ಶತಕತ್ರಯದ ಶ್ಲೋಕತ್ರಯ ಪೂಜ್ಯ ಲಿಂ, ಹಾನಗಲ್ ಶ್ರೀಕುಮಾರ ಶಿವಯೋಗಿಗಳಗಳವರ ವ್ಯಾಖ್ಯಾನ

ಪೀಠಿಕೆ.

                                                                                                                                                              ಸಂ.ಶ್ರೀಕಂಠ.ಚೌಕೀಮಠ

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ರಚಿಸಿದ ಸುಂದರ ಪದ್ಯಗಳನ್ನು ಓದುವ ಸೌಭಾಗ್ಯವೂ, ಸಮಾಜಹಿತಚಿಂತನೆಯಿಂದ ತುಂಬಿದ ಅವರ ಪತ್ರಗಳನ್ನು ಅವಲೋಕಿಸುವ ಅವಕಾಶವೂ ನನಗೆ ಹಿಂದೆಯೇ ಲಭಿಸಿತ್ತು.

ಆದರೆ ಇಂದು, ಪೂಜ್ಯರು ಮಗ್ಗೆಯ ಮಾಯಿದೇವ ವಿರಚಿತ ಶತಕತ್ರಯದೊಳಗಿನ ಮೂರು ವೃತ್ತಗಳಿಗೆ ಬರೆದಿರುವ ಅನುಭವಾಧಿಷ್ಠಿತ ವ್ಯಾಖ್ಯಾನವನ್ನು ಓದುವ ಸೌಭಾಗ್ಯ ಒದಗಿಬಂದಿರುವುದು ವಿಶೇಷವಾದ ಆನಂದವನ್ನುಂಟುಮಾಡಿದೆ. ಈ ವ್ಯಾಖ್ಯಾನವು ಕೇವಲ ಪದ್ಯಾರ್ಥ ವಿವರಣೆ ಮಾತ್ರವಲ್ಲದೆ, ಅನುಭವಸಿದ್ಧ ತತ್ತ್ವದ ಆಳವನ್ನು ಅನಾವರಣಗೊಳಿಸುವ ಮಹತ್ವದ ದರ್ಶನವಾಗಿಯೇ ಭಾಸವಾಗುತ್ತದೆ.

ಶೈವತತ್ತ್ವ ಸಾಹಿತ್ಯ ಪರಂಪರೆಯಲ್ಲಿ ಮಗ್ಗೆಯ ಮಾಯಿದೇವ ವಿರಚಿತ ಶತಕತ್ರಯವು ವಿಶಿಷ್ಟ ಹಾಗೂ ಅಗ್ರಗಣ್ಯ ಸ್ಥಾನವನ್ನು ಹೊಂದಿದೆ. ಕುಮಾರವ್ಯಾಸ ಯುಗದ ಶತಕಕಾರರಲ್ಲಿ ಅಗ್ರಗಣ್ಯರಾಗಿರುವ ಮಗ್ಗೆಯ ಮಾಯಿದೇವರು (ಕ್ರಿ.ಶ. ೧೪೩೦) ಜ್ಞಾನ–ಭಕ್ತಿ–ವೈರಾಗ್ಯಗಳ ಕ್ರಮಬದ್ಧ ಸಾಧನಾಮಾರ್ಗವನ್ನು ಶತಕಕಾವ್ಯ ರೂಪದಲ್ಲಿ ಸಮರ್ಥವಾಗಿ ನಿರೂಪಿಸಿದ ಅಪರೂಪದ ತತ್ತ್ವಕವಿ. ಮಲಪ್ರಹಾರೀ ನದೀತೀರದ ಐಪುರಕ್ಷೇತ್ರದಲ್ಲಿ ಜನಿಸಿದ ಇವರಿಗೆ ಸಂಗಮೇಶ್ವರರು ಪಿತೃಗಳು; ಸೋಮೇಶ್ವರ ಆರಾಧ್ಯದೈವ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ ಮಾಯಿದೇವರು ಅನುಭವಸೂತ್ರ, ಶಿವಸೂತ್ರ ಎಂಬ ಸಂಸ್ಕೃತ ಗ್ರಂಥಗಳನ್ನೂ, ಪ್ರಭುನೀತಿ, ಏಕೋತ್ತರಶತಸ್ಥಲ ಷಟದಿ, ಷಟ್‌ಸ್ಥಲಗದ್ಯತ್ರಯ, ಮಗ್ಗೆಯ ಮಾಯಿದೇವ ವಚನಗಳಂತಹ ಮಹತ್ವದ ಕನ್ನಡ ಕೃತಿಗಳನ್ನೂ ರಚಿಸಿ ಶೈವತತ್ತ್ವ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಮಾಯಿದೇವರ ಶತಕತ್ರಯವು ಅದರ ಅಂಕಿತಪದ್ಧತಿ, ತತ್ತ್ವವ್ಯವಸ್ಥೆ ಹಾಗೂ ಅನುಭವಾಧಿಷ್ಠಿತ ನಿರೂಪಣೆಯಿಂದ ವಿಶಿಷ್ಟವಾಗಿದೆ. ಶಿವಾಧವ ಶತಕದ ಪ್ರತಿಯೊಂದು ವೃತ್ತವೂ “ಶಿವಾಧವಾ” ಎಂಬ ಅಂಕಿತದಲ್ಲಿ ಅಂತ್ಯಗೊಳ್ಳುತ್ತದೆ; ಶಿವಾವಲ್ಲಭ ಶತಕದ ೧೦೩ ವೃತ್ತಗಳೆಲ್ಲ “ಶಿವಾವಲ್ಲಭ” ಎಂಬ ಪದದಲ್ಲಿ ಮುಕ್ತಾಯಗೊಳ್ಳುತ್ತವೆ; ಐಪುರೀಶ್ವರ ಶತಕದ ೧೧೩ ವೃತ್ತಗಳೂ “ಮಹದೈಪುರೀಶ್ವರಾ” ಎಂಬ ಅಂಕಿತದಿಂದ ಪೂರ್ಣಗೊಳ್ಳುತ್ತವೆ. ಈ ಮೂರು ಶತಕಗಳು ಕ್ರಮವಾಗಿ ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳ ತತ್ತ್ವಗಳನ್ನು ಪರಸ್ಪರಾನುಬಂಧಿತವಾಗಿ ಪ್ರತಿಪಾದಿಸುತ್ತವೆ ಎಂಬುದು ಶೈವತತ್ತ್ವ ಅಧ್ಯಯನದ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾಗಿದೆ.

ಮಾಯಿದೇವರ ಕಾವ್ಯಶೈಲಿಯ ಪ್ರಮುಖ ಲಕ್ಷಣವೆಂದರೆ ಗಹನವಾದ ವೇದಾಂತ ತತ್ತ್ವಗಳನ್ನು ದೃಷ್ಟಾಂತ ಮತ್ತು ಉಪಮಾನಗಳ ಮೂಲಕ ಸರಳವಾಗಿ ಹೃದ್ಗೋಚರವಾಗಿಸುವ ಕೌಶಲ್ಯ. “ಕನ್ನಡಿಯಲ್ಲಿ ನೋಡಿಕೊಳ್ಳುವ ಮುನ್ನ ಕನ್ನಡಿಯ ಭಾವವಿರುತ್ತದೆ; ಪ್ರತಿಬಿಂಬವನ್ನು ಕಂಡ ನಂತರ ಕನ್ನಡಿಗೆ ಜ್ಞಾನವಿರುತ್ತದೆಯೇ?” ಎಂಬ ದೃಷ್ಟಾಂತದ ಮೂಲಕ, “ತತ್ತ್ವವನ್ನು ನೋಡದ ಮುನ್ನ ಮಾಯೆ; ಬಳಕೆಯಲ್ಲಿಯ ಮಾಯೆ ಬಿಡಾ, ಶಿವಾಧವಾ” ಎಂಬ ವಚನದಲ್ಲಿ ಜ್ಞಾನಿಯ ನಿರ್ಭಯತೆ, ಉದಾಸೀನತೆ ಹಾಗೂ ಮಾಯಾತೀತ ಸ್ಥಿತಿಯನ್ನು ಸೂಕ್ಷ್ಮವಾಗಿ ಪ್ರತಿಪಾದಿಸುತ್ತಾರೆ. ಇಲ್ಲಿ ಬಳಕೆಯಾದ ‘ಬಿಡಾ’ ಎಂಬ ಶಬ್ದವು ತತ್ತ್ವಾರ್ಥದ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಕೇತವನ್ನು ಹೊತ್ತು ನಿಲ್ಲುತ್ತದೆ.

ಇಂತಹ ತಾತ್ತ್ವಿಕವಾಗಿ ಸಮೃದ್ಧವಾದ ಶತಕತ್ರಯಕ್ಕೆ ಆಳವಾಗಿ ಆಕರ್ಷಿತರಾದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಅವುಗಳಿಗೆ ಅನುಭವಾಧಿಷ್ಠಿತವಾದ ವಿಶದ ವ್ಯಾಖ್ಯಾನವನ್ನು ರಚಿಸುವ ಸಂಕಲ್ಪವನ್ನು ಹೊಂದಿದ್ದರು. ಪ್ರಾರಂಭಿಕ ಹಂತದಲ್ಲಿ ಅವರು ಕೇವಲ ಏಳು–ಎಂಟು ಶ್ಲೋಕಗಳಿಗೆ ಮಾತ್ರ ಭಾಷ್ಯವನ್ನು ಬರೆದಿರಿಸಿದ್ದು, ಆ ಅಮೂಲ್ಯ ವ್ಯಾಖ್ಯಾನವನ್ನು ಪೂಜ್ಯರೂ ಭಾಷ್ಯಾಚಾರ್ಯರೂ ಆದ ಶ್ರೀ ಸದಾಶಿವ ಶಿವಾಚಾರ್ಯರು ಸಂಗ್ರಹಿಸಿ, ನಂತರ ಶ್ರೀ ಜ.ಚ.ನಿ.ಯವರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಗ್ರಹದ ಸೌಜನ್ಯ ವಿಭೂತಿ ಲೇಖನಗಳ ಸಂಗ್ರಹದ ಸಂಪಾದಕರಾದ ಶ್ರೀ ಗೊ.ರು. ಚನ್ನಬಸಪ್ಪ ಅವರಿಗೆ ಸಲ್ಲುತ್ತದೆ (ಪುಟ ೬೮೦); ಅಲ್ಲದೆ ಮಾಯಿದೇವ ಪ್ರಭು (ಜ.ಚ.ನಿ., ಪುಟ ೬೯೫) ಕೃತಿಯಲ್ಲಿಯೂ ಇದರ ಉಲ್ಲೇಖ ಲಭ್ಯವಿದೆ.

ಪೂಜ್ಯ ಹಾನಗಲ್ಲ ಶ್ರೀಗಳವರ ಅನುಭವಾನುಭೂತಿಯ ಪ್ರವಾಹ ಅಖಂಡವಾಗಿ ಹರಿದು ಬಂದಿರುವ ಈ ವ್ಯಾಖ್ಯಾನಗಳಲ್ಲಿ, ಮೊದಲಿನ ಮೂರು ಶ್ಲೋಕಗಳ ಭಾಷ್ಯವನ್ನು ಆಯ್ದು ಈ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ಶೈವತತ್ತ್ವಾಭ್ಯಾಸಿಗಳಿಗೆ, ಶತಕತ್ರಯ ಅಧ್ಯಯನಕಾರರಿಗೆ ಹಾಗೂ ವಿದ್ವತ್‌ಸಮಾಜಕ್ಕೆ ಇದು ಅತ್ಯಂತ ಪ್ರಯೋಜನಕಾರಿಯಾಗಿದ್ದು, ನವಪ್ರಭಾವಕಾರಿಯಾಗಿ, ಪೂಜ್ಯ ಶ್ರೀಗಳವರ ಅನುಭವದ ಅಗಾಧ ನಿಲವನ್ನು ಅನಾವರಣಗೊಳಿಸುವ ಮಹತ್ವದ ತಾತ್ತ್ವಿಕ ದಾಖಲೆಗಳಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

 

 

ಶತಕತ್ರಯದ ಶ್ಲೋಕತ್ರಯ

 ಪೂಜ್ಯ ಲಿಂ, ಹಾನಗಲ್ ಶ್ರೀಕುಮಾರ ಶಿವಯೋಗಿಗಳ ವರ ವ್ಯಾಖ್ಯಾನ

 

 

ಶ್ರೀ ಗುರುವೇ ಮಹಾಗುರುವೇ ಶಾಂತಿಕಲಾ ಗುರುವೇ ಶ್ರೀವಾತ್ಮ

ವಿದ್ಯಾ ಗುರುವೇ ಪುರಾಗುರುವೆ ವಿಶ್ವ ಜಗದ್ಗುರುವೇ ವಿಶುದ್ಧ ಜೇಷ್ಠಾ||

ಗುರುವೇ ಸುಧೀಗುರುವೆ ಭಕ್ತಿಯಶೋಗುರುವೇ

ಪ್ರಸಾದತೇಜೋಗುರುವೇ ಕೃಪಾಗುರುವೇ ಮದ್ಗುರುವೇ

 ಗುರುವೇ ಶಿವಾಧವಾ || ೧||

 

ಶ್ರೀಗುರುವೇ= ಶ್ರೀ ಸಂಪತ್ತಿನಿಂದ ಕೂಡಿದ (ವಿಚಾರ) ಸಂಪತ್ತಿನಲ್ಲಿ ಲೌಕಿಕವೆಂದೂ ಪಾರಮಾರ್ಥಿಕವೆಂದೂ ಎರಡು ವಿಧಗಳುಂಟು.

