೨೫–೦೧–೨೦೨೬ರ ಪವಿತ್ರ ರಥಸಪ್ತಮಿ ದಿನದಂದು, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಸಂಸ್ಥಾಪಿಸಿದ ಶ್ರೀ ಶಿವಯೋಗಮಂದಿರವು ತನ್ನ ೧೧೭ನೇ ಸಂಸ್ಥಾಪನಾ ದಿನವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಈ ಐತಿಹಾಸಿಕ ಸಂದರ್ಭದಲ್ಲಿ, ಶಿವಯೋಗ ಪರಂಪರೆಯ ಬೆಳವಣಿಗೆಯಲ್ಲಿ ಅನನ್ಯ ಪಾತ್ರವಹಿಸಿದ ಮಹಾನ್ ವಿದ್ವಾಂಸರ ಸ್ಮರಣೆ ಸ್ವಾಭಾವಿಕವಾಗಿ ಮನಸ್ಸನ್ನು ಆವರಿಸುತ್ತದೆ.

೧೯೦೯ರಲ್ಲಿ ಪರಮಪೂಜ್ಯ ಚಿತ್ತರಗಿಯ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಗುರುತಿಸಿದ ಪವಿತ್ರ ಸ್ಥಳದಲ್ಲೇ, ಶ್ರೀ ಶಿವಯೋಗಮಂದಿರದ ಶಿಲಾವಿನ್ಯಾಸ ಸಮಾರಂಭ ನಡೆಯಿತು.

ಈ ಮಹತ್ವದ ಧಾರ್ಮಿಕ ವಿಧಿವಿಧಾನವನ್ನು, ಬಳ್ಳಾರಿಯ ಶ್ರೀ ಸಕ್ಕರೆ ಕರಡೆಪ್ಪನವರ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯ  ಪೂಜ್ಯರ ಸಹಪಾಠಿಯಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು, ಪೂಜ್ಯರ ಅಪ್ಪಣೆಯಂತೆ ಮಾಘಮಾಸದ ರಥಸಪ್ತಮಿ ತಿಥಿಯಲ್ಲಿ ಪೌರೋಹಿತ್ಯ ವಹಿಸಿ ನೆರವೇರಿಸಿದರು. ಈ ಘಟನೆ, ಶಿವಯೋಗ ಪರಂಪರೆಯೊಂದಿಗೆ ಅವರ ಆಳವಾದ ಬಾಂಧವ್ಯವನ್ನು ,ಅವರ ಪ್ರಾಮಾಣಿಕ ನಿಷ್ಠೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮಹಾಮೇಧಾವಿಗಳಾಗಿದ್ದ ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ನಿಜಾರ್ಥದಲ್ಲಿ ‘ವಿದ್ಯಾ ಪರ್ವತ’ವೇ ಆಗಿದ್ದರು. ಸಂಸ್ಕೃತ ಭಾಷೆಯಲ್ಲಿ ಅಪಾರ ಪ್ರಭುತ್ವ ಸಾಧಿಸಿದ್ದ ಅವರು, ಅನೇಕ ಸಂಸ್ಕೃತ ಕೃತಿಗಳನ್ನು ರಚಿಸುವ ಮೂಲಕ ತಮ್ಮ ಆಳವಾದ ಪಾಂಡಿತ್ಯ, ತಾತ್ವಿಕ ದೃಷ್ಟಿ ಮತ್ತು ಶಾಸ್ತ್ರೀಯ ಶಿಸ್ತುಗಳನ್ನು ಪ್ರಕಟಿಸಿದ್ದಾರೆ. ಅವರ ಬರಹಗಳಲ್ಲಿ ಭಾಷೆಯ ಸೌಂದರ್ಯ ಮಾತ್ರವಲ್ಲದೆ, ಯೋಗ, ಶೈವಸಿದ್ಧಾಂತ ಮತ್ತು ಆತ್ಮಾನುಭವದ ಸುಗಂಧವೂ ಸ್ಪಷ್ಟವಾಗಿ ಅನುಭವವಾಗುತ್ತದೆ.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳಿಗೆ ಲಭಿಸಿದ “ವಿದ್ಯಾ ಪರ್ವತ” ಎಂಬ ಉಪನಾಮವು ಕೇವಲ ಗೌರವ ಸೂಚಕ ಪದವಿಯಲ್ಲ; ಅದು ಅವರ ಜೀವನ, ಸಾಧನೆ ಮತ್ತು ತಾತ್ವಿಕ ಸ್ಥಿತಿಯನ್ನು ಸಾರುವ ಆಳವಾದ ರೂಪಕವಾಗಿದೆ. ಪರ್ವತ ಎಂಬುದು ಭಾರತೀಯ ಚಿಂತನಾ ಪರಂಪರೆಯಲ್ಲಿ ಸ್ಥೈರ್ಯ, ಗಂಭೀರತೆ, ಸ್ಥಿರತೆ ಮತ್ತು ಶಾಶ್ವತತೆಯ ಸಂಕೇತ. ಅದಕ್ಕೆ ವಿದ್ಯೆ ಎಂಬ ಶಬ್ದವು ಸೇರಿದಾಗ, ಈ ಉಪನಾಮವು ತಾತ್ವಿಕವಾಗಿ ಇನ್ನಷ್ಟು ವಿಶಾಲಾರ್ಥವನ್ನು ಪಡೆಯುತ್ತದೆ.

“ವಿದ್ಯಾ ಪರ್ವತ” ಎಂಬ ಪದವು ಮತ್ತೊಂದು ಅರ್ಥವನ್ನೂ ಹೊರುತ್ತದೆ. ಪರ್ವತವು ನದಿಗಳಿಗೆ ಮೂಲವಾಗುವಂತೆ, ಪರ್ವತ ಶಾಸ್ತ್ರಿಗಳ ವಿದ್ಯೆ ಅನೇಕ ಶಿಷ್ಯರು, ಜಿಜ್ಞಾಸುಗಳು ಮತ್ತು ಸಮಾಜದ ಗಣ್ಯರಿಗೆ ಜ್ಞಾನಧಾರೆಯಾಗಿ ಹರಿಯಿತು. ಅವರ ಉಪನ್ಯಾಸಗಳು, ಜ್ಞಾನಸತ್ರಗಳು ಮತ್ತು ತಾತ್ವಿಕ ಚರ್ಚೆಗಳು ಅನೇಕರ ಮನಸ್ಸಿನ ಸಂಶಯಗಳನ್ನು ನಿವಾರಿಸಿ, ಬೌದ್ಧಿಕ ಸ್ಪಷ್ಟತೆಯನ್ನು ನೀಡಿದವು. ಅಂದರೆ ಅವರು ವಿದ್ಯೆಯ ಸಂಗ್ರಹ ಮಾತ್ರವಲ್ಲ; ವಿದ್ಯೆಯ ಪ್ರಸರಣದ ಕೇಂದ್ರವಾಗಿದ್ದರು.

ಇನ್ನೊಂದು ತಾತ್ವಿಕ ಆಯಾಮದಲ್ಲಿ ನೋಡಿದರೆ, ಪರ್ವತ ಎಂದರೆ ಆಶ್ರಯ. ದಾರಿ ತಪ್ಪಿದವರಿಗೆ ದಿಕ್ಕು ತೋರಿಸುವ ಸಂಕೇತ. ಪರ್ವತ ಶಾಸ್ತ್ರಿಗಳು ತಮ್ಮ ಕಾಲದಲ್ಲಿ ಧಾರ್ಮಿಕ ಗೊಂದಲಗಳು, ಸಾಮಾಜಿಕ ವಿವಾದಗಳು ಮತ್ತು ತಾತ್ವಿಕ ಸಂಶಯಗಳ ಮಧ್ಯೆ ನಿಂತು, ಶಾಸ್ತ್ರಾಧಾರಿತ ಸ್ಪಷ್ಟತೆಯನ್ನು ನೀಡಿದರು. ಪರಳಿ ಪ್ರಕರಣದಂತಹ ಸಂದರ್ಭಗಳಲ್ಲಿ ಅವರು ಸಮಾಜಕ್ಕೆ ಆಧಾರವಾಗಿ ನಿಂತರು. ಈ ಅರ್ಥದಲ್ಲಿಯೂ ಅವರು “ವಿದ್ಯಾ ಪರ್ವತ” — ಆಶ್ರಯದ ವಿದ್ಯೆ.

ಹೀಗಾಗಿ “ವಿದ್ಯಾ ಪರ್ವತ” ಎಂಬ ಉಪನಾಮವು ಪರ್ವತ ಶಾಸ್ತ್ರಿಗಳ ವ್ಯಕ್ತಿತ್ವದ ಮೂರು ಮೂಲ ಆಯಾಮಗಳನ್ನು ಸೂಚಿಸುತ್ತದೆ:
ಸ್ಥಿರವಾದ ಜ್ಞಾನ, ಪ್ರಸರಣಶೀಲವಾದ ಬೋಧನೆ ಮತ್ತು ಅನುಭವದಲ್ಲಿ ಲೀನವಾದ ತತ್ತ್ವಸಾಧನೆ. ಈ ಮೂರೂ ಒಂದಾಗಿ ಸೇರಿ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳನ್ನು ವೀರಶೈವ ತತ್ತ್ವಪರಂಪರೆಯ ಅಳಿಯದ ಶಿಖರವಾಗಿ ಸ್ಥಾಪಿಸುತ್ತವೆ.

ಪಂಡಿತ ಪರ್ವತ ಶಾಸ್ತ್ರಿಗಳ ಜನ್ಮಸ್ಥಳ ಕಂದಗಲ್ಲು. ಈ ಗ್ರಾಮ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ. ಅವರು ಅಲ್ಲಿನ ಶೀಲವಂತ ಮಠದ ಪರಂಪರೆಗೆ ಸೇರಿದವರು. ಪರ್ವತ ಶಾಸ್ತ್ರಿಗಳ ತಾಯಿ ನೀಲಮ್ಮಾ, ತಂದೆ ಶಿವಬಸವ ಶಾಸ್ತ್ರಿಗಳು. ಶ್ರೀಮನೃಪಶಾಲಿವಾಹನ ಶಕೆ ೧೭೭೬ರಲ್ಲಿ (ಕ್ರಿ.ಶ. ೧೮೫೪) ಅವರು ಜನಿಸಿದರೆಂದು ತಿಳಿದುಬರುತ್ತದೆ. ಅವರ ಧರ್ಮಪತ್ನಿ ಬಸವಮ್ಮಾ. ಈ ದಂಪತಿಗಳಿಗೆ ಚನ್ನವೀರ ಶಾಸ್ತ್ರಿ ಮತ್ತು ನೀಲಮ್ಮಾ ಎಂಬ ಇಬ್ಬರು ಮಕ್ಕಳು.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಂದಗಲ್ಲಿನಲ್ಲಿಯೇ ಪೂರ್ಣಗೊಳಿಸಿ, ಪ್ರೌಢಶಿಕ್ಷಣಕ್ಕಾಗಿ ಬಳ್ಳಾರಿಯಲ್ಲಿ ಸಕ್ಕರಿ ಕರಡೆಪ್ಪನವರಿಂದ ಸ್ಥಾಪಿತವಾಗಿದ್ದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ”ಯಲ್ಲಿ ಪ್ರವೇಶ ಪಡೆದರು. ಈ ಪಾಠಶಾಲೆಯೇ ಅವರ ಜೀವನದ ಬೌದ್ಧಿಕ ರೂಪುಗೊಳಿಕೆಗೆ ಗಟ್ಟಿಯಾದ ನೆಲೆಯಾಗಿ ಪರಿಣಮಿಸಿತು.

ಮೂಲತಃ ಹತ್ತಿ ವ್ಯಾಪಾರಿಯಾಗಿದ್ದರೂ, ವೀರಶೈವ ಲಿಂಗಾಯತ ಸಮುದಾಯದ ಶ್ರೇಷ್ಠ ಸಮಾಜಸೇವಕರಾಗಿದ್ದ ಕರಡೆಪ್ಪನವರು ಬ್ರಿಟಿಷ್ ಸರ್ಕಾರದಿಂದ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳು ಹಾಗೂ ಟೆಲಿಗ್ರಾಫ್ ಕಂಬಗಳ ಜೋಡಣೆ ಮುಂತಾದ ಗುತ್ತಿಗೆಗಳನ್ನು ಪಡೆದಿದ್ದರು. ೧೮೬೬ರಲ್ಲಿ ಬಳ್ಳಾರಿ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾದ ಸಂದರ್ಭದಲ್ಲಿ, ತಮ್ಮ ಸ್ವಂತ ಹಣದಿಂದ ಹಲವು ತಿಂಗಳುಗಳ ಕಾಲ ಸಾವಿರಾರು ಜನರಿಗೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿ ಮಾನವೀಯತೆಯ ದೀಪವಾಗಿ ನಿಂತರು. ಸಮಾಜಸೇವಕ, ದಾನಿ ಹಾಗೂ ಶಿಕ್ಷಣಪ್ರೇಮಿಯಾಗಿದ್ದ ಕರಡೆಪ್ಪನವರ ಸೇವೆಯನ್ನು ಗೌರವಿಸಿ ಬ್ರಿಟನ್ ರಾಣಿಯವರು ಅವರಿಗೆ “ರಾವ್ ಬಹಾದೂರ್” ಎಂಬ ಗೌರವ ಪ್ರಶಸ್ತಿಯನ್ನು ನೀಡಿದ್ದರು.

ಕರಡೆಪ್ಪನವರ ಮಹತ್ವದ ಕೊಡುಗೆಗಳಲ್ಲಿ ಪ್ರಮುಖವಾದುದು—ಕನ್ನಡ ನಾಡಿನ ಮೊದಲ ಸಂಸ್ಕೃತ ಪಾಠಶಾಲೆಯೊಂದನ್ನು ಸ್ಥಾಪಿಸಿ, ಬ್ರಾಹ್ಮಣೇತರರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ ಧೈರ್ಯಶಾಲಿ ಸಾಮಾಜಿಕ ಕ್ರಮ. ಅವರು ವಿಭೂತಿ ಕಣಜವನ್ನು ನಿರ್ಮಿಸಿ, ಅದರ ಮೂಲಕ ಶಾಶ್ವತ ನಿಧಿಯನ್ನೂ ಸಂಗ್ರಹಿಸಿದ್ದರು. ಕರಡೆಪ್ಪನವರ ಮೂಲ ಹೆಸರು ಸಕ್ಕರಿ ಬಸಪ್ಪ. ಬಾಲ್ಯದಲ್ಲಿಯೇ ಅವರಲ್ಲಿದ್ದ ಅಪಾರ ಸೇವಾಭಾವವನ್ನು ಗುರು ಮರಿಸ್ವಾಮಿಗಳು ಗಮನಿಸಿ, “ಈತ ತನ್ನ ಮತವನ್ನು, ಗುರು–ಲಿಂಗ–ಜಂಗಮವನ್ನು ಕರಡಿಯಂತೆ ತಬ್ಬಿಕೊಳ್ಳುವನು” ಎಂದು ಆಶೀರ್ವದಿಸಿ ‘ಕರಡಿ’ ಎಂದು ಕರೆಯಲಾರಂಭಿಸಿದರು. ಮುಂದೆ ಅದೇ ಹೆಸರು ಅವರ ಗುರುತಾಗಿಬಿಟ್ಟಿತು.

ಇಂತಹ ಮಹಾನುಭಾವಿ ಶರಣ ಕರಡೆಪ್ಪನವರು ಸ್ಥಾಪಿಸಿದ “ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆ” ಸಂಸ್ಕೃತ ಮತ್ತು ಕನ್ನಡ ವಾಙ್ಮಯದ ಸಮೃದ್ಧ ಸಿರಿಯನ್ನು ವಿದ್ಯಾರ್ಥಿ ವೃಂದಕ್ಕೆ ಹಂಚುವ ಮಹತ್ವದ ಕೇಂದ್ರವಾಗಿತ್ತು. ಸದಾಚಾರ, ಶಿಸ್ತು ಮತ್ತು ವಿದ್ಯಾಸಂಪತ್ತಿಯನ್ನು ಸಂಪಾದಿಸಲು ನಮ್ಮ ನಾಡಿನ ನಾನಾಭಾಗಗಳಿಂದ ಅನೇಕ ಚರವರ್ಯರು, ಪಂಡಿತರು ಮತ್ತು ಶಾಸ್ತ್ರಿಗಳು ತಂಡೋಪತಂಡವಾಗಿ ಈ ಪಾಠಶಾಲೆಗೆ ಆಗಮಿಸುತ್ತಿದ್ದರು.

ಉಜ್ಜಯಿನಿಯ ಜಗದ್ಗುರು ಚನ್ನ ಬಸವದೇಶಿಕೇಂದ್ರ ಸ್ವಾಮಿಗಳು, ಚಿತ್ರರಗಿ–ಇಳಕಲ್ಲದ ವಿಜಯ ಮಹಾಂತಸ್ವಾಮಿಗಳು, ಬಳ್ಳಾರಿಯ ಜಗದ್ಗುರು ಕೊಟ್ಟೂರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶಿವಬಸವ ಸ್ವಾಮಿಗಳು ಮೊದಲಾದವರು ಪಂಡಿತ ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಈ ವಿದ್ಯಾವಂತ ಸಮೂಹದ ಮಧ್ಯೆಯೂ ಪಂಡಿತ ಪರ್ವತ ಶಾಸ್ತ್ರಿಗಳು ಅತ್ಯಂತ ಮೇಧಾವಿಗಳೆಂದೂ, ಕವಿ ಪ್ರತಿಭಾಸಂಪನ್ನರೆಂದೂ ವಿಶೇಷ ಗೌರವ ಪಡೆದಿದ್ದರು. ಇದೇ ಪಾಠಶಾಲೆಯಲ್ಲಿ ಅವರು ಕನ್ನಡ, ಸಂಸ್ಕೃತ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಪ್ರತಿಮ ಪರಿಣತಿಯನ್ನು ಗಳಿಸಿ, ಮುಂದಿನ ತಾತ್ವಿಕ–ಸಾಹಿತ್ಯಿಕ ಸಾಧನೆಗೆ ದೃಢವಾದ ಅಡಿಪಾಯವನ್ನು ಹಾಕಿಕೊಂಡರು.

ಬಳ್ಳಾರಿಯ ಶ್ರೀ ಗುರುನಿವಾಸ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ಬಳಿಕ, ಪಂಡಿತ ಪರ್ವತ ಶಾಸ್ತ್ರಿಗಳು ಸ್ವಗ್ರಾಮವಾದ ಕಂದಗಲ್ಲಿಗೆ ಮರಳಿ ಕೆಲಕಾಲ ಅಲ್ಲಿಯೇ ವಾಸಿಸಿದರು. ನಂತರ ಜೀವನದ ಮುಂದಿನ ಹಂತದಲ್ಲಿ ಅವರು ರಾಯಚೂರು ಜಿಲ್ಲೆಯ ಗೆಜ್ಜಲಗಟ್ಟಿಯನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಂಡರು. ಆದರೆ ಜೀವನದ ಅಂತಿಮ ಕ್ಷಣಗಳಲ್ಲಿ ಪುನಃ ತಮ್ಮ ಜನ್ಮಭೂಮಿಯನ್ನೇ ಸ್ಮರಿಸಿ, ಕಂದಗಲ್ಲ ಗ್ರಾಮಕ್ಕೆ ಮರಳಿ ಅಲ್ಲಿಯೇ ಶಿವೈಕ್ಯರಾದರು. ಇಂದಿಗೂ ಅವರ ಸಮಾಧಿ ಕಂದಗಲ್ಲ ಗ್ರಾಮದಲ್ಲಿಯೇ ಇರುವುದರಿಂದ, ಆ ಸ್ಥಳವು ಅವರ ಜೀವನ–ಸಾಧನೆಯ ಶಾಶ್ವತ ಸ್ಮಾರಕವಾಗಿ ಉಳಿದಿದೆ.

ಪರಮ ಮಹಿಮಶಾಲಿಗಳೂ, ತಪಸ್ವಿಗಳೂ ಆಗಿದ್ದ ಚಿತ್ತರಗಿ–ಇಳಕಲ್ಲ ಮಠದ ವಿಜಯ ಮಹಾಂತರು, ಪರ್ವತ ಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಪರ್ವತ ಶಾಸ್ತ್ರಿಗಳ ಅಪಾರ ಪಾಂಡಿತ್ಯ, ತಾತ್ವಿಕ ಆಳ ಮತ್ತು ವಿದ್ಯಾ ಪ್ರಭಾಪುಂಜದಿಂದ ಆಳವಾಗಿ ಪ್ರಭಾವಿತರಾದ ವಿಜಯ ಮಹಾಂತರು, ಹುನಗುಂದ ಮಠದಲ್ಲಿ ಸ್ಥಾಪಿತವಾಗಿದ್ದ ಸಂಸ್ಕೃತ ಪಾಠಶಾಲೆಗೆ ಪಂಡಿತ ಪರ್ವತ ಶಾಸ್ತ್ರಿಗಳನ್ನು ಪ್ರಧಾನ ಅಧ್ಯಾಪಕರಾಗಿ ನೇಮಿಸಿಕೊಂಡರು. ಈ ನೇಮಕವು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲದೆ, ವಿದ್ಯೆಗೆ ನೀಡಿದ ಗೌರವದ ಸ್ಪಷ್ಟ ಪ್ರತಿಬಿಂಬವಾಗಿತ್ತು.

ಪಂಡಿತರು ಸುಗಮವಾಗಿ ವಿದ್ಯಾದಾನದಲ್ಲಿ ತೊಡಗಿಸಿಕೊಳ್ಳುವಂತೆ ಅಗತ್ಯವಿದ್ದ ಎಲ್ಲ ಸೌಲಭ್ಯಗಳನ್ನು ವಿಜಯ ಮಹಾಂತರು ಒದಗಿಸಿದರು. ಅದಲ್ಲದೆ, ಸಂಭಾವನಾರೂಪವಾಗಿ ಪ್ರತಿವರ್ಷ ಐದು ನೂರು ರೂಪಾಯಿಗಳ ಗೌರವ ವೇತನವನ್ನು ದಯಪಾಲಿಸುತ್ತಿದ್ದರು. ಪಂಡಿತರು ಸೇವೆಯಿಂದ ನಿವೃತ್ತಿಹೊಂದಿದ ನಂತರವೂ, ಆ ಗೌರವ ವೇತನವನ್ನು ಆಜೀವಪರ್ಯಂತ ತಪ್ಪದೆ ನೀಡಿದ್ದು, ಗುರು–ಶಿಷ್ಯ ಪರಂಪರೆಯ ಅಪರೂಪದ ಉದಾಹರಣೆಯಾಗಿದೆ. ಪರ್ವತ ಶಾಸ್ತ್ರಿಗಳು ಈ ಅನುಗ್ರಹವನ್ನು ಭಕ್ತಿ ಮತ್ತು ಕೃತಜ್ಞತೆಯೊಂದಿಗೆ ಗುರುಕೃಪೆಯೆಂದು ಸ್ವೀಕರಿಸಿ, ತಮ್ಮ ವಿದ್ಯಾಸಾಧನೆಯನ್ನು ಇನ್ನೂ ಶ್ರದ್ಧೆಯಿಂದ ಮುಂದುವರಿಸಿದ್ದರು.

ಪೂಜ್ಯ ಇಳಕಲ್ಲ ವಿಜಯ ಮಹಂತರರು, ಗುಡದೂರ ದೊಡ್ಡಯ್ಯನವರು, ಸಂತೆಕೊಲ್ಲರ ಘನಮಠಾರ್ಯರು, ಸೊಲ್ಲಾಪುರದ ವೀರೇಶ್ವರ ಶರಣರು ಹಾಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸನ್ನಿಧಿ ಮತ್ತು ಸಾನ್ನಿಧ್ಯದಿಂದ ಪಂಡಿತ ಪರ್ವತ ಶಾಸ್ತ್ರಿಗಳು ಶಿವಾನುಭವ ಶಾಸ್ತ್ರದ ಪರಮ ರಹಸ್ಯವನ್ನು ಆಳವಾಗಿ ಮನನ ಮಾಡಿಕೊಂಡಿದ್ದರು. ಈ ಮಹಾಪುರುಷರ ಸಂಪರ್ಕವು ಅವರ ತತ್ತ್ವಚಿಂತನೆಗೆ ದಿಕ್ಕು ನೀಡಿದ್ದು, ಅನುಭವ–ಅನುಸಂಧಾನದ ಮೂಲಕ ಶಿವತತ್ತ್ವವನ್ನು ಗ್ರಹಿಸುವ ದೃಷ್ಟಿಯನ್ನು ಮತ್ತಷ್ಟು ಪಕ್ವಗೊಳಿಸಿತು.

ಪರ್ವತ ಶಾಸ್ತ್ರಿಗಳ ಪಾಂಡಿತ್ಯ ಕೇವಲ ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಸಮಾಜದ ವಿವಿಧ ವರ್ಗಗಳೊಂದಿಗೆ ನಡೆದ ತತ್ವಾರ್ಥ ಚರ್ಚೆಗಳ ಮೂಲಕ ಇನ್ನಷ್ಟು ವಿಸ್ತಾರಗೊಂಡಿತು. ಸರ್ವಶ್ರೀ ಕಂದಗಲ್ಲ ನಾಡಗೌಡರು, ಗೆಜ್ಜಲಗಟ್ಟಿ ಸಂಸ್ಥಾನದ ಜಹಗೀರದಾರ ವೆಂಕಟರಾಯರು, ತಾಳೀಕೋಟಿಯ ಶ್ರೀಮಂತರು, ವಿಶ್ವಕರ್ಮ ಸಮಾಜದ ದೇವಗಿರಿ ಲಕ್ಷ್ಮಯ್ಯನವರು, ಸಜ್ಜಲಗುಡ್ಡದ ಶರಣಮ್ಮನವರು, ಸೊಲ್ಲಾಪುರದ ವಾರದ ಮಲ್ಲಪ್ಪನವರು ಸೇರಿದಂತೆ ಸಮಾಜದ ಅನೇಕ ಗಣ್ಯರು ಪರ್ವತ ಶಾಸ್ತ್ರಿಗಳೊಂದಿಗೆ ತಾತ್ವಿಕ ಸಂವಾದಗಳಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಈ ಚರ್ಚೆಗಳಲ್ಲಿ ಪರ್ವತ ಶಾಸ್ತ್ರಿಗಳ ಪ್ರಕಾಂಡ ಪಾಂಡಿತ್ಯ, ವಿಷಯವನ್ನು ಸರಳವಾಗಿ ನಿರೂಪಿಸುವ ಶೈಲಿ ಹಾಗೂ ವಾಗೈಖರಿಯ ಸೌಂದರ್ಯವನ್ನು ಮೆಚ್ಚಿ ಆನಂದಭರಿತರಾಗುತ್ತಿದ್ದರು.

ಪಂಡಿತ ಪರ್ವತ ಶಾಸ್ತ್ರಿಗಳು ಜ್ಞಾನವನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೇ, ಹೊಸಪೇಟೆ, ಹಂಪಿ, ಕೊಡಗಲಿ, ಲಿಂಗಸೂಗುರು, ಇಳಕಲ್ಲು ಮುಂತಾದ ಗ್ರಾಮಗಳಲ್ಲಿ ಜ್ಞಾನಸತ್ರಗಳನ್ನು ಏರ್ಪಡಿಸುತ್ತಾ, ಬಸವಪುರಾಣ ಪ್ರವಚನಗಳನ್ನು ಮಾಡುತ್ತಾ, ಜಿಜ್ಞಾಸುಗಳಿಗೆ ತತ್ತ್ವಬೋಧೆ ನೀಡುತ್ತಾ ನಮ್ಮ ನಾಡಿನ ನಾನಾ ಭಾಗಗಳಲ್ಲಿ ಪ್ರವಾಸ ಕೈಗೊಂಡರು. ಈ ಪ್ರವಚನಗಳು ಕೇವಲ ಧಾರ್ಮಿಕ ಉಪನ್ಯಾಸಗಳಾಗಿರದೆ, ಜನಸಾಮಾನ್ಯರ ಜೀವನಕ್ಕೆ ತಾತ್ವಿಕ ಸ್ಪಷ್ಟತೆ ನೀಡುವ ಅನುಭವಪಾಠಗಳಾಗಿದ್ದವು.

ಪರಳಿ ಪ್ರಕರಣದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಪಾತ್ರ

ಪರಳಿ ಎಂಬುದು ಹೈದ್ರಾಬಾದ್ ಸಂಸ್ಥಾನದ ಮರಾಠಿ ಪ್ರದೇಶದಲ್ಲಿರುವ, ಇಂದಿನ ಪರಭಣಿ ಜಿಲ್ಲೆಯ ಸಣ್ಣ ಗ್ರಾಮ. ಇಲ್ಲಿ ಸ್ಥಿತವಾಗಿರುವ ವೈಜನಾಥ (ವೈದ್ಯನಾಥ) ದೇವಾಲಯವು ಅಪಾರ ಖ್ಯಾತಿಯನ್ನು ಹೊಂದಿದ್ದು, ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ನೈಜನಾಥೇಶ್ವರ ಲಿಂಗವು ಅಲ್ಲಿ ಪ್ರತಿಷ್ಠಿತವಾಗಿದೆ. ಪ್ರಾಚೀನ ಕಾಲದಿಂದಲೂ ಈ ವೈಜನಾಥ ಲಿಂಗದ ಪೂಜಾದಿ ವ್ಯವಸ್ಥೆ ವೀರಶೈವ ಜನಾಂಗದ ಅಧೀನದಲ್ಲಿಯೇ ನಡೆದುಕೊಂಡು ಬಂದಿತ್ತು.

ಆದರೆ ಕಾಲಕ್ರಮೇಣ ಕೆಲ ಪರವಾದಿಗಳು, ವೀರಶೈವ ಸಮಾಜಕ್ಕೆ ವೈಜನಾಥ ಲಿಂಗಕ್ಕೆ ಅರ್ಚನೆ ಮಾಡುವ ಹಕ್ಕಿಲ್ಲವೆಂಬ ಅನುಮಾನವನ್ನು ಸೃಷ್ಟಿಸಿ, ಈ ವಿಷಯವನ್ನು ವಿವಾದದ ರೂಪಕ್ಕೆ ತಳ್ಳಿದರು. ಈ ಗಂಭೀರ ವಿವಾದವು ಕೊನೆಗೆ ಹೈದ್ರಾಬಾದ್ ಸಂಸ್ಥಾನದ ಉಚ್ಚನ್ಯಾಯಾಲಯವಾದ ‘ಉಮರ ಮಜಹಬಿ’ ನ್ಯಾಯಾಲಯದ ಮೆಟ್ಟಿಲೇರಿತು. ಇದು ಕೇವಲ ಧಾರ್ಮಿಕ ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ; ವೀರಶೈವ ಸಮಾಜದ ಗೌರವ, ಪರಂಪರೆ ಮತ್ತು ಅಸ್ತಿತ್ವದ ಪ್ರಶ್ನೆಯಾಗಿ ರೂಪುಗೊಂಡಿತು.

ಈ ಪ್ರಕರಣದಲ್ಲಿ ವೀರಶೈವ ಸಮಾಜದ ಪರವಾಗಿ ಅಪಾರ ಆರ್ಥಿಕ ಸಹಾಯದ ಜೊತೆಗೆ, ವೀರಶೈವರಿಗೆ ವೈಜನಾಥ ಲಿಂಗವನ್ನು ಪೂಜಿಸುವ ಹಕ್ಕು ಶಾಸ್ತ್ರಸಮ್ಮತವಾಗಿಯೇ ಇದೆ ಎಂಬುದನ್ನು ಸಂಸ್ಕೃತ ಶಾಸ್ತ್ರಾಧಾರಗಳಿಂದ ಸಾಬೀತುಪಡಿಸುವ ಅಗತ್ಯವಿತ್ತು. ಇದಕ್ಕಾಗಿ ಉನ್ನತ ಮಟ್ಟದ ಸಂಸ್ಕೃತ ಪಾಂಡಿತ್ಯ, ಶಾಸ್ತ್ರೀಯ ಉದಾಹರಣೆಗಳು ಹಾಗೂ ಪ್ರಾಮಾಣಿಕ ವಿದ್ವಾಂಸರ ಸಹಕಾರ ಅತ್ಯಾವಶ್ಯಕವಾಗಿತ್ತು. ವೀರಶೈವ ಸಮಾಜದ ಮಾನರಕ್ಷಣೆಯ ಘಟ್ಟ ಇದಾಗಿತ್ತು.

ಈ ಸನ್ನಿವೇಶದಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ನೇತೃತ್ವವಹಿಸಿ, ಯಾವುದೇ ಬೆಲೆಯನ್ನಾದರೂ ತೀರಿಸಿ ಈ ಹೋರಾಟವನ್ನು ಜಯಿಸಲೇಬೇಕೆಂಬ ದೃಢನಿಶ್ಚಯದೊಂದಿಗೆ ಕಾರ್ಯೋನ್ಮುಖರಾದರು. ಪರವಾದಿಗಳು ಪುಣೆ ಮೊದಲಾದ ನಗರಗಳಿಂದ ಪ್ರಸಿದ್ಧ ಸಂಸ್ಕೃತ ಪಂಡಿತರನ್ನು ಕರೆಸಿಕೊಂಡಿದ್ದರೆ, ಹಾನಗಲ್ಲ ಶ್ರೀಗಳು ವೀರಶೈವ ಪಂಡಿತ ಮಂಡಳಿಯನ್ನೇ ಸಂಘಟಿಸಿಕೊಂಡು ಹೈದ್ರಾಬಾದಿಗೆ ತೆರಳಿದರು.

ಈ ಪಂಡಿತ ಮಂಡಳಿಯಲ್ಲಿ ಚೌಡದಾನಪುರ ಸಂಸ್ಥಾನಮಠದ ಸರ್ವಶ್ರೀ ವಿರೂಪಾಕ್ಷ ವಡೆಯರು, ಪಂಡಿತ ರೇವಣಸಿದ್ದ ಶಾಸ್ತ್ರಿಗಳು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಆಸ್ಥಾನವಿದ್ವಾನ್ ಪಿ.ಆರ್. ಕರಿಬಸವ ಶಾಸ್ತ್ರಿಗಳು, ಶಿರ್ಸಿ ಗುರುಶಾಂತ ಶಾಸ್ತ್ರಿಗಳು, ಪಂಡಿತ ಸೋಮನಾಥ ಶಾಸ್ತ್ರಿಗಳು ಮತ್ತು ಕಂದಗಲ್ಲಿನ ಪಂಡಿತ ಪರ್ವತ ಶಾಸ್ತ್ರಿಗಳು ಪ್ರಮುಖರಾಗಿದ್ದರು. ವೀರಶೈವ ಸಮಾಜದ ಪರವಾಗಿ ರಾಯ ಹೇಮಚಂದ್ರ ವಕೀಲರು, ರಾಯ ವಿಶ್ವೇಶ್ವರನಾಥರು, ಶ್ರೀ ಸೋಮೇಶ್ವರರಾವ ವಕೀಲರು, ಶರಣಯ್ಯ ಸ್ವಾಮಿ ವಕೀಲರು, ಶ್ರೀ ಸಂಗ್ರಾಮಪ್ಪ ವಕೀಲರು ಮೊದಲಾದವರು ವಕಾಲತ್ತು ವಹಿಸಿದ್ದರು.

ಈ ವಿದ್ವಾಂಸರು ಮತ್ತು ವಕೀಲರು ಸೇರಿ ಶಾಸ್ತ್ರೋಕ್ತ ಪ್ರಮಾಣಗಳು, ಪುರಾಣೋಕ್ತ ಉಲ್ಲೇಖಗಳು ಹಾಗೂ ಸಶಕ್ತ ಶಾಸ್ತ್ರೀಯ ಉದಾಹರಣೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿ, ದೃಢವಾದ ವಾದವನ್ನು ಮುಂದಿಟ್ಟರು. ಈ ಸಮಗ್ರ, ಸಂಘಟಿತ ಮತ್ತು ತಾತ್ವಿಕ ಹೋರಾಟದ ಫಲವಾಗಿ ವೀರಶೈವ ಸಮಾಜಕ್ಕೆ ನ್ಯಾಯ ದೊರಕಿತು; ಪ್ರಕರಣದಲ್ಲಿ ವೀರಶೈವ ಪಕ್ಷವು ವಿಜಯ ಸಾಧಿಸಿತು.

ಈ ಐತಿಹಾಸಿಕ ಹೋರಾಟದಲ್ಲಿ ಪಂಡಿತ ಕಂದಗಲ್ಲ ಪರ್ವತ ಶಾಸ್ತ್ರಿಗಳು ಅವಿಶ್ರಾಂತ ಶ್ರಮವಹಿಸಿ, ಶಾಸ್ತ್ರಾಧಾರಿತ ಪ್ರಮಾಣಗಳನ್ನು ಸಂಗ್ರಹಿಸಿ ಒದಗಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿದರು. ಅವರ ಪಾಂಡಿತ್ಯ, ಸ್ಮರಣಶಕ್ತಿ ಮತ್ತು ಶಾಸ್ತ್ರಸಿದ್ಧತೆಯೇ ಈ ವಾದಕ್ಕೆ ಬಲ ನೀಡಿದ ಮೂಲಾಧಾರಗಳಾಗಿದ್ದವು.

ಈ ಪ್ರಕರಣದ ನಿಮಿತ್ತ ಹೈದ್ರಾಬಾದಿನಲ್ಲಿ ವಾಸ್ತವ್ಯ ಮಾಡಿದ ಸಮಯದಲ್ಲಿ, ಅಂದಿನ ಹೈದ್ರಾಬಾದ್ ನವಾಬರಾದ ಅಲಾ ಹಜರತ್ ಸಾಹೇಬರು ಪಂಡಿತ ಪರ್ವತ ಶಾಸ್ತ್ರಿಗಳ ಖ್ಯಾತಿಯನ್ನು ಕೇಳಿ, ಅವರನ್ನು ತಮ್ಮ ಸದರ ದರ್ಬಾರಕ್ಕೆ ಆಹ್ವಾನಿಸಿ, ಅವರ ಅಪಾರ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದರೆಂದು ತಿಳಿದುಬರುತ್ತದೆ. ಇದು ಪಂಡಿತ ಪರ್ವತ ಶಾಸ್ತ್ರಿಗಳ ವಿದ್ಯಾ ಗೌರವವು ಧರ್ಮ–ಜಾತಿ–ರಾಜಕೀಯ ಸೀಮೆಗಳನ್ನು ಮೀರಿ ಬೆಳಗಿದ್ದುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಅತ್ಯಂತ ಮೇಧಾವಿಗಳೂ, ಪ್ರಕಾಂಡ ಪಂಡಿತರೂ, ಕವಿ ಪ್ರತಿಭಾಸಂಪನ್ನರೂ ಆಗಿದ್ದ ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಸುಮಾರು ಎಪ್ಪತ್ತೆರಡು ವರ್ಷಗಳ ಕಾಲ ಸಮೃದ್ಧ, ಸಾರ್ಥಕ ಮತ್ತು ತಪೋಮಯ ಜೀವನವನ್ನು ನಡೆಸಿ, ಶಕ ೧೮೪೮ರಲ್ಲಿ (ಕ್ರಿ.ಶ. ೧೯೨೬) ತಮ್ಮ ಜನ್ಮಭೂಮಿಯಾದ ಕಂದಗಲ್ಲ ಗ್ರಾಮದಲ್ಲಿಯೇ ಶಿವೈಕ್ಯರಾದರು.

ತಮ್ಮ ಅಂತಿಮ ಕ್ಷಣಗಳಲ್ಲಿ, ತಾವು ಸ್ವತಃ ರಚಿಸಿದ್ದ ಮಹಾಮಹಿಮರಾದ ಚಿತ್ತರಗಿ ವಿಜಯ ಮಹಾಂತೇಶ್ವರರ ಅಷ್ಟಕವನ್ನು, ಇಳಕಲ್ಲ ಹಿರೇಮಠದ ಗುರು ಬಸವ ಶಾಸ್ತ್ರಿಗಳಿಗೆ ತಾರಸ್ವರದಲ್ಲಿ ಹಾಡುವಂತೆ ವಿನಂತಿಸಿ, ತಮ್ಮ ಮನಸ್ಸನ್ನು ಮಹಾಲಿಂಗದಲ್ಲಿ ಲೀನಗೊಳಿಸಿದರು. ಪರಶಿವ ಧ್ಯಾನದಲ್ಲಿ ಮಗ್ನರಾದ ಅವರು, ಇಹಲೋಕದ ಎಲ್ಲ ಬಂಧನಗಳನ್ನು ಮೀರಿ ಪರಂಧಾಮವನ್ನು ಸೇರುವ ಅಪೂರ್ವ ಕ್ಷಣವನ್ನು ಸಾಧಿಸಿದರು. ಮಹಾಕವಿಯ ದೇಹ ನಶ್ವರವಾದರೂ, ಅವರ ಅಶರೀರವಾಣಿ ಸ್ವರಚಿತ ಗ್ರಂಥರಾಶಿಗಳಲ್ಲಿ ಅನುರಣಿತವಾಗಿ ಅಮರವಾದುದು.

ಪಂಡಿತ ಪರ್ವತ ಶಾಸ್ತ್ರಿಗಳು ತಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ತಾತ್ವಿಕ ಸಾಧನೆಯ ಶಿಖರದಂತೆ ಕಾಣುತ್ತದೆ:

ಅಧಾರಾದಿಂ ಪಶ್ಚಿಮಾಂತವಿಲಸತ್ ಚಕ್ರಾಬ್ಜ ಪತ್ರೋಜ್ವಲತ್
ಪ್ರಾಣೋಪಸ್ಕೃತ-ಲಿಂಗಜಿತ್ಸುಖ-ಸುಧಾಸ್ವಾದಾತಿ ಮೋದಾಬುಂಧಿಮ್ ।
ಪಿಂಡಾದಿಸ್ಥಲಬೋಧ-ಸಾಧನಕಲಾ ಭೂಷಾಚ್ಛಭಾಷಾನಿಧಿಂ
ನಿಶ್ಚಿಂತಂ ನಿರುಪಪ್ಲವಂ ನಿರುಪಮಂ ನಿತ್ಯಂ ವಿನುತ್ಯಂ ಮುದಾ ।
ವಂದೇ ತಂ ಸತತಂ ಕೃಪಾರಸಲಸತ್ ಸ್ವಂತಂ ಮಹಾಂತಂ ಪ್ರಭುಮ್ ॥

ಈ ಶ್ಲೋಕದಲ್ಲಿ ಕವಿ ಪರಮಾತ್ಮಸ್ವರೂಪಿಯಾದ ಮಹಾಂತ ಪ್ರಭುವನ್ನು ಭಕ್ತಿಪೂರ್ವಕವಾಗಿ ವಂದಿಸುತ್ತಾನೆ. ಮೂಲಾಧಾರದಿಂದ ಸಹಸ್ರಾರವರೆಗೆ—ಅಂದರೆ ಆಧಾರದಿಂದ ಪಶ್ಚಿಮಾಂತವರೆಗೆ—ಪ್ರಕಾಶಿಸುವ ಚಕ್ರಕಮಲಗಳ ದೀಪ್ತಿಯಿಂದ ಉಜ್ವಲರಾಗಿರುವ ಪ್ರಭುವಿನ ಸ್ವರೂಪವನ್ನು ಇಲ್ಲಿ ಕವಿ ಚಿತ್ರಿಸುತ್ತಾನೆ. ಪ್ರಾಣಶಕ್ತಿಯಿಂದ ಪೋಷಿತವಾದ ಲಿಂಗತತ್ತ್ವವನ್ನು ಜಯಿಸಿ, ಅಮೃತಸದೃಶ ಪರಮಾನಂದವನ್ನು ಅನುಭವಿಸಿ, ಅದರಲ್ಲಿ ಮುಳುಗಿ ಮೋದದಿಂದ ತುಂಬಿರುವ ಆನಂದಸ್ವರೂಪಿಯೇ ಆ ಮಹಾಂತ.

ಪಿಂಡ–ಸ್ಥಳ–ತತ್ತ್ವಗಳ ಬೋಧನೆಗೆ ಸಾಧನವಾಗುವ ಸೂಕ್ಷ್ಮ ಕಲೆಯಿಂದ ಅಲಂಕರಿತರಾಗಿ, ಶುದ್ಧ ಮತ್ತು ಸ್ಪಷ್ಟವಾದ ಭಾಷಾರಸನಿಧಿಯಾಗಿರುವವರು ಅವರು. ಯಾವುದೇ ಚಿಂತೆ ಇಲ್ಲದವರು, ಯಾವುದೇ ಉಪಾಧಿ ಅಥವಾ ಮಿತಿಗಳಿಂದ ಬಂಧಿತರಾಗದವರು, ಅಪೂರ್ವರು, ಅಪ್ರತಿಮರು, ನಿತ್ಯವೂ ಸ್ತುತಿಸಲ್ಪಡುವವರು, ಆನಂದದಿಂದ ಸದಾ ವಂದನೀಯರು. ಅಂತಹವರು ಕೃಪಾರಸದಿಂದ ತುಂಬಿ ಉಕ್ಕುವ, ನಮ್ಮ ಆತ್ಮದ ಅಂತರಾಳದಲ್ಲಿಯೇ ವಾಸಿಸುವ ಮಹಾತ್ಮನಾದ ಮಹಾಂತ ಪ್ರಭು. ಆ ಪ್ರಭುವನ್ನು ನಾನು ಸದಾ ಭಕ್ತಿಯಿಂದ ವಂದಿಸುತ್ತೇನೆ ಎಂಬುದು ಈ ಶ್ಲೋಕದ ಪರಮಾರ್ಥ.

ಈ ಮಹಾಂತಸ್ತುತಿ ಕೇವಲ ಒಂದು ಕಾವ್ಯವಲ್ಲ; ಅದು ಪಂಡಿತ ಪರ್ವತ ಶಾಸ್ತ್ರಿಗಳ ಜೀವನಾನುಭವದ ಸಾರ, ಶಿವಾನುಭವ ಶಾಸ್ತ್ರದ ಸಿದ್ಧಾಂತ ಮತ್ತು ಆತ್ಮಸಾಧನೆಯ ಅಂತಿಮ ಘೋಷಣೆಯಾಗಿದೆ. ಹೀಗೆ, ವಿದ್ಯೆ ಮತ್ತು ಅನುಭವವನ್ನು ಒಂದಾಗಿ ಬೆಸೆಯುವ ಮೂಲಕ, ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ವೀರಶೈವ ತತ್ತ್ವಪರಂಪರೆಯಲ್ಲಿ ಅಳಿಯದ ಬೆಳಕಾಗಿ ಉಳಿದಿದ್ದಾರೆ.

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಸಂಸ್ಕೃತ ಸಾಹಿತ್ಯ ರಚನೆಗಳು

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳು ಕೇವಲ ಮಹಾನ್ ತಾತ್ವಿಕರು ಮಾತ್ರವಲ್ಲ; ಸಂಸ್ಕೃತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ಪ್ರಭುತ್ವ ಸಾಧಿಸಿದ ಅಪೂರ್ವ ವಿದ್ವಾಂಸರಾಗಿದ್ದರು. ಚಂಪೂ ಪ್ರಬಂಧಗಳಿಂದ ಹಿಡಿದು ಅಷ್ಟಕ, ಗೀತೆ, ಸುಭಾಷಿತ ಹಾಗೂ ಸ್ತೋತ್ರ ರಚನೆಗಳವರೆಗೆ ಅವರ ಕೃತಿಗಳು ವ್ಯಾಪಕವಾಗಿದ್ದು, ಶಿವಾನುಭವ–ಶೈವಸಿದ್ಧಾಂತ–ಶರಣ ಪರಂಪರೆಯ ಸುಗಂಧವನ್ನು ಹೊತ್ತಿವೆ.

. ಬೃಹದ್ಗ್ರಂಥಗಳು (ಚಂಪೂ ಪ್ರಬಂಧಗಳು)

ಪಂಡಿತ ಪರ್ವತ ಶಾಸ್ತ್ರಿಗಳ ಬೃಹದಾಕಾರದ ಕೃತಿಗಳು ಅವರ ಕಾವ್ಯಪ್ರತಿಭೆ, ಕಥನಶೈಲಿ ಹಾಗೂ ಶಾಸ್ತ್ರೀಯ ಪಾಂಡಿತ್ಯವನ್ನು ಸಮಗ್ರವಾಗಿ ಪ್ರತಿಬಿಂಬಿಸುತ್ತವೆ.

  • ಕರಡೀಶ ಚರಿತಾಮೃತ ಚಂಪೂ ಪ್ರಬಂಧಃ
  • ಚಿತ್ರಗಿಶ್ರೀಮನ್ಮಹಾಂತೇಶ ಚರಿತ ಚಂಪೂ ಪ್ರಬಂಧಃ

ಈ ಎರಡು ಚಂಪೂ ಕೃತಿಗಳು ಗದ್ಯ–ಪದ್ಯಗಳ ಸುಂದರ ಸಂಯೋಜನೆಯೊಂದಿಗೆ ಶರಣ ಮಹಾತ್ಮರ ಜೀವನ, ತಪಸ್ಸು ಮತ್ತು ತತ್ತ್ವವನ್ನು ಕಾವ್ಯಮಯವಾಗಿ ಚಿತ್ರಿಸುತ್ತವೆ.

. ಸುಭಾಷಿತ ಸಾಹಿತ್ಯ

  • ಸುಭಾಷಿತ ಸುಧಾ ಝರೀ

ನೀತಿ, ವೈರಾಗ್ಯ, ಜೀವನಾನುಭವ ಮತ್ತು ತಾತ್ವಿಕ ಚಿಂತನೆಗಳನ್ನು ಸಂಕ್ಷಿಪ್ತ, ಸುಂದರ ಮತ್ತು ಸ್ಮರಣೀಯ ಶ್ಲೋಕಗಳ ಮೂಲಕ ಹೇಳುವ ಈ ಕೃತಿ, ಪಂಡಿತ ಪರ್ವತ ಶಾಸ್ತ್ರಿಗಳ ಸೂಕ್ಷ್ಮಾವಲೋಕನ ಶಕ್ತಿಗೆ ಸಾಕ್ಷಿಯಾಗಿದೆ.

. ಅಷ್ಟಕ ಕೃತಿಗಳು

ಅಷ್ಟಕ ಸಾಹಿತ್ಯದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳು ವಿಶೇಷ ಸಾಧನೆ ಮಾಡಿದ್ದು, ಶರಣರು, ಯತಿಗಳು, ದೇವತೆಗಳು ಮತ್ತು ಶಿವಾನುಭವ ತತ್ತ್ವಗಳನ್ನು ಭಕ್ತಿಭಾವಪೂರ್ಣವಾಗಿ ವರ್ಣಿಸಿದ್ದಾರೆ. ಅವರ ಪ್ರಮುಖ ಅಷ್ಟಕಗಳು ಇಂತಿವೆ:

  • ಅಂಬಾಷ್ಟಕಮ್
  • ಗಿರಿ ಶ್ರೀ ಮಲ್ಲಿಕಾರ್ಜುನ ಮಹಾಷ್ಟಕಮ್
  • ನಾಗಭೂಷಣ ಘನಮಠವರಭವಾಷ್ಟಕಮ್
  • ಶರಣ ಬಸವ ರಾಜಾಷ್ಟಕಮ್
  • ಶರಣ ಬಸವ ಸದಷ್ಟಕಮ್
  • ಶ್ರೀ ಕೃಷ್ಣಾಮಲಹಾರಿಣೀ, ಶ್ರೀ ಸಂಗಮೇಶ್ವರ ಮಹಾಷ್ಟಕಮ್
  • ಶ್ರೀ ಕೋಲೂರ ಸೂರಿ ನಿವಾಸ ವೃಷೇಂದ್ರಾಷ್ಟಕಮ್
  • ಶ್ರೀ ಗಿರಿಪುರ (ಗುಡದೂರು) ದೊಡ್ಡ ಪಾರ್ಯ ಪಂಚರತ್ನ ಸ್ತವಃ
  • ಶ್ರೀ ದಕ್ಷಿಣಾಮೂರ್ತಿ ಘನಾಷ್ಟಕಮ್
  • ಶ್ರೀ ಭವಾಲದಿ ಮಹಾಂತಸ್ವಾಮಿ ಪ್ರಭಾವ ರುಚಿರಾಷ್ಟಕಮ್
  • ಶ್ರೀ ಮಚ್ಚಿತ್ರಗಿ: ಶ್ರೀ ಮಹಾಂತ ಯತಿರಾಜವರಾಷ್ಟಕಮ್
  • ಶ್ರೀ ಮಲ್ಲಿಕಾರ್ಜುನ ವರಾಷ್ಟಕಮ್
  • ಶ್ರೀ ಸಿದ್ಧರಾಮ ಶಿವಯೋಗಿ ವರಾಷ್ಟಕಮ್
  • ಶ್ರೀ ಸಿದ್ಧವರ್ಯಾಷ್ಟಕಮ್

ಈ ಅಷ್ಟಕಗಳಲ್ಲಿ ಭಕ್ತಿ, ಶಾಸ್ತ್ರ, ಅನುಭವ ಮತ್ತು ಕಾವ್ಯ—all ಒಂದಾಗಿ ಬೆಸೆದಿರುವುದು ಪಂಡಿತ ಪರ್ವತ ಶಾಸ್ತ್ರಿಗಳ ವಿಶೇಷತೆ.

. ಗೀತೆಗಳು

ಸಂಗೀತಾತ್ಮಕ ಲಯ, ಭಕ್ತಿರಸ ಮತ್ತು ಸುಲಭ ಪಠ್ಯಶೈಲಿಯೊಂದಿಗೆ ರಚಿತವಾದ ಪರ್ವತ ಶಾಸ್ತ್ರಿಗಳ ಗೀತೆಗಳು ದೇವಾಲಯ ಹಾಗೂ ಸತ್ಸಂಗಗಳಲ್ಲಿ ಹಾಡಲು ಯೋಗ್ಯವಾಗಿವೆ.

  • ಅಂಬೇ ಗಜೇಂದ್ರ ಬಾಲೇ ಪಾಲಯ
  • ಅಂಬೇ ಪಾಹಿ
  • ಜಯ ಜಯ ಗಿರಿಜಾವರ
  • ಜಯ ಹೈಮವತೀ ಹೃದೇ
  • ತುಂಗ ಮಹಿಮಾಂಕ ಘನಮಂಗಲಮ್
  • ಮಂಗಲಂ ಭವತು ಮಹೇಶ
  • ಮಂಗಲಂ ಭವಾನಿ
  • ಮಂಗಲಂ ಸಂಗಮೇಶ್ವರ

. ದೊರೆಯದೇ ಉಳಿದ ಕೃತಿಗಳು

ಇತಿಹಾಸದ ಪ್ರವಾಹದಲ್ಲಿ ಪಂಡಿತ ಪರ್ವತ ಶಾಸ್ತ್ರಿಗಳ ಕೆಲವು ಕೃತಿಗಳು ಲಭ್ಯವಾಗದೆ ಉಳಿದಿರುವುದು ವಿಷಾದಕರ ಸಂಗತಿ. ಆದರೆ ಗ್ರಂಥಸೂಚಿಗಳಲ್ಲಿ ಉಲ್ಲೇಖವಾಗಿರುವ, ಇಂದಿಗೂ ಅನ್ವೇಷಣೆಗೆ ಕಾಯುತ್ತಿರುವ ಕೃತಿಗಳು ಇಂತಿವೆ:

  • ಅಮರೇಶ್ವರಾಷ್ಟಕಮ್
  • ಪರಶಿವ ಜಂಗಮ ಸಂದರ್ಶನ ಸ್ತೋತ್ರಮ್
  • ಪಂಚಮ ಜಾರ್ಜ ಸಮುದ್ರ ಬಂಧನಮ್

ಉಪಸಂಹಾರ

ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನ ಮತ್ತು ಸಾಧನೆಗಳನ್ನು ಅವಲೋಕಿಸಿದಾಗ, ಅವರು ಕೇವಲ ಒಬ್ಬ ಸಂಸ್ಕೃತ ಪಂಡಿತರಾಗಿರಲಿಲ್ಲ; ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳಿಗೆ ದಿಕ್ಕು ನೀಡಿದ ಮಹಾನ್ ಚೇತನರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಿದ್ಯೆ, ತಪಸ್ಸು, ಅನುಭವ ಮತ್ತು ಸಮಾಜಜವಾಬ್ದಾರಿ—ಈ ನಾಲ್ಕೂ ಗುಣಗಳು ಅವರಲ್ಲಿ ಸಹಜವಾಗಿ ಒಟ್ಟಾಗಿ ಲೀನವಾಗಿದ್ದವು.

ಕಂದಗಲ್ಲ ಎಂಬ ಸಣ್ಣ ಗ್ರಾಮದಿಂದ ಹೊರಟು, ಬಳ್ಳಾರಿಯ ಗುರುನಿವಾಸ ಸಂಸ್ಕೃತ ಪಾಠಶಾಲೆ, ಹುನಗುಂದ ಮಠದ ಶೈಕ್ಷಣಿಕ ಸೇವೆ, ನಾಡಿನ ನಾನಾಭಾಗಗಳಲ್ಲಿ ನಡೆದ ಜ್ಞಾನಸತ್ರಗಳು ಮತ್ತು ಬಸವಪುರಾಣ ಪ್ರವಚನಗಳವರೆಗೆ ಅವರ ಪಯಣ ನಿರಂತರವಾದ ಜ್ಞಾನಯಾತ್ರೆಯಾಗಿತ್ತು. ಪರ್ವತ ಶಾಸ್ತ್ರಿಗಳ ಪಾಂಡಿತ್ಯವು ಗ್ರಂಥಪಾಠಕ್ಕೆ ಸೀಮಿತವಾಗಿರದೆ, ಜೀವಂತ ಅನುಭವವಾಗಿ ಸಮಾಜದೊಳಗೆ ಹರಿದಿತು.

ಪರಳಿ ಪ್ರಕರಣದಂತಹ ಐತಿಹಾಸಿಕ ಹೋರಾಟದಲ್ಲಿ ಅವರು ವೀರಶೈವ ಸಮಾಜದ ಮಾನರಕ್ಷಣೆಗೆ ಶಾಸ್ತ್ರಾಧಾರಿತ ಶಕ್ತಿಯನ್ನು ಒದಗಿಸಿ, ಧರ್ಮ ಮತ್ತು ನ್ಯಾಯ ಒಂದೇ ತ್ರಾಸಿನ ಮೇಲೆ ನಿಲ್ಲಬಹುದೆಂಬುದನ್ನು ಸಾಬೀತುಪಡಿಸಿದರು. ಈ ಸಂದರ್ಭದಲ್ಲಿ ಅವರ ಶ್ರಮ, ತಾತ್ವಿಕ ಧೈರ್ಯ ಮತ್ತು ಸ್ಮರಣಶಕ್ತಿ ವೀರಶೈವ ಪರಂಪರೆಯ ಅಸ್ತಿತ್ವಕ್ಕೆ ಬಲವಾದ ಆಧಾರವಾಯಿತು.

ಚಂಪೂ ಪ್ರಬಂಧಗಳು, ಅಷ್ಟಕಗಳು, ಗೀತೆಗಳು ಮತ್ತು ಸುಭಾಷಿತಗಳ ಮೂಲಕ ಪಂಡಿತ ಪರ್ವತ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದರು. ಅವರ ಕೃತಿಗಳಲ್ಲಿ ಕಾವ್ಯಸೌಂದರ್ಯ ಮಾತ್ರವಲ್ಲದೆ, ಶಿವಾನುಭವ ತತ್ತ್ವದ ಆಳವಾದ ಸ್ಪಂದನವೂ ಮೇಳೈಸಿದೆ. ವಿಶೇಷವಾಗಿ ಅವರ ಅಂತಿಮ ಕ್ಷಣಗಳಲ್ಲಿ ಪಠಿಸಿದ ಮಹಾಂತಸ್ತುತಿ, ಅವರ ಜೀವನಸಾಧನೆಯ ಪರಮಾರ್ಥವನ್ನು ಸಾರುವ ಆತ್ಮಘೋಷಣೆಯಂತಿದೆ.

ಶಿವಾನುಭವ ಶಾಸ್ತ್ರವನ್ನು ಕೇವಲ ತಾತ್ವಿಕ ವಾದವಾಗಿ ಅಲ್ಲದೆ, ಬದುಕಿನ ಅನುಭವವಾಗಿ ಜೀವಿಸಿದ ಪಂಡಿತ ಪರ್ವತ ಶಾಸ್ತ್ರಿಗಳು, ಗುರು–ಲಿಂಗ–ಜಂಗಮ ಪರಂಪರೆಯ ಜೀವಂತ ಪ್ರತಿನಿಧಿಗಳಾಗಿದ್ದರು. ಅವರ ದೇಹ ನಶ್ವರವಾದರೂ, ಅವರ ವಾಣಿ, ಕೃತಿ ಮತ್ತು ತತ್ತ್ವಚಿಂತನೆಗಳು ಇಂದಿಗೂ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತ ವಾಙ್ಮಯದಲ್ಲಿ ಅಳಿಯದ ಬೆಳಕಾಗಿ ಪ್ರಕಾಶಿಸುತ್ತಿವೆ.

ಇಂದು ಅವರ ಸ್ಮರಣೆ ಕೇವಲ ಭೂತಕಾಲದ ಗೌರವವಲ್ಲ; ಅದು ವರ್ತಮಾನ ಮತ್ತು ಭವಿಷ್ಯಕ್ಕೆ ದಿಕ್ಕು ತೋರಿಸುವ ಜ್ಞಾನಸ್ಮರಣೆ. ಕಂದಗಲ್ಲ ಪಂಡಿತ ಪರ್ವತ ಶಾಸ್ತ್ರಿಗಳ ಜೀವನವು, ವಿದ್ಯೆ ಸಮಾಜಸೇವೆಗೆ, ಭಕ್ತಿ ಮಾನವೀಯತೆಗೆ ಮತ್ತು ಅನುಭವ ಆತ್ಮೋದ್ಧಾರಕ್ಕೆ ದಾರಿಯಾಗಬೇಕು ಎಂಬ ಶಾಶ್ವತ ಸಂದೇಶವನ್ನು ನಮಗೆ ನೀಡುತ್ತದೆ.

ಗ್ರಂಥ ಋಣ

  1. ಸುಭಾಷಿತ ಸುಧಾ ಝರೀ – ಸಂಪಾದಕರು: ಶ್ರೀ ಎ. ಎಲ್. ಹಿರೇಮಠ
  2. ಬೆಳಗು ಪ್ರಕಾಶನ, ಶ್ರೀ ಶಿವಯೋಗಮಂದಿರ
  3. ವೀರಶೈವ ವೇದಾಧಿಕಾರ ವಿಜಯಲೇಖ – ಶ್ರೀ ನಂಜುಡಾರಾಧ್ಯ

 

ಲೇಖಕ: ಶ್ರೀಕಂಠ ಚೌಕೀಮಠ

ಧಾರವಾಡದ ಮುರುಘಾಮಠ ನನ್ನ ಬಾಲ್ಯದ ಅಚ್ಚುಮೆಚ್ಚಿನ ತಾಣ. ರವಿವಾರಗಳೆಂದರೆ ವಿಶೇಷ ಉಲ್ಲಾಸ. ಹೊಸಯಲ್ಲಾಪುರದ ನಮ್ಮ ಮನೆಯಿಂದ ನಡೆದುಕೊಂಡೇ ಮುರುಘಾಮಠದತ್ತ ಹೊರಡುವುದು ಒಂದು ಸಂಭ್ರಮವೇ ಆಗಿತ್ತು. ಮಠದ ಬಯಲು ಜಾಗೆಯಲ್ಲಿ, ಆಗ ಮಠದ ಉತ್ತರಾಧಿಕಾರಿಗಳಾಗಿದ್ದ ಪೂಜ್ಯ ಶ್ರೀ ಶಿವಯೋಗಿ ದೇವರೊಂದಿಗೆ ಆಟವಾಡುತ್ತಿದ್ದ ಕ್ಷಣಗಳು ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ. ಅವರು ಪ್ರೀತಿಯಿಂದ ಕೊಟ್ಟ ಉತ್ತತ್ತಿ ಕಲ್ಲುಸಕ್ಕರೆಯ ಸವಿಯು ಇಂದು ಕೂಡ ನನ್ನಲ್ಲಿ ಉಳಿದಂತಿದೆ.

ಅಂತಹ ಅನೇಕ ಸವಿ ನೆನಪುಗಳನ್ನು ಹೊತ್ತುಕೊಂಡು, ಇಂದು ದಿನಾಂಕ 10-01-2026 ರಂದು ಮುರುಘಾಮಠದ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಕ್ರಿಯಾಸಮಾಧಿಯ ಮುಂದೆ ಕುಳಿತುಕೊಂಡಿದ್ದೆ. ಸುತ್ತಮುತ್ತ ಆವರಿಸಿದ್ದ ಪ್ರಶಾಂತ ವಾತಾವರಣ ಮನಸ್ಸಿಗೆ ಅಪಾರ ಶಾಂತಿಯನ್ನು ನೀಡುತ್ತಿತ್ತು.

ಅದೇ ವೇಳೆಯಲ್ಲಿ ಒಂದು ಕುಟುಂಬ ಅಲ್ಲಿ ಆಗಮಿಸಿತು. ಗದ್ದುಗೆಯ ಬಾಗಿಲಲ್ಲಿ ಕುಳಿತಿದ್ದ ಬಾಲಕ ಶಾಸ್ತ್ರಿಗಳಿಗೆ ಮಂಗಳಾರತಿ ಮಾಡಲು ವಿನಂತಿಸಿಕೊಂಡರು. ನಾನು ಮತ್ತು ನನ್ನ ಪತ್ನಿ ಕೂಡ ಎದ್ದು ನಿಂತು, ಅಲ್ಲಿ ಆರಂಭವಾದ ಮಂಗಳಾರತಿಗೆ ಭಕ್ತಿಭಾವದಿಂದ ಧ್ವನಿ ಗೂಡಿಸಿದೆವು.

ಜ್ಞಾನ ಪೂರ್ಣಂ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ

ಅನುದಿನ ಗುರುವಿನ ಅನುರಾಗದ ಭಕ್ತಿಯಲಿ
ಜನನ ಮರಣ ರಹಿತ ಜಂಗಮಕೆ ಬೆಳಗಿರೆ

ಬಾಲಕ ಶಾಸ್ತ್ರಿಗಳು ಸಂಸ್ಕೃತ ಭಾಷೆಯ ಪುಷ್ಪಾಂಜಲಿ ಮಂತ್ರವನ್ನು ಶ್ರದ್ಧೆಯಿಂದ ಉಚ್ಚರಿಸಿದರು. ಶಿವ–ಪಾರ್ವತಿಯರ ಉದ್ಘೋಷಗಳು ಆ ವಾತಾವರಣವನ್ನು ಇನ್ನಷ್ಟು ಪಾವನಗೊಳಿಸಿದವು. ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ಪ್ರತಿಯೊಂದು ಪೂಜೆಯ ನಂತರ ಮನದೊಳಗೆ ಮೂಡುವ ಆಂತರಿಕ ಆನಂದ ಇಲ್ಲಿ ಸಹಜವಾಗಿ ಹರಿದುಬಂತು.

ಆದರೆ ನಮ್ಮೆದುರು ನಿಂತಿದ್ದ ವ್ಯಕ್ತಿಯ ಆಂಗಿಕ ಭಾಷೆಯೇ ಬೇರೆ ರೀತಿಯಲ್ಲಿತ್ತು. ಅವರ ಮುಖಭಾವ, ಧ್ವನಿತನ ಎಲ್ಲವೂ ಅಸಹನೆಯಿಂದ ತುಂಬಿತ್ತು. ಏಕಾಏಕಿ ಅವರು ಬಾಲಕ ಶಾಸ್ತ್ರಿಗಳನ್ನು ಜೋರಾದ ಧ್ವನಿಯಲ್ಲಿ ಹಿಯಾಳಿಸಿದರು.

“ಪೂಜೆಯಲ್ಲಿಯೇಕೆ ಸಂಸ್ಕೃತ ಮಂತ್ರಗಳು? ಮಂಗಳಾರತಿ ಏಕೆ ಹಾಡುವಿರಿ?” ಎಂದು ಪ್ರಶ್ನಿಸಿದರು.
ಮತ್ತೆ, “ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಕೂಗಿ, “ಇಲ್ಲಿ ವಚನಗಳನ್ನು ಮಾತ್ರ ಹೇಳಬೇಕು” ಎಂದು ಆಜ್ಞಾಪಿಸುವ ಧೋರಣೆಯಲ್ಲಿ ಮಾತನಾಡಿದರು. ನಂತರ ಬಸವಣ್ಣನವರ ಕಳ ಬೇಡ, ಕೊಲ ಬೇಡ…’ ಎಂಬ ವಚನವನ್ನು ಜೋರಾಗಿ ಉಚ್ಚರಿಸಿದರು.

ಈ ಆಕಸ್ಮಿಕ ಘಟನೆಯಿಂದ ವಿಚಲಿತಳಾದ ನನ್ನ ಪತ್ನಿ, ಬಾಲಕ ಶಾಸ್ತ್ರಿಗಳನ್ನು ಬಯ್ಯಬೇಡಿ ಎಂದು ಶಾಂತವಾಗಿ ಮನವಿ ಮಾಡಿದಳು. ಆದರೆ ಆ ವ್ಯಕ್ತಿ ಧ್ವನಿ ಏರಿಸಿ ಕೂಗಾಡಿದರು. ಕ್ಷಣಮಾತ್ರದಲ್ಲೇ ಇಡೀ ಮಂದಿರದ ವಾತಾವರಣ ಕರ್ಕಶವಾಗಿ, ಪೂಜೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದಂತಾಯಿತು.

ಬೆದರಿದ ಬಾಲಕ ಶಾಸ್ತ್ರಿಗಳನ್ನು ಸಾಂತ್ವನಪಡಿಸಿ, ಕೂಗಾಡುತ್ತಿದ್ದ ವ್ಯಕ್ತಿಯೊಂದಿಗೆ ವಾದಕ್ಕಿಳಿಯುವುದು ಆ ಸಂದರ್ಭಕ್ಕೆ ಔಚಿತ್ಯವಲ್ಲವೆಂದು ಭಾವಿಸಿದೆ. ಭಾರವಾದ ಮನಸ್ಸನ್ನು ಹೊತ್ತುಕೊಂಡೇ, ಆ ಪವಿತ್ರ ಸ್ಥಳದಿಂದ ನಿಧಾನವಾಗಿ ಹೊರಬಂದೆ.

ಈ ಸನ್ನಿವೇಶವು ವರ್ತಮಾನ ಮತ್ತು ಭವಿಷ್ಯಕಾಲದ ವೀರಶೈವ–ಲಿಂಗಾಯತದ ಇಬ್ಭಾಗದ ಫಲಶೃತಿಯ ಪ್ರಾತ್ಯಕ್ಷತೆಯೇನೋ ಎಂಬ ಪ್ರಶ್ನೆ ಮನಸ್ಸನ್ನು ಕಾಡಿತು. ಮರಳುವ ದಾರಿಯುದ್ದಕ್ಕೂ ನಡೆದ ಘಟನೆಯನ್ನು ಮರುಮರು ಮೆಲಕು ಹಾಕಿದಾಗ, ಅನೇಕ ಅಸಮಾಧಾನಕರ ಪ್ರಶ್ನೆಗಳು ನನ್ನೊಳಗೆ ಮೂಡಿದವು.

“ಕಳಬೇಡ, ಕೊಲಬೇಡ…” ಎಂದು ಬಸವಣ್ಣನವರು ಸಮಾಜದ ಜನತೆಗೆ ಉಪದೇಶಿಸಿದ ವಚನವನ್ನು ಪಾಲಿಸುವ ಜವಾಬ್ದಾರಿ ನಿಸ್ಸಂದೇಹವಾಗಿ ನಮ್ಮೆಲ್ಲರ ಮೇಲಿದೆ. ಆದರೆ ಆ ವಚನವನ್ನು ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ಗದ್ದುಗೆಯ ಮುಂದೆ, ಆ ಸಂದರ್ಭದಲ್ಲೇ ಜೋರಾಗಿ ಉಚ್ಚರಿಸುವ ಔಚಿತ್ಯವೇನು ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡಿತು. ಅದು ನನಗೆ ವಿಚಿತ್ರವಾಗಿ ಅನಿಸಿತು.

ಬಸವಣ್ಣನವರ ಮೇಲಿನ ಅಭಿಮಾನ, ಪುರೋಹಿತಶಾಹಿ ವಿರೋಧವನ್ನು ತೋರಿಸುವ ಭರದಲ್ಲಿ ಬಳಸುವ ವಚನಗಳು ಶುದ್ಧ ಕನ್ನಡದಲ್ಲಿದ್ದರೂ, ಅವುಗಳನ್ನು ಬಳಸುವ ರೀತಿ, ಸಂದರ್ಭ ಮತ್ತು ಉದ್ದೇಶವನ್ನು ನೋಡಿದಾಗ ಒಂದು ರೀತಿಯ ವಿಚಿತ್ರತೆಗೂ ವಿಷಾದಕ್ಕೂ ಕಾರಣವಾಗುತ್ತದೆ. ಭಕ್ತಿಯ ಹೆಸರಿನಲ್ಲಿ ವ್ಯಕ್ತವಾಗಬೇಕಾದ ವಚನಗಳು, ಸಂಘರ್ಷದ ಉಪಕರಣಗಳಾಗಿ ಮಾರ್ಪಡುವುದು ನೋವಿನ ಸಂಗತಿ.

ಇದೇ ರೀತಿಯ ಕಸಿವಿಸಿ ನನಗೆ ಕನ್ನಡದ ಖ್ಯಾತ ಪತ್ರಕರ್ತ ಶ್ರೀ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಉಂಟಾಗಿತ್ತು. ಅಂತ್ಯಕ್ರಿಯೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದ ಶ್ರೀ ನಿಜಗುಣಾನಂದ ಸ್ವಾಮಿಗಳು ಶರಣರ ವಚನಗಳನ್ನು ಪಠಿಸಿದರು. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಮಾಲೆ ಹಾಕುವ ಮುನ್ನ ಅವರು ಉಚ್ಚರಿಸಿದ ವಚನ —

“ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು.”

— ಆ ಕ್ಷಣದಲ್ಲಿ ಮತ್ತೆ ಅದೇ ಪ್ರಶ್ನೆಯನ್ನು ನನ್ನೊಳಗೆ ಎಬ್ಬಿಸಿತು. ವಚನಗಳ ಮಹತ್ವ ಅವುಗಳ ಭಾಷೆಯಲ್ಲಿ ಮಾತ್ರವಲ್ಲ, ಅವುಗಳನ್ನು ಬಳಸುವ ಸಂದರ್ಭ, ಭಾವ ಮತ್ತು ಸಂಯಮದಲ್ಲೂ ಅಡಗಿದೆ ಎಂಬ ಸತ್ಯ ಇನ್ನಷ್ಟು ಸ್ಪಷ್ಟವಾಗಿ ಅರಿವಾಯಿತು.

ಸಮಗ್ರ ವಚನ ಸಾಹಿತ್ಯವು ಕನ್ನಡದ ಸಾಹಿತ್ಯ ಪರಂಪರೆಯಲ್ಲಿನ ಪ್ರಮುಖ ಹಾಗೂ ವಿಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ, ಹನ್ನೆರಡನೇ ಶತಮಾನದ ಅಂತ್ಯದವರೆಗೆ ಬಸವಣ್ಣನವರ ನೇತೃತ್ವದ ಜನಸಾಮಾನ್ಯರ ಆಂದೋಲನದ ಅವಿಭಾಜ್ಯ ಅಂಗವಾಗಿ ಇದು ಬೆಳೆಯಿತು. ಸಾಹಿತ್ಯ ಪರಿಭಾಷೆಯಲ್ಲಿ ಇದು ಒಂದು ಅಪರೂಪದ ಕಾವ್ಯ ಪ್ರಕಾರ—ಹಾಡಿದರೆ ಹಾಡಾಗುವದು, ಓದಿದರೆ ಗದ್ಯವಾಗುವದು. ಕನ್ನಡ ಭಾಷೆಯ ಈ ವೈಶಿಷ್ಟ್ಯಮಯ ಕಾವ್ಯ ಪ್ರಕಾರ ತನ್ನ ಕಾಲಘಟ್ಟದ ಜನರ ಮನೋಭಾವಗಳ ಅಭಿವ್ಯಕ್ತಿಗೆ ನೇರ ಸಂಗಾತಿಯಾಗಿ ನಿಂತಿತು. ‘ವಚನ’ವೆಂದರೆ ‘ಪ್ರಮಾಣ’, ‘ಕೊಟ್ಟ ಮಾತು’ ಎಂಬ ಅರ್ಥವನ್ನು ಹೊತ್ತುಕೊಂಡಿರುವ ಪದ.

ವಚನಗಳು ಶರಣರ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿವೆ. ಅವು ಶರಣರ ಅನುಭಾವಗಳ ಅಕ್ಷರರೂಪ. ಶರಣಪಥದಲ್ಲಿ ಸಾಗಲು ಬಯಸುವ ಪ್ರತಿಯೊಬ್ಬ ಪಥಿಕನಿಗೂ ದಾರಿದೀಪಗಳಂತೆ ದಾರಿತೋರುವ ಜ್ಞಾನಪ್ರಕಾಶಗಳು. ಮೌಢ್ಯದ ಕೊಳೆಯನ್ನು ತೊಳೆಯುವ, ಅಂಧಕಾರದ ಮನಸ್ಸಿಗೆ ಅಂಟಿದ ಕಿಲುಬನ್ನು ತೆಗೆದುಹಾಕಿ ಸ್ವಚ್ಚಗೊಳಿಸುವ, ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರತರಂಗಿಣಿಗಳೇ ವಚನಗಳು. ಅಂತಹ ವಚನಗಳನ್ನು ಓದಿ, ಸರಿಯಾಗಿ ಯಥಾವತ್ತಾಗಿ ಅರ್ಥಮಾಡಿಕೊಂಡು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಬಸವಪಥಿಕನ ಆದ್ಯ ಕರ್ತವ್ಯ.

ವಚನಗಳನ್ನು ಓದುವಾಗ ಅತ್ಯಂತ ಎಚ್ಚರಿಕೆಯಿಂದ, ಆ ವಚನದ ರಚನೆಯ ಹಿಂದಿರುವ ಸನ್ನಿವೇಶವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಆಗ ಮಾತ್ರ ನಿರ್ದಿಷ್ಟ ವಚನದ ನಿಖರವಾದ ಅರ್ಥ ನಮಗೆ ಸ್ಪಷ್ಟವಾಗುತ್ತದೆ. ಯಾವುದೋ ಒಂದು ವಚನವನ್ನು ಅದರ ಹಿನ್ನೆಲೆಯನ್ನು ಪರಿಗಣಿಸದೆ, ಸಂದರ್ಭವನ್ನೇ ಅರಿಯದೆ ಅರ್ಥೈಸಲು ಹೊರಟರೆ, ಅಲ್ಲಿ ಅರ್ಥಕ್ಕಿಂತ ಅನರ್ಥವೇ ಹೆಚ್ಚಾಗುವ ಸಂಭವವಿದೆ ಎಂಬ ಸತ್ಯವನ್ನು ಮರೆಯಬಾರದು.

ಸಂಸ್ಕೃತ ಮಂತ್ರ ವಿರೋಧಿ ಆ ವ್ಯಕ್ತಿ ಹೇಳಿದ ಇನ್ನೊಂದು ಮಾತು ಇನ್ನಷ್ಟು ಆಶ್ಚರ್ಯವನ್ನು ಹುಟ್ಟಿಸಿತು.
“ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಕಂಡು ಹಿಡಿದವರು. ಹಾಗಿದ್ದರೆ ಅವರ ಗದ್ದುಗೆಯ ಮುಂದೆ ಸಂಸ್ಕೃತ ಮಂತ್ರಗಳೇಕೆ?” ಎಂದು ಅವರು ಪ್ರಶ್ನಿಸಿದರು.

ಆದರೆ ಇಲ್ಲಿ ಇರುವ ವಿಪರ್ಯಾಸವೇನೆಂದರೆ, ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳು ಎಂದಿಗೂ ಸಂಸ್ಕೃತ ವಿರೋಧಿಗಳಾಗಿರಲಿಲ್ಲ. ಅವರೂ ಮತ್ತು ಲಿಂ. ಹರ್ಡೇಕರ ಮಂಜಪ್ಪ ಅವರು 1913ರಲ್ಲಿ ಬಸವ ಜಯಂತಿಯ ದಿನಾಂಕವನ್ನು ಗುರುತಿಸಿದ್ದು ಸಂಸ್ಕೃತ ವೀರಶೈವ ಪುರಾಣಗಳ ಆಧಾರದಲ್ಲಿಯೇ. ಬಸವ ಜಯಂತಿಯ ದಿನವನ್ನು ಅವರು ನಿರ್ಧರಿಸಿದ್ದು ಭಾರತೀಯ ಪುರಾತನ ಜ್ಯೋತಿಷ್ಯ ಶಾಸ್ತ್ರದ ಕ್ರಮದ ಮೂಲಕ ಎಂಬುದು ಇತಿಹಾಸಾತ್ಮಕ ಸತ್ಯ.

ಮೈಸೂರಿನ ಪ್ರಸಿದ್ಧ ವಿದ್ವಾಂಸರಾದ ಎನ್.ಆರ್. ಕರಿಬಸವ ಶಾಸ್ತ್ರಿಗಳು ಅವರು ಪೂಜ್ಯ ಲಿಂ. ಮೃತ್ಯುಂಜಯ ಸ್ವಾಮಿಗಳಿಗೆ ಬರೆದ ಪತ್ರದಲ್ಲಿ, ‘ಸಂಸ್ಕೃತ ಬಸವಪುರಾಣ’ದಲ್ಲಿ ಉಕ್ತವಾಗಿರುವ ಬಸವಣ್ಣನವರ ಜನನಕಾಲದ ಗ್ರಹಗತಿಗಳನ್ನು ಸೂಚಿಸುವ ಈ ಶ್ಲೋಕವನ್ನು ಉಲ್ಲೇಖಿಸಿ, ಅದರ ಅರ್ಥವನ್ನೂ ವಿವರಿಸಿ ಕಳುಹಿಸಿದ್ದರಂತೆ:

ಮೀನಸ್ಥಿತೇ ಭೃಗೋಃ ಪುತ್ರೇ ಮೇಷಸ್ತೇ ಚ ದಿವಾಕರೇ।
ತುಲಾಸ್ಥಿತೇ ತತ್ಪುತ್ರೇ। ಕರ್ಕಾಟಸ್ಥೇ ಬೃಹಸ್ಪತೌ
ಶಶಾಂಕೇ ರೋಹಿಣೀ ಸಂಸ್ಥೇ| ಮಕರಸ್ಥೇ ಭೂಸುತೇ।
ಶಿಶೋರರ್ಧೋದಯೇ ಜಾತೇ/ ಲಗ್ನ ಕರ್ಕಟ ಸಂಜ್ಞೀಕೇ

ಈ ಶ್ಲೋಕದ ಆಧಾರದಲ್ಲಿ ಕುಂಡಲಿ ಹಾಕಿ ಬಸವಣ್ಣನವರ ಜನನಕಾಲವನ್ನು ನಿರ್ಧರಿಸಬೇಕೆಂದು, ಆಗಿನ ಖ್ಯಾತ ಜ್ಯೋತಿಷಿಗಳಾದ ಹರಪನಹಳ್ಳಿ ಆರ್. ಶಾಂತಪ್ಪಾಜಿಯವರಲ್ಲಿ ಮನವಿ ಮಾಡಲಾಯಿತು. ಅವರು ಈ ಶ್ಲೋಕಾಧಾರವನ್ನು ಅನುಸರಿಸಿ ಕುಂಡಲಿ ಹಾಕಿ, ಶಾಲಿವಾಹನ ಶಕೆ 1037ನೆಯ ಮನ್ಮಥನಾಮ ಸಂವತ್ಸರ, ವೈಶಾಖ ಶುದ್ಧ 4, ಶನಿವಾರ, ಸೂರ್ಯೋದಯನಂತರ ಘಟಿಕಾ 14–24ಕ್ಕೆ, ಕರ್ಕಟ ಲಗ್ನದಲ್ಲಿ, ರೋಹಿಣೀ ನಕ್ಷತ್ರದ ನಾಲ್ಕನೇ ಚರಣದಲ್ಲಿ ಬಸವಣ್ಣ ಜನಿಸಿದ್ದರೆಂದು ನಿರ್ಣಯಿಸಿದರು.

ಇದರಿಂದ ಬಸವಣ್ಣನವರ ಜನನ ಕ್ರಿ.ಶ. 1115ನೆ ಇಸವಿಯೆಂದು ಸಿದ್ಧವಾಗುತ್ತದೆ. ಆದರೆ ಇತ್ತೀಚಿನ ಕೆಲ ವಿದ್ವಾಂಸರು ಕ್ರಿ.ಶ. 1132 ಎಂದು ನಿರ್ಣಯಕ್ಕೆ ಬಂದಿರುವುದರಿಂದ, ಈ 17 ವರ್ಷಗಳ ಅಂತರದ ಕಾರಣವನ್ನು ಇತಿಹಾಸಜ್ಞರು ಇನ್ನೂ ವಿಶ್ಲೇಷಿಸಬೇಕಾಗಿದೆ. ವರ್ಷದ ವ್ಯತ್ಯಾಸ ಏನೇ ಇರಲಿ, ವೈಶಾಖ ಶುದ್ಧದಲ್ಲಿ ಬರುವ ರೋಹಿಣೀ ನಕ್ಷತ್ರದ ದಿನವನ್ನು ಬಸವ ಜಯಂತಿಯಾಗಿ ಆಚರಿಸಬೇಕೆಂದು ಮಂಜಪ್ಪನವರು ತೀರ್ಮಾನಿಸಿದರು. ಈ ನಿರ್ಧಾರಕ್ಕೆ ಶ್ರೀ ಮೃತ್ಯುಂಜಯ ಸ್ವಾಮಿಗಳೂ ದಾವಣಗೆರೆಯ ಪ್ರಮುಖರೂ ಒಪ್ಪಿಗೆ ನೀಡಿದರು.

“ಶುಭಸ್ಯ ಶೀಘ್ರಂ” ಎಂಬಂತೆ, ಅದೇ ವರ್ಷವಾದ 1913ರಲ್ಲಿಯೇ ದಾವಣಗೆರೆಯಲ್ಲಿ ಬಸವ ಜಯಂತಿಯ ಉತ್ಸವವನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.

(ಆಧಾರ: ಬಸವಜಯಂತಿ ಆಚರಣೆಯು ಬಂದ ಇತಿಹಾಸ – ಲೇಖಕರು: ಪಂಡಿತ ಚನ್ನಪ್ಪ ಎರೇಸೀಮೆ; ಬಸವಪಥ ನಿಯತಕಾಲಿಕದ “ಬೆಳ್ಳಿ ಬೆಳಗು” ಸಂಪುಟ–2, ವಿಶೇಷ ಸಂಚಿಕೆ–1, ಏಪ್ರಿಲ್ 1977; ಹಾಗೂ ದೇಗುಲ ಪ್ರಭೆ ನಿಯತಕಾಲಿಕದ “ಇತಿಹಾಸ ಪ್ರಭೆ” ವಿಶೇಷ ಅಂಕಣ, ಮಾರ್ಚ್–ಏಪ್ರಿಲ್ 2025 ಸಂಚಿಕೆ; ಸಂಗ್ರಹ: ಶ್ರೀ ವಿ.ಪಿ. ಆರಾಧ್ಯ.)

ಮುರುಘಾಮಠದ ಪೂಜ್ಯ ಲಿಂ. ಮೃತ್ಯುಂಜಯ ಮಹಾಸ್ವಾಮಿಗಳು ಅವರ ಕ್ರಿಯಾಸಮಾಧಿಯ ಮುಂದೆ, ತನ್ನನ್ನು ಬಸವವಾದಿ ಎಂದು ಹೇಳಿಕೊಂಡ ಆ ವ್ಯಕ್ತಿಯೊಂದಿಗೆ ನಾನು ವಾದಕ್ಕಿಳಿಯಲಿಲ್ಲ. ಪವಿತ್ರ ಸ್ಥಳದಲ್ಲಿ ವಾದಕ್ಕಿಂತ ಸಂಯಮವೇ ಶ್ರೇಷ್ಠವೆಂಬ ಭಾವನೆ ನನ್ನನ್ನು ತಡೆಹಿಡಿದಿತ್ತು. ಆದರೆ ಅಲ್ಲಿ ಉಪಸ್ಥಿತರಿದ್ದ ಒಬ್ಬ ವೃದ್ಧರು ಆ ವ್ಯಕ್ತಿಗೆ ಹೇಳಿದ ಮಾತು ಮಾತ್ರ ಅತ್ಯಂತ ಅರ್ಥಗರ್ಭಿತವಾಗಿತ್ತು—

ವಚನಗಳನ್ನು ಶರಣರು ಹೇಳೋದಕ್ಕ ಬರೀಲಿಲ್ಲ
ನಾವೂ ನೀವೂ ಪಾಲಿಸೋದಕ್ಕ ಬರದಾರ.”

ಆ ಮಾತುಗಳು ಆ ವ್ಯಕ್ತಿಗೆ ಅರ್ಥವಾಯಿತೋ ಇಲ್ಲವೋ ನನಗೆ ತಿಳಿಯಲಿಲ್ಲ. ಆದರೆ ಆ ಕ್ಷಣದಲ್ಲಿ ನನಗೆ ಒಂದು ವಿಷಯ ಮಾತ್ರ ಸ್ಪಷ್ಟವಾಯಿತು—ವಚನಗಳು ವಾದಕ್ಕೆ ಅಲ್ಲ, ಬದುಕಿಗೆ.

ಆದರೆ ಆ ಮುಗ್ಧ ಭಕ್ತ ಕುಟುಂಬದ ಜೊತೆ ನಾವು ಸೇರಿ ಮಂಗಳಾರತಿ ಮಾಡುತ್ತಾ ಹಾಡಿದ ಗೀತೆಯ ಸಾಲುಗಳು ಮಾತ್ರ ಅತ್ಯಂತ ಆಳವಾದ ಅರ್ಥವನ್ನು ಹೊತ್ತುಕೊಂಡಿದ್ದವು. ಅವುಗಳು ಕ್ಷಣಿಕ ಉದ್ವಿಗ್ನತೆಯನ್ನು ಮೀರಿ, ಆತ್ಮದೊಳಗೆ ಬೆಳಕು ಹಚ್ಚಿದವು.

ಜ್ಞಾನಪೂರ್ಣಂ ಜಗನ್ಜ್ಯೋತಿ
— ಜ್ಞಾನದಿಂದ ಸಂಪೂರ್ಣವಾದ ವಿಶ್ವದ ಬೆಳಕು.

ನಿರ್ಮಲವಾದ ಮನವೇ ಕರ್ಪೂರದಾರತಿ
— ಪರಿಶುದ್ಧವಾದ ಮನಸ್ಸೇ ಕರ್ಪೂರದ ಆರತಿ (ದೀಪ).

ಅನುದಿನ ಗುರುವಿನ ಅನುರಾಗ ಭಕ್ತಿಯಲಿ
— ಪ್ರತಿದಿನ ಗುರುವಿನ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ.

ಜನನಮರಣ ರಹಿತ ಜಂಗಮಗೆ ಬೆಳಗಿರಿ
— ಹುಟ್ಟು–ಸಾವುಗಳಿಲ್ಲದ ಆತ್ಮಕ್ಕೆ ಬೆಳಕನ್ನು ನೀಡಿರಿ.

ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
— ಅನೇಕ ಜನ್ಮಗಳ ಕತ್ತಲೆಯನ್ನು ಬೇಗ ಕಳೆದುಕೊಂಡು.

ಮಾನವ ಜನ್ಮದ ಬೆಳಕಿಲಿ ಸ್ವಾನುಭಾವದ ಸುಖ ತಾನೇ ಕೈ ಸೇರುವುದು
— ಮಾನವ ಜನ್ಮದ ಬೆಳಕಿನಲ್ಲಿ ಸ್ವಾನುಭವದ ಸುಖವು ಸಹಜವಾಗಿ ದೊರಕುತ್ತದೆ.

ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ
— ಅನುಭವಿಸಿ, ಲಿಂಗಕ್ಕೆ (ದೈವಕ್ಕೆ) ಮನಸ್ಸನ್ನು ಒಪ್ಪಿಸಿ ಪ್ರಕಾಶಿಸಿ.

ನಾನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
— ‘ನಾನು–ನೀನು’ ಎಂಬ ಭೇದಭಾವ ಬಿಡದಿದ್ದರೆ ನರಕವೇ ಪ್ರಾಪ್ತವಾಗುತ್ತದೆ.

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ ಹುಟ್ಟಿ ಬರುವುದು ದುರ್ಲಭವು
— ಈ ಎಂಟು ವರ್ಣಗಳ ಭೌತಿಕ ದೇಹದ ಮಾನವ ಜನ್ಮ ದುರ್ಲಭ.

ಕೊಟ್ಟಾನು ಗುರು ಎಮಗೆ ಮಾಡಿದ ಫಲದಿಂದೆ
— ಗುರುಗಳು ಈ ಜನ್ಮವನ್ನು ನಮಗೆ ನಮ್ಮ ಕರ್ಮಫಲದ ಮೂಲಕ ನೀಡಿದ್ದಾರೆ.

ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ
— ಹುಟ್ಟಿದ ಪ್ರತಿಯೊಬ್ಬ ಮಗುವನ್ನೂ ಶಿವನೆಂದು ಕಾಣಿರಿ.

ಆ ದಿನ ನನಗೆ ಮತ್ತೊಮ್ಮೆ ಅರಿವಾಯಿತು—ಮಂತ್ರವಾಗಲಿ, ವಚನವಾಗಲಿ, ಭಾಷೆಯಾಗಲಿ—ಅವುಗಳ ಗುರಿ ಒಬ್ಬರನ್ನೊಬ್ಬರು ಸೋಲಿಸುವುದಲ್ಲ; ಮನಸ್ಸನ್ನು ಮೃದುವಾಗಿಸಿ, ಬದುಕನ್ನು ಶುದ್ಧಗೊಳಿಸುವುದೇ.

ಮುರುಘಾಮಠದ ಮೌನಸನ್ನಿಧಿಯಲ್ಲಿ ನಡೆದ ಆ ಸಣ್ಣ ಘಟನೆಯು ಒಂದು ಅಸಹಜ ಸತ್ಯವನ್ನು ಬಯಲಿಗೆಳೆದಿತು. ಸಮಸ್ಯೆ ವಚನದಲ್ಲಿಲ್ಲ, ಮಂತ್ರದಲ್ಲಿಲ್ಲ; ಸಮಸ್ಯೆ ಅವುಗಳನ್ನು ಹಿಡಿದುಕೊಂಡಿರುವ ಮನಸ್ಸಿನ ಅಸಹನೆಯಲ್ಲಿ ಇದೆ. ವೀರಶೈವ ಮತ್ತು ಲಿಂಗಾಯತ ಎಂಬ ಹೆಸರುಗಳನ್ನು ವಿಭಜನೆಗೆ ಬಳಸುವ ಪ್ರಯತ್ನಗಳು, ಬಸವಪಥದ ಆತ್ಮವನ್ನೇ ತಪ್ಪಾಗಿ ಅರ್ಥಮಾಡಿಕೊಂಡ ಫಲ. ಅವು ಎರಡು ಧರ್ಮಗಳಲ್ಲ, ಎರಡು ಪಾಳಯಗಳಲ್ಲ; ಒಂದೇ ಚಿಂತನೆಯ, ಒಂದೇ ಅನುಭವದ, ಒಂದೇ ಸಾಮಾಜಿಕ ಕ್ರಾಂತಿಯ ಎರಡು ಉಸಿರಾಟಗಳು.

ಬಸವಪಥವು ಎಂದಿಗೂ ವಿರೋಧದ ರಾಜಕೀಯದ ಮೇಲೆ ನಿಂತಿಲ್ಲ; ಅದು ಏಕತೆಯ ನೈತಿಕತೆಯ ಮೇಲೆ ನಿಂತಿದೆ. ವಚನಗಳು ಘೋಷಣೆಗಳಿಗೆಲ್ಲ ಹುಟ್ಟಿಲ್ಲ, ಜೀವನಕ್ಕೆ ಹುಟ್ಟಿವೆ. ಶರಣರು ವಚನಗಳನ್ನು ರಚಿಸಿದ್ದು ಭಾಷಾ ಶುದ್ಧತೆಯ ವಾದಕ್ಕಾಗಿ ಅಲ್ಲ, ಮನಃಶುದ್ಧಿಯ ಪರಿವರ್ತನೆಗಾಗಿ. ಸಂಸ್ಕೃತ–ಕನ್ನಡ, ಪುರಾಣ–ವಚನ, ವಿಧಿ–ಅನುಭಾವ ಎಂಬ ಬೇಧಗಳನ್ನು ಕಟ್ಟುವಲ್ಲಿ ಆಸಕ್ತಿ ತೋರಿದ ಕ್ಷಣದಲ್ಲೇ ನಾವು ಶರಣರ ಸಮಾಜದಿಂದ ಹೊರಬಿದ್ದಿರುತ್ತೇವೆ.

ವಚನಗಳನ್ನು ಕೈಯಲ್ಲಿ ಹಿಡಿದು ಹೊಡೆಯುವವರು ಅವುಗಳನ್ನು ಶಸ್ತ್ರವಾಗಿಸುತ್ತಾರೆ;

 ವಚನಗಳನ್ನು ಹೃದಯದಲ್ಲಿ ಇಟ್ಟು ಬದುಕುವವರು ಅವನ್ನೇ ದೀಪವಾಗಿಸುತ್ತಾರೆ.

ಈ ದಿನ ಕೇಳಿಬಂದದ್ದು ವಿಭಜನೆಯ ಕೂಗು; ಆದರೆ ಕೇಳಿಸಿಕೊಳ್ಳಬೇಕಾದದ್ದು ಶರಣರ ಮೌನದ ಎಚ್ಚರಿಕೆ. ವೀರಶೈವವೂ ಲಿಂಗಾಯತವೂ ಒಂದೇ — ಇದೊಂದು ನಂಬಿಕೆ ಅಲ್ಲ, ಇತಿಹಾಸ; ಇದೊಂದು ಘೋಷಣೆ ಅಲ್ಲ, ಅನುಭವ.

ಬಸವಣ್ಣನವರು ಈ ಸತ್ಯವನ್ನು ಎಷ್ಟು ಸರಳವಾಗಿ, ಎಷ್ಟು ತೀಕ್ಷ್ಣವಾಗಿ ಹೇಳಿಹೋಗಿದ್ದಾರೆ —

ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರ್ತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ;
ಕೂಡಲಸಂಗಮದೇವಾ,
ನಿಮ್ಮ ಚರಣಕಮಲದಲಾನು ತುಂಬಿ

***********

“ಲಿಂಗಾಯತ ಧರ್ಮ ಈಗ ವೀರಶೈವ”?

(ಡಾ. ವೀರಣ್ಣ ರಾಜೂರ ಅವರ ಸಾಕ್ಷ್ಯವಿಲ್ಲದ ಆರೋಪಗಳ ವಿರುದ್ಧ ಒಂದು  ಪ್ರತಿಕ್ರಿಯೆ)

——————————-

ಶ್ರೀಕಂಠ ಚೌಕೀಮಠ

ಅಧ್ಯಕ್ಷ

ಅಖಿಲಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ ನವದೆಹಲಿ

————————–

ಪ್ರಧಾನ ದಿನಪತ್ರಿಕೆಯೊಂದರಲ್ಲಿ ದಿನಾಂಕ 16–12–2025 ರಂದು ಪ್ರಕಟವಾದ ವರದಿಯೊಂದು ಓದುಗರ ಗಮನವನ್ನು ಅನಿವಾರ್ಯವಾಗಿ ಸೆಳೆದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿದ್ವಾಂಸರೆಂದು ಗುರುತಿಸಲ್ಪಟ್ಟಿರುವ ಡಾ. ವೀರಣ್ಣ ರಾಜೂರ ಅವರ *“ಲಿಂಗಾಯತ ಧರ್ಮ ಈಗ ವೀರಶೈವ”* ಎಂಬ ಹೇಳಿಕೆಯನ್ನು ಶೀರ್ಷಿಕೆಯಾಗಿ ಪ್ರಕಟಿಸಿರುವುದು ಕೇವಲ ಆಶ್ಚರ್ಯವನ್ನಷ್ಟೇ ಅಲ್ಲ, ಗಂಭೀರವಾದ ವಿಷಾದವನ್ನೂ ಉಂಟುಮಾಡುತ್ತದೆ. ಕಾರಣ, ಈ ಹೇಳಿಕೆ ಒಂದು ವೈಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಸೀಮಿತವಾಗದೆ, ವೀರಶೈವ–ಲಿಂಗಾಯತ ಪರಂಪರೆಯ ಕುರಿತು ಈಗಾಗಲೇ ಸುದೀರ್ಘ ಕಾಲದಿಂದ ನಡೆದಿರುವ ತಾತ್ವಿಕ ಚರ್ಚೆಯನ್ನು ಮತ್ತೊಮ್ಮೆ ಅನಗತ್ಯ ಗೊಂದಲದ ದಿಕ್ಕಿಗೆ ತಳ್ಳುವ ಪ್ರಯತ್ನವಾಗಿದೆ.

ವೃತ್ತಿಜೀವನದ ಅವಧಿಯಲ್ಲಿ ವೀರಶೈವ ಪರಂಪರೆಯನ್ನು ವೈಭವೀಕರಿಸಿ, ನಿವೃತ್ತಿಯ ನಂತರ ಅದೇ ಪರಂಪರೆಯನ್ನು ಸಂಶಯದ ಗೂಡಿನಲ್ಲಿ ನಿಲ್ಲಿಸುವ ಧೋರಣೆ ಕೇವಲ ವ್ಯಕ್ತಿಗತ ವೈರುಧ್ಯವಲ್ಲ; ಅದು ಸಮಾಜದ ಸಮಗ್ರ ಬೌದ್ಧಿಕ ವಾತಾವರಣದ ಮೇಲೆಯೇ ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ.

ವೀರಶೈವವನ್ನು ವ್ಯಂಗ್ಯಗೊಳಿಸುವುದು ಅಥವಾ ಅನುಮಾನಾಸ್ಪದವಾಗಿ ನಿರೂಪಿಸುವುದು ಬೌದ್ಧಿಕ ಕ್ರೀಡೆಯಾಗಬಾರದು; ಅದಕ್ಕೆ ದೃಢವಾದ ಸಾಕ್ಷ್ಯಾಧಾರ, ವಿಧಾನಬದ್ಧತೆ ಮತ್ತು ಸಂಶೋಧನಾ ಪ್ರಾಮಾಣಿಕತೆ ಅನಿವಾರ್ಯ. ಇಂತಹ ಹೇಳಿಕೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಇಂದಿನ ದಿನಮಾನಗಳಲ್ಲಿ ಮತ್ತಷ್ಟು ಅಗತ್ಯವಾಗಿದೆ, ಏಕೆಂದರೆ ನಾವು ನಿರಂತರವಾಗಿ ಮನಸ್ಸುಗಳನ್ನು ವಿಭಜಿಸುವ ತಂತ್ರಗಾರಿಕೆಗಳಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಂಥ ಕೃತ್ಯಗಳನ್ನು ಕಡೆಗಣಿಸುವುದೂ, ಉದಾಸೀನಗೊಳ್ಳುವುದೂ ಬೌದ್ಧಿಕ ಜವಾಬ್ದಾರಿಯ ತ್ಯಾಗವಾಗುತ್ತದೆ.

ಈ ಲೇಖನದಲ್ಲಿ ಡಾ. ವೀರಣ್ಣ ರಾಜೂರ ಅವರ ಹೇಳಿಕೆಗಳಲ್ಲಿ ವರದಿಯಲ್ಲಿ ಉಲ್ಲೇಖಗೊಂಡಿರುವ ಮೂರು ಪ್ರಮುಖ ಅಂಶಗಳನ್ನು ಕ್ರಮಬದ್ಧವಾಗಿ  ಅವಲೋಕಿಸಿರುವೆ.

  1. ಲಿಂಗಾಯತ ಧರ್ಮದ ಪರಿಕಲ್ಪನೆ ವೀರಶೈವವಾಗಿ ರೂಪುಗೊಂಡಿರುವ ಪ್ರಶ್ನೆ;
  2. ಬಸವಾದಿ ಶರಣರ ಪುರಾಣೀಕರಣದ ವಿಚಾರ; ಹಾಗೂ
  3. ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ ಎಂಬ ವಾದ

ಈ ಮೂರೂ ಅಂಶಗಳನ್ನು ತಾತ್ವಿಕ, ಐತಿಹಾಸಿಕ ಮತ್ತು ಸಂಶೋಧನಾ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.

  1. ಲಿಂಗಾಯತ–ವೀರಶೈವ ಪರಿಕಲ್ಪನೆಯ ತಾತ್ವಿಕ ನೆಲೆ

“ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮದ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿದೆ” ಎಂಬ ಹೇಳಿಕೆ ಹೊಸದಲ್ಲ. ಲಿಂಗಾಯತ ಪರಂಪರೆಯ ತಾತ್ವಿಕ ನೆಲೆ ವೀರಶೈವ ದರ್ಶನದೊಳಗೆಯೇ ರೂಪುಗೊಂಡಿದೆ ಎಂಬ ವಾದವು ಕೇವಲ ಸಂಪ್ರದಾಯವಾದಿಗಳ ಅಭಿಪ್ರಾಯವಲ್ಲ.

ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ ವೀರಶೈವದರ್ಶನ : ತೌಲನಿಕ ವಿವೇಚನೆ (ಕ್ರಿ.ಶ. 2000) ಯ ಮುನ್ನುಡಿಯಲ್ಲಿ ಬಸವಣ್ಣನವರನ್ನು “ವೀರಶೈವ ನಿರ್ಣಯ ಪರಮಾವತಾರ” ಎಂದು ಗುರುತಿಸಿರುವುದು ಗಮನಾರ್ಹ. ಅಲ್ಲದೆ, ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ ಹಾಗೂ ವಿಶ್ವಮಟ್ಟಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಬಸವೇಶ್ವರ ಪರಂಪರೆ ಹೊಂದಿದೆ ಎಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಇದಕ್ಕಿಂತಲೂ ಹೆಚ್ಚಾಗಿ, 2008ರಲ್ಲಿ ಕ.ವಿ.ವಿ. ಧಾರವಾಡದಲ್ಲಿ ನಡೆದ “ವೀರಶೈವ ಆಕರಗಳು”ಎಂಬ ರಾಷ್ಟ್ರಮಟ್ಟದ ವಿಚಾರ ಸಂಕೀರಣದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದ ಡಾ. ವೀರಣ್ಣ ರಾಜೂರ ಅವರು “ತಾರಾವಳಿ, ಶೂನ್ಯ ಸಂಪಾದನೆಗಳಲ್ಲಿ ವೀರಶೈವ” ಎಂಬ ವಿಷಯದ ಕುರಿತು ಬರೆಯುತ್ತ, “ಒಟ್ಟು ತಾರಾವಳಿಗಳಲ್ಲಿ ಬರುವ ವೀರಶೈವ ಉಲ್ಲೇಖಗಳನ್ನು ಗಮನಿಸಿದಾಗ ಕಂಡುಬರುವ ಸಂಗತಿ ಏನೆಂದರೆ, ಆಗಮೋಕ್ತ ವೀರಶೈವ ತತ್ವ ಮತ್ತು ವಚನೋಕ್ತ ಶರಣ ತತ್ವಗಳೆರಡೂ ಇಲ್ಲಿ ಸಮ್ಮಿಳಿತಗೊಂಡಿವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅದೇ ಸಂದರ್ಭದಲ್ಲಿ ಅವರು, “ವೀರಶೈವವು ಶೈವ ಧರ್ಮದ ಒಂದು ಪ್ರಭೇದವಾಗಿ ಆಗಮಗಳ ಕಾಲದಿಂದಲೂ ಪ್ರಚಲಿತವಾದ ಭಾರತದ ಪ್ರಮುಖ ಧರ್ಮಗಳಲ್ಲಿ ಒಂದು. ಅದು ಕಾಲದಿಂದ ಕಾಲಕ್ಕೆ ಅನೇಕ ಸ್ಥಿತ್ಯಂತರಗಳನ್ನು ತಾಳುತ್ತ, ಹಲವಾರು ನೂತನ ಅವಿಷ್ಕಾರಗಳಿಗೆ ಒಳಗಾಗುತ್ತ ಬಂದಿದೆ. ಇದಕ್ಕೆ ತನ್ನದೇ ಆದ ಸಿದ್ಧಾಂತ ಮತ್ತು ವಿಶಿಷ್ಟ ತತ್ವ ಪರಿಭಾಷೆಗಳು ರೂಪಿತವಾಗಿವೆ” ಎಂದು ಹೇಳಿರುವುದೂ ವಿಶೇಷ ಗಮನಾರ್ಹವಾಗಿದೆ.

ಇಂತಹ ಪ್ರಾಮಾಣಿಕ ಹಾಗೂ ಸ್ಪಷ್ಟ ಹೇಳಿಕೆಗಳು ಸ್ವತಃ ಅವರ ಬರಹಗಳು ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಲಭ್ಯವಿರುವ ಸಂದರ್ಭದಲ್ಲಿ, ಅದೇ ವಿದ್ವಾಂಸರು ನಿವೃತ್ತಿಯ ನಂತರ ವಿರುದ್ಧಾರ್ಥದ ಹೇಳಿಕೆಗಳನ್ನು ನೀಡುವುದು ಕೇವಲ ತಾತ್ವಿಕ ಗೊಂದಲವನ್ನೇ ಅಲ್ಲ, ಸಂಶೋಧನಾ ಪ್ರಾಮಾಣಿಕತೆಯ ಪ್ರಶ್ನೆಯನ್ನೂ ಎತ್ತುತ್ತದೆ.

ಸಂಶೋಧನೆಯಲ್ಲಿ ನಿಲುವು ಬದಲಾಗುವುದು ಅಸಾಧ್ಯವಲ್ಲ; ಆದರೆ ಆ ಬದಲಾವಣೆ ಹೊಸ ಸಾಕ್ಷ್ಯಗಳು, ಪಠ್ಯವಿಮರ್ಶಾತ್ಮಕ ಅಧ್ಯಯನ ಮತ್ತು ವಿಧಾನಾತ್ಮಕ ವಿಶ್ಲೇಷಣೆಯ ಆಧಾರದ ಮೇಲೆ ಆಗಬೇಕೇ ಹೊರತು ವ್ಯಂಗ್ಯಮಯ ಅಥವಾ ಸಂಶಯಾಸ್ಪದ ಘೋಷಣೆಗಳ ಮೂಲಕ ಅಲ್ಲ.

  1. ಬಸವಾದಿ ಶರಣರ ಪುರಾಣೀಕರಣ: ಐತಿಹಾಸಿಕ ಅನಿವಾರ್ಯತೆ ಮತ್ತು ಮಿತಿಗಳು

ಬಸವಾದಿ ಶರಣರನ್ನು ಪುರಾಣ ಪುರುಷರನ್ನಾಗಿಸಲಾಗಿದೆ” ಎಂಬ ಡಾ. ವೀರಣ್ಣ ರಾಜೂರ ಅವರ ವಾದವನ್ನು ಐತಿಹಾಸಿಕ ಸಂದರ್ಭದಲ್ಲಿಟ್ಟು ಅವಲೋಕಿಸುವ ಅಗತ್ಯವಿದೆ. ಬಸವಣ್ಣನವರ ಸಮಕಾಲಿಕರಲ್ಲಿ ಯಾರೂ ಅವರ ಜೀವನಚರಿತ್ರೆಯನ್ನು ಬರೆದಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ಅವರು ಕಾಲವಾದ ಅನೇಕ ವರ್ಷಗಳ ನಂತರ ವೀರಶೈವ ಕವಿಗಳು ಬಸವಣ್ಣನವರ ಚರಿತ್ರೆಯನ್ನು ಪುರಾಣರೂಪದಲ್ಲಿ ದಾಖಲಿಸಿದರು. ಇದನ್ನು ಇತಿಹಾಸದ ವಿಕೃತಿಯೆಂದು ಕರೆಯಲು ಸಾಧ್ಯವಿಲ್ಲ; ಪೂರ್ವಕಾಲೀನ ಸಮಾಜಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರಕ್ರಿಯೆಯೇ ಇದಾಗಿದೆ.

ಪುರಾಣಗಳಲ್ಲಿ ನಿಜವಾದ ಘಟನೆಗಳು ಮತ್ತು ಕಲ್ಪಿತ ಅಂಶಗಳು ಬೆರೆತು ಹೋಗಿರುವುದು ಸಹಜ. ಕವಿಗಳು ಕಥಾನಾಯಕನ ಮಹತ್ವವನ್ನು ಉಜ್ಜಲಗೊಳಿಸುವ ಉದ್ದೇಶದಿಂದ ಪವಾಡಾತ್ಮಕ ಅಂಶಗಳನ್ನು ಸೇರಿಸಿಕೊಂಡಿರಬಹುದು. ಈ ಕಾರಣದಿಂದ ಪುರಾಣಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ; ಹಾಗೆಯೇ ಅವುಗಳನ್ನು ಅಕ್ಷರಶಃ ಇತಿಹಾಸವೆಂದು ಸ್ವೀಕರಿಸುವುದೂ ಶಿಕ್ಷಣ, ಸಂಶೋಧನೆ ಮತ್ತು ಬೌದ್ಧಿಕ ಚರ್ಚೆಗಳ ದೃಷ್ಟಿಯಿಂದ ಯುಕ್ತವಲ್ಲ. ಆದ್ದರಿಂದ ಪುರಾಣಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಓದಿ, ಇತರ ಮೂಲಗಳೊಂದಿಗೆ ಸಮನ್ವಯಗೊಳಿಸುವುದು ಅವಶ್ಯಕವಾಗುತ್ತದೆ.

ಇಂದಿನ ಅಧ್ಯಯನದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರ್ಮಿಸಿಕೊಳ್ಳಲು ಮುಖ್ಯವಾಗಿ ಮೂರು ವಿಧದ ಮೂಲಗಳು ಲಭ್ಯವಿವೆ.

  1. ಬಸವಣ್ಣನವರ ಹಾಗೂ ಅವರ ಸಮಕಾಲಿಕ ಶರಣರ ವಚನಗಳು;
  2. ವೀರಶೈವ ಕಾವ್ಯ–ಪುರಾಣಗಳು; ಮತ್ತು
  3. ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಳಕು ಚೆಲ್ಲುವ ಶಾಸನಗಳು.

ಈ ದೃಷ್ಟಿಯಿಂದ ನೋಡಿದಾಗ, ಸಂಶೋಧಕರಿಂದ ಮಾನ್ಯತೆ ಪಡೆದ ಹದಿಮೂರು ಶಾಸನಗಳು ಬೆಳಕಿಗೆ ಬಂದಿರುವುದು ಮಹತ್ವದ ಸಂಗತಿಯಾಗಿದೆ. ಈ ಶಾಸನಗಳು ಬಸವಣ್ಣನವರ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ ಮತ್ತು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿವೆ.

ಬಸವಣ್ಣನ ಹೆಸರನ್ನು ಅಥವಾ ಅವರ ಪರ್ಯಾಯ ನಾಮಗಳನ್ನು ಉಲ್ಲೇಖಿಸುವ ಶಾಸನಗಳು ಐತಿಹಾಸಿಕ ದೃಷ್ಟಿಯಿಂದ ಅತ್ಯಂತ ಮಹತ್ವವನ್ನು ಹೊಂದಿವೆ. ಸಂಶೋಧಕರಿಂದ ಮಾನ್ಯತೆ ಪಡೆದ, ಸರ್ವಸಮ್ಮತವಾದ ಇಂತಹ ಹನ್ನೊಂದು ಶಾಸನಗಳು ಲಭ್ಯವಿದ್ದು, ಅವುಗಳಲ್ಲಿ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಎಂಬುದರಲ್ಲಿ ವಿದ್ವಾಂಸರಲ್ಲಿ ಮೂಲಭೂತ ಭಿನ್ನಾಭಿಪ್ರಾಯವಿಲ್ಲ.

  1. ಕ್ರಿ.ಶ. 1259ರ ಹಿರಿಯೂರ ಶಾಸನದಲ್ಲಿ *ಬಸವಯ್ಯ* ಎಂಬ ಹೆಸರು ಕಾಣಿಸಿಕೊಳ್ಳುತ್ತದೆ.
  2. ಕ್ರಿ.ಶ. 1260ರ ಅರ್ಜುನವಾಡ ಶಾಸನದಲ್ಲಿ *ಬಸವರಾಜ* ಹಾಗೂ *ಸಂಗನಬಸವ* ಎಂಬ ಪರ್ಯಾಯ ನಾಮಗಳು ಉಲ್ಲೇಖಗೊಂಡಿವೆ.
  3. ಕ್ರಿ.ಶ. 1263ರ ಚೌಡದಾನಪುರದ ಎರಡು ಶಾಸನಗಳಲ್ಲಿ *ಸಂಗಮೇಶನ ಪುತ್ರ ಬಸವಯ್ಯ* ಹಾಗೂ *ಸಂಗನಬಸವ* ಎಂಬ ಹೆಸರುಗಳು ಕಾಣುತ್ತವೆ.
  4. ಕ್ರಿ.ಶ. 1279ರ ಕಲ್ಲೆದೇವರಪುರ ಶಾಸನದಲ್ಲಿ *ಬಸವರಾಜ* ಎಂಬ ಹೆಸರು ದೊರಕುತ್ತದೆ.
  5. ಕ್ರಿ.ಶ. 1280ರ ಮರಡಿಪುದ ಶಾಸನದಲ್ಲಿ *ಸಂಗನ ಬಸವಯ್ಯ* ಎಂಬ ಉಲ್ಲೇಖವಿದೆ.
  6. 14ನೇ ಶತಮಾನದ ಗುಡಿಹಾಳ ಶಾಸನದಲ್ಲಿ *ಬಸವರಾಜದೇವರು* ಎಂಬ ಹೆಸರು ಬರುತ್ತದೆ.
  7. ಕ್ರಿ.ಶ. 1660ರ ಆನಂದಪುರ ಮಠದ ತಾಮ್ರಶಾಸನದಲ್ಲಿ *ಬಸವೇಶ್ವರ* ಎಂಬ ಉಲ್ಲೇಖ ಕಂಡುಬರುತ್ತದೆ.
  8. ಕ್ರಿ.ಶ. 1686ರ ಜೋಡೀದಾಸೇನಹಳ್ಳಿ ಶಾಸನದಲ್ಲಿ *ಬಸವರಾಜೇಂದ್ರ* ಎಂಬ ಹೆಸರು ಉಲ್ಲೇಖಿತವಾಗಿದೆ.
  9. ಕ್ರಿ.ಶ. 1700ರ ಕಾನಕಾನಹಳ್ಳಿಯ ಎರಡು ತಾಮ್ರಶಾಸನಗಳಲ್ಲಿ *ಬಸವೇಶ್ವರಸಾಮುಲು* ಹಾಗೂ *ಕಲ್ಯಾಣದ ಬಸವಪ್ಪನವರು* ಎಂಬ ಹೆಸರುಗಳು ಕಾಣಿಸಿಕೊಳ್ಳುತ್ತವೆ.

ಈ ಎಲ್ಲಾ ಶಾಸನಗಳಲ್ಲಿ ಉಲ್ಲೇಖಿತ ವ್ಯಕ್ತಿ ಬಸವಣ್ಣನವರೇ ಎಂಬುದನ್ನು ಐತಿಹಾಸಿಕವಾಗಿ ನಿರ್ಧರಿಸಲು ನೆರವಾಗುವ ಅಂಶವೆಂದರೆ, ಇವುಗಳಲ್ಲಿ ಕೆಲವು ಶಾಸನಗಳು ವೀರಶೈವ ಕಾವ್ಯ–ಪುರಾಣಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟಿರುವುದು. ವಿಶೇಷವಾಗಿ ಕ್ರಿ.ಶ. 1260ರ ಅರ್ಜುನವಾಡ ಶಾಸನ, ಕ್ರಿ.ಶ. 1259ರ ಹಿರಿಯೂರ ಶಾಸನ ಮತ್ತು ಕ್ರಿ.ಶ. 1263ರ ಚೌಡದಾನಪುರ ಶಾಸನಗಳು ಹರಿಹರ ಹಾಗೂ ಪಾಲ್ಕುರಿಕೆ ಸೋಮನಾಥರ ಕಾವ್ಯಗಳಿಗಿಂತ ಮುಂಚಿನವುಗಳಾಗಿವೆ. ಈ ಕಾರಣದಿಂದ, ಬಸವಣ್ಣನವರ ಇತಿವೃತ್ತ, ಶಿವಪಾರಮ್ಯದ ವಿವರ ಹಾಗೂ ಅವರ ಐತಿಹಾಸಿಕ ಅಸ್ತಿತ್ವವನ್ನು ಗುರುತಿಸುವಲ್ಲಿ ಈ ಶಾಸನಗಳು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತವೆ.

ಹರಿಹರನು *ಬಸವರಾಜದೇವರ ರಗಳೆ* ಕೃತಿ ರೂಪದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಮುಂಚೆಯೇ, ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಳ ಮತ್ತು ಕುಟುಂಬಪರ ಹಿನ್ನೆಲೆಯ ಕುರಿತು ಬೆಳಕು ಚೆಲ್ಲುವಲ್ಲಿ ಕ್ರಿ.ಶ. 1260ರ ಅರ್ಜುನವಾಡ ಶಾಸನವು ಮಹತ್ತರ ಪಾತ್ರವನ್ನು ವಹಿಸಿದೆ. ವಿಶೇಷವಾಗಿ, ಬಸವರಾಜದೇವರ ರಗಳೆಯಲ್ಲಿ ಕಾಣುವ ಬಸವಣ್ಣನವರ ತಂದೆಯ ಊರುಗಳ ಕುರಿತ ಸಂದೇಹವನ್ನು ನಿವಾರಿಸುವಲ್ಲಿ ಈ ಶಾಸನ ನಿರ್ಣಾಯಕ ಮಹತ್ವವನ್ನು ಹೊಂದಿದೆ. ಈ ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಾತ್ಮಕ ಮೂಲಗಳಿಗಿಂತ ಹೆಚ್ಚು ಪ್ರಾಚೀನವಾಗಿದ್ದು, ಐತಿಹಾಸಿಕವಾಗಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿವೆ.

(ಸೌಜನ್ಯ: “ಬಸವಣ್ಣನವರನ್ನು ಕುರಿತ ಅರ್ಜುನವಾಡ ಮತ್ತು ಇತರ ಶಾಸನಗಳು” – ಡಾ. ಸಿ. ನಾಗಭೂಷಣ).

ಈ ಎಲ್ಲ ಶಾಸನಗಳು ಬಸವಣ್ಣನವರ ಹೆಸರಿನ ಕುರಿತು ಹಾಗೂ ಅವರ ಮನೆತನಗಳ ಕುರಿತು ಕೆಲವೇ ಕೆಲವು ಸಾಲುಗಳ ಮಟ್ಟಿಗೆ ಐತಿಹಾಸಿಕ ಬೆಳಕು ಚೆಲ್ಲುತ್ತವೆಯೇ ಹೊರತು, ಬಸವಣ್ಣನವರ ಸಮಗ್ರ ಚರಿತ್ರೆಯನ್ನು ನಿರೂಪಿಸುವುದಿಲ್ಲ. ಶಾಸನಗಳು ಐತಿಹಾಸಿಕ ಅಸ್ತಿತ್ವವನ್ನು ದೃಢಪಡಿಸುವಲ್ಲಿ ಸಹಾಯಕವಾಗಿದ್ದರೂ, ಅವುಗಳಿಂದ ಪೂರ್ಣ ಜೀವನಚಿತ್ರಣವನ್ನು ನಿರೀಕ್ಷಿಸುವುದು ಯುಕ್ತಿಯುಕ್ತವಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ.

ಆದರೆ ಕಳೆದ ಒಂಬೈನೂರು ವರ್ಷಗಳ ಅವಧಿಯಲ್ಲಿ ಕನ್ನಡದ ಸಾಂಸ್ಕೃತಿಕ ಲೋಕವು ಬಸವ, ಬಸವಣ್ಣ, ಬಸವರಾಜ, ಬಸವೇಶ್ವರ ಎಂಬ ನಾನಾ ರೂಪಗಳಲ್ಲಿ ಬಸವ ಪರಂಪರೆಯನ್ನು ನಿರಂತರವಾಗಿ ಎದುರುಗೊಳ್ಳುತ್ತಾ ಅದನ್ನು ಜೀವಂತವಾಗಿಟ್ಟುಕೊಂಡಿದೆ. ಹರಿಹರನ ರಗಳೆಗಳು, ವಚನಗಳ ಪುನರ್‌ದಾಖಲೀಕರಣ, ಶೂನ್ಯ ಸಂಪಾದನೆಗಳು, *ಬಸವಪುರಾಣ*, ಮಂಟೆಸ್ವಾಮಿ ಕಾವ್ಯ, ವಚನಗಳ ಸಂಗ್ರಹ–ಸಂಪಾದನೆ, ಕಂಪೆನಿ ನಾಟಕಗಳು, ಸಮಗ್ರ ವಚನ ಸಂಪುಟಗಳು, ವಚನಗಳ ವಿಶ್ಲೇಷಣೆ ಮತ್ತು ಜಿಜ್ಞಾಸೆಗಳು, ಹಾಗೆಯೇ ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ವೀರಶೈವ–ಲಿಂಗಾಯತ ಚರ್ಚೆಗಳು—ಈ ಎಲ್ಲವೂ ಬಸವಣ್ಣನವರನ್ನೂ ಅವರ ಸಮಕಾಲೀನ ಶರಣರನ್ನೂ ನಾವು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಸಾಂಸ್ಕೃತಿಕ ಪರಂಪರೆಯ ಜೀವಂತ ಸಾಕ್ಷಿಗಳಾಗಿವೆ. ಈ ದೀರ್ಘ ಮತ್ತು ಸಂಕೀರ್ಣ ಪರಂಪರೆಯ ಪಾತ್ರವನ್ನು ಡಾ. ವೀರಣ್ಣ ರಾಜೂರ ಅವರು ಮರೆಯಬಾರದು.

ವಚನಗಳು ಸ್ವಭಾವತಃ ಹೆಚ್ಚು ವಿಶ್ವಾಸಾರ್ಹವಾದ ಮೂಲಗಳಾಗಿದ್ದರೂ, ಅವು ಬಿಡಿಬಿಡಿಯಾಗಿ ಬಂದಿರುವುದರಿಂದ ಬಸವಣ್ಣನವರ ಸಂಪೂರ್ಣ ಜೀವನಚರಿತ್ರೆಯನ್ನು ನಿರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಮತ್ತೊಂದೆಡೆ, ಪುರಾಣಗಳು ಸಂಪೂರ್ಣ ವಿಶ್ವಾಸಾರ್ಹವಲ್ಲವಾದರೂ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದರೆ ಐತಿಹಾಸಿಕ ಸಾಕ್ಷ್ಯಗಳಲ್ಲೇ ದೊಡ್ಡ ಕೊರತೆ ಉಂಟಾಗುತ್ತದೆ.

ಆದ್ದರಿಂದ ವಚನಗಳನ್ನೂ ಪುರಾಣಗಳನ್ನೂ ಪರಸ್ಪರ ಸಮನ್ವಯಗೊಳಿಸಿಕೊಂಡು ಬಳಸುವ ವಿಧಾನವೇ ಐತಿಹಾಸಿಕವಾಗಿ ಹೆಚ್ಚು ಸಮರ್ಥವಾದ ಮಾರ್ಗವಾಗಿದೆ. ಈ ದೃಷ್ಟಿಯಿಂದ ಹರಿಹರನ *ಬಸವರಾಜದೇವರ ರಗಳೆ* ,ಪಾಲ್ಕುರಿಕೆ ಸೋಮನಾಥನ,ಭೀಮಕವಿಯ, *ಬಸವಪುರಾಣ* ಮತ್ತು ಕಂಚಿ ಶಂಕರಾಧ್ಯರ ವೃಷಭೇಶ್ವರ ಪುರಾಣಂ (ಬಸವ ಚರಿತೆ) ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಹೀಗಿರುವಾಗ, ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಕಂಡಕಂಡಲ್ಲಿ “ಬಸವಾದಿ ಶರಣರ ಪುರಾಣೀಕರಣ” ಎಂದು ಸುಲಭವಾಗಿ ಟೀಕಿಸುವುದು ಅರ್ಥಹೀನವಾಗುತ್ತದೆ. ಬಸವಣ್ಣನವರ ಸಮಗ್ರ ಚರಿತ್ರೆಯೇ ಬಹುಪಾಲು *ಬಸವಪುರಾಣ*ದಲ್ಲಿ ದಾಖಲಾದ ವಿವಿಧ ಘಟನಾವಳಿಗಳ ಆಧಾರದಲ್ಲೇ ರೂಪುಗೊಂಡಿರುವುದರಿಂದ, ಪುರಾಣಗಳನ್ನು ಅತೀ ತಾತ್ಸಾರ ಭಾವದಿಂದ ನೋಡುವ ಡಾ. ವೀರಣ್ಣ ರಾಜೂರ ಅವರ ನಿಲುವನ್ನು ಗಟ್ಟಿಯಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ವೀರಶೈವವನ್ನು ನಿಂದಿಸುವ ಉತ್ಸಾಹದಲ್ಲಿ, ಬಸವಣ್ಣನವರ ಚರಿತ್ರೆಗೆ ಜೀವಗಂಗೆಯಂತಿರುವ ವೀರಶೈವ ಪುರಾಣಗಳನ್ನು ತುಚ್ಛವಾಗಿ ಕಾಣುವುದು ತಾತ್ವಿಕವಾಗಿಯೂ ಐತಿಹಾಸಿಕವಾಗಿಯೂ ಅಸಂಗತವಾಗಿದೆ.

ಇಲ್ಲಿ ಕಂಡುಬರುವ ವಿಪರ್ಯಾಸವೆಂದರೆ, ಸ್ವತಃ ಡಾ. ವೀರಣ್ಣ ರಾಜೂರ ಅವರನ್ನು ಒಳಗೊಂಡಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಪರಿಕಲ್ಪನೆಯನ್ನು ಬೆಂಬಲಿಸುವ ಬಹುತೇಕ ಸಾಹಿತಿಗಳೇ ಬಸವಪುರಾಣದ ಚರಿತ್ರಾನಾಯಕ ಬಸವಣ್ಣನವರನ್ನು ಶೇಕಡಾ ತೊಂಬತ್ತೈದುರಷ್ಟು ಮಟ್ಟಿಗೆ ಅಂಗೀಕರಿಸಿ, ಶಾಸನಗಳಲ್ಲಿ ಉಲ್ಲೇಖಿತ ಬಸವಣ್ಣನವರನ್ನು ಬಹುತೇಕ ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಕಾರಣವೂ ಸ್ಪಷ್ಟವಾಗಿದೆ—ಈ ಶಾಸನಗಳಲ್ಲಿ ಬಸವಣ್ಣನವರ ತಾತ್ವಿಕ ಸಾಧನೆಗಳ ಕುರಿತು ಒಂದೇ ಒಂದು ಶಬ್ದವೂ ಇಲ್ಲ.

ಈ ಸಂಬಂಧ ಸಂಶೋಧಕ ಎಚ್. ದೇವೀರಪ್ಪ ಅವರು ತಮ್ಮ ಅರ್ಜುನವಾಡದ  ಶಿಲಾಲೇಖ”ಎಂಬ ಲೇಖನದಲ್ಲಿ ಅತ್ಯಂತ ತೀಕ್ಷ್ಣವಾದ ವಿಮರ್ಶೆಯನ್ನು ಮುಂದಿಟ್ಟಿದ್ದಾರೆ. ಅವರು, “ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ, ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ‘ಉಳ್ಳವರು ಶಿವಾಲಯವ…’ ಎಂಬ ವಚನದ ಮೂಲಕ ಲಿಂಗವಂತ ಧರ್ಮದ ತಿರುಳನ್ನೇ ನವೀನವಾಗಿ ಪ್ರತಿಪಾದಿಸಿ ಸ್ಥಾವರ ಲಿಂಗಪೂಜೆಯನ್ನು ಸಮರ್ಥವಾಗಿ ಖಂಡಿಸಿರುವ ಬಸವಣ್ಣನವರ ಅಣ್ಣನ ಮಗನೋ, ಮೊಮ್ಮಗನೋ, ಮರಿಮಗನೋ ಆಗಿ, ಒಂದು ಸಾಮಾನ್ಯ ಶಿವಮಂದಿರದ ‘ಪೂಜಾರಿ’ ಯಾಗಿದ್ದನೆಂದು ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಆಧಾರದ ಮೇಲೆ ಅವರು ಆ ಶಾಸನವೊಂದನ್ನು ‘ಕೂಟಶಾಸನ’ ಎಂದು ಖಂಡಿಸಿ, ಅದರ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ (ಪುಟ 484, *ಸಂಶೋಧನ ಸಂಪುಟ*, ಲೇಖಕ: ಎಚ್. ದೇವೀರಪ್ಪ; ಪ್ರಕಾಶಕರು: ಎನ್.ಆರ್. ವಿಶುಕುಮಾರ್; ನಿರ್ದೇಶಕರು: ಕನ್ನಡ ಸಂಸ್ಕೃತಿ ಇಲಾಖೆ).

ಇಂತಹ ಹಿನ್ನೆಲೆಯಲ್ಲೇ ಡಾ. ವೀರಣ್ಣ ರಾಜೂರ ಅವರಿಗೆ ಒಂದು ಸ್ಪಷ್ಟ, ಮನವಿಪೂರ್ವಕವಾದ ಆಗ್ರಹವನ್ನು ಮಾಡಬೇಕಾಗುತ್ತದೆ. ಪದೇಪದೇ ವೀರಶೈವ ಪದಕ್ಕೆ ಸಂಬಂಧಿಸಿದ ಸಂಶಯಗ್ರಸ್ಥ ಹೇಳಿಕೆಗಳ ಮೂಲಕ ಸಮಾಜದ ಶಾಂತ ವಾತಾವರಣವನ್ನು ಕಲುಷಿತಗೊಳಿಸುವುದಕ್ಕಿಂತ, ತಮ್ಮ ಬಳಿ ಇರುವ ಸ್ವತಂತ್ರ ಹಾಗೂ ಪರಿಶೀಲನೀಯ ಸಾಕ್ಷ್ಯಗಳ ಆಧಾರದ ಮೇಲೆ ಬಸವಾದಿ ಶರಣರನ್ನು ಚಾರಿತ್ರಿಕ ವ್ಯಕ್ತಿಗಳಾಗಿಯೇ ನಿರೂಪಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕಾಗಿದೆ. ಸಾರ್ವಜನಿಕ ಚರ್ಚೆಗೆ ತೊಡಗುವಾಗ, ಇಂತಹ ಜವಾಬ್ದಾರಿಯುತ ನಿಲುವು ವಿದ್ವಾಂಸರಿಂದ ನಿರೀಕ್ಷಿತವಾಗಿರುತ್ತದೆ.

ಆದರೆ ಈ ಕಾರ್ಯದಲ್ಲಿ ಅಪ್ಪಿತಪ್ಪಿಯೂ 13–14ನೇ ಶತಮಾನದ ವೀರಶೈವ ಪುರಾಣಗಳು, ವೀರಶೈವ ರಗಳೆಗಳು ಅಥವಾ ತಾವು ಪದೇಪದೇ ಉಲ್ಲೇಖಿಸುವಂತೆ ಹದಿನಾಲ್ಕನೆಯ ಶತಮಾನದಲ್ಲಿ ತಾವೇ  ವಚನ ಪ್ರಕ್ಷಿಪ್ತತೆಯನ್ನು ಖುದ್ದು ಕಂಡವರಂತೆ ಹೇಳುವ ನೂರೊಂದು ವಿರಕ್ತರ ವಚನ ಸಂಪಾದನೆಗಳನ್ನು ಸಾಕ್ಷಿಯಾಗಿ ಬಳಸದೆ, ಸ್ವತಂತ್ರ ಸಾಕ್ಷ್ಯಗಳ ಸಮೇತ ಶರಣರ ಚರಿತ್ರೆಯನ್ನು ಮೊದಲು ರೂಪಿಸಿ ತೋರಿಸುವುದು ಅಗತ್ಯವಾಗುತ್ತದೆ.

ಅಂತಹ ಕಾರ್ಯವು ತಮ್ಮಿಂದ ಸಾಧ್ಯವಿದ್ದರೆ ಮಾತ್ರ ವೀರಶೈವ ಮತ್ತು ಅದರ ಸಾಹಿತ್ಯದ ಕುರಿತು ಸಾರ್ವಜನಿಕವಾಗಿ ಲಘುವಾಗಿ ಮಾತನಾಡುವ ನೈತಿಕ ಅರ್ಹತೆ ಅವರಿಗೆ ದೊರೆಯುತ್ತದೆ.

  1. ವಚನಗಳು ಮತ್ತು “ತಾತ್ವಿಕ ಬಂಧನ” ಎಂಬ ಪ್ರಶ್ನೆ

“ಸಾಮಾಜಿಕ, ಸಾಹಿತ್ಯಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ”* ಎಂಬ ಹೇಳಿಕೆ ಮೂಲತಃ ಅಸ್ಪಷ್ಟವೂ ಸಮಸ್ಯಾತ್ಮಕವೂ ಆಗಿದೆ. ಇಲ್ಲಿ *ತಾತ್ವಿಕ ಬಂಧನ (Philosophical Bondage)* ಎಂಬ ಪರಿಕಲ್ಪನೆಯನ್ನು ಯಾರು ವಿಧಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ—ಸಮಾಜವೋ, ಸಂಪ್ರದಾಯವೋ, ಅಥವಾ ವಿದ್ವಾಂಸರ ವ್ಯಾಖ್ಯಾನವೋ? ಈ ಕುರಿತು ಸ್ಪಷ್ಟತೆ ಇಲ್ಲದೆ ಇಂತಹ ಸಾಮಾನ್ಯೀಕೃತ ಹೇಳಿಕೆಗಳನ್ನು ನೀಡುವುದು ತಾತ್ವಿಕ ಗೊಂದಲವನ್ನೇ ಉಂಟುಮಾಡುತ್ತದೆ.

ಸಾಮಾಜಿಕ ಹಾಗೂ ಸಾಹಿತ್ಯಕ ಅಂಶಗಳು ತಾತ್ವಿಕ ಚಿಂತನೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿವೆ ಎಂಬ ಊಹೆಯೇ ಮೂಲತಃ ದೋಷಪೂರ್ಣವಾಗಿದೆ. ವಚನಗಳು ಸಾಮಾಜಿಕವಾಗಿಯೂ ಸಾಹಿತ್ಯಕವಾಗಿಯೂ ಇರುವುದೇ ಅವುಗಳ ತಾತ್ವಿಕ ಶಕ್ತಿಯ ಮೂಲವಾಗಿದೆ. ವಚನಗಳಲ್ಲಿ ವೀರಶೈವ ಪದವನ್ನು 14ನೇ ಶತಮಾನದ ನೂರೊಂದು ವಿರಕ್ತರು ಸೇರಿಸಿದ್ದಾರೆ ಎಂಬ ವಾದವನ್ನು ಮುಂದಿಡುವ ಮೊದಲು, 12ನೇ ಮತ್ತು 14ನೇ ಶತಮಾನದ ತಾಳೆಯೋಲೆಗಳನ್ನು ಸಮಾನಾಂತರವಾಗಿ ಇಟ್ಟು ಪಠ್ಯವಿಮರ್ಶಾತ್ಮಕ ಹಾಗೂ ಶಾಸ್ತ್ರೀಯ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ. ಕೇವಲ ಊಹೆಗಳು, ಗುರುಪರಂಪರೆಯ (ಡಾ. ಕಲ್ಬುರ್ಗಿ) ಅಭಿಪ್ರಾಯಗಳು ಅಥವಾ ದ್ವೇಷದಿಂದ ಹುಟ್ಟಿದ ಕಲ್ಪನೆಗಳನ್ನು ಅಂತಿಮ ಸತ್ಯವೆಂದು ಸ್ಥಾಪಿಸುವುದು ಸಂಶೋಧನಾ ಶಿಸ್ತಿನ ಲಕ್ಷಣವಲ್ಲ.

ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯಿಲಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ, ಪೂಜ್ಯ ಶ್ರೀ ದಿಂಗಾಲೇಶ್ವರ ಶ್ರೀಗಳೊಂದಿಗೆ ನಡೆದ ಬಹಿರಂಗ ಚರ್ಚೆಯಲ್ಲಿ ಡಾ. ವೀರಣ್ಣ ರಾಜೂರ ಅವರು “ಈಚೆಗೆ ದೊರೆತ ಆಧಾರಗಳನ್ನು ಲಿಂಗಾಯತಕ್ಕೆ ಪರಿಗಣಿಸಬೇಕಾಗುತ್ತದೆ” ಎಂದು ಹೇಳಿರುವುದು ಗಮನಾರ್ಹ. ಹಾಗಾದರೆ, *ಈಚಿನದು ಮಾತ್ರವೇ ತತ್ತ್ವವಾಗುತ್ತದೆಯೇ?* ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ಈ ಕುರಿತು ಡಾ. ವೀರಣ್ಣ ರಾಜೂರ ಅವರು ಪ್ರಾಮಾಣಿಕವಾಗಿ ಉತ್ತರಿಸಬೇಕಾಗಿದೆ.

ಬಸವಾದಿ ಶಿವಶರಣರು ಪೂರ್ವಾಗ್ರಹಪೀಡಿತರಲ್ಲ. ಅವರು ಸಂಪೂರ್ಣ ವಿಶಾಲ ಮನಸ್ಸಿನಿಂದ ಲೌಕಿಕ ಮತ್ತು ಅಲೌಕಿಕ ಜಗತ್ತನ್ನು ಆಳವಾಗಿ ಪರಿಶೀಲಿಸಿದ್ದಾರೆ. ಆಚಾರ, ಅಧ್ಯಾತ್ಮ ಮತ್ತು ಲೌಕಿಕ ವಿಚಾರಗಳನ್ನು ತಾತ್ವಿಕವಾಗಿ ಪೋಣಿಸಿ ವಚನಸಾಹಿತ್ಯವನ್ನು ರಚಿಸಿರುವುದು ಅವರ ಚಿಂತನೆಯ ವ್ಯಾಪ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಡಾ. ವೀರಣ್ಣ ರಾಜೂರ ಅವರಿಗೆ ವಚನಗಳು ತಾತ್ವಿಕ ಬಂಧನದಿಂದ ಮುಕ್ತವಾಗಿವೆ ಎಂದು ಕಾಣಬೇಕಾದರೆ, ಆ ಮುಕ್ತಿ- ಘೋಷಣೆಯಿಂದ ದೊರಕುವುದಿಲ್ಲ. *ತಾತ್ವಿಕ ಮುಕ್ತಿ (Philosophical Liberation)* ವಿಮರ್ಶಾತ್ಮಕ ಚಿಂತನೆ, ಬಹುದೃಷ್ಟಿಕೋನ ಮತ್ತು ತತ್ವಗಳನ್ನು ಸಾಧನವಾಗಿ ಬಳಸುವ ವಿವೇಕಪೂರ್ಣ ಮನೋಭಾವದಿಂದ ಮಾತ್ರ ಸಾಧ್ಯ.

ವೀರಶೈವ–ಲಿಂಗಾಯತ ಪರಂಪರೆಯ ಕುರಿತು ನಡೆಯುವ ಚರ್ಚೆಗಳು ಸಂಶೋಧನೆಯ ಹೆಸರಿನಲ್ಲಿ ಗೊಂದಲ ಬಿತ್ತುವ ಘೋಷಣೆಗಳಾಗಬಾರದು.

ಬಸವಣ್ಣನವರನ್ನು ರಾಜಕೀಯ ಅಥವಾ ವೈಯಕ್ತಿಕ ನಿಲುವುಗಳ ಸೇವೆಗೆ ಬಳಸಿ, ಅವರ ತಾತ್ವಿಕ ಮಹತ್ವವನ್ನು ಮರುಬರೆಯುವ ಪ್ರಯತ್ನಗಳು ಬೌದ್ಧಿಕ ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತವೆ.

ವೀರಶೈವವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಪ್ರಶ್ನೆ ಮಾಡುವುದಕ್ಕೂ ಒಂದು ಮಿತಿಯಿದೆ—ಅದು ಐತಿಹಾಸಿಕ ಸಾಕ್ಷ್ಯವನ್ನು ನಿರ್ಲಕ್ಷಿಸದ, ತಾತ್ವಿಕ ಸತತತೆಯನ್ನು ತುಂಡರಿಸದ ಮತ್ತು ಸಂಶೋಧನೆಯ ಹೆಸರಿನಲ್ಲಿ ವೈಯಕ್ತಿಕ ಅಭಿರುಚಿಗಳನ್ನು ಹೇರುವ ಪ್ರಯತ್ನವಾಗಿರಬಾರದು.

ಆ ಮಿತಿಯನ್ನು ದಾಟಿದ ಕ್ಷಣದಿಂದ ಪ್ರಶ್ನೆ ವಿಮರ್ಶೆಯಾಗುವುದನ್ನು ನಿಲ್ಲಿಸಿ, ಪರಂಪರೆಯನ್ನು ಅಸ್ಥಿರಗೊಳಿಸುವ ಸಾಧನವಾಗುತ್ತದೆ. ನಿಜವಾದ ವಿಮರ್ಶೆ ಪರಂಪರೆಯನ್ನು ಕುಸಿತಗೊಳಿಸುವುದಿಲ್ಲ; ಅದು ಸಾಕ್ಷ್ಯ, ಶಿಸ್ತು ಮತ್ತು ಜವಾಬ್ದಾರಿಯ ನೆಲೆಯಲ್ಲಿ ನಿಂತು ಅದನ್ನು ಇನ್ನಷ್ಟು ಬಲಪಡಿಸುತ್ತದೆ.

-ಶ್ರೀಕಂಠ.ಚೌಕೀಮಠ

 

ಅದ್ವೈತದಿಂದ ಭಕ್ತಿಗೆ: ಶಂಕರಾಚಾರ್ಯರ ಸ್ತೋತ್ರಗಳಲ್ಲಿ ತತ್ತ್ವ ಮತ್ತು ಅನುಭವದ ಏಕತೆ

——————————

ಸಾಕಾರ ಭಕ್ತಿಯಿಂದ ನಿರಾಕಾರ ಬ್ರಹ್ಮನಿಗೆ ಸಾಗುವ ಸಾಧಕನ ಅಂತರ್ಯಾತ್ರೆ

————————————–

ಲೇಖಕ: ಶ್ರೀಕಂಠ. ಚೌಕೀಮಠ.

———————————-

ಇತ್ತೀಚೆಗೆ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪವಿತ್ರ ಶಾರದಾಪೀಠದ ದರ್ಶನಾರ್ಥವಾಗಿ ತೆರಳಿದ ಸಂದರ್ಭದಲ್ಲಿ, ಅದೊಂದು ಆಶೀರ್ವಾದದಂತೆ ನನ್ನ ಕೈ ಸೇರಿತು — ಶ್ರೀ ಶಂಕರಾಚಾರ್ಯರ ಸಮಗ್ರ ಸ್ತೋತ್ರ ಮಂಜರಿ ಎಂಬ ಅಪರೂಪದ ಗ್ರಂಥ. ನಾಲ್ಕುನೂರು ಹತ್ತು ಪುಟಗಳ ಈ ವಿಶಾಲ ಕೃತಿಯ ಪರಿವಿಡಿಯನ್ನು ವೀಕ್ಷಿಸಿದಾಗ, ಶಂಕರಭಗವತ್ಪಾದರು ರಚಿಸಿದ ಒಟ್ಟು ಎಪ್ಪತ್ತೇಳು ಸ್ತೋತ್ರಗಳು ಹಾಗೂ ಅವುಗಳ ಕನ್ನಡಾನುವಾದಗಳು ಕ್ರಮಬದ್ಧವಾಗಿ ಅಚ್ಚಾಗಿರುವುದು ನನ್ನ ಗಮನ ಸೆಳೆಯಿತು. ಆ ಸ್ತೋತ್ರಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಸುವ್ಯವಸ್ಥಿತವಾಗಿ ವಿಂಗಡಿಸಲಾಗಿದೆ:

  • ಶ್ರೀ ಗಣೇಶ ಸ್ತೋತ್ರಗಳು
  • ಶಿವ ಸ್ತೋತ್ರಗಳು
  • ಶ್ರೀ ವಿಷ್ಣು ಭಕ್ತಿ ಸ್ತೋತ್ರಗಳು
  • ಶ್ರೀ ದೇವಿ ಸ್ತೋತ್ರಗಳು

ಈ ವಿಭಾಗಗಳಲ್ಲಿ ನನ್ನ ಮನಸ್ಸಿಗೆ ಅತ್ಯಂತ ಆಪ್ತವಾಗಿ ಸ್ಪಂದಿಸಿದದ್ದು ಶ್ರೀ ಗಣೇಶ ಪಂಚಕ. ಬಾಲ್ಯದಿಂದಲೂ ನನ್ನ ತಂದೆಯ ನಿತ್ಯಪೂಜೆಯ ಆರಂಭದಲ್ಲಿ ಮೃದುಸ್ವರವಾಗಿ ಪ್ರತಿಧ್ವನಿಸುತ್ತಿದ್ದ ಆ ಶ್ಲೋಕಗಳು, ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿವೆ. ವಿಶೇಷವೆಂದರೆ, ತಮ್ಮ ಜೀವನದ ಅಂತಿಮ ದಿನದ ಬೆಳಗಿನ ಪೂಜೆಯಲ್ಲಿಯೂ ಅಪ್ಪ ಅದೇ ಶ್ರೀ ಗಣೇಶ ಪಂಚಕವನ್ನು ಅಚಲ ಭಕ್ತಿಭಾವದಿಂದ ಪಠಿಸಿದ್ದರು. ಆ ಪಂಚಕದ ಪ್ರಾರಂಭ ಶ್ಲೋಕ ಹೀಗಿದೆ:

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್

ಎಪ್ಪತ್ತೇಳು ಸ್ತೋತ್ರಗಳ ಪರಿವಿಡಿಯನ್ನು ವೀಕ್ಷಿಸುತ್ತ ಕುಳಿತಾಗಲೇ, ನನ್ನ ಮನಸ್ಸಿನಲ್ಲಿ ನಿಧಾನವಾಗಿ ಒಂದು ಗಂಭೀರ ಸಂದೇಹ ಮೂಡಿಬಂತು. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಏಕೋನತತ್ತ್ವದ ಪರಮಾರ್ಥವನ್ನು ಜಗತ್ತಿಗೆ ಬೋಧಿಸಿದ ಶಂಕರಾಚಾರ್ಯರು — ಹೇಗೆ ಅನೇಕ ದೇವತೆಗಳನ್ನು ಸ್ತುತಿಸುವ ಸ್ತೋತ್ರಗಳನ್ನು ರಚಿಸಿದರು? ಒಂದೆಡೆ ಅದ್ವೈತದ ಏಕತ್ವದ ಘೋಷಣೆ, ಮತ್ತೊಂದೆಡೆ ದ್ವೈತಭಾವದಲ್ಲಿ ಅರಳುವ ಭಕ್ತಿಯ ಅಭಿವ್ಯಕ್ತಿ — ಈ ಎರಡೂ ಭಿನ್ನ ಪ್ರಪಂಚಗಳು ಒಂದೇ ಮನಸ್ಸಿನಲ್ಲಿ ಒಟ್ಟಾಗಿ ಚಲಿಸಲಾರಂಭಿಸಿದವು. ಆ ಕ್ಷಣದಿಂದಲೇ ನನ್ನ ಚಿಂತನೆ, ಶಂಕರಾಚಾರ್ಯರ ತತ್ತ್ವದ ಆಳವನ್ನು ಅರಸುವ ದಿಕ್ಕಿನಲ್ಲಿ ನಿಧಾನವಾಗಿ ಸಾಗತೊಡಗಿತು.

ಈ ಜಿಜ್ಞಾಸೆಗಳೊಡನೆ, ನಾನು ಪೂಜ್ಯ ಗುರುಗಳಾದ ಶ್ರೀ ಶಿವಾತ್ಮಾನಂದ ಪುರಿಯವರಿಗೆ (ಗುರುಕಂದ) ಒಂದು ಸಂದೇಶವನ್ನು ವಿನಯಪೂರ್ವಕವಾಗಿ ಕಳುಹಿಸಿದೆ. ಆ ಸಂದೇಶದಲ್ಲಿ ನನ್ನ ಮನಸ್ಸಿನ ಅಶಾಂತಿ ಮತ್ತು ಅರಿವಿನ ಹಂಬಲ ಎರಡನ್ನೂ ನೇರವಾಗಿ ನಿವೇದಿಸಿಕೊಂಡು ಹೀಗೆ ಪ್ರಾರ್ಥಿಸಿದೆ:

“ಪೂಜ್ಯರೆ,
ಇಂದು ಶೃಂಗೇರಿಯಿಂದ ತಂದ ಒಂದು ಗ್ರಂಥವನ್ನು ಹಾಗೂ ಅದರ ಸಮಗ್ರ ಸಾಹಿತ್ಯವಿವರಣೆಗಳನ್ನು ಓದುತ್ತಿರುವ ಸಂದರ್ಭದಲ್ಲಿ, ನನ್ನ ಮನಸ್ಸಿನಲ್ಲಿ ಕೆಲವು ಜಿಜ್ಞಾಸೆಗಳು ಸಹಜವಾಗಿ ಉದಯಿಸಿದವು. ಈ ಪ್ರಶ್ನೆಗಳು ಅಯೋಗ್ಯವಾಗಿಯೂ ಅಥವಾ ತಪ್ಪಾಗಿ ಕೇಳಲ್ಪಡುವಂತೆಯೂ ಕಂಡರೆ ದಯವಿಟ್ಟು ಕ್ಷಮಿಸಬೇಕು. ನನ್ನ ಉದ್ದೇಶ ಯಾವತ್ತೂ ವಿರೋಧವಲ್ಲ; ಸಾಧನೆಗೆ ಸರಿಯಾದ ದಿಕ್ಕು, ತತ್ತ್ವಕ್ಕೆ ಸ್ಪಷ್ಟತೆ ಮತ್ತು ಆತ್ಮೋನ್ನತಿಯ ಮಾರ್ಗವನ್ನು ಅರಿಯುವುದು ಮಾತ್ರ.

ನನಗೆ ಸ್ಪಷ್ಟತೆ ಬೇಕಿರುವ  ವಿಷಯ:
ಅದ್ವೈತ ತತ್ತ್ವ ಮತ್ತು ದೇವತಾ ಉಪಾಸನೆಯ ಸಂಬಂಧ —
ಶಂಕರಾಚಾರ್ಯರು ‘ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ತತ್ತ್ವವನ್ನು ಬೋಧಿಸಿದಾಗ, ಏಕೆ ಅವರು ಅನೇಕ ದೇವತೆಗಳ ಆರಾಧನೆಯನ್ನು ಪ್ರೋತ್ಸಾಹಿಸಿದರು? ಇದು ಪರಸ್ಪರ ವಿರೋಧವೆಂದು ಕಾಣಿಸುವುದಿಲ್ಲವೇ?

ಪೂಜ್ಯರೆ,
ಈ ಪ್ರಶ್ನೆಗಳನ್ನು ನಾನು ತರ್ಕಕ್ಕಾಗಲೀ ವಿರೋಧಕ್ಕಾಗಲೀ ಕೇಳುವುದಿಲ್ಲ; ಕೇವಲ ತಿಳಿವಳಿಕೆಗಾಗಿ, ಆತ್ಮಶೋಧನೆಗಾಗಿ ಕೇಳುತ್ತಿದ್ದೇನೆ.”

ನನ್ನ ಈ  ಮನವಿಗೆ ಪೂಜ್ಯ ಶ್ರೀ ಶಿವಾತ್ಮಾನಂದ ಪುರಿಯವರು   ಸ್ಪಂದಿಸಿ, ಸ್ವಾಮಿ ಹರ್ಷಾನಂದ ಜಿ. ಮಹಾರಾಜರ “ಪ್ರವಚನಮಾಲೆ – ಅಂತರಂಗದ ಅವಲೋಕನ: ಶಂಕರಾಚಾರ್ಯರ ಜೀವನಚರಿತ್ರೆ” (ಭಾಗ ೧ ರಿಂದ ೩) ಅನ್ನು ನನಗೆ ಕಳುಹಿಸಿ ಮಾರ್ಗದರ್ಶನ ನೀಡಿದರು. ಅದು ನನ್ನ ಜಿಜ್ಞಾಸೆಗೆ ಉತ್ತರದ ಮೊದಲ ಕಿರಣವಾಯಿತು.

ಆ ಪ್ರವಚನಮಾಲೆಯ ಪ್ರಾಸ್ತಾವಿಕ ಭಾಗದಲ್ಲಿಯೇ ಸ್ವಾಮಿ ಹರ್ಷಾನಂದ ಜಿ. ಮಹಾರಾಜರು ತಮ್ಮ ಮಾತನ್ನು ಮಹಾಭಾರತದ ಪ್ರಸಿದ್ಧ “ಯಕ್ಷಪ್ರಶ್ನೆ”ಯೊಂದಿಗೆ ಆರಂಭಿಸುತ್ತಾರೆ. ಯಕ್ಷನು ಧರ್ಮರಾಜನಿಗೆ ಕೇಳುವ ಪ್ರಶ್ನೆ — “ದಾರಿ ಯಾವುದು?” — ಮುಕ್ತಿಯ ದಾರಿ ಯಾವುದು ಎಂಬ ಆ ಒಂದು ಪ್ರಶ್ನೆಯೇ ನನ್ನ ಸಂದೇಹಕ್ಕೆ ಉತ್ತರದ ಮೊದಲ ಹೆಜ್ಜೆಯಂತೆ ನನಗೆ ಭಾಸವಾಯಿತು.

ನನ್ನ ಚಿಂತನೆ ಮತ್ತೊಮ್ಮೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅಗಾಧ ಸಮುದ್ರದ ಕಡೆಗೆ ಹರಿಯತೊಡಗಿತು. ಅದರ ಅರ್ಥವ್ಯಾಪ್ತಿ, ತತ್ತ್ವದ ಆಳ, ವ್ಯಾಖ್ಯಾನದ ಸೂಕ್ಷ್ಮತೆ ಮತ್ತು ಅದರ ಗುಹ್ಯಾರ್ಥವನ್ನು ಅರಸಬೇಕೆಂಬ ಆಂತರಿಕ ಪ್ರೇರಣೆ ಮತ್ತಷ್ಟು ಗಾಢವಾಯಿತು.

ಶಂಕರಾಚಾರ್ಯರು ಪ್ರತಿಪಾದಿಸಿದ ದಾರ್ಶನಿಕ ಚಿಂತನೆಯ ಹೃದಯಸಾರವೇ — “ಬ್ರಹ್ಮ ಸತ್ಯಂ, ಜಗತ್ ಮಿಥ್ಯ; ಜೀವೋ ಬ್ರಹ್ಮೈವ ನಾಪರ” ಎಂಬ ಮಹಾವಾಕ್ಯ. ಈ ಏಕವಾಕ್ಯವೇ ಅವರ ತತ್ತ್ವನಿರೂಪಣೆಯ ಪರಿಪೂರ್ಣ ಸಮಾಪ್ತಿ. ವೈಯಕ್ತಿಕ ಆತ್ಮವಾದ ಜೀವ, ಅವನು ಅನುಭವಿಸುವ ಜಗತ್ತು ಎಂಬ ಜಗತ್ ಮತ್ತು ಪರಮಸತ್ಯಸ್ವರೂಪವಾದ ಬ್ರಹ್ಮನ್ — ಇವುಗಳ ವಾಸ್ತವಿಕತೆಯನ್ನು ಒಂದೇ ಅದ್ವೈತ ದೃಷ್ಟಿಕೋನದಲ್ಲಿ ಏಕೀಕರಿಸುವ ಶಕ್ತಿ ಈ ತತ್ತ್ವದಲ್ಲಿದೆ. ಜೀವ ಮತ್ತು ಬ್ರಹ್ಮನ ನಡುವಿನ ಸಂಬಂಧವು ಸ್ವತಂತ್ರ ಸತ್ಯದ ಸಂಬಂಧವಲ್ಲ; ಅದು ಪರಮಸತ್ಯದ ಮೇಲೆ ನಿಂತ ಸಾಪೇಕ್ಷ ವಾಸ್ತವದ ಅನುಭವ, ಅಂದರೆ ಸತ್ಯ–ಮಿಥ್ಯಗಳ ನಡುವಿನ ಸಂಬಂಧ.

ಈ ತತ್ತ್ವವನ್ನು ಇನ್ನಷ್ಟು ಸ್ಪಷ್ಟಗೊಳಿಸುವಂತೆ, “ಜೀವೋ ಬ್ರಹ್ಮೈವ ನಾಪರ” ಎಂಬ ವಾಕ್ಯವು ವ್ಯಕ್ತಿಯೇ ಬ್ರಹ್ಮನಾಗಿದ್ದಾನೆ, ಅವನು ಬೇರೆ ಯಾರೂ ಅಲ್ಲ ಎಂಬ ಸತ್ಯವನ್ನು ಘೋಷಿಸುತ್ತದೆ. ಮೊದಲ ವಾಕ್ಯ ಬ್ರಹ್ಮನನ್ನೇ ಪರಮಸತ್ಯವೆಂದು ಸ್ಥಾಪಿಸಿದರೆ, ಎರಡನೆಯದು — “ಆ ಸತ್ಯವೇ ನೀನು” ಎಂಬ ಆತ್ಮಗುರುತನ್ನು ನೀಡುತ್ತದೆ. ಹೀಗೆ, ಪರಮಸತ್ಯವಾದ ಬ್ರಹ್ಮ, ಅನುಭವಿಸುವ ಜೀವ ಮತ್ತು ಅನುಭವದ ಕ್ಷೇತ್ರವಾದ ಜಗತ್ತು — ಈ ಮೂರೂ ತತ್ತ್ವದೃಷ್ಟಿಯಲ್ಲಿ ವಿಭಿನ್ನವಲ್ಲ; ಭೇದವು ಅಜ್ಞಾನದಿಂದ ಮಾತ್ರ ಕಾಣಿಸುತ್ತದೆ. ಜ್ಞಾನೋದಯವಾದಾಗ ಇವೆಲ್ಲವೂ ಒಂದೇ ಪರಮಸತ್ಯದಲ್ಲಿ ಲೀನವಾಗಿರುವುದೇ ಅದ್ವೈತದ ಸಾರ.

ಇಲ್ಲಿ ಉಲ್ಲೇಖಿಸಲ್ಪಡುವ ಮಿಥ್ಯ ಎಂಬ ತತ್ತ್ವವು, ಸಂಪೂರ್ಣ ಪರಮ ವಾಸ್ತವವಾದ ಬ್ರಹ್ಮನ ಹೊರತಾಗಿ, ಎರಡು ವಿಧದ ಸಾಪೇಕ್ಷ ವಾಸ್ತವಿಕತೆಗಳನ್ನು ಒಳಗೊಂಡಿದೆ: ವ್ಯವಹಾರಿಕ ಸತ್ಯ (Practical/Empirical Reality) ಮತ್ತು ಪ್ರತಿಭಾಸಿಕ ಸತ್ಯ(Illusory/Imagined Reality).  ವ್ಯವಹಾರಿಕ ಸತ್ಯವೆಂದರೆ, ಎಲ್ಲರಿಗೂ ಸಾಮಾನ್ಯವಾಗಿ ಅನುಭವವಾಗುವ ಜಗತ್ತು — ದೈನಂದಿನ ಕಾರ್ಯವ್ಯವಹಾರಗಳ ಮಟ್ಟಿನಲ್ಲಿ ನಿಜವೆಂದು ಕಾಣಿಸುವ ವಸ್ತುನಿಷ್ಠ ವಾಸ್ತವ. ಅದರ ವಿರುದ್ಧವಾಗಿ, ಪ್ರತಿಭಾಸಿಕ ಸತ್ಯವೆಂದರೆ, ಒಬ್ಬ ವ್ಯಕ್ತಿಯ ಮನಸ್ಸಿನ ತಪ್ಪು ಗ್ರಹಿಕೆಯಿಂದ ಮಾತ್ರ ಹುಟ್ಟುವ, ಇತರರಿಗೆ ಅಸ್ತಿತ್ವವಿಲ್ಲದ ವ್ಯಕ್ತಿನಿಷ್ಠ ಭಾಸ. ಉದಾಹರಣೆಗೆ, ನಾವು ಕಾಣುವ ಈ ಪ್ರಪಂಚ ವ್ಯವಹಾರಿಕ ಸತ್ಯವಾದರೆ, ಹಗ್ಗವನ್ನು ಹಾವು ಎಂದು ತಪ್ಪಾಗಿ ಕಾಣುವುದು ಪ್ರತಿಭಾಸಿಕ ಸತ್ಯ. ಈ ಎರಡೂ ಸ್ವತಂತ್ರ ಪರಮಸತ್ಯವಲ್ಲ; ಅವು ಅವಲಂಬಿತ ವಾಸ್ತವಗಳು, ಸಂಪೂರ್ಣ ಸತ್ಯದ ಆಶ್ರಯದಿಂದ ಮಾತ್ರ ಅಸ್ತಿತ್ವ ಹೊಂದುವ ಮಿಥ್ಯ.

ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧವನ್ನು ಸಮುದ್ರ ಮತ್ತು ಅಲೆಯ ಉಪಮಾನದ ಮೂಲಕ ಸುಲಭವಾಗಿ ಗ್ರಹಿಸಬಹುದು. ಅಲೆ ಎಂದರೆ ಸಮುದ್ರಕ್ಕೆ ನೀಡಿದ ಒಂದು ಹೆಸರು ಮತ್ತು ರೂಪ; ಅದರ ಅಸ್ತಿತ್ವವು ನೀರಿಗೆ ಅವಲಂಬಿತ, ಆದರೆ ನೀರಿನ ಅಸ್ತಿತ್ವಕ್ಕೆ ಅಲೆಯ ಅವಲಂಬನೆ ಇಲ್ಲ. ಅಲೆ ಮಿಥ್ಯ; ನೀರು ಸತ್ಯ. ಇದೇ ರೀತಿಯಾಗಿ, ಜಗತ್ತು ಬ್ರಹ್ಮನ ಮೇಲೆಯೇ ನಿಂತಿರುವ ಅವಲಂಬಿತ ವಾಸ್ತವ; ಬ್ರಹ್ಮನು ಮಾತ್ರ ಪರಿಪೂರ್ಣ ಸತ್ಯ. ಹಗ್ಗವಿಲ್ಲದೆ ಹಾವು ಕಾಣಿಸಿಕೊಳ್ಳದಂತೆ, ಬ್ರಹ್ಮನಿಲ್ಲದೆ ಜಗತ್ತಿನ ಅನುಭವವೂ ಸಾಧ್ಯವಿಲ್ಲ. ಏಕೆಂದರೆ ಮಿಥ್ಯವು ತನ್ನ ತಲಾಧಾರವಾಗಿರುವ ಪರಮಸತ್ಯವಿಲ್ಲದೆ ಸ್ವತಃ ಪ್ರತ್ಯಕ್ಷಗೊಳ್ಳುವ ಶಕ್ತಿಯನ್ನೇ ಹೊಂದಿಲ್ಲ.

ಅದ್ವೈತ ತತ್ತ್ವವನ್ನು ಆಳವಾಗಿ ಗ್ರಹಿಸಲು ಯತ್ನಿಸಿದಾಗ, ಅದೇ ತತ್ತ್ವವನ್ನು ಪ್ರತಿಪಾದಿಸಿದ ಶಂಕರಾಚಾರ್ಯರೇ ತಮ್ಮಿಂದಲೇ ರಚಿಸಿದ ಎಪ್ಪತ್ತೇಳು ಸ್ತೋತ್ರಗಳನ್ನು ಹೇಗೆ ಒಂದೇ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನನ್ನೊಳಗೆ ಸಹಜವಾಗಿ ಉದಯಿಸಿತು. ನಿರಾಕಾರವಾದ ಅದ್ವೈತದ ತತ್ತ್ವ ಮತ್ತು ಸ್ತೋತ್ರಗಳಲ್ಲಿ ಪ್ರಕಾಶಿಸುವ ಸಾಕಾರ ಭಕ್ತಿಭಾವ — ಈ ಎರಡನ್ನೂ ಒಂದೇ ತಳಹದಿಯಲ್ಲಿ ಪ್ರತಿಷ್ಠಾಪಿಸಲು ನನ್ನ ಪ್ರಯತ್ನ ಆರಂಭದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಈ ಗ್ರಂಥದ ಕನ್ನಡ ಅನುವಾದಕರಾದ ಡಾ. ಬಿ.ಜೆ. ರಂಗನಾಥ ಅವರ ವಿವರಣೆ ನನ್ನ ಮನಸ್ಸಿಗೆ ಒಂದು ದೀಪದಂತೆ ಬೆಳಕು ತಂದಿತು.

ಅವರ ಅಭಿಪ್ರಾಯದಂತೆ, ಪರಮಾತ್ಮನು ನಾಮರೂಪಗಳಿಂದ ಅತೀತನಾಗಿದ್ದು, ದೇಹರಹಿತನಾಗಿ, ಎಲ್ಲ ಬಾಹ್ಯ–ಆಂತರ ಭೇದಗಳನ್ನು ಮೀರಿ ಅಪರೋಕ್ಷ ಬ್ರಹ್ಮಸ್ವರೂಪನಾಗಿ ಅಸ್ತಿತ್ವದಲ್ಲಿದ್ದಾನೆ. ಅವನು ನಿತ್ಯಜ್ಞಾನಮಯನಾಗಿರುವ ವಿಜ್ಞಾನಘನ; ಆಕಾಶದಂತೆ ಪರಿಪೂರ್ಣ, ಅಶೇಷ ಮತ್ತು ಅವ್ಯಕ್ತ ಪರಮವಸ್ತು. ಈ ಬ್ರಹ್ಮನು ಸ್ಥೂಲವೂ ಅಲ್ಲ, ಸೂಕ್ಷ್ಮವೂ ಅಲ್ಲ; ಆದರೆ “ಸತ್ಯಂ–ಜ್ಞಾನಂ–ಅನಂತಂ ಬ್ರಹ್ಮ” ಎಂಬ ಘೋಷಣೆಯ ಮೇಲೆ ನಿಂತಿರುವ ಪರಮಸತ್ಯ. ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ ಎಂಬ ಮಹಾವಾಕ್ಯಗಳು, ಆತ್ಮ ಮತ್ತು ಬ್ರಹ್ಮನ ಏಕತೆಯನ್ನು ಒಳಗೂ ಹೊರಗೂ, ವ್ಯಕ್ತಿಯಲ್ಲಿಯೂ ವಿಶ್ವದಲ್ಲಿಯೂ ಒಂದೇ ರೀತಿಯಲ್ಲಿ ಘೋಷಿಸುತ್ತವೆ. ಆತ್ಮವೇ ಪರಮಾತ್ಮ, ಜೀವನೇ ಬ್ರಹ್ಮ — ಇದೇ ಅದ್ವೈತದ ಮೂಲಸಂಧಾನ.

ಆದರೆ, ಈ ನಿರಾಕಾರ ಬ್ರಹ್ಮತತ್ತ್ವವನ್ನು ಅನುಭವದ ಮಟ್ಟಕ್ಕೆ ತಲುಪಿಸಲು, ಜಿಜ್ಞಾಸುವಿನ ಮನಸ್ಸಿಗೆ ರೂಪದ ಆಧಾರವೂ ಅಗತ್ಯವೆಂದು ಶಂಕರರು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಸಾಧನೆಯ ಕ್ರಮ ಹೀಗಿದೆ:
ಕರ್ಮದಿಂದ ಭಕ್ತಿ, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಮುಕ್ತಿ.
ಇವೇ ಸಂಸಾರಬಂಧನದಿಂದ ವಿಮುಕ್ತಿಗೆ ಕರೆದೊಯ್ಯುವ ಕ್ರಮಬದ್ಧ ಹಾದಿ.

ಜ್ಞಾನಸೋಪಾನವನ್ನು ಏರಲು ಸಾಧಕನು ಕರ್ಮದಿಂದ ಪ್ರಾರಂಭಿಸಿ, ಭಕ್ತಿಯ ಮೂಲಕ ಜ್ಞಾನಕ್ಕೆ, ಜ್ಞಾನದಿಂದ ಮೋಕ್ಷಕ್ಕೆ ಸಾಗಬೇಕು. ವೇದೋಕ್ತ ಕರ್ಮವನ್ನು ನಿಷ್ಠೆಯಿಂದ ಆಚರಿಸದೆ ಭಕ್ತಿ ಶುದ್ಧವಾಗುವುದಿಲ್ಲ; ಭಕ್ತಿ ಶುದ್ಧವಾಗದೆ ಜ್ಞಾನೋದಯ ಸಂಭವಿಸುವುದಿಲ್ಲ; ಮತ್ತು ಜ್ಞಾನೋದಯವಿಲ್ಲದೆ ಮುಕ್ತಿಯ ಅನುಭವ ಸಾಧ್ಯವಲ್ಲ. ಭಕ್ತಿಯ ಹಂತಗಳಲ್ಲಿ ಪರಮಾತ್ಮನು ಭಕ್ತನಿಗೆ ಸಾಕಾರರೂಪದಲ್ಲಿ ಗೋಚರಿಸುತ್ತಾನೆ — ಗಣಪತಿಯಾಗಿ, ಶಿವನಾಗಿ, ವಿಷ್ಣುವಾಗಿ ಅಥವಾ ದೇವಿಯಾಗಿ. ಈ ರೂಪಾನುಭವಕ್ಕೆ, ದೇವರನ್ನು ವಿವಿಧ ಹಂತಗಳಲ್ಲಿ ದೃಷ್ಟಿಸಲು, ದೇವತಾ ಸ್ತೋತ್ರಗಳೇ ಸಾಧಕನಿಗೆ ಸೇತುವೆಯೂ ದಾರಿದೀಪವೂ ಆಗುತ್ತವೆ.

ಅದರಲ್ಲೇ ಶಂಕರಭಗವತ್ಪಾದರು, ಅದ್ವೈತ ತತ್ತ್ವವನ್ನು ಬೋಧಿಸಿದರೂ, ಭಕ್ತನ ಸಾಧನೆಗೆ ಅನುಕೂಲವಾಗುವಂತೆ ಅನೇಕ ಸ್ತೋತ್ರಗಳನ್ನು ರಚಿಸಿದರು. ಮನಸ್ಸನ್ನು ರೂಪದಿಂದ ನಿರಾಕಾರದತ್ತ ನಿಧಾನವಾಗಿ ಕೊಂಡೊಯ್ಯುವ, ಮಗು ತಾಯಿಯ ಕೈ ಹಿಡಿದು ನಡೆಯುವಂತೆ ಹಿಡಿದು ನಡೆಸುವ ಕರುಣಾಮಯ ಸಾಧನವೇ ಈ ಸ್ತೋತ್ರಗಳು. ಇಲ್ಲಿ ಅದ್ವೈತ ಮತ್ತು ಸ್ತೋತ್ರಗಳ ನಡುವೆ ಯಾವುದೇ ವಿರೋಧವಿಲ್ಲ; ಅದು ಸಾಧನೆಯ ಪಥದಲ್ಲಿ ಕ್ರಮಬದ್ಧವಾದ ಪ್ರಗತಿ — ರೂಪದಲ್ಲಿ ಆರಂಭಿಸಿ, ನಿರಾಕಾರದಲ್ಲಿ ಲಯವಾಗುವ ಆಂತರ್ಯಾತ್ರೆ.

ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಶಂಕರಾಚಾರ್ಯರು ಇಡೀ ಭಾರತಖಂಡವನ್ನು ಎರಡು ಬಾರಿ ವಿಜಯಯಾತ್ರೆಗೆ ಒಳಪಡಿಸಿದರು. ಈ ಮಹಾಯಾತ್ರೆಗಳ ಸಂದರ್ಭದಲ್ಲಿ ಅವರು ಅನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿ ಪ್ರತಿಷ್ಠಿತ ದೇವತೆಗಳನ್ನು ಸ್ತುತಿಸಿ ಸ್ತೋತ್ರಗಳನ್ನು ರಚಿಸಿದರು. ಈ ಸ್ತೋತ್ರಗಳಲ್ಲಿ ಕೇವಲ ಅಲಂಕಾರವಲ್ಲ; ಅವು ಭಕ್ತನ ಮನಸ್ಸಿನಲ್ಲಿ ಭಾವೋದ್ಧೀಪನ ಮೂಡಿಸುವ ಶಕ್ತಿಸಾಧನಗಳು. ಶಂಕರರ ಸ್ತೋತ್ರಗಳಲ್ಲಿ ಸುಲಲಿತ ಸಾಹಿತ್ಯಶೈಲಿ, ಕವಿತ್ವದ ನಿಪುಣತೆ, ಸಂಸ್ಕೃತಭಾಷೆಯ ಚಾತುರ್ಯ, ಪ್ರಕೃತಿಯ ದಿವ್ಯ ಸೌಂದರ್ಯ, ತಾಯಿಯ ಸೌಮ್ಯ ಮಮತೆ ಹಾಗೂ ಕವಿಯ ಸೂಕ್ಷ್ಮ ಪ್ರಯೋಗಗಳು ದಿವ್ಯಾನುರಣನದಂತೆ ಆಪ್ತವಾಗಿ ಪ್ರತಿಧ್ವನಿಸುತ್ತವೆ. ಅವುಗಳನ್ನು ಭಕ್ತಿಯಿಂದ ಪಠಿಸಿದಾಗ, ಭಕ್ತನಿಗೆ ತಾನೇ ಆ ದೇವತೆಯ ಸಾನ್ನಿಧ್ಯದಲ್ಲಿರುವಂತೆ, ದೇವರ ಸಾನ್ನಿಧ್ಯವನ್ನು ನೇರವಾಗಿ ಅನುಭವಿಸುವಂತೆ, ಮನಸ್ಸೇ ದೇಗುಲವಾಗಿ ಪರಿವರ್ತಿತವಾಗುತ್ತದೆ.

ಶಂಕರಭಗವತ್ಪಾದರು ರಚಿಸಿದ ಸ್ತೋತ್ರಗಳಲ್ಲಿ ಭಕ್ತಿ ಪ್ರಧಾನ ಸ್ವರವಾಗಿದ್ದರೂ, ಅವುಗಳ ಆಂತರಾಳದಲ್ಲಿ ಅದ್ವೈತದ ತತ್ತ್ವಸೂತ್ರಗಳು ಅತಿ ಸೂಕ್ಷ್ಮವಾಗಿ ಜೋಡಿಸಿಕೊಂಡಿವೆ. ಸ್ತೋತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಕವಿತ್ವದ ಮಧ್ಯೆ ತತ್ತ್ವಜ್ಯೋತಿ ಹೇಗೆ ಮಿನುಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಕ್ತಿ ರೂಪದ ನದಿಯಲ್ಲಿ ಹರಿಯುವ ಜ್ಞಾನಸ್ವರೂಪದ ಪ್ರವಾಹ ಸ್ತೋತ್ರಗಳಲ್ಲೇ ಅದೃಶ್ಯವಾಗಿ ಹರಡಿಕೊಂಡಿದೆ. ಆದ್ದರಿಂದ, ಶಂಕರರ ತತ್ತ್ವವನ್ನು ಗ್ರಹಿಸಲು ಅವರ ಸ್ತೋತ್ರಗಳು ಕೇವಲ ಭಕ್ತಿಪಥದ ಅಭ್ಯಾಸವಲ್ಲ; ಅವು ನಿರಾಕಾರ ತತ್ತ್ವದತ್ತ ಕೊಂಡೊಯ್ಯುವ ದಾರಿದೀಪವೂ ಆಗಿವೆ.

ಹೀಗೆ, ಶಂಕರಭಗವತ್ಪಾದರು ಪ್ರತಿಪಾದಿಸಿದ ಅದ್ವೈತ ತತ್ತ್ವ ಮತ್ತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣುವ ಸಾಕಾರ ಭಕ್ತಿ — ಎರಡೂ ಪರಸ್ಪರ ವಿರೋಧಿಗಳು ಅಲ್ಲ. ಅವು ಸಾಧನೆಯ ಪಥದಲ್ಲಿ ಎರಡು ಹಂತಗಳು, ಎರಡು ಶಿಖರಗಳು. ಭಕ್ತಿ ರೂಪದ ಮೆಟ್ಟಿಲು ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ; ಜ್ಞಾನವು ಮುಕ್ತಿಗೆ ಕರೆದೊಯ್ಯುತ್ತದೆ; ಮುಕ್ತಿ ಪರಬ್ರಹ್ಮದ ಏಕತ್ವದಲ್ಲಿ ಲಯಗೊಳ್ಳುತ್ತದೆ. ನಿರಾಕಾರ ತತ್ತ್ವದತ್ತ ಸಾಗಲು ರೂಪಸಾಧನೆಯ ಅವಶ್ಯಕತೆ ಮನೋದೈಹಿಕವಾಗಿಯೂ ದಾರ್ಶನಿಕವಾಗಿಯೂ ಸಹಜ. ಅದಕ್ಕಾಗಿ ಶಂಕರರು ದೇವರ ರೂಪಗಳನ್ನೂ, ಸ್ತೋತ್ರಗಳನ್ನೂ ನಿರ್ಲಕ್ಷಿಸದೆ, ಅವುಗಳನ್ನು ಸಾಧನೆಯ ಅವಿಭಾಜ್ಯ ಅಂಗಗಳಾಗಿ ಪ್ರತಿಷ್ಠಾಪಿಸಿದರು.

ಭಕ್ತಿ ಮತ್ತು ಜ್ಞಾನ, ರೂಪ ಮತ್ತು ನಿರಾಕಾರ, ಸಾಧಕ ಮತ್ತು ಸಾಧ್ಯ — ಇವೆಲ್ಲವೂ ಅಂತಿಮವಾಗಿ ಒಂದೇ ಪರಬ್ರಹ್ಮತತ್ತ್ವದಲ್ಲಿ ಶಾಂತಿಯಾಗುತ್ತವೆ. ಸ್ತೋತ್ರ ಮತ್ತು ಅದ್ವೈತ ಎರಡೂ ವಿಭಿನ್ನ ಮಾರ್ಗಗಳಲ್ಲ; ಅವು ಒಂದೇ ಗಮ್ಯವನ್ನು ತಲುಪಿಸುವ ವಿಭಿನ್ನ ಸೇತುವೆಗಳು.

ದೇವರ ಸ್ತೋತ್ರಗಳಲ್ಲಿ ಭಕ್ತನ ಹೃದಯ ಹೊಮ್ಮುತ್ತದೆ; ಅದ್ವೈತದಲ್ಲಿ ಆತ್ಮಜಾಗೃತಿ ಬೆಳಗುತ್ತದೆ.

*******