ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಸಹೃದಯ ಓದುಗರಿಗೆ ,

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಇಂದು ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ. ಇದಕ್ಕೆ ಕಾರಣ ಕರ್ನಾಟಕದ ಏಕೀಕರಣ. ಹೌದು.. ಈಗಿನ ಕರ್ನಾಟಕ 20ಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಮುಂದೊಂದು ದಿನ ದೊಡ್ಡ ದೊಡ್ಡ ಹೋರಾಟಗಳು ನಡೆದು ಕರ್ನಾಟಕ ಏಕೀಕರಣ ಆಗಿ ಕರ್ನಾಟಕ ರಾಜ್ಯ ಹುಟ್ಟಿಕೊಂಡಿತು.

ಏಕೀಕರಣ ಚಳುವಳಿ 19ನೇ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳು ಮಾತ್ರ ಇದ್ದವು.

ಛಿದ್ರ ಛಿದ್ರವಾಗಿ ಹರಿದು ಯಾವ್ಯಾವುದೋ ಪ್ರಾಂತ್ಯಗಳಿಗೆ ಸೇರಿದ್ದೆಲ್ಲವ್ರನ್ನೂ ಒಂದುಗೂಡಿಸಬೇಕು ಅನ್ನೋ ಕಲ್ಪನೆಯೇ ಒಂದು ಅದ್ಭುತವಾಗಿತ್ತು. ಆರಂಭದಲ್ಲಿ ಯಾರೂ ಕೂಡ ಇದಕ್ಕೆ ನೀರು ಮತ್ತು ಸೊಪ್ಪು ಹಾಕದಿದ್ದರೂ ಮುಂದೊಂದು ದಿನ ಕಲ್ಪನೆಗಳಿಗೆ ಹೊಸ ಬೇರು, ಚಿಗರು ಮೊಳಕೆಯೊಡೆಯುವ ಕಾಲ ಕೂಡ ಪರಿಪಕ್ವವಾಗಿತ್ತು.

ಈ ತಿಂಗಳ ಸುಕುಮಾರ ಸಂಚಿಕೆ ಈ ಇತಿಹಾಸದ ಮೇಲೊಂದು ಹೊಸ ಬೆಳಕನ್ನು ಚಲ್ಲುತ್ತಿದೆ, ಅದು ಕರ್ನಾಟಕದ ಏಕೀಕರಣಕ್ಕೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆ….

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ  ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.

ನವಂಬರ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ, ನೀನಾರೋ ? ಕಾಯಾ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕರ್ನಾಟಕದ ಏಕೀಕರಣಕ್ಕೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆ:ಲೇಖಕ ಶ್ರೀಕಂಠ.ಚೌಕೀಮಠ.
  4. ಪುರುಷಾರ್ಥ ಚತುಷ್ಟಯ : ಲೇಖಕರು ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು, ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.
  5. ತೋಂಟದ ಸಿದ್ಧಲಿಂಗ ಶಿವಯೋಗಿಗಳ  ಜೀವನ ಹಾಗೂ ಸಂದೇಶ ಲೇಖಕರು: ಡಾ. ವಿ. ಜಿ. ಪೂಜಾರ
  6. ಷಣ್ಮುಖ ಶಿವಯೋಗಿಗಳು; ಇತಿವೃತ್ತ ಮತ್ತು ಕೃತಿಗಳು : ಲೇಖಕರು ಡಾ||  ಸಿ .ನಾಗಭೂಷಣ
  7. ಪೂರ್ಣತ್ವಕಾರ ಶ್ರೀಷ.ಬ್ರ. ಲಿಂ ಡಾ||ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, ಲೇಖಕರು ಶ್ರೀ ಮಲ್ಲನಗೌಡ  ಹಿರೇಸಕ್ಕರಗೌಡ್ರ , ಗದಗ
  8. ಶ್ರೀ ಹಾನಗಲ್ಲ ಕುಮಾರೇಶ್ವರರ ಪದಗಳು ರಚನೆ: ಶ್ರೀ ವೇ. ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು.
  9. ಸುಕುಮಾರಗೆ ಸುಪ್ರಭಾತ. ರಚನೆ: ಡಾ. ಶಿವಯೋಗಿ ದೇವರು ಕಾರಂಜಿಮಠ ಬೆಳಗಾವಿ
  10. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 ಮಗನೆ ಈ ಸಂಸಾರ | ತೆಗಹನೇ ಪರಿಹರಿಪೆ

ದುಗುಡ ಬೇಡೆಂದು ನಗುತೊಂದಾಲೋಚನೆ

ಬಗೆದ ಶ್ರೀಗುರುವೆ ಕೃಪೆಯಾಗು || ||

ಎಷ್ಟೋ ದಿನಗಳಿಂದ ಜಂಗುಹಿಡಿದ ಕಬ್ಬಿಣವಾದರೂ ಪರುಷಮಣಿ ಸಂಸ್ಪರ್ಶದಿಂದ ಹೊನ್ನಾಗುವಂತೆ ಸದ್ಗುರು ಸನ್ನಿಧಿಯನ್ನು ಸೇರಿದ ಮೇಲೆ ಉದ್ಧಾರವಾಗದೆ ಮಾಣನು. ಶಿಷ್ಯನು ಶ್ರೀಗುರುವಿನಲ್ಲಿ ಆತ್ಮಾರ್ಪಣ ಭಕ್ತಿಯನ್ನು ಅರ್ಪಿಸಬೇಕು. ಅಂದರೆ ಅವನ ಎಲ್ಲ ಜೀವನಭಾರವು ಗುರುವಿಗೆ ಸಲ್ಲುತ್ತದೆ. ಮಾರ್ಜಾಲಕಿಶೋರನ್ಯಾಯದಂತೆ ಪರಮಗುರುವು ಶಿಷ್ಯನ ಸಕಲ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ.

ಶಿಷ್ಯನ ಅನನ್ಯವಾದ ಪ್ರಾರ್ಥನೆಯಿಂದ ಸಂತುಷ್ಟನಾದ ಕರುಣಾಮಯ ಗುರುನಾಥನು- ‘ಮಗನೆ’ಯೆಂದು ಸಂಬೋಧಿಸಿ ಹತ್ತಿರ ಕರೆದು. ತಂದೆ ಮಗನನ್ನು ಕರೆದು ಕೂಡ್ರಿಸಿಕೊಂಡು ಜೀವನ ಮಾರ್ಗವನ್ನು ತಿಳಿಸುವಂತೆ ಶಿಷ್ಯನಿಗೆ ಉಪದೇಶಿಸುತ್ತಾನೆ. ತಂದೆಗೆ ಮಗನ ಉತ್ಕರ್ಷದ ಚಿಂತೆಯಿರುವಂತೆ ಶಿಷ್ಯನ ಉದ್ಧಾರ ಕಾರ್ಯ ಪರಮಗುರುವಿಗಿದೆ. ಬುದ್ಧಿ ಕಲಿಸುವದು, ಸಮಸ್ಯೆಗಳಿಗೆ ಸದುಪಾಯ ತೋರುವುದು ತಂದೆಯಾದವನ ಕರ್ತವ್ಯವಲ್ಲವೆ ? ಸರ್ವಜ್ಞಮೂರ್ತಿಯು “ಬುದ್ಧಿಗಲಿಸದ ತಂದೆಗೆ ಶುದ್ಧ ವೈರಿ’ ಯೆಂದಿದ್ದಾನೆ. ಇಲ್ಲಿ ಸಾಕ್ಷಾತ್ ಅಧ್ಯಾತ್ಮ ತಂದೆಯು ಲಭ್ಯವಾದ ಬಳಿಕ ಶಿಷ್ಯನಿಗೆ ಇನ್ನೆಲ್ಲಿಯ ಚಿಂತೆ ? ಮತ್ತೆಲ್ಲಿಯ ಭಯ ? ಯಾವುದೂ ಉಳಿಯುವದಿಲ್ಲ. ಸಮುದ್ರವನ್ನು ಸೇರಿದ ನದಿಗೆ ರಭಸವೆಲ್ಲಿ ? ಉದ್ವೇಗವೆಲ್ಲಿ? ಎಲ್ಲವೂ ಅದರಲ್ಲಿ ಲೀನವಾಗಿ ಹೋಗುತ್ತದೆ. ಹಾಗೆ ಗುರುಸನ್ನಿಧಿಯಲ್ಲಿ ಶಿಷ್ಯನ ಸಂಸಾರಭಾವನೆಗಳೆಲ್ಲ ಅಡಗಿ ಮೋಕ್ಷದ ಬಯಕೆ ಬಲಿಯುತ್ತದೆ.

ಕೃಪಾಕರನಾದ ಶ್ರೀಗುರುವು ಶಿಷ್ಯನನ್ನು ‘ಬಾ ಅಪ್ಪಾ ಮಗನೆ !’ ಎಂದು ಸಮೀಪಕ್ಕೆ ಕರೆದು ಕುಳ್ಳಿರಿಸಿಕೊಂಡು  ನಗುಮುಖದಿಂದ ಬೋಧೆಗೆಯ್ಯುವ ದೃಶ್ಯ ಅಪೂರ್ವ. ರೋಗಿಯಾದವನಿಗೆ ವೈದ್ಯನ ಕರುಣಾಮಯ ದೃಷ್ಟಿಯು ಮತ್ತು ಸಾಂತ್ವನೆಯ ಮಾತುಗಳು ಅವನ ಅರ್ಧರೋಗವನ್ನೇ ಕಳೆಯುವಂತೆ ; ಭವರೋಗ ವೈದ್ಯನಾದ ಪರಮ ಗುರುವಿನ ನಗು ಮುಖದ ಕೃಪಾನೋಟ ಮನಸ್ಸಿಗೆ ನೆಮ್ಮದಿಯನ್ನು  ಕೊಡುತ್ತದೆ. ಬಿಸಿಲಿನಿಂದ ಬಳಲಿದವನಿಗೆ ನೆಳಲು ತಂಪನ್ನೀಯುವದಿಲ್ಲವೆ?

ಗುರುನಾಥನು ಶಿಷ್ಯನಾದ ನನಗೆ- ‘ಈ ಸಂಸಾರವು ಅಜ್ಞಾನದಿಂದ ಅಹಂಕಾರ ದಿಂದ ನಿನಗೆ ಭಾರವಾಗಿದೆ ಹೊರತು; ಅರಿತಾಚರಿಸಿದಲ್ಲಿ ಅದು  ಸಸಾರವಾಗುತ್ತದೆ. ಕಮಲ ಪತ್ರ ಬಿಂದುವಿನಂತೆ, ಕೆಸರಿನಲ್ಲಿದ್ದ ಕುಂಬಾರ ಹುಳದಂತೆ ಸಂಸಾರದಲ್ಲಿದ್ದು ಇಲ್ಲದಂತಿರಬೇಕು. ಆಗ ಸಂಸಾರವೇ ಸದ್ಗತಿಗೆ ಸಹಾಯಕವಾಗುವದು. ಬಸವಾದಿ ಪ್ರಮಥರು ಸಂಸಾರದಿಂದಲೇ ಸದ್ಗತಿಯನ್ನು ಸಾಧಿಸಲಿಲ್ಲವೆ ? ಜ್ಞಾನಿಯಾಗಿ ಗುರುಪುತ್ರನಾಗಿ ಸಂಸಾರಕ್ರಿಯೆಯನ್ನು ಆಚರಿಸಿದರೆ ಬಂಧನವಿಲ್ಲ. ಅರಿವಿಲ್ಲದ ಕ್ರಿಯೆ ; ಕ್ರಿಯೆಯಿಲ್ಲದ ಅರಿವೂ ವ್ಯರ್ಥ, ಕಾರಣ ಈ ಸಂಸಾರದ ದುಗುಡವನ್ನು ಬಿಡು. ಯಾವ ಕಳವಳವನ್ನು ಮಾಡಿಕೊಳ್ಳಬೇಡ. ಈ ದುಗುಡ-ದುಮ್ಮಾನಗಳನ್ನು ನಿವಾರಿಸಿಕೊಳ್ಳುವ ಪರಮೋಪಾಯವನ್ನು ಕರುಣಿಸುವೆನು. ಚಿತ್ತವಿಟ್ಟು ಕೇಳು.

 “ಭಕ್ತಿಯೇ ಮುಕ್ತಿಯ ಸಾಧನೆ. ಶ್ರದ್ಧಾ-ನಿಷ್ಠೆಗಳಿಂದ ಅದನ್ನು ಅಳವಡಿಸಿಕೊಳ್ಳು. ನವವಿಧ ಭಕ್ತಿಗಳಲ್ಲಿ ಕೊನೆಯದಾದ  ಆತ್ಮಸಮರ್ಪಣಾಭಕ್ತಿಯು ಅತ್ಯಂತ ಶ್ರೇಷ್ಠವಾದುದು. ಇದಕ್ಕೆ ಸುಂದರ ಉದಾಹರಣೆಯೆಂದರೆ- *ʼʼಮಾರ್ಜಾಲ ಕಿಶೋರ ನ್ಯಾಯ.” ಬೆಕ್ಕಿನ ಮರಿಗಳು ತಮ್ಮ ನಿರ್ವಹಣೆಯನ್ನೆಲ್ಲ ತಾಯಿಗೇನೆ ಬಿಟ್ಟಿರುತ್ತವೆ. ಕಣ್ಣುಮುಚ್ಚಿ ಧ್ಯಾನಸ್ಥರಂತೆ ನಿಶ್ಚಿಂತವಾಗಿರುತ್ತವೆ. ತಮ್ಮನ್ನು ತಾಯಿಗೆ ಅರ್ಪಿಸಿಕೊಂಡಿರುತ್ತವೆ. ಅದಕ್ಕಾಗಿ ತಾಯಿಬೆಕ್ಕೇ ಮರಿಗಳ ಸಂಪೂರ್ಣ ರಕ್ಷಣೆಯ ಹೊಣೆಹೊತ್ತಿರುತ್ತದೆ. ಇದರಂತೆ ಶಿವಮಯವಾದ ಸಂಸಾರದಲ್ಲಿದ್ದು ಅದರ ಎಲ್ಲ ಭಾರವನ್ನು ಶಿವನ ಮೇಲೆ ಹಾಕಿ ಕರ್ತವ್ಯ ಕರ್ಮವನ್ನು ಮಾಡು. ಕೊಡುವನೂ ಸಂಗ, ಕೊಂಬುವವನೂ ಸಂಗ’ನೆಂದು ಬಸವಣ್ಣನವರು ನೆರೆನಂಬಿದಂತೆ, ಮಾಡುವವನೂ ಶಿವ, ಮಾಡಿಸಿಕೊಳ್ಳುವವನೂ ಶಿವ. ಮಾಡುವ ಕೆಲಸವೂ ಶಿವಮಯವೆಂಬ ಪವಿತ್ರ ಭಾವನೆಯಿರಲಿ. ಇದನ್ನರಿತು ಆಚರಿಸಿದರೆ ಸಂಸಾರ ಸಸಾರವಾಗುವದರಲ್ಲಿ ಸಂದೇಹವಿಲ್ಲ. 

ಇದಕ್ಕೊಂದು ಚಿಕ್ಕ ದೃಷ್ಟಾಂತವನ್ನು ಮನವಿಟ್ಟು ಕೇಳು- ಒಬ್ಬ ರೈತನು ದಿನಾಲು ತಪ್ಪದೆ ತನ್ನ ಕುದುರೆಯನ್ನೇರಿ ಹೊಲಕ್ಕೆ ಹೋಗಿ ಕೃಷಿಕಾಯಕವನ್ನು ಪೂರೈಸಿ ಬರುತ್ತಿದ್ದನು. ಬರುವಾಗ ಹುಲ್ಲನ್ನೋ, ಕಟ್ಟಿಗೆಯನ್ನೂ ತರುತ್ತಿದ್ದನು. ಹೊಲಕ್ಕೆ ತಪ್ಪದೆ ಹೋಗುವದು ಒಕ್ಕಲಿಗನ ಕರ್ತವ್ಯ. ಜೊತೆಗೆ ಏನಾದರೂ ಕೆಲಸ ಮಾಡಿಯೇ ಬರಬೇಕು. ಅದಕ್ಕಾಗಿಯೇ ಹೊಲ ನೋಡದೆ ಹೋಯಿತು. ಸಾಲ ಕೇಳದೆ ಹೋಯಿತು” ಎಂಬ ವೇದಸದೃಶ ಗಾದೆ ಮಾತನ್ನು ಕೇಳಿರ ಬೇಕು. ಪ್ರತಿನಿತ್ಯವೂ ಹೊಲವನ್ನು ನೋಡುವದರಿಂದ ಕೃಷಿಕಾಯಕ ಸಫಲವಾಗುವದು. ಹೊಲಕ್ಕೆ ಹೋದ ರೈತನು ಬರಿಗೈಯಿಂದ ಬರಬಾರದು. ಅದು ರೈತನ ಲಕ್ಷಣವಲ್ಲ,  ಅದಕ್ಕಾಗಿ ಆ ರೈತನು ಬರಿಗೈಯಿಂದ ಬರುತಿರಲಿಲ್ಲ. ಒಮ್ಮೆ ಬರುವಾಗ ಅವನಿಗೊಂದು ವಿಚಾರ ಹೊಳೆಯಿತು. ಈ ಕುದುರೆಯ ಮೇಲೆ ನಾನು ಸುಖವಾಗಿ ಅಡ್ಡಾಡುತ್ತಿದ್ದೇನೆ. ಪಾಪ ! ಇದಕ್ಕೇಕೆ ಈ ಭಾರವಾದ ಹೊರೆಯನ್ನು ಹೊರಿಸಬೇಕು.  ಇದು ಸರಿಯಲ್ಲವೆಂದು ವಿಚಾರಿಸಿ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ನಡೆದನು. ದಿನಾಲು ಇದನ್ನು ನೋಡುತ್ತಿದ್ದ ಪಕ್ಕದ ಹೊಲದ ಯಜಮಾನನು ಅವನನ್ನು ಕೇಳಿದ, ”ಏನಪ್ಪಾ ತಮ್ಮಾ! ಇಲ್ಲಿ ನಿಲ್ಲು ನಿನಗೊಂದು ಮಾತು ಕೇಳಬೇಕಾಗಿದೆ. ನೀನು ದಿನನಿತ್ಯವೂ ಮೇವಿನ ಹೊರೆಯನ್ನಾಗಲಿ, ಕಟ್ಟಿಗೆಯನ್ನಾಗಲಿ ಮನೆಗೆ ಒಯ್ಯುತ್ತಿ ಆದರೆ ಆ ಭಾರವನ್ನು ನಿನ್ನ ತಲೆಯ ಮೇಲಿಟ್ಟು ಕೊಂಡೇಕೆ ಹೋಗುತ್ತೀ ? ನೀನು ಹೊತ್ತ ಹೊರೆಯ ಭಾರವೂ ಕುದುರೆಗೇನೆ ಬೀಳುವದಿಲ್ಲವೆ ? ನೀನೇಕೆ ವ್ಯರ್ಥ ಕಷ್ಟ ಪಡುತ್ತಿದ್ದೀಯಾ ! ಕುದುರೆಯ ಮೇಲೇನೇ ಮುಂದಿಟ್ಟುಕೊಂಡು ಹೋಗುವದು ಉಚಿತವಲ್ಲವೆ ?” ಎಂದು ಹಿತೋಕ್ತಿಗಳನ್ನಾಡಿದನು.

ಅವನ ಮಾತುಗಳನ್ನು ಅರ್ಥೈಸಿಕೊಂಡು ರೈತನು ತನ್ನ ಮೂರ್ಖತನಕ್ಕೆ ಮರುಗಿ ಸುಖವಾಗಿ ಬರಹತ್ತಿದನು. ಈ ದೃಷ್ಟಾಂತ ಕೇವಲ ರೈತನದಲ್ಲ, ಅದು ನಿನಗೂ ಅನ್ವಯಿಸುತ್ತದೆ-ನೀನು ಶಿವನೆಂಬ ಕುದುರೆಯನ್ನೇರಿ ಸಂಸಾರ ಸಾಗರವನ್ನು ದಾಟುತ್ತಿದ್ದೇನೆಂಬುದನ್ನೇ ಮರೆತಿರುವಿ. ಎಲ್ಲವನ್ನು ನಡೆಯಿಸಿಕೊಡುವವನು ಶಿವನು. ಆದರೆ ಹೊಲ, ಮನೆ ಮಡದಿ ಮಕ್ಕಳೆಲ್ಲರೂ ನನ್ನವರು. ನಾನೇ ನಡೆಸುವೆನೆಂಬ ಸಂಸಾರ ಭ್ರಾಂತಿಯೇ ಭಾರವಾಗಿದೆ. ಶಿವನ ಪ್ರೇರಣೆಯಿಲ್ಲದೆ ಯಾವುದೂ ನಡೆಯದು. ಅದು ಕಾರಣ ಶಿವನ ಧ್ಯಾನ ಮಾಡುತ್ತ, ಗುರು-ಲಿಂಗ- ಜಂಗಮಾರಾಧನೆ ಗೈಯ್ಯುತ್ತ ಎಲ್ಲ ಭಾರವನ್ನು ಪರಶಿವನ ಮೇಲೆ ಹಾಕಿ ಕಾಯಕ ಕೈಕೊಳ್ಳುವದೇ ಪ್ರತಿಯೊಬ್ಬರ ಕರ್ತವ್ಯ. ಇದುವೇ ಸುಲಭೋಪಾಯವು. ಇದರಿಂದ ಸುಖ ಖಂಡಿತವಾಗಿ ಸಿಕ್ಕುವದು.” ಎಂದು ಮುಂತಾಗಿ ಸದ್ಗುರುವಿನ ಆಲೋಚನೆಯನ್ನು ಆಲಿಸುವ ಶಿಷ್ಯನೇ ಕೃತಾರ್ಥನು.  ಪುಣ್ಯಮಯನು.

ಕರೆದು ಮಂಡೆಯ ಮೇಲೆ | ಕರವಿಟ್ಟು ಸಿರದಡಹಿ

ಗುರುಪುತ್ರನೆನಿಸಿ-ಸ್ಥಿರವಾಗಿ ಬಾಳೆಂದು

ಹರಸಿದೈ ಗುರುವೆ ಕೃಪೆಯಾಗು II ೭೭ ||

ಶ್ರೀಗುರುವು ಶಿಷ್ಯನನ್ನು ಸಮೀಪಕ್ಕೆ ಬರಮಾಡಿಕೊಂಡು ಆತ್ಮೀಯವಾಗಿ ಹಸನ್ಮುಖದಿಂದ ಸುಲಭೋಪಾಯಗಳನ್ನು ತಿಳಿಸುತ್ತ ಯಾವ ಯಾವ ಸಂಸ್ಕಾರವನ್ನು ದಯಪಾಲಿಸುವನು, ಏನನ್ನು ಅನುಗ್ರಹಿಸುವನು ಎಂಬುದನ್ನು ಶಿವಕವಿಯು ವಿಶದ ಪಡಿಸುತ್ತ ಹೋಗುತ್ತಾನೆ.

ಬಾಳಿನ ಬೇಗೆಯಲ್ಲಿ ಬಳಲಿದ ವ್ಯಕ್ತಿಯನ್ನು ಹತ್ತಿರಕ್ಕೆ ಕರೆದು ಮೈದಡಹಿ ತಲೆಯ ಮೇಲೆ ಹಸ್ತವನ್ನಿಟ್ಟು ಸಂತೈಸಿದರೆ ಅವನಿಗೆಷ್ಟು ಆನಂದವಾಗುವದೋ ಅದಕ್ಕೂ  ಮಿಗಿಲಾಗಿ ಗುರುಕರಸ್ಪರ್ಶದಿಂದ ಪರಮಾನಂದವೇ ಲಭ್ಯವಾಗುವದು. ಸದ್ಗುರುವಿನ ಸದಯಾಂತಃಕರಣವನ್ನು ಶಿಷ್ಯನು ಪುನಃ ಪುನಃ ಸಂಸ್ಮರಿಸುತ್ತಾನೆ. ಉಪಕೃತಿಯನ್ನು ಸ್ಮರಿಸುತ್ತಿರುವುದೇ ನಿಜವಾದ ಮಾನವೀಯತೆ. ಅದು ಅತ್ಮೋದ್ಧಾರದ ಮೈಲುಗಲ್ಲು

 ಗುರುದೇವಾ ! ಕಾಯ-ಕರ್ಮಗಳೆಂಬ ಮಾಯಾ ಸಂಸಾರಭ್ರಾಂತಿಯಲ್ಲಿ ಗತಿಗಾಣದ ನನ್ನನ್ನು ಉದ್ಧಾರಗೊಳಿಸಿದೆ. ಯೋಗಕ್ಷೇಮವನ್ನು ವಿಚಾರಿಸಿದೆ. ನಗುತೊಂದಾಲೋಚನೆಯನ್ನಿತ್ತು ಸಂತಸಗೊಳಿಸಿರುವೆ. ನಿನ್ನ ಉಪಕಾರ ಸ್ಮರಿಸಲ ಸದಳವಾಗಿದೆ. ಎನ್ನ ಶಿರದ ಮೇಲೆ ನಿನ್ನ ವರದ ಹಸ್ತವನ್ನಿಟ್ಟು ಗುರುಪುತ್ರನನ್ನಾಗಿಸಿದೆ  .ಗುರುಕರ ಜಾತನನ್ನಾಗಿಸಿದೆ. ನನ್ನ ಮಾಂಸಮಯ ಪಿಂಡವು ಮಂತ್ರಮಯವಾಯಿತು. ಧೈರ್ಯವಾಗಿ ಶಿವಬಾಳನ್ನು ಬಾಳೆಂದು ಹರಸಿದೆ-ಇಂಥ ಹರಕೆ ಸಾಮಾನ್ಯವೆ ! ಪುನರ್ಜಾತನನ್ನು ಮಾಡುವ ಸುಯೋಗ, ಗುರುಕರ ಜಾತನಾಗುವ ಶುಭಯೋಗವೂ ಹೌದು.

ಅಧ್ಯಾತ್ಮಜೀವನದಲ್ಲಿ ಗುರುಪುತ್ರನಾಗುವದೇ ಉನ್ನತ ಮಾರ್ಗ. ಅದರಲ್ಲೂ ವೀರಶೈವ ಸಿದ್ಧಾಂತವು ತತ್ತ್ವಪ್ರಧಾನವಾದುದು. ವೀರಶೈವವು ಜಾತಿವಾಚಕವಲ್ಲ. ತತ್ತ್ವಸೂಚಕವಾದುದು. ಗುರುಕರಜಾತನಾಗುವದು ಬಹುಮುಖ್ಯವಾದ ಪ್ರಕ್ರಿಯೆ. ಗುರುಪುತ್ರನಾಗುವಲ್ಲಿಯೇ ಪೂರ್ವಾಶ್ರಯ ಅಳಿಯುವದು ; ಮತ್ತು ಶಿವದೀಕ್ಷೆಯಿಂದ ಸಮಾನತೆಯು ಪ್ರಾಪ್ತವಾಗುವದು. ಸದ್ಗುರು ಕೃಪೆ ಪಡೆಯದೆ ಯಾವ ಫಲವಿಲ್ಲ. ಶರಣಸಂತತಿಗೆ ಕಾರಣಕರ್ತನು ಗುರುದೇವನೆ. ಜೀವಜಾಲಂಗಳೊಳಗೆ ಯಾವನ ನ್ನಾದರೂ ಪಾವನಮಾಡುವ ಮಹಾ ಶಕ್ತಿ ಸದ್ಗುರುವಿಗಿದೆ. ಅಂತೆಯೇ ಅನುಭವಿಗಳು  ಶಾಸ್ತ್ರಕಾರರು ,    

ಅಪುತ್ರಸ್ಯ ಗತಿರ್ನಾಸ್ತಿ”     

ಮಕ್ಕಳಾಗದವನಿಗೆ ಗತಿಯಿಲ್ಲವೆಂದರು. ಲೌಕಿಕ ಮಕ್ಕಳಾದರೆ ಸದ್ಗತಿಯೆಂದರ್ಥವಲ್ಲ. ಇದು ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಮಕ್ಕಳನ್ನು ಹಡೆಯುವ ಶ್ವಾನ ಸೂಕರಗಳಿಗೂ ಸದ್ಧತಿ ಸಿಕ್ಕಬೇಕಾದೀತು. ಸದ್ಗುರುವಿನ ವರಕರದಲ್ಲಿ ಸಂಜನಿಸಿ ಗುರುಪುತ್ರನೆನಿಸಬೇಕು. ಗುರುಪುತ್ರರಾಗದವರಿಗೆ ಸದ್ದತಿಯಿಲ್ಲವೆಂಬುದು ಗಮನೀಯವಾದುದು. ಗುರುಕರ ಜಾತನಾಗದೇ ಶಿವಜೀವರ, ಅಂಗ-ಲಿಂಗದ ಸಾಮರಸ್ಯದ ಸುಖದ ಸಂಬಂಧವೂ ಆಗುವದಿಲ್ಲ.

ವೀರಶೈವ ಪ್ರಕ್ರಿಯೆಯಲ್ಲಿ ಸ್ತ್ರೀಪುರುಷರೆಂಬ ಭೇದಭಾವವಿಲ್ಲ. ಲಿಂಗಾಂಗ ಸಾಮರಸ್ಯದ ಸುಖವನ್ನು ಸವಿಯಲು ಸಕಲರಿಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದೆ ಶರಣಧರ್ಮ. ಹಿಂದೂ ಸಂಸ್ಕೃತಿಯಲ್ಲಿ ಧಾರ್ಮಿಕಸ್ವಾತಂತ್ರ್ಯ ಸಿಕ್ಕದ ಮಹಿಳೆಗೆ ವೀರಶೈವರು ಪ್ರಾಚೀನ ಕಾಲದಿಂದಲೂ ಧರ್ಮಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಶಿವಲಿಂಗವನ್ನು ಪೂಜಿಸುವ ಆರಾಧಿಸುವ ಅಧಿಕಾರ ಸಮನಾಗಿ ಬಂದಿದೆ.

ಗುರುಪುತ್ರನಾಗುವ ಸಂಸ್ಕಾರಕ್ಕೆ ಶಿವಸಂಸ್ಕಾರ ಅಥವಾ ದೀಕ್ಷಾಸಂಸ್ಕಾರವೆಂದು ಹೆಸರು. ಶ್ರೀಗುರುವಿನ ಶಕ್ತಿಪಾತವು ಶಿಷ್ಯನ ಮೇಲಾಗುವದರಿಂದ ಅವನ  ತನು-ಮನ-ಭಾವಗಳು ಪವಿತ್ರವಾಗುತ್ತವೆ. ಶರೀರದಲ್ಲಿದ್ದ ಮಲತ್ರಯಗಳು ಮಾಯವಾಗುತ್ತವೆ. ಅಲ್ಲದೆ ತನುತ್ರಯದಲ್ಲಿ ಶಿವಲಿಂಗತ್ರಯದ ಪ್ರತಿಷ್ಠೆಯೂ ನೆರವೇರುವದು: ಈ ವಿಚಾರವಾಗಿ ಶಿವಯೋಗಿ ಶಿವಚಾರ್ಯರ ನುಡಿಯನ್ನು ಆಲಿಸಿ

*ದೀಯತೇ ಚ ಶಿವಜ್ಞಾನಂ

ಕ್ಷೀಯತೇ ಪಾಶಬಂಧನಮ್ |

ಯಸ್ಮಾದತಃ ಸಮಾಖ್ಯಾತಾ

ದೀಕ್ಷೇತೀಯಂ ವಿಚಕ್ಷಣೈಃ||೬. ೧೧ ||

ಯಾವ ಸಂಸ್ಕಾರವು ಶಿವಜ್ಞಾನವನ್ನುಂಟು ಮಾಡುವದೋ ಮತ್ತು ಮಲಮಾಯಾ ಕರ್ಮಬಂಧನವನ್ನು ನಾಶಮಾಡುವದೋ ಅದಕ್ಕೆ ಶಾಸ್ತ್ರಜ್ಞರು “ದೀಕ್ಷೆ’ಯೆಂದು ಹೇಳುವರು. ಮಲತ್ರಯವನ್ನು ನಾಶಮಾಡಿ ಲಿಂಗತ್ರಯವನ್ನು ಕರುಣಿಸುವ ಸತ್ಕೃಯೆಯುಳ್ಳುದೇ ‘ದೀಕ್ಷೆ’ಯೆಂಬ ಅನ್ವರ್ಥಕ ನಾಮವನ್ನು ಹೊಂದಿದೆ. ಇಂಥ ಮಹತ್ತರವಾದ ಹಸ್ತ-ಮಸ್ತಕ ಸಂಯೋಗ ರೂಪಸತ್ಕೃಯೆಯಿಂದ ಗುರುಕರಜಾತನಾದ ಶರಣನಿಗೆ ಭವ-ಮರಣಗಳು ದೂರಾಗುತ್ತವೆ. ಈ ಕೃತಿಕರ್ತನಾದ ಶಿವಕವಿಯು  ತಮ್ಮ ‘ಶಿವಾನುಭವ ದರ್ಪಣದಲ್ಲಿ’-

ಗುರು ಕರೋದ್ಭವ ತಾನಾದ ಶರಣಗುಂಟೆ ಪರಿಭವ ?

ಪರಮಗುರುವು ಕರುಣದಿಂದ ಶಿರದಮೇಲೆ ಕರವನಿಡಲು |

ಪರುಷಮುಟ್ಟಿದ ಲೋಹದಂತೆ ಶರೀರ ಲಿಂಗವಾದ

ಶರಣಗಿನ್ನು ಉಂಟೆ ಪರಿಭವ ||

ಎಂದು ಗುರುಕರಸ್ಪರ್ಶದ ಮಹತ್ವವನ್ನು ಮಾರ್ಮಿಕವಾಗಿ ವರ್ಣಿಸಿದ್ದಾನೆ. ಪುನರ್ಜಾತನನ್ನು ಮಾಡುವ ಸದ್ಗುರುವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು-

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ,

ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ,

ಭವಿಯೆಂಬುದ ತೊಡೆದು ಭಕ್ತೆಯೆಂದೆನಿಸುವ ಗುರುವೆ,

ಚನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವ, ಶರಣು ಶರಣಾರ್ಥಿ,

ಎಂದು ಮನವಾರೆ ಕೊಂಡಾಡಿ ಶರಣುಗೈದಿದ್ದಾಳೆ. ಅಂದಮೇಲೆ ಸದ್ಗುರುವಿನ ಹರಕೆ ಸಾರ್ಥಕವಾಗುವದು. ಶಕ್ತಿಯುತವಾದುದು.

 ದೀಕ್ಷೆ ತ್ರೈತನುವಿಂಗೆ | ಶಿಕ್ಷೆಯಂ ಮನಸಿಂಗೆ

ಮೋಕ್ಷವಾತ್ಮಂಗೆ-ಈಕ್ಷಿಸುತ ಕೊಟ್ಟಪ್ರ-

ತ್ಯಕ್ಷ ಶ್ರೀಗುರುವೆ ಕೃಪೆಯಾಗು ೭೮ ||

ಹಿಂದಿನ ತ್ರಿಪದಿಯಲ್ಲಿ ದೀಕ್ಷಾವಿಧಾನಗಳನ್ನು ವಿವರಿಸಿ ಇಲ್ಲಿ ದೀಕ್ಷೆಯ ವೈವಿಧ್ಯತೆಯನ್ನು ಶಿವಕವಿಯು ನಿರೂಪಿಸುತ್ತಾನೆ.  

 ದೀಕ್ಷಾಸಂಸ್ಕಾರವು ಮೂಬಗೆಯಾಗಿದೆ. ಮೂರು ಶರೀರಗಳ ಮೂರು ಮಲಗಳನ್ನು ಕಳೆಯಲು ಮೂರು ದೀಕ್ಷೆಗಳು ಅವಶ್ಯವಾಗಬೇಕು.ʼʼ ಸಿದ್ಧಾಂತ ಶಿಖಾಮಣಿʼ’ ಯಲ್ಲಿ ಶಿವಯೋಗಿ ಶಿವಾಚಾರ್ಯರು

ಸಾ ದೀಕ್ಷಾ ತ್ರಿವಿಧಾ ಪ್ರೋಕ್ತಾ ಶಿವಾಗಮವಿಶಾರದೈಃ |

ವೇಧಾರೂಪಾ, ಕ್ರಿಯಾರೂಪಾ, ಮಂತ್ರರೂಪಾ ಚ ತಾಪಸ II ೬.೧೨ ||

ಗುರೋರಾಲೋಕಮಾತ್ರೇಣ ಹಸ್ತಮಸ್ತಕಯೋಗತಃ |

ಯಃ ಶಿವತ್ವ ಸಮಾವೇಶೋ ವೇಧಾದೀಕ್ಷೆತಿ ಸಾ ಮತಾ || ೬.೧೩

ಮಂತ್ರದೀಕ್ಷೇತಿ ಸಾ ಪ್ರೋಕ್ತಾ ಮಂತ್ರ ಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ || ೬. ೧೪ ||

ಆದೀಕ್ಷೆಯು ವೇಧಾದೀಕ್ಷಾ, ಮಂತ್ರದೀಕ್ಷಾ, ಮತ್ತು ಕ್ರಿಯಾದೀಕ್ಷೆಯೆಂದು ಮೂಬಗೆಯಾಗಿದೆ. ಶ್ರೀಗುರುವಿನ ಕೃಪಾಕಟಾಕ್ಷೇಕ್ಷಣ ಮಾತ್ರದಿಂದಲೂ, ಹಸ್ತ ಮಸ್ತಕ ಸಂಯೋಗದಿಂದಲೂ ಉತ್ಪನ್ನವಾಗುವದೋ ಯಾವ ಜ್ಞಾನಕ್ರಿಯಾತ್ಮಕ ಶಿವತತ್ತ್ವ ಸಮಾವೇಶವು ಉತ್ಪನ್ನವಾಗುವದೋ ಅದು ವೇಧಾ ದೀಕ್ಷೆಯೆನಿಸುವದು. ಶಿವಪಂಚಾಕ್ಷರಿ ಮಂತ್ರೋಪದೇಶವನ್ನು ಮಾಡುವದರಿಂದ ಅದು ಮಂತ್ರದೀಕ್ಷೆ ಯೆನಿಸುವದು. ದೀಕ್ಷಾಂಗಭೂತ ಸತ್ಕೃಯೆಗಳಿಂದ ಯುಕ್ತವಾದುದು ಕ್ರಿಯಾದೀಕ್ಷೆ ಯೆನಿಸುವದು ಎಂದು ಮೂರು ದೀಕ್ಷೆಗಳ ವಿವರವನ್ನು ವಿಶದಪಡಿಸಿದ್ದಾರೆ.

ಜೀವನಿಗೆ ಸ್ಥೂಲವಾದುದು ಶರೀರ, ಸೂಕ್ಷ್ಮವಾದುದು ಮನಸ್ಸು. ಕಾರಣ ಸ್ಥಿತಿಯಲ್ಲಿರುವದು ಭಾವ. ಪ್ರತಿಯೊಬ್ಬನಿಗೆ ಈ ಮೂರರ ಕಲ್ಪನೆ ಬಂದೇ ಬರುತ್ತದೆ. ಸ್ಥೂಲಶರೀರಕ್ಕೆ ಕಾರ್ಯಾನ ಕಾರ್ಯಗಳಿಂದ ಅಂಟಿಕೊಂಡಿರುವದು ಕಾರ್ಮಿಕ ಮಲವು. ಸೂಕ್ಷ್ಮ ಶರೀರವಾದ ಮನಸ್ಸಿನಲ್ಲಿ ಹೊನ್ನು, ಹೆಣ್ಣು, ಮಣ್ಣುಗಳಲ್ಲಿ ವ್ಯಾಪ್ತವಾಗಿ ಮೋಹಗೊಂಡಂಥಹವುದೇ ಮಾಯಾಮಲವು. ಕಾರಣರೂಪಾದ ಭಾವವನ್ನು ಸಂಕುಚಿಗೊಳಿಸಿರುವದು ಆಣವಮಲವು. ಈ ಮೂರು ಮಲಗಳಿಂದ ಮಾನವನು ಪುನಃ ಪುನಃ ಭವಚಕ್ರದಲ್ಲಿ ತಿರುಗುತ್ತಾನೆ. ದುಃಖದಿಂದ ಬಳಲುತ್ತಾನೆ. ಪರಮಾತ್ಮನ ಅಂಶೀಭೂತನಾದ ಜೀವನು ದೇವನ ಸರ್ವಜ್ಞತ್ವ, ಸರ್ವಕರ್ತೃತ್ವ, ಸರ್ವವ್ಯಾಪಕತ್ವಗಳನ್ನು ಮರೆತು ಅಲ್ಪಜ್ಞನೂ, ಅಹಂಕರ್ತನೂ, ಸಂಕೋಚ ಸ್ವಭಾವಿಯೂ ಆಗುವನು. ಇದರಿಂದ ಭವ-ಬಂಧನ ತಪ್ಪುವದಿಲ್ಲ. ಇವುಗಳನ್ನು ನಾಶಮಾಡ ಬಲ್ಲಾತನೇ ಶ್ರೀಗುರು.

ಸದ್ಗುರುವು ಶಿಷ್ಯನನ್ನು ಕೃಪಾದೃಷ್ಟಿಯಿಂದ ಈಕ್ಷಿಸಿ ಕಾಯದಲ್ಲಿಯ ಕಾರ್ಮಿಕ ಮಲವನ್ನು ಹೋಗಲಾಡಿಸುತ್ತಾನೆ . ಸಕಾಮಕರ್ಮಂಗಳನ್ನು ಬಿಡಿಸಿ ನಿಷ್ಕಾಮ  ಕ್ರಿಯೆಗಳನ್ನು ಬೋಧಿಸಿ ಇಷ್ಟಲಿಂಗವನ್ನು ಅನುಗ್ರಹಿಸುತ್ತಾನೆ. ಇಲ್ಲಿ ಹಸ್ತ ಮಸ್ತಕ. ಸಂಯೋಗಾತ್ಮಕ ಕ್ರಿಯೆಯು ಬಹು ಮಹತ್ವವುಳ್ಳುದು.

ಈ ವೇಧಾಧೀಕ್ಷೆಯಲ್ಲಿ *೧. ಆಜ್ಞಾ ೨. ಉಪಮಾ ೩. ಸ್ವಸ್ತಿಕಾರೋಹಣ ೪. ಕಲಶಾಭಿಷೇಕ ೫. ವಿಭೂತಿಪಟ್ಟ ೬. ಲಿಂಗಾಯತ ೭. ಲಿಂಗಸ್ವಾಯತ ವೆಂದು ಏಳು ವಿಧಾನಗಳುಂಟು. ಸದಾಚಾರಗಳನ್ನು ಆಜ್ಞಾಪಿಸಿ, ಉತ್ತಮರ, ಶರಣರ ನಡೆಯನ್ನು ಉಪಮಿಸುತ್ತಾನೆ. ಸ್ವಸ್ತಿಕಾರೋಹಣ ಮಾಡಿ ಕಲಶಾಭಿಷೇಕಗೈಯುತ್ತ ಶರೀರಕ್ಕೆ ವಿಭೂತಿ ಪಟ್ಟವನ್ನು ಬರೆಯುತ್ತಾನೆ. ನಂತರ ಶಿಷ್ಯನ ಪಶ್ಚಿಮ ಚಕ್ರದಲ್ಲಿಯ ಮಹಾಚೈತನ್ಯವನ್ನು ಲಿಂಗದಲ್ಲಿ ಆಯತಗೊಳಿಸಿ ಶಿಷ್ಯನ ಅಂಗೈಗೆ ಸ್ವಾಧೀನ ಗೊಳಿಸುತ್ತಾನೆ. ಅರ್ಥಾತ್ ಲಿಂಗವನ್ನು ಕರುಣಿಸುತ್ತಾನೆ. ಈ ಎಲ್ಲ ಕ್ರಿಯಾ ವಿಧಾನಗಳನ್ನು ಮಾಡುವದರಿಂದ ಶಿಷ್ಯನ ತನುವು ವೇಧಿಸಲ್ಪಡುತ್ತದೆ. ಅದಕ್ಕಾಗಿ ಇದು ವೇಧಾದೀಕ್ಷೆಯೆನಿಸುವದು ಈ ಸಪ್ತ ಸಂಸ್ಕಾರಗಳಿಂದ ಸ್ಥೂಲತನುವಿನ ಕಾರ್ಮಿಕಮಲವು ನಾಶವಾಗುವದು. ಮಂತ್ರದೀಕ್ಷೆಯಲ್ಲಿ ಸೂಕ್ಷ್ಮವಾದ ಮನವು ಮಾಯಾಮಲದಿಂದ ದೂರವಾಗಿ ಪ್ರಾಣಲಿಂಗವನ್ನು ಪಡೆಯುವದು. ಶಿವಷಡಕ್ಷರ ಮಹಾಮಂತ್ರವು ಮನಕ್ಕೆ ಉಪದೇಶಿಸಲ್ಪಡುವದು. ಮಂತ್ರೋಪದೇಶವೆಂಬ ಮಹಾಕ್ರಿಯೆ ನಡೆಯುವದರಿಂದ ಇದಕ್ಕೆ ಮಂತ್ರದೀಕ್ಷೆಯೆಂಬ ನಾಮ ಬಂದಿದೆ. ಇದು ೧. ಸಮಯ ೨. ನಿಸ್ಸಂಸಾರ ೩. ನಿರ್ವಾಣ ೪. ತತ್ತ್ವ ೫. ಆಧ್ಯಾತ್ಮ ೬. ಅನುಗ್ರಹ ೭. ಸತ್ಯಸಿದಗಳೆಂದು ಏಳು ವಿಧವಾಗುತ್ತದೆ. ಈ ಏಳನ್ನು ಮನಕ್ಕೆ (ಪ್ರಾಣಕ್ಕೆ) ಉಪದೇಶಿಸಿ ಮಾಯಾಮಲವನ್ನು ದೂರಮಾಡುವನು. ಮೇಲಿನ ಏಳೂ, ಮನಸ್ಸಿನಲ್ಲಿ ಪರಿಣಾಮ ಬೀರುವಂಥವುಗಳು ಇದರಿಂದ ಪ್ರಾಣದ ಮಾಯಾಮಲವು ದೂರವಾಗಿ ಸಂಕುಚಿತದೃಷ್ಟಿಯಳಿದು ವಿಶಾಲದೃಷ್ಟಿಯು ಪ್ರಾಪ್ತವಾಗುವದು.

