ಇಂದಿಗೆ ಸರಿಯಾಗಿ ೪೫ ವರ್ಷಗಳ ಹಿಂದಿನ ಅವಿಸ್ಮರಣೀಯ ಘಟನೆಯ ಮೆಲಕು.(1980)

ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಟ್ಟಾಧಿಕಾರ ರಜತ ಮಹೋತ್ಸವ ಅಭಿನಂದನ ಗ್ರಂಥದಲ್ಲಿ ಬರೆದ “ಪಟ್ಟಾಧ್ಯಕ್ಷರಿಗೆ ಪಂಚ ಪತ್ರ ಲೇಖನದ ನಾಲ್ಕನೆಯ ಪತ್ರದಿಂದ ಆಯ್ದುಕೊಂಡ ಸಾಲುಗಳು……

(ಪೂಜ್ಯ ಶ್ರೀ ಸಿಂದಗಿ ಪಟ್ಟಾಧ್ಯಕ್ಷರಿಗೆ ಆರೋಗ್ಯದಲ್ಲಿ ತೊಂದರೆಯಾದ ಸಂಧರ್ಭ)

“ಇಂದಿನ ಈ ಪಾರ್ಶ್ವವಾಯುವಿನಂತಹ ಸ್ಥಿತಿಯಲ್ಲೂ ನಿಮ್ಮ ನಿಷ್ಠೆ ಹಿಮಾಚಲ. ಅಚಲ.

 ದೇಹ ಬಹಿರಂಗದ ಪ್ರಜ್ಞೆ ಕಳೆದುಕೊಂಡರೂ ನಿಮ್ಮ ಕೈ ಸದಾ ಕೊರಳ ಇಷ್ಟಲಿಂಗವನ್ನು ನೇವರಿಸುತ್ತಿತ್ತು.

ಮೊನ್ನೆ ಆಸ್ಪತ್ರೆಗೆ ನಿಮ್ಮನ್ನು ಕಾಣಲು ಬಂದಿದ್ದೆನಲ್ಲ, ಅಂದಿಗೆ ಪ್ರಜ್ಞೆ ಮಾತು ಮೌನವಾಗಿ, ಹದಿನೈದು-ಇಪ್ಪತ್ತು, ದಿನಗಳೇ ಸಂದಿದ್ದವು.

 ಅಂದು ನಿಮ್ಮ ಆರಾಧ್ಯ ದೈವ  ಕುಮಾರೇಶನ ಸ್ಮರಣದಿನ.

ನಾನು ನಿಮ್ಮ ಕಿವಿಯ ಸಮೀಪ, “ ಬುದ್ದೀ, ಇಂದು ಕುಮಾರೇಶ್ವರನ  ಪುಣ್ಯತಿಥಿ ” ಎಂದು ಹೇಳಿದಾಗ ಇಪ್ಪತ್ತು ದಿನಗಳಿಂದ ತೆರೆಯದ ಕಣ್ಣು ತೆರೆದದ್ದು, ಕಣ್ಣಿನಲ್ಲಿ ಹೊಸ ಬೆಳಕು ಕಂಡದ್ದು, ಏಳಲಾರದ ಕೈ ತನಗೆ ತಾನೇ ಎದ್ದು ನಮಿಸಿದ್ದು, ಮುಖದ ತುಂಬ ಸಂತೃಪ್ತಿಯ ಸಾರ್ಥಕತೆಯ ನಗೆ ತೇಲಿದ್ದು ಅದೊಂದು ರೋಮಾಂಚನ, ಹೃದಯಸ್ಪರ್ಶಿ ಅನುಭವ.”

ಈ ಸಾಲುಗಳನ್ನು ಓದುತ್ತ ಹೋದಂತೆ ಅನಿಸಿದ್ದು,

ಶ್ರೀ ಶಿವಯೋಗಮಂದಿರದ ಗುರು-ಶಿಷ್ಯ ಪರಂಪರೆಯ ಅವಿನಾಭಾವ ಸಂಬಂಧಗಳು- ಅವು ಪವಾಡಗಳಲ್ಲ ! ಅವು ನಿಜಜೀವನದ ವಸ್ತು ಸ್ಥಿತಿಗಳು !!.

ಪ್ರಚಾರವನ್ನು ಬಯಸದ ಮಹಾಸಂತನ  ೯೫ನೆಯ ಪುಣ್ಯ ಸ್ಮರಣೆಯ ಪವಿತ್ರ ದಿನವಿಂದು ಕಾರುಣಿಕ ಯುಗಪುರುಷ  ಸಮಾಜ ಸಂಜೀವಿನಿಯ  ಪರಮಪೂಜ್ಯ  ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಸ್ಮರಣೆ  ಕೇವಲ ಒಂದು ದಿನದ ಸ್ಮರಣೆಯಲ್ಲ ಅವರ ಸ್ಮರಣೆ ನಮ್ಮ ನಿತ್ಯ ಸ್ಮರಣೆ, ನಮ್ಮ ನಿತ್ಯ ಧ್ಯಾನ .

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

 

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

ಮುಖಪುಟ

ಶ್ರೀಕುಮಾರ ತರಂಗಿಣಿ  ಜನೆವರಿ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಪರ ಶಿವಯೋಗದ ಸಾರ|” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. : ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಹಾನಗಲ್ಲ ಶ್ರೀಕುಮಾರೇಶ್ವರರ ತಪೋಭೂಮಿ ಕ್ಯಾಸನೂರು ಶ್ರೀ ಕ್ಷೇತ್ರ :ಲೇಖಕ: ಶ್ರೀಕಂಠ.ಚೌಕೀಮಠ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

ಪರ ಶಿವಯೋಗದ ಸಾರ

(ರಾಗ – ಭೂಪ)

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

 

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

 

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

 

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ಪುತ್ರ ಕೇಳೀ ಲಿಂಗ | ಶ್ರೋತ್ರಾದಿ ಇಂದ್ರಿತನ್

ಮಾತ್ರೆಯ ಸುಜ್ಞಾನ-ಮಾತ್ರದೊಳರಿ ಎಂದಾ

ಧಾತ್ರೀಶ ಗುರುವೆ ಕೃಪೆಯಾಗು    ||೧೫೮||

 ಕರ್ಮೇಂದ್ರಿಯಗಳಲ್ಲಿ ಇಷ್ಟ (ಕ್ರಿಯಾ) ಲಿಂಗ ಸಂಬಂಧವನ್ನು ತೋರಿಸಿ ಈಗ ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ ಸಂಬಂಧವನ್ನು ತಿಳಿಸುತ್ತಾನೆ.

ಜ್ಞಾನೇಂದ್ರಿಯಗಳಿಗೆ ಧರ್ಮೆಂದ್ರಿಯಗಳೆಂತಲೂ ಹೆಸರು. ಈ ಜ್ಞಾನೇಂದ್ರಿಯಗಳು ಅಗ್ನಿತತ್ತ್ವದಿಂದ ಜನಿಸಿದವುಗಳು. ಅರ್ಥಾತ್ ಅಗ್ನಿಯ ಪಂಚೀಕರಣದಿಂದ ಪ್ರಕಟ ಗೊಂಡಿವೆ. ಶ್ರೋತ್ರ, ತ್ವಕ್, ನೇತ್ರ, ಜಿಹ್ವೆ, ಘಾಣಗಳೇ ಪಂಚಜ್ಞಾನೇಂದ್ರಿಯಗಳು. ಪಂಚೀಕೃತ ಅಗ್ನಿಯ ಅರ್ಧಭಾಗವೇ ನೇತ್ರ. ಉಳಿದ ಅರ್ಧಭಾಗದ ಅಗ್ನಿಯಲ್ಲಿ ಸೇರಿದ ಕಾಲುಭಾಗದ (೧/೮ನೇ ಭಾಗ) ಅಕಾಶ ತತ್ತ್ವವೇ ಶ್ರೋತ್ರ. ಕಾಲುಭಾಗದ (೧/೮) ವಾಯುವೇ ತ್ವಕ್ಕು. ಅಪ್ಪುವಿನ (೧/೮) ಪಾದಾಂಶವೇ ಜಿಹ್ವೆ.  ಪೃಥ್ವಿಯ ಕಾಲು (೧/೮) ಭಾಗವೇ ನಾಶಿಕವಾಗಿದೆ. ಈ ಪಂಚಜ್ಞಾನೇಂದ್ರಿಯಗಳಿಗೆ ಪಂಚನ್ಮಾತ್ರೆಗಳು ಸಮರ್ಪಿತವಾಗುತ್ತವೆ. ಪಂಚತನ್ಮಾತ್ರೆಗಳು ಪಂಚೀಕೃತ ಜಲದ ಪಂಚ ಅಂಶಗಳು ಶಬ್ದ ಸ್ಪರ್ಶ, ರೂಪ, ರಸ, ಗಂಧಗಳೇ ಪಂಚತನ್ಮಾತ್ರೆಗಳೆನಿಸಿವೆ. ಪಂಚಜ್ಞಾನೇಂದ್ರಿಗಳಿಗೆ ಪಂಚತನ್ಮಾತ್ರೆಗಳು ಸಮರ್ಪಿತವಾಗುವಲ್ಲಿಯೇ ಸುಜ್ಞಾನದಿಂದ ಪ್ರಾಣಲಿಂಗ ಸಂಬಂಧವನ್ನು ಮಾಡಬೇಕು. ಇಂದ್ರಿಯಗಳನ್ನು ಲಿಂಗಗಳ್ನಾಗಿ ಗ್ರಹಿಸಿ ತನ್ಮಾತ್ರೆಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುವ ಸುಜ್ಞಾನದ ಕಲೆಯನ್ನು ಕರಗತಮಾಡಿಕೊಳ್ಳುವದೇ ಪ್ರಾಣಲಿಂಗ ಧಾರಿಯ ಕರ್ತವ್ಯವಾಗಿದೆ.

ದೇಹವು ಕಣ್ಣಿಗೆ ಕಾಣಿಸುತ್ತದೆ. ಅದು ಸ್ಥೂಲವಾಗಿದೆ. ಆದರೆ ದೇಹದಲ್ಲಿಯ ಪ್ರಾಣ ಕಾಣಿಸುವದಿಲ್ಲ. ಅದು ಸೂಕ್ಷ್ಮವಾದುದು. ಕರ್ಮೆಂದ್ರಿಯಗಳು ಕಾರ್ಯ ಮಾಡುವುದೆಲ್ಲ ಸ್ಪಷ್ಟವಾಗುತ್ತದೆ. ಜ್ಞಾನೇಂದ್ರಿಯಗಳು ಕಾರ್ಯಗೈಯುವದು ಗೋಚರಿಸುವದಿಲ್ಲ. ಜ್ಞಾನೇಂದ್ರಿಯಗಳು ಕಣ್ಣಿಗೆ ಕಂಡರೂ ಅವುಗಳ ಜ್ಞಾನೇಂದ್ರಿಯತ್ವವು ಕಾಣಿಸುವದಿಲ್ಲ. ಅದು ಅನುಭವದಿಂದಲೇ ವೇದ್ಯವಾಗುತ್ತದೆ. ಉದಾಹರಣೆಗಾಗಿ ಕಿವುಡನಿಗೆ ಕಿವಿಗಳಿರುತ್ತವೆ. ಆದರೆ ಅವನಿಗೆ ಯಾವ ಶಬ್ದವೂ ಕೇಳಿಸುವದಿಲ್ಲ. ಶೀತ ಬಾಧೆಯಾದವನಿಗೆ ಮೂಗಿದ್ದರೂ ವಾಸನೆ ಬರುವದಿಲ್ಲ. ಜ್ವರ ಬಂದವನಿಗೆ ನಾಲಿಗೆಯಿದ್ದರೂ ರುಚಿಸುವುದಿಲ್ಲ, ಶರೀರವು ಮರಗಟ್ಟಿದಾಗ ಯಾವುದೇ ತರಹದ ಸ್ಪರ್ಶ ತಿಳಿಯುವದಿಲ್ಲ. ಯಾಕೆಂದರೆ ಪದಾರ್ಥಗಳನ್ನು ಗ್ರಹಿಸುವ ಇಂದ್ರಿಯವು ಸೂಕ್ಷ್ಮವಾಗಿರುತ್ತದೆ, ಮತ್ತು ಅಲ್ಲಿ ಜ್ಞಾನಪೂರ್ವಕವಾದ ಗ್ರಹಿಕೆಯಾಗಬೇಕು. ಬೇರೊಂದು ಕಡೆ ಲಕ್ಷ್ಯವಿರುವ ವ್ಯಕ್ತಿಯು ಬೇರೊಬ್ಬನಿಂದ ಹೇಳಿದ ಮಾತನ್ನು ಕೇಳಲಾರನು, ಶಬ್ದಗಳು ಕಿವಿಗೆ ಬಿದ್ದರೂ ಅರ್ಥವಾಗುವದಿಲ್ಲ. ಉಂಡರೂ ಭೋಗಿಸಿದ ಪ್ರಸಾದವು ತೃಪ್ತಿಯನ್ನು ನೀಡಲಾರದು. ಆದುಕಾರಣ ಗುರುನಾಥನು ಇಲ್ಲಿ ಎಚ್ಚರಿಸಿದ್ದಾನೆ. –

“ ಶ್ರೋತ್ರಾದಿ ಇಂದ್ರಿತನ್ಮಾತ್ರೆಯ ಸುಜ್ಞಾನ ಮಾತ್ರದೊಳರಿ’ ಎಂದು.

ಪ್ರಾಣಲಿಂಗ ಸಂಬಂಧದಲ್ಲಿ ಸುಜ್ಞಾನವೇ ಮುಖ್ಯಸಾಧನವಾಗಿದೆ. ಸುಜ್ಞಾನ ಮಾಧ್ಯಮದಿಂದಲೇ ಸಂಬಂಧವನ್ನು ತಿಳಿಯಬಹುದು. ಹೀಗೆ ಉಪದೇಶಿಸುವ ಗುರು ಸಾಮಾನ್ಯನಲ್ಲ. ಅವನು ಧಾತ್ರೀಶನೆನಿಸಿದ್ದಾನೆ. ಶಿವನು ಬ್ರಹ್ಮಾಂಡ ಜಗದೊಡೆಯ ನಾದರೆ ಗುರುವು ಪಿಂಡಾಂಡ-ಜಗದೊಡೆಯನಾಗಿದ್ದಾನೆ. ಪಿಂಡಾಂಡದ ಸಕಲ ವಿಜ್ಞಾನ ಗುರುವಿಗೆ ವೇದ್ಯವಾದುದು. ಓ ಗುರುವೇ ! ಕೃಪೆಯಿಟ್ಟು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗವನ್ನು ಸಂಬಂಧಗೊಳಿಸು. ಪ್ರಾಣಲಿಂಗದೊಳಗಿನ ಷಡ್ಲಿಂಗದರಿವನ್ನು ದಯಪಾಲಿಸು.

ನಾಸಿಕೇಂದ್ರಿಯದಿ ಸ | ದ್ವಾಸನೆಯ ಕೊಂಬುದು

ಲ್ಲಾ ಸದಾಚಾರ ವಾ ಸಲ್ಲಿಂಗವೆಂದುಪ

ದೇಶಿಸಿದ ಗುರುವೆ ಕೃಪೆಯಾಗು   ||೧೫೯||

ಪೃಥ್ವಿತತ್ತ್ವದ ನಾಶಿಕ (ಮೂಗು)ವು ವಾಸನೆಯನ್ನು ಸ್ವೀಕರಿಸುತ್ತದೆ. ನಾಶಿಕೇಂದ್ರಿಯವೇ ಆಚಾರಲಿಂಗಕ್ಕೆ ಆಶ್ರಯ. ಮೂಗು ಯಾವುದೇ ವಾಸನೆಯನ್ನು ವಾಸಿಸುವದು ಸಹಜ. ಅದು ಅದರ ಪ್ರಕೃತಿ ಧರ್ಮ. ಈ ಪ್ರಾಕೃತಿಕ ಧರ್ಮವನ್ನು ಕಳೆಯಬೇಕಾದರೆ ಭಕ್ತನಾದವನು ಇದು ನಾಸಿಕವೆಂದು ಭಾವಿಸದೇ ಆಚಾರಲಿಂಗ ವೆಂದು ಗ್ರಹಿಸಬೇಕು. ಮೂಗಿನಿಂದ ಸ್ವೀಕರಿಸಲ್ಪಡುವ ಗಂಧವನ್ನು ಪದಾರ್ಥವೆಂದು ತಿಳಿಯದೇ ಅದನ್ನು ಗಂಧಪ್ರಸಾದವೆಂದು ಗ್ರಹಿಸಬೇಕು. ಯಾವುದೇ ವಾಸನೆಯನ್ನು ಆಚಾರಲಿಂಗದ ಸ್ಮರಣೆಮಾಡಿ ಗಂಧಪ್ರಸಾದವನ್ನಾಗಿ ಸ್ವೀಕರಿಸಬೇಕು. ಇದರಿಂದ

ಗಂಧದ ಪೂರ್ವಾಶ್ರಯವು ಅಳಿಯುವದು. ಪ್ರಾಸಾದಿಕ ಭಾವನೆಯು ಮನದಲ್ಲಿ ಬೆಳೆಯುವದು. ಗಂಧಗಳು ಭಿನ್ನವಾಗಿದ್ದರೂ ಪ್ರಸಾದವೆಂದೇ ಸ್ವೀಕರಿಸುವದರಿಂದ ಅದರ ಬಾಧೆಯಾಗುವದಿಲ್ಲ. ಮೋಹಕ ಗಂಧವೇ ಆಗಿದ್ದರೂ ಲಿಂಗಮುಖವಾಗಿ ಪ್ರಸಾದವನ್ನಾಗಿಸಿ ಸ್ವೀಕರಿಸುವ ವ್ಯಕ್ತಿಗೆ (ಶರಣನಿಗೆ) ಆ ಮೋಹ ಪರಿಣಾಮ ಬೀರದು. ಪ್ರಾಸಾದಿಕಗಂಧವು ಆತ್ಮನನ್ನು ಉಲ್ಲಾಸಗೊಳಿಸುವದು. “ಸುಗಂಧಂ ಪುಷ್ಟಿವರ್ಧನಮ್” ಸುಗಂಧ ದ್ರವ್ಯಗಳ ಪರಿಣಾಮ ದೇಹದಲ್ಲಿ ಪುಷ್ಟಿಯನ್ನು ಹೆಚ್ಚಿಸುವದು. ಈ ದೈಹಿಕ ಉತ್ಸಾಹವನ್ನು ಸಾತ್ವಿಕಗೊಳಿಸುವದೇ ಲಿಂಗತತ್ತ್ವ. ಲಿಂಗವಂತನು ಆಚಾರಲಿಂಗಕ್ಕರ್ಪಿತವಾಗುವ ಸುಗಂಧದಿಂದ ಪುಷ್ಟಿಯನ್ನು ಪಡೆದು ಸದಾಕಾಲವೂ ಪ್ರಾಸಾದಿಕ (ಪ್ರಸನ್ನ) ಗುಣಗಳನ್ನು ಹೊಂದುವನು. ಇಂಥ ಶರಣನಿಗೆ ಯಾವಾಗಲೂ ಬೇಸರವೆಂಬುದು ಇರುವದಿಲ್ಲ ಅವನು ಆಲಸಿಯಾಗುವದಿಲ್ಲ. ಉಲ್ಲಾಸಗೊಳಿಸಬಲ್ಲ ತಥ್ಯವನ್ನು ಹೊಂದಿರುವುದೇ ಆಚಾರಲಿಂಗದ ಕುರುಹು.

