General

ಲೇಖಕರು: ಜ.ಚ.ನಿ

 

“ ತಮಗಡಸಿದೆಡರ ನೀಕ್ಷಿಸ

ದೆ ಮಹಾಂತರ್ ಪೆರರ ಸಂಕಟಮನಪಹರಿಪರ್

ಹಿಮರುಚಿ ತನ್ನಯ ಮರ್ಬಂ

ತೆಮರದೆ ತಿರೆಯೊಳ್‌ ತಗುಳ್ದ ತಮಮಂ ತವಿಪಂ”

– ನೀತಿ ಮಂಜು

ಸ್ವಾಮಿಗಳವರು ಸಮಾಜ ಜೀವಿಗಳು. ಸತ್ಯಪ್ರೇಮಿಗಳು. ಸಮಾಜಕ್ಕೆ ಎಲ್ಲಿ ಯಾವ ಮೂಲೆಯಲ್ಲಿ ಪರಾಕ್ರಮಣ ನಡೆದರೂ ಅದನ್ನು ಸಹಿಸುತ್ತಿರಲಿಲ್ಲ. ಇನ್ನು ದುರಾಕ್ರಮಣ ನಡೆದರೆ ಕೇಳಬೇಕೆ ? ತಮಗಿರುವ ತೊಡರುಗಳನ್ನು ನೋಡುತ್ತಿರಲಿಲ್ಲ. ಶ್ರಮವಿಭಾಗವನ್ನೂ ಲೆಕ್ಕಿಸುತ್ತಿರಲಿಲ್ಲ. ವಾಯುವೇಗದಿಂದ ಅಲ್ಲಿಗೆ ಹೋಗಿ ಅದನ್ನು ತಡೆಗಟ್ಟುತ್ತಿದ್ದರು.

ಒಮ್ಮೆ ಹೈದರಾಬಾದ ಪ್ರಾಂತ್ಯದಲ್ಲಿದ್ದ ಪರಳೀ ವೈದ್ಯನಾಥ ಲಿಂಗದ ಪೂಜಾಧಿಕಾರದ ವ್ಯಾಜ್ಯ ಪ್ರಾರಂಭವಾಯಿತು. ಪರಕೀಯರು ಪೂಜಾಧಿಕಾರವನ್ನು ಆಕ್ರಮಿಸುವ ಸಾಹಸ ಮಾಡಿದರು. ಈ ಸಂಗತಿ ಎಲ್ಲೆಲ್ಲಿಯು ಹಬ್ಬಿತ್ತು. ಇದನ್ನು ಕೇಳಿ ‘ಸ್ವಾಮಿಗಳವರಿಗೆ ಸಮಾಧಾನವಾಗಲಿಲ್ಲ. ಶರೀರದಲ್ಲಿ ಸ್ವಾಸ್ಥ್ಯವಿಲ್ಲದಿದ್ದರು ಆ ಕ್ಷಣದಲ್ಲಿಯ ಅನೇಕ ಧರ್ಮಗ್ರಂಥಗಳನ್ನು ತೆಗೆದುಕೊಂಡು ಹತ್ತು ಹನ್ನೆರಡು ಮಂದಿ ಪಂಡಿತರನ್ನು ಕರೆದುಕೊಂಡು ಹೋಗಿ ವಾದ ಕ್ಷೇತ್ರಕ್ಕೆ ನೆರವಾದರು.

ಬರೀ ವೈದ್ಯನಾಥಲಿಂಗ ಪೂಜಾ  ವಿಷಯ ಒಂದಾಗಿದ್ದರೆ ಹೇಗೋ ಆಗಬಹುದಿತ್ತು.  ಜೊತೆಗೆ ಜಾತಿವಾದ ಮುಂದೆ ಬಂದಿತ್ತು. ಅಂತ್ಯಜ ಅಗ್ರಜ ಎಂಬ ಕೀಳು  ಭಾವ ಬಲಿತಿತ್ತು. ವೀರಶೈವರು ಅಂತ್ಯಜ (ಶೂದ್ರ)ರೆಂಬ ವಾದ ವಿಪರೀತಕ್ಕೇರಿತ್ತು. ಸ್ವಾಮಿಗಳವರಿಗೆ ಇದು ಸಹಿಸಲಿಲ್ಲ. ಇದಕ್ಕಾಗಿಯೆ ಈ ಹೊಲಸು ಕಳೆಯಲಿಕ್ಕಾಗಿ ಆವೇಗದಿಂದ ಆವೇಶದಿಂದ ಹೊರಟು ಹೋಗಿ ವಾದದಲ್ಲಿ  ಬಾಗಿಗಳಾದರು.

ವಾದ ಬೇಗ  ಹರಿಯಲಿಲ್ಲ. ೩-೪ ತಿಂಗಳ ಕಾಲ ಮುಂದುವರೆಯಿತು. ವಾದ ಕೇಳುವ ವ್ಯಾಜ್ಯನೋಡುವ ಕುತೂಹಲದಿಂದ ಅನೇಕ ಸಾವಿರ ಜನರು ಸೇರಿದ್ದರು. ಅವರೆಲ್ಲರ ಊಟೋಪಚಾರ ವೆಚ್ಚವನ್ನು ಶ್ರೀಗಳವರ ನಿರ್ವಹಿಸಬೇಕಾಯಿತು.  ತಂದ ಹಣ ತೀರಿಹೋಗಿತ್ತು. ಕೈಯಲ್ಲಿ ಕಾಸಿರಲಿಲ್ಲ. ಹೇಗೆ ಮಾಡುವದು, ಯೋಚಿಸಲಿಲ್ಲ. ತಕ್ಷಣದಲ್ಲಿಯೆ ಸುತ್ತು ಮುತ್ತಹೋಗಿ ಭಿಕ್ಷೆಯಿಂದ ಬೇಕಾದಷ್ಟು ಹಣ ತಂದರು. ಕೊನೆಯವರೆವಿಗು ಬಂದವರ ಯೋಗಕ್ಷೇಮವನ್ನು ನಿತ್ತರಿಸಿದರು. ಸ್ವಾಮಿಗಳವರದು ಅಕ್ಷಯ ಪಾತ್ರೆ; ಅಮೃತ ಹಸ್ತ ಅಂದ ಮೇಲೆ ಕೊರತೆಯ ಮಾತೇಕೆ?

ಈ ವ್ಯಾಜ್ಯದಲ್ಲಿ ಉಂಟಾದ ಸ್ವಾಮಿಗಳವರ ಕಷ್ಟ-ನಷ್ಟ ಅಪಾರವಾದದ್ದು. ಆದರೂ ಯೋಚನೆ ಸ್ವಾಮಿಗಳವರಲ್ಲಿ ಇರಲಿಲ್ಲ. ನಿರ್ಣಯವು ಸಮಾಜದಂತಾದ ಸಂಗತಿಯು ತಿಳಿದೊಡನೆ ಸ್ವಾಮಿಗಳವರಿಗೆ ಸಂತೋಷವುಂಟಾಯಿತು. ಆ ಕಷ್ಟ ನಷ್ಟಗಳು ತುಂಬಿ ಬಂದವು. ಅನೇಕ ಕಡೆಗಳಿಂದ ಪ್ರಶಂಸಾ ಪತ್ರಗಳು ಸ್ವಾಮಿಗಳವರಿಗೆ ಬಂದವು. ವ್ಯಾಜ್ಯದ ಸಮಯದಲ್ಲಿ ಮುಕ್ತ ಹಸ್ತದಿಂದ ಸಹಾಯಮಾಡಿದವರಿಗೆ ಪ್ರಶಸ್ತಿ ಪ್ರದಾನದಿಂದ ಸಂತೋಷ ಪಡಿಸಿದರು. ಶುಭಾಶೀರ್ವಾದ ಮಾಡಿದರು.

ಕುಮಾರಯೋಗಿಯು ಪರಳೀ ವ್ಯಾಜ್ಯದ ಪ್ರಭಾಕರ ! ಅಹುದು. ಪರಮ ಪೂಜ್ಯರು ಆ ಭಗೀರಥ ಪ್ರಯತ್ನ ಪಡದಿದ್ದರೆ ಆ ವಿಜಯದ ಬೆಳಕು ಸಮಾಜಕ್ಕೆಲ್ಲಿ ಹೇಗೆ ದೊರಕುತ್ತಿತ್ತು? ಕುಮಾರಯೋಗಿಗಳಂತಹ ಸಾಹಸಿಗಳನ್ನು ಸಹಾಯಕಾರಿಗಳನ್ನು ಪಡೆದ ಸಮಾಜವೆ ಧನ್ಯ. ಅದುವೆ ಮಾನ್ಯ. ಅವರೆ ಅದಕೊಂದು ಭವ್ಯಭಾಗ್ಯ; ದಿವ್ಯ ಸಂಪತ್ತಿ.

ಲೇಖಕರು: : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

ಅನುಭಾವ ಅನುಭಾವವೆಂದೆಂಬಿರಿ

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿಭೋ  !

ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿಭೋ  !

ಅನುಭಾವವೆಂಬುದು ಅಂತರಂಗದ ರತ್ನ ಕಾಣಿಬೋ  !

ಮತ್ತು – ಭಕ್ತಿಗೆ ಅನುಭಾವವೆ ಬೀಜ ಕಾಣಿರೋ ;

ಭಕ್ತಿಗೆ ಅನುಭಾವವೆಚಾರ ಕಾಣಿರೋ

 

ಚನ್ನಬಸವಣ್ಣನವರ ಈ ನುಡಿಗಡಣ ಅನುಭಾವದ ನಿಲವನ್ನು ಹಾಗೂ ಅನುಭಾವವೇ ಭಕ್ತಿಗೆ ಮೂಲವೆಂಬುದನ್ನು ಪ್ರತಿಪಾದಿಸಿದೆ. ಅನುಭವಜನ್ಯವಾದ ಅನುಭಾವ, ನೆಲದ ಮರೆಯ ನಿಧಾನ, ಅತು ಕಂಡ ಕನಸು, ಅದು ಅಂತರಂಗದ ರತ್ನ, ಇಂಥ ಅನುಭಾವದ ನಿಲವಿನಲ್ಲಿ ಹಾಡುಗಬ್ಬಗಳನ್ನು ರಚಿಸಿದ ನಿಜಗುಣರು, ಸರ್ಪಭೂಷಣರು, ಮುಪ್ಪಿನ ಷಡಕ್ಷರಿಗಳು ಮತ್ತು ಬಾಲಲೀಲಾ ಮಹಾಂತರು ಪ್ರಸಿದ್ಧಿಯನ್ನು ಪಡೆದಿರುವಂತೆ ಮೈಲಾರಂಗವಲಿಂಗ ಶರಣರೂ ಪ್ರಖ್ಯಾತರು. ಕೇವಲ ಭಕ್ತಿಯ ಉದ್ರೇಕ ಹಾಗೂ ತಾತ್ಕಾಲಿಕ ಸ್ಫೂರ್ತಿಯ ಪ್ರಭಾವದಿಂದ ಪದ್ಯಗಳನ್ನು ರಚಿಸಿದವರು ಪಡಕ್ಷರಿಗಳು ; ಬಾಲಲೀಲಾ ಮಹಾಂತರು ಮತ್ತು ಘನಮಠದಾರ್ಯರು. ಆದರೆ ನಿಜಗುಣರಾಗಲಿ, ವಲಿಂಗ ಶರಣರಾಗಲಿ ಹಾಗಲ್ಲ. ತಮ್ಮ, ಸಾಸ್ತ್ರ, ಆಚಾರ, ಅನುಭವ ಇವೆಲ್ಲವು ಗಳನ್ನು ತಾವು ಮೈಗೂಡಿಸಿಕೊಂಡು ಇತರರಿಗೆ ಅಧಿಕಾರವಾಣಿಯಿಂದ ತಿಳಿಯು ವರತೆ ಪದ ಶ್ರೀಯನ್ನು ಇವರಿಬ್ಬರದು, ಅದರಲ್ಲೂ ಬಸವಲಿಂಗ ಶರಣರು ವೀರಶೈವ ತತ್ತ್ವಸಿದ್ಧಾಂತವನ್ನು ಸುಂದರವಾಗಿ, ಸುಬಂಧುರವಾಗಿ ಹಾಡುಗಬ್ಬಗಳಲ್ಲಿ ಕಟ್‌ಪದಿಗಳಲ್ಲಿ ಹೆಣೆದವರು.

 

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹೆಸರಾಂತ ಹಳ್ಳಿ ಮೈಲಾರ. ಇಲ್ಲಿ ಶಿವಭಕ್ತಮನೆತನಕ್ಕೆ ಸೇರಿದ ಹರದ ವೃತ್ತಿಯ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಚೆನ್ನವೀರ ಶಿವಯೋಗಿಗಳಿಂದ ಅನುಗ್ರಹೀತರಾದವರು. ಅನುಭಾವವನ್ನು ಪಡೆದವರು. ಪೂಜ್ಯ ಮಹಾಸ್ವಾಮಿಗಳು ಹಳ್ಳಿಯಲ್ಲಿ ವೀರಶೈವ ವಿದ್ಯಾಕೇಂದ್ರವನ್ನು ತೆರೆದು ತಾವೊ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವುಳ್ಳ ತತ್ತ್ವಪುರುಷರಾಗಿದ್ದವರು. ಬಸವಲಿಂಗ ಶರಣರ ವಾಣಿಯಲ್ಲಿ ಗುರು ಗರಿಮೆ ಪ್ರತಿಮಿಸಿದೆ; ವ್ಯಕ್ತಿತ್ವ ಪ್ರತಿಬಿಂಬಿಸಿದೆ..

 

ಸೃಷ್ಟಿಯೊಳಗುದಿಸಿದ ಶರಣರಿ

ಗಿಷ್ಟ ಸಿದ್ಧಿಯನ್ನು ಪಾಲಿಸು

ವಷ್ಟವರುಣ ಸ್ವರೂಪ ಚನ್ನವೀರ ನಮೋ  (ಶಿ, ದರ್ಪಣ ೬೯)

ಮತ್ತು – ನೂರೊಂದು ಸ್ಥಲದ ವಿಚಾರ ವಿಗ್ರಹ ಚನ್ನ

ವೀರ ಮದ್‌ಗುರು ಲಿಂಗ ಜಂಗಮದಂಘ್ರಿಗಳೆನ್ನ ಸಲುಹಲಿ

ತಾನೆ ಒಲಿಯಲಿ (ಶಿ. ದ. ೨೧)

 

ಅಚ್ಚವೀರಶೈವ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಸವಲಿಂಗ ಶರಣರು ಗುರು-ಲಿಂಗ-ಜಂಗಮರ ಹೊರತಾಗಿ ಅನ್ಯದೈವದ ಹೆಸರನ್ನು ಸಹ ಉಚ್ಚರಿಸದಷ್ಟು ನಿಷ್ಠಾವಂತರಾಗಿದ್ದರು. ಅಷ್ಟೇ ಏಕೆ ? ಈ ಪೂಜ್ಯತ್ರಯರಿಗಿಂತಲೂ ಶಿವನು ಅಧಿಕನಲ್ಲ ವೆಂಬುದನ್ನು ನಿರಾಭಾರಿ ವೀರಶೈವ ಸಿದ್ಧಾಂತ” ಕೃತಿಯಲ್ಲಿ ನಿರ್ಭಯವಾಗಿ ಹಾಗೂ ತಾತ್ವಿಕವಾಗಿಯೂ ಪ್ರತಿಪಾದಿಸಿದ್ದಾರೆ. ಶರಣರ ತಾತ್ವಿಕ ಹಿನ್ನೆಲೆಯಲ್ಲಿ ವಿಮರ್ಶಾ ಶಕ್ತಿಯೂ ಅಪಾರವಿದೆ. ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು.

 

೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಬಸವಲಿಂಗ ಶರಣರು ಮೈಲಾರದ ಮೈಲಾರಲಿಂಗ ದೇವಸ್ಥಾನದ ಮುಂಭಾಗದಲ್ಲಿಯೇ ವ್ಯಾಪಾರವನ್ನು ಅರ್ಧಗಾಣಿಯ ಸೋಲು-ಗೆಲುವುಗಳಿಲ್ಲದೆ, ಆಶೆ-ಆಮಿಷಕ್ಕೆ ಒಳಗಾಗದೆ ಸತ್ಯ ಶುದ್ಧ ಕಾಯಕ ನಡೆಸುತ್ತಿದ್ದರು. ಆಗಾಗ ನಾಡಿನ ಪ್ರಸಿದ್ಧ ವ್ಯಾಪಾರಿ ಕೇಂದ್ರಗಳೆನಿಸಿದ ಸವಣೂರು, ಹುಬ್ಬಳ್ಳಿ, ಇಕ್ಕೇರಿ ಮೊದಲಾದ ಪಡಿಮೂಲೆ ಸ್ಥಳಗಳಲ್ಲಿ ಸರಕುಗಳನ್ನು ತರುತ್ತಿದ್ದುದು ಅವರ ಕೃತಿಗಳಿಂದ ಧ್ವನಿತವಾಗುತ್ತದೆ. ಗಿರಾಕಿಗಳೆಷ್ಟೇ ಇದ್ದರೂ ನಿರ್ದಿಷ್ಟ ವ್ಯಾಪಾರವಾದ ಬಳಿಕ ಆಧ್ಯಾತ್ಮ ವ್ಯವಹಾರದಲ್ಲಿ ತೊಡಗುತ್ತಿದ್ದರು. ಲಿಂಗಾರ್ಚನೆಗೈದು ಜಂಗಮ ತೃಪ್ತಿಗೊಳಿಸುತ್ತಿದ್ದರು. ತಾತ್ವಿಕ ಅನುಭಾವ ಚಿಂತನೆಯಲ್ಲಿ ಕಾಲ ಕಳೆಯುವರು. ಆರ್ಚನ ಅರ್ಪಣ ಅನುಭಾವ ಮಾಡುವದೆ ಶರಣ ಧರ್ಮ, ವೀರಶೈವನ ನಿಜಾಚರಣೆ.

ಮೈಲಾರಲಿಂಗ ದೇವಸ್ಥಾನಕ್ಕೆ ಬರುವ ಗೊರಪ್ಪಗಳ ವಿಚಿತ್ರ ವೇಷ-ಭಾಷೆ ಆಚರಣೆಗಳಿಂದ ಬಸಪ್ಪನಿಗೆ ಅನುಕಂಪ, ಏಕೆಂದರೆ, ವೀರಶೈವ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದು ಬಂದ ಈತನಿಗೆ ಗೊರಪ್ಪಗಳ ಸಂಗ ಹಿಡಿಸಲಿಲ್ಲ. ಈ ಸಂಗತಿ ಇವರ ಅನುಭಾವ ಜೀವನದ ಶಿವಾನುಭವದರ್ಪಣದ ಪದ್ಯಗಳಿಂದ ವೇದ್ಯವಾಗದೆ ಇರದು. ಗೊರಪ್ಪಗಳ ಪವಾಡ ಕಾರಣೀಕ ಮೊದಲಾದ ಅಸಹಜ ಜೀವನಕ್ಕೆ ಮನಸೋಲಲಿಲ್ಲ. ತನ್ನ ಅನುಭಾವದಿಂದ ನಿಜವಾದ ಮೈಲಾರ ಲಿಂಗನಾರು ? ತೇರಾವುದು ? ಕಾರಣೀಕವಾವುದು ? ಎಂಬುದನ್ನು ಈ ಪದ್ಯಗಳಿಂದ ತಿಳಿಸುತ್ತಾರೆ. ನೋಡಿ.

 

ನೋಡಿರಮ್ಮ ಮೈಲಾರಲಿಂಗನ ಜಾತ್ರೆಯಾಗುತ್ತಿದೆ

ನಾಡ ಜನರಿಗೆ ತಿಳಿಯದು ಇದರ ಗೋಪ್ಯ ಬೇರಿದೆ   ||ಪಲ್ಲವಿ  ||

ತವೆ ಏಳ್ಕೋಟಿಗೆಮಿಗೆ ಮಂತ್ರವನುವ ಗೊರವರೊಪ್ಪುತಾರೆ

ಶಿವನಿಂದಕರೆದೆ ದಲ್ಲಣ ಕಡುಗಲಿ ವೀರರೆಸೆವುತಾರೆ

ಇವರೊಳಧಿಕ ಗುರುಚನ್ನವೀರ ಮೈಲಾರ ಲಿಂಗವಹರೆ  (ಪದ್ಯ ೫೧)

 

ಮತ್ತು – ನಂಬುವುದೆಮ್ಮ ಮೈಲಾರಲಿಂಗನ ಸೊಲ್ಲ ಕೇಳಿ ಕೇಳಿ,

ಢಂಭಕ ಮಾತಲ್ಲ ಕಾರಣಿಕನೆ ಬಲ್ಲ ಕೇಳಿ ಕೇಳಿ     ||ಪಲ್ಲವಿ)

ಪರತತ್ವದಿರವೆಮ್ಮ ಗೊರವನ ಶೌರ್ಯ ನವ ಕೇಳಿ ಕೇಳಿ   (ಪದ್ಯ ೫೨)

 

ನಿಜವಾದ ಮೈಲಾರಲಿಂಗನ ಜಾತ್ರೆಯ ಅರಿವು ಜನಸಾಮಾನ್ಯರಿಗೆ ಆಗುವದಿಲ್ಲ. ಏಳುಕೋಟಿ ಮಂತ್ರಗಳಿಗೆ ಮಂತ್ರರಾಜನೆನಿಸಿದ ಷಡಕ್ಷರ ಮಹಾಮಂತ್ರವನ್ನು ಬೋಧಿಸಬಲ್ಲ ಸದ್ಗುರುನಾಥನೇ ಮೈಲಾರಲಿಂಗ. ಮಲತ್ರಯಗಳನ್ನು ಕಳೆದು ತಾಪತ್ರಯಗಳನ್ನು ನಿವಾರಿಸಬಲ್ಲ ವೀರನೇ ಗುರು ಚನ್ನವೀರರು. ಇವರೇ ಹರ ನಿಂದಧಿಕರೆಂದು ಭಾವಿಸಿ ಪ್ರತಿದಿನವೂ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಗುರುಕುಲಕ್ಕೆ ತಪ್ಪದೆ ಆಗಮಿಸಿ ಶಿವಾನುಭವ ಗೋಷ್ಠಿಯಲ್ಲಿ ಕಾಲ ಕಳೆಯ ಹತ್ತುವರು. ಈ ಆಶ್ರಮ ಆ ಕಾಲದಲ್ಲಿ ಆಧ್ಯಾತ್ಮಿಕ ಮಹಾಕೇಂದ್ರವಾಗಿತ್ತು. ನಾಡಿನ ಅನೇಕ ಸಾಧಕರು ಇಲ್ಲಿಗೆ ಆಗಮಿಸಿ ತಮ್ಮ ಸಾಧನೆಯನ್ನು ಸದ್ಗುರು ಸನ್ನಿಧಿಯಲ್ಲಿ ಸಾರ್ಥಕಗೊಳಿಸುತ್ತಿದ್ದರು.

 

ಅರಸುತಿಹ ಲತೆ ಕಾಲ್ದೊಡಗಿದಂತೆ, ಬಡವರ ಮನೆಗೆ ಭಾಗ್ಯನಿಧಿ ದೊರೆತಂತೆ ಜಂಗಮ ಪುಂಗವರಾದ ಚನ್ನವೀರ ಮಹಾಶಿವಯೋಗಿಗಳ ಆಗಮನದಿಂದ ಶರಣರಿಗೆ ಅತ್ಯಾನಂದವನ್ನುಂಟು ಮಾಡಿತ್ತು. ವೀರಶೈವ ಸಂಸ್ಕೃತಿಯೇ, ಸಿದ್ಧಾಂತವೇ ಮೂರ್ತಿ ಮತ್ತಾದ ಈ ಪರಮ ಪೂಜ್ಯರಿಂದ ಅನುಗ್ರಹೀತರಾಗಿ ಪಾವನಾಂಗರೆನಿಸಿದರು ಶರಣರು, ಗುರುಸೇವೆಯಲ್ಲಿ ನಿರತರಾಗಿ ಕಿಂಕರತ್ವವನ್ನು ಅಳವಡಿಸಿಕೊಂಡು ಕಾಯಕ ಗೈಯುತ್ತ ಮಹಾದಾಸೋಹಿಯಾದರು.

 

ಹೀಗೆ ಹಿರಿಯ ಸಾಧಕರಾದ ಬಸವಲಿಂಗ ಶರಣರು ಹೊಸದಾಗಿ ಗುರುಕುಲಕ್ಕೆ ಆಗಮಿಸುತ್ತಿದ್ದ ಸಾಧಕವಟುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಚರಣೆಗೆ ತಕ್ಕ ನಡೆಯನ್ನು ಕಲಿಸುತ್ತಿದ್ದರು. ನಡೆಯಿಲ್ಲದ ಡಂಭಾಚಾರದ ವೇಷವನ್ನು ತೆಗೆಯಿಸಿ ನಡೆ-ನುಡಿ ಸಮನ್ವಯಗೊಂಡ ಮೇಲೆ ಗುರುಗಳಿಂದ ಕಾಷಾಯಾಂಬರವನ್ನು ಕೊಡಿಸುತ್ತಿದ್ದರು. ಕುಶಾಗ್ರಮತಿಗಳಾದ ಶರಣರು ಸುಮ್ಮನೆ ಕಾಲ ಕಳೆಯದೆ ಶರಣ ಸಾಹಿತ್ಯವನ್ನು, ಸಂಸ್ಕೃತ ವಾಙ್ಮಯವನ್ನು ಮತ್ತು ಕನ್ನಡ ಕಾವ್ಯಗಳನ್ನು ಅಭ್ಯಸಿಸು ತಿದ್ದರು. ಪೂಜ್ಯ ಗುರುಗಳ ಅನುಭಾವಪೂರ್ಣ ಪ್ರವಚನಗಳನ್ನು ಮನವಿಟ್ಟು ಆಲಿಸುತ್ತಿದ್ದರು. ನಡೆ ನುಡಿಯಲ್ಲಿ ಚನ್ನರಾದ ಚನ್ನವೀರರ ನಡೆಯೇ ಶರಣರಿಗೆ ಮಾರ್ಗದರ್ಶಿಯಾಗಿತ್ತು. ಶ್ರೀಗಳ ಹಿರಿಯ ಶಿಷ್ಯರಾದ ಗವಿಯ ಶಾಂತವೀರ ಸ್ವಾಮಿಗಳಿಂದಲೂ ಶರಣರು ಅನುಭಾವ ಪಡೆದಿದ್ದರು, ಈ ಮಾತನ್ನು ಅವರ ಪದ್ಯದಲ್ಲಿ ಕಾಣಬಹುದು.

