• ಪ್ರೊ. ಎಸ್. ಎಸ್. ಭೂಸನೂರಮಠ
(ಪ್ರೊ. ಸಂ. ಶಿ. ಭೂಸನೂರಮಠ (ನವೆಂಬರ್ ೭, ೧೯೧೦ – ನವೆಂಬರ್ ೬, ೧೯೯೧) ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿಗಳಲ್ಲೊಬ್ಬರು. ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಕ ಕೊಡುಗೆಗಳೆನಿಸಿವೆ. ಪ್ರೊ. ಸಂ. ಶಿ. ಭೂಸನೂರಮಠರು ಹುಟ್ಟಿದ್ದು ನವಂಬರ್ ೭, ೧೯೧೦ರಂದು ಧಾರವಾಡ ಜಿಲ್ಲಾ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಪೂರ್ಣ ಹೆಸರು ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ.
ತಂದೆಯವರ ಅಲ್ಪ ಸ್ವಲ್ಪ ಕೃಷಿ ಮತ್ತು ವ್ಯಾಪಾರಗಳಿಂದ ಹೊಟ್ಟೆಪಾಡು ನಡೆಯುತ್ತಿತ್ತು. ಆದರೆ ಶಿಕ್ಷಣಕ್ಕೆ ಹಣದ ಅಭಾವ. ಬಾಲಕ ಸಂಗಯ್ಯ ಗದಗಿನಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಪಂಪ್ ಒತ್ತುವ ಕೆಲಸ ಗಿಟ್ಟಿಸಿಕೊಂಡ. ಅದರಿಂದ ತುತ್ತಿನ ಚೀಲಕ್ಕೆ ತಾತ್ಕಾಲಿಕ ತ್ತೃಪ್ತಿಯೇನೋ ಸಿಕ್ಕಿತು. ಆದರೆ ಮನಸ್ಸಿಗೆ, ಬುದ್ಧಿಗೆ ನೆಮ್ಮದಿ ದೊರೆಯಲಿಲ್ಲ. ಕಲಿಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದ ಆ ಬಾಲಕನಿಗೆ ದೈವ, ಮಾನವ ರೂಪದಲ್ಲಿ ಬಂದು ನೆರವಾಯಿತು. ಗದಗಿನಲ್ಲಿ ಇಂಗ್ಲೀಷ್ ಶಾಲೆಯಲ್ಲಿ ಅಧ್ಯಯನ ಮತ್ತು ಮನೆಯಲ್ಲಿ ಸಂಗೀತ ಶಿಕ್ಷಣ ಎರಡೂ ಕ್ರಮವಾಗಿ ನಡೆದವು. ಓದುತ್ತಿರುವಾಗಲೇ ಮದುವೆಯೂ ಆಯಿತು. ೧೯೩೧ರಲ್ಲಿ ಮೆಟ್ರಿಕ್ ಮುಗಿಯುವ ವೇಳೆಗೆ ತಂದೆ ತೀರಿಕೊಂಡರು. ಕುಂಟುತ್ತಾ ನಡೆದಿದ್ದ ಶಿಕ್ಷಣಕ್ಕೆ ಸೊಂಟ ಮುರಿದಂತಾಯಿತು. ಆದರೂ ಪ್ರತಿಭಾವಂತ ವೇತನ ದೊರೆಯಿತು. ಎ. ಟಿ. ಸಾಸನೂರ, ಪತ್ರಾವಳಿ, ಸ.ಸ. ಮಾಳವಾಡ, ಕೆ.ಜಿ. ಕುಂದಣಕರ ಮೊದಲಾದ ಗುರುಗಳ ಕೃಪೆ ಮತ್ತು ಆಶೀರ್ವಾದಗಳ ಬೆಂಬಲದಿಂದ ಬಿ.ಎ ಮುಗಿಸಿ ಕೊಲ್ಲಾಪುರದ ಕಾಲೇಜಿಗೆ ಸೇರಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು.
