General

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ರಸನೇಂದ್ರಿಯದೊಳು ಶೋ ! ಭಿಸುವ ಚಿದ್ರಸವ ಭೋ-

ಗಿಪುದು ಬಹು ರಸಿಕ-ಅಸಮ ಗುರುಲಿಂಗವೆಂ-

ದುಸುರಿದೈ ಗುರುವೆ ಕೃಪೆಯಾಗು   ||೧೬೦||

 

ಜ್ಞಾನೇಂದ್ರಿಯಗಳಲ್ಲಿ ಎರಡನೆಯದು ರಸನೆ. ಇದು ಅಪ್‌ತತ್ತ್ವದಿಂದಾದ ತನ್ಮಾತ್ರೆಯನ್ನು ಗ್ರಹಿಸುವದು. ಅರ್ಥಾತ್ ರಸನೆ (ನಾಲಿಗೆ)ಗೆ ಅನುಭವವಾಗುವದು ರಸ. ರಸಗಳಲ್ಲಿಯೂ ಷಡ್ರಸಗಳೆಂದು ಪ್ರಸಿದ್ಧಿಯಿದೆ. ರಸನೇಂದ್ರಿಯದೊಳಗೆ ಶೋಭಿಸುವ ಮಧುರ, ಒಗರು, ಖಾರ, ಹುಳಿ, ಕಹಿ, ಲವಣವೆಂಬ ಆರು ರಸಗಳನ್ನು ಭೋಗಿಸುವವರಿಗೆ ರಸಿಕರೆಂತಲೂ ವಾಡಿಕೆಯುಂಟು. ದಿನಾಲು ಈ ಷಡ್ರಸಗಳನ್ನು ಭುಂಜಿಸುವವರಿಗೆ ರಸಿಕರೆಂದು ಹೇಳುವ ಅಗ್ಗಳಿಕೆ ಕೇಳಿಬರುತ್ತಿದೆ. ಸುಖ-ಜೀವಿಗಳು (ಶ್ರೀಮಂತರು) ಷಡ್ರಸಗಳಿಂದ ಕೂಡಿದ ಪದಾರ್ಥಗಳನ್ನು ಸ್ವೀಕರಿಸುತ್ತಾರೆ. ಇವರು ಷಡ್ರಸಗಳನ್ನು ಭೋಗಿಸುವ ಭೋಗಿಗಳೆನಿಸುವರೆ ವಿನಃ ಪ್ರಸಾದಿಗಳಾಗುವದಿಲ್ಲ. ಪ್ರಸಾದ ಗುಣಗಳನ್ನು ಪಡೆಯುವದಿಲ್ಲ.  ಪದಾರ್ಥ ಗುಣಗಳ ಬಾಧೆ ತಪ್ಪುವದಿಲ್ಲ.

 

ರಸನೇಂದ್ರಿಯಕ್ಕೆ ಗೋಚರಿಸುವ ಷಡ್ರಸಗಳನ್ನು ಗುರುತಿಸುವದು ಗುರುಲಿಂಗವು. ಈ ಗುರುಲಿಂಗವು ಕೇವಲ ರಸವನ್ನಾಗಿ ಗ್ರಹಿಸದೇ ಚಿದ್ರಸವನ್ನಾಗಿ ಸ್ವೀಕರಿಸುವಂತಾಗ ಬೇಕು. ಆಗ ರಸವು ಪ್ರಸಾದವಾಗಿ ಆನಂದವನ್ನು ಹುಟ್ಟಿಸುತ್ತದೆ. ರಸದ ಬಂಧನ ಗುರುಲಿಂಗಕ್ಕೆ ಇರುವದಿಲ್ಲ. ಗುರುಲಿಂಗವು ಸಕಲ ರಸಗಳನ್ನು ಗುರುತಿಸುವದರಿಂದ ಬಹುರಸಿಕವೆನಿಸಿದೆ. ಮತ್ತು ಅದು ರಸವನ್ನು ಚಿದ್ರಸವನ್ನಾಗಿ ಭೋಗಿಸುವದರಿಂದ ಈ ಗುರುಲಿಂಗಕ್ಕೆ ಸಮನಾದುದು ಮತ್ತೊಂದಿಲ್ಲ. ಅದಕ್ಕಾಗಿ ಅಸಮಗುರುಲಿಂಗವೆಂದು ವರ್ಣಿಸಲ್ಪಟ್ಟಿದೆ ಎಂದು ಮುಂತಾಗಿ ಗುರುನಾಥನು ರಸನೇಂದ್ರಿಯದಲ್ಲಿ ಗುರುಲಿಂಗದ ಗುರುತನ್ನು ತೋರಿಸಿಕೊಡುತ್ತಾನೆ.

 

ಚನ್ನಬಸವಣ್ಣನವರು ನಿರೂಪಿಸಿದ ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣವನ್ನು ಅವಲೋಕಿಸುವದು ಯಥಾ ಯೋಗ್ಯವಾಗಿದೆ.

 

“ಗುರುಲಿಂಗದ ಮಿಶ್ರಷಡ್ವಿದ ಲಿಂಗಾರ್ಪಣದ ವಿವರವು. ಮಧುರವಾದ ರುಚಿಯನರಿವುದು ಆಚಾರಲಿಂಗದಲ್ಲಿ, ಒಗರಾದ ರುಚಿಯನರಿವುದು ಗುರುಲಿಂಗದಲ್ಲಿ, ಖಾರವಾದ ರುಚಿಯನರಿವುದು ಶಿವಲಿಂಗದಲ್ಲಿ, ಆಮ್ಲವಾದ ರುಚಿಯನರಿವುದು ಜಂಗಮ ಲಿಂಗದಲ್ಲಿ ; ಕಹಿಯಾದ ರುಚಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ರುಚಿಯನರಿವುದು ಮಹಾಲಿಂಗದಲ್ಲಿ. ಇಂತೀ ಪಂಚರಸಂಗಳು ಲವಣ ಕೂಡಿದಲ್ಲದೇ ರುಚಿಯಾಗಿ ಆ ಲವಣವನ್ನು ಪಂಚರಸಂಗಳಲ್ಲಿ ಕೂಡಿ ಅರ್ಪಿಸಬೇಕಲ್ಲದೆ ಬೇರೆ ಬೇರೆ  ಅರ್ಪಿಸಲಾಗದು. ಇಂತು ಗುರುಲಿಂಗದ ಮಿಶ್ರಾರ್ಪಣವು.”

 

ಗುರುಲಿಂಗದೊಳಗಿನ ಆಚಾರಲಿಂಗವು ಮಧುರ ರಸವನ್ನು, ಗುರುಲಿಂಗವು ಒಗರನ್ನು, ಶಿವಲಿಂಗವು ಖಾರವನ್ನು, ಜಂಗಮಲಿಂಗವು ಆಮ್ಲವನ್ನು, ಪ್ರಸಾದ ಲಿಂಗವು ಕಹಿಯನ್ನು ಅನುಭವಿಸುವದು. ಈ ಪಂಚರಸಗಳಾದರೂ ಲವಣ (ಉಪ್ಪು) ಕೂಡದೆ ರುಚಿಸುವದಿಲ್ಲವಾದ್ದರಿಂದ ಉಪ್ಪು ಪಂಚರಸಗಳಲ್ಲಿ ಅಂತರ್ಭೂತವಾಗುವದು. ಪಂಚರಸಗಳ ಅನುಭವವೇ ಗುರುಲಿಂಗದ ಮಹಾಲಿಂಗಕ್ಕಾಗುವದು. ಓ ಗುರುವೇ ! ರಸನೇಂದ್ರಿಯದೊಳಗಿನ ಗುರುಲಿಂಗವನ್ನು ಗುರುತಿಸುವ ಗೌರವವನ್ನಿತ್ತು ಕಾಪಾಡು.

 

ನಯನೇಂದ್ರಿಯದೊಳು ಚಿನು | ಮಯರೂಪ ನೋಟ ತ-

ನ್ಮಯವೆ ಶಿವಲಿಂಗ – ಸ್ವಯವೆಂದು ನಂಬು ನಿ-

ರ್ಣಯವೆಂದ ಗುರುವೆ ಕೃಪೆಯಾಗು  ||೧೬೧||

 

ಮೂರನೆಯ ಜ್ಞಾನೇಂದ್ರಿಯ ನಯನ. ನಯನವು ಅಗ್ನಿತತ್ತ್ವಾಧಿಕತ್ಯತೆ  ಯಿಂದಾದುದು. ಅಂತೆಯೇ ನೇತ್ರದಲ್ಲಿ ಪ್ರಕಾಶವಿದೆ. ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ.

 

ರ್ವೇಷು ಗಾತ್ರೇಷು ಶಿರಃ ಪ್ರಧಾನಮ್ |

ಸರ್ವೆಂದ್ರಿಯಾಣಾಂ ನಯನಂ ಪ್ರಧಾನಮ್ ||ʼʼ

 

ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ಎಲ್ಲ ಇಂದ್ರಿಯಗಳಲ್ಲಿ ನೇತ್ರೇಂದ್ರಿಯವೇ ಪ್ರಧಾನವಾದುದು. ನೇತ್ರವು ಸರ್ವಸುಂದರವಾದುದು. ಕಣ್ಣುಗಳಿಂದಲೇ ಮನುಷ್ಯನು ಶಿವನ ಸೃಷ್ಟಿಯ ಸೊಬಗನ್ನು ಸೌಂದರ್ಯವನ್ನು ನೋಡುತ್ತಾನೆ. ಆನಂದಿಸುತ್ತಾನೆ. ನೇತ್ರವಿಲ್ಲದವನ ಜನ್ಮ ನಿರರ್ಥಕವೇ ಸರಿ. ಕಣ್ಣಿನಲ್ಲಿ ಕಾಣುವ ರೂಪವು ಬರಿ ರೂಪವಾಗಬಾರದು. ಅದು ಚಿನುಮಯ ರೂಪವಾಗಬೇಕು. ಮಂಗಲ ರೂಪವಾಗಿ ಪರಿಣಮಿಸಬೇಕು. ಅಂದರೆ ಕಣ್ಣಿನಲ್ಲಿ ಶಿವಲಿಂಗದ ಸ್ವರೂಪು ತೋರಿ ಬರುವದು. ಇದು ನಿಶ್ಚಯವಾದ ಮಾತು. ಇದನ್ನು ನಂಬಿ ನಡೆಯೆಂದು ಗುರು ನಿರೂಪಿಸುತ್ತಾನೆ.

ಯಾವುದೇ ರೂಪವನ್ನು ಗ್ರಹಿಸುವದು ಕಣ್ಣಿನ ಪ್ರಾಕೃತಿಕ ಧರ್ಮ. ಕಂಡ ಸುಂದರ ರೂಪವನ್ನು ಮೋಹಿಸುವದು ವಿಕೃತಿಯೆನಿಸುವದು. ಆದರೆ ಮೋಹಕ ರೂಪವನ್ನು ನೋಡಿದರೂ ಶಿವರೂಪದಲ್ಲಿ ಭಾವಿಸುವದೇ ಶಿವಲಿಂಗದ ಸಂಸ್ಕೃತಿ. ಇಂಥ ಸಂಸ್ಕೃತಿಯನ್ನು ಸಮನ್ವಯಗೊಳಿಸಿಕೊಳ್ಳುವದೇ ಚನಮಯನ ದರ್ಶನ. ಶಿವಲಿಂಗದ ಸಾಕ್ಷಾತ್ಕಾರ.

 

ಶಿವಲಿಂಗದ ಮಿಶ್ರಷದ್ವಿಧ ಲಿಂಗಾರ್ಪಣದ ವಿವರವು ಇಂತಿದೆ – “ಪೀತ ವರ್ಣದ ರೂಪನರಿವುದು ಆಚಾರಲಿಂಗದಲ್ಲಿ, ಶ್ವೇತವರ್ಣದ ರೂಪನರಿವುದು ಗುರುಲಿಂಗದಲ್ಲಿ,  ಹರಿತವರ್ಣದ ರೂಪನರಿವುದು ಶಿವಲಿಂಗದಲ್ಲಿ, ಮಂಜಿಷ್ಠವರ್ಣದ ರೂಪನರಿವುದು ಜಂಗಮಲಿಂಗದಲ್ಲಿ, ಕಪೋತವರ್ಣದ ರೂಪನರಿವುದು ಪ್ರಸಾದ ಲಿಂಗದಲ್ಲಿ ,ಇಂತಿವು ಎಲ್ಲರಲ್ಲಿಯ ರೂಪನರಿವುದು    ಮಹಾಲಿಂಗದಲ್ಲಿ. ಇಂತು ಶಿವಲಿಂಗದ ಮಿಶ್ರಾರ್ಪಣ”ವೆಂದು ಚನ್ನಬಸವಣ್ಣನವರು ನಿರೂಪಿಸಿದ್ದಾರೆ.

 

ರೂಪವು ಪೀತ (ಹಳದಿ) ಶ್ವೇತ (ಬಿಳುಪು) ಹರಿತ (ಹಸಿರು) ಮಂಜಿಷ್ಠ(ಕಪ್ಪು)ಗಳೆಂದು ಐದು ತೆರ.   ರೂಪವನ್ನು ಗ್ರಹಿಸುವ ಶಿವಲಿಂಗವು  ಆಚಾರಲಿಂಗವಾಗಿ ಹಳದಿ ರೂಪವನ್ನು ಗ್ರಹಿಸಿದರೆ, ಗುರುಲಿಂಗವಾಗಿ ಬಿಳಿರೂಪವನ್ನು ನೋಡುತ್ತದೆ. ಶಿವಲಿಂಗದೊಳಗಿನ  ಶಿವಲಿಂಗವು ಹಸಿರುರೂಪವನ್ನು ಕಾಣುತ್ತದೆ. ಜಂಗಮಲಿಂಗವು ಮಂಜಿಷ್ಠ ಬಣ್ಣವನ್ನು ನೋಡಿದರೆ ಪ್ರಸಾದಲಿಂಗವು ಕಪೋತವರ್ಣವನ್ನು ಕಾಣುವದು. ಈ ಎಲ್ಲ ರೂಪಗಳ ಅರಿವು ಮಹಾಲಿಂಗಕ್ಕೆ ಆಗುವದು. ಗುರುವೆ ! ರೂಪವನ್ನು ಸುರೂಪವನ್ನಾಗಿ ಶಿವರೂಪವನ್ನಾಗಿ ನೋಡುವ ಶಿವಲಿಂಗಕ್ಕಾಶ್ರಯವಾದ ಕಂಗಳನ್ನಿತ್ತು ಕಾಪಾಡು.

 

ಅಂಗ ಸೋಂಕಿನ ಸುಖವೆ | ಲಿಂಗ ಸ್ಪರ್ಶನವಾಗ-

ಲಂಗ ತ್ವಗಿಂದ್ರಿಯ-ಜಂಗಮಲಿಂಗವೆಂದು

ಕಂಗೊಳಿಪ ಗುರುವೆ ಕೃಪೆಯಾಗು  ||೧೬೨||

 

ನಾಲ್ಕನೆಯ ಜ್ಞಾನೇಂದ್ರಿಯ ತ್ವಕ್ಕು ಅರ್ಥಾತ್ ಚರ್ಮ. ಇದು ವಾಯು ತತ್ತ್ವಪ್ರಧಾನವಾದುದು. ಈ ತ್ವಗಿಂದ್ರಿಯಕ್ಕೆ ಶೀತೋಷ್ಣಗಳ ಸ್ಪರ್ಶವಾಗುತ್ತದೆ. ಚರ್ಮಕ್ಕೆ ತಂಪು, ಉಷ್ಣಗಳೆನಿಸಿದ ಸ್ಪರ್ಶಸುಖ ಅನುಭವಕ್ಕೆ ಬರುವದು. ಬೇಸಿಗೆಯಲ್ಲಿ ತಂಪುಸ್ಪರ್ಶ ಸುಖವೆನಿಸಿದರೆ; ಚಳಿಗಾಲದಲ್ಲಿ ಉಷ್ಣಸ್ಪರ್ಶ ಹಿತವೆನಿಸುವದು. ಮಳೆಗಾಲದಲ್ಲಿ ಮಂದೋಷ್ಣವು ಆನಂದವನ್ನುಂಟು ಮಾಡುವದು. ಆದರೆ  ಯಾವುದೇ ಅಂಗಸೋಂಕಿನ ಸುಖವು ಲಿಂಗಸ್ಪರ್ಶನದ ಅನುಭವವಾಗುವಂತಾಗ ಬೇಕು. ಸ್ಪರ್ಶವು ಶಾರೀರಿಕವೆನಿಸಿದರೆ ಅದು ಜೀವಿಯನ್ನು ಮೋಹಪಾಶದಲ್ಲಿ ಕೆಡುವುದು. ಅದಕ್ಕಾಗಿ ಲಿಂಗಮುಖವಾಗಿ ಸ್ಪರ್ಶಿಸುವ ತ್ವಗಿಂದ್ರಿಯದಲ್ಲಿ ಜಂಗಮ ಲಿಂಗವನ್ನು ನೆನಯಬೇಕು. ಭಾವಿಸಬೇಕು. ಅಂದರೆ ಭಕ್ತನು ಸಂಸಾರಿಯಾಗಿಯೂ ಕಂಗೊಳಿಸಬಲ್ಲನು. ತನ್ನನ್ನು ನೆರೆನಂಬಿದ ಶಿಷ್ಯನಿಗೆ ಮನೋಜ್ಞ ರೂಪವಾಗಿ

ಕಂಗೊಳಿಪ ಗುರುನಾಥನು ಜಂಗಮಲಿಂಗದ ಅರಿವು ಮೂಡುವಂತೆ ಬೋಧಿಸಿ ಹರಸುತ್ತಾನೆ.

 

ಚನ್ನಬಸವಣ್ಣನವರು ಪ್ರತಿಪಾದಿಸಿದಂತೆ-  “ಜಂಗಮಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣದ ವಿವರವು. ಕಠಿಣವಾದ ಸ್ಪರ್ಶನವನರಿವುದು ಆಚಾರಲಿಂಗದಲ್ಲಿ; ಮೃದುವಾದ ಸ್ಪರ್ಶನವನರಿವುದು ಗುರುಲಿಂಗದಲ್ಲಿ: ಉಷ್ಣವಾದ ಸ್ಪರ್ಶನವನರಿವುದು ಶಿವಲಿಂಗದಲ್ಲಿ: ಶೈತ್ಯವಾದ ಸ್ಪರ್ಶನವನರಿವುದು ಜಂಗಮ ಲಿಂಗದಲ್ಲಿ: ನುಣುಪು ಮಿಶ್ರವಾದ ಸ್ಪರ್ಶನವನರಿವುದು ಪ್ರಸಾದಲಿಂಗದಲ್ಲಿ ; ಇಂತಿವು ಎಲ್ಲರಲ್ಲಿಯ ಸ್ಪರ್ಶನವನರಿವುದು ಮಹಾಲಿಂಗದಲ್ಲಿ ಇಂತು ಜಂಗಮಲಿಂಗದ ಮಿಶ್ರಾರ್ಪಣವು”

ಸ್ಪರ್ಶದಲ್ಲಿಯೂ ಕಠಿಣ, ಮೃದು, ಉಷ್ಣ ಶೈತ್ಯ, ನುಣುಪು ಮಿಶ್ರವೆಂದು ಆರು ವಿಧವಾಗಿದೆ. ಇವುಗಳನ್ನು ಕ್ರಮವಾಗಿ ಜಂಗಮಲಿಂಗದೊಳಗಿನ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗಗಳಿಂದ ಅರಿಯಬೇಕು. ಐದರ ಅನುಭವವೇ ಮಹಾಲಿಂಗಕ್ಕೆ ತೃಪ್ತಿಯನ್ನೀಯುವದು. ಗುರುದೇವ ! ಸ್ಪರ್ಶಸುಖ ಬಯಸುವ ತ್ವಗಿಂದ್ರಿಯದಲ್ಲಿ ಜಂಗಮಲಿಂಗದ ಸಾಕ್ಷಾತ್ಕಾರವಾಗುವಂತೆ ಕರುಣಿಸಿ ಲಿಂಗಸ್ಪರ್ಶಸುಖವನ್ನು ಅನುಭವಿಸಬಲ್ಲ ಘನತೆಯನ್ನಿತ್ತು ಸಲಹು.

