General

ಜ.ಚ.ನಿ

 

ಅರಿಯದರಂ ಸತ್ಪಥದೊಳ್

ನಿರಿಸಲ್ ತುತಿಪಳಿಗಳೊಳವು ಬುಧರ್ಗವು ಬೇಡಂ |

ಕಿರುವೆಂಚೆಗೆ ಕಟ್ಟುಂಟಾ-

ತೆರದಿಂ ವಾರಿಧಿಗೆ ಕಟ್ಟನಾರೆಸಗುವರೋ”

ನೀತಿ ಮಂಜರಿ

 

ಸಮಾಜದ ಭಕ್ತರಲ್ಲಿ ಒಳಪಂಗಡಗಳು, ವಿರಕ್ತರಲ್ಲಿ ಸಮಯ ಭೇದಗಳು ಸಾಲದೆ ಸಮಾಜ ಪುರುಷನಿಗೆ ಎರಡು ಕಣ್ಣುಗಳಂತಿರುವ ಗುರು ವಿರಕ್ತರು ನಾವು ಹೆಚ್ಚು ತಾವು ಹೆಚ್ಚೆಂದು ವಾದಿಸಿ ವಿದ್ವೇಷಕ್ಕೊಳಗಾದುದು ಸರ್ವರಿಗು ತಿಳಿದ ಸಂಗತಿ. ಈ ವೈರ ವಿಷವು ಸಮಾಜವನ್ನೇ ನಿರ್ವೀರವಾಗಿ ಮಾಡಿತ್ತು. ಈ ದಳ್ಳುರಿಯಿಂದ ದಗ್ಧವಾದ ಸಮಾಜದೇಳ್ಗೆ ಆಗಬೇಕಾದಷ್ಟಾಗದೆ ಮೊಟಗಾಗುತ್ತ ನಡೆದಿತ್ತು. ಜನಾಂಗದಲ್ಲಿ ಶಾಂತಿಯಿರಲಿಲ್ಲ. ಸ್ನೇಹವಿರಲಿಲ್ಲ. ಪರಸ್ಪರ ದೂಷಣೆ-ದೋಷಾರೋಪಣೆಯ ಸುರಿಮಳೆ ಸುರಿಯುತ್ತಿತ್ತು. ಮನೆ ಮನೆಯಲ್ಲಿ ಮತ್ಸರ ಪಕ್ಷಪಂಗಡ ಭಾಗ ವಿಭಾಗಗಳೇರ್ಪಟ್ಟವು. ತಂದೆ ಮಕ್ಕಳಿಗೆ ವ್ಯಾಜ್ಯ, ಅಣ್ಣ ತಮ್ಮಂದಿರಿಗೆ ವ್ಯಾಜ್ಯ ಬಂಧುಬಳಗದವರಿಗೆ ವ್ಯಾಜ್ಯ. ಕೊಡಕೊಳ್ಳುವುದಕ್ಕೆ ವ್ಯಾಜ್ಯ. ಹೀಗಾಗಿ ಪರಸಮಾಜಗಳಲ್ಲಿ ಪರಿಹಾಸಕ್ಕಿಟ್ಟಿತ್ತು. ಪರಸ್ಪರ ಸ್ನೇಹ ವಾತ್ಸಲ್ಯಗಳಿಲ್ಲದಾಗಿತ್ತು. ಇದನ್ನು ಕಂಡು ಕುಮಾರಯೋಗಿಗಳು ಕಡುನೊಂದರು. ಹೇಗಾದರು ಮಾಡಿ ಎಂತಾದರು ಮಾಡಿ ಗುರು-ವಿರಕ್ತರಲ್ಲಿ ಪರಸ್ಪರ ಸಹಕಾರ ಮೂಡಿಬರುವಂತೆ ಮಾಡಬೇಕೆಂದು ಮನಸ್ಸು ಮಾಡಿದ್ದಲ್ಲದೆ ಮಿತಿಮೀರಿ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಪ್ರವಾಹದ ಸೆಳೆತ ಸಣ್ಣದಾಗಿರಲಿಲ್ಲ. ಆದರು ಸ್ವಾಮಿಗಳವರು ಹಿಂಜರಿಯಲಿಲ್ಲ. ಕೆಚ್ಚೆದೆಯಿಂದ ಮುಂದುವರಿದರು. ಬೇಕಾದಷ್ಟು ಶ್ರಮಿಸಿದರು. ವೆಚ್ಚಮಾಡಿದರು. ಕೊನೆಗು ಅದು ಸಹಕಾರಕ್ಕೆ ಬಾರದೆ ಹೋಯಿತು. ಅಲ್ಲದೆ ಸ್ವಾಮಿಗಳವರ ಮೇಲೆ ಎರಡು ಕಡೆಗಳಿಂದಲು ಆಕ್ಷೇಪಣೆಯ ಬಿರುಸು ಬಾಣಗಳು ಬಂದು ಬೀಳತೊಡಗಿದವು. ಸತ್ಯ ಮಾರ್ಗಾನುಯಾಯಿಗಳಾದ ಸ್ವಾಮಿಗಳವರು ಆ ಬಾಣಗಳಿಗೆ ಭಯಬೀಳಲಿಲ್ಲ. ಅವರು ಬರೀ ಕೀರ್ತಿಗಾಗಿ ಮಾಡತಕ್ಕವರಲ್ಲ. ಮನಮೆಚ್ಚಿ ಸಮಾಜ ಶಾಂತಿಗಾಗಿ ಮಾಡಹೊರಟಿದ್ದರು. ಅದರಿಂದಾಗಿ ತಮ್ಮ ಸಮತಾಭಾವವನ್ನು ತಾವು ಅದೆಂದಿಗೂ  ಬಿಡಲಿಲ್ಲ.

ಸಮಾಜ ವೃಕ್ಷಕ್ಕೆ ಶ್ರೀಗುರುಗಳು ತಾಯ್ವೇರು. ಅವರನ್ನು ಹೀಗಳೆಯುವುದು ತರವಲ್ಲ. ಜಗದ್ಗುರು ಪಂಚಾಚಾರ್ಯರಂತಹ ಪೂಜ್ಯ ಪುರುಷರಿಂದ ಸಮಾಜ ಪರಿಪಾಲಿತವಾಗಿದೆ-ಆಗಬೇಕು ಎಂದು ಭಾವಿಸಿದ್ದರು.   ಸ್ವತಃ ತಾವೇ ಜಗದ್ಗುರು ಪಂಚಾಚಾರ್ಯರ ಮೇಲೆ ಪ್ರಾರ್ಥನೆಯ ಪದ್ಯಗಳನ್ನು ರಚಿಸಿದರು. ಹಾಗೆಯೆ ಬೋಧಿಸುತ್ತಿದ್ದರು. ಶಿವಯೋಗ ಮಂದಿರದ ವಟುಗಳಿಗು ಸಾಧಕರಿಗು ಕಲಿಸಿದರು. ನಿತ್ಯ ಭಜನೆಯಲ್ಲಿ ಹೇಳಿಸುತ್ತಿದ್ದರು.

ಗುರುಲಿಂಗ ಜಂಗಮರಲ್ಲಿ ಯಾವ ಹೆಚ್ಚು ಕಡಿಮೆಯಿಲ್ಲ. ಮೂರು ಒಂದೇ. ವ್ಯಕ್ತಿತ್ವ ಬೇರೆಯಾದರು ತತ್ವ ಒಂದೇ. ಜಂಗಮನಾದರು ಲಿಂಗ ಪೂಜಿಸುತ್ತಾನೆ. ಗುರುಧ್ಯಾನ ಮಾಡುತ್ತಾನೆ. ಹೊರಗೆ ಮಾತ್ರ ಗುರುವನ್ನು ಏಕೆ ಹೀಗಳೆಯಬೇಕು? ಲಿಂಗ ಆಚಾರಲಿಂಗ, ಗುರುಜಂಗಮರಿಬ್ಬರು ಚರಲಿಂಗಗಳು. ಪರಸ್ಪರ ಸಮಾನರು. ಗುರುವಾದರು ಲಿಂಗಪೂಜಿಸುತ್ತಾನೆ. ಜಂಗಮವನ್ನೇಕೆ ಜರಿಯಬೇಕು? ಗುರು ಜಂಗಮರಲ್ಲಿ ಕ್ರಿಯಾಚರಣೆ ದೃಷ್ಟಿಯಿಂದ ತರತಮ ಭಾವವಿದ್ದರೂ ತತ್ವತಃ ಯಾವ ಭೇದವಿಲ್ಲ. ಪರಸ್ಪರ ಪೂರಕಗಳಾಗಿವೆ. ಗುರುವಿರಕ್ತರಲ್ಲಿ ಪರಸ್ಪರ ಈ ಸಮಭಾವ ಸಮರತಿ ಸಮಕ್ರಿಯೆ ಬಾರದ ವಿನಹ ಸಮಾಜದ ಏಳ್ಗೆಯಿಲ್ಲ. ಸಾಮಾಜಿಕ ಶಾಂತಿ ಅದೊಂದು ಭ್ರಾಂತಿ; ಎಂಬುದು ಸ್ವಾಮಿಗಳವರ ದೃಢನಿಶ್ಚಯ; ದೃಢಪ್ರತ್ಯಯ

ಸ್ವಾಮಿಗಳವರ ಈ ಸಹಕಾರ ಈ ಸಮತೆ ಕೆಲವರಿಗೆ ಸರಿಬೀಳಲಿಲ್ಲ. ಶ್ರೀಗಳವರೆ ಕಾಶೀನಾಥ ಶಾಸ್ತ್ರಿಗಳವರನ್ನು ಎತ್ತಿಕಟ್ಟಿರುವರೆಂದು ಇಲ್ಲದ ಸಲ್ಲದ ಆರೋಪಣೆ ಮಾಡುತ್ತಿದ್ದರು. ಇದರಲ್ಲಿ ಎಷ್ಟು ಮಾತ್ರಕ್ಕು ಸತ್ಯಾಂಶವಿಲ್ಲ. ಸಮಾಜ ಅನೈಕ್ಯತೆಗೆ ಕಾರಣರಾದವರನ್ನು ಕಂಡರೆ ಸ್ವಾಮಿಗಳವರು ಎಷ್ಟೂ ಸಹಿಸುತ್ತಿರಲಿಲ್ಲ. ಅವರ ಪ್ರಚಾರವನ್ನು ಪ್ರತಿಭಟಿಸುತ್ತಿದ್ದರು. ಅವರಿಂದಾದ ಅನೈಕ್ಯತೆಗಾಗಿ ತುಂಬಾ ವ್ಯಥೆಗೊಳ್ಳುತ್ತಿದ್ದರು. ಐಕ್ಯತೆಗಾಗಿ ಕಂಡ ಕಷ್ಟಗಳಿಗೆ ಗುರಿಯಾಗುತ್ತಿದ್ದರು. ಕಡೆಯಿಲ್ಲದ ನಷ್ಟಕ್ಕೆ ಎರವಲಾಗುತ್ತಿದ್ದರು.

ಸಾಲದ್ದಕ್ಕೆ ವಿರಕ್ತ ವಿರಕ್ತರಲ್ಲಿಯೆ ಸಹಕಾರವಿರಲಿಲ್ಲ; ಸೌಹಾರ್ದತೆ ಇರಲಿಲ್ಲ. ನಾಲ್ವರು ನಾಲ್ಕು ದಿಕ್ಕಾಗಿದ್ದರು. ಇವರುಗಳ ಐಕ್ಯತೆಯನ್ನಾದರು ಮಾಡಬೇಕೆಂದು ಸೀಮೆಯಿಲ್ಲದ ಸಾಹಸಪಟ್ಟರು. ಒಮ್ಮೆ ವಿರಕ್ತ ಸಮ್ಮೇಲನವನ್ನು ಶಿವಯೋಗ ಮಂದಿರದಲ್ಲಿಯೆ ಕರೆದರು. ಆಗ ಅನೇಕರು ಆಗಮಿಸಿದರು. ಅವರಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರಘಾಮಠದ ಶ್ರೀಗಳು, ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀಗಳು ಪ್ರಮುಖರು. ಇವರಿಬ್ಬರನ್ನು ಒಂದೆಡೆಗೆ ಸೇರಿಸಲು ಹಾನಗಲ್ಲ ಶ್ರೀಗಳವರು ಹಗಲಿರುಳೆಲ್ಲ ಶ್ರಮಿಸಿದರು. ಭಗೀರಥ ಪ್ರಯತ್ನದಿಂದ ಕೊನೆಗೆ ಒಂದೆಡೆಯಲ್ಲಿ ಕೂಡಿಸಿಯೇ ಬಿಟ್ಟರು. ಆದರೆ ಅದು ಕೊನೆಯವರೆಗು ಬಾಳಲಿಲ್ಲ. ಹಿಸುಕಿ ಹಣ್ಣು ಮಾಡಿದಲ್ಲಿ ಕಾಯಿ ಹಣ್ಣಾಗುವುದೆ ? ಯಾವುದಕ್ಕೂ ಮನಸ್ಸು ಬೇಕು. ಆತ್ಮೀಯತೆ ಬೇಕು. ಅಂತು ಬೀಜಾವಾಪ ಮಾಡಿದರು. ಬಿತ್ತಿದ ಬೀಜ ಬಿತ್ತಿದ ದಿನವೆ ಮೊಳಕೆ ಹಾಕದು. ಅದಕ್ಕು ಒಂದು ಅವಕಾಶ ಬೇಕು. ತಕ್ಕ ವಾತಾವರಣ ಬೇಕು. ಅಂದು ಸ್ವಾಮಿಗಳವರು ಬಿತ್ತಿದ ಬೀಜ ಇದೀಗ ನೆನೆದು ಮೊಳಕೆ ಹಾಕಿದೆ. ಇತ್ತೀಚೆಗೆ ಬೇರೆಬೇರೆ ಸಮಯದವರು ಸೇರತೊಡಗಿದ್ದಾರೆ. ಕೂಡಿ ಶಿವಪೂಜೆ ಮಾಡತೊಡಗಿದ್ದಾರೆ. ಇನ್ನೂ ಸಾಲದು. ಸುಳಿದೆಗೆದು ಬೆಳೆಯಬೇಕು. ಸುಮ ಅರಳಿ ಸುವಾಸಿಸಬೇಕು.

ಇದೀಗ ಗುರು-ವಿರಕ್ತರ ದ್ವೇಷ ದಳ್ಳುರಿಯು ಹೊರಗೆ ಉರಿಯದಿದ್ದರು ಒಳಗೆ ಹೊಗೆಯಾಡುತ್ತಿದೆ. ಬಸವಣ್ಣನವರ ಕಿರಿಯ ಭಾವದ ಶರಣುಮಾರ್ಗದ ತಣ್ಣೀರು ಒಳಗೆ ಬೀಳದ ಹೊರತು ಬಳಕೆಗೆ ಬಾರದ ಹೊರತು ಅದು ನಂದುವಂತಿಲ್ಲ. ನ೦ದಿಸುವಂತಿಲ್ಲ.

ಹಿರಿಯರಿಗಿಂತಲು ಕಿರಿಯರಲ್ಲಿ ನಾವೇ ಹೆಚ್ಚಿನವರೆಂಬ ಹೆಮ್ಮೆ ಹೆಚ್ಚಿಹೋಗಿದೆ. ಅದರಲ್ಲಿಯು ಸ್ವಾಮಿಗಳಂತಹ ಸಮತಾಭಾವಿಗಳ ಶಿಷ್ಯ ಸಮುದಾಯದಲ್ಲಿ ಆ ಭಾವ ಹೆಮ್ಮೆ ಹೆಚ್ಚುತ್ತಿರುವುದು ವಿಷಾದಾಸ್ಪದವಾದುದು, ವಿಚಾರಾಸ್ಪದವಾದುದು. ಭಕ್ತರ ಒಳಪಂಗಡಗಳ ವಿಷಯದಲ್ಲಿಯು ಶ್ರೀಗಳವರಿಗೆ ತುಂಬಾ ಅಸಮಾಧಾನವಿತ್ತು. ಅವನ್ನೆಲ್ಲ ಅಳಿಯಲು ಅವಿಶ್ರಾಂತ ಶ್ರಮಿಸಿದರು. ಸಾಮ್ಯವಾದವು ಸಾಗಿಬರುವ ಈ ಕಾಲದಲ್ಲಿಯಾದರು ವಿವೇಚನೆಯಿಂದ ಆ ತರತಮ ಭಾವವನ್ನು ಸಂಕುಚಿತ ಸ್ವಭಾವವನ್ನು ತೆಗೆದುಹಾಕುವದಾದರೆ ಸಮಾಜಕ್ಕೆ ಲೇಸಾದೀತು. ಶ್ರೀಗಳವರ ಶ್ರಮ ಸಾರ್ಥಕವಾದೀತು. ಅವರ ದಿವ್ಯ ಆತ್ಮಕ್ಕೆ ಆನಂದವೆನಿಸಿತು.

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಯೇಷಾಂ ನ ವಿದ್ಯಾ ನ ತಮೋ ನ ದಾನಂ।

ನ ಜ್ಞಾನಂ ಚ ಶೀಲಂ ನ ಗುಣೋ ನ ಧರ್ಮಃ||

ತೇ ಮೃತ್ಯುಲೋಕೇ ಭುವಿಭಾರಭೂತಾ।

ಮನುಷ್ಯರೂಪೇಣ ಮೃಗಾಶ್ಚರಂತಿ  ||

ವಿದ್ಯಾವಿನಯ ಸಂಪನ್ನನಾಗಿ ತಪೋನಿಷ್ಠನಾಗಿ, ದಾನಶೀಲನಾಗಿ, ಜ್ಞಾನಿಯಾಗಿ, ಸಚ್ಚಾರಿತ್ರ್ಯವುಳ್ಳವನಾಗಿ, ಧರ್ಮವಂತನಾಗಿ, ಗುಣವಂತನಾಗಿ ಬದುಕುವುದೇ ಮನುಷ್ಯನ ನಿಜವಾದ ಬದುಕು. ಇದಕ್ಕೆ ವ್ಯತಿರಿಕ್ತವಾಗಿ ಬದುಕುವವರು ಮನುಷ್ಯರಲ್ಲ. ಅವರು

ಭೂಮಿಗೆ ಭಾರವಾದ ಮನುಷ್ಯರೂಪದ ಪಶುಗಳು ಎಂದು ಸುಭಾಷಿತವೊಂದು ಹೇಳುತ್ತದೆ. ಮೂಲತಃ ಮನುಷ್ಯ ಅನೇಕ ಗುಣಗಳ ಸಂಗಮವಾಗಿದ್ದಾನೆ. ಅವನಲ್ಲಿರುವ ಗುಣಗಳ ವಿಶ್ಲೇಷಣೆಯಿಂದ ಇವನು ಒಳ್ಳೆಯವ, ಇವನು ಕೆಟ್ಟವ ಎಂದು ನಿರ್ಧರಿಸುತ್ತೇವೆ. ಸದ್ಗುಣಗಳನ್ನು ಹೊಂದಿದವನನ್ನು ದೇವಮಾನವ, ಮಹಾತ್ಮ ಎಂದೂ, ದುರ್ಗುಣಗಳುಳ್ಳವನನ್ನು ದುಷ್ಟ, ರಾಕ್ಷಸ ಎಂದೂ ಕರೆಯುತ್ತೇವೆ. ಆದ್ದರಿಂದ ಒಳ್ಳೆಯ ವ್ಯಕ್ತಿತ್ವವನ್ನು ಬಯಸುವವರು ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದುದು ಅತ್ಯವಶ್ಯ.

ಸದ್ಗುಣ ಸಂಪನ್ನರಾದವರು ಲೌಕಿಕ ಧನಸಂಪತ್ತಿಗಿಂತಲೂ ಸದ್ಗುಣಗಳನ್ನೇ ತಮ್ಮ ನಿಜವಾದ ಸಂಪತ್ತು ಎಂದು ಭಾವಿಸುತ್ತಾರೆ. ಅಂತಃಕರಣವನ್ನು ಪರಿಶುದ್ಧಗೊಳಿಸಿಕೊಂಡ ಅವರು ಸದಾ ಸತ್ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಕಾಯಾ ವಾಚಾ ಮನಸಾ ಯಾರಿಗೂ ಹಿಂಸೆಯನ್ನು ಮಾಡದಿರುವುದು, ಪ್ರಿಯವಾದ ಸತ್ಯವನ್ನು ಮಾತನಾಡುವುದು, ಧೈರ್ಯಶಾಲಿಗಳಾಗಿರುವುದು, ಕ್ಷಮಾಶೀಲರಾಗಿರುವುದು ಅವರ ಸಹಜ ಸ್ವಭಾವವಾಗಿರುತ್ತದೆ. ಅವರೆಂದೂ ಅನ್ಯರನ್ನು ನಿಂದಿಸುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ. ಸದಾ ಭಗವಂತನ ನಾಮಸ್ಮರಣೆಯಲ್ಲಿ ಕಾಲ ಕಳೆಯುವ ಅವರು, ತಮ್ಮ ಮೃದು ಮಧುರ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಸರ್ವೇಂದ್ರಿಯಗಳನ್ನು ವಿಷಯಗಳಿಂದ ವಿಮುಖಗೊಳಿಸಿ, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಮೆಟ್ಟಿ ದೈವೀಪುರುಷರಾಗಿ ಕಂಗೊಳಿಸುತ್ತಾರೆ. ಇಂಥ ಸದ್ಗುಣ ಸಂಪನ್ನ ದೈವೀಪುರುಷರು ವಿಶ್ವವನ್ನೇ ಮನೆಯಾಗಿಸಿಕೊಂಡ ವಿಶ್ವಕುಟುಂಬಿಗಳು. ಅಂತೆಯೇ “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎಂಬ ಮಾತು ಅತ್ಯಂತ ಪ್ರಚಲಿತವಾಗಿರುತ್ತದೆ.

ದುರ್ಗುಣಿಗಳ ಜೀವನಶೈಲಿ ಸದ್ಗುಣಿಗಳ ಜೀವನಶೈಲಿಗೆ ತೀರ ಭಿನ್ನವಾದುದು. ಕಾಮಕ್ರೋಧಾದಿಗಳಿಗೆ ದಾಸರಾಗಿ ವಿಷಯಭೋಗಗಳಲ್ಲಿ ಕಾಲಕಳೆಯುವ ದುರ್ಗುಣಿಗಳು ಲೋಕಕಂಟಕರಾಗಿ ಜೀವನ ನಡೆಸುತ್ತಾರೆ. ಸದಾ ಅಹಂಕಾರ ಮಮಕಾರಗಳಿಂದ ಬೀಗುವ ಅಜ್ಞಾನಿಗಳಿವರು. ಅನ್ಯಾಯ, ಅನೀತಿ, ಅನಾಚಾರಗಳಲ್ಲಿ ನಿರತರಾದ ಇವರು ದ್ವೇಷಾಸೂಯೆಗಳಲ್ಲಿ, ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಇಂಥ ವ್ಯಕ್ತಿಗಳನ್ನು ಕುರಿತು

“ಅನೇಕ ಚಿತ್ತ ವಿಭ್ರಾಂತಾ ಮೋಹಜಾಲ ಸಮಾವೃತಾಃ |

ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಶುಚೌ॥

ಅಂದರೆ, ಅಜ್ಞಾನದಿಂದ ಭ್ರಮಿತ ಚಿತ್ತ(ಹುಚ್ಚ)ರಾದ ದುರ್ಗುಣಿಗಳು ಮೋಹಜಾಲದಲ್ಲಿ ಸಿಕ್ಕು ವಿಷಯಲಂಪಟರಾಗಿ ಘೋರ ನರಕಕ್ಕೆ ಭಾಜನರಾಗುತ್ತಾರೆ. ಎಂದು ಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಹಪರಗಳಲ್ಲಿ ಸುಖಾಪೇಕ್ಷಿಗಳಾದ ಮನುಷ್ಯರು ಶ್ವೇಚ್ಛಾಚಾರಿಗಳಾಗದೆ ತಮ್ಮಲ್ಲಿರುವ ದುರಿತ ದುರ್ಗುಣಗಳನ್ನು ಬಿಟ್ಟು ಸದ್ಗುಣ ಸಂಪನ್ನರಾಗಬೇಕು. ತ್ಯಾಗಜೀವಿಗಳಾದ ಸದ್ಗುಣಿಗಳೇ ಪರಮಶಾಂತಿಯನ್ನು ಪಡೆಯುವರು. ದೇವಮಾನವರೆಂಬ ಖ್ಯಾತಿಗೆ ಅರ್ಹರಾಗುವರು.

ಫ. ಗು. ಹಳಕಟ್ಟಿ, ವಿಜಾಪೂರ

 ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

 

ಷಟಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯ ಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಪಟಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ. ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದುಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ  ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತಿಗಳು ತಮ್ಮ ಸಿದ್ದಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಣ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳಿ ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು, ಓಜಸ್ಸುಂಟು. ವಚನಗ್ರಂಥಗಳಲ್ಲಿ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ಮಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ನಡಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕ್ತೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿಂದಲೆ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ, ನುಡಿದಂತೆ ನಡೆಯುವುದಿಲ್ಲ. ಆದ್ದರಿಂದ ಇವರ ಮಾತಿನಲ್ಲಿ ಬಲವಿರುವದಿಲ್ಲ.  ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯ ಉತ್ಪನ್ನವಾಗಿರುತ್ತದೆ.

ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಚೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜಂಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ಧಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮಯವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಅತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳ ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧೈಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಕೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಬಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ದಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ  ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬಾಯಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

 ಹರ್ಡೆಕರ ಮಂಜಪ್ಪನವರು

 

ಈ ಪ್ರಪಂಚದಲ್ಲಿ ಮನುಷ್ಯನು ಸುಖ ಶಾಂತಿಗಳಿಂದ ಜೀವಿಸಬೇಕೆಂದು ಅನೇಕ ಮಹಾತ್ಮರು ಪ್ರತಿಯೊಂದು ಕಾಲದಲ್ಲಿಯೂ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆ ಎಲ್ಲ ಪ್ರಯತ್ನಗಳೂ ಮನುಷ್ಯ ಜಾತಿಯ ಸುಖಸಮಾಧಾನಗಳನ್ನು ಹೆಚ್ಚಿಸಲು ಕಾರಣವಾಗಿಯೂ ಪರಿಣಮಿಸಿದವು. ಆದರೆ ಆ ಸುಖಶಾಂತಿಗಳು ಮಾತ್ರ ಸ್ಥಿರಗೊಳ್ಳಲಿಲ್ಲ ಮತ್ತು ಸ್ಥಿರಗೊಳ್ಳುವುದೂ ಇಲ್ಲ. ಏಕೆಂದರೆ, ಮನುಷ್ಯ ಪ್ರಾಣಿಯು ಬೇರೆ ಪ್ರಾಣಿಗಳಂತೆ ಕ್ಲೃಪ್ತವಾದ ಇಚ್ಛಾಸ್ಥಿತಿ ಪರಿಮಿತಿಗಳಿಂದ ಕೂಡಿರುವುದಿಲ್ಲ. ಆದುದರಿಂದ ಸುಖ ಶಾಂತಿಗಳನ್ನು ಪ್ರಸ್ಥಾಪಿಸಲು ಯಾವಾಗಲೂ ಸಾಧನೋಪಾಯಗಳನ್ನು ವ್ಯತ್ಯಸ್ತಗೊಳಿಸುತ್ತಿರಬೇಕಾಗುತ್ತದೆ. ಒಂದು ಕಾಲದಲ್ಲಿ ಅವಶ್ಯಕವೆಂದು ಏರ್ಪಟ್ಟ ಸಾಧನೋಪಾಯಗಳು ಇನ್ನೊಂದು ಕಾಲದಲ್ಲಿ ಅನಾವಶ್ಯಕವಾಗಿ ಪರಿಣಮಿಸುತ್ತವೆ. ಒಂದು ಪ್ರಸಂಗದಲ್ಲಿ ಸುಖ ಶಾಂತಿಗಳನ್ನುಂಟು ಮಾಡಿದ ನಿಯಮಾಚಾರಗಳು ಇನ್ನೊಂದು ಪ್ರಸಂಗದಲ್ಲಿ ದುಃಖ ಅಶಾಂತತೆಗಳನ್ನೇ ಉಂಟು ಮಾಡುತ್ತವೆ. ಆದುದರಿಂದ ಒಂದು ಸಮಯದಲ್ಲಿ ಯಾವ ಆಚಾರ ವಿಚಾರಗಳನ್ನು ಜನಾಂಗದಲ್ಲುಂಟುಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುತ್ತದೆಯೋ ಅವೇ ಆಚಾರ ವಿಚಾರಗಳನ್ನು ಇನ್ನೊಂದು ಸಮಯದಲ್ಲಿ ನಿವಾರಣೆ ಮಾಡುವುದು ಮಹತ್ಕಾರ್ಯವಾಗಿ ಪರಿಣಮಿಸುವುದು. ಈ ಪ್ರಕಾರ ಮನುಷ್ಯಜಾತಿಯ ಸುಖಶಾಂತಿಗಳಿಗಾಗಿ ಕಾಲ ಭಿನ್ನತ್ವದಂತೆ ಕಾರ್ಯ ಭಿನ್ನತ್ವವೂ ಅವಶ್ಯಕವಾಗಿ ಸಂಭವಿಸುವುದು.

ಬಾಲ್ಯದಲ್ಲಿ ಉಪಯೋಗಿಸಿದ ಉಡಿಗೆ ತೊಡಿಗೆಗಳನ್ನೇ ಯೌವನದಲ್ಲಿಯೂ ಉಪಯೋಗಿಸಲಿಕ್ಕೆ ಬರುತ್ತದೆಯೇ?   ಶೀತಕಾಲದಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳನ್ನು ಬೇಸಿಗೆಯ ಕಾಲದಲ್ಲಿಯೂ ಉಪಯೋಗಿಸಬಹುದೇ? ಕಾಲ ಸ್ಥಿತಿಗಳಂತೆ ಇವುಗಳನ್ನು ಬೇರೆ ಮಾಡುವುದೇ ಹೇಗೆ ಕ್ಷೇಮಕರವಾಗಿದೆಯೋ ಹಾಗೆಯೇ ಕಾಲಸ್ಥಿತಿಗಳಿಗನುಗುಣವಾಗಿ ಸಾಧನೋಪಾಯಗಳನ್ನು ಭಿನ್ನಗೊಳಿಸುವುದೇ ಜನಾಂಗದ ಸುಖಶಾಂತಿಗಳಿಗೆ ಕಾರಣವಾಗಿದೆ. ಮನುಷ್ಯನು ಕಾಲಸ್ಥಿತಿಗಳಿಗನುಸರಿಸಿ ತನ್ನ ಉಡುಪಿನಲ್ಲಿ ಎಷ್ಟೇ ವ್ಯತ್ಯಸ್ತ ಮಾಡಿಕೊಂಡರೂ ಬಟ್ಟೆಯು ಮಾತ್ರ ಹೇಗೆ ಬೇಕೇ ಬೇಕಾಗಿದೆಯೋ ಹಾಗೆಯೇ ಜನಾಂಗದ ಸುಖಶಾಂತಿಗಳಿಗಾಗಿ ಎಷ್ಟೋ ಭಿನ್ನ ಪ್ರಯತ್ನಗಳು ನಡೆದರೂ ಅವುಗಳಿಗೆಲ್ಲ ಮೂಲ ಭೂತವಾದ ನೈತಿಕ ಬಲವು ಮಾತ್ರ ಬೇಕೇ ಬೇಕಾಗುತ್ತದೆ.

ಭಗವಾನ್ ಬುದ್ಧದೇವರು ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಮಾಡಿದ ಧರ್ಮ ಪ್ರಸಾರವಾಗಲಿ, ಹನ್ನೆರಡನೆಯ ಶತಮಾನದಲ್ಲಿ ಮಹಾನುಭಾವರಾದ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆಯಾಗಲಿ, ಈ ಇಪ್ಪತ್ತನೆಯ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರು ಮಾಡುತ್ತಿರುವ ರಾಜಕೀಯ ಕ್ರಾಂತಿಯಾಗಲಿ ಎಷ್ಟೇ ಭಿನ್ನ ಸ್ವರೂಪದವುಗಳಾಗಿ ತೋರಿದರೂ ಅವುಗಳ ಸಾಧನೋಪಾಯಗಳು ಎಷ್ಟೇ ವ್ಯತ್ಯಸ್ತವಾಗಿದ್ದರೂ ಅವುಗಳಲ್ಲೆಲ್ಲಾ ಮನುಷ್ಯ ಜಾತಿಯ ಸುಖಶಾಂತಿಗಳಿಗೆ ಮೂಲಾಧಾರವಾದ ಸಮಾನತ್ವ ಮತ್ತು ಸ್ವಾತಂತ್ರ್ಯ ತತ್ವಗಳು ಮಾತ್ರ ಸಂಪೂರ್ಣವಾಗಿ ಇದ್ದೇ ಇವೆ. ಈ ಉಭಯ ತತ್ವಗಳು ಧಾರ್ಮಿಕ ವಿಷಯದಲ್ಲಾಗಲಿ ಅಥವಾ ಸಾಮಾಜಿಕ ವಿಷಯದಲ್ಲಾಗಲಿ, ಇಲ್ಲವೆ ರಾಜಕೀಯ ಸಂಗತಿಗಳಲ್ಲಾಗಲಿ ಯಾವ ಪ್ರಮಾಣದಂತೆ ಕಡಿಮೆಯಾಗುತ್ತವೆಯೋ ಆ ಪ್ರಮಾಣ ದಂತೆ ಜನಾಂಗದಲ್ಲಿ ಸುಖಶಾಂತಿಗಳೂ ಕಡಿಮೆಯಾಗುತ್ತವೆ. ಆಗ ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಜನಾಂಗದಲ್ಲಿ ಪುನಃ ಪ್ರಸ್ತಾಪಿಸಲು ಮಹಾಮಹಾ ವಿಭೂತಿಗಳು ಆಗಿನ ಸ್ಥಿತಿಗನುಗುಣವಾದ ಭಿನ್ನ ಭಿನ್ನ ಬಾಹ್ಯ ಸಾಧನೋಪಾಯಗಳಿಂದ ಪ್ರಯತ್ನಿಸುತ್ತಾರೆ. ಏಕೆಂದರೆ, ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಲ್ಲಿಯೇ ಸುಖ ಮತ್ತು ಶಾಂತಿಗಳಿವೆಯೆಂಬುದು ಮನುಷ್ಯ ಜಾತಿಯ ಬಹುಕಾಲದ ಅನುಭವದಿಂದ ಸಿದ್ಧವಾದ ಸಂಗತಿಯಾಗಿದೆ.

