ಸಂಪಾದಕೀಯ:

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

 

ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ ತನ್ನ ಮೂರನೆಯ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಯ ಐದನೆಯ ವಾರ್ಷಿಕೋತ್ಸವ, ಶ್ರೀಕುಮಾರ ತರಂಗಿಣಿ ಯ ಮೂರನೆಯ ವಾರ್ಷಿಕೋತ್ಸವ, ಶ್ರೀಕುಮಾರೇಶ್ವರ ಸೇವಾ ಬಳಗ ಜೋಯಿಸರಹರಳಹಳ್ಳಿ ಸದ್ಭಕ್ತರ ಪಾದಯಾತ್ರೆ ದಿ.12-05-2024 ರಂದು ಶ್ರೀ ಶಿವಯೋಗಮಂದಿರ ದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ.ಮ.ನಿ.ಪ್ರ.ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯ ಶ್ರೀ.ಡಾ. ಶಿವಯೋಗಿ ದೇವರು ನೇತೃತ್ವವಹಿಸಿದ್ದರು.ಪೂಜ್ಯ ಶ್ರೀ ಸಿದ್ಧಲಿಂಗ ದೇಶಿಕರು,ಪೂಜ್ಯ ಶ್ರೀ ಮರಿಕೊಟ್ಟೂರು ದೇಶಿಕರು ಮತ್ತು ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀಕುಮಾರ ತರಂಗಿಣಿ ಕುರಿತು ಅನುಭಾವ ಗಳನ್ನು ದಯಪಾಲಿಸಿದರು.

ಪೂಜ್ಯ ವಟು ಸಾಧಕರ ಸಮ್ಮುಖದಲ್ಲಿ,

ಧರ್ಮದರ್ಶಿಗಳಾದ ಶ್ರೀ ಹಂಗರಗಿ ಯವರು ಮತ್ತು ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು  ಆಗಮಿಸಿ ಶುಭಹಾರೈಸಿದರು.

ಕಾರ್ಯಕ್ರಮ ದ ಯಶಸ್ವಿ ಕಾರಣೀಭೂತ ರಾದ ಶ್ರೀ ಶಿವಯೋಗಮಂದಿರದ ಆಡಳಿತ ಮಂಡಲಿಯವರಿಗೆ,ಸಿಬ್ಬಂದಿ ಯವರಿಗೆ,ಜೋಯಿಸರಹರಳಹಳ್ಳಿ ಯ ಗುರು ಹಿರಿಯರಿಗೆ ,ಭಜನಾಮಂಡಲಿಯವರಿಗೆ,ಸಂಗೀತಕಾರರಿಗೆ ಮತ್ತು ಸಭೆಗೆ  ಆಗಮಿಸಿದ ಎಲ್ಲ ಸಭಿಕರಿಗೆ,ಹಾಗೂ ಕಾರ್ಯಕ್ರಮ ನಿರೂಪಿಸಿದ ಪೂಜ್ಯ ಶಿವಪ್ರಸಾದ ದೇವರಿಗೆ ಸೇವಾ ಸಮಿತಿಯ ತುಂಬು ಹೃದಯದ ಕೃತಜ್ಞತೆಗಳು .

ನಾವು ನಮ್ಮ ತರಂಗಿಣಿ ಮಾಸಿಕ್‌ನ ಈ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವೆ ಹಾಗೂ ನಮ್ಮ ಅನುಭವಗಳ ಸಾಕ್ಷಿಯಾಗಿ ನಿಮ್ಮ ಪ್ರತಿಕ್ರಿಯೆ ಪಡೆಯುವುದು ನಮಗೆ ಹೆಚ್ಚು ಉತ್ತೇಜನ ತರುತ್ತದೆ.

 

ನಮ್ಮ ತರಂಗಿಣಿ ಮಾಸಿಕ್‌ ಬ್ಲಾಗ್ ನ ಬಳಗ  ಮುಂದಿನ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯುತ್ತಾ ಹೋಗಲು ನಿಮ್ಮ ಪ್ರೋತ್ಸಾಹ ಮತ್ತು ಆತ್ಮೀಯತೆ ನಮಗೆ ಅತ್ಯಂತ ಆವಶ್ಯಕ.

 

ಧನ್ಯವಾದಗಳು!

 

 

ಶ್ರೀಕುಮಾರ ತರಂಗಿಣಿ  ೨೦೨೪ ಜೂನ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ಮಾನವಾ, ನೀನಾರೋ ? ಕಾಯಾ. ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗ ಮಂದಿರ ಸ್ಥಾಪನೆ: “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. “ರಾಗ-ದ್ವೇಷ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಷಣ್ಮುಖ ಶಿವಯೋಗಿಗಳು; ಇತಿವೃತ್ತ ಮತ್ತು ಕೃತಿಗಳು: ಲೇಖಕರು: ಡಾ|| ಸಿ .ನಾಗಭೂಷಣ
  6. ಒಂದು ನಿರಾಧಾರ ಆರೋಪದ ಕುರಿತು : ಲೇಖಕರು ಶ್ರೀಕಂಠ.ಚೌಕೀಮಠ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಮಾನವಾ, ನೀನಾರೋ ? ಕಾಯಾ

(ರಾಗ-ದರ್ಬಾರಿ ಕಾನಡಾ)

 ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

ಶಿಖೆಯೊಳು* ತ್ರಿದಳ | ವ್ಯಾಪಕನಾದ ಬಸವನಾ

ಮಕದ ನಿಶ್ಶೂನ್ಯ – ಸುಕಳಾಲಿಂಗವ ತೋ |

ರ್ದಕಳಂಕ ಗುರುವೆ ಕೃಪೆಯಾಗು    ||೧೪೬||

 

ಬ್ರಹ್ಮರಂಧ್ರದ ಮುಂದೆ ಶಿಖಾಚಕ್ರವು ಗೋಚರವಾಗುತ್ತದೆ. ಇದು ಎಂಟನೆಯದು. ಶಿಖಾಚಕ್ರವು ಪಶ್ಚಿಮ ಶಿಖೆಯ ಮೇಲ್ಬಾಗದಲ್ಲಿರುವದು. ಇದುವೆ ಎಲ್ಲ ಚಕ್ರಗಳಿಗಿಂತ ಉನ್ನತಸ್ಥಾನವನ್ನು ಆಕ್ರಮಿಸಿದೆ. ಇದು ಮಸ್ತಕದ ಸ್ವಲ್ಪು ಹಿಂಬದಿಗೆ ಇರುವದು. ಈ ಶಿಖಾಚಕ್ರದ ದ್ಯೋತಕವೆಂಬಂತೆ ವೈದಿಕ ಸಂಪ್ರದಾಯದಲ್ಲಿ ಶಿಖೆ ಅಥವಾ ಚಂಡಿಕೆಯನ್ನು ಬಿಡುತ್ತಾರೆ. ಈ ಚಕ್ರವು ಮೂರು ದಳಗಳಿಂದ ವಿರಾಜಮಾನವಾಗಿದೆ. ತ್ರಿದಳಗಳಿಂದ ಕೂಡಿದ ಬಿಲ್ವದಲವು ಶಿವನಿಗೆ ಪ್ರಿಯವಾಗಿರುವಂತೆ ಈ ತ್ರಿದಳ ವ್ಯಾಪಕವೆನಿಸಿದ ಶಿಖಾಚಕ್ರವು ನಿಃಶೂನ್ಯ ಸುಕಳಾಲಿಂಗಕ್ಕೆ ಸಂಪ್ರೀತವಾಗಿದೆ. ಈ ತ್ರಿದಳಚಕ್ರದಲ್ಲಿ ಬಸವ” ಎಂಬ ಮಂತ್ರಾಕ್ಷರಗಳು ಶೋಭಿಸುತ್ತವೆ. ಇವು ನಿರಂಜನ ಪ್ರಣವಗಳು.

 

‘ಬಸವ’ ಇದು ವ್ಯಕ್ತಿಯ ಹೆಸರಲ್ಲ. ಈ ‘ಬಸವಾ’ಕ್ಷರಗಳು ಮಹಾಮಂತ್ರವಾಗಿದೆ. ಅದುಕಾರಣ ಇವುಗಳ ಅರ್ಥ ಅನಂತವಾಗಿದೆ. ಶಿಖಾಚಕ್ರ ಹಾಗೂ ನಿಶ್ಶೂನ್ಯ ಬ್ರಹ್ಮ ಮತ್ತು ‘ಬಸವ’ ತತ್ತ್ವದ ಮಹತ್ವವನ್ನು ೮೪ನೇಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅವಲೋಕಿಸಬಹುದು.

ಶಿಖಾಚಕ್ರದಲ್ಲಿ ತ್ರಿದಳಗಳಲ್ಲಿ ಪರಿಶೋಭಿಸುವ ಬಸವಾಕ್ಷರ ಮಹತ್ವವನ್ನು ಶರಣರೂ, ಕವಿಗಳೂ, ಬಹುವಾಗಿ ಬಣ್ಣಿಸಿದ್ದಾರೆ. ಮಾಯಾ ಕೋಲಾಹಲಿಗಳೂ, ಶೂನ್ಯ ಸಿಂಹಾಸನಾಧಿಪತಿಗಳೂ ನಿರಂಜನ ಜಗದ್ಗುರು ಪ್ರಭುದೇವರು –

 

ಬಸವಗುರುವು ಎನ್ನ ಕರಸ್ಥಲದ ಲಿಂಗದ

ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ

ನಿಲವ ನಿನ್ನಿಂದಲರಿದೆನು

ಬ ಎಂಬಲ್ಲಿ ಭವ ಹರಿಯಿತು

ಸ ಎಂಬಲ್ಲಿ ಸರ್ವಜ್ಞಾನಿಯಾದೆನು

ವ ಎಂದು ವಚಿಸುವ ಚೈತನ್ಯಾತ್ಮಕನಾದನು.

ಇಂತೀ ಬಸವಾಕ್ಷರತ್ರಯವು ಎನ್ನ ಸರ್ವಾಂಗದಲ್ಲಿ

ತೊಳಗಿಬೆಳಗುವ ಭೇದವನರಿದು ಆನು

ಬಸವ ಬಸವ ಎನುತಿರ್ದೆನು.

 

ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ಬಸವಸ್ತೋತ್ರ ತ್ರಿವಿಧಿಯಲ್ಲಿ –

 

ಬಸವ ಬಸವಾ ಬಸವ ಬಸವೇಶ ಬಸವರಸ ಬಸವಯ್ಯ

ನಿಮ್ಮಡಿಗೆ ಶರಣು ಶರಣು

ಬಸವ ಬಸವಾಲಿಂಗ ಬಸವಪ್ಪ ಬಸವೇಶ ಬಸವಯ್ಯ

ಶರಣೆಂಬೆ ಯೋಗಿನಾಥ |

ಬಸವ ಭಕ್ತಿಯ ಬೀಜ, ಬಸವ ಯುಕ್ತಿಯ ಬೀಜ

ಬಸವಪ್ಪ ನಿಮ್ಮಡಿಗೆ ಶರಣು ಶರಣು

 

ಮೋಳಿಗೆಯ ಮಾರಯ್ಯನವರು

ಬ ಎಂಬಲ್ಲಿ ಬಳಿಸಂದೆನು

ಸ ಎಂಬಲ್ಲಿ ಸಯವಾದೆನು

ವ ಎಂಬಲ್ಲಿ ನಿರವಯನಾದೆನು

ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ

ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು

 

ಗಣದಾಸಿ ವೀರಣ್ಣನವರು

“ಬ ಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ

ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ವನಿರ್ಣಯಂ||ʼʼ

ಮತ್ತು – ಎನ್ನ ಪಶ್ಚಿಮದಲ್ಲಿ ನಿರಂಜನ ಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಶಿಖೆಯಲ್ಲಿ ಬಸವಾಕ್ಷರ ತ್ರಯವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಬ್ರಹ್ಮರಂಧ್ರದಲ್ಲಿ ಅ-ಉ-ಮ ಅಕ್ಷರತ್ರಯವಾಗಿ

ಪ್ರಸಾದ ಪಂಚಾಕ್ಷರಿಯಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಆಜ್ಞೆಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ

 

ಎಂದು ಮುಂತಾಗಿ ಸುದೀರ್ಘವಚನವನ್ನೇ ರಚಿಸಿದ್ದಾರೆ. ಶ್ರೀ ಶೀಲವಂತಯ್ಯನವರು ತಮ್ಮ ತ್ರಿವಿಧಿಯ ಆತ್ಮಲಿಂಗ ಪ್ರಣವ ಸಂಯೋಗಸ್ಥಲದಲ್ಲಿ ಬಸವಾಕ್ಷರ ಮಹತ್ವವನ್ನು ಕೆಳಗಿನಂತೆ ವಿವರಿಸಿದ್ದಾರೆ.

 

“ವೃತ್ತ ಗೋಳಕ ಮುಖ್ಯ ನಿತ್ಯ ಬಸವಾಕ್ಷರವು |

ಮತ್ತೆ ಗುರು-ಲಿಂಗ-ಚರ ತ್ರಿವಿಧ ಬಸವನ ಹಸ್ತದಲಿ

ಕಂಡು ಸುಖಿಯಾದೆ

ಆವಾತನ ಮುಖದಲ್ಲಿ ತೀವಿ ಬಸವಾಕ್ಷರವು ಸಾವಧಾನದೊಳು

ವಚಿಸುತ್ತಿರಲದುವೆ ಗುರುದೇವನಿಹತಾಣವಿದನರಿ

ಬಸವನ ನೆನೆ ಮನವೆ ಬಸವಾ ಎನು ನಾಲಿಗೆಯೆ

ಬಸವನ ಪಾದ ಪೂಜೆ ಮಾಡೈಕರವೆ ಬಸವ, ಗುರುಲಿಂಗ ಚರವೆಂದು

ನಿತ್ಯ ನಿಷ್ಕಲದಿಂದ ಚಿತ್ತು ಬಸವಾಕ್ಷರವು

ಮತ್ತೆ ಚಿತ್ ಪ್ರಣವ ಪರಶಕ್ತಿ  ತ್ರೈಮಾತ್ರೆ ವ್ಯಕ್ತದಿಂ ಪ್ರಣವ ಗುರುಲಿಂಗ

 

ಹರಿಹರ ದೇವನ ರಗಳೆ ಕಾವ್ಯಗಳಲ್ಲಿ

 

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆಕೇಳ್

ಬಸವನ ರೀತಿ ರೀತಿ ಬಸವಣ್ಣನ ಕಿಂಕರವೃತ್ತಿ ವೃತ್ತಿ ಮೇಣ್

ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ

ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೇ ನೇಮವುರ್ವಿಯೊಳ್ || ೧ ||

 

ಶ್ರೀ ಪಾಲ್ಕುರಿಕೆಯ ಸೋಮನಾಥರು

 

ಬಾಗುರು ಬಹುಳ ಬ್ರಹ್ಮ | ಸಾಗುರು ಸಾಕಾರ ತತ್ವ ಸಂಘದ ಫಲವೈ

ವಾಗುರು ವಚನ ಮಹತ್ವ | ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ

ಬಾ ಎನೆ ಬಂಧನವಳಿವುದು | ಸಾಯೆನೆ ಸಕಲಸಾಯುಜ್ಯ ಸಂಪದಮಕ್ಕುಂ |

ವಾ ಎನೆ ನಿರವಯ ಪದಮಂ | ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ

ಪ್ರಣವದ ಬಳ್ಳಿ ಬ ಕಾರಂ | ಪ್ರಣವದ ನಾದಾನುಸಾರ ಸಾರ ಸಕಾರಂ |

ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಾ

ಮರೆದೊಮ್ಮೆ ಬಸವ ಎಂದೊಡೆ | ಮರುಜನ್ಮಗಳಲ್ಲಿ ದುರಿತ ವಿಘ್ನಗಳಿಲ್ಲೈ

ಕರಿಗೊರಲನೊಲಿದು ಸಲಹುವ | ಬರಿಜಿಹ್ವೆಯೊಳಿರದೆ ಬಸವನಾಮವ ಜಪಿಸಿ

 

ಸಪ್ತಕಾವ್ಯದ ಗುರುಬಸವದೇವರ ‘ವೃಷಭ ಗೀತೆ’ ಯಲ್ಲಿ –

 

ಬಸವನೆಂದು ಕಂಡು ಪಿರಿಯ |

ಬಸವನೆಂದು ಲೋಕಬಂಧು |

ಬಸವನೆಂದು ಷಟ್‌ಸ್ಥಲ ಸಮಗ್ರ ಸಾರದ |

ಬಸವನೆಂದು ಮತ್ಸಮಸ್ತ |

ಬಸವನೆಂದು ಧರ್ಮರೂಪ

ಬಸವನೆಂದು ಭಜಿಸಿ ಭಜಿಸಿ ಬಾಳ್ವನವ ಕೃತಾರ್ಥನೂ ||

 

ಪ್ರೌಢದೇವರಾಯನ ಮಹಾಕಾವ್ಯವನ್ನು ರಚಿಸಿದ ಅದೃಶ್ಯಕವಿಯು-

 

ಬಸವನೆಂದರೆ ಪಾಪ ದೆಶೆಗಟ್ಟು ಹೋಗುವದು.

ಬಸವನೆಂದೆಂಬ ಮೂರಕ್ಕರದ ಘನತೆಯನು |

ಉಸುರಲೆನ್ನಳವಲ್ಲ ಫಣಿರಾಜಗರಿದರಿದು ಬಸವ ಭವ ಭಯನಾಶವೂ |

 

ಷಡಕ್ಷರದೇವರು “ಬಸವರಾಜ ವಿಜಯ’ದಲ್ಲಿ –

 

ಬಸವನ ನಾಮಂ ಸ್ಮರಿಸುತುಂ ಬಸವೇಶನ ಕಿರ್ತನಂಗಳಂ |

ಪಸರಿಸಿ ಪಾಡುತುಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸು,

ತ್ತೆಸೆವ ನರಂಗೆ ಜನ್ಮತತಿಯುಂಟೆ ಜಡಸ್ಥಿತಿಯುಂಟೆ ಪಾತಕ |

ಪ್ರಸರಮದುಂಟೆ ಮೃತ್ಯುಭಯಮುಂಟೆ ಮದಾಂಧತೆಯುಂಟೆ

ಧಾತ್ರಿಯೋಳ್ ||

 

ಎಂದುಮುಂತಾಗಿ ವರ್ಣಿಸಿದ ಮಹಾನುಭಾವರ ನುಡಿಗಳಿಂದ ಬಸವಾಕ್ಷರ ಮಂತ್ರದ ಮಹತ್ವ ಮನನವಾಗದೇ ಇರದು.

 

ನಿಶ್ಶೂನ್ಯಲಿಂಗ : ‘ಶಿಖಾಚಕ್ರವೇ ನೆಲೆ, ಮಂತ್ರ ನಿಷ್ಪತ್ತಿಯೆ ಕಲೆ; ಉನ್ಮನಿಯ ಮುಖ, ನಿಶ್ಶೂನ್ಯಾಕಾರ, ಅಗಮ್ಯರೂಪು, ತ್ರಿದಳಯುಕ್ತ ನಿಃಕಲ ಪದ್ಮವೇ ಪೀಠ, ಇದು ಸುಜ್ಞಾನಕ್ಕೆ ಸುಜ್ಞಾನವಾಗಿದೆ”. ಎಂದು ನವಲಿಂಗ ಸಾಹಿತ್ಯದಲ್ಲಿ ನಿಶ್ಶೂನ್ಯಲಿಂಗದ

ವರ್ಣನೆಯನ್ನು ಮಾಡಿದ್ದಾರೆ.

 

ಓ ಕಳಂಕರಹಿತನಾದ ಪರಮಗುರುವೆ ! ಶಿಖಾಚಕ್ರದ ಮಹಾಜ್ಯೋತಿ ಪ್ರಕಾಶದಿಂದ ಕೂಡಿದ ನಿಶ್ಶೂನ್ಯ ಸತ್ಕಳಾ ಲಿಂಗವನ್ನು ತೋರಿಸಿ ಉದ್ಧರಿಸಿರುವೆ. ಆ ಲಿಂಗವನ್ನು ಪೂಜಿಸಿ ಧನ್ಯನಾಗುವ ಶಕ್ತಿಯನ್ನೀಡಿ ಕಾಪಾಡು

 

ಮಂಜುಳಮಾದೇಕ ದಳ | ಕಂಜದೊಳೋಂ ಹ ಪ್ರಣವ

ವ್ಯಂಜನವಿಲ್ಲದ ನಿರಂಜನ ಲಿಂಗವನು

ರಂಜಿಸುವ ಗುರುವೆ ಕೃಪೆಯಾಗು   ||೧೪೭||

 

ಮಸ್ತಕದ ಹಿಂಭಾಗದಲ್ಲಿಪ್ಪುದೇ ಏಕದಳಪದ್ಮ. ಅದಕ್ಕೆ ಪಶ್ಚಿಮ ಚಕ್ರವೆಂದು ಹೆಸರು. ಪಶ್ಚಿಮಾಗ್ರವೆಂತಲೂ ಇನ್ನೊಂದು ನಾಮ. ಸಣ್ಣಮೆದುಳೇ ಪಶ್ಚಿಮ ಚಕ್ರವು . ಸ್ಪಟಿಕದಂತೆ ಶುಭ್ರವೂ ಮನೋಹರವೂ ಆಗಿದೆ. ಈ ಚಕ್ರದಲ್ಲಿ ಮಹಾ ಪ್ರಣವ ವೆನಿಸಿದ ‘ಹ್’ ಕಾರ ಮಂತ್ರ ಮೂರ್ತಿಯಾದ ನಿರಂಜನಲಿಂಗವು ಪರಿಶೋಭಿಸು ವದೆಂದು ಬೋಧಿಸಿದ ಗುರುಕೃಪೆ ಅಪಾರವಾದುದು. ಈ ನಿರಂಜನ ಲಿಂಗವು ವಾಙ್ಮನಕ್ಕೆ ಅಗೋಚರವಾದುದು. ಇಂಥ ಅವಾಚ್ಯವಾದ ನಿರಂಜನ ಬ್ರಹ್ಮವನ್ನೇ ಸದ್ಗುರುವು ತನ್ನ ಶುದ್ಧಭಾವದಲ್ಲಿ ಭಾವಿಸಿ ಸಂಸ್ಕರಿಸಿ ಭಾವಲಿಂಗವನ್ನಾಗಿಸುವನು. ಈ ಭಾವಲಿಂಗವೇ ಇಷ್ಟಲಿಂಗದಲ್ಲಿ ನಿರಂಜನಲಿಂಗವಾಗಿ ತೋರುವದು.

ನಿರಂಜನಲಿಂಗ : ಪಶ್ಚಿಮಚಕ್ರವೆ ನೆಲೆ; ಶಿವಾದ್ವೈತವೆ ಕಳೆ, ನಿರಂಜನಾಕಾರ, ಅವಿರಳರೂಪು, ಏಕದಳ, ನಿರಾಳಪದ್ಮವಾಸ, ಜ್ಞಾನಶ್ಶೂನ್ಯ” ಎಂದು ನವಲಿಂಗ ಸಾಹಿತ್ಯಕಾರರು ನಿರಂಜನಲಿಂಗದ ನಿರೂಪಣೆ ಮಾಡಿದ್ದಾರೆ.

 

ಈ ಪಶ್ಚಿಮಚಕ್ರದ ವಿವರವನ್ನು ೮೩ನೆಯ ತ್ರಿಪದಿಯಲ್ಲಿ ನೋಡಬಹುದು. ನಿರಂಜನಲಿಂಗವೇ ಪರಾತ್ಪರ ವಸ್ತುವೆನಿಸಿದೆ. ಇಂಥ ನಿರಂಜನಲಿಂಗವನ್ನು ತೋರಿಸಿ ಪರಿರಂಜಿಸುವ ಗುರುವಿನ ಇರುವೆ ವರ್ಣನಾತೀತವಾದುದು.

ಜ.ಚ.ನಿ

  

ಗಿಡ ಮಾಗಡಿ ಎಂಬ ಪುರದ ಜಂಗಮದೇವ

ಮೃಡಕಣಾ ಭಿಕ್ಷವ ಬೇಡ್ಯಾನು !

ಪೊಡವಿಗೆ ಬಾಗಿ ನೀಡಲು ದೃಢದಿಂದ

ನೀಡಿಸಿಕೊಂಡಾನು |

ಮಲಾಪೂರ ತೀರದಿ ವಿರಕ್ತ ಜಂಗಮನೊಬ್ಬ

ನಲವಿಂದ ಹುಚ್ಚನೆನಿಸ್ಯಾನು !

ಲೋಲ ಜನಗಳು ಹೆಸರನೇ ಇಟ್ಟಾರು ಆ

ಸ್ಥಳದಲ್ಲಿಯೆ ಹೂಳಿಸಿಕೊಂಡಾನು”

ಹಳ್ಳೂರು ಕಾಲಜ್ಞಾನ

 

(ಕುಮಾರ ಯೋಗಿಯ ಶ್ರೀ ಶಿವಯೋಗ ಮಂದಿರ ಸ್ಥಾಪನೆಯ ಮಣಿಹವನ್ನು ಬಿತ್ತರಿಸುವ ಪುರಾತನ ಕಾಲಜ್ಞಾನವಿದು. ಇದರಿಂದ ಕುಮಾರಯೋಗಿಯ ಕಾರಣಿಕತನವು ಕಣ್ಮನಗಳಿಗೆ ಗೋಚರವಾಗುತ್ತದೆ.)

 

ಒಂದು ದಿನ ಬೆಳಗಿನ ಒಂಬತ್ತು ಗಂಟೆ, ಕುಮಾರ ಸ್ವಾಮಿಗಳವರು ಬೆಳಗಿನ ಪೂಜೆಯನ್ನು ಪೂರೈಸಿಕೊಂಡು ಹಾನಗಲ್ಲ ಮಠದ ತೂಗುಮಣೆಯ ಮೇಲೆ ಮಂಡಿಸಿದ್ದಾರೆ. ಪುರಾತನ ತಾಳೆಗರಿಯೊಂದನ್ನು ಹಸ್ತದಲ್ಲಿ ಹಿಡಿದು ಓದುತ್ತಿದ್ದಾರೆ. ಒಮ್ಮೊಮ್ಮೆ ತಟ್ಟನೆ ಸಂಸ್ಥೆಯ ಸ್ಥಾಪನೆಯ ವಿಷಯ ನೆನಪಿಗೆ ಬಂದು ಹಾಗೆಯೆ ಯೋಚನಾಮಗ್ನರಾಗುತ್ತಿದ್ದಾರೆ. ಅವರು ತೂಗುಯ್ಯಾಲೆಯಲ್ಲಿ ಕುಳಿತಿದ್ದರು. ಅದರ ಸೊಗದಲ್ಲಿ ತೂಗಿ ತೊನೆದಿದ್ದಿಲ್ಲ. ತೂಗುಯ್ಯಾಲೆಯಂತೆ ಅವರ ಮನಸ್ಸು, ಒಮ್ಮೆ ಪುರಾತನ ಗ್ರಂಥಪರಿಶೋಧನೆಯತ್ತ ಇನ್ನೊಮ್ಮೆ ಭಾವೀ ಶಿವಯೋಗಮಂದಿರ ಸಂಸ್ಥೆಯ ನಿರ್ಮಾಣಯೋಚನೆಯತ್ತ ತೂಗಾಡುತ್ತಿತ್ತು; ತೂಕಹಾಕುತ್ತಿತ್ತು.

 

ಅಷ್ಟರಲ್ಲಿ ಒಬ್ಬ ಮಹಾವ್ಯಕ್ತಿಯು ಅಲ್ಲಿಗೆ ಹಟಾತ್ತಾಗಿ ಬಂದು ಕಂಡು ಕಾಣದವರಂತೆ ಈ ಮಠದ ಸ್ವಾಮಿಗಳೆಲ್ಲಿ ಎಂದು ಗಟ್ಟಿಯಾಗಿ ಕೇಳಲು ಅಲ್ಲಿಯ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಊಳಿಗದವನು ಭಯಭಕ್ತಿಯುತನಾಗಿ ಕೈಸನ್ನೆಯಿಂದ ತೂಗುಮಣೆಯತ್ತ ತೋರಿಸಿ ಅವರೇ ಸ್ವಾಮಿಗಳೆಂದು ಸೂಚಿಸಿದನು. ಮಹಾವ್ಯಕ್ತಿಯು ತೂಗುಯ್ಯಾಲೆಯ ಬಳಿಗೆ ಬಂದು ನಮಿಸದೆ ಈ ಮಠದ ಸ್ವಾಮಿಗಳು ತಾವೇ ಏನು ? “ಅನ್ನುವರು. ಯಾರು ? ‘ಜನರು.’ ಅನ್ನುವವರು ಮೂರ್ಖರು, ಅವರಿಗೆ ಬುದ್ಧಿಯಿಲ್ಲ, ಕಾವಿ ಧರಿಸಿ ಕೋಲು ಹಿಡಿದರೆ ಸ್ವಾಮಿಯಲ್ಲ, ಹಾವುಗೆ ಹಾಕಿ ಹಾಸುಮಂಚದ ಮೇಲೆ ತೂಗಿದರೆ ಸ್ವಾಮಿಯಲ್ಲ. ಎಲ್ಲ ಭೋಗಭಾಗ್ಯಗಳನ್ನು ತೊರೆದು ಬಾಹ್ಯ ಚಿನ್ನಗಳ ಹುಚ್ಚು ಹರಿದು ನೆಲ ಹಾಸಿಕೆಯಾಗಿ ಮುಗಿಲು ಹೊದಿಕೆಯಾಗಿ ಶಮೆದಮೆಗಳೆಂಬ ಸುಗಂಧ ಪುಷ್ಪಗಳನ್ನು ಅಘ್ರಾಣಿಸಿ ಪ್ರಾತಿಭಾಸಿಕವಾದ ಪ್ರಪಂಚವನ್ನು ಪರಹಿತ ಸಾಧನೆಯ ಮಾರ್ಗದಲ್ಲಿ ಸತ್ಯವೆಂದು ಪರಿಭಾವಿಸಿ ಸೇವೆಗೈಯುವ ಸತ್ಯವಿರತಿಯ ಮಾರ್ಗವೆತ್ತ? ಭೋಗಭಾಗ್ಯದ ಸೆಳೆತಕ್ಕೆ ಸಿಕ್ಕಿ ನಾನು ಮಠಾಧಿಕಾರಿ; ನಾನು ಮಹಾಸ್ವಾಮಿ ಎಂಬ ಅಹಮಿಕೆಯಿಂದ ಸೊಕ್ಕಿ ಭೂತಲಕ್ಕೆ ಪಾದವನ್ನು ಸೋಂಕಿಸದೆ ಅಹಂಕಾರ ಮಮಕಾರ ಸರಪಣಿಗಳಿಂದ ಬಿರನೆ ಬಿಗಿದ ಈ ತೂಗುಮಂಚದ ಸಂಕೋಲೆಯ ಸುಖವೆತ್ತ? ಎಂದು ಮುಂತಾಗಿ ಯಾವ ಅಂಕು ಅಳಕು ಇಲ್ಲದೆ ಅಖಂಡಧೈರ್ಯದಿಂದ ಅರ್ಥಪೂರ್ಣವಾಗಿ ಆತ್ಮಾವೇಶದಿಂದ ಆರೋಪಿಸುತ್ತಿರುವ ಆ ಮಹಾವ್ಯಕ್ತಿಯನ್ನು ಕಂಡು ಸ್ವಾಮಿಗಳವರು ಎಷ್ಟು ಮಾತ್ರಕ್ಕು ಮುನಿಸು ತಾಳಲಿಲ್ಲ. ತಾವು ಆ ಕಟುವಾದ ಆರೋಪಣೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರಲ್ಲವೆ ಕೋಪಾವೇಶಗಳ ಆರ್ಭಟ? ಆ ಮಾತುಗಳಿಗೂ ಮನಸ್ಸಿಗೂ ತಾಕಲಾಟ? ಶುದ್ಧಮಾರ್ಗಗಾಮಿಗಳಿಗೆ ಸತ್ಯವಾಕ್ ಪ್ರೇಮಿಗಳಿಗೆ ಆ ನುಡಿಗಳು ಕುಸುಮಗಳಾಗಿಯೆ ಪರಿಣಮಿಸಬಲ್ಲವು. ಸ್ವಾಮಿಗಳವರಿಗೆ ಹಾಗೆಯೆ ಪರಿಣಮಿಸಿವೆ. ನಿಮಿತ್ತ ಮಾತ್ರ ತೂಗುಯ್ಯಾಲೆಯಲ್ಲಿ ಕುಳಿತ ಅವರಿಗೆ ಆ ಮಾತುಗಳಲ್ಲಿ ಕೋಪವೆಲ್ಲಿಯದು? ತಾಪವೆಲ್ಲಿಯದು? ಪ್ರತಿಯಾಗಿ ಇಂತಹ ಅಪೂರ್ವ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರಲ್ಲ ಎಂದು ಹೃದಯಾರೆ ಹರುಷಿಸಿ ನೀವಾರು? ಎಲ್ಲಿಂದ ಬಂದುದು? ಏನು ಸಂಗತಿ ? ಸ್ನಾನ ಶಿವಪೂಜೆ ಮಾಡಿಕೊಳ್ಳಿರಿ ಎಂದು ಮೊದಲಾಗಿ ಕುಶಲಪ್ರಶ್ನೆಗಳ ಕೇಳಿದಾರೆ.