ಕುಮಾರ ಸ್ವಾಮಿಗಳವರ ಶಿಷ್ಯ ಸಂಪತ್ತು ಅಷ್ಟಿಷ್ಟಲ್ಲ; ಅಗಣಿತವಾಗಿದೆ. ಇಂದಿಗೆ ೪೧  ವರುಷಗಳಿಂದ ನಡೆಯುತ್ತಿರುವ ಶಿವಯೋಗಮಂದಿರದಲ್ಲಿಯೆ ಸಾವಿರಾರು ಮಂದಿ ಶಿಷ್ಯರಾಗಿದ್ದಾರೆ. ಆಚೆ ಉತ್ತರಕರ್ನಾಟಕದಲ್ಲಿ ಊರು ಊರಿನಲ್ಲಿ ಶಿಷ್ಯರಾಗಿದ್ದಾರೆ. ಸಮಾಜದ ಪ್ರಮುಖರನೇಕರು ಸ್ವಾಮಿಗಳವರಲ್ಲಿ ಶಿಷ್ಯತ್ವವನ್ನು ವಹಿಸಿದ್ದಾರೆ. ಆದರೆ ಅವರೆಲ್ಲರ ಹೆಸರುಗಳನ್ನು ಇಲ್ಲಿ ಹೆಸರಿಸಲು ಸಾಧ್ಯವಿಲ್ಲ. ಸ್ವಾಮಿಗಳವರಲ್ಲಿಯೂ ಸಮಾಜದಲ್ಲಿಯೂ ಪ್ರಮುಖರಾದವರ ಸಂಕ್ಷಿಪ್ತ ಪರಿಚಯ ಇಲ್ಲಿ ಅವಶ್ಯಕ.

 

೧. ಶ್ರೀ ಜಗದ್ಗುರು ಗುರುಸಿದ್ಧರಾಜೇಂದ್ರ ಸ್ವಾಮಿಗಳವರು.

ಇವರು ಹುಬ್ಬಳ್ಳಿಯಲ್ಲಿ ಪ್ರಸಿದ್ಧವಾಗಿರುವ ಮೂರುಸಾವಿರಮಠದ ಅಧಿಪತಿಗಳು. ವಿರಕ್ತಾಶ್ರಮದ ಕುಮಾರ ಸಮಯ ಮೂಲ ಪೀಠದವರು. ಈ ಮಠಕ್ಕೆ ಹಾನಗಲ್ಲ ಸ್ವಾಮಿಗಳವರೆ ಇವರನ್ನು ನಿಯೋಜಿಸಿದರು. ಇವರು ಮೊದಲು ಕೊಣ್ಣೂರು ಮಠಾಧಿಪತಿಗಳು. ಶಿವಯೋಗ ಮಂದಿರದಲ್ಲಿದ್ದು ಓದಿದವರು. ಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅನೇಕ ದಿನ ಕೆಲಸಮಾಡಿದ್ದಾರೆ. ತಮ್ಮ ಮಠದಲ್ಲಿಯೆ ಒಂದು ಸಂಸ್ಕೃತ ಪಾಠಶಾಲೆಯನ್ನು ಉಚಿತ ಭೋಜನಾಲಯವನ್ನು ಸ್ಥಾಪಿಸಿ… ಕಲಕತ್ತಾ ಯೂನಿರ್ವಸಿಟಿ ಪರೀಕ್ಷೆಗಳನ್ನು ತಮ್ಮ ಪಾಠಶಾಲೆಯಲ್ಲಿಯೆ ನೆರವೇರುವಂತೆ ಮಾಡಿಸಿದ್ದಾರೆ. ಅಲ್ಲದೆ ಅದೇ ಹುಬ್ಬಳ್ಳಿಯಲ್ಲಿ ಔದ್ಯೋಗಿಕ ಶಿಕ್ಷಣ ಕಾಲೇಜ ಸ್ಥಾಪನೆಗಾಗಿ ಒಂದು ಲಕ್ಷರೂಪಾಯಿಗಳನ್ನು ಉದಾರವಾಗಿ ಆಶೀರ್ವದಿಸಿದ್ದಾರೆ.

 

೨. ನವಿಲುಗುಂದ ಗವಿಮಠದ ಶ್ರೀ ಮ.ನಿ.ಬಸವಲಿಂಗ ಸ್ವಾಮಿಗಳವರು.

ಇವರು ಶಿವಯೋಗಮಂದಿರದಲ್ಲಿದ್ದು ಓದಿ ವಿದ್ಯಾವಿಚಕ್ಷಣರಾಗಿ ಸ್ವಾಮಿಗಳವರ ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರ ಕೃಪೆಗೆ ಪಾತ್ರರಾಗಿದ್ದಾರೆ. ಮಂದಿರದ ಉಪಾಧ್ಯಕ್ಷರಾಗಿ ಬಹುಕಾಲ ಕೆಲಸ ಮಾಡಿದ್ದಾರೆ. ಸ್ವಾಮಿಗಳವರು ಇದ್ದಾಗಳೆ ಗ್ರಂಥ ಬರೆವ ಶಕ್ತಿಯನ್ನು ಗಳಿಸಿದ್ದರು. ಈಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ದುಡಿದಿದ್ದಾರೆ; ತುಂಬಾ ಹೆಸರು ಗಳಿಸಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಅಂಗವಹಿಸಿದ್ದಾರೆ. ಸರ್ವಧರ್ಮ ಸಮನ್ವಯದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಅಯಾಮತದ ವಿದ್ಯಾವಂತರನ್ನು ಪ್ರತಿವರ್ಷ ಕರೆಯಿಸಿ ಮಠದಲ್ಲಿ ಭಾಷಣ ಮಾಡಿಸುತ್ತಾರೆ. ಎಲ್ಲ ತತ್ವಗಳ ಸಮನ್ವಯ ಪ್ರಚಾರ ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಆದ ಬಸವೇಶ್ವರ ಕಾಲೇಜ ಸ್ಥಾಪನೆಗೆ ಮೂಲಕರ್ತರಾಗಿ ನಿಂತು ಕೆಲಸ ಮಾಡಿದ್ದಾರೆ. ಕಾಸುಕೂಡಿಸಿದ್ದಾರೆ. ಕೀರ್ತಿ ಪಡೆದಿದ್ದಾರೆ. ಹೀಗೆ ಅವರ ಕಾರ್ಯಕ್ಷೇತ್ರ ಅನೇಕ   ಮುಖವಾಗಿದೆ.   ಆಧುನಿಕ ಸಾಹಿತಿಗಳು ವಿದ್ವಾಂಸರು ಪ್ರಮುಖರು ಇವರಲ್ಲಿ ಶ್ರದ್ಧೆ ವಿಶ್ವಾಸವುಳ್ಳವರಾಗಿದ್ದಾರೆ.

 

೩ ಹಾಲಕೆರೆಯ ಇಂದಿನ ಶ್ರೀ ಮ.ನಿ, ಅನ್ನದಾನ ಸ್ವಾಮಿಗಳವರು.

ಇವರು ಶಿವಯೋಗ ಮಂದಿರದಲ್ಲಿದ್ದು ಶಿಕ್ಷಣ ಪಡೆದವರಲ್ಲದಿದ್ದರು, ಹಾನಗಲ್ಲ ಸ್ವಾಮಿಗಳವರಿಂದ ಹೆಚ್ಚು ಉಪಕೃತರಾಗಿದ್ದಾರೆ. ಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಅಧ್ಯಕ್ಷತೆಯನ್ನು ವಹಿಸಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ. ತಪೋನಿಷ್ಠರು, ಭವನ ನಿರ್ಮಾಣ ಚಿತ್ರ ಬರವಣಿಗೆ ಕಲೆಗಳಲ್ಲಿ ನಿಷ್ಣಾತರು. ಮೊನ್ನೆ ಮೊನ್ನೆ ಗದುಗಿನಲ್ಲಿ ಜ್ಞಾನ ದಾಸೋಹವನ್ನು ಕರೆದು ತಿಂಗಳುಗಟ್ಟಲೆ ಬಹು ವಿಜೃಂಭಣೆಯಿಂದ ಜರುಗಿಸಿದರು. ದೊಡ್ಡ ದೊಡ್ಡ ವಿದ್ವಾಂಸರನ್ನು ಶಿವಾನುಭವಿಗಳನ್ನು ಕರೆಯಿಸಿದ್ದರು.

 

೪. ಬಿದರಿ ಪಟ್ಟಾಧ್ಯಕ್ಷರವರು.

ಇವರ ನಿಜವಾದ ಹೆಸರು ಬಿದರೀ ಪ್ರಭುಕುಮಾರ ಪಟ್ಟಾಧ್ಯಕ್ಷರು. ಇವರು ಸ್ವಾಮಿಗಳವರ ಶಿಷ್ಯರು. ಬಹುಕಾಲ ಶಿವಯೋಗಮಂದಿರ ನಿವಾಸಿಗಳು. ಯೋಗದಲ್ಲಿ ಅದ್ವಿತೀಯರು. ಸಂಸ್ಥೆಯಲ್ಲಿ ಯೋಗ ಶಿಕ್ಷಣಾಚಾರ್ಯರಾಗಿದ್ದರು. ಉತ್ತರ ಭಾರತ ಸಂಚಾರ ಮಾಡಿ ಅಲ್ಲಿನ ಯೋಗಿಗಳಿಂದ ‘ಯೋಗಿರಾಜ’ ಎಂಬ ಬಿರುದು ಪಡೆದಿದ್ದರು. ಪ್ಲಾವಿನಿ ವಜ್ರೋಳಿ ಮುಂತಾದ ಮೇಲಿನ ಯೋಗಗಳಲ್ಲಿ ಸಂಪೂರ್ಣಸಿದ್ಧಿ ಇವರಿಗಿತ್ತು. ಶಾಂತರು ಸರಳಹೃದಯರು. ಸಾಧುಶೀಲರು. ಶಿವಪೂಜಾ ಧುರಂಧರರು. ನೀರ ಮೇಲೆ ಆಸನ ಹಾಕಿ ಎಷ್ಟು ಹೊತ್ತಾದರು ತೇಲುತ್ತಿದ್ದರು. ನೆಲದ ಮೇಲೆ ಆಸನ ಹಾಕಿ ಹನ್ನೆರಡು ಗಂಟೆ ಹೊತ್ತಾದರು ಸುಖವಾಗಿ ಸ್ಥಿರವಾಗಿ ಕುಳಿತಿರುತ್ತಿದ್ದರು. ಅನೇಕರಿಗೆ ದೀಕ್ಷಾ ಗುರುಗಳು. ಲಿಂಗೈಕ್ಯರಾಗಿದ್ದಾರೆ. ನಾಮಾಂಕಿತವಿಟ್ಟು ಒಂದು

 

೫. ಸಖರಾಯ ಪಟ್ಟಣದ ಪಟ್ಟಾಧ್ಯಕ್ಷರಾದ ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯಸ್ವಾಮಿಗಳವರು.

ಇವರು ಶಿವಯೋಗ ಮಂದಿರದಲ್ಲಿ ಸಂಸ್ಕೃತ ಶಿಕ್ಷಣ ಪಡೆದು ಸ್ವಾಮಿಗಳವರ ಕೃಪೆಗೆ ಪಾತ್ರರಾದವರು. ವಿದ್ಯೆಯಲ್ಲಿ ಯೋಗದಲ್ಲಿ ಶೀಲಾಚರಣೆಯಲ್ಲಿ ಶಿವಪೂಜೆಯಲ್ಲಿ ನಿಷ್ಣಾತರು. ಕನ್ನಡದಲ್ಲಿ ಕೆಲವು ಗ್ರಂಥಗಳನ್ನು ಬರೆದಿದ್ದಾರೆ. ಹಾನಗಲ್ಲ ಸ್ವಾಮಿಗಳವರ ಮೇಲೆ ಒಂದು ರಗಳೆಯ ಕಾವ್ಯವನ್ನು ಅವರ ನಾಮಾಂಕಿತವಿಟ್ಟು ಒಂದು ವಚನವನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ‘ಕೈವಲ್ಯೋಪನಿಷದ್ಭಾಷ್ಯ’ ಬರೆದಿದ್ದಾರೆ. ಅಚ್ಚಾಗುತ್ತಿದೆ. ಇದು  ಇವರ ವೈಶಿಷ್ಟ್ಯ  ನಮಗೆಲ್ಲ ಹೆಮ್ಮೆ. ಇದನ್ನು ಬರೆದು ಇವರು ನಿಜವಾಗಿ ಆಚಾರ್ಯ ಪದವಿಗೇರಿದ್ದಾರೆ. ಗಿರಿಯಾಪುರದಲ್ಲಿ ಶ್ರೀಗುರು ಕುಮಾರಾಶ್ರಮವನ್ನು ಸ್ಥಾಪಿಸಿದ್ದಾರೆ. ಮೊನ್ನೆ ಮೊನ್ನೆ ಮಾಘಮಾಸದಲ್ಲಿ ಅದೇ ಆಶ್ರಮದಲ್ಲಿ ಶಿವಾನುಭವ ಸಪ್ತಾಹ’ವನ್ನು ಸ್ವಾಮಿಗಳವರ ಸ್ಮಾರಕಕ್ಕಾಗಿ ಕೂಡಿಸಿ ಒಳ್ಳೆ ವೈಭವದಿಂದ ವ್ಯವಸ್ಥೆಯಿಂದ ನೆರವೇರಿಸಿದ ಪುಣ್ಯಪುರುಷರು. ಈ ಕೃತಿಯು ಸಹ ಅವರ ಪ್ರೇರಣೆಯ ಫಲ. ಅವರ ಸಪ್ತಾಹ ಸ್ಮಾರಕಚಿನ್ಹೆ.

 

೬ ಶ್ರೀ ಮ.ನಿ. ನಾಗನೂರು ಶಿವಬಸವ ಶ್ರೀಗಳವರು.

ಇವರು ಶಿವಯೋಗಮಂದಿರದಲ್ಲಿದ್ದು ಸ್ವಾಮಿಗಳವರಿಗೆ ಶಿಷ್ಯರಾದವರು, ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರು ವಿದ್ಯಾರ್ಥಿಗಳ ಪೋಷಣದಂತಹ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ.  ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿ ಒಂದು ವಿದ್ಯಾರ್ಥಿ ನಿಲಯ ಸ್ಥಾಪಿಸಿ ಬಹುದಿನಗಳಿಂದ ಬಹುರೂಪದಲ್ಲಿ ಶ್ರಮಿಸಿ ಓದುವ ವಿದ್ಯಾರ್ಥಿಗಳಿಗೆ ಊಟ ವಸತಿಗಳನ್ನು ಏರ್ಪಡಿಸಿದ್ದಾರೆ. ಈಗ ಅದು ಬೃಹದ್ರೂಪದಲ್ಲಿ ಮೈದಾಳಿ ಕೆಲಸ ಮಾಡುತ್ತಿದೆ. ಇದೀಗ ಇವರು ಶಿವಯೋಗ ಮಂದಿರ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

 

೭. ಕೊಪ್ಪದ ಶ್ರೀ ಮ.ನಿ. ಮಹಾಂತ ಶ್ರೀಗಳವರು.

ಈಗ ಇಳಕಲ್ಲ ಮಠಾಧಿಕಾರಿಗಳಾಗಿದ್ದಾರೆ. ಇವರು ಶಿವಯೋಗಮಂದಿರದಲ್ಲಿದ್ದು ಶಿಕ್ಷಣ ಪಡೆದು ಉತ್ತಮ ವ್ಯಾಖ್ಯಾತೃಗಳಾಗಿದ್ದಾರೆ. ಜನಮನಾಕರ್ಷಣಶಕ್ತಿ ಇವರಲ್ಲಿ ಚನ್ನಾಗಿದೆ. ವಾಣಿ ಪ್ರಸನ್ನತೆಯಿದೆ. ಲೀಲಾಜಾಲವಾಗಿ ರುಚಿಕರವಾಗಿ ಮಾತಾಡಬಲ್ಲರು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿ ತೇಲಿಸಬಲ್ಲರು. ಸ್ವಾಮಿಗಳವರ ಅಪ್ಪಣೆಯ ಮೇರೆಗೆ ನಾಡಿನ ಅನೇಕ ಭಾಗಗಳಲ್ಲಿ ಸಂಚರಿಸಿ ಧರ್ಮ ನೀತಿಗಳನ್ನು ಪೌರಾಣಿಕ ಕಥಾಜೋಡಣೆಯಿಂದ ಮನ ಮೆಚ್ಚುವಂತೆ ಬೋಧಿಸಿ ಜನ ಜಾಗೃತಿಯ ಮಾಡಿ ಶಿವಯೋಗಮಂದಿರ ಕೀರ್ತಿ ಬೆಳಗಿಸಿ ಕೃತಾರ್ಥರಾಗಿದ್ದಾರೆ. ಇಳಕಲ್ಲ ಮಠಾಧಿಪತಿಗಳಾದ ಮೇಲೆ ಹುನಗುಂದದಲ್ಲಿ ಒಂದು ಹೈಸ್ಕೂಲನ್ನು ಸ್ಥಾಪಿಸಿ ಉಚಿತ ಭೋಜನಾಲಯವನ್ನು ಏರ್ಪಡಿಸಿ ಸತ್ಕಾರ್ಯ ಮಾಡುತ್ತಿದ್ದಾರೆ. ಅಲ್ಲಿನ ಮಹಾಜನಗಳ ಪ್ರೇಮಾದರಗಳಿಗೆ ಪಾತ್ರರಾಗಿದ್ದಾರೆ. ಇವರು ವಿದ್ಯಾಗುಣ ಪಕ್ಷಪಾತಿಗಳು. ನಿಗರ್ವಿಗಳು. ಬೋಧಾಸಕ್ತರು. ಸ೦ತಸಚಿತ್ತರು. ಪ್ರೋತ್ಸಾಹಿಗಳು.

 

೮. ಶ್ರೀ ಮ.ನಿ. ಜಡೆಸ್ವಾಮಿಗಳೆಂಬವರೊಬ್ಬರು.

ಇವರು ಅನೇಕ ಕಾಲ ಶಿವಯೋಗ ಮಂದಿರದಲ್ಲಿದ್ದು ಸಂಸ್ಥೆಯ ಸೇವೆ ಸಲ್ಲಿಸಿದ್ದಾರೆ. ಅನುಷ್ಠಾನ ಮಾಡುವದರಲ್ಲಿ ಸ್ವಾಮಿಗಳವರಿಗೆ ಅಚ್ಚು ಮೆಚ್ಚಿಗೆಯವರಾಗಿದ್ದರು. ಕಲ್ಯಾಣದಲ್ಲಿರುವ ಮುಖ್ಯವಾದ ಶೂನ್ಯಸಿಂಹಾಸನ ಮಠಕ್ಕೆ ಅಧಿಪತಿಗಳಾಗಿದ್ದಾರೆ. ಪ್ರಭುಸ್ವಾಮಿಗಳಾಗಿದ್ದಾರೆ. ಸದ್ಯಃ ಬೀರೂರಿನಲ್ಲಿದ್ದು ವಿದ್ಯಾಪ್ರೋತ್ಸಾಹ ಸೇವೆ ಸಲ್ಲಿಸುತ್ತಿದ್ದಾರೆ.

