ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ ತನ್ನ ಮೂರನೆಯ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು.

ನಮ್ಮ ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ನ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಸಮರ್ಪಿಸುತ್ತಿದ್ದೇವೆ! ಈ ವರ್ಷ ನಾವು ನಮ್ಮ ಓದುಗರಿಗೆ ಹೊಸದೊಂದು ಅನುಭವವನ್ನು ಕೊಡುವುದಕ್ಕಾಗಿ ಉತ್ಸಾಹಪೂರ್ಣವಾಗಿ ಕೆಲಸ ಮಾಡಿದ್ದೇವೆ. ನಮ್ಮ ಮಾಧ್ಯಮ ನಮ್ಮ ಓದುಗರ ಬದಲಾವಣೆಗೆ ತಕ್ಕಂತೆ ಹೊಸ ಅನುಭವಗಳನ್ನು ತಂದುಕೊಡಲು ಕಾರ್ಯಮಗ್ನರಾಗಿದ್ದೇವೆ.

ನಾವು ಒಂದು ಹೆಜ್ಜೆ ಮುಂದುವರಿಸುತ್ತೇವೆ. ನಮ್ಮ ಅನುಭವಗಳ ಸಾಕ್ಷಿಯಾಗಿ ನಮ್ಮ ಓದುಗರು ಇನ್ನೂ ಹೆಚ್ಚಿನ ಮೌಲ್ಯವನ್ನು ಪಡೆಯುವುದಕ್ಕೆ ಸಹಕಾರಿಗಳಾಗಿರಬೇಕು. ಆದ್ದರಿಂದ, ನಾವು ಸಾಗಿಸುತ್ತಿರುವ ಈ ಪ್ರಯತ್ನ ನಮ್ಮ ನಿಜವಾದ ಗುರಿ.

ಈ ಹೊಸ ವರ್ಷದ ಮೂಲಕ, ನಾವು ಹೆಚ್ಚು ವಿಸ್ತಾರವಾಗಿ, ಆಳವಾಗಿ ಮತ್ತು ವಿನಂತಿಯಿಂದ ನಮ್ಮ ಮಾಸಿಕ ಬ್ಲಾಗ್ನ ವಿಭಾಗವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳುತ್ತೇವೆ. ನಮ್ಮ ವಾಚಕರಿಗೆ ಹೊಸ ಆಸಕ್ತಿಯ ವಿಷಯಗಳಲ್ಲಿ ವಿವಿಧ ವಿಚಾರಗಳನ್ನು ತಂದುಕೊಡುವುದರ ಮೂಲಕ, ಅವರ ಬುದ್ಧಿ ಮತ್ತು ಆಸಕ್ತಿಯನ್ನು ಕೂಡಿಕೊಳ್ಳುವ ಪ್ರಯತ್ನ ನಮ್ಮ ಧ್ಯೇಯ.

ನಾವು ನಮ್ಮ ತರಂಗಿಣಿ ಮಾಸಿಕ್‌ನ ಈ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವೆ ಹಾಗೂ ನಮ್ಮ ಅನುಭವಗಳ ಸಾಕ್ಷಿಯಾಗಿ ನಿಮ್ಮ ಪ್ರತಿಕ್ರಿಯೆ ಪಡೆಯುವುದು ನಮಗೆ ಹೆಚ್ಚು ಉತ್ತೇಜನ ತರುತ್ತದೆ.

ನಮ್ಮ ತರಂಗಿಣಿ ಮಾಸಿಕ್‌ ಬ್ಲಾಗ್ ನ ಬಳಗ  ಮುಂದಿನ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯುತ್ತಾ ಹೋಗಲು ನಿಮ್ಮ ಪ್ರೋತ್ಸಾಹ ಮತ್ತು ಆತ್ಮೀಯತೆ ನಮಗೆ ಅತ್ಯಂತ ಆವಶ್ಯಕ.

ಧನ್ಯವಾದಗಳು!

ಶ್ರೀಕುಮಾರ ತರಂಗಿಣಿ  ೨೦೨೪ ಮೆ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಪ್ರಥಮ ಸಂಚಿಕೆಗೆ ಸಂದ ಆಶೀರ್ವಚನ. ಲಿಂ. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  3. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  4. ಸಮಾಜ ಸಂಸ್ಕರಣ, ಸಂಸ್ಕೃತಿ ಸಂರಕ್ಷಣ : “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  5. “ಸ್ತುತಿ-ನಿಂದೆ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  6. ಕಾರುಣಿಕ ಜಂಗಮ ಶ್ರೀ ಕುಮಾರ ಶಿವಯೋಗಿ: ಲೇಖಕರು: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ, ಹಾಲಕೆರೆ
  7. ಶ್ರೀಕುಮಾರವಾಣಿ : ಸಂಗ್ರಹ -ಸೌಜನ್ಯ -ಮಹಾಜಂಗಮ (ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಒಂದು ಅಧ್ಯಯನ ಡಾ.ಜಿ.ಕೆ.ಹಿರೇಮಠ)

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

( ರಾಗ – ದಕ್ಷಿಣಾದಿ ಕಾನಡಾ )

ಗುರುಬಸವೇಶನ ಹರುಷದಿ ಸ್ಮರಿಸೋ

ಸ್ಥಿರಸುಖ ಪೊಂದುವೆ ನಿರುತದಿ ಭಜಿಸೋ || ಪ ||

ಪರಶಿವನಾಜ್ಞೆಯಿಂದಿಳಿದೀ ಜಗವ

ಪರಿಪಾಲಿಸಿ ಬೋಧಿಸಿ ಸದ್ಗುಣವ  II 1 ||

ಶೈವಮತವ ಬಿಟ್ಟು ವೀರಶೈವದ |

ದಿವ್ಯಮಾರ್ಗವ ಹೊಂದಿ ನೆರೆ ಶೋಭಿಸಿದ || 2 ||

ಹೀನದೆಶೆಯೊಳಿಹ ವೀರಶೈವರನು |

ಕಾಣುತೆ ಕರುಣದಿ ಪೊರೆದಿಹ ಮಹಿಮ || 3 ||

ನಿಗಮಾಗಮತತ್ವ ಸಾರವನರುಪುವ |

ಬಗೆಯನು ಬೋಧಿಸಿ ಜಗದೊಳು ಮೆರೆವ || 4 ||

ಸಾಧಕಸಿದ್ದರ ಮಾರ್ಗದ್ವಯವನು |

ಬೋಧಿಸಿ – ತೋರಿಸಿ ಜಗದೊಳೊಪ್ಪಿಹನು Il 5 ||

ಪರುಷಪಂಚಕದಿಂ ದುರಿತವನೊರೆಸುತ |

ಪರಿಶಿವಲಿಂಗವನವರೊಳು ಬೆರೆಸಿಹ    ||  6 ||

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

 

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 ಶಿಖೆಯೊಳು* ತ್ರಿದಳ | ವ್ಯಾಪಕನಾದ ಬಸವನಾ

ಮಕದ ನಿಶ್ಶೂನ್ಯ – ಸುಕಳಾಲಿಂಗವ ತೋ |

ರ್ದಕಳಂಕ ಗುರುವೆ ಕೃಪೆಯಾಗು    ||೧೪೬||

ಬ್ರಹ್ಮರಂಧ್ರದ ಮುಂದೆ ಶಿಖಾಚಕ್ರವು ಗೋಚರವಾಗುತ್ತದೆ. ಇದು ಎಂಟನೆಯದು. ಶಿಖಾಚಕ್ರವು ಪಶ್ಚಿಮ ಶಿಖೆಯ ಮೇಲ್ಬಾಗದಲ್ಲಿರುವದು. ಇದುವೆ ಎಲ್ಲ ಚಕ್ರಗಳಿಗಿಂತ ಉನ್ನತಸ್ಥಾನವನ್ನು ಆಕ್ರಮಿಸಿದೆ. ಇದು ಮಸ್ತಕದ ಸ್ವಲ್ಪು ಹಿಂಬದಿಗೆ ಇರುವದು. ಈ ಶಿಖಾಚಕ್ರದ ದ್ಯೋತಕವೆಂಬಂತೆ ವೈದಿಕ ಸಂಪ್ರದಾಯದಲ್ಲಿ ಶಿಖೆ ಅಥವಾ ಚಂಡಿಕೆಯನ್ನು ಬಿಡುತ್ತಾರೆ. ಈ ಚಕ್ರವು ಮೂರು ದಳಗಳಿಂದ ವಿರಾಜಮಾನವಾಗಿದೆ. ತ್ರಿದಳಗಳಿಂದ ಕೂಡಿದ ಬಿಲ್ವದಲವು ಶಿವನಿಗೆ ಪ್ರಿಯವಾಗಿರುವಂತೆ ಈ ತ್ರಿದಳ ವ್ಯಾಪಕವೆನಿಸಿದ ಶಿಖಾಚಕ್ರವು ನಿಃಶೂನ್ಯ ಸುಕಳಾಲಿಂಗಕ್ಕೆ ಸಂಪ್ರೀತವಾಗಿದೆ. ಈ ತ್ರಿದಳಚಕ್ರದಲ್ಲಿ ಬಸವ” ಎಂಬ ಮಂತ್ರಾಕ್ಷರಗಳು ಶೋಭಿಸುತ್ತವೆ. ಇವು ನಿರಂಜನ ಪ್ರಣವಗಳು.

‘ಬಸವ’ ಇದು ವ್ಯಕ್ತಿಯ ಹೆಸರಲ್ಲ. ಈ ‘ಬಸವಾ’ಕ್ಷರಗಳು ಮಹಾಮಂತ್ರವಾಗಿದೆ. ಅದುಕಾರಣ ಇವುಗಳ ಅರ್ಥ ಅನಂತವಾಗಿದೆ. ಶಿಖಾಚಕ್ರ ಹಾಗೂ ನಿಶ್ಶೂನ್ಯ ಬ್ರಹ್ಮ ಮತ್ತು ‘ಬಸವ’ ತತ್ತ್ವದ ಮಹತ್ವವನ್ನು ೮೪ನೇಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅವಲೋಕಿಸಬಹುದು.

ಶಿಖಾಚಕ್ರದಲ್ಲಿ ತ್ರಿದಳಗಳಲ್ಲಿ ಪರಿಶೋಭಿಸುವ ಬಸವಾಕ್ಷರ ಮಹತ್ವವನ್ನು ಶರಣರೂ, ಕವಿಗಳೂ, ಬಹುವಾಗಿ ಬಣ್ಣಿಸಿದ್ದಾರೆ. ಮಾಯಾ ಕೋಲಾಹಲಿಗಳೂ, ಶೂನ್ಯ ಸಿಂಹಾಸನಾಧಿಪತಿಗಳೂ ನಿರಂಜನ ಜಗದ್ಗುರು ಪ್ರಭುದೇವರು –

ಬಸವಗುರುವು ಎನ್ನ ಕರಸ್ಥಲದ ಲಿಂಗದ

ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ

ನಿಲವ ನಿನ್ನಿಂದಲರಿದೆನು

ಬ ಎಂಬಲ್ಲಿ ಭವ ಹರಿಯಿತು

ಸ ಎಂಬಲ್ಲಿ ಸರ್ವಜ್ಞಾನಿಯಾದೆನು

ವ ಎಂದು ವಚಿಸುವ ಚೈತನ್ಯಾತ್ಮಕನಾದನು.

ಇಂತೀ ಬಸವಾಕ್ಷರತ್ರಯವು ಎನ್ನ ಸರ್ವಾಂಗದಲ್ಲಿ

ತೊಳಗಿಬೆಳಗುವ ಭೇದವನರಿದು ಆನು

ಬಸವ ಬಸವ ಎನುತಿರ್ದೆನು.

ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ಬಸವಸ್ತೋತ್ರ ತ್ರಿವಿಧಿಯಲ್ಲಿ –

ಬಸವ ಬಸವಾ ಬಸವ ಬಸವೇಶ ಬಸವರಸ ಬಸವಯ್ಯ

ನಿಮ್ಮಡಿಗೆ ಶರಣು ಶರಣು

ಬಸವ ಬಸವಾಲಿಂಗ ಬಸವಪ್ಪ ಬಸವೇಶ ಬಸವಯ್ಯ

ಶರಣೆಂಬೆ ಯೋಗಿನಾಥ |

ಬಸವ ಭಕ್ತಿಯ ಬೀಜ, ಬಸವ ಯುಕ್ತಿಯ ಬೀಜ

ಬಸವಪ್ಪ ನಿಮ್ಮಡಿಗೆ ಶರಣು ಶರಣು

ಮೋಳಿಗೆಯ ಮಾರಯ್ಯನವರು

ಬ ಎಂಬಲ್ಲಿ ಬಳಿಸಂದೆನು

ಸ ಎಂಬಲ್ಲಿ ಸಯವಾದೆನು

ವ ಎಂಬಲ್ಲಿ ನಿರವಯನಾದೆನು

ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ

ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು

ಗಣದಾಸಿ ವೀರಣ್ಣನವರು

“ಬ ಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ

ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ವನಿರ್ಣಯಂ||ʼʼ

ಮತ್ತು – ಎನ್ನ ಪಶ್ಚಿಮದಲ್ಲಿ ನಿರಂಜನ ಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಶಿಖೆಯಲ್ಲಿ ಬಸವಾಕ್ಷರ ತ್ರಯವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಬ್ರಹ್ಮರಂಧ್ರದಲ್ಲಿ ಅ-ಉ-ಮ ಅಕ್ಷರತ್ರಯವಾಗಿ

ಪ್ರಸಾದ ಪಂಚಾಕ್ಷರಿಯಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಆಜ್ಞೆಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ

ಎಂದು ಮುಂತಾಗಿ ಸುದೀರ್ಘವಚನವನ್ನೇ ರಚಿಸಿದ್ದಾರೆ. ಶ್ರೀ ಶೀಲವಂತಯ್ಯನವರು ತಮ್ಮ ತ್ರಿವಿಧಿಯ ಆತ್ಮಲಿಂಗ ಪ್ರಣವ ಸಂಯೋಗಸ್ಥಲದಲ್ಲಿ ಬಸವಾಕ್ಷರ ಮಹತ್ವವನ್ನು ಕೆಳಗಿನಂತೆ ವಿವರಿಸಿದ್ದಾರೆ.

“ವೃತ್ತ ಗೋಳಕ ಮುಖ್ಯ ನಿತ್ಯ ಬಸವಾಕ್ಷರವು |

ಮತ್ತೆ ಗುರು-ಲಿಂಗ-ಚರ ತ್ರಿವಿಧ ಬಸವನ ಹಸ್ತದಲಿ

ಕಂಡು ಸುಖಿಯಾದೆ

ಆವಾತನ ಮುಖದಲ್ಲಿ ತೀವಿ ಬಸವಾಕ್ಷರವು ಸಾವಧಾನದೊಳು

ವಚಿಸುತ್ತಿರಲದುವೆ ಗುರುದೇವನಿಹತಾಣವಿದನರಿ

ಬಸವನ ನೆನೆ ಮನವೆ ಬಸವಾ ಎನು ನಾಲಿಗೆಯೆ

ಬಸವನ ಪಾದ ಪೂಜೆ ಮಾಡೈಕರವೆ ಬಸವ, ಗುರುಲಿಂಗ ಚರವೆಂದು

ನಿತ್ಯ ನಿಷ್ಕಲದಿಂದ ಚಿತ್ತು ಬಸವಾಕ್ಷರವು

ಮತ್ತೆ ಚಿತ್ ಪ್ರಣವ ಪರಶಕ್ತಿ  ತ್ರೈಮಾತ್ರೆ ವ್ಯಕ್ತದಿಂ ಪ್ರಣವ ಗುರುಲಿಂಗ

ಹರಿಹರ ದೇವನ ರಗಳೆ ಕಾವ್ಯಗಳಲ್ಲಿ

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆಕೇಳ್

ಬಸವನ ರೀತಿ ರೀತಿ ಬಸವಣ್ಣನ ಕಿಂಕರವೃತ್ತಿ ವೃತ್ತಿ ಮೇಣ್

ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ

ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೇ ನೇಮವುರ್ವಿಯೊಳ್ || ೧ ||

ಶ್ರೀ ಪಾಲ್ಕುರಿಕೆಯ ಸೋಮನಾಥರು

ಬಾಗುರು ಬಹುಳ ಬ್ರಹ್ಮ | ಸಾಗುರು ಸಾಕಾರ ತತ್ವ ಸಂಘದ ಫಲವೈ

ವಾಗುರು ವಚನ ಮಹತ್ವ | ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ

ಬಾ ಎನೆ ಬಂಧನವಳಿವುದು | ಸಾಯೆನೆ ಸಕಲಸಾಯುಜ್ಯ ಸಂಪದಮಕ್ಕುಂ |

ವಾ ಎನೆ ನಿರವಯ ಪದಮಂ | ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ

ಪ್ರಣವದ ಬಳ್ಳಿ ಬ ಕಾರಂ | ಪ್ರಣವದ ನಾದಾನುಸಾರ ಸಾರ ಸಕಾರಂ |

ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಾ

ಮರೆದೊಮ್ಮೆ ಬಸವ ಎಂದೊಡೆ | ಮರುಜನ್ಮಗಳಲ್ಲಿ ದುರಿತ ವಿಘ್ನಗಳಿಲ್ಲೈ

ಕರಿಗೊರಲನೊಲಿದು ಸಲಹುವ | ಬರಿಜಿಹ್ವೆಯೊಳಿರದೆ ಬಸವನಾಮವ ಜಪಿಸಿ

ಸಪ್ತಕಾವ್ಯದ ಗುರುಬಸವದೇವರ ‘ವೃಷಭ ಗೀತೆ’ ಯಲ್ಲಿ

ಬಸವನೆಂದು ಕಂಡು ಪಿರಿಯ |

ಬಸವನೆಂದು ಲೋಕಬಂಧು |

ಬಸವನೆಂದು ಷಟ್‌ಸ್ಥಲ ಸಮಗ್ರ ಸಾರದ |

ಬಸವನೆಂದು ಮತ್ಸಮಸ್ತ |

ಬಸವನೆಂದು ಧರ್ಮರೂಪ

ಬಸವನೆಂದು ಭಜಿಸಿ ಭಜಿಸಿ ಬಾಳ್ವನವ ಕೃತಾರ್ಥನೂ ||

ಪ್ರೌಢದೇವರಾಯನ ಮಹಾಕಾವ್ಯವನ್ನು ರಚಿಸಿದ ಅದೃಶ್ಯಕವಿಯು-

ಬಸವನೆಂದರೆ ಪಾಪ ದೆಶೆಗಟ್ಟು ಹೋಗುವದು.

ಬಸವನೆಂದೆಂಬ ಮೂರಕ್ಕರದ ಘನತೆಯನು |

ಉಸುರಲೆನ್ನಳವಲ್ಲ ಫಣಿರಾಜಗರಿದರಿದು ಬಸವ ಭವ ಭಯನಾಶವೂ |

ಷಡಕ್ಷರದೇವರು “ಬಸವರಾಜ ವಿಜಯ’ದಲ್ಲಿ –

ಬಸವನ ನಾಮಂ ಸ್ಮರಿಸುತುಂ ಬಸವೇಶನ ಕಿರ್ತನಂಗಳಂ |

ಪಸರಿಸಿ ಪಾಡುತುಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸು,

ತ್ತೆಸೆವ ನರಂಗೆ ಜನ್ಮತತಿಯುಂಟೆ ಜಡಸ್ಥಿತಿಯುಂಟೆ ಪಾತಕ |

ಪ್ರಸರಮದುಂಟೆ ಮೃತ್ಯುಭಯಮುಂಟೆ ಮದಾಂಧತೆಯುಂಟೆ

ಧಾತ್ರಿಯೋಳ್ ||

ಎಂದುಮುಂತಾಗಿ ವರ್ಣಿಸಿದ ಮಹಾನುಭಾವರ ನುಡಿಗಳಿಂದ ಬಸವಾಕ್ಷರ ಮಂತ್ರದ ಮಹತ್ವ ಮನನವಾಗದೇ ಇರದು.

ನಿಶ್ಶೂನ್ಯಲಿಂಗ : ‘ಶಿಖಾಚಕ್ರವೇ ನೆಲೆ, ಮಂತ್ರ ನಿಷ್ಪತ್ತಿಯೆ ಕಲೆ; ಉನ್ಮನಿಯ ಮುಖ, ನಿಶ್ಶೂನ್ಯಾಕಾರ, ಅಗಮ್ಯರೂಪು, ತ್ರಿದಳಯುಕ್ತ ನಿಃಕಲ ಪದ್ಮವೇ ಪೀಠ, ಇದು ಸುಜ್ಞಾನಕ್ಕೆ ಸುಜ್ಞಾನವಾಗಿದೆ”. ಎಂದು ನವಲಿಂಗ ಸಾಹಿತ್ಯದಲ್ಲಿ ನಿಶ್ಶೂನ್ಯಲಿಂಗದ

ವರ್ಣನೆಯನ್ನು ಮಾಡಿದ್ದಾರೆ.

ಓ ಕಳಂಕರಹಿತನಾದ ಪರಮಗುರುವೆ ! ಶಿಖಾಚಕ್ರದ ಮಹಾಜ್ಯೋತಿ ಪ್ರಕಾಶದಿಂದ ಕೂಡಿದ ನಿಶ್ಶೂನ್ಯ ಸತ್ಕಳಾ ಲಿಂಗವನ್ನು ತೋರಿಸಿ ಉದ್ಧರಿಸಿರುವೆ. ಆ ಲಿಂಗವನ್ನು ಪೂಜಿಸಿ ಧನ್ಯನಾಗುವ ಶಕ್ತಿಯನ್ನೀಡಿ ಕಾಪಾಡು

ಮಂಜುಳಮಾದೇಕ ದಳ | ಕಂಜದೊಳೋಂ ಹ ಪ್ರಣವ

ವ್ಯಂಜನವಿಲ್ಲದ ನಿರಂಜನ ಲಿಂಗವನು

ರಂಜಿಸುವ ಗುರುವೆ ಕೃಪೆಯಾಗು   ||೧೪೭||

ಮಸ್ತಕದ ಹಿಂಭಾಗದಲ್ಲಿಪ್ಪುದೇ ಏಕದಳಪದ್ಮ. ಅದಕ್ಕೆ ಪಶ್ಚಿಮ ಚಕ್ರವೆಂದು ಹೆಸರು. ಪಶ್ಚಿಮಾಗ್ರವೆಂತಲೂ ಇನ್ನೊಂದು ನಾಮ. ಸಣ್ಣಮೆದುಳೇ ಪಶ್ಚಿಮ ಚಕ್ರವು . ಸ್ಪಟಿಕದಂತೆ ಶುಭ್ರವೂ ಮನೋಹರವೂ ಆಗಿದೆ. ಈ ಚಕ್ರದಲ್ಲಿ ಮಹಾ ಪ್ರಣವ ವೆನಿಸಿದ ‘ಹ್’ ಕಾರ ಮಂತ್ರ ಮೂರ್ತಿಯಾದ ನಿರಂಜನಲಿಂಗವು ಪರಿಶೋಭಿಸು ವದೆಂದು ಬೋಧಿಸಿದ ಗುರುಕೃಪೆ ಅಪಾರವಾದುದು. ಈ ನಿರಂಜನ ಲಿಂಗವು ವಾಙ್ಮನಕ್ಕೆ ಅಗೋಚರವಾದುದು. ಇಂಥ ಅವಾಚ್ಯವಾದ ನಿರಂಜನ ಬ್ರಹ್ಮವನ್ನೇ ಸದ್ಗುರುವು ತನ್ನ ಶುದ್ಧಭಾವದಲ್ಲಿ ಭಾವಿಸಿ ಸಂಸ್ಕರಿಸಿ ಭಾವಲಿಂಗವನ್ನಾಗಿಸುವನು. ಈ ಭಾವಲಿಂಗವೇ ಇಷ್ಟಲಿಂಗದಲ್ಲಿ ನಿರಂಜನಲಿಂಗವಾಗಿ ತೋರುವದು.

ನಿರಂಜನಲಿಂಗ : ಪಶ್ಚಿಮಚಕ್ರವೆ ನೆಲೆ; ಶಿವಾದ್ವೈತವೆ ಕಳೆ, ನಿರಂಜನಾಕಾರ, ಅವಿರಳರೂಪು, ಏಕದಳ, ನಿರಾಳಪದ್ಮವಾಸ, ಜ್ಞಾನಶ್ಶೂನ್ಯ” ಎಂದು ನವಲಿಂಗ ಸಾಹಿತ್ಯಕಾರರು ನಿರಂಜನಲಿಂಗದ ನಿರೂಪಣೆ ಮಾಡಿದ್ದಾರೆ.

