ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಶ್ರೀ ಡಿ.ಎಸ್ ಕರ್ಕಿಯವರ ಶಿವಯೋಗಮಂದಿರ ಕುಇತು ಬರೆದ ಲೇಖನದ ಸಾಲುಗಳು ಅತ್ಯಂತ ಅರ್ಥಪೂರ್ಣ ಮತ್ತು ಸುಂದರವಾಗಿವೆ
ಇದೋ ಮಂದಿರ ಶಿವಮಂದಿರ
ಶಿವಯೋಗದ ಮಂದಿರ
ಪ್ರಕೃತಿಯ ಪರಮಾನಂದದ
ಸುಧೆ ಸೂಸುವ ಚಂದಿರ
…….
ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.
ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ.
ಕಾವ್ಯ : “ ಬೋಧವ ಕೊಡು ದೇವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-25 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3 ಉದಂತ ಉದಯ, ಉಜ್ವಲಂತ ಉತ್ಕ್ರಮಣ: ಲೇಖಕರು: ಪೂಜ್ಯ ಜ.ಚ.ನಿ
ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
ಪೂಜ್ಯರ ಆಶೀರ್ವಚನ ೧೪-೦೫-೨೦೨೧
ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು”
ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳಿಂದ ಶಾಂತಾಶ್ರಮ ಹುಬ್ಬಳ್ಳಿ.
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಲಿಂಗಾಂಗಯೋಗವನ್ನು ವಿವರಿಸಿ ಆ ಲಿಂಗದ ಆದ್ಯಂತವನ್ನು ಅರುಹುತ್ತಾನೆ. ಗುರುಕರುಣಿಸಿದ ಲಿಂಗವು ಶಿಷ್ಯನ ಚಿತ್ಕಳೆಯೆಂಬುದನ್ನು ತಿಳಿದಿದ್ದೇವೆ. ಚಿತ್ಕಳೆಯೇ ಚುಳುಕಾಗಿ ಕರಕಮಲಕ್ಕೆ ಬಂದ ಇಷ್ಟಲಿಂಗ ಚಿಕ್ಕದಲ್ಲ. ಆಲದ ಬೀಜವು ಅತಿಚಿಕ್ಕದಾಗಿದ್ದರೂ ಅದರಲ್ಲಡಗಿದ ಮರದ ಧರ್ಮ ವ್ಯಾಪಕವಾಗಿದೆ. ಸಣ್ಣ ಬೀಜದಿಂದಲೇ ಬೃಹತ್ತಾದ ಗಿಡವು ಪ್ರಾದುರ್ಭವಿಸುತ್ತದೆ. ಅದರಂತೆ ಈ ಲಿಂಗದೊಡಲೊಳಗೆ ಸ್ವರ್ಗ ಮರ್ತ್ಯ-ಪಾತಾಳವೆಂಬ ಮೂರು ಲೋಕಂಗಳು ಅಡಗಿದ್ದಾವೆ. ಲಿಂಗದಲ್ಲಿ ತ್ರಿಲೋಕಗಳ ವ್ಯಾಪಕತೆಯಿರುವಂತೆ ಮೂರು ಲೋಕಂಗಳಲ್ಲಿ ಲಿಂಗದ ಸಂಚಾರ (ವ್ಯಾಪಕತೆ) ಪಸರಿಸಿದೆ. ಲಿಂಗವಿಲ್ಲದ ಸ್ಥಾನವೇ ಇಲ್ಲ. ಈ ಮಾತನ್ನು ಸರ್ವಜ್ಞನು ಸುಂದರವಾಗಿ ಹಾಡಿದ್ದಾನೆ.
ಲಿಂಗಕ್ಕೆ ಕಡೆಯಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು, ಲಿಂಗವನು
ಹಿಂಗಿದವರುಂಟೆ ಸರ್ವಜ್ಞ
ಲಿಂಗಕ್ಕೆ ಕಡೆ-ಮೊದಲಿಲ್ಲ, ಲಿಂಗವು ಸರ್ವತ್ರ ವ್ಯಾಪಿಸಿದೆ. ಅದುಕಾರಣ ಇದನ್ನು ಸಕಲರೂ ಗೌರವಿಸಲೇಬೇಕಾಗುವದು.
ವೀರಶೈವ ಚಿಂತಾಮಣಿಕಾರರು-
“ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯತೇ ||
ʼʼಲಿಂಗ ಮಧ್ಯದಲ್ಲಿ ಮೂರು ಲೋಕದ ಸಚರಾಚರ ಜಗತ್ತು ಅಡಕವಾಗಿದ್ದು ಆ ಲಿಂಗಕ್ಕಿಂತ ಭಿನ್ನವಾದ ವಸ್ತು ಯಾವುದೂ ಇಲ್ಲ, ಇಂಥ ಲಿಂಗಪೂಜೆ ಅವಶ್ಯ” ವೆಂದು ಪ್ರತಿಪಾದಿಸಿದ್ದಾರೆ.
ಪರಾತ್ಪರವೆನಿಸಿದ ಏಕಮೇವ ವಸ್ತುವಿನ ಸಾಕ್ಷಾತ್ಕಾರದಿಂದ ಸಕಲ ವಸ್ತುಗಳ ಜ್ಞಾನ-ವಿಜ್ಞಾನಗಳು ತಿಳಿಯುವವು. ಅದುವೇ ಬ್ರಹ್ಮ (ಪರಬ್ರಹ್ಮ) ಎಂದು ಉದ್ಧಾಲಕ ಮುನಿಯು ದ್ವಾದಶವರ್ಷ ಅಧ್ಯಯನ ಮಾಡಿ ಮರಳಿದ, ಅಭಿಮಾನಿಯೆನಿಸಿದ. (ಪುತ್ರ) ಶ್ವೇತ ಕೇತುವಿಗೆ ತಿಳಿಯಪಡಿಸಿದಂತೆ ಈ ಲಿಂಗದ ವಿಜ್ಞಾನವನ್ನು ಅವಗತ ಮಾಡಿಕೊಂಡ ಭಕ್ತನು ಯಾವುದರ ಗೊಂದಲಕ್ಕೆ ಅವಕಾಶವೀಯುವುದಿಲ್ಲ. ಆ ಕರದಿಷ್ಟ ಲಿಂಗದಲ್ಲಿಯೇ ಸಕಲ ಸೌಭಾಗ್ಯ ಸನ್ನಿಹಿತವಾಗಿರುತ್ತದೆ.
ಆನು ಕಾಮಿಸುತಿಪ್ಪ ಸಾಲೋಕ್ಯವಿದೆ.
ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.
ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,
ಎನ್ನ ಧ್ಯಾನದ ಜಪ-ತಪದಿಂದಲೇ ಸಿದ್ಧಿಯಪ್ಪ ಮಹಾಸಿದ್ಧಿಯಿದೆ,
ಆನೇನ ಇಚ್ಛೈಸುವ ಎಲ್ಲವೂ ಇದೆ ನೋಡಾ !
ಶ್ರೀಗುರು ಕಾರುಣ್ಯದಿಂದ ಮಹಾವಸ್ತು
ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ !
ಇನ್ನು ಬಯಲಭ್ರಮೆಯೊಳಗೆ ಹೊಗಿಸದಿರಯ್ಯಾ
ನಿಮ್ಮ ಬೇಡಿಕೊಂಬೆನು ನಿಮಗೆ ಎನ್ನಾಣೆ
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ
–
ಚತುರ್ವಿಧ ಮುಕ್ತಿಗಳು ಚತುರ್ವಿಧ ಪುರುಷಾರ್ಥಗಳು, ಶಿವಭಕ್ತರು ಬಯಸುವ ಸಕಲ ಪಡಿಪದಾರ್ಥಗಳು ಸಂಕಲ್ಪಗಳು ಕರದಿಷ್ಟಲಿಂಗದ ಧ್ಯಾನ ತಪಾದಿಗಳಿಂದ ಸುಲಭವಾಗಿ ಸಿದ್ಧಿಸುತ್ತವೆಂದ ಬಳಿಕ ಬಯಲು ಭ್ರಮೆಯಲ್ಲಿ ಮನ ಚಲಿಸದಂತಿರಿಸೆಂದು ಆಣೆಯಿಟ್ಟು ಬೇಡಿದ ಉರಿಲಿಂಗ ಪೆದ್ದಣ್ಣನ ಮಾತು ಮನನೀಯ ವಾಗಿದೆ.