 

ಅವರ ಉತ್ತರದಿಂದ ಅವರು ಪ್ರಸಿದ್ಧರಾಗಿದ್ದ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರೆಂದು ಮನವರಿಕೆಯಾಗುತ್ತದೆ. ಆಮೇಲೆ ಇಬ್ಬರು ಸೇರಿ ಸ್ನಾನ ಶಿವಪೂಜಾದಿ ಕ್ರಿಯೆಗಳನ್ನು ತೀರಿಸಿಕೊಳ್ಳುತ್ತಾರೆ. ತೀರದ ತೃಪ್ತಿಯಿಂದ ಮತ್ತೆ ಮಲ್ಲಣಾರ್ಯರು ಮಾತಿಗೆ ಮೊದಲು ಮಾಡುತ್ತಾರೆ; ಮನನೀಯವಾಗಿ ಮಾತನಾಡುತ್ತಾರೆ.

 

ಧಮ್ಮೋನ್ನತಿಗೆ ಬ್ರಹ್ಮಬಲ-ಕ್ಷಾತ್ರಬಲ ಎರಡು ಕಾರಣಗಳೇನು ನಿಜ. ವಿಶ್ವದ ಇತಿಹಾಸವನ್ನು ನೋಡಿದರೆ ಕ್ಷಾತ್ರಬಲದಿಂದ ಬೆಳೆದ ಧರ್ಮಕ್ಕೆ ಒಮ್ಮಿಲ್ಲೊಮ್ಮೆ ಬೀಳುಂಟೆಂದು ತಿಳಿದು ಬರುತ್ತದೆ. ಬೆಳಗಿನ ಬೆನ್ನ ಮೇಲೆ ಕತ್ತಲೆಯು ಕಾದಿರುವಂತೆ ಕ್ಷಾತ್ರಬಲದ ಮೇಲೆ ಮತ್ತೊಂದು ಕ್ಷಾತ್ರಬಲ ಕತ್ತಿಯನ್ನೆತ್ತಿ ತನ್ನ ಧರ್ಮಧ್ವಜವನ್ನು ಎತ್ತರದಲ್ಲಿ ಹಾರಿಸುತ್ತದೆ. ಈ ಏರಿಳಿತಗಳ ಸೋಂಕಿಲ್ಲದೆ ಏಕರೀತಿಯಲ್ಲಿ ಎಲ್ಲ ಕಾಲದಲ್ಲಿ ವೈಷಮ್ಯ ವೈಕಲ್ಯಗಳಿಲ್ಲದೆ ಧರ್ಮವು ಮುನ್ನಡೆಯಬೇಕಾದರೆ ಆತ್ಮಬಲದಿಂದ ಮತ್ತು ಅಹಿಂಸೆ ಸತ್ಯ ವಿರತಿ ವಿಶಾಲಮತಿ ಇವುಗಳ ಬೆಂಬಲದಿಂದ ಸ್ಥಾಪಿತವಾದ ಧರ್ಮವೆ ಚಿರಕಾಲ ಉಳಿಯಬಲ್ಲದು.

 

ಈಗ ಕಂದಿ ಕುಂದಿದ ಶಿವಯೋಗ ಧರ್ಮಕ್ಕೆ ಈ ಮಾರ್ಗದಿಂದ ಮೆರಗು  ಕೊಡಬೇಕಾಗಿದೆ. ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡ ಯೋಗ ಸಂಸ್ಥೆಯ  ಅವಶ್ಯಕತೆ ಅನಿವಾರ್ಯವಾಗಿದೆ. ಅದು ನಿಮ್ಮಿಂದ ನೆರವೇರಬೇಕಾಗಿದೆ; ನೆಲೆ ನಿಲ್ಲಬೇಕಾಗಿದೆ. ಏನು ಹೇಳುವಿರಿ?

 

ತಾವು ಮೊದಲೆ ಯೋಚಿಸುತ್ತ ಇದ್ದುದನ್ನೆ ಮಲ್ಲಣಾರ್ಯರು ಸೂಚಿಸಿದುದನ್ನು ಕೇಳಿ ಒಳಗೊಳಗೆ ತುಂಬಾ ಸಂತೋಷಭರಿತರಾದರು. ಮೇಲೆ ಇದಕ್ಕೆ ಅವರ ಬೆಂಬಲವಿದೆ ಇಲ್ಲವೊ ತಿಳಿಯಲು ಈ ಪ್ರಶ್ನೆಯನ್ನು ಹಾಕುತ್ತಾರೆ. ಸಂಸ್ಥೆಯನ್ನು ಸ್ಥಾಪಿಸಬೇಕಾದುದೇನೊ ಸರಿ, ಆದರೆ ಅದು ಅಪಾರ ದ್ರವ್ಯ ಬಲವಿಲ್ಲದೆ ಸಾಧ್ಯವಾಗದು. ಅಷ್ಟೊಂದು ದ್ರವ್ಯ ಈಗ ನಮ್ಮಲ್ಲಿಲ್ಲ. ಏನು ಮಾಡುವುದು?

ಈ ಮಾತಿಗೆ ಮಲ್ಲಣಾರ್ಯರು ಕಾಲು ತಾಗಿದ ಹಾವಿನಂತೆ ಮುನಿದೆದ್ದು ಮಹಾಸ್ವಾಮಿ, ತಮ್ಮಂತಹ ನಿರಾಭಾರಿ ವಿರಕ್ತರು ನಿರಂಜನ ಮೂರ್ತಿಗಳು ಮಠಮಾನ್ಯಗಳ ಮೋಹವನ್ನು ಕಳಚಿ ಮೇಲುಪ್ಪರಿಗೆಯ ತೂಗುಯ್ಯಾಲೆಯ ಸುಖಕ್ಕೆ ನೀರೆರಚಿ ಶಾಂತಿ ವಿಶ್ರಾಂತಿಗಳ ಹವ್ಯಾಸವನ್ನು ನುಣಚಿ ಡಾಂಭಿಕ ಭಕ್ತರ ಪರಡಿ ಪಾಯಸಗಳ ಸವಿಯೂಟವ ಹಿಳಿದು ಹಿಮ್ಮೆಟ್ಟಿ ಮೇಣೆ ಪಲ್ಲಕ್ಕಿಗಳ ವೈಭವವನ್ನು ಕನಸು ಮನಸಿನಲ್ಲಿ ನೆನೆಯದೆ ಸಮಾಜಸೇವೆಯ ಸತ್ಯಸಂಕಲ್ಪದ ಪ್ರತಿಜ್ಞೆ ಮಾಡಿ ಧಾರ್ಮಿಕ ಸಾಧನಗಳಾದ ಜೋಳಿಗೆ ಬೆತ್ತಗಳನ್ನು ಹಿಡಿದು ಆಚಾರನಿಷ್ಠೆಯೆಂಬ ಕುದರೆಯನೇರಿ ಪಯಣ ಬೆಳೆಸಿದರೆ ಲಕ್ಷಾಂತರ ರೂಪಾಯಿಗಳ ರಾಶಿ ‘ನಾ ನೀ’ ಅನ್ನುವದರೊಳಗಾಗಿ ಕೂಡಬೀಳುವುದು. ಇದಕ್ಕೆ ನಿಮ್ಮ ಮನೋಧೈವಿಲ್ಲದಿದ್ದರೆ ನಿಮ್ಮ ಆ ಜೋಳಿಗೆ ಬೆತ್ತಗಳನ್ನು ನನ್ನ ಕೈಗೆ ಕೊಡಿರಿ. ನಾನು ಮುಂದೆ ಮುಂದೆ ಪ್ರಯಾಣ ಮಾಡಿದಂತೆ ತಾವು ನನ್ನ ಹಿಂದೆಯಾದರು ದಯಮಾಡಿರಿ. ಆಮೇಲೆ ಆ ಯೋಗ ಸಂಸ್ಥೆಯು ಹೇಗೆ ಆಗುವುದಿಲ್ಲವೊ ನೋಡೋಣ! ಹಣ ಹೇಗೆ ಒದಗುವದಿಲ್ಲವೊ ನಿರೀಕ್ಷಿಸೋಣ! ಎಂದು ಕೆರಳಿ ನುಡಿದರು. ಕೆಲಸಕ್ಕೆ ಕೆರಳುವಂತೆ, ಕೆಚ್ಚೆದೆಯಿಂದ ತೆರಳುವಂತೆ ಮಾಡಿದರು.

 

ಆ ಭಾವಾವೇಶದ ಭಾಷಣವನ್ನು ಕೇಳಿಯೇ ಸ್ವಾಮಿಗಳವರು ಆ ಕಾರ್ಯಕ್ಕೆ ಮುಂದುವರೆಯುವ ಸನ್ನಿವೇಶ ಇರಲಿಲ್ಲ. ಅವರು ಮೊತ್ತಮೊದಲೆ ಕಾರ್ಯಾಲೋಚನೆಯಲ್ಲಿದ್ದರು. ಆದರೆ ಅವರ ಭಾಷಣದಿಂದ ಇಷ್ಟು ಮಾತ್ರ ಪ್ರಯೋಜನವಾಯಿತು; ಸ್ವಾಮಿಗಳವರು ಮುಂಗೋರುತ್ತಿದ್ದಂತೆ ಸಹಕರಿಸುವ ಒಬ್ಬ ಸಹೋದ್ಯೋಗಿಗಳು ಸಿಕ್ಕಿಂದತಾಯಿತು. ಯೋಚನೆ ಹೋಗಿ ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಇಬ್ಬರು ಸೇರಿ ಅರ್ಥವನ್ನು ಅರ್ಜಿಸಿ ಯೋಗಸಂಸ್ಥೆಯೊಂದನ್ನು ಸ್ಥಾಪಿಸುವ ದೃಢಸಂಕಲ್ಪ ಮಾಡಿದರು; ಧುರೀಣರಾಗಿ ನಿಂತರು.

 

ಸೇರಿ ಸಂಕಲ್ಪ ಮಾಡಿದ್ದು ಮಾತ್ರವೆ ! ಸ್ವಲ್ಪ ದಿನಗಳಲ್ಲಿಯೆ ಮಲ್ಲಣಾರ್ಯರು ದೀರ್ಘಕಾಹಿಲೆ ಮಲಗಿ ವಾಸಿಯಾಗದೆ ಉಲ್ಬಣವಾಗಿ ಅದರಲ್ಲಿಯೆ ಲಿಂಗೈಕ್ಯರಾದರು ಅವರಲ್ಲಿದ್ದ ನಿರೀಕ್ಷಣೆ ನೀರಾಯಿತು; ಆಶೆ ನಿರಾಶೆಯಾಯಿತು. ಸ್ವಾಮಿಗಳವರು ಮರಳಿ ಒಬ್ಬಂಟಿಗರಾದರು. ವರ್ಷಾಕಾಲದಲ್ಲಿ ಮಿಂಚು ಮಿಂಚಿದಂತಾಯಿತು. ಮರುಕ್ಷಣದ ಮತ್ತಿಷ್ಟು ಕಗ್ಗತ್ತಲೆ ಕವಿದಂತಾಯಿತು; ಕಣ್ಣು ಕಾಣದಂತಾಯಿತು.

 

ಏನಾದರೇನು ? ಕುಮಾರಸ್ವಾಮಿಗಳವರು ಅಷ್ಟೇನು ಅಳ್ಳೆದೆಯವರಾಗಿರಲಿಲ್ಲ ಸಹಾಯಕರಿರಲಿ ಇಲ್ಲದಿರಲಿ, ಸಿರಿಬರಲಿ ಉರಿಬರಲಿ ಮುನ್ನುಗ್ಗಿದ ಮೇಲೆ ಹಿಂದಡಿಯಿಡುತ್ತಿರಲಿಲ್ಲ. ಹೇಡಿಗಳಂತೆ ಹಿಮ್ಮುಖರಾಗುತ್ತಿರಲಿಲ್ಲ. ಮಾಡಿದ ಸಂಕಲ್ಪವನ್ನು ಕೈ ಬಿಡದೆ ಇನ್ನೂ ಇಮ್ಮಡಿ ಉತ್ಸಾಹದಿಂದ ಕೆಲಸ ಮಾಡಲಾರಂಭಿಸಿದರು. ಮಲ್ಲಣಾರ್ಯರ ಉತ್ಸಾಹ ಶಕ್ತಿ ಬಂದು ಸ್ವಾಮಿಗಳವರಲ್ಲಿ ಸಂಪರ್ಕವಾಯಿತು. ಎರಡಳಿದು ಒ೦ದಾದಂತಾಯಿತು.

 

ಕುಮಾರ ಸ್ವಾಮಿಗಳವರು ಕಂಡ ಕಂಡ ಕಡೆಗೆ ಸುತ್ತಿದರು. ತಮ್ಮ ಮತಿವಂತಿಕೆಯಿಂದ ಧೃತಿವಂತಿಕೆಯಿಂದ ಅನತಿಕಾಲದಲ್ಲಿಯೆ ಹದಿನಾಲ್ಕು ಸಾವಿರಕ್ಕೆ ಕಡಿಮೆಯಿಲ್ಲದಷ್ಟು ಹಣವನ್ನು ಸಂಗ್ರಹಿಸಿದರು. ಅಷ್ಟು ಜಾಗ್ರತೆ ಅಷ್ಟೊಂದು ಅರ್ಥಸಂಗ್ರಹವಾದುದು ಅನೇಕರಿಗೆ ಅಚ್ಚರಿಯೆನಿಸಿರುವಂತೆ ಸ್ವಾಮಿಗಳವರು ವಿಸ್ಮಯಗೊಂಡರು. ನಿಸ್ವಾರ್ಥಿಗಳಿಗೆ ನಿತ್ಯ ಲಕ್ಷ್ಮಿಯು ತಾನೆ ತಾನಾಗಿರುವಳೆಂಬ ಮಾತು ನಿಜವಾಗಿಯು ಸ್ವಾಮಿಗಳವರಲ್ಲಿ ಸಾರ್ಥಕವಾಗಿತ್ತು; ಸಂಪ್ರೋಕ್ತವಾಗಿತ್ತು.

 

ಕ್ರಿ.ಶ. ಸಾವಿರದಾ ಒಂಬೈನೂರು ಎಂಟನೆಯ ಸಾಲು, ಬಾಗಲಕೋಟೆಯಲ್ಲಿ ಆ ಸಲ ವೀರಶೈವ ಮಹಾಸಭೆಯು ಜರುಗಬೇಕೆಂದು ನಿರ್ಧಾರವಾಗಿತ್ತು. ಆಗಳೆ ಅದರ ಪ್ರಕಟಣೆಗು ಆರಂಭವಾಗಿತ್ತು. ಸ್ವಾಮಿಗಳವರು ಅದೇ ಪ್ರಕಟನೆಯಲ್ಲಿಯೆ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯ ವಿಷಯವನ್ನು ಪ್ರಕಟಿಸಿದರು. ನಿಯಮಿತ ಕಾಲಕ್ಕೆ ಸಭೆ ಜರುಗಿತು. ಸಭೆಯ ಕಾರ್ಯಕಾರಿ ಸಮಿತಿಯಲ್ಲಿ ಶ್ರೀ ಮ.ನಿ.ಪ್ರ. ಇಳಕಲ್ಲ ಮಹಾಂತಸ್ವಾಮಿಗಳವರು ತೋರಿಸಿದಲ್ಲಿ ಮಂದಿರವನ್ನು ಸ್ಥಾಪಿಸುವಂತೆ ತೀರ್ಮಾನವಾಯಿತು.

ಆಲೋಚಿಸಿದ ಕಾರ್ಯವನ್ನು ಅಲ್ಲಿಗೆ ಕೈ ಬಿಡುವುದು ಕುಮಾರಸ್ವಾಮಿಗಳವರ ಸ್ವಭಾವವಾಗಿರಲಿಲ್ಲ. ಅದು ಬೇಗ ಕಾರ್ಯರೂಪಕ್ಕೆ ಬಾರದ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅದರಿಂದಾಗಿ ಸ್ವಾಮಿಗಳವರು ಆ ಕ್ಷಣದಲ್ಲಿಯೆ ಇಳಕಲ್ಲಿಗೆ ಹೋಗಿ ಆ ಶ್ರೀಗಳವರಿಗೆ ಆದ್ಯಂತವನ್ನೆಲ್ಲ ಅರಿಕೆ ಮಾಡಿ ಸ್ಥಳವನ್ನು ತೋರಿಸಲು ಆಗಳೆ ಹೊರಡಿಸಿದರು. ಜೊತೆಗೆ ಜಿಲ್ಲಾಧಿಕಾರಿಗಳಾಗಿದ್ದ ಕಿತ್ತೂರ ರೇವಣಸಿದ್ದಪ್ಪನವರು ಮತ್ತು ಧಾರವಾಡ, ಹುಬ್ಬಳ್ಳಿ, ಗದಗ, ಬಾಗಲಕೋಟ ಮುಂತಾದ ನಗರಗಳ ೨೦-೩೦ ಜನ ಪ್ರಮುಖರು ಸಹ ಹೊರಡುವರು. ಹುನಗುಂದ ಮಾರ್ಗವಾಗಿ ಹೊರಟು ಐತಿಹಾಸಿಕ ಪ್ರಸಿದ್ಧವಾದ ಐಹೊಳೆಯ ಕ್ಷೇತ್ರಕ್ಕೆ ಬಂದರು. ಅಲ್ಲಿನ ಪುರಾತನ ದೇವ ಮಂದಿರಗಳನ್ನು ನೋಡಿ ಕೆಲವರು ಅಲ್ಲಿಯೆ ಸ್ಥಾಪಿಸಲು ಇಷ್ಟಪಟ್ಟರು. ಅದಕ್ಕೆ ಇಳಕಲ್ಲ ಶ್ರೀಗಳವರ ಒಪ್ಪಿಗೆಯಾಗಲಿಲ್ಲ. ಇದು ಏಕಾಂತತೆಗೆ ಭಂಗವೆಂದು ಅವರ ಹೇಳಿಕೆ. ಅಲ್ಲಿಂದ ಮತ್ತೊಂದು ಐತಿಹಾಸಿಕ ಪ್ರಸಿದ್ಧವಾದ ಪಟ್ಟದಕಲ್ಲಿಗೆ ಆಗಮಿಸಿದರು. ಅಲ್ಲಿ ಕೆಲವರು ತಮ್ಮ ಬಯಕೆಯನ್ನು ಬಿಚ್ಚಿ ಬಿನ್ನಿಸಿದರು. ಅದಕ್ಕೆ ಶ್ರೀಗಳವರು ಅಲ್ಲಿಯ ಪಕ್ಕದಲ್ಲಿದ್ದ ನಾಗರಹಾವನ್ನು ತೋರಿಸಿ ಇಲ್ಲಿ ಬೇಡ ಎಂದು ಸಮಾಧಾನ ಹೇಳಿದರು. ಎಲ್ಲರನ್ನು ಶಿವಪೂಜೆಗಾಗಿ ಅಲ್ಲಿಯೆ ಬಳಿಯಲ್ಲಿರುವ ಪುರಾಣಪ್ರಸಿದ್ದವು ಪವಿತ್ರವು ಆದ ಮಾಕೂಟಕ್ಕೆ ಕಳುಹಿಸಿ ತಾವು ಸ್ವಲ್ಪ ಹೊತ್ತು ಪಟ್ಟದಕಲ್ಲಿನಲ್ಲಿಯೆ ವಿಶ್ರಮಿಸಿ ಬಳಿಕ ಮಲಾಪಹಾರಿಣಿ ನದಿಯ ತೀರವನ್ನು ಹಿಡಿದು ಹೊರಟು ಈಗಿರುವ ಶಿವಯೋಗ ಮಂದಿರ ಸ್ಥಳದ ಹತ್ತಿರಕ್ಕೆ ಬರುವರು. ಎತ್ತ ನೋಡಿದರು ಹೆಗ್ಗಾಡು, ಕಗ್ಗಾಡು, ಹೆಜ್ಜೆಯಿಡಲು ಸಾಧ್ಯವಿಲ್ಲದಂತೆ ಮುಳ್ಳು ಗಳ್ಳಿ (ಪಾಪಾಸುಕಳ್ಳಿ) ಬೆಳೆದು ನಿಂತಿದೆ. ಏನೂ ಸರಿಯಾಗಿ ಕಾಣುವಂತಿಲ್ಲ. ಮತ್ತೊಂದೆಡೆಗೆ ಶ್ರೀಗಳು ನೋಡುತ್ತಾರೆ. ಹೊಲದಲ್ಲಿ ಒಬ್ಬ ರೈತನು ಕಾಣಿಸಿಕೊಂಡನು. ಅವನ ಬಳಿಗೆ ಬಂದು ಸ್ಥಳ ಪರಿಚಯವನ್ನು ಕೇಳಿದರು. ಇಲ್ಲಿ ಎಲ್ಲಿಯಾದರು ನದಿಗೆ ಸಮೀಪದಲ್ಲಿ ಬಿಲ್ವಪತ್ರೆಯ ವನವಿರುವ ಸ್ಥಳವನ್ನು ತೋರಿಸು ಎಂದೆನ್ನುವರು. ರೈತನು ಇದೋ ಈ ದಬದಭೆಯ (ದಿಡಗಿನ) ದಂಡೆಯ ಸಮೀಪದಲ್ಲಿ ಬೇಕಾದಷ್ಟು ಪತ್ರೆಯ ಗಿಡಗಳಿವೆ ಎಂದು ತೋರಿಸಿದನು. ಶ್ರೀಗಳವರು ಮೇಲಿನಿಂದ ಕೆಳಕ್ಕೆ ಧೋ ಎಂದು ಶಬ್ದಮಾಡುತ್ತ ಬೀಳುವ ಹೊಳೆಯ ರಮ್ಯತೆಯನ್ನು ನೋಡಿ ಸಂತೋಷಿಸಿದರು. ಇಲ್ಲಿ ಇನ್ನೇನಿದೆ ತೋರಿಸೆಂದು ಕೇಳಿದಕ್ಕೆ ರೈತನು ಅದೇ ನಿಬಿಡವಾಗಿ ಬೆಳೆದ ಮುಳ್ಳಗಳ್ಳಿಯ ಪೊದೆಗಳಲ್ಲಿ ದೂರಿ ಸ್ವಾಮಿಗಳವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುವನು. ಅಲ್ಲಿ ಬಿಲ್ವವನ, ಅದರ ಬಳಿಯಲ್ಲಿ ಒಂದು ಮುರಿದ ಬಿದ್ದ ಸಣ್ಣ ಗುಡಿ, ಅದರಲ್ಲಿ ದೇವರೆ ಇರಲಿಲ್ಲ. ಸ್ವಾಮಿ, ಇದು ಕೊಟ್ಟೂರು ಬಸವೇಶ್ವರ ದೇವಸ್ಥಾನ,

ನಾವೆಲ್ಲ ಶ್ರಾವಣ ಸೋಮವಾರಗಳಲ್ಲಿ ಬಂದು ಇದಕ್ಕೆ ಎಡೆ ಕಾಯಿ ಕಪ್ಪುರಗಳನ್ನು ಸಮರ್ಪಿಸುತ್ತೇವೆ; ಎಂದು ಹೇಳಿದನು.

 

ಶ್ರೀಗಳವರು ಆ ಮಾತಿಗೆ ಓಹೋ ! ಇದು ಕೊಟ್ಟರು ಬಸವ; ಕೊಡದಿದ್ದರು ಬಸವ ಎಂದು ನುಡಿದು ಅಲ್ಲಿಯೆ ಕುದುರೆಯಿಂದಿಳಿದು ಕುಳಿತುಕೊಳ್ಳುವರು. ಅದೇ ರೈತನನ್ನು ಕಳುಹಿಸಿ ಮಾಕೂಟದಲ್ಲಿರುವವರನ್ನೆಲ್ಲ ಕರೆಯಿಸುವರು. ಇದೋ ಇದೆ ಶಿವಯೋಗ ಮಂದಿರವನ್ನು ಕಟ್ಟಲು ತಕ್ಕ ಸ್ಥಳ. ಇಲ್ಲಿಗೆ ನದಿಯು ತೀರ ಹತ್ತಿರದಲ್ಲಿದೆ. ಬೇಕಾದಷ್ಟು ಬಿಲ್ವವೃಕ್ಷಗಳಿವೆ. ಸೊಂಪಾದ ಲತಾ ಮಂಟಪಗಳಿವೆ. ಇಲ್ಲಿಯೆ ಸಂಸ್ಥೆಯನ್ನು ನಿರ್ಮಿಸಲು ಉಚಿತವಾಗಿದೆ ಎಂದು ಅಪ್ಪಣೆ ಮಾಡಿದರು. ಇದಕ್ಕೆ ಅನೇಕರ ಒಪ್ಪಿಗೆಯಿಲ್ಲದಿದ್ದರು ವಿಧಿಯಿಲ್ಲದೆ ಕೊನೆಗೆ ಎಲ್ಲರೂ ಒಪ್ಪಿದರು. ಆ ಕ್ಷಣದಲ್ಲಿಯೇ ಅದೇ ಕೊಟ್ಟೂರು ಬಸವೇಶ್ವರನ ಗದ್ದುಗೆಯ ಮುಂದೆ ಕಪ್ಪುರ ಹಚ್ಚಿ ಕಾಯಿ ಒಡೆದು ಮಂಗಳಾರತಿ ಮಾಡಿದರು. ಆಗ ಸುಮಾರು ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತು. ಶ್ರೀಗಳು ಈಗ ನಾವು ಊರಿಗೆ ಹೋಗಿ ಏಳೆಂಟು ದಿನಗಳಲ್ಲಿ ಒದಗುವ ರಥಸಪ್ತಮಿಗೆ ಲಿಂಗಮುದ್ರೆಯನ್ನು ಸ್ಥಾಪಿಸಲು ಬರುತ್ತೇವೆ. ಅಲ್ಲಿಯವರೆವಿಗು ನೀವೆಲ್ಲರು ಇಲ್ಲಿಯ ಇದ್ದು, ಈ ಸ್ಥಳವನ್ನು ವಿಕ್ರಯಕ್ಕೆ ಪಡೆದು ಸ್ವಚ್ಛಮಾಡಿರಬೇಕೆಂದು ಹೇಳಿ ಕುದುರೆಯೇರಿ ಅದೇ ಹೊರಟು ಹೋದರು. ಹಳ್ಳಿಯ ರೈತನು ಹಳ್ಳಿಗೆ ಹೊರಟು ಹೋಗುವನು. ಹೊತ್ತು ಮುಳುಗುವುದು.

 

ಪುಷ್ಯಮಾಸದ ಅಮಾವಾಸ್ಯೆ ಕತ್ತಲೆಯ ಪಾಳೆಯವಾಗಿತ್ತು. ಸುತ್ತಲು ಮುಳ್ಳುಪೊದೆಗಳು ವಿಶೇಷವಾಗಿ ಬೆಳೆದು ನಿಂತಿವೆ. ಕಾಡುಮೃಗಗಳ ಕಳ್ಳಕಾಕರ ಭಯ ಎಲ್ಲರನ್ನು ಬಾಧಿಸತೊಡಗಿತು. ಅಂತಹದರಲ್ಲಿ ಹಾನಗಲ್ಲ ಸ್ವಾಮಿಗಳವರು ತಮ್ಮೊಡನೆ ಬಂದವರಿಗೆಲ್ಲ ಧೈಯ್ಯಹೇಳುತ್ತ ಧೀರೋದಾತ್ತರಾಗಿ ಧುರಂಧರರಾಗಿ ಧರ್ಮನಿಷ್ಠರಾಗಿ ನಿಂತಿದ್ದಾರೆ. ಅಷ್ಟರಲ್ಲಿ ಹಕ್ಕಿಗಳು ಹಾಡಿದವು, ಚುಕ್ಕಿಗಳು ಮೂಡಿದವು. ನದಿಯು ನಿರ್ಮಲೋದಕವ ನೀಡಿತು. ವನದೇವತೆ ವನ್ಯಮೃಗಗಳಿಗೆ ಅಹಿಂಸೆಯಿಂದಿರಲು ಶಾಸಿಸಿತು. ಅದರಿಂದಾಗಿ ಕಾಡ ಹಂದಿಗಳು ಚಿರ್ಚುಗಳು ತಮ್ಮ ಗೂಡ ಸೇರಿದವು. ವನಪಶುಗಳು ಸಹ ಕುಮಾರಸ್ವಾಮಿಗಳವರ ಧಮ್ಮಕಾರ್ಯಕ್ಕೆ ನೆರವಾದವು. ನಿಸರ್ಗವು ಸಹ ಸ್ವಾಮಿಗಳ ದರ್ಮೋದ್ಯಮದ ಮೂರ್ತಿರೂಪವನ್ನು ತಾಳಿದಂತಿತ್ತು. ಯಾವುದರಿಂದ ಯಾವ ಭಯವು ಯಾರಿಗಾಗಲಿಲ್ಲ. ಎಲ್ಲರು ಮರದ ಬುಡದಲ್ಲಿ ಶಿವಪೂಜೆಯನ್ನು ಮಿತಾಹಾರವನ್ನು ನೆರವೇರಿಸಿ ವನ್ಯಭೂಮಿಯ ಮೇಲೆ ಮಲಗಿದರು.

