ಇತಿಹಾಸವನ್ನು ಘೋಷಣೆಗಳಿಂದಲ್ಲ, ದಾಖಲೆಗಳಿಂದ ಅರಿಯೋಣ

=================================

: ಡಾ. ಜೆ. ಎಸ್. ಪಾಟೀಲ್ ಅವರ“ಪಂಚಮಸಾಲಿ ಪೀಠಗಳ ಗೊಂದಲ”  ಲೇಖನಗಳಿಗೆ ಉತ್ತರ”

========================

ಶ್ರೀಕಂಠ.ಚೌಕೀಮಠ

===========================

ಇತ್ತೀಚಿನ ದಿನಗಳಲ್ಲಿ ಡಾ. ಜೆ. ಎಸ್. ಪಾಟೀಲ್ ಅವರು “ಬಸವ ತತ್ವ ಪ್ರಚಾರಕ” ಹಾಗೂ “ಪ್ರಗತಿಪರ ಚಿಂತಕ” ಎಂಬ ಪರಿಚಯದೊಂದಿಗೆ ಈದಿನ ಡಾಟ್ ಕಾಮ್‌ನಲ್ಲಿ “ಪಂಚಮಸಾಲಿ ಪೀಠಗಳ ಗೊಂದಲ” ಎಂಬ ಶೀರ್ಷಿಕೆಯಡಿ ಒಂದು ಧಾರಾವಾಹಿ ಲೇಖನ ಸರಣಿಯನ್ನು ಪ್ರಕಟಿಸುತ್ತಿದ್ದಾರೆ. ಭಾಗದಿಂದ ಭಾಗಕ್ಕೆ ವಿಸ್ತರಿಸುತ್ತಿರುವ ಈ ಲೇಖನಗಳು ಈಗ ಒಂದು ಬೃಹತ್ ಕಾದಂಬರಿಯ ರೂಪ ಪಡೆದುಕೊಂಡಂತಿದ್ದು, ಬಸವಪರ ಸಂಘಟನೆಗಳು ಹಾಗೂ ಕೆಲವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುವ ವಲಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಳ್ಳುತ್ತಿವೆ.

 

ಆದರೆ ಈ ಲೇಖನಗಳನ್ನು ಸಮಗ್ರವಾಗಿ ಓದಿದಾಗ, “ಪಂಚಮಸಾಲಿ ಪೀಠಗಳ ಗೊಂದಲ” ಎಂಬ ಶೀರ್ಷಿಕೆ ಕೇವಲ ಒಂದು ನೆಪ ಅಥವಾ ಸಾಂಕೇತಿಕ ಆವರಣವಾಗಿದ್ದು, ಅದರ ಒಳಹರಿವು ಬೇರೆಡೆಗೆ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಲೇಖನಗಳ ಬಹುತೇಕ ಭಾಗದಲ್ಲಿ ಚರ್ಚೆಯ ಕೇಂದ್ರಬಿಂದು ಪಂಚಮಸಾಲಿ ಪೀಠಗಳಲ್ಲ; ಬದಲಾಗಿ ಜಾತಿ ಜಂಗಮರು, ಪಂಚಪೀಠಗಳು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಪರೋಕ್ಷವಾಗಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಂಪರೆ ಮತ್ತು ಕಾರ್ಯಗಳೇ ಗುರಿಯಾಗಿರುವಂತೆ ಕಾಣುತ್ತದೆ.

 

ಒಂದು ಮಾತಿನಲ್ಲಿ ಹೇಳುವುದಾದರೆ, ಬರೆಯಲ್ಪಡುತ್ತಿರುವುದು “ಪಂಚಮಸಾಲಿ ಪೀಠಗಳ ಗೊಂದಲ” ಎಂಬ ಶೀರ್ಷಿಕೆಯಡಿಯಲ್ಲಿ ಆದರೂ, ಅದರ ಬಾಣಗಳು ತಿರುಗುತ್ತಿರುವುದು ಜಾತಿ ಜಂಗಮರ ಕಡೆಗೆ, ಪಂಚಪೀಠಗಳ ಕಡೆಗೆ, ಅಖಿಲ ಭಾರತ ವೀರಶೈವ ಮಹಾಸಭೆಯ ಕಡೆಗೆ ಮತ್ತು ಅಂತಿಮವಾಗಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಚಿಂತನೆ ಹಾಗೂ ಕಾರ್ಯಪರಂಪರೆಯ ಕಡೆಗೆ ಎಂಬ ಭಾವನೆ ಓದುಗರಲ್ಲಿ ಮೂಡದೆ ಇರದು.

 

ಸಾರ್ವಜನಿಕ ವಲಯದಲ್ಲಿ ಇತಿಹಾಸ, ಧರ್ಮ, ಮಹಾಪುರುಷರು ಮತ್ತು ಸಮಾಜಸಂಸ್ಥೆಗಳ ಕುರಿತು ಚರ್ಚೆ ನಡೆಸುವಾಗ ಲೇಖಕರಿಗೆ ವಿಶೇಷವಾದ ಜವಾಬ್ದಾರಿ ಇರುತ್ತದೆ. ಯಾವುದೇ ಆರೋಪ, ಟೀಕೆ ಅಥವಾ ವಿಶ್ಲೇಷಣೆ ದಾಖಲೆಗಳು, ಸಾಕ್ಷ್ಯಗಳು ಮತ್ತು ವಿಶ್ವಾಸಾರ್ಹ ಉಲ್ಲೇಖಗಳ ಆಧಾರದ ಮೇಲೆ ನಿಲ್ಲಬೇಕು. ವಿಶೇಷವಾಗಿ ಶತಮಾನಗಳ ಇತಿಹಾಸ ಹೊಂದಿರುವ ಸಂಸ್ಥೆಗಳು, ಸಮಾಜ ಸುಧಾರಕರು ಮತ್ತು ಮಹನೀಯರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಅವರ ಜೀವನ, ಕಾರ್ಯ, ಕಾಲಘಟ್ಟ ಹಾಗೂ ಚಾರಿತ್ರಿಕ ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿದೆ.

 

ಭಿನ್ನಾಭಿಪ್ರಾಯಗಳು ಸಾಹಿತ್ಯ ಮತ್ತು ಚಿಂತನೆಯ ಲೋಕದಲ್ಲಿ ಸಹಜ. ಆದರೆ ಭಿನ್ನಾಭಿಪ್ರಾಯಗಳು ದಾಖಲೆ ಆಧಾರಿತ ವಿಮರ್ಶೆಯ ರೂಪ ಪಡೆಯಬೇಕೇ ಹೊರತು, ಪೂರ್ವಗ್ರಹ ಅಥವಾ ಏಕಪಕ್ಷೀಯ ನಿರೂಪಣೆಯ ರೂಪ ಪಡೆಯಬಾರದು. ಇಲ್ಲವಾದರೆ ಅದು ಇತಿಹಾಸದ ಹುಡುಕಾಟಕ್ಕಿಂತಲೂ ವಿತಂಡವಾದದ ಚರ್ಚೆಯಾಗಿ ಪರಿಣಮಿಸುವ ಅಪಾಯವಿರುತ್ತದೆ.

 

ದುರದೃಷ್ಟವಶಾತ್‌, ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನಗಳಲ್ಲಿ ಚರ್ಚೆಗೆ ಅಗತ್ಯವಾದ ದಾಖಲೆಗಳು, ಉಲ್ಲೇಖಗಳು ಮತ್ತು ಚಾರಿತ್ರಿಕ ಆಧಾರಗಳನ್ನು ಸಮರ್ಪಕವಾಗಿ ಒದಗಿಸಿರುವುದು ಕಾಣುವುದಿಲ್ಲ. ಭಾರತದ ಸಂವಿಧಾನದ 19(1)(a)ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿರುವುದು ನಿಸ್ಸಂಶಯ. ಆದರೆ ಆ ಹಕ್ಕು ಸಂಪೂರ್ಣ ಅನಿಯಂತ್ರಿತವಾದದ್ದಲ್ಲ. ಸಾರ್ವಜನಿಕ ಹಿತಾಸಕ್ತಿ, ಸಾಮಾಜಿಕ ಸೌಹಾರ್ದತೆ ಮತ್ತು ಜವಾಬ್ದಾರಿಯುತ ಅಭಿವ್ಯಕ್ತಿಯನ್ನು ಕಾಪಾಡುವ ಉದ್ದೇಶದಿಂದ ಅದಕ್ಕೆ ಕೆಲವು ಸಮಂಜಸವಾದ ಮಿತಿಗಳನ್ನು ಸಹ ವಿಧಿಸಲಾಗಿದೆ.

 

ಆದ್ದರಿಂದ ಇತಿಹಾಸ, ಧರ್ಮ, ಸಮಾಜಸಂಸ್ಥೆಗಳು ಹಾಗೂ ಮಹನೀಯರ ಕುರಿತು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಲೇಖಕರು ತಮ್ಮ ವಾದಗಳಿಗೆ ದಾಖಲೆಗಳು, ಉಲ್ಲೇಖಗಳು ಮತ್ತು ವಿಶ್ವಾಸಾರ್ಹ ಸಾಕ್ಷ್ಯಾಧಾರಗಳನ್ನು ನೀಡುವುದು ಅಗತ್ಯವಾಗಿದೆ. ಆದರೆ ಡಾ. ಪಾಟೀಲ್ ಅವರ ಈ ಸರಣಿ ಲೇಖನಗಳನ್ನು ಗಮನಿಸಿದಾಗ, ಅನೇಕ ಗಂಭೀರ ಆರೋಪಗಳು ಮತ್ತು ತೀರ್ಮಾನಗಳು ದಾಖಲೆಗಳ ಬೆಂಬಲವಿಲ್ಲದೆ ಮಂಡಿಸಲ್ಪಟ್ಟಿರುವುದು ಗೋಚರಿಸುತ್ತದೆ. ಓದುಗರ ಮುಂದೆ ಒಂದು ವಾದವನ್ನು ಇಡುವುದು ಬೇರೆ; ಆದರೆ ಆ ವಾದಕ್ಕೆ ಪೂರಕವಾದ ಪ್ರಮಾಣಗಳನ್ನು ಒದಗಿಸುವುದು ಬೌದ್ಧಿಕ ಪ್ರಾಮಾಣಿಕತೆಯ ಮೂಲಭೂತ ಕರ್ತವ್ಯವಾಗಿದೆ.

 

ವೈಯಕ್ತಿಕವಾಗಿ ನಾನು ಡಾ. ಪಾಟೀಲ್ ಅವರಿಗೆ ಅಪರಿಚಿತನಾಗಿರಬಹುದು. ಅವರೇ ಒಮ್ಮೆ ನನಗೆ ತಿಳಿಸಿದಂತೆ, ಅವರು ಅಪರಿಚಿತರೊಂದಿಗೆ ಚರ್ಚೆ ನಡೆಸಲು ಇಚ್ಛಿಸುವುದಿಲ್ಲವಂತೆ. ಅದು ಅವರ ವೈಯಕ್ತಿಕ ಆಯ್ಕೆ. ಆದರೆ ಒಂದು ಲೇಖನ ಸಾರ್ವಜನಿಕ ವಲಯಕ್ಕೆ ಬಂದ ಬಳಿಕ, ಅದರಲ್ಲಿನ ಅಭಿಪ್ರಾಯಗಳು ಮತ್ತು ಆರೋಪಗಳು ಸಾರ್ವಜನಿಕ ಚರ್ಚೆಯ ಭಾಗವಾಗುತ್ತವೆ. ಆಗ ಪ್ರತಿಕ್ರಿಯಿಸುವವರ ಪರಿಚಯ ಅಥವಾ ಅಪರಿಚಯ ಮುಖ್ಯವಾಗುವುದಿಲ್ಲ; ಮುಖ್ಯವಾಗುವುದು ಮಂಡಿಸಲಾದ ವಿಚಾರಗಳ ಸತ್ಯಾಸತ್ಯತೆ ಮತ್ತು ಅವುಗಳ ಆಧಾರಗಳು.

