ಕಾಕತಾಳೀಯವಾದ- “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ “

ಇಂದು ೧೩-೦೯-೨೦೨೫ ಮುಂಜಾನೆ  ದಿನಪತ್ರಿಕೆ ತೆರೆದಾಗ ನನಗೊಂದು ಆಘಾತಕಾರಿ ಸುದ್ದಿ ಅತ್ಯಂತ ನೋವನ್ನುಂಟು ಮಾಡಿತು. “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ ” ಎಂಬ ತಲೆಬರಹದಡಿ ಪ್ರಕಟವಾದ ಸುದ್ದಿ.

೧೯೦೦ ರ ಅವಧಿಯಲ್ಲಿ ಹಾನಗಲ್ಲ ಸುತ್ತಮುತ್ತಲ ಗುರುಳೇ ರೋಗ ಮತ್ತು ಬರಗಾಲ ಅಪ್ಪಳಿಸಿದಾಗ ಇಡೀ ಹಾನಗಲ್ಲ ಮಠ ಆಶ್ರಯ ತಾಣವಾಗಿಸಿ , ಆಸ್ಪತ್ರೆಯಾಗಿ  ,ಶಿಕ್ಷಣ ಕೇಂದ್ರವಾಗಿ  ಜೀವನಾಡಿಯಾದ ಶ್ರೀ ಮಠದ ಪವಿತ್ರ ನೆಲಕ್ಕೆ  , ಛಿದ್ರ ಛಿದ್ರ ವಾಗಿ ಹೋಗಿದ್ದ ಸಮಾಜವನ್ನು ಒಂದು ಗೂಡಿಸಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಇಡೀ ಜೀವಮಾನವನ್ನೇ ತ್ಯಾಗ ಮಾಡಿದ ಮಹಾ ಪುರುಷ ಹಾನಗಲ್ಲ ಶ್ರೀಕುಮಾರೇಶ್ವರರ ಮಠಕ್ಕೇ ಬಾಂಬ್‌ ಇಟ್ಟಿದ್ದೇನೆ ಎಂದು ಬೆಂಗಳೂರಿನಿಂದ ಹಾನಗಲ್ಲಿಗೆ ಬಂದು ಪೋಲಿಸ ಗಸ್ತು ವಾಹನದ ೧೧೨ ಕ್ಕೆ ದೂರವಾಣಿ ಕರೆ ಮಾಡಿದ ಆರೋಪಿ ಹರೀಶ ಚವ್ವಾಣನ ಹೇಳಿಕೆ ,ಹಲವು ಸಂಶಯಗಳಿಗೆ ಕಾರಣವಾಯಿತು.

ಸುದ್ದಿ ಮಾಡಿದವ ಮಾನಸಿಕ ಅಸ್ವಸ್ಥ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಮಠವನ್ನೇ ಏಕೆ ಆಯ್ದುಕೊಂಡ ?.

ಆಶ್ಚರ್ಯವೆನಿಸುತ್ತದೆ.!

ಒಂದು ಕ್ಷಣ ಪ್ರಸ್ತುತ ಕರ್ನಾಟಕದಲ್ಲಿ ಜರಗುತ್ತಿರುವ  ವೀರಶೈವ ಲಿಂಗಾಯತ ಒಳ ಜಗಳಗಳು ,ತಾರಕಕ್ಕೇರುತ್ತಿರುವ ಪರ ವಿರೋಧದ ಭಾಷಣಗಳು ,ಅದರಲ್ಲೂ ವೀರಶೈವ ಎಂಬ ಶಬ್ಧಕ್ಕೆ ಉಗ್ರವಾಗಿ ವಿರೋಧಿಸುತ್ತಲೇ ಹುಟ್ಟಿಕೊಂಡ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಹಾನಗಲ್ಲಿನ ಜಿಲ್ಲೆ ಮತ್ತು ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜನ್ಮ ಸ್ಥಳ ಜೋಯಿಸರಹರಳಹಳ್ಳಿಯ ಜಿಲ್ಲೆ  ಹಾವೇರಿಯನ್ನು ಪ್ರವೇಶ ಮಾಡುತ್ತಿರುವದು ನಾಳೆ ೧೪-೦೯-೨೦೨೫ ಕಾಕತಾಳಿಯ !.