ಈ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಹೇಗೆ ಪ್ರಾಪ್ತವಾಗುತ್ತವೆ? ಇವುಗಳನ್ನು ಜನಾಂಗದಲ್ಲಿ ಹೇಗೆ ಪ್ರಸ್ತಾಪಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ನಮ್ಮ ಶಿವಶರಣರ ಸಂದೇಶವೇ ಉತ್ತರವಾಗಿದೆ. ದೇಶ, ಜಾತಿ, ಉದ್ಯೋಗ, ಸಂಪತ್ತು ಮೊದಲಾದ ಕೃತ್ರಿಮ ಸಾಧನ ಸೌಲಭ್ಯಗಳಿಂದ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ವ್ಯಕ್ತಿಗೆ ಪ್ರಾಪ್ತವಾಗಬಾರದು. ಒಂದು ದೇಶದವರೆಂದಾಗಲಿ ಅಥವಾ ಒಂದು ಜಾತಿಯವರೆಂದಾಗಲಿ ಇಲ್ಲವೆ ಉದ್ಯೋಗ ಸಂಪತ್ತುಗಳ ಬಲದಿಂದಾಗಲಿ ಶ್ರೇಷ್ಠ ಕನಿಷ್ಠರೆಂದು ಎಣಿಸಬಾರದು. ಮನುಷ್ಯನಿಗೆ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಆತನಲ್ಲಿರುವ ನೈತಿಕ ಬಲದಿಂದಲೇ ಪ್ರಾಪ್ತವಾಗಬೇಕು. ಈ ನೈತಿಕ ಬಲವನ್ನು ಪ್ರಪಂಚದಲ್ಲಿ ಪ್ರಸ್ತಾಪಿಸುವವರೇ ಮನುಷ್ಯ ಜಾತಿಯ ಸುಖಶಾಂತಿಗಳನ್ನು ಹೆಚ್ಚಿಸುತ್ತಾರೆ. ಒಂದು ವ್ಯಕ್ತಿಯಲ್ಲಾಗಲಿ ಅಥವಾ ಒಂದು ಜನಾಂಗದಲ್ಲಾಗಲಿ ನೈತಿಕ ಬಲವಿಲ್ಲದಿದ್ದರೆ ಆ ವ್ಯಕ್ತಿಯು ಅಥವಾ ಜನಾಂಗವು ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನನುಭವಿಸಲು ಅಧಿಕಾರಿಯಲ್ಲ. ಈ ಸಮಾನತ್ವ ಮತ್ತು ಸ್ವಾತಂತ್ರ್ಯ ಗಳಿಲ್ಲದಿದ್ದ ಮೇಲೆ ಸುಖ ಮತ್ತು ಶಾಂತಿಗಳು ದೊರೆಯುವುದೆಂತು? ಆದಕಾರಣ ಯಾವ ವ್ಯಕ್ತಿಯು ಅಥವಾ ಜನಾಂಗವು ಸುಖ ಮತ್ತು  ಶಾಂತಿಗಳನ್ನಪೇಕ್ಷಿಸುತ್ತದೆಯೋ ಸುಖಶಾಂತಿಗಳು ಐಹಿಕವಾದವುಗಳೇ ಇರಲಿ ಅಥವಾ ಪಾರಲೌಕಿಕವಾದವುಗಳೇ ಇರಲಿ, ಮೊದಲು ನೈತಿಕ ಬಲವನ್ನು ಸಂಪಾದಿಸಬೇಕು. ಆ ನೈತಿಕ ಬಲದ ನ್ಯೂನಾಧಿಕಗಳ ಮೇಲಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳು ಪ್ರಾಪ್ತವಾಗ ಬೇಕು. ಈ ನೈತಿಕ ಬಲದ ವಿನಾ ಮನುಷ್ಯನಿಗೆ ಇಹಲೋಕದ ಸುಖಶಾಂತಿಗಳೇ ದೊರೆಯದಿದ್ದ ಮೇಲೆ ಪರಲೋಕದ ಮಾತೇಕೆ ? ನೈತಿಕ ಬಲವಿಲ್ಲದವರಿಗೆ ಸುಖಶಾಂತಿಗಳಿಲ್ಲವೆಂಬುದೇ ನಮ್ಮ ಶಿವಶರಣರ ಸಂದೇಶವು, ನೈತಿಕ ಬಲವಿಲ್ಲದವರಿಗೆ ಮನುಷ್ಯರೇ ಮೆಚ್ಚದಿರುವಾಗ ಶಿವನು ಮೆಚ್ಚುವನೇ? ಶಿವನನ್ನು ಒಲಿಸಿಕೊಳ್ಳ ಬೇಕೆಂಬುವವರು ಮೊದಲು ನೈತಿಕ ಬಲಶಾಲಿಗಳಾಗಬೇಕು. ಆದುದರಿಂದ ಮಹಾನುಭಾವರಾದ ಬಸವಣ್ಣನವರು ಈ ಪ್ರಕಾರ ಮನುಷ್ಯಜಾತಿಗೆ ತಮ್ಮ ಸಂದೇಶವನ್ನು ಸೂಚಿಸಿದ್ದಾರೆ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯವ ನುಡಿಯಲು ಬೇಡ. ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವ ನೊಲಿಸುವ ಪರಿ.

ಸತ್ಯ, ಅಹಿಂಸೆ, ಅಸ್ತೇಯ ಮೊದಲಾದ ನೈತಿಕ ಆಚರಣೆಗಳೇ ಸದಾಚಾರಗಳು. ಇವುಗಳಿಂದಲೇ ಮನುಷ್ಯನು ಪವಿತ್ರನೂ, ಪ್ರತಾಪಿಯೂ ಆಗುತ್ತಾನೆ. ಇವುಗಳ ವಿನಾ ಯಾವ ಸುಖಶಾಂತಿಗಳೂ ದೊರೆಯುವುದಿಲ್ಲ. ಕಳ್ಳತನ, ಸುಳ್ಳು, ಮೋಸ, ವ್ಯಭಿಚಾರಾದಿ ದುರಾಚಾರಗಳಲ್ಲಿರುವವರು ಎಷ್ಟೇ ಪೂಜೆ, ಜಪ, ತಪಗಳನ್ನು ಮಾಡಿದರೂ ವ್ಯರ್ಥವೇ ಸರಿ. ಅವರು ಯಾವ ಜಾತಿಯಲ್ಲಿ ಹುಟ್ಟಿದರೂ ಎಂಥ ಉದ್ಯೋಗ ಮಾಡುತ್ತಿದ್ದರೂ, ಎಷ್ಟು ಧನಿಕರಾಗಿದ್ದರೂ ಮನುಷ್ಯವರ್ಗದಲ್ಲಿ ಅತ್ಯಂತ ಕೀಳು ಸ್ಥಿತಿಯಲ್ಲಿರತಕ್ಕವರೇ ಸರಿ. ಇಂತಹ ನೈತಿಕ ಬಲವಿಲ್ಲದ ಅನಾಚಾರಿಗಳಿಗೆ ಶಿವನು ಒಲಿಯುವುದಿಲ್ಲವೆಂಬುದೇ ಶಿವಶರಣರ ಸಂದೇಶವು. ಆದುದರಿಂದ ಮಹಾಶಿವ ಶರಣರಾದ ಸಕಳೇಶ ಮಾದರಸರು ಈ ಪ್ರಕಾರ ಹೇಳಿದ್ದಾರೆ.

ಜನಮೆಚ್ಚಿ ಶುದ್ಧನಲ್ಲದೆ, ಮನಮೆಚ್ಚಿ ಶುದ್ಧನಲ್ಲವಯ್ಯ, ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯ, ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವಯ್ಯ. ಧನ ದೊರಕದೆ ನಿಸ್ಪೃಹನಲ್ಲದೆ ಧನದೊರಕಿ ನಿಸ್ಪೃಹನಲ್ಲವಯ್ಯ. ಏಕಾಂತದ್ರೋಹಿ. ಗುಪ್ತಪಾತಕಿ. ಯುಕ್ತಿ ಶೂನ್ಯಂಗೆ ಸಕಳೇಶ್ವರ ದೇವರು ಒಲಿ ಒಲಿ ಎಂದರೆ ಎಂತೊಲಿವನಯ್ಯ?

ಇದರ ಮೇಲಿಂದ ನೈತಿಕ ಬಲವಿಲ್ಲದವರ ಧರ್ಮಾಚಾರಗಳು ಡಂಭಾಚಾರಗಳಾಗಿಯೇ ಪರಿಣಮಿಸುತ್ತವೆಂದು ಶಿವಶರಣರು ಸ್ಪಷ್ಟವಾಗಿ ಹೇಳಿರುತ್ತಾರೆಂದು ಗೊತ್ತಾಗುವುದಿಲ್ಲವೇ ಧಾರ್ಮಿಕ ಶಕ್ತಿಯನ್ನೂ ಸುಖಾನಂದಗಳನ್ನು ಹೊಂದಲಪೇಕ್ಷಿಸುವ ಪ್ರತಿಯೊಂದು ವ್ಯಕ್ತಿಯೂ ಮೊದಲು ನೈತಿಕಚಾರನಿಷ್ಟನಾಗಲೇ ಬೇಕೆಂಬುದು ಸ್ಪಷ್ಟವಾಗುವುದಿಲ್ಲವೇ? ನಾವು ನಾನಾ ಅನೀತಿಗಳಿಂದ ಆಚರಿಸುತ್ತ ಧಾರ್ಮಿಕ  ವೇಷಭಾಷೆಗಳಿಂದ ಶೋಭಾಯಮಾನರಾದರೆ ಫಲವೇನು? ಶಿವನು ಮೆಚ್ಚುವನೇ? ಜನರನ್ನು ಮೋಸಗೊಳಿಸಿ ಧಾರ್ಮಿಕರೆಂದು ಹೇಳಿಸಿಕೊಳ್ಳುವುದೇ ಕಷ್ಟವಾಗಿರುವಾಗ ಶಿವನನ್ನು ಮೋಸಗೊಳಿಸುವ ಹವ್ಯಾಸವೇಕೆ? ಮಹಾನುಭಾವರಾದ ಬಸವಣ್ಣನವರು ಹೇಳಿರುವುದೇನಂದರೆ

ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ. ಪಾಪಿ ಹೂವನೇರಿಸಿದರೆ ಮಸೆದಾಯುಧದ ಗಾಯ. ಕೂಪರನಾರನೂ ಕಾಣೆ, ಮಾದರ ಚೆನ್ನಯ್ಯನಲ್ಲಿದೆ. ಕೂಪರನಾರನೂ ಕಾಣೆ ಡೋಹರ ಕಕ್ಕಯ್ಯನಲ್ಲದೆ. ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ ನಿಮ್ಮ ಪತ್ತಿಗರಿವರಯ್ಯ ಕೂಡಲಸಂಗಮದೇವ.

ಹೆಚ್ಚಿನ ಕುಲದವರೆಂದಾಗಲಿ ಹೆಚ್ಚು ಶಿವಪೂಜೆಯನ್ನು ಮಾಡುತ್ತಾರೆಂದಾಗಲಿ ಶಿವನು ಪ್ರೀತಿಸುವುದಿಲ್ಲ. ಮಾದಾರ ಚೆನ್ನಯ್ಯನವರೇ ಮೊದಲಾದ ಮಹಾಶಿವ ಶರಣರು ನೈತಿಕ ಬಲಶಾಲಿಗಳಾಗಿ ಶಿವನನ್ನು ಪೂಜಿಸಿದ್ದರಿಂದಲೇ ಆತನ ಪ್ರೀತಿಗೆ ಪಾತ್ರರಾದರು. ಕೋಪ ಪಾಪಗಳಿಂದ ಕೂಡಿದವರು ಯಾವ ಕುಲದವರಾಗಲಿ, ಅವರು ಎಂತಹ ವೈಭವದಿಂದ ಪೂಜೆಗಳನ್ನು ಮಾಡಲಿ., ಶಿವನಿಗೆ ಶಸ್ತ್ರದಿಂದ ಗಾಯಮಾಡಿದಂತೆಯೂ ಆತನ ಮೇಲೆ ರಕ್ತದ ಅಭಿಷೇಕವನ್ನು ಮಾಡಿದಂತೆಯೂ ಆಗುತ್ತದೆಂದು ಮಹಾನುಭಾವರಾದ ಬಸವಣ್ಣನವರು ಹೇಳಿರುವುದನ್ನು ನೋಡಿದರೆ ನಾವು ಮೊದಲು ನೈತಿಕ ಬಲಶಾಲಿಗಳಾಗಲು ಪ್ರಯತ್ನಿಸಬೇಕೆಂಬುದು ಗೊತ್ತಾಗುವುದಿಲ್ಲವೇ? ಪ್ರತಿನಿತ್ಯ ಎಷ್ಟು ಮಡಿಯಿಂದ ಲಿಂಗಪೂಜೆ ಮಾಡುತ್ತಿದ್ದರೂ ಅದರ ಫಲ ಪದಗಳು ಮಾತ್ರ ದೊರೆಯದಿರುವುದಕ್ಕೆ ಕಾರಣವೇನು ? ಪೂಜೆ ಮಾಡುವ ಕೈಗಳು ಪರಧನ ಪರದಾರಾದಿಗಳನ್ನು ಮುಟ್ಟಿ ಮಲಿನವಾಗಿರುವುದರಿಂದಲ್ಲವೆ ? ಮಂತ್ರವನ್ನುಚ್ಚರಿಸುವ ನಾಲಿಗೆಯು ಅಸತ್ಯ ದುರ್ಭಾಷಣಾದಿಗಳಿಂದ ಮೈಲಿಗೆಯಾಗಿರುವುದರಿಂದಲ್ಲವೇ ? ಆದಕಾರಣ ಮೊದಲು ನೈತಿಕ ಬಲಶಾಲಿಗಳಾಗಿರೆಂದೇ ಶಿವಶರಣರು ಸಾರಿಸಾರಿ ಹೇಳುತ್ತಿದ್ದಾರೆ.

ಮೊಟ್ಟೆ ಮೊಟ್ಟೆ ಪುಷ್ಪ ಪತ್ರೆಯ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು? ತನುಮನಧನವ ಕೊಟ್ಟು ಹಿಂಗದನ್ನಕ್ಕರ? ಹುಸಿ, ಕಳವು, ಪರದಾರ, ವ್ಯಾಪಾರದಲ್ಲಿ ಹರಿದಾಡುವ ಮರುಳಬುದ್ಧಿಯ ದುರಾಚಾರಿಗಳಿಗೆ ದೂರವಾಗಿಪ್ಪನು ನೋಡಾ ನಮ್ಮ ಅಖಂಡೇಶ್ವರ.

ಪತ್ರೆ ಪುಷ್ಪಗಳನ್ನು ಕೂಡಿಸುವುದು ಸುಲಭ ಆದರೆ ಸತ್ಯ, ಶಮೆ, ದಮೆಗಳಿಂದ ಕೂಡಿದವರಾಗುವುದು ಕಠಿಣ. ಈ ಕಠಿಣ ಕಾರ್ಯವನ್ನು ಮಾಡದೆ ಸುಖಶಾಂತಿ ಗಳೆಂಬ ಹೆಚ್ಚಿನ ಫಲಗಳನ್ನು ಹೊಂದುವುದು ಶಕ್ಯವೇ? ಯಥೇಚ್ಛವಾಗಿ ಪತ್ರೆ ಪುಷ್ಪ ಗಳಿಂದ ಲಿಂಗಪೂಜೆಯನ್ನು ಮಾಡಿದ ಮಾತ್ರದಲ್ಲಿ ಶಿವನು ಮೆಚ್ಚುತ್ತಿದ್ದರೆ ಸತ್ಯಾದಿ ನೈತಿಕ ಆಚರಣೆಗಳನ್ನು ಆಚರಿಸಲು ಯಾರು ತಾನೇ ಪ್ರಯತ್ನಿಸುತ್ತಿದ್ದರು? ಶಿವಶರಣರಾದರೂ ಇಷ್ಟು ಒತ್ತಾಯದಿಂದ ನೈತಿಕ ಆಚರಣೆಗಳ ಕಡೆಗೆ ಲಕ್ಷಿಸಲು ಏಕೆ ಹೇಳುತ್ತಿದ್ದರು. ಮನುಷ್ಯನು ನೈಹಿಕ ಸಾಮರ್ಥ್ಯವನ್ನು ಹೊಂದಲು ಪ್ರಯತ್ನಿಸದೆ ಬಾಹ್ಯ ಡಂಭಾಚಾರಗಳಿಗೇನೇ ಮೋಸಹೋಗಿ ತನ್ನ ಜನ್ಮವನ್ನು ವ್ಯರ್ಥ ಮಾಡಿ ಕೊಳ್ಳಬಾರದೆಂಬ ಉದ್ದೇಶದಿಂದಲೇ ಶಿವಶರಣರು ಈ ಪ್ರಕಾರ ತೀಕ್ಷ್ಣವಾಣಿಯಿಂದ ಜನಾಂಗವನ್ನು ಎಚ್ಚರಗೊಳಿಸಿದ್ದಾರಲ್ಲವೇ? ಈಗ ನಾವು ಶಿವಶರಣರ ಸಂದೇಶವನ್ನು ಲಕ್ಷಿಸದ ಬಾಹ್ಯಾಡಂಬಾಚಾರಗಳಿಗೆ ಮರುಳರಾಗಿ ಅಧೋಗತಿ ಗೀಡಾಗುತ್ತಲಿದ್ದೇವೆ. ನಮ್ಮಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮೊದಲಾದ ಯಾವ ಸಂಗತಿಗಳೂ ಫಲಕಾರಿಯಾಗದಿರುವುದಕ್ಕೆ ನಮ್ಮ ನೈತಿಕ ನಿರ್ಬಲತೇಯೇ ಮುಖ್ಯ ಕಾರಣವಾಗಿದೆ.

ಬಹು ಜನರು ಬಾಹ್ಯಾಡಂಬರದ ಅಚರಣೆಗಳಲ್ಲಿಯೇ ಮಗ್ನರಾಗಿದ್ದಾರೆಯೇ ವಿನಾಹ ತಮ್ಮ ನೈತಿಕ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಇಲ್ಲ. ಪೂಜೆ, ಜಪ, ತಪ, ಅನುಷ್ಠಾನಗಳೆಂಬ ಬಾಹ್ಯ ವೇಷಭಾಷೆಗಳಿಗೆ ಮರುಳಾಗುವವರೇ ಸಮಾಜದಲ್ಲಿ ಹೆಚ್ಚಿರುವುದರಿಂದ ಧಾರ್ಮಿಕ ನಿಜಶಕ್ತಿಯನ್ನು ಹೊಂದುವ ಉತ್ಕಟೇಚ್ಛೆಯೇ ಉಂಟಾಗುತ್ತಾ ಇಲ್ಲ. ಜನಾಂಗದಲ್ಲಿ ವ್ಯಾಪಿಸಿರುವ ಈ ಮಲಿನಾಚಾರ ವಿಚಾರಗಳು ನಿವಾರಣೆಯಾಗಬೇಕಾದರೆ ಶಿವಶರಣರ ಸಂದೇಶವನ್ನು ನಾವು ಕೇಳಿ ಆಚರಿಸಬೇಕು.

ಉದಯದಲೆದ್ದು ಗಡಗಡನೆ ನಡುಗುತ ಹೋಗಿ, ಹೂಗಿಡವ ಪತ್ರೆಯ ಕಡಿವ ದೃಢಗೇಡಿಗಳಿರಾ ನೀವು ಕೇಳಿರಿ. ಅದು ಕಡುಪಾಪವಲ್ಲವೆ? ನಿಮಗೆ ನಡುಗಿರೋ. ಪರಧನ ಪರಸ್ತ್ರೀಯರಿಗೆ ನಡುಗಿರೊ. ಕೊಲೆ, ಹುಸಿ, ಕಳವು, ಪರದಾರ ಕಾಂಕ್ಷೆಗೆ ನಡುಗಿರೋ. ಹರನಿಂದೆ ಗುರುನಿಂದೆ, ಶಿವನಿಂದೆ ಕೇಳಲಾರವೆಂದು ನಡುಗಿರೊ. ಶಿವಾಚಾರಕ್ಕೆ ನಡುಗದೆ ಮಹಾಚಳಿಗೆ ನಡುಗಿ ಹೂವಿನ ಗಿಡವ ತರಿವ ಕಡುಪಾಪಿಗಳಿರಾ, ನಿಮಗೆ ಮೃಡನ ಪೂಜೆ ಎಲ್ಲಿಯದೂ ಇಲ್ಲ. ನಿಮಗೆ ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ.

ಸತ್ಯ ಪ್ರಿಯರಿಗೆ ಅಮೃತಪ್ರಾಯರಾಗಿಯೂ ಡಾಂಭಿಕರಿಗೆ ಶೂಲದಂತೆಯೂ ಇರುವ ಈ ದಿವ್ಯ ಸಂದೇಶವು ನೈತಿಕ ಬಲವನ್ನು ಹೆಚ್ಚಿಸಿಕೊಳ್ಳುವ ನಮ್ಮನ್ನು ಜಾಗೃತಗೊಳಿಸುವುದಿಲ್ಲವೆ? ಶಿವಶರಣರು ಶಿವಪೂಜಕರಿಗೇನೇ ಈ ಪ್ರಕಾರ ನೈತಿಕ ಸಾಮರ್ಥ್ಯವನ್ನು ಸಂಪಾದಿಸಲು ಸೂಚಿಸಿದ್ದಾರೆಂದು ತಿಳಿಯಬಾರದು. ಜಪ, ತಪ, ಭಕ್ತಿ ಕರ್ಮ, ಜ್ಞಾನ, ಯೋಗ ಮೊದಲಾದ ಧಾರ್ಮಿಕ ಭಿನ್ನ ಭಿನ್ನ ಆಚರಣೆಗಳನ್ನು ಆಚರಿಸುವವರಿಗೂ ಕೂಡ ಇದೇ ಪ್ರಕಾರ ಮೊದಲು ನೀತಿಯಿಂದ ನಡೆಯುವುದನ್ನು ಕಲಿಯಿರೆಂತಲೂ ನೀತಿಯ ಬಲವಿಲ್ಲದೆ ಧಾರ್ಮಿಕ ಆಚರಣೆಗಳನ್ನು ಆಚರಿಸುವುದರಿಂದ ನಿಜವಾದ ಫಲಪ್ರಯೋಜನಗಳು ಪ್ರಾಪ್ತವಾಗುವುದಿಲ್ಲವೆಂತಲೂ ಬಹಳವಾಗಿ ಹೇಳಿದ್ದಾರೆ.

ಶಿವನೇ ದೈವ. ಕೊಲ್ಲದಿರ್ಪುದೆ ಧರ್ಮ, ಅಧರ್ಮದಿಂದ ಬಂದುದನ್ನೊಲ್ಲದಿಪ್ಪುದೆ ನೇಮ. ಆಶೆಯಿಲ್ಲದಿಪ್ಪುದೆ ತಪ. ರೋಷವಿಲ್ಲದಿಪ್ಪುದೆ ಜಪ.  ವಂಚನೆ ಇಲ್ಲದಿಪ್ಪುದೆ ಭಕ್ತಿ. ಹೆಚ್ಚು ಕುಂದಿಲ್ಲದಿಪ್ಪುದೆ ಸಮಯಾಚಾರ. ಇದು ಸತ್ಯ. ಶಿವಬಲ್ಲ. ಶಿವನಾಣೆ ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.

ತಪವೆತ್ತ ಹೆರರ ಕೇಡಿಂಗೆ ಬಗೆಯುವುದೆತ್ತ. ಜಪವೆತ್ತ ಶರಣರ ಮೇಲೆ ಅನೃತವ ನುಡಿವುದೆತ್ತ? ಪಂಚಾಚಾರವೆತ್ತ ಪಾತಕಕ್ಕೆ ಮನ ಬಗೆವುದೆತ್ತ.? ಇಂತೀ ಹೊರಬಳಿಕೆಯ ಲೋಕರಂಜನೆಯಲ್ಲಿಪ್ಪವರಿಗೆ ನಾನಂಜುವೆ. ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ ನೀನು ಅಂಜಿದೂರದಲ್ಲಿ ಓಡುವೆ.

ಮನುಷ್ಯನು ಪಾರಲೌಕಿಕ ಸುಖಶಾಂತಿಗಳನ್ನು ಹೊಂದಲು ಆತನು ಯಾವ ಧರ್ಮ ಮತ ಪಂಥವನ್ನನುಸರಿಸಿ ಪೂಜೆ ಕರ್ಮಂಗಳನ್ನು ಮಾಡಬೇಕಾದರೂ ಮೊದಲು ನೈತಿಕ ಬಲಶಾಲಿಯಾಗುವುದು ಅತ್ಯಾವಶ್ಯಕವಾಗಿದೆಯೆಂದೇ ಶಿವರಣರಣರು ಸಾರಿ ಸಾರಿ ಹೇಳಿದ್ದಾರೆಂಬುದು ಈ ವರೆಗಿನ ವಿವೇಚನೆಯಿಂದ ಸ್ಪಷ್ಟವಾಗುವುದಿಲ್ಲವೆ? ಇದೇ ಶಿವಶರಣರ ದಿವ್ಯ ಸಂದೇಶವು. ಈ ನೈತಿಕ ಬಲವು ಕೇವಲ ಪಾರಮಾರ್ಥಿಕ ಸುಖಶಾಂತಿಗಳಿಗೇನೇ ಬೇಕೆಂದಲ್ಲ. ಐಹಿಕ ಸುಖಶಾಂತಿಗಳಿಗೂ ಈ ನೈತಿಕ ಬಲವೇ ಮುಖ್ಯವಾಗಿದೆ.

ಭಗವಾನ್ ಬುದ್ಧ ದೇವರು ಧಾರ್ಮಿಕ ಕ್ರಾಂತಿಯನ್ನು ಮಾಡಿದಾಗ ಸತ್ಯ ಅಹಿಂಸಾದಿ ನೈತಿಕ ತತ್ವಗಳನ್ನೇ ಮುಖ್ಯವಾಗಿಟ್ಟುಕೊಂಡಿದ್ದರು. ಈಗ ಮಹಾತ್ಮಾ ಗಾಂಧಿಯವರು ರಾಜಕೀಯ ಕ್ರಾಂತಿಯನ್ನು ಮಾಡುತ್ತಿರುವಾಗಲೂ ಕೂಡ ಸತ್ಯ ಅಹಿಂಸಾದಿ ನೈತಿಕ ಆಚರಣೆಗಳನ್ನೇ ಮುಖ್ಯವಾಗಿಟ್ಟಿಲ್ಲವೇ? ಮಹಾನುಭಾವರಾದ ಬಸವಾದಿ ಶಿವಶರಣರು ಕೂಡಾ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯನ್ನುಂಟು ಮಾಡಲು ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯಾದಿ ನೈತಿಕ ಮಹಾತತ್ವಗಳನ್ನೇ ಜನಾಂಗಕ್ಕೆ ಬೋಧಿಸಿ ಅವುಗಳಿಂದಲೇ ಸಮಾನತ್ವ ಮತ್ತು ಸ್ವಾತಂತ್ರ್ಯಗಳನ್ನು ಪ್ರಸ್ತಾಪಿಸಿ ಸುಖಶಾಂತಿಗಳನ್ನುಂಟು ಮಾಡಿದರು.

ಶಿವಶರಣರ ಈ ದಿವ್ಯ ಸಂದೇಶದ ಸತ್ಯತೆಯು ಮಹಾತ್ಮಾಗಾಂಧಿಯವರು ಈಗಿನ ಪ್ರಯತ್ನದಿಂದ ಸಕಲರಿಗೂ ಸ್ಪಷ್ಟವಾಗುವಂತಿದೆ. ಯಾರು ನೈತಿಕ ಬಲಶಾಲಿಗಳೋ ಅವರೇ ಧರ್ಮಾತ್ಮರು. ಅವರೇ ಲೋಕಸೇವೆಗೆ ಅರ್ಹರು. ಅವರೇ ಲೋಕಪೂಜ್ಯರು. ಅವರನ್ನೇ ಪ್ರಪಂಚವು ಹಿಂಬಾಲಿಸುತ್ತದೆ. ಅವರ ವಾಣಿಯೇ ದೇವವಾಣಿಯು, ಆದುದರಿಂದ ನಮ್ಮ ಶರಣರು ಈ ಪ್ರಕಾರ ಹೇಳಿದ್ದಾರೆ.

ಶಮೆ, ದಮೆ, ವಿವೇಕ, ವೈರಾಗ್ಯ, ಪರಿಪೂರ್ಣ, ಭಾವ ಶಾಂತಿ, ಕಾರುಣ್ಯ ಶ್ರದ್ದೆ ಸತ್ಯ, ಸದ್ಭಕ್ತಿ ಶಿವಜ್ಞಾನ, ಶಿವಾನಂದ, ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ, ಸ್ಪರ್ಶನ, ಸಂಭಾಷಣೆಯಿಂದ ಕೇವಲ ಮುಕ್ತಿಯಪ್ಪುದು ತಪ್ಪದಯ್ಯ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ.

ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.

ಸಮಾಪ್ತಿ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

ಅಣುಗ ಹಿಂದಣದಗ್ರ | ದಣುಚಕ್ರದೊಳು ಭಕ್ತಿ

ಮಣಿಹವಿಡಿದಿಪ್ಪ-ಅಣು ಮಹಾಲಿಂಗ ನೆಲೆ

ತೃಣು ಎಂದ ಗುರುವೆ ಕೃಪೆಯಾಗು   ||೧೪೮||

 

ನವಚಕ್ರಗಳನ್ನು ಮೀರಿನಿಂದುದು ದಶಮಚಕ್ರ. ಹತ್ತನೆಯ ಪದ್ಮವು ಬಹು ಸೂಕ್ಷ್ಮವಾಗಿರುವದರಿಂದಲೇ ಅದು ಅಣು ಚಕ್ರವೆನಿಸಿದೆ. ಇಂಥ ಅಣುಚಕ್ರವನ್ನು ಅರಿಯುವದು ಸಾಮಾನ್ಯಸಾಧಕನ ಶಕ್ತಿಯಲ್ಲ. ಅಂತೆಯೇ ಶಿಷ್ಯನಿಗೆ ಶ್ರೀಗುರು ಅಣುಗನೆಂದು ಸಂಬೋಧಿಸಿದ್ದು ಗಮನಾರ್ಹವಾಗಿದೆ.

 

ಶರೀರವಿಜ್ಞಾನಿಗಳು ತಲೆಬುರುಡೆಯಲ್ಲಿ ದೊಡ್ಡ ಮೆದುಳು ಸಣ್ಣ ಮೆದುಳು ಎಂದೆರಡುಭಾಗ ತೋರಿಸುವರು. ಆದರೆ ಅಧ್ಯಾತ್ಮಿಕ ವಿಜ್ಞಾನಿಗಳು ಬ್ರಹ್ಮರಂಧ್ರ, ಶಿಖಾಚಕ್ರ, ಪಶ್ಚಿಮಶಿಖಾಚಕ್ರ ಹಾಗೂ ಅಣುಚಕ್ರಗಳೆಂದು ನಾಲ್ಕು ಭಾಗ ಮಾಡಿರುವರು. ಈ ನಾಲ್ಕು ಜ್ಞಾನಗಮ್ಯವಾದವುಗಳೇ, ಪಶ್ಚಿಮ ಶಿಖಾಚಕ್ರದ ಕೆಳಭಾಗದಲ್ಲಿ ತೋರುವ ಈ ಮಹಾಲಿಂಗವು- ಅರ್ಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶೃತಿಮಾತಿನಂತೆ ಅಣುವಿಗೆ ಅಣುವಾಗಿ ಮಹತ್ತಿಂಗೆ ಮಹತ್ತಾಗಿ ತೋರುವದು. ಇದು ಕೇವಲ ಭಕ್ತಿಯಿಂದ ಮಾತ್ರ ಲಭ್ಯವಾಗುವದು. ಭಕ್ತಿಪಥವೇ ಮುಖ್ಯಗುರಿಯಾಗಿ ನಡೆಯುವ ಮಹಾನುಭಾವಿಗಳು ಈ ಲಿಂಗದ ದರ್ಶನ ಪಡೆಯಬಲ್ಲರು ಎಂದು ಬೋಧಿಸಿದ ಗುರುವೆ ಕೃಪೆಯಾಗು. ನಿನ್ನ ಕೃಪೆಯಿದ್ದರೇನೆ ಈ ಅಣು ಮಹಾಲಿಂಗನ ದರ್ಶನ ಮಾಡಿಕೊಳ್ಳಬಹುದು.

 

ಇಂದಿನ ಯುಗದಲ್ಲಿ ಅಣು ವಿಜ್ಞಾನವನ್ನು ಕಂಡುಹಿಡಿದಿರುವರು. ಆದರೆ ಈ ವಿಜ್ಞಾನ ಕೇವಲ ಭೌತಿಕವಾಗಿದೆ. ಭೌತಿಕ ಪ್ರಗತಿ ಸೀಮಿತವಾದುದು. ಭೌತಿಕವಿಜ್ಞಾನವು ಮಾನವನನ್ನು ಆಲಸಿಯನ್ನಾಗಿಸಿದೆ. ಅಸಂತೃಪ್ತಿಯನ್ನೊಡ್ಡಿದೆ. ಜೀವನ ಸಮಸ್ಯೆಗಳು ಈ ವಿಜ್ಞಾನದಿಂದ ಪರಿಹಾರವಾಗುವದಿಲ್ಲ. ಆದರೆ ನಮ್ಮ ಪೂರ್ವಜರು ಮಹಾನುಭಾವಿಗಳಾಗಿ ಅಧ್ಯಾತ್ಮಶಕ್ತಿಯಿಂದ ಅಣುವಿಜ್ಞಾನವನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ತಮ್ಮ ಅತ್ಮೋದ್ಧಾರದ ಜೊತೆಗೆ ಜಗತ್ತಿನ ಕಲ್ಯಾಣಕ್ಕಾಗಿ ಬಳಸುತ್ತಿದ್ದರು. ರಾಮಾಯಣ ಮಹಾಕಾವ್ಯದಲ್ಲಿ ಹನುಮಂತನು ಅಣುವಾಗಿಯೂ, ಮಹತ್ತಾಗಿಯೂ ವರ್ತಿಸಿದ ಘಟನೆ ಸ್ಮರಣೀಯವಾಗಿದೆ. ಆತನು ಮಹಾ ಆತ್ಮಜ್ಞಾನಿಯಾಗಿದ್ದನು. ಅಂತೆಯೇ ತನ್ನ ಯೋಗಶಕ್ತಿಯಿಂದ ಸಮುದ್ರ ಲಂಘನ ಮಾಡಲು ಸಾಧ್ಯವಾಯಿತು.

 

ಅಧ್ಯಾತ್ಮವಿಜ್ಞಾನವನ್ನು ಸೂಕ್ಷ್ಮವಾಗಿ ತೋರಬಲ್ಲವರು ಇಂದು ಅತ್ಯಂತ ವಿರಳವೆಂದೇ ಹೇಳಬೇಕಾಗಿದೆ. ಮಹಾಜ್ಞಾನಿ ಚನ್ನಬಸವಣ್ಣನವರು ನಿರೂಪಿಸಿದ ಘಟ ಚಕ್ರ, ಕರಣಹಸಿಗೆ, ಮಂತ್ರಗೋಪ್ಯ ಮುಂತಾದ ಅನುಭಾವ ಸಾಹಿತ್ಯದಲ್ಲಿಯೂ ವ್ಯಕ್ತವಾಗದ ಶಿವಕವಿಯು ವ್ಯಕ್ತಗೊಳಿಸಿದ್ದು ಅಣುಚಕ್ರದ ವಿಷಯವನ್ನು    ಗಮನೀಯವಾಗಿದೆ. ಇದು ಅವರ ಪರಮಗುರು ಚನ್ನವೀರೇಶ್ವರರಲ್ಲಿದ್ದ ವ್ಯಕ್ತಿತ್ವದ ಪ್ರತೀಕವೆಂತಲೂ ಅವರ ಪ್ರತಿಭೆಯ ದ್ಯೋತಕವೆಂತಲೂ ಗ್ರಹಿಸಬಹುದು.