ವೀರಶೈವರಲ್ಲಿ ಅರ್ಚನ, ಅರ್ಪಣ ಮತ್ತು ಅನುಭವಗಳು ಬಹಳ ಮುಖ್ಯವಾಗಿವೆ. ಲಿಂಗಾರ್ಚನೆಯಿಂದ ಆತ್ಮಾನುಸಂಧಾನ ಮಾಡಬೇಕು. ಲಿಂಗ ಗುಣಗಳನ್ನು ಪಡೆಯಲು ಲಿಂಗಾರ್ಪಣ ಮಾಡಬೇಕು. ಅರ್ಪಿಸಿದ್ದು ಅನುಭವದಲ್ಲಿ ಅಳವಡಬೇಕು. ಈ ಅರ್ಪಣ ವಿಧಾನವೇ ಪ್ರಸ್ತುತ ಪ್ರಕರಣದಲ್ಲಿ ಸ್ಪುಟಗೊಂಡಿದೆ.

ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ನಿರೂಪಿಸಿದ “ಮಿಶ್ರಾರ್ಪಣ’ವು ಅತ್ಯಂತ ಮಹತ್ವಪೂರ್ಣವಾದುದು. ಮಿಶ್ರಾರ್ಪಣದ ಅರಿವಿಲ್ಲದೆ ಅಂಗನು  ಲಿಂಗನಾಗನು. ಅರ್ಪಣಸದ್ಭಾವವೇ ಚರಮಗುರಿಯಾಗಿದೆ. ಅರ್ಪಣವು ಕಾಯಾರ್ಪಣ, ಕರಣಾರ್ಪಣ, ಮತ್ತು ಭಾವಾರ್ಪಣವೆಂದು ಮೂಬಗೆಯಾಗಿದೆ. ಕ್ರಿಯೆಯಿಂದ ಮಾಡುವದು ಕ್ರಿಯಾರ್ಪಣ, ಜ್ಞಾನದಿಂದ ಗ್ರಹಿಸುವದು ಕರಣಾರ್ಪಣ, ಭಾವದಲ್ಲಿ ಆನಂದಿಸುವದು ಭಾವಾರ್ಪಣ. ಈ ವಿಚಾರವನ್ನು ಮಿಶ್ರಾರ್ಪಣದಿಂದಲೇ ಅವಲೋಕಿಸುವದು ಸೂಕ್ತ.

ಕಾಯಾರ್ಪಣ : ಕಾಯದ ಕೈಯ ಮುಟ್ಟಿ, ಕ್ರಿಯಾರ್ಪಣವ ಮಾಡುವಾಗ; ಭೋಜ್ಯವಾಚಾರ ಲಿಂಗದಲ್ಲಿ ಪಾನ್ಯ ಗುರುಲಿಂಗದಲ್ಲಿ ಭಕ್ಷ್ಯ ಶಿವಲಿಂಗದಲ್ಲಿ ಚೋಹ್ಯ ಜಂಗಮಲಿಂಗದಲ್ಲಿ ಲೇಹ್ಯ ಪ್ರಸಾದಲಿಂಗದಲ್ಲಿ. ಇವು ಎಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ, ಇಂತೀ ಷಡ್ವಿಧಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಣದ ಭೇದಮಂ ಪೇಳ್ವೆ.”

ಕರಣಾರ್ಪಣ : ನಾಶಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶ್ರೋತ್ರದಲ್ಲಿ ಪ್ರಸಾದಲಿಂಗ, ಹೃದಯದಲ್ಲಿ ಮಹಾಲಿಂಗವು. ಇಂತೀ ಷಡ್ವಧಲಿಂಗಾರ್ಪಣವೆಂತೆಂದೊಡೆ ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು ಜಂಗಮಲಿಂಗದರಿವು ಸ್ಪರ್ಶನ, ಪ್ರಸಾದಲಿಂಗದರಿವು ಶಬ್ದ ಮಹಾಲಿಂಗದರಿವು ಸರ್ವೆಂದ್ರಿಯ. ಇಂತೀ ಷಡ್ವಧಲಿಂಗಕ್ಕೆ ಮಿಶ್ರಾರ್ಪಣವು”.

ಷಡಂಗಗಳಲ್ಲಿ ಷಡ್ಲಿಂಗಗಳನ್ನು ವಿವರಿಸಿ ಅವುಗಳಿಗಾಗುವ ಪದಾರ್ಥಗಳ ವಿಚಾರವನ್ನು ವಿವರವಾಗಿ ತೋರಿಸಿದ್ದಾರೆ. ಮುಂದುವರೆದು ಆಚಾರಲಿಂಗದಲ್ಲಿಯೇ ಆರು ಲಿಂಗಗಳಾಗುವ ಮತ್ತು ಆಚಾರಲಿಂಗದರಿವಾದ ಗಂಧವೂ ಆರಾಗುವ ಪರಿಯನ್ನು ಪ್ರತಿಪಾದಿಸಿದ್ದಾರೆ; ನೋಡಿ –

“ಆಚಾರಲಿಂಗದ ಮಿಶ್ರ ಷಡ್ಡಿಧ ಲಿಂಗಾರ್ಪಣದ ವಿವರವೆಂತೆಂದೊಡೆ. ಆವುದಾನೊಂದು ಅರ್ಪಣಕ್ಕೆ ಬೇಕಾದುದು ಬೇರು, ಗೆಣಸು, ಮೊದಲಾದ ಗಂಧವನುವುದು ಆಚಾರಲಿಂಗದಲ್ಲಿ; ಮರ, ತಿಗುಡು, ಹಗಿನ ಮೊದಲಾದ ಗಂಧವನರಿವುದು ಗುರುಲಿಂಗದಲ್ಲಿ; ಚಿಗುರು ಮೊದಲಾದ ಪತ್ರಿಯ ಗಂಧವನರಿವುದು ಶಿವಲಿಂಗದಲ್ಲಿ ;ಮೊಗ್ಗೆ ಮೊದಲಾದ ಪುಷ್ಪದ ಗಂಧವನರಿವುದು ಜಂಗಮಲಿಂಗದಲ್ಲಿ; ಕಾಯಿ ಹಣ್ಣು ಮೊದಲಾದ ಫಲದ ಗಂಧವನರಿವುದು ಪ್ರಸಾದಲಿಂಗದಲ್ಲಿ; ಇವೆಲ್ಲರಲ್ಲಿಯ ಗಂಧವನರಿವುದು ಮಹಾಲಿಂಗದಲ್ಲಿ. ಇಂತು ಆಚಾರಲಿಂಗದ ಮಿಶ್ರಾರ್ಪಣವು.  ”

ಹೀಗೆ ಬೇರು, ಬೊಡ್ಡೆ, ಚಿಗುರು-ಎಲೆ, ಮೊಗ್ಗೆ-ಪುಷ್ಪ, ಕಾಯಿ-ಹಣ್ಣುಗಳ ಗಂಧವನ್ನು ಆಚಾರಲಿಂಗದ ಆರು ಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನು, ಸುಜ್ಞಾನವನ್ನು ಪಡೆಯಬೇಕು. ಇದುವೇ ಭವದ ಬಂಧನದಿಂದ ಬಿಡುಗಡೆಯಾಗುವ ಉಪಾಯ. ಷಡ್ವಿಧ ಮಿಶ್ರಾರ್ಪಣ ವಿಧಾನದಿಂದ ವಿಷಯಗಳು ಪ್ರಸಾದವಾಗಿ ಪ್ರಸನ್ನತೆಉನ್ನು ಕೊಡಬಲ್ಲವು. ಓ ಗುರುವೆ ! ಇಂಥ ಸೂಕ್ಷ್ಮತೆಯನ್ನು ಗ್ರಹಿಸುವು ಯೋಗ್ಯತೆಉನ್ನು ಸುಜ್ಞಾನವನ್ನು ಕರುಣಿಸಿ ಸಲಹು.

ಇವೆರಡು ಪರಸ್ಪರ ಪೂರಕವಾದವು, ಪ್ರೇರಕವಾದವು. ಒಂದು ಒಳಮ್ಮೆ ಇನ್ನೊಂದು ಹೊರಮೈ,  ಎರಡು ಸೇರಿ ಒಮ್ಮೈ, ಒಂದನ್ನು ಬಿಟ್ಟು ಇನ್ನೊಂದು ಶೋಭಿಸುವಂತಿಲ್ಲ. ಇವೆರಡು ಸುಂದರ ಸಮನ್ವಯ ಸೃಷ್ಟಿ, ವೀರಶೈವರ ವಿಶಿಷ್ಟ ಸೃಷ್ಟಿ.

ಈ  ಪೂರ್ಣವಾದ ಸಾರವಾದ ವಿಚಾರವನ್ನು ತಿಳಿದು ತಮ್ಮಲ್ಲಿ ಇವೆರಡನ್ನು ಅಳವಡಿಸಿಕೊಂಡ  ಮಹಾನುಭಾವರೆಂದರೆ ಬಸವಣ್ಣನವರ ನಂತರ ಹಾನಗಲ್ಲ ಕುಮಾರ ಸ್ವಾಮಿಗಳವರೊಬ್ಬರೆ ! ದಾಸೋಹಂಭಾವದಿಂದಿರುವವರಲ್ಲಿ ದಾಸೋಹ ಸೇವೆಯ ಅಭಾವ, ದಾಸೋಹ ಸೇವೆಯನ್ನು ನಡೆಸುವವರಲ್ಲಿ ದಾಸೋಹಂಭಾವದ ಕೊರತೆ, ಎರಡನ್ನು ಸಮನ್ವಯವಾಗಿ ಸಮನಿಸಿಕೊಂಡವರು ಅತ್ಯಂತ ಅಪರೂಪ. ಇಲ್ಲೆಂದರೆ ಆಗದು ಅಪಲಾಪ.

‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಜೀವಾಳದ ಅಮೃತೋಕ್ತಿಯನ್ನು ಚಾಚು ತಪ್ಪದೆ ತ್ರಿಕರಣಗಳಿಂದ ನಡೆಸಿಕೊಂಡು ಬಂದರು ಸ್ವಾಮಿಗಳವರು. ಅವರಿಗೆ ತಾವು ಹಿರಿಯರೆಂಬ ಭಾವನೆ ಕನಸಿನಲ್ಲಿಯು ಕಾಣಿಸಿಕೊಳ್ಳಲಿಲ್ಲ. ಅವರು ತಮ್ಮ ದಾಸೋಹಂಭಾವವನ್ನು ನುಡಿಗಿಂತ ಹೆಚ್ಚು ನಡೆಯಲ್ಲಿಯೆ ತೋರುತ್ತಿದ್ದರು. ಈ ವಿಷಯದಲ್ಲಿ ಅವರದು ‘ಕ್ರಿಯಾಕೇವಲ ಮುತ್ತರಂʼʼ

ಶ್ರೀಗಳವರಿಗೆ ತಾವು ಸ್ವಾಮಿಗಳೆಂಬ ಸ್ವಾಭಿಮಾನವಿರಲಿಲ್ಲ. ಸಭೆ ಸಂಸ್ಥೆಗಳ ಸ್ಥಾಪಕರೆಂಬ ಸ್ವಾಹಂಕಾರವಿರಲಿಲ್ಲ. ಒಮ್ಮೆ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು ಆರಂಭವಾಗುವ ಮೊದಲು ಆದಾರೋ ವಿಷಬೀಜ ಬಿತ್ತಿದರು. ಜರಗಬೇಕಾದ ಸಭೆಯ ಮೂಲಕ್ಕೆ ಕೊಡಲಿ ಏಟು ಹಾಕಿದರು. ಪರಸ್ಪರ ವೈಮನಸ್ಸಿನಿಂದ ಸಭೆಯ ನಿಲ್ಲುವ ಪ್ರಸಕ್ತಿ ಪ್ರಾಪ್ತವಾಯಿತು, ಆಗ ಸ್ವಾಮಿಗಳವರು ಪ್ರತಿಯೊಬ್ಬ ಗಣ್ಯ ಗೃಹಸ್ಥರ ಮನೆಗಳಿಗೆ ಪಾದಚಾರಿಗಳಾಗಿ ಪ್ರಸಾದದ ಹಂಗಿಲ್ಲದೆ ಹತ್ತಾರು ಸಲ, ನೂರಾರು ಸಲ ತಿರುಗಾಡಿ ತಿಳಿಹೇಳಿ ಎಲ್ಲರ ಹೃದಯಗಳನ್ನು ತಿಳಿಗೊಳಿಸಿದರು. ಸಭೆಯು ಸಾಂಗವಾಗಿ ಸಾಗುವಂತೆ ಮಾಡಿದರು. ಅವರ ದಾಸೋಹಂಭಾವಕ್ಕೆ ಇಂತಹ ಅನೇಕ ಉದಾಹರಣೆಗಳನ್ನು ಉದಹರಿಸಬಹುದು.

ತಾವು ಸ್ವತಃ ಸತ್ಪುರುಷರಾಗಿದ್ದರು ಶಿವಯೋಗಿಗಳಾಗಿದ್ದರು ತಮ್ಮಲ್ಲಿ ಆ ಭಾವನೆ ಅವರಿಗೆ ಎಳ್ಳಷ್ಟು ಇರಲಿಲ್ಲ. ಬೇರೆ ಬೇರೆ ಊರುಗಳಲ್ಲಿ ಯಾರಾದರು ಸತ್ಪುರುಷರಿದ್ದರೆ ಶಿವಯೋಗಿಗಳಿದ್ದರೆ ಅವರ ದರ್ಶನಕ್ಕೆ ದಯಮಾಡಿಸುತ್ತಿದ್ದರು. ಅಲ್ಲಿ ದಾಸೋಹಂಭಾವದಿಂದ ವರ್ತಿಸುತ್ತಿದ್ದರು. ‘ವಿನಮಿತನಹುದರಿಂದುಪಚಾರಮುಂಟೆ?” ಎಂಬ ನುಡಿಯನ್ನು ಸಾವಿರ ಪಾಲಿಗು ಸಾರ್ಥಕಗೊಳಿಸುತ್ತಿದ್ದರು.

ಸಾಧು ಮಾರ್ಗದಲ್ಲಿರುವವರನ್ನು ಕಂಡು ಅವರ ಸಂತೋಷ ಉಕ್ಕಿಬರುತ್ತಿತ್ತು. ಕುತೂಹಲ ಕೆರಳಿ ಬರುತ್ತಿತ್ತು. ಅವರನ್ನು ಕಾಣದೆ ಅವರಿಗೆ ತೃಪ್ತಿಯಿರುತ್ತಿರಲಿಲ್ಲ. ವಿನಯದಿಂದ ಅವರ ಗುಣವರ್ಣನೆಯಿಂದ ನೆನವಿನಿಂದ ಕಾಯವಾಙ್ಮನ ಸೇವೆಗಳನ್ನು ನಿರಪೇಕ್ಷೆಯಿಂದ ನಿರ್ಮಲ ಹೃದಯದಿಂದ ಸಮರ್ಪಿಸುತ್ತಿದ್ದರು.

ಒಮ್ಮೆ ಅಥಣಿ ಶಿವಯೋಗಿಗಳ ದರ್ಶನಕ್ಕೆ ದಯಮಾಡಿದ್ದರು. ಕಾಯಮನ ಸೇವೆಗಳೊಡನೆ ಎಂದಿಗೂ ಕಾಣಬರುವ ವಾಣಿ ಸೇವೆಯನ್ನು ಅವರಲ್ಲಿ ಸಲ್ಲಿಸಿದ್ದಾರೆ.

“ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ II

ಜಂಗಮಲಿಂಗ ಭೇದದ ಸ್ವಯ ಚರಪರ

ಇಂಗಿತವರುಪಿದಂತಾಚರಿಸಿದ ಮಹಿಮಗೆ||ʼʼ

ಇದು ಅವರ ದರ್ಶನಕ್ಕೆ ದಯಮಾಡಿಸಿದಾಗ ಅವರ ಮೇಲೆ ಕಟ್ಟಿ ಹಾಡಿದ ಹಾಡಿಸಿದ ಮಂಗಳಾರತಿ, ಹೃದಯವುಕ್ಕಿದಾಗ ವಾಣಿಯು ಉಕ್ಕುವುದು ಅವರದೊಂದು ಸುಸ್ವಭಾವ. ಅದಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿರಲಿಲ್ಲ. ಸಾಹಸದಿಂದ ಶಬ್ದಗಳನ್ನು ಸೆರೆಹಿಡಿದು ತಂದು ಪವಣಿಸುತ್ತಿರಲಿಲ್ಲ. ಹೃದಯದಿಂದ ಹುಟ್ಟಿ ಹೃದಯದಿಂದ ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಈ ಪದ್ಯವು ಅಷ್ಟೇ, ಅದರಿಂದಾಗಿ ಅರ್ಥ ಪೂರ್ಣವಾಗಿದೆ. ಶಿವಯೋಗಿಗಳವರ ಜೀವನ ಸಾರವನ್ನು ಸೂರೆಗೊಂಡಿದೆ. ಪಲ್ಲವಿಯಲ್ಲಿ ಪಲ್ಲವಿಸಿದ ಸ್ವಯ ಚರ ಪರ ಜಂಗಮ ವಿವರಣೆಯನ್ನು ಮುಂದಿನ ಪದಗಳಲ್ಲಿ ಸ್ವಾರಸ್ಯವಾಗಿ ಸಹಜಾರ್ಥವಾಗಿ ಬಿತ್ತರಿಸಿದ್ದಾರೆ.

