ಶ್ರೀ ಕುಮಾರ ತರಂಗಿಣಿ
Month: August 2025
ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.
ಆದಿ ಶ್ರೋತ್ರಂದ್ರಿಯ ನಿ |ರ್ಭೇದ ಶಬ್ದವ ಕೇಳ್ವ
ಮೋದವದು ಸುಪ್ರ- ಸಾದ ಲಿಂಗವು ಎಂದು
ಬೋಧಿಸಿದ ಗುರುದೆ ಕೃಷಿಯಾಗ ||೧೬೩||
ಐದನೆಯ ಜ್ಞಾನೇಂದ್ರಿಯ ಶ್ರೋತ್ರ, ಅರ್ಥಾತ್ ಕಿವಿ, ಆಕಾಶ ತತ್ವ ಪ್ರಧಾನವಾದುದು ಈ ಶ್ರೋತ್ರೇಂದ್ರಿಯ, ಆಕಾಶವು ಶಬ್ದ ಗುಣಕವಾಗಿರುವದರಿಂದ ಶ್ರೋತ್ರಕ್ಕೂ ಶಬ್ದದ ಅನುಭವವಾಗುತ್ತದೆ. “ಆತ್ಮನಃ ಆಕಾಶ ಸಂಭೂತಃʼʼ ಆತ್ಮನಿಂದ ಆಕಾಶವು ಮೊಟ್ಟಮೊದಲು ಹುಟ್ಟಿದ್ದರಿಂದ ಶಿವಕವಿಯು “ಆದಿ ಶ್ರೋತ್ರೇಂದಿ” ಎಂದು ಪ್ರಯೋಗಿಸಿದ್ದಾರೆ. ಶ್ರೋತ್ರೇಂದಿಯಕ್ಕೆ ಆದಿಪಟ್ಟ ಬಂದಿದೆ. ಮತ್ತು ಶಿವನು ನಾದ – ಬಿಂದು ಕಲಾಸ್ವರೂಪನು. ಅವರ ಮೊದಲನೇ ತತ್ವ ”ನಾದ”ವು ಕಿವಿಗೆ ತಾನೇ ವೇದ್ಯವಾಗುವದಿಲ್ಲವೆ !
“ನಿರ್ಭೇದ’ ಶಬ್ದದ ಅರ್ಥ ವಿಧವಿಧವಾಗಿದೆ, (೧) ಎರಡುಮಾಡು ೨) ಒಡೆ ೩) ಬೈಲಿಗೆ ಹಾಕು ೪) ಸ್ಪಷ್ಟಭಾಷಣ ) ೫)ನಾಷ ೬) ಪ್ರಲಯ ಮುಂತಾದವುಗಳು ನಿರ್ಭೇದ ಪದದ ಪರ್ಯಾಯನಾಮಗಳು. ಪ್ರಸ್ತುತ ತ್ರಿಪದಿಯಲ್ಲಿ ನಿರ್ಭೇದಕ್ಕೆ ಸ್ಪಷ್ಟವಾದ ಶಬ್ದವೆಂದೇ ಹೇಳಬೇಕು. ಯಾಕಂದರೆ ಶಬ್ದಗಳು – ಭಿನ್ನ ಭಿನ್ನವಾಗಿರುವದರಿಂದ ಕೇಳುವಿಕೆಯಲ್ಲಿ ಸ್ಪಷ್ಟತೆಯಿರಬೇಕಾಗುವದು. ಮುಖ್ಯವಾಗಿ ಶಬ್ದವನ್ನು ಐದು ತೆರನಾಗಿ ವಿಭಾಗಿಸಬಹುದು. ೧) ತಾಳವಾದ್ಯ ಕಂಸಾಳಾದಿಗಳಿಂದ ಜನ್ಯಶಬ್ದ ೨) ತಂತೀವಾದ್ಯದಿಂದ ಹೊರಡುವ ಶಬ್ದ.೩) ಕುಡುಹು (ಚರ್ಮವಾದ್ಯ) ವಿಡಿದು ಬರುವ ಶಬ್ದ ೪) ಕೊಳಲು, ವಾಸುಗಿ, ನಾಗಸರ, ಶಂಖ ಮೊದಲಾದವುಗಳಿಂದ ಹುಟ್ಟುವ ಶಬ್ದ. ೫) ವಚನ, ಗೀತರೂಪವಾದ ಶಬ್ದ. ಈ ಶಬ್ದಗಳನ್ನು ಪ್ರತ್ಯೇಕವಾಗಿ ಗ್ರಹಿಸುವ ಆನಂದವೇನಿದೆಯೋ ಅದು ಪ್ರಸಾದಲಿಂಗಕ್ಕೆ ಸಲ್ಲುವದೆಂದು ಗುರು ಬೋಧಿಸುತ್ತಾನೆ.
ಸಾಮಾನ್ಯ ಶಬ್ದವು ಪ್ರಸಾದಲಿಂಗಕ್ಕೆ ಸಲ್ಲುತ್ತಿದ್ದರೆ, ವಿಭಾಗಿಸಲ್ಪಡುವ ವಿವಿಧ ಶಬ್ದಗಳು ಪ್ರಸಾದಲಿಂಗದೊಳಗಿನ ಷದ್ವಿಧ ಲಿಂಗಗಳಿಗೆ ಸಮರ್ಪಣವಾಗುವಂತಾಗಬೇಕು. ಅರ್ಥಾತ್ ಸುಜ್ಞಾನದಿಂದ ವಿಭಿನ್ನ ಶಬ್ದಗಳನ್ನು ಗುರುತಿಸಿ ಆಯಾಲಿಂಗಕ್ಕೆ ಶಬ್ದ ಪ್ರಸಾದವನ್ನಾಗಿ ಸಮರ್ಪಿಸುವದು ಶರಣನ ಮಣಿಹವಾಗಿದೆ. ಪ್ರಸಾದಲಿಂಗವು ಶರಣನಿಂದ ಪೂಜೆಗೊಂಬುವಂಥಹದು. ಶರಣಸ್ಥಲಕ್ಕೆ ಏರಿ ನಿಂತವನು ನಿರ್ಭೇದ ಶಬ್ದವನ್ನು ಅರಿಯುತ್ತಾನೆ. ಅಂದರೆ ದೇಹಾವಸಾನದ, ಅರ್ಥಾತ್ ಅಂತಿಮಾವವಸ್ಥೆಯ ಸಾಗರಘೋಷದಂತಹ ಶಬ್ದವನ್ನು ಸಹ ತಿಳಿಯಲು ಸಮರ್ಥನಾಗುತ್ತಾನೆಂದು ಹೇಳಬಹುದು. ಈ ಶರಣನು ತನ್ನ ಶರೀರಾವಸಾನದ ಸೂಚನೆಯನ್ನು ತಿಳಿದು ಕೊಳ್ಳುವನು. ಅಂತೆಯೇ ‘ಶರಣನ ಗುಣ ಮರಣದಲ್ಲಿ ಕಾಣು” ಎಂದು ಅನುಭವಿಗಳು ನುಡಿದುದುಂಟು.
ಚನ್ನ ಬಸವಣ್ಣನವರ ಪ್ರಸಾದಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣ ಕೆಳಗಿನಂತಿದೆ. ”ತಾಳ-ಕಂಸಾಳವಿಡಿದು ಹುಟ್ಟಿದ ಶಬ್ದವನರಿವುದು ಆಚಾರಲಿಂಗದಲ್ಲಿ ,ತಂತಿವಿಡಿದು ಹುಟ್ಟಿದ ಶಬ್ದವನರಿವುದು ಗುರುಲಿಂಗದಲ್ಲಿ; ಕುಡುಹುವಿಡಿದು ಹುಟ್ಟಿದ ಶಬ್ದವನರಿವುದು ಶಿವಲಿಂಗದಲ್ಲಿ; ಕೊಳಲು, ವಾಸುಗಿ, ನಾಗಸರ; ಶಂಖದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಜಂಗಮಲಿಂಗದಲ್ಲಿ: ವಚನಗೀತದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಪ್ರಸಾದಲಿಂಗದಲ್ಲಿ ; ಇಂತಿವೆಲ್ಲದರಲ್ಲಿಯ ಹುಟ್ಟಿದ ಶಬ್ದವನರಿವುದು ಮಹಾಲಿಂಗದಲ್ಲಿ”
ಈ ರೀತಿಯಾಗಿ ಹುಟ್ಟಿದ ಶಬ್ದಗಳನ್ನು ಪ್ರಸಾದಲಿಂಗದೊಳಗಿನ ಆಚಾರಾದಿ ಲಿಂಗದಲ್ಲಿ ಮನನಮಾಡಿಕೊಳ್ಳಬೇಕು. ಶಬ್ದ ಪ್ರಸಾದವನ್ನು ಆಯಾಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನರಿಯಬೇಕು. ಶಬ್ದವು ನಿಃಶಬ್ದವಾಗಿ ಮಂತ್ರವಾಗ ಬೇಕು. ಆಗ ಸದಾಕಾಲವೂ ಕಿವಿಯಲ್ಲಿ ಪ್ರಸಾದಲಿಂಗದ ಸಾಕ್ಷಾತ್ಕಾರವಾಗುವದು. ಗುರುವೆ ! ಎನ್ನ ಶ್ರೋತ್ರವನ್ನು ಪ್ರಸಾದಲಿಂಗವನ್ನಾಗಿಸುವಂತೆ ಕರುಣಿಸು.