(೧) ಸತಿಪುತ್ರಧನಧಾನ್ಯ ಕರಿತುರಗಾದಿಗಳು ಲೌಕಿಕ ಸಂಪತ್ತಿಯೆನಿಸುವವು.

(೨) ಭಕ್ತಿಜ್ಞಾನ ವೈರಗ್ಯಾದಿಗಳು ಪಾರಮಾರ್ಥಿಕ ಸಂಪತ್ತಿಯೆನಿಸುವವು. (ಈ ಪಾರಮಾರ್ಥಿಕ ಸಂಪತ್ತಿಯೇ ಗುರುಸಂಪತ್ತಿಯೆಂಬ ಭಾವವು.), ಗುರುವೇ ಅಜ್ಞಾನ ನಾಶಕನೇ – (ಗು=ಅಜ್ಞಾನವನ್ನು – ರು=ನಾಶಮಾಡಿದಂಥ ಪ್ರಮಾಣ ಶ್ಲೋ ॥ ಗುಕಾರಸ್ತ್ರಂಧ ಕಾರಶ್ಚರುಕಾರಸ್ತದ್ವಿನಾಶಕೃತ್ | ಅಂಧಕಾರವಿನಾಶಿತ್ವಾದ್ಗು ರುರಿತ್ಯಭಿಧೀಯತೇ ॥

ಮಹಾಗುರುವೇ  =ಶ್ರೇಷ್ಠನಾದ ಗುರುವೇ (ವಿಚಾರ) ಸೃಷ್ಟಿ-ಸ್ಥಿತಿ- ಲಯಗಳಿಗೆ ಕಾರಣರಾದ ಬ್ರಹ್ಮಾದಿಗಳು ಜಗತ್ತಿನಲ್ಲಿ ಶ್ರೇಷ್ಠರಾಗಿ ಜೀವಿಗಳನ್ನು ಭವಮಾಲೆಯಲ್ಲಿ ತಿರುಗಿಸಿ, ದುಃಖದಲ್ಲಿ ಕೆಡುಹುತ್ತಿರುವರು. ಶ್ರೀಗುರುವು ತನ್ನನ್ನು ಮರೆಹೊಕ್ಕವರ ಅಜ್ಞಾನ ನಾಶಮಾಡಿ ಆ ಭವವನ್ನು ಕಳೆದು ಸಕಲದುಃಖ ನಿವೃತ್ತಿ ನಿತ್ಯಾನಂದಪದ ಪ್ರಾಪ್ತಿರೂಪ ಮುಕ್ತಿಯನ್ನು ಕೊಡುವನಾದ ಕಾರಣ ತ್ರಿಮೂರ್ತಿಗಳಿಗಿಂತಲೂ ಗುರುವು ಅಧಿಕನು. ಈ ಗುರುತತ್ವಕ್ಕೆ ಮೇಲಾದದ್ದು ಮತ್ತೊಂದಿಲ್ಲ. ಇದಕ್ಕಾಗಿಯೇ ‘ನಗುರೋರಧಿಕಂ’ ಎಂದು ಶ್ರುತಿಯು ಕೂಗುತ್ತಿರುವದು. ಶಾಂತಿಕಲಾಗುರುವೇ = ಶಾಂತ ವೃತ್ತಿಯಿಂದ ಕೂಡಿದ ಗುರುವೇ (ವಿಚಾರ) “ಸತ್ವಗುಣದಿಂ ವೈರಾಗ್ಯಮಯವಾದ ಶಾಂತವೃತ್ತಿ” ಎಂಬ ಪುರಾತನೋಕ್ತಿಯಂತೆ ವಿರತಿಯಿಂದೊಡಗೂಡಿದ ಶಾಂತಮಯವಾದ ವರ್ತನವುಳ್ಳ ಗುರುವೇ ಎಂಬ ತಾತ್ಪರ್ಯವು. ಶಿವಾತ್ಮವಿದ್ಯಾಗುರುವೇ = ಲಿಂಗಾಂಗ ಸಾಮರಸ್ಯ

ಜ್ಞಾನರೂಪನಾದ ಗುರುವೇ (ಶಿವ=ಲಿಂಗ, ಆತ್ಮಲಿಂಗವಿದ್ಯಾ = ಜ್ಞಾನ ಲಿಂಗಾಂಗೈಕ್ಯಜ್ಞಾನಾಕಾರನೆಂಬ ಭಾವವು).

ಪುರಾಗುರುವೇ = ಆದಿಯಿಂದತ್ತತ್ತಲಾದ ಗುರುವೇ (ಜಗತ್ ಸೃಷ್ಟಿಗಿಂತಲೂ ಪೂರ್ವದಲ್ಲಿದ್ದವನೆಂಬಭಿಪ್ರಾಯವು) ವಿಶೇಷ ವಿಚಾರ (ಶಂಕಾ) ನೂರು ವರ್ಷದೊಳಗಿನ ಆಯುಷ್ಯವುಳ್ಳ ಮನುಷ್ಯರೂಪಿಯಾದ ಗುರುವು ಪೂರ್ವಿಕನೆಂಬುವುದು ಹೇಗೆ? (ಸಮಾಧಾನ) ಗುರುವ್ಯಕ್ತಿ, ಗುರುತತ್ವ ಈ ಎರಡು ಕೂಡಿಕೊಂಡು ಗುರುವೆನಿಸಿಕೊಳ್ಳುವನು. ಇವುಗಳಲ್ಲಿ ವ್ಯಕ್ತಿಗಿಂತಲೂ ತತ್ವವು ಮುಖ್ಯವಾದದ್ದು.

ವ್ಯಕ್ತಿಯು ನೂರು ವರ್ಷದೊಳಗಿನ ಆಯುಷ್ಯವುಳ್ಳದ್ದು, ಗುರುತತ್ವವು ಸೃಷ್ಟಿಗಿಂತಲೂ ಪೂರ್ವದಲ್ಲಿದ್ದದ್ದು. ಇಲ್ಲಿ ತತ್ತ್ವವನ್ನುದ್ದೇಶಿಸಿ ಪುರಾಗುರುವೆಂದು ಹೇಳಿದ್ದು ಸಂಶಯಕ್ಕೆ ಆಸ್ಪದವಾಗಲಾರದು. ಉದಾಹರಣಾರ್ಥವಾಗಿ, ಪೂರ್ವದ ರಾಜನ ರಾಯವನ್ನು (ಹುಕುಮನ್ನು) ತನ್ನ ಅಪ್ಪಣೆಯೆಂದು ತತ್ಕಾಲದ ರಾಜನುರಾಜ ತತ್ವವನ್ನು ಲಕ್ಷಿಸಿ ಒಪ್ಪಿಕೊಳ್ಳುವಂತೆ ಗುರುತತ್ವದ ವಿಚಾರವಿರುವದು. ವಿಶ್ವ ಜಗದ್ಗುರುವೇ = ಎಲ್ಲ ಜಗತ್ತಿಗೂ ಗುರುವೇ – (ವಿಶೇಷ ವಿಚಾರ) ಶಂಕಾ : ಜಗತ್ತಿನಲ್ಲಿ ಅನೇಕ ಮತಗಳಿರುವವು. ಒಂದು ಮತದ ಗುರುಗಳು ಎಲ್ಲ ಮತಗಳಿಗೆ ಗುರುಗಳಾಗುವದು ಅಸಂಭವವಾದ್ದರಿಂದ ಈ ಮತದ ಗುರುಗಳಿಗೆ ಜಗದ್ಗುರುತ್ವವು ಹೇಗೆ ಸಲ್ಲುವದು? ಅಂದರೆ (ಸಮಾಧಾನ) ಸ್ಥೂಲ ಸೂಕ್ಷ್ಮ ಕಾರಣಗಳೆಂಬ ಮೂರು ರೂಪಿನಿಂದ ಜಗತ್ತು ಕಾಣಿಸುವದು. ಈ ಮೂರು ರೂಪಗಳು ಕ್ರಮದಿಂದ ಜಾಗರಣ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳಿಗೆ ಸಂಬಂಧಪಟ್ಟಿರುವದರಿಂದ “ಅವಸ್ಥಾತ್ರಯಮಂ ಗೆದ್ದಾತನೇ ಜಗದ್ಗುರುವಪ್ಪಂ” ಎಂಬ ಪುರಾತನೋಕ್ತಿಯುಂಟು. ಅವಸ್ಥಾತ್ರಯಗಳು ಪಿಂಡಾಂಡರೂಪೀ ಜೀವನಿಗೆ ಸಂಬಂಧಿಸಿದವುಗಳಾದ್ದರಿಂದ ಜೀವನ ನಿವೃತ್ತಿರೂಪ ಪ್ರಯತ್ನದಿಂದ ಗೆದಿಯಲಿಕ್ಕೆ ಅಭ್ಯಂತರವಿಲ್ಲ. ಜೀವನು “ಸರ್ವಾರ್ಥಸಾಧಕನಪ್ಪುದರಿಂ ಸರ್ವಸಂಬಂಧಿತ್ವವೇ ಪೂರ್ಣರೂಪು” ಎಂದು ಪೂರ್ವಿಕರ ವಚನವುಂಟು.

ಜಾಗರಣಾದಿ ಮೂರು ಅವಸ್ಥೆಗಳ ಸಂಬಂಧವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳಲ್ಲಿ ಇಷ್ಟ ಪ್ರಾಣ ಭಾವವೆಂಬ ಮೂರು ಲಿಂಗಗಳನ್ನು ಸದ್ಗುರುವಿನಿಂದ ವಿಧಾನೋಕ್ತವಾಗಿ ಪಡೆದು, ತ್ರಿವಿಧಾರ್ಚನೆಯ ಬಲದಿಂದ ಶಿವಯೋಗಸಂಪನ್ನನೆನಿಸಿ ತ್ರಿತತ್ವಾತ್ಮಕ ಜಗತ್ತನ್ನು ಜೈಸುವನು. ಈ ಕ್ರಮವು ಅಸಾಧಾರಣವಾದದ್ದು. ಇದರಿಂದುಂಟಾದ ಜಗದ್ಗುರುತ್ವವು ಶ್ರೇಷ್ಠವೆನಿಸುವದು.

ಪಿಂಡಾಂಡಕ್ಕೂ ಬ್ರಹ್ಮಾಂಡಕ್ಕೂ ನಿಕಟ ಸಂಬಂಧವಿರುವದರಿಂದ ಅವಸ್ಥಾತ್ರಯರೂಪ ಪಿಂಡಾಂಡವನ್ನು ಗೆದ್ದ ಆತ್ಮನಿಗೆ ಬ್ರಹ್ಮಾಂಡರೂಪ ಜಗತ್ರಯವು ಸಹಜವಾಗಿ ಗೆಲ್ಲಲ್ಪಡುವದು. ಈ ಜಯವನ್ನು ಹೊಂದಿದ ಮಹಾಗುರುವಿಗೆ ಜಗದ್ಗುರುತ್ವವು ಸಿದ್ಧಿಸುವಲ್ಲಿ ಸಂಶಯವಿಲ್ಲವು. ಬ್ರಹ್ಮಾಂಡಸ್ಥಲ ಪಿಂಡಾಂಡವು ಸೂಕ್ಷ್ಮ ಸ್ಥೂಲವು ಕಾರ್ಯವೆನಿಸುವದು. ಸೂಕ್ಷ್ಮವು ಕಾರಣವೆನಿಸುವದು. ಸೂಕ್ಷ್ಮವನ್ನು ಜೈಸಿದರೆ ಸ್ಥೂಲವು ತಾನೇ ಸಾಧ್ಯವಾಗುವದು.