ಬೆಳಗಾವಿಯ ಲಿಂಗರಾಜಾ ಕಾಲೇಜು, ಮತ್ತು ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಭೂಸನೂರಮಠರು.ಇಪ್ಪತ್ತು ಮೂರು ವರ್ಷಗಳವರೆಗೆ ಲಿಂಗರಾಜಾ ಕಾಲೇಜಿನಲ್ಲಿ ಸೇವೆಸಲ್ಲಿಸಿ ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೭೬ರಲ್ಲಿ ನಿವೃತ್ತಿ ಹೊಂದಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಅನೇಕ ಗೌರವಗಳು ಪ್ರೊ.ಭೂಸನೂರಮಠ ಅವರಿಗೆ ಸಂದಿವೆ
ತಮ್ಮ ಸರಳತೆ, ಸಜ್ಜನಿಕೆ, ಸ್ನೇಹಪರತೆ ಮತ್ತು ಸಾತ್ವಿಕ ನಡೆನುಡಿಗಳಿಂದಾಗಿ ಶಿಷ್ಯರು, ಗೆಳೆಯರಿಗೆಲ್ಲ ಆತ್ಮೀಯರಾಗಿದ್ದು ಶ್ರೀಯುತರು ತುಂಬು ಸಾರ್ಥಕ ಜೀವನ ನಡೆಸಿ 6-11-1991ರಂದು, ಧಾರವಾಡದ ಪ್ರಶಾಂತ ಪರಿಸರದಲ್ಲಿರುವ ತಮ್ಮ ಮನೆ ಪರಂಜ್ಯೋತಿಯಲ್ಲಿ ಶಿವೈಕ್ಯರಾದರು)
ನಮ್ಮೂರು ನಿಡಗುಂದಿ, ರೋಣ ತಾಲೂಕು, ಜಿಲ್ಲೆ ಧಾರವಾಡ. ನಮ್ಮೂರಿನಿಂದ ಸುಮಾರು ಮೂರುಮೈಲು ದೂರ ಹಾಳಕೇರಿ ಅಥವಾ ಹಾಲಕೆರೆ, ಇದೂ ರೋಣ ತಾಲೂಕಿನಲ್ಲಿರುವ ಗ್ರಾಮವೇ. ಜನಸಂಖ್ಯೆಯ ದೃಷ್ಟಿಯಿಂದ ನಮ್ಮೂರು ದೊಡ್ಡದಾದರೂ, ನಮ್ಮ ಭಾಗಕ್ಕೆ ಪುಣ್ಯಕ್ಷೇತ್ರವೆನಿಸಿಕೊಂಡಿರುವ ಹಾಳಕೇರಿ. ಊರು ಸಣ್ಣದಾದರೂ ಪಾವನ ಭಾವದ ದೃಷ್ಟಿಯಿಂದ ಬಹಳ ದೊಡ್ಡದು. ಏಕೆಂದರೆ ಇಂದಿಗೂ ಹಾಳಕೇರಿ ಎಂಬ ಹೆಸರು ನೆನಪಾದರೆ ಏನೋ ಒಂದು ಬಗೆಯ ಪವಿತ್ರ ಭಾವನೆ, ಒಂದು ಪುಣ್ಯಕ್ಷೇತ್ರದ ಮಂಗಲ ವಾತಾವರಣ ಹೃದಯವನ್ನು ಅವತರಿಸಿದಂತಾಗುತ್ತದೆ. ಈ ಭಾವನೆ ತರ್ಕಕ್ಕೆ ನ್ಯಾಯಕ್ಕೆ ಒಳಗಾಗುವಂತಿಲ್ಲ ತನಗೆ ತಾವೇ ಸಾಕ್ಷಿ.