ಓಂಕಾರರೂಪದ ಮಹಾಲಿಂಗವು ಪೂರ್ಣವಾಗಿದೆ. ಅದರಿಂದಾದ ಈ ಜಗವೂ ಪರಿಪೂರ್ಣವೇ ಆಗಿದೆ. ಪೂರ್ಣದಲ್ಲಿ ಪೂರ್ಣವನ್ನು ಬೆರೆತರೆ ಪೂರ್ಣವೇ ತಾನೇ ಉಳಿಯುವಂತೆ ಮಹಾಲಿಂಗ ಹಾಗೂ ಇಷ್ಟಲಿಂಗಕ್ಕೂ ಅಂತರವಿಲ್ಲ, ಆಚಾರಾದಿ ಲಿಂಗಗಳ ಆರಾಧನೆಯಿಂದ ಮಹಾಲಿಂಗದಲ್ಲಿ ಕೂಡಿ ಮಹಾಲಿಂಗವೇ ತಾನಾದ ಶರಣನು ಪೂರ್ಣನೆನಿಸುವನು.
ಜಗತ್ತಿನಲ್ಲಿ ಕಾಣಬರುವ ಲಿಂಗಗಳಿಂದ ಈ ಲಿಂಗ ತತ್ತ್ವದ ವ್ಯಾಪಕತೆ ವೇದ್ಯವಾಗುವದು. ಕಾಶಿಯ ಶ್ರೀಬಾಬು ಶಿವಪ್ರಸಾದರು- “ಪೃಥ್ವಿ ಪ್ರದಕ್ಷಿಣೆ’ ಎಂಬ ಗ್ರಂಥದಲ್ಲಿ – ಮಿಸರದೇಶದಲ್ಲಿ ”ಅಸಿರಿಸ್” ಮತ್ತು ‘ಆಯಿಸಿಸ್” ಎಂಬ ಲಿಂಗವನ್ನೂ, ಗ್ರೀಸ್ ದೇಶದಲ್ಲಿ ಬೆಸಕ್’ ಮತ್ತು ‘ಪಿಯಸಸ್’ ಎಂಬ ಲಿಂಗವನ್ನೂ, ಸ್ಕಾಟಲೆಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣವಿಶಿಷ್ಟ ಲಿಂಗವನ್ನೂ, ಆಸ್ಟ್ರಿಯಾ, ಹಂಗೇರಿಯಲ್ಲಿ ತಂತ್ರಿಸ್ಟಕ ಎಂಬ ಲಿಂಗವನ್ನು, ಅಸೀರಿಯಾ ದೇಶದ ಬಿಲಸನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವನ್ನೂ, ಅರಬಸ್ತಾನದಲ್ಲಿ ‘ಸಗೆ ಅನಬದ್’ ಅಂದರೆ ಮಕ್ಕೇಶ್ವರ ಲಿಂಗ (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕ ಚುಂಬನ ಕೊಡುತ್ತಾರೆ). ವನ್ನೂ, ಇರಾಣದಲ್ಲಿ ಜ್ವಾಲಾಮಯ ಲಿಂಗವನ್ನೂ, ಪೆರುದೇಶದಲ್ಲಿ ‘ಪಾರ್ಥಿವೇಶ್ವರ” ಲಿಂಗವನ್ನೂ, ಅಮೇರಿಕೆಯ ಪೆಂಬ್ರುಕೋ ಪಟ್ಟಣದಲ್ಲಿ “ದ್ವಿಮುಖ” ಲಿಂಗವನ್ನೂ, ಅಮೇರಿಕೆಯ ಟೆನ್ನಿ ಪಟ್ಟಣದಲ್ಲಿ ಘನಲಿಂಗವನ್ನೂ, ಇಂದಿಗೂ ಆ ಭಾಗದ ಜನರು ಪೂಜಿಸುತ್ತಿದ್ದಾರೆ” ಎಂದು ಲಿಂಗಪೂಜೆಯ ವಿಶ್ವವ್ಯಾಪಕತೆಯನ್ನು ವಿವರಿಸಿದ್ದಾರೆ.
ಉತ್ತರ ಪ್ರದೇಶದ ಗೋರಖಪುರದಿಂದ ಪ್ರಕಟವಾಗುವ ‘ಕಲ್ಯಾಣ’ ಮಾಸ ಪತ್ರಿಕೆಯ ‘ಶ್ರೀ ಶಿವಾಂಕ” ವೆಂಬ ವಿಶೇಷಾಂಕವನ್ನು ಸನ್ ೧೯೩೩ ರಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಲಿಂಗತತ್ತ್ವದ ಪುರಾತನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ಅವಲೋಕಿಸಬಹುದು. ಭಾರತೀಯ ಇತಿಹಾಸಕಾರರು ಮತ್ತು ಪುರಾತತ್ತ್ವ ಸಂಶೋಧಕರು ಸಂಗ್ರಹಿಸಿದ ಸಿಂಧೂ ನದಿಯ ಹರಪ್ಪಾ ಮತ್ತು ಮೆಹಂಜೋದಾರದ ಅವಶೇಷಗಳಲ್ಲಿ ಉಪಲಬ್ಧವಾದ ಲಿಂಗಗಳಿಂದ ಲಿಂಗ ಸಂಸ್ಕೃತಿಯ ೪-೫ ಸಾವಿರ ವರುಷ ಪೂರ್ವದ್ದೆಂದು ತಿಳಿದು ಬರುತ್ತದೆ.
ಮೇಲಿನ ಇತಿಹಾಸ ಸ್ಥಾವರ ಲಿಂಗಕ್ಕೆ ಸೀಮಿತವಾದುದು. ಸಿಂಧೂ ಸಂಸ್ಕೃತಿ ಯಲ್ಲಿ ಮಾತ್ರ ಇಷ್ಟಲಿಂಗದ ಅವಶೇಷ ಸಿಕ್ಕುತ್ತದೆ. ಬೃಹತ್ತಾದ, ಹಾಗೂ ಸ್ಥಾವರತ್ವವನ್ನು ಹೊಂದಿದ ಲಿಂಗವನ್ನು ಅಧ್ಯಾತ್ಮಿಕವಾಗಿ ಇಷ್ಟಲಿಂಗವನ್ನಾಗಿ ಅಳವಡಿಸಿಕೊಡುವ ಸದ್ಗುರುವು ಸಾಮಾನ್ಯನಲ್ಲ. ಅಂತರಂಗದ ಅರುಹಿನ ಕುರುಹೆನಿಸಿದ ಕರದಿಷ್ಟ ಲಿಂಗವನ್ನು ಶರೀರದಿಂದ ಅಗಲದಂತಿರಿಸಬೇಕು. ಅಂದರೆ ಸದಾ ಲಿಂಗದೇವನ ಸಹವಾಸದಲ್ಲಿ ಲಿಂಗಗುಣಗಳು ಮೈಗೂಡುತ್ತವೆ.
ಇಷ್ಟ-ಪ್ರಾಣ-ಭಾವಲಿಂಗಗಳನ್ನು ಸತ್ಕ್ರಿಯಾ-ಸುಜ್ಞಾನ ಪೂರ್ವಕ ಸಂಪೂಜಿಸಿ ಸ್ಥೂಲ-ಸೂಕ್ಷ್ಮ-ಕಾರಣವೆಂಬ ಶರೀರತ್ರಯ ರೂಪ ತ್ರಿವಿಧ ಲೋಕದಲ್ಲಿಯೂ ಆ ಲಿಂಗಗಳು ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಅರ್ಥಾತ್, ತ್ರಿವಿಧ ತನುಗಳಿಗೆ ಸಂಬಂಧಿಸಿದ ತ್ರಿವಿಧ ಲಿಂಗಗಳ ಅನುಸಂಧಾನವನ್ನು ಸಾಧಿಸಿ ಲಿಂಗಸ್ವರೂಪನೇ ತಾನಾಗಬೇಕು. ಇದುವೇ ಶ್ರೀಗುರುವಿನ ಕೃಪೆಯ ಸತ್ಪಲವೆನಿಸುವದು.