 

ಡಾ. ಪಾಟೀಲ್ ಅವರ ಲೇಖನಗಳಲ್ಲಿ ಕಂಡುಬರುವ ಕೆಲವು ಹೇಳಿಕೆಗಳು ಅಷ್ಟು ಗಂಭೀರ ಸ್ವರೂಪದ್ದಾಗಿವೆ; ಅವುಗಳನ್ನು ಪರಿಶೀಲಿಸದೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ವಿಶೇಷವಾಗಿ ಜಾತಿ ಜಂಗಮರು, ಪಂಚಪೀಠಗಳು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಸಂಬಂಧಿತ ಸಂಸ್ಥೆಗಳ ಕುರಿತು ಮಾಡಲಾಗಿರುವ ಕೆಲವು ಆರೋಪಗಳು ವಾಸ್ತವಿಕತೆ ಮತ್ತು ದಾಖಲೆಗಳ ಬೆಳಕಿನಲ್ಲಿ ಮರುಪರಿಶೀಲನೆಗೆ ಒಳಪಡಬೇಕಾಗಿವೆ. ಅಂತಹ ಕೆಲವು ಉದಾಹರಣೆಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ಸ್ಪಷ್ಟೀಕರಣಗಳನ್ನು ಕೆಳಗೆ ದಾಖಲಿಸುತ್ತಿದ್ದೇನೆ.

 

೧. “ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತರನ್ನು ಅಲ್ಪಸಂಖ್ಯಾತರ ಸೌಲಭ್ಯಗಳಿಂದ ವಂಚಿಸುತ್ತಿದೆ” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕುರಿತು ಮಾತನಾಡುವಾಗ “ವಂಚನೆ” ಎಂಬ ಗಂಭೀರ ಪದವನ್ನು ಬಳಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಸಂಸ್ಥೆಯ ವಿರುದ್ಧ ಇಂತಹ ಆರೋಪ ಮಾಡುವಾಗ ಅದಕ್ಕೆ ಪೂರಕವಾದ ಸ್ಪಷ್ಟ ದಾಖಲೆಗಳು ಮತ್ತು ನಿರ್ವಿವಾದ ಸಾಕ್ಷ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ.

 

ಅಖಿಲ ಭಾರತ ವೀರಶೈವ ಮಹಾಸಭೆಯು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಶ್ರೀ ಅರಟಾಳ ರುದ್ರಗೌಡರು, ಶ್ರೀ ಶಿರಸಂಗಿ ಲಿಂಗರಾಜರು ಸೇರಿದಂತೆ ಅನೇಕ ಮಹನೀಯರ ಸಹಕಾರ ಮತ್ತು ದೂರದೃಷ್ಟಿಯ ಫಲವಾಗಿ ರೂಪುಗೊಂಡ ಸಂಸ್ಥೆಯಾಗಿದೆ. ಸ್ವತಃ ಶ್ರೀ ಅರಟಾಳ ರುದ್ರಗೌಡರು ಮಹಾಸಭೆಯ ಏಳನೇ ನಿಪ್ಪಾಣಿ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂತಹ ಸಂಸ್ಥೆಯ ಕುರಿತು “ವಂಚನೆ” ಎಂಬ ಪದವನ್ನು ಬಳಸುವುದು ಕೇವಲ ಅಭಿಪ್ರಾಯ ವ್ಯಕ್ತಪಡಿಸುವುದಲ್ಲ; ಅದು ಒಂದು ನಿರ್ದಿಷ್ಟ ಆರೋಪವನ್ನು ಹೊರಿಸುವಂತಾಗಿದೆ.

 

ಸಾಮಾನ್ಯ ಅರ್ಥದಲ್ಲಿ “ವಂಚನೆ” ಎಂದರೆ ಸತ್ಯವನ್ನು ತಪ್ಪಾಗಿ ನಿರೂಪಿಸುವುದು, ವಾಸ್ತವಾಂಶಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದು ಅಥವಾ ಇತರರಿಗೆ ಹಾನಿಯಾಗುವಂತೆ ಅವರನ್ನು ದಾರಿತಪ್ಪಿಸುವುದು. ಇಂತಹ ಆರೋಪವನ್ನು ಸಾಬೀತುಪಡಿಸಲು ನಿರ್ದಿಷ್ಟ ಘಟನೆಗಳು, ದಾಖಲೆಗಳು ಮತ್ತು ಪ್ರಮಾಣಗಳು ಅಗತ್ಯವಾಗುತ್ತವೆ. ಆದರೆ ಮಹಾಸಭೆಯು ಲಿಂಗಾಯತ ಸಮುದಾಯವನ್ನು ಅಲ್ಪಸಂಖ್ಯಾತರ ಸೌಲಭ್ಯಗಳಿಂದ ವಂಚಿಸಿದೆ ಎಂಬುದಕ್ಕೆ ಡಾ. ಪಾಟೀಲ್ ಅವರು ಯಾವುದೇ ದಾಖಲೆ ಅಥವಾ ಸಾಕ್ಷ್ಯವನ್ನು ನೀಡಿರುವುದು ಕಂಡುಬರುವುದಿಲ್ಲ.

 

ಸುಮಾರು ೧೨೨ ವರ್ಷಗಳ ಇತಿಹಾಸ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭೆಯು ತನ್ನ ಸ್ಥಾಪನೆಯ ಕಾಲದಿಂದಲೂ “ವೀರಶೈವ ಮತ್ತು ಲಿಂಗಾಯತ ಒಂದೇ ಧಾರ್ಮಿಕ ಪರಂಪರೆಯ ಅವಿಭಾಜ್ಯ ಅಂಗಗಳು” ಎಂಬ ನಿಲುವನ್ನು ಪ್ರತಿಪಾದಿಸುತ್ತ ಬಂದಿದೆ. ಈ ನಿಲುವಿನೊಂದಿಗೆ ಒಪ್ಪಿಕೊಳ್ಳಬಹುದು ಅಥವಾ ಭಿನ್ನಾಭಿಪ್ರಾಯ ಹೊಂದಬಹುದು. ಆದರೆ ಸಮುದಾಯದ ಏಕತೆಯನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಂಡಿರುವ ಒಂದು ತಾತ್ವಿಕ ನಿಲುವನ್ನು “ವಂಚನೆ” ಎಂದು ಕರೆಯುವುದು ನ್ಯಾಯಸಮ್ಮತವೂ ಅಲ್ಲ, ಇತಿಹಾಸೋಚಿತವೂ ಅಲ್ಲ.

 

ಯಾವುದೇ ಸಂಸ್ಥೆಯ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಭಿನ್ನಾಭಿಪ್ರಾಯವನ್ನು ದಾಖಲೆ ಆಧಾರಿತ ಚರ್ಚೆಯ ಮಟ್ಟದಲ್ಲಿಯೇ ಉಳಿಸಬೇಕೇ ಹೊರತು, ಸಾಕ್ಷ್ಯಾಧಾರಗಳಿಲ್ಲದ ಆರೋಪಗಳ ಮಟ್ಟಕ್ಕೆ ಇಳಿಸಬಾರದು. ಅಖಿಲ ಭಾರತ ವೀರಶೈವ ಮಹಾಸಭೆಯ ಕುರಿತು ಮಾಡಲಾಗಿರುವ ಈ ಆರೋಪವೂ ಅಂತಹ ಸಾಕ್ಷ್ಯರಹಿತ ಆಪಾದನೆಗಳ ಸಾಲಿಗೆ ಸೇರುವಂತಿದೆ.

 

೨. “ಶಿವಯೋಗಮಂದಿರವು ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ, ಲಿಂಗಾಯತರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ಅರಟಾಳ ರುದ್ರಗೌಡರ ಪ್ರೇರಣೆ ಮತ್ತು ಸಹಕಾರದಿಂದ ಸ್ಥಾಪಿತವಾದ ಶ್ರೀ ಶಿವಯೋಗಮಂದಿರವು ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ ಹಾಗೂ ಲಿಂಗಾಯತ ಸಮುದಾಯದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಇದು ಕೇವಲ ಒಂದು ಸಂಸ್ಥೆಯ ಕುರಿತು ಮಾಡಿದ ಟೀಕೆಯಲ್ಲ; ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ವೀರಶೈವ–ಲಿಂಗಾಯತ ಸಮಾಜದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಂಸ್ಥೆಯ ಸಂಪೂರ್ಣ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುವ ಪ್ರಯತ್ನವಾಗಿದೆ.

 

ವಾಸ್ತವದಲ್ಲಿ, ಶ್ರೀ ಶಿವಯೋಗಮಂದಿರವು ೧೯೦೯ರಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ದೂರದೃಷ್ಟಿ ಮತ್ತು ಸಮಾಜದ ಅನೇಕ ಮಹನೀಯರ ಸಹಕಾರದಿಂದ ಸ್ಥಾಪನೆಯಾಯಿತು. ಆ ಕಾಲಘಟ್ಟದಲ್ಲಿ ವೀರಶೈವ–ಲಿಂಗಾಯತ ಧರ್ಮದ ಆಚಾರ-ವಿಚಾರಗಳು ಸಮರ್ಪಕ ಮಾರ್ಗದರ್ಶನದ ಕೊರತೆಯಿಂದ ವಿಚಲನಗೊಳ್ಳುತ್ತಿದ್ದ ಸಂದರ್ಭದಲ್ಲಿ, ಧರ್ಮದ ಮೂಲತತ್ತ್ವಗಳನ್ನು ಸಂರಕ್ಷಿಸಿ, ಅಧ್ಯಾತ್ಮಿಕ ಶಿಕ್ಷಣಕ್ಕೆ ಸಂಘಟಿತ ರೂಪ ನೀಡುವ ಉದ್ದೇಶದಿಂದ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.

 

ಇಂದು ಸುಮಾರು ೧೧೭ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಶಿವಯೋಗಮಂದಿರವು ಕೇವಲ ಒಂದು ಶಿಕ್ಷಣ ಕೇಂದ್ರವಾಗಿಯೇ ಉಳಿದಿಲ್ಲ; ಅದು ವೀರಶೈವ–ಲಿಂಗಾಯತ ಪರಂಪರೆಯ ಅಧ್ಯಯನ, ಸಾಧನೆ ಮತ್ತು ನಾಯಕತ್ವ ನಿರ್ಮಾಣದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಈ ಅವಧಿಯಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ವಟುಗಳಿಗೆ ತರಬೇತಿ ನೀಡಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಅನೇಕ ಮಠಗಳಿಗೆ ಮಠಾಧಿಪತಿಗಳನ್ನು ರೂಪಿಸಿ ಸಮಾಜಕ್ಕೆ ಸಮರ್ಪಿಸಿದೆ. ಇಂದಿಗೂ ತನ್ನ ಮೂಲ ಉದ್ದೇಶಗಳನ್ನು ಅಚಲವಾಗಿ ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.

 

ಇಂತಹ ಸಂಸ್ಥೆಯ ಕುರಿತು “ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ” ಎಂಬ ಆರೋಪ ಮಾಡಬೇಕಾದರೆ ಅದಕ್ಕೆ ನಿರ್ದಿಷ್ಟ ಉದಾಹರಣೆಗಳು, ದಾಖಲೆಗಳು ಮತ್ತು ವಿಶ್ವಾಸಾರ್ಹ ಸಾಕ್ಷ್ಯಗಳು ಅಗತ್ಯ. ಆದರೆ ಆ ರೀತಿಯ ಯಾವುದೇ ಪ್ರಮಾಣಗಳನ್ನು ಒದಗಿಸದೆ ಇಂತಹ ಗಂಭೀರ ಆರೋಪಗಳನ್ನು ಮಾಡುವುದರಿಂದ ವಾಸ್ತವಕ್ಕಿಂತ ಅಪವಾದಗಳೇ ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ.

 

ಶ್ರೀ ಶಿವಯೋಗಮಂದಿರದ ಇತಿಹಾಸ, ಅದರ ಕಾರ್ಯವೈಖರಿ ಹಾಗೂ ಸಮಾಜದ ಮೇಲಿನ ಅದರ ಪ್ರಭಾವವನ್ನು ಸಮೀಪದಿಂದ ಅರಿತಿರುವ ಅನೇಕ ಸಾಧಕರು, ವಿದ್ವಾಂಸರು ಮತ್ತು ಮಠಾಧೀಶರು ಇಂದಿಗೂ ಅದರ ಸೇವೆಯನ್ನು ಗೌರವದಿಂದ ಸ್ಮರಿಸುತ್ತಾರೆ. ಆದ್ದರಿಂದ ಇಂತಹ ತೀರ್ಮಾನಾತ್ಮಕ ಆರೋಪಗಳನ್ನು ಸಾರ್ವಜನಿಕವಾಗಿ ಮಂಡಿಸುವ ಮೊದಲು, ಸಂಸ್ಥೆಯ ಇತಿಹಾಸವನ್ನು ತಿಳಿದವರೊಂದಿಗೆ ಸಮಾಲೋಚನೆ ನಡೆಸುವುದು ಮತ್ತು ಅದರ ಕಾರ್ಯಚಟುವಟಿಕೆಗಳನ್ನು ವಸ್ತುನಿಷ್ಠವಾಗಿ ಅವಲೋಕಿಸುವುದು ಹೆಚ್ಚು ಯುಕ್ತಿಯುತವಾಗಿರುತ್ತದೆ.