 

ಬಸವಲಿಂಗ ಶರಣರು ಅಚ್ಚಗಣಾಚಾರಿಗಳಾಗಿದ್ದರು. ಹಾಗೆಯೇ ಲಿಂಗಾಚಾರಗಳೂ ಹೌದು. ಇವರ ಘನವಾದ ನಿಷ್ಠೆಯನ್ನು ಸಹಿಸದ ಕೆಲವು ಸಾಂಪ್ರದಾಯ ವಾದಿಗಳು ಇವರಿಗೆ ಕಿರುಕುಳವನ್ನು ಕೊಡುತ್ತಿದ್ದರು. ಸಮಯ ಸಾಧಿಸಿ ಹೊಸದಾಗಿ ಬಂದ ಹಡಗಲಿಯ ಕಟ್ಟಾವೈಷ್ಣವ ತಹಶೀಲದಾರನಿಗೆ ಶರಣರ ವಿರುದ್ಧ ಜಾಡಿಯನ್ನು ಹೇಳಿದರೂ ಶರಣರು ಅಂಜದೆ ಅಳುಕದೆ ತಮ್ಮ ನಿಷ್ಠೆಯನ್ನೇ ಮೆರೆದರು. ಅಧಿಕಾರಿಯು ವಿಷ್ಣುವಿನ ನಾಮಗಳನ್ನು ಕೊಂಡಾಡಲು ತಿಳಿಸಿದಾಗ ಶರಣರು ಒಪ್ಪಿ ಸುಂದರ ಪದ್ಯಗಳನ್ನೇ ರಚಿಸುತ್ತಾರೆ. ನ್ಯಾಯನಿಷ್ಠುರ; ದಾಕ್ಷಿಣ್ಯಪರರಾಗದೆ ಪವಿತ್ರ ಪ್ರಾಣಿಯಾದ ಗೋವಿನ ಮಹತ್ವವನ್ನು ತಿಳಿಸಿ ಅದರಿಂದ ತಯಾರಾಗುವ ಪಾವನ ಪಾಂಡುವರ್ಣದ ಶ್ರೀ ವಿಭೂತಿಯ ಘನತೆಯನ್ನು ವ್ಯಕ್ತಗೊಳಿಸುವ-

 

“ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾದ ಪಾವನ ಪಾಂಡುರಂಗ

ಶ್ರೀ ವಿಭೂತಿಯು ಪಂಚಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ | ಜಗ

ಜೀವ ಸಂತೃಪ್ತಿಯು ಗೋವಿಂದ

 

ಎನ್ನುವ ಐದು ನುಡಿಯ ಪದ್ಯವನ್ನು ರಚಿಸಿದರಲ್ಲದೆ ಮತ್ತೆ

 

“ಹರಿಯೆ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

ಹರಿಯೆ ತ್ರೈಭುವನ ಅಟ್ಟುಂಬ ಸಕಲ ಜೀವಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ ಲೋಕದೊಳಗದು ಕಾರಣ |

ಹರಿಭಕ್ತನಹುದು, ಹರಭಕ್ತನಲ್ಲ ನಾಂ

ನರಸಿಂಹ ಮಧುಸೂದನ ಶಿರಿಯರಸ ವಾ

ಸರ ಯಂಕಟಾಚಲಾದಿ ಪ್ರಣವ ಸ್ಮರಣೆಯೊಳಗಿರ್ಪೆಂ ಸದಾ ||

 

ಎಂಬ ನಾನಾರ್ಥ ವೈಚಿತ್ರ್ಯದಿಂದ ಅರ್ಥ ವಿಸ್ತಾರ ತೋರಿಸಿ ನರಸಿಂಹಾದಿ ಶಬ್ದಗಳ ಆದಿ ಅಕ್ಷರ ಜೋಡಿಸುವ ಷಡಕ್ಷರ ಮಂತ್ರದ ಸ್ಮರಣೆ ಮಾಡಿದ್ದನ್ನು ಈ ಪದ್ಯದಲ್ಲಿ ಬರೆದು ಅಧಿಕಾರಿಯನ್ನು ಬೆರಗುಗೊಳಿಸುತ್ತಾರೆ. ಹಾಗೆ ಕೇಡಿಗಳೂ ತಣ್ಣಗಾಗುತ್ತಾರೆ.

 

ಪ್ರತ್ಯುತ್ಪನ್ನ ಮತಿಯವರಾದ ಬಸವಲಿಂಗ ಶರಣರು ಭಕ್ತಿಯ ಉದ್ರೇಕದಿಂದಾಗಲಿ, ತಾತ್ಕಾಲಿಕ ಸ್ಫೂರ್ತಿಯಿಂದಾಗಲಿ ಕೃತಿಗಳನ್ನು ರಚಿಸಲಿಲ್ಲ. ತತ್ತ್ವ, ಶಾಸ್ತ್ರ ,ಆಚಾರ, ಅನುಭಾವಗಳ ಸಂಗಮದಲ್ಲಿ ಕ್ರಿಯಾಜ್ಞಾನಗಳ ಸಮುಚ್ಚಯದಲ್ಲಿ ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ನಾಲ್ಕು ೧)ಶಿವಾನುಭವ ದರ್ಪಣ (ಹಾಡುಗಬ್ಬಗಳು) ೨) ನಿರಾಭಾರಿ ವೀರಶೈವ ಸಿದ್ಧಾಂತ (ಷಟ್‌ಪದಿಯಲ್ಲಿ ಬರೆದ ವೀರಶೈವ ಸೈದ್ಧಾಂತಿಕ ವಿಚಾರಗಳು) ೩) ಗುರು ಕರುಣ ತ್ರಿವಿಧಿ (ತ್ರಿಪದಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮವಾಗಿ ತಿಳಿಸಿದ ಕೃತಿ) ೪) ಲಿಂಗಪೂಜಾ ವಿಧಾನ (ಚೌಪದಿಯಲ್ಲಿ ಬರೆದದ್ದು) ಡಾ. ಎಸ್. ವ್ಹಿ, ಅಯ್ಯನಗೌಡ ಇವರು ಗದಗ “ವೀರಶೈವ ಅಧ್ಯಯನ ಸಂಸ್ಥೆ ʼʼ ಯಿಂದ ಪ್ರಕಟಿಸಿದ ಬಸವಲಿಂಗ ಶರಣರು ಸಮಗ್ರ ಕೃತಿಗಳು’ʼ ಇದರಲ್ಲಿ ಚನ್ನವೀರ ಸ್ವಾಮಿಗಳ ಇನ್ನೊಬ್ಬ ಶಿ಼ಷ್ಯರಾದ ಬನ್ನಿಮಟ್ಟಿ ಚನ್ನಪ್ಪನವರು ರಚಿಸಿದ “ಶಿವಾನುಭವ ದೀಪಿಕೆ ಯೆಂಬ ಗ್ರಂಥವನ್ನು  “ಷಟ್ ಸ್ಥಲ, ಜ್ಞಾನಾನುಭಾವ’ ಎಂಬ  ಹೆಸರಿಟ್ಟು ಹಸ್ತಪ್ರತಿಯ ಆಧಾರದಿಂದಲೋ, ತಮ್ಮ ಜಾಣೆಯಿಂದಲೋ ಬಸವಲಿಂಗ ಶರಣರಿಗೆ ಸೇರಿಸಿ, ಆ ಕೃತಿಕಾರರನ್ನು ಲುಪ್ತಗೊಳಿಸಿದ್ದು ಸಮಂಜಸವಲ್ಲ. ಶ್ರೀಯುತರು ಕನ್ನಡ ಅಧ್ಯಯನ ಪೀಠದ ಹಸ್ತ ಪ್ರತಿಭಾಂಡಾರದ ಕ್ರಮಾಂಕ ೧೦೬೧ ರಿಂದ ಸಂಗ್ರಹಿಸಿದ “ ಭಕ್ತಿ ಭಿನ್ನಹ ದಂಡಕ”ವು ಶರಣರೆಂದು ಖಚಿತಪಡಿಸಿದುದರಲ್ಲಿ ಔಚಿತ್ಯವಿದೆ.  “ಭಕ್ತಿ ಬಿನ್ನಹ ದಂಡಕ’ ವು ಶರಣರ ಐದನೆಯ ಕೃತಿಯೆನ್ನಬಹುದು. ಶರಣರ ಹೆಸರಿಗೆ ಸೇರಿಸಿದ “ಶಿವಾನುಭವ ದೀಪಿಕೆʼ’ ಯನ್ನು ಕುರಿತು ವಿಮರ್ಶಿಸಲು ಅವಕಾಶವಿಲ್ಲದಿದ್ದರೂ ಕೆಲವು ಮಾತುಗಳನ್ನು ಹೇಳುವದು ಅವಶ್ಯವಿದೆ; ಹಾಗೂ ಅನಿವಾರ್ಯವಿದೆ, ಅದರ ಕವಿ ಚಿನ್ನಪ್ಪನವರು “ಶಿವಾನುಭವ ದೀಪಿಕೆ’ಯ ಕೊನೆಯ ಕಂದ (೩೦೩)ದಲ್ಲಿ-

 

“ಪಾಹಿ ಗುರು ಚನ್ನವೀರಾ ಬಸವಪ್ರಭುವೆ’ʼ ಗುರು ಚನ್ನವೀರಾ ಎಂಬ ಅಂಕಿತವಿರುವುದರಿಂದ ಬಸವಲಿಂಗ ಶರಣರ ಕೃತಿಯೆಂದು ಭಾವಿಸುವುದು ಸರಿಯಲ್ಲ. ಎಲ್ಲ ಪದಗಳಲ್ಲಿ ಕೇವಲ ಬಸವಪ್ರಭುವೇ ಎಂದಿದೆ. ಬಸವಲಿಂಗ ಶರಣರಿಗೆ ಪ್ರೀತಿಯ ಪ್ರಭು (ಸ್ವಾಮಿ) ಅಥವಾ ಗುರುವಾದ ಚನ್ನವೀರರೆಂದು ಚನ್ನಪ್ಪನವರು ಅಂಕಿತ ಬಳಸಿರಲು ಸಾಕು. ಬವಣ್ಣನವರು ಕೂಡಲ ಸಂಗಮದೇವಾ ಎಂದು ವಚನಾಂಕಿತ ಹಾಕಿದರೆ; ಚನ್ನಬಸವಣ್ಣನವರೂ ಆದನ್ನೇ ಬಳಸಿ ಕೇವಲ ಚನ್ನ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಹಾಗೆ ಇಲ್ಲಿಯೂ ಅಂಕಿತದ ಭಿನ್ನತೆಯಿದೆ. ಬವಲಿಂಗ ಶರಣರು ಪದಪದ್ಯಗಳಲ್ಲಿ ಚನ್ನವೀರ’ ನಾಮವನ್ನು ಬಳಸಿಕೊಂಡಿರುವುದಾದರೂ ಬಸವಪ್ರಭುವೆಂಬ ನಾಮಾಂಕಿತವನ್ನು ಬಳಸಿಲ್ಲ. ಅಲ್ಲದೆ ಸಮಗ್ರ ಕೃತಿಯಲ್ಲಿ ಬರುವ ವಿಷಯ ಜೋಡಣೆಯ ವ್ಯತ್ಯಾಸ ಅನುಭಾವದ ಆಳವನ್ನು ಅಳೆಯಬಹುದು. ಶಿವಾನುಭವ ದೀಪಿಕೆಯಲ್ಲಿ ಅನುಭಾವದ ಕೊರತೆಯನ್ನು ಕಾಣಬಹುದು. ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯನ್ನು ಅದಕ್ಕೆ ತುಲನೆ ಮಾಡಿದರೆ ಬಹಳ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಿದೆ. ಹಲವಾರು ಕಾರಣಗಳಿಂದ “ಶಿವಾನುಭವ ದೀಪಿಕೆ’ ಬಸವಲಿಂಗ ಶರಣರದಂತೂ ಅಲ್ಲ. ಸಂಶೋಧನೆಯ ಹೆಸರಿನಲ್ಲಿ ಒಬ್ಬ ಕವಿಯನ್ನು ಲುಪ್ತಗೊಳಿಸುವ ಕಾರ್ಯ ಸರಿಯಲ್ಲ. ಸಂಶೋಧಕರು ಇನ್ನೂ ವಿಚಾರಿಸಬೇಕು. ಈ ಗ್ರಂಥ ಬಸವಲಿಂಗ ಶರಣರದು ಅಲ್ಲವೆಂದು ಸಿದ್ಧಮಾಡಲು ಸಾಕಷ್ಟು ಅಂಶಗಳಿವೆ.

 

ಇನ್ನು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯನ್ನು ಗುರುಗಳಿಂದ ಶಾಪಗ್ರಸ್ಥರಾಗಿ ಬರೆದರೆಂದು ಹೇಳುವ ದಂತಕಥೆ ಬೆಳೆದುದೂ ದುರದೃಷ್ಟಕರವೆ ! ಕವಿರತ್ನ ಚನ್ನಕವಿಗಳು ಮುಳುಗುಂದ ಬಾಲಲಿಲಾ ಮಹಾಂತ ಸ್ವಾಮಿಗಳ  ಪುರಾಣದಲ್ಲಿ ಈ ಸಂಗತಿಯನ್ನು ಬಳಸಿಕೊಂಡಿದ್ದಾರೆ. ಬಹುಶಃ ಅವರು ತ್ರಿವಿಧಿಯನ್ನಾಗಲಿ ಅವರ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿರಲಿಲ್ಲ. ಎಲ್ಲಿಯೂ ಈ ಸಂಗತಿ ತಿಳಿದು ಬರುವದಿಲ್ಲ. ಬಸವಲಿಂಗ ಶರಣರು ತಮ್ಮ “ನಿರಾಭಾರಿ ವೀರಶೈವ ಸಿದ್ಧಾಂತ”ದಲ್ಲಿ ಅಷ್ಟಾವರಣ ಮಹತ್ವ, ಪಂಚಾಚಾರಗಳ ವಿಶ್ಲೇಷಣೆ, ಧರ್ಮಾಚಾರಗಳೆಂಬ ತ್ರಿವಿಧ ಪ್ರಕರಣಗಳನ್ನು ವಿವರಿಸಿದರು.  ಶಿವಾನುಭವ ದರ್ಪಣ’ದಲ್ಲೂ ಬಿಡಿಬಿಡಿಯಾಗಿ ಅನೇಕ ತಾತ್ವಿಕ ವಿಷಯವಾಗಿ ಪದ್ಯಗಳನ್ನು ರಚಿಸಿದ್ದರೆ, ಗುರುಕರುಣ ತ್ರಿವಿಧಿಯು ಅಷ್ಟಾವರಣವೇ ಲಿಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮಬದ್ಧವಾಗಿ ಹಾಗೂ ಸಮಗ್ರವಾಗಿ ಬೋಧಿಸುವ ಏಕೈಕ ಕೃತಿಯೆಂದರೆ ತಪ್ಪಾಗದು. ಇಲ್ಲಿ ಶಿವಕವಿಯ ಆಳವಾದ ಅನುಭವ, ತರ್ಕಬದ್ಧವಾದ ವಿಚಾರ, ವಿಮರ್ಶೆ ಹಾಗೂ ಶಾಸ್ತ್ರೀಯ ಸಿದ್ಧಾಂತಗಳು ಮುಪ್ಪುರಿಗೊಂಡಿವೆ. ವೀರಶೈವನು ನಿಜಾಚರಣೆಯಿಂದ ತತ್ತ್ವಪುರುಷನಾಗುವ ಬಗೆ ಈ ತ್ರಿವಿಧಿಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಈ ಕೃತಿ ಶಿವಕವಿಯ ಅತ್ಯುತ್ತಮ ಗ್ರಂಥವೆಂದೇ ಹೇಳಬೇಕು. ವೀರಶೈವರ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದಾರೆ. ಇದರಿಂದ ಶಿವ ಕವಿಯ ಸ್ವಾನುಭಾವ ಮತ್ತು ವಿಚಕ್ಷಣಮತಿಯ ಪರಿಚಯವಾಗುವದು. ತ್ರಿವಿಧಿಯಲ್ಲಿ ೩೩೩ ತ್ರಿಪದಿಗಳಿದ್ದು ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿದ ಸಾಹಸ ಶರಣರದು.

 

ಆಲದ (ಮರ) ಬೀಜ ಅತಿ ಚಿಕ್ಕದಾಗಿದ್ದರೂ ವಿಶಾಲ ಗಿಡವನ್ನು ಒಳಗೊಂಡಿರುವಂತೆ ಈ ಗುರುಕರುಣ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನು ಮಾಡಬಹುದು. ಬಹುಶಃ ಇದು ಗುರುಸ್ತುತಿಗೈವ ಪಾರಾಯಣ ತ್ರಿವಿಧಿಯೆಂಬುದಾಗಿ ಬಹುಜನರ ತಿಳುವಳಿಕೆಯಾಗಿತ್ತು; ಅಲ್ಲದೆ ಬಸವಲಿಂಗ ಶರಣರು ಶಾಪಗ್ರಸ್ಥರಾಗಿ ಗುರುಸ್ತುತಿಯನ್ನು ಮಾಡಿದ್ದೆಂಬುದಾಗಿಯೇ ಅನೇಕರು ಹೇಳುತ್ತಾರೆ. ಇದು ಸರಿಯಲ್ಲ. ಶಿವಕವಿ ಬಸವಲಿಂಗ ಶರಣರ ಸಮಗ್ರ ಕೃತಿಗಳನ್ನು ಅವಲೋಕಿಸಿದರೆ ಎಲ್ಲಿಯೂ ಶಾಪದ ಪ್ರಸಂಗ ಬರುವುದಿಲ್ಲ. ಬಸಪ್ಪ-ಮುಸಪ್ಪ ಎಂಬ ಶಬ್ದ ಸಾಮ್ಯದಿಂದ ಬೆಳೆದ ಕಥೆಯಿರಬೇಕು. ಮತ್ತು ಶಾಪಗ್ರಸ್ಥನಾಗಿ ಇಂಥ ತಾತ್ವಿಕ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಗುರುಕರುಣೆಯನ್ನು ಕಳೆದುಕೊಂಡ ವ್ಯಕ್ತಿ ಮತಿಮಂದನಾಗಿ ಉತ್ತಮ ಕೃತಿಯನ್ನು ರಚಿಸಲಾರನು. ಗುರುಕರುಣೆಯಿಂದಲೇ ಇಂಥ ಉತ್ತಮ ಕೃತಿರತ್ನಗಳು ಮೂಡಿಬರುತ್ತವೆ. ಗುರುವಿಗೆ ಪ್ರತಿಮಾತನ್ನು ಆಡುವದೂ ಶರಣ ಜೀವನದಲ್ಲಿ ಸಲ್ಲದು. ಸದ್ಗುರುವಿನ ಮೌನ ನಿರ್ದೇಶನಗಳೂ ಶರಣನಿಗೆ ಮಾರ್ಗದರ್ಶಕವಾಗಬೇಕು. ಅರಿವುಳ್ಳವನೇ ಶರಣ. ಅಂಥ ಅರಿತ ಶರಣ ಮರೆತರೆ ಮತಿ ಅಮಂಗಲವಾಗಬಾರದೆಂದೆ ಶಿವಕವಿಗಳು ಸದ್ಗುರುವಿನಲ್ಲಿ ಮತಿಗೆ ಮಂಗಲ ಬೇಡುತ್ತ ಗುರುಕರುಣೆಯ ಹಿನ್ನೆಲೆಯಲ್ಲಿ ತ್ರಿವಿಧಿಯನ್ನು  ರಚಿಸಿರುವರು.

 

“ ಗುರುಕರುಣ ತ್ರಿವಿಧಿ’ಯು ಶ್ರೀ ಗುರು ಪ್ರಾರ್ಥನೆಯಿಂದ ಪ್ರಾರಂಭ ವಾಗುತ್ತದೆ. ತ್ರಿವಿಧಿಯಲ್ಲಿ ಶಿವಕವಿಗಳು ಅಷ್ಟಾವರಣವನ್ನು ಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ. ಏಕೆಂದರೆ ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ ಅಷ್ಟಾವರಣವು ಸ್ಪುಟವಾಗಿದೆ. ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ ಪಂಚಾಚಾರಗಳು ಅಳವಟ್ಟಿವೆ. ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ. ಪ್ರಥಮದಲ್ಲಿ ಸ್ತುತಿಗೈದ ಶ್ರೀಗುರು ನಿರಾಭಾರಿ ಜಂಗಮನೇ ಆಗಿದ್ದಾನೆ. ಬಸವಲಿಂಗ ಶರಣರು ಚಿನ್ಮಯಾನುಗ್ರಹ ಪಡೆದವರು. ನಿರಾಭಾರಿ ಗುರುವಿನ ಸುತ್ತಿಗೈದರೂ ಸಾಭಾರಿ ಸದ್ಗುರುವಿನ ಸ್ವರೂಪವನ್ನು, ಮಹತ್ವವನ್ನು ತಿಳಿಸುತ್ತಾರೆ. ಇದರಿಂದ ಈ ಗುರುವಿನ ಅವಶ್ಯಕತೆಯೇನೆಂಬುದು ಗೋಚರಿಸುತ್ತದೆ. ಅವಶ್ಯಕತೆಯ ಅರಿವಾಗುತಿದ್ದಂತೆ ಸದ್ಗುರುವನ್ನು ಹೃದಯತುಂಬಿ ಹಾಡುತ್ತಾರೆ ಕವಿಗಳು. ಗುರುದೀಕ್ಷೆ ಪಡೆದ ಭಕ್ತನು ಲೌಕಿಕ ತಂದೆ-ತಾಯಿ ಬಂಧು-ಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು. ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರುಕೃಪೆ ತೀವ್ರ ಲಭಿಸುವುದು.

 

ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ. ಆಗ ತ್ರಿವಿಧಿಯ ಮೂಲ ಬೀಜವೇ ವ್ಯಕ್ತವಾಗುತ್ತದೆ. ಶರಣರು ತ್ರಿವಿಧಿಯನ್ನು ರಚಿಸುವಲ್ಲಿ ಬಹಳ ಸುಂದರ ಕ್ರಮವನ್ನು ಅನುಸರಿಸಿದ್ದಾರೆ. ಶಾಸ್ತ್ರದ ಪದ್ಧತಿಯಂತೆ ವಿಷಯದ ಉಪಕ್ರಮ ಮಾಡುತ್ತ ಅದನ್ನು ಪ್ರತಿಪಾದಿಸಿ ಕೊನೆಗೆ ಉಪಸಂಹಾರ ಮಾಡುತ್ತ ಮುಂದಿನ ವಿಷಯಕ್ಕೆ ಕೊಂಡಿಯಂತೆ ಜೋಡಿಸುತ್ತ ಸಂಪೂರ್ಣವಾಗಿ ೩೩೩ ತ್ರಿಪದಿಗಳನ್ನು ರಚಿಸಿರುವರು.

 

ಗುರುವಿನ ಸಂವೇದನೆಯ ನಗುವೇ ಈ ಗುರುಕರುಣ ತ್ರಿವಿಧಿಯ ದಾರ್ಶನಿಕ ಸಿದ್ಧಾಂತದ ಬೀಜಾರೋಪಣವಾಗುತ್ತದೆ. ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿ ಸದ್ಗುರುವಿಗೆ ನೆಮ್ಮದಿಯಾದೀತು ? ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಗಳು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾರೆ. ಕಾಮಕೇಳಿಯಲ್ಲಿ ಮೈ-ಮರೆತ ಮಾನವನು ಮಾಯಾಬಂಧನದಲ್ಲಿ ಸಿಲುಕುತ್ತಾನೆ. ಶರಣ ಸಿದ್ಧಾಂತದಂತೆ ಮಾಯೆ ಹೊರಗಿನದಲ್ಲ. ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ. ಕಾಮನ ಉರುವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಪಂಚಭೂತಗಳ ಭಯಾನಕತೆಯನ್ನು ವಿವರಿಸುತ್ತ ಪಂಚಭೂತಗಳ ಪಂಚೀಕರಣದ ಪಂಚಭೂತಮಯವಾದ ಕಾರಣದಿಂದಲೇ ಶರೀರವಾಯಿತೆಂದು ಪ್ರತಿಪಾದಿಸುತ್ತಾರೆ. ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾರೆ. ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾರೆ. ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಗಳ ಐತಿಹಾಸಿಕ ಪ್ರಜ್ಞೆ, ತೀರ್ಥ ಕ್ಷೇತ್ರಗಳ ಪರಿಚಯ, ವ್ಯಾವಹಾರಿಕ ಜ್ಞಾನ, ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ.

