ಋಷಿವಾಣಿ ಎಂದಿಗೂ ಹುಸಿಯಾಗದು: ಗುರು ಕುಮಾರ ಶಿವಯೋಗಿಗಳ ದಿವ್ಯ ದಿಕ್ಸೂಚಿ”

ಲೇಖಕರು: ಶ್ರೀ ಅನ್ನದಾನೀಶ್ವರ ಶಿವಲಿಂಗ ಶಾಸ್ತ್ರೀ ಹಿರೇಮಠ ಇಲಕಲ್ಲ (ಗುಡೂರ)

========================

ಸತ್ಯವಂತರ-ಸದಾಚಾರಿಗಳ ಮಾತು ಜ್ಯೋತಿರ್ಲಿಂಗ, ಅವರ ಮಾತು ಮುತ್ತಿನಹಾರ-ಅವರ ಮಾತು ಮಾಣಿಕ್ಯದ ದೀಪ್ತಿ-ಅವರ ಮಾತು ಸ್ಪಟಿಕದ ಸಲಾಕೆ-ಶಿವ ಮೆಚ್ಚಿ ಅಹುದು ಅಹುದು ಎನ್ನುವಂತಹದ್ದು,ಅವರ ಮಾತು ಮಂತ್ರ,ಅವರ ಮಾತು ಮೃತ್ಯುವಿಗೊಳಗಾಗುವವರಿಗೆ -ಸಂಜೀವಿನಿ,ಅವರ ಮಾತು ಹೃದಯವನರಳಿಸುವಂತದ್ದು ವಿನಃ ಹೃದಯಾಘಾತ ಮಾಡುವಂತಹದ್ದಲ್ಲ,ಅವರ ಮಾತುಗಳಿಂದ ಒಡೆದಿರುವ ಎರಡು ಮನಗಳು-ಎರಡು ಮನೆಗಳು,ಎರಡು ಗುಂಪುಗಳು ಒಂದಾಗುವವು,ಬಹುತೇಕ ನಮ್ಮ ಮಾತು ಮೃತ್ಯುವಿಗೆ- ಜಗಳಕ್ಕೆ ಕಾರಣವಾಗುತ್ತೆ,ಅವರ ಮಾತು-ಬದುಕಿಗೆ ಸ್ಪೂರ್ತಿ-ಪ್ರೇರಣೆಯಾಗುತ್ತದೆ,ಅವರ ಮಾತು ಬೆಳಕು

ನಮ್ಮ ಮಾತು ಕತ್ತಲೆ,ಅವರ ಮಾತು ಶೂಕ್ಲ ಪಕ್ಷದ ಪೂರ್ಣಿಮೆಯ ಚಂದ್ರ-ನಮ್ಮ ಮಾತು‌ ಕೃಷ್ಣ ಪಕ್ಷದ ‌ಕರಗುವ-ಕಾಣೆಯಾಗುವ ಚಂದ್ರ, ಅವರ ಮಾತು ಮುತ್ತು-ನಮ್ಮ‌ಮಾತು ಮೃತ್ಯು, ಅವರ ವಾಣಿ ಅಮರವಾಣಿ-ಅಮೃತವಾಣಿ,ನಮ್ಮದು ಮೃತವಾಣಿ-ಮೃತ್ಯುವಾಣಿ,

ನಿಜವನರಿತ ಶಿವಯೋಗಿಗಳ ವಾಣಿ ಅದು ಪರುಷವಾಣಿ-ಅದು ಪ್ರಸಾದ ವಾಣಿ-ಶಿವವಾಣಿ-ಅದು ಲಿಂಗ ನುಡಿ”ಋಷಿಯಾಡಿದ ಮಾತು ಹುಸಿಯಾಗದು”

ಪಂಡಿತ ಪಂಚಾಕ್ಷರ ಗವಾಯಿಗಳು ಶ್ರೀ ಗುರು ಕುಮಾರ ಶಿವಯೋಗಿಗಳವರ ಕೃಪೆಯಿಂದ ಉತ್ತರಾದಿ-ದಕ್ಷಿಣಾದಿ ಎರಡು ಪ್ರಕಾರದ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ “ಉಭಯಗಾಯನ ವಿಶಾರದರು” ಹಾನಗಲ್ ಗುರು ಕುಮಾರ ಶಿವಯೋಗಿಗಳನ್ನು ಅವರ ಆದರ್ಶಗಳನ್ನು ಉಸಿರಾಗಿಸಿಕೊಂಡು ಬದುಕಿದ ಮಹಾನುಭಾವಿಗಳು.

