂಸ್ಕೃತದಲ್ಲಿ ಅದರ  ನಾದಲೋಲತೆಗಾಗಿ ತುಂಬ ಖ್ಯಾತವಾಗಿರುವ ವೃತ್ತ, ರಾವಣ ನಿಂದ ರಚಿತವಾಯಿತೆನ್ನಲಾದ ಶಿವತಾಂಡವ ಸ್ತೋತ್ರವು  ಇದೇ ಛಂದಸ್ಸಿನದೇ. ‘ಭುಜಂಗಮಾಲಾ ಶಿವಸಂಕೀರ್ತನಂʼಕೃತಿಯನ್ನು ಸಪ್ಪಣ್ಣನವರು,  ಇಷ್ಟಲಿಂಗಾನುಸಂಧಾನ ಸಮಯದಲ್ಲಿ ಹಾಡಿರಬೇಕು. ಅಲ್ಲದೆ ಇದು ಅವರ ಚೊಚ್ಚಲು ಕೃತಿಯೂ ಆಗಿರಬೇಕು. ಏಕೆಂದರೆ ಈ ಕೃತಿಯಲ್ಲೆಲ್ಲೂ ತಮ್ಮ ಗುರುಗಳಾದ ಗುರುಸಿದ್ಧ ಸ್ವಾಮಿಗಳ ಸ್ಮರಣೆ ಇಲ್ಲ. ಗ್ರಂಥಾರಂಭದಲ್ಲಿ ಬರುವ ಶ್ರೀ ಗುರುಚರಣಂ ನಮಾಮಿ ಎಂಬಲ್ಲಿ ತಮ್ಮ ಗುರುಗಳನ್ನು ಕವಿ ಸೂಚ್ಯವಾಗಿ ಸ್ಮರಿಸಿರುವಂತೆ ತೋರುತ್ತದೆ. ಈ ಕೃತಿ ದೊರೆತದ್ದು ಒಂದು ಆಕಸ್ಮಿಕವೇ. ಬಹುಶಃ ಶಿವಪೂಜಾ ಸಮಯದಲ್ಲಿ ತಮಗೆ ತಾವೇ ಹಾಡಿಕೊಳ್ಳುತ್ತಿದ್ದ ಈ ಸಂಕೀರ್ತನೆಯ ಹಾಡುಗಳನ್ನು   ಕೇಳಿ ಅವರ ಸಮೀಪದ ಭಕ್ತರೊಬ್ಬರಾದ ಲಿಂ|| ಕಂಬಿ ಸಿದ್ದರಾಮಣ್ಣನವರು ಕಾಗದದ ಪ್ರತಿಯೊಂದರಲ್ಲಿ ಈ ಪದ್ಯಗಳನ್ನು ನೆನಪಿನಿಂದ ಬರೆದಿಟ್ಟುಕೊಂಡಿದ್ದರು. ಅದನ್ನು ಅವರು ವಿದ್ವಾನ್ ಬಸವರಾಜಯ್ಯನವರಿಗೆ ಪ್ರಕಟಣೆಗೆಂದು ನೀಡಿ ಬೇರಾವ ಪ್ರತಿಗಳು ಸಿಕ್ಕದ ಅದೊಂದೇ ಪ್ರತಿಯ ನೆರವಿನಿಂದ ೪೬ ವರ್ಷಗಳಾದ ಮೇಲೆ ಅಂದರೆ ೧೯೮೭ರಲ್ಲಿ ಇದನ್ನು ಪ್ರಕಟಿಸಲಾಯಿತು. ಈ ಕಾರಣದಿಂದ ಈ ಕೃತಿಯಲ್ಲಿ ಹಲವಾರು ಭಾಷಾದೋಷಗಳು ಉಳಿದಿವೆ. ಭುಜಂಗಮಾಲಾ ಶಿವಸಂಕೀರ್ತನವು ಶಿವಯೋಗಿಗಳ ಶಿವಸ್ತೋತ್ರವಾಗಿದ್ದು  ನಾದಲೋಲತೆಯಿಂದ ಕೂಡಿ ಭಕ್ತಿಯಿಂದ ಹಾಡಿಕೊಳ್ಳಲು ಅನುಕೂಲಕರವಾಗಿದೆ. ಈ ಕೃತಿಯಲ್ಲಿ ನಾದಲೋಲತೆ ಮತ್ತು ಭಕ್ತಿ  ಇದ್ದಂತೆ ಕಾವ್ಯದ ಗುಣ ಕಡಿಮೆಯಾಗಿದೆ.

 ಅವರ ಎರಡನೆಯ ಕೃತಿ ‘ಜ್ಞಾನಶತಕಂ’ ಇದು ಸಂಸ್ಕೃತ ಕೃತಿ, ಶಿವಯೋಗಿಗಳೇ ಸೂಚಿಸುವಂತೆ ಪ್ರಸ್ಥಾನತ್ರಯಗಳ ಸಮಗ್ರ ಸಾರವನ್ನು ಒಳಗೊಂಡಿದೆ. ಈ ಕೃತಿಯ ಮೊದಲನೆಯ ವೃತ್ತ ತಮ್ಮ ಗುರುಗಳಾದ ಗುರುಸಿದ್ಧರ ಧ್ಯಾನದಲ್ಲಿದೆ.

ಗುರು ಸಿದ್ಧ ಗುರುಮಿದಾನೀಂ

ಕಲಯೇ ನಮದುದಯ ವಿಂಧ್ಯ ಘಟಯೋನಿಮ್

ವೃತಕೃತಕರಣಗ್ಲಾನಿಂ

ಚುಳುಕಿತ ವೇದಾಂತ ನಿಮ್ಮಘ್ನಾನಿಮ್

ಈ ವೃತ್ತದಲ್ಲಿ ತಮ್ಮ ಗುರುಗಳನ್ನು ಧ್ಯಾನಿಸಿರುವುದಷ್ಟೇ ; ಅವರ ವೇದಾಂತ ಜ್ಞಾನಮೇರುತ್ವವನ್ನೂ ಧ್ವನಿಸಿದ್ದಾರೆ. ಎರಡು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಗ್ರಂಥದಾಶಯವನ್ನು ಅವರೇ ಸೂಚಿಸಿರುವುದು ಹೀಗೆ :

ಪ್ರಸ್ಥಾನತ್ರಯಕಾಂತಾರ ಪ್ರವೇಶಾನುಷ್ಣಚೇತಸಃ

ಮುಮುಕ್ಷೋಸುಖಮುಕ್ತ್ಯರ್ಥಮಿದಂ ಶತಕಮುಚ್ಯತೇ.

(ಪ್ರಸ್ಥಾನತ್ರಯ ಅರಣ್ಯದಲ್ಲಿ ಹೋಗಲು ಮಂದ ಬುದ್ದಿ ಯುಳ್ಳ ಮೋಕ್ಷಗಾಮಿಗೆ ಸಂಸಾರದಿಂದ ಸುಲಭವಾಗಿ   ಬಿಡುಗಡೆ ದೊರೆಯುವುದಕ್ಕಾಗಿ ಈ ಜ್ಞಾನ ಶತಕವು ಹೇಳಲ್ಪಟ್ಟಿದೆ.)

 ಈ ಗ್ರಂಥ ರಚನೆಯ ಉದ್ದೇಶ ಮುಮುಕ್ಷುಸುಖಾರ್ಥವಾಗಿ ಪ್ರಸ್ಥಾನತ್ರಯ ಸಾರವನ್ನು ನಿರೂಪಿಸುವುದಾದರೂ ಸಪ್ಪಣ್ಣನವರು ಕವಿಗಳೂ ಆದ್ದರಿಂದ ಅಲ್ಲಲ್ಲಿ ಕವಿತೆಯ ಮಿಂಚೂ ಆಡುತ್ತದೆ.

 ಅವರ ಪ್ರಧಾನವಾದ ಸಾಹಿತ್ಯ ಕೃತಿಯೆಂದರೆ ಕೈವಲ್ಯ ಕಲ್ಪವಲ್ಲರಿಯೇ.

 ಸಪ್ಪಣ್ಣನವರೇ ತಮ್ಮ ಈ ಕೃತಿಯನ್ನು ನಿಜಗುಣ ಕೈವಲ್ಯ ಪದ್ಧತಿ ಕೃತಿಗೆ ಹಬ್ಬಿಸಿದ ಕಲ್ಪವಲ್ಲರಿ ಎಂದು ಕರೆದುಕೊಂಡರೆಂದು ಹೇಳಲಾಗಿದೆ. ನಿಜವಾಗಿಯೂ ಇದು ಕಲ್ಪವೃಕ್ಷದ ಬಳ್ಳಿಯೇ. ಇದನ್ನವರು ಬರೆದದ್ದು, ಜನರಿಗೆ ತಿಳಿಯಲೆಂದು ಕನ್ನಡದಲ್ಲಿ. ಇಲ್ಲಿಯ ಹಾಡುಗಳು ಮಠಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಭಾಗಗಳ ಜನರ ನಾಲಗೆಯಲ್ಲಿ ನರ್ತಿಸುತ್ತಿರುವುದಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ಕಡೆ ಇವುಗಳ ಹಸ್ತಪ್ರತಿಗಳು ದೊರೆಯುವುದು ಇದರ ಜನಪ್ರಿಯತೆಗೆ ದ್ಯೋತವಾಗಿದೆ. ಈ ಹಾಡುಗಳ ಅಂಕಿತ ಗುರುಸಿದ್ದ’ ಎಂಬುದಾಗಿದೆ.

ಕೈವಲ್ಯಕಲ್ಪವಲ್ಲರಿ’ಯು ನಿಜಗುಣರ ಕೈವಲ್ಯ ಪದ್ಧತಿ ಯಂತೆಯೇ ಶಿವಕಾರುಣ್ಯ, ಪ್ರಾರ್ಥನಾ ಸ್ಥಲ, ಜೀವ ಸಂಶೋಧನ ಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ ಹಾಗೂ ಜ್ಞಾನ ಪ್ರತಿಪಾದನಗಳೆಂಬ ಐದು  ಸ್ಥಲಗಳನ್ನೊಳಗೊಂಡಿದೆ. ಪ್ರತಿಯೊಂದು ಸ್ಥಲದಲ್ಲಿ ಕ್ರಮವಾಗಿ ೨೬, ೨೧, ೨೫, ೨೯ ಮತ್ತು ೭೬ ಹಾಡುಗಳನ್ನೊಳಗೊಂಡಿದೆ. ಸಪ್ಪಣ್ಣನವರ ವಚನಗಳು, ಸ್ವರ ವಚನಗಳು, ಅನುಭವಸಾರ, ಅಧ್ಯಾತ್ಮಿಕ ಸುಖಪ್ರಬೋಧ ಪ್ರಕರಣ ಎಂದೆಲ್ಲ ಕರೆಯುವ ಈ ಹಾಡುಗಳ ಕೃತಿ ಈಗ ಕೈವಲ್ಯ ಕಲ್ಪವಲ್ಲರಿಯೆಂದೇ ಪ್ರಸಿದ್ಧವಾಗಿದೆ. ಪ್ರತಿಯೊಂದು ಹಾಡಿಗೂ ರಾಗ ಸಂಯೋಜನೆಯನ್ನೂ ಶಿವಯೋಗಿಗಳು ಯೋಚಿಸಿ ಸಾಹಿತ್ಯ ಸಂಗೀತ ಕ್ಷೇತ್ರಗಳೆರಡಕ್ಕೂ ಅಪೂರ್ವಸೇವೆ ಸಲ್ಲಿಸಿದ್ದಾರೆ, ಹಾಡುಗಳ ಜನಪ್ರಿಯತೆ ಎಷ್ಟು ಪ್ರಖರವೆಂದರೆ “ಅನುಭವದಡಿಗೆಯ ಮಾಡಿ’ ಎಂಬ ಹಾಡು ಅಂಕಿತ ಬದಲಾವಣೆ ಮಾತ್ರದಿಂದ ಪುರಂದರರ ಹಾಡುಗಳಲ್ಲಿ ಸೇರಿಹೋಗಿದೆ.