 

ಶಬ್ದಾದಿ ಪಂಚ ವಿಷಯಗಳ ಪ್ರಸ್ತಾಪದ ನಂತರ ಅಂತಃಕರುಣ ಚತುಷ್ಟಯ ಹಾಗೂ ಗುಣತ್ರಯದ ನಿರೂಪ ಬಂದಿದೆ. ಹೀಗೆ ಶರೀರ ವಿಜ್ಞಾನ, ಶರೀರಿಗೆ ಅಂಟಿದ ಅಜ್ಞಾನ, ವಿಷಯ ವಾಸನೆ ಇತ್ಯಾದಿಗಳ ವಿಚಾರವು ನೇರವಾಗಿ ತಿಳಿದಂತೆ ಸಂಸಾರ ಹೇಯವೆನಿಸುವುದು ಸಹಜ. ಎಲ್ಲ ವಿಷಯಗಳನ್ನು ಶರಣರು ಸ್ವಾರಸ್ಯವಾಗಿ ಪ್ರತಿಪಾದಿಸಿದ್ದಾರೆ. ವಿಷಯದ ಮನವರಿಕೆಯಾಗಲು ಬೆಡಗಿನ ನುಡಿಯನ್ನು, ಶೇಷಾರ್ಥದ ಪರಿಯನ್ನು ಉಪಯೋಗಿಸಿದ್ದಾರೆ. ಕವಿಗಳ ಜಾಣ್ಮೆ ಅನುಭಾವಗಳು ಒಡಮೂಡಿವೆ. ಶಿಷ್ಯನು ಸಂಸಾರ ಬಂಧನದಿಂದ ತನುತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸುತ್ತಾನೆ. ಹೀಗೆ ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ. ತ್ರಿಪದಿಯ ಪ್ರತಿಪದಗಳು ವೈಶಿಷ್ಟ್ಯವನ್ನು ಪಡೆದಿವೆ. ಸಂಸಾರ ಹೇಯಸ್ಥಲದ ಕೆಲವು ತ್ರಿಪದಿಗಳು ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ. ೫೦ನೇಯ

 

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲ ದೇರಿದೆ ನಾನಿಳಿಯ

ಲಾರನೈ ಗುರುವೆ ಕೃಪೆಯಾಗು ||

 

ಈ ತ್ರಿಪದಿಯಂತೂ ವೀರಶೈವ ಸಿದ್ಧಾಂತವನ್ನು ಬೋಧಿಸುವ ಪರಿಣತ ಪ್ರಜ್ಞೆಯ ದ್ಯೋತಕವಾಗಿದೆ. ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಸತ್ವ ಪ್ರಕಟವಾಗುತ್ತದೆ.

 

ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಇಷ್ಟಲಿಂಗ, ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುತ್ತದೆ. ಈ ಲಿಂಗ ಹೊರಗಿನದಲ್ಲ. ಶಿಷ್ಯನ ಚಿಚ್ಚೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಶಿಷ್ಯನ ಭಕ್ತಿಗಾಗಿ ಅರುಹಿನ ಕುರುಹೆ ಮೂರ್ತಗೊಂಡು ಇಷ್ಟಲಿಂಗವಾಗುತ್ತದೆ. ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಪ್ರವೃತ್ತಿಕ್ರಮದಿಂದ ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು. ಮುಕ್ತಿಮಾರ್ಗಕ್ಕೆ ಯೋಗಮಾರ್ಗ, ಷಣ್ಮುಖೀ, ಖೇಚರೀ ಮುದ್ರೆಗಳು ಇರುತ್ತಿದ್ದರೂ ಅವು ಸುಲಭ ಸಾಧ್ಯವಲ್ಲವೆಂದು ಯುಕ್ತಿ ಯುಕ್ತವಾಗಿ ಶಿವಕವಿಗಳು ನಿರಸನಮಾಡಿ ಲಿಂಗಾಂಗಯೋಗದ ಸರಳತೆಯನ್ನು ತಿಳಿಸುತ್ತಾರೆ. ಅದಕ್ಕೆ ಸಹಕಾರಿಯೆಂಬಂತೆ ಲಿಂಗಲಕ್ಷಣ ಲಿಂಗವ್ಯಾಪ್ತಿಯನ್ನು ಹೇಳುತ್ತ ಈ ಲಿಂಗವು ಪ್ರಣವದಿರವೆಂಬುದನ್ನು ತಿಳಿಸುತ್ತಾರೆ. ಲಿಂಗ ಷಟ್‌ಸ್ಥಾನಗಳಲ್ಲಿ ಷಡಕ್ಷರ ಮಂತ್ರ ಸಂಬಂಧವನ್ನು ಬೋಧಿಸುತ್ತಾರೆ. ಇಂಥ ಅಸಾಧಾರಣ ಲಿಂಗವನ್ನು ಅಂತರಂಗಗಳಲ್ಲಿ ಧರಿಸಿಕೊಳ್ಳುವ ಯೋಗ್ಯತೆಯನ್ನು ವಿವರಿಸಿ ಲಿಂಗಾಂಗ ಸಾಮರಸ್ಯದ ರಹಸ್ಯವು ನಿವೃತ್ತಿಕ್ರಮದಿಂದ ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಯ ಮೂಲಕ ಬೋಧಿಸಲ್ಪಟ್ಟಿದೆ. ಸಾಧಕನು ಸರ್ವಾಂಗ-ಲಿಂಗಿಯಾಗಲು ಕರ್ಮೇಂದ್ರಿಯಗಳಲ್ಲಿ ಇಷ್ಟಲಿಂಗದ,  ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ, ಕರಣಂಗಳಲ್ಲಿ ಭಾವಲಿಂಗದ ಸಂಬಂಧವನ್ನು ಕ್ರಮವಾಗಿ ಅರಹುತ್ತಾರೆ. ಪುನಃ ಲಿಂಗದ ಅವಶ್ಯಕತೆ ಅರ್ಥಾತ್ ಪ್ರಾಣಲಿಂಗಪೂಜೆ, ಭಾವಲಿಂಗ ಪೂಜೆಯ ಪರಿಯನ್ನು ಪ್ರಸ್ತಾಪಿಸಿದ್ದಾರೆ. ಮೂರು ವಿಧದಲ್ಲಿ ತ್ರಿವಿಧ ಲಿಂಗಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಗಳು ಲಿಂಗತತ್ತ್ವದ ವ್ಯಾಪಕತೆಯನ್ನು ಅವರ್ಣನೀಯವಾಗಿ ಪ್ರತಿಪಾದಿಸುತ್ತಾರೆ. ಈ ವಿಚಾರ ವಚನ ಸಾಹಿತ್ಯದಲ್ಲೂ ಹೆಚ್ಚು ಕಾಣುತ್ತಿಲ್ಲ.

 

ಇಷ್ಟ ಪ್ರಾಣ ಭಾವಲಿಂಗಗಳ ಅನುಸಂಧಾನ ಮಾಡುವ ಭಕ್ತನು ಲಿಂಗದ ಪ್ರಾಣ ಜಂಗಮನನ್ನು ಆರಾಧಿಸಬೇಕೆಂಬುದನ್ನು ತಿಳಿಸುತ್ತ ಜಂಗಮನ ನಿಲವು, ಭೇದ ಹಾಗೂ ಜಂಗಮನ ಕರ್ತವ್ಯವನ್ನು ಬಿತ್ತರಿಸಿದ್ದಾರೆ. ನುಡಿದಂತೆ ನಡೆವ ಮಾರ್ಗ ಷಟ್‌ಸ್ಥಲ. ಇದನ್ನು ಅನುಗ್ರಹಿಸುವವನು ಜಂಗಮನೆಂಬುದನ್ನು ಶರಣರು ಸ್ಪಷ್ಟಗೊಳಿಸಿರುವರು.   ಗುರು ಧರ್ಮಕರ್ತೃವಾದರೆ ಜಂಗಮ ಧರ್ಮ ಸಂಶೋಧಕನೆಂಬುದನ್ನು ಶರಣರು ವ್ಯಕ್ತಗೊಳಿಸಿರುವರು.

 

ಬಾಹ್ಯ ಜಂಗಮನ ಸೇವೆಗೈಯುತ್ತ ಅಂತರಂಗದಲ್ಲಿ ಜಂಗಮನ ಸಾಕ್ಷಾತ್ಕಾರದ ಸ್ವರೂಪವನ್ನು ಅರಿಯಬೇಕು. ಜಂಗಮ ಪುಂಗವನಿಂದ ಪ್ರಾಪ್ತವಾಗುವದು ಪರಬ್ರಹ್ಮರೂಪಿ ಪಾದೋದಕ ಪ್ರಸಾದಗಳು. ಪಾದೋದಕವನ್ನು ಪಡೆವ ವಿಧಾನ ಹಾಗೂ ಮಹಿಮೆಯನ್ನು ತಿಳಿಸಿ ಅದರ ಪರಿಣಾಮವನ್ನು ವಿವರಿಸುತ್ತಾರೆ. ಭಕ್ತರನ್ನು ಪೊರೆವ ಮಹಾತಾಯಿ ಪ್ರಸಾದವೆನಿಸಿದ್ದರಿಂದ ಅದನ್ನು ಒಳಹೊರಗೂ ಪರಿಣಾಮಿಸಿಕೊಳ್ಳಬೇಕು. ಏಕೆಂದರೆ ಪ್ರಸಾದ ಸದ್ಭಾವವೇ ವೀರಶೈವರ ಆತ್ಯಂತಿಕ ಸಿದ್ಧಿಯೆನಿಸಿದೆ. ಇದುವೆ ನಿತ್ಯ ಮುಕ್ತತ್ವವೆನಿಸಿದೆ.

 

ಪ್ರಸಾದ ಸದ್ಭಾವಿಯಾದ ಶರಣು ನಿಜೈಕ್ಯ ಸ್ಥಿತಿಯಲ್ಲಿರುವಾಗ ಮತ್ತೆ ಸಾಧನಗಳ ಅವಶ್ಯಕತೆಯೆನಿಸದು. ಅದಕ್ಕಾಗಿ ಶಿವಕವಿಗಳು ಸಾಧನಗಳಿಂದ ಸಾಧ್ಯವೆನಿಸಿದ ಚಿದ್ಭಸಿತ, ಚಿದ್ರುದ್ರಾಕ್ಷಗಳ ಮಹತ್ವವನ್ನು ವಿವರಿಸಿ ಮನ ಚಿದ್ಘನವಾಗುವ ನಿಜಮಂತ್ರದ ಸ್ವರೂಪವನ್ನು ನಿರೂಪಿಸುತ್ತಾರೆ. ಕಾಯದಲ್ಲಿ ಗುರುಲಿಂಗ ಜಂಗಮರ ಆಯತವನ್ನು ಅರಿಯಲು ಬಾಹ್ಯಾಚರಣೆಯ ವಿವರವನ್ನು ತಿಳಿಸಿ ಆಂತರಿಕ ಅಷ್ಟಾವರಣದ ಅಳವಡಿಕೆಯನ್ನು ಸಾಧಿಸಿದಾಗ ನೈಜ ಶೂನ್ಯ ಸಂಪಾದನೆಯಾಗುವುದೆಂಬುದನ್ನು ಈ ತ್ರಿವಿಧಿಯಲ್ಲಿ ಅವಲೋಕಿಸಬಹುದು. ‘ಶೂನ್ಯ ಸಂಪಾದನೆ” ಉಕ್ಕಿನ ಕಡಲೆಯಾಗಿರುವಾಗ ಅದನ್ನು ಸಾಧಿಸುವ, ಆಚರಿಸುವ ದಾರ್ಶನಿಕ ಸಿದ್ಧಾಂತವನ್ನು ಸಾಕ್ಷಾತ್ಕರಿಸಿಕೊಳ್ಳಲು ಮಹಾನುಭಾವಿ ಮೈಲಾರ ಭಸವಲಿಂಗ ಶರಣರ ಈ ಗುರುಕರುಣ ಶ್ರಿವಿಧಿಯು ಅಧ್ಯಾತ್ಮದ ಕೈಮರವೆನಿಸಿದೆ. ವೀರಶೈವ  ಸಿದ್ಧಾಂತದ ರಸಘಟ್ಟಿ ಗುರುಕರಣ ತ್ರಿವಿಧಿಯೆಂದರೆ ತಪ್ಪಲ್ಲ.ಶೂನ್ಯ ಸಂಪಾದನೆಯನ್ನು ಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನ ಗುರುಕರಣ ತ್ರಿವಿಧಿಯೆಂಬುದನ್ನು ಬೇರೆ ಹೇಳಬೇಕಿಲ್ಲ.

 

ಬಸವಲಿಂಗ ಶರಣರು ʼ’ಶಿವಾನುಭಾವ ದರ್ಪಣ’ʼದಲ್ಲಿ ೭೦ ಪದ್ಯಗಳನ್ನು ರಚಿಸಿದ್ದು ವಿವಿಧ ರಾಗ ಮಾಲಿಕೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಪ್ರಾರ್ಥನೆ, ನೀತಿ, ತತ್ವಗಳನ್ನು ಹೃದಯಂಗಮವಾಗಿ ಹಾಡಿದ್ದಾರೆ. ಸದ್ಗುರು ಚನ್ನವೀರರ ವ್ಯಕ್ತಿತ್ವವನ್ನು ಹಲವಾರು ಪದ್ಯಗಳಲ್ಲಿ ಸ್ತುತಿಸಿದ್ದನ್ನು ನೋಡಬಹುದು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ವಿಚಾರಗಳನ್ನು ದ್ವಿಪದಿ, ಚೌಪದಿ, ಷಟ್‌ ಪದಿಗಳಲ್ಲಿ ವ್ಯಕ್ತ ಮಾಡಿದ್ದಾರೆ. ಅನೇಕ ಪದ್ಯಗಳು ಅತ್ಯಂತ ಮನನೀಯವಾಗಿವೆ. ಗೇಯಯೋಗ್ಯವಾಗಿವೆ. ಇನ್ನು ನಾಲ್ಕನೆ ಕೃತಿಯನಿಸಿದ ‘ಲಿಂಗ ಪೂಜಾ ವಿಧಾನ’ ದಲ್ಲಿ ಸಂಕಲ್ಪದಿಂದ ಪ್ರಾರಂಭಿಸಿ ಉಪಚಾರಗಳ ಅರ್ಥ ವಿವರಣೆಯೊಂದಿಗೆ ವಿಶೇಷವಾಗಿ ವಿಧಾನವನ್ನು ಬೆಳೆಸಿದ್ದಾರೆ. ಪಾದ್ಯಾದಿ ಅಭಿಷೇಕಗಳನ್ನು ಇಷ್ಟಲಿಂಗಕ್ಕೆ ಸಮರ್ಪಿಸುವಲ್ಲಿ ಅನಂದವಾಗಿ ನೆರವೇರಿಸಲು ವಿವರಿಸಿದ್ದಾರೆ. ೫೨ ಚೌಪದಿಗಳಲ್ಲಿ ಈ ವಿಧಾನ ಪರಿಸಮಾಪ್ತಿಗೊಂಡಿದೆ. ರಾಜೋಪಚಾರಗಳನ್ನು ಹೇಳುವಲ್ಲಿ ಶರಣರಿಗೆ ಸಂತೃಪ್ತಿಯೆನಿಸಿದೆ.

 

ಶಿವಕವಿ ಬಸವಲಿಂಗ ಶರಣರ ಅನುಭಾವವನ್ನು ಅಳೆಯುವದು, ಅಳವಡಿಸಿ ಕೊಳ್ಳುವದು ಆಚಾರ ಮತ್ತು ಅನುಭಾವಗಳಿಂದ ಮಾತ್ರ ಸಾಧ್ಯ. ಅದನ್ನು ಸಾಧಿಸಿಕೊಂಡರೆ ಆಗುವ ಆನಂದ ಅಪಾರ. ಇಂಥ ಅನುಭಾವ ತೊರೆಯಲ್ಲಿ ಮಿಂದು ಮಡಿಯಾಗಿ ಪರಿಪೂರ್ಣತೆಯನ್ನು ಪಡೆಯಲು ಬಸವಲಿಂಗ ಶರಣರ ಸಮಗ್ರ ಸಾಹಿತ್ಯ, ಶರಣತತ್ವ ಜಿಜ್ಞಾಸುಗಳಿಗೆ ಅತ್ಯುತ್ತಮ ಮೌಲಿಕ ಸಾಧನವಾಗಿದೆ. ಇದರಿಂದ ಮಹಾನುಭಾವಿಗಳಾದ ಮೈಲಾರ ಬಸವಲಿಂಗ ಶರಣರು ಶಾಪಗ್ರಸ್ಥರಲ್ಲವೆಂಬುದು ಸ್ಪಷ್ಟವಾಗದೇ ಇರದು.

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ವ್ಯಕ್ತಿಯ ಬದುಕಿನಲ್ಲಿ ನಡೆನುಡಿಗಳಿಗೆ ಅಗ್ರಸ್ಥಾನ. ಅವೆರಡೂ ಪರಸ್ಪರ ಪೂರಕ. ನಡೆಯೊಳಗೆ ನುಡಿ ನುಡಿಯೊಳಗೆ ನಡೆ ತುಂಬಿದುದೇ ನಿಜವಾದ ಬದುಕು. ಅದು ಸಮಾಜಕ್ಕೂ ದೇವನಿಗೂ ಒಪ್ಪಿತವಾದ ಬದುಕು ನುಡಿಯಂತೆ ನಡೆ, ಮಾತಿನಂತೆ ಕೃತಿ ಇಲ್ಲದ ಬದುಕಿಗೆ ಯಾವ ಬೆಲೆಯೂ ಇಲ್ಲ.

 

ಜೀವಿಗಳಲ್ಲಿ ಮನುಷ್ಯನು ಶ್ರೇಷ್ಠ ಮಾತನಾಡುವ ವಿಶೇಷ ಶಕ್ತಿ ಅವನಿಗಿದೆ. ಮಾತೆಂಬುದು ಜ್ಯೋತಿರ್ಲಿಂಗ, ಕಾರಣ ಮಾತು ಪವಿತ್ರವಾಗಿರಬೇಕಾದುದು ಅತ್ಯಂತ ಅಪೇಕ್ಷಣೀಯ. ನಮ್ಮ ಮಾತು ಮೃದು ಮಧುರವಾಗಿದ್ದು, ಕೇಳುಗರ ಮನ ನೋಯದಂತಾದಾಗ ಸಹಜವಾಗಿಯೇ ಶ್ರೇಷ್ಠತ್ವವನ್ನು ಪಡೆಯುತ್ತದೆ.

 

ನಮ್ಮ ನುಡಿ(ಮಾತು) ಮುತ್ತಿನಹಾರದಂತೆ ಆಕರ್ಷಕವಾಗಿರಬೇಕು. ಮಾಣಿಕ್ಯದ ದೀಪ್ತಿಯಂತೆ ಕೇಳುಗರ ಮನ ಬೆಳಗಬೇಕು. ಸ್ಪಟಿಕದ ಶಲಾಕೆಯಂತೆ ನೇರವೂ ಪಾರದರ್ಶಕವೂ ಆಗಿರಬೇಕೆಂದು ಹೇಳುವ ಬಸವಣ್ಣ ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪವಾಗುತ್ತದೆ’ ಎಂದು ನಮ್ಮನ್ನು ಎಚ್ಚರಿಸುತ್ತಾನೆ. ಹಾಗೆಯೇ ‘ನುಡಿಯೊಳಗಾಗಿ ನಡೆಯದಿದ್ದರೆ   ಕೂಡಲಸಂಗಮದೇವನೆಂತೊಲಿವನಯ್ಯ’ ಎಂದು ಕೇಳುತ್ತಾನೆ. ‘ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂದರಿತ ಬಸವಣ್ಣನವರು ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಕೂದಲೆಳೆಯಷ್ಟು ವ್ಯತ್ಯಾಸ ಬಂದರೂ ಸಂಸಾರದೊಳಗೆ ನನ್ನನ್ನು ಮುಳುಗಿಸಿ ನೀನೆದ್ದು ಹೋಗು’ ಎಂದು ಆರಾಧ್ಯದೇವನಿಗೆ ದೃಢವಾಗಿ ಹೇಳುತ್ತಾರೆ.

ಬಸವಣ್ಣನವರು ಒಂದು ಸಾಮಾಜಿಕ ಚಳುವಳಿಯ ನಾಯಕರು, ಕಲ್ಯಾಣ ರಾಜ್ಯಕಟ್ಟಬೇಕೆಂದು ಬಯಸಿದವರು. ಅವರಲ್ಲಿ ಇಂಥ ದೃಢತೆ ಇರಬೇಕಾದುದು ಅತ್ಯವಶ್ಯ. ಏಕೆಂದರೆ ಸಾಮಾನ್ಯ ಜನರು ತಮ್ಮ ನಾಯಕನ ನಡೆನುಡಿಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ.

 

ಬೋಧಿಸುವವನು ಮೊದಲು ಸಾಧಿಸಬೇಕು, ನುಡಿದವನು ಮೊದಲು ನಡೆಯಬೇಕು. ಬೋಧೆ ಪರಿಣಾಮಕಾರಿಯಾಗುವುದು ಮತ್ತು ಬೋಧಕನಿಗೆ ಬೋಧಿಸುವ ನೈತಿಕ ಹಕ್ಕು ದೊರೆಯುವುದು ಆಚರಣೆಯಲ್ಲಿದ್ದಾಗ ಮಾತ್ರ ರಾಮಕೃಷ್ಣ ಪರಮಹಂಸರಲ್ಲಿಗೆ ಹಣ್ಣಾದ ಮುದುಕಿಯೊಬ್ಬಳು ಬಂದು ತನ್ನ ಮೊಮ್ಮಗ ಬಹಳಷ್ಟು ಬೆಲ್ಲ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದನ್ನು ಬಿಡಿಸಬೇಕೆಂದು ಪಾರ್ಥಿಸುತ್ತಾಳೆ. ರಾಮಕೃಷ್ಣರು ಎಂಟು ದಿನ ಬಿಟ್ಟು ಮೊಮ್ಮಗನನ್ನು ಕರೆದುಕೊಂಡು  ಬರಲು ಹೇಳುತ್ತಾರೆ. ಹಾಗೆಯೇ ಮುದುಕಿಯು ಎಂಟು ದಿನಗಳ ನಂತರ ಮೊಮ್ಮಗನನ್ನು ಅವರಲ್ಲಿಗೆ ಕರೆತರುತ್ತಾಳೆ. ರಾಮಕೃಷ್ಣರು ಆ ಹುಡುಗನಿಗೆ ಅತಿಯಾಗಿ ಬೆಲ್ಲ ತಿನ್ನಬಾರದೆಂದೂ, ಅದರಿಂದ ಆರೋಗ್ಯ ಕೆಡುವುದೆಂದೂ ಬೋಧಿಸುತ್ತಾರೆ. ಆಶ್ಚರ್ಯಚಕಿತಳಾದ ಮುದುಕಿ ಈ ಮಾತನ್ನು ಎಂಟು ದಿನಗಳ ಹಿಂದೆಯೇ ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ರಾಮಕೃಷ್ಣರು ‘ತಾಯಿ ಆಗ ನಾನೇ ಹೆಚ್ಚಾಗಿ ಬೆಲ್ಲ ತಿನ್ನುತ್ತಿದ್ದೆ. ಆ ಹುಡುಗನಿಗೆ ಹೇಳುವ ನೈತಿಕ ಹಕ್ಕು ನನಗೆಲ್ಲಿತ್ತು? ಈ ಎಂಟು ದಿನಗಳ ಅವಧಿಯಲ್ಲಿ ನಾನು ಸಂಪೂರ್ಣವಾಗಿ ಬೆಲ್ಲ ತಿನ್ನುವುದನ್ನು ತ್ಯಜಿಸಿರುವೆ’ ಎನ್ನುತ್ತಾರೆ. ಅಂತೆಯೇ ನಡೆದು ನುಡಿಯುವುದು ಶ್ರೇಯಸ್ಕರ. ಅದುವೇ ಶ್ರೇಷ್ಠ ಜನರ ಆದರ್ಶ.

ಸಮಾಜದ ಕಣ್ಣುಗಳು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು

ಲೇಖಕ: ಶ್ರೀಕಂಠ.ಚೌಕೀಮಠ.

 

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಕನ್ನಡ ನಾಡು ಕಂಡ ಅಪ್ರತಿಮ, ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ಇಬ್ಬರು ಮಹಾನುಭಾವರನ್ನು ಸ್ಮರಿಸುವ ಸುಯೋಗ ನನ್ನದು. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳದ್ದು ೧೫೭ನೆಯ ಜಯಂತಿ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳದ್ದು ೧೫೦ನೆಯ ಜಯಂತಿ ಮಹೋತ್ಸವಗಳ ಸಂಭ್ರಮಾಚರಣೆಯ ಶುಭಗಳಿಗೆಗೆ ನನ್ನ ತೊದಲ್ನುಡಿಗಳ ನುಡಿ ನಮನ !

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜನ್ಮ ತಾಳಿದ್ದು ೧೧-೦೯-೧೮೬೭.ರಲ್ಲಿ

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಜನ್ಮ ತಾಳಿದ್ದು ೨೭-೮-೧೮೭೪ ರಲ್ಲಿ.

ವಯಸ್ಸಿನಲ್ಲಿ ಏಳು ವರ್ಷ ಹಿರಿಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಮತ್ತು ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಮದ್ಯದಲ್ಲಿದ್ದುದು ಅಂತಃಕರುಣೆ,ವಾತ್ಸಲ್ಯ ಮತ್ತು ಸಮಾಜೋಭಿವೃದ್ದಿಯ ಚಿಂತನೆಗಳ ಅವಿನಾಭಾವ ಸಂಬಂಧಗಳು.

ಅವರೀರ್ವರೂ ಚಿಂತಿಸಿದ್ದು ಮತ್ತು ಅವಿಶ್ರಾಂತವಾಗಿ ಅಹೋರಾತ್ರಿ  ದುಡಿದಿದ್ದು ಸಮಾಜಕ್ಕಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ.ಅವರೀರ್ವರ ಮಧ್ಯ ಒಂದು ಅವಿನಾಭಾವ ಸಂಬಂಧವಿತ್ತು.ಪರಸ್ಪರ ಸಹಾಯ ಸಹಕಾರವಿತ್ತು.ಪರಸ್ಪರ ಆರ್ಥಿಕ ಬೆಂಬಲವಿತ್ತು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂಧರ್ಭದಲ್ಲಿ (೧೯೦೦-೧೯೦೩)ಹಿರಿಯ ಸಹೋದರನ ಸ್ಥಾನದಲ್ಲಿ ನಿಂತು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಹಾಯ ಸಲ್ಲಿಸಿದರು.

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಪಟ್ಟಾಧಿಕಾರ ಸಂಧರ್ಭದಲ್ಲಿ ಮೈಸೂರು ಒಡೆಯರ ಅವರು ನಾಮಕರಣ ಮಾಡಿದ ಆಭ್ಯರ್ಥಿಯ ತೀವೃ ಸ್ಪರ್ದೆಯಲ್ಲೂ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳ ಜೊತೆಗಿದ್ದು ಅವರ ಪಟ್ಟಾಧಿಕಾರವನ್ನು (೧೯೦೩) ಸುಗಮಗೊಳಿಸಿದವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು.