 

ಮತ್ತೆ ಮತ್ಕರದಿಷ್ಟ | ನಿತ್ಯ ನಿಜಲಿಂಗವನು

ಹತ್ತು ಚಕ್ರದೊಳು-ಗೊತ್ತು ತೋರಿಸಿಕೊಟ್ಟ

ಸತ್ಯ ಸದ್ಗುರುವೆ ಕೃಪೆಯಾಗು  ೧೪೯ ||

 

ಶಿವಕವಿಯು ಹತ್ತು ಚಕ್ರಗಳಲ್ಲಿ ಇಷ್ಟಲಿಂಗದ ವ್ಯಾಪ್ತಿಯನ್ನು ಪ್ರತಿಪಾದಿಸಿ ಇಲ್ಲಿ ಉಪಸಂಹಾರಗೊಳಿಸುತ್ತಾನೆ ಮತ್ತು ಗುರುಕೃಪೆಗೆ ಉಪಕೃತಿಯನ್ನು ಸೂಚಿಸುತ್ತಾನೆ. ಜಗತ್ತಿನಲ್ಲಿ ಮರೆಯದ ವಸ್ತು ಉಪಕಾರಸ್ಮರಣೆ ಉಪಕೃತಿಯನ್ನು ಮರೆಯುವವನು ಮಾನವನೇ ಆಗಲಾರನು. ಪಶು-ಪಕ್ಷಿಗಳಲ್ಲಿಯೂ ಸಹ ಉಪಕಾರಸ್ಮರಣೆ ವ್ಯಕ್ತವಾಗುತ್ತದೆ. ಆದರೆ ಮುಂದುವರೆದಿದ್ದೇವೆಂಬ ಇಂದಿನ ಮಾನವರಲ್ಲಿ ಉಪಕೃತಿ ಸ್ಮರಣೆ ಕಡಿಮೆಯಾಗಹತ್ತಿದೆ. ಕೃತಜ್ಞನಾಗುವ ಬದಲು ಕೃತಘ್ನನಾಗುವ ಭಾವ ಅವರಲ್ಲಿ ಬೆಳೆಯಹತ್ತಿದೆ. ಇಳೆ-ಬೆಳೆ-ಮಳೆಯನ್ನಿತ್ತ ಮಾನವ ಜನ್ಮವನ್ನಿತ, ಮಹಾದೇವನನ್ನು ಸ್ಮರಿಸಬೇಕು. ಇದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಕ್ರಿಶ್ಚಿಯನ್ನರಲ್ಲಿ ಈ ಬಗೆಯ ಉಪಕೃತಿ ಸ್ಮರಣೆಗೆ ಪ್ರಾಧಾನ್ಯತೆಯಿದೆ. ಅವರು ಪ್ರತಿನಿತ್ಯವೂ ತಾವುಣ್ಣುವಾಗ ಆ ಭಗವಂತನನ್ನು ಪ್ರಾರ್ಥಿಸಿಯೇ ತೀರುತ್ತಾರೆ. ಇದು ಒಳ್ಳೆಯ ಸಂಸ್ಕಾರವು. ಆದ್ದರಿಂದ ಇಂಥ ಉಪಕಾರ ಸ್ಮರಣೆಯು ಬೆಳೆದು ಬರಲೆಂದೇ ಮಕ್ಕಳಿಗೆ ಒಳ್ಳೆ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ತನಗೆ ಏನಾದರೂ ಸಹಾಯಮಾಡಿದ ವ್ಯಕ್ತಿಗೆ ಧನ್ಯವಾದವನ್ನು ತೋರುವ ಸುಜ್ಞಾನವನ್ನು ಕರುಣಿಸಿದ ಗುರುವನ್ನು ಎಂದೂ ಮರೆಯಬಾರದು.

 

ಗುರುವೆ ! ನೀನು ನಿತ್ಯನೂ ಸತ್ಯನೂ ಆದ ಶಿವನಲ್ಲವೆ ! ಎನ್ನ ಮೇಲೆ ಕೃಪೆಮಾಡಿ ಸಂಸಾರ ಬಂಧನದಿಂದ ಮುಕ್ತನನ್ನಾಗಿಸಿದೆ. ಇಷ್ಟಲಿಂಗವನ್ನು ಕರುಣಿಸಿದೆ. ಲಿಂಗ ಸ್ವರೂಪವನ್ನೂ, ಮಹತ್ವವನ್ನು ತಿಳಿಸಿದೆ. ಲಿಂಗಧಾರಣೆಯ ಘನತೆಯನ್ನು ಬೀರಿದೆ. ಬಾಹ್ಯಧಾರಣೆಯಂತೆ ಆಂತರಿಕ ದಶಕಚಕ್ರಗಳಲ್ಲಿ ಲಿಂಗದ ಗೊತ್ತು ಗುರಿಯನ್ನು ತೋರಿಸಿಕೊಟ್ಟೆ. ಈ ಲಿಂಗವು ನಿತ್ಯವೂ ಸತ್ಯವೂ ಆದುದು. ಎನ್ನ ವಾಮಕರದಲ್ಲಿ ಕಾಣಿಸಿಕೊಂಡು ಎನ್ನ ಅಂಗಾಂಗಗಳೆಲ್ಲವನ್ನು ಲಿಂಗವನ್ನಾಗಿಸುವ ಮಹಾ  ಶಕ್ತಿಯುಳ್ಳುದು. ಇದೆಲ್ಲವೂ ನನಗೆ ಪ್ರಾಪ್ತವಾದುದು ನಿನ್ನ ಕೃಪೆಯಿಂದಲ್ಲದೆ ಬೇರೇನಿದೆ !

 

ಮಾತೃಋಣ, ಪಿತೃಋಣ, ಗುರುಋಣ ಈ ತ್ರಿವಿಧ ಋಣಗಳಲ್ಲಿ ಗುರು ಋಣವೇ ದೊಡ್ಡದು. ಗುರುಋಣವನ್ನು ತೀರಿಸಲು ಶಿಷ್ಯನು ಅತ್ಯಂತ ಪ್ರಯತ್ನ ಶೀಲನಾಗಬೇಕಾಗುವದು. ಗುರೂಪದೇಶವನ್ನು ಚೆನ್ನಾಗಿ ಅರಿತು ಆಚರಿಸಿ ಅನುಭವಿಯಾಗುವದರಿಂದಲೇ ಗುರುಋಣದಭಾರ ಕಡಿಮೆಯಾಗಬಲ್ಲುದು.

ಜ.ಚ.ನಿ

 

ಕುಮಾರ ಯೋಗಿಗಳು ಕನ್ನಡ ನಾಡಿನ ಬಹುಭಾಗವನ್ನು ಸುತ್ತಿಸುಳಿದರು. ಹೋದಹೋದಲ್ಲಿ ಸಭೆಗಳನ್ನು ಸೇರಿಸುತ್ತಿದ್ದರು. ಪ್ರತಿದಿನ ಸಾಯಂಕಾಲ ತಪ್ಪದೆ

ಹಿತಬೋಧೆಯನ್ನು ಮಾಡುತ್ತಿದ್ದರು. ತಾಪತ್ರಯದಿಂದ ತೊಳಲಿ ಬಂದ ಅನೇಕರು ಅವರ ಬೋಧೆಯ ಪರಿಣಾಮದಿಂದ ತಿಳಿಮನಸ್ಸಿನವರಾಗಿ ಹಿಂದಿರುಗುತ್ತಿದ್ದರು. ಅತಿಯಾಶೆಯ ಪಿಶಾಚಿ ಹೊಡೆದವರು ಅದರಿಂದ ಮುಕ್ತರಾಗುತ್ತಿದ್ದರು. ವಿಷಯಾಸಕ್ತರು ವಿಹ್ವಲರಹಿತವಾಗಿ ಹೋಗುತ್ತಿದ್ದರು. ಕೃಪಣರು ಉದಾರಿಗಳಾಗಿ ಮಾರ್ಪಡುತ್ತಿದ್ದರು. ಅನೇಕ ನೀತಿ ಮಾರ್ಗಗಳನ್ನು ಬೋಧಿಸಿ ನಿದ್ರಿತ ಜನಾಂಗವನ್ನು ನಿಜಜೀವನದತ್ತ ಸಾಗುವಂತೆ ಮಾಡಿದರು. ಮದಾಂಧರ ಮದವನ್ನು ತಗ್ಗಿಸಿದರು. ಮತ್ಸರವುಳ್ಳವರಲ್ಲಿ ಮೈತ್ರಿ ಭಾವ ಮೂಡಿಸಿದರು. ರೋಷಾವೇಶವುಳ್ಳವರನ್ನು ಶಾಂತರನ್ನಾಗಿ ಸಮಾಧಾನಿಗಳನ್ನಾಗಿ

ಕುದುರಿಸಿದರು.

 

ಇದರ ಫಲವಾಗಿ ಜನಾಂಗದ ಮನಸ್ಸು ಕುಮಾರ ಯೋಗಿಗಳ ಕಡೆಗೆ ಹೊರಳಿತು. ಧನಿಕರು ದರಿದ್ರರು ಶಿಷ್ಯರಾದರು. ಮಾಸ್ತರರು, ಶಾಸ್ತ್ರಿಗಳು, ಭಕ್ತಿಯಿಟ್ಟರು. ರಾಜಾಧಿಕಾರಿಗಳು, ರೈತರು ಅತ್ಯಂತ ಅನುರಾಗಿಗಳಾದರು. ಆಜ್ಞೆಯನ್ನು ಮೀರದವರಾದರು.

 

ಕುಮಾರ ಯೋಗಿಗಳ ಬೋಧೆ, ಕಾರ್ಯತತ್ಪರತೆ, ಸಾಮಾಜಿಕ ಕಳಕಳಿ, ಸಾಹಿತ್ಯ, ಸಂಸ್ಕೃತಿ ಪ್ರೇಮ ಎಲ್ಲರನ್ನು ಆಕರ್ಷಿಸಿತು. ಅನೇಕ ಬ್ರಾಹ್ಮಣರು ಸಹ ಸ್ವಾಮಿಗಳವರ ಕಾರ್ಯಕ್ಷೇತ್ರದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು. ಹೀಗೆ ಸ್ವಾಮಿಗಳವರ ಶಿಷ್ಯವೃಂದವು ಅಪಾರವಾಗಿ ಬೆಳೆಯಿತು.

 

ಇದರಿಂದಾಗಿ ಅವರ ನಾಡ ಸಂಚಾರ-ಧರ್ಮ ಪ್ರಚಾರ ಯಾವ ತಡೆಯಿಲ್ಲದೆ ಭರದಿಂದ ಸಾಗಿತು. ಜನರಲ್ಲಿ ಜಾಗ್ರತಿ ವಿದ್ಯುದ್ವೇಗದಿಂದ ಹರಿಯಿತು; ಹರಡಿತು. ಮೂಢತನ ಮೂಲೆಗೆ ಬಿದ್ದಿತು. ತಮ್ಮ ಜೀವನದ ಗುರಿಯನ್ನು ಸಮಾಜದ ಹೊಣೆಯನ್ನು ಬಹುಜನರು ತಿಳಿದುಕೊಂಡರು; ತೀರಿಸಿದರು. ಸಾಹಿತ್ಯಕ್ಕೆ ಸಂಸ್ಕೃತಿಗೆ ವಿದ್ಯೆಗೆ ವಿಶೇಷ ಸಹಾಯ ನೀಡಿದರು. ಸ್ವಾಮಿಗಳವರ ನಾಡ ಸಂಚಾರದಿಂದ ಧಾರ್ಮಿಕ ಪ್ರಚಾರವು ಸಾಕಷ್ಟು ಜರುಗಿತು. ಮುಚ್ಚಿಹೋಗಿದ್ದ ಧರ್ಮದ ಕಣ್ಣು ಮರಳಿ ತೆರೆಯಿತು.

ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.

ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.

೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.

೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :

(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;

(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು;

(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;

(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.

(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.

೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.

೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.

೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.

೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್‌ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.

ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.

 

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ತತ್ವಶಾಸ್ತ್ರದಲ್ಲಿ ಪರಮಾತ್ಮನ ಸ್ವರೂಪವನ್ನು ಕುರಿತು ವ್ಯಾಪಕವಾಗಿ ಚಿಂತನೆ ನಡೆಸಲಾಗಿದೆ. ಸತ್ ಚಿತ್ ಆನಂದ ಸ್ವರೂಪನೂ, ನಿತ್ಯಪರಿಪೂರ್ಣನೂ ಆಗಿರುವ ಪರಮಾತ್ಮ ಸಗುಣನೋ, ನಿರ್ಗುಣನೋ, ಸಾಕಾರನೋ, ನಿರಾಕಾರನೋ ಎಂಬ ಜಿಜ್ಞಾಸೆ ನಮ್ಮನ್ನು ಸದಾ ಕಾಡುತ್ತದೆ. ಜಗತ್ತಿನ ಅನೇಕ ಶ್ರೇಷ್ಠತತ್ವಜ್ಞಾನಿಗಳು, ಅನುಭಾವಿಗಳು ಮರಮಾತ್ಮನ ಸ್ವರೂಪವನ್ನು ಕುರಿತು ಹೇಳುವಾಗ ಕೆಲವರು ಪರಮಾತ್ಮನು ನಿರಾಹಾರ, ನಿರ್ಗುಣನೆಂದೂ ಇನ್ನು ಕೆಲವರು ಪರಮಾತ್ಮನು ಸಗುಣ, ಸಾಕಾರನೆಂದು ಹೇಳುವ ಮೂಲಕ ನಮ್ಮ ಜಿಜ್ಞಾಸೆಯನ್ನು ಇನ್ನೂ ಹೆಚ್ಚಿಸುತ್ತಾರೆ.

 

ಸತ್ ಚಿತ್ ಆನಂದ ಸ್ವರೂಪನಾದ ಪರಮಾತ್ಮನಿಗೆ ಯಾವುದೇ ಆಕಾರವಿಲ್ಲವಾದ್ದರಿಂದ ಅವನು ನಿರಾಕಾರ, ಯಾವುದೇ ಗುಣಗಳು ಇಲ್ಲದುದರಿಂದ ಅವನು ನಿರ್ಗುಣ ಕಣ್ಣಿಗೆ ಕಾಣಲಾರ, ಮನಸ್ಸಿಗೆ ನಿಲುಕಲಾರ. ಆದ್ದರಿಂದ ಅವನು ಆಗೋಚರ, ಅವ್ಯಕ್ತ, ಹೀಗೆ ಅವ್ಯಕ್ತನಾಗಿರುವ ಪರಮಾತ್ಮನು ವಿಶ್ವವನ್ನು ವ್ಯಾಪಿಸಿಕೊಂಡಿದ್ದರೂ ವಿಶ್ವಾತೀತನಾಗಿದ್ದಾನೆ. ವಿಶ್ವವನ್ನು ಸೃಷ್ಟಿಸುವ, ರಕ್ಷಿಸುವ ಮತ್ತು ಸಂಹರಿಸುವ ಶಕ್ತಿ ಪರಮಾತ್ಮನಿಗಿದೆ.

 

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ।

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

 

ಎಂಬ ಗೀತೋಕ್ತಿಯಂತೆ ಜನರನ್ನು ಅವರವರ ಕರ್ಮಾನುಸಾರ ಶಿಕ್ಷಿಸುವ ಮತ್ತು ರಕ್ಷಿಸುವ ಶಕ್ತಿಯೂ ಪರಮಾತ್ಮನಿಗಿದೆ. ಹೀಗೆ ಅವನಲ್ಲಿ ಶಕ್ತಿ ಎಂಬ ವಿಶೇಷ ಗುಣವಿರುವುದರಿಂದ ಅವನು ಸಗುಣ ಎಂದು ಹೇಳಲಾಗಿದೆ.

 

‘ಲೀಲೆಯಾದೊಡೆ ಉಮಾಪತಿ, ಲೀಲೆ ನಿಂದೊಡೆ ಸ್ವಯಂಭು’ ಎಂಬುದು ಅನುಭಾವಿ ಅಲ್ಲಮನ ಸ್ಪಷ್ಟ ಅಭಿಪ್ರಾಯ. ನಮ್ಮ ಕಣ್ಣಿಗೆ ಕಾಣುವ ವಿಶ್ವವು ಪರಮಾತ್ಮನಲ್ಲಿ ಮೊದಲು ಅವ್ಯಕ್ತವಾಗಿ ಇತ್ತು. ಅವನ ಸಂಕಲ್ಪ ಹಾಗು ಇಚ್ಛೆಯ ಕಾರಣದಿಂದಾಗಿ ಚರಾಚರ ಪ್ರಪಂಚವು ನಮಗೆ ಕಾಣುತ್ತಿದೆ. ವಿಶ್ವದ ಈ ಅಭಿವ್ಯಕ್ತಿಯೇ ಪರಮಾತ್ಮನ ಲೀಲೆಯಾಗಿರುವುದರಿಂದ ಅವನು ‘ಉಮಾಪತಿ’ ವ್ಯಕ್ತವಾದ ಸಮಸ್ತವೂ ಅವನಲ್ಲಿ ಅಡಗಿಹೋದಾಗ ಲೀಲೆ ನಿಂತು ಅವನು ‘ಸ್ವಯಂಭು’ ಎನಿಸುತ್ತಾನೆ. ಹೀಗೆ ವಿಶ್ವವೆಲ್ಲ ಪರಮಾತ್ಮನ ಲೀಲೆಗೆ ಒಳಗಾಗಿದ್ದರೂ ಅವನು ಮಾತ್ರ ನಿರಾಳ, ವಿಶ್ವದ ಎಲ್ಲ ಇತಿ ಮಿತಿಗಳಿಂದ ಆಕಾರಗಳಿಂದ, ಜೀವಿಗಳ ಹುಟ್ಟು-ಸಾವು, ಸುಖ-ದುಃಖಾದಿಗಳಿಂದ ಅವನು ನಿರ್ಮುಕ್ತ, ಅಪರಿಣಾಮಿಯಾದ ಚೈತನ್ಯ ‘ಪದ್ಮಪತ್ರ ಜಲದಂತೆ ಹೊದ್ದಿಯೂ ಹೊದ್ದದಂತಿಹನು’ ಎಂದು ಅನುಭಾವಿಯೊಬ್ಬರು ಉದ್ಗರಿಸುತ್ತಾರೆ. ನೀರ

ತಾವರೆಯಂತಿರುವ ಪರಮಾತ್ಮನು ಶೂನ್ಯಸ್ಥಿತಿಯಲ್ಲಿರುವಾಗ ನಿರಾಕಾರ, ನಿರ್ಗುಣ; ಶೂನ್ಯಸ್ಥಿತಿಯನ್ನು ತೊರೆದು ತಾನೇ ಜಗತ್ತಾಗಿ ಪರಿಣಮಿಸಿದಾಗ ಸಾಕಾರ, ಸಗುಣ. ಆದರೆ ಜಗತ್ತೆ ಅವನ ನಿತ್ಯ ಆಕಾರವಲ್ಲ. ಹೀಗೆ ಪರಮಾತ್ಮನು ಜಗವಾಗಲೂ ಬಲ್ಲ ಜಗವಾಗದಿರಲೂ ಬಲ್ಲ. ಆದ್ದರಿಂದಲೇ ಬಸವಣ್ಣನವರು- ‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲಸಂಗಮದೇವ’ ಎಂದು ಹೇಳಿರುವುದು.

 

ಪರಮಾತ್ಮ ‘ನಿರ್ಗುಣ’ ಎಂದು ಹೇಳುವವರು ನಿರ್ಗುಣಪಂಥಿಗಳು. ಅವರು ಮೂರ್ತಿಪೂಜೆಯನ್ನಾಗಲಿ, ಆವೇಶಯುಕ್ತವಾದ ಭಕ್ತಿಯನ್ನಾಗಲಿ ಒಪ್ಪುವುದಿಲ್ಲ. ದೈವತ್ವವು ಮೂರ್ತಿಗಳನ್ನು ಮೀರಿನಿಂತಿರುವುದರಿಂದ ಅಂತರ್ಮುಖಿಯಾಗಿ ಅದನ್ನು ಅನುಭವಿಸಬೇಕು ಎನ್ನುತ್ತಾರೆ. ಆದರೆ ಪರಮಾತ್ಮ ‘ಸಗುಣ’ ಎಂದು ಹೇಳುವವರು ದೈವತ್ವವನ್ನು ಸಾಕಾರಗೊಳಿಸಿ ಅದರೊಡನೆ ವಿವಿಧ ಮಾನವೀಯ ಸಂಬಂಧಗಳನ್ನು ಕಲ್ಪಿಸಿ ಪ್ರೇಮಿಸುತ್ತಾರೆ. ಆ ಭಕ್ತಿಯ ಆನಂದವನ್ನು ತಾವು ಬೇರೆಯಾಗಿಯೇ ನಿಂತು ಸವಿಯುತ್ತಾರೆ. ಯಾರು ಯಾವ ರೂಪದಿಂದ ದೈವತ್ವವನ್ನು ಆರಾಧಿಸುವರೋ ಅದೇ ಸಗುಣ ಸಾಕಾರರೂಪದಲ್ಲಿ ದೈವತ್ವವು ಮೈದೋರುತ್ತದೆ. ಒಟ್ಟಾರೆ ಪರಮಾತ್ಮನು ಸಗುಣ-ನಿರ್ಗುಣನೂ, ಸಾಕಾರ ನಿರಾಕಾರನೂ ಆಗಿದ್ದಾನೆಂಬುದು ಅನುಭಾವಿಗಳ ವಿವಿಧ ದೃಷ್ಟಿಕೋನಗಳಿಂದ ನಮಗೆ ಸ್ಪಷ್ಟವಾಗುತ್ತದೆ.

ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ ಬೂದಗುಂಪ.

– ಕರುನಾಡಿಗೊಬ್ಬ ಕುಮಾರನೊಡಯ್ಯ ಆತನ ನಡೆ ಹಿರಿಕಿರಿಯರಿಗೆ ಪಾವನ, ಆತನ ನುಡಿ ಸರ್ವರಿಗೂ ಅಮೃತದ ಧಾರೆ,ಆತನು ನೆನಪಿದೆ ಹೃದಯ ಗೀತೆ ಸಕಲ ಸಂಜೀವಿನಿ ನೋಡಯ್ಯ.

ಆತನಿರುವು ಸಮಾಜಕ್ಕೊಂದು ಪಾವನ, ಆತನ ಸುಳಿವು ಕನ್ನಡಕ್ಕೊಂದು ಜೀವನ, ಇಂದಿನ  ಕರುನಾಡಿಗೆ ದ್ವಿತೀಯ ಬಸವನಂತಿದ್ದನಯ್ಯ- ಶಬ್ದ ಬ್ರಹ್ಮ ಡಾ. ಜ. ಚ.ನಿ.

– ಅಂದು  12 ನೇ ಶತಮಾನದಲ್ಲಿ  ಸಾಮಾಜಿಕ ಕ್ರಾಂತಿಯ ಮೂಲಕ ಭಕ್ತಿಯ ಪಥವ ತೋರ ಬಂದವರು ಬಸವಣ್ಣ,

ಇಂದು 20 ನೇ ಶತಮಾನದಲ್ಲಿ ತ್ಯಾಗ ಮತ್ತು ನಿಸ್ವಾರ್ಥದ  ಸೇವೆಯ ಮೂಲಕ ಶಕ್ತಿಯ ಪಥವ ತೋರ ಬಂದವರು ಶ್ರೀ ಕುಮಾರ ಶಿವಯೋಗಿಗಳು.

**ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಕರುನಾಡಿನ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮೃದ್ಧ ಸಮಾಜದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಅಂಧ -ಅನಾಥರ ಭಾಗ್ಯದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮಸ್ತ  ಮಾನವಕಲ್ಯಾಣದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು  ಕನ್ನಡ ನಾಡಿನ ಪುಣ್ಯದ ಉದಯ ,ಭಾಗ್ಯೋದಯ.

** ಪೂಜ್ಯರಲ್ಲಿ ಅದೆಂತಃ ವಿಚಾರಧಾರೆಗಳು ತುಂಬಿಕೊಂಡಿದ್ದವು ಅಂದರೆ ಅವರ ಉದಾತ್ತ ಮತ್ತು ದೂರದೃಷ್ಟಿಯ ಚಿಂತನೆಗಳನ್ನ ನೋಡುವುದಾದರೆ,

ಪೂಜ್ಯರ ವ್ಯಕ್ತಿತ್ವ ಅದು ಅತ್ಯಂತ ವೈವಿಧ್ಯಪೂರ್ಣವಾದದ್ದು. ಅವರಲ್ಲಿನ “ಮನನೀಯವಾದ ವಿಚಾರ ಸ್ವಾತಂತ್ರ್ಯ, ಘನ ವಿರಕ್ತಿ, ಆರ್ತದ ಬಗೆಗಿನ ಅಪಾರವಾದ ಅನುಕಂಪ, ಅಜ್ಞ  ಸಮಾಜದ ಏಳಿಗೆಗೆ ಪೂಜ್ಯರು ತೋರಿದ ಕಳಕಳಿ, ಸಾಹಿತ್ಯ ಸಂಸ್ಕೃತಿಗಳ ಅಭಿಮಾನ, ಧರ್ಮ ಸಹಿಷ್ಣುತೆ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ, ಕೈ ಹಿಡಿದಿದ್ದನ್ನು ಕೈಗೂಡಿಸಿ ತೀರುವ ದೃಢಸಂಕಲ್ಪ, ಸಂಗೀತ ಕಲೆ ಮೊದಲಾದ ಲಲಿತ ಕಲೆಗಳ ಬಗೆಗಿನ ಅಪಾರ ಪ್ರೀತಿ, ಎಲ್ಲದಕ್ಕೂ ಮಿಗಿಲಾಗಿ ಮನುಕುಲದ ಉದ್ದಾರ, ಮಾನವ ಕಲ್ಯಾಣದ ಚಿಂತನೆ”ಇಂತಹ ಅದೆಷ್ಟೋ ಅದ್ಭುತ  ಸದ್ಗುಣಗಳ ಸಂಗಮವಾಗಿ , ಕಾರುಣ್ಯದ ಕಣ್ಣಾಗಿ,ಸಮಾಜದ ಹೊಂಬಣ್ಣಾಗಿ ಬಾಳಿ ಬೆಳಗಿದ ಸಾಕಾರದ  ಪ್ರತಿರೂಪ ಪೂಜ್ಯ ಗುರುಗಳು.

– ಇಂತಹ ಗುಣಗಳನ್ನ ಪ್ರತಿಯೊಬ್ಬರಿಗೂ ಉಣಗಲಿಸಿದವರು,ಉಡಗಲಿಸಿದವರು, ನಡೆನುಡಿ ಗಲಿಸಿದವರು,

ಕಲಿತು ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಅದ್ಭುತ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನ ನಾಡಿಗೆ ಬಿತ್ತರಿಸಿದ ಮಹಾಂತರು.

*- ಒಂದು ಕಾಲದಲ್ಲಿ ಸಮಾಜ ಹೀಗಿತ್ತು

“( ಜಟಿಲೋ ಮುಂಡಿ ಲುಂಚಿತ ಕೇಶಃ…………) ”

ಹೀಗೆ ದಿಕ್ಕೆಟ್ಟು ಹೋಗಿರುವ ಸಮಾಜಕ್ಕೆ “ಮಹಾಸಭೆ ಮತ್ತು  ಶಿವಯೋಗ ಮಂದಿರದ”ಮೂಲಕ ದಿಕ್ಸೂಚಿಯಾಗಿ ಬಂದವರು ಕುಮಾರ ಶಿವಯೋಗಿಗಳು.

**ಇದನ್ನೆಲ್ಲಾ ಕಣ್ತುಂಬಿ ಕೊಂಡ ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು ಪೂಜ್ಯರ ಕುರಿತು ಹೀಗೆ ಹೃದಯತುಂಬಿ ಹೇಳಿದ್ದಾರೆ

” ಯಾವ ಕಾಲದಲ್ಲಿ ಅನಕ್ಷರತೆ ತುಂಬಿ ತುಳುಕುತ್ತಿತ್ತು, ಯಾವ ಕಾಲದಲ್ಲಿ ಧರ್ಮಾಂಧತೆಯಲ್ಲಿ ಸಮಾಜ ಬಿದ್ದು ಹೊರಳಾಡುತ್ತಿತ್ತು,

ಆಧುನಿಕ ಸಮಾಜದ ಗಂಧ ಗಾಳಿಯೂ ಬೀಸದ,ಯಾವ ರಾಜಕೀಯ ಸೋಂಕೂ ತಗುಲದ, ಒಬ್ಬ ವೀರ ವಿರಕ್ತ ಸನ್ಯಾಸಿಯ ಮಹಾಸಭೆ ಹಾಗೂ  ಶಿವಯೋಗ ಮಂದಿರ ಅನ್ನುವ ಪರಿಕಲ್ಪನೆ ಇಡಿ ಭಾರತ ದೇಶಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿತಿಲ್ಲ ಅದು ಅಭೂತಪೂರ್ವ, ಅದೊಂದು ಪವಾಡವೇ ಸರಿ.

ಮಹಾಸಭೆ ಮತ್ತು ಶಿವಯೋಗ ಮಂದಿರ ಇಡೀ ಭಾರತ ದೇಶದ ವೀರಶೈವ ಲಿಂಗಾಯತರನ್ನ ಒಗ್ಗೂಡಿಸಲು ಕೈಗೊಂಡಂತಹ ಶ್ರೇಷ್ಠ ಸಂಕಲ್ಪದ ನೇತೃತ್ವ ಹಾನಗಲ್ಲ ಕುಮಾರ ಶಿವಯೋಗಿಗಳದ್ದು . ಅದಕ್ಕಾಗಿಯೇ “ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರ” ಅಂದರು. ಬರಿ “ಅಖಿಲ ಕರ್ನಾಟಕ” ಅನ್ನಲಿಲ್ಲ ಇಡೀ ಭಾರತದ ವೀರಶೈವ ಲಿಂಗಾಯತರು ಒಂದಾಗಿಸೇರಿಕೊಂಡು  ಧರ್ಮ ಜಾಗೃತಿ ಮಾಡಬೇಕು ಅನ್ನುವ ದೃಷ್ಟಿಯಿಂದ.

*ಯಾಕೆ ಈ ವಿಚಾರ ಕುಮಾರ ಶಿವಯೋಗಿಗಳಿಗೆ ಬಂತು, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದ ನಮ್ಮ ಸಮಾಜದಲ್ಲಿ ನಿರಕ್ಷರತೆ ,ಹಾಗೂ ಬಡತನ ತಾಂಡವಾಡುತ್ತಿತ್ತು, ಮೂಡನಂಬಿಕೆ ಮನದಾಳದಲ್ಲಿ ಬೇರು ಬಿಟ್ಟಿತ್ತು ಅದರ ಪರಿಣಾಮವಾಗಿ ಕಂದಾಚಾರಗಳಲ್ಲಿ ಸಮಾಜ ಮುಳುಗಿತ್ತು, ವ್ಯಾಪಾರ ವ್ಯವಹಾರಗಳಲ್ಲಿ ಹಿಂದುಳಿದಿದ್ದರು,ಮೂಲ ಉದ್ಯೋಗ ವಾದ ಕೃಷಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು, ಹೀಗೆ ಇಡೀ ಸಮಾಜ ಆರ್ಥಿಕವಾಗಿ ಅಧೋಗತಿಗಿಳಿದಿತ್ತು.ಒಗ್ಗಟ್ಟು ಮಾಯವಾಗಿ ಸಮಾಜ ಒಡೆದ ಕನ್ನಡಿಯಂತಾಗಿತ್ತು , ಇಂಥ ಸಮಾಜವನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ ಉನ್ನತ ಸ್ಥಿತಿಗೆ ತರುವುದರ ಜೊತೆಗೆ, ಧರ್ಮದ ಸಾಹಿತ್ಯ, ಸಂಸ್ಕೃತಿ,ತತ್ವಗಳ ಆಳವಾದ ಅಭ್ಯಾಸ ಮಾಡಿ ನಶಿಸುತ್ತಿದ್ದ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಏಳಿಗೆ ಮಾಡಬಲ್ಲ ವಟು – ಸಾಧಕರಿಗೆ ಶಿಕ್ಷಣ ಮತ್ತು ತರಬೇತಿ ಕೊಡಿಸಿ ತನ್ಮೂಲಕ ಸಮಾಜದ ಅಜ್ಞಾನವನ್ನು ಅಳಿಸಿಹಾಕಿ ಅವರನ್ನು ಸಮಾಜ ಸೇವೆಗಾಗಿ ಸಿದ್ಧಗೊಳಿಸುವುದೇ ಇದರ ಸ್ಥಾಪನೆಯ ಮೂಲ ಉದ್ದೇಶವಾಗಿತ್ತು ಹಾಗೂ ಹಿನ್ನೆಲೆಯಾಗಿತ್ತು.

* ಇಲ್ಲಿ ಪೂಜ್ಯರು ಎಂಥ ಸಂಪತ್ತನ್ನ ಸಂಪಾದಿಸಿದರು ಕರಗಿಹೋಗುವ, ಸೊರಗಿ ಹೋಗುವ,ಕಳೆದುಹೋಗುವ ಭೌತಿಕ ಸಂಪತ್ತನ್ನ ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದ, ಕಳೆಗುಂದದ, ಮತ್ತೊಂದು ಬೇಕೆನಿಸದ  ಅಧ್ಯಾತ್ಮಿಕ ಜ್ಞಾನ ಸಂಪತ್ತು, ಅರಿವು-ಆಚಾರ, ಯೋಗ – ಶಿವಯೋಗ, ವ್ಯಕ್ತಿ ಹಿತಕ್ಕಿಂತ – ಸಮಷ್ಟಿ ಹಿತ ಮುಖ್ಯ, ಸ್ಥಾನಮಾನಕ್ಕಿಂತ-ಸಮಾಜ ಸೇವೆ ಮುಖ್ಯ, ಜನನಾಯಕನಿಗಿಂತ- ಜನಸೇವಕ ಮುಖ್ಯ, ಇಂತಹ ಸಂಪತ್ತನ್ನಗಳಿಸಿ ಈ ನಾಡಿಗೆ-ನುಡಿಗೆ-ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು.

* ಮಂದಿರವನ್ನು ಸ್ಥಾಪಿಸಿ ಇಲ್ಲಿಗೆ ನನ್ನ ಕಾರ್ಯ ಮುಗಿಯಿತು ಅಂತ ಕೈಕಟ್ಟಿ ಕುಳಿತುಕೊಳ್ಳಲಿಲ್ಲ ಅಲ್ಲಿ ಬರುವ ಸಾಧಕರಿಗೆ ಅನ್ನ ಆಶ್ರಯದ ವ್ಯವಸ್ಥೆ,ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ, ಗೋಶಾಲೆ,ವಿಭೂತಿ ನಿರ್ಮಾಣ,ಪ್ರತಿಯೊಬ್ಬರಿಗೂ ಧರ್ಮದ ತಿಳುವಳಿಕೆಗಾಗಿ ಎಲ್ಲಾ ಗ್ರಂಥಗಳನ್ನೊಳಗೊಂಡ ಗ್ರಂಥಾಲಯ ಹೀಗೆ ಎಲ್ಲ ವ್ಯವಸ್ಥೆಯ ಕುರಿತು 19 ದ್ದೆಯೋದ್ದೇಶಗಳನ್ನ ರಚನೆ ಮಾಡಿದರು.