*ಹೃದಯೇಂದ್ರಿಯದಿ ಪಂಚ | ವಿಧ ವಿಷಯ ಸುಖ ಮಿಶ್ರ
ಮುದದಿ ಭೋಗಿಪುದು-ಸದಮಲ ಮಹಲಿಂಗವೆಂ
ಬುದ ಪೇಳ್ದ ಗುರುವೆ ಕೃಪೆಯಾಗು ||೧೬೪||
ಐದು ಜ್ಞಾನೇಂದ್ರಿಯಗಳ ವಿಷಯಗಳ ತೃಪ್ತಿಯನ್ನು ಪಡೆಯುವದು ಹೃದಯೇಂದ್ರಿಯವು. ಇದು ಆತ್ಮತತ್ವದಿಂದ ಬಂದುದು. ಈ ಹೃದಯದಲ್ಲಿ ಮಹಾಲಿಂಗನ ವಾಸವಿರುವದು. ಘ್ರಾಣದೊಳಗಿನ ಆಚಾರಲಿಂಗಕ್ಕೆ ಗಂಧವು, ಜಿಹ್ವೆಯೊಳಗಿನ ಗುರುಲಿಂಗಕ್ಕೆ ರಸವು, ನೇತ್ರದೊಳಗಿನ ಶಿವಲಿಂಗಕ್ಕೆ ರೂಪವು ,ತ್ವಕ್ಕಿನೊಳಗಿನ ಜಂಗಮಲಿಂಗಕ್ಕೆ ಸ್ಪರ್ಶನವು, ಶ್ರೋತ್ರದೊಳಗಿನ ಪ್ರಸಾದಲಿಂಗಕ್ಕೆ ಶಬ್ದವು ಸಮರ್ಪಿಸಲ್ಪಡುತ್ತಿದ್ದರೆ ಈ ಪಂಚಜ್ಞಾನೇಂದ್ರಿಯಗಳೊಳಗಿನ ಪಂಚಲಿಂಗಗಳಿಗೆ ಸಲ್ಲುವ ಪಂಚಪ್ರಸಾದದ ಮಿಶ್ರತೃಪ್ತಿಯು ಹೃದಯದೊಳಗಣ ಮಹಾಲಿಂಗಕ್ಕೇನೆ ಆನಂದಗೊಳಿಸುವದು. ಇಂದ್ರಿಯಗಳು ಲಿಂಗಮುಖವಾಗಿ ವಿಷಯಗಳನ್ನು ಪ್ರಸಿದ ಗೊಳಿಸಿ ಭೋಗಿಸುವದರಿಂದ ಆತ್ಮನು ಆನಂದಗೊಳ್ಳುವನು. ಇಂಥ ಸುಜ್ಞಾನಿಯಾದ ಶಿವಭಕ್ತನು ಸದಾಕಾಲವೂ ಆನಂದತುಂದಿಲನಾಗಿರುವನು. ಅವನ ಪ್ರಾಣಲಿಂಗಕ್ಕೆ ಸಂತೃಪ್ತಿಯಾಗುವದು. ಪಂಚಜ್ಞಾನೇಂದ್ರಿಯಗಳಲ್ಲಿ ಪಂಚಲಿಂಗಗಳನ್ನು ಸ್ಮರಿಸಿ ಸುಜ್ಞಾನದಿಂದ ಪಂಚ ವಿಷಯಗಳನ್ನು ಪಂಚಪ್ರಸಾದಗಳನ್ನಾಗಿಸಿ ಸ್ವೀಕರಿಸುವದರಿಂದ ಯಾವಾಗಲೂ ಪವಿತ್ರವಾದ ಮಹಾಲಿಂಗವು ಆನಂದ ಹೊಂದುವದು. ಈ ತೆರನಾಗಿ ಭೋಗಿಸುವ ಕಲೆಯನ್ನು ಕರಗತಮಾಡಿಕೊಂಡರೆ ವಿಷಯಗಳ ಪೂರ್ವಾಶ್ರಯವು ಅಳಿಯುವದು. ಅಲ್ಲದೆ ಜ್ಞಾನೇಂದ್ರಿಯಗಳ ಪ್ರಾಕೃತಿಕ ಧರ್ಮವೂ ಬಯಲಾಗಿ ಲಿಂಗಸಂಬಂಧವನ್ನು ಪಡೆಯಬಲ್ಲವು. ಆಗ ಲಿಂಗಭಕ್ತನು ಪ್ರಸಾದಕಾಯನಾಗಿ ಪ್ರಸನ್ನಚಿತ್ತನಾಗುವದರಲ್ಲಿ ಸಂಶಯವಿಲ್ಲವೆಂದು ಗುರುನಾಥನು ಉಪದೇಶಿಸುತ್ತಾನೆ.
ಮಿಶ್ರಾರ್ಪಣದಲ್ಲಿ ಮಹಾಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣವನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗಂಧದ ತೃಪ್ತಿಯನರಿಯುವದು ಆಚಾರಲಿಂಗದಲ್ಲಿ, ರಸದತೃಪ್ತಿಯನರಿವುದು ಗುರುಲಿಂಗದಲ್ಲಿ; ರೂಪಿನ ತೃಪ್ತಿಯನರಿವುದು ಶಿವಲಿಂಗದಲ್ಲಿ; ಸ್ಪರ್ಶನತೃಪ್ತಿಯನರಿವುದು ಜಂಗಮಲಿಂಗದಲ್ಲಿ, ಶಬ್ದದ ತೃಪ್ತಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ತೃಪ್ತಿಯನರಿವುದು ಮಹಾಲಿಂಗದಲ್ಲಿ’ ಮಹಾಲಿಂಗದೊಳಗಿನ ಆಚಾರ ಲಿಂಗವು ಗಂಧಪ್ರಸಾದದ ತೃಪ್ತಿಯನ್ನು, ಗುರುಲಿಂಗವು ರಸಪ್ರಸಾದದ ತೃಪ್ತಿಯನ್ನು, ಶಿವಲಿಂಗವು ರೂಪುಪ್ರಸಾದ ತೃಪ್ತಿಯನ್ನು, ಜಂಗಮಲಿಂಗವು ಸ್ಪರ್ಶಪ್ರಸಾದ ತೃಪ್ತಿಯನ್ನು, ಪ್ರಸಾದಲಿಂಗವು ಶಬ್ದಪ್ರಸಾದ ತೃಪ್ತಿಯನ್ನು ಅನುಭವಿಸುತ್ತವೆ. ಇವೆಲ್ಲವುಗಳ ಸಂತೃಪ್ತಿಯು ಮಹಾಲಿಂಗದೊಳಗಿನ ಮಹಾಲಿಂಗಕ್ಕೆ ಸಲ್ಲುವದು. ಓ ಗುರುವೆ ಇಂಥ ಮಹದಾನಂದವನ್ನು ಹೊಂದುವ ಸೌಭಾಗ್ಯವನ್ನು ಸಮನಿಸುವಂತೆ ಹರಸು
ಜ.ಚ.ನಿ
ಶಿಲ್ಪಿಗಳಲ್ಲಿ ಶಿಲಾಶಿಲ್ಪಿಯೆ ಪ್ರಸಿದ್ದ. ಈತನು ಜಾತಿಯ ಶಿಲೆಯನ್ನು ತೆಗೆದುಕೊಂಡು ತನ್ನ ಅಂತಸ್ಥವಾದ ಕಲೆಯನ್ನು ಅದರಲ್ಲಿರಿಸಿ ಅದನ್ನು ಕಲಾಮೂರ್ತಿಯನ್ನಾಗಿ ಮಾಡಬಲ್ಲನು, ಮಾಡುತ್ತಾನೆ.
ಕ್ರಿಯಾಶಿಲ್ಪಿಯಾದ ಕುಮಾರಯೋಗಿಯು ಅನೇಕ ಶಿಲಾವರ್ಗದ ಮನುಷ್ಯರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದ ಕಡೆದು ಕಡೆದು ಮೂರ್ತಿಗಳನ್ನಾಗಿ ಮಾಡಿದನು. ಶಿಲಾಶಿಲ್ಪಿಗಿಂತಲು ಕ್ರಿಯಾಶಿಲ್ಪಿಯ ಕೌಶಲ್ಯ ಹೆಚ್ಚಿನದು; ಕಷ್ಟ ಹೆಚ್ಚಿನದು, ಶಿಲಾಶಿಲ್ಪಿಗೆ ಶಿಲೆಯು ವಶಂಗತವಾಗಿರುತ್ತದೆ. ಅದರಂತೆ ಕ್ರಿಯಾಶಿಲ್ಪಿಗೆ ಶಿಲಾವರ್ಗದ ಮನುಷ್ಯರ ಮನಸ್ಸು ವಶವರ್ತಿಯಾಗುವುದು ತೀರ ಕಷ್ಟದ ಮಾತು. ಕ್ರಿಯಾಶಿಲ್ಪಿಯು ತಾನೊಂದು ನೆನೆದರೆ ಶಿಷ್ಯನು ಮತ್ತೊಂದನ್ನು ನೆನೆಯುತ್ತಿರುತ್ತಾನೆ. ಅಂಥವರ ಮನಸ್ಸನ್ನು ಪರಿಪಾಲಿಸುವುದೆ ಪರಮ ಸಾಹಸದ ಕೆಲಸ, ಶಿಲಾಶಿಲ್ಪಿಯ ಉಳಿಯ ಹೊಡೆತ ಶಿಲೆಯಲ್ಲಿ ನೇರವಾಗಿ ಮೂಡುತ್ತದೆ. ಕ್ರಿಯಾಶಿಲ್ಪಿಯ ಹಿತನುಡಿಯ ಪರಿಣಾಮ ಶಿಷ್ಯನ ಮನಸ್ಸಿನ ಮೇಲೆ ಒಮ್ಮಿಗೆ ಮೂಡಲರಿಯದು.
