ಸಂಪಾದಕೀಯ:

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ ,ವಿಶ್ವಾದ್ಯಂತ ೧೫೦೦೦ ಓದುಗರನ್ನು ಹೊಂದುವದರ ಜೊತೆಗೆ ,ವರ್ಣರಂಜಿತ ಶೋಭೆಯೊಂದಿಗೆ ತಮ್ಮ ಅಕ್ಷಿಪಟಲದ ಮುಂದೆ ಅನಾವರಣಗೊಳ್ಳುತ್ತಿರುವದು ಅತ್ಯಂತ ಹರ್ಷವನ್ನುಂಟು ಮಾಡುತ್ತಿದೆ.

ಹೊಸ ರೂಪದಲ್ಲಿ  “ಶ್ರೀಕುಮಾರ ತರಂಗಿಣಿ”ಬ್ಲಾಗ್‌ ಅನಾವರಣ ವನ್ನು

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ  ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ  ಮಹಾಸ್ವಾಮಿಗಳವರು

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ  ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತದಿಂದ ಜರಗಿತು.

ಶ್ರೀಕುಮಾರೇಶ್ವರರ  ಶಿಲ್ಪಸನ್ನಿಧಿಯಲ್ಲಿ, ನೂತನ ಶಿಲಾ ಮಠ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ  ಹೊಸಪೇಟೆ

ಜರುಗಿದ ಈ ಕಾರ್ಯಕ್ರಮದಲ್ಲಿ

ಪೂಜ್ಯ. ಮ.ನಿ.ಪ್ರ.ಕೊಟ್ಟೂರು ಮಹಾಸ್ವಾಮಿಗಳು ಶ್ರೀ ಸಂಗನಬಸವೇಶ್ವರ ವಿರಕ್ತಮಠ ದರೂರು.

ಪೂಜ್ಯಶ್ರೀ ನಿರಂಜನ ಪ್ರಭು ದೇಶಿಕರು ಶ್ರೀ ಮಠ  ಕುರುಗೋಡು

ಪೂಜ್ಯಶ್ರೀ ಸಿದ್ದಲಿಂಗ ದೇಶಿಕರು ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು ಶ್ರೀಧರಗಡ್ಡೆ

ಪೂಜ್ಯ ಶ್ರೀ ಸಿದ್ದೇಶ್ವರ ದೇವರು ಬೂದಗುಂಪ .

ಪೂಜ್ಯಶ್ರೀ ವಿಶ್ವೇಶ್ವರ ದೇವರು ಅಡನೂರು. ಪೂಜ್ಯರು ಭಾಗವಹಿಸಿದ್ದರು

 

ಹೊಸರೂಪ ಮತ್ತು ಓದುಗರ ಪ್ರೋತ್ಸಾಹಗಳು ಶ್ರೀಕುಮಾರ ತರಂಗಿಣಿ ಯನ್ನು ಅರ್ಥಪೂರ್ಣವಾಗಿ ಹೊರಬರಲು ಸಹಾಯಕವಾಗಿವೆ.

 

 

ಶ್ರೀಕುಮಾರ ತರಂಗಿಣಿ  ೨೦೨೪ ಜನೆವರಿ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಯೋಗಿವರೇಣ್ಯ ನಾನಪರಾಧಿ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಯೋಗ್ಯ ಗುರುವಿನ ಭಾಗ್ಯ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ಭಕ್ತಿ-ಮುಕ್ತಿ ;ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಪದಾರ್ಥ ಮತ್ತು ಪ್ರಸಾದ:-ಲೇಖಕರು:- ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠ ಬೂದಗುಂಪ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

ಯೋಗಿವರೇಣ್ಯ ನಾನಪರಾಧಿ

(ರಾಗ – ಭೈರವಿ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

 

 

ಯೋಗಿವರೇಣ್ಯ ನಾನಪರಾಧಿ | ಭೋಗ ಭವಾಂಬುಧಿ

ನೀಗಿದ ಮಹಿಮ || ಪ ||

ಮಾಯವಿದೂರ | ಮೋಹಕೆಪಾರ |

ಕಾಯ ವಿಷಯ ಪರಿಪಕ್ವ ವಿಚಾರ || 1 ||

ನಾಶಿಕ ತ್ರ್ಯಂಬಕ ಈಶನ ವಚನದಿ |

ಕಾಸಿನಿವಾಶಿಗಳ್ ತೋಷ ಮಾಗಿರುವ || 2 ||

ಶುದ್ಧಶಿಲಾಗ್ರದೊಳಿದ್ದು ತಪವಮಾಡಿ |

ಸಿದ್ಧಗಂಗೆಯ ತೋರಿ ಸಿದ್ಧನಾಗಿರುವ || 3 ||

ನಿಜಗುಣರ ವೇದಾಂತ ಗ್ರಂಥಗಳಲ್ಲಿಯೆ ಅದರಲ್ಲಿಯು ಕೈವಲ್ಯ ಪದ್ಧತಿಯಲ್ಲಿಯ ತಲ್ಲೀನರಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢರವರು ಅವರ ಈ ಇಷ್ಟಲಿಂಗದ ಮಹಿಮೆ ಹಿರಿಮೆಗಳ ಹಿತೋಪದೇಶವನ್ನೆ ಲೆಕ್ಕಿಸಿರಲಿಲ್ಲ. ಆತ್ಮಲಿಂಗವಿದ್ದ ಆರೂಢನಿಗೆ ಬಾಹ್ಯಲಿಂಗವೇಕೆ ಎಂದು ಅವರ ಗ್ರಹಿಕೆ. ಆದರೆ ತಮ್ಮ ಗ್ರಹಿಕೆಯಲ್ಲಿ ಗಂಧವಿಲ್ಲೆಂಬುದು ಅವರಿಗೆ ತಿಳಿದಿರಲಿಲ್ಲ. ಅಂತರ್ಲಿಂಗಧಾರಣ ಸಮರ್ಥನಿಗೂ ಬಾಹ್ಯಲಿಂಗದ ಅಗತ್ಯವಿದೆಯೆಂಬುದನ್ನು ಅವರು ಕಂಡುಕೊಂಡಿರಲಿಲ್ಲ. ನಿಜಗುಣರೆ ಮತ್ತೊಂದೆಡೆಯಲ್ಲಿ ಸೊಗಸಾದ ಇಸಾದೃಶ್ಯಕೊಟ್ಟು ಹೇಳಿದ್ದಾರೆ; ಇಷ್ಟ-  ಪ್ರಾಣ-ಭಾವಲಿಂಗಗಳು ಕ್ರಮವಾಗಿ ದೀಪ-ದೀಪದ ಕಿರಣ- ದೀಪದ ಪ್ರಕಾಶಗಳಂತೆ ಅವಿನಾಭಾವ ಸಂಬಂಧದಿಂದ ಇವೆಯೆಂದು ಇನಿದಾಗಿ ಬಿತ್ತರಿಸಿದ್ದಾರೆ. ಕತ್ತಲೆಯ ಮನೆಯಲ್ಲಿ ಹಣತೆ ಹಚ್ಚಿದ ಮೇಲೆ ಬೆಳಕು ಬಿತ್ತೆಂದು ದೀವಿಗೆಯನ್ನು ಆರಿಸಿದರೆ, ಎತ್ತಿ ಬಿಸುಡಿದರೆ ಬೆಳಗು ಉಳಿಯುತ್ತದೆಯೊ? ಉಳಿದಿರಲು ಸಾಧ್ಯವೊ? ಹಾಗೆಯೇ  ದೀಪದಂತಿದ್ದ ಇಷ್ಟಲಿಂಗ ಇಲ್ಲದಿರಲು ಪ್ರಾಣಕಿರಣವು ಇಲ್ಲ, ಭಾವ ಬೆಳಗು ಇಲ್ಲ. ಅನ್ನದ ಅವಶ್ಯಕತೆ ಇರುವವರೆವಿಗು ಇಷ್ಟಲಿಂಗದ ಅವಶ್ಯಕತೆ ಅನಿವಾರ್ಯ. ಸ್ಥೂಲ  ಶರೀರ ಹೊದ್ದಿರುವವರೆವಿಗು ಸ್ಥೂಲಲಿಂಗದ ಸಂಬಂಧ ಅಪರಿಹಾರ. ಈ ನಿಜವನರಿಯದವ ನಿಜವಾದ ಆರೂಢನಲ್ಲ, ಆರೂಢಪತಿತ. ಈ ತತ್ವವ ತಿಳಿಯದೆ ಸಿದ್ಧಾರೂಢರು ಅವರ ಕೆಲವು ಶಿಷ್ಯರು ಇಷ್ಟಲಿಂಗವನ್ನು ಬಿಟ್ಟುಬಿಟ್ಟಿದ್ದರು. ಅವರು ವೇದಾಂತಬಲ್ಲಿದರಾಗಿದ್ದರು. ಈ ಒಂದು ಕೊರತೆಯಿಂದ ಸ್ವಾಮಿಗಳವರು ಯೋಚನಾಕ್ರಾಂತರಾಗಿದ್ದರು. ಅವರ ಮನಸ್ಸು ಅಲ್ಲಿಂದ ಹಿಂಜರಿಯುತ್ತಿತ್ತು. ಯೋಗ್ಯಗುರುವಿನ ಬರುವನ್ನು ಹಾರೈಸುತ್ತಿತ್ತು. ಇಲ್ಲಿಯೇ ಇರು’ ಎಂದರ್ಥದ ಜಡೆಸಿದ್ದರ ಅಮೃತವಾಣಿಯಿಂದ ಇಲ್ಲಿಯೆ ನನಗೆ ಸದ್ಗುರುವಿನ ಸಂದರ್ಶನ ಭಾಗ್ಯಲಭಿಸಬಹುದೆಂದು ನಚ್ಚಿ ವಿಧಿಯಿಲ್ಲದೆ ಅಲ್ಲಿಯೆ ವಾಸವಾಗಿದ್ದರು.