ಮುಖಸ್ತುತಿಗಾಗಿ ಅವರು ಬಣ್ಣಿಸುತ್ತಿರಲಿಲ್ಲ. ಅದು ಅವರ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಮುಖಸ್ತುತಿಗಾಗಿ ಯಾವಜೀವವು ಎಲ್ಲಿಯು ಅವರು ಮನಸ್ಸು ಮಾಡಿದವರಲ್ಲ. ಇದು ತಮಗು ಇಷ್ಟವಿರಲಿಲ್ಲ. ಇನ್ನೊಬ್ಬರ ವಿಷಯದಲ್ಲಿಯು ತಾವು ಮಾಡುತ್ತಿರಲಿಲ್ಲ.

ಎಡೆಯೂರು ತೋಂಟದಾರ್ಯರ ಸೊನ್ನಲಾಪುರ ಸಿದ್ಧರಾಮೇಶ್ವರರ ಗದ್ದುಗೆಗಳ ದರ್ಶನಕ್ಕೆ ದಯಮಾಡಿದಾಗಲು ಸ್ವಾಮಿಗಳು ವಾಣಿಸೇವೆಯನ್ನು ಪದ್ಯಗಳ ಮುಖಾಂತರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು ಮುಖಸ್ತುತಿ ಪರರಲ್ಲ ಎಂಬುದು ವ್ಯಗ್ಗಳವಾಗುತ್ತದೆ. ಸ್ವಾಮಿಗಳವರ ದಾಸೋಹಂಭಾವ ಆಳವಾದುದು ಅಪಾರವಾದುದು ಅದನ್ನು ಅಳೆಯಲು ನಮ್ಮಂಥವರಿಂದ ಸಾಧ್ಯವಿಲ್ಲ.

ಇನ್ನು ಅವರ ದಾಸೋಹ ಸೇವೆಗೆ ಶಿವಯೋಗ ಮಂದಿರವೆ ಒಂದು ದೊಡ್ಡ ನಿದರ್ಶನ. ಅಲ್ಲಿ ಒಂದು ದೊಡ್ಡ ದಾಸೋಹವನ್ನು ಏರ್ಪಡಿಸಿ ಅಲ್ಲಿನ ಕೆಲಸಗಾರರಲ್ಲದೆ ಪ್ರತಿ ದಿನವು ಪರಸ್ಥಳಗಳಿಂದ ಬರುತ್ತಿರುವ ನೂರಿನ್ನೂರು ಜನ ಅತಿಥಿ ಅಭ್ಯಾಗತರಿಗೆ ಪ್ರಸಾದ ವಿನಿಯೋಗ ಕೊರತೆಯಿಲ್ಲದೆ ನಡೆಯುತ್ತಿತ್ತು. ನಡೆಯುತ್ತಿದೆ. ಆ ದಾಸೋಹದಲ್ಲಿ ದೊಡ್ಡವರು ಚಿಕ್ಕವರು ಧನಿಕರು ದರಿದ್ರರು ಎಂಬ ಭೇದಭಾವವಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಪ್ರಸಾದದ ಏರ್ಪಾಡಿಲ್ಲ, ಇದು ನಿಜವಾದ ದಾಸೋಹ ಸೇವೆ

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಬ್ರಹ್ಮವೊಂದೆ ಪರಮಸತ್ಯ. ಆ ಪರಮಸತ್ಯವನ್ನು ಅಭೇದಭಾವದಿಂದ  ಅನುಭವಿಸುವವರೇ ಬ್ರಹ್ಮಜ್ಞಾನಿಗಳು. ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.  ಬ್ರಹ್ಮಜ್ಞಾನಿಯಾಗಬೇಕಾದರೆ ತನುವಿನ ವ್ಯಾಮೋಹವನ್ನು ಕೈಬಿಡಬೇಕು. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಬೇಕು. ಭಾವಗತವಾದ ಅಹಂಕಾರವನ್ನು ಇಲ್ಲವಾಗಿಸಬೇಕು. ದೇಹ, ಮನ, ಬುದ್ಧಿ, ಪ್ರಾಣಗಳು ನಾನಲ್ಲವೆಂಬ ವಿಮಲಜ್ಞಾನವನ್ನು ಹೊಂದಬೇಕು. ಇಂಥವರು ದೇಹವೆ ನಾನೆಂಬ ಭ್ರಮೆಯಿಂದ ಮುಕ್ತರಾಗಿ ಪರಬ್ರಹ್ಮದ ಅರಿವಿನ ಕಳೆಯ ಆತ್ಮವೆಂದರಿತು ಪರಬ್ರಹ್ಮದೊಡನೆ ತಾದಾತ್ಮ ಹೊಂದಿ ಬ್ರಹ್ಮಾನಂದವನ್ನು ಅಂದರೆ ಪರಮಸುಖವನ್ನು ಸದಾ ಅನುಭವಿಸುತ್ತಾರೆ.

ಜನಸಾಮಾನ್ಯರಿಗೆ ಅಹಂಭಾವವನ್ನು ಅಳಿಯುವುದು, ದೇಹಗುಣ ಅಭಿಮಾನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ದೇಹವೆ ನಾನೆಂಬ ಅಭಿಮಾನ ಹಾಗು ಭೌತಿಕ ವಿಷಯಗಳೇ ಸುಖದ ನೆಲೆ ಎಂಬ ಭಾವನೆ ಹೊಂದಿದ ಅವರಿಗೆ ಪರವಸ್ತುವೆ ತಾವೆಂಬ ಅರಿವು ಸಾಧ್ಯವಾಗುವುದಿಲ್ಲ. ಬದುಕಿನುದ್ದಕ್ಕೂ ವಿಷಯಗಳ ಹಿಂದೆ ಹರಿಯುವ ಅವರು ಭವಬಂಧನದಲ್ಲಿ ಸಿಕ್ಕು ಸದಾ ದುಃಖವನ್ನನುಭವಿಸುತ್ತಾರೆ. ಇಂಥವರು ಯೋಗ್ಯ ಗುರುವನ್ನಾಶ್ರಯಿಸಿ ತಮ್ಮ ತನು ಮನ ಭಾವಗಳನ್ನು ಶಿವನಿಗೆ ಸಮರ್ಪಿಸಿ ಸಾಧನಾ ಪಥದಲ್ಲಿ ಮುಂದುವರೆದಾಗ ದೇವನ ಅರಿವು ಕೊನೆಗೆ ತಾನೇ ದೇವರೆಂಬ ಅರಿವು ಸಾಧ್ಯವಾಗುತ್ತದೆ. ಈ ಸಾಧನಾಪಥವೇ ಸುಖದ ಮಾರ್ಗ.  ಈ ಮಾರ್ಗದಲ್ಲಿ ಮುನ್ನಡೆದವರು ಭವಬಂಧನದಿಂದ ಮುಕ್ತರಾಗುತ್ತಾರೆ.

ಸಮಾಜದಲ್ಲಿ ಮಿಥ್ಯಾಜ್ಞಾನಿಗಳಿಗೂ ಕೊರತೆ ಏನಿಲ್ಲ. ಅವರು ಬ್ರಹ್ಮವನ್ನರಿಯದಿದ್ದರೂ ಮಾತಿನ ಬ್ರಹ್ಮವನಾಡುವವರು. ಶಬ್ದಜಾಲದೊಳಗೆ ಬದುಕು ಸಾಗಿಸುವ ಇವರು ಲೌಕಿಕ ವಿಷಯಗಳಿಂದ ವಿಮುಖರಾದವರಲ್ಲ. ಅಜ್ಞಾನವನ್ನು ಕಳೆದುಕೊಂಡು ನಿಜಜ್ಞಾನಿಗಳಾಗಬೇಕೆಂದು ಬಯಸುವವರೂ ಅಲ್ಲ. ‘ಅಹಂ ಬ್ರಹ್ಮಾಸ್ಮಿ’ ‘ನಾನೇ ಬ್ರಹ್ಮ’ ಎಂದು ಹೇಳುತ್ತ ಗಾಢಭ್ರಮೆಯೊಳಗಿರುವ ಇಂಥವರನ್ನು ಕುರಿತು ಹೇಳುವ ಕತೆಯೊಂದು ಹೀಗಿದೆ: ಬ್ರಹ್ಮವನ್ನರಿಯದಿದ್ದರೂ ಬ್ರಹ್ಮವನ್ನರಿತಿರುವೆ ಎಂದು ಹೇಳುತ್ತಿದ್ದ ಮಿಥ್ಯಾಜ್ಞಾನಿಯೊಬ್ಬ ‘ಅಹಂ ಬ್ರಹ್ಮಾಸ್ಮಿ’ ಎಂದು ಹೇಳುತ್ತ ರಸ್ತೆಯಲ್ಲಿ ನಡೆದು ಹೊರಟಿದ್ದ. ಅದೇ ರಸ್ತೆಯಲ್ಲಿ ಎದುರಿನಿಂದ ಮದವೇರಿದ ಆನೆಯೊಂದು ಬರುತ್ತಿತ್ತು. ಅದರ ಮಾವುತ ‘ಆನೆಗೆ ಮದವೇರಿದೆ. ರಸ್ತೆಯಲ್ಲಿ ಎದುರಿನಿಂದ ಬರುವವರು ದೂರ ಸರಿಯಬೇಕೆಂದು ಕೂಗಿ ಕೂಗಿ ಹೇಳುತ್ತಿದ್ದ. ಆದರೆ ಈ ಮಿಥ್ಯಾಜ್ಞಾನಿ ‘ನಾನು ಬ್ರಹ್ಮನಿದ್ದೇನೆ. ಆನೆಯೂ ಬ್ರಹ್ಮವಿದೆ ಈ ಆನೆ ನನಗೇನು ಮಾಡುತ್ತದೆ?’ ಎಂದು ದುರಹಂಕಾರದಿಂದ ಮಾವುತನ ಮಾತನ್ನು ಲೆಕ್ಕಿಸದೇ ಮುಂದುವರೆದ. ಆಗ ಮದೋನ್ಮತ್ತ ಆನೆ ತನ್ನ ಸೊಂಡಿಲಿನಿಂದ ಈ ದುರಹಂಕಾರಿಯನ್ನು ಎತ್ತಿ ಒಗೆಯಿತು. ಪೆಟ್ಟು ತಿಂದ ಮಿಥ್ಯಾಜ್ಞಾನಿ ಶ್ರೀ ರಾಮಕೃಷ್ಣ ಪರಮಹಂಸರಲ್ಲಿಗೆ ಬಂದು ಬ್ರಹ್ಮನಾದ ನನಗೆ ಹೀಗೇಕಾಯಿತು ಎಂದು ಕೇಳಿದ. ಆಗ ರಾಮಕೃಷ್ಣರು ಇವನ ಅಜ್ಞಾನಕ್ಕೆ ನಕ್ಕು “ನೀನೇನೊ ಬ್ರಹ್ಮ ಸರಿ. ಆದರೆ ಎದುರಿನಿಂದ ಕೂಗಿ ಹೇಳುತ್ತಿದ್ದ ಮಾವುತನೂ ಒಬ್ಬ ಬ್ರಹ್ಮ ಎಂಬುದನ್ನು ಏಕೆ ಅರಿಯಲಿಲ್ಲ.?’ ಎಂದಾಗ ತನ್ನ ಅಜ್ಞಾನಕ್ಕೆ ತಾನೇ ನಾಚಿ ತಲೆ ತಗ್ಗಿಸಿದ.

ಬರೀ ಶಾಸ್ತ್ರಾಧ್ಯಯನ ಮಾಡಿದವರು ಎಂದೂ ಬ್ರಹ್ಮಜ್ಞಾನಿಗಳಾಗುವುದಿಲ್ಲ. ಬ್ರಹ್ಮವನ್ನರಿತವರು ಸುಮ್ಮನಾಗಿರಬೇಕು. ಬಾಹ್ಯದಲ್ಲಿ ಎಂದೂ ತಮ್ಮ ಬ್ರಹ್ಮದ್ವೈತವನ್ನು ಬಳಸಬಾರದು. ಅಂತೆಯೇ ನಿಜಗುಣರು ‘ಬಳಸದಿರದ್ವೈತವನು ಬಾಹ್ಯದಲ್ಲಿ ನಿನ್ನೊಳಗೇಕೋ ಭಾವನೆಯೊಡಗೂಡು’ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಹ್ಮಜ್ಞಾನವನ್ನರಿತವರು ಸತ್ತು ಸ್ವರ್ಗ ಸೇರಬೇಕೆಂದೇನೂ ಅಲ್ಲ. ಅವರು ಬ್ರಹ್ಮವನ್ನರಿತೂ ನಮ್ಮ ಮಧ್ಯದಲ್ಲಿ ಇರಬಲ್ಲರು. ಅವರೇ ಜೀವನ್ಮುಕ್ತರು, ಕಾಯವನ್ನೇ ಕೈಲಾಸವಾಗಿಸಿಕೊಂಡ ಪುಣ್ಯಪುರುಷರು.

ಕ್ಯಾಸನೂರಿ(ಖೇಚರಿಪುರ)ನ ಲಿಂ. ಶ್ರೀ ಗುರುಬಸವ ಶಿವಾಚಾರ್ಯರ ಕ್ರಿಯಾ ಸಮಾಧಿಯ  ಜಾಗೃತ ಸ್ಥಳವನ್ನು ನೋಡುವ ಭಾಗ್ಯ ನನಗೊದಿಗೆ ಬಂದದ್ದು ದಿ.೧೪-೧೦-೨೦೨೪ ರಂದು ಕೆಳದಿಯ ಪಂಚಮಠಗಳಲ್ಲೊಂದಾದ ಗೊಗ್ಗಿಹಳ್ಳಿ ಹಿರೇಮಠದ ಕಾರ್ಯಕ್ರಮದಲ್ಲಿ.

ಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಅಕ್ಕಿಆಲೂರು,ಪೂಜ್ಯಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು  ಮೂಲಗದ್ದೆ ಮತ್ತು ಪೂಜ್ಯ ಷ.ಬ್ರ.ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು ಕ್ಯಾಸನೂರು ಅವರುಗಳ ಅಂಥಕರುಣೆಯ ಕರೆ ನನಗೆ  ಕ್ಯಾಸನೂರು ಶ್ರೀಮಠದ ದರ್ಶನದ ಭಾಗ್ಯವನ್ನೊದಗಿಸಿಕೊಟ್ಟಿತ್ತು.

ಶ್ರೀಶೈಲ ಪೀಠದ ಶಾಖಾಮಠವಾದ ಕ್ಯಾಸನೂರಿನ ಸಂಸ್ಥಾನ ಹಿರೇಮಠ  ಆವರಣವನ್ನು ಪ್ರವೇಶಿಸುತ್ತಿದ್ದಂತೆ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಶ್ರೀ ಮಠದ   ಭೂದೃಶ್ಯ ವಿನ್ಯಾಸ ( landscape ).ಕರಾರುವಕ್ಕಾದ  ಭೂಮಿಯ ಸದ್ಬಳಕೆ.

ಮುಖ್ಯ ಪ್ರವೇಶ ದ್ವಾರದಿಂದ  ಲಿಂ.ಗುರುಬಸವ ಶಿವಾಚಾರ್ಯರರ ಗದ್ದುಗೆಯ ಸುಂದರ ಮಂದಿರ, ಶ್ರೀ ಮೂಕೇಶ್ವರ ಸ್ವಾಮಿಯವರ ಗದ್ದುಗೆ ಮಂದಿರ ಮತ್ತು ಶಕ್ತಿ ದೇವತೆ ಚೌಡೇಶ್ವರಿ ದೇವಿಯ ಮಂದಿರಗಳ ರಚನೆ ಮತ್ತು  ಮುಖ್ಯ ದ್ವಾರ ಮತ್ತು ಮಂದಿರಗಳ ಮಧ್ಯದ ವಿಶಾಲ ಜಾಗ ವಿಶೇಷವೆನಿಸಿತು .ಈ ಮಧ್ಯದ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಬಯಲು ಸಭಾ ವೇದಿಕೆ  ಮಠದಲ್ಲಿ ಜರಗುವ  ಧಾರ್ಮಿಕ ಸತ್ಸಂಗಗಳನ್ನು ಸಾಕ್ಷೀಕರಿಸಿತು.

ಶ್ರೀ ಮಠದ   ಅಧ್ಯಾತ್ಮ ಕೇಂದ್ರದ ಭೂದೃಶ್ಯ ವಿನ್ಯಾಸವು (spiritual center landscape design) ಶಾಂತಿ, ಪ್ರಾಕೃತಿಕ ಸೌಂದರ್ಯ, ಮತ್ತು ಅಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಸಾರುವ ಎಲ್ಲ ಅಂಶಗಳನ್ನು ಹೊಂದಿದ್ದು ಸ್ವಚ್ಛ,ನಿರ್ಮಲ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.

೧೮೯೪ ರಲ್ಲಿ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯ ರಾದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನ ಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.

ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು  ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನ ದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ. ಶ್ರೀ ಮಠದ  ಸದ್ಯದ  ಪೀಠಾಧಿಪತಿ ಗಳಾದ ಪೂಜ್ಯ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತತ್ವ ಶಕ್ತಿಯ ಪ್ರತಿಫಲವಾಗಿ ಶ್ರೀ ಮಠದ ಪರಿಸರ ವಿಶೇಷ ವಾಗಿ ವಿನ್ಯಾಸ ಗೊಂಡಿದೆ. ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಅನುಷ್ಠಾನ ದ ಸ್ಥಳವಂತೂ  ಕೆಂಪು ಚಿರಿ ಕಲ್ಲುಗಳಿಂದ ( ಲ್ಯಾಟರೈಟ್ ಸ್ಟೋನ್)ಆಶ್ರಮ ವಿನ್ಯಾಸ ದಲ್ಲಿ ರೂಪಗೊಂಡಿದ್ದು ನೋಡುಗರನ್ನು 18ನೆಯ ಶತಮಾನದ ಅಂತಿಮ ವರ್ಷಗಳ ಚಿತ್ರಣವನ್ನು ಕಟ್ಟಿಕೊಡುವ ದರ ಜೊತೆಗೆ ಅಲ್ಲಿನ ನಿರ್ಮಲ ಮತ್ತು ಪ್ರಶಾಂತ ವಾತಾವರಣ – ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ “ಇರುವು”ವನ್ನು  ಸಾಕ್ಷೀಕರಿಸುತ್ತದೆ.

ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಜೊತೆಗೆ ಅವರ ಶಿಷ್ಯರಾದ ಪೂಜ್ಯ ಹಾಲಯ್ಯ ( ಹಾನಗಲ್ಲ ಶ್ರೀ ಕುಮಾರೇಶ್ವರರ ಪೂರ್ವಾಶ್ರಮದ ಹೆಸರು ) ಲೋಕಸಂಚಾರ ಮಾಡುತ್ತ  ಅಣ್ಣಿಗೇರಿಯ ತೊಂಟದಾರ್ಯ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳವರಿಗೆ ದೇಹಲಾಸ್ಯಯುಂಟಾಗುತ್ತದೆ.ದೇಹಾಲಸ್ಯ ಉಲ್ಭಣಿಸಿ ಅನೀರಿಕ್ಷಿತವಾಗಿ  ಶ್ರೀ ಬಸವಲಿಂಗ ಶಿವಯೋಗಿಗಳು ಶಾಲಿವಾಹನ ಶಖೆ ೧೮೧೫ ಮತ್ತು ವಿಕ್ರಮ ಸಂವಸ್ಥರ ೧೯೫೦ ಪುಷ್ಯ ಶು.೫ (  12-01-1894)  ರಂದು  ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾಗುತ್ತಾರೆ. ಕ್ರಿಯಾ ಸಮಾಧಿಯ ವಿಧಿ ವಿಧಾನಗಳನ್ನು ಮುಗಿಸಿದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.

ನನಗೊಂದು ಕೂತೂಹಲವಿತ್ತು ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ತಮ್ಮ ಗುರುಗಳನ್ನು ಕಳೆದುಕೊಂಡಿದ್ದು ಬಯಲುಸೀಮೆಯ ಗದಗ ಜಿಲ್ಲೆಯ ಅಣ್ಣಿಗೇರಿ ಎಂಬ ಪುಟ್ಟ ಪಟ್ಟಣದಲ್ಲಿ, ಗುರುಗಳ ಅಗಲಿಕೆಯ ನೋವು ಮರೆಯಲು ಅನುಷ್ಠಾನಕ್ಕೆ ಹೋಗಿದ್ದು ಮಲೆನಾಡು ಪ್ರದೇಶಕ್ಕೆ ೧೬೦ ಕಿ.ಮಿ. ದೂರದ ಸೊರಬ ತಾಳೂಕಿನ ಕ್ಯಾಸನೂರು ಎಂಬ ಗ್ರಾಮಕ್ಕೆ. ಏಕೆ ಮತ್ತು ಯಾವ ಕಾರಣಕ್ಕಾಗಿ ? ಎಂದು.

ಆ ಸನ್ನಿವೇಷವನ್ನು ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ” ಯಲ್ಲಿ ಹೀಗೆ ವರ್ಣಿಸಿದ್ದಾರೆ,

“….ಆ ತುರ್ಯಾತೀತ ಸಮಾಧಿಯಲ್ಲಿ ತಮ್ಮ ಪರಮಾರಾಧ್ಯ ಶ್ರೀಗುರು ಮೂರ್ತಿಯನ್ನು ದರ್ಶಿಸುತ್ತ ಪರಮಾನಂದದೊಳಗೆ ಮುಳುಗಿದ್ದ ಹಾಲಸ್ವಾಮಿ ದೇಶಿಕರು ರೆಪ್ಪೆಯಲುಗಿಸಿ ಬಹಿರ್ಮುಖರಾದಾಗ ಮೂಡಣ ದಿಶೆಯಲ್ಲಿ ಮುಂಜಾವದ ಬೆಳಗು ಸೂಸಿ ಹರಡಿತ್ತು . ಶ್ರೀ ಬಸವಲಿಂಗಸ್ವಾಮಿಗಳ ಗದ್ದುಗೆಗೆ ಮಣಿದು ಪೂಜೆ-ಪ್ರಸಾದ ಪೂರೈಸಿಕೊಂಡ ಹಾಲಸ್ವಾಮಿ ದೇಶಿಕರು ಅಣ್ಣಿಗೇರಿಯಿಂದ ಮಲೆನಾಡ ಪ್ರಾಂತ್ಯದತ್ತ ಹೆಜ್ಜೆಗಳನ್ನಿರಿಸಿದ್ದರು.

`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಶ್ರೀ ಬಸವಲಿಂಗ ಸ್ವಾಮಿಗಳು ಅಂತರಂಗದೊಳಗೆ ತಮಗೆ ನೀಡಿದ ನಿರ್ದೇಶನದಲ್ಲಿ ತಮ್ಮ ಶ್ರೀ ಗುರುವೀಗ ಆಂತರ್ಯದಲ್ಲಿ ನೆಲೆಗೊಂಡಿದ್ದಾರೆ ಎಂಬ ಭಾವದಲ್ಲಿ ಹಾಲಸ್ವಾಮಿ ದೇಶಿಕರು ದೃಢ ಹೆಜ್ಜೆಗಳನ್ನಿರಿಸುತ್ತ ಹೊರಟಿದ್ದರು. `ಹಿಂದೊಂದು ಕಾಲದಲ್ಲಿ ಶಿವಯೋಗಿಗಳು ಈ ನಾಡಲ್ಲೆಲ್ಲ ತುಂಬಿದ್ದರು. ಮಲೆನಾಡ ಪ್ರಾಂತ್ಯದಲ್ಲಿ ವಿಶೇಷ ಪ್ರಭಾವ ಬೀರಿದ್ದರು.’ ಶ್ರೀ ಬಸವಲಿಂಗಸ್ವಾಮಿಗಳು ಒಮ್ಮೆ ಹೇಳಿದ್ದ ನುಡಿ ಹಾಲಸ್ವಾಮಿ ದೇಶಿಕರ ಸ್ನೃತಿಯಲ್ಲಿ ಹಾದುಹೋಗಿತ್ತು”

27 ವರ್ಷದ ಹಾಲಯ್ಯನವರು ಅಣ್ಣಿಗೇರಿಯಿಂದ ಕ್ಯಾಸನೂರಿಗೆ ಕಾಲ್ನಡಿಗೆಯಿಂದ ಸಂಚರಿಸಿದ  ೧೬೦ ಕಿ.ಮಿ. ಮಾರ್ಗ (ಊಹೆ)

 

(ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ”ಯ ಮುಂದುವರೆದ ಭಾಗ)

“…..ಶ್ರೀಗುರುಬಸವ ಸ್ವಾಮಿಗಳ ಗದ್ದುಗೆಯಲ್ಲಿ ಅನುಷ್ಠಾನ ನಡೆಸಬೇಕು ಎಂಬ ಹಾಲಸ್ವಾಮಿ ದೇಶಿಕರ ಸದಾಶಯಕ್ಕೆ ಒಡಂಬಟ್ಟಿದ್ದ ಉಳವಿಮಠದ ಗುರುಬಸವಯ್ಯ ಹಾಗೂ ಮಳಗುದ್ದಿ ಕೆಂಡಪ್ಪಗೌಡ ಎಂಬ ಈ ಭಾಗದ ಪ್ರಮುಖರು ಅನುಷ್ಠಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು.

ಶ್ರೀ ಹಾಲಸ್ವಾಮಿ ದೇಶಿಕರು ನಡೆಸಬೇಕೆಂದಿದ್ದ ಅನುಷ್ಠಾನ ವಿಶಿಷ್ಟವಾಗಿತ್ತು . ಉಪ್ಪು, ಹುಳಿ, ಕಾರ ಸಕ್ಕರೆಯಂಥ ಪದಾರ್ಥಗಳನ್ನು ಸೇವಿಸದೆ ಹಸುವಿನ ಹಾಲು- ಅನ್ನವನ್ನು ಪ್ರಸಾದವಾಗಿ ಅರ್ಪಿತಗೊಳಿಸಿ ಮೌನಾಚರಣೆಯೊಂದಿಗೆ ಮೂರುವರುಷ ಗಳವರೆಗೆ ಅಖಂಡ ಅನುಷ್ಠಾನ ನಡೆಸಬೇಕು ಎಂಬ ಸದುದ್ದೇಶ ಇರಿಸಿಕೊಂಡಿದ್ದರು. ಇಂಥ ಅನುಷ್ಠಾನ ನಡೆಸುವ ಮೊದಲು ಹಿರಿಯ ಶಿವಯೋಗಿಗಳ ಅನುಗ್ರಹ ಪಡೆಯುವುದು ಸೂಕ್ತ ಎಂಬ ಸಲಹೆಯನ್ನು ಕೆಂಡಪ್ಪಗೌಡರು ನೀಡಿದ್ದರು. ಕೆಂಡಪ್ಪಗೌಡರು ಪರಮಗುರುಭಕ್ತರು. ಗುರುಸೇವಾ ಕಾರ್ಯಗಳಿಗೆ ಸದಾ ಮುಂದಾಗುವ ಗುಣವಂತರು. ಇವರು ಆಗಾಗ ಹಾನಗಲ್ಲಿನ ಕುಮಾರಸ್ವಾಮಿಗಳ ಮಠಕ್ಕೆ  ಹೋಗಿಬರುತ್ತಿದ್ದರು. ಈ ವಿರಕ್ತಮಠದಲ್ಲಿ ಆಗ ಶ್ರೀ ಫಕೀರೇಶ್ವರ ಸ್ವಾಮಿಗಳು ಪೀಠಾಧಿಪತಿಗಳಾಗಿದ್ದರು. ತಮ್ಮ ವೈರಾಗ್ಯ ತಪೋನಿಷ್ಠೆಯಿಂದ ಶಿವಯೋಗ ಸಾಧನೆಯಲ್ಲಿ ಪಂಚಪರುಷ ಸಿದ್ಧಿಗೊಂಡ ಶ್ರೀ ಫಕೀರಸ್ವಾಮಿಗಳು ಹಸ್ತಮುಟ್ಟಿ ಕೊಟ್ಟದ್ದು ಫಲದಾಯಕವಾಗುತ್ತಿತ್ತು . ನುಡಿದ ವಾಣಿ ಅನುಗ್ರಹವಾಗುತ್ತಿತ್ತು . ಮುಪ್ಪಿನಲ್ಲಿದ್ದ ಶ್ರೀ ಫಕೀರ ಸ್ವಾಮಿಗಳು ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನೋಡಿ ಎಂದು ಭಕ್ತರಿಗೆ ಆಗಾಗ ಹೇಳುತ್ತಿದ್ದರು. ಹಾಲಸ್ವಾಮಿ ದೇಶಿಕರು ಹಾನಗಲ್ಲ ವಿರಕ್ತಮಠಕ್ಕೆ ಸೂಕ್ತ ಉತ್ತರಾಧಿಕಾರಿ ಎಂದು ಕಂಡುಕೊಂಡಿದ್ದ ಕೆಂಡಪ್ಪಗೌಡರು ತಾವು ಈ ವಿಷಯವನ್ನು ಪ್ರಸ್ತಾಪಿಸಿದರೆ ಒಪ್ಪುವರೋ ಇಲ್ಲವೇ ಎಂಬ ಅನುಮಾನದಲ್ಲಿಯೇ, ಅನುಷ್ಠಾನಕ್ಕೆ ಮೊದಲು ಶ್ರೀ ಫಕೀರೇಶ್ವರ ಸ್ವಾಮಿಗಳಂಥ ಶಿವಯೋಗಿಗಳ ಅನುಗ್ರಹ ಪಡೆಯುವುದು ಒಳ್ಳೆಯದು ಎಂದು ಸೂಚಿಸಿ ಹಾನಗಲ್ಲಿಗೆ ಹಾಲಸ್ವಾಮಿ ದೇಶಿಕರನ್ನು ಕರೆದುಕೊಂಡು ಹೋಗುವ ಸನ್ನಾಹ ನಡೆಸಿದ್ದರು. ಶ್ರೀ ಫಕೀರೇಶ್ವರ ಸ್ವಾಮಿಗಳ ಬಗೆಗೆ ಹೇಳಿದ ಸಂಗತಿಗಳನ್ನೆಲ್ಲ ಕೇಳಿ ಅಂಥ ಹಿರಿಯ ಶಿವಯೋಗಿಗಳ ಅನುಗ್ರಹ ತಮ್ಮ ಅನುಷ್ಠಾನಕ್ಕೆ ಅವಶ್ಯ ಎಂದುಕೊಂಡು ಹಾಲಸ್ವಾಮಿ ದೇಶಿಕರು ಹಾನಗಲ್ಲಿಗೆ ಹೋಗಲು ಸಮ್ಮತಿಸಿದ್ದರು; ಉಳವಿಮಠದ ಗುರುಬಸಯ್ಯ ಹಾಗೂ ಕೆಂಡಪ್ಪಗೌಡರೊಂದಿಗೆ ಹಾನಗಲ್ಲಿನತ್ತ ಹೊರಟಿದ್ದರು.

ಹಾನಗಲ್ಲು ತಲುಪಿ ಕುಮಾರ ಮಠದಲ್ಲಿ ಶ್ರೀ ಫಕೀರೇಶ್ವರ ಸ್ವಾಮಿಗಳ ದರ್ಶನ ಮಾಡಿದಾಗ ಶಿವಯೋಗಿವರ್ಯರ ಬಗೆಗೆ ತಾವು ಕೇಳಿದ್ದು ದಿಟವೆಂಬುದು ಹಾಲಸ್ವಾಮಿ ದೇಶಿಕರಿಗೆ ಪ್ರತ್ಯಕ್ಷವಾಗಿ ಕಂಡಿತ್ತು. ಶಿವಯೋಗದ ಮಹತಿಯನ್ನು ಕಣ್ಣೆದುರೇ ತೋರುವ ಇಂಥ ಶಿವಯೋಗಿಗಳು ಎಲ್ಲ ಕಾಲದಲ್ಲೂ ಯಾವುದೋ ಒಂದೆಡೆ ಗುಪ್ತವಾಗಿ ಇರುತ್ತಾರೆ ಎನಿಸಿತ್ತು . ಹಾಲಸ್ವಾಮಿ ದೇಶಿಕರು ಹೃದಯದುಂಬಿ ಶ್ರೀ ಫಕೀರಸ್ವಾಮಿಗಳ ಶ್ರೀ ಚರಣಗಳಿಗೆ ಮಣಿದಿದ್ದರು. ಸ್ನಾನ-ಪೂಜಾರ್ಚನೆಗಳು ಸಾಂಗವಾಗಿ ಪೂರೈಸಿದ್ದವು. ತಮ್ಮ ಪೀಠಕ್ಕೆ ಯೋಗ್ಯ ಉತ್ತರಾಧಿಕಾರಿ ಕೊನೆಗೂ ತಮ್ಮೆದುರು ಬಂದನೆಂಬುದನ್ನು ಶ್ರೀ ಫಕೀರೇಶ್ವರ ಸ್ವಾಮಿಗಳು ತಮ್ಮ ಲಿಂಗಪೂಜೆಯಲ್ಲಿ ಕಂಡಿದ್ದರು……”

ಮುಂದೆ ನಡೆದಿದ್ದು ಒಂದು ಅಪೂರ್ವ ಇತಿಹಾಸ.ಮನೋವ್ಯಾಕುಲತೆಯ ನಿಗ್ರಹಕ್ಕೆ ಬಂದು ಪೂಜ್ಯ ಗುರುಬಸವ ಶಿವಾಚಾರ್ಯರ ಗದ್ದುಗೆ ಬಳಿಬಂದು ಅನುಷ್ಠಾನಕ್ಕೆ ಕುಳಿತರೆ ಆ ಅಮೋಘಶಕ್ತಿಯ ಶಿವಯೋಗಿಯ ಜಾಗೃತ ಸ್ಥಳ ಹಾಲಯ್ಯ ದೇಶಿಕರನ್ನು ಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವ ಕುಮಾರ ಸ್ವಾಮಿಗಳನ್ನಾಗಿಸಿ, ಸತ್ತ ಸಮಾಜದ ಮರು ಹುಟ್ಟಿಗಾಗಿ ಸಮಾಜ ಸಂಜೀವಿನಿಯನ್ನಾಗಿ  ನೀಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು.

ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು  ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ.

`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಎಂದು ಯಳಂದೂರು ಬಸವಲಿಂಗ ಶಿವಯೋಗಿಗಳು  ಶ್ರೀಕುಮಾರೇಶ್ವರರಿಗೆ ಹೇಳಿದ ಆ ನುಡಿಗಳು ನನ್ನನ್ನು ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಪ್ರೇರಣೆ ನೀಡಿದವು.