ಪೂಜ್ಯ ಪಂಚಾಕ್ಷರ ಗವಾಯಿಗಳು,ಯೌವ್ವನಾವಸ್ಥೆಯಲ್ಲಿರುವಾಗ-ಮದುವೆ ಮಾಡಿಕೊಳ್ಳುವ ಬಯಕೆಗೊಳಗಾಗಿ-ತಮ್ಮ ಇಚ್ಚೆಯನ್ನು ಪೂಜ್ಯ ಶ್ರೀ ಕುಮಾರ ಮಹಾಸ್ವಾಮಿಜಿಯವರ ಮುಂದೆ ವ್ಯಕ್ತ ಪಡಿಸಿದಾಗ,ಪೂಜ್ಯರಿಗೆ ಬಹು ನೋವಾಯಿತು,ಯೋಚನೆಗೊಳಗಾದರು,ಪೂಜ್ಯರು-ಪಂಚಾಕ್ಷರಿ ನಾವು ಸಮಾಜದ ಹಣದಿಂದ ನಿನಗೆ ಸಂಗೀತ ವಿದ್ಯೆ ಕಲಿಸಿರುವುದು,ಗೃಹಸ್ಥನಾಗಿ ಒಬ್ಬ ಗವಾಯಿಯಾಗುವುದಕ್ಕಲ್ಲ-ಸಮಾಜದ ಋಣ ತೀರಿಸಲು ನೀನು ಅಖಂಡ ಬ್ರಹ್ಮಚಾರಿಯಾಗಿ-ಸಂಗೀತ ಲೋಕದ ಶಿವನಾಗಿ-ಗಾನಯೋಗಿಯಾಗಿ-ಅಂಧ ಅನಾಥರ ಬಾಳಿಗೆ ನಂದಾದೀಪವಾಗಲು.ಮದುವೆಯಾದರೆ ಎರಡು ಮಕ್ಕಳಿಗೆ ತಂದೆಯಾಗಿ,ಒಬ್ಬ ಗವಾಯಿಯಾಗುವೆ,ಕಣ್ಣುಗಳಿಲ್ಲದ-ಕಾಲುಗಳಿಲ್ಲದ,ತಂದೆ ತಾಯಿಗಳಿಲ್ಲದ ಸರ್ವಮತಿಯರ – ಸಾವಿರಾರು ಮಕ್ಕಳ ತಂದೆಯಾಗಿ -ಆಶ್ರಯದಾತನಾಗಬೇಕು.

ನಿನ್ನ ಆಶ್ರಮ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು.ಹೀಗೆ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ ಪ್ರಸಾದವಾಣಿ , ದಿಕ್ಸೂಚಿಯ ಮಾತು-ಪಂಚಾಕ್ಷರಿ ಗವಾಯಿಗಳವರ  ಮನಃ ಪರಿವರ್ತಿಸಿತು,ತಮ್ಮನ್ನು ಶ್ರೀ ಗುರು ಕುಮಾರೇಶನ ಪಾದಾರವಿಂದಗಳಿಗೆ ಅರ್ಪಿಸಿಕೊಂಡು”ಎನ್ನ ವಾಮಕ್ಷೇಮ ನಿಮ್ಮದು,ಎನ್ನ ಹಾನಿವೃದ್ಧಿ ನಿಮ್ಮದು,ಎನ್ನ ಮಾನಾಪಮಾನ ನಿಮ್ಮದು”ಎಂದು ಪೂಜ್ಯ ಗುರುಗಳ ಸನ್ನಿಧಾನಕ್ಕೆ ಶರಣಾದದ್ದು ಇಂದು‌ ಗದುಗಿನಲ್ಲೊಂದು ಪುಣ್ಯಾಶ್ರಮ ತಲೆ‌ ಎತ್ತಲು ಕಾರಣವಾಯಿತು,ನಡೆದಾಡುವ ದೇವರು‌-ಪೂಜ್ಯ ಪುಟ್ಟರಾಜ ಗುರುಗಳನ್ನು ಈ ನಾಡು ಕಾಣಲು ಸಾಧ್ಯವಾಯಿತು, ಇಂದು ವೀರೇಶ್ವರ ಪುಣ್ಯಾಶ್ರಮ ದಿಂದ, ಸಾವಿರ ಸಾವಿರ ಸಂಖೇಯಲ್ಲಿ- ಸಂಗೀತ-ಸಾಹಿತ್ಯ  ಪುರಾಣ-ಪ್ರವಚನ

ಕೀರ್ತನ-ರಂಗಭೂಮಿಯ ಕಲಾ ದಿಗ್ಗಜರು, ಈ ನಾಡಿನ ಸೇವೆ ಮಾಡುವಂತಾಯಿತು.

ಅಂದು ಪೂಜ್ಯರ  ಅಮೂಲ್ಯ ಸಂದೇಶ-ಪಂಚಾಕ್ಷರ ಗವಾಯಿಗಳವರ ತ್ಯಾಗದ ಪ್ರತಿರೂಪ “ಗದುಗಿನ ವೀರೇಶ್ವರ ಪುಣ್ಯಾಶ್ರಮ”

 

ಲೇಖಕರು: ಶ್ರೀ ಅನ್ನದಾನೀಶ್ವರ ಶಿವಲಿಂಗ ಶಾಸ್ತ್ರೀ ಹಿರೇಮಠ ಇಲಕಲ್ಲ (ಗುಡೂರ)

೮೬೬೦೦೨೭೭೯೧

“ಜಯ ಗುರು ಕುಮಾರೇಶ”

Related Posts