ಇಂಥ ಪ್ರಭಾವಲಯ ಹಾಳಕೇರಿಯ ಬಗೆಗೆ ಇರಲು ಕಾರಣವೇನು ? ಕಾಶಿ, ಕೇದಾರ, ಹಂಪೆ, ಕೂಡಲಸಂಗಮ ಮುಂತಾದ ಪುಣ್ಯಕ್ಷೇತ್ರ ತೀರ್ಥಗಳ ಹೆಸರಿನಲ್ಲಿ ಸುತ್ತುಗಟ್ಟಿಕೊಂಡಿರುವ ಕಾರಣವೇನು ? ಅಲ್ಲಲ್ಲಿರುವ ಸ್ಥಾವರಲಿಂಗಗಳು, ವಿಶ್ವನಾಥ, ಬದರೀನಾಥ, ವಿರೂಪಾಕ್ಷ, ಸಂಗಮೇಶ್ವರ ದೇವತೆಗಳಿರುವ ಸ್ಥಳಗಳೆಂದೇ ಈ ಹೆಸರುಗಳಲ್ಲಿ ಒಂದುಬಗೆಯ ಮನೋನೈರ್ಮಲ್ಯವನ್ನುಂಟುಮಾಡುವ ಅಂತಃಶಕ್ತಿ ಇದೆ. ಇಂದಿಗೆ ಸುಮಾರು ಹನ್ನೆರಡು ವರ್ಷಗಳ ಹಿಂದೆ ಲಿಂಗೈಕ್ಯರಾದ ಶ್ರೀಗುರು ಅನ್ನದಾನಿ ಮಹಾಸ್ವಾಮಿಗಳವರು ಹಾಳಕೇರಿಯಲ್ಲಿ ತಮ್ಮ ಶಿವಪೂಜೆ ಶಿವಯೋಗ ತಪಸ್ಸು ಅನುಷ್ಠಾನ ಮಾಡಿರುವ ಪರಿಣಾಮವಾಗಿ ಹಾಳಕೇರಿಗೆ ಒಂದು ವಿಶಿಷ್ಟ ಸ್ಥಾನದ ಮಹತ್ವ ಬಂದಿದೆ.
ಈ ಪುಣ್ಯಕ್ಷೇತ್ರಕ್ಕೆ ಮೂಲವಾದ ಇನ್ನೂ ಪೂರ್ವದ ಪುಣ್ಯದ ಇತಿಹಾಸವಿದೆ. ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳವರ ಗುರುಗಳು ಈ ಮಠದ ಹಿಂದಿನ ಪೀಠಾಧಿಪತಿಗಳು. ಇವರು ಅತ್ಯಂತ ಪ್ರಭಾವಶಾಲಿಗಳು; ಮಹಿಮಾಪುರುಷರು. ಈ ಮಠಕ್ಕೆ ಒಂದು ಮಹೋಜ್ವಲತೆಯನ್ನು ತಂದುಕೊಟ್ಟವರು. ಇವರನ್ನು ಕುರಿತು ದ್ಯಾಂಪುರದ ಚೆನ್ನಕವಿಗಳು ರಚಿಸಿದ ಅನ್ನದಾನೀಶ್ವರ ಮಹಾಪುರಾಣವೇ ಈ ಮಾತಿಗೆ ಸಾಕ್ಷಿಯಾಗಿ ನಿಂತಿದೆ.
ಶ್ರೀಗುರು ಅಥವಾ ಗುರು ಅನ್ನದಾನಿ ಮಹಾಸ್ವಾಮಿಗಳವರನ್ನು ಕುರಿತು ನನ್ನ ಭಾವನೆಗಳನ್ನು ಹೇಳಿಕೊಳ್ಳುವುದಕ್ಕಿಂತ ಮೊದಲು, ಪುರಾಣ ಪುರುಷರಾದ ಅನ್ನದಾನಿ ಮಹಾಸ್ವಾಮಿಗಳವರ ಬಗೆಗೆ ಒಂದೆರಡು ಮಾತು ಬಹುಮಟ್ಟಿಗೆ ಈ ಮೂಲ ಪುರುಷರ ಬಗೆಗೆ ನನಗೆ ಕೇಳಿ ಆಷ್ಟೇ ಗೊತ್ತು. ಇವರು ೧೯೧೩ರಲ್ಲಿ ಲಿಂಗೈಕ್ಯರಾದಾಗ ಅವರ ಸಮಾಧಿ ಮಾಡಲು ಬಂದ ಭಕ್ತರ ಸಂಖ್ಯೆ ವಿಪರೀತವೆಂದು ಹೇಳುತ್ತಾರೆ, ಎಂಟು ಹತ್ತು ಹಾಳಕೆರೆ ಜಾತ್ರೆಗಳಿಗೆ ಕೂಡಬೇಕಾದ ಜನಸಂಖ್ಯೆ ಅವರ ಸಮಾಧಿ ಮಾಡುವ ಕಾಲದಲ್ಲಿ ಕೂಡಿತ್ತೆಂದು ಅಲ್ಲಿಗೆ ಹೋಗಿಬಂದ ಹಿರಿಯರು ಹೇಳುತ್ತಿದ್ದರು. ಜನರ ಬಳಕೆಯಲ್ಲಿರುವ ವದಂತಿಗಳು ಮತ್ತು ಪುರಾಣವೇ ನನ್ನ ಕೆಲವೊಂದು ಅಭಿಪ್ರಾಯಕ್ಕೆ ಆಧಾರ. ನನಗೆ ತಿಳಿದು ಬರುವಂತೆ ಇವರು ಅತ್ಯಂತ ವೈರಾಗ್ಯಶಾಲಿಗಳು, ಶಿವಪೂಜಾ ನಿರತರು. ಶಿವಯೋಗನಿಷ್ಠರು. ಇಂದಿಗೂ ಮೊದಲಿದ್ದ ಕಲ್ಲುಮಠದ ಇವರ ಗದ್ದುಗೆಯ ಮುಂದೆ ಎಡಭಾಗದಲ್ಲಿ ಕೆಳಗೆ ಇರುವ ಗವಿಯೇ ಇವರ ಲಿಂಗಪೂಜಾ ಮಂಟಪ. ಪಾವಟಿಗೆಗಳಿರುವ ಈ ಗವಿಯೊಳಗಡೆ ಬಂದು ಈ ಮಂಟಪವನ್ನು ನೋಡಿರುವ ಪುಣ್ಯ ನನ್ನದು. ಗವಿ ಎಂದರೆ ಕತ್ತಲೆಯ ಗವಿ. ಬೆಳಕಿಲ್ಲ ದೀವಿಗೆಯನ್ನು ಹಿಡಿದೇ ಬರಬೇಕು. ಒಳಗೆ ನೋಡಬೇಕು ಈ ಪೂಜಾಮಂಟಪವನ್ನು ನನಗೆ ತಿಳಿದಿರುವ ಮಟ್ಟಿಗೆ ಈ ಮಹಾಸ್ವಾಮಿಗಳು ಎಂದಿಗೂ ಹೆಣ್ಣು ಮಕ್ಕಳಿಗೆ ದರ್ಶನವನ್ನು ಕೊಟ್ಟವರಲ್ಲ ಆಕಸ್ಮಾತ್ ಕಂಡವರು ಕಂಡಿರಬಹುದು. ತಾವು ಕೂಡುವ ಮಂಚದ ಮುಂದೆ ಯಾವಾಗಲೂ ದೊಡ್ಡ ಗುಡಾರದ ಮರೆ. ಭಕ್ತ ಜನರಷ್ಟೇ ಒಳಗೆ ದರ್ಶನ ತೆಗೆದುಕೊಂಡು ಬರುವ ಸಂಪ್ರದಾಯ. ಇವರ ಸೇವೆ ಮಾಡಿಕೊಂಡಿದ್ದ ಶಿವಪೂಜಪ್ಪ, ಸ್ವಾಮಿಗಳ ಅತ್ಯಂತ ನಿಷ್ಠಾಭಕ್ತ. ಈತನ ಬಗೆಗೆ ನಾನು ಕೇಳಿದ ಒಂದು ಕಡೆ ಸ್ವಾಮಿಗಳ ಸೇವೆಯನ್ನು