ಅವುಗಳನ್ನು ಸಂಕ್ಷಿಪ್ತ ರೀತಿಯಲ್ಲಿ,ಮೇಲ್ನೋಟದಲ್ಲಿ ವಿಚಾರಿಸುದಾದರೆ

* ಮೊಟ್ಟ ಮೊದಲು ವಟು -ಸಾಧಕರ ವ್ಯವಸ್ತೆ ಹಾಗೂ ವೇಷ ಭೂಷಣ, ಜೊತೆಗೆ ಅವರಿಗೆ ಕಲಿಸುವ ಅಧ್ಯಾಪಕರು ಹೇಗಿರಬೇಕು ಸದ್ಗುಣ ಸುಶೀಲರಾಗಿರಬೇಕು, ಗುರು-ಲಿಂಗ- ಜಂಗಮ  ಪ್ರೇಮಿಗಳ ಆಗಿರಬೇಕು, ಆಚಾರ-ವಿಚಾರವಂತರಾಗಿರಬೇಕು ಅವರು ಸಾಧಕರಿಗೆ ಎಲ್ಲ ತರಹದ ವಿದ್ಯೆಗಳನ್ನ ಹೇಳಿಕೊಟ್ಟು ಸರ್ವ ವಿದ್ಯಾ ಪಾರಂಗತರನ್ನಾಗಿ ಮಾಡಿಕೊಡಬೇಕು.

*ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಗ್ರಂಥಗಳನ್ನ ಒಳಗೊಂಡ ಒಳ್ಳೆಯ ಸುಸಜ್ಜಿತ ಗ್ರಂಥಾಲಯ ನಿರ್ಮಾಣ.

* ಮತ ಸುಧಾರಣೆಗೆ ಸದ್ವಿವಿಷಯಗಳನ್ನ ಒಳಗೊಂಡ ಕೀರ್ತನೆ, ಸಾಹಿತ್ಯ,ಪದ್ಯಗಳನ್ನ ರಚಿಸಬೇಕು ಅವುಗಳನ್ನ ಕೇಳುಗರಿಗೆ ಪ್ರಿಯವಾಗುವ ರೀತಿಯಲ್ಲಿ ಹೇಳುಗರನ್ನ ಸೃಷ್ಟಿಸಬೇಕು ಅರ್ಥಾತ್ ಪ್ರವಚನಕಾರರನ್ನ.

* ಮತಶಾಸ್ತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ನುರಿತವರನ್ನ ಅಲ್ಲಲ್ಲಿ ಕಳುಹಿಸಿ ಅವರಿಂದ ಧರ್ಮೋಪದೇಶ ಮಾಡಿಸಿ ಜನ ಜಾಗೃತಿ ಮಾಡಿಸಬೇಕು ಜೊತೆಗೆ ಧರ್ಮದ ತತ್ವತ್ರಯಗಳನ್ನ ಜನಮಾನಸದಲ್ಲಿ ಬಿತ್ತಬೇಕು.

* ಮನೆಯಲ್ಲೇ ಕುಳಿತವರಿಗೆ ಧರ್ಮದ ಕುರಿತು ತಿಳಿದುಕೊಳ್ಳಲು ಧರ್ಮ ಪ್ರಸಾರ,ಸಾಹಿತ್ಯ ಪ್ರಸಾರವಾಗಬೇಕೆಂದು 1911 ರಲ್ಲಿ “ಧರ್ಮ ತರಂಗಿಣಿ” ಪತ್ರಿಕೆ ಹೊರಡಿಸಿದರು ಬಸವಾದಿಪ್ರಮಥರ ವಿಚಾರಧಾರೆಗಳು ಮನೆಮನಗಳಿಗೆ ತಲುಪಬೇಕೆಂದು ವಚನ ಸಾಹಿತ್ಯಕ್ಕೆ ಹೊಸ ರೂಪತರಲು ಫ.ಗು.ಹಳಕಟ್ಟಿ ಅವರಿಗೆ ಪ್ರೇರಣೆ ನೀಡಿದರು, ಹುಳುಹತ್ತಿಹಾಳಿಡುವ ತಾಳೆಗರಿಗಳನ್ನು ಸುತ್ತಿ ಸಂಗ್ರಹಿಸುವುದರ ಜೊತೆಗೆ ವಚನಗಳು ಜನರ ಕೈಗೆ ತಲುಪುವಂತೆ ವ್ಯವಸ್ಥೆ ಮಾಡುವುದು. ಹಳಕಟ್ಟಿಯವರು ಕೂಡ “ಶಿವಾನುಭವ” ಪತ್ರಿಕೆಯನ್ನು ಹೊರಡಿಸಿದರು.ನಂತರ ಪೂಜ್ಯರ ಇಷ್ಟೆಲ್ಲ ಕಾರ್ಯಕ್ಕೆ ಪ್ರಭಾವಿತರಾದ ಚೆನ್ನಮಲ್ಲಿಕಾರ್ಜುನಪ್ಪ ನವರು ತಮ್ಮ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಹಾವೇರಿಯ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯದಿಂದ “ಸದ್ಧರ್ಮದೀಪಿಕೆ”ಪತ್ರಿಕೆ ಹೊರಡಿಸಿದರು.

ಆನಂತರ 1930ರಲ್ಲಿ ಶಿವಯೋಗಿ ಸಾಧಕರು ಸೇರಿಕೊಂಡು “ಸುಕುಮಾರ” ಪತ್ರಿಕೆ ಹೊರಡಿಸಿದರು. ನಂತರ ಸ್ಥಗಿತಗೊಂಡ ಪತ್ರಿಕೆಯವಿಷಯ 2021 ರಲ್ಲಿ ದೆಹಲಿಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ  ಸೇವಾ ಸಮಿತಿಯಿಂದ “ಶ್ರೀ ಕುಮಾರ ತರಂಗಿಣಿ ಪತ್ರಿಕೆ” ಅಂತರ್ಜಾಲದ ಮೂಲಕ  ಪ್ರಾರಂಭಗೊಂಡಿತು,2023 ರಲ್ಲಿ ಮತ್ತೆ ಶ್ರೀ ಶಿವಯೋಗ ಮಂದಿರದಿಂದ “ಸುಕುಮಾರ ಪತ್ರಿಕೆ” ಮುದ್ರಣ ರೂಪದಲ್ಲಿ ಪ್ರಕಾಶಗೊಳ್ಳುತ್ತಿದೆ.

ಇದೆಲ್ಲ ಕುಮಾರ ಶಿವಯೋಗಿಗಳು ವಿಚಾರಿಸಿ  ಸಮಾಜವನ್ನು ಈ ರೀತಿ ಕಟ್ಟಬೇಕು ಅನ್ನುವ ದೂರ ದೃಷ್ಟಿ.

* ಜೊತೆಗೆ ಅಂದಿನ ಬ್ರಿಟಿಷಸರ್ಕಾರದ ಜೊತೆ ಸಂಪರ್ಕ ಸಾಧಿಸಲು ಹಾಗೂ ಪತ್ರವ್ಯವಹಾರ ಮಾಡಲಿಕ್ಕೆ ಸಾಧಕರನ್ನ ಭಾಷಾ ಪರಿಣಿತರನ್ನಾಗಿಸಲು  ಗಡಹಿಂಗ್ಲಜದ ವೀರಬಸಪ್ಪ ಶ್ರೇಷ್ಟಿಯವರಿಂದ ಸಾಧಕರಿಗೆ ಆಗ್ಲಭಾಷಾ ಜ್ಞಾನವನ್ನ ಕೊಡಿಸುತ್ತಾರೆ.

* ಇಲ್ಲಿ ಎಂತವರಿಗೆ ಅವಕಾಶ ಮಾಡಿಕೊಟ್ಟರು ಅಂದ್ರೆ ಸಾಧಕರಿಗೆ ಅಷ್ಟೇ ಅಲ್ಲ,ಸಂಸಾರದಲ್ಲಿ ಇದ್ದವರಿಗೆ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನ ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟು, ಅವರಿಗೆ ಪರೀಕ್ಷೆ ಇಟ್ಟು ಅದರಲ್ಲಿ ಉತ್ತೀರ್ಣರಾದವರಿಂದ ಹಳ್ಳಿಹಳ್ಳಿಗೆ ಕಳುಹಿಸಿ ಲಿಂಗಧಾರಣೆ-ರುದ್ರಾಕ್ಷಿ ಧಾರಣೆ- ವಿಭೂತಿ ಧಾರಣೆಯ  ಪರಿಕಲ್ಪನೆ ಹೀಗೆ ಧರ್ಮ ಬೋಧನೆ ಕಾರ್ಯ ಮಾಡಿಸುತ್ತಿದ್ದರು (ಸಾಕ್ಷರತಾ ಅಭಿಯಾನ).

* ಜೊತೆಗೆ ಪೂಜ್ಯರು ಸಕಲ ಪ್ರಾಣಿಗಳಿಗೂ ಲೇಸ ಬಯಸುವಂಥವರು, ಅದಕ್ಕಾಗಿ ಶಿವಯೋಗ ಮಂದಿರದಲ್ಲಿ ಗೋಶಾಲೆ ನಿರ್ಮಾಣ ಮಾಡಿದರು (ಎಷ್ಟು ಪ್ರೀತಿಯೆಂದರೆ ಗೋವುಗಳ ಮೇಲೆ ಬರಗಾಲದಲ್ಲಿ ಕರುಗಳಿಗೆ ಹಾಲು ಉಣಲಿಕ್ಕೆ ಬಿಡಿ ಅಂದ ಘಟನೆ)”ಮಳೆಯಿಲ್ಲದೊಂದು ವರ್ಷಮ್ ಗುಡ್ಡದೊಳು ಹುಲ್ಲು ಬೆಳೆಯದುದರಿಂದಾವುಗಳ ಹಾಲು ತಮ್ಮ ಕರುಗಳಿಗಾಗದೀರ್ಪುದಂ ತಿಳಿದೀ ಮಹಾತ್ಮನಾವತ್ಸಗಳ ಬಾಯಬಡಿದು ಎಳಸಿ ನಾವ್ಕರೆದುಂಬುದೇ ಮಹಾ ಪಾಪ ವೆಂದಳುಕಿ ನಾವೆಲ್ಲರುo ಪಾಲುಣ್ಣದೆಬಿಟ್ಟು ಕರುಗಳನೆ ಕರುಣದಿಂ ಪೋಷಿಪಂತೆಸಗಿದಂ ದನಗಾವ ಜನಕೆ.( ಪುರಾಣ 13 ನೇ ಸಂಧಿ) ” ಹೀಗೆ  ಗೋವುಗಳ ರಕ್ಷಣೆ ಗೋವುಗಳಿಂದ ಬಂದಿರುವ ಗೋಮಯದಿಂದ ಶಾಸ್ತ್ರೋಕ್ತವಾಗಿ ವಿಭೂತಿ ನಿರ್ಮಾಣ ಮಾಡಿಸಿದರು (ನೊಸಲಿಗೆ ವಿಭೂತಿಯೇ ಶೃಂಗಾರ ಶರಣರ ವಾಣಿಯನ್ನ ಚಾಲನೆಗೆ ತಂದವರು), ಪಂಚಸೂತ್ರ ಲಿಂಗಗಳನ್ನ ತಾಯಾರಿಸುವುದು, ಶಿವದಾರವನ್ನ ತಯಾರಿಸುವುದು,ಹೀಗೆ ಎಲ್ಲವುಗಳ ತಯಾರಿಕೆ ಕೇಂದ್ರ ಮಂದಿರವಾಗಬೇಕೆಂದರು.

*ಇದೆಲ್ಲದಕ್ಕೂ ಮಿಗಿಲಾಗಿ ಪೂಜ್ಯರು  ಮಾಡಿದ ಮಹತ್ ಸಂಕಲ್ಪ ಅಂದ್ರೆ ಪ್ರತಿಯೊಂದು ಕ್ಷೇತ್ರದಲ್ಲಿ ಶಿವಯೋಗಿ ಸಾಧಕರಿರಬೇಕೆಂದು ಒಬ್ಬೊಬ್ಬರನ್ನ ಬೆಳೆಸಿದರು.

“ಸಾಹಿತ್ಯದಲ್ಲಿ ಶಬ್ದಬ್ರಹ್ಮ ಡಾ. ಜ . ಚ.ನಿ.ಯವರನ್ನ,ಆಯುರ್ವೇದದಲ್ಲಿ ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮಿಗಳನ್ನ,ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿ  ಕನ್ನಡ ಕೋಟೆ ಕಟ್ಟಲು ಬಾಲ್ಕಿಯ ಚೆನ್ನಬಸವ ಪಟ್ಟಾಧ್ಯಕ್ಷರನ್ನ, ಶಿವಯೋಗದಲ್ಲಿ ಸಕ್ಕರಾಯ ಪಟ್ಟಣದ ಸದಾಶಿವ ಶಿವಾಚಾರ್ಯರನ್ನ, ಕೃಷಿ ಕಾಯಕ ಕ್ಷೇತ್ರದಲ್ಲಿ ಕಪನಳ್ಳಿಯ ರುದ್ರಮುನಿ ಸ್ವಾಮಿಗಳನ್ನ, ಪ್ರವಚನದಲ್ಲಿ ನವಲಗುಂದದ ಬಸವಲಿಂಗ ಸ್ವಾಮಿಗಳನ್ನ, ಯೋಗದಲ್ಲಿ ಯೋಗಿರಾಜ ಕಂಚುಕಲ್ಲಬಿದರಿ ಪ್ರಭು ಕುಮಾರ ಪಟ್ಟಾಧ್ಯಕ್ಷರನ್ನ, ಸಂಗೀತದಲ್ಲಿ ಪಂಚಾಕ್ಷರಿ – ಪುಟ್ಟರಾಜ ಗವಾಯಿಗಳನ್ನ, ಹೀಗೆ ಪ್ರತಿಯೊಂದು ರಂಗದಲ್ಲಿ ಶಿವಯೋಗ ಮಂದಿರ ಇರಬೇಕೆಂದು ಕನಸು ಕಂಡವರು ಸಾಕಾರ ಮಾಡಿದವರು .

* ಪ್ರತಿವರ್ಷ ಶಿವರಾತ್ರಿಯಲ್ಲಿ ಕೀರ್ತನೆ,ಪುರಾಣ, ಸಂಗೀತ ಹೀಗೆ ಎಲ್ಲ ರೀತಿಯ ಧರ್ಮ ಬೋಧನೆ ಕಾರ್ಯ ಆಗಬೇಕು.

*ಅಲ್ಲಲ್ಲಿ ಶಿವ ಯೋಗ ಮಂದಿರ ಶಾಖೆಗಳು ನೆಲೆಸಬೇಕು ಅಲ್ಲಿಯೂ ಸರ್ವರಿಗೂ ಶಿವಾನುಭವ ದೊರೆಯಬೇಕು ಇಂತಹ ದೂರದೃಷ್ಟಿ ಹಾಗೂ ಮಹದ್ದೋದ್ದೇಶ ಇಟ್ಟುಕೊಂಡು ಸ್ಥಾಪಿಸಿದ್ದಕ್ಕಾಗಿ ಇಂದಿಗೆ  115 ವಸಂತಗಳನ್ನ ನಿರ್ವಿಘ್ನವಾಗಿ ದಾಟಿ ಬಂದಿದೆ.ಕುಮಾರ ಶಿವಯೋಗಿಗಳ ಇಂತಹ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ, ಕ್ರಿಯಾಶಕ್ತಿಯ ಸಂಗಮವೆ ಶ್ರೀ ಶಿವಯೋಗ ಮಂದಿರ.ಶರಣು ಶರಣಾರ್ಥಿಗಳು.????

ಡಾ|| ಬಿ. ನಂಜುಂಡಸ್ವಾಮಿ

ಪಂಡಿತ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ

ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್

ಬಿ.ಹೆಚ್. ರಸ್ತೆ, ತುಮಕೂರು-572102.

ಮೊ : 9880996196

 

ವಚನ ಸಾಹಿತ್ಯದ ಪ್ರಕಟಣೆ : ಪ್ರಥಮ ಘಟ್ಟ

ವಚನ ಸಾಹಿತ್ಯ ಪ್ರಕಟಣೆ ಇತಿಹಾÀಸದ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕು. ನಮಗೆ ಗೊತ್ತಿರುವಂತ  ವಚನ ಸಾಹಿತ್ಯದ ಪ್ರಥಮ ಪ್ರಕಟಣೆ 1882ರಲ್ಲಿ `ಅಖಂಡೇಶ್ವರ ವಚನ’ ಪ್ರಕಟಿಸಿದವರು ಧಾರವಾಡದ ಬಸಪ್ಪ ಅಣ್ಣಾ ಜವಳಿ. ಬಸವಣ್ಣನವರ ಷಟ್‍ಸ್ಥಲ ವಚನದ ಪ್ರಥಮ ಪ್ರಕಟಣೆ 1886 ಮಾರ್ಚಿ ತಿಂಗಳು ಸಂಪಾದಕರು ಮರಿಶಂಕರದೇವರು ಬಳ್ಳಾರಿ ಪುಸ್ತಕ ವ್ಯಾಪಾರಿ ಮ.ರಾ.ಎನ್. ಕೋನೇರು ಶೆಟ್ಟರು. ಈ ಕಾಲಮಾನದಲ್ಲಿ ಇನ್ನು ಕೆಲವು ಪುಸ್ತಕಗಳು ಮುದ್ರಣವಾಗಿವೆ. ಈ ಆರಂಭ ಕಾಲದ ವಚನ ಸಾಹಿತ್ಯದ ಬಗ್ಗೆ ವಿವರವಾಗಿ ಅಧ್ಯಯನ ಮಾಡಬೇಕು.

  1. ಅಖಂಡೇಶ್ವರ ವಚನ 1882
  2. ಶಿಖಾರತ್ನ ಪ್ರಕಾಶವು 1883
  3. ಸಿದ್ಧೇಶ್ವರ ವಚನವು 1885

ತೋಂಟದ ಸಿದ್ಧಲಿಂಗೇಶ್ವರ ವಚನಗಳ ಸಂಕಲನ 697 ವಚನ ಇದೆ

701 ವಚನ ಇರಬೇಕು

  1. ನಿಃಕಲರ ವಚನವು 1885
  2. ಬಸವಣ್ಣನವರ ವಚನಗಳು (1886)
  3. ಅಖಂಡೇಶ್ವರ ವಚನವು (ಸಟೀಕಾ – 1887)
  4. ಅಖಂಡೇಶ್ವರ ವಚನಶಾಸ್ತ್ರವು 1890
  5. ಅಂಬಿಗರ ಚೌಡಯ್ಯನೆಂಬ ಶಿವಯೋಗಿಯಿಂದ ವಿರಚಿಸಲ್ಪಟ್ಟ

ಅಂಬಿಗರ ಚೌಡಯ್ಯನ ವಚನ ಶಾಸ್ತ್ರವು 1905

  1. ಘನಲಿಂಗಿದೇವರು ನಿರೂಪಿಸಿದ ಕನ್ನಡ ವೀರಶೈವ ಸಿದ್ಧಾಂತ ವಚನವು (1907)
  2. ಸಟೀಕಾ ಗಣಭಾಷ್ಯ ರತ್ನಮಾಲೆ (1909) ನಂ. ಶಿವಪ್ಪಶಾಸ್ತ್ರಿಗಳು
  3. ಅಖಂಡೇಶ್ವರ ವಚನಶಾಸ್ತ್ರವು (ನಾಲ್ಕನೇ ಮುದ್ರಣ) 1911
  4. ಚೆನ್ನಬಸವಣ್ಣನವರ ವಚನಗಳು-1914
  5. ಅಂಬಿಗರ ಚೌಡಯ್ಯನಿಂದ ವಿರಚಿತವಾದ ಅಂಬಿಗರ ಚೌಡಯ್ಯನ ವಚನಶಾಸ್ತ್ರವು      1924
  6. ಅಖಂಡೇಶ್ವರ ವಚನಶಾಸ್ತ್ರವು 1917
  7. ಬಸವಣ್ಣನವರ ವಚನವು 1923

ರಾ. ನರಸಿಂಹಾಚಾರ್ಯ

ಕರ್ನಾಟಕ ಕವಿಚರಿತೆ ಭಾಗ-1 1907, ದ್ವಿತೀಯ ಮುದ್ರಣ 1924 ಭಾಗ-2, 1919 ಭಾಗ-3 1929 ಈ ಮೂರು ಪುಸ್ತಕಗಳ ರಚನೆಯಲ್ಲಿ ಅನೇಕ ವಚನಗಾರರ ಪರಿಚಯ ಅವರು ರಚಿಸಿದ ವಚನಗಳ ಉಲ್ಲೇಖದಿಂದ ವಚನ ಸಾಹಿತ್ಯದ ವಿಸ್ತಾರ ವಿಪುಲ ವಚನಗಾರರ ಮತ್ತು ವಚನಕಾರ್ತಿಯರ ಪರಿಚಯವಾಯಿತು.

ಬೆಂಗಳೂರು ಗುಬ್ಬಿ ತೋಟದಪ್ಪನವರ ಛತ್ರದಲ್ಲಿ ಚಿತ್ರದುರ್ಗ ಶ್ರೀ ಜಯದೇವ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಚನ ಸಾಹಿತ್ಯದ ಸೇವೆ ಸುಮಾರು 1910ರಲ್ಲಿ ಉಪನ್ಯಾಸ ಮಾಡಿದ್ದನ್ನು ಡಿ.ವಿ.ಜಿ ದಾಖಲಿಸಿದ್ದಾರೆ. ವಚನ ಸಾಹಿತ್ಯ ಸಂಪಾದನೆಗೆ ಕವಿಚರಿತೆಗಾರರ ಕೊಡುಗೆ ಕುರಿತು ವಿಶೇಷವಾದ ಅಧ್ಯಯನವಾಗಬೇಕು.

ವಚನ ಸಾಹಿತ್ಯ ಸಂಪಾದನೆಯಲ್ಲಿ

ಡಾ. ಫ.ಗು. ಹಳಕಟ್ಟಿ

ಡಾ. ಫ.ಗು. ಹಳಕಟ್ಟಿಯವರ ಸಂಸ್ಮರಣ ಗ್ರಂಥದಲ್ಲಿ ಹಳಕಟ್ಟಿಯವರ ಕೃತಿಸೂಚಿ ಲೇಖಕಸೂಚಿ ಪ್ರಕಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ 1967ರಲ್ಲಿ ಪ್ರಕಟವಾದ ಲೇಖಸೂಚಿ (ಜೀವನ, ಜಯಕರ್ನಾಟಕ ಮತ್ತು ಶಿವಾನುಭವ) ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಎಂ.ಆರ್. ಸಣ್ಣರಾಮೇಗೌಡರವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ 1973ರಲ್ಲಿ ಟಿ.ವಿ. ವೆಂಕಟರಮಣಯ್ಯನವರಿಂದ ಸಂಕಲನಗೊಂಡ ಕನ್ನಡ ಭಾಷಾ ಸಾಹಿತ್ಯ ಲೇಖನ ಸೂಚಿ ಪ್ರಕಟವಾಗಿದ್ದು ಇವರಲ್ಲಿ ಶಿವಾನುಭವ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಸೂಚಿಯನ್ನು ಒಳಗೊಂಡಿದೆ. ಬೆಂಗಳೂರಿನ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದಿಂದ ಪ್ರಕಟವಾದ ಮಣಿಹ (1982) ವಿಶೇಷ ಸ್ಮರಣ ಸಂಪುಟ ದಿ|| ಪೂಜ್ಯ ಡಾ.ಫ.ಗು. ಹಳಕಟ್ಟಿ ಜನ್ಮಶತಮಾನೋತ್ಸವದ ಸಂಸ್ಮರಣ ಸಂಪುಟದಲ್ಲಿ ಡಾ. ಫ.ಗು. ಹಳಕಟ್ಟಿಯವರ ವಾಙ್ಮಯ ಸೂಚಿ ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಡಾ. ಎಸ್.ಆರ್. ಗುಂಜಾಳ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಬರೆದ `ವಚನ ಗುಮ್ಮಟ’ ಫ.ಗು. ಹಳಕಟ್ಟಿ ಪುಸ್ತಕ 1998 ರಲ್ಲಿ ಪ್ರಕಟವಾಗಿದ್ದು ಪುಸ್ತಕದ ಅನುಬಂಧದಲ್ಲಿ ಹಿರಿಯ ಹಸ್ತಪ್ರತಿ ವಿದ್ವಾಂಸರು, ಆಕರ ವಿಜ್ಞಾನಿಗಳು ಆದ ಎಸ್. ಶಿವಣ್ಣನವರು ಹಳಕಟ್ಟಿ ಅವರ ಜೀವನದ ಕೆಲವು ಮುಖ್ಯ ಘಟ್ಟಗಳು ಕುಟುಂಬ ವರ್ಗ, ಶಿವಾನುಭವದಲ್ಲಿ ಹಳಕಟ್ಟಿಯವರ ಪ್ರಕಟಿತ ಲೇಖನಗಳು ಶಿವಾನುಭವದಲ್ಲಿ ಪ್ರಕಟವಾದ ಕೃತಿಸೂಚಿ, ಹಳಕಟ್ಟಿಯವರ ಅಧ್ಯಕ್ಷ ಭಾಷಣಗಳು ಹಳಕಟ್ಟಿಯವರ ಬಾನುಲಿ ಭಾಷಣ. ಹಳಕಟ್ಟಿಯವರಿಗೆ ಅರ್ಪಿಸಿದ ಮಾನಪತ್ರಗಳು ಡಾ. ಫ.ಗು. ಹಳಕಟ್ಟಿಯವರನ್ನು ಕುರಿತ ಪುಸ್ತಕಗಳು, ಡಾ. ಫ.ಗು. ಹಳಕಟ್ಟಿ ಕುರಿತ ಲೇಖನಗಳು ಸೂಚಿ ಪ್ರಕಟಿಸಿ, ಮುಂದಿನ ಯುವ ಸಂಶೋಧಕರಿಗೆ ಬಹಳ ಉಪಕಾರ ಮಾಡಿದ್ದಾರೆ. ಲಿಂ|| ಡಾ. ಫ.ಗು. ಹಳಕಟ್ಟಿಯವರು ಸಂಪಾದಿಸಿದ ವಚನ ಸಾಹಿತ್ಯ ಬಹಳ ವಿಸ್ತಾರವಾದದ್ದು.

ಬಸವೇಶ್ವರರ ವಚನಗಳು

ಡಾ. ಫ.ಗು. ಹಳಕಟ್ಟಿಯವರು ತಮ್ಮ ಶಿವಾನುಭವ ಮೊದಲ ಸಂಚಿಕೆಯಲ್ಲಿ ಮತ್ತು ದ್ವಿತೀಯ ಸಂಚಿಕೆಯಲ್ಲಿ ಬಸವೇಶ್ವರರ ಷಟ್ಥ ್ಸಲ ವಚನವನ್ನು ಪ್ರಕಟಿಸಿ 1926ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಎರಡನೇ ಆವೃತ್ತಿ 1930ರಲ್ಲಿ ಮೂರು ಹಸ್ತಪ್ರತಿಗಳ ಸಹಾಯದಿಂದ ಮುದ್ರಿಸಿದ್ದಾರೆ. ಮೂರನೇ ಆವೃತ್ತಿ 1934ರಲ್ಲಿ ಬಂದಿದೆ. 1940ರಲ್ಲಿ ನಾಲ್ಕನೇ ಆವೃತ್ತಿ ಹೊರತಂದಿದ್ದಾರೆ. ಈ ಪ್ರಕಟಣೆಗೆ ಇನ್ನು ಎರಡು ಹಸ್ತಪ್ರತಿಗಳನ್ನು ಬಳಸಿದ್ದಾರೆ. ಸಂಸ್ಕøತ ಶ್ಲೋಕಗಳನ್ನು ಈ ಆವೃತ್ತಿಯಲ್ಲಿ ತಿದ್ದಿದವರು ಬಾಗಲಕೋಟೆ ಸಂಸ್ಕøತ ಪಾಠಶಾಲೆಯ ಕಲಿಗಣನಾಥಶಾಸ್ತ್ರಿಗಳು. ಈ ಆವೃತ್ತಿಯಲ್ಲಿ ಬಾಗೇವಾಡಿ ಬಸವೇಶ್ವರ ದೇವಾಲಯದ ಎರಡು ಚಿತ್ರಗಳು, ಟಿಪ್ಪಣಿಗಳು ಅರ್ಜುನವಾಡದ ಶಿಲಾಲೇಖ, ಶಿಲಾಶಾಸನದ ಭಾಷಾಂತರ ಕಠಿಣ ಶಬ್ದಗಳ ಅರ್ಥವನ್ನು ಕೊಟ್ಟಿದ್ದಾರೆ. ಡಾ. ಫ.ಗು. ಹಳಕಟ್ಟಿಯವರ ಆವೃತ್ತಿಯೇ ಮುಂದೆ ಪ್ರೊ. ಶಿ.ಶಿ. ಬಸವನಾಳರಿಗೆ ಹೆಚ್ಚಿನ ಸಂಸ್ಮರಣೆ ಮಾಡಲು ಪ್ರೇರಣೆಯನ್ನಿತ್ತಿದೆ ಎಂದು ಡಾ. ಎಸ್.ಆರ್. ಗುಂಜಾಳರವರು ಅಭಿಪ್ರಾಯಪಟ್ಟಿದ್ದಾರೆ.

ಸಟೀಕ ಬಸವೇಶ್ವರನ ವಚನಗಳು

ಹಳಕಟ್ಟಿಯವರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಶಿವಾನುಭವ ಸಂಪುಟ 27 ಸಂಚಿಕೆ 3, 5, 7, 9, 10ರಲ್ಲಿ 92 ವಚನಗಳ ಟೀಕೆಯನ್ನು ಪ್ರಕಟಿಸಿದ್ದಾರೆ. ಬಸವಣ್ಣನವರ ವಚನ ಸಟೀಕವಾದ ಹಸ್ತಪ್ರತಿ ದೊರೆತ ಬಗ್ಗೆ ಬಸವೇಶ್ವರನ ವಚನಗಳು ಮುನ್ನುಡಿಯಲ್ಲಿ ಈ ಮಾಹಿತಿ ನೀಡಿದ್ದಾರೆ.  “ಈ ಎರಡನೇ ಆವೃತ್ತಿಯು ಮೂರು ಕೈಬರಹದ ಗ್ರಂಥಗಳ ಸಹಾಯದಿಂದ ಸಿದ್ಧಗೊಳಿಸಿಲ್ಪಟ್ಟಿದೆ. ಇವುಗಳಲ್ಲಿ ಎರಡು ಗ್ರಂಥಗಳು ಶ್ರೀ ಶಿವಯೋಗಮಂದಿರದಿಂದ ದೊರಕಿದವುಗಳು. ಮೂರನೆಯ ಪ್ರತಿಯು ಶ್ರೀ ಶಿವಬಸವ ಸ್ವಾಮಿಗಳು ಹುಕ್ಕೇರಿಮಠ ಮುಕ್ಕಾಮ ಹಾವೇರಿ ಇವರದು ಇರುತ್ತದೆ. ಈ ಪ್ರತಿಯು ಟೀಕೆಯುಳ್ಳದಿದ್ದು ಇದರಿಂದ ಶುದ್ಧಪಾಠಗಳನ್ನು  ಕಂಡುಹಿಡಿಯಲು ನಮಗೆ ಬಹಳ ಅನುಕೂಲವಾಯಿತು ಎಂದಿದ್ದಾರೆ. ದೊರೆತ ಟೀಕಾಪ್ರತಿಯಿಂದ ಈ ಟೀಕೆ ಸಿದ್ಧಪಡಿಸಿರಬೇಕು. ಮೂಲಹಸ್ತಪ್ರತಿ ದೊರೆತರೆ ನಿರ್ಧರಿಸುವುದು ಸುಲಭ. ದೊರೆತ ಪ್ರಾಚೀನ ಟೀಕೆಯನ್ನು ಸ್ವಲ್ಪ ಹೊಸಗನ್ನಡ ಭಾಷೆಯಿಂದ ಸರಿಪಡಿಸಿರಬಹುದು. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಹೊಸಪದ್ಧತಿಯ ಬಸವಣ್ಣನವರ ವಚನಗಳು

ಬಸವಣ್ಣನವರ ವಚನಗಳನ್ನು `ಷಟ್ಸ್ ್ಥಲವಚನಗಳನ್ನಾಗಿ’ ಸಂಕಲಿಸಿದವನು ಕನಕಪುರವರಾಧೀಶ್ವರ ಎಂಬ ಸುಳುಹು ಚಿತ್ರದುರ್ಗ ಬೃಹನ್‍ಮಠದ ಸರಸ್ವತಿ ಭಂಡಾರದಲ್ಲಿ ಇರುವ 693/1 ರ ಹಸ್ತಪ್ರತಿಯಲ್ಲಿ ಬಸವಣ್ಣನವರ ವಚನಗಳ್ನು ಸಂಕಲಿಸಿದ್ದು ಆ ಬಗ್ಗೆ ಸ್ಪಷ್ಟವಾದ ಮಾಹಿತಿ ಈ ಹಸ್ತಪ್ರತಿಯಲ್ಲಿ ಇದೆ. ಹಳಕಟ್ಟಿಯವರು ಹೊಸಪದ್ಧತಿ ವಚನವನ್ನು ಎಲ್ಲಾ ಧರ್ಮೀಯರಿಗೂ ಆಕರ್ಷಣೆಯಾಗುವಂತೆ ಹೊಸ ದೃಷ್ಟಿಕೋನದಿಂದ ವಿಭಾಗಿಸಿ `ಹೊಸ ಪದ್ಧತಿಯ ಬಸವೇಶ್ವರನ ವಚನಗಳು ಎಂಬ ಗ್ರಂಥವನ್ನ 1942ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಿಸಿದರು. ವಚನಗಳ ಆಯ್ಕೆ ಮತ್ತು ಜೋಡಣೆಯಲ್ಲಿ ವ್ಯತ್ಯಾಸಗೊಳಿಸಿದರು. 1950 ರಲ್ಲಿ ಒಂದು ಆವೃತ್ತಿ ಬಂದಿದೆ. 1999ರಲ್ಲಿ ಗದಗಿನ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪೀಠಾರೋಹಣ ರಜತ ಸಂಪುಟದ 15ನೇ ಕುಸುಮವಾಗಿ ಮುದ್ರಣವಾಗಿದೆ. 2008 ರಲ್ಲಿ ಪ್ರಕಟವಾದ ಫ.ಗು. ಹಳಕಟ್ಟಿಯವರ ಸಮಗ್ರ ಸಂಪುಟ-1 ರಲ್ಲಿ ಪ್ರಕಟವಾಗಿದೆ.