  1. ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಸಂಗ್ರಹಿಸಿದ ಮಾಹಿತಿಗಳು

ವಿಜಯನಗರ ಪ್ರೌಡದೇವರಾಯನ ಸಮಕಾಲೀನರಾದ (೧೪೧೯-೧೪೫೦) ಕನ್ನಡದಲ್ಲಿ ಸಪ್ತಕಾವ್ಯಗಳ ಕರ್ತೃ; ಸಪ್ತ ಕಾವ್ಯಗಳ ಗುರುಬಸವ ಎಂದು ಖ್ಯಾತರಾದ  ಮತ್ತು ನೂರೊಂದು ವಿರಕ್ತರಲ್ಲಿ ಒಬ್ಬರಾದ ಶ್ರೀ ಗುರುಬಸವ ಶಿವಾಚಾರ್ಯರು ಮೂಲತಃ ಸೊರಬ ತಾಲೂಕಿನ ಕ್ಯಾಸನೂರು (ಖೇಚರಿಪುರ) ಸಂಸ್ಥಾನ ಹಿರೇಮಠದವರು. ಪೂಜ್ಯರ ಕ್ರಿಯಾಸಮಾಧಿ ಶ್ರೀಮಠದಲ್ಲಿರುವದು.ಮತ್ತು ಶ್ರೀ ಮಠವು ಕೆಳದಿ ಸಂಸ್ಥಾನದ ಪಂಚಮಠಗಳ ಪೈಕಿ ಒಂದು ಶ್ರೀಮಠ ವಾಗಿರುತ್ತದೆ.

ಶ್ರೀಗುರುಬಸವ ರಿಂದ ರಚಿಸಲ್ಪಟ್ಟ ಸಪ್ತ ಕಾವ್ಯಗಳು ಹೀಗಿವೆ.

  1. ಶಿವಯೋಗಾಂಗ ವಿಭೂಷಣ,
  2. ಸದ್ಗುರು ರಹಸ್ಯ,
  3. ಕಲ್ಯಾಣೇಶ್ವರ,
  4. ಸ್ವರೂಪಾಮೃತ,
  5. ವೃಷಭಗೀತೆ,
  6. ಅವಧೂತಗೀತೆ ಮತ್ತು
  7. ಮನೋವಿಜಯ

ಶ್ರೀ ಗುರು ಬಸವರಿಂದ  ಕೆಲವು ಸ್ವರವಚನಗಳು ರಚಿತವಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಗುರುಬಸವ ರಿಗೆ

  • ಭಕ್ತಜನಮನೋಮಂದಿರ,
  • ಶಿವಯೋಗಜನಸೇವಿತಚರಣಾರವಿಂದ,
  • ಷಟ್‍ಸ್ಥಲಜ್ಞಾನ ಪ್ರಭಾಪುಂಜರಂಜಿತಾಂತರಂಗ,
  • ವೀರಶೈವಮತಸ್ಥಾಪನಾಚಾರ್ಯ

ಮುಂತಾದ ಬಿರುದುಗಳಿದ್ದವೆಂದು ಮನೋವಿಜಯಕ್ಕೆ ತಾತ್ಪರ್ಯವನ್ನು ಬರೆದ ವಿರಕ್ತ ತೋಂಟದಾರ್ಯರು ತಿಳಿಸಿದ್ದಾರೆ. ಆದರೆ ಸ್ವವಿಷಯವಾಗಿ ಕವಿ ಏನನ್ನೂ ಹೇಳಿಕೊಂಡಿಲ್ಲ. ಕವಿ ವಿರಕ್ತರಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು.

ವಿಜಯನಗರ ಸಾಮ್ರಾಜ್ಯವನ್ನು ಸ್ಥಿರಗೊಳಿಸಿದ ಪ್ರೌಢದೇವರಾಯನ (ಕ್ರಿ.ಶ. 1419-1446) ಕಾಲದಲ್ಲಿ ಶ್ರೀ ಗುರುಬಸವರಿದ್ದರೆಂದು  ಚೆನ್ನಬಸವಪುರಾಣದಿಂದ ತಿಳಿದುಬರುತ್ತವೆ. ಪ್ರೌಢದೇವರಾಯ ವೀರಶೈವನಾಗಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ತುಂಬ ನೆರವಾದುದು ಇತಿಹಾಸಾವಲೋಕನದಿಂದ ಶ್ರುತವಾಗಿದೆ. ಆತನ ಕಾಲದಲ್ಲಿ ನೂರೊಂದು ವಿರಕ್ತರು ಉದಿಸಿ, ಹಂಪೆಯಲ್ಲಿ ನೆರೆದು ವೀರಶೈವಧರ್ಮವನ್ನು ಪ್ರಚುರಗೊಳಿಸಿದುದೂ ಅಷ್ಟೇ ಪ್ರಸಿದ್ಧವಾದ ವಿಷಯ. ಈ ವಿರಕ್ತರ ತಪಃಭಾವ ನಿಜವಾಗಿಯೂ ಅವರ್ಣನೀಯವಾದುದು. ಅವರು ಸಂಸಾರದ ಅಸಾರತೆಯನ್ನು ಕಂಡುಕೊಂಡು, ಜಂಗಮಸ್ಥಲವನ್ನಾಶ್ರಯಿಸಿ ಪರಮವೈರಾಗ್ಯಶೀಲರಾಗಿ ಮೆರೆದಿದ್ದಾರೆ. ಅವರಲ್ಲಿ ಕರಸ್ಥಲದ ನಾಗಿದೇವರಿಗೂ ಗುರುಬಸವರಿಗೂ ಮಹತ್ತ್ವದ ಸ್ಥಾನವಿದೆ. ಇವರಿಬ್ಬರ ಒಡನಾಟವನ್ನು ಚೆನ್ನಬಸಪುರಾಣದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಮಾತುಗಳು ಸ್ಪಷ್ಟವಾಗುತ್ತವೆ. ಗುರುಬಸವರ ಅರಮನೆ (ಮಠ) ವಿಜಯನಗರದಲ್ಲಿತ್ತು. ಕರಸ್ಥಲದ ನಾಗಿದೇವ ಆ ಮಠಕ್ಕೆ ಒಮ್ಮೆ ಬಂದು ಗುರುಬಸವರನ್ನು ಕಂಡಿದ್ದ. ಗುರುಬಸವರು ವೇದ, ವೇದಾಂತ, ಪುರಾಣಾಗಮ, ಇತಿಹಾಸಾದಿಗಳಲ್ಲಿ ಬಲ್ಲಿದವರಾಗಿದ್ದು ಯೋಗಶಕ್ತಿಯಿಂದ ಅನೇಕ ಪವಾಡಗಳನ್ನು ಮೆರೆದರೆಂದೂ ಪ್ರೌಢದೇವರಾಯನ ಸಮ್ಮುಖದಲ್ಲಿ ಪರವಾದಿಗಳನ್ನು ಗೆದ್ದು ಶಾರದೆಯ ಪೀಠವನ್ನು ಅಲಂಕರಿಸಿದರೆಂದೂ ಖೇಚರಶಕ್ತಿಯನ್ನು ಪ್ರದರ್ಶಿಸಿ, ಗಗನದಲ್ಲಿ ಈಜುತ್ತ ಸಕಲ ರಾಗಗಳನ್ನು ಹಾಡಿ, ಬಯಲಿನೊಳಗೆ ಬಯಲಾದರೆಂದೂ ಅದೇ ಪುರಾಣದಿಂದ ತಿಳಿದುಬರುತ್ತದೆ.

ಗುರುಬಸವರು ವಿಜಯನಗರಕ್ಕೆ ಬರುವ ಪೂರ್ವದಲ್ಲಿ ಎಲ್ಲಿದ್ದರು?, ಅವರ ಮೂಲ ಮಠ ಯಾವುದು?, -ಎಂಬ ಪ್ರಶ್ನೆಗಳಿಗೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಕೊಡುವ ಪರಿಹಾರಗಳನ್ನು ಗಮನಿಸಬಹುದು. ಕವಿ ಗುರುಬಸವರು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಮಠಾಧ್ಯಕ್ಷರಾಗಿದ್ದರೆಂದೂ ವಿಜಯನಗರದ ರಾಯರ ಕಾಲದಲ್ಲಿಯೂ ಕೆಳದಿಯ ದೊರೆಗಳ ಕಾಲದಲ್ಲಿಯೂ ಕ್ಯಾಸನೂರು ಎಂಬುದಕ್ಕೆ ಸಂಸ್ಕೃತದಲ್ಲಿ ಖೇಚರಿಪುರ ಎಂದು ಹೇಳುವರೆಂದೂ ಶಿವಯೋಗಿಯಾದ ಗುರುಬಸವರು ತಮ್ಮ ಯೋಗ ಸಾಮಥ್ರ್ಯದಿಂದ ಆಕಾಶದಲ್ಲಿ ಸಂಚರಿಸುತ್ತ ಇದ್ದುದರಿಂದ ಅವರಿದ್ದ ಊರಿಗೆ ಖೇಚರಪುರ ಎಂದು ಹೆಸರಾಯಿತೆಂದೂ ಐತಿಹ್ಯವುಂಟು. ಖೇಚರಿಪುರ ಎಂಬುದರ ಅಪಭ್ರಂಶವೇ ಕ್ಯಾಸನೂರು-ಎಂಬುದು ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳ ಅಭಿಮತವಾಗಿದೆ.

ಗುರುಬಸವರು ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದನೆಂಬುದರ ಮೇಲೆ ಇವರ ಕಾಲ ಕ್ರಿ.ಶ. 1430ರ ಸುಮಾರು ಎಂದು ಖಚಿತವಾಗಿ ಹೇಳಬಹುದು. ಇವರ ಸಪ್ತ ಕಾವ್ಯಗಳು ವೇದಾಂತವನ್ನು ಬೋಧಿಸುತ್ತವೆ; ಲಿಂಗಾಂಗಸಾಮರಸ್ಯಕ್ಕೆ ಯೋಗವೇ ಮೂಲವೆಂದು ಸಾರುತ್ತವೆ. ವಚನಾಗಮ, ವೇದೋಪನಿಷತ್ತುಗಳ ಸಾರವನ್ನು ಹೀರಿ, ನಿತ್ಯಸಾಧನೆಯನ್ನು ಬೋಧನೆಯ ರೂಪದಲ್ಲಿ ಕವಿ ನೀಡಿದ್ದಾರೆ.

ಗುರುಬಸವರ ಕೃತಿಗಳಲ್ಲಿ

  1. ಸದ್ಗುರು ರಹಸ್ಯ ನಿಜತತ್ತ್ವವನ್ನು ಬೋಧಿಸುತ್ತದೆ. ಈ ಕೃತಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ.
  2. ಕಲ್ಯಾಣೇಶ್ವರ ಪರಿವರ್ಧಿನಿಯ ವಿವಿಧ ರಾಗಗಳಲ್ಲಿ ಮೂಡಿಬಂದು ಷಟ್‍ಸ್ಥಲ ವಿವರಣೆ ಮಾಡುತ್ತದೆ.
  3. ಸ್ವರೂಪಾಮೃತ ಜೀವಪರಮರ ಸ್ವರೂಪವನ್ನು ತಿಳಿಸಿ, ಅವರ ಪರಸ್ಪರ ಮಿಲನವೇ ಮುಕ್ತಿಯೆಂಬುದನ್ನು ಹೇಳುತ್ತದೆ.
  4. ಅವಧೂತಗೀತೆ ನೂರೊಂದು ಚೌಪದಿಗಳಲ್ಲಿ ಮೂಡಿ ಬಂದಿದೆ. ಜ್ಞಾನೋತ್ತರ ಮಾರ್ಗದ ವಿಧವಿಧಗಳನ್ನು ಅನುಭವಿಸುವವನೇ ಅವಧೂತನೆಂದು ಕವಿಯ ಮತವಾಗಿದೆ.
  5. ಮನೋವಿಜಯ ಕುಸುಮಷಟ್ಪದಿಯಲ್ಲಿದ್ದು ಮನೋನಿಗ್ರಹವನ್ನು ತಿಳಿಸುವ ಶ್ರೇಷ್ಠ ಕೃತಿ.
  6. ಶಿವಯೋಗಾಂಗ ವಿಭೂಷಣ ಯೋಗಗಳ ಅಂಗಗಳನ್ನು ವಿವರಿಸುತ್ತ ಶಿವಯೋಗದ ಮೇಲ್ಮೈಯನ್ನು ಹೇಳುತ್ತದೆ.
  7. ವೃಷಭಗೀತೆ ಭೋಗಷಟ್ಪದಿಯಲ್ಲಿದ್ದು ಒಂದು ಶತಕಕೃತಿ ಎನಿಸಿಕೊಂಡಿದೆ.

ಗುರುಬಸವರ ಸಪ್ತಕಾವ್ಯಗಳಲ್ಲಿ ವೈವಿಧ್ಯವಿದೆ; ವೈಶಿಷ್ಟ್ಯವಿದೆ. ಈ ಕೃತಿಗಳು ಗುರು ಶಿಷ್ಯರ ಸಂವಾದರೂಪದಲ್ಲಿ ರಚಿತವಾಗಿವೆ. ಸುವಿವೇಕನೆಂಬ ಶಿಷ್ಯನಿಗೆ ದೇಶಿಕರು ಬೋಧೆ ಮಾಡುತ್ತಾರೆ. ವಿಷಯ ಸುಖದಲ್ಲಿ ಲೀನವಾದ ಶಿಷ್ಯನ ಮನಸ್ಸನ್ನು ಶಿವಯೋಗಾನಂದ ಸಾಗರಕ್ಕೆ ಸಾಗಿಸಬೇಕೆಂಬುದೇ ಸದ್ಗುರುವಿನ ಸಾಹಸ.

ಗುರುಬಸವರ ಸಂಗೀತಜ್ಞಾನ ಅಗಾಧವಾದ್ದು. ಶಾಸ್ತ್ರಕ್ಕೆ ಸಂಗೀತದ ಒಪ್ಪವಿದ್ದರೆ ಮೃದುಮಧುರವಾಗುವುದೆಂದು ಕವಿ ಅರಿತಿದ್ದಾರೆ. ಕನ್ನಡ ಛಂದೋಮಟ್ಟುಗಳಲ್ಲಿ ರಾಗಬದ್ಧವಾಗಿ ಹಾಡಲು ಕವಿಗೆ ಹೆಚ್ಚಿನ ಉತ್ಸಾಹವಿದೆ. ಸಂಸ್ಕೃತ ಛಂದಸ್ಸನ್ನು ಅಲ್ಲಗಳೆದು ಕನ್ನಡ ಷಟ್ಪದಿಯನ್ನು ಅಪ್ಪಿಕೊಂಡುದು ಕವಿಯ ಶೈಲಿಯ ವೈಶಿಷ್ಟ್ಯವೆನ್ನಬಹುದು. ಕವಿಯ ವಾಣಿಯಲ್ಲಿ ಪ್ರಾಸದ ಗುಣವಿದೆ; ಭಾಷೆಯಲ್ಲಿ ಹದವಿದೆ. ಒಟ್ಟಿನಲ್ಲಿ, ಈ ಕವಿ ತತ್ತ್ವನಿರೂಪಣೆಗಾಗಿ ಬಳಸಿಕೊಂಡಿರುವ ನಿರ್ವಿಕಾರ ಮಾರ್ಗ, ತತ್ತ್ವಸಮನ್ವಯ ರೀತಿ, ಸಂಗೀತದ ಸೊಗಸು ಮನೋಹರವಾಗಿವೆ. ಸಪ್ತಕಾವ್ಯಗಳು ಶಾಸ್ತ್ರನಿರೂಪಣೆ ಮಾಡುವ ಕೃತಿಗಳಾದುದರಿಂದ ಮೋಕ್ಷಾಪೇಕ್ಷಿಗಳ ಮನಸ್ಸನ್ನು ಸೆಳೆಯಬಲ್ಲವು.

(ಸೌಜನ್ಯ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)

೧೯೭೧ರಲ್ಲಿ ಶ್ರೀ  ಶಿವಾನಂದ ವಿರಕ್ತಮಠ ಅವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಬೃಹತ್ ಮಹಾಪ್ರಬಂಧವನ್ನು ಅರ್ಪಿಸಿ, ಪಿಎಚ್.ಡಿ. ಪದವಿ ಪಡೆದರು. ಈ ಕೃತಿ ೧೯೭೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ  ಒಂದು ಮಾರ್ಗವನ್ನೇ ತೋರಿಸಿಕೊಟ್ಟಿತು.

ಮಹಾಪ್ರಬಂಧದ ಹೃದಯ ಭಾಗ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಎರಡನೆಯ ಭಾಗ. ಈ ಕಾಲದ ವೀರಶೈವ/ಲಿಂಗಾಯತ ಸಾಹಿತ್ಯ, ಈ ಕಾಲದ ಬ್ರಾಹ್ಮಣ ಸಾಹಿತ್ಯ, ಈ ಕಾಲದ ಜೈನ ಸಾಹಿತ್ಯ, ಈ ಕಾಲದ ಇತರ ಸಾಹಿತ್ಯ ಎಂಬ ವಿಭಾಗದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅದರಲ್ಲೂ ಈ ಕಾಲದ  ವೀರಶೈವ/ಲಿಂಗಾಯತ ಸಾಹಿತ್ಯ ವಿಭಾಗದಲ್ಲಿ ಮುಖ್ಯವಾಗಿ ನೂರೊಂದು ವಿರಕ್ತರ ವಿಷಯವಾಗಿ ಮೊದಲ ಬಾರಿಗೆ ಇಲ್ಲಿ ತುಂಬ ಗಂಭೀರವಾಗಿ ಚರ್ಚಿಸಿದ್ದಾರೆ. ನೂರೊಂದು ವಿರಕ್ತರು ಯಾರು, ಅವರ ಸಂಖ್ಯಾ ನಿರ್ಣಯ, ಹೆಸರಿನ ಬಗೆಗಿರುವ ಗೊಂದಲಗಳು, ನೂರೊಂದು ವಿರಕ್ತರ ಸಾಹಿತ್ಯ ಸೃಷ್ಟಿ ಕುರಿತು ಅತ್ಯಂತ ಸ್ಪಷ್ಟವಾಗಿ ದಾಖಲೆಗಳನ್ನು ಪರಿಶೀಲಿಸಿ, ಹೊಸ ಹೊಳವುಗಳನ್ನು ಕೊಟ್ಟಿದ್ದಾರೆ. ‘ನೂರೊಂದು ವಿರಕ್ತರು ಇದ್ದರೆಂಬುದು ತ್ರಿಕಾಲ ಸತ್ಯ, ಆದರೆ ಇದು ಅವರ ಅಭಿಧಾನಗಳನ್ನು ಕುರಿತ ಸಮಸ್ಯೆ ಅಷ್ಟೆ’ (ಪು.೯೩) ಎಂದು ಕೊನೆಯಲ್ಲಿ ಹೇಳುವ ಮೂಲಕ ನೂರೊಂದು ವಿರಕ್ತರು ಚಾರಿತ್ರಿಕವಾಗಿ ಇದ್ದರೆಂಬುದನ್ನು ಸಿದ್ಧಪಡಿಸಿದ್ದಾರೆ.

ನೂರೊಂದು ವಿರಕ್ತರಲ್ಲಿ ‘ಗುರುಬಸವ’ ವೆನ್ನುವವರು ಏಳು ಕೃತಿಗಳನ್ನು ರಚಿಸಿ, ಸಪ್ತಕಾವ್ಯದ ಗುರುಬಸವ ಎಂಬ ಕೀರ್ತಿಗೆ ಪಾತ್ರನಾದವರು. ಅಷ್ಟೇ ಅಲ್ಲ, ಅವರು ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಅವಧೂತರೂ, ವೇದಾಂತಿಗಳೂ ಆಗಿದ್ದವರು. ಕೊನೆಗೆ ಶರಣರಾಗಿ ವೀರಶೈವ/ಲಿಂಗಾಯತ ಧರ್ಮದ ಮಹಿಮೆಯನ್ನು ಸಾರಿದವರು. ಇನ್ನೂ ವಿಶೇಷವೆಂದರೆ ಆ ಕಾಲಘಟ್ಟದಲ್ಲಿ ತಮ್ಮ ಮತವೇ ಶ್ರೇಷ್ಠವೆಂಬ ವಿಷಯವಾಗಿ ಅನೇಕ ಧರ್ಮದವರೊಡನೆ ವಾದ-ಸಂವಾದಗಳು ನಡೆಯುತ್ತಿದ್ದವು. ಈ ವಾದದಲ್ಲಿ ಗೆದ್ದವರು ಸೋತವರ ಸ್ವತ್ತಿಗೆ ಹಕ್ಕುದಾರರಾಗುತ್ತಿದ್ದರು. ಈ ಸಪ್ತಕಾವ್ಯದ ಗುರುಬಸವರು  ಶೃಂಗೇರಿ ಶಾರದಾ ಪೀಠವನ್ನು ವಾದದಲ್ಲಿ ಗೆದ್ದು, ಆ ಶಾರದಾ ಪೀಠವನ್ನು ಆರೋಹಣ ಮಾಡಿ, ಅದರಲ್ಲೂ ವೈರಾಗ್ಯ ತಾಳಿ, ಅದನ್ನು ಮರಳಿ ಶೃಂಗೇರಿ ವೇದಾಂತಿಗಳಿಗೆ ಮರಳಿ ಕೊಟ್ಟು ಬಂದರೆಂದು ವಿರೂಪಾಕ್ಷ ಪಂಡಿತ ತನ್ನ ಚನ್ನಬಸವ ಪುರಾಣದಲ್ಲಿ ಹೇಳುತ್ತಾನೆ. ಈ ವಿಷಯ ಕುರಿತು ವೀರಶೈವ/ಲಿಂಗಾಯತರು ಹೆಮ್ಮೆ ಪಡಬೇಕು. ಅದ್ವೈತಮಠವೊಂದರ ಶ್ರೇಷ್ಠ ಪೀಠವೊಂದನ್ನು ವೀರಶೈವ/ಲಿಂಗಾಯತನೊಬ್ಬ ಏರಿದ ಘಟನೆ ನಿಜಕ್ಕೂ ಅಭಿಮಾನ ಪಡುವ ಸಂಗತಿ. ಈ ವಿಷಯ ಕುರಿತು ಡಾ. ಶಿವಾನಂದರ ಮಾತುಗಳಲ್ಲಿಯೇ ಕೇಳಬೇಕು.

“ಶೃಂಗೇರಿ ಪೀಠವು ಅಂದು ಅದ್ವೈತ ಮತ ಪ್ರಸಾರ ಕೇಂದ್ರವಾಗಿತ್ತು. ಗುರುಬಸವರ ಕಾಲಕ್ಕೆ ಅಲ್ಲಿ ಅನೇಕ ಪಂಡಿತರು ಅದ್ವೈತ ತತ್ವಗಳನ್ನು ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ತನ್ನ ಕಾವ್ಯಗಳಲ್ಲಿ ಅದ್ವೈತ ತತ್ವದ ಸುರಿಮಳೆಗರೆದ ಗುರುಬಸವ ಅಂದಿನ ಪ್ರಕಾಂಡ ಪಂಡಿತರನ್ನು ಸೋಲಿಸಿ ಪೀಠಾರೋಹಣ ಮಾಡಿ ಅದ್ವೈತಾಚಾರ್ಯ ಪ್ರಶಸ್ತಿಗೆ ಕಾರಣವಾಗಿರಬೇಕು. ವಿರೂಪಾಕ್ಷ ಪಂಡಿತನು ‘ಶಾರದೆಯ ಪೀಠವನ್ನೇರಿ ಮರಳಿ ಬಂದು ಪ್ರೌಢನರಮನೆಯಲ್ಲಿದ್ದ ಯೋಗಿಯನ್ನು ಸೋಲಿಸಿದನೆಂದು’ ಸ್ಪಷ್ಟವಾಗಿ ಹೇಳಿರವುದರಿಂದ, ಈ ಪೀಠವು ನಾರಾಯಣ ಶಾಸ್ತ್ರಿಗಳು ಹೇಳುವಂತೆ ಹಂಪೆಯಲ್ಲಿರದೆ ಶೃಂಗೇರಿಯದೇ ಆಗಿರಬೇಕು. ಅಲ್ಲಿಂದ ಅವನು ‘ಮರಳಿ’ ಬಂದಿರಬೇಕು. ಗುರುಬಸವನವರ ಓಲಗವು ಸಕಲ  ವೇದಾಂತಿಗಳ ಬೀಡಾಗಿತ್ತೆಂದು ಹೇಳುವುದರಿಂದ ವೇದಾಂತಕ್ಕೆ ಒಲಿದ ಗುರುಬಸವರ ಅದ್ವೈತ ಸಿದ್ಧಾಂತದ ಶ್ರೀರೋಹಣ ಗಿರಿಯಾದ ಶೃಂಗೇರಿಯ ಶಾರದಾಪೀಠವನ್ನೇ ಏರಿರುವುದು ಖಂಡಿತ. ಅದು ವೀರಶೈವ/ಲಿಂಗಾಯತ ಯೋಗಿಗಳ ಅಂದಿನ ವಿದ್ಯೆ, ಅನುಭಾವ, ಪ್ರಭಾವಗಳ ಪ್ರತೀಕ.” (ಪು. ೧೩೭)

ಗುರುಬಸವವರಂತಹ ಸಾಧಕರು ತಮ್ಮ ಸಾಧನೆಯಿಂದ ವೀರಶೈವ/ಲಿಂಗಾಯತದ ಹಿರಿಮೆ ಗರಿಮೆಗಳನ್ನು ಎತ್ತರೆತ್ತರಕ್ಕೆ ಬೆಳೆಸಿದರೆಂಬ ಸಂಗತಿಯನ್ನು ಮೊದಲ ಬಾರಿಗೆ ಡಾ. ಶಿವಾನಂದ ಅವರು ಅನೇಕ ಆಧಾರಗಳಿಂದ ಸಿದ್ಧಪಡಿಸಿ ತೋರಿಸಿರುವುದು ಅವರ ಸಂಶೋಧನಾ ವಿಚಕ್ಷಣತೆಗೆ ಸಾಕ್ಷಿಯಾಗಿದೆ.

(ಸೌಜನ್ಯ ಪುಸ್ತಕ ವಿಮರ್ಶಾಲೇಖನ: ಶ್ರೀ ಪ್ರಕಾಶ.ಗಿರಿಮಲ್ಲನವರ)

 ಶ್ರೀ ಗುರುಬಸವ ರ ಬಾಲ್ಯದ ಮಾಹಿತಿ

 ತಂದೆಯ ಹೆಸರು ವೆ. ಸದಾಶಿವಯ್ಯ ಮತ್ತು ತಾಯಿಯ ಹೆಸರು ಶಿವಲಿಂಗಮ್ಮ.

ವಿದ್ಯಾಭ್ಯಾಸ: ಶ್ರೀಶೈಲ  ಜಗದ್ಗುರು ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ಭಗವತ್ಪಾದರ ಆಶ್ರಯದಲ್ಲಿ.

ಪೂರ್ವಾಶ್ರಮದ ಹೆಸರು : ಬಸವಾರ್ಯ

ಶ್ರೀಶೈಲ ಜಗದ್ಗುರುಗಳಿಂದ ಬಸವಾರ್ಯರು ವಿಶೇಷವಾಗಿ ಕಲಿತುಕೊಂಡಿದ್ದು ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”

(ಸೌಜನ್ಯ:  “ಖೇಚರಯೋಗಿ” ಲೇಖಕಿ:ವಿದ್ಯಾ.ಡಿ.ಪಾಟೀಲ್ ವಡಗೇರಿ)‌

 ಕರ್ನಾಟಕದ ಕವಿ ಚರಿತೆ”” ಸಂಪುಟ೨ ಯಲ್ಲಿ ದಾಖಲಾದ ಮಾಹಿತಿಗಳು

೧೯೧೯ ರಲ್ಲಿ ರಾವ್‌ ಬಹದ್ದೂರು ಆರ್.ನರಸಿಂಹಾಚಾರ್ಯ ಅವರು ಬರೆದ “ಕರ್ನಾಟಕದ ಕವಿ ಚರಿತೆ””  ಸಂಪುಟ-೨ ರಲ್ಲಿ ಶ್ರೀ ಗುರುಬಸವ ಅವರ ಕುರಿತು ಮತ್ತು ಅವರ ಕೃತಿಗಳ ಕುರಿತು ವಿಶೇಷ ಬೆಳಕು ಚಲ್ಲುತ್ತದೆ. ಆ ಪುಸ್ತಕದ ಪುಟ ಸಂಖ್ಯೆ ೭೪ ರಿಂದ ೮೦ ರವರೆಗೆ ವಿಸ್ತೃತ ಲೇಖನದ ಪೂರ್ಣ ಪಾಠ ಹೀಗಿದೆ.

ಗುರುಬಸವ, ಸು 1430

ಈತನು ಶಿವಯೋಗಾಂಗಭೂಷಣ, ಸದ್ಗುರುರಹಸ್ಯ, ಕಲ್ಯಾಣೇಶ್ವರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ, ಮನೋವಿಜಯಕಾವ್ಯ ಈ ಗ್ರಂಥಗಳನ್ನು  ಬರೆದಿದ್ದಾನೆ. ಗುರುಬಸವಾರ್ಯರ ವಚನ ಎಂಬ ಹಾಡಿನ ರೂಪವಾದ ಒಂದು ಗಂಥವು ದೊರೆಯುತ್ತದೆ. ಇದೂ ಏತತ್ಕವಿಕೃತವಾಗಿರಬಹುದೋ ಏನೋ ತಿಳಿಯದು.

ಇವನು ವೀರಶೈವ ಕವಿ . ಮನೋವಿಜಯಕಾವ್ಯದ ಕೊನಯ ಗದ್ಯದಲ್ಲಿ “ಶಿವಯೋಗಜನಸೇವಿತಚರಣಾರವಿಂದ ಷಟ್‌ ಸ್ಥಲ ಜ್ಞಾನಪ್ರಭಾಪುಂಜರಂಜಿತಾಂತರಂಗ ವೀರಶೈಮತ ಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರು ಬಸವೇಶ್ವರಂ “ಎಂಬ ಹೇಳಿರುವದರಿಂದ  ಈತನು ಬಹಳಾ ಪ್ರಸಿದ್ಧನಾದ ವೀರಶೈವಗುರುವಾಗಿದ್ದಂತೆ  ತಿಳಿಯುತ್ತದೆ. ಚನ್ನಬಸವ ಪುರಾಣದ ೬೩ ನೆಯ ಸಂಧಿಯ ೧೫,೧೬,೩೫ ನೆಯ ಪದ್ಯಗಳಿಂದ ಇವನು ವಿಜಯನಗರದ ರಾಜನಾದ ೨ ನೆಯ ಪ್ರೌಢದೇವರಾಯನ (1419-1446) ಕಾಲದಲ್ಲಿ ಇದ್ದಂತೆ ತಿಳಿಯಬರುತ್ತದೆ. ಇವನ ಕಾಲವು ಸುಮಾರು ೧೪೩೦ ಆಗ ಬಹುದು.

ಇವನ 7 ಗ್ರಂಥಗಳು ಸಪ್ತಕಾವ್ಯವೆಂದು ಪ್ರಸಿದ್ಧವಾಗಿವೆ. ಎಲ್ಲವೂ ವೀರಶೈವವೇದಾಂತ ಪ್ರತಿಪಾದಕವಾಗಿಯೂ ಗುರುಶಿಷ್ಯಸಂವಾದರೂಪವಾಗಿಯೂ ಇವೆ. ಒಟ್ಟು 1243 ಪದ್ಯಗಳಿವೆ.

ಈ ಗ್ರಂಥಗಳಲ್ಲಿ

1 ಶಿವಯೋಗಾಂಗಭೂಷಣ

ಇದು ಪರಿವರ್ಧಿನೀ ಷಟ್ಪದಿಯಲ್ಲಿ ಬರೆದಿದೆ. ಸಂಧಿ 6, ಪದ 278. ಈ ಗ್ರಂಥದಲ್ಲಿ ಯೋಗಾಭ್ಯಾಸಕ್ರಮ, ಯೋಗಾಸನ, ಮುಂತಾದ ವಿಷಯಗಳು ಹೇಳಿವೆ. ಇದರ ಉತೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ:

ಶ್ರುತಿವನಿತೆಯ ಮುಖಗನ್ನಡಿ ಶಾಸ್ತ್ರ |

ಪ್ರತತಿಯ ನಿಲುಕಡೆ ತರ್ಕಂಗಳ ಸ |

ನ್ಮತ ನಿಖಿಲಾಗಮತತ್ವರಹಸ್ಯಂಗಳ ಘನಚೇತನವು ||

ಸ್ಮೃತಿಗಳ ಮುದ ಪೌರಾಣಂಗಳ ನಿಜ |

ಮತಿಯಖಿಲಾದ್ಯರ ವಚನಂಗಳ ನಿ |

ಶ್ಚಿತಮತವೀಯೋಗಾಂಗವಿಭೂಷಣವೆಂದನು ದೇಶಿಕನು |

ಈ ಗ್ರಂಥಕ್ಕೆ ಶಿವಯೋಗಾಂಗಭೂಷಣ ಎಂಬ ಹೆಸರು ಬರಲಿಕ್ಕೆ ಕಾರಣವು ಈ ಪದ್ಯದಲ್ಲಿ ಹೇಳಿದೆ-

ಸತ್ಯ ವಿರತಿ ಗುತಲಾಲಸನಿಶ್ಚಲ |

ಯುಕ್ತಿ ಮನೋಮತನಿರಸನವೆಚ್ಚ |

ನಿತ್ಯಸ್ವ ಪ್ರತ್ಯಕ್ಷತೆಸಂತೃಪ್ತಿಗಳೆ ಯಮಾದಿಗಳು ||

ಅತ್ಯುತ್ಸಾಹದೊಳಿವನನುದಿನ ನಿಜ |

ಭಕ್ತಿಸಹಿತ ಭೂಷಿಸಿ ಶಿವನೊಳು ಸಂ |

ವ್ಯಕ್ತದಲೇ ಬೆರಸುವ ಕಾರಣವಿದು ಯೋಗಾಂಗವಿಭೂಷಣವು ||

ಪದ್ಯಗಳು ಪ್ರಾಯಿಕವಾಗಿ ಎಂದನು ದೇಶಿಕನು, ಪೇಳಿದ ದೇಶಿಕನು, ಎಂದು ಮುಗಿಯುತ್ತವೆ. ಗ್ರಂಥಾಂತ್ಯದಲ್ಲಿ ಕೆಲವು ಅನುಷ್ಟುಪ್‌ಶ್ಲೋಕಗಳೂ ಇವೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-

ಇದುಹೆಯ ಕೋಶವನಬುಜಭವಾಂಡವ|

ನರಣಿಯ ಮೇರುಗಿರಿಯ ದಿಕ್ಪುಂಜವ |

ಕರಸಂಪುಟಿಕೆಯನಂಬುನಿಧಿಯ ಚುಲುಕೋದಕಮಾತ್ರಕವಂ ||

ತರಣಿಯ ಖದ್ಯೋತನ ಗೋಷ್ಪದಮಂ|

ಧರಣಿಯ ಸಮವೆಂದೆನಿಸುವಮಹಿಮೆಯ |

ಹರವರಿಯಿಂ  ಸು   ದಾಡುವನಿಳೆಯೊಳಗೆಂದನು ದೇಶಿಕನು ||

ಹಸಿಯದೆ ಹುಸಿಯದೆ ಕುಸಿಯದೆ ನೆಸೆಯದೆ |

ಹಸಗೆಡದಖಿಳರೊಳಗೆ ಕಾರುಣ್ಯಂ |

ಮಸುಳಿಸದುದ್ರೇಕಿಸದೆ ವೃಧಾ ದೈನ್ಯದಿ ವಿಷಯಂಗಳೊಳು ||

ಪಸರಿಸಿ ಹರಿದಾಡದೆ ಲೌಕಿಕರಿಂ |

ವಸನಾಗಿರದೆ ಮನಸ್ಸಂಸಾರದ |

ಬೆಸುಗೆಯದು ಸುಯುತ್ತಿಹನಿಳೆಯೊಳಗೆಂದನು ದೇಶಿಕನು |

2 ಸದ್ಗುರುರಹಸ್ಯ

ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಉಪದೇಶ 9, ಪದ್ಯ 237. ಈ ಗ್ರಂಥದ  ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ-