ಉದಾಹರಣೆ :

ಸೂಕ್ಷ್ಮವಾದ ಮನಸ್ಸನ್ನು ಜೈಸಿದರೆ ಸ್ಥೂಲವಾದ ಶರೀರವೂ ಸಮಸ್ತ ಇಂದ್ರಿಯಗಳೂ ಸಹಜವಾಗಿ ಸ್ವಾಧೀನಕ್ಕೆ ಬರುವವು ಮತ್ತು ಉಗಿಯ ಯಂತ್ರದ ಇಂಜನ್ ಒಂದನ್ನು ಸಾಗಿಸಿದರೆ, ಅದಕ್ಕೆ ಸಂಬಂಧಪಟ್ಟ ಅನೇಕ ಯಂತ್ರಗಳು ಸಹಜವಾಗಿ ಸಾಗುವಂತೆ ಪಿಂಡಾಂಡವನ್ನು ಜೈಸಿದರೆ, ಬ್ರಹ್ಮಾಂಡವು ತಾನೇ ಸಾಧ್ಯವಾಗುವದು. (ಶಂಕಾ) ಅವಸ್ಥಾತ್ರಯಗಳನ್ನು ಜೈಸಬೇಕೆಂಬುವಲ್ಲಿ ಇವನ ಇಚ್ಛಾಯತ್ನಾದಿಗಳಿಗೆ ಜಾಗೃದವಸ್ಥೆಯಲ್ಲಿ ಅನುಕೂಲವಿರುವದರಿಂದ ಶಿವನನ್ನು ಮರೆಹೊಕ್ಕು ಜಾಗೃದವಸ್ಥೆಯನ್ನು ಗೆದಿಯಬಹುದು. ಸ್ವಪ್ನ ಮತ್ತು ಸುಷುಪ್ತಾವಸ್ಥೆಯಲ್ಲಿ ಇವನ ಅಧಿಕಾರಕ್ಕೆ ಅನುಕೂಲವಿಲ್ಲದ್ದರಿಂದ ಅಲ್ಲಿ ಪ್ರಯತ್ನ ಮಾಡಿ ಗೆದಿಯುವದು ಹೇಗೆ? ಇದು ಅಸಂಭವವು. ಅಂದರೆ (ಸಮಾಧಾನ) ಜಾಗೃದವಸ್ಥೆಯೊಂದನ್ನು ಗೆದ್ದರೆ, ಸ್ವಪ್ನ-ಸುಷುಪ್ತಿಗಳನ್ನು ಗೆದ್ದಂತಾಯಿತು. ಹೇಗೆಂದರೆ ಸುಪ್ತಾವಸ್ಥೆಗೆ ಕಾರಣವಾದದ್ದು ಮಾಯಾಕರಣ (ಭಾವ), ಸ್ವಪ್ನಾವಸ್ಥೆಗೆ ಕಾರಣವಾದದ್ದು ಅಂತಃಕರಣ (ಮನಸ್ಸು) ಜಾಗೃದವಸ್ಥೆಗೆ ಕಾರಣವಾದದ್ದು ನೇತ್ರಾದಿ – ಇಂದ್ರಿಯವರ್ಗವು (ಸ್ಥೂಲ ಶರೀರ). ಈ ಮೂರು ಕರಣಗಳು ಜಾಗೃದವಸ್ಥೆಯಲ್ಲಿರುವದರಿಂದ ಈ ಅವಸ್ಥೆಯಲ್ಲಿಯೇ ಜೈಸುವುದಕ್ಕೆ ಬರುತ್ತದೆ. ಅದು ಹೇಗಂದರೆ (ಸಾಧನಗಳು) ಅಥವಾ ಅನುಸಂಧಾನಗಳು.

(೧) ನೇತ್ರಕರಣಾದಿ ಬಾಹೇಂದ್ರಿಯಗಳಿಂದ ಇಷ್ಟಲಿಂಗವನ್ನು ನಿರೀಕ್ಷಣಾರ್ಚನಾದಿಗಳಿಂದ ಪೂಜಿಸುವದೇ ಜಾಗರಣದೊಳಗಿನ ಜಾಗೃದವಸ್ಥೆಯನ್ನು ಗೆದಿಯುವ ಸಾಧನವು.

(೨) ಅಂತರಂಗದ ಶಿವಕಲಾ ಸ್ವರೂಪನಾದ ಬಿಂದುಕಲಾತ್ಮಕವಾದ ಪ್ರಾಣಲಿಂಗವೇ ಇಷ್ಟಲಿಂಗವೆಂದು ಮನಸ್ಸಿನಿಂದ ಧ್ಯಾನಿಸುವದೇ ಜಾಗರಣದೊಳಗಿನ ಸ್ವಪ್ನಾವಸ್ಥೆಯನ್ನು ಗೆದಿಯುವ ಸಾಧನವು.

(೩) ಮೂರು ತನುಗಳಲ್ಲಿ ವ್ಯಾಪಿಸಿಕೊಂಡಿರುವ ಶಿವತೇಜಸೇ ಅಂದರೆ ಭಾವಲಿಂಗವೇ ಇಷ್ಟಲಿಂಗವೆಂದು ಭಾವಿಸುವದು. ಜಾಗರದೊಳಗಿನ ಸುಪ್ತಾವಸ್ಥೆಯನ್ನು ಗೆದಿಯುವ ಸಾಧನವು. ಇದೊಂದು ಪ್ರಕಾರದ್ದು.

ಎರಡನೆಯ ಪ್ರಕಾರದ ಸಾಧನವೆಂದರೆ,

(೧) ಶ್ರವಣ, ಮನನ, ನಿದಿಧ್ಯಾಸನ ಎಂದು ಮೂರು ವಿಧವಾಗಿರುವದರಲ್ಲಿ ಲಿಂಗಾಂಗ ಸಾಮರಸ್ಯ ರೂಪ ಮಹಾವಾಕ್ಯವನ್ನು ಭಕ್ತಿಪೂರ್ವಕ ಕೇಳುವದೇ ಶ್ರವಣವು.

(೨) ಆ ಲಿಂಗಮೂರ್ತಿಯನ್ನು ವಿಚಾರಪೂರ್ವಕವಾಗಿ ಸ್ಮರಣಕ್ಕೆ ತರುವದೇ ಮನನವು.

(೩) ಆ ಲಿಂಗಸ್ವರೂಪವನ್ನು ಎಡೆಬಿಡದೆ ಭಾವಿಸುವದೇ ನಿದಿಧ್ಯಾಸವು. ಇದೊಂದು ಪ್ರಕಾರದ್ದು.

ಮೂರನೆಯ ಪ್ರಕಾರದ ಸಾಧನವೆಂದರೆ,

(೧) ದೃಶ್ಯಾನುವಿದ್ದರೂಪವಾದ ಇಷ್ಟಲಿಂಗಾನುಸಂಧಾನವು.

(೨) ಶಬ್ದಾನುವಿದ್ದರೂಪವಾದ ಪ್ರಾಣಲಿಂಗಾನು ಸಂಧಾನವು.

(೩) ನಿರ್ವಿಕಲ್ಪ ಕರೂಪ ಭಾವಲಿಂಗಾನುಸಂಧಾನವು, ಇದೊಂದು ಪ್ರಕಾರದ್ದು.

ನಾಲ್ಕನೆಯ ಪ್ರಕಾರದ ಸಾಧನವೆಂದರೆ, ಶಿವನನ್ನುದ್ದೇಶಿಸಿ (ಶಿವನಿಗೋಸ್ಕರ) ಈ ಕಾರ್ಯವನ್ನು ಮಾಡುವೆನೆಂದು ಸಂಕಲ್ಪಿಸಿ ಕೃಷಿ ವಾಣಿಜ್ಯ ಸೇವಾ ಯಾಚನಾದಿ ಕಾರ್ಯಗಳನ್ನು ಮಾಡಿ ಅದರಿಂದ ಬಂದ ಪದಾರ್ಥಗಳನ್ನು ಗುರುಲಿಂಗ ಜಂಗಮ ಸೇವೆಗಾಗಿ ಅರ್ಪಿಸಿ, ಆ ಗುರು ಲಿಂಗ ಜಂಗಮದ ಕೃಪಾರೂಪ ಪ್ರಸಾದವನ್ನು ಉಪಭೋಗಿಸುವುದು. ಇದೊಂದು ಪ್ರಕಾರದ್ದು.

ಈ ನಾಲ್ಕು ಪ್ರಕಾರದ ಸಾಧನಗಳಲ್ಲದೆ ತನು ಮನ ಭಾವಗಳಿಂದ ಮಾಡತಕ್ಕ ಶಿವಸಂಬಂಧಿ ಕಾರ್ಯಗಳೆಲ್ಲವೂ ಅವಸ್ಥಾತ್ರಯವನ್ನು ಗೆದಿಯುವ ಸಾಧನವೆಂದು ತಿಳಿಯುವದು. ಇದೇ ಶಿವಯೋಗವೆನಿಸುವದು. ಈ ಪ್ರಕಾರ, ಸಾಧನಗಳಿಂದುಂಟಾದದ್ದು ವೃತ್ತಿರೂಪ ಜಗದ್ಗುರುತ್ವವು. ಇದರೊಡನೆ ಆಶ್ರಮೋಚಿತ ಸಂಸ್ಕಾರರೂಪ ಜಗದ್ಗುರುತ್ವವು ಸಂಬಂಧವಾದಲ್ಲಿ ಬಂಗಾರಕ್ಕೆ ಕುಂದಣವನ್ನು ಹಾಕಿದಂತೆ ಅತ್ಯಂತ ಶ್ರೇಷ್ಠವೆನಿಸಿ ಸಹಜ ಜಗದ್ಗುರುತ್ವವೆನಿಸುವದು.

ಗುರುತ್ವದಲ್ಲಿ ಅಂಕುರಿತರೂಪ ಜಗದ್ಗುರುತ್ವ, ಫಲಾಯಿತರೂಪ ಜಗದ್ಗುರುತ್ವ, ಫಲಿತರೂಪ ಜಗದ್ಗುರುತ್ವವೆಂದು ಮೂರು ವಿಧವು. ಅಂಕುರಿತರೂಪ, ಫಲಾಯಿತ ರೂಪ ಜಗದ್ಗುರುತ್ವಗಳು ಸಂಬಂಧ ಅಥವಾ ಸಾಧಕ ಜಗದ್ಗುರುತ್ವವೆನ್ನಲ್ಪಡುವವು. ಫಲಿತರೂಪ ಜಗದ್ಗುರುತ್ವವು ಸಹಜ ಅಥವಾ ಸಿದ್ಧ ಜಗದ್ಗುರುತ್ವವೆನಿಸುವದೆಂಬ ಭಾವವು.

ವಿಶುದ್ಧ ಜೇಷ್ಟಾಗುರುವೇ – ಅತಿ ನಿರ್ಮಲವಾದ ಚರಿತ್ರವುಳ್ಳ ಗುರುವೇ (ವಿಚಾರ) ಪದಾರ್ಥಗಳಲ್ಲಿ ಸ್ಥೂಲವೆಂದೂ ಸೂಕ್ಷ್ಮವೆಂದೂ ಎರಡು ಭೇದಗಳುಂಟು. ಲಿಂಗಾರ್ಪಿತಕ್ಕೆ ಅಯೋಗ್ಯವಾದ ಪದಾರ್ಥಗಳು ಸ್ಥೂಲವೆನಿಸುವವು. ಲಿಂಗಾರ್ಪಿತಕ್ಕೆ ಯೋಗ್ಯವಾದವುಗಳು ಸೂಕ್ಷ್ಮವೆನಿಸುವವು ಸೂಕ್ಷ್ಮದಲ್ಲಿ ಶುದ್ಧವೆಂದೂ ವಿಶುದ್ಧವೆಂದೂ ಎರಡು ಪ್ರಕಾರಗಳುಂಟು. ಹೇಗೆಂದರೆ

(೧) ಅಷ್ಟಾವರಣಗಳಲ್ಲಿ ಮೊದಲನೆಯದಾದ ಭಸ್ಮವು ಪಂಚಗೋವುಗಳ ಗೋಮಯದಿಂದುಂಟಾದದ್ದು ಶುದ್ಧವು. ಪಾದೋದಕ ಮಂತ್ರ ಭಾವನಾದಿಗಳಿಂದ  ಸಂಸ್ಕರಿಸಿದ್ದು ವಿಶುದ್ಧ ಭಸ್ಮವೆನಿಸುವದು.

(೨) ಎರಡನೆಯ ರುದ್ರಾಕ್ಷಿಯು ಶುದ್ಧಸ್ಥಲದಲ್ಲಿ ಬೆಳೆದು ರುದ್ರಾಕ್ಷಿಯ ಮರದಿಂದ ಶಾತ್ರೊಕ್ತವಾಗಿ ತಂದ ದೋಷರಹಿತವಾದವುಗಳು ಶುದ್ಧವು. ಪಾದೋದಕ ಮಂತ್ರಾದಿಗಳಿಂದ ಸಂಸ್ಕರಿಸಲ್ಪಟ್ಟ ರುದ್ರಾಕ್ಷಿಗಳು ವಿಶುದ್ಧವೆನಿಸುವವು.

(೩) ಮೂರನೆಯದಾದ ಮಂತ್ರವು ವೇದಾದಿಗಳಲ್ಲಿ ಸಪ್ತಕೋಟಿ ಮಂತ್ರಗಳಿಗಿಂತಲೂ ಶ್ರೇಷ್ಠವೆಂದು ಹೇಳಲ್ಪಟ್ಟು ತನ್ನಂತರಂಗದಲ್ಲಿ ಸಂಬಂಧವಾಗಿ ತೋರುವ ಮಹಾಮಂತ್ರವು ಶುದ್ಧವು. ವರ್ಣಾಶ್ರಮಕ್ಕೆ ತಕ್ಕ ಜ್ಞಾನಾಚಾರಗಳುಳ್ಳ ಗುರುವಿನಿಂದ ವಿಧಿವತ್ತಾಗಿ ಅನುಗ್ರಹಿಸಲ್ಪಟ್ಟಿದ್ದು ವಿಶುದ್ಧವೆನಿಸುವದು. (ಇಲ್ಲಿ ವಿಚಾರ) ಸಾಧಕ ಗುರುವಿನಿಂದ ಬಂದ ಮಂತ್ರವು, ಗುರು-ಶಿಷ್ಯರ ಅಧಿಕಾರಕ್ಕನುಗುಣವಾಗಿ ಕಾಲಾಂತರದಲ್ಲಿ ಫಲಿಸುವದು. ಸಿದ್ಧಗುರುವಿನಿಂದ ಬಂದ ಮಂತ್ರವು ಕಾಲವಿಲಂಬವಿಲ್ಲದೇ ಫಲಕಾರಿಯಾಗುವದು. ಸಿದ್ಧನಾದ ಶಿಷ್ಯನಿಂದ ಸಾಧಕನಾದ ಗುರುವು ಕೂಡಾ ಸಿದ್ಧಸ್ಥಿತಿಯನ್ನು ಹೊಂದಬಹುದು. ಈ ಮಾತಿಗೆ ಉರುಲಿಂಗಪೆದ್ದಿ ದೇವರ ಚರಿತ್ರೆಯೂ ದಾಶಾರ್ಹ ರಾಜನ ಚರಿತ್ರವೂ ಉದಾಹರಣೆಗಳಾಗಿವೆ.