ಆದಿ ಪೀಠವೆ ಗುರು ಮೇ | ಲಾದ ಪೀಠವೆ ಲಿಂಗ ಅ-
ನಾದಿ ಗೋಮುಖವೆ-ಮೋದ ಜಂಗಮವೆಂದು
ಭೋಧಿಸಿದ ಗುರುವೆ ಕೃಪೆಯಾಗು || ೧೧೨ ॥
ಪರಶಿವನ ಸಾಕ್ಷಾತ್ ಸ್ವರೂಪವೇ ಲಿಂಗವಾಗಿರವುದೆಂಬುದನ್ನು ಅರಿತಾಯಿತು. ಪರಶಿವನು ನಿಷ್ಕಲನು; ನಿರ್ಗುಣನು. ಲಿಂಗದಲ್ಲಿ ಸಕಲ ನಿಷ್ಕಲತೆಯಿದೆ. ಸಗುಣ ನಿರ್ಗುಣತ್ವವಿದೆ. ಶಿವನು ಭಕ್ತೋದ್ಧಾರಕ್ಕಾಗಿ ತ್ರಿವಿಧ ರೂಪವನ್ನು ಧರಿಸಿದ್ದಾನೆ. ಗುರು-ಲಿಂಗ-ಜಂಗಮರೇ ತ್ರಿಮೂರ್ತಿಗಳು. ವೀರಶೈವರಿಗೆ ಇವು ಪರಮ ಪೂಜನೀಯ ವಸ್ತುಗಳು. ಇವರನ್ನು ಬಿಟ್ಟು ಬೇರೆ ಪೂಜ್ಯರಿಲ್ಲ ವೀರಶೈವರಿಗೆ ಅದು ಕಾರಣ ತನ್ನಂಗೈಯಲ್ಲಿ ಕಾಣುವ ಲಿಂಗದಲ್ಲಿಯೂ ಗುರು-ಜಂಗಮರ ಸ್ವರೂಪವು ಸುಪ್ತವಾಗಿರುತ್ತದೆ.
“ಸಚ್ಛಿದಾನಂದಂ ಬ್ರಹ್ಮ’ ” ಸತ್ ಚಿತ್ ಆನಂದವೇ ಬ್ರಹ್ಮವೆಂಬ ಶೃತಿ ವಾಕ್ಯದಂತೆ ಲಿಂಗದ ಆದಿ ಪೀಠವು ಅಂದರೆ ಲಿಂಗದ ಕೆಳಗಿನ ಭಾಗವು ಸತ್ ಸ್ವರೂಪನಾದ ಗುರು ರೂಪವಾಗಿದೆ. ಅರ್ಥಾತ್ ಗುರುವು ಲಿಂಗವನ್ನು ಸೃಷ್ಟಿಸುವವನು. ಗುರು ಲಿಂಗಕ್ಕೆ
ಆಧಾರನಾಗಿದ್ದಾನೆ. (ಲಿಂಗದ) ಮೇಲಿರುವ ಬಾಣವು ಅಥವಾ ಲಿಂಗವು ಚಿತ್ ಸ್ವರೂಪವಾಗಿದೆ. ಅನಾದಿ ಗೋಮುಖವು ಆನಂದದಾಯಕನಾದ ಜಂಗಮ ಸ್ವರೂಪವೆನಿಸಿದೆಯೆಂದು ಗುರುವರನು ಬೋಧಿಸುತ್ತಾನೆ.
ಈ ಕೃತಿಕರ್ತರ ಸಮಕಾಲೀನರೂ, ಶರಣ ಸಹೋದ್ಯೋಗಿಗಳೂ ಚನ್ನ ವೀರೇಶ್ವರ ಯತಿಗಳ ಪರಮ ಶಿಷ್ಯರೂ ಆದ ಬನ್ನಿಮಟ್ಟಿ ಚನ್ನಪ್ಪನವರು ತಮ್ಮ’ಶಿವಾನುಭವ ದೀಪಿಕೆ” ಯಲ್ಲಿ ಇದೇ ಅರ್ಥವನ್ನು,
ಲಿಂಗದಡಿ ಪೀಠ ಶ್ರೀಗುರು |
ಲಿಂಗದ ಮೇಲೂರ್ಧ್ವಪೀಠ ಚಿದ್ಘನಲಿಂಗ ||
ಲಿಂಗದ ಗೋಮುಖ ಜಂಗಮ |
ಲಿಂಗವೆ ಕೂಡಲ ಸಂಗಂ ಬಸವ ಪ್ರಭುವೆ || ೨೮೯ |
ಎಂದು ಪುಷ್ಟಿಕರಿಸುವಂತೆ ಬಣ್ಣಿಸಿರುತ್ತಾರೆ.
ಗುರು-ಜಂಗಮರ ಸಾನಿಧ್ಯವಿಲ್ಲದ ಸಮಯಕ್ಕೆ ಕೇವಲ ಕರದಿಷ್ಟಲಿಂಗವನ್ನು ಪೂಜಿಸಿದರೂ ತ್ರಿವಿಧ ಪೂಜ್ಯರ ಪೂಜೆ ಪೂರೈಸಿದಂತಾಗುವದು. ಈ ತ್ರಿವಿಧ ಪೂಜ್ಯ ವಸ್ತುಗಳು ಅವಿಭಾಜ್ಯ ಅಂಗಗಳು. ಇವು ಒಂದಕ್ಕೊಂದು ಆಶ್ರಯಿಸಿವೆ. ಅದು ಕಾರಣ ಈ ಬೋಧೆಯನ್ನು ಮನದಲ್ಲಿ ಅಳವಡಿಸಿಕೊಂಡು ತ್ರಿವಿಧ ಪೂಜ್ಯ ವಸ್ತುಗಳ ಪೂಜೆ ಮಾಡಿದ ಆನಂದವನ್ನು ಹೊಂದಬೇಕು. ಅಂದರೆ ಮಾತ್ರ ಗುರುಬೋಧೆ ಯಥಾರ್ಥ ವಾಗುವದು
ಅಡಿಯ ಪೀಠವೆ ಇಷ್ಟ | ಮುಡಿಯ ಪೀಠವೆ ಪ್ರಾಣ
ನಡುವಣ ಗೋಮುಖ-ದೃಢ ಭಾವ ಲಿಂಗವೆಂ-
ದೊಡನುಸಿರ್ದ ಗುರುವೆ ಕೃಪೆಯಾಗುII ೧೧೩ II
ಲಿಂಗದ ಅಡಿಯು ಪೀಠವು, (ಕೆಳಭಾಗ) ಇದು ಲಿಂಗಕ್ಕೆ ಪಾದವಾಗಿದೆ. ಲಿಂಗದ ಪಾದವು ಕ್ರಿಯಾಸ್ವರೂಪವು. ಲಿಂಗದ ಮೇಲಿನ ಪೀಠವು ಮುಡಿಯು ಅಂದರೆ ಮಸ್ತಕವು. ಇದು ಜ್ಞಾನದ ಸಂಕೇತವು. ಜ್ಞಾನವು ಮಸ್ತಕದಲ್ಲಿರುವದು ಸರ್ವರಿಗೂ ಅರಿತ ವಿಷಯ. ಜ್ಞಾನ ಕ್ರಿಯೆಗಳ ವ್ಯಾಖ್ಯಾನದಲ್ಲಿ ಪಾದಕ್ಕೆ ಕ್ರಿಯೆಯ ಉಪಮೆಯನ್ನು ಜ್ಞಾನಕ್ಕೆ ಮುಡಿಯ ಮಾತನ್ನು ಮಹಾನುಭಾವಿಗಳು ಮಾರ್ನುಡಿದಿದ್ದಾರೆ. ಕ್ರಿಯೆಗೆ ಜ್ಞಾನವೇ ಪ್ರಾಣವು. ಪ್ರಾಣವಿಲ್ಲದ ಶರೀರ ಶವವಾಗುವಂತೆ; ಜ್ಞಾನಶೂನ್ಯವಾದ ಕ್ರಿಯೆಯು ಜಡವಾಗುತ್ತದೆ. ಕ್ರಿಯಾ-ಜ್ಞಾನಗಳ ಸಮನ್ವಯದಲ್ಲಿ ಭಾವ ಅಥವಾ ಅನುಭಾವ ಅನುಗೂಡುತ್ತದೆ. ಆದ್ದರಿಂದ ಅಡಿಪೀಠ ಇಷ್ಟಲಿಂಗವಾದರೆ ಮುಡಿಪೀಠ ಪ್ರಾಣಲಿಂಗವಾಗುತ್ತದೆ. ನಡುವಿನ ಗೋಮುಖವು ದೃಢತರವಾದ ಭಾವ ಲಿಂಗವಾಗಿ ಪರಿಣಮಿಸುವದು.
