ಲೇಖಕ: ಶ್ರೀಕಂಠ.ಚೌಕೀಮಠ
(ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಮಹಾ ಸ್ವಾಮಿಗಳ ೧೫೭ ನೆಯ ಜಯಂತಿ ಮಹೋತ್ಸವದ ನಿಮಿತ್ತ ಸ್ಮರಣೆ)
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.
ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಳೆದ ತಿಂಗಳನಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಅವರು ಕೇವಲ ನುಡಿದು ಮರೆಯಾಗಲಿಲ್ಲ.
ನಡೆದು ಬದುಕಿದವರು
ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ ಸಮಾಜಕ್ಕೇ ಅರ್ಪಿಸಿದ ಮಹಾತ್ಮರು
ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ ಮುನ್ನೆಡೆಯುತ್ತಿವೆ.
ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ
ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಓದಿದ್ದು ಕೇವಲ ಏಳನೆಯ ತರಗತಿ.ಅವರು ಏಳನೆಯ ತರಗತಿಯ ಮುಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.ಅವರು ಅನುತ್ತೀರ್ಣರಾಗಿದ್ದು- ಅವರು ದಡ್ಡರೆಂದು ಅಲ್ಲ.
ಅವರು ಅನುತ್ತೀರ್ಣರಾದ ಕಾರಣ, ಪರೀಕ್ಷೆಯ ಹಿಂದಿನ ನಾಲ್ಕೈದು ದಿನಗಳ ಕಾಲ 120 ಕಿ.ಮಿ. ದೂರದ ಕಾಲ್ನೆಡಿಗೆಯ ಪ್ರವಾಸ. ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದು ಮುಲ್ಕಿ (ಏಳನೆಯ ತರಗತಿ) ಪರೀಕ್ಷಾ ಕೇಂದ್ರಕ್ಕೆ ಬಂದು ಜ್ವರ ದಿಂದ ಬಳಲಿದ್ದು ಹೊರತು ಅವರು ಅನುತ್ತೀರ್ಣರಾಗುವಂತಹ ದಡ್ಡರಲ್ಲ. ಅವರೊಬ್ಬ ಸ್ವಾಭಿಮಾನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಅನುತ್ತೀರ್ಣರಾದರೂ ಮರಳಿ ತಮ್ಮ ತಾಯಿಯ ತೌರುಮನೆಯ ಊರು ಲಿಂಗದಹಳ್ಳಿಗೆ ಬಂದು ಗಾವಟಿ ಶಾಲೆ ತೆರೆದು ಊರ ಮಕ್ಕಳಿಗೆ ಪಾಠ ಹೇಳಿದ ಮಹಾನುಭಾವರು.
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.
ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ
ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !
ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;
ಮಾತೃಋಣ ತೀರಿಸಿ,
ಗುರು ಋಣ ತೀರಿಸಲೆಂದೇ ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.
ಸಮಾಜಋಣದಿಂ ಮುಕ್ತನಾಗಲೆಂದೇ
ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.
ತ್ರಿವಿಧ ಋಣಮುಕ್ತ,
ತ್ರಿವಿಧ ಲಿಂಗ ಪೂಜಕ
ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ
ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.
-ಮೃಡಗಿರಿ ಶ್ರೀ ಜಗದ್ಗುರುಗಳು
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.
ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು (ತ್ರಿವಿಧ ಜಂಗಮಲಿಂಗಸ್ಥಲಗಳು: ಸ್ವಯ, ಚರ, ಪರ)
(ಸೌಜನ್ಯ :ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ : ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ– ಗದಗ ಲೇಖನದ ಆಯ್ದ ಭಾಗ)
ವೀರಶೈವ-ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ .
- ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು .
- ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು. ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮ.
ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು .
- ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು
ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಎಂಬುದಕ್ಕೆ ಸಾಕ್ಷಿಯಾಗಿ ಅವರು ತಮ್ಮ ಜೀವಿತಾವಧಿಯಲ್ಲಿ ಕಾರ್ಯಗತಗೊಳಿಸಿದ ಎಲ್ಲ ಯೋಜನೆಗಳ ಯಶೋಗಾಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮುಂದಾಲೋಚನೆ, ಯೋಜನೆ,ಸಂಪಲ್ಮೂನಗಳ ಕ್ರೋಢಿಕರಣ ಮತ್ತು ದೃಡ ಸಂಕಲ್ಪಗಳು ಮಹಾಶಕ್ತಿಗಳಾಗಿ ಅತ್ಯಧ್ಬುತವಾಗಿ ಗೋಚರಿಸುತ್ತವೆ.
ಅವುಗಳಲ್ಲಿ ಅತ್ಯಂತ ಮಹತ್ವವಾದ ಕೊಡುಗೆಗಳು ಹೀಗಿವೆ
- ೧೮೮೧-೮೩ ಪೂಜ್ಯರ ೧೪ನೆಯ ವರ್ಷದಲ್ಲಿಯೇ ಲಿಂಗದಹಳ್ಳಿಯಲ್ಲಿ ಗಾವಟಿ ಶಾಲೆ ಸ್ಥಾಪನೆ
- ೧೮೯೭ ನಾಡಿನಲ್ಲಿ ಬರಗಾಲ ಹಾನಗಲ್ಲಿನಲ್ಲಿ ಬರಪೀಡಿತರಿಗೆ ದಾಸೋಹ ಕೇಂದ್ರ ಸ್ಥಾಪನೆ.
- ೧೮೯೮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ಆರಂಭ.
- ೧೯೦೧ ಕಾಡಶೆಟ್ಟಿಹಳ್ಳಿಯಲ್ಲಿ ಗದಿಗೆಯ್ಯ ನೆಂಬ ಅಂಧ ಬಾಲಕನನ್ನು ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಮುಂದೆ ಅದೇ ಬಾಲಕ ಪಂಚಾಕ್ಷರಿ ಗವಾಯಿಗಳಾಗಿ ಪ್ರಸಿದ್ದಿ ಹೊಂದಿದ್ದು
- ೧೯೦೪ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ. ಇಲ್ಲಿಯವರೆಗೆ ೨೫ ಅಧ್ಯಕ್ಷರುಗಳ ಸೇವೆ ಪಡೆದು ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮಹಾಸಭೆ ತನ್ನದೇ ಆದ ಗೌರವಾದರಗಳನ್ನು ಹೊಂದಿದೆ.
- ೧೯೦೯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಅಭ್ಯುದಯಕ್ಕೆ ಶ್ರೀ ಶಿವಯೋಗಮಂದಿರ ಸ್ಥಾಪನೆ ಶ್ರೀ ಶಿವಯೋಗಮಂದಿರದ ಮೂಲಕ ಸಹಸ್ರಾರು ಸ್ವಾಮಿಗಳು ಅಧ್ಯಾತ್ಮಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣ ಪಡೆದು ಶಿವಯೋಗ ಸಂಪನ್ನರಾಗಿ ನಾಡಿನಾದ್ಯಂತ ಸಮಾಜ ಸೇವೆ ಯನ್ನು ವಿವಿಧ ರಂಗಗಳಲ್ಲಿ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು.