ದೃಷ್ಟಾಂತ : ಗಂಡನು ಬಲವಂತನಾದರೆ ಹೆಂಡತಿಯನ್ನೂ ಹೆಂಡತಿಯು ಬಲವಂತೆಯಾದರೆ ಗಂಡನನ್ನೂ ಸಂರಕ್ಷಿಸಿ ಸಂಸಾರಸಾಗರವನ್ನು ದಾಟಿ ಹೋಗುವ ಸತಿಪತಿ ನ್ಯಾಯದಂತೆ, ಗುರುವು ಬಲವಂತನಾದರೆ ಶಿಷ್ಯನನ್ನೂ, ಶಿಷ್ಯನು ಬಲವಂತನಾದರೆ ಗುರುವನ್ನೂ ಉದ್ಧರಿಸಲಿಕ್ಕೆ ಸಮರ್ಥರಾಗುವರು. ಶಕ್ತಿಹೀನನಾದ ಪುರುಷನು ಸ್ತ್ರೀಯ ಹಾವಭಾವ ವಿಲಾಸವನ್ನು ನೋಡಿ ಸಶಕ್ತನಾಗುವಂತೆ!

೪ನೆಯದು ಗುರು : ಶುದ್ಧವಂಶಜ ಗುರುಕುಲೋತ್ಪನ್ನರಾದ ವಟುಗಳು ಶುದ್ಧರು. ವಿಶೇಷ ದೀಕ್ಷಾಯುಕ್ತವಾದ ಒಡೆತನದ (ಆರ್ಯಾಚಾರ ಅಥವಾ ಅಯ್ಯ ತನದ) ಸಂಸ್ಕಾರ ಮೊದಲುಗೊಂಡು ಗುರುಪಟ್ಟಾಭಿಷೇಕ ಕಡೆಯಾದ ಸಂಸ್ಕಾರ ವಿಶಿಷ್ಟವಾದಲ್ಲಿ ವಿಶುದ್ಧ ಗುರುಮೂರ್ತಿಯೆನಿಸುವನು.

೫ನೆಯದು ಲಿಂಗ : ಶ್ರೀಗಿರಿ ಮೊದಲಾದ ಕ್ಷೇತ್ರಗಳಲ್ಲಿಯೂ ಲಿಂಗೋದ್ಭವಾದಿ ಪುಣ್ಯನದಿಗಳಲ್ಲಿಯೂ ದೊರೆತ ಶಿಲೆಗಳಿಂದ ರಚಿಸಿದ ಲಿಂಗವು ಶುದ್ಧ; ಜಲಾಧಿವಾಸ ಧಾನ್ಯಾಧಿವಾಸ ಮುಂತಾದ ಸಂಸ್ಕಾರವುಳ್ಳದ್ದನ್ನು ವೇಧಾಮಯ ಕ್ರಿಯಾದೀಕ್ಷೆಗಳಿಂದ ಶಿಷ್ಯನಿಗೆ ಶ್ರೀಗುರುವು ಕೊಟ್ಟ ಶಿವಲಿಂಗವು ವಿಶುದ್ಧವು.

೬ನೆಯದು ಜಂಗಮವು : ಗುರುಸಂಸ್ಕಾರವನ್ನು ಹೊಂದಿದ ವಟುವು ಜಂಗಮವಾಗಲಿಕ್ಕೆ ಶುದ್ಧ; ಈ ವಟುವಿಗೆ ನಿರಾಭಾರಿ ಪಟ್ಟಾಭಿಷೇಕ ಸಂಸ್ಕಾರ ಮಾಡಿದಲ್ಲಿ ವಿಶುದ್ಧ ಜಂಗಮಮೂರ್ತಿಯೆನಿಸುವನು.

೭ನೆಯದು ಪಾದೋದಕ : ನಿರ್ಮಲ ಪ್ರದೇಶದಲ್ಲಿರ್ದ ಜಲವು ಶುದ್ಧ; ಪೂಜ್ಯ ಪೂಜಕರ ಭಾವನಾ ಮತ್ತು ಮಂತ್ರ ತಂತ್ರಗಳ ವಿಶೇಷ ಸಂಸ್ಕಾರದಿಂದಾದ ಪಾದೋದಕವು ವಿಶುದ್ಧವು.

೮ನೆಯದು ಪ್ರಸಾದ : ಸತ್ಕಾಯಕದಿಂದ ತಂದ ಪದಾರ್ಥವನ್ನು ಪಾಕಮಾಡಿದ ಅನ್ನವು ಶುದ್ಧ; ಹಸ್ತಸ್ಪರ್ಶ ಮಹಾಮಂತ್ರೋಚ್ಚಾರ ಶಿವಭಾವನಾದಿಗಳಿಂದ ಸಂಸ್ಕರಿಸಿ ಗುರು ಲಿಂಗ ಜಂಗಮಕ್ಕೆ ಅರ್ಪಿಸಿದ್ದು ಲಿಂಗಭೋಗವು. ಆ ಗುರುಲಿಂಗ ಜಂಗಮ ಮುಖದಿಂದ ಕ್ರಮವಾಗಿ ಬಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವನ್ನು ಭಕ್ತನು ಅನುಭವಿಸುವದೇ ಉಪಭೋಗವು. ಇದೇ ವಿಶುದ್ಧವೆನಿಸುವದು ಈ ಅಷ್ಟಾವರಣಗಳಲ್ಲಿ ಭಸ್ಮ, ರುದ್ರಾಕ್ಷಿ, ಮಂತ್ರ – ಈ ಮೂರು ಸಾಧನಗಳು. ಗುರು, ಲಿಂಗ, ಜಂಗಮ – ಈ ಮೂರು ಅಧಿದೇವತೆಗಳು. ಪಾದೋದಕ, ಪ್ರಸಾದ – ಈ ಎರಡು ಫಲಗಳು.

ಈ ಪ್ರಕಾರ, ವಿಶುದ್ಧ ರೂಪವಾದ ಅಷ್ಟಾವರಣದಲ್ಲಿ ಭಕ್ತರೂಪದಿಂದ ಗುರುವು ವಿನೋದಿಸುವನಾದ್ದರಿಂದ ವಿಶುದ್ಧ ಜೇಷ್ಠಾಗುರುವೆಂದು ಹೇಳಲ್ಪಟ್ಟಿರುವದೆಂಬ ಭಾವವು. ಸುಧೀಗುರುವೇ ಉತ್ತಮ ಬುದ್ಧಿಯುಳ್ಳ ಗುರುವೇ (ವಿಚಾರ) ಆವುದಾದರೊಂದು ಪದಾರ್ಥವನ್ನು ವಿವೇಕದೃಷ್ಟಿಯಿಂದ ನಿಶ್ಚಯಿಸುವುದು ಬುದ್ಧಿಯು. ಅನಿಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಒದಗಿಸಿಕೊಡುವದಕ್ಕೆ ಆಷ್ಟಾವರಣವೇ ಮುಖ್ಯವೆಂದು ವಿಚಾರಮುಖದಿಂದ ನಿಶ್ಚಯಿಸಿಕೊಂಡಿರುವದನ್ನೇ ಶಿಷ್ಯರಿಗೆ ಬೋಧಿಸುವತನವು ಗುರುವಿನಲ್ಲಿರುವದರಿಂದ ಸುಧೀಗುರುವೆಂದು ಹೇಳಲ್ಪಟ್ಟಿರುವದೆಂಬಭಿಪ್ರಾಯವು.

ಭಕ್ತಿಯಶೋಗುರುವೇ = ಭಕ್ತಿಯ ಕೀರ್ತಿಯುಳ್ಳ ಗುರುವೇ. (ವಿಚಾರ) ಶರೀರ ಇಂದ್ರಿಯ ಮನಸ್ಸು ಜೀವಾತ್ಮ ಇವುಗಳ ಸಮಷ್ಟಿರೂಪವಾದ ತನ್ನಲ್ಲಿ ಯಾವ ಪ್ರಕಾರ ಪ್ರೀತಿ ಇರುವದೋ, ಹಾಗೆಯೇ ಪೂಜ್ಯವಸ್ತುಗಳಾದ ಗುರುಲಿಂಗ ಜಂಗಮಾದಿ ಅಷ್ಟಾವರ್ಣದಲ್ಲಿ ಇಡಲ್ಪಟ್ಟ ಪ್ರೀತಿಯೇ ಭಕ್ತಿಯು. ಇಂಥ ಸಿದ್ಧಭಕ್ತಿಯ ಕೀರ್ತಿಯುಳ್ಳ ಗುರುವೇ ಅಂದರೆ ಗುರುತ್ವಾಭಿಮಾನರಹಿತನಾಗಿ ಶಿಷ್ಯಾದಿಗಳಿಗೆ ಪೂಜ್ಯನಾಗಿಯೂ ಅಷ್ಟಾವರಣದಲ್ಲಿ ಪೂಜಕನಾಗಿಯೂ ಇರುವನೆಂಬ ತಾತ್ಪರ್ಯವು. ಪ್ರಸಾದತೇಜೋಗುರುವೇ – ಅನುಗ್ರಹರೂಪವರ್ಚಸ್ಸುಳ್ಳ ಗುರುವೇ. (ವಿಚಾರ) ಅನುಗ್ರಹವು ಶುದ್ಧಸಿದ್ಧಪ್ರಸಿದ್ಧವೆಂದು ಮೂರು ಪ್ರಕಾರವಿರುವದವುಗಳಲ್ಲಿ :

ಗುರುವಿನ ದೃಷ್ಟಿ (ಅಪೂರ್ವ ತೇಜೋಮಯವಾದ ಕೃಪಾದೃಷ್ಟಿ)ಯು ಶಿಷ್ಯ ನನ್ನು ಆಚ್ಛಾದಿಸಲು ಆ ಶಿಷ್ಯನು ಪವಿತ್ರವೆನಿಸುವನು. ಈ ಪ್ರಥಮ ಸ್ಪರ್ಶರೂಪ ಅನುಗ್ರಹವು ಶುದ್ಧ ಪ್ರಸಾದವೆಂದೆನಿಸುವದು. ಶಿಷ್ಯನಲ್ಲಿರುವ ದುರ್ಗಣ ದುರಾಚಾರಾದಿಗಳನ್ನು ನಿಶೇಷವಾಗಿ ಕಳೆದುಕೊಳ್ಳುವದಕ್ಕೆ ಉಪಾಯಗಳನ್ನು ತೋರಿಸುವದೇ ಸಿದ್ಧಪ್ರಸಾದವೆನಿಸುವದು. ನಾಮರೂಪಾತ್ಮಕವಾದ ಜಡಮಾಯಾಂಶವನ್ನು ದೂರೀಕರಿಸಿ, ಸಚ್ಚಿದಾನಂದರೂಪ ಶಿವಲಿಂಗವನ್ನು ಬೋಧಿಸುವದೇ ಪ್ರಸಿದ್ಧವೆನಿಸುವದು. ಅಥವಾ ದೀಕ್ಷಾಗುರುವು ದೀಕ್ಷಾತ್ರಯದಿಂದ ಪೂರ್ವಾಂಶವನ್ನು (ಮಲತ್ರಯಗಳನ್ನು) ನಾಶಗೊಳಿಸಿ, ಅಂಗತ್ರಯದಲ್ಲಿ ಲಿಂಗತ್ರಯವನ್ನು ಸ್ಥಾಪಿಸಿ, ಲಿಂಗಾಣತಿವಿಡಿದು ವರ್ತಿಸೆಂದು ಬೋಧಿಸುವದೇ ಶುದ್ಧಾನುಗ್ರಹವು. ಪುನಃ ಶಿಕ್ಷಾಗುರುರೂಪದಿಂದ ಶಿವಯೋಗಾಂಗಗಳನ್ನು ಬೋಧಿಸುವದೇ ಸಿದ್ಧಾನುಗ್ರಹವು.

ಬಳಿಕ ಮೋಕ್ಷಾಗುರುರೂಪದಿಂದ ಲಿಂಗಾಂಗ ಸಾಮರಸ್ಯಜ್ಞಾನ ಸಾಧನಗಳನ್ನು ಬೋಧಿಸುವದೇ ಪ್ರಸಿದ್ಧಾನುಗ್ರಹವೆನಿಸುವದು. ಇಂಥಾ ಕೀರ್ತಿಯಿಂದ ಜಗತ್ಪಸಿದ್ಧನೆಂಬ ಭಾವವು.