ಕ್ರೀಯಾದೀಕ್ಷೆಯಿಂದ ಶಿಷ್ಯನ ಜೀವಭಾವವನ್ನು ನಿವೃತ್ತಗೊಳಿಸಿ ದಿವ್ಯ ಭಾವವ ಅಂದರೆ ಲಿಂಗಾಂಗಸಾಮರಸ್ಯದ ರಹಸ್ಯವನ್ನು ತಿಳುಹಿ ಆಣವ ಮಲವನ್ನು ಸುಟ್ಟು ಭಾವಲಿಂಗವನ್ನು ಅನುಗ್ರಹಿಸುವನು. ಇಲ್ಲಿ ೧. ಏಕಾಗ್ರಚಿತ್ತ ೨. ದೃಢವ್ರತ ೩. ಪಂಚೇದ್ರಿಯಾರ್ಪಿತ ೪. ಅಹಿಂಸೆ ೫. ಮನೋಲಯ ೬, ಲಿಂಗನಿಜ ೭. ಸದ್ಯೋನ್ಮುಕ್ತಿಗಳೆಂಬ ಏಳು ಉಪಸಂಸ್ಕಾರಗಳಾಗುವವು. ಅರ್ಥಾತ್ ಈ ಏಳು ಸೂಕ್ಷ್ಮ ಕ್ರಿಯೆಗಳಿಂದ ಸೂಕ್ಷ್ಮವಾದ ಭಾವದಲ್ಲಿ ಭರಿತವಾದ ಆಣವಮಲವನ್ನು ಕಿತ್ತಿಹಾಕುವನು. ಭಾವ ವಿಶಾಲವಾಗುವದು .ಭಾವಲಿಂಗಕ್ಕೆ ಆಶ್ರಯವಾಗುವದು.  ಸಪ್ತ ಸತ್ಕ್ರಿಯಾ ಭರಿತವಾದ ಇದು ಕ್ರಿಯಾದೀಕ್ಷೆಯೆನಿಸಿದೆ.

ಈ ತೆರನಾಗಿ ವೇಧಾದೀಕ್ಷೆ, ಮಂತ್ರದೀಕ್ಷೆ, ಕ್ರಿಯಾದೀಕ್ಷೆಗಳಲ್ಲಿ ಏಳೇಳು ವಿಧವಾಗಿ ಒಟ್ಟಿಗೆ ಇಪ್ಪತ್ತೊಂದು ದೀಕ್ಷೆಗಳಾಗುವವು. ಷಟ್‌ಸ್ಥಲಬ್ರಹ್ಮಿ ಮಹಾಜ್ಞಾನಿಗಳಾದ ಚನ್ನಬಸವಣ್ಣನವರು ೮೮೫ನೆಯ ವಚನದಲ್ಲಿ ಮೇಲಿನ ೨೧ ದೀಕ್ಷಾ ವಿವರವನ್ನು ತಿಳಿಸಿದ್ದಾರೆ. ಮತ್ತು…….

ಮೂರೇಳು ಇಪ್ಪತ್ತೊಂದು ದೀಕ್ಷೆಯ

ಭಿನ್ನವಿಲ್ಲದೆ ಸದ್ಗುರು ಮುಖದಿಂದೆ

ಅರಿದಾನಂದಿಸಬೇಕು’ (೩೩೨ ವಚನ)

ಎಂದು ಇಪ್ಪತ್ತೊಂದು ದೀಕ್ಷೆಗಳು ಅವಶ್ಯವೆಂಬುದನ್ನು ನಿರೂಪಿಸಿದ್ದಾರೆ.

ಸದ್ಗುರುವು ಪ್ರತ್ಯಕ್ಷ ಶಿವನಾಗಿ ಶಿಷ್ಯನ ಉದ್ಧಾರಮಾಡುವಲ್ಲಿ ದೀಕ್ಷಾಗುರುವಾಗಿ ತನುತ್ರಯಗಳನ್ನು ಶುದ್ಧಗೊಳಿಸಿ ಇಷ್ಟಲಿಂಗವನ್ನು ಕರುಣಿಸುವನು. ಶಿಕ್ಷಾಗುರುವಾಗಿ ಮನಕ್ಕೆ ಮಂತ್ರವನ್ನು ಉಪದೇಶಿಸಿಸುವನು. ಮೋಕ್ಷಗುರುವಾಗಿ ಭಾವದಲ್ಲಿ ಪರಿಶುದ್ಧತೆಯನ್ನು ವ್ಯಾಪಕತೆಯನ್ನು ತುಂಬಿ ಭಾವಲಿಂಗವನ್ನು ನೆಲೆಗೊಳಿಸುವನು. ನಿತ್ಯ ಮುಕ್ತಿಯನ್ನು ಪಡೆದು ನಿತ್ಯಾನಂದವನ್ನು ಹೊಂದಲು ಅಣಿಗೊಳಿಸುವನು. ಶ್ರೀಗುರುವಿನ ಕರುಣಾದೃಷ್ಟಿಯ ಈಕ್ಷಣವು ಅಸಾಮಾನ್ಯವಾದುದು. ಆತನ ಈ ಕ್ಷಣದಿಂದ ಮೋಕ್ಷ ಸುಖ ಸಾಧ್ಯವಾಗುವದು. ಆದ್ದರಿಂದ ಗುರುನಾಥನು ಪ್ರತ್ಯಕ್ಷ ಶಿವನಲ್ಲದೆ ಮತ್ತೇನು ? ಅಪ್ರತ್ಯಕ್ಷ ಶಿವನಿಂದ ಇವೆಲ್ಲವೂ ಸಾಧ್ಯವಿಲ್ಲ. ಅದು ಕಾರಣವೇ ಅಣ್ಣನವರು- “ಶಿವಪಥವನರಿವೊಡೆ ಗುರುಪಥವೆ ಮೊದಲು ಎಂದು ಕೊಂಡಾಡಿದರು.

 ಅಡಿಗೆರಗಿದವನ ಶಿರ | ದಡಹಿ ಮನ್ನಸಿ ಎನ್ನ

ನುಡಿಯ ಬ್ರಹ್ಮವನು-ನಡೆಗೆ ತಂದಿತ್ತ ಎ-

ನ್ನೊಡೆಯ ಶ್ರೀಗುರುವೆ ಕೃಪೆಯಾಗು ||೭೬||

ಗುರುದೀಕ್ಷಾಸಂಸ್ಕಾರದ ಗರಿಮೆಯನ್ನು ಪುನಃ ಪುನಃ ಶಿವಕವಿಯು ಬಿತ್ತರಿಸಿದ್ದಾನೆ. ದೇವರದಾಸಿಮಾರ್ಯರು ಗುರುಕರುಣೆಯಿಂದಾದ ತಮ್ಮಿರವನ್ನು, ಸ್ವಾನುಭಾವವನ್ನು

ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ

ತನುವೆಂಬ ತೃಣವ ತಂದಿರಿಸಿದರೆ

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ

 ಎಂದು ತನುತುಂಬಿ, ಮನತುಂಬಿ, ಭಾವದುಂಬಿ ಹಾಡಿದ್ದಾರೆ. ಉರಿಯನ್ನು ಕಂಡ ತೃಣ ಉರಿಯಂತಾಗುವಂತೆ ಗುರುಚರಣವನ್ನು ಹೊಂದಿದ ಶಿಷ್ಯನ ತನುವು ಲಿಂಗಸ್ವರೂಪವಾಗುವದು. ಲಿಂಗಸ್ವರೂಪವನ್ನು ಅನುಭವಿಸಿ ಸರ್ವಾಂಗ ಲಿಂಗಿಯಾದ ಆನಂದದ ನಿಬ್ಬೆರಗಿನಲ್ಲಿ ಪುನಃ ಪುನಃ ಗುರುಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾನೆ.

ಗುರುವೆ! ತವಚರಣಾರವಿಂದಗಳಲ್ಲಿ ಶರಣಾಗತನಾದ ಎನ್ನ ಶಿರದಡಹಿ ಪ್ರೀತಿಯಿಂದ ನನ್ನ ನುಡಿಯನ್ನೂ  ಮಂತ್ರಮಯಗೊಳಿಸಿದೆ. ಚತುರ್ವೇದಗಳ ಸಾರತರವಾದ ಮಹಾವಾಕ್ಯಗಳೆನಿಸಿದ ‘ಅಹಂ ಬ್ರಹ್ಮಾಸ್ಮಿ” (ನಾನು ಬ್ರಹ್ಮನಿದ್ದೇನೆ.) ‘ಅಯಮಾತ್ಮಾ ಬ್ರಹ್ಮ’ (ಈ ಆತ್ಮನೇ ಬ್ರಹ್ಮನಾಗಿದ್ದಾನೆ.) ‘ಪ್ರಜ್ಞಾನಂ ಬ್ರಹ್ಮ (ಪ್ರಕೃಷ್ಟವಾದ ಜ್ಞಾನವೇ ಬ್ರಹ್ಮವಾಗಿದೆ) ಮತ್ತು ‘ತತ್ತ್ವಮಸಿ’ (ಆ ಬ್ರಹ್ಮವೇ ನೀನಾಗಿರುವೆ)ಯೆಂಬ ಬಾಯ್ (ನುಡಿ) ಬ್ರಹ್ಮವನ್ನು ಪ್ರತ್ಯಕ್ಷವಾಗಿ ಎನ್ನ  ಕಂಗಳಿಂದ ನೋಡಲು ಮನ ಮುಟ್ಟಿ ಪೂಜಿಸಲು, ಭಾವತುಂಬಿ ಹಾಡಲು ಸದ್ಗುರುನಾಥನೆ ! ಅನುವು ಮಾಡಿಕೊಟ್ಟಿರುವಿ. ಶಬ್ದ ಬ್ರಹ್ಮದಿಂದೇನು ಲಾಭ ? ಆ ಶಬ್ದಬ್ರಹ್ಮವನ್ನೇ ಆಚಾರ ಲಿಂಗವನ್ನಾಗಿ ಕ್ರಿಯಾಲಿಂಗವನ್ನಾಗಿ ಎನ್ನ ಕರಕಮಲಕ್ಕೆ ತಂದಿರಿಸಿದ ನೀನು ಎನ್ನೊಡೆಯನಲ್ಲವೆ ?

ಕ್ರಿಯೆಗೆ ಬಾರದ ವಸ್ತುವಿನಿಂದ ಯಾವ ಫಲವೂ ದೊರೆಯುವದಿಲ್ಲ. ನುಡಿಯ ಬ್ರಹ್ಮವು ನಡೆಗೆ ಬಾರದೆ  ಪ್ರಯೋಜನವಾಗುವದಿಲ್ಲ, ಕಲ್ಲುಸಕ್ಕರೆಯ ಸವಿಯನ್ನು ಮಾತಿನಿಂದ ನೆನೆದರೆ ಅದನ್ನು ಉಪಭೋಗಿಸಿದಂತಾಗುವದೇ ? ನುಡಿಯನ್ನು ನಡೆಯಲ್ಲಿ ಸಮನ್ವಯಗೊಳಿಸುವದೇ ವೀರಶೈವ ಸಿದ್ಧಾಂತ. ಜ್ಞಾನಗಮ್ಯವಾದ ವಿಷಯವನ್ನು ಆಚರಣೆಯಲ್ಲಿ ಅಳವಡಿಸುವದೇ ಶರಣರ ಮಹಾಮಾರ್ಗ, ಜ್ಞಾನ ಕ್ರಿಯೆಗಳ ಸಂಗಮದಲ್ಲಿಯೇ ಅನುಭವ ಪ್ರಾಪ್ತವಾಗುವದು. ಅನುಭವದಲ್ಲಿಯೇ ಆನಂದವನ್ನು ಹೊಂದುತ್ತೇವೆ. ವೀರಶೈವನು ನುಡಿದಂತೆ ನಡಿಯಲೇಬೇಕು. ಅಂತೆಯೇ ಚನ್ನಬಸವಣ್ಣನವರು-

ವೀರಶೈವನಾದಡೆ ಪರಧನ ಪರಸತಿಯರ ಮುಟ್ಟದಿರಬೇಕು.

ಎಂದೂ ಪರಹಿಂಸೆಯನೆಸಗದಿರಬೇಕು.

ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು.

ಇಂತೀ ವೀರಾಚಾರವು ನೆಲೆಗೊಳ್ಳದೆ ವೀರವಂಶದಲ್ಲಿ

ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯ ಕೂಡಲ ಚನ್ನಸಂಗಯ್ಯ

“ಹಿಡಿದಾಚಾರವನ್ನು ಬಿಡದೇ ಪಾಲಿಸುವಲ್ಲಿಯೇ ವೀರಶೈವತ್ವವು ಸಿದ್ಧಿಸುವದು” ಎಂದು ನಡೆ-ನುಡಿಯ ನಿರ್ವಚನ ಮಾಡಿದ್ದಾರೆ. ಅದುಕಾರಣ ನಡೆ-ನುಡಿ ಯೊಂದಾಗಿಸುವದೇ ಭವಭಂಧನದ ಬಿಡುಗಡೆಗೆ ಕಾರಣವಾಗಿದೆ.

ಮಸ್ತಕದೊಳಗೆ ನಿನ್ನ | ಹಸ್ತವನೆ ಇಟ್ಟು ನಿಜ

 ವಸ್ತುವನು ತೆಗೆದು  –ಹಸ್ತಪೀಠದೊಳಿತ್ತ

ಸ್ವಸ್ಥ ಶ್ರೀಗುರುವೆ ಕೃಪೆಯಾಗು  II ೮೦ ||

ಸದ್ಗುರುವಿನಿಂದ ಶಿವದೀಕ್ಷೆಯನ್ನು ಪಡೆದ ಶಿವಕವಿಯು ಅದರ ಪರಿಯನ್ನು ಸುಖದ ಸೊಬಗನ್ನು ನೆನೆನೆನೆದು ಮೆಲಕುಹಾಕಹತ್ತಿದ್ದಾನೆ. ಈ ದೀಕ್ಷಾವಿಧಾನವು ಈ ಶರಣ ʼನಿರಾಭಾರಿ ವೀರಶೈವ ಸಿದ್ಧಾಂತ’ ಪ್ರಕರಣದಲ್ಲಿ ಇದಕ್ಕೂ ಸ್ಪಷ್ಟವಾಗಿ ಪ್ರತಿಪಾದಿತ   ವಾಗಿದೆ-

ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು

ದೇವ ಕರವಾಂತು ಸಾಸಿರದಳದ ಚಿತ್ ಕಳೆಯ

ಭಾವದಿಂ ಮನ, ಮನದಿ ನೇತ್ರಂಗಳಿಂ ತೆಗೆದಿಷ್ಟರೂಪುಗೊಳಿಸಿ

ತೀವಿ ತಚ್ಛಿಷ್ಯನಂಗದ ಮೇಲೆ ಧರಿಸಿ ಸಂ-

ಜೀವ ಷಣ್ಮಂತ್ರ ಲಿಂಗವಿದೆಂದು ತಿಳುಹೆ ಚಿದ್

ಭಾವ ಕಳೆಯೊಳಗಿಷ್ಟಲಿಂಗವೇ ತಾನಾದ ಲಿಂಗಭಕ್ತನೆ ಶ್ರೇಷ್ಠನು || ೪ ||

ದೀಕ್ಷಾವಿಧಾನವು ಎಂಥ ಕಲಾತ್ಮಕವೂ ಕ್ರಿಯಾ-ಜ್ಞಾನ ಪ್ರಧಾನವೂ ಹಾಗೂ ಸದ್ಗುರು ಕೃಪಾಪೂರಿತವೂ ಆಗಿದೆ ! ಇದು ಸಾಮಾನ್ಯ ಗುರುವಿನಿಂದ ಸಾಧ್ಯವಿಲ್ಲ. ಲಿಂಗದ ಶಿಲಾಭಾವ ಹೋಗದೆ ಜೀವಾತ್ಮನ ಜಡಭಾವ ಅಳಿಯದು. ಸದ್ಗುರುವು ಶಿಷ್ಯನ ಪಾವನಾತ್ಮಕ ಮಸ್ತಕದ ಪಶ್ಚಿಮ ಶಿಖಾಚಕ್ರಮಧ್ಯದ ನಿಜವಸ್ತುವಾದ ಮಹಾಚೈತನ್ಯವನ್ನು ಅವನ ಶಿರದ ಮೇಲೆ ತನ್ನ ವರದ ಹಸ್ತವನ್ನು ಇಟ್ಟು ತನ್ನ ಭಾವದಲ್ಲಿ ಭಾವಿಸುತ್ತಾನೆ. ಆ ಚೈತನ್ಯವನ್ನು ಮನದಲ್ಲಿ ಮೂರ್ತರೂಪಗೊಳಿಸುತ್ತಾನೆ. ನಂತರ ಅದನ್ನು ಶಿಷ್ಯನ ಕಂಗಳಿಂದ ತನ್ನ ಕೃಪಾಪೂರ್ಣ ಲೋಚನಮುಖಾಂತರ ಹೊರತೆಗೆದು ಇಷ್ಟಲಿಂಗವನ್ನಾಗಿ ಮಾಡಿ ಕರುಣಾಮಯ ಹೃದಯದಿಂದ ಶಿಷ್ಯನ ವಾಮಹಸ್ತದಲ್ಲಿ ಇರಿಸುತ್ತಾನೆ. ಈ ಇಷ್ಟಲಿಂಗವು ನಿನ್ನ ಚಿತ್‌ಸ್ವರೂಪು. ಇದು ಸುಜ್ಞಾನ-ಸತ್ಕೃಯೆಗಳನ್ನು ಸಮನ್ವಯ ಗೊಳಿಸುವ ಸಾಧನವೆಂದು ಆಜ್ಞಾದಿ ದೀಕ್ಷೆಗಳಿಂದ ಉಪದೇಶಿಸಿ ಬಲಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಬೋಧಿಸಿ, ಇದುವೆ ನಿನ್ನ ಪ್ರಾಣ. ಪ್ರಾಣ ಬೇರೆಯಲ್ಲ ; ಲಿಂಗ ಬೇರೆಯಲ್ಲ, ಲಿಂಗಪ್ರಾಣಿಯಾಗಿ ಬಾಳೆಂದು ಹರಸುತ್ತಾನೆ. ಶಿರದರಮನೆಯಿಂದ ಕರಕಮಲಕ್ಕೆ ಬಿಜಯಂಗೈಸಿದ ಈ ಮಹಾಲಿಂಗವು ಸಾಮಾನ್ಯವಲ್ಲ. ಇದು ಇಷ್ಟಲಿಂಗ. ಇಷ್ಟಾರ್ಥವನ್ನು ಪೂರೈಸುವಂಥಹದು.    

ಇಂಥ ಲಿಂಗದ ನೆಲೆ-ಕಲೆಗಳೇನೆಂಬ ಪ್ರಶ್ನೆಬರುವದು ಸಹಜ. “ವೀರಶೈವ ಚಿಂತಾಮಣಿ’ಯಲ್ಲಿ –

ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |

ತದೇತಲ್ಲಿಂಗಮಿತ್ಯುಕ್ತಂ ಲಿಂಗಶಬ್ದಪರಾಯಣೈ II ೧೦ II

 ಲಿಂಗಮಧೇಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ || ೧೧ |

ಯಾವ ಮಹಾವಸ್ತುವಿನಲ್ಲಿ ಸಕಲ ಚರಾಚರ ಪ್ರಾಣಿಗಳು ಲೀನವಾಗುವವೋ ಪುನಃ ಹುಟ್ಟುವವೋ; ಅದುವೆ ಲಿಂಗವೆಂಬುದಾಗಿ ಲಿಂಗತತ್ತ್ವವನ್ನು ಬಲ್ಲಜ್ಞಾನಿಗಳು ನಿರೂಪಿಸಿದ್ದಾರೆ. ಮತ್ತು ಈ ಲಿಂಗಮಧ್ಯದಲ್ಲಿ ಮೂರುಲೋಕದ ಸಕಲ ಚರಾಚರ ಜಗತ್ತು ಅಡಗಿದೆ. ಇದನ್ನು (ಲಿಂಗವನ್ನು) ಹೊರತುಪಡಿಸಿ ಬೇರೆ ಯಾವುದೂ ಇಲ್ಲ. ಎಲ್ಲವನ್ನು ಒಳಗೊಂಡ ಮಹಾಲಿಂಗವನ್ನು ಚನ್ನಾಗಿ ಪೂಜಿಸಬೇಕೆಂದು ತಿಳಿಸಿದ್ದಾರೆ. ಇದು ಬ್ರಹ್ಮಾದಿ ದೇವತೆಗಳಿಗೂ ದೊರಕಿಲ್ಲ, ಇಂಥ ಮಹಾ ಘನಲಿಂಗವನ್ನು ಗುರು ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ. ಅರುಹಿನ ಕುರುಹನ್ನಾಗಿ ಉಪದೇಶಿಸುತ್ತಾನೆ. ಚಿಚ್ಚೈತನ್ಯದ ಚುಳುಕನ್ನಾಗಿ ಅನುಗ್ರಹಿಸುತ್ತಾನೆ. ಜಗದಣ್ಣ ಬಸವಣ್ಣನವರು-

ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ

ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ

ಅಗಮ್ಯ, ಅಗೋಚರ, ಅಪ್ರತಿಮಲಿಂಗವೆ

ಕೂಡಲ ಸಂಗಮ ದೇವಯ್ಯಾ

ನೀವೆನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ

“ಜಗದ ವಿಸ್ತಾರದಲ್ಲಿ, ಆಕಾಶದ ಹರವಿನಲ್ಲಿ ವ್ಯಾಪಿಸಿದ, ಅಗಮ್ಯ, ಅಗೋಚರ, ಅಪ್ರತಿಮವಾದ ಮಹಾಲಿಂಗವು ಸದ್ಗುರು ಕೃಪೆಯಿಂದ ಎನ್ನ ಕರಸ್ಥಲಕ್ಕೆ ಚುಳುಕಾಗಿ ಬಂದಿತು.” ಎಂದು ಆನಂದದಿಂದ ಮಾರ್ಮಿಕವಾಗಿ ಇಷ್ಟಲಿಂಗದ ಹುಟ್ಟಿನ ಗುಟ್ಟನ್ನು ಪ್ರಕಟಗೊಳಿಸಿದ್ದಾರೆ. ಅದರ ಮಹತ್ವವನ್ನು ಮನದುಂಬಿ ಬಣ್ಣಿಸಿದ್ದಾರೆ.

ಬ್ರಹ್ಮಾಂಡಗತವಾದ ಮಹಾಲಿಂಗವು ಮಹಾಚೈತನ್ಯವಾಗಿದ್ದರೆ, ಪಿಂಡಾಂಡಕ್ಕೆ ಪ್ರಾಪ್ತವಾದ ಇಷ್ಟಲಿಂಗವು ಮಹಾಚೈತನ್ಯದ ಚುಳುಕು, ಇಷ್ಟಲಿಂಗವನ್ನು ಸಂಶೋಧಿಸಿದ ಮಹಾನುಭಾವರು ಮನುಷ್ಯನ ಆಕಾರಕ್ಕೇನೇ ಸಾದೃಶ್ಯಗೊಳಿಸಿದ್ದಾರೆ. ಈ ಲಿಂಗವು  ಐದು ಲಕ್ಷಣಗಳಿಂದ ಕೂಡಿರಬೇಕು. ಇವಕ್ಕೆ ಪಂಚಸೂತ್ರಗಳೆನ್ನುವರು.

ಲಿಂಗವೃತ್ತ ಸಮಂ ಪೀಠಂ ದೀರ್ಘ೦ ವಿಸ್ತಾರ ಮೇವ ಚ |

ತದರ್ಧ೦ ಗೋಮುಖಶೈವ ಇತ್ಯೇತಲ್ಲಿಂಗಪಂಚಕಮ್

ಪಂಚಸೂತ್ರಕೃತಂ ಲಿಂಗಂ ಧಾರಯೇದ್ವಿಧಿವತ್‌ ಶುಭಮ್ ||

ಲಿಂಗಕ್ಕೆ ಬಾಣ, ಪೀಠ, ವಿಸ್ತಾರ, ಎತ್ತರ ಮತ್ತು ಗೋಮುಖವೆಂದು ಪಂಚ ಲಕ್ಷಣಗಳು. ಬಾಣ (ಪೀಠದ ಮೇಲಿನ ಲಿಂಗ)ದ ಸುತ್ತಳತೆಯಷ್ಟು ಪೀಠದ ಎತ್ತರ ಮತ್ತು ವಿಸ್ತಾರವಿರಬೇಕು. ಪೀಠದಲ್ಲಿ ಅರ್ಧಬಾಣವು ಅಡಗಬೇಕು. ಗೋಮುಖವು ಸುತ್ತಳತೆಯ ಅರ್ಧವಾಗಿರಬೇಕು. ಹೀಗೆ ಪಂಚಸೂತ್ರಗಳಿಂದ ಕೂಡಿದ ಲಿಂಗವನ್ನೇ  ಸದ್ಗುರುವಿನಿಂದ ವಿಧಾನ ಪೂರ್ವಕ ಧರಿಸಬೇಕೆಂದು ʼʼವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಪ್ರತಿಪಾದಿತವಾಗಿದೆ

 ಇಂಥ ಶಾಸ್ತ್ರೀಯವಾದ  ಪಂಚಸೂತ್ರಲಿಂಗಗಳನ್ನು ಬೆಳಕಿಗೆ ತಂದ ಶ್ರೇಯಸ್ಸು  ಕಾರಣಿಕ ಪುರುಷರಾದ ಶಿವಯೋಗಮಂದಿರ ಸಂಸ್ಥಾಪಕರಾದ ಹಾನಗಲ್ಲ ಶ್ರೀಕುಮಾರ ಮಹಾ ಶಿವಯೋಗಿಗಳಿಗೆ ಸಲ್ಲದೆ ಇರದು. ಶುದ್ಧವಾದ ಕಪ್ಪು ಕಲ್ಲಿನಲ್ಲಿ ಪಂಚ ಸೂತ್ರ(ಪಂಚಲಕ್ಷಣ)ಗಳಿಂದ ಕೂಡಿದ ಲಿಂಗವನ್ನು ತಯಾರಿಸುವ ವಿಧಾನವನ್ನು ಶಿವಯೋಗ   ಮಂದಿರದಲ್ಲಿ ಕಲಿಸಿಕೊಟ್ಟರು.

 ವೀರಶೈವರ ಧಾರ್ಮಿಕ ಕಲ್ಪನೆಗಳಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ ವೈಜ್ಞಾನಿಕತೆ ತುಂಬಿ ತುಳುಕಿದೆ. ಇಲ್ಲಿ ಯಾವ ಮಾತನ್ನು ಮೂಢನಂಬಿಕೆಯಿಂದಾಗಲಿ ರಂಜನೆಯಿಂದಾಗಲಿ ಹೇಳಿಲ್ಲ. ಶಿವಪೂಜೆಗೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಲಿಂಗದ ಆಕಾರ (ಪಂಚಸೂತ್ರದ ಲಿಂಗದಂತೆ)ವಾಗಿಯೇ ಕಾಣಬರುವನು. ಆಸನಯುಕ್ತವಾಗಿ ಕುಳಿತುಕೊಂಡ ಕೆಳಭಾಗವೇ ಪೀಠವಾಗುವದು. ನೀಳವಾದ ಕಾಯ (ದಿಡ)ವು ಅಷ್ಟೇ ಪ್ರಮಾಣದಲ್ಲಿರುತ್ತದೆ. ಅದರರ್ಧಶಿರವಿರುತ್ತದೆ. ಈ ಶಿರವೇ ಲಿಂಗದ ಬಾಣವೆನಿಸುವದು. ವಾಮಕರದಲ್ಲಿ ಲಿಂಗವನ್ನು ಧರಿಸಿ ಈ ಲಿಂಗನಿರೀಕ್ಷಣೆ ಮಾಡುವ ಸನ್ನಿವೇಶವೇ ಗೋಮುಖವೆಸಿಸುವದು. ಲಿಂಗದ ಆಕಾರಕ್ಕೂ ಅಂಗದ ಆಕಾರಕ್ಕೂ ಭೇದವಿಲ್ಲದೆ ಅಂಗದಲ್ಲಿ ಲಿಂಗವನ್ನು ಲಿಂಗ ಗುಣಗಳನ್ನು ಅಳವಡಿಸಿಕೊಂಡರೆ ಲಿಂಗವೇ ತಾನಾಗುವನು.

ಪಂಚಸೂತ್ರ ಲಿಂಗಗಳು ಮಾರಲಿಕ್ಕೆ ಸಿಕ್ಕಮೇಲೆ ನಾವೇ ಕಟ್ಟಿಕೊಳ್ಳಬಹುದಲ್ಲ ವೆಂಬ ವಿಚಾರ ಬರಬಹುದು. ಹಾಗೇ (ಗುರುಸಂಸ್ಕಾರವಿಲ್ಲದೆ) ಕಟ್ಟಿಕೊಂಡ ಲಿಂಗದಲ್ಲಿ ಚೈತನ್ಯ ಬರದು. ಯಾವ ಸಂಸ್ಕಾರ ದೊರೆಯದು. ಲಿಂಗದ ಪೂರ್ವಾಶ್ರಯ (ಶಿಲಾಭಾವ)ವೂ ಹೋಗದು. ಅಂಗದ ಜಡಭಾವ (ಮಾಂಸಮಯ ಪಿಂಡದ)ವೂ ಅಳಿಯದು. ಮಂತ್ರ ಲಭ್ಯವಾಗದು. ಲಿಂಗವನ್ನು ಖರೀದಿಸಿ ತಾವೇ ಕಟ್ಟಿಕೊಳ್ಳುವ ಮೂರ್ಖರನ್ನು ಅಂಬಿಗರ ಚೌಡಯ್ಯ ಶರಣನು ಕಟುವಾಗಿ ಖಂಡಿಸಿದ್ದಾನೆ.

ಅದುಕಾರಣ ಗುರುಕರುಣೆಯಲ್ಲಿ ಆತನ ಶಿವಯೋಗ ಬಲದಿಂದ ಸಂಸ್ಕರಿಸಿದ ಲಿಂಗವೇ ಇಷ್ಟಲಿಂಗವು. ಮನಕ್ಕೆ ಶಿಕ್ಷೆಯನ್ನಿತ್ತು ಪ್ರಾಣಲಿಂಗವನ್ನು ಸ್ವಾಯತ್ತೀ ಕರಿಸುವನು. ಸಂಸಾರ ಭ್ರಾಂತಿಯಿಂದ ಬಿಡುಗಡೆ ಮಾಡಿ ಭಾವಕ್ಕೆ ಮೋಕ್ಷವನ್ನು ಕರುಣಿಸುವ ಭಾವಲಿಂಗವನ್ನು ಸನ್ನಿಹಿತಗೊಳಿಸುವನು. ಅಂದಮೇಲೆ ಇಂಥ ಪರಿಪೂರ್ಣ ಚೈತನ್ಯಮಯ ಇಷ್ಟಲಿಂಗವುಳ್ಳವನೇ ಲಿಂಗಾಯತನು. ಅಥವಾ ಲಿಂಗವಂತನು. ಲಿಂಗವಿಲ್ಲದೆ ಲಿಂಗವಂತನೆನಿಸಲಾರನು. ಯಾಕೆಂದರೆ ನಮ್ಮ “ವಚನವಲ್ಲರಿ”ಯಲ್ಲಿ ಅವಲೋಕಿಸಿ:

ಸಿರಿಯುಳ್ಳವನೆ ಸಿರಿವಂತ,

ಗುಣವುಳ್ಳವನೆ ಗುಣವಂತ;

ಲಿಂಗವುಳ್ಳವನೆ ಲಿಂಗವಂತನು ನಿಜದಿಂ,

ಲಿಂಗಗುಣಗಳನ್ನು ಆಯತ-ಸ್ವಾಯತ-ಸನ್ನಿಹಿತ

ಮಾಡಿಕೊಂಡವನೆ ಲಿಂಗಾಯತನು.

ಲಿಂಗಾಂಗ ಸಾಮರಸ್ಯದ ಸವಿಯನುಂಡವನೆ ನಿಜವೀರಶೈವನೆಂದ-

ನಮ್ಮ ಮೃಡಗಿರಿಯ ಅನ್ನದಾನೀಶ || ೨೧ ||

ಹೆತ್ತ ತಂದೆ ತಾಯಿಗಳು ಲಿಂಗವಂತರಾಗಿದ್ದರೂ ಲಿಂಗವಿಲ್ಲದ ಪುತ್ರ ಲಿಂಗಾಯತನಲ್ಲ. ಸಿರಿಸಂಪಾದಿಸಿ  ಸಿರಿವಂತನೆನಿಸುವಂತೆ ಗುಣಗಳನ್ನು ಸಂಪಾದಿಸಿ ಗುಣವಂತನಾಗುವಂತೆ ಸದ್ಗುರುವಿನ ಕೃಪೆಪಡೆದು ಲಿಂಗಾಯತನಾಗಬೇಕು. ಇದುವೆ  ಲಿಂಗವಂತಿಕೆಯ ಮೂಲವಾಗಿದೆ. ಇಷ್ಟಲಿಂಗವನ್ನು ಗುರುವಿನಿಂದ ಆಯತವಾದ (ಬರಮಾಡಿಕೊಂಡ) ಮೇಲೆ ಅದನ್ನು ಅರ್ಚನೆಗಳಿಂದ ಸ್ವಾಯತಗೊಳಿಸಿ (ತನ್ನದನ್ನಾಗಿ ಮಾಡಿಕೊಂಡು )ಸನ್ನಿಹಿತಗೊಳಿಸಿಕೊಳ್ಳಬೇಕು. (ಸಮರಸಗೊಳ್ಳಬೇಕು) ಲಿಂಗವೇ ಪ್ರಾಣ; ಪ್ರಾಣವೇ ಲಿಂಗವಾಗಿ ಭಾವಲಿಂಗದಲ್ಲಿ ಬೆರೆಯಬೇಕು. ಒಂದಾಗಬೇಕು. ಅಂದರೆ ಮಾತ್ರ ನಿಜವಾದ ವೀರಶೈವನೆನಿಸುವನು. ಲಿಂಗಭಕ್ತನಾಗುವನು. ಇಂಥವನಿಗೆ ಸಮಾನ ಸುಖಿ ವಿರಳ. ಇಂಥ ಲಿಂಗಾನಂದರಸದಲ್ಲಿ ತಲ್ಲೀನರಾದ ಮಹಾನುಭಾವರು ಮನದುಂಬಿ, ಭಾವದುಂಬಿ ಹೃದಯವನ್ನೇ ಹೊರಗೆಡವಿದ್ದಾರೆ. ಲಿಂಗತತ್ತ್ವದ ಅಗ್ಗಳಿಕೆಯನ್ನು ವೆಗ್ಗಳವಾಗಿ ಹೊಗಳಿದ್ದಾರೆ. ನಿಜಗುಣಾರ್ಯರು-

ಪರತರ ಶಿವಲಿಂಗವೆಳಸಿ ನಿನಗಾಗಿ

ಕರಕಂಜದೊಳು ಕಾಣಿಸಿತು ಯೋಗಿ ಯಜಿಸು ||

ಎಂದು ಹಾಡಿದ್ದಾರೆ. ಸರ್ಪಭೂಷಣ ಶಿವಯೋಗಿಗಳು

ಕರದೊಳಗೆ ಕಾಣಿಪುದು ಪರವಸ್ತುವಿದನರಿಯ

ದರೆಮರುಳರೊಳಗರಸಿ ತೊಳಲಿ ಬಳಲುವರು || ಪ ||

ಗೋವಿನೊಳಗಿಹ ಘೃತವು ಗೋವಿನಂಗದ ರುಜೆಯ

ಗೋವಿನಿಂ ಪೊರಮಟ್ಟು ಕೆಡಿಸುವಂತೆ ||

ಜೀವಭಾವವ ಕಳೆಯಲಾ ವಿಮಲಚಿದ್ ಬಿಂದು

ವಾವರಿಸಿ ಪೊರಗಿಷ್ಟಲಿಂಗ ತಾನಾಗಿ ||೧||

ಕಾಷ್ಠದೊಡಲಿನ ಶಿಖಿಯ ಕಾಷ್ಠದಿಂದುಜ್ವಲಿಸಿ

ಕಾಷ್ಠವನೆ ಸುಟ್ಟು ತಾ ಬೆಳಗುವಂತೆ ||

ಶ್ರೇಷ್ಠ ಚಿತ್ ಕಳೆಯೆ ಪೊರಮೊಟ್ಟು ಜಡಭಾವವನು |

ನಿಟ್ಟೊರಸಲದು ಪ್ರಾಣಲಿಂಗ ತಾನಾಗಿ || ೨ ||

ಮನೆಯ ಸೊಡರಿನ ಬೆಳಗು ಮನೆಯ ಬಾಗಿಲೊಳೈದಿ

ಮನೆಯಂಗಣದ ಮರ್ಬ ನೂಂಕುವಂತೆ ||

ತನು ತಮವ ಕಳೆಯಲ್ಕೆ ಚಿನ್ನಾದ ಮುಚ್ಚಳಿಸು-

ತನುಪಮಾದ್ವಯ ಭಾವಲಿಂಗ ತಾನಾಗಿ || ೩ ||  

ʼʼ ಹಸ್ತಕಮಲದಲ್ಲಿ ಪರವಸ್ತುವಾದ ಇಷ್ಟಲಿಂಗವು ಸದ್ಗುರು ಕೃಪೆಯಿಂದ ಪ್ರತ್ಯಕ್ಷ ತೋರುವದನ್ನು ತಿಳಿಯದೆ ಪಾಮರರೊಡನೆ ಚರ್ಚಿಸಿ ತೊಳಲಾಡಿ ಬಳಲುತ್ತಿರುವರು. ಆಕಳಿಗೆ ಬೇನೆ ಬಂದರೆ ಅದರೊಳಗಿರುವ ಹಾಲಿನಲ್ಲಿಯ ತುಪ್ಪವು  ಗುಣಪಡಿಸಲಾರದು. ಹಾಲನ್ನು ಕರೆದು ಚನ್ನಾಗಿ ಕಾಸಿ, ಹೆಪ್ಪು ಹಾಕಿ, ಮಜ್ಜಿಗೆ ಮಾಡಿ, ಬೆಣ್ಣೆತೆಗೆದು ಕಾಯಿಸಿದರೆ ತುಪ್ಪವಾಗುವದು. ಅದನ್ನು ಗೋವಿನ ನೋವಿಗೆ ಹಚ್ಚಿ ತಿಕ್ಕಿದರೆ ಅದು ವಾಸಿಯಾಗುವಂತೆ, ಗುರುವು ಜೀವಭಾವವನ್ನು ಕಳೆದು ವಿಮಲ ಚೈತನ್ಯಮಯ ಬೆಳಗನ್ನು ಇಷ್ಟಲಿಂಗದಲ್ಲಿ ನೆಲೆಗೊಳಿಸಿದರೇನೆ ಇಷ್ಟಲಿಂಗವಾಗುವದು. ಕಟ್ಟಿಗೆ ಯೊಳಗಿನ ಬೆಂಕಿಯು ಮಥನದಿಂದ ಹೊರಬಂದು ಆ ಕಟ್ಟಿಗೆಯನ್ನೆಲ್ಲ ಸುಟ್ಟು ಬೆಳಗುವಂತೆ ಜೀವಾತ್ಮನೊಳಗಿರುವ ಶ್ರೇಷ್ಠ ಚಿತ್ಕಳೆಯೇ ಗುರುಕೃಪೆಯಿಂದ ಹೊರಬಂದು ಜೀವದ ಜಡಭಾವವನ್ನು ಕಳೆಯಲು ಪ್ರಾಣಲಿಂಗವಾಗಿ ಮನೋನೇತ್ರಕ್ಕೆ ಕಾಣಿಸುವದು. ಮನೆಯೊಳಗೆ ಹಚ್ಚಿಟ್ಟ ದೀಪದ ಬೆಳಕು ಮನೆಯ ಬಾಗಿಲೊಳಗೆ ವ್ಯಾಪಿಸಿ ಮನೆಯಂಗಳದ ಕತ್ತಲೆಯನ್ನು ಕಳೆಯುವಂತೆ, ತನುವಿನಲ್ಲಿ (ಭಾವದಲ್ಲಿ )ತುಂಬಿರುವ  ತಮ (ಅಜ್ಞಾನ ಕತ್ತಲೆ) ವನ್ನು ನೀಗಿದ ಚಿನ್ನಾದವೇ ಅನುಪಮದ ಭಾವಲಿಂಗವಾಗಿ ಬೆಳಗುವದು” ಎಂದು ಇಷ್ಟ-ಪ್ರಾಣ-ಭಾವಲಿಂಗಗಳ ಸ್ವರೂಪ ವನ್ನು ಅವಶ್ಯಕತೆಯನ್ನು ತಿಳಿಪಡಿಸುತ್ತ ಸ್ತುತಿಗೈದಿದ್ದಾರೆ.

ಕೆಲವರು ತಮ್ಮಂತರಂಗದಲ್ಲಿಯೇ ಪ್ರಾಣಲಿಂಗವಿರುವದರಿಂದ ಹೊರಗಿನ ಇಷ್ಟಲಿಂಗದ ಅವಶ್ಯಕತೆಯಿಲ್ಲವೆಂದು  ವಾದಿಸುತ್ತಾರೆ. ಈ ವಾದ ಬರಿ ಶುಷ್ಕವಾದುದು. ವ್ಯರ್ಥವಾದುದು. ಊಟಮಾಡದವನಿಗೆ ತೃಪ್ತಿಯಾಗುವದೇ ಇಲ್ಲ. ಬಾಹ್ಯದಿಂದಲೇ ಅಂತರಂಗದ ಅರಿವಾಗುವದು. ಕರ್ಮಯೋಗದಲ್ಲಿ ಬದ್ಧನಾಗಿ ಗುಡಿ-ಗೋಪುರ- ಕೆರೆಗಳನ್ನು ಕಟ್ಟಿಸುತ್ತಿದ್ದ ಸಿದ್ಧರಾಮನಿಗೂ ಇಷ್ಟಲಿಂಗವಿರಲಿಲ್ಲ. ಮಲ್ಲಿಕಾರ್ಜುನನ ಕೃಪೆಪಡೆದಿದ್ದರೂ ಸ್ಥೂಲತನುವಿನ ತಮ (ಅಹಂಕಾರ) ಅಳಿದಿರಲಿಲ್ಲ. ಹಣೆಗಣ್ಣನ್ನು ಪಡೆದಿದ್ದೇನೆಂಬ ಅಹಂಕಾರ ಅತಿಯಾಯಿತು. ಲೋಕೋದ್ಧಾರಕ್ಕಾಗಿ ಸಂಚರಿಸುವ ವ್ಯೋಮಕಾಯನಾದ ಅಲ್ಲಮನ ಮೇಲೂ ಸಿದ್ಧರಾಮನ ಉರಿಗಣ್ಣು ಭುಗಿಲ್ಲೆಂದಿತು. ಆದರೆ ಸರ್ವಾತ್ಮನಾದ ಅಲ್ಲಮನ ಅಡಿಯಲ್ಲಿ ಉರಿಗಣ್ಣು ನಂದಿತು. ಸಿದ್ಧರಾಮನ ಗರ್ವ ಮುರಿಯಿತು. ನೈಜತಾತ್ತ್ವಿಕ ವಿಚಾರಗಳನ್ನು ಪ್ರಭುವಿನಿಂದ ತಿಳಿದು ಇಷ್ಟಲಿಂಗದ ಅವಶ್ಯಕತೆಯನ್ನು ಅರಿತು, ಚನ್ನಬಸವಣ್ಣನಿಂದ ಅನುಗೃಹೀತನಾದ ಸಿದ್ಧರಾಮೇಶ್ವರನ ಶೂನ್ಯ ಸಂಪಾದನೆಯ ಪ್ರಕರಣ ಅತ್ಯಂತ ಮಾರ್ಮಿಕವಾಗಿದೆ.

ಸಾಮಾನ್ಯವಾಗಿ ಗರ್ಭಸ್ಥ ಶಿಶುವಿಗೆ ತಾಯಿಯು ಜೋಗುಳವನ್ನು ಹಾಡುವದಿಲ್ಲ. ಉಪಚರಿಸಿ ಮುತ್ತಿಕ್ಕಿ ಆನಂದಪಡಲಾರಳು. ಅದರಂತೆ ಅಂತರಂಗದ ಆತ್ಮಲಿಂಗದ ಸ್ಥಿತಿಯಾದರೂ ಅರುವಿಗೆ ಬರುವದಿಲ್ಲ. ಇಷ್ಟಲಿಂಗವಿಲ್ಲದೆ ಪ್ರಾಣಲಿಂಗದ ನೆಲೆಕಲೆಗಳೂ ತಿಳಿಯುವದಿಲ್ಲ. ದೀಪವನ್ನು ಬೆಳಗಿದರೇನೇ ಕಿರಣ, ಪ್ರಕಾಶಗಳು ಹೊರಸೂಸುವಂತೆ ಸದ್ಗುರುವಿನಿಂದ ಪಡೆದ ಇಷ್ಟಲಿಂಗವೇ ದೀಪವು, ದೀಪದ ಕಿರಣವೇ ಪ್ರಾಣಲಿಂಗವು, ಪ್ರಕಾಶವೇ ಭಾವಲಿಂಗವು. ಇಷ್ಟಲಿಂಗದಿಂದಲೇ ಪ್ರಾಣಲಿಂಗ- ಭಾವಲಿಂಗಗಳು ಅಳವಡುತ್ತವೆ. ಮೂರು ಲಿಂಗಗಳನ್ನು ಧಾರಣ ಮಾಡಿಕೊಂಡಲ್ಲದೆ ಮೂರುತನುಗಳು ತುಂಬವು. ಮೂರು ಮಲಗಳು ನಾಶವಾಗಿ ಪಾವನವಾಗವು.