ವೇದದಂತುಟಿದಲ್ಲ ಶಾಸ್ತ್ರದ |

ಹೋದ ಹೋಲಬಲ್ಲೆಲೆ ಪುರಾಣದ |

ಗಾದೆಗಳ ಜಂಜಡದ ಜಾಡ್ಯದ ಜಿನುಗು ತಾನಲ್ಲ ||

ಆದರಿಸಿ ಕೇಳುವಡೆ ಪರಮಸ |

ಮಾಧಿಶಾಂಭವಸತ್ಯ ಸಮ್ಯ |

ಗ್ಬೋಧಲೀಲಾಲೋಲಶೀಲಾನ್ವಯರಹಸ್ಯವಿದು ||

ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಕೆಲವು ಪದ್ಯಗಳನ್ನು  ತೆಗೆದು ಬರೆಯುತ್ತೇವೆ

ಬಸವಸ್ತುತಿ

ಘಟವನದಾಕಾಶದಂತುಟು |

ಪಟವನದಿಹ ಚಿತ್ರದಂತುಟು |

ಸಟೆಯನದುರುಸತ್ಯದಂತುಟುಪಾಧಿಯಂ ಪದು ||

ನಟಿಸಿ ತೋರುವ ದೀಪದಂತುಟು |

ಕುಟಿಲಮಾಯೆಯನದು ನಿಜದೊಳ್ |

ಘಟಿಸಿದಮಲಬ್ರಹ್ಮಗುರುಬಸವಂಗೆ ಶರಣೆಂಬೆ ||

ಶಿಷ್ಯನಿಗೆ ಉವದೇಶ

 ನೊಂದು ತಾಪತ್ರಯಗಳಿಂದ |

ಮುಂದುಗೆಟ್ಟಹ ಜಗವ ಕಾಣುತ |

ಹಂದೆಯಂ ಹಾವಡರಿದಂತವಿವೇಕದಿಂ ತನ್ನ ||

ಬೆಂದ ತುಂದನಿಮಿತ್ತ ಪೆರಂ |

ಕೊಂದು ಕೂಗಿ ನಿರರ್ಧ ನಿರಯದೊ |

ಳೊಂದಬೇಡೆಂದೈದೆ ಪೇಳಿದ ದೇಶಿಕೋತ್ತಮನು ||

ಕರ್ಮ ಪಟವ ನಂಬಿ ಪರಮನ |

ವರ್ಮವಯದೆ ವಾಗ್ವಿಲಾಸದಿ |

ಬೊಮ್ಮವಾರ್ತೆಯ ನುಡಿದು ಶಿಶ್ನೋದರಪರಾಯಣದ ||

ಧರ್ಮದಲಿ ನೀ ನಡೆದು ಹಮ್ಮಿನ |

ಬಿಮ್ಮು ಮಿಗೆ ತಲೆಗೇ ಮಗನೇ |

ಗಮ್ಮ ನಿಯಲ್ಬೇಡ ನಿರಯದೊಳೆಂದ ದೇಶಿಕನು |

  1. ಕಲ್ಯಾಣೇಶ್ವರ

 ಇದು ಪರಿವರ್ಧಿನೀಪಟ್ಪದಿಯಲ್ಲಿದೆ ; ಪದ್ಯ 102 “ಕಲ್ಯಾಣೇಶ್ವರನೆನಿಸುವ ಬಸವನ ಕಾರುಣ್ಯದಿಂ ಭಾವಿಸುತಿಹುದೆಂದನು ದೇಶಿಕನು” ಎಂಬುದರಿಂದ ಈ ಗ್ರಂಥದ ಕಲ್ಯಾಣೇಶ್ವರ ಎಂಬ ಹೆಸರಿಗೆ ಕಾರಣವು ಊಹಿಸಬಹುದಾಗಿದೆ. ಇದರಲ್ಲಿ- ಬಸವನ ಸಹಚರಿಯಾದ ನಂದಿನಿ ತನ್ನ ಕಿಂಕರ ನಾದ ವಿಚಿತ್ರಕನೆಂಬ ಗಣೇಶ್ವರನು  ಸುಜ್ಞಾನಚರಿತ್ರನಾಗಲು ಮಾಡಿದ ಜ್ಞಾನಬೋಧೆಯನ್ನು ದೇಶಿಕನು ಶಿಷ್ಯನಿಗೆ ನಿರೂಪಿಸಿದಂತೆ ಹೇಳಿದೆ. ಗ್ರಂಥಾವತಾರದಲ್ಲಿ ಬಸವಸ್ತುತಿಯೂ ಬಸವಸಹಚರಿಯಾದ ನಂದಿನಿಯ ಸ್ತುತಿಯೂ ಇವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ.

ಪ್ರಳಯಾರ್ಕನ ದೀಪ್ತಿಯನೊಳಕೊಂಡು|

ಜ್ಜ್ವಲಿಸುವ ಲಿಂಗದ್ಯುತಿ ಸರ್ವಾಂಗವ ಬಳಸಿ ಮಹಾತೇಜಃಪುಂಜೀಕೃತವಾಗಿ ಬಹಿಷ್ಕರಿಸಿ ||

ಮಲೆಯುತ ದಳವೇತ ಧಳಧಳಿಸುತ |

ಘುಳುಘುಳಿಸುತಷೂರ್ಮಿಸುತ ಸಮಸ್ತವ ಸುಸುಗೊಳುತಿಹುದೀಗ ಮಹಾಸಿದ್ಧಿಗೆ ಕುಹಯೆಂದ ||

ಆಡುತಲನುಭವದೊಳು ಗುರುವಚನವ ಪಾಡುತ ಸುಮನೋದೃಷ್ಟಿಯೊಳೊಲವಿಂ |

ನೋಡುತ ಲಿಂಗವ ಚಿತ್ತಾಂತರ್ಗತವಹ ಬಹುಬಾಧೆಗಳಂ ||

ಝೂಡಿಸಿ ಸತ್ಯಾನಂದಾಂಬುಧಿತುಳು |

ಕಾಡುತ ನಿಜವಿಶ್ರಾಂತಿಯೊಳೀ ಪರಿ | ರೂಢಿಯೊಳಗೆ ನಿರುಪಮಸುಖದಿಂದಿಹುದೆಂದನು ದೇಶಿಕನು ||

4 ಸ್ವರೂಪಾಮೃತ

ಇದು ಭಾಮಿನೀಪಟ್ಪದಿಯಲ್ಲಿದೆ; ಪರಿಚ್ಛೇದ 3, ಪದ್ಯ 77. ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ಪದಗಳನ್ನುಗದ್ಧರಿಸಿ ಬರೆಯುತ್ತೇವೆ

ತೆಗೆದು ವಾಯುಗಳಂ ಸದಾತ್ಮನು |

ಬಿಗಿದು ಧಾತುಗಳಂ ಶರೀರವ |

ನಗಲದಿರುತಿರಲಿಹುದದಲ್ಲದಿರಲ್ ಕ್ಷಣಾರ್ಧದೊಳು ||

ಹಗಲು ನಾಯ್ನರಿನೋಣಗಳೀ ಕಾ |

ಗೆಗಳು ನೊರಜುಗಳೀ ಶರೀರವ |

ಸೊಗಸದೊಗಡಿಸದೆಳಸುವುವೆ ನೀಂ ತಿಳಿದು ನೋಡೆಂದ ||

ವಿಷಯತಳಿರಿಂ ತಳಿತು ಕೊರ್ವಿದ |

ದಶವಿಧೇಂದ್ರಿಯಶಾಖೆಗಳನೆ |

ಣ್ದೆಸೆಯೊಳಿಟ್ಟುದ್ದಾನವಾಗಿ ಶರೀರ ಭೂರುಹವು ||

ವ್ಯಸನಪುಷ್ಪದಿ ಕರ್ಮಫಲದಿಂ |

ದೆಸೆದಿರಲು ತತ್ಪಲವನುಲ್ಲಾ |

ಲಸದಿ ಮಾನಸವಕ್ಕಿ ಎಸಟಂಬರಿದು ತಿನುತಿಹುದು ||

  1. ವೃಷಭಗೀತೆ

ಇದು ಭೋಗಪಟ್ಪದಿಯಲ್ಲಿ ಬರೆದಿದೆ; ಪದ್ಯ 101, ಪದ್ಯಗಳು ಪ್ರಾಯಿಕವಾಗಿ ಬಾಲ್ವನವ ಕೃತಾರ್ಥನು, ತಿಳಿವನವ ಕೃರ್ತಾಥನು ಎಂದು ಮುಗಿಯುತ್ತವೆ. ಈ ಗ್ರಂಥವು ಬಸವಸ್ತುತಿರೂಪವಾಗಿಯೂ ವೀರಶೈವವೇ ದಾಂತಪ್ರತಿಪಾದಕವಾಗಿಯೂ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ~

ಪಯದಿಹುದೆ ಧರ್ಮ ತನುವ |

ಕೆಳೆಯದಿಹುದೆ ಸಿದ್ಧಿ ಚಿತ್ತ |

ವಲುಗದಿಹುದೆ ಮುಕ್ತಿ ಮದು ನುಡಿದ ವಕ್ಕಣೆ ||

ಹೊಳೆಯದಿಹುದೆ ಸತ್ಯ ರೋಷ |

ದಳೆಯದಿಹುದೆ ಶಾಂತಿ ಕಪಟ |

ಮೊಳೆಯದಿಹುದೆ ಸೌಖ್ಯವಿದನು ತಿಳಿಯಲವ  ಕೃತಾರ್ಧನು ||

ಶಮದಮಾದಿಗುಣವಿಶಿಷ್ಟ |

ವಿಮಲಚಿತ್ರಪುಷ್ಪನಷ್ಟ |

ಮಮತೆಹೀನ ದುಃಖಸುಖಸಮಾನವಾಗಿಯೇ ||

ಭ್ರಮಣಭವವಿಕಾರನಾಟ್ಯ |

ವಿಮುಖನಾಗಿ ತನ್ನ ತಾನೆ |

ಸಮವನದ ನನ್ಯಸುಖದೊಳಿರ್ಪನವ ಕೃತಾರ್ಧನು ||

  1. ಅವಧೂತಗೀತೆ

ಇದು ವಿರಕ್ತಿ ಬೋಧಕವಾದ ಹಾಡಿನ ರೂಪದಲ್ಲಿದೆ; ಹಾಡು 101. ಅಂತ್ಯದಲ್ಲಿ  ಅವಧೂತಲಕ್ಷಣವು ಹೇಳಿದೆ ಗ್ರಂಧಾದಿಯಲ್ಲಿ ಬಸವಸ್ತುತಿ ಇದೆ.  ಇದರಿಂದ ಒಂದೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ

ಹಸುಗಯದೆ ಸೊಣಗನು ಮತಿಗೆಟ್ಟು |

ಮುಸುರೆಯ ಮಡಕೆಯೊಳಗೆಮೊಗವಿಟ್ಟು |

ದೆಸೆಗಾಣದೆ ಬಾಧೆಗೆ ತನುಗೊಟ್ಟು |

ಪೆಸರ್ಗೊಳಲಿದು ಸಂಸಾರದ ಗುಟ್ಟು ||

ವಡಬ ಜಡಂ ಗುಣಮಹಿಸಂತಾನ |

ಸುಡುವ ವಿಷಂ ಪೀಯೂಷಸಮಾನ I

ಪೊಡೆವ ಸಿಡಿಲ್ ಮಂಜುಳವರಗಾನ |

ಮೃಡಗುರುಕರುಣಕಟಾಕ್ಷದ ಭಾನ ||

  1. ಮನೋವಿಜಯಕಾವ್ಯ

ಇದು ಕುಸುಮಪಟ್ಪದಿಯಲ್ಲಿ ಬರೆದಿದೆ; ಪ್ರಕರಣ 9; ಪದ್ಯ 355, ಈ ಗ್ರಂಥದಲ್ಲಿ ಸುವಿವೇಕನೆಂಬ ಜ್ಞಾನಿ ಸಂಸಾರಕಲಸಿ ಗುರುವಿಡಿದು ತನ್ನ ನಿಜ ತಾನಾದ ಸಂಗತಿ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-

ಸದುಗುರುಕಟಾಕ್ಷದಿಂ |

ದುದಿಸಿದ ನಿಜಾನುಭವ |

ದುದಯದಿಂದಖಿಲಾದ್ಯರನುಮತದೊಳು ||

ವಿದಿತವೇದಾಗಮೋ |

ಕ್ತ ದೊಳುಪನಿಷತ್ತುಗಳೊ |

ಳೊದವಿಸಿದ ಸಮ್ಮ ತಿಯ ಸಂಗ್ರಹವಿದು ||

ಇದು ಶ್ರುತಿಸ್ಮೃತಿಯ ಸೌ |

ಖ್ಯದ ಸುಖಂ ವೇದಾಂತ |

ದೊದವು ನಿಜಶೈವಸಿದ್ದಾಂತಮತದ ||

ಹೃದಯವಾದ್ಯರ ಕರುಣ |

ದುದಯದನುಭವಸಿದ್ಧ |

ವಿದನವರೀಸುವಿಧದವವರು ||

ಗ್ರಂಥಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಅಲ್ಲಮ, ಚನ್ನಬಸವ, ಮಡಿವಾಳ, ಸಿದ್ಧರಾಮ, ಇವರುಗಳನ್ನೂ ನೂತನಪುರಾತನರನ್ನೂ ಸ್ತುತಿಸಿದ್ದಾನೆ. ಗ್ರಂಥಾತ್ಯದಲ್ಲಿ ಈ ಗದ್ಯವಿದೆ—

ಶ್ರೀಮತ್ಪರಮಪರಮಾನಂದನಿತ್ಯ ನಿರ್ಮಲನಿರಘನಿರ್ಗುಣನಿರಾವರಣಸಕಲಜಗದ್ಧ

ರಿತಭಕ್ತ ಜನಮನೋ…………ವಯೋಗಿಜನಸೇವಿತಚರಣಾರವಿಂದ ಷಟ್ತ್ಸಲಜ್ಞಾನಪ್ರ ಭಾಪುಂಜರಂಜಿತಾಂತರಂಗ ವೀರಶೈವಮತಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರುಬಸವೇಶ್ವರಂ ಸಕಲಭಕ್ತ ಜನಹಿತಾರ್ಧವಾಗಿ ಸುಜ್ಞಾನಿಗಳಿಗಾನಂದನಪ್ಪ….ಸ್ತುಶಿವಯೋಗೀಶ್ವರರದಾಚರಿಸಲೆಂದು ವೇದಾಗಮೋಪನಿಷತ್ಸಮ್ಮತಿಯಿಂ ನಿರೂಪಿಸಿದ ಮನೋ ವಿಜಯವೆಂಬ ಪ್ರಕರಣಂ ಪರಿಸಮಾಪ್ತಂ.

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ  –

ಹಿಸುಣತೆಗೆ ಹಿಗ್ಗಿ ಮಿಗೆ |

ಕಿಸುಕುಳದೊಳೊಗ್ಗಿ ಸಂ |

ತಸವಟ್ಟು ಕಳವುಹಾದರಹಿಂಸೆಗೆ ||

ಬೆಸಗೆಯ್ದು ನಿಂದೆತಾ |

ಮಸಕುಟಿಲಕುಹಕದೊಳ |

ಗೆಸೆದು ಮನವಿನಿಸಳ್ ಬೆಸೆದಿರ್ಪುದು ||

ಚಿಪ್ಪಿನೊಡಕಂ ಬೆಳ್ಳಿ |

ಯಪ್ಪುದೆಂದದ ಪಿಡಿಯ |

ಲಪ್ಪದೇ ಭ್ರಾಂತಿಯಾಪುತ್ತಿನೆಡೆಯೊಳ್ ||

ಇರ್ಪ ಸರವಿಯೆ ಸರ್ಪ |

ನಪ್ಪುದೆಂದಂಜಿಯಿಂ |

ತಿರ್ಪುದೇ ಸಂಶಯವಿದೆಂದವುದು ||

ನಳಿನಮಿತ್ರನ ಕಿರಣ |

ತಳಿಗೆಯೊಳ್‌ ಬೆಳಗಲದು |

ತೊಳಗದೇ ಶತಗುಣೋತ್ತರಮದಾಗಿ ||

ಹವುಂಟೆ ರವಿಗ ಸಂ |

ಚಳ ತಳಿಗೆಯಿಂದೈಸೆ |

ತಿಳಿವುದಾಪರಿಯ ಪರಮಾತ್ಮನಿರವಂ ||

ಆವುಮವೆಗಳೆರಡ |

ರತದಿಂ ಹುಸಿದಿಟಗ |

೪ಬಸಿ೦ ನಾನು ನೀನೆಂಬುಭಯದ ||

ಸ ಕಿನಿಂ ಮನವೆಂಬು | ದ ಕುವರ ನೀ ಜಾಗ್ರ |

ದು ಸುಪ್ತಿ ಮಧ್ಯದೊಳ್ ಕನಸಿನಂತೆ ||

  1.  ಏನಿರಬಹುದು ಈ ಖೇಚರೀ ಮುದ್ರೆಯ ಯೋಗದಲ್ಲಿ ?

ಖೇಚರಯೋಗಿ ಎನ್ನುವ ವಿಶೇಷ ಶಬ್ಧಕ್ಕೆ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಅಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅತ್ಯಂತ ಸುಂದರವಾಗಿ ಹೀಗೆ ವಿವರಿಸಿದ್ದಾರೆ.

ಸಂಸ್ಕೃತದಲ್ಲಿ “ಖ” ಎಂದರೆ ಆಕಾಶ ಎಂದರ್ಥ,ಅದರ ಸಪ್ತಮಿ ವಿಭಕ್ತಿ ರೂಪ “ಖೇ”. ಚರ ಎಂದರೆ ಸಂಚರಿಸು ಎಂದರ್ಥ.