 

೩. “ಅರಟಾಳ ರುದ್ರಗೌಡರನ್ನು ವೀರಶೈವ ಜಾತಿ ಜಂಗಮರು ತಮ್ಮ ಉದ್ದೇಶಗಳಿಗೆ ಬಳಸಿಕೊಂಡರು; ಆದರೆ ಅವರನ್ನು ಸ್ಮರಿಸಿಕೊಳ್ಳಲಿಲ್ಲ” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ದೇವಸ್ಥಾನಗಳ ಅರ್ಚಕ ಹಕ್ಕು, ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಇತರ ಹಕ್ಕುಗಳಿಗಾಗಿ ನಡೆದ ನ್ಯಾಯಾಂಗ ಹೋರಾಟಗಳಲ್ಲಿ ಅರಟಾಳ ರುದ್ರಗೌಡರ ಸಹಾಯವನ್ನು ವೀರಶೈವ ಜಾತಿ ಜಂಗಮರು ಬಳಸಿಕೊಂಡರು; ಆದರೆ ನಂತರ ಅವರನ್ನು ಸ್ಮರಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಈ ಹೇಳಿಕೆ ವಾಸ್ತವಾಂಶಗಳೊಂದಿಗೆ ಹೊಂದಿಕೆಯಾಗುವುದಿಲ್ಲ.

 

ಅರಟಾಳ ರುದ್ರಗೌಡರು ತಮ್ಮ ಕಾಲದಲ್ಲಿ ಸಮಾಜಮುಖಿ ಚಿಂತನೆ, ಧಾರ್ಮಿಕ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯರು. ಅವರ ಸೇವೆಯನ್ನು ವೀರಶೈವ ಸಮಾಜದ ಅನೇಕ ನಾಯಕರು ಮತ್ತು ಲೇಖಕರು ಗೌರವದಿಂದ ದಾಖಲಿಸಿದ್ದಾರೆ. ವಿಶೇಷವಾಗಿ ಜಾತಿ ಜಂಗಮ ಸಮುದಾಯಕ್ಕೆ ಸೇರಿದ ಶ್ರೀ ಬಸಯ್ಯ ಕಂಬಿಮಠ ಅವರು ಅರಟಾಳ ರುದ್ರಗೌಡರ ಆತ್ಮೀಯ ಮಿತ್ರರಾಗಿದ್ದು, ಅವರ ಜೀವನ ಮತ್ತು ಕಾರ್ಯವನ್ನು ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಉದ್ದೇಶದಿಂದ “ಅರಟಾಳ ರುದ್ರಗೌಡರ ಚರಿತ್ರೆ” ಎಂಬ ಗ್ರಂಥವನ್ನು ರಚಿಸಿದ್ದಾರೆ.

 

ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಡಾ. ಪಾಟೀಲ್ ಅವರು ತಮ್ಮ ವಾದಗಳಿಗಾಗಿ ಬಳಸಿಕೊಂಡಿರುವ ಪ್ರಮುಖ ಆಕರಗಳಲ್ಲಿ ಇದೇ ಗ್ರಂಥವೂ ಒಂದಾಗಿದೆ. ಹಾಗಿರುವಾಗ, ಜಾತಿ ಜಂಗಮರು ಅರಟಾಳ ರುದ್ರಗೌಡರನ್ನು ಎಂದಿಗೂ ಸ್ಮರಿಸಿಕೊಳ್ಳಲಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಆಶ್ಚರ್ಯಕರವಾಗಿದೆ. ಒಬ್ಬ ವ್ಯಕ್ತಿಯ ಜೀವನಚರಿತ್ರೆಯನ್ನು ರಚಿಸುವುದು, ಅವರ ಕೊಡುಗೆಗಳನ್ನು ದಾಖಲಿಸುವುದು ಮತ್ತು ಸಾರ್ವಜನಿಕ ಸ್ಮೃತಿಯಲ್ಲಿ ಉಳಿಸುವುದು ಸ್ಮರಣೆಯ ಅತ್ಯಂತ ಪ್ರಾಮಾಣಿಕ ರೂಪಗಳಲ್ಲಿ ಒಂದಾಗಿದೆ.

 

ಅರಟಾಳ ರುದ್ರಗೌಡರ ಸೇವೆ ಮತ್ತು ತ್ಯಾಗವನ್ನು ಯಾವುದೇ ಒಂದು ಸಮುದಾಯ ಅಥವಾ ವ್ಯಕ್ತಿ ತನ್ನ ಸ್ವತ್ತಾಗಿ ಪರಿಗಣಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಸಮಗ್ರ ಸಮಾಜದ ನಾಯಕರು. ಆದ್ದರಿಂದ ಅವರ ಕೊಡುಗೆಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಬೇಕೇ ಹೊರತು, ಅವರನ್ನು ನೆಪವಾಗಿಸಿಕೊಂಡು ಸಮುದಾಯಗಳ ವಿರುದ್ಧ ಆರೋಪಗಳನ್ನು ಕಟ್ಟಿಕೊಡುವುದು ಇತಿಹಾಸದ ನ್ಯಾಯಸಮ್ಮತ ಓದಾಗುವುದಿಲ್ಲ.

 

ವಾಸ್ತವವಾಗಿ, ಅರಟಾಳ ರುದ್ರಗೌಡರನ್ನು ಸ್ಮರಿಸಿರುವ ದಾಖಲೆಗಳು, ಅವರ ಕುರಿತು ಪ್ರಕಟವಾದ ಕೃತಿಗಳು ಮತ್ತು ವಿವಿಧ ಸಂದರ್ಭಗಳಲ್ಲಿ ಅವರಿಗೆ ಸಲ್ಲಿಸಲಾದ ಗೌರವಗಳು ಲಭ್ಯವಿರುವಾಗ, “ಅವರನ್ನು ಯಾರೂ ಸ್ಮರಿಸಿಕೊಳ್ಳಲಿಲ್ಲ” ಎಂಬ ಹೇಳಿಕೆ ಇತಿಹಾಸದ ಸಂಪೂರ್ಣ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ. ದಾಖಲೆಗಳು ಹೇಳುವುದೇ ಬೇರೆ; ಆದ್ದರಿಂದ ಈ ಆರೋಪವು ಪುನರ್‌ಪರಿಶೀಲನೆಗೆ ಅರ್ಹವಾಗಿದೆ.

 

೪. “ಜಾತಿ ನಿರ್ಮೂಲನೆಯ ತತ್ವವನ್ನು ಪ್ರತಿಪಾದಿಸುವ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರಿತವಾಗಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭವಾಯಿತು” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ಈ ಆರೋಪದಲ್ಲಿ ಯಾವುದೇ ಸಂಸ್ಥೆಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಅವರು ಬಳಸಿರುವ ನಿರೂಪಣೆಯನ್ನು ಗಮನಿಸಿದಾಗ, ಅದರ ಗುರಿ ಪರೋಕ್ಷವಾಗಿ ಶ್ರೀ ಶಿವಯೋಗಮಂದಿರದ ಕಡೆಗೆ ತಿರುಗಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಆರೋಪಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ದಾಖಲಿಸುವುದು ಅಗತ್ಯವಾಗಿದೆ.

 

ಶ್ರೀ ಶಿವಯೋಗಮಂದಿರವು ಸ್ಥಾಪನೆಯಾದ ದಿನದಿಂದಲೂ ವೀರಶೈವ–ಲಿಂಗಾಯತ ಪರಂಪರೆಯ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶಾಸ್ತ್ರಾಧ್ಯಯನ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಇಲ್ಲಿ ತರಬೇತಿ ಪಡೆದ ಸಾಧಕರು ಮತ್ತು ವಟುಗಳು ವಿವಿಧ ಪ್ರದೇಶಗಳ, ವಿವಿಧ ಸಾಮಾಜಿಕ ಹಿನ್ನೆಲೆಯ ಮತ್ತು ವಿವಿಧ ಮಠಪರಂಪರೆಗಳ ಪ್ರತಿನಿಧಿಗಳಾಗಿದ್ದಾರೆ. ಈ ಸಂಸ್ಥೆಯ ಇತಿಹಾಸವನ್ನು ಅವಲೋಕಿಸಿದರೆ, ಅದನ್ನು ಯಾವುದೋ ಒಂದು ಜಾತಿಯ ಅಥವಾ ಒಂದು ವರ್ಗದ ಸಂಸ್ಥೆಯೆಂದು ಚಿತ್ರಿಸುವುದು ವಾಸ್ತವಕ್ಕೆ ದೂರವಾದ ನಿರೂಪಣೆಯಾಗುತ್ತದೆ.

 

ಉದಾಹರಣೆಗೆ, ಶ್ರೀ ಶಿವಯೋಗಮಂದಿರದ ಪ್ರಪ್ರಥಮ ಸಪ್ತ ಸಾಧಕರಲ್ಲಿ ಒಬ್ಬರಾಗಿದ್ದ ಪೂಜ್ಯ ನವಿಲುಗುಂದದ ಬಸವಲಿಂಗ ಮಹಾಸ್ವಾಮಿಗಳು, ನಂತರದ ಕಾಲದಲ್ಲಿ ಶಿವಯೋಗಮಂದಿರದ ಸಾಧಕರಾಗಿ ಖ್ಯಾತರಾದ ಭಾಲ್ಕಿಯ ಶತಾಯುಷಿ ಪೂಜ್ಯ ಚನ್ನಬಸವಪಟ್ಟದ್ದೇವರು, ಹಾಗೆಯೇ ಇಂದು ಪಂಚಮಸಾಲಿ ಜಗದ್ಗುರು ಮೂರನೇ ಪೀಠದ ಪೀಠಾಧ್ಯಕ್ಷರಾಗಿರುವ ಬಬಲೇಶ್ವರ ಬೃಹನ್ಮಠದ ಪೂಜ್ಯ ಮಹಾದೇವ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಅನೇಕರು ಈ ಪರಂಪರೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇಂತಹ ಉದಾಹರಣೆಗಳೇ ಶಿವಯೋಗಮಂದಿರದ ಕಾರ್ಯವ್ಯಾಪ್ತಿಯು ಯಾವುದೇ ಸಂಕುಚಿತ ಜಾತಿ ಚೌಕಟ್ಟಿಗೆ ಸೀಮಿತವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ.

 

ವಾಸ್ತವವಾಗಿ, ಒಂದು ಶತಮಾನಕ್ಕೂ ಹೆಚ್ಚು ಕಾಲ ಅನೇಕ ಮಠಗಳಿಗೆ ಮಠಾಧಿಪತಿಗಳನ್ನು, ಧರ್ಮೋಪದೇಶಕರನ್ನು ಮತ್ತು ಸಮಾಜಸೇವಕರನ್ನು ರೂಪಿಸಿದ ಸಂಸ್ಥೆಯನ್ನು ಕೇವಲ “ಜಾತಿಯಾಧಾರಿತ ತರಬೇತಿ ಕೇಂದ್ರ” ಎಂದು ವರ್ಣಿಸುವುದು ಅದರ ಇತಿಹಾಸ ಮತ್ತು ಕೊಡುಗೆಗಳ ನ್ಯಾಯಯುತ ಮೌಲ್ಯಮಾಪನವಲ್ಲ. ಇಂತಹ ನಿರ್ಣಯಗಳು ವಾಸ್ತವಾಂಶಗಳ ಸಮಗ್ರ ಪರಿಶೀಲನೆಯ ಆಧಾರದ ಮೇಲೆ ಬರಬೇಕೇ ಹೊರತು, ಪೂರ್ವನಿರ್ಧರಿತ ಕಲ್ಪನೆಗಳ ಆಧಾರದ ಮೇಲೆ ಅಲ್ಲ.

