ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಸಪ್ಟಂಬರ ತಿಂಗಳು ಪರಮಪೂಜ್ಯ ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಜಯಂತಿಯ ಪವಿತ್ರ ಮಾಸ.

ಕಾರಣಿಕ ಯುಗ ಪುರುಷರ ಹುಟ್ಟು ಈ ಯುಗದ ಸಮಾಜೋತ್ಸಾಹ ! ಶ್ರೀಕುಮಾರೇಶ ಚರಿತ ದ ಸಾಹಿತಿ ಪೂಜ್ಯ ಗುರುಕಂದ ಅವರ ಸುಂದರ ಈ  ಸಾಲುಗಳು ಓದಿದಷ್ಟು ಮತ್ತೊಮ್ಮೆ ಓದಿಸಿಕೊಳ್ಳುವ ಸಾಲುಗಳು…..

“ತಾಯಿ ನೀಲಮ್ಮನವರ ಗರ್ಭದ ಕೂಸು ಶಿವಾಂಶಿಕನೆಂಬುದು ಹೀಗೆ ಮತ್ತೆ ಕುರುಹಿಟ್ಟಿತ್ತು . ಏಳನೂರೆಪ್ಪತ್ತು ಅಮರಗಣರೊಂದಿಗೆ ಮತ್ರ್ಯದಲ್ಲಿ ಅವತರಿಸಿದ್ದ ದ್ವಿತೀಯ ಶಂಭುವೆನಿಸಿದ ನಂದಿ ಅಂದು ಕಲ್ಯಾಣದಲ್ಲಿ ಬಸವಣ್ಣನಾಗಿ ಚರಿತ್ರೆ ನಿರ್ಮಿಸಿದ್ದ . ಬಾಗೇವಾಡಿಯ ನಂದೀಶ್ವರನ ಅನುಗ್ರಹದಿಂದ ಆ ಮಾದಲಾಂಬಿಕಾ ತಾಯಿ ಬಸವಣ್ಣನವರನ್ನು ಪಡೆದು ಶಿವಶರಣಧರ್ಮ ಮೆರೆಸಲು ಕೂಡಲ ಸಂಗನ ಅಡಿಗಳಿಗೆ ನೀಡಿದ್ದರು. ಆ ಶಿವಶರಣರ ಕಾರ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಆ ನಂದಿಯೇ ಮತ್ತೆ ತಾಯಿ ನೀಲಮ್ಮನವರ ಗರ್ಭದಿಂದ ಅವತರಣಗೊಳ್ಳುವ ಕುರುಹನ್ನು ಹೀಗೆ ನಂದಿಕೇಶ್ವರ ಜಾತ್ರೆಯಲ್ಲಿ ಆ ಸಾದ್ವಿ ನೀಲಮ್ಮನವರಿಗೆ ಕುರುಹಿತ್ತಿದ್ದ. ಆ ಶಿವಪ್ರಸಾದ ಉತ್ತತ್ತಿಯನ್ನು ಜತನವಾಗಿ ಇರಿಸಿಕೊಂಡು ಮನೆಗೆ ಮರಳಿದ ನೀಲಮ್ಮನವರು ಲಿಂಗಪೂಜೆ ಮುಗಿಸಿ ಅರ್ಪಿತಗೊಳಿಸಿ ಸೇವಿಸಿದ್ದರು. ದಿನಗಳು ಉರುಳುತ್ತಿದ್ದವು. ಕೂತರೂ ನಿಂತರೂ, ಮಲಗಿದರೂ ಶಿವಧ್ಯಾನಕ್ಕೆಳಸುವ ಅಂತರಂಗದ ಸೆಳೆತ ಗರ್ಭದ ನೋವನ್ನು ಕ್ಷಣಾರ್ಧದಲ್ಲೇ ಮರೆಮಾಚುವ ಶಿವಮಂತ್ರದ ಶಕ್ತಿಗೆ ನೀಲಮ್ಮ ಬೆರಗಾಗಿದ್ದರು. ತನ್ನೊಳಗೇ ಯಾರೋ ಆ ಮಹಾಮಂತ್ರವನ್ನು ಎಡೆಬಿಡದೆ ಮೆಲ್ಲಗೆ ಉಸುರುತ್ತಿರು ವಂತಾಗಿತ್ತು ಆ ತಾಯಿಗೆ.

ಮುಂಗಾರಮಳೆಗೆ ಭೂಮಿ ಹಸನಾಗಿ ಸುತ್ತಣ ಸೀಮೆಯ ಹೊಲಗಳಲ್ಲಿ ಬಿತ್ತನೆ ಕೆಲಸಗಳೆಲ್ಲ ಮುಗಿದು ಹಸಿರ ಪೈರು ಕಂಗೊಳಿಸುತ್ತ ಪ್ರಕೃತಿ ಸಸ್ಯಶ್ಯಾಮಲೆಯಾಗಿ ನಳನಳಿಸುತ್ತ ಶ್ರಾವಣ ಉರುಳಿ ಭಾದ್ರಪದ ಮಾಸ ಅಡಿಯಿರಿಸಿತ್ತು . ಗೌರಿ-ಗಣೇಶ ಹಬ್ಬ ಸಂಭ್ರಮದಿಂದ ಜರುಗಿತ್ತು. ದಿನ ತುಂಬಿ ಜನನ ಕಾಲ ಸಮೀಪಿಸಿದೆ ಎಂದು ಮನೆಯವರೆಲ್ಲ ನೀಲಮ್ಮನವರತ್ತ ಸದಾ ಒಂದು ಕಣ್ಣಿರಿಸಿದ್ದರು. ಅಂದು ಮಂಗಳವಾರ ರಾತ್ರಿ ಮನೆಯವರೆಲ್ಲರೂ ಪ್ರಸಾದ ಮುಗಿಸಿ ಎಂದಿನಂತೆ ಮಲಗಿದ್ದರು. ನಡು ಇರುಳು ಹಿಂದೆ ಸರಿದಿತ್ತು. ನೀಲಮ್ಮ ನೋವಿನಿಂದ ಒಮ್ಮೆ ಹೊರಳಿದ್ದರು. ಕಾತರಿಸುವ ಜನನ ಕಾಲ ಸಮೀಪಿಸಿತೆಂದು ದೀಪ ಹೊತ್ತಿಸಿ ಮನೆಯ ಹೆಂಗಳೆಯರು ನೀಲಮ್ಮನವರ ಸುತ್ತ ನೆರೆದಿದ್ದರು. ಒಂದು ಮಗುವಿನ ಪ್ರಸವವೆಂದರೆ ಗರ್ಭ ಧರಿಸಿದ ಹೆಣ್ಣಿಗೆ ಹೋದ ಜೀವ ಮತ್ತೆ ಮರಳಿದಂತೆ. ಪ್ರಸವದ ನೋವಿಗೆ ನೀಲಮ್ಮನವರನ್ನು ಸಾಂತ್ವನ ಗೊಳಿಸಲು ನೆರೆದ ಹೆಂಗಸರಿಗೆ ಅಚ್ಚರಿಯಾಗಿತ್ತು. ತಾಯಿ ನೀಲಮ್ಮ ಹೆಚ್ಚು ನೋವಿಲ್ಲದೆ ಗರ್ಭದ ಕೂಸನ್ನು ಹೆತ್ತಿದ್ದರು. ಗರ್ಭ ಹೊತ್ತ ತಾಯಿಗೆ ನೋವು ನೀಡದೆಯೇ ಕೂಸು ಜನಿಸಿತ್ತು. `ಗಂಡು ಕೂಸು’ ! ಹೊರಗಿನವರಿಗೆ ಕೇಳುವಂತೆ ಹೆಂಗಳೆಯರು ಉದ್ಗರಿಸಿದ್ದರು. ಮೂಡಣ ದಿಶೆಯಲ್ಲಿ ನಸುಕು ಕುಡಿದೋರಲು ಅಣಿಯಾಗಿತ್ತು. ಅದು ಬುಧವಾರದ ಮುಂಜಾವ ಬ್ರಾಹ್ಮೀಕಾಲ. ಕೂಸು ಜನಿಸಿದ ಕಾಲಕ್ಕೆ ಶ್ರವಣ ನಕ್ಷತ್ರ ಮೂರನೇ ಪಾದವಿತ್ತು. ಭಾರತೀಯ ಕಾಲಮಾನದಂತೆ ಶಾಲಿವಾಹನ ಶಕೆ 1789ರ ಪ್ರಭವ ಸಂವತ್ಸರ ಭಾದ್ರಪದ ಶುಕ್ಲ ತ್ರಯೋದಶಿ ಬುಧವಾರ ಶ್ರವಣ ನಕ್ಷತ್ರದಲ್ಲಿ ಕಾರಣಿಕ ಕೂಸು ಜನಿಸಿತ್ತು. ಕ್ರಿಸ್ತ ಶಕೆಯಂತೆ ಅದು 1867 ನೇ ಇಸವಿ.”

“ ಶ್ರೀ ಕುಮಾರೇಶರು ಅವತರಿಸಿದ್ದು ಧರ್ಮದ ಬುನಾದಿ ಸಡಿಲಗೊಂಡು ಸಮಾಜ ಇಬ್ಬಂದಿತನದಲ್ಲಿ ಮುಳುಗಿದ್ದ ಅತಂತ್ರ ಸ್ಥಿತಿಯನ್ನು ದೂರ ಮಾಡಲೆಂದು. ಒಬ್ಬೊಬ್ಬ ಸಂತ ಮಹನೀಯರ ಜೀವಿತವೂ ಒಂದೊಂದು ವೈಚಿತ್ರವನ್ನು ತೋರುವಂಥಹುದು. ಎಲ್ಲ ಯೋಗಿ ಮಹಾತ್ಮರೂ ಬೆಳಕಿನತ್ತ ಮುಖ ಮಾಡಿರುವಂಥವರೇ. ತನ್ನ ಮೋಕ್ಷವನ್ನಷ್ಟೇ ಗುರಿಯಾಗಿಸಿಕೊಂಡ ಸಾಧಕ ಜಗತ್ತಿಗೆ ಬೆಳಕು ತೋರಲಾರ; ಅಲ್ಲಿ ಸ್ವಾರ್ಥವೇ ಅಂತಿಮಗುರಿ. ಶ್ರೀ ಕುಮಾರೇಶರಂಥ ಶಿವಯೋಗಿವರ್ಯ ಅಂಥ ಸ್ವಾರ್ಥಕ್ಕೆ ದೂರರಾಗಿ ತನ್ನ ಬಳಿಗೆ ಬಂದವರಿಗೆ ಮಹಾಬೆಳಗಿನ ಹಾದಿ ಎಂಥಹುದೆಂಬುದನ್ನು ತೋರುತ್ತ ಆ ಪರಾತ್‍ಪರ ಪರಮನಿರಂಜನ ವಸ್ತುವಿನ ಕಾಣ್ಕೆಗೆ ಕಾರಣಿಕನಾಗಿ ಮೆರೆದ ಜ್ಯೋತಿಪುಂಗವ, ಈ ಜಂಗಮಜ್ಯೋತಿ ಲೋಕಕ್ಕೆ ಅವತರಿಸಿದ್ದು ಒಂದು ಬಡ ಕುಟುಂಬದಲ್ಲಿ .”

ಸರ್ವರಿಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೭ ನೆಯ ಜಯಂತಿ ಮಹೋತ್ಸವದ ಹಾರ್ದಿಕ ಶುಭ ವಂದನೆಗಳು

 

ಮುಖಪುಟ

ಶ್ರೀಕುಮಾರ ತರಂಗಿಣಿ  ಸಪ್ಟಂಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಂಕರ ಕಾಯೊ ಸದಾ ಕಿಂಕರನು |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಪರಳಿ ವ್ಯಾಜ್ಯದಲ್ಲಿ ಪ್ರಯತ್ನ-ಲೇಖಕರು-ಜ.ಚ.ನಿ
  4. ಮಹಾನುಭಾವಿ ಮೈಲಾರ ಬಸವಲಿಂಗ ಶರಣರು : ಶಾಪಗ್ರಸ್ಥರಲ್ಲ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  5. ನಡೆ-ನುಡಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಸಮಾಜದ ಕಣ್ಣುಗಳು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು :ಲೇಖಕ: ಶ್ರೀಕಂಠ.ಚೌಕೀಮಠ.

  1. ಹಾನಗಲ್ಲ ಕುಮಾರಸ್ವಾಮಿಗಳಿಗೆ ಪಾದಪೂಜೆ : ಕವಿ : ..ಡಾ. ಕಿರಣ ಪೇಟಕರ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

 

 

 

ಶಂಕರ ಕಾಯೊ ಸದಾ  ಕಿಂಕರನು |

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

  

ಶಂಕರ ಕಾಯೊ ಸದಾ  ಕಿಂಕರನು |

ಸಂಕಟವನು ದೂರಿಕರಿಸುತ   || ||

 

ಭೋಂಕನೆ ಮನದ , ಬಿಂಕವ ಬಿಡಿಸಿ |

ಅಂಕಿತದೊಳಗಿರಿಸಿ  ಕಿಂಕರರನು || ||

 

 ಪರತರ ಶಿವನೀ , ಗುರುಚರವೆನಿಸಿ |

 ನಿರುತದಿ ಸಂಚರಿಸಿ ಪರಿಪಾಲಿಸಿ  || ||

 

ಸಾಭಾರಿ ನಿರಾಭಾರಿ , ಗುರು ನೀನೆ |

ಲೋಭಾದಿಗಳನಳಿದು  ಲಾಭದಿಸುಳಿದು || ||

 

 ದೀಕ್ಷ  ಶಿಕ್ಷ ಮೋಕ್ಷ ಗುರು ನೀ ।

ದಕ್ಷನೆ ಮುಮ್ಮಲವ ಈಕ್ಷಿಸಿ ಕಳೆವ || ||

 

 ಕಾಮಕಾಲ ಮಾಯ , ಸೀಮೆಯ ಬಿಡಿಸಿ |

ಕಾಮಾರಿ ಗುರುವರನೆ  ಪ್ರೇಮದಿ ನೀನೆ || ||

 

 ಇಷ್ಟ ಪ್ರಾಣ , ಶ್ರೇಷ್ಠ ಭಾವದಿ ।

ಕಷ್ಟವನತಿಗಳೆದು  ಶಿಷ್ಟತನದಿ || ||

  

ತನು ಮೂರರಲಿ ಜನಿಪದೋಷವನು |

ಸನುಮತದಿಂದ ಕಳೆದು ತನುವಳಿದು || ||

  

ಸ್ವಯಚರಪರವು , ಭಯಲಯದಿರವು |

ಪಯಶೇಷಕರವಾಗಿ ದಯಯುತನಾಗಿ || ||

 

 ಶಿವಯೋಗಾಲಯ , ಭುವನದಿ ಮೆರೆಯುವ |

ತವೆ ಸಾಧನವಿರಿಸಿ  ನಿವಾಸಿಸಿ  || ||

 

 

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

  ಪರರ ಸಂಗವೆ ಕೆಟ್ಟ | ದುರಿತವೆಂದದ ಬಿಟ್ಟ

ವರ ಗುಹ್ಯ ದಿಟ್ಟ – ಗುರುಲಿಂಗವೆಂಬುದೆ-

ಚ್ಚರಗೊಟ್ಟ ಗುರುವೆ ಕೃಪೆಯಾಗು   ||೧೫೨||

ಎರಡನೆಯ ಕರ್ಮೇಂದ್ರಿಯ ಗುಹ್ಯ. ಇದಕ್ಕೆ ಗುಪ್ತಾಂಗವೆಂತಲೂ ಹೆಸರು, ಜೀವಾತ್ಮರ ಉತ್ಪತ್ತಿಗೆ ಕಾರಣವಾದುದು ಗುಹೇಂದ್ರಿಯವೇ. ಸಂಗಸುಖಕ್ಕೂ ಇದುವೇ ಮೂಲ. ಸಂಗವು ಸ್ವಸ್ತ್ರೀಯೊಡನಾದರೆ ದೋಷವಿಲ್ಲ. ಪರಸ್ತ್ರೀ ಸಂಗವು ದುರಿತಕ್ಕೆ ದಾರಿಮಾಡುವದು. ಪರಸ್ತ್ರೀಸಂಗವನ್ನು ಶರಣಬಳಗವು ಅತ್ಯಂತ ಕಟುವಾಗಿ ಖಂಡಿಸಿರುವದನ್ನು ೧೩೦ ನೆಯ ತ್ರಿಪದಿಯ ವಿವರಣೆಯಲ್ಲಿಯೂ ನೋಡಬಹುದು. ಪ್ರಾಸಂಗಿಕವಾಗಿ ಮತ್ತೆ ಕೆಲವು ವಚನಗಳನ್ನು ಉದಾಹರಿಸುವದು ಅಪ್ರಸ್ತುತವೇನಲ್ಲ.   ಪರಶಿವನಿಂದ ತವನಿಧಿ ಪಡೆದ ದೇವರದಾಸಿಮಯ್ಯನವರು –

ವೇಶಿಯ ಎಂಜಲ ತಿಂದು, ಈಶ್ವರ ಪ್ರಸಾದವ

ಭುಂಜಿಸಿದೊಡೆ ಓಸರಿಸಿತ್ತಯ್ಯ ಲಿಂಗವು

ಆತ ದ್ರೋಹಿ, ಭಾಷೆ ತಪ್ಪುಕನವನು

ಭವದಲ್ಲಿ ಬಳಲುವನು, ಅಂತಹನ ಕಂಡು

ಹೇಸಿ, ಕಡೆಗೆ ತೊಲಗಿದೆ ಕಾಣಾ ರಾಮನಾಥ |

ಭಕ್ತಿ ಭಾಂಡಾರಿ ಬಸವಣ್ಣನವರ ಆಪ್ತಕಾರ್ಯದರ್ಶಿ ಹಡಪದಪ್ಪಣ್ಣನವರು

ದಾಸಿಯಸಂಗ ಎರಡನೆಯ ಪಾತಕ

ವೇಶಿಯ ಸಂಗ ಮೂರನೆಯ ಪಾತಕ

ಮೀಸಲಳಿದ ಪರಸ್ತ್ರೀಯರ ಸಂಗ ಪಂಚ ಮಹಾಪಾತಕ,

ಇನಿಸು ಶಿವಭಕ್ತರಿಗೆ ಸಲ್ಲವು

ಇವನರಿದರಿದು ಮಾಡಿದನಾದರೆ ಯಮ ಪಟ್ಟಣವೆ ವಾಸವಾಗಿಪ್ಪರಲ್ಲದೆ

ಈ ದೇಶಕ್ಕೆ ಮರಳಿ ಬರಲಿಲ್ಲ. ನೋಡಾ

ಬಸವಪ್ರಿಯ ಕೂಡಲ ಚನ್ನಬಸವಣ್ಣ

 

ಭಕ್ತನಿಗೆ ವೇಶಿಯ ಸಂಗ, ದಾಸಿಯ ಸಂಗ, ಪರಸ್ತ್ರೀಯರ ಸಂಗ ಯಾವುದೂ ಉಚಿತವಲ್ಲ. ಈ ಸಂಗದಿಂದ ಪಂಚಮಹಾಪಾತಕವೇ ಪ್ರಾಪ್ತವಾಗುವದೆಂದು ಶರಣರು ಎಚ್ಚರಕೊಟ್ಟಿದ್ದಾರೆ. ಅದುಕಾರಣ ಪರಸ್ತ್ರೀಸಂಗವು ಬಹುಕೆಟ್ಟದ್ದು ಮತ್ತು

ದುರಿತಕಾರಕವೆಂದು ಅರಿತು ಅದರಿಂದ ದೂರವಾಗಿರಬೇಕು. ಇಲ್ಲವಾದರೆ ಇಂಥವರಿಗೆ ಯಮಪುರದ ವಾಸವೇ ಸ್ಥಿರವಾಗುವದು. ರೌರವನರಕದಲ್ಲಿ ಬಿದ್ದು ದುಃಖಿಯಾಗಬೇಕಾಗುವದು. ಪರಸ್ತ್ರೀ ಸಂಗದಿಂದ ದೂರಾದವರ ಗುಹ್ಯವೇ ಶ್ರೇಷ್ಠವೆನಿ

ಸುವದು. ಅದುವೆ ದಿಟ್ಟತನದ ಪ್ರತೀಕ. ಯಾಕಂದರೆ ರಾಷ್ಟ್ರಕವಿ ಕು.ವೆಂ.ಪು. ಇವರು

‘ರಾಮಾಯಣ ದರ್ಶನ’ದಲ್ಲಿ “

ಇಂದ್ರ ವಿಜಯಿಗಿಂ ನೂರ್ಮಡಿ ವೀರವಿಕ್ರಮಿಯಲ್ತೆ ಇಂದ್ರಿಯ ವಿಜಯಿ”

 

ಅರಣ್ಯವಾಸದಲ್ಲಿ ಬ್ರಹ್ಮಚಾರಿಯಾದ ಲಕ್ಷ್ಮಣನು ಇಂದ್ರ ವಿಜಯಿಯಾದ. ಇಂದ್ರಜಿತ್ (ರಾವಣನ ಮಗ) ನನ್ನು ಜಯಿಸಿದಾಗ ಅವನನ್ನು ಪ್ರಶಂಸಿಸುತ್ತ ಬರೆದ ಮಹಾಕಾವ್ಯವಿದಾಗಿದೆ. ಇಂದ್ರಿಯ ವಿಜಯಿಯಾದವನೇ ಮಹಾವೀರ. ಅಂತೆಯೇ ಶಿವಕವಿಯ ದಿಟ್ಟ ಗುರುಲಿಂಗ’ ವೆಂದು ಉದಾಹರಿಸಿದ್ದು ಅತ್ಯಂತ ಮನನೀಯವಾಗಿದೆ.