“ಖೇ ಚರತೇತಿಖೇಚರ” ಎಂಬ ವ್ಯುತ್ಪತ್ತೀಯ ಆಧಾರದ ಮೇರೆಗೆ “ ಖೇಚರಯೋಗಿ” ಎಂದರೆ ತನ್ನ ಯೋಗ ಬಲದಿಂದ ಆಕಾಶಮಾರ್ಗದಲ್ಲಿಯೂ ಕೂಡ ಸಂಚರಿಸಬಲ್ಲ ಶಕ್ತಿಯನ್ನು ಸಂಪಾದಿಸಿಕೊಂಡ ಸಿದ್ಧಪುರುಷರು ಎಂದರ್ಥ.

ಅಂತಹ ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”ಯ ಸಿದ್ದಪುರುಷರಾಗಿದ್ದವರು ಶ್ರೀ ಗುರುಬಸವ ಅವರು.ಅವರ “ಖೇಚರೀ ಮುದ್ರೆ”ಯ ಯೋಗ ಸಾಧನೆಯ ಪ್ರಸಿದ್ಧಿಯಿಂದಲೆ ಕ್ಯಾಸನೂರಿನ ಮೂಲ ಹೆಸರು ಖೇಚರಿಪುರ !.

 1926 ರಲ್ಲಿ ಪ್ರಕಟವಾದ ಯೋಗಾನಂದ ಅವರ  ಹೋಮ್ ಸ್ಟಡಿ ಕೋರ್ಸ್‌ನ ಆರಂಭಿಕ ಆವೃತ್ತಿಯಲ್ಲಿ ಯೋಗಾನಂದರು ಖೇಚರಿ ಬಗ್ಗೆ ಬರೆದಿದ್ದಾರೆ. ಅವರು ಕೆಳಗೆ ಉಲ್ಲೇಖಿಸಿರುವ “ಪುಟ್ಟ ನಾಲಿಗೆ” ಎಂದರೆ ಉವುಲಾ , ಬಾಯಿಯ ಛಾವಣಿಯಿಂದ ಗಂಟಲಿನ ಹಿಂಭಾಗದಲ್ಲಿ ನೇತಾಡುವ ಮೃದು ಅಂಗಾಂಶ:

ಈ ಕುಂಡಲಿನಿಯು ಮೆದುಳಿನ ಕಡೆಗೆ ಚಲಿಸುತ್ತದೆ ಮತ್ತು ನಾಲಿಗೆಯ ತುದಿಯಲ್ಲಿರುವ ನರಗಳ ಒಕ್ಕೂಟ ಮತ್ತು “ಚಿಕ್ಕ ನಾಲಿಗೆ” ಮತ್ತು ಮೂಗಿನ ಕುಹರದ ಕೆಲವು ಕೇಂದ್ರಗಳಿಂದ ಸಹಾಯ ಮಾಡುತ್ತದೆ, ಜೀವ ಶಕ್ತಿ ಮತ್ತು ಕಾಸ್ಮಿಕ್ ಶಕ್ತಿಯ ಒಕ್ಕೂಟದೊಂದಿಗೆ ದ್ರವದ ಸ್ರವಿಸುವಿಕೆಯನ್ನು ತರುತ್ತದೆ.

ಮಕರಂದ ಮತ್ತು ಶಕ್ತಿಗಳ ಒಕ್ಕೂಟದ ಈ ಸ್ರವಿಸುವಿಕೆಯು ಯಾವುದೇ ನಷ್ಟವನ್ನು ಒಳಗೊಳ್ಳುವುದಿಲ್ಲ, ಆದರೆ ಅಪಾರ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಅರ್ಥೈಸುತ್ತದೆ.

ಯೋಗದಲ್ಲಿ ಖೇಚರಿ ಮುದ್ರೆ ಎಂದು ಕರೆಯಲ್ಪಡುವ ಮೂಲಕ ಈ ಒಕ್ಕೂಟವನ್ನು ಭೌತಿಕವಾಗಿಯೂ ಸಾಧಿಸಬಹುದು – ನಾಲಿಗೆಯ ತುದಿಯನ್ನು ಮೂಗಿನ ಮಾರ್ಗದಲ್ಲಿರುವ ನರಗಳಿಗೆ ಅಥವಾ ಬಾಯಿಯ ಹಿಂಭಾಗದಲ್ಲಿರುವ ಉವುಲಾಕ್ಕೆ ಸ್ಪರ್ಶಿಸುವುದು.

– ಸ್ವಾಮಿ ಕ್ರಿಯಾಾನಂದರಿಂದ ಯೋಗಾನಂದರೊಂದಿಗಿನ ಸಂಭಾಷಣೆಗಳು

ಆರಂಭಿಕ ಲೇಖನದಲ್ಲಿ ಯೋಗಾನಂದರು ಖೇಚರಿ ಮುದ್ರೆಯನ್ನು ಅಭ್ಯಾಸ ಮಾಡುವ ಪ್ರಯೋಜನಗಳಲ್ಲಿ ಒಂದನ್ನು ವಿವರಿಸಿದ್ದಾರೆ:

ಇದು ದೊಡ್ಡ ನಾಲಿಗೆಯ ತುದಿಯನ್ನು ಚಿಕ್ಕ ನಾಲಿಗೆಯೊಂದಿಗೆ (ಉವುಲಾ) ಸಂಪರ್ಕಿಸುವ ಮೂಲಕ ಸೆರೆಬ್ರಮ್ ಮತ್ತು ಮೆಡುಲ್ಲಾದಿಂದ ಶಕ್ತಿಯನ್ನು ಸೆಳೆಯುತ್ತದೆ.

ಅವರು 1935-6 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪನ್ಯಾಸವೊಂದರಲ್ಲಿ ಹೆಚ್ಚು ನಿಗೂಢ ವಿವರಣೆಯನ್ನು ನೀಡಿದರು:

ಕ್ರಿಯಾವನ್ನು ಅಭ್ಯಾಸ ಮಾಡುವಾಗ… ಸಹಸ್ರಾರದಿಂದ (ಚಕ್ರ, ಅಥವಾ ಬೆನ್ನುಮೂಳೆಯ ಕೇಂದ್ರ, ತಲೆಯ ಮೇಲ್ಭಾಗದಲ್ಲಿ) ದೈವಿಕ ಮಕರಂದದಂತಹ ಪ್ರವಾಹವು ಹರಿಯುತ್ತದೆ .

ಖೇಚರಿ ಮುದ್ರೆಯ ಪ್ರದರ್ಶನದ ಮೂಲಕ, ನಾಲಿಗೆಯ ತುದಿಯನ್ನು ಉವುಲಾಕ್ಕೆ ಸ್ಪರ್ಶಿಸುವುದು, ಅಥವಾ “ಪುಟ್ಟ ನಾಲಿಗೆ” (ಅಥವಾ ಉವುಲಾದ ಹಿಂದೆ ಮೂಗಿನ ಕುಳಿಯಲ್ಲಿ ಇಡುವುದು), ಆ ದೈವಿಕ ಜೀವನ-ಪ್ರವಾಹವು ಪ್ರಾಣವನ್ನು ಇಂದ್ರಿಯಗಳಿಂದ ಬೆನ್ನುಮೂಳೆಯೊಳಗೆ ಸೆಳೆಯುತ್ತದೆ. ಮತ್ತು ಅದನ್ನು ಚಕ್ರಗಳ ಮೂಲಕ ವೈಷ್ಣವರಕ್ಕೆ (ಯುನಿವರ್ಸಲ್ ಸ್ಪಿರಿಟ್ ) ಸೆಳೆಯುತ್ತದೆ , ಪ್ರಜ್ಞೆಯನ್ನು ಚೈತನ್ಯದೊಂದಿಗೆ ಒಂದುಗೂಡಿಸುತ್ತದೆ.

ಇಡೀ ದೇಹವು ಆ ಮೂಲಕ ಆಧ್ಯಾತ್ಮಿಕ ಮತ್ತು ಶಕ್ತಿಯುತವಾಗಿರುತ್ತದೆ. ಪರಿಣಾಮವಾಗಿ, ದೇಹದಿಂದ ಗ್ರಹಿಸಬಹುದಾದ ಹೊಳಪು ಹೊರಹೊಮ್ಮಬಹುದು.

-ಮೆಜ್ದಾ: ದಿ ಫ್ಯಾಮಿಲಿ ಅಂಡ್ ದಿ ಅರ್ಲಿ ಲೈಫ್ ಆಫ್ ಪರಮಹಂಸ ಯೋಗಾನಂದರಿಂದ ಸಾನಂದ ಲಾಲ್ ಘೋಷ್, ಪುಟಗಳು 279-28

ಪ್ರಯೋಜನಗಳು

  1. ಇದು ಬಾಯಾರಿಕೆ, ಹಸಿವು ಮತ್ತು ಸೋಮಾರಿತನವನ್ನು ಜಯಿಸಲು ಸಹಾಯ ಮಾಡುತ್ತದೆ
  2. ಸಾಧಕರು / ಯೋಗಿ ಯಾವುದೇ ರೋಗ, ಕೊಳೆತ ಅಥವಾ ಸಾವಿನಿಂದ ಬಳಲುವದಿಲ್ಲ.
  3. ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ ಮತ್ತು ದೇಹವನ್ನು ದೈವಿಕವಾಗಿಸುತ್ತದೆ
  4. ಘೇರಾಂಡ ಸಂಹಿತಾ ಮತ್ತು ಹಠಯೋಗ ಪ್ರದೀಪಿಕಾ ಪ್ರಕಾರ, ಯೋಗಿ ವಿಷ ಮತ್ತು ಹಾವು ಕಡಿತದಿಂದ ರೋಗನಿರೋಧಕವಾಗುತ್ತಾನೆ.
  5. ಸಾಧಕನಿಗೆ ಅಂದರೆ ಅತಿಮಹತ್ವದ ಪ್ರಜ್ಞೆಯ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ
  6. ಸ್ರವಿಸುವಿಕೆಯು ಅಂದರೆ ಮಕರಂದವು ವಯಸ್ಸಾದ ವಿರೋಧಿ ಪರಿಣಾಮವನ್ನು ಹೊಂದಿದೆ ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ
  7. ಇದು ಎಲ್ಲಾ ಚಕ್ರಗಳನ್ನು ಉತ್ತೇಜಿಸುತ್ತದೆ ಮತ್ತು ದೇಹದಾದ್ಯಂತ ಶಕ್ತಿಯುತ ಮಾರ್ಗಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ದೇವತೆಗಳ ಅಮೃತವು ಬಿಡುಗಡೆಯಾಗುತ್ತದೆ ಮತ್ತು ದೇಹದಾದ್ಯಂತ ಮೂರನೇ ಕಣ್ಣಿನ ಚಕ್ರದಿಂದ ಹರಿಯುವುದರಿಂದ ಸಾಧಕನ ಸಂಪೂರ್ಣ ದೇಹವು ಪುನರುಜ್ಜೀವನಗೊಳ್ಳುತ್ತದೆ.
  8. ಇದು ಕುಂಡಲಿನಿ ಶಕ್ತಿಯನ್ನು ಹೆಚ್ಚಿಸಲು ಮತ್ತು ತಲೆಯಲ್ಲಿ ಅಮೃತದ ವಿವಿಧ ಮಳಿಗೆಗಳನ್ನು ಪ್ರವೇಶಿಸಲು ಶಕ್ತಗೊಳಿಸುತ್ತದೆ. ಇದು ತರುವಾಯ ದೇಹವನ್ನು ಪ್ರವಾಹ ಮಾಡುತ್ತದೆ. (ಖೇಚರಿವಿದ್ಯಾ – ಹಠಯೋಗ ಪಠ್ಯ)
  9. ಇದು ಭಕ್ತ/ಯೋಗಿಯನ್ನು ದೇವರ ಸಾರ್ವತ್ರಿಕ ಅರಿವಿನ ಸ್ಥಿತಿಗೆ ತಳ್ಳುತ್ತದೆ
  10. ಇದು ಮಾತಿನ ಮೇಲೆ ನಿಯಂತ್ರಣವನ್ನು ನೀಡುತ್ತದೆ

 

*****************************************************************************************

 

 

 

 

 

 

 

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ ,

ಪರಮ ಪೂಜ್ಯ ಶ್ರೀ  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ದಾರ್ಶನಿಕ ಕಾವ್ಯ “ಮಾನವಾ, ನೀನಾರೋ? ಕಾಯಾ” ಎಂಬ ಈ ಕವನವು ಮಾನವನ ಜೀವನದ ಗೂಢಾರ್ಥವನ್ನು ಮತ್ತು ಜೀವನದ ನಿಜವಾದ ಅರ್ಥವನ್ನು ತಿಳಿಸುವಂತಾಗಿದೆ.

ಕವನವು ಮಾನವನ ಅಸ್ತಿತ್ವ, ಅವನ ಜೀವನದ ಮೂಲಭೂತ ಅರ್ಥ ಮತ್ತು ಅಂತರಾತ್ಮದ ಪಯಣವನ್ನು ಆಳವಾಗಿ ಪರಿಶೀಲಿಸುತ್ತದೆ.

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಕವಿಯು ಮೊದಲ ಸಾಲುಗಳಲ್ಲಿ  ಮಾನವನಿಗೆ ಕೇಳುತ್ತಾರೆ, “ನೀನು ಯಾರು? ಈ ದೇಹದ ಹಿಂದೆ ಇರುವ ನಿಜವಾದ ತತ್ವವೇನು?” ಎನ್ನುವುದನ್ನು. ಈ ಪ್ರಶ್ನೆ ಮೂಲಕ ಮಾನವನ ಮನಸ್ಸು ಮತ್ತು ದೇಹದ ಪಯಣದ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ.

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಇಲ್ಲಿ ಕವಿ ಸಂಸಾರವನ್ನು ಭ್ರಮಾತ್ಮಕವೆಂದು ವರ್ಣಿಸುತ್ತಾರೆ. ಕರ್ಮ ಮತ್ತು ಮಮತೆಗಳಿಂದ ಮಾನವನು ಬಂಧಿತನಾಗಿ, ತಪ್ಪು ಕಲ್ಪನೆಗಳಲ್ಲಿ ಸಿಲುಕಿದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ವಿವರಿಸುತ್ತಾರೆ. “ಮಮತೆಯ” ಎಂಬ ಅಹಂಕಾರ ಮತ್ತು ಸ್ವಾರ್ಥದಿಂದ ಮುಕ್ತಿಯ ಅಗತ್ಯತೆಯನ್ನು ಕವಿ ಪ್ರಸ್ತಾಪಿಸುತ್ತಾರೆ.

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಜನನ ಮತ್ತು ಮರಣದ ಚಕ್ರದಲ್ಲಿ ಬಂಧಿತವಾಗಿರುವ ಮಾನವನ ಸ್ಥಿತಿಯನ್ನು ಕವಿ ವಿವರಿಸುತ್ತಾರೆ. ಈ ನಿರಂತರ ಚಕ್ರವು “ಘನ ಸುಖ” (ನಿಜವಾದ ಆನಂದ)ವನ್ನು ಅಡಚಣೆ ಮಾಡುತ್ತದೆ. ಜೀವನದ ಮೂಢಮತಿಯ ಪರಿಣಾಮವನ್ನು ಹೀರಿಕೊಳ್ಳುತ್ತಾ, ನಿಜವಾದ ಶಾಂತಿಯನ್ನು ಹುಡುಕಬೇಕಾದ ಅವಶ್ಯಕತೆಯನ್ನು ಈ ಪದ್ಯದಲ್ಲಿ ಸ್ಪಷ್ಟಪಡಿಸುತ್ತಾರೆ.

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ಪರಾತ್ಮಕ ಜೀವನವನ್ನು ಅರ್ಥಮಾಡಿಕೊಳ್ಳಲು ಕವಿ ಸಲಹೆ ನೀಡುತ್ತಾರೆ. ಪರಶಿವಯೋಗದ ಮೂಲಕ, ಆಧ್ಯಾತ್ಮಿಕ ಅನುಭವಗಳ ಮೂಲಕ, ನಿಜವಾದ ಆನಂದ ಮತ್ತು ಶ್ರೇಷ್ಠ ಶಾಂತಿಯನ್ನು ಸಾಧಿಸಬಹುದು. ದೈವಿಕ ಯೋಗವೇ ಜೀವನದ ನಿಜವಾದ ಅರ್ಥವನ್ನು ಮತ್ತು ಉನ್ನತತೆಯನ್ನು ತಲುಪಲು ಮಾರ್ಗವಾಗಿದೆ ಎಂದು ಅವರು ಉಪದೇಶಿಸುತ್ತಾರೆ.

ಈ ಕವನವು ಮಾನವನಿಗೆ ಆತ್ಮಪರಿಶೀಲನೆ ಮಾಡಲು ಪ್ರೇರೇಪಿಸುತ್ತಿದ್ದು, ಸಂಸಾರಿಕ ಬಂಧನದಿಂದ ಮುಕ್ತಿಯ ದಾರಿಯನ್ನು ತೋರಿಸುತ್ತದೆ.

ಶ್ರೀಕುಮಾರ ತರಂಗಿಣಿ  ಡಿಸೆಂಬರ   ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ ! ನೀನಾರೋ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ವ್ಯವಸಾಯ-ವಾಣಿಜ್ಯ -ಲೇಖಕರು-ಜ.ಚ.ನಿ
  4. ಜ್ಞಾನ-ಕ್ರಿಯೆ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಕಾವ್ಯ: ಹರನಾಮವನು ಬಿಡದೆ ಜಪಿಸಬಲ್ಲವರ ಭವ ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು
  2. ಶತಮಾನೋತ್ಸವದ ಪಾದಯಾತ್ರೆ:ಲೇಖಕ: ಶ್ರೀಕಂಠ.ಚೌಕೀಮಠ.
  3. ಕರುಣಿಸಿ ಕರೆದುಕೊ ;ರಚನೆ. ಶಶಿಧರ ಜಿಗಜಿನ್ನಿ ಬಾಗಲಕೋಟೆ

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||