ಈ ಪಶ್ಚಿಮಚಕ್ರದ ವಿವರವನ್ನು ೮೩ನೆಯ ತ್ರಿಪದಿಯಲ್ಲಿ ನೋಡಬಹುದು. ನಿರಂಜನಲಿಂಗವೇ ಪರಾತ್ಪರ ವಸ್ತುವೆನಿಸಿದೆ. ಇಂಥ ನಿರಂಜನಲಿಂಗವನ್ನು ತೋರಿಸಿ ಪರಿರಂಜಿಸುವ ಗುರುವಿನ ಇರುವೆ ವರ್ಣನಾತೀತವಾದುದು.

ಜ.ಚ.ನಿ

 

ವೀರಶೈವ ಮಹಾಸಭೆಯ ಸ್ಥಾಪನೆಯಿಂದ ಅದರ ಸೇವೆಯಿಂದ ಸ್ವಾಮಿಗಳವರಿಗೆ ಸಂತೃಪ್ತಿಯಾಗಲಿಲ್ಲ. ಸಮಾಜದೇಳ್ಗೆಯ ಕಾರ್ಯವು ಎಷ್ಟು ಮುಖಗಳಿಂದ ನಡೆದರೂ ಇನ್ನೂ ಹಲವು ಮುಖಗಳಿಂದ ನಡೆಯಬೇಕೆಂಬ ಒತ್ತಾಸೆ ಸ್ವಾಮಿಗಳವರದು. ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಸ್ವಾಮಿಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ವಿಷಯ ಹೇಗೆ ಮುಂದಕ್ಕೆ ಬರುವದೆಂದು ಸದಾ ಯೋಚಿಸುತ್ತಿದ್ದರು. ಸಮಾಜದ ಸರ್ವಾಂಗದೇಳ್ಗೆಯ ಆಸಕ್ತಿಯು ಅವರ ರಕ್ತದ

ಪ್ರತಿಕಣದಲ್ಲಿಯು ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಪರಿಶ್ರಮವನ್ನು ಊಹಿಸುವುದೆ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನು ಶ್ರಮವನ್ನು ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯು ಉಪವಾಸವು ಊಟದಂತೆಯು ಯೋಚನೆಯು ಜಪವಾಗಿಯು ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಪ್ರಬಲವಾಗಿ ಹೋರಾಡಿ ಗಳಿಸಿದ ಜಯಕ್ಕೆ ಶ್ರೀಗಳು ಬಹುಮಟ್ಟಿಗೆ ಕಾರಣರಾದ ವಿಷಯ ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿನಂತೆ ಆಗುವದರ ಸಲುವಾಗಿ ಸ್ವಾಮಿಗಳವರು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಹೇಳತೀರದಷ್ಟು ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸಮಾಡಿದ್ದನ್ನು ವೀರಶೈವ ಸಮಾಜವು ಎಂದಿಗೂ ಮರೆಯುವಂತಿಲ್ಲ.   ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳವರ ಸಿದ್ದಾಪುರದ ಸಾಧು ನಿರಸನ’ ಎಂಬ ತಲೆಬರಹದ ಲೇಖನವನ್ನು ‘ಮೈಸೂರು ಸ್ಟಾರ್‌’ ಪತ್ರಿಕೆಯಲ್ಲಿ ಓದಿದ್ದು ನೆನವಿನಲ್ಲಿದೆ. ಜನರ ಸಣ್ಣ ಪುಟ್ಟ ವ್ಯಾಜ್ಯಗಳನ್ನು ತಮ್ಮ ಬುದ್ಧಿಬಲದಿಂದ ಬಗೆಹರಿಸಿ ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು ಮೆರವಣೆಗೆಗಳಿಗೆ ಮತ್ತಿತರ ಮೂಢಕಾರ್ಯಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆಮಾಡಿಸಿದರು. ‘ಕಾಯಕವೆ ಕೈಲಾಸ’ ಎಂಬ ಶಿವಶರಣರ ದಿವ್ಯ ಬೋಧೆಯನ್ನು ಸಾರಿದರು. ಪ್ರತಿಕ್ಷಣದಲ್ಲಿಯು ಜನಜೀವನದಲ್ಲಿ ಬೆರೆದು ಬೋಧಿಸಿದರು. ಪ್ರತಿಯೊಂದು ಸಣ್ಣಪುಟ್ಟ ದೋಷವನ್ನು ತಿದ್ದಿದರು. ಪ್ರತಿಯೊಂದು ಕಣವನ್ನು ಅನ್ಯಾಯಕ್ಕೆ ವ್ಯಯಮಾಡದಂತೆ ಪ್ರತಿಪಾದಿಸಿದರು.   ಎರಡನೆಯದಾಗಿ ಅವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನು ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ಫಂಡುʼ ಮಾಡಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿ ಆಲೂರ, ರೋಣ, ಇಳಕಲ್ಲ, ನೀರಡಗುಂಬ, ಅನಂತಪುರ, ಕೆಳದಿ, ಚಿತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದ, ಕೆಲವು ಪ್ರೇರಣೆ ಪ್ರೋತ್ಸಾಹಗಳಿಂದ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ. ಕೆಲವು ನಿಂತು ಹೋಗಿವೆ. ಮೊತ್ತಮೊದಲು ಸ್ವಾಮಿಗಳವರ ಉಪದೇಶದಿಂದಲೆ ವೀರಶೈವರಲ್ಲಿ ವಾಚನಮಂದಿರಗಳು ಸ್ಥಾಪಿತವಾದವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಳವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನಪಟ್ಟರು. ಜನಧನ ಸಹಾಯವು ಸಾಕಷ್ಟಾಗದೆ ಅದು ಸಂಪೂರ್ಣ ಸಿದ್ದಿಗೆ ನಿಲುಕಲಿಲ್ಲ. ಆದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತ್ರಾವಣಕೋರ, ತಂಜಾವರ, ಮದ್ರಾಸ್  (ಈಗಿನ ಚನ್ನೈ) ಮೊದಲಾದ ಸ್ಥಳಗಳಿಗೆ ಕಳುಹಿಸಿ ಕೆಲವು ಮಹತ್ವದ ಮತಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿರುವರು. ಶಿವಯೋಗ ಮಂದಿರದಲ್ಲಿ  ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದ್ದರು. ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೈ. ವೀರಬಸವ ಶ್ರೇಷ್ಠಿ ಬಿ.ಎ. ಅವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಿ ಸಂಸ್ಕೃತಿಯ ಪ್ರಚಾರ ಮಾಡಬೇಕೆಂಬ ಮಹತ್ವಾಕಾಂಕ್ಷೆ ಶ್ರೀಗಳವರಲ್ಲಿತ್ತು. ಅದರಂತೆ ಒಮ್ಮೆ ಸಾಹಸ ಮಾಡಿದರು. ಕಾರಣಾಂತರಗಳಿಂದ ಕಾರ್ಯ ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೆ ಪರಿಶೋಧ ಪರಿಶ್ರಮದಿಂದಲೆ ಹುಳದ ಬಾಯಿಗೆ ಬಿದ್ದು ಹಾಳಾಗಿ ಹೋಗುತ್ತಿದ್ದ ಎಷ್ಟೋ ವಾಙ್ಮಯವು ಬದುಕಿ ಬೆಳಕಿಗೆ

ಬಂದಿತು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೆ ಹಲವು ವಿಧವಾಗಿ ಸಹಾಯ ಮಾಡಿದರು. ಮೊದಲು ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡುತ್ತಿದ್ದ ಶ್ರೀ ಮ. ನಿ. ಜಗದ್ಗುರು ಜಯದೇವ ಮುರಘರಾಜೇಂದ್ರ ಸ್ವಾಮಿಗಳವರಿಗು, ಶ್ರೀ ಬಾಳೇಹಳ್ಳಿ ವೀರಸಿಂಹಾಸನಾಧೀಶ್ವರ ಜಗದ್ಗುರು ಶಿವಾನಂದ ಸ್ವಾಮಿಗಳವರಿಗು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಧನಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಉಳಿದ ಜನರನ್ನು ಹೆಸರಿಸಲು ಸಾಧ್ಯವೇ ಇಲ್ಲ. ‘ಧರ್ಮ ತರಂಗಿಣಿ’ ‘ಶಿವಪ್ರತಾಪ’ ಮೊದಲಾದ ಮಾಸಪತ್ರಿಕೆ ವಾರಪತ್ರಿಕೆಗಳು ಶ್ರೀಗಳ ಕೃಪೆಯಿಂದಲೆ ಹೊರಡುತ್ತಿದ್ದವು. ಹೀಗೆ ಒಂದಲ್ಲ ಎರಡಲ್ಲ ಹಲವು ವಿಧವಾಗಿ ಸ್ವಾಮಿಗಳವರು ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

ಸ್ವಾಮಿಗಳವರು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆದರ್ಶ ಪುರುಷರು; ಧಾರ್ಮಿಕ ಹೃದಯರು. ಅವರು ಅರ್ಚನಾನುಭವ ಜೀವಿಗಳು, ವೀರವಿರಾಗಿಯಾಗಿ ಯುಕ್ತಯೋಗಿಯಾಗಿ ಸತ್ಯಸ್ವಾಮಿಯಾಗಿ ಬಾಳಿದರು. ಜನಾನುರಾಗಿಗಳಾಗಿ ಜೀವನ್ಮುಕ್ತರಾಗಿ ಜಸ ಪಡೆದರು. ಅವರು ಸಮಾಜ ವಿರಾಜಮಾನವಾಗಿ ಮಾಡಿದ  ದಿವ್ಯಜ್ಯೋತಿ ಸಂಗೀತ ಸಾಹಿತ್ಯ ವೈದ್ಯ ಉದ್ಯೋಗಗಳ ಸಂರಕ್ಷಿಸಿ ಸಾಂಸ್ಕೃತಿಕ ಸಿದ್ಧಮೂರ್ತಿ ,ವಿದ್ಯೆ, ವಿಜ್ಞಾನಗಳ ಅಭಿವೃದ್ಧಿಗೊಳಿಸಿದ ವಿದ್ಯಾಭಿಮಾನಿ,  ಪುರಾಣ, ಪ್ರವಚನ,ಕೀರ್ತನ ಭಾಷಣ ಕಲಾಶಿಕ್ಷಣಾಚಾರ್ಯ, ನೀತಿ ಭಕ್ತಿ ನಡೆ ನುಡಿ ಸ್ತ್ರೀ ಸುಧಾರಣೆ ಕಲಿಸಿದ ಪ್ರಥಮಪುಂಗವ. ದೀನರನ್ನು ದರಿದ್ರರನ್ನು ದುರ್ಮಾರ್ಗಿಗಳನ್ನು ಉದ್ದರಿಸಿದ ಉದಾರಚರಿತ . ತನ್ನ ನಡೆನುಡಿಯಿಂದ ಲೋಕದ ಬಾಳನ್ನು ತಿದ್ದಿ ಸಚೇತನಗೊಳಿಸಿದ ಸಂತ. ತನ್ನ ಆಯುಷ್ಯವನ್ನು ಆರೋಗ್ಯವನ್ನು ಲೋಕೋದ್ಧಾರಕ್ಕಾಗಿಯ ಧಾರೆಯರದ ಮಹಾತ್ಮ ಪುರಾತರ ಪ್ರಮಥರ ಆಚಾರ್ಯರ ಹೊಣೆಯನ್ನು ಹೊತ್ತು ನಿತ್ತರಿಸಿದ ಆರ್ಯ.