ಪ್ರಭುದೇವರ ವಚನಗಳು

ಮಹಾಲಿಂಗದೇವರು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಸಂಕಲಿಸಿ ಅವಕ್ಕೆ ವ್ಯಾಖ್ಯಾನ ಬರೆದವರು. ಈ ಸಂಕಲನ ಆರಂಭಿಕ ಗದ್ಯದಿಂದ ಗುರು ಶಿಷ್ಯ ಸಂಬಂಧವನ್ನು ಈ ರೀತಿ ಗುರುತಿಸಬಹುದು. ಮಹಾಲಿಂಗದೇವ-ಕುಮಾರ ಬಂಕನಾಥದೇವರು-ಭಕ್ತಿಭಂಡಾರಿ ಜಕ್ಕಣ್ಣ ಕೃತಿಯ ಪ್ರಾರಂಭದಲ್ಲಿ ಪ್ರಭುದೇವರ ತಿಂಡಿ ಸಂಭವ ಗದ್ಯವಿದೆ. ಹಳಕಟ್ಟಿಯವರು ನಾಲ್ಕು ಹಸ್ತಪ್ರತಿಗಳಿಂದ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯ ಮುದ್ರಣ ಸಮಯದಲ್ಲಿ ಡಾ. ಎಸ್.ಸಿ. ನಂದೀಮಠ ಬಿಜಾಪುರದಲ್ಲಿ ಕೆಲವು ದಿವಸ ನಿಂತು ಗ್ರಂಥದ ಬಹುಭಾಗವನ್ನು ಬರೆಯಿಸಿ ತಿದ್ದಿ ಅಚ್ಚಿಗೆ ಸಿದ್ಧಗೊಳಿಸಿದರು. ಈ ಗ್ರಂಥದ ಮುದ್ರಣಕ್ಕೆ ಹುಬ್ಬಳ್ಳಿಯ ಮೂರುಸಾವಿರಮಠದ ಅಂದಿನ ಮಠಾಧೀಶರಾಗಿದ್ದ ಶ್ರೀಮಜ್ಜಗದ್ಗುರು ಶ್ರೀಗುರುಸಿದ್ಧರಾಜ ದೇಶಿಕೇಂದ್ರ ಮಹಾಸ್ವಾಮಿಗಳು 500 ರೂ ಧನಸಹಾಯ ಮಾಡಿದ್ದಾರೆ. 1931ರಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ 694 ವಚನಗಳು ಟೀಕಾ ಸಮೇತ ಮುದ್ರಣವಾಗಿವೆ.

ಚನ್ನಬಸವೇಶ್ವರ ವಚನಗಳು

ಶಿವಾನುಭವ ಗ್ರಂಥಮಾಲೆಯ 32ನೆಯ ಪುಷ್ಪವಾಗಿ 1932ರಲ್ಲಿ ಪ್ರಕಟವಾದ ಚನ್ನಬಸವೇಶ್ವರನ ವಚನಗಳು ಗ್ರಂಥದ ಕಡೆಯಲ್ಲಿ “ಇಂತು ಷಟ್‍ಸ್ಥಲಕ್ಕೆ ಸೇರಿದ ವಚನ 319 ಕ್ಕೂ ಗ್ರಂಥ 90ಕ್ಕಂ ಮಂಗಳ ಮಹಾಶ್ರೀ” ಇಂತಿ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನ. ಈ ಸಮಾಪ್ತಿ ವಾಖ್ಯದ ನಂತರ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನವಿದೆ. ಕಡೆಯಲ್ಲಿ ಸ್ವರವಚನ ಇದ್ದು, ಈ ಸ್ವರವಚನದಲ್ಲಿ ಸಂಕಲನಗಾರ ಅನುಭಾವಿ ರಚಿಸಿರಬಹುದು. ಈ ಕೃತಿ ಧಾರವಾಡ ಸಮಾಜ ಪುಸ್ತಕಾಲಯದಿಂದ 1966ರಲ್ಲಿ ಮರುಮುದ್ರಣವಾಗಿದೆ. ಗದಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ 1990ರಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಸಂಪಾದನೆಗೊಂಡ ಚನ್ನಬಸವಣ್ಣನವರ ಷಟ್ಸ್ ್ಥಲವಚನ ಮಹಾಸಂಪುಟದಲ್ಲಿ (266-414) ಮುದ್ರಣವಾಗಿದೆ. ಇಲ್ಲಿ 322 ವಚನಗಳಿವೆ. ಹಳಕಟ್ಟಿಯವರಿಗೆ ಈ ಪುಸ್ತಕ ವಿಜಾಪುರದ ಶಿ.ಮೂ. ಸೊಪ್ಪಯ್ಯನವರ ಮಠದಲ್ಲಿ ದೊರೆತದ್ದು ಮತ್ತೊಂದು ಗೋಕಾನಿಯಿಂದ ಡಾ. ಎಸ್.ಸಿ. ನಂದೀಮಠ ಅವರು ಕಳುಹಿಸಿ ಕೊಟ್ಟಿದ್ದು. ಈ ಪುಸ್ತಕಕ್ಕೆ ದ್ರವ್ಯ ಸಹಾಯ ಮಾಡಿದವರು ಹುಬ್ಬಳ್ಳಿಯ ರಾ.ರಾ. ವಿರೂಪಾಕ್ಷಪ್ಪ ಶಿವಲಿಂಗಪ್ಪ ಪಾವಟೆ.

ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ

1930ರಲ್ಲಿ ಶಿವಾನುಭವ ಮಾಲೆಯ 22ನೇ ಪುಷ್ಪವಾಗಿ ಪ್ರಕಟಿಸಿದರು. ಈ ಗ್ರಂಥ ಮುದ್ರಣಕ್ಕೆ ಆರ್ಥಿಕ ಸಹಾಯಹಸ್ತ ನೀಡಿದವರು ರಾ.ರಾ. ವೀರಭದ್ರಪ್ಪ ಬಸಪ್ಪ ಹಾಲಭಾವಿಯವರು. ಇವರ ಸೂಚನೆ  ಮೇರೆಗೆ ಮಹಾಶಿವಾನುಭವಿಗಳಾದ ಶಿವಶರಣರ ಮಾರ್ಗವನ್ನು ಕೈಕೊಂಡು ಅವರಂತೆ ನಿತ್ಯ ಆಚರಿಸಿ ಸೊಲ್ಲಾಪುರದಲ್ಲಿ ವಾಸಿಸಿ, ಅಲ್ಲಿಯೇ ಕೆಲವು ವರ್ಷಗಳ ಹಿಂದೆ ಶಿವೈಕ್ಯರಾಗಿ ಹೋದ ನಾಲವತ್ತವಾಡದ ಶಿ.ಮೂ. ವೀರಯ್ಯನವರು ಶಿವಶರಣ ಇವರಿಗೆ ಸಮರ್ಪಿಸಲ್ಪಟ್ಟಿದೆ. ಶೂನ್ಯಸಂಪಾದನೆ ಇತಿಹಾಸ ಬಹಳ ದೊಡ್ಡದು. ಹಳಕಟ್ಟಿಯವರು ಮುದ್ರಣ ಮಾಡುವ ಮುಂಚೆ ಅಲ್ಲಲ್ಲಿ ಕೆಲವೇ ಜನ ಅನುಭಾವಿಗಳು ಈ ಗ್ರಂಥವನ್ನು ಅಧ್ಯಯನ ಮಾಡುತ್ತಾ ಇದ್ದರು. ಧಾರವಾಡ ಮುರುಘಾಮಠದಲ್ಲಿ 1925ನೆಯ ಜೂನ್ ತಿಂಗಳಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮೃತ್ಯುಂಜಯಸ್ವಾಮಿಗಳು ಕೈಲಾಸವಾಸಿ ಕಿಣಗಿ ಬಸವಲಿಂಗಪ್ಪನವರಿಂದ ವಚನ ಪ್ರವಚನ ಏರ್ಪಡಿಸಿದ್ದು ಆ ಸಂದರ್ಭದಲ್ಲಿ ಶೂನ್ಯಸಂಪಾದನೆಯ ಒಂದೆರಡು ಸಂಪಾದನಗಳ ಅರ್ಥವನ್ನು ಅವರಿಂದ ತಿಳಿದುಕೊಂಡಿದ್ದೆನು ಎಂದು ಹರ್ಡೇಕರ ಮಂಜಪ್ಪನವರು ನನ್ನ ಕಳೆದ ಮೂವತ್ತು ವರುಷಗಳ ಕಾಣಿಕೆ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

ಸಾಂಗಲಿ ಸಂಸ್ಥಾನಕ್ಕೆ ಸೇರಿದ ರಬಕವಿ ಗ್ರಾಮದ ಕಾಗದದ ಹಸ್ತಪ್ರತಿ, ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆ ಮೃಗಮಲೆಯ ಶ್ರೀ ಬಸವರಾಜ ಮರಿದೇವರಲ್ಲಿ ದೊರೆತ ತಾಡೋಲೆ. ಈ ಎರಡು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡು ಗೂಳೂರ ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರಪ್ರಥಮವಾಗಿ ಸಂಪಾದಿಸಿ ಲೋಕಾರ್ಪಣೆ ಮಾಡಿದ ಕೀರ್ತಿ ಹಳಕಟ್ಟಿಯವರದು. ಈ ಮುದ್ರಿತ ಪ್ರತಿ ವಚನಸಾಹಿತ್ಯಾಸಕ್ತರಲ್ಲಿ ಬಹುದೊಡ್ಡ ಸಂಚಲನವನ್ನು ಉಂಟು ಮಾಡಿತು.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಗುರುಕರುಣ) (ದಶಮೋಪದೇಶ)

ಈ ಟೀಕಾಕೃತಿ ಶಿವಾನುಭವ ಗ್ರಂಥಮಾಲಾ 78ನೇ ಕುಸುವiವಾಗಿ 1954ರಲ್ಲಿ ಮುದ್ರಣವಾಗಿದೆ. 8+37 ಪುಟದ ಈ ಪುಸ್ತಕದ ಅಂದಿನ ಬೆಲೆ 1 ರೂ 4 ಆಣೆ. ಕೃತಿಯನ್ನು ಅಥಣಿ ಶಿವಯೋಗಿಗಳಿಗೆ ಅರ್ಪಿಸಲಾಗಿದೆ. ಪೂಜ್ಯರ ಫೋಟೋ ಕೆಳಗೆ “ಬಸವಣ್ಣನವರ ಶಿವಧರ್ಮದಂತೆ ನಡೆದು ನುಡಿದು ಸಿದ್ಧಿಯನ್ನು ಪಡೆದ ಮಹಾಮಹಿಮರಾದ ಶ್ರೀ ಶ್ರೀ ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಬರೆಯಲಾಗಿದೆ. ಕೃತಿ ಪ್ರಕಟಣೆಗೆ ಬೇಕಾದ ಹಸ್ತಪ್ರತಿ ಲಭ್ಯವಾದದ್ದು ಶಿವಯೋಗ ಮಂದಿರದಲ್ಲಿ ಗ್ರಂಥದ ಮುದ್ರಣಕ್ಕೆ ಬೇಕಾದ ದ್ರವ್ಯ ಸಹಾಯವನ್ನು ಮಾಡಿದವರು ಶ್ರೀಯುತ ಕುರುವತ್ತೆಪ್ಪ ಕುರವತ್ತಿ ಮುಕ್ಕಾಮ ರಾಣಿಬೆನ್ನೂರು ಇವರು.

ಗೂಳೂರು ಸಿದ್ಧವೀರಣ್ಣೊಡೆಯರ ಹತ್ತನೇ ಅಧ್ಯಾಯವನ್ನು ಸಂಪೂರ್ಣವಾಗಿ ಮುದ್ರಿಸಿ ಆ ನಂತರ ಭಾವಾರ್ಥ ಎಂದು ಬರೆಯಲಾಗಿದೆ. ಹಸ್ತಪ್ರತಿಯಲ್ಲಿ ಇದೇ ರೀತಿ ಇತ್ತೆ? ಅಥವಾ ಹಳಕಟ್ಟಿ ಅವರು ಟೀಕೆಯನ್ನು ಅಧ್ಯಯನ ಮಾಡಿ ಅವರ ಭಾವಾರ್ಥವನ್ನು ತಮ್ಮದೇ ಆದ ದಾಟಿಯಲ್ಲಿ ಬರೆದರೆ ಮೂಲ ಹಸ್ತಪ್ರತಿಯ ಜೊತೆ ತುಲನೆ ಮಾಡಿದರೆ ಮಾತ್ರ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತದೆ. ವೀರಶೈವ ಸಿದ್ಧಾಂತವನ್ನು ಅಧ್ಯಯನ ಮಾಡುವವರಿಗೆ ಈ ಭಾವಾರ್ಥ ಒಂದು ದೊಡ್ಡ ನಿಧಿ ಅಂಗದ ಮೇಲೆ ಲಿಂಗ ಧರಿಸಲೆಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸುವ ಅಪರೂಪದ ಪುಸ್ತಕ. ಎಲ್ಲಾ ಪುರಾತನರಲ್ಲಿ ಅಲ್ಲಮಪ್ರಭುವು ಮಹಾನುಭಾವ ಸದ್‍ಗೋಷ್ಠಿಯನ್ನು ಮಾಡಿದ್ದನ್ನು ಶೂನ್ಯಸಂಪಾದನೆಯಲ್ಲಿ ಸಿದ್ಧರಾಮಯ್ಯದೇವರ ಗುರುಕಾರುಣ್ಯದ 10ನೇ ಉಪದೇಶವು ಇಲ್ಲಿಗೆ ಸಮಾಪ್ತವಾಯಿತು.

ಶೂನ್ಯ ಸಂಪಾದನೆ (ಭಕ್ತ ಜಂಗಮದ ಸ್ಥಲ) (ಪಂಚಮೋಪದೇಶ)

ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲಾ 79ನೇ ಗ್ರಂಥ 1954ರಲ್ಲಿ ಮುದ್ರಣವಾಗಿದ್ದು. ಅಂದಿನ ಬೆಲೆ 7 ಆಣಿ. ಇಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ ಗ್ರಂಥದ ಪಂಚಮೋಪದೇಶ ಅಧ್ಯಾಯ ಯಥಾವತ್ತಾಗಿ ಮುದ್ರಣವಾಗಿದ್ದು ಬಿಟ್ಟರೆ ಯಾವ ವಿಧವಾದ ಟೀಕೆಯು ಮುದ್ರಣವಾಗಿಲ್ಲ. ಯಾವುದೋ ಸಂದರ್ಭಕ್ಕೆ ಒಂದು ಅಧ್ಯಾಯವನ್ನು ಪುಸ್ತಕ ರೂಪದಲ್ಲಿ ಅಚ್ಚು ಮಾಡಿದ್ದಾರೆ. ಅಂದಿನ ಕಾರಣ ತಿಳಿದು ಬಂದಿಲ್ಲ. ಈ ಪುಸ್ತಕ ಮುದ್ರಣಕ್ಕೆ ಶ್ರೀ ಮ.ನಿ.ಪ್ರ ಹಾಲಕೆರೆ ಅನ್ನದಾನ ಸ್ವಾಮಿಗಳು ಮುದ್ರಣ ವೆಚ್ಚವನ್ನು ಆಶೀರ್ವದಿಸಿದ್ದಾರೆ. ಅವರ ಭಾವಚಿತ್ರವನ್ನು ಕೃತಿಯ ಆರಂಭದಲ್ಲಿ  ಮುದ್ರಿಸಲಾಗಿದೆ.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಸಂಪಾದನೆ) (ತೃತಿಯೋಪದೇಶ)

ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲೆಯ 77ನೆಯ ಗ್ರಂಥವಾಗಿ 1954ರಲ್ಲಿ ಮುದ್ರಣಗೊಂಡಿದೆ. ಅಂದಿನ ದಿನಮಾನದ ಈ ಕಿರುಪುಸ್ತಕದ ಬೆಲೆ 1ರೂ. ನಾವು ಈ ಗ್ರಂಥವನ್ನು ಈ ಮೊದಲಿಗೆ ಪ್ರಸಿದ್ಧಿಸಿದ ಶೂನ್ಯಸಂಪಾದನೆ ಗ್ರಂಥ ಮತ್ತು ಶಿವಯೋಗ ಮಂದಿರದಲ್ಲಿ ದೊರೆತ ಕೈಬರಹದ ಪ್ರತಿ ಒಂದರ ಸಹಾಯದಿಂದ ಅಚ್ಚಿಗಾಗಿ ಸಿದ್ಧಪಡಿಸಿದ್ದೇನೆ.

ಗೊಳೂರು ಸಿದ್ಧವೀರಣ್ಣಡೆಯನ `ಸಿದ್ಧರಾಮಯ್ಯಗಳ ಸಂಪಾದನೆ’ ತೃತಿಯೋಪದೇಶವನ್ನು ಸಂಪೂರ್ಣವಾಗಿ ಮುದ್ರಿಸಿ ನಂತರ ಸಿದ್ಧರಾಮಯ್ಯದೇವರ ಸಂಪಾದನೆ ಭಾವಾರ್ಥ ಬರೆದಿದ್ದು `ದೇವಾಲಯಗಳ ನಿರಾಕರಣಿ’, `ಲಿಂಗತನುವಿನ ಸ್ವರೂಪ’ `ಪರಮಾತ್ಮನು ಸ್ತುತಿಪ್ರಿಯನಲ್ಲ’ – ಭಕ್ತಪ್ರಿಯನು ಮುಂತಾದ ವಿಷಯಗಳನ್ನು ವಿವರವಾಗಿ ಚರ್ಚಿಸಲಾಗಿದೆ.

ಸಿದ್ಧಲಿಂಗೇಶ್ವರನ ಏಕೋತ್ತರ ಶತಸ್ಥಲ

ಶಿವಾನುಭವ ಗ್ರಂಥಮಾಲಾ 14ನೇ ಪುಸ್ತಕವಾಗಿ ಪ್ರಕಟವಾದ ಈ ಪುಸ್ತಕದ ಮುದ್ರಣವರ್ಷ ನಮೂದಾಗಿಲ್ಲ. ಈ ಪುಸ್ತಕದ ಬೆಲೆ 1-4-0 ಹಳಕಟ್ಟಿಯವರಿಗೆ ಹಸ್ತಪ್ರತಿ ದೊರೆತದ್ದು ಆದವಾನಿಯ ರಾ.ರಾ. ಈಶ್ವರಪ್ಪ ಸೌದ್ರಿ ಎಂಬ ಮಹನೀಯರಿಂದ ಮಹಾಲಿಂಗದೇವರು (ಸು. 1430) ಏಕೋತ್ತರ ಶತಸ್ಥಲ ಕೃತಿಯನ್ನು ರಚಿಸಿದವರು. ಅವರ ಶಿಷ್ಯ ಜಕ್ಕಣ್ಣ ಅಥವಾ ಜಕ್ಕಣಾರ್ಯ (ಸು. 1430) ಸ್ವರ ಏಕೋತ್ತರ ಶತಸ್ಥಲದ ವಚನವನ್ನು ರಚಿಸಿದವನು. ಕೃತಿಯ ಅಂತ್ಯದಲ್ಲಿ ಸಿದ್ಧಲಿಂಗೇಶ್ವರ ಶತಕದ 1 ಒಂದೊಂದು ವೃತ್ತವನ್ನು ಸೇರಿಸಿದ್ದರಿಂದ ಕೃತಿಗೆ ಸಿದ್ಧಲಿಂಗೇಶ್ವರ ಏಕೋತ್ತರ ಶತಸ್ಥಲ ಎಂದು ಕರೆದರು. ಈ ಬಗ್ಗೆ ಇನ್ನು ನಿಖರವಾದ ಅಧ್ಯಯನವಾಗಿಲ್ಲ. ಈ ಹಿಂದೆ ಈ ವೃತ್ತಗಳು ವಿರಕ್ತ ತೋಂಟದಾರ್ಯ ರಚಿಸಿದ್ದು ಎಂದುಕೊಂಡಿದ್ದು ಆದರೆ ವಿರಕ್ತ ತೋಂಟದಾರ್ಯನ ಸಿದ್ಧಲಿಂಗೇಶ್ವರ ಶತಕದಲ್ಲಿ ನಿರಂಜನಲಿಂಗ ಅಂಕಿತವಿದೆ. ಸಿದ್ಧಲಿಂಗೇಶ್ವರ ಅಂಕಿತದ 101 ವೃತ್ತಗಳಲ್ಲಿ ನಿರಂಜನಲಿಂಗದ ಅಂಕಿತವಿಲ್ಲ.

ಅಂಬಿಗರ ಚೌಡಯ್ಯನ ವಚನಗಳು

ಶಿವಾನುಭವ ಗ್ರಂಥಮಾಲಾ ನಂ 40 ರ ಪುಸ್ತಕವಾಗಿ 1934ರಲ್ಲಿ ಪ್ರಕಟವಾಗಿದೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಒಂದೆಡೆ ಸಂಗ್ರಹಿಸಿ ವಿಷಯಾನುಸಾರ ಜೋಡಿಸಿ ಪ್ರತಿಯೊಂದು ವಚನಗಳಿಗೆ ಅದರ ಭಾವವನ್ನು ಬರೆಯಲಾಗಿದೆ. ಹಳಕಟ್ಟಿಯವರು ಈ ಕೃತಿ ಸಂಪಾದಿಸುವಾಗ ಮುದ್ರಿತ “ಅಂಬಿಗರ ಚೌಡಯ್ಯನ ವಚನವು ಪುಸ್ತಕ ಲಭ್ಯವಿತ್ತು. 1905ರಲ್ಲಿ ಮುದ್ರಣವಾದ ಈ ಪುಸ್ತಕದ ಸಂಪಾದಕರು “ಗಣೀಶೋಪಾಸಕ’’ ಈ ಕಾವ್ಯನಾಮದ ಕವಿಯ ಹೆಸರು ಗುಂಡಭಟ್ಟ ಬೆಳಗುಪ್ಪಿ.

ಬಸವಪಥ ಸಂಪುಟ 27 ಸಂಚಿಕೆ 8 2005 ನವೆಂಬರ್‍ನಲ್ಲಿ “ಅಂಬಿಗರ ಚೌಡಯ್ಯನ ವಚನವು’’ ವಚನ ಸಂಕಲನ ಗ್ರಂಥ ಶೋಧಿಸಿದ ಗಣೀಶೋಪಾಸಕನು ಯಾರು? ಎಂಬ ಲೇಖನದಲ್ಲಿ ವಿವರವಾಗಿ ಬರೆಯಲಾಗಿದೆ. 1924ರಲ್ಲಿ ಇದೇ ಪುಸ್ತಕದ ದ್ವಿತೀಯ ಮುದ್ರಣವಾಗಿದ್ದು ಪುಸ್ತಕದ ಹೆಸರು “ಅಂಬಿಗರ  ಚೌಡಯ್ಯನ ವಚನಶಾಸ್ತ್ರವು” ಎಂದು ಬದಲಾಯಿಸಲಾಗಿದೆ.

ಆತುರವೈರಿ ಮಾರೇಶ್ವರ ವಚನಗಳು

ಮಾರಿತಂದೆಯ ಪರಿಚಯ ಲೇಖನವನ್ನು ಮತ್ತು ಏಳು ವಚನಗಳನ್ನು ಶಿವಾನುಭವ ಪತ್ರಿಕೆಯ ಸಂಪುಟ 18 ಜೂನ್ ಸಂಚಿಕೆಯಲ್ಲಿ 1944ರಲ್ಲಿ ಅಚ್ಚು ಮಾಡಲಾಗಿದೆ. ಹಳಕಟ್ಟಿಯವರಿಗೆ ಅಂದಿನ ದಿನಮಾನಕ್ಕೆ ಇಪ್ಪತ್ತೈದು ವಚನಗಳು ಲಭ್ಯವಿದ್ದು ಆದರೆ ಏಳು ವಚನಗಳನ್ನು ಮಾತ್ರ ಮುದ್ರಿಸಿದ್ದರು.

ಆದಯ್ಯನ ವಚನವು

ಶಿವಾನುಭವ ಗ್ರಂಥಮಾಲೆಯ 23ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಹಲವು ಹಸ್ತಪ್ರತಿಗಳ ಸಂಗ್ರಹದಿಂದ 151 ವಚನಗಳನ್ನು ಒಂದೆಡೆ ಸಂಗ್ರಹಿಸಲಾಗಿದೆ. ಹತ್ತು ವಚನಗಳ ಪ್ರಾಚೀನ ಟೀಕೆಯನ್ನು ಯಥಾವತ್ತಾಗಿ ಮುದ್ರಿಸಲಾಗಿದೆ.

ಉರಿಲಿಂಗ ಪೆದ್ದಿಯ ವಚನಗಳು

ಶಿವಾನುಭವ ಗ್ರಂಥಮಾಲಾ 43ನೇ ಪುಸ್ತಕವಾಗಿ 1935ರಲ್ಲಿ ಉರಿಲಿಂಗ ಪೆದ್ದಿಯ ವಚನಗಳು ಮುದ್ರಣವಾಗಿದೆ. ಅಂದಿನ ಪುಸ್ತಕದ ಬೆಲೆ 1 ರೂಪಾಯಿ, ಉರಿಲಿಂಗ ಪೆದ್ದಿಯ ವಚನಗಳು ಒಂದೇ ಕಡೆ ದೊರೆಯುವುದಿಲ್ಲ, ಹಲವು ಹಸ್ತಪ್ರತಿಗಳ ಸಹಾಯದಿಂದ ಸಂಗ್ರಹಿಸಲಾಗಿದೆ. ಈ ವಚನಗಳಲ್ಲಿ ಸಂಸ್ಕøತ ಆಧಾರ ಶ್ಲೋಕಗಳು ಬಹಳವಾಗಿ ಬಂದಿರುತ್ತದೆ. ಅವು ಲಿಪಿಗಾರ ದೋಷದಿಂದ ಬಹಳ ಅಶುದ್ಧವಾಗಿವೆ. ಅವುಗಳನ್ನು ಶುದ್ಧಪಡಿಸುವುದು ಬಹಳ ಕಷ್ಟಕರವಾದದ್ದು ಎಂದಿದ್ದಾರೆ. ಪ್ರತಿಯೊಂದು ವಚನಕ್ಕೂ ವಚನಾರ್ಥವನ್ನು ವಚನದ ಭಾವ ಎಂದು ಹಳಕಟ್ಟಿಯವರೇ ಬರೆದಿದ್ದಾರೆ.

ಗಣದಾಸಿ ವೀರಣ್ಣನವರ ವಚನಗಳು

ಶಿವಾನುಭವ ಗ್ರಂಥಮಾಲಾ 7ನೇ ಪುಸ್ತಕವಾಗಿ 1926ರಲ್ಲಿ ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ನಾಲ್ಕಾಣೆ ಮೂರು ಹಸ್ತಪ್ರತಿಗಳ ಸಹಾಯದಿಂದ ಈ ಗ್ರಂಥವನ್ನು ಸಂಪಾದಿಸಲಾಗಿದೆ. ಮೂವತ್ತೇಳು ವಚನಗಳ ಈ ಕೃತಿಯಲ್ಲಿ ಅಷ್ಟಾವರಣದ ಬಗ್ಗೆ ವಿಶೇಷವಾದ ವಚನಗಳಿವೆ.

ದೇವರ ದಾಸಿಮಯ್ಯನ ವಚನಗಳು = ಜೇಡರ ದಾಸಿಮಯ್ಯನ ವಚನಗಳು

ಶಿವಾನುಭವ ಗ್ರಂಥಮಾಲಾ 15ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಬಸವಣ್ಣನವರಿಗಿಂತ ಹಿಂದಿನವರು ಎಂದು ಹಳಕಟ್ಟಿಯವರು ತಮ್ಮ ಅಧ್ಯಯನದಿಂದ ನಿರ್ಧರಿಸಿದ್ದಾರೆ.  ಜೇಡರ ದಾಸಿಮಯ್ಯನ ವಚನವನ್ನು ಸಂಗ್ರಹಿಸಲು ಹಳಕಟ್ಟಿಯವರು ಹತ್ತಾರು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡಿದ್ದಾರೆ. ದೇವರ ದಾಸಿಮಯ್ಯನ ಜೀವನ ವೃತ್ತಾಂತವನ್ನು ತಿಳಿಸುವ ಉಪಯುಕ್ತ ಗ್ರಂಥಗಳ ಒಂದು ಪಟ್ಟಿಯನ್ನು ನೀಡಿದ್ದಾರೆ. ಜೇಡರ ದಾಸಿಮಯ್ಯನ ವಚನಗಳಿಗೆ ಉಪಶೀರ್ಷಿಕೆಗಳನ್ನು ಕೊಟ್ಟು ಅವುಗಳ ಕೆಳಗೆ ವಚನಗಳನ್ನು ಮುದ್ರಣ ಮಾಡಿದ್ದಾರೆ. ಪ್ರತಿಯೊಂದು ವಚನದ ಭಾವಾರ್ಥವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ವಚನದ ಕೆಳಗೆ ಕಠಿಣಪದದ ಅರ್ಥಗಳನ್ನು ಕೊಟ್ಟಿದ್ದಾರೆ.

ಮಡಿವಾಳ ಮಾಚಿದೇವನ ವಚನಗಳು

ಶಿವಾನುಭವ ಗ್ರಂಥಮಾಲೆಯ 50ನೇ ಪುಸ್ತಕವಾಗಿ 1929ರಲ್ಲಿ ಹಳಕಟ್ಟಿಯವರು ಪ್ರಕಟಿಸಿದ್ದಾರೆ.  ಪುಸ್ತಕದ ಬೆಲೆ ಆರು ಆಣಿ. ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ ವಿಷಯಾನುಸಾರ ಹೊಂದಿಸಿ ಈ ಗ್ರಂಥವನ್ನು ರಚಿಸಿರುತ್ತಾರೆ. ಹಳಕಟ್ಟಿಯವರು ಮಡಿವಾಳ ಮಾಚಿದೇವನ ವಚನಗಳ ಬಗ್ಗೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಪುರಾತನ ವಚನಗಳಂತೆಯೇ ಅವನ ಓಜಸ್ಸು ಇದೆ, ಒಲವು ಇದೆ. ಅವು ಈಚಿನ ವಚನಗಳಂತೆ ಉದ್ದವಾದವುಗಳಲ್ಲ. ಅವುಗಳ ಭಾವಪೂರಿತವೂ ಅರ್ಥ ಬೋಧಕವೂ ಇರುತ್ತವೆ.

ಅವನ ವಚನಗಳಲ್ಲಿ ಅಲ್ಲಲ್ಲಿ ಸಂಸ್ಕøತ ಅವತರಣಗಳೂ ಕಂಡುಬರುತ್ತವೆ. ಇದರ ಮೇಲಿಂದ ಅವನು ಬಹುಶ್ರುತನೂ ವಿದ್ವಾಂಸನು ಆಗಿದ್ದನೆಂದು ತೋರುತ್ತವೆ.

ಮಹಾದೇವಿಯಕ್ಕನ ವಚನಗಳು

ಶಿವಾನುಭವ ಗ್ರಂಥಮಾಲಾ ಮೂರನೇ ಪುಸ್ತಕವಾಗಿ 1926ರಲ್ಲಿ ಮಹಾದೇವಿಯಕ್ಕನ ವಚನಗಳು ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ಆರು ಆಣಿ. ಹಳಕಟ್ಟಿಯವರು ವಿವಿಧ ವಚನ ಸಂಕಲನಗಳಲ್ಲಿ ಇದ್ದ ಮಹಾದೇವಿಯಕ್ಕನ ವಚನಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಕ್ಕೆ ಹನ್ನೆರಡು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಮಹಾದೇವಿಯಕ್ಕನ ಚರಿತ್ರೆ ತಿಳಿಯಲು ಪ್ರಭುಲಿಂಗ ಲೀಲೆಯನ್ನು ಬಳಸಿ ಕೊಂಡಿದ್ದಾರೆ. ಈ ವಚನ ಸಂಕಲನ ಶರಣ ಸಾಹಿತ್ಯ ಅಭ್ಯಾಸಿಗಳಲ್ಲಿ ಒಂದು ಸಂಚಲನವನ್ನೆ ಉಂಟು ಮಾಡಿತು. 1950ನೇ ಇಸವಿಯಲ್ಲಿ ಇದೇ ಪುಸ್ತಕದ ಆರನೇ ಆವೃತ್ತಿಯ ಮುದ್ರಣವಾಗಿದೆ.

ಮೆರಮಿಂಡದೇವನ ವಚನಗಳು

ಶಿವಾನುಭವ ಗ್ರಂಥಮಾಲಾ 68ನೇ ಪುಸ್ತಕವಾಗಿ ಪ್ರಕಟವಾಗಿವೆ. ವಿವಿಧ ಹಸ್ತಪ್ರತಿಗಳಲ್ಲಿ ಸಂಗ್ರಹಿಸಿ 101 ವಚನಗಳನ್ನು ಸಂಪಾದಿಸಿದ್ದಾರೆ.

ಮೋಳಿಗೆ ಮಾರಯ್ಯನ ವಚನಗಳು

ಶಿವಾನುಭವ ಪತ್ರಿಕೆ ಸಂಪುಟ 11 ಸಂಚಿಕೆ 1 ಮತ್ತು 2 ರಲ್ಲಿ ಮೋಳಿಗೆ ಮಾರಯ್ಯನ ವಚನಗಳನ್ನು ಪ್ರಕಟಿಸಿದರು. ಈ ವಚನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲ. ಆದ್ದರಿಂದ ಮೋಳಿಗೆ ಮಾರಯ್ಯನ ಪರಿಚಯಾತ್ಮಕ ಲೇಖನ ಪ್ರಕಟವಾಗಲಿಲ್ಲ. “ಲಿಂಗಾಂಗ ಸಾಮರಸ್ಯ ಮತ್ತು ಲಿಂಗದ ಅರಿವು” ಎಂಬ ಉಪಶೀರ್ಷಿಕೆ ಕೊಟ್ಟು ವಚನಗಳನ್ನು ಮುದ್ರಣ ಮಾಡಲಾಗಿದೆ. 43 ವಚನಗಳಿಗೆ ಟೀಕೆ ಇಲ್ಲ.

44ನೇ ವಚನದಿಂದ 63ನೇ ವಚನದವರೆಗೆ ಪ್ರಾಚೀನ ಟೀಕೆ ಇದೆ.

ಲಿಂಗಮ್ಮನ ವಚನಗಳು

ಶಿವಾನುಭವ ಗ್ರಂಥಮಾಲೆಯ 17ನೇ ಪುಸ್ತಕವಾಗಿ ಲಿಂಗಮ್ಮನ ವಚನಗಳು ಮುದ್ರಣವಾಗಿವೆ. ಪುಸ್ತಕದ ಬೆಲೆ ಮೂರು ಆಣೆ. ಲಿಂಗಮ್ಮ ವಚನಕಾರ ಹಡಪದಪ್ಪಣ್ಣನ ಭಾರ್ಯೆ. ಈಕೆ ಬಸವೇಶ್ವರ, ಚೆನ್ನಬಸವೇಶ್ವರ ಮತ್ತು ಅಲ್ಲಮಪ್ರಭು ಮೊದಲಾದವರ ಬಗ್ಗೆ ಅತ್ಯಂತ ಭಕ್ತಿಭಾವವುಳ್ಳವಳಾಗಿದ್ದಾಳೆ. ಈ ಪ್ರಸ್ತಾವನೆ ಬರೆದಿದ್ದು 30.6.1929 ಪುಸ್ತಕ ಮುದ್ರಣವಾದ ವರ್ಷ 1929 ಎಂದು ಇಟ್ಟುಕೊಳ್ಳಬಹುದು.