ಇಂಥ ವೀರತ್ವವನ್ನೇ ಸಾಧಿಸಬಲ್ಲ ಗುಹೇಂದ್ರಿಯದಲ್ಲಿ ಗುರುಲಿಂಗವನ್ನು ಸಾಧಿಸಬೇಕು. ಅಳವಡಿಸಿಕೊಳ್ಳಬೇಕು ಎಂದು ಗುರುನಾಥನು ಶಿಷ್ಯನಿಗೆ ಎಚ್ಚರ ಕೊಡುತ್ತಾನೆ. ಸಮಯೋಚಿತ ಎಚ್ಚರಿಕೆಯನ್ನು ನೀಡುವ ಆತ್ಮೀಯ ಗುರುವೆ ! ಕೃಪೆದೋರು.

 

ಬಿಡದೆ ಸತ್ಪಥಮಾರ್ಗ | ನಿಡಿದು ತಾ ನುಡಿದಂತೆ

ನಡೆವ ಪಾದವು ತಾ-ಮೃಡನು ಶಿವಲಿಂಗವೆಂದು

ನುಡಿದ ಶ್ರೀಗುರುವೆ ಕೃಪೆಯಾಗು   ||೧೫೩||

 

ಪಾದಗಳೆರಡು ಮೂರನೆಯ ಕರ್ಮೇದ್ರಿಯಗಳು. ಪಾದಗಳಿಂದ ಚಲನ- ವಲನ ನಡೆಯುವದು. ನಡೆಯುವದು ಪಾದಗಳ ಕರ್ಮವಾದರೂ ಅದು ಸತ್ಕರ್ಮವಾಗಬೇಕು. ಸಾರ್ಥಕವಾಗಬೇಕು. ವ್ಯರ್ಥವಾದ ನಡೆಯಾಗಬಾರದು. ನಡೆಯ ಅರ್ಥ ನುಡಿಯಲ್ಲಿದೆ.

ಪಾದಗಳು ಕ್ರಿಯಾದ್ಯೋತಕವೆಂದು ಅರಿತಿದ್ದೇವೆ. ಪಾದಗಳಿಂದಲೇ ಗಮನಾಗಮನಗಳನ್ನು ಸಾಧಿಸಲು ಬರುವದು. ಓಟಗಳ ಪಂದ್ಯಗಳಲ್ಲಿ ಪಾದಗಳ ಪಾತ್ರ ಬಹು ಮುಖ್ಯವಾದುದು. ಬಂಧುರ ಕಾಲುಗಳುಳ್ಳ ಪ್ರಾಣಿಗಳು ಅತ್ಯಂತ ವೇಗದಲ್ಲಿ ಓಡುತ್ತವೆ. ಅವುಗಳಲ್ಲಿ ಕುದುರೆ ಮತ್ತು ಜಿಂಕೆಗಳು ಮುಖ್ಯ ಪ್ರಾಣಿಗಳು. ಓಟಗಳ ಸ್ಪರ್ಧೆ ಜಾಗತಿಕವಾಗಿ ನಡೆಯುತ್ತದೆ. ಓಲಿಂಪಿಕ್ ಸ್ಪರ್ಧೆಗಳಲ್ಲಿ ೨೬ ಮೈಲು (ಮ್ಯಾ ರೇಥಾನ) ಇತಿಹಾಸವಿದೆ. ಇದುವೆ ಅತ್ಯಂತ ಕಠಿಣ ಪಂದ್ಯವೆನಿಸುವದೆಂದು ಕ್ರೀಡಾಪಟುಗಳ ಅಭಿಪ್ರಾಯ .

ಓಟದ  ಸ್ಪರ್ಧೆಗಳು ಜೀವನ ಶ್ರೇಯಸ್ಸಿಗೆ ಕಾರಣವಾಗಬಹುದು. ಆದರೆ ಆತ್ಮೋನ್ನತಿಯತ್ತ ತಿರುಗಿದರೆ ಅದನ್ನು ಸಾಧಿಸಬಹುದು. ಆತ್ಮೋನ್ನತಿಗೆ ನಡೆ-ನುಡಿಗಳ ಹೊಂದಾಣಿಕೆಯೇ ಮುಖ್ಯ. ಅದ ಕಾರಣ ನಡೆಗೆ ಕಾರಣವೆನಿಸಿದ ಪಾದಗಳು ಸತ್ಪಥವನ್ನು ಬಿಡದಂತೆ ಸನ್ಮಾರ್ಗದಲ್ಲಿ ನಡೆಯಬೇಕು. ಮಹಾತ್ಮರ ನಡೆಯನ್ನು ಅನುಸರಿಸಿ ನಡೆಯಬೇಕು. ಸಜ್ಜನರ ನಡೆಯಲ್ಲಿ ಶಿವನಿರುತ್ತಾನೆಂಬ ಸರ್ವಜ್ಞನ ಈ ಮಾತು ಮನೋಜ್ಞವಾಗಿದೆ –

 

ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ

ಸಜ್ಜೆಯಲ್ಲಿ ಶಿವನ ಧರಿಸಿಪ್ಪ ಶರಣರ

ಹೆಜ್ಜೆಯಲಿ ನಡೆಯೋ ಸರ್ವಜ್ಞ

 

ಸಜ್ಜನರ ನಡೆಯನ್ನು ಅನುಸರಿಸುವಲ್ಲಿ ನಾಚಿಕೆಯನ್ನು ತೊರೆದು ಮುನ್ನಡೆಯಬೇಕು ನಿಜಗುಣರು ಶಿವನಲ್ಲಿ –

 

“ಶಾಂತರೊಸೆದಹುದೆಂದು ಬಣ್ಣಿಸುವ ವರ್ತನವನ್ನೇ ಬೇಡಿದ್ದಾರೆ.

ಇದುವೆ ನಿಜವಾದ ನಡೆಯಾಗಿದೆ. ಆಗ “ನುಡಿದಂತೆ ನಡೆ ಇದೇ ಜನ್ಮಕಡೆ” ಎಂಬ ಶರಣವಾಣಿ ಯಥಾರ್ಥವಾಗಿ ತೋರುವದು. ಮಹಾತ್ಮರ ನಡೆಯನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೂ ಸ್ವಲ್ಪಾದರು ಆಚರಿಸಲು ಪ್ರಯತ್ನಿಸುವವನಿಗೂ ಕೇಡಿಲ್ಲ. ಅದುಕಾರಣ ಮಹಾನುಭಾವರು ತೋರಿಸಿದ ಸನ್ಮಾರ್ಗವನ್ನು ಚಾಚೂ ತಪ್ಪದಂತೆ ನಡೆಯಬೇಕು. ಇಂಥ ನಡೆಯಲ್ಲಿ ಶಿವನು ಮನೆ ಮಾಡಿಕೊಂಡಿರುವನಲ್ಲದೆ ಶಿವಲಿಂಗದ ಸಾಕ್ಷಾತ್ಕಾರವಾಗುವದೆಂದು  ಶ್ರೀಗುರುರಾಯನು ಮನೋಜ್ಞವಾಗಿ ನುಡಿಯುತ್ತಾನೆ. ಶ್ರೀಗುರುವಿನ ತೇಜೋಮಯ ಶಿವಲಿಂಗದ ದರ್ಶನವಾಗಬಲ್ಲದು. ಓ ಗುರುವೆ ! ಎನ್ನ ಪಾದಂಗಳಲ್ಲಿ ಶಿವಲಿಂಗವನ್ನು ಕಾಣುವ ಒಳ್ನಡೆಯನ್ನು ಕರುಣಿಸು.

ಲೇಖಕರು: ಜ.ಚ.ನಿ

 

“ ತಮಗಡಸಿದೆಡರ ನೀಕ್ಷಿಸ

ದೆ ಮಹಾಂತರ್ ಪೆರರ ಸಂಕಟಮನಪಹರಿಪರ್

ಹಿಮರುಚಿ ತನ್ನಯ ಮರ್ಬಂ

ತೆಮರದೆ ತಿರೆಯೊಳ್‌ ತಗುಳ್ದ ತಮಮಂ ತವಿಪಂ”

– ನೀತಿ ಮಂಜು

ಸ್ವಾಮಿಗಳವರು ಸಮಾಜ ಜೀವಿಗಳು. ಸತ್ಯಪ್ರೇಮಿಗಳು. ಸಮಾಜಕ್ಕೆ ಎಲ್ಲಿ ಯಾವ ಮೂಲೆಯಲ್ಲಿ ಪರಾಕ್ರಮಣ ನಡೆದರೂ ಅದನ್ನು ಸಹಿಸುತ್ತಿರಲಿಲ್ಲ. ಇನ್ನು ದುರಾಕ್ರಮಣ ನಡೆದರೆ ಕೇಳಬೇಕೆ ? ತಮಗಿರುವ ತೊಡರುಗಳನ್ನು ನೋಡುತ್ತಿರಲಿಲ್ಲ. ಶ್ರಮವಿಭಾಗವನ್ನೂ ಲೆಕ್ಕಿಸುತ್ತಿರಲಿಲ್ಲ. ವಾಯುವೇಗದಿಂದ ಅಲ್ಲಿಗೆ ಹೋಗಿ ಅದನ್ನು ತಡೆಗಟ್ಟುತ್ತಿದ್ದರು.

ಒಮ್ಮೆ ಹೈದರಾಬಾದ ಪ್ರಾಂತ್ಯದಲ್ಲಿದ್ದ ಪರಳೀ ವೈದ್ಯನಾಥ ಲಿಂಗದ ಪೂಜಾಧಿಕಾರದ ವ್ಯಾಜ್ಯ ಪ್ರಾರಂಭವಾಯಿತು. ಪರಕೀಯರು ಪೂಜಾಧಿಕಾರವನ್ನು ಆಕ್ರಮಿಸುವ ಸಾಹಸ ಮಾಡಿದರು. ಈ ಸಂಗತಿ ಎಲ್ಲೆಲ್ಲಿಯು ಹಬ್ಬಿತ್ತು. ಇದನ್ನು ಕೇಳಿ ‘ಸ್ವಾಮಿಗಳವರಿಗೆ ಸಮಾಧಾನವಾಗಲಿಲ್ಲ. ಶರೀರದಲ್ಲಿ ಸ್ವಾಸ್ಥ್ಯವಿಲ್ಲದಿದ್ದರು ಆ ಕ್ಷಣದಲ್ಲಿಯ ಅನೇಕ ಧರ್ಮಗ್ರಂಥಗಳನ್ನು ತೆಗೆದುಕೊಂಡು ಹತ್ತು ಹನ್ನೆರಡು ಮಂದಿ ಪಂಡಿತರನ್ನು ಕರೆದುಕೊಂಡು ಹೋಗಿ ವಾದ ಕ್ಷೇತ್ರಕ್ಕೆ ನೆರವಾದರು.

ಬರೀ ವೈದ್ಯನಾಥಲಿಂಗ ಪೂಜಾ  ವಿಷಯ ಒಂದಾಗಿದ್ದರೆ ಹೇಗೋ ಆಗಬಹುದಿತ್ತು.  ಜೊತೆಗೆ ಜಾತಿವಾದ ಮುಂದೆ ಬಂದಿತ್ತು. ಅಂತ್ಯಜ ಅಗ್ರಜ ಎಂಬ ಕೀಳು  ಭಾವ ಬಲಿತಿತ್ತು. ವೀರಶೈವರು ಅಂತ್ಯಜ (ಶೂದ್ರ)ರೆಂಬ ವಾದ ವಿಪರೀತಕ್ಕೇರಿತ್ತು. ಸ್ವಾಮಿಗಳವರಿಗೆ ಇದು ಸಹಿಸಲಿಲ್ಲ. ಇದಕ್ಕಾಗಿಯೆ ಈ ಹೊಲಸು ಕಳೆಯಲಿಕ್ಕಾಗಿ ಆವೇಗದಿಂದ ಆವೇಶದಿಂದ ಹೊರಟು ಹೋಗಿ ವಾದದಲ್ಲಿ  ಬಾಗಿಗಳಾದರು.

ವಾದ ಬೇಗ  ಹರಿಯಲಿಲ್ಲ. ೩-೪ ತಿಂಗಳ ಕಾಲ ಮುಂದುವರೆಯಿತು. ವಾದ ಕೇಳುವ ವ್ಯಾಜ್ಯನೋಡುವ ಕುತೂಹಲದಿಂದ ಅನೇಕ ಸಾವಿರ ಜನರು ಸೇರಿದ್ದರು. ಅವರೆಲ್ಲರ ಊಟೋಪಚಾರ ವೆಚ್ಚವನ್ನು ಶ್ರೀಗಳವರ ನಿರ್ವಹಿಸಬೇಕಾಯಿತು.  ತಂದ ಹಣ ತೀರಿಹೋಗಿತ್ತು. ಕೈಯಲ್ಲಿ ಕಾಸಿರಲಿಲ್ಲ. ಹೇಗೆ ಮಾಡುವದು, ಯೋಚಿಸಲಿಲ್ಲ. ತಕ್ಷಣದಲ್ಲಿಯೆ ಸುತ್ತು ಮುತ್ತಹೋಗಿ ಭಿಕ್ಷೆಯಿಂದ ಬೇಕಾದಷ್ಟು ಹಣ ತಂದರು. ಕೊನೆಯವರೆವಿಗು ಬಂದವರ ಯೋಗಕ್ಷೇಮವನ್ನು ನಿತ್ತರಿಸಿದರು. ಸ್ವಾಮಿಗಳವರದು ಅಕ್ಷಯ ಪಾತ್ರೆ; ಅಮೃತ ಹಸ್ತ ಅಂದ ಮೇಲೆ ಕೊರತೆಯ ಮಾತೇಕೆ?

ಈ ವ್ಯಾಜ್ಯದಲ್ಲಿ ಉಂಟಾದ ಸ್ವಾಮಿಗಳವರ ಕಷ್ಟ-ನಷ್ಟ ಅಪಾರವಾದದ್ದು. ಆದರೂ ಯೋಚನೆ ಸ್ವಾಮಿಗಳವರಲ್ಲಿ ಇರಲಿಲ್ಲ. ನಿರ್ಣಯವು ಸಮಾಜದಂತಾದ ಸಂಗತಿಯು ತಿಳಿದೊಡನೆ ಸ್ವಾಮಿಗಳವರಿಗೆ ಸಂತೋಷವುಂಟಾಯಿತು. ಆ ಕಷ್ಟ ನಷ್ಟಗಳು ತುಂಬಿ ಬಂದವು. ಅನೇಕ ಕಡೆಗಳಿಂದ ಪ್ರಶಂಸಾ ಪತ್ರಗಳು ಸ್ವಾಮಿಗಳವರಿಗೆ ಬಂದವು. ವ್ಯಾಜ್ಯದ ಸಮಯದಲ್ಲಿ ಮುಕ್ತ ಹಸ್ತದಿಂದ ಸಹಾಯಮಾಡಿದವರಿಗೆ ಪ್ರಶಸ್ತಿ ಪ್ರದಾನದಿಂದ ಸಂತೋಷ ಪಡಿಸಿದರು. ಶುಭಾಶೀರ್ವಾದ ಮಾಡಿದರು.

ಕುಮಾರಯೋಗಿಯು ಪರಳೀ ವ್ಯಾಜ್ಯದ ಪ್ರಭಾಕರ ! ಅಹುದು. ಪರಮ ಪೂಜ್ಯರು ಆ ಭಗೀರಥ ಪ್ರಯತ್ನ ಪಡದಿದ್ದರೆ ಆ ವಿಜಯದ ಬೆಳಕು ಸಮಾಜಕ್ಕೆಲ್ಲಿ ಹೇಗೆ ದೊರಕುತ್ತಿತ್ತು? ಕುಮಾರಯೋಗಿಗಳಂತಹ ಸಾಹಸಿಗಳನ್ನು ಸಹಾಯಕಾರಿಗಳನ್ನು ಪಡೆದ ಸಮಾಜವೆ ಧನ್ಯ. ಅದುವೆ ಮಾನ್ಯ. ಅವರೆ ಅದಕೊಂದು ಭವ್ಯಭಾಗ್ಯ; ದಿವ್ಯ ಸಂಪತ್ತಿ.

ಲೇಖಕರು: : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

ಅನುಭಾವ ಅನುಭಾವವೆಂದೆಂಬಿರಿ

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿಭೋ  !

ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿಭೋ  !

ಅನುಭಾವವೆಂಬುದು ಅಂತರಂಗದ ರತ್ನ ಕಾಣಿಬೋ  !