 

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಮಹಾಮಹಿಮರಾದ ವೀರವೈರಾಗ್ಯ ಸಂಪನ್ನರಾದ ಎಳಂದೂರು ಬಸವಲಿಂಗಸ್ವಾಮಿಗಳವರು ಆ ಪ್ರಾಂತದಲ್ಲಿ ಪ್ರಯಾಣ ಮಾಡುತ್ತ ಹುಬ್ಬಳ್ಳಿಗೆ ಬಂದರು. ಅದೇ ಊರಿನಲ್ಲಿಯೇ ಪ್ರಸಿದ್ಧರಾದ ಆರೂಢರಿಗೆ ನಿಜಗುಣರ ಕೃತಿಗಳಲ್ಲಿರುವ ಪರಿಣತಿಯನ್ನು ಕೇಳಿ ನೋಡಿ ಸಂತೋಷಿಸಬೇಕೆಂದು ಆರೂಢರಲ್ಲಿಗೆ ಆಗಮಿಸಿದರು. ಆರೂಢರೊಡನೆ ಆಧ್ಯಾತ್ಮಜಿಜ್ಞಾಸೆ ಆರಂಭವಾಯಿತು.   ಶ್ರೀಗಳ ಅಸ್ಖಲಿತವಾದ ಅನನ್ಯ ಸಾಧಾರಣವಾದ ಅನುಭವವನ್ನು ಕಂಡು ಆರೂಢರಿಗೆ ಅಚ್ಚರಿಯಾಯಿತು. ತಾವು ಮೌನತಾಳಿ ತಮ್ಮ ಶಿಷ್ಯರನ್ನು ವಾದಕ್ಕೆ ಮುಂದುಮಾಡಿದರು. ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದ ಸದಾಶಿವ ಸ್ವಾಮಿಗಳವರು ಚುರುಕಾಗಿ ಚರ್ಚೆಮಾಡಿದರು. ಏನು ಮಾಡಿದರೇನು ? ಅಪಕ್ವತೆಯನ್ನು ಶ್ರೀಗಳು ಕಂಡುಕೊಂಡರು. ಬರೀ ವಾದವಿಮರ್ಶೆಯ ಹೊರತು ಆಳ ಅನುಭವದ ಹುರುಳಿಲ್ಲ. ಕೇವಲ ಬೌದ್ಧಿಕವಾದವು ಆತ್ಮಶಾಂತಿಗೆ ಕಾರಣವಲ್ಲ ಎಂದು ಹೇಳಿ ಹೊರಗೆ ಬಂದು ಒಂದು ತಂಬಿಗೆಯನ್ನು ಕೇಳಿದರು. ಶ್ರೀಗಳ ಅನುಭವಕ್ಕೆ ಮೆಚ್ಚಿದ ಸದಾಶಿವಸ್ವಾಮಿಗಳವರೆ ತಂಬಿಗೆಯನ್ನು ತೆಗೆದುಕೊಂಡು ಬಂದರು. ಅವರೊಡನೆ ಬಹಿರ್ದೆಶಕ್ಕೆ ತೆರಳುತ್ತ ತಮ್ಮ ಹಿಂದೆ ಬರುತ್ತಲಿದ್ದ ಶಿಷ್ಯನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಷ್ಟರಲ್ಲಿ ಜಲಾಶಯವೊಂದು ಹತ್ತಿರ ಕಂಡಿತು. ಶ್ರೀಗಳು ತಂಬಿಗೆಯನ್ನು ತೆಗೆದುಕೊಂಡು ಹೋಗಿ ಬಂದು ಹಸ್ತ ತೊಳೆದರು. ಹಲ್ಲುಜ್ಜಲು ಕಡ್ಡಿಯೊಂದನ್ನು ತರಹೇಳಿದರು. ಆರೂಢರ ಶಿಷ್ಯವೃತ್ತಿಯಲ್ಲಿದ್ದ ಸದಾಶಿವ ಸ್ವಾಮಿಗಳಿಗೆ ಹಲ್ಲುಕಡ್ಡಿಯ ಪರಿಚಯವಿರಲಿಲ್ಲ. ಅನುಮಾನಿಸುತ್ತ ನಾಲ್ಕು ಬೆರಳುದ್ದದ ಒಂದು ಕಡ್ಡಿಯನ್ನು ತಂದುಕೊಟ್ಟರು. ಅದನ್ನು ಶ್ರೀಗಳು ನೋಡಿ ‘ತಮ್ಮಾ ನಿನ್ನ ಬುದ್ಧಿಯೂ ಸಹ ಇಷ್ಟೇ ಉದ್ದಿದೆ. ಅದ್ವೈತದಲ್ಲಿ ಮುಳುಗಿದ್ದ ನಿಮಗೆ ಬಾಹ್ಯಶೀಲಾಚರಣೆಯ ಅರಿವಿಲ್ಲ. ಬಾಹ್ಯ ಶೌಚಾಚರಣೆಯ ಮಾಡದವನು ಆತ್ಮನನ್ನು ಅರಿತು ಫಲವಿಲ್ಲ. ತಾನು ಶುಚಿಯಾಗಿದ್ದು ಮನೆ ಮೂಲೆಗಳಲ್ಲಿ ಅಶುಚಿಯಾಗಿದ್ದರೆ ಸಾಕೇನು? ತನ್ನ ಮನೆ ಶುಚಿಯಾಗಿರಬೇಡವೆ? ತಾನು ಶುಚಿಯಾಗಿದ್ದರೆ ಆರೋಗ್ಯ ಬರುವುದೇನು? ತಾನು ತನ್ನ ಮೈತೊಳೆದು ಬಿಳಿಯ ಬಟ್ಟೆಯನ್ನು ತೊಡುವಂತೆ ಮನೆಯ ಶುಭ್ರತೆಮಾಡಿ ಸುಣ್ಣ ಬಣ್ಣ ಬಳಿದರಲ್ಲವೆ? ಹಾಗೆ ಆತ್ಮನಿಗೆ ಅರಿವಿನ ಬೆಳಗು ಒಂದಿದ್ದರೆ ಸಾಲದು. ಶರೀರೇಂದ್ರಿಯಗಳೂ ಶುಭ್ರವಾಗಿರಬೇಕು. ಸುಣ್ಣ ಬಣ್ಣ ಬಳಿವ ಕುಂಚು ಎಷ್ಟುದ್ದವಿದ್ದರೆ ಲೇಸೆಂಬುದನ್ನು ತಿಳಿಯಬೇಡವೆ ? ಹಾಗೆ ಹಲ್ಲುಜ್ಜುವ ಕಡ್ಡಿ ಹನ್ನೆರಡು ಅಂಗುಲ ಉದ್ದಿರಬೇಕು ಇದು ಶಾಸ್ತ್ರ, ಆತ್ಮವಿಚಾರ ಮಾತ್ರ ಹೇಳುವುದೇ ಶಾಸ್ತ್ರವಲ್ಲ, ದೇಹಾತ್ಮಗಳ ಆಚಾರ ವಿಚಾರಗಳೆರಡನ್ನು ಹೇಳುವುದೇ ಶಾಸ್ತ್ರ, ಶರೀರೇಂದ್ರಿಯ ಮೋಹ ತ್ಯಜಿಸುವುದೆಂದರೆ ನೀವೆಲ್ಲ ತಿಳಿದಿರುವಂತೆ ಶರೀರೇಂದ್ರಿಯಗಳನ್ನು ಕೊಳೆಯಾಗಿ ಇರಿಸುವದಲ್ಲ. ಶೌಚ-ಸ್ನಾನ, ಹಲ್ಲುಜ್ಜುವಿಕೆ ಮುಂತಾದ ಬಾಹ್ಯ ಶೌಚಾಚಾರಗಳನ್ನು ಯಥಾವಿಧಿಯಾಗಿ ಆಚರಿಸಲೇ ಬೇಕು. ಆಚರಿಸದೆ ಇರುವದರಿಂದ ನಿಮಗೆಲ್ಲ ಹಲ್ಲುಜ್ಜುವ ಕಡ್ಡಿ ಎಷ್ಟಿರಬೇಕೆಂಬುದೇ ಗೊತ್ತಿಲ್ಲ. ಹೊರಗೆ ಹೋಗಿ ಬಂದಾದ ಮೇಲೆ  ತೊಳೆವುದೂ ಸಹ ನಿಮಗೆ ಗೊತ್ತಿದೆಯೊ ಇಲ್ಲೊ. ಹೊರಗಿನದನ್ನೆ ಅರಿಯದವನು ಒಳಗಿನದನ್ನು ಇನ್ನೆಷ್ಟು ಅರಿತಿರಬೇಕು? ಎಂದು ಚೆನ್ನಾಗಿ ಬುದ್ಧಿವಾದ ಹೇಳಿದರು.