 ಇಂಥ ಅಗಮ್ಯ, ಅನುಪಮ, ದಿವ್ಯಲಿಂಗವನ್ನು ಪಡೆದ ಮೇಲೆ ಅನ್ಯದೇವತೆ ಗಳನ್ನು ಆರಾಧಿಸುವ ಅವಶ್ಯಕತೆಯಿಲ್ಲ. ಈ ಲಿಂಗವ ಹೊರತುಪಡಿಸಿ ಯಾವ ದೈವವೂ ಇಲ್ಲವೆಂದು ಹಿಂದೆ ಅರಿತಿದ್ದೇವೆ. ಲಿಂಗಭಕ್ತನು ಅನ್ಯದೇವತೆಗಳ ಕಲ್ಪನೆಯನ್ನೂ ಮನದಲ್ಲಿ ತರಬಾರದು. ಅನೇಕ ಶರಣರು ಅನ್ಯದೇವತಾರ್ಚನೆಯನ್ನು ನಿಷ್ಠುರವಾಗಿ ಹೇಳಿದ್ದುಂಟು. ‘ಶಿವಾನಂದಲಹರಿ”ಯಲ್ಲಿ ಶಂಕರಾಚಾರ್ಯರು-

ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾಃ |

ನಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಕೃಫಲಮ್ ||

ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ

ಚಿರಂ ಯಾಚೇ ಶಂಭೋ ಶಿವ ! ತವ ಪದಾಂಭೋಜಭಜನಮ್ || ೪ ||

ಜಗತ್ತಿನಲ್ಲಿ ಕ್ಷುದ್ರಫಲವನ್ನು ಕೊಡುವ ಸಹಸ್ರಾರು ದೇವತೆಗಳಿರಬಹುದು. ಆದರೆ ಅವುಗಳನ್ನು ಸ್ವಪ್ನಾವಸ್ಥೆಯಲ್ಲಿಯೂ ನೆನೆಯುವದಿಲ್ಲ. ಅವುಗಳ ಫಲವನ್ನು ಬಯಸುವದಿಲ್ಲ. ಹರಿಬ್ರಹ್ಮಾದಿಗಳಿಗೆ ದುರ್ಲಭವಾದ ಶಿವನಪಾದವೊಂದೇ ತನ್ನ ಮನದಲ್ಲಿ ಸ್ಥಿರವಾಗಿರಲೆಂದು ಬೇಡಿಕೊಂಡಿದ್ದಾರೆ. ಅದರಂತೆ ಇಷ್ಟಲಿಂಗ ಭಕ್ತನು ಲಿಂಗಾಚಾರವೆನಿಸುವದು. ಅನ್ಯದೇವತೆಗಳನ್ನು ಮನ್ನಿಸಬಾರದು. ಲಿಂಗಾಚಾರಿಯಾದ ಭಕ್ತನು ಅನ್ಯದೇವತೆಗಳನ್ನು ಮನ್ನಿಸಬಾರದೆಂದರೆ ಅವುಗಳನ್ನು ತಿರಸ್ಕರಿಸುವದಲ್ಲ. ತನ್ನ ಲಿಂಗದಲ್ಲಿಯೇ ಎಲ್ಲವನ್ನು ಕಂಡುಕೊಳ್ಳಬೇಕು. ಯಾವುದೇ ದೇವರನ್ನು ಕಂಡರೂ ಇಷ್ಟಲಿಂಗಕ್ಕೇನೇ ಹಣೆಯಿಡಬೇಕಲ್ಲದೆ ಅವುಗಳಿಗೆ ಮಣಿಯಬಾರದು. ಮನದಲ್ಲಿ ಶಿವಲಿಂಗವನ್ನು ಧ್ಯಾನಿಸಬೇಕು. ಇಷ್ಟಲಿಂಗಕ್ಕೆ ಮಿಗಿಲಾಗಿ ಯಾವುದನ್ನೂ ಭಾವಿಸಬಾರದು. ಇಂಥ ಲಿಂಗನಿಷ್ಠಾಪರನು ಭವಮರಣಗಳನ್ನು ಸುಲಭವಾಗಿ ಜಯಿಸಬಹುದು. ಘನತರ ವೈರಾಗ್ಯ ನಿಧಿಯಾದ ಘನಮಠದಾರ್ಯರು.

 ಗುರುಕರ ಜಾತರು ನಮ್ಮವರು

ಭವಮರಣವ ಗೆಲಿವರು ನಮ್ಮವರು |

 ಪರಮವೀರಶೈವಾಚಾರವನೀ

ಧರೆಯೊಳ್ ಮೆರೆದರು ನಮ್ಮವರು || ಪ ||

ಮಾರಿಮಸಣಿಯೆಂಬೂರ ದೈವತರ

ಗಾರುಮಾಡುವರು ನಮ್ಮವರು ||

ಎಂದು ಹೆಮ್ಮೆಯಿಂದ ದೀರ್ಘವಾಗಿ ಹಾಡಿದ ಹಾಡು ಮನನೀಯವಾಗಿದೆ. ಪ್ರತಿಯೊಬ್ಬ ವೀರಶೈವನು ಈ ಹಾಡನ್ನು ಹಾಡಲೇಬೇಕು. ಹಾಡಿನ ನಾದದಲ್ಲಿ ಬೆರೆಯಬೇಕು. ಅರ್ಥದ ಆಳದಲ್ಲಿ ಮುಳುಗಬೇಕು.

ಇಷ್ಟಲಿಂಗ ವಿಜ್ಞಾನದಲ್ಲಿ ಇನ್ನೊಂದು ಮಾತು ವಿಚಾರಣೀಯವಾಗಿದೆ. ಪಂಚಸೂತ್ರದ ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದು ತಾತ್ವಿಕವೂ ಹಾಗೂ ವೈಜ್ಞಾನಿಕವೂ ಆಗಿದೆ. ವೀರಶೈವರು ಶಿವಾದೈತಿಗಳು ಅಥವಾ ಶಕ್ತಿವಿಶಿಷ್ಟಾದೈತಿಗಳು, ಲಿಂಗದ ಪೀಠವೇ ಶಕ್ತಿ, ಬಾಣವೇ ಶಿವ. ಈ ಶಿವ-ಶಕ್ತಿಯರ ಸಮ್ಮಿಲನದಿಂದ ಕೂಡಿದ್ದೇ ಲಿಂಗ. ಜಗವೂ ಶಿವ ಶಕ್ತಿಯರ ಸಮ್ಮಿಲನದಲ್ಲಿಯೇ ಪ್ರಾದುರ್ಭವಿಸಿದೆ. ಶಿವನಿಲ್ಲದೆ ಶಕ್ತಿಯಿಲ್ಲ. ಶಕ್ತಿಯಿಲ್ಲದೆ ಶಿವನಿಗೆ ಚೈತನ್ಯವಿಲ್ಲ. ಶಿವಶಕ್ತಿಯರ ಅದ್ವೈತತತ್ತ್ವವನ್ನು (ಸಾಮರಸ್ಯವನ್ನು) ಸಾರುವ ಈ ಇಷ್ಟಲಿಂಗವು ಜಗದಾಕಾರವುಳ್ಳುದಾಗಿದೆ. ಪರಿಪೂರ್ಣವಾಗಿದೆ. ಜಗತ್ತು ಗೋಲವಾಗಿದೆಯೆಂಬ ಮಾತನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ ಮತ್ತು ಲಿಂಗಕ್ಕೆ ಕಪ್ಪು ಕಂಥೆಯನ್ನಿಡುವದೂ ಸಶಾಸ್ತ್ರೀಯವಾಗಿದೆ. ಲಿಂಗದಲ್ಲಿಯ ಪೀಠ (ಶಕ್ತಿ) ಬಾಣ (ಶಿವ)ಗಳನ್ನು ಪರಿಪೂರ್ಣಗೊಳಿಸುವ ಅಥವಾ ಒಂದಾಗಿಸುವ ಸಂಕೇತವೂ ಕಂಥೆಯಿಡುವುದಾಗಿದೆ. ಅಲ್ಲದೆ ಲಿಂಗವು ಆಯತವಾದ ಮೇಲೆ ಸ್ವಾಯತ ಸನ್ನಿಹಿತಗೊಳ್ಳಬೇಕಾದರೆ ನೋಟ-ಮಾಟ-ಕೂಟಗಳು ಅವಶ್ಯ. ಲಿಂಗದ ನೋಟ ದಿಂದಲೇ ಶಿವಯೋಗ ಸಾಧಿಸುವದು. ನೋಡುವ ಕಣ್ಣುಗುಡ್ಡೆಗಳು ಕಪ್ಪಾಗಿರುವದರಿಂದ ಲಿಂಗಕ್ಕೆ ಕಪ್ಪು ಕಂಥೆಯನ್ನು ಕೊಟ್ಟಿದ್ದಾರೆ. “ಸಮಾನಶೀಲವ್ಯಸನೇಷು ಸಖ್ಯಮ್” ಸಮಾನವಾದ ಶೀಲ ವ್ಯಸನವುಳ್ಳವರಲ್ಲಿ ಗಾಢವಾದ ಮಿತ್ರತ್ವ ಬೆಳೆಯುವಂತೆ ಕಂಥೆಯು ಕಪ್ಪು ; ಕಣ್ಣು ಗುಡ್ಡೆಯು ಕಪ್ಪು ; ಕಂಥೆಯನ್ನು ತಯಾರಿಸಲು ಉಪಯೋಗಿಸುವ ಬೂದಿಯೂ ಕಪ್ಪು, ಕೇರೆಣ್ಣೆಯೂ ಕಪ್ಪು; ಅಲ್ಲದೆ ಕಾಡಿಗೆಯೂ ಕಪ್ಪೇ ಇರುವದು. ಎಲ್ಲ ಕಪ್ಪುಗಳ ಶೀಲ ಸಮನಾಗಿದೆ.

ಕಂಥೆಯನ್ನು ಮಾಡುವಾಗ ಬೆರೆಸುವ ಕೇರೆಣ್ಣೆಯು ಅಗ್ನಿತತ್ತ್ವದ್ದಿದ್ದು ಕಣ್ಣೂ ಅಗ್ನಿತತ್ತ್ವದ್ದಾಗಿದೆ. ಕಾರಣ ಎರಡರಲ್ಲಿ ಪರಸ್ಪರ ಸಾಮ್ಯವಿದೆ. ಸ್ನೇಹವಿದೆ. ಲಿಂಗದ ಕಂಥೆಯ ಕಾಂತಿಯೊಡನೆ ಕಂಗಳ ಕಾಂತಿಯು ಬೆಳಗಿ ಅದಕ್ಕೆ ಪ್ರಕಾಶ ಪ್ರಾಪ್ತವಾಗುವದು. ಕರಿಯ ಮೋಡದಲ್ಲಿ ವಿದ್ಯುತ್‌ ಸಂಚಲನವು ವ್ಯಕ್ತವಾಗಿ ಕಾಣುವಂತೆ ಲಿಂಗ ಮತ್ತು ಕಣ್ಣಿನ ನೋಟದಲ್ಲಿ ಪ್ರಕಾಶವು ಸ್ಫುಟವಾಗಿ ತೋರುವದು. ಇದಲ್ಲದೆ ಲಿಂಗವನ್ನು ಅನಿಮಿಷದೃಷ್ಟಿಯಿಂದ ನೋಡುವವನ ಕಣ್ಣಿನ ಕಾಂತಿ ಕಳೆಯೇರುತ್ತದೆ. ಮತ್ತು  ಲಿಂಗದಮೇಲೆ ಪಾದೋದಕವನ್ನು ಎರೆದು ಸ್ವೀಕರಿಸುವದು ಆರೋಗ್ಯಕ್ಕೆ ಉತ್ತಮ ವಾಗಿದೆ. ಕೇರು ರೋಗ ನಿವಾರಕವಾಗಿದೆ. ಆದ್ದರಿಂದ ಲಿಂಗಕ್ಕೆ ಕಪ್ಪು ಕಂಥೆಯು ಅತ್ಯಂತ ಸಮೀಚೀನವಾಗಿದೆ.

ಇಂಥ ಅದ್ಭುತ ಶಕ್ತಿಯುಳ್ಳ ಇಷ್ಟಲಿಂಗವನ್ನು ಅಂಗೈಯಲ್ಲಿ ತಂದುಕೊಟ್ಟ ಗುರುವು ಸ್ವಸ್ಥನಾಗಿರುವನು. ಯಾಕಂದರೆ ತಂದೆಯು ಮಗನಿಗೆ ತನ್ನ ಎಲ್ಲ ಸಂಸಾರದ ಭಾರವನ್ನು ವಹಿಸಿಕೊಟ್ಟ ಮೇಲೆ ತಾನು ಸಖಿಯಾಗಿ, ನಿಶ್ಚಿಂತನಾಗಿರುವಂತೆ ಗುರುದೇವನು ತನ್ನ ಸನ್ನಿಧಿಯನ್ನು ಬಯಸಿಬಂದ ಶಿಷ್ಯನಿಗೆ ಮಸ್ತಕದೊಳಗಿನ ಪರವಸ್ತುವನು ಹಸ್ತದಲ್ಲಿ ತಂದಿರಿಸುವದರಿಂದ ಕೃತಕೃತ್ಯನಲ್ಲದೆ ಮತ್ತೇನು ? ಕಾರಣ ‘ಸ್ವಸ್ಥ’ ಪದಪ್ರಯೋಗವು ಔಚಿತ್ಯಪೂರ್ಣವಾಗಿದೆ. ಸಾರ್ಥಕವಾಗಿದೆ.

ಶ್ರೀಕಂಠ.ಚೌಕೀಮಠ.

ಅಧ್ಯಕ್ಷ.ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ

ನವದೆಹಲಿ

೧೭೯೯ ರಿಂದ ೧೯೫೬  ರ ಕನ್ನಡಿಗರ ಬದುಕನ್ನು ಇತಿಹಾಸದ ಪುಟಗಳಿಂದ ನೋಡುವಾಗ, ಕನ್ನಡ ಮಾತನಾಡುವವರು ಕನ್ನಡದ ನೆಲದಲ್ಲಿ ಪರಕೀಯರಾಗಿ ಬಾಳಿದ ದುರಂತ ಚರಿತ್ರೆ ಎದ್ದು ಕಾಣುತ್ತದೆ.

ಕನ್ನಡ ರಾಜ್ಯದ ವಿಸ್ತಾರವು ಕವಿರಾಜಮಾರ್ಗದಲ್ಲಿ ವಿವರಿಸಿದಂತೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ಇತ್ತು. ಈ ನೆಲವನ್ನು ಅನೇಕ ಕನ್ನಡ ರಾಜವಂಶಗಳು ಆಳಿದವು. ವಿಜಯನಗರದ ಪತನದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ರಾಜಕೀಯವಾಗಿ ಪರಭಾಷಿಗರ ಕಪಿಮುಷ್ಠಿಯಲ್ಲಿ ಬಳಲತೊಡಗಿದವು

 ಟಿಪ್ಪು ಸುಲ್ತಾನನ ಮರಣದ ನಂತರ, ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಭಾಷೆಗಳ ಇಪ್ಪತ್ತು ಆಡಳಿತ ವಿಭಾಗಗಳಲ್ಲಿ ಹಂಚಲ್ಪಟ್ಟವು. ಹೈದರಾಬಾದ್‌ನ ನಿಜಾಮರ ಆಳ್ವಿಕೆಯಲ್ಲಿ ಕನ್ನಡಿಗರು ಪರಕೀಯರಾಗಬೇಕಾಯಿತು.

ಮಾತೃಭಾಷೆಯ ಭಾಷಿಕರು “ಒಂದಾಗುವಿಕೆ”  ಮತ್ತು ಒಂದಾದವರ ರಾಜ್ಯದ ಹುಟ್ಟು  ರೋಚಕ ಹೋರಾಟದ ಫಲಶೃತಿಯಾಯಿತು

ಕನ್ನಡ ವಿದ್ವಜ್ಜನರ ಸಾತ್ವಿಕ ಹೋರಾಟದ ಜೊತೆಗೆ ಬಳ್ಳಾರಿಯ  ಶ್ರೀ ರಂಜಾನ್‌ ಸಾಬ್ ಬಲಿದಾನದ ನೆತ್ತರು ಕಲೆಗಳು ಚರಿತ್ರೆಯಲ್ಲಿ ಚಿರಸ್ಥಾಯಿಯಾಯಿತು..

ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಂಡಿದ್ದನ್ನು ಇತಿಹಾಸಕಾರರು ಮರೆತಿದ್ದು ಆಶ್ಚರ್ಯವೆನಿಸುತ್ತದೆ.

 ೧೯ ನೆಯ ಶತಮಾನದ ಆದಿಭಾಗದ ಛಿದ್ರ  ಕರ್ನಾಟಕದ ಬಹು ಸಂಖ್ಯಾತರಾದ ವೀರಶೈವ-ಲಿಂಗಾಯತರು ಮತ್ತು ಹೊರರಾಜ್ಯ ಗಳಲ್ಲಿ ಹರಿದು ಹಂಚಿಹೋಗಿದ್ದ  ವೀರಶೈವ-ಲಿಂಗಾಯತ ಧರ್ಮದ ೯೯ ಒಳಪಂಗಡಗಳನ್ನು ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ಅಖಿಲ ಭಾರತ ವೀರಶೈವ ಮಹಾಸಭಾ ದ ಮೂಲಕ ಸಂಘಟಿಸಿ ಒಗ್ಗೂಡಿಸಿದ ಕ್ರಾಂತಿ ಕರ್ನಾಟಕದ ನೆಲದಲ್ಲಿ  ಅಭೂತಪೂರ್ವ ಒಗ್ಗಟ್ಟಿನ ಪರಿಸರವನ್ನೇ ಸೃಷ್ಠಿಸಿತು.

 ವೀರಶೈವ-ಲಿಂಗಾಯತ  ಧರ್ಮಿಯರಿಗಾಗಿ  ಸೃಷ್ಠಿಸಿದ “ ಸಮಾಜ ಸಂಘಟನೆ “ಮತ್ತು “ಸಮಾಜ ಸಂಸ್ಕರಣೆ” ಪರಮ ಪೂಜ್ಯ ಲಿಂ. ಹಾನಗಲ್ಲ  ಕುಮಾರ ಶಿವಯೋಗಿಗಳವರು ನೀಡಿದ  ಅದ್ಭುತ ಕೊಡುಗೆಗಳು. “ಸಮಾಜದ ಸಂಘಟನೆ” ಗೆ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮತ್ತು “ಸಮಾಜ ಸಂಸ್ಕರಣೆ”ಗೆ ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ. ಇವುಗಳ ಹುಟ್ಟು ಮತ್ತು ಕಾರ್ಯ ಸಾಧನೆಗಳು ಕೇವಲ ವೀರಶೈವ-ಲಿಂಗಾಯತರ ಏಕೀಕರಣಕ್ಕಷ್ಠೇ ಸೀಮಿತವಾಗಲಿಲ್ಲ, ಸಮಗ್ರ ಕರ್ನಾಟಕದ ಏಕೀಕರಣಕ್ಕೆ ದಿಕ್ಸೂಚಿಯಾಯಿತು ಮತ್ತು ಸರ್ವಧರ್ಮದವರಿಗೆ ಆಸರೆಯಾದವು.

೧೯೦೪ ರಲ್ಲಿ ಸ್ಥಾಪಿಸಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ೧೯೫೬ ರ ಕರ್ನಾಟಕ ಏಕೀಕರಣದ ವರೆಗೆ ಒಟ್ಟು ೧೬ ಬೃಹತ್‌ ಸಮ್ಮೇಳನಗಳನ್ನು ಕರ್ನಾಟಕದ ವಿವಿಧ ಪ್ರಾಂತಗಳಲ್ಲಿ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಹಾಗು ತಮಿಳುನಾಡಿನ ಕುಂಭಕೋಣಂ ಗಳಲ್ಲಿ ನಡೆಯಸಿತು .ಈ ಕಾಲಘಟ್ಟದಲ್ಲಿ ಜರುಗಿದ ಸಮ್ಮೇಳನಗಳ ಅಧ್ಯಕ್ಷತೆ ,ಸ್ಥಳ ಮತ್ತು ಸಮ್ಮೇಳನದ ವರ್ಷಗಳ ವಿವರ ಈ ಕೆಳಗಿನಂತಿವೆ,

  1. ಶ್ರೀ ಸಿರಸಂಗಿ ಲಿಂಗರಾಜ ಸರದೇಸಾಯಿಯವರು  ಧಾರವಾಡ ೧೯೦೪.
  2. ಶ್ರೀ  ಸಿರಸಂಗಿ ಲಿಂಗರಾಜ ಸರದೇಸಾಯಿಯವರು ಬೆಂಗಳೂರು ೧೯೦೫
  3. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ಸೊಲ್ಲಾಪುರ ೧೯೦೭
  4. ಶ್ರೀ  ರಾಜಾ ಲಖಮಗೌಡರು ಬಾಗಲಕೋಟೆ ೧೯೦೮
  5. ಶ್ರೀ  ವಾರದ ಮಲ್ಲಪ್ಪನವರು  ಬಳ್ಳಾರಿ ೧೯೦೯
  6. ಶ್ರೀ  ಮಾಮಲೆ ದೇಸಾಯಿಯವರು ಬೆಳಗಾವಿ ೧೯೧೧
  7. ಶ್ರೀ  ಅರಟಾಳ ರುದ್ರಗೌಡರು ನಿಪ್ಪಾಣಿ ೧೯೧೨
  8. ಶ್ರೀ  ಕೆ.ಪಿ.ಪುಟ್ಟಣ್ಣಶೆಟ್ಟರು ದಾವಣಗೆರೆ ೧೯೧೭
  9. ಶ್ರೀ  ಶಾಂತವೀರಪ್ಪ ಮೆಣಸಿನಕಾಯಿಯವರು ಬೀರೂರು ೧೯೨೦
  10. ಶ್ರೀ  ಸಿದ್ಧಪ್ಪ ಕಂಬಳಿಯವರು ಬೆಂಗಳೂರು ೧೯೨೭
  11. ಶ್ರೀ  ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಧಾರವಾಡ ೧೯೩೩
  12. ಶ್ರೀ  ಸಿದ್ಧಪ್ಪ ಕಂಬಳಿಯವರು ರಾಯಚೂರು ೧೯೩೭
  13. ಶ್ರೀ  ಶಿ.ಶಿ.ಬಸವನಾಳರು ಹುಬ್ಬಳ್ಳಿ ೧೯೩೮
  14. ಶ್ರೀ  ಎಂ.ಎಸ್. ಸರದಾರರು ಕುಂಭಕೋಣಂ ೧೯೪೦
  15. ಶ್ರೀ  ಸಿ.ಸಿ.ಹುಲಕೋಟಿಯವರು ತುಮಕೂರು ౧౯౪ ౫
  16. ಶ್ರೀ ಮ.ನಿ.ಪ್ರ. ಸಂಗನಬಸವ ಶಿವಯೋಗಿಗಳು ಬಂಥನಾಳ ಬಸವಕಲ್ಯಾಣ ೧೯೫೫.

೧೯೨೭ ಬೆಂಗಳೂರಿನಲ್ಲಿ ಜರುಗಿದ ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷ  ಶ್ರೀ  ಸಿದ್ಧಪ್ಪ ಕಂಬಳಿಯವರು‌ ಕರ್ನಾಟಕ ಏಕೀಕರಣದ  ಬೆಂಬಲ ವಿಷಯದಮೇಲೆ ಮಂಡಿಸಿದ ೯ನೇ ನಿರ್ಣಯದ ಕರೆ ಸಮಸ್ತ ವೀರಶೈವ ಲಿಂಗಾಯತರಲ್ಲಿ ಸಂಚಲನವನ್ನು ಸೃಷ್ಠಿಮಾಡಿಬಿಟ್ಟಿತು. ೧೯೩೩ ರಲ್ಲಿ ಧಾರವಾಡದಲ್ಲಿ ಜರುಗಿದ ಸಮ್ಮೇಳನದಲ್ಲಿ ,ಸಮ್ಮೇಳನಾಧ್ಯಕ್ಷರಾದ ಶ್ರೀ ಫ.ಗು.ಹಳಕಟ್ಟಿಯವರು ಮಂಡಿಸಿದ  ಮೂರನೆಯ ನಿರ್ಣಯ ಕರ್ನಾಟಕ ಏಕೀಕರಣದ  ಬೆಂಬಲದ ನಿರ್ಣಯ ವಾಗಿತ್ತು. ಇದೇ ಸಮ್ಮೇಳನದಲ್ಲಿ  “ತರುಣರ ಸಮಾವೇಷದ ಸ್ವಾಗತಾಧ್ಯಕ್ಷರಾದ ಶ್ರೀ  ವ್ಹಿ.ಎಸ್.ಬಸವನಾಳ ಅವರು ಮಾತನಾಡುತ್ತ ತರುಣರಿಗೆ ಕರ್ನಾಟಕ ಏಕೀಕರಣದ ಹೋರಾಟದಲ್ಲೂ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯ ಹೋರಾಟದಲ್ಲಿಯೂ ಭಾಗಿಯಾಗಲು ಕರೆ ನೀಡಿದರು.ನಂತರ ೧೯೫೫ ರವರೆಗೆ   ಜರುಗಿದ ಎಲ್ಲ ವೀರಶೈವ ಸಮ್ಮೇಳನ ಗಳು ಕರ್ನಾಟಕ ಏಕೀಕರಣದ ಬೆಂಬಲದ ನಿರ್ಣಯಗಳನ್ನು ಮಂಡಿಸುತ್ತ ವೀರಶೈವ-ಲಿಂಗಾಯತರಲ್ಲಿ ಜಾಗೃತಿಯನ್ನುಂಟು ಮಾಡಿದವು.

ಅಖಿಲ ಭಾರತ  ಮದ್ವೀರಶೈವ ಮಹಾಸಭೆ ಮಹಾಸಮ್ಮೇಳನದಲ್ಲಿ ಮಹಿಳಾ ಪರಿಷತ್ತಿನ ಅಧ್ಯಕ್ಷರಾದ ಸೊಲ್ಲಾಪುರದ ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು ರಕ್ತದಲ್ಲಿ ಪತ್ರ ಬರೆದು ಕರ್ನಾಟಕದ ಏಕೀಕರಣದಲ್ಲಿ ಹೋರಾಡಿದವರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರು.

“ಸಮಾಜ ಸಂಸ್ಕರಣೆ”ಗೆ  ೧೯೦೯ ರಲ್ಲಿ ಸ್ಥಾಪನೆಗೊಂಡ  ಶ್ರೀ ಮದ್ವೀರಶೈವ ಶಿವಯೋಗಮಂದಿರದಿಂದ ಶಿಕ್ಷಣ ಪಡೆದ ಸಮಾಜಕ್ಕೆ ಅರ್ಪಿತರಾದ ಶಿವಯೋಗಮಂದಿರದ ಸಾಧಕರು ಅನ್ನ ಆಶ್ರಯ ಅಕ್ಷರಗಳ  ತ್ರಿವಿಧ ದಾಸೋಹಗಳ ಮೂಲಕ  ವೀರಶೈವ-ಲಿಂಗಾಯತರ ಜೊತೆಗೆ ಸರ್ವ ಧರ್ಮದವರನ್ನು  ಕರ್ನಾಟಕ ಏಕೀಕರಣಕ್ಕೆ ಸದೃಡವಾಗಿ ಸಜ್ಜುಗೊಳಿಸಿದರು.

ಶಿವಯೋಗಮಂದಿರದ ಪ್ರಪ್ರಥಮ ಸಪ್ತ ಸಾಧಕರಲ್ಲಿ ಒಬ್ಬರಾದ ಪೂಜ್ಯ ನವಲಗುಂದ ಬಸವಲಿಂಗ ಮಹಾಸ್ವಾಮಿಗಳು  ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದವರು.ಕರ್ನಾಟಕ ಏಕೀಕರಣಕ್ಕಂತೇ ಹುಟ್ಟಿಕೊಂಡ  ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷರಾಗಿ ,ಉತ್ತರಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿಯ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕರ್ನಾಟಕದ ಏಕೀಕರಣಕ್ಕೆ ಅನುಪಮ ಸೇವೆ ಸಲ್ಲಿಸಿರುವರು. ಉಳಿದೆಲ್ಲ ಸಾಧಕರು ಅತ್ಯುತ್ತಮ ವಾಗ್ಮಿಗಳಾಗಿ,ಯೋಗ ಪಟುಗಳಾಗಿ ,ಸಂಚಾರಿಗಳಾಗಿ ಊರೂರು ಸುತ್ತಿ ಧರ್ಮ ಜಾಗೃತಿ ಮಾಡುತ್ತ ಸಮಾಜದ ಬಾಂಧವರನ್ನು ಒಂದುಗೂಡಿಸಿದರು.

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮ ಶಿಷ್ಯರಾದ ಹಾಲಕೆರೆಯ ಶ್ರೀ ಮ.ನಿ.ಪ್ರ. ಅನ್ನದಾನೇಶ್ವರ ಮಹಾಸ್ವಾಮಿಗಳು (ಬೆತ್ತದ ಅಜ್ಜನವರು) ಜಕ್ಕಲಿಯ ಕರ್ನಾಟಕ ಏಕೀಕರಣದ ಪ್ರಮುಖ ಹೋರಾಟಗಾರ ಶ್ರೀ ಅಂದಾನಪ್ಪ ದೊಡ್ಡಮೇಟಿಯವರ ಹೋರಾಟಕ್ಕೆಬೆಂಬಲ ನೀಡಿ ಅವರ ಉಪವಾಸ ಸತ್ಯಾಗ್ರಹಕ್ಕೆ ಜಕ್ಕಲಿಯ ಶ್ರೀ ಅನ್ನದಾನೇಶ್ವರ ಮಠದ ಆವರಣ ನೀಡಿ ಉಳಿದ ಹೋರಾಟಗಾರರಿಗೆ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಿದ್ದು ಚರಿತ್ರಾರ್ಹವಾದುದು. ಶ್ರೀ ಅಂದಾನಪ್ಪ ದೊಡ್ಡಮೇಟಿಯವರು ಕನ್ನಡ ತಾಯಿ ಭುವನೇಶ್ವರಿಯ ತೈಲ ವರ್ಣದ ಚಿತ್ರ ಬರೆಯಿಸಿ ಪ್ರಸಿಧ್ಧಿ ಪಡಿಸಿದ ಮಹಾನುಭಾವರು

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೨ ವರ್ಷ ಸೇವೆ ಮಾಡಿದ ಬೆಳಗಾವಿಯ ನಾಗನೂರಿನ ರುದ್ರಾಕ್ಷಿಮಠದ ಪೂಜ್ಯ ಮ.ನಿ.ಪ್ರ. ಶಿವಬಸವ ಸ್ವಾಮಿಗಳು ಗಡಿನಾಡ ಬೆಳಗಾವಿಯಲ್ಲಿ ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪೂಜ್ಯ ಶಿವಬಸವ ಸ್ವಾಮಿಗಳವರು ಸೇವೆ ಅನನ್ಯವಾದುದ್ದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ನೀಡಿದರು. ಶ್ರೀಗಳು  ಕೆಲವು ಕಾಲ ಭೂಗತರಾಗಿ ಹೋರಾಟಗಳಿಗೆ ಬೆಂಬಲ ನೀಡಿದರು.

ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಕರ್ನಾಟಕದ್ದು ಎಂದು ಖಚಿತವಾಗಿ ಪ್ರತಿಪಾದಿಸಿದರು. ಅವರ ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕ ರಾಜ್ಯದಲ್ಲಿದೆ.

ಬೀದರ ಜಿಲ್ಲೆಯ ಭಾಲ್ಕಿ ಶ್ರೀ ಘ.ಚ .ಚನ್ನಬಸವ ಪಟ್ಟಾಧ್ಯಕ್ಷರು ,ರಜಕಾರ ಹಾವಳಿಯ ಸಂಧರ್ಭದಲ್ಲಿ ಹೊರಗೆ ಉರ್ದು ಬೋರ್ಡ ಹಾಕಿ ಒಳಗೆ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿ, ಪೂಜ್ಯ ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಮೂಲಕ ಜನ ರನ್ನು ವಿದ್ಯಾವಂತರನ್ನಾಗಿಸಿ ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರಿಂದ ಬೀದರ ಕರ್ನಾಟಕದಲ್ಲಿ ವಿಲೀನ ವಾಯಿತು.

ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು, ಅಂಧರಾದ  ಪಂಡಿತ ಪಂಚಾಕ್ಷರಿಗವಾಯಿಗಳಿಗೆ ದೇಶದ ಖ್ಯಾತ ಸಂಗೀತಗಾರರಿಂದ ಸಂಗೀತ ಶಿಕ್ಷಣವನ್ನು ನೀಡಿ ಅವರನ್ನು ಪ್ರಸಿದ್ಧ ಸಂಗೀತಗಾರರನ್ನಾಗಿ ರೂಪಿಸಿ ಅವರಿಂದ ಆರಂಭಿಸಿದ  ಗದುಗಿನ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮತ್ತು ಹೊರ ರಾಜ್ಯದ ದ ವಿವಿಧ ಸರ್ವಧರ್ಮದವರ ಮತ್ತು  ದಿವ್ಯಾಂಗದವರಿಗೆ ಉಚಿತ ವಸತಿ,ಪ್ರಸಾದ ಮತ್ತು ಶಿಕ್ಷಣದ ಕ್ರಾಂತಿ ಏಕೀಕರಣಕ್ಕೆ ಸಂಗೀತ ಮತ್ತು ಕಲೆಯ ಸಂಸೃತಿಯ ರಕ್ಷಣೆಯ ಮೂಲಕ  ಬಲವನ್ನು ನೀಡಿತು.

ಶ್ರೀ ಮನ್ಮಹರಾಜ ನಿರಂಜನ ಜಗದ್ಗುರು ಲಿಂ.ಗುರುಸಿದ್ಧ ರಾಜಯೋಗೀಂದ್ರ  ಮಹಾಸ್ವಾಮಿಗಳು ಉಚಿತ ಪ್ರಸಾದ ನಿಲಯಗಳು ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು. ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು 1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಹುಬ್ಬಳ್ಳಿ ಮೂರುಸಾವಿರದ ಮಠದಿಂದ ಬೆಂಬಲಿಗರಿಗೆ ಪ್ರಸಾದ ವ್ಯವಸ್ಥೆಮಾಡಿ ಹಲವು ಸತ್ಯಾಗ್ರಹಿಗಳಿಗೆ ಆಶ್ರಯ ನೀಡಿ ಸಲುಹಿದ್ದು ಪೂಜ್ಯ ಜಗದ್ಗುರುಗಳ ಮಾತೃಹೃದಯಕ್ಕೆ ಸಾಕ್ಷಿಯಾಗುತ್ತದೆ.

ಶಿವಯೋಗಮಂದಿರ ದಿಂದ ಮೊದಲ ಸಾಧಕರಾದ ಬಾಗಲಕೋಟೆಯ ಶ್ರೀ ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು  ಚರಂತಿಮಠ ಮಠದ ಆಸ್ತಿಗಳನ್ನು ಬಾಗಲಕೋಟೆಯ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಗೆ ದಾನವಾಗಿ ದಯಪಾಲಿಸಿ ಆ ಭಾಗದ ಶಿಕ಼್ಣಣ ಕ್ರಾಂತಿಗೆ  ಅಮೂಲ್ಯ ಕಾಣಿಕೆಯನ್ನು ಕೊಟ್ಟರು.

 ಚಿಕ್ಕಮಗಳೂರ ಜಿಲ್ಲೆಯ ಕಡೂರು ತಾಲೂಕಿನ ಕಂಚುಕಲ್ಲ ಬಿದರೆಯ ದೊಡ್ಡಮಠದ ಶ್ರೀ ಪ್ರಭುಕುಮಾರ  ಪಟ್ಟಾಧ್ಯಕ್ಷರು ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರಿಂದ ಯೋಗ ಶಿಕ್ಷಣ ಪಡೆದು  ಮಹಾರಾಷ್ಟ್ರದ ನಾಸಿಕದ ಕುಂಭಮೇಳದಲ್ಲಿ ಯೋಗರಾಜ ಎಂದು ಬಿರುದು ಪಡೆದುಯೋಗದ ಮೂಲಕ ಶಿವಯೋಗಮಂದಿರಕ್ಕೆ ಮೆರಗು ತಂದರು.

ವೀರಶೈವ-ಲಿಂಗಾಯತ ಧರ್ಮದ ವೈದಿಕ ಆಚರಣೆಗಳ ರಕ಼್ಣೆಗೆ ಆರಂಭಿಸಿದ ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆ ಹಾವೇರಿ , ಸಾವಿರಾರು ವಿದ್ಯಾರ್ಥಿಗಳನ್ನು ತನ್ನೆಡಗೆ ಆಕರ್ಷಿಸಿತು ಅದರ ಸಂಸ್ಥಾಪಕರಾದ ಶ್ರೀ ಸಿಂದಗಿಯ ಶ್ರೀ ಘ.ಚ ಶಾಂತವೀರ ಶಿವಾಚಾರ್ಯರು ಯೋಗ ಮತ್ತು ಆಯುರ್ವೇದದಲ್ಲಿ ಪಾರಂಗತರಾಗಿ ಪ್ರಾಥಸ್ಮರಣೀಯರಾಗಿರುವರು

ಶ್ರೀ ಮ.ನಿ.ಪ್ರ ಮಹಾಂತ ಸ್ವಾಮಿಗಳು ಚಿತ್ತರಗಿ -ಇಲಕಲ್ಲ  ಶಿವಯೋಗಮಂದಿರದಲ್ಲಿ ತರಬೇತಿ ಪಡೆದು ಅದ್ವೀತಿಯ ಪ್ರವಚನಕಾರರಾಗಿ ಪ್ರಸಿದ್ಧಿ ಹೊಂದಿ  ಗಡಿ ಪ್ರದೇಶವಾದ ಮಹಾರಾಷ್ಟ್ರದ ಗಡಹಿಂಗ್ಲಜ ಪ್ರಾಂತದಲ್ಲಿ  ದ್ಯಾವಾಪೂರದ ಬಸವಲಿಂಗ ಶಾಸ್ತ್ರಿಗಳವರೊಡನೆ ಸಂಚರಿಸಿ ಧರ್ಮ ಪ್ರಚಾರ ಮಾಡಿದ್ದು ಮಹತ್ವಪೂರ್ಣ ಬೆಳವಣಿಗೆಯಾಯಿತು.ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದಿಗೂ ಪ್ರಸಿದ್ಧಿಯಾಗಿವೆ.

ಶಿವಯೋಗಮಂದಿರದ ಕೈಬರಹದ “ಸುಕುಮಾರ “ಪತ್ರಿಕೆಯ ಬರಹಗಾರರಾಗಿ ಸಾಹಿತ್ಯ ಕೃಷಿ ಆರಂಭಿಸಿದ ಶ್ರೀ ಜ.ಚ.ನಿ ಯವರು ೬೦೦ ಕ್ಕೂ ಹೆಚ್ಚು ಕೃತಿಗಳನ್ನು ಬರೆದು “ಶಬ್ಧ ಬ್ರಹ್ಮ” ಎಂಬ ಸನ್ಮಾನಕ್ಕೆ ಭಾಜನರಾಗಿ ಜನಜಾಗೃತಿಯನ್ನುಂಟುಮಾಡಿದರು

ಇವರೆಲ್ಲ ಯತಿಗಳ ಜೊತೆಗೆ ಹಲವಾರು ಯತಿಗಳು  ಪ್ರವಚನ-ವ್ಯಾಖ್ಯಾನ ಗಳಿಂದ  ನಾಡಿನ ತುಂಬೆಲ್ಲ ಸಂಚರಿಸಿ ಧರ್ಮ ಜಾಗೃತಿಯನ್ನು ಮಾಡಿ ಉಚಿತ ವಿದ್ಯಾರ್ಥಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರಲ್ಲಿ ಪ್ರಮುಖರು,

  1. ಸಂಪಗಾವಿ  ಶ್ರೀ ನೀಲಕಂಠ ಶಿವಾಚಾರ್ಯ ಚರಮೂರ್ತಿಗಳು ಯರಗಂಬಳಿಮಠ
  2. ಹಾನಗಲ್ಲ ಶ್ರೀ ಮ.ನಿ.ಪ್ರ. ಮಹೇಶ್ವರ ಸ್ವಾಮಿಗಳು
  3. ಜಡೆಯ  ಶ್ರೀ ಮ.ನಿ.ಪ್ರ. ಸಿದ್ಧಬಸವ ಸ್ವಾಮಿಗಳು ಸೊರಬ ಶಿವಮೊಗ್ಗ.
  4. ಕಲ್ಯಾಣದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು ಪ್ರಭುಸ್ವಾಮಿಮಠ
  5. ಕಲಬುರ್ಗಿಯ ಶ್ರೀ.ಮ.ನಿ.ಪ್ರ. ಶಿವಮೂರ್ತಿ ಸ್ವಾಮಿಗಳು ಗದ್ದುಗೆಮಠ
  6. ಬನವಾಸಿಯ ಶ್ರೀ ಮ.ನಿ.ಪ್ರ. ಸಿದ್ದವೀರ ಸ್ವಾಮಿಗಳು ಶಿರ್ಸಿ ಉತ್ತರಕನ್ನಡ.
  7. ಕಲಬುರ್ಗಿಯ ಶ್ರೀ .ಘ.ಚ.ಕೆಂಚಬಸವ ಪಟ್ಟಾಧ್ಯಕ್ಷರು ರೋಜಾ ಹಿರೇಮಠ.
  8. ಚಿತ್ತಾಪೂರದ ಶ್ರೀ ಘ.ಚ.ಚಂದ್ರಶೇಖರ ಪಟ್ಟಾಧ್ಯಕ್ಷರು ಹಿರಿಯಮಠ
  9. ಕುಷ್ಠಗಿಯ ಶ್ರೀ ಘ.ಚ. ಪಟ್ಟದ ಕರಿಬಸವ ಶಿವಾಚಾರ್ಯರು ಹಿರಿಯಮಠ.
  10. ಸಖಿರಾಯಪಟ್ಟಣದ ಶ್ರೀ ಘ.ಚ, ಸದಾಶಿವ ಪಟ್ಟಾಧ್ಯಕ್ಷರು ಹಾಲುಸ್ವಾಮಿಮಠ.
  11. ಕಪನಿಹಳ್ಳಿಯ ಶ್ರೀ.ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು  ಶಿಕಾರಿಪುರ ಶಿವಮೊಗ್ಗೆ
  12. ಅನಂತಪುರದ ಶ್ರೀ.ಮ.ನಿ.ಪ್ರ. ಜಗದ್ಗುರು ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು ಆನಂದಪುರ ಶಿವಮೊಗ್ಗ
  13. ಹಾನಗಲ್ಲ ಶ್ರೀ ಮ.ನಿ.ಪ್ರ.ಸದಾಶಿವ ಸ್ವಾಮಿಗಳು ವಿರಕ್ತಮಠ.
  14. ಉಸ್ಮಾನಾಬಾದ ಮೊರಬ ದ ಶ್ರೀ ಘ.ಚ. ಶಂಭುಲಿಂಗ ಪಟ್ಟಾಧ್ಯಕ್ಷರು
  15. ಖೇಳಗಿ (ಹುಮ್ನಾಬಾದ) ಶ್ರೀ.ಮ.ನಿ.ಪ್ರ. ಆದಿನಾಥ(ಶಿವಲಿಂಗ) ಸ್ವಾಮಿಗಳು ವಿರಕ್ತಮಠ
  16. ನಿಡಗುಂದಿಕೊಪ್ಪದ ಶ್ರೀ ಮ.ನಿ.ಪ್ರ. ಚನ್ನಬಸವಸ್ವಾಮಿಗಳು ಶಾಖಾ ಶಿವಯೋಗಮಂದಿರ
  17. ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು (೧೯೨೬) ಮುಂಡರಗಿ ಸಂಸ್ಥಾನಮಠ.
  18. ಅಂಕಲಗಿಯ ಶ್ರೀ ಮ.ನಿ.ಪ್ರ. ಸಿದ್ಧರಾಮ ಸ್ವಾಮಿಗಳು ಅಡವೀಸ್ವಾಮಿ ಮಠ.
  19. ತೆಲಸಂಗದ ಶ್ರೀ.ಘ.ಚ.ಬಸವಲಿಂಗ ಪಟ್ಟಾಧ್ಯಕ್ಷರು ಹಿರಿಯಮಠ
  20. ಚಿಕ್ಕಮಗಳೂರು ಜಿಲ್ಲೆಯ ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ.ಚ.ಸಿದ್ಧಲಿಂಗ ಶಿವಾಚಾರ್ಯ ಗಿರಿಯಾಪುರಹಾರ್ನಹಳ್ಳಿಯ ಶ್ರೀ.ಮ.ನಿ.ಪ್ರ. ನೀಲಲೋಚನ ಸ್ವಾಮಿಗಳು ಕೋಡಿಮಠ.
  21. ಹುಬ್ಬಳ್ಳಿ ಹೊಸಮಠದ ಶ್ರೀ.ಮ.ನಿಪ್ರ. ಶಿವಬಸವ ಸ್ವಾಮಿಗಳು .
  22. ಆದವಾನಿ ಮತ್ತು ರಾವೂರು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು.
  23. ಸಾಲೂರು ಶ್ರೀ.ಘ.ಚ.ಚನ್ನವೀರ ಶಿವಾಚಾರ್ಯರು.
  24. ಬಾರಂಗಿ ಕೂಡ್ಲಿಯ ಶ್ರೀ ಮ.ನಿ.ಪ್ರ. ಸದಾನಂದ ಸ್ವಾಮಿಗಳು ಪುರದಮಠ ಸಿದ್ದಾಪೂರ ಕಾರವಾರ
  25. ನೀರಡಗುಂಭದ ಶ್ರೀ.ಮ.ನಿ.ಪ್ರ.ಸಿದ್ಧಲಿಂಗ ಸ್ವಾಮಿಗಳು ಪಶ್ಚಿಮಾದ್ರಿ ಸಂಸ್ಥಾನಮಠ
  26. ಕಡಕೋಳ ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು ಚೌಕೀಮಠ.
  27. ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಪ್ರಭು ಸ್ವಾಮಿಗಳು ಬೂದಿಸ್ವಾಮಿಮಠ ಸಂಸ್ಥಾನಮಠ.
  28. ಹಾವೇರಿಯ ಶ್ರೀ.ಮ.ನಿ.ಪ್ರ.ಶಿವಲಿಂಗ ಸ್ವಾಮಿಗಳು ಹುಕ್ಕೇರಿಮಠ

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ  ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಏಕೀಕರಣಕ್ಕೆ  ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರ ಕೊಡುಗೆಗಳನ್ನು ಇತಿಹಾಸಕಾರರು ಮರೆತಿರಬಹುದು ಆದರೆ

ವಾರ್ತಾ ಭಾರತಿ ೨೦೧೭ ರ ಪತ್ರಿಕೆಯಲ್ಲಿ  “Unification Of Karnatak”  ಎಂಬ ತಲೆಬರಹದ ಅಡಿಯಲ್ಲಿ ಶ್ರೀ ಬಿ.ಎಮ್‌ ಚಂದ್ರಶೇಖರ್‌ ಅವರು ಈ ಕೆಳಗಿನಂತೆ ದಾಖಲಿಸಿರುವರು

……………………

Cultural Renaissance

The impact of the British rule was the cultural awakening in the different regions of India. Karnataka, like other states of India, witnessed the cultural Renaissance. European scholars particularly missionaries as well as Kannada stalwarts promoted the Kannada Renaissance. Kannada newspapers also accelerated the cultural awakening. One may recall the services of those now no more with us, Prof. B. M. Sreekantaiah, Sri Hanagal Kumaraswamy, Hardekar Manjappa, Aluru Venkata Rao and many other literary and social leaders who worked with devotion and zeal for the cause of Kannada. Men of letters thus provided the necessary emotional and philosophical background of the agitation for the ‘Karnataka Ekikarana’, which was taken up and was organized by politicians like S. Nijalingappa and Kengal. Hanumantaiah and many others………….”

ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಭಾರತೀಯ ಸಂಸ್ಕೃತಿ ‘ಸಮನ್ವಯ ಸಂಸ್ಕೃತಿ’ ಎಂಬ ಖ್ಯಾತಿಯನ್ನು ಪಡೆದಿದೆ. ಧರ್ಮ, ದರ್ಶನ, ಕಲೆ, ಸಾಹಿತ್ಯಗಳಲ್ಲಿ ಸಮನ್ವಯ ಸಾಧಿಸಿದಂತೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿಯೂ ಸಮನ್ವಯ ಸಾಧಿಸಿದೆ.  ಅನೇಕತೆಯಲ್ಲಿ ಏಕತೆ’ (Unity in Diversity) ಈ ಸಂಸ್ಕೃತಿಯ ಜೀವಜೀವಾಳ, ಧರ್ಮ, ಅರ್ಥ, ಕಾಮ, ಮೋಕ್ಷಗಳು ಪ್ರತ್ಯೇಕ ಅರ್ಥವ್ಯಾಪ್ತಿಯನ್ನು ಹೊಂದಿದ್ದರೂ ಪ್ರತಿಯೊಬ್ಬ ಮನುಷ್ಯನು ಸಾಧಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಇವುಗಳನ್ನು ಸೂತ್ರಬದ್ಧಗೊಳಿಸಿ ‘ಪುರುಷಾರ್ಥ ಚತುಷ್ಪಯ’ ಎಂದು ಹೆಸರಿಸಲಾಗಿದೆ. ಧರ್ಮ, ಅರ್ಥ, ಕಾಮ ಇವು ಇಹಲೋಕಕ್ಕೂ, ಮೋಕ್ಷವು ಪರಲೋಕಕ್ಕೂ ಸಂಬಂಧಿಸಿವೆ. ಆದರ್ಶಜೀವನ ದೃಷ್ಟಿಯಿಂದ ಇವುಗಳಲ್ಲಿ ಮೋಕ್ಷಕ್ಕೆ ಪ್ರಮುಖ ಸ್ಥಾನವಿದ್ದರೂ ವ್ಯಕ್ತಿಯ ಜೀವನದಲ್ಲಿ ಉಳಿದವುಗಳಿಗೂ ವಿಶೇಷ ಸ್ಥಾನವಿದೆ.

‘ಯತೋಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ’ ಧರ್ಮವು ವ್ಯಕ್ತಿಯ ಇಹಪರಗಳ ಅಭ್ಯುದಯಕ್ಕೆ ಮತ್ತು ನಿಶ್ರೇಯಸ ಸಿದ್ಧಿ (ಮೋಕ್ಷ)ಗೆ ಕಾರಣವಾಗಿರುವುದರಿಂದ ಪುರುಷಾರ್ಥಗಳಲ್ಲಿ ಅದಕ್ಕೆ ಆದ್ಯ ಸ್ಥಾನ. ಧರ್ಮ ಭಾರತೀಯ ಸಂಸ್ಕೃತಿಯ ಪ್ರಾಣ. ಅದರ ಅರ್ಥವೂ ಅತ್ಯಂತ ವ್ಯಾಪಕವಾದುದು. ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು, ತನ್ನಂತೆ ಪರರ ಬಗೆವುದು ಹೀಗೆ ವಿವಿಧ ರೂಪದಲ್ಲಿ ಧರ್ಮವು ಹೊರಹೊಮ್ಮುತ್ತದೆ. ಅಧ್ಯಾತ್ಮವೇ ಅದರ ತಿರುಳು. ಅರ್ಥ, ಕಾಮಗಳಿಗೂ ಧರ್ಮವೇ ಆಧಾರ. ಧರ್ಮಾಧಾರಿತ ಅರ್ಥ, ಕಾಮಗಳೇ ಜೀವನದ ಆ ಪರಮ ಗುರಿಯಾದ ಮೋಕ್ಷಕ್ಕೆ ಸಹಕಾರಿಯಾಗಿವೆ.

ಅರ್ಥ ಸಾಧನೆಯೂ ಧರ್ಮಮಾರ್ಗದಿಂದಲೇ ನಡೆಯಬೇಕು. ಅಧರ್ಮದಿಂದ ಅರ್ಜಿತವಾದ ಅರ್ಥ(ಹಣ)ವು ನಮ್ಮ ಹೃದಯ ಮತ್ತು ಆತ್ಮಗಳೆರಡನ್ನೂ ಕಲುಷಿತಗೊಳಿಸುತ್ತದೆ. ಜೀವನದ ಗುರಿ ಆತ್ಯಂತಿಕ ದುಃಖ ನಿವೃತ್ತಿಗೆ ಕಾರಣವಾದ ಮೋಕ್ಷವಾಗಿರುವುದರಿಂದ ಅಧರ್ಮದಿಂದ ಸಂಪಾದಿತವಾದ ಹಣವು ಮೋಕ್ಷ ಸಂಪಾದನೆಯಲ್ಲಿ ಅನೇಕ ಅಡೆತಡೆಗಳನ್ನುಂಟು ಮಾಡುವುದು.ಆದ್ದರಿಂದ ಧರ್ಮದ ಮೂಲಕ ಅರ್ಥ(ಹಣ)ದ ಸಂಪಾದನೆ ಮಾಡಬೇಕಾದುದು ಅನಿವಾರ್ಯ.

ಕಾಮವೆಂದರೆ ಕ್ಷಣಿಕವಾದ ವಿಷಯವಾಸನೆಯಲ್ಲ. ಲೋಕಹಿತವನ್ನೊಳಗೊಂಡ ಉದಾತ್ತ ಬಯಕೆ ಅದು. ಧರ್ಮಾಧಾರಿತ ಕಾಮವೂ ಪುರುಷಾರ್ಥ ಚತುಷ್ಪಯಗಳಲ್ಲಿ ಧರ್ಮದಷ್ಟೇ ಮಹತ್ವಪೂರ್ಣವಾದುದು. ‘ಧರ್ಮಾsವಿರುದ್ಧೋ ಭೂತೇಷು ಕಾಮೋsಸ್ಮಿ  ಭರತರ್ಷಭ’ (ಭಗವದ್ಗೀತೆ) ಶ್ರೀಕೃಷ್ಣನು “ಅರ್ಜುನ! ಧರ್ಮ ವಿರುದ್ಧವಲ್ಲದ ಕಾಮವೂ ನನ್ನ ಸ್ವರೂಪವಾಗಿದೆ’ ಎಂದು ಹೇಳುವ ಮೂಲಕ ಹಿತ, ಮಿತ, ಧರ್ಮಸಮ್ಮತವಾದ ಕಾಮಕ್ಕೆ ದೈವತ್ವದ ಮೆರುಗು ನೀಡಿರುವುದು ಅದರ ಮಹತ್ವಕ್ಕೆ ಹಿಡಿದ ಕನ್ನಡಿ.-

ಮೋಕ್ಷ ಸಂಪಾದನೆ ಮನುಷ್ಯನ ಪರಮಗುರಿ. ಅದನ್ನು ಪಡೆಯಲು ಮಾನವತ್ವದಿಂದ ಮೇಲೇಳಬೇಕಾಗುವುದು. ಮೋಕ್ಷಸ್ಥಿತಿಯಲ್ಲಿ ಪರಮ ಸುಖದ ಅನುಭವವುಂಟಾಗುತ್ತದೆ. ಭವಬಂಧನದಿಂದ ಬಿಡುಗಡೆಯಾಗುತ್ತದೆ.

ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಧರ್ಮ ಮತ್ತು ಮೋಕ್ಷಗಳನ್ನು ತಿರಸ್ಕರಿಸಿ, ಕೇವಲ ಅರ್ಥ ಮತ್ತು ಕಾಮಗಳಿಗೆ ಪ್ರಾಶಸ್ತ್ಯ ನೀಡಿರುವುದರಿಂದ ಸಮಾಜದಲ್ಲಿ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆಯಂತಹ ಮೌಲ್ಯಗಳು ನೆಲಕಚ್ಚುತ್ತಿವೆ. ಮಾನವ ಬದುಕು ದುರ್ಭರವಾಗಿದೆ. ಕಾರಣ ಧರ್ಮ ಮಾರ್ಗದಿಂದ ಅರ್ಥೋಪಾರ್ಜನ ಹಾಗು ಕಾಮೋಪಭೋಗಗಳನ್ನು ಪೂರೈಸುತ್ತ ಮೋಕ್ಷ ಸಂಪಾದನೆ ಮಾಡುವುದೇ ವಿಹಿತ. ಆಗಲೇ ಪರಮಸುಖದ ಪ್ರಾಪ್ತಿ.

ಡಾ. ವಿ. ಜಿ. ಪೂಜಾರ

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಹಾಗೂ ಅವರ ಧೈಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರು ನಡೆದ ಮಾರ್ಗದಲ್ಲೇ ನಡೆದ ಒಬ್ಬ ಶ್ರೇಷ್ಠ ವಚನಕಾರರು: ವೀರಶೈವ ಧರ್ಮದ ಇತಿಹಾಸದಲ್ಲಿಯೂ ವಚನ ಸಾಹಿತ್ಯದ ಇತಿಹಾಸದಲ್ಲಿಯೂ ವಿಶಿಷ್ಟ ಸ್ಥಾನವನ್ನು ಪಡೆದವರು. ಎರಡನೇ ಅಲ್ಲಮ  ಪ್ರಭುಗಳೆಂದೇ ಪ್ರಖ್ಯಾತರಾದ ಇವರು ವಚನ ಸಾಹಿತ್ಯದ ದ್ವಿತೀಯ ಘಟ್ಟಕ್ಕೆ ಇವರೇ ಆದ್ಯರು. ಹನ್ನೆರಡನೇ ಶತಮಾನದ ತರುವಾಯ ೧೩-೧೪ ನೇ ಶತಮಾನಗಳಲ್ಲಿ ಮುಸ್ಲಿಂರ ದಾಳಿಯಿಂದಾಗಿ ಕನ್ನಡ ಸಾಹಿತ್ಯಕ್ಕೆ ಕತ್ತಲೆ ಕವಿಯಿತು. ವಚನ ಸಾಹಿತ್ಯವೂ ಇದಕ್ಕೆ ಹೊರತಲ್ಲ. ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾದಾಗ ಬಸವಾದಿ ಶರಣರೆಲ್ಲ ಉಳವಿಯತ್ತ ಹೋದರು. ವಚನ ಸಾಹಿತ್ಯದ ಸೃಷ್ಟಿ ಇದರಿಂದಾಗಿ  ಸ್ಥಗಿತಗೊಂಡಿತು. ಮುಂದೆ ಹದಿನೈದನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲಕ್ಕೆ ವೀರಶೈವ ಕಾವ್ಯ- ಪುರಾಣಗಳ ಸೃಷ್ಟಿ, ವಚನಗಳ ಸಂಕಲನ, ಸಂಪಾದನ ಹಾಗೂ ಅವುಗಳಿಗೆ ಟೀಕೆ- ವ್ಯಾಖ್ಯಾನ ಬರೆಯುವ ಕಾರ್ಯ ನಡೆಯಿತು. ನೂರೊಂದು ವಿರಕ್ತರು ಆಗ ವೀರಶೈವ ಸಾಹಿತ್ಯ ಸೃಷ್ಟಿಗೆ ಬಹುವಾಗಿ ಶ್ರಮಿಸಿದರು. ಇದಕ್ಕೆ ವಿಜಯನಗರದ ಅರಸನಾದ ಪ್ರೌಢದೇವರಾಯನು ಸಾಕಷ್ಟು ಪ್ರೋತ್ಸಾಹ ನೀಡಿದನು. ಲಕ್ಕಣ್ಣ ದಂಡೆಶ ಚಾಮರಸರಂಥಹ ಉದ್ದಾಮ ಕವಿಗಳು ಉತ್ಕೃಷ್ಟವಾದ ಕಾವ್ಯಗಳನ್ನು ಬರೆದರು. ಇವರ ತರುವಾಯ ಬಂದ ತೋಂಟದ ಸಿದ್ದಲಿಂಗರು ವಚನಗಳನ್ನು ರಚಿಸುವುದರ ಮೂಲಕ ಬತ್ತಿಹೋಗಲಿರುವ ವಚನಗಂಗೆಯನ್ನು ಪುನಃ ಪ್ರವಹಿಸುವಂತೆ  ಮಾಡಿದರು. ವಚನ ಸಾಹಿತ್ಯದ ಪುನಃಸೃಷ್ಟಿಗೆ ಕಾರಣರಾದರು. ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ವಚನ ರಚಿಸಿ ಜನಜಾಗೃತಿ ಮಾಡಿದಂತೆ ಇವರು ತಮ್ಮ ಹಲವಾರು ಶಿಷ್ಯರೊಡಗೂಡಿ ವಚನ ರಚಿಸುತ್ತ, ದಾಸೋಹ ಸಂಸ್ಕೃತಿಯ ಮೂಲಕ ಜನಸೇವೆ ಮಾಡಿದರು.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮೈಸೂರ ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿರುವ ಹರದನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಈ ಶಿವಭಕ್ತ ದಂಪತಿಗಳಿಗೆ ಬಹುದಿನ ಮಕ್ಕಳಾಗಲೇ ಇಲ್ಲ. ಈ ಕೊರಗನ್ನು ಆ ಊರಿನ ಮಠಾಧಿಪತಿಗಳಾದ ಗೋಸಲ ಚೆನ್ನಬಸವೇಶ್ವರರ ಬಳಿ ನಿವೇದಿಸಿಕೊಂಡರು. ಗುರುಗಳು ಕರುಣೆಯಿಂದ ಇವರಿಗೆ ಆಶೀರ್ವಾದ ಮಾಡಿ, ಶಿವಪೂಜೆಯಲ್ಲಿ ನಿರತರಾಗುವಂತೆ ಸೂಚಿಸಿದರು. ದಂಪತಿಗಳು ಇಂತಿರಲು ಅವರಿಗೆ ಸಿದ್ದಲಿಂಗರು ಜನಿಸಿದರು. ‘ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು” ಎಂಬಂತೆ ಶಿಶುವಿನ ಮೊಗದಲ್ಲಿ ಶಿವತೇಜಸ್ಸು ಹೊಳೆಯುತ್ತಿತ್ತು. ಕೆಲ ಕಾಲ ಆತ ಶಾಲೆಗೆ ಹೋದ. ಆತ ಉಳಿದ ಮಕ್ಕಳಂತೆ ಇರದೆ ವಿಶಿಷ್ಟ  ರೀತಿಯಲ್ಲಿರುವುದನ್ನು ಗುರುಗಳು ಗುರುತಿಸಿದರು. ಮುಂದೆ ಆತ ಓದಿನಲ್ಲಿ ಅಷ್ಟಾಗಿ ಆಸಕ್ತಿಯನ್ನು ತೋರಲಿಲ್ಲ. ಆತನ ಮನಸ್ಸು ಆಧ್ಯಾತ್ಮದತ್ತ ಹೊರಳಿತು. ಇದನ್ನರಿತ ಆತನ ತಂದೆ-ತಾಯಿಗಳು ಆತನನ್ನು ಶಾಲೆ ಬಿಡಿಸಿ, ಗುರು  ಚೆನ್ನಬಸವೇಶ್ವರರ ಬಳಿಗೆ ಕಳುಹಿಸಿದರು. ಅವರು ಆತನಲ್ಲಿರುವ ಅಧ್ಯಾತ್ಮದ ಹಸಿವನ್ನು ಅರಿತರು. ಆತನನ್ನು ಪ್ರೀತಿಯಿಂದ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಸಿದ್ಧಲಿಂಗರು ಅಲ್ಲಿ ಗುರುವಿನ ಸೇವೆಯಲ್ಲಿ ನಿರತರಾದರು. ಹೂ ಪತ್ರಿ ತಂದು ನಿತ್ಯ ಗುರುವಿನ ಲಿಂಗಪೂಜೆಗೆ ಅಣಿ ಮಾಡಿಕೊಡುತ್ತಿದ್ದ ಸಿದ್ಧಲಿಂಗರಿಗೆ ಒಂದು ದಿನ ಗುರುಗಳು ತಮ್ಮ ಚರ ಪಟ್ಟಾಧಿಕಾರವನ್ನು ವಹಿಸಿಕೋ ಎನ್ನುವರು. ಇವರು ಅದನ್ನೊಪ್ಪಿಕೊಳ್ಳದೆ, ತಾನಿನ್ನೂ ಶಿವಯೋಗ ಸಾಧನೆಯನ್ನು ಮಾಡಬೇಕಾಗಿದೆ. ಪರಮಾತ್ಮನನ್ನು ಕಾಣಬೇಕಾಗಿದೆ. ಇದಕ್ಕಾಗಿ ನಾನು ಲೋಕ ಸಂಚಾರವನ್ನು ಕೈಗೊಳ್ಳುವೆನು. ಆದ್ದರಿಂದ ಈ ಪಟ್ಟಾಧಿಕಾರ ತಮಗೇ ಇರಲೆಂದರು. ಇವರ ಅಧ್ಯಾತ್ಮ ಶಕ್ತಿಗೆ ಮಾರುಹೋಗಿ, ಅನೇಕರು ಇವರ ಶಿಷ್ಯರಾಗಿ, ಇವರೊಡನೆ ಲೋಕ ಸಂಚಾರಕ್ಕೆ ಹೊರಟರು. ಸಿದ್ದಲಿಂಗರು ಗುರುಗಳಿಗೆ ,ತಾಯಿ, ತಂದೆಗಳಿಗೆ ವಂದಿಸಿ ಹೊರಡುವರು. “ಭಕ್ತನು ಭಕ್ತನ ಕಾಂಬುದು ಸದಾಚಾರ” ಎಂದು ಸಿದ್ದಲಿಂಗರು ಭಕ್ತರನ್ನು ಭೇಟಿಯಾಗಲು ಅವರೊಂದಿಗೆ ಕೂಡಿಕೊಂಡು ಸಾಧನೆ ಮಾಡಲು ಹೊರಟರು. ಅವರು ಕನ್ಯಾಕುಮಾರಿಯಿಂದ ಹಿಡಿದು ಹಿಮವತ್ಕೇದಾರ, ತ್ರಿಯಂಬಕ, ಶ್ರೀಶೈಲ, ಗೋಕರ್ಣ, ಮಹಾಬಲೇಶ್ವರ, ಹಂಪೆ, ಶಿವಗಂಗೆ, ಕಾಳಹಸ್ತಿ, ಪೋನ್ನಾಂಬಲ, ಕಂಚಿ, ಚಿದಂಬರಂ, ಅರುಣಾಚಲಂ, ರಾಮೇಶ್ವರ ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿದರು. ತಮಿಳುನಾಡಿನ ಅರುಣಾಚಲಂದಲ್ಲಿ ಬಹಳ ಕಾಲ ತಪಸ್ಸಿನಲ್ಲಿ ನಿರತರಾಗಿದ್ದರು. ಅಪಾರ ಶಿವಾನುಭವ ಪಡೆದರು.

 ಸಿದ್ಧಲಿಂಗರ ಹೆಸರಿನ ಹಿಂದೆ `ತೋಂಟದ’ ಎಂಬ ವಿಶೇಷಣ ಏಕೆ ಸೇರಿಕೊಂಡಿದೆ ಎಂದರೆ, ಅವರು ಕಗ್ಗೆರೆ ಎಂಬ ಊರಿನ ಬಳಿ ಇರುವ ತೋಟವೊಂದರಲ್ಲಿ ಬಹುಕಾಲ ತಪಸ್ಸು ಮಾಡಿದರು. ಅದಕ್ಕೆ ಈ ವಿಶೇಷಣ ಪ್ರಾಪ್ತವಾಗಿದೆ. ಇದಕ್ಕೆ  ಸಂಬಂಧಿಸಿದ ಘಟನೆಯೊಂದನ್ನಿಲ್ಲಿ ನೋಡಬಹುದು. ಸಿದ್ದಲಿಂಗರು ಲೋಕ ಸಂಚಾರದಲ್ಲಿದ್ದಾಗ  ತುಮಕೂರು ಜಿಲ್ಲೆಯ ಕಗ್ಗೆರೆ ಎಂಬ ಗ್ರಾಮಕ್ಕೆ ದಯಮಾಡಿಸಬೇಕೆಂದು ಇವರನ್ನು ಆ ಊರಿನ ನಿಂಬೆಣ್ಣ ಶೆಟ್ಟರು ಭಿನ್ನವಿಸಿಕೊಂಡರು. ತ್ರಿಕಾಲ ಜ್ಞಾನಿಗಳಾದ ಸಿದ್ದಲಿಂಗರು ಮುಂದಾಗುವುದನ್ನರಿತು ಬೇಡವೆಂದರು. ಆದರೂ ಆ ಭಕ್ತ ಬರಲೇಬೇಕೆಂದು ಹಟ ಹಿಡಿಯಲು, ಒಪ್ಪಿಕೊಂಡು ಊರಿಗೆ ಹೋದರು. ಆ ಊರ ಹೊರವಲಯದ ತೋಟದ ಹತ್ತಿರ ಇರುವ ಮಾವಿನ ಮರದ ಕೆಳಗೆ ಇವರನ್ನು ಕೂಡಿಸಿ, ಆ ಭಕ್ತ ಊರೊಳಗೆ ದೈವದೊಂದಿಗೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗುವನು. ಅದೇ ವೇಳೆಗೆ ಆ ಊರಿನ ಮೇಲೆ ಬೇಡರ ಪಡೆಯೊಂದು ದಾಳಿ ಮಾಡಲು, ಜನರೆಲ್ಲ ಊರು ಬಿಟ್ಟು ಹೋದರು. ಆ ಭಕ್ತನೂ ಹೋದನು. ಇತ್ತ ಸಿದ್ದಲಿಂಗರು ನಿಂಬೆಣ್ಣ ಶೆಟ್ಟಿಯ ಬಿನ್ನಹ ಪೂರ್ಣವಾಗುವವರೆಗೆ ಅಲ್ಲಿಯೇ ಇರಬೇಕೆಂದು ನಿರ್ಧರಿಸಿ, ಅಲ್ಲಿನ ತೋಟವೊಂದರಲ್ಲಿ ಶಿವಯೋಗದಲ್ಲಿ ತಲ್ಲೀನರಾದರು. ಅಲ್ಲಿಯೇ ಇಷ್ಟ-ಭಾವ-ಪ್ರಾಣಲಿಂಗ ಯೋಗದಲ್ಲಿ ತಲ್ಲೀನರಾದರು. ದಿನಗಳು ಉರುಳಿದವು, ದಿನಗಳಾದಂತೆ ಅವರ ಮೇಲೆ ಹುತ್ತ ಬೆಳೆಯಿತು. ಕೆಲವು ದಿನಗಳ ನಂತರ ಆ ಊರಿನ ಜನ ಮರಳಿ ಬಂದರು. ಈ ಮಧ್ಯೆ ನಿಂಬೆಣ್ಣ ಶೆಟ್ಟಿಯ ಆಕಳೊಂದು ನಿತ್ಯವೂ ಆ ಹುತ್ತದ ಮೇಲೆ ಹಾಲು ಕರೆದು ಬರುತ್ತಿತ್ತು. ಹಗಲೆಲ್ಲ ಮೆಯ್ದು ಮನೆಗೆ  ಹಾಲಿಲ್ಲದೆ ಬರುವ ಹಸುವನ್ನು ಕಂಡು ಮನೆಯವರಿಗೆ ಅಚ್ಚರಿಯಾಯಿತು. ಒಂದು ದಿನ ದನಗಾಹಿ ಅದರ ಹಿಂದೆ ಹೋಗಿ   ನೋಡಿ, ನಿಜಸ್ಥಿತಿಯನ್ನು ನಿಂಬೆಣ್ಣಶೆಟ್ಟರಿಗೆ ತಿಳಿಸಿದನು. ಆಗ ಆತ ಅಲ್ಲಿಗೆ ಹೋಗಿ ಆ ಹುತ್ತವನ್ನು ಅಗೆಸಿದ. ಒಳಗಿದ್ದ  ತೇಜೋಮೂರ್ತಿ ಸಿದ್ದಲಿಂಗರ ದರ್ಶನವಾಯಿತು. ನಿಂಬೆಣ್ಣಶೆಟ್ಟಿ ತನ್ನಿಂದ ಪ್ರಮಾದವಾಯಿತೆಂದು ಕ್ಷಮೆಯಾಚಿಸಿದ. ಆತನನ್ನು ಶಿವಯೋಗಿಗಳು ಕ್ಷಮಿಸಲು, ಅವರನ್ನು ನಿಂಬೆಣ್ಣ ಶೆಟ್ಟಿ ವೈಭವದಿಂದ ತನ್ನ ಮನೆಗೆ ಕರೆದೊಯ್ದು ಸತ್ಕರಿಸಿದ. ಶಿವಯೋಗಿಗಳು ಸಂತುಷ್ಟರಾದರು. ಈ ಹೊತ್ತಿಗೆ ಅವರು ದೊಡ್ಡ ಶಿವಯೋಗಿಗಳೆಂದು ಖ್ಯಾತಿ ಪಡೆದರು. ಅವರ ಬಳಿಗೆ ಅನೇಕ ಶಿವಭಕ್ತರು ಬರತೊಡಗಿದರು. ಬೋಳಬಸವೇಶ್ವರ, ಫನಲಿಂಗಿದೇವ. ಗುಮ್ಮಳಾಪುರದ ಸಿದ್ಧಲಿಂಗಯತಿ, ಸ್ವತಂತ್ರ ಸಿದ್ಧಲಿಂಗರು, ಮುರಿಗೆ ಶಾಂತವೀರರು, ಸಿದ್ಧಮಲ್ಲೇಶ, ಸಂಪಾದನೆಯ ಸಿದ್ಧವೀರ, ಮರುಳಸಿದ್ಧ, ಚಂದ್ರಶೇಖರ, ಚಿಟ್ಟನದೇವ, ಸಪ್ಪೆಯಾರ್ಯ, ರಾಚವಟ್ಟಿ ದೇವ, ಶೀಲವಂತಯ್ಯ ಮುಂತಾದವರು ಅವರ ಶಿಷ್ಯರಾದರು. ಕೆಲವರು ಅಲ್ಲಲ್ಲಿಯೇ ಮಠಗಳನ್ನು ಸ್ಥಾಪಿಸಿಕೊಂಡು ನೆಲೆ ನಿಂತರು. ಇವರ ಕಾಲದಲ್ಲಿಯೇ ವಿರಕ್ತ ಮಠಗಳು ಅಧಿಕವಾಗಿ ಹುಟ್ಟಿಕೊಂಡವು. ಗುರುಪರಂಪರೆಯ ಮಠಗಳಿಗೂ ಇವರು ಪ್ರೋತ್ಸಾಹ ನೀಡಿದರು. ತೋಂಟದ ಸಿದ್ಧಲಿಂಗ ಶಿವಯೋಗಿಗಳಿಂದ ಎಳಂದೂರು, ದನಗೂರು, ಸೋಸಲೆ, ಮಾಗೂರು, ಸುತ್ತೂರು. ಗದಗ, ತಲಕಾಡು, ಹುಲ್ಲಹಳ್ಳಿ ಮೊದಲಾದ ಊರುಗಳಲ್ಲಿರುವ ಮಠಗಳು ವೀರಶೈವ ಧರ್ಮಜ್ಯೋತಿಯನ್ನು ಬೆಳಗಿಸುವ ಅಧ್ಯಾತ್ಮ ಕೇಂದ್ರಗಳಾದವು. ಸಿದ್ಧಲಿಂಗರು ಹರದನಹಳ್ಳಿಯ ಮಠದ ಹದಿನಾರನೇ ಅಧಿಪತಿಗಳಾಗಿ ರಾರಾಜಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳೆಲ್ಲವೂ ಪಾವನವಾದವು. ಬಸವಣ್ಣನವರಂತೆ  ಸಿದ್ಧಲಿಂಗರು ತುಂಬಾ ಜನಪ್ರಿಯರಾದರು. ಇವರ ತಪಸ್ಸಿನ ಪ್ರಭಾವಕ್ಕೆ ಅನೇಕ ಭಕ್ತರು ಒಳಗಾದರು. ಅನೇಕ ರಾಜರು ಇವರ ಬಳಿ ಬಂದು ಶಿಷ್ಯತ್ವ ವಹಿಸಿ ಶಿವಯೋಗ ಮಾರ್ಗದಲ್ಲಿ ನಡೆದರು.

 ಮರಗಳಲ್ಲಿ ಹಣ್ಣು, ಬಳ್ಳಿಯಲ್ಲಿ ಹೂ ಬಿಡುವುದು ಪರೋಪಕಾರಕ್ಕಾಗಿಯೇ ಮರ ಹಣ್ಣನ್ನು ತಾನೇ ತಿನ್ನದು,ಬಳ್ಳಿ  ತಾನೇ ಹೂವನ್ನು ಮುಡಿಯದು. ಇವು ನಿಸ್ವಾರ್ಥ ಭಾವನೆಯಿಂದ ಲೋಕಸೇವೆ ಮಾಡುವಂತೆ ಸಿದ್ದಲಿಂಗ ಶಿವಯೋಗಿಗಳು ಶಿವಾರ್ಪಣ ಬಾವನೆಯಿಂದ ದಾಸೋಹವನ್ನು ಮಾಡಿದರು. ತಾಯಿ ಹಸು ಕರುವನ್ನು ಹುಡುಕಿಕೊಂಡು ಹೋಗುವಂತೆ ಇವರು ದೀನರನ್ನು, ದುಃಖಿತರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸಾಂತ್ವನ ಹೇಳಿದರು. ಅವರಲ್ಲಿ ಧೈರ್ಯ ತುಂಬಿ ಧರ್ಮ ಮಾರ್ಗದಲ್ಲಿ ಅವರು ನಡೆಯಂತೆ ಮಾಡಿದರು. ಒಮ್ಮೆ ಇವರ ಬಳಿಗೆ ಕುರುಡ ಜಂಗಮನೊಬ್ಬ ಬಂದು ನನಗೆ ಕಣ್ಣು ದಯಪಾಲಿಸಿರಿ ಎಂದು ಬೇಡಿಕೊಂಡ. ಅವನಿಗೆ ಶಿವಯೋಗಿಗಳು ಆಶೀರ್ವಾದ ಮಾಡಿ -ನೀನು ಬಾಹ್ಯ ಜಗತ್ತನ್ನು ನೋಡಲಾರೆ ಇಷ್ಟಲಿಂಗವನ್ನು ಕಾಣಲಾರೆ ನಿನ್ನ ಬಾಹ್ಯ ಕಣ್ಣೇನೋ ನಿರರ್ಥಕವಾಗಿದೆ. ಕೆಲವರು ಕಣ್ಣಿದ್ದೂ ಕುರುಡರಂತೆಯೇ ಇರುವರು. ಇಂಥವರಿಗೆ ಕಣ್ಣಿದ್ದೂ ಏನು ಪ್ರಯೋಜನ ಕಣ್ಣಿದ್ದೂ ಜಗತ್ತನ್ನು ನೋಡಿ ಶಿವನನ್ನು ನೋಡದಿದ್ದರೆ ಅವರೂ ಕುರುಡರೇ, ನೀನು ಶಿವನಲ್ಲೇ ಅಚಲವಾದ. ಶ್ರದ್ಧೆಯನ್ನಿಡು, ಶಿವಭಕ್ತಿಯೇ ಕಣ್ಣಲ್ಲವೇ? ಎಂದು ಹೇಳಿ ಆತನಿಗೆ ಜ್ಞಾನದ ಕಣ್ಣನ್ನು ದಯಪಾಲಿಸಿದರು. 

ಹೊಳಲುಗುಂದ ಗ್ರಾಮದಲ್ಲಿ ಮಾರಿಕಾಂಬಾ ದೇವತೆಗೆ ಕುರಿ, ಕೋಣಗಳನ್ನು ಬಲಿ ಕೊಡುವ ವಿಷಯ ತಿಳಿದು ಅಲ್ಲಿಗೆ ಸಿದ್ಧಲಿಂಗರು ಹೋಗುವರು. ಅದನ್ನು ತಡೆಯಲು ನಿರ್ಧರಿಸಿ, ಮಧ್ಯೆ ನಿಂತರು. ದೈವಿ ಸ್ವರೂಪಿಗಳಾದ ಪ್ರಾಣಿಗಳನ್ನು ಕೊಲ್ಲುವುದು ಸರಿಯಲ್ಲ. ಪ್ರಾಣಿಗಳನ್ನು ಸೃಷ್ಟಿಸುವ ಶಕ್ತಿ ಶಿವನೊಬ್ಬನಿಗೆ ಇದೆ ಅವನ್ನು ಸೃಷ್ಟಿಸಲಾರದ ನಮಗೆ ಅವನ್ನು ಕೊಲ್ಲಲು ಯಾವ ಅಧಿಕಾರ ಇದೆ ಎಂದು ಜನರನ್ನು ಪ್ರಶ್ನಿಸುತ್ತ, ಅಲ್ಲೇ ನಿಂತಾಗ ವಾದ್ಯಗಳ ಧ್ವನಿಯೂ ನಿಂತಿತು ಜನರೆಲ್ಲರೂ ಬೆರಗಾದರು. ಪ್ರಾಣಿ ಹಿಂಸೆ ಮಾಡುವುದು ಸರಿಯಲ್ಲ. ನಮ್ಮಂತೆ ಅವಕ್ಕೂ ಪ್ರಾಣವಿದೆ. ಕೊಲ್ಲಬಾರದೆಂದು ಅವುಗಳನ್ನು ಬಿಟ್ಟರು. ದೇವತೆ ಪ್ರಾಣಿಗಳ ಬಲಿ ಕೇಳುವುದಿಲ್ಲ. ಅವಳ ಹೆಸರಿನಲ್ಲಿ ಹೀಗೆ ಮಾಡುತ್ತಿರುವುದು ಸರಿಯಲ್ಲವೆಂದು ಜನತೆಗೆ ಮನದಟ್ಟಾಯಿತು. ಅವರೆಲ್ಲರ ಮನಸ್ಸು ಪರಿವರ್ತನೆಯಾಯಿತು. ಅವರ ಮೇಲೆ ಶಿವಯೋಗಿಗಳ ವ್ಯಕ್ತಿತ್ವದ ಪರಿಣಾಮವಾಯಿತು. ಅವರೆಲ್ಲರೂ ಶಿವಭಕ್ತರಾದರು.

ಈ ವೇಳೆಗೆ ಸಿದ್ದಲಿಂಗರಿಗೆ ವಯಸ್ಸಾಗಿತ್ತು. ಅವರು ಅಲ್ಲಿಂದ ಹಂಪೆಗೆ ಬಂದರು. ಅಲ್ಲಿ ಅನೇಕ ಶಿವಭಕ್ತರನ್ನು, ವಿರಕ್ತರನ್ನು, ಕವಿಗಳನ್ನು ಕಂಡು ಆನಂದಪಟ್ಟರು. ಅಲ್ಲಿ ಇವರನ್ನು ನಿರಂಜನ ಜಂಗಮರಂದು ಗೌರವಿಸಿದರು. ಹಂಪೆಯಲ್ಲಿ ಕೆಲಕಾಲ ಇದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಹರಿಯುವ ನಾಗಿಣಿ ನದಿಯ ದಂಡೆಯಲ್ಲಿರುವ ಎಡೆಯೂರಿಗೆ ಬರುವರು  ಊರ ಬಳಿ ಕದಂಬ ನದಿಯ ಹರಿಯುತ್ತಿತ್ತು. ಈ ಎರಡು ನದಿಗಳ ನಡುವಿರುವ ಎಡೆಯೂರಿನಲ್ಲಿ ಸಿದ್ದಲಿಂಗರು ನೆಲೆಸಿ, ವಚನಗಳನ್ನು ರಚನೆ ಮಾಡುವರು. ಇವರ ಬಳಿ ಅನೇಕ ರಾಜರು, ಶಿವಭಕ್ತರು, ಸಾಧುಸಂತರು ಬರತೊಡಗಿದರು. ಇವರ ತಪಃಪ್ರಭಾವಕ್ಕೆ ಜನ ಒಳಗಾಗತೊಡಗಿದರು. ೭೦೧ ಜನ ವಿರಕ್ತರಿಗೂ ೨೦೦ ಜನ ಜಂಗಮರಿಗೂ ಇವರು ದೀಕ್ಷೆ ನೀಡಿದರು.

  ಸಿದ್ಧಲಿಂಗ ಶಿಷ್ಯರಲ್ಲಿ ಒಬ್ಬರಾದ ಚಿಟ್ಟಿಗದೇವ, ಚೆನ್ನರಾಯದುರ್ಗದ ಚೆನ್ನವೀರಪ್ಪ ಒಡೆಯನ ಕುಲಗುರುವಾಗಿದ್ದ. ಆ ಒಡೆಯನು ತನ್ನ ಗುರುವಿನ ಇಷ್ಟದಂತೆ ಸಿದ್ಧಲಿಂಗರಿಗೆ ಎಡೆಯೂರಿನಲ್ಲಿ ಭವ್ಯವಾದ ಕಲ್ಲಿನ ಮಠವೊಂದನ್ನು ಕಟ್ಟಿಸಿದ. ಶಿವಯೋಗಿಗಳು ಲಿಂಗೈಕ್ಯರಾಗುವವರೆಗೂ ಇದೇ ಮಠದಲ್ಲಿದ್ದರು. ತನ್ನ ಶಿಷ್ಯ ಬೋಳಬಸವನಿಗೆ ತಮ್ಮ ಅಧ್ಯಾತ್ಮ ಶಕ್ತಿಯನ್ನು ಧಾರೆಯೆರೆದು ಲಿಂಗೈಕ್ಯರಾದರು. ಶಿವನೊಡನೆ ಸಮರಸ ಹೊಂದಿ ಸಮಾಧಿಸ್ಥರಾದರು. ವೀರಶೈವರಿಗೆ ಇವರ ಸಮಾಧಿ ಶಿವದ್ವಾರವೇ ಆಗಿದೆ. ಶಿವದ್ವಾರದ ಸಮಾಧಿಯ ಮೇಲೆಯೇ ಈಗ ಎಡೆಯೂರಿನಲ್ಲಿ ಇವರ ಹೆಸರಿನ ಭವ್ಯ ದೇವಾಲಯ  ನಿರ್ಮಾಣಗೊಂಡಿದೆ. ಇಂದು ಎಡೆಯೂರಿನ ಸಿದ್ದಲಿಂಗೇಶ್ವರ ದೇವಾಲಯ ಯಾತ್ರಾರ್ಥಿಗಳಿಗೆ, ಅಧ್ಯಾತ್ಮದ ಹಸಿವು ಉಳ್ಳವರಿಗೆ ಪವಿತ್ರವಾದ ಹಾಗೂ ಪ್ರಮುಖವಾದ ಅಧ್ಯಾತ್ಮದ ಕೇಂದ್ರವಾಗಿದೆ. ಸಿದ್ಧಲಿಂಗೇಶ್ವರ ಧಾರ್ಮಿಕ, ಅಧ್ಯಾತ್ಮಿಕ ಕೇಂದ್ರಗಳು ಕರ್ನಾಟಕದ ಬಹುಭಾಗದಲ್ಲಿವೆ. ತುಮಕೂರಿನಲ್ಲಿ ಇವರ ಹೆಸರಿನ ದೇವಾಲಯವಿದೆ. ಗದುಗಿನಲ್ಲಿ ಇವರ ಹೆಸರಿನ ಪ್ರಸಿದ್ಧವಾದ ಮಠ ಇದೆ. ಇವರ ಪ್ರಭಾವ ಕರ್ನಾಟಕದ ವೀರಶೈವ ಮಠಗಳ ಮೇಲೆ ಉದ್ದಕ್ಕೂ ಆಗುತ್ತ ಬಂದಿದೆ.

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ವಚನಗಳಿಂದ ಪ್ರಭಾವಗೊಂಡಿದ್ದಲ್ಲದೆ ಅವರ ವಚನಗಳಲ್ಲಿನ ಪ್ರಗತಿಪರ ಧೈಯ ಆದರ್ಶಗಳನ್ನು ತಮ್ಮ ವಚನಗಳಲ್ಲಿ ತರಲೆತ್ನಿಸಿದ್ದಾರೆ. ತಾವು ಸಾಧಿಸಿದ ಶಿವಯೋಗ ಸಿದ್ದಿ, ತಪಸ್ಸು ಹಾಗೂ ಅನುಸಂಧಾನಗಳನ್ನೆಲ್ಲ ತಮ್ಮ ವಚನಗಳಲ್ಲಿ ಎರಕ ಹೊಯ್ದಿದ್ದಾರೆ. “ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ” ಎಂಬುದು ಇವರ ವಚನಗಳ ಅಂಕಿತ. ಇವರು ರಚಿಸಿದ ವಚನಗಳಲ್ಲಿ ಷಟಸ್ಥಲದ ವಿವರಣೆ, ವೀರಶೈವ ಧರ್ಮ-ತತ್ವ-ಅನುಭಾವ ಒಡಮೂಡಿ ನಿಂತಿದೆ. ಸಿದ್ದಲಿಂಗರ ಸಾಧಕ ಜೀವನದ ವಿಧವಿಧದ ಅನುಭವಗಳು, ಅಂತರಂಗದ ಹೋರಾಟ, ಸಾಮಾಜಿಕ ಚಿಂತನೆ ಮುಂತಾದವು ಇವರ ವಚನಗಳಲ್ಲಿ ವ್ಯಕ್ತಗೊಂಡಿವೆ. ಷಟ್ ಸ್ಥಲ ಸಾಧನೆಯ ತಿಳುವಳಿಕೆಯನ್ನು ಸಾಮಾನ್ಯ ಜನರಿಗೆ ತಿಳಿಸುವಲ್ಲಿ ಇವರ ವಚನಗಳು ಯಶಸ್ವಿಯಾಗಿವೆ. ಧರ್ಮ-ತತ್ವ-ಅಧ್ಯಾತ್ಮ ವಿಷಯಗಳನ್ನು ಸಮೃದ್ಧವಾಗಿ ಒಳಗೊಂಡ ಇವರ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ. ಅವರ ಸಾಧಕ ಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ಅವರು ಎಡೆಯೂರನ್ನು ಮತ್ತೊಂದು ಕಲ್ಯಾಣ ಮಾಡಿ, ಮುಂದೆ ಬಂದ ಶರಣ ಕವಿಗಳಿಗೆ ಪೂಜ್ಯರಾದುದನ್ನು, ಗುರುಗಳಾದುದನ್ನು ನೋಡಿದರೆ  ಅವರ ವ್ಯಕ್ತಿತ್ವ ಎಂಥ ಘನವಾದುದು ಎಂಬುದು ವಿದಿತವಾಗುವುದು. ಈ ಕೆಳಗಿನ ಅವರ ವಚನಗಳಲ್ಲಿ ಅವರು ನೀಡಿದ ಸಂದೇಶವನ್ನು ಅರಿಯಬಹುದು

“ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ?

ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೇ?”

“ಸತ್ಯದಲ್ಲಿ ನಡೆವುದು ಶೀಲ, ಸತ್ಯದಲ್ಲಿ ನುಡಿವುದು ಶೀಲ

ಸಜ್ಜನ ಸದಾಚಾರದಲ್ಲಿ ವರ್ತಿಸಿ, ನಿತ್ಯವನರಿವುದೆ ಶೀಲ ಕಾಣಿಭೋʼʼ

“ಕಾಯ ಬತ್ತಲೆಯಿದ್ದರೇನೋ ಮಾಯೆಯಳಿಯದನ್ನಕ್ಕರ

ಮಂಡೆ ಬೋಳಾದರೇನೋ ಸಂಸಾರ ವಿಷಯ ಭೇದಿಸದನ್ನಕ್ಕರʼʼ

ಒಡಲುಪಾಧಿಗೆ ಉಪಚಾರ ನುಡಿವ ವಿರಕ್ತರ ನಾಲಿಗೆ

ನಾಯ ಬಾಲಕ್ಕಿಂತ ಕರಕಷ್ಟ ನೋಡಾ”

`ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ, ಹೊನ್ನ ಬಿಟ್ಟೆನೆಂದು

ಜಗದ ಕಣ್ಣ ಕಟ್ಟಿ ಮೆರೆವ

ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋʼʼ

ಮಾತಿನಲ್ಲಿ ಬಿಟ್ಟಿರಿಯೋ, ಮನದಲ್ಲಿ ಬಿಟ್ಟರಿಯೋ?

ಈ ನೀತಿಯ ಹೇಳಿರಿ ಎನಗೊಮ್ಮೆ

ತನುಮನದ ಮಧ್ಯದಲ್ಲಿ ಇರುವ ನೆನಹು ಕೆಟ್ಟು

ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ

ಬಿಟ್ಟರೆಂದೆಂಬೆನಯ್ಯ….ʼʼ

ಡಾ||  ಸಿ .ನಾಗಭೂಷಣ

ವಚನಸಾಹಿತ್ಯ ವಾಹಿನಿಯ ಮೂರು ಘಟ್ಟಗಳಲ್ಲಿ ಒಂದಾದ ಬಸವೋತ್ತರ ಯುಗದಲ್ಲಿ ಪ್ರಾತಿನಿಧಿಕ ವಚನಕಾರರಾಗಿದ್ದಾರೆ. | ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ವಚನಗಳಿಂದ ಪ್ರಭಾವಿತರಾಗಿ ವಚನಗಳನ್ನು ರಚಿಸಿರುವುದರ ಜೊತೆಗೆ ಸ್ವಂತಿಕೆಯ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಬಸವಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ ಮತ್ತು ಪೂರ್ವದ ವಚನಕಾರರ ಪರಂಪರೆಯನ್ನು ಮುಂದುವರಿಸಿವೆ.