ಶತಮಾನದಿಂದ ಹಲವು ಶಾಸ್ತ್ರಿಗಳು ,ಕೀರ್ತನಕಾರರು,ಪುರಾಣಿಕರು,ಸಾಹಿತಿಗಳು ,ಶಿಕ್ಷಣ ತಜ್ಞರು , ಸಂಗೀತಗಾರರು ಶ್ರೀ ಶಿವಯೋಗಮಂದಿರದಿಂದ ಶಿಕ್ಷಣ ಕಲಿತು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು
- ೧೯೦೯ ನಾಡಿನ ಪ್ರಪ್ರಥಮ ಗೋಶಾಲೆ ಆರಂಭ
- ೧೯೧೦ಪ್ರಪ್ರಥಮ ಶಾಸ್ತ್ರೋಕ್ತ ವಿಭೂತಿ ನಿರ್ಮಾಣ ಕೇಂದ್ರ ಆರಂಭ
- ೧೯೧೧ ಯೋಗ ಪಾಠ ಶಾಲೆ ಆರಂಭ
- ೧೯೧೨ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭ
- ಪ್ರಪ್ರಥಮ ಮಹಿಳಾ ವಿದ್ಯಾಲಯ ಆರಂಭ
- ೧೯೧೦ ಗ್ರಂಥಾಲಯ ಸ್ಥಾಪನೆ .ವಚನಕಟ್ಟುಗಳ ಸಂಗ್ರಹ ,ತಾಳೆಯೋಲೆಗಳ ಸಂಗ್ರಹ
- ೧೯೧೦ ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಸ್ಥೆ ಸ್ಥಾಪನೆಗೆ ಚಾಲನೆ
- ೧೯೧೧ ಬಾಗಲಕೋಟೆ ಯಲ್ಲಿ ಶಿವಾನಂದ ಜಿನ್ನಿಂಗ ಮಿಲ್ಲ ಸ್ಥಾಪನೆ
- ೧೯೧೧ ಗದುಗಿನ ವೀರೇಶ್ವರ ಪುಣ್ಯಾಶ್ರಮ-ಸರ್ವ ಧರ್ಮ ಗಳ ಅಂಧ-ಅನಾಥ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಪಂ.ಪಂಚಾಕ್ಷರಿ ಗವಾಯಿಗಳ ಮೂಲಕ ಚಾಲನೆ.ಪಂ. ಮಲ್ಲಿಕಾರ್ಜುನ ಮನಸೂರ,ಪಂ. ಬಸವರಾಜ ರಾಜಗುರು ಅವರಿಂದ ಹಿಡಿದು ಪಂ. ವೆಂಕಟೇಶ್ ಕುಮಾರ ಅವರವರೆಗೂ ಸಹಸ್ರಾರು ಖ್ಯಾತನಾಮ ಸಂಗೀತ ಗಾರರ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ್ದು.
ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೇವಲ ಸಂಗೀತ ಕ್ಷೇತ್ರಕ್ಕೆ ಮೀಸಲಾಗಲಿಲ್ಲ. ನಾಟಕ ರಂಗಕ್ಕೂ ಪ್ರೋತ್ಸಾಹ ನೀಡಿ .ನಾಡಕ ಸಂಘಗಳನ್ನೂ ಸ್ಥಾಪಿಸಿತು.
- ೧೯೧೨ ಬಾಗಿಲಕೋಟೆಯಲ್ಲಿ ಶ್ರೀಗುರುಸಿದ್ದೇಶ್ವರ ಚಿತ್ರಮಂದಿರ ಸ್ಥಾಪನೆ.ಉತ್ತರ ಕರ್ನಾಟಕದ ಪ್ರಪ್ರಥಮ ಚಲನಚಿತ್ರ ಮಂದಿರ ಮೂಲಕ ಆಧುನಿಕ ಕಲೆಗೆ ಪ್ರೋತ್ಸಾಹ.