 

ಇದನ್ನು ಕೇಳಿ ಸದಾಶಿವ ಸ್ವಾಮಿಗಳವರ ಮನಸ್ಸು ಪರಿವರ್ತನವಾಯಿತು. ಶಾರೀರಿಕ ಶೌಚವಿಧಾನವನ್ನೇ ಅರಿಯದ ಆತ್ಮವಿಚಾರದಿಂದ ಏನೂ ತಿರುಳಿಲ್ಲ ಎಂಬ  ವಾದ ಅವರ ಮನಸ್ಸಿಗೆ ಆಚ್ಚೊತ್ತಿದಂತಾಯಿತು. ಅದನರಿಯಲು ಮನಸ್ಸು ಉತ್ಸುಕಗೊಂಡಿತು. ಮೊದಲೆ ಆರೂಢರ ಕ್ರಿಯಾಲೋಪವನ್ನು ಒಪ್ಪದ ಸ್ವಾಮಿಗಳಿಗೆ ಇದನ್ನೆಲ್ಲ ಕಂಡಮೇಲೆ ಮತ್ತೂ ಮನಸ್ಸು ಅಲ್ಲಿರಲು ಹಿಮ್ಮೆಟ್ಟಿತು. ಶ್ರೀಗಳೊಡನೆ ಹೋಗಲು ಅಭಿಲಾಷೆಯಾಗಿ ಅವಾಗಳೆ ಅಪ್ಪಣೆ ಕೇಳಿದರು

 

ಯೋಗಧುರಂಧರರಾದ ಶ್ರೀಗಳವರು ‘ತಮ್ಮಾ ನಮ್ಮ ಸೇವೆ ಕಠಿಣವಾದುದು. ನೀನಾದರೊ ಆರೂಢರ ಶಿಥಿಲಾಚಾರ ಶಿಕ್ಷಣದಲ್ಲಿದ್ದವನು. ಕಷ್ಟದ ಸೇವೆಗೆ ಒಳಪಟ್ಟು ತೊಳಲಬೇಕಾದೀತು ? ತುಂಬಾ ವಿಚಾರಿಸಿ ಹೇಳು. ಎನ್ನಲು ಸ್ವಾಮಿಗಳ ಕಣ್ಣಲ್ಲಿ ನೀರೂರಿ ‘ಮಹಿಮರೆ, ಶಿವಯೋಗದ ಕಟ್ಟುಗಳು ಎಷ್ಟೇ ಕಷ್ಟದಾಯಕಗಳಾಗಿದ್ದರು ಸಹಿಸಬಲ್ಲೆನು, ಸೇವಿಸಬಲ್ಲೆನು. ತಮ್ಮೊಡನೆ ಬರಲು ತಮ್ಮ ಶಿಷ್ಯನಾಗಿರಲು ಅಪ್ಪಣೆ ಆಗಿಯೇ ತೀರಬೇಕೆಂದು ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರ ದೃಢನಿಶ್ಚಯವನ್ನು ಸತ್ಯಸಂಕಲ್ಪವನ್ನು ಕಂಡು ಶ್ರೀಗಳವರು ಶಿಷ್ಯನನ್ನಾಗಿ ಪರಿಗ್ರಹಿಸಿದರು.

ಸದಾಶಿವ ಸ್ವಾಮಿಗಳವರ ಸಂತೋಷಕ್ಕೆ ಪಾರವೆ ಇಲ್ಲದಾಯಿತು. ಬಹುದಿನಗಳ ನಿರೀಕ್ಷಣೆ ಇಂದು ಫಲಿಸಿತು; ಅಭೀಷ್ಟವು ತಾನೇ ಪ್ರಾಪ್ತಿಯಾಯಿತು; ತಾನಿದ್ದಲ್ಲಿಗೆ ಬಂದೊದಗಿತು. ವಿವೇಕಾನಂದರು ಪರಮಾತ್ಮನ ಪಿಪಾಸುಗಳಾಗಿ ದಕ್ಷಿಣೇಶ್ವರಕ್ಕೆ ಹೋದರೆ ನಮ್ಮ ಕಥಾನಾಯಕರಲ್ಲಿಗೆ ಶಿವನನ್ನು ಕಂಡ ಸದ್ಗುರುಗಳು ತಾವಾಗಿಯೇ ಆಗಮಿಸಿದರು; ಅನುಗ್ರಹಿಸಿದರು. ಭಾಗ್ಯವಿಶೇಷವಲ್ಲವೆ? ತಾನು ಹಂಬಲಿಸುತ್ತಿರುವ ವಸ್ತು ಅಥವಾ ಮಹಾವ್ಯಕ್ತಿ ತನ್ನಲ್ಲಿಗೆ ಬರುವುದೆಂದರೆ ಪುಣ್ಯದ ಪ್ರಭಾವ ಎಷ್ಟಿರಬೇಕು?

 

ಗುರುಗಳು ಬದುಕಿರುವವರೆವಿಗೂ ಅವರ ಸನ್ನಿಧಿಯಲ್ಲಿದ್ದು ಸೇವೆಗೈಯುತ್ತಾ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಶಿವಾನುಭವ ಸಾರಸವಿಯ ಸವಿದರು. ಅದಕ್ಕೆ ಮುಗ್ಧರಾದರು. ಪ್ರತಿದಿನ ರಾತ್ರಿ ನಿದ್ರೆ ಬರುವವರೆವಿಗು ಶಿವಾನುಭವ ಗ್ರಂಥಗಳನ್ನು ಓದುತ್ತಿದ್ದರು. ಹಗಲು ಗುರುಗಳ ಸಕಲವಿಧ ಸೇವೆಯಲ್ಲಿ ತೊಡಗಿರುತ್ತಿದ್ದರು. ಸೇವೆಯಲ್ಲಿ ಮೇಲು ಕೀಳೆಂಬ ಭಾವನೆಯಿರಲಿಲ್ಲ. ಯಾವ ಕೆಲಸವೆ ಆಗಲಿ ಗುರುಸೇವೆಯೆಂದು ಹರುಷದಿಂದ ಉಲ್ಲಾಸದಿಂದ ಮಾಡುತ್ತಿದ್ದರು. ಗುರುಗಳು ಶಿವಪೂಜೆಗೆ ಕುಳಿತಾಗ ಅದನ್ನು ತದೇಕ ಧ್ಯಾನದಿಂದ ತಲ್ಲೀನ ಮನಸ್ಸಿನಿಂದ ನಿರೀಕ್ಷಿಸುತ್ತಿದ್ದರು. ಆಗ ಬಾಹ್ಯ ಜಗತ್ತನ್ನು ಮರೆತಿರುತ್ತಿದ್ದರು. ಅವರಂತೆ ಅಂತರಾತ್ಮನ ಸಮರಸಕ್ಕೆ ಹಂಬಲಿಸುತ್ತಿದ್ದರು. ಗುರುಗಳ ಪೂಜೆಯ ಪ್ರಭಾವವು ಅವರ ಕಣ್ಣುಗಳ ಹೊಲಬಿನಿಂದ ಹೋಗಿ ಮನೋಮಂದಿರದಲ್ಲಿ ನಿಂದು ಅಂತರಂಗದಾದ್ಯಂತವನ್ನು ವ್ಯಾಪಿಸುತ್ತಿತ್ತು.  ಹೀಗೆ ಗುರುಗಳವರಲ್ಲಿ ಸದಾಚಾರ ಶಿವಪೂಜೆ ಶಿವಾನುಭವಗಳನ್ನು ಕಲಿತುದಲ್ಲದೆ ಯೋಗವಿದ್ಯೆಯನ್ನು ಅಭ್ಯಸಿಸಿದರು. ಕ್ರಿಯೋಪದೇಶವನ್ನು ಪಡೆದರು. ಗುರುಶಿಷ್ಯ ಸಂಬಂಧ ತೀರ ಹತ್ತಿರದ್ದಾಯಿತು; ತಾದಾತ್ಮ್ಯಭಾವದ್ದಾಯಿತು.

