ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೮೬೭-೧೯೩೦ ಕಾಲಮಾನ ಮತ್ತು ಅಂದಿನ ಸಮಾಜದ ಸ್ತಿತಿ ಗತಿಗಳ ಬಗ್ಗೆ ವಿವರವಾದ ಸಂಗತಿಗಳ ಸಂಗ್ರಹ ಸಂಧರ್ಭದಲ್ಲಿ ಶ್ರೀ ಬಸವರಾಜ ಪುರಾಣಿಕ ಅವರ ಒಂದು ಲೇಖನ ಗಮನ ಸೆಳೆಯಿತು

ಶ್ರೀ ಕುಮಾರ ಶಿವಯೋಗಿಗಳ ಕಾಲವು ವೀರಶೈವ ಸ್ಥಿತಿಗತಿಗಳ ಶೋಚನೀಯ ಕಾಲವೂ ಹೌದು, ಸೌಭಾಗ್ಯದ ಕಾಲವೂ ಹೌದು ಎಂದೆನಬೇಕಾಗುತ್ತದೆ. ಹಲವಾರು ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದಾಗಿ

ಸಮಾಜವು ಒಮ್ಮೆಲೇ ಮೈಕೊಡವಿಕೊಂಡು ಎಚ್ಚತ್ತು ವಿವೇಕಯುತವಾಗಿ ವರ್ತಿಸಿ ಸಮಾಜದ ನಿಶ್ಚಿತ ಗತಿ ಗಮನಗಳನ್ನು ಗುರುತಿಸಿಕೊಂಡುದು, ಸಕ್ರಿಯವಾಗಿ, ಸಾಂಘಿಕವಾಗಿ ಸಾಗಿ ಬಂದು ಸಾರ್ಥಕತೆಯ ನೆಲೆ ತಲುಪಿದುದನ್ನು ಇತಿಹಾಸವಿಂದು ತಿಳಿಯಪಡಿಸುತ್ತದೆ.

ಈ ಕಾಲ ಸಂದರ್ಭದ ವೀರಶೈವ ಸಮಾಜದಲ್ಲಿ ಅನೇಕ ಮಹನೀಯರು ಕಂಡುಬರುತ್ತಾರೆ.

ಗ್ರಂಥ ಪ್ರಚಾರ ಮಾಡಿದ ಮಹನೀಯರು ಕೆಲವರು,

ವಿದ್ಯಾಪ್ರಚಾರ ಮಾಡಿದ ಪುಣ್ಯಾತ್ಮರು ಕೆಲವರು

ತತ್ವೋಪದೇಶ ಮಾಡಿದವರು ಕೆಲವರು,

ಪಾಠಶಾಲೆಗಳನ್ನು ಸ್ಥಾಪಿದವರು ಕೆಲವರು,

ಯೋಗವಿದ್ಯೆಯನ್ನು ಕಲಿಸಿದವರು ಕೆಲವರು,

ಪರವಾದಿಗಳ ನಿಗ್ರಹ ಮಾಡಿದವರು ಕೆಲವರು,

ಸದಾಚಾರಕ್ಕೆ ಮಾರ್ಗದರ್ಶಕ ರಾದವರು ಕೆಲವರು,

ಸಮಾಜದ ಸಂಘಟನೆಗಾಗಿ ಪ್ರಯತ್ನಿಸಿದವರು ಕೆಲವರು,

ಸರ್ವಾರ್ಪಣ ಮಾಡಿದವರು ಕೆಲವರು,

ಜನರನ್ನು ಸಂಘಟಿಸಿ ಒಂದು ಧೈಯಕ್ಕೆ ಒಡ್ಡಿದವರು ಕೆಲವರು.

ಈ ಎಲ್ಲರನ್ನೂ ಇವೆಲ್ಲವನ್ನೂ ಸಾಧಿಸಿದ ಸಿದ್ಧಿಸಿದ ಏಕೈಕ ವ್ಯಕ್ತಿ ಎಂದರೆ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು,

 

ಶ್ರೀಗಳು ಕೀರ್ತಿಯನ್ನು ತಿರಸ್ಕರಿಸಿದರು. ಆದರೆ ಕೀರ್ತಿ ಅವರನ್ನು ಎಡಬಿಡದೆ ಪುರಸ್ಕರಿಸಿತು.

ಅವರು ಪಲ್ಲಕ್ಕಿಯನ್ನೇರಲಿಲ್ಲ. ಆದರೆ ಪಲ್ಲಕ್ಕಿಯನ್ನೇರಿದವರು ಇವರ ಸನ್ನಿಧಿಗೆ ಎರಗದಿರಲಿಲ್ಲ.

ಪರಮಾಶ್ಚರ್ಯ ದ ಸಂಗತಿಯೆಂದರೆ,

ಶ್ರೀಗಳ ೬೩ ವರ್ಷದ ಈ ಜೀವನ ಯಾತ್ರೆಯಲ್ಲಿ ಅವರು ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿದ್ದು ತಮ್ಮ ೩೬ನೆಯ ಪ್ರಾಯಕ್ಕೆ, ಮುಂದಿನ ೨೭ ವರ್ಷದ ಆಯುಷ್ಯದ ಪ್ರತಿ ಕ್ಷಣವೂ ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಿತ್ತು ಸಮಾಜದ ಏಳೆಯ ಬಯಕೆಯು ಅವರ ಹಸ್ತವು ಅವರ ಸನಿಹಕ್ಕೆ ಬರುತ್ತಿದ್ದ ಸಮರ್ಥ ವ್ಯಕ್ತಿ ತಂತಿಗಳನ್ನು ಮೀಟುತ್ತಿತ್ತು’ ಎಂಬ

ಜಚನಿಯವರ ಮಾತುಗಳು ಕಾವ್ಯಮಯವಾಗಿದ್ದರೂ ಶ್ರೀಗಳ ಅಂತಶ್ವೇತನದ ಚಿತ್ರವನ್ನೇ ನೀಡುತ್ತವೆ.


ಶ್ರೀಕುಮಾರ ತರಂಗಿಣಿ  ೨೦೨೪ ಫೆಭ್ರುವರಿ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-32 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ತಪೋಭೂಮಿ-ತತ್ವಪ್ರೇಮಿ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ಆಶೆ-ಆಮಿಷ;ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಗುರುವಿನ ಅವಶ್ಯಕತೆ ನಮಗೆ ಏಕೆ ಬೇಕು : ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು ಹೂವಿನಶಿಗ್ಲಿ ಶ್ರೀ ವಿರಕ್ತಮಠ
  6. ಶ್ರೀ ಮೈಲಾರ ಬಸವಲಿಂಗ ಶರಣರ ದೃಷ್ಟಿಯಲ್ಲಿ ಅಷ್ಟಾವರಣ. ಸಂಗ್ರಹ -ಸಂಪಾದನೆ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣ ತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

 

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

  

ಹೊರಗುರಿಯಲೊಳಗನ್ನ | ಪರಿಪಕ್ವವಾದಂತೆ

ಹೊರಗಣ ಸತ್ಕ್ರಿಯಾಂ-ತರದ ಸುಜ್ಞಾನವೆಂ-

ದೊರೆದ ಶ್ರೀಗುರುವೆ ಕೃಪೆಯಾಗು     || ||

 

ಈ ದಾರ್ಶನಿಕ ಶಿವಕವಿಯು ಲಿಂಗಭಕ್ತನು ಲಿಂಗರೂಪನು ಹೇಗಾಗಬಲ್ಲ ನೆಂಬುದನ್ನೂ, ಲಿಂಗಮಯನೆನಿಸಿದ ಲಕ್ಷಣವನ್ನು ದೃಷ್ಟಾಂತ ಪೂರ್ವಕವಾಗಿ ಪ್ರತಿಪಾದಿಸುತ್ತಾನೆ.

 

ಮನುಷ್ಯನಿಗೆ ಎರಡು ಹಸಿವೆಗಳು, ಒಂದು ಹೊಟ್ಟೆಯದು; ಇನ್ನೊಂದು ನೆತ್ತಿಯದು. ಸಾಮಾನ್ಯವಾಗಿ ಸಕಲರೂ ಹೊಟ್ಟೆ ತುಂಬಿಕೊಳ್ಳಲೆಂದು ಪ್ರಯತ್ನಿಸುವರು. ನೆತ್ತಿಯನ್ನು ತುಂಬಿಸಿಕೊಳ್ಳುವವರು ಬಹಳ ವಿರಳ. ಹೊಟ್ಟೆಯನ್ನು ತುಂಬಿಸಿಕೊಳ್ಳಲು ಪದಾರ್ಥಗಳಿದ್ದರೂ ಅವನ್ನು ಸಿದ್ಧಗೊಳಿಸಬೇಕಾಗುವದು. ಪಾಕವಾಗದೇ ದೇಹಕ್ಕೆ ಹಿತವೆನಿಸುವದಿಲ್ಲ. ಕಾರಣ ಅಡಿಗೆಯು ಸಿದ್ಧವಾಗಬೇಕಾದರೆ ಎಲ್ಲ ಸಾಧನ-ಸಾಮಗ್ರಿ ಗಳನ್ನು ಕೂಡಿಸಬೇಕು. ನಂತರ ಸ್ವಚ್ಛಗೊಳಿಸಿ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಒಲೆಯ ಮೇಲಿಟ್ಟರಾಗುವದಿಲ್ಲ. ಕೆಳಗೆ ಚನ್ನಾಗಿ ಅಗ್ನಿಯನ್ನು ಪುಟಗೊಳಿಸಬೇಕಾಗುವದು. ಅಗ್ನಿಯ ಸಂಸ್ಕಾರವಿಲ್ಲದೆ ಅಕ್ಕಿಯು ಬೇಯದು. ಅನ್ನವಾಗದು. ಇದರಂತೆ ಅಂಗನು ಲಿಂಗಮಯನಾಗಬೇಕಾದರೆ ಸತ್ಕ್ರಿಯೆ ಹಾಗೂ ಸುಜ್ಞಾನಗಳ ಸಂಸ್ಕಾರ ಅವಶ್ಯಬೇಕು.

 

ಲಿಂಗಮಯನಾಗುವದಕ್ಕೆ ಸುಜ್ಞಾನ-ಸತ್ಕ್ರಿಯೆಗಳು ಮುಖ್ಯವೆಂಬುದನ್ನು ಒತ್ತಿ ಹೇಳುತ್ತಾನೆ. ಸುಜ್ಞಾನ-ಸತ್ಕ್ರಿಯೆಗಳ ಸಮನ್ವಯವೇ ವೀರಶೈವ ಸಿದ್ಧಾಂತ. ಕೆಲವು ಶಾಸ್ತ್ರಕಾರರು ಮೋಕ್ಷ ಪ್ರಾಪ್ತಿಗೆ ಕೇವಲ ಜ್ಞಾನವನ್ನು ಪ್ರತಿಪಾದಿಸಿದರೆ, ಹಲವರು ಯಜ್ಞಾದಿ ಕರ್ಮವನ್ನು ಬೋಧಿಸುತ್ತಾರೆ. ನಮ್ಮವರು ಜ್ಞಾನ-ಕರ್ಮಗಳೆರಡೂ ಬೇಕೆಂಬುದನ್ನು ಯುಕ್ತಿ ಯುಕ್ತನಾಗಿ ಮಂಡಿಸುತ್ತಾರೆ.

 

ಜ್ಞಾನಂ ಪ್ರಧಾನಂ ನ ತು ಕರ್ಮಹೀನಂ

ಕರ್ಮಪ್ರಧಾನಂ ನ ಚ ತದ್ವಿಹೀನಮ್ |

ತಸ್ಮಾದ್ವಯೋರೇವ ಭವೇತ್ಪ್ರಸಿದ್ಧಿಃ

ಹ್ಯೇಕಪಕ್ಷೋ ವಿಹಗಃ ಪ್ರಯಾತಿ |

 

ಕರ್ಮರಹಿತವಾದ ಜ್ಞಾನವು ಪ್ರಧಾನವಾಗಬಾರದು. ಅಲ್ಲದೆ ಜ್ಞಾನಹೀನವಾದ ಕರ್ಮವೂ ಮುಖ್ಯವೆನಿಸಬಾರದು. ಉಭಯ ಪ್ರಾಧ್ಯಾನತೆಯಿಂದಲೇ ಮೋಕ್ಷ ಸಿದ್ಧಿಯು ಸಾಧ್ಯವಾಗುತ್ತದೆ. ಯಾಕಂದರೆ ಒಂದೇ ರೆಕ್ಕೆಯಿಂದ ಪಕ್ಷಿಯು ಆಕಾಶದಲ್ಲಿ ಹಾರಲಾರದು. ಅದು ಎರಡೂ ರೆಕ್ಕೆಗಳನ್ನು ಬಡಿಯುತ್ತ ಮಾತ್ರ ಸಂಚರಿಸಬಲ್ಲುದು. ಅದರಂತೆ ಸಾಧಕನು ಸದ್ಗುರುವಿನಿಂದ ಲಿಂಗವನ್ನು ಪೂಜಿಸುವ ಅನುಸಂಧಾನ ಮಾಡುವ ಸುಜ್ಞಾನವನ್ನೂ ಸಂಪಾದಿಸಬೇಕು. ಸುಜ್ಞಾನಯುಕ್ತವಾದ ಆಚರಣೆಯನ್ನು ಅನುಸರಿಸಬೇಕು. ಕರಗತಮಾಡಿಕೊಳ್ಳಬೇಕು. ವಿಜ್ಞಾನ ಕಲಿಯುವ ವಿದ್ಯಾರ್ಥಿಗಳಿಗೆ ಮೊದಲು ಸಿದ್ಧಾಂತವನ್ನು ತಿಳಿಸಿ ನಂತರ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ ಗುರುಗಳು. ನಂತರ ಅವರಿಗೆ ಮಾಡಿ ಹಚ್ಚುತ್ತಾರೆ. ಹಾಗೇನೆ ವೀರಶೈವ ಸಿದ್ಧಾಂತ ದಲ್ಲಿಯೂ ಗುರುಗಳು ಶಿವಜ್ಞಾನವನ್ನು ತಿಳಿಸಿ ಮತ್ತು ಲಿಂಗವನ್ನು ಪೂಜಿಸುವ ವಿಧಾನವನ್ನು ಹೇಳಿ ಕೊಡುವರು. ಅವರು ಬೋಧಿಸಿದಂತೆ ಲಿಂಗಪೂಜಾ ಪದ್ಧತಿಯನ್ನು ಗುರು-ಲಿಂಗ-ಜಂಗಮರ ದಾಸೋಹದ ರೀತಿಯನ್ನು ಅಳವಡಿಸಿಕೊಳ್ಳ ಬೇಕಾಗುವದು. ಅಂದರೆ ಮಾತ್ರ ಅಂಗನು ಲಿಂಗಮಯನಾಗುವನು. ಲಿಂಗಪೂಜೆ ಯೆಂಬುದು ಪ್ರಯೋಗವಿದ್ದಂತೆ. ಅಂತೆಯೇ ನಮ್ಮ (ಶರಣ) ಸಿದ್ಧಾಂತಕ್ಕೆ ಪ್ರಾಯೋಗಿಕಸಿದ್ಧಾಂತ ಅಥವಾ ಪ್ರಾಯೋಗಿಕದರ್ಶನವೆಂದು ಕರೆದಿದ್ದಾರೆ. ಆದ್ದರಿಂದಲೇ ಇದು ಅತ್ಯಂತ ಮಹತ್ವವನ್ನು ಹೊಂದಿದೆ.

 

ಅನುಭವಿಗಳು ಲಿಂಗಾಂಗಸಮರಸ ಅಥವಾ ಮುಕ್ತಿಗೆ ಜ್ಞಾನಕ್ರಿಯೆಗಳೆರಡೂ ಅತ್ಯವಶ್ಯವೆಂದು ಪ್ರತಿಪಾದಿಸಿದ್ದಾರೆ. ‘ಕೈವಲ್ಯ ಪದ್ಧತಿ’ ಯಲ್ಲಿ ನಿಜಗುಣರು-

 

ಸುಮ್ಮನಾಗದರಿವಿನಿಂದವೆ ಮುಕುತಿ

ನೆಮ್ಮಿಲೇಸೆನಿಸುವ ಗುಣಗಣವಿಲ್ಲದವನಿಗೆ

 

ಮತ್ತು ‘ಪರಮಾನುಭವ ಬೋಧೆ’ ಯಲ್ಲಿಯೂ ಕೆಳಗಿನಂತೆ ಹಾಡಿದ್ದಾರೆ.

 

ಅರುವಿನೊಳ್ಕೂಡಿ ತನ್ನನು ವಿಚಾರಿಸುವಾಗ

ಳರಿವುಮಾ ಸುವಿಚಾರ ಕ್ರಿಯೆಯವು

ನೆರೆಬಿಚ್ಚದಿರೆ ಮುಕ್ತಿಯೆಂಬುದು ಮಿಶ್ರ

ವರಿ ನೀನು ನಿರ್ಮಳಮತಿವಂತೆ

 

ಶ್ರೀಕಂಠ ಶಿವಾಚಾರ್ಯರು ತಾವೇ ಪ್ರಶ್ನಿಸಿ ಉತ್ತರಿಸಿದ್ದಾರೆ-

 

ಕಿಂ ಮೋಕ್ಷತರೋರ್ಬಿಜಮ್ ?

ಸಮ್ಯಕ್ ಜ್ಞಾನಂ ಕ್ರಿಯಾಸಹಿತಮ್

 

ಮೋಕ್ಷವೆಂಬ ವೃಕ್ಷದ ಬೀಜವಾವುದೆಂದರೆ ಕ್ರಿಯಾಸಹಿತವಾದ ಸುಜ್ಞಾನವಾಗಿದೆ. ಎಲ್ಲ ಶಿವಶರಣರೂ ಕ್ರಿಯಾಜ್ಞಾನ ಸಮಸಮುಚ್ಚಯವನ್ನು ಚೆನ್ನಾಗಿ ವಿವರಿಸಿದ್ದಾರೆ. ದೇವರ ದಾಸಿಮಾರ್ಯರು-

 

ಅಗ್ನಿ ಸುಡಲಲ್ಲದೆ ಸುಳಿಯಲರಿಯದು.

ವಾಯು ಸುಳಿವುದಲ್ಲದೆ ಸುಡಲರಿಯದು.

ಆ ಅಗ್ನಿ ವಾಯು ಕೂಡಿದಲ್ಲದೆ ಅಡಿ ಇಡಲರಿಯದು.

ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ ರಾಮನಾಥ.

 

ಅಗ್ನಿ-ವಾಯುಗಳೆರಡೂ ಕೂಡಿದಲ್ಲದೆ ಸುಡುವ ಕ್ರಿಯೆ ನಡೆಯದು. ಹಾಗೆ ಸಾಧಕವ ಕ್ರಿಯಾ-ಜ್ಞಾನಗಳನ್ನು ಅರಿತು ಸಮನ್ವಯ ಮಾಡಿಕೊಳ್ಳಬೇಕು ಶಿವಲೆಂಕ ಮಂಚಣ್ಣಗಳು-

 

ಕ್ರೀಯ ಮರೆದಲ್ಲಿ ಅರಿವು ಹೀನವಾಗಿಪ್ಪುದು,

ಅರಿವ ಮರೆದಲ್ಲಿ ಜ್ಞಾನ ಹೀನವಾಗಿಪ್ಪುದು,

ಜ್ಞಾನವ ಮರೆದಲ್ಲಿ ಬೆಳಗಿನ ಕಳೆ ನಷ್ಟವಾಯಿತ್ತು.

ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವು.

ಅವರಿಗೆ ಮರೆಯಾಗಿ ತೊಲಗಿದ.

 

ಅಮುಗಿದೇವಯ್ಯಗಳು-

 

ಜ್ಞಾನದಲರಿಯದಡೇನಯ್ಯ, ಕೀಯನಾಚರಿಸದನ್ನಕ್ಕ ?

ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ ?

ಕುರುಡ ಕಾಣ ಪಥವ, ಹೆಳವ ನಡೆಯಲರಿಯ

ಒಂದಿಲ್ಲದಿರ್ದಡೊಂದಾಗದು

ಜ್ಞಾನವಿಲ್ಲದಿರ್ದ ಕ್ರೀಜಡನು

ಕ್ರೀಯಿಲ್ಲದ ಜ್ಞಾನ ವಾಗ್‌ಜಾಲ ಭ್ರಾಂತು

ಇದು ಕಾರಣ ಸಿದ್ಧಸೋಮನಾಥಲಿಂಗವ ಕೂಡುವ

ಶರಣಂಗೆ ಎರಡೂ ಬೇಕು

 

ಆಯ್ದಕ್ಕಿ ಮಾರಯ್ಯ ಶರಣರು-

 

ಮನದಲ್ಲಿ ಹುಟ್ಟಿದ ಅರಿವು

ಮಾಡುವ ಮಾಟದಲ್ಲಿ ಕಾಣಬಹುದು.

ಶರಣರ ಸಂಗಕ್ಕೆಳಸಿದ ಚಿತ್ತವ

ಅನುಭಾವದಲ್ಲಿ ಕಾಣಬಹುದು

ಒಳಹೊರಗೆ ತೆರೆಹಿಲ್ಲದ ಕೂಟ ನಿನ್ನದು

ಅಮರೇಶ್ವರ ಲಿಂಗದಲ್ಲಿ ಸಂಗನಬಸವಣ್ಣಾ

ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.

 

ಜ್ಞಾನನಿಧಿ ಚನ್ನಬಸವಣ್ಣನವರು-

 

ಕ್ರಿಯೆ ಜಡವೆಂಬರು, ಜ್ಞಾನ ಅಜಡವೆಂಬರು, ಅದೆಂತಯ್ಯಾ ?

ನೀತಿಯು ಹೇಳಿದುದು ಜಡವೆ ?

ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ

ಭವಕ್ಕೆ ಹೋಗುವದು ಅಜಡವೆ ?

ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ,

ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ,

ಕೂಡಲ ಚನ್ನಸಂಗಮದೇವಾ ? || ೪೪೦ ||

 

ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ

ಜ್ಞಾನವೆಂದಡೆ ತಿಳಿಯುವುದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು,

ಪರಸ್ತ್ರೀಯ ಭೋಗಿಸಬಾರದೆಂಬುದ ಜ್ಞಾನ,

ಅದರಂತೆ ಆಚರಿಸುವುದೆ ಕ್ರಿಯೆ.

ಅಂತು ಆಚರಿಸದಿದ್ದಡೆ, ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವಾ ॥ ೧೦೮೭ ॥

 

ಮೇಲಿನ ವಚನಗಳಲ್ಲಿ ಯಾವತ್ತೂ ಶರಣರು ಜ್ಞಾನ-ಕ್ರಿಯೆಗಳ ಸಂಗಮವನ್ನು  ಸುಂದರವಾಗಿ ಪ್ರತಿಪಾದಿಸಿದ್ದಾರೆ. ಜ್ಞಾನ-ಕ್ರಿಯೆಗಳಿಲ್ಲದೆ ಲಿಂಗಾಂಗ ಸಾಮರಸ್ಯದ ಸುಖ ಸಮನಿಸುವದಿಲ್ಲ. ಕ್ರಿಯೆಯನ್ನು ಮರೆತರೆ ಅರಿವು ಹೀನವೆನಿಸುವದು. ಅರಿವನ್ನು ಮರೆತರೆ ಜ್ಞಾನ ಹೀನವಾಗುವದು. ಶರಣರ ವ್ಯಾಖ್ಯಾನ ಬಹುಸೂಕ್ಷ್ಮವಾಗಿದೆ. ಕ್ರಿಯೆ

ಮತ್ತು ಅರಿವುಗಳ ಸಮನ್ವಯದಲ್ಲಿಯೇ ಜ್ಞಾನದ ಬೆಳಕು ಬೆಳಗುವದೆಂದಿದ್ದಾರೆ. ಈ ಬೆಳಕೇ ಅನುಭಾವ.  ಕ್ರಿಯೆಯಿಲ್ಲದ ಜ್ಞಾನದಿಂದ ಸಾಧ್ಯವು ಸಿಗುವದಿಲ್ಲ. ಯಾಕೆಂದರೆ ಕುರುಡನೇ ತನ್ನ ಪಥವನ್ನು ಗುರುತಿಸಲಾರ. ಅದರಂತೆ ಹೆಳವನು ಪಥವನ್ನು ತಿಳಿದರೂ ಆ ದಾರಿಯನ್ನು ತುಳಿಯಲಾರನು ಅವರಿಬ್ಬರೂ ಒಂದುಗೂಡಿದಲ್ಲಿ ತಮ್ಮ ಗುರಿಯನ್ನು ಮುಟ್ಟಬಹುದು. ಹಾಗೆ ಕೇವಲ ಕ್ರಿಯೆ ಕುರುಡನಂತಾದರೆ ಕೇವಲ ಜ್ಞಾನ ಹೆಳವನಂತಿದೆ. ಒಂದಕ್ಕೆ ಚಾಲನೆಯಿದ್ದರೆ ತನ್ನ ಗುರಿಯನ್ನು ಗುರುತಿಸುವ ಶಕ್ತಿಯಿಲ್ಲ. ಇನ್ನೊಂದಕ್ಕೆ ಗುರಿ ನೋಡುವ ಶಕ್ತಿಯಿದ್ದರೆ ಚಾಲನ ಶಕ್ತಿಯಿಲ್ಲ. ಕಾರಣ ಕ್ರಿಯಾ ಜ್ಞಾನಗಳೆರಡೂ ಶಿವಪಥವನ್ನು ತಲುಪಿಸಲು ಶಕ್ಯವಾಗುವವು ಮತ್ತು ಜ್ಞಾನಕ್ಕೆ ಮೂರ್ತತೆಯಿಲ್ಲ, ಅದು ಮಾಡುವ ಮಾಟದಿಂದಲೇ ವೇದ್ಯವಾಗಬೇಕು. ಅಂದ ಬಳಿಕ ಕ್ರಿಯಾ-ಜ್ಞಾನಗಳಿಂದಾದ ಅನುಭಾವದಲ್ಲಿ ನೆಲೆನಿಂತ ಶರಣರನಿಲವು ಘನವಾದುದು. ಷಟ್‌ಸ್ಥಲ ಬ್ರಹ್ಮಿ ಜ್ಞಾನನಿಧಿ ಚನ್ನಬಸವಣ್ಣನವರ ಕ್ರಿಯಾ-ಜ್ಞಾನಗಳ ವಿಮರ್ಶೆ ಮಿಗಿಲಾಗಿದೆ. ಸುಸ್ಪಷ್ಟವಾದ ಕ್ರಿಯಾ-ಜ್ಞಾನಗಳ ಅಭಿನ್ನತೆಯನ್ನು ಅಥವಾ ಸಮಸಮುಚ್ಚವನ್ನು ಒತ್ತಿ ಹೇಳಿದ್ದಾರೆ.

 

ಶಿವಾದ್ವೈತ ದರ್ಶನ’ದಲ್ಲಿ ಜ.ಚ.ನಿ. ಯವರು ಜ್ಞಾನಕ್ರಿಯೆಗಳ ವಿಚಾರವನ್ನು ಮನನೀಯವಾಗಿ ತಿಳಿಸಿದ್ದಾರೆ-

 

“ಶಿವಾದ್ವೈತ ತತ್ತ್ವದ ಕ್ರಿಯೆಯೆಂದರೆ ಕರ್ಮವಲ್ಲ. ಕರ್ಮನಿರ್ಮಲ ವಾದುದೇ ಕ್ರಿಯೆ. ಕ್ರಿಯಾ ದೀಕ್ಷೆಯ ತೇಜ ಉದಯವಾದೊಡನೆ ಕರ್ಮಕತ್ತಲೆ ಹರಿದು ಹೋಗಿರುತ್ತದೆ. ಅನಿತ್ಯ ಫಲದಾಯಕ ಪ್ರಾಕೃತ ಯಾಗಾದಿ ಜಡಕರ್ಮಗಳೆಲ್ಲ ಕಾಲ್ಕೀಳುತ್ತವೆ. ಕಾರಣ ಕರ್ಮಕ್ಕೆ ಮರಳಿ ಅವಕಾಶವಿಲ್ಲ, ಕರ್ಮವೆಂದರೆ ಅನಾಚಾರ, ಕ್ರಿಯೆಯೆಂದರೆ ಸದಾಚಾರ. ಜ್ಞಾನವಿಲ್ಲದ್ದು ಕರ್ಮ, ಜ್ಞಾನವುಳ್ಳದ್ದು ಕ್ರಿಯೆ. ಕರ್ಮ ರೋಗ; ಕ್ರಿಯೆ ಯೋಗ, ʼ’ಪೂರ್ವಜನ್ಮಕೃತಂ ಕರ್ಮ ವ್ಯಾಧಿರೂಪೇಣ ಬಾಧತೇʼʼ ಎಂಬುದು ಕರ್ಮವೆ ರೋಗವೆಂಬುದನ್ನು ಸಾರಿದೆ. ʼʼಯೋಗಃ ಕರ್ಮಸು ಕೌಶಲಂʼʼ  ಕರ್ಮ ಕೌಶಲ್ಯವೆ ಅಂದರೆ ಕ್ರಿಯೆಯೆ ಯೋಗವೆಂದು ಗೀತೆ ಪ್ರತಿಪಾದಿಸಿದೆ. ಜೀವನದ ಆಚಾರ ವಿಚಾರ ರೂಪ ಧರ್ಮವೆ ಕ್ರಿಯೆ. ಇಲ್ಲಿ ಕ್ರಿಯೆಯೆಂಬ ಪದವು ಬಹುಸೂಕ್ಷ್ಮ ವಾಗಿ ಸೂಚ್ಯವಾಗಿದೆ. ನಿರಂತರ ನಡೆವ ನಮ್ಮ ಒಳಹೊರಗಿನ ಕಾರ್ಯಗಳೆಲ್ಲ ಕ್ರಿಯೆಗಳಾಗಬೇಕಾದರೆ ಶಿವಾರ್ಪಣವಾಗಿರಬೇಕು; ಶಿವಾರ್ಥವಾಗಿರಬೇಕು. ಜೀವನ ಪ್ರತಿಯೊಂದು ಚಲನವೂ ಶಿವಮಯವಾಗಬೇಕು. ಉಸಿರಾಡುವಾಗ, ಉಲ್ಲಾಸಿಸು ವಾಗ, ಸ್ನಾಯು ಸ್ಪಂದಿಸುವಾಗ ಹೃದಯ ಹಂಬಲಿಸುವಾಗ, ಕಣ್ಣು ಎವೆ ಹಳಚುವಾಗ, ನುಡಿವಾಗ ನಡೆವಾಗ ಕುಳಿತಾಗ ಮಲಗಿದಾಗ ಅರಿವಾಗ ಆಲೋಚಿಸುವಾಗ ಯಾವುದೇ ಕಾರ್ಯವನ್ನು ಕಾಯಕವನ್ನು ಮಾಡುವಾಗ ಶಿವಭಾವ ಸಮನ್ವಿತರಾಗಿರುವುದೆ ಕ್ರಿಯೆಯೆ೦ದೆನಿಸುತ್ತದೆ”.ʼʼ

 

ಕ್ರಿಯಾ ಜ್ಞಾನಗಳೆರಡೂ ಜೀವನ ರಥದ ಚಕ್ರಗಳು. ಇವಿಲ್ಲದೆ ರಥ ಸುಗಮವಾಗಿ ಸಾಗದು, ಒಂದೇ ಗಾಲಿಯಿಂದ ಗಮ್ಯಸ್ಥಾನವನ್ನು ಮುಟ್ಟದು. ಒಂದೇ ರೆಕ್ಕೆಯಿಂದ ಪಕ್ಷಿ ಹಾರದು, ಲಿಂಗಾಂಗ ಸಮರಸ ಅಥವಾ ಶಿವಯೋಗದ ನಿಲವನ್ನು ಸಾಧಿಸಲು ಜ್ಞಾನ-ಕ್ರಿಯೆಗಳೆರಡೂ ಅವಶ್ಯ. ಅಣ್ಣ ಬಸವಣ್ಣ ಈ ಜ್ಞಾನ ಕ್ರಿಯೆಗಳ ಸಮನ್ವಯದಿಂದಲೇ ಲಿಂಗವಾಗಿದ್ದ, ಜಂಗಮ ಪ್ರಾಣಿಯೆನಿಸಿದ್ದ, ನಡೆ-ನುಡಿಯಲ್ಲಿ ಏಕಾರ್ಥವನ್ನು ಸಾಧಿಸಿದ ಮಹಾನುಭಾವಿಯಾಗಿದ್ದ ಅವನಲ್ಲಿಯೇ ಕೈಲಾಸ ನೆಲಸಿತ್ತು.

 

ಪರಮಗುರವೆ ! ಎನ್ನ ಸತ್ಕ್ರಿಯೆಯು ಅಂತರಂಗದ ಸುಜ್ಞಾನವನ್ನು ಹಾಗೂ ಅನುಭಾವವನ್ನು ಹೊರಸೂಸುವಂತೆ ಹರಸು, ಎನ್ನ ಸತ್ಕ್ರಿಯೆಯಿಂದಲೇ ಎನ್ನ ಶರಣ ಭಾವ ವ್ಯಕ್ತವಾಗುವಂತಾಗಲಿ.

 

 

ಹತ್ತು ಚಕ್ರಗಳಲ್ಲಿ ಇಷ್ಟಲಿಂಗವು  (ಹತ್ತು ಚಕ್ರಗಳ ಗೊತ್ತುಗುರಿ)

 

 

ಕುವರ ಕೇಳೀ ಲಿಂಗ | ನವಚಕ್ರದೊಳಗೆ ತಾ-

ನವ ಲಿಂಗವಾಗಿ ತವೆ ರಾಜಿಸವುದ ಪೇ-

ಳುವೆನೆಂದ ಗುರುವೆ ಕೃಪೆಯಾಗು    ||೧೩೮||

 

ಸದ್ಗುರು ಕೃಪೆಯಿಂದ ಇಷ್ಟಲಿಂಗವನ್ನು ಸತ್ಕ್ರಿಯಾ-ಸುಜ್ಞಾನಗಳಿಂದ ಆರವಯವಗಳಲ್ಲಿ ಧರಿಸುವ ಕ್ರಮವನ್ನು ಅರಿತುಕೊಂಡ ಮೇಲೆ ಸೂಕ್ಷ್ಮ ಶರೀರದ (ಅಂತರಂಗ) ದಲ್ಲಿ ಲಿಂಗಧಾರಣೆಯ ನೆಲೆಯನ್ನು ಹಾಗೂ ಆ ವಿವರವನ್ನು ಶಿವಕವಿಯು ಇನ್ನೂ ತಿಳಿಸುತ್ತಾನೆ. ಸ್ಥೂಲ ತನುವಿನ ಬಹಿರಿಂದ್ರಿಯಗಳಲ್ಲಿ ಲಿಂಗಧಾರಣೆಯ ಕ್ರಮವನ್ನು ತೀವ್ರವಾಗಿ ತಿಳಿಯಬಹುದು. ಆದರೆ ಅಂತರಂಗದ ಲಿಂಗಧಾರಣೆಯ ಕ್ರಮ ಶ್ರಮದಾಯಕ ಹಾಗೂ ಸೂಕ್ಷ್ಮ ಗ್ರಾಹ್ಯವಾದುದು. ಆದರೂ ಪ್ರಯತ್ನದಿಂದ ಅರಿಯಲೇಬೇಕು. ಈಗಾಗಲೇ ನವಚಕ್ರಗಳಲ್ಲಿ ನವಬ್ರಹ್ಮರು ನವಲಿಂಗವಾದುವನ್ನು ಅರಿತಿದ್ದೇವೆ. ಅದುಕಾರಣ ಒಳಹೊರಗೂ ಏಕರೂಪವಾಗುವದೇ ವೀರಶೈವನ ಮುಖ್ಯ ಗುರಿಯಲ್ಲವೆ ? ಮತ್ತು ಇಲ್ಲಿ ಶಿವಭಕ್ತನು ಸತ್ಕ್ರಿಯಾ ಸುಜ್ಞಾನಪೂರ್ವಕ ನಿವೃತ್ತಿ ಕ್ರಮದಿಂದ ಮಹಾಲಿಂಗದಲ್ಲಿ ಬೆರೆಯುವ ಪೂಜಾ ವಿಧಾನವೂ ಅಭಿವ್ಯಕ್ತವಾಗಿದೆ.

ಶಿಷ್ಯನ ಬಿನ್ನಹದಂತೆ ಗುರುವು ನುಡಿಯಬ್ರಹ್ಮವನ್ನು ನಡೆಗೆ ತಂದಿರಿಸುವಾಗ ನವಚಕ್ರಗಳಲ್ಲಿಯ ನವಚೈತನ್ಯವನ್ನು ಒಬ್ಬುಳಿಮಾಡಿ ಇಷ್ಟಲಿಂಗದಲ್ಲಿ ಕರುಣಿಸಿದ ಕಥೆಯನ್ನು ಆಲಿಸಿದ್ದೇವೆ. ಹಿಂದೆ ಅಭ್ಯಸಿಸಿದ್ದೇವೆ. ನವಚಕ್ರಗಳ ವಿವರದೊಡನೆ ನವಬ್ರಹ್ಮರ ದರ್ಶನ ಮಾಡಿದ್ದೇವೆ. ಆ ಬ್ರಹ್ಮ ಚೈತನ್ಯವೆ ಸದ್ಗುರುವಿನ ಶಿವಯೋಗ ಶಕ್ತಿಯಿಂದ ಇಷ್ಟಲಿಂಗವಾಗಿ ಶಿಷ್ಯನ ಅಂಗೈಗೆ ಆಗಮಿಸಿದೆ. ಅದು ಸೃಷ್ಟಿ ಕ್ರಮ ಸೃಷ್ಟಿಯು ಪ್ರವೃತ್ತಿ ಪಥಕ್ಕಿಳಿಸುವದು. ಪ್ರವೃತ್ತಿ ಕ್ರಮದಿಂದ ನಿತ್ಯತ್ವ ಲಭಿಸದು. ನಿವೃತ್ತಿಯನ್ನು ಸಾಧಿಸಬೇಕಾಗುವದು. ಅದುಕಾರಣ ನಿವೃತ್ತಿಮಾರ್ಗದಲ್ಲಿ ಮುನ್ನಡೆಯ ಬೇಕಾಗುವದು. ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳನ್ನು ಅನುಸಂಧಾನ ಮಾಡುತ್ತ ಹತ್ತು ಚಕ್ರಗಳನ್ನು ಹತ್ತಿ ಮಹಾಲಿಂಗದಲ್ಲಿ ಕೂಡುವ ಕಲೆಯನ್ನು ಈ ಕಳಾಗುರುವು ಕರುಣೆಯಿಂದ ಉಪದೇಶಿಸತೊಡಗಿದ್ದಾನೆ- ಕುವರ ! ಕೇಳು” ಎಂದು ಸಂಬೋಧಿಸಿ ಆತ್ಮೀಯತೆಯಿಂದ ತತ್ವವನ್ನು ತಿಳಿಸಿ ಗುರು ತಂದೆಯ ಘನತೆ ಅಪಾರವಾದುದು.

 

ವಾಮಕರದಲ್ಲಿ ಕಾಣುವ ಇಷ್ಟಲಿಂಗವು ಒಂಬತ್ತು ಚಕ್ರಗಳಲ್ಲಿ ಒಂಬತ್ತು ತೆರನಾಗುತ್ತದೆ. ಎಲ್ಲ ಶರಣರು ಷಟ್‌ಚಕ್ರ ಹಾಗೂ ನವಚಕ್ರಗಳನ್ನು ವಿವರಿಸಿದ್ದಾರೆ. ಆದರೆ ನಮ್ಮ ಶಿವಕವಿಗಳು ಅತಿಸೂಕ್ಷ್ಮವಾದ ಹತ್ತನೆಯ ಅಣುಚಕ್ರವನ್ನೂ ನಿರೂಪಿಸಿದ್ದಾರೆ.  ೧. ಆಧಾರ ೨. ಸ್ವಾಧಿಷ್ಠಾನ ೩. ಮಣಿಪೂರಕ ೪. ಅನಾಹತ ೫. ವಿಶುದ್ಧಿ ೬ ಆಜ್ಞಾ ೭ ಬ್ರಹ್ಮರಂಧ್ರ ೮. ಶಿಖಾ ೯. ಪಶ್ಚಿಮ ಹಾಗೂ ೧೦ ಅಣುಚಕ್ರ. ಇವುಗಳಲ್ಲಿ ಕ್ರಮವಾಗಿ ೧. ಆಚಾರಲಿಂಗ ೨. ಗುರುಲಿಂಗ ೩ ಶಿವಲಿಂಗ ೪. ಜಂಗಮ ಲಿಂಗ ೫. ಪ್ರಸಾದಲಿಂಗ ೬ ಮಹಾಲಿಂಗ ೭ ನಿಷ್ಕಳಲಿಂಗ ೮. ನಿಶೂನ್ಯಲಿಂಗ ೯. ನಿರಂಜನಲಿಂಗ ೧೦. ಇವೆಲ್ಲವುಗಳನ್ನೊಳಗೊಂಡ ಅಣುಮಹಾಲಿಂಗವು. ಮುಖ್ಯವಾಗಿ ಹಸಿಗೆಯಾದವು ನವಲಿಂಗಗಳು. ಅಂತೆಯೇ ನವಚಕ್ರದೊಳಗೆ ನವಲಿಂಗವಾಗಿ ಶೋಭಿಸುವ ವಿವರವನ್ನು ಪೇಳುತ್ತೇನೆ. ಚಿತ್ತವಿಟ್ಟು ಕೇಳೆಂದು ಸದ್ಗುರು ಬೋಧಿಸಿದ್ದಾನೆ.

 

ನಿಷ್ಕಲವೆನಿಸಿ ನಿಶೂನ್ಯವಾದ ಮತ್ತು ಕೊನೆಗೆ ನಿರಂಜನ ಸ್ವರೂಪ ಹೊಂದಿದ ಲಿಂಗವು ನಿತ್ಯಪರಿಪೂರ್ಣ ಸಚ್ಚಿದಾನಂದಮಯ ಮಹಾಲಿಂಗದಲ್ಲಿ ಬೆರೆದ ಬಳಿಕ ಯಾವ ವ್ಯವಹಾರವು ನಿಲ್ಲುವದಿಲ್ಲ, ಅಂಥ ಮಹತ್ವವುಳ್ಳುದೇ ಹತ್ತನೆಯ ಮಹಲಿಂಗವು. ಇದು ಅತ್ಯಂತ ಸೂಕ್ಷ್ಮವಾಗಿದ್ದರಿಂದಲೇ ಅಣು ಚಕ್ರದಲ್ಲಿ ಶೋಭಿಸುತ್ತದೆ.

ಜ.ಚ.ನಿ

 

ಆಮೇಲೆ ಏಕಾಂತದಲ್ಲಿ ಏಕಾಂಗಿಯಾಗಿದ್ದು ಏಕಾಗ್ರಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು, ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಆಗಮಿಸಿದರು. ಬರುತ್ತ ಬೆಟ್ಟದ ಇಕ್ಕಟ್ಟಾದ ಹಾದಿಗಳಲ್ಲಿ ಹಾಯ್ದು ಮುಂದುವರೆಯುತ್ತಿದ್ದರು. ಒಮ್ಮೊಮ್ಮೆ ಹೋಗುವುದನ್ನೇ ಮರೆತು ಚಣಹೊತ್ತು ಸೀಳ್ದಾರಿಯಲ್ಲಿಯೇ ನಿಂತು ಬಿಡುತ್ತಿದ್ದರು. ಚಿಂತಾಮಗ್ನರಾಗಿರುತ್ತಿದ್ದರು. ಎಚ್ಚತ್ತು ಮತ್ತೆ ಹತ್ತಿಪ್ಪತ್ತು ಹೆಜ್ಜೆ ಮುನ್ನಡೆದು ಮತ್ತೇನನ್ನೂ ಯೋಚಿಸುತ್ತನಿಲ್ಲುತ್ತಿದ್ದರು. ಅಂತು ಇಂತು ದಾರಿ ಸಾಗಿತ್ತು. ನಿಶ್ಚಟದ ಗುರಿ ಮಾತ್ರ ತೋರದಾಗಿತ್ತು. ಗುರುವರ್ಯರ

ಗುರುತರವಾದ ಆಶೀರ್ವಾದದ ಪ್ರತಿಯೊಂದು ಮಾತನ್ನು ತಮಗೆ ಒರೆಹಚ್ಚಿಕೊಳ್ಳುತ್ತಿದ್ದರು. ತಮಗೆ ಆ ಶಕ್ತಿ ಎಲ್ಲಿ ? ಆ ಸಾಹಸವೆಲ್ಲಿ? ಸಂಘಶಕ್ತಿಗೂ ಸಾಧ್ಯವಾಗದ ಆ ಕಾರ್ಯ ನನ್ನಿಂದ ನೆರವೇರುವುದೆಂದರೇನು ? ನೆರವೇರಿಸುವದೆಂದರೇನು ಗುರುವಿನಾಜ್ಞೆ ತೊರೆಯುವಂತಿಲ್ಲ. ಮಾಡುವ ಬಗೆ ಹೇಗೆ ? ಮುಂದೋರದು ಎಂದು ಮುಂತಾಗಿ ಅಂತರಂಗದಲ್ಲಿಯೆ ಆಲೋಚಿಸುತ್ತಿದ್ದರು. ಅಷ್ಟರಲ್ಲಿ ನಿಜಗುಣರು ಹಿಂದೆ ನಿವಾಸಿಸಿ ನಿಯಮವ್ರತಗಳಿಂದ ತಪಸಿದ ಆಶ್ರಮ ಕಣ್ಣಿಗೆ ಬಿತ್ತು. ಅಲ್ಲಿನ ಆ ಅನನ್ಯ ಪ್ರಶಾಂತ ವಾತಾವರಣದಿಂದ ಅದೇ ಇರಬಹುದೆಂದು ಭಾವಿಸಿದರು. ಆ ತಪೋಭೂಮಿಗೆ ತಪೋನೇಮಿಯು ತವಕದಿಂದ ಬಂದು ತಲುಪಿದನು. ತತ್ವಪ್ರೇಮಿಯಾಗಿ ತಂಗಿದನು.

 

ಆ ತಪೋಭೂಮಿಯ ಭಾಗಗಳನ್ನು ಅಡ್ಡಾಡಿ ಅವಲೋಕಿಸಿದನು. ಒಂದೆಡೆ ಗವಿಯೊಂದು ಕಂಡಿತು. ವಾಸಕ್ಕೆ ನೆಲೆಸಿಕ್ಕಿತೆಂದು ಆನಂದಿಸಿದನು. ಆ ಆನಂದದ ವನವೈಭವವನ್ನು ನಿಟ್ಟಿಸಿ ನೋಡಿದನು. ಒಂದೆಡೆಗೆ ಬೆಟ್ಟದ ತುತ್ತುದಿ ನಿಶ್ಚಲವಾಗಿ ನಿಶ್ಚಿಂತೆಯಾಗಿ ನಿಂತಿತ್ತು. ಅದರ ಮಡುಲಲ್ಲಿ ಅನಂತ ಗಿಡಮರಗಳು ಬೆಳೆದಿದ್ದವು. ವನಮೃಗಗಳು ವಾಸವಾಗಿದ್ದವು, ಕಿರಿದಾದ ತೊರೆಯೊಂದು ಹರಿದಿತ್ತು. ಹಕ್ಕಿಗಳು ಬಾಳಿದ್ದವು. ಇದನ್ನೆಲ್ಲ ನೋಡಿ ಸ್ವಾಮಿಗಳವರ ಕಲ್ಪನೆ ಕೆರಳಿತು; ಬಯಕೆ ಬೇರೂರಿತು. ನಾನೂ ನಿಶ್ಚಲವಾಗಿ ತಪಸ್ಸನ್ನಾಚರಿಸಿದರೆ ನನ್ನಲ್ಲಿ ಸುಗುಣ ವೃಕ್ಷಗಳು ಶಿವರತಿ ಸಮರತಿ ಲತೆಗಳು ಬೆಳೆಯಬಲ್ಲವು. ಶಾಂತಿಜಲ ಪ್ರವಹಿಸಬಲ್ಲದು. ಸಮಾಜದ ಹಕ್ಕಿಗಳು ಭಯವಿಲ್ಲದೆ ಬಾಳಬಲ್ಲವು. ಇಷ್ಟಾದರು ದುರ್ಜನರೆಂಬ ವನ್ಯಪಶುಗಳು ಇಲ್ಲದಿರಲು ಸಾಧ್ಯವಾಗದು. ಇದ್ದರೂ ಇಲ್ಲಿರುವ ವನಮೃಗಗಳಂತೆ ಅವುಗಳ ಆಟವೂ ನಡೆಯದು.  ಹಾಗಾದಮೇಲೆ ನಾನೇಕೆ ಹೆದರಬೇಕು. ಅಖಂಡವಾದ ಅಚಲವಾದ ಆತ್ಮಶಕ್ತಿಯನ್ನು ಸಂಪಾದಿಸುವುದೇ ಈಗ ನನ್ನ ಆದ್ಯ ಕರ್ತವ್ಯ; ಆಮೇಲೆ ಅದು ಗಂತವ್ಯಗುರಿ ಎಂದು

ಭಾವಿಸಿ ತಪಸ್ಸಿಗೆ ಅಭಿಮುಖರಾದರು; ಮಿಗೆ ಹರುಷಿಸಿದರು.

 

ನಿತ್ಯವು ತಪ್ಪದೆ ತದೇಕ ಚಿತ್ತದಿಂದ ತಪಸ್ಸಾಧನೆ ಸಾಗಿತು. ತಿಳಿಯಾದ ತಣ್ಣೀರಿನಲ್ಲಿ ಮಿಂದು ನೀರ್ಗಾವಿಯ ಮಡಿಯುಟ್ಟು ಹೂವು ಹಣ್ಣುಗಳ ತಂದು ಲಿಂಗ ಪೂಜೆಯಲ್ಲಿ ಲೀನವಾಗುವರು. ಸಂಸಿದ್ಧಿಗೇರುವರು. ಜಪದ ಎಣಿಕೆ ನಿಲ್ಲುವುದು. ಕ್ರಮದ ಪ್ರಮೆ ಅಡಗುವುದು ದೃಕ್‌ ದೃಶ್ಯವೊಂದಾಗುವವು. ಇದಾದ ಮೇಲೆ ದ್ರಷ್ಟಾ ಇನ್ನೆಲ್ಲಿ ? ಹೀಗೆ

ತ್ರಿಪುಟಿಯಳಿದು ತನ್ಮಯರಾಗಿ ಇರುತ್ತಿದ್ದರು. ಹೊತ್ತುಹೋದಂತೆ ಮರಳಿ ದೃಶ್ಯದಿಂದ ದೃಕ್ಕು ಬೇರ್ಪಡುತ್ತಿತ್ತು. ಬಾಹ್ಯಸ್ಮೃತಿ ಬರುತ್ತಿತ್ತು. ಈಶ್ವರನೆ ಸಾಕಾರ ನಿರಾಕಾರನಾಗಿರುವಂತೆ ಸಾಧನ ಸಿದ್ಧಿಗಳಿಂದ ಭಕ್ತಿಮುಕ್ತಿಗಳಿಂದ ತಪಸ್ವಿ ತೇಜಸ್ವಿಯಾದರು. ಬಾಹ್ಯವಿಧಿ ಭಾವಸಮಾಧಿಗಳಿಂದ ಸಮಾಜದ ಭಾವೀ ಭಾಗ್ಯವಿಧಾತರಾದರು.

 

ಆದರೂ ಅವರಿಗೆ ನಂಬುಗೆ ನೆರವಾಗಲಿಲ್ಲ. ಹಂಬಲ ಹರಿಯಲಿಲ್ಲ. ನಿಜಗುಣರು ಶಂಭುಲಿಂಗನ, ವಿದ್ಯಾರಣ್ಯರು ಭುವನೇಶ್ವರಿಯ ಪ್ರಾರ್ಥಿಸಿದಂತೆ ಸದಾಶಿವಸ್ವಾಮಿಗಳು ತಮ್ಮ ಗುರುಗಳಾದ ಬಸವಲಿಂಗಸ್ವಾಮಿಗಳನ್ನು ಪ್ರಾರ್ಥಿಸುವರು. ತಮ್ಮ ವಾಣಿಯಲ್ಲಿ ನೇರವಾಗಿ ಪ್ರಾರ್ಥಿಸುವ ಮೊದಲು ಗುರುಕರುಣವನ್ನೆ ಕೋಗಿಲೆಯನ್ನಾಗಿ ಭಾವಿಸಿ ಹಾಡಿದ ನಿಜಗುಣರ ಈ ಪದ್ಯವು ಸ್ವಾಮಿಗಳ ನೆನಪಿಗೆ ಬರುವುದು. ಸೂಕ್ತವಾದ ಆ ಪದ್ಯದಲ್ಲಿ ಅವರ ಮನಸ್ಸು ಸಂಯುಕ್ತವಾಗಿ ಅವರ ವಾಣಿಯಿಂದ ಹೊರಹೊಮ್ಮುತ್ತದೆ, ಹಾಡತೊಡಗುವರು :

 

ಕೋಗಿಲೆ ದನಿದೋರು ಕರ್ಮವೆಸಿಸುವ ಮಾಗಿ ಪೋದುದಿನ್ನು

ಅನುನಯದಿ ಗುರುಕರುಣವೆಂಬ ಕೋಗಿಲೆ

ಘನವಸಂತವಿದೆನಗೆ ಸೊಗಸು ಮಿಗೆ ಪ್ರಣವರೂಪಿನ

ಚಿತ್ರತರವಾದ ಕೋಗಿಲೆ

 

ಹೀಗೆಂದು ಗುರುಕರುಣೆಗಾಗಿ ಹಾಡಿಹಾರೈಸುವರು, ಸಾಲದೆ

 

ಬಸವಲಿಂಗ ಯೋಗೀಶ್ವರ ! ನಿನ್ನ ಅಪ್ಪಣೆಯಂತೆ ಅನುಷ್ಠಿಸಿದ ನನ್ನ ಈ ಹನ್ನೆರಡು ವರುಷದ ತಪಃಪ್ರಭಾವವನ್ನು ತಾತ್ವಿಕ ಫಲವನ್ನು ಸಮಾಜದ ಉನ್ನತಿಗೆ ಉದ್ಧಾರಕ್ಕೆ ಧಾರೆಯೆರೆವೆನು; ಸೂರೆಗೈವೆನು. ಈ ಲೋಕದಲ್ಲಿ ನನ್ನದೆಂಬುದು ಯಾವುದು ಇಲ್ಲ. ಸಮಾಜದ ಸೇವಾ ಸೌಭಾಗ್ಯವೊಂದೇ ನನ್ನದು. ಸಮಾಜದ ಅಜ್ಞಾನ ವಿಮುಕ್ತಿಯೆ

ನನ್ನ ವಿಮುಕ್ತಿ ಸಮಾಜದ ವಿದ್ಯಾ ಪ್ರಾಪ್ತಿಯೆ ನನ್ನ ಪ್ರಾಪ್ತಿ ಸದ್ಧರ್ಮದ ಉದ್ಧಾರವೆ ನನ್ನ ಉದ್ಧಾರ, ಶಿವಯೋಗದ ಅಭ್ಯುದಯವೆ ನನ್ನ ಅಭ್ಯುದಯ. ನನಗೆ ಇದಕ್ಕಿಂತ ಬೇರೆ ಜೀವಿತ ಲಕ್ಷ್ಯವಿಲ್ಲ. ಇದಕ್ಕೆ ನಿನಗಿಂತ ಬೇರೆ ಸಾಕ್ಷ್ಯವಿಲ್ಲ. ಸಮಾಜಕ್ಕಾಗಿ ಆತ್ಮಶಕ್ತಿಯನ್ನು ಪ್ರಜಾಶಕ್ತಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುವೆನು. ಸೊಗಸು ನೋಡೆನು. ಸಮಾಜೋನ್ನತಿಯ ಸೊಗಸೆ ನನ್ನ ಸೊಗಸು. ಸಮಾಜದ ಚಿರಾಯುಷವ ನನ್ನ ಆಯುಷ. ಸಮಾಜ ಸೇವೆಗೈದು ಒಂದು ದಿನ ಬದುಕಿದರೆ ಸಾಲದೇನು? ಅದು ಸಾವೇನು ? ಅದುವೆ ಮಹಾನವಮಿಯಾಗದೇನು ?