ಕೈಕೊಳ್ಳುವ ಮುನ್ನ ತಮ್ಮೂರಲ್ಲಿ ತನ್ನ ಹೆಂಡತಿಯನ್ನು ಬಿಟ್ಟು ಬಂದಿದ್ದ ಶಿವಪೂಜಪ್ಪನಿಗೆ ಒಂದು ದಿನ ಸುದ್ದಿಬಂತು ತನ್ನ ಹೆಂಡತಿ ತೀರಿಕೊಂಡಳೆಂದು. ಮುಂದೆ ಶಿವಪೂಜಪ್ಪ ಊರಲ್ಲಿ ಸಕ್ಕರೆ ಹಂಚಿದ ಕಾರಣವನ್ನು ಹೇಳಲಿಲ್ಲ. ಮುಂದೆ ಊರವರಿಗೆ ಗೊತ್ತಾಯಿತು ಆತನ ಹೆಂಡತಿ ತೀರಿದ ಸುದ್ದಿ, ಊರವರು ಸಕ್ಕರೆ ಹಂಚಿದ್ದಕ್ಕೆ ಕಾರಣವನ್ನು ಕೇಳಿದರೆ ? ಆತನ ಉತ್ತರ : ಇಂದು ಸಂಸಾರದ ಬಂಧನ ಸಂಪೂರ್ಣ ಕಡಿದು ಹೋಯಿತು ಎಂದು. ಮಠದ ಸ್ವಾಮಿಗಳವರ ವೈರಾಗ್ಯದ ಪ್ರಭಾವ ಆತನ ಮೇಲಾದುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
ಈತನ ಬಗ್ಗೆಯೇ ಇನ್ನೊಂದು ಕತೆ- ಹಾಳಕೇರಿಯ ಮಠದಲ್ಲಿ ತಾಡೋಲೆಯ ಪುರಾತನ ಗ್ರಂಥಗಳು ಚಕ್ಕಡಿ ಗಟ್ಟಲೆ ಇದ್ದವಂತೆ. ಸ್ವಾಮಿಗಳವರಿಗೆ ಅಡಿಗೆ ಮಾಡುವಾಗ ಒಲೆಪಟುವು ಮಾಡಲಿಕ್ಕೆ ಆ ತಾಡೋಲೆಯ ಗರಿಗಳನ್ನೇ ತಂದು ತುರುಕುತ್ತಿದನಂತೆ ಈ ಶಿವಪೂಜಪ್ಪ. ಈ ಮಾತು ಮಹಾಸ್ವಾಮಿಗಳವರಿಗೆ ತಿಳಿದಿರಲಿಕಿಲ್ಲವೆಂದು ತೋರುತ್ತದೆ. ಏಕೆಂದರೆ ಅವರು ವೀರಶೈವ ವಿದ್ಯಾಪ್ರೇಮಿಗಳು ಮಠದ ಈ ಸಂಪತ್ತನ್ನು ಕಾಯ್ದುಕೊಂಡು ಬಂದವರು.
ಮೇಲೆ ಹೇಳಿದ ಮಹಾಸ್ವಾಮಿಗಳವರ ಬಗೆಗೆ ನನ್ನ ಭಕ್ತಿ ಗೌರವವನ್ನು ಹೇಳ ಬೇಕೆಂದರೆ ಇವರನ್ನು ಕುರಿತು ಇರುವ ಶ್ರೀಮದನ್ನದಾನೀಶ್ವರ ಮಹಾಪುರಾಣವನ್ನು ನಾನು ಮೂರು-ನಾಲ್ಕುಸಾರೆ ಆದರೂ ಅತ್ಯಂತ ಶ್ರದ್ದೆಯಿಂದ ಭಕ್ತಿಯಿಂದ ಪಾರಾಯಣ ಮಾಡಿ ಉದ್ದಕ್ಕೆ ಬೆಳೆದಿರುವ ನನ್ನ ಈ ಜೀವನದಲ್ಲಿ ಅಳವಡಿಸಿಕೊಂಡಂತಾಗಿದೆ.