 

ಗುರುಶಿಷ್ಯರಿಬ್ಬರು ಸೇರಿ ಪ್ರಾಂತ ಪ್ರಯಾಣವನ್ನು ಕೈಕೊಂಡರು. ಅಲ್ಲಲ್ಲಿ ಸಂಚರಿಸುತ್ತ ಭಕ್ತಸಮೂಹಕ್ಕೆ ಸದ್ಬೋಧೆಯನ್ನು ಮಾಡುತ್ತ ಧಾರವಾಡ ಜಿಲ್ಲೆಯ ಅಣ್ಣಿಗೆರೆ ಗ್ರಾಮಕ್ಕೆ ಆಗಮಿಸಿದರು.  ಅಲ್ಲಿರುವಾಗಲೆ ಎಳಂದೂರು ಶ್ರೀಗಳವರಿಗೆ ದೇಹಾಲಸ್ಯವಾಯಿತು. ದಿನದಿನಕ್ಕೆ ದೇಹಾಲಸ್ಯವು ಉಲ್ಬಣಾವಸ್ಥೆಗೆ ಹೋಗಹತ್ತಿತು. ಇದನ್ನು ಕಂಡು ಸದಾಶಿವ ಸ್ವಾಮಿಗಳವರು ಚಿಂತಿಸತೊಡಗಿದರು. ಇದನ್ನು ಕಂಡು ಗುರುವರ್ಯರು ಹತ್ತಿರಕ್ಕೆ ಕರೆದು ನೇವರಿಸಿ ಕುಮಾರಾ! ನಿನ್ನಲ್ಲಿ ಯೋಗವಿದೆ; ತ್ಯಾಗವಿದೆ. ವಿರತಿಯಿದೆ ಉಪರತಿಯಿದೆ. ಕಾರ್ಯದಕ್ಷತೆಯಿದೆ; ಅಧ್ಯಾತ್ಮಿಕ ಬಲವಿದೆ. ಇನ್ನೇನಾಗಬೇಕು? ಸುಮ್ಮನೆ ಅಂಜದಿರು, ಅಳುಕದಿರು. ಧೈರ್ಯಗುಂದದೆ ಸತ್ಕಾರ್ಯ ತತ್ಪರನಾಗು. ಸಮಾಜಸೇವೆಯನೆಸಗು. ಸಮಾಜವು ಯೋಗಬಲ ಹೀನವಾಗಿದೆ. ತ್ಯಾಗಗುಣ ರಹಿತವಾಗಿದೆ. ವಿದ್ಯೆ-ಧರ್ಮಗಳಿಲ್ಲದೆ ಕುರುಡಾಗಿದೆ. ನಿರ್ವೀರ್ಯವಾದ ಸಮಾಜಕ್ಕೆ ಕಳೆತುಂಬಿ ಕಣ್ಣರಳಿಸಲು ನೀನು ಮುಂದೆ ಬರಬೇಕು.ಕೇವಲ ಯೋಗಿಯಾಗಿ ವಿರಾಗಿಯಾಗಿ ಕಣ್ಮುಚ್ಚಿ ಕುಳಿತರೆ ಸುಖವಿಲ್ಲ. ಸಮಾಜವು ಶಕ್ತಿಗುಂದಿ ಸಣ್ಣಾಗುತ್ತಿರುವಾಗ ಒಬ್ಬನೆ ಮುಕ್ತನಾಗಲು ಹವಣಿಸುವುದು ಹೆಚ್ಚಿನ ಸ್ವಾರ್ಥ. ಸಮಾಜ ಸೇವೆಯ ಯುಕ್ತಯೋಗ, ಅದೇ ತಾತ್ವಿಕ ತಪಸ್ಸು, ಸಮಾಜವೇ ನಿನ್ನ ಜೀವನ.  ಸಮಾಜಸೇವೆಯೆ ನಿನಗೆ ಪಾವನ, ಸಮಾಜದ ಮಕ್ಕಳೆ ನಿನ್ನ ಮಕ್ಕಳು. ಸಮಾಜದೇಳ್ಗೆಯೆ ನಿನ್ನ ಏಳ್ಗೆ.  ಸಮಾಜ ಮುಕ್ತಿಯೆ ನಿನ್ನ ಮುಕ್ತಿ .  ಯೋಚಿಸಬೇಡ. ಯೋಧನಂತೆ ಧೈರ್ಯತಾಳು. ನಿನಗೆ ದೇವನ ಬೆಂಬಲವಿದೆ. ಆಯುಷ್ಯರೇಖೆಯಿದೆ. ಸಮಾಜವೇ ನಾನೆಂದು ಭಾವಿಸಿ ಸೇವಿಸು. ಇದರಿಂದ ನೀನು ಆದರ್ಶಜೀವಿಯಾಗುವೆ. ಅಸಾಧಾರಣ ಶಿವಯೋಗಿಯಾಗುವೆ ಎಂದು ಹೇಳಿ ತಮ್ಮ ಯೋಗದ ಸಾಧನ ಸಾಮಗ್ರಿಗಳನ್ನು ಪೂರ್ಣ ಕೃಪಾ ಪ್ರಸಾದಾನುಗ್ರಹ ದೀಕ್ಷೆಯಿತ್ತು ಶುಭಾಶೀರ್ವಾದವನ್ನು ಕೊಟ್ಟು, ಲಿಂಗೈಕ್ಯರಾಗುವರು. ಸ್ವಾಮಿಗಳಾದರೊ ಗುರು ಅನುಗ್ರಹಿಸಿದುದನ್ನೆ ತಮ್ಮ ಭಾವೀ ಜೀವನದ ಪರಮ ಸಂಪತ್ತೆಂದು ಪರಮಾರ್ಥ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತರಾದರು. ಆದರೂ ಗುರುವಿರಹದ ವ್ಯಥೆಯನ್ನು ಕೆಲವು ಕಾಲ ಅನುಭವಿಸದೆ ಇರಲಿಲ್ಲ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 

 

ಗ್ರಹಗೋಂಕಿದವ ತಾನೆ | ಗ್ರಹವಾಗುತಿಹನಂತೆ

ಮಹಲಿಂಗವ ನೀ | ವಹಿಸಲ್ಕೆ ನೀ ಲಿಂಗ

ವಹೆಯೆಂದ ಗುರುವೆ ಕೃಪೆಯಾಗು   || ೧೩೬ ॥

 

ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕರು ಭೂತ-ಪ್ರೇತ-ಪಿಶಾಚಿಗಳನ್ನು ನಂಬುವದಿಲ್ಲ. ಹಲವರು ಹೆಚ್ಚಾಗಿ ನಂಬುತ್ತಾರೆ. ಕೆಲವರಂತೂ ಅತ್ಯಂತ ಭಯ ಪಡುತ್ತಾರೆ. ಆದರೆ ಅವುಗಳ ಯಥಾರ್ಥತೆಯನ್ನರಿತರೆ ಅಧೈರ್ಯಪಡಲೇಬೇಕಾಗುವದಿಲ್ಲ. ಮಾನವನ ಅತ್ಯಧಿಕವಾದ ದುರಾಶೆಯು ಶಾಂತವಾಗದೆ ದುರ್ಮರಣ ವನ್ನಪ್ಪಿದರೆ ಅವನ ಕಾರಣ ಶರೀರಗತವಾದ ಅತೃಪ್ತವಾಸನೆಯು ದುರ್ಬಲ ಮನಸ್ಸಿನ ಮಾನವರಲ್ಲಿ ಪ್ರವೇಶಿಸಿ ತನ್ನ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೇನೆ ಗ್ರಹಬಡಿಯುವದೆಂಬ ವಾಡಿಕೆ ಬೆಳೆದು ಬಂದಿದೆ. ವಾಸನಾಮಯೀ ಜೀವಿಯು ಪರಕಾಯವನ್ನು ಪ್ರವೇಶಿಸಿ ವಿವಿಧ ರೀತಿಯಲ್ಲಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಪ್ರಯತ್ನಸುತ್ತದೆ. ಆದ್ದರಿಂದ ಗ್ರಹಹೊಡೆದವನು ಆ ಪಿಶಾಚಿಯ ನಡೆ-ನುಡಿಯನ್ನು ಅವಶ್ಯ ಅನುಸರಿಸುವನು. ಹೆಣ್ಣುಗಂಡಿನಂತೆ ವರ್ತಿಸುವದು ಅಥವಾ ಗಂಡು ಹೆಣ್ಣಿನಂತೆ ವರ್ತಿಸುವದು ಕಾಣಬರುತ್ತದೆ.

 

ಗ್ರಹಸೋಂಕಿದವನು ಗ್ರಹದಂತಾಗುತ್ತಿರುವಾಗ ಪರಮ ಪವಿತ್ರವಾದ ಮಹಾಲಿಂಗದ ಸಂಬಂಧದಿಂದ ಜೀವಾತ್ಮನು ಲಿಂಗಮಯನಾಗುವದು ಸಾಧ್ಯವಿದೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ

 

 ಇಷ್ಟಲಿಂಗಮಿದಂ ಸಾಕ್ಷಾದನಿಷ್ಟ – ಪರಿಹಾರಕಮ್ |

ಧಾರಯೇದವಧಾನೇನ ಶರೀರೇ ಸರ್ವದಾ ಬುಧಃ  || ೬-೫೦ ||

 

ಸುಜ್ಞಾನಿಯಾದವನು ಪ್ರತ್ಯಕ್ಷವಾಗಿ ಸಾಂಸಾರಿಕ ಅನಿಷ್ಟವನ್ನು ಪರಿಹರಿಸಬಲ್ಲ. ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿಯೂ ಶರೀರದ ಮೇಲೆ ಸಾವಧಾನದಿಂದ ಧರಿಸಬೇಕೆಂದು ಶ್ರೀ ರೇಣುಕಾಚಾರ್ಯರ ವಾಣಿಯಲ್ಲಿ ತಿಳಿಸಿದ್ದಾರೆ.