ಕೃಪಾಗುರುವೇ = ದಯಾಳುವಾದ ಗುರುವೇ. (ವಿಚಾರ) ಭವಮಾಲೆಯ ಸ೦ಬ೦ಧದ ತಾಪತ್ರಯಾಗ್ನಿಯಿಂ ಬೆ೦ದ ಜೀವಿಯನ್ನು ಕೃಪಾದೃಷ್ಟಿಯಿಂದುದ್ಧರಿಸುವದರಿಂದ ಕರುಣಾನಿಧಿಯೆನಿಸುವನು. ದುಃಖಿಗಳನ್ನು ಕಂಡು ಉದಾಸೀನದಿಂದಿರುವವನು ಗುರುವಲ್ಲವು.

ಈ ದಯಾಶೀಲರಾದ ಗುರುಗಳಲ್ಲಿ ದೃಢಸಿದ್ಧರು ಅದೃಢಸಿದ್ದರು ಎಂದು ಎರಡು ವಿಧಗಳುಂಟು. ಅದೃಢಸಿದ್ಧರು ತಮ್ಮ ಸ್ಥಿತಿಯನ್ನು ದೃಢೀಕರಿಸುವದಕ್ಕಾಗಿಯೂ ಲೋಕಾನುಗ್ರಹಾರ್ಥವಾಗಿಯೂ ಸಮ್ಯಜ್ಞಾನ ಸತ್ಕ್ರಿಯೆಗಳನ್ನು ಆಚರಿಸುತ್ತಿರುವರು. ದೃಢಸಿದ್ಧರು ಆ ಸಮ್ಯಜ್ಞಾನ ಸತ್ಕ್ರಿಯೆಗಳನ್ನು ಲೋಕಾನುಗ್ರಹಾರ್ಥವಾಗಿ ಆಚರಿಸುತ್ತಿರುವರು. ದೃಢಾದೃಢವುಳ್ಳ ಉಭಯರು ಸದ್ಗುರುಗಳೆನಿಸಿ ಜಗತ್ತಿನ ಮುಮುಕ್ಷುಗಳಿಗೆ ಮೋಕ್ಷಮಾರ್ಗವನ್ನು ಬೋಧಿಸುತ್ತಿರುವರು. ದೃಢಸಿದ್ಧರು ತಮ್ಮ ಶಿವಯೋಗ ಪ್ರಭಾವವನ್ನು ಜಗತ್ತಿನ ಮಾನವರಲ್ಲಿ ಅನಿರ್ವಾಹ ಸಂಬಂಧವೊದಗಿಬಂದರೆ ಶಿವಾಜ್ಞೆಯೆಂದು ತಿಳಿದು ವ್ರತನೇಮಗಳ ಕಟ್ಟು ಮೀರಿ ವರ್ತಿಸಿದರೂ ಅಮಾನುಷಕೃತ್ಯವನ್ನು (ಈಶ್ವರ ಸೃಷ್ಟಿಯನ್ನೆ ಬದಲುಮಾಡಿ ತೋರಿಸುವ ಸ್ಥಿತಿಯನ್ನು ಉಂಟುಮಾಡಿ ವೀರಶೈವ ಮತೇತರರೂ ಕೂಡಾ ಆಶ್ಚರ್ಯಚಕಿತರಾಗಿ ಅಸಾಧಾರಣ ಭಕ್ತಿಯನ್ನು ತೋರಿಸುವಂತೆ ಮಾಡುತ್ತಿರುವರು. ಉದಾಹರಣಾರ್ಥವಾಗಿ –

ಸಿರಹಟ್ಟಿ ಮಹಾಸ್ವಾಮಿಗಳೂ ಗವೀಸಿದ್ದಪ್ಪನವರೂ ಆಚರಿಸಿದ ಚರಿತ್ರೆಗಳೂ ಇನ್ನೂ ಅನಂತಮಹಿಮರ ಚರಿತ್ರಗಳೂ ಉಂಟು.

ದೃಢಸಿದ್ಧರಾದ ಗುರುಗಳು ದೊರೆಯದೇ ಗುರುಸಾಂಪ್ರದಾಯವು ಚ್ಯುತಿಯಾಗುವ ಸಂದರ್ಭ ಕಂಡುಬಂದಲ್ಲಿ ಅಂಥ ಪರಿಪಕ್ವಾಂತಃಕರಣವುಳ್ಳ ಶಿಷ್ಯನ ಶಕ್ತಿಪಾತ ಚಿನ್ಹವನ್ನರಿತು ಅನಿರ್ವಾಹಪಕ್ಷದಲ್ಲಿ ಇದು ಲಿಂಗಾಣತಿಯೆಂದು ಭಾವಿಸಿ, ಅದೃಢಸಿದ್ಧರು ಗುರುತ್ವವನ್ನು ವಹಿಸತಕ್ಕದ್ದು.  ಶಿಷ್ಯನಾದರೂ ಈ ಮರ್ಮವನ್ನರಿತು ಗುರುಗಳನ್ನು ಮಾಡಿಕೊಳ್ಳತಕ್ಕದ್ದು. ಉದಾಹರಣೆ-

ಶಾಲೆಯಲ್ಲಿ ಕಲಿಯುತ್ತ ಕಲಿಸುವರು, ಕಲಿತು ಕಲಿಸುವರು ಈ ಉಭಯರೂ ಆಧ್ಯಾಪಕರೇ ಇರುವಂತೆ, ಗುರುಗಳ ವಿಚಾರವಾದರೂ ಉಂಟು. ಮದ್ಗುರುವೇ ನನ್ನ ಗುರುವೇ. (ವಿಚಾರ) ನನ್ನ ಪುಣ್ಯೋದಯದಿಂದ ನನ್ನನ್ನು ಉದ್ಧರಿಸುವದಕ್ಕಾಗಿ ತನ್ನ ನಿರ್ಗುಣ ಲೀಲೆಯನ್ನುಳಿದು ನನ್ನಂತೇ ಸಗುಣಾಕಾರವನ್ನು ಧರಿಸಿ ಅವತರಿಸಿರುವದರಿಂದ ಆ ಸದ್ಗುರುವಿನ ಉಪಕಾರ ನಿವಾರಣಾರ್ಥ ಆಪ್ತಾದಿ ಗುರುಸೇವಾನಿರತನಾಗಿ ಮುಮುಕ್ಷುವಾದ ಶಿಷ್ಯನು ಇರಬೇಕೆಂಬಭಿಪ್ರಾಯವು.

ಶಿವಾಧವ ಗುರುವೇ =  ಚಿಚ್ಛಕ್ತಿ ವಲ್ಲಭನಾದ ಗುರುವೇ. (ವಿಚಾರ) ಶಕ್ತಿವಿಶಿಷ್ಟಾದ್ವೈತ ಶಿವಸ್ವರೂಪಿಯಾದ ಗುರು ಎಂಬ ಭಾವವುಳ್ಳ ಕವಿಯ ಮುದ್ರಿಕೆಯು.

 

 ಜಯಬಸವೇಶ ಭಕ್ತಜನಭಾಗ್ಯ ಶುಭೋದಯ ವೀರಶೈವನಿ|

 ರ್ಣಯ ಪರಮಾವತಾರ ಶರಣಾಗತ ರಕ್ಷಕ ಚಿದ್ಘನಪ್ರಭಾ|

ಮಯ ಜಗದಾದಿದೇಶಿಕ ಪುರಾತನ ಪುಂಗವ ಶಾಂಭವೈ ಪುರಾ |

ಶ್ರಯ ಜಯ ಸೋಮನಾಥ ಜಯದೇವ ಜಯಾವಿರತಂ ಶಿವಾಧವಾ ||೨||

ಜಯಬಸವೇಶ = ಚಿನ್ನಾದ ಚಿದ್ಬಿಂದು ಚಿತ್ಕಲಾಸ್ವರೂಪನಾದ ಬಸವೇಶ್ವರನೇ ಸರ್ವೋತ್ಕೃಷ್ಟನಾಗು (ಶಂಕಾ) ಶಿವನ ಪರಾವತಾರಿಯಾದ ದ್ವಿತೀಯ ಶಂಭುವೆಂದೆನಿಸಿ ಜಗದ್ಧಿತಾರ್ಥವಾದ ದಿವ್ಯಚೇಷ್ಟೆಯುಳ್ಳ ಮಹಾಮಹಿಮನೆನಿಸುವ ಬಸವೇಶ್ವರನಿಗೆ ಆಶೀರ್ವಾದರೂಪ ಮಂಗಲ ಮಾಡಿರುವದು. ಅಸಂಭವವೆಂದರೆ (ಸಮಾಧಾನ) ಜೀವಿಗಳ ಕರ್ಮಾನುಸಾರವಾಗಿ ಸುಖದುಃಖರೂಪ ಸೃಷ್ಟಾದಿ ಕಾರ್ಯಗಳನ್ನು ಮಾಡಿ ಅಜ್ಞರ ದೃಷ್ಟಿಗೆ ಶ್ರೇಷ್ಠ ತವರೆಂದು ಕಾಣಿಸಿಕೊಳ್ಳುವ ಬ್ರಹ್ಮಾದಿದೇವತೆಗಳಿಗಿಂತಲೂ ಮೇಲಾದ ಎಲೈ ಬಸವೇಶ್ವರನೇ, ನನ್ನ ಕರ್ಮಾನುಗುಣ್ಯವಾಗಿ ನನಗುಂಟಾಗಿರುವ ಭವಮಾಲೆಯ ದುಃಖವನ್ನು ನನ್ನಲ್ಲರ್ಧ ಘನವಾದ ಸಾಮರ್ಥ್ಯದಿಂದ ನಿವೃತ್ತಿಗೊಳಿಸಿ, ತ್ರೈಮೂರ್ತಿಗಳಿಗೂ ಅಸಾಧ್ಯವಾದ ನಿನ್ನ ಸರ್ವೋತ್ಕರ್ಷವನ್ನು ನನ್ನಲ್ಲಿ ತೋರಿಸು ಎಂಬ ಅಭಿಪ್ರಾಯ ಉಳ್ಳದ್ದಾದುದರಿಂದ ಆಶೀರ್ವಾದರೂಪ ಮಂಗಲವು ಪೂಜ್ಯ ಪೂಜಕ ಭಾವಗಳಿಗೆ ಕೊರತೆಯನ್ನುಂಟುಮಾಡುವ ಅಸಂಬದ್ಧಾಲಾಪವೆಂದು ವಿವೇಕಿಗಳ ದೃಷ್ಟಿಗೆ ತೋರದೆಂಬ ಭಾವವು.

ಉದಾಹರಣೆ – ದರಿದ್ರನು ತನ್ನ ದೀನತೆಯನ್ನು ದೂರಮಾಡಿಕೊಳ್ಳುವದಕ್ಕೆ ಧನಿಕನ (ಸಾವುಕಾರನ) ಬಳಿಗೆ ಹೋಗಿ ನನಗೆ ನೀವು ಸಾವುಕಾರರಾಗಿರಿ ಎಂದು ಬೇಡಿಕೊಳ್ಳುವಂತೆ!

ಭಕ್ತಜನಭಾಗ್ಯ= ಸದ್ಭಕ್ತಿಶೀಲರ ಐಶ್ವರ್ಯಸ್ವರೂಪನೇ, (ವಿಚಾರ) ಸಚ್ಚಿದಾನಂದ ಸ್ವರೂಪಿಯಾದ ಬಸವೇಶ್ವರನಲ್ಲಿ ಯಾರ ಭಕ್ತಿಯು (ಅಸಾಧಾರಣ ಪ್ರೀತಿಯು) ನೆಲಸಿರುವದೋ ಅಂಥವರಿಗೆ ಅನಿಷ್ಟ ನಿವೃತ್ತಿ ಇಷ್ಟಾರ್ಥ ಪ್ರಾಪ್ತಿಯನ್ನುಂಟುಮಾಡುವ ಸಂಪತ್ತಿಯನ್ನೂ, ಜನಸಂಪತ್ತಿ, ಧನಸಂಪತ್ತಿ, ಭೂಸಂಪತ್ನಿ, ರಾಜಸಂಪತ್ತಿ, ಯಜ್ಞಾದಿ ಸಕಾಮಕರ್ಮ ಫಲರೂಪ ಸಂಪತ್ತಿ ಮುಂತಾದ ಇಹಪರ ಲೌಕಿಕ ಸಂಪತ್ತಿಗಳನ್ನೂ ಸಕಲ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿರೂಪಮಾದ ಪಾರಮಾರ್ಥಿಕ ಸಂಪತ್ತಿಯನ್ನೂ ಸಹಜವಾಗಿ ಕೊಡುವಲ್ಲಿ ಸಮರ್ಥನಾದ ಮೂರ್ತಿಯೆಂಬ ಅಭಿಪ್ರಾಯವು.

ಶುಭೋದಯ = ಮಂಗಲೋತ್ಪತ್ತಿಗೆ ಕಾರಣನೇ, (ವಿಚಾರ) ಬಸವೇಶ್ವರನ ಉದಯವೇ ಮಂಗಲರೂಪಸಂಪತ್ತಿನ ಉದಯವು. ಅಂದರೆ ಮನಸ್ಸಿನಲ್ಲಿ ಬಸವೇಶ್ವರನ ಮೂರ್ತಿಧ್ಯಾನ. ಮಾತಿನಲ್ಲಿ ಬಸವೇಶ್ವರನ ನಾಮೋಚ್ಚರಣ ತನುವಿನಲ್ಲಿ ಬಸವರೂಪ ಗುರುಲಿಂಗ ಜಂಗಮದ ಆರ್ಚನವೆಂಬ ತ್ರಿವಿಧರೂಪ. ಬಸವನ ಉದಯವು, ಸರ್ವ ಅಮಂಗಲಗಳನ್ನು ನಷ್ಟಮಾಡಿ ಸುಮಂಗಲಗಳನ್ನುಂಟುಮಾಡಿ ಕೊಡುವದು. ಉಕ್ತಿಯ ಸಂಪತ್ತಿನ ಸಾಧನವನ್ನು ಬೋಧಿಸುವದೆಂಬ ಭಾವವು, ಉದಾಹರಣೆ ಸೂರ್ಯೋದಯವೇ ಪ್ರಕಾಶದ ಉದಯವೆನಿಸಿದ೦ತೆ ತನ್ನಲ್ಲಿ ಬಸವೇಶ್ವರ ನ ಉದಯವೇ ಮಂಗಲೋದಯವೆನಿಸುವದು.