 

೯. ಈ ಕೃತಿಕರ್ತರ ಪರಿಚಯ ಅನಾವಶ್ಯಕವಾದರು ಕ್ರಮಪ್ರಾಪ್ತವಾಗಿ ಎರಡು ಮಾತನ್ನು ಹೇಳಿದರೆ ಹೆಚ್ಚೆನಿಸಲಾರದು; ಆತ್ಮಸುತ್ತಿಯೆನಿಸಲಾರದು. ಶ್ರೀ ಜಗದ್ಗುರು ನಿಡುಮಾಮಿಡಿ ಶ್ರೀಶೈಲ ಪೀಠವು  ಪಂಚಪೀಠಗಳಲ್ಲೊಂದು. ಶ್ರೀಶೈಲ ಸೂರ್ಯಸಿಂಹಾಸನ ಪೀಠ. ಪ್ರಾಚೀನ ಪೀಠ, ಪ್ರಭಾವಯುತ ಪೀಠ.  ಸ್ವಾಮಿಗಳವರ ಕೃಪೆಯ ಬಲದಿಂದ ಇದರ ಅಧಿಕಾರ ಪ್ರಾಪ್ತವಾಗಿದೆ. ಹಿಂದಿದ್ದ ಮೈಸೂರು ಮಹಾರಾಜರವರ ಆರ್ಡರ ಪ್ರಕಾರ ಕೋಲಾರ ಜಿಲ್ಲಾಧಿಕಾರಿಗಳು ಸ್ವತಃ ನಿಂತು ಪೀಠದ ಪಟ್ಟಾಧಿಕಾರವನ್ನು ನೆರವೇರಿಸಿದರು. ಶಿವಯೋಗ ಮಂದಿರ ಶಿಕ್ಷಣ ಪಡೆದವರಲ್ಲಿ ನಾವೊಬ್ಬರು. ಅಷ್ಟಿಷ್ಟು ಕನ್ನಡ ಸಾಹಿತ್ಯ ಸೇವೆ ನಡೆಯುತ್ತಿದೆಯೆಂಬುದಕ್ಕೆ ಈ ಕೃತಿಯೊಂದು ಸಾಕ್ಷಿ. ಇದು ಹನ್ನೆರಡನೆಯ ಕೃತಿ. ಗೌರಿಬಿದನೂರಿನಲ್ಲಿ ಕೋಮುಪಂಥಗಳ ಭಾವನೆಯಿಲ್ಲದೆ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಗಿದೆ. ಎರಡು ವರ್ಷಗಳಿಂದ  ನಡೆಯುತಲಿದೆ. ಗೂಳೂರಿನ ಮಾಧ್ಯಮಿಕ ಶಾಲೆಯ ಕಟ್ಟಡಕ್ಕೆ ಪೀಠದಿಂದ ಧನಸಹಾಯ ಮಾಡಲಾಗಿದೆ. ಕರ್ನಾಟಕ ಏಕೀಕರಣ ವಿಷಯದಲ್ಲಿ ಭಾಷಣಗಳ ಮೂಲಕ ಸೇವ ಸಲ್ಲಿದೆ.

 

೧೦. ಭಾಲ್ಕಿ ಶ್ರೀ ಮ.ಲಿಂ.ಚ. ಚನ್ನಬಸವ ಪಟ್ಟಾಧ್ಯಕ್ಷರು.

ಇವರು ಶಿವಯೋಗ   ಮಂದಿರದಲ್ಲಿದ್ದು ಶಿಕ್ಷಣ ಪಡೆದವರು. ಸ್ವಾಮಿಗಳವರ ಸೇವೆಯನ್ನು ಮಾಡಿ ಧನ್ಯರಾದವರು. ಇವರು ಹೈದರಾಬಾದ ಪ್ರಾಂತ್ಯದಲ್ಲಿ ಗುಲಬರ್ಗಾ ಜಿಲ್ಲೆಯ ಒಂದೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಆ ಭಾಗದ ವಿದ್ಯಾರ್ಥಿಗಳಿಗೆ ತುಂಬ ಸಹಾಯ ಮಾಡಿದ್ದಾರೆ; ಸತ್ಕಾರ್ಯ ನಿರತರಾಗಿದ್ದಾರೆ.

 

ಇದಲ್ಲದೆ ಶ್ರೀ ವ್ಯಾಕರಣಾಳ ಪಟ್ಟಾಧ್ಯಕ್ಷರು, ಕೆಳದಿ ಪಟ್ಟಾಧ್ಯಕ್ಷರು, ಸೂಡಿ ಪಟ್ಟಾಧ್ಯಕ್ಷರು ಶ್ರೀ ಸವದತ್ತಿ ಅಪ್ಪಯ್ಯ ಸ್ವಾಮಿಗಳವರು, ಬಾಗಲಕೋಟಿ ಕರವೀರಮಠದ ಶ್ರೀಗಳು, ನೇರಡುಗುಂಭ ಶ್ರೀಗಳು ಮುಖ್ಯ ಶಿಷ್ಯರಾಗಿದ್ದರು.

 

೧೧. ಶಿರೂರಿನ ಶ್ರೀ ಮಾಗಿ ಶಿವಬಸಪ್ಪ ಮಾಸ್ತರರು.

ಇವರು ಸಂಸ್ಥೆಯ ಸ್ಥಾಪನೆಯ ಮೊದಲ್ಗೊಂಡು ಇಂದಿನವರೆವಿಗು ಸಂಸ್ಥೆಯ ಮ್ಯಾನೇಜರರಾಗಿ ಅಮೋಘವಾದ ಸೇವೆ ಸಲ್ಲಿಸಿದ್ದಾರೆ; ಸಲ್ಲಿಸುತ್ತಿದ್ದಾರೆ. ಮನೆ ಬಾಳಿನ ಮಮತೆಯನ್ನು ಬಿಟ್ಟು ಔದಾರ್ಯದಿಂದ ಔತ್ಸುಕ್ಯದಿಂದ ಭಕ್ತಿಪ್ರಸಕ್ತಿಯಿಂದ ಸಂಸ್ಥೆಯ ಸೇವೆಗೆ ತಮ್ಮ ಆಯುಷ್ಯವನ್ನೇ ಮುಡಿಪಿಟ್ಟು ದುಡಿದು ಧನ್ಯರಾದರು. ಆದರ್ಶಜೀವಿಗಳಾದರು, ಸ್ವಾಮಿಗಳವರ ಸತ್ಕೃಪೆಗೆ ಪಾತ್ರರಾದರು. ಇವರ ತ್ಯಾಗ, ಸತ್ಯಸಂಧತೆ, ಸ್ವಾಮಿಗಳವರಲ್ಲಿದ್ದ ಗಾಢಭಕ್ತಿ ನಿಯಮ ನಿಷ್ಠೆ, ವಚನ ಪರಿಪಾಲನಾ ದೃಷ್ಟಿ, ಕಷ್ಟಸಹಿಷ್ಣುತೆ ಮುಂತಾದ ಗುಣಗಳು ಸ್ತುತ್ಯರ್ಹವಾದವು. ಈಗ ತೀರ ಅಪರವಯಸ್ಸಿನವರಾಗಿ ಸಂಸ್ಥೆಯಲ್ಲಿಯೆ ತಂಗಿದ್ದಾರೆ.

 

೧೨. ಸಂಗೀತಗಾರರು : ಶ್ರೀ ಪಂಚಾಕ್ಷರಿ ಗವಾಯಿಗಳವರು.

ಇವರು ಸ್ವಾಮಿಗಳವರ ಕೃಪೆಯಲ್ಲಿಯೇ ಬೆಳೆದು ಸಂಗೀತಾಭ್ಯಾಸ ಮಾಡಿ ನಂತರ ಒಂದು ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿದರು. ಸ್ವಾಮಿಗಳವರ ಕೃಪೆಯಿಂದ ಗಾಯನ ನಯನ ಪಡೆದು ಅನೇಕ ಕುರುಡ ಮಕ್ಕಳಿಗೆ ಗಾನನೇತ್ರಗಳನ್ನು ತಂದುಕೊಟ್ಟರು. ಅವರಲ್ಲಿ ಶ್ರೀ ಪುಟ್ಟಯ್ಯನವರು ಅಗ್ರಗಣ್ಯರು. ಇವರು ಈಗ ಅದೇ ಪಾಠಶಾಲೆಯನ್ನು ತಮ್ಮಗಾಯನ ಕವನ ಕಲಾಶಕ್ತಿಗಳಿಂದ ಸುರಕ್ಷಿತವಾಗಿ ಮುಂದುವರಿಸಿದ್ದಾರೆ. ಗದಗಿನಲ್ಲಿ ಕುಮಾರಾಶ್ರಮವೊಂದನ್ನು ಸ್ಥಾಪಿಸಿ ಅಲ್ಲಿ ಗಾಯನ ಶಿಕ್ಷಣವನ್ನು ನಡೆಸಿದ್ದಾರೆ. ಅಲ್ಲದೆ ಕುರುಡರಿಗೆ ಆಧುನಿಕ ವಿಜ್ಞಾನ ಪದ್ಧತಿಯನ್ನನುಸರಿಸಿ ಅಕ್ಷರಾಭ್ಯಾಸವನ್ನು ಆರಂಭಿಸಿ ಅದರಲ್ಲಿಯು ಜಯಶೀಲರಾಗಿದ್ದಾರೆ. ಒಟ್ಟಿನಲ್ಲಿ ಕುಮಾರೇಶ್ವರನ ಕೃಪೆಯಿಂದ ಕನ್ನಡ ನಾಡಿನ ಕುರುಡ ಮಕ್ಕಳನೇಕರು ಗಾನ-ವಿದ್ಯೆಗಳನ್ನು ಕಲಿತು ಸ್ವತಂತ್ರಜೀವಿಗಳಾಗಿ ಸಾಂಸ್ಕೃತಿಕ ಜೀವಿಗಳಾಗಿ ಬದುಕುವಂತಾಗಿದೆ; ಬೆಳಗುವಂತಾಗಿದೆ.

 

೧೩. ಕೀರ್ತನಕಾರರು :

 ೧. ದೇವಲಾಪುರದ ಶ್ರೀ ಬಸವಲಿಂಗ ಶಾಸ್ತ್ರಿಗಳವರು.

ಇವರು ಸ್ವಾಮಿಗಳವರ ಆಶೀರ್ವಾದದಿಂದ ಆಶ್ರಯದಿಂದ ಅದ್ವಿತೀಯ ಕೀರ್ತನಕಾರರಾದರು. ತಮ್ಮ ಅಸ್ಖಲಿತವಾದ ಅದ್ಭುತವಾದ ವಾಕ್ ವೈಖರಿಯಿಂದ ಜನರನ್ನು ತಲೆದೂಗಿಸುತ್ತಿದ್ದರು. ಮಂಜುಳವಾದ ಕಂಠದಿಂದ ಮನ ಮೆಚ್ಚಿಸುತ್ತಿದರು. ವಿಷಯ ನಿರೂಪಣೆಯಲ್ಲಿ ಅವರದೇ ಒಂದು ವೈಶಿಷ್ಟ್ಯ. ಎಷ್ಟು ಅಲ್ಪ ಅವಕಾಶ ಕೊಟ್ಟರು ಅದರಲ್ಲಿಯೆ ವಿಷಯವನ್ನು ಸೂಕ್ತವಾಗಿ ತೃಪ್ತಿಕರವಾಗಿ ಪ್ರತಿಪಾದಿಸುತ್ತಿದ್ದರು. ಜನರನ್ನು ಹರ್ಷವುಳಕಿತರನ್ನಾಗಿ ಮಾಡುತ್ತಿದ್ದರು. ಕೊನೆಯವರೆಗು ಕೀರ್ತನ ಸೇವೆಯನ್ನು ಸಲ್ಲಿಸಿ ಕನ್ನಡ ನಾಡಿನಲ್ಲಿ ತಮ್ಮ ಸಂಸ್ಥೆಯ ಕೀರ್ತಿ ಹರಡಿದರು. ಶಿವಯೋಗ ಮಂದಿರದಲ್ಲಿಯ ಸಮಾಧಿಸ್ಥರಾದರು.

 

ಎರಡನೆಯವರು ಹಿರಿಯಹಾಳ ಶ್ರೀ ವೀರಯ್ಯನವರು. ಇವರು ಆ ಕೀರ್ತನ ಕಲೆಯನ್ನು ಸ್ವಾಮಿಗಳವರಲ್ಲಿಯೆ ಅಭ್ಯಸಿಸಿದವರು. ಅಭ್ಯುದಯಕ್ಕೆ ಬಂದವರು. ಹೆಚ್ಚಿನ ಸಂಗೀತ ಹೆಚ್ಚಿನ ವಿದ್ವತ್ತು ಇಲ್ಲದಿದ್ದರೂ ಕಲೆಯಲ್ಲಿ ಹಿಂದಡಿಯಿಡದವರು.  ಇದ್ದ ಸಂಗೀತದಲ್ಲಿಯೆ ವಿಚಾರಾತ್ಮಕವಾಗಿ ವಿನೋದಾತ್ಮಕವಾಗಿ ಕೀರ್ತನ ಮಾಡಬಲ್ಲ ಸಮರ್ಥರು. ಜಂಭದ ಮಾತಿಲ್ಲ. ಜನತಾ ಪ್ರೇಮಿಗಳು. ಈಗಲು ಕೀರ್ತನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸ್ವಾಮಿಗಳವರಲ್ಲಿ ಮೀರಿದ ಭಕ್ತಿವಂತರಾಗಿದ್ದಾರೆ.

 

೧೪. ಕವಿಗಳು :

೧. ದ್ಯಾಂಪೂರಿನ ಶ್ರೀ ಚನ್ನಕವಿಗಳು. ಇವರು ಸ್ವಾಮಿಭಕ್ತರು. ಪುರಾಣಕರ್ತರು. ಷಟ್ಪದಿಯಲ್ಲಿ ಅನೇಕ ಪುರಾಣಗಳನ್ನು ಬರೆದಿದ್ದಾರೆ. ಪುರಾಣ ನಿರ್ಮಾಣ ವಿಷಯದಲ್ಲಿ ಇವರು ವೀರಶೈವ ವ್ಯಾಸರು. ರಾಘವಾಂಕನ ಕಾವ್ಯಕನ್ನಿಕೆ ಇವರ ಕೈವಿಡಿದಿದ್ದಳು; ಕೃತಾರ್ಥಳಾಗಿದ್ದಳು. ಚನ್ನಕವಿಗಳು ತಮ್ಮ ಕಾವ್ಯ ಶ್ರೀಯನ್ನು ಕೊನೆಯ ಉಸಿರಿನಲ್ಲಿಯು ಸ್ವಾಮಿಗಳವರ ಪಾದದಲ್ಲಿರಿಸಿ ಕೃತಾರ್ಥರಾದರು; ಕೀರ್ತಿಕಾಯರಾದರು.

ಎರಡನೆಯವರು…. ಶ್ರೀ ಲಿಂಗಪ್ಪ ಮಾಸ್ತರರು.

ಇವರು ಸ್ವಾಮಿ ಶಿಷ್ಯರು. ಕಾವ್ಯಜೀವಿಗಳು ಸ್ವಾಮಿಗಳವರ ಮೇಲೆ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಕಾವ್ಯವೊಂದನ್ನು ಕಟ್ಟಿದ್ದಾರೆ. (ಅದಾವುದೊ ಹೆಸರು ಗೊತ್ತಿಲ್ಲ) ಸ್ವಾಮಿಗಳವರಲ್ಲಿ ಅಚಲವಾದ ಭಕ್ತಿಯಿತ್ತು. ಇವರು ಮುಕ್ತರಾಗಿದ್ದಾರೆ.

 

೧೫. ಸಂಶೋಧಕರು ಅಥವಾ ಶಿವಾನುಭಾವಿಗಳು : ಶ್ರೀ ಚನ್ನಮಲ್ಲಿಕಾರ್ಜುನರು ‘ಸದ್ಧರ್ಮ ದೀಪಿಕೆ’ಯ ಸಂಪಾದಕರು. ಇವರು ಸ್ವಾಮಿಗಳವರ ತುಂಬಾ ನೆಚ್ಚಿನ ಶಿಷ್ಯರು. ಮೊದಲಿನಿಂದಲು ಸ್ವಾಮಿಗಳವರಲ್ಲಿ ಪಳಗಿದ್ದಾರೆ. ಅವರ ಸನ್ನಿಧಿಯಲ್ಲಿಗೆ ಆಗಾಗ್ಗೆ ಬಂದು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ್ದಾರೆ. ಅಲ್ಲದೆ ಶ್ರೀಗಳವರ ಆಶೀರ್ವಾದದಿಂದ ಒಂದು ಪ್ರೆಸ್ಸನ್ನು ಪಡೆದು ಹಾವೇರಿಯಲ್ಲಿದ್ದು ‘ಸದ್ಧರ್ಮ ದೀಪಿಕೆ’ ಮಾಸಿಕ ಹೊರಡಿಸಿದರು. ಅನೇಕ ಸ್ವತಂತ್ರ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಪುರಾತನ ಗ್ರಂಥಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಅಕ್ಕಮಹಾದೇವಿಯ ರಗಳೆ ಪ್ರಧಾನವಾದುದು. ಸ್ವಾಮಿಗಳವರಲ್ಲಿದ್ದು ಶಿವಾನುಭವ ಮರ್ಮವನ್ನು ಚನ್ನಾಗಿ ಅರಿತಿದ್ದಾರೆ, ಈಗಲು ಅದೇ ಮಾಸಿಕವನ್ನು ಹೊರಡಿಸುತ್ತಿದ್ದಾರೆ.

 

ಎರಡನೆಯವರು ದ್ಯಾಂಪೂರ ಶ್ರೀ ಮಹಾಲಿಂಗಪ್ಪನವರು. ಇವರು ಶಿವಯೋಗ ಮಂದಿರದಲ್ಲಿಯೆ ಅನೇಕ ವರುಷಗಳವರೆಗೆ ಸ್ವಾಮಿಗಳವರ ಸನ್ನಿಧಿಯಲ್ಲಿದ್ದು ಪುರಾತನ ಗ್ರಂಥಗಳನ್ನು ಸಂಶೋಧಿಸಿದ್ದಾರೆ. ಸ್ವಾಮಿಗಳವರಿಂದ ಉತ್ತೇಜಿತರಾಗಿದ್ದಾರೆ. ಈಗಲು ಅದೇ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಮೂರನೆಯದಾಗಿ ಇಟಗಿ ಶ್ರೀ ಸೋಮನಾಥ ಶಾಸ್ತ್ರಿಗಳವರು. ಇವರು ಸಂಸ್ಕೃತ ಪಂಡಿತರು. ಮಗ್ಗಿಮಾಯಿದೇವರ ಸಂಸ್ಕೃತ ಶಿವಾನುಭವ ಗ್ರಂಥಗಳ ವಿಚಾರವನ್ನು ಸ್ವಾಮಿಗಳವರಲ್ಲಿ ಆಳವಾಗಿ ಅಭ್ಯಸಿಸಿದ್ದರು. ಶಿವಾನುಭವಿಗಳಾಗಿದ್ದರು. ಶಿಷ್ಯರಾಗಿದ್ದರು. ಶಿವಾಧೀನರಾಗಿದ್ದಾರೆ.

 

೧೬. ಲೇಖಕರು : ಶ್ರೀ ಕರ್ಜಿಗಿ ಗುರುಮೂರ್ತಿ ಶಾಸ್ತ್ರಿಗಳವರು. ಇವರು ಸ್ವಾಮಿಗಳವರಲ್ಲಿ ನಿಷ್ಠಾವಂತ ಶಿಷ್ಯರು. ಸ್ವಾಮಿಗಳವರಿಂದ ಪ್ರಚೋದಿತರಾಗಿ ಅನೇಕ ಬಗೆಯ ಲೇಖನಗಳನ್ನು ಬರೆಯುತ್ತಿದ್ದರು. ‘ಶಿವಪ್ರತಾಪ’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿದ್ದರು. ಸ್ವಾಮಿಗಳವರ ಆಶ್ರಯ ಅಪ್ಪಣೆಗಳಿಂದ ಆ ಪತ್ರಿಕೆ ಹೊರಬಿದ್ದು ಕೆಲವು ದಿನ ಮಾತ್ರ ಕೆಲಸ ಮಾಡಿತು. ಶಾಸ್ತ್ರಿಗಳವರು ಸ್ವಾಮಿಗಳವರ ಜನ್ಮಭೂಮಿಯ ಬಳಿಯವರು. ಅದರಿಂದಾಗಿ ಸ್ವಾಮಿಗಳವರ ಸಂಕ್ಷಿಪ್ತ ಚರಿತೆಯನ್ನು ಸಂಗ್ರಹಿಸಿ ಸ್ಮಾರಕ ಚಂದ್ರಿಕೆಯಲ್ಲಿ ಕೊಟ್ಟಿದ್ದಾರೆ. ಅದುವೆ ಈ ಗ್ರಂಥಕ್ಕೆ ಬೀಜ. ಇವರು ಶಿವಾಧೀನರಾಗಿದ್ದಾರೆ.