ಜನಪದ ಗೀತೆಗಳ ಒಗಟು, ವಚನಗಳ ಬೆಡಗು, ತತ್ವ ಪದಗಳ ಅನುಭಾವ ಇವುಗಳು ಮೇಲೈಸಿರುವ ಸಪ್ಪಣ್ಣನವರ ಪ್ರತಿಭೆ ಇಲ್ಲಿ ಉಪಮೆ, ರೂಪಕ ದೃಷ್ಟಾಂತ ಸಂಕೇತಗಳನ್ನು ಬಳಸಿಕೊಂಡಿದೆ. ವಚನ ಹಾಗೂ ಪದಗಳಿಂದಲೂ ಪ್ರಭಾವಿತವಾಗಿದೆ. ಕಾಮಾಗ್ನಿ, ಅಶ್ರುಸೃಷ್ಟಿ ಪರಿಭವಾಂಭೋನಿಯಂಥ ರೂಪಕಗಳು; ನೆರೆದ ಸಂತೆಯ ಪರಿಯು, ನೀರ-ಗುರುಳೆಯ ತೆರೆದಿ, ಎಣ್ಣೆಯಿರುವನಕ ದೀವಿಗೆಯುರಿಯುವವೋಲು, ವ್ರಣಕೆ ಮುಸುರುವ ನೊಣಗಳಂತೆ ಪಸಿಯ ಕಾಯ್ ಲವಣವುಂಬಂತೆ, ಕೆಸರಿನೊಳಗಾಡುತಿಹ ಕುಂಬಾರ ಹುಳುವಿನಂತೆ, ಒಂದು ಮರದಖಿಳಪಕ್ಷಿಗಳು ಸಂಜೆಯೊಳಗೊಂದಿ ಬೆಳಗಿನೊಳಗಲಿ ಹೋಗುವಂತೆ, ಎಳೆಯ ಶಿಶುವಿನ ತಲೆಯ ಮೇಲೆ ಮಂದರಗಿರಿಯನಿಳುಹಿದಂತೆ, ನಾನಾಗೊವುಗಳ ಹಾಲೊಂದೆ ರೂಪಾದಂತೆ, ಕುರಿಯ ಹೊತ್ತದನು ಮರೆದು ಸುತ್ತಲರಸುವ ಕುರುಬನಂದದೂಳು, ಕುರುಡರಾನೆಯ ಮುಟ್ಟಿ ಮನಕೆ ಬಂದಂದದಿಂದರಿವಂತೆ, ಎಳೆಗರುವನಗಲ್ದು ಮೇಯಲು ಪೋದ ಹಸುವು ತನ್ನೊಳಗದನೆ ನೆನೆದು ಮೇವನೆ ಮರವಂತ- ಇಂಥ ಉಪಮೆಗಳಿವೆ. ದೃಷ್ಟಾಂತಗಳಂತೂ  ವಿಪುಲ. ಕಾಯಕಾಂತಾರವ ಹೊಕ್ಕು ಬೇಂಟೆಯನಾಡಿ, ಅನುಭವದಡಿಗೆಯ ಮಾಡಿ, ಮನವೆಂಬ ಮರ್ಕಟ ಇಂಥ ಹಾಡುಗಳು ಶಕ್ತಿಯುತ ವಾಗುವುದೇ ಕಣ್ಣಿಗೆ ಕಟ್ಟುವಂತೆ ಮಾಡುವ ಆ ಚಿತ್ರಗಳಿಂದ. ತೇರು ಸಾಗಿತು ಹಾಡಂತು ನಮ್ಮ ಕಣ್ಣ ಮುಂದೆಯೇ ದೇಹವೆಂಬ ತೇರು ಹರಿದಾಡುವ ವಿಸ್ಮಯಾನುಭವವನ್ನು ಮೂಡಿಸುತ್ತದೆ. ಸಪ್ಪಣ್ಣನವರದನ್ನು ಆರಂಭಿಸಿದ ರೀತಿ ಅತ್ಯಂತ ಆಕರ್ಷಕವಾದದ್ದು;ಮುಕ್ತಿ ಕನ್ಯೆಯರನ್ನೇ ತೇರು ಸಾಗಿತು  ನೋಡಬನ್ನಿರೇ’ ಎಂದು ಕರೆಯುವ ಆತ್ಮೀಯತೆಯ ದನಿ ಇಲ್ಲಿಯ ಅನುಭಾವವನ್ನು ಹೃದಯದಾಳಕ್ಕೆ ಇಳಿಸಿಬಿಡುತ್ತದೆ.

 ತತ್ವ ವಿಚಾರಕ್ಕೆ ಬರುತ್ತಿದ್ದಂತೆ ಸಪ್ಪಣ್ಣನವರ ವಾಣಿಗೆ ಉತ್ಸಾಹವೇರುತ್ತದೆ. ಜೀವನಾನುಭವ ಹಾಗೂ ಯೌಗಿಕಾನು ಭವಗಳು ಮೇಲೈಸಿ ಕಾವ್ಯ ಗೇಯತೆಗಳು ಒಂದರೊಳಗೊಂದು ಜೋಡಿಸಿ ನಡೆಯುತ್ತವೆ,

ತತ್ವ ನಿರೂಪಣೆ ಮಾಡುವಾಗ ಸಪ್ಪಣ್ಣನವರು ಬಳಸಿಕೊಳ್ಳುವ ತಂತ್ರ ಸರಳವೂ ನೇರವೂ ಚಿತ್ರಮಯವೂ ಆದದ್ದು. ಇಲ್ಲಿ ಕಾಯವೇ ಕಾಂತಾರವಾಗುತ್ತದೆ. ಅಲ್ಲಿ ತುಡುಗು ಮಾಡುವ ಕೋಣ ಹುಲಿ ಕರಡಿ ಆನೆಗಳು ಮತ್ತೇನೂ ಅಲ್ಲ, ಮನಸ್ಸನ್ನು ಕಾಡುವ ದುರ್ಗುಣಗಳು. ಒಂದೊಂದು ದುರ್ಗುಣಕ್ಕೊಂದು ಪ್ರಾಣಿರೂಪವನ್ನಿತ್ತು ಜ್ಞಾನದ ಬಾಣವನ್ನು ಸದ್ಭಕ್ತಿಯೆಂಬ ಬಿಲ್ಲಿಗೆ ಹೂಡಿ ಗೆಲ್ಲಬೇಕೆಂದು ನಿರೂಪಿಸುತ್ತದೆ. ಒಂದರ್ಥದಲ್ಲಿ  ಅರೂಪವೆನ್ನಬಹುದಾದ ತತ್ತ್ವವನ್ನು ಕಣ್ಣುಮುಂದೆ ಚಿತ್ರಮಯವಾಗುವಂತೆ  ಮಾಡುವ ಈ ರೀತಿಯ ಈ ಹಾಡುಗಳನ್ನು ಹೃದ್ಯವಾಗುವಂತೆ ಯೂ ಜನಪ್ರಿಯವಾಗುವಂತೆಯೂ ಮಾಡಿರುವದು .ಪರತತ್ತ್ವ ಸಾಧನೆಯನ್ನಿವರು ರೂಪಿಸುವ ರೀತಿ ಅನ್ಯಾದೃಶವಾದ್ದು. ಹೃದಯವೆಂಬ ಹೊಲದಲ್ಲಿ ಪರತತ್ತ್ವದ ಬೆಳೆ ಬೆಳೆಯಬೇಕೆನ್ನುತ್ತಾರೆ, ಇಲ್ಲಿಯ ಹೂಲವನ್ನುಳುವ ಎತ್ತುಗಳು ಶಮೆದಮೆಗಳು, ಸಮತೆಯೆಂಬ ಭಾವವೇ ಗುರುವಿನುಪದೇಶವೆಂಬ ಬೀಜ ಬೆಳೆಯಲು ಹಾಕುವ ಗೊಬ್ಬರ. ಇಷ್ಟಾದರೆ ಸಾಲದು ಮಳೆಯ ನೆರವು ಬೇಕೆಂದು ನೆನಪಿಸಿ ದೈವ ಕೃಪೆಯ ಅಗತ್ಯದತ್ತ ನಮ್ಮ ಗಮನ ಸಳೆದು ದುರಿತ ದುರ್ಗುಣಗಳ ಕಳೆಯನ್ನು ಕಿತ್ತರೆ  ಪ್ರಾಪ್ತವಾಗುವ ಬೆಳೆಯೇ ಸ್ಥಿರವಾದ ಮುಕ್ತಿ ಎನ್ನುವ ಧಾನ್ಯವೆಂದು ಹೇಳಿ ಈ ಹಾಡಿಗೆ ಒಂದು ತಿರುವನ್ನು ಕೊನೆಗೆ ನೀಡುತ್ತಾರೆ. ಈ ಧಾನ್ಯವನ್ನುಂಡು ಪ್ರಾಪ್ತವಾದ ಪರಮಾನಂದದಿಂದ ಸಂಸಾರಬಂಧನವೆಂಬ ಬರಗಾಲವನ್ನು ದೂರ ಅಟ್ಟಿ ಎಂದು ನಾಟಕೀಯಗೊಳಿಸುತ್ತಾರೆ.

ಡಾ. ರಂ. ಶ್ರೀ ಮುಗಳಿಯವರು ನಿಜಗುಣರ ಬಗ್ಗೆ ಬರೆಯುತ್ತ ಸಪ್ಪಣ್ಣನವರನ್ನು ನೆನಪು ಮಾಡಿಕೊಂಡು ‘ಸರ್ಪಭೂಷಣ ಇಲ್ಲವೆ ಸಪ್ಪಣ್ಣನು ಅದೇ ಬಗೆಯ ಉದಾತ್ತ ಮನೋಧರ್ಮ ಮತ್ತು ಅನುಭಾವವುಳ್ಳ ಹಾಡುಗಾರನು’ ಎನ್ನುತ್ತಾರೆ. ‘ಕೈವಲ್ಯ ಕಲ್ಪವಲ್ಲರಿ ಕನ್ನಡಿಗರು ಸರ್ಪಭೂಷಣರಿಂದ ಪಡೆದ ಅನುಭವದ ಅಕ್ಷಯ ಭಂಡಾರ’ ಎಂದಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕರು, ಶ್ರೀ ನಿಜಗುಣ ಶಿವಯೋಗಿಗಳೂ ಸರ್ಪಭೂಷಣ ಶಿವಯೋಗಿಗಳೂ ಧ್ವನಿ ಪ್ರತಿಧ್ವನಿಗಳಂತಿದ್ದು ಸಮಾನಸ್ಕಂದರಾಗಿರುವರು’ ಎಂಬ ಬಸವರಾಜಯ್ಯನವರ ಅಭಿಪ್ರಾಯ ವಿರೋಧಾಭಾಸದಿಂದ ಕೂಡಿದೆ, ಸಮಾನ ಸ್ಕಂದರಂದು ಕೊನೆಯಲ್ಲಿ ಹೇಳಿದ್ದರೂ ಅವರು ‘ಧ್ವನಿ ಪ್ರತಿಧ್ವನಿ ಗಳತಿಂದ್ದು ಎಂದಿರುವುದು. ಸಪ್ಪಣ್ಣನವರದು ಪ್ರತಿಧ್ವನಿಯೆಂಬರ್ಥ ಮೂಡಿಸಿಬಿಡುತ್ತದೆ. ಇದನ್ನು  ದೃಷ್ಟಿಯಲ್ಲಿಟ್ಟುಕೊಂಡೇ….. “ಸಪ್ಪಣ್ಣಾರ್ಯರು ಪ್ರತಿಭಾವಂತರಾದ ಕವಿಗಳಾದುದರಿಂದ ಅವರ ಕೈವಲ್ಯಕಲ್ಪವಲ್ಲರಿ ಕೈವಲ್ಯ ಪದ್ಧತಿಯ ಬರಿಯ ಅನುಕರಣ ಅಥವಾ ಶುಷ್ಕಾನುವಾದವೆಂದೆನಿಸುವುದಿಲ್ಲ” ಎಂದು ಬಸವನಾಳರು

ಸರಿಯಾಗಿ ಗುರುತಿಸಿದ್ದಾರೆ. ಈ ಗ್ರಂಥದಲ್ಲಿ ನಾಲ್ವತ್ತರ ಮೇಲ್ಪಟ್ಟು ಭಿನ್ನರಾಗಗಳನ್ನೂ ಅವುಗಳ ಅವಾಂತರ ಪ್ರಕಾರಗಳನ್ನೂ ಬಳಸಿದ್ದಾರೆ’ ಎಂದು ಹೇಳಿ ಒಟ್ಟಿನಲ್ಲಿ ಕೈವಲ್ಯ ಕಲ್ಪವಲ್ಲರಿ ಸಂಗೀತಕ್ಕಾಗಿ ರಚಿಸಿದ ಸಾಹಿತ್ಯವಾದರೂ ಇದರಲ್ಲಿ ಉಚ್ಚ ಸಾಹಿತ್ಯದ ಯಾವ ಮುಖ್ಯ ಲಕ್ಷಣಕ್ಕೂ ಚ್ಯುತಿ ಬಂದಿಲ್ಲವೆಂದೇ ಹೇಳಬಹುದು’ ಎಂದಿದ್ದಾರೆ. ಇಂದಿಗೂ ಕಲ್ಪವಲ್ಲರಿಯ ಸಂಗೀತ ಮೌಲ್ಯದ ಬಗ್ಗೆ ಆಳವಾದ ಅಧ್ಯಯನ ನಡೆಯದಿರುವುದು ದುರ್ದೆವದ ಸಂಗತಿಯಾಗಿದೆ. ಈ ವಿಷಯ ಇರಲಿ, ಸಪ್ಪಣ್ಣನ ವರು ಮತ್ತು ನಿಜಗುಣರ ಪ್ರತಿಭೆ ಸಂಬಂಧದ ಬಗ್ಗೆ ಹುಟ್ಟಿಕೊಂಡ ನಂಬಿಕೆಯನ್ನು ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಹೀಗೆ ಉಲ್ಲೇಖಿಸಿದ್ದಾರೆ. “ಆರು ಶಾಸ್ತ್ರ ಬರೆದಿಟ್ಟು ಹೋದರೂ ಇನ್ನೂ ಕೂಡ ಜ್ಞಾನ ಅದರಲ್ಲಿ ಪೂರ್ಣವಾಗಿಲ್ಲವೆಂದು ಆ ನಿಜಗುಣಪ್ಪನವರೇ ಮತ್ತೆ ಸಪ್ಪಣ್ಣನವರಾಗಿ ಅವತರಿಸಿದ್ದಾರೆ.”