ಕ್ರಿಯಾ ಜ್ಞಾನಗಳ ಸಮ-ಸಮುಚ್ಚಯದಲ್ಲಿ ಅನುಭಾವ ಬೆಳೆಯುವದು. ಈ ರೀತಿಯಾಗಿ ಕರದಿಷ್ಟಲಿಂಗದಲ್ಲಿ ಪ್ರಾಣ-ಭಾವಲಿಂಗಗಳು ಸೇರಿ ತ್ರಿವಿಧ ಬಗೆಯಾಗಿದ್ದ ಪರಿಯನ್ನು ಶ್ರೀಗುರುವರನು ಉಸುರುತ್ತಾನೆ. ಕ್ರಿಯಾಜ್ಞಾನಗಳು ಸಂಬಂಧವಾಗಿ ಆಚರಣೆಯಲ್ಲಿ ಅಳವಟ್ಟರೆ ಭಾವಬಲಿಯುವದು. ಭಾವ ದೃಢವಾದರೆ ಆ ಕ್ರಿಯಾಲಿಂಗ (ಇಷ್ಟಲಿಂಗ) ಹಾಗೂ ಜ್ಞಾನ (ಪ್ರಾಣ) ಲಿಂಗಗಳು ಭಾವ ಲಿಂಗದಲ್ಲಿ ಒಂದುಗೂಡುವವು. ಅದು ಕಾರಣವೇ ಶಿವಕವಿಯು ಭಾವಕ್ಕೆ ದೃಢ ಭಾವವೆಂದು ಸ್ಪಷ್ಟಪಡಿಸಿರುವನು. “ಭಾವದಲ್ಲಿ ಬ್ರಹ್ಮ‘ವೆಂಬ ಮಾತನ್ನು ಅನುಭಾವಿಗಳೂಹೇಳಿದ್ದುಂಟು. “ಯಥಾ ಭಾವಸ್ತಥಾ ಸಿದ್ಧಿರ್ಭವತಿ”, ಶುದ್ಧಭಾವದಂತೆ ಸಿದ್ಧಿಯುಸಂಭವಿಸುವದೆಂದು ಜ್ಞಾನಿಗಳೂ ಪ್ರತಿಪಾದಿಸಿರುವರು.
ಮೂಢ ಮನುಷ್ಯನ ಭಾವದಲ್ಲಿ ದೃಢತೆಯಿರುತ್ತದೆ. ಗುರುವಾಕ್ಯದಲ್ಲಿ ಶ್ರದ್ಧೆ- ವಿಶ್ವಾಸಗಳು ಘಟ್ಟಿಗೊಂಡಿರುತ್ತವೆ. ಅಂತೆಯೇ ಮುಗ್ಧ ಭಕ್ತನು ಕಲ್ಲನ್ನೂ ದೇವನನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ವಿಪುಲವಾಗಿವೆ. ಹಾಲುಮತದ ಗೊಲ್ಲಾಳನು ಕುರಿಯ ಹಿಕ್ಕಿಯಲ್ಲಿ ಶಿವಲಿಂಗವನ್ನು ಕಂಡನು. ಬೇಡರ ಕಣ್ಣಪ್ಪನ ದೃಢ ಭಾವಕ್ಕೆ ಶಿವನು ದೃಢತರ ಪದವಿಯನ್ನಿತ್ತನು. ಅರವತ್ತುಮೂರು ಪುರಾತನರ ಚರಿತ್ರೆಗಳಲ್ಲಿ ಭಾವದೃಢತೆಯೂ ಮತ್ತು ಆತ್ಮಸಮರ್ಪಣೆಯೂ ಪ್ರಮುಖವಾಗಿದೆ. ಭಾವಜೀವಿಯು ಆನಂದಮಯನಾಗಿರುತ್ತಾನೆ. ವಿಮರ್ಶಕನ ಭಾವದಲ್ಲಿ ದೃಢತೆಯಿರುವದಿಲ್ಲ. ಅವನಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಚಿಕಿತ್ಸಕ ಬುದ್ಧಿ-ಭಾವಗಳು ನೆಲಸಿರುತ್ತವೆ.
ಶರಣರು ಕೇವಲ ಭಾವ ಜೀವಿಗಳಲ್ಲ, ಕೇವಲ ಜ್ಞಾನಿಗಳಲ್ಲ. ಕರ್ಮಠರೂ ಅವರಲ್ಲ, ಅವರು ಕ್ರಿಯಾ-ಜ್ಞಾನಗಳ ಸಮ್ಮಿಲನದಲ್ಲಿ ಸಮರಸಾನಂದದ ಸವಿಯುಂಡರು ಸಂತಸಪಟ್ಟರು. ಇದುವೇ ಲಿಂಗಾನುಸಂಧಾನದ ಅರಿವು, ಅನುಭಾವದ ಕುರುಹು.
ಇಂಥ ಕ್ರಿಯಾ-ಜ್ಞಾನ-ಭಾವಗಳ ಮುಪ್ಪುರಿಯೇ ಈ ದೃಷ್ಟಿಲಿಂಗವೆಂದು ಬೋಧಿಸಿದ ಸದ್ಗುರುವೆ ! ಅದರಂತಜ್ಞಾನಸವಿಯನ್ನು ಸವಿಯುವ ಸೌಭಾಗ್ಯವನ್ನು ಸಮನಿಸು.
ಮೊದಲ ಪೀಠವೆ ಸ್ವಯ | ತುದಿಯ ಪೀಠವೆ ಚರ ಮ-
ಧ್ಯದ ಗೋಮುಖ ಪರತತ್ತ್ವ ಜಂಗಮವು ಎಂ
ಬುದ ಪೇಳ್ದ ಗುರುವೆ ಕೃಪೆಯಾಗು ||೧೧೪ ||
ಲಿಂಗವು ಇಷ್ಟ-ಪ್ರಾಣ-ಭಾವವೆಂದು ತ್ರಿವಿಧವಾಗಿರುವಂತೆ ಲಿಂಗದ ಹರಣ ವಾದ ಜಂಗಮವೂ ಮೂಬಗೆಯಾಗಿದೆ. ಜಂಗಮದಲ್ಲಿ ಸ್ವಯಜಂಗಮನೆಂತಲೂ ಚರಜಂಗಮನೆಂತಲೂ, ಪರಜಂಗಮನೆಂತಲೂ, ಮೂರು ವಿಧ. ಈ ಮೂವರ ಸ್ವಸ್ವರೂಪ ಲಕ್ಷಣವನ್ನು ಶಿವಕವಿಯು ಮುಂದೆ ಜಂಗಮತತ್ತ್ವವನ್ನು ಪ್ರತಿಪಾದಿಸುವ ಅವಸರದಲ್ಲಿ ವರ್ಣಿಸಿದ್ದಾನೆ. ಲಿಂಗಪೂಜೆಯ ಫಲ ಜಂಗಮನ ಸಾಕ್ಷಾತ್ಕಾರ; ಹಾಗೂ ಪಾದೋದಕ-ಪ್ರಸಾದಗಳು.