ಅತ್ಯಂತ ವೈಭವಯುಕ್ತವಾದ ಹಾನಗಲ್ಲ ವಿರಕ್ತಮಠವನ್ನು ಹಿಡಿದು ಪಲ್ಲಕ್ಕಿಯನೇರಿ ಮರೆಯಬಹುದಿತ್ತು. ಅದಕ್ಕೆ ಅವರು ಮನಸ್ಸು ಮಾಡಲಿಲ್ಲ. ಆಗಾಗ ಅನೇಕರು ಅನೇಕ ಕಡೆಗಳಲ್ಲಿ ಅಂದಣವನೇರಲು ಬಲವಂತಿಸಿದರು. ಎಳ್ಳಷ್ಟು ಮನಸ್ಸು ಮಾಡದೆ ಮತ್ತೊಬ್ಬರಿಗೆ ಆ ಉತ್ಸವದ ಭಾಗ್ಯವನ್ನು ಧಾರೆಯೆರೆಯುತ್ತಿದ್ದರು. ಅದು ವೈಭವವೆಂದು ವೈಶಿಷ್ಟ್ಯವೆಂದು ಅವರು ಭಾವಿಸಲಿಲ್ಲ. ಭ್ರಮಿಸಲಿಲ್ಲ. ಜನತಾರೂಪಿ ಜನಾರ್ದನನ ಸೇವೆಗೆ ಮರಸ್ಸು ಮಾಡಿದರು. ಮೈದುಡಿಸಿದರು. ಹಗಲಿರುಳೆನ್ನದೆ ನಾಡ ಸುತ್ತಿದರು; ಕಡಸುತ್ತಿದರು. ನಿಂತಲ್ಲಿಯ ಧಾರ್ಮಿಕ ಜಾಗ್ರತಿ ಮಾಡಿದರು. ಕುಂತಲ್ಲಿಯೆ ದೇವ ಚಿಂತನೆಗೈದರು. ಆತ್ಮಪೂಜೆಯನೆಸಗಿದರು. ಅವರಲ್ಲಿ ಅದ್ಭುತವಾದ ಜನಾಕರ್ಷಣ ಶಕ್ತಿಯಿತ್ತು, ಅನುಪಮವಾದ ಬೋಧನಾಸಕ್ತಿಯಿತ್ತು. ಅನುವಾದ ಅಲ್ಪಕಾಲದಲ್ಲಿಯೆ ಭಕ್ತಿಪ್ರ ಪತ್ತಿಯಿಂದ ಶಿವಪೂಜೆ ಮಾಡುತ್ತಿದ್ದರು. ಭಾವಪ್ರಪೂರ್ತಿಯಿಂದ ಶಿವಾನುಭವ ಜರುಗಿಸುತ್ತಿದ್ದರು. ಸಾಮಾನ್ಯ ಜನರು ದರ್ಶನಕ್ಕೆ ಬಂದರೆ ಅವರ ಉನ್ನತಿಯ ಉಪದೇಶ. ಸಮಾಜ ಪ್ರಮುಖರು ಬಂದರೆ ಅವರೊಡನೆ ಸಮಾಜೋನ್ನತಿಯ ಸಮಾಲೋಚನೆ. ತಮ್ಮ ಬಳಿಯಲ್ಲಿರುವ ಶಿಷ್ಯರು ಬಂದರೆ ಪಾಠಪ್ರವಚನ, ಯಾರೂ ಇಲ್ಲದಿದ್ದರೆ ಆತ್ಮಚಿಂತನ. ಹೀಗೆ ಯಾವಜ್ಜೀವನವು ಕ್ಷಣಕಾಲ ವೃಥಾಕಳೆಯದೆ ಸಮಾಜ ಸಂಸ್ಕೃತಿ ಆತ್ಮಕಲ್ಯಾಣ ಸಾಧನೆಯಲ್ಲಿಯ ನಿರತರಾಗಿದ್ದರು. ಪರೋಪಕಾರಕ್ಕಾಗಿ ದೇಹವನ್ನು ದಣಿಸಿದರು. ಪರಮಾತ್ಮಧ್ಯಾನ ಧಾರಣ ಸಮಾಧಿಗಳಲ್ಲಿ ಮನವನ್ನು ತಣಿಸಿದರು. ಶ್ರೀಗಳು ಲೋಕಚರಿತರು; ಲೋಕೋತ್ತರ ಚರಿತರು.

ಸಂಸಾರಿಯಾಗಲಿ ಸನ್ಯಾಸಿಯಾಗಲಿ ಸ್ವಾರ್ಥವಿಲ್ಲದೆ ಸಮಾಜ ಸಂಸ್ಕೃತಿಗಳ ಸೇವೆ ಮಾಡಬೇಕೆಂಬುದೆ ಅವರ ಮನೀಷೆ;, ಅದನ್ನೇ ಅವರು ಬೋಧಿಸುತ್ತಿದ್ದರು, ಸಾಧಿಸುತ್ತಿದ್ದರು. ಬೋಧನೆಗೆ ಸಾಧನೆಗೆ ಸಿದ್ಧರಾಗಿರುವವರನ್ನು ಅವರು ಮನಸಾರೆ ಮನ್ನಿಸುತ್ತಿದ್ದರು. ಹೃದಯಾರೆ ಹರಸುತ್ತಿದ್ದರು. ಆದರೆ ಅಂಥವರ ಸಂಖ್ಯೆ ತೀರ ಕಮ್ಮಿಯಿತ್ತು. ಸಮಾಜದ ವಿಸ್ತಾರ ದೃಷ್ಟಿಯಲ್ಲಿ ಅಲ್ಲಲ್ಲಿ ಒಬ್ಬಿಬ್ಬರಿರುವ ಸಣ್ಣ ಸಂಖ್ಯೆ ಯಾತಕ್ಕು ನಿಲುಕದಾಗಿತ್ತು. ಸಮಾಜ ಸಂಸ್ಕೃತಿ ಸೇವಕರ ಗುಂಪಿನ ಅವಶ್ಯಕತೆ ಸ್ವಾಮಿಗಳವರ ಮನಸ್ಸಿನಲ್ಲಿ ಮುಮ್ಮೂಡಿನಿಂತಿತು. ಸ್ವಾಮಿಗಳವರ   ಪ್ರವೃತ್ತಿಧರ್ಮವಿವೇಚನೆಯ ಮೇಲೆ ವಿಶೇಷವಾಗಿತ್ತು. ಈ ಅವರ ಬಯಕೆ ಈಚೆಗೆ ವೀರಶೈವ ಮಹಾಸಭೆಯಲ್ಲಿ ನೆರವೇರಲು ಆತಂಕವಾಯಿತು. ಆಂಗ್ಲ ವಿದ್ಯೆಯ ಪದವೀಧರರು ಹೆಚ್ಚಾಗಿ ಸಭೆಯಲ್ಲಿ ಸೇರಿ ಧಾರ್ಮಿಕ ವಿಚಾರಕ್ಕೆ ಕ್ರಮವಾಗಿ ಕೊಡಲಿ ಪೆಟ್ಟು ಬಿದ್ದಿತು. ಅದರಿಂದಾಗಿ ಸ್ವಾಮಿಗಳವರು ಕ್ರಿ.ಶ. ೧೯೦೯ರಲ್ಲಿ ಧರ್ಮೋತ್ತೇಜಕ ನಾಮಾಂಕಿತ ಸಭೆಯೊಂದನ್ನು ಬಂಕಾಪುರದಲ್ಲಿ ಹುಬ್ಬಳ್ಳಿ ಶ್ರೀ ಜಗದ್ಗುರು ಶ್ರೀ ಗಂಗಾಧರ ಸ್ವಾಮಿಗಳವರು ಮೂರುಸಾವಿರಮಠ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಅದನ್ನು ಮೂರುನಾಲ್ಕು ವರುಷ ಪ್ರತ್ಯೇಕವಾಗಿ ನಡೆಯಿಸಿ ಧರ್ಮ ಪ್ರಸಾರ ಮಾಡಿದರು. ಅದರಿಂದಲು ಅವರ ಸಮಾಜ ಸಂಸ್ಕೃತಿಯ ಉತ್ಕೃಮಣ ಸೇವೆ ಸಾಕಷ್ಟು ಸಾಗಲಿಲ್ಲ. ಆ ದಿಸೆಯಲ್ಲಿಯೂ ಅವರಿಗೆ ಸಮಾಜ ಸೇವಕರ ಬೋಧಕರ ಅಭಾವ ಹೆಜ್ಜೆ ಹೆಜ್ಜೆಗೂ ತೋರಿತು; ಹೆಚ್ಚು ಹೆಚ್ಚಾಗಿ ನಿರಾಶೆ ಬೀರಿತು.

ಸಮಾಜದ ಪ್ರತಿ ವ್ಯಕ್ತಿಯನ್ನು ಪ್ರತಿಕಲೆಯನ್ನು ಸುಧಾರಿಸುವ ಕಡೆಯಿಲ್ಲದ ಕುತೂಹಲ ಸ್ವಾಮಿಗಳವರದು. ಸಮಾಜ ಸಂಸ್ಕೃತಿಗಳ ಸೇವೆಯೊಂದಿದ್ದರೆ ಅವರಿಗೆ ಮೋಕ್ಷ ಬಂದರು ಅದು ಬೇಕಿರಲಿಲ್ಲ. ಆದ್ದರಿಂದ ಸಮಾಜದ ವಿಶಿಷ್ಟವರ್ಗವನ್ನು ಸುಧಾರಿಸುವ ಒಂದು ಸಂಸ್ಥೆಯನ್ನು ನಿರ್ಮಿಸುವ ಬಯಕೆ ಮೂಡಿ ಬಂದಿತು. ಗುರುವಿನ ಆದೇಶವು ಅದಾಗಿತ್ತು.

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಸಂಸ್ಥಾನಮಠ ಗದಗ.

ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸ್ತುತಿ ನಿಂದೆಗಳಿಗೆ ಗುರಿಯಾಗುತ್ತಾನೆ. ಹಾಗೆಯೇ ಇನ್ನೊಬ್ಬರ ಸ್ತುತಿ ನಿಂದೆಗಳಿಗೂ ಕಾರಣನಾಗುತ್ತಾನೆ. ಯಾರಾದರು ತನ್ನನ್ನು ಸ್ತುತಿಸಿದರೆ ಸಹಜವಾಗಿಯೇ ಸಂತಸ ಪಡುತ್ತಾನೆ. ನಿಂದಿಸಿದರೆ ವ್ಯಥೆ ಪಡುತ್ತಾನೆ ಮತ್ತು ನಿಂದಿಸಿದವರೊಡನೆ ದ್ವೇಷ ಸಾಧಿಸುತ್ತಾನೆ. ತಾನು ಇನ್ನೊಬ್ಬರನ್ನು ನಿಂದಿಸಿದಾಗ ಅವರಲ್ಲಿಯೂ ತನ್ನ ಹಾಗೆ ದ್ವೇಷ ಹುಟ್ಟಬಹುದೆಂಬ ಅಥವಾ ಅವರ ದುಃಖಿಸುವರೆಂಬ ಅರಿವು ಆ ವ್ಯಕ್ತಿಗಿರುವುದಿಲ್ಲ. ಇದೇ ಮನುಷ್ಯರ ದೌರ್ಬಲ್ಯ.

ಯಾವುದೇ ಒಬ್ಬ ವ್ಯಕ್ತಿ ಆತ್ಮಸ್ತುತಿ ಮಾಡಿಕೊಳ್ಳುವುದಾಗಲಿ ಅಥವಾ ಎಲ್ಲರೂ ತನ್ನನ್ನು ಹೊಗಳುತ್ತಿರಲಿ ಎಂದು ಬಯಸುವದಾಗಲಿ ತೀರ ಆಘಾತಕಾರಿ. ಬದುಕಿನಲ್ಲಿ ಲೋಕಹಿತ ಕಾರ್ಯಗಳನ್ನು ಜರುಗಿಸಿದಾಗ, ಆದರ್ಶಯುತವಾದ ಬದುಕನ್ನು ಬದುಕಿದಾಗ ಲೋಕದ ಜನ ಅನೇಕ ರೀತಿಯಲ್ಲಿ ಹೊಗಳುತ್ತಾರೆ, ಗೌರವಿಸುತ್ತಾರೆ. ಆದರೆ ಜನರು ಹೊಗಳಲಿ, ಗೌರವಿಸಲಿ ಎಂಬ ಭಾವನೆಯಿಂದ ಲೋಕಹಿತ ಕಾರ್ಯಗಳನ್ನು ಮಾಡಬಾರದು. ಒಮ್ಮೊಮ್ಮೆ ತಮ್ಮ ಕಾರ್ಯಸಾಧನೆಗಾಗಿ ಹೊಗಳುಭಟ್ಟರು ವ್ಯಕ್ತಿಯನ್ನು ಹೊಗಳುತ್ತಾರೆ. ಆ ಹೊಗಳಿಕೆಯ ಹಿಂದಿನ ಉದ್ದೇಶವನ್ನರಿತು ಅಂಥ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಹೊಗಳಿಕೆ ಅಥವಾ ಸ್ತುತಿಯಿಂದ ವ್ಯಕ್ತಿ ಮದೋನ್ಮತ್ತನಾಗಿ ಅಧಃಪತನ ಹೊಂದುವ ಸಾಧ್ಯತೆಯೂ ಇದೆ. ‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ…. ನೀನು ಒಳ್ಳಿದನಾದರೆ ಎನ್ನ ಹೊಗಳಿಕೆಗೆ ಅಡ್ಡಬಾರಾ ಧರ್ಮಿ’ ಎಂದು ಬಸವಣ್ಣನವರು ದೇವರಲ್ಲಿ ಪ್ರಾರ್ಥಿಸುವುದನ್ನು ಗಮನಿಸಿದರೆ ಈ ಮಾತು ಅತ್ಯಂತ ಸ್ಪಷ್ಟವೆನಿಸುತ್ತದೆ. ಆತ್ಮಸ್ತುತಿಯೂ ಒಂದು ದುರ್ಗುಣ. ವ್ಯಕ್ತಿಯ ಅಂತರಂಗ ಹಾಗು ಬಹಿರಂಗ ಶುದ್ಧಿಗೆ ಮಾರಕವಾಗುವ ಏಳು ದುರ್ಗುಣಗಳಲ್ಲಿ ಇದೂ ಒಂದು. ಅಂತೆಯೇ ‘ತನ್ನ ಬಣ್ಣಿಸಬೇಡ’ ಎಂದು ಬಸವಣ್ಣ ಎಚ್ಚರಿಸುತ್ತಾನೆ.