ಹಲವು ಸುಂದರ  ಸ್ವಸ್ಥ ಮುಖಗಳು ಮತ್ತು ಅವರು ಉದುರಿಸಿದ ಸುಂದರ ಮುತ್ತುಗಳು ಕಣ್ಣೆದರು ಬಂದವು.

ಅವುಗಳಲ್ಲಿ…..

ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಹಾಸಭೆ ಎಂದು ಹೆಸರಿಡದೇ ವೀರಶೈವ ಮಹಾಸಭೆ ಎಂದು ಹೆಸರಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಎಂದು ಹಲವು ಅವಹೇಳನಕರ ವಿಷಯಗಳ ಪುಸ್ತಕವನ್ನು ಬರೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸೂತ್ರದಾರಿಗಳಾದ ,ಚಾಣಾಕ್ಷರೂ,ಚಾಣುಕ್ಯರೂ ಮತ್ತು ಮಹಾ ಮೇಧಾವಿಗಳಾದ ಡಾ.ಎಸ್.ಎಮ್.ಜಾಮದಾರ ಅವರು,

೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು, ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಪ್ರವಾಚಿಸಿದ್ದರಲ್ಲಿ  “ಅಟ್ಯಾಕ” ಅನ್ನುವ ಭಯೋತ್ಪಾದಕ ಶಬ್ಧ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಆರಂಭಗೊಳ್ಳುವ ಒಂದು ವಾರದ ಹಿಂದೆ “ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನ.

ಲೇಖನಕ್ಕೆ ತೀವೃ ವಿರೋಧವುಂಟಾದಾಗ ಕ್ಷಮೆ ಯಾಚಿಸಿದ ಡಾ,ಶಶಿಕಾಂತ ಪಟ್ಟಣ ಅವರ 29-08-2025ರಂದು ನಡೆದ ಕಾನ್ಫರೆನ್ಸ್ ಕರೆಯಲ್ಲಿ ವ್ಯಕ್ತವಾದ ಮಾತುಗಳು ಸಂಶಯದ ದಿಕ್ಕನ್ನು ಬದಲಾಯಿಸುವಂತಹದ್ದು- ವಚನ ಟಿ.ವಿಯಲ್ಲಿ ಸಂದರ್ಶನ ಕೊಡುವ.,ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಸದಸ್ಯರಾದ ಶ್ರೀ ಅಶೋಕ ಬರಗುಂಡಿ (ನಿವೃತ್ತ ಎಂಜಿನಿಯರ್) ಬಸವತತ್ವ ಪ್ರತಿಪಾದಕರು ಅವರು ಲಿಂಗಾಯತ ಮಠಾಧೀಶರ ಬಸವತತ್ವ ಅಭಿಯಾನ ಆರಂಭವಾಗುತ್ತಿರುವದರಿಂದ- ಪ್ರಕಟಗೊಂಡ ಪೂಜ್ಯ ಹಾನಗಲ್ಲ ಶ್ರೀಗಳ ಕುರಿತು ಅವಹೇಳನ ದ ಲೇಖನಕ್ಕೆ ಕ್ಷಮೆ ಕೇಳಿದ ಡಾ,ಶಶಿಕಾಂತ ಪಟ್ಟಣ  ಅವರಿಗೆ ತಾಕೀತು ಮಾಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಜೊತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರುಗಳಾದ ಶ್ರೀ ನಿಜಗುಣಮೂರ್ತಿ ಮತ್ತು ಶ್ರೀ ಸಿದ್ದಲಿಂಗಸ್ವಾಮಿ.ಸಿ.ಜಿ. ಅವರ ಮುಂದುವರೆದ ಜಾಲತಾಣಗಳಲ್ಲಿನ  ನಿರಂತರ ಅವಹೇಳನಗಳು ಡಾ,ಶಶಿಕಾಂತ ಪಟ್ಟಣ ಅವರ ಲೇಖನದ ಪ್ರಕಟಣೆ ಉದ್ದೇಶ ಪೂರ್ವಕ ಹಿನ್ನಲೆಯನ್ನು ಸಾಬೀತು ಪಡಿಸುತ್ತದೆ.