ಅಖಂಡೇಶ್ವರ ವಚನಗಳ ಕರ್ತೃತ್ವದ ಬಗೆಗೆ, ಆರ್. ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ನಿರಾಲಂಬ ಶರಣನ ಕಾಲ ೧೭೦೦. ಇವನು ವೀರಶೈವ ಕವಿ. ಇವನನ್ನು ಶ್ರೀಮತ್ಪರಮಹ೦ಸ ಪರಿವ್ರಾಜಕ ಸದ್ಗುರು ಸಂಪ್ರದಾಯಕ ಸಿದ್ಧಯೋಗಿಂದ್ರರೆಂದು ಹೇಳಿದ್ದಾರೆ. ಕವಿಚರಿತಕಾರರನ್ನು ಅನುಸರಿಸಿ ರಂ. ಶ್ರೀ. ಮುಗಳಿಯವರು ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳೆಂದು ಹೇಳದೆ ನಿರಾಲಂಬ ಶರಣನಿಗೆ ಷಣ್ಮುಖ ಸ್ವಾಮಿಗಳೆಂದು ಕರೆಯುತ್ತ ಬಂದಿದ್ದಾರೆಂದು ಹೇಳಿದ್ದಾರೆ. ‘ನಿರಾಲಂಬಬಶರಣ’ ಎಂಬುದು ಷಣ್ಮುಖ ಸ್ವಾಮಿಗಳ ಹೆಸರನ್ನು ಪರ್ಯಾಯವಾಗಿ ಸೂಚಿಸಿರುವ ವ್ಯಕ್ತಿಸೂಚಕ ಪದವಾಗಿರದೆ ಅಧ್ಯಾತ್ಮದ ಉನ್ನತ ಸ್ಥರವನ್ನು ಸೂಚಿಸುತ್ತದೆ. ಲೋಕದಲ್ಲಿ ತೊಡಗುವ ಭಕ್ತ ಅನುಭಾವ ಮಾರ್ಗದಲ್ಲಿ ನಡೆದು ಅನುಭಾವಿ  ಶರಣನಾಗಿ ವಚನಗಳನ್ನು ಹೇಳುವಂತಹನಾಗುತ್ತಾನೆ.ಅಂತಹ ಭಕ್ತನ ಅನುಭಾವದ ಸ್ಥಿತಿಯನ್ನೇ ʼತೂರ್ಯನಿರಾಲಂಬ ಶರಣʼ ಎಂಬ ಪದವು ಧ್ವನಿಸುತ್ತದೆ.ಹೀಗಾಗಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಕರ್ತೃ ನಿರಾಲಂಬ ಶರಣ ಎಂಬುದಕ್ಕಿಂತ    ಷಣ್ಮುಖ ಸ್ವಾಮಿಗಳು ಎಂದು ಪರಿಗಣಿಸುವುದೇ ಸೂಕ್ತ. ಷಣ್ಮುಖಸ್ವಾಮಿಗಳು ತನ್ನ ವಚನ ವೊಂದರಲ್ಲಿ ‘ಷಣ್ಮುಖನೆಂಬ ಗಣೇಶ್ವರನ ಹೃದಯ ಕಮಲದಲ್ಲಿ’ ಎಂದು ತಮ್ಮ ಹೆಸರನ್ನು ಹೇಳಿ ಹಂತಹಂತವಾಗಿ ಮುನ್ನಡೆದು ಹೇಗೆ ತಾವು ಐಕ್ಯ ಪದವಿಯನ್ನು ಹೊಂದಿದರೆಂಬಲ್ಲಿ ಅವರು ದಾಟಿದ ಅವಸ್ಥೆಗಳನ್ನು ಗಣೇಶ್ವರರ ಹೆಸರುಗಳಿಗೆ ಸಂಕೇತವಾಗಿಸಿ ಕೊಟ್ಟಿದ್ದಾರೆ. ಈ ಅಂಶವೂ ಸಹ ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳು ಎಂಬುದನ್ನು ಬೆಂಬಲಿಸುತ್ತದೆ.

ಅಖಂಡೇಶ್ವರ ವಚನಗಳು ಹೆಸರಿನ ಬಗೆಗೆ ವಚನಗಳನ್ನು ಸಂಪಾದಿಸಿದ ಸಂಪಾದಕರಲ್ಲಿ ಭಿನ್ನಾಭಿಪ್ರಾಯವಿದೆ. ಎಲ್ಲಾ ತಾಡವೋಲೆ ಮತ್ತು ಕೋರಿ ಕಾಗದಗಳಲ್ಲಿ “ಷಣ್ಮುಖ ಸ್ವಾಮಿಗಳು ನಿರೂಪಿಸಿದ ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲದ ವಚನ” ಎಂದು ಕಂಡುಬರುತ್ತದೆ. ‘ಅಖಂಡೇಶ್ವರ’ ಎಂಬುದು ಷಣ್ಮುಖ  ಶಿವಯೋಗಿಗಳ ವಚನಗಳ  ಅಂಕಿತವಾಗಿದೆ. ತಮ್ಮ ಗುರುವಿನ ಹೆಸರನ್ನೇ ಅಂಕಿತವನ್ನಾಗಿ ಬಳಸಿದ್ದಾರೆ. ಈ ವಚನಗಳನ್ನು ಬಸವಣ್ಣನ ವಚನಗಳು; ಅಲ್ಲಮನ ವಚನಗಳು ಎಂದು ಕರೆಯುವ ಹಾಗೆ ಷಣ್ಮುಖ ಶಿವಯೋಗಿಯ ವಚನಗಳು ಎಂದು ಕರೆಯಬೇಕು. ಆದರೆ ಕೆಲವು ಸಂಪಾದಕರು.

೧. ಶ್ರೀ ಷಣ್ಮುಖ ಶಿವಯೋಗಿ ಕೃತ ಅಖಂಡೇಶ್ವರ ವಚನಗಳು (ಶ್ರೀ ಸಿದ್ಧವೀರದೇವರು, ಹೊಸಮಠ) ೨. ಷಣ್ಮುಖ ಶಿವಯೋಗಿ ವಿರಚಿತ ಅಖಂಡೇಶ್ವರ ವಚನಗಳು (ವಿ. ಶಿವಾನಂದ) ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ. ಈ ಬಗೆಗೆ ಚರ್ಚಿಸಿದ ಹ. ನಂ. ವಿಜಯಕುಮಾರರವರು ಪೂರ್ವದ ವಚನಗಳನ್ನು ಕರ್ತೃಗಳ ಹೆಸರಿನಲ್ಲಿ ಕರೆಯುವ ಹಾಗೆ ‘ಷಣ್ಮುಖ ಸ್ವಾಮಿಗಳ  ವಚನಗಳೆಂದೇ’ ತಾವು ಸಂಪಾದಿಸಿದ ವಚನಗಳಿಗೆ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಸಮಗ್ರ ವಚನ ಸಂಪುಟ ಮಾಲಿಕೆಯಲ್ಲಿಯ

ಸಂಕೀರ್ಣ ವಚನ ಸಂಪುಟ ೯ ರಲ್ಲಿ ಷಣ್ಮುಖ ಶಿವಯೋಗಿಯ ವಚನಗಳನ್ನು ‘ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನಗಳು ಎ೦ದು ಕರೆದಿದ್ದಾರೆ. ಹ. ನಂ. ವಿಜಯಕುಮಾರವರು ಸಂಪಾದಿಸಿದ ವಚನಗಳು ಸ್ಥಲ ಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿವೆ. ಉಳಿದ ಸಂಪಾದಕರು ಸ್ಥಲಕಟ್ಟಿಗನುಗುಣವಾಗಿ ವಚನಗಳನ್ನು ಸಂಪಾದಿಸಿದ್ದಾರೆ.

 ವಚನಗಳ ಸಂಪಾದನೆಯ ಇತಿಹಾಸ : ವಚನಗಳಲ್ಲೆಲ್ಲ ಪ್ರಪ್ರಥಮವಾಗಿ ಮುದ್ರಿತಗೊಂಡ ವಚನಗಳು ಷಣ್ಮುಖ ಶಿವಯೋಗಿಯ ಷಟ್‌ಸ್ಥಲ ವಚನಗಳೇ ಆಗಿವೆ. ವಚನ ಸಾಹಿತ್ಯದಲ್ಲಿ ಈ ವಚನಗಳಿಗೆ ತನ್ನದೇ ಆದ ಒಂದು ಐತಿಹಾಸಿಕ ಮಹತ್ವ ಇದೆ. ಆರಂಭದಲ್ಲಿ ಪ್ರಕಟಗೊಂಡ ಈ ವಚನಗಳು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿರುವುಗಳಾಗಿರದೆ ಪೇಟೆ ಅಥವಾ ಬಾಜಾರು ಪ್ರತಿಯಾಗಿದ್ದವು. ಪ್ರಥಮಬಾರಿಗೆ ‘ಅಖಂಡೇಶ್ವರ ವಚನ’ ಶೀರ್ಷಿಕೆಯಡಿಯಲ್ಲಿ ‘ಉಮಾ ಮಹೇಶ್ವರಿ ಪ್ರೆಸ್’ ಚಿತ್ತೂರು ಇವರು ೧೮೮೪ರಲ್ಲಿ ಪ್ರಕಟಿಸಿದರು. ೧೮೯೦ರಲ್ಲಿ ‘ಗ್ರಂಥರತ್ನಾಕರ’ ಮುದ್ರಣ ಶಾಲೆಯವರು ಅಖಂಡೇಶ್ವರ ವಚನ ಶಾಸ್ತ್ರ ಹೆಸರಿನಲ್ಲಿ ೧೩೨ ವಚನಗಳನ್ನು ಪ್ರಕಟಿಸಿದರು. ೧೯೧೧ರಲ್ಲಿ ಶಿವಲಿಂಗಶೆಟ್ರುರವರು ೧೩೦ ವಚನಗಳನ್ನು ಅಖಂಡೇಶ್ವರ ವಚನಶಾಸ್ತ್ರ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದರು. ೧೯೨೩ರಲ್ಲಿ ಬಳ್ಳಾರಿಯ ವೀರಶೈವ ಬುಕ್ ಡಿಪೋದವರು ೧೬೮ ವಚನಗಳನ್ನು ಅಖಂಡೇಶ್ವರ ವಚನವು ಹೆಸರಿನಲ್ಲಿ ಪ್ರಕಟಿಸಿದರು. ೧೯೫೯ರಲ್ಲಿ ಬಿ. ಜೆ. ಜಾನಕಿರವರು ಷಣ್ಮುಖ ಶಿವಯೋಗಿಗಳ ೮೫ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವೆಲ್ಲವೂ ಜನಪ್ರಿಯ ಸ೦ಪಾದನ ಕೃತಿಗಳಾಗಿದ್ದು ಶಾಸ್ತ್ರೀಯ ಮತ್ತು ಶುದ್ಧಾತ್ಮಕವಾಗಿ ಸಂಪಾದಿತಗೊಂಡವುಗಳಲ್ಲ. ೧೯೪೪ರಲ್ಲಿ ಎರಡು ಹಸ್ತ     ಪ್ರತಿಗಳನ್ನುಪಯೋಗಿಸಿಕೊಂಡು ಸಿದ್ಧವೀರದೇವರು ಹೊಸಮಠರವರು ‘ಶ್ರೀ ಷಣ್ಮುಖ ಸ್ವಾಮಿಕೃತ ಅಖಂಡೇಶ್ವರ  ವಚನಗಳು’ ಹೆಸರಿನಲ್ಲಿ ಸಂಪಾದಿಸಿದರು. ಇದನ್ನು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಎರಡನೆಯ ಕುಸುಮವಾಗಿ ಧಾರವಾಡದ ಮುರುಘಾಮಠದವರು ಪ್ರಕಟಿಸಿದ್ದರು. ೧೯೫೧ರಲ್ಲಿ ಈ ಕೃತಿ ಪುನರ್‌ಮುದ್ರಣ ಪಡೆಯಿತು. ಕೆ. ಎಸ್. ಪಾಟೀಲರವರು ಈ ಆವೃತ್ತಿಯ ಜೊತೆಗೆ ಒಂದು ತಾಳೆಯೋಲೆ ಪ್ರತಿ, ಎರಡು ಕಾಗದದ ಪ್ರತಿ, ಬಳ್ಳಾರಿಯ ಕಲ್ಲಚ್ಚಿನ ಪ್ರತಿಗಳನ್ನುಪಯೋಗಿಸಿಕೊಂಡು ೧೯೫೯ರಲ್ಲಿ ಮುರುಘಾಮಠದ ಮೂಲಕ ಪರಿಷ್ಕರಿಸಿ ಪ್ರಕಟಿಸಿದರು. ಈ ಮೂರು ಆವೃತ್ತಿಯಲ್ಲಿಯ  ಒಟ್ಟು ಪ್ರಕಟವಾದ ವಚನಗಳ ಸಂಖ್ಯೆ ೭೧೭, ಈ ಕೃತಿ ೧೯೮೬ರಲ್ಲಿ ನಾಲ್ಕನೇ ಪರಿಷ್ಕೃತ ಮುದ್ರಣದ ಹೆಸರಿನಲ್ಲಿ ಪ್ರಕಟವಾಗಿದೆ. ಆದರೆ ಮೂರನೆಯ ಮುದ್ರಣದಲ್ಲಿ ಇದ್ದಂತದ ವಿವರಕ್ಕಿಂತ ಯಾವುದೇ ಬದಲಾವಣೆ ಆಗಿಲ್ಲ. ಸಂಪಾದಕರ ಹೆಸರು ಮಾತ್ರ ಶ್ರೀ ನಿ.ಪ್ರ.ಸ್ವ, ಪ್ರಭುಸ್ವಾಮಿಗಳು ಎಂದು ಬದಲಾಗಿದೆ. ಹ. ನಂ. ವಿಜಯಕುಮಾರರವರು ೧೯೫೯ರ  ವೇಳೆಗೆ ಮೂರು ಆವೃತ್ತಿಗಳನ್ನು ಕಂಡಿದ್ದ ೭೧೭ಕ್ಕಿಂತ ಹೆಚ್ಚಿನ ವಚನಗಳು ದೊರೆಯದೆ ಇದ್ದರೂ ಹುಮನಾಬಾದಿನ ವೀರಶೈವ ಕಲ್ಯಾಣ ಪರಿಷತ್ತಿನವರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಎರಡು ತಾಳೆವೋಲೆ ಪ್ರತಿ ಮತ್ತು ೧ ಕಾಗದದ ಪ್ರತಿ ಹಾಗೂ ಶ್ರೀ ಸಿದ್ಧವೀರ ದೇವರು ಹೊಸಮಠ ಸಂಪಾದಿಸಿದ ಮುದ್ರಿತ ಆವೃತ್ತಿಯನ್ನು ಉಪಯೋಗಿಸಿಕೊಂಡು ೧೯೭೭ರಲ್ಲಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಸಂಪಾದನೆಯ ವಿಶೇಷ ಎಂದರೆ, ಉಳಿದ ಸಂಪಾದನ ಕೃತಿಗಳಲ್ಲಿಯ ಹಾಗೆ ‘ಶ್ರೀ ಷಣ್ಮುಖ ಸ್ವಾಮಿ ಕೃತ ಅಖಂಡೇಶ್ವರ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗದೆ ‘ಷಣ್ಮುಖ ಸ್ವಾಮಿಗಳ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗಿದೆ. ೧೯೮೦ರಲ್ಲಿ ವಿ. ಶಿವಾನಂದರವರು ಷಣ್ಮುಖ ಶಿವಯೋಗಿಗಳು ಜೀವಿಸಿದ್ದ  ಪರಿಸರದಲ್ಲಿ

 ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಪ್ರಾದೇಶಿಕ ಮಹತ್ವವಿರುವದನ್ನು ಗುರುತಿಸಿ ಒಟ್ಟು ನಾಲ್ಕು ಕೋರಿ ಕಾಗದ ಪ್ರತಿಗಳು ಮತ್ತು ಈಗಾಗಲೇ ಪ್ರಕಟಗೊಂಡ ಎರಡು ಮುದ್ರಿತ ಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದಿಸಿ ಕೊಟ್ಟಿದ್ದಾರೆ. ಷಣ್ಮುಖ ಶಿವಯೋಗಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ. ಸಮಗ್ರ ವಚನ ಸಂಪುಟದ ಜನಪ್ರಿಯ ಆವೃತ್ತಿಯ ಮಾಲೆಯಲ್ಲಿ ಸಂಕೀರ್ಣ ವಚನ ಸಂಪುಟ – ೯ರಲ್ಲಿ ವೀರಣ್ಣ ರಾಜೂರವರು ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿಶೇಷ ಇಲ್ಲ. ಇದರ ಜೊತೆಗೆ ಅಖಂಡೇಶ್ವರ ಗ್ರಂಥ ಮಾಲೆಯಡಿಯಲ್ಲಿ ಅಖಂಡೇಶ್ವರ ವಚನ ಮಂಜರಿ ಹೆಸರಿನಲ್ಲಿ ೨೦೪ ವಚನಗಳು ಪ್ರಕಟವಾಗಿವೆ.

ಷಣ್ಮುಖ ಶಿವಯೋಗಿಗಳ ಕಾಲ

ಇವರ ಕಾಲದ ಬಗೆಗೆ ಹಲವಾರು ವಿದ್ವಾ೦ಸರು ಚರ್ಚಿಸಿ   ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಅಷ್ಟಾಗಿ ವಿರೋಧ ಕಂಡು ಬರುವುದಿಲ್ಲ. ವಿ. ಶಿವಾನಂದರವರು ಷಣ್ಮುಖ ಶಿವಯೋಗಿ ವಿರಚಿತ ಅಂಡೇಶ್ವರ ವಚನಗಳು, ಪ್ರಸ್ತಾವನೆಯಲ್ಲಿ ಇವರ ಕಾಲದ ಬಗೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿಯ ಎರಡು ಆಧಾರಗಳು ಇವರ ಕಾಲದ ಬಗೆಗೆ ಖಚಿತವಾದ ಮಾಹಿತಿಯನ್ನು ಒದಗಿಸುತ್ತವೆ.

೧.ಕಾಡಸಿದ್ಧೇಶ್ವರ ವಚನಗಳ ಟೀಕೆಯೊಂದು ದೊರೆತಿದ್ದು ಅದರಲ್ಲಿ ಷಣ್ಮುಖ ಶಿವಯೋಗಿ ಮತ್ತು ಅವರ ಸಮಕಾಲೀನ ವ್ಯಕ್ತಿಗಳ ಉಲ್ಲೇಖವನ್ನೊಳಗೊಂಡ ವಚನವೊಂದಿದೆ. ‘ನಿನ್ನಿನವರು ಇಂದಿನವರು ಹೋದ ದಾರಿ ಒ೦ದಲ್ಲದೆ ಎರಡಿಲ್ಲ. ನೋಡೆಂದನಯ್ಯಾ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದ೦ಬಲಿಂಗ ಪ್ರಭುವೆ. ಈ ವಚನದ ಟೀಕೆಯಲ್ಲಿ (ಕಾಡಸಿದ್ಧೇಶ್ವರ ವಚನ ಸಂ, ಹೊಳಲು ಚಂದ್ರಶೇಖರಶಾಸ್ತ್ರಿ, ಪು. ೪೭೮ ಹುಬ್ಬಳ್ಳಿ) ನಿನ್ನಿನವರು ಯಾರೆಂಬುದನ್ನು ಹೇಳಿ, ಇಂದಿನವರೆಂದಡೆ ತುರ್ತು ಈ ಕಲಿಯುಗದೊಳಗೆ ಸಿದ್ದೇಶ್ವರ ಸ್ವಾಮಿಗಳು. ಸಿಂಗಳಾಪುರದ ಬಸವರಾಜದೇವರು, ಘನಲಿಂಗದೇವರು, ಬೋಳಬಸವೇಶ್ವರ ಸ್ವಾಮಿಗಳು. ಶೀಲವಂತ ಚೆನ್ನಮಲ್ಲ ಸ್ವಾಮಿಗಳು. ಷಣ್ಮುಖಸ್ವಾಮಿಗಳು ಇಂತೀ ಗಣಂಗಳು ಲಿಂಗೈಕ್ಯ ರಾಗಿರುವಲ್ಲಿ ಗುಪ್ತರಾಗಿರುವರು ಎಂದಿದೆ. ಈ  ವ್ಯಾಖ್ಯಾನದಲ್ಲಿಯ ವಿವರದ ಪ್ರಕಾರ ಷಣ್ಮುಖ ಶಿವಯೋಗಿಗಳು ಕಾಡಸಿದ್ಧೇಶ್ವರರಿಗಿಂತ ಪ್ರಾಚೀನರು ಎ೦ಬುದಾಗಿ ತಿಳಿದುಬರುತ್ತದೆ. ಕಾಡಸಿದ್ದೇಶ್ವರರ  ಕಾಲ ೧೭೦೦-೨೫ ಎ೦ದು ಅಂದಾಜು ಮಾಡಲಾಗಿದೆ. ೧೭೦೦ಕ್ಕಿಂತ ಪೂರ್ವದಿಂದಲೂ ಜೀವಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.  

೨. ಅಖಂಡೇಶ್ವರ ವಚನಗಳ ಪ್ರಾಚೀನ ಮುದ್ರಿತ ಪ್ರತಿಗಳಲ್ಲಿ ಶ್ರೀ ಷಣ್ಮುಖ ಸ್ವಾಮಿಗಳು ಶ್ರೀ ಬಸವಲಿಂಗದೇವರಿಗೆ ನಿರೂಪಿಸಿದ ಅರುಹಿನ ಷಡುಸ್ಥಲದ ವಚನ ಎಂಬ ಉಲ್ಲೇಖ ಇದ್ದು ಈ ಬಸವಲಿಂಗಸ್ವಾಮಿಗಳು ಕಲಬುರ್ಗಿಯ ಗದ್ದುಗೆ ಮಠದ ಮೂಲ ಸ್ಥಾಪಕರಾಗಿದ್ದು ಜೀವಿಸಿದ್ದ ಕಾಲ ೧೭೨೫ ಎಂದು ತಿಳಿದುಬಂದಿದೆ. ಈ ವೇಳೆ ಗಾಗಲೇ ಷಣ್ಮುಖ ಶಿವಯೋಗಿಗಳು ವೃದ್ಧರಾಗಿರಬೇಕು ಎ೦ದೆನಿಸುತ್ತದೆ.  ಜೇವರ್ಗಿಯ ಷಣ್ಮುಖ ಶಿವಯೋಗಿ ಮಠದ ಇತ್ತೀಚಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಹಳೆಯ ಕಾಗದಗಳಲ್ಲಿ ದೊರೆತ ಆಧಾರದ ಮೇಲೆ ಇವರ ಕಾಲವನ್ನು ಜನನ ೧೬೩೯ ಶೂನ್ಯ ಪಟ್ಟಕ್ಕೊಡೆಯರಾದ ಕಾಲ ಕ್ರಿ. ಶ. ೧೬೫೯. ಲಿಂಗೈಕ್ಯರಾದ ಕಾಲ ೧೭೧೧ ಎಂದು ನಿರೂಪಿಸಿ ಒಟ್ಟು ೧೬೩೯-೧೭೧೧ರ ವರೆಗೆ ೭೨ ವರ್ಷಗಳ ಕಾಲ ಜೀವಿಸಿದ್ದರು ಎಂಬ ಅಂಶವನ್ನು ಒದಗಿಸಿದ್ದಾರೆ. ಈ ಹೇಳಿಕೆಯನ್ನೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ.

ಜೀವನ ಚರಿತ್ರೆ;

ಷಣ್ಮುಖ ಶಿವಯೋಗಿಗಳು ಜೀವಿಸಿದ್ದ ಕಾಲದಲ್ಲಾಗಲೀ ನಂತರದ ಕಾಲದಲ್ಲಾಗಲೀ ಅವರ ಚರಿತ್ರೆಯನ್ನು ಯಾವ ಕವಿಗಳೂ ಬರೆದ ಹಾಗೆ ಕ೦ಡು ಬರುವುದಿಲ್ಲ. ಅವರ ಚರಿತ್ರೆಯನ್ನು ತಿಳಿಯಲು ಇರುವ ಆಧಾರಗಳು, ಜೇವರ್ಗಿಯ ಮಠದಲ್ಲಿಯ ಕೆಲವು ಕಾಗದಗಳಲ್ಲಿಯ ವಿವರಗಳು ಐತಿಹ್ಯಗಳು ಜನಪ್ರತೀತಿ ಗಳಷ್ಟೇ ಆಗಿವೆ. ಇವುಗಳನ್ನು ಸಮರ್ಥಿಸಲು ಬಲವಾದ ಆಧಾರಗಳಿಲ್ಲವಾದರೂ ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಈ ಆಧಾರ ಗಳನ್ನೇ ಉಪಯೋಗಿಸಿಕೊಂಡು ಆಧುನಿಕರಲ್ಲಿ ಗುಂಜಿಹಳ್ಳಿ ಶ್ರೀ ಷಡಕ್ಷರ ಕವಿಯವರು ಶ್ರೀ ಷಣ್ಮುಖ ಶಿವಯೋಗೀಶ್ವರ ಕಾವ್ಯರತ್ನಾಕರ ಎಂಬ ಕಾವ್ಯವನ್ನು ರಚಿಸಿದ್ದಾರೆ. ವಿ. ಸಿದ್ಧ ರಾಮಣ್ಣರವರು ಷಟ್‌ಸ್ಥಲಜ್ಯೋತಿ ಷಣ್ಮುಖಸ್ವಾಮಿ ಎಂಬ ಸಂಗೀತ ಪ್ರಧಾನ ನಾಟಕ ರಚಿಸಿದ್ದಾರೆ. ಎಚ್. ತಿಪ್ಪೇರುದ್ರ ಸ್ವಾಮಿಯವರು ‘ಜಡದಲ್ಲಿ ಜಂಗಮ’ ಎ೦ಬ ಕಾದಂಬರಿಯನ್ನು ರಚಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯʼ ಜೇವರ್ಗಿಯು’ ಇವರ ಜನ್ಮಸ್ಥಳ. ಜೇವರ್ಗಿಯ ಹಿರೇಗೌಡರ ಮನೆತನದಲ್ಲಿಯ ಮಲ್ಲಪ್ಪಶೆಟ್ಟಪ್ಪ ಮತ್ತು ದೊಡ್ಡಮ್ಮ ಎಂಬ ದಂಪತಿಗಳಿಗೆ ಪುತ್ರರಾಗಿ ಜನಿಸಿದರು. ಮು೦ದ ಅಖಂಡೇಶ್ವರ ಗುರುಗಳ ಪರಿಸರದಲ್ಲಿ ಬೆಳೆದರು. ಪ್ರಾರಂಭದಲ್ಲಿ ಚರಜ೦ಗಮರಾಗಿ ಲೋಕ ಸಂಚಾರ ಕೈಗೊಂಡು ಸಮಕಾಲೀನ ಜಡ ಸಮಾಜದಲ್ಲಿ ಜ೦ಗಮತೆಯನ್ನು ಮೂಡಿಸುತ್ತ ಪರ್ಯಟನೆ ಮಾಡುತ್ತ ಕೊನೆಗೆ ಜೇವರ್ಗಿ ಸಮೀಪದ ಕೋಳಕೂರ ಗ್ರಾಮದ ಭೀಮಾನದಿ ತಟಾಕದ ಭೀಮಕೊಳ್ಳದಲ್ಲಿ ನೆಲಸಿ ದೀರ್ಘ ತಪಸ್ಸು ಮಾಡಿ ಯೋಗಸಿದ್ಧಿ ಪಡೆದುಕೊಂಡು ವಚನ ರಚನೆ ಮಾಡಿದರು. ಇವರ ದಿವ್ಯ ಸಾಧನೆಯನ್ನು ಮನಗಂಡ ಅಖಂಡೇಶ್ವರ ಸ್ವಾಮಿಗಳು ಜೋಗಿಕೊಳ್ಳದಿಂದ ಜೇವರ್ಗಿಗೆ  ಬರಮಾಡಿಕೊಂಡು ಕ್ರಿ. ಶ. ೧೬೫೯ರಲ್ಲಿ ತಾವು ಸ್ಥಾಪಿಸಿದ್ದ ವಿರಕ್ತ ಮಠದ ಪಟ್ಟಗಟ್ಟಿದರು. ಹೀಗೆ ಇವರು ಅಖಂಡೇಶ್ವರರು ಸ್ಥಾಪಿಸಿದ ಮಠದ ಅಧಿಪತಿಯಾಗಿ ಧರ್ಮತತ್ತ್ವ ಬೋಧನೆ ಮಾಡುತ್ತ ಅಲ್ಲಿಯೇ ಜೀವಿಸಿದ್ದು ಐಕ್ಯವಾದರು. ಇವರು ಗುರು ಅಖಂಡೇಶ್ವರರ ಅಂಕಿತದಲ್ಲಿ ವಚನಗಳನ್ನು ಬರೆದು ಪ್ರಸಿದ್ಧ ರಾದ್ದರಿಂದ ಮತ್ತು ಅಖಂಡೇಶ್ವರರ ನಂತರ ಪ್ರಸಿದ್ಧವಾದ ಆ ಮಠ ಷಣ್ಮುಖ ಶಿವಯೋಗಿಗಳ ಮಠ ಎಂದೇ ಹೆಸರು ಬಂದಿತು.

ಷಣ್ಮುಖ ಶಿವಯೋಗಿಗಳು ಬಸವಯುಗದ ವಚನಗಳ ಪರಿಭಾಷೆ, ವಸ್ತುಧೋರಣ, ರೀತಿ, ನೀತಿ ಇತ್ಯಾದಿಗಳನ್ನು ಬಸವೋತ್ತರ ಯುಗದಲ್ಲಿ ಪ್ರತಿನಿಧಿಸಿದ ವ್ಯಕ್ತಿ ಮಾತ್ರವಾಗಿರದೆ, ಬಸವಾದಿಗಳ ಪ್ರಗತಿಪರ ಸಮಾಜೋಧಾರ್ಮಿಕ ಸುಧಾರಣಾ ತತ್ತ್ವಗಳನ್ನು, ಜೀವಿಸಿದ್ದ ಯುಗದಲ್ಲಿ ಮುಂದುವರೆಸಿದರು. ಇವರು ಅಂತ್ಯಜರಲ್ಲಿ ಕೆಲವರಿಗೆ ಲಿಂಗದೀಕ್ಷೆ ನೀಡಿದ್ದಲ್ಲದೆ ಸಹಭೋಜನ ಮಾಡಿದರು ಎಂಬ ಹೇಳಿಕೆಯನ್ನು ಸಮರ್ಥಿಸುವಂತೆ ಜೇವರ್ಗಿಯ ಹರಿಜನ ಕೇರಿಯಲ್ಲಿ ಇವರ ಗದ್ದುಗೆಯ ಕುರುಹುಗಳನ್ನು ಕಾಣಬಹುದಾಗಿದೆ. ಅಂತ್ಯಜರು ಇವರನ್ನು ಗುರುವಾಗಿ ಸ್ವೀಕರಿಸಿದ್ದರು. ಒಂದು ಮುದಿ ಎತ್ತು ಅವಸಾನದ  ಸ್ಥಿತಿಯಲ್ಲಿರುವಾಗ ಅದನ್ನು ಆರೈಕೆ ಮಾಡಿ ಅದರಿಂದ ಕಂಥಾಭಿಕ್ಷೆ ಕಾಯಕ ಮಾಡಿಸಿದರೆಂಬ ಐತಿಹ್ಯ ಇದೆ. ಈಗಲೂ ಜೇವರ್ಗಿಯ ಮಠದ ಮುಂದುಗಡೆ ನಂದಿಯ ಸಮಾಧಿ ಇದೆ. ಸುರಪುರದ ದೊರೆ ವೆಂಕಟಪ್ಪನಾಯಕನ ಮಹಾಮಂತ್ರಿ ನಿಷ್ಠೆಯ ವೀರಪ್ಪನವರು ಷಣ್ಮುಖ ಶಿವಯೋಗಿಗಳಿಗೆ ರಾಜಮರ್ಯಾದೆ ನೀಡಿ ಅವರನ್ನು ರಾಜಗುರುಗಳೆಂದು ಸ್ವೀಕರಿಸಿ ಜೇವರ್ಗಿಯಲ್ಲಿ ಅವರಿಗಾಗಿ ಒ೦ದು ಮಠವನ್ನು ಕಟ್ಟಿಸಿದ್ದರು. ಹೀಗೆ ಇವರು ವಿರಕ್ತಮಠದ ಅಧಿಪತಿಯಾಗಿ ಲೋಕೋದ್ಧಾರವನ್ನು ಕೈಗೊಳ್ಳುತ್ತಲೇ ಕ್ರಿ. ಶ. ೧೭೧೧ರಲ್ಲಿ ಶಿವಸಾಯುಜ್ಯ ಪದವಿಯನ್ನು ಪಡೆದರು. ಇವರ ಹೆಸರಿನ ರಥೋತ್ಸವವು ಪ್ರತಿವರುಷ ವೈಶಾಖ ಬಹುಳ ಪಂಚಮಿ ತಿಥಿಗೆ ಜೇವರ್ಗಿಯಲ್ಲಿ ಇಂದಿಗೂ ವೈಭವದಿಂದ ನಡೆಯುತ್ತದೆ.  

 ಕನ್ನಡ ಸಂಸ್ಕೃತಿಯಲ್ಲಿ  ಷಣ್ಮುಖ ಶಿವಯೋಗಿಗಳ ಕುರುಹುಗಳು :

 ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಷಣ್ಮುಖ ಶಿವಯೋಗಿಗಳ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಇವರು ಐಕ್ಯವಾದ ಗದ್ದುಗೆ ಜೇವರ್ಗಿಯಲ್ಲಿ ಇಂದಿಗೂ ಇದ್ದು ಪೂಜೆಗೊಳ್ಳುತ್ತಿದೆ. ಅಖಂಡೇಶ್ವರರು ಜೇವರ್ಗಿಯಲ್ಲಿ ಮಠವನ್ನು ಕಟ್ಟಿಸಿದ್ದರೂ ಇ೦ದಿಗೂ ಅದನ್ನು ಷಣ್ಮುಖ ಶಿವಯೋಗಿಗಳ ಮಠ ಎಂದೇ ಕರೆಯುತ್ತಾರೆ, ಜೇವರ್ಗಿಯ ಹರಿಜನ ಕೇರಿಯಲ್ಲಿಯೂ ಇವರ ಗದ್ದುಗೆ ಇದೆ. ಇವರ ಹೆಸರಿನ ಮಠಗಳು ಜೀವರ್ಗಿಯಲ್ಲಿ ಮಾತ್ರವಲ್ಲದೆ ಸುರಪುರ, ನೆಲೋಗಿ ಮತ್ತು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿರ್ಲಗಾ ತಾಲ್ಲೂಕಿನ ತಾಂಬಾಳಗಳಲ್ಲಿಯೂ  ಇವೆ. ಇವರು ಪೂಜೆ, ಅಧ್ಯಯನ ಮತ್ತು ಬರವಣಿಗೆಗೆ ತೊಡಗುತ್ತಿದ್ದ ಕೋಳತೂರ ಗ್ರಾಮದ ಭೀಮಾನದಿ ಹತ್ತಿರದ ಯೋಗಿಕೊಳ್ಳದ ಸುಂದರ ತಾಣವನ್ನು ಈಗಲೂ ಕಾಣಬಹುದು. 

ವಚನಗಳು ಮತ್ತು ಲಘು ಕೃತಿಗಳು:

 ಇವರು ವಚನಗಳನ್ನು ಮತ್ತು ಕೆಲವು ಲಘು ಕೃತಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಅಖಂಡೇಶ್ವರ ಅಂಕಿತದ ೭೧೭ ವಚನಗಳೂ ಉಪಲಬ್ಧತವಾಗಿವೆ. ೪೧ ಚೌಪದಿಗಳುಳ್ಳ ಅಖಂಡೇಶ್ವರ ಜೋಗುಳ ಪದಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಇವರ ಬರೆದಿದ್ದವುಗಳೆಂದು ಹೇಳಲಾದ ಏಳು ಪರಿವರ್ಧಿನಿ ಷಟ್ಪದಿಯುಳ್ಳ ಪ೦ಚಸಂಜ್ಞೆಗಳ ಪದ ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಿರಾಳಸದ್ಗುರುಸ್ತೋತ್ರ ದೊರೆತವುಗಳಾಗಿವೆ. ಇವುಗಳ ಜೊತೆಗೆ ಇವರು ಷಣ್ಮುಖ ಶಿವಯೋಗಿಗಳ ನಾಂದ್ಯ, ಪ್ರಾಣಲಿಂಗಸ್ಥಲದ ವ್ಯಾಖ್ಯಾನ ಕಾಲಜ್ಞಾನ ಸಾಹಿತ್ಯಗಳನ್ನು ಬರೆದಿರುವುದಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿ  ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ  ಮಹಾಸ್ವಾಮಿಗಳು, ಮಠಕ್ಕೆ ನಾನು ಭೇಟಿಕೊಟ್ಟಾಗ ತಿಳಿಸಿದ್ದಾರೆ. ಸದ್ಯಕ್ಕೆ ಇವು ಅನುಪಲಬ್ದವಾಗಿವೆ.

 ಷಣ್ಮುಖ ಶಿವಯೋಗಿಗಳೇ ತಮ್ಮ ವಚನಗಳನ್ನು ಸ್ಥಲಕಟ್ಟಿಗನುಗುಣವಾಗಿ ಜೋಡಿಸಿದ್ದಂತೆ ಕಾಣುತ್ತದೆ. ಈ ವಚನಗಳು ಮುಖ್ಯವಾಗಿ ವೀರಶೈವ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿ ಕಂಡುಬರುತ್ತದೆಯಾದರೂ , ತನ್ನ ಕಾಲದ ಇತರ  ವಚನಕಾರರಲ್ಲಿ ಇಲ್ಲದ ಸಾಮಾಜಿಕ ವಿಡಂಬನೆ ಕ್ರಾಂತಿಕಾರಿಕ ಆಲೋಚನೆ, ಅನುಭಾವ ತತ್ತ್ವದರ್ಶನಗಳನ್ನು  ಕಾಣಬಹುದಾಗಿದೆ. ಇವರ ವಚನಗಳು ೧೪ ಸ್ಥಲಗಳಲ್ಲಿ ವಿಭಜನೆಗೊಂಡಿವೆ. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣ ಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಪ೦ಚಾಕ್ಷರಿಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ ಪ್ರಾಣಿಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ.

ಷಣ್ಮುಖ ಶಿವಯೋಗಿಗಳು ಬಸವಾದಿ ಪರಂಪರೆಯ ವಚನಕಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ವಚನಗಳಿಂದ ಪ್ರಭಾವಿತರಾಗಿದ್ದಾರೆ. ಕರಗಳನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ. ಕೆಳಕಂಡ ವಚನಗಳಲ್ಲಿ ತನಗಿಂತ  ಪೂರ್ವದ ಬಸವಾದಿ ಪ್ರಮಥರನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ

ಎನ್ನ ತನುವೆಸವಣ್ಣನು

ಎನ್ನ ಮನವೆ ಚೆನ್ನಬವಣ್ಣನು

ಎನ್ನ ಪ್ರಾಣವೇ ಪ್ರಭುದೇವರು

(ಶರಣಸ್ಥಲ ವ. ಸಂ. ೮೨ ಪು. ೩೩೬)

ಮಾದಾರಚೆನ್ನಯ್ಯನ ಬಾಯಿತಾಂಬೂಲವ ಮೆಲುವೆ

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನು೦ಬೆ

ಚೋಳಿಯಕ್ಕನ ಊಳಿಗದವನಾಗುವೆ

ಶ್ವಪಚಯ್ಯನ ಆಳಾಗಿರುವೆ

ಇನ್ನುಳಿದ ಸಕಲ ಗಣ೦ಗಳ ತೊತ್ತು ಬಂಟಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ

(ಪ್ರಸಾದಿಸ್ಥಲ ವ. ಸಂ. ೪೨ ಪು. ೧೮೮೯)

ಇದೇ ರೀತಿ ಸಿದ್ಧರಾಮ, ಉರಿಲಿಂಗಪೆದ್ದಿ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಬಿಬ್ಬಿ ಬಾಚಯ್ಯ, ಬೇಡರಕಣ್ಣಪ್ಪ ಮುಂತಾದ ನೂತನ ಪುರಾತನರನ್ನು ಒಂಭತ್ತು ವಚನಗಳಲ್ಲಿ ಸ್ಮರಿಸಿದ್ದಾನೆ.

ಬಸವಣ್ಣ, ಅಕ್ಕಮಹಾದೇವಿಯವರ ವಚನಗಳ ಪ್ರಭಾವ ಷಣ್ಮುಖ ಶಿವಯೋಗಿಗಳ ಮೇಲೆ ಯಾವ ರೀತಿ ಆಗಿದೆ ಎಂಬುದನ್ನು  ಹ. ನಂ.ವಿಜಯಕುಮಾರರವರು ತಾವು ಸಂಪಾದಿಸಿದ ಷಣ್ಮುಖ ಶಿವಯೋಗಿಗಳ ವಚನಗಳ ಕೃತಿಯ ಪ್ರಸ್ತಾವನೆಯಲ್ಲಿ   ನಿರೂಪಿಸಿದ್ದಾರೆ. ಆದಯ್ಯನ ವಚನಗಳ ಪ್ರಭಾವವೂ ಇವರ ವಚನಗಳ ಮೇಲಾಗಿರುವುದನ್ನು ಈ ಲೇಖನದಲ್ಲಿ ಪ್ರಥಮವಾಗಿ ಗುರುತಿಸಲಾಗಿದೆ.

ನೆರಕೆನ್ನೆಗೆ ತೆರೆಗಲ್ಲಕೆ

ಶರೀರ ಗೂಡುವೋಗದ ಮುನ್ನ…..  

ಲ್ಲುಹೋಗಿ ಬೆನ್ನುಬಾಗಿ

ಅನ್ಯರಿಗೆ ಹ೦ಗಾಗದ ಮುನ್ನ

(ಸ.ವ.ಸಂ. ೧ ವ.ಸಂ. ೧೬೧ ಪು. ೪೨)

ಬಸವಣ್ಣನವರ ಕಿರಿದಾದ ಈ ವಚನದಿಂದ ಪ್ರಭಾವಿತರಾಗಿ ಷಣ್ಮುಖ ಶಿವಯೋಗಿಗಳು ಸು. ಒಂದೂವರೆ ಪುಟದಷ್ಟು  ದೀರ್ಘವಾಗಿ ನಿರೂಪಿಸಿದ್ದಾರೆ.

ದೇಹವು ನಿಸ್ಸಾರವಾಗಿ ಯೌವ್ವನದ ಬಲಗೆಟ್ಟು

ಮುಪ್ಪಾವರಿಸಿ ಅಚೇತನಗೊಂಡು

ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾನಾಗಿ

ಆದಿವ್ಯಾದಿ ವಿಪತ್ತು

ರೋಗ ರುಜೆಗಳಿಂದ ಬಹು ದುಃಖಟ್ಟು

ಎದೆಗೂಡುಗಟ್ಟಿ ಬೆನ್ನು ಬಾಗಿ ಕಣ್ಣು ಒಳನಟ್ಟು

ಶರೀರ ಎಳಿತಾಟಗೊಂಡು ಕಾಲಮೇಲೆ ಕೈಯನೂರಿ

ಕೋಲ ಹಿಡಿದು ಏಳುತ್ತ ನಾನಾತರದ ದುಃಧಾವತಿಯಿಂದ

ರ್ತಕಟ್ಟು ನಷ್ಟವಾಗಿ ಹೋಯಿತು….

(ಸಂಸಾರ ಹೇಯಸ್ಥಲ ವ. ಸಂ. ೭)

ಈ ವಚನವು ಬಸವಣ್ಣನವರ ವಚನವು ಕೊಡುವಷ್ಟು ಸುಂದರವಾಗಿ ಅರ್ಥವಂತಿಕೆಯನ್ನು ಕೊಡಲಾರದು.

ನೀನೊಲಿದಡೆ ಕೊರಡು ಕೊನರುವುದಯ್ಯ

ನೀನೊಲಿದಡೆ ಬರಡು ಹಯನಹುದಯ್ಯ

ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯ

ನೀನೊಲಿದಡೆ ಸಕಲಪಡಿ ಪದಾರ್ಥ ಇದರಲ್ಲಿರ್ಪವು

ಕೂಡಲ ಸಂಗಮದೇವ (ಸ. ವ. ಸಂ. ೧ ವ. ಸಂ. ೬೬)

ಎ೦ಬ ಬಸವಣ್ಣನವರ ವಚನವನ್ನು ಅನುಸರಿಸಿ ಇವರು

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ

ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ

ನೀನೊಲಿದಡ ಕೊರಡೆಲ್ಲ ಕಲ್ಪವೃಕ್ಷವಯ್ಯ

ನೀನೊಲಿದಡ ಬರಡೆಲ್ಲ ಕಾಮಧೇನುವಯ್ಯ

ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ

(ಭಕ್ತಸ್ಥಲ ವ. ಸಂ. ೫೮ ಪು. ೮೫)

ಎಂದು ರಚಿಸಿದ್ದಾರೆ. ಈ ವಚನದಲ್ಲಿ ಹೇಳುವ ಧಾಟಿ, ಬಳಸಿರುವ ಭಾಷೆ ಎಲ್ಲವೂ ಬಸವಣ್ಣನಿಂದ ನಿಚ್ಚಳವಾಗಿ ಪ್ರಭಾವಿತವಾಗಿರುವುದನ್ನು ಧ್ವನಿಸುತ್ತದೆ.

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಕೂಡಲಸಂಗಮದೇವ

(ಸ. ವ. ಸಂ. ೧ ವ. ಸಂ. ೪೮೧)

ಬಸವಣ್ಣನವರ ವಚನ ಪಡಿಯಚ್ಚಿನಂತೆ ಕೆಳಕಂಡ ವಚನವನ್ನು ಶಿವಯೋಗಿಗಳು ರಚಿಸಿದ್ದಾರೆ.

ತಂದನೀನಯ್ಯ ಎನಗೆ ತಾಯಿನೀನಯ್ಯ ಎನಗೆ

ಬ೦ಧು ನೀನಯ್ಯ ಎನಗೆ ಬಳಗನೀನಯ್ಯ ಎನಗೆ

ಗತಿಯು ನೀನಯ್ಯ ಎನಗೆ ಮತಿಯು ನೀನಯ್ಯ ಎನಗೆ

ಸಕಲ ಚೈತನ್ಯವು ನೀನೆ ಅಯ್ಯ ಎನಗೆ

 ಅಖಂಡೇಶ್ವರ ನೀನೆದಿಕ್ಕಲ್ಲದೆ ಎನಗೆ ಮತ್ತಾರು ಇಲ್ಲಯ್ಯ

(ಮ.ಸ್ಥ. ವ. ಸಂ. ೭೭ ಪು. ೧೩೩)

ಷಣ್ಮುಖ ಶಿವಯೋಗಿಗಳು ಅಕ್ಕಮಹಾದೇವಿಯವರ  ವಚನಗಳಿಂದಲೂ ಪ್ರಭಾವಿತರಾಗಿ ವಚನಗಳನ್ನು ರಚಿಸಿದ ಹಾಗೆ ಕಂಡು ಬರುತ್ತದೆ. ನಿದರ್ಶನಕ್ಕೆ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಸರವೆತ್ತಿ ಹಾಡುವ ಕೋಗಿಲೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಎರಗಿ ಬ0ದಾಡುವ ತುಂಬಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಕೊಳನತಡಿಯೊಳಾಡುವ ಹ೦ಸೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಗಿರಿಗಹ್ವರದೊಳಗಾಡುವ ನವಿಲುಗಳಿರಾ

ನೀವುಕಾಣಿರೆ ನೀವು ಕಾಣಿರೆ

ಚೆನ್ನಮಲ್ಲಿಕಾರ್ಜುನನಲ್ಲಿದ್ದಹನೆಂದು ಹೇಳಿರೆ

(ಸ. ವ. ಸಂ. ವ. ಸಂ. ೧೭೪ ಪು. ೫೫)

ಎ೦ಬ ಅಕ್ಕಮಹಾದೇವಿಯ ವಚನದೊಂದಿಗೆ ಷಣ್ಮುಖ  ಶಿವಯೋಗಿಗಳ ವಚನವನ್ನು ಹೋಲಿಸಿ ನೋಡಿ.