ಸಾಮಾನ್ಯವಾಗಿ ಯಾವುದೊಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ಅರಿಯುವಾಗ ಆದ್ಯಂತಗಳನ್ನು ಅವಲೋಕಿಸುತ್ತೇವೆ. ಕೆಳಗೆ ಮತ್ತು ಮೇಲೆ ನೋಡುತ್ತೇವೆ. ಅದರೊಳಗಿನ ಗುಣವನ್ನು ಪರೀಕ್ಷಿಸಬೇಕಾಗುವದು. ಕಾರಣ ಪೃಥ್ವಿಯಲ್ಲಿ ಸ್ಥೂಲವಾಗಿ ವ್ಯಾಪಿಸಿರುವದನ್ನು ನೋಡುತ್ತೇವೆ. ಆ ಮೇಲೆ ಅದು ಏನೆಂಬುದನ್ನು ವಿಚಾರಿಸಲು ಮೇಲೆ ನೋಡುತ್ತೇವೆ. ಉದಾಹರಣೆಗಾಗಿ ಒಂದು ವನವನ್ನು ಪ್ರವೇಶಿಸುತ್ತ ಗಿಡಗಳ ಬೊಡ್ಡೆಗಳನ್ನು ಕಾಣುತ್ತೇವೆ. ಇದು ಯಾವ ಮರವೆಂಬ ವಿಚಾರ ಸುಳಿಯುತ್ತಲೇ ಮೇಲೆ ಅವಲೋಕಿಸಿ ಅರ್ಥೈಸಿಕೊಳ್ಳುತ್ತೇವೆ. ಇನ್ನು ಮಧ್ಯಭಾಗವು ಎರಡನ್ನು ಸಮನ್ವಯಗೊಳಿಸುವದು. ಹಾಗೆ, ಲಿಂಗದಲ್ಲಿ ಮೊದಲ ಪೀಠವು ಸ್ಥಾಯಿಯಾಗಿ (ಮೇಲಿನ ಬಾಣಕ್ಕೆ ಆಧಾರವಾಗಿ) ರುವದರಿಂದ ಅದು ಸ್ವಯ ಜಂಗಮವೆನಿಸುವದು. ಲಿಂಗಭಕ್ತನು ಲಿಂಗಪೂಜೆಯಲ್ಲಿ ತನ್ನ ದೃಷ್ಟಿ ಮನಗಳನ್ನು ಲಿಂಗದ ತುದಿಯ ಮೇಲಿರಿಸುವದರಿಂದ ಅದು ಚರಜಂಗಮವೆನಿಸುವದು. ಯಾಕಂದರೆ ಲಿಂಗದಲ್ಲಿ ದೃಷ್ಟಿ-ಮನಗಳು ಸಂಚಲನೆಗೊಳ್ಳುತ್ತಿರುವದರಿಂದ ಅದು ಚರಜಂಗಮವಾಗಿದೆ. ಮೊದಲ ಭಾಗ ಹಾಗೂ ತುದಿಗಳ ಅವಲೋಕನಯಲ್ಲಿ ಮಧ್ಯದ ಗೋಮುಖವು. ಮೇಲಿನವೆರಡೂ ಕ್ರಿಯೆಗಳಿಗೆ ಸಮನ್ವಯಗೊಂಡು ಪರವಾಗಿರುವುದರಿಂದ ಅದು ಪರಜಂಗಮವೆನಿಸುವದು. ಪರಜಂಗಮನು ಸ್ವಯ ಚರಜಂಗಮತ್ವದ ಕ್ರಿಯೆಗಳನ್ನು ಆಚರಿಸಿ ಮುಕ್ತನೆನಿಸುವನು. ತನ್ನ ಲಿಂಗಾನಂದದಲ್ಲಿಯೇ ತಲ್ಲೀನನಾಗಿರುವನು. ಅದು ಕಾರಣ ಪರತರವಾದ ಈ ಇಷ್ಟಲಿಂಗದಲ್ಲಿ ಲಿಂಗದ ಪ್ರಾಣವೆನಿಸಿದ ಜಂಗಮವು ಸ್ವಯ-ಚರ-ಪರವೆಂದು ಮೂಬಗೆಯಾಗಿ ಅಡಕವಾಗಿದೆಯೆಂಬ ತತ್ತ್ವವನ್ನು ಗುರುನಾಥನು ತಿಳಿಸಿಕೊಡುತ್ತಾನೆ.
ಗುರು-ಲಿಂಗ-ಜಂಗಮವು | ವರಭಾವ ಪ್ರಾಣೇಷ್ಟ
ಸ್ಥಿರ-ಚರ-ಪರ ಮೂರು-ಕರದಿಷ್ಟಲಿಂಗವೆಂ
ದೊರೆದ ಶ್ರೀಗುರುವೆ ಕೃಪೆಯಾಗು ||೧೧೫ ||
ಬಸವಲಿಂಗ ಶರಣರು ಶ್ರೇಷ್ಠದಾರ್ಶನಿಕರು, ಹಾಗೂ ಅನುಭಾವಿ ಕವಿಗಳು. ಅಂತೆಯೇ ಶಿವಾನುಭವವನ್ನು ತಿಳಿಯಲಿಚ್ಛಿಸುವ ಜಿಜ್ಞಾಸುವಿಗೆ ಪ್ರತಿಯೊಂದು ವಿಷಯವನ್ನು ಹಿಂಜಿ-ಹಿಂಜುವ ಜೊತೆಗೆ ಸಿಂಹಾವಲೋಕನವನ್ನು ಆಗಾಗ್ಗೆ ಮಾಡಿಸುತ್ತಾರೆ. ವನರಾಜನಾದ ಸಿಂಹವು ತಾನು ನಿಂತಲ್ಲಿಂದಲೇ ಹಿಂದಿನದನ್ನು ಮುಂದಿನದನ್ನೂ ಅವಲೋಕಿಸುತ್ತದೆ. ಧೀರನಾದವನು ಹಿಂದೆ ಅನುಭವಿಸಿದ ಅನುಭವವನ್ನು ಮೆಲುಕು ಹಾಕುತ್ತ ಮುಂದೆ ಸಾಧಿಸಬೇಕಾದುದನ್ನು ಆಲೋಚಿ ಸುತ್ತಾನೆ. ಹಿಂದಿನ ಅನುಭವವನ್ನು ಸಿಂಹಾವಲೋಕನಗೈಯುತ್ತಾನೆ. ಮೇಲಿನ ಕ್ಲಾಸಿಗೆ ಮುಂದು ವರೆಯುವ ವಿದ್ಯಾರ್ಥಿಯು ಹಿಂದಿನ ಅಭ್ಯಾಸವನ್ನು ಅವಲೋಕಿಸುತ್ತಿರ ಬೇಕು. ಬುನಾದಿ ಭದ್ರವಾಗಿದ್ದರೆ ಭವನವು ಭದ್ರವಾಗುವದು. ಕಾರಣ ಸಾಧಕನು ಮುಂದುವರಿಯಲು ಹಿಂದಿನ ಸತ್ಕ್ರಿಯೆಗಳನ್ನು ಬಿಡದಂತೆ ಆಚರಿಸುತ್ತಿರಬೇಕು. ಮತ್ತು ಪೂರ್ವದ ಶಾಸ್ತ್ರ ಶ್ರವಣವನ್ನು (ಹಿಂದಿನ ಪ್ರಕ್ರಿಯೆಯನ್ನು ಮನದಲ್ಲಿಟ್ಟುಕೊಂಡರೆ ಮುಂದಣ ಅನುಭವವು ಗಮ್ಯವಾಗುವದು.
ಶಿವಕವಿಯು ಆಗಾಗ್ಗೆ ಹಿಂದೆ ಹೇಳಿದ ವಿಷಯವನ್ನು ಅಲ್ಲಲ್ಲಿ ಸಮಾಹಾರ ಮಾಡುತ್ತಾನೆ. ಲಿಂಗದಲ್ಲಿ ಗುರು-ಲಿಂಗ-ಜಂಗಮವೆಂಬ ತ್ರಿವಿಧ ಪೂಜ್ಯವಸ್ತುಗಳು ವ್ಯಾಪಿಸಿರುವಂತೆ ಭಾವಲಿಂಗ-ಪ್ರಾಣಲಿಂಗ ಇಷ್ಟಲಿಂಗಗಳು ಒಂದಕ್ಕೊಂದು ಹೊಂದಿಕೊಂಡಿವೆ. ಜೊತೆಗೆ ಲಿಂಗದ ಚಿತ್ಕಳೆಯೆನಿಸಿದ ಸ್ವಯಜಂಗಮ, ಚರಜಂಗಮ, ಪರಜಂಗಮದ ಭಾವ ಭರಿತವಾಗಿದೆ.