(ಉಲ್ಲೇಖ: ೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರ ದುರ್ಗದ ಪೂಜ್ಯ  ಶ್ರೀ ಜಯದೇವ ಜಗದ್ಗುರುಗಳ ಲೇಖನ)

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಶ್ರೀಮದ್ವೀರಶೈವ ಶಿವಯೋಗಮಂದಿರದ ವತಿಯಿಂದ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಮತ್ತು ಹತ್ತಿ ಬೆಳೆಯುವ ರೈತರಿಗೆ ಸಹಾಯವಾಗಲೆಂದು ಆರಂಭಿಸಿದ ಬಾಗಲಕೋಟೆಯ ಶ್ರೀ ಶಿವಾನಂದ ಜಿನ್ನಿಂಗ ಫ್ಯಾಕ್ಟರಿಗೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೫೦೦೦ ರೂಗಳನ್ನು ಶೇರ ರೂಪ ದಲ್ಲಿ ಕೊಟ್ಟು ಪ್ರೋತ್ಸಾಹಿಸಿದರು

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಸಂಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆ ಹಣಕಾಸು ತೊಂದರೆ ಅನುಭವಿಸಿದಾಗ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ೧೯೧೭ ರಲ್ಲಿ ೬೩ ಸಾವಿರ ರೂಗಳನ್ನು ಭಕ್ತರಿಂದ ಸಂಗ್ರಹಿಸಿ ಮಹಾಸಭೆಗೆ ಚಿರಸ್ಥಾಯಿ ನಿಧಿ ಸ್ಥಾಪನೆ ಮಾಡಿಕೊಟ್ಟರು.

ಅವರೀರ್ವರ ಕಾಲಘಟ್ಟದಲ್ಲಿ  ಸಮಯ ಬೇಧಾಚರಣೆಯ ವಿಷಮ ವಾತವರಣವಿದ್ದ ಪರಿಸ್ಥಿತಿಯಲ್ಲಿ ಕುಮಾರ ಸಮಯ ಪರಂಪರೆಯ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಮುರುಘಾ ಸಮಯ ಪರಂಪರೆಯ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಎಂದಿಗೂ ಸಮಯ ಬೇಧವನ್ನು ತಮ್ಮಗಳ ಮಧ್ಯ ತಂದುಕೊಡಲಿಲ್ಲ .

ಶ್ರೀ ಕುಮಾರ ಶ್ರೀಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶ್ರೀಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ

ಆ ಪವಿತ್ರ ಮತ್ತು ಪರಸ್ಪರ ಗೌರವ ಸಂಬಂಧಕ್ಕೆ ಈ ಕೆಳಗಿನ ಘಟನೆಗಳು ಸಾಕ್ಷಿಯಾಗುತ್ತವೆ.

  1. ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ
  2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣವನ್ನು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಮೃತಹಸ್ತದಿಂದ ನೆರವೇರಿಸಿದ್ದು .ಮತ್ತು
  3. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು                                                                                                                                 ಚಿತ್ರದುರ್ಗ ಜಗದ್ಗುರು ಪೀಠದ ಪೀಠಾಧಿಕಾರತ್ವ.

ವೀರಶೈವ ಧರ್ಮ ಸಾಮ್ರಾಜ್ಯ ಪ್ರಸಿದ್ಧ ಮಠವಾದ ಚಿತ್ರದುರ್ಗ ಜಗದ್ಗುರು ಪೀಠ ಅತ್ಯಂತ ಪ್ರತೀಷ್ಠೆಯ ಪೀಠ. ಪೀಠದ ಉತ್ತರಾಧಿಕಾರತ್ವಕ್ಕೆ ಹಲವು ರೀತಿಯ ಸ್ಪರ್ಧೆಗಳು ಜೊತೆ ಮೈಸೂರು ಒಡೆಯರ ಹಸ್ತಕ್ಷೇಪಗಳು ೧೯೦೩ ರ ನವ್ಹಂಬರ ತಿಂಗಳಲ್ಲಿ  ಬ್ರಿಟಿಷರ ಹದ್ದಿನ ಕಣ್ಗಾವಲಿನಲ್ಲಿ ಜರಗಿದವು.

ಆ ಸಂಧರ್ಬದಲ್ಲಿ ಜಯದೇವ ಪಂಡಿತರು ಬ್ಯಾಡಗಿಯ ಅಂಕಲಕೋಟೆಯವರ ಮನೆಯಲ್ಲಿದ್ದರು ಅವರ ಜೊತೆಗೆ ಕಡಕೋಳದ ಬಸವಪ್ಪನವರೂ ಇದ್ದರು..ಚಿತ್ರದುರ್ಗ ಜಗದ್ಗುರು ಪೀಠದ ಉತ್ತರಾಧಿಕಾರಿಗಳು ಯಾರು ಎಂದು ೧೯೦೩ ಮೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿ ಜರುಗಿದ ಬಸವಪುರಾಣ ಸಂಧರ್ಭದಲ್ಲಿ ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು ಜಯದೇವ ಪಂಡಿತರೆಂದು  ಘೋಷಣೆಯನ್ನು ಮಾಡಿದ್ದರು. ಆ ಘೋಷಣೆಯ ಆಧಾರದ ಮೇಲೆ ಸೊಲ್ಲಾಪುರದ ವಾರದ ಮಲ್ಲಪ್ಪನವರು ಜಯದೇವ ಪಂಡಿತರಿಗೆ ಚಿತ್ರದುರ್ಗಕ್ಕೆ ಆಗಮಿಸಲು ತಂತಿ ಸಂದೇಶವನ್ನು ಕಳುಹಿಸಿದರು.ಬ್ಯಾಡಗಿಯಿಂದ ಹೊಳಲ್ಕೆರೆಗೆ ಉಗಿ ಬಂಡಿಯಲ್ಲಿ ಬಂದ ಜಯದೇವ ಪಂಡಿತರನ್ನು ಅಲ್ಲಿಂದ ಅವರಿಗಾಗಿ ಕಾದಿದ್ದ ಕುದುರೆಗಾಡಿಯಲ್ಲಿ ಚಿತ್ರದುರ್ಗದ ಬೃಹನ್ಮಠಕ್ಕೆ ಕರೆ ತರಲಾಯಿತು. ಬಹುಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಅವರನ್ನು ಹೃತ್ತೂರ್ವಕ ಬರಮಾಡಿಕೊಂಡು, ಅನಾದಿ ಕರ್ತೃ ಶ್ರೀ ಮುರುಘರಾಜೇಂದ್ರರ ಗದ್ದುಗೆಯ ದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಜಯದೇವಪಂಡಿತರನ್ನು ಕಂಡು, ತಮ್ಮ ಸಂತೋಷ ವ್ಯಕ್ತಪಡಿಸುತ್ತ “ಶ್ರೀ ಮುರುಘೇಶನ ಸಂಪೂರ್ಣ ಕೃಪೆ ತಮ್ಮ ಮೇಲಿದೆ. ಅದನ್ನು ಹುಸಿಯಾಗಿಸಲು ಯಾರಿಂದಲೂ  ಸಾಧ್ಯವಿಲ್ಲ. ತಾವು ಈ ಶೂನ್ಯ ಪೀಠವನ್ನು ಅಲಂಕರಿಸುತ್ತಿರುವುದು ನಮಗಂತೂ ಎಲ್ಲಿಲ್ಲದ ಸಂತೋಷ ತಂದಿದೆ. ತಮ್ಮಂತಹ ದೂರದೃಷ್ಟಿಯುಳ್ಳವರು ಪೀಠದ ಒಡೆತನ ವಹಿಸಿಕೊಳ್ಳುವುದ ರಿಂದ ಬ್ರಹನ್ಮಠದ ಕೀರ್ತಿ ದಿಗ್‌ದಿಗಂತದಲ್ಲಿ ಹಬ್ಬುವುದಲ್ಲದೆ, ಪೀಠವನ್ನು ಮುನ್ನೆಡೆಸಿಕೊಂಡು ಹೋಗುವಲ್ಲಿ ತಾವು ಯಶಸ್ವಿಯಾಗುತ್ತೀರೆಂಬ ಸಂಪೂರ್ಣ ವಿಶ್ವಾಸ ನಮ್ಮದು.” ಎಂದು ಅಭಿನಂದಿಸಿದರು.

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಈ ಮಾತುಗಳಿಗೆ ಉತ್ತರವಾಗಿ ಜಯದೇವ ಪಂಡಿತರು “ತಾವು ಬಹುದೊಡ್ಡ ಮಾತುಗಳನ್ನಾಡಿದ್ದೀರಿ. ತಮ್ಮ ಈ ಮಾತುಗಳನ್ನು ಸತ್ಯವಾಗಿಸುವದೇ ನಮ್ಮ ಮುಂದಿನ ಗುರಿಯಾಗಿದೆ. ತಾವಾದರೂ ವಿರಕ್ತಾಶ್ರಮ ಸ್ವೀಕರಿಸಿ ಬಹು ದಿನಗಳಾಗಿರುತ್ತವೆ. ತಾವು ಅನುಭವಿಗಳಿದ್ದೀರಿ. ಈಗಾಗಲೇ ತಮ್ಮ ವ್ಯಕ್ತಿತ್ವದ ಮುದ್ರೆ ಸಮಾಜದ ಮೇಲೆ ಅಚ್ಚೊತ್ತಿ ಮೂಡಿದೆ. ಈಗ ತಾನೆ ಈ ಪೀಠಕ್ಕೆ ಆಯ್ಕೆಯಾದ ನಮಗೆ ಎಲ್ಲ ವಿಧವಾದ ಸಹಕಾರ ನೀಡುತ್ತಿ ರೆಂದು ಭಾವಿಸಿದ್ದೇವೆ. ನಾವು ಈ ಪೀಠದ ಮೂಲಕ, ತಾವು ತಮ್ಮ ಮಠದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಇಂದು ಸಮಾಜದ ಪರಿಸ್ಥಿತಿ ಗಂಭೀರವಾಗಿದೆ. ಅನಕ್ಷರತೆ, ಅಜ್ಞಾನ, ಎಲ್ಲೆಲ್ಲ ತಾಂಡವವಾಡುತ್ತಿದೆ. ಎಷ್ಟೋ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ, ಪ್ರೋತ್ಸಾಹವಿಲ್ಲ. ಅವರ ಪ್ರತಿಭೆ ಕಾಡುಮಲ್ಲಿಗೆಯಂತೆ ಬಾಡಿಹೋಗುತ್ತಿದೆ. ಅಂಥವರ ಪ್ರಗತಿಗೆ ನಾವು ಪ್ರಯತ್ನಿಸಬೇಕಾಗಿದೆ. ಆ ದಿಶೆಯಲ್ಲಿ ನಾವು ನಮ್ಮನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳೋಣ.” ಜಯದೇವ ಪಂಡಿತರ ಅಂತಃಕರಣದಿಂದ ಹೊರಬಂದ ಈ ಮುತ್ತಿನಂತಹ ಮಾತುಗಳು ಅವರೀರ್ವರ ಪವಿತ್ರ ಸಂಬಂಧಗಳಿಗೆ ಸಾಕ್ಷೀಕರಿಸುತ್ತವೆ.

(ಉಲ್ಲೇಖ: ಜಯದೇವ ಜಗದ್ಗುರುಗಳು  ಲೇಖಕರು ಶ್ರೀ .ಮ.ನಿ.ಪ್ರ. ಶಿವಮೂರ್ತಿ ಮಹಾಸ್ವಾಮಿಗಳು  ಹೊಸಮಠ.ಹಾವೇರಿ .ಪ್ರಕಾಶನ ವೀರಶೈವ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ)

ಅದನ್ನು ಸ್ವತಃ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಸ್ಮಾರಕ ಚಂದ್ರಿಕೆ ಸ್ಮರಣಗ್ರಂಥದಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು  ನೆನೆಯುತ್ತ “ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು” ಎಂದು ಬರೆದು ಸ್ಮರಿಸಿಕೊಂಡಿರುವರು..

ಪಂ. ವೈ ನಾಗೇಶಶಾಸ್ತ್ರಿಗಳು ರಚಿಸಿದ ‘ಶ್ರೀ ಜಯದೇವ ಲೀಲೆ’ಯ ೯ ನೆಯ ಸಂಧಿಯಲ್ಲಿ-ಸೊಲ್ಲಾಪುರದ ವಾರದ ಮಲ್ಲಪ್ಪನವರು ಹುಬ್ಬಳ್ಳಿಯಲ್ಲಿ ವೀರಶೈವ ಮಹಾಸಭೆಯ ಸ್ಥಾಪನೆಗಾಗಿ ಕಾರ್ಯತತ್ಪರರಾಗಿದ್ದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕಂಡು ಚಿತ್ರದುರ್ಗಮಠದ ಅಧಿಕಾರ ಬಗೆಗೆ ಕೇಳಿದಾಕ್ಷಣ ಪೂಜ್ಯರು ‘ಶ್ರೀಜಯದೇವ ಪಂಡಿತರನ್ನೇ ಚಿತ್ರದುರ್ಗ ಪೀಠಕ್ಕೆ ಆರಿಸುವದು ಉಚಿತವು. ಅವರಿಂದಲೇ ಸಮಾಜೋದ್ಧಾರ ಹಾಗೂ ಸಮಾಜೋನ್ನತಿಯ ಸತ್ಕಾರ್ಯವಾಗುವುದು ಸಾಧ್ಯವಿದೆ.” (ಶ್ರೀ ಜಯದೇವ ಲೀಲೆಯ ಕಥಾಸಾರ ಪುಟ ೩೨) ಎಂದು ಅಪ್ಪಣೆ ಮಾಡಿದ್ದನ್ನೇ ಬರೆದಿದ್ದಾರೆ.

ವಸ್ತುಸ್ತಿತಿ ಹೀಗಿದ್ದರೂ ಸಂಕುಚಿತಭಾವದ ಕಲ್ಮಷ ಹೃದಯದ ಲೇಖಕರು ಮತ್ತು ಕೆಲವರು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳನ್ನು ಕುರಿತು ಬರೆದ ಮತ್ತು ಹಬ್ಬಿಸಿದ ವಿಷಯಗಳು ಖಂಡನೀಯವಾದುದು.

೧೯೫೬ ರಲ್ಲಿ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳು ಲಿಂಗೈಕ್ಯರಾದ ಮೇಲೆ ಪ್ರಕಟವಾದ “ಶ್ರೀ ಜಗದ್ಗುರು ಜಯದೇವ ದಿಗ್ವಿಜಯ” ಪುಟ ೧೭ ರಲ್ಲಿ- “ಚಿತ್ರ ದುರ್ಗದಲ್ಲಿ ಉತ್ತರಾಧಿಕಾರ ಸಮಾರಂಭಕ್ಕೆ ಬಹು ಭರದಿಂದ ಏರ್ಪಾಟು ನಡೆದಿತ್ತು. ಅನೇಕ ಪಟ್ಟ ಚರ ಮೂರ್ತಿಗಳೂ, ಬ್ರಹ್ಮಚಾರಿಗಳೂ ಅಭ್ಯರ್ಥಿಗಳಾಗಿ ಬಂದಿದ್ದರು. ಬರುತ್ತಲಿದ್ದರು. ಇವರಲ್ಲಿ ಶ್ರೀಮನ್ ಪ್ರಣವ ಸ್ವರೂಪಿ ಹಾನಗಲ್ಲ ಕುಮಾರ ಸ್ವಾಮಿಗಳೂ ಒಬ್ಬರು ಎಂದು ಬರೆಯುತ್ತ ಮುಂದೆ ಅನೇಕ ಅಸಂಬದ್ಧ ವಿಚಾರಗಳನ್ನು ಪ್ರಸ್ತಾಪಿಸಿ ೨೫ ನೆಯ ಪುಟದಲ್ಲಿ-೧೯೦೩ ನೆಯ ನವಂಬರ ತಿಂಗಳು ಒಂದನೆಯ ತಾರೀಖು ಬೆಳಿಗ್ಗೆ ಒಂಬತ್ತು ಘಂಟೆಗೆ ಚುನಾವಣೆ ನಡೆದು ಹಾನಗಲ್ಲ ಸ್ವಾಮಿಗಳು ಅಪಯಶಸ್ವಿಗಳಾದರೆಂದು ಬರೆಯಲಾಗಿದೆ.

ಆಶ್ಚರ್ಯವೇನೆಂದರೆ ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಶ್ರೀಗಳಿದ್ದ ಸಂಧರ್ಭದಲ್ಲಿ ಸನ್ ೧೯೪೦ ರಲ್ಲಿ ಎನ್. ಎಚ್. ಹೊಸೂರವರು ಬರೆದ “ಶ್ರೀಜಗದ್ಗುರು ಜಯದೇವ ಮುರಘಾರಾಜೇಂದ್ರ ವಿಜಯ” ದಲ್ಲಿಯೂ ಈ ವಿಚಾರ ಉಲ್ಲೇಖಿಸಲ್ಪಟ್ಟಿಲ್ಲ.

೧೯೫೬ ರಲ್ಲಿ ಶ್ರೀ ಜಗದ್ಗುರುಗಳು ಲಿಂಗೈಕ್ಯರಾದ ತರುವಾಯ ೧೯೬೬ರಲ್ಲಿ ಪ್ರಕಟವಾದ ಶ್ರೀ ಜಗದ್ಗುರು ಜಯದೇವ ದಿಗ್ವಿಜಯ”ದ ಅಸಂಬದ್ಧ ಹಾಗೂ ಅಸಮಂಜಸ ವಿಷಯಗಳಿಗಾಗಿ ವಿಷಾದ ಪಡಬೇಕಾಗಿದೆ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

ಇಂಥ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವವರಿಗೆ ಒಂದು ಸ್ಪಷ್ಠವಾದ ಸ್ಪಷ್ಠೀಕರಣವನ್ನು ಕೊಡಲು ಬಯಸುತ್ತಿದ್ದೇನೆ.

೧೮೯೫ ರಲ್ಲಿ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ತಮ್ಮ ಗುರುಗಳಾದ ಯಳಂದೂರು ಪೂಜ್ಯ ಶ್ರೀಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾದ (ಅಣ್ಣಿಗೇರಿ) ಮೇಲೆ ಸೊರಬ ತಾಲೂಕಿನ ಕ್ಯಾಸನೂರು  ಶ್ರೀ ಗುರುಬಸವ ಮಹಾಸ್ವಾಮಿಗಳವರ ಕ್ರಿಯಾ ಸಮಾಧಿ ಸ್ಥಳದಲ್ಲಿ ಅನುಷ್ಠಾನವನ್ನು ಆಚರಿಸುತ್ತಿದ್ದರು. ಆ ಸಂಧರ್ಭದಲ್ಲಿ ಹಾನಗಲ್ಲಿನ ವಿರಕ್ತಮಠದ ಪೂಜ್ಯ ಶ್ರೀ ಫಕೀರಸ್ವಾಮಿಗಳು ತಮ್ಮ ಶಿಷ್ಯರಾದ ಕೆಂಡಪ್ಪಗೌಡರನ್ನು ಕಳುಹಿಸಿ ಪೂಜ್ಯ ಕುಮಾರ ಶ್ರೀಗಳನ್ನು ಹಾನಗಲ್ಲ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲು ಆವ್ಹಾನವನ್ನು ಕೊಟ್ಟಾಗ ಮೊದಲು ಅಧಿಕಾರವನ್ನು ತಿರಸ್ಕರಿಸಿದವರು ಶ್ರೀ ಕುಮಾರ ಶ್ರೀಗಳು ( ನಂತರ ಬಿದರಿ ಕುಮಾರ ಸ್ವಾಮಿಗಳು ಶ್ರೀಗಳ ಮನವಲಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕಾಯಿತು).೧೮೯೬ ರಲ್ಲಿ ಪೂಜ್ಯ ಶ್ರೀ ಕುಮಾರ ಶ್ರೀಗಳು ಹಾನಗಲ್ಲ ಶ್ರೀ ವಿರಕ್ತಮಠದ ಪೀಠಾಧ್ಯಕ್ಷರಾದರು

ಒಂದು ವೇಳೆ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳಿಗೆ ಅಧಿಕಾರದ ವ್ಯಾಮೋಹ ಇದ್ದಿದ್ದೇ ಆಗಿದ್ದರೆ…….

ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳೇ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ , ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಮತ್ತು ತಮ್ಮ ಶಿಷ್ಯ ಪಂ.ಪಂಚಾಕ್ಷರ ಗವಾಯಿಗಳ ಮೂಲಕ ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಗದುಗಿನ ಅಧ್ಯಕ್ಷ ಸ್ಥಾನಗಳನ್ನು ವಹಿಸಿಕೊಳ್ಳ ಬಹುದಿತ್ತು.

ಅವರೆಂದೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ.

ಸನ್ ೧೯೦೩ ರ ಮೇ ತಿಂಗಳಲ್ಲಿ ಸವದತ್ತಿಯ ಕಲ್ಮಠದಲ್ಲಿ ಶ್ರೀಬಿದರಿ ಕುಮಾರ ಮಹಾಸ್ವಾಮಿಗಳ ಸದಿಚ್ಛೆಯಂತೆ ನಡೆದ ಬಸವ ಪುರಾಣದ’ ಮಂಗಲೋತ್ಸವಕ್ಕೆ ಅಥಣಿ, ಹುಬ್ಬಳ್ಳಿ, ಹಾನಗಲ್ಲು, ಹಾವೇರಿ ಮೊದಲಾದ ಮಹಾಸ್ವಾಮಿಗಳು ದಯಮಾಡಿಸಿದ್ದರಲ್ಲದೆ, ಜಯದೇವ ಪಂಡಿತರೂ ಆಗಮಿಸಿದ್ದರು. ಆ ಮಹಾಸಭೆಯಲ್ಲಿಯೇ ‘ವೀರಶೈವ ಮಹಾಸಭೆ’ ಜರುಗಿಸಲು ಬೀಜಾರೋಪಣವಾಯಿತು. ಪ್ರಪ್ರಥಮತಃ ಹಾನಗಲ್ಲ ಶ್ರೀಗಳವರೇ ೧೦೧ರೂ. ಗಳನ್ನು ವೀರಶೈವ ಮತ ಪ್ರಚಾರಕ ಸಭೆಯವರಿಗೆ ಆಶೀರ್ವದಿಸಿದರಲ್ಲದೆ ತಾವೇ ಮುಂದಾಗಿ ೧೯೦೩ ರ ಡಿಶಂಬರ ತಿಂಗಳಲ್ಲಿ ಮೊದಲನೆಯ .ಮಹಾಸಭೆಯನ್ನು ಕೂಡಿಸುವ ಪ್ರಯತ್ನದಲ್ಲಿ ತೊಡಗಿದರು. ಧನಸಂಚಯಕ್ಕಾಗಿ ಹುಬ್ಬಳ್ಳಿ ಧಾರವಾಡ, ಸಂಶಿ, ಬ್ಯಾಡಗಿ, ಮಹಾರಾಜಪೇಟೆ, ಗರಗ, ಮಮ್ಮಿಗಟ್ಟಿ ಮೊದಲಾದ ಗ್ರಾಮಗಳಲ್ಲಿ ಭಿಕ್ಷೆಗೈದರೆಂದು ಅಖಿಲ ಭಾರತ ವೀರಶೈವ ಮಹಾಸಭೆಯ ೧ ನೆಯ ರಿಪೋರ್ಟಿನಲ್ಲಿ ಉಕ್ತವಾಗಿದೆ.

ಜೂನ ೨೨ ನೇ ತಾರೀಖಿನಿಂದಲೇ ಸಮಾಜ ಕಾರ್ಯದಲ್ಲಿ ಎಡಬಿಡದೆ ಸೇವೆಗೈಯ್ಯುವ ಹಾಗೂ ಹಾನಗಲ್ಲ ಮಠಕ್ಕೇನೆ ಅಧಿಕಾರ ಬಯಸದ ಶ್ರೀಗಳು ಚಿತ್ರದುರ್ಗ ಮಠದ ಅಧಿಕಾರಕ್ಕಾಗಿ ಆಶಿಸಿದರೆಂಬ ಮಾತು ಹಾಸ್ಯಾಸ್ಪದವಲ್ಲದೆ ಮತ್ತೇನು ? ಮತ್ತು ಜಯದೇವ ಪಂಡಿತರಿಗೆ ಕಲಿಯಲು ಸಹಾಯ ಸಲ್ಲಿಸಿದವರೇ ಅವರ ವಿರುದ್ದವಾಗಿ ಚುನಾವಣೆಗೆ ನಿಂತರೆಂಬ ಸಂಗತಿ ಸತ್ಯಕ್ಕೆ ದೂರವಾದ ಮಾತೇ ಸರಿ. ಒಂದುಪಕ್ಷ ಭಕ್ತರ ಅಭಿಪ್ರಾಯವಿದ್ದರೂ ಒಪ್ಪದವರು       ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು. ಯಾಕಂದರೆ ವಾರದ ಮಲ್ಲಪ್ಪನವರು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಶ್ರೀ ಜಯದೇವ ಪಂಡಿತರ ಹೆಸರನ್ನೇ ಸೂಚಿಸಿದ್ದು ಗಣನೀಯವಾಗಿದೆ. ದೊಡ್ಡವರ ಚರಿತ್ರ ದೊಡ್ಡದಾಗಿಯೇ ಇರುತ್ತದೆ. ಮಹಾತ್ಮರ ನೈಜ ವ್ಯಕ್ತಿತ್ವವನ್ನು ಯಥಾರ್ಥವಾಗಿ ಅವಲೋಕಿಸುವದು ಸಮಾಜ ಬಾಂಧವರ ಹಾಗೂ ಸಾಹಿತಿಗಳ ಪರಮ ಕರ್ತವ್ಯವಾಗಿದೆ.

ಘನವೈರಾಗ್ಯ ಶೀಲರೂ, ಸಮಾಜದ ಹಿತ ಚಿಂತಕರೂ ಆದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು  ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀ ಜಗದ್ಗುರು ಗಂಗಾಧರಸ್ವಾಮಿಗಳ ಹಾಗೂ ಗುರುಸಿದ್ಧ ಮಹಾಸ್ವಾಮಿಗಳ ಅಧಿಕಾರದಲ್ಲೂ ದುಡಿದದ್ದು ಕಂಡು ಬರುತ್ತದೆ. ಒಂದಲ್ಲ, ಎರಡಲ್ಲ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕಾಯವನ್ನು ಗಂಧದಂತೆ ಸವೆಸಿದರೂ ಸಂತೃಪ್ತಿಪಡುವ ಸ್ವಭಾವ ಅವರದಾಗಿರಲಿಲ್ಲ. ಸ್ವಾರ್ಥದ ಲವಲೇಶವಂತೂ ಅವರಲ್ಲಿರಲಿಲ್ಲ.