ವೀರಶೈವ ನಿರ್ಣಯ ಪರಮಾವತಾರ = ವೀರಶೈವ ಮತ ಸಿದ್ಧಾಂತಸ್ವರೂಪನೇ, (ವಿಚಾರ) ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವೆಂತಲೂ ಷಟ್‌ ಸ್ಥಲ ಸಿದ್ಧಾಂತವೆಂತಲೂ ಉಕ್ತವಾಗಿರುವದರಿಂದ ಸತ್ಕೃಯಾ ಸತ್ಯಜ್ಞಾನಸಹಿತ ಷಟ್‌ಸ್ಥಲಾತ್ಮಕ ಸಿದ್ಧಾಂತ ಸ್ವರೂಪನೇ ಬಸವೇಶ್ವರನೆಂಬಭಿಪ್ರಾಯವು. ಪರಮಾವತಾರ ಉತ್ಕೃಷ್ಟವಾದ ಅವತಾರ ಉಳ್ಳಾತನೇ, (ವಿಚಾರ) ದ್ವಿತೀಯಶಂಭುವೆನಿಸಿದ ನಂದೀಶ್ವರನು ಜಗತ್ತನ್ನು ಉದ್ಧರಿಸುವದಕ್ಕೋಸುಗ ಮನುಷ್ಯಾಕಾರವನ್ನು ಧರಿಸಿ ಮಲಮಾಯಾ ಕರ್ಮಗಳ ತೊಡಕಿಲ್ಲದೆ ಬಸವೇಶ್ವರನೆಂಬ ನಾಮವನ್ನಾಂತು ಭೂಮಿಗಿಳಿದನೆಂಬ ಭಾವವು.

ಶರಣಾಗತರರಕ್ಷಕ = ಮರೆ ಹೊಕ್ಕವರನ್ನು ಕಾಪಾಡುವವನೇ, (ವಿಚಾರ) ಶುದ್ಧಾಂತಃ ಕರಣರಾಗಿ ಸದ್ಭಕ್ತಿಯಿಂದ ಮರೆಹೊಕ್ಕವರೆಲ್ಲರನ್ನೂ ಬಿಡದೇ ರಕ್ಷಿಸುವವನು. ಮನುಷ್ಯರಿಗೆ ತಮ್ಮನ್ನು ಮರೆ ಹೊಕ್ಕವರ ರಕ್ಷಿಸುವಲ್ಲಿ ಅಳತೆಯುಂಟು ಮತ್ತು ಉದಾಸೀನಾದಿ ದುರ್ಭಾವಗಳೂ ಬರುವದುಂಟು. ಹಾಗೆ ಬಸವೇಶ್ವರನಿಗೆ ಉದಾಸೀನವೂ ಇಷ್ಟೇ ಜನರನ್ನು ಕಾಪಾಡುವೆನೆಂಬ ನಿರ್ಬಂಧವೂ ಇಲ್ಲವೆಂಬ ಭಾವವು.

ಚಿದ್ಘನ ಪ್ರಭಾಮಯ= ಜ್ಞಾನದ ಆಧಿಕವಾದ ಪ್ರಕಾಶದಿಂದ ವ್ಯಾಪಕನಾದಾತನೇ, (ವಿಚಾರ) ಪರಮಾತ್ಮನು  ಸಾಧಕರಲ್ಲಿ ಅಣುರೂಪನಾಗಿಯೂ ಸಿದ್ಧರಲ್ಲಿ ಘನರೂಪನಾಗಿಯೂ ವಾಸಿಸುವನು. ಆದ್ದರಿಂದ ಸಿದ್ಧನಾದ ಬಸವೇಶ್ವರದೇವರ ಹೃದಯದಲ್ಲಿ ವ್ಯಾಪಕ (ಘನ) ರೂಪದಿಂದ ವಾಸಿಸುವನೆಂಬಭಿಪ್ರಾಯವು.

ಜಗದಾದಿದೇಶಿಕ = ಜಗತ್ತಿಗೆ ಮೊದಲಿಗನಾದ ಗುರುವೇ, (ವಿಚಾರ) “ಶಂಭುಲಿಂಗವಾದಿಯಾಗಿ ನಿರಾಭಾರಿ ದೇಶಿಕೋತ್ತುಮಪರ್ಯತ ಮಹಾಗುರು ಪರಂಪರೆಗೆ” ಎಂಬ ಶ್ರೀ ನಿಜಗುಣ ಶಿವಯೋಗಿಗಳ ಉಕ್ತಿಯಂತೆ’ ಶಂಭುಲಿಂಗ ಸ್ವರೂಪಿಯಾದ ಬಸವೇಶ್ವರನೇ ಆದಿಗುರುವೆಂಬ ತಾತ್ಪರ್ಯವು.

ಪುರಾತನ ಪುಂಗವ = ಪ್ರಮಥರಲ್ಲಿ ಶ್ರೇಷ್ಠನೇ, ಅಂದರೆ ಪ್ರಮಥಾಗ್ರಗಣ್ಯನಾದ ನಂದೀಶ್ವರರೂಪನೆಂಬುದರ್ಥವು. ಶಾಂಭವೈಪುರಾಶ್ರಯ = ಶಂಭುಸಂಬಂಧವಾದ ಜ್ಞಾನಾಕಾಶವೆಂಬ ಪಟ್ಟಣವೇ ಆಶ್ರಯವಾಗಿಯುಳ್ಳಾತನೇ, (ಶಂಕಾ) :

ಅಂತರಂಗದ ಚಿದಾಕಾಶದಲ್ಲಿ ಆಶ್ರಯಿಸುವಾತನೆಂದು ಹೇಳಿದರೆ ಬಸವೇಶ್ವರನು ಮಂತ್ರಿಯ ಪದತ್ವವನ್ನೂ ಗುರುಲಿಂಗ ಜಂಗಮದಾಸೋಹವನ್ನೂ ಮಾಡುತ್ತ ಮನುಷ್ಯರಂತೆ ವರ್ತಿಸುತ್ತಿದ್ದನು. ಆದ್ದರಿಂದ ಸದಾ ಚಿದಾಕಾಶದಲ್ಲಿ ವಾಸಮಾಡುವನೆಂಬ ಮಾತು ಹೇಗೆ ಸಂಬಂಧಿಸುವದು ಅಂದರೆ….

ಅಷ್ಟಾವರಣವು ಚಿದಾಕಾರ ಸ್ವರೂಪವೇ ಮತ್ತು ಅಷ್ಟಾವರಣವನ್ನು ಕುರಿತು ಭಕ್ತನು ಆಚರಿಸುವ ಸತ್ಕ್ರಿಯ ಸಮ್ಯಜ್ಞಾನವೂ ಗುರುಲಿಂಗ ಜಂಗಮದ ದೆಸೆಯಿಂದ ಮಾಡತಕ್ಕ ಕೃಷಿ ವಾಣಿಜ್ಯ ಸೇವಾದಿ ಸತ್ಕಾಯಕಗಳೆಲ್ಲವೂ ಚಿದಾಕಾಶ (ಬಿಂದ್ವಾಕಾಶ) ಸ್ವರೂಪವೇ. ಅಂದರೆ ಶಿವಸ್ವರೂಪವೇ ಆಗಿರುವದರಿಂದ ಬಸವೇಶ್ವರದೇವರು ಚಿದಾಕಾಶದಲ್ಲಿ ವಾಸಿಸುವರೆಂದು ಬೋಧಿಸಿರುವದು ಸಮಂಜಸವಿರುವದೆಂಬ ಭಾವವು. ಉದಾಹರಣೆ – ಒಬ್ಬ ಸೇವಕನು ಧನಿಯ ಇಚ್ಛಾನುಸಾರ ಕೆಲಸವನ್ನು ಮಾಡುತ್ತ ತನ್ನ ಮನೆಯಲ್ಲಿದ್ದಾಗ್ಯೂ ನಾನು ಆ ಧನಿಕನ ಮನೆಯಲ್ಲಿರುವೆನೆಂದು ಹೇಳುವಂತೆ.

ಬಸವೇಶ್ವರನು ಸ್ವಾರ್ಥಿಯೆನಿಸದೇ ಶಿವಾಜ್ಞೆಗನುಸಾರವಾಗಿ ಮಂತ್ರಿಯ ಕಾರ್ಯವನ್ನು ಮಾಡಿದರೂ ಚಿದಾಕಾಶಗತ ಶಿವಸಂಬಂಧಿ ಸೇವೆಯಲ್ಲಿ ನಿರತನಾಗಿದ್ದನೆಂದು ತಿಳಿಯತಕ್ಕದ್ದು. ಮತ್ತು ಸತ್ಯವನ್ನುದ್ದೇಶಿಸಿ ಹೊಲೆಯನಿಗಾಳಾದ ಹರಿಶ್ಚಂದ್ರನು ಆ ಹೊಲೆಯನಾಳೆನಿಸದೇ ಸತ್ಯಶೀಲನೆನಿಸಿದಂತೆ (ಸತ್ಯತೆಯ ಆಳೆನಿಸಿದಂತೆ) ಬಸವೇಶ್ವರನು ಮಂತ್ರಿಯಾಗಿದ್ದರೂ ಜ್ಞಾನಾಕಾಶದಲ್ಲಿ  ವಾಸಮಾಡಿದ್ದನೆಂದು ತಿಳಿಯುವದು. ಜಯ ಸೋಮನಾಥ ಬಿಂದುಶಕ್ತಿಗೆ (ವಿಮರ್ಶಶಕ್ತಿಗೆ ಅಥವಾ ಕುಂಡಲಿಗೆ) ಪ್ರಭುವೇ ಸರ್ವೋತ್ಕೃಷ್ಟನಾಗು. ಜಯದೇವ : ಎಲೈ ಒಡೆಯನೇ ಸರ್ವೋತ್ತಮನಾಗು, ಅವಿರತಂ ಜಯ = ನನ್ನನ್ನು ಉದ್ಧರಿಸಿ ಯಾವಾಗಲೂ ಜಯಶೀಲನಾಗು. (ವಿಚಾರ) ನನ್ನನ್ನು ಕಾಡುತ್ತಿರುವ ಕಾಮ ಕಾಲ ಮಾಯೆಗಳನ್ನು ಸೋಲಿಸಿ, ಸರ್ವೋತ್ಕೃಷ್ಟನಾಗೆಂಬ ಭಾವವು.

ಬಸವಕುಮಾರಭಾಕ್ತಿಕ ಪುರಸ್ಸರ ಷಟ್‌ಸ್ಥಲಧೀರ ಚಿತ್ಸುಧಾ |

ರಸಭರಿತಾಂತರಂಗ ಸಕಲಾಕ್ಷ ಸಮರ್ಪಿತ ಲಿಂಗತತ್ರಸಾದ |

 ಸುಖವಿಶೇಷತೃಪ್ತ ಶಿವಯೋಗಪದೈಕಸಮಾಪ್ತ ನೀನೆ ರ |

 ಕ್ಷಿಸುಗಡ ಜೀಯ ಚನ್ನಬಸವಯ್ಯ ಕೃಪಾನಿಧಿಯೇ ಶಿವಾಧವಾ ॥೩॥

 

ಬಸವಕುಮಾರ=ಬಸವೇಶ್ವರನ ಪುತ್ರನೇ, ಅಂದರೆ ಚಿದಾಕಾಶಾತ್ಮಕ ಚಿನ್ನಾದ ಬಿಂದು ಚಿತ್ಕಲಾಸ್ವರೂಪ ಪ್ರಸಾದದಿಂದುದ್ಭವಿಸಿದಾತನೇ, (ವಿಚಾರ) ಈ ಬಸವ ಕುಮಾರತ್ವವು ಜನ್ಮರೂಪ ಸಂಸ್ಕಾರರೂಪ ಕ್ರಿಯಾರೂಪ ಯೋಗರೂಪ ಅವತಾರ ರೂಪ ವೃತ್ತಿರೂಪವೆಂದು ಆರು ಪ್ರಕಾರವೆಂದು ನಿಶ್ಚಯಿಸಲ್ಪಟ್ಟಿರುವದವುಗಳಲ್ಲಿ

(೧)  ಬಸವಕುಮಾರ-ತ್ರಿವಿಧಚಿದ್ರೂಪ ಪ್ರಣವಗಳಿಂದುಂಟಾದ ಕಕ್ಕಯ್ಯಗಳ ಮಿಕ್ಕ ಪ್ರಸಾದವನ್ನು ಅವತಾರ ಸ್ವರೂಪನಾದ ಬಸವೇಶ್ವರನು ಅವಧಾನದಿಂದ (ಎಚ್ಚರಿಕೆಯಿಂದ) ತಂದುಕೊಡಲು ಅದರಿಂದ ಜನಿಸಿದವನು. ಈ ಕುಮಾರತ್ವವು ಜನ್ಮರೂಪ ವಾದದ್ದು.