ಪರರ ದೋಷಗಳನ್ನೆಣಿಸುವುದು ಒಳ್ಳೆಯದಲ್ಲ. ದೋಷೈಕ ದೃಷ್ಟಿ ಅಹಂಭಾವದ ಪ್ರತೀಕ. ಅದು ಪರನಿಂದೆಗೆ ದಾರಿ ಮಾಡಿಕೊಡುತ್ತದೆ. ಪರನಿಂದೆಯಂತಹ ದೊಡ್ಡ ದೋಷ ಇನ್ನೊಂದಿಲ್ಲ. ನಿಂದಕನಿಗಿಂತ ನೀಚ ಮತ್ತೊಬ್ಬನಿಲ್ಲ. ಅವನ ಮೈ, ಮನ,

ಮಾತುಗಳೆಲ್ಲವೂ ದೋಷಯುಕ್ತವಾಗಿರುವ ಕಾರಣ ಇನ್ನೊಬ್ಬರಲ್ಲಿ ದೋಷಗಳನ್ನೆಣಿಸುವದು ಮತ್ತು ಅವರನ್ನು ನಿಂದಿಸುವುದು ಅವನ ಸಹಜ ಗುಣವಾಗಿರುತ್ತದೆ.ಭಕ್ತಕವಿ ತುಳಸೀದಾಸರು ನಿಂದಕರನ್ನು ಕುರಿತು ‘ಸಬಕರ ನಿಂದಾ ಜೋ ನರ ಕರಯಿ |ಸೋ ಚಮಗಾದರ ಹೋ ಅವತರಯಿ||’ ಅಂದರೆ ‘ವಿನಾಕಾರಣ ಎಲ್ಲರನ್ನು ನಿಂದಿಸುವ  ಮನುಷ್ಯ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ಹುಟ್ಟುತ್ತಾನೆ.’ ಎಂದು ಹೇಳುತ್ತಾರೆ. ಬಾವಲಿಯು ಆಹಾರವನ್ನು ಸ್ವೀಕರಿಸಿದ ಬಾಯಿಯಿಂದಲೇ ಮಲವಿಸರ್ಜನೆಯನ್ನೂ ಮಾಡುವುದರಿಂದ ಅದೊಂದು ಕೀಳು ಪ್ರಾಣಿ ಎಂಬ ನಂಬಿಕೆ ಇದೆ. ನಿಂದೆಯಂತಹ ದುರಿತ ಕರ್ಮ ಬೇರೊಂದಿಲ್ಲ ಎಂದು ಹೇಳಿರುವುದು ಈ ಕಾರಣಕ್ಕಾಗಿಯೇ

ನಾಹಂ ಲೋಕೇ ನ ಲೋಕೋಹಂ ಲೋಕನಿಂದಾ ಕುತೋಮಮ

ಇತಿ ನಿಶ್ಚಯದ್ಭಾವಃ ಶಿವಜ್ಞಾನೀತಿ ಕಥ್ಯತೇ

ಶಿವಜ್ಞಾನಿಗಳಾದವರು ಲೋಕದಲ್ಲಿ ನಾನಿಲ್ಲ, ನಾನು ಲೋಕವಲ್ಲ, ಲೋಕನಿಂದೆಯೂ ನನ್ನದಲ್ಲ. ಎಂಬ ನಿಶ್ಚಯ ಭಾವ ಉಳ್ಳವರಾಗಿರುತ್ತಾರೆ. ಯಾರು ನಿಂದಿಸಿದರೂ ಅವರನ್ನು ಪ್ರತಿಯಾಗಿ ನಿಂದಿಸುವುದಿಲ್ಲ. ನಿಂದೆಗೆ ನಿಂದೆ ಒಳ್ಳೆಯದಲ್ಲ. ನಿಂದಿಸಿದವರನ್ನ ತಂದೆ-ತಾಯಿಗಳೆಂಬ ಭಾವ ಅವರದು. ಲೌಕಿಕ ಸ್ತುತಿ-ನಿಂದೆಗಳು ಅವರನ್ನೆಂದೂ ಅಲುಗಿಸವು, ‘ಆರೇನಂದರೂ ಓರಂತಿಪ್ಪುದೇ ಸಮತೆ, ಆರು ಜರಿದರೂ ಅವರೆನ್ನ ಕಾಳಿಕೆಯ ಕಳೆದರೆಂಬುದೇ ಸಮತೆ, ಆರು ಸ್ತೋತ್ರ ಮಾಡಿಹರೆನ್ನ ಜನ್ಮ ಹಗೆಗಳೆಂಬುದೇ ಸಮತೆ’ ಎಂಬಂತಹ ಚಿತ್ತಸಮತೆಯನ್ನು ಶಿವಜ್ಞಾನಿಗಳು ಹೊಂದಿರುತ್ತಾರೆ. ಸ್ತುತಿನಿಂದೆಗಳು ಬಂದರೆ ಸಮಾಧಾನಿಯಾಗಿರುವುದೇ ಅವರ ಲಕ್ಷಣ. ‘ದೂಷಣೆ ಮಾಡಲದೊಂದೆ ಜನರತಿ ಭೂಷಣ ಮಾಡಲದೊಂದೆ’ ಎಂದು ಘನಮಠದಾರ್ಯರ ಮಾತಿಗೆ ಅವರ ಬದುಕೊಂದು ನಿದರ್ಶನ.

ಜಗತ್ತಿನಲ್ಲಿ ಸ್ತುತಿಸುವವರು ಪುಣ್ಯದ ಫಲವನ್ನೂ, ನಿಂದಿಸುವವರು ಪಾಪದ ಫಲವನ್ನು ಅನುಭವಿಸುತ್ತಾರೆ. ಆದ್ದರಿಂದ ಯಾರನ್ನೂ ಯಾವ ಕಾಲಕ್ಕೂ ನಿಂದಿಸಬಾರದು. ವ್ಯಕ್ತಿಗಳಲ್ಲಿರುವ ದೋಷಗಳನ್ನೆಣಿಸಿ ನಿಂದಿಸುವುದೂ ಉಚಿತವಲ್ಲ. ಅವರ ದೋಷ ದುರ್ಗುಣಗಳನ್ನು ಮರೆತು ಆದರಿಸುವುದೇ ಸೂಕ್ತ. ಇದರಿಂದ ಆ ವ್ಯಕ್ತಿಗಳೂ ತಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಳ್ಳುತ್ತಾರೆ. ಆಗ ರಾಗ-ದ್ವೇಷಗಳು ಅಳಿದು ಪರಸ್ಪರ ಪ್ರೀತಿ ವಿಶ್ವಾಸಗಳು ಹೆಚ್ಚಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ.

ಲೇಖಕರು : ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ, ಹಾಲಕೆರೆ.

(ಪೂಜ್ಯರು ಶ್ರೀ ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡುವಾಗ ಬರೆದ ಲೇಖನ)

ವೀರಶೈವ-ಲಿಂಗಾಯತ ಸಮಾಜ ತನ್ನನ್ನು ಸದಾಚಾರ, ಸದ್ವಿಚಾರ, ಸಮಭಾವಗಳಿಂದ ಒಟ್ಟುಗೂಡಿಸಲು ಹೊರಟು ತನ್ನಲ್ಲಿಯೇ ಆ ತಾತ್ವಿಕ ನೆಲೆಯನ್ನೆ ಮರೆಮಾಡಿಕೊಂಡಿತ್ತು. ಇಂಥ ಸಾಮಾಜಿಕ ಹೊಯ್ದಾಟದ ಕಾಲದಲ್ಲಿ ಹಲವು ಚೇತನಗಳು ಅಪೂರ್ವಕಾರ್ಯ ನಡೆಸಲು ಅವತರಿಸಿದ್ದವು. ಇಂಥವರಲ್ಲಿ ಒರ್ವರು, ವಿರತಿ ತೇಜ ತುಂಬಿದ ಬಾಗಲಕೋಟೆಯ ಶ್ರೀ ವೈರಾಗ್ಯದ ಮಲ್ಹಣಾರ್ಯರು. ಸಂಚಾರ ಮೂರ್ತಿಗಳಾಗಿದ್ದ ಅವರು ತಮ್ಮಂತೆಯೆ ಸಾಮಾಜಿಕ ಕಳಕಳಿವುಳ್ಳ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಧರ್ಮ ಪೀಠದಲ್ಲಿರುವ ತಮ್ಮಂಥವರು ನಡೆಸುವ ಕಾರ್ಯಗಳು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಬೇಕು. ಈ ಸಮಾಜದ ಗುರು-ವಿರಕ್ತ ಪೀಠಗಳಿಗೆ ಏರುವವರು ಶಿಕ್ಷಣ ಪಡೆಯುವ ಸಂಸ್ಥೆಯೊಂದು ಸ್ಥಾಪನೆಯಾಗಬೇಕು ಎಂದು ಪೀಠಿಕೆ ಹಾಕಿದ್ದರು. ಈ ಪೀಠಿಕೆಯೇ ಕುಮಾರ ಮಹಾಸ್ವಾಮಿಗಳವರ ಮನದಲ್ಲಿ ಹೆಮ್ಮರವಾಗಿ ಬೆಳೆದು, ಮುಂದೆ ಶಿವಯೋಗಮಂದಿರ ಸಂಸ್ಥೆಯನ್ನು ಸಾಕಾರಗೊಳಿಸಿತು. ಬಾಗಲಕೋಟೆಯ ೪ನೇ ವೀರಶೈವ ಮಹಾಅಧಿವೇಶನದಲ್ಲಿ ಅಂದಿನ ಸಮಾಜ ಪ್ರಮುಖರಲ್ಲಿ ಓರ್ವರಾದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆಗೆ ನಿರ್ಣಯ ಮಂಡಿಸಿತು. ಪರಮ ತಪೋನಿಧಿಗಳಾದ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ತೋರಿದ ಸ್ಥಳದಲ್ಲಿ, ಮಲಪಹಾರಿಣಿ ತಟದಲ್ಲಿ ೧೯೦೯ರ ರಥಸಪ್ತಮಿಯಂದು ಸ್ಥಾಪನೆಯಾಯಿತು. ಒಮ್ಮೆ ಶ್ರೀ ವಿಜಯಮಹಾಂತ ಶಿವಯೋಗಿಗಳು ತಾಡೋಲೆಗಳನ್ನು ಅಭ್ಯಸಿಸುವಾಗ ೭೦೦ ವರ್ಷಗಳ ಹಿಂದಿನ ಘಟ್ಟಿವಾಳ ಮುದ್ದಣ್ಣಗಳ ಕಾಲಜ್ಞಾನ ವಚನ ಕಣ್ಸೆಳೆಯಿತು. ಮುಂದೊಂದುದಿನ ದಿಟ ಜಂಗಮನೋರ್ವ ಶಿವಯೋಗ ಸಂಸ್ಥೆಯೊಂದನ್ನು ಹುಟ್ಟು ಹಾಕುವನೆಂಬ ಉಲ್ಲೇಖ ಆ ಕಾಲಜ್ಞಾನದಲ್ಲಿತ್ತು. ಘಟ್ಟಿವಾಳಯ್ಯ ಪರಮ ವೈರಾಗ್ಯಶಾಲಿ, ಇಂದ್ರಿಯಗಳನ್ನು ತೃಣೀಕರಿಸಿ ನಿರ್ಮೋಹಿತನಾಗಿದ್ದ. ‘ಸುವರ್ಣ ಎಂದರೆ

ಕಲ್ಲು, ಮನೆಯೆಂದರೆ ಸಂತೆ ಗುಡಿಸಲು’ ಎಂದು ಭಾವಿಸಿ ಸಕಲರಲ್ಲಿ ವಿಶ್ವಬಂದುತ್ವ ಕಾಣುವ ದೃಷ್ಟಿಉಳ್ಳವನಾಗಿದ್ದ. ಅವನು ಯಾರನ್ನೂ ಪೀಡಿಸುತ್ತಿರಲಿಲ್ಲ, ಯಾರ ಮನಸ್ಸನ್ನು ನೋಯಿಸುತ್ತಿರಲಿಲ್ಲ. ಅಹಿಂಸಾ ಧರ್ಮ ಪಾಲಕನಾಗಿದ್ದ. ಈ ಕಡುತರವಾದ ಆಚರಣಾ ಪ್ರವೃತ್ತಿಯನ್ನು ಕಂಡೇ ಜನರು ಘಟ್ಟಿವಾಳಯ್ಯನೆಂದು ಈ ಮುದ್ದಣ್ಣನನ್ನು ಕರೆಯುತ್ತಿದ್ದರು. ಮುದ್ದಣನೆಂಬುದು ಮರೆಯಾಗಿ ಘಟ್ಟಿವಾಳಯ್ಯನೆಂದೇ ಈತ ಪ್ರಸಿದ್ಧನಾಗಿದ್ದ.

ಬಸವಣ್ಣನವರು ನಡೆಸುವ ಅನುಭವ ಮಂಟಪದ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಬಂದಿದ್ದ ಈ ಘಟ್ಟಿವಾಳಯ್ಯ. ಬಸವಣ್ಣನವರ ಮಹಾಮನೆಯ ಮುಂದೆ ಜಾಗಟೆಯ ನಾದ ಕೇಳಿದಾಗ ಪ್ರಸಾದಕ್ಕೆ ಸಾಲು ಹಿಡಿದು ಹೋಗುವ ಜಂಗಮರನ್ನು ಕಂಡು ಘಟ್ಟಿವಾಳಯ್ಯ ‘ಇವರು ಉಪಾದಿಯಿಂದ ಶರೀರ ಪೋಷಕರು ಜ್ಞಾನ ಜಂಗಮ ಸ್ಥಲಕ್ಕೆ ಸಲ್ಲರು’ ಎಂದು ವಿಡಂಬಿಸಿದ್ದ.

“ತನುವ ಮರೆಯ ಬೇಕೆಂದು ಗುರುವ ತೋರಿ

ಮನವ ಮರೆಯ ಬೇಕೆಂದು ಲಿಂಗವ ತೋರಿ

ಧನವ ಮರೆಯ ಬೇಕೆಂದು ಜಂಗಮವ ತೋರಿ

ಲೇಸ ಮರೆದು ಕಷ್ಟಕ್ಕೆ ಕಡಿದಾದುವ ಭಾಷೆಹೀನರ ಕಂಡು

ನಾಚಿಕೆಯಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

 

ಘಟ್ಟಿವಾಳಯ್ಯಗಳ ವಿಡಂಬನೆ ಹೀಗೆ ಮುಂದುವರೆದಿತ್ತು.

” ಕಾಯ ಜೀವವನರಿದೆನೆಂಬುವವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ!

ಹೊನ್ನು ಹೆಣ್ಣು ಮಣ್ಣಿಗಾಗಿ ಹೊರೆಯಾಡುವವರೆಲ್ಲರು

ಬಸವಣ್ಣನ ಬಾಗಿಲಲ್ಲಿ ಬಂದಿತರಾಗಿ ನೊಂದವರಿಗೇಕೆ

ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ ”

 

ಹೀಗೆ ಘಟ್ಟಿವಾಳಯ್ಯ ಜಂಗಮ ಸಮೂಹವನ್ನು ವಿಡಂಬಿಸಿದಾಗ ಆ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ನೋಯಿಸಿ ಆತನ ಕೊರಳ ಇಷ್ಟಲಿಂಗವನ್ನು ಕಸಿದುಕೊಂಡರು ಆಗಲೂ ಘಟ್ಟಿವಾಳಯ್ಯ ವಚನದಲ್ಲೆ ನುಡಿದಿದ್ದ,

“ಗೋಕುಲರೆಲ್ಲರು ಕೂಡಿ ಗೋಪತಿಯಣ್ಣನ ಮನೆಗೆ ಉಣಬಂದರೆಲ್ಲರು,

ನಾ ನೀಸಕ್ಕಿ ಕೂಳ ಕೇಳಿದರೆ ವೇಷದಾರಿಗಳು

ಘಾಸಿಯ ಮಾಡಿದರೆನ್ನುವ ಜಗದೀಶ ನೀನೆ ಬಲ್ಲೆ

ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

 

ಹೀಗೆ ಘಟ್ಟಿವಾಳಯ್ಯನ ಲಿಂಗದೇವನನ್ನು ಜಂಗಮದೇವರುಗಳು ತೆಗೆದುಕೊಂಡ ಮೇಲೆ, ಆತ ಗುಡ್ಡಕ್ಕೆ ಹೋಗಿ ಒಂದು ದೊಡ್ಡ ಗುಂಡಕಲ್ಲಿಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕೊರಳಿಗೆ ಆ ಹಗ್ಗವನ್ನು ಶಿವದಾರದಂತೆ ಸುತ್ತಿಕೊಂಡು ಬಸವಣ್ಣನವರ ಮಹಾಮನೆಯತ್ತ ಬಂದಿದ್ದ. ಆ ದೊಡ್ಡ ಗುಂಡಕಲ್ಲು ಮಹಾಮನೆಯ ಬಾಗಿಲಿಗೆ ಅಡ್ಡವಾಗಿ ನಿಂತಿತ್ತು. ಒಳಗಿದ್ದವರು ಹೊರಗೆ; ಹೊರಗಿದ್ದವರು ಒಳಗೆ ಬರಲಾಗದೆ ಆ ಗುಂಡಕಲ್ಲು ದ್ವಾರವನ್ನು ಬಂದಿಸಿತ್ತು. ಶಿವಶರಣೆ ನಿಲಾಂಬಿಕೆಯವರು ಲಿಂಗದಲ್ಲಿ ಈ ಚೋದ್ಯವನ್ನು ಕಂಡು ಬಿಜ್ಜಳನ ಆಸ್ಥಾನದಲ್ಲಿರುವ ಬಸವಣ್ಣನವರಿಗೆ ಹೇಳಿ ಕಳುಹಿಸಿದ್ದರು. ಬಸವಣ್ಣ, ಅಲ್ಲಮ ಪ್ರಭುಗಳು, ಚನ್ನಬಸವಣ್ಣ, ಮಡಿವಾಳ ತಂದೆಗಳು ಮಹಾಮನೆಯತ್ತ ಬಂದಿದ್ದರು. ಘಟ್ಟಿವಾಳಯ್ಯನ ಜಂಗಮರ ವಿಡಂಬನೆ ಹೀಗೆ ಮುಂದುವರೆದಿತ್ತು.

“ಅಂಡಜ ಮುಗ್ದೆಯ ಮಕ್ಕಳಿರಾ, ಕೆಂಡದ ಮಳೆ ಕರೆವಲ್ಲಿ

ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ! ಜಂಗಮವೆಂಬುದಕ್ಕೆ

ನಾಚಿರಿ, ನಿಮ್ಮ ಕಂಗಳ ಹಿಂಡಿರ ತಿಂಬಳೆಯನ್ನರಿಯಿರಿ, ಅವಳು

ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು

ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾ

ಜಂಗಮವೇ? ಲೋಕವೇಲ್ಲಾ ಅವಳು, ಅವಳು ವಿರಹಿತವಾದ

ಜಂಗಮರಾರೈ ಬಸವಣ್ಣ? ಅವಳು ವಿರಹಿತವಾದ

ಭಕ್ತರಾರೈ ಬಸವಣ್ಣ? ಅವಳ ಮಕ್ಕಳು ನಿನ್ನ ಕೈಯಲ್ಲಿ

ಆರಾಧಿಸಿಕೊಂಬ ಜಂಗಮಕಾಣೈ ಬಸವಣ್ಣ!

ಅವಳು ವಿರಹಿತವಾದ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ನಲ್ಲದಿಲ್ಲನಿಲ್ಲು ಮಾಣು”

ಹೀಗೆ ಘಟ್ಟಿವಾಳಯ್ಯನ ವಿಡಂಬನೆ ಸಾಗಿದ್ದಾಗ ಅಲ್ಲಮ ಪ್ರಭುಗಳು ಶಿವಾನುಭವ ನಡೆಸಿದ್ದರು. ಜಂಗಮರಿಗೆ  ಹಾಗೂ ಘಟ್ಟಿವಾಳಯ್ಯನಿಗೆ ತಿಳಿಹೇಳಿ ಘಟ್ಟಿವಾಳಯ್ಯನ ಲಿಂಗವನ್ನು ಜಂಗಮರಿಂದ ಮರಳಿ ಕೊಡಿಸಿದ್ದರು. ಆಗ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ಅಣಕಿಸಿದ್ದರು. ‘ಏನು ಘಟ್ಟಿವಾಳಯ್ಯನವರೆ, ನಿಮಗೆ ಇಬ್ಬರು ಗಂಡಂದಿರೇನು.? ನಾವು ಕಟ್ಟಿದವನೊಬ್ಬ ನೀವು ಕಟ್ಟಿಕೊಂಡವನೊಬ್ಬ’. ಆಗ ಘಟ್ಟಿವಾಳಯ್ಯನವರು ತಮ್ಮ ಲಿಂಗಲೀಲೆ ಮೆರೆದಿದ್ದರು.

“ಲೀಲೆಗೊಳಗಾದ ಲಿಂಗವೇ, ಬಾರಯ್ಯ ಎನ್ನಂಗದೊಳಗಾಗು

ಶೃತ, ದೃಷ್ಟ, ಅನುಮಾನದಲ್ಲಿ ನೋಡುವವರೆಲ್ಲರಿಗೂ

ಅತೀತವಾಗು ಹಾಗೆಂಬುದಕ್ಕೆ ಮುನ್ನವೇ ಆ ಗುಂಡು

ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ ಕಾಯವಡಗಿ ಭಾವವೆಂಬ

ಭಾವಬಯಲಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

ಘಟ್ಟಿವಾಳಯ್ಯನವರು ಆ ಗುಂಡನ್ನು ಪರಬ್ರಹ್ಮವೆಂದು ತನ್ನ ಕಾಯದ ಕರಸ್ಥಲದ ಇಷ್ಟಲಿಂಗದಲ್ಲಿ ಅಡಗಿಸಿದ್ದರು. ಘಟ್ಟಿವಾಳಯ್ಯನವರು ಕಲ್ಯಾಣದ ಬೀದಿ ಬೀದಿಗಳಲ್ಲಿ ತಮ್ಮ ದೇಹವನ್ನು ಕೈಮಾಡಿ ತೋರಿಸುತ್ತ ‘ಇದು ಲಿಂಗಕಾಯ ಯಾರೂ ಸಮಾದಿ ಮಾಡ ಬೇಕಿಲ್ಲ, ಇದು ಲಿಂಗದಲ್ಲಿ ಐಕ್ಯವಾಗುತ್ತೆ’. ಎಂದು ನುಡಿಯುತ್ತಿದ್ದರು. ಇಂಥ ಘಟ್ಟಿವಾಳಯ್ಯನವರು ತಮ್ಮ ಲಿಂಗೈಕ್ಯ ಸಮಿಪಿಸಿದಾಗ ಕಲ್ಯಾಣದ ರಾಜ ಬೀದಿಯಲ್ಲಿ ದೇಹವನ್ನು ತ್ಯಜಿಸಿದರು. ಈ ಸುದ್ದಿಯನ್ನು ಚಾರರಿಂದ ತಿಳಿದ ಬಿಜ್ಜಳನು ಬಸವಣ್ಣನವರಿಗೆ ‘ನಿಮ್ಮ ಶರಣರಿಗೆ ನುಡಿದಂತೆ ನಡೆಯುವ ನಡೆಯಿಲ್ಲ, ಯಾರೋ ಒಬ್ಬ ತನ್ನ ಕಾಯಕ್ಕೆ ಸಮಾದಿ ಮಾಡ ಬೇಕಿಲ್ಲ ಎನ್ನುತ್ತಿದ್ದವನು ರಾಜ ಬೀದಿಯಲ್ಲಿ ಬಿದ್ದು ಸತ್ತಿರುವನಂತೆ ಅವನ ನುಡಿ ನಡೆಯಾಗಿಲ್ಲವಲ್ಲ?’ ಎಂದಿದ್ದನ್ನು ಕೇಳಿದ ಬಸವಣ್ಣನವರು ತಮ್ಮ ಶರಣ ಬಳಗದವರೊಂದಿಗೆ ಘಟ್ಟಿವಾಳಯ್ಯನವರು ಜೀವಬಿಟ್ಟ ರಾಜ ಬೀದಿಯಲ್ಲಿ ಬಂದಿದ್ದರು. ಘಟ್ಟಿವಾಳಯ್ಯನ ಲಿಂಗಕಾಯವನ್ನು ಸುತ್ತುವರೆದು ಸಮಾಧಿ ಕ್ರಿಯೆಗೆಂದು ಹೊತ್ತೊಯ್ಯಲು ಆ ಮಹಾಶಿವಶರಣನ ಕಾಯವನ್ನು ಮೇಲೆತ್ತುತ್ತಿದ್ದರು, ಹಾಗೆ ಎತ್ತಿದ ಬಸವಾದಿ ಶಿವಶರಣರ ಕರದಲ್ಲಿಯೇ ಅಡಗಿದಂತೆ ಘಟ್ಟಿವಾಳಯ್ಯನ ಲಿಂಗಕಾಯ ಬಯಲಾಗಿತ್ತು. ಈ ಸುದ್ದಿ ಚಾರರಿಂದ ಬಿಜ್ಜಳಗೆ ತಲುಪಿತ್ತು, ಆತ ಓಡೋಡಿ ಬಂದಿದ್ದ. ಈ ಮಹಾ ಶರಣನ ದರ್ಶನವಾಗಲಿಲ್ಲವಲ್ಲ ಎಂದು ಖಿನ್ನನಾಗಿದ್ದ. ಘಟ್ಟಿವಾಳಯ್ಯನ ಮಹಿಮೆಯನ್ನು ಶರಣರು ಕೊಂಡಾಡಿದ್ದರು.

ಘಟ್ಟಿವಾಳಯ್ಯನವರ ಈ ದೃಷ್ಟಾಂತದಲ್ಲಿ ‘ಶರಣ ಜ್ಞಾನದನಿಧಿ, ಜಂಗಮವೆಂಬುದು ಜ್ಞಾನದ ಸಂಖೇತ’ ಎಂಬುದನ್ನು ಜಂಗಮ ಸಮೂಹದಲ್ಲಿ ಮೂಡಿಸಲು ಯತ್ನಿಸಿರುವರು. ಕರದಿಷ್ಟಲಿಂಗದಲ್ಲಿ ಬೃಹದಾಕಾರದ ಕಲ್ಲುಗುಂಡನ್ನಡಗಿಸಿ ಲಿಂಗಮಹಾತ್ಮೆ ಮೆರೆದ ಮಹಾಮಹಿಮನಾಗಿದ್ದುದು ಮಿಂಚಿನಂತೆ ಹೊಳೆಯುತ್ತದೆ. ಇಂಥ ಘಟ್ಟಿವಾಳಯ್ಯ ಮುಂದೊಂದು ದಿನ ದಿಟ ಜಂಗಮನೊರ್ವ ಈ ಭುವಿಯಲ್ಲಿ ಉದಯಿಸುವನೆಂಬ ಕಾಲಜ್ಞಾನ ವಚನವನ್ನು ಹೇಳಿದ್ದ,

“ಗಿಡಮಾಗಡಿ ಎಂಬ ಪುರದ ಜಂಗಮದೇವ

ಮೃಡಕಣಾ ಭಿಕ್ಷವ ಬೇಡ್ಯಾನು!

ಪೊಡವಿಗೆ ಬಾಗಿ ನೀಡಲು ದೃಢದಿಂದ

ನೀಡಿಸಿಕೊಂಡಾನು !

ಮಲಪುರಿಯ ತೀರದಿ ವಿರಕ್ತಜಂಗಮನೊಬ್ಬ

ನಲವಿಂದ ಹುಚ್ಚನೆನಿಸ್ಯಾನು !

ಲೋಲ ಜನಗಳು ಹೆಸರನೇ ಇಟ್ಟಾರು ಆ

ಸ್ಥಳದಲ್ಲಿಯೇ ಹೂಳಿಸಿಕೊಂಡಾನು”

(ಹಳ್ಳೂರು ಕಾಲಜ್ಞಾನ)

ತಮ್ಮ ಅಂತಃ ಚಕ್ಷುವಿನಲ್ಲಿ ಭೂತ-ಭವಿಷತ್-ವರ್ತಮಾನ ತ್ರಿಕಾಲದ ಆಗುಹೋಗುಗಳನ್ನು ಶಿವಶರಣರು ಕಾಣುತ್ತಿದ್ದರು. ಕಂಡದನ್ನು ಬೆಡಗಿನಲ್ಲಿ ನುಡಿಯುತ್ತಿದ್ದರು. ಈ ಕಾಲಜ್ಞಾನ ವಚನ ಅಂತಹದು. ಮಲಪುರಿ ಎನ್ನುವದೇ ಮಲಪಹಾರಿಣಿ ನದಿತೀರ. ಇಲ್ಲಿಯ ವಿರಕ್ತಜಂಗಮ ಬೇರಾರು ಅಲ್ಲ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ೭೦೦ ವರ್ಷಗಳ ಹಿಂದೆಯೇ ನುಡಿದ ಈ ಕಾಲಜ್ಞಾನ ವಚನ

ಇಂದು ತಮ್ಮ ಪಾರಾಯಣ ಸಂದರ್ಭದಲ್ಲಿ ಕಂಡು ವಿವೇಚಿಸಲಾಗಿ ಅದು ದಿಟವಾದುದ್ದನ್ನು ಕಂಡು ಶ್ರೀ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳಿಗೆ ಘಟ್ಟಿವಾಳಯ್ಯನ ಕಾಲಜ್ಞಾನ ಆಶ್ಚರ್ಯ ಮೂಡಿಸಿತ್ತು. ತಮ್ಮ ಸುತ್ತಮುತ್ತ ಇದ್ದವರಿಗೆ ಈ ವಚನ ತೋರಿಸಿ ಎಂಥ ವಿರಕ್ತ ಜಂಗಮನೀತನೆಂದು ಕೊಂಡಾಡಿದ್ದರು. ಇದು ಬೇರಾರು ಅಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಎಂದಾಗ ಶ್ರೀಗಳು ಮುದಡಿಕೊಂಡಿದ್ದರು. ಆತ್ಮಸ್ತುತಿಗೆ ತಮ್ಮ ಜೀವಿತಾವದಿಯಲ್ಲಿ ಎಂದೂ ಅನುಗೊಡದ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ತಮ್ಮ ಬಗ್ಗೆ ಯಾರಾದರೂ ಬರೆದಿದ್ದು ತಿಳಿದರೆ ಅದನ್ನು ಹರಿದು ಹಾಕುತ್ತಿದ್ದರು. ‘ಬರೆಯುವುದಾದರೆ ಬಸವಾದಿ ಪ್ರಮಥರನ್ನು, ಬಿದರಿ ಕುಮಾರ ಶಿವಯೋಗಿಗಳನ್ನು, ಅಥಣಿ ಶಿವಯೋಗಿಗಳನ್ನು ಕುರಿತು ಬರೆಯಿರಿ’ ಎನ್ನುತ್ತಿದ್ದರಂತೆ. ಇಂಥ ಮಹಾಮಹಿಮರಿಂದ ಸ್ಥಾಪನೆಗೊಂಡ ಶಿವಯೋಗ ಮಂದಿರ ೧೦೦ ಸಂವತ್ಸರಗಳನ್ನು ಪೂರೈಸಿದೆ. ಕಾಲದ ಪರೀಕ್ಷೆಯಲ್ಲಿ ಶಿವಯೋಗದ ಅಂತಃ ಸತ್ವವನ್ನು ಗುಪ್ತವಾಗಿರಿಸಿಕೊಂಡ ೧೧೧ರ ಬೆಳಗನ್ನು

ಜಗತ್ತಿಗೆ ಬೆಳಗುತ್ತಿದೆ. ನಾಡಿನ ಹಲವೆಡೆ ಹಲವಾರು ಸಂಘ ಸಂಸ್ಥೆಗಳು ಸ್ಥಾಪನೆಗೊಳ್ಳುತ್ತವೆ. ಕೆಲವು ಅಲ್ಪಾವದಿಯಲ್ಲಿಯೆ ಅಳಿಯುತ್ತವೆ ಆದರೆ ಶ್ರೀ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಸಂಸ್ಥೆ ಶತಮಾನದಾಟಿ ಮತ್ತೊಂದು ಶತಮಾನ ಉರುಳಿಸಲು ಹೆಜ್ಜೆ ಇರಿಸಿದೆ. ಈ ಶಿವಯೋಗ ಮಂದಿರ ಪರಂಪರೆಯಲ್ಲಿ ಈ ಹಿಂದೆ ಶಿವಶರಣರ ಕಾಲಕ್ಕೆ ಶ್ರೀಶೈಲ, ಕೊಟ್ಟೂರು, ಲಿಂಗನಾಯಕನಹಳ್ಳಿ, ಬಳ್ಳಾರಿಯಲ್ಲಿ ಇಂಥ ಶಿವಯೋಗ ಶಿಕ್ಷಣ ಕೇಂದ್ರಗಳು ಇದ್ದ ದಾಖಲೆಗಳಿವೆ. ಆದರೆ ಇಷ್ಟುವರ್ಷದ ಪ್ರಮಾಣದಲ್ಲಿ ಶಿವಯೋಗದ ಬೆಳಗನ್ನು ಲೋಕಕ್ಕೆ ತೋರಿದ ತೋರುತ್ತಿರುವ ಶ್ರೇಯಸ್ಸು ಶಿವಯೋಗಮಂದಿರ ಸಂಸ್ಥೆಗೆ ಮಾತ್ರ ಸಲ್ಲುವಂತೆ ನಮ್ಮ ಕಣ್ಣೆದುರಿಗೆ ಚರಿತ್ರೆ ನಿರ್ಮಿಸಿದೆ. ಈ ಸಂಸ್ಥೆಯಿಂದ ಹೊರಹೊಮ್ಮಿದವರಲ್ಲಿ ಕಪನಳ್ಳಿಯ ರುದ್ರಮುನಿ ಶಿವಯೋಗಿಗಳಂಥ ಕಾಯಕ ಯೋಗಿಗಳಾಗಿದ್ದಾರೆ, ಶ್ರೀ ಜಚನಿಯವರಂಥ ವಿದ್ವತ್ ಕಲೆಮೆಳೈಸಿದವರಿದ್ದಾರೆ, ನಿಡಗುಂದಿಕೊಪ್ಪದ ಚನ್ನವೀರಸ್ವಾಮಿಗಳಂಥ ದೇಸಿ ಚಿಕಿತ್ಸಾಯೋಗಿಗಳದ್ದಾರೆ, ಗಡಿನಾಡಿನಲ್ಲಿ ಸಾಹಿತ್ಯ ಸಂಸ್ಕೃತಿಗಾಗಿ ನಾಗನೂರಿನ ಶ್ರೀ ಶಿವಬಸವ ಸ್ವಾಮಿಗಳು ಭಾಲ್ಕಿಯ ಚನ್ನಬಸವ ಪಟ್ಟಾಧ್ಯಕ್ಷರು ಹಾಗೂ ಪ್ರಬುಕುಮಾರ ಪಟ್ಟಾಧ್ಯಕ್ಷರಂಥ ಯೋಗಿಗಳಾಗಿದ್ದಾರೆ. ಇವರೆಲ್ಲರು ಶಿವಯೋಗ ಮಂದಿರ ಸಂಸ್ಥೆಯಲ್ಲಿ ತಮ್ಮ ವೈಶಿಷ್ಟತೆ ಮೆರೆಯುವ ಹಾದಿಹಿಡಿದರು. ಶ್ರೀ ಪಂ ಪಂಚಾಕ್ಷರಗವಾಯಿಗಳು ಪುಟ್ಟರಾಜಗವಾಯಿಗಳಂಥವರು ಅಪರೂಪದ ಸಂಗೀತ ಪ್ರತಿಭೆ ಮೆರೆಯಲು ಶ್ರೀ ಕುಮಾರ ಮಹಾ ಸ್ವಾಮಿಗಳವರ ಕೃಪಾಶಿರ್ವಾದವೇ ಮೂಲವಾಗಿದೆ.

ಈ ಮೇಲಿನ ಪರಮ ಪೂಜ್ಯರೆಲ್ಲಾ ಶ್ರೀಕುಮಾರಸ್ವಾಮಿಗಳವರ ಒಡನಾಟದಲ್ಲಿದ್ದು ತಮ್ಮ ಪ್ರತಿಭೆ ಮೆರೆದಿರುವಂತವರು. ಶ್ರೀ ಕುಮಾರಮಹಾಸ್ವಾಮಿಗಳವರ ಲಿಂಗೈಕ್ಯವಾದನಂತರ ಅವರ ಕಾರ್ಯವನ್ನು ಹಲವರು ಮುನ್ನೆಡೆಸುತ್ತ ಪ್ರಸಿದ್ದರಾಗಿದ್ದಾರೆ.ಅಂತವರಲ್ಲಿ ಹೊಸಪೇಟೆ, ಹಾಲಕೆರೆ ಪೀಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಶ್ರೀಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಎರಡು ದಶಕದಿಂದ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾವಯವ ಕೃಷಿಯಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ತಮ್ಮ ಮಠಗಳಲ್ಲಿ ಹಾಗೂ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯಲ್ಲಿ ಮಾಡಿ; ಮಾಡುತ್ತಲಿದ್ದಾರೆ. ಮುಂಡರಗಿ ಜಗದ್ಗುರುಗಳು,

ಮೂರುಸಾವಿರಮಠದ ಲಿಂ.ಮೂಜಗಂ ಮೊದಲು ಮಾಡಿ ಅನೇಕರಿರುವರು. ಶ್ರೀ ಕುಮಾರ ಶಿವಯೋಗಿಗಳ ಮಹಾ ಚೇತನ ಸಮಾಜಕ್ಕೆ ಹೇಗೆ ಅಂತಃಶಕ್ತಿ ತುಂಬುತ್ತಿದೆ ಎಂಬುದನ್ನು ಅವಲೋಕಿಸಿದರೆ ಅವರ ಕಾರಣಿಕತನ ಗೋಚರಿಸುತ್ತದೆ.

ಶ್ರೀ ಕುಮಾರ ಮಹಾಸ್ವಾಮಿಗಳು ನಮ್ಮ ಸಂಸ್ಕೃತಿಯೊಳಗಣ ಲೋಕಧರ್ಮಿಣಿ ಹಾಗೂ ಶಿವಧರ್ಮಿಣಿ ವಿದ್ಯೆಯ ಅರಿವುಳ್ಳವರು. ಲೋಕಧರ್ಮಿಣಿ ವಿದ್ಯೆ ಇಹಬಾಳಿನ ಸಾಫಲ್ಯಕಷ್ಟೇ, ಶಿವಧರ್ಮಿಣಿ ವಿದ್ಯೆ ಭವಚಕ್ರದಿಂದ ಪಾರುಗಾಣುವತ್ತಲೂ ಹಾದಿ ತೋರುವಂತಹದ್ದು. ಶಿವಧರ್ಮಿಣಿ ವಿದ್ಯೆ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗುವಂತಹದ್ದಲ್ಲ. ಅಂತಃ ಶಿವಧರ್ಮಿಣಿ ವಿದ್ಯೆ ನೀಡುವುದು ಶಿವಯೋಗ ಮಂದಿರದ ಗುರಿಯಾಗಿದೆ. ಮಾನವ ಹುಟ್ಟಿನ ನಿಗೂಢ ಶಿವಧರ್ಮಿಣಿಯಲ್ಲಿ ಮಾತ್ರ  ಗೋಚರಿಸುವಂತಹದ್ದು. ಶಿವಧರ್ಮಿಣಿಯ ಸರಳೀಕೃತ

ವಿಚಾರದಲ್ಲಿ ಆತ್ಮದ ನಂಬುಗೆಯಲ್ಲಿ ಬ್ರಹ್ಮಾಂಡದಾಚೆಗಿನ ರುದ್ರಾಂಡದಲ್ಲಿಯ ಅತೀತ ನಿಗೂಢಗಳತ್ತ ಸಾಗುವಂತಹದ್ದು .ಅಗೆದಷ್ಟು ನವನವೋನ್ಮೇಶಾಲಿನಿ ಯಾಗುತ್ತದೆ. ನೂರ ಹನ್ನೊಂದು ವರ್ಷಗಳ ದಾಟಿದ ಶ್ರೀಶಿವಯೋಗಮಂದಿರ ಸಂಸ್ಥೆಯಲ್ಲಿ ಈ ಶಿವಧರ್ಮಿಣಿ ಶಿಕ್ಷಣ, ವಿಭೂತಿ ನಿರ್ಮಾಣ,  ಗೋಪಾಲನೆ, ದಾಸೋಹ, ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಮುಂತಾದ ಧರ್ಮೋತ್ತೇಜಕ ಕಾರ್ಯಗಳು ಲೀಲಾತ್ಮಕವಾಗಿ ನಿರಂತರವಾಗಿ ನಡೆಯುತ್ತಲಿವೆ. ಅಂತಃಚಕ್ಷುವುಳ್ಳವರಿಗೆ ಶ್ರೀ ಕುಮಾರ ಶಿವಯೋಗಿಗಳ ಚಿನ್ಮಯ ನಿರಂಜನ ಜ್ಯೋತಿ ಅವರ ಗದ್ದುಗೆಯಲ್ಲಿ ದರ್ಶನಗೊಂಡೀತು. ಆ ಕಾರಣಿಕ ಶಿವಯೋಗಿಯ ಅನುಗ್ರಹ ಸರ್ವಜೀವರ ಆತ್ಮ ಆ ಶಿವಯೋಗಿ, ಶಿವಶರಣರ ಹಾದಿಯಲ್ಲಿ ಮುನ್ನಡೆಯಲಿ ಎಂದು ಆಶಿಸುವೆ.

 

 

(ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಒಂದು ಅಧ್ಯಯನ ಡಾ.ಜಿ.ಕೆ.ಹಿರೇಮಠ)

 

  1. ಮೋಹಕ್ಕಿಂತ ಸುಡುವ ಬೆಂಕಿಯಿಲ್ಲ ,
  2. ದ್ವೇಷಕ್ಕಿಂತ ಚುಚ್ಚುವ ಅಲಗಿಲ್ಲ .
  3. ಭ್ರಾಂತಿಗಿಂತ ಬೇರೆ ಪಾಶವಿಲ್ಲ .
  4. ದುರಾಸೆಗಿಂತ ಬೇರೆ ಶತ್ರುವಿಲ್ಲ
  5. ಕಲ್ಲಿನಲ್ಲಿರುವ ನಿರಾಶೆ ಕನಕದಲ್ಲಿಯೂ ಬರಬೇಕು .
  6. ಪರಮತದ ಅಪಚಾರಕ್ಕೆ ಕೈ ಹಾಕಬಾರದು . ಸ್ವಮತದ ಅಪಜಯಕ್ಕೆ ಕೈಕಟ್ಟಿಕೊಂಡು ಕೂಡ್ರಬಾರದು .
  7. ಜಾತ್ರೆಗಳಲ್ಲಿ ಜರಗುವ ಜೀವವಧೆಯನ್ನು ನಿಲ್ಲಿಸಬೇಕು
  8. ಜೀವದಯಾ ಸಂಘಕ್ಕೆ ಸಹಾಯ ನೀಡಬೇಕು .
  9. ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ದೃಷ್ಟಿಶುದ್ಧಿ ಮಾಡಿಕೊಳ್ಳಬೇಕು .
  10. ಡೊಂಬರಾಟದಿಂದ ಹಟಯೋಗದ ಮರ್ಮವರಿಯಬೇಕು .
  11. ನಿಜಗುಣರ ಷಟ್‌ಶಾಸ್ತ್ರದ ಅಧ್ಯಯನ ಮಾಡಬೇಕು .
  12. ಅರ್ಚನ , ಅರ್ಪಣ , ಅನುಭಾವಗಳು ನಿತ್ಯವೂ ನಡೆಯಬೇಕು .
  13. ದೃಷ್ಟಿಯನ್ನು ಒಂದೇ ಕಡೆಗೆ ನಿಲ್ಲಿಸುವುದು ಯೋಗ ಸಾಧನೆಯಿಂದ ಸಾಧ್ಯ .
  14. ಒಳ್ಳೇ ಧೈಯವನ್ನು ಸಾಧಿಸಲು ಸದಾ ಪ್ರಯತ್ನಿಸುತ್ತಿರಬೇಕು .
  15. ಧರ್ಮದಿಂದ ಸದಾಚಾರದಿಂದ ನಡೆಯುವವನೇ ಮಾನವ .
  16. ಸಾಧಕರಾದವರು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು .
  17. ನಿತ್ಯವೂ ಪ್ರಾತಃಕಾಲದಲ್ಲಿ ಆಸನ ಹಾಕಬೇಕು .
  18. ಪ್ರಾಣಾಯಾಮ ಮಾಡಬೇಕು .
  19. ಪರಮಾತ್ಮನನ್ನು ಧ್ಯಾನಿಸಿ ಮಲಗಬೇಕು .
  20. ಬಾಹ್ಯಾದ್ವೈತಕ್ಕೆ ಮನಸ್ಸು ಹಾಕಬಾರದು .
  21. ಗುರುವಚನವನ್ನು ಮೀರಬಾರದು .
  22. ಆಹಾರ – ಶುದ್ಧಿಯೇ ಸತ್ವಶುದ್ಧಿ .
  23. ಜಗದ್ಗುರುತ್ವ ಪಡೆದವರು ಸಮಾಜ – ಸೇವಾಕಾರ್ಯನಿರತರಾಗಬೇಕು .
  24. ಮಠಾಧಿಕಾರಿಗಳ ಆಚಾರ ವಿಚಾರಗಳನ್ನು ಸುಧಾರಿಸುವುದೇ ಶಿವಯೋಗ ಮಂದಿರದ ಮೂಲೋದ್ದೇಶ .
  25. ಶಕ್ತಿ ವಿಶಿಷ್ಟಾದ್ವೈ ತ ಸಿದ್ಧಾಂತವನ್ನು ತುಲನಾತ್ಮಕವಾಗಿ ವಿವೇಚಿಸಿ ಶಿಕ್ಷಣವನ್ನು ನೀಡುವುದು ಶಿವಯೋಗಮಂದಿರದ ಮುಖ್ಯೋದ್ದೇಶ .
  26. ಭಾರತದ ಎಲ್ಲ ವೀರಶೈವಮಠಗಳು ‘ ‘ ಶಿವಯೋಗ ಮಂದಿರ ‘ ‘ ಗಳಾಗಬೇಕು .
  27. ದೇಶ ವಿದೇಶಗಳಲ್ಲಿ ಶಕ್ತಿವಿಶಿಷ್ಟಾದ್ವೈ ತ ಪ್ರಚಾರ ಮಾಡಬೇಕು .
  28. ವಿರಕ್ತರಾದವರು ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರ ತೊರೆಯಬೇಕು .
  29. ಸತ್ಯಕ್ಕಾಗಿ ಮಿತಭಾಷಿಯಾಗಿರಬೇಕು .
  30. ದುರ್ಗುಮ ತುಂಬಿರುವ ಮೌನ ಅಪಾಯಕಾರಿ .
  31. ಗುರು – ವಿರಕ್ತರು ಸಮಾಜಸೇವೆ ಮಾಡಬೇಕು .
  32. ದ್ವಿತೀಯ ಶಂಭು ಬಸವಣ್ಣನ ತತ್ವ ಪ್ರಚಾರ ಮಾಡಬೇಕು
  33. ಸಮಾಜಕ್ಕಾಗಿ ದೇಹ ಸವೆಯಿಸಬೇಕು
  34. ಘಟದಿಂದ ಮಠ ಬೆಳಗಬೇಕಲ್ಲದೆ ಮಠದಿಂದ ಘಟ ಬೆಳಗಬಾರದು .
  35. ಗೋಸಂರಕ್ಷಣೆಯನ್ನು ಮಠಾಧಿಪತಿಗಳು ಮಾಡಬೇಕು .
  36. ವಿಭೂತಿಯ ಮಹಿಮೆಯನ್ನು ತಿಳಿಯಬೇಕು