ಶಿಲಾವರ್ಗದ ಮನುಷ್ಯರನ್ನು ಮಾನವತ್ವದ ಮಟ್ಟಕ್ಕೆ ತಂದು ಮೂರ್ತಿವಂತರನ್ನಾಗಿ ಮಾಡುವುದು ಇದೂ ಒಂದು ಶಿಲ್ಪಕಲೆ. ದುಸ್ವಭಾವಗಳನ್ನು ದೂರೀಕರಿಸಿ ಸುಸ್ವಭಾವ-ಸ್ವಾನುಭಾವಗಳನ್ನು ಬೋಧಿಸಿ ಶಾಂತಿ-ಸೌಹಾರ್ದ್ರ ಕಳೆಗಳನ್ನು ತುಂಬಿ ತೋರುವಂತೆ ಎಸಗುವುದು ಒಂದು ಸಜೀವ ಸೋಜ್ವಲ ಶಿಲ್ಪಕಲೆ; ಪ್ರವಾಹಿ ಕಲೆ. ಇದರಲ್ಲಿ ಹಸ್ತ ನೈಪುಣ್ಯಕ್ಕಿಂತ ಭಾವ ನೈಪುಣ್ಯ ಪ್ರಧಾನವಾದುದು; ಪ್ರಯುಕ್ತವಾದುದು.
ಶಿಲಾಶಿಲ್ಪಿಯು ಬಹಿರಂಗಗಳನ್ನು ನಿರ್ಮಿಸಬಲ್ಲನು. ಮಾನವೋನ್ನತಿ ಗೈಯುವ ಶಿಷ್ಟ ಶಿಲ್ಪಿಯು ಅಂತರಂಗವನ್ನು ಅಲಂಕರಿಸಬಲ್ಲನು ; ತಿದ್ದಿ ಶುದ್ಧಗೊಳಿಸಬಲ್ಲನು. ಎರಡನೆಯದಾಗಿ ವಸನಾಭರಣಗಳನ್ನು ಉಡಿಸಿ ತೊಡಿಸುವುದರಲ್ಲಿ ಶಿಲಾಶಿಲ್ಪಿಯ ನೈಪುಣ್ಯವಿದ್ದರೆ, ಗುಣಾಭರಣಗಳನ್ನು ತೊಡಿಸುವುದರಲ್ಲಿ ಶಿಷ್ಟಶಿಲ್ಪಿಯ ಪುಣ್ಯಪ್ರಭೆ ಕಾರಣವಾಗಿರುತ್ತದೆ. ಉಡಿಗೆಯಿಲ್ಲದೆ ಬರೀತೊಡಿಗೆಗಳಿಂದ ಅಲಂಕರಿಸಿದ ಶಿಲ್ಪಕಲೆಗಳಿಗೇನು ಕೊರತೆಯಿಲ್ಲ. ಬೇಲೂರು, ಹಳೆಬೀಡುಗಳನ್ನು ನೋಡಿದವರಿಗೆ ಬೇರೆ ನಿದರ್ಶನಬೇಕಿಲ್ಲ. ಈ ಸಂವಿಧಾನವು ಶಿಷ್ಟಶಿಲ್ಪಿಯ ಕಲೆಗೆ ಸಾದೃಶ್ಯವಾಗಿದೆ; ಸಂಗ್ರಾಹ್ಯವಾಗಿದೆ. ಏಕೆಂದರೆ ಅಂತರಂಗದ ಆತ್ಮನಿಗೆ ಗುಣಾಭರಣದ ವಿನಹ ವಸನಾಭರಣದ ಹಂಗೆಲ್ಲಿ, ಏತಕ್ಕೆ ?
ಶಿಲಾಶಿಲ್ಪಿಯದು ಜಡವಾದ ಕಲೆ, ಕ್ರಿಯಾಶಿಲ್ಪಿಯದು ಅಜಡವಾದ ಕಲೆ. ಶಿಲಾಶಿಲ್ಪಿಯು ಶಿಲೆಯಲ್ಲಿ ಬರೀ ಲಾವಣ್ಯವನ್ನು ಕುದುರಿಸುತ್ತಾನೆ. ಶಿಷ್ಟಶಿಲ್ಪಿಯು ಮಾನವನಲ್ಲಿ ಪುಣ್ಯಲಾವಣ್ಯವನ್ನು ಕೆತ್ತುತ್ತಾನೆ. ಶಿಲಾಶಿಲ್ಪಿಯ ಕಲೆ ಕಾಲಕ್ಕೊಳಗಾಗುತ್ತದೆ. ಕ್ರಿಯಾಶಿಲ್ಪಿಯ ಕಲೆ ಕಾಲಾತೀತವಾಗಿರುತ್ತದೆ.
ಕುಮಾರೇಶನ ಕ್ರಿಯಾಶಕ್ತಿನಿಶಿತವಾದುದು; ನಿತಾಂತವಾದುದು ಅದುದರಿಂದಲೆ ಯಾರಿಂದಲು ಸುಧಾರಿಸಲು ಶಕ್ಯವಿಲ್ಲದ ಅನೇಕರು ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕು ಮುದ್ದಾದ ಮೂರ್ತಿವಂತರಾದರು; ಕೊನೆಯಿಲ್ಲದ ಕೀರ್ತಿವಂತರಾದರು.
ಸರಿಯಾಗಿ ಓದು ಬಾರದವರು ಅವರ ಕೈಯಲ್ಲಿ ಶ್ರೇಷ್ಟ ಶಿವಾನುಭವಿಗಳಾದರು. ಬರೆಯಬಾರದವರು ಪ್ರಸಿದ್ಧ ಲೇಖಕರಾದರು. ಚನ್ನಾಗಿ ಮಾತನಾಡಲು ಬಾರದವರು ವಾಗ್ಮಿಗಳಾದರು; ವ್ಯಾಖ್ಯಾತೃಗಳಾದರು; ಕೀರ್ತನ ಕಲಾವಿದರಾದರು. ಸಂಗೀತದ ಗಂಧವನರಿಯದವರು ‘ಸಂಗೀತ ಸಾಗರ’ವಾದರು. ಸಂಸಾರಿಗಳಾಗಬೇಕಾದವರು ಸನ್ಯಾಸಿಗಳಾದರು. ಪಶುಗಾಯಿಗಳಾಗಬೇಕಾದವರು ಪಾಠಶಾಲಾಧ್ಯಾಪಕರಾದರು. ರಾಗಿಗಳು ವಿರಾಗಿಗಳಾದರು. ಕೃಪಣರು ತ್ಯಾಗಿಗಳಾದರು. ರೋಗಿಗಳು ನಿರೋಗಿಗಳಾದರು. ಭವಿಗಳು ಭಕ್ತರಾದರು. ಗುಣಹೀನರು ಗುಣಿಗಳಾದರು.
ಸುಳಿವು ಸರಿಯಾಗಿಲ್ಲದ ಶಿಲೆಗಳು ಶಿಲ್ಪಿಯ ಕೈಗೆ ಸೇರಿದರು ಮೂರ್ತಿಗಳಾಗುವ ಭಾಗ್ಯವಿಲ್ಲದೆ ಒಡೆದು ಹೋಗುವಂತೆ, ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕಿದ ಕೆಲವರು ಕರ್ಮಬಲದಿಂದ ಕಲಾಹೀನರಾದರು. ಕನಿಷ್ಠ ಬಾಳು ಬಾಳಿದರು. ಯಾವುದನ್ನು ಪುಣ್ಯ ಬೇಕು; ಭಾಗ್ಯ ಬೇಕು.
ಅಂಥವರ ವಿಷಯದಲ್ಲಿ ಸ್ವಾಮಿಗಳವರು ಒಮ್ಮೊಮ್ಮೆ ನೆನೆದು ಮನಸಾರೆ ಮರುಗುತ್ತಿದ್ದರು. ಮತ್ತೊಮ್ಮೆ “ಸಗಣಿಯ ಬೆನಕಂಗೆ ಸಂಪಿಗೆಯ ಅರಳಲ್ಲಿ ಪೂಜಿಸಿದರೆ ರಂಜನೆ ಅಹುದಲ್ಲದೆ ಅದರ ಗಂಜಳ ಬಿಡದಣ್ಣ… ಎಂಬ ಬಸವೇಶ್ವರನ ವಚನವನ್ನು ನೆನೆದು ಸುಮ್ಮನಾಗುತ್ತಿದ್ದರು; ನೆಮ್ಮದಿಗೊಳ್ಳುತ್ತಿದ್ದರು.
ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
ವ್ಯಕ್ತಿಯ ಜೀವನದಲ್ಲಿ ಹರಕೆ-ಹಾರೈಕೆಗಳೆರಡಕ್ಕೂ ವಿಶೇಷ ಮಹತ್ವವಿದೆ. ‘ಹರಕೆ ಇದರ ಶಾಬ್ದಿಕ ಅರ್ಥ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆ, ಸಂಕಲ್ಪ ಅಥವಾ ಅಭೀಷ್ಟ ಸಿದ್ದಿಸಿದ ಮೇಲೆ ದೇವರಿಗೆ ಅರ್ಪಿಸುವ ವಸ್ತು ಎಂದಿದ್ದರೂ ದೇವರಲ್ಲಿ ಬೇಡಿಕೊಳ್ಳುವುದು (ಉದಾಹರಣೆಗೆ ಹರಕೆ ಹೊರುವುದು) ಎಂಬ ಅರ್ಥದಲ್ಲಿಯೂ ಈ ಶಬ್ದವನ್ನು ಬಳಸಿಕೊಳ್ಳುತ್ತೇವೆ. ದೇವರಲ್ಲಿ ಬೇಡಿಕೊಳ್ಳುವ, ಮೊರೆ ಇಡುವ ಕ್ರಿಯೆಗೆ ನಾವು ಪ್ರಾರ್ಥನೆ ಎನ್ನುತ್ತೇವೆ. ಆಗ ಹರಕೆಯ ಅರ್ಥ ಪ್ರಾರ್ಥನೆ ಎಂದಾಗುತ್ತದೆ. ನಾವು ಪರಮಾತ್ಮನ ಕೃಪೆಗಾಗಿ, ಮನಸ್ಸನ್ನು ನಿರ್ಮಲಗೊಳಿಸುವುದಕ್ಕಾಗಿ, ಹೃದಯಶುದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತೇವೆ. ಬದುಕುವುದಕ್ಕೆ ಆಧಾರಭೂತವಾದ ಅನ್ನ, ನೀರು, ಭೂಮಿ, ಗಾಳಿ ಇತ್ಯಾದಿ ಸರ್ವಸ್ವವನ್ನು ದಯಪಾಲಿಸಿದ ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯೂ ಪ್ರಾರ್ಥನೆ ಎನಿಸುವುದು. ಸರ್ವಶಕ್ತನಾದ ಸರ್ವವ್ಯಾಪಿಯಾದ ಭಗವಂತನಲ್ಲಿ ನಮ್ಮ ದೋಷ ದೌರ್ಬಲ್ಯಗಳನ್ನು ಸಮರ್ಪಿಸಿ, ಸದ್ಗುಣ ಸಂಪನ್ನರಾಗಿ ಬದುಕುವುದಕ್ಕೆ ಹಾಗೆಯೇ ಕ್ಷಣಿಕ ಸುಖಭೋಗಗಳನ್ನು ತ್ಯಾಗ ಮಾಡಿ ಆತ್ಮೋನ್ನತಿಯನ್ನು ಹೊಂದುವುದಕ್ಕೆ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲೇಬೇಕು. ಸತ್ಸಂಕಲ್ಪದ ಸಾಧನೆಗಾಗಿ ನಾವು ಮಾಡುವ ಪ್ರಾರ್ಥನೆಯಲ್ಲಿ ಅಚಲ ಶ್ರದ್ಧೆ ಹಾಗೂ ವಿಶ್ವಾಸಗಳು ಇರಬೇಕಾದುದು ಅತ್ಯವಶ್ಯ. ಅಚಲ ಶ್ರದ್ಧೆಯುಳ್ಳ ಉಪನಿಷತ್ಕಾಲದ ಗುರುಶಿಷ್ಯರು ಭಗವಂತನನ್ನು ಪ್ರಾರ್ಥಿಸುವ ಮಾದರಿಯೊಂದು ಹೀಗಿದೆ:
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಂಗೈಸ್ತು಼ಷ್ಟುವಾಂಸಸ್ತನೂಬಿಃ
ವ್ಯಶೇಮ ದೇವಹಿತಂ ಯದಾಯುಃ (ಪ್ರಶೋಪನಿಷತ್)
‘ದೇವತೆಗಳೇ! ನಾವು ನಮ್ಮ ಕಿವಿಗಳಿಂದ ಕಲ್ಯಾಣಕಾರಕ ವಚನಗಳನ್ನೇ ಕೇಳುವಂತಾಗಲಿ, ಕಣ್ಣುಗಳಿಂದ ಮಂಗಳಕರವಾದುದನ್ನೇ ನೋಡುವಂತಾಗಲಿ. ನಮ್ಮ ಶರೀರದ ಪ್ರತಿಯೊಂದು ಅವಯವವೂ ಸದೃಢವಾಗಿರಲಿ, ಅವುಗಳ ಸಹಾಯದಿಂದ ನಮ್ಮ ಆಯುಷ್ಯದುದ್ದಕ್ಕೂ ಭಗವಂತನ ನಾಮಸ್ಮರಣೆ ಮಾಡುವಂತಾಗಲಿ’ ಇದೊಂದು ಪ್ರಾರ್ಥನೆ (ಹರಕೆ)ಯ ಅತ್ಯುತ್ತಮ ಮಾದರಿ. ಇಲ್ಲಿ ನಿಂದೆ, ಚಾಡಿ, ಬೈಗುಳ ಅಥವಾ ಪಾಪದ ಮಾತುಗಳನ್ನು ಕೇಳಬಾರದೆಂಬ, ಅಮಂಗಲಕಾರಿ ಮತ್ತು ಪತನಕ್ಕೆ ಕಾರಣವಾಗುವ ದೃಶ್ಯಗಳನ್ನು ನೋಡಬಾರದೆಂಬ ಗುರು-ಶಿಷ್ಯರ ಆಶಯವನ್ನು ಗುರುತಿಸಬೇಕು. ನಮ್ಮ ಹರಕೆ ಅಥವಾ ಪ್ರಾರ್ಥನೆಯೂ ಹೀಗಿದ್ದರೆ ಒಳ್ಳೆಯದಲ್ಲವೆ? ʼಹಾರೈಕೆ’ಯೂ ಕೋರಿಕೆ, ಬಯಕೆ ಇತ್ಯಾದಿ ಅರ್ಥಗಳನ್ನು ಹೊಂದಿದ ಸುಂದರ ಶಬ್ದ. ಒಳ್ಳೆಯದನ್ನು ಬಯಸುವುದಕ್ಕೆ, ಶುಭವನ್ನು ಕೋರುವುದಕ್ಕೆ ನಾವು ‘ಹಾರೈಕೆ’ ಎಂಬ ಪದಪ್ರಯೋಗ ಮಾಡುತ್ತೇವೆ. ನಮ್ಮ ಹಾರೈಕೆಯೂ ಪರಿಶುದ್ಧ ಅಂತಃಕರಣದಿಂದ, ಮಾನವ ಕಲ್ಯಾಣದ ಆಶಯದಿಂದ ಬಂದುದಾಗಿರಬೇಕು. ಉಪನಿಷತ್ಕಾಲದ ಋಷಿಗಳು ವ್ಯಕ್ತಗೊಳಿಸಿದ ಹಾರೈಕೆಯಲ್ಲಿ ನಾವು ಅಂತಹ ಆಶಯವನ್ನು ಕಾಣಬಹುದಾಗಿದೆ-
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ
ಏವಂ ತ್ವಯಿ ನಾನ್ಯಥೇತೋsಸ್ತಿ ನಕರ್ಮ ಲಿಪ್ಯತೇ ನರೇ ! (ಈಶೋಪನಿಷತ್)
ಈ ಜಗತ್ತಿನಲ್ಲಿ ಸರ್ವಶಕ್ತ ಪರಮಾತ್ಮನ ಧ್ಯಾನ ಮಾಡುತ್ತ ಅರ್ಥಾತ್ ಎಲ್ಲವೂ ಅವನದೇ ಎಂದು ಪರಿಭಾವಿಸಿ, ಅವನ ಸೇವೆ(ಪೂಜೆ)ಗಾಗಿ ಶಾಸ್ತ್ರನಿಯತವಾದ ಕರ್ಮ(ಕರ್ತವ್ಯ)ಗಳನ್ನು ನಿರ್ವಹಿಸುತ್ತ, ನೂರು ವರ್ಷಗಳವರೆಗೆ ಬದುಕುವ ಇಚ್ಛೆಯುಳ್ಳವನಾಗು. ಕರ್ಮಗಳನ್ನು ಮಾಡುತ್ತ ಕರ್ಮಗಳಿಗಂಟಿಕೊಳ್ಳದೆ ಭವಬಂಧನದಿಂದ ಮುಕ್ತನಾಗುವ ಮಾರ್ಗ ಇದಕ್ಕಿಂತ ಬೇರೊಂದಿಲ್ಲ. ಇಲ್ಲಿ ಶಾಸ್ತ್ರನಿಯತ ಕರ್ಮಗಳನ್ನು ಮಾಡುತ್ತ ಜೀವನ ನಿರ್ವಹಣೆ ಮಾಡುವುದು ಯಾವುದೇ ಸ್ವಾರ್ಥಕ್ಕಾಗಿ ಅಥವಾ ವಿಷಯ ಭೋಗಕ್ಕಾಗಿ ಅಲ್ಲ; ತಾಪತ್ರಯಗಳಿಂದ ಭವಬಂಧನದಿಂದ ಮುಕ್ತನಾಗುವುದಕ್ಕಾಗಿ. ಈ ಕಾರಣಕ್ಕಾಗಿಯೇ ಪೂರ್ಣ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಬೇಕೆನ್ನುವ ಆಶಯ ಹೊಂದಿದ ಋಷಿಗಳ ಮಾನವೀಯ ಕಳಕಳಿ ನಮಗೆ ಮುಖ್ಯವಾಗುತ್ತದೆ.