ಕೆಲವು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪೂಜ್ಯ ಶ್ರೀ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅವಹೇಳನದ ಲೇಖನದ ಪುಟಗಳನ್ನಷ್ಟೇ ಸಾವಿರಾರು ಪ್ರತಿ ಮುದ್ರಿಸಿ  ಇಲ್ಲವೇ ಝರಾಕ್ಸ ಪ್ರತಿ ಮಾಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಹಂಚಲು ಮತ್ತು ಅದಕ್ಕೆ ಉಂಟಾಗುವ ಖರ್ಚು ವೆಚ್ಚಗಳನ್ನು ಭರಿಸುವದಾಗಿಯೂ ಹೇಳಿದ ಸಂಗತಿಗಳು ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರ  ಮತ್ತು ಲೇಖಕ ಡಾ. ಶಶಿಕಾಂತ ಪಟ್ಟಣ  ಕಾನಫರೆನ್ಸ ಕಾಲ್‌ ನಲ್ಲಿ  ವಿಚಾರ ವಿನಿಮಯದಲ್ಲಿ ವ್ಯಕ್ತ ವಾದುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಎಲ್ಲದರ ಜೊತೆಗೆ ನಾನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣುವ ಇಬ್ಬರ  ಶ್ರೀಗಳ “ಮೌನ” ನನಗೆ ಅತ್ಯಂತ ನೋವನ್ನುಂಟುಮಾಡಿದೆ.

“ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನದ ಸಂಚಿಕೆಯ ಗೌರವ ಸಂಪಾದಕರಾದ  ಇಲಕಲ್ಲಿನ ಪೂಜ್ಯ ಗುರು ಮಹಾಂತಸ್ವಾಮಿಗಳು ಮತ್ತು ಸಹಿಯಿಲ್ಲದ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ “ ಬಸವ ಭಾರತ “ ಪತ್ರಿಕೆಯ ಸಂಪಾದಕರ ಪತ್ರದಲ್ಲಿ  ಹಠಾತ್ತಾಗಿ ಕಾಣಿಸಿಕೊಂಡ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರ ಹೆಸರು , ಅವರಿಬ್ಬರ ಗಮನಕ್ಕೆ ತಂದರೂ  ಅವರು  ಲಿಖಿತ ಸ್ಪಷ್ಠೀಕರಣ ಕೊಡದೇ ಇರುವುದು.

ಸುಂದರವಾಗಿದ್ದ ಬಂಧುರವಾಗಿದ್ದ ವೀರಶೈವ ಲಿಂಗಾಯತ ಸಮುದಾಯ ೨೦೧೭ ರಿಂದ ಇಲ್ಲಿಯವರೆಗೆ ರಾಜಕೀಯ ಬಲಿಪಶುವಾಗಿದ್ದು. ಎಡಗೈ ತನ್ನ ಬಲಗೈಯನ್ನೇ ಸಂಶಯದಿಂದ ನೋಡುವ ಸ್ಥಿತಿಯನ್ನು ತಲುಪಿದ್ದು ಶೋಚನೀಯ.