ಇನ್ನು ತರುವಾಯದ ಗುರು ಅನ್ನದಾನೀಶ್ವರ ಮಹಾಸ್ವಾಮಿಗಳವರನ್ನು ಕುರಿತು ಸುಮಾರು ಎಂಟು ವರ್ಷದ ಬಾಲ್ಯದಲ್ಲಿದ್ದ ನಾನು ಪ್ರತಿ ಅಮಾವಾಸ್ಯೆಗೆ ನಮ್ಮ ಅಕ್ಕನೊಡನೆ ಮತ್ತು ಕೆಲವು ನೆರೆಹೊರೆಯವರೊಡನೆ ಹಾಳಕೇರಿಮಠಕ್ಕೆ ಹೋಗಿ ಬರುವುದು ರೂಢಿಯಾಗಿತ್ತು. ಆದರೇನು ? ಗುರು ಅನ್ನದಾನೀಶ್ವರ ಮಹಾಸ್ವಾಮಿಗಳ ದರ್ಶನ ನಮಗಿಲ್ಲ, ಕೇವಲ ಹಿಂದಿನ ಅನ್ನದಾನಿಸ್ವಾಮಿಗಳವರ ಕಲ್ಲುಮಠದ ಗದ್ದುಗೆಯ ದರ್ಶನದ ಲಾಭವಷ್ಟೇ ನಮಗೆ. ಮೊದಲು ಗಂಟೆಬಾರಿಸಿ, ಗದ್ದುಗೆಯ ಮುಂದೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ಗದ್ದುಗೆಯ ಬಾಗಿಲಮುಂದೆ ಎಡಗಡೆಗೆ ಕುಳಿತಿದ್ದ ಕುಬ್ಜಮೂರ್ತಿ ಮುಪ್ಪಯ್ಯನವರ ಪಾದಕ್ಕೂ ನಮಸ್ಕಾರಮಾಡಿ, ಕಾಯಿ ಒಡೆಯಿಸಿಕೊಂಡು, ಆಂಗಾರವನ್ನು ಹಚ್ಚಿಕೊಂಡು ಮತ್ತು ಕಟ್ಟಿಕೊಂಡು, ಕಟ್ಟೆಯ ಕೆಳಗಿಳಿದು ಬಂದು ಕುಳಿತು, ನಮ್ಮೂರಿಗೆ ಮರಳಿ ಹೊರಡುವಾಗ ಮತ್ತೊಮ್ಮೆ ನಮಸ್ಕಾರಮಾಡಿ, ಅಲ್ಲಿರುವ ಅಂಗಾರವನ್ನು ತೆಗೆದುಕೊಂಡು ಬರುತ್ತಿದೆವು, ಮಠದ ಮುಂದಿರುವ ಓಣಿಯನ್ನು ದಾಟಿ ಬಂದರೆ ಅಲ್ಲಲ್ಲಿ ಕಾಯಿ, ಕರ್ಪೂರ, ಊದಿನಕಡ್ಡಿ ಇಟ್ಟುಕೊಂಡವರು ಮತ್ತು ಚುರುಮುರಿ ಅಂಗಡಿಗೆ ಇದ್ದಲ್ಲಿ ಒಂದು ಒಂದು ಪಾವು ಅಥವಾ ಪಡಿ ಚೂರಮರಿಕೊಂಡು ಪನಿವಾರ ತಿನ್ನುತ್ತ ನಮ್ಮೂರಿಗೆ ತಿರುಗಿ ಬರುವ ರೂಢಿ.
ಈ ಅಮವಾಸ್ಯೆಯ ದಿನ ಸುತ್ತ-ಮುತ್ತಲಿನ ಇನ್ನೂರು ಅಥವಾ ಹೆಚ್ಚು ಜನ ಗದ್ದುಗೆಯ ದರ್ಶನಕ್ಕೆ ಬಂದುಹೋಗುವುದನ್ನೂ ನಾನು ಕಂಡಿದ್ದೆ. ಮತ್ತು ಕೆಲವು ಭಕ್ತರು ಚಕ್ಕಡಿಯಲ್ಲಿ ಬುತ್ತಿಕಟ್ಟಿಕೊಂಡು ಬಂದು ಗದ್ದುಗೆ ದರ್ಶನ ಮಾಡಿಕೊಂಡು ಊಟಮಾಡಿ ತಿರುಗಿ ತಮ್ಮೂರಿಗೆ ಹೋಗುವುದನ್ನೂ ನಾನು ಕಂಡಿದ್ದೆ.