 

ಯೋಗೀಶ್ವರ ! ನೀನು ಅನುಗ್ರಹಿಸಿದ ಬುದ್ಧಿಶಕ್ತಿಯಿದೆ; ಶುದ್ಧಿ ಸಂಪತಿಯಿದೆ. ಸಮಾಜವನ್ನು ಸಂಯುಕ್ತಗೊಳಿಸುವ ಸಿದ್ಧಿಯೊಂದನು ಆಶೀರ್ವದಿಸು. ಇದೊ ನೀನು ಆಶೀರ್ವದಿಸಿದೆಯಾದರೆ ಈಗಳೆ ಇಲ್ಲಿಂದ ಹೊರಡುವೆನು. ತಪದ ತಳುಮೆ ಸಾಕಿನ್ನು. ಸಮೆದು ಸಣ್ಣಾಗುವ ಸಮಾಜದ ಆರ್ತತೆಯ ಕರೆ ಗಾಳಿಗೂಡಿ ಬರುತಿದೆ. ಇನ್ನಿರಲಾರೆ,  ಹಿಸಲಾರೆ, ಎಲ್ಲಿ ದೇವ, ಆಶ್ವಾಸನವೀಯದೆ ಎಲ್ಲಿ ಅಡಗಿರುವೆ ? ಅಡಗಿದ ಬೆಡಗನುಬಿಟ್ಟು ಬಲುಹನು ತೋರೆಯಾ ? ಬಾರೆಯಾ ?

ಯಾವ ರೂಪದಿಂದ ಬರಲೆಂದು ಚಿಂತಿಸುವಿಯಾ ? ಯಾವ ರೂಪಾದರೇನು ? ಯಾವ ಮುಖವಾದರೇನು | ನಿನ್ನ ಕರುಣೆಯೆ ನನಗೆ ಮುಖ್ಯ. ಅದು ಯಾವ ರೂಪದಿಂದಲಾದರು ಬರಲಿ, ಅದು ನಿನ್ನದೆ, ನೀನಲ್ಲದೆ ಇನ್ನಾರು ಕರುಣಿಸುವರು ? ಇನ್ನಾರ ಕರುಣೆಯೂ ನನಗೆ ಬೇಕಿಲ್ಲ. ನಾನು ನಿನ್ನ ಕಂದ. ನೀನು ನನ್ನ ತಂದೆ, ನಿನ್ನ ಕಂದನ ಮೇಲೆ ನಿನಗೆ ಕರುಣೆಯಿಲ್ಲವೆ ? ನಿನ್ನ ಕಂದನನ್ನು ಕಂಡವರ ಕರುಣೆಗೆ ಒಪ್ಪಿಸುವುದು ನಿನ್ನ ಧರ್ಮವೆ ? ಅದೇ ನನ್ನ ಕರ್ಮವೆ ? ಅಲ್ಲದಿರೆ ಬೇಗ ಬಾ ! ಕರುಣ ಕಿರಣ ಕಾಣಿಸು, ಕರುಳ ಶಂಖೆಯ ಮಾಣಿಸು. ಸಮಾಜ ಸೇವೆಗೆ ಸಾಗಿಸು ಎಂದು

ಆರ್ತತೆಯಲಿ ಆಲಾಪಿಸುವರು; ಆತ್ಮೀಯತೆಯಲ್ಲಿ ಆಹ್ವಾನಿಸುವರು.

 

ಹೀಗಿರಲು ಒಂದು ದಿನ ಹುಣ್ಣಿಮೆ, ಹಾಲು ಚೆಲ್ಲಿದಂತೆ ಬೆಳದಿಂಗಳು ಬಿದ್ದಿತ್ತು. ಸ್ವಾಮಿಗಳವರು ಒಂದು ಎತ್ತರದ ಕಲ್ಲು ಬಂಡೆಯ ಮೇಲೆ ಕುಳಿತು ಜೀವನ ಜಂಜಡಕ್ಕೆ ಪರಿಹಾರವೇನೆಂದು ಯೋಚಿಸುತ್ತಿದ್ದರು. ಮನದ ಮಾಯಾ ಪಟಲ ಹರಿವುದೆಂದಿಗೆ  ಎಂದು ಬೇಗುದಿಗೊಳ್ಳುತ್ತಿದ್ದರು. ಅಜ್ಞ ಸಮಾಜಕ್ಕೆ ಅರಿವು ತರುವ ಶಕ್ತಿ ಮೈಗೂಡಿಬರುವುದಿನ್ನೆಂದಿಗೆ ಎಂದು ಚಿಂತಿಸುತ್ತಿದ್ದರು. ಗುರುವೆ, ಕಲ್ಪದ ತರುವೆ ! ಇನ್ನೂ ನಿನ್ನ ಮನಸ್ಸು ಕರಗಲಿಲ್ಲವೆ ? ಅಂದು ನಿನ್ನ ಕರುಣಾಜನಕ ಕೋಮಲ ಕಂಠದಿಂದ ಕುಮಾರಾ ಎಂದು ಕೂಗಿದೆ. ಕೈವಿಡಿದು ತಲೆದಡವಿ ನೇವರಿಸಿದೆ. ಇಂದೆಲ್ಲಿ? ಕಾಣದಂತೆ ಏಕೆ ಇರುವೆ ? ತಲ್ಲಣಿಸಿದ ಹೃದಯಕ್ಕೆ ತಣ್ಣೀರು ಎರೆಯಲಾರೆಯಾ ? ಕಾಣದ ಕಣ್ಣಿಗೆ ಕಿರಣವ ತೋರಲಾರೆಯಾ ? ಎಂದೆನ್ನುವಷ್ಟರಲ್ಲಿ ಅವರ ಕಣ್ಮುಂದೆ ಕೋಲ್ಮೀಂಚು ಮಿಣುಕಿದಂತಾಯಿತು. ಮೈಜುಮ್ಮೆಂದಿತು. ತೆರೆದ ಕಣ್ಣುಗಳು ತೆರೆದಂತೆಯೆ ಇದ್ದವು. ಅವುಗಳ ಮುಖದಲ್ಲಿ ಆ ಮಿಂಚಿನ ತೇಜಸ್ಸು ಹೊರಟು ಹೋಗಿ ಅಂತರಂಗವನ್ನು ಆವರಿಸಿ ಬಿಟ್ಟಿತ್ತು. ಅಪಾರ ಬೆಳಗ ಮೂಡಿತ್ತು. ಚಂದಿರನು ಹೊರಗಿನ ಸೃಷ್ಟಿಯನ್ನು ಬೆಳಗಿದಂತೆ ಚಿಜ್ಯೋತಿಯು ಚಿತ್ತದ ಪ್ರಪಂಚವನ್ನು ಬೆಳಗಿತು. ವಿಲಕ್ಷಣವಾದ ಶಕ್ತಿ ಮೈಗೂಡಿತು. ಯೋಚಿಸುತ್ತಿರುವ ಯೋಚನೆಗಳೆಲ್ಲ ಬಯಲಾಗಿ ಆತ್ಮಸ್ಪೂರ್ತಿ ಸ್ಫುರಿಸಿತು. ಹಾಗೆಯೆ ಎದ್ದು ಬಂದು ಹರ್ಷಚಿತ್ತದಿಂದ ನಿದ್ದೆ ಹೋದರು.

 

“ನಿಮಿಷವಾಗಲಿ ನಿಮ್ಮ ನೆನಹು ನಿಂದೊಡೆ ಮುಕ್ತಿ”

 

ಬೆಳಗಾಯಿತು. ಬಾಂದಳದಿ ಜಗಚ್ಚಕ್ಷುವು ಹೊಮ್ಮೂಡಿದನು. ಹೊಂಬೆಳಗ ಹರಡಿದನು. ಮರ ಮಣ್ಣುಗಳ ಹೊನ್ನಾಗಿಸಿದನು. ಹಕ್ಕಿಗಳ ಹಾರಾಡಿಸಿದನು; ಹಾಡಿಸಿದನು.  ತಪಸ್ವಿಗಳಾದ ತೇಜಸ್ವಿಗಳಾದ ಸದಾಶಿವ ಸ್ವಾಮಿಗಳವರು ಆ ಹಕ್ಕಿಗಳ ಹಾಡಿನೊಡನೆ ಹೊರಹೊರಟರು. ತಮ್ಮ ತಾತ್ವಿಕ ತೇಜಸ್ಸನ್ನು ಸಮಾಜದಲ್ಲಿ ಚೆಲ್ಲಿ ಆ ಜಗಚ್ಚಕ್ಷುವಿನ ಕಾರ್ಯ ಕಿಂತಲು ಮಿಗಿಲಾದ ಕಾರ್ಯ ನೆರವೇರಿಸಲು ಕಾಡ ಬಿಟ್ಟು ನಾಡ ಬಾಂದಳದಿ ಮೂಡಲು ಸಾಗಿದರು. ಹಾಡುವ ಹಕ್ಕಿಗಳ ಕಲರವವೆ ಭಾವೀ ಚೈತ್ರಯಾತ್ರೆಗೆ ಜಯಮಂಗಳವಾಯಿತು. ಕಾಡಿನ ಕಿಬ್ಬದಿಯಲ್ಲಿ ಹಾಯ್ದು ಹೋಗುತ್ತಿರುವಾಗ ವನಲತೆಗಳ ಬಗೆಬಗೆಯ ಬಣ್ಣದ ನರುಗಂಪಿನ ಹೂಗೊಂಚಲುಗಳು ಸ್ವಾಮಿಗಳವರ ವಿಶಾಲವಾದ ಎದೆಯ ಮೇಲೆ ಬಾಗಿ ತೂಗುತ್ತಿದ್ದುದು ಹಾರಹಾಕಿ ಕೈ ಮುಗಿಯುವಂತಿದ್ದಿತು.

ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ

 

ಆಸೆ-ಆಮಿಷ ಶಬ್ದಗಳೆರಡಾದರೂ ಅರ್ಥ ಒಂದೇ; ಕ್ರಿಯೆಯೂ ಒಂದೇ. ಮನಸ್ಸಿನ ಸಲ್ಲದ ಬಯಕೆ ಹಾಗು ವಿಷಯ ಸುಖದ ಲಾಲಸೆಗಳೇ ಆಸೆ ಆಮಿಷಗಳು. ಇವುಗಳಿಗೆ ಲೋಭವೆಂದೂ ಹೆಸರು. ಈ ಲೋಭ ಮನುಷ್ಯನ ಅವನತಿಗೆ ಕಾರಣವಾಗುವ ಅರಿಷಡ್ವರ್ಗಗಳಲ್ಲಿ ಒಂದು. ಮನುಷ್ಯನ ಎಲ್ಲ ಪಾಪಗಳಿಗೂ ಲೋಭವೇ ಮೂಲ. ಅದು ಪಾಪದ ಜನಕ (ಲೋಭ ಪಾಪಕಾ ಬಾಪ ಹೈ). ಆಶೆಗೆ ಸಮನಾದ ದುರ್ಗುಣ ಇನ್ನೊಂದಿಲ್ಲ. ಆಶೆಯಿಂದ ಎಲ್ಲವೂ ತನಗೆ ಬೇಕೆಂದು ಎಲ್ಲವನ್ನೂ ತನ್ನಲ್ಲೇ ಬಚ್ಚಿಟ್ಟುಕೊಳ್ಳುವ ವ್ಯಕ್ತಿಗೆ ಕೃಪಣ, ಜಿಪುಣ ಅಥವಾ ಲೋಭಿ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಅವನಂಥ ದುರ್ಗುಣಿ ಮತ್ತೊಬ್ಬನಿಲ್ಲ.

 

ವ್ಯಕ್ತಿಯ ಅಧ್ಯಾತ್ಮ ಸಾಧನೆಯಲ್ಲಿಯೂ ಆಶೆ ಅನೇಕ ಅಡೆತಡೆಗಳನ್ನುಂಟು ಮಾಡುತ್ತದೆ. ಶರಣರು, ಸಂತರು ಈ ಆಶೆಯನ್ನು ‘ಮಾಯೆ’ ಎಂದು ಕರೆದಿರುವರು. ಮನದ ಮುಂದಣ ಆಶೆಯೆ ಮಹಾ ಮಾಯೆ ಕಾಣಾ ಗುಹೇಶ್ವರ’ ಎಂದು ಹೇಳುವ ಅಲ್ಲಮಪ್ರಭು ಇಹಲೋಕದ ಹೆಣ್ಣು, ಹೊನ್ನು, ಮಣ್ಣು ಅಥವಾ ಬೇರಾವುದೇ ವಸ್ತುಗಳು ವ್ಯಕ್ತಿಯ ಭವಬಂಧನಕ್ಕೆ ಕಾರಣಗಳಲ್ಲ. ಆ ವಸ್ತುಗಳ ಬಗೆಗಿರುವ ಅವನ ಅಲ್ಲಸಲ್ಲದ ಬಯಕೆಗಳೇ ಅವನ ಸಾಂಸಾರಿಕ ಬಂಧನಕ್ಕೆ, ದುಃಖಕ್ಕೆ ಕಾರಣವಾಗುತ್ತವೆ. ಮನುಷ್ಯ ಸಹಜವಾಗಿಯೇ ಸುಖಾಪೇಕ್ಷಿಯಾಗಿದ್ದಾನೆ. ಭೋಗ ವಸ್ತುಗಳಿಂದ ತಾನು ಬಯಸಿದ ಸುಖ ಸಿಗುವದೆಂಬ ಆಶೆಯಿಂದ ಆ ವಸ್ತುಗಳಿಗೆ ಹಾತೊರೆಯುತ್ತಾನೆ. ಭೋಗವಸ್ತುಗಳು ಎಂದೂ ತಾವಾಗಿಯೇ ನಮ್ಮನ್ನು ಆಕರ್ಷಿಸುವುದಿಲ್ಲ. ಕೇವಲ ಅವುಗಳ ತ್ಯಾಗದಿಂದ ಮಾತ್ರವೇ ಪರಮಸುಖ ಸಾಧ್ಯವೂ ಇಲ್ಲ. ಆದ್ದರಿಂದ ಮನವನ್ನೆಲ್ಲ ವ್ಯಾಪಿಸಿರುವ, ವಿಷಯ ವಸ್ತುಗಳನ್ನು ತನ್ನದಾಗಿಸಿಕೊಂಡು ಮನಸಾರೆ ಅನುಭವಿಸಬೇಕೆಂಬ ಹೀನ ಬಯಕೆಯನ್ನು ತ್ಯಾಗ ಮಾಡಬೇಕು. ಆಶೆ ಆಮಿಷ ಅಳಿದವರಿಗಲ್ಲದೆ ಪರಮಸುಖ ತೋರದು.

 

ಲೌಕಿಕ ವ್ಯವಹಾರದಲ್ಲಿ ಆಶೆ ಎಂಬುದು ಶೂಲವಾಗಿ ಮನುಷ್ಯರನ್ನು ಕಾಡುತ್ತದೆ. ಲೋಕದ ಅಸಮತೋಲನಕ್ಕೆ ಕಾರಣವಾಗುವ ಈ ದುರಾಶೆಗೆ ಎಂದಾವರೂ ಕೊನೆಯುಂಟೆ? ‘ಆಶಾ ನ ಜೀರ್ಣಾ ವಯಮೇವ ಜೀರ್ಣಾ’ ಆಶೆಗೆ ಎಂದು ಕೊನೆ ಎಂಬುದಿಲ್ಲ. ಅದನ್ನು ಹೊಂದಿದ ನಾವೇ ಕೊನೆಕೊಳ್ಳಬೇಕಾಗುತ್ತದೆ. “ಆಶೆಯೇ ದಾಸತ್ವ, ನಿರಾಶೆಯೇ ಈಶತ್ವ” ಸಲ್ಲದ ಆಶೆಗೆ ಒಳಗಾಗುವನು ಕೊಡುವವರ ದಾಸನಾಗಿ ಬದುಕಬೇಕಾಗುತ್ತದೆ. ಲೌಕಿಕ ವಸ್ತುಗಳ ಆಶೆ ಮೀರಿದವ ಈಶನಾಗುತ್ತಾನೆ. ಕಾಣಿಯ ಲೋಭ ಕೋಟಿಯ ಲಾಭವನ್ನು ಕೆಡಿಸಿ ನಮ್ಮ  ದುಃಖಕ್ಕೆ ಕಾರಣವಾಗುವುದು. ಒಬ್ಬ ವ್ಯಕ್ತಿಯ ಹತ್ತಿರ ಸುಂದರವಾದ ಕೋಳಿ ಇತ್ತು, ಅದು ಅವನಿಗೆ ಪ್ರತಿದಿನ ಬಂಗಾರದಂತಹ ಮೊಟ್ಟೆಯೊಂದನ್ನು ಕೊಡುತ್ತಿತ್ತು. ಅದನ್ನು ಮಾರಿ ತನ್ನ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ. ಒಂದು ದಿನ ಅವನು-‘ಈ ಕೋಳಿ ಪ್ರತಿದಿನ ಒಂದೇ ಮೊಟ್ಟೆಯನ್ನು ಕೊಡುತ್ತಿದೆ. ಇದನ್ನು ಕೊಂದು ಎಲ್ಲ ಮೊಟ್ಟೆಗಳನ್ನು ಒಮ್ಮೆಯೇ ಏಕೆ ತೆಗೆದುಕೊಳ್ಳಬಾರದು’ ಎಂದು ಯೋಚಿಸಿದನು. ಮನಸ್ಸಿನಲ್ಲಿ ಈ ದುರಾಶೆ ಹುಟ್ಟಿದಾಕ್ಷಣವೆ ಅವನು ಕೋಳಿಯನ್ನು ಕೊಂದು ಹಾಕಿದ, ಅವನಿಗೆ ಒಂದು ಮೊಟ್ಟೆಯೂ ಸಿಗಲಿಲ್ಲ. ಮೊದಲು ಒಂದು ಮೊಟ್ಟೆಯಾದರೂ ಪ್ರತಿದಿನ ದೊರೆಯುತ್ತಿತ್ತು. ಈಗ ಅದೂ ಕೊನೆಗೊಂಡಿತು. ಆದ್ದರಿಂದಲೇ ಅತಿ ಆಸೆ ಗತಿಗೆಡಿಸಿತು’ ಎಂಬ ಗಾದೆ ಪ್ರಚಲಿತವಾಗಿರುವುದು. ಅತಿ ಆಶೆ ಮಾಡಬಾರದು, ಅತಿ ಆಶೆಯೆ ನಮ್ಮ ವಿನಾಶಕ್ಕೆ ಹಾಗು ದುಃಖಕ್ಕೆ ಕಾರಣ.

 

 

ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು

ಹೂವಿನಶಿಗ್ಲಿ ಶ್ರೀ ವಿರಕ್ತಮಠ.

ಮಣ್ಣು ಇರದೇ ಮಡಿಕೆ ಆಗದು. ಹಾಗೆಯೇ ಸದ್ಗುರುವಿನ ಸಂಗ ಸಿಗದೆ ಭಗವಂತನ ಸಾನಿಧ್ಯ ಸಿಗಲು ಸಾಧ್ಯವಿಲ್ಲ. ದೇವರು ತಂದೆಯಂತೆ ಗುರುವು ತಾಯಿಯಂತೆ ,ಗುರುವೆಂಬ ತಾಯಿಯನ್ನು ಬಿಟ್ಟು ತಂದೆಯಂಬ ದೇವರನ್ನು ಕಾಣಲು ಸಾಧ್ಯವಿಲ್ಲ. ತಾಯಿ ತನ್ನ ಎದೆ ಹಾಲಿನಿಂದ ತನ್ನ ಮಗನ ತನುವನ್ನು ಸಲುಹಿದರೆ , ಗುರುವು ತನ್ನ ಅಂತರಂಗದ ಉಪದೇಶಾಮೃತವನಿತ್ತು ಶಿಷ್ಯನ ಅತ್ಮವನ್ನು ಸಲುಹಿ ದೇವನಿಗೆ ಎಡೆ ಮಾಡುತ್ತಾನೆ.

 

ಒಬ್ಬ ಮನುಷ್ಯ ದಾರಿಯಲ್ಲಿ ಹೋಗುತ್ತಿದ್ದ. ಆತನ ಹತ್ತಿರ ಒಂದಿಷ್ಟು ಸಂಪತ್ತು ಇತ್ತು. ದಾರಿ ನಿರ್ಜನವಾಗಿತ್ತು. ಢಕಾಯತರು ಬಂದರು, ಸಂಪತ್ತನ್ನೆಲ್ಲ ಕಸಿದುಕೊಂಡರು. ಆ ಬಳಿಕ ಸುಮ್ಮನೆ ಬಿಡಲಿಲ್ಲ. ಕಣ್ಣುಕಟ್ಟಿ ಆತನನ್ನು ದಟ್ಟ ಅರಣ್ಯದಲ್ಲಿ ಬಿಟ್ಟರು.  ಯಾರೂ ಇಲ್ಲ. ಕಣ್ಣುಕಾಣದು, ಕೈ ಕಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಎಷ್ಟು ತಳಮಳಿಸುತ್ತಾ ಇರಬೇಡ ?

 

ಆತ ಪಾರಾಗುವುದು ಹೇಗೆ?  ಭಗವಂತನನ್ನು ಪ್ರಾರ್ಥಿಸಿದ.  ಅಲ್ಲಿಗೆ ಒಬ್ಬ ವ್ಯಕ್ತಿ ಬಂದ.ಅ ನಿಮಿತ್ತ ಭಂಧುವಾಗಿ ಬಂದ   ಕಣ್ಣು ಕೈ ಬಿಚ್ಚಿ ಈ ದಾರಿಯಿಂದ ನೀನು ಹೋಗು  ಎಂದು ದಾರಿ ತೋರಿದ.

 

ಹಾಗೆ ನಮ್ಮ ಬದಕು ಒಂದು ದಟ್ಟವಾದ ಕಾಡು. ಇಂತಲ್ಲಿ ನಮ್ಮನ್ನು ಯಾರೋ ತಂದು ಬಿಟ್ಟಿದ್ದಾರೆ. ನಾವು ಕಣ್ಣು ತೆರೆದಾಗ ಕಂಡದ್ದು ಒಂದು ಮನೆ, ತಂದೆ, ತಾಯಿ, ಈ ಮಾಯಾ ಪ್ರಂಪಚ ಹಿಂದೆ ಏನಾಗಿದೆ ಗೊತ್ತಿಲ್ಲ, ಮುಂದೆ ಏನಾಗಲಿದೆ ಗೊತ್ತಿಲ್ಲ. ತಿಳಿದವರು ನಮಗೆ ಸಿಕ್ಕಿಲ್ಲ. ಉಳಿದವರೆಲ್ಲ ಕಣ್ಣುಕಟ್ಟಿಸಿ  ಕೊಂಡವರೇ. ಇಂತಹ ಸ್ಥಿತಿಯಲ್ಲಿ ಯಾರು ನಮ್ಮ ಕಣ್ಣು ಬಿಚ್ಚುತ್ತಾರೆ. ಯಾರು ನಮಗೆ ನಿಖರವಾದ ಮಾರ್ಗ ತೋರಿಸುತ್ತಾರೆ. ಅವರೇ ಸದ್ಗುರು ದೇವರು.

 

ಅದಕ್ಕಾಗಿಯೇ ಬಸವಣ್ಣನವರು

ಮಡಿಕೆಯ ಮಾಡುವರೆ ಮಣ್ಣೇ ಮೊದಲು

ತೊಡಿಗೆಯ ಮಾಡುವರೇ ಹೊನ್ನ ಮೊದಲು

ಶವಪಥವನರಿವಡೆ ಗುರುಪಥವೇ ಮೊದಲು ಎಂದಿದ್ದಾರೆ

 

 

ಸಂಗ್ರಹ -ಸಂಪಾದನೆ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟಸ್ಥಲವೇ ಆತ್ಮ . ಇವು ವೀರಶೈವ ಲಿಂಗಾಯತರ ತತ್ವತ್ರಯಗಳು.

ಅಷ್ಟಾವರಣ ಎಂಬ ಪದದಲ್ಲಿ ಎರಡು ಪದಗಳಿವೆ.

ಅಷ್ಟ – ಎಂಟು. ಆವರಣ – ಹೊದಿಕೆ, ಲಾಂಛನ, ರಕ್ಷಾಕವಚ, ಪ್ರಕಾರ,

ದೇಹಕ್ಕೆ ಚರ್ಮ ಎಷ್ಟು ಮುಖ್ಯವೋ ಅಷ್ಟೇ ವೀರಶೈವ ಸಾಧಕನಿಗೆ ಅಷ್ಟಾವರಣವು ಅಷ್ಟೇ ಮುಖ್ಯ.  ಅಷ್ಟಾವರಣಗಳನ್ನು ಮೈಗೂಡಿಸಿಕೊಂಡಿರುವನಿಗೆ ಯಾವುದರ ಅಂಜಿಕೆ ಇರುವುದಿಲ್ಲಾ.

ವೀರಶೈವ ಲಿಂಗಾಯತರಿಗೆ ಎಂಟು ಹೊದಿಕೆಗಳುಂಟು, ಚರ್ಮಗಳುಂಟು.

ಅವುಗಳು –

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ.

ಈ ಎಂಟುಕೂಡಿ ಒಂದು ಅಂಗ, ಇದರಿಂದಲೇ ಪಂಚಚಾರಗಳೆಂಬ ಪ್ರಾಣಗಳು ಸುಳಿದಾಡುತ್ತೇ, ಷಟಸ್ಥಲಗಳೆಂಬ ಆತ್ಮವು ನೆಲೆಗೊಂಡಿದೆ.

ಈ ಆವರಣ ಇಲ್ಲದೇ ಯಾವ ವಸ್ತುಗಳು ವ್ಯಕ್ತವಾಗಲಾರದು, ಯಾವ ರೀತಿ ಹೂವಿಲ್ಲದೇ ಸುಗಂಧ ಬರುವುದಿಲ್ಲವೋ, ಹಣ್ಣಿಲ್ಲದೇ ರಸ ಬರುವುದಿಲ್ಲವೋ, ಅಂಗವಿಲ್ಲದೇ ಪ್ರಾಣ ನೆಲೆನಿಲ್ಲಲಾರದು, ಆತ್ಮ ಸಾಧನೆ ಸಾಧ್ಯವಾಗದು.

ಒಟ್ಟಿನಲ್ಲಿ ಹೇಳುವುದಾದರೆ ಅಂಗವಿಲ್ಲದೇ ಯಾವ ಕಾರ್ಯವೂ ನೆರವೇರುವುದು ಇಲ್ಲಾ.

  1. ಗುರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಮೂರು ಪೂಜೆಗೊಳ್ಳುವವು ಗುರು, ಲಿಂಗ, ಜಂಗಮ.

ಅದರಲ್ಲಿ ಗುರುವಿಗೆ ಮೊದಲನೆಯ ಸ್ಥಾನ.

ಜೀವಿ ತನ್ನ ಜನ್ಮದ ಸಫಲತೆಯನ್ನು ಪಡೆಯಬೇಕಾದರೆ ಗುರುವಿನ ಅನುಗ್ರಹ ಬೇಕು. ಅವನು ತನ್ನ ಶಿಷ್ಯನಲ್ಲಿರುವ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನ ಎಂಬ ಬೆಳಕನ್ನು ನೀಡಿ ಶಿಷ್ಯನ ಜನನ ಮರಣಗಳನ್ನು ಕಳೆದು ನಿತ್ಯಾನಂದ ಪ್ರಾಪ್ತಿಮಾಡಿಕೊಡುವವನು ಗುರು.

ಅವನು ಬ್ರಹ್ಮ ವಿಷ್ಣು ಶಿವನಿಂತ ದೊಡ್ಡವನು-

ಗುರುಃಬ್ರಹ್ಮಾ ಗುರುಃವಿಷ್ಣುಃ ಗುರುಃದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ.