ಅರಳಿಯ ಮರದೊಳಗಿರುವ ಅರಗಿಳಿಗಳಿರಾ

ನಮ್ಮ ಅಖಂಡೇಶ್ವರನ ಕಂಡಡೆ ಹೇಳಿರೇ

ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ

ನಮ್ಮ ನಾಗಭೂಷಣನ ಕಂಡಡೆ ಹೇಳಿರೇ

ಕೊಳನ ತೀರದೊಳಗಾಡುವ ಕಳ ಹಂಸೆಗಳಿರಾ

ನಮ್ಮ ಎಳೆಯ ಚಂದ್ರನ ಕಂಡಡೆ ಹೇಳಿರೇ

ಮೇಘ ಧ್ವನಿಗೆ ಕುಣಿವ ನವಿಲುಗಳಿರಾ

ನಮ್ಮ ಅಖಂಡೇಶ್ವರನೆಂಬ ಅವಿರಳ

ಪರಶಿವನ ಕಂಡಡೆ ಹೇಳಿರೇ

(ಶರಣಸ್ಥಲ ವ. ಸ. ೩೦ ಪು. ೩೧೫)

ವಚನವು ಭಾವಗೀತಾತ್ಮಕತೆಯಿಂದ ಕೂಡಿದ್ದು, ತೀವ್ರವಾದ ಸ೦ವೇದನೆ ಮತ್ತು ಅರಸುವಿಕೆ ಉಕ್ಕಿಬರುತ್ತದೆ. ಆದರೆ, ಅಕ್ಕಳಿಗಿದ್ದ ಇಷ್ಟದೈವವನ್ನು ಅರಸುವಿಕೆಯ ತುರ್ತು ಇವರಿಗಿತ್ತೆ? ಎಂದೆನಿಸುತ್ತದೆ. ಅಂಬಿಗರ ಚೌಡಯ್ಯನಲ್ಲಿಯ,

ಗಾಳಿಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿನಿನ್ನಧೀನವಲಯ್ಯ,

(ಸ.ವ.ಸಂ. ೧, ಪು. ೧೨೨)  

 ಎಂಬ ವಚನ ಷಣ್ಮುಖ ಶಿವಯೋಗಿಗಳಲ್ಲಿ ಕೆಳಕಂಡಂತೆ ಸಿಗುತ್ತದೆ.

ಗಾಳಿಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗಬೇಗ

ಗಾಳಿ ನಿರ್ಮಿಚ್ಚೆಯಲ್ಲ ಕೇಳಿರೋ ಜಾಳಮನುಜರಿರಾ

(ಭ.ಸ್ಥ, ವ.ಸಂ. ೨೨)

ಮಡಿವಾಳ ಮಾಚಯ್ಯನ ವಚನದ ಪ್ರಭಾವವೂ ಇವರ ಮೇಲಾಗಿದೆ.

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವನರಿಯದಿದ್ದರೆ

ಆ ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರದೇವಾ

ಎ೦ಬ ಮಡಿವಾಳ ಮಾಚಯ್ಯನ ವಚನದ ಜೊತೆ ಷಣ್ಮು ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಬಹುದು.

ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ

ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ

ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರ

(ಭ. ಸ್ಥ, ವ. ಸಂ. ೩೨ ಪು. ೭೨)

ಆದಯ್ಯನಲ್ಲಿ ಬರುವ

ತೀರ್ಥಯಾತ್ರೆಯ ಮಾಡಿ ಪಾಪನ ಕಳೆದಿಹನೆಂಬ

ಯಾತನೆ ಬೇಡ ಕೇಳಿರಣ್ಣಾ

ಅನಂತ ಕರ್ಮವಲ್ಲಾ ಒಬ್ಬ ಶಿವಭಕ್ತನ

ದರುಶನ ಸ್ಪರ್ಶನದಿಂದ ಕೆಡುವವು.

(ಸ. ವ. ಸಂ. ೧, ವ. ಸಂ. ೯೬೯)

ಎಂಬ ವಚನದ ಜೊತೆಗೆ ಷಣ್ಮುಖ ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಿದರೆ ಆದಯ್ಯನ ವಚನದಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು.

ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು

ಸಕಲ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ

ತೊಟ್ಟನ ತೊಳಲಿಬಳಲಿ ಬೆಂಡಾಗಲೇಕೊ

ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಭತ್ತೆಂಟು ಕೋಟಿ

ಕ್ಷೇತ್ರಂಗಳಿರ್ಪವು

ಆತನದರ್ಶನ ಸ್ಪರ್ಶನವಾದಾತಂಗೆ

ಅನಂತಕೋಟಿ ಭವ ಪಾಕ೦ಗಳು ಪರಿಹರವಪ್ಪುವು ನೋಡಾ

(ಭ.ಸ್ಥ. ವ. ಸಂ. ೮೨, ಪು. ೯

ಆದಯ್ಯನ ವಚನ :

ಮುತ್ತು ನೀರೊಳಗೆ ಹುಟ್ಟಿ ಮರಳಿನೀರಾಗದಂತೆ

ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ

(ಸ.ವ.ಸಂ. ೧ ವ. ಸಂ. ೧೦೭೨)  

ಎ೦ಬ ಉಪಮೆಯು

ಷಣ್ಮುಖ ಶಿವಯೋಗಿಗಳಲ್ಲಿ :

ನೀರು ಘಟ್ಟಿಕೊಂಡು ಮುತ್ತಪ್ಪುದಲ್ಲದೆ ಮುತ್ತುನೀರಪ್ಪುದೇ

ಅಯ್ಯ ?

ಹಾಲು ಹೆಪ್ಪುಗೊ0ಡು ತುಪ್ಪವಪ್ಪುದಲ್ಲದೆ ತುಪ್ಪಹಾಲಪ್ಪುದೇ

ಅಯ್ಯ ?

ಎ೦ದು ನಿರೂಪಿತವಾಗಿದೆ. ಇವರೀರ್ವರ ವಚನದ ವಸ್ತು, ಧಾಟಿ ಒ೦ದೇ ಆಗಿದೆ.

ಆದಯ್ಯನು ತನ್ನ ವಚನಗಳಲ್ಲಿ ಬಳಸಿರುವ ಸಂಸ್ಕೃತದ ಪ್ರಮಾಣ ಗ್ರಂಥಗಳಲ್ಲಿಯ ಸಂಸ್ಕೃತ ಶ್ಲೋಕಗಳಲ್ಲಿ ಕೆಲವನ್ನು ಷಣ್ಮುಖ ಶಿವಯೋಗಿಗಳು ಬಳಸಿದ್ದಾರೆ. ಆದಯ್ಯನು ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವ ಸಲುವಾಗಿ ಬಳಸಿರುವ

ಯಥಾಭೇರುಂಡ ಪಕ್ಷೀತ್ ದ್ವಿ ಮುಖಾತ್ ಪರಿಭುಂಜತೆ |

ತಥಾ ಭುಂಜಾಮಿ ದ್ವಿಮುಖಾಲ್ಲಿಂ

ಜಂಗಮಯೋರಹಂ

(ಸ.ವ.ಸಂ. ೧ ವ. ಸಂ. ೧೧೧೨)

ಎ೦ಬ ಸ೦ಸ್ಕೃತ ಶ್ಲೋಕವನ್ನೇ ಷಣ್ಮುಖ ಶಿವಯೋಗಿಗಳು ಸಹ ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವಲ್ಲಿ ಬಳಸಿದ್ದಾರೆ.

ಯಥಾ ಭೇರುಂಡ ಪಕ್ಷೀತ್ ದ್ವಿಮುಖೇನ ಪ್ರಭುಂಜತೆ |

ತಥಾ ಚ ಉಮಯಾದೇವಿ ಮಮ ತೃಪ್ತಂತು ಜಂಗಮಂ ॥

(ಮ.ಸ್ಥ.ವ.ಸ೦.೮೫)

ಇಷ್ಟಲಿಂಗದ ಮಹತ್ತನ್ನು ಎತ್ತಿ ಹಿಡಿಯುವಲ್ಲಿ ಆದ್ಯಯನು ಬಳಸಿರುವ :

ಇಷ್ಟಲಿಂಗಮ ವಿಶ್ವಸ್ಯ ತೀರ್ಥ ಲಿಂಗಂತು ಯೋ ಭಜೇತ್ |

ಶುನಾಂ ಯೋನಿಶತಂತ್ವಾ ಚಂಡಾಲ ಗೃಹಮಾವಿಶೇತ್ ||

(ಸ.ವ.ಸಂ. ೧ ವ.ಸಂ. ೧೧೪೯)

ಎ೦ಬ ಉಕ್ತಿಯನ್ನೇ ಷಣ್ಮುಖ ಶಿವಯೋಗಿಗಳು ಸಹ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ ಕ೦ಡ ಕ೦ಡ ದೇಗುಲದೊಳಗನ ಕಲ್ಲದೇವರೆಂದು ಭಾವಿಸಿ ಪೂಜಿಸುವವರನ್ನು ಹೋಲಿಸಲು ಬಳಸಿದ್ದಾರೆ.

ಇಷ್ಟ ಲಿಂಗಮ ವಿಶ್ವಾಸಂ ಸ್ಥಾವರ ಲಿ೦ಗೇನ ಪೂಜನಂ |

ಶ್ವಾನಯೋನಿ ಶತ೦ಗತ೦ ಚಾಂಡಾಲೋಗೃಹಮಾಚರೇತ್ ||   

(ಮ.ಸ್ಥ.ವ.ಸಂ. ೮೬)

ಷಣ್ಮುಣ ಶಿವಯೋಗಿಗಳ ಪ್ರಾಣಲಿಂಗಿಸ್ಥಲದಲ್ಲಿ ಬರುವ ವಚನಗಳಂತೂ ಆದಯ್ಯನ ವಚನಗಳನ್ನು ನೆನಪು ಮಾಡಿ  ಕೂಡುತ್ತವೆ.

ಪೂರ್ವದ ವಚನ ಸಾಹಿತ್ಯದ ಪ್ರಭಾವ ಷಣ್ಮುಖ ಶಿವಯೋಗಿಗಳ ವಚನಗಳ ಮೇಲೆ ನಿಚ್ಚಳವಾಗಿರುವುದನ್ನು ಮೇಲಿನ ವಿವರಣೆಗಳು ದೃಢೀಕರಿಸುತ್ತವೆ. ಬಸವಣ್ಣ, ಅಕ್ಕಮಹಾದೇವಿ, ಆದಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಕಾಣಿಸಿಕೊಳ್ಳುವ ಸಂಕ್ಷಿಪ್ತತೆ, ಸೂತ್ರಬದ್ಧತೆ, ಉತ್ಕಟತೆ, ಕಲಾಮಂತಿಕೆ ಅಷ್ಟಾಗಿ ಇವರ ವಚನಗಳಲ್ಲಿ ಕಾಣಬರದೆ ವಾಚ್ಯತೆ, ವಿವರಣಾತ್ಮಕತೆಗೆ ಹೆಚ್ಚಿನ ಅವಕಾಶ ದೊರೆತಿದೆ.

ಒಂದು ಸಾಹಿತ್ಯಕ ಪರಂಪರೆ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ಮೇಲೆ ಬರುವ ಕೃತಿಕಾರರು ಆ ಹಿಂದಿನ

ಪರಂಪರೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮೌಲಿಕ ರಚನೆ ಮಾಡುವುದು ತ್ರಾಸಿನಕೆಲಸ, ಆದಾಗ್ಯೂ ಪ್ರತಿಭಾಶಾಲಿಗಳು ಆ ಪ್ರಭಾವವನ್ನು ಅರ್ಜಿಸಿಕೊಂಡು ಪರಂಪರೆಯಿಂದ ಬಿಡಿಸಿಕೊಂಡು ಮೌಲಿಕ ಕೃತಿರಚನೆ ಮಾಡುವ ಸಾಧ್ಯತೆ ಇದೆ. ಷಣ್ಮುಖ ಶಿವಯೋಗಿಗಳು ಪೂರ್ವದ ವಚನಕಾರರ ಪರಂಪರೆಯನ್ನು ಗೌರವಿಸಿ ಪ್ರಭಾವಿತರಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೂ ಇವರ ೭೧೭ ವಚನಗಳೆಲ್ಲವೂ ಪೂರ್ವದ ಅನುಸರಣೆಯಿಂದ ಪ್ರೇರಿತವಾಗಿ ರಚಿತವಾದವುಗಳಲ್ಲ. ಸ್ವಂತಿಕೆಯ ವಚನಗಳು ಇವೆ

ಇವರು ತನ್ನ ಕಾಲದಲ್ಲಿ ಇದ್ದ ಸಹಗಮನ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಎಂಬುದು ಕೆಳಕಂಡ ವಚನದಿಂದ ವಿದಿತವಾಗುತ್ತದೆ.

ಗ೦ಡಸತ್ತನೆ೦ದು ಗ೦ಡನೊಡನೆ ಕೆಂಡವ ಬೀಳುವನೆಂದು

ಪುಂಡ ವೀರಮಾಸ್ತಿ ತಾನುದಂಡೆಯ ಕಟ್ಟಿಕೊಂಡು

ಖಂಡಯವ ಪಿಡಿದು ತಂಡ ತಂಡದ ಜನರ ಮುಂದೆ

ಮೆರೆದು ಕೊಂಡು ಬಂದು

ಕಿಚ್ಚಿನ ಹೂ೦ಡವಕಂಡು ಹೆದರಿ ಹಿಮ್ಮೆಟ್ಟಿದಡೆ

ಅವಳಿಗದೇ ಭ೦ಗವಲ್ಲದೆ ಶೃಂಗಾರ ಮೆರವುದೇ ಅಯ್ಯ ?

(ಮ.ಸ್ಥ.ವ.ಸು. ೧೩೮)

ಪ೦ಚೇಂದ್ರಿಯ, ಅರಿಷಡ್ವರ್ಗ, ಕರಣ ಚತುಷ್ಟಯ ಇತ್ಯಾದಿ ಲೌಕಿಕ ಲೋಕ ವಿಚಾರಗಳಿಂದ ತನ್ನ ತನುಮನಗಳಲ್ಲಿ ಉಂಟಾದ ತುಮುಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳಿಂದ ಪಾರಾಗುವ ನಿರಸನಗೊಳ್ಳುವ, ತನ್ನ ಅಂತರಂಗವನ್ನು ಒರೆಹಚ್ಚಿ ನೋಡುವಂತಹ  ಭಕ್ತನ ಅ೦ತರಂಗದ ನಿರೀಕ್ಷಣೆಯನ್ನು ಸೂಚಿಸುವ ಭಾವತೀವ್ರತೆಯ ಲಕ್ಷಣವನ್ನು, ಇಂತಹ ಸಂದರ್ಭದಲ್ಲಿ ಗುರುವನ್ನು ಮೊರೆ ಹೋಗುವಂತಹ ಅಂಶಗಳನ್ನು ಷಣ್ಮುಖ ಶಿವಯೋಗಿಗಳ ಸಂಸಾರ ಹೇಯಸ್ಥಲದಲ್ಲಿ ಬರುವ ವಚನಗಳಲ್ಲಿ ಕಾಣಬಹುದು.

ನಿದರ್ಶನಕ್ಕೆ,

 ಕೆಟ್ಟೆಕೆಟ್ಟೆನಯ್ಯ, ಒಡಲುಪಾಧಿವಿಡಿದು

ಕೆಟ್ಟೆ ಕೆಟ್ಟೆನಯ್ಯ ಒಡಲುದುರ್ಗುಣದೊಡನಾಡಿ

ಕೆಟ್ಟೆ ಕೆಟ್ಟೆನಯ್ಯ ನಿಮ್ಮಡಿಯ ಶತ್ತಿಯ ಮೆರೆದು

(ಸ.ಹೇ.ಸ್ಥ.ವ.ಸಂ. ೧೦)

ಮನವೆಂಬ ಮರ್ಕಟನು ತನುವೆ೦ಬ ವೃಕ್ಷವನೇರಿ

ಇ೦ದ್ರಿಯಗಳೆಂಬ ಶಾಖೆಗೆ ಹಾರಿ ವಿಷಯಗಳೆಂಬ

ಹಣ್ಣು ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ

ಈ ಮನವೆ೦ಬ ಮರ್ಕಟನ ನಿಮ್ಮನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿ ಕೊಳ್ಳಯ್ಯ

(ಅದೇ .ಸಂ.೧೪)

ಕುಸಿವು  ತೈಷಯಂಡಲೆಯಾವರಿಸಿ ಕುಸಿವ

  ದೆಸೆದೆಸೆಗೆ  ತಿರ್ಪದು ನೋಡಾ ತನುವು

ವಿಷಯ ವಿಕಾರದ೦ಡಲೆಯಾವರಿಸಿ

ದೆಸೆದೆಸೆಗೆ ನುಸುಳು ತಿಪ್ಪುದು ನೋಡಾ ಮನವು

ಈತನು ಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು

(ಅದೇ ವ. ಸಂ. ೧೭)

ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ

ಸಾಕು ಮಾಡದು ಭವಬ೦ಧನ೦ಗಳ

ನೂಕಿಬಿಡದು ಸಕಲಸ೦ಸಾರವ

ಬೇಕೆ೦ದಳಿಸುವದು ವಿಷಯ ಭೋಗಕ್ಕೆ

(ಅದೇ ವ.ಸಂ. ೧೮)

ಸಕಲ ಲೋಕಾದಿಲೋಕಂಗಳು ಮಾಯಾಬಲೆಯಲ್ಲಿ ಸಿಲ್ಕಿ

ಸೆರೆ ಹೋಗುವುದು ಕಂಡು ನಾನಂಜಿ

ನಿಮ್ಮ ಮೊರೆಹೊಕ್ಕೆ ಕಾಯಯ್ಯ ಕಾರುಣ್ಯನಿಧಿಯೇ

(ಅದೇ ವ.ಸಂ. ೨೦)

ಷಟ್‌ಸ್ಥಲವು ಇವರಲ್ಲಿ ಕೇವಲ ಸಾಧನೆಯ ಮಾರ್ಗವಾಗಿರದೆ ಸಿದ್ಧಾಂತವಾಗಿಯೂ ನಿರೂಪಿಸಲ್ಪಟ್ಟಿದೆ. ಶಾಸ್ತ್ರೀಯ ನಿರೂಪಣೆ ಯನ್ನು ವಚನಗಳಲ್ಲಿ ಕಾಣಬಹುದು. ಪ್ರತಿಯೊಂದು ಸ್ಥಲದ ಸ್ವರೂಪ, ಲಕ್ಷಣ, ವೈಶಿಷ್ಟ್ಯಗಳು, ಅದರೊಳಗೆ ಸೇರುವ ಭಕ್ತಿಜ್ಞಾನ, ವೈರಾಗ್ಯ, ಅನುಭಾವ, ದಾಸೋಹ, ಕಾಯಕ ಶಿವಯೋಗ, ಶೀಲಚಾರಿತ್ರ ನೇಮ ಎಲ್ಲವೂ ಕ್ರಮಬದ್ಧವಾಗಿ ನಿರೂಪಿಸಲ್ಪಟ್ಟಿದೆ. ಕೆಲವೆಡೆ ಹೋಲಿಕೆಯೊಡನೆ ನಿರೂಪಿಸಲ್ಪಟ್ಟಿದೆ.

 ಉದಾ : ಭಕ್ತನಾದವನಿಗೆ ನುಡಿ, ತನು, ಮನ ಭಾವ, ಸರ್ವಕ್ರಿಯೆಯೆಲ್ಲವೂ ಶುದ್ಧವಾಗಿರಬೇಕು. ಲಿಂಗನಿಷ್ಠಾ ಪರನಾಗಿಯೂ, ಜಂಗಮವೇ ಪ್ರಾಣವಾಗಿಯೂ, ಅರ್ಥ ಪ್ರಾಣಾಭಿಮಾನ೦ಗಳು ಶಿವನ ಕೂಡಿರಬೇಕು. ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವುದು. ಲಿಂಗಜಂಗಮ ಒಂದೆಯಾಗಿ ಕಾಂಬುದು, ವಿಭೂತಿ, ರುದ್ರಾಕ್ಷಿ ಲಿಂಗಧಾರಣ ಮುಂತಾದ  ಶಿವಲಾಂಛನವುಳ್ಳಂಥ ಶಿವಶರಣರಲ್ಲಿ ಅತಿಭಕ್ತಿ ಯಾಗಿರಬೇಕು ಎಂದು ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಪರಸ್ತ್ರೀಯರ ಮುಟ್ಟದಿರುವ, ಪರಧನವ ಅಪಹರಿಸದಿರುವ, ಪರದೈವವ ಪೂಜಿಸದಿರುವ, ಪರಹಿಂಸೆಯ ಮಾಡದಿರುವ ಪರಲೋಕದ ಫಲಪದವ ಬಯಸದಿರುವ, ಇಷ್ಟಲಿಂಗದಲ್ಲಿ ನೈಷ್ಠೆಯನ್ನು ಇಟ್ಟಿರುವವರೇ ವೀರಮಾಹೇಶ್ವರರು ಎಂದು ಹೇಳಿದ್ದಾರೆ.

ಅನುಭಾವಿಯಾದವನು ತಿರುಳುಕರಗಿದ ಹುರಿದ ಬೀಜದಂತಿರಬೇಕು. ದಗ್ಧ ಪಟದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.

ಇವರ ವಚನಗಳಲ್ಲಿ ಯೋಗ ಶಿವಯೋಗಗಳ ಬಗೆಗೂ ಉಲ್ಲೇಖ ಇದೆ. ಪ್ರಾಣಲಿಂಗಿಸ್ಥಲದ ಬಹುತೇಕ ವಚನಗಳು  ಯೋಗದ ವಿವರಣೆಗಾಗಿಯೇ ಮೀಸಲಾಗಿವೆ. ಮಂತ್ರ, ಲಯ ಹಠಯೋಗ, ರಾಜಯೋಗಗಳೆಂಬ ಚತುರ್ವಿಧಯೋಗಗಳ ಸ್ವರೂಪ, ಅವುಗಳಲ್ಲಿಯ ವಿಧಗಳು ಲಕ್ಷಣ ಇತ್ಯಾದಿಗಳ ಪ್ರತ್ಯಕ್ಷ ಅನುಭವಗಳನ್ನು ಸ್ಫುಟವಾಗಿ ನಿರೂಪಿಸಿ ಇವೆಲ್ಲವುಗಳಿಗಿಂತ ಮಿಗಿಲಾದದ್ದು ‘ಶಿವಯೋಗ’ ಎಂದು ಹೇಳಿ ಇದರಿಂದಲೇ ವ್ಯಕ್ತಿಯ ಪರಿಪೂರ್ಣ ಸಿದ್ಧಿಸಾಧ್ಯ ಎಂದು ನಿರೂಪಿಸಿದ್ದಾರೆ. ಅಷ್ಟಾವರಣಗಳ ಮಹತ್ವದ ಬಗೆಗೂ ವಚನಗಳಲ್ಲಿ ವಿವರವಿದೆ. ಅಷ್ಟಾವರಣಗಳಲ್ಲಿ ಒಂದಾದ ವಿಭೂತಿಯ ಬಗೆಗೆ ಒಂದು ಸ್ಥಲವನ್ನೇ ಮೀಸಲಾಗಿರಿಸಿದ್ದಾನೆ. ವಿಭೂತಿಯ ಲಕ್ಷಣ ಪ್ರಕಾರಗಳು ಮಹತ್ವ ಇತ್ಯಾದಿಗಳ ಬಗೆಗೂ ಸವಿವರವಾದ ನಿರೂಪಣೆ ಇದೆ. ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತ ಕೋಟಿ ಪಾತಕ೦ಗಳು  ಪರಿಹಾರವಾಗಿ ಶಿವಸಾಯುಜ್ಯ ಪದವು ದೊರೆಕೊಂಬುದು ಎಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಏಳು ವಚನಗಳಲ್ಲಿ ರುದ್ರಾಕ್ಷಿಯ ಬಗೆಗೆ ನಿರೂಪಿಸಲಾಗಿದೆ.

ವ್ಯಕ್ತಿಯ ವ್ಯಕ್ತಿತ್ವದ ಉನ್ನತ ಮೌಲ್ಯಗಳಾದ ಶೀಲ ,ಚಾರಿತ್ರ, ವ್ರತ ನೇಮಗಳ ನಿರೂಪಣೆಯು ಇವರ ವಚನಗಳಲ್ಲಿ ನಿರೂಪಿತವಾಗಿದೆ.

ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ,

ಛಲವಿರಬೇಕು ನಿತ್ಯ ನೇಮದಲ್ಲಿ

ಶೀಲವ್ರತದಲ್ಲಿ ಹಿಡಿದು ಬಿಡನೆಂಬ ಸಟೆಯನಾಡದೆ

ಸತ್ಯವಚನವ ನುಡಿವಾತ

ಕುಟಿಲ ಕುಹಕವ ಮರೆತು ಸದಾಚಾರದಲ್ಲಿ

ನಡೆವಾತನೇ ಸದ್ಭಕ್ತ

ಸುರಚಾಪದಂತೆ ತೋರಿ ಅಡಗುವ ಮನವನಚ್ಚ ಬೇಡ

ಪರಧನ ಪರಸ್ತ್ರೀಯರ ಮುಟ್ಟವೆಂಬುದೆ ಎನ್ನ ಶೀಲ

ಒಡಲುಪಾಧಿಕೆಯ ವಿಡಿದು ಅನ್ಯರ ಅನ್ನ ವಸ್ತ್ರಂಗಳ

ಬಾಯ್ದೆರೆದು ಬೇಡನೆಂಬುದ ಎನ್ನ ವ್ರತ

ಸಕಲ ಪದಾರ್ಥ೦ಗಳ ಲಿಂಗಕ್ಕೆ ಕೊಡದೆ ಅ೦ಗದಿಚ್ಛೆಗೆ

ಕೊಳ್ಳೆನೆ೦ಬುದೇ ನೇಮ

ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು

ಗುರುಲಿಂಗ ಜಂಗಮದಲ್ಲಿ

ನಯವಿರಬೇಕು ಸಕಲ ಗುಣಂಗಳಲ್ಲಿ ಸ್ನೇಹವಿರಬೇಕು

ನುಡಿಗಡಣದಲ್ಲಿ

ಇತ್ಯಾದಿಯಾಗಿ ಆತ್ಮೀಯವಾದ ನುಡಿಗಳಲ್ಲಿ ನವುರಾಗಿ ನೀತಿಬೋಧನೆ ಮಾಡುವುದರ ಮೂಲಕ ವ್ಯಕ್ತಿ ಚಾರಿತ್ರ ಸಂಪನ್ನನಾಗಿ ಸಾರ್ಥಕ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ.

ಸಮಕಾಲೀನ ಸಮಾಜದಲ್ಲಿ ಕಂಡು ಬಂದ ಕುಂದು ಕೊರತೆಗಳು ವೈಪರೀತ್ಯಗಳನ್ನು ನವುರಾಗಿಯೂ, ಕಠೋರವಾಗಿಯೂ ವಿಡಂಬಿಸಿ ಅವುಗಳನ್ನು ನಿವಾರಿಸುವ ಯತ್ನವನ್ನು ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ಇಲ್ಲೆಲ್ಲಾ ಉಪಮೆ, ರೂಪಕ, ದೃಷ್ಟಾಂತ ನಾಣ್ಣುಡಿ, ಗಾದೆ ಮಾತುಗಳಿಗೆ ಹೆಚ್ಚಿನ ಆದ್ಯತೆ ತಲುಪಿದೆ.

ಬ೦ಧನಕ್ಕೊಳಗಾದ ಹುಲಿಗೆ ಬಲತ್ಕಾರ ಉಂಟೆ ಅಯ್ಯ ?

ಸ೦ಸಾರದ೦ದುಗದಲ್ಲಿ ತೊಳಲುವ ಜೀವನಿಗೆ

ಮು೦ದೆ ಮುಕ್ತಿಯನರಸುವ ಜ್ಞಾನ ಉ೦ಟೇ ಅಯ್ಯ

ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ

ಸಿರಿಯೆಂಬುದು ಕನಸಿನ ಪರಿಯಂತೆ

ಮಡದಿ ಮಕ್ಕಳು ಪಡೆದ ದ್ರವ್ಯವು ಎನ್ನೊಡವೆ ಎಂದು

ನಚ್ಚಬೇಡಿರೊ ಎಲೆ ಹುಚ್ಚು ಮಾನವರಿರಾ ಎಂದು ಎಚ್ಚರಿಸಿದ್ದಾರೆ.

ಮಹೇಂದ್ರ ಜಾಲದ೦ತೆ ಕಣ್ಣ ಮುಂದೆ ಒಡ್ಡಿದ

ಹುಸಿಯ ಸ೦ಸಾರದಲ್ಲಿಯೇ ಎಡ್ಡಾಗಬೇಡಿರೋ 

ಎಂದು ಕಿವಿಮಾತು ಹೇಳಿದ್ದಾರೆ. ಅನ್ಯರಲ್ಲಿ ಅವಗುಣವ ಅರಸುವವರನ್ನು’ ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನು ಅರಿಯದೆ ಪರರ ಎಡೆಯಲ್ಲಿ ನೊಣವ ಅರಸುವ ಮರಳುಗಳಿಗೆ   ಹೋಲಿಸಿದ್ದಾರೆ. ವೇಷದಾರಿ ಮಹಾಂತರನ್ನು ಹೊರಗೆ ಆಡಂಬರದ ವೇಷವ ತಾಳಿ ಜಡೆಯ ಬಿಟ್ಟರೇನು ಆಲದ ಮರಕ್ಕೆ ಬೇರಿಳಿದಂತೆ ಎಂದು ಮೂದಲಿಸಿದ್ದಾರೆ. ಪರಧನ, ಪರಸ್ತ್ರೀಯರ ಬಿಟ್ಟರೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ ಎಂದು ಒಂದಡೆ ನಿರೂಪಿಸಿದ್ದಾರೆ. ಕನಕ, ಕಾಮಿನಿ ಭೂಮಿಗಾಗಿ ಹೊಡೆದಾಡಿ ಕಟ್ಟಿತೀ ಜಗವೆಲ್ಲಾ ಎಂದು ನೊಂದಿದ್ದಾರೆ. ತನ್ನ ತಾನರಿಯದೆ ಅನ್ಯರ ಗುಣಾವಗುಣಂಗಳ ಎತ್ತಿ ಹಿಡಿಯುವವರನ್ನು, ಸಜ್ಜನ ಸದ್ಭಾವಿ ಸತ್ಪುರಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವವರನ್ನು ಶಿವಶರಣರೆಂದು ಹೇಗೆ ಕರೆಯಲಿ ಎಂದು ಚಿಂತಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಆಸೆಪಟ್ಟರೆ ಸಂಚಿತ ಪ್ರಾರಬ್ಧ ಆಗಾಮಿಕರ್ಮ ಬಿಡದು ಎಂದು ಎಚ್ಚರಿಸಿದ್ದಾರೆ. ಕೇವಲ ಮಾತಿನಲ್ಲಿ ತಾವು ಶಿವಾನುಭಾವಿಗಳೆಂದು ಗಳಹುತ್ತಿರುವವರನ್ನು ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋಮಾತುಗಳ ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಲೆಗುಟ್ಟುವ ಒಣಹರಟೆಗಾರರು ಎಂದೂ, ಅ೦ತರ೦ಗದಲ್ಲಿಯ ಅರಿಷಡ್ವರ್ಗ, ಅಷ್ಟಮದ, ಕರಣ ಚತುಷ್ಟಯಗಳನ್ನು ನಿಗ್ರಹಿಸದೆ ಬಹಿರಂಗದಲ್ಲಿ ಹಲವು ವ್ರತಗಳನ್ನು ಪಾಲಿಸುತ್ತ ತಾವು ಶೀಲವಂತರೆಂದು ಹೇಳಿಕೊಳ್ಳುವವರನ್ನು ‘ಹುತ್ತದೊಳಗಣ ಹಾವ ಕೊಲುವನೆಂದು ಮೇಲೆ ಹುತ್ತವ ಬಡಿವ ಅರೆ ಮರುಳರು ಎಂದು ಹರಿತವಾಗಿ ವಿಡಂಬಿಸಿದ್ದಾರೆ. ಭಕ್ತಿಯ ಮರೆತು ಯುಕ್ತಿ ಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳ್ ಮುಳು ಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಎಂದು ಹೀಗಳೆದಿದ್ದಾರೆ. ವೇದಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸ೦ಗಳ ಓದಿ ಹೇಳುವಾತ ಇವರ ಪ್ರಕಾರ ಜಾಣನಲ್ಲ. ಹೊನ್ನೆನ್ನದು, ಮಣ್ಣೆನ್ನದು, ಹೆಣ್ಣೆನ್ನೆದು, ಮನೆಯೆನ್ನದು., ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತ ಜಂಗಮರೊಡನೆ ಸಹಭೋಜನ ಮಾಡಿದಡೆ ಕುನ್ನಿ ಕುಕ್ಕಟನ ಬಸುರಲ್ಲಿ ಬರುವುದು ತಪ್ಪದು ಎಂದು ಎಚ್ಚರಿಸಿದ್ದಾರೆ. ಇವರು ಪೂರ್ವದ ವಚನಕಾರರ ತತ್ತ್ವಗಳನ್ನು ಒಪ್ಪಿಕೊಂಡು ಅದರಂತೆ ನಡೆದವರು, ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ಹೇಳುವಂತಹ, ಸದಾಚಾರವನ್ನು ಬಯಸುವಂರಹವನ್ನು ಕುರಿತ ವಚನಗಳಲ್ಲಿ ಭಾಷೆಯಲ್ಲಿ ಸರಳತೆ ಇದೆ. ಪ್ರಾಸಬದ್ಧತೆ ಇದೆ. ತನ್ನನ್ನು ಪರೀಕ್ಷಿಸಿಕೊಳ್ಳುವ ಟೀಕಿಸುವ ಗುಣ ಇದೆ.

ಇವರ ವಚನಗಳಲ್ಲಿ ಅನೇಕ ಯೋಗಾಸನಗಳ ಹೆಸರು ,ಆಚರಣೆಗಳು ಕೇಳಿ ಬರುತ್ತವೆ.  ಬಹುಶಃ ಬ್ರಹ್ಮಚಾರಿಗಳಾಗಿದ್ದ ಇವರು ಯೋಗಾಸನಗಳನ್ನು ಕಲಿತಿದ್ದಿರಬಹುದು. ಇವರ ವಚನಗಳಲ್ಲಿ ಹದಿನೈದಕ್ಕೂ ಮೇಲ್ಪಟ್ಟು ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಈ ಬೆಡಗಿನ ವಚನಗಳಲ್ಲಿ ಬಳಸಿರುವ ಭಾಷೆ ಲೌಕಿಕವಾಗಿದ್ದರೂ ತಲೆಕೆಳಕಾಗಿದ್ದು ಆಳವಾದ ಅನುಭಾವ ಮತ್ತು ಪಾಂಡಿತ್ಯದಿಂದ ಅರ್ಥೈಸಬೇಕಾಗುತ್ತದೆ.  ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ತತ್ತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣ ಇಣುಕಿ ಹಾಕಿದೆ. ಕೆಲವು ವಚನಗಳಲ್ಲಿ ತಾನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಅರ್ಥವಾಗುವಂತೆ ಮಾಡಲು ಉಪಮೆ, ರೂಪಕಗಳು ಗಾದೆಗಳು ನಾಣ್ಣುಡಿಗಳು ಯಥೇಚ್ಛವಾಗಿ ಬಳಸಿದ್ದಾರೆ. ಈ ಪದವಾಕ್ಯಗಳಲ್ಲಿ ಹುದುಗಿರುವ  ಅರ್ಥಗರ್ಭಿತವನ್ನು ಗಮನಿಸಬಹುದು.

ಉದಾ :

ಅಸಲುಕಳೆದ ಬಳಿಕ ಲಾಭ ಉಂಟೆ

ಉಪದೇಶವಿಲ್ಲದ ಲಿಂಗ ಜಡಪಾಷಾಣವೆ೦ದೆನಿಸಿತ್ತು

ಒಡಲಲ್ಲಿ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತಾಯಿತ್ತು

ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು ?

ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಕಡಿದು ನೋಡಿ

ಕಲ್ಲೊಂದು

ಬಿಸಾಡುವಲ್ಲದೆ ಅದರ ಬೆಳಗನರಿವುದೆ ಅಯ್ಯ ?

ಕಬ್ಬಿನ ಸ್ವಾದ ಮದಗಜ ಬಲ್ಲುದಲ್ಲದೆ ಕುರಿ ಎತ್ತ ಬಲ್ಲುದಯ್ಯ?

ಕ್ಷೀರದ ರುಚಿಯ ಹಂಸ ಬಲ್ಲುದಲ್ಲದೆ ನೀರಗೋಳ ಎತ್ತ

ಬಲ್ಲುದಯ್ಯ ?

ತೊಟ್ಟಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೆ

ಹಗಲ ಕಂಡ ಕಮರಿಯ ಇರುಳೆ ಬೀಳುವರೆ

ಹಂದಿ ಹಡಿಕೆಯ ನೆನಸಿ ಹಾಳುಗೇರಿಗೆ ಹೋಗುವಂತ

ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ ಸೀಳುನಾಯಿಗೆ

ಯೋಗ್ಯವೇ ?

ಸುಟ್ಟ ಮಡಕೆಯಲ್ಲಿ ನೀರು ತು0ಬಿದಡೆ ನಿಲುವುದಲ್ಲದೆ

ಹಸಿಯ ಮಡಕೆಯಲ್ಲಿ

ನೀರ ತುಂಬಿದಡ ದಿಟವಾಗಿ ನಿಲ್ಲುವುದೆ

ಇತ್ಯಾದಿ ನಿತ್ಯ ಜೀವನದ ಸೂಕ್ತಿಗಳು ಸಂದರ್ಭೋಚಿತವಾಗಿ ವಚನಗಳಲ್ಲಿ ಬಳಸಲ್ಪಟ್ಟಿವೆ.

ಇವರ ಶಬ್ಧ ಸಂಪತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳ ಪದಗಳನ್ನು ಗುರುತಿಸಬಹುದು. ಒಂದೇ ವಚನದಲ್ಲಿಯೇ ಅಚ್ಚಗನ್ನಡ ಶಬ್ದಗಳು, ಸಂಸ್ಕೃತ ಭೂಯಿಷ್ಠ ಪದಗಳು ಸಮ್ಮಿಳಿತವಾಗಿರುವುದನ್ನು ನೋಡಬಹುದು. ಇವರ ವಚನಗಳಲ್ಲಿಯ ಅದರಲ್ಲೂ ತಾತ್ವಿಕ ವಚನಗಳ ಶೈಲಿಯು ಹೆಚ್ಚು ವಿಸ್ತೃತದಿಂದ ಕೂಡಿದ್ದು ಗದ್ಯ ಲಯವನ್ನು ಪಡೆದಿದೆ. ಇವರ ವಚನಗಳ ಶಿಲ್ಪ ನಾಲ್ಕು ಸಾಲುಗಳ ಬಂಧದಿಂದ ನಾಲ್ಕು ಪುಟದವರೆಗೂ ದೀರ್ಘಾರ್ತಕವಾಗಿದೆ.

ವೀರಶೈವಸಿದ್ಧಾಂತವನ್ನು ತರ್ಕಬದ್ಧವಾಗಿ ನಿರೂಪಿಸಲು ಸಂಸ್ಕೃತ ಪ್ರಮಾಣ ಗ್ರಂಥಗಳಾದ, ಶಿವಧರ್ಮ, ವೀರಶೈವ ಸಂಗ್ರಹ, ವೀರಮಾಹೇಶ್ವರ ಗ್ರಂಥ, ವಾತುಲಾಗಮ, ಶಿವರಹಸ್ಯ, ಸೂಕ್ಷ್ಮಾಗಮ, ಪರಮರಹಸ್ಯ, ಸಿದ್ಧಾಂತ ಶಿಖಾಮಣಿ, ಸ್ಕಾಂದ ಪುರಾಣ, ಪದ್ಮಪುರಾಣ, ಲಿಂಗಪುರಾಣ, ಬ್ರಹ್ಮಾಂಡ ಪುರಾಣ  ಮುಂತಾದ ಕೃತಿಗಳಿಂದ ಸಂಸ್ಕೃತ ಶ್ಲೋಕಗಳನ್ನು ಆಕರಗಳಾಗಿ ಬಳಸಿಕೊಂಡಿದ್ದು, ನಿರೂಪಣೆಯಲ್ಲಿ ಸ೦ದರ್ಭೋಚಿತವಾಗಿ  ಬಳಕೆಯಾಗಿವೆ.

ಒಟ್ಟಾರೆ ಇವರ ವಚನಗಳನ್ನು ಕುರಿತು, ಪ್ರಭುಸ್ವಾವಿಗಳು ಬೂದಿಹಾಳಮಠರವರು ಹೇಳಿರುವ ವೀರಶೈವತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವುದರಿಂದ ಇದು ಒಂದು  ಉಪದೇಶ ಗ್ರಂಥವೆಂದೂ, ಶಿವಾನುಭವ ಶಾಸ್ತ್ರ ಸಾರವೆಂದು, ಶಿವಾನುಭವ ಶಬ್ದಕೋಶವೆಂದು, ಹೇಳಲು ಅಭ್ಯಂತರವಿಲ್ಲ  ಎಂಬ ವಾಕ್ಯಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ಸ್ವಲ್ಪ ಮಟ್ಟಿಗೆ ಖಚಿತತೆ ಇದೆ. ವೀರಶೈವ ಸಿದ್ಧಾಂತವನ್ನು ನಿರೂಪಿಸುವಲ್ಲಿ ಚೆನ್ನಬಸವಣ್ಣ ಆದಯ್ಯರನ್ನು ನೆನಪಿಗೆ ತಂದು ಕೊಡುತ್ತಾರೆ. ಇವರ ವಚನಗಳು ರಚನೆಯಾದ ನಂತರದ ಕಾಲದಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದ್ದವು ಎಂಬುದಕ್ಕೆ ಇಲ್ಲಿಯವರೆಗೂ ಪ್ರಕಟಗೊ0ಡ ಆವೃತ್ತಿಗಳೇ ಸಾಕ್ಷಿ. ಪ್ರಪ್ರಥಮವಾಗಿ ಪ್ರಕಟಗೊಂಡ ವಚನಗಳು ಎಂಬ ಖ್ಯಾತಿ ಇವರ ವಚನಗಳಿಗೆ ಸಲ್ಲುತ್ತದೆ. ಇವರ ವಚನಗಳನ್ನು ವಿಶ್ವಕರ್ಮ ಸಮಾಜದ ಪುರವಂತರು ಗುಗ್ಗಳ ಮೊದಲಾದ ಸಮಾರಂಭಗಳಲ್ಲಿ ಒಡಪುಗಳಾಗಿ ಉಗ್ಗಡಿಸುವುದು ವಿಶಿಷ್ಟವಾಗಿದೆ. ಅದ್ವೈತ ತತ್ವಾವಲಂಬಿಗಳು ಇವರ ವಚನಗಳಲ್ಲಿಯ ಯೋಗ ಅಧ್ಯಾತ್ಮಕ್ಕೆ ಸಂಬಂಧಿಸಿದ ವಚನಗಳನ್ನು ಕೆಲವೆಡೆ ಬಳಸಿಕೊಂಡಿದ್ದಾರೆ.

ಇವರೇ ಬರೆದರೆಂದು ಹೇಳಲಾದ ಅಖಂಡೇಶ್ವರ ಜೋಗುಳು ೪೧ ಪದಗಳು ದೊರೆತಿವೆ. ಜೋಗುಳ ಪದಗಳಲ್ಲಿ ಬರುವ ಬಹಳಷ್ಟು ವಿಷಯಗಳು ಇವರ ಪ್ರಾಣಿಲಿಂಗಿಸ್ಥಲದ ವಚನಗಳುನ್ನು ನೆನಪಿಗೆ ತಂದುಕೊಡುತ್ತವೆ. ಶಿವಾನುಭವವನ್ನು ನಿರೂಪಿಸಿವೆ. ಕಲ್ಯಾಣಪಟ್ಟಣದಲ್ಲಿ ಬಸವಾದಿ ಪ್ರಮಥರು ಶಿವನರೂಪವಾಗಿ ಕೂಡಿದ್ದರು   ಎಂದು ನೂತನ ಶರಣರುಗಳನ್ನು ನಾಲ್ಕು ಪದ್ಯಗಳಲ್ಲಿ  ಸ್ಮರಿಸಿದ್ದಾರೆ.

ನಿದರ್ಶನಕ್ಕೆ,

ಶುದ್ಧ ಪ್ರಸಾದವನು ಗುರುವಿನಿಂ ಪಡೆದು

ಸಿದ್ಧ ಪ್ರಸಾದವನು ಲಿಂಗದಿಂ ಪಡೆದು

ಚಿದ್ಘನ ಪ್ರಸಾದವನು ಚರದೊಳ್ ಪಡೆದು ಮಹಾ

ರುದ್ರಂಗೆ ಜೋಜೋ ಎಂದಳು ಶರಣೆ

ಜೋಜೋ ಎನ್ನಿರಿ ಅಸಮಾಕ್ಷ ಶಿವಗೆ

ಜೋಜೋ ಎನ್ನಿರಿ ಭಸಿತ ಭೂಸಿತಗೆ

ಜೋಜೋ ಎನ್ನಿರಿ ಶಶಿಯ ಸೂಡಿದಗೆ | ಪಾಡಿ |

ಜೋಜೋ ಎನ್ನಿರಿ ವೃಷಭವಾಹನಗೆ

ಇತ್ಯಾದಿಯಾಗಿ ಐದು ಪದಗಳಲ್ಲಿ ಶಿವನನ್ನು ಪರ್ಯಾಯ ನಾಮಗಳಿಂದ ಸ್ತುತಿಸಿದ್ದಾರೆ. ಒಂದು ಪದದಲ್ಲಿಯಂತೂ ಜೋಗುಳದ ಪದಗಳನ್ನು ಕೇಳಿದವರಿಗೆ ಶಿವನೊಲಿಯುವನು. ಸಿದ್ದಿ ದೊರಕುವುದು ಎಂದು ಹೇಳಿದ್ದಾರೆ.