ಮತ್ತು – ಭಕ್ತಿಗೆ ಅನುಭಾವವೆ ಬೀಜ ಕಾಣಿರೋ ;

ಭಕ್ತಿಗೆ ಅನುಭಾವವೆಚಾರ ಕಾಣಿರೋ

 

ಚನ್ನಬಸವಣ್ಣನವರ ಈ ನುಡಿಗಡಣ ಅನುಭಾವದ ನಿಲವನ್ನು ಹಾಗೂ ಅನುಭಾವವೇ ಭಕ್ತಿಗೆ ಮೂಲವೆಂಬುದನ್ನು ಪ್ರತಿಪಾದಿಸಿದೆ. ಅನುಭವಜನ್ಯವಾದ ಅನುಭಾವ, ನೆಲದ ಮರೆಯ ನಿಧಾನ, ಅತು ಕಂಡ ಕನಸು, ಅದು ಅಂತರಂಗದ ರತ್ನ, ಇಂಥ ಅನುಭಾವದ ನಿಲವಿನಲ್ಲಿ ಹಾಡುಗಬ್ಬಗಳನ್ನು ರಚಿಸಿದ ನಿಜಗುಣರು, ಸರ್ಪಭೂಷಣರು, ಮುಪ್ಪಿನ ಷಡಕ್ಷರಿಗಳು ಮತ್ತು ಬಾಲಲೀಲಾ ಮಹಾಂತರು ಪ್ರಸಿದ್ಧಿಯನ್ನು ಪಡೆದಿರುವಂತೆ ಮೈಲಾರಂಗವಲಿಂಗ ಶರಣರೂ ಪ್ರಖ್ಯಾತರು. ಕೇವಲ ಭಕ್ತಿಯ ಉದ್ರೇಕ ಹಾಗೂ ತಾತ್ಕಾಲಿಕ ಸ್ಫೂರ್ತಿಯ ಪ್ರಭಾವದಿಂದ ಪದ್ಯಗಳನ್ನು ರಚಿಸಿದವರು ಪಡಕ್ಷರಿಗಳು ; ಬಾಲಲೀಲಾ ಮಹಾಂತರು ಮತ್ತು ಘನಮಠದಾರ್ಯರು. ಆದರೆ ನಿಜಗುಣರಾಗಲಿ, ವಲಿಂಗ ಶರಣರಾಗಲಿ ಹಾಗಲ್ಲ. ತಮ್ಮ, ಸಾಸ್ತ್ರ, ಆಚಾರ, ಅನುಭವ ಇವೆಲ್ಲವು ಗಳನ್ನು ತಾವು ಮೈಗೂಡಿಸಿಕೊಂಡು ಇತರರಿಗೆ ಅಧಿಕಾರವಾಣಿಯಿಂದ ತಿಳಿಯು ವರತೆ ಪದ ಶ್ರೀಯನ್ನು ಇವರಿಬ್ಬರದು, ಅದರಲ್ಲೂ ಬಸವಲಿಂಗ ಶರಣರು ವೀರಶೈವ ತತ್ತ್ವಸಿದ್ಧಾಂತವನ್ನು ಸುಂದರವಾಗಿ, ಸುಬಂಧುರವಾಗಿ ಹಾಡುಗಬ್ಬಗಳಲ್ಲಿ ಕಟ್‌ಪದಿಗಳಲ್ಲಿ ಹೆಣೆದವರು.

 

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹೆಸರಾಂತ ಹಳ್ಳಿ ಮೈಲಾರ. ಇಲ್ಲಿ ಶಿವಭಕ್ತಮನೆತನಕ್ಕೆ ಸೇರಿದ ಹರದ ವೃತ್ತಿಯ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಚೆನ್ನವೀರ ಶಿವಯೋಗಿಗಳಿಂದ ಅನುಗ್ರಹೀತರಾದವರು. ಅನುಭಾವವನ್ನು ಪಡೆದವರು. ಪೂಜ್ಯ ಮಹಾಸ್ವಾಮಿಗಳು ಹಳ್ಳಿಯಲ್ಲಿ ವೀರಶೈವ ವಿದ್ಯಾಕೇಂದ್ರವನ್ನು ತೆರೆದು ತಾವೊ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವುಳ್ಳ ತತ್ತ್ವಪುರುಷರಾಗಿದ್ದವರು. ಬಸವಲಿಂಗ ಶರಣರ ವಾಣಿಯಲ್ಲಿ ಗುರು ಗರಿಮೆ ಪ್ರತಿಮಿಸಿದೆ; ವ್ಯಕ್ತಿತ್ವ ಪ್ರತಿಬಿಂಬಿಸಿದೆ..

 

ಸೃಷ್ಟಿಯೊಳಗುದಿಸಿದ ಶರಣರಿ

ಗಿಷ್ಟ ಸಿದ್ಧಿಯನ್ನು ಪಾಲಿಸು

ವಷ್ಟವರುಣ ಸ್ವರೂಪ ಚನ್ನವೀರ ನಮೋ  (ಶಿ, ದರ್ಪಣ ೬೯)

ಮತ್ತು – ನೂರೊಂದು ಸ್ಥಲದ ವಿಚಾರ ವಿಗ್ರಹ ಚನ್ನ

ವೀರ ಮದ್‌ಗುರು ಲಿಂಗ ಜಂಗಮದಂಘ್ರಿಗಳೆನ್ನ ಸಲುಹಲಿ

ತಾನೆ ಒಲಿಯಲಿ (ಶಿ. ದ. ೨೧)

 

ಅಚ್ಚವೀರಶೈವ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಸವಲಿಂಗ ಶರಣರು ಗುರು-ಲಿಂಗ-ಜಂಗಮರ ಹೊರತಾಗಿ ಅನ್ಯದೈವದ ಹೆಸರನ್ನು ಸಹ ಉಚ್ಚರಿಸದಷ್ಟು ನಿಷ್ಠಾವಂತರಾಗಿದ್ದರು. ಅಷ್ಟೇ ಏಕೆ ? ಈ ಪೂಜ್ಯತ್ರಯರಿಗಿಂತಲೂ ಶಿವನು ಅಧಿಕನಲ್ಲ ವೆಂಬುದನ್ನು ನಿರಾಭಾರಿ ವೀರಶೈವ ಸಿದ್ಧಾಂತ” ಕೃತಿಯಲ್ಲಿ ನಿರ್ಭಯವಾಗಿ ಹಾಗೂ ತಾತ್ವಿಕವಾಗಿಯೂ ಪ್ರತಿಪಾದಿಸಿದ್ದಾರೆ. ಶರಣರ ತಾತ್ವಿಕ ಹಿನ್ನೆಲೆಯಲ್ಲಿ ವಿಮರ್ಶಾ ಶಕ್ತಿಯೂ ಅಪಾರವಿದೆ. ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು.

 

೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಬಸವಲಿಂಗ ಶರಣರು ಮೈಲಾರದ ಮೈಲಾರಲಿಂಗ ದೇವಸ್ಥಾನದ ಮುಂಭಾಗದಲ್ಲಿಯೇ ವ್ಯಾಪಾರವನ್ನು ಅರ್ಧಗಾಣಿಯ ಸೋಲು-ಗೆಲುವುಗಳಿಲ್ಲದೆ, ಆಶೆ-ಆಮಿಷಕ್ಕೆ ಒಳಗಾಗದೆ ಸತ್ಯ ಶುದ್ಧ ಕಾಯಕ ನಡೆಸುತ್ತಿದ್ದರು. ಆಗಾಗ ನಾಡಿನ ಪ್ರಸಿದ್ಧ ವ್ಯಾಪಾರಿ ಕೇಂದ್ರಗಳೆನಿಸಿದ ಸವಣೂರು, ಹುಬ್ಬಳ್ಳಿ, ಇಕ್ಕೇರಿ ಮೊದಲಾದ ಪಡಿಮೂಲೆ ಸ್ಥಳಗಳಲ್ಲಿ ಸರಕುಗಳನ್ನು ತರುತ್ತಿದ್ದುದು ಅವರ ಕೃತಿಗಳಿಂದ ಧ್ವನಿತವಾಗುತ್ತದೆ. ಗಿರಾಕಿಗಳೆಷ್ಟೇ ಇದ್ದರೂ ನಿರ್ದಿಷ್ಟ ವ್ಯಾಪಾರವಾದ ಬಳಿಕ ಆಧ್ಯಾತ್ಮ ವ್ಯವಹಾರದಲ್ಲಿ ತೊಡಗುತ್ತಿದ್ದರು. ಲಿಂಗಾರ್ಚನೆಗೈದು ಜಂಗಮ ತೃಪ್ತಿಗೊಳಿಸುತ್ತಿದ್ದರು. ತಾತ್ವಿಕ ಅನುಭಾವ ಚಿಂತನೆಯಲ್ಲಿ ಕಾಲ ಕಳೆಯುವರು. ಆರ್ಚನ ಅರ್ಪಣ ಅನುಭಾವ ಮಾಡುವದೆ ಶರಣ ಧರ್ಮ, ವೀರಶೈವನ ನಿಜಾಚರಣೆ.

ಮೈಲಾರಲಿಂಗ ದೇವಸ್ಥಾನಕ್ಕೆ ಬರುವ ಗೊರಪ್ಪಗಳ ವಿಚಿತ್ರ ವೇಷ-ಭಾಷೆ ಆಚರಣೆಗಳಿಂದ ಬಸಪ್ಪನಿಗೆ ಅನುಕಂಪ, ಏಕೆಂದರೆ, ವೀರಶೈವ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದು ಬಂದ ಈತನಿಗೆ ಗೊರಪ್ಪಗಳ ಸಂಗ ಹಿಡಿಸಲಿಲ್ಲ. ಈ ಸಂಗತಿ ಇವರ ಅನುಭಾವ ಜೀವನದ ಶಿವಾನುಭವದರ್ಪಣದ ಪದ್ಯಗಳಿಂದ ವೇದ್ಯವಾಗದೆ ಇರದು. ಗೊರಪ್ಪಗಳ ಪವಾಡ ಕಾರಣೀಕ ಮೊದಲಾದ ಅಸಹಜ ಜೀವನಕ್ಕೆ ಮನಸೋಲಲಿಲ್ಲ. ತನ್ನ ಅನುಭಾವದಿಂದ ನಿಜವಾದ ಮೈಲಾರ ಲಿಂಗನಾರು ? ತೇರಾವುದು ? ಕಾರಣೀಕವಾವುದು ? ಎಂಬುದನ್ನು ಈ ಪದ್ಯಗಳಿಂದ ತಿಳಿಸುತ್ತಾರೆ. ನೋಡಿ.

 

ನೋಡಿರಮ್ಮ ಮೈಲಾರಲಿಂಗನ ಜಾತ್ರೆಯಾಗುತ್ತಿದೆ

ನಾಡ ಜನರಿಗೆ ತಿಳಿಯದು ಇದರ ಗೋಪ್ಯ ಬೇರಿದೆ   ||ಪಲ್ಲವಿ  ||

ತವೆ ಏಳ್ಕೋಟಿಗೆಮಿಗೆ ಮಂತ್ರವನುವ ಗೊರವರೊಪ್ಪುತಾರೆ

ಶಿವನಿಂದಕರೆದೆ ದಲ್ಲಣ ಕಡುಗಲಿ ವೀರರೆಸೆವುತಾರೆ

ಇವರೊಳಧಿಕ ಗುರುಚನ್ನವೀರ ಮೈಲಾರ ಲಿಂಗವಹರೆ  (ಪದ್ಯ ೫೧)

 

ಮತ್ತು – ನಂಬುವುದೆಮ್ಮ ಮೈಲಾರಲಿಂಗನ ಸೊಲ್ಲ ಕೇಳಿ ಕೇಳಿ,

ಢಂಭಕ ಮಾತಲ್ಲ ಕಾರಣಿಕನೆ ಬಲ್ಲ ಕೇಳಿ ಕೇಳಿ     ||ಪಲ್ಲವಿ)

ಪರತತ್ವದಿರವೆಮ್ಮ ಗೊರವನ ಶೌರ್ಯ ನವ ಕೇಳಿ ಕೇಳಿ   (ಪದ್ಯ ೫೨)

 

ನಿಜವಾದ ಮೈಲಾರಲಿಂಗನ ಜಾತ್ರೆಯ ಅರಿವು ಜನಸಾಮಾನ್ಯರಿಗೆ ಆಗುವದಿಲ್ಲ. ಏಳುಕೋಟಿ ಮಂತ್ರಗಳಿಗೆ ಮಂತ್ರರಾಜನೆನಿಸಿದ ಷಡಕ್ಷರ ಮಹಾಮಂತ್ರವನ್ನು ಬೋಧಿಸಬಲ್ಲ ಸದ್ಗುರುನಾಥನೇ ಮೈಲಾರಲಿಂಗ. ಮಲತ್ರಯಗಳನ್ನು ಕಳೆದು ತಾಪತ್ರಯಗಳನ್ನು ನಿವಾರಿಸಬಲ್ಲ ವೀರನೇ ಗುರು ಚನ್ನವೀರರು. ಇವರೇ ಹರ ನಿಂದಧಿಕರೆಂದು ಭಾವಿಸಿ ಪ್ರತಿದಿನವೂ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಗುರುಕುಲಕ್ಕೆ ತಪ್ಪದೆ ಆಗಮಿಸಿ ಶಿವಾನುಭವ ಗೋಷ್ಠಿಯಲ್ಲಿ ಕಾಲ ಕಳೆಯ ಹತ್ತುವರು. ಈ ಆಶ್ರಮ ಆ ಕಾಲದಲ್ಲಿ ಆಧ್ಯಾತ್ಮಿಕ ಮಹಾಕೇಂದ್ರವಾಗಿತ್ತು. ನಾಡಿನ ಅನೇಕ ಸಾಧಕರು ಇಲ್ಲಿಗೆ ಆಗಮಿಸಿ ತಮ್ಮ ಸಾಧನೆಯನ್ನು ಸದ್ಗುರು ಸನ್ನಿಧಿಯಲ್ಲಿ ಸಾರ್ಥಕಗೊಳಿಸುತ್ತಿದ್ದರು.

 

ಅರಸುತಿಹ ಲತೆ ಕಾಲ್ದೊಡಗಿದಂತೆ, ಬಡವರ ಮನೆಗೆ ಭಾಗ್ಯನಿಧಿ ದೊರೆತಂತೆ ಜಂಗಮ ಪುಂಗವರಾದ ಚನ್ನವೀರ ಮಹಾಶಿವಯೋಗಿಗಳ ಆಗಮನದಿಂದ ಶರಣರಿಗೆ ಅತ್ಯಾನಂದವನ್ನುಂಟು ಮಾಡಿತ್ತು. ವೀರಶೈವ ಸಂಸ್ಕೃತಿಯೇ, ಸಿದ್ಧಾಂತವೇ ಮೂರ್ತಿ ಮತ್ತಾದ ಈ ಪರಮ ಪೂಜ್ಯರಿಂದ ಅನುಗ್ರಹೀತರಾಗಿ ಪಾವನಾಂಗರೆನಿಸಿದರು ಶರಣರು, ಗುರುಸೇವೆಯಲ್ಲಿ ನಿರತರಾಗಿ ಕಿಂಕರತ್ವವನ್ನು ಅಳವಡಿಸಿಕೊಂಡು ಕಾಯಕ ಗೈಯುತ್ತ ಮಹಾದಾಸೋಹಿಯಾದರು.

 

ಹೀಗೆ ಹಿರಿಯ ಸಾಧಕರಾದ ಬಸವಲಿಂಗ ಶರಣರು ಹೊಸದಾಗಿ ಗುರುಕುಲಕ್ಕೆ ಆಗಮಿಸುತ್ತಿದ್ದ ಸಾಧಕವಟುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಚರಣೆಗೆ ತಕ್ಕ ನಡೆಯನ್ನು ಕಲಿಸುತ್ತಿದ್ದರು. ನಡೆಯಿಲ್ಲದ ಡಂಭಾಚಾರದ ವೇಷವನ್ನು ತೆಗೆಯಿಸಿ ನಡೆ-ನುಡಿ ಸಮನ್ವಯಗೊಂಡ ಮೇಲೆ ಗುರುಗಳಿಂದ ಕಾಷಾಯಾಂಬರವನ್ನು ಕೊಡಿಸುತ್ತಿದ್ದರು. ಕುಶಾಗ್ರಮತಿಗಳಾದ ಶರಣರು ಸುಮ್ಮನೆ ಕಾಲ ಕಳೆಯದೆ ಶರಣ ಸಾಹಿತ್ಯವನ್ನು, ಸಂಸ್ಕೃತ ವಾಙ್ಮಯವನ್ನು ಮತ್ತು ಕನ್ನಡ ಕಾವ್ಯಗಳನ್ನು ಅಭ್ಯಸಿಸು ತಿದ್ದರು. ಪೂಜ್ಯ ಗುರುಗಳ ಅನುಭಾವಪೂರ್ಣ ಪ್ರವಚನಗಳನ್ನು ಮನವಿಟ್ಟು ಆಲಿಸುತ್ತಿದ್ದರು. ನಡೆ ನುಡಿಯಲ್ಲಿ ಚನ್ನರಾದ ಚನ್ನವೀರರ ನಡೆಯೇ ಶರಣರಿಗೆ ಮಾರ್ಗದರ್ಶಿಯಾಗಿತ್ತು. ಶ್ರೀಗಳ ಹಿರಿಯ ಶಿಷ್ಯರಾದ ಗವಿಯ ಶಾಂತವೀರ ಸ್ವಾಮಿಗಳಿಂದಲೂ ಶರಣರು ಅನುಭಾವ ಪಡೆದಿದ್ದರು, ಈ ಮಾತನ್ನು ಅವರ ಪದ್ಯದಲ್ಲಿ ಕಾಣಬಹುದು.