(ಉಲ್ಲೇಖ :ಕಾರುಣಿಕ ಯುಗಪುರುಷ: ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ)

 2. ಧಾರವಾಡದ ಮುರುಘಾಮಠ ದಲ್ಲಿರುವ ಪರಮಪೂಜ್ಯ ಅಥಣಿ ಮುರುಘೇಂದ್ರ ಮಹಾಸ್ವಾಮಿಗಳ ಅಮೃತಶಿಲಾ ಮೂರ್ತಿಯ ಅನವಾರಣ:

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶ್ರೀಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

  1. ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಅಂತಿಮ ದರ್ಶನದ ಸಂಧರ್ಭ ಉಭಯ ಮಹನೀಯರ ಭೇಟಿ ಮತ್ತು ಮಾತುಕತೆಗಳು.

ಪೂಜ್ಯರಿಬ್ಬರನ್ನೂ ಕಣ್ಣಾರೆ ಕಂಡಿದ್ದ ಕವಿರತ್ನ ದ್ಯಾಂಪೂರ ಚನ್ನ ಕವಿಗಳು ತಮ್ಮ ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ ದಲ್ಲಿ ಪೂಜ್ಯರಿಬ್ಬರ ಅಂತಿಮ ಭೇಟಿಯನ್ನು ಅತ್ಯಂತ ಹೃದಯ ಸ್ಪರ್ಷಿಯಾಗಿ ವರ್ಣಿಸಿರುವರು

 ಅನಿತರೊಳು ಚಿತ್ರದುರ್ಗದ ಜಗದ್ಗುರುವರೇ-

ಣ್ಯನು ತವಕದಿಂದ ದಯೆಮಾಡಿಸಿದನೋ ಪ್ರಭುವೆ-

ಮನಮೊಪ್ಪಿ ಹಿಂದೆ ಮಾತಾಡಿದಂತೀ ಸಮಾಜೋದ್ಧಾರಮಂ ಮಾಡಿರಿ

ಎನುತೀ ಕುಮಾರೇಶನಾಗ ಬಿನ್ನಯಿಸಲಾ

ಘನಮಹಿಮನೈ ನಿಮ್ಮ ಪ್ರಕೃತಿಯೆಂತಿಹುದೊರೆವು-

ದೆನಲಿದೇನೆಮ್ಮಿ ಸಮಾಜವೆಂತಿಹುದೆಂದು ಕೇಳಲಿಲ್ಲೇಕೆ ತಾವು

ಭಾವಾರ್ಥ : ಅಷ್ಟರಲ್ಲಿ ಚಿತ್ರದುರ್ಗದ ಜಯದೇವ ಜಗದ್ಗುರುಗಳು ದಯಮಾಡಿಸುತ್ತಾರೆ. ಅವರಿಗೆ ಕುಮಾರೇಶ ನಮಸ್ಕರಿಸಿ ಕೂಡಲೇ ಕೇಳಿಕೊಂಡದ್ದು, “ಪೂಜ್ಯರೇ ಮನವೊಪ್ಪಿ ಹಿಂದೆ ಮಾತನಾಡಿದಂತೆ ಈ ಸಮಾಜದ ಉದ್ಧಾರವನ್ನು ಮಾಡಿರಿ” ಎಂದು. ಆಗ ಜಗದ್ಗುರುಗಳು “ಈಗ ನಿಮ್ಮ ಪ್ರಕೃತಿ ಹೇಗಿದೆ?” ಎಂದು ಕುಮಾರೇಶನನ್ನು ಕೇಳಲು ಅವರು, “ಬುದ್ಧಿ ತಾವು ಸಮಾಜ ಹೇಗಿದೆ ಎಂದು ಕೇಳಲಿಲ್ಲವೇಕೆ?”

ಎನ್ನಲು,

ಎಂದೀ ಸದಾಶಿವಂ ಪಡಿನುಡಿಗೊರಲ್ದೇಳ್ದು

ಮುಂದುವರಿವಳಲಿಂದ ಕಂಬನಿಗಳುದುರಲಕ-

ಟೆಂದೀತನಂದು ನಿಮ್ಮಂ ಪೋಲ್ವ ಮತಸುಧಾರಕಭೂತಿಗಳಾರು ಧಾರಿಣಿಯೊಳು

ಮುಂದೀ ತೆರದ ಮಹಾಶಿವಯೋಗಿಯವತರಿಸಿ

ಬಂದೊಡೆಮ್ಮಿ ಸಮಾಜದ ಪುಣ್ಯವೆಂದು ಮನ

ದಂದಾಡಿದಂ ಜಗದ್ಗುರುವರಂ ಪಲುಬಿದಂ ಪೆರ್ಚಿದನುತಾಪದಿಂದ

ಭಾವಾರ್ಥ : ಜಗದ್ಗುರುಗಳಿಗೆ ಕುಮಾರಸ್ವಾಮಿಗಳಲ್ಲಿರುವ ಅಪರಿಮಿತ ಸಮಾಜೋದ್ಧಾರದ, ಹಂಬಲವ, ತಿಳಿದು, ಜಗದ್ಗುರುಗಳ ಕಣ್ಣುಗಳು ಹನಿಗೂಡಿದವು. ಗದ್ಗದಿತರಾಗಿ “ನಿಮಗೆ ಸರಿ ಸಮಾನರಾದ ಸಮಾಜ ಚಿಂತಕರು, ಇಂದಿನ ದಿನಮಾನಗಳಲ್ಲಿ ಯಾರೂ ಇಲ್ಲ. ಮುಂದೆ ಈ ತೆರದ ಮಹಾಶಿವಯೋಗಿ ಅವತರಿಸಿ ಬಂದರೆ, ಅದು ನಮ್ಮ ಸಮಾಜದ ಪುಣ್ಯ” ಎಂದು ಉದ್ಗರಿಸಿದರು, ದುಃಖತಪ್ತರಾದರು.

(ಸೌಜನ್ಯ: ಕವಿರತ್ನ ದ್ಯಾಂಪೂರ ಚನ್ನ ಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ” ವ್ಯಾಖ್ಯಾನ ಪೂಜ್ಯ ಅಭಿನವ ಸಿದ್ದಾರೂಢ ಸ್ವಾಮಿಗಳು )

೧೯-೦೨-೧೯೩೦ ರಂದು ಲಿಂಗೈಕ್ಯರಾದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳ ಕ್ರಿಯಾ ಸಮಾಧಿಯ ಕಾರ್ಯಕ್ರಮಕ್ಕೆ ದಯಮಾಡಿಸಿ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಅಂತಿಮ ಗೌರವ ಸಲ್ಲಿಸಿದ್ದು ಚರಿತ್ರಾರ್ಹವಾಗಿದೆ ,

೧೯೩೧ ರಲ್ಲಿ ಹುಬ್ಬಳ್ಳಿ ಲೋಕಮತದ ಸಂಪಾದಕರಾದ ವ್ಹಿ. ಬಿ. ಪುರಾಣಿಕರು ಸಂಪಾದಿಸಿದ ‘ಸ್ಮಾರಕ ಚಂದ್ರಿಕೆ’ಯಲ್ಲಿ ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳ ಲೇಖನದ ಪೂರ್ಣಪಾಠ.ಸಂಕುಚಿತ ಮನೋಭಾವದ ಮಹಾನುಭಾವರಿಗೆ ಸ್ಪಷ್ಠ ಉತ್ತರ  ನೀಡುತ್ತದೆ.

ಶ್ರೀ ಮನ್ನಹಾರಾಜ ನಿರಂಜನ ಜಗದ್ಗುರು ಜಯದೇವ

ಶ್ರೀ ಮುರುಘರಾಜೇಂದ್ರ ಮಹಾಸ್ಟಾಮಿಗಳು,

ಮುರಘಾಮಠ, ಚಿತ್ರದುರ್ಗ

ಸಂದೇಶ ಕೃಪೆ: ಸ್ಮಾರಕ ಚಂದ್ರಿಕೆ ಪ್ರಕಟಣೆ ೧೯೩೧.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರ ಪರಿಚಯವು ನಾವು ಕಾಶಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಉಂಟು. ಇವರು ದೂರದರ್ಶಿಗಳು,ಶಿವಾನುಭವಿಗಳು, ಆಧ್ಯಾತ್ಮಿಕ ವಿಚಾರದಲ್ಲಿ ಸುಜ್ಜರು ಮತ್ತು ಸಮಾಜದ ಹಿತಕ್ಕೋಸ್ಕರ ಅವಿಶ್ರಾಂತ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸುವದರಲ್ಲಿ ಮೊದಲನೆಯವರು ಎಂದು ಶ್ಲಾಘಿಸಿಕೊಳ್ಳಲು ಅರ್ಹರಾಗಿದ್ದರು. ಲೌಕಿಕ ಮತ್ತು ಪಾರಮಾರ್ಥಿಕ ವಿದ್ಯಾಭ್ಯಾಸಗಳನ್ನು ಮಾಡುತ್ತಿದ್ದ ನಮ್ಮ ಜನಾಂಗದವರಿಗೆ ಕೈಲಾದ ಮಟ್ಟಿಗೆ ಮೊದಲಿನಿಂದಲೂ ಸಹಾಯ ಮಾಡುತ್ತಿದ್ದರೆಂಬುದಕ್ಕೆ ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ, ಇನ್ನಿತರರಿಗೂ ಸಹಾಯ ಮಾಡಿದುದೇ ನಿದರ್ಶನವಾಗಿದೆ.

ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು. ಬಿದರಿ ಮತ್ತು ಸವದತ್ತಿ ವಿರಕ್ತಮಠಗಳ ಶ್ರೀ ಕುಮಾರ ಸ್ವಾಮಿಗಳು ವಿರಕ್ತಾಶ್ರಮಿಗಳಲ್ಲಿ ಶ್ರೇಷ್ಠತರ ಯೋಗ್ಯತಾ ಸಂಪನ್ನ ಯತಿಪುಂಗವರಾಗಿದ್ದರು. ಇವರು ಸವದತ್ತಿಯ ಪುರಾಣ ಸಮಾಪ್ತಿ ಮಹೋತ್ಸವಕ್ಕೆ ಅಥಣಿ ಶ್ರೀ ತಪಸ್ವಿ ಮುರಘೇಂದ್ರ ಸ್ವಾಮಿಗಳೇ ಮೊದಲಾದ ವಿರಕ್ತ ಶ್ರೇಷ್ಠರನ್ನು ಮತ್ತು ಶ್ರೀ ಕಿತ್ತೂರು ರೇವಣಸಿದ್ಧಪ್ಪನವರೇ ಮೊದಲಾದ ದೊಡ್ಡ ಮನುಷ್ಯರನ್ನು ಬರಮಾಡಿಕೊಂಡಿದ್ದರು.

ಆ ಕಾಲದಲ್ಲಿ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳೇ ವೀರಶೈವ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ನಮ್ಮ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಏರ್ಪಡಿಸಿ ಸುಸಂಕಲ್ಪದಂತೆ ಮಹಾಸಭೆಯನ್ನು ಮಾಡಬೇಕೆಂದು ನಿರ್ಣಯ ಮಾಡಿಸಿದವರಾದುದರಿಂದ ಇವರೇ ವೀರಶೈವ ಮಹಾಸಭಾ ಸ್ಥಾಪಕರಾಗಿರುತ್ತಾರೆ.

ಇವರು ಮಹಾ ತಪೋನಿಷ್ಠರು, ಅಸಾಧಾರಣ ಕಾರ್ಯನಿರ್ವಾಹಕರು, ಅಸಮರ್ಥರನ್ನು ಸಮರ್ಥರನ್ನಾಗಿ ಮಾಡುವುದರಲ್ಲಿ ಒಳ್ಳೆ ದಕ್ಷರು ಆಗಿದ್ದರು, ಆದುದರಿಂದಲೇ ಮನೋನಿಗ್ರಹದ ಮೂಲಕ ಚಿತ್ತಶುದ್ಧಿಯಾಗುವುದಕ್ಕೆ ಸಾಧನವಾದ ಶಿವಯೋಗ ಮಂದಿರವೆಂಬ ಒಂದು ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು.

ನಮಗೂ ಮತ್ತು ಇವರಿಗೂ ಕೆಲವು ವಿಷಯಗಳಲ್ಲಿ ಮತಭೇದಗಳಿದ್ದರೂ ಉದ್ದೇಶದಲ್ಲಿ ಭೇದವಿರಲಿಲ್ಲ ಇವರು ಈ ಸಮಯದಲ್ಲಿ ಶಿವೈಕ್ಯರಾದುದರಿಂದ ಸಮಾಜದಲ್ಲಿ ಕೆಲವು ದುರಹಂಕಾರಿಗಳು ಉಂಟುಮಾಡಿರುವ ಅಶಾಂತತೆಯನ್ನು ನಿವಾರಣೆ ಮಾಡಲು ಬಹುಪ್ರಯಾಸವಾಗಿದೆ.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳಿಂದ ಸ್ಥಾಪಿತವಾದ ಕಾರ್ಯಗಳು ಅಭಿವೃದ್ಧಿಯನ್ನು ಹೊಂದಿ ಸಮಾಜಕ್ಕೆ ಓತಸಾಧಕಗಳಾಗುವದೇ ಅವರ ನಿಜವಾದ ಸ್ಮಾರಕವು. ಆದುದರಿಂದ… ಅಂತಹ ಸ್ಥಿತಿಯು ಪ್ರಾಪ್ತ ವಾಗಲೆಂದು ಹಾರೈಸೋಣವಾಗಿದೆ.

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶ್ರೀಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ.

ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ವಿುಕ ಯುಗಪಲ್ಲಟಕ್ಕೆ ಪ್ರಮುಖವಾಗಿ ಕಾರಣರಾದವರಲ್ಲಿ, ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶ್ರೀಗಳು ಮತ್ತು ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಎಂದೆಂದೂ ಪ್ರಾತಃಸ್ಮರಣೀಯರು.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ಮಧ್ಯಕರ್ನಾಟಕದ ಸಾಮಾಜಿಕ ಮತ್ತು ಧಾರ್ವಿುಕ ವಿಕಾಸಕ್ಕೆ ಕಾರಣರಾದದ್ದು ಚಾರಿತ್ರಿಕ ಸತ್ಯ.

ಚಿತ್ರದುರ್ಗದ ಪೂಜ್ಯಶ್ರೀ ಜಯದೇವ ಜಗದ್ಗುರುಗಳು ವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವಂತ ದೇವರಾಗಿದ್ದರು

ಶ್ರೀಗಳು ಹೋದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಯಾವುದೆ ಊರಿಗೆ ಹೋದರು ಭಕ್ತರು ನೀಡಿದ ಕಾಣಿಕೆಯಲ್ಲಿ ಅದೆ ಊರಿನಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರದಿರುವುದು ಇಂದಿಗೂ ಕಾಣಬಹುದು. ಭಕ್ತರ ಹಣವನ್ನು ತಮ್ಮ ಮಠಕ್ಕೆ ತರುತ್ತಿರಲಿಲ್ಲ. ಸಮಾಜ ಸೇವೆ ಅವರ ಮುಖ್ಯ ಗುರಿಯಾಗಿತ್ತು.

ಸಮಾಜದಲ್ಲಿರುವ ಅಜ್ಞಾನ, ಅಂಧಕಾರ ಹೋಗಲಾಡಿಸಲು ವಿದ್ಯೆ ದಿವೌಷಧ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೇ ಮೂಲಾಧಾರವೆಂದು ನಂಬಿದ್ದ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ದೂರದರ್ಶಿತ್ವದಿಂದಾಗಿ ಚಿತ್ರದುರ್ಗ, ಬೆಂಗಳೂರು, ತಿಪಟೂರು, ದಾವಣಗೆರೆ, ಧಾರವಾಡ, ನರಗುಂದ, ಕೊಲ್ಲಾಪುರ, ಹಾವೇರಿ, ಅಥಣಿ, ಅರಸೀಕೆರೆ, ನಿಪ್ಪಾಣಿ, ಜಯದೇವ ವಾಡಿ(ಕಾಶಿ) ಹೀಗೆ ಪ್ರಮುಖ ನಗರ,ಪಟ್ಟಣಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅಸಂಖ್ಯ ವಿದ್ಯಾರ್ಥಿಗಳ ಬಾಳಿಗೆ

ಬೆಳಕಾಗಿದೆ.

ಸಮಾಜದ ಅಂತರಂಗದ ಶುದ್ಧಿಗೆ ಶ್ರೀಮಧ್ವೀರಶೈವ ಶಿವಯೋಗಮಂದಿರ ,ಬಹಿರಂಗದ ಅಭಿವೃದ್ಧಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಗಳನ್ನು ಸ್ಥಾಪಿಸಿ ಸತ್ತು ಹೋದ ಸಮಾಜಕ್ಕೆ ಜೀವ ತುಂಬಿದ ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಸಮಾಜ ಸಂಜೀವಿನಿ ಮತ್ತು ಕಾರಣಿಕ ಯುಗ ಪುರುಷರು.

ಪೂಜ್ಯರೀರ್ವರ ಸ್ಮರಣೆ ನಮ್ಮ ಬದುಕಿಗೆ ಬೆಳಕಾಗಲಿ . *************

ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾ ಸಭಾ ದೆಹಲಿ ರಾಜ್ಯ ಘಟಕ ನವದೆಹಲಿ

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಮತ್ತು ಕರ್ನಾಟಕ -೯೯೧೦೧೫೯೨೪೫

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗ

(ಇಷ್ಟಲಿಂಗದ ಸಂಬಂಧ)

ಕಂದ ಕೇಳೀ ಲಿಂಗ | ಮುಂದೆ ಕರ್ಮೇಂದ್ರಿಯದಿ

ನಿಂದ ನಿಲುಕಡೆಯ-ನೊಂದೊಂದ ಪೇಳ್ವೆ ನಿನ-

ಗೆಂದ ಶ್ರೀಗುರುವೆ ಕೃಪೆಯಾಗು   || ೧೫೦  ||

 

ಈ ದಾರ್ಶನಿಕ ಕವಿಯು ಶಿವಾದ್ವೈತ ಸಿದ್ಧಾಂತದ ಮೂಲ ಚಿನ್ಹವೆನಿಸಿದ ಲಿಂಗವನ್ನು ಬಹಿರಂಗ ಹಾಗೂ ಅಂತರಂಗದಲ್ಲಿ ಧರಿಸುವ ಪರಿಯನ್ನು ಬಿತ್ತರಿಸಿದನು. ಒಳಹೊರಗೂ ಲಿಂಗಧಾರಣೆಯ ಚಾರಿತ್ರವನ್ನು ನಿರೂಪಿಸಿದನು. ಲಿಂಗವನ್ನು ಕೇವಲ ಧರಿಸಿಕೊಂಡರಾಗದು. ಅದನ್ನು ನೈಜಾಚರಣೆಯಲ್ಲಿ ಅಳವಡಿಸಿಕೊಳ್ಳಬೇಕಾಗುವದು. ಕಾರಣ ಇನ್ನು ಮುಂದೆ ಇಷ್ಟಲಿಂಗ, ಪ್ರಾಣಲಿಂಗ ಭಾವಲಿಂಗಗಳನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತಿಪಾದಿಸುತ್ತಾನೆ.

ಯಾವ ಶಿಷ್ಯನಲ್ಲಿ ಜಿಜ್ಞಾಸೆ, ಜ್ಞಾನಪಿಪಾಸೆ ಹಾಗೂ ಜ್ಞಾನಗ್ರಹಣ ಶಕ್ತಿಗಳು ಅಧಿಕವಾಗಿರುತ್ತವೆಯೋ, ಸದ್ಭಕ್ತಿ ಸದ್ಭಾವನೆಗಳೇ ಜೀವನವಾಗಿರುವದೋ ಅಂಥ ಶಿಷ್ಯನಿಗೆ ಸದ್ಗುರುವು ಪುನಃ ಪುನಃ ಹೊಸವಿಷಯಗಳನ್ನು ತಿಳಿಸಲು ಆತುರನಾಗುವನು. ಈ ತ್ರಿಪದಿಯಲ್ಲಿ ಗುರು ಶಿಷ್ಯರ ಮಧುರ ಬಾಂಧವ್ಯ ವ್ಯಕ್ತವಾಗುತ್ತದೆ. ಇಲ್ಲಿ ಪೂಜ್ಯ ಲಿಂಗನಾಯಕನಹಳ್ಳಿ ಪರಮ ನಿರಂಜನ ಪುಂಗವರ ಜ್ಞಾನದ ಪ್ರಖರತೆ ಹಾಗೂ ಶಿಷ್ಯ ಬಸವಲಿಂಗ ಶರಣರ ಜ್ಞಾನಪಿಪಾಸೆಯ ಮಟ್ಟ ವ್ಯಕ್ತವಾಗದೇ ಇರದು.

ಕಂದ ! ಕೇಳು, ನಿನ್ನ ಕೈಯಲ್ಲಿ ಕಾಣಿಸಿಕೊಂಡ ಈ ಇಷ್ಟಲಿಂಗವು ಕ್ರಿಯಾ ಲಿಂಗವಾಗಿದೆ. ಯಾಕೆಂದರೆ ಸತ್ಕ್ರಿಯೆಗಳಿಂದಲೇ ಈ ಲಿಂಗದ ಸಾಕ್ಷಾತ್ಕಾರವಾಗುವದು. ಇದನ್ನು ನಿನ್ನ ಕರ್ಮೇಂದ್ರಿಯಗಳಾದ ಗುದ, ಗುಹ್ಯ ಪಾದ ಪಾಣಿ ಮತ್ತು ವಾಣಿಗಳೆಂಬ ಐದಿಂದ್ರಿಯಗಳಲ್ಲಿ ಪ್ರಕಟಗೊಳಿಸಿಕೊಳ್ಳಬೇಕು. ಅಂದರೆ ಈ ಲಿಂಗವು ಆಯಾ ಇಂದ್ರಿಯಗಳಲ್ಲಿ ನಿಂದ ನಿಲುವನ್ನು ಒಂದೊಂದನ್ನಾಗಿ ಮುಂದೆ ನಿರೂಪಿಸುತ್ತೇನೆ. ಚನ್ನಾಗಿ ಲಕ್ಷವಿಟ್ಟು ಕೇಳು. ಎಂದು ಹೇಳುವ ಗುರು ಶ್ರೀಗುರುವಲ್ಲದೆ ! ಪರಮಗುರುವಲ್ಲವೆ |

ಮೊದಲೆ ದುರ್ಮದ () ಗಳೆವ | ಗುದಿಗಾನಂದವ ತಳೆವ

ಗುದದೊಳಾಚಾರ- ವಿದಿತ ಲಿಂಗವನು ಪೇ-

ಳ್ದಧಿಕಾರಿ ಗುರುವೆ ಕೃಪೆಯಾಗು    ||೧೫೧||

ಕರ್ಮೇಂದ್ರಿಯಗಳಲ್ಲಿ ಮೊದಲನೆಯದು ಗುದ. ಗುದೇಂದ್ರಿಯವು ಪೃಥ್ವಿ ತತ್ವಪ್ರಧಾನವಾದುದು. ಶರೀರವೂ ಪೃಥ್ವಿತತ್ವಾಧಿಕ್ಯತೆಯಿಂದ ಕೂಡಿದೆ. ಪೃಥ್ವಿಯು ಗಂಧಗುಣವುಳ್ಳುದು. ೫೬ನೆಯ ತ್ರಿಪದಿಯಲ್ಲಿ ಭೂಮಿತತ್ವದ ವಿಚಾರವನ್ನು ಅವಲೋಕಿಸಬಹುದು.  ಗುದೇಂದ್ರಿಯ ಶುದ್ಧತೆಯೇ ಶರೀರ ವೃದ್ಧಿಗೆ ಕಾರಣ, ಅದು ಚೆನ್ನಾಗಿ ತನ್ನ ಕಾರ್ಯವನ್ನು ನಿರ್ವಹಿಸದಿದ್ದರೆ ಅಲ್ಲಿನ ಅಧಿದೈವನಾದ ಯಮನ ಸದನವನ್ನು ಸೇರಬೇಕಾಗುವದು. ಕಾರಣ ಗುದೇಂದ್ರಿಯವು ದರ್ಮಲವನ್ನು ಪ್ರತಿನಿತ್ಯ ದೂರಗೊಳಿಸುವದು, ಮಲವಿಸರ್ಜನೆಯಾದರೆ ದೈಹಿಕ ಆನಂದ ಸಿಕ್ಕುವದು. ಶರೀರವು ಉತ್ಸಾಹಗೊಳ್ಳುವರು. ‘ದುರ್ಮಲ ಶಬ್ದದ ಹೊರತಾಗಿ ‘ದುರ್ಮದ ಪದವೂ ಕಾಲಾಂತರದಲ್ಲಿ ಸಿಕ್ಕುತ್ತದೆ. ದುರ್ಮದ ಪದ ಪ್ರಯೋಗದಿಂದಲೂ ಅರ್ಥ ವಿಸ್ತಾರಗೊಳ್ಳುತ್ತದೆ. ಮಲ ಶಬ್ದದಿಂದ ಭೌತಿಕ ಮಲ ಹಾಗೂ ಆಧ್ಯಾತ್ಮಿಕ ಮಲಗಳೆಂದೂ ಗ್ರಹಿಸಬಹುದು. ಈ ಮಲಗಳನ್ನು ಶರೀರದಿಂದ ದೂರಗೊಳಿಸುವಂತೆ ಮದವನ್ನು ದೂರೀಕರಿಸಬೇಕು. ಮದವು ಜೀವನಿಗೆ ಅನಿಮಿತ್ತ ವೈರಿಯೆನಿಸಿದೆ. ಪ್ರತಿಯೊಬ್ಬ ಮಾನವನು ತನ್ನಲ್ಲಿರುವ ದುರಹಂಕಾರವನ್ನು ದೂರಗೊಳಿಸಿದಲ್ಲದೆ ಆನಂದ ಸಿಕ್ಕಲಾರದು. ಮದ ತಮಸಿಗುಣ. ಈ ಮದದ ವಿಚಾರ ೬೩ನೆಯ ತ್ರಿಪದಿಯಲ್ಲಿ ಅವಲೋಕಿಸಬಹುದು.