ಗುರು ಬ್ರಹ್ಮನಾಗಬಲ್ಲಾ, ಗುರು ವಿಷ್ಣುವಾಗಬಲ್ಲಾ, ಗುರು ಮಹೇಶ್ವರನಾಗಬಲ್ಲಾವನು ಎಂದಿದ್ದಾರೆ.

 

ಗುರುವಿನ ವೇಷವನ್ನು ಹಾಕಿದ ಮಾತ್ರಕ್ಕೆ ಗುರುತ್ವವು ಬರುವುದಿಲ್ಲಾ, ಗುರುವಾದವನು ಸತ್ಯ ಶುದ್ಧ ಕಾಯಕವನ್ನು ಮಾಡಬೇಕು, ನಿತ್ಯವೂ ಲಿಂಗಾರ್ಚನೆಯನ್ನು ಮಾಡಬೇಕು, ಸದ್ಭಕ್ತರಿಗೆ ಉಪದೇಶವನ್ನು ಮಾಡುತ್ತಾ ಅವರನ್ನು ಕಷ್ಟದ ಕೋಟೆಯಿಂದ ಹೊರಗೆ ತರಬೇಕು, ತನ್ನ ಶಿಷ್ಯನನ್ನು ‘ಲಿಂಗಾಂಗ ಸಾಮರಸ್ಯವೇ ನಿಜವಾದ ಸುಖ’ ಎಂದು ಭೋದಿಸಿ ಅದರಲ್ಲಿಯೇ ಅವನನ್ನು ಗುರಿ ತೋರಿಸಬೇಕು.

ಮೈಲಾರ ಬಸವಲಿಂಗ ಶರಣರು  ಗುರುವಿನ ಸ್ವರೂಪ, ಗುರುವಿನ ಮಹತ್ವ ತಿಳಿಸಲು ಹೊರಟಿದ್ದಾರೆ –

ಗುರುವೇ ಭಕ್ತರ ಕಲ್ಪ ತರುವೆ ಸಜ್ಜನ ಮನೋ

ಹರವೆ ನಿಜಭಕ್ತಿ ಜ್ಞಾನ ವೈರಾಗ್ಯ

ಮಂದಿರವೇ ಮದ್ಗುರುವೇ ಕೃಪೆಯಾಗು.

ಗುರುವಾದವನು ಭಕ್ತರ ಇಷ್ಟಾರ್ಥ ಫಲವನ್ನು ಕೊಡುವ ಕಲ್ಪವೃಕ್ಷ, ಬೇಡಿದ ಬಯಕೆಯನ್ನೆಲ್ಲಾ ನಿವಾರಿಸುವವನು, ಭಕ್ತನಿಗೆ ಸತ್ಯ ಶುದ್ಧ ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ನೀಡುವವನು, ಸುಜ್ಞಾನವನ್ನು ಉಪದೇಶಿಸಿ ಲಿಂಗಾಂಗ ಸಾಮರಸ್ಯ ಆನಂದವನ್ನು ಕರುಣಿಸುವವನು, ನೈಜವಾದ ಭಕ್ತಿ, ಜ್ಞಾನ, ವೈರಾಗ್ಯವನ್ನು ತನ್ನಲ್ಲಿ ಅಳವಡಿಸಿರುವ ಆಶ್ರಮ ಸ್ವರೂಪನಾಗಿರುವವನೇ ಗುರು, ಅವನಲ್ಲಿ ಭಕ್ತಿ ಜ್ಞಾನ ವೈರಾಗ್ಯ ಕಪಟಿತನವಿರುವುದಿಲ್ಲಾ ಅವೆಲ್ಲವೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆ.

ಗುರುವಾದವನು ಶಿವಾನುಭವಿಯಾಗಿ ತನ್ನ ಅನುಭವ ಉಪದೇಶದಿಂದ ಶಿಷ್ಯನ ಮನಸ್ಸಿನಲ್ಲಿ ಮನೆಮಾಡಿಕೊಂಡಿರುವ ದುರ್ಗುಣಗಳನ್ನು ಕಳೆದು, ಮನಸ್ಸಿನ ಸಂಕಲ್ಪ ವಿಕಲ್ಪಗಳನ್ನು ನಾಶಮಾಡಿ ನಿಷ್ಕಾಮ ಭಕ್ತಿ ಅಳವಡಲೆಂದು ಆಣವ, ಮಾಯಾ, ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು, ಮನ, ಧನಗಳನ್ನು ಶುದ್ಧಗೊಳಿಸುವವನಾಗಿರುತ್ತಾನೆ .

ಗುರುವೂ ಶಿಷ್ಯನ ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಗುರುನೇ ಧೈರ್ಯವಾಗಿರುತ್ತಾನೆ. ಗುರುವನ್ನು ಹೊಂದಿರುವ, ಧೈರ್ಯವಂತನಾದ ಶಿಷ್ಯನು ಏನೆಲ್ಲಾ ಸಾಧನೆಯನ್ನು ಮಾಡಲು ಹಿಂಜರಿಯುವುದಿಲ್ಲ. ಶಿಷ್ಯನ ತ್ರಿಮಲಗಳನ್ನು ಕಳೆದು ತ್ರಿವಿಧ ಅಂಗಗಳಲ್ಲಿ ತ್ರಿಲಿಂಗವನ್ನು ಸ್ಥಾಪಿಸಿ ಅವನನ್ನು ತನ್ನಂತೆ ಮಾಡಿಕೊಳ್ಳುವವನು ಗುರು ಎನಿಸಿಕೊಳ್ಳುವನು.

ಶರಣರು ಗುರುವಿಗಿಂತ ಮಿಗಿಲಾದ ದೈವವಿಲ್ಲಾ ಎನ್ನುವಲ್ಲಿ ” ನ ಗುರೋರಧಿಕಂ, ನ ಗುರೋರಧಿಕಂ” ಎನ್ನುವ ಶೃತಿಯನ್ನು ಬಿತ್ತರಿಸಿದ್ದಾರೆ.

ಹರನಿಂದಲಧಿಕ ಸದ್ಗುರುವೆಂಬುದನು ಕೇಳಿ

ಗುರುವೆ ನಾ ನಿಮ್ಮ ಚರಣವನು ನುತಿಸುವೆನು

ಕರುಣಾದಿಂದೆನೆಗೆ ಕೃಪೆಯಾಗು.-

ಹರನಿಗಿಂತ ಗುರುವೇ ದೊಡ್ಡವನು

ಬಸವೇಶ್ವರರು – ಶಿವಪಥವ ಅರಿದೊಡೆ ಗುರುಪಥವೆ ಮೊದಲು.

ಹರ ಮುನಿದರೆ ಗುರು ಕಾಯುವನು

ಗುರು ಮುನಿದರೆ ಹರ ಕಾಯಾಲಾರ.

ಎಂಬುದನ್ನು ಗುರುವಿನ ಮಹತಿಯನ್ನೇ ತಿಳಿಸಿದೆ.

ಅಕ್ಕಮಹಾದೇವಿ –

ನರ ಜನ್ಮವ ತೊಡೆದು ಹರಜನ್ಮವ ಮಾಡಿದ,

ಭವಿ ಎಂಬುದನ್ನು ತೊಡೆದು ಭಕ್ತನೆಂದೆನಿಸಿದವನು ಶ್ರೀಗುರು ಎಂದು ಬನ್ನಿಸಿದ್ದಾಳೆ.

ಗುರುವು ತಂದೆಯೂ ಆಗಬಲ್ಲಾ, ತಾಯಿಯೂ ಆಗಬಲ್ಲಾ, ಬಂದು ಬಳಗವೂ ಆಗುವನು.

ಮಾಯಾ ಪಾಶವ ಹರಿದು ಕಾಯೋ ನೀನೆನ್ನುವನು

ತಾಯಿ ಜನ್ಮದೊಳು ಬೇಡಿದುದೀವ ಗುರು

ತಾಯಿ ನೀನೆನಗೆ ಕೃಪೆಯಾಗು.

ನಮ್ಮ ವೇದದಲ್ಲಿ ತಾಯಿಗೆ ಮೊದಲನೆಯ ಪೂಜ್ಯಸ್ಥಾನವನ್ನು ಕೊಟ್ಟಿದೆ.

“ಮಾತೃ ದೇವೋಭವ” ಎಂದು ತಾಯಿಯನ್ನು ಗೌರವಿಸಿದ ದೇಶ ಭಾರತ.

ತಂದೆಯ ಹೃದಯ ಸಿಟ್ಟಿನಿದ್ದರೂ, ತಾಯಿಯ ಹೃದಯ ಎಂದೂ ಕಠೋರವಾಗುವುದಿಲ್ಲಾ.

ಹುಟ್ಟುವ ಮಕ್ಕಳು ಕೆಟ್ಟವರಾಗಿ ಹುಟ್ಟಬಹುದು, ಆದರೆ ಯಾವ ತಾಯಿಯೂ ಕೆಟ್ಟವಳಾಗಿ ಹುಟ್ಟುವುದಿಲ್ಲ ,

ಶರಣರು ತಮ್ಮ ಗುರುಗಳಾದ ಶ್ರೀ ಚೆನ್ನವೀರ ಶಿವಯೋಗಿಗಳ ಮುಂದೆ,

ಓ ಗುರುವೇ, ಗುರುತಾಯಿಯೇ, ನೀ ನನ್ನನ್ನು ಕರುಣಿಸು ಯಾವುದರಿಂದ ಅಂದರೆ ಈ ಭವ ಎನ್ನುವ ಮಾಯಾ ಪಾಶವನ್ನು ನಾಶಮಾಡಿ ಈ ಭೌತಿಕ ಬಯಕೆಗಳನ್ನು ಕಳೆದು ನಿನ್ನ ಕರಗರ್ಭದಲ್ಲಿ ಉದಯವಾಗುವಂತೆ ಭವಬಂದನದಿಂದ ನನ್ನನ್ನು ಪಾರುಮಾಡು, ಹೊನ್ನು ಹೆಣ್ಣು ಮಣ್ಣು ಅವು ನಿಜವಾದ ಮಾಯೆ, ಅವು ನನಗೆಲ್ಲವೂ ಬೇಕು ಎನ್ನುವ ಆಸೆಯೆಂಬ ಮಾಯೆಯನ್ನು ನಾಶಮಾಡು, ನನ್ನ ಮಲತ್ರಯಗಳನ್ನು ನಾಶಿಸು,  ಗುರುತಾಯಿಯೇ.  ನಿನ್ನ ಕಿರಿಯ ಮಗನಂತೆ (ತಾಯಿಗೆ ಕಿರಿಯ ಮಗನ ಮೇಲೆ ಬಹಳ ಪ್ರೀತಿ ಇರುತ್ತದೆ ಎಂದು ಸಹಜವಾದ ವಾಡಿಕೆ) ಶರಣಾಗತನಾದ ನನ್ನನ್ನು ನಿನ್ನ ಮಡುವಿನಲ್ಲಿ ಹಾಕಿಕೊಳ್ಳು ಎಂದು ಬೇಡುತ್ತಿದ್ದಾರೆ.

ಕಾಯ, ಕರ್ಮ, ಮಾಯೆಯಲ್ಲಿ ಬಿದ್ದು ಒದ್ದಾಡುವ ಜೀವಿಯನ್ನು ಎತ್ತುವವನೆ ಗುರು ಎನಿಸಿಕೊಳ್ಳುವನು,

ಇಂತಹ ಶಿಷ್ಯನ ಬಯಕೆಯನ್ನು ಈಡೇರಿಸುವವನು ಗುರು ಎನಿಸಿಕೊಳ್ಳುವನು.

  1. ಲಿಂಗ.

ಲಿಂಗ ಎಂದರೆ ಪರಾತ್ಪರ ವಸ್ತು, ಈ ಜಗತ್ತಿನ  ಸೃಷ್ಟಿಗೆ ಕಾರಣಿಭೂತವಾಗಿದೆ,

ಲಿಂಗ ಆತ್ಮದ ಕುರುಹು, ಗುರುಕೃಪೆಯ ಚಿನ್ಹೆ, ಶಿಷ್ಯನು ಗುರುವಿನ ಅನುಗ್ರಹಕ್ಕೆ ಪಾತ್ರವಾಗಿದ್ದಾನೆ ಅನ್ನುವುದಕ್ಕೆ ದೇಹದ ಮೇಲೆ ಧರಿಸಿರುವ ಇಷ್ಟಲಿಂಗವೇ ಸಾಕ್ಷಿ,

ವೀರಶೈವ ಲಿಂಗಾಯತ ಧರ್ಮದ ಜೀವಾಳ ಇಷ್ಟಲಿಂಗ,

ಜಗದಗಲ ಮುಗಿಲಗಲ ಮಿಗೆಯಗಲ ಅಗಮ್ಯ ಅಗೋಚರ ಅಪ್ರಮಾಣ ಆಗಿರುವ ಪರತರ ಶಿವಲಿಂಗ, ಶ್ರೀ ಗುರುವಿನ ಕರುಣೆಯಿಂದ ಕರಿಯು ಕನ್ನಡಿಯಲ್ಲಿ ಅಡಗಿದ ಹಾಗೆ ಇಷ್ಟಲಿಂಗದಲ್ಲಿ ಇಡೀ ಬ್ರಹ್ಮಾಂಡವು ಚುಳುಕಾಗಿದೆ.

‘ದೃಷ್ಟಿಯಿಂದ ಸೃಷ್ಟಿ’ ಎಂಬ ಅನುಭವಿಗಳು ನುಡಿಯಂತೆ, ದೃಷ್ಟಿಯ ಮುಖಾಂತರ ನಮ್ಮ ಮನಸ್ಸು ಸೃಷ್ಟಿಯ ವಿಷಯಗಳ ಮೇಲೆ ಹರಿದು ಹೋಗುತ್ತದೆ, ವಿಷಯಾಸಕ್ತನಾಗಿ ದುಃಖಕ್ಕೆ ತಳ್ಳುತ್ತದೆ, ನಮ್ಮ ಮನಸ್ಸನ್ನು ನಿಲ್ಲಿಸಬೇಕಾದರೆ ನಮ್ಮ ದೃಷ್ಟಿಯನ್ನು ನಿಲ್ಲಿಸಬೇಕು,

ಪ್ರಭುಲಿಂಗಲೀಲೆಯಲ್ಲಿ-

ಆಲಿ ನಿಂದೊಡೆ ಸುಳಿದು ಸೂಸುವ

ಗಾಳಿ ನಿಲ್ಲುವುದು ಗಾಳಿ ನಿಲೆ ಮನ

ಮೇಲೆ ನಿಲ್ಲುವುದು,,,

ನಮ್ಮ ಮನಸ್ಸು ನಿಲ್ಲಬೇಕಾದರೆ ಮನಸ್ಸು ನಿಲ್ಲಬೇಕು ಆ ಮನವನ್ನು ನಿಲ್ಲಿಸಲು ಇಷ್ಟಲಿಂಗ ಬೇಕು, ಇಷ್ಟಲಿಂಗದಲ್ಲಿ ತದೇಕಚಿತ್ತದಿಂದ ದೃಷ್ಟಿಯನ್ನಿಟ್ಟರೇ ಮನಸ್ಸಿನ ಚಾಪಲ್ಯವು ಅಡಗಿಹೋಗುತ್ತದೆ.

ಕರೆದು ಮಂಡೆಯ ಮೇಲೆ ಕರವಿಟ್ಟು ಸಿರದಡಹಿ

ಗುರುಪುತ್ರನೆನಸಿ ಸ್ಥಿರವಾಗಿ ಬಾಳೆಂದು

ಹರಸಿದೈ ಗುರುವೇ ಕೃಪೆಯಾಗು.

ಗುರುವು ಶಿಷ್ಯನನ್ನು ಆತ್ಮೀಯವಾಗಿ ಅವನ ಶಿರದ ಮೇಲೆ ತನ್ನ ವರದ ಹಸ್ತವನ್ನಿಟ್ಟು ಅನುಗ್ರಹಿಸಿದರೇ ಶಿಷ್ಯ ಗುರುಪುತ್ರನಾಗುವನು, ಅಧ್ಯಾತ್ಮದಲ್ಲಿ ಗುರುಪುತ್ರ ಎನ್ನುವುದು ಉನ್ನತವಾದ ಮಾರ್ಗ, ಹಲವಾರು ಗುರುಗಳು ಅಂತಹಾ ಶಿಷ್ಯನನ್ನು ಮಾಡಿಕೊಂಡಿದ್ದು ಓದುತ್ತೇವೆ.

ರಾಮಕೃಷ್ಣ ಪರಮಹಂಸರ – ಸ್ವಾಮಿ ವಿವೇಕಾನಂದರು.

ಭಗವಾನ್ ನಿತ್ಯಾನಂದರು – ಪರಮಹಂಸ ಮುಕ್ತಾನಂದರು.

ಯಳಂದೂರು ಬಸವಲಿಂಗ ಶಿವಯೋಗಿಗಳು – ಶ್ರೀ ಕುಮಾರ ಶಿವಯೋಗಿಗಳು.

ಇವರೆಲ್ಲರನ್ನೂ ಗುರುಗಳಾದವರು ತಮ್ಮ ಸಮೀಪದಲ್ಲಿದ್ದು ಉನ್ನತಮಟ್ಟಕ್ಕೆ ಏರಿಸಿದ್ದಾರೆ.

ಗುರುಪುತ್ರನಾದರೇ ಶಿಷ್ಯನ ಪೂರ್ವಾಶ್ರಮವು ಅಳೆಯುವುದು.

ಕಾಯ ಕರ್ಮಗಳೆಂಬ ಮಾಯ ಸಂಸಾರದಲ್ಲಿ ಗತಿಗಾಣದ ಶಿಷ್ಯನನ್ನು ಉದ್ಧಾರಗೊಳಿಸಬೇಕಾದ್ದು ಗುರುವಿನ ಕರ್ತವ್ಯವಾಗಿದೆ, ಎನ್ನ ಶಿರದ ಮೇಲೆ ತಮ್ಮ ಹಸ್ತವನ್ನಿಟ್ಟು ಗುರುಪುತ್ರನನ್ನಾಗಿ, ನನ್ನ ಮಾಂಸಮಯ ಪಿಂಡವನ್ನು ಮಂತ್ರಮಯವನ್ನಾಗಿಸಿದೆ, ಶಿವಬಾಳಿನಲ್ಲಿ ಧೈರ್ಯದಿಂದ ಬದುಕಲು ಹರಿಸಿದೆ,

ಪರಮಗುರುವು ಕರುಣದಿಂದ ಶಿರದಮೇಲೆ ಕರವನಿಡಲು

ಪರುಷಮುಟ್ಟಿದ ಲೋಹದಂತೆ ಶರೀರವಾದ ಲಿಂಗವಾದ

ಶರಣಗಿನ್ನು ಉಂಟೆ ಪರಿಭವ,

– ಎಂದು ಶರಣರು ಗುರು ಕರಸ್ಪರ್ಶದ ಮಹತಿಯನ್ನು ವರ್ಣಿಸಿದ್ದಾರೆ.

ಗುರು ಶಿಷ್ಯನ ಮಲತ್ರಯವನ್ನು ನಾಶಮಾಡಿ ಲಿಂಗತ್ರಯವನ್ನು ಸ್ಥಾಪಿಸಲು ದೀಕ್ಷೆ ಎನ್ನುವ ಮಹತ್ತರವಾದ ಹಸ್ತಮಸ್ತಕ ಸಂಯೋಗಮಾಡಿ ಶಿಷ್ಯನನ್ನು ಲಿಂಗಿಯನ್ನಾಗಿ ಮಾಡುವನು.

ತನುವಿಂಗೆ ದೀಕ್ಷೆಯನ್ನು, ಮನಸ್ಸಿಗೆ ಶಿಕ್ಷೆಯನ್ನು, ಆತ್ಮಕ್ಕೆ ಮೋಕ್ಷ ಕೊಡಬೇಕಾದರೆ ಸ್ಥೂಲ ಶರೀರಕ್ಕೆ ಇಷ್ಟಲಿಂಗವನ್ನು, ಸೂಕ್ಷ್ಮ ಶರೀರಕ್ಕೆ ಪ್ರಾಣಲಿಂಗವನ್ನು, ಕಾರಣಶರೀರಕ್ಕೆ ಭಾವಲಿಂಗವನ್ನು ಸ್ಥಾಪಿಸುವನು.

ಪಶ್ಚಿಮ ಚಕ್ರದಲ್ಲಿ ನಿರಂಜನಬ್ರಹ್ಮ ಎನ್ನುವ ಭಾವಲಿಂಗ,

ಶಿಖಾ ಚಕ್ರದಲ್ಲಿ ನಿಶೂನ್ಯಬ್ರಹ್ಮ ಎನ್ನುವ ಪ್ರಾಣಲಿಂಗ,

ಸಹಸ್ರದಳ ಪದ್ಮದಲ್ಲಿ ನಿಷ್ಕಳಬ್ರಹ್ಮ ಎನ್ನುವ ಇಷ್ಟಲಿಂಗ,

ಆಜ್ಞಾಚಕ್ರದಲ್ಲಿ ನಿಸ್ಸೀಮಬ್ರಹ್ಮ ಎನ್ನುವ ಮಹಾಲಿಂಗ,

ವಿಶುದ್ಧಿಚಕ್ರದಲ್ಲಿ ವಿಜ್ಞಾನಬ್ರಹ್ಮ ಎನ್ನುವ ಪ್ರಸಾದಲಿಂಗ,

ಅನಾಹತಚಕ್ರದಲ್ಲಿ ಆನಂದಬ್ರಹ್ಮ ಎನ್ನುವ ಜಂಗಮಲಿಂಗ,

ಮಣಿಪೂರಕಚಕ್ರದಲ್ಲಿ ಸತ್ಕಲಾಬ್ರಹ್ಮ ಎನ್ನುವ ಶಿವಲಿಂಗ,

ಸ್ವಾದಿಷ್ಠಾನಚಕ್ರದಲ್ಲಿ ಪಿಂಡಬ್ರಹ್ಮ ಎನ್ನುವ ಗುರುಲಿಂಗ,

ಆಧಾರ ಚಕ್ರದಲ್ಲಿ ಮೂರ್ತಿಬ್ರಹ್ಮ ಎನ್ನುವ ಆಚಾರಲಿಂಗ,

ಈ ರೀತಿ ಒಂದೇ ಲಿಂಗ ಮೂರು ತೆರನಾಗಿ ಅವುಗಳು ಷಡಿಂದ್ರಿಯಗಳಲ್ಲಿ ಷಡಚಕ್ರಗಳಲ್ಲಿ ಆರು ಲಿಂಗಗಳಾಗುತ್ತವೆ, ಆ ಆರು ಲಿಂಗ ಮತ್ತು ಇಷ್ಟ ಪ್ರಾಣ ಭಾವಲಿಂಗಳು ಕೂಡಿ ನವಚಕ್ರಗಳಲ್ಲಿ ನವಲಿಂಗಗಳಾಗುತ್ತವೆ.

ಕಾಯವಿಡಿದು ಕೈವಲ್ಯಪಡೆಯುವ ಕಷ್ಟವಿಲ್ಲದೆ ಸುಲಭೋಪಯಯಾದ ಯೋಗವೇ ಅದು ಶಿವಯೋಗ .

ಹಲವು ಯೋಗವ ಮಾಡಿ ಫಲವೇನು ಮಗನೆ

ಎಂದೊಲಿದು ಲಿಂಗಾಂಗ ಸುಲಭಯೋಗವನೊಡನೆ ಕಲಿಸಿದಾ ಗುರುವೆ ಕೃಪೆಯಾಗು.

ಯೋಗಗಳಲ್ಲಿ ಹಲವಾರು ಯೋಗಗಳಿವೆ ಅವುಗಳಲ್ಲಿ ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ಇವೆಲ್ಲ ಯೋಗಗಳನ್ನು ಸಾಧಿಸಿದರೆ ಒಂದೊಂದೇ ಫಲವನ್ನು ಕೊಡಬಹುದು, ಇವೆಲ್ಲಾ ಒಂದೇ ಫಲವು ಯಾವ ಯೋಗದಲ್ಲಿ ಸಿಗುತ್ತದೆ ಅಂದರೆ ಅದುವೆ ಶಿವಯೋಗ. ಶಿವಯೋಗವನ್ನು ಸಾಧಿಸಿದ ಮೇಲೆ ಕರ್ಮದ ಅಂಜಿಕೆ ಇರುವುದಿಲ್ಲಾ, ಭವ ಬಂಧನದ ಸೋಂಕಿಲ್ಲ, ಪುನರ್ಜನ್ಮವಿಲ್ಲಾ, ಶಿವಭಕ್ತನನ್ನು ಮುಕ್ತನ್ನನ್ನಾಗಿ ಮಾಡುವ ಯೋಗವೇ ಅದು ಶಿವಯೋಗ, ಲಿಂಗಾಂಗಯೋಗ.

ಗುರುವಿನ ಕರುಣೆಯಿಂದ ಬಂದು ಇಷ್ಟಲಿಂಗವನ್ನು ಪೂಜಿಸುತ್ತಾ, ಪೂಜಿಸುತ್ತಾ ಲಿಂಗಯ್ಯನಾಗು ಮನವೇ. ಎಂದು ಬಸವಾದಿ ಶರಣರು ತಿಳಿಸಿದ್ದಾರೆ.

ಗುರು ಕೊಟ್ಟ ಲಿಂಗವನ್ನು ಅಂಗವನ್ನಗಲದೆ ನೋಡಿಕೊಳ್ಳಬೇಕು, ಲಿಂಗವೇ ಪ್ರಾಣ ಪ್ರಾಣವೇ ಲಿಂಗ ಎಂಬ ಭಾವದಲ್ಲಿ ತಲ್ಲೀನನಾಗಿ ಸಂಪೂರ್ಣ ಶರೀರವನ್ನು ಲಿಂಗಮಯ ಮಾಡಿಕೊಳ್ಳಬೇಕು. ಆಗ ಅವನಿಗೆ ಮುಕ್ತಿ ದೊರೆಯುತ್ತದೆ.

  1. ಜಂಗಮ.

ನಿರಂತರವಾಗಿ ಸಂಚರಿಸುತ್ತಾ ಉಪದೇಶಿಸುವ ಶಿವಯೋಗಿಯೇ ಜಂಗಮ. ವೀರಶೈವರಲ್ಲಿ ಸಾಮಾನ್ಯವಾಗಿ ಊರಿನ ಮಹೇಶ್ವರರಿಗೆ ಜಂಗಮವೆಂದು ಕರೆಯುವುದುಂಟು,  ತಾತ್ವಿಕವಾಗಿ ಅದು ಸುಳ್ಳು, ಜಂಗಮ ಜಾತಿಯ ವಾಚಕವಲ್ಲಾ ಅದು ಜ್ಞಾನಯ ಕುರುಹು.

‘ಜಂಗಮನ ಸುಳಿವು ವಸಂತದ ತಂಗಾಳಿಯಂತೆ’ ಎಂದು ಪ್ರಭು ಹೇಳಿದ್ದಾರೆ.

ಇಷ್ಟಲಿಂಗದ ಚೈತನ್ಯವೇ ಜಂಗಮ,

ಲಿಂಗದ ಪ್ರಾಣವೇ ಜಂಗಮನೋಡಾ. ಎಂದು ಶರಣರು ಸಾರಿದ್ದಾರೆ.

ಜಂಗಮನಿಂದಲೇ ಲಿಂಗಕ್ಕೆ ಪ್ರಾಣಬರುತ್ತದೆ, ಜಂಗಮ ತೃಪ್ತಿಯಾದರೆ ಲಿಂಗವೇ ತೃಪ್ತಿಯಾಗುತ್ತೆ, ಲಿಂಗ ತೃಪ್ತಿಯಾದರೆ ಇಡೀ ಬ್ರಹ್ಮಾಂಡವು ಸಂತೋಷದಿಂದ ಇರಲು ಸಾಧ್ಯ.

ಕೇಶ ಕಾಷಾಂಬರವನಿಕ್ಕಿದರೇನು?