 

ಪುಷ್ಯದ ಮಸುಗು ಹರಿಯಿತು. ಮಾಘದ ಬೆಳಗು ಮೂಡಿತು. ಮುಂದಿನ ಮಹಾಕಾರ್ಯಕ್ಕೆ ಪ್ರಕೃತಿ ದೇವಿ ಚೆಂಬಣ್ಣದ ಚಿಗುರುಡಿಗೆಯನುಟ್ಟು ರವಿತಿಲಕವನಿಟ್ಟು ಕಿರಣಭಸಿತವ ಧರಿಸುವಳು. ನೀಲಾಕಾಶದ ತಳಿಗೆಯಲ್ಲಿ ಜಗಜ್ಯೋತಿಯನ್ನಿಟ್ಟು ಮಂಗಳಾರತಿಯ ಮಾಡುವಳು. ಹಕ್ಕಿಗಳು ಮಂಜುಳ ಘೋಷವ ಮಾಡುವವು. ಲತಾಕುಂಜಗಳು ಮಗ್ಗುಮಂಜರಿಗಳ ಮಾಲೆಯ ಹಾಕಲು ಸಜ್ಜಾಗಿರುವವು. ಸೂರ್ಯೋದಯದೊಡನೆ ಶುಭೋದಯವಾಯಿತು.

 

ಎಲ್ಲರು ಎದ್ದರು. ಮೊಗದೊಳೆದರು. ಮುಂಜಾವಿನ ಆ ನಿಸರ್ಗಮನೋಹರ ದೃಶ್ಯವನ್ನು ಕಣ್ಣುಂಬ ನೋಡಿ ನಲಿದರು. ನಗರಗಳಲ್ಲಿ ಈ ನಿರ್ಮಲ ನಿಸರ್ಗದೃಶ್ಯ ಎಲ್ಲಿಂದ ಬರಬೇಕು ? ಎಷ್ಟು ಕೊಟ್ಟರೆ ದೊರೆಯಬೇಕು ಎಂದು ಮನವಾರೆ ಕೊಂಡಾಡಿದರು. ಮುಂದಿನ ಕಾರ್ಯಕ್ಕೆ ಅಣಿಯಾದರು.

ಕುಮಾರಮಹಾಸ್ವಾಮಿಗಳವರು ಕಿತ್ತೂರ ರೇವಣಸಿದ್ಧಪ್ಪನವರನ್ನು ಗುಳೇದಗುಡ್ಡ ಜಿರ್ಲಿ ಮುರಘಪ್ಪನವರನ್ನು ಕೂಡಿಕೊಂಡು ಪಕ್ಕದಲ್ಲಿರುವ ‘ಮಂಗಳೂರು’ ಎಂಬ ಹಳ್ಳಿಗೆ ಹೋಗುವರು. ಹಲವರನ್ನು ವಿಚಾರಿಸಿ ಆ ಹೊಲದ ಒಡೆಯನನ್ನು ಗುರುತಿಸುವರು. ಅವನು ತೀರ ಬಡವನಾಗಿದ್ದನು. ವಿಶೇಷವಾಗಿ ಮುಳ್ಳುಗಳ್ಳಿ ಬೆಳೆದ ಭೂಮಿಯಲ್ಲಿ ಬೆಳೆಯಿಡಲು ಅವನಿಗೆ ಸಾಧ್ಯವಾಗದೆ ಹೋಗಿತ್ತು. ಅದರಿಂದಾಗಿ ಪ್ರತಿವರ್ಷವು ಕೈಯಿಂದ ಕಂದಾಯ ಕಟ್ಟಿ ಬೇಸತ್ತಿದ್ದನು. ಬೇರೆ ಯಾರು ಅದನ್ನು ತೆಗೆದುಕೊಳ್ಳುವರಿರಲಿಲ್ಲ. ಹೀಗಾಗಿ ಯಾರಾದರು ಗಿರಾಕಿ ಬಂದರೆ ಸಾಕಾಗಿತ್ತು. ತಕ್ಷಣವೆ ಕ್ರಯಕ್ಕೆ ಕೊಡಲೊಪ್ಪಿದನು. ಬೆಲೆ ಇನ್ನೂರು ರೂಪಾಯಿಗಳೆಂದು ನಿರ್ಧಾರವಾಯಿತು. ಹಣವನ್ನು ಆತನಿಗೆ ಕೊಟ್ಟು ಕ್ರಯಪತ್ರ ಬರೆಯಿಸಿಯಾಯಿತು. ಬಂದೊಡನೆ ಬಂದ ಕಾರ್ಯವಾದುದಕ್ಕೆ ಸ್ವಾಮಿಗಳವರಿಗೆ ಸಂತೋಷವಾಯಿತು. ಮುಳ್ಳುಗಳ್ಳಿ ಕಡಿದು ಹಾಕಲು ಮೂವತ್ತು ನಾಲ್ವತ್ತು ಜನ ಆಳುಗಳನ್ನು ಕರೆತಂದು ಕೆಲಸಕ್ಕೆ ಪ್ರಾರಂಭಿಸಿದರು. ನಾಲೈದು ದಿನ ಅದೇ ಒಂದು ದೃಶ್ಯವಾಗಿತ್ತು. ಅದೇ ಒಂದು ಕಾಲಕ್ಷೇಪವಾಗಿತ್ತು.

 

ಆರನೆಯ ದಿನ ಐದಾರು ಪರ್ಣಕುಟೀರ ತೃಣಕುಟೀರಗಳನ್ನು ಅಂದವಾಗಿ ನಿರ್ಮಿಸಿದರು. ಬೆಳಗಾದರೆ ರಥಸಪ್ತಮಿ, ಶಿವಯೋಗ ಮಂದಿರ ಸ್ಥಾಪನೆಯ ದಿನ. ಇಳಕಲ್ಲಿನಿಂದ ಶ್ರೀ ಮಹಾಂತಸ್ವಾಮಿಗಳವರು ಬರುವ ನಿರೀಕ್ಷಣೆ, ಸುತ್ತು ಮುತ್ತಣ್ಣ ಹಳ್ಳಿಗಳ ಜನರಿಗೆಲ್ಲ ಒಂದು ಅಭೂತಪೂರ್ವವಾದ ಉತ್ಸಾಹ. ಗಿಡಗಂಟಿಗಳನ್ನು ಕಡಿದು ಹಸನಮಾಡಿದರು. ಪರ್ಣಕುಟೀರಗಳ ಮುಂದೆ ಮಾಂದಳಿರ ತೋರಣ ಕಟ್ಟಿ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ಲಿಂಗಮುದ್ರೆಗಳನ್ನು ಕೆತ್ತಿಸಿ ಒಂದೆಡೆಗೆ ಇರಿಸಿದ್ದರು. ಆ ವೇಳೆಗೆ ಇಳಕಲ್ಲಿನಿಂದ ಶ್ರೀಗಳವರು ತಮ್ಮ ಪ್ರೀತಿಯ ಹಸುವಿನೊಂದಿಗೆ ಬರುವರು. ಆ ಸಂಭ್ರಮಕ್ಕೆ ವನದೇವತೆಯು ಬನಶಂಕರಿಯ ರೂಪದಲ್ಲಿ ಬಂದಿದ್ದಳು. ಐಹೊಳೆಯ ಭಕ್ತರು ಐತಂದು ಹೊಳೆ ನೀರಿನಿಂದ ಚಳಕಹೊಡೆದರು. ಪಟ್ಟದಕಲ್ಲಿನವರು ಲಿಂಗಮುದ್ರೆಯ ಕಲ್ಲುಗಳನ್ನು ಸಂಸ್ಥೆಯ ಪಟ್ಟಕ್ಕಾಗಿ ತಯಾರಿಸಿದ್ದರು. ಮಂಗಳೂರಿನವರ ಮಂಗಳವಾದ್ಯದೊಡನೆ ಶಿವಯೋಗ ಮಂದಿರ ಶುಭಸಂಸ್ಥೆಯು ಸ್ಥಾಪಿತವಾಯಿತು. ಬಾದಾಮಿಯವರು ಬಾದಾಮು ತೂರಿದರು. ನಿಲುವಿಗೆಯವರು ನೆಲೆಯಾಗಿ ನಿಲ್ಲುವಂತೆ ನೆರವಿತ್ತರು, ಈ ಎಲ್ಲ ಗ್ರಾಮದವರು ಸೇರಿದ್ದರಿಂದ ಅದೇ ಒಂದು ಮಹಾಕೂಟವಾಯಿತು. ಮಹಾವೈಭವದಿಂದ ನಡೆಯಿತು. ಸುತ್ತಣ ಈ ಗ್ರಾಮನಾಮಗಳಲ್ಲಿ ಮಂಗಲೋತ್ಕರ್ಷಗಳು ತುಂಬಿ ತುಳುಕುತ್ತಿವೆ. ಎಷ್ಟು ಅರ್ಥಪೂರ್ಣವಾದ ಉತ್ಕರ್ಷಪೂರ್ಣವಾದ ಮಂಗಳಪೂರ್ಣವಾದ ಹೆಸರುಗಳಿವು. ಅಂತಹ ಗ್ರಾಮಗಳ ಮಧ್ಯದಲ್ಲಿ ಶಿವಯೋಗ ಮಂದಿರ ಮಹಾಸಂಸ್ಥೆಯು ಸ್ಥಾಪಿತವಾದುದು ಮತ್ತೂ ಹೆಚ್ಚಿನ ಮಾಂಗಲ್ಯೋದಯವಾಯಿತು. ಪುಣ್ಯೋದಯವಾಯಿತು. ಅಯಾಗ್ರಾಮಗಳ ಹೆಸರುಗಳು ಅಂದಿನಿಂದ ಸಾರ್ಥಕವಾದವು, ಅವುಗಳಂತೆ ಶಿವಯೋಗ ಮಂದಿರ ಎಂಬುದು ಅರ್ಥಪೂರ್ಣವಾದ ಅನ್ವರ್ಥನಾಮ. ಭವರೋಗವನ್ನು ಕಳೆದು ಶಿವಯೋಗವನ್ನು ಉಂಟುಮಾಡುವ ಆಶ್ರಮ. ಹಿಂದಿನ ಕ್ಷಣದಲ್ಲಿ ಕ್ರೂರ ಮೃಗಗಳ ವಾಸದಿಂದ ಕಳ್ಳಕಾಕರ ತ್ರಾಸಿನಿಂದ ಭೀಕರವಾದ ಅರಣ್ಯವು ಮರುಕ್ಷಣದಲ್ಲಿಯ ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ನೆರೆದ ಭಕ್ತವೃಂದವು ನೋಡಿ ಸಂತೋಷಪಟ್ಟಿತು. ಸಂತೋಷವಲ್ಲಿ ಶ್ರೀ ಶಿವಯೋಗಮಂದಿರಕ್ಕೆ ಜಯವಾಗಲಿ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರಿಗೆ ಜಯವಾಗಲಿ, ಶ್ರೀ ಇಳಕಲ್ಲ ವಿಜಯಮಹಾಂತ ಶ್ರೀಗಳವರಿಗೆ ವಿಜಯವಾಗಲಿ ಎಂದು ಒಕ್ಕೊರಲಿನಿಂದ ಜಯನಿನಾದ ಮಾಡಿದರು. ಆ ನಿನಾದವು ನಾಲ್ದೆಸೆಗು ಇರುವ ಕಾನನಗಳಲ್ಲಿ ಪ್ರತಿಧ್ವನಿಸಿ ಮುಗಿಲ ಮುಟ್ಟಿತು.

 

ಆಶ್ರಮದ ನಿಸರ್ಗಶೋಭೆ ಆಗಂತುಕರ ಆಯಾಸವನ್ನು ಪರಿಹರಿಸುವಂತಹದು. ಪಕ್ಕದಲ್ಲಿಯೆ ತಿಳಿಯಾಗಿ ಹರಿಯುವ ಮಲಾಪಹಾರಿಣಿ ನದಿಯು, ಅದು ಕಲ್ಲು ಬಂಡೆಗಳ ಮೇಲಿಂದ ದಭ ದಭ ಎಂದು ಉಲಿಯುತ್ತ ಉರುಳುತ್ತದೆ. ಅದರಿಂದ ಅದಕ್ಕೆ ‘ದಭದಭ ಎಂದರೆ ಜಲಪಾತವೆಂದು ಹೆಸರು ಬಂದಿದೆ. ತೊರೆಯ ತೀರದಲ್ಲಿ ಹಚ್ಚಗೆ ಹಸುರು ಮುಡಿದದರ್ಭೆಯ ಹುಲ್ಲು, ಹೂತು ಕಾತು ಕಂಗೊಳಿಸುವ ತರುಲತೆಗಳು. ಹೂಗಂಪನು ಹೊತ್ತು ಹಗುರಾಗಿ ತೀಡುವ ತಂಗಾಳಿ, ಇವು ಪಾಂಥರ ಪರಿಶ್ರಮವನ್ನು ಪರಿಹರಿಸುತ್ತವೆ. ಕುಕಿಲ್ವ ಕೋಕಿಲೆಗಳು ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು, ಓಡಾಡುವ ಮೊಲ ಅಳುಲೆಗಳು ನೋಡುವವರ ನೋಟ ತಣಿಸುತ್ತವೆ. ತೊರೆಯ ತೀರದಲ್ಲಿ ಅನುಷ್ಠಾನಕ್ಕೆಂದು ಕಟ್ಟಿಸಿದ ಹುಲ್ಲುಗುಡಿಸಲುಗಳು, ಕಲ್ಲುಗವಿಗಳು ತಾವಾಗಿ ಹಬ್ಬಿ ಹಣೆದು ನಿಂತ ಕುಂಜ ನಿಕುಂಜಗಳು ದಟ್ಟವಾಗಿ ಬೆಳೆದು ಹಣ್ಣು ಗೊಂಚಲುಗಳಿಂದ ರಾಜಿಸುವ ನೇರಲ ವೃಕ್ಷಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನು ಸೆಳೆದು ಶಾಂತಿಗೊಳಿಸುವವು. ಅದರಲ್ಲಿಯು ಚೈತ್ರ ಮಾಸದ ಹುಣ್ಣಿಮೆಯ ತಿಂಗಳ ಬೆಳದಿಂಗಳಿನಲ್ಲಿ ನಿಂತು ಸುತ್ತುಮುತ್ತಣ ಆ ನೈಸರ್ಗಿಕ ವನಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ.

“ಅಳಿಸಂಕುಲವೆ ಮಾಮರವೆ ಬೆಳದಿಂಗಳೆ ಕೋಗಿಲೆಯೆ

ನಿಮ್ಮ ನಿಮ್ಮನೆಲ್ಲರನು ಒಂದು ಬೇಡುವೆನು.

ಎನ್ನ ಚನ್ನಮಲ್ಲಿಕಾರ್ಜುನನು ಇದ್ದರೆ ಕರೆದು ತೋರಿರೆ.”

 

ಎಂಬ ವಚನವನ್ನು ಅಕ್ಕಮಹಾದೇವಿಯು ಇಲ್ಲಿಯೇ ನಿಂತು ಹಾಡಿರಬಹುದೆ ಹಂಬಲಿಸಿರಬಹುದೆ ಎಂದು ಭಾಸವಾಗುತ್ತದೆ; ವಾಣಿಯಿಂದ ಅದೇ ವಚನವನ್ನು ಹಾಡಿಸುತ್ತದೆ. ನೋಡುವವರ ಕಣ್ಮನಗಳು ಆ ಕಾಡ ಚಲುವಿನಲ್ಲಿ ತಲ್ಲೀನವಾಗಿ ಬಿಡುತ್ತವೆ.

 

ಕುಮಾರ ಸ್ವಾಮಿಗಳವರ ಪರಿಶ್ರಮದ ಫಲವಾಗಿ ಅಲ್ಲಿ ಹತ್ತು ಹನ್ನೆರಡು ಭವ್ಯ ಕಟ್ಟಡಗಳಾಗಿವೆ. ಯೋಗ ಸಾಧನೆಗಾಗಿ ನೆಲದಲ್ಲಿ ಗವಿಗಳಾಗಿವೆ. ಅಲ್ಲದೆ ಸಂಸ್ಥೆಯ ಸ್ಥಿರಜೀವಿತಕ್ಕೆ ಸ್ವಾಮಿಗಳವರು ನಾಲೈದು ಲಕ್ಷರೂಪಾಯಿಗಳನ್ನು ಕೂಡಿಸಿದರು. ಸುಮಾರು ನಾಲೈದು ಮೈಲಿ ಭೂಮಿ ಸೀಮೆಗಳ ಸ್ವಾಮಿತ್ವವನ್ನು ಸಂಪಾದಿಸಿದರು. ನೂರಿನ್ನೂರು ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ಐವತ್ತು ಎಕರೆ ಗುಡ್ಡವನ್ನು ಸರಕಾರದಿಂದ ಇನಾಮನ್ನಾಗಿ ಪಡೆದರು. ಬೇರೆಬೇರೆ ಗ್ರಾಮಗಳಲ್ಲಿ ಸದ್ಭಕ್ತರು ನೂರಾರು ಕೂರಿಗೆ ಭೂಮಿಯನ್ನು ಸಂಸ್ಥೆಗೆಂದು ಭಕ್ತಿಯಿಂದ ಸಮರ್ಪಿಸಿದ್ದಾರೆ. ಜೀನಿಂಗ ಮತ್ತು ಪ್ರೆಸಿಂಗ ಫ್ಯಾಕ್ಟರಿಯೊಂದನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಿದ್ದಾರೆ. ಶಿವಯೋಗ ಮಂದಿರದಲ್ಲಿಯೆ ಒಂದು ದೊಡ್ಡ ಪುಸ್ತಕಾಲಯವನ್ನು ಸ್ಥಾಪಿಸಿದ್ದಾರೆ.  ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ನಾಲೈದು ಸಾವಿರಕ್ಕೆ ಮೇಲ್ಪಟ್ಟು ಶೇಖರಿಸಿದ್ದಾರೆ. ಇದಲ್ಲದೆ ಪುರಾತನ ತಾಳೆಗರಿಗಳನ್ನು ಕೈಬರಹದ ಕಡತಗಳನ್ನು ಏಳೆಂಟುನೂರು ಕಲೆಹಾಕಿದ್ದಾರೆ. ಪರಿಶುದ್ಧವಾದ ಭಸ್ಮ ಪಂಚಸೂತ್ರದ ಪವಿತ್ರಶಿಲೆಯ ಲಿಂಗಗಳನ್ನು ಮಾಡುವ ಏರ್ಪಾಡನ್ನು ಮಾಡಿದ್ದಾರೆ. ವೈದ್ಯದ ಸಂಶೋಧವನ್ನು ಮಾಡಿದ್ದಾರೆ. ಹಲವು ದಿವ್ಯೌಷಧಿಗಳನ್ನು ತಯಾರಿಸಿದ್ದಾರೆ. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ಧೌಷಧಿಯು ಅಲ್ಲಿ ಈಗಲು ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣಹೊಂದಿ ಕಳೆದುಕೊಂಡ ಧೃತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಶಿವರಾತ್ರಿಯಲ್ಲಿ ಸಾಗುವ ಜಾತ್ರೆಯಲ್ಲಿ ಹಲವು ಬಗೆಯ ಧಾರ್ಮಿಕ ಸಾಮಾಜಿಕ ಸಭೆಗಳು ನಡೆವಂತೆ ವ್ಯವಸ್ಥೆ ಮಾಡಿದ್ದಾರೆ.

 

ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆವಿಗೆ ಸುಮಾರು ಸಾವಿರಾರು ಜನ ಸಾಧಕರು ಅಧ್ಯಯನ ಮಾಡಿದ್ದಾರೆ. ಕನ್ನಡ ಸಂಸ್ಕೃತ ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗಯೋಗವನ್ನು ಇಷ್ಟಲಿಂಗದ ವಿಚಾರವನ್ನು ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನು ಪ್ರಾಣಲಿಂಗದ ನೆಲೆಕಲೆಗಳನ್ನು ಗುರುತಿಸಿಕೊಂಡಿದ್ದಾರೆ. ಷಟ್ಕರ್ಮಗಳ ಸಿದ್ಧಿಯನ್ನು ಷಟ್‌ಸ್ಥಲಗಳ ಶುದ್ಧಿಯನ್ನು ಸಂಪಾದಿಸಿಕೊಂಡಿದ್ದಾರೆ. ಒಟ್ಟಾಗಿ ಒಂದೇ ಮಾತಿನಲ್ಲಿ ಹೇಳುವದಾದರೆ ಆ ಸಂಸ್ಥೆಯಿಂದ ಉತ್ತಮ ಭಾಷಣಕಾರರು ಕೀರ್ತನಕಾರರು ಪೌರಾಣಿಕರು ಲೇಖಕರು ಯೋಗಿಗಳು ಅನುಭವಿಗಳು ಸ್ವಾಮಿಗಳು ಸಂಗೀತಜ್ಞರು ಮುಂತಾಗಿ ಅನೇಕರು ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಕೀರ್ತಿಗಳಿಸಿದ್ದಾರೆ. ಕನ್ನಡ ನಾಡಿನ ಬಹುಭಾಗದಲ್ಲಿ ಅನೇಕರು ಮಠಾಧಿಪತ್ಯವನ್ನು ವಹಿಸಿದ್ದಾರೆ; ವಿರಾಜಮಾನರಾಗಿದ್ದಾರೆ. ಸಮಾಜ ಸಾಹಿತ್ಯಾದಿಗಳ ಸೇವೆ ಸಲ್ಲಿಸುತ್ತಿದ್ದಾರೆ.

 

ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ ಕೋಡಿಕೊಪ್ಪ ಬಾದಾಮಿ ಮುಂತಾದ ಗ್ರಾಮಗಳಲ್ಲಿ ಸ್ಥಾಪಿಸಿದ್ದಾರೆ. ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ ಭೋಜನಶಾಲೆ (ಬೋರ್ಡಿಂಗ್ ಹೋಂ)ಗಳನ್ನು ಸ್ಥಾಪಿಸಿದ್ದಾರೆ. ಇದರಿಂದಾಗಿ ಸಮಾಜಕ್ಕೂ ಸಾಹಿತ್ಯ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಸೇವೆ ಸಲ್ಲಿದೆ. ಅನೇಕ ಉದ್ದಾಮ ಸಾಹಿತಿಗಳು ಇಲ್ಲಿಗೆ ಬಂದು ಗ್ರಂಥಭಂಡಾರದ ಪ್ರಯೋಜನ ಪಡೆದಿದ್ದಾರೆ. ಗ್ರಂಥ ಪ್ರಕಾಶಕರು ಈ ಸಂಸ್ಥೆಯ ಗ್ರಂಥಾಲಯದಿಂದ ಪ್ರಾಚೀನ ಗ್ರಂಥ ಪ್ರತಿಗಳನ್ನು ಪಡೆದು ಉಪಕೃತರಾಗಿದ್ದಾರೆ.

 

ಈ ಎಲ್ಲ ದೃಷ್ಟಿಗಳಿಂದ ಈ ಸಂಸ್ಥೆಯು ಸಮಾಜಕ್ಕೆ ಆರ್ಯ ಸಮಾಜದ ‘ಕಾಂಗಡಿ ಗುರುಕುಲ ವಿದ್ದಂತೆಯು, ಶಾಂತಿಸಾಧಕರಿಗೆ ರವೀಂದ್ರನಾಥ ಠಾಕೂರವರ ‘ಶಾಂತಿನಿಕೇತನ’ ವಿದ್ದಂತೆಯು, ಅನುಭವ ವಿಚಾರಕ್ಕೆ ೧೨ನೆಯ ಶತಮಾನದ ‘ಅನುಭವ ಮಂಟಪ’ ವಿದ್ದಂತೆಯು ಇದೆಯೆಂದು ಹೇಳಿದಲ್ಲಿ ಯಾವ ತಪ್ಪಾಗಲಿಕ್ಕಿಲ್ಲ. ಆ ಅನುಭವ ಮಂಟಪವನ್ನು ಸ್ಥಾಪಿಸಿ ಬಸವಣ್ಣನು ದ್ವಿತೀಯ ಶಂಭುವೆನಿಸಿದಂತೆ ಈ ಶಿವಯೋಗಮಂದಿರವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ದ್ವಿತೀಯ ಬಸವಣ್ಣನೆನಿಸಿದರು; ಕಾರಣಿಕ ಪುರುಷರಾದರು.

 

೧೯೨೫ ನೆಯ ಸಾಲಿಗೆ ಶಿವಯೋಗ ಮಂದಿರವು ಹದಿನಾರನೆಯ ವರುಷದಲ್ಲಿ ಹೆಜ್ಜೆಯನ್ನಿಕ್ಕಿತ್ತು. ಏರುಂಜವ್ವನದ ಆರಂಭ ವಯಸ್ಸು, ಎಂಥವರನ್ನು ಬೆರಗುಗೊಳಿಸುವ ವರ್ಚಸ್ಸು. ಆಗ ಶಿವಯೋಗ ಮಂದಿರದಲ್ಲಿ ೩೦-೪೦ ಜನ ಚಿಕ್ಕ ಚಿಕ್ಕ ವಯಸ್ಸಿನ ವಟುಗಳು. ೭೦-೮೦ ಜನ ೧೨ ವರುಷಕ್ಕೆ ಮೀರಿದ ೨೫ ವರ್ಷಕ್ಕೆ ಮಿಂಚದ ಸಾಧಕ ಸಮುದಾಯವು. ಗುರುವಿರಕ್ತರೆಂಬ ಭೇದಭಾವವಿಲ್ಲದೆ ಸಮರಸವಾಗಿದ್ದರು. ಮೇಲು ಕೀಳೆಂಬ ವೈಷಮ್ಯವಿಲ್ಲದೆ ವಾತ್ಸಲ್ಯದಿಂದಿದ್ದರು. ಚಿಕ್ಕ ವಟುಗಳು ಧರಿಸುವುದು ಬಿಳಿಯ ಕಪನಿಗಳು, ಸಾಧಕರು ಧರಿಸುವುದು ಕಾವಿಯ ಕಪನಿಗಳು, ನಿಲುವಂಗಿಗೆ ಕಪನಿಯೆಂದು ಅಲ್ಲಿ ಹೇಳುವ ವಾಡಿಕೆ. ಎಲ್ಲರು ಕೌಪೀನಧಾರಿಗಳು. ವಟುಗಳಿಗೆ ಕಿವಿಟೊಪ್ಪಿಗೆಗಳು. ಸಾಧಕರಿಗೆ ಮಸ್ತಕಪಾವುಡಗಳು. ಚೌಕ ವಸ್ತ್ರಗಳಿಗೆ ಮಸ್ತಕಪಾವುಡಗಳೆಂದು ಹೇಳಿಕೆ. ಇಷ್ಟು ಅಲ್ಲಿನವರ ಉಡುಪುಗಳು. ಕನ್ನಡ ಸಂಸ್ಕೃತ ಇಂಗ್ಲೀಷ್ ಭಾಷೆಗಳಲ್ಲಿ ಅಧ್ಯಯನ ಸಾಗಿತ್ತು. ಇಬ್ಬರು ಸಂಸ್ಕೃತ ಶಿಕ್ಷಣ ಕೊಡುವ ಶಾಸ್ತ್ರಿಗಳು. ಇಬ್ಬರು ಇಂಗ್ಲೀಷ್ ಓದಿಸುವ ಶಿಕ್ಷಕರು. ಒಬ್ಬರು ಕನ್ನಡಾಧ್ಯಾಪಕರು. ಹೀಗೆ ಒಟ್ಟು ಐದು ಮಂದಿ ಶಿಕ್ಷಕರಿದ್ದರು. ಅಭ್ಯಾಸ ಅತ್ಯಂತ ಭರದಿಂದ ಸಾಗಿತ್ತು. ದಿನಾಚರಣೆ ಕ್ರಮವಿಡಿದು ನಡೆದಿತ್ತು.

 

ಪ್ರತಿದಿನ ಬೆಳಗಿನ ನಾಲ್ಕುವರೆ ಗಂಟೆಗೆ ಜಾಗಟೆಯ ಝಣಝಣಲ್ ಶಬ್ದವಾಗುತ್ತಿತ್ತು. ಸುಪ್ರಭಾತ ಸಮಯ ಸುಪ್ರಸನ್ನ ವಾತಾವರಣ. ಆಗ ಎಲ್ಲರು ಶಿವನಾಮಸ್ಮರಣೆಯಿಂದ ಏಳುವುದು. ಎದ್ದೊಡನೆ ಒಂದೆಡೆಗೆ ಸೇರಿ ಹಾರ್ಮೊನಿಯಂ ಬಾಜಿಸುತ್ತ ಸುಶ್ರಾವ್ಯವಾಗಿ ಪ್ರಾರ್ಥನೆಯನೆಸಗುವುದು. ಬೆಳಗಾಗುವವರೆವಿಗು ಅವರವರ ಪಾಠಪ್ರವಚನಗಳನ್ನು ಪ್ರಶಾಂತ ಚಿತ್ತದಿಂದ ಓದುವುದು. ಅನಂತರ ಪ್ರಾತಃಶೌಚ ತೀರಿಸುವುದು. ಏಳು ಗಂಟೆಗೆ ಸರಿಯಾಗಿ ಮರಳಿ ಜಾಗಟೆ ಶಬ್ದವಾಗುತ್ತಿತ್ತು. ಎಲ್ಲರು ಸೇರಿ ಎಂಟು ಗಂಟೆಯವರೆವಿಗು ಆಸನಗಳನ್ನು ಹಾಕುವುದು. ಆಸನ ಹಾಕುವಲ್ಲಿ ಒಂದು ವಿಶಿಷ್ಟ ಪದ್ಧತಿಯಿತ್ತು; ಸಕ್ರಮವಿತ್ತು. ಮಾತಿಗೆ ಅವಕಾಶವಿಲ್ಲ. ಮನದೃಷ್ಟಿಗಳ ಹರಿದಾಟವಿಲ್ಲ. ಸಂದರ್ಭೋಚಿತವಾಗಿ ಊರ್ಧ್ವ, ಪೌರ್ಣಿಮ, ನಾಸಿಕಾಗ್ರ, ಅಮಾವಾಸ್ಯ ದೃಷ್ಟಿಗಳನ್ನಿಡಬೇಕು. ಧ್ಯಾನ ಅವ್ಯಾಹತವಾಗಿ ನಡೆದಿರಬೇಕು. ಅಂಗವೆಲ್ಲ ಆಸನಗಳಲ್ಲಿ ಅನುಷಂಗವಾಗಿರಬೇಕು. ಅಂತರಂಗ ಆತ್ಮಸಂಗವಾಗಿರಬೇಕು.

 

ಎಂಟು ಹತ್ತು ನಿಮಿಷಕ್ಕೆ ಪಾಠ ಪ್ರವಚನಗಳು ಪ್ರಾರಂಭವಾಗಿ ಹತ್ತು ಹತ್ತುವವರೆಗೆ ಪೂರೈಸುವುದು. ಮುಂದೆ ಹನ್ನೆರಡು ಗಂಟೆಯವರೆವಿಗು ತೊರೆಯ ತಿಳಿ ನೀರಿನಲ್ಲಿ ಎಲ್ಲರು ಮೀಯುವುದು. ಮಡಿಯುಟ್ಟು ಮನವಿಟ್ಟು ಶಿವಪೂಜೆ ಪಾದಪೂಜೆಗಳ ಮಾಡುವುದು. ಪಾದೋದಕ ಪ್ರಸಾದಗಳ ಕೊಂಬುವುದು. ಮಧ್ಯಾಹ್ನ ಒಂದು ಗಂಟೆ ವಿಶ್ರಾಂತಿ, ಒಂದು ಗಂಟೆ ಶಿವಾನುಭವ. ಎರಡುಗಂಟೆಯಿಂದ ನಾಲ್ಕುವರೆವರೆವಿಗು ಪಾಠಗಳು. ಐದರವರೆವಿಗು ಸಾಯಂಶೌಚ.  ಆರರವರೆವಿಗು ಪುರಾಣಶ್ರವಣ; ಭಜನೆ, ರಾತ್ರಿ ಎಂಟುವರೆವರೆವಿಗು ಮರಳಿ ಸ್ನಾನ ಶಿವಪೂಜಾದಿಗಳು. ಆಮೇಲೆ ಓದಿಕೊಂಡು ಹತ್ತುಗಂಟೆಗೆ ದೇವ ಪ್ರಾರ್ಥನೆ ಮಾಡಿ ಮಲಗುವುದು ಇದು ಅಲ್ಲಿನ  ಕಾರ್ಯಕ್ರಮ.