ಬ್ರಹ್ಮಾಂಡಗಳ ಮಹಾಲಿಂಗದಲ್ಲಿ ಹುದುಗಿಕೊಂಡಿದ್ದ ಶಕ್ತಿ ಚಿತ್ಕಳಾರೂಪ ಕರದಿಷ್ಟ ಲಿಂಗದಲ್ಲಿ ಅಡಗಿದೆ. ಲಿಂಗದೊಳಗೆ ಎಲ್ಲವೂ ಅಡಗಿದ್ದು ಸಕಲರಲ್ಲಿ ಲಿಂಗದ ವ್ಯಾಪಕತೆಯಿರುವಂತೆ, ಇಷ್ಟಲಿಂಗದಲ್ಲಿ ಶಿಷ್ಯನ ಸಕಲ ಚೈತನ್ಯವು ಹುದುಗಿಕೊಂಡು ಶಿಷ್ಯನಲ್ಲಿ ಪರಿಪೂರ್ಣವಾಗಿ ಲಿಂಗದ ಚೇತನ ಪಸರಿಸಿಕೊಂಡಿರುತ್ತದೆ. ಇಂಥ ಲಿಂಗದಲ್ಲಿ ಪೂಜ್ಯ ವಸ್ತುಗಳ ಸಮಾವೇಶ ಸಮನಿಸಿದೆ. ಯಾಕೆಂದರೆ ಪರಾತ್ಪರ ಪರವಸ್ತುವೇ ಸಕಲನೆನಿಸಿ ಗುರುವಾಗಿ ಲಿಂಗವನ್ನೀಯುತ್ತಾನೆ. ಅರುಹಿನ ಕುರುಹಾಗಿ ಚಿಚ್ಚೈತನ್ಯವೆನಿಸಿದ ಲಿಂಗವು ಪೂಜೆಗೊಳ್ಳುತ್ತದೆ. ಲಿಂಗಕ್ಕೇನೆ ಚೇತನವೆನಿಸಿದ ಜಂಗಮನ ಕೃಪೆಯೂ ಅತ್ಯವಶ್ಯ. ಆದುದರಿಂದ ಲಿಂಗದಲ್ಲಿ ತ್ರಿವಿಧ ವಸ್ತುಗಳ ಅಭಿನ್ನತೆಯಿದೆ. ಲಿಂಗಭಕ್ತನು ಈ ತ್ರಿವಿಧ ಪೂಜ್ಯರನ್ನು ಭಿನ್ನವಾಗಿ ಕಾಣಬಾರದು. ಅದರಲ್ಲೂ ಲಿಂಗದ ಚೈತನ್ಯನೆನಿಸಿದ ಜಂಗಮನ ತ್ರಿವಿಧ ರೂಪಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಇಂಥ ಅಪ್ರತಿಮ ಸ್ವರೂಪದ ಲಿಂಗವು ಅಸದೃಶವಾದುದು. ಅನುಪಮವಾದುದು.
ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ
ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು
ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು
ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.
ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.
ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!
ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.
ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.
ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.
ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.
ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು. ಸಮಾಜಸೂರ್ಯೋದಯವಾಯಿತು.
ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು
ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.
ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !
ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!
ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?
ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.
ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?
ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.
ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.
ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.
ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.
ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು. ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.
ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.
‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು
ಇನ್ನೊಬ್ಬರ ಅನುಕರಣೆ ಮಾತ್ರ.
ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.
ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು. ಅವು ದೇವರಿಗೆ ಒಪ್ಪಿತವಾದ ನೇಮಗಳು.
ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ
ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.
ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
ಪ್ರತೀ ಜೀವಿಗೆ ಆಧಾರ ಭಗವಂತನಿಂದ ನಿರ್ಮಾಣವಾದ ಈ ಭೂಮಂಡಲ.ಇದು ಪಂಚಭೂತಗಳಿಂದ ಆವೃತವಾದದ್ದು.ಇಲ್ಲಿ ಜೀವಿಸುವ ಪ್ರತಿ ಜೀವಿಗೂ ಸುಖ – ದುಃಖ, ಆಸೆ – ನಿರಾಸೆ,ನೋವು – ನಲಿವು ಹೀಗೆ ಎಲ್ಲ ಅನುಭವಗಳು ಸಾಮಾನ್ಯವೇ.ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ತಮ್ಮ ಕುಂದು ಕೊರತೆಗಳನ್ನು,ಕಷ್ಟ ಸುಖಗಳನ್ನು ತಮ್ಮಷ್ಟಕ್ಕೆ ತಾವೇ ನಿಭಾಯಿಸಿಕೊಳ್ಳುತ್ತವೆ. ಸಮತೋಲನದಲ್ಲಿ ಬದುಕು ನಡೆಸುತ್ತವೆ.ಆದರೆ ಮಾನವ ಮಾತ್ರ ಇವುಗಳಿಗಿಂತ ಭಿನ್ನ.ಇವನು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವವ. ಅತೃಪ್ತ,ಸ್ವಾರ್ಥ ಪರತೆಯನ್ನು ತುಂಬಿಕೊಂಡು ನಡೆವವ.ಇವನಿಗೆ ಸುಖ – ದುಃಖ,ನೋವು – ನಲಿವು ,ಲಾಭ – ನಷ್ಟ ಬಂದೊದಗಿದಾಗ ಒಂದೊಂದು ತರಹದ ಮನೋಸ್ಥಿತಿ ಇವನು ಎದುರಿಸುತ್ತಾನೆ.ಇವನು ಭೂಮಿಗೆ ಬಂದ ಕಾರಣ,ಧೇಯೋದ್ದೇಶ,ಕಾರ್ಯ ಕಲ್ಪ ಎಲ್ಲವನ್ನೂ ಬದಿಗೊತ್ತಿ ಲೋಕದ ಮಾಯಾವಶನಾಗಿ ಭವದ ಚಕ್ರದಲ್ಲಿ ಬಿದ್ದು ಭಿನ್ನ ಭಿನ್ನ ರೀತಿಯ ಗುಣಗಳನ್ನು ಹೊಂದಿ ದುಃಖಿಯಾಗಿ ಕೊನೆಗೆ ತನ್ನ ಕೈಲಾಗದಿದ್ದ ಪಕ್ಷದಲ್ಲಿ ಭಗವಂತ ,ಆತ್ಮ ,ಪರಮಾತ್ಮ ಎಂಬುದರ ಕಡೆಗೆ ಚಿತ್ತೈಸುವ. ಈ ಲೋಕದ ವ್ಯವಸ್ಥೆಗೆ ಅಂಟಿಕೊಂಡು ಬದಲಾದ ಮನುಷ್ಯ ಮತ್ತೆ ಆ ಪರಮ ಸ್ವರೂಪ ಪಡೆಯಬೇಕಾದರೆ ಅದಕ್ಕೆ ಮೂಲ ಬೇರು ಈ ಅಂತರಾತ್ಮ ನ ಅರಿವನ್ನು ತಿಳಿಸುವ ಅಧ್ಯಾತ್ಮ. ಇದು ಅವನ ಪಾಪಯುಕ್ತ ದೇಹ,ಮನಸು ಬುದ್ಧಿಯನ್ನು ಪುಣ್ಯಯುಕ್ತವನ್ನಾಗಿ ಮಾಡಿ ಮುಕ್ತನನ್ನಾಗಿ ಮಾಡುತ್ತದೆ.ಆ ಅಧ್ಯಾತ್ಮವನ್ನು ಅರಿಯಲು ಅವನಿಗೆ ಕೆಲವೊಂದಿಷ್ಟು ಮಾರ್ಗಗಳು ಅವಶ್ಯ.ಅವುಗಳಲ್ಲಿ ನೂರಾರು ಮಾರ್ಗಗಳು ಉಂಟು.ಆ ನೂರಾರು ಮಾರ್ಗಗಳಲ್ಲಿ ಅತ್ಯಂತ ಸುಲಭ ಸೂಕ್ಷ್ಮ ಶಿಸ್ತಿನ ವಿದ್ಯೆಯೇ ಈ “ಧ್ಯಾನ ಮತ್ತು ಅನುಷ್ಠಾನ.”
ಧ್ಯಾನ ಮತ್ತು ಅನುಷ್ಠಾನ ಎಂದರೇನು ಅವುಗಳ ಕ್ರಮಗಳೇನು ಹೇಗೆ ಆಚರಿಸಬೇಕು ಎನ್ನುವ ಪರಿಯನ್ನು ಈ ಕೆಳಕಂಡಂತೆ ಅವಲೋಕಿಸೋಣ.
ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.
ಧ್ಯಾನ ಎಂದರೇನು?
ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.
*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.
*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.
*ಧ್ಯಾನ ಎಂದರೆ ತಲ್ಲೀನತೆ.
*ಅದು ಒಂದು ವಸ್ತುವನ್ನು ಕೇಂದ್ರವಾಗಿ ಇಟ್ಟುಕೊಂಡು ನಮ್ಮನ್ನು ಅದರೊಂದಿಗೆ ಅಳವಡಿಸಿಕೊಳ್ಳುವುದು.
ಧ್ಯಾನದಲ್ಲಿ ಎರಡು ಪ್ರಕಾರ
1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.
2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.
ಕಮಲ
ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.
ಧ್ಯಾನಕ್ಕೆ ಸಿದ್ಧತೆ
ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.
ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.
ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.
ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.
ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.