- ೧೯೧೩ ರಲ್ಲಿ ಅಸ್ಪೃಶ್ಯರು ಎಂಬ ಭೇದಭಾವ ಸವರ್ಣಿಯರಿಂದ ಉಂಟಾದಾಗ ಸ್ವಾಭಿಮಾನದ ಪ್ರಕ್ರಿಯೆಯಾಗಿ ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರಿಗಾಗಿಯೇ ಶಿವಯೋಗಮಂದಿರದ ಸಮೀಫ ಮಂಗಳೂರು ಎಂಬ ಗ್ರಾಮದಲ್ಲಿ ಶಾಲೆಯನ್ನು ತೆರೆದಿದ್ದು
- ೧೯೧೪ ನಿಡುಗುಂದಿಕೊಪ್ಪ ಸೇರಿ ನಾಲ್ಕು ಶಾಖಾ ಶಿವಯೋಗಮಂದಿರಗಳ ಸ್ಥಾಪನೆ
- ೧೯೧೫ ಶಿರಸಂಗಿ ಲಿಂಗರಾಜರ ಆಸ್ತಿ ಸಮಾಜಕ್ಕೇ ಸಲ್ಲಲು ಮುಂಬೈ ಹೈಕೋರ್ಟನಲ್ಲಿ ಸಾಂಘಿಕ ಕಾನೂನು ಹೋರಾಟಕ್ಕೆ ಹಣಕಾಸು ಸಹಾಯ ಮತ್ತು ಗೆಲವು.ಈ ಗೆಲವು ಬೆಳಗಾವಿಯ ಕೆ.ಎಲ್.ಇ ಸೋಸೈಟಿಯ ಅಭಿವೃದ್ಧಿಗೆ ಸುಭದ್ರ ಅಡಿಪಾಯವಾಯಿತು
- ೧೯೧೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಾಳೇನಹಳ್ಳಿನಲ್ಲಿ ಶಾಖಾ ಶಿವಯೋಗ ಮಂದಿರ ಸ್ಥಾಪನೆ
- ೧೯೧೭ ಕಾಳೇನಹಳ್ಳಿ ಯ ನಾಲ್ಕು ನೂರು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿಗೆ ಚಾಲನೆ ಪ್ರಪ್ರಥಮ ಬಾರಿಗೆ ಟ್ರಾಕ್ಟರ ಖರೀಧಿ ಕೃಷಿಗೆ ಉತ್ತೇಜನೆ
- ೧೯೧೭ ಗದುಗಿನಿಂದ ಯಡೆಯೂರು ಕ್ಷೇತ್ರ ಪಾದಯಾತ್ರೆ ಮಾಡಿ ಧಾರ್ಮಿಕ ಸಂಚಲನೆಯನ್ನುಂಟು ಮಾಡಿದ್ದು.
- ೧೯೨೦ ವಚನಪಿತಾಮಹ ಫ.ಗು.ಹಳಕಟ್ಟಿಯವರಿಗೆ ವಚನ ಸಂಗ್ರಹಕ್ಕೆ ಆರ್ಥಿಕ ಸಹಾಯ ಮಾಡಿಸಿ ಶಿವಯೋಗಮಂದಿರದಲ್ಲಿ ಸಂಗ್ರಹವಾಗಿದ್ದ ವಚನ ಕಟ್ಟುಗಳನ್ನು ನೀಡಿ ಪ್ರೋತ್ಸಾಹಿಸಿದ್ದು. ಕೃತಜ್ಞತೆ-ಗೌರವಕ್ಕೆ ಶ್ರೀ ಫ.ಗು.ಹಳಕಟ್ಟಿಯವರು ತಮ್ಮ ಗ್ರಂಥ ”ವಚನಶಾಸ್ತ್ರಸಾರ”ದ ಮೊದಲ ಭಾಗವನ್ನು ಬೆಳಗಾವಿಯಲ್ಲಿ ಮುದ್ರಿಸಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಅರ್ಪಿಸಿದ್ದು
- ೧೯೨೯ ಮಹಾರಾಷ್ಟ್ರದ ಪರಳಿ ದೇಗುಲದ ಪ್ರವೇಶ ಕುರಿತು ಹೈದ್ರಾಬಾದ ನಿಜಾಮ ಕೋರ್ಟನಲ್ಲಿ ವೀರಶೈವರಿಗೂ ಹಕ್ಕು ಎಂದು ಸತತ ಐದು ವರ್ಷಗಳ ಕಾನೂನು ಹೋರಾಟ ನಡೆಯಿಸಿ ಜಯಗಳಿಸಿದ್ದು
- ೧೯೦೪ ರಿಂದ ೧೯೩೦ ರ ವರೆಗೆ ಕರ್ನಾಟಕ-ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಒಟ್ಟು ೧೦ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನಗಳ ಆಯೋಜನೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ವೀರಶೈವ ಮಹಾಸಭೆಯ ಅಧಿವೇಶನಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದವು
- ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಟ್ಟಿತು
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು ಮತ್ತು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ ಮಹಾತ್ಮರು.
ಲೇಖಕ: ಶ್ರೀಕಂಠ.ಚೌಕೀಮಠ
ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ.
ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