 

ಪ್ರಾರ್ಥನೆ ಪುರಾಣ ಶಿವಾನುಭವ ಮುಂತಾದ ಸನ್ನಿವೇಶಗಳಲ್ಲಿ ಒಂದೆಡೆಯಲ್ಲಿ ಸೇರಿ ಸಾಲುಸಾಲಾಗಿ ಕುಳಿತುಕೊಳ್ಳುವ ಆ ದೃಶ್ಯವನ್ನು ನೋಡಿದರೆ ಸಾಕ್ಷಾತ್ ಕೈಲಾಸವನ್ನು ಕಂಡಂತಾಗುತ್ತಿತ್ತು. ಒಂದೇ ಬಣ್ಣದ ಒಂದೇ ಬಗೆಯ ಉಡುಗೆಯ ಆ ನೋಟ ಚಿತ್ತಾಕರ್ಷಕವಾಗಿರುತ್ತಿತ್ತು. ಎಲ್ಲರದು ಒಂದೇ ಸತ್ಕರ್ಮ ಒಂದೇ ಸದ್ಧರ್ಮ; ಯಾವಾಗಲು ಎಲ್ಲರಿಗು ಒಂದೇ ಧ್ಯಯ; ಒಂದೇ ಶೇಯ ಎಲ್ಲರು ಮನೆ ಮಾರು ಊರು ಕೇರಿ ಬಂಧುಬಳಗಗಳನ್ನು ಬಿಟ್ಟು ಸನ್ಯಾಸಕ್ಕೆ ಮೀಸಲಾದವರು. ಪೂರ್ವಾಶ್ರಮದ ಹಂಗನ್ನು ಹಳಚಿದವರು. ಜನ್ಮದಾತರಾದ ಜನನಿ ಜನಕರನ್ನು ನೋಡುವುದು ಒಂದೆಡೆಗಿರಲಿ ಹೆಸರುಗಳನ್ನು ಯಾರೂ ಹೇಳುವಂತಿಲ್ಲ.  ಅರಿಯದವರು ಯಾರಾದರು ಕೇಳಿದರೆ ತಾಯಿ ಚಿಚ್ಛಕ್ತಿಯೆಂತಲು ತಂದೆ ಕುಮಾರ ಸ್ವಾಮಿಗಳೆಂತಲು ವಟುಗಳು ಹೇಳುವ ರೂಢಿಯಾಗಿತ್ತು. ಹಣ ತರಿಸುವಂತಿಲ್ಲ; ಬಳಸುವಂತಿಲ್ಲ, ಪೂರ್ವಾಶ್ರಮ ನಿರಸನದೊಡನೆ ಪೂರ್ವಾಶ್ರಮ ನಿರಸನವು ಜಾರಿಯಲ್ಲಿ ಬರಬೇಕೆಂಬ ಬಯಕೆ. ಅದರಂತೆ ಅಲ್ಲಿಯ ನಡೆವಳಿಕೆ.

 

ಉಪ್ಪು ಹುಳಿ ಖಾರ-ಎಣ್ಣೆಗಳಿಲ್ಲದ ಸಪ್ಪೆ ಆಹಾರ. ಅವರೆ ಹುರುಳಿ, ಕುಂಬಳಕಾಯಿ, ಮುಳ್ಳುಗಾಯಿ, ಜೋಳ, ರಾಗಿ ಮುಂತಾದ ತಾಮಸಾಹಾರಗಳಿಗೆ ಅಲ್ಲಿ ಎಡೆಯಿಲ್ಲ. ಅಕ್ಕಿ, ತೊಗರಿ, ಹೆಸರು, ಗೋಧಿ, ಹಾಲು, ತುಪ್ಪ ಮುಂತಾದ ಸಾತ್ವಿಕಾಹಾರದ ಕಟ್ಟಿಗೆ ಎಲ್ಲರು ಒಳಪಟ್ಟಿರಬೇಕು. ಕೆಲವರು ಪೂರ್ವಾಶ್ರಮದ ಹೆಸರುಗಳು ಚೆನ್ನಾಗಿ ಇಲ್ಲದಿದ್ದರೆ ಅವನ್ನು ಬಿಟ್ಟು ಬೇರೆ ಹೆಸರುಗಳನ್ನು ಇಡುತ್ತಾರೆ. ಹೆಸರಿನ ಮುಂದೆ ಆರ್ಯ, ಆಚಾರ್ಯ, ದೇವ, ದೇಶಿಕ ಎಂಬ ಶ್ರೇಷ್ಠ ಸೂಚಕ ಶಬ್ದಗಳನ್ನು ಜೋಡಿಸುತ್ತಾರೆ. ಆಸನ, ಅಭ್ಯಾಸ, ಅನುಷ್ಠಾನ, ಅನುಭವ ಇವು ಅಲ್ಲಿ ಕಲಿಯತಕ್ಕ ಮುಖ್ಯ ವಿಷಯಗಳು ಇವನ್ನು ಎಲ್ಲರು ಅಭ್ಯಾಸಿಸಲು ಮನಃಪೂರ್ತಿಯಾಗಿ ಪ್ರಯತ್ನಿಸಬೇಕು. ಫಲಾಫಲ ಅವರ ಕರ್ತವ್ಯ ಕೋಟಿಗೆ ಸೇರಿದ್ದು. ಈ ರೀತಿ ಅಲ್ಲಿನ ಅಭ್ಯಾಸಗಳನ್ನು ಆಗುಮಾಡಿಕೊಂಡವರು ಮಠಾಧಿಪತ್ಯವನ್ನು ವಹಿಸಿ ಧರ್ಮ, ವಿದ್ಯೆ ಆಚಾರ, ವಿಚಾರ, ಪ್ರಚಾರ ಮಾಡುವುದು ಅವರ ಕರ್ತವ್ಯ ಸಂಸ್ಥೆಯ ನೇಮ ನೀತಿಗಳಂತೆ ಇರುವುದೇ ಅವರಿಗೆ ವಾಸ್ತವ್ಯ.

 

ಇನ್ನೊಂದೆಡೆಯಲ್ಲಿ ಶ್ರೀ ವಿಜಯಮಹಾಂತೇಶ್ವರ ಪುಸ್ತಕ ಭಂಡಾರ. ಅಲ್ಲಿ ಪುರಾತನ ಪುಸ್ತಕಗಳ ಸಂಗ್ರಹ ಸಂಶೋಧನೆ ಅವಿಶ್ರಾಂತವಾಗಿ ಸಾಗುತ್ತಿತ್ತು. ಅದಕ್ಕಾಗಿ ತಜ್ಞರಾದ ಒಬ್ಬಿಬ್ಬರು ಪಂಡಿತರಿದ್ದರು. ಸಂಶೋಧನೆಯಲ್ಲಿ ಸ್ವಾಮಿಗಳು ಸ್ವತಃ ಭಾಗವಹಿಸುತ್ತಿದ್ದರು. ಲೋಪದೋಷಗಳನ್ನು ಸರಿಪಡಿಸುತ್ತಿದ್ದರು. ಸ್ವಾಮಿಗಳವರಿಂದ ಪರಿಷ್ಕೃತವಾದ ಗ್ರಂಥಗಳೆಲ್ಲ ಪ್ರಕಟವಾಗದಿರುವುದೊಂದು ದೊಡ್ಡ ಕೊರತೆ ! ಈ ಕೊರತೆಯನ್ನು ತುಂಬಿ ತರುವ ಕೆಲಸ ಆಗಬೇಕಾಗಿದೆ.

 

ವೈದ್ಯ ಸಂಶೋಧನವು ಇನ್ನೊಂದೆಡೆಯಲ್ಲಿ ನಡೆದಿತ್ತು. ಕೆಲವು ಮಂದಿ ಸಾಧಕರಿಗೆ ಆಯುರ್ವೇದದ ಜ್ಞಾನವನ್ನು ಸ್ವಾಮಿಗಳವರು ಮಾಡಿಕೊಟ್ಟರು. ಸ್ವಾಮಿಗಳವರು ಸಾಯಂಕಾಲ ಗಾಳಿಗೆ ದಯಮಾಡಿಸಿದರೆ ಸುಮ್ಮನೆ ಅದೆಂದಿಗು ಹೋಗುತ್ತಿರಲಿಲ್ಲ. ಬೆಟ್ಟದ ದಾರಿಗಳಲ್ಲಿ ದಯಮಾಡಿಸುತ್ತಿರುವಾಗ ಅಕ್ಕಪಕ್ಕದಲ್ಲಿರುವ ಗಿಡಮರಗಳನ್ನು ಗೆಡ್ಡೆಗೆಣಸುಗಳನ್ನು, ಬಳ್ಳಿ ಬೇರುಗಳನ್ನು ಶೋಧಿಸುತ್ತ ಹೋಗುತ್ತಿದ್ದರು. ಯಾವುದಾದರೊಂದು ವಿಶೇಷ ವನಸ್ಪತಿಯನ್ನು ತಾರದೆ ಮಠಕ್ಕೆ ಮರಳುತ್ತಿರಲಿಲ್ಲ. ಹೀಗಾಗಿ ವನೌಷಧಿಗಳ ಸಂಶೋಧನವು ದಿನದಿನಕ್ಕೆ ಹೆಚ್ಚುತ್ತಿತ್ತು. ವೈದ್ಯ ವಿದ್ವಾಂಸರಿಗು ಸಹ ಅಸಾಧ್ಯವಾದ ಕೆಲವು ರೋಗಗಳನ್ನು ಸ್ವಾಮಿಗಳವರು ತಮ್ಮ ಔಷಧಿಗಳಿಂದ ವಾಸಿಮಾಡುತ್ತಿದ್ದರು. ಪಾಶ್ಚಾತ್ಯ ಡಾಕ್ಟರುಗಳಿಂದಲು ಸಾಧ್ಯವಾಗದ ಬಿಳಪು (ತೊನ್ನು) ಕಳೆವ ‘ಧೃತಿ’ಯೊಂದನ್ನು ಕಂಡು ಹಿಡಿದು ಅನೇಕ ರೋಗಿಗಳಿಗೆ ಪ್ರಯೋಗಿಸಿ ಫಲಿತಾಂಶ ಪಡೆದರು. ಅನೇಕ ವಿದ್ಯಾರ್ಥಿಗಳಿಗೆ ಸ್ವತಃ ವೇತನವನ್ನು ಕೊಟ್ಟು ಸಾತಾರೆಯ ಆರ್ಯಾಂಗ್ಲ ವಿದ್ಯಾಲಯದಲ್ಲಿ ವೈದ್ಯವಿದ್ಯಾಭ್ಯಾಸವನ್ನು ಮಾಡಿಸಿದರು. ಹೀಗೆ ವೈದ್ಯಭಾಗದ ಸೇವೆಯು ಸಂಸ್ಥೆಯಿಂದ ಸಾಕಷ್ಟು ಸಲ್ಲಿದೆ.

 

ಮತ್ತೊಂದೆಡೆಯಲ್ಲಿ ಭಸ್ಮ ಲಿಂಗಗಳ ಕಾರ್ಮಿಕಾಗಾರ. ಇದಕ್ಕಾಗಿಯೆ ಒಂದು ಮಾಹೇಶ್ವರ ಕುಟುಂಬವರ್ಗವನ್ನು ಅಲ್ಲಿಯೆ ತಂದಿರಿಸಿದ್ದರು. ಈ ವಿಷಯದಲ್ಲಿ ಸ್ವಾಮಿಗಳವರಿಗೆ ತುಂಬಾ ಕುತೂಹಲವಿತ್ತು. ಶುದ್ಧ ಭಸ್ಮಗಳ ಅಭಾವ ಹೆಚ್ಚಿಹೋಗಿತ್ತು. ಸಮಾಜದಲ್ಲಿ ಎಲ್ಲಿಯೂ ಮಾಡುತ್ತಿದ್ದಿಲ್ಲ. ಹಸುಗಳ ಸಗಣಿಯನ್ನು ಮಾತ್ರ ಉಪಯೋಗಿಸುತ್ತಿರಲಿಲ್ಲ. ಮಂತ್ರಶುದ್ಧಿ ಇದ್ದದ್ದು ಇಲ್ಲ. ಹೀಗಾಗಿ ಸ್ವಾಮಿಗಳು ಈ ವಿಷಯದಲ್ಲಿ ಹೆಚ್ಚು ಗಮನವಿತ್ತರು. ಸ್ವತಃ ಹೋಗಿ ಕ್ರಮವನ್ನು ಹೇಳಿ ಮಾಡಿಸುತ್ತಿದ್ದರು. ಅನೇಕ ದಿನಗಳ ಪರಿಶ್ರಮದ ಫಲವಾಗಿ ಶುದ್ಧವು ಶುಭ್ರವು ಆದ ಭಸ್ಮದಗಟ್ಟಿಗಳು ತಯಾರಾದವು. ಸ್ವಾಮಿಗಳವರು ಮೀರಿದ ಸಂತೋಷಪಟ್ಟರು.

ಎರಡನೆಯದಾಗಿ ಲಿಂಗಗಳ ವಿಷಯ. ಎಲ್ಲಿಯೂ ಪಂಚಸೂತ್ರಕ್ಕೆ ಸರಿಯಾಗಿ ಮಾಡುತ್ತಿರಲಿಲ್ಲ. ಮಟ್ಟಗಲ್ಲಿನ ಲಿಂಗಗಳ ಹೊರತು ಶುದ್ಧಶಿಲೆಯ ಲಿಂಗಗಳೇ ಇರಲಿಲ್ಲ. ಇತ್ತ ಪೀಠದವರು ಯಾರು ಗಮನಿಸಿರಲಿಲ್ಲ. ಇದು ಸಮಾಜಕ್ಕೆ ತೀರ ಅಗತ್ಯದ ಕೆಲಸವಾಗಿತ್ತು. ಇದನ್ನು ಕಂಡು ಸ್ವಾಮಿಗಳವರು ಸೂಕ್ತವಾದ ಶುದ್ಧವಾದ ಕಲ್ಲು ತರಿಸಿ ಪಂಚಸೂತ್ರಕ್ಕೆ ಸರಿಯಾಗಿ ಶಾಸ್ರೋಕ್ತವಾಗಿ ನಿರ್ಮಾಣಮಾಡಿಸಿದರು. ಲಿಂಗ ಕಲೆಯನ್ನು ನೆಲೆನಿಲ್ಲಿಸಿದರು. ಈಗಲು ಅನೇಕ ಕಡೆ ತಿಳಿಯದೆ ಸಿಕ್ಕ ಪೀಠಗಳನ್ನು ಧರಿಸುತ್ತಿದ್ದಾರೆ. ಇದು ಹೋದಷ್ಟು ಕ್ಷೇಮ. ಈ ರೀತಿಯಾಗಿ ಸ್ವಾಮಿಗಳವರು ಸಮಾಜಕ್ಕೆ ಅತ್ಯಗತ್ಯವಾದ ಶುದ್ಧ  ಭಸ್ಮ, ಲಿಂಗಗಳ ನಿರ್ಮಾಣ ಮಾಡಿ ಗುರುಲಿಂಗ ಜಂಗಮ ಭಸ್ಮಗಳ ಸುಧಾರಣೆಯ ಮೂಲಕರ್ತರಾದರು; ಮಹಾಪುಣ್ಯಶಾಲಿಗಳಾದರು.

 

ಬೇರೊಂದು ಕಡೆ ಕೃಷಿ ಕರ್ಮ. ಇದಕ್ಕಾಗಿ ಎಂಟು ಹತ್ತು ಎತ್ತುಗಳನ್ನು ಅಷ್ಟೆ ಮನುಷ್ಯರನ್ನು ಇರಿಸಿದ್ದರು. ಹಳೆ ಮಾಕೂಟದ ಬಳಿ ಒಂದು ಬಾಳೆಯ ಬನವನ್ನು ಹಾಕಿಸಿದ್ದರು. ಲಿಂಬೆ, ಮಾವು, ಈರಳೆ ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆಯಿಸಿದ್ದರು. ಇದಕ್ಕೆ ತಕ್ಕ ವ್ಯವಸ್ಥೆಯನ್ನಿರಿಸಿದ್ದರು. ದಿನ್ನೆಯ ಭೂಮಿಯಲ್ಲಿ ಸಾಕಷ್ಟು ಬೆಳೆಯನ್ನು ತೆಗೆಯಿಸುತ್ತಿದ್ದರು. ಭೂಮಿಗೆ ನೀರುಣಿಸಿ ಹೆಚ್ಚು ಬೆಳೆಯಲು ನೀರಾವರಿ ಯೋಜನೆಗಳನ್ನು ಅನೇಕ ಸಲ ಮಾಡಿದರು. ಹೀಗೆ ಶಿವಯೋಗ ಮಂದಿರದಲ್ಲಿ ಅನೇಕ ಕಾರ್ಯಕಲಾಪಗಳು ನಡೆದವು.

 

ಇವನ್ನೆಲ್ಲ ನೋಡಿಕೊಳ್ಳಲು ಒಬ್ಬ ಮೇಲಾಧಿಕಾರಿಗಳು, ೩-೪ ಮಂದಿ ಬರವಣಿಗೆದಾರರು, ಅದಕ್ಕೆ ತಕ್ಕ ಲೆಕ್ಕ ಪತ್ರಗಳು. ಒಂದು ಅಂಚೆ ಮನೆಯ (ಪೋಷ್ಟಾಫೀಸ)ನ್ನು ಸಂಸ್ಥೆಗಾಗಿಯೆ ಗವರಮೆಂಟಿನಿಂದ ಪಡೆದಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರ ತತ್ವಗಳನ್ನು ಪ್ರಚಾರ ಮಾಡಲು ವಿವೇಕಾನಂದರು ‘ರಾಮಕೃಷ್ಣಾಶ್ರಮ’ವನ್ನು ಸ್ಥಾಪಿಸಿದಂತೆ ಕುಮಾರ ಸ್ವಾಮಿಗಳವರು ಮೇಲೆ ಕಂಡ ರೂಪುರೇಖೆಯ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಅನೇಕ ದಿನಗಳಿದ್ದು ಯೋಗ ವಿದ್ಯೆ, ಆಚಾರ-ವಿಚಾರ, ಪುರಾಣ-ಪ್ರವಚನಗಳನ್ನು ಪ್ರಾರಂಭಿಸಿ ಅಭ್ಯಾಸಿಗಳಿಗೆ ತಕ್ಕ ಏರ್ಪಾಟುಗಳನ್ನು ಮಾಡಿ ಮುಂದಿನ ಆ ಸಂಸ್ಥೆಯ ಅಭಿವೃದ್ಧಿಗಾಗಿಯು ಸಾಮಾಜಿಕರಿಗೆ ಧರ್ಮ ನೀತಿ ಮಿತವ್ಯಯ ಮೈತ್ರಿಭಾವ ಮುಂತಾದವುಗಳನ್ನು ಬೋಧಿಸುವದಕ್ಕಾಗಿಯು ನಾಡಿನಲ್ಲಿ ಸಂಚರಿಸುತ್ತಿದ್ದರು. ಅವರ ಜೀವನ ಬಹುಭಾಗ ಪ್ರಯಾಣಮಯವಾಗಿತ್ತು. ಒಂದೆಡೆಗಿದ್ದು ವಿಶ್ರಾಂತಿ ಪಡೆದ ದಿನಗಳು ತೀರ ಕಡಿಮೆ. ಇಲ್ಲವೆಂದರು ಅಲ್ಲಗಳೆಯುವಂತಿಲ್ಲ. ಅವರಿರಬೇಕೆಂದರು ಅವರ ಮನಸ್ಸಿರದು. ಅವರು ಹಮ್ಮಿಕೊಂಡ ಕಾರ್ಯಬಾಹುಲ್ಯವು ಅವರನ್ನು ಇರಲೀಸದು.

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ

 

 

ರಾಗದ್ವೇಷಗಳು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುವುದರಿಂದ ಇವುಗಳಿಗೆ ಹೀನಗುಣಗಳೆಂದು ಕರೆಯಲಾಗಿದೆ. ‘ರಾಗ’ದ ಶಾಬ್ದಿಕ ಅರ್ಥ ಪ್ರೀತಿ, ಒಲವು, ಆಸಕ್ತಿ ಎಂದಿದ್ದರೂ ಅದನ್ನು ‘ವಿಷಯ ವ್ಯಾಮೋಹ’ ಎಂಬರ್ಥದಲ್ಲಿಯೇ ಹೆಚ್ಚಾಗಿ ಬಳಸಲಾಗುತ್ತದೆ. ಸ್ವಾರ್ಥ ಪ್ರೇರಿತನಾದ ವ್ಯಕ್ತಿಯು ಮತ್ಸರ ಭಾವದಿಂದ ಇನ್ನೊಬ್ಬರೊಂದಿಗೆ ಸಾಧಿಸುವ ಹಗೆತನಕ್ಕೆ ‘ದ್ವೇಷ’ ಎನ್ನುತ್ತೇವೆ. ರಾಗಕ್ಕೆ ಮೂಲ ವಿಷಯೇಚ್ಛೆ. ‘ವಿಷಯ’ವೆಂದರೆ ವ್ಯಕ್ತಿಯನ್ನು ಮೋಹ ಪಾಶದಲ್ಲಿ ಬಂಧಿಸುವ ಲೌಕಿಕ ಭೋಗ ಭಾಗ್ಯಗಳು. ವಿಷಯ ಸುಖಕ್ಕೆ ಮರುಳಾದ ವ್ಯಕ್ತಿಯ ಮನಸ್ಸು ವಿಕಾರಕ್ಕೆ ಒಳಗಾಗುತ್ತದೆ. ಮನಸ್ಸು ವಿಕಾರಕ್ಕೊಳಗಾದಾಗ ದ್ವೇಷಾಸೂಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ರಾಗದ್ವೇಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ತೋರುತ್ತವೆ.

 

ರಾಗದಿಂದ ಮನುಷ್ಯನಲ್ಲಿ ಆಶೆ ಆಮಿಷಗಳು ಹುಟ್ಟಿಕೊಳ್ಳುತ್ತವೆ. ಅಹಂಕಾರ ಅವಿವೇಕಗಳು ಹೆಚ್ಚುತ್ತವೆ. ಮದ ಮತ್ಸರಗಳು ಮಿತಿ ಮೀರುತ್ತವೆ. ಆಗ ಮನುಷ್ಯ ಭ್ರಾಂತಿಗೊಳಗಾಗುತ್ತಾನೆ. ವಿಷಯ ಭೋಗದಿಂದಲೇ ತನಗೆ ಸುಖ ದೊರೆವುದೆಂದು ಭಾವಿಸುತ್ತಾನೆ. ತನ್ನತನದ ಅರಿವು ಕಳೆದುಕೊಳ್ಳುತ್ತಾನೆ. ಎಲ್ಲವೂ ತನಗೇ ಬೇಕೆಂಬ ಸ್ವಾರ್ಥಲಾಲಸೆಗಳಿಂದ ಕೂಡಿ ಎಲ್ಲರನ್ನೂ ದ್ವೇಷಿಸಲು ಪ್ರಾರಂಭಿಸುತ್ತಾನೆ. ಹೀಗೆ ರಾಗದಿಂದ ದ್ವೇಷವೂ, ರಾಗದ್ವೇಷಗಳಿಂದ ಮನೋವಿಕಾರವೂ, ಮನೋವಿಕಾರದಿಂದ ಭವಬಂಧನವೂ ಉಂಟಾಗುತ್ತದೆ. ರಾಗದ್ವೇಷಗಳು ಮನಸ್ಸಿನ ಶಕ್ತಿಯನ್ನು ಹಾಳು ಮಾಡುತ್ತವೆ. ಆಗ ಮನಸ್ಸು ವಿಷಯವಾಸನೆಯಲ್ಲಿ ಮುಳುಗಿಹೋಗುತ್ತದೆ. ವಿಷಯ ವಾಸನೆಯಿಂದ ಕೂಡಿದ ಮನಸ್ಸುಳ್ಳ ವ್ಯಕ್ತಿ ಸದಾ ಅನ್ಯರನ್ನು ದ್ವೇಷಿಸುತ್ತಾನೆ. ತನ್ನ ಹಿತಕ್ಕಾಗಿ ಅನ್ಯರ ಹಿತ ಬಲಿಕೊಡುತ್ತಾನೆ. ತನ್ನ ಸುಖ ಸಂತೋಷಕ್ಕಾಗಿ ಅನ್ಯರನ್ನು ಸಂಕಟಕ್ಕೀಡುಮಾಡುತ್ತಾನೆ. ಕೊನೆಗೆ ತಾನೂ ಹಾಳಾಗುತ್ತಾನೆ. ಇತರರನ್ನೂ ಹಾಳುಮಾಡುತ್ತಾನೆ.

 

ದ್ವೇಷದ ಕಿಚ್ಚು ತಂದೆ ಮಕ್ಕಳಲ್ಲಿ, ಅಣ್ಣ-ತಮ್ಮಂದಿರಲ್ಲಿ, ಪತಿ ಪತ್ನಿಯರಲ್ಲಿ, ಗುರು-ಶಿಷ್ಯರಲ್ಲಿ ಹೀಗೆ ಎಲ್ಲಿಯಾದರೂ ಹೊತ್ತಿಕೊಳ್ಳಬಲ್ಲದು. ಈ ದ್ವೇಷ ಎಂಬ ಕಿಚ್ಚು ಒಬ್ಬರಿಂದ ಇನ್ನೊಬ್ಬರನ್ನು ಅಗಲಿಸಿ ಕಷ್ಟಕ್ಕೆ ಗುರಿಪಡಿಸುವುದು. ಅಂತೆಯೇ ಉಪನಿಷತ್ಕಾಲದ ಗುರುಶಿಷ್ಯರು ‘ಮಾ ವಿದ್ವಿಷಾವಹೈ’ ಅಂದರೆ ‘ಹೇ ದೇವರೆ! ನಾವಿಬ್ಬರೂ ಪರಸ್ಪರ ಎಂದೂ ದ್ವೇಷಿಸದಂತೆ ಮಾಡು’ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದನ್ನು ಕಾಣುತ್ತೇವೆ. ಅಣ್ಣತಮ್ಮಂದಿರ ದ್ವೇಷಕ್ಕೆ ಸಂಬಂಧಿಸಿದ ಕಾಲ್ಪನಿಕ ಕಥೆಯೊಂದು ಹೀಗಿದೆ: ಇಬ್ಬರು ಅಣ್ಣ ತಮ್ಮಂದಿರಲ್ಲಿ ಸಂಪತ್ತಿನ ವಿಷಯವಾಗಿ ದ್ವೇಷ ಹುಟ್ಟಿಕೊಂಡಿತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಶ್ರೀಮಂತರಾಗುವುದಕ್ಕಾಗಿ ದೇವರಿಂದ ವರ ಪಡೆಯಲು ಕಾಡಿಗೆ ತೆರಳಿ ಉಗ್ರ ತಪವನ್ನಾಚರಿಸಿದರು. ಇವರ ತಪಸ್ಸಿಗೆ ಮೆಚ್ಚಿದ ಶಿವನು ಮೊದಲು ತಮ್ಮನ ಹತ್ತಿರ ಬಂದು ವರ ಕೇಳಲು ಹೇಳಿದನು. ಆಗ ತಮ್ಮನು ‘ನಾನು ಎಷ್ಟು ಸಂಪತ್ತನ್ನು ಕೇಳಿದರೂ ಅದಕ್ಕಿಂತ ಹೆಚ್ಚು ಸಂಪತ್ತನ್ನು ನನ್ನ ಅಣ್ಣ ಕೇಳುವ ಸಾಧ್ಯತೆ ಇರುವುದರಿಂದ ಅಣ್ಣನಿಗೆ ಏನು ಕೊಡುವೆಯೋ ಅದಕ್ಕೆ ದುಪ್ಪಟ್ಟು ತನಗೆ ಬೇಕೆಂದು ಶಿವನನ್ನು ಕೇಳಿದನು. ತಮ್ಮನಿಗೆ ತಥಾಸ್ತು ಎಂದು ಹೇಳಿ ಅಣ್ಣನ ಹತ್ತಿರ ಹೋದ ಶಿವನು ವರ ಕೇಳಿಕೊಳ್ಳಲು ಹೇಳಿದನು. ಆಗ ಅಣ್ಣನು ‘ನನ್ನ ತಮ್ಮನಿಗೆ ಏನು ವರ ಕೊಟ್ಟಿರುವೆ?’ ಎಂದು ಶಿವನನ್ನು ಕೇಳಿದ. “ನೀನು ಏನು ಬೇಡಿಕೊಳ್ಳುವೆಯೋ ಅದರ ದುಪ್ಪಟ್ಟು ಅವನಿಗೆ ಕೊಡುವುದಾಗಿ ವರ ಕೊಟ್ಟಿರುವೆ’ ಎಂದು ಶಿವ ಹೇಳುತ್ತಾನೆ. ಇದನ್ನು ಕೇಳಿ ದ್ವೇಷದಿಂದ ಕುದಿದ ಅಣ್ಣ ‘ಹಾಗಾದರೆ ನನ್ನ ಒಂದು ಕಣ್ಣು ಕಾಣದಂತಾಗಲಿ’ ಎಂದು ಶಿವನಲ್ಲಿ ವರ ಕೇಳಿದ. ಶಿವನು ‘ತಥಾಸ್ತು’ ಎಂದು ಹೇಳಿದ ತಕ್ಷಣ ಅಣ್ಣನ ಒಂದು ಕಣ್ಣು, ತಮ್ಮನ ಎರಡೂ ಕಣ್ಣುಗಳು ಕಾಣದಂತಾದವು. ಇದು ರಾಗದ್ವೇಷಗಳ ಪರಿಣಾಮ.

ರಾಗದ್ವೇಷಗಳು ಎಂತಹ ಬಲ್ಲಿದರನ್ನೂ ದುಃಖಕ್ಕೀಡುಮಾಡದೆ ಬಿಡವು. ಭವಭವಾಂತರದ ಸುಳಿಗೆ ಸಿಲುಕುವಂತೆ ಮಾಡುವುದೇ ಅವುಗಳ ಕೆಲಸ. ರಾಗದ್ವೇಷಗಳ ಈ ಮಾಯಾಪ್ರಪಂಚದಿಂದ ಬಿಡುಗಡೆ ಹೊಂದಲು ಪರಶಿವಜ್ಞಾನವನ್ನು ಸಂಪಾದಿಸಬೇಕಾದುದು ಅನಿವಾರ್ಯ.

ಡಾ||  ಸಿ .ನಾಗಭೂಷಣ

 

ವಚನಸಾಹಿತ್ಯ ವಾಹಿನಿಯ ಮೂರು ಘಟ್ಟಗಳಲ್ಲಿ ಒಂದಾದ ಬಸವೋತ್ತರ ಯುಗದಲ್ಲಿ ಪ್ರಾತಿನಿಧಿಕ ವಚನಕಾರರಾಗಿದ್ದಾರೆ. | ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ವಚನಗಳಿಂದ ಪ್ರಭಾವಿತರಾಗಿ ವಚನಗಳನ್ನು ರಚಿಸಿರುವುದರ ಜೊತೆಗೆ ಸ್ವಂತಿಕೆಯ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಬಸವಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ ಮತ್ತು ಪೂರ್ವದ ವಚನಕಾರರ ಪರಂಪರೆಯನ್ನು ಮುಂದುವರಿಸಿವೆ.