ಹನ್ನೆರಡು ವರ್ಷಗಳ ಅವರ ತೀರ್ಥಯಾತ್ರೆ ಹಾಗೂ ಮಠಗಳ ಯಾತ್ರೆಯಲ್ಲಿ ಅವರು ಕಲಿತದ್ದು ತಮ್ಮ ಗುರುಗಳಾದ ಗುರುಸಿದ್ಧರಲ್ಲಿ ಕಲಿತುದಕ್ಕಿಂತಲೂ ಹೆಚ್ಚೆಂದು ಹೇಳಬೇಕು. ಮಠಗಳಲ್ಲಿ ನಡೆಯುತ್ತಿದ್ದ ಶಿವಾನುಭಾವಗೋಷ್ಠಿಗಳಲ್ಲಿ ಸಪ್ಪಣ್ಣನವರು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಏಕಂದರೆ ಜ್ಞಾನವೆಂಬುದು ಎಲ್ಲ ದಿಕ್ಕಿನಿಂದಲೂ ಹರಿದು ಬರುತ್ತದೆಂಬುದನ್ನು ಅವರು ಚೆನ್ನಾಗಿ ಮನಗಂಡಿದ್ದರು. ಆದರೆ ಇವರ ಕಲಿಯುವ ಉತ್ಸುಕತೆ ಜೊತೆಗೆ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತಿತ್ತು. ಅಂಥ ಸಂದರ್ಭಗಳು ಸಪ್ಪಣ್ಣ ನವರಿಗೆ ಮುಜಗರವುಂಟುಮಾಡಿದರೂ ಅವರ ಪ್ರತಿಭೆ ಹಾಗೂ ವ್ಯಕ್ತಿತ್ವ ಪ್ರಕಟವಾಗಲು ಕಾರಣವಾದದ್ದು ಮಾತ್ರ ಯೋಗಾಯೋಗ, ವ್ಯಾಕರಣ, ತರ್ಕ, ಛಂದಸ್ಸು, ವೇದೋಪ ನಿಷತ್ತುಗಳು, ಪುರಾಣ ಹಾಗೂ ಕಾವ್ಯಗಳ ಅಪಾರವಾದ ಜ್ಞಾನ ಅವರಲ್ಲಿ ಮೂಡಿಸಿದ್ದ ವಿನಯದಿಂದಾಗಿ ಎಂಥವರ ಮನಸ್ಸನ್ನಾದರೂ ಆಕರ್ಷಿಸುತ್ತಿತ್ತು. ಜೊತೆಗೆ ಅವರಲ್ಲಿದ್ದ ಸೃಜನಶೀಲ ಪ್ರತಿಭೆಗೆ ಸಂಗೀತ ಜ್ಞಾನವೂ ನೇರವಾಗಿ ಅವರ ವಾಗ್ಮಿತೆಗೆ ಮಂತ್ರಗಾರಿಕೆ ಪ್ರಾಪ್ತವಾಗಿತ್ತು ಇವೆಲ್ಲಕ್ಕಿಂತಲೂ ಪ್ರಧಾನವಾದುದು ಇಷ್ಟಲಿಂಗಾನು ಸಂಧಾನದಿಂದ ಪ್ರಾಪ್ತವಾಗಿದ್ದ ಶಿವಯೋಗ ಸಿದ್ಧಿ, ಪ್ರವಾಸ ಕಾಲದಲ್ಲಿ ಕನಿಷ್ಠ ಮೂರು ಮಠಗಳ ಅಧ್ಯಕ್ಷತೆ ವಹಿಸಿಕೊಳ್ಳುವ ಅಹ್ವಾನ ಬಂದರೂ ಅವುಗಳತ್ತ  ಲಕ್ಷವನ್ನೇ ನೀಡದ ವೀರವೀರಕ್ತಿ, ಅಷ್ಟೇ ಏನು, ಸ್ವತಃ ಗುರುಸಿದ್ಧರ ಅನಂತರ ಆ ಪೀಠಕ್ಕೆ ಅಧ್ಯಕ್ಷರಾಗಬೇಕೆಂದು ಹರಗುರು ಚರಮೂರ್ತಿಗಳು ಹಾಗೂ ಭಕ್ತಾದಿಗಳು ತೀವ್ರವಾದ ಒತ್ತಾಯ ಮಾಡಿದರೂ ಅದನ್ನೊಲ್ಲದ ತಮ್ಮ ಸಹಪಾಠಿಗಳಾಗಿದ್ದ ಚಿಕ್ಕಗುರುಸಿದ್ಧಸ್ವಾಮಿಗಳನ್ನೇ ಅಧ್ಯಕ್ಷರನ್ನಾಗಿಸಿದ ಇವರ ವಿರತಿ ಸಿದ್ದಿ ಅದ್ಭುತ, ಮಂತ್ರಮುಗ್ಧರನ್ನಾಗಿ ಮಾಡಬಲ್ಲ ಪ್ರವಚನ ಶಕ್ತಿ ಅದ್ಭುತವಾದ ಸಂಗೀತ ಶಕ್ತಿ, ವಿನಯ ವಿದ್ವತ್ತುಗಳು ಶಿವಯೋಗ-ಇವುಗಳು ಅವರ ವ್ಯಕ್ತಿತ್ವಕ್ಕೊಂದು ಪ್ರಭಾವಲಯವನ್ನು  ನಿರ್ಮಿಸಿದ್ದವು. ಅದರಿಂದಾಗಿ ಬೆಂಗಳೂರಿನಲ್ಲಿ ಅವರಿದ್ದ ಜಾಗಕ್ಕೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತಾದಿಗಳೂ ಹರಗುರು ಚರಮೂರ್ತಿಗಳು  ಬರತೊಡಗಿದರು. ಧಾರವಾಡ,ಬಿಜಾಪುರ, ಮತ್ತು ಬಳ್ಳಾರಿ ಜಿಲ್ಲೆಗಳು ಹಾಗೂ ರಾಯಚೂರ ಆದವಾನಿಗಳ ಕಡೆಯಿಂದ ಭಕ್ತಾದಿಗಳೂ ಚಿತ್ರದುರ್ಗ, ಶಿವಮೊಗ್ಗ, ಮೈಸುರು,ಜಿಲ್ಲೆಗಳಿಂದ ಹರಗುರುಚರಮೂರ್ತಿಗಳೂ ಪಟ್ಟ ಚರಾಧಿಕಾರಿಗಳೂ ದರ್ಶನಾಶೀರ್ವಾದಗಳಿಗಾಗಿ ಬರತೊಡಗಿದರು ಸಪ್ಪಣ್ಣನವರಿದ್ದ ತಿಪ್ಪಶೆಟ್ಟಿ ಮಠವೀಗ ಇವರಿಂದಾಗಿ ಒಂದು ಮಹತ್ವದ ಧರ್ಮ ಮತ್ತು ಸಂಸ್ಕೃತಿಗಳ ಕೇಂದ್ರವಾಗಿ ಅಲ್ಲಿನ  ಮಠಾದಿಪತಿಗಳಾಗಿದ್ದ ಚಿಕ್ಕ ಗುರುಸಿದ್ದಸ್ವಾಮಿಗಳಿಗೆ  ಮುಜುಗರವಾಗಬಹುದೆಂದು  ಭಕ್ತಾದಿಗಳ ಒತ್ತಾಯದಿಂದ ಬೇರೆ ಮಠವನ್ನೆ ಕಲ್ಪಿಸಬೇಕೆಂದೆ ವಿಚಾರ  ಬಂದಷ್ಟೇ ಅಲ್ಲ ಅಂದಿನ ಸರ್ಕಾರದಿಂದ ಪುಕ್ಕಟೆಯಾಗಿ ಜವೀನನ್ನು ಪಡೆಯುವದು ಕಷ್ಟವಾಗಲಿಲ್ಲ.ಈ ವಿಷಯದಲ್ಲಿ ಅಂದು ಉನ್ನತಾಧಿಕಾರಿಗಳಾಗಿದ್ದ ತೋಪಖಾನೆ ಕೃಷ್ಣರಾಯ(ದಿವಾನ್‌ ಕೃಷ್ಣಪ್ಪನಾಯಕ)ರು ವಹಿಸಿದ ಪಾತ್ರ ಸಾಮಾನ್ಯವಲ್ಲ.ಭಕ್ತಾದಿಗಳು ಚಕ್ಕ ಗುರುಸಿದ್ದಸ್ವಾಮಿಗಳು ನೀಡಿದ ಆರ್ಥಿಕ ನೆರವು ಕೂಡಿ ಬಂದರೂ ಮಠದ ನಿರ್ಮಾಣದ ಜವಾಬ್ದಾರಿ ಮತ್ತೆ ಇವರ ಅಭಿಮಾನದ ಶಿಷ್ಯ ಫಾಲಲೋಚನರ ಮೇಲೆಯೇ ಬಿದ್ದಿತು.ಅಂಥ ಸರ್ಪಭೂಷಣ ಶಿವಯೋಗಿಗಳ ಶಿಷ್ಯರು ಎಷ್ಟು ಎನ್ನುವ ವಿವರವಾದ ದಾಖಲೆಯಿಲ್ಲದಿದ್ದರು ಫಾಲಲೋಚನರು  ಅವರ ಅಭಿಮಾನದ ಶಿಷ್ಯರೂ ಹಾಗೂ ಅನತಂರದ ಪೀಠಾಧಿಕಾರಿಗಳೂ ಆದರು, ಮಠಾಧೀಶರಾದ ಪ್ರಭುಸ್ವಾಮಿಗಳಂತೂ ಸಹಪಾಠಿಗಳಾದರೂ ಸಪ್ಪಣ್ಣನವರ ವ್ಯಕ್ತಿತ್ವದ ಮಹಿಮೆಗೆ ಮಾರು ಹೋದವರೇ .ಆದ್ದರಿಂದಲೇ ಕಾಶಿಯ ಯಾತ್ರೆಯನ್ನು ಸಪ್ಪಣ್ಣನವರ ಇಂಗಿತದಂತೆ ನಿಲ್ಲಿಸಿ ಸಪ್ಪಣ್ಣನವರು ಲಿಂಗೈಕ್ಯರಾಗುವವರಿಗೂ ಜೊತೆಗಿದ್ದ ರೆಂಬುದನ್ನು ಮರೆಯಲಾಗದು.ಜೊತೆಗೆ ವೃಷಭಲಿಂಗ ಶಿವಯೋಗಿಗಳು ತಮ್ಮನ್ನು ಶ್ರೀ ಸರ್ಪಭೂಷಣ ಗುರುವರೇಣ್ಯ ಚರಣಾರವಿಂದ  ಮತ್ತು ಮಧುಕರ ಸ್ವರೂಪವೆಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ.ನರಗಲ್ಲು ಸೋಮಣ್ಣನವರು ಷಡಕ್ಷರದೇವನ ಶಬರಶಂಕರ ವಿಳಾಸಕ್ಕೆ ಅರ್ಥಬರೆದವರು ಸಪ್ಪಣ್ಣಸ್ವಾಮಿಗಳ ಶಿಷ್ಯರೆಂದು ತಿಳಿದು ಬರುತ್ತದೆ.ಇನ್ನೂ ಇಂಥ ಎಷ್ಟು ಜನಕ್ಕೆ ಗುರುಗಳೋ ಬಲ್ಲವರಾರು.

ವಿರಕ್ತರಾಗಿ ಘನತೆವೆತ್ತ ವ್ಯಕ್ತಿತ್ವ; ಅಪಾರ ವಿದ್ವತ್ಸಂಪನನ್ನತೆ; ಯೋಗ ಸಿದ್ದ ತೇಜಸ್ವಿ ಮುಖ; ಸಂಗಿತ ಜ್ಞಾನ ಸಮೃದ್ದವಾಗಿರುವ ಹದವಾದ ಶಾರೀರ ;ನಮ್ರತೆ; ಸರಳತೆಗಳಿಂದ ಕೂಡಿದ ವಾಗ್ಮಿತೆ ಇವುಗಳೆಲ್ಲದರಿಂದ ಶ್ರೀಮಂತವಾದ ಅವರು ಮಠಾಧಿಶರೂ ಆಗಿರಲು ಅಂಥವರ ಗುರುತ್ವ ಯಾರಿಗೆ ಬೇಡ?

ಡಾ. ಸ.ಜ.ನಾಗಲೋಟಮಠ

ವೀರಶೈವ ಧರ್ಮದಲ್ಲಿ ಇಷ್ಟಲಿಂಗ, ಅಷ್ಟಾವರಣ, ಪಂಚಾಚಾರ ಹಾಗು ಷಟ್‌ಸ್ಥಲಗಳು ಬಹು ಮಹತ್ವದವು, ಪಾದೋದಕವು ಅಷ್ಟಾವರಣದಲ್ಲಿಯ ಒಂದು ಆವರಣ, ಪಾದೋದಕ ಶಬ್ದದ ಸರಳಾರ್ಥವೆಂದರೆ ಪಾದಗಳನ್ನು ತೊಳೆದ ನೀರು,ಇತ್ತೀಚೆಗೆ ಪಾದೋದಕವು ಗೊಂದಲವನ್ನು ಎಬ್ಬಿಸಿದೆ. ಹಲವಾರು ಜನ ಶರಣರು,ಸ್ವಾಮಿಗಳು, ಸ್ವಾಮಿನಿಯರು, ಜಗದ್ಗುರು ಎಂದು ಕರೆಸಿಕೊಳ್ಳುವವರು ಪಾದೋದಕದ ಬಗ್ಗೆ ಅಪಪ್ರಚಾರ ಮಾಡುತ್ತಿರುವರು. ಇವರೊಡನೆ ಕೆಲವು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಸೇರಿಕೊಂಡಿದ್ದಾರೆ. ಅವರೂ ಸಹ ಬೇರೆಯವರನ್ನು ತೆಗಳುವ ಪಾಂಡಿತ್ಯ ಪ್ರದರ್ಶಿಸುವರು. ಪಾದೋದಕವು ಅಷ್ಟಾವರಣದ ಒಂದು ಆವರಣ. ವೀರಶೈವ ಧರ್ಮ ಸ್ಥಾಪಕರು ಇದಕ್ಕೆ ಮಹತ್ವ ಕೊಟ್ಟು ಇದನ್ನು ಅಷ್ಟಾವರಣಗಳಲ್ಲಿ ಸೇರಿಸಿಕೊಂಡರು. ಶರಣರು ಇದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ಆದರೆ ಕೆಲವು ಶರಣರು ಹಾಗು ವೀರಶೈವರು ಇದನ್ನು ವಿರೋಧಿಸುತ್ತಿರಲೇಬೇಕು. ಆದ್ದರಿಂದ ಚನ್ನಬಸವಣ್ಣನವರು ಈ ವಚನ ರಚಿಸಿರಲು ಸಾಕು.

ಗುರುಜಂಗಮದ ಪಾದ ತೀರ್ಥವು ಲಿಂಗಾಭಿಷೇಕಕ್ಕೆ ಸಲ್ಲದೆಂಬ

ಮಂದಮತಿಗಳು ನೀವು ಕೇಳಿರೋ

ಮಂತ್ರ ಸಂಸ್ಕಾರದಿಂದ ಜಡಶಿಲೆ ಲಿಂಗವಾಗುತಿರ್ಪುದೆಂಬಿರಿ

ಆ ಮಂತ್ರ ಸಂಸ್ಕಾರದಿಂದ ಶಿವಾಂಶಿಕನಾದ ಮನುಷ್ಯನು

ಶಿವಜ್ಞಾನ ಸಂಪನ್ನನಾಗಿ ಗುರುವಾಗನೆ?