ಸಕಲೇಶ ಮಾದರಸನ ವಚನಗಳು

ಶಿವಾನುಭವ ಗ್ರಂಥಮಾಲಾ ಇಪ್ಪತ್ತನೆಯ ಪುಸ್ತಕವಾಗಿ 1930ರಲ್ಲಿ ಮುದ್ರಣವಾಗಿದೆ. ಪುಸ್ತಕದ ಬೆಲೆ ಮೂರು ಆಣೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಸಕಲೇಶ ಮಾದರಸನ ಚರಿತ್ರೆಯನ್ನು ಅಧ್ಯಯನ ಪೂರ್ಣವಾಗಿ ಕೊಟ್ಟ ಕೀರ್ತಿ ಹಳಕಟ್ಟಿಯವರದು. ಹಳಕಟ್ಟಿಯವರಿಗೆ ದೊರೆತ 44 ವಚನಗಳನ್ನು ಉಪಶೀರ್ಷಿಕೆ ಅಡಿಯಲ್ಲಿ ಕೊಟ್ಟಿದ್ದಾರೆ.

ಸಿದ್ಧರಾಮೇಶ್ವರರ ವಚನಗಳು

ಶಿವಾನುಭವ ಗ್ರಂಥಮಾಲಾ 30ನೇ ಪುಸ್ತಕವಾಗಿ ಸಿದ್ಧರಾಮೇಶ್ವರನ ವಚನಗಳು ಪ್ರಕಟವಾಗಿದೆ. ಅಂದಿನ ಪುಸ್ತಕದ ಬೆಲೆ 1-0-0 ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಗ್ರಂಥವನ್ನು ಸಂಪಾದಿಸಿದ್ದಾರೆ. ಸಿದ್ಧರಾಮೇಶ್ವರ ದೇವರು ನಿರೂಪಿಸಿದ ಷಟ್‍ಸ್ಥಲದ ವಚನಗಳು ಮುಖ್ಯ ಶೀರ್ಷಿಕೆ ಅಡಿಯಲ್ಲಿ ವಚನಗಳು ಮುದ್ರಣವಾಗಿವೆ.

ಹಡಪದಪ್ಪಣ್ಣನ ವಚನಗಳು

ಶಿವಾನುಭವ ಗ್ರಂಥಮಾಲಾ ಹದಿನಾರನೇ ಪುಸ್ತಕವಾಗಿ ಪ್ರಕಟವಾಗಿದೆ. ಹಳಕಟ್ಟಿಯವರು ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಸಂಕಲನವನ್ನು ಮುದ್ರಿಸಿದ್ದಾರೆ. ಈ ಪುಸ್ತಕ ಮುದ್ರಣವಾದಾಗ ಹಡಪದಪ್ಪಣ್ಣನ ವೃತ್ತಾಂತವು ತಿಳಿದಿರಲಿಲ್ಲ. ಈತನ ಹೆಂಡತಿ ಲಿಂಗಮ್ಮನೂ ಒಳ್ಳೇ ಪಂಡಿತಳಾಗಿದ್ದಳು ಆಕೆಯ ಒಂದು ವಚನ ಉಪಲಬ್ಧವಿದೆ ಎಂದಿದ್ದಾರೆ. ಈ ಸಂಕಲನ ಮುದ್ರಣವಾದದ್ದು 1927ರಲ್ಲಿ

ಶಿವಶರಣರ ಸಂಕೀರ್ಣ ವಚನಗಳು ಭಾಗ-1

ಶಿವಾನುಭವ ಗ್ರಂಥಮಾಲಾ 47ನೇ ಪುಸ್ತಕವಾಗಿ 1938ರಲ್ಲಿ ಪ್ರಕಟವಾಗಿರುವ ಈ ಗ್ರಂಥದ ಬೆಲೆ 9 ಆಣಿ. ಈ ಸಂಕಲನದಲ್ಲಿ

1) ಗಜೇಶ ಮಸಣಯ್ಯ ವಚನಗಳು

ಈತನ ವಚನಗಳೂ ಲಿಂಗಾಂಗ ಸಾಮರಸ್ಯ ಬೋಧಕವಾಗಿರುತ್ತವೆ. ಈತನ ವಚನಗಳು ಶಿವಶರಣರ ವಚನಗಳಲ್ಲಿ ಬಹು ಸುಂದರವಾದವು.

2) ಚಂದಿಮರಸನ ವಚನಗಳು

ಹಲವು ಹಸ್ತಪ್ರತಗಳಿಂದ ವಚನಗಳನ್ನು ಸಂಗ್ರಹಿಸಿದ್ದಾರೆ. ಚಂದಿಮರಸನು ವಚನಕಾರರಲ್ಲಿ ಬಹುಪ್ರಸಿದ್ಧನಾದವನು. ಆದುದರಿಂದ ಅವನ ಉಕ್ತಿಗಳು ವಚನಗಳ ಪ್ರತಿಯೊಂದು ಸಂಗ್ರಹದಲ್ಲಿ ಬಹುಶಃ ದೊರೆಯುತ್ತವೆ ಎಂದಿದ್ದಾರೆ. ಈತನು ಬಸವನ ಬಾಗೇವಾಡಿ ಹತ್ತಿರ ಇರುವ ಸಿಮ್ಮಲಿಗೆ ಗ್ರಾಮದವನು. ಈ ಗ್ರಾಮ ಕೃಷ್ಣಾನದಿ ದಡದಲ್ಲಿದೆ. ಈತನ ಗುರುವಿನ ಹೆಸರು “ನಿಜಗುಣ ಶಿವಯೋಗಿ” ಘನಲಿಂಗ ಶಿವಯೋಗಿಗಳು ತಮ್ಮ ವಚನಗಳಲ್ಲಿ ಗುರುಶಿಷ್ಯರಿಬ್ಬರನ್ನು ಸ್ಮರಿಸಿರುವರು.

3) ಅರಿವಿನ ಮಾರಿತಂದೆಗಳ ವಚನಗಳು

ಗುಬ್ಬಿ ಮಲ್ಲಣ್ಣನ ಸಂಕಲಿಸಿದ “ಗಣಭಾಷ್ಯ ರತ್ನಮಾಲೆ” ಕೃತಿಯಲ್ಲಿ ಅರಿವಿನ ಮಾರಿತಂದೆ ವಚನಗಳು ಇವೆ. ಈತನ ಅನೇಕ ಬೆಡಗಿನ ವಚನಗಳಗೆ ಟೀಕೆ ಇದೆ. ಈ ಟೀಕೆಗಳು ಸಿಂಗಳದ ಸಿದ್ಧಬಸವ ವಿರಚಿತ “ಬೆಡಗಿನ ವಚನಗಳು” ಗ್ರಂಥದಿಂದ ಸ್ವೀಕರಿಸಿದ್ದು.

ಶಿವಶರಣರ ಸಂಕೀರ್ಣ ವಚನಗಳು ಭಾಗ 2

ಈ ಪುಸ್ತಕ 1940ರಲ್ಲಿ ಮುದ್ರಣವಾಗಿದೆ. ಅಂದು ಈ ಪುಸ್ತಕದ ಬೆಲೆ ಹನ್ನೆರಡಾಣೆ. ಈ ಪುಸ್ತಕದಲ್ಲಿ :

1) ಹಾವಿನಾಳ ಕಲ್ಲಿದೇವರ ವಚನಗಳು ಅನೇಕ ವಚನ ಸಂಕಲನದಿಂದ 60 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಅವುಗಳನ್ನು ವಿಷಯಾನುಗುಣವಾಗಿ ಹೊಂದಿಸಿ ಈ ಗ್ರಂಥದಲ್ಲಿ ಮುದ್ರಿಸಲಾಗಿದೆ. ವೇದಗಳು ವಿಶಿಷ್ಟ ವರ್ಣದವರಿಗೋಸ್ಕರ ಇರದೆ, ಬೇಕಾದ ಪಂಗಡದವರು ಅವುಗಳ ಪಠಣ ಮಾಡಬಹುದೆಂಬುದನ್ನು ತೋರಿಸುವದಕ್ಕೋಸ್ಕರ ಹಾವಿನಾಳ ಕಲ್ಲಯ್ಯನ ಚರಿತ್ರೆಯನ್ನು ಅನೇಕ ವೀರಶೈವ ಗ್ರಂಥಕಾರರು ತಮ್ಮ ಗ್ರಂಥದಲ್ಲಿ ಉದಾಹರಿಸುವದುಂಟು. ಒಂದು ನಾಯಿಯ ಕಡೆಯಿಂದ ಹಾವಿನಹಾಳ ಕಲ್ಲಯ್ಯನು ವೇದಗಳನ್ನು ಉದ್ಘೋಷಿಸಿದನೆಂದೂ ಅವನ ಚರಿತ್ರೆಯಲ್ಲಿ ಬರುವ ಮುಖ್ಯ ವಿಷಯ. ಹಾವಿನಾಳ ವಿಜಾಪುರ ಜಿಲ್ಲೆ ಮಂಗಳವೇಡೆ ಗ್ರಾಮದ ಹತ್ತಿರವಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ಪ್ರಭಾವಕ್ಕೆ ಒಳಗಾಗಿ ಅಲ್ಲಿಯೆ ವಿವಾಹವಾಗಿ `ಕಲ್ಲವ್ವೆ’ ಎಂಬ ಮಗಳನ್ನು ಪಡೆದನು. ಇವನ ಗದ್ದುಗೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರ ಗದ್ದುಗೆ ಸಮೀಪ ಇದೆ.

ಮಧುವರಸನ ವಚನಗಳು

ಮಧುವರಸನು ಬಿಜ್ಜಳ ಸೈನ್ಯದಲ್ಲಿ ಒಬ್ಬ ದಂಡಾಧೀಶನಾಗಿದ್ದು ಅವನ ಕೈಕೆಳಗೆ ಅನೇಕ ವರ್ಷ ಸೇವೆ ಮಾಡುತ್ತ ಬಂದವನೆಂದು ಆತನ ಬಗ್ಗೆ ದಂತಕಥೆಗಳಿವೆ. ಇವನ ಮೂಲ ಗ್ರಾಮವು ಮಂಗಳವಾಡವು ಇದು ಸಾಂಗಲಿ ಸಂಸ್ಥಾನದ ಮುಖ್ಯ ಗ್ರಾಮ. ಬಸವಣ್ಣನ ಶರಣ ಧರ್ಮವನ್ನು ಒಪ್ಪಿಗೊಂಡ ಮಧುವರಸ ಮುಂದೆ ತನ್ನ ಮಗಳನ್ನು ಹರಳಯ್ಯನ ಮಗನಿಗೆ ವಿವಾಹ ಮಾಡಿಕೊಟ್ಟ ನಂತರ ಕಲ್ಯಾಣಕ್ರಾಂತಿಯಾಯಿತು. ಮಧುವರಸನ ವಚನಗಳಿಗೆ ಸಿಂಗಳದ ಸಿದ್ಧಬಸವ ಟೀಕೆಗಳನ್ನು ಬರೆದಿದ್ದಾನೆ. ಫ.ಗು. ಹಳಕಟ್ಟಿಯವರು 35 ವಚನಗಳಿಗೆ ಟೀಕೆಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಕೃತಿಯಲ್ಲಿ 33 ವಚನಗಳ ಟೀಕೆ ಮಾತ್ರ ಇವೆ.

ಸತ್ಯಕ್ಕನ ವಚನಗಳು

ಜಂಬೂರೆಯ ಪುರದಲ್ಲಿ ಸತ್ಯಕ್ಕವೆಂಬ ಶಿವಶರಣೆ ಇರುತಿರ್ದು ಶಿವಭಕ್ತಿ ಶಿವಭಕ್ತಿ ನಿಷ್ಠೆಯಿಂದ ಶಿವನ ಶಬ್ದವಲ್ಲದೆ ಅನ್ಯ ಶಬ್ದ ಕೇಳಲೊಲ್ಲೆನೆಂಬ ಭಾಷೆಯಂ ಮಾಡಿಕೊಂಡಿರುವ ಶಿವಭಕ್ತರ ಮನೆಯ ಅಂಗಳನುಡುಗಿ ಮನೆಯ ಸಮ್ಮಾರ್ಜನೆಯಂ ಮಾಡಿ ಅವರು ಕೊಟ್ಟ ಧಾನ್ಯದಿಂದ ಜಂಗಮಾರ್ಚನೆ ಮಾಡುತ್ತ ಇದ್ದಳು. ಈಕೆ ವಾಸವಿದ್ದ ಜಂಬೂರು ಗ್ರಾಮ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಹತ್ತಿರವಿದೆ. ಜಂಬೂರು ಗ್ರಾಮದಲ್ಲಿ ಸತ್ಯಕ್ಕನ ದೇವಾಲಯವೂ ಇದೆ ಎಂದು ಹಳಕಟ್ಟಿಯವರು ತಿಳಿಸಿದ್ದಾರೆ. ವಿವಿಧ ಹಸ್ತಪ್ರತಿಗಳ ಸಹಾಯದಿಂದ ಇಪ್ಪತ್ತು ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಶಿವಲೆಂಕ ಮಂಚಣ್ಣಗಳ ವಚನಗಳು

ಪಂಡಿತತ್ರಯರೆಂದು ಪ್ರಸಿದ್ಧಿಯಾದವರು 1. ಮಲ್ಲಿಕಾರ್ಜುನ ಪಂಡಿತಾರಾಧ್ಯ 2. ಶ್ರೀಪತಿ ಪಂಡಿತಾರಾಧ್ಯ 3. ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯ ಈ ಮೂವರನ್ನು ಆರಾಧ್ಯತ್ರಯರೆಂದು ಅಥವಾ ಪಂಡಿತತ್ರಯರೆಂದು ಕರೆಯಲಾಗುತ್ತದೆ. ಶಿವಲೆಂಕ ಮಂಚಣ್ಣ ಪಂಡಿತರು ಉತ್ತರ ಹಿಂದೂಸ್ಥಾನದವರು. ಇವರ ಚರಿತ್ರೆಯು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಶಿವಕಥಾಸಾಗರ, ಸಿಂಗಿರಾಜ ಪುರಾಣ ಈ ಮೊದಲಾದ ಗ್ರಂಥಗಳಲ್ಲಿ ದೊರೆಯುತ್ತದೆ. ವಾರಣಾಸಿಯ ಜಂಬುಭಟ್ಟನಿಗೆ ಮಗನಾಗಿ ಜನಿಸಿ ವೀರಶೈವ ದೀಕ್ಷೆಯನ್ನು ಹೊಂದಿ ಶಿವನೇ ಸರ್ವೋತ್ತಮನೆಂದು ಭಾವಿಸಿ ವಿಶ್ವನಾಥನನ್ನು ಭಕ್ತಿಯಿಂದ ಅರ್ಚಿಸುತ್ತ ಇರುತ್ತಿದ್ದನು. ಶಿವನು ಸರ್ವೋತ್ತಮನೆಂದು ಬ್ರಾಹ್ಮಣರಿಗೆ ತೋರಿಸಲು ಮಂಚಣ್ಣ ನಾರಾಯಣನನ್ನು ಆಹ್ವಾನಿಸಿ ವಿಶ್ವೇಶ್ವರನ ಪಾದಕ್ಕೆ ನಮಸ್ಕರಿಸುವಂತೆ ಮಾಡಿದನಂತೆ.

ಹಳಕಟ್ಟಿಯವರು 53 ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಎಂಟು ವಚನಗಳು ಟೀಕಾ ಸಮೇತ ಮುದ್ರಣವಾಗಿವೆ. ಈ ಟೀಕೆ ತಿಂಗಳದ ಸಿದ್ಧಬಸವರಾಜ ದೇವರು ವ್ಯಾಖ್ಯಾನಿಸಲಾಗಿದೆ.

ಉರಿಲಿಂಗದೇವರ ವಚನಗಳು

ಹಳಕಟ್ಟಿಯವರು ತಮಗೆ ದೊರೆತ ಉರಿಲಿಂಗದೇವರ ವಚನಗಳನ್ನು ಹಲವು ಹಸ್ತಪ್ರತಿಗಳಿಂದ ಸಂಪಾದಿಸಿ ಸ್ಥಲಾನುಸಾರವಾಗಿ ಜೋಡಿಸಿದ್ದಾರೆ. ಇವನ ಗುರು ಉರುಲಿಂಗಪೆದ್ದಿ ಇವನು ಪ್ರಸಿದ್ಧ ವಚನಕಾರ ಹೀಗೆ ಗುರುಶಿಷ್ಯರಿಬ್ಬರು ಮೇಲುಮಟ್ಟದ ವಚನಗಳನ್ನು ರಚನೆ ಮಾಡಿದ್ದಾರೆ. ಹಳಕಟ್ಟಿಯವರು ವಿವಿಧ ಹಸ್ತಪ್ರತಿಗಳಿಂದ 49 ವಚನಗಳನ್ನು ಸಂಗ್ರಹಿಸಿದ್ದಾರೆ.

ಬಾಹೂರ ಬೊಮ್ಮಯ್ಯಗಳ ವಚನ

ಬಾಹೂರ ಬೊಮ್ಮಯ್ಯನ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲವೆಂದು ತೋರುತ್ತವೆ. ಅದಕ್ಕೆ ಹಳಕಟ್ಟಿಯವರು ವಚನಕಾರನ ಪರಿಚಯ ಲೇಖನ ಬರೆದಿಲ್ಲ. ಬಾಹೂರ ಬೊಮ್ಮಯ್ಯನ 44 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ.

ಶಿವಶರಣರ ಸಂಕೀರ್ಣ ವಚನಗಳು ಭಾಗ-3

ಈ ಸಂಪುಟ ಪುಸ್ತಕ ರೂಪದಲ್ಲಿ ಬರಲಿಲ್ಲ ಶಿವಾನುಭವ ಸಂಪುಟ 15, 16, 17, 18 ನೇ ಸಂಪುಟದಲ್ಲಿ ಈ ಕೆಳಕಂಡ ವಚನಕಾರರ ವಚನಗಳು ಪ್ರಕಟಗೊಂಡವು.

ಭಂಡಾರಿ ಶಾಂತಯ್ಯನ ವಚನ

ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ 32  ವಚನಗಳನ್ನು ಸಂಕಲಿಸಿದ್ದಾರೆ. ಈ ಸಂಕಲನಕ್ಕೆ ಎರಡು ಹಸ್ತಪ್ರತಿಗಳನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ. ಕಲ್ಲುಮಠದ ಪ್ರಭುದೇವರ `ಲಿಂಗಲೀಲಾ ವಿಳಾಸ’ ಸಿಂಗಳದ ಸಿದ್ಧಬಸವರಾಜದೇವರು ವ್ಯಾಖ್ಯಾನಿಸಿದ `ಸಕಲ ಪುರಾತನರ’ ಬೆಡಗಿನ ವಚನಗಳು.

ಪ್ರಕಟಿತ `ಲಿಂಗಲೀಲಾ ವಿಲಾಸ’ ಪುಸ್ತಕದಲ್ಲಿ ಭಂಡಾರಿ ಶಾಂತಯ್ಯನ ವಚನಗಳು ಇಲ್ಲ ಅವರೆ ಹಳಕಟ್ಟಿಯವರು ನೋಡಿದ ಹಸ್ತಪ್ರತಿಯನ್ನು ಭಂಡಾರಿ ಶಾಂತಯ್ಯನ ವಚನಗಳ ಟೀಕೆ ಇದ್ದಿರಬೇಕು ಈ ಬಗ್ಗೆ ಸೂಕ್ಷ್ಮವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು ಭಂಡಾರಿ ಶಾಂತಯ್ಯನ 32 ವಚನಗಳನ್ನು ಸಂಗ್ರಹಿಸಿದ ಹಳಕಟ್ಟಿಯವರು 21 ವಚನಗಳನ್ನು ಟೀಕಾ ಸಮೇತ ಮುದ್ರಿಸಿದ್ದಾರೆ.

ರೆಮ್ಮವ್ವೆಯ ವಚನಗಳು

ವೀರಶೈವರು ಅಂಧತೆಯಿಂದ ತಮ್ಮ ಕ್ರಿಯಾದಿಗಳನ್ನು ನೆರವೇರಿಸಿದಲ್ಲಿ ಅವರಲ್ಲಿ ಪ್ರಗತಿಯಾಗಲಾರದೆಂದು ವಚನಕಾರರು ಭಾವಿಸುತ್ತಾರೆ. ರೆಮ್ಮವ್ವೆಯ 64 ವಚನಗಳನ್ನು ಹಲವು ಹಸ್ತಪ್ರತಿಯಿಂದ ಸಂಗ್ರಹಿಸಿದ್ದಾರೆ.

ಏಲೇಶ ಕೇತಯ್ಯಗಳ ವಚನ

ಹಲವು ಹಸ್ತಪ್ರತಿಗಳಿಂದ 23 ವಚನಗಳನ್ನು ಸಂಗ್ರಹಿಸಿದ್ದಾರೆ. ಏಲೇಶ ಕೇತಯ್ಯ 63 ಶೀಲಾಚರಣೆಗೆ ಬಹಳ ಮಹತ್ವ ಕೊಟ್ಟವನು. ರೆಮವ್ವೆಯ ವಚನಗಳಿಗೆ ಈತನ ವಚನಗಳಿಗೂ ಬಹಳ ಸಾಮ್ಯವಿದೆ. ಈತನ ಗ್ರಾಮ ಯಾದಗಿರಿ ಹತ್ತಿರನ ಏಳೇರಿ ಇರಬೇಕು ಎಂದು ಹಳಕಟ್ಟಿಯವರು ಊಹಿಸಿದ್ದಾರೆ. ಷಟ್‍ಸ್ಥಲಗಳಲ್ಲಿ ಕೇತಯ್ಯನ ವಚನಗಳನ್ನು ವಿಂಗಡಿಸಿದಲ್ಲದೆ ಪ್ರತಿಯೊಂದು ವಚನಗಳಿಗೆ ಸರಳ ಗದ್ಯಾನುವಾದವನ್ನು `ಭಾವ’ ಎಂದು ಪ್ರತಿಯೊಂದು ವಚನದ ಕೆಳಗೆ ಕೊಟ್ಟಿದ್ದಾರೆ.

ಸೊಡ್ಡಳ ಬಾಚರಸನ ವಚನಗಳು

ಬಾಚರಸನು ಮೂಲತಃ ಗುಜರಾತದೇಶದವನು ಬಿಜ್ಜಳನಲ್ಲಿಗೆ ಬಂದು ನೌಕರಿಯನ್ನು ಸಂಪಾದಿಸಿಕೊಂಡು ಉಪಜೀವಿಸುತ್ತ ಬಂದವನು. ಬಾಚರಸನು ಸೌರಾಷ್ಟ್ರ ಸೋಮೇಶ್ವರನ ಪೂರ್ಣಭಕ್ತನು. ಬಸವೇಶ್ವರನು ಬಲದೇವ ಮಂತ್ರಿ ಮಗಳು ಗಂಗಾಂಬಿಕೆಯನ್ನು ವಿವಾಹವಾಗಲು ಕಲ್ಯಾಣಕ್ಕೆ ಬಂದಾಗ ಬಸವೇಶ್ವರನನ್ನು ಬಾಚರಸನ ಮನೆಯಲ್ಲಿಯೇ ಇಳಿಸಿದ್ದನು. ಶಿವಾನುಭವ ಗೋಷ್ಠಿಯಲ್ಲಿ ಬಾಚರಸನು ಭಾಗವಹಿಸುತ್ತಾ ಇದ್ದನು. 56 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿ ಷಟ್‍ಸ್ಥಲ ರೂಪದಲ್ಲಿ ವಿಂಗಡಿಸಿ ಪ್ರತಿಯೊಂದು ವಚನಗಳಿಗೆ ಭಾವ ಎಂದು ಸರಳ ಗದ್ಯಾನುವಾದ ಕೊಟ್ಟಿದ್ದಾರೆ.

ಗುಮ್ಮಳಾಪುರದ ಸಿದ್ಧಲಿಂಗದೇವರ ವಚನಗಳು

`ಷಟ್‍ಸ್ಥಲ ಲಿಂಗಾಂಗ ಸಂಬಂಧದ ನಿರ್ವಚನ’ ಎಂಬ ವಚನ ಕಟ್ಟಿನ ಕರ್ತೃ ಗುಮ್ಮಳಾಪುರದ ಸಿದ್ಧಲಿಂಗದೇವ. ಶೂನ್ಯಸಂಪಾದನೆಯ ಕರ್ತೃ. ತೋಂಟದ ಸಿದ್ಧಲಿಂಗೇಶ್ವರ ಮತ್ತು ಬೋಳಬಸವೇಶ್ವರನ ಶಿಷ್ಯ ಪರಂಪರೆಯವನು. ಈತ ಶೂನ್ಯಸಿಂಹಾಸನದ ಅಧಿಪತಿಯೂ ಆಗಿದ್ದ. ಎಡೆಯೂರಿನ ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗೇಶ್ವರನ ಜೊತೆ ಇದ್ದ ವಿರಕ್ತರೊಡನೆ ಗುಮ್ಮಳಾಪುರದ ಸಿದ್ಧಲಿಂಗದೇವನ ಹೆಸರು ಇದೆ. ಇವನ ಅಂಕಿತ “ಪರಂಜ್ಯೋತಿ ಮಹಾಲಿಂಗ ಗುರುಸಿದ್ಧಲಿಂಗ ಪ್ರಭುವಿನಲ್ಲಿ ಬಸವಣ್ಣನವರು ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗವಾಗಿರ್ದೆನಯ್ಯ ಬೋಳಬಸವೇಶ್ವರಾ ನಿಮ್ಮ ಧರ್ಮ ನಿಮ್ಮ ಧರ್ಮ.’’ ಈತನ 18 ವಚನಗಳನ್ನು ಶಿವಾನುಭವ ಪತ್ರಿಕೆ ಸಂಪುಟ 17 ಮತ್ತು 18ರಲ್ಲಿ 1943-44ರ ಕಾಲಮಾನದಲ್ಲಿ ಸಂಪಾದಿಸಿ ಪ್ರಕಟಿಸಿದ್ದರು.

ಕಾಲಜ್ಞಾನದ ವಚನಗಳು

1)          ಚೆನ್ನಬಸವರಾಜ ದೇವರು ಉಳಿವಿಗೆ ಚಿತ್ತೈಸಿದ ಪ್ರಸ್ತಾವದ ವಚನ

2)          ಪ್ರಭುದೇವರು ನಿರೂಪಿಸಿದ ಕಾಲಜ್ಞಾನದ ವಚನ

3)          ಎಲ್ಲಾ ಪುರಾತನರು ನಿರೂಪಿಸಿದ ಕಾಲಜ್ಞಾನದ ವಚನ

4)         ಬಸವರಾಜ ದೇವರು ನಿರೂಪಿಸಿದ ಕಾಲಜ್ಞಾನದ ವಚನ

5)          ಕಲ್ಯಾಣಿಯಮ್ಮನವರ ಕಾಲಜ್ಞಾನದ ವಚನ

6)          ಕೂಗಿನ ಮಾರಯ್ಯಗಳ ಕಾಲಜ್ಞಾನದ ವಚನ

7)          ಚನ್ನಬಸವೇಶ್ವರ ದೇವರು ನಿರೂಪಿಸಿದ ಕಾಲಜ್ಞಾನ ವಚನ

8)          ಸರ್ವಜ್ಞಸ್ವಾಮಿ ನಿರೂಪಿಸಿದ ಕಾಲಜ್ಞಾನ ವಚನ

9)          ಘಟಿವಾಳಯ್ಯನವರ ಕಾಲಜ್ಞಾನದ ವಚನ

 

ಘನಲಿಂಗನ ವಚನಗಳು

ಶಿವಾನುಭವ ಗ್ರಂಥಮಾಲೆಯ ಹದಿಮೂರನೇ ಪುಸ್ತಕವಾಗಿ ಘನಲಿಂಗನ ವಚನಗಳ ಪುಸ್ತಕ 1927ರಲ್ಲಿ ಪ್ರಕಟವಾಗಿವೆ. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ವಚನಗಳ ಸಂಖ್ಯೆ 60, 1907ರಲ್ಲಿ ಮೈಸೂರು ವೀರಶೈವಮತ ಸಂವರ್ಧಿನೀ ಸಭಾ ವತಿಯಿಂದ ಎಂ. ಬಸವಲಿಂಗಶಾಸ್ತ್ರೀಯಿಂದ ಸಂಪಾದನೆಗೊಂಡು ಪ್ರಕಟವಾದ ಗ್ರಂಥದಲ್ಲಿ 63 ವಚನಗಳು ಇವೆ. ಇತ್ತೀಚೆಗೆ ಎಸ್. ಶಿವಣ್ಣನವರು ಈತನ ಒಂದು ಹೊಸವಚನ ಸಂಶೋಧಿಸಿದ್ದಾರೆ. ಈತನ ಸಮಾಧಿ ಕುಣಿಗಲ್ ತಾಲ್ಲೂಕು ಕಗ್ಗೇರೆಯಲ್ಲಿದೆ.

 

ಶಿವಾನುಭವ ಸೃಷ್ಟಿಯ ವಚನಗಳು

ಶಿವಾನುಭವ ಗ್ರಂಥಮಾಲಾ 56ನೇ ಪುಸ್ತಕವಾಗಿ 1941ರಲ್ಲಿ ಪ್ರಕಟವಾಗಿದೆ. ಈ ಗ್ರಂಥದಲ್ಲಿ 1 ಮುಕ್ತ್ಯಾಂಗನಾ ಕಂಠಮಾಲೆ, ಸ್ವತಂತ್ರ ಸಿದ್ಧಲಿಂಗೇಶ್ವರನ 21 ವಚನಗಳನ್ನು ಸಂಕಲಿಸಿ ಅವುಗಳಿಗೆ ಟೀಕೆ ಬರೆದವನು ಚೆನ್ನದೇವನೆಂಬುವನು. ಇದರಲ್ಲಿ ಸೃಷ್ಟಿಯ ಉಗಮವು ಹೇಗೆ ಉಂಟಾಯಿತು. ಪರಮಾತ್ಮನ ಮೂಲ ಚೈತನ್ಯ ರೂಪು ಜಗತ್ ಸೃಷ್ಟಿಗೆ ಹೇಗೆ ಕಾರಣವಾಯಿತು. ಇವೇ ಮೊದಲಾದ ವಿಷಯಗಳನ್ನು ವಿವರಿಸಿ ಆಮೇಲೆ ಮುಕ್ತಿಗೆ ಸಾಧನವಾದ ಲಿಂಗಧಾರಣ ವಿಷಯವನ್ನು ಹೇಳಿದ್ದಾನೆ.

“ಜ್ಯೋತಿರ್ಮಯ ಶಾಂಭವೀ ದೀಕ್ಷೆ” ಪ್ರಭುದೇವರ 37 ವಚನಗಳನ್ನು ಪಾಲ್ಕುರಿಕೆ ಸೋಮಾರಾಧ್ಯರು ಪ್ರಭುದೇವರ ವಚನಗಳನ್ನು ಸಂಕಲಿಸಿ ಈ ಸಂಕಲನವನ್ನು ಸಿದ್ಧಮಾಡಿದವರು. ಈ ಎರಡು ಗ್ರಂಥಗಳು ಈ ಮೊದಲೇ ಮುದ್ರಣವಾದದ್ದನ್ನು ಹಳಕಟ್ಟಿಯವರು ಗಮನಿಸಿದ್ದಾರೆ. ಮೊದಲನೇ ಗ್ರಂಥವನ್ನು ಡಿ.ಆರ್. ತಿಪ್ಪಯ್ಯಶಾಸ್ತ್ರಿ, ಎರಡನೇ ಗ್ರಂಥವನ್ನು ಶ್ರೀ ಚೆನ್ನಮಲ್ಲಪ್ಪನವರು ಅಥವಾ ಸದ್ಧರ್ಮದೀಪಿಕೆ ಚೆನ್ನಮಲ್ಲಿಕಾರ್ಜುನರು ಸಂಪಾದಿಸಿ ಪ್ರಕಟಿಸಿದ್ದಾರೆ.

ಸಕಲಾಗಮ ಶಿಖಾಮಣಿ ವಚನ

ಈ ವಚನ ಗ್ರಂಥ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ. ಶಿವಾನುಭವ ಪತ್ರಿಕೆ ಸಂಪುಟ 28, 29, 30 ನೇ ಸಂಪುಟಗಳಲ್ಲಿ ವಚನಗಳು ಮುದ್ರಣವಾಗಿವೆ 518 ವಚನಗಳು ಇವೆ.

ಸಂಗನ ಬಸವೇಶ್ವರ ವಚನಗಳು

ಶಿವಾನುಭವ ಗ್ರಂಥಮಾಲೆಯ 12 ಪುಸ್ತಕವಾಗಿ 1927ರಲ್ಲಿ ಪ್ರಕಟವಾದ ಈ ಕೃತಿಯನ್ನು 70ನೇ ಹಸ್ತಪ್ರತಿಯಿಂದ ಸಂಪಾದಿಸಲಾಗಿದೆ. ಇನ್ನು ಹೆಚ್ಚಿನ ವಿಷಯಕ್ಕೆ ಸಮಗ್ರ ವಚನ ಸಂಪುಟ ಹತ್ತು ಸಂಪಾದಕ ಡಾ. ವೀರಣ್ಣ ರಾಜೂರವರು ಸಂಪಾದಿಸಿದ ಪುಸ್ತಕವನ್ನು ಅವಲೋಕಿಸಬೇಕಾಗಿ ವಿನಂತಿ.

ವೇಮಣ್ಣಯೋಗಿಯ ವಚನಗಳು

ಶಿವಾನುಭವ ಗ್ರಂಥಮಾಲೆಯ 72ನೇ ಪುಸ್ತಕವಾಗಿ 1951ರಲ್ಲಿ ಪ್ರಕಟವಾಗಿದೆ. ಪ್ರಕಟಿತ ಪುಸ್ತಕದಲ್ಲಿ 507 ವಚನಗಳಿವೆ.

ವಚನಶಾಸ್ತ್ರಸಾರ ಭಾಗ-1

ವಚನಶಾಸ್ತ್ರಸಾರ ಭಾಗ-1 ಮೊದಲ ಆವೃತ್ತಿ ಬಂದಿದ್ದು 1923 ಬೆಳಗಾವಿಯ ಶ್ರೀಯುತ ದೇವೇಂದ್ರಪ್ಪ ಫಡೆಪ್ಪಾ ಚೌಗುಲೆ ಇವರು ಶ್ರೀ ಮಹಾವೀರ ಪ್ರಿಂಟಿಂಗ್ ವಕ್ರ್ಸ್‍ನಲ್ಲಿ ಮುದ್ರಣವಾಗಿದ್ದು ಈ ಪುಸ್ತಕ ಮುಂದೆ ಪೂರ್ವಾರ್ಧ 10-8-1931 ಉತ್ತರಾರ್ಥ 26-9-1933ರಲ್ಲಿ ಪ್ರಕಟಗೊಂಡಿತು. ಹೀಗೆ ಹಳಕಟ್ಟಿಯವರಿಂದ ಎರಡು ಸಾರಿ ಮುದ್ರಣವಾಯಿತು. ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರರವರಿಂದ ಪರಿಷ್ಕರಣಗೊಂಡು 1982ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾಯಿತು. ಗದಗಿನ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಗಳ ರಜತಮಹೋತ್ಸವದಲ್ಲಿ 1999ರಲ್ಲಿ ಮುದ್ರಣವಾಯಿತು. 2005ರಲ್ಲಿ ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಮತ್ತೆ ಪರಿಷ್ಕರಣೆಗೆ ಒಳಗಾಗಿ ಮುದ್ರಣವಾಯಿತು.