 

ಅಖಂಡೇಶ್ವರ ವಚನಗಳ ಕರ್ತೃತ್ವದ ಬಗೆಗೆ, ಆರ್. ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ನಿರಾಲಂಬ ಶರಣನ ಕಾಲ ೧೭೦೦. ಇವನು ವೀರಶೈವ ಕವಿ. ಇವನನ್ನು ಶ್ರೀಮತ್ಪರಮಹ೦ಸ ಪರಿವ್ರಾಜಕ ಸದ್ಗುರು ಸಂಪ್ರದಾಯಕ ಸಿದ್ಧಯೋಗಿಂದ್ರರೆಂದು ಹೇಳಿದ್ದಾರೆ. ಕವಿಚರಿತಕಾರರನ್ನು ಅನುಸರಿಸಿ ರಂ. ಶ್ರೀ. ಮುಗಳಿಯವರು ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳೆಂದು ಹೇಳದೆ ನಿರಾಲಂಬ ಶರಣನಿಗೆ ಷಣ್ಮುಖ ಸ್ವಾಮಿಗಳೆಂದು ಕರೆಯುತ್ತ ಬಂದಿದ್ದಾರೆಂದು ಹೇಳಿದ್ದಾರೆ. ‘ನಿರಾಲಂಬಬಶರಣ’ ಎಂಬುದು ಷಣ್ಮುಖ ಸ್ವಾಮಿಗಳ ಹೆಸರನ್ನು ಪರ್ಯಾಯವಾಗಿ ಸೂಚಿಸಿರುವ ವ್ಯಕ್ತಿಸೂಚಕ ಪದವಾಗಿರದೆ ಅಧ್ಯಾತ್ಮದ ಉನ್ನತ ಸ್ಥರವನ್ನು ಸೂಚಿಸುತ್ತದೆ. ಲೋಕದಲ್ಲಿ ತೊಡಗುವ ಭಕ್ತ ಅನುಭಾವ ಮಾರ್ಗದಲ್ಲಿ ನಡೆದು ಅನುಭಾವಿ  ಶರಣನಾಗಿ ವಚನಗಳನ್ನು ಹೇಳುವಂತಹನಾಗುತ್ತಾನೆ.ಅಂತಹ ಭಕ್ತನ ಅನುಭಾವದ ಸ್ಥಿತಿಯನ್ನೇ ʼತೂರ್ಯನಿರಾಲಂಬ ಶರಣʼ ಎಂಬ ಪದವು ಧ್ವನಿಸುತ್ತದೆ.ಹೀಗಾಗಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಕರ್ತೃ ನಿರಾಲಂಬ ಶರಣ ಎಂಬುದಕ್ಕಿಂತ    ಷಣ್ಮುಖ ಸ್ವಾಮಿಗಳು ಎಂದು ಪರಿಗಣಿಸುವುದೇ ಸೂಕ್ತ. ಷಣ್ಮುಖಸ್ವಾಮಿಗಳು ತನ್ನ ವಚನ ವೊಂದರಲ್ಲಿ ‘ಷಣ್ಮುಖನೆಂಬ ಗಣೇಶ್ವರನ ಹೃದಯ ಕಮಲದಲ್ಲಿ’ ಎಂದು ತಮ್ಮ ಹೆಸರನ್ನು ಹೇಳಿ ಹಂತಹಂತವಾಗಿ ಮುನ್ನಡೆದು ಹೇಗೆ ತಾವು ಐಕ್ಯ ಪದವಿಯನ್ನು ಹೊಂದಿದರೆಂಬಲ್ಲಿ ಅವರು ದಾಟಿದ ಅವಸ್ಥೆಗಳನ್ನು ಗಣೇಶ್ವರರ ಹೆಸರುಗಳಿಗೆ ಸಂಕೇತವಾಗಿಸಿ ಕೊಟ್ಟಿದ್ದಾರೆ. ಈ ಅಂಶವೂ ಸಹ ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳು ಎಂಬುದನ್ನು ಬೆಂಬಲಿಸುತ್ತದೆ.

 

ಅಖಂಡೇಶ್ವರ ವಚನಗಳು ಹೆಸರಿನ ಬಗೆಗೆ ವಚನಗಳನ್ನು ಸಂಪಾದಿಸಿದ ಸಂಪಾದಕರಲ್ಲಿ ಭಿನ್ನಾಭಿಪ್ರಾಯವಿದೆ. ಎಲ್ಲಾ ತಾಡವೋಲೆ ಮತ್ತು ಕೋರಿ ಕಾಗದಗಳಲ್ಲಿ “ಷಣ್ಮುಖ ಸ್ವಾಮಿಗಳು ನಿರೂಪಿಸಿದ ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲದ ವಚನ” ಎಂದು ಕಂಡುಬರುತ್ತದೆ. ‘ಅಖಂಡೇಶ್ವರ’ ಎಂಬುದು ಷಣ್ಮುಖ  ಶಿವಯೋಗಿಗಳ ವಚನಗಳ  ಅಂಕಿತವಾಗಿದೆ. ತಮ್ಮ ಗುರುವಿನ ಹೆಸರನ್ನೇ ಅಂಕಿತವನ್ನಾಗಿ ಬಳಸಿದ್ದಾರೆ. ಈ ವಚನಗಳನ್ನು ಬಸವಣ್ಣನ ವಚನಗಳು; ಅಲ್ಲಮನ ವಚನಗಳು ಎಂದು ಕರೆಯುವ ಹಾಗೆ ಷಣ್ಮುಖ ಶಿವಯೋಗಿಯ ವಚನಗಳು ಎಂದು ಕರೆಯಬೇಕು. ಆದರೆ ಕೆಲವು ಸಂಪಾದಕರು.

 

೧. ಶ್ರೀ ಷಣ್ಮುಖ ಶಿವಯೋಗಿ ಕೃತ ಅಖಂಡೇಶ್ವರ ವಚನಗಳು (ಶ್ರೀ ಸಿದ್ಧವೀರದೇವರು, ಹೊಸಮಠ) ೨. ಷಣ್ಮುಖ ಶಿವಯೋಗಿ ವಿರಚಿತ ಅಖಂಡೇಶ್ವರ ವಚನಗಳು (ವಿ. ಶಿವಾನಂದ) ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ. ಈ ಬಗೆಗೆ ಚರ್ಚಿಸಿದ ಹ. ನಂ. ವಿಜಯಕುಮಾರರವರು ಪೂರ್ವದ ವಚನಗಳನ್ನು ಕರ್ತೃಗಳ ಹೆಸರಿನಲ್ಲಿ ಕರೆಯುವ ಹಾಗೆ ‘ಷಣ್ಮುಖ ಸ್ವಾಮಿಗಳ  ವಚನಗಳೆಂದೇ’ ತಾವು ಸಂಪಾದಿಸಿದ ವಚನಗಳಿಗೆ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಸಮಗ್ರ ವಚನ ಸಂಪುಟ ಮಾಲಿಕೆಯಲ್ಲಿಯ

ಸಂಕೀರ್ಣ ವಚನ ಸಂಪುಟ ೯ ರಲ್ಲಿ ಷಣ್ಮುಖ ಶಿವಯೋಗಿಯ ವಚನಗಳನ್ನು ‘ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನಗಳು ಎ೦ದು ಕರೆದಿದ್ದಾರೆ. ಹ. ನಂ. ವಿಜಯಕುಮಾರವರು ಸಂಪಾದಿಸಿದ ವಚನಗಳು ಸ್ಥಲ ಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿವೆ. ಉಳಿದ ಸಂಪಾದಕರು ಸ್ಥಲಕಟ್ಟಿಗನುಗುಣವಾಗಿ ವಚನಗಳನ್ನು ಸಂಪಾದಿಸಿದ್ದಾರೆ.

ವಚನಗಳ ಸಂಪಾದನೆಯ ಇತಿಹಾಸ : ವಚನಗಳಲ್ಲೆಲ್ಲ ಪ್ರಪ್ರಥಮವಾಗಿ ಮುದ್ರಿತಗೊಂಡ ವಚನಗಳು ಷಣ್ಮುಖ ಶಿವಯೋಗಿಯ ಷಟ್‌ಸ್ಥಲ ವಚನಗಳೇ ಆಗಿವೆ. ವಚನ ಸಾಹಿತ್ಯದಲ್ಲಿ ಈ ವಚನಗಳಿಗೆ ತನ್ನದೇ ಆದ ಒಂದು ಐತಿಹಾಸಿಕ ಮಹತ್ವ ಇದೆ. ಆರಂಭದಲ್ಲಿ ಪ್ರಕಟಗೊಂಡ ಈ ವಚನಗಳು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿರುವುಗಳಾಗಿರದೆ ಪೇಟೆ ಅಥವಾ ಬಾಜಾರು ಪ್ರತಿಯಾಗಿದ್ದವು. ಪ್ರಥಮಬಾರಿಗೆ ‘ಅಖಂಡೇಶ್ವರ ವಚನ’ ಶೀರ್ಷಿಕೆಯಡಿಯಲ್ಲಿ ‘ಉಮಾ ಮಹೇಶ್ವರಿ ಪ್ರೆಸ್’ ಚಿತ್ತೂರು ಇವರು ೧೮೮೪ರಲ್ಲಿ ಪ್ರಕಟಿಸಿದರು. ೧೮೯೦ರಲ್ಲಿ ‘ಗ್ರಂಥರತ್ನಾಕರ’ ಮುದ್ರಣ ಶಾಲೆಯವರು ಅಖಂಡೇಶ್ವರ ವಚನ ಶಾಸ್ತ್ರ ಹೆಸರಿನಲ್ಲಿ ೧೩೨ ವಚನಗಳನ್ನು ಪ್ರಕಟಿಸಿದರು. ೧೯೧೧ರಲ್ಲಿ ಶಿವಲಿಂಗಶೆಟ್ರುರವರು ೧೩೦ ವಚನಗಳನ್ನು ಅಖಂಡೇಶ್ವರ ವಚನಶಾಸ್ತ್ರ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದರು. ೧೯೨೩ರಲ್ಲಿ ಬಳ್ಳಾರಿಯ ವೀರಶೈವ ಬುಕ್ ಡಿಪೋದವರು ೧೬೮ ವಚನಗಳನ್ನು ಅಖಂಡೇಶ್ವರ ವಚನವು ಹೆಸರಿನಲ್ಲಿ ಪ್ರಕಟಿಸಿದರು. ೧೯೫೯ರಲ್ಲಿ ಬಿ. ಜೆ. ಜಾನಕಿರವರು ಷಣ್ಮುಖ ಶಿವಯೋಗಿಗಳ ೮೫ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವೆಲ್ಲವೂ ಜನಪ್ರಿಯ ಸ೦ಪಾದನ ಕೃತಿಗಳಾಗಿದ್ದು ಶಾಸ್ತ್ರೀಯ ಮತ್ತು ಶುದ್ಧಾತ್ಮಕವಾಗಿ ಸಂಪಾದಿತಗೊಂಡವುಗಳಲ್ಲ. ೧೯೪೪ರಲ್ಲಿ ಎರಡು ಹಸ್ತ     ಪ್ರತಿಗಳನ್ನುಪಯೋಗಿಸಿಕೊಂಡು ಸಿದ್ಧವೀರದೇವರು ಹೊಸಮಠರವರು ‘ಶ್ರೀ ಷಣ್ಮುಖ ಸ್ವಾಮಿಕೃತ ಅಖಂಡೇಶ್ವರ  ವಚನಗಳು’ ಹೆಸರಿನಲ್ಲಿ ಸಂಪಾದಿಸಿದರು. ಇದನ್ನು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಎರಡನೆಯ ಕುಸುಮವಾಗಿ ಧಾರವಾಡದ ಮುರುಘಾಮಠದವರು ಪ್ರಕಟಿಸಿದ್ದರು. ೧೯೫೧ರಲ್ಲಿ ಈ ಕೃತಿ ಪುನರ್‌ಮುದ್ರಣ ಪಡೆಯಿತು. ಕೆ. ಎಸ್. ಪಾಟೀಲರವರು ಈ ಆವೃತ್ತಿಯ ಜೊತೆಗೆ ಒಂದು ತಾಳೆಯೋಲೆ ಪ್ರತಿ, ಎರಡು ಕಾಗದದ ಪ್ರತಿ, ಬಳ್ಳಾರಿಯ ಕಲ್ಲಚ್ಚಿನ ಪ್ರತಿಗಳನ್ನುಪಯೋಗಿಸಿಕೊಂಡು ೧೯೫೯ರಲ್ಲಿ ಮುರುಘಾಮಠದ ಮೂಲಕ ಪರಿಷ್ಕರಿಸಿ ಪ್ರಕಟಿಸಿದರು. ಈ ಮೂರು ಆವೃತ್ತಿಯಲ್ಲಿಯ  ಒಟ್ಟು ಪ್ರಕಟವಾದ ವಚನಗಳ ಸಂಖ್ಯೆ ೭೧೭, ಈ ಕೃತಿ ೧೯೮೬ರಲ್ಲಿ ನಾಲ್ಕನೇ ಪರಿಷ್ಕೃತ ಮುದ್ರಣದ ಹೆಸರಿನಲ್ಲಿ ಪ್ರಕಟವಾಗಿದೆ. ಆದರೆ ಮೂರನೆಯ ಮುದ್ರಣದಲ್ಲಿ ಇದ್ದಂತದ ವಿವರಕ್ಕಿಂತ ಯಾವುದೇ ಬದಲಾವಣೆ ಆಗಿಲ್ಲ. ಸಂಪಾದಕರ ಹೆಸರು ಮಾತ್ರ ಶ್ರೀ ನಿ.ಪ್ರ.ಸ್ವ, ಪ್ರಭುಸ್ವಾಮಿಗಳು ಎಂದು ಬದಲಾಗಿದೆ. ಹ. ನಂ. ವಿಜಯಕುಮಾರರವರು ೧೯೫೯ರ  ವೇಳೆಗೆ ಮೂರು ಆವೃತ್ತಿಗಳನ್ನು ಕಂಡಿದ್ದ ೭೧೭ಕ್ಕಿಂತ ಹೆಚ್ಚಿನ ವಚನಗಳು ದೊರೆಯದೆ ಇದ್ದರೂ ಹುಮನಾಬಾದಿನ ವೀರಶೈವ ಕಲ್ಯಾಣ ಪರಿಷತ್ತಿನವರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಎರಡು ತಾಳೆವೋಲೆ ಪ್ರತಿ ಮತ್ತು ೧ ಕಾಗದದ ಪ್ರತಿ ಹಾಗೂ ಶ್ರೀ ಸಿದ್ಧವೀರ ದೇವರು ಹೊಸಮಠ ಸಂಪಾದಿಸಿದ ಮುದ್ರಿತ ಆವೃತ್ತಿಯನ್ನು ಉಪಯೋಗಿಸಿಕೊಂಡು ೧೯೭೭ರಲ್ಲಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಸಂಪಾದನೆಯ ವಿಶೇಷ ಎಂದರೆ, ಉಳಿದ ಸಂಪಾದನ ಕೃತಿಗಳಲ್ಲಿಯ ಹಾಗೆ ‘ಶ್ರೀ ಷಣ್ಮುಖ ಸ್ವಾಮಿ ಕೃತ ಅಖಂಡೇಶ್ವರ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗದೆ ‘ಷಣ್ಮುಖ ಸ್ವಾಮಿಗಳ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗಿದೆ. ೧೯೮೦ರಲ್ಲಿ ವಿ. ಶಿವಾನಂದರವರು ಷಣ್ಮುಖ ಶಿವಯೋಗಿಗಳು ಜೀವಿಸಿದ್ದ  ಪರಿಸರದಲ್ಲಿ

ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಪ್ರಾದೇಶಿಕ ಮಹತ್ವವಿರುವದನ್ನು ಗುರುತಿಸಿ ಒಟ್ಟು ನಾಲ್ಕು ಕೋರಿ ಕಾಗದ ಪ್ರತಿಗಳು ಮತ್ತು ಈಗಾಗಲೇ ಪ್ರಕಟಗೊಂಡ ಎರಡು ಮುದ್ರಿತ ಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದಿಸಿ ಕೊಟ್ಟಿದ್ದಾರೆ. ಷಣ್ಮುಖ ಶಿವಯೋಗಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ. ಸಮಗ್ರ ವಚನ ಸಂಪುಟದ ಜನಪ್ರಿಯ ಆವೃತ್ತಿಯ ಮಾಲೆಯಲ್ಲಿ ಸಂಕೀರ್ಣ ವಚನ ಸಂಪುಟ – ೯ರಲ್ಲಿ ವೀರಣ್ಣ ರಾಜೂರವರು ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿಶೇಷ ಇಲ್ಲ. ಇದರ ಜೊತೆಗೆ ಅಖಂಡೇಶ್ವರ ಗ್ರಂಥ ಮಾಲೆಯಡಿಯಲ್ಲಿ ಅಖಂಡೇಶ್ವರ ವಚನ ಮಂಜರಿ ಹೆಸರಿನಲ್ಲಿ ೨೦೪ ವಚನಗಳು ಪ್ರಕಟವಾಗಿವೆ.

 

ಷಣ್ಮುಖ ಶಿವಯೋಗಿಗಳ ಕಾಲ

 

ಇವರ ಕಾಲದ ಬಗೆಗೆ ಹಲವಾರು ವಿದ್ವಾ೦ಸರು ಚರ್ಚಿಸಿ   ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಅಷ್ಟಾಗಿ ವಿರೋಧ ಕಂಡು ಬರುವುದಿಲ್ಲ. ವಿ. ಶಿವಾನಂದರವರು ಷಣ್ಮುಖ ಶಿವಯೋಗಿ ವಿರಚಿತ ಅಂಡೇಶ್ವರ ವಚನಗಳು, ಪ್ರಸ್ತಾವನೆಯಲ್ಲಿ ಇವರ ಕಾಲದ ಬಗೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿಯ ಎರಡು ಆಧಾರಗಳು ಇವರ ಕಾಲದ ಬಗೆಗೆ ಖಚಿತವಾದ ಮಾಹಿತಿಯನ್ನು ಒದಗಿಸುತ್ತವೆ.

೧.ಕಾಡಸಿದ್ಧೇಶ್ವರ ವಚನಗಳ ಟೀಕೆಯೊಂದು ದೊರೆತಿದ್ದು ಅದರಲ್ಲಿ ಷಣ್ಮುಖ ಶಿವಯೋಗಿ ಮತ್ತು ಅವರ ಸಮಕಾಲೀನ ವ್ಯಕ್ತಿಗಳ ಉಲ್ಲೇಖವನ್ನೊಳಗೊಂಡ ವಚನವೊಂದಿದೆ. ‘ನಿನ್ನಿನವರು ಇಂದಿನವರು ಹೋದ ದಾರಿ ಒ೦ದಲ್ಲದೆ ಎರಡಿಲ್ಲ. ನೋಡೆಂದನಯ್ಯಾ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದ೦ಬಲಿಂಗ ಪ್ರಭುವೆ. ಈ ವಚನದ ಟೀಕೆಯಲ್ಲಿ (ಕಾಡಸಿದ್ಧೇಶ್ವರ ವಚನ ಸಂ, ಹೊಳಲು ಚಂದ್ರಶೇಖರಶಾಸ್ತ್ರಿ, ಪು. ೪೭೮ ಹುಬ್ಬಳ್ಳಿ) ನಿನ್ನಿನವರು ಯಾರೆಂಬುದನ್ನು ಹೇಳಿ, ಇಂದಿನವರೆಂದಡೆ ತುರ್ತು ಈ ಕಲಿಯುಗದೊಳಗೆ ಸಿದ್ದೇಶ್ವರ ಸ್ವಾಮಿಗಳು. ಸಿಂಗಳಾಪುರದ ಬಸವರಾಜದೇವರು, ಘನಲಿಂಗದೇವರು, ಬೋಳಬಸವೇಶ್ವರ ಸ್ವಾಮಿಗಳು. ಶೀಲವಂತ ಚೆನ್ನಮಲ್ಲ ಸ್ವಾಮಿಗಳು. ಷಣ್ಮುಖಸ್ವಾಮಿಗಳು ಇಂತೀ ಗಣಂಗಳು ಲಿಂಗೈಕ್ಯ ರಾಗಿರುವಲ್ಲಿ ಗುಪ್ತರಾಗಿರುವರು ಎಂದಿದೆ. ಈ  ವ್ಯಾಖ್ಯಾನದಲ್ಲಿಯ ವಿವರದ ಪ್ರಕಾರ ಷಣ್ಮುಖ ಶಿವಯೋಗಿಗಳು ಕಾಡಸಿದ್ಧೇಶ್ವರರಿಗಿಂತ ಪ್ರಾಚೀನರು ಎ೦ಬುದಾಗಿ ತಿಳಿದುಬರುತ್ತದೆ. ಕಾಡಸಿದ್ದೇಶ್ವರರ  ಕಾಲ ೧೭೦೦-೨೫ ಎ೦ದು ಅಂದಾಜು ಮಾಡಲಾಗಿದೆ. ೧೭೦೦ಕ್ಕಿಂತ ಪೂರ್ವದಿಂದಲೂ ಜೀವಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.

 

೨. ಅಖಂಡೇಶ್ವರ ವಚನಗಳ ಪ್ರಾಚೀನ ಮುದ್ರಿತ ಪ್ರತಿಗಳಲ್ಲಿ ಶ್ರೀ ಷಣ್ಮುಖ ಸ್ವಾಮಿಗಳು ಶ್ರೀ ಬಸವಲಿಂಗದೇವರಿಗೆ ನಿರೂಪಿಸಿದ ಅರುಹಿನ ಷಡುಸ್ಥಲದ ವಚನ ಎಂಬ ಉಲ್ಲೇಖ ಇದ್ದು ಈ ಬಸವಲಿಂಗಸ್ವಾಮಿಗಳು ಕಲಬುರ್ಗಿಯ ಗದ್ದುಗೆ ಮಠದ ಮೂಲ ಸ್ಥಾಪಕರಾಗಿದ್ದು ಜೀವಿಸಿದ್ದ ಕಾಲ ೧೭೨೫ ಎಂದು ತಿಳಿದುಬಂದಿದೆ. ಈ ವೇಳೆ ಗಾಗಲೇ ಷಣ್ಮುಖ ಶಿವಯೋಗಿಗಳು ವೃದ್ಧರಾಗಿರಬೇಕು ಎ೦ದೆನಿಸುತ್ತದೆ.  ಜೇವರ್ಗಿಯ ಷಣ್ಮುಖ ಶಿವಯೋಗಿ ಮಠದ ಇತ್ತೀಚಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಹಳೆಯ ಕಾಗದಗಳಲ್ಲಿ ದೊರೆತ ಆಧಾರದ ಮೇಲೆ ಇವರ ಕಾಲವನ್ನು ಜನನ ೧೬೩೯ ಶೂನ್ಯ ಪಟ್ಟಕ್ಕೊಡೆಯರಾದ ಕಾಲ ಕ್ರಿ. ಶ. ೧೬೫೯. ಲಿಂಗೈಕ್ಯರಾದ ಕಾಲ ೧೭೧೧ ಎಂದು ನಿರೂಪಿಸಿ ಒಟ್ಟು ೧೬೩೯-೧೭೧೧ರ ವರೆಗೆ ೭೨ ವರ್ಷಗಳ ಕಾಲ ಜೀವಿಸಿದ್ದರು ಎಂಬ ಅಂಶವನ್ನು ಒದಗಿಸಿದ್ದಾರೆ. ಈ ಹೇಳಿಕೆಯನ್ನೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ.

 

ಜೀವನ ಚರಿತ್ರೆ;

ಷಣ್ಮುಖ ಶಿವಯೋಗಿಗಳು ಜೀವಿಸಿದ್ದ ಕಾಲದಲ್ಲಾಗಲೀ ನಂತರದ ಕಾಲದಲ್ಲಾಗಲೀ ಅವರ ಚರಿತ್ರೆಯನ್ನು ಯಾವ ಕವಿಗಳೂ ಬರೆದ ಹಾಗೆ ಕ೦ಡು ಬರುವುದಿಲ್ಲ. ಅವರ ಚರಿತ್ರೆಯನ್ನು ತಿಳಿಯಲು ಇರುವ ಆಧಾರಗಳು, ಜೇವರ್ಗಿಯ ಮಠದಲ್ಲಿಯ ಕೆಲವು ಕಾಗದಗಳಲ್ಲಿಯ ವಿವರಗಳು ಐತಿಹ್ಯಗಳು ಜನಪ್ರತೀತಿ ಗಳಷ್ಟೇ ಆಗಿವೆ. ಇವುಗಳನ್ನು ಸಮರ್ಥಿಸಲು ಬಲವಾದ ಆಧಾರಗಳಿಲ್ಲವಾದರೂ ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಈ ಆಧಾರ ಗಳನ್ನೇ ಉಪಯೋಗಿಸಿಕೊಂಡು ಆಧುನಿಕರಲ್ಲಿ ಗುಂಜಿಹಳ್ಳಿ ಶ್ರೀ ಷಡಕ್ಷರ ಕವಿಯವರು ಶ್ರೀ ಷಣ್ಮುಖ ಶಿವಯೋಗೀಶ್ವರ ಕಾವ್ಯರತ್ನಾಕರ ಎಂಬ ಕಾವ್ಯವನ್ನು ರಚಿಸಿದ್ದಾರೆ. ವಿ. ಸಿದ್ಧ ರಾಮಣ್ಣರವರು ಷಟ್‌ಸ್ಥಲಜ್ಯೋತಿ ಷಣ್ಮುಖಸ್ವಾಮಿ ಎಂಬ ಸಂಗೀತ ಪ್ರಧಾನ ನಾಟಕ ರಚಿಸಿದ್ದಾರೆ. ಎಚ್. ತಿಪ್ಪೇರುದ್ರ ಸ್ವಾಮಿಯವರು ‘ಜಡದಲ್ಲಿ ಜಂಗಮ’ ಎ೦ಬ ಕಾದಂಬರಿಯನ್ನು ರಚಿಸಿದ್ದಾರೆ.

 

ಕಲಬುರ್ಗಿ ಜಿಲ್ಲೆಯʼ ಜೇವರ್ಗಿಯು’ ಇವರ ಜನ್ಮಸ್ಥಳ. ಜೇವರ್ಗಿಯ ಹಿರೇಗೌಡರ ಮನೆತನದಲ್ಲಿಯ ಮಲ್ಲಪ್ಪಶೆಟ್ಟಪ್ಪ ಮತ್ತು ದೊಡ್ಡಮ್ಮ ಎಂಬ ದಂಪತಿಗಳಿಗೆ ಪುತ್ರರಾಗಿ ಜನಿಸಿದರು. ಮು೦ದ ಅಖಂಡೇಶ್ವರ ಗುರುಗಳ ಪರಿಸರದಲ್ಲಿ ಬೆಳೆದರು. ಪ್ರಾರಂಭದಲ್ಲಿ ಚರಜ೦ಗಮರಾಗಿ ಲೋಕ ಸಂಚಾರ ಕೈಗೊಂಡು ಸಮಕಾಲೀನ ಜಡ ಸಮಾಜದಲ್ಲಿ ಜ೦ಗಮತೆಯನ್ನು ಮೂಡಿಸುತ್ತ ಪರ್ಯಟನೆ ಮಾಡುತ್ತ ಕೊನೆಗೆ ಜೇವರ್ಗಿ ಸಮೀಪದ ಕೋಳಕೂರ ಗ್ರಾಮದ ಭೀಮಾನದಿ ತಟಾಕದ ಭೀಮಕೊಳ್ಳದಲ್ಲಿ ನೆಲಸಿ ದೀರ್ಘ ತಪಸ್ಸು ಮಾಡಿ ಯೋಗಸಿದ್ಧಿ ಪಡೆದುಕೊಂಡು ವಚನ ರಚನೆ ಮಾಡಿದರು. ಇವರ ದಿವ್ಯ ಸಾಧನೆಯನ್ನು ಮನಗಂಡ ಅಖಂಡೇಶ್ವರ ಸ್ವಾಮಿಗಳು ಜೋಗಿಕೊಳ್ಳದಿಂದ ಜೇವರ್ಗಿಗೆ  ಬರಮಾಡಿಕೊಂಡು ಕ್ರಿ. ಶ. ೧೬೫೯ರಲ್ಲಿ ತಾವು ಸ್ಥಾಪಿಸಿದ್ದ ವಿರಕ್ತ ಮಠದ ಪಟ್ಟಗಟ್ಟಿದರು. ಹೀಗೆ ಇವರು ಅಖಂಡೇಶ್ವರರು ಸ್ಥಾಪಿಸಿದ ಮಠದ ಅಧಿಪತಿಯಾಗಿ ಧರ್ಮತತ್ತ್ವ ಬೋಧನೆ ಮಾಡುತ್ತ ಅಲ್ಲಿಯೇ ಜೀವಿಸಿದ್ದು ಐಕ್ಯವಾದರು. ಇವರು ಗುರು ಅಖಂಡೇಶ್ವರರ ಅಂಕಿತದಲ್ಲಿ ವಚನಗಳನ್ನು ಬರೆದು ಪ್ರಸಿದ್ಧ ರಾದ್ದರಿಂದ ಮತ್ತು ಅಖಂಡೇಶ್ವರರ ನಂತರ ಪ್ರಸಿದ್ಧವಾದ ಆ ಮಠ ಷಣ್ಮುಖ ಶಿವಯೋಗಿಗಳ ಮಠ ಎಂದೇ ಹೆಸರು ಬಂದಿತು.