 

ಹಿಂದೆ ವಿವರಿಸಿದ ಆರೂ ಸ್ಥಾನಗಳನ್ನು ಹೊರತುಪಡಿಸಿ ಕೆಲವರು ಲಿಂಗವನ್ನು ನಡದಲ್ಲಿ ಹಾಕುವರು .. ಕೆಲವರಿಗಂತೂ ಇದೊಂದು ಹೊಸಬಗೆಯಾಗಿದೆ. ಆದರೆ ಇದು ಶುದ್ಧತಪ್ಪು. ಯಾಕಂದರೆ-

 

ನಾಭೇರಧಸ್ತಾತ್ ಲಿಂಗಸ್ಯ ಧಾರಣಂ ಪಾಪಕಾರಣಮ್ || ಸಿ. ಶ. ೬-೫೨ ||

 

ನಾಭಿಯ ಕೆಳಗೆ ಲಿಂಗವನ್ನು ಧರಿಸುವದರಿಂದ ಪಾಪ ಭಾಗಿಗಳಾಗಬೇಕಾಗುವದು. ಅಗಸ್ತ್ಯರಿಗೆ ರೇಣುಕರು ಎಚ್ಚರಿಕೆಯನ್ನಿತ್ತಿದ್ದಾರೆ. ಇಷ್ಟಲಿಂಗವು ಸಾಮಾನ್ಯವಾದುದಲ್ಲ. ನಮ್ಮ ಸಕಲ ಅನಿಷ್ಟಗಳನ್ನು ಕಳೆಯಬಲ್ಲ ಮಹಾಸಾಧನವಾಗಿದೆ. ಜ.ಚ.ನಿ. ಯವರು ಸಿದ್ಧಾಂತ ಶಿಖಾಮಣಿಯ ಅನುವಾದ ಕಾವ್ಯವೆನಿಸಿದ ‘ಮಣಿ ಮುಕುರ’ದಲ್ಲಿ

 

ಇಷ್ಟಲಿಂಗವಿದು ತಾಂ ಸಾಕ್ಷಾದನಿಷ್ಟ ಪರಿ-

ಹಾರಕಮಿದನಂ ಬಲ್ಲಿದರಾವಾಗಳುಂ

ಶರೀರದೊಳವಧಾನದಿಂದಗಲದಂತೆವೊಲ್

ಧರಿಸಿರ್ಪುಳ್ಕರಿಂ ಸುಕ್ಷೇಮ ಕಾರಣಂ || ಪು ೫೬ ||

 

ಇಷ್ಟಲಿಂಗವನ್ನು ಅವಧಾನಪೂರ್ವಕ ಸದಾ ಶರೀರದ ಮೇಲೆ ಧರಿಸಿಕೊಂಡಿರ ಬೇಕೆಂದು ಹೇಳಿದ್ದಾರೆ. ಆದರೆ ಇಂದಿನ ವೀರಶೈವ ಧರ್ಮಾನುಯಾಯಿಗಳು – ಲಿಂಗವನ್ನು ಹಾಕಿಕೊಳ್ಳುವದೇ ಬೇಡವಾಗಿದೆ. ಹಾಕಿದರೆ ನಾಚಿಕೆ, ಅದನ್ನು ದೇವರ ಜಗುಲಿಯ ಮೇಲೋ, ಮನೆಯಗೂಟಕ್ಕೂ ಹಾಕುತ್ತಾರೆ. ಹಲವರಿಗೆ ದೇವರೂ ಇರುವದಿಲ್ಲ. ಕೆಲವರು ಸ್ನಾನ ಮಾಡಿದಾಗ ಪೂಜಿಸಿ ಪುನಃ ಜಗುಲಿಗೆ ಕಳಿಸುತ್ತಾರೆ. ಜಗುಲಿಯ ಮೇಲೆ ಇಡುವದರಿಂದ ಅದು ಇಷ್ಟಲಿಂಗವೆನಿಸುವದಿಲ್ಲ. ಗುರುದೀಕ್ಷೆಯ ಸಂಸ್ಕಾರದಿಂದ ಬಂದ ಲಿಂಗವೇ ಲಿಂಗಗುಣಗಳನ್ನು ಕರುಣಿಸಬಲ್ಲುದು. ಮತ್ತೆ ಕೆಲವರು ಲಿಂಗದ ಕರಡಿಗೆಯನ್ನು ಶೋಭೆಗೆಂದು ಧರಿಸುತ್ತಾರೆ. ಆದರೆ ಅದು ಖಾಲಿಯಾಗಿಯೋ ಅಥವಾ ಚಿಲ್ಲರೆ ನಾಣ್ಯಗಳನ್ನಿಡುವ ಪೆಟ್ಟಿಗೆಯಾಗಿಯೋ ಉಪಯೋಗಿಸಲ್ಪಡುತ್ತದೆ. ಇಂಥ ಲಿಂಗವಂತರಿಗೆ ಲಿಂಗವಂತಿಕೆಯಾಗಲಿ ಅಥವಾ ಲಿಂಗಗುಣಗಳಾಗಲಿ ಯಾವ ಕಾಲದಲ್ಲಿಯೂ ಬರಲಾರವು. ಅವರು ಲಿಂಗವಂತರೆಂದೆನ್ನಿಸಿಕೊಳ್ಳಲು ಯೋಗ್ಯರಲ್ಲ.

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವೆಂಬ ಭಾವ ಬಲಿಯಬೇಕು. ಆಗ ಪ್ರಾಣಲಿಂಗದ ಸಂಬಂಧವಾಗುವದು. ಇಷ್ಟಲಿಂಗವು ಅಕಸ್ಮಾತ್ ಕಳಚಿದರೆ ಪ್ರಾಣವು  ತಾನಾಗಿ ಹೋದಂತಾಗಬೇಕು. ಇಂಥ ಭಾವ ಬೆಳೆಯುವದರಿಂದ ಭಾವಲಿಂಗ ಸಂಗಿಯೆನಿಸುವನು. ಇವನಿಗೆ ಭಾವಲಿಂಗದ ಸಾಕ್ಷಾತ್ಕಾರ ಸುಲಭವಾಗುವದು. ನಿಜ ಲಿಂಗಮಯನಾಗುವನು, ಓ ಗುರುವೆ’! ಕರುಣಿಸು ನಿಜಲಿಂಗಸ್ವರೂಪಿ ನಾನಾಗುವಂತೆ

‘ಪೂಜ್ಯೇಷು ಅನುರಾಗೋ ಭಕ್ತಿಃ’ ಪೂಜ್ಯರಲ್ಲಿರುವ ಅನುರಾಗ(ಪ್ರೇಮ)ವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರು, ತಂದೆ- ತಾಯಿಗಳು ನಮಗೆ ಪೂಜ್ಯರು. ಅವರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರೇಮವನ್ನು ಹೊಂದಿರುತ್ತೇವೆ. ಇದು ಭಕ್ತಿ ಎನಿಸಿದರೂ ‘ಈಶ್ವರೇ ಪರಾನುರಕ್ತಿಃ ಭಕ್ತಿ’ ಅಂದರೆ ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ ಎಂದು ಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಾತ್ಮನಲ್ಲಿರುವ ನಮ್ಮ ಶ್ರದ್ಧೆ, ಅನುರಕ್ತಿಗಳು ನಿಷ್ಠೆಯಾಗಿ ಮುಂದುವರೆಯಬೇಕು. ಆ ನಿಷ್ಠೆ ಏಕೋಭಾವವಾಗಿ ಸಹಜಗುಣವಾಗಿ ಬೆಳೆಯಬೇಕು. ಅಂದರೆ ಇಹಪರಗಳೆಲ್ಲವನ್ನು ಮರೆತು ಪರಮಾತ್ಮನೊಬ್ಬನನ್ನೆ ಮನದಲ್ಲಿ ನೆನೆವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಎನಿಸುವುದು.

ಜಗತ್ತಿನಲ್ಲಿ ಅನೇಕರು ಬರೀ ಆಡಂಬರದ ಪೂಜಾದಿಗಳನ್ನು ನೆರವೇರಿಸುತ್ತ ತಾವೇ ಪರಮಭಕ್ತರೆಂದೂ, ತಾವು ಆಚರಿಸುವ ಭಕ್ತಿಯೇ ಶ್ರೇಷ್ಠ ಭಕ್ತಿ ಎಂದೂ ಗರ್ವದಿಂದ ನುಡಿಯುತ್ತಾರೆ. ಮನಸ್ಸಿನಲ್ಲಿ ಯಾವುದೇ ಶ್ರದ್ಧೆ, ನಿಷ್ಠೆ ಹಾಗು ದೃಢತೆ ಇಲ್ಲದ ಇಂತಹವರ ಭಕ್ತಿಯನ್ನು ಕಂಡು ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ’ ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮ. ಅದು ನಿರರ್ಥಕವಾದ ಭಕ್ತಿ, ಅದೆಂದೂ ಪರಮಾತ್ಮನಿಗೆ ಸಲ್ಲದು ಎಂದು ಸ್ಪಷ್ಟಪಡಿಸುತ್ತಾಳೆ. ನಿಜವಾದ ಭಕ್ತನು ಸದಾಚಾರವನ್ನು ಅರಿತು ಆಚರಿಸುತ್ತಾನೆ. ಸಿರಿಸಂಪತ್ತುಗಳ ವಿಷಯದಲ್ಲಿ ಅವನೆಂದೂ ಅಹಂಕಾರ, ಮಮಕಾರಗಳನ್ನು ಹೊಂದುವುದಿಲ್ಲ. ಅವೆಲ್ಲವೂ ಪರಮಾತ್ಮನ ಸೊಮ್ಮು ಎಂಬ ಭಾವ ಅವನಲ್ಲಿ ಗಟ್ಟಿಗೊಂಡಿರುತ್ತದೆ. ದಾಸೋಹಂಭಾವದಿಂದ ಶಿವನ ಸೊಮ್ಮು ಶಿವನಿಗೆ ಅರ್ಪಿಸುವ ಭಕ್ತನು ಶಿವನಿಗೆ ಪ್ರಿಯನಾಗಿರುತ್ತಾನೆ. ಭಕ್ತಿಯ ಕುರುಹಾದ ದಾಸೋಹವನ್ನು ಮಾಡುವುದು ಭಕ್ತನ ಕರ್ತವ್ಯಗಳಲ್ಲೊಂದು. ಪರಮಾತ್ಮನು ಭಕ್ತಿಪ್ರಿಯ. ಭಕ್ತಿಯಿಂದ ಸಮರ್ಪಿಸಿದ ನೀರೂ ಕೂಡ ಅವನಿಗೆ ಪ್ರಿಯವೆ.