ವಚನಶಾಸ್ತ್ರಸಾರ ಭಾಗ-2

1938ರಲ್ಲಿ ಸಂಕಲನಗೊಂಡು ಶಿವಾನುಭವ ಗ್ರಂಥಮಾಲೆ 27ನೇ ಪುಷ್ಪವಾಗಿ ವಚನಶಾಸ್ತ್ರಸಾರ ಭಾಗ-2 ಮುದ್ರಣವಾಗಿತ್ತು. ಆರನೂರ ಐದು ಪುಟಗಳ ಸಂಪುಟ ಪ್ರಕಟವಾಗಿತ್ತು.

2004ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಡಾ ವೀರಣ್ಣ ರಾಜೂರರವರಿಂದ ಮತ್ತು ಇತರ ವಿದ್ವಾಂಸರಿಂದ ಮರು ಪರಿಷ್ಕರಣಗೊಂಡು ಪ್ರಕಟವಾಯಿತು.

ವಚನಶಾಸ್ತ್ರಸಾರ ಭಾಗ-3 (ಪೂರ್ವಾರ್ಧ) 1939ರಲ್ಲಿ ಮುದ್ರಣವಾಗಿದೆ.

ವಚನಶಾಸ್ತ್ರ ಸಾರ ಭಾಗ-3 (ಉತ್ತರಾರ್ಧ)

ಶಿವಾನುಭವ ಗ್ರಂಥಮಾಲಾ ನಂ 52 ಪುಸ್ತಕವಾಗಿ 1953ರಲ್ಲಿ ಪ್ರಕಟವಾಗಿದೆ.

ಶಿವಾನುಭವ ಶಬ್ದಕೋಶ

1943ರಲ್ಲಿ ಶಿವಾನುಭವ ಗ್ರಂಥಮಾಲೆಯ 28ನೇ ಪುಷ್ಪವಾಗಿ ಪ್ರಕಟಗೊಂಡಿದೆ.

ಭಕ್ತಿಯ ವಚನಗಳು

1943 ರಲ್ಲಿ ಶಿವಾನುಭವ ಗ್ರಂಥಮಾಲೆಯ ಹತ್ತನೇ ಪುಷ್ಪವಾಗಿ ಪ್ರಕಟವಾದ ಈ ಕೃತಿಯ ಬೆಲೆ ಹತ್ತಾಣೆ. ಬಸವೇಶ್ವರನ ನೂರು ವಚನಗಳನ್ನು ಆಯ್ದು ಈ ಗ್ರಂಥದಲ್ಲಿ ಕೊಟ್ಟಿದ್ದಾರೆ.

ನೈತಿಕ ಮತ್ತು ಭಕ್ತಿಯ ವಚನಗಳು

1927ರಲ್ಲಿ ಮುದ್ರಣವಾದ ಈ ಕೃತಿಯ ಎರಡನೇ ಆವೃತ್ತಿ 1931ರಲ್ಲಿ ಪ್ರಕಟವಾಗಿದೆ. ವೀರಶೈವ ಶಿವಶರಣರು ತಮ್ಮ ಗ್ರಂಥಗಳಲ್ಲಿ ನೈತಿಕಾಚರಣೆಗೂ ಭಕ್ತಿಗೂ ಅತ್ಯಂತ, ಶ್ರೇಷ್ಠ ಸ್ಥಾನವನ್ನು ಕೊಟ್ಟಿರುತ್ತಾರೆ. ಈ ವಿಷಯಗಳ ಬಗ್ಗೆ ಇರುವ ಅವರ ವಾಕ್ಯಗಳು ಬಹಳ ಉದಾತ್ತವಾಗಿರುತ್ತವೆ.

ಭಕ್ತಿಯ ವಚನಗಳು ಭಾಗ-2

ಇಪ್ಪತ್ತನೆಯ ಶತಮಾನದ ಬಹಳ ಮುಖ್ಯವಾದ ಸಂಕಲನ ಎಂದರೆ ತಪ್ಪಾಗಲಾರದು. ಸಹಸ್ರಾರು ವಚನಗಳನ್ನು ಓಲೆಯಿಂದ ಪ್ರತಿ ಮಾಡುವಾಗಲೇ ಓದಿದ ಹಳಕಟ್ಟಿಯವರು ಅವುಗಳ ವಿಶಾಲಾರ್ಥವನ್ನು ಗ್ರಹಿಸಿ ವಚನಶಾಸ್ತ್ರಸಾರ ಭಾಗ-1 ರ ನಂತರ ಇಂತಹ ಮಹತ್ತ ್ವವಾದ ಕೃತಿಗಳನ್ನು ಹೊರತರಲು ಸಾಧ್ಯವಾಯಿತು.

ಪರಮಾತ್ಮನ ಸ್ವರೂಪದ ವಚನಗಳು

1948ರಲ್ಲಿ ಶಿವಾನುಭವ ಗ್ರಂಥಮಾಲೆಯ 11ನೇ ಪುಷ್ಪವಾಗಿ ಪ್ರಕಟವಾಗಿದೆ.

ಲಿಂಗ ಪರಮಾತ್ಮ (1927) ಪರಮಾತ್ಮನ ಸ್ವರೂಪ ಭಾಗ-1 ಲಿಂಗಸ್ವರೂಪ ಭಾಗ-2 ಸಾಮರಸ್ಯ ಭಾಗ-3, ಶಿವಾನುಭವ ಸತ್ಯಮಾರ್ಗ ಈ ಪುಸ್ತಕಗಳು ವಚನ ಸಾಹಿತ್ಯದ ಅಧ್ಯಯನದ ಫಲ.

ಸದ್ಧರ್ಮ ದೀಪಿಕೆ ಚೆನ್ನಮಲ್ಲಿಕಾರ್ಜುನರು ಅಥವಾ

ಚೆನ್ನಮಲ್ಲಪ್ಪನವರು

ನಿವೃತ್ತ ಕನ್ನಡ ಶಾಲೆಯ ಅಧ್ಯಾಪಕರಾಗಿ ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದರು. ಇವರು ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ ವಿವರ ಇಂದಿನವರೆಗೂ ಸರಿಯಾಗಿ ದಾಖಲಾಗಿಲ್ಲ. ಯುವ ವಿದ್ವಾಂಸರು ಈ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು.

  1. ಅಕ್ಕಗಳ ಸೃಷ್ಟಿವಚನ 1959
  2. ಅಕ್ಕಮಹಾದೇವಿಯ ವಚನಾರ್ಥ ಪ್ರಥಮ ಭಾಗ
  3. ಉಡುತಡಿಯ ಮಹಾದೇವಿಯಕ್ಕನ ವಚನಾರ್ಥ-ಎರಡನೇ ಭಾಗ
  4. ಕೊರವಂಜಿ ವಚನ – ಅಕ್ಕಮಹಾದೇವಿ
  5. ಗುರುವರ್ಗದ ವಚನಗಳು
  6. ದೇವರ ದಾಸಿಮಯ್ಯಗಳು = ಜೇಡರ ದಾಸಿಮಯ್ಯಗಳ ಮುಂಡಿಗೆಯ ವಚನ
  7. ಶಿವಲೆಂಕ ಮಂಚಣ್ಣಗಳ ವಚನ
  8. ಸರ್ವ ಪುರಾತನರ ವಚನ 1000 ವಚನದ ಸಂಕಲನ
  9. ಮೂರು ಸಾವಿರ ವಚನಗಳು, ಸದ್ಧರ್ಮ ದೀಪಿಕೆಯಲ್ಲಿ ಪ್ರಕಟವಾಗುತ್ತಾ ಬಂದಿದೆ. ಪುಸ್ತಕದ ರೂಪದಲ್ಲಿ ಹೊರಬಂದಿಲ್ಲ.
  10. ಸಿದ್ಧೇಶ್ವರನ ವಚನಗಳು

ಪ್ರಕಟಿತ ಸಾಹಿತ್ಯವನ್ನು ಮುಂದೆ ಇಟ್ಟುಕೊಂಡು ಪರಿಶೀಲನೆ ಮಾಡಿ ಪುಸ್ತಕಗಳನ್ನು ವಿಂಗಡಿಸಬೇಕು.

 

ಪ್ರೊ|| ಸಂ.ಶಿ. ಭೂಸನೂರಮಠ

ಹಿರಿಯ ಕನ್ನಡ ವಿದ್ವಾಂಸರಾದ ಪ್ರೊ. ಸಂ.ಶಿ. ಭೂಸನೂರಮಠರು ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದ್ದಾರೆ.

  1. ಲಿಂಗಲೀಲಾ ವಿಲಾಸ – ಕಲ್ಲುಮಠದ ಪ್ರಭುದೇವ
  2. ಏಕೋತ್ತರ ಶತಸ್ಥಲ – ಮಹಾಲಿಂಗದೇವ
  3. ಶೂನ್ಯಸಂಪಾದನೆ – ಗೂಳೂರು ಸಿದ್ಧವೀರಣ್ಣೊಡೆಯ
  4. ಮೋಳಿಗೆ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನ ವಚನಗಳು (ಉತ್ತಂಗಿ ಅವರ ಜೊತೆ)
  5. ವಚನ ಸಾಹಿತ್ಯ ಸಂಗ್ರಹ

 

ಉತ್ತಂಗಿ ಚೆನ್ನಪ್ಪನವರು

ಹುಟ್ಟುಕನ್ನಡಿಗರಾದ ಉತ್ತಂಗಿ ಚೆನ್ನಪ್ಪನವರು ರೆವರೆಂಡ್‍ರಾಗಿ ಬೈಬಲ್ ಜೊತೆಗೆ ವಚನ ಸಾಹಿತ್ಯವನ್ನು  ಅಧ್ಯಯನ ಮಾಡಿದವರು. ಅವರ ಸೇವೆ ಸದಾ ಸ್ಮರಣೀಯ.

  1. ಸರ್ವಜ್ಞ ವಚನಗಳು
  2. ಆದಯ್ಯನ ವಚನಗಳು – ಮುರುಘಾಮಠ 1957
  3. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಮ್ಮನ ವಚನಗಳು

(ಪ್ರೊ. ಸಂ.ಶಿ. ಭೂಸನೂರಮಠರವರ ಜೊತೆ)

ವೀರಭದ್ರಪ್ಪ ಹಾಲಬಾವಿ ಧಾರವಾಡ ಪ್ರಕಾಶಕರು 1950

  1. ಸಿದ್ಧರಾಮ ಸಾಹಿತ್ಯ ಸಂಗ್ರಹ – 1955, ಪ್ರಕಾಶಕರು ಜಯದೇವಿ ತಾಯಿ ಲಿಗಾಡೆಯವರು ಕನ್ನಡ ಕೋಟೆ
  2. ಕುಷ್ಟಗಿ ಕರಿಬಸವೇಶ್ವರರ ವಚನಗಳು

ಪ್ರೊ. ಶಿ.ಶಿ. ಬಸವನಾಳ

ಪ್ರೊ|| ಶಿ.ಶಿ. ಬಸವನಾಳರು ವಚನ ಸಾಹಿತ್ಯ ಸಂಪಾದನೆ ಪ್ರಕಟಣೆ ಇಂಗ್ಲೀಷ್ ಅನುವಾದಕ್ಕೆ ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ.

  1. ಬಸವಣ್ಣನವರ ಷಟ್‍ಸ್ಥಲದ ವಚನಗಳು
  2. ಬಸವಣ್ಣನವರ ಷಟ್‍ಸ್ಥಲದ ವಚನಗಳು ಗ್ರಂಥಾಲಯ ಆವೃತ್ತಿ 1962
  3. ಬಸವಣ್ಣನವರ ಹೆಚ್ಚಿನ ವಚನಗಳು

 

ಡಾ. ಎಲ್. ಬಸವರಾಜು

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು ತಮ್ಮ ಜೀವಿತಾವಧಿಯಲ್ಲಿ ವಚನ ಸಂಪಾದನೆಗೆ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಬಗ್ಗೆ ಅಖಿಲ ಭಾರತ ಮಟ್ಟದಲ್ಲಿ ಚರ್ಚೆಯಾಗಬೇಕು.

  1. ಬಸವಣ್ಣನವರ ವಚನಗಳು (ಬಸವೇಶ್ವರ ವಚನ ಸಂಗ್ರಹ) 1952
  2. ಅಲ್ಲಮನ ವಚನ ಚಂದ್ರಿಕೆ (ಪ್ರಭುದೇವರ ವಚನಗಳು ಮತ್ತು ಸ್ವರವಚನಗಳು) 1960
  3. ಬಸವ ವಚನಾಮೃತ ಭಾಗ-1 1966 ಭಾಗ-2 1989
  4. ಅಕ್ಕನ ವಚನಗಳು 1966
  5. ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ – 1969
  6. ದೇವರ ದಾಸಿಮಯ್ಯನ ವಚನಗಳು – 1970
  7. ಅಲ್ಲಮನ ವಚನಗಳು – 1969
  8. ಸರ್ವಜ್ಞನ ವಚನಗಳು – 1970
  9. ಸರ್ವಜ್ಞನ ವಚನಗಳು (ಸಂಗ್ರಹ) 1975
  10. ವಚನ ಚಿಂತನ (1982)
  11. ಅಲ್ಲಮನ ಲಿಂಗಾಂಗ ಸಂವಾದ (ಪ್ರಭುಲಿಂಗಲೀಲೆಯ ಆಧಾರದಿಂದ) 1986
  12. ಬಸವಣ್ಣನ ಷಟ್ಸ್ ್ಥಲದ ವಚನಗಳು (ಸಹ ವ್ಯಾಖ್ಯಾನ ಸಹಿತ) 1990
  13. ಶೂನ್ಯಸಂಪಾದನೆ – 1996 (ಸಂಗ್ರಹ ಕರ್ನಾಟಕ ಸಾಹಿತ್ಯ ಅಕಾಡೆಮಿ)
  14. ಶೂನ್ಯಸಂಪಾದನೆ (ಗೂಳೂರು ಸಿದ್ಧವೀರಣ್ಣೊಡೆಯ ಮೌಲಿಕ ಕೃತಿಯ

ಸರಳ ನಿರೂಪಣೆ) 1997, 2016

  1. ಬೆಡಗಿನ ವಚನಗಳು – 1998
  2. [ಅಲ್ಲಮನು ಮೈಮೇಲೆ ಬಂದಾಗ 2004]
  3. ಪ್ರಭುದೇವರ ಷಟ್ಸ್ ್ಥಲದ ವಚನಗಳು 2005 ಸಹಸ್ಪಂದನ ಸಹಿತ
  4. ಶ್ರೀಘನಲಿಂಗದೇವರ ವಚನಗಳು 2005 ವ್ಯಾಖ್ಯಾನ ಸಹಿತ
  5. ಸೊನ್ನಲಾಪುರದ ಸಂತ ಸಿದ್ಧರಾಮರ ನಿಜವಚನಗಳು 2007
  6. ನೂರಾರು ಶರಣರ ಸಾವಿರ ವಚನಗಳು 2008
  7. [ಕವನ ಕೂಡಲಸಂಗ 2009]
  8. ಬಸವಪೂರ್ವ ವಚನಕಾರರು 2009
  9. ಕಡಕೋಳ ಮಡಿವಾಳಪ್ಪನವರ ಮಹಾಂತ ನಿಜಲೀಲಾನುಭವ ವಚನ ಮತ್ತು ಪದಗಳೂ 2011

ಡಾ. ಆರ್.ಸಿ. ಹಿರೇಮಠ

ವಚನ ಸಾಹಿತ್ಯ ಪ್ರಕಟಣ ಇತಿಹಾಸದಲ್ಲಿ ಡಾ. ಆರ್.ಸಿ. ಹಿರೇಮಠರಿಗೆ ಅಗ್ರಸ್ಥಾನ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬೃಹತ್ ಹಸ್ತಪ್ರತಿ ಭಂಡಾರವನ್ನು ಸ್ಥಾಪಿಸಿದ್ದು, ವಚನ ಸಾಹಿತ್ಯ ಪ್ರಕಟಣೆಗೆ ದುಡಿಯುವಂತಹ ವಿದ್ವಾಂಸರನ್ನು ತಯಾರು ಮಾಡಿದ್ದು ಇವರ ಜೀವಮಾನದ ಕೊಡುಗೆ.

  1. ಅಖಂಡೇಶ್ವರ ವಚನ (ಸಂಪಾದನೆ) 1956
  2. ಷಟ್‍ಸ್ಥಲ ಜ್ಞಾನಸಾರಾಮೃತ ಮುರುಘಾಮಠ ಧಾರವಾಡ 1964
  3. ಷಟ್‍ಸ್ಥಲಪ್ರಭೆ (ಸಂಶೋಧನೆ) 1965
  4. ಇಪ್ಪತ್ತೇಳು ಶಿವಶರಣೆಯರ ವಚನಗಳು (ಸಂಪಾದನೆ) 1968
  5. ಅಮುಗೆ ರಾಯಮ್ಮನ ಮತ್ತು ಅಕ್ಕಮ್ಮನ ವಚನಗಳು 1968
  6. ಸಿದ್ಧರಾಮೇಶ್ವರ ವಚನಗಳು 1968

6ಎ.      ಬಸವಣ್ಣನವರ ವಚನಗಳು 1968

  1. ವೀರಶೈವ ಚಿಂತಾಮಣಿ 1971
  2. ಮುಕ್ತಿಕಂಠಾಭರಣ 1971
  3. ನೀಲಮ್ಮನ ವಚನಗಳು ಮತ್ತು ಲಿಂಗಮ್ಮನ ವಚನಗಳು 1971
  4. ಶೂನ್ಯಸಂಪಾದನೆ – ಶಿವಗಣಪ್ರಸಾದಿ ಮಹಾದೇವಯ್ಯ 1971
  5. ವಿಶೇಷಾನುಭವ ಷಟ್ಸ್ ್ಥಲ – 1971
  6. ಶೂನ್ಯಸಂಪಾದನೆ – ಗುಮ್ಮಳಾಪುರದ ಸಿದ್ಧಲಿಂಗ ದೇವರ 1972
  7. ಸಕಲ ಪುರಾತನರ ವಚನಗಳು-1 1973
  8. ಬ್ರಹ್ಮಾದ್ವೈತ ಸಿದ್ಧಾಂತ ಷಟ್‍ಸ್ಥಲಾಭರಣ – 1973
  9. ಮಹಾದೇವಿಯಕ್ಕನ ವಚನಗಳು – 1973
  10. ಅಲ್ಲಮಪ್ರಭುದೇವರ ವಚನಗಳು – 1976
  11. Sಡಿi ಅhಚಿಟಿಟಿಚಿbಚಿsಚಿvesತಿಚಿಡಿಚಿ (ಣಡಿಚಿಟಿsಟಚಿಣioಟಿ) 1978

 

ಡಾ. ಎಂ.ಎಂ. ಕಲಬುರ್ಗಿ ವಚನ ಸಂಪಾದನೆ

ವಚನ ಸಾಹಿತ್ಯದ ಪ್ರಕಟಣೆಯಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪುಟದ ಪ್ರಧಾನ ಸಂಪಾದಕರಾಗಿ ತಮ್ಮ ಜೀವಿತಾವಧಿಯಲ್ಲಿ ಮೂರು ಸಾರಿ ಸಂಪಾದಿಸಿ ಪ್ರಕಟಿಸಿದ್ದು, ಫಗು. ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಪ್ರಕಟಣೆ, ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆ, ಬಸವ ಸಮಿತಿಯ ಬಹುಭಾಷಾ ಯೋಜನೆಯಲ್ಲಿ ವಚನ ಸಾಹಿತ್ಯ ಪ್ರಕಟಣೆ ಹೀಗೆ ವಚನ ಸಾಹಿತ್ಯಕ್ಕೆ ಸಂದ ಇವರ ಸೇವೆ ಬಗ್ಗೆ ಯುವ ವಿದ್ವಾಂಸರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು.

  1. ಬಸವಸ್ತೋತ್ರದ ವಚನಗಳು ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1976
  2. ಬಸವಣ್ಣನವರ ಟೀಕಿನ ವಚನಗಳು-1 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1970
  3. ಬಸವಣ್ಣನವರ ಟೀಕಿನ ವಚನಗಳು-2 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1982
  4. ವಚನಶಾಸ್ತ್ರಸಾರ ಭಾಗ-1, (ಫ.ಗು. ಹಳಕಟ್ಟಿ) ಇತರರೊಂದಿಗೆ ತೋಂಟದಾರ್ಯಮಠ ಗದಗ 1982, 1999 ವಿಜಾಪುರ 2007
  5. ಚೆನ್ನಬಸವಣ್ಣನವರ ಷಟ್‍ಸ್ಥಲ ವಚನ ಮಹಾಸಂಪುಟ ತೋಂಟದಾರ್ಯಮಠ ಗದಗ 1992
  6. ವಚನಸಂಕಲನ ಸಂಪುಟ – ನಾಲ್ಕು (ಇತರರೊಂದಿಗೆ) ತೋಂಟದಾರ್ಯಮಠ ಗದಗ 1992
  7. ಬಸವಣ್ಣನವರ ವಚನಗಳು ಕರ್ನಾಟಕ ಸರ್ಕಾರ ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002, 2016
  8. ಸಂಕೀರ್ಣ ವಚನ ಸಂಪುಟ-1 ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002
  9. ಸಿದ್ಧರಾಮಯ್ಯದೇವರ ವಚನಗಳು (ಡಾ. ಸಾ.ಶಿ ಮರುಳಯ್ಯನವರೊಂದಿಗೆ)
  10. ಷಟ್ಸ್ ್ಥಲ ಶಿವಾಯಣ (ಡಾ. ಸಿ.ಸಿ ಕೃಷ್ಣಕುಮಾರ್‍ರೊಂದಿಗೆ) ತೋಂಟದಾರ್ಯಮಠ ಗದಗ 1999
  11. ವಚನ ಸಂಕಲನ ಸಂಪುಟ-6 (ಇತರರೊಂದಿಗೆ) ತೋಂಟದಾರ್ಯಮಠ ಗದಗ 2002
  12. ಪರಮಾನಂದ ಸುಧೆ (ಡಾ. ವೀರಣ್ಣ ರಾಜೂರ ಜೊತೆ)
  13. ವಚನ : 2 ಬಸವ ಸಮಿತಿ ಬೆಂಗಳೂರು 2012 23 ಭಾಷೆಗೆ ಭಾಷಾಂತರ
  14. ಏಕೋತ್ತರಶತಸ್ಥಲ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ ಗದಗ 2014
  15. ಶೂನ್ಯಸಂಪಾದನೆ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ 2015

 

ಎಸ್. ಶಿವಣ್ಣ

ಹಸ್ತಪ್ರತಿ ತಜ್ಞ, ಆಕರ ವಿಜ್ಞಾನಿ ಎಸ್. ಶಿವಣ್ಣನವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನ ನಡೆಯಬೇಕು. ಅಪ್ರಕಟಿತ ವಚನ ಸಾಹಿತ್ಯದ ಬಗ್ಗೆ ವಿವರವಾದ ಮಾಹಿತಿ ನೀಡುತ್ತಾ ಇದ್ದ ಏಕಮೇವ ವ್ಯಕ್ತಿ ಎಂದರೆ ಅತಿಶಯೋಕ್ತಿ ಅಲ್ಲ. ಹಲವು ಅಪ್ರಕಟಿತ ಬಿಡಿ ಬಿಡಿ ವಚನಗಳು ಪಾತಾಳಗರುಡಿ ಹಾಕಿ ಹುಡುಕಿ ವಿಶೇಷ ಸಂಚಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿರುವ “ಬಿಡುಮುತ್ತು” (2004) ಸಂಪುಟವನ್ನು ಪರಿಶೀಲಿಸಿದರೆ ವಚನ ಸಂಪಾದನೆಗೆ ಅವರ ಸೇವೆಯ ವಿಸ್ತಾರದ ಅರಿವು ಉಂಟಾಗುತ್ತವೆ.

  1. ಕುಷ್ಟಗಿ ಕರಿಬಸವೇಶ್ವರನ ವಚನಗಳು ತೋಂಟದಾರ್ಯಮಠ ಗದಗ 1990
  2. ಸಮಗ್ರ ವಚನ ಸಂಪುಟ-11 ಕನ್ನಡ ಸಂಸ್ಕøತಿ ಇಲಾಖೆ 1993, 2002
  3. ಚೆನ್ನಬಸವಣ್ಣನವರ ವಚನಗಳು ಬಡಗಿ ಪ್ರಕಾಶನ ತುಮಕೂರು 1995
  4. ಹೊಸ ವಚನಗಳು ಕರ್ಣಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 1998
  5. ವಚನ ಸಂಕಲನ ಸಂಪುಟ-4
  6. ನೀಲಮ್ಮನ ವಚನಗಳು ಬಸವ ಸಮಿತಿ 1993
  7. ಅಕ್ಕಮಹಾದೇವಿ ವಚನಗಳು ಬೆಂಗಳೂರು 1993
  8. ಏಕೋತ್ತರ ಶತಸ್ಥಲ 2014 ಇತರರೊಂದಿಗೆ ಎಳಂದೂರು ಪರ್ವತ ಶಿವಯೋಗಿ ಕೃತಿ (ಅಪೂರ್ಣ)

 

ಪ್ರೊ. ಎಸ್. ಉಮಾಪತಿ

ನಿವೃತ್ತ ಕನ್ನಡ ಪ್ರಾಧ್ಯಾಪಕರು ದಾವಣಗೆರೆ ಪರಿಸರದಲ್ಲಿ ಹಸ್ತಪ್ರತಿ ಸಂಗ್ರಹ ಸಂಪಾದನೆಗೆ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ತಮ್ಮ 88ನೇ ವಯಸ್ಸಿನಲ್ಲಿ ನವೆಂಬರ್ 2020ರಲ್ಲಿ ಮಹಾಲಿಂಗದಲ್ಲಿ ಲೀನವಾದರು.

  1. ಸಕಲೇಶ ಮಾದರಸನ ವಚನಗಳು
  2. ಮಡಿವಾಳ ಮಾಚಿದೇವ ವಚನಗಳು
  3. ಜೇಡರ ದಾಸಿಮಯ್ಯನ ವಚನಗಳು
  4. ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು 1984
  5. ಏಕೋತ್ತರ ಶತಸ್ಥಲ ಏಳಂದೂರು (ಪರ್ವತ ಶಿವಯೋಗಿಯ ವಚನಗಳು) ಎಸ್. ಶಿವಣ್ಣ ಮತ್ತು ಡಾ|| ಬಿ. ನಂಜುಂಡಸ್ವಾಮಿ

 

ಡಾ. ಎಸ್. ವಿದ್ಯಾಶಂಕರ ಸಂಪಾದಿತ ವಚನ ಸಾಹಿತ್ಯ

ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿ ವಚನಾಭ್ಯಾಸಿಗಳಾಗಿ ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾ ವಚನಗಳ ಸಂಪಾದನೆ, ಪ್ರಕಟಣೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪಾದನೆ ಪ್ರಕಟಣೆಯಲ್ಲಿ ಇವರ ಸೇವೆ ಸಂದಿದೆ. ಅಪ್ರಕಟಿತ ಹಲಗೆಯಾರ್ಯನ ಶೂನ್ಯ ಸಂಪಾದನೆ ಪ್ರಕಟಣೆ ಅವರು ವಚನ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆ.

  1. ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆ ಪ್ರಕಾಶನ ತೊರೆಮಠ ಗುಬ್ಬಿ ತುಮಕೂರು ಜಿಲ್ಲೆ 2006, ಸ್ನೇಹ ಪ್ರಕಾಶನ 2021
  2. ವಚನ ಪರಿಭಾಷಾ ಕೋಶ – 1993 ಕನ್ನಡ ಸಂಸ್ಕøತಿ ಇಲಾಖೆ, ಬೆಂಗಳೂರು
  3. ಹಲಗೆದೇವರ ಶೂನ್ಯಸಂಪಾದನೆ (ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರೊಡನೆ) 2000, 2010
  4. ಅಂಬಿಗರ ಚೌಡಯ್ಯನ ವಚನಗಳು ಡಾ. ಸಿದ್ಧಾಶ್ರಮ ಇವರೊಡನೆ 1980
  5. ಶ್ರೀ ಸಿದ್ಧರಾಮೇಶ್ವರ ವಚನಗಳು ಸಂಪಾದಿತ 1993 ಕನ್ನಡ ಮತ್ತು ಸಂಸ್ಕøತಿ ಇಲಾಖೆ, 2002, 2016
  6. ಸಂಕೀರ್ಣ ವಚನ ಸಂಪುಟ-2 ಕನ್ನಡ ಮತ್ತು ಸಂಸ್ಕøತಿ ಇಲಾಖೆ 1993, 2002, 2016
  7. ವಚನಗಳು (ವಚನಗಳ ಪ್ರಾತಿನಿಧಿಕ ಸಂಗ್ರಹ) ಕರ್ನಾಟಕ ಸಾಹಿತ್ಯ ಅಕಾಡೆಮಿ 1998
  8. ಸಿದ್ಧಲಿಂಗೇಶ್ವರರ ವಚನಗಳ ಟೀಕೆ ಅಜ್ಞಾತ ಕವಿಕೃತ ಸಮೇತ 2011
  9. ಎನ್ನ ನಾ ಹಾಡಿಕೊಂಬೆ ಟೀಕಾ ಸಮೇತ ಬಸವಣ್ಣನವರ ವಚನಗಳ ಸಾಂಸ್ಕøತಿಕ ಅಧ್ಯಯನ ಪ್ರಿಯದರ್ಶಿನಿ ಪ್ರಕಾಶನ 2012
  10. ಅಲಕ್ಷಿತ ವಚನಕಾರರು 2013 ಪ್ರಿಯದರ್ಶಿನಿ ಪ್ರಕಾಶನ
  11. ಕಲ್ಲುಮಠದ ಪ್ರಭದೇವರ ಕೃತಿಗಳು 2013

 

ಜಿ.ಎ. ಶಿವಲಿಂಗಯ್ಯ

ಮಂಡ್ಯದ ಗುತ್ತಲು ಗ್ರಾಮದ ಗ್ರಾಮಾಂತರ ಪ್ರತಿಭೆ ಜಿ.ಎ. ಶಿವಲಿಂಗಯ್ಯನವರು ಮೈಸೂರು ಮರಿಮಲ್ಲಪ್ಪ ಜೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ.

  1. ಮುತ್ತಿನಕಂತೆಯ ದೇವರ ವಚನಗಳು
  2. ಚೆನ್ನಬಸವಣ್ಣನವರ ಮಿಶ್ರಷಟ್ಸ್ ್ಥಲದ ವಚನಗಳು, ತೋಂಟದಾರ್ಯ ಮಠ, ಗದಗ
  3. ಷಟ್‍ಪ್ರಕಾರ ಸಂಗ್ರಹ – 1987 ತೋಂಟದಾರ್ಯ ಮಠ ಗದಗ
  4. `ವಚನೈಕೋತ್ತರ ಶತಸ್ಥಲ’ ಚೆನ್ನಬಸವಣ್ಣನವರು (ಕ್ರಿ.ಶ. 1160) 108 ವಚನಗಳ ಸಂಕಲನರೂಪದ ಗ್ರಂಥ
  5. ಮೋಕ್ಷದರ್ಶನ ಸಂಗ್ರಹ (ಅಪೂರ್ಣ ವಚನ ಸಂಕಲನ)
  6. ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು 1991 ತೋಂಟದಾರ್ಯಮಠ
  7. ಎಲ್ಲ ಪುರಾತರ ವಚನ  ಕುಂತೂರು ಮಹಾಂತ ದೇವರು, ವಚನ ಸಂಕಲನ ಸಂಪುಟ II
  8. ಚೆನ್ನಬಸವೇಶ್ವರದೇವರ ರಾಜಯೋಗದ ವಚನ, ವಚನ ಸಂಕಲನ ಸಂಪುಟ II 1990 ತೋಂಟದಾರ್ಯ ಮಠ ಗದಗ

ಪಿ.ಎಂ. ಗಿರಿರಾಜು

ಮೈಸೂರು ವ್ಯಾಪಾರಸ್ಥರ ಮನೆ ಮಗನಾಗಿ ವಚನ ಸಾಹಿತ್ಯ ಪ್ರಕಟಣೆಗೋಸ್ಕರ ತಮ್ಮ ಜೀವನವನ್ನು ಮುಡಿಪಿಟ್ಟು ಹೋರಾಟ ಮಾಡಿದವರು. ವಚನ ಸಾಹಿತ್ಯ ಸಂಪಾದನೆ, ಪ್ರಕಟಣೆಗೆ ಅಪರಿಮಿತವಾದ ಸೇವೆ ಸಂದಿದೆ.

  1. ಆಚರಣೆ ಸಂಬಂಧದ ವಚನಗಳು – ಸಂಪಾದನೆ ಹರತಾಳ ಚನ್ನಂಜಯದೇವರು
  2. ಸಂಬಂಧಾಚರಣೆ ವಚನಗಳು                   3.          ಷಟ್‍ಪ್ರಕಾರ ಸಂಗ್ರಹ
  3. ಚಿದೈಶ್ವರ್ಯ ಚಿದಾಭರಣ                                    5.          ಸಿದ್ಧರಾಮೇಶ್ವರ ವಚನಗಳು
  4. ಬಸವಣ್ಣನವರ 101 ವಚನಗಳು      7.             ಜೇಡರ ದಾಸಿಮಯ್ಯಗಳ ವಚನ
  5. ವಿರತಾಚರಣೆಯ ವಚನಗಳು ಸಂಪಾದನೆ ಸಿದ್ಧವೀರೇಶ್ವರದೇವರು

ಬಿ.ಎಸ್. ಸಣ್ಣಯ್ಯ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನೆ ವಿಭಾಗದಲ್ಲಿ ಸಂಪಾದಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಬಿ.ಎಸ್. ಸಣ್ಣಯ್ಯನವರು ಅಖಿಲ ಭಾರತ ಮಟ್ಟದಲ್ಲಿ ಹಸ್ತಪ್ರತಿ ಸಂಗ್ರಹಕ್ಕೆ ತಿರುಗಾಡಿದ್ದರು. ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ವಿಶೇಷ ಕ್ರಮವನ್ನು ಹಾಕಿದ ಹಿರಿಯ ವಿದ್ವಾಂಸರು.