ಎಚ್ಚರಿಕೆ
*ಮನಸ್ಸು ಚಂಚಲ,ಉದ್ವೇಗ,ಚಿಂತೆ ಇವುಗಳಿಂದ ಆವೃತವಾದ ಸಮಯದಲ್ಲಿ ಮಾಡಬಾರದು.ಕೆಲವು ನಿಮಿಷ ದೀರ್ಘ ಉಸಿರಾಟ ಮಾಡಿ ಮುಂದುವರೆಯ ಬೇಕು.
* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.
* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.
ಪ್ರಯೋಜನಗಳು
* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.
* ದೇಹ, ಮನಸ್ಸಿನ ದ್ವಂದ್ವ ದೂರ.
* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.
* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.
* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.
* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.
* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.
* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.
* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.
* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.
* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.
* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.
* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.
*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.
ಅನುಷ್ಠಾನ.
ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸುವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ನಮ್ಮ ಒಳ ಅರಿವನ್ನು ಹೊರತೆಗೆಯಲು, ಪರಿಶುದ್ಧ ಪರಿಪಕ್ವ ಸ್ಥಿತಿಯನ್ನು ತಲುಪಲು,ಆತ್ಮಾನಂದವನ್ನು ಆನಂದಿಸಲು ಇರುವ ಏಕೈಕ ಮಾರ್ಗ ಎಂದರೆ ಅನುಷ್ಠಾನ.
*ನಮ್ಮ ಸಂಕಲ್ಪವನ್ನು ಈಡೇರಿಸಲು ಅಂದರೆ ಜಾರಿಗೆ ತರಲು ಇರುವ ಸೋಪಾನವೆ ಈ ಅನುಷ್ಠಾನ.
*ಯೋಗ ಸಾಧನೆಯಿಂದ ಯಾವ ಯಾವ ಸಾಧನೆಯನ್ನೂ ಸಿದ್ಧಿಯನ್ನು ಪಡೆಯಲಿಕ್ಕೆ ಸಾಧ್ಯವೋ ಅದನ್ನೆಲ್ಲ ಶಿವಯೋಗ ಆಚರಣೆಯ ಅನುಷ್ಠಾನದಿಂದ ಪಡೆಯಲು ಸಾಧ್ಯ.
*ಹೆಸರೇ ಹೇಳುವಂತೆ ಅನುಷ್ಠಾನ ಎಂದರೆ ಇದು ಕೇವಲ ಮೌಖಿಕವಾಗಿ ನುಡಿಯುವ ನುಡಿ ಅಲ್ಲ ಇದು ದೇಹ ಹಾಗೂ ಆತ್ಮ ವಿಜ್ಞಾನದ ಕ್ರಿಯೆಯಾಗಿದೆ.
*ನಿಗ್ರಹಾನುಗ್ರಹ ಶಕ್ತಿ ಪ್ರಾಪ್ತವಾಗಿ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಳು ಅನುಷ್ಠಾನ ಅವಶ್ಯಕ.
*ಅನುಷ್ಠಾನ ಮಾಡಿದ ಮಹನೀಯನಿಗೆ ಪಂಚ ಪರುಷ ಸಿದ್ಧಿಗಳು(ವಾಕ್,ದೃಷ್ಠಿ,ಹಸ್ತ,ಮನೋ,ಭಾವ) ಅವರ ವಶವಾಗಿ
ಅವರ ಬೌದ್ಧಿಕ,ಶಾರೀರಿಕ,ಮಾನಸಿಕ ಚಟುವಟಿಕೆಗಳೆಲ್ಲವೂ ಲೋಕೊದ್ಧಾರಕ್ಕಾಗಿ ಕಾರಣವಾಗುವವು.
*ಸಾಮಾನ್ಯರಂತೆ ಈ ಭೂಮಿಯಲ್ಲಿ ಜನಿಸಿದರೂ ಸಹ ಅನುಷ್ಠಾನ ಮಾತ್ರದಿಂದ ಅವರ ಅಂಗ ಗುಣಗಳೆಲ್ಲ ಶಿವಗುಣಗಳಾಗಿ ಅರಳಿ ನಿತ್ಯ ನಿರಂತರ
ಸುಗಂಧವನ್ನು ಬೀರುತ್ತಲೇ ಇರುತ್ತದೆ.
*ಅನುಷ್ಠಾನ ಎಂದರೆ ಏನೋ ಸಾಮಾನ್ಯ ಇಲ್ಲವೇ ವಿಶೇಷ ಪೂಜಾ ವಿಧಿ ಎಂದು ಯಾರೂ ಭಾವಿಸಬಾರದು.ಅನುಷ್ಠಾನ ಕಾಲದಲ್ಲಿ ಅಣು ಯುದ್ದ,ಪರಮಾಣು ಯುದ್ಧದಂತಹ ಪ್ರಸಂಗಗಳು ದೇಹದಲ್ಲಿ ಎದುರಿಸಬೇಕಾಗುತ್ತದೆ.ಸೃಷ್ಠಿಯ ಅಸುರೀ ಶಕ್ತಿಗಳನ್ನು ದಮನಮಾಡಿ ವಿಜಯ ಸಂಪಾದಿಸಬೇಕು. ಹೋರಾಟಕ್ಕಿಳಿದಾಗ ಘೋರರೂಪದಲ್ಲಿ ಮೇಲೇರಗುತ್ತವೆ ಅವುಗಳ ನಿಗ್ರಹ ಅಧ್ಯಾತ್ಮಿಕವಾಗಿ ಶಕ್ತಿಶಾಲಿಯಾದ ತಪಸ್ಸಿಗೆ ಮಾತ್ರ ಸಾಧ್ಯ. ಈ ಅನುಷ್ಠಾನ ಭೂಮಿಯು ದೇಹ ಮನಸ್ಸು ಹಾಗೂ ದಶೆಂದ್ರಿಯಗಳು,ಪಂಚ ತನ್ಮಾತ್ರಯಗಳು,ಪಂಚಭೂತಗಳು,ಮತ್ತು ಅಂತಃಕರಣ ಚತುಷ್ಟಯಗಳ ನಡುವಿನ ಮಹಾಯುದ್ಧದ ರಣರಂಗವಾಗಿದೆ.ಅದಕ್ಕಾಗಿಯೇ ಇದನ್ನು ಪಡೆಯಲು ಯೋಗ್ಯ ಗುರುವಿನ ಮಾರ್ಗದರ್ಶನ ಅವಶ್ಯಕ.
ಅನುಷ್ಠಾನ ವಿಧಗಳು.
ಇದರಲ್ಲಿ 3 ವಿಧಗಳು
1.ಸಾತ್ವಿಕ ಅನುಷ್ಠಾನ.
2.ರಾಜಸಿಕ ಅನುಷ್ಠಾನ.
3 ತಾಮಸಿಕ ಅನುಷ್ಠಾನ.
ಸಾತ್ವಿಕ ಅನುಷ್ಠಾನ:- ಇದು ಅಂತರಂಗದ ಅರಿವಿನ ಖನಿಯಾದ ಆತ್ಮವನ್ನು ಶಿವಯೋಗ ಮಾರ್ಗದ ಮೂಲಕ ಅಂದರೆ ಮೊದಮೊದಲು ಸ್ಥೂಲ ತನುವಿನೊಡಗೂಡಿ ಸ್ಥೂಲ ಗ್ರಾಹಿಯಾದ ಗುರು ಕೊಟ್ಟ ಇಷ್ಟಲಿಂಗದ ನಿರಿಕ್ಷಣೆಯ ಮೂಲಕ ಬಾಹ್ಯ ಇಂದ್ರಿಯಗಳ ಒಳಸೆಳೆತವನ್ನು ಮಾಡುತ್ತಾ ಸೂಕ್ಷ್ಮ ಶರೀರದ ಪ್ರಾಣಲಿಂಗವನ್ನು ಕಂಡುಕೊಳ್ಳುವುದು.ಇದು ಮನೋಗ್ರಾಹಿ.ಇಲ್ಲಿ ಮನೋನಿಗ್ರಹ ವೆ ಇದಕ್ಕೆ ತಾಯಿ ಬೇರು.ನಂತರ ಭಾವಲಿಂಗವನ್ನು ಅದರ ಅರಿವನ್ನು ಭಾವಗಾನುವುದು.ಇಲ್ಲಿ ಅಭ್ಯಂತರ ಸಾಧನೆಯ ಮೂಲಕ ಭಾವಗ್ರಾಹಿ ಆತ್ಮವನ್ನು ಕಾಣುವ ಸ್ಥಿತಿ. ಇದಕ್ಕೆ ಮೂಲ ಮಾರ್ಗವೇ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಮಾರ್ಗ.