ಷಣ್ಮುಖ ಶಿವಯೋಗಿಗಳು ಬಸವಯುಗದ ವಚನಗಳ ಪರಿಭಾಷೆ, ವಸ್ತುಧೋರಣ, ರೀತಿ, ನೀತಿ ಇತ್ಯಾದಿಗಳನ್ನು ಬಸವೋತ್ತರ ಯುಗದಲ್ಲಿ ಪ್ರತಿನಿಧಿಸಿದ ವ್ಯಕ್ತಿ ಮಾತ್ರವಾಗಿರದೆ, ಬಸವಾದಿಗಳ ಪ್ರಗತಿಪರ ಸಮಾಜೋಧಾರ್ಮಿಕ ಸುಧಾರಣಾ ತತ್ತ್ವಗಳನ್ನು, ಜೀವಿಸಿದ್ದ ಯುಗದಲ್ಲಿ ಮುಂದುವರೆಸಿದರು. ಇವರು ಅಂತ್ಯಜರಲ್ಲಿ ಕೆಲವರಿಗೆ ಲಿಂಗದೀಕ್ಷೆ ನೀಡಿದ್ದಲ್ಲದೆ ಸಹಭೋಜನ ಮಾಡಿದರು ಎಂಬ ಹೇಳಿಕೆಯನ್ನು ಸಮರ್ಥಿಸುವಂತೆ ಜೇವರ್ಗಿಯ ಹರಿಜನ ಕೇರಿಯಲ್ಲಿ ಇವರ ಗದ್ದುಗೆಯ ಕುರುಹುಗಳನ್ನು ಕಾಣಬಹುದಾಗಿದೆ. ಅಂತ್ಯಜರು ಇವರನ್ನು ಗುರುವಾಗಿ ಸ್ವೀಕರಿಸಿದ್ದರು. ಒಂದು ಮುದಿ ಎತ್ತು ಅವಸಾನದ  ಸ್ಥಿತಿಯಲ್ಲಿರುವಾಗ ಅದನ್ನು ಆರೈಕೆ ಮಾಡಿ ಅದರಿಂದ ಕಂಥಾಭಿಕ್ಷೆ ಕಾಯಕ ಮಾಡಿಸಿದರೆಂಬ ಐತಿಹ್ಯ ಇದೆ. ಈಗಲೂ ಜೇವರ್ಗಿಯ ಮಠದ ಮುಂದುಗಡೆ ನಂದಿಯ ಸಮಾಧಿ ಇದೆ. ಸುರಪುರದ ದೊರೆ ವೆಂಕಟಪ್ಪನಾಯಕನ ಮಹಾಮಂತ್ರಿ ನಿಷ್ಠೆಯ ವೀರಪ್ಪನವರು ಷಣ್ಮುಖ ಶಿವಯೋಗಿಗಳಿಗೆ ರಾಜಮರ್ಯಾದೆ ನೀಡಿ ಅವರನ್ನು ರಾಜಗುರುಗಳೆಂದು ಸ್ವೀಕರಿಸಿ ಜೇವರ್ಗಿಯಲ್ಲಿ ಅವರಿಗಾಗಿ ಒ೦ದು ಮಠವನ್ನು ಕಟ್ಟಿಸಿದ್ದರು. ಹೀಗೆ ಇವರು ವಿರಕ್ತಮಠದ ಅಧಿಪತಿಯಾಗಿ ಲೋಕೋದ್ಧಾರವನ್ನು ಕೈಗೊಳ್ಳುತ್ತಲೇ ಕ್ರಿ. ಶ. ೧೭೧೧ರಲ್ಲಿ ಶಿವಸಾಯುಜ್ಯ ಪದವಿಯನ್ನು ಪಡೆದರು. ಇವರ ಹೆಸರಿನ ರಥೋತ್ಸವವು ಪ್ರತಿವರುಷ ವೈಶಾಖ ಬಹುಳ ಪಂಚಮಿ ತಿಥಿಗೆ ಜೇವರ್ಗಿಯಲ್ಲಿ ಇಂದಿಗೂ ವೈಭವದಿಂದ ನಡೆಯುತ್ತದೆ.

 

 ಕನ್ನಡ ಸಂಸ್ಕೃತಿಯಲ್ಲಿ  ಷಣ್ಮುಖ ಶಿವಯೋಗಿಗಳ ಕುರುಹುಗಳು :

ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಷಣ್ಮುಖ ಶಿವಯೋಗಿಗಳ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಇವರು ಐಕ್ಯವಾದ ಗದ್ದುಗೆ ಜೇವರ್ಗಿಯಲ್ಲಿ ಇಂದಿಗೂ ಇದ್ದು ಪೂಜೆಗೊಳ್ಳುತ್ತಿದೆ. ಅಖಂಡೇಶ್ವರರು ಜೇವರ್ಗಿಯಲ್ಲಿ ಮಠವನ್ನು ಕಟ್ಟಿಸಿದ್ದರೂ ಇ೦ದಿಗೂ ಅದನ್ನು ಷಣ್ಮುಖ ಶಿವಯೋಗಿಗಳ ಮಠ ಎಂದೇ ಕರೆಯುತ್ತಾರೆ, ಜೇವರ್ಗಿಯ ಹರಿಜನ ಕೇರಿಯಲ್ಲಿಯೂ ಇವರ ಗದ್ದುಗೆ ಇದೆ. ಇವರ ಹೆಸರಿನ ಮಠಗಳು ಜೀವರ್ಗಿಯಲ್ಲಿ ಮಾತ್ರವಲ್ಲದೆ ಸುರಪುರ, ನೆಲೋಗಿ ಮತ್ತು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿರ್ಲಗಾ ತಾಲ್ಲೂಕಿನ ತಾಂಬಾಳಗಳಲ್ಲಿಯೂ  ಇವೆ. ಇವರು ಪೂಜೆ, ಅಧ್ಯಯನ ಮತ್ತು ಬರವಣಿಗೆಗೆ ತೊಡಗುತ್ತಿದ್ದ ಕೋಳತೂರ ಗ್ರಾಮದ ಭೀಮಾನದಿ ಹತ್ತಿರದ ಯೋಗಿಕೊಳ್ಳದ ಸುಂದರ ತಾಣವನ್ನು ಈಗಲೂ ಕಾಣಬಹುದು.

 

ವಚನಗಳು ಮತ್ತು ಲಘು ಕೃತಿಗಳು:

ಇವರು ವಚನಗಳನ್ನು ಮತ್ತು ಕೆಲವು ಲಘು ಕೃತಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಅಖಂಡೇಶ್ವರ ಅಂಕಿತದ ೭೧೭ ವಚನಗಳೂ ಉಪಲಬ್ಧತವಾಗಿವೆ. ೪೧ ಚೌಪದಿಗಳುಳ್ಳ ಅಖಂಡೇಶ್ವರ ಜೋಗುಳ ಪದಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಇವರ ಬರೆದಿದ್ದವುಗಳೆಂದು ಹೇಳಲಾದ ಏಳು ಪರಿವರ್ಧಿನಿ ಷಟ್ಪದಿಯುಳ್ಳ ಪ೦ಚಸಂಜ್ಞೆಗಳ ಪದ ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಿರಾಳಸದ್ಗುರುಸ್ತೋತ್ರ ದೊರೆತವುಗಳಾಗಿವೆ. ಇವುಗಳ ಜೊತೆಗೆ ಇವರು ಷಣ್ಮುಖ ಶಿವಯೋಗಿಗಳ ನಾಂದ್ಯ, ಪ್ರಾಣಲಿಂಗಸ್ಥಲದ ವ್ಯಾಖ್ಯಾನ ಕಾಲಜ್ಞಾನ ಸಾಹಿತ್ಯಗಳನ್ನು ಬರೆದಿರುವುದಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿ  ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ  ಮಹಾಸ್ವಾಮಿಗಳು, ಮಠಕ್ಕೆ ನಾನು ಭೇಟಿಕೊಟ್ಟಾಗ ತಿಳಿಸಿದ್ದಾರೆ. ಸದ್ಯಕ್ಕೆ ಇವು ಅನುಪಲಬ್ದವಾಗಿವೆ.

ಷಣ್ಮುಖ ಶಿವಯೋಗಿಗಳೇ ತಮ್ಮ ವಚನಗಳನ್ನು ಸ್ಥಲಕಟ್ಟಿಗನುಗುಣವಾಗಿ ಜೋಡಿಸಿದ್ದಂತೆ ಕಾಣುತ್ತದೆ. ಈ ವಚನಗಳು ಮುಖ್ಯವಾಗಿ ವೀರಶೈವ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿ ಕಂಡುಬರುತ್ತದೆಯಾದರೂ , ತನ್ನ ಕಾಲದ ಇತರ  ವಚನಕಾರರಲ್ಲಿ ಇಲ್ಲದ ಸಾಮಾಜಿಕ ವಿಡಂಬನೆ ಕ್ರಾಂತಿಕಾರಿಕ ಆಲೋಚನೆ, ಅನುಭಾವ ತತ್ತ್ವದರ್ಶನಗಳನ್ನು  ಕಾಣಬಹುದಾಗಿದೆ. ಇವರ ವಚನಗಳು ೧೪ ಸ್ಥಲಗಳಲ್ಲಿ ವಿಭಜನೆಗೊಂಡಿವೆ. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣ ಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಪ೦ಚಾಕ್ಷರಿಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ ಪ್ರಾಣಿಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ.

ಷಣ್ಮುಖ ಶಿವಯೋಗಿಗಳು ಬಸವಾದಿ ಪರಂಪರೆಯ ವಚನಕಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ವಚನಗಳಿಂದ ಪ್ರಭಾವಿತರಾಗಿದ್ದಾರೆ. ಕರಗಳನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ. ಕೆಳಕಂಡ ವಚನಗಳಲ್ಲಿ ತನಗಿಂತ  ಪೂರ್ವದ ಬಸವಾದಿ ಪ್ರಮಥರನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ

ಎನ್ನ ತನುವೆಸವಣ್ಣನು

ಎನ್ನ ಮನವೆ ಚೆನ್ನಬವಣ್ಣನು

ಎನ್ನ ಪ್ರಾಣವೇ ಪ್ರಭುದೇವರು

(ಶರಣಸ್ಥಲ ವ. ಸಂ. ೮೨ ಪು. ೩೩೬)

ಮಾದಾರಚೆನ್ನಯ್ಯನ ಬಾಯಿತಾಂಬೂಲವ ಮೆಲುವೆ

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನು೦ಬೆ

ಚೋಳಿಯಕ್ಕನ ಊಳಿಗದವನಾಗುವೆ

ಶ್ವಪಚಯ್ಯನ ಆಳಾಗಿರುವೆ

ಇನ್ನುಳಿದ ಸಕಲ ಗಣ೦ಗಳ ತೊತ್ತು ಬಂಟಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ

(ಪ್ರಸಾದಿಸ್ಥಲ ವ. ಸಂ. ೪೨ ಪು. ೧೮೮೯)

 

ಇದೇ ರೀತಿ ಸಿದ್ಧರಾಮ, ಉರಿಲಿಂಗಪೆದ್ದಿ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಬಿಬ್ಬಿ ಬಾಚಯ್ಯ, ಬೇಡರಕಣ್ಣಪ್ಪ ಮುಂತಾದ ನೂತನ ಪುರಾತನರನ್ನು ಒಂಭತ್ತು ವಚನಗಳಲ್ಲಿ ಸ್ಮರಿಸಿದ್ದಾನೆ.

ಬಸವಣ್ಣ, ಅಕ್ಕಮಹಾದೇವಿಯವರ ವಚನಗಳ ಪ್ರಭಾವ ಷಣ್ಮುಖ ಶಿವಯೋಗಿಗಳ ಮೇಲೆ ಯಾವ ರೀತಿ ಆಗಿದೆ ಎಂಬುದನ್ನು  ಹ. ನಂ.ವಿಜಯಕುಮಾರರವರು ತಾವು ಸಂಪಾದಿಸಿದ ಷಣ್ಮುಖ ಶಿವಯೋಗಿಗಳ ವಚನಗಳ ಕೃತಿಯ ಪ್ರಸ್ತಾವನೆಯಲ್ಲಿ   ನಿರೂಪಿಸಿದ್ದಾರೆ. ಆದಯ್ಯನ ವಚನಗಳ ಪ್ರಭಾವವೂ ಇವರ ವಚನಗಳ ಮೇಲಾಗಿರುವುದನ್ನು ಈ ಲೇಖನದಲ್ಲಿ ಪ್ರಥಮವಾಗಿ ಗುರುತಿಸಲಾಗಿದೆ.

ನೆರಕೆನ್ನೆಗೆ ತೆರೆಗಲ್ಲಕೆ

ಶರೀರ ಗೂಡುವೋಗದ ಮುನ್ನ…..  

ಲ್ಲುಹೋಗಿ ಬೆನ್ನುಬಾಗಿ

ಅನ್ಯರಿಗೆ ಹ೦ಗಾಗದ ಮುನ್ನ

(ಸ.ವ.ಸಂ. ೧ ವ.ಸಂ. ೧೬೧ ಪು. ೪೨)

ಬಸವಣ್ಣನವರ ಕಿರಿದಾದ ಈ ವಚನದಿಂದ ಪ್ರಭಾವಿತರಾಗಿ ಷಣ್ಮುಖ ಶಿವಯೋಗಿಗಳು ಸು. ಒಂದೂವರೆ ಪುಟದಷ್ಟು  ದೀರ್ಘವಾಗಿ ನಿರೂಪಿಸಿದ್ದಾರೆ.

ದೇಹವು ನಿಸ್ಸಾರವಾಗಿ ಯೌವ್ವನದ ಬಲಗೆಟ್ಟು

ಮುಪ್ಪಾವರಿಸಿ ಅಚೇತನಗೊಂಡು

ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾನಾಗಿ

ಆದಿವ್ಯಾದಿ ವಿಪತ್ತು

ರೋಗ ರುಜೆಗಳಿಂದ ಬಹು ದುಃಖಟ್ಟು

ಎದೆಗೂಡುಗಟ್ಟಿ ಬೆನ್ನು ಬಾಗಿ ಕಣ್ಣು ಒಳನಟ್ಟು

ಶರೀರ ಎಳಿತಾಟಗೊಂಡು ಕಾಲಮೇಲೆ ಕೈಯನೂರಿ

ಕೋಲ ಹಿಡಿದು ಏಳುತ್ತ ನಾನಾತರದ ದುಃಧಾವತಿಯಿಂದ

ರ್ತಕಟ್ಟು ನಷ್ಟವಾಗಿ ಹೋಯಿತು….

(ಸಂಸಾರ ಹೇಯಸ್ಥಲ ವ. ಸಂ. ೭)

 

ಈ ವಚನವು ಬಸವಣ್ಣನವರ ವಚನವು ಕೊಡುವಷ್ಟು ಸುಂದರವಾಗಿ ಅರ್ಥವಂತಿಕೆಯನ್ನು ಕೊಡಲಾರದು.

 

ನೀನೊಲಿದಡೆ ಕೊರಡು ಕೊನರುವುದಯ್ಯ

ನೀನೊಲಿದಡೆ ಬರಡು ಹಯನಹುದಯ್ಯ

ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯ

ನೀನೊಲಿದಡೆ ಸಕಲಪಡಿ ಪದಾರ್ಥ ಇದರಲ್ಲಿರ್ಪವು

ಕೂಡಲ ಸಂಗಮದೇವ (ಸ. ವ. ಸಂ. ೧ ವ. ಸಂ. ೬೬)

 

ಎ೦ಬ ಬಸವಣ್ಣನವರ ವಚನವನ್ನು ಅನುಸರಿಸಿ ಇವರು

 

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ

ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ

ನೀನೊಲಿದಡ ಕೊರಡೆಲ್ಲ ಕಲ್ಪವೃಕ್ಷವಯ್ಯ

ನೀನೊಲಿದಡ ಬರಡೆಲ್ಲ ಕಾಮಧೇನುವಯ್ಯ

ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ

(ಭಕ್ತಸ್ಥಲ ವ. ಸಂ. ೫೮ ಪು. ೮೫)

 

ಎಂದು ರಚಿಸಿದ್ದಾರೆ. ಈ ವಚನದಲ್ಲಿ ಹೇಳುವ ಧಾಟಿ, ಬಳಸಿರುವ ಭಾಷೆ ಎಲ್ಲವೂ ಬಸವಣ್ಣನಿಂದ ನಿಚ್ಚಳವಾಗಿ ಪ್ರಭಾವಿತವಾಗಿರುವುದನ್ನು ಧ್ವನಿಸುತ್ತದೆ.

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಕೂಡಲಸಂಗಮದೇವ

(ಸ. ವ. ಸಂ. ೧ ವ. ಸಂ. ೪೮೧)

 

ಬಸವಣ್ಣನವರ ವಚನ ಪಡಿಯಚ್ಚಿನಂತೆ ಕೆಳಕಂಡ ವಚನವನ್ನು ಶಿವಯೋಗಿಗಳು ರಚಿಸಿದ್ದಾರೆ.

 

ತಂದನೀನಯ್ಯ ಎನಗೆ ತಾಯಿನೀನಯ್ಯ ಎನಗೆ

ಬ೦ಧು ನೀನಯ್ಯ ಎನಗೆ ಬಳಗನೀನಯ್ಯ ಎನಗೆ

ಗತಿಯು ನೀನಯ್ಯ ಎನಗೆ ಮತಿಯು ನೀನಯ್ಯ ಎನಗೆ

ಸಕಲ ಚೈತನ್ಯವು ನೀನೆ ಅಯ್ಯ ಎನಗೆ

 ಅಖಂಡೇಶ್ವರ ನೀನೆದಿಕ್ಕಲ್ಲದೆ ಎನಗೆ ಮತ್ತಾರು ಇಲ್ಲಯ್ಯ

(ಮ.ಸ್ಥ. ವ. ಸಂ. ೭೭ ಪು. ೧೩೩)

 

ಷಣ್ಮುಖ ಶಿವಯೋಗಿಗಳು ಅಕ್ಕಮಹಾದೇವಿಯವರ  ವಚನಗಳಿಂದಲೂ ಪ್ರಭಾವಿತರಾಗಿ ವಚನಗಳನ್ನು ರಚಿಸಿದ ಹಾಗೆ ಕಂಡು ಬರುತ್ತದೆ. ನಿದರ್ಶನಕ್ಕೆ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಸರವೆತ್ತಿ ಹಾಡುವ ಕೋಗಿಲೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಎರಗಿ ಬ0ದಾಡುವ ತುಂಬಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಕೊಳನತಡಿಯೊಳಾಡುವ ಹ೦ಸೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಗಿರಿಗಹ್ವರದೊಳಗಾಡುವ ನವಿಲುಗಳಿರಾ

ನೀವುಕಾಣಿರೆ ನೀವು ಕಾಣಿರೆ

ಚೆನ್ನಮಲ್ಲಿಕಾರ್ಜುನನಲ್ಲಿದ್ದಹನೆಂದು ಹೇಳಿರೆ

(ಸ. ವ. ಸಂ. ವ. ಸಂ. ೧೭೪ ಪು. ೫೫)

 

ಎ೦ಬ ಅಕ್ಕಮಹಾದೇವಿಯ ವಚನದೊಂದಿಗೆ ಷಣ್ಮುಖ  ಶಿವಯೋಗಿಗಳ ವಚನವನ್ನು ಹೋಲಿಸಿ ನೋಡಿ.

 

ಅರಳಿಯ ಮರದೊಳಗಿರುವ ಅರಗಿಳಿಗಳಿರಾ

ನಮ್ಮ ಅಖಂಡೇಶ್ವರನ ಕಂಡಡೆ ಹೇಳಿರೇ

ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ

ನಮ್ಮ ನಾಗಭೂಷಣನ ಕಂಡಡೆ ಹೇಳಿರೇ

ಕೊಳನ ತೀರದೊಳಗಾಡುವ ಕಳ ಹಂಸೆಗಳಿರಾ

ನಮ್ಮ ಎಳೆಯ ಚಂದ್ರನ ಕಂಡಡೆ ಹೇಳಿರೇ

ಮೇಘ ಧ್ವನಿಗೆ ಕುಣಿವ ನವಿಲುಗಳಿರಾ

ನಮ್ಮ ಅಖಂಡೇಶ್ವರನೆಂಬ ಅವಿರಳ

ಪರಶಿವನ ಕಂಡಡೆ ಹೇಳಿರೇ

(ಶರಣಸ್ಥಲ ವ. ಸ. ೩೦ ಪು. ೩೧೫)

 

ವಚನವು ಭಾವಗೀತಾತ್ಮಕತೆಯಿಂದ ಕೂಡಿದ್ದು, ತೀವ್ರವಾದ ಸ೦ವೇದನೆ ಮತ್ತು ಅರಸುವಿಕೆ ಉಕ್ಕಿಬರುತ್ತದೆ. ಆದರೆ, ಅಕ್ಕಳಿಗಿದ್ದ ಇಷ್ಟದೈವವನ್ನು ಅರಸುವಿಕೆಯ ತುರ್ತು ಇವರಿಗಿತ್ತೆ? ಎಂದೆನಿಸುತ್ತದೆ. ಅಂಬಿಗರ ಚೌಡಯ್ಯನಲ್ಲಿಯ,

ಗಾಳಿಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿನಿನ್ನಧೀನವಲಯ್ಯ,

(ಸ.ವ.ಸಂ. ೧, ಪು. ೧೨೨)  

ಎಂಬ ವಚನ ಷಣ್ಮುಖ ಶಿವಯೋಗಿಗಳಲ್ಲಿ ಕೆಳಕಂಡಂತೆ ಸಿಗುತ್ತದೆ.

 

ಗಾಳಿಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗಬೇಗ

ಗಾಳಿ ನಿರ್ಮಿಚ್ಚೆಯಲ್ಲ ಕೇಳಿರೋ ಜಾಳಮನುಜರಿರಾ

(ಭ.ಸ್ಥ, ವ.ಸಂ. ೨೨)

 

ಮಡಿವಾಳ ಮಾಚಯ್ಯನ ವಚನದ ಪ್ರಭಾವವೂ ಇವರ ಮೇಲಾಗಿದೆ.

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವನರಿಯದಿದ್ದರೆ

ಆ ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರದೇವಾ

 

ಎ೦ಬ ಮಡಿವಾಳ ಮಾಚಯ್ಯನ ವಚನದ ಜೊತೆ ಷಣ್ಮು ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಬಹುದು.

 

ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ

ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ

ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರ

(ಭ. ಸ್ಥ, ವ. ಸಂ. ೩೨ ಪು. ೭೨)

 

ಆದಯ್ಯನಲ್ಲಿ ಬರುವ

 

ತೀರ್ಥಯಾತ್ರೆಯ ಮಾಡಿ ಪಾಪನ ಕಳೆದಿಹನೆಂಬ

ಯಾತನೆ ಬೇಡ ಕೇಳಿರಣ್ಣಾ

ಅನಂತ ಕರ್ಮವಲ್ಲಾ ಒಬ್ಬ ಶಿವಭಕ್ತನ

ದರುಶನ ಸ್ಪರ್ಶನದಿಂದ ಕೆಡುವವು.

(ಸ. ವ. ಸಂ. ೧, ವ. ಸಂ. ೯೬೯)

 

ಎಂಬ ವಚನದ ಜೊತೆಗೆ ಷಣ್ಮುಖ ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಿದರೆ ಆದಯ್ಯನ ವಚನದಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು.

 

ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು

ಸಕಲ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ

ತೊಟ್ಟನ ತೊಳಲಿಬಳಲಿ ಬೆಂಡಾಗಲೇಕೊ

ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಭತ್ತೆಂಟು ಕೋಟಿ

ಕ್ಷೇತ್ರಂಗಳಿರ್ಪವು

ಆತನದರ್ಶನ ಸ್ಪರ್ಶನವಾದಾತಂಗೆ

ಅನಂತಕೋಟಿ ಭವ ಪಾಕ೦ಗಳು ಪರಿಹರವಪ್ಪುವು ನೋಡಾ

(ಭ.ಸ್ಥ. ವ. ಸಂ. ೮೨, ಪು. ೯

 

ಆದಯ್ಯನ ವಚನ :

ಮುತ್ತು ನೀರೊಳಗೆ ಹುಟ್ಟಿ ಮರಳಿನೀರಾಗದಂತೆ

ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ

(ಸ.ವ.ಸಂ. ೧ ವ. ಸಂ. ೧೦೭೨)  

ಎ೦ಬ ಉಪಮೆಯು

ಷಣ್ಮುಖ ಶಿವಯೋಗಿಗಳಲ್ಲಿ :

 

ನೀರು ಘಟ್ಟಿಕೊಂಡು ಮುತ್ತಪ್ಪುದಲ್ಲದೆ ಮುತ್ತುನೀರಪ್ಪುದೇ

ಅಯ್ಯ ?

ಹಾಲು ಹೆಪ್ಪುಗೊ0ಡು ತುಪ್ಪವಪ್ಪುದಲ್ಲದೆ ತುಪ್ಪಹಾಲಪ್ಪುದೇ

ಅಯ್ಯ ?

ಎ೦ದು ನಿರೂಪಿತವಾಗಿದೆ. ಇವರೀರ್ವರ ವಚನದ ವಸ್ತು, ಧಾಟಿ ಒ೦ದೇ ಆಗಿದೆ.

 

ಆದಯ್ಯನು ತನ್ನ ವಚನಗಳಲ್ಲಿ ಬಳಸಿರುವ ಸಂಸ್ಕೃತದ ಪ್ರಮಾಣ ಗ್ರಂಥಗಳಲ್ಲಿಯ ಸಂಸ್ಕೃತ ಶ್ಲೋಕಗಳಲ್ಲಿ ಕೆಲವನ್ನು ಷಣ್ಮುಖ ಶಿವಯೋಗಿಗಳು ಬಳಸಿದ್ದಾರೆ. ಆದಯ್ಯನು ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವ ಸಲುವಾಗಿ ಬಳಸಿರುವ

 

ಯಥಾಭೇರುಂಡ ಪಕ್ಷೀತ್ ದ್ವಿ ಮುಖಾತ್ ಪರಿಭುಂಜತೆ |

ತಥಾ ಭುಂಜಾಮಿ ದ್ವಿಮುಖಾಲ್ಲಿಂ

ಜಂಗಮಯೋರಹಂ

(ಸ.ವ.ಸಂ. ೧ ವ. ಸಂ. ೧೧೧೨)

 

ಎ೦ಬ ಸ೦ಸ್ಕೃತ ಶ್ಲೋಕವನ್ನೇ ಷಣ್ಮುಖ ಶಿವಯೋಗಿಗಳು ಸಹ ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವಲ್ಲಿ ಬಳಸಿದ್ದಾರೆ.

 

ಯಥಾ ಭೇರುಂಡ ಪಕ್ಷೀತ್ ದ್ವಿಮುಖೇನ ಪ್ರಭುಂಜತೆ |

ತಥಾ ಚ ಉಮಯಾದೇವಿ ಮಮ ತೃಪ್ತಂತು ಜಂಗಮಂ ॥

(ಮ.ಸ್ಥ.ವ.ಸ೦.೮೫)

 

ಇಷ್ಟಲಿಂಗದ ಮಹತ್ತನ್ನು ಎತ್ತಿ ಹಿಡಿಯುವಲ್ಲಿ ಆದ್ಯಯನು ಬಳಸಿರುವ :

 

ಇಷ್ಟಲಿಂಗಮ ವಿಶ್ವಸ್ಯ ತೀರ್ಥ ಲಿಂಗಂತು ಯೋ ಭಜೇತ್ |

ಶುನಾಂ ಯೋನಿಶತಂತ್ವಾ ಚಂಡಾಲ ಗೃಹಮಾವಿಶೇತ್ ||

(ಸ.ವ.ಸಂ. ೧ ವ.ಸಂ. ೧೧೪೯)

 

ಎ೦ಬ ಉಕ್ತಿಯನ್ನೇ ಷಣ್ಮುಖ ಶಿವಯೋಗಿಗಳು ಸಹ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ ಕ೦ಡ ಕ೦ಡ ದೇಗುಲದೊಳಗನ ಕಲ್ಲದೇವರೆಂದು ಭಾವಿಸಿ ಪೂಜಿಸುವವರನ್ನು ಹೋಲಿಸಲು ಬಳಸಿದ್ದಾರೆ.

 

ಇಷ್ಟ ಲಿಂಗಮ ವಿಶ್ವಾಸಂ ಸ್ಥಾವರ ಲಿ೦ಗೇನ ಪೂಜನಂ |

ಶ್ವಾನಯೋನಿ ಶತ೦ಗತ೦ ಚಾಂಡಾಲೋಗೃಹಮಾಚರೇತ್ ||   

(ಮ.ಸ್ಥ.ವ.ಸಂ. ೮೬)

 

ಷಣ್ಮುಣ ಶಿವಯೋಗಿಗಳ ಪ್ರಾಣಲಿಂಗಿಸ್ಥಲದಲ್ಲಿ ಬರುವ ವಚನಗಳಂತೂ ಆದಯ್ಯನ ವಚನಗಳನ್ನು ನೆನಪು ಮಾಡಿ  ಕೂಡುತ್ತವೆ.

 

ಪೂರ್ವದ ವಚನ ಸಾಹಿತ್ಯದ ಪ್ರಭಾವ ಷಣ್ಮುಖ ಶಿವಯೋಗಿಗಳ ವಚನಗಳ ಮೇಲೆ ನಿಚ್ಚಳವಾಗಿರುವುದನ್ನು ಮೇಲಿನ ವಿವರಣೆಗಳು ದೃಢೀಕರಿಸುತ್ತವೆ. ಬಸವಣ್ಣ, ಅಕ್ಕಮಹಾದೇವಿ, ಆದಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಕಾಣಿಸಿಕೊಳ್ಳುವ ಸಂಕ್ಷಿಪ್ತತೆ, ಸೂತ್ರಬದ್ಧತೆ, ಉತ್ಕಟತೆ, ಕಲಾಮಂತಿಕೆ ಅಷ್ಟಾಗಿ ಇವರ ವಚನಗಳಲ್ಲಿ ಕಾಣಬರದೆ ವಾಚ್ಯತೆ, ವಿವರಣಾತ್ಮಕತೆಗೆ ಹೆಚ್ಚಿನ ಅವಕಾಶ ದೊರೆತಿದೆ.

ಒಂದು ಸಾಹಿತ್ಯಕ ಪರಂಪರೆ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ಮೇಲೆ ಬರುವ ಕೃತಿಕಾರರು ಆ ಹಿಂದಿನ

ಪರಂಪರೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮೌಲಿಕ ರಚನೆ ಮಾಡುವುದು ತ್ರಾಸಿನಕೆಲಸ, ಆದಾಗ್ಯೂ ಪ್ರತಿಭಾಶಾಲಿಗಳು ಆ ಪ್ರಭಾವವನ್ನು ಅರ್ಜಿಸಿಕೊಂಡು ಪರಂಪರೆಯಿಂದ ಬಿಡಿಸಿಕೊಂಡು ಮೌಲಿಕ ಕೃತಿರಚನೆ ಮಾಡುವ ಸಾಧ್ಯತೆ ಇದೆ. ಷಣ್ಮುಖ ಶಿವಯೋಗಿಗಳು ಪೂರ್ವದ ವಚನಕಾರರ ಪರಂಪರೆಯನ್ನು ಗೌರವಿಸಿ ಪ್ರಭಾವಿತರಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೂ ಇವರ ೭೧೭ ವಚನಗಳೆಲ್ಲವೂ ಪೂರ್ವದ ಅನುಸರಣೆಯಿಂದ ಪ್ರೇರಿತವಾಗಿ ರಚಿತವಾದವುಗಳಲ್ಲ. ಸ್ವಂತಿಕೆಯ ವಚನಗಳು ಇವೆ

 

ಇವರು ತನ್ನ ಕಾಲದಲ್ಲಿ ಇದ್ದ ಸಹಗಮನ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಎಂಬುದು ಕೆಳಕಂಡ ವಚನದಿಂದ ವಿದಿತವಾಗುತ್ತದೆ.

 

ಗ೦ಡಸತ್ತನೆ೦ದು ಗ೦ಡನೊಡನೆ ಕೆಂಡವ ಬೀಳುವನೆಂದು

ಪುಂಡ ವೀರಮಾಸ್ತಿ ತಾನುದಂಡೆಯ ಕಟ್ಟಿಕೊಂಡು

ಖಂಡಯವ ಪಿಡಿದು ತಂಡ ತಂಡದ ಜನರ ಮುಂದೆ

ಮೆರೆದು ಕೊಂಡು ಬಂದು

ಕಿಚ್ಚಿನ ಹೂ೦ಡವಕಂಡು ಹೆದರಿ ಹಿಮ್ಮೆಟ್ಟಿದಡೆ

ಅವಳಿಗದೇ ಭ೦ಗವಲ್ಲದೆ ಶೃಂಗಾರ ಮೆರವುದೇ ಅಯ್ಯ ?