(೨) ಬಸವಕುಮಾರ = ಪರಶಿವನ ಅಪರಾವತಾರಿಯಾದ ಬಸವೇಶ್ವರನ್ನು ಆದಿಗುರು ತತ್ವದೀಕ್ಷೆಯನ್ನೆಸಗಲು ಪುನರ್ಜಾತನಾದನು. ಈ ಕುಮಾರತ್ವವು ಸಂಸ್ಕಾರರೂಪವಾದದ್ದು (ಸದ್ಯೋನಿರ್ವಾಣ ಅಸದ್ಯೋನಿರ್ವಾಣ ದೀಕ್ಷೆಗಳ ವಿವೇಚನೆ ಮಾಡತಕ್ಕದ್ದು).

(೩) ಬಸವಕುಮಾರ ಚಿನ್ನಾದ ಚಿದ್ಬಿಂದು ಚಿತ್ಕಲಾತ್ಮಕ ಗುರುತ್ರಯ ಲಿಂಗತ್ರಯ ಜಂಗಮಶ್ರಯಗಳ ಪ್ರಸಾದದಿಂದ ಕುಮಾರ. ಕುಕಾಮ ಕಾಲ ಮಾಯಾಮಯವಾದ ದುರ್ಮಾರ್ಗಗಳನ್ನು ಮಾರ = ಹೊಡೆದೋಡಿಸಿದವನು. ಇದು ಕ್ರಿಯಾರೂಪವಾದ ಕುಮಾರತ್ವವು

(೪) ಬಸವಕುಮಾರ = ಚಿನ್ನಾದ ದ್ಬಿಂದು ಚಿತ್ಕಲಾತ್ಮಕಾರಕ ಬ್ರಹ್ಮವನ್ನು ಚಿದ್ರೂಪಕಾರ ಕತ್ರಯಾ (ಲಕ್ಷತ್ರಯನುಸಂಧಾನ ರೂಪಸಾಧನದಿಂದ ಸಾಕ್ಷಾತ್ಕಾರಮಾಡಿಕೊಂಡು ಕುತ್ಸಿವಾದ ಭವಮಾಲೆಯನ್ನು ಧಿಕ್ಕರಿಸಿದವನು. (ಕು ಕುತ್ಸಿತವಾದದ್ದನ್ನು, ಮಾರ= ಹೊಡೆದವನು) ಇದು ಯೋಗರೂಪ ಕುಮಾರತ್ವ

(೫) ಬಸವಕುಮಾರ-ಶಿವನ ಚಿದ್ಧರ್ಮರೂಪು. ಈ ಚಿದ್ಧರ್ಮರೂಪನಾದ ಪರಶಿವನ ಕುಮಾರ. ಪುತ್ರನಾದ ಸ್ಕಂದನು ಪಂಚವರ್ಣಸೂತ್ರಾಧಿಪತಿಗಳಾದ ವಿಶ್ವಾರಾಧ್ಯರ ಗೋತ್ರಾಧಿಪತಿಯು. ಈತನ ಅಪರಾವತಾರನೇ ಚನ್ನಬಸವೇಶ್ವರನು. (ಇದು ಅವತಾರರೂಪ ಕುಮಾರತ್ವ)

(೬) ಬಸವಕುಮಾರ -ಅವಾಗ್ಜಪಸ್ವರೂಪ  ಮೂಲಪ್ರಣವವು ಕುಮಾರ-ಷಣ್ಮುಖ ಸ್ವಾಮಿಯು ಅರ್ಥಾತ್‌ ಬಸವಕುಮಾರ ಅಂದರೆ ಅವಾಗ್ಜಪ್ರಣವದಿಂದುಂಟಾದ ಷಣ್ಮುಖಸ್ವಾಮಿಯ ಅವತಾರಸ್ವರೂಪನಾದ ಚನ್ನಬಸವನೆಂಬಭಿಪ್ರುವು. (ವಿಶೇಷ ವಿಚಾರ) ಕಾರಣರೂಪವಾದ ಅವಾಗ್ಜಪ್ರಣವದುಂಟಾದ ಚಿನ್ನಾದ ಚಿದ್ಬಿಂದುಚಿತ್ಕಲಾಸ್ವರೂಪ ಸೂಕ್ಷ್ಮ ಪ್ರಣವತ್ರಯಗಳು. ಇವುಗಳಿಂದುಂಟಾದ ಸ್ಥೂಲ ಅಂಗ ಷಟ್ಪ್ರಣವ ಲಿಂಗಪಟ್ಟಣವಗಳು. ಈ ಪ್ರಣವಷಟ್ಕದಿಂದ ಭಗವದಾತ್ಮಕ (ಪರಶಿವಾತ್ಮಕ) ಷಣ್ಮುಖರೂಪ ಹಸ್ತಸ್ಪರ್ಶದಿಂದ ಭೂತಾಂಶವಳಿದು ಪೂತಾಂಶದಿಂದ ಜನಿಸಿದ ಪ್ರಸಾದರೂಪವೆ ಚನ್ನಬಸವನೆಂದು ತಾತ್ಪರ್ಯ.

ಕಾರಣರೂಪ ಅವಾಗ್ಜಪ್ರಣವದಲ್ಲಿ ಷಡಕ್ಷರೀ ಸಮಷ್ಟಿರೂಪ ಮೂಲಪ್ರಣವವೂ ಸೂಕ್ಷ್ಮರೂಪ ಚಿನ್ನಾದ ಚಿದ್ಬಿಂದು ಚಿತ್ಕಲಾ ಪ್ರಣವಗಳಲ್ಲಿ ನಾದ ಬಿಂದು ಕಲಾ ಪ್ರಣವತ್ರಯಗಳೂ ಸಂಭವಪ್ರಮಾಣದಿಂದ ಮಹಾ ಪ್ರಕಾಶದಲ್ಲಿ ಗೌಣ (ಅಲ್ಪ) ಪ್ರಕಾಶವು ಸಂಬಂಧವೆನಿಸಿದ್ದಂತೆ ಸಂಬಂಧಿಸಿರುವವು.

ಶರಣರ ಹಸ್ತವೇ ಷಟ್‌ಸ್ಥಲಸ್ವರೂಪ ಪ್ರಣವಗಳ ಸಂಬಂಧದಿಂದ ಶಿವಹಸ್ತ ವೆಂದರೆ ಷಣ್ಮುಖಸ್ವರೂಪವೆನಿಸುವದು. ಆ ಷಣ್ಮುಖಸ್ವರೂಪ ಹಸ್ತಸ್ಪರ್ಶದಿಂದ ಪದಾರ್ಥದ ಭೂತಾಂಶವಳಿದು ಪೂತಾಂಶದಿಂದುಂಟಾದ ಪ್ರಸಾದವೇ ಚನ್ನಬಸವೇಶ್ವರ ನೆಂದು ತಿಳಿಯತಕ್ಕದ್ದು. ಇದು ಷಟ್‌ಸ್ಥಲರೂಪ ಷಡಕ್ಷರಿಯಿಂದುಂಟಾದ ಕುಮಾರತ್ವವು. ಈ ಕುಮಾರತ್ವವು ವೃತ್ತಿರೂಪವಾದದ್ದು.

ಭಾಕ್ತಿಕಪುರಸ್ಸರ ಷಟ್‌ಸ್ಥಲಧೀರ = ಭಕ್ತಿಸ್ಥಲವೇ ಮೊದಲ್ಗೊಂಡು ಆರು ಸ್ಥಲಗಳ ಆಚರಣೆಯಲ್ಲಿ ವೀರನೆನಿಸಿದನು. (ಇಲ್ಲಿ ವಿಚಾರ)

ಚನ್ನಬಸವೇಶ್ವರ ದೇವರೊಬ್ಬರೇ ಷಟ್‌ಸ್ಥಲ ಪರಶಿವ ಸ್ವರೂಪ ಧೀರರೆನಿಸುವರೋ? ಅಂದರೆ ಷಟ್‌ ಸ್ಥಲಾಚರಣೆಯನ್ನು ತಪ್ಪದೇ ನಡೆಸುವವರೆಲ್ಲರೂ ಧೀರರೇ (ವೀರಶೈವರೇ). ಅವರೆಲ್ಲರೂ ಚನ್ನಬಸವೇಶ್ವರ ದೇವರ ಸ್ವರೂಪಿಗಳೆನಿಸುವರು. “ಶಿವನೊಳಗೆ ವಿಶ್ವಾಸ, ಶಿವನೊಳಗೆ ನಂಬುಗೆಯು, ಶಿವನೊಳಗೆ ಮೋಹವಿರೆ ತಾನೆ ಶಿವನು” ಎಂಬ ಪುರಾತನೋಕ್ತಿಯಂತೆ, ಶಿವನಲ್ಲಿ

ವಿಶ್ವಾಸಾದಿಗಳನ್ನಿಟ್ಟವರೆಲ್ಲರೂ ಶಿವಸ್ವರೂಪಿಗಳಾದ್ದರಿಂದ ಚನ್ನಬಸವೇಶ್ವರದೇವರೂ ಇನ್ನುಳಿದ ಪ್ರಮಥರೂ ಶಿವಸ್ವರೂಪಿಗಳೇ ಎಂದು ತಾತ್ಪರ್ಯವು. (ಧೀರರೆನ್ನುವಲ್ಲಿ ವಿಚಾರ) ಷಟ್‌ ಸ್ಥಲಗಳಲ್ಲಿ ಒಂದಾದ ಭಕ್ತಿಸ್ಥಲದ ಆಚಾರವೆಂದರೆ, ಭಕ್ತನು ತಾನು ಪಡೆದ ದ್ರವ್ಯವನ್ನು ಶಿವನಲ್ಲಿ ಭಕ್ತಿಯುಳ್ಳವರಿಗೆ ನಿರ್ವಂಚನೆಯಿಂದ ಕೊಡುವದೂ, ಅವರಲ್ಲಿ ನಿರಹಂಕಾರದಿಂದ ವರ್ತಿಸುವದೂ ಭಕ್ತಿಸ್ಥಲವೆಂದು ಹೇಳಲ್ಪಡುವದು. ಇದು ಹೇಡಿಯ ಕೆಲಸವಲ್ಲ. “ಕೊಡುವದೂ, ಕಡಿಯುವದೂ, ವೀರನ ಕೆಲಸ” ಎಂದು ನಾಣ್ಣುಡಿಯುಂಟು.

ಆಶೆಯೊಂದನ್ನೇ ಬಿಟ್ಟವನಿಗೆ ವೀರನೆಂಬುವದು ಲೋಕಾನುಭವಪ್ರಸಿದ್ಧವು. ಆಶೆಯನ್ನು ಬಿಡುವದು ಸಾಮಾನ್ಯದ ಕೆಲಸವಲ್ಲ. ವೀರನ ಕೆಲಸವು. ಇದರಂತೆ ಅಹಂಕಾರವನ್ನು ಬಿಡುವದಕ್ಕೆ ಅತ್ಯಂತ ಶೂರತನವು ಬೇಕಾಗುತ್ತದೆ. ಭಕ್ತಿಸ್ಥಲದಲ್ಲಿ ಆಶಾ ಮತ್ತು ಅಹಂಕಾರ ಇವೆರಡನ್ನೂ ನಾಶಗೊಳಿಸುವದು ಕರ್ತವ್ಯವಾದ್ದರಿಂದ ಚನ್ನಬಸವೇಶ್ವರದೇವರಿಗೆ ಧೀರರೆಂದು ಹೇಳಿದ್ದು ಅತಿಶಯೋಕ್ತಿಯೆನಿಸದು. ಇದರಂತೆ ಮುಂದಿನ ಮಾಹೇಶ್ವರ ಸ್ಥಲವನ್ನು ವಿಚಾರಮಾಡಿದರೆ, ಪರದ್ರವ್ಯಾಪೇಕ್ಷೆ ಪರಹಿಂಸೆ ಮೊದಲಾದ ದುರ್ಗುಣಗಳನ್ನು ದೂರದಲ್ಲಿಯೇ ಬಿಟ್ಟು ಏಕಲಿಂಗನಿಷ್ಠಾ (ಒಬ್ಬ ಶಿವನಲ್ಲಿಯೇ ನಿಷ್ಪಾ)ಪರನಾಗಿರಬೇಕೆಂದು ಹೇಳುವದು. “ಒಲ್ಲದಿಪ್ಪುದೇ ಶೀಲ; ಕೊಲ್ಲದಿಪ್ಪುದೇ ಧರ್ಮ’ವೆಂದು ಪುರಾತನ ಪ್ರವಚನ ಉಂಟು. ಮುಂದಿನ ಸ್ಥಲಗಳಲ್ಲಿ ಉತ್ತರೋತ್ತರ ಅಧಿಕವಾದ ವೀರತನವೇ ಕಂಡುಬರುವದರಿಂದ ಷಟ್‌ ಸ್ಥಲಧೀರನೆಂದು ಕರೆದಿರುವದು ಸಂಯುಕ್ತಿಕವೆನಿಸುವದು. “ತಿಳಿಯಲಹುದೊಲಿದು ಬಿಡಲಹುದು ಮೋಹಿಸದೆ ಭೂತಳದೊಳಾನೆಂದಹಂಕರಿಸದಿಹುದರಿದು ” ಎಂದು “ಶತೇಷುಜಾಯತೇ ವೀರಃ ಸಹಸ್ರೇಷು ಚ ಪಂಡಿತಃ | ವಕ್ತಾದಶಸಹಸ್ರೇಷು ದಾತಾಭವತಿ ಮಾನವಾ ॥