ರುದ್ರಾಕ್ಷಿ ಮಕುಟವ ಧರಿಸಿದರೆ ಏನು?

ಸಾಕಾರದಲ್ಲಿ ಸನುಮತರಲ್ಲ, ನಿರಾಕರಿಸಿದಲ್ಲಿ ನಿರುತರಲ್ಲ,

ಪರಮಾರ್ಥದಲ್ಲಿ ಪರಿಣಾಮಿಗಳಲ್ಲ,

ಇದು ಕಾರಣ ಕೂಡಲ ಚೆನ್ನಸಂಗಯ್ಯಾ

ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ.

ಕೇವಲ ಜಂಗಮತ್ವವು ವೇಷದರಿಸುವುದರಿಂದ ಬರುವದಲ್ಲಾ, ಜಂಗಮನ ಲಕ್ಷಣವು ಇರಬೇಕು.

ಜಂಗಮನ ಮುಖ್ಯ ಲಕ್ಷಣವೆಂದರೆ ಅರಿವು ಆಚಾರದಿಂದ ಇರಬೇಕು, ಕಾಮ ಕ್ರೋಧಗಳನ್ನು ಮೆಟ್ಟಿ ನಿಂತಿರಬೇಕು, ಮೋಹ ಮಾಯೆಗೆ ಒಳಗಾಗಿರಬಾರದು, ನಿರಹಂಕಾರನಾಗಿ ನಿರಂಜನ ನಿರಾಬಾರಿಯಾಗಿರಬೇಕು,  ಮಾತಿನಲ್ಲಿ ಹಿತವಿರಬೇಕು, ವಿನಯವಂತಿಕೆ ಇರಬೇಕು, ಇನ್ನೊಬ್ಬರಿಗೆ ನೋವುಂಟು ಮಾಡದಿರಬೇಕು,

ಹೀಗಲ್ಲದಿದ್ದರೆ ಅವನು ಜಂಗಮನಿಗೆ ಅಯೋಗ್ಯ ಎನೆಸಿಕೊಳ್ಳುವನು.

ಮೈಲಾರ ಬಸವಲಿಂಗ ಶರಣರು –

ಲಿಂಗದ ಹರಣವೇ ಜಂಗಮ, ಜಂಗಮಕೆ ಲಿಂಗ ಅಂಗ. ಎಂದಿದ್ದಾರೆ.

ಲಿಂಗ ಜಂಗಮದಲ್ಲಿ ವ್ಯತ್ಯಾಸವನ್ನು ಹುಡುಕಬಾರದು, ಭಕ್ತನು ಲಿಂಗಪೂಜೆಮಾಡಿಕೊಳ್ಳುವುದೇ ಜಂಗಮನ ದರ್ಶನ ಮಾಡಿಕೊಳ್ಳಲು,  ಜಂಗಮನಿದ್ದರೆ ಲಿಂಗಪೂಜೆಯ ಬೇಕಾಗುವುದಿಲ್ಲ.

 

ಚನ್ನಬಸವಣ್ಣನವರು-

ಲಿಂಗಾರ್ಚನೆಯ ಮಾಡುವೆನಯ್ಯಾ ನಾನು ಜಂಗಮ ಮನೆಗೆ ಬರಬೇಕೆಂದು,

ಜಂಗಮ ಮನೆಗೆ ಬಂದಡೆ ಆ ಲಿಂಗಾರ್ಚನೆಯ ಮಾಡದೆ ಜಂಗಮಾರ್ಚನೆ ಮಾಡುವೆನಯ್ಯಾ.

ಅಂತಾ ಹೇಳಿದ್ದಾರೆ.

 

ಶ್ರೀ ಬಸವಲಿಂಗ ಶರಣರು –

ಕರದಿಷ್ಟ ಲಿಂಗದಾ ಹರಣ ಜಂಗಮವೆಂದು

ನೆರೆ ನಂಬಿ ಬಳಿಕ ಎರವ ಬಾವಿಸಬೇಡೆಂ

ದೊರೆದ ಶ್ರೀ ಗುರುವೇ ಕೃಪೆಯಾಗು.

 

ಪರಶಿವನು ಜಂಗಮನ ಅವತಾರಹೊತ್ತು ಜಗತ್ತಿನಲ್ಲಿ ನಡೆಯುತ್ತಿರುತ್ತಾನೆ,

 

ಬಸವಲಿಂಗ ಶರಣರು –

ಧರೆಗೆ ನೀರೆರೆಯಲ್ಕೆ ಮರವು ಫಲವಾಂತಂತೆ

ಚರಲಿಂಗ ತೃಪ್ತಿ ಕರದಿಷ್ಟ ಲಿಂಗಕೆಂ

ದೊರೆದ ಶ್ರೀ ಗುರುವೇ ಕೃಪೆಯಾಗು.

 

ಮರಕ್ಕೆ ಭೂಮಿಯೇ ಮುಖ,

ಲಿಂಗದ ಮುಖವೇ ಜಂಗಮನಾಗಿದ್ದಾಗ ಅವನಿಗೆ ಸಮರ್ಪಿಸಬೇಕು, ಹಾಗೂ ಅವರಲ್ಲಿ ಬಿನ್ನ ಭಾವವನ್ನು ನೋಡಬಾರದು.

ಆ ಜಂಗಮವ ಹರನೆಂದು ಕಂಡು ನರನೆಂದು ಬಾವಿಸಿದಡೆ ನರಕ ತಪ್ಪದು ಎಂದು ಬಸವಣ್ಣನವರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಶರಣರು ಜಂಗಮ ಲಿಂಗದ ಸಮಾನತೆಯನ್ನು ವರ್ಣಿಸಿದ್ದಾರೆ.

ವೃಕ್ಷಗಳಲ್ಲಿ ಕಲ್ಪವೃಕ್ಷವು ಕಲ್ಪಿಸಿದವರಿಗೆ ಕೊಡುವ ಹಾಗೆ ಮುಮುಕ್ಷುವಾದ ಜಂಗಮನು ಮೋಕ್ಷವನ್ನು ಕೇಳುವ ಸದ್ಭಕ್ತರಿಗೆ ಮುಕ್ತಿಯನ್ನು ಕೊಡುವನು.

ಶಿಲೆಯ ರಾಶಿಗಳಲ್ಲಿ ಪರುಷಮಣಿಯೂ ಶ್ರೇಷ್ಠವಾಗಿದೆ, ಅದರ ಬೆಲೆಯೂ ಅಮೂಲ್ಯ, ಹಾಗೆ ನರಲೋಕದೋಳಗೆ ಮಹಾಜ್ಞಾನಿಯಾದ ಚರಲಿಂಗ (ಜಂಗಮ)ನೆ ಶ್ರೇಷ್ಠನಾಗಿರುವನು.

 

ಮುಂದೆ ಶರಣರು ಜಂಗಮನು ಭಕ್ತಿ ಜ್ಞಾನ ವೈರಾಗ್ಯಗಳನ್ನು ತನ್ನಲ್ಲಿ ಇಂಗಿತವನ್ನು ಮಾಡಿಕೊಂಡು ಸ್ವಯ, ಚರ, ಪರವೆಂದು ಮೂರು ತೆರನಾಗುವನು.

ಎಂದಿದ್ದಾರೆ.

ಸ್ವಯ ಚರ ಪರ ಸದ್ ಭಕ್ತಿಯು ಜ್ಞಾನ ವೈರಾಗ್ಯ ತ್ರಯವನ್ನ ನೀ ವಿನಯದಿಂದ ಕೇಳ್ವುದು

ತನಯ ಎಂದ ಗುರುವೆ ಕೃಪೆಯಾಗು.

ನಿರಂಜನ ಜಂಗಮನಲ್ಲಿ ಸ್ವಯ ಚರ ಪರವೆಂಬ ಬೇಧತ್ರಯವಿರುವದು.

ಸ್ವಯ ಜಂಗಮ.

ಒಂದೇ ಮಠವನ್ನು ಆಶ್ರಯಿಸಿ ಲಿಂಗ ಪೂಜೆ ಮಾಡುತ್ತಾ,  ಸಮಾಧಾನಿಯಾಗಿ ನಿರಂತರ ಸತ್ಯಜ್ಞಾನ ಪರನಾಗಿ ಬಂದು ಹೋಗುವ ಭಕ್ತರಿಗೆ ಜಂಗಮಮೂರ್ತಿಗಳಿಗೆ ಉಪಚಾರವನ್ನು ಮಾಡುತ್ತಾ ಮಠದಲ್ಲಿ ಇರುತ್ತಾನೆಯೋ ಅವನೇ ಸ್ವಯಜಂಗಮ.

ಇದೇ ಸಾರವನ್ನೇ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ವಯಜಂಗಮನ ಬಗ್ಗೆ ಮಂಗಲಪಾಡಿದ್ದಾರೆ –

ಒಂದೇ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ.

ನಿಂದು ಏಕಾಂತದಾನಂದದ ಯೋಗದ

ಚಂದವನರಿದನುಷ್ಠಾನಿಪನೇ ಶಿವಸ್ವಯಗೆ.

ಚರ ಜಂಗಮ.

ಷಟಸ್ಥಲಾಚಾರಸಂಪನ್ನನಾಗಿ, ಸುಜ್ಞಾನ ಮೂರುತಿಯಾಗಿ ಭೂಮಂಡಲವನ್ನು ಸಂಚರಿಸುತ್ತಾ ತನ್ನ ನಂಬಿದ ಭಕ್ತರಿಗೆ ತತ್ತ್ವಜ್ಞಾನವನ್ನು ಶಿವಾನುಭವವನ್ನು ಬೋಧಿಸುತ್ತಾ, ಪಾದಸ್ಪರ್ಶದಿಂದ, ಹಸ್ತ ಸ್ಪರ್ಶದಿಂದ, ದರ್ಶನ ಸ್ಪರ್ಶದಿಂದ ಪವಿತ್ರ ರನ್ನಾಗಿ ಮಾಡುತ್ತಾ, ಭಕ್ತರ ಹಿತ ಕಾಯುವವನೇ ಚರ ಜಂಗಮ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಚರ ಜಂಗಮನನ್ನು ಕುರಿತು –

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ.

ಎಂದು ಮಂಗಲಪಾಡಿದ್ದಾರೆ.

ಪರ ಜಂಗಮ.

 

ಪರ ಜಂಗಮನು ಪರಮ ವೈರಾಗಿ, ಷಟಸ್ಥಲಾಚರಣೆಯಿಂದ ಸಚ್ಚಿದಾನಂದ ಸ್ವರೂಪಿಯಾದ ಜಂಗಮ ಶಿವನ ಸಾಮ್ರಾಜ್ಯ(ಕೈಲಾಸ) ವನ್ನೆ ದಿಕ್ಕರಿಸುವನು, ಆಶಿಸನು. ಪರಶಿವನ ಚತುರ್ವಿಧ ಪದವಿಗಳನ್ನು ಕವಡೆಗೆ ಸಾಮಾನ ಎಂದು ತಿಳಿಯುವನು, ತನ್ನ ಭಕ್ತರು ತನ್ನೆಡೆಗೆ ಬಂದ ಭಕ್ತರನ್ನು ಶಿವಭಾವದಿಂದ ದೃಷ್ಟಿಸಿ ಪಾವನಗೊಳಿಸುವವನೆ ಪರ ಜಂಗಮ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಪರಜಂಗಮನ ಕುರಿತು ಮಂಗಲಪಾಡಿದ್ದಾರೆ –

ಪಾಪ ಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣಗಳ ತೂರಿ

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯ ವಳಿದು ಶಿವನಾತಹ ಪರತರಗೆ.

ಸ್ವಯ ಜಂಗಮನು ಸದ್ಭಕ್ತಿಯುಳ್ಳವನಾಗಿರುತ್ತಾನೆ,

ಚರ ಜಂಗಮನು ಜ್ಞಾನವುಳ್ಳವನಾಗಿರುತ್ತಾನೆ,

ಪರ ಜಂಗಮನು ವೈರಾಗ್ಯದಿಂದಿರುವನು.

ಸಾಮಾನ್ಯವಾಗಿ ಸ್ವಯ ಚರ ಜಂಗಮರು ಸಿಗಬಹುದು, ಪರ ಜಂಗಮನು ಸಿಗುವುದು ದುರ್ಬಲವಾಗಿದೆ.

ಮುಂದೆ ಶರಣರು ಜಂಗಮನ ಸಹಜಾಚರಣೆಯನ್ನು ಹೇಳಿದ್ದಾರೆ,

ಜಂಗಮನಾದವನು ತಲೆಯನ್ನು ಮೀಸೆಯನ್ನು ಬೋಳಿಸಬೇಕು, ಹಣೆಯಲ್ಲಿ ತ್ರಿಪುಂಡ್ರ ಭಸ್ಮಧಾರಣೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿರಬೇಕು, ಕೌಪೀನ ಧರಿಸಿ, ಕಾವಿಯನ್ನ ಹೊದ್ದು, ಕೈಯಲ್ಲಿ ಯೋಗ ದಂಡವನ್ನು ಹಿಡಿದಿರಬೇಕು, ಸಂಚಾರ ಮೂರ್ತಿಯಾದ ಕಾರಣ ಕ್ರಿಯಾ ಭಸ್ಮವನ್ನು ಎಡತಓಳಇನಲ್ಲಇ ಕಟ್ಟಿಕೊಂಡಿರಬೇಕು, ಬಲಗೈಯಲ್ಲಿ ಜಪಮಾಲೆ ಧರಿಸಿರಬೇಕು, ಬರಿಗಾಲಿನಲ್ಲಿ ನಡೆಯದೇ ಆವುಗೆಯನ್ನು ಮೆಟ್ಟಿರಬೇಕು, ಪಾದಗಳನ್ನು ಮುಂದಿಟ್ಟು ಕಣ್ಣನ್ನು ಪಾದಗಳಲ್ಲಿ ಇಟ್ಟಿರಬೇಕು, ಜಂಗಮನ ಪಂಚ ಮುದ್ರೆಗಳಾದ – 1) ಕೈಯಲ್ಲಿ ಕೋಲು, 2) ನಡದಲ್ಲಿ ಕೌಪೀನ, 3) ಮೈ ಮೇಲೆ ಕಂಥೆ, 4) ಕಮಂಡಲು, 5) ಪ್ರಸಾದ ಬಟ್ಟಲು ಈ ಮುದ್ರೆಗಳು ಬೇಕೆಬೇಕು ಎನ್ನುವರು

ಬಸವಲಿಂಗ ಶರಣರು –

ಹಳ್ಳಿಗೇಕವೆ ಭುಕ್ತ ಡಿಳ್ಳಿಗೇ ಐದೂಟ

ಹೊಳ್ಳದೊಳು ಒರಗಿ ಇಳ್ಳುಗಳೆವಯ್ಯಗೆ

ಜಗಸುಳ್ಳೆಂದ ಗುರುವೇ ಕೃಪೆಯಾಗು.

ಜಂಗಮನಾದವನು ಜಂಗಮತ್ವವವನ್ನು ಮೈಗೂಡಿಸಿಕೊಂಡು “ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿ” ಇದ್ದುಕೊಂಡು ಹಳ್ಳಿ ಪಟ್ಟಣಗಳಲ್ಲಿ ಚಂಚಸುತ್ತಾ ಸಕಲ ಜೀವಿಗಳಿಗೆ ಲೇಸ ಬಯಸುವ ದಯಾಮಯಿ ಆಗಿರುತ್ತಾನೆ ಎಂದು ಶ್ರೀ ಬಸವಲಿಂಗ ಶರಣರು ತಿಳಿಸಿದ್ದಾರೆ

ಅಂತರಂಗದ ಜಂಗಮ.

ಬಹಿರಂಗದ ಜಂಗಮ.

 

ಜಂಗಮ ತತ್ವವನ್ನು ಅರಿತು ಅಂತರಂಗದಲ್ಲಿ ಜಂಗಮನಾಗಿ ಅರ್ಚಿಸಬೇಕು, ಪೂಜಿಸಬೇಕು.

ಸ್ಥೂಲ ಮತ್ತು ಸೂಕ್ಷ್ಮ ಶರೀರಗಳಿಗೆ ಕಾರಣವಾದ ಪಂಚಭೂತಗಳು, ಕರ್ಮೆಂದ್ರಿಯಗಳು, ಜ್ಞಾನೇಂದ್ರಿಯಗಳು, ಅವುಗಳ ಗುಣಗಳ, ಪಂಚವಿಷಯಗಳು, ಮಾತು, ದಶೇಂದ್ರಿಯವಾದ ಮನಸ್ಸು, ವಿವೇಕರೂಪಾದ ಅರಿವಿಗೆ ಸಾಕ್ಷೀಭೂತ ಚೈತನ್ಯವೇ ಅಂತರಂಗದ ಜಂಗಮ.

ಕಾರಣ ಶರೀರಕ್ಕೆ ಕಾರಣವಾದ ಷಡ್ಭಾವಗಳು, ಜೀವತ್ರಯ (ವಿಶ್ವ, ತೈಜಸ, ಪ್ರಾಜ್ಞಾ)ಗಳಿಗೆ ಚೈತನ್ಯವನ್ನು ಕೊಡುವ ಸಂಜೀವಿಯಾಗಿದವನೆ ಜಂಗಮ.

ಷಡ್ಭಾವಗಳಾದ – ಭಾವ, ಜ್ಞಾನ, ಮನ, ಅಹಂಕಾರ, ಬುದ್ಧಿ, ಚಿತ್ತಗಳು ಜಂಗಮನ ಸಾಕ್ಷಾತ್ಕಾರದಿಂದ ಸದ್ಭಾವ, ಸುಜ್ಞಾನ, ಸುಮನ, ನಿರಹಂಕಾರ, ಸುಬುದ್ಧಿ, ಸುಚಿತ್ತಗಳಾಗಿ ಪರಿಣಮಿಸುತ್ತವೆ. ಈ ಹಸ್ತದಿಂದಲೇ ಭಾವಲಿಂಗಗೊಳಗಿನ ಷಡ್ಲಿಂಗಳನ್ನು ಪೂಜಿಸಲು ಸಾಧ್ಯವಾಗುತ್ತದೆ ಆದರಿಂದ ಆಂತರಿಕ ಜಂಗಮತತ್ವವನ್ನು ಮೈಗೊಡಿಸಿಕೊಳ್ಳಬೇಕೆಂದು ಬಸವಲಿಂಗ ಶರಣರು ತಿಳಿಸಿದ್ದಾರೆ.

ಇನ್ನೂ ಬಹಿರಂಗದ ಜಂಗಮನನ್ನು ಕುರಿತು – ಅಂತರಂಗದ ಆತ್ಮಚೈತನ್ಯ ರೂಪ ಜಂಗಮನ ಕೃಪೆಯಿಂದ ಬಾಹ್ಯ ಕ್ರಿಯೆಗಳೆಲ್ಲಾ ನಡೆಯುತ್ತವೆ.

“ಕಾಯ ಜಂಗಮವೆಂಬು ಪಾಯವನು ಕೇಳೆಲವೊ

ಬಾಹ್ಯವೇ ಸಹಜ ಕ್ರಿಯೆ ಜಂಗಮ” ಎನ್ನುತ್ತಾ

ಶರೀರಕ್ಕೆ ಬಾಯಿ ಎಂಬ  ಇಂದ್ರಿಯವೇ ಮುಖ್ಯ, ಬಾಹ್ಯವಾದ ಸಹಜ ಕ್ರಿಯೆಗಳೆ ಆಂತರಿಕವಾಗಿ ಸುಜ್ಞಾನವನ್ನು ಬೆಳೆಸುತ್ತದೆ.

ಬಾಯಿಯಿಂದ ಸ್ವೀಕರಿಸುವ ಪ್ರಸಾದ ಮತ್ತು ನಾಲಿಗೆಯಿಂದ ಹೊರ ಬರುವ ನುಡಿ ಸಹಜಸಿದ್ಧಿಯನ್ನು ಹೊಂದಬೇಕು, ಪ್ರಸಾದದಿಂದ ಕಾಯ ಕಾಯಪ್ರಸಾದವಾಗಿ, ನುಡಿಯುವ ಮಾತು ಮಂತ್ರವಾಗಿರಬೇಕು. ದಾನ – ಧರ್ಮ ಹುಟ್ಟುವುದೇ ಕೈಗಳಿಂದ, ಅಂತರಂಗದ ಸುಜ್ಞಾನದ ಸತ್ಪ್ರೇರಣೆಯಿಂದ ಕೈಗಳೆರಡು ದಾನ ಧರ್ಮಕ್ಕೆ ಕಾರಣ ಎಂದು ತಿಳಿದಿರಬೇಕು, ಪಾದಗಳು ಸನ್ಮಾರ್ಗ ಕಡೆ ನಡೆಗೆ ಕಾರಣವಾಗುತ್ತದೆ, ತನ್ನ ಸದ್ಭಕ್ತರಿಗೆ ಸಹಜ ಸನ್ಮಾರ್ಗದಲ್ಲಿ ತೋರಿಸಿ ಕೊಡುವ ಶರಣನ ನಡೆಯು ಮಾರ್ಗದರ್ಶನ ಮಾಡಿ ಮೋಹ ಮಾಯೆಯಲ್ಲಿ ಬಿದ್ದ ಭಕ್ತರನ್ನು ನಾಶಮಾಡುತ್ತದೆ, ಹೀಗೆ ಶರಣರು ಕಾಯ ಮತ್ತು ಬಾಯಿ ಸಹಜ ಸತ್ರ್ಕಿಯೆಗಳೇ  ಬಹಿರಂಗದ ಜಂಗಮವತ್ವ ಎಂದಿದ್ದಾರೆ.

ಬಾಹ್ಯ ಮತ್ತು ಅಂತರಂಗದಲ್ಲಿ ಜಂಗಮನನ್ನು ಅಳವಡಿಸಿಕೊಳ್ಳಬೇಕು, ಅರಿವೇ ಗುರುವಾಗಿ ಅರುವಿನೊಳಗಣ ಅನುಭವವೇ ಲಿಂಗವಾಗಿ ಅನುಭವದೊಳಗಣ ಆನಂದವೇ ಜಂಗಮನನ್ನು ಸಾಕ್ಷಾತ್ಕರಿಸಬೇಕೆಂದಿದ್ದಾರೆ.

  1. ಪಾದೋದಕ.

ವೀರಶೈವ ಲಿಂಗಾಯತರ ಆರಾಧ್ಯ ವಸ್ತುಗಳಾದ ಗುರು ಲಿಂಗ ಜಂಗಮದ ಆರಾಧನೆಯಿಂದ ಬರುವ ಫಲವೇ ಪಾದೋದಕ ಮತ್ತು ಪ್ರಸಾದ.

ಪಾದೋದಕದಲ್ಲಿ ಎರಡು ಪದಗಳಿವೆ. ಪಾದ – ಉದಕ,

ಶಬ್ದದಲ್ಲಿ ನಾಲ್ಕು ಅಕ್ಷರ,

ಪಾ – ಪಾಪವನ್ನು ನಾಶಮಾಡಿ ಜ್ಞಾನವನ್ನು ಉದಯಿಸುತ್ತೆ,

ದೋ – ದೋಷವನ್ನು ನಿವಾರಿಸಿ ಶುದ್ಧನನ್ನಾಗಿಸುತ್ತೆ,

ದ – ದರ್ಪವನ್ನು ಸಂಹಾರಮಾಡುತ್ತೆ,

ಕ – ಕರ್ಮವನ್ನು ನಾಶಮಾಡುತ್ತದೆ.

 

ಗುರು ಜಂಗಮರ ನೀರಿನಿಂದ ಪಾದಗಳನ್ನು ತೊಳೆಯುವದೆ ಪಾದೋದಕ, ಭಕ್ತನಾದವನು ಅಂತಹ ಪಾದಗಳನ್ನು ಹೂವಿನಂತೆ ತನ್ನ ಶಿರದ ಮೇಲೆ ಇಟ್ಟುಕೊಂಡು ಮೆರೆದಾಡುತ್ತಾ, ಪೂಜಿಸಿ ವಂದಿಸಿ ತನ್ನ ಭಕ್ತಿಯನ್ನು ಸಮರ್ಪಣೆಮಾಡುತ್ತಾನೆ, ಅಂತಹ ಪವಿತ್ರ ಪಾದದಿಂದ ನೆಲವೇ ಸುಕ್ಷೇತ್ರ, ಜಲವೇ ಪಾವನ ಆಗುತ್ತದೆ. ಜಡವಾಗಿರುವಂತಹ ನೀರು ಗುರು ಜಂಗಮರ ಪಾದ ಸ್ಪರ್ಶದಿಂದ ಪಾದೋದಕವಾಗುತ್ತೆ.

 

ಶ್ರೀ ಬಸವೇಶ್ವರರು ಪಾದದ ಹಿರಿಮೆಯನ್ನು ಕುರಿತು  –

ಬ್ರಹ್ಮಂಗೆ ವಾಕ್ಪರುಷ,

ವಿಷ್ಣುವಿಂಗೆ ನಯನ ಪರುಷ,

ರುದ್ರಂಗೆ ಹಸ್ತ ಪರುಷ,

ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ.

 

ಶ್ರೀ ಬಸವಲಿಂಗ ಶರಣರು ಜಂಗಮರ ಪಾದದಿಂದ ಉತ್ಪತ್ತಿಯಾದ  ಪಾದೋದಕವೇ ಪರಬ್ರಹ್ಮವಾದುದು ಎಂದು –

ಭೇದಿಸುತ ನೋಡಲಾ  ಪಾದದಿಂದೊಗೆದ

ಪಾದೋದಕ ಪರಬ್ರಹ್ಮ ವಾದುದೆಂದೆನೆಗೆ

ನೀ ಭೋದಿಸಿದ ಗುರುವೇ ಕೃಪೆಯಾಗು.

ವೀರಶೈವ ಲಿಂಗಾಯತರಿಗೆ ಅರ್ಚನೆ ಅರ್ಪಣೆ ಅನುಭವಗಳೇ ಸಿದ್ಧಾಂತ.

ಗುರು ಲಿಂಗ ಜಂಗಮರನ್ನು ಅರ್ಚಿಸುವುದರಿಂದ ದೊರೆಯುವ ಫಲವೇ ಪಾದೋದಕ ಪ್ರಸಾದ.

ಪರಬ್ರಹ್ಮಸ್ವರೂಪಿಯಾದ ಜಂಗಮನಿಂದ ಚರಣೋದಕವಾಗಿ ಸೃಷ್ಟಿಯಾಗಿದೆ, ಪಾದೋದಕವು ಭಕ್ತನ ಸತ್ಕ್ರಿಯೆ ಹಾಗೂ ಜಂಗಮನ ಸುಜ್ಞಾನ ಮಥನದಿಂದ ಹುಟ್ಟಿದೆ.

ಪಾದಕ್ಕೂ ಪರಬ್ರಹ್ಮಕ್ಕೂ ಅತ್ಯಂತ ಸಂಬಂಧ ಇದೆ, ಪಶ್ಚಿಮ ಶಿಖಾ ಚಕ್ರದಲ್ಲಿಯೇ ನಿರಂಜನ ಪರಬ್ರಹ್ಮನ ವಾಸಸ್ಥಳ, ಅದಕ್ಕೆ ಮೆದುಳು ಅಂತಾನೇ ಕರೆಯುತ್ತಾರೆ, ಆ ಮೆದುಳಿಗೂ ಪಾದಕ್ಕೂ ನೇರ ಸಂಬಂಧ ಇದೆ, ಜಂಗಮತತ್ವವು ಪಾದದಲ್ಲಿ ಪ್ರಕಟವಾಗುವುದರಿಂದ ಭಕ್ತರು ಪಾದಕ್ಕೆ ನಮಸ್ಕರಿಸುತ್ತಾರೆ.

ನಿರಂಜನಮೂರುತಿ ಜಂಗಮನ ಪಾದಾಂಗುಷ್ಠದಲ್ಲಿ ಪಶ್ಚಿಮ ಶಿಖಾ ಚಕ್ರದ ಅಮೃತವೂ ಹರಿದು ಹೋಗುತ್ತಿರುತ್ತದೆ ಅದಕ್ಕೆ ಎಲ್ಲರೂ ಪಾದಕ್ಕೆ ನಮಸ್ಕರಿಸುತ್ತಾರೆ.

ಚನ್ನಬಸವಣ್ಣನವರು –

“ಗುರುವಾಗಲಿ ಲಿಂಗವಾಗಲಿ ಜಂಗಮನಾಗಲಿ ಪಾದೋಕದ ಪ್ರಸಾದವಿಲ್ಲದ ಪಾಪಿಯ ಮುಖವ ನೋಡಲಾಗದು” ಎಂದಿದ್ದಾರೆ.

ಪಾದೋದಕವು ಗುರುವಿಗೂ ಬೇಕು, ಜಂಗಮನಿಗೂ ಬೇಕು, ಸ್ಥಾವರ ಲಿಂಗದಲ್ಲಿ ಕಲೆಬರುವುದಕ್ಕೆ ಜಂಗಮನ ಪಾದೋದಕವು ಬೇಕೇಬೇಕು.

ಗುರುಪಾದೋದಕದಿಂದ ಸಂಚಿತ ಕರ್ಮ ನಾಸ್ತಿ,

ಲಿಂಗ ಪಾದೋದಕದಿಂದ ಪ್ರಾರಬ್ಧ ಕರ್ಮ ನಾಸ್ತಿ,

ಜಂಗಮ ಪಾದೋದಕದಿಂದ ಆಗಾಮಿ ಕರ್ಮ ನಾಸ್ತಿ.

ಎಂದಿದ್ದಾರೆ.

ಯಾರು ಪಾದೋದಕದ ಮಹಿಮೆಯನ್ನು ತಿಳಿಯಲಾರದೆ ಅದನ್ನು ಉದಾಸೀನ ಮಾಡಿದರೆ, ಅದರ ತತ್ವಕ್ಕೆ ಅಪಚಾರ ಮಾಡಿದಂತೆ, ಅಂತವನು ನರಕದಲ್ಲಿ ಬಿದ್ದು ಒದ್ದಾಡುವನು, ಎಂದು ಶಾಸ್ತ್ರಗಳು ಹೇಳುತ್ತವೆ.

ಗುರು ಜಂಗಮರ ಪಾದವನ್ನು ತೊಳೆದ ನೀರು ಪಾದೋದಕವಾಗಿರುತ್ತೆ, ನೀರಿನಲ್ಲಿರುವ ಜಡತ್ವವು ಹೋಗಿ ಪಾದೋದಕ ಆಗಿರುತ್ತೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟು ಕೊಂಡು ಕೈಕಾಲು ಮುಖ ತೊಳೆದು ಸ್ನಾನ ಮಾಡಬೇಕು, ಅದನ್ನು ಬಳಸಿಯೆ‌ ಅಡುಗೆಯನ್ನು ಮಾಡಬೇಕು, ಎಂದು ಬಸವಲಿಂಗ ಶರಣರು ತಿಳಿಸಿದ್ದಾರೆ. ಮುಂದೆ ಪಾದೋದಕವನ್ನು ಯಾವ ರೀತಿ ಗುರುವಿನ ಪಾದದಿಂದ ಮಾಡಬೇಕು ಮೂರು ಸಾರಿ ಲಿಂಗದ ಮೇಲೆ ಗುರು ಪಾದೋದಕ, ಲಿಂಗಪಾದೋದಕ, ಜಂಗಮ ಪಾದೋದಕ,ಎಂದು ಎರೆದು ಭಕ್ತಿಯಿಂದ ಸ್ವೀಕರಿಸಬೇಕು ಎಂದು ತಿಳಿಸುತ್ತಾರೆ.

ಪಾದೋದಕ ಮಹಿಮೆ

ಶರಣರು ಅನೇಕ ಪುರಾಣ ಕಾವ್ಯಗಳಲ್ಲಿರುವ ದೃಷ್ಟಾಂತಗಳಿಂದ ನಮ್ಮೆಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ –

ನರಿಯ ಹಿಂಡಿನ ಮೇಲೆ ಚರಣೋದಕವನ್ನು(ಪಾದೋದಕವನ್ನು) ಸಿಂಪಡಿಸಿದಾಗ ಆ ನರಿಗಳೆಲ್ಲಾ ಕುದುರೆಗಳಾದವು ಎಂದು ಪ್ರೌಢರಾಯನ ಕಾವ್ಯದಲ್ಲಿರುವ ದೃಷ್ಟಾಂತವನ್ನು ಹೇಳಿದ್ದಾರೆ.

ಅರಣ್ಯದಲ್ಲಿ ಒಬ್ಬ ಜಂಗಮಮೂರುತಿ ಪೂಜೆಯನ್ನು ಮಾಡಿ ಪಾದೋದಕ ಸ್ವೀಕರಿಸುವಾಗ ಬಿರುಗಾಳಿ ಬಂದಾಗ ಪಾದೋದಕದ ಹನಿ ಅಲ್ಲಿಯೇ ಇದ್ದ ಹಾವಿನ ಬಾಯಲ್ಲಿ ಬೀಳುತ್ತೇ ಆ ಹಾವಿನ ಮೇಲೆ ಕಳ್ಳನು ಕಾಲಿಟ್ಟಾಗ ಅವನಿಗೆ ಕಡಿದರೂ ಆ ಕಳ್ಳ ಸಾಯುವುದಿಲ್ಲ. ಎಂದು “ಅನಾದಿ ವೀರಶೈವ ಸಾರಸಂಗ್ರಹ” ದಲ್ಲಿರುವ ದೃಷ್ಟಾಂತವನ್ನು ಹೇಳಿದ್ದಾರೆ.

ಜಂಗಮನನ್ನು ಆರಾಧಿಸಿ ಭಕ್ತಿಯಿಂದ ಪಾದೋದಕವನ್ನೂ ಸ್ವಿಕರಿಸುವುದರಿಂದ ಮುಕ್ತಿವು ದೊರೆಯುತ್ತದೆ.

ಜಗತ್ತಿನ ಅರವತ್ತೆಂಟು ಪುಣ್ಯಕ್ಷೇತ್ರದ ತೀರ್ಥದ ಮುಂದೆ ಜಂಗಮನ ಪಾದೋದಕವು ಸಮನಿಸದು, ಗುರು ಲಿಂಗ ಜಂಗಮರ ಪಾದೋದಕವೇ ಶ್ರೇಷ್ಠವಾದುದು ಎಂದು ಬಸವಲಿಂಗ ಶರಣರು ಪಾದೋದಕದ ಮಹಿಮೆಯನ್ನು ತಿಳಿಸಿದ್ದಾರೆ.

 

ಇಲ್ಲಿಯ ತನಕ ಬಾಹ್ಯವಾಗಿ ಪಾದೋದಕ ಅಂದರೇನು? ಅದರಲ್ಲಿ ಎಷ್ಟು ವಿಧ? ಯಾವ ರೀತಿ ಅದನ್ನು ತಯಾರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿತ್ತಾಯಿತು, ಈಗ ಪಾದೋದಕವನ್ನು ತೆಗೆದುಕೊಳ್ಳುವುದರಿಂದ ಅಂತರಂಗದ ಅರಿವಿನಲ್ಲಿ ತನಗೆ ಯಾವ ಯಾವ ಪರಿಣಾಮವೂ ಆಗುತ್ತದೆ ಎಂಬುದನ್ನು ಅನುಭವಿಸಿ ತಿಳಿದುಕೊಳ್ಳಬೇಕು ಎಂಬುದನ್ನು ತಿಳಿಸುತ್ತಾ,

ಪಾದೋದಕವನ್ನು ಭಕ್ತಿವಂತನಾಗಿ ಲಿಂಗದ ಮೇಲೆ ಎರೆದು ಸ್ವೀಕರಿಸಬೇಕು ಎಂಬುದನ್ನು ತಿಳಿದಿದ್ದೇವೆ, ಮೊದಲನೆಯದಾಗಿ ಎರೆದ ಪಾದೋದಕವು ಗುರುಪಾದೋದಕವಾಗಿ, ಇಷ್ಟಲಿಂಗಕ್ಕರ್ಪಣವಾಗುತ್ತದೆ, ಅದೇ ಕರುಣಜಲ ಎನಿಸುತ್ತದೆ ,ಸರ್ವಜೀವಿಗಳಲ್ಲಿ ಅಂತಃಕರಣ ಭಾವದಿಂದ ಕಾಣುವ ಮನೋಭಾವವು ಹುಟ್ಟುತ್ತದೆ.

ಎರಡನೆಯದಾಗಿ ಎರದ ಪಾದೋದಕವು  ಲಿಂಗಪಾದೋದಕವಾಗಿ, ಪ್ರಾಣಲಿಂಗಕ್ಕೆ ಅರ್ಪಣವಾಗುತ್ತದೆ ಅದೇ ವಿನಯಜಲ ಎನಿಸುತ್ತದೆ, ಭಯ-ಭಕ್ತಿ, ನಯ-ವಿನಯ, ದಯೆ-ಕರುಣೆಯಿಂದ ಬಾಳುವನು.

ಮೂರನೆಯದಾಗಿ ಎರೆದ ಪಾದೋದಕವು ಜಂಗಮಲಿಂಗಪಾದೋದಕವಾಗಿ, ಭಾವಲಿಂಗಕ್ಕೆ ಅರ್ಪಣೆ ಆಗುತ್ತದೆ ಅದೇ ಸಮತಾಜಲ ಎನಿಸಿಕೊಂಡು ಜ್ಞಾನ ಪಾದೋದಕ ಆಗುತ್ತದೆ, ಜ್ಞಾನವಂತನಾದ ವ್ಯಕ್ತಿಯ ಭಾವದಿಂದ “ಪಂಡಿತಾಃ ಸಮದರ್ಶಿನಃ” ಎಲ್ಲವನ್ನೂ ಸಮಾನವಾಗಿ ಕಾಣುತ್ತಾನೆ.

ಶಿವಭಕ್ತನಾಗಿರುವವ ಗುರು ಲಿಂಗ ಜಂಗಮರನ್ನು ಆರಾಧಿಸಿಕೊಂಡು ಹೋಗುವವನಲ್ಲಿ ಕರುಣ, ವಿನಯ, ಸಮತ್ವವು ಬರುವುದು, ಅವನು ಕಾಲ ಕರ್ಮ ಮಾಯಾ ರಹಿತವಾಗಿ ಅಮರನಾಗುವನು.

ಪಾದೋದಕವನ್ನು ಸ್ವೀಕರಿಸುವ ಭಕ್ತನ ಪ್ರಾಣ ಚೇತನವಾಗಿ ಪ್ರಕಟಗೊಳ್ಳುತ್ತದೆ, ಸಕಲ ಪದಾರ್ಥಗಳು ಹೋಗಿ ಪ್ರಸಾದ ಆಗುತ್ತದೆ, ಶಿಲೆಯು ಹೋಗಿ ಲಿಂಗವಾಗುತ್ತೆ, ಜಡತ್ವವು ಹೋಗಿ ದೈವತ್ವವು ಬರುತ್ತದೆ.

  1. ಪ್ರಸಾದ.

ಸದ್ಭಕ್ತನು ಸತ್ಯ ಶುದ್ಧ ಕಾಯಕವನ್ನು ಮಾಡಿ ತಂದಿರುವ ಪದಾರ್ಥವನ್ನು ಗುರು ಜಂಗಮರಿಗೆ ಅರ್ಪಿಸಿದಾಗ ಪದಾರ್ಥ ಭಾವ ಹೋಗಿ ಪ್ರಸಾದ ಎನ್ನುವ ಭಾವ ಬರುತ್ತದೆ, ಗುರು ಲಿಂಗ ಜಂಗಮರ ಅನುಗ್ರಹದಿಂದ ಬರುವಂತಹದ್ದೇ ಪ್ರಸಾದ,

ಬಸವಲಿಂಗ ಶರಣರು –

ಗುರುದೇವನೊಳು ಶುದ್ಧ ವರಲಿಂಗದೊಳು ಸಿದ್ಧ

ಚರದೊಳ್ಪ್ರಸಿದ್ಧ ದಿರದ ತೋರಿಸಿ ಎನ್ನ

ಪೊರೆದ ಶ್ರೀ ಗುರುವೇ ಕೃಪೆಯಾಗು.

ಬಂದ ಪದಾರ್ಥವನ್ನು ಗುರುವಿಗೆ ಅರ್ಪಿಸಿದಾಗ ಶುದ್ಧಪ್ರಸಾದ ಆಗುತ್ತದೆ, ಲಿಂಗಕ್ಕೆ ಅರ್ಪಿಸಿದಾಗ ಸಿದ್ಧಪ್ರಸಾದ, ಜಂಗಮನಿಗೆ ಅರ್ಪಿಸಿದಾಗ ಪ್ರಸಿದ್ಧಪ್ರಸಾದ ಆಗುತ್ತದೆ, ಗುರುವಿಗೆ ಪದಾರ್ಥಗಳು ಅರ್ಪಿಸಿದಾಗ ತನ್ನಲ್ಲಿರುವ ಲಿಂಗ ಜಂಗಮರಿಗೆ ಸಲ್ಲಿಸಕೊಳ್ಳುತ್ತಾನೆ, ಜಂಗಮನಿಗೆ ಪದಾರ್ಥವನ್ನು ಅರ್ಪಿಸಿದಾಗ ಜಂಗಮನು ತನ್ನಲ್ಲಿರುವ ಗುರು ಲಿಂಗಕ್ಕೆ ಸಲ್ಲಿಸಿ ಶುದ್ಧ ಸಿದ್ಧ ಪ್ರಸಿದ್ಧಪ್ರಸಾದವನ್ನಾಗಿಸಿ ಸ್ವೀಕರಿಸುತ್ತಾನೆ.

ಗುರು ಜಂಗಮರು ತಾವು ಸ್ವೀಕರಿಸುವ ಮೊದಲು ಪ್ರಸಾದ ಬಟ್ಟಲನ್ನು ಭಸ್ಮವನ್ನು ಹಚ್ಚಿ ಪ್ರಣವಸಂಬಂಧವನ್ನು ಮಾಡಿಕೊಂಡು ಶುದ್ಧಗೈಸಿಕೊಂಡಿರುತ್ತಾರೆ, ಭಕ್ತನು ತಂದು ನೀಡಿದ ಪದಾರ್ಥವು ಕ್ರಿಯಾ ಬಟ್ಟಲಲ್ಲಿ ಸ್ಪರ್ಶವಾದಾಗ ಅದು ಶುದ್ಧಪ್ರಸಾದ ವಾಗುತ್ತದೆ, ಗುರು ಜಂಗಮರು ಆ ಪ್ರಸಾದವನ್ನು  ಮೂರು ವೇಳೆ ಕುರಂಗ, ಪತಾಕ,  ಸೂಚಕವೆಂಬ ಮುದ್ರೆಯಿಂದ ಲಿಂಗಕ್ಕೆ ತೋರಿಸುವಾಗ ಸಿದ್ಧಪ್ರಸಾದ ಆಗುತ್ತದೆ, ಹಸ್ತದಿಂದ ಜಿಹ್ವೆಗೆ ಮುಟ್ಟುವಾಗ ಪ್ರಸಿದ್ಧ ಪ್ರಸಾದವಾಗುತ್ತದೆ, ಎಂದು ಶರಣರು ಸಾರಿದ್ದಾರೆ.

ಪ್ರತಿಯೊಂದು ತಯಾರಾದ ಪದಾರ್ಥದಲ್ಲಿ ರೂಪು, ರುಚಿ ಮತ್ತು ತೃಪ್ತಿ ಎನ್ನುವ ಗುಣಗಳಿರುತ್ತವೆ.

ಆಹಾರ ಪದಾರ್ಥಗಳನ್ನು ವಿವಿಧ ರೂಪಗಳಿಂದ ನೋಡುತ್ತೇವೆ, ಎಲ್ಲಾ ಪ್ರಸಾದ ರೂಪವನ್ನು ಇಷ್ಟಲಿಂಗಕ್ಕೆ ತೋರಿಸಿದಾಗ ಗುರುಪ್ರಸಾದ ಶುದ್ಧಪ್ರಸಾದ ರೂಪ ಎನಿಸಿಕೊಳ್ಳುತ್ತದೆ, ನಾಲಿಗೆಯ ಮೇಲೆ ಇಟ್ಟುಕೊಂಡಾಗ ರುಚಿಯ ಅನುಭವ ಆ  ಲಿಂಗಪ್ರಸಾದ ಸಿದ್ಧಪ್ರಸಾದ ಎನಿಸಿಕೊಳ್ಳುತ್ತದೆ, ಚಪ್ಪರಿಸಿ ಲಾಲರಸದೊಡನೆ ನುರಿಸುವಾಗ ತೃಪ್ತಿಯಾಗುತ್ತದೆ, ಬಿನ್ನ ರುಚಿಗಳು ಸಮರಸಗೊಂಡು ಸಿದ್ಧ ಪ್ರಸಾದ ಎನಿಸಿ ಭಾವಲಿಂಗಕ್ಕೆ ತೃಪ್ತಿಗೊಳ್ಳುತ್ತದೆ. ಹೀಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಗಳ ರೂಪು ರುಚಿ ತೃಪ್ತಿಗಳು ಪ್ರಸಾದವಾಗಿ ಆತ್ಮಕ್ಕೆ ಸಂತೃಪ್ತಿಯನ್ನು ನೀಡಬಲ್ಲದು ಎಂದು ಶರಣರು ತಿಳಿಸಿದ್ದಾರೆ.

ರೂಪು ರುಚಿ ತೃಪ್ತಿಗಳು ಸಮರ್ಪಣ ಕಾಯಕ್ಕೆ ಚೇತನವನ್ನು ನೀಡಿ ಪ್ರಸಾದ ತೃಪ್ತಿಯಿಂದಲೇ ದೇಹಕ್ಕೆ ಪ್ರಾಣ ಬರುತ್ತದೆ.

ಗುರುವಿನಿಂದ ಬಂದ ಪ್ರಸಾದ ಶುದ್ಧ ಪ್ರಸಾದವಾಗುತ್ತದೆ ಅದರಿಂದ ತಾನು ಶುದ್ಧಿಯಾಗುತ್ತದೆ, ಲಿಂಗದಿಂದ ಬಂದದ್ದು ಸಿದ್ಧ ಪ್ರಸಾದ ಅದರಿಂದ ಮನಶುದ್ಧಿ ಆಗುತ್ತದೆ, ಜಂಗಮನಿಂದ ಬಂದದ್ದು ಪ್ರಸಿದ್ಧ ಪ್ರಸಾದ ಅದರಿಂದ ಭಾವಶುದ್ಧಿಯಾಗುತ್ತದೆ ಹೀಗೆ ಮೂರು ವಿಧ ಪ್ರಸಾದಗಳು ನಮಗೆ ಸದ್ಭಾವವನ್ನು ತುಂಬುತ್ತವೆ, ತ್ರಿವಿಧ ಪ್ರಸಾದಗಳು ಜೀವನವನ್ನು ಉದ್ಧರಿಸುತ್ತವೆ, ಅಂಗನು ಲಿಂಗನಾಗುವ ಶಕ್ತಿಯನ್ನು ಕೊಡುತ್ತದೆ.

ಬಸವಲಿಂಗ ಶರಣರು –

ಏಕ ನೈಷ್ಠೆಯೊಳು ನೀ ನೇಕಾದಶ ಶೇಷವನು

ಸ್ವೀಕರಿಸುತಿರಲು ಕಾಕು ಫಲಪದದಾಸೆ

ಏಕೆಂದ ಗುರುವೇ ಕೃಪೆಯಾಗು.

ಇಲ್ಲಿ ಶೇಷ ಎಂಬ ಪದ ಅರ್ಥ ಗುರು ಜಂಗಮರ ಪ್ರಸಾದದ ನಂತರ ಉಳಿದ ಪ್ರಸಾದಕ್ಕೆ ಶೇಷ ಎಂದು ಕರೆಯುತ್ತಾರೆ,

ಗುರು ಲಿಂಗ ಜಂಗಮರ ಪ್ರಸಾದವನ್ನು ಸ್ವೀಕರಿಸಿದರೆ ಭ

ಭವವು ನಾಶವಾಗುತ್ತದೆ, ಹೀಗಿರುವಾಗ ಕಾಕು ಫಲಗಳ ಆಸೆ ಏಕೆ ಎಂದು ಪ್ರಶ್ನಿಸಿದ್ದಾರೆ, ಗುರು ಲಿಂಗ ಜಂಗಮರ ಪ್ರಸಾದಕ್ಕೆ ಆಸೆ ಪಡಬೇಕೆ ವಿನಃ ಇನ್ನುಳಿದುದಕ್ಕೆ ಆಸೆ ಪಡಬಾರದು.

ಗುರು ಲಿಂಗ ಜಂಗಮರ ತ್ರಿವಿಧ ಪ್ರಸಾದವು ಮುಂದೆ ಹನ್ನೊಂದು ಪ್ರಸಾದಗಳಾಗುತ್ತವೆ.

1-ಶುದ್ಧ ಪ್ರಸಾದ, (ಗುರು ಪ್ರಸಾದ)

2-ಸಿದ್ಧ ಪ್ರಸಾದ, (ಲಿಂಗ ಪ್ರಸಾದ)

3-ಪ್ರಸಿದ್ಧ ಪ್ರಸಾದ, (ಜಂಗಮ ಪ್ರಸಾದ)

4-ಪ್ರಸಾದಿಯ ಪ್ರಸಾದ. (ಜಂಗಮ ಪ್ರಸಾದವನ್ನು ಹಸ್ತದಲ್ಲಿ ತೆಗೆದುಕೊಂಡಾಗ ಆಗುವುದು),

5-ಸಮಯ ಪ್ರಸಾದ, (ಜಂಗಮ ಪ್ರಸಾದವನ್ನು ಪುನಃ ಕೇಳಿ ನೀಡಿಸಿಕೊಳ್ಳುವದು)

6-ಭೋಜ್ಯಪ್ರಸಾದ, (ಜಂಗಮನು ಪ್ರಸಾದವನ್ನು ತುತ್ತು ಮಾಡಿಕೊಂಡಿದ್ದು),

7-ಪಾನ್ಯ ಪ್ರಸಾದ, (ಪ್ರಸಾದವನ್ನು ಸ್ವೀಕರಿಸಿದ್ದು)

8-ಭಕ್ಷ್ಯ ಪ್ರಸಾದ,(ದಂತದಿಂದ ಜಗಿಯದ್ದು)

9-ಚೋಹ್ಯ ಪ್ರಸಾದ, (ಪ್ರಸಾದವನ್ನು ಜಿಹ್ವೆಯಿಂದ ಚಪ್ಪರಿಸಿದ್ದು)

10-ಲೇಹ್ಯ ಪ್ರಸಾದ, (ಬಟ್ಟಲಲ್ಲಿನ ಪ್ರಸಾದವನ್ನು ಸಂಪೂರ್ಣವಾಗಿ ಸೇವಿಸಿ ನಾಲಿಗೆಯಿಂದ ನೆಕ್ಕುವದು)

11- ತೃಪ್ತಿಪ್ರಸಾದ, ( ಸಂತೋಷ ಆಗುವಷ್ಟು ಪ್ರಸಾದವನ್ನು ಸ್ವೀಕರಿಸಿದಾಗ ತೃಪ್ತಿ ಕೊಡುವದೇ)

* ವೀರಶೈವ ದಾರ್ಶನಿಕ ಸಿದ್ಧಾಂತ ಎಂಬ ಗ್ರಂಥದಲ್ಲಿ ಮುಂಡರಗಿಯ ಜಗದ್ಗುರುಗಳು ವಿವರಿಸಿದ್ದಾರೆ.

ಶಿವಾದ್ವೈತಿಯಾದ ಶರಣನು ನಿತ್ಯ ಪ್ರಸಾದವನ್ನು ಸ್ವೀಕರಿಸಿ ಪ್ರಸಾದಕಾಯನಾಗಿ ಪರವಸ್ತುವೇ ತಾನಾಗಿರುತ್ತಾನೆ, ವೇದಗಳು ಪ್ರತಿಪಾದಿಸುವ ಚತುರ್ವಿಧ ಪದವಿಗಳಾದ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ಪದವಿಗಳನ್ನು ತೃಣಕ್ಕೆ ಸಮಾನ ಎಂದು ತಿಳಿದು ಅವುಗಳನ್ನು ಆಸೆ ಪಡನು, ಪ್ರಸಾದದಿಂದಲೇ ಜೀವನ್ಮುಕ್ತಿ, ಪ್ರಸಾದದ ಜ್ಞಾನಪರಿಪೂರ್ಣನಾಗಿ ಪ್ರಸನ್ನತೆ ಪರಮ ಕಳೆಯನ್ನು, ಸಚ್ಚಿದಾನಂದವನ್ನು ಪಡೆಯುವನು, ಎಂದು ಶರಣರು ಸಾರಿದ್ದಾರೆ.

ಪ್ರಸಾದದ ಪರಿಣಾಮವನ್ನು ತಿಳಿಸುವರು,

ಗುರು ಕರುಣೆಯಿಂದ ಒಲಿದ ಶ್ರೇಷ್ಠವಾದ ಶುದ್ಧ ಪ್ರಸಾದ, ಸತ್ಕ್ರಿಯಾ ಸಂಸ್ಕಾರಗಳಿಂದ ಪದಾರ್ಥ ಹೋಗಿ ಪ್ರಸಾದವಾಗಿ ಪರಿಣಮಿಸುತ್ತದೆ, ಈ ಪ್ರಸಾದವು ಇಷ್ಟಲಿಂಗಕ್ಕೆ ಸಮರ್ಪಿತವಾಗಿದೆ, ಇದು ಇಷ್ಟಲಿಂಗನಿಗೆ ಇಷ್ಟವಾದಂತೆ ಪ್ರಾಣಲಿಂಗ ಭಾವಲಿಂಗಕ್ಕೂ ಪ್ರಿಯವಾಗಿದೆ, ಇದರಿಂದ ತೃಪ್ತನಾದ ಭಕ್ತನ ಭಾವವು ಸಕಲ ಕ್ರಿಯೆಗಳೆಲ್ಲಾ ಸತ್ಯ ಸ್ವರೂಪವನ್ನು ಹೊಂದುವದು.

ಸತ್ರ್ಕಿಯಾ ಸ್ವರೂಪವಾದ ಶುದ್ಧ ಪ್ರಸಾದ ಇಷ್ಟಲಿಂಗಕ್ಕೆ ಅರ್ಪಿತವಾಗಿ ರೂಪವಾದದ್ದು ರುಚಿಯೆನಿಸಿ ಸಿದ್ಧಪ್ರಸಾದವೇ ಪ್ರಾಣಲಿಂಗಕ್ಕೆ ತ್ರಾಣ ಆಗುತ್ತದೆ, ಸತ್ಕ್ರಿಯೆಯಿಂದ ಕೂಡಿದ ಸುಜ್ಞಾನದ ಪರಿಣಾಮದಿಂದ ಮಾತು ಮನವು ಪವಿತ್ರವಾಗಿ ಮಂತ್ರವಾಗುತ್ತದೆ,  ಅವರು ಮಾತನಾಡಿದ್ದು ಮಂತ್ರವಾಗಿ, ಅವರ ಯೋಚನೆಯು ಲಿಂಗತತ್ವದ್ದೇ ಆಗಿರುತ್ತದೆ, ಸತ್ಕ್ರಿಯೆಗಳು ಶುದ್ಧವಾಗಿರುವ, ಮನ ಮಾತು ಪವಿತ್ರವಾಗಿ ಮಂತ್ರವಾಗಿದ ಮೇಲೆ ಅವನ ಅಂಗ ಮನ ಭಾವಗಳೆಲ್ಲಾ ಪರಿಶುದ್ಧನಾದ ಮೇಲೆ ಪ್ರಸಾದವೇ ವಿಶೇಷ ಶ್ರೇಷ್ಠತೆಯ ಭಾವವನ್ನು ಹೊಂದುವನು, ಅಂಗವೇ ಗುರುವಾಗಿ, ಮನವೇ ಲಿಂಗವಾಗಿ, ಭಾವವೇ ಜಂಗಮನಾಗಿ ಪರಿಣಮಿಸುವುದರಿಂದ ಪ್ರಸಾದಗಳು ಒಳಹೊರಗೆ ಪರಿಶುದ್ಧ ಪರಿಣಾಮವೂ ಬೀರುತ್ತದೆ ಎಂದು ಶರಣರು ಸಾರಿದ್ದಾರೆ

  1. ವಿಭೂತಿ.

ವೀರಶೈವ ಲಿಂಗಾಯತ ಸಿದ್ಧಾಂತದ ಅಷ್ಟಾವರಣದಲ್ಲಿ ಪೂಜ್ಯಗೊಳ್ಳುವ ಮೂರು ಸಂಪತ್ತುಗಳನ್ನು ಕಂಡಿದ್ದೇವೆ ಪೂಜಿಸಿದ ನಂತರ ಪ್ರಾಪ್ತವಾಗುವ ಎರಡು ಫಲಗಳನ್ನು ಕಂಡಿದ್ದೇವೆ ಈಗ ಪೂಜೆಯನ್ನು ಮಾಡುವ ಸಾಧನೆಗಳನ್ನು ನೋಡಬೇಕಾಗಿದೆ, ಪೂಜಿಸುವ ಸಾಧನೆಗಳು ವಿಭೂತಿ, ರುದ್ರಾಕ್ಷಿ, ಮಂತ್ರ.

ಇಂತು ಗುರು ಚರ ಲಿಂಗ ದಂತರಂಗದೊಳಿರ್ದ

ಶಾಂತಿ ಚಿತ್ಕಳೆಯೆ ಮುಂತೆ ಭಸಿತವೆಯಾದು

ದಿಂತೆಂದ ಗುರುವೆ ಕೃಪೆಯಾಗು.

 

ಗೋಮಯವನ್ನು ಕ್ರಿಯಾ ಬದ್ದವಾಗಿ ಸುಟ್ಟು ಭಸ್ಮ ಮಾಡುವುದಕ್ಕೂ , ಆಂತರಂಗದೊಳಗೆ ನೆಲೆಸಿರುವ ಶಾಂತಿಚಿತ್ಕಳೆಯ ವಿಭೂತಿಗೂ ವ್ಯತ್ಯಾಸವುಂಟು.

ಭಸ್ಮದಲ್ಲಿ ಎರಡು ಒಂದು ಸೋಪಾಧಿಕ ಭಸ್ಮ ಇನ್ನೊಂದು ನಿರುಪಾಧಿಕ ಭಸ್ಮ ಎಂದು ಕರೆಯುತ್ತಾರೆ.

ಜ್ಞಾನಾಗ್ನಿಯಿಂದ ಕಾಮ ಕ್ರೋಧಾದಿಗಳನ್ನು ಸುಟ್ಟು ತೊಳಗಿ ಬೆಳಗುವದೇ ನಿರುಪಾಧಿಕ ಭಸ್ಮ ಎನ್ನುವರು.

ನಿರುಪಾಧಿಕ ಭಸ್ಮವು ಅಂತರಂಗಿಕವಾಗಿರುವುದು, ಅದು ಶಿವನ ಚಿತ್ಕಲೆ, ಗುರು ಲಿಂಗ ಜಂಗಮರ ಅನುಗ್ರಹದಿಂದ ಬರುವಂತಹದ್ದೇ ನಿರುಪಾಧಿಕ ಭಸ್ಮವು, ಇದು ಯಾವುದೇ ಉಪಆಧಇಗಳಇಲ್ಲದಏ ದೊರೆಯುವುದರಿಂದ ಇದಕ್ಕೆ ನಿರುಪಾಧಿಕ ಎಂಬ ಹೆಸರು ಬಂದಿರಬಹುದು.

ಪವಿತ್ರ ಗೋವಿನ ಗೋಮಯವನ್ನು ತೆಗೆದು ಶಿವಾಗ್ನಿಯಿಂದ ಸುಟ್ಟು ಪುಡಿಮಾಡಿ ಉಂಡೆಗಳನ್ನಾಗಿ ಮಾಡಿ ಮತ್ತೆ ಅದನ್ನು ಅಗ್ನಿಯಲ್ಲಿ ಹಾಕಿ ತಯಾರು ಮಾಡುವುದಕ್ಕೆ ಸೋಪಾಧಿಕ ಭಸ್ಮ ಎಂದು ಕರೆಯುವರು, ಆಕಳು ಕಾಡಿಗೆ ಹೋಗಿ ಅಲ್ಲಿ ನಾನಾ ವಿಧ ಗಿಡಗಳನ್ನು ತಿಂದು ಬರುತ್ತದೆ, ಗಿಡದಲ್ಲಿ ವನಸ್ಪತಿಯೂ ಇರುವ ಕಾರಣ ಆಕಳು ತಿಂದ ಗಿಡದಲ್ಲಿ ಔಷಧಿಗುಣಗಳು ಇರುತ್ತದೆ, ತಾನು ತಿಂದ ಹುಲ್ಲನ್ನು ಜಠರಾಗ್ನಿಯಲ್ಲಿ ಸುಟ್ಟು ಸೆಗಣಿಯನ್ನು ಕೊಡುತ್ತದೆ ಅದನ್ನು ಅಗ್ನಿಯಿಂದ ಸುಟ್ಟು ಪುಡಿಮಾಡಿ ತಯಾರಿಸುವವ ಪರಿಶುದ್ಧ ಶಿವಭಾವದಿಂದ ಕ್ರಿಯಾಪದ್ಧತಿಯಂತೆ ಅದನ್ನು ಭಸ್ಮವನ್ನು ಆಗಿ ಮಾಡುತ್ತಾನೆ, ಅದನ್ನು ಹಚ್ಚಿಕೊಂಡನಿಗೆ ಅನಾರೋಗ್ಯವು ಬರುವುದಿಲ್ಲಾ, ಚರ್ಮವ್ಯಾದಿಗಳಿಂದ ಮುಕ್ತಿಯಾಗುವನು, ಹಚ್ಚಿಕೊಂಡವನನ್ನು ನೋಡಿದರೆ ಶಿವಭಾವದಿಂದ ಕೈಮುಗಿಯಬೇಕೆನುಸುತ್ತದೆ, ಅವನಿಗೆ ಶಿವಕಳೆಯು ಬರುತ್ತದೆ, ಅವನಿಗೆ ಸಮಾಧಾನವಾಗುತ್ತದೆ,

ನಿರುಪಾಧಿಕ ಭಸ್ಮವು ಸತ್ವ ರಜ ತಮೋಗುಣಗಳನ್ನು ಕಳೆದು ಶುದ್ಧ ಸಾತ್ವಿಕ ಇಂದ್ರಿಯಗಳನ್ನು ಸದ್ಗುಣ ಸತ್ಕ್ರಿಯೆಗಳೆಂಬ ಸಗುಣವನ್ನು ಜ್ಞಾನಾಗ್ನಿಯಲ್ಲಿ ಸುಟ್ಟರೇ ನಿರುಪಾಧಿಕ ಭಸ್ಮವು ತಯಾರಾಗುತ್ತದೆ, ಸಾಧಕನ ಕರ್ಮೆಂದ್ರಿಯಗಳ, ಜ್ಞಾನೇಂದ್ರಿಯಗಳ , ಕರಣೇಂದ್ರಿಯಗಳ ತ್ರಿಗುಣಗಳು ದಹಿಸಿ ಲಿಂಗರೂಪವನ್ನು ಪಡೆದರೆ ಸರ್ವಾಂಗವು ಲಿಂಗ ಎನಿಸಿದ ಗುರು ಲಿಂಗ ಜಂಗಮ ಪೂಜ್ಯತ್ರಯರನ್ನು ತನ್ನಲ್ಲಿ ಸಾಕ್ಷಾತ್ಕರಿಸಿಕೊಂಡ ಸದ್ಭಕ್ತ ಸಾಧಕನು ಚಿದ್ಭಸಿತವನ್ನು (ನಿರುಪಾಧಿಕ ಭಸ್ಮ) ಧರಿಸುವನು, ಎಲ್ಲಾ ಉಪಾದಿಯು ನಾಶವಾಗಿ ಸತ್ಕ್ರಿಯಾಚರಣೆಯಿಂದ ಬೆಳಗುವ ಶಿವತೇಜವಾಗುವನು, ಅವನಲ್ಲಿ ಪರಶಿವನ ಕಳೆಯನ್ನು ಬೆಳಗಿಸುವದೇ ನಿರುಪಾಧಿಕ ಭಸ್ಮವು ಎಂದು ಬಸವಲಿಂಗ ಶರಣರು ತಿಳಿಸುತ್ತಾರೆ.

ಆಕಳಿನ ಸೆಗಣೆಗೆ ಸಂಸ್ಕಾರವನ್ನು ಕೊಟ್ಟಾಗ ಅದು ಭಸ್ಮವಾಗುತ್ತದೆ, ಆ ಭಸ್ಮವನ್ನು ಹಾಗೆ ಅದನ್ನು ಧರಿಸಬಾರದು ಅದಕ್ಕೆ ಗುರು ಜಂಗಮರಿಂದ ಸಂಸ್ಕಾರವನ್ನು ಕೊಡಬೇಕು ಅದಕ್ಕೆ ಅವರ ಪಾದೋದಕವನ್ನು ಹಾಕಿದರೆ ಶುದ್ಧಿಯಾಗುತ್ತದೆ.

ಭಸ್ಮವನ್ನು ಶುದ್ಧಮಾಡುವಾಡುವಾಗ ಮೊದಲು ಗುರುಪಾದೋದಕದಲ್ಲಿ ಅದ್ದಿ ನಂತರ ಪುನಃ ಕ್ರಿಯಾ ಪಾದೋದಕದಲ್ಲಿ  ಅದ್ದಬೇಕು, ನಿರಂಜನ ಗುರುದೇವನ ಕೃಪೆಯಿಂದ ಪಾದೋದಕವು ಅದರಲ್ಲಿ ವ್ಯಾಪಿಸಿಕೊಂಡು ಎರಡು ಇದ್ದದ್ದು ಒಂದಾಗುತ್ತದೆ.

ಬಸವಲಿಂಗ ಶರಣರು –

ಪಾದುದಕ ಪಿಂಡಕ್ಕೆ ವೇಧಾ ಮಂತ್ರವು ಕ್ರಿಯಾ

ತ್ರೈದೀಕ್ಷೆ ಮಾಡಿ ಆದಿ ಮೂಲವ ಲೇಖಂ

ಗೆಯ್ದ ಶ್ರೀ ಗುರುವೇ ಕೃಪೆಯಾಗು.

 

ದೇಹ ಪಿಂಡಕ್ಕೆ ವೇಧಾ ಮಂತ್ರ ಕ್ರಿಯಾ ದೀಕ್ಷೆ ಆಗುವ ಹಾಗೆ ಭಸ್ಮದ ಪಿಂಡಕ್ಕೂ ತ್ರೈದೀಕ್ಷೆ ಅವಶ್ಯಕ ಗುರು ಜಂಗಮರು ತನ್ನ ಎಡಗೈ ಹಸ್ತದಲ್ಲಿರಿಸಿಕೊಂಡು ವಿಧಿವತ್ತಾಗಿ ಪೂಜೆ ಮಾಡಿ ಬಲಗೈ ಹಸ್ತವನ್ನು ಭಸ್ಮದ ಮೇಲೆ ಇಟ್ಟು ಕೊಳ್ಳುವುದು ವೇಧಾದೀಕ್ಷೆ, ಹಾಗೆ ಎರಡು ಹಸ್ತವನ್ನು ಭಸ್ಮದ ಮೇಲೆ ಇಟ್ಟು ಮೂಲ ಪ್ರಣವವನ್ನು ಬರೆದು ಮಂತ್ರೋಚ್ಛಾರಣೆಯೊಂದಿಗೆ ಹಸ್ತ ಮಸ್ತಕ ಸಂಯೋಗವೇ ಮಂತ್ರದೀಕ್ಷೆ, ಮಂತ್ರದೊಂದಿಗೆ ಶುದ್ಧಗೈಸಿರುವ ಭಸ್ಮವನ್ನು ತನ್ನ ಆರು ಸ್ಥಾನಕ್ಕೆ ಮುಟ್ಟಿಸಿ ಹಣೆಗೆ ಮೂರು ಸಾರೇ ಹಚ್ಚಿಕೊಳ್ಳುವದೇ ಕ್ರಿಯಾದೀಕ್ಷೆ. ಇಂತಹ ಶುದ್ಧ ಗೈಸಿರುವ ಕ್ರಿಯಾಭಸ್ಮವನ್ನು ಅನುಗ್ರಹಿತರಾದ ಸಾಧಕರು ಮಾತ್ರ ಇದನ್ನು ಹಚ್ಚಿಕೊಳ್ಳಲು ಯೋಗ್ಯ.

ಕ್ರಿಯಾಭಸ್ಮವನ್ನು ಪಾವನವಾದುದು, ಭಸ್ಮದ ಮಹಿಮೆಯನ್ನು ಅರಿತ ಶ್ರೀ ಬಸವೇಶ್ವರರು ಭಸ್ಮವು ಹಚ್ಚಿಕೊಂಡರೆ ಹಣೆಬರಹವನ್ನು ಬರೆಯುತ್ತದೆ ಎಂದಿದ್ದಾರೆ -ಲಲಾಟದಲ್ಲಿ ವಿಭೂತಿಯ ಬರೆಯಲಿಕೆ ಪಾಪ ಪಲ್ಲಟವಾಗುವುದು.

ಬಸವಲಿಂಗ ಶರಣರು –

ಧ್ಯಾನ ಮಂತ್ರಗಳಿಂದ ಸ್ನಾನ ದೂಳನ ಗೆಯ್ದ

ನೀ ನಾಲ್ವತ್ತೆಂಟು ಸ್ಥಾನದೊಳು ಧರಿಸೆಂದು

ನೀನೊರೆದೆ ಗುರುವೆ ಕೃಪೆಯಾಗು.

ಬಸವ ಪೆಸರಕ್ಷರದಿ ಅಸಮ ತ್ರೈಪುಂಡ್ರವನು

ನೊಸಲು ಮೊದಲಾದ ಎಸೆವ ಸರ್ವಾಂಗಕ್ಕೆ

ಸಸಿನೆ ಧರಿಸೆಂದ ಗುರುವೆ ಕೃಪೆಯಾಗು.

ತ್ರೈಕಾಲ ಪೂಜೆ ಮಾಡುವ ಸಂದರ್ಭದಲ್ಲಿ ಭಸ್ಮವನ್ನು ಷಡಕ್ಷರಿ ಮೂಲಪ್ರಣವದೊಡನೆ ಪೂಜೆ ಮಾಡಿ ಸಮಾಧಾನದೊಳು ಭಸ್ಮಸ್ನಾನ(ಭಸ್ಮವನ್ನು ಶರೀರಕ್ಕೆ ಪ್ರೋಕ್ಷಣೆ ಮಾಡುವುದು), ಭಸ್ಮದೂಳನ( ಭಸ್ಮದ ಕಣವನ್ನ ಹಸ್ತಕ್ಕೆ ಹಚ್ಚಿಕೊಂಡು ಶರೀರಕ್ಕೆ ಲೇಪಿಸಿಕೊಳ್ಳುವದು), ಭಸ್ಮಧಾರಣೆ(ಮಧ್ಯದ ಬೆರಳಿನಿಂದ ಶರೀರಕ್ಕೆ ಹಚ್ಚಿಕೊಳ್ಳುವುದು)

ಮೂರು ಬೆರಳುಗಳಿಗೆ ಆ ಊ ಮಾ ಎಂಬ ಮಂತ್ರದೊಂದಿಗೆ ಹಣೆಗೆ ಹಚ್ಚಿ ಭಸ್ಮವನ್ನು ಶರೀರದ 48 ಸ್ಥಾನಗಳಿಗೆ ಧಾರಣೆ ಮಾಡಿಕೊಳ್ಳಬೇಕು.

ತ್ರೈಪುಂಡವು ಸತ್ವ ರಜ ತಮೋಗುಣಗಳನ್ನು ಮೆಟ್ಟಿನಿಂತ ವ್ಯಕ್ತಿಯನ್ನು ಸೂಚಿಸುತ್ತವೆ, ಭಕ್ತಿ ಜ್ಞಾನ ವೈರಾಗ್ಯವನ್ನು ತೊಟ್ಟಿನಿಂತವನ ಕುರುಹು, ಹೊನ್ನು ಹೆಣ್ಣು ಮಣ್ಣುಗಳೆಂಬ ತ್ರಿಮವಗಳಿಂದ ಮುಕ್ತನಾದವನ ಸಂಕೇತವಾಗಿವೆ, ಬಸವಾತ್ರಯ ಮಹಾಮಂತ್ರದಿಂದ ನೊಸಲಾದಿಯಿಂದ ಸರ್ವಾಂಗಕ್ಕೆ ಭಸ್ಮವನ್ನು ಧರಿಸಬೇಕು. ಬಸವ ಮಂತ್ರದಲ್ಲಿ ಅಗಾಧವಾದ ಶಕ್ತಿ ತುಂಬಿದೆ, ಶಿವನೇ ಬಸವನಾಗಿ, ಬಸವನೆ ಶಿವನಾದವನು, ಬಸವ ಎಂದರೆ ಪಾಪವು ದಿಕ್ಕುಗಾಣದೆ ಹೋಗುತ್ತದೆ.

ಬಾಲಲೀಲ ಮಹಾಂತ ಶಿವಯೋಗಿಗಳು –

ಬಸವ ಬಸವಾಯೆಂದು ಭಸಿತಮಂ ಧರಿಸಿದರೆ ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ‌

ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು, ಭಸಿತಮಂ ಧರಿಸಿ ಬಯಲಾದರಯ್ಯ.

ಘನಮಠ ಶಿವಯೋಗಿಗಳು –

ಶ್ರೀ ಗುರು ಬಸವನ ಸ್ಮರಿಸಲು ನಿಜಪದವಾಗುವದಿದು ನಂಬೋ ಮನುಜ.

ಬಸವ ಮಂತ್ರದ ಮಹಿಮೆಯ ಕುರಿತು ಅನೇಕರು ಕೊಂಡಾಡಿದ್ದಾರೆ.

ಸುಲಭಮಂತ್ರವಾದ ಬಸವಾಕ್ಷರವನ್ನು ಧ್ಯಾನಿಸುತ್ತಾ ಭಸ್ಮವನ್ನು ಸರ್ವಾಂಗಕ್ಕೆ ಧರಿಸಬೇಕು.

 

ಸಕಲಾಚಾರದ ಕವಚ ಸಕಲ ವಶ್ಯದ ತಿಲಕ

ಸಕಲ ಸುಖ ಮುಖದ ಮುಕುರವೀಭಸಿತವೆಂ

ದಕಳಂಕ ಗುರುವೆ ಕೃಪೆಯಾಗು.

ಯೋಧನಿಗೆ ಕವಚಗಳು ಎಷ್ಟು ಮುಖ್ಯವೋ ಅಷ್ಟೇ ಭಸ್ಮವು ಸಕಲ ಆಚಾರಗಳಿಗೆ ರಕ್ಷಾ ಕವಚ ಇದ್ದಂತೆ, ಭಸ್ಮಧಾರಣೆಯಿಂದ ಪಾಪವು ನಾಶವಾಗಿ ಸದಾಚಾರಗಳನ್ನೂ ಸಂರಕ್ಷಿಸುತ್ತದೆ, ಭಸ್ಮಕ್ಕೆ ಸಕಲವನ್ನೂ ವಶೀಕರಣ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದೆ, ವಶ್ಯದ ತಿಲಕವಾಗಿದೆ, ಭಸ್ಮವು ವೀರಶೈವರಿಗೆ ಪರಮಾಲಂಕಾರವಾಗಿದೆ, ಧರಿಸುವುದರಿಂದ ಸುಖ ದುಖಃದ ಅರಿವಾಗುತ್ತದೆ,  ಧರಸಿ ಲಿಂಗಾಂಗ ಯೋಗ ಸಾಧನೆಮಾಡುವುದರಿಂದ ಭವಿಷ್ಯವನ್ನು ಅರಿಯಬಲ್ಲವನು ಎಂದು ಬಸವಲಿಂಗ ಶರಣರು ಭಸ್ಮದ ಮಹಿಮೆ ಅಪಾರವಾದದ್ದು, ಅಡಿಗಡಿಗೆ ಪರಮಾತ್ಮನನ್ನು ಸ್ವರೂಪಿಯಾದ ಗುರು ಲಿಂಗ ಜಂಗಮರನ್ನು ನೆನೆಯುತ್ತಾ ನೊಸಲಿಗೆ ಭಸ್ಮವನ್ನು ಧರಿಸುವುದರಿಂದ ಭವ ಬಂಧನವು ಅಳಿಯುತ್ತದೆ ಎಂದು ನೆನಪಿಸಿದ್ದಾರೆ.

ಭೂಮಂಡಲದಲ್ಲಿ ಸೂರ್ಯೋದಯ ವಾದರೆ ಕತ್ತಲೆ ಹೋಗುವ ಹಾಗೆ ಚಿದ್ಭಸಿತವನ್ನು ಧರಿಸುವುದರಿಂದ ಪಿಂಡಾಂಡದಲ್ಲಿ ತನು ಮನದ ಅಜ್ಞಾನವೆಂಬ ಕತ್ತಲೆಯು ಹೋಗುತ್ತದೆ.

ಭಸ್ಮದಲ್ಲಿ ವಿಭೂತಿ,  ಭಸಿತ, ಭಸ್ಮ, ಕ್ಷಾರ, ರಕ್ಷ ಎಂದು ಐದು ವಿಧವುಂಟು.

ಅಣಿಮಾದಿ ಅಷ್ಟಸಿದ್ಧಿಯನ್ನು ಕೊಡುವುದು ವಿಭೂತಿ, ಶಿವತತ್ವವನ್ನು ಧರಿಸುವುದೇ ಭಸಿತ,

ಪಾಪಗಳನ್ನು ಸುಟ್ಟು ಪರಿಹರಿಸುವದೇ ಭಸ್ಮ, ತಾಪತ್ರಯದಿಂದ ಒದಗುವ ಆಪತ್ತನ್ನು ಕಳೆಯುವುದೇ ಕ್ಷಾರ,

ಸಕಲ ಭೂತ ಪೀಶಾಚದ ಭಯವನ್ನು ನಿಲ್ಲಿಸುವದೇ ರಕ್ಷ ಎನ್ನುವರು.

ಭಸ್ಮ ಎಂದರೇನು? ಭಸ್ಮದ ಮಹಿಮೆ, ಅದರ ತಯಾರಿಕೆ, ಅದರ ಗುಣಗಳನ್ನು ಬಸವಲಿಂಗ ಶರಣರು ತಿಳಿಸುತ್ತಾ ಬಂದಿದ್ದಾರೆ. ಸಾಧಕನು ಚಿದ್ಭಸ್ಮವನ್ನು‌ ಧರಿಸಿಕೊಳ್ಳಬೇಕು ಮಾನವನಿಗೆ ಬಹುವಾಗಿ ಕಾಡುವ ವೈರಿ ಅಂದರೆ ನಾನೆಂಬ ಅಹಂ, ಇದು ಬಂದಮೇಲೆ ವ್ಯಕ್ತಿಯ ಬದುಕು ಮಂಕಾಗುತ್ತದೆ, ನಾಶದ ಕಡೆಗೆ ಹೋಗುತ್ತಾನೆ. ಈ ಅಹಂಕಾರವನ್ನು  ಅಜ್ಞಾನ ಎಂಬ ಬೆರಣಿಯನ್ನು ಸುಜ್ಞಾನವೆಂಬ ಅಗ್ನಿಯಲ್ಲಿ ಸುಟ್ಟು ಹಾಕಿದಾಗ ಉಳಿದದ್ದೇ ಚಿದ್ಭಸಿತ, ಇದನ್ನು ಧರಿಸಿವನಿಗೆ ನಾನೆಂಬ ಹೋಗಿ ತಾನೆಂಬದು ಉಳಿದು ಪರಶಿವನ ಸ್ವರೂಪನಾಗುವನು.

  1. ರುದ್ರಾಕ್ಷಿ.

ರುದ್ರನ ಅಕ್ಷಿಯೆ ರುದ್ರಾಕ್ಷಿ, ರುದ್ರನ ನೇತ್ರದಿಂದ ಉತ್ಪನ್ನವಾಗಿದ್ದಕ್ಕೆ ಇದಕ್ಕೆ ರುದ್ರಾಕ್ಷಿ ಎಂಬ ಹೆಸರು ಬಂದಿದೆ, ಯೋಗ ಸಮಾದಿಯಲ್ಲಿರುವ ಶಿವನು ತಾರಕಾಕ್ಷ , ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರಿಂದ ಬಂಗಾರ, ಬೆಳ್ಳಿ, ಕಬ್ಬಿಣಗಳ ತ್ರಿಪುರಗಳನ್ನು  ನಾಶಮಾಡಲು ತ್ರಿನೇತ್ರ ತೆಗೆಯುತ್ತಾನೆ ಆಗ ಕಣ್ಣಿನಿಂದ ಕಣ್ಣೀರು ಭೂಮಿಯಲ್ಲಿ ಬಿದ್ದು ಹುಟ್ಟಿದ ಬೀಜವೇ ರುದ್ರಾಕ್ಷಿಯು, ರುದ್ರಾಕ್ಷಿ ಯಲ್ಲಿ ಔಷದಿ ಗುಣವಿದೆ, ಇದು ವಾಯು ಶುದ್ಧಿ ಮಾಡುತ್ತದೆ, ಸಾಮಾನ್ಯವಾಗಿ ಜನರು ಬಂಗಾರಾಭರಣವನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾರೆ ಸಾಧಕನಾದವನು ರುದ್ರಾಕ್ಷಿಯನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾನೆ, ರುದ್ರಾಕ್ಷಿಯ ನೀರು ಮೈಮೇಲೆ ಬೀಳುವುದರಿಂದ ಚರ್ಮರೋಗವು ಹೋಗುತ್ತದೆ, ಯಾರು ರುದ್ರಾಕ್ಷಿಯನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾರೋ ಅಂತವರಿಗೆ ಶಿವನ ಅನುಗ್ರಹ ಇರುತ್ತದೆ.

ಬಸವಲಿಂಗ ಶರಣರು –

ಆಕಳಂಕ ಶರಣನಾ ಶಿಖೆಯ ಲಿಂಗದ ಗೋಪ್ಯ

ಮುಖವೆ ರುದ್ರಾಕ್ಷ ಸಕಲ ಭೂಷಣ ಮಣಿಯ

ಶಿಖೆಯೆಂದ ಗುರುವೆ ಕೃಪೆಯಾಗು.

ಶರಣರು ತ್ರಿಪದಿಯಲ್ಲಿ ಆಂತರಿಕ ರುದ್ರಾಕ್ಷಿಯನ್ನು ಧರಿಸುವುದನ್ನು ಹೇಳಿದ್ದಾರೆ, ಶರಣನಾದವನು ಆಧಾರಾದಿ ಷಡ್ಚಕ್ರಗಳಲ್ಲಿ ಆಚಾರಾದಿ ಲಿಂಗಗಳನ್ನು ಆರಾಧಿಸುತ್ತಾ, ಬ್ರಹ್ಮರಂದ್ರ ಸ್ಥಲಕ್ಕೆ ಏರಿ ಶಿಖಾಚಕ್ರದ ನಿಶೂನ್ಯಲಿಂಗದ ಗೋಪ್ಯ ಮುಖವೇ ರುದ್ರಾಕ್ಷಿ, ಅಂತಹ ಸಾಧಿಸಿರುವ ಸಾಧಕನು ಮಾತ್ರಾ ಸೂಕ್ಷ್ಮವಾದ ಆಂತರಿಕ ರುದ್ರಾಕ್ಷಿಯನ್ನು ಧರಿಸುವನು, ಎಂದು ತಿಳಿಸಿದ್ದಾರೆ.

ಶ್ರೀ ಬಸವೇಶ್ವರರು –

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಪಾವನವು,

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಕಾರಣವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಸಾಧನವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಸಿದ್ಧಿ

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಪಾಪಕ್ಷಯವು

ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖ ರುದ್ರಾಕ್ಷಿಗಳಾದವಾಗಿ

ಅಯ್ಯಾ ಕೂಡಲಸಂಗಮದೇವ

ಎನಗೆ ಮುಕ್ತಿ ಪಥಕ್ಕೆ ಶ್ರೀ ರುದ್ರಾಕ್ಷಿಯೆ ಸಾಧನವಯ್ಯಾ.

ಸರ್ವ ಕಾರ್ಯ ಕಾರಣಕ್ಕೂ ರುದ್ರಾಕ್ಷಿಯೇ ಕಾರಣ, ಮುಕ್ತಿಯನ್ನು ಪಡೆಯಲು ರುದ್ರಾಕ್ಷಿಯೆ ಸಾಧನ ಎಂದು ಈ ವಚನದಲ್ಲಿ ಸೂಚಿಸಿದ್ದಾರೆ.

ಆ ರುದ್ರಾಕ್ಷಿಯನ್ನು ಯಾವ ಯಾವ ಸ್ಥಾನಗಳಲ್ಲಿ ಧರಿಸಬೇಕು ಎಂದು ಶರಣರು ತಿಳಿಸಿದ್ದಾರೆ.

ಧರಿಸುವ ಕ್ರಮ – ಎರಡು ಮುಂಗೈಗೆ ಕಂಕಣದ ರೀತಿ ಹನ್ನೆರಡು ಹನ್ನೆರಡು ರುದ್ರಾಕ್ಷಿ ಮಾಲೆ ಹಾಕಿಕೊಳ್ಳಬೇಕು, ಎರಡು ಭುಜದಲ್ಲಿ ತೋಳಬಂದ ರೀತಿ ಬಲಕ್ಕೆ ಹದಿನಾರು, ಎಡಬುಜಕ್ಕೆ ಹದಿನಾರು, ಕಂಠದಲ್ಲಿ ಮೂವತ್ತೆರಡು ರುದ್ರಾಕ್ಷಿಯ ಮಾಲೆಮಾಡಿ ಹಾಕಿಕೊಳ್ಳಬೇಕು, ಕಿವಿಯಲ್ಲಿ ಕರ್ಣಕುಂಡಲದಂತೆ ಒಂದೊಂದು ರುದ್ರಾಕ್ಷಿ, ಎದೆಯ ಮೇಲೆ ಐವತ್ತೇಳು ರುದ್ರಾಕ್ಷಿಯ ಮಾಲೆ ಹಾಕಿಕೊಳ್ಳಬೇಕು, ಕಕ್ಷೆಯ ಬಾಗಕ್ಕೆ ನೂರೆಂಟು ರುದ್ರಾಕ್ಷಿಗಳನ್ನು, ನೆತ್ತಿಯ ಮೇಲೆ ಮೂರು, ತಲೆಯ ಸುತ್ತಲೂ ಮೂವತ್ತಾರು, ಹಾಗೆ ಶಿಖೆಯಲ್ಲಿ ಒಂದು ರುದ್ರಾಕ್ಷಿಯನ್ನು ಧರಿಸಬೇಕು.

 

ಸಾಮಾನ್ಯವಾಗಿ ಪಂಚಮುಖ ರುದ್ರಾಕ್ಷಿಯನ್ನು ಧರಿಸುವುದೇ ಉತ್ತಮ, ವಿಭಿನ್ನ ಸ್ಥಾನದಲ್ಲಿ ಆಯಾ ಸಂಖ್ಯೆಗಣುಗುಣವಾಗಿ ದೊಡ್ಡ ಗಾತ್ರದ ರುದ್ರಾಕ್ಷಿಯನ್ನು ಧರಿಸಬೇಕು, ರುದ್ರಾಕ್ಷಿಯನ್ನು ಪೋಣಿಸುವುದು ಅಷ್ಟೇ ಮುಖ್ಯ ಒಂದೊಂದು ರುದ್ರಾಕ್ಷಿಯು ಮುಖ ಪೃಷ್ಠ ಅಂತಾ ಇರುತ್ತವೆ ಅವುಗಳನ್ನು ತಿಳಿದು ಮುಖಕ್ಕೆ ಮುಖವನ್ನು, ಪೃಷ್ಠಕ್ಕೆ ಪೃಷ್ಠ ಭಾಗವು ಕಲೆಯಬೇಕು.

ಈ ದೇಹ ಮೂವತ್ತಾರು ತತ್ವದಿಂದ ಕೂಡಿದೆ, ಅಂಥ ತತ್ವಜ್ಞಾನಿ ಆಗಬೇಕೆಂದು ತಲೆಯಲ್ಲಿ ಮೂವತ್ತಾರು ರುದ್ರಾಕ್ಷಿಯನ್ನು ಧರಿಸುವುದ ಸೂಚಕ.

ಪರಮ ರುದ್ರಾಕ್ಷಿಯನ್ನು ಕೈ, ಬಾಹು, ಕಿವಿ, ಎದೆ, ಕಕ್ಷಗಳಲ್ಲಿ, ತಲೆ, ಶಿಖೆಯನ್ನು ಬಿಡದಂತೆ ಎಲ್ಲಾ ಸ್ಥಾನಗಳಲ್ಲಿ  ಭಕ್ತಿಯಿಂದ ರುದ್ರಾಕ್ಷಿಯನ್ನು ಧರಿಸುವನೋ ಅವನು ಮೋಕ್ಷವನ್ನು ಹೊಂದುತ್ತಾನೆ, ಮುಖಬೇದವನ್ನು ಕಂಡುಕೊಂಡು ಧರಿಸುವವನಿಗೆ ರುದ್ರ ಪದವಿಯನ್ನು ಪಡೆಯುತ್ತಾನೆ ಎಂದಿದ್ದಾರೆ.

ಹಾಗೆ – ರುದ್ರಾಕ್ಷಿಯೂ ಭವದ ಬೀಜವನ್ನು ತೆಗೆಯುತ್ತದೆ ಎನ್ನುವರು, ಹೊಲದಲ್ಲಿ ಕರಕಿಯನ್ನು ತೆಗೆಯಲು ನೇಗಿಲನ್ನು ಹಾಕಿದರೆ ಹೋಗುವುದಿಲ್ಲ ಅದಕ್ಕೆ ಗುದ್ದಲಿ ಎನ್ನುವ ಸಾಧನಾದಿಂದ ಸಂಪೂರ್ಣ ನಾಶಮಾಡಬಹುದು, ಹಾಗೆ ಈ ಭವದ ನಾಶ ಮಾಡಲು ರುದ್ರಾಕ್ಷಿಯನ್ನು ಧರಿಸಬೇಕು.

ರುದ್ರಾಕ್ಷಿಯ ಧಾರಣೆಯ ಫಲ.

ಅಣುಗ ಶ್ರೀ ಗುರುಚರಕೆ ಮಣಿದು ಭಕ್ತಿಯ ಮಾಳ್ಪ

ಮಣಿಹವೀವುದಕೆ ಶೃಣು ರುದ್ರಾಕ್ಷಿಯೆ ಚಿಂತಾ

ಮಣಿಯೆಂದ ಗುರುವೆ ಕೃಪೆಯಾಗು.

ಶ್ರೀ ಗುರು ಜಂಗಮರಲ್ಲಿ ಭಕ್ತಿಯನ್ನು ಇಟ್ಟುಕೊಳ್ಳುವದು ಭಕ್ತನಾದವನ ಕರ್ತವ್ಯವಾಗಿದೆ, ಇವನು ಸ್ಥಾವರಲಿಂಗಕ್ಕೆ ಮಹತ್ವವನ್ನು ಕೊಡದೆ ಗುರು ಜಂಗಮರಿಗೆ ಭಕ್ತಿಯನ್ನು ಅರ್ಪಿಸಬೇಕು, ಭಕ್ತನಲ್ಲಿ ಕಿಂಕರತೆ ಇರಬೇಕು, ಆ ಕಿಂಕರ ಬರಬೇಕು ಅಂದರೆ ರುದ್ರಾಕ್ಷಿಯ ಧಾರಣೆಯ ಅವಶ್ಯಕತೆ ಇದೆ, ಈ ರುದ್ರಾಕ್ಷಿಯೆ ಚಿಂತಾಮಣಿಯಾಗಿದೆ  ಚಿಂತಾಮಣಿ ಅಂದರೆ ಬೇಡಿದವರಿಗೆ ಬೇಡಿದ್ದು ನೀಡುವ ಕೆಲಸ ಆ ವರವನ್ನು ಬೇಡಿದವರಿಗೆ ಚಿಂತೆಯನ್ನು ದೂರಮಾಡಿ ಅವರಿಗೆ ಇಷ್ಟಾರ್ಥವನ್ನು ಈಡೇರುತ್ತದೆ,

ಲೌಕಿಕ ಜೀವನದಲ್ಲಿ ನಾನು ನೀನು ಎನ್ನುವ ಭಾವಗಳು ಇರುತ್ತವೆ, ಅಲೌಕಿಕ ಜೀವನದಲ್ಲಿ ಅವುಗಳು ಇಲ್ಲದೆ ಎಲ್ಲವೂ ಶಿವನ ಕಾರ್ಯ ಎಲ್ಲವೂ ಶಿವನೇ ನಡೆಸುವುದು ಎನ್ನುವ ಭಾವ ಇರುತ್ತದೆ, ರುದ್ರಾಕ್ಷಿ ಧಾರಣೆಯಿಂದ ನಾನು ನೀನು ಎನ್ನುವ ಭಾವ ಅಳಿದು ಸುಜ್ಞಾನದಿಂದ ಎಲ್ಲವೂ ಶಿವಭಾವ ಬಂದು ಅವನು ಲಿಂಗಸ್ವರೂಪಿಯಾಗಿ ಅವನೇ ರುದ್ರನಾಗುತ್ತಾನೆ ಎಂದು ಬಸವಲಿಂಗ ಶರಣರು ಫಲವನ್ನು ಹೇಳಿದ್ದಾರೆ.

ಈ ರೀತಿ ರುದ್ರಾಕ್ಷಿಯ ಮಹತ್ವವನ್ನು ತಾತ್ವಿಕವಾಗಿ ವೈಜ್ಞಾನಿಕವಾಗಿ ತಿಳಿದು ರುದ್ರಾಕ್ಷಿಯನ್ನು ಧರಿಸಿದವನಿಗೆ ಚರ್ಮ ರೋಗ, ಅವನ ದೇಹದಲ್ಲಿ ಶೀತ ಉಷ್ಣತೆಯು ಸಮತೋಲನದಲ್ಲಿ ಬರುತ್ತದೆ.

 

 

 

  1. ಮಂತ್ರ.

ಏಳುಕೋಟಿ ಮಂತ್ರಗಳಿವೆ ಎಂದು ಶಾಸ್ರ್ತಾಕಾರರು ಹೇಳುವರು, ನದಿಯನ್ನು ದಾಟಲು ದೋಣಿ ಅವಶ್ಯಕತೆ ಇರುವ ಹಾಗೆ ಈ ಭವಬಂದನದ ಸಂಸಾರ ಸಾಗರವನ್ನು ದಾಟಲು ಮಂತ್ರಗಳು ಅವಶ್ಯಕ, ಏಳು ಕೋಟಿ ಮಂತ್ರದಲ್ಲಿ ಪ್ರಣವ ಸಹಿತ ಷಡಕ್ಷರಿ ಮಹಾಮಂತ್ರವೇ ಮಿಗಿಲು,

ಅಕ್ಕಮಹಾದೇವಿ –

“ದುರಿತವ ಪರಿಹರಿಸಬಲ್ಲದೆ, ಓಂ ನಮಃ ಶಿವಾಯ ಶರಣೆಂಬುದೇ ಮಂತ್ರ”.

ಶ್ರೀ ಬಸವೇಶ್ವರರು –

ಕರಿಯಂಜುವುದು ಅಂಕುಶಕ್ಕಯ್ಯಾ,

ಗಿರಿಯಂಜುವುದು ಕುಲಿಶಕ್ಕಯ್ಯಾ, ತಮಂಧವಂಜುವುದು ಜ್ಯೋತಿಗಯ್ಯಾ, ಕಾನನವಂಜುವುದು ಬೇಗೆಗಯ್ಯಾ, ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯಾ.

ಎಂದು ಮಂತ್ರದ ಶಕ್ತಿಯನ್ನು ತಿಳಿಸುತ್ತಾ,

“ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎನಗಿದೆ ಮಂತ್ರ, ಇದೇ ಜಪ. ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.”

ತನು ಮನದಲ್ಲಿಯೂ ನಿನ್ನ ನಾಮವನ್ನು ಬಿಟ್ಟು ಏನನ್ನು ಆಸೆಪಡುವುದಿಲ್ಲಾ ಎಂದಿದ್ದಾರೆ.

“ಮನಸಾ ತ್ರಾಯತ ಇತಿ ಮಂತ್ರ”ಮನಸ್ಸಿನಿಂದ ಗೌಪ್ಯವಾಗಿ ರಕ್ಷಿಸುವುದೇ ಮಂತ್ರ,

ಅಸಮ ಲಿಂಗದ ದಿವ್ಯ ಪೆಸರೆಂಬ ಷಣ್ಮಂತ್ರ

ವಿಸರವೆ ನಿನ್ನಂಗ ದಸುವಿನೊಳಗಿಹುದೆಂಬು

ದುಸುರಿದಾ ಗುರುವೆ ಕೃಪೆಯಾಗು.

 

ಇಡೀ ಮನುಷ್ಯನ ದೇಹಕ್ಕೆ ಒಂದೇ ಹೆಸರು ಇದೆ, ಒಂದೊಂದು ಅಂಗಕ್ಕೆ ಒಂದೊಂದು ಹೆಸರು ಇರುವುದಿಲ್ಲಾ , ಹಾಗೆ ಲಿಂಗದ ನಾಮವೂ ಕೂಡ ಅಂಗನ ಪ್ರಾಣದಲ್ಲಿ ವ್ಯಾಪಿಸಿಕೊಂಡಿದೆ, ಅದು ಷಣ್ಮಂತ್ರ, ಮಹಾಮಂತ್ರ.

ಮಂತ್ರ ಧ್ಯಾನದಿಂದ ಪ್ರಾಣವನ್ನು ಪ್ರಣವಮಂತ್ರವನ್ನಾಗಿ ಮಾಡಿಕೊಳ್ಳಬೇಕು, ಅವನ ಜೀವನದ ಉಸಿರಿನಲ್ಲಿ ಮಂತ್ರವು ಸಮರಸವಾಗಬೇಕು, ಅಂದಾಗ ಮಾತ್ರ ಅವನಿಗೆ ಮಂತ್ರಮಯನೆನಿಸಿಕೊಳ್ಳುತ್ತಾನೆ ಎಂದಿದ್ದಾರೆ.

 

ಷಡಕ್ಷರಿ ಮಂತ್ರವು ಅಪ್ರತಿಮ, ದಿವ್ಯಮಂತ್ರವಾಗಿದೆ, ಲಿಂಗದೇವನ ದಿವ್ಯ ಹೆಸರು ಷಡಕ್ಷರಿ ಮಂತ್ರವಾಗಿದೆ ಅದನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು, ಹೇಗೆ ಹಿಂದಿನ ಕಾಲದಲ್ಲಿ ಸತಿಯು ತನ್ನ ಪತಿಯ ಹೆಸರನ್ನು ಭಯ ಭಕ್ತಿಯಿಂದ ಕರೆಯುತ್ತಿದ್ದಳು, ಲಿಂಗದ ದಿವ್ಯ ಹೆಸರಾದ ಷಡಕ್ಷರಿ ಮಹಾಮಂತ್ರವನ್ನು ಶರಣನಾದವನು ‘ಶರಣ ಸತಿ ಲಿಂಗ ಪತಿ’ ಭಾವದಿಂದ ವ್ಯಕ್ತವಾಗಿ ನುಡಿಯುವುದಲ್ಲಾ, ಮನಸ್ಸಿನಲ್ಲಿಯೇ ತುಂಬಿಕೊಳ್ಳುತ್ತಾನೆ.

ಮಂತ್ರವನ್ನು ಪುಸ್ತಕವನ್ನು ನೋಡಿ ಪಠಿಸಬಾರದು ಅದು ಶ್ರೀ ಗುರುಗಳಿಂದಲೇ ಮೂಡಿ ಬರಬೇಕು, ಅದು ಫಲವನ್ನು ಕೊಡುತ್ತದೆ ಹೊರತು ಪುಸ್ತಕ ನೋಡಿ ಕಲಿತ ಮಂತ್ರವು ಫಲಗೊಳಿಸುವುದಿಲ್ಲಾ.

 

ಮಂತ್ರವನ್ನು ಯಾರು ಜಪಿಸಬೇಕು? ಯಾರು ಜಪಿಸಬಾರದು ಎಂದು ಹೇಳುವರು.

ಸಾಮಾನ್ಯವಾಗಿ ಯುವಕ ಯುವತಿ ದಂಪತಿಗಳು ಆಗಬೇಕಾದರೆ ಅವರಿಗೆ ಮದುವೆ ಎನ್ನುವ ಕಾರ್ಯವೂ ನಡೆಯಬೇಕು, ಅವರ ತಂದೆ ತಾಯಿಗಳು, ಬಂದು ಬಳಗದವರು ಆ ಕಾರ್ಯದಲ್ಲಿ ಇದ್ದು ನಡೆಸಿದರೆ ಅವರು ದಂಪತಿಯಾಗಿ ಸಂಸಾರವನ್ನು ನಡೆಸಲು ಅರ್ಹರಾಗುತ್ತಾರೆ.

ಪಾರಮಾರ್ಥಿಕ ಜೀವನದಲ್ಲಿ ದೀಕ್ಷೆಯನ್ನುವ ಮದುವೆಯಾಗಬೇಕು, ಲೌಕಿಕದಲ್ಲಿ ಗಂಡ ಹೆಂಡತಿ ಸತಿ ಪತಿ ಇರುವ ಹಾಗೆ ಇಲ್ಲಿ ಶರಣನೆ ಸತಿಯಾಗುತ್ತಾನೆ ಲಿಂಗವೇ ಪತಿಯಾಗುತ್ತಾನೆ ಈ ವಿವಾಹಕ್ಕೆ ಸಂಬಂಧಿಕರು ಇವರ ಹಾಗೆ ಶಿವಭಕ್ತರೇ ಭಾಂದವರು ಶ್ರೀ ಗುರುವೇ ಈ ಮದುವೆಯನ್ನು ಮಾಡುತ್ತಾನೆ, ಅದಕ್ಕೆ ದೀಕ್ಷೆ ಎಂದು ಕರೆಯುತ್ತಾರೆ, ಈ ಕಾರ್ಯ ಮಾಡುವಾಗ ಗುರುವು ಶಿಷ್ಯನ ಕಿವಿಯಲ್ಲಿ ಮಂತ್ರೋಪದೇಶವನ್ನು ಮಾಡುತ್ತಾನೆ ಆ ಮಂತ್ರ ಮಗ್ಗಲು ಕುಳಿತ ವ್ಯಕ್ತಿಗೆ ಕೇಳದ ಹಾಗೆ ಶಿಷ್ಯನ ಕಿವಿಯಲ್ಲಿ ಲಿಂಗಪತಿಯ ಷಡಕ್ಷರಿ ಮಂತ್ರವನ್ನು ಉಪದೇಶಿಸುತ್ತಾನೆ.

ಉಪದೇಶಿಸಿಕೊಂಡ ಶಿಷ್ಯನು ಮಂತ್ರವನ್ನು ಜಪಿಸಲು ಅರ್ಹರಾಗುತ್ತಾರೆ, ಸದ್ಗುರು ಹೇಳಿದ ಮಹಾಮಂತ್ರವನ್ನು ಜಪ ಮಾಡುವ ವಿಧಾನವನ್ನು ಅರಿತು, ಏಕಚಿತ್ತನಾಗಿ ಲಿಂಗದಲ್ಲಿ ದೃಷ್ಟಿಸುತ್ತಾ ಮಂತ್ರವನ್ನು ಮನಸ್ಸಿನಲ್ಲಿಯೇ ಜಪಿಸಬೇಕು, ಜೋರಾಗಿ ಎಲ್ಲರಿಗೂ ಕೇಳುವ ಹಾಗೆ ಹೇಳುವುದರಿಂದ ಮಂತ್ರದ ಉಪಯೋಗವಾಗುವುದಿಲ್ಲಾ.

ಜಪವನ್ನು ಮಾಡುವ ವಿಧಾನ ಮೂರು ಪ್ರಕಾರಗಳಿವೆ.

1- ವಾಚಕ.

2- ಉಪಾಂಶು.

3- ಮಾನಸಿಕ.

ತನ್ನ ಸುತ್ತಲಿನ ಇನ್ನಿತರ ಜನರಿಗೆ ಕೇಳುವ ಹಾಗೆ ಜಪಿಸುವದು ವಾಚಕಜಪ.

ತುಟಿಗಳನ್ನು ಅಲ್ಲಾಡಿಸುತ್ತಾ ಸುತ್ತಲಿನ ಜನರಿಗೆ ಕೇಳದ ಹಾಗೆ ಜಪಿಸುವದು ಉಪಾಂಶುಜಪ.

ತುಟಿಗಳನ್ನು, ನಾಲಿಗೆಯನ್ನು ಅಲುಗಾಡಿಸಿದೆ ಏಕಚಿತ್ತನಾಗಿ ಮನಸ್ಸಿನಲ್ಲಿಯೇ ಜಪಿಸುವದು ಮಾನಸಿಕಜಪ.

ವಾಚಕಜಪಕಿಂತ ಉಪಾಂಶುಜಪ ಶ್ರೇಷ್ಠ, ಉಪಾಂಶುಜಪಕಿಂತ ಮಾನಸಿಕ ಜಪವು ಅತ್ಯಂತ ಶ್ರೇಷ್ಠವಾದದ್ದು.

ಸದ್ಗುರು ದಯಾಪಾಲಿದ ಇಷ್ಟಲಿಂದಲ್ಲಿ ದೃಷ್ಟಿಯನ್ನಿಟ್ಟು ಮನಸಿನಲ್ಲಿಯೆ ಜಪಮಾಡುವುದು ಸಾವಿರ ಪಾಲು ಶ್ರೇಷ್ಠವಾಗಿದೆ,ಷಜಪಮಣಿಯನ್ನು ಎಳೆಯುತ್ತಾ ಪ್ರಣವ ಷಡಕ್ಷರಿಮಹಾಮಂತ್ರವನ್ನು ಜಪಿಸಬೇಕು,

 

ಎಲ್ಲಾ ಮಂತ್ರಗಳಲ್ಲಿ ಷಡಕ್ಷರಿ ಮಹಾಮಂತ್ರವೇ ರಾಜ ಅನಿಸಿಕೊಂಡಿದೆ, ಈ ಮಂತ್ರವನ್ನು ಬಿಟ್ಟು ಬೇರೆ ಮಂತ್ರವನ್ನು ಜಪಿಸದೆ ಇದನ್ನು ಯಾರು ನಯ ವಿನಯದಿಂದ ಮಂತ್ರವನ್ನು ಜಪಿಸುವವರಿಗೆ ಬೇಡಿದ್ದು ಕೊಡುವ ಕಾಮಧೇನು, ತನ್ನನ್ನೇ ಬೇಡಿದರೂ ನೀಡಬಲ್ಲವ ಮಹಾಮಂತ್ರ, ಅದುಕಾರಣ ಇದು ಕಾಮಧೇನು ಎನಿಸಿಕೊಂಡಿದೆ, ಈ ಮಂತ್ರವನ್ನು ಸಿದ್ಧಿಸಿಕೊಂಡನಿಗೆ ಯಾವುದೇ ಫಲವು ಬೇಕಾದಲ್ಲಿ ಸುಲಭವಾಗಿ ಸಿಗುತ್ತದೆ.

‘ಈ ಷಡಕ್ಷರಿ ಮಂತ್ರವೇ ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರಣವಾದುದು’ ಎಂದು ಉರಿಲಿಂಗ ದೇವರು ಹೇಳಿದ್ದಾರೆ.

ಸಾಕ್ಷಾತು ಶಿವಮಂತ್ರ ಮೋಕ್ಷಾಪೇಕ್ಷಿತರ ತಾ

ರಕ್ಷಿಸುವ ಕಲ್ಪವೃಕ್ಷವೆಂದೊರೆದ ಮುಮುಕ್ಷು ಶ್ರೀ ಗುರುವೇ ಕೃಪೆಯಾಗು.

ಪ್ರಣವ ಸಹಿತ ಷಡಾಕ್ಷರಿ ಮಹಾ ಮಂತ್ರವು ಮೋಕ್ಷವನ್ನು ಬಯಸುವ ಮುಮುಕ್ಷುಗಳಿಗೆ ಮೋಕ್ಷ ಪದವಿಯನ್ನು ಕೊಡುವ ಕಲ್ಪವೃಕ್ಷ ಆಗಿದೆ, ಷಡಕ್ಷರಿ ಮಂತ್ರವನ್ನು ಜಪಿಸುವವನು ಸದಾನಂದದಲ್ಲಿರುತ್ತಾನೆ, ಈ ಷಡಕ್ಷರಿ ಮಹಾಮಂತ್ರವನ್ನು ಜಪಿಸುವವನು, ಧ್ಯಾನಿಸುವವನು ಸದಾಕಾಲ ಪರಿಶುದ್ಧನಾಗಿ ಅವನ ದೇಹ ಅಷ್ಟೇ ಅಲ್ಲ ಮನವು ಕೂಡ ಶಿವಾನಂಧದಲ್ಲಿರುತ್ತಾನೆ.

ಅಣಿಮಾದಿ ಅಷ್ಟಸಿದ್ಧಿಗಳು ಶಿವನ ಸಾಕಾರಕ್ಕೆ, ಶಿವನ ಸ್ವರೂಪವನ್ನು ಹೊಂದಲಾರವು, “ಅಣಿಮಾದಿ ಸಿದ್ಧಿಗಳು ತೃಣವು” ಎಂದು ಶರಣರು ಸಾರಿದ್ದಾರೆ. ಸ್ಥಿರವಾಗಿ ನಿತ್ಯವೂ ಆನಂದವು ಈ ಸಿದ್ಧಿಯು ಕೊಡಲಾರವು, ಸುಲಭ ಸಾಧ್ಯವಾದ ಷಡಕ್ಷರಿ ಮಹಾಮಂತ್ರವನ್ನು ಜಪಿಸಲು ಹೇಳಿದ್ದಾರೆ, ಕ್ಷಣಕ್ಷಣಕ್ಕೂ ಕೇಳಿದ್ದನ್ನು ಕೊಡುವ, ಚಿಂತಿಸಿದ್ದನ್ನು ದೊರೆಯಿಸುವ, ಚಿಂತಾಮಣಿ ಕಾಮಧೇನು ಕಲ್ಪವೃಕ್ಷವು ಎಂದು ಷಡಕ್ಷರಿ ಮಂತ್ರದ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

ನಮ್ಮ ಮಾತು ಮನವು ಒಂದಾದರೆ ನಾವಾಡುವ ಮಾತು ಮಂತ್ರವಾಗಿ ಜ್ಯೋತಿರ್ಲಿಂಗವಾಗುತ್ತದೆ, ಮನ ಮತ್ತು ಮಾತು ಏಕರ್ಥವಾಗಿರುಬೇಕು ನಡೆಯುವುದು ಒಂದು ರೀತಿ ನುಡಿಯುವುದು ಒಂದು ರೀತಿ ಇದ್ದರೆ ಅವನಿಗೆ ಶಿವನ ಕರುಣೆ ಸಿಗುವುದಿಲ್ಲ, ಸಾಧಕನು ಸದಾಕಾಲ ಮನವನ್ನು ಮಂತ್ರದಲ್ಲಿ ತೊಡಗಿಸಿಕೊಂಡಿರಬೇಕು, ತ್ರಿಕರಣಪೂರ್ವಕವಾಗಿ ಶ್ರೀ ಗುರುವು ಉಪದೇಶಿಸಿದ ಮಂತ್ರವನ್ನು ಶ್ರದ್ಧೆಯಿಂದ ನೆನೆದರೆ ಅವನು ಮಹಾದೇವನ ಆಗುವನು.