ನಿರಾಳ ಸದ್ಗುರು ಸೋತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿವಿಭಾಗದಲ್ಲಿ ಕೆ. ೧೧೭೫/೧೮ ನಂಬರಿನ ಓಲೆಪ್ರತಿಯಲ್ಲಿಯು, ಷಣ್ಮುಖಸ್ವಾಮಿಯವರು ನಿರೂಪಿಸಿದ ನಿರಾಳ ಗುರುಸ್ತೋತ್ರ ಹೆಸರಿನಡಿಯಲ್ಲಿ ೨೫ ಭಾಮಿನಿ ಷಟ್ಪದಿ ಪದ್ಯಗಳಿವೆ. ಗುರುವನ್ನು, ಗುರುವಿನ ಮಹಿಮೆಯನ್ನು ನಾನಾ ತೆರನಾಗಿ ಸ್ತುತಿಸಲಾಗಿದೆ. ನಿದರ್ಶನಕ್ಕೆ ಕೆಲವು ಪದ್ಯಗಳು.

ಬಡವ ನಡೆನಡೆಯುತ್ತ ಭಾಗ್ಯವ

ನೆಡಹಿ ತಾಕ೦ಡ೦ತೆ ರೋಗಿಯು

ಹುಡುಕುತಿಪ್ಪೌಷಧಿಯ ಲತೆ ಕಾಲ್ದೊರಿ ಕಾಂಬಂತೆ

ಒಡಲಕ್ಷುಧೆಯಿಂದಲೆವವಗೆ ಪಾ

ಲ್ಗಡಲ ನಿಧಿಯೆನೆ ಕ೦ಡತೆರನೆ

ನ್ನೊಡೆಯ ಶ್ರೀ ಗುರುದೇವನ೦ಘ್ರಿಯ ಕ೦ಡು ಬದುಕಿದೆನು.

ಗುರುವೆ ಪರತರ ನಿತ್ಯನಿರುಪಮ

ಗುರುವೆ ಪರತರ ಸತ್ಯನದ್ವಯ

ಗುರುವೆ ಪರಬೊಮ್ಮಸ್ವರೂಪನೆ ಘನತಕೆ ಘನಮಹಿಮಾ

ಗುರುವೆ ಮುಕ್ತಿಗೆ ಮೂಲ ನಿಶ್ಚಲ

ಗುರುವೆ ಸುರಚಿರ ಭೇದ್ಯ ನಿರ್ಮಲ

ಗುರುವ ನಿನಗಿನ್ನಧಿಕಮಿಲ್ಲನುತಿಹುದು ಶೃತಿತತಿಯು

ಉಳಿದ ಲಘು ಕೃತಿಗಳು ಉಪಲಬ್ಧವಿಲ್ಲದೆ ಇರುವುದರಿಂದ ಸದ್ಯಕ್ಕೆ ಆ ಕೃತಿಗಳ ಬಗೆಗೆ ಏನನ್ನೂ ಹೇಳುವಂತಿಲ್ಲ

ಮಲ್ಲನಗೌಡ  ಹಿರೇಸಕ್ಕರಗೌಡ್ರ , ಗದಗ

“ಹಾನಗಲ್ಲ ಕುಮಾರ ಸ್ವಾಮಿಗಳ ಅಪೂರ್ವ ಪೂರ್ಣ –ಯೋಗದ ಮರಿ ಇದು. ಇದೂ ಪೂರ್ಣವೇ. ಪೂರ್ಣಾತ್  ಪೂರ್ಣಂ ಉದಚ್ಯತೇ .” ದ.ರಾ.ಬೇಂದ್ರೆ

ಮೇಲಿನ  ಉಕ್ತಿಯನ್ನು “ದರ್ಶನ ಶಾಸ್ತ್ರ-ಚಕ್ರವರ್ತಿ” ಪೂರ್ಣತ್ವಕಾರ, “ಸಪ್ತಬಾಷಾ ಸಾಗರ”, “ಸತ್ವಪೂರ್ಣ ಸಾಹಿತ್ಯ ಸಾಗರ” ಶಬ್ದಬ್ರಹ್ಮ  ಲಿಂ ಡಾ||ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು ಕೆಳದಿ ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ ಇವರ ಕುರಿತು   “ಶಾಸ್ತ್ರ ಕಾವ್ಯ” ವಾದ “ಪೂರ್ಣತ್ವ” ಗ್ರಂಥದ “ಶಿವ-ಸಂಕಲ್ಪ”ದಲ್ಲಿ ಬರೆದವರೆಂದರೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕತ ವರಕವಿ ಡಾ: ದ.ರಾ.ಬೇಂದ್ರೆ ರವರು.  ಪೂರ್ಣತ್ವಕಾರ ಕಳದಿ ಪೂಜ್ಯರ “ಪೂರ್ಣತ್ವ”ದ ಪೂರ್ಣ ಪ್ರಜ್ಞೆಯನ್ನು ಮನಸಾ ಮೆಚ್ಚಿ ಮೇಲಿನಂತೆ ಮನದುಂಬಿ ನುಡಿದಿದ್ದಾರೆ.

ಇಲಕಲ್ ಹಿರೇಮಠದ ಬಡಕುಟುಂಬದಲ್ಲಿ ಜನಿಸಿ, ಶ್ರೀಮದ್ ವೀರಶೈವ ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡಿ, ಶ್ರೀ ಹಾನಗಲ್ ಗುರುಕುಮಾರೇಶನನ್ನು ಸಂಪೂರ್ಣವಾಗಿ ಗ್ರಹಿಸಿ,  ಅವರ ಪಥದಲ್ಲಿ ನಡೆದು ಸರ್ವರಿಗೂ ಆದರ್ಶದ ಬೆಳಕು ತೋರಿದ ಪರಮ ವೈರಾಗ್ಯಶಾಲಿ, ಪಂಡಿತೋತ್ತಮರು  ಪೂರ್ಣತ್ವಕಾರ ಕಳದಿ ಪೂಜ್ಯರು.

 ಪೂರ್ಣತ್ವಕಾರ ಡಾ||ಕೆಳದಿ ಶ್ರೀಗಳದ್ದು  ವಿಶಾಲ ಆಳ ಹರಿವಿನ, ಸದಾ ಸಮಾಜದ, ಶಿವಯೋಗ ಮಂದಿರದ ಹಿತಕ್ಕಾಗಿ ತನು-ಮನ-ಧನ ಸವೆಸಿದ  ಸುಗಂಧ ಭರಿತ  ಹೋರಾಟದ ಜೀವನ. 

ಬಾಲ್ಯ ಜೀವನ:

ಗ್ರಾನೈಟ್ ಉದ್ಯಮ ಮತ್ತು ಸೀರೆಗಳಿಗೆ ಜಗತ್‍ಪ್ರಸಿದ್ಧವಾದ, ಮಹಾತಪಸ್ವಿ ವಿಜಯ ಮಹಾಂತೇಶನ ತಪೋಭೂಮಿ,  ಆಧ್ಯಾತ್ಮದ ತವರಾದ   ಬಾಗಲಕೋಟ ಜಿಲ್ಲೆ, ಹುನಗುಂದ ತಾಲ್ಲೂಕಿನ ಇಳಕಲ್  ಪೂಜ್ಯರ ಹುಟ್ಟೂರು.  ಇಳಕಲ್  ಹಿರೇಮಠದ ಪುಣ್ಯ ಶರಣ ದಂಪತಿಗಳಾದ  ಶ್ರೀ ವೇ||ಗುರುಮೂರ್ತಯ್ಯ ಮತ್ತು ಅನ್ನದಾನಮ್ಮ ನವರ ಪುಣ್ಯ ಗರ್ಭದಲ್ಲಿ   ಜೇಷ್ಟ  ಪುತ್ರರಾಗಿ ಆರನೇ ಮಾರ್ಚ 1930 ರಂದು  ಜನಿಸಿದರು.  ಇವರ ಜನ್ಮ ನಾಮ “ಗುರುಸಿದ್ದಯ್ಯ”.

“ಮನೆಯೇ ಮೊದಲು ಪಾಠ ಶಾಲೆ : ಜನನಿ ತಾನೇ ಮೊದಲು ಗುರು” ಎನ್ನುವಂತೆ,   ತಾಯಿ ಅನ್ನದಾನಮ್ಮನವರು ಎಳೆಯ ಬಾಲಕ ಗುರುಸಿದ್ಧಯ್ಯನಿಗೆ ಬಾಲ್ಯದಲೇ ಉತ್ತಮ ಸಂಸ್ಕಾರ ನೀಡುತ್ತಾ, ಅವನ ಬಾಲ ಲೀಲೆಗಳನ್ನು ನೋಡುತ್ತಾ ಆನಂದ ಪಡುತ್ತಿದ್ದರು.   “ತಿರಿದು ತಂದರೂ  ಕರೆದು  ಉಣ್ಣುವ” ಪರಮ ಸಂಸ್ಕತಿ   ಆ ಶರಣ ದಂಪತಿಗಳದಾಗಿತ್ತು.   ಗುರುಸಿದ್ದಯ್ಯನಿಗೆ ಎಳೆಯ ವಯಸ್ಸಿನಲ್ಲಿ  ಕಾಯಕ, ದಾಸೋಹದ ಮಹತ್ವನ್ನು ಮನಗಾಣಿಸಿದ್ದರು.  ಹಿರೇಮಠ ಮನೆತನಕ್ಕೆ ಸೇರಿದವರಾಗಿದ್ದರಿಂದ ಶಿಷ್ಯಮಕ್ಕಳ ಮನೆಗೆ ಹೋಗಿ ರೊಟ್ಟಿ  ತರುವ  ಸಂಪ್ರದಾಯ ಇದೆ. ಹೀಗೆ ರೊಟ್ಟಿಗೆ ಹೋಗುವಾಗ ಕೈಯಲ್ಲಿದ್ದ ಬುಟ್ಟಿ ಮತ್ತು ಬೆತ್ತಗಳು ಬಾಲಕ ಗುರುಸಿದ್ದಯ್ಯನಿಗಿಂತಲೂ  ಎತ್ತರವಾಗಿದ್ದವು. ಆಗ  ಊರಿನ ಜನರು ನಮ್ಮೂರಿನ ಮತ್ತೊಬ್ಬ   “ವಿಜಯ ಮಹಾಂತೇಶ” ಎನ್ನುತ್ತಿದ್ದರು.

ಬಾಲಕ ಗುರುಸಿದ್ದಯ್ಯ  ಇಳಕಲ್ ನಲ್ಲಿಯೇ   ಗಾಂವಟಿ ಶಾಲೆಗೆ ಹೋಗುತ್ತಿದ್ದ. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ.   ಆದರೂ  ಹೆತ್ತವರಿಗೆ  ಮಗ  ಗುರುಸಿದ್ದಯ್ಯನನ್ನು ಚೆನ್ನಾಗಿ ಓದಿಸಿಬೇಕೆಂಬ ಮಹದಾಸೆ,  ಇದೇ ಆಸೆಯನ್ನು   ಹೆಣ್ಣಜ್ಜ ವೀರಯ್ಯ ನವರಿಗೂ ಇತ್ತು.  ಅಂತೆಯೇ ಮೊಮ್ಮಗ ಗುರುಸಿದ್ಧಯ್ಯನನ್ನು   ಗಜೇಂದ್ರಗಡ ಕ್ಕೆ ಕರೆತಂದು   ಉರ್ದು ಶಾಲೆಗೆ ಸೇರಿಸಿದರು.  ಆ ಶಾಲೆಯ  ಅಬ್ದುಲ್ ಗಪಾರ್‍ಖಾನ್ ಮಾಸ್ತರರು  ಮತ್ತು ವೀರಯ್ಯನವರು ಗೆಳೆಯರಾಗಿದ್ದರು. ಆಗ ಕುಷ್ಟಗಿ, ಯಲಬುರ್ಗಾ, ಗಜೇಂದ್ರಗಡ ಭಾಗದಲ್ಲಿ   ಇವರ  ಶಿಷ್ಯಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ,  ನವಾಬರ ಆಡಳಿತ ಪ್ರಭಾವವೋ ಏನೋ ಅಲ್ಲಿನ ಜನರು   ಉರ್ದು ಹೆಚ್ಚು ಮಾತನಾಡುತ್ತಿದ್ದರಿಂದ,  ಉರ್ದು ಭಾಷೆ  ಕಲಿತರೆ ಒಳ್ಳೇದು ಎಂಬ ಉದ್ಧೇಶದಿಂದ ಉರ್ದು ಶಾಲೆಗೆ ಸೇರಿಸಿದ್ದರು.   ಅಬ್ದಲ್ ಗಫಾರ್ ಖಾನ್ ಮಾಸ್ತರರಿಂದ  ಬಾಲಕ ಗುರುಸಿದ್ದಯ್ಯನ ಜೀವನ ಬಹಳ ಪ್ರಭಾವಿತಗೊಂಡಿತು. ಯಾಕೆಂದರೆ ಅಬ್ದುಲ್ ಗಫಾರ್‍ಖಾನ್ ಮಾಸ್ತರರು ಪ್ರತಿದಿನ ಗುರುಸಿದ್ಧಯ್ಯನಿಗೆ ನಮಿಸಿ ಪಾಠ ಪ್ರಾರಂಭ ಮಾಡುತ್ತಿದ್ದರು, ಅಲ್ಲದೆ ಮುಂದೆ ನೀನು ದೊಡ್ಡ ಯೋಗಿ ಆಗುವವನಿದ್ದಿ,  ಸ್ವಾಮಿ ಜೀವನದಲ್ಲಿ ನಿಷ್ಠೆ ಇರಬೇಕು ಎನ್ನುವುದಕ್ಕೆ  ಪ್ರತಿಜ್ಞೆಗೆ ಕುಳಿತ ಫಕೀರನ ಆಸೆಯನ್ನು ಪ್ರವಾಹ ರೂಪದಲ್ಲಿ ದೇವರು ಈಡೇಸಿದ ಕಥೆಯನ್ನು   ಹಾಗೂ  ದೇವರು ಇದ್ದಾನೆ, ನಂಬಿದವರನ್ನು ದೇವರು ಎಂದೂ ಕೈಬಿಡುವುದಿಲ್ಲ  ಎನ್ನುವುದಕ್ಕೆ  ಮಹ್ಮದ ಪೈಗಂಬರ್‍ರವರನ್ನು ವೈರಿಗಳಿಂದ  ಜೇಡರಬಲೆ ರಕ್ಷಿಸಿದ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದನ್ನು  ಕೆಳದಿ ಅಜ್ಜನವರ   ಬಾಯಿಂದಲೆ ಕೇಳಬೇಕು. ಅದರ ಸೊಗಸು,  ರೋಮಾಂಚನ ಇನ್ನೆಲ್ಲು ಸಿಗುವುದಿಲ್ಲ. ಅದನ್ನು ಕೇಳಿದ್ದು ನನ್ನ ಪುಣ್ಯ. ಅಬ್ದುಲ್ ಗಫಾರ ಖಾನ್ ಮಾಸ್ತರರ ನೀತಿ ಕಥೆಗಳು,  ನನ್ನ ಸ್ವಾಮಿ ಜೀವನಕ್ಕೆ, ಸ್ವಾಮಿ ಜೀವನದಲ್ಲಿ “ಗಟ್ಟಿ ಸ್ವಾಮಿ” ಆಗಲಿಕ್ಕೆ ಮುನ್ನುಡಿಯಾದವು ಎಂದು ನೆನಪಿಸಿಕೊಳ್ಳುತ್ತಿದ್ದರು.  

ಹೆತ್ತವರಿಗೆ ಮಗ ಗುರುಸಿದ್ದಯ್ಯನಿಗೆ  ಮದುವೆ ಮಾಡಿ, ಮೊಮ್ಮಕ್ಕಳನ್ನು ಆಡಿಸಬೇಕೆಂಬ ಆಸೆ, ಆದರೆ ವಿಧಿ ಲಿಖಿತವೇ ಬೇರೆ, ವಿಧಿ ಲಿಖಿತ ತಪ್ಪಿಸಲು ಯಾರಿಂದ ಸಾಧ್ಯ? ಬಾಲಕ ಗುರುಸಿದ್ದಯ್ಯ ಯಾವಾಗಲೂ ಕಾಯಕ, ದಾಸೋಹ ಹಾಗೂ ದೇವರ ಧ್ಯಾನದಲ್ಲೇ ಇರುತ್ತಿದ್ದ. ಕುಮಾರೇಶ ನನ್ನನ್ನು  ಬಾ ಎಂದು ಕರೆಯುತ್ತಿದ್ದಾನೆ ಎಂದು ತಂದೆಯವರಲ್ಲಿ ಹೇಳಿಕೊಳ್ಳುತ್ತಿದ್ದ.  ಇದರಿಂದ  ವಿಧಿಯಿಲ್ಲದೆ,  ಗುರುಸಿದ್ದಯ್ಯನನ್ನು ಶಿವಯೋಗಮಂದಿರಕ್ಕೆ ಒಪ್ಪಿಸಲು ನಿರ್ಧರಿಸಿ, ಶಿವಯೋಗಮಂದಿರಕ್ಕೆ ಕರೆತಂದು  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳ ಪಾದಕ್ಕೆ ಅರ್ಪಿಸಿದರು. 

ಬದುಕು ಬೆಳಗಿಸಿದ ಶಿವಯೋಗ ಮಂದಿರ:

ಶಿವಯೋಗ ಮಂದಿರದ ಮಣ್ಣು ಸ್ಪರ್ಶಿಸಿದ ಕೂಡಲೇ ಗುರುಸಿದ್ದಯ್ಯನಲ್ಲಿದ್ದ ತಂದೆ-ತಾಯಿ, ಬಂಧು-ಬಳಗದ ವ್ಯಾಮೋಹದ ಪೊರೆ  ಕಳಚಿಹೋಯಿತು. ಯಾಕೆಂದರೆ ಮಂದಿರಕ್ಕೆ ಕಾಲಿಟ್ಟ ತಕ್ಷಣವೇ ತಂದೆಯವರಿಗೆ ತಂದೆ ಎಂದು ಕರೆಯದೇ “ಗುರುಮೂರ್ತಯ್ಯನವರೇ, ಮಂದಿರಕ ಪೂರ್ವಕ್ಕ ದಾರಿ ಇಲ್ಲೇನ್ರಿ? ಎಂದು ಪ್ರಶ್ನೆ ಮಾಡಿದ್ದರು. ಎಳೆವಯಸ್ಸಿನಲ್ಲೇ ಎಂತಹ ವೈರಾಗ್ಯ ನೋಡಿ.  ಆಗ ತಂದೆಯವರು “ಇಲ್ಲಪ್ಪ” ಎಂದಾಗ “ಮುಂದ  ಇಲ್ಲಿ ದಾರಿಯಾದರ ನಡಿತೈತಲ್ರೀ ?” ಎಂದು ಮರು ಪ್ರಶ್ನಿಸಿದಾಗ ತಂದೆಯವರು  “ಕುಮಾರೇಶನ ಕೃಪೆ” ಎಂದಿದ್ದರು,  ಬಾಲ್ಯದಲ್ಲಿ ತಂದೆಯವರ ಮುಂದೆ ಹೇಳಿದಂತೆ,   ಮಲಪ್ರಭೆ ನದಿಗೆ ಸೇತುವೇ ನಿರ್ಮಿಸುವ ಮೂಲಕ ಶಿವಯೋಗ ಮಂದಿರಕ್ಕೆ ಪೂರ್ವಕ್ಕೆ ದಾರಿ ಮಾಡಿದರು. ಇದು ಲೀಲೆ. 

ಯತಿಕುಲ ತಿಲಕ ಹಾನಗಲ್ ಗುರುಕುಮಾರೇಶ್ವರ ಮಹಾಸ್ವಾಮಿಗಳಿಂದ ಸನ್ 1909 ರಲ್ಲಿ ಸ್ಥಾಪಿತವಾದ  ಶಿವಯೋಗಮಂದಿರ  ಮಲಪ್ರಭೆಯ ರಮ್ಯ ನಿಸರ್ಗದ ಒಡಲು.   ಗುರುಸಿದ್ದಯ್ಯ ಶಿವಯೋಗ ಮಂದಿರ ಸೇರಿದ ನಂತರ ಅಲ್ಲಿನ ಪದ್ದತಿಯಂತೆ ಗುರುಸಿದ್ದಾರ್ಯರಾಗಿ, ಗುರುಸಿದ್ದದೇವರಾಗಿ,   ಶಿವಯೋಗಮಂದಿರದ ವಾರಿಗೆ ಎಲ್ಲ ವಟು -ಸಾಧಕ, ಮರಿದೇವರಿಗಿಂತಲೂ  ಶಿಕ್ಷಣ, ಸಾಹಿತ್ಯ, ಯೋಗ, ಶ್ರಮದಾನ, ಪೂಜೆ, ಆಟ-ಪಾಠ, ಈಜು ಎಲ್ಲದರಲ್ಲೂ ಮುಂದಿದ್ದರು. ಇವರು  ಶಿವಯೋಗಮಂದಿರದ ವಿದ್ಯಾರ್ಜನೆ ಸಮಯದಲ್ಲಿ  ಶಿವಯೋಗಮಂದಿರವನ್ನು ವರ್ಣಿಸಿ ಬರೆದಿರುವ “ನೋಡಿರಿಲ್ಲಿದೆ ಶಿವನಮಂದಿರ” ಎಂಬ ಕವಿತೆ ಬಹಳ ಜನಪ್ರಿಯವಾಗಿದೆ. ಶಿವಯೋಗ ಮಂದಿರದಲ್ಲಿ  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು, ಹಂಡಿ ಮಾಸ್ತರರು, ದ್ಯಾಂಪುರ ಚನ್ನಕವಿಗಳು. ಪಗಡದಿನ್ನಿ ಬೃಹನ್ಮಠದ ಬಸವರಾಜ ಶಾಸ್ರ್ತಿಗಳು ಮುಂತಾದ ಪಂಡಿತೋತ್ತಮರ ಸನ್ನಿಧಿಯಲ್ಲಿ  ವಿದ್ಯಾರ್ಜನೆ ಮಾಡಿ,  ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು  “ಮಂದಿರದ ಹೆಸರುಳಿಸುವ ಗಟ್ಟಿಮರಿ ಅಂದರೆ ನೀವ” ಎಂದು ಹೇಳುವಷ್ಟರ ಮಟ್ಟಿಗೆ  ಬೆಳೆದು ನಿಂತರು.  ಶಿವಯೋಗ ಮಂದಿರ ಗುರುಸಿದ್ದಯ್ಯನ  ಕತ್ತಲೆಯ ಬದುಕಿಗೆ ಬೆಳಕು, ನೀಡಿತು,  ಕೆಳದಿ ಅಜ್ಜನವರ ರೂಪದಲ್ಲಿ  ಸಮಾಜಕ್ಕೆ ಮಹಾನ್ ತಪಸ್ವಿಯನ್ನು ನೀಡಿತು. 

ಕಾಶಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಶಿವಯೋಗ ಮಂದಿರಕ್ಕೆ ಮರಳಿದ  ಮರಿದೇವರೊಬ್ಬರಿಗೆ ಶಿವಯೋಗಮಂದಿರದಲ್ಲಿ ಮಾಡಿದ ಸನ್ಮಾನದಿಂದ ಪ್ರಭಾವಿತರಾಗಿ, ತಾವೂ ಅವರಂತಯೇ  ಹೆಚ್ಚಿನ ಉನ್ನತ ವ್ಯಾಸಂಗ ಮಾಡಬೇಕೆಂಬ ಮಹಾದಾಸೆಯಿಂದ,  ಹಿರಿಯ ಗುರುಗಳ ಅನುಮತಿ, ಶಿಷ್ಯ ಮಕ್ಕಳ ಸಹಾಯ ಸಹಕಾರದಿಂದ ಉನ್ನತ ವ್ಯಾಸಂಗಕ್ಕೆ  ಕಾಶಿ  ಕ್ಷೇತ್ರಕ್ಕೆ  ತೆರಳಿದರು.

ಕಾಶಿಯಲ್ಲಿ ಉನ್ನತ ವ್ಯಾಸಂಗ:

1952 ರ ಡಿಸೆಂಬರ್ 07 ನೇ ತಾರೀಖಿಗೆ ಕಾಶಿಗೆ ಕಾಲಿರಿಸಿದ  ಇಲಕಲ್ ಗುರುಸಿದ್ಧ ದೇವರು ಕಾಶಿಯ ಜಂಗಮವಾಡಿ  ಮಠದಲ್ಲಿ 05 ವರ್ಷ, ಹಾಗೂ ಹನುಮಾನ್ ಘಾಟ್‍ನಲ್ಲಿ 11 ವರ್ಷ ಹೀಗೆ 16 ವರ್ಷಗಳ ಕಾಲ ಕಾಶಿ ನಿವಾಸಿಗಳಾಗಿದ್ದುಕೊಂಡು, ಉನ್ನತ ವ್ಯಾಸಂಗ ಮಾಡಿದರು. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಎಂ.ಎ.ಯಲ್ಲಿ “ವೇದಾಂತ” ವಿಷಯವನ್ನು  ಅಧ್ಯಯನ ಮಾಡಿದರು.  ಪ್ರತಿ ವರ್ಷ ವಿಶ್ವ ವಿದ್ಯಾಲಯದ ತತ್ವ –ಜ್ಞಾನ- ವಿಭಾಗದಲ್ಲಿ “ಮೆರಿಟ್ ಸ್ಕಾಲರಶಿಫ್” ಪಡೆದು ಅಂತಿಮ ವರ್ಷದ “ವೇದಾಂತ ಶಾಸ್ತ್ರಾಚಾರ್ಯ” ಪರೀಕ್ಷೆಯಲ್ಲಿ  14 ಸಾವಿರ ಜನ ವಿದ್ಯಾರ್ಥಿಗಳಲ್ಲಿ ಸರ್ವ ಪ್ರಥಮ ಸ್ಥಾನಗಳಿಸಿ ಪ್ರಥಮ ರ್ಯಾಂಕ್  [ಈiಡಿsಣ ಖಚಿಟಿಞ] ಪಡೆದುಕೊಂಡರು. [1959-60] ಈ ಸಾಧನೆಯು ವೀರಶೈವ ಮಠಾಧೀಶರಲ್ಲಷ್ಟೆ ಅಲ್ಲದೆ ದಕ್ಷಿಣ ಭಾರತೀಯರೊಬ್ಬರು ಮಾಡಿದ ಅಂದಿನ ವಿಶಿಷ್ಟ ಸಾಧನೆ.  ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಕಾಶ್ಮೀರದ ಅಂದಿನ ಮಹಾರಾಜ ಕರಣಸಿಂಗ್ ರವರಿಂದ ಬಂಗಾರದ ಪದಕವನ್ನು ಪಡೆದುಕೊಂಡರು.

         ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ “ಶಾಸ್ತ್ರಾಚಾರ್ಯ” ರಾದರೆ, ಕಲ್ಕತ್ತ ವಿಶ್ವವಿದ್ಯಾಲಯದಿಂದ “ಕಾವ್ಯತೀರ್ಥ”ಪದವಿ [1954], ಡಾಕಾ ವಿಶ್ವವಿದ್ಯಾಲಯದಿಂದ [ಆಗಿನ ಪೂರ್ವ ಪಾಕಿಸ್ತಾನ –ಈಗಿನ ಬಾಂಗ್ಲಾದೇಶ] “ಕಾವ್ಯನಿಧಿ” ಪದವಿ [1955] ಯನ್ನು ಪಡೆದುಕೊಂಡರು.

ದೆಹಲಿಯ ಕೇಂದ್ರ ಸರ್ಕಾರದಿಂದ ಸ್ಕಾಲರ್‍ಶಿಫ್ ಪಡೆದು, ಪಂಡಿತ ಶ್ರೇಷ್ಠರೂ ಹಾಗೂ ಭಾರತ ಸಂಸ್ಕøತ  ಆಯೋಗದ  ಅಧ್ಯಕ್ಷರಾಗಿದ್ದ ಪಂಡಿತ ವಿ.ಎಸ್.ರಾಮಚಂದ್ರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ “ಅದ್ವೈತ ವೇದಾನ್ತ ಶಾಕ್ತ ತನ್ತ್ರಯೋ:ಸಾಮ್ಯ ವೈಷಮ್ಯ ಚಿನ್ತನಮ್ “ ಎಂಬ ಆಧ್ಯಾತ್ಮಿಕ ತತ್ವಜ್ಞಾನದ ಸಂಸ್ಕøತ ಪಿ.ಎಚ್.ಡಿ. ಗ್ರಂಥವನ್ನು ಸಮರ್ಪಿಸಿ, 8 ನೇ ಜೂನ್ 1973 ರಲ್ಲಿ  ಡಾಕ್ಟರೇಟ್ ಪದವಿಗಳಿಸಿಕೊಂಡರು. ಇದಲ್ಲದೆ, ಅದುವರೆಗೂ ಯಾವ ವೀರಶೈವ ಮಠಾಧೀಶರು ಕಾಶಿ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಕøತ ಮಹಾವಿದ್ಯಾಲಯದ “ಪ್ರಾಚ್ಯ-ಧರ್ಮ-ವಿಜ್ಞಾನ” ವಿಭಾಗದಿಂದ ಪಡೆದಿರಲಾರದಂತಹ “ದರ್ಶನ ಶಾಸ್ತ್ರ ಚಕ್ರವರ್ತಿ”  ಎಂಬ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಈ ಸಾಧನೆ ಇಂದಿಗೂ ಅಲ್ಲಿ ದಾಖಲೆಯಾಗಿ ಉಳಿದಿದೆ. ಜೊತೆಗೆ ಎಲ್‍ಎಲ್‍ಬಿ ಪದವಿಯನ್ನು ಸಹ ಪಡೆದುಕೊಂಡರು.

ಕಾಶಿಯಲ್ಲಿ ಉನ್ನತ ಅಧ್ಯಯನದೊಂದಿಗೆ ಬಿಡುವಿನ ಅವಧಿಯಲ್ಲಿ  ರಾಮಕೃಷ್ಣಾಶ್ರಮ, ಥಿಯೋಸಫಿಕಲ್ ಸೋಸೈಟಿ ಮುಂತಾದ ಆಧಾತ್ಮಿಕ ಕೇಂದ್ರಗಳಗೆ ಬೇಟಿ ನೀಡುತ್ತಿದ್ದರು.ಅಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ, ಶ್ರಾವಣ ಮಾಸ ಮತ್ತು ಅಧ್ಯಯನ ಬಿಡುವಿನ ಸಮಯದಲ್ಲಿ  ಹಿಮಾಲಯ, ಋಷಿಕೇಶ, ಗಂಗಾನದಿ ಶಾಂತ ಪರಿಸರದ ಘಾಟ್‍ಗಳಲ್ಲಿ  ತಿಂಗಳುಗಟ್ಟಲೆ ಕಠಿಣ ತಪಸ್ಸು  ಆಚರಿಸುತ್ತಿದ್ದರು.  ಹೀಗೆ  ಒಟ್ಟು 16 ವರ್ಷಗಳ ಕಾಶಿ ನಿವಾಸಿಗಳಾಗಿ, ಉನ್ನತ ವ್ಯಾಸಂಗವನ್ನು  ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಗಳಿಸಿ  ಶಿವಯೋಗಮಂದಿರಕ್ಕೆ ದೊಡ್ಡ ಹೆಸರು, ಗೌರವನ್ನು ತಂದುಕೊಟ್ಟರು.

ಕೆಳದಿ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ:

ಕಾಶಿಯಿಂದ ಮರಳಿ ಶಿವಯೋಗಮಂದಿರಕ್ಕೆ ಬಂದ  ನಂತರ, ಶಿವಯೋಗ ಮಂದಿರದಲ್ಲಿ   ವಟು-ಸಾಧಕರಿಗೆ ಪಾಠ ಹೇಳುತ್ತಿದ್ದರು. ಆ ಸಮಯದಲ್ಲಿ  ಕೆಳದಿ ರಾಜಗುರು ಹಿರೇಮಠದ ಸ್ವಾಮಿಗಳಾಗಬೇಕು ಎಂಬ ಬೇಡಿಕೆ ಆ ಪ್ರಾಂತ್ಯದ ಭಕ್ತರಿಂದ ಬಂದಿದ್ದನನ್ನು  ಒಪ್ಪಿ,   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಕೆಳದಿ ಯ ಸಮೀಪದ ಬಂದಗದ್ದೆಯಲ್ಲಿರುವ, ಕೆಳದಿಯ ನಾಯಕರು ಸ್ಥಾಪಿಸಿ, ಗುರುವಿಗರ್ಪಿಸಿದ ಕೆಳದಿ ಸಂಸ್ಥಾನ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ   ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪಶಾಲಿವಾಹನ ಶಕ 1891ಕ್ಕೆ ಸೌಮ್ಯನಾಮ ಸಂವತ್ಸರದ ಅಶ್ವಯುಜ ಶುದ್ಧ ವಿಜಯ ದಶಮಿಯ ದಿನಾಂಕ:20-10-1969 ನೇ ಇಸ್ವಿಯ ಸೋಮವಾರದಂದು ಅಧಿಕಾರ ವಹಿಸಿಕೊಂಡು  ನ್ಯಾಯಾಲಯದಲ್ಲಿ  ಹಲವಾರು ವ್ಯಾಜ್ಯಗಳ ಕಾರಣದಿಂದ ತೀರಾ ಹಿಂದುಳಿದಿದ್ದ ಮಠವನ್ನು ಅಭಿವೃದ್ದಿ ಪಡಿಸಿದರು. ಮಠದಲ್ಲಿ ಬಡಮಕ್ಕಳಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭ ಮಾಡಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದರು, ಶ್ರೀಗಳ ಆಶ್ರಯದಲ್ಲಿ ವಿದ್ಯಾರ್ಜನೆ ಮಾಡಿದವರಲ್ಲಿ ಸರ್ಕಾರದ ವಿವಿಧ ಇಲಾಖೆ, ಹುದ್ದೆಗಳಲ್ಲಿ, ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಿವಯೋಗ ಮಂದಿರ – ಅದರ ಸಂರಕ್ಷಣೆ:

 ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳು ಪರಮಾತ್ಮನ ಸ್ವರೂಪ ಶ್ರೀ ಮ.ನಿ.ಪ್ರ. ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳನ್ನು ತಮ್ಮ ಹೃದಯ ಮಂದಿರದಲ್ಲಿ ಇರಿಸಿಕೊಂಡು, ತಮ್ಮ ಜೀವನ ರಥವನ್ನು ಶಿವನ ಪಥದಲ್ಲಿ ಸಾಗಿಸಿದವರು.   ಶ್ರೀಮದ್ ವೀರಶೈವ ಶಿವಯೋಗಮಂದಿರದ ಪ್ರಚಾರ ಹಾಗೂ  ಪ್ರಚುರಕ್ಕಾಗಿ ಹಗಲಿರಳು ಹೋರಾಡಿದವರು.

1976 ರಲ್ಲಿ ಶಿವಯೋಗ ಮಂದಿರದ ಟ್ರಸ್ಟ ಕಮಿಟಿ ಸದಸ್ಯರಾಗಿ, 1984 ರಲ್ಲಿ ಶಾಖಾ ಬಾದಾಮಿ ಮಠದ ಸಂಚಾಲಕರಾಗಿ, ಶಿವಯೋಗಮಂದಿರ  ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿ, ಮಠಗಳ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅದರಲ್ಲೂ ಶಾಖಾ ಬಾದಾಮಿ ಮಠದ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ದುಡಿದ್ದಾರೆ.  ಈ ಬಗ್ಗೆ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಮಠ, ಮುಂಡರಗಿ ರವರು ತಮ್ಮ “ಕಾರಣಿಕ ಸುಕುಮಾರ” ಗ್ರಂಥದಲ್ಲಿ  “ಶಿವಯೋಗಮಂದಿರ ಶಾಖಾ ಬಾದಾಮಿ ಮಠದ ಏಳಿಗೆಗಾಗಿ ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯರು, ಹೆಚ್ಚು ಕಷ್ಟಪಟ್ಟಿದ್ದಾರೆ” ಎಂಬುದನ್ನು ಉಲ್ಲೇಖಿಸಿದ್ದಾರೆ.

ಪರಮಪೂಜ್ಯ ಮೌನ ತಪಸ್ವಿ ಶ್ರೀಮ.ನಿ.ಪ್ರ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಶಾಂತಲಿಂಗೇಶ್ವರ ವಿರಕ್ತಮಠ, ನಿಂಬಾಳ, ಸಮಾಧಾನ ಧ್ಯಾನ ಕೇಂದ್ರಗಳು, ಕಲ್ಬುಗಿ, ರವರು “ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ ರವರು “ವೀರಶೈವ ತತ್ವ -ಸಿದ್ಧಾಂತದ ಪ್ರತಿಬೋಧಕ, ಪ್ರತಿರೂಪಕರಾಗಿದ್ದರು,  ಹಾನಗಲ್ಲ   ಶ್ರೀ ಗುರುಕುಮಾರ ಕೃಪೆಯ ಕರುಣೆಯ ಕಂದರಾದ ಕೆಳದಿ ಪೂಜ್ಯರು ಶಿವಯೋಗ ಮಂದಿರದ ಸರ್ವತೋಮುಖ ಶ್ರೇಯೋಭಿವೃದ್ದಿಗೆ ತಮ್ಮ ಜೀವನವನ್ನೆ ಮುಡಿಪಾಗಿರಿಸಿದ್ದ ಮಹಾತ್ಮರವರು”  ಎಂದು ಹಲವಾರು ತಮ್ಮ ಬರವಣಿಗೆಗಳಲ್ಲಿ  ಸ್ಮರಿಸಿರುವುದನ್ನು ಕಾಣಬಹುದಾಗಿದೆ.

ಏನೆ ಕಾರ್ಯವಗೈದರದು ನಿಜ

ಹಾನಗಲ್ಲ ಕುಮಾರ ಕೃಪೆಯದು

ಮಾನದಿಂದಲಿ ನುಡಿವ ಗುರುಸಿದ್ಧೇಶ ಮನಸಾರೆ

ಪ್ರಾಣವೇ ಶಿವಯೋಗಮಂದಿರ

ಧ್ಯಾನವೇ ಸುಕುಮಾರ ನಾಮವು

ತ್ರಾಣವೇ ವಟುಸಾಧಕರು ನಿಜ ಎಂದಿಹನು ಗುರುಸಿದ್ಧ ||

ಎಂಬ ಕೆಳದಿ ಗುರುಸಿದ್ದೇಶ್ವರ ಪುರಾಣದ ಕವಿ ವಾಣಿಯಂತೆ ಶಿವಯೋಗ ಮಂದಿರ ಮತ್ತು ಅದರ ನೀತಿ, ನಿಯಮಾವಳಿ, ಆಸ್ತಿ ಸಂರಕ್ಷಣೆ ವಿಚಾರದಲ್ಲಿ  ಕೆಳದಿ ಶ್ರೀಗಳು ತಮ್ಮ  ತನು-ಮನ-ಪ್ರಾಣವನ್ನು ಮುಡಿಪಿಟ್ಟು ದುಡಿದ ದಿವ್ಯಾತ್ಮರವರು.

ಶಿವಯೋಗ ಮಂದಿರದಲ್ಲಿ  ಪಾಠ-ಪ್ರವಚನ :

ಕೆಳದಿ ಶ್ರೀಗಳು ಶಿವಯೋಗ ಮಂದಿರದಲ್ಲಿ  ವಟು –ಸಾಧಕ – ಮರಿದೇವರುಗಳಿಗೆ  ಧಾರ್ಮಿಕ  ವಿಧಿ – ವಿಧಾನಗಳನ್ನು , ಆಧ್ಯಾತ್ಮಿಕ ವಿಚಾರಗಳನ್ನು ಪ್ರಾತ್ಯಕ್ಷತೆಯಿಂದ ತಿಳಿಸಿ ಹೇಳುತ್ತಿದ್ದರು.  ವಿವಿಧ ವಿಷಯಗಳಲ್ಲಿ ಪರಿಣಿತರಾದ ಸಂಪನ್ಮೂಲ ವ್ಯಕ್ತಿಗಳನ್ನು  ಕರೆಸಿ  ಪಾಠ  ಹೇಳಿಸುತ್ತಿದ್ದರಲ್ಲದೆ ಪ್ರಾಯೋಗಿಕ ತರಬೇತಿಗಳನ್ನು ಸಹ ನೀಡಿಸುತ್ತಿದ್ದರು.

ಮರಿದೇವರಿಗೆ ಆಧ್ಯಾತ್ಮ ಪಾಠ ಹೇಳುವಾಗ ಕೆಳದಿ ಶ್ರೀಗಳು ತೆಂಗಿನಕಾಯಿ ಹಾಗೂ ಬಾಳೆಯ ಹಣ್ಣು ಇವುಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಹೇಳುತ್ತಿದ್ದರು.

ಪರಮಾತ್ಮನು “ಬ್ರಹ್ಮ –ವಿಷ್ಣು-ಮಹೇಶ್ವರ” ಎಂಬ ಮೂರು ಭಾಗಗಳಾಗಿದ್ದಾನೆ. “ಸೃಷ್ಟಿ ಕಾರ್ಯವನ್ನು ಬ್ರಹ್ಮನ ಮೂಲಕ, ರಕ್ಷಣಾ ಕಾರ್ಯವನ್ನು ವಿಷ್ಣುವಿನ ಮೂಲಕ ಹಾಗೂ ಲಯ ಕಾರ್ಯವನ್ನು ಮಹೇಶ್ವರನ ಮೂಲಕ ನೆರವೇರಿಸುತ್ತಾನೆ” ಎಂಬ ವಿಚಾರಗಳನ್ನು ತೆಂಗಿನಕಾಯಿಯಿಂದ ಶ್ರೀಗಳು ಪ್ರಾತ್ಯಕ್ಷಿಕವಾಗಿ ತೋರಿಸುತ್ತಿದ್ದರು. ಸುಲಿದ ತೆಂಗಿನಕಾಯಿಯಲ್ಲಿ ಮೂರು ಪ್ರತ್ಯೇಕ ಭಾಗಗಳು ಕಂಡುಬರುತ್ತವೆ, ದೊಡ್ಡದಾದ ಭಾಗವು ಬ್ರಹ್ಮ ಸೂಚಕ, ಅದರ ಎಡ ಭಾಗವು ವಿಷ್ಣು ಸೂಚಕ ಮತ್ತು ಬಲಭಾಗವು  ಮಹೇಶ್ವರ ಸೂಚಕಗಳಾಗಿರುತ್ತವೆ. ಅದರಲ್ಲಿ ಪರಮಾತ್ಮನಿಗೆ ಇರುವಂತೆ ಮೂರು ಕಣ್ಣುಗಳು ಇವೆ. ದೊಡ್ಡ ಭಾಗದಲ್ಲಿರುವ ಕಣ್ಣಿನಿಂದ ಮಾತ್ರ ತೆಂಗಿನಕಾಯಿಯು ಮೊಳಕೆಯೊಡೆದು, ಸಸಿಯಾಗಿ, ಮರವಾಗಿ ಫಲಪ್ರದವಾಗುವುದು.

ಹಾಗೆಯೇ ಬಾಳೆ ಹಣ್ಣಿನಲ್ಲೂ ಸಹ ಮೂರು ಭಾಗಗಳಿವೆ. “ಏಕ ಮೂರ್ತಿ ತ್ರಯೋಭಾಗ” ಎಂಬುದಕ್ಕೆ ಇದು ನಿದರ್ಶನವಾಗಿದೆ ಅಂತಾ ಕೆಳದಿ ಶ್ರೀಗಳು ಪಾಠವನ್ನು ಹೇಳುತ್ತಿದ್ದರು.

ಓಂ ಮತ್ತು    ಇವುಗಳ  ಅರ್ಥದ ಮರ್ಮ:

         ಒಮ್ಮೆ ಪಾಠ ಬೋಧನೆಯ ಸಮಯದಲ್ಲಿ ಓಂ ಮತ್ತು    ಇವುಗಳ ಅರ್ಥದ ಮರ್ಮ ತಿಳಿಸಿ, ಓಂ = ಅ+ಉ+ಮ್ ಇದು ಮೂರಕ್ಷರಗಳ ಸಂಯೋಜನೆಯಿಂದ ಆಗಿರುವುದು. ಬ್ರಹ್ಮ – ವಿಷ್ಣು- ಮಹೇಶ್ವರರ ಸಂಕೇತವೇ ಓಂ ಆಗಿರುತ್ತದೆ. ಆದರೆ    ಇದು ಅಕ್ಷರ ಅಲ್ಲ. ಅದೊಂದು ಧರ್ಮದ ಸಂಕೇತ, ಅದು ಸರ್ವ ಧರ್ಮವನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ   ನ್ನು ಬಿಚ್ಚಿ ಇಟ್ಟಾಗ ತ್ರಿಶೂಲ   ಸಂಕೇತವು ಪರಮಾತ್ಮನ ಕೈಯಲ್ಲಿರುವುದು ಇದು ವೀರಶೈವರ ಧರ್ಮದ ದ್ಯೂತಕವಾಗಿ. ಇದು ಇಸ್ಲಾಂ ಧರ್ಮೀಯರ ಸಂಕೇತವಾದ ಅರ್ಧ ಚಂದ್ರಾಕೃತಿಯನ್ನು ತೋರಿಸುತ್ತದೆ. ಕ್ರೈಸ್ತ್ ಧರ್ಮೀಯರ ಕ್ರಾಸ್ ದಂತೆಯೂ ಇದು ಇರುತ್ತದೆ. ಹೀಗಾಗಿ ಇದು ಸರ್ವಧರ್ಮೀಯರ ಸಂಕೇತವಾಗಿದೆ ವಿನಃ ಅದು ಅಕ್ಷರವಲ್ಲ. ಅಂತಾ ಸ್ಪಷ್ಟೀಕರಿಸಿದರು.  ಅಧಿಕ ಚಿನ್ಹೆ,  ಭಾಗಾಕಾರ ಚಿನ್ಹೆ,  ಗುಣಾಕಾರ ಚಿನ್ಹೆ,   ಬರಾಬರಿ ಚಿನ್ಹೆ, ಒಟ್ಟಿನಲ್ಲಿ   ಕಾರವು ಚಿನ್ಹೆಯೆ ಆಗಿದೆ ; ಅಕ್ಷರ ಅಲ್ಲ.  ಹೀಗೆ ಕೆಳದಿ ಶ್ರೀಗಳವರ ಜ್ಞಾನ ಆಳವಾಗಿ, ಅಪಾರವಾಗಿ, ಅಪರಿಮಿತವಾಗಿ ಹೊಂದಿದ್ದ ಪುಣ್ಯಾತ್ಮ, ಧರ್ಮಾತ್ಮ, ದಿವ್ಯಾತ್ಮ, ಮಹಾತ್ಮ ಅಷ್ಟೇ ಏಕೆ ಸಾಕ್ಷಾತ್ ಪರಮಾತ್ಮರೆ ಆಗಿದ್ದಾರೆ.