ಶ್ರೀ ಮಲ್ಲಿಕಾರ್ಜುನ ದೇಶಿಕರು. ಇವರು ಸ್ವಾಮಿಗಳವರಲ್ಲಿ ಅನೇಕ ದಿನಗಳಿದ್ದು ಸೇವೆ ಮಾಡಿದ್ದಾರೆ. ಅಭ್ಯಾಸ ಮಾಡಿದ್ದಾರೆ. ಅಭ್ಯಾಸಕ್ಕಿಂತ ಆಶೋತ್ತರವೇ ಮಿಗಿಲಾಗಿದ್ದ ಇವರನ್ನು ಇಂದು ಒಬ್ಬ ಲೇಖಕರಾಗುವಂತೆ ಮಾಡಿದ್ದಾರೆ ಸ್ವಾಮಿಗಳವರು. ಇವರು ಈಚೆಗೆ ನಾಲ್ಕಾರು ಪುಸ್ತಕಗಳನ್ನು ಬರೆದಿದ್ದಾರೆ.

೧೭. ಪುರಾಣಿಕರು :

೧. ತೆಲಸಂಗದ ಶ್ರೀ ಬಸವಲಿಂಗ ಪಟ್ಟದ್ದೇವರು. ಇವರು ಶಿವಯೋಗಮಂದಿರದಲ್ಲಿಯೆ ಇದ್ದು ಅಭ್ಯಾಸಮಾಡಿದವರು. ಸಂಸ್ಕೃತದಲ್ಲಿ ಚನ್ನಾಗಿ ಗತಿಯಿದ್ದವರು. ಮರಾಠಿ ಭಾಷೆಯ ಪರಿಚಯವು ಇವರಿಗಿದೆ. ಇವರು ಶಿವಯೋಗ ಮಂದಿರದಲ್ಲಿಯೆ ಸಂಗೀತಾಭ್ಯಾಸವನ್ನು ತಕ್ಕಷ್ಟು ಮಾಡಿ ಪುರಾಣ ಹೇಳುವದರಲ್ಲಿ ಪ್ರವೀಣರಾಗಿದ್ದಾರೆ. ಶಾರೀರವಿದೆ; ಸೇಮುಷಿಯಿದೆ. ಇವರಲ್ಲದೆ ಶ್ರೀ ರುದ್ರದೇಶಿಕರು ಎಡಹಳ್ಳಿ ಇವರು ಸಹ ಪುರಾಣವನ್ನು ಹೇಳಬಲ್ಲರು.

 

ಇದಲ್ಲದೆ ಸಾಮಾಜಿಕರಲ್ಲಿ ದೇವಿಹೊಸೂರು ರಾ.ಬ. ಚನ್ನಬಸವಪ್ಪ ಶೆಟ್ಟರು, ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು, ಮೆಣಸಿನಕಾಯಿ ಸಾಹೇಬರು, ಕಿತ್ತೂರು ರೇವಣಸಿದ್ದಪ್ಪನವರು, ಶ್ರೀ ವೀರಬಸವ ಶ್ರೇಷ್ಟಿಯವರು, ವಾರದ ಅಪ್ಪಾಸಾಹೇಬರು, ಒಂಟಮುರಿ ದೇಸಾಯರು, ಇಟಗಿ ದೇಸಾಯರು, ಸವದತ್ತಿ ಮೂಗಪ್ಪಣ್ಣನವರು, ತೇರದಾಳ ಬುದ್ದಯ್ಯನವರು, ಧಾರವಾಡ ಶಿವಲಿಂಗ ಶಾಸ್ತ್ರಿಗ ಗಳು,  ರೋಣ ಜೋಳದ ಮಾಸ್ತರರು, ಅಡ್ನೂರಿನ ಪ್ರಭುಗೌಡರು, ಕುರಹಟ್ಟಿ ಪರ್ವತಗೌಡರು, ಬೆನಕೊಪ್ಪ ಭಾಪುಗೌಡರು ಮುಂತಾಗಿ ಅನೇಕ ಪ್ರಮುಖ ಶಿಷ್ಯರಿದ್ದರು; ಈಗಲು ಇವರಲ್ಲಿ ಕೆಲವರಿದ್ದಾರೆ.

 

ಹಾವೇರಿ ಶ್ರೀಗಳವರು

ಇವರು ಹಾನಗಲ್ಲ ಕುಮಾರ ಸ್ವಾಮಿಗಳವರಿಗೆ ಮಲ್ಲಣಾರ್ಯರಂತೆ ಅತ್ಯಂತ ಆಪ್ತರು. ಆದರಾಭಿಮಾನಿಗಳು. ಕೊನೆಯವರೆವಿಗು ಸ್ವಾಮಿಗಳವರೊಡನೆ ಸಹಕರಿಸಿ ಕೆಲಸ ಮಾಡಿದರು. ಸ್ವಾಮಿಗಳವರು ಶಿವಯೋಗ ಮಂದಿರ ಭಾರವನ್ನು ತಮ್ಮ ತರುವಾಯ ಇವರ ಹೆಗಲ ಮೇಲಿರಿಸಿ ಇಳುಹಿ ಹೋದರು. ಹಾವೇರಿ ಹುಕ್ಕೇರಿಮಠದ ಶ್ರೀ ಮ.ನಿ. ಶಿವಬಸವ ಸ್ವಾಮಿಗಳವರು ಆ ಭಾರವನ್ನು ತಮ್ಮ ಉಸಿರು ಇರುವವರೆವಿಗು ಹೊತ್ತು ನಿತ್ತರಿಸಿದರು. ಯಶಸ್ವಿಗಳಾದರು. ಇವರು ತಪೋನಿಷ್ಠರು. ಸದಾಚಾರ ನಿರತರು.

 

 

ಲೇಖಕರು : ಪೂಜ್ಯ ಶ್ರೀ.ಜಗದ್ಗುರು   ಡಾ|| ಸಿದ್ಧರಾಮ ಮಹಾಸ್ವಾಮಿಗಳು.ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಇಂದಿನ ವೈಜ್ಞಾನಿಕಯುಗದಲ್ಲಿ ಧರ್ಮ ತನ್ನ ನೈಜ ಅರ್ಥವನ್ನು ಕಳೆದುಕೊಂಡು ತಪ್ಪು ತಪ್ಪಾಗಿ ಅರ್ಥೈಸಲ್ಪಡುತ್ತಿದೆ. ಅಜ್ಞಾನ ಅಂಧಶ್ರದ್ಧೆಯಿಂದಾಗಿ ಧರ್ಮವು ಜಾತೀಯ ಸಂಘಟನೆಯಾಗಿ, ಗೊಡ್ಡು ಸಂಪ್ರದಾಯವಾಗಿ ಅವಹೇಳನಕ್ಕೆ ಗುರಿಯಾಗುತ್ತಿದೆ. ಅನೇಕ ವಿದ್ಯಾವಂತರು, ಪ್ರಗತಿಪರ ವಿಚಾರವುಳ್ಳವರು ನಾವು ಇಂಥ ಧರ್ಮಕ್ಕೆ ಸೇರಿದವರು ಅಥವಾ ಧಾರ್ಮಿಕರು ಎಂದು ಹೇಳಿಕೊಳ್ಳಬಯಸುವುದಿಲ್ಲ. ಹಾಗೆ ಹೇಳಿದರೆ ಪ್ರಗತಿಶೀಲರು ಎನಿಸಿಕೊಳ್ಳಲಾರೆವು ಎಂದು ಭಾವಿಸುತ್ತಾರೆ. ಧರ್ಮವನ್ನು ಸರಿಯಾಗಿ ಅರ್ಥೈಸದಿರುವುದು ಹಾಗು ನಿಜಾಚರಣೆಗಿಂತ ಬಾಹ್ಯ ಆಡಂಬರಕ್ಕೆ ವಿಶೇಷ ಮಹತ್ವ ಕೊಡುವುದು ಈ ಅವಾಂತರಕ್ಕೆ ಕಾರಣವಾಗಿದೆ.

 

ವಾಸ್ತವದಲ್ಲಿ ಧರ್ಮ ಅತ್ಯಂತ ವಿಶಾಲವಾದ ಅರ್ಥವನ್ನು ಹೊಂದಿದೆ. ಪ್ರಾಣಿದಯೆ, ಅಂತಃಕರಣ, ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ಸೇವಾಮನೋಭಾವಗಳಲ್ಲಿ ಅದು ಸದಾ ಅಣುರಣಿಸುತ್ತದೆ. ಅದೊಂದು ಜೀವನಪದ್ಧತಿ ಹಾಗೆಯೇ ಆದರ್ಶ ನಡವಳಿಕೆ. ನಮ್ಮ ನೆರೆಹೊರೆಯವರನ್ನು ಅರ್ಥಮಾಡಿಕೊಂಡು, ಅವರೊಡನೆ ಹೊಂದಿಕೊಂಡು ಬಾಳುವುದೇ ಧರ್ಮ. ಇದನ್ನು ಬಿಟ್ಟು ಕೇವಲ ಪೂಜೆ, ಜಪತಪಾದಿ ಕರ್ಮಗಳೇ ಧರ್ಮವೆಂದು ಭಾವಿಸುವುದು ತಪ್ಪು. ಅಹಿಂಸಾಪರವಾದ, ನೀತಿಯುತವಾದ ಸಾತ್ವಿಕ ಬದುಕು ನಮ್ಮದಾಗಬೇಕು. ‘ದಯವಿಲ್ಲದ ಧರ್ಮ ಅದಾವುದಯ್ಯಾ?’ ಎಂದು ಬಸವಣ್ಣನವರು ಕೇಳುವಲ್ಲಿ ಇದೇ ಅರ್ಥ ಧ್ವನಿತವಾಗಿದೆ. ನೊಂದವರ ನೋವಿನಲ್ಲಿ ಭಾಗಿಯಾಗಿ ನಮ್ಮ ಕೈಲಾದಮಟ್ಟಿಗೆ ಅವರ ದುಃಖ ಶಮನಗೊಳಿಸುವುದು, ದೀನ ದಲಿತರ ಬದುಕಿಗೆ ಆಸರೆಯಾಗಿ ನಿಲ್ಲುವುದೇ ಧರ್ಮ. ಅದು ಬರೀ ಉಪದೇಶದ ಮಾತಲ್ಲ; ಚರ್ಚೆಯ ವಿಷಯವೂ ಅಲ್ಲ. ಮಾನವೀಯತೆಯನ್ನು ಅರಿತು ಆಚರಿಸುವುದೇ ಧರ್ಮ, ಅದಕ್ಕಾಗಿಯೇ ‘ಧರ್ಮಂಚರ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದೆ ಎಂದು ಭಾವಿಸೋಣ. ಆಗ ನಾವು ತಕ್ಷಣ ವೈದ್ಯರಲ್ಲಿ ಅವನನ್ನು ಕರೆದುಕೊಂಡು ಹೋಗುತ್ತೇವೆ. ವೈದ್ಯರು ಅವನ ಶರೀರದಲ್ಲಿ ಪ್ರವೇಶವಾಗಿರುವ ಗುಂಡನ್ನು ತಕ್ಷಣ ಹೊರತಗೆದು ಸರಿಯಾದ ಔಷಧೋಪಚಾರ ಮಾಡುವುದೇ ಧರ್ಮ. ಅದು ಬಿಟ್ಟು, ನಿನಗೆ ಗುಂಡು ಹೊಡೆದ ವ್ಯಕ್ತಿ ಯಾರು? ಅವನ ವಯಸ್ಸೆಷ್ಟು? ಅವನು ಎಷ್ಟು ಎತ್ತರವಾಗಿದ್ದ? ಅವನ ಬಣ್ಣ ಯಾವುದಿತ್ತು? ಹೀಗೆಲ್ಲ ಚರ್ಚಿಸುತ್ತ ಕುಳಿತುಕೊಳ್ಳುವುದು ಧರ್ಮವಾದೀತೆ  ?

 

ಜಗತ್ತಿನಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣ. ಬಾಹ್ಯ ಆಡಂಬರಕ್ಕೆ, ಅಂಧಾನುಕರಣೆಗೆ ಧರ್ಮದಲ್ಲಿ ಸ್ಥಳವಿಲ್ಲ. ಆದರೆ ದುರದೃಷ್ಟದಿಂದ  ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮ ಸುಲಿಗೆಯ ಸಾಧನವಾಗಿ ಮಾರ್ಪಟ್ಟು ಅನಾದರಣೆಗೆ ಕಾರಣವಾಗಿದೆ. ಧರ್ಮ ಯಾವಾಗಲೂ ಜ್ಞಾನಿಯಲ್ಲಿ ಜನಿಸಿ, ಅನುಭಾವಿಯಲ್ಲಿ ಬೆಳೆದು ಪುರೋಹಿತಶಾಹಿಯ ಜನರಲ್ಲಿ ಅವಸಾನ ಹೊಂದುತ್ತದೆ. ಜಗತ್ತಿನ ಪ್ರತಿಯೊಂದು ಧರ್ಮದಲ್ಲಿ ಪುರೋಹಿತಶಾಹಿಯ ಕೈವಾಡ ಇದ್ದೇ ಇದೆ. ಬೌದ್ಧಧರ್ಮ ಭಾರತದಿಂದ ಹೊರಹೋಗುವಲ್ಲಿ, ಕ್ರಿಸ್ತ ಶಿಲುಬೆಗೇರುವಲ್ಲಿ, ಬಸವಣ್ಣನವರ ಕ್ರಾಂತಿ ವಿಫಲವಾಗುವಲ್ಲಿ, ಅವರ ಕೈವಾಡ ಸ್ಪಷ್ಟವಾಗಿದೆ. ಧರ್ಮ ಧರ್ಮಗಳಲ್ಲಿ ಭೇದ ಹುಟ್ಟಿಸಿ, ಧರ್ಮದ ಹೆಸರಿನಲ್ಲಿ ಕೊಲೆ ಸುಲಿಗೆಗಳಿಗೆ ಕಾರಣರಾದವರು ಇದೇ ಜನ. ಮನುಷ್ಯ ಧರ್ಮಾಭಿಮಾನಿ ಯಾಗಿರಬೇಕು ಎಂದಾಗ ಅಂಧಾಭಿಮಾನಿಯಾಗಬೇಕು ಎಂದು ಅರ್ಥವಲ್ಲ. ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಲೇ ಹಗಲು, ರಾತ್ರಿಗಳು ಋತುಮಾನಗಳು ಸಾಧ್ಯವಾಗುತ್ತಿವೆ. ಇಲ್ಲದಿದ್ದರೆ ಹವಾಮಾನ ವೈಪರೀತ್ಯಗಳುಂಟಾಗಿ ಭೂಮಿಯ ನಾಶಕ್ಕೆ ಕಾರಣವಾಗುತ್ತಿತ್ತು. ಹಾಗೆಯೇ ವ್ಯಕ್ತಿ ಸ್ವಧರ್ಮ ನಿಷ್ಠೆಯುಳ್ಳವನಾಗಿರುವಂತೆ ಪರಧರ್ಮ ಸಹಿಷ್ಣುವಾದಾಗ ತಾನೂ ಬದುಕುತ್ತಾನೆ: ಇನ್ನೊಬ್ಬರನ್ನು ಬದುಕಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿದೆ. ರಾಜಧರ್ಮ, ಪ್ರಜಾಧರ್ಮ, ಅಧ್ಯಾಪಕ ಧರ್ಮ, ಸೈನಿಕಧರ್ಮ ಇತ್ಯಾದಿ. ಅವರವರ ಧರ್ಮ ಪರಿಪಾಲನೆಯಲ್ಲಿಯೇ ಅವರವರ ಅಭ್ಯುದಯವೂ ಸೇರಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಅರ್ಥಾತ್ ಕರ್ತವ್ಯಪ್ರಜ್ಞೆಯನ್ನು ಅರಿತು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತ ಇಹಪರಗಳಲ್ಲಿ ಶ್ರೇಯಸ್ಸನ್ನು ಪಡೆಯಲು ಸಾಧ್ಯವಿದೆ.

ಲೇಖಕರು: ಶ್ರೀ ಕೆ. ವಿ. ಬಾಳಿಕಾಯಿ

 

ವೀರಶೈವ ಧರ್ಮವು ಬಹು ಪ್ರಾಚೀನವಾದುದು. ಷಟ್‌ಸ್ಥಲಗಳ ಮೂಲಕ ಮಾನವನನ್ನು ಮಹಂತನನ್ನಾಗಿ ಮಾಡುವ ದಿವ್ಯಾಮೃತ. ಅಲ್ಲಿಂದ ಇಲ್ಲಿಯವರೆಗೆ ಈ ವಿಶಾಲ ಧರ್ಮದಲ್ಲಿ ಅನೇಕ ಮಹಾತ್ಮರು, ಶಿವಶರಣರು ಆಗಿಹೋಗಿದ್ದಾರೆ. ಎಲ್ಲರ ತತ್ತ್ವಗಳನ್ನು ಕಂಡಾಗ, ಕಂಡು ಉಂಡಾಗ ಬಹಿರಂಗ ಸಂಗ ಬಿಟ್ಟು ಅಂತರಂಗದ ಜ್ಯೋತಿ ತಾನೇ ತಾನಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ. ಇಂತಹ ಮಹಾತ್ಮರಲ್ಲಿ ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಒಬ್ಬರಾಗಿದ್ದಾರೆ.

ಈ ಶಿವಯೋಗಿಗಳ ಬಗೆಗೆ ಐತಿಹಾಸಿಕವಾದ ಚಾರಿತ್ರ್ಯವು ನಮಗೆ ಸಾಕಷ್ಟು ಲಭ್ಯ ವಾಗಿಲ್ಲ. ಅಲ್ಲಲ್ಲಿ ಪ್ರಚಲಿತವಿದ್ದ ಅಂಶಗಳನ್ನು ಗಮನಿಸಿ ಇವರ ಚರಿತ್ರೆಯನ್ನು ಹೇಳ ಬೇಕಾಗುತ್ತದೆ. ಈ ಮಹಾತ್ಮರು ೧೯ನೆಯ ಶತಮಾನದ ಮೊದಲ ಪಾದದಲ್ಲಿ ಬಾಳಿ ಬೆಳಗಿದರು.  ಮುಳಗುಂದದ ಕಲ್ಮಠದ ಮಹಾಂತ ಶಿವಯೋಗಿಗಳು ಬಿಜಾಪುರ ಜಿಲ್ಲೆಯ ಯರನಾಳ ಗ್ರಾಮದ ಹಿರೇಮಠದ ಸದ್ಭಕ್ತ ದಂಪತಿಗಳಿಗೆ ಗಂಡುಮಗುವನ್ನು ಆಶೀರ್ವದಿಸಿದರು. ಆತನೇ ಮುಂದೆ ಬಾಲಲೀಲಾ ಮಹಾಂತ ಶಿವಯೋಗಿಯೆಂದು ಪ್ರಸಿದ್ಧವಾದನು.

 

ತಮ್ಮ ಚಿಕ್ಕ ವಯಸ್ಸಿನಲ್ಲೇ ತಾಯಿ-ತಂದೆಯನ್ನು ಬಿಟ್ಟು ಸದ್ಗುರುಗಳನ್ನು ಹುಡುಕುತ್ತ ಲಿಂಗನಾಯಕನಹಳ್ಳಿಗೆ ಬಂದು ಅಲ್ಲಿ ಶ್ರೀ ಚೆನ್ನವೀರ ಸ್ವಾಮಿಗಳ ಶಿಷ್ಯರಾಗಿ ಶಿವಯೋಗ ಸಾಧನವನ್ನು ಪಡೆದು ಜ್ಞಾನನಿಧಿಯಾಗಿ ದೇಶಸಂಚಾರ ಮಾಡುತ್ತ, ಬಾಲಲೀಲೆಗಳನ್ನು ತೋರುತ್ತ ಭಕ್ತರನ್ನು ಶಿವಭಕ್ತಿಯಲ್ಲಿ ನಡೆಸುತ್ತ ಅವರನ್ನು ಉದ್ಧರಿಸಿದರು.