ಭಕ್ತಿಯ ಪ್ರಾರಂಭದ ಹಂತದಲ್ಲಿ ಪೂಜ್ಯನಾದ ದೇವ ಬೇರೆ, ಪೂಜಕನಾದ ತಾನು ಬೇರೆ ಎಂಬ ಭಾವ ಇರುತ್ತದೆ. ಭಕ್ತಿವಿಕಾಸವಾದಂತೆ ಪೂಜ್ಯ ಪೂಜಕನೆಂಬ ಭೇದಭಾವ ಇಲ್ಲದಂತಾಗಿ ಭಕ್ತ ಮತ್ತು ದೇವರಲ್ಲಿ ಸಹಜ ಸಾಮರಸ್ಯ ಉಂಟಾಗುತ್ತದೆ. ಇದೇ ಭಕ್ತಿಯ ನಿಜವಾದ ಉದ್ದೇಶ ಈ ಉದ್ದೇಶ ಈಡೇರಿದಾಗ ಭಕ್ತನು ಜನನ ಮರಣಗಳಿಂದ ಮುಕ್ತನಾಗಿ ಸ್ವಸ್ವರೂಪಾನುಸಂಧಾನದಲ್ಲಿ ನಿರತನಾಗುತ್ತಾನೆ. ಅದುವೇ ಮೋಕ್ಷ ಸ್ಥಿತಿ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ’ ಮೋಕ್ಷ ಸಂಪಾದನೆಯ ಅನೇಕ ಮಾರ್ಗಗಳಲ್ಲಿ ಭಕ್ತಿಮಾರ್ಗದಷ್ಟು ಸರಳವಾದ, ಸುಲಭವಾದ ಮಾರ್ಗ ಬೇರೊಂದಿಲ್ಲ. ಅನನ್ಯಗತಿಕನಾಗಿ ಭಕ್ತಿಯಿಂದ ನೆನೆವ ಭಕ್ತನನ್ನು ಸರ್ವವಿಧದಿಂದಲೂ ದೇವನೆ ರಕ್ಷಿಸುವನು. ಭಕ್ತನು ಮಾತ್ರ ಸದಾ ಆನಂದಾನುಭೂತಿಯಲ್ಲಿ ಮಗ್ನನಾಗಿರುತ್ತಾನೆ. ಕೊನೆಗೆ ದೇವರಲ್ಲಿಯೇ ಲೀನನಾಗುತ್ತಾನೆ. ಆನಂದಾನುಭೂತಿಯ ಸ್ಥಿತಿಯಂತೂ ಮೋಕ್ಷಕ್ಕಿಂತಲೂ ಶ್ರೇಷ್ಠವಾದುದು. ಅದು ಭಕ್ತನಿಗೆ ಮಾತ್ರ ಸಾಧ್ಯವಾದುದು. ಅದಕ್ಕಾಗಿಯೇ ನಿಜಗುಣ ಶಿವಯೋಗಿಗಳು:

ಕರುಣಿಸೆನಗಿದನ ಬೇಡುವನಭವ ಬೇರೊಂದು

ವರವನೊಲ್ಲೆನು ಮುಕ್ತಿದೊರೆವ ಸಾಧನವ

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತಿಯನ್ನಾಚರಿಸುವ ಸಂದರ್ಭದಲ್ಲಿ ದೊರೆವ ಸುಖ, ಆನಂದ ಮುಕ್ತಿಯ ಸ್ಥಿತಿಯಲ್ಲಿ ದೊರೆಯದು. ಮುಕ್ತಿ ಎಂಬ ಸಕ್ಕರೆಯಾಗುವುದಕ್ಕಿಂತ ಇರುವೆಯಾಗಿ ಸಕ್ಕರೆಯ ಸವಿಯನ್ನು ಸವಿಯುವುದೇ ಮೇಲು ಎಂಬುದು ಅವರ ಅಭಿಪ್ರಾಯ. ಮುಕ್ತಿಗಿಂತ ಭಕ್ತಿಯೇ ಶ್ರೇಷ್ಠ, ಭಕ್ತಿಯೇ ಮುಕ್ತಿಯ ಜನನಿ. ಭಕ್ತಿಯ ಬಲದಿಂದ ಏನೆಲ್ಲವನ್ನೂ ಭಕ್ತನು ಸಾಧಿಸುತ್ತಾನೆ. ಆದರೆ ಅವನ ಭಕ್ತಿಯಲ್ಲಿ ಶ್ರದ್ಧೆ ನಿಷ್ಠೆಗಳು ನೆಲೆಗೊಂಡಿರಬೇಕು. ಅದುವೆ ನಿಜಭಕ್ತಿ, ಅದುವೇ ಮುಕ್ತಿಗೆ ಸಾಧನ.

ವೀರಶೈವ ಸಾಧಕನು ಗುರು,ಲಿಂಗ,ಜಂಗಮರನ್ನ ವಿಭೂತಿ,ರುದ್ರಾಕ್ಷಿ,ಮಂತ್ರಗಳಿಂದ ಪೂಜಿಸಿದಾಗ ದೊರೆಯುವ ಫಲವೇ ಪಾದೋದಕ-ಪ್ರಸಾದ.

ಪದಾರ್ಥವೆಂದರೆ:- ತಾನೆ ದುಡಿದದ್ದು,ತನ್ನದು ಎಂಬ ಅಹಂಕಾರ ಮಮಕಾರಗಳಿಂದ ಭುಂಜಿಸುವ ಆಹಾರ ಅದು ಪದಾರ್ಥ.

ಪ್ರಸಾದವೆಂದರೆ:- ಅದು ಪೂಜ್ಯರ ಕೃಪೆ,ಭಗವಂತನದಯೆ, ಹಿರಿಯರಿಂದ ಪಡೆದದ್ದು ಅನ್ನುವ ಭಾವದೊಂದಿಗೆ , ದೇವರಿಗೆ ಅರ್ಪಿಸಿ ಬಂದುದ್ದನ್ನ ದಾಸೋಹಂ ಭಾವದಿಂದ ಸೇವಿಸುವ ಆಹಾರ ಅದು ಪ್ರಸಾದ.

“ಎಲ್ಲಿ ಸೋಹಂ ಭಾವವಿದೆ ಅದು ಪದಾರ್ಥ, ಎಲ್ಲಿ  ದಾಸೋಹಂ ಭಾವವಿದೆ ಅದು ಪ್ರಸಾದ”

“ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮುಕ್ತಿ”

ಯಾವುದನ್ನು ಸ್ವೀಕರಿಸಿದಾಗ ಪ್ರಸನ್ನತೆ ಉಂಟಾಗುವುದು ಅದುವೇ ಪ್ರಸಾದ.

ಬಾಹ್ಯ ದ್ರವ್ಯವು ಪದಾರ್ಥವಾದರೆ, ಅಂತರ್ದ್ರವ್ಯವು (ಶುದ್ಧ ಭಾವ) ಪ್ರಸಾದವಾಗುತ್ತದೆ.

ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ನೀಡುವುದೇ ಪ್ರಸಾದ ರಹಸ್ಯ.

“ಒಲ್ಲೆನೆಂಬುದು ವೈರಾಗ್ಯ;ಒಲಿವೆನೆಂಬುದು ಕಾಯ ಗುಣ

ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ

ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ

ಕೂಡಲಸಂಗಮ ದೇವರ ನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು”

– ಜೀವಿಯು ದಿಕ್ಷೆಯಿಂದ ಶುದ್ಧನಾಗಿ ಗುರುಲಿಂಗ ಜಂಗಮರನ್ನ ಪೂಜಿಸಿ, ಇವರಿಗೆ ತನ್ನದೆನ್ನುವದನ್ನೆಲ್ಲವನ್ನು ಅಂದರೆ ಬರಿ ಆಹಾರವನ್ನಷ್ಟೇ ಅಲ್ಲ, ಭೋಗ್ಯ ವಿಷಯಗಳನ್ನು, ಭೋಗಸಾಧನಗಳಾದದೇಹಂದ್ರಿಯಗಳನ್ನು,

ಭೋಕೃತವಾದ ತನ್ನನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ

ಇವೆಲ್ಲವುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು.