ವೀರಶೈವ ಧರ್ಮ:

ವೀರಶೈವ ಧರ್ಮ ಭಾವಲಿಂಗದವರೆಗೆ ವಿಸ್ತಾರವಾಗಿರುತ್ತದೆ. ನವ ಲಿಂಗಗಳು ಹಂತ ಹಂತವಾಗಿ ಹೀಗೆ ವಿಸ್ತøತಗೊಳ್ಳುತತವೆ. [1] ಆಚಾರ ಲಿಂಗ  [2] ಗುರುಲಿಂಗ [3] ಶಿವಲಿಂಗ [4] ಜಂಗಲಿಂಗ [5] ಪ್ರಸಾದ ಲಿಂಗ [6] ಮಹಾಲಿಂಗ [7] ಇಷ್ಟಲಿಂಗ [8] ಪ್ರಾಣಲಿಂಗ [9] ಭಾವಲಿಂಗ ಹೀಗೆ ಅಂಗ ಲಿಂಗ ಸ್ವರೂಪವಾಗಿ ಲಿಂಗಾಂಗ ಸಾಮರಸ್ಯದ ರಹಸ್ಯದ ಗುಟ್ಟನ್ನು ಇಡಿ ಇದ್ದದ್ದನ್ನು ಬಿಡಿಯಾಗಿ ತಿಳಿಸಿದರು. ಭಾವದಂತೆ ಬ್ರಹ್ಮನಿದ್ದಾನೆ ; ಭಾವದಲ್ಲಿ ಭಗವಂತನಿದ್ದಾನೆ, ಅಂತೆಯೇ ಶಿವಯೋಗಿಗಳು ಅವರವರ ಭಾವಕ್ಕೆ, ಅವರವರ ತೆರನಾಗಿ ಇರುತಿಹರು ಶಿವಯೋಗಿಗಳು ಎಂದು ವರ್ಣಿಸಿದ್ದಾರೆ  ಹೀಗೆ ಸರಳವಾಗಿ   ತಿಳಿಸಿ ಹೇಳುತ್ತಿದ್ದರು.

         ವೀರಶೈವ ಧರ್ಮದ ಲಾಂಛನದಲ್ಲಿ ಆರು ಸ್ಥಲಗಳಿವೆ. ಅದರ ಮಂತ್ರ ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರವಾಗಿರುವುದು. ಈ ಆರು ಅಕ್ಷರಗಳು ಧರ್ಮಲಾಂಛನದಲ್ಲಿ ನಮೂದಿತವಾಗಿರುತ್ತವೆ. ಇದು ದೀಕ್ಷಾ ಮಂತ್ರವೂ ಹೌದು. 07 ಕೋಟಿ ಮಂತ್ರಗಳಲ್ಲಿ ಅತ್ಯಂತ ಶ್ರೇಷ್ಠ “ಮಹಾ” ಮಂತ್ರ ಇದಾಗಿದೆ. ಇದು ಪರಮಾತ್ಮನ ನಾಮಸ್ಮರಣೆಯಾಗಿರುವುದು. “ನೀನ್ಯಾಕೋ ? ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕು” ಓಂ ನಮಃ ಶಿವಾಯ ಅಂತಾ ನಾಮ ಬಲದಿಂದ ಬರಡು ಜೀವನದಲ್ಲಿ ಚೈತನ್ಯ ತುಂಬುವ ಚೇತನ ಮಂತ್ರ ಇದಾಗಿದೆ ಎಂದು  ಹೇಳುತ್ತಿದ್ದರು.

ವೀರಶೈವ ಎಂಬ ಮಾರ್ಮಿಕವಾಗಿ ಕೆಳದಿ ಶ್ರೀಗಳು ಅರ್ಥೈಸಿದ್ದಾರೆ. ವಿ =ವಿದ್ಯೆ, ರ =ರಮಿಸು,       ಶೈವ =ಶಿವನ ಆರಾಧಕನು, ಯಾವನು ಶಿವನ ಆರಾಧಕನಾಗಿದ್ದು ವಿದ್ಯೆಯಿಂದ ರಮಿಸುವನೋ ಅವನೇ ವಿರಶೈವ ಎಂದಿದ್ದಾರೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೀರ =ಶೂರ + ಧೀರ ಅಂತಾ ಅರ್ಥೈಸಿದ್ದಾರೆ. “ಶೂರ” ಇದು ದೇಹ ಧಾಢ್ರ್ಯಡ ಸೂಚಕವಾಗಿದರೆ “ಧೀರ” ಇದು ಮನೋ ಬಲವನ್ನು ತಿಳಿಸುವುದು. ದೇಹಧಾಢ್ರ್ಯ ಹಾಗೂ ಮನೋಬಲ ಇವೆರಡರ ಸಮ್ಮಿಳನದ ದ್ಯೋತಕವಾಗಿರುವುದೆ “ವೀರಶೈವ” ವಾಗಿದೆ. ಎಂದು ನೈಜ ಧಾರ್ಮಿಕತೆಯನ್ನು ತಿಳಿಸಿ ಹೇಳಿದರು. “ಧೈರ್ಯಂ ಸರ್ವತ್ರ ಸಾಧನಂ” ಇದು ನಿಜ ಧರ್ಮದ ಸಾರವಾಗಿದೆ. “ಶರೀರಂ ಆದ್ಯಂ ಖಲು ಧರ್ಮ ಸಾಧನಂ” ಎಂಬ ವೇದ ವಾಕ್ಯ ನಿಜವೆಂದು ಸಾರುತ್ತಿದ್ದಾರೆ ಕೆಳದಿ ಶ್ರೀಗಳು.

ಚೀನಿಯರ ವಿಚಾರಧಾರೆಯಂತೆ ಅಂದರೆ “ಒಂದು ವರ್ಷದ ಫಲ ಬೇಕಾದರೆ ಧಾನ್ಯದ ಬೀಜ ಬಿತ್ತಬೇಕು. ಹತ್ತು ವರ್ಷದ ಫಲ ಬೇಕಾದರೆ ಹಣ್ಣಿನ ಗಿಡದ ಬೀಜ ಬಿತ್ತಬೇಕು,, ನೂರು ವರ್ಷದ ಫಲ ಬೇಕಾದರೆ ವಿದ್ಯೆಯ ಬೀಜ ಬಿತ್ತಬೇಕು” ಎಂಬ ಭಾವವನ್ನು ತಳೆದು ಕೆಳದಿ ಶ್ರೀಗಳು  ಶಿವಯೋಗ ಮಂದಿರದ ವಟು ಸಾಧಕರಿಗೆ ವಿದ್ಯೆಯೆಂಬ ಬೀಜವನ್ನು ಧಾರೆಯರೆದಿದ್ದಾರೆ.

ಅದೇ ರೀತಿ ಶಿವಯೋಗ ಮಂದಿರದಲ್ಲಿ  ಅಶಿಸ್ತು, ಕುಮಾರ ಸ್ವಾಮಿಗಳು ಹಾಕಿದ ನೇಮವನ್ನು ಭಂಗಮಾಡುವಂತಿರಲಿಲ್ಲ. ಒಮ್ಮೆ ಶಿವಯೋಗಮಂದಿರದಲ್ಲಿ  ಒಬ್ಬ ಮರಿದೇವರ ಪೂಜಾ ಕೊಠಡಿಯಲ್ಲಿ ಕೆಳದಿ ಶ್ರೀಗಳು ಮೆಣಸಿನಕಾಯಿಯನ್ನು ಕಂಡರು. ಕೂಡಲೇ ಶ್ರೀ ಹಾನಗಲ್ ಕುಮಾರ ಸ್ವಾಮಿಗಳು ಹಾಕಿದ ನೇಮ ಭಂಗವಾಯಿತು ಎಂದು ತಿಳಿದು ಆ ಮರಿದೇವರಿಗೆ ಶಿಕ್ಷೆ ನೀಡಿ, ಮರಿದೇವರನ್ನಾಗಿಸಲು ಶ್ರೀ ಬನಶಂಕರಿ ದೇವಸ್ಥಾನದವರೆಗೆ ಒಂದು ಕಲ್ಲನ್ನು ಆ ಮರಿದೇವರ ತಲೆಯ ಮೇಲೆ ಹೊರಿಸಿ, ತಾವು ಅವರ ಹಿಂದೆ ನಡೆದುಕೊಂಡು ಹೋಗಿ ಬಂದರು. ಇದು ಕೆಳದಿ ಶ್ರೀಗಳು ಶಿವಯೋಗಮಂದಿರದ ನಿಯಮಾವಳಿಗಳನ್ನು ಎಷ್ಟೊಂದು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು, ಹಾಗೂ  “ಹಾನುಗಲ್ಲ ಕುಮಾರ ಮಹಾಸ್ವಾಮಿಗಳವರ ಮೇಲೆ ಎಷ್ಟೊಂದು ಪ್ರೀತಿ ಗೌರವ ವಿಶ್ವಾಸ ಇಟ್ಟಿದ್ದರು.  ಎಂಬುದು ಎದ್ದು ಕಾಣುತ್ತದೆ.

 “ಜೀವನ ಸುಗಮವಾಗಿ, ಸುಂದರವಾಗಿ ಸಾಗಬೇಕಾದರೆ ದಿನ ನಿತ್ಯದ ಖರ್ಚನ್ನು  ಅತ್ಯವಶ್ಯಕ,      ಅವಶ್ಯಕ  ಮತ್ತು  ಅನಾವಶ್ಯಕ “ ಇವುಗಳನ್ನು ಕ್ರಮವಾಗಿ ಅರಿತು ಮಾಡಬೇಕು. “ಹೊಸ ದುಡ್ಡು ಬರುವವರೆಗೆ, ಹಳೆ ದುಡ್ಡನ್ನು ಕಾಪಾಡಿಕೊಂಡು ಬರಬೇಕು” ಎಂಬ ಮಹತ್ವದ ಜ್ಞಾನ  ಪೂಜ್ಯ ಕೆಳದಿ ಶ್ರೀಗಳು ನೀಡುತ್ತಿದ್ದರು, ಇದನ್ನು ಅನುಸರಿಸಿದ ಬಹಳ ಜನರಿಗೆ ಆರ್ಥಿಕ ತೊಂದರೆಗಳು ಇಲ್ಲದಂತಾದವು.

ಬೇಸಿಗೆಯಲ್ಲಿ ಪ್ರವಾಸಕ್ಕೆ ವಟು-ಸಾಧಕರು, ಮರಿದೇವರುಗಳನ್ನು ಮಲೆನಾಡು ಕೆಳದಿಗೆ ಕರೆದಕೊಂಡು  ಹೋಗುತ್ತಿದ್ದರು. ಹದಿನೈದು ದಿವಸ ತಿಂಗಳಾನುಗಟ್ಟಲೆ ಕೆಳದಿ ಮಠದಲ್ಲಿಟ್ಟುಕೊಂಡು ಸಂಸ್ಕøತ ಪಾಠ ಪ್ರವಚನಗಳನ್ನು ನೀಡುತ್ತಿದ್ದರು.   ಸಾಗರದ ರಾಜಗುರು ಕಲ್ಯಾಣ ಕೇಂದ್ರದ ಉದ್ಘಾಟನೆ ಸಮಯದಲ್ಲಿ  36 ಮರಿದೇವರ ಮಂಟಪ ಪೂಜೆ ಮಾಡಿ, ಅವರಿಗೆ ಬೆಳ್ಳಿಯ ಪೂಜಾ ಪರಿಕರಗಳನ್ನು ನೀಡಿದರು. ಪ್ರತಿ ವರ್ಷ ಶ್ರಾವಣ ಮಾಸದ  ಮುಕ್ತಾಯ ದಿನದಂದು  ಅಮವಾಸ್ಯೆ ಪಾಢ್ಯದ ದಿನದಂದು ಬಾದಾಮಿ ಶಾಖಾ ಮಠದಿಂದ ಮಹಾಕೂಟ ಮಾರ್ಗವಾಗಿ ಶಿವಯೋಗ ಮಂದಿರದವೆಗೆ ಪಾದಯಾತ್ರೆ ಮಾಡಿ, ಮರಿದೇವರುಗಳ ಪಾದಪೂಜೆ ಮಾಡುವ ಮೂಲಕ  ಮುಕ್ತಾಯ ಮಾಡುತ್ತಿದ್ದರು. “ಶಿವಯೋಗ ಮಂದಿರದ ವಟು-ಸಾಧಕ-ಮರಿದೇವರುಗಳನ್ನು ಹಾನಗಲ್ ಕುಮಾರೇಶನ ಪ್ರತಿರೂಪ” ಎಂದೇ ಭಾವಿಸಿ ನಡೆಯುತ್ತಿದ್ದರು.

ಹೀಗೆ ವಟು-ಸಾಧಕರಿಗೆ  ಶಿವಪೂಜೆ, ಶಿವಧ್ಯಾನ, ಜ್ಞಾನ, ವಿಜ್ಞಾನ, ಆಧ್ಯಾತ್ಮ, ಶಿವಯೋಗ, ಪಾಠ  – ಬೋಧನೆ ಮಾಡುತ್ತಾ, ಅವರ ಬಾಳಿಗೆ ಬೆಳಕಾದವರು. ಶಿವಯೋಗ ಮಂದಿರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.  ಇವರ ಗರಡಿಯಲ್ಲಿ ವಿದ್ಯಾರ್ಜನೆ ಮಾಡಿದ ವಟು-ಸಾಧಕ-ಮರಿದೇವರುಗಳು ಇಂದು ದೊಡ್ಡ ದೊಡ್ಡ ಮಠಗಳ ಮಠಾಧಿಪತಿಗಳಾಗಿ, ಪೀಠಾಧಿಪತಿಗಳಾಗಿ, ಜಗದ್ಗುರುಗಳಾಗಿ  ಕಾಯಕ-ದಾಸೋಹದ ಸೇವೆಯನ್ನು ನಾಡಿಗೆ ನೀಡುತ್ತಿದ್ದಾರೆ.

ಶಿವಯೋಗ ಮಂದಿರದ ವಟು-ಸಾಧಕರಿಗೆ ಎಲ್ಲವೂ ಆಗಿದ್ದ   ಪೂರ್ಣತ್ವಕಾರ ಡಾ||ಕೆಳದಿ ಶ್ರೀಗಳನ್ನು  ಕುರಿತು ಪೂಜ್ಯ ಮ.ಘ.ಚ. ಪ್ರಭುಕುಮಾರು ಶಿವಾಚಾರ್ಯರು  ತ್ರಿಪದಿ ಛಂದಸ್ಸಿನಲ್ಲಿ ಬರೆದ “ಅರಳಿದ ಅರಿವು” ತ್ರಿಪದಿಯಲ್ಲಿ  ಬರೆದ ಈ ತ್ರಿಪದಿಯನ್ನು ಸ್ಮರಿಸಬಹುದಾಗಿದೆ.

 ಬ

ಹಡೆದ ತಾಯಿಯ ಮಮತೆ | ಪಡೆದೆ ಶಿವಮಂದಿರದಿ

ಒಡೆಯ ಗುರುಸಿದ್ಧ ಕೆಳದೀಶ ಗುರುವೆನಗೆ

ಬಿಡದೆ ಕೈಹಿಡಿದ ಜಗದೀಶ   ||968||    

ಸಮಾಜ ಸೇವೆ ಮತ್ತು ಧಾರ್ಮಿಕ ಜನ ಜಾಗೃತಿ:

“ಗುರುವಿನ ವಿರಕ್ತಿ –ವಿರಕ್ತಿಯಲ್ಲಿ ಗುರುತ್ವ” ಇರಬೇಕು .ನಾ ಹೆಚ್ಚು ನಾ ಹೆಚ್ಚು ಎಂಬ ಬೇದ ಭಾವನೆ ಇರಬಾರದು . ಗುರು-ವಿರಕ್ತರೊಂದೆ ಎಂಬ ಸಮತೆ ಸಾರುವ ಉದ್ದೇಶದಿಂದ ದಿನಾಂಕ:27.11.1978 ರಿಂದ 07.12.1978 ರವರೆಗೆ ಹುಬ್ಬಳ್ಳಿಯಿಂದ ಶಿವಯೋಗಮಂದಿರದವರೆಗೆ  11 ದಿನಗಳ ಪಾದಯಾತ್ರೆಯನ್ನು ಹುಬ್ಬಳ್ಳಿ ಜಗದ್ಗುರುಗಳು ಸೇರಿದಂತೆ ಅನೇಕ ಸ್ವಾಮೀಜಿಗಳೊಂದಿಗೆ ಕೈಗೊಂಡು, ಗುರು-ವಿರಕ್ತರು ಒಂದೆ ಎಂಬ ಹಾನಗಲ್ ಕುಮಾರೇಶನ ಸಂದೇಶವನ್ನು ಸಾರಿದರು. ಪಾದಯಾತ್ರೆಯುದ್ದಕ್ಕೂ ಸುಮಾರು 05 ಸಹಸ್ರಕ್ಕಿಂತಲೂ ಅಧಿಕ ಜನರಿಗೆ  ಲಿಂಗಧಾರಣೆ ಮಾಡಿ, ಧರ್ಮ ಜಾಗೃತಿ ಮೂಡಿಸಿದರು.

1979 ರಲ್ಲಿ ತಮಿಳುನಾಡಿನಲ್ಲಿ ಧರ್ಮ ಪ್ರಚಾರ ಕೈಗೊಂಡು ಅಲ್ಲಿಯೂ ಸಹಸ್ರಾರು ಜನರಿಗೆ ಲಿಂಗಧಾರಣೆ ಮಾಡಿದ್ದಲ್ಲದೆ. ಮಲೇಷಿಯಾ, ಸಿಂಗಾಪೂರ, ಲಂಕಾದಿಂದ ಬಂದವರಿಗೂ ಕೆಳದಿ ಶ್ರೀಗಳು ಶಾಸ್ತ್ರೋಕ್ತವಾಗಿ ಲಿಂಗಧಾರಣೆ ಮಾಡಿದರು. ಹೀಗೆ ತಮಿಳು ನಾಡು ಸೇರಿದಂತೆ ಹಿಂದೂಸ್ತಾನದ ಹಲವಾರು ರಾಜ್ಯಗಳಲ್ಲಿ ಸಂಚರಿಸಿ, ಲಕ್ಷಾಂತರ  ಭಕ್ತರಿಗೆ ಲಿಂಗಧಾರಣೆ, ಶಿವದೀಕ್ಷೆ, ರುದ್ರಾಕ್ಷಿ ಧಾರಣ ಮಾಡಿ  ಅಜ್ಞಾನ ಕಳೆದು ಜಾಗೃತಗೊಳಿಸಿದರು.    

ವೀರಶೈವರು ಇಷ್ಟ ಲಿಂಗ ಧಾರಣೆ ಮಾಡಿರಬೇಕು ಎಂದು ತಿಳಿಸಿ ಲಿಂಗಧಾರಣೆ ಮಾಡುತ್ತಿದ್ದರು. “ಪೂರ್ಣತ್ವ” ಗ್ರಂಥದ   ಪೂರ್ಣತ್ವ -ಭಾವಾಭಿವ್ಯಕ್ತಿ ಯ ಪುಟ  -156 ರಲ್ಲಿ ವೀರಶೈವನ ಇಷ್ಟಲಿಂಗಧಾರಣೆ ಮಹತ್ವವನ್ನು  ಈ ಕೆಳಗಿನಂತೆ ತಿಳಿಸಿದ್ದಾರೆ.

ಇಷ್ಟಾರ್ಥ ಸಿದ್ಧಿಸಿತು;

ಇಷ್ಟಕ್ಕೆ ಸಾಕೆಂದು

ಇಷ್ಟ ಲಿಂಗವ ಬಿಡುವ ವೀರಶೈವ ; ಅರೆ ವೀರಶೈವ |

ಅಷ್ಟ ಮಾಸದ ಗರ್ಭ

ಸೃಷ್ಟಿಯಿಂ ಲಯತನಕ

ಇಷ್ಟಲಿಂಗವ ಬಿಡದ ವೀರಶೈವ ; ವರ ವೀರಶೈವ|

ಪ್ರತಿ ವರ್ಷ ಕೆಳದಿ ರಾಜಗುರು ಹಿರೇಮಠದಲ್ಲಿ ವಿಜಯದಶಮಿ ದಿನದಂದು ಸಹಸ್ರ ಸಹಸ್ರ ಜನರಿಗೆ ಲಿಂಗದಾರಣೆ, ಧೀಕ್ಷೆ, ಅಯ್ಯಾಚಾರ,ಗಳನ್ನು ಜರುಗಿಸಿ ಧರ್ಮ ಜಾಗೃತಿ ಮಾಡಿದ್ದಾರೆ.

ಕೆಳದಿ ಅಜ್ಜನವರು  ಸಮಾಜ ಮುಖಿಯಾಗಿ, 01.06.1989 ರಲ್ಲಿ  ಸಾಗರ ಪಟ್ಟಣದಲ್ಲಿ  ರಾಜಗುರು ವಿದ್ಯಾವರ್ಧಕ ಸಂಘದ ಸ್ಥಾಪನೆ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ  ನಿಂತ ಪೂಜ್ಯರು  ಸಾಗರ ಪಟ್ಟಣದಲ್ಲಿ ರಾಜಗುರು ಕಲ್ಯಾಣ ಕೇಂದ್ರ ಸ್ಥಾಪನೆ [1993],   ಮತ್ತು ಶಿವಯೋಗಮಂದಿರದ ಬಳಿ ಮಂಗಳೂರು ಗ್ರಾಮದ ಸೇತುವೆ ಬಸವೇಶ್ವರನ ಸನ್ನಿದಾನದಲ್ಲಿ  ಸೇತುವೆ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ [1995],  ಮಾಡುವ ಮೂಲಕ ಉಚಿತ ಸಾಮೂಹಿಕ ವಿವಾಹಗಳಿಗೆ  ಚಾಲನೆ ನೀಡಿ, ಬಡವರಿಗೆ ದೀನರಿಗೆ ಆಸರೆಯಾದರು.  

 ಶಿವಯೋಗ ಮಂದಿರ ಸ್ಥಾಪನೆಯಾಗಿ ಶತಮಾನವಾಗುತ್ತಾ ಬಂದರೂ  ಪೂರ್ವ ದಿಕ್ಕಿನ  ದಾರಿ ಇಲ್ಲವೆಂದು  ಕೆಳದಿ ಪೂಜ್ಯರು ತಮ್ಮ ಭಕ್ತರ ಸಹಾಯ ಸಹಕಾರದಿಂದ ಲಕ್ಷಾಂತರ  ರೂಪಾಯಿ ಸ್ವಂತ ಖರ್ಚಿನಲ್ಲಿ ಮಲಪ್ರಭಾ ನದಿಗೆ ಶಿವಯೋಗ ಮಂದಿರದ ಬಳಿ  ಸೇತುವೆ ನಿರ್ಮಾಣ [1994-2007] ಮಾಡಿದರು. ಇವರ ಈ ಕಾರ್ಯವನ್ನು ಮೆಚ್ಚಿದ ಬಾಗಲಕೋಟ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಮದನಗೋಪಾಲ, ಐ.ಎ.ಎಸ್ ರವರು 50 ಸಾವಿರ ರೂಪಾಯಿ ಸರ್ಕಾರದ ಹಣವನ್ನು ಮಂಜೂರಿಸಿದ್ದರು.  ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ಕೆಳದಿ ಪೂಜ್ಯರು ಸ್ವತ: ತಾವೆ ಕಲ್ಲು, ಸಿಮೆಂಟು, ಕರಣಿ, ಹಿಡಿದು ಸೇತುವೆ ಕಟ್ಟಿದ್ದು,  ಕೆಳದಿ ಶ್ರೀಗಳ ಹಠಯೋಗದ ಘನ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದೆ, ಇದು ಹಠಯೋಗಿಗಳು, ತಪಸ್ವಿಗಳಿಂದ ಮಾತ್ರ ಸಾಧ್ಯ. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳ ಜನರ ಕಷ್ಟವನ್ನು ಪರಿಹರಿಸಿದರು.  ಸಮಾಜದಿಂದ ಪಡದಿದ್ದನ್ನು ಸಮಾಜಕ್ಕೆ ನೀಡಿದ ದಿವ್ಯಾತ್ಮ ಕೆಳದಿ ಪೂಜ್ಯರು.

ಸಾಹಿತ್ಯ:

ಪೂಜ್ಯ ಪೂರ್ಣತ್ವಕಾರ ಡಾ: ಕೆಳದಿ ಶ್ರೀಗಳು ಕನ್ನಡ, ಸಂಸ್ಕತ, ಹಿಂದಿ, ಮರಾಠಿ, ಇಂಗ್ಲೀಷ್, ಉರ್ದು, ಬಂಗಾಳಿ ಬಾಷೆಗಳಲ್ಲಿ ವ್ಯಾಕರಣ ಬದ್ದ ಪ್ರಭುತ್ವ ಸಾಧಿಸಿದ್ದರು.  ಕೆಳದಿ ಗುರುಗಳ ಪಾಂಡಿತ್ಯ ಅಪರಾವಾದದ್ದು, “ಶಬ್ದಗಳ ಡಾಕ್ಟರ್”, “ಪುರುಷ ಸರಸ್ವತಿ” ಎಂದೇ ಖ್ಯಾತರಾದವರು.   ಇವರ ಕಾವ್ಯನಾಮ “ಗುರುಮೂರ್ತಿ”  ಮಹಾನ್ ಪಂಡಿತರಾಗಿದ್ದ ಗುರುಗಳು “ಶಿವ-ಶಕ್ತಿ”  “ಹಾನಗಲ್ ಗುರುಕುಮಾರ” “ರಾಮಕೃಷ್ಣ ಪರಮಹಂಸ” “ವಿವೇಕಾನಂದ” ಮುಂತಾದ ಸಂಸ್ಕøತ ಕೃತಿಗಳನ್ನು  ಹಾಗೂ ಕ್ನನಡದಲ್ಲಿ  “ಪೂಣತ್ವ” , ಲಿಂಗೈಕ್ಯ ಜಗದ್ಗುರು ಗಂಗಾಧರ ಸ್ವಾಮಿಗಳು“ ಎಂದು ಕೃತಿಯನ್ನು ಬರೆದಿದ್ದಾರೆ.  “ಶ್ರೀ ಗುರುಸಿದ್ಧೇಶ್ವರ ಭಕ್ತಿಗೀತೆಗಳು”                  “ಶ್ರೀ ಕರಡೀಶ ಚರಿತಾಮೃತ ಚಂಪೂ ಪ್ರಬಂಧ” “ಕುಮಾರವಾಣಿ” ಇವರು  ಸಂಪಾದಿತ ಕೃತಿಗಳು.

          ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳ   ಸಾಹಿತ್ಯದ  ಅಮೂಲ್ಯ  ಮತ್ತು  , ಶ್ರೇಷ್ಟವಾದ ಕೃತಿ ಎಂದರೆ,  “ಪೂರ್ಣತ್ವ” ಇದು ವರಕವಿ ದ.ರಾ. ಬೇಂದ್ರೆಯವರಿಂದ ಪ್ರಶಂಸಿಲ್ಪಟ್ಟಿದೆ.  ಅಲ್ಲದೆ, ವರಕವಿ ದ.ರಾ ಬೇಂದ್ರೆಯವರು  ಈ ಪೂರ್ಣತ್ವ  ಕೃತಿಯ “ಶಿವ ಸಂಕಲ್ಪ” ದಲ್ಲಿ    “ಹಾನಗಲ್  ಕುಮಾರಸ್ವಾಮಿಗಳ ಅಪೂರ್ವ ಪೂರ್ಣ ಯೋಗದ ಮರಿ ಇದು, ಪೂರ್ಣಾತ್ ಪೂರ್ಣಮ್ ಉದಚ್ಯತೇ “ ಎಂದು  ಕೆಳದಿ ಅಜ್ಜನವರ ಬಗ್ಗೆ   ಮನಮೆಚ್ಚಿ ನುಡಿದಿದ್ದಾರೆ.

ಓಂ ಪೂರ್ಣ; ಅದು ಪೂರ್ಣ;

ಇದು ಪೂರ್ಣವಿದೆ ಮತ್ತು

ಪೂರ್ಣದಿಂದಲೆ ಪೂರ್ಣ;

ಅದೆ ಸತ್ತು ; ಅದೆ ಚಿತ್ತು;

ಪೂರ್ಣದಲಿ ಪೂರ್ಣ ಕಳೆ-

ದರು, ಬೆರೆಸುವದು ಮತ್ತು.

ಬೆರೆಸು; ಪೂರ್ಣ ಬೆರೆಸದೆ

ಬಿಡಬೇಡ ಬೇಸತ್ತು.     [ಪೂರ್ಣತ್ವ  ಪುಟ-36]

‘ತಿರುಗದ್ದೆ ತಿರುಗುವುದೇ?’

ಇತಿ ನಿಲ್ಲದಿರು ಅತ್ತು,

“ಅ-ಕ್ಷ” ಎಂಭೈವತ್ತು

ಅಕ್ಷರದ ನಿಜ ಸುತ್ತು

ಜಗ ತುಂಬ ಬೆಳೆದಿಹುದು

ವಿದ್ಯೆ ನಾಮದ ಸುತ್ತು

ಬೆಳೆಸು; ಪೂರ್ಣ ಬೆಳಸದೆ

ಬಿಡಬೇಡ ಬೇಸತ್ತು.  [ಪೂರ್ಣತ್ವ ಪುಟ-3 ]

ಸ್ವಯಮೇವ ಜೀಕಾಲಿ

ಜೀಕಲಿಕೆ ಮನ ತೆತ್ತು,

ಅದರಲ್ಲಿ ನೀಟಾಗಿ

ಕುಳಿತೊ, ನಿಂತೋ ಮತ್ತು

ಎರಡು ಕೈಯಲಿ ಎರಡು

                 ಹಗ್ಗ ಹಿಡಿ ; ಜೀಕೆತ್ತು.

ಜೀಕು; ಪೂರ್ಣ ಜೀಕದೆ

                 ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-7]

ಗಡಿಯಾರ ಮುಳ್ಳುಗಳು

                 ಅಷ್ಟೆ  ಅಂಕೆಯ ಸುತ್ತು

ಕೀಲೆ ಇರೆ ತಿರುಗುವು-

                 ದಿನ-ದಿನಕು ಕೆಲ ಸುತ್ತು.

ಸುತ್ತದಿರೆ ಸರಿಯಾಗಿ

ತಿಳಿಸಲಾರವು ಹೊತ್ತು.

ತಿಳಿಸು; ಪೂರ್ಣ ತಿಳಿಸದೆ

                 ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-4]

         ಪೂರ್ಣತ್ವ ಗ್ರಂಥವು  ವೀರಶೈವ ಧರ್ಮಧ 36 ತತ್ವಗಳ ವರ್ಣನೆ ಹೊಂದಿದ್ದು, ಬೆರೆಸು, ಬೆಳೆಸು, ಜೀಕು, ತಿಳಿಸು ಹೀಗೆ  ಕ್ರಿಯಾ ಸಂಯೋಜನೆ ಮೆರಗು ನೀಡಿ ಆಲಸ್ಯದಿಂದ, ಬೇಸರಿಂದ ಪರಮೋನ್ನತ ಸಾಧನೆಯನ್ನು ಮರೆಯಲಾರದಂತೆ ಸದಾ ಸದ್ ವೃತ್ತಿಯನ್ನು ನೆನಪು ಮಾಡಿಕೊಡುತ್ತಾ “ಪೂರ್ಣ ಮುಗಿಸದೇ ಬಿಡಬೇಡ ಬೇಸತ್ತು”  ಎಂದು ಸೂಚಿಸುವ ಪೂರ್ಣತ್ವದ ಸೂತ್ರಗಳು ಸದಾ ಸದ್‍ವೃತ್ತಿ ಸಾಧನೆಯನ್ನು ಸಾಧಿಸುತ್ತಿರಬೇಕೆಂದು ಹೇಳುತ್ತವೆ. ಕೆಳದಿ ಅಜ್ಜನವರು  “ಪೂರ್ಣತ್ವ”  ಎಂಬ ಶ್ರೇಷ್ಠ ಕೃತಿಯನ್ನು ಬರೆದಿದ್ದರಿಂದಲೂ ಹಾಗೂ ನುಡಿದಂತೆ ನಡೆದು, ನಡೆದಂತೆ ನುಡಿದು, ಹಿಡಿದ ಕಾರ್ಯವನ್ನು  ಪೂರ್ಣಗೊಳ್ಳುವವರೆಗೆ ಬಿಡದ ಛಲವಂತರಾಗಿದ್ದರು, ಹಾಗಾಗಿ ಅವರು “ಪೂರ್ಣತ್ವಕಾರ” ರಾಗಿದ್ದಾರೆ. ಹಠಯೋಗಿಯಾಗಿದ್ದಾರೆ.

 “ಇಂಗ್ಲೀಷ್ “SಔUಐ’ =ಆತ್ಮ ಗಟ್ಟಿ ಇದ್ದರೆ, ಕನ್ನಡದ ಸೋಲ್ (ಸೋಲು) =ಅಪಜಯ ಎಂದೂ ಆಗುವುದಿಲ್ಲ” ಎಂದು  ಕೆಳದಿ ಅಜ್ಜನವರು ಯಾವಾಗಲೂ ಹೇಳುತ್ತಿದ್ದರು.

ಬಹುಭಾಷಾ ಪಂಡಿತರೂ, ಶ್ರೇಷ್ಠ ಬರಹಗಾರರೂ, ವಾಗ್ಮಿಗಳೂ ಆಗಿದ್ದ ಕೆಳದಿ ಗುರುಗಳು ಅವರು ಬರೆದಿದ್ದನ್ನು ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಿದ್ದರೆ ಇಂದು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರು. ಅದನ್ನು ಮಾಡಲಿಲ್ಲವೆಂಬ ಕೊರಗು ಆಪ್ತ ಭಕ್ತರಲ್ಲಿದೆ.  ಗುರುಗಳು ಈ ರೀತಿಯ ಬರವಣಿಗೆಗಳನ್ನು ಸಂಗ್ರಹಿಸಿ, ಪ್ರಕಟಿಸಬೇಕಾದ ಕಾರ್ಯ ನಡೆಯಬೇಕಾಗಿದೆ.

ಮಹಾ ತಪಸ್ವಿ:

ಮಹಾತಪಸ್ವಿಯಾಗಿದ್ದ ಪೂರ್ಣತ್ವಕಾರ ಕೆಳದಿ ಪೂಜ್ಯರು ತಮ್ಮ ತಪಃಶಕ್ತಿಯಿಂದಲೆ  ಲೀಲೆಗಳನ್ನು ಗೈದ ಲೀಲಾಪರುಷರಾಗಿದ್ದಾರೆ. ಹಿಮಾಲಯ, ಋಷಿಕೇಶ, ಶಿವಯೋಗ ಮಂದಿರ, ಕೆಳದಿ ಮುಂತಾದ ಪುಣ್ಯ ತಪೋಭೂಮಿಯಲ್ಲಿ ತಪ ಗೈದ ಕೆಳದಿ ಪೂಜ್ಯರು ನೊಂದು ಬಂದ ಭಕ್ತರ ಕಷ್ಟಗಳನ್ನು ತಮ್ಮ ತಪಃಶಕ್ತಿಯಿಂದ ನಿವಾರಿಸಿದ ದಿವ್ಯಾತ್ಮರು. ಅಂತಹ ನೂರಾರು , ಸಾವಿರಾರು ಲೀಲೆಗಳನ್ನು  ಉದಾರಿಸಬಹುದಾಗಿದೆ.

ಆಡಂಬರವನ್ನು ಬಯಸುವ ಇಂದಿನ ಸಮಾಜವು ಪೂರ್ಣತ್ವಕಾರ ಕೆಳದಿ ಶ್ರೀಗಳ ‘ನಿರಾಡಂಬರ” “ಸರಳ” “ತತ್ವಗತ” ಜೀವನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅವರ ಪ್ರತಿಭೆ- ಪಾಂಡಿತ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ.

“ನಿಸ್ವಾರ್ಥ” “ನಿಷ್ಕಳಂಕ” ನಿರ್ಮಲಾತ್ಮದ” ಪೂರ್ಣತ್ವಕಾರ ಕೆಳದಿ ಶ್ರೀಗಳಿಗೆ ಕೆಲವು ಜನ ಸ್ವಾರ್ಥಿಗಳು, ಕಳಂಕಿತರು, ಕಲ್ಮಶ ರು ಅನೇಕ ರೀತಿಯಲ್ಲಿ ತೊಂದರೆ, ಚಿತ್ರಹಿಂಸೆ ನೀಡಿದರೂ ಅದನ್ನೆಲ್ಲ ತಾಳ್ಮೆಯಿಂದ ಸಹಿಸಿದರೆ, ಹೊರತು ತೊಂದರೆ ಮಾಡಿದವರೆಂದಿಗೂ  ಕೆಳದಿ ಪೂಜ್ಯರು ಕೇಡುಬಯಸಲಿಲ್ಲ.

ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ ತಮ್ಮ ಇಚ್ಚೆಯಂತೆ ಸನ್ 2200 ನೇ ಇಸ್ವಿಯಲ್ಲಿ  ತಮ್ಮ ತರುವಾಯ  ಶ್ರೀ ಮೃತ್ಯಂಜಯ ದೇಶಿಕ ಶಿವಾಚಾರ್ಯರನ್ನು ಕೆಳದಿ ರಾಜಗುರು ಹಿರೇಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳಿಸಿದರು.  

ಲಿಂಗೈಕ್ಯ:

ಮೌನ ತಪಸ್ವಿ ಶ್ರೀಮ.ನಿ.ಪ್ರ.ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ ನಿಂಬಾಳ ರವರು ಹೇಳುವಂತೆ  “ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್” ಮಹಾತ್ಮರಾದವರಿಗೆ ಕೃತಿ (ಕಾಯ), ಮಾತು (ವಾಕ್), ಮತಿ (ಮನಸ್ಸು) ಈ ಮೂರರಲ್ಲಿಯೂ ಏಕರೂಪತೆಯಿರುತ್ತದೆ. ಈ ಸುಭಾಷಿತೋಕ್ತಿಯೇ ವ್ಯಕ್ತಿರೂಪದಂತಿದ್ದವರು ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, 

ಸರಳತೆ, ಸಹನೆ, ತಾಳ್ಮೆ, ಸಮ-ಚಿತ್ತತೆ, ದೈರ್ಯ, ತ್ಯಾಗ, ಆದರ್ಶ, ಸಿದ್ದಾಂತ, ಮಹಾನ್ ಪಾಂಡಿತ್ಯ, ತಪಃಶಕ್ತಿ, ಇವುಗಳ ಸಮ್ಮಿಳಿತದ  ಮೇರು ವ್ಯಕ್ತಿತ್ವ ಕೆಳದಿ ಅಜ್ಜನವರದಾಗಿತ್ತು.  ತ್ಯಾಗ ಜೀವನದಲ್ಲಿ, ಆದರ್ಶ ಯೋಗಿಯಾಗಿ ಬೆಳಿಗಿದ ಕೆಳದಿ ಅಜ್ಜನವರು “ಹಾನಗಲ್  ಗುರು ಕುಮಾರೇಶ್ವರರನ್ನು ಸಂಪೂರ್ಣವಾಗಿ ಗ್ರಹಿಸಿ, ಅವರ ಪಥದಲ್ಲಿ  ನಡೆದು,  ಶ್ರೀಮದ್ ವೀರಶೈವ ಶಿವಯೋಗ ಮಂದಿರದ  ಪ್ರಚಾರ ಹಾಗೂ ಪ್ರಚುರಕ್ಕಾಗಿ ಹಗಳಿರುಳು  ಶ್ರಮಿಸಿ,  “ಹಾನಗಲ್ ಗುರುಕುಮಾರ ಶಿವಯೋಗಿಗಳ ಮತ್ತೊಂದು ಅವತಾರ”ವಾಗಿದ್ದರು. 

ಅವರನ್ನು “ರಾಜಗುರುಗಳು ಎನ್ನುವದಕ್ಕಿಂತಲೂ  ಗುರುಗಳಲ್ಲಿ ರಾಜರಂತಿದ್ದು “ “ಗುರುತ್ವ, ದಿವ್ಯತ್ವ, ಸಿದ್ದಿ ಹೊಂದಿದ ಮಹಾನ್ ತಪಸ್ವಿಯಾಗಿದ್ದರು.

ಏಕ-ನಿಷ್ಠೆಗೆ = ಗುರಿಗೆ ಸಿದ್ಧಿ ದೊರೆವುದು ಸಹಜ |

ಸಾಧಕನ ಸಾಧನೆಗೆ ಸಿದ್ದಿ ದೊರೆತರೆ ಸಿದ್ಧ ;||

ಅಣಿಮಾದಿ ಸಿದ್ದಿ ದೊರೆತ ಗುರುವೇ ಗುರುಸಿದ್ಧ |

ಗುರು-ಸಿದ್ಧ – ದೇವನೇ “ಗುರುಸಿದ್ಧದೇವ” =ಶಿವ ||

                                   ಕೆಳದಿ ಪೂಜ್ಯರು ಲಿಲತ ರಗಳೆ ಛಂದಸ್ಸಿನಲ್ಲಿ ಬರೆದ ಪದ್ಯದ 03 ನೇ ಪ್ಯಾರಾ

 ಇಂತಹ ಮಹಾನ್  ತಪಸ್ವಿಗಳು ಆಷಾಡ ಶುದ್ಧ ಏಕಾದಶಿ,   ಜುಲೈ  09  2009 ರ  ಮಂಗಳವಾರ  ದಂದು  ತಮ್ಮ 79 ನೇ ವಯಸ್ಸಿನಲ್ಲಿ  ಲಿಂಗೈಕ್ಯರಾದರು.

 ಕೆಳದಿ ಅಜ್ಜನವರ  ಕರ್ತೃ ಗದ್ದುಗೆಯನ್ನು  ಶ್ವೇತಾಂಬರದಾರಿ, ಮೌನತಪಸ್ವಿ    ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತಮಠ, ನಿಂಬಾಳ, ಇವರ ಮಾರ್ಗದರ್ಶನದಲ್ಲಿ   ಶಿವಯೋಗ ಮಂದಿರದ ಪಲಪ್ರಭೆ ನದಿ ಬಲದಂಡೆ ಮೇಲೆ ನಿರ್ಮಿಸಲಾಗಿದೆ.

ಪರಮ ಪೂಜ್ಯ ಮೌನ ತಪಸ್ವಿ ಜಡೆಯೊಡೆಯರ  ಪರಿಶ್ರಮದಿಂದ ಇಂದು ದೊಡ್ಡ ಮಠವಾಗಿ ಬೆಳದು ನಿಂತಿದ್ದು, ಇದು  ಪೂರ್ಣತ್ವಕಾರ  ಲಿಂ ಡಾ||ಕೆಳದಿ ಶ್ರೀಗಳ ಹಾಗೂ ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಪರಿಶುದ್ಧ ಗೆಳೆತನದ ಸಂಕೇತವಾಗಿದೆ.

                 ————*******—————–

ಶ್ರೀ ವೇ. ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು

ರಾಗ: ಯಮನ     ತಾಳ: ಝಫ್ತ

ಚಾಲ:

ಬಾ ಗುರುವೆ ! ಸುರತರುವೆ !

ಬಾಗಿಲವ ತೆರೆದಿರುವೆ |

ಸ್ವಾಗತಿಪೆ ಜೀವದೇವತೆ |

ಯರಸಬರಲೆಂದು ||ಪ||    

ದೇಹದೇಗುಲದೊಳಗೆ |

ಭಾವ ಸಿಂಹಾಸನವ

ಸಾಹಸದಿ ರಚಿಸಿರುವೆ |

ನೇಹಮನದಿಂದಿಂದು ||೧||

ಲಿಂಗಾಂಗ ಸಮರಸದ |

ಮಂಗಲದ ಸುಧೆಯುಣಿಸಿ |

ತುಂಗ ಗುರು – ಲಿಂಗ |

ಜಂಗಮ ಲೀಲೆಯಿಂ ಮೆರೆವ ||೨||

ಎಲ್ಲ ದೈವಕೂ ನಿನ್ನ |

ಮೆಲ್ಲಡಿಯೆ ಮಿಗಿಲೆಂದು |

ಬಲ್ಲಿದನೆ ನುತಿಪೆ ನಿ ।

ನೋಲ್ಮೆ ಎನ್ನಲ್ಲಿರಲಿ||೩||

ಮೆಲ್ಲಡಿಗೆ ಮನವೆಂಬ |

ಮಲ್ಲಿಗೆಯ ಹಾಸುವೆನು ||

“ನಲ್ಲೆ’ ಭಕ್ತಿಯ ರಸವ |

ನಲ್ಮೆಯಿಂದೆರೆಯುವೆನು||೪||

ಎನ್ನಯ್ಯ ಬರಲೆಂದು |

ಪನ್ನೀರ ನೆರಚುವೆನು |

“ಚೆನ್ನಬಸವನ” ಪುಣ್ಯ |

ರನ್ನ ಶ್ರೀ ಸುಕುಮಾರ |

ಡಾ. ಶಿವಯೋಗಿ ದೇವರು ಕಾರಂಜಿಮಠ ಬೆಳಗಾವಿ

ಹೊಂಗಿರಣಗಳು ಸುಕುಮಾರಗೆ ಸುಪ್ರಭಾತ ಹಾಡ್ಯಾವು

ತರುಲತೆಗಳು ತಲೆದುಗುತ ತಂಗಾಳಿ ಬಿಸ್ಯಾವು

 

ಶಿವಯೋಗದ ಸೋನೆ ಸುರಿದು ,ಮಲಪಹಾರಿ ನದಿಯು ಹರಿದು

ಮನುಕುಲದ ಜ್ಯಾಡ್ಯ ತೊಳೆದು ,ಮಹಾದೇವನ ಇರುವ ತೋರ್ಯಾವು

 

ತೆಂಗು ಕಂಗು ಮಾವು ಬಿಲ್ವ ಫಲವ ಬಿಟ್ಟಾವು

ಲಿಂಗ ಪೂಜೆಗೆ ಸೇವೆ ಸಲಿಸಿ ಸಾರ್ಥಕಾಗ್ಯಾವು

 

ನಾದ ನಿನಾದ ಸುನಾದಗಳ ಕಂಪನಗಳೆದ್ದಾವು

ಅಂಧ ಅನಾಥರ ಭಾಳಬೆಳಗಿದ  ತಂದೆ ಎಂದಾವು

 

ಗಿರಿನವಿಲು ಗಿಳಿಕೋಗಿಲೆ ಸರಿಸಮಯಕೆ ಹಾಡ್ಯಾವು

ಸಮಯ ಬೇದವನಳಿದು ಸಮತೆ ಅರಿದೆ ಎಂದಾವು

 

ಮತಮತಿಗಳ ಮಾತು ಮತಿಸಿ ಮಹಾಸಭೆಗಳೇ ಆಗ್ಯಾವು

ಮನುಜ ಮತ ವಿಶ್ವಪಥ ಎಂಬುದನೇ ಸಾರ್ಯಾವು

 

ಸಮಾಜವೆನುತಲಿ ಸುಕುಮಾರ ಶಿವನೊಳು ಬೆರೆತಾನು

ಇದ ನೋಡುತ ಶಿವಯೋಗಿ ಶರಣೆಂದು ನಿಂತಾನು