ಇಲ್ಲಿ ಆತ್ಮನನ್ನು ಪ್ರಾಧಾನ್ಯವಾಗಿಟ್ಟುಕೊಂಡು ಮುನ್ನಡೆವ ಸಾಧಕನು ದೇಹದ ಸುಖ ದುಃಖಕ್ಕೆ ಬೆಲೆ ಕೊಡದೆ ಇರುತ್ತಾನೆ.ಹಾಗಾಗಿ ಸಾತ್ವಿಕ ಆಹಾರ ಸೇವನೆ,ಸಾತ್ವಿಕ ನಡೆ,ಸಾತ್ವಿಕ ನುಡಿ,ಸಾತ್ವಿಕ ವಾತಾವರಣ,ಸಾತ್ವಿಕ ವಿಚಾರಗಳು ಇದಕ್ಕೆ ಸಹಕಾರಿ.
ಇದನ್ನು ಬಸವಾದಿ ಪ್ರಮಥ ಶಿವಶರಣರು,ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಲಕಲ್ ವಿಜಯ ಮಹಾಂತ ಶಿವಯೋಗಿಗಳು,ಹಾನಗಲ್ಲ ಕುಮಾರ ಮಹಾ ಸ್ವಾಮಿಗಳು,ಹಾವೇರಿ ಶಿವಬಸವ ಮಹಾ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಶಿವಯೋಗಿಗಳು, ಒಳಬಳ್ಳಾರಿಯ ಚನ್ನಬಸವ ತಾತನವರು ಇನ್ನೂ ಹಲವಾರು ಶಿವಯೋಗಿಗಳು ಮಾಡಿದ್ದಾರೆ.
ರಾಜಸಿಕ ಅನುಷ್ಠಾನ:- ಇದು ಒಂದು ಲೌಕಿಕ ಅನುಷ್ಠಾನ ವೆ ಸರಿ.ಲೋಕಾನುಭವ ಇರುವ ವ್ಯಕ್ತಿ ಲೌಕಿಕ ವಸ್ತುವನ್ನು (ತನ್ನ ಹೊಲ, ಮನೆ, ಆಸ್ತಿ,ಪಾಸ್ತಿಗಳನ್ನು ಪಡೆಯಲು ತನ್ನ ಪ್ರತಿಷ್ಠೆಗಳು ,ಬಯಕೆಗಳನ್ನು ಪೂರೈಸಲು ಸಾಮಾನ್ಯವಾಗಿ ದೇವರಿಗೆ ಮೊರೆಹೋಗುತ್ತಾರೆ.ತಾತ್ಕಾಲಿಕ ಭಕ್ತಿ ಇಂದ ಮಾಡುವ ದೇವರ ಪ್ರಾರ್ಥನೆ ಇದು.ಇದು ಲೋಕಾಸಕ್ತ ಎಲ್ಲ ಜನರು ಮಾಡುತ್ತಾರೆ.
ತಾಮಸ ಅನುಷ್ಠಾನ:- ಇದು ಕಾಮಾದಿ ಅರಿಷಡ್ ವೈರಿಗಳನ್ನು ಜಾಗೃತಗೊಳಿಸಿ ದುಷ್ಟಶಕ್ತಿಗಳನ್ನು ವಶಮಾಡಿಕೊಂದು ತನ್ನ ಮನೋವಾಂಚೆಯನ್ನು, ಪ್ರಲೋಭನೆಗಳನ್ನು ಪೂರೈಸುವ ಅನುಷ್ಠಾನವಾಗಿದೆ. ಇದು ವಾಮಾಚಾರ ಬಾನಾಮತಿ ಇತ್ಯಾದಿ ವಿಧಿಗಳು ಇದರಲ್ಲಿವೆ.ಇದನ್ನು ವಾಮಮಾರ್ಗದ ಅಮಾನುಷ ಶಕ್ತಿ ಪಡೆಯಲು ಬಯಸುವವರು ಮಾಡುತ್ತಾರೆ.
ಉಪಸಂಹಾರ:-
ಹೀಗೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ ಆಗುವವು ಈ ಧ್ಯಾನ ಮತ್ತು ಅನುಷ್ಠಾನ.ಅವರವರ ಸಂಪ್ರದಾಯ ಮನೋಸ್ಥಿತಿ ಗೆ ತಕ್ಕಹಾಗೆ ಇವುಗಳು ಅವನ ರೂಢಿಗೆ ಬರುತ್ತವೆ.ಇವೆರಡರಲ್ಲಿ ಏನೇ ವ್ಯತ್ಯಾಸ ಗಣನೀಯವಾಗಿ ಕಂಡು ಬರದಿದ್ದರೂ ಮಾರ್ಗಗಳಲ್ಲಿ,ಅದಕ್ಕೆ ಉಪಯೋಗವಾಗುವ ವಸ್ತು ವ್ಯವಸ್ಥೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.ಏನೇ ಆಗಲಿ ಪಂಚಭೂತ ಗಳಿಂದ ನಿರ್ಮಾಣವಾದ ಈ ಶರೀರ ಲೋಕದ ಮಾಯೆಗೆ ಅಳವಟ್ಟಾಗಿ ದೇಹಸ್ಥಿತಿ ಪಂಚಭೂತಗಳು ವ್ಯತ್ಯಾಸ ವಾಗುತ್ತವೆ.ಅದನ್ನು ಗಮನಿಸಿ ಅವುಗಳನ್ನು ಸಮಸ್ಥಿತಿಯಲ್ಲಿ ಇಡಲು ಇವುಗಳು ಅತ್ಯವಶ್ಯ. ಬನ್ನಿ ಆಚರಿಸಿ ಆನಂದಿಸೋಣ.
ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು
ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.
“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”
ನಿಷ್ಠೆಯಿಂದ ಲಿಂಗವ ಪೂಜಿಸಿ
ಮತ್ತೊಂದು ಪಥವನರಿಯದ ಶರಣರು
ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !
ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,
ಕೂಡಲಸಂಗಮದೇವಾ,ನಿಮ್ಮಶರಣರು.
ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.
ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.
ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.
ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.
“ಕಣ್ ಗಳ ನೋಟ ಹೃದಯದ ಜ್ಞಾನ
ಮನದಲ್ಲಿ ಮಾತಅಡುತಿರ್ದಯ್ಯ
ಜೇನು ಮಳೆಗಳು ಕರೆದವು
ಅಮೃತದ ಕಳೆಗಳು ಸುರಇದವು
ಕೂಡಲಸಂಗಮ ದೇವನೆಂಬ
ಸಾಗರದೊಳಡುತಿದ್ದನಯ್ಯ
ಕೂಡಲಸಂಗಮದೇವ.
ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.
ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ! ನಿಮ್ಮ ಪುರಾತರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,
ಕೂಡಲಸಂಗಮದೇವಾ.
ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.
ಜೊತೆಗೆ ೧೧೧೪೮ ಓದುಗರು. ಈ ಯಶಸ್ಸಿಗೆ ಸಹಕರಿಸಿದ ಎಲ್ಲ ಪರಮಪೂಜ್ಯರಿಗೆ ಭಕ್ತಿಪೂರ್ವಕ ಮತ್ತು ಹೃದಯಪೂರ್ವಕ ಕೃತಜ್ಞತೆಗಳು
ಶ್ರೀಕುಮಾರ ತರಂಗಿಣಿ ೨೦೨೩ ಮೇಸಂಚಿಕೆಯ ಲೇಖನಗಳ ವಿವರ
ಕಾವ್ಯ : “ ಪರಾತ್ಪರ ಬಸವೇಶ್ವರನನು” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ಶ್ರೀ ಕುಮಾರ ಸ್ವಾಮಿಗಳ ವಿಚಾರಗಳು : ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು
ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೨ ಪ್ರವೇಶ: ಲೇಖಕರು: ಪೂಜ್ಯ ಜ.ಚ.ನಿ
ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
ಪೂಜ್ಯರ ಆಶೀರ್ವಚನ ೧೪-೦೫-೨೦೨೧
ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು”
ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳಿಂದ ಶಾಂತಾಶ್ರಮ ಹುಬ್ಬಳ್ಳಿ.
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