 

ಈ ಮಹಾತ್ಮರು ರಚಿಸಿದ ಕೃತಿಯೇ ‘ಕೈವಲ್ಯ ದರ್ಪಣ’, ಕೈವಲ್ಯವೆಂದರೆ ಮೋಕ್ಷ ದರ್ಪಣವೆಂದರೆ ಕನ್ನಡಿ, ಮೋಕ್ಷವನ್ನು ತೋರಿಸುವ ಕನ್ನಡಿ. ಇದೊಂದು ಬಿಡಿಪದ್ಯಗಳ ಸಂಕಲನ. ಇದರ ಮಹಿಮೆಯನ್ನು ಎಷ್ಟು ವರ್ಣಿಸಿದರೂ ತೀರದು. ಶ್ರೀಗಳವರ ಆತ್ಮಧ್ವನಿಯೇ ಈ ಪದ್ಯಗಳಲ್ಲಿ ಗುಂಜಾರವ ಮಾಡಿದಂತೆ ಆಗುತ್ತದೆ. ಒಂದೊಂದು ಪದ್ಯವೂ ಸಾಧಕನಿಗೆ ಸಾಧನೆಯ ಸೋಪಾನ. ಎಲ್ಲ ಪದ್ಯಗಳ ಸೌಂದರ್ಯವನ್ನು ವಿವರಿಸಿ ಹೇಳುವುದು ಈ ಲೇಖನಕ್ಕೆ ಮೀರಿದ ಮಾತು.

ವೀರಶೈವ ಧರ್ಮದ ಅಷ್ಟಾವರ್ಣಗಳಲ್ಲಿ ಮೊದಲನೆಯ ಸ್ಥಾನ ಗುರುವಿನದು,.’ನ ಗುರೋರಧಿಕಂ’ ಎನ್ನುವ ಮಾತಿನಂತೆ, ಗುರುವಿಗಿಂತ ಹಿರಿದಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅದನ್ನೇ ‘ಪಾಲಿಸೈ ಪರಮ ಶ್ರೀ ಗುರುನಾಥ ದಯೆಯಿಂದ ಎನ್ನುವ ಪದ್ಯದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಈ ಪದ್ಯದ ಭಾವ ಅಲೌಕಿಕ ಮತ್ತು ಇವರು ಪರಮಾತ್ಮನಲ್ಲಿ ಮೊರೆಯಿಡುವ ರೀತಿಯಂತು‌ ಅನ್ಯಾದೃಶ,. ಸಾಕು ಪರಿಹರಿಸು ಎನ್ನ ದೇಹದ ದುರ್ಗುಣಗಳನ್ನು ನೂಕು ನುಗ್ಗನು ಮಾಡಿ ಕಾಡುತಿಹವು”, ದೇಹದ ಒಳಗಿರುವ ಚೇಳು, ಹಾವು, ಹುಲಿ, ಕರಡಿಗಳೆಂಬ ದುರ್ಗುಣಗಳ ಬಾಧೆಯನ್ನು ಪರಿಹರಿಸು ದೇವಾ ಎಂದು ಬೇಡಿಕೊಳ್ಳುತ್ತಾರೆ. ಇಂಥಹ ಪದಗಳು ನಮ್ಮ ನಿತ್ಯಮಂತ್ರಗಳಾಗ ಬೇಕಾಗಿವೆ. ‘ಮನಸ್ಸೆಂಬ ಮಂಗವು ವಿಷಯದ ಇಂದ್ರಿಯದ ಶಾಖೆ ಶಾಖೆಗಳು ಹಾರುತಿದೆ, “ಕಂದನೆನ್ನನು ಸಲಹೋ ಗುರು ಮಹಾಂತಲಿಂಗ” ಎಂದು ಆರ್ತರಾಗಿ ಕೇಳುತ್ತಾರೆ. ಅದೇ ರೀತಿಯಾಗಿ ಲಿಂಗದ ಮಹಿಮೆಯನ್ನು ಕೊಂಡಾಡಿದ್ದಾರೆ. ಜಂಗಮದ ಮಹತಿಯನ್ನಂತೂ ಅವರ ಬಾಯಿಂದಲೇ ಕೇಳಬೇಕು.

 

ಜಂಗಮವೆ ಪರದೈವ ಜಗಮವೆ ಪರವಸ್ತು

ಜಂಗಮವೆ ಪರಮ ಪಾವನಮೂರ್ತಿಯು||

ಜಂಗಮದ ಪಾದವನು| ಪಿಂಗದಲ್ಲಿ ನೆನೆ ಮನವೆ

ಭಂಗಗೊಳಿಪುದು ಭವದ ಬೇರುಗಳನ್ನು       ||೧||

ಜಗಮವೆ ಜಗದೊಡೆಯ |ಜಂಗಮವೆ ಜಗಭರಿತ

ಜಂಗಮವೆ ಸಾಕ್ಷಾತ್ ಲಿಂಗಮೂರ್ತಿ |

ಜಂಗಮದ ಪಾದವನು| ಅಂಗ ಮನ ಪ್ರಾಣದಲಿ|

ಸಂಗೊಳಿಸು ಕಂಡೆಯ ಲೆ ಚಿತ್ತವೇ     ||೨||

 

ಮತ್ತೊಂದು ಪದ್ಯದಲ್ಲಿ ಸುಖಭೋಗ ದೊರೆಯುವ ಮಹಾಹಾದಿಯನ್ನೇ ಹೇಳಿ ಕೊಟ್ಟಿದ್ದಾರೆ.  ಅದು ತುಂಬಾ ಪ್ರಚಲಿತವಾಗಿರುವ ಪದ್ಯ ಎರಡು ಮಾಣಿಕ್ಯದ ಮಾತುಗಳು. ಹರಪೂಜೆ ಗುರುಸೇವೆ ಇಲ್ಲದೇ ಸುಖಭೋಗಗಳು ದೊರೆಯಲಾರದು. ಇದೇ ಪದ್ಯದ ಕೆನೆಯಲ್ಲಿ ‘ನರಪಾಪ ಪ್ರಣ್ಯವನು ನರರ ಸೆರಗಿನಲಿ ಹಾಕಿ ಗುರು ಮಹಾಂತ ಲಿಂಗ ತಾ ಮರೆಯಾಗಿರುತಿರುವ. ಅವರವರ ಪಾಪಪುಣ್ಯಗಳಿಗೆ ಅವರವರೇ ‘ಬಾದ್ಧಸ್ಥರು.ʼಉದ್ಧರೇತ್ ಆತ್ಮಾನಾ’ ‘ಆತ್ಮನಂ ಎಂಬ ಗೀತೆಯ ಮಾತು ಇಲ್ಲಿ ಪ್ರಸ್ತುತ

ವೀರಶೈವ ಸಿದ್ಧಾಂತದಲ್ಲಿ ಜಗತ್ತು ಮಿಥ್ಯೆಯಲ್ಲ ಜಗತ್ತು ಸತ್ಯವಾದುದು. ಪ್ರಪಂಚ ದಿಂದ ಪಾರಮಾರ್ಥದ ಕಡೆಗೆ ಸಾಗುವ ಮಹತ್ತಿನ ಹಾದಿ ಇದರಲ್ಲಿ ಅಡಕವಾಗಿದೆ. ಪ್ರಪಂಚಕ್ಕೆ ವಿಮುಖವಾಗುವುದು ಸಲ್ಲ.  ಅದನ್ನೇ ಪೂಜ್ಯ ಶ್ರೀಗಳವರು,

 

 ಸಂಸಾರದೊಳಗೆ ಸದ್ಗತಿಯುಂಟು ಕೇಳ್ ಮಗನೆ |

ಬಸವಾದಿ ಪ್ರಮಥರಿಗೇನಿದ್ದಿಲ್ಲವೇ ||

ಎನ್ನುವ ಪದ್ಯದಲ್ಲಿ ಮೋಕ್ಷದ ದಾರಿಯನ್ನು ಅತ್ಯಂತ ಸುಲಭವಾಗಿ ತಿಳಿಸಿಕೊಟ್ಟಿದ್ದಾರೆ.

 

ಇನ್ನೊಂದು ಪದ್ಯದಲ್ಲಿ ಶಿವಯೋಗಿಯ ಇರುವಿಕೆಯನ್ನು ಅತ್ಯಂತ ಹೃದ್ಯವಾಗಿ ಹೇಳಿದ್ದಾರೆ. ಆ ಶಿವಯೋಗಿಯ ಸ್ವರೂಪವನ್ನು ನೆನಸಿಕೊಂಡಾಗ ಆಗುವ ಆನಂದ ಅವರ್ಣನೀಯ.

 

ಶಿವಯೋಗಿ ಸಾಕ್ಷಾತ್ | ಶಿವನಾದ ಕಾರಣದಿ|

ಅವನಿಭೋಗಗಳವಗೆ ತೃಣಗಾಂಬುವು ||

‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎನ್ನುವ ಮಾತಿನಂತೆ ದೇವನು ಒಬ್ಬನೇ. ಏಕದೇವನ ಇರುವಿಕೆಯನ್ನು ಎಲ್ಲರಿಗೂ ಅತ್ಯಂತ ಸುಲಭವಾಗಿ ತಿಳಿಯುವ ರೀತಿಯಲ್ಲಿ ಅರುಹಿದ್ದಾರೆ.

 

ಅವರವರ ಭಕ್ತಿಗೆ ಅವರವರ ಭಾವಕ್ಕೆ |

ಅವರವರ ತೆರನಾಗಿ ಇರುತಿಹನು ಶಿವಯೋಗಿ

 

ಈ ಪದ್ಯದ ಭಾವವನ್ನು ನಾವು ಸಂಪೂರ್ಣವಾಗಿ ಅರಿತು ಅನುಭವಿಸಿದ್ದಾದರೆ ನಾವು ಪೂರ್ಣ ನೆಮ್ಮದಿಯಿಂದ ಬಾಳಬಹುದಲ್ಲವೇ!

 

ಇವರು ತಮ್ಮ ಮಂಗಳಾರತಿ ಪದ್ಯದಲ್ಲಿ ಪರಮಾತ್ಮನನ್ನು ವರ್ಣಿಸಿದ ರೀತಿ ಅತ್ಯದ್ಭುತ. ವೇದೋಪನಿಷತ್ತುಗಳಲ್ಲಿ ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.  ಅದನ್ನೇ ನಮ್ಮ ಸಿರಿಗನ್ನಡದಲ್ಲಿ ಈ ಮಹಾಶಿವಯೋಗಿಗಳು ಎಲ್ಲರಿಗೂ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ವರ್ಣಿಸಿದ್ದಾರೆ.

 

ಬೇಕು ಬೇಡಂಬೆರಡು ಭವಬೀಜಗಳ ಹುಲಿದು|

ಲೋಕದೊಳಗಿದ್ದು ಇಲ್ಲದ ಮಹಿಮೆಗೆ

ಭಂಗಾರ ಕಬ್ಬುನವು ಹಿರಿಕಿಗಿದು ಸಮಗಂಡ |

ಲಿಂಗ ಮಹಂತೇಶ ಮಹಾ ಜಗತ್ಪುತ್ರಗೆ

 

ಅತ್ಯಂತ ಕ್ಲಿಷ್ಟವಾದ ವಿಷಯವನ್ನು ಅತ್ಯಂತ ಸುಲಭವಾಗಿ ತಿಳಿಸುವ ರೀತಿ ಜ್ಞಾನಿಗಳಿಗೆ ಮಾತ್ರ ಸಾಧ್ಯ. ಮತ್ತೊಂದು ಪದ್ಯದಲ್ಲಿ ಭಕ್ತಿಯ ಹಿರಿಮೆಯನ್ನು ಕೊಡಮಾಡಿದ್ದಾರೆ. ‘ಸೆಡವು ಬಿಗುವಿನ ಭಕ್ತಿ ಹಿಡಿಯಬೇಡೆಂದು ನಮ್ಮೊಡೆಯ ಹೇಳಿದನು ಕೇಳಯ್ಯ’ ಭಕ್ತಿಯಲ್ಲಿ ಸಂಪೂರ್ಣ ಸಮರ್ಪಣ ಭಾವವಿರಬೇಕು. ಆ ಸಮರ್ಪಣ ಭಾವವಿರುವಾಗ `ಗುರು ತಂದೆ ಕಾಯುವಾ’, ಮತ್ತೊಂದು ಪದ್ಯದಲ್ಲಿ ಶ್ರೀಗಳು ಶಿವನ್ನು ಮಾತನಾಡಿಸುವ ರೀತಿಯನ್ನು ನೋಡಬೇಕು.

 

 ಗುರುವೆ ನೀ ಮಾತನಾಡೊ ಸುರತರು ಕಲ್ಪತರುವೆ ನೀ ಮಾತನಾಡೊ|

ಸುರರ ದೇವರ್ಕಳ ಒಡೋಲಗದೊಳು ಮೆರೆವೆ ನೀ ಮಾತನಾಡೋ ||||

 

ಲಿಂಗವೆ ಮಾತನಾಡೊ ಶ್ರೀಗುರು ಮಹಂ

ಲಿಂಗವೆ ಮಾತನಾಡೋ ||

ಸಂಗನ ಶರಣರ ಅಂಗೈಯೊಳಿರುವಂಥ|

ಲಿಂಗವೆ ಮಾತನಾಡೋ   ||೧||

 

ಈ ಮಾತನ್ನು ಕೇಳಿದಾಗ ಗುರುಲಿಂಗವು ಸಾಕ್ಷಾತ್ ಎದುರಿಗೆ ನಿಂತಿರುವ ಹಾಗೆ ಭಕ್ತರಿಗೆ ಭಾಸವಾಗುತ್ತದೆ.

ಒಟ್ಟಾರೆಯಾಗಿ ಈ ಶಿವಯೋಗಿಗಳವರ ‘ಕೈವಲ್ಯ ದರ್ಪಣ’ವೆಂಬ ಕೃತಿರತ್ನ ನಮ್ಮ ಸಾಹಿತ್ಯದ ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ. ಇದರ ವಿಷಯದ ಹರಹು ಬಹು ವಿಸ್ತಾರವಾದದ್ದು. ಶೈಲಿಯಂತೂ ಪಂಡಿತ ಪಾಮರರಿಗೂ ಹೃದ್ಯ. ಸಾಹಿತ್ಯಜ್ಞರಿಗೂ ಇಲ್ಲಿ ಅಲಂಕಾರಗಳ ರಸದೌತಣವಿದೆ. ಉದಾಹರಣೆಗೆ ಯಮಕಾಲಂಕಾರವು ಎಷ್ಟು ಸಹಜವಾಗಿ ಬಂದಿದೆ ನೋಡಿ.

 

ಪುಣ್ಯದಿಂದಲಿ ಆನೆ ಕುದುರೆಯು| ಪುಣ್ಯದಿಂದಲಿ ರಥ ಪದಾತಿಯು

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯತ್ಮ ||

ಪುಣ್ಯದಿಂದಲಿ ಅನ್ನ ವಸ್ತ್ರವು |ಪುಣ್ಯದಿಂದಲಿ ದಂಡು ಮಾರ್ಬಲ |

ಪುಣ್ಯದಿಂದಲಿ ಸರ್ವಸಿದ್ಧಿಯು ಕೇಳು ಪುಣ್ಯಾತ್ಮ ||

 

ಎಲ್ಲೂ ಕ್ಲಿಷ್ಟತೆಯ ಸುಳಿವಿಲ್ಲ. ಮಾನವನಿಗೆ ಅತ್ಯಂತ ಸರಳವಾಗಿ ಸಾಧನಾ ಮಾರ್ಗವನ್ನು ತಿಳಿಸಿದೆ ಈ ಕೃತಿರತ್ನ, ಇದರಲ್ಲಿಯ ತತ್ತ್ವಗಳು ನಮ್ಮ ದಾರಿದೀಪಗಳಾಗಬೇಕು. ಶಿವನೇ ತಾನಾದ ಈ ಮಹಾಶಿವಯೋಗಿಯು ಮನುಕುಲದ ಕಲ್ಯಾಣಕ್ಕಾಗಿ ಈ ಕೃತಿಯನ್ನು ನೀಡಿ ನಮ್ಮನ್ನು ಧನ್ಯರಾಗಿಸಿದ್ದಾರೆ. ಈ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಯ ದಿವ್ಯ ಪಾದಪದ್ಮಗಳಲ್ಲಿ ನನ್ನ ದೀರ್ಘದಂಡ ನಮನಗಳು.

“ಅಟ್ಯಾಕ” ಅನ್ನುವುದು ಬಸವ ಭಾಷೆಯೆ ?

ಲೇಖಕ:ಶ್ರೀಕಂಠ.ಚೌಕೀಮಠ

ಕಳೆದ ಹಲವು ತಿಂಗಳುಗಳಿಂದ ಕರ್ನಾಟಕದಲ್ಲಿ “ವಚನ ದರ್ಶನ” ಎಂಬ ಪುಸ್ತಕದ ಪ್ರಚಾರ ಮತ್ತು ಆ ಪುಸ್ತಕಕ್ಕೆ ಪ್ರತಿಯಾಗಿ  “ವಚನದರ್ಶನ ಮಿಥ್ಯ -ಸತ್ಯ” ಪುಸ್ತಕದ ಪ್ರಚಾರಗಳನ್ನು ನಾವೆಲ್ಲ ನೋಡುತ್ತ ಬಂದಿರುತ್ತೇವೆ.

ಒಂದು ಪುಸ್ತಕ ಅದರ ಒಳತಿರಳು  ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಒಂದು ಗುಂಪಿನ ವಾದ ದ ಫಲಶೃತಿಯಾಗಿ ಆರಂಭವಾದ ಪ್ರತಿರೋಧಗಳು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಆರಂಭ ಗೊಂಡಿದ್ದನ್ನು ನಾವು ನೋಡುತ್ತ ಕೇಳುತ್ತ ಬಂದಿದ್ದೇವೆ.

ಇದೊಂದು ತಾತ್ವಿಕ ಹೋರಾಟ.

ಒಂದು ಪುಸ್ತಕದ ವಿಷಯಗಳನ್ನು ವಿರೋಧಿಸುವ ಮತ್ತು ಅದಕ್ಕೆ ಪೂರಕವಾದ ವಿವರಣೆ ನೀಡುವ ಒಂದು ಅರ್ಥದಲ್ಲಿ  ಆರೋಗ್ಯಕರ ಚಳುವಳಿ.

ಆದರೆ ಈ ಆರೋಗ್ಯಕರ ಚಳುವಳಿಯ ಪ್ರತಿರೋಧದಲ್ಲಿ ಮೊನ್ನೆ ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು ಅನಾರೋಗ್ಯಕರ ವಾತವರಣ ವನ್ನು ಸೃಷ್ಠಿಸಿದ್ದು ಖಂಡನೀಯ.

ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಮಾತನಾಡುತ್ತ ಈ ಕೆಳಗಿನ ಸಾಲುಗಳ ಮೂಲಕ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟಕ್ಕೆ ಫತ್ವಾ ಹೊರಡಿಸಿರುವರು

  1. “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.”
  2. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?”
  3. “ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು?”
  4. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .”

ಜೆಎಲ್‌ಎಂ ಸಂಘಟನೆಯ ಸಿದ್ದು ಯಾಪಲಪರ್ವಿ ಯ  “ಅಟ್ಯಾಕ” ಎನ್ನುವ ಈ  ಭಯೋತ್ಪಾದಕ ಶಬ್ಧಕ್ಕೆ ನನ್ನ ಮೂಲ ಭೂತ ಪ್ರಶ್ನೆ.

  1. ಸಾರ್ವಜನಿಕವಾಗಿ “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಹೇಳಲಿಕ್ಕೆ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮಾಡಿದ ಅಪರಾಧ ವೇನು ? .

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್‌ ಸಂತನಮೇಲೆ ಸಿದ್ದು ಯಾಪಲಪರ್ವಿಯಂತವರು ಮಾತನಾಡುವ ಮುನ್ನ ಜಾಗೃತ ಅವಸ್ಥೆಗೆ ಬಂದು ಎಚ್ಚರದಿಂದ  ಮಹಾತ್ಮರ ಬಗ್ಗೆ ಮಾತನಾಡಲಿ.

  1. ಪೂಜ್ಯರ ಭೌತಿಕ ಶರೀರ ಮಹಾಲಿಂಗದಲ್ಲಿ ಐಕ್ಯವಾಗಿ ೯೫ ವರ್ಷ ಕಳೆದರೂ ಪೂಜ್ಯರ ಮೇಲೆ “ಅಟ್ಯಾಕ್” ಎನ್ನುವ ಶಬ್ಧದ ಪ್ರಯೋಗ ಎಷ್ಟು ಸಮಂಜಸ ?‘ಪಾಪ’ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರಿಗೆ ಈ ಮೂಲಕ ತಿಳಿಸುವದೇನೆಂದರೆ ಇದು  ಕುಮಾರೇಶನ  ಅನುಯಾಯಿಗಳ ಬರೀ ನೋವಲ್ಲ ರಕ್ತ ಕ್ರಾಂತಿಗೆ,  ಸಿದ್ದು .ಬ. ಯಾಪಲಪರ್ವಿ  ಹಾಕಿದ ಮುನ್ನುಡಿ ಮತ್ತು ಈ ಮೂಲಕ ಉದ್ಭವವಾಗುವ ಎಲ್ಲ ಅಹಿತಕರ ಘಟನೆಗಳಿಗೆ ಈ ಕಾರ್ಯಕ್ರಮದ ಸಂಘಟಕರಾದ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ನೇರ ಹೊಣೆಯಾಗುತ್ತಾರೆ.