ಆಗ ಜೀವಿಯು ಶಿವನಂತೆ ಪ್ರಸಾದ ರೂಪನಾಗುವನು.

:- ಪ್ರಸಾದದಲ್ಲಿ 11 ವಿಧ

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬರು ನೀವು ಕೇಳಿರಿ

ಶುದ್ಧ ಪ್ರಸಾದ ಗುರು ಮುಖದಿಂದ ಬಂದುದು

ಸಿದ್ಧ ಪ್ರಸಾದ ಲಿಂಗ ಮುಖದಿಂದ ಬಂದುದು

ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದುದು

ಇದರೊಳಗೆ ಆವುದ ಘನವೆಂಬೇ? ಆವುದ ಕಿರಿದೆಂಬೇ

ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ.

ಗುರುಪ್ರಸಾದದಿಂದ ತನು ಶುದ್ಧವಾಯಿತು.

ಲಿಂಗಪ್ರಸಾದದಿಂದ ಮನಶುದ್ದವಾಯಿತು.

ಜಂಗಮಪ್ರಸಾದದಿಂದ ಭಾವ ಶುದ್ಧವಾಯಿತು.

ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತು

ಕೂಡಲ ಚನ್ನಸಂಗಮದೇವಯ್ಯ ಈ ತ್ರಿವಿಧ ಪ್ರಸಾದವ ಕೊಂಡೆನ್ನ ಭವಂನಾಸ್ತಿಯಾಯಿತ್ತು.

 

1 ಶುದ್ಧ ಪ್ರಸಾದ:- ಭಸ್ಮ ಲೇಪಿತಹಸ್ತದಿಂದ ಊಟದ ಪಾತ್ರೆಯಲ್ಲಿರುವ ಭೋಜನ ಪದಾರ್ಥಗಳನ್ನು ಶುದ್ಧ ಮಾಡುವುದು ಶುದ್ಧ ಪ್ರಸಾದ.

2 ಸಿದ್ದಪ್ರಸಾದ:- ಶುದ್ಧ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ  ಅಲ್ಲಿ ಪ್ರಸಾದ ಕಳೆವೇಧಿಸುವುದೇ ಸಿದ್ದ ಪ್ರಸಾದ.

3 ಪ್ರಸಿದ್ಧ ಪ್ರಸಾದ:- ಸಿದ್ದಪ್ರಸಾದವನ್ನು ಜಂಗಮಾರ್ಪಣ ಭಾವದಿಂದ ನಾಲಿಗೆಮೇಲಿಟ್ಟು ಸ್ವೀಕರಿಸುವುದೇ ಪ್ರಸಿದ್ಧ ಪ್ರಸಾದ .

4ಆಪ್ಯಾಯನ ಪ್ರಸಾದ:-ಶುದ್ಧ,ಸಿದ್ಧ,ಪ್ರಸಿದ್ಧ ಪ್ರಸಾದ ಸೇವನೆಯಿಂದಾದ ಮನೋವಿಕಾಸವೇ ಅಪ್ಯಾಯನ ಪ್ರಸಾದವೆನಿಸುತ್ತದೆ.

5 ಸಮಯ ಪ್ರಸಾದ:-ಈ ಪ್ರಸಾದ ಸೇವನೆಯ ಸಮಯದಲ್ಲಿ ಇತರ ಪದಾರ್ಥಗಳನ್ನು ಸೇವಿಸುವುದು ಅನರ್ಪಿತವೆಂದು ತಿಳಿಯುವುದು ಸಮಯಪ್ರಸಾದವಾಗಿದೆ.

6 ಪಂಚೇಂದ್ರಿಯವಿರಹಿತ ಪ್ರಸಾದ:- ಇತರ ವಿಷಯಗಳ ಕಡೆಗೆ ಪಂಚೇಂದ್ರಿಯಗಳನ್ನು ಹೋಗಗೊಡದಿರುವುದು.

7 ಅಂತಃಕರಣ ವಿರಹಿತ ಪ್ರಸಾದ:- ಇತರ ಸಂಕಲ್ಪಾದಿಗಳಿಗೆ ಅಂತಃಕರಣ ಸುಳಿಯದಂತೆಮಾಡಿ ನಿಶ್ಚಲತೆಯಿಂದ ಪ್ರಸಾದ ಸೇವಿಸುವುದು.

8 ಪ್ರಸಾದೀಯ ಪ್ರಸಾದ:- ಗುರುಲಿಂಗ ಜಂಗಮದಿಂದ ಪಡೆದ ಪ್ರಸಾದದೊಡನೆ ತನ್ನ ಪ್ರಸಾದವನ್ನು ಭುಂಜಿಸುವುದು ಪ್ರಸಾದೀಯ ಪ್ರಸಾದ.

9 ಸದ್ಭಾವ ಪ್ರಸಾದ:- ಪ್ರಸಾದದಲ್ಲಿ ಪದಾರ್ಥ ಭಾವನೆಯನ್ನಳಿದು ಸದ್ಭಾವದಿಂದ ಭೋಗಿಸುವುದು.

10 ಸಮತಾ ಪ್ರಸಾದ:- ಪ್ರಸಾದ ಸೇವನೆಯ ಸಮಯದ ಹೊರತು ಇನ್ನೇನನ್ನೂ ಸೇವಿಸದೆ ಶಾಂತಿ ಸಹನೆಗಳಿಂದ ಇರುವುದು.

11 ಜ್ಞಾನ ಪ್ರಸಾದ:- ಈ ಸಮತಾಪ್ರಸಾದದಿಂದ ಪುನಃ ಪೂಜೆ ಪ್ರಾರಂಭವಾಗುವವರೆಗೂ ಪ್ರಸಾದಕಾಯನಾಗಿರುವುದು ಜ್ಞಾನ ಪ್ರಸಾದವಾಗಿ ಕಂಗೊಳಿಸುತ್ತದೆ.

-ಗುರುವಿನ ಮುಖಾಂತರ ಬಂದ ಪ್ರಸಾದಕ್ಕೆ ಶುದ್ಧ ಪ್ರಸಾದ, ಇಷ್ಟಲಿಂಗಪ್ರಸಾದ,ರೂಪ ಪ್ರಸಾದ,ತ್ಯಾಗಾಂಗ ಪ್ರಸಾದವೆಂಬರು.

ಲಿಂಗ ಮುಖಾಂತರ ಬಂದ ಪ್ರಸಾದಕ್ಕೆ ಸಿದ್ಧ ಪ್ರಸಾದ,ಪ್ರಾಣ ಲಿಂಗಪ್ರಸಾದ, ರುಚಿ ಪ್ರಸಾದ ಭೋಗಾಂಗ ಪ್ರಸಾದವೆಂಬರು.

ಜಂಗಮನ ಮುಖಾಂತರ ಬಂದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ, ಭಾವಲಿಂಗ ಪ್ರಸಾದ,ತೃಪ್ತಿ ಪ್ರಸಾದ,ಯೋಗಾಂಗ ಪ್ರಸಾದವೆಂಬರು.

ಈ ಪ್ರಸಿದ್ಧ ಪ್ರಸಾದ ಅರ್ಥಾತ್ ಜಂಗಪ್ರಸಾದವನ್ನ ಮಹಾಮನೆಯಲ್ಲಿ ಬಸವೇಶ್ವರರು ಸ್ವೀಕರಿಸುತ್ತಿದ್ದರು

ಬಸವೇಶ್ವರರು ಮಿಗಿಸಿದ ಪ್ರಸಾದವನ್ನ ಅವರ ಸೇವಕರು ಸ್ವೀಕರಿಸುತ್ತಿದ್ದರು, ಅವರ ಸೇವಕರು ಮಿಗಿಸಿದ ಪ್ರಸಾದವನ್ನ ಕಲ್ಯಾಣದ ಅಂಗಳಕ್ಕೆ ಪ್ರಭುದೇವರ ದರ್ಶನಕ್ಕೆಂದು ಅಪಘಾನಿಸ್ತಾನದಿಂದ ಆಗಮಿಸಿದ ಮರುಳ ಶಂಕರ ದೇವ

ಚಂದ್ರಮನಿಗೆ ಚಕೋರ ಪಕ್ಷಿಯು ಹಾರೈಸಿಕೊಂಡಿರುವಂತೆ, ವಸಂತ ಋತುವನ್ನು ಕೋಗಿಲೆ ನಿರೀಕ್ಷಿಸಿದ್ದು ಕೊಂಡಿರುವಂತೆ 12 ವರ್ಷಗಳ ಕಾಲ ಮಹಾಮನೆಯ ಪ್ರಸಾದ ಕುಂಡಲದಲ್ಲಿದ್ದು ಮಿಕ್ಕ ಪ್ರಸಾದವನ್ನ ಸ್ವೀಕರಿಸಿದ.

ಆ ಶರಣರ ಮಾತನ್ನ ಕೇಳಲೇಬೇಕು

“ಜಂಗಮ ಪಾದೋದಕವ ಮಜ್ಜನವ ಮಾಡಿ,

ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ, ಶಿವ ಕಲ್ಯಾಣ ಮಾಡಿದ.

ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.

ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,

ತನಗೆ ಚೈತನ್ಯ ಜಂಗಮವೆಂದು,

ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.

ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ.

ಒಡೆಯರೊಕ್ಕುದ ತಾ ಸವಿದು,

ತನ್ನೊಕ್ಕೂದ ಮಿಕ್ಕುದ ತನ್ನ ಗೃಹಚರರಂಡು,

ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕಾಯಿತ್ತು.

ಆ ಪ್ರಸಾದ ಗುಂಡವೇ ಗೃಹವಾಗಿತ್ತು.

ಆ ಪ್ರಸಾದ ಅರ್ಪಿಸುತ್ತಲೇ ಎನ್ನ ಲಿಂಗಕ್ಕೆ ಪೂಜೆ.

ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧ ಪ್ರಸಾದವಾಯಿತ್ತು, ಮನಸ್ಸಿದ್ದ ಪ್ರಸಾದವಾಯಿತ್ತು.

ಗುರುವವಿಡಿದನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯ.

ಇನ್ನು ಬದುಕಿದೆನು ಕಾಣ,

ಶುದ್ಧ ಸಿದ್ದ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ,

ನಿಮ್ಮ ಶರಣ ಸಿದ್ದರಾಮಯ್ಯನ ಕಂಡು ಸಿಕಿಕರ್ಪೂರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.

ನಿಜವಾಗಿಯೂ ನೋಡಿದರೆ ಮನುಷ್ಯ ಬದುಕಲಿಕ್ಕಾಗಿ ಆಹಾರ ಸೇವಿಸಬೇಕು, ಆದರೆ ಆಹಾರ ಸೇವಿಸಲಿಕ್ಕಾಗಿ ಬದುಕಿರುವವರೇ ಬಹಳಜನ ಈ ಲೋಕದಲ್ಲಿ.

ಕೇವಲ ಒಕ್ಕೂ-ಮಿಕ್ಕುದ ತೆಗೆದುಕೊಳ್ಳುವವನು ಮಾತ್ರ ಪ್ರಸಾದಿಯಲ್ಲ, ಬಂದುದನ್ನು ಬೇಕು-ಬೇಡನ್ನದೆ, ಹಿತ- ಅಹಿತವೆನ್ನದೆ, ಸ್ತುತಿ-ನಿಂದೆ ಎನ್ನದೆ ಸಮಭಾವವಾಗಿ ಸ್ವೀಕರಿಸುವುದು ಪ್ರಸಾದಿಯಾದವನ ಸಲ್ಲಕ್ಷಣವೆನ್ನುವರು ಶರಣರು.

ಅದನ್ನೇ ಷಣ್ಮುಖ ಶಿವಯೋಗಿಗಳು ವಿವರಿಸುವಂತೆ :-

ಎನ್ನ ಆಗು ಹೋಗು, ಸುಖ-ದುಃಖ,ಆನಿ-ವೃದ್ಧಿ,ಭಯ-ಭೀತಿ, ಲಜ್ಜೆ-ಮೋಹ,ಸಜ್ಜನ-ಸಮತೆ,ಸಳುವು-ಸಂಚಾರ,ಚಿತ್ತ -ಸುಚಿತ್ತ,ಬುದ್ಧಿ-ಸುಬುದ್ಧಿ,ಅಹಂಕಾರ-ನಿರಹಂಕಾರ,ಭಾವ -ಸದ್ಭಾವ, ಎಡ-ಬಲ,ಮೇಲು-ಕೀಳು ಮೊದಲಾದವುಗಳೆಲ್ಲ ಪ್ರಸಾದವೆಂಬುದು ಇಂತಾಗಿ ಅಖಂಡೇಶ್ವರ             ನೀನೆಂಬ ಪ್ರಸಾದ ಸಾಗರದಲ್ಲಿ ನಾನೆಂಬುದು ಮುಳುಗಿ ನೆಲೆದಪ್ಪಿ ಹೋದೆನಯ್ಯ.

ಹೀಗೆ ಪರಿಶುದ್ಧ ಕ್ರಿಯೆಯಿಂದ ಪ್ರಸಾದಿಯು ನಡೆದುದೆ ಶಿವಪಥವೆನಿಸುತ್ತದೆ.

:-ಗುರು ಕರುಣ ತ್ರಿವಿಧಿಯಲ್ಲಿ ಪ್ರಸಾದ ತ್ರೈವಿಧವನ್ನು ಶ್ರೀ ಗುರು ಶಿಷ್ಯನಿಗೆ ಉದ್ದರಿಸುವನು

“ಶುದ್ಧ ಶೇಷವೇ ಇಷ್ಟ, ಸಿದ್ಧವೇ ಪ್ರಾಣ,    ಪ್ರಸಿದ್ಧವೇ ಭಾವ, ನಿರ್ಧರ ತ್ರೈಲಿಂಗವ

ಸಮುದ್ದರಿಪ -ಗುರುವಿಗೆ ಕೃಪೆಯಾಗು”

ಈ ಮೂರು ಪ್ರಸಾದವ ಸ್ವೀಕರಿಸುವಲ್ಲಿ ಪ್ರಸಾದದಲ್ಲಿ ನಿರ್ಧರ (ನಿಷ್ಠೆಯ) ಭಾವವಿರಬೇಕೆನ್ನುವರು ಮೈಲಾರದ ಬಸವಲಿಂಗ ಶರಣರು.

“ನಂಬಿದರೆ ಪ್ರಸಾದ;ನಂಬದಿದ್ದರೆ ವಿಷ ವೆನಿಸುವುದು”

ದೃಢನಿಷ್ಠೆಯಿಂದಲೇ ಪದಾರ್ಥವು ಪ್ರಸಾದವೆನಿಸುವುದು, ಇಂಥ ಪ್ರಸಾದಿಕ ಕ್ರಿಯೆಗಳಿಂದ, ಪ್ರಸಾದಿಕ ಪ್ರಜ್ಞೆಯಿಂದ, ಪ್ರಸಾದಿಕಾನುಭೂತಿಯಿಂದ ಅಂಗನು  ಪ್ರಸಾದ ಕಾಯನಾಗುವನು ಜೊತೆಗೆ ಯಾವಾಗಲೂ ಪ್ರಸನ್ನ ಚಿತ್ತವುಳ್ಳವನಾಗುವನು “ಪ್ರಸಾದಸ್ತು ಪ್ರಸನ್ನತಾ”.

ಆಹಾರವನ್ನು ಭಗವಂತನ ಪ್ರಸಾದವೆಂದು ಆತನಿಗೆ ಅರ್ಪಿಸಿ ತುತ್ತಿಗೊಮ್ಮೆ ಆತನನ್ನು ನೆನೆಯುತ್ತ ಉಣ್ಣಬೇಕು,

ಇದು ದೇಹ ಭಾವವನ್ನು ಕಳೆದುಕೊಂಡು ಪ್ರಸಾದ ಭಾವವನ್ನು ಅಳವಡಿಸಿಕೊಳ್ಳುವ ಸುಂದರ ಸೂತ್ರವಾಗಿದೆ

ಅದನ್ನೇ ಬಸವಣ್ಣನವರು ತಿಳಿಸುತ್ತಾರೆ

“ಮೌನದಲುಂಬುವುದು ಆಚಾರವಲ್ಲ,

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಾ ಶರಣೆನ್ನುತ್ತಿರಬೇಕು,

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡಡೆ”

ಆತನ ಕರುಣೆಯ ಸ್ಮರಣೆಯಿಂದ ಕರಣವೃತ್ತಿಗಳು ಅಂದರೆ ಇಂದ್ರಿಯವಿಕಾರಗಳು ಅರ್ಥಾತ್ ಮನಸ್ಸು ಪ್ರಸನ್ನವಾಗುತ್ತದೆ.

ಹೀಗೆ ಪ್ರಸಾದ ಸ್ವೀಕರಿಸುವಲ್ಲಿ ಮನೋನೈರ್ಮಲ್ಯ ನೆಲೆಗೊಂಡು, ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು, ಹೀಗೆ ಸ್ವೀಕರಿಸುತ್ತಾ ಬದುಕುವಲ್ಲಿ ಸಾಧಕನು ಲಿಂಗ ಭೂಗೋಪಭೋಗಿಯಾಗಿರುತ್ತಾನೆ.

ಭಗವಂತನಿಗೆ ಅರ್ಪಿಸುವದನ್ನ ಶ್ರದ್ಧೆಯಿಂದ ಅರ್ಪಿಸಬೇಕು, ಅಟ್ಟಹಾಸದಿಂದ ಅಥವಾ ಪ್ರಸಿದ್ಧಿಗೊಸ್ಕರ,ದೇವರ ಕಾಟ ಕಳೆಯಲೆಂದು ಅರ್ಪಿಸಬಾರದು.

ಅರ್ಪಣ ಮನೋಭಾವ ಸಾಧಕನಲ್ಲಿ ನೆಲೆಗೊಳ್ಳಬೇಕು. ಅರ್ಪಿಸಿದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೆ ಉಪಯೋಗಿಸಬೇಕು ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು