ಡಾ. ಎಸ್. ವಿ. ಅಯ್ಯನಗೌಡರ.
ಪೀಠಿಕೆ
ಕನ್ನಡ ಸಾಹಿತ್ಯದಲ್ಲಿ ವಿನೂತನ ಹಾಗೂ ಪ್ರಯೋಗ ಯುಗ ನಿರ್ಮಿಸಿದ ನಿರ್ಮಾತೃಗಳಲ್ಲಿ ಶಿವಶರಣರ ಹಿರಿಮೆ-ಅವರಿಂದ ರಚಿತವಾದ ಸಾಹಿತ್ಯದ ಹಿರಿಮೆ- ಮಹೋನ್ನತವಾದುದು. ಮನುಕುಲವು ಹೊಂದಬಹುದಾದ ಅತ್ಯುನ್ನತ ನಿಲುವನ್ನು ಹೊಂದಿದ ಶರಣರು ಮತ, ಕುಲ, ವರ್ಣ, ಜಾತಿ, ವಯಸ್ಸು ಅಂತಸ್ತುಗಳಲ್ಲಿ ಮೇಲು ಕೀಳೆನ್ನದೆ ಸರ್ವರೂ ಸಮಾನರು ಎಂಬ ಧೋರಣೆಯಿಂದ ಬದುಕಿ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವವನ್ನು ಎತ್ತಿ ಹಿಡಿದು, ಅದರಂತೆ ಮುಂದಿನವರು ಬದುಕಲೆಂಬಮಾರ್ಗ ನಿರ್ಮಿಸಿದವರು; ಅವರ ಮಾರ್ಗವೇ ಶರಣ ಮಾರ್ಗ- ಅನುಭಾವಮಾರ್ಗ- ಶಿವಮಾರ್ಗ-ಪ್ರಸಾದಮಾರ್ಗ. ಬಸವಾದಿ ಪ್ರಮಥರಿಂದ ಉದ್ದಂಡವಾಗಿ ಮುನ್ನಡೆಯುತ್ತಿರುವ ಈ ಪರಂಪರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪ್ರಶಿಷ್ಯರಲ್ಲಿ, ಷಣ್ಮುಖ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ ಮೊದಲಾದ ಕೈವಲ್ಯಕಾರರಲ್ಲಿ ಸಾಗಿ ಮೈಲಾರ ಶಿವಯೋಗಿ-ಮುಂತಾದವರ ಭಾವನೆಗಳಲ್ಲಿ ಪಸರಿಸಿ, ಇಂದಿನವರೆಗೂ ಹೆಜ್ಜೆಹಾಕುತ್ತಲಿದೆ. ಇಂಥ ಶರಣ-ಅನುಭಾವಿಗಳಿಂದ ರಚಿತವಾದ ಸಾಹಿತ್ಯ ಮೂರು ವಿಧದಲ್ಲಿ ಲಭ್ಯವಾಗುವುದು.
( ೧. ವಚನ ೨. ಸ್ವರವಚನ ೩. ಇತರ ಸಾಹಿತ್ಯ
೧. ವಚನ:
‘ವಚ’ (To speak) ಎಂಬ ಶಬ್ದದಿಂದ ನಿಷ್ಪನ್ನಗೊಂಡ ಈ ಪದ ಅನೇಕ ಸಂದರ್ಭಜನ್ಯವಾದ ಅರ್ಥವ್ಯಾಪ್ತಿ ಪಡೆದ ರಚನೆಯಾಗಿದೆ. ಭಾಷೆ-ರೂಪ- ಅನುಭಾವ-ನಡೆನುಡಿ, ಅಭಿವ್ಯಕ್ತಿ-ಆಣೆ (Oath), ಸೂಳ್ನುಡಿ ಮುಂತಾದ ಅರ್ಥವ್ಯಾಪ್ತಿಯಲ್ಲಿ ಬಳಕೆಗೊಂಡಿದೆ. ಚನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ವಚನ-ರಚನೆ-ಅನುಭಾವ ಕುರಿತು ವ್ಯಾಖ್ಯೆ ನೀಡಿದ್ದಾರೆ. ವಚನ ಎಂದರೆ ʼʼಆತ್ಮತೃಪ್ತಿಯ ನರಿಯ ಬಲ್ಲಡೆ ವಚನʼʼ ಎಂದು ಅರ್ಥೈಸಿದ್ದುಂಟು. ಕೆಲ ವಿದ್ವಾಂಸರು ಗುರುತಿಸಿದಂತೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಒಂದು ವಿಶಿಷ್ಟ ರೂಪ (Form) ಎಂದು ಹೇಳಿದ್ದಾರೆ. ಇನ್ನು ಕೆಲವೆಡೆ “ಶುದ್ಧ ನಡತೆಯವನ ನೇರ ನುಡಿʼʼ – ವಚನ ಎಂದು ಗುರುತಿಸಿರುವರು. ವಚನವನ್ನು ತ್ರಿಪದಿ, ಗೀತೆಗಳಿಗೂ ಅನ್ವಯಿಸಿ ʼʼಸರ್ವಜ್ಞನ ವಚನ (ತ್ರಿಪದಿ), ಷಡಕ್ಷರಿಯ ವಚನ, ಕೋಡೆಕಲ್ಲು ಬಸವಣ್ಣನ ವಚನ, ಗುರುಕರುಣ ತ್ರಿಪದಿ ವಚನ ಪ್ರಾರಂಭʼʼ ಎಂಬ ಪ್ರಯೋಗಗಳು ನಡೆ-ನುಡಿಯನ್ನೇ ಅತಿಕರಿಸಿಕೊಂಡವರ ಬದುಕು ಮತ್ತು ಅದರಿಂದ ಅಭಿವ್ಯಕ್ತಗೊಂಡ ಸಾಹಿತ್ಯ ಎಂಬರ್ಥದಲ್ಲಿ ಬಳಸಿದುದು ಲಭ್ಯವಾಗುತ್ತದೆ. ‘ವಚನʼ ಎಂಬುದು ಗದ್ಯ ಪದ್ಯ ಮಾದರಿಗೆ, ನಡೆ-ನುಡಿಗೆ ಅಭಿವ್ಯಕ್ತಿಗೆ, ಸಾಹಿತ್ಯದ ಭಾಷೆ-ರೂಪಗಳಿಗೆ, ಚಳುವಳಿಗೆ ಅನ್ವಯವಾಗುವುದು. ವಿವಿಧ ಶಿವಶರಣ-ಶರಣೆಯರು ಬಿಡಿಬಿಡಿಯಾದ ಮುಕ್ತಕಗಳನ್ನು ತಮ್ಮ ತಮ್ಮ ಆರಾಧ್ಯ ದೈವದ ಅಂಕಿತದೊಂದಿಗೆ ಮುಕ್ತ ಛಂದಸ್ಸಿನಲ್ಲಿ ರಚಿಸಿದ ಕೃತಿಗಳೇ ಈ ವಚನಗಳು. ಅವರ ಆತ್ಮ ಮಥನದಿಂದ ಅನುಭಾವದಿಂದ ಹೊರಹೊಮ್ಮಿದ ಸಾಹಿತ್ಯವಿದು. ಆರಂಭದ ಜೇಡರ ದಾಸಿಮಯ್ಯನ ವಚನಗಳು ಕಿರಿದಾಗಿದ್ದು ತ್ರಿಪದಿಯಂತಿರುವುದನ್ನು ವಿದ್ವಾಂಸರು ಗುರುತಿಸಿದುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ವಚನಗಳು ಸರಳ-ಬೆಡಗು ಶಾಸ್ತ್ರವಚನಗಳನ್ನು ಪ್ರತಿನಿಧಿಸುವ ವಿವಿಧ ಪ್ರಕಾರಗಳಾಗಿ ಗುರುತಿಸಲ್ಪಡುತ್ತವೆ.
೨. ಸ್ವರವಚನ
ಕನ್ನಡ ಸಾಹಿತ್ಯವು ಅನೇಕ ಹೊಸ ಪರಿಭಾಷೆಗಳನ್ನು ಹೊತ್ತು ಬಂದಿದೆ, ಬರುತ್ತಲಿದೆ. ಅಂಥವುಗಳಲ್ಲಿ ‘ಸ್ವರವಚನ ಪರಿಭಾಷೆ ಒಂದಾಗಿದೆ. ಕನ್ನಡ ಸಾಹಿತ್ಯದ ಅಪ್ರಕಟಿತ-ಪ್ರಕಟಿತ ಸಾಹಿತ್ಯದ ಹುಲುಸಾದ ಜನಪದ ಸಾಹಿತ್ಯಪ್ರಕಾರ ಸ್ವರವಚನ ಸಾಹಿತ್ಯ. ಇದು ‘ಗೀತ’ ‘ಹಾಡು’ ‘ಪದ’ ಎಂಬ ಪದಗಳಿಗೆ ಪರ್ಯಾಯವಾಚಿಯಾಗಿ ಬಳಕೆಗೊಳ್ಳುತ್ತ ಆಯಾ ಕಾಲಘಟ್ಟದ ಸಂದರ್ಭಗಳಲ್ಲಿ ನಾಮ ನಿರ್ದೇಶನದಿಂದ ಬಳಕೆಗೊಂಡಿದೆ. ‘ಸ್ವರವಚನ’ ‘ಸ್ವರಪದ’ ‘ಪದ ವಚನ’ ‘ವಚನದ ಪದಂಗಳು ʼಬೆಡಗಿನ ಸ್ವರ ಪದಂಗಳು’, ‘ಸ್ಥಲ ನಿರ್ದೇಶನ ಪದ’- ಎಂಬಂಥ ಸಂದರ್ಭ ಜನ್ಯ ಪದಗಳು ವಿವಿಧ ಸಂದರ್ಭಗಳಲ್ಲಿ, ವಿವಿಧ ಸ್ವರವಚನಕಾರರಿಂದ ಅಭಿವ್ಯಕ್ತಗೊಂಡು ಜನಪ್ರಿಯ ಸಾಹಿತ್ಯಪ್ರಕಾರವಾಗಿ ಬೆಳೆದು ನಿಂತಿದೆ. ಭಾಷೆ ಮತ್ತು ಗೇಯ ಮಾಧ್ಯಮಗಳೇ ಪ್ರಮುಖ ಗುರಿಯಾದ ಇವನ್ನು ಶರಣರು -ದಾಸರು (ಕೀರ್ತನೆ) ಕೈವಲ್ಯಕಾರರು-ಅನುಭಾವಿಗಳು-ಮುಂತಾದ ವಾಗ್ಮೇಯಕಾರರು ಇವುಗಳ ವಾಹಕರಾಗಿ ನಿಂತಿದ್ದಾರೆ. ಮುಂದೆ ಬಂದ ಸಂಕಲನ ಸಂಪಾದನಾಕಾರರು ವಿವಿಧ ಸ್ವರವಚನಕಾರರ ಪದಗಳನ್ನು ಬಳಸಿಕೊಂಡಿದ್ದಾರೆ; ಟೀಕೆ ಬರೆದು ಅರ್ಥೈಸಿದ್ದಾರೆ. ತತ್ವಪದಕಾರರು- ಕೈವಲ್ಯಕಾರರು- ವಾಗ್ಮೇಯಕಾರರು -ಸ್ವರವಚನಕಾರರು-ಕೀರ್ತನಕಾರರು ಅವರನ್ನು ಗುರುತಿಸಿ, ಶತಮಾನಗಳಡಿಯಲ್ಲಿ ವಿಭಜಿಸಿ ಅಧ್ಯಯನ ನಡೆಸಿದ್ದು ನಡೆಸುತ್ತಿರುವುದು ಗಮನಾರ್ಹ ಸಂಗತಿಗಳಾಗಿವೆ. ಇಂಥ ಸ್ವರವಚನ ಸಾಹಿತ್ಯದ ಲಕ್ಷಣ-ಸ್ವರೂಪ- ಉದ್ದೇಶ-ಆಶಯಗಳನ್ನು ಹೀಗೆ ಗುರುತಿಸಬಹುದು:
- ʼಸ್ವರವಚನ’ ಎಂದರೆ ನಾಲ್ಕಡಿಗಳಿಂದ ಒಪ್ಪಲ್ಪಟ್ಟ ವಚನಂಗಳು ಎಂದು ನೂರೊಂದು ಸ್ಥಲ ಟೀಕೆಯಲ್ಲಿ ಟೀಕಾರ್ಥ ಬರೆಯುತ್ತಾನೆ- ಶ್ರೀ ಗಿರೀಂದ್ರ. ಪ್ರತಿಯೊಂದು ಪದಗಳ ತಲೆಬರಹದಡಿಯಲ್ಲಿ ರಾಗ-ತಾಳಗಳ ನಿರ್ದೇಶನಗಳಿವೆ (ಕೆಲವು ಹಾಡುಗಳಿಗೆ ವಿರಳವಾಗಿ ತಾಳ ನಿರ್ದೇಶನ ಉಂಟು) ಪ್ರಾದೇಶಿಕ ವಿಭಿನ್ನತೆಯಲ್ಲಿ ವಿವಿಧ ತಾಳ ನಿರ್ದೇಶನಗಳು ಒಂದೇ ಹಾಡಿಗೆ ಲಭ್ಯ . ಉದಾಹರಣೆಗೆ ತಾಳ-ರೂಪಕ-ಎಂದಿದ್ದ ಒಂದೇ ಹಾಡಿಗೆ ಪರಾಯವಾಗಿ ಝಂಪೆ, ಅಟ್ಟಹಾಸ ಎಂದು ಸೂಚಿಸಿದ ಉದಾಹರಣೆಗಳಿವೆ.
- ಸ್ವರವಚನಗಳು ಪಲ್ಲವಿ ಅನುಪಲ್ಲವಿಯಿಂದ ಕೂಡಿವೆ. ಶ್ರೀ ಗಿರೀಂದ್ರ ‘ಪಲ್ಲವಿ’ ಎಂಬ ಪದಕ್ಕೆ ʼʼಮುಂದೆ ಬಹ ಪದಗಳ ಅರ್ಥಾಭಿಪ್ರಾಯಂಗಳನ್ನು ಪದಾಂತ್ಯ ಪರಿಯಂತರ ಸೂಚನಾರ್ಥವಾಗಿ ವೊಳಕೊಂಡೊಪ್ಪುವದೀಗ ಪಲ್ಲವ’ ಎಂದು ಅರ್ಥೈಸಿದ್ದುಂಟು. ಈ ‘ಪಲ್ಲವಿ’ ಗಳಿಗೆ ಒಂದು ಸಾಲಿನಿಂದ ನಾಲೈದು ಸಾಲುಗಳವರೆಗೆ ವ್ಯಾಪ್ತಿ ಇದೆ. ಎರಡು ಚರಣಗಳ ಪಲ್ಲವಿ ಬೆಳೆವ ವೃಕ್ಷವನ್ನು ಗರ್ಭಿಕರಿಸಿಕೊಂಡಿರುವಂತೆ ಸಮಗ್ರ ಪದ್ಯದ ಭಾವವನ್ನು ಹುದುಗಿಸಿಕೊಂಡಿದೆ.
- ಹಾಡಿನ ಕೊನೆಯಲ್ಲಿ ಅಂಕಿತ ರೂಪದ ಮುದ್ರಿಕೆ ಇರುವುದು ಉದಾ: ಸೋಮನಾಥ, ಗುಹೇಶ್ವರ, ಚನ್ನಮಲ್ಲಿಕಾರ್ಜುನ-ಚೆನ್ನವೀರ ಇತ್ಯಾದಿ ೫ ಕನಿಷ್ಟ ಮೂರು ನುಡಿಯಿಂದ ೩೦-೩೫ ನುಡಿಗಳವರೆಗೆ (ಕೆಲವೆಡೆ ಮಿಕ್ಕಿ) ಒಂದೊಂದು ಪದ್ಯದ ವ್ಯಾಪ್ತಿ ಇದೆ.
- ಪ್ರಾಚೀನ ಸ್ವರವಚನವಾದ (ಲಭ್ಯ) ಸಕಳೇಶ ಮಾದರಸನ ಸ್ವರ ವಚನ ರಾಗ-ಶಂಕರಾಭರಣದಿಂದ ಕೂಡಿದ್ದು ಅದರಲ್ಲಿ ʼʼಕೈವಲ್ಯಕ್ಕೆ ದೃಷ್ಟವಾದ ಹೆಮ್ಮರನೇ..ʼ’ ಎಂಬ ಪದ ಪ್ರಯೋಗಗೊಂಡಿದ್ದು ಕೈವಲ್ಯ ಸಾಹಿತ್ಯದ ಮೂಲಕ್ಕೆ ಇದು ಪ್ರಚೋದನೆ ನೀಡಿದಂತಿದೆ.
- ಷಟ್ಪದಿಯಲ್ಲಿ ರಚನೆಗೊಂಡ ಸ್ವರವಚನಗಳ ಆರಂಭದಲ್ಲಿ ಪಲ್ಲವಿಯ ಬದಲಾಗಿ ʼʼಸೂಚನೆʼʼ ಎಂಬ ಪ್ರಯೋಗ ಬಳಕೆಗೊಂಡಿದೆ.
- .ಶಿವದಾಸರ ಗೀತೆಗಳು-ಹರಿದಾಸರ ಕೀರ್ತನೆಗಳು-ಕೈವಲ್ಯಕಾರರ ಪದಗಳು ಸ್ವರವಚನದ ಬೆಳವಣಿಗೆಯ ಘಟ್ಟದ ವಿವಿಧ ಮುಖಗಳಾಗಿವೆ.
- ಶರಣರ ಪದಗಳು ಕನ್ನಡದ ಮೊದಲ ಕೀರ್ತನೆಗಳು,
- ಸ್ವರವಚನಗಳಲ್ಲಿ ಅನುಕರಣೆ ಕಂಡುಬರುವುದು.
- .ಮಾತ್ರಾ ಛಂದಸ್ಸು ಅಂಶಛಂದಸ್ಸುಗಳ ಮಿಶ್ರಣದಿಂದ ಕೂಡಿದ ಇವು ದೇಸಿ ಸಾಹಿತ್ಯದ ಛಂದೋರೂಪಗಳಾದ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ, ಕಿರುಸೀಸ-ಬಳಸಿಕೊಂಡಿವೆ. ಉತ್ಸಾಹ-ಮಂದಾನಿಲ-ಲಲಿತ ಲಯಗಳನ್ನು ದುಡಿಸಿಕೊಂಡುದುಂಟು.
- ವೃತ್ತಶ್ಲೋಕ-ಕಂದ ಮಾದರಿಗಳು ಚೌಪದಿಯಲ್ಲಿದ್ದು ಗಣಪರಿವೃತ್ತಿ ಅವುಗಳಲ್ಲಿ ಕಾಣುವುದು.
- ಬೆಡಗಿನ ಸ್ವರಪದಗಳು, ಕಾಲಜ್ಞಾನ, ಕಾರಣಿಕ, ಕಣಿ ಸ್ವರೂಪಗಳಲ್ಲಿಯೂ ಲಭ್ಯ,
- ಕೆಲವು ಸ್ವರವಚನ ಕೃತಿಗಳು ವಿವಿಧ ಸ್ಥಲಗಳಡಿಯಲ್ಲಿ ವಿಭಜನೆಗೊಂಡಿವೆ.
- ಸಾಹಿತ್ಯ- ಸಂಗೀತ-ತತ್ತ್ವಗಳ ಮುಪ್ಪರಿಯಿಂದ ಕೂಡಿಕೊಂಡಿವೆ.
- ಅನೇಕ ಜಾನಪದ ಸಾಹಿತ್ಯ ಪ್ರಕಾರಗಳು, ಸ್ವರವಚನಗಳ ಮೂಲಕ ಸಾಹಿತ್ಯ ವೇದಿಕೆಯನ್ನೇರಿವೆ. ಉದಾ:- ಪರಾಕು, ಲಾಲಿಕಣಿ ಚಂದಮಾಮ, ಕೋಲುಪದ, ಹೋಳಿಪದ, ದುಂದುಮೆ, ಬುಡಬುಡಕ್ಯಾ ಮುಂತಾದವು.
- ಸ್ವರವಚನಗಳನ್ನು ಸ್ತುತಿ-ಪೂಜೆ-ಗೋಷ್ಠಿ ಸಂದರ್ಭಗಳಲ್ಲಿ ಹಾಡುತ್ತಲಿದ್ದ ಉಲ್ಲೇಖವಿದೆ.
- ಭಜನೆ-ಸಭೆ-ಸಮಾರಂಭಗಳಲ್ಲಿ-ಮಠಮಾನ್ಯಗಳಲ್ಲಿ ಇವು ಜನಸಮೂಹದಲ್ಲಿ ಹೆಚ್ಚು ಪ್ರಚುರತೆ ಪಡೆದಿವೆ.
- ಪ್ರಾಸ, ಅನುಪ್ರಾಸಗಳ ಜೋಡಣೆ ಇವುಗಳಲ್ಲಿದೆ.
- .ಕೀರ್ತನೆ, ಸ್ವರಪದ, ಸ್ವರವಚನಗಳು ಕರ್ನಾಟಕ ಸಂಗೀತದ ಪ್ರತಿನಿಧಿಗಳಾಗಿವೆ; ಗಮಕ ಮತ್ತು ಪ್ರವಚನಕ್ಕೆ ಸಹಕಾರಿಗಳು.
- ನೀತಿಬೋಧೆ-ತತ್ವನಿರೂಪಣೆ ಇವುಗಳ ಪ್ರಮುಖ ಗುರಿ.
- ಹಾಡುಗಬ್ಬಗಳೆಂದು ಪ್ರಸಿದ್ಧಿಪಡೆದ ಇವು ಜಾತಿ-ಭೇದವಿಲ್ಲದೆ ಜನಸಾಮಾನ್ಯರನ್ನೂ ವ್ಯಾಪಿಸಿದ ಸಾಹಿತ್ಯ ಪ್ರಕಾರಗಳಾಗಿವೆ.
- ಗಾಯಕ- ಶ್ರಾವಕರ ಚಿತ್ಛಲಕದಲ್ಲಿ ವಸ್ತು ತತ್ವ್ತಾರ್ಥ ಚಿರಸ್ಥಾಯಿಗೊಳ್ಳುವವು.
ಇತರ ಸಾಹಿತ್ಯ:
ವಚನ- ಸ್ವರವಚನಗಳಲ್ಲದೆ ಮಂತ್ರಗೋಪ್ಯ, ದಂಡಕ, ಬೊಲ್ಲಿ ಅಷ್ಟಕ, ತಾರಾವಳಿ, ಮಿಶ್ರಾರ್ಪಣ, ಕರಣಹಸಿಗೆ, ಉಯ್ಯಾಲೆ, ಶತಕ, ತ್ರಿಪದಿ, ಪೀಠಿಕೆ, ನಾಂದ್ಯ- ಮೊದಲಾದ ಪರಿಭಾಷೆಗಳು ಶರಣರ ಕೃತಿಗಳಲ್ಲಿ ಬಳಕೆಗೊಂಡು ಶರಣ ಸಾಹಿತ್ಯದ
ವೈಶಾಲ್ಯತೆಗೆ ವೈವಿಧ್ಯತೆಗೆ ಕಾರಣಗಳಾಗಿವೆ.
ಹೀಗೆ ವಚನ- ಸ್ವರವಚನ- ಇತರ ಸಾಹಿತ್ಯ ಪ್ರಕಾರದಲ್ಲಿ ಮೈದೋರಿದ ಶರಣ ಸಾಹಿತ್ಯ ಅನುಭಾವ ಗೋಷ್ಠಿಗಳ ಮೂಲಕ ಹೊರಹೊಮ್ಮಿದೆ. ಭಾವೈಕ್ಯತೆಗೆ ಸಹಕಾರಿಯಾಗಿ ನಿಂತ ಈ ಸಾಹಿತ್ಯದ ಹರವು ಹಲವಾರು ಮಹಾಪ್ರಬಂಧಗಳ ಅಧ್ಯಯನಕ್ಕೆ ಸ್ವರವಚನ ಪರಿಭಾಷಾ ಕೋಶಗಳ ಸಿದ್ಧತೆಗೆ ವಸ್ತುವಾಗಬಲ್ಲ ಸಾಮರ್ಥ್ಯ ಹೊಂದಿದೆ. ಸ್ವರವಚನ ಸಾಹಿತ್ಯವು ಬಿಡಿಬಿಡಿ ಸ್ವರವಚನಗಳಲ್ಲಿ ಸ್ವತಂತ್ರ ಕೃತಿಗಳಲ್ಲಿ ಸಂಪಾದನಾ- ಸಂಕಲನ ಕೃತಿಗಳಲ್ಲಿ ಲಭ್ಯವಾಗುತ್ತವೆ.
೧೨ನೆಯ ಶತಮಾನದಲ್ಲಿ ಸಕಲೇಶ ಮಾದರಸ, ಸೊಡ್ಡಳ ಬಾಚರಸ, ಬಸವ, ಅಲ್ಲಮ, ಚನ್ನಬಸವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ಆದಯ್ಯ, ಅಕ್ಕಮಹಾದೇವಿ, ನೀಲಮ್ಮ ಮೊದಲಾದವರ ಸ್ವರವಚನ ಲಭ್ಯವಾದರೆ, ಹರಿಹರ-ರಾಘವಾಂಕರಲ್ಲಿ ಅವುಗಳನ್ನು ಹಾಡುತ್ತಿದ್ದ ಸಂದರ್ಭಜನ್ಯವಾಗಿ ಬಳಸುತ್ತಿದ್ದ ಕ್ರಮವನ್ನು ಸೂಚಿಸಿರುವುದುಂಟು. ೧೫ನೆಯ ಶತಮಾನದಿಂದ ಮುಂದೆ ಕರಸ್ಥಲದ ನಾಗಿದೇವ-ಗುರುಬಸವ ಗುರುಪುರದ ಮಲ್ಲಯ್ಯ-ನಿಜಗುಣ ಶಿವಯೋಗಿ ಕೆಸ್ತೂರದೇವ ಮುಪ್ಪಿನ ಷಡಕ್ಷರಿ- ಸರ್ಪಭೂಷಣ ಶಿವಯೋಗಿ- ಬಾಲಲೀಲಾ ಮಹಂತ ಶಿವಯೋಗಿ- ಘನಮಠಾರ್ಯ- ರಥೋದ್ಧರಣೆಯ ಸಂಗನ ಬಸವೇಶ್ವರ- ಮೈಲಾರ ಬಸವಲಿಂಗ ಶರಣ- ಮುಂತಾದವರಲ್ಲಿ ಸ್ಥಲ ನಿರ್ದೆಶನ, ಸ್ಥಲ ನಿರ್ದೇಶನವಿಲ್ಲದೆ ಒಂದೊಂದು ಕೃತಿಯಲ್ಲಿ ಲಭ್ಯವಾಗಿ ಸ್ವರವಚನ ಸಾಹಿತ್ಯದ ಸುಗ್ಗಿಯ ಹಿಗ್ಗನ್ನೇ ಒದಗಿಸಿ, ಅದರ ಹುಲುಸಿಗೆ ಸಾಕ್ಷಿಗಳಾಗುತ್ತವೆ. ಮುಂದೆ ಬಂದ ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳಪ್ಪ ಶಿವಯೋಗಿ, ಕರಿವೃಷಭೇಂದ್ರರು, ಶಿಶುನಾಳ ಶರೀಫ ಶಿವಯೋಗಿ, ಮುಂತಾದ ಅನುಭಾವಿಗಳಲ್ಲಿ ಸ್ಪಂದಿಸಿ ಹೊರಹೊಮ್ಮಿದೆ. ಜೊತೆ ಜೊತೆಯಲ್ಲಿ ಹರಿದಾಸರ ಕೀರ್ತನೆಗಳಿಗೆ ಪ್ರಚೋದನೆ ನೀಡಿದೆ. ಸ್ವರ ಏಕೋತ್ತರ ಶತಸ್ಥಲ, ಶೂನ್ಯಸಂಪಾದನೆ ಗ್ರಂಥದ ಸಂಕಲನಕಾರರಿಗೆ ಆಕರ ಸಾಮಗ್ರಿಯಾಗಿ ನಿಂತಿದೆ. ವಚನ ಸ್ವರವಚನ-ಇತರ ಸಾಹಿತ್ಯ ರಚನೆಯ ಮೈಲಾರ ಬಸವಲಿಂಗ ಶರಣರಿಗೆ ವೀರಶೈವ ತತ್ವ್ತಾಚರಣೆಯನ್ನು ಪರಿಶುದ್ಧವಾಗಿ ನಿರೂಪಿಸುವ ಅವರ ಜೀವನ ಕೃತಿಗಳ ಅವಲೋಕನವನ್ನು ಲಭ್ಯ ಸಾಹಿತ್ಯದ ಆಧಾರದಲ್ಲಿ ಹಿಂದೆ ಸೂಚಿಸಿದ ವಚನ- ಸ್ವರವಚನ- ಇವರ ಸಾಹಿತ್ಯ ಪ್ರಕಾರಗಳ ಹಿನ್ನೆಲೆಯಲ್ಲಿ ಅವಲೋಕಿಸುತ್ತ ಅವರ ಕೊಡುಗೆ ಏನೆಂಬುದನ್ನು ಬೆಲೆಕಟ್ಟಬಹುದು.
ಮೈಲಾರ ಬಸವಲಿಂಗ ಶರಣರು ಎಂದ ಕೂಡಲೇ ನಮ್ಮೆದುರು ಬಂದು ನಿಲ್ಲುವುದು. ಅವರು ಶರಣರಾಗಲು ಅವರಿಗಿದ್ದ ಪರಿಸರ ಎಂಥದು? ಯಾವ ಶಿವಾನುಭವ ಗರಡಿಯಲ್ಲಿ ಗುರುಗಳಲ್ಲಿ ತಯಾರಾದವರು ಎಂಬುದು. ಆ ಗರಡಿಯೇ (ಕೇಂದ್ರವೇ) ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಪರಿಸರದಲ್ಲಿ ಮೈವೆತ್ತು ನಿಂತ. ಹಾಲವರ್ತಿ ಚೆನ್ನವೀರರ ಗುರುಕುಲದ ಶಿವಾನುಭವ ಕೇಂದ್ರದ ದೃಶ್ಯ. ಈ ಕೇಂದ್ರದ ಚಾಲಕರಾದ ಗುರು ಚೆನ್ನವೀರರು ʼʼಪರತತ್ತ್ವಮೂರ್ತಿ ನಿಜದಿರವೆ ರೂಪಾಗಿ ಧರೆಯೊಳಗೆ ಚರಿಸಿ, ಮೆಟ್ಟಿದ ಧರೆ ಸುಕ್ಷೇತ್ರವೆನಿಸಿ, ಜಲವ ಪಾವನ ತೀರ್ಥವಾಗಿಸಿ, ಜೀವಚರಗಳೊಳಗೆ ಆವನಾದೊಡೆ ಅವನ ಕೈವಿಡಿದು ಪಾವನಾತ್ಮಕವಾಗಿಸುವ ಉದ್ದೇಶ ಹೊತ್ತು ಬಂದವರು. ಲಿಂಗನಾಯಕನಹಳ್ಳಿಯ ಶಿವಾನುಭವ ಕೇಂದ್ರದ ರೂವಾರಿಗಳಾಗಿದ್ದ ಚೆನ್ನವೀರರು ಸೋಮಶೇಖರ ದೊರೆ ಅವನರಸಿ ಬಸವಮ್ಮಾಜಿಯರನ್ನು, ಹರವಿ ಪುಂಗ ಪುರಾಣ ಮಠದಯ್ಯನಂಥವರನ್ನು, ಹರಚರ ಗುರು ಮೂರ್ತಿಗಳನ್ನು ಮೂರ್ತಗೊಳಿಸಿದ ಚಿತ್ರ. ಹಾಗೆಯೇ ಅವರಿಂದ ದೀಕ್ಷಿತರಾಗಿ ಲಿಂಗಮೂರ್ತಿಗಳಾಗಿ ಹೊರಬಂದ- ಬಾಲಲೀಲಾ ಮಹಾಂತ ಶಿವಯೋಗಿಗಳು, ಹೊಳಲು ಲಿಂಗಪ್ಪ ಶರಣರು, ಬನ್ನಿಮಟ್ಟಿ ಚೆನ್ನಪ್ಪನವರು, ಶಾಂತವೀರರು, ರಾಚೋಟಿ ಸ್ವಾಮಿಗಳು-ಇನ್ನೂ ಅನೇಕರು ಇವರ ಪರುಷ ಸದೃಶ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಕೃಪಾವಲಯದಲ್ಲಿ ಬೆಳೆದು ನಾಡಿನುದ್ದಗಲಕ್ಕೂ ಅವರ ಪ್ರಭಾವ ಬೀರಿದವರು. ಇವರಲ್ಲಿ ಮೈಲಾರ ಬಸವಲಿಂಗ ಶರಣರೂ ಒಬ್ಬರೆಂಬುದನ್ನು ಮರೆಯುವಂತಿಲ್ಲ.
ಬಸವಲಿಂಗ ಶರಣರು -ಬದುಕು:
ಕನ್ನಡ ನಾಡಿಗೆ ಮಬ್ಬುಕವಿದು ಕತ್ತಲಾವರಿಸಿದ ೧೮-೧೯ನೆಯ ಶತಮಾನಗಳ ಅಂತ್ಯ ಹಾಗೂ ಆದಿ ಭಾಗಗಳಲ್ಲಿ ಉದಯಿಸಿ ದಿವ್ಯ ಕಿರಣದಿಂದ ಪ್ರಕಾಶಿಸಿದ ಮಹಾತ್ಮರಲ್ಲಿ ಒಬ್ಬರು ಮೈಲಾರ ಶರಣರು. ಕ್ರಿಯಾ-ಜ್ಞಾನ ಸಮಾಯುಕ್ತ ಸಮತೋಲನದ ವೀರಶೈವವೇ ಅವರ ಬದುಕು ಬರಹಗಳು. ಬಸವ ಜ್ಯೋತಿಯ ದಿವ್ಯ ಕಿರಣ ಜ್ಯೋತಿಯಾದ ಮೈಲಾರ ಬಸವಲಿಂಗ ಶರಣರು ಏತಿಹಾಸಿಕ ಪ್ರಸಿದ್ಧಿ ಪಡೆದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಶೆಟ್ರ ಮನೆತನದ ಬಸವಪ್ಪನೆಂಬಭಿದಾನದಿಂದ ಜನ್ಮ ತಳೆದವರು. ಮನೆಕೊಂಡು ಬದುಕಿದವರು. ಅವರ ಮನೆ ಚಿಕ್ಕದಾದರೂ ಘನಮನದಿಂದ ಬೆಳೆವ ಪ್ರವೃತ್ತಿಯವರೆಂಬುದು, ಅವರ ಜೀವನ ಸಾಧನೆಗಳ ಬೆಳವಣಿಗೆಯಿಂದ ತಿಳಿದು ಬರುವುದು. ಶರಣತ್ವ ಸಿದ್ಧಿ ಪಡೆದ ಬಸವಪ್ಪನವರು ತಮ್ಮ ಬಾಲ್ಯದ ಬಗೆಗಾಗಲಿ ತಂದೆ ತಾಯಿಗಳ ಬಗೆಗಾಗಲಿ, ಹೇಳಿಕೊಳ್ಳದಿರುವುದು, ಗುರುವನ್ನು ಗುರು ಪರಂಪರೆಯನ್ನು ಹೇಳಿಕೊಂಡುದು ವೀರಶೈವ ತತ್ತ್ವಕ್ಕನುಗುಣವಾಗಿಯೇ ಇರುವುದು. ಹೀಗಾಗಿ ಗುರುದರ್ಶನದ ನಂತರದ ಬದುಕಿನ ಜೀವನ ಸಾಧನೆಯನ್ನು ಅವರ ಕೃತಿಗಳ ಮೂಲಕ ಗುರುತಿಸಿದಂತೆ ಬಾಲ್ಯದ ಬದುಕಿನ ಚಿತ್ರಣ ಮಸುಕು-ಮಸುಕು. ಆದರೂ ಜನತೆಯಲ್ಲಿ ಬಾಯಿಂದ ಬಾಯಿಗೆ ಕೊಡುತ್ತ ಜನ ಮನದಲ್ಲಿ ಅಚ್ಚಳಿಯದೆ ನಿಂತುಕೊಂಡು ಬಂದ ಅವರ ಬಾಲ್ಯ ಜೀವನವೂ ಮೈಲಾರದಲ್ಲಿಯೇ ಕಳೆದುದು ವಿದಿತವಾಗುತ್ತದೆ. ಅಯ್ಯನವರ ಪಾಠಶಾಲೆಯಲ್ಲಿ ಓದಿದ ಓದು ಅವರ ಜ್ಞಾನದಾಹ ತೀರಿಸದಾದಾಗ ನೆರೆಹೊರೆಯ ಊರುಗಳಲ್ಲಿಯ ಕೀರ್ತನೆ ಪ್ರವಚನಗಳಲ್ಲಿ ಭಾಗಿಗಳಾಗಿ ಕೇಳುವುದು, ಅದರಿಂದ ಪ್ರಚೋದನೆಗೊಂಡು ಶರಣರ ಜೀವನ ತತ್ತ್ವಗಳ ಬಗೆಗೆ ಅವರ ಕೃತಿಗಳತ್ತ ಗಮನಹರಿಸಿ ಸ್ವಾಧ್ಯಾಯ ಸಿದ್ಧರಾಗಿ ಓದಿಕೊಂಡು ದಿನನಿತ್ಯದ ವ್ಯಾಪಾರದ ಕಾಯಕದಲ್ಲಿ ತೊಡಗುವುದು ಅವರ ದಿನನಿತ್ಯದ ಬದುಕಾಗಿದ್ದಿತು.
ವಿವೇಕದಿಂದೆಚ್ಚತ್ತು ಸಂಸಾರ ಜಂಜಡವನ್ನು ಬಿಡಿಸುವ ಅನುಭಾವವನ್ನು ಬೋಧಿಸುವ ಗುರು ತಂದೆಯನ್ನು ನೆನೆಯುತ್ತ ‘ನಗುರೋರಧಿಕಂ ನಗುರೋರುಧಿಕಂ’’ ಪಥವನರಿವೊಡೆ ಗುರು ಪಥವೇದ ಮೊದಲು’’ ಎಂಬ ವಾಕ್ಯಗಳನ್ನು ಮೆಲುಕು ಹಾಕುತ್ತ ಶಿವಾನುಭವದ ನಿಲವನ್ನರಿಯಬೇಕೆಂಬ ಹೃದಯದ ಭೂಮಿಯನ್ನು ಹದಗೊಳಿಸಿಕೊಂಡು ಗುರುದರ್ಶನದ ಕಾತರದ ಕಳವಳದಲ್ಲಿ ಮಗ್ನರಾದವರು. ಹೀಗಿರುವಾಗಲೇ ವ್ಯಾಪಾರ ಕಾಯಕದಲ್ಲಿ ಜಾಣ್ಮೆಯನ್ನು ಮೆರೆದ ಬಸವಪ್ಪನವರು ಸಮೀಪದ ಅನೇಕ ಕುಹಕಿಗಳಿಂದ ಪರೀಕ್ಷೆಗೊಳಪಡುವರು. ಮೈಲಾರಕ್ಕೆ ಬಂದ ಅಧಿಕಾರಿಗಳಿಗೆ ‘ವಿಷ್ಣು ನಿಂದಕʼನೆಂಬ ಆಪಾದನೆ ಹೊರಿಸಿ ಅವರಿಂದ ಪ್ರಶ್ನೆಗಳಿಗೊಳಪಟ್ಟು ಪರೀಕ್ಷಿಸಿ ವಿಷ್ಣುನಿಂದಕನಲ್ಲನೆಂಬ ತಮ್ಮ ಅಭಿಪ್ರಾಯವನ್ನು ಪದಮೂಲಕ ಸ್ಪಷ್ಟಪಡಿಸಿದರು.
ಹರಿಯ ಬ್ರಹ್ಮಾಂಡ ಪಿಂಡಾಂಡ ದಶದಿಗ್ಭರಿತ
ಮರಿಯೆ ತ್ರೈಭುವನಮಟ್ಟುಂಬ ಸಕಲಕ್ಕಾದಿ
ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ. ಲೋಕದೊಳಗದು ಕಾರಣಂ
ಹರಿಭಕ್ತನಹುದು ಹರಭಕ್ತನಲ್ಲ ನಾನೂಂ
ನರಸಿಂಹ ಮಧುಸೂದನಂ ಮತ್ತಮಾ
ಸಿರಿಯರಸ ವಾಸುದೇವ ಯದುಪತಿಯಾದಿ ಪ್ರಣವ ಸ್ಮರಣೆಯೊಳಗಿರ್ಪೆಂಸದಾ||
ಈ ಪದ್ಯದಲ್ಲಿ ಬರುವ ‘ಹರಿ’ ಪದವನ್ನು ‘ವಾಯು’ ಎಂಬರ್ಥದ ಶ್ಲೇಷೆಯಿಂದ ಬಳಸಿ ಕುಹಕಿಗಳ ಮುಖಭಂಗ ಮಾಡಿದವರು. ಮತ್ತೊಂದು ಸನ್ನಿವೇಶದ ಸಂದರ್ಭಕ್ಕಾಗಿ ಕಾಯ್ದು ಬಸವಪ್ಪನವರನ್ನು ಪರೀಕ್ಷೆಗೊಳಪಡಿಸಿದಾಗ
ಗೋವಿಂದನಾದಿ ಗೋವಿಂದ ನಮ್ಮ
ಗೋವಿಂದಲಾವ ಪಾವನ ಪಾಂಡುರಂಗ ||ಪಲ್ಲ||
ಶ್ರೀ ವಿಭೂತಿಯ ಪಂಚ ಗೋವಿಂದ | ವೀರ
ಶೈವಾಗಮೋಕ್ತವು ಗೋವಿಂದ
ಪೀವ ಪಂಚಾಮೃತ ಗೋವಿಂದ| ಜಗ
ಜ್ಜೀವ ಸಂತೃಪ್ತಿಯು ಗೋವಿಂದ….
ವಿಭೂತಿಯಿಂದಾಗುವ ವಿಭೂತಿಯ ಮಹತಿಯನ್ನು ಎತ್ತಿ ಹೇಳಿ ಗೋವಿಂದ ‘ಪಡೆದ ಶ್ಲೇಷೆಯ ಮೂಲಕ ಅವರ ಮನವನ್ನು ಸಂತೃಪ್ತಪಡಿಸಿದವರು; ಅಗ್ನಿ ದಿವ್ಯ ಗೆದ್ದು ತಮ್ಮ ಸಾಹಿತ್ಯ ನಿರ್ಮಾಣದ ಮೊದಲ ಹಾದಿ ತುಳಿದವರು; ಗುರು ನಿರೀಕ್ಷೆಗಾಗಿ
ಕಾಯ್ದು ಕುಳಿತವರು.
ಮೊದಲೇ ಸೂಚಿಸಿದಂತೆ ಲಿಂಗನಾಯಕನಹಳ್ಳಿಯಲ್ಲಿ ಶಿವಾನುಭವ ಕೇಂದ್ರದ, ರೂವಾರಿಗಳಾದ ಗುರು ಚೆನ್ನವೀರರ ತಪಃಪ್ರಭಾವದ ಸುದ್ದಿ ಪವನ ವೇಗದಿಂದ ಹರಡಿ ತಿಳಿದು ಸರ್ವರನ್ನೂ ಆಕರ್ಷಿಸಿದಂತೆ ಬಸವಪ್ಪನವರನ್ನೂ ಆಕರ್ಷಿಸಿ ಶಿವಯೋಗ ಸಂಪದದ ಹಬ್ಬದೂಟದ ವಾರ್ತೆ ಮಾತಾಯಿತು. ಅರಸುವ ಬಳ್ಳಿ ಕಾಲ್ ತೊಡಕಿದಂತಾಗಿ ಮುಂದೆ ಗುರು ಚೆನ್ನವೀರರನ್ನು ಬಸವಪ್ಪನವರು-
ಪರಮ ಪಾವನ ಪರಬ್ರಹ್ಮ ಸ್ವರೂಪನೆ, ಚೆನ್ನವೀರ
ನಿರುಪಮ, ನಿರಘ ನಿರ್ದ್ವಂದ್ವ ನಿರ್ಲೇಪನೆ| ಚೆನ್ನವೀರ ||ಪಲ್ಲ||
ಶರಣ ಮಂದಿರಧಿಕಾರನೆ ಚನ್ನವೀರ…
ವಿನಮಿತ ಜನರ ಭವದ ಬೇರ ಕೀಳ್ವೆನೆ |
ಎಂದು ಭಾವ ತುಂಬಿ ಹಾಡುತ್ತ ʼʼಈತನುನ್ನತವ ತನ್ನ ಪೊಗಳುವಡಾರು ಬಲ್ಲ ಚತುರಾಸ್ಯ ಬ್ರಹ್ಮಗಳವಲ್ಲʼʼ ಎಂದು ತಮ್ಮ ವಿನಯ ಮೆರೆದವರು. ಗುರು ದರ್ಶನ ಪಡೆದು ʼʼಎಲ್ಲ ದೈವಕೆ ನಿಮ್ಮ ಮೆಲ್ಲಡಿಯೆ ಘನವೆಂದು.. ಭಾವಿಸಿದ ಅವರು ಮಾಯೆಯ ಬಲೆಯಿಂದ, ಆಶೆ-ರೋಷಗಳ, ಹಮ್ಮು ಬಿಮ್ಮುಗಳ ಕಾಟದಿಂದ, ಮರ್ಕಟ ಮನದಿಂದ, ಮೂರರ ಮಲಗಳಿಂದ, ಅರಿಷಡ್ವರ್ಗಗಳ ಉಪಟಳದಿಂದ, ಕಾಯಕರ್ಮಗಳೆಂಬ ಮಾಯಾ ಸಂಸಾರದಿಂದ ಹೇಯವ ಮಾಡಿ ಪ್ರಿಯದಿಂದ ಪಾಲಿಸು ತಂದೆಯೆಂದು
ಬಿನ್ನವಿಸಿದವರು.
ಶಿಷ್ಯನ ಮೊರೆ ಕೇಳಿದ ಚನ್ನವೀರನು, ನೀನು ನರನಲ್ಲ ಪರವಸ್ತುವೆಂದು, ಲಿಂಗ ಸಜ್ಜೀವಿಯೆಂದು, ಚತುರ್ವಿಧ ಸಾರಾಯನೆಂದು ಬೋಧಿಸಿ
ಭವಿತನವ ಕಳೆದು ಭಕ್ತನ ಮಾಡಿ ತನುತ್ರಯಕೆ
ತ್ರಿವಿಧ ದೀಕ್ಷೆಯನ್ನಿತ್ತು ತ್ರಿವಿಧ ಗುಣಗಳ ಕಳೆದು
ತ್ರಿವಿಧ ತನುವಿಗೆ ತ್ರಿವಿಧ ಲಿಂಗಮಂ ನೆಲೆಗೊಳಿಸಿ ತ್ರಿವಿಧಿವಾಚಾರವರುಹಿ
ತ್ರಿವಿಧ ಪೂಜೆಯ ಪೇಳಿ ತ್ರಿವಿಧಾರ್ಪಣವ ತಿಳುಹಿ
ತ್ರಿವಿಧ ಶೇಷವೆಂಬ ತ್ರಿವಿಧಸುಖ ಸಮರತಿಯ
ನವಿರತಂ ದೆಯೆಗೆಯ್ದು… ಗುರುವಿಗೆ ಶರಣೆಂದು….
ಪೊರೆಮಡುವರು. ಹಾಗೆಯೇ ಲಿಂಗ ದೀಕ್ಷಿತರಾದ ಗುರುಕರೋದ್ಭವರಾದ ವಿವರವನ್ನು
“ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು
ದೇವ ಕರವಾಂತು ಸಾಸಿರದಳದ ಚಿತ್ಕಳೆಯ
ಭ್ರಾವದಿಂ ಮನ ಮನದಿನೇತ್ರ ನೇತ್ರಗಳಿಂ ತೆಗೆದಿಷ್ಟರೂಪುಗೊಳಿಸಿ
ತೀವಿ ತಚ್ಚಿಷ್ಯನಂಗದ ಮೇಲೆ ಧರಿಸಿ ಸಂ
ಜೀವಷಣ್ ಮಂತ್ರಲಿಂಗವಿದೆಂದು ತಿಳುಹೆ…..”
ಎಂದು ಹೇಳಿಕೊಂಡಿರುವರು.
ಗುರುಸೇವೆ- ಲಿಂಗಪೂಜೆ- ಜಂಗಮ ದಾಸೋಹ-ಜಲತೀರ್ಥ ಸೇವನೆ- ಪ್ರಸಾದ ಭೋಗದಿಂದ ಅಖಂಡ ಭಕ್ತಿಯುಳ್ಳ ಭಕ್ತಕಾಯನಾಗೆಂದು ಷಟ್ಸ್ಥಲ – ಪಂಚಾಚಾರಗಳ ಬೋಧೆ ನೀಡಿ ಅಷ್ಟಾವರಣಾಂಗಿಯಾಗಿ ಪರಿಪೂರ್ಣ ಮಂತ್ರಶರೀರಿಯಾಗೆಂದು ನಡೆಸಿದವರು.
ಹರಣ ಹೋಗದ ಮುನ್ನ ಶರಣನಾಗಬೇಕೆಂಬ, ವೀರಶೈವವೆನಿಸುವ ಚರ್ತುರ್ವಿಧ ಸಾರಾಯ ಸಂಪತ್ತಿನ ಪರಿಪೂರ್ಣ (ಅಖಂಡ) ಭಕ್ತನೆನಿಸಬೇಕೆಂಬ ಹಂಬಲದಿಂದ ಗುರು ಬೋಧಿಸಿದ ಮಾರ್ಗದಲ್ಲಿ ನಡೆದು ಅಹಂಮಮತೆ-ಅಹಂಕಾರ ತ್ಯಜಿಸಿ, ಪರವಸ್ತುವಾಗಿ “ಶರಣಸತಿ – ಲಿಂಗಪತಿ”ಯಾಗಿ ನರಸುಮನಾಗದೆ ಗುರುಸುತನಾಗಿ, ಭವಿಯಾಗದೆ-ಭಕ್ತನಾಗಿ, ಅವಶೈವನಾಗದೆ-ಜಪದರ್ಥವೆನಿಸಿಪ ಶಿವನಾಗಿ ಬದುಕಲು ಸಾಧನೆಗೈದವರು.
“ಭಕ್ತಿಯೇ ಮುಕ್ತಿಯ ಜನನಿ” ಎಂದರಿತ ಬಸವಪ್ಪನವರು ಷಟ್ಸ್ಥಲ ಮೂಲಕ ಭಕ್ತಿಶಕ್ತಿಯಿಂದೊಡಗೂಡಿ ಅಂಗ-ಲಿಂಗ-ಶಕ್ತಿ-ಭಕ್ತಿ, ಕರ-ಮುಖ, ಪದಾರ್ಥ-ಪ್ರಸಾದಗಳ ಸಕೀಲವಿಡಿದು, ಅರ್ಚಿನ -ಅರ್ಪಣ ಅನುಭವದಿಂದ ಅಷ್ಟಾಂಗ ಯೋಗ ತ್ಯಜಿಸಿ ಶಿವಯೋಗದಲ್ಲಿ ಧ್ಯಾನದಿಂದ ಮನದ ಲಿಂಗವಾಗಿಸಿ ತನುವನು ಲಿಂಗವಾಗಿಸಿ ಧಾರಣ ಮಾಡಿ ಅನಿಮಿಷದೆ ಸಮಾಧಿಯಲ್ಲಿ ಲಿಂಗಲೋಲುಪರಾದವರು.
“ನಯನವ ನಂದಾದೀವಿಗೆ, ಭಯಭಕ್ತಿ ಭೃತ್ಯ ಕಿಂಕರ
ಚೌಮಣಿ ಮಂಚವಾಗಿಸಿ, ತನ್ನ ತಾನೆನಿಪಲಿಂಗಮಂ
ಭಿನ್ನವಿಲ್ಲದೆ ಪೂಜಿಸಿ ಷಣ್ಮಂತ್ರ ಮೂರ್ತಿಸ್ವರೂಪರಾಗಿ
ಸಾರಾಯದಿಂದ ಪ್ರಸಾದಕಾಯರಾದವರು ಭಕ್ತರಾದವರು.
ಗುರುವೇ ಪರಬ್ರಹ್ಮವಾಗಿ, ಗುರುವಿನ ವಿಗ್ರಹವೇ ಲಿಂಗವಾಗಿ, ಹರಣ ಜಂಗಮವಾಗಿ, ಆನಂದ ಪದಜಲವಾಗಿ, ಪ್ರಸನ್ನತೆ ಪ್ರಸಾದವಾಗಿ, ಶಾಂತಿ ಭಸಿತವಾಗಿ, ಚಿದ್ಘನ ರುದ್ರಾಕ್ಷಿಯಾಗಿ, ಅಭಿದಾನವೇ ಮಂತ್ರವಾಗಿ, ಭಕ್ತಿಯ ಸ್ಪರ್ಶದಿಂದ ಬಾಹ್ಯದೈವಂಗಳಿಗೆರಗದೆ ಏಕಲಿಂಗ ನಿಷ್ಠಾಪರರಾಗಿ ʼʼಅನುಭಾವವೆಂಬುದೈವಾಚಾರದಿರವು’ ಎಂದರಿತು ಆತ್ಮ ಸಾಕ್ಷಾತ್ಕಾರ ಪಡೆದವರು, ನಡೆ- ನುಡಿಯನೇಕೀಕರಿಸಿಕೊಂಡವರು.
ಬಸವಪ್ಪ ಬಸವಲಿಂಗ ಶರಣರಾದುದು:
ಗುರು ಚೆನ್ನವೀರರಡಿಯಲ್ಲಿದ್ದ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಮಠದ ಉತ್ತರಾಧಿಕಾರಿಯನ್ನು ನಿಯಮಿಸುವ ಸಂದರ್ಭದಲ್ಲಿ ಅಂಗಹೀನ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಬಾರದೆಂಬ ಶರಣರ ಆಕ್ಷೇಪಣೆಯಿಂದಾಗಿ ಗುರುವಿನ
ಅವಕೃಪೆಗೆ ತುತ್ತಾಗಿ ‘ಮುಸವಪ್ಪ’ ನಾದರು. “ಹರ ಮುನಿದರೆ ಗುರು ಕಾಯ್ವ ಗುರು ಮುನಿದರೆ ಹರ ಕಾಯ’ನೆಂಬುದಕ್ಕೆ ಸಾಕ್ಷಿಯಾಯಿತು. ಈ ಘಟನೆ ಈ ಘಟನೆಯಿಂದ ನೊಂದು ಬೆಂದು ಬಸವಪ್ಪನವರು ಸಹಪಾಠಿಗಳಲ್ಲೊಬ್ಬರಾದ ಬಾಲಲೀಲಾ ಮಹಾಂತ ಶಿವಯೋಗಿಗಳ ಸಲಹೆಯಂತೆ ಗುರುಸ್ತುತಿಸಿ “ಗುರು ಕರುಣ ತ್ರಿವಿಧಿ” ರಚಿಸಿ ಗುರು ಕೃಪಾ ಪೋಷಕರಾಗಿ ಬಸವಲಿಂಗರಾದರು. ಅದನ್ನೇ ಅವರು
“ಬಸವ ಬಾರೆಂದನೆಗೆ ಅಸಮಲಿಂಗವೇ ನೀನೆಂ
ದುಸುರಿದ ಬಳಿಕ ಬಸವಲಿಂಗನೆಂದು
ಪೆಸರಿಟ್ಟ ಗುರುವೆ ಕೃಪೆಯಾಗುʼʼ ಎಂದು ಹಾಡಿಕೊಂಡಿದ್ದಾರೆ.
ಪರೀಕ್ಷೆಗಾಗಿ ಬೋಧಕರಾಗಿ:
ಲಿಂಗನಾಯಕನ ಹಳ್ಳಿಯ ಶಿವಾನುಭವ ಕೇಂದ್ರದಲ್ಲಿ ಗುರು ಮತದಂತೆ ಪರೀಕ್ಷಕರಾಗಿ, ಬೋಧಕರಾಗಿ ಹುಸಿಲಾಂಛನ ಖಂಡಿಸಿದ ಶರಣರುʼʼ ಛೀ ಹೆಡ್ಡ ನೀವೆಂಥ ಶಿವಭಕ್ತರು, ಶಿವಯೋಗಿಗಳುʼʼ ಎಂದು ಅವರ ಕಪಟ ವೇಷಗಳನ್ನು ತೆಗೆಸಿ, ವೀರಶೈವ ತತ್ತ್ವಾಚರಣೆಗಳನ್ನು ನಿರೂಪಿಸಿ, “ತೂಗಿರೇ ಶರಣ ಸತಿಯರು ಶಿವಯೋಗ ಸಂಪದದೊಳು” ಎಂದು ಬೋಧಿಸಿದವರು ಪುನಃ ಅವರನ್ನು ಪರೀಕ್ಷೆಗೊಳಪಡಿಸಿ, ಪರೀಕ್ಷಿಸಿ, ಈಗ ನೀವು ಮಠಾಧಿಕಾರಿಗಳಾಗಲಿ, ಬೋಧಕರಾಗಲು ಸಿದ್ಧರಾದಿರಿ, ಹೋಗಿ ಬನ್ನಿʼ’ ಎಂದು ನಮಸ್ಕರಿಸಿ ಕಳಿಸಿಕೊಡುವಲ್ಲಿ ಅವರಿಗೆ ತತ್ವಬೋಧಕರನ್ನು ಸಿದ್ಧಪಡಿಸುವ, ಅವರ ಮೂಲಕ ಸಮಾಜವನ್ನು ತಿದ್ದಬೇಕೆಂಬ ಹಂಬಲದ ಕಳಕಳಿಯನ್ನು ಹೊಂದಿದವರಾಗಿದ್ದರು.
ಹಲವು ವರ್ಷಗಳವರೆಗೆ ಕಾರ್ಯತತ್ಪರರಾದ ಬಸವಲಿಂಗ ಶರಣರು ಒಂದು ಕಡೆಗೆ ಸಾಧಕರನ್ನು ಸಾಧನೆಗೊಳಪಡಿಸುವುದು, ಇನ್ನೊಂದೆಡೆಗೆ ದಿನ ನಿತ್ಯ ೫ ಆಣೆ ದುಡ್ಡನ್ನು ಸಂಪಾದಿಸುವ ವ್ಯಾಪಾರ ಕಾಯಕದೊಂದಿಗೆ ದಾಸೋಹಂಭಾವ ಎಂದು ವಸ್ತು ತೂಗುವದರ ಜೊತೆ ತತ್ತ್ವ ತೂಗಿ ಕೊಡುವುದು ಇವರ ಇನ್ನೊಂದು ಮುಖದ ಸಾಧನವಾಗಿ ಬೆಳೆದವರು; ಶರಣ ತತ್ತ್ವವನ್ನು ಕೃತಿಗಳ ಮೂಲಕ ಉಳಿಸಿದವರು.
ಇವರು ರಚಿಸಿದ ಕೃತಿಗಳ ‘ವಸ್ತು’ ವೀರಶೈವ ತತ್ತ್ವಾಚರಣೆ ಒಂದೇ ಆದರೂ ಜನತೆಗೆ ಮುಟ್ಟಬೇಕೆಂಬ ಅವರ ಕಳಕಳಿ ಹಲವಾರು ಕೃತಿ ರಚನೆಗೆ ಪ್ರಚೋದನೆ ನೀಡಿರುವುದು. ೧) ಗುರುಕರುಣ ತ್ರಿವಿಧಿ ೨). ಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ ೩). ಷಟ್ಸ್ಥಲ ಜ್ಞಾನಾನುಭವ ೪). ಶಿವಾನುಭವ ದರ್ಪಣ ೫). ಲಿಂಗಪೂಜಾ ವಿಧಾನ ೬). ಭಕ್ತಿ ಬಿನ್ನಹ ದಂಡಕ- ಹೀಗೆ ಆರು ಕೃತಿಗಳ ಮೂಲಕ ತತ್ತ್ವಾಚರಣೆಯ ಸೌಗಂಧವನ್ನು ಸೂಸಿ ಸಾಹಿತ್ಯಕ್ಕೆ ತಮ್ಮ ಭಕ್ತಿಮಣಿ ಸಲ್ಲಿಸಿದವರು.
ಒಟ್ಟಿನಲ್ಲಿ ಸಂಸಾರಿಗಳಾಗಿ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ಭಕ್ತರಾಗಿ-ಕಾಯಕ ಯೋಗಿಗಳಾಗಿ, ಶಿವಾನುಭವ ಬೋಧಕರಾಗಿ ಮಾಹೇಶ ನಿಷ್ಠೆಯುಳ್ಳವರಾಗಿ ಕೃತಿ ರಚನಕಾರರಾಗಿ ಅನುಭಾವಿಗಳಾಗಿ ಹೀಗೆ ಹಲವಾರು ಸಾಧನೆಯ ಹಂತಗಳಿಂದ ವ್ಯಕ್ತಿತ್ವವನ್ನರಳಿಸಿಕೊಂಡವರು. ಮೈಲಾರ ಶರಣರು. ಗುರು ಚೆನ್ನವೀರರ ವಿಯೋಗದ ನಂತರ ಮೈಲಾರದಲ್ಲಿಯೇ ಲಿಂಗದೊಳಗಾದರೆಂದು ತಿಳಿದುಬರುವುದು.
ಇನ್ನು ಅವರಿಂದ ರಚಿತವಾದ ಕೃತಿಗಳನ್ನು ಅವು ಒಳಗೊಳ್ಳುವ ವಿಷಯವನ್ನು ನೋಡಬಹುದು. ಸ್ವರವಚನ ಸಂಪುಟ ಕೃತಿ ʼʼಶಿವಾನುಭವದರ್ಪಣವನ್ನುʼʼ ದೀರ್ಘವಾಗಿ ಅವಲೋಕಿಸುತ್ತ ಸ್ವರವಚನ ಸಂಪುಟಗಳಲ್ಲಿ ಕೈವಲ್ಯಕಾರರಲ್ಲಿ ಅದಕ್ಕಿರುವ ಮಹತಿಯನ್ನು ನೋಡಬಹುದು.
೧. ಗುರುಕರುಣ ತ್ರಿವಿಧಿ:
ಕನ್ನಡ ಸಾಹಿತ್ಯದಲ್ಲಿ ತ್ರಿಪದಿ ಸಾಹಿತ್ಯಕ್ಕೆ ತನ್ನದೇ ಆದ ಹಾಸುಬೀಸು ಇದೆ. ಆಕಾರದಲ್ಲಿ ವಾಮನನಂತಿದ್ದ ತ್ರಿಪದಿ ಅರ್ಥದಲ್ಲಿ ತ್ರಿವಿಕ್ರಮನಂತಿದೆ. ಜನಪದರ ಪ್ರಾಣವಾದ ಈ ಪ್ರಕಾರ ಅನುಭಾವಿಗಳ ಕೈಯಲ್ಲಿ ದುಡಿದು ಇನ್ನೂ ವ್ಯಾಪಕ ನಿಲುವು ಪಡೆದಿದೆ.
ಪಂಡಿತರ ಪಾಮರರ ಬದುಕನ್ನು ಎತ್ತಿಕಟ್ಟಲು ಉಪಯುಕ್ತಗೊಂಡ ಈ ತ್ರಿಪದಿ ಮಾಧ್ಯಮ ೧೨ನೆಯ ಶತಮಾನದ ಶರಣ-ಶರಣೆಯರಲ್ಲಿ ತ್ರಿವಿಧಿಯಾಗಿ ಬಳಕೆಗೊಂಡಂತೆ ಮೈಲಾರ ಬಸವಲಿಂಗ ಶರಣರಲ್ಲಿ “ಗುರುಕರುಣ ತ್ರಿವಿಧಿ” ಹೆಸರು ಪಡೆದು ಮುಂದಿನ ಪೀಳಿಗೆಯ ಶರಣರಿಗೆ ಪಾರಾಯಣ ಗ್ರಂಥವಾಗಿದೆ. “ವಚನ” ಪದ ಪ್ರಯೋಗಾರ್ಥದಲ್ಲಿ ʼʼಗುರುಕರುಣ ತ್ರಿವಿಧಿ ವಚನ ಬರೆಯುವುದಕ್ಕೆ ಪ್ರಾರಂಭ” ಎಂಬ ವಾಕ್ಯ ಕೃತಿ ಆರಂಭದಲ್ಲಿ ಬಳಕೆಗೊಂಡು ಮೈಲಾರ ಶರಣರ ನಡೆ -ನುಡಿಯನ್ನೇಕೀಕರಿಸಿ ಕೊಂಡ ಬದುಕು-ಅವರು ಗುರುವಿನಿಂದ ಪಡೆದ ಅನುಭವ ತ್ರಿಪದಿರೂಪದ ವಚನ ತೊಟ್ಟು ಹೊರಹೊಮ್ಮಿದೆ ಸಾರ್ಥಕತೆ ಪಡೆದಿದೆ. ೩೩೩ ತ್ರಿಪದಿಯಿಂದ ಕೂಡಿದ ಇದು ಗುರು ಸ್ತೋತ್ರ ರೂಪದಲ್ಲಿ ಗುರು ಮಹತ್ವಪೂರ್ಣ ಮಹಿಮೆ ಪಡೆದಿದೆ. ತೋರಿಸಿದ ವೀರಶೈವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ಪರಿಚಯಿಸಿಕೊಡುವ
“ಎಲ್ಲ ಕೈವದೈ ನಿಮ್ಮ ಮೆಲ್ಲಡಿಯ ಘನವೆಂದು
ಸೊಲ್ಲಿಗೊಮ್ಮೊಮ್ಮೆ ನುತಿಪೆ ನಾಂ ಗುರುರಾಯ
ಸಲ್ಲೀಲೆಯಿಂದೆನಗೆ ಕೃಪೆಯಾಗುʼʼ
ಎಂಬ ಶರಣ ಶಿಷ್ಯರ ಮೇಲೆ ಗುರುಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತದ ಅನುಭವದ ವಿವಿಧ ಮುಖಗಳನ್ನು ಹೊತ್ತು ಸರಳವಾಗಿ ಶಾಸ್ತ್ರ ವಿಷಯವನ್ನು ಪರಿಚಯಿಸಿಕೊಡುವಲ್ಲಿ ಅದಕ್ಕೆ ವಿಶೇಷತೆಯಿದೆ; ಮನ್ನಣೆಯಿದೆ.
‘ತ್ರಿವಿಧ’ವೆಂದರೆ ಮೂರುವಿಧವೆಂದರ್ಥ. ಸೃಷ್ಟಿಯಲ್ಲಿ ಮೂಲೋಕ, ಸೃಷ್ಟಿ ತತ್ತ್ವ ಮೂರು ಬಗೆ, ತನು ತ್ರಿವಿಧ, ಚೇತನ ತತ್ತ್ವ- ತ್ರಿವಿಧ, ಅಂಗಮೂರು, ಲಿಂಗಮೂರು, ಜಂಗಮ ಮೂರು, ಗುರು ಮೂರು, ಭಕ್ತಿ ಮೂರು, ಶಕ್ತಿಮೂರು, ಪಾದೋದಕ-ಪ್ರಸಾದ ಮೂರು ಹಾಗೆಯೇ ವಿಭೂತಿ ರುದ್ರಾಕ್ಷಿ-ಮಂತ್ರ-ಮೂರು, ಮೂರು. ಕೃತಿ ಎತ್ತಿಕೊಂಡ ತತ್ತ್ವಗಳಾದರೂ ಅಷ್ಟಾವರಣ-ಪಂಚಾಚಾರ- ಷಟ್ಸ್ಥಲ ಮೂರೇ ಮೂರು. ಹೀಗೆ ಸಮಗ್ರ ಕೃತಿ ತನ್ನ ಸಕಲ ಅವಯುವ, ಸಕಲಾರ್ಥಂಗಳಲ್ಲಿ ತ್ರಿವಿಧಕ್ಕೆ ಸಂದು, ತ್ರಿವಿಧವನ್ನು ಧರಿಸಿ, ತ್ರಿವಿಧಕ್ಕೆ ಕೈಚಾಚಿದ್ದು ಮೂರು ಮೂರು ಚರಣಗಳ ೩೩೩ ನುಡಿಗಳನ್ನೊಳಗೊಂಡಿರುವುದರಿಂದ ಈ ಕೃತಿಗೆ ʼʼಗುರು ಕರುಣ ತ್ರಿವಿಧಿʼ’ಯೆಂದು ಕರೆದುದು ಅರ್ಥಪೂರ್ಣವಾಗಿದೆ. ಮಾತ್ರಾಗಣ-ಅಂಶಗಣಗಳ ಸಮ್ಮಿಶ್ರದಿಂದ ಪರಿಣಾಮ ತೀವ್ರತೆ ತಂದ ಕೃತಿಯಾಗಿದೆ.
“ಸರ್ವಜ್ಞನ ವಚನಗಳು” ಎಂದಂತೆ ಈ ಕೃತಿಯ ಆರಂಭದಲ್ಲಿ “ಶ್ರೀಗುರು ಪ್ರಸನ್ನ! ಗುರುಕರುಣ ತ್ರಿವಿಧಿ ವಚನ ಪ್ರಾರಂಭ’ ಎಂಬ ತ್ರಿಪದಿ ರೂಪದ ಇದನ್ನು “ವಚನ” ಎಂಬರ್ಥದಲ್ಲಿ ಗ್ರಹಿಸಿ ನಡೆನುಡಿಯ ನೇಕೀಕರಿಸಿಕೊಂಡ ಬದುಕು, ಅವರಿಂದ ಅಭಿವ್ಯಕ್ತವಾದ ಸಾಹಿತ್ಯ ಎಂಬರ್ಥ ಇಲ್ಲಿ ಪ್ರಮುಖವಾಗುತ್ತದೆಂಬುದನ್ನು ಮರೆಯುವಂತಿಲ್ಲ.
೨. ಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ:
ವೀರಶೈವವು ಶೈವದ ಪರಿಪಕ್ವ ಫಲ. “ಲಿಂಗವಂತ, ವೀರಶೈವ, ನಿರಾಭಾರ ವೀರಶೈವ -ಅಜಾತ ಶೈವ’ ಎಂಬ ಪ್ರಯೋಗಗಳು ವಚನಕಾರರಲ್ಲಿ ಬಳಕೆಗೊಂಡಿದೆ.
೧ ಚತುರ್ವರ್ಣತಿತನೆ ವೀರಶೈವ ನೋಡಾ’ʼ, ಕುಲದಲ್ಲಿ ಶೂದ್ರನಾದಡೇನು ? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾʼʼ ʼʼತಿಳಿದನುಭಾವಿಯೇ, ಸಂಸ್ಕಾರಿಯೇ ಪರಮ ವೀರಶೈವ ನೋಡಾ”, ತನ್ನ ತಾ ತಿಳಿದವ ವೀರಶೈವ
“ಶಿವಯೋಗದಲ್ಲಿರುವಾತ ಲಿಂಗವಂತನೆಂಬೆನಯ್ಯಾ? ಎಂಬಂಥ ಪ್ರಯೋಗಗಳು ವಚನಕಾರರಲ್ಲಿ ಸ್ಪಷ್ಟತೆ ಪಡೆದಿವೆ. ಅಕ್ಕಮಹಾದೇವಿಯು “ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದವರು ನೋಡಾʼʼ, ಅಜಾತಿ ಶೈವರು ಗುರುಲಿಂಗ ಜಂಗಮಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತರಾಗಿಹರಯ್ಯಾ”-ಎಂಬಂಥ ಪದಗಳ ಒಟ್ಟು ಧೋರಣೆಗಳು ಮಥನವನ್ನೇ ಮಥಿಸಿ ಮೈಲಾರ ಬಸವಲಿಂಗ ಶರಣರು ʼʼಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼವನ್ನು ರಚಿಸಿದ್ದಾರೆ. ವೀರಶೈವಾಚರಣೆಯ ಒಟ್ಟು ನೋಟವನ್ನು ಅಷ್ಟಾವರಣ ಪಂಚಾಚಾರ ಧರ್ಮಾಚಾರ ಎಂಬ ೩ ಪ್ರಕರಣಗಳಲ್ಲಿ ೧೨೧ ವಾರ್ಧಕ ಷಟ್ಪದಿಯಲ್ಲಿ ರಚಿಸಿರುವರು.
ಮೈಲಾರ ಶರಣರು ಸ್ವರವಚನದಲ್ಲಿ ಬರುವ ‘ಪಲ್ಲವಿ’ಯಂತೆ ಒಂದೊಂದು ಪ್ರಕರಣದ ಆದಿಯ ‘ಸೂಚನಾ’ ಪದ್ಯದಲ್ಲಿ ಸಂಕ್ಷೇಪಿಸಿ ವಿವರಿಸಿದುದು ಅವರ ‘ಗಣಾಚಾರ’ ನಿಷ್ಠೆಗೆ ಸಾಕ್ಷಿಯಾಗಿದೆ. ಆದಯ್ಯ, ಬಸವ, ಚೆನ್ನಬಸವ, ಅಲ್ಲಮ ಮುಂತಾದವರ ಸಿದ್ಧರಾಮ ಅಕ್ಕಮಹಾದೇವಿ ಸಾಹಿತ್ಯದಿಂದ ಮಥಿಸಿ ಬಂದ ವೀರಶೈವ ಹೂರಣ ಈ ಕೃತಿ. ಮೂರೂ ಪ್ರಕರಣಗಳನ್ನು ಷಟ್ಸ್ಥಲಾತ್ಮಕವಾಗಿ ಎತ್ತಿ ಕಟ್ಟಿದುದು “ಧರ್ಮಾಚಾರ” ಎಂಬ ಪುಟ್ಟ ಪ್ರಕರಣದ ಮೂಲಕ ನಿಜ ವೀರಶೈವ ಸಿದ್ಧಾಂತದ ನಿಲುಮೆಯನ್ನು ಸಂಗ್ರಹಿಸಿ-ಸಂಕ್ಷೇಪಿಸಿದುದು ಈ ಕೃತಿಗಿರುವ ಮಹತಿಯಾಗಿದೆ.
ಆಷ್ಟಾವರಣ ಪಂಚಾಚಾರ ಪ್ರಕರಣಗಳು ಷಟ್ಸ್ಥಲಾತ್ಮಕ ಧೋರಣೆಯ ಶಿವಯೋಗದ ಹಿನ್ನೆಲೆಯಲ್ಲಿ ನಿರೂಪಿತಗೊಂಡ ಕೃತಿಗಳು. ಪಂಚಾಚಾರಗಳನ್ನು ಷಟ್ಸ್ಥಲಾತ್ಮಕವಾಗಿ ಸಮನ್ವಯೀಕರಿಸಿರುವ ವಿಶೇಷತೆ ಮೈಲಾರ ಶರಣರದು. ‘ಧರ್ಮಾಚಾರ’ ಪ್ರಕರಣದಲ್ಲಿ ಭಕ್ತನ ಧರ್ಮಾಚಾರ, ಮಾಹೇಶನ ಧರ್ಮಾಚಾರ, ಪ್ರಸಾದಿಯ ಧರ್ಮಾಚಾರ, ಪ್ರಾಣಲಿಂಗಿಯ ಧರ್ಮಾಚಾರ, ಶರಣನ ಧರ್ಮಾಚಾರ, ಐಕ್ಯನ ಧರ್ಮಾಚಾರ.
ಧರೆ ಕೈಲಾಸ, ಭಕ್ತಿಯ ಮಹತಿ, ಭವಿ-ಭಕ್ತ, ಅಧಃಸೃಷ್ಟಿ-ಊರ್ಧೃ ಸೃಷ್ಟಿ ಅಷ್ಟಾಂಗಯೋಗ-ಶಿವಯೋಗಗಳ ನಿಲುವನ್ನು ಚರ್ಚಿಸಿ ವೀರಶೈವದ ಕೇಂದ್ರ ತತ್ತ್ವಾಚರಣೆಗಳನ್ನೇ ಬಿತ್ತರಿಸಿದ ಕೃತಿ.
ಯೋಗವೆಂಬುದು ಶಿವಶಕ್ತಿ ಸಂಪುಟ. ಶಿವಯೋಗವು ಅಷ್ಟಾಂಗಯೋಗಗಳಲ್ಲಿ ಧಾರಣ-ಧ್ಯಾನ ಸಮಾಧಿಗಳನ್ನು ಮಾತ್ರ ಸ್ವೀಕರಿಸಿರುವುದನ್ನು ಖಚಿತಪಡಿಸಿ ವಿವರ ನೀಡಿ “ಅಷ್ಟಾಂಗ ಯೋಗ ಶರಣನಿಗೆ ಸಲ್ಲ’ ಎನ್ನುವರು. ಷಟ್ಸ್ಥಲಯೋಗ ಲಿಂಗಾಂಗಯೋಗ, ಪರಮಾನಂದಯೋಗ, ಅಳಿಯದೆ ಕೂಡುವ ಯೋಗ, ಹಠಯೋಗ, ಆನಂದಯೋಗ, ನಿಷ್ಕಲಯೋಗ, ಶಾಂಭವೀಯೋಗ, ಪರಿಣಾಮಯೋಗ, ಮಹಾಯೋಗ, ದಿವ್ಯಯೋಗ, ಶಿವಶಕ್ತಿ ಸಂಪುಟ ಯೋಗ, ಪರಮಾತ್ಮ ಯೋಗ, ಅನಿಮಿಷ ಯೋಗ-ಮುಂತಾದ ಪರಿಭಾಷೆಗಳಲ್ಲಿ ಬಳಕೆಗೊಂಡುದು ಶಿವಯೋಗ. ಶಿವಯೋಗ ಸಾಧನೆಯೇ ಷಟ್ಸ್ಥಲ ನಿರಾಭಾರ ಸಿದ್ಧಾಂತದ ನಿಲುವೆಂಬುದನ್ನು ಶೈವ ವೀರಶೈವಗಳಿಗಿರುವ ಭಿನ್ನತೆಯನ್ನು ಎತ್ತಿ ತೋರಿಸಿದ ಮಹತ್ವಪೂರ್ಣ ಕೃತಿಯಿದು.
೩. ಷಟ್ಸ್ಥಲ ಜ್ಞಾನಾಮೃತ:
“ಸದ್ಧರ್ಮ ದೀಪಿಕೆʼʼ ಸಂಪಾದಕರಾದ ಚೆನ್ನಮಲ್ಲಿಕಾರ್ಜುನವರಿಂದ “ಶಿವಾನುಭಾವ ದೀಪಿಕೆ “ಯೆಂಬ ಭಿನ್ನ ಹೆಸರಿನಲ್ಲಿ ತಲೆಬರಹದಲ್ಲಿ ಪ್ರಕಟಗೊಂಡ ಈ ಕೃತಿ ಅನ್ಯ ಕೃತವಾದುದಲ್ಲ. ಈ ಕೃತಿಯ ತಲೆಬರಹ ‘ಶಿವಾನುಭವ ದೀಪಿಕೆ’ ಎಂದಿರದೆ “ಷಟ್ಸ್ಥಲ ಜ್ಞಾನಾನುಭವ” ಅಥವಾ “ಷಟ್ಸ್ಥಲ ಜ್ಞಾನಾಮೃತ” ಎಂದಿದ್ದು ೩೦೩ ಕಂದ ಪದ್ಯಗಳು ಇಲ್ಲಿವೆ. ಪ್ರತಿಯೊಂದು ಕಂದ ಪದ್ಯಗಳು, ಬಸವಲಿಂಗ ಪ್ರಭುವೆ ಎಂದು ಮುಕ್ತಾಯಗೊಳ್ಳುವವು. ಕೊನೆಗೆ ಎಲ್ಲ ಕೃತಿಗಳಿರುವಂತೆ ʼʼಗುರು ಚನ್ನವೀರಾʼʼ ಎಂಬ ಅಂಕಿತ ಇದಕ್ಕಿದೆ. ಕೃತಿಯ ಆರಂಭದಲ್ಲಿ ಮೈಲಾರ ಬಸವಪ್ಪನವರು ವಿರಚಿಸದ ʼಷಟ್ಸ್ಥಲ ಜ್ಞಾನಾನುಭಾವ’ ಎಂಬ ವಾಕ್ಯ ಕರ್ತೃ-ಕೃತಿನಾಮಗಳ ಸ್ಪಷ್ಟತೆ ಕೊಡುವುದು.
ಶಿವನಾರು !ಜೀವಿಯಾರು! ವೀರಶೈವವೆಂದರೇನು! ಕರಣಹಸಿಗೆಗಳ ವೈವಿಧ್ಯಗಳೇನು ? ಕೃತಿ ತತ್ತ್ವಗಳಾವವು! ಪಂಚಾಕ್ಷರದ ಸಂಚುಗಳ ನಿಲುವೇನು ? ಮಿಶ್ರಾರ್ಪಣವೆಂದರೇನು! ಮುಂತಾದ ಮೂಲಭೂತ ತತ್ತ್ವಗಳನ್ನು ಕೊಂಡುಗುಳಿ ಕೇಶಿರಾಜ ಬಳಸಿದ ಕಂದ ಛಂದೋಲಯದಲ್ಲಿ ಸರಳವಾಗಿ ಬಿಗಿಯಾದ ಶಾಸ್ತ್ರರೂಪದ ತತ್ತ್ವಗಳನ್ನು ಸರ್ವಜನತೆಗೆ ತಿಳಿಸಿಕೊಡುವ ಈ ಕೃತಿಗೆ ವೀರಶೈವ ಸಾಹಿತ್ಯ ಧರ್ಮ ತತ್ತ್ವಗಳ ಅಧ್ಯಯನದಲ್ಲಿ ಮಹತ್ತರವಾದ ಸ್ಥಾನವಿದೆ.
ವೀರಶೈವ ತತ್ತ್ವಗಳನ್ನರಿವ ಕೈಪಿಡಿಯಂತಿರುವ ಈ ಕೃತಿ
“ಶೈವ ಸುಮಾರ್ಗದೊಳೆಲ್ಲಂ
ಶ್ರೀ ವೀರಶೈವ ಷಟ್ಸ್ಥಲ ಮಾರ್ಗವಿದಧಿಕಂ
ಈ ವೀರಶೈವವೊಂದನೆ ನೀವರುಹಿ ಪಾಲಿಸೆನ್ನಂ ಬಸವ ಪ್ರಭುವೆʼʼ
ಎಂದು ಹೇಳುವಲ್ಲಿ ಸ್ಪಷ್ಟವಾಗುತ್ತ ಶಿವ ಶಕ್ತಿ, ಶಿವನೇ ಬಸವ ಬಸವನೇ ಶಿವ, ಮಾಯಾ ಸಂಸಾರ ನಿರಸನ, ಪಂಚವಿಷಯ, ಅಷ್ಟಮದ, ಅರಿಷಡ್ವರ್ಗ ನಿರಸನ, ನವಪ್ರಣವ, ಜಗತ್ ಸೃಷ್ಟಿಕ್ರಮ, ಪಂಚಭೂತಗಳ ಪಂಚೀಕರಣ, ಮಿಶ್ರಪಂಚೀಕರಣ, ಪಂಚವಿಂಶತಿ ತತ್ತ್ವ, ಪಂಚಾಕ್ಷರದ ಸ್ವರೂಪ, ಭಕ್ತನ ಅಂಗ ಲಿಂಗಮಯ, ಮಿಶ್ರಅಂಗ-ಲಿಂಗ ಸಂಗ, ಎಂಟಹ ಸಕೀಲ ಆರಕ್ಷರದ ರೂಪ, ಷಣ್ಮಂತ್ರದ ೪೮ ವಿಧ, ಎಂಟಹ ಆವರಣವೇ ಷಣ್ಮಂತ್ರ, -ಇದಕ್ಕಿರುವ ಅಧಿಕಾರ, ಅನಧಿಕಾರ, ಶಿವಸರ್ವಗತ-ನಿರಸನ ಷಟ್ಸ್ಥಲದಿರವೇ ಮಹಾದೇವ, ಜೀವನದ ಸದುಪಯೋಗ-ತತ್ತ್ವಮಸಿ ಪದಕ್ರಮ, ಲಿಂಗಾಂಗ ಕೂಟ, ನಾದಬಿಂದು ಕಲೆ ಹೀಗೆ ಅನೇಕ ವಿಷಯಗಳನ್ನು ಈ ಕೃತಿ ನಿರೂಪಿಸುವುದು.
೩೦೩ ಕಂದ ಪದ್ಯಗಳ ಈ ಕೃತಿಯ ವಿವರಣೆಯಲ್ಲಿ ಒಂದು ಕ್ರಮಬದ್ಧತೆ ಇದೆ. ವೀರಶೈವರಿಗೆ ಬೇಕಾಗುವ ಅನುಭವದ ಜ್ಞಾನಾಮೃತವನ್ನು ಒದಗಿಸುವ ಕೃತಿ “ಷಟ್ಸ್ಥಲ ಜ್ಞಾನಾನುಭವ” ಎಂಬ ತಲೆಬರೆಹ ಸಾರ್ಥಕತೆಗೆ ಸಮರ್ಥತೆ ಒದಗಿಸುವುದು, ಬಸವ ಅಲ್ಲಮ ಚೆನ್ನಬಸವಣ್ಣನವರ ಕೃತಿಗಳ ಆಳವಾದ ಜ್ಞಾನ ಇವರಿಗಿತ್ತೆಂಬುದಕ್ಕೆ ನಿದರ್ಶನ ಈ ಕೃತಿ.
೪, ಲಿಂಗಪೂಜಾ ವಿಧಾನ :
೫೭. ಕಂದ ಪದ್ಯಗಳ ಚಿಕ್ಕ ಕೃತಿಯಿದು, ಮಾನವನ ಜೀವನವು ಕೇವಲ ಇಂದ್ರಿಯ ಲಾಲಸೆಗಳ ಪೂರೈಕೆಯ ಯತ್ನವಲ್ಲ., ಜನನ ಮರಣಗಳ ಮಧ್ಯದ ಅನುಭವವೂ ಅಲ್ಲ. ಈ ಹುಟ್ಟು ಸಾವುಗಳ ಎಲ್ಲೆ ಮೀರಿ ಮಾನವನು ಅಮೃತತ್ತ್ವ ಪಡೆಯಬಹುದು. ಪ್ರಪಂಚದ ವಿಶಿಷ್ಟ ಆಗು ಹೋಗುಗಳಲ್ಲಿ ಮಾನವನಿಗೆ ಮೀರಿದ ಇನ್ನೊಂದು ಶಕ್ತಿ ಇದೆ. ಅದು ಎಲ್ಲವನ್ನೂ ನಡೆಸುತ್ತದೆ. ಅದೇ ಪರಮ ಸತ್ಯ. ಅದನ್ನೇ ನಾವು ದೇವರೆಂದು ‘ಪರವಸ್ತುʼ ಎಂದು, ಪರಮಾತ್ಮವೆಂದು, ಪರಬ್ರಹ್ಮವೆಂದು ಕರೆಯುತ್ತೇವೆ. ಅಂಥ ಪರವಸ್ತುವನ್ನು ವೀರಶೈವರು ತಮ್ಮ ಪರಿಭಾಷೆಯಲ್ಲಿ ‘ಲಿಂಗ’ ವೆಂದು ಕರೆದರು. ‘ಲಿಂಗ’ ಪದಕ್ಕೆ ಸ್ಥಲ, ದೇವರು, ಪರಶಿವ, ಪರಬ್ರಹ್ಮ ಶೂನ್ಯ, ಪರವಸ್ತು, ಅನು, ಘನ, ಮುಂತಾದ ಪರ್ಯಾಯ ಪದಗಳನ್ನುಪಯೋಗಿಸಿರುವರು. ಜಗದುತ್ಪತ್ತಿ-ಸ್ಥಿತಿ- ಲಯಗಳಿಗೆ ಕಾರಣೀಭೂತವಾದುದು ಯಾವುದೋ ಅದೇ ಲಿಂಗ, “ಲಿಂಗ ಮಧ್ಯೆ ಜಗತ್ ಸರ್ವಂʼ’ ಇಂಥ ವ್ಯಾಪಕವಾದ ಲಿಂಗದ ಆರಾಧನೆ, ಅರ್ಚನೆ, ಅರ್ಪಣ, ಅನುಭವಗಳಿಂದ ಪ್ರಕಟಿಸಬೇಕು. ಅದಕ್ಕಾಗಿ ಲಿಂಗಪೂಜೆ ಅಗತ್ಯ ಸಾಧನ. “ಪಶುಭಾವದ ನಿಮ್ಮ ಸ್ಥಿತಿಯಿಂದ ದೇವಭಾವದ ಸರ್ವೋತ್ಕೃಷ್ಟ ಸ್ಥಿತಿಗೇರಿ ನಿಂತುಕೊಳ್ಳಲು ಬಯಸುವರು ಅನುಸರಿಸಬೇಕಾದ ಸಾಧನಗಳಲ್ಲಿ ಲಿಂಗಪೂಜೆ ಮಹತ್ವದ್ದು.
“ಮುನ್ನನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹೃತ್ಕಮಲದ ಪರಜ್ಯೋತಿ ಲಿಂಗವನ್ನು
ಭಿನ್ನವಿಲ್ಲದೆ ವಾಮ ಕರಕಂಜದೊಳು ಪಿಡಿದು
ತನ್ನ ತಾನರ್ಚಿಸುತಿಹ…ʼʼ
ಇದರ ಆರಾಧಕನು ಅಷ್ಟವಿಧಾರ್ಚನೆ-ಷೋಡಷೋಪಚಾರಗಳ ಮೂಲಕ ಆರಾಧಿಸಿ ಲಿಂಗಾಂಗಿಯಾಗುವ ನಿಲುವನ್ನು ೫೭ ಕಂದ ಪದ್ಯಗಳಲ್ಲಿ ಸುಲಭವಾಗಿ ನಿರೂಪಿಸಿದ ಕೃತಿ “ಲಿಂಗಪೂಜಾ ವಿಧಾನ”. ಆಹ್ವಾನ-ಆಸನ-ಧ್ಯಾನ-ಅರ್ಘ್ಯ-ಪಾದ್ಯ, ಅಚಮನ,
ಮಿಶ್ರಪಂಚಾಮೃತ, ಸಾಲಭಿಷೇಕ, ವಸ್ತ್ರ-ಪುಷ್ಪ-ಪತ್ರಿ -ನೈವೇದ್ಯ, ಘಂಟಾನಾದ, ಪ್ರದಕ್ಷಿಣೆ, ನಿರಾಜನ ಮುಂತಾದ ಆಚರಣೆಗಳಲ್ಲಿ ಈ ಕೃತಿ ವೀರಶೈವ ಪರಿಭಾಷೆಯ ಅರ್ಥದಲ್ಲಿ ಅದ್ದಿ ತೆಗೆದ ವೀರಶೈವಾಚರಣೆಯ ನಿಲುವನ್ನೇ ಪ್ರತಿಪಾದಿಸುವ ಶಕ್ತಿ ಪಡೆದಿದೆ.
೫. ಭಕ್ತಿ ಬಿನ್ನಹ ದಂಡಕ:
“ದಂಡಕ” ವಿಶಿಷ್ಟ ಸಾಹಿತ್ಯ ಪ್ರಕಾರ. “ಭಕ್ತ ಬಿನ್ನಹ ದಂಡಕʼʼವು ಮೈಲಾರ ಶರಣರಿಂದ ಅಗಲಿ ನಿಂತ ಕುಸುಮ. ೫-೫ ಮಾತ್ರೆಗಳಂತೆ ಮುನ್ನಡೆವ ಈ ದಂಡಕವ ಪಾದವಿಭಾಗವಿಲ್ಲದೆ ನಿಯತವಾದ ಗಣಗಳಿಂದ ಕೂಡಿ ದಂಡಕವು ಸ್ವರೂಪದಲ್ಲಿ ಬೆಳೆದು ನಿಂತ ಕೃತಿ. ಶರಣರು ಗುರು ಚೆನ್ನವೀರರಲ್ಲಿ ಭಕ್ತಿ ಬಿನ್ನಹದ ವಿಜ್ಞಾಪನೆಗೈದು ಅವರ ಕೃಪಾನುಗ್ರಹಕ್ಕೆ ಸಿಲುಕಿ ದೀಕ್ಷೆಪಡೆದು ಶುದ್ಧಾಂತಃಕರಣರಾಗಿ, ಲಿಂಗ ಭಕ್ತರಾಗಿ ನಿಂತ ನಿಲವೇ ಇಲ್ಲಿಯ ವಸ್ತು. ಶಿಷ್ಯನ ನಿರ್ಮಲಾಂತಃಕರಣದ ಭಕ್ತಿಯ
ಹೊನಲೇ ಮೂಲ ಪ್ರೇರಕಶಕ್ತಿಯಾಗಿ ಕೃತಿರೂಪ ತಾಳಿದೆ. ಜನತೆಯಲ್ಲಿ ಪ್ರಮುಖಜ್ಞಾನವನ್ನರಳಿಸುವುದೇ ಬಸವಲಿಂಗ ಶರಣರ ಕೃತಿಗಳ ಗುರಿ ಆಗಿರುವುದರಿಂದ ಚಿಕ್ಕದಾದ ಈ ಕೃತಿ ಅಂಥ ಕ್ರಿಯಾಚರಣೆಯಲ್ಲಿ ಮಗ್ನರಾಗಬೇಕೆಂದು ಪ್ರೇರೇಪಿಸುವ ದಂಡಕ ಕೃತಿ, ದಂಡಕ ಸಾಹಿತ್ಯಕ್ಕೆ ಒಂದು ಕೊಡುಗೆ, ನಿದರ್ಶನ ಗದ್ಯದ ಮಾದರಿಗೆ ನಿದರ್ಶನ ಕೃತಿ.
೬. ಶಿವಾನುಭವ ದರ್ಪಣ:
ವೈವಿಧ್ಯಮಯವಾದ ವ್ಯಾಪಕವಾದ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ವೃತ್ತಗಳಲ್ಲಿ ರಚನೆಗೊಂಡು ಪ್ರೌಢಭಾಷೆಯಿಂದೊಡಗೂಡಿದುದನ್ನು ʼಓದುಗಬ್ಬ’ ಎಂದೂ ಸುಲಭವಾದ ಸರಳಗನ್ನಡದ ದೇಸಿ ಮಟ್ಟುಗಳಲ್ಲಿ ರಾಗ-ತಾಳ-ನಿರ್ದೆಶನದೊಂದಿಗೆ ಹಾಡಲು ಬರುವಂಥವುಗಳನ್ನು ಹಾಡುಗಬ್ಬ’ – ಸ್ವರವಚನಗಳೆಂದು ವಿಭಜಿಸಬಹುದು. ಇದರಲ್ಲಿ ೨ನೆಯದಾದ ಸ್ವರವಚನಗಳು, ಶಿವಶರಣರಲ್ಲಿ ಹರಿದಾಸರಲ್ಲಿ, ಕೈವಲ್ಯಕಾರರಲ್ಲಿ, ಅನುಭಾವಿ ಕವಿಗಳಲ್ಲಿ ಕಾಲಕಾಲಕ್ಕೆ ರಚನೆಗೊಂಡು ಒಂದೊಂದು ಪರಪರೆಯನ್ನೇ ನಿರ್ಮಿಸಿದೆ. ಶಿವದಾಸ-ಹರಿದಾಸರಿಂದ ಹೊರಹೊಮ್ಮಿದ ಇದು ಮುಂದೆ ಕೈವಲ್ಯಕಾರರಲ್ಲಿ ಸಂಗೀತದ ಸ್ಪರ್ಶದಿಂದ ವ್ಯಾಪ್ತಿಗೊಂಡಿದೆ. “ಕೈವಲ್ಯ ಪದ್ಧತಿ” ಯೆಂಬ ಹೆಸರನಲ್ಲಿಯೂ ರಚನೆಗೊಂಡಿದೆ.
ಸ್ವರವಚನ-ಕೀರ್ತನ-ಕೈವಲ್ಯ ಸಾಹಿತ್ಯವಾಹಿನಿಯಲ್ಲಿ ಮಿಂದು ತಮ್ಮದೇ ಆದ ಸ್ವತಂತ್ರ ಪ್ರತಿಭೆಯಲ್ಲಿ ಮೆರೆದ ಮೈಲಾರ ಬಸವಲಿಂಗ ಶರಣರ ಆತ್ಮಾನುಭವದಿಂದ ಹೃದಯ ತುಂಬಿ ಹೊರಹೊಮ್ಮಿದ ಹಾಡುಗಳನ್ನು ಸಂಗ್ರಹಿಸಿ-ಸಂಕಲಿಸಿ “ಶಿವಾನುಭವದರ್ಪಣ” ವೆಂಬ ಅಭಿದಾನದಿಂದ ಸಂಪಾದಿಸಿದ ಗೀತೆಗಳ ಪುಂಜವೇ ಈ ಕೃತಿ. ಸಾಹಿತ್ಯ-ತತ್ತ್ವ ಸಂಗೀತಗಳಿಂದ ಮುಪ್ಪುರಿಗೊಂಡ ಈ ಕೃತಿಯಲ್ಲಿಯ ಹಾಡುಗಳ ರಾಗ ವೈವಿಧ್ಯ ವಿಷಯ ವೈವಿಧ್ಯಗಳ ಮಜಲುಗಳು ಮೈಲಾರ ಶರಣರ ವೈದುಷ್ಯ ಮತ್ತು ಅನುಭಾವಗಳಿಗೆ ಸಾಕ್ಷಿಗಳಾಗಿವೆ.
ಭಕ್ತಿ-ಜ್ಞಾನ-ಕ್ರಿಯೆಗಳ ತ್ರಿವೇಣಿ ಸಂಗಮವೇ ಶಿವಾನುಭವದ ಕೇಂದ್ರ. ಇವುಗಳ ನಿಜವಾದ ಅನುಭವವೇ ಶಿವಾನುಭವ. ಈ ಶಿವಾನುಭವ ಸಂಪಾದನೆಯೇ ಶೂನ್ಯಸಂಪಾದನೆ. ಇದನ್ನು ಸಾಧಿಸುವುದೇ ವೀರಶೈವರ ಪರಮ ಗುರಿ. ಇದರ ಸಾಧನೆಗೆ ಅಷ್ಟಾವರಣ-ಪಂಚಾಚಾರ-ಷಟ್ಸ್ಥಲಗಳೇ ಮೂಲ ತಳಹದಿ. ಸಾಧಕನು ಇವುಗಳನ್ನು ನಿಜಾಚರಣೆಗೆ ತಂದಾಗ ಅನುಭವಿಯೆನಿಸುವನು; ಈ ಅನುಭವ ಉಳ್ಳವನೇ ಶಿವಾನುಭವಿ. ಶಿವಾನುಭವಿಯಾಗಬೇಕಾದ ತತ್ತ್ವಾಚರಣೆಗಳನ್ನು ಪರಿಚಯಿಸಿಕೊಡುವ ಗ್ರಂಥ “ಶಿವಾನುಭವದರ್ಪಣ”.
ಶಿವಾನುಭವ ದರ್ಪಣವು ಮಹದರಿವಿನ ಕುರುಹು. ಶಿವಾನುಭವ ಪಡೆಯಲು ಅರಿವು ಸತ್ಯಸಾಧನ. ದರ್ಪಣವಿಲ್ಲದೆ ತನ್ನ ನಿಲುವನ್ನು ಕಾಣಲು ಹೇಗೆ ಅಸಾಧ್ಯವೋ ಹಾಗೆ ಶಿವಾನುಭವದ ಮಹದರಿವಿಲ್ಲದೆ ಸ್ವಸ್ವರೂಪದ ಪರಿಪೂರ್ಣತೆ ಅಳವಡುವಂತಿಲ್ಲ. ಪರಿಪೂರ್ಣತೆ ಅಳವಡಲು ‘ಶಿವಾನುಭವ ದರ್ಪಣ ʼಕೃತಿ ಮಾರ್ಗದರ್ಶಕ.
ಡಾ.ಫ.ಗು.ಹಳಕಟ್ಟಿ, ಪ್ರೊ.ಶಿ.ಶಿ.ಬಸವನಾಳ ಅವರಿಂದ ಸಂಪಾದಿತ ಈ ಕೃತಿ ಈಗ ನನ್ನಿಂದ “ಮೈಲಾರ ಬಸವಲಿಂಗ ಶರಣರ ಸಮಗ್ರ ಸಾಹಿತ್ಯ’ ಎಂಬ ಗ್ರಂಥದಡಿಯಲ್ಲಿ ಹೆಚ್ಚು ಪದ್ಯಗಳು ಸೇರಿ ೭೫ ಪದ್ಯಗಳ ಸಂಕಲನ ಸಂಗ್ರಹದಲ್ಲಿ ಪ್ರಕಟಗೊಂಡಿದೆ.
ಫ.ಗು.ಹಳಕಟ್ಟಿ, ಶಿ.ಶಿ. ಬಸವನಾಳ ಅವರಲ್ಲಿ ವಿಭಜನೆಗೊಳಪಡಿಸದೆ ಸಂಪಾದಿಸಿದರೆ, ನಾನು ಸಂಪಾದಿಸಿದ ಕೃತಿಯಲ್ಲಿ ೮ ವಿಭಜನೆಗಳನ್ನು ಸಂಕಲಿಸಿ ಪ್ರಕಯಿಸಿದೆ. ಅವು-
೧. ಅಷ್ಟಾವರಣ-| ೨. ಅಷ್ಟಾವಣ – ೩. ಪಂಚಾಚಾರ ೪. ಷಟ್ಸ್ಥಲ ೫, ನರಸುತ – ಗುರುಸುತ, ಭವಿ-ಭಕ್ತ ಇತ್ಯಾದಿ ೬. ಬೆಡಗಿನ ಪದಗಳು ೭. ಚರಿತ್ರೆ ೮. ಮಂಗಳಾರತಿ.
ಅಷ್ಟಾವರಣ ಭಾಗ -೧ ರಲ್ಲಿ ಗುರು-ಲಿಂಗ- ಜಂಗಮ- ಪಾದೋದಕ-ಪ್ರಸಾದ- ವಿಭೂತಿ-ರುದ್ರಾಕ್ಷಿ-ಮಂತ್ರಗಳನ್ನು ಕುರಿತಂತೆ ೮ ವಿಧಗಳಿಗೆ ಅನ್ವಯಿಸಿ ಪದ್ಯಗಳನ್ನು ಮೀಸಲಾಗಿರಿಸಿ ಪದ್ಯ ೧ರಿಂದ ೩೮ರವರೆಗೆ ವಿವಿಧ ರಾಗ-ತಾಳ-ನಿರ್ದೇಶನದಡಿಯಲ್ಲಿ
“ಗುರು ಚೆನ್ನವೀರ” ಅಂಕಿತದಿಂದ ಪಲ್ಲವಿ-ಅನುಪಲ್ಲವಿಗಳ ಮೂಲಕ ೩ ನುಡಿಯಿಂದ ೧೫-೨೦ ನುಡಿಗಳವರೆಗೆ ಒಂದೊಂದು ತತ್ತ್ವದ ವಿವರಣೆ ನೀಡಿದ್ದಾರೆ, ಮೈಲಾರ ಬಸವಲಿಂಗ ಶರಣರು.
ಮೈಲಾರ ಬಸವಲಿಂಗ ಶರಣರು ಅಷ್ಟಾವರಣ ಭಾಗ-೨ರಲ್ಲಿ ಪದ್ಯ ೩೯ರಿಂದ ಪದ್ಯ ೪೮ರವರೆಗೆ ಒಂದೊಂದು ಪದ್ಯಾಂತರ್ಗತದಲ್ಲಿ ಒಂದೊಂದು ನುಡಿಯಲ್ಲಿ ಒಂದೊಂದು ಅಷ್ಟಾವರಣ ಪರಿಕಲ್ಪನೆಗಳ ವಿವರ ನೀಡಿದ್ದಾರೆ. ಪದ್ಯ ೨೬, ಮಲ್ಲಿಕಾಮಾಲಾವೃತ್ತ ಪದ್ಯ ೪೪ ಚಿತ್ರಪದವೃತ್ತ, ಪದ ೪೫ ವಜ್ರನಾಮವೃತ್ತ ಪದ್ಯ ೪೬ ಸುಲಭ ನಾಮವೃತ್ತ (೨ ಸಾಲು), ಪದ್ಯ ೪೭ ವಿದ್ಯುನ್ಮಾಲಾವೃತ್ತ (೪ ಸಾಲು)ಗಳಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ತಿರುಗಿಸಿ ಪರಿವರ್ತಿಸಿದ ಕ್ರಿಯೆ ಇಲ್ಲಿದೆ. ಕೆಲವೊಂದು ಪದ್ಯಗಳಲ್ಲಿ ತತ್ತ್ವ ಮತ್ತು ಛಂದೋರೂಪಗಳ ಸಮನ್ವಯದೊಂದಿಗೆ ಪದ್ಯ ಕಟ್ಟಿ ರಚಿಸಿದುದು ಅವರ ವಿಶೇಷತೆಯನ್ನು ಸೂಚಿಸುವುದು. ಉದಾ:- (ಪದ) ಅಷ್ಟಾವರಣ ವಾರ್ಧಕ (ಪರತತ್ತ್ವಮೂರ್ತಿಯಷ್ಟಾವರಣ) (ಪಲ್ಲವಿ) ಇಂಥ ವಾರ್ಧಕ ಷಟ್ಪದಿಯ ಆರಂಭದ ಪದ್ಯಗಳು ‘ಸೂಚನೆ’ ಎಂಬ ಸ್ವರೂಪದ ಪಲ್ಲವಿಯನ್ನು ಹೊಂದಿ ಷಟ್ಪದಿಗಿರುವ ಮಾತ್ರಾ ಅಂಥ ಛಂದಗಳೆರಡರ ಮಿಶ್ರಣವನ್ನು ಕಾಣುತ್ತೇವೆ. ಕೆಲವೆಡೆ ಶೈವನಿರಸನ ಸ್ಥಲ, ಗುರುಕರುಣ ಸ್ಥಲ, ವಿಭೂತಿ ಸ್ಥಲ(ಪದ್ಯ೩೩), ರುದ್ರಾಕ್ಷಿ ಸ್ಥಲ (ಪದ್ಯ -೩೭) ಪಂಚಾಕ್ಷರಿ ಸ್ಥಲ (ಪದ್ಯ ೩೮) ಎಂಬ ತಲೆಬರಹದಡಿಯಲ್ಲಿ ಅಷ್ಟಾವರಣ ವಿವರಣೆ ನೀಡಿದ್ದಾರೆ.
“ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ, ಷಟ್ಸ್ಥಲವೇ ಆತ್ಮ’ ಎಂಬುದು ವೀರಶೈವಾನುಭವಿಗಳ ನುಡಿ.ಅಂಗಸ್ವರೂಪವಾದ ಅಷ್ಟಾವರಣಗಳಿಗೆ ಪ್ರಾಣಸ್ವರೂಪವಾದ ಪಂಚಾಚಾರಗಳು ಮುಖ್ಯ. ಅವುಗಳಿಗಿರುವ ಅವಿನಾಭಾವ ಸಂಬಂಧವನ್ನರಿತ ಮೈಲಾರ ಬಸವಲಿಂಗ ಶರಣರು ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರಗಳ ನಿಲುವನ್ನು ೨ ಪದ್ಯಗಳಲ್ಲಿ ಹುದುಗಿಸಿದ್ದಾರೆ. ಆದರೆ ಒಂದು ಪದ್ಯದಲ್ಲಿ ಪಂಚಾಚಾರಗಳ ಜೊತೆ “ಧರ್ಮಾಚಾರ ಸೇರಿಸಿ ವೀರಶೈವಾಚರಣೆಯ ಕೇಂದ್ರಬಿಂದುವನ್ನು ಧರ್ಮಾಚಾರ ಎಂಬ ಆಚಾರದಲ್ಲಿ ವಿವರ ನೀಡಿದುದು ಅವರಿಗಿರುವ ವಿಶೇಷತೆಯೂ ಆಗಿದೆ. ಅದು ಹೀಗಿದೆ:
“ಗುರುಭಕ್ತಿ ಲಿಂಗಪೂಜೆಯು ಜಂಗಮ ದಾಸೋಹ
ಚರತೀರ್ಥ ಸೇವನೆ ಪ್ರಸಾದ ಭೋಗ
ನಿರುಪಮಖಂಡ ಭಕ್ತಿಯನುಳ್ಳ ಭಕ್ತಿಗೆ
ಹರಣ ಕಿರಣವಾಗೊಪ್ಪುವುದೆ ಧರ್ಮಾಚಾರʼʼ
“ಪಂಚಾಚಾರ ಸುಮಾರ್ಗದೊಳು” ಎಂಬ ಪದ್ಯದಲ್ಲಿ ೫ ಆಚಾರ ಲಿಂಗಸಂಬಂಧಗಳೊಂದಿಗೆ ವಿವರಿಸಿ ಪರಿಶುದ್ಧ ಆಚರಣೆಯಿಂದಾಗುವ ಶರಣ ಬದುಕನ್ನು ಕಾಯಕ ದಾಸೋಹ, ನಿರಹಂಕಾರ, ಕಿಂಕರತ್ವ, ವ್ಯಷ್ಟಿ- ಸಮುಷ್ಟಿಗಳ ನಿಲುವನ್ನು
ಪ್ರದರ್ಶಿಸಿ ಮಾರ್ಗ ತೋರಿಸಿದ್ದಾರೆ.
೪. ಷಟ್ ಸ್ಥಲಗಳು: ಧರ್ಮ-ನೀತಿ-ತತ್ತ್ವಗಳ ಪ್ರತಿನಿಧಿಗಳಾದ ಅಂಗ, ಪ್ರಾಣ, ಆತ್ಮ ಸ್ವರೂಪಗಳಾದ ಅಷ್ಟಾವರಣ-ಪಂಚಾಚಾರ-ಷಟ್ಸ್ಥಲಗಳು ವೀರಶೈವ ಸಿದ್ಧಾಂತದ ಕೇಂದ್ರಬಿಂದುಗಳು. ಇವುಗಳಲ್ಲಿ ಷಟ್ಸ್ಥಲಗಳ ಭಾಗ ಒಂದು. ವೀರಶೈವ ಸಿದ್ಧಾಂತವಾದ “ಷಟ್ಸ್ಥಲ ಸಿದ್ಧಾಂತ” ವನ್ನು ಶಿವಯೋಗದ ಮೂಲಕ ಹೇಗೆ ಸಾಧನಾಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ. ಸಾಧಕ ಅಷ್ಟಾವರಣವನ್ನು ಅಂಗವಾಗಿಸಿ, ಪಂಚಾಚಾರವನ್ನೇ ಪ್ರಾಣವಾಗಿಸಿ, ಷಟ್ಸ್ಥಲವನ್ನೇ ಆತ್ಮವಾಗಿಸಿ ನಡೆವುದು ಮುಖ್ಯ. ಚಕ್ರದಳ-ಮುಖಲಿಂಗ-ಪ್ರಸಾದ-ಜಪಾಂತರ್ಗತ ಷಟ್ಸ್ಥಲವನ್ನು ತತ್ತ್ವ ಹಾಗೂ ಛಂದಸ್ಸಿನ ಅವಿನಾಭಾವದಿಂದ ಪರಿವರ್ಧಿನಿ ಷಟ್ಪದಿಯಲ್ಲಿ ರಚನೆಗೊಂಡ “ಸಾಲು ಚಕ್ರದಳ ಕುಳದ ಸುಹಂಸನ” ಎಂಬುದು “ಷಟ್ಚಕ್ರ ಪರಾಗ ಪರಿವರ್ಧಿನಿ” ಅಥವಾ ‘ಷಟ್ ಸ್ಥಲ ನಿರ್ಣಯ ಪದ” ಎಂಬ ಅಭಿದಾನದಿಂದ ಸೂಚಿಸಿದುದು ಶರಣರ ಆಧ್ಯಾತ್ಮವಿದ್ಯೆಯ
ಚಮತ್ಕಾರಕ್ಕೆ ನಿದರ್ಶನ.
ವೀರಶೈವ ಸಿದ್ಧಾಂತವನ್ನು ಶಿವಶರಣರು ʼಷಟ್ಸ್ಥಲ ನಿರಾಭಾರಿ ವೀರಶೈವʼʼ ಎಂದು ಕರೆದಂತೆ ಇವರುʼʼ ಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼದ ಮೂಲಭೂತ ತತ್ತ್ವಗಳನ್ನು ಚಿಕ್ಕ ಚಿಕ್ಕ ಪದ್ಯಗಳಲ್ಲಿ ರಚಿಸಿದ್ದಾರೆ. ಎರಡು ಕೃತಿಗಳನ್ನೂ ಮೀಸಲಾಗಿರಿಸಿ ವೀರಶೈವ ವೆಂದರೇನು ? ಶಿವನಾರು ಜೀವನಾರು ? ಅವನ ಕೊನೆಯ ನಿಲುವೇನು ? ಎಂಬಂಥ ಮೂಲಭೂತ – ಪ್ರಶ್ನೆಗಳನ್ನೊಡ್ಡಿ ಅರ್ಥೈಸುತ್ತ ಹೋದುದು “ವೀರಶೈವ ದ ಸ್ಪಷ್ಟ ಹೆಜ್ಜೆಗಳನ್ನು ನಿಚ್ಚಳವಾಗಿ ಶೈವ ಮಿಶ್ರಮಾಡದೆ ನಿರೂಪಿಸುತ್ತಾರೆ. ʼʼಖಚಿತತೆ ಸಂಕ್ಷಿಪ್ತತೆ-ಸ್ಪಷ್ಟತೆʼʼ ಇವರ ಕೃತಿಗಳ ಒಟ್ಟು ಸಾರವಾಗಿದೆ. ವಿಜ್ಞಾನ ಧೋರಣೆಯ ಬುದ್ಧಿ ಇವರಿಗಿರುವುದು ಇವರ ಕೃತಿಗಳ ಅವಲೋಕನದಿಂದ ಸಾಧ್ಯವಾಗುತ್ತದೆ.
ವೀರಶೈವದಲ್ಲಿ ತುಂಬಾ ಪ್ರಚುರತೆ ಪಡೆದ ಮೈಲಾರ ಬಸವಲಿಂಗ ಶರಣರ ಕೃತಿಗಳು ಶಿವಾನುಭವ ಬೋಧಕ ಪಠ್ಯಗಳಂತೆ, ಕೀರ್ತನೆಕಾರರಿಗೆ ಮಂಗಲಪದ್ಯಗಳಂತೆ ಪಾರಾಯಣ, ಮಾಡುವವರಿಗೆ ಕೈಪಿಡಿಗಳಂತೆ ಉಪಯುಕ್ತವಾಗಿದೆ. ಮಠಗಳಲ್ಲಿ ಪ್ರಾರ್ಥನಾಗೀತೆಗಳಾಗಿ, ಭಜನೆಪದಗಳಾಗಿ, ವೀರಶೈವದ ಖಚಿತ ವಿವರ ನೀಡುವ ವಿದ್ವಾಂಸರಿಗೆ ಉಲ್ಲೇಖನೀಯ ಪದ್ಯಗಳಾಗಿ ನಿಂತಿರುವುದು ಅವರ ಕೃತಿಗಳಿಗಿರುವ ನೆಲೆ-ಬೆಲೆಯನ್ನು ಅವರಿಗಿರುವ ಸ್ಥಾನವನ್ನು ಸೂಚಿಸುವಂತಿವೆ. ಒಟ್ಟು ಶರಣ ಸಾಹಿತ್ಯ
ಮುಂದೆ ರಚಿತವಾದ ಸರ್ವಮತಧರ್ಮದವರ ಮೇಲೆ, ಸಾಹಿತ್ಯದ ಮೇಲೆಪ್ರಭಾವ ಬೀರಿದ್ದನ್ನು ಮರೆಯುವಂತಿಲ್ಲ.