 

ಬಸವಲಿಂಗ ಶರಣರು ಅಚ್ಚಗಣಾಚಾರಿಗಳಾಗಿದ್ದರು. ಹಾಗೆಯೇ ಲಿಂಗಾಚಾರಗಳೂ ಹೌದು. ಇವರ ಘನವಾದ ನಿಷ್ಠೆಯನ್ನು ಸಹಿಸದ ಕೆಲವು ಸಾಂಪ್ರದಾಯ ವಾದಿಗಳು ಇವರಿಗೆ ಕಿರುಕುಳವನ್ನು ಕೊಡುತ್ತಿದ್ದರು. ಸಮಯ ಸಾಧಿಸಿ ಹೊಸದಾಗಿ ಬಂದ ಹಡಗಲಿಯ ಕಟ್ಟಾವೈಷ್ಣವ ತಹಶೀಲದಾರನಿಗೆ ಶರಣರ ವಿರುದ್ಧ ಜಾಡಿಯನ್ನು ಹೇಳಿದರೂ ಶರಣರು ಅಂಜದೆ ಅಳುಕದೆ ತಮ್ಮ ನಿಷ್ಠೆಯನ್ನೇ ಮೆರೆದರು. ಅಧಿಕಾರಿಯು ವಿಷ್ಣುವಿನ ನಾಮಗಳನ್ನು ಕೊಂಡಾಡಲು ತಿಳಿಸಿದಾಗ ಶರಣರು ಒಪ್ಪಿ ಸುಂದರ ಪದ್ಯಗಳನ್ನೇ ರಚಿಸುತ್ತಾರೆ. ನ್ಯಾಯನಿಷ್ಠುರ; ದಾಕ್ಷಿಣ್ಯಪರರಾಗದೆ ಪವಿತ್ರ ಪ್ರಾಣಿಯಾದ ಗೋವಿನ ಮಹತ್ವವನ್ನು ತಿಳಿಸಿ ಅದರಿಂದ ತಯಾರಾಗುವ ಪಾವನ ಪಾಂಡುವರ್ಣದ ಶ್ರೀ ವಿಭೂತಿಯ ಘನತೆಯನ್ನು ವ್ಯಕ್ತಗೊಳಿಸುವ-

 

“ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾದ ಪಾವನ ಪಾಂಡುರಂಗ

ಶ್ರೀ ವಿಭೂತಿಯು ಪಂಚಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ | ಜಗ

ಜೀವ ಸಂತೃಪ್ತಿಯು ಗೋವಿಂದ

 

ಎನ್ನುವ ಐದು ನುಡಿಯ ಪದ್ಯವನ್ನು ರಚಿಸಿದರಲ್ಲದೆ ಮತ್ತೆ

 

“ಹರಿಯೆ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

ಹರಿಯೆ ತ್ರೈಭುವನ ಅಟ್ಟುಂಬ ಸಕಲ ಜೀವಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ ಲೋಕದೊಳಗದು ಕಾರಣ |

ಹರಿಭಕ್ತನಹುದು, ಹರಭಕ್ತನಲ್ಲ ನಾಂ

ನರಸಿಂಹ ಮಧುಸೂದನ ಶಿರಿಯರಸ ವಾ

ಸರ ಯಂಕಟಾಚಲಾದಿ ಪ್ರಣವ ಸ್ಮರಣೆಯೊಳಗಿರ್ಪೆಂ ಸದಾ ||

 

ಎಂಬ ನಾನಾರ್ಥ ವೈಚಿತ್ರ್ಯದಿಂದ ಅರ್ಥ ವಿಸ್ತಾರ ತೋರಿಸಿ ನರಸಿಂಹಾದಿ ಶಬ್ದಗಳ ಆದಿ ಅಕ್ಷರ ಜೋಡಿಸುವ ಷಡಕ್ಷರ ಮಂತ್ರದ ಸ್ಮರಣೆ ಮಾಡಿದ್ದನ್ನು ಈ ಪದ್ಯದಲ್ಲಿ ಬರೆದು ಅಧಿಕಾರಿಯನ್ನು ಬೆರಗುಗೊಳಿಸುತ್ತಾರೆ. ಹಾಗೆ ಕೇಡಿಗಳೂ ತಣ್ಣಗಾಗುತ್ತಾರೆ.

 

ಪ್ರತ್ಯುತ್ಪನ್ನ ಮತಿಯವರಾದ ಬಸವಲಿಂಗ ಶರಣರು ಭಕ್ತಿಯ ಉದ್ರೇಕದಿಂದಾಗಲಿ, ತಾತ್ಕಾಲಿಕ ಸ್ಫೂರ್ತಿಯಿಂದಾಗಲಿ ಕೃತಿಗಳನ್ನು ರಚಿಸಲಿಲ್ಲ. ತತ್ತ್ವ, ಶಾಸ್ತ್ರ ,ಆಚಾರ, ಅನುಭಾವಗಳ ಸಂಗಮದಲ್ಲಿ ಕ್ರಿಯಾಜ್ಞಾನಗಳ ಸಮುಚ್ಚಯದಲ್ಲಿ ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ನಾಲ್ಕು ೧)ಶಿವಾನುಭವ ದರ್ಪಣ (ಹಾಡುಗಬ್ಬಗಳು) ೨) ನಿರಾಭಾರಿ ವೀರಶೈವ ಸಿದ್ಧಾಂತ (ಷಟ್‌ಪದಿಯಲ್ಲಿ ಬರೆದ ವೀರಶೈವ ಸೈದ್ಧಾಂತಿಕ ವಿಚಾರಗಳು) ೩) ಗುರು ಕರುಣ ತ್ರಿವಿಧಿ (ತ್ರಿಪದಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮವಾಗಿ ತಿಳಿಸಿದ ಕೃತಿ) ೪) ಲಿಂಗಪೂಜಾ ವಿಧಾನ (ಚೌಪದಿಯಲ್ಲಿ ಬರೆದದ್ದು) ಡಾ. ಎಸ್. ವ್ಹಿ, ಅಯ್ಯನಗೌಡ ಇವರು ಗದಗ “ವೀರಶೈವ ಅಧ್ಯಯನ ಸಂಸ್ಥೆ ʼʼ ಯಿಂದ ಪ್ರಕಟಿಸಿದ ಬಸವಲಿಂಗ ಶರಣರು ಸಮಗ್ರ ಕೃತಿಗಳು’ʼ ಇದರಲ್ಲಿ ಚನ್ನವೀರ ಸ್ವಾಮಿಗಳ ಇನ್ನೊಬ್ಬ ಶಿ಼ಷ್ಯರಾದ ಬನ್ನಿಮಟ್ಟಿ ಚನ್ನಪ್ಪನವರು ರಚಿಸಿದ “ಶಿವಾನುಭವ ದೀಪಿಕೆ ಯೆಂಬ ಗ್ರಂಥವನ್ನು  “ಷಟ್ ಸ್ಥಲ, ಜ್ಞಾನಾನುಭಾವ’ ಎಂಬ  ಹೆಸರಿಟ್ಟು ಹಸ್ತಪ್ರತಿಯ ಆಧಾರದಿಂದಲೋ, ತಮ್ಮ ಜಾಣೆಯಿಂದಲೋ ಬಸವಲಿಂಗ ಶರಣರಿಗೆ ಸೇರಿಸಿ, ಆ ಕೃತಿಕಾರರನ್ನು ಲುಪ್ತಗೊಳಿಸಿದ್ದು ಸಮಂಜಸವಲ್ಲ. ಶ್ರೀಯುತರು ಕನ್ನಡ ಅಧ್ಯಯನ ಪೀಠದ ಹಸ್ತ ಪ್ರತಿಭಾಂಡಾರದ ಕ್ರಮಾಂಕ ೧೦೬೧ ರಿಂದ ಸಂಗ್ರಹಿಸಿದ “ ಭಕ್ತಿ ಭಿನ್ನಹ ದಂಡಕ”ವು ಶರಣರೆಂದು ಖಚಿತಪಡಿಸಿದುದರಲ್ಲಿ ಔಚಿತ್ಯವಿದೆ.  “ಭಕ್ತಿ ಬಿನ್ನಹ ದಂಡಕ’ ವು ಶರಣರ ಐದನೆಯ ಕೃತಿಯೆನ್ನಬಹುದು. ಶರಣರ ಹೆಸರಿಗೆ ಸೇರಿಸಿದ “ಶಿವಾನುಭವ ದೀಪಿಕೆʼ’ ಯನ್ನು ಕುರಿತು ವಿಮರ್ಶಿಸಲು ಅವಕಾಶವಿಲ್ಲದಿದ್ದರೂ ಕೆಲವು ಮಾತುಗಳನ್ನು ಹೇಳುವದು ಅವಶ್ಯವಿದೆ; ಹಾಗೂ ಅನಿವಾರ್ಯವಿದೆ, ಅದರ ಕವಿ ಚಿನ್ನಪ್ಪನವರು “ಶಿವಾನುಭವ ದೀಪಿಕೆ’ಯ ಕೊನೆಯ ಕಂದ (೩೦೩)ದಲ್ಲಿ-

 

“ಪಾಹಿ ಗುರು ಚನ್ನವೀರಾ ಬಸವಪ್ರಭುವೆ’ʼ ಗುರು ಚನ್ನವೀರಾ ಎಂಬ ಅಂಕಿತವಿರುವುದರಿಂದ ಬಸವಲಿಂಗ ಶರಣರ ಕೃತಿಯೆಂದು ಭಾವಿಸುವುದು ಸರಿಯಲ್ಲ. ಎಲ್ಲ ಪದಗಳಲ್ಲಿ ಕೇವಲ ಬಸವಪ್ರಭುವೇ ಎಂದಿದೆ. ಬಸವಲಿಂಗ ಶರಣರಿಗೆ ಪ್ರೀತಿಯ ಪ್ರಭು (ಸ್ವಾಮಿ) ಅಥವಾ ಗುರುವಾದ ಚನ್ನವೀರರೆಂದು ಚನ್ನಪ್ಪನವರು ಅಂಕಿತ ಬಳಸಿರಲು ಸಾಕು. ಬವಣ್ಣನವರು ಕೂಡಲ ಸಂಗಮದೇವಾ ಎಂದು ವಚನಾಂಕಿತ ಹಾಕಿದರೆ; ಚನ್ನಬಸವಣ್ಣನವರೂ ಆದನ್ನೇ ಬಳಸಿ ಕೇವಲ ಚನ್ನ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಹಾಗೆ ಇಲ್ಲಿಯೂ ಅಂಕಿತದ ಭಿನ್ನತೆಯಿದೆ. ಬವಲಿಂಗ ಶರಣರು ಪದಪದ್ಯಗಳಲ್ಲಿ ಚನ್ನವೀರ’ ನಾಮವನ್ನು ಬಳಸಿಕೊಂಡಿರುವುದಾದರೂ ಬಸವಪ್ರಭುವೆಂಬ ನಾಮಾಂಕಿತವನ್ನು ಬಳಸಿಲ್ಲ. ಅಲ್ಲದೆ ಸಮಗ್ರ ಕೃತಿಯಲ್ಲಿ ಬರುವ ವಿಷಯ ಜೋಡಣೆಯ ವ್ಯತ್ಯಾಸ ಅನುಭಾವದ ಆಳವನ್ನು ಅಳೆಯಬಹುದು. ಶಿವಾನುಭವ ದೀಪಿಕೆಯಲ್ಲಿ ಅನುಭಾವದ ಕೊರತೆಯನ್ನು ಕಾಣಬಹುದು. ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯನ್ನು ಅದಕ್ಕೆ ತುಲನೆ ಮಾಡಿದರೆ ಬಹಳ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಿದೆ. ಹಲವಾರು ಕಾರಣಗಳಿಂದ “ಶಿವಾನುಭವ ದೀಪಿಕೆ’ ಬಸವಲಿಂಗ ಶರಣರದಂತೂ ಅಲ್ಲ. ಸಂಶೋಧನೆಯ ಹೆಸರಿನಲ್ಲಿ ಒಬ್ಬ ಕವಿಯನ್ನು ಲುಪ್ತಗೊಳಿಸುವ ಕಾರ್ಯ ಸರಿಯಲ್ಲ. ಸಂಶೋಧಕರು ಇನ್ನೂ ವಿಚಾರಿಸಬೇಕು. ಈ ಗ್ರಂಥ ಬಸವಲಿಂಗ ಶರಣರದು ಅಲ್ಲವೆಂದು ಸಿದ್ಧಮಾಡಲು ಸಾಕಷ್ಟು ಅಂಶಗಳಿವೆ.

 

ಇನ್ನು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯನ್ನು ಗುರುಗಳಿಂದ ಶಾಪಗ್ರಸ್ಥರಾಗಿ ಬರೆದರೆಂದು ಹೇಳುವ ದಂತಕಥೆ ಬೆಳೆದುದೂ ದುರದೃಷ್ಟಕರವೆ ! ಕವಿರತ್ನ ಚನ್ನಕವಿಗಳು ಮುಳುಗುಂದ ಬಾಲಲಿಲಾ ಮಹಾಂತ ಸ್ವಾಮಿಗಳ  ಪುರಾಣದಲ್ಲಿ ಈ ಸಂಗತಿಯನ್ನು ಬಳಸಿಕೊಂಡಿದ್ದಾರೆ. ಬಹುಶಃ ಅವರು ತ್ರಿವಿಧಿಯನ್ನಾಗಲಿ ಅವರ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿರಲಿಲ್ಲ. ಎಲ್ಲಿಯೂ ಈ ಸಂಗತಿ ತಿಳಿದು ಬರುವದಿಲ್ಲ. ಬಸವಲಿಂಗ ಶರಣರು ತಮ್ಮ “ನಿರಾಭಾರಿ ವೀರಶೈವ ಸಿದ್ಧಾಂತ”ದಲ್ಲಿ ಅಷ್ಟಾವರಣ ಮಹತ್ವ, ಪಂಚಾಚಾರಗಳ ವಿಶ್ಲೇಷಣೆ, ಧರ್ಮಾಚಾರಗಳೆಂಬ ತ್ರಿವಿಧ ಪ್ರಕರಣಗಳನ್ನು ವಿವರಿಸಿದರು.  ಶಿವಾನುಭವ ದರ್ಪಣ’ದಲ್ಲೂ ಬಿಡಿಬಿಡಿಯಾಗಿ ಅನೇಕ ತಾತ್ವಿಕ ವಿಷಯವಾಗಿ ಪದ್ಯಗಳನ್ನು ರಚಿಸಿದ್ದರೆ, ಗುರುಕರುಣ ತ್ರಿವಿಧಿಯು ಅಷ್ಟಾವರಣವೇ ಲಿಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮಬದ್ಧವಾಗಿ ಹಾಗೂ ಸಮಗ್ರವಾಗಿ ಬೋಧಿಸುವ ಏಕೈಕ ಕೃತಿಯೆಂದರೆ ತಪ್ಪಾಗದು. ಇಲ್ಲಿ ಶಿವಕವಿಯ ಆಳವಾದ ಅನುಭವ, ತರ್ಕಬದ್ಧವಾದ ವಿಚಾರ, ವಿಮರ್ಶೆ ಹಾಗೂ ಶಾಸ್ತ್ರೀಯ ಸಿದ್ಧಾಂತಗಳು ಮುಪ್ಪುರಿಗೊಂಡಿವೆ. ವೀರಶೈವನು ನಿಜಾಚರಣೆಯಿಂದ ತತ್ತ್ವಪುರುಷನಾಗುವ ಬಗೆ ಈ ತ್ರಿವಿಧಿಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಈ ಕೃತಿ ಶಿವಕವಿಯ ಅತ್ಯುತ್ತಮ ಗ್ರಂಥವೆಂದೇ ಹೇಳಬೇಕು. ವೀರಶೈವರ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದಾರೆ. ಇದರಿಂದ ಶಿವ ಕವಿಯ ಸ್ವಾನುಭಾವ ಮತ್ತು ವಿಚಕ್ಷಣಮತಿಯ ಪರಿಚಯವಾಗುವದು. ತ್ರಿವಿಧಿಯಲ್ಲಿ ೩೩೩ ತ್ರಿಪದಿಗಳಿದ್ದು ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿದ ಸಾಹಸ ಶರಣರದು.

 

ಆಲದ (ಮರ) ಬೀಜ ಅತಿ ಚಿಕ್ಕದಾಗಿದ್ದರೂ ವಿಶಾಲ ಗಿಡವನ್ನು ಒಳಗೊಂಡಿರುವಂತೆ ಈ ಗುರುಕರುಣ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನು ಮಾಡಬಹುದು. ಬಹುಶಃ ಇದು ಗುರುಸ್ತುತಿಗೈವ ಪಾರಾಯಣ ತ್ರಿವಿಧಿಯೆಂಬುದಾಗಿ ಬಹುಜನರ ತಿಳುವಳಿಕೆಯಾಗಿತ್ತು; ಅಲ್ಲದೆ ಬಸವಲಿಂಗ ಶರಣರು ಶಾಪಗ್ರಸ್ಥರಾಗಿ ಗುರುಸ್ತುತಿಯನ್ನು ಮಾಡಿದ್ದೆಂಬುದಾಗಿಯೇ ಅನೇಕರು ಹೇಳುತ್ತಾರೆ. ಇದು ಸರಿಯಲ್ಲ. ಶಿವಕವಿ ಬಸವಲಿಂಗ ಶರಣರ ಸಮಗ್ರ ಕೃತಿಗಳನ್ನು ಅವಲೋಕಿಸಿದರೆ ಎಲ್ಲಿಯೂ ಶಾಪದ ಪ್ರಸಂಗ ಬರುವುದಿಲ್ಲ. ಬಸಪ್ಪ-ಮುಸಪ್ಪ ಎಂಬ ಶಬ್ದ ಸಾಮ್ಯದಿಂದ ಬೆಳೆದ ಕಥೆಯಿರಬೇಕು. ಮತ್ತು ಶಾಪಗ್ರಸ್ಥನಾಗಿ ಇಂಥ ತಾತ್ವಿಕ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಗುರುಕರುಣೆಯನ್ನು ಕಳೆದುಕೊಂಡ ವ್ಯಕ್ತಿ ಮತಿಮಂದನಾಗಿ ಉತ್ತಮ ಕೃತಿಯನ್ನು ರಚಿಸಲಾರನು. ಗುರುಕರುಣೆಯಿಂದಲೇ ಇಂಥ ಉತ್ತಮ ಕೃತಿರತ್ನಗಳು ಮೂಡಿಬರುತ್ತವೆ. ಗುರುವಿಗೆ ಪ್ರತಿಮಾತನ್ನು ಆಡುವದೂ ಶರಣ ಜೀವನದಲ್ಲಿ ಸಲ್ಲದು. ಸದ್ಗುರುವಿನ ಮೌನ ನಿರ್ದೇಶನಗಳೂ ಶರಣನಿಗೆ ಮಾರ್ಗದರ್ಶಕವಾಗಬೇಕು. ಅರಿವುಳ್ಳವನೇ ಶರಣ. ಅಂಥ ಅರಿತ ಶರಣ ಮರೆತರೆ ಮತಿ ಅಮಂಗಲವಾಗಬಾರದೆಂದೆ ಶಿವಕವಿಗಳು ಸದ್ಗುರುವಿನಲ್ಲಿ ಮತಿಗೆ ಮಂಗಲ ಬೇಡುತ್ತ ಗುರುಕರುಣೆಯ ಹಿನ್ನೆಲೆಯಲ್ಲಿ ತ್ರಿವಿಧಿಯನ್ನು  ರಚಿಸಿರುವರು.

 

“ ಗುರುಕರುಣ ತ್ರಿವಿಧಿ’ಯು ಶ್ರೀ ಗುರು ಪ್ರಾರ್ಥನೆಯಿಂದ ಪ್ರಾರಂಭ ವಾಗುತ್ತದೆ. ತ್ರಿವಿಧಿಯಲ್ಲಿ ಶಿವಕವಿಗಳು ಅಷ್ಟಾವರಣವನ್ನು ಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ. ಏಕೆಂದರೆ ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ ಅಷ್ಟಾವರಣವು ಸ್ಪುಟವಾಗಿದೆ. ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ ಪಂಚಾಚಾರಗಳು ಅಳವಟ್ಟಿವೆ. ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ. ಪ್ರಥಮದಲ್ಲಿ ಸ್ತುತಿಗೈದ ಶ್ರೀಗುರು ನಿರಾಭಾರಿ ಜಂಗಮನೇ ಆಗಿದ್ದಾನೆ. ಬಸವಲಿಂಗ ಶರಣರು ಚಿನ್ಮಯಾನುಗ್ರಹ ಪಡೆದವರು. ನಿರಾಭಾರಿ ಗುರುವಿನ ಸುತ್ತಿಗೈದರೂ ಸಾಭಾರಿ ಸದ್ಗುರುವಿನ ಸ್ವರೂಪವನ್ನು, ಮಹತ್ವವನ್ನು ತಿಳಿಸುತ್ತಾರೆ. ಇದರಿಂದ ಈ ಗುರುವಿನ ಅವಶ್ಯಕತೆಯೇನೆಂಬುದು ಗೋಚರಿಸುತ್ತದೆ. ಅವಶ್ಯಕತೆಯ ಅರಿವಾಗುತಿದ್ದಂತೆ ಸದ್ಗುರುವನ್ನು ಹೃದಯತುಂಬಿ ಹಾಡುತ್ತಾರೆ ಕವಿಗಳು. ಗುರುದೀಕ್ಷೆ ಪಡೆದ ಭಕ್ತನು ಲೌಕಿಕ ತಂದೆ-ತಾಯಿ ಬಂಧು-ಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು. ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರುಕೃಪೆ ತೀವ್ರ ಲಭಿಸುವುದು.