(ಮ.ಸ್ಥ.ವ.ಸು. ೧೩೮)

 

ಪ೦ಚೇಂದ್ರಿಯ, ಅರಿಷಡ್ವರ್ಗ, ಕರಣ ಚತುಷ್ಟಯ ಇತ್ಯಾದಿ ಲೌಕಿಕ ಲೋಕ ವಿಚಾರಗಳಿಂದ ತನ್ನ ತನುಮನಗಳಲ್ಲಿ ಉಂಟಾದ ತುಮುಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳಿಂದ ಪಾರಾಗುವ ನಿರಸನಗೊಳ್ಳುವ, ತನ್ನ ಅಂತರಂಗವನ್ನು ಒರೆಹಚ್ಚಿ ನೋಡುವಂತಹ  ಭಕ್ತನ ಅ೦ತರಂಗದ ನಿರೀಕ್ಷಣೆಯನ್ನು ಸೂಚಿಸುವ ಭಾವತೀವ್ರತೆಯ ಲಕ್ಷಣವನ್ನು, ಇಂತಹ ಸಂದರ್ಭದಲ್ಲಿ ಗುರುವನ್ನು ಮೊರೆ ಹೋಗುವಂತಹ ಅಂಶಗಳನ್ನು ಷಣ್ಮುಖ ಶಿವಯೋಗಿಗಳ ಸಂಸಾರ ಹೇಯಸ್ಥಲದಲ್ಲಿ ಬರುವ ವಚನಗಳಲ್ಲಿ ಕಾಣಬಹುದು.

ನಿದರ್ಶನಕ್ಕೆ,

ಕೆಟ್ಟೆಕೆಟ್ಟೆನಯ್ಯ, ಒಡಲುಪಾಧಿವಿಡಿದು

ಕೆಟ್ಟೆ ಕೆಟ್ಟೆನಯ್ಯ ಒಡಲುದುರ್ಗುಣದೊಡನಾಡಿ

ಕೆಟ್ಟೆ ಕೆಟ್ಟೆನಯ್ಯ ನಿಮ್ಮಡಿಯ ಶತ್ತಿಯ ಮೆರೆದು

(ಸ.ಹೇ.ಸ್ಥ.ವ.ಸಂ. ೧೦)

ಮನವೆಂಬ ಮರ್ಕಟನು ತನುವೆ೦ಬ ವೃಕ್ಷವನೇರಿ

ಇ೦ದ್ರಿಯಗಳೆಂಬ ಶಾಖೆಗೆ ಹಾರಿ ವಿಷಯಗಳೆಂಬ

ಹಣ್ಣು ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ

ಈ ಮನವೆ೦ಬ ಮರ್ಕಟನ ನಿಮ್ಮನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿ ಕೊಳ್ಳಯ್ಯ

(ಅದೇ .ಸಂ.೧೪)

 

 

 

 

 

ಕುಸಿವು  ತೈಷಯಂಡಲೆಯಾವರಿಸಿ ಕುಸಿವ

  ದೆಸೆದೆಸೆಗೆ  ತಿರ್ಪದು ನೋಡಾ ತನುವು

ವಿಷಯ ವಿಕಾರದ೦ಡಲೆಯಾವರಿಸಿ

ದೆಸೆದೆಸೆಗೆ ನುಸುಳು ತಿಪ್ಪುದು ನೋಡಾ ಮನವು

ಈತನು ಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು

(ಅದೇ ವ. ಸಂ. ೧೭)

ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ

ಸಾಕು ಮಾಡದು ಭವಬ೦ಧನ೦ಗಳ

ನೂಕಿಬಿಡದು ಸಕಲಸ೦ಸಾರವ

ಬೇಕೆ೦ದಳಿಸುವದು ವಿಷಯ ಭೋಗಕ್ಕೆ

(ಅದೇ ವ.ಸಂ. ೧೮)

ಸಕಲ ಲೋಕಾದಿಲೋಕಂಗಳು ಮಾಯಾಬಲೆಯಲ್ಲಿ ಸಿಲ್ಕಿ

ಸೆರೆ ಹೋಗುವುದು ಕಂಡು ನಾನಂಜಿ

ನಿಮ್ಮ ಮೊರೆಹೊಕ್ಕೆ ಕಾಯಯ್ಯ ಕಾರುಣ್ಯನಿಧಿಯೇ

(ಅದೇ ವ.ಸಂ. ೨೦)

 

ಷಟ್‌ಸ್ಥಲವು ಇವರಲ್ಲಿ ಕೇವಲ ಸಾಧನೆಯ ಮಾರ್ಗವಾಗಿರದೆ ಸಿದ್ಧಾಂತವಾಗಿಯೂ ನಿರೂಪಿಸಲ್ಪಟ್ಟಿದೆ. ಶಾಸ್ತ್ರೀಯ ನಿರೂಪಣೆ ಯನ್ನು ವಚನಗಳಲ್ಲಿ ಕಾಣಬಹುದು. ಪ್ರತಿಯೊಂದು ಸ್ಥಲದ ಸ್ವರೂಪ, ಲಕ್ಷಣ, ವೈಶಿಷ್ಟ್ಯಗಳು, ಅದರೊಳಗೆ ಸೇರುವ ಭಕ್ತಿಜ್ಞಾನ, ವೈರಾಗ್ಯ, ಅನುಭಾವ, ದಾಸೋಹ, ಕಾಯಕ ಶಿವಯೋಗ, ಶೀಲಚಾರಿತ್ರ ನೇಮ ಎಲ್ಲವೂ ಕ್ರಮಬದ್ಧವಾಗಿ ನಿರೂಪಿಸಲ್ಪಟ್ಟಿದೆ. ಕೆಲವೆಡೆ ಹೋಲಿಕೆಯೊಡನೆ ನಿರೂಪಿಸಲ್ಪಟ್ಟಿದೆ.

ಉದಾ : ಭಕ್ತನಾದವನಿಗೆ ನುಡಿ, ತನು, ಮನ ಭಾವ, ಸರ್ವಕ್ರಿಯೆಯೆಲ್ಲವೂ ಶುದ್ಧವಾಗಿರಬೇಕು. ಲಿಂಗನಿಷ್ಠಾ ಪರನಾಗಿಯೂ, ಜಂಗಮವೇ ಪ್ರಾಣವಾಗಿಯೂ, ಅರ್ಥ ಪ್ರಾಣಾಭಿಮಾನ೦ಗಳು ಶಿವನ ಕೂಡಿರಬೇಕು. ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವುದು. ಲಿಂಗಜಂಗಮ ಒಂದೆಯಾಗಿ ಕಾಂಬುದು, ವಿಭೂತಿ, ರುದ್ರಾಕ್ಷಿ ಲಿಂಗಧಾರಣ ಮುಂತಾದ  ಶಿವಲಾಂಛನವುಳ್ಳಂಥ ಶಿವಶರಣರಲ್ಲಿ ಅತಿಭಕ್ತಿ ಯಾಗಿರಬೇಕು ಎಂದು ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಪರಸ್ತ್ರೀಯರ ಮುಟ್ಟದಿರುವ, ಪರಧನವ ಅಪಹರಿಸದಿರುವ, ಪರದೈವವ ಪೂಜಿಸದಿರುವ, ಪರಹಿಂಸೆಯ ಮಾಡದಿರುವ ಪರಲೋಕದ ಫಲಪದವ ಬಯಸದಿರುವ, ಇಷ್ಟಲಿಂಗದಲ್ಲಿ ನೈಷ್ಠೆಯನ್ನು ಇಟ್ಟಿರುವವರೇ ವೀರಮಾಹೇಶ್ವರರು ಎಂದು ಹೇಳಿದ್ದಾರೆ.

ಅನುಭಾವಿಯಾದವನು ತಿರುಳುಕರಗಿದ ಹುರಿದ ಬೀಜದಂತಿರಬೇಕು. ದಗ್ಧ ಪಟದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.

ಇವರ ವಚನಗಳಲ್ಲಿ ಯೋಗ ಶಿವಯೋಗಗಳ ಬಗೆಗೂ ಉಲ್ಲೇಖ ಇದೆ. ಪ್ರಾಣಲಿಂಗಿಸ್ಥಲದ ಬಹುತೇಕ ವಚನಗಳು  ಯೋಗದ ವಿವರಣೆಗಾಗಿಯೇ ಮೀಸಲಾಗಿವೆ. ಮಂತ್ರ, ಲಯ ಹಠಯೋಗ, ರಾಜಯೋಗಗಳೆಂಬ ಚತುರ್ವಿಧಯೋಗಗಳ ಸ್ವರೂಪ, ಅವುಗಳಲ್ಲಿಯ ವಿಧಗಳು ಲಕ್ಷಣ ಇತ್ಯಾದಿಗಳ ಪ್ರತ್ಯಕ್ಷ ಅನುಭವಗಳನ್ನು ಸ್ಫುಟವಾಗಿ ನಿರೂಪಿಸಿ ಇವೆಲ್ಲವುಗಳಿಗಿಂತ ಮಿಗಿಲಾದದ್ದು ‘ಶಿವಯೋಗ’ ಎಂದು ಹೇಳಿ ಇದರಿಂದಲೇ ವ್ಯಕ್ತಿಯ ಪರಿಪೂರ್ಣ ಸಿದ್ಧಿಸಾಧ್ಯ ಎಂದು ನಿರೂಪಿಸಿದ್ದಾರೆ. ಅಷ್ಟಾವರಣಗಳ ಮಹತ್ವದ ಬಗೆಗೂ ವಚನಗಳಲ್ಲಿ ವಿವರವಿದೆ. ಅಷ್ಟಾವರಣಗಳಲ್ಲಿ ಒಂದಾದ ವಿಭೂತಿಯ ಬಗೆಗೆ ಒಂದು ಸ್ಥಲವನ್ನೇ ಮೀಸಲಾಗಿರಿಸಿದ್ದಾನೆ. ವಿಭೂತಿಯ ಲಕ್ಷಣ ಪ್ರಕಾರಗಳು ಮಹತ್ವ ಇತ್ಯಾದಿಗಳ ಬಗೆಗೂ ಸವಿವರವಾದ ನಿರೂಪಣೆ ಇದೆ. ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತ ಕೋಟಿ ಪಾತಕ೦ಗಳು  ಪರಿಹಾರವಾಗಿ ಶಿವಸಾಯುಜ್ಯ ಪದವು ದೊರೆಕೊಂಬುದು ಎಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಏಳು ವಚನಗಳಲ್ಲಿ ರುದ್ರಾಕ್ಷಿಯ ಬಗೆಗೆ ನಿರೂಪಿಸಲಾಗಿದೆ.

ವ್ಯಕ್ತಿಯ ವ್ಯಕ್ತಿತ್ವದ ಉನ್ನತ ಮೌಲ್ಯಗಳಾದ ಶೀಲ ,ಚಾರಿತ್ರ, ವ್ರತ ನೇಮಗಳ ನಿರೂಪಣೆಯು ಇವರ ವಚನಗಳಲ್ಲಿ ನಿರೂಪಿತವಾಗಿದೆ.

ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ,

ಛಲವಿರಬೇಕು ನಿತ್ಯ ನೇಮದಲ್ಲಿ

ಶೀಲವ್ರತದಲ್ಲಿ ಹಿಡಿದು ಬಿಡನೆಂಬ ಸಟೆಯನಾಡದೆ

ಸತ್ಯವಚನವ ನುಡಿವಾತ

ಕುಟಿಲ ಕುಹಕವ ಮರೆತು ಸದಾಚಾರದಲ್ಲಿ

ನಡೆವಾತನೇ ಸದ್ಭಕ್ತ

ಸುರಚಾಪದಂತೆ ತೋರಿ ಅಡಗುವ ಮನವನಚ್ಚ ಬೇಡ

ಪರಧನ ಪರಸ್ತ್ರೀಯರ ಮುಟ್ಟವೆಂಬುದೆ ಎನ್ನ ಶೀಲ

ಒಡಲುಪಾಧಿಕೆಯ ವಿಡಿದು ಅನ್ಯರ ಅನ್ನ ವಸ್ತ್ರಂಗಳ

ಬಾಯ್ದೆರೆದು ಬೇಡನೆಂಬುದ ಎನ್ನ ವ್ರತ

ಸಕಲ ಪದಾರ್ಥ೦ಗಳ ಲಿಂಗಕ್ಕೆ ಕೊಡದೆ ಅ೦ಗದಿಚ್ಛೆಗೆ

ಕೊಳ್ಳೆನೆ೦ಬುದೇ ನೇಮ

ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು

ಗುರುಲಿಂಗ ಜಂಗಮದಲ್ಲಿ

ನಯವಿರಬೇಕು ಸಕಲ ಗುಣಂಗಳಲ್ಲಿ ಸ್ನೇಹವಿರಬೇಕು

ನುಡಿಗಡಣದಲ್ಲಿ

ಇತ್ಯಾದಿಯಾಗಿ ಆತ್ಮೀಯವಾದ ನುಡಿಗಳಲ್ಲಿ ನವುರಾಗಿ ನೀತಿಬೋಧನೆ ಮಾಡುವುದರ ಮೂಲಕ ವ್ಯಕ್ತಿ ಚಾರಿತ್ರ ಸಂಪನ್ನನಾಗಿ ಸಾರ್ಥಕ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ.

 

ಸಮಕಾಲೀನ ಸಮಾಜದಲ್ಲಿ ಕಂಡು ಬಂದ ಕುಂದು ಕೊರತೆಗಳು ವೈಪರೀತ್ಯಗಳನ್ನು ನವುರಾಗಿಯೂ, ಕಠೋರವಾಗಿಯೂ ವಿಡಂಬಿಸಿ ಅವುಗಳನ್ನು ನಿವಾರಿಸುವ ಯತ್ನವನ್ನು ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ಇಲ್ಲೆಲ್ಲಾ ಉಪಮೆ, ರೂಪಕ, ದೃಷ್ಟಾಂತ ನಾಣ್ಣುಡಿ, ಗಾದೆ ಮಾತುಗಳಿಗೆ ಹೆಚ್ಚಿನ ಆದ್ಯತೆ ತಲುಪಿದೆ.

 

ಬ೦ಧನಕ್ಕೊಳಗಾದ ಹುಲಿಗೆ ಬಲತ್ಕಾರ ಉಂಟೆ ಅಯ್ಯ ?

ಸ೦ಸಾರದ೦ದುಗದಲ್ಲಿ ತೊಳಲುವ ಜೀವನಿಗೆ

ಮು೦ದೆ ಮುಕ್ತಿಯನರಸುವ ಜ್ಞಾನ ಉ೦ಟೇ ಅಯ್ಯ

ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ

ಸಿರಿಯೆಂಬುದು ಕನಸಿನ ಪರಿಯಂತೆ

ಮಡದಿ ಮಕ್ಕಳು ಪಡೆದ ದ್ರವ್ಯವು ಎನ್ನೊಡವೆ ಎಂದು

ನಚ್ಚಬೇಡಿರೊ ಎಲೆ ಹುಚ್ಚು ಮಾನವರಿರಾ ಎಂದು ಎಚ್ಚರಿಸಿದ್ದಾರೆ.

ಮಹೇಂದ್ರ ಜಾಲದ೦ತೆ ಕಣ್ಣ ಮುಂದೆ ಒಡ್ಡಿದ

ಹುಸಿಯ ಸ೦ಸಾರದಲ್ಲಿಯೇ ಎಡ್ಡಾಗಬೇಡಿರೋ 

 

ಎಂದು ಕಿವಿಮಾತು ಹೇಳಿದ್ದಾರೆ. ಅನ್ಯರಲ್ಲಿ ಅವಗುಣವ ಅರಸುವವರನ್ನು’ ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನು ಅರಿಯದೆ ಪರರ ಎಡೆಯಲ್ಲಿ ನೊಣವ ಅರಸುವ ಮರಳುಗಳಿಗೆ   ಹೋಲಿಸಿದ್ದಾರೆ. ವೇಷದಾರಿ ಮಹಾಂತರನ್ನು ಹೊರಗೆ ಆಡಂಬರದ ವೇಷವ ತಾಳಿ ಜಡೆಯ ಬಿಟ್ಟರೇನು ಆಲದ ಮರಕ್ಕೆ ಬೇರಿಳಿದಂತೆ ಎಂದು ಮೂದಲಿಸಿದ್ದಾರೆ. ಪರಧನ, ಪರಸ್ತ್ರೀಯರ ಬಿಟ್ಟರೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ ಎಂದು ಒಂದಡೆ ನಿರೂಪಿಸಿದ್ದಾರೆ. ಕನಕ, ಕಾಮಿನಿ ಭೂಮಿಗಾಗಿ ಹೊಡೆದಾಡಿ ಕಟ್ಟಿತೀ ಜಗವೆಲ್ಲಾ ಎಂದು ನೊಂದಿದ್ದಾರೆ. ತನ್ನ ತಾನರಿಯದೆ ಅನ್ಯರ ಗುಣಾವಗುಣಂಗಳ ಎತ್ತಿ ಹಿಡಿಯುವವರನ್ನು, ಸಜ್ಜನ ಸದ್ಭಾವಿ ಸತ್ಪುರಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವವರನ್ನು ಶಿವಶರಣರೆಂದು ಹೇಗೆ ಕರೆಯಲಿ ಎಂದು ಚಿಂತಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಆಸೆಪಟ್ಟರೆ ಸಂಚಿತ ಪ್ರಾರಬ್ಧ ಆಗಾಮಿಕರ್ಮ ಬಿಡದು ಎಂದು ಎಚ್ಚರಿಸಿದ್ದಾರೆ. ಕೇವಲ ಮಾತಿನಲ್ಲಿ ತಾವು ಶಿವಾನುಭಾವಿಗಳೆಂದು ಗಳಹುತ್ತಿರುವವರನ್ನು ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋಮಾತುಗಳ ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಲೆಗುಟ್ಟುವ ಒಣಹರಟೆಗಾರರು ಎಂದೂ, ಅ೦ತರ೦ಗದಲ್ಲಿಯ ಅರಿಷಡ್ವರ್ಗ, ಅಷ್ಟಮದ, ಕರಣ ಚತುಷ್ಟಯಗಳನ್ನು ನಿಗ್ರಹಿಸದೆ ಬಹಿರಂಗದಲ್ಲಿ ಹಲವು ವ್ರತಗಳನ್ನು ಪಾಲಿಸುತ್ತ ತಾವು ಶೀಲವಂತರೆಂದು ಹೇಳಿಕೊಳ್ಳುವವರನ್ನು ‘ಹುತ್ತದೊಳಗಣ ಹಾವ ಕೊಲುವನೆಂದು ಮೇಲೆ ಹುತ್ತವ ಬಡಿವ ಅರೆ ಮರುಳರು ಎಂದು ಹರಿತವಾಗಿ ವಿಡಂಬಿಸಿದ್ದಾರೆ. ಭಕ್ತಿಯ ಮರೆತು ಯುಕ್ತಿ ಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳ್ ಮುಳು ಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಎಂದು ಹೀಗಳೆದಿದ್ದಾರೆ. ವೇದಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸ೦ಗಳ ಓದಿ ಹೇಳುವಾತ ಇವರ ಪ್ರಕಾರ ಜಾಣನಲ್ಲ. ಹೊನ್ನೆನ್ನದು, ಮಣ್ಣೆನ್ನದು, ಹೆಣ್ಣೆನ್ನೆದು, ಮನೆಯೆನ್ನದು., ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತ ಜಂಗಮರೊಡನೆ ಸಹಭೋಜನ ಮಾಡಿದಡೆ ಕುನ್ನಿ ಕುಕ್ಕಟನ ಬಸುರಲ್ಲಿ ಬರುವುದು ತಪ್ಪದು ಎಂದು ಎಚ್ಚರಿಸಿದ್ದಾರೆ. ಇವರು ಪೂರ್ವದ ವಚನಕಾರರ ತತ್ತ್ವಗಳನ್ನು ಒಪ್ಪಿಕೊಂಡು ಅದರಂತೆ ನಡೆದವರು, ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ಹೇಳುವಂತಹ, ಸದಾಚಾರವನ್ನು ಬಯಸುವಂರಹವನ್ನು ಕುರಿತ ವಚನಗಳಲ್ಲಿ ಭಾಷೆಯಲ್ಲಿ ಸರಳತೆ ಇದೆ. ಪ್ರಾಸಬದ್ಧತೆ ಇದೆ. ತನ್ನನ್ನು ಪರೀಕ್ಷಿಸಿಕೊಳ್ಳುವ ಟೀಕಿಸುವ ಗುಣ ಇದೆ.

ಇವರ ವಚನಗಳಲ್ಲಿ ಅನೇಕ ಯೋಗಾಸನಗಳ ಹೆಸರು ,ಆಚರಣೆಗಳು ಕೇಳಿ ಬರುತ್ತವೆ.  ಬಹುಶಃ ಬ್ರಹ್ಮಚಾರಿಗಳಾಗಿದ್ದ ಇವರು ಯೋಗಾಸನಗಳನ್ನು ಕಲಿತಿದ್ದಿರಬಹುದು. ಇವರ ವಚನಗಳಲ್ಲಿ ಹದಿನೈದಕ್ಕೂ ಮೇಲ್ಪಟ್ಟು ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಈ ಬೆಡಗಿನ ವಚನಗಳಲ್ಲಿ ಬಳಸಿರುವ ಭಾಷೆ ಲೌಕಿಕವಾಗಿದ್ದರೂ ತಲೆಕೆಳಕಾಗಿದ್ದು ಆಳವಾದ ಅನುಭಾವ ಮತ್ತು ಪಾಂಡಿತ್ಯದಿಂದ ಅರ್ಥೈಸಬೇಕಾಗುತ್ತದೆ.  ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ತತ್ತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣ ಇಣುಕಿ ಹಾಕಿದೆ. ಕೆಲವು ವಚನಗಳಲ್ಲಿ ತಾನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಅರ್ಥವಾಗುವಂತೆ ಮಾಡಲು ಉಪಮೆ, ರೂಪಕಗಳು ಗಾದೆಗಳು ನಾಣ್ಣುಡಿಗಳು ಯಥೇಚ್ಛವಾಗಿ ಬಳಸಿದ್ದಾರೆ. ಈ ಪದವಾಕ್ಯಗಳಲ್ಲಿ ಹುದುಗಿರುವ  ಅರ್ಥಗರ್ಭಿತವನ್ನು ಗಮನಿಸಬಹುದು.

ಉದಾ :

ಅಸಲುಕಳೆದ ಬಳಿಕ ಲಾಭ ಉಂಟೆ

ಉಪದೇಶವಿಲ್ಲದ ಲಿಂಗ ಜಡಪಾಷಾಣವೆ೦ದೆನಿಸಿತ್ತು

ಒಡಲಲ್ಲಿ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತಾಯಿತ್ತು

ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು ?

ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಕಡಿದು ನೋಡಿ

ಕಲ್ಲೊಂದು

ಬಿಸಾಡುವಲ್ಲದೆ ಅದರ ಬೆಳಗನರಿವುದೆ ಅಯ್ಯ ?

ಕಬ್ಬಿನ ಸ್ವಾದ ಮದಗಜ ಬಲ್ಲುದಲ್ಲದೆ ಕುರಿ ಎತ್ತ ಬಲ್ಲುದಯ್ಯ?

ಕ್ಷೀರದ ರುಚಿಯ ಹಂಸ ಬಲ್ಲುದಲ್ಲದೆ ನೀರಗೋಳ ಎತ್ತ

ಬಲ್ಲುದಯ್ಯ ?

ತೊಟ್ಟಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೆ

ಹಗಲ ಕಂಡ ಕಮರಿಯ ಇರುಳೆ ಬೀಳುವರೆ

ಹಂದಿ ಹಡಿಕೆಯ ನೆನಸಿ ಹಾಳುಗೇರಿಗೆ ಹೋಗುವಂತ

ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ ಸೀಳುನಾಯಿಗೆ

ಯೋಗ್ಯವೇ ?

ಸುಟ್ಟ ಮಡಕೆಯಲ್ಲಿ ನೀರು ತು0ಬಿದಡೆ ನಿಲುವುದಲ್ಲದೆ

ಹಸಿಯ ಮಡಕೆಯಲ್ಲಿ

ನೀರ ತುಂಬಿದಡ ದಿಟವಾಗಿ ನಿಲ್ಲುವುದೆ

 

ಇತ್ಯಾದಿ ನಿತ್ಯ ಜೀವನದ ಸೂಕ್ತಿಗಳು ಸಂದರ್ಭೋಚಿತವಾಗಿ ವಚನಗಳಲ್ಲಿ ಬಳಸಲ್ಪಟ್ಟಿವೆ.

 

ಇವರ ಶಬ್ಧ ಸಂಪತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳ ಪದಗಳನ್ನು ಗುರುತಿಸಬಹುದು. ಒಂದೇ ವಚನದಲ್ಲಿಯೇ ಅಚ್ಚಗನ್ನಡ ಶಬ್ದಗಳು, ಸಂಸ್ಕೃತ ಭೂಯಿಷ್ಠ ಪದಗಳು ಸಮ್ಮಿಳಿತವಾಗಿರುವುದನ್ನು ನೋಡಬಹುದು. ಇವರ ವಚನಗಳಲ್ಲಿಯ ಅದರಲ್ಲೂ ತಾತ್ವಿಕ ವಚನಗಳ ಶೈಲಿಯು ಹೆಚ್ಚು ವಿಸ್ತೃತದಿಂದ ಕೂಡಿದ್ದು ಗದ್ಯ ಲಯವನ್ನು ಪಡೆದಿದೆ. ಇವರ ವಚನಗಳ ಶಿಲ್ಪ ನಾಲ್ಕು ಸಾಲುಗಳ ಬಂಧದಿಂದ ನಾಲ್ಕು ಪುಟದವರೆಗೂ ದೀರ್ಘಾರ್ತಕವಾಗಿದೆ.

 

ವೀರಶೈವಸಿದ್ಧಾಂತವನ್ನು ತರ್ಕಬದ್ಧವಾಗಿ ನಿರೂಪಿಸಲು ಸಂಸ್ಕೃತ ಪ್ರಮಾಣ ಗ್ರಂಥಗಳಾದ, ಶಿವಧರ್ಮ, ವೀರಶೈವ ಸಂಗ್ರಹ, ವೀರಮಾಹೇಶ್ವರ ಗ್ರಂಥ, ವಾತುಲಾಗಮ, ಶಿವರಹಸ್ಯ, ಸೂಕ್ಷ್ಮಾಗಮ, ಪರಮರಹಸ್ಯ, ಸಿದ್ಧಾಂತ ಶಿಖಾಮಣಿ, ಸ್ಕಾಂದ ಪುರಾಣ, ಪದ್ಮಪುರಾಣ, ಲಿಂಗಪುರಾಣ, ಬ್ರಹ್ಮಾಂಡ ಪುರಾಣ  ಮುಂತಾದ ಕೃತಿಗಳಿಂದ ಸಂಸ್ಕೃತ ಶ್ಲೋಕಗಳನ್ನು ಆಕರಗಳಾಗಿ ಬಳಸಿಕೊಂಡಿದ್ದು, ನಿರೂಪಣೆಯಲ್ಲಿ ಸ೦ದರ್ಭೋಚಿತವಾಗಿ  ಬಳಕೆಯಾಗಿವೆ.

 

ಒಟ್ಟಾರೆ ಇವರ ವಚನಗಳನ್ನು ಕುರಿತು, ಪ್ರಭುಸ್ವಾವಿಗಳು ಬೂದಿಹಾಳಮಠರವರು ಹೇಳಿರುವ ವೀರಶೈವತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವುದರಿಂದ ಇದು ಒಂದು  ಉಪದೇಶ ಗ್ರಂಥವೆಂದೂ, ಶಿವಾನುಭವ ಶಾಸ್ತ್ರ ಸಾರವೆಂದು, ಶಿವಾನುಭವ ಶಬ್ದಕೋಶವೆಂದು, ಹೇಳಲು ಅಭ್ಯಂತರವಿಲ್ಲ  ಎಂಬ ವಾಕ್ಯಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ಸ್ವಲ್ಪ ಮಟ್ಟಿಗೆ ಖಚಿತತೆ ಇದೆ. ವೀರಶೈವ ಸಿದ್ಧಾಂತವನ್ನು ನಿರೂಪಿಸುವಲ್ಲಿ ಚೆನ್ನಬಸವಣ್ಣ ಆದಯ್ಯರನ್ನು ನೆನಪಿಗೆ ತಂದು ಕೊಡುತ್ತಾರೆ. ಇವರ ವಚನಗಳು ರಚನೆಯಾದ ನಂತರದ ಕಾಲದಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದ್ದವು ಎಂಬುದಕ್ಕೆ ಇಲ್ಲಿಯವರೆಗೂ ಪ್ರಕಟಗೊ0ಡ ಆವೃತ್ತಿಗಳೇ ಸಾಕ್ಷಿ. ಪ್ರಪ್ರಥಮವಾಗಿ ಪ್ರಕಟಗೊಂಡ ವಚನಗಳು ಎಂಬ ಖ್ಯಾತಿ ಇವರ ವಚನಗಳಿಗೆ ಸಲ್ಲುತ್ತದೆ. ಇವರ ವಚನಗಳನ್ನು ವಿಶ್ವಕರ್ಮ ಸಮಾಜದ ಪುರವಂತರು ಗುಗ್ಗಳ ಮೊದಲಾದ ಸಮಾರಂಭಗಳಲ್ಲಿ ಒಡಪುಗಳಾಗಿ ಉಗ್ಗಡಿಸುವುದು ವಿಶಿಷ್ಟವಾಗಿದೆ. ಅದ್ವೈತ ತತ್ವಾವಲಂಬಿಗಳು ಇವರ ವಚನಗಳಲ್ಲಿಯ ಯೋಗ ಅಧ್ಯಾತ್ಮಕ್ಕೆ ಸಂಬಂಧಿಸಿದ ವಚನಗಳನ್ನು ಕೆಲವೆಡೆ ಬಳಸಿಕೊಂಡಿದ್ದಾರೆ.

 

ಇವರೇ ಬರೆದರೆಂದು ಹೇಳಲಾದ ಅಖಂಡೇಶ್ವರ ಜೋಗುಳು ೪೧ ಪದಗಳು ದೊರೆತಿವೆ. ಜೋಗುಳ ಪದಗಳಲ್ಲಿ ಬರುವ ಬಹಳಷ್ಟು ವಿಷಯಗಳು ಇವರ ಪ್ರಾಣಿಲಿಂಗಿಸ್ಥಲದ ವಚನಗಳುನ್ನು ನೆನಪಿಗೆ ತಂದುಕೊಡುತ್ತವೆ. ಶಿವಾನುಭವವನ್ನು ನಿರೂಪಿಸಿವೆ. ಕಲ್ಯಾಣಪಟ್ಟಣದಲ್ಲಿ ಬಸವಾದಿ ಪ್ರಮಥರು ಶಿವನರೂಪವಾಗಿ ಕೂಡಿದ್ದರು   ಎಂದು ನೂತನ ಶರಣರುಗಳನ್ನು ನಾಲ್ಕು ಪದ್ಯಗಳಲ್ಲಿ  ಸ್ಮರಿಸಿದ್ದಾರೆ.