 

ಆದ್ದರಿಂದ, ಶ್ರೀ ಶಿವಯೋಗಮಂದಿರದ ಇತಿಹಾಸ, ಅದರ ಸಾಧಕರ ವೈವಿಧ್ಯತೆ ಮತ್ತು ಸಮಾಜದ ವಿವಿಧ ವರ್ಗಗಳಿಗೆ ನೀಡಿರುವ ಕೊಡುಗೆಗಳನ್ನು ಗಮನಿಸಿದಾಗ, ಈ ಆರೋಪವು ದಾಖಲೆಗಳ ಬೆಂಬಲವಿಲ್ಲದ ಸಾಮಾನ್ಯೀಕರಣವಾಗಿ ಕಾಣುತ್ತದೆ. ಇತಿಹಾಸವನ್ನು ಸಂಪೂರ್ಣತೆಯಲ್ಲಿ ನೋಡುವುದು ಅಗತ್ಯ; ಅದರ ಒಂದು ಭಾಗವನ್ನು ಮಾತ್ರ ಆಯ್ದುಕೊಂಡು ತೀರ್ಮಾನಿಸುವುದು ಸಮಂಜಸವಲ್ಲ.

೫. “ಉತ್ತರ ಕರ್ನಾಟಕದ ಲಿಂಗಾಯತರಿಗೆ ‘ವೀರಶೈವ’ ಎಂಬ ಪದದ ಪರಿಚಯವೇ ಇರಲಿಲ್ಲ; ಆ ಪದವನ್ನು ಬಳಸಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಲಾಯಿತು” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ಉತ್ತರ ಕರ್ನಾಟಕದ ಲಿಂಗಾಯತರಿಗೆ “ವೀರಶೈವ” ಎಂಬ ಪದದ ಪರಿಚಯವೇ ಇರಲಿಲ್ಲ ಎಂಬ ವಾದವನ್ನು ಮಂಡಿಸುತ್ತಾರೆ. ಆದರೆ ಈ ಹೇಳಿಕೆಯು ಲಭ್ಯವಿರುವ ಐತಿಹಾಸಿಕ ದಾಖಲೆಗಳು, ಸಾಹಿತ್ಯಿಕ ಸಾಕ್ಷ್ಯಗಳು ಮತ್ತು ಶತಮಾನಗಳಿಂದ ಬಳಕೆಯಲ್ಲಿರುವ ಕನ್ನಡ ವೀರಶೈವ ಸಾಹಿತ್ಯದೊಂದಿಗೆ ಹೊಂದಿಕೆಯಾಗುವುದಿಲ್ಲ.

 

ವಾಸ್ತವವಾಗಿ, “ವೀರಶೈವ” ಎಂಬ ಪದವು ಇಪ್ಪತ್ತನೆಯ ಶತಮಾನದಲ್ಲಿ ಹುಟ್ಟಿಕೊಂಡ ಹೊಸ ಪದವಲ್ಲ. ಅದರ ಬಳಕೆ ಉತ್ತರ ಕರ್ನಾಟಕದಲ್ಲಿ ಹಲವು ಶತಮಾನಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸಾಹಿತ್ಯಿಕ ಸಾಕ್ಷ್ಯಗಳು ದೊರೆಯುತ್ತವೆ.

 

ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ದಂಡೆಯ ಮೇಲಿರುವ ಐಪುರ (ಐಹೊಳೆ) ಪ್ರದೇಶದಲ್ಲಿ ಜನಿಸಿದ ಕನ್ನಡದ ಪ್ರಸಿದ್ಧ ವೀರಶೈವ ಕವಿ ಮತ್ತು ಅನುಭಾವಿಯಾದ ಮಗ್ಗೆಯ ಮಾಯಿದೇವ (ಕ್ರಿ.ಶ. ೧೪೩೦ರ ಸುಮಾರಿನಲ್ಲಿ) ತಮ್ಮ ಕೃತಿಗಳಲ್ಲಿ “ವೀರಶೈವ” ಎಂಬ ಪದವನ್ನು ಬಳಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇಮ್ಮಡಿ ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದ ಈ ಕವಿಯ ಸಾಹಿತ್ಯವೇ ಆ ಪದದ ಐತಿಹಾಸಿಕ ಪ್ರಾಚೀನತೆಗೆ ಸಾಕ್ಷಿಯಾಗಿದೆ.

 

ಅದೇ ರೀತಿ, ಹದಿನೆಂಟನೆಯ ಶತಮಾನದಲ್ಲಿ ವಿಜಯನಗರ ಜಿಲ್ಲೆಯ (ಅಂದಿನ ಬಳ್ಳಾರಿ ಪ್ರದೇಶ) ಮೈಲಾರ ಕ್ಷೇತ್ರದ ಪ್ರಸಿದ್ಧ ವಚನಕಾರರಾದ ಮೈಲಾರ ಬಸವಲಿಂಗ ಶರಣರು ರಚಿಸಿದ “ಗುರುಕರಣ ತ್ರಿವಿಧಿ” ಎಂಬ ಆಧ್ಯಾತ್ಮಿಕ ಕೃತಿಯಲ್ಲಿಯೂ “ವೀರಶೈವ” ಎಂಬ ಪದದ ಬಳಕೆ ಕಂಡುಬರುತ್ತದೆ. ಹೀಗಾಗಿ “ವೀರಶೈವ” ಎಂಬ ಪದವು ಉತ್ತರ ಕರ್ನಾಟಕದ ಜನತೆಗೆ ಅಪರಿಚಿತವಾಗಿತ್ತು ಎಂಬ ವಾದವು ಸಾಹಿತ್ಯದ ಬೆಳಕಿನಲ್ಲಿ ನಿಲ್ಲುವುದಿಲ್ಲ.

 

ಇನ್ನು, ೧೯೦೪ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ವೀರಶೈವ ಮಹಾಸಭೆಯ ಪೂರ್ವಭಾವಿಯಾಗಿ ಧಾರವಾಡದಲ್ಲಿ ವೀರಶೈವ ಪ್ರಾಂತೀಯ ಸಭೆ ಕಾರ್ಯನಿರ್ವಹಿಸುತ್ತಿತ್ತು. ಈ ಸಭೆಯ ಕಾರ್ಯಕ್ರಮಗಳಲ್ಲಿ ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಭಾಗವಹಿಸಿದ್ದರೆಂಬ ಉಲ್ಲೇಖಗಳು ಲಭ್ಯವಿವೆ. ಹೀಗಿರುವಾಗ, “ವೀರಶೈವ” ಎಂಬ ಪದವು ಉತ್ತರ ಕರ್ನಾಟಕದ ಜನರಿಗೆ ಅಪರಿಚಿತವಾಗಿತ್ತು ಎಂಬ ವಾದವು ಐತಿಹಾಸಿಕ ನೆಲೆಗಟ್ಟನ್ನು ಹೊಂದಿಲ್ಲ.

 

ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆಯ ಆರಂಭಿಕ ಅಧಿವೇಶನಗಳ ವರದಿಗಳು, ಶ್ರೀ ಬಸಯ್ಯ ಕಂಬಿಮಠ ರಚಿಸಿರುವ “ಅರಟಾಳ ರುದ್ರಗೌಡರು” ಕೃತಿ ಹಾಗೂ ಡಾ. ಜಿ. ಕೆ. ಹಿರೇಮಠ ಅವರ “ಮಹಾಜಂಗಮ” ಮಹಾಪ್ರಬಂಧ ಮೊದಲಾದ ಕೃತಿಗಳು ಮಹತ್ವದ ಸಾಕ್ಷ್ಯಗಳಾಗಿವೆ.

 

ಇನ್ನೂ ಗಮನಾರ್ಹ ಸಂಗತಿಯೆಂದರೆ, ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದ ಅಪ್ಪಟ ಬಸವಾಭಿಮಾನಿ ಶ್ರೀ ಹರ್ಡೇಕರ ಮಂಜಪ್ಪನವರು ತಮ್ಮ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ “ವೀರಶೈವ” ಎಂಬ ಪದವನ್ನು ಬಳಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಜನಿಸಿದ ಅವರು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದರು. ಅವರು ಸ್ಥಾಪಿಸಿದ ಸಂಸ್ಥೆಗಳ ಹೆಸರೇ ಇದಕ್ಕೆ ಸಾಕ್ಷಿಯಾಗಿವೆ:

  • ವೀರಶೈವ ಹಿತೋಪದೇಶಕರ ಸಂಘ
    • ವೀರಶೈವ ತರುಣ ಸಂಘ
    • ೧೯೨೪ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ವೀರಶೈವ ಪರಿಷತ್
    • ಆಲಮಟ್ಟಿಯ ವೀರಶೈವ ವಿದ್ಯಾಲಯ
    • ಅಖಿಲ ವೀರಶೈವ ಖಾದಿ ಬಂಡಾರ
    • ವೀರಶೈವ ತತ್ವ ಪ್ರಚಾರಕ ಸಂಘ

ಇಷ್ಟೇ ಅಲ್ಲದೆ, ಅವರು ರಚಿಸಿದ “ವೀರಶೈವ ಮತಬೋಧೆ”, “ವೀರಶೈವ ಸಮಾಜ ಸುಧಾರಣೆ” ಮತ್ತು “ವೀರಶೈವ ಏಕೀಕರಣ” ಮೊದಲಾದ ಕೃತಿಗಳ ಶೀರ್ಷಿಕೆಗಳೇ ಆ ಕಾಲದಲ್ಲಿ “ವೀರಶೈವ” ಎಂಬ ಪದವು ಸಾರ್ವಜನಿಕ ಬಳಕೆಯಲ್ಲಿ ಎಷ್ಟು ಸಾಮಾನ್ಯವಾಗಿತ್ತೆಂಬುದನ್ನು ತೋರಿಸುತ್ತವೆ.

 

ಅದೇ ರೀತಿ, ವಚನಪಿತಾಮಹರೆಂದು ಗೌರವಿಸಲ್ಪಡುವ ಡಾ. ಫ. ಗು. ಹಳಕಟ್ಟಿಯವರು ವಿಜಯಪುರ ಜಿಲ್ಲೆಯವರಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಸಂಪಾದಕತ್ವದಲ್ಲಿ ಪ್ರಕಟವಾದ “ಶಿವಾನುಭವ” ಪತ್ರಿಕೆಯ ಸಾವಿರಾರು ಸಂಚಿಕೆಗಳಲ್ಲಿ “ವೀರಶೈವ” ಎಂಬ ಪದವು ಪುನಃ ಪುನಃ ಬಳಕೆಯಾಗಿದೆ. ಡಾ. ಫ. ಗು. ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಅವಲೋಕಿಸಿದರೂ ಈ ಸಂಗತಿ ಸ್ಪಷ್ಟವಾಗುತ್ತದೆ.

ಹೀಗಿರುವಾಗ, ಉತ್ತರ ಕರ್ನಾಟಕದ ಲಿಂಗಾಯತರಿಗೆ “ವೀರಶೈವ” ಎಂಬ ಪದದ ಪರಿಚಯವೇ ಇರಲಿಲ್ಲ ಎಂಬ ವಾದವು ದಾಖಲೆಗಳು, ಸಾಹಿತ್ಯ ಮತ್ತು ಐತಿಹಾಸಿಕ ಸಾಕ್ಷ್ಯಗಳ ಬೆಳಕಿನಲ್ಲಿ ಸಮರ್ಥನೀಯವಾಗಿ ಕಾಣುವುದಿಲ್ಲ. ಲಭ್ಯವಿರುವ ಸಾಕ್ಷ್ಯಗಳು ಹೇಳುವುದೇನೆಂದರೆ, “ವೀರಶೈವ” ಎಂಬ ಪದವು ಉತ್ತರ ಕರ್ನಾಟಕದ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ಬದುಕಿನಲ್ಲಿ ಹಲವು ಶತಮಾನಗಳಿಂದ ಬಳಕೆಯಲ್ಲಿದ್ದ ಒಂದು ಪರಿಚಿತ ಮತ್ತು ಪ್ರಚಲಿತ ಪದವಾಗಿತ್ತು.

 

(ಉಲ್ಲೇಖಗಳು: ಮಗ್ಗೆಯ ಮಾಯಿದೇವರ ಕೃತಿಗಳು; ಮೈಲಾರ ಬಸವಲಿಂಗ ಶರಣರ “ಗುರುಕರಣ ತ್ರಿವಿಧಿ”; ಅಖಿಲ ಭಾರತ ವೀರಶೈವ ಮಹಾಸಭೆಯ ಆರಂಭಿಕ ಅಧಿವೇಶನ ವರದಿಗಳು; ಬಸಯ್ಯ ಕಂಬಿಮಠ “ಅರಟಾಳ ರುದ್ರಗೌಡರು”; ಡಾ. ಜಿ. ಕೆ. ಹಿರೇಮಠ “ಮಹಾಜಂಗಮ”; ಎಸ್. ಎಸ್. ಕೋತಿನ “ಹರ್ಡೇಕರ ಮಂಜಪ್ಪನವರು”; ಡಾ. ಫ. ಗು. ಹಳಕಟ್ಟಿಯವರ ಸಮಗ್ರ ಸಾಹಿತ್ಯ.)