ಮತ್ತೆ ಜಂಗಮವಾಗನೆ? ಹೇಳಿರೊ

ಸಂಸ್ಕಾರದಿಂದ ಲಿಂಗಕ್ಕೆ ಸಂಸ್ಕಾರವಿಲ್ಲದ ಮನುಷ್ಯನ ಪಾದಜಲವು

ಸಲ್ಲದೆಂದಡೆ ಅದು ಸಹಜವೆಂಬೆನು

ಸಂಸ್ಕಾರ ವಿಶಿಷ್ಟವಾದ ಲಿಂಗಕ್ಕೆಯೂ ಜಂಗಮಕ್ಕೆಯೂ

ಅಭೇದವೆಂಬುದು ಆಗಮೋಕ್ತಿ-

“ಪದೋದಾದಭಿ ಷೇಚನಂ’ ಎಂದು ಸಾರುತಿಹುದು ಕಾಣಿರೋ

ಇದು ಕಾರಣ, ಅಂತಪ್ಪ ಗುರುಜಂಗಮದ ಪಾದತೀರ್ಥವು

ಆಯೋಗ್ಯವೆಂದಡೆ

ನಮ್ಮ ಕೂಡಲಚನ್ನಸಂಗಯ್ಯನ ವಚನವ

ನಿರಾಕರಿಸಿದಂತಕ್ಕು ಕಾಣಿರೋ

ಇಂಥದೇ ಒಂದು ವಚನವನ್ನು ಸಿದ್ಧರಾಮೇಶ್ವರರು ರಚಿಸಿರುವರು.

ಪಾದೋದಕವೆಂಬುದು ಪರಮಾತ್ಮನ ಚಿದ್ರೂಪ ನೋಡಾ,

ಪಾದೋದಕವೆಂಬುದು ಮೋಕ್ಷದ ಮಾರ್ಗ ನೋಡಾ,

ಪಾದೋದಕವೆಂಬುದು ಪಾಪದ ಕೇಡು ನೋಡಾ

ಪಾದೋದಕವೆಂಬುದು ಪ್ರಮಥರ ಇರವು ನೋಡಾ

ಪಾದೋದಕವೆಂಬುದು ಕಪಿಲಸಿದ್ಧ ಮಲ್ಲಿಕಾರ್ಜುನನ ಮಹಿಮೆ ನೋಡಾ.

ಹೀಗೆ ಶರಣರೆಲ್ಲ ಪಾದೋದಕದ ಮಹತ್ವವನ್ನು ಹಾಡಿದ್ದಾರೆ. ಬಹುಶಃ ಆಗ ತೆಗಳುವವರ ಸಂಖ್ಯೆ ಸಣ್ಣದಿರಬೇಕು. ಇಂದು ಹೊಗಳುವವರು ಕಡಿಮೆ ಆಗಿದ್ದಾರೆ. ತೆಗಳುವವರು ಅಧಿಕವಾಗಿದ್ದಾರೆ. ಆದ್ದರಿಂದಲೇ ಪಾದೋದಕವು ಅಮಾನ್ಯವಾಗುತ್ತಲಿದೆ. ವೀರಶೈವರ ಅಷ್ಟಾವರಣಗಳು ಸಪ್ತಾವರಣವಾಗುತ್ತಿವೆ.

ಹಾಗಾದರೆ ಯಾವ ಕಾರಣಕ್ಕಾಗಿ ಹಿರಿಯರು ಈ ಪಾದೋದಕವನ್ನು ಸೇರಿಸಿದರು? ಯಾವದೋ ಮಹತ್ವದ ಕಾರಣ ಇದ್ದಿರಲೇ ಬೇಕು. ಪಾದೋದಕಕ್ಕೆ ಇನ್ನೊಂದು ಅರ್ಥ ಇರಬೇಕು. ಅದು ಸರಳಾರ್ಥದಂತೆ ಪಾದತೊಳೆದ ನೀರು ಇರಲಿಕ್ಕಿಲ್ಲ. ಪಾದಗಳು ಎಂದರೆ ಭೂಮಿಯ ಮೇಲೆ ನಿಲ್ಲುವ ಕರಣಗಳು. ಪಾದಗಳು ಮುಖ್ಯವಾಗಿ ನಡೆಯಲು ಬೇಕು. ಅಂದರೆ ವ್ಯಕ್ತಿಯ ನಡೆಯನ್ನು ಅವು ಪ್ರತಿನಿಧಿಸುತ್ತವೆ.

ಕಾಲಿನ ಹೆಬ್ಬೆರಳು ನಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ಪಾದೋದಕ ಪಡೆಯುವಾಗ ಹೆಬ್ಬೆರಳಿಗೆ ಮಹತ್ವ ಕೊಡುವರು. ಹೆಬ್ಬೆರಳು ಅಂದರೆ ವ್ಯಕ್ತಿಯ ನಡತೆ-ವ್ಯಕ್ತಿಯ ನಡಾವಳಿ, ಅಂದರೆ ವ್ಯಕ್ತಿ ಗುಣವಿಶೇಷಣಗಳು. ಒಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯ,ಸಂಸ್ಕಾರ, ವ್ಯಕ್ತಿ ಬದುಕಿದ್ದ ರೀತಿ-ನೀತಿ, ಅವನ ನಡೆನುಡಿ, ಪಾದೋದಕ ಅಂದರೆ ವ್ಯಕ್ತಿಯ ರೀತಿ ನೀತಿ, ನಡೆನುಡಿ, ಸೇವೆ. ಜನ ಕಲ್ಯಾಣ  ಕಾರ್ಯಗಳು. ಇವೆಲ್ಲಉತ್ತಮವಿದ್ದರೆ ಮಾತ್ರ ಆ ವ್ಯಕ್ತಿ ಪಾದೋದಕ ಕೊಡಲು ಅರ್ಹ, ಇಲ್ಲವಾದರೆ ಆ ನೀರು ನೀರಾಗಿಯೇ ಉಳಿಯುವುದು, ಕಡಿಮೆ ಇಲ್ಲವೆ ಕೀಳು ವ್ಯಕ್ತಿತ್ವದ ಪಾದೋದಕ ಕೊಡಲು ಅನರ್ಹ. ಅಂಥ ಪಾದೋದಕ ಕಲಶ ನೀರೇ ವಿನಃ ಪವಿತ್ರವಾದುದಲ್ಲ. ಈ ಮಾತನ್ನು ಕೆಳಗಿನ ವಚನದಲ್ಲಿ ತಿಳಿಯಬಹುದು.

“ಸಂಸ್ಕಾರವಿಲ್ಲದ ಮನುಷ್ಯನ ಪಾದ ಜಲವು ಸಲ್ಲದೆಂದಡೆ ಅದು ಸಹಜವೆಂಬೆನು” ಒಬ್ಬರ ಪಾದೋದಕ ಸ್ವೀಕರಿಸುವುದೆಂದರೆ ಅವನ ನಡತೆಯನ್ನು ಒಪ್ಪಿಕೊಂಡಂತೆ, ಅವರು ಬಾಳಿದಂತೆ ಬಾಳಲು ಆಶೆ ಪಟ್ಟಂತೆ. ಅಂಥ ನಡತೆಯನ್ನು ಅನುಕರಿಸಲು ಸಿದ್ಧರಾದಂತೆ.

ಪಾದೋದಕದಲ್ಲಿ ಇನ್ನೊಂದು ಸಂಗತಿ ಇದೆ. ಅದೆಂದರೆ ಸಮಾನತೆ ತರುವುದು, ವೀರಶೈವರಲ್ಲಿ ಒಬ್ಬರು ಹೆಚ್ಚಿನವರು, ಉಳಿದವರು ಕೆಳಮಟ್ಟದವರು ಎಂಬ ಪಶ್ನೆಯಿಲ್ಲ. ಎಲ್ಲರೂ ಸಮಾನರೆ, ಶಿಷ್ಯನು ಗುರುವಿನ ಪಾದೋದಕ ಸ್ವೀಕರಿಸುವನು. ತತ್‌ಕ್ಷಣವೇ ಗುರುವು ಶಿಷ್ಯನಿಗೆ ನಮಸ್ಕರಿಸಿ ಪಾದೋದಕ ಕೊಡಬೇಕೆಂದು ಪ್ರಾರ್ಥಿಸುವನು. ಆಗ ಗುರುವು ಶಿಷ್ಯನನ್ನು ತನ್ನ ಗುರುವೆಂದು ಭಾವಿಸುವನು. ನಿಯಮದ ಪ್ರಕಾರ, ಪಾದೋದಕ ಪಡೆಯುವನು, ಶಿಷ್ಯನು ಗುರುವಿಗಿಂತ ವಯಸ್ಸಿನಲ್ಲಿ ಚಿಕ್ಕವನಿರಬಹುದು. ಕಡಿಮೆ ಕಲಿತವನಿರಬಹುದು. ಆದರೂ ಈಗ ಅವನು ತನ್ನ ಗುರುವಿನ ಗುರುವೂ ಹೌದು. ಅಂದರೆ ಎಲ್ಲರೂ ಸಮಾನರಾದಂತೆ. ಇದೇ ವೀರಶೈವ ಧರ್ಮದ ಗುರಿ.

ಅನೇಕ ಹಿರಿಯ ಸ್ವಾಮಿಗಳು ಪಾದೋದಕವನ್ನು ಪಡೆಯಲು ಕ್ರಿಯಾಮೂರ್ತಿಗಳನ್ನು ಗುರುತಿಸಿರುತ್ತಾರೆ. ಅವರು ಸ್ವಾಮಿಗಳಿಗಿಂತ ಚಿಕ್ಕವರಿರಬಹುದು, ಕಡಿಮೆ ಕಲಿತವರಿರಬಹುದು, ಗೃಹಸ್ಥರಾಗಿರಬಹುದು. ಆದರೆ ಇವರ ನಡತೆ ಶುದ್ಧವಾಗಿರುತ್ತದೆ. ಸಮಾಜದಲ್ಲಿ ಅವರಿಗೆ ಗೌರವ ಸ್ಥಾನವಿರುವುದು. ಕಾರಣವೇ ಪಾದೋದಕ ಎರಡು ಫಲಕೊಡುವುದು. ಒಂದು ಜಾಗತಿಕ ಸಮಾನತೆ ಎರಡನೆಯದು ಜೀವನದಲ್ಲಿ ಒಳ್ಳೆಯ ನಡತೆ ಅಳವಡಿಸಿಕೊಳ್ಳುವುದು, ದೂರು ಮಾಡಿದರೆ ಧರ್ಮವನ್ನೇ ಹಾಳು ಮಾಡಿದಂತೆ. ಮರಳಿ ಈ ಜನರು ಸನಾತನ ಧರ್ಮವನ್ನೇ ಒಪ್ಪಿಕೊಂಡಂತೆ ಅನಿಸುವುದು. ವೀರಶೈವರಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಪ್ರಶ್ನೆಯೇ ಬರುವುದಿಲ್ಲ.

ನಾನು ಎಲ್ಲರಿಗಿಂತ ಕಿರಿಯ ಎಂಬುದೇ ಕೊನೆಯ ಮಾತು. ಗುರು-ಶಿಷ್ಯರ ಸಂಬಂಧಗಳು ಹೇಗಿರಬೇಕು ಎಂಬ ಪ್ರಶ್ನೆಗೆ ಕೆಳಗಿನ ವಚನ ಉತ್ತರಿಸುತ್ತದೆ.

ಶ್ರೀಗುರುಲಿಂಗವು ಶಿಷ್ಯನ ಬರವ ಕಂಡು

ಬಂದು ಪಾದದ ಮೇಲೆ ಬೀಳುವಾತ ಗುರುಲಿಂಗ

ಮಂಡೆಯ ಹಿಡಿದೆತ್ತುವಾತ ಶಿಷ್ಯ.

ಶ್ರೀಗುರುಲಿಂಗವು ಶಿಷ್ಯನ ಸಿಂಹಾಸನದಲ್ಲಿ ಕುಳ್ಳಿರಿಸಿ

ಪಾದಾರ್ಚನೆಯ ಮಾಡುವಾತ ಗುರುಲಿಂಗ

ಮಾಡಿಸಿಕೊಂಬಾತ ಶಿಷ್ಯ

ಶ್ರೀಗುರುಲಿಂಗವು ಶಿಷ್ಯನಾರೋಗಣೆಯ ಮಾಡುತ್ತಿದ್ದಾನೆಂದು ಬಂದು

ಪ್ರಸಾದವ ಕೊಂಬಾತ ಗುರುಲಿಂಗ, ಇಕ್ಕುವಾತ ಶಿಷ್ಯ.

ಇದು ಕಾರಣ ದ್ವಿವಿಧ ಸಂಬಂಧ ಸಮಮತವಾಯಿತ್ತು

ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ

ಎಲ್ಲ ಕಡೆಗೂ ಎಲ್ಲ ಹಂತಗಳಲ್ಲಿ ಜಾಗತಿಕ ಸಮಾನತೆ ಒಡೆದು ಕಾಣಬೇಕು. ಇದೇ ನಿಯಮವನ್ನು ನಾವು ಬೆಳೆಸಬೇಕು. ಇಲ್ಲವಾದರೆ ವೀರಶೈವ ಪ್ರಮುಖರು ನಾವೇ ಎಂದು ಹೇಳಿಕೊಂಡು ತಿರುಗುತ್ತಿರುವ ಸ್ವಾಮಿಗಳು, ಅವರ ಬೆಂಬಲಿಗರು ಕೂಡಿಕೊಂಡು ವೀರಶೈವ ಧರ್ಮದ ನಿಯಮಗಳನ್ನು ಪರಿಶೀಲಿಸಿ ಹೊಸ ನಿಯಮಗಳನ್ನು ಬರೆಯಬೇಕು. ಹಿರಿಯರು-ಶರಣರು ನಡೆದು ಬಂದ ರೀತಿ-ನೀತಿಗಳು ದೋಷರಹಿತವಾಗಿವೆ ಎಂದು ಸಾರಬೇಕು. ಎಲ್ಲರೂ ಇವರ ನಿಯಮ ಪಾಲಿಸಬೇಕು ಎಂದು ಹೇಳಬೇಕು. ಆಗ ಮಾತ್ರ ವೀರಶೈವ ಜನಸಾಮಾನ್ಯರಲ್ಲಿ ಗೊಂದಲ ಕಡಿಮೆಯಾಗುವುದು. ಇಲ್ಲದೆ ಹೋದರೆ ಧರ್ಮದ ನಿಯಮಗಳಿಗೂ ಮುಂದಾಳುಗಳ ನಡತೆಗೂ ಅಂತರ ಕಂಡುಬರುವುದು.