 

ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ. ಆಗ ತ್ರಿವಿಧಿಯ ಮೂಲ ಬೀಜವೇ ವ್ಯಕ್ತವಾಗುತ್ತದೆ. ಶರಣರು ತ್ರಿವಿಧಿಯನ್ನು ರಚಿಸುವಲ್ಲಿ ಬಹಳ ಸುಂದರ ಕ್ರಮವನ್ನು ಅನುಸರಿಸಿದ್ದಾರೆ. ಶಾಸ್ತ್ರದ ಪದ್ಧತಿಯಂತೆ ವಿಷಯದ ಉಪಕ್ರಮ ಮಾಡುತ್ತ ಅದನ್ನು ಪ್ರತಿಪಾದಿಸಿ ಕೊನೆಗೆ ಉಪಸಂಹಾರ ಮಾಡುತ್ತ ಮುಂದಿನ ವಿಷಯಕ್ಕೆ ಕೊಂಡಿಯಂತೆ ಜೋಡಿಸುತ್ತ ಸಂಪೂರ್ಣವಾಗಿ ೩೩೩ ತ್ರಿಪದಿಗಳನ್ನು ರಚಿಸಿರುವರು.

 

ಗುರುವಿನ ಸಂವೇದನೆಯ ನಗುವೇ ಈ ಗುರುಕರುಣ ತ್ರಿವಿಧಿಯ ದಾರ್ಶನಿಕ ಸಿದ್ಧಾಂತದ ಬೀಜಾರೋಪಣವಾಗುತ್ತದೆ. ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿ ಸದ್ಗುರುವಿಗೆ ನೆಮ್ಮದಿಯಾದೀತು ? ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಗಳು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾರೆ. ಕಾಮಕೇಳಿಯಲ್ಲಿ ಮೈ-ಮರೆತ ಮಾನವನು ಮಾಯಾಬಂಧನದಲ್ಲಿ ಸಿಲುಕುತ್ತಾನೆ. ಶರಣ ಸಿದ್ಧಾಂತದಂತೆ ಮಾಯೆ ಹೊರಗಿನದಲ್ಲ. ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ. ಕಾಮನ ಉರುವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಪಂಚಭೂತಗಳ ಭಯಾನಕತೆಯನ್ನು ವಿವರಿಸುತ್ತ ಪಂಚಭೂತಗಳ ಪಂಚೀಕರಣದ ಪಂಚಭೂತಮಯವಾದ ಕಾರಣದಿಂದಲೇ ಶರೀರವಾಯಿತೆಂದು ಪ್ರತಿಪಾದಿಸುತ್ತಾರೆ. ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾರೆ. ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾರೆ. ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಗಳ ಐತಿಹಾಸಿಕ ಪ್ರಜ್ಞೆ, ತೀರ್ಥ ಕ್ಷೇತ್ರಗಳ ಪರಿಚಯ, ವ್ಯಾವಹಾರಿಕ ಜ್ಞಾನ, ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ.

 

ಶಬ್ದಾದಿ ಪಂಚ ವಿಷಯಗಳ ಪ್ರಸ್ತಾಪದ ನಂತರ ಅಂತಃಕರುಣ ಚತುಷ್ಟಯ ಹಾಗೂ ಗುಣತ್ರಯದ ನಿರೂಪ ಬಂದಿದೆ. ಹೀಗೆ ಶರೀರ ವಿಜ್ಞಾನ, ಶರೀರಿಗೆ ಅಂಟಿದ ಅಜ್ಞಾನ, ವಿಷಯ ವಾಸನೆ ಇತ್ಯಾದಿಗಳ ವಿಚಾರವು ನೇರವಾಗಿ ತಿಳಿದಂತೆ ಸಂಸಾರ ಹೇಯವೆನಿಸುವುದು ಸಹಜ. ಎಲ್ಲ ವಿಷಯಗಳನ್ನು ಶರಣರು ಸ್ವಾರಸ್ಯವಾಗಿ ಪ್ರತಿಪಾದಿಸಿದ್ದಾರೆ. ವಿಷಯದ ಮನವರಿಕೆಯಾಗಲು ಬೆಡಗಿನ ನುಡಿಯನ್ನು, ಶೇಷಾರ್ಥದ ಪರಿಯನ್ನು ಉಪಯೋಗಿಸಿದ್ದಾರೆ. ಕವಿಗಳ ಜಾಣ್ಮೆ ಅನುಭಾವಗಳು ಒಡಮೂಡಿವೆ. ಶಿಷ್ಯನು ಸಂಸಾರ ಬಂಧನದಿಂದ ತನುತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸುತ್ತಾನೆ. ಹೀಗೆ ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ. ತ್ರಿಪದಿಯ ಪ್ರತಿಪದಗಳು ವೈಶಿಷ್ಟ್ಯವನ್ನು ಪಡೆದಿವೆ. ಸಂಸಾರ ಹೇಯಸ್ಥಲದ ಕೆಲವು ತ್ರಿಪದಿಗಳು ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ. ೫೦ನೇಯ

 

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲ ದೇರಿದೆ ನಾನಿಳಿಯ

ಲಾರನೈ ಗುರುವೆ ಕೃಪೆಯಾಗು ||

 

ಈ ತ್ರಿಪದಿಯಂತೂ ವೀರಶೈವ ಸಿದ್ಧಾಂತವನ್ನು ಬೋಧಿಸುವ ಪರಿಣತ ಪ್ರಜ್ಞೆಯ ದ್ಯೋತಕವಾಗಿದೆ. ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಸತ್ವ ಪ್ರಕಟವಾಗುತ್ತದೆ.

 

ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಇಷ್ಟಲಿಂಗ, ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುತ್ತದೆ. ಈ ಲಿಂಗ ಹೊರಗಿನದಲ್ಲ. ಶಿಷ್ಯನ ಚಿಚ್ಚೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಶಿಷ್ಯನ ಭಕ್ತಿಗಾಗಿ ಅರುಹಿನ ಕುರುಹೆ ಮೂರ್ತಗೊಂಡು ಇಷ್ಟಲಿಂಗವಾಗುತ್ತದೆ. ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಪ್ರವೃತ್ತಿಕ್ರಮದಿಂದ ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು. ಮುಕ್ತಿಮಾರ್ಗಕ್ಕೆ ಯೋಗಮಾರ್ಗ, ಷಣ್ಮುಖೀ, ಖೇಚರೀ ಮುದ್ರೆಗಳು ಇರುತ್ತಿದ್ದರೂ ಅವು ಸುಲಭ ಸಾಧ್ಯವಲ್ಲವೆಂದು ಯುಕ್ತಿ ಯುಕ್ತವಾಗಿ ಶಿವಕವಿಗಳು ನಿರಸನಮಾಡಿ ಲಿಂಗಾಂಗಯೋಗದ ಸರಳತೆಯನ್ನು ತಿಳಿಸುತ್ತಾರೆ. ಅದಕ್ಕೆ ಸಹಕಾರಿಯೆಂಬಂತೆ ಲಿಂಗಲಕ್ಷಣ ಲಿಂಗವ್ಯಾಪ್ತಿಯನ್ನು ಹೇಳುತ್ತ ಈ ಲಿಂಗವು ಪ್ರಣವದಿರವೆಂಬುದನ್ನು ತಿಳಿಸುತ್ತಾರೆ. ಲಿಂಗ ಷಟ್‌ಸ್ಥಾನಗಳಲ್ಲಿ ಷಡಕ್ಷರ ಮಂತ್ರ ಸಂಬಂಧವನ್ನು ಬೋಧಿಸುತ್ತಾರೆ. ಇಂಥ ಅಸಾಧಾರಣ ಲಿಂಗವನ್ನು ಅಂತರಂಗಗಳಲ್ಲಿ ಧರಿಸಿಕೊಳ್ಳುವ ಯೋಗ್ಯತೆಯನ್ನು ವಿವರಿಸಿ ಲಿಂಗಾಂಗ ಸಾಮರಸ್ಯದ ರಹಸ್ಯವು ನಿವೃತ್ತಿಕ್ರಮದಿಂದ ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಯ ಮೂಲಕ ಬೋಧಿಸಲ್ಪಟ್ಟಿದೆ. ಸಾಧಕನು ಸರ್ವಾಂಗ-ಲಿಂಗಿಯಾಗಲು ಕರ್ಮೇಂದ್ರಿಯಗಳಲ್ಲಿ ಇಷ್ಟಲಿಂಗದ,  ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ, ಕರಣಂಗಳಲ್ಲಿ ಭಾವಲಿಂಗದ ಸಂಬಂಧವನ್ನು ಕ್ರಮವಾಗಿ ಅರಹುತ್ತಾರೆ. ಪುನಃ ಲಿಂಗದ ಅವಶ್ಯಕತೆ ಅರ್ಥಾತ್ ಪ್ರಾಣಲಿಂಗಪೂಜೆ, ಭಾವಲಿಂಗ ಪೂಜೆಯ ಪರಿಯನ್ನು ಪ್ರಸ್ತಾಪಿಸಿದ್ದಾರೆ. ಮೂರು ವಿಧದಲ್ಲಿ ತ್ರಿವಿಧ ಲಿಂಗಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಗಳು ಲಿಂಗತತ್ತ್ವದ ವ್ಯಾಪಕತೆಯನ್ನು ಅವರ್ಣನೀಯವಾಗಿ ಪ್ರತಿಪಾದಿಸುತ್ತಾರೆ. ಈ ವಿಚಾರ ವಚನ ಸಾಹಿತ್ಯದಲ್ಲೂ ಹೆಚ್ಚು ಕಾಣುತ್ತಿಲ್ಲ.

 

ಇಷ್ಟ ಪ್ರಾಣ ಭಾವಲಿಂಗಗಳ ಅನುಸಂಧಾನ ಮಾಡುವ ಭಕ್ತನು ಲಿಂಗದ ಪ್ರಾಣ ಜಂಗಮನನ್ನು ಆರಾಧಿಸಬೇಕೆಂಬುದನ್ನು ತಿಳಿಸುತ್ತ ಜಂಗಮನ ನಿಲವು, ಭೇದ ಹಾಗೂ ಜಂಗಮನ ಕರ್ತವ್ಯವನ್ನು ಬಿತ್ತರಿಸಿದ್ದಾರೆ. ನುಡಿದಂತೆ ನಡೆವ ಮಾರ್ಗ ಷಟ್‌ಸ್ಥಲ. ಇದನ್ನು ಅನುಗ್ರಹಿಸುವವನು ಜಂಗಮನೆಂಬುದನ್ನು ಶರಣರು ಸ್ಪಷ್ಟಗೊಳಿಸಿರುವರು.   ಗುರು ಧರ್ಮಕರ್ತೃವಾದರೆ ಜಂಗಮ ಧರ್ಮ ಸಂಶೋಧಕನೆಂಬುದನ್ನು ಶರಣರು ವ್ಯಕ್ತಗೊಳಿಸಿರುವರು.

 

ಬಾಹ್ಯ ಜಂಗಮನ ಸೇವೆಗೈಯುತ್ತ ಅಂತರಂಗದಲ್ಲಿ ಜಂಗಮನ ಸಾಕ್ಷಾತ್ಕಾರದ ಸ್ವರೂಪವನ್ನು ಅರಿಯಬೇಕು. ಜಂಗಮ ಪುಂಗವನಿಂದ ಪ್ರಾಪ್ತವಾಗುವದು ಪರಬ್ರಹ್ಮರೂಪಿ ಪಾದೋದಕ ಪ್ರಸಾದಗಳು. ಪಾದೋದಕವನ್ನು ಪಡೆವ ವಿಧಾನ ಹಾಗೂ ಮಹಿಮೆಯನ್ನು ತಿಳಿಸಿ ಅದರ ಪರಿಣಾಮವನ್ನು ವಿವರಿಸುತ್ತಾರೆ. ಭಕ್ತರನ್ನು ಪೊರೆವ ಮಹಾತಾಯಿ ಪ್ರಸಾದವೆನಿಸಿದ್ದರಿಂದ ಅದನ್ನು ಒಳಹೊರಗೂ ಪರಿಣಾಮಿಸಿಕೊಳ್ಳಬೇಕು. ಏಕೆಂದರೆ ಪ್ರಸಾದ ಸದ್ಭಾವವೇ ವೀರಶೈವರ ಆತ್ಯಂತಿಕ ಸಿದ್ಧಿಯೆನಿಸಿದೆ. ಇದುವೆ ನಿತ್ಯ ಮುಕ್ತತ್ವವೆನಿಸಿದೆ.

 

ಪ್ರಸಾದ ಸದ್ಭಾವಿಯಾದ ಶರಣು ನಿಜೈಕ್ಯ ಸ್ಥಿತಿಯಲ್ಲಿರುವಾಗ ಮತ್ತೆ ಸಾಧನಗಳ ಅವಶ್ಯಕತೆಯೆನಿಸದು. ಅದಕ್ಕಾಗಿ ಶಿವಕವಿಗಳು ಸಾಧನಗಳಿಂದ ಸಾಧ್ಯವೆನಿಸಿದ ಚಿದ್ಭಸಿತ, ಚಿದ್ರುದ್ರಾಕ್ಷಗಳ ಮಹತ್ವವನ್ನು ವಿವರಿಸಿ ಮನ ಚಿದ್ಘನವಾಗುವ ನಿಜಮಂತ್ರದ ಸ್ವರೂಪವನ್ನು ನಿರೂಪಿಸುತ್ತಾರೆ. ಕಾಯದಲ್ಲಿ ಗುರುಲಿಂಗ ಜಂಗಮರ ಆಯತವನ್ನು ಅರಿಯಲು ಬಾಹ್ಯಾಚರಣೆಯ ವಿವರವನ್ನು ತಿಳಿಸಿ ಆಂತರಿಕ ಅಷ್ಟಾವರಣದ ಅಳವಡಿಕೆಯನ್ನು ಸಾಧಿಸಿದಾಗ ನೈಜ ಶೂನ್ಯ ಸಂಪಾದನೆಯಾಗುವುದೆಂಬುದನ್ನು ಈ ತ್ರಿವಿಧಿಯಲ್ಲಿ ಅವಲೋಕಿಸಬಹುದು. ‘ಶೂನ್ಯ ಸಂಪಾದನೆ” ಉಕ್ಕಿನ ಕಡಲೆಯಾಗಿರುವಾಗ ಅದನ್ನು ಸಾಧಿಸುವ, ಆಚರಿಸುವ ದಾರ್ಶನಿಕ ಸಿದ್ಧಾಂತವನ್ನು ಸಾಕ್ಷಾತ್ಕರಿಸಿಕೊಳ್ಳಲು ಮಹಾನುಭಾವಿ ಮೈಲಾರ ಭಸವಲಿಂಗ ಶರಣರ ಈ ಗುರುಕರುಣ ಶ್ರಿವಿಧಿಯು ಅಧ್ಯಾತ್ಮದ ಕೈಮರವೆನಿಸಿದೆ. ವೀರಶೈವ  ಸಿದ್ಧಾಂತದ ರಸಘಟ್ಟಿ ಗುರುಕರಣ ತ್ರಿವಿಧಿಯೆಂದರೆ ತಪ್ಪಲ್ಲ.ಶೂನ್ಯ ಸಂಪಾದನೆಯನ್ನು ಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನ ಗುರುಕರಣ ತ್ರಿವಿಧಿಯೆಂಬುದನ್ನು ಬೇರೆ ಹೇಳಬೇಕಿಲ್ಲ.

 

ಬಸವಲಿಂಗ ಶರಣರು ʼ’ಶಿವಾನುಭಾವ ದರ್ಪಣ’ʼದಲ್ಲಿ ೭೦ ಪದ್ಯಗಳನ್ನು ರಚಿಸಿದ್ದು ವಿವಿಧ ರಾಗ ಮಾಲಿಕೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಪ್ರಾರ್ಥನೆ, ನೀತಿ, ತತ್ವಗಳನ್ನು ಹೃದಯಂಗಮವಾಗಿ ಹಾಡಿದ್ದಾರೆ. ಸದ್ಗುರು ಚನ್ನವೀರರ ವ್ಯಕ್ತಿತ್ವವನ್ನು ಹಲವಾರು ಪದ್ಯಗಳಲ್ಲಿ ಸ್ತುತಿಸಿದ್ದನ್ನು ನೋಡಬಹುದು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ವಿಚಾರಗಳನ್ನು ದ್ವಿಪದಿ, ಚೌಪದಿ, ಷಟ್‌ ಪದಿಗಳಲ್ಲಿ ವ್ಯಕ್ತ ಮಾಡಿದ್ದಾರೆ. ಅನೇಕ ಪದ್ಯಗಳು ಅತ್ಯಂತ ಮನನೀಯವಾಗಿವೆ. ಗೇಯಯೋಗ್ಯವಾಗಿವೆ. ಇನ್ನು ನಾಲ್ಕನೆ ಕೃತಿಯನಿಸಿದ ‘ಲಿಂಗ ಪೂಜಾ ವಿಧಾನ’ ದಲ್ಲಿ ಸಂಕಲ್ಪದಿಂದ ಪ್ರಾರಂಭಿಸಿ ಉಪಚಾರಗಳ ಅರ್ಥ ವಿವರಣೆಯೊಂದಿಗೆ ವಿಶೇಷವಾಗಿ ವಿಧಾನವನ್ನು ಬೆಳೆಸಿದ್ದಾರೆ. ಪಾದ್ಯಾದಿ ಅಭಿಷೇಕಗಳನ್ನು ಇಷ್ಟಲಿಂಗಕ್ಕೆ ಸಮರ್ಪಿಸುವಲ್ಲಿ ಅನಂದವಾಗಿ ನೆರವೇರಿಸಲು ವಿವರಿಸಿದ್ದಾರೆ. ೫೨ ಚೌಪದಿಗಳಲ್ಲಿ ಈ ವಿಧಾನ ಪರಿಸಮಾಪ್ತಿಗೊಂಡಿದೆ. ರಾಜೋಪಚಾರಗಳನ್ನು ಹೇಳುವಲ್ಲಿ ಶರಣರಿಗೆ ಸಂತೃಪ್ತಿಯೆನಿಸಿದೆ.