ಲೇಖಕರು ಶ್ರೀ ಮ.ನಿ.ಪ್ರ. ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು .ಓಲೆಮಠ.ಜಮಖಂಡಿ
ಕನ್ನಡ ನಾಡಿನ ಪುಣ್ಯ ವಿಶೇಷವೆಂದರೆ, ಕುಮಾರ ಶಿವಯೋಗಿಗಳಂಥ ಮಹಿಮಾಶಾಲಿಗಳು ಉದಯರಾದದ್ದು. ಲೋಕಬೆಳಗಲು ರವಿಬೇಕು; ಆಧ್ಯಾತ್ಮಲೋಕ ಬೆಳಗಲು ಶ್ರೀ ಕುಮಾರ ಶಿವಯೋಗಿಗಳಂಥ ಚಿದ್ಬೆಳಕು ಬೇಕು. ಬಸವಾದಿ ಶಿವಶರಣರ ತರುವಾಯು ಆ ಆಧ್ಯಾತ್ಮ ಬೆಳಕನ್ನು ಬೆಳಗಿಸಿದವರು ಲಿಂಗೈಕ್ಯ ಹಾನಗಲ್ಲ ಪರಮಪೂಜ್ಯ ಶ್ರೀ ಕುಮಾರ ಶಿವಯೋಗಿಗಳು.
ಶರಣರು ಸಮಷ್ಟಿಗಾಗಿ ದುಡಿದಂತೆ ; ಕುಮಾರ ಶಿವಯೋಗಿಗಳು ವ್ಯಷ್ಟಿಯಾಗಿ ಸಮಷ್ಟಿಯನ್ನು ಕಟ್ಟಿ; ಸಮಷ್ಟಿಯ ಶ್ರೇಷ್ಠತೆಯನ್ನು ಸಮಷ್ಟಿಗೆ ಅರುಹಿ ಶ್ರೇಷ್ಠತೆಯ ಶಿಖರ ಕಟ್ಟಲು ಆಗ ಅವರಿಗೆ ಅವರ ಅರಿವೇ, ಒಂಟಿ ಸಲಗ. ವಿಶೇಷ ಸವಲತ್ತುಗಳೇ ಇಲ್ಲದ ಹಳ್ಳಿಯಲ್ಲಿ ಉದಿಸಿದರು. ಯಾರೂ ಕೇಳುವವರೇ ಇಲ್ಲ ಎಂಬಂತಹ ವಾತಾವರಣದಲ್ಲಿ ಬೆಳೆದರು. ಜ್ಞಾನಭ್ರಮರದ ಕುಕ್ಕಾರಿಯಲ್ಲಿ ಜ್ಞಾನಹಸಿವಿನ ಕಸಿವಿಸಿಯುಸಿರಿಗೆ ಕಿವಿಯೇ ಇರದ ಬಡತನದ ಭದ್ರಕೋಟೆಯಲ್ಲಿ ನಲುಗಿದ ಆ ಅವಸ್ಥೆ ಅದು.
ಅಕ್ಕ ಹೇಳುವ ಹಾಗೆ ಅನಂತಕಾಲ ತಪಿಸಿದ ಫಲಪಕ್ವವಾದಾಗ ವೈರಾಗ್ಯದಿಂದ ಬಂದ ಬಣ್ಣ ಅವರಿಗೆ ಕಾಣಹತ್ತಿತು ; ಹಣ್ಣು ಹಣ್ಣಾದ ಸಿಪ್ಪೆ ಕಳಚಲು ಕಳಿಯಲು ಲಿಂಗ ನೈವೇದ್ಯವಾಗಲು ಅರ್ಹವಾಗುವಂತೆ ಜೋಯಿಸರ ಹರಳಳ್ಳಿ ಎಂಬ ತಳಿಗೆ ಸಾಲೀಮಠಕ್ಕೆಂದೇ ಮೀಸಲಾಗಿಬಿಟ್ಟಿತ್ತು. ಹೃದಯಶ್ರೀಮಂತಿಕೆ ಭಾವಶ್ರೀಮಂತಿಕೆ ಭೂಮವಾದ ಸಾಂಸ್ಕೃತಿಕ ಆಧ್ಯಾತ್ಮಿಕ ದೈವಾವಲಂಬಿಕ ಶ್ರೀಮಂತಿಕೆ ಮನದ ತುಂಬ ; ಮನೆಯತುಂಬ ಇಂಬಿಲ್ಲದಂತೆ ತುಂಬಿತುಳುಕಿತ್ತು ; ಅರ್ಥ ದತ್ತೂರಿಯನೊಂದು ಬಿಟ್ಟು.
ಹಸಿದೇ ಬಂದ ಸದಾ ಹಸಿದೇ ನಿಂತ ಹಸಿವಿನಿಂದಲೇ ಹೋಗಿ ಬರುವವರು ಕಣ್ಣರಳಿಸಿ ಜೊಲ್ಲು ಸುರಿಸಿ ಮನೆ ತುಂಬ ನಿಂತ ಹಸುಗಳು ಹಸಿವಿಗೆ ಸಂಕೇತವಾದಂತಾಗಿದ್ದವು. ಇಂದೋ ನಾಳೆಯೋ ಬಿದ್ದೇ ತೀರುವೆ ಎಂಬಂತಹ ಟೊಂಕುಮುರಿದವರಂತೆ ನಿಂತ ಹಾಳು ಬೀಳು ಬಣ್ಣ ಕಳೆದಕೊಂಡ ಮಣ್ಣು ಮನೆ. ಉಳಿದ ಬಳೆದ ಅನ್ನಕ್ಕೆ ತಾನೇ ಅಧಿಕಾರಿಯೆಂಬ ಉಂಡು ಓಡಾಡಿ ಕರಗಿಸಿಯೇನು
ಎಂಬಂತಹ ಹಳ್ಳಿಯ ಹೈದ ಅಣ್ಣ ಶಿವಬಸಯ್ಯ. ಹಾಲಯ್ಯ ದಟ್ಟಡಿಯನಿಡುವಾಗಲೇ ತಂದೆ ಪಿತೃಪರ್ವತ ಸದೃಶ ಬಸವಯ್ಯ ಅಸ್ತಂಗತ.
ಬಡತನದ ಒಳಹೊರ ಭಾರಕ್ಕೆ ವೃದ್ಧಾಪ್ಯದಿಂದ ಮಗನ ಮರಣದಿಂದ ಮುಗಿಲೇ ಹರಿದು ಮೈಮೇಲೆ ಬಿದ್ದಂತೆ ಚಿಂತಿತ ಮನೆಗೆ ಹಿರಿತನಕ್ಕುಳಿದ ಅಜ್ಜ ಕೊಟ್ರಯ್ಯಾ ಕಂಗಾಲಾದ ಕಾಲಘಟ್ಟದಲ್ಲಿ ಅಲೆದಾಡುವುದು. ಅನಿವಾರ್ಯವಾಯಿತು ಜೋಳಿಗೆ ಸಾತ್ವಿಕ ಶಿಖಾಮಣಿಯಾದ ಬಾಲ ಹಾಲಯ್ಯನವರ ಕೊರಳಿಗೆ ಆರು ವರುಷದ ಬಾಲಕ ಹಾಲಯ್ಯ ಮನೆಗೂ ಓಡಾಡಿ ನೀಲಮ್ಮರ ಕೊರಳು ಕಕ್ಕುಲಾತಿಗೆ ಮಿಡಿದ ಮನೆಯಿಂದ ಮನೆಗೆ ಜೋಳಿಗೆ ಹೊತ್ತು ಅರ್ಧ ದಿನ ಶ್ಯಾಲೆಯನ್ನು ತಪ್ಪಿಸಿ ; ಅಂದಿನ ಮನೆಯ ಹಸಿವೆಯನ್ನು ಪೂರೈಸಲು ಅಲೆದಾಡಿದ.