ಅಖಿಲ ಭಾರತ ವೀರಶೈವ  ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ

 ಸ್ಥಳ :ಕುಮಾರ ನಗರ ದಿ. ೨೨-೨-೧೯೬೦

ಮಹಿಳೆಯರ ಉನ್ನತಿಗಾಗಿ ಶರಣರು ಮಹೋನ್ನತ ಕಾರ್ಯವನ್ನು ಮಾಡಿದ್ದಾರೆ

ಅಖಿಲ ಭಾರತ ವೀರಶೈವ  ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ

 ಸ್ಥಳ :ಕುಮಾರ ನಗರ ದಿ. ೨೨-೨-೧೯೬೦

ಸಂಗ್ರಹ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹೆಣ್ಣು ಅಬಲೆಯೆಂದು ಕಡೆಗಣಿಸಿದ ಒಂದು ಕಾಲವೂ ಇದ್ದಿತು. ಆದರೆ ದಿನಗಳೆದಂತೆ ಬದಲಾದ ಪರಿಸ್ಥಿತಿಯೊಂದಿಗೆ ಹೆಣ್ಣಿನ ಆ ಸ್ಥಿತಿ ನಿವಾರಣೆಯಾಗುತ್ತ ಬಂದಿತು.

ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಾಮಾಜಿಕದಲ್ಲಿ ಧಾರ್ಮಿಕದಲ್ಲಿ ಆರ್ಥಿಕದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ಮನ್ನಣೆಯೂ ಇರಲಿಲ್ಲ. ಹೆಣ್ಣು ಶೂದ್ರಳು ಮೋಕ್ಷಕ್ಕೆ ಅರ್ಹಳಲ್ಲ ಅವಳಿಗೆ ಆತ್ಮವಿಲ್ಲ ಎಂದುಸಾರಿದರು ಕೆಲವರು. ಅಂಥ ಧರ್ಮದ ದಾರಿಯಲ್ಲಿ ಕುಗ್ಗುತ್ತ ಮುಗ್ಗುತ್ತ ಸಾವಿರ ನೋವುಗಳನ್ನು ತಾಳಿ ನಡೆದು ಬಂದಿರಲು ಹೆಣ್ಣು ಜೀವನ ತನ್ನ ಗೋಳನ್ನು ಹೇಳಿಕೊಳ್ಳಲು ಅದಕ್ಕೆ ಇರಲಿಲ್ಲ ಕೇಳುವ ಕಿವಿಯೂ ಇರಲಿಲ್ಲ. ಕಣ್ಣಿದ್ದು ಕುರುಡರಾದವರಿಗೆ ಅವರ ಸಾವು ನೋವುಗಳು ಕಾಣಲಿಲ್ಲ. ಹೀಗೆ ಹೆಣ್ಣಿನ ಕೊರಗು ಎಷ್ಟು? ಮರಗು ಎಷ್ಟು ಎಂದು ಲೆಕ್ಕಹಾಕಲು ಬರುವಂತಿಲ್ಲ. ತಿಂದ ಬೇನೆ, ನೊಂದ ನೋವು ಹೆತ್ತವರಿಗಲ್ಲದೆ ಹೊತ್ತವರಿಗಲ್ಲದೆ ಏನು ಗೊತ್ತು ? ಹೆಣ್ಣು ಮಕ್ಕಳು ಕರುಣದಿಂದ ಕರೆದದ್ದು, ಕರುಳು ಹರಿದು ಕೂಗಿದ್ದು ಮೊದಲು ಕೇಳಿಸಿತು ಶರಣರಿಗೆ.

ಮಹಿಳೆ ಪಾವನಳಾದಳು

12 ನೆಯ ಶತಮಾನದಲ್ಲಿ ಎಲ್ಲಾ ವರ್ಗದ ಮಹಿಳೆಯರು ಸಮಾನ ಗೌರವವನ್ನು ಸ್ವೀಕರಿಸಿದರು. ಅವರು ಸ್ವತಃ ಕಾಯಕವನ್ನು ಮಾಡಿ, ವಚನೆ ರಚನೆಯನ್ನು ಮಾಡಿರುವರು. ಎಲ್ಲಾ ಶರಣರು ಅಷ್ಟೇ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಹೆಣ್ಣು ಮಾಯೆಯಲ್ಲ ಅವಳು ಶಕ್ತಿ ಸ್ವರೂಪಗಳು. ಹೆಣ್ಣು ಹೆಣ್ಣಲ್ಲಾ ಹೆಣ್ಣು ರಕ್ಕಸಿಯಲ್ಲಾ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ ಎಂದು ಅನ್ನಿಸಿಕೊಳ್ಳುವಂತಾಯಿತು..

ಬೇಕಾಗುವದಕ್ಕಿಂತಲೂ ಹೆಚ್ಚು ಸಂಗ್ರಹಿಸಬಾರದು. ಎಂಬ ಸಮತ ವಾದದ ತತ್ವವನ್ನು ಅಂದು ಬೀರಿದಳು ಲಕ್ಕಮ್ಮ.

ಕದರೀಯ ರೆಮ್ಮವ್ವ ಚದುರಿ ನಿನ್ನ ರಾಟೀಯ

ಸದರೀಗ ತಂದೆ ಬಾಪೂಜಿ

ಸದರೀಗ ತಂದ ಬಾಪೂಜಿ ತಾನೂತ

ಮಾದರಿ ಮಾಡ್ಯಾನ ಜಗದಾಗ

           ( ತಾಯಿಯ ಪದಗಳು )

   ಶರಣರ ಮಹತ್ಕಾರ್ಯ

ರಾಟಿಯ ಕಾಯಕದ ಮಹತ್ವವನ್ನು ಮೊದಲು ತೋರಿಸಿದವಳು ಕರಿಯ ರೆಮ್ಮವ್ವ. ಹೀಗೆ ಒಬ್ಬರೆ ಇಬ್ಬರೆ? ಅನೇಕ ಶಿವಶರಣೆಯರು ತಮ್ಮ ತಮ್ಮ ಕಾಯಕ ದಲ್ಲಿ ನಿರತರಾದರು. ಜಗತ್ತಿನಲ್ಲಿ ಶ್ರೇಷ್ಠವೆನಿಸಿಕೊಂಡ ತತ್ವ ಅನುಭವಗಳನ್ನು ಆಚರಿಸಿ ಜನರಿಗೆ ದಾರಿ ತೋರಿದರು. ಧರ್ಮದಲ್ಲಿ ಸಮಾಜದಲ್ಲಿ ಸ್ತ್ರೀಯರು ಸಮಾನ ರಾಗಿ ಅನುಭಾವ, ಸತ್ಕ್ರಿಯೆ, ಆಚಾರ ವಿಚಾರಗಳಲ್ಲಿ ಕಡಿಮೆಯವರಲ್ಲ ಎಂಬುದನ್ನು ಸಿದ್ಧಪಡಿಸಿದರು. ಅಂಥ ಅನುವಿನ ತಿಳಿಬೆಳಕಿನಲ್ಲಿ ಸ್ತ್ರೀಯರನ್ನು ಸಲಹಿದರು ಬೆಳಸಿದರು, ನಮ್ಮ ಶರಣರು. ಆ ಪರಂಪರೆಯಲ್ಲಿ ನಾವು ಬೆಳೆದಿದ್ದೇವೆ

 ಸಮಾಜ ದೃಷ್ಟಿ ಬದಲಾಗಲಿ

ಆ ಹಿರಿಯ ತಾಯಂದಿರು ಗಳಿಸಿದ ಅನುಭಾವದಾಗರವನ್ನು ಉಳಿಸಿಕೊಂಡು, ಬಳಿಸಿಕೊಂಡು ಹೇಗೆ ಬೆಳಸಿಕೊಂಡು ಹೋಗಬೇಕು, ಎಂಬುವದೇ ನಮ್ಮ ಮೇಲಿರುವ ಇಂದಿನ ಹೊಣೆ; ಅಷ್ಟೆ ಸಮಾಜದ ಮೇಲೂ ಇದೆ. ಏಕೆಂದರೆ ಹೆಣ್ಣು ಮಕ್ಕಳ ಬಗೆಗೆ ಇರುವ ಸಮಾಜದ ದೃಷ್ಟಿಕೋನವು ಬದಲಾಗದೆ ಸ್ತ್ರೀಯರ ಉದ್ಧಾರವಿಲ್ಲ. ಸ್ತ್ರೀಯರ ಉದ್ಧಾರವಿಲ್ಲದೆ ಸಮಾಜಕ್ಕೆ ಪ್ರಗತಿ ಇಲ್ಲ.

   ಸರಿಯಾದ ಶಿಕ್ಷಣ ಅವಶ್ಯ

ಸ್ತ್ರೀಯರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಬರೀ ಅಕ್ಷರ ಜ್ಞಾನವಿದ್ದರೆ ಇಲ್ಲವೆ ಒಂದೆರಡು ಭಾಷೆಯನ್ನು ನುಡಿಯಲು ಕಲಿತರೆ ಸಾಲದು. ಇಂದಿನ ಉಚ್ಚ ಶಿಕ್ಷಣವು ಸ್ತ್ರೀಯರಿಗೆ ಎಷ್ಟು ಪ್ರಯೋಜನಕಾರಿಯಾಗಿದೆ, ಆಗಬಲ್ಲುದು? ಎಂಬುದನ್ನು ವಿಚಾರ ಮಾಡಬೇಕಾದುದು. ಗೃಹವಿಜ್ಞಾನಕ್ಕೂ ಸ್ತ್ರೀಯರ ಜೀವನಕ್ಕೂ ನಿಕಟ ಸಂಬಂಧ ಅಂಥ ಶಿಕ್ಷಣ ಅವರಿಗೆ ಸಿಗುವಂತೆ ಆಗಬೇಕು.

  ಕಾಯದೆ ಕಾರ್ಯವಾಗಲಿ

`ಆರ್ಥಿಕದಲ್ಲಿ ಪಾಲು ಸಿಗಬೇಕು. ಎಂದು ಸರಕಾರ ಕಾಯ್ದೆ ಮಾಡಿದರೂ ತಂದೆ ತಾಯಿಗಳು ಅಣ್ಣ ತಮ್ಮಂದಿರು ಸಹಕರಿಸದ ಏನಃ ಕಾಯ್ದೆಯು ಕಾವ್ಯರೂಪದಲ್ಲಿ ಬರುವದು ದುಸ್ತರವಾದದು. ಸ್ತ್ರೀಯರಿಗೆ ಆರ್ಥಿಕದಲ್ಲಿ ಕಾಯ್ದೆಯು ಬೆಂಬಲ ವಿದ್ದರೂ ಕೆಲ ವಿಧವೆಯರ ಗೋಳು ಹೇಳತೀರದು. ಅಂಥವರ ಗೋಳಿನ ಬಾಳನ್ನು ಕಂಡಿದ್ದೇನೆ. ಅಂಥ ಕೆಲವರಿಗೆ ಪಾಲವು ಬೇಕಿಲ್ಲ ಹೊಟ್ಟೆ ತುಂಬ ಅನ್ನ, ವರುಷಕ್ಕೆ ಎರಡು ಸೀರೆ ಕೊಟ್ಟರೆ ಸಾಕಾಗಿದೆ

 ಗಂಡು ಹೆಣ್ಣಿನ ಜೀವನ

ಹೆಣ್ಣು ಗಂಡಿನ ಜೀವನ ಸುಗಮವೂ ಸುಂದರವೂ ಆಗಬೇಕಾದರೆ, ಪರಸ್ಪರರಲ್ಲಿ ತಿಳವಳಿಕೆ ಬೆಳೆಯಬೇಕು. ಸ್ತ್ರೀಯು ಪುರುಷನ ಪ್ರತಿಸ್ಪರ್ಧಿಯಲ್ಲಿ ಪೋಷಕಳು. ಬಾಪೂಜಿಯವರ ಮಾತಿನಲ್ಲಿ ಹೇಳಬೇಕಾದರೆ, ಸ್ತ್ರೀ ಪುರುಷರಿಬ್ಬರು ಪರಸ್ಪರ ಪಾಲಕರು ಚಾಲಕರು ಮೂಲಕರು ಎಂದು ಹೇಳಬಹುದು.

ಇಂದಿನ ಸ್ತ್ರೀಯರು ಹೆಚ್ಚಾಗಿ ವಚನ ವಾಜ್ಮಯವನ್ನು ಜಾನಪದಗಳನ್ನು ಓದಿ ತಿಳಿದು ಅಳವಡಿಸಿಕೊಳ್ಳಬೇಕು. ಅವುಗಳನ್ನು ಸಂಗ್ರಹಿಸುವ, ಹೊಸದಾಗಿ ಬರೆಯುವ ಕಾರ್ಯವನ್ನು ಮುನ್ನಡಿಸಬೇಕು. ಹರಟೆ ಪರನಿಂದೆಗಳಲ್ಲಿ ಕಾಲ ಕಳೆಯದೆ ಯಾವದಾದರೂ ಒಂದು ಉತ್ತಮ ಸಾಧನೆಯಲ್ಲಿ ಮನ ತೊಡಗಿಸ ಬೇಕು. ರಾಟಿಯ ಕಾಯಕವನ್ನು ಮತ್ತೆ ಅಳವಡಿಸಬೇಕು.