 

  1. “ಏನು ಸಂಸ್ಕೃತ ವ್ಯಾಮೋಹ ಕೇವಲ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಇತ್ತೋ?” ಎಂದು ಕೇಳುವ ಈ ಇಂಗ್ಲೀಷ ಪ್ರಾಧ್ಯಾಪಕರಿಗೆ ಪಿತ್ತ ನೆತ್ತಿಗೇರಿದಂತೆ ಕಾಣುತ್ತದೆ.ತಾನು ಪಾಶ್ಚ್ಯಾತ್ಯ ಭಾಷೆ ಇಂಗ್ಲೀಷ ಓದಿದರೆ ಮತ್ತು ಕಲಿಸಿದರೆ  ನಡೆಯುತ್ತದೆ ಆದರೆ ಜನ ಭಾರತದ ಮೂಲ ಭಾಷೆ ಸಂಸ್ಕೃತ ಓದಿದರೆ ಮತ್ತು ಓದಿಸಿದರೆ  ಅಪರಾಧವೆಂಬಂತೆ ವ್ಯಂಗವಾಗಿ ಮಾತನಾಡಿರುವ  ಸಿದ್ದು ಯಾಪಲಪರ್ವಿ  ಆಯಾ ಕಾಲ ಘಟ್ಟದ ಭಾಷಾ ಅಧ್ಯಯನ ಆಯಾ ಕಾಲಘಟ್ಟದ ಅನಿವಾರ್ಯತೆಯಿಂದಲೇ ನಡೆಯುತ್ತದೆಯೇ ಹೊರತು ವಯಸ್ಸು ಮುಚ್ಚಿಕೊಳ್ಳಲು  ಬಳಸುವ ಹೇರ ಡ್ರೈಯರ ಬಣ್ಣದಂತಲ್ಲ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳತಕ್ಕದ್ದು.

ಸಂಸ್ಕೃತ ಭಾಷೆಯ ಅಧ್ಯಯನವನ್ನು ಅಪಹಾಸ್ಯಗೊಳಿಸುವ ಪ್ರಯತ್ನವು ಜ್ಞಾನದ ಮೇಲೆ ಬೀರುವ ಅಪಮಾನವಾಗಿದೆ. ಸಿದ್ದು ಯಾಪಲಪರ್ವಿ   ಪಾಶ್ಚಾತ್ಯ ಭಾಷೆಯ ಅಧ್ಯಾಪಕರಾಗಿದ್ದರೂ, ಭಾರತೀಯ ಭಾಷೆಗಳ ವಿರುದ್ಧ ಅಭಿಮಾನ ಕೊರತೆಯು ಗಂಭೀರ ವಾದುದ್ದು.

  1. ಶಿವಯೋಗಮಂದಿರದ ಟೆಕ್ಸ್ಟ್ ಬುಕ್ ಏನು ? ಎಂದು ಪ್ರಶ್ನಿಸಿದ ಸಿದ್ದು ಯಾಪಲಪರ್ವಿ    ಶಿವಯೋಗಮಂದಿರದ ಹಲವು ಪ್ರಕಟಣೆಗಳಲ್ಲಿ ಶಿವಯೋಗಮಂದಿರದ ಅಧ್ಯಯನದ ಕುರಿತು ಅಲ್ಲಿ ಬಳಸುವ ಪಠ್ಯಪುಸ್ತಕಗಳ ಕುರಿತು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿದ್ದರೂ ಮತ್ತು ೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ  ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶಿವಯೋಗಮಂದಿರದ ಸಾಧಕರೇ ವಹಿಸಿದ್ದರೂ  ಶಿವಯೋಗಮಂದಿರದ ಪಠ್ಯಪುಸ್ತಕಗಳ ಕುರಿತು ಗುಮಾನಿ ಮತ್ತು ಅನುಮಾನ ವ್ಯಕ್ತಪಡಿಸಿದ್ದು ಕುಚೋದ್ಯತನವೇ ಹೊರತು ಬೇರೆ ಏನೂ ಇಲ್ಲ.ಅವುಗಳ ಕುರಿತು ಜನಸಮ್ಮುಖದಲ್ಲಿ ಶಂಕೆ ವ್ಯಕ್ತಪಡಿಸುವುದು ದುರಭಿಪ್ರಾಯದಿಂದ ಕೂಡಿದ ನಡೆ.

 

  1. “ಅಲ್ಲಿ ಬಸವಣ್ಣನಿಗೆ ಅಪಮಾನ ಮಾಡಿದ ವ್ಯಕ್ತಿಯ ಟೆಕ್ಸ್ಟ್ ಬುಕ್ ಇದೆ. ಅದು ಯಾಕೆ ಇಡಬಾರದು ಅನ್ನೋದನ್ನ ನಾವು ಚರ್ಚಿಸೋಣ. .” ಎಂದು ಹೇಳಿದ ಸಿದ್ದು .ಬ. ಯಾಪಲಪರ್ವಿಯವರ ವಿಚಿತ್ರ ಆಪಾದನೆ. ಇಷ್ಟೆಲ್ಲಾ ಸಾರ್ವಜನಿಕವಾಗಿ ಮಾತನಾಡಿ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಂತೆ  ಸಾರ್ವಜನಿಕರಲ್ಲಿ ಶಿವಯೋಗಮಂದಿರದ ಬಗೆಗೆ ತಪ್ಪು ಕಲ್ಪನೆ ಬರುವಂತೆ ಪ್ರಚೋದನೆ ಮಾಡುವದಕ್ಕಿಂತ ಬದಲು ನೇರವಾಗಿ ಪುಸ್ತಕದ ಹೆಸರು ಮತ್ತು ಲೇಖಕನ ಹೆಸರು ಹೇಳಬಹುದಿತ್ತಲ್ಲವೆ?

 

  1. ಸಿದ್ದು ಯಾಪಲಪರ್ವಿ ಸದಸ್ಯರಾಗಿರುವ  ಜೆಎಲ್‌ಎಂ, ಬಸವಣ್ಣನವರ ವಚನನಾಮಾಂಕಿತ ವನ್ನೇ ಬದಲಿಸಿದವರ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ಮತ್ತು ಬಸವಣ್ನನವರ ಪತ್ನಿ ನೀಲಾಂಬಿಕೆ ವಚನ “ನೋಡು ನೋಡು ಲಿಂಗವೇ “ ವನ್ನೆ ಅಪಾರ್ಥ ಮಾಡಿದ,ಸಂಶೋದಕ ,ಚನ್ನಬಸವಣ್ಣ ನವರ ಜನನವನ್ನೇ ಅಪವಿತ್ರ ಗೊಳಸಿದ ವರನ್ನು ಒಪ್ಪಿಕೊಂಡು ಅವರ ಸಂಶೋದನೆಗಳನ್ನೆ ಹೊತ್ತು ಮೆರೆಸುವ ಜೆಎಲ್‌ಎಂ  ಕುರಿತು ಮೊದಲು ಚಿಂತಿಸಲಿ, ನಂತರ ಶತಮಾನದ ಇತಿಹಾಸ ವಿರುವ ಶಿವಯೋಗಮಂದಿರದ ಬಗ್ಗೆ ಮಾತನಾಡಲಿ.

 

ಈ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ನನ್ನ ಕಳಕಳಿಯ ಮನವಿ.ಇಂಥಹ ಅಚಾತುರ್ಯದ ಘಟನೆಗಳು ಮರುಕಳಿಸುವುದೇ ಆದಲ್ಲಿ ದಯವಿಟ್ಟು ಅದನ್ನು ಮುಂಚಿತವಾಗಿ  ಕಾರ್ಯಕ್ರಮದ  ಹಿಡನ್ನ ಅಜೆಂಡಾ ವನ್ನು ದಯವಿಟ್ಟು ಸಾರ್ವಜನಿಕವಾಗಿ ಬಹಿರಂಗಗೊಳಿಸಿ.

“ವಚನದರ್ಶನ ಮಿಥ್ಯ -ಸತ್ಯ ಎಂಬ ಪುಸ್ತಕದ ಹೆಸರಿನಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರರ ನಿಂದನೆಯನ್ನು ಶಿವಯೋಗಮಂದಿರದ ಸಾಧಕ ಮಠಾಧಿಪತಿಗಳು ಶ್ರೀ ಕುಮಾರೇಶನ ಭಕ್ತ ಸಂಕುಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು  ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಿದ್ದು ಯಾಪಲಪರ್ವಿ ಮೂಲಕ ಆಡಿಸಿದ ಈ  ರೀತಿಯ ತುಚ್ಛ ಮಾತುಗಳನ್ನು ಸಹಿಸಲು ಇನ್ನು ಸಾಧ್ಯವಿಲ್ಲ.

ಈ ರೀತಿಯ ಶಬ್ದಪ್ರಯೋಗಗಳು, ವಿಶೇಷವಾಗಿ “ಅಟ್ಯಾಕ್” ಎಂಬ ಕ್ರೂರ ಪದದ ಬಳಕೆ, ಭಯೋತ್ಪಾದಕ ಛಾಯೆಯ ಮಾತುಗಳು ಸಮಾಜದಲ್ಲಿ ಭಾವನಾತ್ಮಕವಾಗಿ ತೀವ್ರ ಪ್ರತಿಕ್ರಿಯೆ ಉಂಟುಮಾಡಬಲ್ಲವು ಮತ್ತು ಭವಿಷ್ಯದಲ್ಲಿ ಶಾಂತಿಗೆ ಧಕ್ಕೆಯುಂಟುಮಾಡುವ ಆತಂಕವಿದೆ.

ವಚನ ಸಂಸ್ಕೃತಿಯ ಕುರಿತ ತಾತ್ವಿಕ ಚರ್ಚೆ ಮತ್ತು ಗ್ರಂಥಗಳ ಆಲೋಚನಾತ್ಮಕ ವಿಶ್ಲೇಷಣೆಗಳು, ಅರ್ಥಪೂರ್ಣ ರೀತಿಯಲ್ಲಿ ನಡೆಯುವುದು ಒಳ್ಳೆಯದು. ಆದರೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರ ನಾಮದೊಂದಿಗೆ ಯಾವುದೇ ಸಂಬಂಧವಿಲ್ಲದ ವಿಷಯವನ್ನು ಎಳೆದುಕೊಂಡು ಅವರು ಮೇಲೆಗೆ “ಅಟ್ಯಾಕ್” ಎಂಬ ಶಬ್ದವನ್ನು ಬಳಸುವುದು ನಿಜಕ್ಕೂ ಖಂಡನೀಯ.

ಈ ಕುರಿತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಠಾಧಿಪತಿಗಳ ಒಕ್ಕೂಟ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಅಪೇಕ್ಷೆ ನಮ್ಮದಾಗಿದೆ. ಶತಮಾನದ ಪರಂಪರೆಯ ಘನತೆಯ ರಕ್ಷಣೆಯೇ ನಮ್ಮ ಆಶಯ.ಇದಕ್ಕೆ ಸಂಬಂಧಪಟ್ಟಂತೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂಬ ವಿಶ್ವಾಸವಿದೆ.

-ಶ್ರೀಕಂಠ.ಚೌಕೀಮಠ

ಸೇವಕ-ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ

 

ಇಂದಿಗೆ ಸರಿಯಾಗಿ ೪೫ ವರ್ಷಗಳ ಹಿಂದಿನ ಅವಿಸ್ಮರಣೀಯ ಘಟನೆಯ ಮೆಲಕು.(1980)

ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಪಟ್ಟಾಧಿಕಾರ ರಜತ ಮಹೋತ್ಸವ ಅಭಿನಂದನ ಗ್ರಂಥದಲ್ಲಿ ಬರೆದ “ಪಟ್ಟಾಧ್ಯಕ್ಷರಿಗೆ ಪಂಚ ಪತ್ರ ಲೇಖನದ ನಾಲ್ಕನೆಯ ಪತ್ರದಿಂದ ಆಯ್ದುಕೊಂಡ ಸಾಲುಗಳು……

(ಪೂಜ್ಯ ಶ್ರೀ ಸಿಂದಗಿ ಪಟ್ಟಾಧ್ಯಕ್ಷರಿಗೆ ಆರೋಗ್ಯದಲ್ಲಿ ತೊಂದರೆಯಾದ ಸಂಧರ್ಭ)

“ಇಂದಿನ ಈ ಪಾರ್ಶ್ವವಾಯುವಿನಂತಹ ಸ್ಥಿತಿಯಲ್ಲೂ ನಿಮ್ಮ ನಿಷ್ಠೆ ಹಿಮಾಚಲ. ಅಚಲ.

 ದೇಹ ಬಹಿರಂಗದ ಪ್ರಜ್ಞೆ ಕಳೆದುಕೊಂಡರೂ ನಿಮ್ಮ ಕೈ ಸದಾ ಕೊರಳ ಇಷ್ಟಲಿಂಗವನ್ನು ನೇವರಿಸುತ್ತಿತ್ತು.

ಮೊನ್ನೆ ಆಸ್ಪತ್ರೆಗೆ ನಿಮ್ಮನ್ನು ಕಾಣಲು ಬಂದಿದ್ದೆನಲ್ಲ, ಅಂದಿಗೆ ಪ್ರಜ್ಞೆ ಮಾತು ಮೌನವಾಗಿ, ಹದಿನೈದು-ಇಪ್ಪತ್ತು, ದಿನಗಳೇ ಸಂದಿದ್ದವು.

 ಅಂದು ನಿಮ್ಮ ಆರಾಧ್ಯ ದೈವ  ಕುಮಾರೇಶನ ಸ್ಮರಣದಿನ.

ನಾನು ನಿಮ್ಮ ಕಿವಿಯ ಸಮೀಪ, “ ಬುದ್ದೀ, ಇಂದು ಕುಮಾರೇಶ್ವರನ  ಪುಣ್ಯತಿಥಿ ” ಎಂದು ಹೇಳಿದಾಗ ಇಪ್ಪತ್ತು ದಿನಗಳಿಂದ ತೆರೆಯದ ಕಣ್ಣು ತೆರೆದದ್ದು, ಕಣ್ಣಿನಲ್ಲಿ ಹೊಸ ಬೆಳಕು ಕಂಡದ್ದು, ಏಳಲಾರದ ಕೈ ತನಗೆ ತಾನೇ ಎದ್ದು ನಮಿಸಿದ್ದು, ಮುಖದ ತುಂಬ ಸಂತೃಪ್ತಿಯ ಸಾರ್ಥಕತೆಯ ನಗೆ ತೇಲಿದ್ದು ಅದೊಂದು ರೋಮಾಂಚನ, ಹೃದಯಸ್ಪರ್ಶಿ ಅನುಭವ.”

ಈ ಸಾಲುಗಳನ್ನು ಓದುತ್ತ ಹೋದಂತೆ ಅನಿಸಿದ್ದು,

ಶ್ರೀ ಶಿವಯೋಗಮಂದಿರದ ಗುರು-ಶಿಷ್ಯ ಪರಂಪರೆಯ ಅವಿನಾಭಾವ ಸಂಬಂಧಗಳು- ಅವು ಪವಾಡಗಳಲ್ಲ ! ಅವು ನಿಜಜೀವನದ ವಸ್ತು ಸ್ಥಿತಿಗಳು !!.

ಪ್ರಚಾರವನ್ನು ಬಯಸದ ಮಹಾಸಂತನ  ೯೫ನೆಯ ಪುಣ್ಯ ಸ್ಮರಣೆಯ ಪವಿತ್ರ ದಿನವಿಂದು ಕಾರುಣಿಕ ಯುಗಪುರುಷ  ಸಮಾಜ ಸಂಜೀವಿನಿಯ  ಪರಮಪೂಜ್ಯ  ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಸ್ಮರಣೆ  ಕೇವಲ ಒಂದು ದಿನದ ಸ್ಮರಣೆಯಲ್ಲ ಅವರ ಸ್ಮರಣೆ ನಮ್ಮ ನಿತ್ಯ ಸ್ಮರಣೆ, ನಮ್ಮ ನಿತ್ಯ ಧ್ಯಾನ .

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

 

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ಪುತ್ರ ಕೇಳೀ ಲಿಂಗ | ಶ್ರೋತ್ರಾದಿ ಇಂದ್ರಿತನ್

ಮಾತ್ರೆಯ ಸುಜ್ಞಾನ-ಮಾತ್ರದೊಳರಿ ಎಂದಾ

ಧಾತ್ರೀಶ ಗುರುವೆ ಕೃಪೆಯಾಗು    ||೧೫೮||

 ಕರ್ಮೇಂದ್ರಿಯಗಳಲ್ಲಿ ಇಷ್ಟ (ಕ್ರಿಯಾ) ಲಿಂಗ ಸಂಬಂಧವನ್ನು ತೋರಿಸಿ ಈಗ ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ ಸಂಬಂಧವನ್ನು ತಿಳಿಸುತ್ತಾನೆ.

ಜ್ಞಾನೇಂದ್ರಿಯಗಳಿಗೆ ಧರ್ಮೆಂದ್ರಿಯಗಳೆಂತಲೂ ಹೆಸರು. ಈ ಜ್ಞಾನೇಂದ್ರಿಯಗಳು ಅಗ್ನಿತತ್ತ್ವದಿಂದ ಜನಿಸಿದವುಗಳು. ಅರ್ಥಾತ್ ಅಗ್ನಿಯ ಪಂಚೀಕರಣದಿಂದ ಪ್ರಕಟ ಗೊಂಡಿವೆ. ಶ್ರೋತ್ರ, ತ್ವಕ್, ನೇತ್ರ, ಜಿಹ್ವೆ, ಘಾಣಗಳೇ ಪಂಚಜ್ಞಾನೇಂದ್ರಿಯಗಳು. ಪಂಚೀಕೃತ ಅಗ್ನಿಯ ಅರ್ಧಭಾಗವೇ ನೇತ್ರ. ಉಳಿದ ಅರ್ಧಭಾಗದ ಅಗ್ನಿಯಲ್ಲಿ ಸೇರಿದ ಕಾಲುಭಾಗದ (೧/೮ನೇ ಭಾಗ) ಅಕಾಶ ತತ್ತ್ವವೇ ಶ್ರೋತ್ರ. ಕಾಲುಭಾಗದ (೧/೮) ವಾಯುವೇ ತ್ವಕ್ಕು. ಅಪ್ಪುವಿನ (೧/೮) ಪಾದಾಂಶವೇ ಜಿಹ್ವೆ.  ಪೃಥ್ವಿಯ ಕಾಲು (೧/೮) ಭಾಗವೇ ನಾಶಿಕವಾಗಿದೆ. ಈ ಪಂಚಜ್ಞಾನೇಂದ್ರಿಯಗಳಿಗೆ ಪಂಚನ್ಮಾತ್ರೆಗಳು ಸಮರ್ಪಿತವಾಗುತ್ತವೆ. ಪಂಚತನ್ಮಾತ್ರೆಗಳು ಪಂಚೀಕೃತ ಜಲದ ಪಂಚ ಅಂಶಗಳು ಶಬ್ದ ಸ್ಪರ್ಶ, ರೂಪ, ರಸ, ಗಂಧಗಳೇ ಪಂಚತನ್ಮಾತ್ರೆಗಳೆನಿಸಿವೆ. ಪಂಚಜ್ಞಾನೇಂದ್ರಿಗಳಿಗೆ ಪಂಚತನ್ಮಾತ್ರೆಗಳು ಸಮರ್ಪಿತವಾಗುವಲ್ಲಿಯೇ ಸುಜ್ಞಾನದಿಂದ ಪ್ರಾಣಲಿಂಗ ಸಂಬಂಧವನ್ನು ಮಾಡಬೇಕು. ಇಂದ್ರಿಯಗಳನ್ನು ಲಿಂಗಗಳ್ನಾಗಿ ಗ್ರಹಿಸಿ ತನ್ಮಾತ್ರೆಗಳನ್ನು ಪ್ರಸಾದವನ್ನಾಗಿ ಸ್ವೀಕರಿಸುವ ಸುಜ್ಞಾನದ ಕಲೆಯನ್ನು ಕರಗತಮಾಡಿಕೊಳ್ಳುವದೇ ಪ್ರಾಣಲಿಂಗ ಧಾರಿಯ ಕರ್ತವ್ಯವಾಗಿದೆ.