 

೬. “ಕಾರಣಿಕ ಪುರುಷರು ಡಾ. ಫ. ಗು. ಹಳಕಟ್ಟಿಯವರ ವಚನ ಸಂಪಾದನಾ ಕಾರ್ಯಕ್ಕೆ ನೆರವಾಗಲಿಲ್ಲ” ಎಂಬ ಆರೋಪ

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರ ವಚನ ಸಂಪಾದನಾ ಕಾರ್ಯಕ್ಕೆ “ಕಾರಣಿಕ ಪುರುಷರು” ಯಾವುದೇ ಗಣನೀಯ ಸಹಾಯ ಮಾಡಲಿಲ್ಲ; ಕೇವಲ ಬಾಯಿಮಾತಿನ ಪ್ರಶಂಸೆಗಳಷ್ಟೇ ದೊರಕಿದವು ಎಂದು ಆರೋಪಿಸಿದ್ದಾರೆ. ಅಲ್ಲದೆ, ಅವರಿಗೆ ಒಂದು ಮುದ್ರಣಾಲಯವನ್ನು ಒದಗಿಸುವ ಪ್ರಯತ್ನವೂ ನಡೆಯಲಿಲ್ಲ ಮತ್ತು ಅಂತಿಮವಾಗಿ ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನು ಮಾರುವ ಪರಿಸ್ಥಿತಿ ಎದುರಿಸಬೇಕಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಈ ಹೇಳಿಕೆಯಲ್ಲಿ ಬಳಸಿರುವ “ಕಾರಣಿಕ ಪುರುಷರು” ಎಂಬ ವಿಶೇಷಣವು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ವ್ಯಾಪಕವಾಗಿ ಬಳಸಲ್ಪಡುವ ಗೌರವನಾಮವಾಗಿರುವುದರಿಂದ, ಈ ಟೀಕೆ ಪರೋಕ್ಷವಾಗಿ ಅವರತ್ತಲೇ ತಿರುಗಿದೆ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ. ಆದರೆ ಇತಿಹಾಸವನ್ನು ನಿರ್ಣಯಿಸುವಾಗ ಊಹೆಗಳಿಗಿಂತ ದಾಖಲೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು.

 

ಈ ವಿಷಯದಲ್ಲಿ ಅತ್ಯಂತ ಮಹತ್ವದ ಸಂಗತಿಯೆಂದರೆ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರಿಗೂ ಇದ್ದ ಸಂಬಂಧದ ಬಗ್ಗೆ ನಮಗೆ ತಿಳಿಯಬೇಕಾದರೆ, ಅದಕ್ಕಾಗಿ ಮೂರನೇ ವ್ಯಕ್ತಿಗಳ ವ್ಯಾಖ್ಯಾನಗಳ ಅಗತ್ಯವಿಲ್ಲ. ಸ್ವತಃ ಫ. ಗು. ಹಳಕಟ್ಟಿಯವರೇ ತಮ್ಮ ಬರಹಗಳಲ್ಲಿ ಮತ್ತು ತಮ್ಮ ಸಂಪಾದಕತ್ವದ

“ಶಿವಾನುಭವ” ಪತ್ರಿಕೆಯಲ್ಲಿ ಶ್ರೀ ಕುಮಾರ ಶಿವಯೋಗಿಗಳ ಕುರಿತು ಅಪಾರ ಗೌರವ, ಭಕ್ತಿ ಮತ್ತು ಆತ್ಮೀಯತೆಯಿಂದ ಬರೆದಿರುವ ದಾಖಲೆಗಳು ಲಭ್ಯವಿವೆ.

 

ಹಳಕಟ್ಟಿಯವರು ಶ್ರೀ ಕುಮಾರ ಶಿವಯೋಗಿಗಳ ಬಗ್ಗೆ ಬರೆದಿರುವ ಲೇಖನಗಳನ್ನು ಓದಿದಾಗ, ಇಬ್ಬರ ನಡುವಿನ ಸಂಬಂಧವು ಕೇವಲ ಔಪಚಾರಿಕ ಪರಿಚಯದ ಮಟ್ಟದಲ್ಲಿರಲಿಲ್ಲ; ಅದು ಆಧ್ಯಾತ್ಮಿಕ ಗೌರವ, ಪರಸ್ಪರ ವಿಶ್ವಾಸ ಮತ್ತು ಸಮಾಜಸೇವೆಯ ಸಾಮಾನ್ಯ ಆದರ್ಶಗಳ ಮೇಲೆ ನಿರ್ಮಿತವಾದ ಬಾಂಧವ್ಯವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇತಿಹಾಸವನ್ನು ಅರಿಯಬೇಕಾದರೆ ಇಂತಹ ಪ್ರಾಥಮಿಕ ದಾಖಲೆಗಳನ್ನೇ ಆಶ್ರಯಿಸಬೇಕು.

ಈ ಸಂಬಂಧವನ್ನು ಬೆಳಗಿಸುವ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖಿಸಬಹುದು:

ಲೇಖನಗಳಿಗಾಗಿ :

  1. https://journal.shrikumar.com/archives/936
  2. https://journal.shrikumar.com/archives/4352
  3. https://journal.shrikumar.com/archives/2021

ಇನ್ನೂ ಮಹತ್ವದ ಸಂಗತಿಯೆಂದರೆ, ವಚನ ಪಿತಾಮಹ ಫ. ಗು. ಹಳಕಟ್ಟಿಯವರು ತಮ್ಮ ಮೊದಲ ಮುದ್ರಿತ ಕೃತಿ “ವಚನಶಾಸ್ತ್ರ ಸಾರ”ವನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಅರ್ಪಿಸಿದ್ದಾರೆ. ಸಾಹಿತ್ಯ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಒಂದು ಕೃತಿಯ ಅರ್ಪಣೆ ಕೇವಲ ಔಪಚಾರಿಕ ಗೌರವವಲ್ಲ; ಅದು ಲೇಖಕನ ಮನಸ್ಸಿನಲ್ಲಿ ಆ ವ್ಯಕ್ತಿಗೆ ಇರುವ ಗೌರವ, ಕೃತಜ್ಞತೆ ಮತ್ತು ಆತ್ಮೀಯತೆಯ ಪ್ರತೀಕವಾಗಿದೆ. ಹಳಕಟ್ಟಿಯವರಂತಹ ವ್ಯಕ್ತಿತ್ವದವರು ಮಾಡಿದ ಈ ಅರ್ಪಣೆ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಬಹಳಷ್ಟು ಹೇಳುತ್ತದೆ.

 

ಆದ್ದರಿಂದ, ಶ್ರೀ ಕುಮಾರ ಶಿವಯೋಗಿಗಳು ಹಳಕಟ್ಟಿಯವರ ಕಾರ್ಯದ ಬಗ್ಗೆ ಕೇವಲ ಬಾಯಿಮಾತಿನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎಂಬ ನಿರ್ಣಯಕ್ಕೆ ಬರುವುದು ಅಷ್ಟು ಸರಳವಲ್ಲ. ಈ ವಿಷಯದ ಕುರಿತು ಅಭಿಪ್ರಾಯ ರೂಪಿಸುವ ಮುನ್ನ, ಸ್ವತಃ ಫ. ಗು. ಹಳಕಟ್ಟಿಯವರು ಬರೆದಿರುವ ದಾಖಲೆಗಳನ್ನು ಓದುವುದು ಅಗತ್ಯವಾಗಿದೆ. ಇತಿಹಾಸವನ್ನು ಘೋಷಣೆಗಳು ಅಥವಾ ಊಹೆಗಳ ಮೂಲಕವಲ್ಲ, ದಾಖಲೆಗಳು ಮತ್ತು ಸಾಕ್ಷ್ಯಗಳ ಮೂಲಕವೇ ಅರ್ಥಮಾಡಿಕೊಳ್ಳಬೇಕು.

 

ಅಂತಿಮವಾಗಿ, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ವಚನ ಪಿತಾಮಹ ಫ. ಗು. ಹಳಕಟ್ಟಿಯವರ ನಡುವಿನ ಸಂಬಂಧವು ಇತಿಹಾಸದ ದಾಖಲೆಯಾಗಿ ಉಳಿದಿದೆ. ಆ ಸಂಬಂಧದ ಮಹತ್ವವನ್ನು ನಿರ್ಧರಿಸಲು ಇಂದು ಯಾರೊಬ್ಬರ ಪ್ರಮಾಣಪತ್ರವೂ ಸಮಾಜಕ್ಕೆ ಅಗತ್ಯವಿಲ್ಲ; ಅವರೇ ಬಿಟ್ಟುಹೋದ ದಾಖಲೆಗಳೇ ಅದಕ್ಕೆ ಸಾಕ್ಷಿಯಾಗಿವೆ.

 

೭. “ಲಿಂಗಾಯತ ಸಾಧಕರು ಜಾತಿ ಜಂಗಮರ ಉಪಟಳದಿಂದ ಬಸವತತ್ವವನ್ನು ಬಿಟ್ಟು ಆರೂಢ ಪರಂಪರೆಯ ಕಡೆಗೆ ಹೋದರು” ಎಂಬ ಆರೋಪ.

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ವೀರಶೈವ ಜಾತಿ ಜಂಗಮರ ಉಪಟಳದಿಂದ ಲಿಂಗಾಯತ ಭಕ್ತವರ್ಗದ ಅನೇಕ ಸಾಧಕರು ಬಸವತತ್ವದಿಂದ ವಿಮುಖರಾಗಿ ಆರೂಢ ಪರಂಪರೆಯ ಕಡೆಗೆ ವಲಸೆ ಹೋದರು ಎಂದು ಪ್ರತಿಪಾದಿಸುತ್ತಾರೆ. ಇದೇ ಹಿನ್ನೆಲೆಯಲ್ಲಿ ಅಕ್ಕಲಕೋಟೆಯ ರೇವಣಸಿದ್ಧ ಶರಣರು ಹಾಗೂ ನಂತರ ಗದುಗಿನ ಶಿವಾನಂದ ಸ್ವಾಮಿಗಳು ಸಹ ಸಿದ್ಧಾರೂಢರ ಅನುಯಾಯಿಗಳಾದರು ಎಂಬ ತೀರ್ಮಾನವನ್ನು ಮಂಡಿಸುತ್ತಾರೆ.

 

ಆದರೆ ಈ ನಿರೂಪಣೆ ಚಾರಿತ್ರಿಕ ವ್ಯಕ್ತಿತ್ವಗಳ ಆಧ್ಯಾತ್ಮಿಕ ಬದುಕನ್ನು ಅತ್ಯಂತ ಸರಳೀಕೃತವಾಗಿ ಅರ್ಥೈಸುವ ಪ್ರಯತ್ನದಂತೆ ಕಾಣುತ್ತದೆ. ಒಬ್ಬ ಮಹಾತ್ಮರು ಮತ್ತೊಬ್ಬ ಮಹಾತ್ಮರ ಬಗ್ಗೆ ಗೌರವ, ಭಕ್ತಿ ಅಥವಾ ಆತ್ಮೀಯತೆಯನ್ನು ಹೊಂದಿದ್ದರೆ, ಅದನ್ನು ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ತ್ಯಜಿಸಿ ಹೊಸ ಪರಂಪರೆಗೆ ಸೇರ್ಪಡೆಯಾದರೆಂದು ಅರ್ಥೈಸುವುದು ಸರಿಯಲ್ಲ.

 

ಗದುಗಿನ ಪೂಜ್ಯ ಶಿವಾನಂದ ಸ್ವಾಮಿಗಳ ಜೀವನವೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಶಿವಾನಂದ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ನಿತ್ಯ ಇಷ್ಟಲಿಂಗ ಪೂಜೆಯನ್ನು ಆಚರಿಸುತ್ತಿದ್ದರು. ಅವರು ಬನಹಟ್ಟಿಯ ಪೂಜ್ಯ ರುದ್ರಮುನಿ ಮಹಾಸ್ವಾಮಿಗಳಿಂದ ಲಿಂಗದೀಕ್ಷೆಯನ್ನು ಪಡೆದಿದ್ದರು. ಇಷ್ಟಲಿಂಗವು ಅವರ ಆಧ್ಯಾತ್ಮಿಕ ಜೀವನದ ಕೇಂದ್ರಬಿಂದುವಾಗಿತ್ತು. ಅವರು ಇಷ್ಟಲಿಂಗವನ್ನು ಕೊರಳಲ್ಲಿ ಧರಿಸದೇ, ಸದಾ ತಮ್ಮ ರಟ್ಟೆಗೆ ಕಟ್ಟಿಕೊಂಡು ಪೂಜಿಸುತ್ತಿದ್ದರು ಎಂಬುದು ಅವರ ಜೀವನಚರಿತ್ರೆಗಳಲ್ಲಿ ದಾಖಲಾಗಿರುವ ಸಂಗತಿಯಾಗಿದೆ.