ಒಂದು ದಿನ ಲಿಂಗನಾಯಕನೆಂಬ ಹಳ್ಳಿಯ ವೃದ್ಧ ಈತನ ಜೋಳಿಗೆ ಕಂಡು ಕಿಡಿನುಡಿದ : “ಏನೋ, ನಿನ್ನ ವಯಸ್ಸಿನಲ್ಲಿ ಭಿಕ್ಷೆ ಬೇಡುವುದಾ ? ಯಾಕಾಗಿ ನೀನು ದುಡಿಬಾರದು ? “ಆ ನುಡಿ ಹಾಲಯ್ಯನವರಿಗೆ ಸಿಡಿಲಾಗಿ ಬಡಿಯಿತು. ಬದುಕೆ ತಿರುಮುರುವಾಗಿ ಕಂಡಿತು. ಕೋಮಲ ಮನಸ್ಸು ಕಮರಿದಂತೆನಿಸಿತು. ಬಾರವಾದ ಹೃದಯ ಮತ್ತು ಬರಿದಾದ ಜೋಳಿಗೆ ಹೊತ್ತು ಮನೆಗೆ ಬಂದ. ಊಟ ನಿದ್ರೆ ಬೇಡವಾದವು.
ಪ್ರಳಯ, ಭೂಕಂಪ ಹಾಗು ಜ್ವಾಲಾಮುಖಿಗಳ ಸಂಭವವು ; ಒಂದು ದಿನದ ಪರಿತಾಪವಲ್ಲ. ಬಹುಕಾಲದಿಂದ ನಡೆದ ಬಿರುಬಿಗಿತ ಶಾಕೋತ್ಪಾದನ ರಸವಿರಸ ಸಂಘರ್ಷ ಸಂಘಾತ ಮಂಥನ ಸಿಡಿತ ರೌದ್ರಭೀಕರನೋಟ ಅವು.
ಪ್ರಾಪಂಚಿಕ ಅಡತಡೆಗಳನ್ನು ನಿಜಗುಣರು ತಮ್ಮ ಶಾಸ್ತ್ರದಲ್ಲಿ ಬಹಳ ಮಾರ್ಮಿಕವಾಗಿ ಚರ್ಚಿಸುತ್ತಾರೆ. ಪ್ರಾಪಂಚಿಕ ಒತ್ತಡದಲ್ಲಿರುವ ಪ್ರಪಂಚ ಹೊತ್ತು ವಿಲಿವಿಲಿ ಒದ್ದಾಡಿದ ಆಸಾಮಿಗಳೇ ನಿಜಗುಣ ಶಾಸ್ತ್ರದಲ್ಲಿ ಹೆಚ್ಚು ಬಲ್ಲವಾಗಿರುತ್ತಾರೆ. ಅಂಥ ಅತ್ಯಂತಿಕ ಸತಿ ಸುತ ತಾಪತ್ರಯದ ಅಡಚಣೆ ಹಾಲಯ್ಯನವರಿಗೆಲ್ಲಿತ್ತು ? ಆಧ್ಯಾತ್ಮಿಕ ರಹಸ್ಯದತ್ತ ಅವರ ಒಲವು ಅವರ ವಯೋಮಾನಕ್ಕೆ ಮೀರಿದವರೊಂದಿಗಿನ ಒಡನಾಟ ಹೆಚ್ಚಾಗಿ ಹೋಗಿತ್ತು. ಸಂಸಾರದ ಹೇಯತೆಯ ಬಗ್ಗೆ ಹಗಲೂ ರಾತ್ರಿ ಚರ್ಚಿಸಿ ಸಂಸಾರದ ಸುತ್ತ ತಿರುಗುವವರ ನೋಡಿ ಅವರಲ್ಲಿ ನಗುವು ಹುಟ್ಟಿತು. ಬುದ್ಧ ಹಾಗು ನಿಜಗುಣರ ಎಚ್ಚರದ ಊರಿಗೆ ಅವರು ಅರಗಾಗಿ ಕರಗಿಹೋದರು. ಅಣ್ಣ ತೊಳೆದು ತರಲೆಂದೆಸೆದ ಬಟ್ಟಿ ಹೊಸಬಾಳಬಟ್ಟೆಗೆ ದಾರಿ ಮಾಡಿಕೊಟ್ಟಿತು. ಎಲ್ಲ ಇದ್ದೂ ಮಧ್ಯರಾತ್ರಿ ಎದ್ದ ಬುದ್ಧ ಅವರಿಗೆ ಆದರ್ಶವಾಗಿಬಿಟ್ಟ. ಅವರಿವರ ಬಾಯಿಂದ ಕುತೂಹಲದಿಂದ ತಿಳಿದು ಕೇಳಿದ ನಿಜಗುಣರ ಶಾಸ್ತ್ರದೊಲವು ನಿರಂತರ ಅವರನ್ನು ಕೈಮಾಡಿ ಕರೆಯುತ್ತಿತ್ತು. ಊರುಕೇರಿ ಮನೆ ಮಾರು ಓದು ಕಟ್ಟಿದ ಮುಲಕೀ ಪರೀಕ್ಷೆ ಕಲಕು ಮಲಕಾಗಿ ಹೊರಳಿ ಬಿದ್ದವು. ʼಭಿಕ್ಷೆಯೆತ್ತಿ ತಂದದ್ದನ್ನು ತಿಂದು ಮಲಗಿದ್ದಾನೆ’ ಎಂಬ ಅಣ್ಣನ ಸಣ್ಣ ಮಾತು ಆ ಮುದುಕನ ಮಾಹಿಗಿಂತ ದೊಡ್ಡದೆನ್ನಿಸಲಿಲ್ಲ. ಹಾಲಯ್ಯನವರಿಗೆ.
”ನಿನ್ನರಿಕೆಯ ನರಕವೇ ಸುಖ ಕಂಡಯ್ಯ’ ಎಂದು ಉಡತಡಿ ಬಿಟ್ಟು ಕಲ್ಯಾಣ ಕಂಡು ಜಗನ್ಮಾತೆ ಅಕ್ಕಮಹಾದೇವಿಯವರು ‘ನೆಟ್ಟನೆ ಭವಗೆಟ್ಟೆನು’ ಎಂದು ನಡೆದ ಕಠಿಣ ಪಥ ಹಾಲಯ್ಯನವರಿಗೂ ಸತ್ಪಥವಾಗಿಬಿಟ್ಟಿತು. ಆರೂಢ ಪಥವೇ ಪಥವು ; ಅದವರಿಗೆ ಎದೆಂದಿಗೂ ಇಳಿಯದ ಆವೇಶ ತಂದಿತ್ತು.
ದೋಣಿಯನ್ನಲ್ಲ ಸಾಗುವ ದಿಕ್ಕನ್ನು ಬದಲಿಸಿದ ಅವರಿಗೆ ನಿಷ್ಪಲವಾದ ಮುಲಕಿ ಪರೀಕ್ಷೆಯು ಇನ್ನಿಷ್ಟು ನಿಖರವಾಗಿ ಬ್ರಹ್ಮಪ್ರಜ್ಞಾನಕ್ಕೆ ಪ್ರಖರ ನಂದದ ದೀಪಸ್ಥಂಬವಾಗಿ ಮಹಾಮಾರ್ಗತೋರಿಸಿತು. ಗಾಂವಟಿ ಶ್ಯಾಲಾ ಮಾಸ್ತರಕೀಯಿಂದ ಕೂಡಿಟ್ಟ ಹಣವು ; ಹೆತ್ತವ್ವ ಹೊತ್ತು ಹೊರೆದ ಋಣ ತೀರಿಸುವುದೋ ಎಂಬ ಅಳುಕು ; ಆದಿಶಂಕರರ ಇಂಗಿತ ಅರಿತ ಅವರ ತಾಯಿ ಯತಿಯಾಗಲು ಅನುಮತಿ ದೊರೆತು ಐತಿಹಾಸಿಕ ಗೆಲವು ಹಾಲಯ್ಯನವರ ಬಾಳಬಟ್ಟೆಗೂ ಚಾಚಿಕೊಂಡಿತ್ತು . ಸದಾ ಉನ್ಮುಖಿಯಾಗಿ ಸಂಸಾರ ಸಾಗರದ ಉರದುದ್ದ ಸಿರದುದ್ದ ಕಷ್ಟವ ತೆರೆ ಎದುರಿಸಿದ್ದ ನೀಲಮ್ಮ ಮಗನ ಸಂತೋಷಕ್ಕೆ ಪಡೆದ ಆ ಧನ ತಾಯಿಗೆ ತವನಿಧಿಯಾಗಿ ಬಿಟ್ಟಿತು. ಹಿಂದಿದ್ದ ತಾಪತ್ರಯಗಳು ಲುಪ್ತವಾಗಿ ಹೋದವು.
ಹಾಲಯ್ಯರ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣಬೇಕೆಂಬ ಕನಸಿಗೆ ಮಗನ ತೀವ್ರ ವೈರಾಗ್ಯದ ಅರುಹಿನ ರವಿಕಿರಣಗಳು ಕನಿಸಿನ ನಿದ್ರೆಗೆ ಆಸ್ಪದವನ್ನೇ ಕೊಡದೆ ಹಾಗೆ ನೋಡಿಕೊಂಡವು. ಏನನ್ನೋ ಕೇಳಲೆಂದು ಬಂದಮಾತೆಗೆ ರಾಮಕೃಷ್ಣ ಪರಮಹಂಸರ ಕಾಳಿಕೆಯ ಎದುರು ನಿಂತ ನಿರಾಪೇಕ್ಷಾವಸ್ಥೆಯ ನರೇಂದ್ರನಂತಾಗಿತ್ತು ನೀಲಮ್ಮ ತಾಯಿಯದು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಡರು ; ಎಮ್ಮಿಗನೂರಿನ ಶ್ರೀ ಜಡೆಯ ಸಿದ್ದರು; ಎಳಂದೂರ ಶ್ರೀ ಬಸವಲಿಂಗಶಿವಯೋಗಿಗಳು; ಜ್ಞಾನ-ಕ್ರಿಯೆ-ಭಕ್ತಿಯೋಗದ ಸಾಗರ ಸಂಗಮ ಈ ತ್ರಿವಿಧರು. ಆ ಸಂಗಮ ರಾಮೇಶ್ವರದಲ್ಲಿ ಕಾಣುವುದು; ಭಕ್ತಿ-ಜ್ಞಾನ-ವೈರಾಗ್ಯ ಸಂಗಮ ಕುಮಾರಶಿವಯೋಗಿಗಳ ವ್ಯಕ್ತಿತ್ವದಲ್ಲಿ ಕಂಡುಬರುವುದು.
“ಶರಣ ಜನರ ಹೃದಯ ನಳಿನದೊಳು ಪರಿಶೋಭಿಸುತ್ತಿಹುದು ಗುರುಶಂಭುಲಿಂಗ ನಿನ್ನ ದಿವ್ಯ ಪಾದ” ಎಂಬ ನಿಜಗುಣರ ಈ ಪದ್ಯವು ಕಲ್ಯಾಣದ ಶರಣರನ್ನೇ ಅಧಿಕೃತವಾಗಿ ಗಮನದಲ್ಲಿಟ್ಟುಕೊಂಡಿರುವುದು ತುಂಬ ಔಚಿತ್ಯ ; “ಬಿಡಬೇಕು ಬಲು ಹಿಂದೆ ಬರಿದೆ ತನ್ನಿರವನು’ ಸಗುಣ ಸಂತತಿಯನು ನಿಗಮಾದಿ ವಿಧಿಯನು ! ಮಿಗೆ ತಪವನು ತನಗಹ ಸಿದ್ಧಿಗಳನ್ನು! ಎಂಬುದಾಗಿ ನುಡಿದ ನಿಜಗುಣರಿಗೆ ಈ ಇದಕ್ಕೆ ಪರ್ಯಾಯ ಎಂಬಂತೆ ಬಾಳಿ ಬದುಕಿದ ಕುಮಾರ ಶಿವಯೋಗಿಗಳು ನಿಜಗುಣರ ಷಟ್ ಶಾಸ್ತ್ರಕ್ಕೆ ಗೌರವ ಹೆಚ್ಚಿಸಿದರು. ಜ್ಞಾನಿ-ಯೋಗಿ-ಜಿಜ್ಞಾಸು -ಉನ್ಮತ್ತ – ಪಿಶಾಚಿ-ವ್ಯಾಕರಣಿ ಎಂಬ ವರ್ಗಿಕರಣದಲ್ಲಿ ಶುದ್ಧಯೋಗಿಯಾಗಿದ್ದರಿಂದಲೇ ಶಿವಯೋಗ ಮಂದಿರದಂಥ ಸಂಸ್ಥೆ ಕಟ್ಟಲು ಅವರಿಗೆ ಸಾಧ್ಯವಾಯಿತು. “ತನಗೆ ಮುಂದೊದಗುವ ಮುನಿದೇವ ಗಣಪದ !ವನು ರುದ್ರೇಶ್ವರ ಸದಾಶಿವ ಭಾವನೆಯನು ! ಘನಶಂಭುಲಿಂಗವಾಗಿ ಮುಕ್ತಿ ಸುಖವನು ! ಜನಿಸಿದೀ ಕಾಮವಿಲ್ಲೆನಿಪುರಿಂದ ! ಎಂದು ಮುಂದುವರಿದ ಪದ್ಯ ಕುಮಾರಶಿವಯೋಗಿಗಳನ್ನು ಕುರಿತೇ ಹಾಡಿದಂತಿದೆ.
ಶರಣರೇ ಮಹತ್ ಸಂಕಲ್ಪಹೊತ್ತು ೨೦ನೇ ಶತಮಾನದಲ್ಲಿ ಶಿವಯೋಗಿಗಳಾದರು : ಅಷ್ಟೇ ಅಲ್ಲ ಅವರ ಆದರ್ಶಗಳನ್ನು ಮನನವಾಗಿಸಿಕೊಂಡು ಸಮಾಜಮುಖಿಯಾಗಿ ಬದುಕಿ “ಸಮಾಜ ಸೇವೆಯೇ ಲಿಂಗಪೂಜೆ’ ಎಂಬುದನ್ನು ನಡೆದು ನುಡಿದು ಬದುಕಿದರು. ಸರ್ವರ ಏಳ್ಗೆ ಅವರ ಗುರಿಯಾಗಿತ್ತು. ಗುಪ್ತವಾಗಿ ಅಲ್ಲಲ್ಲಿ ಮುಸುಕಿನಲ್ಲಿದ್ದ ವಚನಸಾಹಿತ್ಯವನ್ನು ಹೊರತಂದು ಅದರ ಪ್ರಚಾರಕ್ಕೆ ವಿದ್ವತ್ ಬಳಗ ಗುರುತಿಸಿ ಗೌರವಿಸಿ ಅವರಿಂದ ಸಾಹಿತ್ಯ ರಕ್ಷಣೆ ಮಾಡಿ, ಒಂದು ಶಿಸ್ತಿಗೆ ಅಳವಡಿಸಿ ಇಂದಿನ ಎಲ್ಲ ಓದುವ ವೇದಿಕೆಗೆ ನೆರವಾದರು.
೧೮೬೭ರಲ್ಲಿ ಜನಿಸಿದ ತರುಣ ವೇದಾಂತ ಜಿಜ್ಞಾಸುವಿಗೆ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಒಂದು ಗ್ರಾಮವಾದ ಜೋಯಿಸರ ಹಳ್ಳಿಯ ಸಂಬಂಧವೆಲ್ಲ ಪೂರ್ವಾಶ್ರಮದ ನೆನಹಾಗಿ ಬಿಟ್ಟತಷ್ಟೇ. ಹುಟ್ಟಿದೂರಬಿಟ್ಟು ಕಜ್ಜರಗಿಯ ಹಿರೇಮಠದ ರಾಚಯ್ಯನವರ ಕಣ್ಣಿಗೆ ಬಿದ್ದು ನಾಲ್ಕು ವರ್ಷ ಓದಿ ಧಾರವಾಡಕ್ಕೆ ಕಾಲ್ನಡಿಗೆಯಲ್ಲೇ ನಡೆದ ನಡಿಗೆ, ಹುಬ್ಬಳ್ಳಿಯ ಸಿದ್ಧಾರೂಢಮಠದ ಆಧ್ಯಾತ್ಮ ಶಾಲೆಗೆ ನಡೆದ ಅಂದಿನ ನಡಿಗೆಯು ವಿಲಕ್ಷಣವಾಗಿತ್ತು.
ಅನಿರೀಕ್ಷಿತವಾಗಿ ಪರೀಕ್ಷೆಯಲ್ಲಿ ಅನುತೀರ್ಣರಾದ ನಿರಾಶೆಯು ತಾಯಿಯ ತವರಾದ ಲಿಂಗದಹಳ್ಳಿಯಲ್ಲಿ ಸಮಾಳದ ಬಸವಪ್ಪಯ್ಯನವರ ಷಟ್ಶಾಸ್ತ್ರ ಶೈಲಿ ಮನಸೊರೆಗೊಂಡುದೇ ಕಾರಣವಾಗಿ ಸಿದ್ಧಾರೂಢರ ಸಾಮಿಪ್ಯ ಸಾಧ್ಯವಾಯಿತು. ಅಲ್ಲಿ ಕೆಲವರು ಇಷ್ಟಲಿಂಗ ಧರಿಸುವದರ ವಿರುದ್ಧದ ವಿಚಾರದಲ್ಲಿ ಸಂದೇಹವೆದ್ದು ಹುಬ್ಬಳ್ಳಿಯ ರುದ್ರಾಕ್ಷಿಮಠದ ಶ್ರೀಗಳು ಜಡೆಯಸಿದ್ದರಲ್ಲಿಗೆ ಕಳುಹಿಸಬೇಕಾಯಿತು. ಇವರು ಕೇಳುವ ಮುನ್ನವೇ ಅವರು ಧರಿಸಲೇಬೇಕೆಂಬ ಕುರುಹು ತೋರಿದರು. “ಎಲ್ಲಿಗೆ ಹೋಗಲಿನ್ನು ಮುಂದೆ ? ‘ಎಂಬ ವಿಚಾರ ಜಡೆಸಿದ್ಧರಿಗೆ ಗೊತ್ತಾಗಿ’ ಎಲ್ಲಿಂದ
ಬಂದಿದ್ಧಿಯೋ ಅಲ್ಲಿಗೆ ಹೋಗು” ಎಂಬುದನ್ನು ಸೂಚ್ಯವಾಗಿಸಿದರು. ಸಿದ್ಧಾರೂಢರಲ್ಲಿಗೆ ಎಳಂದೂರ ಶ್ರೀಗಳು ಆಗಮವಾಯಿತು. ಅವರಿಂದ ಆಕರ್ಷಿತರಾದ ಹಾಲಯ್ಯ ಅವರೊಂದಿಗೆ ನಾಡನಲೆದರು.ಅಣ್ಣಿಗೇರಿಯ ಶಾಖಾಮಠದಲ್ಲಿ ವಿಷಮಜ್ವರ ನೆಪವಾಗಿ ಎಳಂದೂರ ಶ್ರೀಗಳು ಲಿಂಗೈಕ್ಯರಾದರು. ಗುರೂಪದೇಶವಿಶೇಷವಾಗಿತ್ತು : ‘ವ್ಯಕ್ತಿಗಿಂತ ಸಮಾಜ ದೊಡ್ಡದು. ಇಂದಿನಿಂದ
ಸಮಾಜಸೇವೆಗೆ ಬದ್ಧನಾಗು’ ಎಂಬುದಾಗಿ ಶ್ರೀಗಳು ಇಹದಿಂದ ನಿರ್ಗಮಿಸುವದಕ್ಕಿಂತ ಮೊದಲು ನುಡಿದುದರ ಫಲವಾಗಿ ಅತಿ ಶೀಘ್ರದಲ್ಲಿ ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಮುನ್ನವೇ ಅಖಿಲಭಾರತ ವೀರಶೈವ ಮಹಾಸಭೆ ಸ್ಥಾಪನೆ ಆಯಿತು
ಮನೋ ಶುದ್ದಿಗೆ ಆತ್ಮಸಿದ್ಧಿಗೆ ಶಂಭುಲಿಂಗ ಬೆಟ್ಟದಲ್ಲಿ ೧೨ ವರ್ಷ ತಪೋಲಿಂಗಧ್ಯಾನ ಸೇವಾತತ್ಪರರಾಗಿ ಕಳೆದದಿನಗಳು ಸತ್ಪ್ರೇರಣೆ ಕೊಟ್ಟವು; ಅದರ ಅರುಹು ನೆರವಾಗಿ ಜನರ ಮಧ್ಯೆ ಹೋದರು. ದಾನ, ಧರ್ಮ, ನೀತಿ, ನಿಯಮ ಕಾಯಕ, ದಾಸೋಹತತ್ವವನು ಬೋಧಿಸಿದರು. ಅಲ್ಲಮನಂತೆಯೇ ನಾಡನೆಲ್ಲ ಅಲೆದರು. ಅವರ ನಡೆಯಲ್ಲಿ ಗಾಂಭೀರ್ಯವಿತ್ತು; ನುಡಿಯಲ್ಲಿ ಹೊಳಪಿತ್ತು ಮಾತುಗಳಲ್ಲಿ ಮಾರ್ಧವತೆ ಇತ್ತು. ದೇವರು ಧರ್ಮ ಸನ್ಮಾರ್ಗಪರವಿಚಾರ ವಿವರಿಸುತ್ತ ಸ್ವಾಮಿಪಾದರು ಸ್ವರಬದ ಬೆಟ್ಟದ ಮಠದಲ್ಲಿ ಬಹುಕಾಲದಿಂದ ಅನುಷ್ಠಾನಮಾಡಿ ಆ ಭಾಗದಲ್ಲಿ ಜನಾನುರಾಗಿಯಾದರು.
ಆ ಸಮಯದಲ್ಲಿ ಕರ್ನಾಟಕ ಆದ್ಯಮಠಗಳಲ್ಲಿ ಒಂದಾದ ಚಿತ್ರದುರ್ಗ ಮಠಕ್ಕೆ ಅಧಿಪತಿಗಳಿರಲಿಲ್ಲ. ಮಠದ ಭಕ್ತರು ಹಾಲಯ್ಯನವರನ್ನು ಕಂಡುಪೀಠಾಧಿಪತಿಗಳಾಗಿ ಬರಬೇಕೆಂದು ಅರಿಕೆಯಿಟ್ಟರು. ಇನ್ನೊಬ್ಬರಾಗಿದ್ದರೆ ಕುಣಿದಾಡುತ್ತಿದ್ದರು. ಆದರೆ ಹಾಲಯ್ಯನವರನ್ನು ಯಾವುದೊಂದು ಸ್ಥಳಕ್ಕೆ ಬಂಧಿತರಾಗಬಯಸಿರಲಿಲ್ಲ.” (ಲಿ.ಮ.ಸ.ಪು:೭೭), ಮತ್ತೊಮ್ಮೆ ಇಂಥದೇ ಸನ್ನಿವೇಶ ಆದರಿದು ವಿಭಿನ್ನ, ಆ ಮಠದ ಫಕೀರ ಸ್ವಾಮಿಗಳಿಗೆ ವೃದ್ಧಾಪ್ಯ, ಹಾಲಯ್ಯನವರನ್ನು ಹಾನಗಲ್ಲಿಗೆ ಕೆರೆ ತರಲು ಭಕ್ತರಿಗೆ ಆಜ್ಞೆಯಾಯಿತು. ಸರ್ವವು ಹಾಲಯ್ಯನವರ ಮುಂದೆ ಪ್ರಸ್ತಾಪವಾಯಿತು. ಹಾಲಯ್ಯನವರು ವಿನಮ್ರರಾಗಿ ನುಡಿದರು, ನಾನೊಬ್ಬ ಸಮಾಜ ಸೇವಕನ ನನಗೆ ದೊಡ್ಡ ಮಠವೊಂದರ ಹೊಣೆಗಾರಿಕೆ ಬೇಡ; ಮಠ ಹಾಗೂ ಸಮಾಜ ಸೇವೆ ಎರಡು ವ್ಯವಸ್ಥೆಗಳನ್ನು ತೂಗಿಸಿಕೊಂಡು ಹೋಗುವುದು ಅಸಾಧ್ಯವೆಂದು ತಿಳಿದವ ನಾನು; ನನ್ನನ್ನು ದಯವಿಟ್ಟು ಬಿಟ್ಟಬಿಡಿ ಎಂಬುದಾಗಿ ವಾದಿಸಿದರು. ಹಾಸಿಗೆಯಿಂದ ಬೇಸರಗೊಂಡು ಫಕೀರಸ್ವಾಮಿಗಳು ಸ್ವಾನುಭವದ ಅಧಿಕಾರಬೆರೆಸಿದ ಆಗ್ರಹದ ಮಾತುಗಳು ಎಂಬಂತೆ ಉಪದೇಶ ಮಾಡಿದರು, ನೀನಿನ್ನೂ ಚಿಕ್ಕವ ವೈಯಕ್ತಿಕವಾಗಿ ದೊಡ್ಡದಾಗಿ ಸಮಾಜಸೇವೆ ಮಾಡಲಾಗದೆಂದು ನಿನಗೆ ತಿಳಿಯದು, ಅದಕ್ಕೆ ಧಾರ್ಮಿಕ ಸಂಸ್ಥೆಯೊಂದರ ಬೆಂಗಾವಲು ಬೇಕು .ಮಠದ ಆದಿಪತ್ಯ ಸ್ವೀಕರಣೆ ಸ್ವಾರ್ಥ ಬಯಕೆಗಾಗಿ ಅಲ್ಲ. ನಿಷ್ಕಾಮ ಸೇವೆಗೆ ಎಂಬ ಮಂತ್ರ ಸದೃಶಮಾತುಗಳು ಅವರನ್ನು ಮಂತ್ರಮುಗ್ದಗೊಳಿಸಿದವು. ಹಾಲಯ್ಯನವರು ಹಾನಗಲ್ಲ ಕುಮಾರ ಸ್ವಾಮಿಗಳೆಂದೇ ಪ್ರಸಿದ್ಧಿಯಾದರು.
ಬಸವ ಸಾಮಾಜಿಕ ಕ್ರಾಂತಿಯನ್ನವರು ಪುನರಜ್ಜೀವನಗೊಳಿಸಿದರು. ಧರ್ಮ, ಶಿಕ್ಷಣ, ಕಲೆ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜೋನ್ನತಿಯ ಹೊಂಗನಸು ಅವರದು ಕೃಷಿಗೆ ಸಂಗೀತಕ್ಕೆ ಅಪಾರ ಕೊಡುಗೆ ಅವರದು, ಅಚಾರವೇ ವೀರಶೈವ ಲಿಂಗಾಯತ ಧರ್ಮದ ತಿರುಳು; ಅದನ್ನು ಶಿವಯೋಗಮಂದಿರದ ಮೂಲಕ ಉಳಿಸಿ ಬೆಳೆಸಿದರು. ಅಂಧರ ಉಪಜೀವನಕ್ಕೆ ತಳಪಾಯ ಹಾಕಿ ಅಲ್ಲಿ ಗುರು ಶಿಷ್ಯ ಪರಂಪರೆಗೆ ಶ್ರೀಕಾರ ಹಾಕಿದರು.
ಶ್ರೀ ಗುರು ಕುಮಾರಂ ವಂದೇ