ಇನ್ನು ಮುಂದೆ ಹಾಳಕೇರಿ ಜಾತ್ರೆಯ ವಿಷಯ; ಈ ಜಾತ್ರೆ ಆಗ ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ನಡೆಯುತ್ತಿತ್ತು ಅಂದಿನ ನನ್ನ ಬಾಲ್ಯದಲ್ಲಿ ಆ ಜಾತ್ರೆ ಎಂದರೆ ಬಲುದೊಡ್ಡ ಜಾತ್ರೆ. ಏಕೆಂದರೆ ಬಾಲ್ಯಾವಸ್ಥೆಯಲ್ಲಿದ್ದ. ನಾನು ಈ ಜಾತ್ರೆಯನ್ನು ಮೀರಿದ ಮತ್ತೊಂದು ಜಾತ್ರೆಯನ್ನು ನೋಡಿರಲೇ ಇಲ್ಲ ರಥೋತ್ಸವಕ್ಕಿಂತ ಹಿಂದಿನ ದಿನ ಹಾಳಕೇರಿಯ ಮಹಾಮಠದಲ್ಲಿ ಬಹುದೊಡ್ಡ ಪ್ರಸ್ಥ ಅಥವಾ ಗಣಾರಾಧನೆ.
ಅಂದು ಭಕ್ತರೂ ಮತ್ತು ಗಣಂಗಳೂ ಸೇರಿ ಹತ್ತು ಸಾವಿರಕ್ಕೆ ಕಡಿಮೆ ಇಲ್ಲದಷ್ಟು ಜನ ಪ್ರಸಾದವನ್ನು ತೆಗೆದುಕೊಂಡು ಹೋಗುವ ಪ್ರತಿವರ್ಷದ ಪದ್ದತಿ, ನನ್ನ ತಿಳಿವಳಿಕೆಯ ಮಟ್ಟಿಗೆ ನಮ್ಮೂರಿಂದ ಹಾಳಕೇರಿಗೆ ಭಕ್ತರ ಇರುವೆಯ ಸಾಲು. ಇದರಂತೆ ನೀವೇ ಲೆಕ್ಕಹಾಕಿರಿ, ಹಾಲಕೆರೆಯ ಸುತ್ತಮುತ್ತಲಿನ ಮುಧೋಳ, ಮ್ಯಾಗೇರಿ, ಕರಮುಡಿ, ಸಂಗನಾಳು, ತೊಂಡ್ಯಾಳು, ಬಂಡ್ಯಾಳು, ಆಡೂರು, ರಾಜೂರು, ಕಲ್ಲೂರು, ಚಿಕ್ಕೇನಕೊಪ್ಪ, ಕುಕನೂರು, ನರೇಗಲ್ಲು, ಬೂದಿಹಾಳು, ಕೋಡಿಕೊಪ್ಪ, ತೋಟಗಂಟೆ, ಜಕ್ಕಲಿ, ಹೊಸಹಳ್ಳಿ, ಮಾರನಬಸರಿ, ಜಿಗಳೂರು, ಸಂಕನೂರು, ಬಿನ್ನಾಳು, ಯಲಬುರ್ಗಿ, ಇವಲದೇ ಅಲ್ಲಿರುವ ಸಣ್ಣ ದೊಡ್ಡ ಹಳ್ಳಿಗಳಿಂದ ಮತ್ತು ಗದಗ, ಗಜೇಂದ್ರಗಡ ಮುಂತಾದ ದೂರದ ಪಟ್ಟಣಗಳಿಂದಲೂ ಜನ ಜಾತ್ರೆಗೆ ಸೇರುತ್ತಿರಬಹುದು, ಇದು ನನಗೆ ಗೊತ್ತಿಲ್ಲ, ರಥೋತ್ಸವಕ್ಕೆಂದೇ ಬಂದು ತಮ್ಮೂರಿಗೆ ಹೋಗುವವರು ಹದಿನೈದು ಅಥವಾ ಇಪ್ಪತ್ತು ಸಾವಿರ ಸಂಖ್ಯೆಯಲ್ಲಿರಬಹುದು. ಇದು ಬೆರಳಿನ ಎಣಿಕೆಯಲ್ಲ; ಕಣ್ಣಿನ ಎಣಿಕೆ.
ಹಾಳಕೇರಿ ಜಾತ್ರೆಗೆ ಹೋಗುವಾಗ ನಾವು ಖರ್ಚಿಗಾಗಿ ಪಡೆಯುತ್ತಿದ್ದ ಹಣ ಹೆಚ್ಚು ಎಂದರೆ ನಾಲ್ಕು ಆಣೆ ಈ ನಾಲ್ಕು ಆಣೆಗೆ ಈಗಿನ ಬೆಲೆ ಸುಮಾರು ಮೂರುನಾಲ್ಕು ರೂಪಾಯಿಗಳು.