 

ಇದರಿಂದ ಸ್ಪಷ್ಟವಾಗುವುದು ಏನೆಂದರೆ, ಶಿವಾನಂದ ಸ್ವಾಮಿಗಳ ಆಚಾರಜೀವನವು ಇಷ್ಟಲಿಂಗೋಪಾಸನೆ ಮತ್ತು ವೀರಶೈವ–ಲಿಂಗಾಯತ ಸಾಧನಾ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ಸಿದ್ಧಾರೂಢರೊಂದಿಗೆ ಅವರಿಗೆ ಇದ್ದದ್ದು ಪರಸ್ಪರ ಗೌರವ, ಆಧ್ಯಾತ್ಮಿಕ ಸ್ನೇಹ ಮತ್ತು ವಿಚಾರಗಳ ಅನ್ಯೋನ್ಯತೆ; ಅದು ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ತ್ಯಜಿಸಿ ಮತ್ತೊಂದು ಪರಂಪರೆಗೆ ವಲಸೆ ಹೋದ ಸಂಬಂಧವಲ್ಲ.

ಭಾರತದ ಸಂತ ಪರಂಪರೆಯಲ್ಲಿ ವಿವಿಧ ಮಹಾತ್ಮರು ಪರಸ್ಪರರನ್ನು ಗೌರವಿಸುವುದು, ಭೇಟಿ ಮಾಡುವುದು, ವಿಚಾರ ವಿನಿಮಯ ನಡೆಸುವುದು ಮತ್ತು ಒಬ್ಬರನ್ನೊಬ್ಬರು ಸನ್ಮಾನಿಸುವುದು ಸಾಮಾನ್ಯ ಸಂಗತಿಯಾಗಿದೆ. ಅಂತಹ ಸಂಬಂಧಗಳನ್ನು “ಒಂದು ಪರಂಪರೆಯನ್ನು ಬಿಟ್ಟು ಮತ್ತೊಂದು ಪರಂಪರೆಗೆ ಸೇರ್ಪಡೆಯಾದರು” ಎಂಬ ಚೌಕಟ್ಟಿನೊಳಗೆ ಕಟ್ಟಿಹಾಕುವುದು ಚಾರಿತ್ರಿಕ ಸತ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ.

 

ಆದ್ದರಿಂದ ಶಿವಾನಂದ ಸ್ವಾಮಿಗಳು ಅಥವಾ ಇತರ ಮಹಾತ್ಮರ ಜೀವನವನ್ನು ವಿಶ್ಲೇಷಿಸುವಾಗ, ಅವರ ಆಚಾರ, ಉಪಾಸನೆ ಮತ್ತು ಆಧ್ಯಾತ್ಮಿಕ ನಿಲುವುಗಳನ್ನು ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ನೋಡಿದರೆ, ಶಿವಾನಂದ ಸ್ವಾಮಿಗಳಿಗೆ ಸಿದ್ಧಾರೂಢರೊಂದಿಗೆ ವಿಚಾರಗಳಲ್ಲಿ ಅನ್ಯೋನ್ಯ ಸಂಬಂಧವಿತ್ತೇ ಹೊರತು, ತಮ್ಮ ವೀರಶೈವ–ಲಿಂಗಾಯತ ಆಚರಣೆಗಳನ್ನು ತ್ಯಜಿಸಿ ಬೇರೆ ಪರಂಪರೆಯ ಅನುಯಾಯಿಯಾದರು ಎಂಬುದಕ್ಕೆ ದೃಢವಾದ ಆಧಾರಗಳು ಕಾಣಿಸುವುದಿಲ್ಲ.

 

ಹೀಗಾಗಿ, “ಜಾತಿ ಜಂಗಮರ ಉಪಟಳದಿಂದ ಲಿಂಗಾಯತ ಸಾಧಕರು ಬಸವತತ್ವವನ್ನು ಬಿಟ್ಟು ಆರೂಢ ಪರಂಪರೆಯ ಕಡೆಗೆ ವಲಸೆ ಹೋದರು” ಎಂಬ ಸಾಮಾನ್ಯೀಕೃತ ತೀರ್ಮಾನವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ. ಇತಿಹಾಸವು ವ್ಯಕ್ತಿಗಳ ಜೀವನವನ್ನು ಏಕಕಾರಣದ ಸಿದ್ಧಾಂತಗಳಿಂದ ವಿವರಿಸುವುದಕ್ಕಿಂತ ಹೆಚ್ಚು ಸಂಕೀರ್ಣ ಮತ್ತು ಬಹುಮುಖವಾಗಿದೆ.

(ಉಲ್ಲೇಖ ಶ್ರೀ ಶಿವಾನಂದರ ಕುರಿತಾದ  ಚರಿತ್ರ ಪುಸ್ತಕಗಳು   ಪ್ರಕಟಣೆ ಶ್ರೀ ಶಿವಾನಂದ ಮಠ ಗದಗ)

೮. “ವಿಜಯಪುರ ಇಂದಿಗೂ ವೈದಿಕ ಅಜ್ಞಾನದ ತೊಟ್ಟಿಲಾಗಿದೆ; ಅಲ್ಲಿನ ಲಿಂಗಾಯತರಿಗೆ ಬಸವಣ್ಣ ಅಪರಿಚಿತ” ಎಂಬ ಆರೋಪ.

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ಬಸವಣ್ಣನವರು ಜನ್ಮ ತಾಳಿದ ವಿಜಯಪುರದ ಭೂಮಿಯನ್ನು “ವೈದಿಕತೆಯ ಅಜ್ಞಾನದ ತೊಟ್ಟಿಲು” ಎಂದು ಬಣ್ಣಿಸುತ್ತಾರೆ. ಅಲ್ಲದೆ, ಅಲ್ಲಿನ ಲಿಂಗಾಯತರಿಗೆ, ವಿಶೇಷವಾಗಿ ಪಂಚಮಸಾಲಿ ಲಿಂಗಾಯತರಿಗೆ ಬಸವಣ್ಣ ಅಕ್ಷರಶಃ ಅಪರಿಚಿತ ಎಂದು ಹೇಳುತ್ತಾರೆ. ಇದು ಕೇವಲ ಒಂದು ಅಭಿಪ್ರಾಯವಲ್ಲ; ವಿಜಯಪುರ ಜಿಲ್ಲೆಯ ಲಕ್ಷಾಂತರ ಜನರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಜ್ಞೆಯನ್ನೇ ಪ್ರಶ್ನಿಸುವ ಗಂಭೀರ ಆರೋಪವಾಗಿದೆ.

ವಿಜಯಪುರವು ಬಸವಣ್ಣನವರ ಜನ್ಮಭೂಮಿ ಮಾತ್ರವಲ್ಲ; ವಚನ ಚಳವಳಿಯ ಸ್ಮೃತಿಗಳನ್ನು, ಶರಣ ಪರಂಪರೆಯ ಹೆಜ್ಜೆ ಗುರುತುಗಳನ್ನು ಮತ್ತು ವೀರಶೈವ–ಲಿಂಗಾಯತ ಸಂಸ್ಕೃತಿಯ ಅನೇಕ ಆಯಾಮಗಳನ್ನು ತನ್ನೊಳಗೆ ಹೊತ್ತಿರುವ ಐತಿಹಾಸಿಕ ನೆಲವಾಗಿದೆ. ಈ ಭಾಗದಲ್ಲಿ ಶತಮಾನಗಳಿಂದ ಬಸವಪುರಾಣ ಪ್ರವಚನಗಳು, ವಚನ ಸಾಹಿತ್ಯದ ಅಧ್ಯಯನ, ಜಾತ್ರೆಗಳು, ಧಾರ್ಮಿಕ ಉತ್ಸವಗಳು ಮತ್ತು ಮಠಗಳ ಮೂಲಕ ಬಸವತತ್ವದ ಪ್ರಸಾರ ನಿರಂತರವಾಗಿ ನಡೆಯುತ್ತ ಬಂದಿದೆ.

ಇದೇ ವಿಜಯಪುರ ಜಿಲ್ಲೆಯ ನೆಲದಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ಸಂಗ್ರಹಿಸಿದವರು. ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರ ಕಾರ್ಯವೂ ಇದೇ ಭಾಗದ ಸಾಮಾಜಿಕ ಜಾಗೃತಿಯ ಪ್ರತೀಕವಾಗಿದೆ. ಬಸವಣ್ಣನವರ ಚಿಂತನೆಗಳನ್ನು ಜನಮಾನಸದಲ್ಲಿ ಜೀವಂತವಾಗಿಡಲು ಅನೇಕ ಮಠಗಳು, ಪ್ರವಚನಕಾರರು, ಕೀರ್ತನಕಾರರು, ಪುರಾಣಿಕರು, ಲೇಖಕರು ಮತ್ತು ಸಮಾಜಮುಖಿ ಸಂಘಟನೆಗಳು ನಿರಂತರವಾಗಿ ಶ್ರಮಿಸಿವೆ.

 

ಒಂದು ಜಿಲ್ಲೆಯ ಸಮಗ್ರ ಸಮಾಜವನ್ನು “ಬಸವಣ್ಣನವರಿಗೆ ಅಪರಿಚಿತ” ಎಂದು ತೀರ್ಮಾನಿಸುವುದು ವಸ್ತುನಿಷ್ಠ ವಿಶ್ಲೇಷಣೆಯಲ್ಲ; ಅದು ಒಂದು ಸಾಮಾನ್ಯೀಕರಣ. ಯಾವುದೇ ಸಮಾಜದಲ್ಲಿ ವಿಚಾರಜಾಗೃತಿಯ ಮಟ್ಟದಲ್ಲಿ ವ್ಯತ್ಯಾಸಗಳು ಇರಬಹುದು, ಭಿನ್ನಾಭಿಪ್ರಾಯಗಳೂ ಇರಬಹುದು. ಆದರೆ ಅದನ್ನಾಧರಿಸಿ ಇಡೀ ಪ್ರದೇಶದ ಲಿಂಗಾಯತ ಸಮುದಾಯವನ್ನೇ ಬಸವತತ್ವದಿಂದ ದೂರವಿರುವ ಸಮುದಾಯವೆಂದು ಚಿತ್ರಿಸುವುದು ನ್ಯಾಯಸಮ್ಮತವಾಗುವುದಿಲ್ಲ.

 

ವಿಜಯಪುರದ ಜನರು, ಅಲ್ಲಿನ ಮಠಗಳು, ವಚನ ಸಾಹಿತ್ಯದ ಅಭಿಮಾನಿಗಳು ಮತ್ತು ಬಸವತತ್ವದ ಅನುಯಾಯಿಗಳು ಈ ಆರೋಪಕ್ಕೆ ತಮ್ಮ ಬದುಕಿನ ಮೂಲಕವೇ ಉತ್ತರ ನೀಡಿದ್ದಾರೆ ಮತ್ತು ಮುಂದೆಯೂ ನೀಡುತ್ತಾರೆ. ಬಸವಣ್ಣನವರ ಹೆಸರನ್ನು ಕೇವಲ ಘೋಷಣೆಯಲ್ಲಿ ಮಾತ್ರವಲ್ಲ, ಸಾಮಾಜಿಕ ಮತ್ತು ಧಾರ್ಮಿಕ ಜೀವನದಲ್ಲಿಯೂ ಜೀವಂತವಾಗಿಟ್ಟಿರುವ ಸಾವಿರಾರು ಜನರ ಸೇವೆಯನ್ನು ಕಡೆಗಣಿಸಿ ಇಂತಹ ತೀರ್ಮಾನಕ್ಕೆ ಬರುವುದು ಇತಿಹಾಸದ ಸಂಪೂರ್ಣ ಚಿತ್ರಣವನ್ನು ನಿರ್ಲಕ್ಷಿಸುವಂತಾಗುತ್ತದೆ.