 

ಶಿವಕವಿ ಬಸವಲಿಂಗ ಶರಣರ ಅನುಭಾವವನ್ನು ಅಳೆಯುವದು, ಅಳವಡಿಸಿ ಕೊಳ್ಳುವದು ಆಚಾರ ಮತ್ತು ಅನುಭಾವಗಳಿಂದ ಮಾತ್ರ ಸಾಧ್ಯ. ಅದನ್ನು ಸಾಧಿಸಿಕೊಂಡರೆ ಆಗುವ ಆನಂದ ಅಪಾರ. ಇಂಥ ಅನುಭಾವ ತೊರೆಯಲ್ಲಿ ಮಿಂದು ಮಡಿಯಾಗಿ ಪರಿಪೂರ್ಣತೆಯನ್ನು ಪಡೆಯಲು ಬಸವಲಿಂಗ ಶರಣರ ಸಮಗ್ರ ಸಾಹಿತ್ಯ, ಶರಣತತ್ವ ಜಿಜ್ಞಾಸುಗಳಿಗೆ ಅತ್ಯುತ್ತಮ ಮೌಲಿಕ ಸಾಧನವಾಗಿದೆ. ಇದರಿಂದ ಮಹಾನುಭಾವಿಗಳಾದ ಮೈಲಾರ ಬಸವಲಿಂಗ ಶರಣರು ಶಾಪಗ್ರಸ್ಥರಲ್ಲವೆಂಬುದು ಸ್ಪಷ್ಟವಾಗದೇ ಇರದು.

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ವ್ಯಕ್ತಿಯ ಬದುಕಿನಲ್ಲಿ ನಡೆನುಡಿಗಳಿಗೆ ಅಗ್ರಸ್ಥಾನ. ಅವೆರಡೂ ಪರಸ್ಪರ ಪೂರಕ. ನಡೆಯೊಳಗೆ ನುಡಿ ನುಡಿಯೊಳಗೆ ನಡೆ ತುಂಬಿದುದೇ ನಿಜವಾದ ಬದುಕು. ಅದು ಸಮಾಜಕ್ಕೂ ದೇವನಿಗೂ ಒಪ್ಪಿತವಾದ ಬದುಕು ನುಡಿಯಂತೆ ನಡೆ, ಮಾತಿನಂತೆ ಕೃತಿ ಇಲ್ಲದ ಬದುಕಿಗೆ ಯಾವ ಬೆಲೆಯೂ ಇಲ್ಲ.

 

ಜೀವಿಗಳಲ್ಲಿ ಮನುಷ್ಯನು ಶ್ರೇಷ್ಠ ಮಾತನಾಡುವ ವಿಶೇಷ ಶಕ್ತಿ ಅವನಿಗಿದೆ. ಮಾತೆಂಬುದು ಜ್ಯೋತಿರ್ಲಿಂಗ, ಕಾರಣ ಮಾತು ಪವಿತ್ರವಾಗಿರಬೇಕಾದುದು ಅತ್ಯಂತ ಅಪೇಕ್ಷಣೀಯ. ನಮ್ಮ ಮಾತು ಮೃದು ಮಧುರವಾಗಿದ್ದು, ಕೇಳುಗರ ಮನ ನೋಯದಂತಾದಾಗ ಸಹಜವಾಗಿಯೇ ಶ್ರೇಷ್ಠತ್ವವನ್ನು ಪಡೆಯುತ್ತದೆ.

 

ನಮ್ಮ ನುಡಿ(ಮಾತು) ಮುತ್ತಿನಹಾರದಂತೆ ಆಕರ್ಷಕವಾಗಿರಬೇಕು. ಮಾಣಿಕ್ಯದ ದೀಪ್ತಿಯಂತೆ ಕೇಳುಗರ ಮನ ಬೆಳಗಬೇಕು. ಸ್ಪಟಿಕದ ಶಲಾಕೆಯಂತೆ ನೇರವೂ ಪಾರದರ್ಶಕವೂ ಆಗಿರಬೇಕೆಂದು ಹೇಳುವ ಬಸವಣ್ಣ ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪವಾಗುತ್ತದೆ’ ಎಂದು ನಮ್ಮನ್ನು ಎಚ್ಚರಿಸುತ್ತಾನೆ. ಹಾಗೆಯೇ ‘ನುಡಿಯೊಳಗಾಗಿ ನಡೆಯದಿದ್ದರೆ   ಕೂಡಲಸಂಗಮದೇವನೆಂತೊಲಿವನಯ್ಯ’ ಎಂದು ಕೇಳುತ್ತಾನೆ. ‘ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂದರಿತ ಬಸವಣ್ಣನವರು ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಕೂದಲೆಳೆಯಷ್ಟು ವ್ಯತ್ಯಾಸ ಬಂದರೂ ಸಂಸಾರದೊಳಗೆ ನನ್ನನ್ನು ಮುಳುಗಿಸಿ ನೀನೆದ್ದು ಹೋಗು’ ಎಂದು ಆರಾಧ್ಯದೇವನಿಗೆ ದೃಢವಾಗಿ ಹೇಳುತ್ತಾರೆ.

ಬಸವಣ್ಣನವರು ಒಂದು ಸಾಮಾಜಿಕ ಚಳುವಳಿಯ ನಾಯಕರು, ಕಲ್ಯಾಣ ರಾಜ್ಯಕಟ್ಟಬೇಕೆಂದು ಬಯಸಿದವರು. ಅವರಲ್ಲಿ ಇಂಥ ದೃಢತೆ ಇರಬೇಕಾದುದು ಅತ್ಯವಶ್ಯ. ಏಕೆಂದರೆ ಸಾಮಾನ್ಯ ಜನರು ತಮ್ಮ ನಾಯಕನ ನಡೆನುಡಿಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ.

 

ಬೋಧಿಸುವವನು ಮೊದಲು ಸಾಧಿಸಬೇಕು, ನುಡಿದವನು ಮೊದಲು ನಡೆಯಬೇಕು. ಬೋಧೆ ಪರಿಣಾಮಕಾರಿಯಾಗುವುದು ಮತ್ತು ಬೋಧಕನಿಗೆ ಬೋಧಿಸುವ ನೈತಿಕ ಹಕ್ಕು ದೊರೆಯುವುದು ಆಚರಣೆಯಲ್ಲಿದ್ದಾಗ ಮಾತ್ರ ರಾಮಕೃಷ್ಣ ಪರಮಹಂಸರಲ್ಲಿಗೆ ಹಣ್ಣಾದ ಮುದುಕಿಯೊಬ್ಬಳು ಬಂದು ತನ್ನ ಮೊಮ್ಮಗ ಬಹಳಷ್ಟು ಬೆಲ್ಲ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದನ್ನು ಬಿಡಿಸಬೇಕೆಂದು ಪಾರ್ಥಿಸುತ್ತಾಳೆ. ರಾಮಕೃಷ್ಣರು ಎಂಟು ದಿನ ಬಿಟ್ಟು ಮೊಮ್ಮಗನನ್ನು ಕರೆದುಕೊಂಡು  ಬರಲು ಹೇಳುತ್ತಾರೆ. ಹಾಗೆಯೇ ಮುದುಕಿಯು ಎಂಟು ದಿನಗಳ ನಂತರ ಮೊಮ್ಮಗನನ್ನು ಅವರಲ್ಲಿಗೆ ಕರೆತರುತ್ತಾಳೆ. ರಾಮಕೃಷ್ಣರು ಆ ಹುಡುಗನಿಗೆ ಅತಿಯಾಗಿ ಬೆಲ್ಲ ತಿನ್ನಬಾರದೆಂದೂ, ಅದರಿಂದ ಆರೋಗ್ಯ ಕೆಡುವುದೆಂದೂ ಬೋಧಿಸುತ್ತಾರೆ. ಆಶ್ಚರ್ಯಚಕಿತಳಾದ ಮುದುಕಿ ಈ ಮಾತನ್ನು ಎಂಟು ದಿನಗಳ ಹಿಂದೆಯೇ ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ರಾಮಕೃಷ್ಣರು ‘ತಾಯಿ ಆಗ ನಾನೇ ಹೆಚ್ಚಾಗಿ ಬೆಲ್ಲ ತಿನ್ನುತ್ತಿದ್ದೆ. ಆ ಹುಡುಗನಿಗೆ ಹೇಳುವ ನೈತಿಕ ಹಕ್ಕು ನನಗೆಲ್ಲಿತ್ತು? ಈ ಎಂಟು ದಿನಗಳ ಅವಧಿಯಲ್ಲಿ ನಾನು ಸಂಪೂರ್ಣವಾಗಿ ಬೆಲ್ಲ ತಿನ್ನುವುದನ್ನು ತ್ಯಜಿಸಿರುವೆ’ ಎನ್ನುತ್ತಾರೆ. ಅಂತೆಯೇ ನಡೆದು ನುಡಿಯುವುದು ಶ್ರೇಯಸ್ಕರ. ಅದುವೇ ಶ್ರೇಷ್ಠ ಜನರ ಆದರ್ಶ.

ಸಮಾಜದ ಕಣ್ಣುಗಳು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು

ಲೇಖಕ: ಶ್ರೀಕಂಠ.ಚೌಕೀಮಠ.

 

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಕನ್ನಡ ನಾಡು ಕಂಡ ಅಪ್ರತಿಮ, ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ಇಬ್ಬರು ಮಹಾನುಭಾವರನ್ನು ಸ್ಮರಿಸುವ ಸುಯೋಗ ನನ್ನದು. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳದ್ದು ೧೫೭ನೆಯ ಜಯಂತಿ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳದ್ದು ೧೫೦ನೆಯ ಜಯಂತಿ ಮಹೋತ್ಸವಗಳ ಸಂಭ್ರಮಾಚರಣೆಯ ಶುಭಗಳಿಗೆಗೆ ನನ್ನ ತೊದಲ್ನುಡಿಗಳ ನುಡಿ ನಮನ !

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜನ್ಮ ತಾಳಿದ್ದು ೧೧-೦೯-೧೮೬೭.ರಲ್ಲಿ

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಜನ್ಮ ತಾಳಿದ್ದು ೨೭-೮-೧೮೭೪ ರಲ್ಲಿ.

ವಯಸ್ಸಿನಲ್ಲಿ ಏಳು ವರ್ಷ ಹಿರಿಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಮದ್ಯದಲ್ಲಿದ್ದುದು ಅಂತಃಕರುಣೆ,ವಾತ್ಸಲ್ಯ ಮತ್ತು ಸಮಾಜೋಭಿವೃದ್ದಿಯ ಚಿಂತನೆಗಳ ಅವಿನಾಭಾವ ಸಂಬಂಧಗಳು.

ಅವರೀರ್ವರೂ ಚಿಂತಿಸಿದ್ದು ಮತ್ತು ಅವಿಶ್ರಾಂತವಾಗಿ ಅಹೋರಾತ್ರಿ  ದುಡಿದಿದ್ದು ಸಮಾಜಕ್ಕಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ.ಅವರೀರ್ವರ ಮಧ್ಯ ಒಂದು ಅವಿನಾಭಾವ ಸಂಬಂಧವಿತ್ತು.ಪರಸ್ಪರ ಸಹಾಯ ಸಹಕಾರವಿತ್ತು.ಪರಸ್ಪರ ಆರ್ಥಿಕ ಬೆಂಬಲವಿತ್ತು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂಧರ್ಭದಲ್ಲಿ (೧೯೦೦-೧೯೦೩)ಹಿರಿಯ ಸಹೋದರನ ಸ್ಥಾನದಲ್ಲಿ ನಿಂತು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಹಾಯ ಸಲ್ಲಿಸಿದರು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಪಟ್ಟಾಧಿಕಾರ ಸಂಧರ್ಭದಲ್ಲಿ ಮೈಸೂರು ಒಡೆಯರ ಅವರು ನಾಮಕರಣ ಮಾಡಿದ ಆಭ್ಯರ್ಥಿಯ ತೀವೃ ಸ್ಪರ್ದೆಯಲ್ಲೂ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಜೊತೆಗಿದ್ದು ಅವರ ಪಟ್ಟಾಧಿಕಾರವನ್ನು (೧೯೦೩) ಸುಗಮಗೊಳಿಸಿದವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು.

(ಉಲ್ಲೇಖ: ೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರ ದುರ್ಗದ ಪೂಜ್ಯ  ಶ್ರೀ ಜಯದೇವ ಜಗದ್ಗುರುಗಳ ಲೇಖನ)

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಶ್ರೀಮದ್ವೀರಶೈವ ಶಿವಯೋಗಮಂದಿರದ ವತಿಯಿಂದ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಮತ್ತು ಹತ್ತಿ ಬೆಳೆಯುವ ರೈತರಿಗೆ ಸಹಾಯವಾಗಲೆಂದು ಆರಂಭಿಸಿದ ಬಾಗಲಕೋಟೆಯ ಶ್ರೀ ಶಿವಾನಂದ ಜಿನ್ನಿಂಗ ಫ್ಯಾಕ್ಟರಿಗೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೫೦೦೦ ರೂಗಳನ್ನು ಶೇರ ರೂಪ ದಲ್ಲಿ ಕೊಟ್ಟು ಪ್ರೋತ್ಸಾಹಿಸಿದರು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆ ಹಣಕಾಸು ತೊಂದರೆ ಅನುಭವಿಸಿದಾಗ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೧೯೧೭ ರಲ್ಲಿ ೬೩ ಸಾವಿರ ರೂಗಳನ್ನು ಭಕ್ತರಿಂದ ಸಂಗ್ರಹಿಸಿ ಮಹಾಸಭೆಗೆ ಚಿರಸ್ಥಾಯಿ ನಿಧಿ ಸ್ಥಾಪನೆ ಮಾಡಿಕೊಟ್ಟರು.

ಅವರೀರ್ವರ ಕಾಲಘಟ್ಟದಲ್ಲಿ  ಸಮಯ ಬೇಧಾಚರಣೆಯ ವಿಷಮ ವಾತವರಣವಿದ್ದ ಪರಿಸ್ಥಿತಿಯಲ್ಲಿ ಕುಮಾರ ಸಮಯ ಪರಂಪರೆಯ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಮುರುಘಾ ಸಮಯ ಪರಂಪರೆಯ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಎಂದಿಗೂ ಸಮಯ ಬೇಧವನ್ನು ತಮ್ಮಗಳ ಮಧ್ಯ ತಂದುಕೊಡಲಿಲ್ಲ .

ಶ್ರೀ ಕುಮಾರ ಶ್ರೀಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶ್ರೀಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ

ಆ ಪವಿತ್ರ ಮತ್ತು ಪರಸ್ಪರ ಗೌರವ ಸಂಬಂಧಕ್ಕೆ ಈ ಕೆಳಗಿನ ಘಟನೆಗಳು ಸಾಕ್ಷಿಯಾಗುತ್ತವೆ.

  1. ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ
  2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣವನ್ನು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಮೃತಹಸ್ತದಿಂದ ನೆರವೇರಿಸಿದ್ದು .ಮತ್ತು
  3. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು                                                                                                                                 ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ.

ವೀರಶೈವ ಧರ್ಮ ಸಾಮ್ರಾಜ್ಯ ಪ್ರಸಿದ್ಧ ಮಠವಾದ ಚಿತ್ರದುರ್ಗ ಜಗದ್ಗುರು ಪೀಠ ಅತ್ಯಂತ ಪ್ರತೀಷ್ಠೆಯ ಪೀಠ. ಪೀಠದ ಉತ್ತರಾಧಿಕಾರತ್ವಕ್ಕೆ ಹಲವು ರೀತಿಯ ಸ್ಪರ್ಧೆಗಳು ಜೊತೆ ಮೈಸೂರು ಒಡೆಯರ ಹಸ್ತಕ್ಷೇಪಗಳು ೧೯೦೩ ರ ನವ್ಹಂಬರ ತಿಂಗಳಲ್ಲಿ  ಬ್ರಿಟಿಷರ ಹದ್ದಿನ ಕಣ್ಗಾವಲಿನಲ್ಲಿ ಜರಗಿದವು.

ಆ ಸಂಧರ್ಬದಲ್ಲಿ ಜಯದೇವ ಪಂಡಿತರು ಬ್ಯಾಡಗಿಯ ಅಂಕಲಕೋಟೆಯವರ ಮನೆಯಲ್ಲಿದ್ದರು ಅವರ ಜೊತೆಗೆ ಕಡಕೋಳದ ಬಸವಪ್ಪನವರೂ ಇದ್ದರು..ಚಿತ್ರದುರ್ಗ ಜಗದ್ಗುರು ಪೀಠದ ಉತ್ತರಾಧಿಕಾರಿಗಳು ಯಾರು ಎಂದು ೧೯೦೩ ಮೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿ ಜರುಗಿದ ಬಸವಪುರಾಣ ಸಂಧರ್ಭದಲ್ಲಿ ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಜಯದೇವ ಪಂಡಿತರೆಂದು  ಘೋಷಣೆಯನ್ನು ಮಾಡಿದ್ದರು. ಆ ಘೋಷಣೆಯ ಆಧಾರದ ಮೇಲೆ ಸೊಲ್ಲಾಪುರದ ವಾರದ ಮಲ್ಲಪ್ಪನವರು ಜಯದೇವ ಪಂಡಿತರಿಗೆ ಚಿತ್ರದುರ್ಗಕ್ಕೆ ಆಗಮಿಸಲು ತಂತಿ ಸಂದೇಶವನ್ನು ಕಳುಹಿಸಿದರು.ಬ್ಯಾಡಗಿಯಿಂದ ಹೊಳಲ್ಕೆರೆಗೆ ಉಗಿ ಬಂಡಿಯಲ್ಲಿ ಬಂದ ಜಯದೇವ ಪಂಡಿತರನ್ನು ಅಲ್ಲಿಂದ ಅವರಿಗಾಗಿ ಕಾದಿದ್ದ ಕುದುರೆಗಾಡಿಯಲ್ಲಿ ಚಿತ್ರದುರ್ಗದ ಬೃಹನ್ಮಠಕ್ಕೆ ಕರೆ ತರಲಾಯಿತು. ಬಹುಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಅವರನ್ನು ಹೃತ್ತೂರ್ವಕ ಬರಮಾಡಿಕೊಂಡು, ಅನಾದಿ ಕರ್ತೃ ಶ್ರೀ ಮುರುಘರಾಜೇಂದ್ರರ ಗದ್ದುಗೆಯ ದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜಯದೇವಪಂಡಿತರನ್ನು ಕಂಡು, ತಮ್ಮ ಸಂತೋಷ ವ್ಯಕ್ತಪಡಿಸುತ್ತ “ಶ್ರೀ ಮುರುಘೇಶನ ಸಂಪೂರ್ಣ ಕೃಪೆ ತಮ್ಮ ಮೇಲಿದೆ. ಅದನ್ನು ಹುಸಿಯಾಗಿಸಲು ಯಾರಿಂದಲೂ  ಸಾಧ್ಯವಿಲ್ಲ. ತಾವು ಈ ಶೂನ್ಯ ಪೀಠವನ್ನು ಅಲಂಕರಿಸುತ್ತಿರುವುದು ನಮಗಂತೂ ಎಲ್ಲಿಲ್ಲದ ಸಂತೋಷ ತಂದಿದೆ. ತಮ್ಮಂತಹ ದೂರದೃಷ್ಟಿಯುಳ್ಳವರು ಪೀಠದ ಒಡೆತನ ವಹಿಸಿಕೊಳ್ಳುವುದ ರಿಂದ ಬ್ರಹನ್ಮಠದ ಕೀರ್ತಿ ದಿಗ್‌ದಿಗಂತದಲ್ಲಿ ಹಬ್ಬುವುದಲ್ಲದೆ, ಪೀಠವನ್ನು ಮುನ್ನೆಡೆಸಿಕೊಂಡು ಹೋಗುವಲ್ಲಿ ತಾವು ಯಶಸ್ವಿಯಾಗುತ್ತೀರೆಂಬ ಸಂಪೂರ್ಣ ವಿಶ್ವಾಸ ನಮ್ಮದು.” ಎಂದು ಅಭಿನಂದಿಸಿದರು.