ಮಾನವೀಯ ಜೀವನದ ಶಿಖರದಮೇಲೆ ಅಹಿಂಸಾಮಯ ಪವಿತ್ರ ಪತಾಕೆ ಯನ್ನು ಹಾರಾಡಿಸುವ ನಿಜವಾದ ಶ್ರೇಯಸ್ಸನ್ನು ಸ್ತ್ರೀಯು ಕೈವಶಮಾಡಿಕೊಳ್ಳಬೇಕು. ವಿಶ್ವಶಾಂತಿಯ ನಿಜವಾದ ವಿಧಾನವು ಸ್ತ್ರೀಯರಲ್ಲಿದೆ. ಹೀಗಿದ್ದರೂ, ವಿಶ್ವ ಶಾಂತಿಗಾಗಿ ಸ್ತ್ರೀಯರು ಏನೂ ಮಾಡಲಿಲ್ಲ, ಇದರ ಬಗ್ಗೆ ನನಗೆ ನಾಚಿಕೆಯಾಗಿದೆ ಆದರ್ಶ ಪ್ರೇರಿತರಾಗಿ, ಅಹಿಂಸೆಯ ದಾರಿಯಲ್ಲಿ ಮುನ್ನುಗ್ಗುವ ಶಕ್ತಿಯಲ್ಲಿ ಪುರುಷರಿಗಿಂತಲೂ, ಸ್ತ್ರೀಯು ಅಧಿಕ ಗುಣಸಂಪನ್ನಳಾಗಿದ್ದಾಳೆ. ಇಂಥ ಶಕ್ತಿಯನ್ನು ಶರಣರು ಮತ್ತೆ ಮತ್ತೆ ಕರುಣಿಸಲಿ

ಡಾ|| ಬಸವರಾಜ ಹಿರೇಮಠ

ಸಹ ಪ್ರಾಧ್ಯಾಪಕರು,

ಆಯುರ್ವೇದ ಮತ್ತು ಯುನಾನಿ ತಬ್ಬಿಯಾ ಕಾಲೇಜು

ಮತ್ತು ಆಸ್ಪತ್ರೆ (ದೆಹಲಿ ಸರಕಾರ)

ಕರೋಲಬಾಗ, ನವದೆಹಲಿ-110005.

 

          ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅವುಗಳು ಜೀವಿಸಲು ಪ್ರಾಣವಾಯು, ನೀರು ಮತ್ತು ಆಹಾರದ ಅವಶ್ಯಕತೆ ಇದ್ದೇ ಇದೆ.  ಆದರೆ ಅವುಗಳನ್ನು ಸೇವಿಸುವ ವಿಧಾನ ಮತ್ತು ಪ್ರಮಾಣ ಭಿನ್ನಭಿನ್ನವಾಗಿದೆ.

          ಸೃಷ್ಟಿ ಸಂಕುಲದಲ್ಲಿಯ ಪ್ರಾಣಿ, ಪಕ್ಷಿಗಳು ಜಲಚರವಾಸಿಗಳು ಮುಖ್ಯವಾಗಿ ತಮ್ಮ ಆಹಾರವನ್ನು ಹುಡುಕುವದರಲ್ಲಿಯೇ ಮಗ್ನವಾಗಿರುತ್ತವೆ.  ಆದರೆ ವಿಕಸಿತ ಮೆದುಳು ಹೊಂದಿರುವ ಮನುಷ್ಯನು ಆಹಾರವನ್ನು ತನ್ನ ರುಚಿಗೆ ತಕ್ಕಂತೆ ಹಸಿವೆಗೆ ತಕ್ಕಂತೆ ತಯಾರಿಸಿ ಸೇವಿಸುತ್ತಾನೆ.

          ಸೃಷ್ಟಿಯಲಿ ಮಾನವನ ವಿಕಾಸವಾದಂತೆ ಅವರ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿಯೂ ಅನೇಕ ಬದಲಾವಣೆಗಳಾದವು.  ನಂತರ ಜ್ಞಾನ, ವಿಜ್ಞಾನಗಳ ರೂವಾರಿಯಾದ ಜ್ಞಾನ ಬೆಳೆದಂತೆ ವಿಜ್ಞಾನದ ವಿಕಸನವೂ ಆಯಿತು, ಆಗುತ್ತಿದೆ ಮುಂದೆಯೂ ಆಗುವದು.

          ಆಹಾರವೇ ಔಷಧಿ, ಔಷಧಿಯೇ ಆಹಾರ ಎಂಬ ಮೇಲ್ಪಂಕ್ತಿಯನ್ನು ನೋಡಿದಾಗ ಕ್ಷಣಕಾಲ ಓದುಗರಲ್ಲಿ ಆಶ್ಚರ್ಯವೆನಿಸಿರಬಹುದು.  ಅಂದರೆ, ಆಹಾರವನ್ನು ನಾವು ಯಾವಾಗ, ಹೇಗೆ, ಎಷ್ಟು ಪ್ರಮಾಣ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಸೇವಿಸಬೇಕು.

ಆಹಾರ:- ಯಾವುದು ಶರೀರದ ಪೋಷಣೆ ಮಾಡುವುದೋ, ಮತ್ತು ಯಾವುದನ್ನು ಸೇವಿಸುವದರಿಂದ ಮನ ಪ್ರಸನ್ನತೆ ಮತ್ತು ಶಾರೀರಿಕ ಶಕ್ತಿ ವೃದ್ಧಿಸುವುದೋ ಅದು ಆಹಾರ.  ಆಯುರ್ವೇದ ಆರ್ಷ ಗ್ರಂಥಗಳಲ್ಲಿ ಆಹಾರದ ಮಹತ್ವ, ಆಹಾರ ತಯಾರಿಸುವ ವಿಧಾನ, ಸಂತುಲಿತ ಆಹಾರ, ವಿರುದ್ಧ ಆಹಾರ, ಆಹಾರ ಸೇವನೆ ಕಾಲ ಮತ್ತು ಆಯಾ ರೋಗಗಳಿಗನುಸಾರ ರೋಗಿಗಳಿಗೆ ನೀಡಲಾಗುವ ಪಥ್ಯೆ ಆಹಾರಗಳ ಬಗ್ಗೆ ಅತ್ಯಂತ ವಿಸ್ತಾರವಾಗಿ ವಿವರಿಸಲಾಗಿದೆ.

          ಸಂತುಲಿತ ಆಹಾರವೆಂದರೆ, ಯಾವುದು ಪಂಚಮಹಾಭೂತಾತ್ಮಕವಾಗಿರುವುದೊ, ಮಧುರಾಧಿ ಷಡ್ರಸಾತ್ಮವಾಗಿರುವುದೋ, ಶರೀರ ಪೋಷಣೆಯ ಜೊತೆಗೆ ಶಾರೀರಿಕ ಹಾಗೂ ಇಂದ್ರಿಯ ಶಕ್ತಿಗಳ ವೃದ್ಧಿಗೆ ಸಹಾಯಕವಾಗಿರುವುದೊ ಸಾತ್ವಿಕ ಗುಣವುಳ್ಳದ್ದಾಗಿರುವುದೋ ತಯಾರಿಸಿದ ಮೇಲೆ ಅದರಿಂದ ಹೊರಸೂಸುವ ಪರಿಮಳ ಅದರ ವರ್ಣ ಮತ್ತು ಅನುಸರಿಸಿದ ವಿಧಾನಗಳು ಇವೇ ಮೊದಲಾದವನ್ನೊಳಗೊಂಡ ಅಂಶಗಳ ಸಂಕ್ರಮಣವೇ ಸಂತುಲಿತ ಆಹಾರ.

ವಿರುದ್ಧ ಆಹಾರ:

          ಆಯುರ್ವೇದ ಗ್ರಂಥಗಳಲ್ಲಿ ವಿರುದ್ಧ ಆಹಾರ ಎಂದರೇನು? ಅವುಗಳಲ್ಲಿ ಎಷ್ಟು ವಿಧ ಮತ್ತು ವಿರುದ್ಧ ಆಹಾರ ಸೇವಿಸುವದರಿಂದ ಯಾವ ಯಾವ ರೋಗಗಳು ಉಂಟಾಗುವವು ಎಂಬುದನ್ನು ವಿವರಿಸಲಾಗಿದೆ.

ಉದಾಹರಣೆಗೆ:

  • ವಿಧಿವಿರುದ್ಧ
  • ಕಾಲವಿರುದ್ಧ
  • ಸಂಸ್ಕಾರವಿರುದ್ಧ     
  • ಉಪಚಾರವಿರುದ್ಧ
  • ದೇಶವಿರುದ್ಧ
  • ಸಂಯೋಗ ವಿರುದ್ಧ
  • ದೋಷವಿರುದ್ಧ 
  • ಪಾಕವಿರುದ್ಧ
  • ಮೂತ್ರವಿರುದ್ಧ
  • ಅಗ್ನಿವಿರುದ್ಧ          
  • ವೀರ್ಯ ವಿರುದ್ಧ     
  • ಕೋಷ್ಠವಿರುದ್ಧ
  • ಅವಸ್ಥಾ ವಿರುದ್ಧ  
  • ಕ್ರಮವಿರುದ್ಧ  
  • ಪರಿಹಾರ ವಿರುದ್ಧ

ವಿಧಿವಿರುದ್ಧ ಏಕಾಂತ ಪ್ರದೇಶದಲ್ಲಿ ಕುಳಿತು ಸೇವಿಸದೇ ಇರುವದು.

ಕಾಲ ವಿರುದ್ಧ ಶೀತಕಾಲದಲ್ಲಿ ಶೀತ ಗುಣವುಳ್ಳ ಮತ್ತು ರೂಕ್ಷ ಸೇವನೆ

ಸಂಸ್ಕಾರ ವಿರುದ್ಧ : ಜೇಷಲ ಕಟ್ಟಿಗೆಯಲ್ಲಿ ನವಿಲಿನ ಮಾಂಸವನ್ನು ಸುಟ್ಟು ತಯಾರಿಸಲಾದ    ಮಾಂಸ ವ್ಯಂಜನ.

ದೇಶ ವಿರುದ್ಧ :ಅತೀ ಮಳೆ ಬಿಳುವ ಪ್ರದೇಶದಲ್ಲಿ ಇದ್ದವರು ಸ್ನಿಗ್ಧ ಮತ್ತು                  ಶೀತಗುಣವುಳ್ಳ ಆಹಾರದ ಸೇವನೆ.   

ಸಂಯೋಗ ವಿರುದ್ಧ          :ಹುಳಿ ಪದಾರ್ಥ (ಆಮ್ಲರಸಾತ್ಮಕ) ಗಳನ್ನು ಹಾಲಿನೊಂದಿಗೆ ಬೆರೆಸಿ           ತಯಾರಿಸಿದ ಅಹಾರ.

ದೋಷ ವಿರುದ್ಧ:ವಾತ ಪ್ರಕೃತಿಯುಳ್ಳ ವ್ಯಕ್ತಿಯು ರೂಕ್ಷ, ಶೀತ ಆಹಾರ ಸೇವನೆಯಿಂದ

                                      ಪುನಃ ವಾತ ದೋಷವು ವೃದ್ಧಿಯಾಗುವದು.

ಪಾಕ ವಿರುದ್ಧ:ಉದಾಹರಣೆಗೆ, ಅನ್ನ ತಯಾರಿಸುವಾಗ ಅದು ಸರಿಯಾಗಿ                        ಬೆಂದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ.  ಅರೆಬೆಂದ ಅನ್ನ – ಹಾಗೂ ಸಂಪೂರ್ಣ ಸುಟ್ಟು ಹೋದ ಅನ್ನ ಇವರೆಡೂ ಪಾಕ   ವಿರುದ್ಧ ಅಹಾರ.

ಮೂತ್ರಾ ವಿರುದ್ಧ    :         ಜೇನುತುಪ್ಪ ಹಾಗೂ ತುಪ್ಪ ಇವೆರಡನ್ನೂ ಸಮ ಪ್ರಮಾಣದಲ್ಲಿ

                                      ಸೇವಿಸುವದೂ ಕೂಡಾ ಮೂತ್ರಾ ವಿರುದ್ಧವಾಗಿದೆ.

ಅಗ್ನಿ ವಿರುದ್ಧ             :         ಮಂದಾಗ್ನಿಯುಳ್ಳ ವ್ಯಕ್ತಿ ಪತನಕ್ಕೆ ಜಡವಾದ (ಗುರು) ಆಹಾರ

                                      ನೀಡುವದರಿಂದ ಆಹಾರವು ಸರಿಯಾಗಿ ಪಚನವಾಗುವದಿಲ್ಲ.

ವೀರ್ಯ ವಿರುದ್ಧ      :         ಶೀತ ವೀರ್ಯವುಳ್ಳ ಹಾಲಿಗೆ ಉಷ್ಣ ವೀರ್ಯವುಳ್ಳ ಪಿಪ್ಪಲಿ ಮಿಶ್ರಣ ಮಾಡಿ ಸೇವಿಸುವದರಿಂದ  (ಹಾಲು ಮತ್ತು ಮತ್ಸ್ಯ)

ಕೋಷ್ಠ ವಿರುದ್ಧ:ಕ್ರೂರಕೋಷ್ಠವುಳ್ಳ ವ್ಯಕ್ತಿಗೆ ಅಲ್ಪ ಪ್ರಮಾಣದಲ್ಲಿ ಆಹಾರ ನೀಡುವದು

ಅವಸ್ಥಾ ವಿರುದ್ಧ:    ಅಧಿಕ ಶ್ರಮದ ಕೆಲಸ ಮಾಡುವ ವ್ಯಕ್ತಿಗೆ ವಾತವರ್ಧಕ ಆಹಾರ

                                      ನೀಡುವದು.

ಕ್ರಮ ವಿರುದ್ಧ         :ಮಲಮೂತ್ರ ತ್ಯಾಜ ಮಾಡದೇ ಆಹಾರ ಸೇವನೆ.

ಆಹಾರ ಸೇವನ ಕಾಲ :         ಆಹಾರವನ್ನು ಯಾವಾಗ ಸೇವನೆಯನ್ನು ಮಾಡಬೇಕು ಎನ್ನುವದೂ ಅಷ್ಟೆ ಮುಖ್ಯ.

ಇಲ್ಲಿ ಆಹಾರ ಸೇವನೆ ಕಾಲ:

•         ಈ ಮೇಲೆ ವಿವರಿಸಿದ ಸಂತುಲಿತ ಆಹಾರವನ್ನು ಬೆಳಗಿನ ಜಾವ ಎದ್ದ ಮೇಲೆ ಮಲಮೂತ್ರ ವಿಸರ್ಜಿಸಿದ ಬಳಿಕ ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿದ ಬಳಿಕ ತನ್ನ ಎಲ್ಲಾ ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ತನ್ನ ಹಸಿವಿಗೆ ತಕ್ಕ ಹಾಗೆ ಸೇವನೆ ಮಾಡುವದು.  ಆಹಾರವನ್ನು ಮಧ್ಯರಾತ್ರಿಯಲ್ಲಿಯೂ ನಸುಕಿನ ಜಾವದಲ್ಲಿಯೂ ಮತ್ತು ಸೇವನೆ ಮಾಡಬಾರದು.

ದಿವಸದಲ್ಲಿ ಎಷ್ಟು ಹೊತ್ತು ಊಟ ಮಾಡಬೇಕು?

  • ಒಂದು ಹೊತ್ತು ಉಂಡವ ಯೋಗಿ
  • ಎರಡು ಹೊತ್ತು ಉಂಡವ ಭೋಗಿ
  • ಮೂರು ಹೊತ್ತು ಉಂಡವ ರೋಗಿ
  • ನಾಲ್ಕು ಹೊತ್ತು ಉಂಡವ ಕಂಬಳಿಯಲ್ಲಿ ಕಚ್ಚಿಕೊಂಡು ಹೋಗಿ

        ಈ ಮೇಲಿನ ಸಾಲುಗಳನ್ನು ವೈಜ್ಞಾನಿಕವಾಗಿ ಗಮನಿಸಿದಾಗ ಮೊದಲನೆಯ ಉಕ್ತಿ ಒಂದು ಹೊತ್ತು ಉಂಡವ ಯೋಗಿ ಅಂದರೆ ವ್ಯಕ್ತಿಯು ತನ್ನ ವಯಸ್ಸಿಗನುಗುಣವಾಗಿ ಜಠರಾಗ್ನಿಗನುಗುಣವಾಗಿ ಸಂತುಲಿತ ಆಹಾರವನ್ನು ಮಿತವಾಗಿ ದಿವಸದಲ್ಲಿ ಒಂದು ಹೊತ್ತು ಮಾತ್ರ ಸೇವಿಸುವದರಿಂದ ಅವನು ಯೋಗಿ.  ಇದರರ್ಥ ಅವನು ಸದಾ ನಿರೋಗಿ, ನಿರೋಗಿಯೇ ನಿಜವಾದ ಯೋಗಿ.

ಆಹಾರ ಸೇವನೆ ನಂತರ ಏನು ಮಾಡಬೇಕು?

ಉಂಡು ನೂರಡಿಯ ತಿರುಗಾಡಿ, ಕೆಂಡಕ್ಕೆ ಕೈ ಕಾಸಿ

ಗಂಡ ಭುಜವ ಮೇಲ್ಮಾಡಿ ಮಲಗಿದೊಡೆ

ವೈದ್ಯನ ಗಂಡ ಸರ್ವಜ್ಞ ||

ರಾತ್ರಿ ಭೋಜನಾನಂತರ ಬೇಗನೇ ಮಲಗಬಾರದು, ಮರಾಠಿಯಲ್ಲಿ ಶತಪೌಲಿ ಎನ್ನುವರು.  ಅಂದರೆ ಭೋಜನಾನಂತರ ಶರೀರಕ್ಕೆ ಆಯಾಸವಾಗದ ಹಾಗೆ ನೂರಾರು ಹೆಜ್ಜೆ ನಡೆದಾಡುವದು.  ನಂತರ ಒಲೆಯ ಮುಂದೆ ಕುಳಿತು ಕೈಗಳನ್ನು ಸ್ವಲ್ಪ ಬೆಚ್ಚಗೆ ಮಾಡಬೇಕು.  ಇತ್ತೀಚಿನ ದಿನಗಳಲ್ಲಿ ಯಾರ ಮನೆಯಲ್ಲಿಯೂ ಕಟ್ಟಿಗೆ, ಬೆರಣಿ ಹಾಗೂ ಇದ್ದಿಲು ಉಪಯೋಗಿಸಿ ಅಡುಗೆ ಮಾಡುತ್ತಿಲ್ಲ.  ಆದ್ದರಿಂದ ಇದು ಸಾಧ್ಯವಾಗುತ್ತಿಲ್ಲ.  ಗಂಡ ಭುಜವ ಮೇಲ್ಮಾಡಿ ದಲ್ಲಿ ಮಲಗುವದು.  ಇದು ವೈಜ್ಞಾನಿಕವಾಗಿಯೂ ಅಷ್ಟೇ ಸತ್ಯವಾಗಿದೆ.  ಈ ಭಂಗಿಯಲ್ಲಿ ಮಲಗಿದರೆ ಪಚನಕ್ರಿಯೆಯು ಸರಾಗವಾಗಿ ನಡೆಯುವದು.  ಮಲಬದ್ಧತೆಯು ನಿವಾರಣೆಯಾಗುವದು.  ಈ ಮೇಲಿನ ಸರ್ವಜ್ಞನ ವಚನದಿಂದ ಅರ್ಥೈಸುವದೇನೆಂದರೆ ಅಯುರ್ವೇದ ವಿಜ್ಞಾನ ಮತ್ತು ಅದರ ಮಹತ್ವವನ್ನು ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪುವ ಹಾಗೆ ಹೇಳಿದ್ದಾರೆ.  ಹೀಗೆ ಹಲವಾರು ನಮ್ಮ ವಚನಕಾರರು ತಮ್ಮ ತಮ್ಮ ವಚನಗಳಲ್ಲಿ ಆಹಾರ, ನಿದ್ರಾ, ಬ್ರಹ್ಮಚರ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ.

•         ಆಹಾರವನ್ನು ಔಷಧಿಯಂತೆ ಸೇವಿಸುವದೂ ಒಂದು ವೈಜ್ಞಾನಿಕ ವಿಧಾನವೇ ಸರಿ – ಆಯಾ ರೋಗಗಳಿಗನುಸಾರ, ರೋಗಿಗಳನುಸಾರ.•   ಆಯುರ್ವೇದದಲ್ಲಿ ಉಲ್ಲೇಖಿಸಿದ ಹಾಗೆ

ಮಂಡ, ಪೇಯಾ, ವಿಲೇಪಿ, ಯವಾಗೂ ಕೃಷರಾ, ಯೂಷ ಮುಂತಾದ ಪಥ್ಯ ಆಹಾರ ತಯಾರಿಕಾ ವಿಧಾನಗಳನ್ನು ಹಾಗೂ ಅವನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಗೆ ಸೇವನೆ ಮಾಡಬೇಕು.  ಮತ್ತು ಈ ಪಥ್ಯಕರ ಆಹಾರ ಸೇವನೆಯಿಂದ ಶರೀರಕ್ಕೆ ಉಂಟಾಗುವ ಲಾಭಗಳ ಬಗ್ಗೆ ತಿಳಿಸಲಾಗಿದೆ.  ಇನ್ನು ಸರಳ ಭಾಷೆಯಲ್ಲಿ ವಿವರಿಸಬೇಕೆಂದರೆ ಮನೆಗಳಲ್ಲಿ ತಲೆತಲಾಂತರದಿಂದ ತಯಾರಿಸಿಕೊಂಡು ಬಂದ ಜೋಳದ ಗಂಜಿ, ಅಕ್ಕಿ ಗಂಜಿ, ನುಚ್ಚು, ಕಿಚಡಿ, ಅನ್ನ ಮುಂತಾದ ಭಕ್ಷ್ಯಗಳು, ಮಾಂಸ ಭಕ್ಷ್ಯಗಳು, ಪೇಯಗಳು, ವ್ಯಂಜನಗಳು ಮತ್ತು ವ್ಯಂಜನಗಳನ್ನು ತಯಾರಿಸುವಾಗ ಉಪಯೋಗಿಸುವ ಮಸಾಲೆ ಪದಾರ್ಥಗಳು, ಎಣ್ಣೆ, ಉಪ್ಪು, ಸಕ್ಕರೆ, ಬೆಲ್ಲ, ವಿವಿಧ ತರಕಾರಿಗಳು ದ್ವಿದಳ ಧಾನ್ಯಗಳು, ವಿವಿಧ ಹಣ್ಣುಗಳು ವಿವಿಧ ಉಪ್ಪಿನಕಾಯಿಗಳು ಎಲ್ಲವೂ ಔಷಧೀಯ ಗುಣಗಳನ್ನೇ ಹೊಂದಿವೆ. 

ಅನ್ನದ ಮಹತ್ವ:

ತೈತ್ತಿರೀಯ ಉಪನಿಷತ್ತಿನಲ್ಲಿ ಅನ್ನದಿಂದಲೇ ಪ್ರಾಣಿಯ ಉತ್ಪತ್ತಿ, ಅನ್ನದಿಂದಲೇ ಶರೀರ ವೃದ್ಧಿಯಾಗುವದು.

ಯಥಾವಿಧಿ ಸೇವಿಸಿದ ಅನ್ನದಿಂದ ಶರೀರ ಸ್ವಾಸ್ಥ್ಯದಿಂದಿರುವದು ಹಾಗೂ ಧೀರ್ಘಾಯುಷ್ಯ ಪ್ರದವಾಗುವದು.

ಅನ್ನಂ ಬ್ರಹ್ಮೇತಿ ವ್ಯಜನಾತ್ – ಅಚಿದರೆ ಅನ್ನವು ಪರಬ್ರಹ್ಮ ಸ್ವರೂಪಿ, ವೈದ್ಯ ಚಾಣಕ್ಯನ ಪ್ರಕಾರ ಈ ಜಗತ್ತಿನಲ್ಲಿ ಮೂರೇ ಮೂರು ರತ್ನಗಳಿವೆ.  ಅವು ಯಾವುವೆಂದರೆ ಅನ್ನ ಜಲ ಮತ್ತು ಸುಭಾಷಿತ, ಆದರೆ ಮೂರ್ಖರು ರತ್ನದ ಕಲ್ಲುಗಳನ್ನೇ ನಿಜವಾದ ರತ್ನಗಳೆಂದು ತಿಳಿದಿದ್ದಾರೆ.

ಆಕಳ ಹಾಲಿನ ಮಹತ್ವ:

ಎಲ್ಲಾ ತರಹದ ಹಾಲುಗಳಲ್ಲಿ ಆಕಳ ಹಾಲು ಶ್ರೇಷ್ಠವಾದುದು.  ಅದು ಜೀವನೀಯ ಮತ್ತು ರಸಾಯನಗಳುಳ್ಳದ್ದಾಗಿದೆ.  ಯಾರು ಆಕಳು ಹಾಲನ್ನು ಸೇವಿಸುವದಿಲ್ಲವೋ ಅವರು ಕೃಶ ಕಾಯದವರೂ, ನಿರ್ವೀರ್ಯರೂ, ದುರ್ಬಲರೂ ಹಾಗೂ ಕುರೂಪಿಗಳಾಗಿರುವರು.

ಇಂದ್ರದೇವನ ಪ್ರಕಾರ ಆಕಳ ಹಾಲು ಅಮೃತವೇ.  ಯಾರು ಗೋದಾನವನ್ನು ಮಾಡುವರೋ ಅವರು ಅಮೃತವನ್ನೇ ದಾನ ಮಾಡಿದಂತೆ.

ಧಾರೋಷ್ಣ ಹಾಲು :  ಅಂದರೆ ಆಕಳ ಹಾಲು ಕರೆಯುವ ಸಂದರ್ಭದಲ್ಲಿಯೇ ವಿಳಂಬ ಮಾಡದೇ ಸೇವಿಸುವದೇ ಧಾರೋಷ್ಣ ಹಾಲು.

ತಕ್ರದ (ಮಜ್ಜಿಗೆ) ಮಹತ್ವ:

     ಯಾವ ರೀತಿ ದೇವತೆಗಳು ಅಮೃತವನ್ನು ಸೇವಿಸಿ ಅಮರರಾದರೋ ಅದೇ ರೀತಿ ಇಹಲೋಕದಲ್ಲಿ ತಕ್ರವನ್ನು ಸೇವಿಸುವದರಿಂದ ಅಮರರಾಗುತ್ತಾರೆ.

ಅಮೃತಂ ದುರ್ಲಭಂ ನೈರಾಂ, ದೇವಾನಾಮುದಕಂ ತಥಾ |

ಪಿತೃಣಾಂ ದುರ್ಲಭಂ ಪುತ್ರ ಸ್ತಕ್ರಂ ಶಕ್ರಸ್ಯ ದುರ್ಲಭಂ ||

ಇದರರ್ಥ : ಹೇಗೆ ಮನುಷ್ಯರಿಗೆ ಅಮೃತವು ದೇವತೆಗಳಿಗೆ ನೀರು, ತಂದೆಗೆ ಪುತ್ರನೂ ಹಾಗೂ

 ಇಂದ್ರನಿಗೆ ತಕ್ರವೂ ದುರ್ಲಭವಾಗಿದೆ.ಅಲ್ಲದೇ-          ಯಾವ ಮನೆಯಲ್ಲಿ ಮೊಸರು ಕಡೆದು ಮಜ್ಜಿಗೆ ಮಾಡುವ ಸಪ್ಪಳವೂ, ಚಿಕ್ಕ ಚಿಕ್ಕ ಮಕ್ಕಳ ಮನೆ ತುಂಬ ಓಡಾಡುವ ಸಪ್ಪಳವೂ ಮತ್ತು ಗುರುಗಳ, ಅತಿಥಿಗಳ ಆದರ ಸತ್ಕಾರವೂ ಇರುವದಿಲ್ಲವೋ ಅದು ಸ್ಮಶಾನಕ್ಕೆ ಸಮಾನ.

ಮಿತಾಹಾರ ಅಂದರೆ:

          ಯಾವುದರ ಸೇವನೆಯಿಂದ ಶರೀರ ಮತ್ತು ಜೀವಾತ್ಮನು ತೃಪ್ತಿಯಾಗುವನೋ ಮತ್ತು ಜಠರದ ಒಂದು ನಾಲ್ಕಾಂಶ ಭಾಗವು ಖಾಲಿ ಇರುವದೋ ಮತ್ತು ಹಾಲು ಮೊಸರು, ಮಜ್ಜಿಗೆ, ತುಪ್ಪ ಇತ್ಯಾದಿಗಳಿಂದ ಕೂಡಿದ ಆಹಾರ.ಹಿತಕರವಾದ, ತನ್ನ ಹಸಿವಿಗೆ ತಕ್ಕಂತೆ ಮತ್ತು ಹಾಲು, ತುಪ್ಪಗಳಿಂದ ಕೂಡಿದ ಆಹಾರ ಸೇವನೆಯೂ ಕೂಡ ಒಂದು ತಪಸ್ಸು ಇದ್ದಂತೆ.