ಮೇಲ್ನೋಟಕ್ಕೆ ಬಸವಣ್ಣನವರ ಭಾವಚಿತ್ರ ಸರಕಾರಿ ಕಛೇರಿಯಲ್ಲಿ ಹಾಕಿಸಿ ,ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಳನೋಟದಲ್ಲಿ ಕರಳುಬಳ್ಳಿಗಳಿಗೆ ಕೊಳ್ಳಿಯನಿಕ್ಕಿದವರು ಒಳ ಒಳಗೆ  ನಗುತ್ತಿರುವ  ಮುಸಿ ಮುಸಿ ನಗು ಹೊರ ಹೊರಗೆ ಕರಳುಬಳ್ಳಿಗಳು ಕತ್ತಿ ಮಸಿಯುತ್ತಿರುವುದು ವೀರಶೈವ ಲಿಂಗಾಯತರ ದುರಂತ ಮತ್ತು ಅವರು  ಹಗಲು ಕಂಡ ಬಾವಿಗೆ ರಾತ್ರಿ ಹಾರಿಕೊಳ್ಳುತ್ತಿರುವುದು ಶೋಚನೀಯ.

ಲಿಂಗಾಯತ ಎಂದು ವಾದಿಸುವವರು ಲಿಂಗಾಯತ ರಾಗಿ ಬದುಕಲಿ

ವೀರಶೈವರು ಎಂದು ವಾದಿಸುವವರು ವೀರಶೈವರಾಗಿ ಬದುಕಲಿ

ವೀರಶೈವ ಲಿಂಗಾಯತರು ಎಂದು ಸಮರಸದ ಬದುಕನ್ನು ಕಾಣಲಿಚ್ಚುಸುವವರು ವೀರಶೈವ ಲಿಂಗಾಯತರಾಗಿ ಬದುಕಲಿ.

ಆದರೆ ನಾ ಹೆಚ್ಚು ನೀ ಹೆಚ್ಚು ಎನ್ನುವ ಹಗ್ಗ ಜಗ್ಗಾಟದ ಪ್ರತಿ ಹಂತದಲ್ಲೂ  ಸಮಾಜದ ಉನ್ನತಿಗೆ ಹಗಲಿರಳು ಶ್ರಮಪಟ್ಟ ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು  ಅನಾವಶ್ಯಕವಾಗಿ ಎಳೆದುತರುವ ಪಾಪದ ಕೆಲಸ ಅಕ್ಷಮ್ಯ ಅಪರಾಧ.

ಈ ವಿಷಯದ ಸೂಕ್ಷ್ಮತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ತೀವೃವಾಗಿ ಮನಗಾಣಬೇಕು.

ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಕುರಿತು ಅವಹೇಳಕಾರಿ ಪುಸ್ತಕ ಪ್ರಕಟಿಸುವುದು ,ಸಾರ್ವಜನಿಕ ಸಭೆಯಲ್ಲಿ ಪೂಜ್ಯರ ಮೇಲೆ “ಅಟ್ಯಾಕ” ಎಂಬ ಭಯೋತ್ಪಾದಕ ಶಬ್ಧವನ್ನು ಕೇಳಿಯೂ ಕೇಳದಂತೆ ಕುಳಿತುಕೊಳ್ಳುವುದು ,ಜಾಣ ಮೌನವನ್ನು ವಹಿಸುವುದು  ಇಂದು ಸಂಬಂಧಪಟ್ಟವರ ಆತ್ಮಗಳಿಗೆ ಸಂತೋಷವನ್ನು ನೀಡುತ್ತಿರಬಹುದು.

ನ್ಯಾಯಾಂಗ, ರಾಜ್ಯಾಂಗ ಮತ್ತು ಕಾರ್ಯಾಂಗಗಳು  ಸಂಬಂಧಪಟ್ಟವರ ಆತ್ಮಗಳಿಗೆ ಪೂರಕ ಸಹಕಾರ ನೀಡುತ್ತಿರಬಹುದು,ಆದರೆ  ಮುಂದೊಂದು ದಿನ ನಿಸರ್ಗ ಈ ಎಲ್ಲ ನೀಚ ಕಾರ್ಯಗಳಿಗೆ  ತಕ್ಕ ಉತ್ತರ ನೀಡುತ್ತದೆ ಎಂಬ ಅಚಲ ನಂಬಿಕೆ ನನ್ನದು.

-ಶ್ರೀಕಂಠ.ಚೌಕೀಮಠ

 

 

 

 

Related Posts