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಈ ಮಾತುಗಳಿಗೆ ಉತ್ತರವಾಗಿ ಜಯದೇವ ಪಂಡಿತರು “ತಾವು ಬಹುದೊಡ್ಡ ಮಾತುಗಳನ್ನಾಡಿದ್ದೀರಿ. ತಮ್ಮ ಈ ಮಾತುಗಳನ್ನು ಸತ್ಯವಾಗಿಸುವದೇ ನಮ್ಮ ಮುಂದಿನ ಗುರಿಯಾಗಿದೆ. ತಾವಾದರೂ ವಿರಕ್ತಾಶ್ರಮ ಸ್ವೀಕರಿಸಿ ಬಹು ದಿನಗಳಾಗಿರುತ್ತವೆ. ತಾವು ಅನುಭವಿಗಳಿದ್ದೀರಿ. ಈಗಾಗಲೇ ತಮ್ಮ ವ್ಯಕ್ತಿತ್ವದ ಮುದ್ರೆ ಸಮಾಜದ ಮೇಲೆ ಅಚ್ಚೊತ್ತಿ ಮೂಡಿದೆ. ಈಗ ತಾನೆ ಈ ಪೀಠಕ್ಕೆ ಆಯ್ಕೆಯಾದ ನಮಗೆ ಎಲ್ಲ ವಿಧವಾದ ಸಹಕಾರ ನೀಡುತ್ತಿ ರೆಂದು ಭಾವಿಸಿದ್ದೇವೆ. ನಾವು ಈ ಪೀಠದ ಮೂಲಕ, ತಾವು ತಮ್ಮ ಮಠದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಇಂದು ಸಮಾಜದ ಪರಿಸ್ಥಿತಿ ಗಂಭೀರವಾಗಿದೆ. ಅನಕ್ಷರತೆ, ಅಜ್ಞಾನ, ಎಲ್ಲೆಲ್ಲ ತಾಂಡವವಾಡುತ್ತಿದೆ. ಎಷ್ಟೋ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ, ಪ್ರೋತ್ಸಾಹವಿಲ್ಲ. ಅವರ ಪ್ರತಿಭೆ ಕಾಡುಮಲ್ಲಿಗೆಯಂತೆ ಬಾಡಿಹೋಗುತ್ತಿದೆ. ಅಂಥವರ ಪ್ರಗತಿಗೆ ನಾವು ಪ್ರಯತ್ನಿಸಬೇಕಾಗಿದೆ. ಆ ದಿಶೆಯಲ್ಲಿ ನಾವು ನಮ್ಮನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳೋಣ.” ಜಯದೇವ ಪಂಡಿತರ ಅಂತಃಕರಣದಿಂದ ಹೊರಬಂದ ಈ ಮುತ್ತಿನಂತಹ ಮಾತುಗಳು ಅವರೀರ್ವರ ಪವಿತ್ರ ಸಂಬಂಧಗಳಿಗೆ ಸಾಕ್ಷೀಕರಿಸುತ್ತವೆ.

(ಉಲ್ಲೇಖ: ಜಯದೇವ ಜಗದ್ಗುರುಗಳು  ಲೇಖಕರು ಶ್ರೀ .ಮ.ನಿ.ಪ್ರ. ಶಿವಮೂರ್ತಿ ಮಹಾಸ್ವಾಮಿಗಳು  ಹೊಸಮಠ.ಹಾವೇರಿ .ಪ್ರಕಾಶನ ವೀರಶೈವ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ)

ಅದನ್ನು ಸ್ವತಃ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಸ್ಮಾರಕ ಚಂದ್ರಿಕೆ ಸ್ಮರಣಗ್ರಂಥದಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು  ನೆನೆಯುತ್ತ “ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು” ಎಂದು ಬರೆದು ಸ್ಮರಿಸಿಕೊಂಡಿರುವರು..

ಪಂ. ವೈ ನಾಗೇಶಶಾಸ್ತ್ರಿಗಳು ರಚಿಸಿದ ‘ಶ್ರೀ ಜಯದೇವ ಲೀಲೆ’ಯ ೯ ನೆಯ ಸಂಧಿಯಲ್ಲಿ-ಸೊಲ್ಲಾಪುರದ ವಾರದ ಮಲ್ಲಪ್ಪನವರು ಹುಬ್ಬಳ್ಳಿಯಲ್ಲಿ ವೀರಶೈವ ಮಹಾಸಭೆಯ ಸ್ಥಾಪನೆಗಾಗಿ ಕಾರ್ಯತತ್ಪರರಾಗಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕಂಡು ಚಿತ್ರದುರ್ಗಮಠದ ಅಧಿಕಾರ ಬಗೆಗೆ ಕೇಳಿದಾಕ್ಷಣ ಪೂಜ್ಯರು ‘ಶ್ರೀಜಯದೇವ ಪಂಡಿತರನ್ನೇ ಚಿತ್ರದುರ್ಗ ಪೀಠಕ್ಕೆ ಆರಿಸುವದು ಉಚಿತವು. ಅವರಿಂದಲೇ ಸಮಾಜೋದ್ಧಾರ ಹಾಗೂ ಸಮಾಜೋನ್ನತಿಯ ಸತ್ಕಾರ್ಯವಾಗುವುದು ಸಾಧ್ಯವಿದೆ.” (ಶ್ರೀ ಜಯದೇವ ಲೀಲೆಯ ಕಥಾಸಾರ ಪುಟ ೩೨) ಎಂದು ಅಪ್ಪಣೆ ಮಾಡಿದ್ದನ್ನೇ ಬರೆದಿದ್ದಾರೆ.

ವಸ್ತುಸ್ತಿತಿ ಹೀಗಿದ್ದರೂ ಸಂಕುಚಿತಭಾವದ ಕಲ್ಮಷ ಹೃದಯದ ಲೇಖಕರು ಮತ್ತು ಕೆಲವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕುರಿತು ಬರೆದ ಮತ್ತು ಹಬ್ಬಿಸಿದ ವಿಷಯಗಳು ಖಂಡನೀಯವಾದುದು.

೧೯೫೬ ರಲ್ಲಿ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಲಿಂಗೈಕ್ಯರಾದ ಮೇಲೆ ಪ್ರಕಟವಾದ “ಶ್ರೀ ಜಗದ್ಗುರು ಜಯದೇವ ದಿಗ್ವಿಜಯ” ಪುಟ ೧೭ ರಲ್ಲಿ- “ಚಿತ್ರ ದುರ್ಗದಲ್ಲಿ ಉತ್ತರಾಧಿಕಾರ ಸಮಾರಂಭಕ್ಕೆ ಬಹು ಭರದಿಂದ ಏರ್ಪಾಟು ನಡೆದಿತ್ತು. ಅನೇಕ ಪಟ್ಟ ಚರ ಮೂರ್ತಿಗಳೂ, ಬ್ರಹ್ಮಚಾರಿಗಳೂ ಅಭ್ಯರ್ಥಿಗಳಾಗಿ ಬಂದಿದ್ದರು. ಬರುತ್ತಲಿದ್ದರು. ಇವರಲ್ಲಿ ಶ್ರೀಮನ್ ಪ್ರಣವ ಸ್ವರೂಪಿ ಹಾನಗಲ್ಲ ಕುಮಾರ ಸ್ವಾಮಿಗಳೂ ಒಬ್ಬರು ಎಂದು ಬರೆಯುತ್ತ ಮುಂದೆ ಅನೇಕ ಅಸಂಬದ್ಧ ವಿಚಾರಗಳನ್ನು ಪ್ರಸ್ತಾಪಿಸಿ ೨೫ ನೆಯ ಪುಟದಲ್ಲಿ-೧೯೦೩ ನೆಯ ನವಂಬರ ತಿಂಗಳು ಒಂದನೆಯ ತಾರೀಖು ಬೆಳಿಗ್ಗೆ ಒಂಬತ್ತು ಘಂಟೆಗೆ ಚುನಾವಣೆ ನಡೆದು ಹಾನಗಲ್ಲ ಸ್ವಾಮಿಗಳು ಅಪಯಶಸ್ವಿಗಳಾದರೆಂದು ಬರೆಯಲಾಗಿದೆ.

ಆಶ್ಚರ್ಯವೇನೆಂದರೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳಿದ್ದ ಸಂಧರ್ಭದಲ್ಲಿ ಸನ್ ೧೯೪೦ ರಲ್ಲಿ ಎನ್. ಎಚ್. ಹೊಸೂರವರು ಬರೆದ “ಶ್ರೀಜಗದ್ಗುರು ಜಯದೇವ ಮುರಘಾರಾಜೇಂದ್ರ ವಿಜಯ” ದಲ್ಲಿಯೂ ಈ ವಿಚಾರ ಉಲ್ಲೇಖಿಸಲ್ಪಟ್ಟಿಲ್ಲ.

೧೯೫೬ ರಲ್ಲಿ ಶ್ರೀ ಜಗದ್ಗುರುಗಳು ಲಿಂಗೈಕ್ಯರಾದ ತರುವಾಯ ೧೯೬೬ರಲ್ಲಿ ಪ್ರಕಟವಾದ ಶ್ರೀ ಜಗದ್ಗುರು ಜಯದೇವ ದಿಗ್ವಿಜಯ”ದ ಅಸಂಬದ್ಧ ಹಾಗೂ ಅಸಮಂಜಸ ವಿಷಯಗಳಿಗಾಗಿ ವಿಷಾದ ಪಡಬೇಕಾಗಿದೆ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

ಇಂಥ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವವರಿಗೆ ಒಂದು ಸ್ಪಷ್ಠವಾದ ಸ್ಪಷ್ಠೀಕರಣವನ್ನು ಕೊಡಲು ಬಯಸುತ್ತಿದ್ದೇನೆ.

೧೮೯೫ ರಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ತಮ್ಮ ಗುರುಗಳಾದ ಯಳಂದೂರು ಪೂಜ್ಯ ಶ್ರೀಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾದ (ಅಣ್ಣಿಗೇರಿ) ಮೇಲೆ ಸೊರಬ ತಾಲೂಕಿನ ಕ್ಯಾಸನೂರು  ಶ್ರೀ ಗುರುಬಸವ ಮಹಾಸ್ವಾಮಿಗಳವರ ಕ್ರಿಯಾ ಸಮಾಧಿ ಸ್ಥಳದಲ್ಲಿ ಅನುಷ್ಠಾನವನ್ನು ಆಚರಿಸುತ್ತಿದ್ದರು. ಆ ಸಂಧರ್ಭದಲ್ಲಿ ಹಾನಗಲ್ಲಿನ ವಿರಕ್ತಮಠದ ಪೂಜ್ಯ ಶ್ರೀ ಫಕೀರಸ್ವಾಮಿಗಳು ತಮ್ಮ ಶಿಷ್ಯರಾದ ಕೆಂಡಪ್ಪಗೌಡರನ್ನು ಕಳುಹಿಸಿ ಪೂಜ್ಯ ಕುಮಾರ ಶ್ರೀಗಳನ್ನು ಹಾನಗಲ್ಲ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲು ಆವ್ಹಾನವನ್ನು ಕೊಟ್ಟಾಗ ಮೊದಲು ಅಧಿಕಾರವನ್ನು ತಿರಸ್ಕರಿಸಿದವರು ಶ್ರೀ ಕುಮಾರ ಶ್ರೀಗಳು ( ನಂತರ ಬಿದರಿ ಕುಮಾರ ಸ್ವಾಮಿಗಳು ಶ್ರೀಗಳ ಮನವಲಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕಾಯಿತು).೧೮೯೬ ರಲ್ಲಿ ಪೂಜ್ಯ ಶ್ರೀ ಕುಮಾರ ಶ್ರೀಗಳು ಹಾನಗಲ್ಲ ಶ್ರೀ ವಿರಕ್ತಮಠದ ಪೀಠಾಧ್ಯಕ್ಷರಾದರು

ಒಂದು ವೇಳೆ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳಿಗೆ ಅಧಿಕಾರದ ವ್ಯಾಮೋಹ ಇದ್ದಿದ್ದೇ ಆಗಿದ್ದರೆ…….

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳೇ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ , ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಮತ್ತು ತಮ್ಮ ಶಿಷ್ಯ ಪಂ.ಪಂಚಾಕ್ಷರ ಗವಾಯಿಗಳ ಮೂಲಕ ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಗದುಗಿನ ಅಧ್ಯಕ್ಷ ಸ್ಥಾನಗಳನ್ನು ವಹಿಸಿಕೊಳ್ಳ ಬಹುದಿತ್ತು.

ಅವರೆಂದೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ.

ಸನ್ ೧೯೦೩ ರ ಮೇ ತಿಂಗಳಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀಬಿದರಿ ಕುಮಾರ ಮಹಾಸ್ವಾಮಿಗಳ ಸದಿಚ್ಛೆಯಂತೆ ನಡೆದ ಬಸವ ಪುರಾಣದ’ ಮಂಗಲೋತ್ಸವಕ್ಕೆ ಅಥಣಿ, ಹುಬ್ಬಳ್ಳಿ, ಹಾನಗಲ್ಲು, ಹಾವೇರಿ ಮೊದಲಾದ ಮಹಾಸ್ವಾಮಿಗಳು ದಯಮಾಡಿಸಿದ್ದರಲ್ಲದೆ, ಜಯದೇವ ಪಂಡಿತರೂ ಆಗಮಿಸಿದ್ದರು. ಆ ಮಹಾಸಭೆಯಲ್ಲಿಯೇ ‘ವೀರಶೈವ ಮಹಾಸಭೆ’ ಜರುಗಿಸಲು ಬೀಜಾರೋಪಣವಾಯಿತು. ಪ್ರಪ್ರಥಮತಃ ಹಾನಗಲ್ಲ ಶ್ರೀಗಳವರೇ ೧೦೧ರೂ. ಗಳನ್ನು ವೀರಶೈವ ಮತ ಪ್ರಚಾರಕ ಸಭೆಯವರಿಗೆ ಆಶೀರ್ವದಿಸಿದರಲ್ಲದೆ ತಾವೇ ಮುಂದಾಗಿ ೧೯೦೩ ರ ಡಿಶಂಬರ ತಿಂಗಳಲ್ಲಿ ಮೊದಲನೆಯ .ಮಹಾಸಭೆಯನ್ನು ಕೂಡಿಸುವ ಪ್ರಯತ್ನದಲ್ಲಿ ತೊಡಗಿದರು. ಧನಸಂಚಯಕ್ಕಾಗಿ ಹುಬ್ಬಳ್ಳಿ ಧಾರವಾಡ, ಸಂಶಿ, ಬ್ಯಾಡಗಿ, ಮಹಾರಾಜಪೇಟೆ, ಗರಗ, ಮಮ್ಮಿಗಟ್ಟಿ ಮೊದಲಾದ ಗ್ರಾಮಗಳಲ್ಲಿ ಭಿಕ್ಷೆಗೈದರೆಂದು ಅಖಿಲ ಭಾರತ ವೀರಶೈವ ಮಹಾಸಭೆಯ ೧ ನೆಯ ರಿಪೋರ್ಟಿನಲ್ಲಿ ಉಕ್ತವಾಗಿದೆ.

ಜೂನ ೨೨ ನೇ ತಾರೀಖಿನಿಂದಲೇ ಸಮಾಜ ಕಾರ್ಯದಲ್ಲಿ ಎಡಬಿಡದೆ ಸೇವೆಗೈಯ್ಯುವ ಹಾಗೂ ಹಾನಗಲ್ಲ ಮಠಕ್ಕೇನೆ ಅಧಿಕಾರ ಬಯಸದ ಶ್ರೀಗಳು ಚಿತ್ರದುರ್ಗ ಮಠದ ಅಧಿಕಾರಕ್ಕಾಗಿ ಆಶಿಸಿದರೆಂಬ ಮಾತು ಹಾಸ್ಯಾಸ್ಪದವಲ್ಲದೆ ಮತ್ತೇನು ? ಮತ್ತು ಜಯದೇವ ಪಂಡಿತರಿಗೆ ಕಲಿಯಲು ಸಹಾಯ ಸಲ್ಲಿಸಿದವರೇ ಅವರ ವಿರುದ್ದವಾಗಿ ಚುನಾವಣೆಗೆ ನಿಂತರೆಂಬ ಸಂಗತಿ ಸತ್ಯಕ್ಕೆ ದೂರವಾದ ಮಾತೇ ಸರಿ. ಒಂದುಪಕ್ಷ ಭಕ್ತರ ಅಭಿಪ್ರಾಯವಿದ್ದರೂ ಒಪ್ಪದವರು       ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು. ಯಾಕಂದರೆ ವಾರದ ಮಲ್ಲಪ್ಪನವರು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಶ್ರೀ ಜಯದೇವ ಪಂಡಿತರ ಹೆಸರನ್ನೇ ಸೂಚಿಸಿದ್ದು ಗಣನೀಯವಾಗಿದೆ. ದೊಡ್ಡವರ ಚರಿತ್ರ ದೊಡ್ಡದಾಗಿಯೇ ಇರುತ್ತದೆ. ಮಹಾತ್ಮರ ನೈಜ ವ್ಯಕ್ತಿತ್ವವನ್ನು ಯಥಾರ್ಥವಾಗಿ ಅವಲೋಕಿಸುವದು ಸಮಾಜ ಬಾಂಧವರ ಹಾಗೂ ಸಾಹಿತಿಗಳ ಪರಮ ಕರ್ತವ್ಯವಾಗಿದೆ.

ಘನವೈರಾಗ್ಯ ಶೀಲರೂ, ಸಮಾಜದ ಹಿತ ಚಿಂತಕರೂ ಆದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು  ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀ ಜಗದ್ಗುರು ಗಂಗಾಧರಸ್ವಾಮಿಗಳ ಹಾಗೂ ಗುರುಸಿದ್ಧ ಮಹಾಸ್ವಾಮಿಗಳ ಅಧಿಕಾರದಲ್ಲೂ ದುಡಿದದ್ದು ಕಂಡು ಬರುತ್ತದೆ. ಒಂದಲ್ಲ, ಎರಡಲ್ಲ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕಾಯವನ್ನು ಗಂಧದಂತೆ ಸವೆಸಿದರೂ ಸಂತೃಪ್ತಿಪಡುವ ಸ್ವಭಾವ ಅವರದಾಗಿರಲಿಲ್ಲ. ಸ್ವಾರ್ಥದ ಲವಲೇಶವಂತೂ ಅವರಲ್ಲಿರಲಿಲ್ಲ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

 2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣ:

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶ್ರೀಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

  1. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು.