ದೇಹವು ಕಣ್ಣಿಗೆ ಕಾಣಿಸುತ್ತದೆ. ಅದು ಸ್ಥೂಲವಾಗಿದೆ. ಆದರೆ ದೇಹದಲ್ಲಿಯ ಪ್ರಾಣ ಕಾಣಿಸುವದಿಲ್ಲ. ಅದು ಸೂಕ್ಷ್ಮವಾದುದು. ಕರ್ಮೆಂದ್ರಿಯಗಳು ಕಾರ್ಯ ಮಾಡುವುದೆಲ್ಲ ಸ್ಪಷ್ಟವಾಗುತ್ತದೆ. ಜ್ಞಾನೇಂದ್ರಿಯಗಳು ಕಾರ್ಯಗೈಯುವದು ಗೋಚರಿಸುವದಿಲ್ಲ. ಜ್ಞಾನೇಂದ್ರಿಯಗಳು ಕಣ್ಣಿಗೆ ಕಂಡರೂ ಅವುಗಳ ಜ್ಞಾನೇಂದ್ರಿಯತ್ವವು ಕಾಣಿಸುವದಿಲ್ಲ. ಅದು ಅನುಭವದಿಂದಲೇ ವೇದ್ಯವಾಗುತ್ತದೆ. ಉದಾಹರಣೆಗಾಗಿ ಕಿವುಡನಿಗೆ ಕಿವಿಗಳಿರುತ್ತವೆ. ಆದರೆ ಅವನಿಗೆ ಯಾವ ಶಬ್ದವೂ ಕೇಳಿಸುವದಿಲ್ಲ. ಶೀತ ಬಾಧೆಯಾದವನಿಗೆ ಮೂಗಿದ್ದರೂ ವಾಸನೆ ಬರುವದಿಲ್ಲ. ಜ್ವರ ಬಂದವನಿಗೆ ನಾಲಿಗೆಯಿದ್ದರೂ ರುಚಿಸುವುದಿಲ್ಲ, ಶರೀರವು ಮರಗಟ್ಟಿದಾಗ ಯಾವುದೇ ತರಹದ ಸ್ಪರ್ಶ ತಿಳಿಯುವದಿಲ್ಲ. ಯಾಕೆಂದರೆ ಪದಾರ್ಥಗಳನ್ನು ಗ್ರಹಿಸುವ ಇಂದ್ರಿಯವು ಸೂಕ್ಷ್ಮವಾಗಿರುತ್ತದೆ, ಮತ್ತು ಅಲ್ಲಿ ಜ್ಞಾನಪೂರ್ವಕವಾದ ಗ್ರಹಿಕೆಯಾಗಬೇಕು. ಬೇರೊಂದು ಕಡೆ ಲಕ್ಷ್ಯವಿರುವ ವ್ಯಕ್ತಿಯು ಬೇರೊಬ್ಬನಿಂದ ಹೇಳಿದ ಮಾತನ್ನು ಕೇಳಲಾರನು, ಶಬ್ದಗಳು ಕಿವಿಗೆ ಬಿದ್ದರೂ ಅರ್ಥವಾಗುವದಿಲ್ಲ. ಉಂಡರೂ ಭೋಗಿಸಿದ ಪ್ರಸಾದವು ತೃಪ್ತಿಯನ್ನು ನೀಡಲಾರದು. ಆದುಕಾರಣ ಗುರುನಾಥನು ಇಲ್ಲಿ ಎಚ್ಚರಿಸಿದ್ದಾನೆ. –

“ ಶ್ರೋತ್ರಾದಿ ಇಂದ್ರಿತನ್ಮಾತ್ರೆಯ ಸುಜ್ಞಾನ ಮಾತ್ರದೊಳರಿ’ ಎಂದು.

ಪ್ರಾಣಲಿಂಗ ಸಂಬಂಧದಲ್ಲಿ ಸುಜ್ಞಾನವೇ ಮುಖ್ಯಸಾಧನವಾಗಿದೆ. ಸುಜ್ಞಾನ ಮಾಧ್ಯಮದಿಂದಲೇ ಸಂಬಂಧವನ್ನು ತಿಳಿಯಬಹುದು. ಹೀಗೆ ಉಪದೇಶಿಸುವ ಗುರು ಸಾಮಾನ್ಯನಲ್ಲ. ಅವನು ಧಾತ್ರೀಶನೆನಿಸಿದ್ದಾನೆ. ಶಿವನು ಬ್ರಹ್ಮಾಂಡ ಜಗದೊಡೆಯ ನಾದರೆ ಗುರುವು ಪಿಂಡಾಂಡ-ಜಗದೊಡೆಯನಾಗಿದ್ದಾನೆ. ಪಿಂಡಾಂಡದ ಸಕಲ ವಿಜ್ಞಾನ ಗುರುವಿಗೆ ವೇದ್ಯವಾದುದು. ಓ ಗುರುವೇ ! ಕೃಪೆಯಿಟ್ಟು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗವನ್ನು ಸಂಬಂಧಗೊಳಿಸು. ಪ್ರಾಣಲಿಂಗದೊಳಗಿನ ಷಡ್ಲಿಂಗದರಿವನ್ನು ದಯಪಾಲಿಸು.

ನಾಸಿಕೇಂದ್ರಿಯದಿ ಸ | ದ್ವಾಸನೆಯ ಕೊಂಬುದು

ಲ್ಲಾ ಸದಾಚಾರ ವಾ ಸಲ್ಲಿಂಗವೆಂದುಪ

ದೇಶಿಸಿದ ಗುರುವೆ ಕೃಪೆಯಾಗು   ||೧೫೯||

ಪೃಥ್ವಿತತ್ತ್ವದ ನಾಶಿಕ (ಮೂಗು)ವು ವಾಸನೆಯನ್ನು ಸ್ವೀಕರಿಸುತ್ತದೆ. ನಾಶಿಕೇಂದ್ರಿಯವೇ ಆಚಾರಲಿಂಗಕ್ಕೆ ಆಶ್ರಯ. ಮೂಗು ಯಾವುದೇ ವಾಸನೆಯನ್ನು ವಾಸಿಸುವದು ಸಹಜ. ಅದು ಅದರ ಪ್ರಕೃತಿ ಧರ್ಮ. ಈ ಪ್ರಾಕೃತಿಕ ಧರ್ಮವನ್ನು ಕಳೆಯಬೇಕಾದರೆ ಭಕ್ತನಾದವನು ಇದು ನಾಸಿಕವೆಂದು ಭಾವಿಸದೇ ಆಚಾರಲಿಂಗ ವೆಂದು ಗ್ರಹಿಸಬೇಕು. ಮೂಗಿನಿಂದ ಸ್ವೀಕರಿಸಲ್ಪಡುವ ಗಂಧವನ್ನು ಪದಾರ್ಥವೆಂದು ತಿಳಿಯದೇ ಅದನ್ನು ಗಂಧಪ್ರಸಾದವೆಂದು ಗ್ರಹಿಸಬೇಕು. ಯಾವುದೇ ವಾಸನೆಯನ್ನು ಆಚಾರಲಿಂಗದ ಸ್ಮರಣೆಮಾಡಿ ಗಂಧಪ್ರಸಾದವನ್ನಾಗಿ ಸ್ವೀಕರಿಸಬೇಕು. ಇದರಿಂದ

ಗಂಧದ ಪೂರ್ವಾಶ್ರಯವು ಅಳಿಯುವದು. ಪ್ರಾಸಾದಿಕ ಭಾವನೆಯು ಮನದಲ್ಲಿ ಬೆಳೆಯುವದು. ಗಂಧಗಳು ಭಿನ್ನವಾಗಿದ್ದರೂ ಪ್ರಸಾದವೆಂದೇ ಸ್ವೀಕರಿಸುವದರಿಂದ ಅದರ ಬಾಧೆಯಾಗುವದಿಲ್ಲ. ಮೋಹಕ ಗಂಧವೇ ಆಗಿದ್ದರೂ ಲಿಂಗಮುಖವಾಗಿ ಪ್ರಸಾದವನ್ನಾಗಿಸಿ ಸ್ವೀಕರಿಸುವ ವ್ಯಕ್ತಿಗೆ (ಶರಣನಿಗೆ) ಆ ಮೋಹ ಪರಿಣಾಮ ಬೀರದು. ಪ್ರಾಸಾದಿಕಗಂಧವು ಆತ್ಮನನ್ನು ಉಲ್ಲಾಸಗೊಳಿಸುವದು. “ಸುಗಂಧಂ ಪುಷ್ಟಿವರ್ಧನಮ್” ಸುಗಂಧ ದ್ರವ್ಯಗಳ ಪರಿಣಾಮ ದೇಹದಲ್ಲಿ ಪುಷ್ಟಿಯನ್ನು ಹೆಚ್ಚಿಸುವದು. ಈ ದೈಹಿಕ ಉತ್ಸಾಹವನ್ನು ಸಾತ್ವಿಕಗೊಳಿಸುವದೇ ಲಿಂಗತತ್ತ್ವ. ಲಿಂಗವಂತನು ಆಚಾರಲಿಂಗಕ್ಕರ್ಪಿತವಾಗುವ ಸುಗಂಧದಿಂದ ಪುಷ್ಟಿಯನ್ನು ಪಡೆದು ಸದಾಕಾಲವೂ ಪ್ರಾಸಾದಿಕ (ಪ್ರಸನ್ನ) ಗುಣಗಳನ್ನು ಹೊಂದುವನು. ಇಂಥ ಶರಣನಿಗೆ ಯಾವಾಗಲೂ ಬೇಸರವೆಂಬುದು ಇರುವದಿಲ್ಲ ಅವನು ಆಲಸಿಯಾಗುವದಿಲ್ಲ. ಉಲ್ಲಾಸಗೊಳಿಸಬಲ್ಲ ತಥ್ಯವನ್ನು ಹೊಂದಿರುವುದೇ ಆಚಾರಲಿಂಗದ ಕುರುಹು.

ವೀರಶೈವರಲ್ಲಿ ಅರ್ಚನ, ಅರ್ಪಣ ಮತ್ತು ಅನುಭವಗಳು ಬಹಳ ಮುಖ್ಯವಾಗಿವೆ. ಲಿಂಗಾರ್ಚನೆಯಿಂದ ಆತ್ಮಾನುಸಂಧಾನ ಮಾಡಬೇಕು. ಲಿಂಗ ಗುಣಗಳನ್ನು ಪಡೆಯಲು ಲಿಂಗಾರ್ಪಣ ಮಾಡಬೇಕು. ಅರ್ಪಿಸಿದ್ದು ಅನುಭವದಲ್ಲಿ ಅಳವಡಬೇಕು. ಈ ಅರ್ಪಣ ವಿಧಾನವೇ ಪ್ರಸ್ತುತ ಪ್ರಕರಣದಲ್ಲಿ ಸ್ಪುಟಗೊಂಡಿದೆ.

ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ನಿರೂಪಿಸಿದ “ಮಿಶ್ರಾರ್ಪಣ’ವು ಅತ್ಯಂತ ಮಹತ್ವಪೂರ್ಣವಾದುದು. ಮಿಶ್ರಾರ್ಪಣದ ಅರಿವಿಲ್ಲದೆ ಅಂಗನು  ಲಿಂಗನಾಗನು. ಅರ್ಪಣಸದ್ಭಾವವೇ ಚರಮಗುರಿಯಾಗಿದೆ. ಅರ್ಪಣವು ಕಾಯಾರ್ಪಣ, ಕರಣಾರ್ಪಣ, ಮತ್ತು ಭಾವಾರ್ಪಣವೆಂದು ಮೂಬಗೆಯಾಗಿದೆ. ಕ್ರಿಯೆಯಿಂದ ಮಾಡುವದು ಕ್ರಿಯಾರ್ಪಣ, ಜ್ಞಾನದಿಂದ ಗ್ರಹಿಸುವದು ಕರಣಾರ್ಪಣ, ಭಾವದಲ್ಲಿ ಆನಂದಿಸುವದು ಭಾವಾರ್ಪಣ. ಈ ವಿಚಾರವನ್ನು ಮಿಶ್ರಾರ್ಪಣದಿಂದಲೇ ಅವಲೋಕಿಸುವದು ಸೂಕ್ತ.

ಕಾಯಾರ್ಪಣ : ಕಾಯದ ಕೈಯ ಮುಟ್ಟಿ, ಕ್ರಿಯಾರ್ಪಣವ ಮಾಡುವಾಗ; ಭೋಜ್ಯವಾಚಾರ ಲಿಂಗದಲ್ಲಿ ಪಾನ್ಯ ಗುರುಲಿಂಗದಲ್ಲಿ ಭಕ್ಷ್ಯ ಶಿವಲಿಂಗದಲ್ಲಿ ಚೋಹ್ಯ ಜಂಗಮಲಿಂಗದಲ್ಲಿ ಲೇಹ್ಯ ಪ್ರಸಾದಲಿಂಗದಲ್ಲಿ. ಇವು ಎಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ, ಇಂತೀ ಷಡ್ವಿಧಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಣದ ಭೇದಮಂ ಪೇಳ್ವೆ.”

ಕರಣಾರ್ಪಣ : ನಾಶಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶ್ರೋತ್ರದಲ್ಲಿ ಪ್ರಸಾದಲಿಂಗ, ಹೃದಯದಲ್ಲಿ ಮಹಾಲಿಂಗವು. ಇಂತೀ ಷಡ್ವಧಲಿಂಗಾರ್ಪಣವೆಂತೆಂದೊಡೆ ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು ಜಂಗಮಲಿಂಗದರಿವು ಸ್ಪರ್ಶನ, ಪ್ರಸಾದಲಿಂಗದರಿವು ಶಬ್ದ ಮಹಾಲಿಂಗದರಿವು ಸರ್ವೆಂದ್ರಿಯ. ಇಂತೀ ಷಡ್ವಧಲಿಂಗಕ್ಕೆ ಮಿಶ್ರಾರ್ಪಣವು”.

ಷಡಂಗಗಳಲ್ಲಿ ಷಡ್ಲಿಂಗಗಳನ್ನು ವಿವರಿಸಿ ಅವುಗಳಿಗಾಗುವ ಪದಾರ್ಥಗಳ ವಿಚಾರವನ್ನು ವಿವರವಾಗಿ ತೋರಿಸಿದ್ದಾರೆ. ಮುಂದುವರೆದು ಆಚಾರಲಿಂಗದಲ್ಲಿಯೇ ಆರು ಲಿಂಗಗಳಾಗುವ ಮತ್ತು ಆಚಾರಲಿಂಗದರಿವಾದ ಗಂಧವೂ ಆರಾಗುವ ಪರಿಯನ್ನು ಪ್ರತಿಪಾದಿಸಿದ್ದಾರೆ; ನೋಡಿ –

“ಆಚಾರಲಿಂಗದ ಮಿಶ್ರ ಷಡ್ಡಿಧ ಲಿಂಗಾರ್ಪಣದ ವಿವರವೆಂತೆಂದೊಡೆ. ಆವುದಾನೊಂದು ಅರ್ಪಣಕ್ಕೆ ಬೇಕಾದುದು ಬೇರು, ಗೆಣಸು, ಮೊದಲಾದ ಗಂಧವನುವುದು ಆಚಾರಲಿಂಗದಲ್ಲಿ; ಮರ, ತಿಗುಡು, ಹಗಿನ ಮೊದಲಾದ ಗಂಧವನರಿವುದು ಗುರುಲಿಂಗದಲ್ಲಿ; ಚಿಗುರು ಮೊದಲಾದ ಪತ್ರಿಯ ಗಂಧವನರಿವುದು ಶಿವಲಿಂಗದಲ್ಲಿ ;ಮೊಗ್ಗೆ ಮೊದಲಾದ ಪುಷ್ಪದ ಗಂಧವನರಿವುದು ಜಂಗಮಲಿಂಗದಲ್ಲಿ; ಕಾಯಿ ಹಣ್ಣು ಮೊದಲಾದ ಫಲದ ಗಂಧವನರಿವುದು ಪ್ರಸಾದಲಿಂಗದಲ್ಲಿ; ಇವೆಲ್ಲರಲ್ಲಿಯ ಗಂಧವನರಿವುದು ಮಹಾಲಿಂಗದಲ್ಲಿ. ಇಂತು ಆಚಾರಲಿಂಗದ ಮಿಶ್ರಾರ್ಪಣವು.  ”

ಹೀಗೆ ಬೇರು, ಬೊಡ್ಡೆ, ಚಿಗುರು-ಎಲೆ, ಮೊಗ್ಗೆ-ಪುಷ್ಪ, ಕಾಯಿ-ಹಣ್ಣುಗಳ ಗಂಧವನ್ನು ಆಚಾರಲಿಂಗದ ಆರು ಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನು, ಸುಜ್ಞಾನವನ್ನು ಪಡೆಯಬೇಕು. ಇದುವೇ ಭವದ ಬಂಧನದಿಂದ ಬಿಡುಗಡೆಯಾಗುವ ಉಪಾಯ. ಷಡ್ವಿಧ ಮಿಶ್ರಾರ್ಪಣ ವಿಧಾನದಿಂದ ವಿಷಯಗಳು ಪ್ರಸಾದವಾಗಿ ಪ್ರಸನ್ನತೆಉನ್ನು ಕೊಡಬಲ್ಲವು. ಓ ಗುರುವೆ ! ಇಂಥ ಸೂಕ್ಷ್ಮತೆಯನ್ನು ಗ್ರಹಿಸುವು ಯೋಗ್ಯತೆಉನ್ನು ಸುಜ್ಞಾನವನ್ನು ಕರುಣಿಸಿ ಸಲಹು.

ಇವೆರಡು ಪರಸ್ಪರ ಪೂರಕವಾದವು, ಪ್ರೇರಕವಾದವು. ಒಂದು ಒಳಮ್ಮೆ ಇನ್ನೊಂದು ಹೊರಮೈ,  ಎರಡು ಸೇರಿ ಒಮ್ಮೈ, ಒಂದನ್ನು ಬಿಟ್ಟು ಇನ್ನೊಂದು ಶೋಭಿಸುವಂತಿಲ್ಲ. ಇವೆರಡು ಸುಂದರ ಸಮನ್ವಯ ಸೃಷ್ಟಿ, ವೀರಶೈವರ ವಿಶಿಷ್ಟ ಸೃಷ್ಟಿ.

ಈ  ಪೂರ್ಣವಾದ ಸಾರವಾದ ವಿಚಾರವನ್ನು ತಿಳಿದು ತಮ್ಮಲ್ಲಿ ಇವೆರಡನ್ನು ಅಳವಡಿಸಿಕೊಂಡ  ಮಹಾನುಭಾವರೆಂದರೆ ಬಸವಣ್ಣನವರ ನಂತರ ಹಾನಗಲ್ಲ ಕುಮಾರ ಸ್ವಾಮಿಗಳವರೊಬ್ಬರೆ ! ದಾಸೋಹಂಭಾವದಿಂದಿರುವವರಲ್ಲಿ ದಾಸೋಹ ಸೇವೆಯ ಅಭಾವ, ದಾಸೋಹ ಸೇವೆಯನ್ನು ನಡೆಸುವವರಲ್ಲಿ ದಾಸೋಹಂಭಾವದ ಕೊರತೆ, ಎರಡನ್ನು ಸಮನ್ವಯವಾಗಿ ಸಮನಿಸಿಕೊಂಡವರು ಅತ್ಯಂತ ಅಪರೂಪ. ಇಲ್ಲೆಂದರೆ ಆಗದು ಅಪಲಾಪ.

‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಜೀವಾಳದ ಅಮೃತೋಕ್ತಿಯನ್ನು ಚಾಚು ತಪ್ಪದೆ ತ್ರಿಕರಣಗಳಿಂದ ನಡೆಸಿಕೊಂಡು ಬಂದರು ಸ್ವಾಮಿಗಳವರು. ಅವರಿಗೆ ತಾವು ಹಿರಿಯರೆಂಬ ಭಾವನೆ ಕನಸಿನಲ್ಲಿಯು ಕಾಣಿಸಿಕೊಳ್ಳಲಿಲ್ಲ. ಅವರು ತಮ್ಮ ದಾಸೋಹಂಭಾವವನ್ನು ನುಡಿಗಿಂತ ಹೆಚ್ಚು ನಡೆಯಲ್ಲಿಯೆ ತೋರುತ್ತಿದ್ದರು. ಈ ವಿಷಯದಲ್ಲಿ ಅವರದು ‘ಕ್ರಿಯಾಕೇವಲ ಮುತ್ತರಂʼʼ

ಶ್ರೀಗಳವರಿಗೆ ತಾವು ಸ್ವಾಮಿಗಳೆಂಬ ಸ್ವಾಭಿಮಾನವಿರಲಿಲ್ಲ. ಸಭೆ ಸಂಸ್ಥೆಗಳ ಸ್ಥಾಪಕರೆಂಬ ಸ್ವಾಹಂಕಾರವಿರಲಿಲ್ಲ. ಒಮ್ಮೆ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು ಆರಂಭವಾಗುವ ಮೊದಲು ಆದಾರೋ ವಿಷಬೀಜ ಬಿತ್ತಿದರು. ಜರಗಬೇಕಾದ ಸಭೆಯ ಮೂಲಕ್ಕೆ ಕೊಡಲಿ ಏಟು ಹಾಕಿದರು. ಪರಸ್ಪರ ವೈಮನಸ್ಸಿನಿಂದ ಸಭೆಯ ನಿಲ್ಲುವ ಪ್ರಸಕ್ತಿ ಪ್ರಾಪ್ತವಾಯಿತು, ಆಗ ಸ್ವಾಮಿಗಳವರು ಪ್ರತಿಯೊಬ್ಬ ಗಣ್ಯ ಗೃಹಸ್ಥರ ಮನೆಗಳಿಗೆ ಪಾದಚಾರಿಗಳಾಗಿ ಪ್ರಸಾದದ ಹಂಗಿಲ್ಲದೆ ಹತ್ತಾರು ಸಲ, ನೂರಾರು ಸಲ ತಿರುಗಾಡಿ ತಿಳಿಹೇಳಿ ಎಲ್ಲರ ಹೃದಯಗಳನ್ನು ತಿಳಿಗೊಳಿಸಿದರು. ಸಭೆಯು ಸಾಂಗವಾಗಿ ಸಾಗುವಂತೆ ಮಾಡಿದರು. ಅವರ ದಾಸೋಹಂಭಾವಕ್ಕೆ ಇಂತಹ ಅನೇಕ ಉದಾಹರಣೆಗಳನ್ನು ಉದಹರಿಸಬಹುದು.

ತಾವು ಸ್ವತಃ ಸತ್ಪುರುಷರಾಗಿದ್ದರು ಶಿವಯೋಗಿಗಳಾಗಿದ್ದರು ತಮ್ಮಲ್ಲಿ ಆ ಭಾವನೆ ಅವರಿಗೆ ಎಳ್ಳಷ್ಟು ಇರಲಿಲ್ಲ. ಬೇರೆ ಬೇರೆ ಊರುಗಳಲ್ಲಿ ಯಾರಾದರು ಸತ್ಪುರುಷರಿದ್ದರೆ ಶಿವಯೋಗಿಗಳಿದ್ದರೆ ಅವರ ದರ್ಶನಕ್ಕೆ ದಯಮಾಡಿಸುತ್ತಿದ್ದರು. ಅಲ್ಲಿ ದಾಸೋಹಂಭಾವದಿಂದ ವರ್ತಿಸುತ್ತಿದ್ದರು. ‘ವಿನಮಿತನಹುದರಿಂದುಪಚಾರಮುಂಟೆ?” ಎಂಬ ನುಡಿಯನ್ನು ಸಾವಿರ ಪಾಲಿಗು ಸಾರ್ಥಕಗೊಳಿಸುತ್ತಿದ್ದರು.

ಸಾಧು ಮಾರ್ಗದಲ್ಲಿರುವವರನ್ನು ಕಂಡು ಅವರ ಸಂತೋಷ ಉಕ್ಕಿಬರುತ್ತಿತ್ತು. ಕುತೂಹಲ ಕೆರಳಿ ಬರುತ್ತಿತ್ತು. ಅವರನ್ನು ಕಾಣದೆ ಅವರಿಗೆ ತೃಪ್ತಿಯಿರುತ್ತಿರಲಿಲ್ಲ. ವಿನಯದಿಂದ ಅವರ ಗುಣವರ್ಣನೆಯಿಂದ ನೆನವಿನಿಂದ ಕಾಯವಾಙ್ಮನ ಸೇವೆಗಳನ್ನು ನಿರಪೇಕ್ಷೆಯಿಂದ ನಿರ್ಮಲ ಹೃದಯದಿಂದ ಸಮರ್ಪಿಸುತ್ತಿದ್ದರು.

ಒಮ್ಮೆ ಅಥಣಿ ಶಿವಯೋಗಿಗಳ ದರ್ಶನಕ್ಕೆ ದಯಮಾಡಿದ್ದರು. ಕಾಯಮನ ಸೇವೆಗಳೊಡನೆ ಎಂದಿಗೂ ಕಾಣಬರುವ ವಾಣಿ ಸೇವೆಯನ್ನು ಅವರಲ್ಲಿ ಸಲ್ಲಿಸಿದ್ದಾರೆ.

“ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ II

ಜಂಗಮಲಿಂಗ ಭೇದದ ಸ್ವಯ ಚರಪರ

ಇಂಗಿತವರುಪಿದಂತಾಚರಿಸಿದ ಮಹಿಮಗೆ||ʼʼ

ಇದು ಅವರ ದರ್ಶನಕ್ಕೆ ದಯಮಾಡಿಸಿದಾಗ ಅವರ ಮೇಲೆ ಕಟ್ಟಿ ಹಾಡಿದ ಹಾಡಿಸಿದ ಮಂಗಳಾರತಿ, ಹೃದಯವುಕ್ಕಿದಾಗ ವಾಣಿಯು ಉಕ್ಕುವುದು ಅವರದೊಂದು ಸುಸ್ವಭಾವ. ಅದಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿರಲಿಲ್ಲ. ಸಾಹಸದಿಂದ ಶಬ್ದಗಳನ್ನು ಸೆರೆಹಿಡಿದು ತಂದು ಪವಣಿಸುತ್ತಿರಲಿಲ್ಲ. ಹೃದಯದಿಂದ ಹುಟ್ಟಿ ಹೃದಯದಿಂದ ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಈ ಪದ್ಯವು ಅಷ್ಟೇ, ಅದರಿಂದಾಗಿ ಅರ್ಥ ಪೂರ್ಣವಾಗಿದೆ. ಶಿವಯೋಗಿಗಳವರ ಜೀವನ ಸಾರವನ್ನು ಸೂರೆಗೊಂಡಿದೆ. ಪಲ್ಲವಿಯಲ್ಲಿ ಪಲ್ಲವಿಸಿದ ಸ್ವಯ ಚರ ಪರ ಜಂಗಮ ವಿವರಣೆಯನ್ನು ಮುಂದಿನ ಪದಗಳಲ್ಲಿ ಸ್ವಾರಸ್ಯವಾಗಿ ಸಹಜಾರ್ಥವಾಗಿ ಬಿತ್ತರಿಸಿದ್ದಾರೆ.

ಮುಖಸ್ತುತಿಗಾಗಿ ಅವರು ಬಣ್ಣಿಸುತ್ತಿರಲಿಲ್ಲ. ಅದು ಅವರ ಹತ್ತಿರಕ್ಕೆ ಸುಳಿಯುತ್ತಿರಲಿಲ್ಲ. ಮುಖಸ್ತುತಿಗಾಗಿ ಯಾವಜೀವವು ಎಲ್ಲಿಯು ಅವರು ಮನಸ್ಸು ಮಾಡಿದವರಲ್ಲ. ಇದು ತಮಗು ಇಷ್ಟವಿರಲಿಲ್ಲ. ಇನ್ನೊಬ್ಬರ ವಿಷಯದಲ್ಲಿಯು ತಾವು ಮಾಡುತ್ತಿರಲಿಲ್ಲ.

ಎಡೆಯೂರು ತೋಂಟದಾರ್ಯರ ಸೊನ್ನಲಾಪುರ ಸಿದ್ಧರಾಮೇಶ್ವರರ ಗದ್ದುಗೆಗಳ ದರ್ಶನಕ್ಕೆ ದಯಮಾಡಿದಾಗಲು ಸ್ವಾಮಿಗಳು ವಾಣಿಸೇವೆಯನ್ನು ಪದ್ಯಗಳ ಮುಖಾಂತರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು ಮುಖಸ್ತುತಿ ಪರರಲ್ಲ ಎಂಬುದು ವ್ಯಗ್ಗಳವಾಗುತ್ತದೆ. ಸ್ವಾಮಿಗಳವರ ದಾಸೋಹಂಭಾವ ಆಳವಾದುದು ಅಪಾರವಾದುದು ಅದನ್ನು ಅಳೆಯಲು ನಮ್ಮಂಥವರಿಂದ ಸಾಧ್ಯವಿಲ್ಲ.

ಇನ್ನು ಅವರ ದಾಸೋಹ ಸೇವೆಗೆ ಶಿವಯೋಗ ಮಂದಿರವೆ ಒಂದು ದೊಡ್ಡ ನಿದರ್ಶನ. ಅಲ್ಲಿ ಒಂದು ದೊಡ್ಡ ದಾಸೋಹವನ್ನು ಏರ್ಪಡಿಸಿ ಅಲ್ಲಿನ ಕೆಲಸಗಾರರಲ್ಲದೆ ಪ್ರತಿ ದಿನವು ಪರಸ್ಥಳಗಳಿಂದ ಬರುತ್ತಿರುವ ನೂರಿನ್ನೂರು ಜನ ಅತಿಥಿ ಅಭ್ಯಾಗತರಿಗೆ ಪ್ರಸಾದ ವಿನಿಯೋಗ ಕೊರತೆಯಿಲ್ಲದೆ ನಡೆಯುತ್ತಿತ್ತು. ನಡೆಯುತ್ತಿದೆ. ಆ ದಾಸೋಹದಲ್ಲಿ ದೊಡ್ಡವರು ಚಿಕ್ಕವರು ಧನಿಕರು ದರಿದ್ರರು ಎಂಬ ಭೇದಭಾವವಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಪ್ರಸಾದದ ಏರ್ಪಾಡಿಲ್ಲ, ಇದು ನಿಜವಾದ ದಾಸೋಹ ಸೇವೆ

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

 

ಬ್ರಹ್ಮವೊಂದೆ ಪರಮಸತ್ಯ. ಆ ಪರಮಸತ್ಯವನ್ನು ಅಭೇದಭಾವದಿಂದ  ಅನುಭವಿಸುವವರೇ ಬ್ರಹ್ಮಜ್ಞಾನಿಗಳು. ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.  ಬ್ರಹ್ಮಜ್ಞಾನಿಯಾಗಬೇಕಾದರೆ ತನುವಿನ ವ್ಯಾಮೋಹವನ್ನು ಕೈಬಿಡಬೇಕು. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಬೇಕು. ಭಾವಗತವಾದ ಅಹಂಕಾರವನ್ನು ಇಲ್ಲವಾಗಿಸಬೇಕು. ದೇಹ, ಮನ, ಬುದ್ಧಿ, ಪ್ರಾಣಗಳು ನಾನಲ್ಲವೆಂಬ ವಿಮಲಜ್ಞಾನವನ್ನು ಹೊಂದಬೇಕು. ಇಂಥವರು ದೇಹವೆ ನಾನೆಂಬ ಭ್ರಮೆಯಿಂದ ಮುಕ್ತರಾಗಿ ಪರಬ್ರಹ್ಮದ ಅರಿವಿನ ಕಳೆಯ ಆತ್ಮವೆಂದರಿತು ಪರಬ್ರಹ್ಮದೊಡನೆ ತಾದಾತ್ಮ ಹೊಂದಿ ಬ್ರಹ್ಮಾನಂದವನ್ನು ಅಂದರೆ ಪರಮಸುಖವನ್ನು ಸದಾ ಅನುಭವಿಸುತ್ತಾರೆ.

ಜನಸಾಮಾನ್ಯರಿಗೆ ಅಹಂಭಾವವನ್ನು ಅಳಿಯುವುದು, ದೇಹಗುಣ ಅಭಿಮಾನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ದೇಹವೆ ನಾನೆಂಬ ಅಭಿಮಾನ ಹಾಗು ಭೌತಿಕ ವಿಷಯಗಳೇ ಸುಖದ ನೆಲೆ ಎಂಬ ಭಾವನೆ ಹೊಂದಿದ ಅವರಿಗೆ ಪರವಸ್ತುವೆ ತಾವೆಂಬ ಅರಿವು ಸಾಧ್ಯವಾಗುವುದಿಲ್ಲ. ಬದುಕಿನುದ್ದಕ್ಕೂ ವಿಷಯಗಳ ಹಿಂದೆ ಹರಿಯುವ ಅವರು ಭವಬಂಧನದಲ್ಲಿ ಸಿಕ್ಕು ಸದಾ ದುಃಖವನ್ನನುಭವಿಸುತ್ತಾರೆ. ಇಂಥವರು ಯೋಗ್ಯ ಗುರುವನ್ನಾಶ್ರಯಿಸಿ ತಮ್ಮ ತನು ಮನ ಭಾವಗಳನ್ನು ಶಿವನಿಗೆ ಸಮರ್ಪಿಸಿ ಸಾಧನಾ ಪಥದಲ್ಲಿ ಮುಂದುವರೆದಾಗ ದೇವನ ಅರಿವು ಕೊನೆಗೆ ತಾನೇ ದೇವರೆಂಬ ಅರಿವು ಸಾಧ್ಯವಾಗುತ್ತದೆ. ಈ ಸಾಧನಾಪಥವೇ ಸುಖದ ಮಾರ್ಗ.  ಈ ಮಾರ್ಗದಲ್ಲಿ ಮುನ್ನಡೆದವರು ಭವಬಂಧನದಿಂದ ಮುಕ್ತರಾಗುತ್ತಾರೆ.

ಸಮಾಜದಲ್ಲಿ ಮಿಥ್ಯಾಜ್ಞಾನಿಗಳಿಗೂ ಕೊರತೆ ಏನಿಲ್ಲ. ಅವರು ಬ್ರಹ್ಮವನ್ನರಿಯದಿದ್ದರೂ ಮಾತಿನ ಬ್ರಹ್ಮವನಾಡುವವರು. ಶಬ್ದಜಾಲದೊಳಗೆ ಬದುಕು ಸಾಗಿಸುವ ಇವರು ಲೌಕಿಕ ವಿಷಯಗಳಿಂದ ವಿಮುಖರಾದವರಲ್ಲ. ಅಜ್ಞಾನವನ್ನು ಕಳೆದುಕೊಂಡು ನಿಜಜ್ಞಾನಿಗಳಾಗಬೇಕೆಂದು ಬಯಸುವವರೂ ಅಲ್ಲ. ‘ಅಹಂ ಬ್ರಹ್ಮಾಸ್ಮಿ’ ‘ನಾನೇ ಬ್ರಹ್ಮ’ ಎಂದು ಹೇಳುತ್ತ ಗಾಢಭ್ರಮೆಯೊಳಗಿರುವ ಇಂಥವರನ್ನು ಕುರಿತು ಹೇಳುವ ಕತೆಯೊಂದು ಹೀಗಿದೆ: ಬ್ರಹ್ಮವನ್ನರಿಯದಿದ್ದರೂ ಬ್ರಹ್ಮವನ್ನರಿತಿರುವೆ ಎಂದು ಹೇಳುತ್ತಿದ್ದ ಮಿಥ್ಯಾಜ್ಞಾನಿಯೊಬ್ಬ ‘ಅಹಂ ಬ್ರಹ್ಮಾಸ್ಮಿ’ ಎಂದು ಹೇಳುತ್ತ ರಸ್ತೆಯಲ್ಲಿ ನಡೆದು ಹೊರಟಿದ್ದ. ಅದೇ ರಸ್ತೆಯಲ್ಲಿ ಎದುರಿನಿಂದ ಮದವೇರಿದ ಆನೆಯೊಂದು ಬರುತ್ತಿತ್ತು. ಅದರ ಮಾವುತ ‘ಆನೆಗೆ ಮದವೇರಿದೆ. ರಸ್ತೆಯಲ್ಲಿ ಎದುರಿನಿಂದ ಬರುವವರು ದೂರ ಸರಿಯಬೇಕೆಂದು ಕೂಗಿ ಕೂಗಿ ಹೇಳುತ್ತಿದ್ದ. ಆದರೆ ಈ ಮಿಥ್ಯಾಜ್ಞಾನಿ ‘ನಾನು ಬ್ರಹ್ಮನಿದ್ದೇನೆ. ಆನೆಯೂ ಬ್ರಹ್ಮವಿದೆ ಈ ಆನೆ ನನಗೇನು ಮಾಡುತ್ತದೆ?’ ಎಂದು ದುರಹಂಕಾರದಿಂದ ಮಾವುತನ ಮಾತನ್ನು ಲೆಕ್ಕಿಸದೇ ಮುಂದುವರೆದ. ಆಗ ಮದೋನ್ಮತ್ತ ಆನೆ ತನ್ನ ಸೊಂಡಿಲಿನಿಂದ ಈ ದುರಹಂಕಾರಿಯನ್ನು ಎತ್ತಿ ಒಗೆಯಿತು. ಪೆಟ್ಟು ತಿಂದ ಮಿಥ್ಯಾಜ್ಞಾನಿ ಶ್ರೀ ರಾಮಕೃಷ್ಣ ಪರಮಹಂಸರಲ್ಲಿಗೆ ಬಂದು ಬ್ರಹ್ಮನಾದ ನನಗೆ ಹೀಗೇಕಾಯಿತು ಎಂದು ಕೇಳಿದ. ಆಗ ರಾಮಕೃಷ್ಣರು ಇವನ ಅಜ್ಞಾನಕ್ಕೆ ನಕ್ಕು “ನೀನೇನೊ ಬ್ರಹ್ಮ ಸರಿ. ಆದರೆ ಎದುರಿನಿಂದ ಕೂಗಿ ಹೇಳುತ್ತಿದ್ದ ಮಾವುತನೂ ಒಬ್ಬ ಬ್ರಹ್ಮ ಎಂಬುದನ್ನು ಏಕೆ ಅರಿಯಲಿಲ್ಲ.?’ ಎಂದಾಗ ತನ್ನ ಅಜ್ಞಾನಕ್ಕೆ ತಾನೇ ನಾಚಿ ತಲೆ ತಗ್ಗಿಸಿದ.

ಬರೀ ಶಾಸ್ತ್ರಾಧ್ಯಯನ ಮಾಡಿದವರು ಎಂದೂ ಬ್ರಹ್ಮಜ್ಞಾನಿಗಳಾಗುವುದಿಲ್ಲ. ಬ್ರಹ್ಮವನ್ನರಿತವರು ಸುಮ್ಮನಾಗಿರಬೇಕು. ಬಾಹ್ಯದಲ್ಲಿ ಎಂದೂ ತಮ್ಮ ಬ್ರಹ್ಮದ್ವೈತವನ್ನು ಬಳಸಬಾರದು. ಅಂತೆಯೇ ನಿಜಗುಣರು ‘ಬಳಸದಿರದ್ವೈತವನು ಬಾಹ್ಯದಲ್ಲಿ ನಿನ್ನೊಳಗೇಕೋ ಭಾವನೆಯೊಡಗೂಡು’ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಹ್ಮಜ್ಞಾನವನ್ನರಿತವರು ಸತ್ತು ಸ್ವರ್ಗ ಸೇರಬೇಕೆಂದೇನೂ ಅಲ್ಲ. ಅವರು ಬ್ರಹ್ಮವನ್ನರಿತೂ ನಮ್ಮ ಮಧ್ಯದಲ್ಲಿ ಇರಬಲ್ಲರು. ಅವರೇ ಜೀವನ್ಮುಕ್ತರು, ಕಾಯವನ್ನೇ ಕೈಲಾಸವಾಗಿಸಿಕೊಂಡ ಪುಣ್ಯಪುರುಷರು.