  1. ಮೆರೆಮಿಂಡಯ್ಯನ ವಚನಗಳು
  2. ದೇವರ ದಾಸಿಮಯ್ಯನ = ಜೇಡರ ದಾಸಿಮಯ್ಯನ ವಚನಗಳು
  3. ಅರಿವಿನ ಮಾರಿತಂದೆಗಳ ವಚನ   4.             ಕೋಲಶಾಂತಯ್ಯನ ವಚನ
  4. ಗಜೇಶಮಸಣಯ್ಯಗಳ ವಚನ       6.             ಡಕ್ಕೆಯ ಬೊಮ್ಮಣ್ಣಗಳ ವಚನ
  5. ಬಿಬ್ಬಿಬಾಚಯ್ಯನ ವಚನಗಳು       8.             ಮಧುವಯ್ಯಗಳ ವಚನ
  6. ಮೋಳಿಗೆ ಮಾರಯ್ಯನ ವಚನ       10.             ಉರಿಲಿಂಗದೇವನ ವಚನಗಳು

 

ಡಾ. ವೈ.ಸಿ. ಭಾನುಮತಿ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸುತ್ತಾ ನಿವೃತ್ತರಾಗಿದ್ದಾರೆ. ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು

  1. ವಚನ ಸಂಕಲನ ಸಂಪುಟ – ಗಿ – 1992 ಗದುಗಿನ ತೋಂಟದಾರ್ಯ ಮಠ, ಈ ಸಂಪುಟದಲ್ಲಿ ಅವಿಧಿತ ಸಂಕಲನಕಾರನ ವಚನಗಳು, ಸಿದ್ಧಲಿಂಗ ಸೂತ್ರ ಶಿಖಾ ಚಕ್ರ ದೀಕ್ಷಾ ವಿಧಾನದ ವಚನಗಳನ್ನು ಈ ಸಂಪುಟದಲ್ಲಿ ಸಂಕಲಿಸಲಾಗಿದೆ.
  2. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಗಿIII, 2021
  3. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ Iಘಿ,  2021
  4. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಘಿI, 2021 ಸಂಪುಟಗಳನ್ನು ಸಂಪಾದಿಸಿದ್ದಾರೆ.

ಮೈಸೂರು ನಗರದಲ್ಲಿ ವಚನ ಸಾಹಿತ್ಯಕ್ಕೆ ದುಡಿದವರು.ಎಂ. ಬಸವಲಿಂಗಶಾಸ್ತ್ರಿಗಳು, ತಿಪ್ಪಯ್ಯ ಶಾಸ್ತ್ರಿಗಳು, ಅರಮನೆ ಪಂಚಗವಿಮಠದ ಗೌರೀಶಂಕರಸ್ವಾಮಿಗಳು, ಹೆಚ್. ದೇವೀರಪ್ಪ, ಡಾ. ಎಲ್. ಬಸವರಾಜು ಬಿ.ಎಸ್. ಸಣ್ಣಯ್ಯ, ಪಿ.ಎಂ. ಗಿರಿರಾಜು, ಸದ್ಧರ್ಮ ದೀಪಿಕೆ, ಚೆನ್ನಮಲ್ಲಿಕಾರ್ಜುನರು, ಜಿ.ಎ. ಶಿವಲಿಂಗಯ್ಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು, ಡಾ. ವೈ.ಸಿ. ಭಾನುಮತಿ, ಡಾ. ಇಮ್ಮಡಿ ಶಿವಬಸವಸ್ವಾಮಿಗಳು, ವಿದ್ವಾನ್ ಡಿ. ಸಿದ್ಧಗಂಗಯ್ಯ, ಎಸ್. ಶಿವಣ್ಣ ಇನ್ನು ಮುಂತಾದವರು. ಹಿರಿಯ ವಿದ್ವಾಂಸರಾದ ಪ್ರೊ. ಡಿ.ಎಲ್. ನರಸಿಂಹಾಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯ, ವಚನ ಸಾಹಿತ್ಯ ಸಂಪಾದನೆಗೆ ಮಾರ್ಗದರ್ಶನ ಮಾಡಿದ್ದಾರೆ. ಡಾ. ಚಿದಾನಂದಮೂರ್ತಿ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಡಾ. ದೇಜಗೌ ವಚನ ಸಾಹಿತ್ಯ ಪ್ರಕಟಣೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

 

ಡಾ. ಬಿ.ಆರ್. ಹಿರೇಮಠ

ಕರ್ನಾಟಕ ಧಾರವಾಡ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಪ್ರಕಟಿತ ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು.

  1. ಅದ್ವೈತಾನಂದದ ವಚನಗಳು – 1983 ತೋಂಟದಾರ್ಯಮಠ ಗದಗ
  2. ಕಂಡಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  3. ಕುಸ್ತಿ ಆಗಮದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  4. ಗೊಹೇಶ್ವರಯ್ಯನ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  5. ಚಿದ್ಭಸ್ಮಮಣಿಮಂತ್ರ ಮಹಾತ್ಮೆಯ ಸ್ಥಲದ ವಚನ, ಜಟಾಶಂಕರದೇವರು-ವಚನ ಸಂಕಲನ

ಸಂಪುಟ-I 1990 ತೋಂಟದಾರ್ಯ ಮಠ

  1. `ನಂಜುಂಡ ಶಿವಾ’ ಅಂಕಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯಮಠ ಗದಗ
  2. ನಿರಾಲಂಬ ಪ್ರಭುದೇವನ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  3. ಪರಂಜ್ಯೋತಿಯರ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ
  4. ಬಸವಸ್ತೋತ್ರದ ವಚನಗಳು : 2 ಸಂಪಾದನೆ ಬೋಳಬಸವೇಶ್ವರದೇವರು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  5. ಲಿಂಗಸಾವಧಾನದ ವಚನಗಳು ಸಣ್ಣ ಬರೆಹದ ಗುರುಬಸವರಾಜದೇವರು ವಚನ ಸಂಕಲನ ಸಂಪುಟ -I 1990 ತೋಂಟದಾರ್ಯಮಠ ಗದಗ
  6. ಸಂಪಾದನೆಯ ಸಾರಾಮೃತ-ಕಟ್ಟಿಗೆಹಳ್ಳಿ ಸಿದ್ಧಲಿಂಗಸ್ವಾಮಿ-1988 ತೋಂಟದಾರ್ಯಮಠ ಗದಗ

 

ಡಾ. ವೀರಣ್ಣ ರಾಜೂರವರ ವಚನ ಸಾಹಿತ್ಯ ಸಂಪಾದನೆ

ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿ ಇಂದಿಗೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಡಾ. ಎಂ.ಎಂ. ಕಲಬುರ್ಗಿರವರ ಮಹಾಲಿಂಗದಲ್ಲಿ ಲೀನರಾದ ನಂತರ ಸಮಗ್ರ ವಚನ ಸಂಪುಟದ ಪ್ರದಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.

  1. ಉರಿಲಿಂಗದೇವರ ವಚನಗಳು (ಎಸ್.ಎನ್. ಭೂಸರೆಡ್ಡಿ ಅವರೊಂದಿಗೆ) ಮಂಗಳ ಪ್ರಕಾಶನ ಧಾರವಾಡ 1978
  2. ವಚನಾಮೃತಸಾರ (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1979 ಮಂಗಳ ಪ್ರಕಾಶನ, ಧಾರವಾಡ
  3. ಗಜೇಶ ಮಸಣಯ್ಯನ ವಚನಗಳು (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1980 ಮಂಗಳ ಪ್ರಕಾಶನ ಧಾರವಾಡ
  4. ವಚನ ಶಾಸ್ತ್ರಸಾರ ಭಾಗ-1 (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) ವೀರಶೈವ ಅಧ್ಯಯನ ಸಂಸ್ಥೆ, ಗದಗ 1981
  5. ಸರ್ವಜ್ಞನ ವೀರಗಣಸ್ತೋತ್ರದ ವಚನಗಳು (ಎಚ್.ಎಸ್. ಭೂಸರೆಡ್ಡಿ ಅವರೊಂದಿಗೆ) 1981 ಮೂರುಸಾವಿರಮಠ, ಹುಬ್ಬಳ್ಳಿ
  6. ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಶೈವ ಅಧ್ಯಯನ ಸಂಸ್ಥೆ – 1983
  7. ಶೀಲಸಂಪಾದನೆ ವೀರಶೈವ ಅಧ್ಯಯನ ಸಂಸ್ಥೆ ಗದಗ 1984
  8. ಪ್ರಭುದೇವರ ಮಂತ್ರಗೋಪ್ಯ (ವ್ಯಾಖ್ಯಾನ ಸಹಿತ) 1984 ಸಿದ್ಧರಾಮೇಶ್ವರ ಪ್ರಕಾಶನ, ಯಲಬುರ್ಗಾ
  9. ಭಕ್ತ್ಯಾನಂದ ಸುಧಾರ್ಣವ ವೀರಶೈವ ಅಧ್ಯಯನ ಸಂಸ್ಥೆ 1985
  10. ಅರಿವಿನ ಮಾರಿತಂದೆಯ ನೂರೊಂದು ವಚನಗಳು 1986 ಮೂರುಸಾವಿರ ಮಠ, ಹುಬ್ಬಳ್ಳಿ
  11. ಸೂಕ್ಷ್ಮಮಿಶ್ರ ಷಟ್‍ಸ್ಥಲ 1987 ವೀರಶೈವ ಅಧ್ಯಯನ ಸಂಸ್ಥೆ, ಗದಗ
  12. ಎಲ್ಲಾ ಪುರಾತನರ ಸ್ತೋತ್ರದ ವಚನಗಳು 1988 ವೀರಶೈವ ಅಧ್ಯಯನ ಸಂಸ್ಥೆ ಗದಗ
  13. ಪ್ರಭುದೇವ ಷಟ್‍ಸ್ಥಲ ಜಂಗಮಸ್ಥಲ ನಿರ್ದೇಶ 1989 ವೀರಶೈವ ಅಧ್ಯಯನ ಸಂಸ್ಥೆ, ಗದಗ
  14. ವಚನಸಾರ, ವೀರಶೈವ ಅಧ್ಯಯನ ಸಂಸ್ಥೆ, ಗದಗ
  15. ಜ್ಞಾನಷಟ್‍ಸ್ಥಲಸಾರ 1991 ವೀರಶೈವ ಅಧ್ಯಯನ ಸಂಸ್ಥೆ, ಗದಗ
  16. ಶಿವಶರಣೆಯರ ವಚನ ಸಂಪುಟ ಕನ್ನಡ ಸಂಸ್ಕøತಿ ಇಲಾಖೆ 1993, 2001, 2015, 2021
  17. ಸಂಕೀರ್ಣ ವಚನ ಸಂಪುಟ-ಐದು 1993, 2001, 2015, 2021
  18. ಸಂಕೀರ್ಣ ವಚನ ಸಂಪುಟ-ಏಳು 1993, 2001, 2015, 2021
  19. ಸಂಕೀರ್ಣ ವಚನ ಸಂಪುಟ-ಎಂಟು 1993, 2001, 2015, 2021
  20. ಸಂಕೀರ್ಣ ವಚನ ಸಂಪುಟ-ಒಂಭತ್ತು 1993, 2001, 2015, 2021
  21. ಬಸವಣ್ಣ (ಆಯ್ದ ವಚನಗಳು) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಪ್ರ.ಮು. 1996, ದ್ವಿ.ಮು. 2000
  22. ವಚನಶಾಸ್ತ್ರಸಾರ – ಸಂಪುಟ ಎರಡು (ಇತರರೊಂದಿಗೆ) 1997

ವೀರಶೈವ ಅಧ್ಯಯನ ಸಂಸ್ಥೆ, ಗದಗ

  1. ವಚನ ಶಾಸ್ತ್ರಸಾರ ಸಂಪುಟ-3 2004 ವೀರಶೈವ ಅಧ್ಯಯನ ಸಂಸ್ಥೆ, ಗದಗ
  2. ಷಟ್‍ಸ್ಥಲ ಜ್ಞಾನಸಾರಾಮೃತ ಟೀಕೆಗಳು 2005 ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ, ಎಡೆಯೂರು
  3. ಎಲ್ಲ ಪುರಾತನರ ವಚನಗಳು ಭಾಗ-1 2006 (ಮೂರುಸಾವಿರ ವಚನಗಳು) ಶ್ರೀ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು
  4. ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ (ಸಂಪುಟ-6) 2007 ವಚನಶಾಸ್ತ್ರಸಾರ ಭಾಗ 2 ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಬಿ.ಎಲ್.ಡಿ.ಇ., ಸಂಸ್ಥೆ ವಿಜಾಪುರ
  5. ವಚನ ಸಂಕಲನ (ಸಂಪುಟ ಏಳು) 2009 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  6. ಪರಮಾನಂದ ಸುಧೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2010 ಲಿಂಗಾಯತ ಅಧ್ಯಯನ ಸಂಸ್ಥೆ ಗದಗ
  7. ಬಸವ ವಚನ ಸಾರಾಮೃತ 2011 ಲಿಂಗಾಯತ ಅಧ್ಯಯನ ಸಂಸ್ಥೆ
  8. ವಚನಸಾರ (ಸಂಪುಟ ಎರಡು) 2014 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  9. ಏಕೋತ್ತರ ಶತಸ್ಥಲ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2014
  10. ಶರಣಸತಿ – ಲಿಂಗಪತಿ 2015 ಮಂಗಳ ಪ್ರಕಾಶನ ಧಾರವಾಡ
  11. ಗಣಭಾಷಿತ ರತ್ನಮಾಲೆ (ಗುಬ್ಬಿ ಮಲ್ಲಣ್ಣ 2016 ಮುರುಘಾಮಠ, ಧಾರವಾಡ)
  12. ಬಸವಣ್ಣನವರ ಷಟ್ಸ್ ್ಥಲ ವಚನಗಳು (ಪ್ರೊ. ಎಸ್.ಎಸ್. ಬಸವನಾಳ) ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ 2016
  13. ಶೂನ್ಯಸಂಪಾದನೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2016 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  14. ಶಿವಶರಣೆಯರ ವಚನಗಳು ಮುರುಘಾಮಠ, ಧಾರವಾಡ
  15. ತೋಂಟದ ಸಿದ್ಧಲಿಂಗೇಶ್ವರರ ಷಟ್ಸ್ ್ಥಲ ಜ್ಞಾನಸಾರಾಮೃತ 2017 ಮುರುಘಾಮಠ, ಧಾರವಾಡ
  16. ಸ್ವತಂತ್ರ ಸಿದ್ಧಲಿಂಗೇಶ್ವರ ಷಟ್ಸ್ ್ಥಲ ವಚನಗಳು 2017 ಮುರುಘಾಮಠ, ಧಾರವಾಡ
  17. ಷಣ್ಮುಖ ಶಿವಯೋಗಿಗಳ ಷಟ್ಸ್ ್ಥಲ ವಚನಗಳು2017 ಮುರುಘಾಮಠ, ಧಾರವಾಡ
  18. ದೇಶೀಕೇಂದ್ರ ಸಂಗನಬಸವಯ್ಯಗಳ ಷಟ್ಸ್ ್ಥಲ ವಚನಗಳು – 2017 ಮುರುಘಾಮಠ, ಧಾರವಾಡ

 

ಡಾ. ಬಿ.ವ್ಹಿ. ಶಿರೂರ

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಶ್ರೀಯುತರು ಕನ್ನಡ ವಿಭಾಗದಲ್ಲಿ ಸಂಶೋಧಕರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಲವು ಕನ್ನಡ ಕಾವ್ಯ ಮತ್ತು ಕೃತಿಗಳನ್ನು ಸಂಪಾದನೆ ಮಾಡಿ ನಿವೃತ್ತ ಜೀವನವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದಾರೆ.

  1. ಷಟ್‍ಸ್ಥಲ ಜ್ಞಾನಾಮೃತದ ಬೆಡಗಿನ ವಚನದ ಟೀಕೆ – ಸೋಮಶೇಖರ ಶಿವಯೋಗಿಕೃತ
  2. ನಿರಾಳಮಂತ್ರಗೋಪ್ಯ – ಜಕ್ಕಣ್ಣಯ್ಯ ಕೃತ
  3. ಶರಣಚಾರಿತ್ರದ ವಚನಗಳು – ಸಣ್ಣಬರಹದ ಗುರುಬಸವರಾದೇವರು ಸಂಕಲಿಸಿದ್ದು
  4. ಉರಿಲಿಂಗಿಪೆದ್ದಿಯ ನೂರೊಂದು ವಚನಗಳು
  5. ಶರಣ ಮುಖಮಂಡಲ
  6. ಸರ್ವಾಚಾರ ಸಾರಾಮೃತ ಸುಧೆ – ಮೂರುಸಾವಿರ ಮುಕ್ತಿಮುನಿ ವಿರಚಿತ
  7. ಎಲ್ಲ ಪುರಾತನರ ವಚನಗಳು – 2000 ವಚನಗಳ ಕಟ್ಟು ಜೆ.ಎಸ್.ಎಸ್ ಮೈಸೂರು ಪ್ರಕಟಣೆ.

 

ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟಣಾ ಯೋಜನೆ,

ಕನ್ನಡ ಮತ್ತು ಸಂಸ್ಕøತಿ ಇಲಾಖೆ – 1993

  1. ಬಸವಣ್ಣನವರ ವಚನ ಸಂಪುಟ – ಡಾ. ಎಂ.ಎಂ. ಕಲಬುರ್ಗಿ
  2. ಅಲ್ಲಮಪ್ರಭುದೇವರ ವಚನ ಸಂಪುಟ – ಡಾ. ಬಿ.ವ್ಹಿ. ಮಲ್ಲಾಪುರ
  3. ಚನ್ನಬಸವಣ್ಣನವರ ವಚನ ಸಂಪುಟ ಡಾ. ಬಿ.ವ್ಹಿ. ಮಲ್ಲಾಪುರ
  4. ಸಿದ್ಧರಾಮೇಶ್ವರ ವಚನ ಸಂಪುಟ ಡಾ. ಎಸ್. ವಿದ್ಯಾಶಂಕರ್
  5. ಶಿವಶರಣೆಯ ವಚನ ಸಂಪುಟ ಡಾ. ವೀರಣ್ಣ ರಾಜೂರ
  6. ಸಂಕೀರ್ಣ ವಚನ ಸಂಪುಟ-I ಡಾ. ಎಂ.ಎಂ. ಕಲಬುರ್ಗಿ
  7. ಸಂಕೀರ್ಣ ವಚನ ಸಂಪುಟ-II ಡಾ ಎಸ್. ವಿದ್ಯಾಶಂಕರ್
  8. ಸಂಕೀರ್ಣ ವಚನ ಸಂಪಟ-III ಡಾ. ಬಿ.ಆರ್. ಹಿರೇಮಠ
  9. ಸಂಕೀರ್ಣ ವಚನ ಸಂಪುಟ-Iಗಿ ಡಾ. ಬಿ.ಆರ್. ಹಿರೇಮಠ
  10. ಸಂಕೀರ್ಣ ವಚನ ಸಂಪುಟ-ಗಿ ಡಾ. ವೀರಣ್ಣ ರಾಜೂರ
  11. ಸಂಕೀರ್ಣ ವಚನ ಸಂಪುಟ-ಗಿI ಎಸ್. ಶಿವಣ್ಣ
  12. ಸಂಕೀರ್ಣ ವಚನ ಸಂಪುಟ-ಗಿII ಡಾ. ವೀರಣ್ಣ ರಾಜೂರ
  13. ಸಂಕೀರ್ಣ ವಚನ ಸಂಪುಟ-ಗಿIII ಡಾ. ವೀರಣ್ಣ ರಾಜೂರ
  14. ಸಂಕೀರ್ಣ ವಚನ ಸಂಪುಟ-Iಘಿ ಡಾ. ವೀರಣ್ಣ ರಾಜೂರ
  15. ವಚನ ಪರಿಭಾಷಾ ಕೋಶ : ಡಾ. ವಿದ್ಯಾಶಂಕರ

 

ಸಮಗ್ರ ವಚನ ಸಂಪುಟ 2021 ಕನ್ನಡ ಪುಸ್ತಕ ಪ್ರಾಧಿಕಾರ

  1. ಬಸವಣ್ಣನವರ ಸಂಪುಟವನ್ನು ಡಾ. ವೀರಣ್ಣ ರಾಜೂರ
  2. ಅಲ್ಲಮಪ್ರಭುದೇವರ ಸಂಪುಟ ಶ್ರೀ ಸಿದ್ಧರಾಮ ಶರಣರು, ಬೆಲ್ದಾಳ
  3. ಚನ್ನಬಸವಣ್ಣನವರ ಸಂಪುಟ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು, ಬೆಲ್ದಾಳ
  4. ಸಿದ್ಧರಾಮೇಶ್ವರ ವಚನ ಸಂಪುಟ ಪ್ರೊ|| ಮಲೆಯೂರು ಗುರುಸ್ವಾಮಿ
  5. ಶಿವಶರಣೆಯರ ಸಂಪುಟ ಐದು ಡಾ. ವೀರಣ್ಣ ರಾಜೂರ
  6. ಸಂಕೀರ್ಣ ವಚನ ಸಂಪುಟ ಆರು ಡಾ. ಕೆ. ರವೀಂದ್ರನಾಥ್
  7. ಸಂಕೀರ್ಣ ವಚನ ಸಂಪುಟ ಏಳು ಡಾ. ಕೆ. ರವೀಂದ್ರನಾಥ್
  8. ಸಂಕೀರ್ಣ ವಚನ ಸಂಪುಟ ಎಂಟು ಡಾ. ವೈ.ಸಿ. ಭಾನುಮತಿ
  9. ಸಂಕೀರ್ಣ ವಚನ ಸಂಪುಟ ಒಂಭತ್ತು ಡಾ. ವೈ.ಸಿ. ಭಾನುಮತಿ
  10. ಸಂಕೀರ್ಣ ವಚನ ಸಂಪುಟ ಹತ್ತು ಡಾ. ವೀರಣ್ಣ ರಾಜೂರ
  11. ಸಂಕೀರ್ಣ ವಚನ ಸಂಪುಟ ಹನ್ನೊಂದು ಡಾ. ವೈ.ಸಿ. ಭಾನುಮತಿ
  12. ಸಂಕೀರ್ಣ ವಚನ ಸಂಪುಟ ಹನ್ನೆರಡು ಡಾ. ವೀರಣ್ಣ ರಾಜೂರ
  13. ಸಂಕೀರ್ಣ ವಚನ ಸಂಪುಟ ಹದಿಮೂರು ಡಾ. ವೀರಣ್ಣ ರಾಜೂರ
  14. ಸಂಕೀರ್ಣ ವಚನ ಸಂಪುಟ ಹದಿನಾಲ್ಕು ಡಾ. ವೀರಣ್ಣ ರಾಜೂರ
  15. ಸಂಕೀರ್ಣ ವಚನ ಸಂಪುಟ ಹದಿನೈದು ಡಾ. ಬಸವಲಿಂಗ ಸೊಪ್ಪಿಮಠ

 

ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾದ ವಚನ ಸಾಹಿತ್ಯ

ಏಕವ್ಯಕ್ತಿ ವಚನ ಸಂಕಲನಗಳು

ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿದ ಕೀರ್ತಿ ಗದಗಿನ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಈ ಪ್ರಕಟಣೆ ಹಿಂದೆ ಡಾ. ಎಂ.ಎಂ. ಕಲಬುರ್ಗಿ ಅವರು ಗದಗಿನ ಲಿಂಗೈಕ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ತೋಂಟದ ಸಿದ್ಧಲಿಂಗಸ್ವಾಮಿಗಳ ಒತ್ತಾಸೆ ಇದ್ದುದರಿಂದ ಅಪ್ರಕಟಿತ ಕೃತಿಗಳ ರಾಶಿ ಪ್ರಕಟ ಮಾಡಲು ಸಾಧ್ಯವಾಯಿತು. ಪ್ರಸ್ತುತ ಗದಗಿನ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ತೋಂಟದ ಸಿದ್ಧರಾಮಸ್ವಾಮಿಗಳು ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ಪ್ರೋತ್ಸಾಹ ನೀಡುತ್ತಾ ಇದ್ದಾರೆ.

  1. ಷಟ್‍ಸ್ಥಲ ಜ್ಞಾನಸಾರಾಮೃತ – ಆರ್.ಸಿ. ಹಿರೇಮಠ
  2. ಬಸವ ಬೋಧಾಮೃತ – ಹರ್ಡೇಕರ ಮಂಜಪ್ಪ
  3. ಷಟ್‍ಸ್ಥಲ ಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ – ಬಿ.ವಿ. ಶಿರೂರ
  4. ಜಕ್ಕಣ್ಣಯ್ಯನ ನಿರಾಳ ಮಂತ್ರಗೋಪ್ಯ ಬಿ.ವಿ. ಶಿರೂರ
  5. ಸರ್ವಾಚಾರ ಸಾರಾಮೃತ ಸುಧೆ – ಬಿ.ವಿ. ಶಿರೂರ
  6. ಪ್ರಭುದೇವರ ಷಟ್‍ಸ್ಥಲ ಜಂಗಮಸ್ಥಳ ನಿರ್ದೇಶ – ವೀರಣ್ಣ ರಾಜೂರ
  7. ಚನ್ನಬಸವಣ್ಣನವರ ಷಟ್ಸ್ ್ಥಲ ಮಹಾಸಂಪುಟ ಎಂ.ಎಂ. ಕಲಬುರ್ಗಿ
  8. ಕುಷ್ಟಗಿ ಕರಿಬಸವೇಶ್ವರನ ವಚನಗಳು – ಎಸ್. ಶಿವಣ್ಣ
  9. ಮಡಿವಾಳ ಮಾಚಿದೇವರ ವಚನಗಳು – ಚನ್ನಕ್ಕ ಪಾವಟೆ

 

ಅನೇಕ ವ್ಯಕ್ತಿ ವಚನಗಳಿಂದ ಕೂಡಿದ ಸ್ಥಳಕಟ್ಟಿನ ಕೃತಿಗಳು

  1. ವಚನಶಾಸ್ತ್ರಸಾರ – ಫ.ಗು. ಹಳಕಟ್ಟಿ ಭಾಗ-1-2-3
  2. ಅದ್ವೈತಾನಂದದ ವಚನಗಳು ಬಿ.ಆರ್. ಹಿರೇಮಠ
  3. ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಣ್ಣ ರಾಜೂರ
  4. ಚನ್ನಬಸವಣ್ಣನವರ ವಚನೈಕೋತ್ತರ ಶತಸ್ಥಲ – ಜಿ.ಎ. ಶಿವಲಿಂಗಯ್ಯ
  5. ಶೀಲಸಂಪಾದನೆ – ವೀರಣ್ಣ ರಾಜೂರ
  6. ಶರಣ ಚಾರಿತ್ರದ ವಚನಗಳು – ಬಿ.ವಿ. ಶಿರೂರ
  7. ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು ಎಸ್. ಉಮಾಪತಿ
  8. ಭಕ್ತ್ಯಾನಂದ ಸುಧಾರ್ಣವ – ವೀರಣ್ಣ ರಾಜೂರ
  9. ಷಟ್ಪ್ರಕಾರ ಸಂಗ್ರಹ – ಜಿ.ಎ. ಶಿವಲಿಂಗಯ್ಯ
  10. ಸೂಕ್ಷ್ಮಮಿಶ್ರ ಷಟ್‍ಸ್ಥಲ – ವೀರಣ್ಣ ರಾಜೂರ
  11. ಸುಖ ಸಂಪಾದನೆಯ ವಚನಗಳು – ಬಿ.ಆರ್. ಹಿರೇಮಠ
  12. ಶಿವಯೋಗ ಚಿಂತಾಮಣಿ – ಉಮಾದೇವಿ
  13. ಶರಣ ಮುಖಮಂಟನ – ಬಿ.ವಿ. ಶಿರೂರ, ಬಿ.ಆರ್. ಹೂಗಾರ
  14. ಎಲ್ಲ ಪುರಾತನರ ಸ್ತೋತ್ರದ ವಚನಗಳು – ವೀರಣ್ಣ ರಾಜೂರ
  15. ಸಂಪಾದನೆಯ ಸಾರಾಮೃತ – ಬಿ.ಆರ್. ಹಿರೇಮಠ
  16. ಅನುಭವಜ್ಞಾನ ಸಾರಾಮೃತ ಸಂಪಾದನೆಯ ಸ್ತೋತ್ರ ಬಿ.ಆರ್. ಹೂಗಾರ, ವೀರಣ್ಣ ರಾಜೂರ
  17. ವಚನಸಾರ – ವೀರಣ್ಣ ರಾಜೂರ
  18. ವಚನ ಸಂಕಲನ ಸಂಪುಟ-1 ಬಿ.ಆರ್. ಹಿರೇಮಠ
  19. ವಚನ ಸಂಕಲನ ಸಂಪುಟ-2 ಜಿ.ಎ. ಶಿವಲಿಂಗಯ್ಯ
  20. ವಚನ ಸಂಕಲನ ಸಂಪುಟ-3 ಎಸ್. ಶಿವಣ್ಣ
  21. ವಚನ ಸಂಕಲನ ಸಂಪುಟ-4 ಡಾ. ಎಂ.ಎಂ. ಕಲಬುರ್ಗಿ, ಬಿ.ಆರ್. ಹಿರೇಮಠ, ಎಸ್. ಶಿವಣ್ಣ
  22. ವಚನ ಸಂಕಲನ ಸಂಪುಟ-5 ವೈ.ಸಿ. ಭಾನುಮತಿ
  23. ವಚನ ಸಂಕಲನ ಸಂಪುಟ-6 ಎಂ.ಎಂ. ಕಲಬುರ್ಗಿ
  24. ವಚನ ಸಂಕಲನ ಸಂಪುಟ-7 – ವೀರಣ್ಣ ರಾಜೂರ
  25. ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು – ಜಿ.ಎ. ಶಿವಲಿಂಗಯ್ಯ
  26. ಜ್ಞಾನ ಷಟ್ಸ್ ್ಥಲಸಾರ – ವೀರಣ್ಣ ರಾಜೂರ
  27. ವೀರಶೈವ ಕಾವ್ಯೋಕ್ತ ವಚನ ಸಂಪುಟ ಬಿ.ಆರ್. ಹೂಗಾರ
  28. ಮೋಕ್ಷದರ್ಶನ ಸಂಗ್ರಹ – ಜಿ.ಎ. ಶಿವಲಿಂಗಯ್ಯ
  29. ಪರಮಾನಂದ ಸುಧೆ – ಎಂ.ಎಂ. ಕಲಬುರ್ಗಿ, ವೀರಣ್ಣ ರಾಜೂರ
  30. ಬಸವ ವಚನ ಸಾರಾಮೃತ – ವೀರಣ್ಣ ರಾಜೂರ
  31. ಲಿಂಗಲೀಲಾ ವಿಲಾಸ ಚಾರಿತ್ರ್ಯ ಸಂಗ್ರಹ – ಜಯಾ ರಾಜಶೇಖರ
  32. ಶೂನ್ಯಸಂಪಾದನೆ : ಡಾ. ಎಂ.ಎಂ. ಕಲಬುರ್ಗಿ ಮತ್ತು ವೀರಣ್ಣ ರಾಜೂರ
  33. ಬೆಡಗಿನ ವಚನ ಸಾಹಿತ್ಯ – ವೀರಣ್ಣ ರಾಜೂರ

ವಚನ ಸಾಹಿತ್ಯ ಸಂಪಾದನೆಯಲ್ಲಿ ದುಡಿದ ಎಲ್ಲಾ ಮಹನೀಯರ ಬಗ್ಗೆ ಮಾಹಿತಿ ಸಂಗ್ರಹ ಮಾಡಬೇಕು. ಆ ನಿಟ್ಟಿನಲ್ಲಿ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ನೆಲೆಸಿದ ಹೆಚ್. ದೇವೀರಪ್ಪನವರು, ಪ್ರೊ. ಆರ್. ರಾಚಪ್ಪನವರು, ಇಬ್ಬರು ಜಂಟಿಯಾಗಿ ಜೇಡರ ದಾಸಿಮಯ್ಯನ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಮೈಸೂರಿನ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಮಹಾಲಿಂಗದೇವರ ವ್ಯಾಖ್ಯಾನದೊಂದಿಗೆ ಸಂಪಾದಿಸಿ ಪ್ರಕಟಿಸಿದರು. ಡಾ. ಟಿ.ಜಿ. ಸಿದ್ಧಪ್ಪಾರಾಧ್ಯರು ಮೂಲ ವಚನಗಳನ್ನು ಸಂಪಾದಿಸಿದವರ ಬಗ್ಗೆ ಮಾಹಿತಿ ಇಲ್ಲ ಆದರೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗೆ ಬಸವಣ್ಣ, ಅಲ್ಲಮ ಪ್ರಭುದೇವ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ವಚನಗಳನ್ನು ಭಾಷಾಂತರಿಸಿದರು. ಅಲ್ಲಮ ಪ್ರಭುದೇವರ ವಚನಗಳು ಸುಮಾರು 1430 ರಲ್ಲಿ ಮೊಗ್ಗೆಮಾಯಿದೇವರು ಸಂಸ್ಕøತಕ್ಕೆ ಭಾಷಾಂತರಿಸಿದ ಹಸ್ತಪ್ರತಿ ಪ್ರೊ. ಸಿ. ಮಹಾದೇವಪ್ಪನವರ ಹತ್ತಿರ ಇದ್ದು ಅವರು ಅದನ್ನು ಸಮರ್ಥವಾಗಿ ಸಂಪಾದಿಸಿ ಮೂಲ ವಚನಗಳನ್ನು ದೇವನಾಗರಿ ಲಿಪಿಯಲ್ಲಿ ಅನುವಾದವನ್ನು ಇಂಗ್ಲಿಷಿನಲ್ಲಿ ಕೊಟ್ಟಿರುವುದರಿಂದ ವಿಶ್ವದ ಜನತೆ ಅಲ್ಲಮ ಪ್ರಭುವಿನ ವಚನಗಳನ್ನು ಅಧ್ಯಯನ ಮಾಡುವ ಅವಕಾಶ. ಕನ್ನಡ ಭಾಷೆಯಲ್ಲಿ ಅಲ್ಲಮನ ಮೂಲ ವಚನ ಅದರ ಸಂಸ್ಕøತಾನುವಾದವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ಜ.ಚ.ನಿ ಸನ್ನಿಧಿಯವರು, ಡಾ. ಹುಣಸಿನಾಳರು, ಡಾ. ಸಾ.ಶಿ. ಮರುಳಪ್ಪನವರು, ಪ್ರೊ. ಚ. ಸುಂದರೇಶನ್ ಅ.ನ.ಕೃರವರು ಇನ್ನು ಅನೇಕ ವಿರಕ್ತ ಮೂರ್ತಿಗಳು, ಪಟ್ಟದಸ್ವಾಮಿಗಳು, ಕಾವ್ಯಾಸಕ್ತರು, ಶಾಲಾಧ್ಯಾಪಕರು, ಪ್ರಾಧ್ಯಾಪಕರುಗಳು ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಮಹನೀಯರು ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು. ಅಖಿಲ ಭಾರತ ಮಟ್ಟದಲ್ಲಿ ವಚನ ಸಾಹಿತ್ಯ ಪ್ರಕಟಣೆ ನಡೆದಿದೆ ಆ ಎಲ್ಲಾ ವಿವರವನ್ನು ಸಂಗ್ರಹಿಸಬೇಕು.