ಎಂದೂ ಪುರಾತನೋಕ್ತಿಗಳುಂಟು. ಚಿತ್ಸುಧಾರಸಭರಿತಾಂತರಂಗ= ಚಿದಾಕಾಶ ದಿಂದುಂಟಾದ ಅಮೃತರಸದಿಂದ ತುಂಬಿದ ಮನಸ್ಸುಳ್ಳಂಥ. (ವಿಚಾರ) ಈ ಚಿದ್ರೂಪಾಮೃತರಸವು ಬಹಿರಂಗದಲ್ಲಿ ತುಂಬಿರುವದಿಲ್ಲವೇನು? ಅಂದರೆ ಬಹಿರಂಗವೂ ಚಿದ್ರೂಪಮಯವಾದದ್ದು. “ಮನ ಏವ ಮನುಷ್ಯಾಣಾಂ ಕಾರಣಂ” ಎಂಬಂತೆ ವೃಕ್ಷದ ಬೊಡ್ಡೆಗೆ ಹಾಕಿದ ನೀರು ಶಾಖೋಪಶಾಖೆಗಳಲ್ಲಿ ವ್ಯಾಪಿಸಿ ಪಲ್ಲವಿಸಿ ಫಲವೀಯುವಂತೆ, ಶಿವಾಕಾರವಾದ ಮನಸ್ಸಿನ ಆನಂದಾಮೃತವು ಬಹಿರಂಗದ ಇಂದ್ರಿಯಾದಿಗಳಲ್ಲಿ ವ್ಯಾಪಕವಾಗಿರುವದೆಂಬ ಭಾವವು. ಸಕಲಾಕ್ಷ ಸಮರ್ಪಿತ ಲಿಂಗ = ಸರ್ವೆಂದ್ರಿಯಂಗಳನ್ನು ಅರ್ಪಿಸಲ್ಪಟ್ಟ ಇಷ್ಟಲಿಂಗವುಳ್ಳಂಥ, (ವಿಚಾರ) ಎಲ್ಲ ಇಂದ್ರಿಯಂಗಳನ್ನು ಇಷ್ಟಲಿಂಗದ ಸೇವೆಯಲ್ಲಿ ತತ್ಪರತೆಯುಳ್ಳವುಗಳನ್ನಾಗಿ ಮಾಡಿದವನು. ಅರ್ಥಾತ್ ಚನ್ನಬಸವೇಶ್ವರದೇವರು ಅಥವಾ ಷಟ್‌ಸ್ಥಲ ಜ್ಞಾನಿಗಳು ಷಡಿಂದ್ರಿಯಗಳನ್ನು ಲಿಂಗದಲ್ಲಿ ಸಂಬಂಧಿಸಿ, ಆ ಲಿಂಗಮೂರ್ತಿಯನ್ನು ಆರು ಇಂದ್ರಿಯಂಗಳಲ್ಲಿ ಸಂಬಂಧ ಮಾಡಿದವರು. ಘಟದ ಬಹಿರ್ಭಾಗದಲ್ಲಿ ಸಂಬಂಧಿಸಿದ ಅಗ್ನಿಯಿಂದ ಘಟದೊಳಗಿರುವ ನೀರು ಕೂಡಿದ ಅಕ್ಕಿಯು ಪರಿಪಕ್ವ ಅನ್ನವಾದಂತೆ ಇಷ್ಟಲಿಂಗದಲ್ಲಿ ಸಂಬಂಧಿಸಿದ ಇಂದ್ರಿಯಂಗಳ ಸತ್ಕ್ರಿಯಾ ಪರಿಣಾಮವು ಅಂತರಂಗಕ್ಕೆ ವ್ಯಾಪಿಸುವದೆಂಬ ಭಾವವು. ಶಿವಶರಣರು ಭೂತಾಂಶವನ್ನು ಪೂತಾಂಶವನ್ನಾಗಿ ಮಾಡುವರೆಂಬ ಭಾಷಾಪ್ರಬಂಧದ (ವಚನಶಾಸ್ತ್ರ) ಅಭಿಪ್ರಾಯ. ತತ್ಪ್ರಸಾದಸುಖ ವಿಶೇಷತೃಪ್ತ = ಆ ಲಿಂಗಪ್ರಸಾದ ಸುಖದಿಂದ ಹೆಚ್ಚಿನ  ತೃಪ್ತಿಯನ್ನು ಹೊಂದಿದಂಥ, (ವಿಚಾರ)

ಶಿವಶರಣನು ಲಿಂಗಭೋಗೋಪಭೋಗಿಯಾಗಿರುವನು. ಹೇಗೆಂದರೆ, ಸತ್ಕಾಯಕದಿಂದ ಸಂಪಾದಿಸಿ ತಯಾರಿಸಲ್ಪಟ್ಟ ಶುದ್ಧ ಪದಾರ್ಥವನ್ನು ವಿಶುದ್ಧಗೊಳಿಸಿ, ಇಷ್ಟ ಪ್ರಾಣ ಭಾವ ಈ ಮೂರು ಲಿಂಗಗಳಿಗೆ ರೂಪು ರುಚಿ ತೃಪ್ತಿಗಳನ್ನು ಕ್ರಮವಾಗಿ ಅರ್ಪಿಸಿ, ಆ ಅರ್ಪಿತ ಶಿವಸುಖಮಯವಾದ ಶುದ್ಧ ಸಿದ್ಧ  ಪ್ರಸಿದ್ಧವೆಂಬ ಪ್ರಸಾದವನ್ನು ತಾನು ಅನುಭವಿಸುವದೇ ವಿಶೇಷ ತೃಪ್ತಿಯೆನಿಸುವದು. ವಿಶೇಷ ತೃಪ್ತನೆನ್ನುವಲ್ಲಿ ಲಿಂಗರೂಪಿಯಾದ ಶಿವನಿಗೆ ಪದಾರ್ಥಗಳಿಂದ ತೃಪ್ತಿಯಾಗುವದು ಶರಣನಿಗೆ ಶಿವಾನುಗ್ರಹರೂಪ ನಿತ್ಯಾನಂದಮಯವಾದ ಪ್ರಸಾದ  ಸೇವನೆಯಿಂದ ವಿಶೇಷ ತೃಪ್ತಿಯಾಗುವದು.

ನರರು ಮಾಯಾಮಯವಾದ ಪ್ರಾಕೃತ ಪದಾರ್ಥಗಳನ್ನು ಭುಂಜಿಸಿ ಕ್ಷಣಿಕಾ ನಂದವನ್ನು ಹೊಂದಿದ ತೃಪ್ತಿಗಿಂತಲೂ ಅತ್ಯಧಿಕವಾದ ಶಿವಪ್ರಸಾದ ತೃಪ್ತಿಯನ್ನು ಶರಣನು ಹೊಂದುವದರಿಂದ ವಿಶೇಷ ತೃಪ್ತನೆಂಬುದರ್ಥ. ಉದಾಹರಣೆ –

ಆನೆಯು ಅಕ್ಕಿಯನ್ನು ತಿಂದು ತೃಪ್ತಿಯನ್ನು ಹೊಂದುವದಕ್ಕಿಂತಲೂ, ಅದೇ ಅಕ್ಕಿಯನ್ನೇ ಮನುಷ್ಯನು ಅಗ್ನಿ ಸಂಸ್ಕಾರದಿಂದ ಪಾಕಮಾಡಿಕೊಂಡು ಭುಂಜಿಸುವದು ವಿಶೇಷ ತೃಪ್ತಿಯೆನಿಸಿದಂತೆ, ಅಥವಾ ಆನೆಯಾಗಿ ಕಬ್ಬು ಮೇಯುವದಕ್ಕಿಂತ ಇರುವೆಯಾಗಿ ಸಕ್ಕರೆ ಮೇಯುವದು ಲೇಸೆಂಬ ಗಾದೆಯಂತೆ ಶರಣನ ವಿಶೇಷ ತೃಪ್ತಿ ಇರುವದು. ಶಿವಯೋಗಪದೈಕ ಸಮಾಪ್ತ= ಶಿವಯೋಗ ಪದವನ್ನು ಮುಖ್ಯವಾಗಿ ಪೂರ್ಣಮಾಡಿದಂಥ. (ವಿಚಾರ) =

ಅರಿವು, ಅನುಸಂಧಾನ, ವ್ರತ, ಆರ್ಚನೆಗಳೆಂಬ ಐದು ಅಂಗಗಳಿಂದ ಕೂಡಿದುದೇ ಶಿವಯೋಗವು, ಅಥವಾ ಮಂತ್ರಾದಿ ಪಂಚಯೋಗಗಳಿಂದ ಕೂಡಿದ್ದು ಶಿವಯೋಗವು ಎಂಬದಾಗಿ ವೇದಾಗಮಗಳಲ್ಲಿ ಹೇಳಲ್ಪಟ್ಟಿರುವದರಿಂದ, ಷಟ್‌ಸ್ಥಲ ಜ್ಞಾನಿಗಳಾದ ಶಿವಭಕ್ತರು ಅಥವಾ ಚನ್ನಬಸವೇಶ್ವರ ದೇವರು ಇಂಥ ಶಿವಯೋಗಾಂಗಗಳನ್ನೆಲ್ಲ ಸಾಂಗವಾಗಿ ಅರಿದು ಅರಿದಂತಾಚರಿಸಿ ಪೂರ್ಣಸಿದ್ಧತೆಯನ್ನು ಹೊಂದಿದವರೆಂಬ ಸಾರಾಂಶವು, ಕೃಪಾನಿಧಿಯೇ= ದಯಾಸಮುದ್ರನೇ, ಅಂದರೆ ಜಗತ್ತನ್ನು ಉದ್ಧರಿಸುವಲ್ಲಿ ಅಪಾರವಾದ (ಅಳತೆಮೀರಿದ) ಕೃಪೆಯುಳ್ಳವನೆಂಬುದರ್ಥ. ಜೀಯಾ=ಒಡೆಯನೇ ಅಂದರೆ ಮೇಲೆ ಹೇಳಿದ ಅಪಾರವಾದ ಕೃಪೆಯೇ ಮೊದಲಾದ ಚಿತ್ಪ್ರಕಾಶ’ಸ್ಥಿತಿಯೇ ಪೂರ್ಣಾಂಗಗೊಂಡ ಮಹಿಮನೇ ನಿಜವಾದ ಒಡೆಯನು. ಆತನೇ ಪೂಜ್ಯನೆಂಬ ಭಾವವು. ಚನ್ನಬಸವಯ್ಯ= ಚನ್ನಬಸವಯ್ಯನೆಂಬ ಹೆಸರುಳ್ಳ ಅಂದರೆ = ಚಿದ್ರೂಪದಿಂದುಂಟಾದ ಚಲ್ವಿಕೆಯುಳ್ಳಂಥ ಚಿನ್ನಾದ ಚಿದ್ಬಿಂದು ಚಿತ್ಕಲಾಧೀಶ್ವರನೆಂಬ ತಾತ್ಪರ್ಯವು. ನೀನೆ ರಕ್ಷಿಸುಗಡ=ನೀನೆ ಕಾಪಾಡು ಕಂಡೆಯಾ. (ಶಂಕಾ) ಇಲ್ಲಿ ಬಸವೇಶ್ವರ ಪ್ರಭುದೇವ ರೇಣುಕ ದಾರುಕ ಮುಂತಾದ ಪ್ರಮಥವರರ ತಿರಸ್ಕಾರವು ಕಂಡುಬರುವದೆಂದರೆ (ಸಮಾಧಾನ) ನೀನೆ ಎಂದು ಹೇಳುವಲ್ಲಿ ಶಿವಸ್ವರೂಪಿ ಚನ್ನಬಸವೇಶ್ವರದೇವರೆಂದು ಅರ್ಥಗರ್ಭಿತವಾಗಿರುವದು. ಅದು ಕಾರಣ ಎಲ್ಲ ಪ್ರಮಥರೂ ಶಿವಸ್ವರೂಪಿಗಳಾಗಿರುವದರಿಂದ ಪ್ರಮಥತಿರಸ್ಕಾರವಾಗದೆಂಬ ತಾತ್ಪರ್ಯವು. ಉದಾಹರಣೆ – ಚಿನ್ನವು ಆಭರಣತೆಯಿಂದ ಭೇದಾಭೇದವಾಗಿ ತೋರಿದಂತೆ ಚನ್ನಬಸವೇಶ್ವರನಿಗೂ ಮಿಕ್ಕ ಪ್ರಮಥರಿಗೂ ಅವತಾರರೂಪ ವ್ಯಕ್ತಿಮಾತ್ರದಿಂದ ಭೇದವೂ ಶಿವಸ್ವರೂಪ ನಿಜಸ್ಥಿತಿಯಿಂದ ಅಭೇದವೂ ಉಂಟೆಂಬಭಿಪ್ರಾಯವು.

Related Posts