ಪೂಜ್ಯರಿಬ್ಬರನ್ನೂ ಕಣ್ಣಾರೆ ಕಂಡಿದ್ದ ಕವಿರತ್ನ ದ್ಯಾಂಪೂರ ಚನ್ನ ಕವಿಗಳು ತಮ್ಮ ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ ದಲ್ಲಿ ಪೂಜ್ಯರಿಬ್ಬರ ಅಂತಿಮ ಭೇಟಿಯನ್ನು ಅತ್ಯಂತ ಹೃದಯ ಸ್ಪರ್ಷಿಯಾಗಿ ವರ್ಣಿಸಿರುವರು

 ಅನಿತರೊಳು ಚಿತ್ರದುರ್ಗದ ಜಗದ್ಗುರುವರೇ-

ಣ್ಯನು ತವಕದಿಂದ ದಯೆಮಾಡಿಸಿದನೋ ಪ್ರಭುವೆ-

ಮನಮೊಪ್ಪಿ ಹಿಂದೆ ಮಾತಾಡಿದಂತೀ ಸಮಾಜೋದ್ಧಾರಮಂ ಮಾಡಿರಿ

ಎನುತೀ ಕುಮಾರೇಶನಾಗ ಬಿನ್ನಯಿಸಲಾ

ಘನಮಹಿಮನೈ ನಿಮ್ಮ ಪ್ರಕೃತಿಯೆಂತಿಹುದೊರೆವು-

ದೆನಲಿದೇನೆಮ್ಮಿ ಸಮಾಜವೆಂತಿಹುದೆಂದು ಕೇಳಲಿಲ್ಲೇಕೆ ತಾವು

ಭಾವಾರ್ಥ : ಅಷ್ಟರಲ್ಲಿ ಚಿತ್ರದುರ್ಗದ ಜಯದೇವ ಜಗದ್ಗುರುಗಳು ದಯಮಾಡಿಸುತ್ತಾರೆ. ಅವರಿಗೆ ಕುಮಾರೇಶ ನಮಸ್ಕರಿಸಿ ಕೂಡಲೇ ಕೇಳಿಕೊಂಡದ್ದು, “ಪೂಜ್ಯರೇ ಮನವೊಪ್ಪಿ ಹಿಂದೆ ಮಾತನಾಡಿದಂತೆ ಈ ಸಮಾಜದ ಉದ್ಧಾರವನ್ನು ಮಾಡಿರಿ” ಎಂದು. ಆಗ ಜಗದ್ಗುರುಗಳು “ಈಗ ನಿಮ್ಮ ಪ್ರಕೃತಿ ಹೇಗಿದೆ?” ಎಂದು ಕುಮಾರೇಶನನ್ನು ಕೇಳಲು ಅವರು, “ಬುದ್ಧಿ ತಾವು ಸಮಾಜ ಹೇಗಿದೆ ಎಂದು ಕೇಳಲಿಲ್ಲವೇಕೆ?”

ಎನ್ನಲು,

ಎಂದೀ ಸದಾಶಿವಂ ಪಡಿನುಡಿಗೊರಲ್ದೇಳ್ದು

ಮುಂದುವರಿವಳಲಿಂದ ಕಂಬನಿಗಳುದುರಲಕ-

ಟೆಂದೀತನಂದು ನಿಮ್ಮಂ ಪೋಲ್ವ ಮತಸುಧಾರಕಭೂತಿಗಳಾರು ಧಾರಿಣಿಯೊಳು

ಮುಂದೀ ತೆರದ ಮಹಾಶಿವಯೋಗಿಯವತರಿಸಿ

ಬಂದೊಡೆಮ್ಮಿ ಸಮಾಜದ ಪುಣ್ಯವೆಂದು ಮನ

ದಂದಾಡಿದಂ ಜಗದ್ಗುರುವರಂ ಪಲುಬಿದಂ ಪೆರ್ಚಿದನುತಾಪದಿಂದ

ಭಾವಾರ್ಥ : ಜಗದ್ಗುರುಗಳಿಗೆ ಕುಮಾರಸ್ವಾಮಿಗಳಲ್ಲಿರುವ ಅಪರಿಮಿತ ಸಮಾಜೋದ್ಧಾರದ, ಹಂಬಲವ, ತಿಳಿದು, ಜಗದ್ಗುರುಗಳ ಕಣ್ಣುಗಳು ಹನಿಗೂಡಿದವು. ಗದ್ಗದಿತರಾಗಿ “ನಿಮಗೆ ಸರಿ ಸಮಾನರಾದ ಸಮಾಜ ಚಿಂತಕರು, ಇಂದಿನ ದಿನಮಾನಗಳಲ್ಲಿ ಯಾರೂ ಇಲ್ಲ. ಮುಂದೆ ಈ ತೆರದ ಮಹಾಶಿವಯೋಗಿ ಅವತರಿಸಿ ಬಂದರೆ, ಅದು ನಮ್ಮ ಸಮಾಜದ ಪುಣ್ಯ” ಎಂದು ಉದ್ಗರಿಸಿದರು, ದುಃಖತಪ್ತರಾದರು.

(ಸೌಜನ್ಯ: ಕವಿರತ್ನ ದ್ಯಾಂಪೂರ ಚನ್ನ ಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ” ವ್ಯಾಖ್ಯಾನ ಪೂಜ್ಯ ಅಭಿನವ ಸಿದ್ದಾರೂಢ ಸ್ವಾಮಿಗಳು )

೧೯-೦೨-೧೯೩೦ ರಂದು ಲಿಂಗೈಕ್ಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಕ್ರಿಯಾ ಸಮಾಧಿಯ ಕಾರ್ಯಕ್ರಮಕ್ಕೆ ದಯಮಾಡಿಸಿ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಅಂತಿಮ ಗೌರವ ಸಲ್ಲಿಸಿದ್ದು ಚರಿತ್ರಾರ್ಹವಾಗಿದೆ ,

೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳ ಲೇಖನದ ಪೂರ್ಣಪಾಠ.ಸಂಕುಚಿತ ಮನೋಭಾವದ ಮಹಾನುಭಾವರಿಗೆ ಸ್ಪಷ್ಠ ಉತ್ತರ  ನೀಡುತ್ತದೆ.

ಶ್ರೀ ಮನ್ನಹಾರಾಜ ನಿರಂಜನ ಜಗದ್ಗುರು ಜಯದೇವ

ಶ್ರೀ ಮುರುಘರಾಜೇಂದ್ರ ಮಹಾಸ್ಟಾಮಿಗಳು,

ಮುರಘಾಮಠ, ಚಿತ್ರದುರ್ಗ

ಸಂದೇಶ ಕೃಪೆ: ಸ್ಮಾರಕ ಚಂದ್ರಿಕೆ ಪ್ರಕಟಣೆ ೧೯೩೧.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರ ಪರಿಚಯವು ನಾವು ಕಾಶಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಉಂಟು. ಇವರು ದೂರದರ್ಶಿಗಳು,ಶಿವಾನುಭವಿಗಳು, ಆಧ್ಯಾತ್ಮಿಕ ವಿಚಾರದಲ್ಲಿ ಸುಜ್ಜರು ಮತ್ತು ಸಮಾಜದ ಹಿತಕ್ಕೋಸ್ಕರ ಅವಿಶ್ರಾಂತ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸುವದರಲ್ಲಿ ಮೊದಲನೆಯವರು ಎಂದು ಶ್ಲಾಘಿಸಿಕೊಳ್ಳಲು ಅರ್ಹರಾಗಿದ್ದರು. ಲೌಕಿಕ ಮತ್ತು ಪಾರಮಾರ್ಥಿಕ ವಿದ್ಯಾಭ್ಯಾಸಗಳನ್ನು ಮಾಡುತ್ತಿದ್ದ ನಮ್ಮ ಜನಾಂಗದವರಿಗೆ ಕೈಲಾದ ಮಟ್ಟಿಗೆ ಮೊದಲಿನಿಂದಲೂ ಸಹಾಯ ಮಾಡುತ್ತಿದ್ದರೆಂಬುದಕ್ಕೆ ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ, ಇನ್ನಿತರರಿಗೂ ಸಹಾಯ ಮಾಡಿದುದೇ ನಿದರ್ಶನವಾಗಿದೆ.

ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು. ಬಿದರಿ ಮತ್ತು ಸವದತ್ತಿ ವಿರಕ್ತಮಠಗಳ ಶ್ರೀ ಕುಮಾರ ಸ್ವಾಮಿಗಳು ವಿರಕ್ತಾಶ್ರಮಿಗಳಲ್ಲಿ ಶ್ರೇಷ್ಠತರ ಯೋಗ್ಯತಾ ಸಂಪನ್ನ ಯತಿಪುಂಗವರಾಗಿದ್ದರು. ಇವರು ಸವದತ್ತಿಯ ಪುರಾಣ ಸಮಾಪ್ತಿ ಮಹೋತ್ಸವಕ್ಕೆ ಅಥಣಿ ಶ್ರೀ ತಪಸ್ವಿ ಮುರಘೇಂದ್ರ ಸ್ವಾಮಿಗಳೇ ಮೊದಲಾದ ವಿರಕ್ತ ಶ್ರೇಷ್ಠರನ್ನು ಮತ್ತು ಶ್ರೀ ಕಿತ್ತೂರು ರೇವಣಸಿದ್ಧಪ್ಪನವರೇ ಮೊದಲಾದ ದೊಡ್ಡ ಮನುಷ್ಯರನ್ನು ಬರಮಾಡಿಕೊಂಡಿದ್ದರು.

ಆ ಕಾಲದಲ್ಲಿ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೇ ವೀರಶೈವ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ನಮ್ಮ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಏರ್ಪಡಿಸಿ ಸುಸಂಕಲ್ಪದಂತೆ ಮಹಾಸಭೆಯನ್ನು ಮಾಡಬೇಕೆಂದು ನಿರ್ಣಯ ಮಾಡಿಸಿದವರಾದುದರಿಂದ ಇವರೇ ವೀರಶೈವ ಮಹಾಸಭಾ ಸ್ಥಾಪಕರಾಗಿರುತ್ತಾರೆ.

ಇವರು ಮಹಾ ತಪೋನಿಷ್ಠರು, ಅಸಾಧಾರಣ ಕಾರ್ಯನಿರ್ವಾಹಕರು, ಅಸಮರ್ಥರನ್ನು ಸಮರ್ಥರನ್ನಾಗಿ ಮಾಡುವುದರಲ್ಲಿ ಒಳ್ಳೆ ದಕ್ಷರು ಆಗಿದ್ದರು, ಆದುದರಿಂದಲೇ ಮನೋನಿಗ್ರಹದ ಮೂಲಕ ಚಿತ್ತಶುದ್ಧಿಯಾಗುವುದಕ್ಕೆ ಸಾಧನವಾದ ಶಿವಯೋಗ ಮಂದಿರವೆಂಬ ಒಂದು ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು.

ನಮಗೂ ಮತ್ತು ಇವರಿಗೂ ಕೆಲವು ವಿಷಯಗಳಲ್ಲಿ ಮತಭೇದಗಳಿದ್ದರೂ ಉದ್ದೇಶದಲ್ಲಿ ಭೇದವಿರಲಿಲ್ಲ ಇವರು ಈ ಸಮಯದಲ್ಲಿ ಶಿವೈಕ್ಯರಾದುದರಿಂದ ಸಮಾಜದಲ್ಲಿ ಕೆಲವು ದುರಹಂಕಾರಿಗಳು ಉಂಟುಮಾಡಿರುವ ಅಶಾಂತತೆಯನ್ನು ನಿವಾರಣೆ ಮಾಡಲು ಬಹುಪ್ರಯಾಸವಾಗಿದೆ.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳಿಂದ ಸ್ಥಾಪಿತವಾದ ಕಾರ್ಯಗಳು ಅಭಿವೃದ್ಧಿಯನ್ನು ಹೊಂದಿ ಸಮಾಜಕ್ಕೆ ಓತಸಾಧಕಗಳಾಗುವದೇ ಅವರ ನಿಜವಾದ ಸ್ಮಾರಕವು. ಆದುದರಿಂದ… ಅಂತಹ ಸ್ಥಿತಿಯು ಪ್ರಾಪ್ತ ವಾಗಲೆಂದು ಹಾರೈಸೋಣವಾಗಿದೆ.

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶ್ರೀಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ.

ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ವಿುಕ ಯುಗಪಲ್ಲಟಕ್ಕೆ ಪ್ರಮುಖವಾಗಿ ಕಾರಣರಾದವರಲ್ಲಿ, ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಎಂದೆಂದೂ ಪ್ರಾತಃಸ್ಮರಣೀಯರು.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಮಧ್ಯಕರ್ನಾಟಕದ ಸಾಮಾಜಿಕ ಮತ್ತು ಧಾರ್ವಿುಕ ವಿಕಾಸಕ್ಕೆ ಕಾರಣರಾದದ್ದು ಚಾರಿತ್ರಿಕ ಸತ್ಯ.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವಂತ ದೇವರಾಗಿದ್ದರು

ಶ್ರೀಗಳು ಹೋದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಯಾವುದೆ ಊರಿಗೆ ಹೋದರು ಭಕ್ತರು ನೀಡಿದ ಕಾಣಿಕೆಯಲ್ಲಿ ಅದೆ ಊರಿನಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರದಿರುವುದು ಇಂದಿಗೂ ಕಾಣಬಹುದು. ಭಕ್ತರ ಹಣವನ್ನು ತಮ್ಮ ಮಠಕ್ಕೆ ತರುತ್ತಿರಲಿಲ್ಲ. ಸಮಾಜ ಸೇವೆ ಅವರ ಮುಖ್ಯ ಗುರಿಯಾಗಿತ್ತು.

ಸಮಾಜದಲ್ಲಿರುವ ಅಜ್ಞಾನ, ಅಂಧಕಾರ ಹೋಗಲಾಡಿಸಲು ವಿದ್ಯೆ ದಿವೌಷಧ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೇ ಮೂಲಾಧಾರವೆಂದು ನಂಬಿದ್ದ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ದೂರದರ್ಶಿತ್ವದಿಂದಾಗಿ ಚಿತ್ರದುರ್ಗ, ಬೆಂಗಳೂರು, ತಿಪಟೂರು, ದಾವಣಗೆರೆ, ಧಾರವಾಡ, ನರಗುಂದ, ಕೊಲ್ಲಾಪುರ, ಹಾವೇರಿ, ಅಥಣಿ, ಅರಸೀಕೆರೆ, ನಿಪ್ಪಾಣಿ, ಜಯದೇವ ವಾಡಿ(ಕಾಶಿ) ಹೀಗೆ ಪ್ರಮುಖ ನಗರ,ಪಟ್ಟಣಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅಸಂಖ್ಯ ವಿದ್ಯಾರ್ಥಿಗಳ ಬಾಳಿಗೆ

ಬೆಳಕಾಗಿದೆ.

ಸಮಾಜದ ಅಂತರಂಗದ ಶುದ್ಧಿಗೆ ಶ್ರೀಮಧ್ವೀರಶೈವ ಶಿವಯೋಗಮಂದಿರ ,ಬಹಿರಂಗದ ಅಭಿವೃದ್ಧಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಗಳನ್ನು ಸ್ಥಾಪಿಸಿ ಸತ್ತು ಹೋದ ಸಮಾಜಕ್ಕೆ ಜೀವ ತುಂಬಿದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಸಮಾಜ ಸಂಜೀವಿನಿ ಮತ್ತು ಕಾರಣಿಕ ಯುಗ ಪುರುಷರು.

ಪೂಜ್ಯರೀರ್ವರ ಸ್ಮರಣೆ ನಮ್ಮ ಬದುಕಿಗೆ ಬೆಳಕಾಗಲಿ . *************

ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾ ಸಭಾ ದೆಹಲಿ ರಾಜ್ಯ ಘಟಕ ನವದೆಹಲಿ

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ -೯೯೧೦೧೫೯೨೪೫

ಕವಿ : ..ಡಾ. ಕಿರಣ ಪೇಟಕರ

Plastic Surgeon.MBBS, MS,  MCh, and DNB Bengaluru.

 

ಪಂಪನ ನಂದನ ದೇಶದೊಳು

ಸೊಂಪಿನ ಕಬ್ಬಿಗ ವೇಶದೊಳು

ಬನವಾಸಿಯ ಬನಸಿರಿ ಗಾನ

ಇಂಪಲಿ ಹಾಡುವ ಕೋಗಿಲೆಯು

 

ಕೇಳಿದೆ ಹಾರುವ ದುಂಬಿಗೆ

“ತುಂಬಿತೆ ಜೇನಿನ ಬಿಂದಿಗೆ?”

 

ದುಂಬಿಯು ಗುಂಯ್ಗುಡುತೆಂದಿತು

“ವಿರಕ್ತಮಠದ ಬನದಲಿ,

ಅಜ್ಜನ ದರುಶನವಾಯಿತು;

ಅಮೃತ ಪಾಶನವಾದಡೆ,

ಜೇನಿನ ಗೊಡವೆಯದೇತಕೆ?”

 

ತೆಂಕಣ ಗಾಳಿಯು ಸುಯ್ಯನೆ ಸುಳಿದು

ತೇಲಿಸಿ ತಂದಿದೆ ಪರಿಮಳವ

ಮೊಲ್ಲೆ ಸಂಪಿಗೆ ಜಾಜಿ ಸೇವಂತಿಗೆ

ಗಂಧವು ಸೂಸಿದೆ ಸುಮಘಮವ

ನಿಲ್ಲಿಸಿ ಕೇಳಿದೆನೆಲ್ಲಿಗೆ ಪಯಣ?

ನಿಲದೇ ಓಡಿವೆ ಸಡಗರದಿ

“ಮಠವನು ಬೇಗ ತಲುಪುವ ಬಾರಾ

ಕುಮಾರಸ್ವಾಮಿಗಳ ಪೂಜೆಯ ಸಮಯದಿ”

 

ಆನಿಕೆರೆಯಾಚೆ  ಮೂಡಿ ಮೇಲೇರಿದ

ದಟ್ಟಕಪ್ಪನೆ ಮೋಡಗಳು

ಊರ ಗಡಿಯೊಳಗೆ ನಿಧಾऽ..ನಕೆ

ತೊನೆದಾಡುತ  ತೆವಳುತಿವೆ ನೋಡು

 

ಪುಣ್ಯಭೂಮಿ ಹಾನಗಲ್ಲಿನ ಮಣ್ಣಲಿ

ಮಳೆಯಾಗಿ ಸುರಿದು; ಜುಳುಜುಳನೆ  ಹರಿದು

ಶಿವಶರಣರ ಪಾದ ತೊಳೆವ

ಪುಳಕದೊಳಿವೆ ನೋಡು

 

ಕಾಣದ ದೇವರ ಕಾಯಕದಿ ತೋರಿ

ಕರ್ಮಸಿದ್ಧಾಂತವ ಲೋಕಕೆ ಸಾರಿ

ಜನಮಾನಸದಲಿ ನೆಲೆನಿಂತ

ಗುರುವಿಗೆ ಶರಣು ಕೋಟಿ ಶರಣು

ಶರಣು ಶರಣು ಶರಣು ಶರಣು ಶರಣು

 

..ಡಾ. ಕಿರಣ ಪೇಟಕರ