        ಇನ್ನು ಆಹಾರವನ್ನು ಯಾವಾಗ ಮತ್ತು ಎಷ್ಟು ಹೊತ್ತು ಸೇವಿಸಬೇಕು ಎನ್ನವದೂ ಅಷ್ಟೇ ಮುಖ್ಯವಾಗಿದೆ.  ಆಹಾರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಅಂದರೆ ದಿವಸದಲ್ಲಿ ಎರಡೇ ಹೊತ್ತು ಸೇವಿಸಬೇಕು ಹಾಗೂ ಇದುವೇ ವೇದ ಸಮ್ಮತವಾಗಿದೆ. ಅಲ್ಲದೇ ಭೋಜನಾಂತರ ತಕ್ಷಣವೇ ವ್ಯಾಯಾಮ ಮಾಡುವದಾಗಲೀ, ಮೈಥುನದಲ್ಲಿ ತೊಡಗುವದಾಗಲೀ, ಓದುವದಾಗಲಿ ಅತಿಯಾಗಿ ಜಲಪಾನ ಮಾಡುವದಾಗಲೀ, ಹಾಡುವದಾಗಲೀ ಅಥವಾ ಮಲ್ಲಯುದ್ಧ ಮಾಡುವದಾಗಲೀ ಮಾಡಬಾರದು.  ಕನಿಷ್ಠ ಪಕ್ಷ ಭೋಜನ ಆದ ಮೇಲೆ ಒಂದು ಗಂಟೆ ಒಳಗೆ ಮೇಲೆ ವಿವರಿಸಿದವುಗಳನ್ನು ಮಾಡಬಾರದು.

ಔಷಧ:

          ಔಷಧ, ಔಷಧಿ, ಪ್ರಾಯಶ್ಚಿತ್, ಪ್ರಶಮನ, ಬೇಷಜ, ಮುಂತಾದ ಅನ್ವರ್ಥಗಳು ಔಷಧಿಗೆ ಇವೆ.  ಅಂದರೆ ಯಾವುದು ರೋಗವನ್ನು ಸಂಪೂರ್ಣ ಹೋಗಲಾಡಿಸಿ ಪುನಃ ಆರೋಗ್ಯವನ್ನು ದೊರಕಿಸಿಕೊಡುವದೋ ಅದೇ ಔಷಧಿ.

ಔಷಧಿ ಎಂದರೆ – ಜನಸಾಮಾನ್ಯರು ತಿಳಿದ ಹಾಗೆ ಔಷಧಿ ಅಂಗಡಿಯಲ್ಲಿ ಕೊಂಡುಕೊಳ್ಳುವ ಮಾತ್ರೆ/ಗುಳಿಗೆ ಔಷಧಿ ಇವೇ ಮೊದಲಾದವುಗಳಲ್ಲದೇ ಔಷಧಿಗೆ ಒಂದು ದೊಡ್ಡ ಅರ್ಥವನ್ನು ಕೊಡಬಹುದಾಗಿದೆ.

ಔಷಧಿ: ಭಾರತೀಯ ಆಯುರ್ವೇದ ಪರಂಪರೆಯ ಆರ್ಷ ಗ್ರಂಥಗಳಾದ ಚರಕ ಸಂಹಿತೆ, ಸುಪ್ರಿತ ಸಂಹಿತೆ, ಅಷ್ಟಾಂಗ ಸಂಗ್ರಹ ಮುಂತಾದವುಗಳಲ್ಲಿ ಔಷಧಿ ಅಂದರೆ ಏನು? ಅವುಗಳ ಮೂಲ ಏನು? ಔಷಧಿಯ ತಯಾರಿಕಾ ವಿಧಾನಗಳೇನು? ಅವನ್ನು ಯಾವ ಯಾವ ಸ್ವರೂಪದಲ್ಲಿ ತಯಾರಿಸಬೇಕು ಎಂಬಿತ್ಯಾದಿ ಅಂಶಗಳನ್ನು ವಿವರವಾಗಿ, ಸ್ಪಷ್ಟವಾಗಿ ವಿವರಿಸಲಾಗಿದೆ.

ಆಹಾರವೇ ಔಷಧಿ:

ಪ್ರಾಣ: ಪ್ರಾಣಬೃತಾಂ ಅನ್ನಂ ತದ್‍ಯುಕ್ತ್ಯಾ ನಿವಂತಿ ಅಸೂನ್|

ವಿಷಂ ಪ್ರಾಣಹರಂ ತಚ್ಛ್ ಯುಕ್ತಿಯುಕ್ತಂ ರಸಾಯನಂ|| (ಚರಕ)

ಆಹಾರವು ಸಹ ಜೀವರಾಶಿಗಳಿಗೆ ಪ್ರಾಣವೇ ಸರಿ.  ಅದನ್ನು ಯುಕ್ತಿಪೂರ್ವಕವಾಗಿ ಸೇವಿಸಿದರೆ ಅದು ಶರೀರಕ್ಕೆ ರಸಾಯನ ಇಲ್ಲದಿದ್ದರೆ ಅದೇ ವಿಷಕ್ಕೆ ಸಮಾನವಾಗಿ ಪ್ರಾಣಹರಣವನ್ನುಂಟು ಮಾಡುವದು.

          ಇದರರ್ಥ ಮನುಷ್ಯನು ತನ್ನ ವಯೋಬಲಕ್ಕನುಗುಣವಾಗಿ ತನ್ನ ಜಠರಾಗ್ನಿ ಬಲಕ್ಕನುಗುಣವಾಗಿ ಶರೀರಕ್ಕೆ ಸಾತ್ಮ್ಯಕ್ಕನುಗುಣವಾಗಿ ಆಹಾರವನ್ನು ಸೇವಿಸಬೇಕು.

ಏಕರಸಾಭ್ಯಾನೋ ದುರ್ಬಲ್ಯಕರಾಣಾಂ|| (ಚರಕ)

ಸರ್ವ ರಸಾಭ್ಯುಸೋ ಬಲಕರಾಣಾಂ||

ಇದರರ್ಥ-

          ಸೇವಿಸುವ ಆಹಾರವು ಮಧುರಾದಿ ಷಡ್ರಸಗಳಿಂದ ಯುಕ್ತವಾಗಿರಬೇಕು.  ಹಾಗೆಯೇ ಆಹಾರದ ವರ್ಣ, ಗಂಧ, ರುಚಿ ಆದರ ಆಕಾರ ಮನಸ್ಸಿಗೆ ಮುದ ನೀಡುವಂತಿರಬೇಕು.  ಆಹಾರ ಸೇವನೆಯಿಂದ ಇಂದ್ರಿಯಗಳು ಪ್ರಸನ್ನವಾಗಿರಬೇಕು ಹಾಗೂ ಆರೋಗ್ಯಕ್ಕೆ ಹಿತಕರವಾಗಿರಬೇಕು.

ಆಹಾರವು ಮೂರು ವಿಧವಾಗಿದೆ

ಸಾತ್ವಿಕ ಆಹಾರ:- ಸಾತ್ವಿಕ ಆಹಾರ ಸೇವನೆಯಿಂದ ಆಯುಷ್ಯ, ಮನೋಬಲ, ಶಾರೀರಿಕಬಲ, ಸ್ವಾಸ್ತ್ಯವನ್ನು ವೃದ್ಧಿಸುವಂಥಾದ್ದು, ಮನಕ್ಕೆ ಆಹ್ಲಾದವನ್ನುಂಟು ಮಾಡುವದು.  ಮತ್ತು ಘೃತಾದಿ ಸ್ನಿಗ್ಧ ಗುಣಗಳಿಂದ ಕೂಡಿದ ಆಹಾರ, ಹಾಗೂ ಸಾತ್ವಿಕ ಗುಣವುಳ್ಳವರು ಭೋಜಿಯಾಗಿರುತ್ತಾರೆ.

ರಾಜಸು ಆಹಾರ: ಯಾವ ಆಹಾರದ ಸೇವನೆಯಿಂದ ಎದೆ ಉರಿ, ಹೊಟ್ಟೆ ಉರಿ ಕಂಡುಬರುವದೋ, ಆಹಾರವು ಹುಳಿ, ಉಪ್ಪು, ಖಾರ ಕ್ಷಾರಯುಕ್ತವಾಗಿರುವದೋ, ದುಃಖ ಶೋಕ ಮತ್ತು ರೋಗವನ್ನುಂಟು ಮಾಡುವದೋ ಇಂಥ ಆಹಾರವು ರಾಜಸ ಪ್ರಕೃತಿಯವರಿಗೆ ಹೆಚ್ಚು ಪ್ರೀಯವಾಗಿರುವದು. ರಾಜಸ ಪ್ರಕೃತಿಯುಳ್ಳವರು ಪೂರ್ಣ ಭೋಜಿಯಾಗಿರುತ್ತಾರೆ.

ತಾಮಸಿಕ ಆಹಾರ:-

       ಆಹಾರ ತಯಾರಿಸಿದ ಎಷ್ಟೋ ಗಂಟೆಗಳ ಮೇಲೆ ಸೇವಿಸುವದು, ಅಥವಾ ರಾತ್ರಿ ಮಾಡಿದ ಅಡುಗೆ ಬೆಳಿಗ್ಗೆ ಸೇವಿಸುವದು, ಬೇರೊಬ್ಬರ ಎಂಜಲು ಹಾಗೂ ಶರೀರದಲ್ಲಿ ತಾಮಸೀ ಗುಣ ಉತ್ಪನ್ನ ಮಾಡುವದು ತಾಮಸಿಕ ಆಹಾರವಾಗದ್ದು, ತಾಮಸ ಪ್ರಕೃತಿಯುಳ್ಳವರು ಅತೀ ಭೋಜಿಯಾಗಿರುತ್ತಾರೆ.

ವಿಷ್ಣು ಪುರಾಣದಲ್ಲಿ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವದನ್ನು ವಿವರಿಸಲಾಗಿದೆ:

ಜಠರಂ ಪೂರಯೇದರ್ಧಂ ಅನ್ನೈರ್ಭಾಗಂ ಜಲೇನ ಜೆ|

ವಾಯೋಃ ಸಂಚಣಾರ್ಥಆಯ ಚತುರ್ಥಂ ಅವಶೇಷಯೇತ್||

ಅಂದರೆ –

          ಜಠರದ ಅರ್ಥ ಭಾಗ ಆಹಾರದಿಂದಲೂ, ಆಹಾರದ ಅರ್ಧಭಾಗ ನೀರಿನಿಂದಲೂ ಹಾಗೂ ನೀರಿನ ಅಂಗವಾದ ವಾಯುವಿನಿಂದಲೂ ಕೂಡಿದ್ದರೆ  ಔಷಧಿಯೇ ಆಹಾರ:

          ಚರಕಾಚಾರ್ಯರು ಹೇಳಿದ ಹಾಗೆ ಜಗತ್ತಿನಲ್ಲಿ ದೊರೆಯುವ ಎಲ್ಲಾ ವನಸ್ಪತಿಗಳಲ್ಲಿ, ಪಶು ಪಕ್ಷಿಗಳಲ್ಲಿ, ಜಲಚರ ಪ್ರಾಣಿಗಳಲ್ಲಿ, ಭೂಗರ್ಭದಲ್ಲಿ ಸ್ಥಿತಿ ಮೂಲ ವಸ್ತುಗಳಲ್ಲಿ ಔಷಧಿಯ ಗುಣಗಳಿವೆ.  ಇವುಗಳನ್ನು ಹೇಗೆ ಬಳಸಬೇಕು.  ಹೇಗೆ ಔಷಧಿಯಾಗಿ ತಯಾರಿಸಬೇಕು ಎನ್ನುವದು ಬಹಳ ಮುಖ್ಯವಾಗಿದೆ.

•         ಆಹಾರದಲ್ಲಿ ಬಳಸುವ ಎಲ್ಲಾ ವಸ್ತುಗಳು ಒಂದಿಲ್ಲಾ ಒಂದು ಔಷಧಿಯ ಗುಣಗಳನ್ನು ಹೊಂದಿರುತ್ತವೆ.

•         ಉದಾಹರಣೆಗೆ – ಆಹಾರದಲ್ಲಿ ಬಳಸಲಾಗುವ ಶುಂಠಿ, ಕಾಳುಮೆಣಸು ಸಾಸಿವೆ, ಜೀರಿಗೆ, ಅಜವಾನ, ಲವಂಗ, ಏಲಕ್ಕಿ, ಕಲ್ಲು ಸಕ್ಕರೆ, ಬೆಲ್ಲ ವಿವಿಧ ತರಕಾರಿಗಳು ವಿವಿಧ ಹಣ್ಣುಗಳು.

ಅಲ್ಲದೇ – ಕೆಲವು ಔಷಧೀಯ ಪೇಯಗಳು, ಪಾನಕಗಳು, ಮಾಂಸರಸಗಳನ್ನು ಸ್ವಲ್ಪದರಲ್ಲೇ ವಿವರಿಸಲಾಗಿದೆ.

ಉದಾಹರಣೆಗೆ – ಅರ್ಜುನ ಕ್ಷೀರಪಾಕ

                     ಖರ್ಜೂರಾದಿ ಮರಿಫ.

                     ಚಿಂಚಾ ಪಾನಕ

                     ವಿವಿಧ ಔಷಧಿಯುಕ್ತ ತಕ್ರಗಳು

                     ಔಷಧಿಯುಕ್ತ ಮಾಂಸಭಕ್ಷಗಳು

                     ಇವೆಲ್ಲವುಗಳು ಔಷಧಿಯುಕ್ತ ಆಹಾರಗಳೇ,

ಇವೆಲ್ಲವುಗಳ ಆಧಾರದ ಮೇಲೆ ಈ ವೈಜ್ಞಾನಿಕ ಲೇಖನದ ಶೀರ್ಷಿಕೆಗೆ ಒಂದು ವೈಜ್ಞಾನಿಕ ಪರಿಕಲ್ಪನೆಯನ್ನು ನೀಡುವ ಪ್ರಯತ್ನ ಲೇಖಕರದ್ದಾಗಿದೆ.