 

ಆದ್ದರಿಂದ, ವಿಜಯಪುರದ ಲಿಂಗಾಯತ ಸಮುದಾಯದ ಬಗ್ಗೆ ಮಾಡಲಾಗಿರುವ ಈ ಹೇಳಿಕೆಯನ್ನು ಒಂದು ವಾಸ್ತವಿಕ ವಿಶ್ಲೇಷಣೆಯಾಗಿ ಅಲ್ಲ, ಅತಿಶಯೋಕ್ತಿಯ ಅಭಿವ್ಯಕ್ತಿಯಾಗಿ ಪರಿಗಣಿಸುವುದೇ ಹೆಚ್ಚು ಸಮಂಜಸವೆನಿಸುತ್ತದೆ. ಬಸವಣ್ಣನವರ ಜನ್ಮಭೂಮಿಯ ಬಗ್ಗೆ ಮಾತನಾಡುವಾಗ, ಆ ನೆಲ ಕೊಟ್ಟ ಮಹನೀಯರನ್ನು, ಸಾಹಿತ್ಯವನ್ನು ಮತ್ತು ಸಮಾಜಜಾಗೃತಿಯ ಪರಂಪರೆಯನ್ನು ಮರೆಯಬಾರದು.

 

೯. “ಲಿಂಗಾನಂದ ಸ್ವಾಮಿಗಳ ಪ್ರಭಾವದಿಂದಲೇ ವಿರಕ್ತ ಮಠಗಳು ಬಸವತತ್ವದ ಪ್ರಚಾರ ಆರಂಭಿಸಿದವು” ಎಂಬ ಆರೋಪ.

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ಲಿಂಗಾನಂದ ಸ್ವಾಮಿಗಳ ಆಕ್ರಮಣಕಾರಿ ಬಸವತತ್ವ ಪ್ರಚಾರದಿಂದ ಪಂಚಪೀಠಗಳ ಹಾಗೂ ಸಾಂಪ್ರದಾಯಿಕ ವಿರಕ್ತ ಮಠಗಳ ಜಂಗಮರು ಕಂಗಾಲಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಅಲ್ಲದೆ, ಲಿಂಗಾನಂದ ಸ್ವಾಮಿಗಳ ಪ್ರಭಾವವನ್ನು ಕಂಡು, ಈ ಹಿಂದೆ ಕೇವಲ ಔಪಚಾರಿಕವಾಗಿ ಬಸವಣ್ಣನವರ ಹೆಸರನ್ನು ಉಲ್ಲೇಖಿಸುತ್ತಿದ್ದ ಅನೇಕ ಮಠಾಧೀಶರು ಅನಿವಾರ್ಯವಾಗಿ ಬಸವತತ್ವದ ಪ್ರಚಾರಕ್ಕೆ ಮುಂದಾದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

 

ಲಿಂಗಾನಂದ ಸ್ವಾಮಿಗಳ ಬಸವತತ್ವ ಪ್ರಚಾರದ ಸೇವೆಯನ್ನು ಯಾರೂ ಕಡಿಮೆ ಮಾಡಬೇಕಾಗಿಲ್ಲ. ಅವರು ತಮ್ಮ ಕಾಲದಲ್ಲಿ ಬಸವ ಚಿಂತನೆಗಳ ಪ್ರಸಾರಕ್ಕೆ ಸಲ್ಲಿಸಿದ ಕೊಡುಗೆ ಗಮನಾರ್ಹವಾದದ್ದು. ಆದರೆ ಬಸವಣ್ಣನವರನ್ನು ಜನಮಾನಸಕ್ಕೆ ಪರಿಚಯಿಸಿದ ಮೊದಲ ವ್ಯಕ್ತಿ ಅಥವಾ ಮೊದಲ ಪರಂಪರೆ ಲಿಂಗಾನಂದ ಸ್ವಾಮಿಗಳೇ ಎಂಬ ರೀತಿಯ ನಿರೂಪಣೆ ಇತಿಹಾಸದ ಪೂರ್ಣ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ.

 

ವಾಸ್ತವವಾಗಿ, ಲಿಂಗಾನಂದ ಸ್ವಾಮಿಗಳು ಜನಿಸುವುದಕ್ಕೂ ಹಲವು ದಶಕಗಳ ಮುನ್ನವೇ ಬಸವಣ್ಣನವರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅನೇಕ ಮಹನೀಯರು ತಮ್ಮ ಬದುಕನ್ನೇ ಸಮರ್ಪಿಸಿದ್ದರು. ಪೂಜ್ಯ ಅಥಣಿ ಮುರುಘೇಂದ್ರ ಶಿವಯೋಗಿಗಳು, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಹಳ್ಳಿಹಳ್ಳಿಗಳಿಗೆ ತೆರಳಿ ಬಸವಪುರಾಣವನ್ನು ಹೇಳುತ್ತಿದ್ದ ಪೂಜ್ಯ ಮಲ್ಲಣಾರ್ಯರು, ಪೂಜ್ಯ ಹಾವೇರಿಯ ಶಿವಬಸವ ಸ್ವಾಮಿಗಳು, ಸೂಡಿ ಜುಗ್ಗಿಮಠದ ಪೂಜ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಪಂಡಿತ ಪಂಚಾಕ್ಷರಿ ಗವಾಯಿಗಳು, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು, ಡಾ. ಡಿ. ಸಿ. ಪಾವಟೆಯವರು, ಶ್ರೀ ನಂದಿಮಠರು, ಶ್ರೀ ಆರ್. ಸಿ. ಹಿರೇಮಠರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಸವೇಶ್ವರ ಅಧ್ಯಯನ ಕೇಂದ್ರದ ಸ್ಥಾಪನೆಗೆ ಕಾರಣರಾದ ಮುರುಗೋಡ ಮಹಾಂತ ಅಪ್ಪಗಳು, ಹಾಲಕೆರೆ ಶ್ರೀ ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು, ಧಾರವಾಡದ ಮುರುಘಾಮಠದ ಮೃತ್ಯುಂಜಯ ಅಪ್ಪಗಳು, ಹರ್ಡೇಕರ ಮಂಜಪ್ಪನವರು ಸೇರಿದಂತೆ ಅನೇಕ ಮಹನೀಯರು ಬಸವತತ್ವದ ಪ್ರಸಾರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ.

 

ಇದಲ್ಲದೆ, ಹಳ್ಳಿಗಳಲ್ಲಿ ಬಸವಪುರಾಣವನ್ನು ನಿರಂತರವಾಗಿ ಪ್ರವಚನ ಮಾಡುತ್ತಿದ್ದ ಪುರಾಣಿಕರು, ಕೀರ್ತನಕಾರರು, ವಚನ ಸಾಹಿತ್ಯದ ಪ್ರಚಾರಕರು ಮತ್ತು ಸಮಾಜ ಸುಧಾರಕರು ಸಹ ಬಸವ ಚಿಂತನೆಯ ವಿಸ್ತರಣೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಇವರ ಸೇವೆಯನ್ನು ಕಡೆಗಣಿಸಿ, ಬಸವತತ್ವದ ಪ್ರಚಾರವು ಒಂದು ನಿರ್ದಿಷ್ಟ ವ್ಯಕ್ತಿಯ ಪ್ರಭಾವದಿಂದ ಮಾತ್ರ ಆರಂಭವಾಯಿತು ಅಥವಾ ಮಠಗಳು ಅನಿವಾರ್ಯತೆಯಿಂದ ಅದನ್ನು ಅಳವಡಿಸಿಕೊಂಡವು ಎಂದು ಹೇಳುವುದು ಇತಿಹಾಸದ ಬಹುಮುಖ ಸ್ವರೂಪವನ್ನು ಸಂಕುಚಿತಗೊಳಿಸುವಂತಾಗುತ್ತದೆ.

 

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಈ ಮಹನೀಯರ ಪೈಕಿ ಕೆಲವರು ಜಾತಿ ಜಂಗಮ ಪರಂಪರೆಯವರಾಗಿದ್ದರು; ಇನ್ನೂ ಕೆಲವರು ಆ ಪರಂಪರೆಗೆ ಸೇರದವರಾಗಿದ್ದರು. ಬಸವತತ್ವದ ಪ್ರಸಾರವು ಒಂದು ವ್ಯಕ್ತಿ, ಒಂದು ಮಠ ಅಥವಾ ಒಂದು ಸಮುದಾಯದ ಏಕೈಕ ಸಾಧನೆಯಾಗಿರದೆ, ಅನೇಕ ತಲೆಮಾರುಗಳ ಸಮೂಹ ಪ್ರಯತ್ನದ ಫಲವಾಗಿದೆ.

ಆದ್ದರಿಂದ ಲಿಂಗಾನಂದ ಸ್ವಾಮಿಗಳ ಕೊಡುಗೆಯನ್ನು ಗೌರವಿಸುವುದು ಎಷ್ಟು ಅಗತ್ಯವೋ, ಅವರಿಗಿಂತ ಮುಂಚೆ ಮತ್ತು ಅವರ ಸಮಕಾಲೀನವಾಗಿ ಬಸವತತ್ವದ ಪ್ರಸಾರಕ್ಕಾಗಿ ದುಡಿದ ಅನೇಕ ಮಹನೀಯರ ಕೊಡುಗೆಯನ್ನು ಸ್ಮರಿಸುವುದೂ ಅಷ್ಟೇ ಅಗತ್ಯವಾಗಿದೆ. ಇತಿಹಾಸದಲ್ಲಿ ಒಬ್ಬರನ್ನು ಎತ್ತಿಹಿಡಿಯುವ ಉತ್ಸಾಹದಲ್ಲಿ ಮತ್ತೊಬ್ಬರ ಕೊಡುಗೆಯನ್ನು ಮರೆಮಾಚುವುದು ನ್ಯಾಯಸಮ್ಮತವಾದ ವಿಧಾನವಲ್ಲ. ಬಸವತತ್ವದ ಪ್ರಸಾರದ ಇತಿಹಾಸವು ಒಬ್ಬ ವ್ಯಕ್ತಿಯ ಕಥೆಯಲ್ಲ; ಅದು ಅನೇಕ ಮಹಾತ್ಮರು, ಪಂಡಿತರು, ಪ್ರವಚನಕಾರರು ಮತ್ತು ಸಮಾಜಸೇವಕರ ಸಮೂಹ ಸಾಧನೆಯ ಇತಿಹಾಸವಾಗಿದೆ.

 

೧೦. “ಲಿಂಗಾನಂದರು ಇಷ್ಟಲಿಂಗವನ್ನು ಕೇವಲ ಊಟದ ಪ್ರವೇಶಪತ್ರವೆಂದು ಪರಿಗಣಿಸುತ್ತಿದ್ದರು” ಎಂಬ ನಿರೂಪಣೆ.

 

ಡಾ. ಜೆ. ಎಸ್. ಪಾಟೀಲ್ ಅವರು ತಮ್ಮ ಲೇಖನದಲ್ಲಿ, ವಿದ್ಯಾರ್ಥಿ ಜೀವನದಲ್ಲಿ ಲಿಂಗಾನಂದರು ಲಿಂಗಾಯತ ಉಚಿತ ಪ್ರಸಾದ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರು ಮತ್ತು ಪ್ರಸಾದ ನಿಲಯದಲ್ಲಿ ಇಷ್ಟಲಿಂಗ ಧರಿಸುವುದು ಕಡ್ಡಾಯವಾಗಿದ್ದ ಕಾರಣ, ತಮ್ಮ ಕೊರಳಲ್ಲಿದ್ದ ಇಷ್ಟಲಿಂಗವನ್ನು ತೋರಿಸುತ್ತಾ “This is gate pass to dining hall” ಎಂದು ಹಾಸ್ಯ ಮಾಡುತ್ತಿದ್ದರು ಎಂಬ ಒಂದು ಪ್ರಸಂಗವನ್ನು ಉಲ್ಲೇಖಿಸುತ್ತಾರೆ.

 

ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಇಲ್ಲಿ ಪರಿಶೀಲಿಸುವುದು ಒಂದು ವಿಷಯವಾದರೆ, ಇನ್ನೊಂದು ಮಹತ್ವದ ಸಂಗತಿ ಎಂದರೆ ಪಾಟೀಲರು ಉಲ್ಲೇಖಿಸಿರುವ ಆ ಪ್ರಸಾದ ನಿಲಯದ ಹಿನ್ನೆಲೆ. ಲಿಂಗಾನಂದರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅವರು ವ್ಯಾಸಂಗ ಮಾಡಿದ ಸಂಸ್ಥೆಯ ಹೆಸರು “ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಉಚಿತ ಪ್ರಸಾದ ನಿಲಯ”, ಮಾರುತಿ ಗಲ್ಲಿ, ಬೆಳಗಾವಿ. ಈ ಸಂಸ್ಥೆಯನ್ನು ಸ್ಥಾಪಿಸಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಶಿಷ್ಯರೂ, ಶ್ರೀ ಶಿವಯೋಗಮಂದಿರದ ಸಾಧಕರೂ ಆಗಿದ್ದ ನಾಗನೂರು ರುದ್ರಾಕ್ಷಿಮಠದ ಶತಾಯುಷಿ ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳು.

 

ಈ ಪ್ರಸಾದ ನಿಲಯವು ಕೇವಲ ವಿದ್ಯಾರ್ಥಿಗಳಿಗೆ ಅನ್ನ-ವಸತಿ ನೀಡುವ ಕೇಂದ್ರವಾಗಿರಲಿಲ್ಲ. ಅದು ಸಮಾಜದ ಬಡ, ಪ್ರತಿಭಾವಂತ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದ ಒಂದು ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಯಾಗಿತ್ತು. ಅನೇಕ ವಿದ್ಯಾರ್ಥಿಗಳು ಅಲ್ಲಿಂದ ವಿದ್ಯಾಭ್ಯಾಸ ಮಾಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಲಿಂಗಾನಂದ ಸ್ವಾಮಿಗಳೂ ಅಂತಹ ಅವಕಾಶವನ್ನು ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು ಎಂಬುದು ಗಮನಾರ್ಹ ಸಂಗತಿ.

 

ಹೀಗಿರುವಾಗ, ಲಿಂಗಾನಂದ ಸ್ವಾಮಿಗಳ ಜೀವನದ ಒಂದು ಘಟನೆಯನ್ನು ಉಲ್ಲೇಖಿಸುವ ಸಂದರ್ಭದಲ್ಲಿ, ಅವರಿಗೆ ಶಿಕ್ಷಣ ಮತ್ತು ಆಶ್ರಯ ನೀಡಿದ ಸಂಸ್ಥೆಯ ಹಿಂದಿದ್ದ ತ್ಯಾಗ, ಸೇವೆ ಮತ್ತು ದೂರದೃಷ್ಟಿಯನ್ನೂ ಸ್ಮರಿಸಬೇಕು. ಒಬ್ಬ ವ್ಯಕ್ತಿಯ ವಿದ್ಯಾರ್ಥಿ ಜೀವನದ ಹಾಸ್ಯಪ್ರಸಂಗ ಅಥವಾ ವೈಯಕ್ತಿಕ ಅಭಿವ್ಯಕ್ತಿಯನ್ನು ಆಧಾರವಾಗಿಸಿಕೊಂಡು ವಿಶಾಲವಾದ ತಾತ್ವಿಕ ತೀರ್ಮಾನಗಳನ್ನು ಕಟ್ಟುವುದು ಎಚ್ಚರಿಕೆಯಿಂದ ಮಾಡಬೇಕಾದ ಕೆಲಸವಾಗಿದೆ.

 

ಇದಲ್ಲದೆ, ಲಿಂಗಾನಂದ ಸ್ವಾಮಿಗಳ ಮುಂದಿನ ಜೀವನ, ಅವರ ಧಾರ್ಮಿಕ ಚಟುವಟಿಕೆಗಳು, ಬಸವತತ್ವದ ಪ್ರಚಾರಕ್ಕಾಗಿ ಅವರು ಸಲ್ಲಿಸಿದ ಸೇವೆ ಮತ್ತು ಸಮಾಜದಲ್ಲಿ ಅವರು ಪಡೆದ ಗೌರವವನ್ನು ಗಮನಿಸಿದಾಗ, ವಿದ್ಯಾರ್ಥಿ ಜೀವನದ ಯಾವುದೋ ಒಂದು ಪ್ರಸಂಗವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಅವರ ಸಮಗ್ರ ವ್ಯಕ್ತಿತ್ವವನ್ನು ಅಳೆಯುವುದು ಸಮಂಜಸವೆನಿಸುವುದಿಲ್ಲ.

 

ಆದ್ದರಿಂದ ಈ ವಿಷಯವನ್ನು ಚರ್ಚಿಸುವಾಗ, ವ್ಯಕ್ತಿಗಿಂತಲೂ ದೊಡ್ಡದಾದ ಸೇವಾ ಪರಂಪರೆಯನ್ನು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ಮಹನೀಯರ ಕೊಡುಗೆಯನ್ನು ಮತ್ತು ಆ ಸಂಸ್ಥೆಗಳ ಸಾಮಾಜಿಕ ಪಾತ್ರವನ್ನು ಮರೆಯಬಾರದು. ಲಿಂಗಾನಂದ ಸ್ವಾಮಿಗಳು ಓದಿದ ಪ್ರಸಾದ ನಿಲಯದ ಇತಿಹಾಸವೇ, ವೀರಶೈವ–ಲಿಂಗಾಯತ ಸಮಾಜದಲ್ಲಿ ಶಿಕ್ಷಣ ಮತ್ತು ಸಮಾಜಸೇವೆಯ ಪರಂಪರೆ ಎಷ್ಟು ಆಳವಾಗಿ ಬೇರೂರಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.

 

.

ಉಪಸಂಹಾರ

 

ಡಾ. ಜೆ. ಎಸ್. ಪಾಟೀಲ್ ಅವರ ಲೇಖನಗಳಲ್ಲಿ ವ್ಯಕ್ತವಾಗಿರುವ ಅನೇಕ ಅಭಿಪ್ರಾಯಗಳು, ಆರೋಪಗಳು ಮತ್ತು ತೀರ್ಮಾನಗಳನ್ನು ಮೇಲಿನ ದಾಖಲೆಗಳು, ಉಲ್ಲೇಖಗಳು ಹಾಗೂ ಚಾರಿತ್ರಿಕ ಸಂಗತಿಗಳ ಬೆಳಕಿನಲ್ಲಿ ಪರಿಶೀಲಿಸಿದಾಗ, ಅವುಗಳಲ್ಲಿ ಹಲವಾರು ಏಕಪಕ್ಷೀಯ ನಿರೂಪಣೆಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಇತಿಹಾಸವನ್ನು ಓದುವಾಗ ನಮಗೆ ಇಷ್ಟವಾದ ಸಂಗತಿಗಳನ್ನು ಮಾತ್ರ ಆಯ್ದುಕೊಂಡು, ಇಷ್ಟವಿಲ್ಲದ ದಾಖಲೆಗಳನ್ನು ಕಡೆಗಣಿಸಿದರೆ ಅದು ಸಂಶೋಧನೆಯಾಗುವುದಿಲ್ಲ; ಅದು ಪೂರ್ವನಿರ್ಧರಿತ ಅಭಿಪ್ರಾಯಗಳಿಗೆ ಇತಿಹಾಸದ ಹೊದಿಕೆ ಹೊದಿಸುವ ಪ್ರಯತ್ನವಾಗುತ್ತದೆ.

 

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಅರಟಾಳ ರುದ್ರಗೌಡರು, ಶಿರಸಂಗಿ ಲಿಂಗರಾಜರು, ಫ. ಗು. ಹಳಕಟ್ಟಿಯವರು, ಹರ್ಡೇಕರ ಮಂಜಪ್ಪನವರು ಮತ್ತು ಇತರ ಅನೇಕ ಮಹನೀಯರು ತಮ್ಮ ಜೀವನವನ್ನು ಯಾವುದೋ ಒಂದು ಜಾತಿ, ಪಂಥ ಅಥವಾ ಗುಂಪಿಗಾಗಿ ಮೀಸಲಿಟ್ಟವರಲ್ಲ. ಅವರು ಸಮಾಜದ ಉದ್ಧಾರಕ್ಕಾಗಿ, ಶಿಕ್ಷಣಕ್ಕಾಗಿ, ಧಾರ್ಮಿಕ ಜಾಗೃತಿಗಾಗಿ ಮತ್ತು ಮಾನವೀಯ ಮೌಲ್ಯಗಳಿಗಾಗಿ ಬದುಕಿದವರು. ಅವರ ಕೊಡುಗೆಗಳನ್ನು ಇಂದಿನ ಸೈದ್ಧಾಂತಿಕ ಕನ್ನಡಕಗಳಿಂದ ಅಳೆಯಲು ಪ್ರಯತ್ನಿಸಿದಾಗ ಇತಿಹಾಸದ ಸಮಗ್ರ ಚಿತ್ರಣವೇ ವಿಕೃತಗೊಳ್ಳುತ್ತದೆ.

 

ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸೌಂದರ್ಯ. ಟೀಕೆ, ವಿಮರ್ಶೆ ಮತ್ತು ಚರ್ಚೆಗಳು ಸಮಾಜವನ್ನು ಜೀವಂತವಾಗಿರಿಸುತ್ತವೆ. ಆದರೆ ಆ ಟೀಕೆಗಳು ದಾಖಲೆಗಳ ಮೇಲೆ ನಿಲ್ಲಬೇಕು; ಆರೋಪಗಳು ಸಾಕ್ಷಿಗಳ ಮೇಲೆ ನಿಲ್ಲಬೇಕು; ತೀರ್ಮಾನಗಳು ವಾಸ್ತವಾಂಶಗಳ ಮೇಲೆ ನಿಲ್ಲಬೇಕು. ಇಲ್ಲವಾದರೆ ಅವು ಸಮಾಜದಲ್ಲಿ ಬೆಳಕು ಹರಿಸುವ ಬದಲು ಗೊಂದಲವನ್ನೇ ಸೃಷ್ಟಿಸುತ್ತವೆ.

 

ವೀರಶೈವ–ಲಿಂಗಾಯತ ಸಮಾಜದ ಇತಿಹಾಸವು ವ್ಯಕ್ತಿಗಳ ಸಂಘರ್ಷದ ಇತಿಹಾಸವಲ್ಲ; ಅದು ಅನೇಕ ಮಹಾತ್ಮರು, ಮಠಗಳು, ವಿದ್ವಾಂಸರು, ಪುರಾಣಿಕರು, ಕೀರ್ತನಕಾರರು ಮತ್ತು ಸಮಾಜಸೇವಕರ ಸಮೂಹ ತಪಸ್ಸಿನ ಇತಿಹಾಸವಾಗಿದೆ. ಆ ಇತಿಹಾಸವನ್ನು ಗೌರವಿಸುವುದು ಎಂದರೆ ಒಬ್ಬರನ್ನು ಎತ್ತಿಹಿಡಿಯಲು ಮತ್ತೊಬ್ಬರನ್ನು ಕುಗ್ಗಿಸುವುದಲ್ಲ; ಎಲ್ಲರ ಕೊಡುಗೆಗಳನ್ನು ನ್ಯಾಯಯುತವಾಗಿ ಗುರುತಿಸುವುದು.

 

ಈ ಲೇಖನದ ಉದ್ದೇಶವೂ ಯಾರನ್ನಾದರೂ ಅವಹೇಳನ ಮಾಡುವುದಲ್ಲ; ದಾಖಲೆಗಳ ಆಧಾರದ ಮೇಲೆ ಕೆಲವು ತಪ್ಪು ಗ್ರಹಿಕೆಗಳು ಮತ್ತು ಏಕಪಕ್ಷೀಯ ನಿರೂಪಣೆಗಳಿಗೆ ಉತ್ತರ ನೀಡುವುದಷ್ಟೇ. ಓದುಗರು ಭಾವೋದ್ರೇಕದ ಆಧಾರದ ಮೇಲೆ ಅಲ್ಲ, ದಾಖಲೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಿ ಎಂಬುದು ನಮ್ಮ ವಿನಮ್ರ ಆಶಯ.

 

ಕೊನೆಗೆ ಒಂದು ಮಾತು—

ಇತಿಹಾಸವು ಯಾರೊಬ್ಬರ ಖಾಸಗಿ ಆಸ್ತಿಯಲ್ಲ; ಅದು ಸತ್ಯವನ್ನು ಹುಡುಕುವ ಪ್ರತಿಯೊಬ್ಬರ ಸಾಮೂಹಿಕ ಹೊಣೆಗಾರಿಕೆ.

ಆ ಸತ್ಯದ ಹುಡುಕಾಟದಲ್ಲಿ ದಾಖಲೆಗಳು ಮಾತನಾಡಲಿ, ಮಹನೀಯರ ಬದುಕು ಮಾತನಾಡಲಿ, ಅವರ ಕಾರ್ಯಗಳು ಮಾತನಾಡಲಿ; ವ್ಯಕ್ತಿಗಳ ಮೇಲಿನ ಪ್ರೀತಿ ಅಥವಾ ದ್ವೇಷ ಅಲ್ಲ.

 

****ಶ್ರೀಕಂಠ.ಚೌಕೀಮಠ