ನಿದರ್ಶನಕ್ಕೆ,

ಶುದ್ಧ ಪ್ರಸಾದವನು ಗುರುವಿನಿಂ ಪಡೆದು

ಸಿದ್ಧ ಪ್ರಸಾದವನು ಲಿಂಗದಿಂ ಪಡೆದು

ಚಿದ್ಘನ ಪ್ರಸಾದವನು ಚರದೊಳ್ ಪಡೆದು ಮಹಾ

ರುದ್ರಂಗೆ ಜೋಜೋ ಎಂದಳು ಶರಣೆ

 

ಜೋಜೋ ಎನ್ನಿರಿ ಅಸಮಾಕ್ಷ ಶಿವಗೆ

ಜೋಜೋ ಎನ್ನಿರಿ ಭಸಿತ ಭೂಸಿತಗೆ

ಜೋಜೋ ಎನ್ನಿರಿ ಶಶಿಯ ಸೂಡಿದಗೆ | ಪಾಡಿ |

ಜೋಜೋ ಎನ್ನಿರಿ ವೃಷಭವಾಹನಗೆ

 

ಇತ್ಯಾದಿಯಾಗಿ ಐದು ಪದಗಳಲ್ಲಿ ಶಿವನನ್ನು ಪರ್ಯಾಯ ನಾಮಗಳಿಂದ ಸ್ತುತಿಸಿದ್ದಾರೆ. ಒಂದು ಪದದಲ್ಲಿಯಂತೂ ಜೋಗುಳದ ಪದಗಳನ್ನು ಕೇಳಿದವರಿಗೆ ಶಿವನೊಲಿಯುವನು. ಸಿದ್ದಿ ದೊರಕುವುದು ಎಂದು ಹೇಳಿದ್ದಾರೆ.

 

ನಿರಾಳ ಸದ್ಗುರು ಸೋತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿವಿಭಾಗದಲ್ಲಿ ಕೆ. ೧೧೭೫/೧೮ ನಂಬರಿನ ಓಲೆಪ್ರತಿಯಲ್ಲಿಯು, ಷಣ್ಮುಖಸ್ವಾಮಿಯವರು ನಿರೂಪಿಸಿದ ನಿರಾಳ ಗುರುಸ್ತೋತ್ರ ಹೆಸರಿನಡಿಯಲ್ಲಿ ೨೫ ಭಾಮಿನಿ ಷಟ್ಪದಿ ಪದ್ಯಗಳಿವೆ. ಗುರುವನ್ನು, ಗುರುವಿನ ಮಹಿಮೆಯನ್ನು ನಾನಾ ತೆರನಾಗಿ ಸ್ತುತಿಸಲಾಗಿದೆ. ನಿದರ್ಶನಕ್ಕೆ ಕೆಲವು ಪದ್ಯಗಳು.

 

ಬಡವ ನಡೆನಡೆಯುತ್ತ ಭಾಗ್ಯವ

ನೆಡಹಿ ತಾಕ೦ಡ೦ತೆ ರೋಗಿಯು

ಹುಡುಕುತಿಪ್ಪೌಷಧಿಯ ಲತೆ ಕಾಲ್ದೊರಿ ಕಾಂಬಂತೆ

ಒಡಲಕ್ಷುಧೆಯಿಂದಲೆವವಗೆ ಪಾ

ಲ್ಗಡಲ ನಿಧಿಯೆನೆ ಕ೦ಡತೆರನೆ

ನ್ನೊಡೆಯ ಶ್ರೀ ಗುರುದೇವನ೦ಘ್ರಿಯ ಕ೦ಡು ಬದುಕಿದೆನು.

 

ಗುರುವೆ ಪರತರ ನಿತ್ಯನಿರುಪಮ

ಗುರುವೆ ಪರತರ ಸತ್ಯನದ್ವಯ

ಗುರುವೆ ಪರಬೊಮ್ಮಸ್ವರೂಪನೆ ಘನತಕೆ ಘನಮಹಿಮಾ

ಗುರುವೆ ಮುಕ್ತಿಗೆ ಮೂಲ ನಿಶ್ಚಲ

ಗುರುವೆ ಸುರಚಿರ ಭೇದ್ಯ ನಿರ್ಮಲ

ಗುರುವ ನಿನಗಿನ್ನಧಿಕಮಿಲ್ಲನುತಿಹುದು ಶೃತಿತತಿಯು

ಉಳಿದ ಲಘು ಕೃತಿಗಳು ಉಪಲಬ್ಧವಿಲ್ಲದೆ ಇರುವುದರಿಂದ ಸದ್ಯಕ್ಕೆ ಆ ಕೃತಿಗಳ ಬಗೆಗೆ ಏನನ್ನೂ ಹೇಳುವಂತಿಲ್ಲ

( ಇತ್ತೀಚಿಗೆ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ಈ ಕೆಳಗಿನಂತೆ ಒಂದು ಸುಳ್ಳು ಸುದ್ದಿಯನ್ನು ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳನ್ನು ಕೇಂದ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಅವರಿಗೆ ಬರೆದ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಈ ಲೇಖನ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ತಪ್ಪು ಸಂದೇಶವನ್ನು ಸಾರ್ವಜನಿಕರಲ್ಲಿ ಪ್ರಸಾರ ಮಾಡಿದ್ದರಿಂದ ಈ ಸ್ಪಷ್ಟೀಕರಣವಿರುತ್ತದೆ.

 ಅವಸರದಲ್ಲಿ ಮಾಡುವ ನಿರಾಧಾರ ಆರೋಪಗಳು (hasty and unfounded accusations) ಒಂದು ಗಂಭೀರ ವಿಷಯವಾಗಿದೆ. ಇಂತಹ ಆರೋಪಗಳನ್ನು ಮಾಡುವಾಗ ಅಥವಾ ಅವುಗಳನ್ನು ಪರಿಗಣಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

 ತಕ್ಷಣದ ಪ್ರಭಾವ: ಯಾರಾದರೂ ಮಾಡುವ ನಿರಾಧಾರ ಆರೋಪಗಳು ಅನೇಕ ಸಂದರ್ಭಗಳಲ್ಲಿ ತಕ್ಷಣದ ಪ್ರಭಾವವನ್ನು ಉಂಟುಮಾಡುತ್ತವೆ.

ಖಚಿತ ಮಾಹಿತಿಯಿಲ್ಲದಿರುವುದು: ಅರ್ಜೆಂಟ್ ಪರಿಸ್ಥಿತಿಯಲ್ಲಿಯೇ ಆರೋಪಗಳನ್ನು ಮಾಡುವುದು, ಸಾಕ್ಷ್ಯಗಳ ಅಥವಾ ಪರಿಶೀಲಿತ ಮಾಹಿತಿಯ ಕೊರತೆಯ ಕಾರಣದಿಂದಾದರೂ ಆಗಬಹುದು.

 ಕಾನೂನು ಸಮಸ್ಯೆಗಳು: ನಿರಾಧಾರ ಆರೋಪಗಳು ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಹುದಾಗಿದೆ. ತಪ್ಪು ಆರೋಪಗಳು ಮಾನನಷ್ಟ ಮೊಕದ್ದಮೆಗಳಿಗೆ ಕಾರಣವಾಗಬಹುದು.

 ವ್ಯಕ್ತಿಗತ ಮತ್ತು ವೃತ್ತಿಪರ ಪ್ರಭಾವ: ನಿರಾಧಾರ ಆರೋಪಗಳು ವ್ಯಕ್ತಿಗಳ ಖ್ಯಾತಿಗೆ ತೀವ್ರ ಹಾನಿ ಉಂಟುಮಾಡಬಹುದು. ಇದರಿಂದ ಅವರ ವೃತ್ತಿಪರ ಜೀವನದ ಮೇಲೆ ದೊಡ್ಡ ಪರಿಣಾಮ ಬೀಳಬಹುದು.

 ಆತ್ಮವಿಶ್ವಾಸ ಮತ್ತು ಸಂಬಂಧಗಳು: ಇಂತಹ ಆರೋಪಗಳು ಆತ್ಮವಿಶ್ವಾಸವನ್ನು ಹಾಳುಮಾಡಬಹುದು ಮತ್ತು ವ್ಯಕ್ತಿಗಳ ನಡುವಿನ ನಂಬಿಕೆಯನ್ನು ಕುಸಿತಗೊಳಿಸಬಹುದು.

 ಸಮಯವಿಲ್ಲದ ಪರಿಶೀಲನೆ: ಅವಸರದ ಆರೋಪಗಳು ಸತ್ಯಾಸತ್ಯತೆಗಳನ್ನು ನಿಖರವಾಗಿ ಪರಿಶೀಲಿಸಲು ಸಮಯವಿಲ್ಲದ ಕಾರಣದಿಂದ ಉಂಟಾಗಬಹುದು.

ನಿರಾಧಾರ ಆರೋಪಗಳನ್ನು ತಪ್ಪಿಸಲು ಸೂಕ್ತ ಮಾಹಿತಿಯನ್ನು ಸಂಗ್ರಹಿಸಿ, ಸಾಕ್ಷ್ಯಾಧಾರವನ್ನು ಪರಿಶೀಲಿಸಿ, ಮತ್ತು ಆ ನಂತರವೇ ಆರೋಪಗಳನ್ನು ಮಾಡುವುದು ಉತ್ತಮ. ಇವುಗಳನ್ನು ಕೈಗೊಳ್ಳುವುದರಿಂದ ತಪ್ಪು ಆರೋಪಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಮತ್ತು ಎಲ್ಲರೂ ನ್ಯಾಯವನ್ನು ಅನುಭವಿಸಬಹುದು. )

  

ದಿ.೨ ಜೂನ ೨೦೨೪

 ಗೆ, ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯ

ಬೆಂಗಳೂರು

ಮೊಬೈಲ ಸಂಖ್ಯೆ :  8722724174

ಮಾನ್ಯರೆ,

ವಿಷಯ: ತಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಶ್ರದ್ಧೆಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಕುರಿತು ಸುಳ್ಳು ಸಂಗತಿಗಳನ್ನು ಅಪಪ್ರಚಾರ ಮಾಡುತ್ತಿರುವದರ ಕುರಿತು,

 ತಾವು ದಿ. ೩೧-೦೫-೨೦೨೪ ವಾಟ್ಸ್ಯಾಪ ಜಾಲತಾಣಗಳಲ್ಲಿ ಹರಿಬಿಟ್ಟ ವಿಷಯ

 “ಕೊಲ್ಹಾಪುರದ ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಿದಾಗ ಲಿಂಗಾಯತ ದೀಕ್ಷೆ ನೀಡುವುದು ಬೇಡವೆಂದು ಪ್ರತಿರೋಧ ಒಡ್ಡಿದವರೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು. ಅಂದು ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆಯನ್ನು ಸ್ವೀಕಾರ ಮಾಡಿದ್ದಿದ್ದರೆ ಇಂದು  ಮಹಾರಾಷ್ಟ್ರ ರಾಜ್ಯದಲ್ಲಿ ವೀರಶೈವ ಜಂಗಮರೆಂದು ಗುರುತಿಸಿಕೊಂಡಿರುವ ಸಿಂಹಪಾಲು ಜನ ಲಿಂಗಾಯತರಾಗಿ ಉಳಿದಿರುತ್ತಿದ್ದರು. ಅಂತಹ ಸಾಧ್ಯತೆಯನ್ನು ತಪ್ಪಿಸಿದ್ದು ಇದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು.” 

ಎಂದು ಬರೆದು ನಂತರ ಅದನ್ನು ಫೇಸಬುಕ್ ಜಾಲತಾಣಗಳ ಮೂಲಕ ಪ್ರಚಾರ ಮಾಡಿರುವಿರಿ.

 

ವಿಷಯ ತಿಳಿದು ನಾನು ತಮಗೆ ಅಂದೇ ೩೧-೦೫-೨೦೨೪ ರಂದು ತಮ್ಮ ಮೊಬೈಲ ಸಂಖ್ಯೆ :  8722724174 ಗೆ ಫೋನ ಮಾಡಿ ತಾವು ಪ್ರಚಾರ ಮಾಡುತ್ತಿರುವ ವಿಷಯಕ್ಕೆ ಸಾಕ್ಷಿ ಮತ್ತು ಪುರಾವೆಗಳನ್ನು  ಕೇಳಿದೆ.

ಅದಕ್ಕೆ ಪ್ರತಿಯಾಗಿ ತಾವು ಯಾರದೋ ಬಾಯಿಯಿಂದ ಕೇಳಿದ ವಿಷಯವನ್ನು ಬರೆದಿರುವೆ ಎಂದು ತಿಳಿಸಿರುವಿರಿ.

ಒಬ್ಬ ಸಂಶೋಧಕ,ಕವಿ, ಸಾಹಿತಿ ಮತ್ತು ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪಡೆದುಕೊಂಡಿರುವ ತಮ್ಮ ವ್ಯಕ್ತಿತ್ವಕ್ಕೆ ಈ ರೀತಿಯ ಸ್ಪಷ್ಠೀಕರಣಗಳು ಶೋಭೆ ತರುವದಿಲ್ಲ.

 

ಯಾರೋ ಹೇಳಿದರು ಎಂದ ಮಾತ್ರಕ್ಕೆ ಹಿಂದೆ ಮುಂದೆ ನೋಡದೇ  ಜಾಲತಾಣಗಳಲ್ಲಿ ಹರಿಬಿಡಲು ಇದು ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ.

 

 ತಾವು ಬರೆದಿದ್ದು ನಮ್ಮ ಆರಾಧ್ಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ  ಛತ್ರಪತಿ ಶಾಹು ಮಹಾರಾಜರ ಕುರಿತು ಎಂಬುದನ್ನು ತಾವು ಅಷ್ಠೋಂದು ಲಘುವಾಗಿ ಪರಿಗಣಿಸಬಾರದಾಗಿತ್ತು.

ನಿಮಗೆ ನಿಮ್ಮ ಆರಾಧ್ಯರು ಹೇಗೆ ಶ್ರೇಷ್ಠರೋ ಹಾಗೆ ನಮಗೂ ನಮ್ಮ ಗುರುಗಳು ಶ್ರೇಷ್ಠರು ಎಂದು ತಾವು ಯಾವ ಕ್ಷಣದಲ್ಲೂ ಅಥವ ಯಾರ ಬೆಂಬಲದ ಕೃಪಾ ಛತ್ರದಲ್ಲಿದ್ದಾಗಲೂ ಮರೆಯಬಾರದು.

 ಸಮಾಜದ ಪ್ರಶಾಂತ ವಾತಾವರಣದಲ್ಲಿ ದುರ್ಗಂಧವನ್ನೆಬ್ಬಿಸಿದ ವಿವಾದದ ವಿಷಯ ಕುರಿತು ದಾಖಲೆ ಸಮೇತ ಬರೆಯದೇ, ಬರೆಯುವ ತೆವಲಿಗೆ ಬರೆದು ಜಾಲತಾಣಗಳಲ್ಲಿ ಹರಿಬಿಡುವುದು  ಅಕ್ಷಮ್ಯ ಅಪರಾಧ.ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆನಿಸುವದಿಲ್ಲ ಅದು ಅನೈತಿಕ ಬೌದ್ಧಿಕತೆ ಎಂದೆನಿಸುತ್ತದೆ

 ೩೧-೦೫-೨೦೨೪ ರಂದು ತಮ್ಮ ಜೊತೆ ಮಾತನಾಡಿದಾಗ ಸಂಬಂದಿಸಿದ ಮಾಹಿತಿ ಕೊಡಿ ಎಂದು ನನಗೆ ತಾವು ಹೇಳಿದುದರಿಂದ  ನಾನು ಸಂಬಂಧಿಸಿದ ಮಾಹಿತಿಗಳನ್ನು ತಮಗೆ ಒದಗಿಸುತ್ತಿರುವೆ.

ಛತ್ರಪತಿ ಶಾಹು ಮಹಾರಾಜ ಕೊಲ್ಲಾಪುರ

 ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು ಜನ್ಮ ತಾಳಿದ್ದು  ೨೪.೬.೧೮೭೪ ಮತ್ತು ಮರಣ ಹೊಂದಿದ್ದು  -೬.೫, ೧೯೨೨ (ಜೀವಿತಾವಧಿ ೪೭ ವರ್ಷಗಳು).

ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಜನ್ಮ ತಾಳಿದ್ದು ೧೧-೦೯-೧೮೬೭ ಮತ್ತು ಲಿಂಗೈಕ್ಯರಾದುದು ೧೯-೦೨-೧೯೩೦.(ಜೀವಿತಾವಧಿ ೬೩ ವರ್ಷಗಳು)

ಇವರೀರ್ವ ಮಹಾತ್ಮರ  ಜೀವಿತಾವಧಿಯ  ಸಮಯದಲ್ಲಿ  ಪರಮಪೂಜ್ಯ ಹಾನಗಲ್ಲ ಶ್ರೀಗಳು  ಮಹಾರಾಷ್ಟ್ರರಾಜ್ಯಕ್ಕೆ ಪ್ರಯಾಣ ಬೆಳಿಸಿದ್ದು ಮೂರುಬಾರಿಯಾದರೂ ಒಮ್ಮೆಯೂ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರನ್ನು ಭೇಟಿಯಾಗಿಲ್ಲ

  1. ೧೯೦೭ ಸೊಲ್ಲಾಪುರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮೂರನೆ ಯ ಅಧಿವೇಷನ ಕ್ಕೆ ಹೋಗಿದ್ದು
  2. ೧೯೦೯ ಗಡಹಿಂಗ್ಲಜಗೆ ಇಂಗ್ಲೀಷ ವಿದ್ವಾಂಸರಾದ ಶ್ರೀ ವೀರಭದ್ರ ಶ್ರೇಷ್ಠೀ ಯವರನ್ನು ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ವ್ಯವಸ್ಥೆಮಾಡಲು .
  3. ೧೯೨೦ ಸೊಲ್ಲಾಪುರಕ್ಕೆ ಪೂಜ್ಯ ನಾಲತ್ವಾಡ ವೀರೇಶ್ವರ ಶರಣರ ಅಂತ್ಯಕ್ರಿಯೆಗೆ ಹೋಗಿದ್ದು.

ಶಾಹುಮಹಾರಾಜರು ಕರ್ನಾಟಕಕ್ಕೆ ಎಂದೂ  ಭೇಟಿ ನೀಡಿಲ್ಲ ೧೯೧೯-೨೦ರಲ್ಲಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ ಅಖಿಲ ಭಾರತ ಕಾಸ್ಟ್ ಕಾನ್ಫರೆನ್ಸ್ ನಡೆದಿತ್ತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಾಹು ಮಹಾರಾಜರಿಗೆ ಆಮಂತ್ರಣ ನೀಡಿ, ಈ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ಆದರೆ ಶಾಹು ಮಹಾರಾಜರು ಅದರಲ್ಲಿ ತಾವು ಭಾಗವಹಿಸದ ಕಾರಣದಿಂದ ಶ್ರೀ ವಿ.ಆರ್.ಶಿಂದೆ ಎಂಬ ಸತ್ಯಶೋಧಕ ಸಮಾಜದ ಮುಖಂಡರನ್ನು ಮೈಸೂರಿಗೆ ಕಳುಹಿಸಿದ್ದರು.

ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದೊಂದಿಗೆ ಆರಂಭವಾದ ಕಟು ಬ್ರಾಹ್ಮಣವಾದದಿಂದ ಸಂತ್ರಸ್ತವಾದ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯ ಬಿರುಗಾಳಿ ಎಬ್ಬಿಸಿದವರಲ್ಲಿ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು  ಚರಿತ್ರೆಯಲ್ಲಿ ಎದ್ದು ಕಾಣುವ ಹೆಸರು.

೧೮೯೪ ರಲ್ಲಿ ಜರುಗಿದ ಅವರ ಪಟ್ಟಾಭಿಷೇಕದ ಧಾರ್ಮಿಕ ಸಮಾರಂಭದಲ್ಲಿ ರಾಜಮನೆತನದ ಬ್ರಾಹ್ಮಣ ಪುರೋಹಿತ ನಾರಾಯಣ ಭಟ್ ಅವರು ಶಾಹು ಶೂದ್ರ ವರ್ಣಕ್ಕೆ ಸೇರಿದವರು ಎಂದು ನಿರ್ದಿಷ್ಟ ವೇದೋಕ್ತ ವಿಧಿಗಳನ್ನು ಮಾಡಲು ನಿರಾಕರಿಸಿದರು.ಇದು ಶಾಹು ಮಹಾರಾಜರ ಸ್ವಾಭಿಮಾನಕ್ಕೆ ತೀವೃ ಆಘಾತವನ್ನುಂಟುಮಾಡಿತು. ಇದನ್ನು ವೇದೋಕ್ತ ವಿವಾದ ಎಂದು ಕರೆಯಲಾಯಿತು.

ಇದು ಶಾಹು ಮಹಾರಾಜರು  ಆರ್ಯ ಸಮಾಜ ಮತ್ತು ಸತ್ಯಶೋಧಕ್ ಸಮಾಜವನ್ನು ಬೆಂಬಲಿಸಲು ಮತ್ತು ಮರಾಠ ಸಮುದಾಯದ ಹಕ್ಕುಗಳಿಗಾಗಿ ಪ್ರಚಾರ ಮಾಡಲು ಕಾರಣವಾಯಿತೇ ಹೊರತು ವೀರಶೈವ-ಲಿಂಗಾಯತ ಧರ್ಮವನ್ನಲ್ಲ . ಅವರು ಪುರೋಹಿತರನ್ನು ತೆಗೆದುಹಾಕುವ ಮತ್ತು ಕ್ಷತ್ರ ಜಗದ್ಗುರು (ಕ್ಷತ್ರಿಯರ ವಿಶ್ವ ಗುರು) ಎಂಬ ಬಿರುದು ಹೊಂದಿರುವ ಬ್ರಾಹ್ಮಣೇತರರ ಧಾರ್ಮಿಕ ಶಿಕ್ಷಕರಾಗಿ ಯುವಕ ಮರಾಠರನ್ನು ನೇಮಿಸುವ ಧೈರ್ಯದ ಹೆಜ್ಜೆಯನ್ನು ತೆಗೆದುಕೊಂಡರು.

 ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯನವರೆ , ದಯವಿಟ್ಟು ಇಲ್ಲಿ ಗಮನಿಸಿ ಆ ಸಂಧರ್ಭದಲ್ಲಿ ವೀರಶೈವ-ಲಿಂಗಾಯತವೂ ಮಹಾರಾಷ್ಟ್ರದಲ್ಲಿ ಶೂದ್ರರ ಸ್ಥಾನದಲ್ಲಿಯೇ ಇತ್ತು ( ಪರಳಿ ವೈದ್ಯನಾಥ ದೇವಾಲಯದಲ್ಲಿ ವೀರಶೈವ-ಲಿಂಗಾಯತರ ಪ್ರವೇಶ ನಿರಾಕರಣೆ ೧೯೧೫-೧೯೨೯) ಹೈದರಾಬಾದ ನಿಜಾಂ ಕೋರ್ಟ-ವಾದ ವಿವಾದ ಮತ್ತು  ೧೯೦೯ ರಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರಿಂದ ವೀರಶೈವ-ಲಿಂಗಾಯತರನ್ನು ಶೂದ್ರ ಸ್ಥಾನದಿಂದ ಮೇಲೆತ್ತಲು “ಲಿಂಗಿ ಬಾಹ್ಮಣ” ರೆಂದು ಮಾಡಿದ ಪ್ರಯತ್ನಗಳು).

ಶಾಹು ಮಹಾರಾಜರು ಬ್ರಾಹ್ಮಣ ಗುಂಪುಗಳ ಅಪಪ್ರಚಾರವನ್ನೆದುರಿಸಲು ಬ್ರಾಹ್ಮಣೇತರರಿಗೆ ಪತ್ರಿಕೆಗಳನ್ನು ಶುರು ಮಾಡಲು ನೆರವು ನೀಡಿದರು. ಆದರೆ ಅವರೆಂದಿಗೂ ಜಾತಿವಾದವನ್ನು ಬೆಂಬಲಿಸಲಿಲ್ಲ.

ಶಾಹು ಮಹಾರಾಜರ  ಅವರ ಈ ಸಾಮಾಜಿಕ ಕ್ರಾಂತಿಯ ಆಂದೋಲನದ ಹಿಂದೆ ಇದ್ದುದು

  1. ಆರ್ಯ ಸಮಾಜ,
  2. ಅನಿಬೆಸಂಟರ ಥಿಯೋಸಾಫಿಕಲ್ ಸೊಸೈಟಿ,
  3. ಮಹಾತ್ಮ ಫುಲೆ ಅವರ ಸತ್ಯಶೋಧಕ ಸಮಾಜ ಮತ್ತು
  4. ಅಮೆರಿಕನ್ ಕ್ರಿಶ್ಚಿಯನ್ ಮಿಷನರಿಯೊಂದರ ಸ್ಪೂರ್ತಿ.

ಹೊರತು ವೀರಶೈವ-ಲಿಂಗಾಯತ ಧರ್ಮ ವಲ್ಲ ( ಉಲ್ಲೇಖ : ರಾಜರ್ಷಿ ಶಾಹು ಛತ್ರಪತಿ.ಲೇಖಕ ಪ್ರೋ.ಹನುಮಂತ.Pages 898. 400.00.Year of Publication: 2018.Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ .Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು 560174 ).

 ವಸ್ತುಸ್ತಿತಿ ಹೀಗಿದ್ದಾಗ ಮತ್ತು ಶಾಹು ಮಹಾರಾಜರ ಜೀವಿತಾವಧಿಯಲ್ಲೇ ವೀರಶೈವ-ಲಿಂಗಾಯತ ಧರ್ಮೀಯರು ಶೂದ್ರರಾಗಿಯೇ ಇದ್ದ ಸಂಧರ್ಭದಲ್ಲಿ ಅವರು ಹೇಗೆ  ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಲು ಸಾಧ್ಯ ?.

 ಕಾಮಾಲೆಯ ಕಣ್ಣುಗಳನ್ನು ಹೊಂದಿದವರಿಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳು ಮಸಕಾಗಿಯೇ ಕಾಣುತ್ತವೆ.   ಅವರ ಧರ್ಮ ಜಾಗೃತಿಗೆ ಒಂದು ಚಿಕ್ಕ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು.

೧೯೧೦ ರಲ್ಲಿ ಬೀಳಗಿ ತಾಲೂಕಿನ ಹಲಗಲಿ ಗ್ರಾಮಕ್ಕೆ ಶ್ರೀ ಕುಮಾರ ಸ್ವಾಮಿಗಳು ಶಿವಯೋಗ ಮಂದಿರದ ಭಿಕ್ಷೆಗೆಂದು ಹೋಗಿದ್ದರು. ಈ ಊರಿನ ವಿವಿಧ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿವಸಿದ್ಧ ಸರನಾಯಕ ಎಂಬ ಈ ಊರ ಪ್ರಮುಖರು ಮೂರುಸಾವಿರ ರೂಪಾಯಿಗಳನ್ನು ಕೂಡಿಸಿ ತಮ್ಮೆಲ್ಲರ ಕಾಣಿಕೆಯಾಗಿ ನೀಡಲು ಬಂದರು. ಪೂಜ್ಯರಿಗೆ ಅಲ್ಲಿ ಆಚಾರ ವಿಚಾರಗಳು ಭಿನ್ನವೆನಿಸಿದವು.ಅವರು ಆ ಕಾಣಿಕೆ ಸ್ವೀಕರಿಸಲಿಲ್ಲ.

ಕಾಣಿಕೆ ತೆಗೆದುಕೊಳ್ಳಲೂ ನಿಯಮಗಳಿರುತ್ತವೆ ಎನ್ನುವುದನ್ನು ಶ್ರೀ ಕುಮಾರ ಸ್ವಾಮಿಗಳು ಸ್ಪಷ್ಟಪಡಿಸಿದ್ದರು. ಶ್ರೀ ಕುಮಾರ ಸ್ವಾಮಿಗಳ ಈ ನಿಲವು ಕಾಣಿಕೆ ನೀಡಲು ಬಂದವರನ್ನು ಬಿಕ್ಕಟ್ಟಿನಲ್ಲಿ ಮುಳುಗಿಸಿತ್ತು. ತಮ್ಮ ಜನಾಂಗದೊಳಗಿನ ಸದ್ಯದ ಸ್ಥಿತಿಯನ್ನು ಅವರು ನೋವಿನಿಂದಲೇ ಶ್ರೀ ಕುಮಾರ ಸ್ವಾಮಿಗಳಲ್ಲಿ ಬಿನ್ನವಿಸಿಕೊಂಡಿದ್ದರು. `ನಮ್ಮ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿಲ್ಲ ಬುದ್ದಿ. ನಮ್ಮಲ್ಲಿ ಲಿಂಗದೀಕ್ಷೆ ಪಡೆಯಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಇಲ್ಲ”

ಮೂರು ಸಾವಿರ ರೂಪಾಯಿಗಳಿಗೆ ಧಾರ್ಮಿಕತೆ ಮಾರಿಕೊಂಡ ನಡತೆ ತಮ್ಮದಲ್ಲವೆಂಬ ಶ್ರೀ ಕುಮಾರ ಸ್ವಾಮಿಗಳ ನಿಷ್ಠುರತೆ ಗೆ ಬೆಚ್ಚಿದ ಹಲಗಲಿ ಗ್ರಾಮದ ಭಕ್ತರು ಸಾಮೂಹಿಕ ಲಿಂಗದೀಕ್ಷೆ ಪಡೆದು  ಗುರುಗಳಿಗೆ ಕಾಣಿಕೆ ಸಲ್ಲಿಸಿದ್ದು ಇತಿಹಾಸ. ಅವರು ಎಂದೂ ನಂಬಿ ಬಂದ ಭಕ್ತರನ್ನು ನಡು ನೀರಿನಲ್ಲಿ ಕೈಬಿಟ್ಟವರಲ್ಲ. ಮನಸ್ಸನ್ನು ಪರಿವರ್ತನೆ ಮಾಡಿ ಭಕ್ತರಿಗೆ ಧಾರ್ಮಿಕ ದೀಕ್ಷೆ ಕೊಟ್ಟವರು

 ತಾವು ತಮ್ಮ  ಸುಳ್ಳು ಸುದ್ದಿ ಹರಡಿದರ ಪರಿಣಾಮ ನಮಗಾದ ನೋವು ತಮಗೆ ಅರ್ಥವಾಗಲಿಕ್ಕಿಲ್ಲ. ಬಹುಷಃ ತಮಗೆ ತಮಾಷೆಯ ವಸ್ತುವಾಗಿರಬಹುದು.

ಕೆಲವರಿಗೆ ಕುಡಿಯುವ ನೀರಿನಲ್ಲಿ ಮೂತ್ರ ಮಾಡಿ ದೂರದಲ್ಲಿ ನಿಂತು ಆ ನೀರನ್ನು ಕುಡಿಯುವವರನ್ನು ಕಂಡು ಸಂತೋಷ ಪಡುವ ಚಾಳಿಯಿರುತ್ತದೆ ತಾವು ಆ ಗುಂಪಿಗೆ ಸೇರಬಾರದು ಎಂಬ ನನ್ನ ಅಭಿಮಾನಪೂರ್ವಕ ಹಕ್ಕೋತ್ತಾಯ.

ತಾವು ಈ ನಾಡು ಕಂಡ ಅಪರೂಪದ ಕವಿ, ಸಂಶೋಧಕ, ಸಂಸ್ಕೃತಿ ಚಿಂತಕ, ಹೋರಾಟಗಾರರು, ಬರೆಯಿರಿ ಆದರೆ ದಾಖಲೆಗಳಿಲ್ಲದೆ ಮತ್ತು ಸಾಕ್ಷಿಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಬೇಡಿ ಎಂದು ನನ್ನ ಕಳಕಳಿಯ ಮನವಿ.

ಇತಿ ನಮಸ್ಕಾರಗಳೊಂದಿಗೆ,

ಶ್ರೀಕಂಠ.ಚೌಕೀಮಠ

ಅಧ್ಯಕ್ಷ :ಅಖಿಲ ಭಾರತ ವೀರಶೈವ ಮಹಾಸಭಾ .ದೆಹಲಿ ರಾಜ್ಯ ಘಟಕ

ಸೇವಕ:ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ.