ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು.

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

          ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಶಿರಸಂಗಿ ಲಿಂಗರಾಜರು ಅಗ್ರಗಣ್ಯರು.  ಶಿರಸಂಗಿ-ನವಲಗುಂದ ಸಂಸ್ಥಾನದ ಅಧಿಪತಿಯಾಗಿದ್ದ ಅವರು ಜನಕಲ್ಯಾಣದ ಕಾರ್ಯಗಳನ್ನು ಕೈಕೊಂಡು ಅತ್ಯಂತ ಜನಾನುರಾಗಿಯಾಗಿದ್ದರು.  ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅವರು ವಸಂತದ ಗಾಳಿಯಂತೆ ಸುಳಿದು ಅಜ್ಞಾನ-ದಾರಿದ್ರ್ಯದಲ್ಲಿ ಮೈಮರೆತು ಮಲಗಿದ್ದ ಸಮಾಜವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಅರಟಾಳ ರುದ್ರಗೌಡರು, ಗಿಲಗಂಚಿ ಗುರುಸಿದ್ಧಪ್ಪನವರು, ವಾರದ ಮಲ್ಲಪ್ಪನವರು ಹಾಗು ಹಳಕಟ್ಟಿ ಗುರುಬಸಪ್ಪನವರೇ ಮುಂತಾದ ಗಣ್ಯವ್ಯಕ್ತಿಗಳ ಹೆಗಲಿಗೆ ಹೆಗಲುಕೊಟ್ಟು ಸಮಾಜವನ್ನು ಮುನ್ನಡೆಸಿದ ಕೀರ್ತಿಶಾಲಿಗಳು ತ್ಯಾಗವೀರ ಶಿರಸಂಗಿ ಲಿಂಗರಾಜರು.

          ಇಂದಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮಡ್ಲಿ ಗೂಳಪ್ಪ ಹಾಗು ಎಲ್ಲಮ್ಮ ದಂಪತಿಗಳ ಸುಪುತ್ರನಾಗಿ ೧೮೬೧ರ ಜನೇವರಿ ೧೦ ರಂದು ಜನಿಸಿದ ಲಿಂಗರಾಜರು ಶಿರಸಂಗಿ ಮತ್ತು ನವಲಗುಂದ ಸಂಸ್ಥಾನದ ದತ್ತುಪುತ್ರನಾದುದು ಯೋಗಾಯೋಗ.  ಆಗ ಅವರಿಗೆ ಕೇವಲ ೧೧ರ ಹರೆಯ.  ಕೊಲ್ಲಾಪುರದಲ್ಲಿದ್ದು ಪ್ರಾಥಮಿಕ ಇಂಗ್ಲೀಷ್ ಶಿಕ್ಷಣವನ್ನು ಪೂರ್ಣಗೊಳಿಸುವ ಪೂರ್ವದಲ್ಲಿಯೇ ದತ್ತು ತಾಯಿ ಗಂಗಾಬಾಯಿಯವರು ಲಿಂಗೈಕ್ಯರಾದುದು ಲಿಂಗರಾಜರಿಗೆ ಬರಸಿಡಿಲೆರಗಿದಂತಾಯಿತು. ಆಗ ಶಿಕ್ಷಣವನ್ನು ಪೂರ್ಣಗೊಳಿಸುವುದೊತ್ತಟ್ಟಿಗಿರಲಿ ಇನ್ನೋರ್ವ ದತ್ತಕ ತಾಯಿ ಉಮಾಬಾಯಿಯವರಿಂದ ಅನೇಕ ತೊಂದರೆಗಳನ್ನು ಲಿಂಗರಾಜರು ಎದುರಿಸಬೇಕಾಗಿ ಬಂದಿತು.  ಕೋರ್ಟುಕಚೇರಿಗಳಿಗೆ ಸುತ್ತಿ ಬೆಂದು ಬಸವಳಿದಿದ್ದ ಅವರಿಗೆ ಮುಂಬಯಿ ನ್ಯಾಯಾಲಯವು ಕ್ರಿ.ಶ. ೧೮೮೧ರಲ್ಲಿ ಶಿರಸಂಗಿ-ನವಲಗುಂದ ಸಂಸ್ಥಾನದ ನಿಜವಾರಸುದಾರರೆಂದು ತೀರ್ಪು ನೀಡಿದಾಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.  ಕೋರ್ಟಿನಲ್ಲಿ ಜಯಶಾಲಿಯಾದ ನಂತರ ತನ್ನನ್ನು ಅತಿಯಾಗಿ ಕಾಡಿದ ದತ್ತು ತಾಯಿ ಉಮಾಬಾಯಿಯವರನ್ನೂ ಕೂಡ ಅತ್ಯಂತ ಗೌರವದಿಂದ ಕಂಡು ಅವರ ಯೋಗಕ್ಷೇಮವನ್ನು ನೋಡಿಕೊಂಡ ದಯಾರ್ದ್ರ ಹೃದಯಿಗಳು ಲಿಂಗರಾಜರು.

          ಕೋರ್ಟು-ಕಚೇರಿಗಳ ಗೊಂದಲದಲ್ಲಿ ಅರ್ಥಿಕವಾಗಿ ದಯನೀಯ ಸ್ಥಿತಿಗೆ ತಲುಪಿದ್ದ ಶಿರಸಂಗಿ ಸಂಸ್ಥಾನದ ಆದಾಯವನ್ನು ಹೆಚ್ಚಿಸುವಲ್ಲಿ ಲಿಂಗರಾಜರು ಬಹುವಾಗಿ ಶ್ರಮಿಸಿದರು.  ಆ ಕಾಲದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಅವರು ಕೃಷಿ ಆದಾಯವನ್ನು ಹೆಚ್ಚಿಸುವುದಲ್ಲದೆ ಇತರ ರೈತರಿಗೆ ಮಾದರಿಯಾದರು.  ಹಾಗೆಯೇ ಇದೇ ರೀತಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಅವರು ರೈತರಿಗೆ ನೆರವಾದರು.  ಕ್ರಿ.ಶ. ೧೮೯೬ ರಲ್ಲಿ ಮಳೆಯಾಗದೇ ಜನ ಕಂಗಾಲಾಗಿರುವುದನ್ನು ಗಮನಿಸಿದ ಅವರು ಮುಂದೆಯೂ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಅಲ್ಲಲ್ಲಿ ಕೆರೆ ಕಾಲುವೆಗಳನ್ನು ನಿರ್ಮಿಸಿ ಜನರಿಗೆಲ್ಲ ಅನುಕೂಲ ಕಲ್ಪಿಸಿಕೊಟ್ಟರು.  ನವಲಗುಂದ ಭಾಗದಲ್ಲಿ ಅವರು ಕಟ್ಟಿದ ಕೆರೆ ಕಾಲುವೆಗಳು ಇಂದಿಗೂ ಜನರ ಜೀವನಾಡಿಯಾಗಿರುವುದನ್ನು ಕಾಣಬಹುದಾಗಿದೆ.

          ಲಿಂಗರಾಜರ ಕೌಟುಂಬಿಕ ಜೀವನ ಸುಖಮಯವಾಗಿರಲಿಲ್ಲ.  ಆದರೂ ಅದಕ್ಕಾಗಿ ಅವರೆಂದೂ ಚಿಂತಿಸಲಿಲ್ಲ.  ಲಿಂ.  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗು ಅರಟಾಳ ರುದ್ರಗೌಡರ ಸಹಾಯ ಸಹಕಾರದಿಂದ ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.  ಅವರ ಜನಪರ ಕಾಳಜಿ, ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಗಳು ಬ್ರಿಟಿಷ ಆಳರಸರ ಗಮನ ಸೆಳೆದವು.  ಸರಕಾರ ಅವರಿಗೆ ವಿಶೇಷ ಗೌರವವನ್ನು ನೀಡಿ ಸನ್ಮಾನಿಸಿತು.  ಇದಕ್ಕೆ ನಿದರ್ಶನವೆಂಬಂತೆ  ಕ್ರಿ.ಶ. ೧೯೦೧ರಲ್ಲಿ ಎಡ್ವರ್ಡ ಚಕ್ರವರ್ತಿಯ ಸಿಂಹಾಸನಾರೋಹಣದ ನಿಮಿತ್ತ ಜರುಗಿದ ಸಮಾರಂಭಕ್ಕೆ ಸರಕಾರದ ಪ್ರತಿನಿಧಿಯಾಗಿ ಲಿಂಗರಾಜರು ದಿಲ್ಲಿಗೆ ಹೋಗಿ ಬಂದರು.  ಹಾಗೆಯೇ ಸರಕಾರದ ಹತ್ತುಹಲವು ಕಾರ್ಯಕ್ರಮಗಳಲ್ಲಿ ಸದಸ್ಯರಾಗಿ, ಅತಿಥಿಗಳಾಗಿ ಭಾಗವಹಿಸಿದ ಗೌರವಕ್ಕೆ ಅವರು ಪಾತ್ರರಾದರು.

          ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಕಾಲದ ಹಿರಿಯರ ನೆರವಿನಿಂದ ಕ್ರಿ. ಶ. ೧೯೦೪ರಲ್ಲಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿ ಲಿಂಗರಾಜರು ಮಾಡಿದ ಭಾಷಣವು ಇಡೀ ಸಮಾಜದ ಅಭಿವೃದ್ಧಿಯ ದಿಕ್ಸೂಚಿಯಾಗಿತ್ತು.  ಬೆಂಗಳೂರಿನಲ್ಲಿ ಜರುಗಿದ ದ್ವಿತೀಯ ಅಧಿವೇಶನಕ್ಕೂ ಅವರೇ ಅಧ್ಯಕ್ಷರಾಗಿದ್ದರು.  ಅವರು ತಮ್ಮ ಅಧ್ಯಕ್ಷೀಯ ಭಾಷಣಗಳಲ್ಲಿ ಶಿಕ್ಷಣ, ಕೃಷಿ, ಉದ್ಯೋಗ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿದರು.  ಹಾಗೆಯೇ ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಕರೆ ನೀಡಿದರು.  ಅದರ ಪರಿಣಾಮವಾಗಿ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.  ಅಲ್ಲಲ್ಲಿ ಶಾಲೆ-ಕಾಲೇಜುಗಳು, ಮಠ-ಮಂದಿರಗಳಲ್ಲಿ ಪ್ರಸಾದ ನಿಲಯಗಳು ಪ್ರಾರಂಭಗೊಳ್ಳುವುದಕ್ಕೆ ಅವರ ಮಾತುಗಳು ಪ್ರೇರಕಶಕ್ತಿಯಾದವು.

          ಕ್ರಿ.ಶ. ೧೯೦೬ರಲ್ಲಿ ಲಿಂಗರಾಜರ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಅವರ ಅಭಿಮಾನಿಗಳು ದತ್ತಕ ಪುತ್ರನನ್ನು ತೆಗೆದುಕೊಂಡು ಸಂಸ್ಥಾನವನ್ನು ಮುಂದುವರೆಸಬೇಕೆಂದು ಸಲಹೆ ನೀಡಿದರು.  ಆದರೆ ಅದಾಗಲೇ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಹಾಗು ಅರಟಾಳ ರುದ್ರಗೌಡರ ಮಾರ್ಗದರ್ಶನ ಪಡೆದ ಅವರು ಗುಪ್ತವಾಗಿ ಮೃತ್ಯು ಪತ್ರವನ್ನು ಬರೆದು ಬೆಳಗಾವಿಯ ಜಿಲ್ಲಾಧಿಕಾರಿಯ ಕೈಗಿತ್ತು ಕ್ರಿ.ಶ. ೧೯೦೬ರ ಅಗಸ್ಟ ೨೩, ಗಣೇಶ ಚೌತಿಯಂದು ಲಿಂಗೈಕ್ಯರಾದರು.  ನವಲಗುಂದದಲ್ಲಿ ಅವರ ಸಮಾಧಿ ಕಾರ್ಯವನ್ನು ಪೂರೈಸಿದ ೨ ದಿನಗಳ ನಂತರ ಜಿಲ್ಲಾಧಿಕಾರಿಗಳು ಮೃತ್ಯುಪತ್ರವನ್ನು ಹೊರತೆಗೆದು ಓದಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.  ಲಿಂಗರಾಜರು ತಮ್ಮ ಸಂಸ್ಥಾನದ ಸಮಸ್ತ ಸ್ಥಾವರ ಮತ್ತು ಜಂಗಮ ಆಸ್ತಿಯನ್ನು ಸಮಾಜದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳಸಬೇಕೆಂದೂ, ಬೆಳಗಾವಿ ಜಿಲ್ಲಾಧಿಕಾರಿ [ಕಲೆಕ್ಟರ್]ಯ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಮಾಡಿ ಸಮಸ್ತ ಆಸ್ತಿಯನ್ನು ಅದರ  ಅಧೀನಕ್ಕೆ ಒಳಪಡಿಸಬೇಕೆಂದೂ ಮೃತ್ಯುಪತ್ರದಲ್ಲಿ ಬರೆದಿದ್ದರು.  ಆಶೆ-ಆಮಿಷಗಳಿಗಾಗಿ, ಹೆಂಡರು ಮಕ್ಕಳಿಗಾಗಿ ಕುದಿವ  ಕೋಟಿ ಕೋಟಿ ಜನರಿರುವ ಈ ಪ್ರಪಂಚದಲ್ಲಿ ಬಡಮಕ್ಕಳಲ್ಲಿ ಭಗವಂತನನ್ನು ಕಂಡ ಲಿಂಗರಾಜರಂಥ ತ್ಯಾಗಜೀವಿಗಳು ಅಪರೂಪವೆಂಬ ಮಾತು ಜಗತ್ತಿಗೆ ಗೋಚರಿಸಿತು.  ಇಂತಹ ದಾನ ಪರಂಪರೆಗೆ ಕಾರಣರಾದ ಅವರು ಇತಿಹಾಸದಲ್ಲಿ ಅಮರರಾದರು; ತ್ಯಾಗಿಗಳಲ್ಲಿಯೇ ವೀರರಾಗಿ ತ್ಯಾಗವೀರರೆನಿಸಿದರು.

          ಶಿರಸಂಗಿ ಲಿಂಗರಾಜರು ಬರೆದಿಟ್ಟ ಈ ಮೃತ್ಯುಪತ್ರವನ್ನು ಪ್ರಶ್ನಿಸಿ ಅವರ ಧರ್ಮಪತ್ನಿ ಸುಂದರಾಬಾಯಿ ಅವರು ಹಾನಗಲ್ಲ ಕುಮಾರ ಸ್ವಾಮಿಗಳನ್ನು, ಅರಟಾಳ ರುದ್ರಗೌಡರನ್ನು ಹಾಗು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಎದುರು ಪಕ್ಷಗಾರರನ್ನಾಗಿಸಿ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದರು.  ಸತತ ೧೩ ವರ್ಷಗಳವರೆಗೆ ನಡೆದ ಈ ವ್ಯಾಜ್ಯವು ಕ್ರಿ.ಶ. ೧೯೧೯ರಲ್ಲಿ ಕೊನೆಗೊಂಡು ಲಿಂಗರಾಜರು ಬರೆದ ಮೃತ್ಯುಪತ್ರವು ನ್ಯಾಯಸಮ್ಮತವಾಗಿದೆ ಎಂಬ ನಿರ್ಣಯ ಹೊರಬಂದಿತು.  ಅಂದಿನಿಂದ ಇಂದಿನವರೆಗೆ ಸಹಸ್ರ ಸಹಸ್ರ ಸಂಖ್ಯೆಯ ಬಡಮಕ್ಕಳು ಶಿರಸಂಗಿ ಟ್ರಸ್ಟಿನ ನೆರವಿನಿಂದ ಉನ್ನತ ಶಿಕ್ಷಣ ಪಡೆದಿದ್ದಾರೆ; ಪಡೆಯುತ್ತಿದ್ದಾರೆ.  ಡಾ. ಡಿ. ಸಿ. ಪಾವಟೆ,  ಪ್ರೊ. ಶಿ. ಶಿ. ಬಸವನಾಳ, ಪ್ರೊ. ಎಮ್. ಆರ್. ಸಾಖರೆ, ಡಾ. ಎಸ್. ಸಿ. ನಂದೀಮಠ, ಡಾ. ಎಮ್. ಸಿ. ಮೋದಿ ಅವರಂಥ ಗಣ್ಯಾತಿಗಣ್ಯರು ಉನ್ನತ ಶಿಕ್ಷಣ ಪಡೆಯುವಲ್ಲಿ ಶಿರಸಂಗಿ ಟ್ರಸ್ಟಿನ ಪಾತ್ರ ಗಮನಾರ್ಹವಾಗಿದೆ.

          ಇತ್ತೀಚೆಗೆ ಶತಮಾನೋತ್ಸವವನ್ನು ಆಚರಿಸಿಕೊಂಡ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯಾದಿಯಾಗಿ ಅನೇಕ ಶಿಕ್ಷಣ ಸಂಸ್ಥೆಗಳು ತ್ಯಾಗವೀರ ಲಿಂಗರಾಜರ ಹಾಗು ಯುಗಪುರುಷ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಸಹಾಯ-ಸಹಕಾರ, ಪ್ರೇರಣೆ-ಪ್ರೋತ್ಸಾಹಗಳಿಂದ ಸ್ಥಾಪನೆಯಾಗಿರುವಲ್ಲಿ ಎರಡು ಮಾತಿಲ್ಲ.  ಅವರು ಸಮಾಜದಲ್ಲಿ ಚಳುವಳಿಯೋಪಾದಿಯಲ್ಲಿ ನಡೆಸಿದ ವಿದ್ಯಾಭಿವೃದ್ಧಿಯ ಚಿಂತನ ಮಂಥನಗಳ ಪರಿಣಾಮವೇ ಅವುಗಳ ಸ್ಥಾಪನೆಗೆ ಬಲ ನೀಡಿತು.  ಹೀಗೆ ಸಮಾಜಕ್ಕಾಗಿ, ವಿದ್ಯೆಯ ಅಭಿವೃದ್ಧಿಗಾಗಿ ಸರ್ವಸ್ವವನ್ನು ತ್ಯಾಗಮಾಡಿದ ಶಿರಸಂಗಿಯ ಲಿಂಗರಾಜರು ಸದಾ ಸ್ಮರಣೀಯರಾಗಿದ್ದಾರೆ.  ‘ ನಿಮ್ಮ ನೆನಹಾದಾಗಲೇ ಉದಯ, ಮರೆದಾಗಲೇ ಅಸ್ತಮಾನ’ ಎನ್ನುವಂತೆ ಇಂತಹ ಪುಣ್ಯಪುರುಷರನ್ನು ಸದಾ ಸ್ಮರಿಸುವುದೇ ಸಮಾಜದ ಭಾಗ್ಯೋದಯವಾಗಿದೆ.

Related Posts