ಮದೋನ್ಮತ್ತ ತಾಮಸಿಗೆ ಆನಂದ ಎಂದಿಗೂ ಸಿಕ್ಕದು. ಕಾರಣ ದುರ್ಮಲವನ್ನು ಹಾಗೂ ದುರ್ಮದವನ್ನು ದೂರೀಕರಿಸಿದರೇನೆ ಅಲ್ಲಿ ಆಚಾರಲಿಂಗದ ಪ್ರತಿಷ್ಠೆಯಾಗುವದು. ಈ ಲಿಂಗವು ಅನ್ವರ್ಥಕನಾಮವನ್ನು ಹೊಂದಿದೆ. ಸದಾಚಾರಗಳಿಂದ ಆಚಾರಲಿಂಗವು ಪ್ರಕಟಗೊಳ್ಳುವದು.  ಆಚಾರಲಿಂಗದ ಅರಿವನ್ನು ಮಾಡಿಕೊಡುವ ಗುರು ಅಧಿಕಾರಿಯಾಗಬೇಕಂತೆ | ಅಂದರೆ ತಾನು ಸ್ವತಃ ಸದಾಚರಣೆಯಿಂದ ಏಕರೂಪವಾಗಬೇಕು.  ತನ್ನ ನಡೆ ನುಡಿಗಳು ಒಂದಾಗಿರಬೇಕು. ಇಂಥ ಗುರುನಾಥನು ತೋರಿದ ಮಾರ್ಗವು ಮುಕ್ತಿದಾಯಕವಾಗಬಲ್ಲುದು.

ಜ.ಚ.ನಿ

 

ಅರಿಯದರಂ ಸತ್ಪಥದೊಳ್

ನಿರಿಸಲ್ ತುತಿಪಳಿಗಳೊಳವು ಬುಧರ್ಗವು ಬೇಡಂ |

ಕಿರುವೆಂಚೆಗೆ ಕಟ್ಟುಂಟಾ-

ತೆರದಿಂ ವಾರಿಧಿಗೆ ಕಟ್ಟನಾರೆಸಗುವರೋ”

ನೀತಿ ಮಂಜರಿ

 

ಸಮಾಜದ ಭಕ್ತರಲ್ಲಿ ಒಳಪಂಗಡಗಳು, ವಿರಕ್ತರಲ್ಲಿ ಸಮಯ ಭೇದಗಳು ಸಾಲದೆ ಸಮಾಜ ಪುರುಷನಿಗೆ ಎರಡು ಕಣ್ಣುಗಳಂತಿರುವ ಗುರು ವಿರಕ್ತರು ನಾವು ಹೆಚ್ಚು ತಾವು ಹೆಚ್ಚೆಂದು ವಾದಿಸಿ ವಿದ್ವೇಷಕ್ಕೊಳಗಾದುದು ಸರ್ವರಿಗು ತಿಳಿದ ಸಂಗತಿ. ಈ ವೈರ ವಿಷವು ಸಮಾಜವನ್ನೇ ನಿರ್ವೀರವಾಗಿ ಮಾಡಿತ್ತು. ಈ ದಳ್ಳುರಿಯಿಂದ ದಗ್ಧವಾದ ಸಮಾಜದೇಳ್ಗೆ ಆಗಬೇಕಾದಷ್ಟಾಗದೆ ಮೊಟಗಾಗುತ್ತ ನಡೆದಿತ್ತು. ಜನಾಂಗದಲ್ಲಿ ಶಾಂತಿಯಿರಲಿಲ್ಲ. ಸ್ನೇಹವಿರಲಿಲ್ಲ. ಪರಸ್ಪರ ದೂಷಣೆ-ದೋಷಾರೋಪಣೆಯ ಸುರಿಮಳೆ ಸುರಿಯುತ್ತಿತ್ತು. ಮನೆ ಮನೆಯಲ್ಲಿ ಮತ್ಸರ ಪಕ್ಷಪಂಗಡ ಭಾಗ ವಿಭಾಗಗಳೇರ್ಪಟ್ಟವು. ತಂದೆ ಮಕ್ಕಳಿಗೆ ವ್ಯಾಜ್ಯ, ಅಣ್ಣ ತಮ್ಮಂದಿರಿಗೆ ವ್ಯಾಜ್ಯ ಬಂಧುಬಳಗದವರಿಗೆ ವ್ಯಾಜ್ಯ. ಕೊಡಕೊಳ್ಳುವುದಕ್ಕೆ ವ್ಯಾಜ್ಯ. ಹೀಗಾಗಿ ಪರಸಮಾಜಗಳಲ್ಲಿ ಪರಿಹಾಸಕ್ಕಿಟ್ಟಿತ್ತು. ಪರಸ್ಪರ ಸ್ನೇಹ ವಾತ್ಸಲ್ಯಗಳಿಲ್ಲದಾಗಿತ್ತು. ಇದನ್ನು ಕಂಡು ಕುಮಾರಯೋಗಿಗಳು ಕಡುನೊಂದರು. ಹೇಗಾದರು ಮಾಡಿ ಎಂತಾದರು ಮಾಡಿ ಗುರು-ವಿರಕ್ತರಲ್ಲಿ ಪರಸ್ಪರ ಸಹಕಾರ ಮೂಡಿಬರುವಂತೆ ಮಾಡಬೇಕೆಂದು ಮನಸ್ಸು ಮಾಡಿದ್ದಲ್ಲದೆ ಮಿತಿಮೀರಿ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಪ್ರವಾಹದ ಸೆಳೆತ ಸಣ್ಣದಾಗಿರಲಿಲ್ಲ. ಆದರು ಸ್ವಾಮಿಗಳವರು ಹಿಂಜರಿಯಲಿಲ್ಲ. ಕೆಚ್ಚೆದೆಯಿಂದ ಮುಂದುವರಿದರು. ಬೇಕಾದಷ್ಟು ಶ್ರಮಿಸಿದರು. ವೆಚ್ಚಮಾಡಿದರು. ಕೊನೆಗು ಅದು ಸಹಕಾರಕ್ಕೆ ಬಾರದೆ ಹೋಯಿತು. ಅಲ್ಲದೆ ಸ್ವಾಮಿಗಳವರ ಮೇಲೆ ಎರಡು ಕಡೆಗಳಿಂದಲು ಆಕ್ಷೇಪಣೆಯ ಬಿರುಸು ಬಾಣಗಳು ಬಂದು ಬೀಳತೊಡಗಿದವು. ಸತ್ಯ ಮಾರ್ಗಾನುಯಾಯಿಗಳಾದ ಸ್ವಾಮಿಗಳವರು ಆ ಬಾಣಗಳಿಗೆ ಭಯಬೀಳಲಿಲ್ಲ. ಅವರು ಬರೀ ಕೀರ್ತಿಗಾಗಿ ಮಾಡತಕ್ಕವರಲ್ಲ. ಮನಮೆಚ್ಚಿ ಸಮಾಜ ಶಾಂತಿಗಾಗಿ ಮಾಡಹೊರಟಿದ್ದರು. ಅದರಿಂದಾಗಿ ತಮ್ಮ ಸಮತಾಭಾವವನ್ನು ತಾವು ಅದೆಂದಿಗೂ  ಬಿಡಲಿಲ್ಲ.

ಸಮಾಜ ವೃಕ್ಷಕ್ಕೆ ಶ್ರೀಗುರುಗಳು ತಾಯ್ವೇರು. ಅವರನ್ನು ಹೀಗಳೆಯುವುದು ತರವಲ್ಲ. ಜಗದ್ಗುರು ಪಂಚಾಚಾರ್ಯರಂತಹ ಪೂಜ್ಯ ಪುರುಷರಿಂದ ಸಮಾಜ ಪರಿಪಾಲಿತವಾಗಿದೆ-ಆಗಬೇಕು ಎಂದು ಭಾವಿಸಿದ್ದರು.   ಸ್ವತಃ ತಾವೇ ಜಗದ್ಗುರು ಪಂಚಾಚಾರ್ಯರ ಮೇಲೆ ಪ್ರಾರ್ಥನೆಯ ಪದ್ಯಗಳನ್ನು ರಚಿಸಿದರು. ಹಾಗೆಯೆ ಬೋಧಿಸುತ್ತಿದ್ದರು. ಶಿವಯೋಗ ಮಂದಿರದ ವಟುಗಳಿಗು ಸಾಧಕರಿಗು ಕಲಿಸಿದರು. ನಿತ್ಯ ಭಜನೆಯಲ್ಲಿ ಹೇಳಿಸುತ್ತಿದ್ದರು.

ಗುರುಲಿಂಗ ಜಂಗಮರಲ್ಲಿ ಯಾವ ಹೆಚ್ಚು ಕಡಿಮೆಯಿಲ್ಲ. ಮೂರು ಒಂದೇ. ವ್ಯಕ್ತಿತ್ವ ಬೇರೆಯಾದರು ತತ್ವ ಒಂದೇ. ಜಂಗಮನಾದರು ಲಿಂಗ ಪೂಜಿಸುತ್ತಾನೆ. ಗುರುಧ್ಯಾನ ಮಾಡುತ್ತಾನೆ. ಹೊರಗೆ ಮಾತ್ರ ಗುರುವನ್ನು ಏಕೆ ಹೀಗಳೆಯಬೇಕು? ಲಿಂಗ ಆಚಾರಲಿಂಗ, ಗುರುಜಂಗಮರಿಬ್ಬರು ಚರಲಿಂಗಗಳು. ಪರಸ್ಪರ ಸಮಾನರು. ಗುರುವಾದರು ಲಿಂಗಪೂಜಿಸುತ್ತಾನೆ. ಜಂಗಮವನ್ನೇಕೆ ಜರಿಯಬೇಕು? ಗುರು ಜಂಗಮರಲ್ಲಿ ಕ್ರಿಯಾಚರಣೆ ದೃಷ್ಟಿಯಿಂದ ತರತಮ ಭಾವವಿದ್ದರೂ ತತ್ವತಃ ಯಾವ ಭೇದವಿಲ್ಲ. ಪರಸ್ಪರ ಪೂರಕಗಳಾಗಿವೆ. ಗುರುವಿರಕ್ತರಲ್ಲಿ ಪರಸ್ಪರ ಈ ಸಮಭಾವ ಸಮರತಿ ಸಮಕ್ರಿಯೆ ಬಾರದ ವಿನಹ ಸಮಾಜದ ಏಳ್ಗೆಯಿಲ್ಲ. ಸಾಮಾಜಿಕ ಶಾಂತಿ ಅದೊಂದು ಭ್ರಾಂತಿ; ಎಂಬುದು ಸ್ವಾಮಿಗಳವರ ದೃಢನಿಶ್ಚಯ; ದೃಢಪ್ರತ್ಯಯ

ಸ್ವಾಮಿಗಳವರ ಈ ಸಹಕಾರ ಈ ಸಮತೆ ಕೆಲವರಿಗೆ ಸರಿಬೀಳಲಿಲ್ಲ. ಶ್ರೀಗಳವರೆ ಕಾಶೀನಾಥ ಶಾಸ್ತ್ರಿಗಳವರನ್ನು ಎತ್ತಿಕಟ್ಟಿರುವರೆಂದು ಇಲ್ಲದ ಸಲ್ಲದ ಆರೋಪಣೆ ಮಾಡುತ್ತಿದ್ದರು. ಇದರಲ್ಲಿ ಎಷ್ಟು ಮಾತ್ರಕ್ಕು ಸತ್ಯಾಂಶವಿಲ್ಲ. ಸಮಾಜ ಅನೈಕ್ಯತೆಗೆ ಕಾರಣರಾದವರನ್ನು ಕಂಡರೆ ಸ್ವಾಮಿಗಳವರು ಎಷ್ಟೂ ಸಹಿಸುತ್ತಿರಲಿಲ್ಲ. ಅವರ ಪ್ರಚಾರವನ್ನು ಪ್ರತಿಭಟಿಸುತ್ತಿದ್ದರು. ಅವರಿಂದಾದ ಅನೈಕ್ಯತೆಗಾಗಿ ತುಂಬಾ ವ್ಯಥೆಗೊಳ್ಳುತ್ತಿದ್ದರು. ಐಕ್ಯತೆಗಾಗಿ ಕಂಡ ಕಷ್ಟಗಳಿಗೆ ಗುರಿಯಾಗುತ್ತಿದ್ದರು. ಕಡೆಯಿಲ್ಲದ ನಷ್ಟಕ್ಕೆ ಎರವಲಾಗುತ್ತಿದ್ದರು.

ಸಾಲದ್ದಕ್ಕೆ ವಿರಕ್ತ ವಿರಕ್ತರಲ್ಲಿಯೆ ಸಹಕಾರವಿರಲಿಲ್ಲ; ಸೌಹಾರ್ದತೆ ಇರಲಿಲ್ಲ. ನಾಲ್ವರು ನಾಲ್ಕು ದಿಕ್ಕಾಗಿದ್ದರು. ಇವರುಗಳ ಐಕ್ಯತೆಯನ್ನಾದರು ಮಾಡಬೇಕೆಂದು ಸೀಮೆಯಿಲ್ಲದ ಸಾಹಸಪಟ್ಟರು. ಒಮ್ಮೆ ವಿರಕ್ತ ಸಮ್ಮೇಲನವನ್ನು ಶಿವಯೋಗ ಮಂದಿರದಲ್ಲಿಯೆ ಕರೆದರು. ಆಗ ಅನೇಕರು ಆಗಮಿಸಿದರು. ಅವರಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರಘಾಮಠದ ಶ್ರೀಗಳು, ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀಗಳು ಪ್ರಮುಖರು. ಇವರಿಬ್ಬರನ್ನು ಒಂದೆಡೆಗೆ ಸೇರಿಸಲು ಹಾನಗಲ್ಲ ಶ್ರೀಗಳವರು ಹಗಲಿರುಳೆಲ್ಲ ಶ್ರಮಿಸಿದರು. ಭಗೀರಥ ಪ್ರಯತ್ನದಿಂದ ಕೊನೆಗೆ ಒಂದೆಡೆಯಲ್ಲಿ ಕೂಡಿಸಿಯೇ ಬಿಟ್ಟರು. ಆದರೆ ಅದು ಕೊನೆಯವರೆಗು ಬಾಳಲಿಲ್ಲ. ಹಿಸುಕಿ ಹಣ್ಣು ಮಾಡಿದಲ್ಲಿ ಕಾಯಿ ಹಣ್ಣಾಗುವುದೆ ? ಯಾವುದಕ್ಕೂ ಮನಸ್ಸು ಬೇಕು. ಆತ್ಮೀಯತೆ ಬೇಕು. ಅಂತು ಬೀಜಾವಾಪ ಮಾಡಿದರು. ಬಿತ್ತಿದ ಬೀಜ ಬಿತ್ತಿದ ದಿನವೆ ಮೊಳಕೆ ಹಾಕದು. ಅದಕ್ಕು ಒಂದು ಅವಕಾಶ ಬೇಕು. ತಕ್ಕ ವಾತಾವರಣ ಬೇಕು. ಅಂದು ಸ್ವಾಮಿಗಳವರು ಬಿತ್ತಿದ ಬೀಜ ಇದೀಗ ನೆನೆದು ಮೊಳಕೆ ಹಾಕಿದೆ. ಇತ್ತೀಚೆಗೆ ಬೇರೆಬೇರೆ ಸಮಯದವರು ಸೇರತೊಡಗಿದ್ದಾರೆ. ಕೂಡಿ ಶಿವಪೂಜೆ ಮಾಡತೊಡಗಿದ್ದಾರೆ. ಇನ್ನೂ ಸಾಲದು. ಸುಳಿದೆಗೆದು ಬೆಳೆಯಬೇಕು. ಸುಮ ಅರಳಿ ಸುವಾಸಿಸಬೇಕು.

ಇದೀಗ ಗುರು-ವಿರಕ್ತರ ದ್ವೇಷ ದಳ್ಳುರಿಯು ಹೊರಗೆ ಉರಿಯದಿದ್ದರು ಒಳಗೆ ಹೊಗೆಯಾಡುತ್ತಿದೆ. ಬಸವಣ್ಣನವರ ಕಿರಿಯ ಭಾವದ ಶರಣುಮಾರ್ಗದ ತಣ್ಣೀರು ಒಳಗೆ ಬೀಳದ ಹೊರತು ಬಳಕೆಗೆ ಬಾರದ ಹೊರತು ಅದು ನಂದುವಂತಿಲ್ಲ. ನ೦ದಿಸುವಂತಿಲ್ಲ.

ಹಿರಿಯರಿಗಿಂತಲು ಕಿರಿಯರಲ್ಲಿ ನಾವೇ ಹೆಚ್ಚಿನವರೆಂಬ ಹೆಮ್ಮೆ ಹೆಚ್ಚಿಹೋಗಿದೆ. ಅದರಲ್ಲಿಯು ಸ್ವಾಮಿಗಳಂತಹ ಸಮತಾಭಾವಿಗಳ ಶಿಷ್ಯ ಸಮುದಾಯದಲ್ಲಿ ಆ ಭಾವ ಹೆಮ್ಮೆ ಹೆಚ್ಚುತ್ತಿರುವುದು ವಿಷಾದಾಸ್ಪದವಾದುದು, ವಿಚಾರಾಸ್ಪದವಾದುದು. ಭಕ್ತರ ಒಳಪಂಗಡಗಳ ವಿಷಯದಲ್ಲಿಯು ಶ್ರೀಗಳವರಿಗೆ ತುಂಬಾ ಅಸಮಾಧಾನವಿತ್ತು. ಅವನ್ನೆಲ್ಲ ಅಳಿಯಲು ಅವಿಶ್ರಾಂತ ಶ್ರಮಿಸಿದರು. ಸಾಮ್ಯವಾದವು ಸಾಗಿಬರುವ ಈ ಕಾಲದಲ್ಲಿಯಾದರು ವಿವೇಚನೆಯಿಂದ ಆ ತರತಮ ಭಾವವನ್ನು ಸಂಕುಚಿತ ಸ್ವಭಾವವನ್ನು ತೆಗೆದುಹಾಕುವದಾದರೆ ಸಮಾಜಕ್ಕೆ ಲೇಸಾದೀತು. ಶ್ರೀಗಳವರ ಶ್ರಮ ಸಾರ್ಥಕವಾದೀತು. ಅವರ ದಿವ್ಯ ಆತ್ಮಕ್ಕೆ ಆನಂದವೆನಿಸಿತು.

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಯೇಷಾಂ ನ ವಿದ್ಯಾ ನ ತಮೋ ನ ದಾನಂ।

ನ ಜ್ಞಾನಂ ಚ ಶೀಲಂ ನ ಗುಣೋ ನ ಧರ್ಮಃ||

ತೇ ಮೃತ್ಯುಲೋಕೇ ಭುವಿಭಾರಭೂತಾ।

ಮನುಷ್ಯರೂಪೇಣ ಮೃಗಾಶ್ಚರಂತಿ  ||

ವಿದ್ಯಾವಿನಯ ಸಂಪನ್ನನಾಗಿ ತಪೋನಿಷ್ಠನಾಗಿ, ದಾನಶೀಲನಾಗಿ, ಜ್ಞಾನಿಯಾಗಿ, ಸಚ್ಚಾರಿತ್ರ್ಯವುಳ್ಳವನಾಗಿ, ಧರ್ಮವಂತನಾಗಿ, ಗುಣವಂತನಾಗಿ ಬದುಕುವುದೇ ಮನುಷ್ಯನ ನಿಜವಾದ ಬದುಕು. ಇದಕ್ಕೆ ವ್ಯತಿರಿಕ್ತವಾಗಿ ಬದುಕುವವರು ಮನುಷ್ಯರಲ್ಲ. ಅವರು

ಭೂಮಿಗೆ ಭಾರವಾದ ಮನುಷ್ಯರೂಪದ ಪಶುಗಳು ಎಂದು ಸುಭಾಷಿತವೊಂದು ಹೇಳುತ್ತದೆ. ಮೂಲತಃ ಮನುಷ್ಯ ಅನೇಕ ಗುಣಗಳ ಸಂಗಮವಾಗಿದ್ದಾನೆ. ಅವನಲ್ಲಿರುವ ಗುಣಗಳ ವಿಶ್ಲೇಷಣೆಯಿಂದ ಇವನು ಒಳ್ಳೆಯವ, ಇವನು ಕೆಟ್ಟವ ಎಂದು ನಿರ್ಧರಿಸುತ್ತೇವೆ. ಸದ್ಗುಣಗಳನ್ನು ಹೊಂದಿದವನನ್ನು ದೇವಮಾನವ, ಮಹಾತ್ಮ ಎಂದೂ, ದುರ್ಗುಣಗಳುಳ್ಳವನನ್ನು ದುಷ್ಟ, ರಾಕ್ಷಸ ಎಂದೂ ಕರೆಯುತ್ತೇವೆ. ಆದ್ದರಿಂದ ಒಳ್ಳೆಯ ವ್ಯಕ್ತಿತ್ವವನ್ನು ಬಯಸುವವರು ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದುದು ಅತ್ಯವಶ್ಯ.

ಸದ್ಗುಣ ಸಂಪನ್ನರಾದವರು ಲೌಕಿಕ ಧನಸಂಪತ್ತಿಗಿಂತಲೂ ಸದ್ಗುಣಗಳನ್ನೇ ತಮ್ಮ ನಿಜವಾದ ಸಂಪತ್ತು ಎಂದು ಭಾವಿಸುತ್ತಾರೆ. ಅಂತಃಕರಣವನ್ನು ಪರಿಶುದ್ಧಗೊಳಿಸಿಕೊಂಡ ಅವರು ಸದಾ ಸತ್ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಕಾಯಾ ವಾಚಾ ಮನಸಾ ಯಾರಿಗೂ ಹಿಂಸೆಯನ್ನು ಮಾಡದಿರುವುದು, ಪ್ರಿಯವಾದ ಸತ್ಯವನ್ನು ಮಾತನಾಡುವುದು, ಧೈರ್ಯಶಾಲಿಗಳಾಗಿರುವುದು, ಕ್ಷಮಾಶೀಲರಾಗಿರುವುದು ಅವರ ಸಹಜ ಸ್ವಭಾವವಾಗಿರುತ್ತದೆ. ಅವರೆಂದೂ ಅನ್ಯರನ್ನು ನಿಂದಿಸುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ. ಸದಾ ಭಗವಂತನ ನಾಮಸ್ಮರಣೆಯಲ್ಲಿ ಕಾಲ ಕಳೆಯುವ ಅವರು, ತಮ್ಮ ಮೃದು ಮಧುರ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಸರ್ವೇಂದ್ರಿಯಗಳನ್ನು ವಿಷಯಗಳಿಂದ ವಿಮುಖಗೊಳಿಸಿ, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಮೆಟ್ಟಿ ದೈವೀಪುರುಷರಾಗಿ ಕಂಗೊಳಿಸುತ್ತಾರೆ. ಇಂಥ ಸದ್ಗುಣ ಸಂಪನ್ನ ದೈವೀಪುರುಷರು ವಿಶ್ವವನ್ನೇ ಮನೆಯಾಗಿಸಿಕೊಂಡ ವಿಶ್ವಕುಟುಂಬಿಗಳು. ಅಂತೆಯೇ “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎಂಬ ಮಾತು ಅತ್ಯಂತ ಪ್ರಚಲಿತವಾಗಿರುತ್ತದೆ.

ದುರ್ಗುಣಿಗಳ ಜೀವನಶೈಲಿ ಸದ್ಗುಣಿಗಳ ಜೀವನಶೈಲಿಗೆ ತೀರ ಭಿನ್ನವಾದುದು. ಕಾಮಕ್ರೋಧಾದಿಗಳಿಗೆ ದಾಸರಾಗಿ ವಿಷಯಭೋಗಗಳಲ್ಲಿ ಕಾಲಕಳೆಯುವ ದುರ್ಗುಣಿಗಳು ಲೋಕಕಂಟಕರಾಗಿ ಜೀವನ ನಡೆಸುತ್ತಾರೆ. ಸದಾ ಅಹಂಕಾರ ಮಮಕಾರಗಳಿಂದ ಬೀಗುವ ಅಜ್ಞಾನಿಗಳಿವರು. ಅನ್ಯಾಯ, ಅನೀತಿ, ಅನಾಚಾರಗಳಲ್ಲಿ ನಿರತರಾದ ಇವರು ದ್ವೇಷಾಸೂಯೆಗಳಲ್ಲಿ, ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಇಂಥ ವ್ಯಕ್ತಿಗಳನ್ನು ಕುರಿತು

“ಅನೇಕ ಚಿತ್ತ ವಿಭ್ರಾಂತಾ ಮೋಹಜಾಲ ಸಮಾವೃತಾಃ |

ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಶುಚೌ॥

ಅಂದರೆ, ಅಜ್ಞಾನದಿಂದ ಭ್ರಮಿತ ಚಿತ್ತ(ಹುಚ್ಚ)ರಾದ ದುರ್ಗುಣಿಗಳು ಮೋಹಜಾಲದಲ್ಲಿ ಸಿಕ್ಕು ವಿಷಯಲಂಪಟರಾಗಿ ಘೋರ ನರಕಕ್ಕೆ ಭಾಜನರಾಗುತ್ತಾರೆ. ಎಂದು ಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಹಪರಗಳಲ್ಲಿ ಸುಖಾಪೇಕ್ಷಿಗಳಾದ ಮನುಷ್ಯರು ಶ್ವೇಚ್ಛಾಚಾರಿಗಳಾಗದೆ ತಮ್ಮಲ್ಲಿರುವ ದುರಿತ ದುರ್ಗುಣಗಳನ್ನು ಬಿಟ್ಟು ಸದ್ಗುಣ ಸಂಪನ್ನರಾಗಬೇಕು. ತ್ಯಾಗಜೀವಿಗಳಾದ ಸದ್ಗುಣಿಗಳೇ ಪರಮಶಾಂತಿಯನ್ನು ಪಡೆಯುವರು. ದೇವಮಾನವರೆಂಬ ಖ್ಯಾತಿಗೆ ಅರ್ಹರಾಗುವರು.

ಫ. ಗು. ಹಳಕಟ್ಟಿ, ವಿಜಾಪೂರ

 ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

 

ಷಟಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯ ಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಪಟಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ. ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದುಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ  ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತಿಗಳು ತಮ್ಮ ಸಿದ್ದಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಣ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳಿ ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು, ಓಜಸ್ಸುಂಟು. ವಚನಗ್ರಂಥಗಳಲ್ಲಿ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ಮಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ನಡಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕ್ತೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿಂದಲೆ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ, ನುಡಿದಂತೆ ನಡೆಯುವುದಿಲ್ಲ. ಆದ್ದರಿಂದ ಇವರ ಮಾತಿನಲ್ಲಿ ಬಲವಿರುವದಿಲ್ಲ.  ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯ ಉತ್ಪನ್ನವಾಗಿರುತ್ತದೆ.

ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಚೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜಂಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ಧಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮಯವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಅತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳ ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧೈಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಕೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಬಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ದಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ  ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬಾಯಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

 ಹರ್ಡೆಕರ ಮಂಜಪ್ಪನವರು

 

ಈ ಪ್ರಪಂಚದಲ್ಲಿ ಮನುಷ್ಯನು ಸುಖ ಶಾಂತಿಗಳಿಂದ ಜೀವಿಸಬೇಕೆಂದು ಅನೇಕ ಮಹಾತ್ಮರು ಪ್ರತಿಯೊಂದು ಕಾಲದಲ್ಲಿಯೂ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆ ಎಲ್ಲ ಪ್ರಯತ್ನಗಳೂ ಮನುಷ್ಯ ಜಾತಿಯ ಸುಖಸಮಾಧಾನಗಳನ್ನು ಹೆಚ್ಚಿಸಲು ಕಾರಣವಾಗಿಯೂ ಪರಿಣಮಿಸಿದವು. ಆದರೆ ಆ ಸುಖಶಾಂತಿಗಳು ಮಾತ್ರ ಸ್ಥಿರಗೊಳ್ಳಲಿಲ್ಲ ಮತ್ತು ಸ್ಥಿರಗೊಳ್ಳುವುದೂ ಇಲ್ಲ. ಏಕೆಂದರೆ, ಮನುಷ್ಯ ಪ್ರಾಣಿಯು ಬೇರೆ ಪ್ರಾಣಿಗಳಂತೆ ಕ್ಲೃಪ್ತವಾದ ಇಚ್ಛಾಸ್ಥಿತಿ ಪರಿಮಿತಿಗಳಿಂದ ಕೂಡಿರುವುದಿಲ್ಲ. ಆದುದರಿಂದ ಸುಖ ಶಾಂತಿಗಳನ್ನು ಪ್ರಸ್ಥಾಪಿಸಲು ಯಾವಾಗಲೂ ಸಾಧನೋಪಾಯಗಳನ್ನು ವ್ಯತ್ಯಸ್ತಗೊಳಿಸುತ್ತಿರಬೇಕಾಗುತ್ತದೆ. ಒಂದು ಕಾಲದಲ್ಲಿ ಅವಶ್ಯಕವೆಂದು ಏರ್ಪಟ್ಟ ಸಾಧನೋಪಾಯಗಳು ಇನ್ನೊಂದು ಕಾಲದಲ್ಲಿ ಅನಾವಶ್ಯಕವಾಗಿ ಪರಿಣಮಿಸುತ್ತವೆ. ಒಂದು ಪ್ರಸಂಗದಲ್ಲಿ ಸುಖ ಶಾಂತಿಗಳನ್ನುಂಟು ಮಾಡಿದ ನಿಯಮಾಚಾರಗಳು ಇನ್ನೊಂದು ಪ್ರಸಂಗದಲ್ಲಿ ದುಃಖ ಅಶಾಂತತೆಗಳನ್ನೇ ಉಂಟು ಮಾಡುತ್ತವೆ. ಆದುದರಿಂದ ಒಂದು ಸಮಯದಲ್ಲಿ ಯಾವ ಆಚಾರ ವಿಚಾರಗಳನ್ನು ಜನಾಂಗದಲ್ಲುಂಟುಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುತ್ತದೆಯೋ ಅವೇ ಆಚಾರ ವಿಚಾರಗಳನ್ನು ಇನ್ನೊಂದು ಸಮಯದಲ್ಲಿ ನಿವಾರಣೆ ಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುವುದು. ಈ ಪ್ರಕಾರ ಮನುಷ್ಯಜಾತಿಯ ಸುಖಶಾಂತಿಗಳಿಗಾಗಿ ಕಾಲ ಭಿನ್ನತ್ವದಂತೆ ಕಾರ್ಯ ಭಿನ್ನತ್ವವೂ ಅವಶ್ಯಕವಾಗಿ ಸಂಭವಿಸುವುದು.

ಬಾಲ್ಯದಲ್ಲಿ ಉಪಯೋಗಿಸಿದ ಉಡಿಗೆ ತೊಡಿಗೆಗಳನ್ನೇ ಯೌವನದಲ್ಲಿಯೂ ಉಪಯೋಗಿಸಲಿಕ್ಕೆ ಬರುತ್ತದೆಯೇ?   ಶೀತಕಾಲದಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳನ್ನು ಬೇಸಿಗೆಯ ಕಾಲದಲ್ಲಿಯೂ ಉಪಯೋಗಿಸಬಹುದೇ? ಕಾಲ ಸ್ಥಿತಿಗಳಂತೆ ಇವುಗಳನ್ನು ಬೇರೆ ಮಾಡುವುದೇ ಹೇಗೆ ಕ್ಷೇಮಕರವಾಗಿದೆಯೋ ಹಾಗೆಯೇ ಕಾಲಸ್ಥಿತಿಗಳಿಗನುಗುಣವಾಗಿ ಸಾಧನೋಪಾಯಗಳನ್ನು ಭಿನ್ನಗೊಳಿಸುವುದೇ ಜನಾಂಗದ ಸುಖಶಾಂತಿಗಳಿಗೆ ಕಾರಣವಾಗಿದೆ. ಮನುಷ್ಯನು ಕಾಲಸ್ಥಿತಿಗಳಿಗನುಸರಿಸಿ ತನ್ನ ಉಡುಪಿನಲ್ಲಿ ಎಷ್ಟೇ ವ್ಯತ್ಯಸ್ತ ಮಾಡಿಕೊಂಡರೂ ಬಟ್ಟೆಯು ಮಾತ್ರ ಹೇಗೆ ಬೇಕೇ ಬೇಕಾಗಿದೆಯೋ ಹಾಗೆಯೇ ಜನಾಂಗದ ಸುಖಶಾಂತಿಗಳಿಗಾಗಿ ಎಷ್ಟೋ ಭಿನ್ನ ಪ್ರಯತ್ನಗಳು ನಡೆದರೂ ಅವುಗಳಿಗೆಲ್ಲ ಮೂಲ ಭೂತವಾದ ನೈತಿಕ ಬಲವು ಮಾತ್ರ ಬೇಕೇ ಬೇಕಾಗುತ್ತದೆ.

ಭಗವಾನ್ ಬುದ್ಧದೇವರು ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಮಾಡಿದ ಧರ್ಮ ಪ್ರಸಾರವಾಗಲಿ, ಹನ್ನೆರಡನೆಯ ಶತಮಾನದಲ್ಲಿ ಮಹಾನುಭಾವರಾದ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆಯಾಗಲಿ, ಈ ಇಪ್ಪತ್ತನೆಯ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರು ಮಾಡುತ್ತಿರುವ ರಾಜಕೀಯ ಕ್ರಾಂತಿಯಾಗಲಿ ಎಷ್ಟೇ ಭಿನ್ನ ಸ್ವರೂಪದವುಗಳಾಗಿ ತೋರಿದರೂ ಅವುಗಳ ಸಾಧನೋಪಾಯಗಳು ಎಷ್ಟೇ ವ್ಯತ್ಯಸ್ತವಾಗಿದ್ದರೂ ಅವುಗಳಲ್ಲೆಲ್ಲಾ ಮನುಷ್ಯ ಜಾತಿಯ ಸುಖಶಾಂತಿಗಳಿಗೆ ಮೂಲಾಧಾರವಾದ ಸಮಾನತ್ವ ಮತ್ತು ಸ್ವಾತಂತ್ರ್ಯ ತತ್ವಗಳು ಮಾತ್ರ ಸಂಪೂರ್ಣವಾಗಿ ಇದ್ದೇ ಇವೆ. ಈ ಉಭಯ ತತ್ವಗಳು ಧಾರ್ಮಿಕ ವಿಷಯದಲ್ಲಾಗಲಿ ಅಥವಾ ಸಾಮಾಜಿಕ ವಿಷಯದಲ್ಲಾಗಲಿ, ಇಲ್ಲವೆ ರಾಜಕೀಯ ಸಂಗತಿಗಳಲ್ಲಾಗಲಿ ಯಾವ ಪ್ರಮಾಣದಂತೆ ಕಡಿಮೆಯಾಗುತ್ತವೆಯೋ ಆ ಪ್ರಮಾಣ ದಂತೆ ಜನಾಂಗದಲ್ಲಿ ಸುಖಶಾಂತಿಗಳೂ ಕಡಿಮೆಯಾಗುತ್ತವೆ. ಆಗ ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಜನಾಂಗದಲ್ಲಿ ಪುನಃ ಪ್ರಸ್ತಾಪಿಸಲು ಮಹಾಮಹಾ ವಿಭೂತಿಗಳು ಆಗಿನ ಸ್ಥಿತಿಗನುಗುಣವಾದ ಭಿನ್ನ ಭಿನ್ನ ಬಾಹ್ಯ ಸಾಧನೋಪಾಯಗಳಿಂದ ಪ್ರಯತ್ನಿಸುತ್ತಾರೆ. ಏಕೆಂದರೆ, ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಲ್ಲಿಯೇ ಸುಖ ಮತ್ತು ಶಾಂತಿಗಳಿವೆಯೆಂಬುದು ಮನುಷ್ಯ ಜಾತಿಯ ಬಹುಕಾಲದ ಅನುಭವದಿಂದ ಸಿದ್ಧವಾದ ಸಂಗತಿಯಾಗಿದೆ.

ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಹೇಗೆ ಪ್ರಾಪ್ತವಾಗುತ್ತವೆ? ಇವುಗಳನ್ನು ಜನಾಂಗದಲ್ಲಿ ಹೇಗೆ ಪ್ರಸ್ತಾಪಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ನಮ್ಮ ಶಿವಶರಣರ ಸಂದೇಶವೇ ಉತ್ತರವಾಗಿದೆ. ದೇಶ, ಜಾತಿ, ಉದ್ಯೋಗ, ಸಂಪತ್ತು ಮೊದಲಾದ ಕೃತ್ರಿಮ ಸಾಧನ ಸೌಲಭ್ಯಗಳಿಂದ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಪ್ರಾಪ್ತವಾಗಬಾರದು. ಒಂದು ದೇಶದವರೆಂದಾಗಲಿ ಅಥವಾ ಒಂದು ಜಾತಿಯವರೆಂದಾಗಲಿ ಇಲ್ಲವೆ ಉದ್ಯೋಗ ಸಂಪತ್ತುಗಳ ಬಲದಿಂದಾಗಲಿ ಶ್ರೇಷ್ಠ ಕನಿಷ್ಠರೆಂದು ಎಣಿಸಬಾರದು. ಮನುಷ್ಯನಿಗೆ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಆತನಲ್ಲಿರುವ ನೈತಿಕ ಬಲದಿಂದಲೇ ಪ್ರಾಪ್ತವಾಗಬೇಕು. ಈ ನೈತಿಕ ಬಲವನ್ನು ಪ್ರಪಂಚದಲ್ಲಿ ಪ್ರಸ್ತಾಪಿಸುವವರೇ ಮನುಷ್ಯ ಜಾತಿಯ ಸುಖಶಾಂತಿಗಳನ್ನು ಹೆಚ್ಚಿಸುತ್ತಾರೆ. ಒಂದು ವ್ಯಕ್ತಿಯಲ್ಲಾಗಲಿ ಅಥವಾ ಒಂದು ಜನಾಂಗದಲ್ಲಾಗಲಿ ನೈತಿಕ ಬಲವಿಲ್ಲದಿದ್ದರೆ ಆ ವ್ಯಕ್ತಿಯು ಅಥವಾ ಜನಾಂಗವು ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನನುಭವಿಸಲು ಅಧಿಕಾರಿಯಲ್ಲ. ಈ ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಿಲ್ಲದಿದ್ದ ಮೇಲೆ ಸುಖ ಮತ್ತು ಶಾಂತಿಗಳು ದೊರೆಯುವುದೆಂತು? ಆದಕಾರಣ ಯಾವ ವ್ಯಕ್ತಿಯು ಅಥವಾ ಜನಾಂಗವು ಸುಖ ಮತ್ತು  ಶಾಂತಿಗಳನ್ನಪೇಕ್ಷಿಸುತ್ತದೆಯೋ ಸುಖಶಾಂತಿಗಳು ಐಹಿಕವಾದವುಗಳೇ ಇರಲಿ ಅಥವಾ ಪಾರಲೌಕಿಕವಾದವುಗಳೇ ಇರಲಿ, ಮೊದಲು ನೈತಿಕ ಬಲವನ್ನು ಸಂಪಾದಿಸಬೇಕು. ಆ ನೈತಿಕ ಬಲದ ನ್ಯೂನಾಧಿಕಗಳ ಮೇಲಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಪ್ರಾಪ್ತವಾಗ ಬೇಕು. ಈ ನೈತಿಕ ಬಲದ ವಿನಾ ಮನುಷ್ಯನಿಗೆ ಇಹಲೋಕದ ಸುಖಶಾಂತಿಗಳೇ ದೊರೆಯದಿದ್ದ ಮೇಲೆ ಪರಲೋಕದ ಮಾತೇಕೆ ? ನೈತಿಕ ಬಲವಿಲ್ಲದವರಿಗೆ ಸುಖಶಾಂತಿಗಳಿಲ್ಲವೆಂಬುದೇ ನಮ್ಮ ಶಿವಶರಣರ ಸಂದೇಶವು, ನೈತಿಕ ಬಲವಿಲ್ಲದವರಿಗೆ ಮನುಷ್ಯರೇ ಮೆಚ್ಚದಿರುವಾಗ ಶಿವನು ಮೆಚ್ಚುವನೇ? ಶಿವನನ್ನು ಒಲಿಸಿಕೊಳ್ಳ ಬೇಕೆಂಬುವವರು ಮೊದಲು ನೈತಿಕ ಬಲಶಾಲಿಗಳಾಗಬೇಕು. ಆದುದರಿಂದ ಮಹಾನುಭಾವರಾದ ಬಸವಣ್ಣನವರು ಈ ಪ್ರಕಾರ ಮನುಷ್ಯಜಾತಿಗೆ ತಮ್ಮ ಸಂದೇಶವನ್ನು ಸೂಚಿಸಿದ್ದಾರೆ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯವ ನುಡಿಯಲು ಬೇಡ. ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವ ನೊಲಿಸುವ ಪರಿ.

ಸತ್ಯ, ಅಹಿಂಸೆ, ಅಸ್ತೇಯ ಮೊದಲಾದ ನೈತಿಕ ಆಚರಣೆಗಳೇ ಸದಾಚಾರಗಳು. ಇವುಗಳಿಂದಲೇ ಮನುಷ್ಯನು ಪವಿತ್ರನೂ, ಪ್ರತಾಪಿಯೂ ಆಗುತ್ತಾನೆ. ಇವುಗಳ ವಿನಾ ಯಾವ ಸುಖಶಾಂತಿಗಳೂ ದೊರೆಯುವುದಿಲ್ಲ. ಕಳ್ಳತನ, ಸುಳ್ಳು, ಮೋಸ, ವ್ಯಭಿಚಾರಾದಿ ದುರಾಚಾರಗಳಲ್ಲಿರುವವರು ಎಷ್ಟೇ ಪೂಜೆ, ಜಪ, ತಪಗಳನ್ನು ಮಾಡಿದರೂ ವ್ಯರ್ಥವೇ ಸರಿ. ಅವರು ಯಾವ ಜಾತಿಯಲ್ಲಿ ಹುಟ್ಟಿದರೂ ಎಂಥ ಉದ್ಯೋಗ ಮಾಡುತ್ತಿದ್ದರೂ, ಎಷ್ಟು ಧನಿಕರಾಗಿದ್ದರೂ ಮನುಷ್ಯವರ್ಗದಲ್ಲಿ ಅತ್ಯಂತ ಕೀಳು ಸ್ಥಿತಿಯಲ್ಲಿರತಕ್ಕವರೇ ಸರಿ. ಇಂತಹ ನೈತಿಕ ಬಲವಿಲ್ಲದ ಅನಾಚಾರಿಗಳಿಗೆ ಶಿವನು ಒಲಿಯುವುದಿಲ್ಲವೆಂಬುದೇ ಶಿವಶರಣರ ಸಂದೇಶವು. ಆದುದರಿಂದ ಮಹಾಶಿವ ಶರಣರಾದ ಸಕಳೇಶ ಮಾದರಸರು ಈ ಪ್ರಕಾರ ಹೇಳಿದ್ದಾರೆ.

ಜನಮೆಚ್ಚಿ ಶುದ್ಧನಲ್ಲದೆ, ಮನಮೆಚ್ಚಿ ಶುದ್ಧನಲ್ಲವಯ್ಯ, ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯ, ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವಯ್ಯ. ಧನ ದೊರಕದೆ ನಿಸ್ಪೃಹನಲ್ಲದೆ ಧನದೊರಕಿ ನಿಸ್ಪೃಹನಲ್ಲವಯ್ಯ. ಏಕಾಂತದ್ರೋಹಿ. ಗುಪ್ತಪಾತಕಿ. ಯುಕ್ತಿ ಶೂನ್ಯಂಗೆ ಸಕಳೇಶ್ವರ ದೇವರು ಒಲಿ ಒಲಿ ಎಂದರೆ ಎಂತೊಲಿವನಯ್ಯ?

ಇದರ ಮೇಲಿಂದ ನೈತಿಕ ಬಲವಿಲ್ಲದವರ ಧರ್ಮಾಚಾರಗಳು ಡಂಭಾಚಾರಗಳಾಗಿಯೇ ಪರಿಣಮಿಸುತ್ತವೆಂದು ಶಿವಶರಣರು ಸ್ಪಷ್ಟವಾಗಿ ಹೇಳಿರುತ್ತಾರೆಂದು ಗೊತ್ತಾಗುವುದಿಲ್ಲವೇ ಧಾರ್ಮಿಕ ಶಕ್ತಿಯನ್ನೂ ಸುಖಾನಂದಗಳನ್ನು ಹೊಂದಲಪೇಕ್ಷಿಸುವ ಪ್ರತಿಯೊಂದು ವ್ಯಕ್ತಿಯೂ ಮೊದಲು ನೈತಿಕಚಾರನಿಷ್ಟನಾಗಲೇ ಬೇಕೆಂಬುದು ಸ್ಪಷ್ಟವಾಗುವುದಿಲ್ಲವೇ? ನಾವು ನಾನಾ ಅನೀತಿಗಳಿಂದ ಆಚರಿಸುತ್ತ ಧಾರ್ಮಿಕ  ವೇಷಭಾಷೆಗಳಿಂದ ಶೋಭಾಯಮಾನರಾದರೆ ಫಲವೇನು? ಶಿವನು ಮೆಚ್ಚುವನೇ? ಜನರನ್ನು ಮೋಸಗೊಳಿಸಿ ಧಾರ್ಮಿಕರೆಂದು ಹೇಳಿಸಿಕೊಳ್ಳುವುದೇ ಕಷ್ಟವಾಗಿರುವಾಗ ಶಿವನನ್ನು ಮೋಸಗೊಳಿಸುವ ಹವ್ಯಾಸವೇಕೆ? ಮಹಾನುಭಾವರಾದ ಬಸವಣ್ಣನವರು ಹೇಳಿರುವುದೇನಂದರೆ

ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ. ಪಾಪಿ ಹೂವನೇರಿಸಿದರೆ ಮಸೆದಾಯುಧದ ಗಾಯ. ಕೂಪರನಾರನೂ ಕಾಣೆ, ಮಾದರ ಚೆನ್ನಯ್ಯನಲ್ಲಿದೆ. ಕೂಪರನಾರನೂ ಕಾಣೆ ಡೋಹರ ಕಕ್ಕಯ್ಯನಲ್ಲದೆ. ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ ನಿಮ್ಮ ಪತ್ತಿಗರಿವರಯ್ಯ ಕೂಡಲಸಂಗಮದೇವ.

ಹೆಚ್ಚಿನ ಕುಲದವರೆಂದಾಗಲಿ ಹೆಚ್ಚು ಶಿವಪೂಜೆಯನ್ನು ಮಾಡುತ್ತಾರೆಂದಾಗಲಿ ಶಿವನು ಪ್ರೀತಿಸುವುದಿಲ್ಲ. ಮಾದಾರ ಚೆನ್ನಯ್ಯನವರೇ ಮೊದಲಾದ ಮಹಾಶಿವ ಶರಣರು ನೈತಿಕ ಬಲಶಾಲಿಗಳಾಗಿ ಶಿವನನ್ನು ಪೂಜಿಸಿದ್ದರಿಂದಲೇ ಆತನ ಪ್ರೀತಿಗೆ ಪಾತ್ರರಾದರು. ಕೋಪ ಪಾಪಗಳಿಂದ ಕೂಡಿದವರು ಯಾವ ಕುಲದವರಾಗಲಿ, ಅವರು ಎಂತಹ ವೈಭವದಿಂದ ಪೂಜೆಗಳನ್ನು ಮಾಡಲಿ., ಶಿವನಿಗೆ ಶಸ್ತ್ರದಿಂದ ಗಾಯಮಾಡಿದಂತೆಯೂ ಆತನ ಮೇಲೆ ರಕ್ತದ ಅಭಿಷೇಕವನ್ನು ಮಾಡಿದಂತೆಯೂ ಆಗುತ್ತದೆಂದು ಮಹಾನುಭಾವರಾದ ಬಸವಣ್ಣನವರು ಹೇಳಿರುವುದನ್ನು ನೋಡಿದರೆ ನಾವು ಮೊದಲು ನೈತಿಕ ಬಲಶಾಲಿಗಳಾಗಲು ಪ್ರಯತ್ನಿಸಬೇಕೆಂಬುದು ಗೊತ್ತಾಗುವುದಿಲ್ಲವೇ? ಪ್ರತಿನಿತ್ಯ ಎಷ್ಟು ಮಡಿಯಿಂದ ಲಿಂಗಪೂಜೆ ಮಾಡುತ್ತಿದ್ದರೂ ಅದರ ಫಲ ಪದಗಳು ಮಾತ್ರ ದೊರೆಯದಿರುವುದಕ್ಕೆ ಕಾರಣವೇನು ? ಪೂಜೆ ಮಾಡುವ ಕೈಗಳು ಪರಧನ ಪರದಾರಾದಿಗಳನ್ನು ಮುಟ್ಟಿ ಮಲಿನವಾಗಿರುವುದರಿಂದಲ್ಲವೆ ? ಮಂತ್ರವನ್ನುಚ್ಚರಿಸುವ ನಾಲಿಗೆಯು ಅಸತ್ಯ ದುರ್ಭಾಷಣಾದಿಗಳಿಂದ ಮೈಲಿಗೆಯಾಗಿರುವುದರಿಂದಲ್ಲವೇ ? ಆದಕಾರಣ ಮೊದಲು ನೈತಿಕ ಬಲಶಾಲಿಗಳಾಗಿರೆಂದೇ ಶಿವಶರಣರು ಸಾರಿಸಾರಿ ಹೇಳುತ್ತಿದ್ದಾರೆ.

ಮೊಟ್ಟೆ ಮೊಟ್ಟೆ ಪುಷ್ಪ ಪತ್ರೆಯ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು? ತನುಮನಧನವ ಕೊಟ್ಟು ಹಿಂಗದನ್ನಕ್ಕರ? ಹುಸಿ, ಕಳವು, ಪರದಾರ, ವ್ಯಾಪಾರದಲ್ಲಿ ಹರಿದಾಡುವ ಮರುಳಬುದ್ಧಿಯ ದುರಾಚಾರಿಗಳಿಗೆ ದೂರವಾಗಿಪ್ಪನು ನೋಡಾ ನಮ್ಮ ಅಖಂಡೇಶ್ವರ.

ಪತ್ರೆ ಪುಷ್ಪಗಳನ್ನು ಕೂಡಿಸುವುದು ಸುಲಭ ಆದರೆ ಸತ್ಯ, ಶಮೆ, ದಮೆಗಳಿಂದ ಕೂಡಿದವರಾಗುವುದು ಕಠಿಣ. ಈ ಕಠಿಣ ಕಾರ್ಯವನ್ನು ಮಾಡದೆ ಸುಖಶಾಂತಿ ಗಳೆಂಬ ಹೆಚ್ಚಿನ ಫಲಗಳನ್ನು ಹೊಂದುವುದು ಶಕ್ಯವೇ? ಯಥೇಚ್ಛವಾಗಿ ಪತ್ರೆ ಪುಷ್ಪ ಗಳಿಂದ ಲಿಂಗಪೂಜೆಯನ್ನು ಮಾಡಿದ ಮಾತ್ರದಲ್ಲಿ ಶಿವನು ಮೆಚ್ಚುತ್ತಿದ್ದರೆ ಸತ್ಯಾದಿ ನೈತಿಕ ಆಚರಣೆಗಳನ್ನು ಆಚರಿಸಲು ಯಾರು ತಾನೇ ಪ್ರಯತ್ನಿಸುತ್ತಿದ್ದರು? ಶಿವಶರಣರಾದರೂ ಇಷ್ಟು ಒತ್ತಾಯದಿಂದ ನೈತಿಕ ಆಚರಣೆಗಳ ಕಡೆಗೆ ಲಕ್ಷಿಸಲು ಏಕೆ ಹೇಳುತ್ತಿದ್ದರು. ಮನುಷ್ಯನು ನೈಹಿಕ ಸಾಮರ್ಥ್ಯವನ್ನು ಹೊಂದಲು ಪ್ರಯತ್ನಿಸದೆ ಬಾಹ್ಯ ಡಂಭಾಚಾರಗಳಿಗೇನೇ ಮೋಸಹೋಗಿ ತನ್ನ ಜನ್ಮವನ್ನು ವ್ಯರ್ಥ ಮಾಡಿ ಕೊಳ್ಳಬಾರದೆಂಬ ಉದ್ದೇಶದಿಂದಲೇ ಶಿವಶರಣರು ಈ ಪ್ರಕಾರ ತೀಕ್ಷ್ಣವಾಣಿಯಿಂದ ಜನಾಂಗವನ್ನು ಎಚ್ಚರಗೊಳಿಸಿದ್ದಾರಲ್ಲವೇ? ಈಗ ನಾವು ಶಿವಶರಣರ ಸಂದೇಶವನ್ನು ಲಕ್ಷಿಸದ ಬಾಹ್ಯಾಡಂಬಾಚಾರಗಳಿಗೆ ಮರುಳರಾಗಿ ಅಧೋಗತಿ ಗೀಡಾಗುತ್ತಲಿದ್ದೇವೆ. ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಯಾವ ಸಂಗತಿಗಳೂ ಫಲಕಾರಿಯಾಗದಿರುವುದಕ್ಕೆ ನಮ್ಮ ನೈತಿಕ ನಿರ್ಬಲತೇಯೇ ಮುಖ್ಯ ಕಾರಣವಾಗಿದೆ.

ಬಹು ಜನರು ಬಾಹ್ಯಾಡಂಬರದ ಅಚರಣೆಗಳಲ್ಲಿಯೇ ಮಗ್ನರಾಗಿದ್ದಾರೆಯೇ ವಿನಾಹ ತಮ್ಮ ನೈತಿಕ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಇಲ್ಲ. ಪೂಜೆ, ಜಪ, ತಪ, ಅನುಷ್ಠಾನಗಳೆಂಬ ಬಾಹ್ಯ ವೇಷಭಾಷೆಗಳಿಗೆ ಮರುಳಾಗುವವರೇ ಸಮಾಜದಲ್ಲಿ ಹೆಚ್ಚಿರುವುದರಿಂದ ಧಾರ್ಮಿಕ ನಿಜಶಕ್ತಿಯನ್ನು ಹೊಂದುವ ಉತ್ಕಟೇಚ್ಛೆಯೇ ಉಂಟಾಗುತ್ತಾ ಇಲ್ಲ. ಜನಾಂಗದಲ್ಲಿ ವ್ಯಾಪಿಸಿರುವ ಈ ಮಲಿನಾಚಾರ ವಿಚಾರಗಳು ನಿವಾರಣೆಯಾಗಬೇಕಾದರೆ ಶಿವಶರಣರ ಸಂದೇಶವನ್ನು ನಾವು ಕೇಳಿ ಆಚರಿಸಬೇಕು.

ಉದಯದಲೆದ್ದು ಗಡಗಡನೆ ನಡುಗುತ ಹೋಗಿ, ಹೂಗಿಡವ ಪತ್ರೆಯ ಕಡಿವ ದೃಢಗೇಡಿಗಳಿರಾ ನೀವು ಕೇಳಿರಿ. ಅದು ಕಡುಪಾಪವಲ್ಲವೆ? ನಿಮಗೆ ನಡುಗಿರೋ. ಪರಧನ ಪರಸ್ತ್ರೀಯರಿಗೆ ನಡುಗಿರೊ. ಕೊಲೆ, ಹುಸಿ, ಕಳವು, ಪರದಾರ ಕಾಂಕ್ಷೆಗೆ ನಡುಗಿರೋ. ಹರನಿಂದೆ ಗುರುನಿಂದೆ, ಶಿವನಿಂದೆ ಕೇಳಲಾರವೆಂದು ನಡುಗಿರೊ. ಶಿವಾಚಾರಕ್ಕೆ ನಡುಗದೆ ಮಹಾಚಳಿಗೆ ನಡುಗಿ ಹೂವಿನ ಗಿಡವ ತರಿವ ಕಡುಪಾಪಿಗಳಿರಾ, ನಿಮಗೆ ಮೃಡನ ಪೂಜೆ ಎಲ್ಲಿಯದೂ ಇಲ್ಲ. ನಿಮಗೆ ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ.

ಸತ್ಯ ಪ್ರಿಯರಿಗೆ ಅಮೃತಪ್ರಾಯರಾಗಿಯೂ ಡಾಂಭಿಕರಿಗೆ ಶೂಲದಂತೆಯೂ ಇರುವ ಈ ದಿವ್ಯ ಸಂದೇಶವು ನೈತಿಕ ಬಲವನ್ನು ಹೆಚ್ಚಿಸಿಕೊಳ್ಳುವ ನಮ್ಮನ್ನು ಜಾಗೃತಗೊಳಿಸುವುದಿಲ್ಲವೆ? ಶಿವಶರಣರು ಶಿವಪೂಜಕರಿಗೇನೇ ಈ ಪ್ರಕಾರ ನೈತಿಕ ಸಾಮರ್ಥ್ಯವನ್ನು ಸಂಪಾದಿಸಲು ಸೂಚಿಸಿದ್ದಾರೆಂದು ತಿಳಿಯಬಾರದು. ಜಪ, ತಪ, ಭಕ್ತಿ ಕರ್ಮ, ಜ್ಞಾನ, ಯೋಗ ಮೊದಲಾದ ಧಾರ್ಮಿಕ ಭಿನ್ನ ಭಿನ್ನ ಆಚರಣೆಗಳನ್ನು ಆಚರಿಸುವವರಿಗೂ ಕೂಡ ಇದೇ ಪ್ರಕಾರ ಮೊದಲು ನೀತಿಯಿಂದ ನಡೆಯುವುದನ್ನು ಕಲಿಯಿರೆಂತಲೂ ನೀತಿಯ ಬಲವಿಲ್ಲದೆ ಧಾರ್ಮಿಕ ಆಚರಣೆಗಳನ್ನು ಆಚರಿಸುವುದರಿಂದ ನಿಜವಾದ ಫಲಪ್ರಯೋಜನಗಳು ಪ್ರಾಪ್ತವಾಗುವುದಿಲ್ಲವೆಂತಲೂ ಬಹಳವಾಗಿ ಹೇಳಿದ್ದಾರೆ.

ಶಿವನೇ ದೈವ. ಕೊಲ್ಲದಿರ್ಪುದೆ ಧರ್ಮ, ಅಧರ್ಮದಿಂದ ಬಂದುದನ್ನೊಲ್ಲದಿಪ್ಪುದೆ ನೇಮ. ಆಶೆಯಿಲ್ಲದಿಪ್ಪುದೆ ತಪ. ರೋಷವಿಲ್ಲದಿಪ್ಪುದೆ ಜಪ.  ವಂಚನೆ ಇಲ್ಲದಿಪ್ಪುದೆ ಭಕ್ತಿ. ಹೆಚ್ಚು ಕುಂದಿಲ್ಲದಿಪ್ಪುದೆ ಸಮಯಾಚಾರ. ಇದು ಸತ್ಯ. ಶಿವಬಲ್ಲ. ಶಿವನಾಣೆ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.

ತಪವೆತ್ತ ಹೆರರ ಕೇಡಿಂಗೆ ಬಗೆಯುವುದೆತ್ತ. ಜಪವೆತ್ತ ಶರಣರ ಮೇಲೆ ಅನೃತವ ನುಡಿವುದೆತ್ತ? ಪಂಚಾಚಾರವೆತ್ತ ಪಾತಕಕ್ಕೆ ಮನ ಬಗೆವುದೆತ್ತ.? ಇಂತೀ ಹೊರಬಳಿಕೆಯ ಲೋಕರಂಜನೆಯಲ್ಲಿಪ್ಪವರಿಗೆ ನಾನಂಜುವೆ. ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನೀನು ಅಂಜಿದೂರದಲ್ಲಿ ಓಡುವೆ.

ಮನುಷ್ಯನು ಪಾರಲೌಕಿಕ ಸುಖಶಾಂತಿಗಳನ್ನು ಹೊಂದಲು ಆತನು ಯಾವ ಧರ್ಮ ಮತ ಪಂಥವನ್ನನುಸರಿಸಿ ಪೂಜೆ ಕರ್ಮಂಗಳನ್ನು ಮಾಡಬೇಕಾದರೂ ಮೊದಲು ನೈತಿಕ ಬಲಶಾಲಿಯಾಗುವುದು ಅತ್ಯಾವಶ್ಯಕವಾಗಿದೆಯೆಂದೇ ಶಿವರಣರಣರು ಸಾರಿ ಸಾರಿ ಹೇಳಿದ್ದಾರೆಂಬುದು ಈ ವರೆಗಿನ ವಿವೇಚನೆಯಿಂದ ಸ್ಪಷ್ಟವಾಗುವುದಿಲ್ಲವೆ? ಇದೇ ಶಿವಶರಣರ ದಿವ್ಯ ಸಂದೇಶವು. ಈ ನೈತಿಕ ಬಲವು ಕೇವಲ ಪಾರಮಾರ್ಥಿಕ ಸುಖಶಾಂತಿಗಳಿಗೇನೇ ಬೇಕೆಂದಲ್ಲ. ಐಹಿಕ ಸುಖಶಾಂತಿಗಳಿಗೂ ಈ ನೈತಿಕ ಬಲವೇ ಮುಖ್ಯವಾಗಿದೆ.

ಭಗವಾನ್ ಬುದ್ಧ ದೇವರು ಧಾರ್ಮಿಕ ಕ್ರಾಂತಿಯನ್ನು ಮಾಡಿದಾಗ ಸತ್ಯ ಅಹಿಂಸಾದಿ ನೈತಿಕ ತತ್ವಗಳನ್ನೇ ಮುಖ್ಯವಾಗಿಟ್ಟುಕೊಂಡಿದ್ದರು. ಈಗ ಮಹಾತ್ಮಾ ಗಾಂಧಿಯವರು ರಾಜಕೀಯ ಕ್ರಾಂತಿಯನ್ನು ಮಾಡುತ್ತಿರುವಾಗಲೂ ಕೂಡ ಸತ್ಯ ಅಹಿಂಸಾದಿ ನೈತಿಕ ಆಚರಣೆಗಳನ್ನೇ ಮುಖ್ಯವಾಗಿಟ್ಟಿಲ್ಲವೇ? ಮಹಾನುಭಾವರಾದ ಬಸವಾದಿ ಶಿವಶರಣರು ಕೂಡಾ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯನ್ನುಂಟು ಮಾಡಲು ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯಾದಿ ನೈತಿಕ ಮಹಾತತ್ವಗಳನ್ನೇ ಜನಾಂಗಕ್ಕೆ ಬೋಧಿಸಿ ಅವುಗಳಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿ ಸುಖಶಾಂತಿಗಳನ್ನುಂಟು ಮಾಡಿದರು.

ಶಿವಶರಣರ ಈ ದಿವ್ಯ ಸಂದೇಶದ ಸತ್ಯತೆಯು ಮಹಾತ್ಮಾಗಾಂಧಿಯವರು ಈಗಿನ ಪ್ರಯತ್ನದಿಂದ ಸಕಲರಿಗೂ ಸ್ಪಷ್ಟವಾಗುವಂತಿದೆ. ಯಾರು ನೈತಿಕ ಬಲಶಾಲಿಗಳೋ ಅವರೇ ಧರ್ಮಾತ್ಮರು. ಅವರೇ ಲೋಕಸೇವೆಗೆ ಅರ್ಹರು. ಅವರೇ ಲೋಕಪೂಜ್ಯರು. ಅವರನ್ನೇ ಪ್ರಪಂಚವು ಹಿಂಬಾಲಿಸುತ್ತದೆ. ಅವರ ವಾಣಿಯೇ ದೇವವಾಣಿಯು, ಆದುದರಿಂದ ನಮ್ಮ ಶರಣರು ಈ ಪ್ರಕಾರ ಹೇಳಿದ್ದಾರೆ.

ಶಮೆ, ದಮೆ, ವಿವೇಕ, ವೈರಾಗ್ಯ, ಪರಿಪೂರ್ಣ, ಭಾವ ಶಾಂತಿ, ಕಾರುಣ್ಯ ಶ್ರದ್ದೆ ಸತ್ಯ, ಸದ್ಭಕ್ತಿ ಶಿವಜ್ಞಾನ, ಶಿವಾನಂದ, ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ, ಸ್ಪರ್ಶನ, ಸಂಭಾಷಣೆಯಿಂದ ಕೇವಲ ಮುಕ್ತಿಯಪ್ಪುದು ತಪ್ಪದಯ್ಯ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.

ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.

ಸಮಾಪ್ತಿ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಅಣುಗ ಹಿಂದಣದಗ್ರ | ದಣುಚಕ್ರದೊಳು ಭಕ್ತಿ

ಮಣಿಹವಿಡಿದಿಪ್ಪ-ಅಣು ಮಹಾಲಿಂಗ ನೆಲೆ

ತೃಣು ಎಂದ ಗುರುವೆ ಕೃಪೆಯಾಗು   ||೧೪೮||

 

ನವಚಕ್ರಗಳನ್ನು ಮೀರಿನಿಂದುದು ದಶಮಚಕ್ರ. ಹತ್ತನೆಯ ಪದ್ಮವು ಬಹು ಸೂಕ್ಷ್ಮವಾಗಿರುವದರಿಂದಲೇ ಅದು ಅಣು ಚಕ್ರವೆನಿಸಿದೆ. ಇಂಥ ಅಣುಚಕ್ರವನ್ನು ಅರಿಯುವದು ಸಾಮಾನ್ಯಸಾಧಕನ ಶಕ್ತಿಯಲ್ಲ. ಅಂತೆಯೇ ಶಿಷ್ಯನಿಗೆ ಶ್ರೀಗುರು ಅಣುಗನೆಂದು ಸಂಬೋಧಿಸಿದ್ದು ಗಮನಾರ್ಹವಾಗಿದೆ.

 

ಶರೀರವಿಜ್ಞಾನಿಗಳು ತಲೆಬುರುಡೆಯಲ್ಲಿ ದೊಡ್ಡ ಮೆದುಳು ಸಣ್ಣ ಮೆದುಳು ಎಂದೆರಡುಭಾಗ ತೋರಿಸುವರು. ಆದರೆ ಅಧ್ಯಾತ್ಮಿಕ ವಿಜ್ಞಾನಿಗಳು ಬ್ರಹ್ಮರಂಧ್ರ, ಶಿಖಾಚಕ್ರ, ಪಶ್ಚಿಮಶಿಖಾಚಕ್ರ ಹಾಗೂ ಅಣುಚಕ್ರಗಳೆಂದು ನಾಲ್ಕು ಭಾಗ ಮಾಡಿರುವರು. ಈ ನಾಲ್ಕು ಜ್ಞಾನಗಮ್ಯವಾದವುಗಳೇ, ಪಶ್ಚಿಮ ಶಿಖಾಚಕ್ರದ ಕೆಳಭಾಗದಲ್ಲಿ ತೋರುವ ಈ ಮಹಾಲಿಂಗವು- ಅರ್ಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶೃತಿಮಾತಿನಂತೆ ಅಣುವಿಗೆ ಅಣುವಾಗಿ ಮಹತ್ತಿಂಗೆ ಮಹತ್ತಾಗಿ ತೋರುವದು. ಇದು ಕೇವಲ ಭಕ್ತಿಯಿಂದ ಮಾತ್ರ ಲಭ್ಯವಾಗುವದು. ಭಕ್ತಿಪಥವೇ ಮುಖ್ಯಗುರಿಯಾಗಿ ನಡೆಯುವ ಮಹಾನುಭಾವಿಗಳು ಈ ಲಿಂಗದ ದರ್ಶನ ಪಡೆಯಬಲ್ಲರು ಎಂದು ಬೋಧಿಸಿದ ಗುರುವೆ ಕೃಪೆಯಾಗು. ನಿನ್ನ ಕೃಪೆಯಿದ್ದರೇನೆ ಈ ಅಣು ಮಹಾಲಿಂಗನ ದರ್ಶನ ಮಾಡಿಕೊಳ್ಳಬಹುದು.

 

ಇಂದಿನ ಯುಗದಲ್ಲಿ ಅಣು ವಿಜ್ಞಾನವನ್ನು ಕಂಡುಹಿಡಿದಿರುವರು. ಆದರೆ ಈ ವಿಜ್ಞಾನ ಕೇವಲ ಭೌತಿಕವಾಗಿದೆ. ಭೌತಿಕ ಪ್ರಗತಿ ಸೀಮಿತವಾದುದು. ಭೌತಿಕವಿಜ್ಞಾನವು ಮಾನವನನ್ನು ಆಲಸಿಯನ್ನಾಗಿಸಿದೆ. ಅಸಂತೃಪ್ತಿಯನ್ನೊಡ್ಡಿದೆ. ಜೀವನ ಸಮಸ್ಯೆಗಳು ಈ ವಿಜ್ಞಾನದಿಂದ ಪರಿಹಾರವಾಗುವದಿಲ್ಲ. ಆದರೆ ನಮ್ಮ ಪೂರ್ವಜರು ಮಹಾನುಭಾವಿಗಳಾಗಿ ಅಧ್ಯಾತ್ಮಶಕ್ತಿಯಿಂದ ಅಣುವಿಜ್ಞಾನವನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ತಮ್ಮ ಅತ್ಮೋದ್ಧಾರದ ಜೊತೆಗೆ ಜಗತ್ತಿನ ಕಲ್ಯಾಣಕ್ಕಾಗಿ ಬಳಸುತ್ತಿದ್ದರು. ರಾಮಾಯಣ ಮಹಾಕಾವ್ಯದಲ್ಲಿ ಹನುಮಂತನು ಅಣುವಾಗಿಯೂ, ಮಹತ್ತಾಗಿಯೂ ವರ್ತಿಸಿದ ಘಟನೆ ಸ್ಮರಣೀಯವಾಗಿದೆ. ಆತನು ಮಹಾ ಆತ್ಮಜ್ಞಾನಿಯಾಗಿದ್ದನು. ಅಂತೆಯೇ ತನ್ನ ಯೋಗಶಕ್ತಿಯಿಂದ ಸಮುದ್ರ ಲಂಘನ ಮಾಡಲು ಸಾಧ್ಯವಾಯಿತು.

 

ಅಧ್ಯಾತ್ಮವಿಜ್ಞಾನವನ್ನು ಸೂಕ್ಷ್ಮವಾಗಿ ತೋರಬಲ್ಲವರು ಇಂದು ಅತ್ಯಂತ ವಿರಳವೆಂದೇ ಹೇಳಬೇಕಾಗಿದೆ. ಮಹಾಜ್ಞಾನಿ ಚನ್ನಬಸವಣ್ಣನವರು ನಿರೂಪಿಸಿದ ಘಟ ಚಕ್ರ, ಕರಣಹಸಿಗೆ, ಮಂತ್ರಗೋಪ್ಯ ಮುಂತಾದ ಅನುಭಾವ ಸಾಹಿತ್ಯದಲ್ಲಿಯೂ ವ್ಯಕ್ತವಾಗದ ಶಿವಕವಿಯು ವ್ಯಕ್ತಗೊಳಿಸಿದ್ದು ಅಣುಚಕ್ರದ ವಿಷಯವನ್ನು    ಗಮನೀಯವಾಗಿದೆ. ಇದು ಅವರ ಪರಮಗುರು ಚನ್ನವೀರೇಶ್ವರರಲ್ಲಿದ್ದ ವ್ಯಕ್ತಿತ್ವದ ಪ್ರತೀಕವೆಂತಲೂ ಅವರ ಪ್ರತಿಭೆಯ ದ್ಯೋತಕವೆಂತಲೂ ಗ್ರಹಿಸಬಹುದು.

 

ಮತ್ತೆ ಮತ್ಕರದಿಷ್ಟ | ನಿತ್ಯ ನಿಜಲಿಂಗವನು

ಹತ್ತು ಚಕ್ರದೊಳು-ಗೊತ್ತು ತೋರಿಸಿಕೊಟ್ಟ

ಸತ್ಯ ಸದ್ಗುರುವೆ ಕೃಪೆಯಾಗು  ೧೪೯ ||

 

ಶಿವಕವಿಯು ಹತ್ತು ಚಕ್ರಗಳಲ್ಲಿ ಇಷ್ಟಲಿಂಗದ ವ್ಯಾಪ್ತಿಯನ್ನು ಪ್ರತಿಪಾದಿಸಿ ಇಲ್ಲಿ ಉಪಸಂಹಾರಗೊಳಿಸುತ್ತಾನೆ ಮತ್ತು ಗುರುಕೃಪೆಗೆ ಉಪಕೃತಿಯನ್ನು ಸೂಚಿಸುತ್ತಾನೆ. ಜಗತ್ತಿನಲ್ಲಿ ಮರೆಯದ ವಸ್ತು ಉಪಕಾರಸ್ಮರಣೆ ಉಪಕೃತಿಯನ್ನು ಮರೆಯುವವನು ಮಾನವನೇ ಆಗಲಾರನು. ಪಶು-ಪಕ್ಷಿಗಳಲ್ಲಿಯೂ ಸಹ ಉಪಕಾರಸ್ಮರಣೆ ವ್ಯಕ್ತವಾಗುತ್ತದೆ. ಆದರೆ ಮುಂದುವರೆದಿದ್ದೇವೆಂಬ ಇಂದಿನ ಮಾನವರಲ್ಲಿ ಉಪಕೃತಿ ಸ್ಮರಣೆ ಕಡಿಮೆಯಾಗಹತ್ತಿದೆ. ಕೃತಜ್ಞನಾಗುವ ಬದಲು ಕೃತಘ್ನನಾಗುವ ಭಾವ ಅವರಲ್ಲಿ ಬೆಳೆಯಹತ್ತಿದೆ. ಇಳೆ-ಬೆಳೆ-ಮಳೆಯನ್ನಿತ್ತ ಮಾನವ ಜನ್ಮವನ್ನಿತ, ಮಹಾದೇವನನ್ನು ಸ್ಮರಿಸಬೇಕು. ಇದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಕ್ರಿಶ್ಚಿಯನ್ನರಲ್ಲಿ ಈ ಬಗೆಯ ಉಪಕೃತಿ ಸ್ಮರಣೆಗೆ ಪ್ರಾಧಾನ್ಯತೆಯಿದೆ. ಅವರು ಪ್ರತಿನಿತ್ಯವೂ ತಾವುಣ್ಣುವಾಗ ಆ ಭಗವಂತನನ್ನು ಪ್ರಾರ್ಥಿಸಿಯೇ ತೀರುತ್ತಾರೆ. ಇದು ಒಳ್ಳೆಯ ಸಂಸ್ಕಾರವು. ಆದ್ದರಿಂದ ಇಂಥ ಉಪಕಾರ ಸ್ಮರಣೆಯು ಬೆಳೆದು ಬರಲೆಂದೇ ಮಕ್ಕಳಿಗೆ ಒಳ್ಳೆ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ತನಗೆ ಏನಾದರೂ ಸಹಾಯಮಾಡಿದ ವ್ಯಕ್ತಿಗೆ ಧನ್ಯವಾದವನ್ನು ತೋರುವ ಸುಜ್ಞಾನವನ್ನು ಕರುಣಿಸಿದ ಗುರುವನ್ನು ಎಂದೂ ಮರೆಯಬಾರದು.

 

ಗುರುವೆ ! ನೀನು ನಿತ್ಯನೂ ಸತ್ಯನೂ ಆದ ಶಿವನಲ್ಲವೆ ! ಎನ್ನ ಮೇಲೆ ಕೃಪೆಮಾಡಿ ಸಂಸಾರ ಬಂಧನದಿಂದ ಮುಕ್ತನನ್ನಾಗಿಸಿದೆ. ಇಷ್ಟಲಿಂಗವನ್ನು ಕರುಣಿಸಿದೆ. ಲಿಂಗ ಸ್ವರೂಪವನ್ನೂ, ಮಹತ್ವವನ್ನು ತಿಳಿಸಿದೆ. ಲಿಂಗಧಾರಣೆಯ ಘನತೆಯನ್ನು ಬೀರಿದೆ. ಬಾಹ್ಯಧಾರಣೆಯಂತೆ ಆಂತರಿಕ ದಶಕಚಕ್ರಗಳಲ್ಲಿ ಲಿಂಗದ ಗೊತ್ತು ಗುರಿಯನ್ನು ತೋರಿಸಿಕೊಟ್ಟೆ. ಈ ಲಿಂಗವು ನಿತ್ಯವೂ ಸತ್ಯವೂ ಆದುದು. ಎನ್ನ ವಾಮಕರದಲ್ಲಿ ಕಾಣಿಸಿಕೊಂಡು ಎನ್ನ ಅಂಗಾಂಗಗಳೆಲ್ಲವನ್ನು ಲಿಂಗವನ್ನಾಗಿಸುವ ಮಹಾ  ಶಕ್ತಿಯುಳ್ಳುದು. ಇದೆಲ್ಲವೂ ನನಗೆ ಪ್ರಾಪ್ತವಾದುದು ನಿನ್ನ ಕೃಪೆಯಿಂದಲ್ಲದೆ ಬೇರೇನಿದೆ !

 

ಮಾತೃಋಣ, ಪಿತೃಋಣ, ಗುರುಋಣ ಈ ತ್ರಿವಿಧ ಋಣಗಳಲ್ಲಿ ಗುರು ಋಣವೇ ದೊಡ್ಡದು. ಗುರುಋಣವನ್ನು ತೀರಿಸಲು ಶಿಷ್ಯನು ಅತ್ಯಂತ ಪ್ರಯತ್ನ ಶೀಲನಾಗಬೇಕಾಗುವದು. ಗುರೂಪದೇಶವನ್ನು ಚೆನ್ನಾಗಿ ಅರಿತು ಆಚರಿಸಿ ಅನುಭವಿಯಾಗುವದರಿಂದಲೇ ಗುರುಋಣದಭಾರ ಕಡಿಮೆಯಾಗಬಲ್ಲುದು.