ತೇರು ಅಥವಾ ಹುಚ್ಚಾಯ ಅಂದರೆ ಸ್ವಾಮಿಯ ರಥ ಎಳೆಯುವಾಗ ಅನುಭವಿಸಬೇಕು, ಜಾತ್ರೆಯ ಶಿಖರವೆನಿಸುವ ಕಿಕ್ಕಿರಿದ ಗದ್ದಲ, ದಿಕ್ಕು ತಪ್ಪಿಸುವ ಜನ ಸಮ್ಮರ್ದದ ತೊಡಕು-ಬಡಕು ಸಂಭ್ರಮವನ್ನು ! ತೇರು ಸಾಗುವಾಗ ಸಣ್ಣವರು ದೊಡ್ಡವರು ತಮ್ಮ ತಮ್ಮ ಶಕ್ತಿಯಂತೆ ಉತ್ತತ್ತಿ ಬಾಳೆಹಣ್ಣು ರಥದ ಮೇಲು ಮೇಲಕ್ಕೆ ಒಗೆದು ಕೈಲಾಸದಿಂದ ಪುಣ್ಯವನ್ನು ಪಡೆದುಕೊಳ್ಳುವರೋ ಏನೋ ಎಂಬಂತೆ ಸಣಸಾಡುವ ಶೂರತನ ಕೈಲಾಸಕ್ಕೇರದವರು ರಥಕ್ಕೆ ಬಡಿದು ಮೇಲಿಂದ ಕೆಳಗೆ ಬಿದ್ದ ಫಲಗಳನ್ನೇ ಆರಿಸಿಕೊಂಡು ತಮ್ಮ ತಮ್ಮ ಉಡಿಯಲ್ಲಿ ಪುಣ್ಯವನ್ನೇ ಕಟ್ಟಿಕೊಂಡಂತೆ ಕಟ್ಟಿಕೊಂಡು ಹೊತ್ತುಸಿಕ್ಕಾಗ ಪ್ರಸಾದವನ್ನು ತಿನ್ನುವುದು, ಈ ಸ್ವಾಮಿಯ ಪ್ರಸಾದವನ್ನು ನಾವೂ ಸಣ್ಣವರಿದ್ದಾಗ ತಿಂದ ನೆನಪು. ಜಾತ್ರೆಯ ವಿಶೇಷವೆಂದರೆ ನೆರೆಹೊರೆಯ ನಾಡಿನ ಗರ್ಭಿಣಿಯರಾದ ಹೆಣ್ಣುಮಕ್ಕಳು ಸಾಮಾನ್ಯವಾಗಿ ರಥೋತ್ಸವಕ್ಕೆ ಬಂದು ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು, ಗಂಡು-ಹೆಣ್ಣಿನ ಸುಖ ಪ್ರಸವವನ್ನು ಬೇಡಿಕೊಂಡು, ಹೋಗುವವರು ಸಾಕಷ್ಟು ಜನ ಅಂದು.
ಹಾಳಕೇರಿಯ ಹೊರಗಿನ ಬಯಲಲ್ಲಿ ನೋಡಬೇಕು. ನಾಲ್ಕೈದುನೂರು ಚಕ್ಕಡಿಗಳ ಗಡಣವನ್ನು ಹಾಳಕೆರೆಯ ಹೊರಗೆ ನಿಡಗುಂದಿಯ ಕಡೆಗೆ ಇರುವ ಬಲುದೊಡ್ಡ ಕೆರೆಯ ಸಣ್ಣ ಸಾಗರದ ನೀರು ಅಂದಿನ ಪರಿಸೆಗೆ ಸಾಕಷ್ಟು ಕೆಂಪು ನೀರು ಒದಗಿಸಿ ಕೊಡುತ್ತಿತ್ತು, ಹಾಳಕೆರೆಯ ಒಳಗಡೆ ತೇರು ಎಳೆಯುವ ಮಾರ್ಗದಲ್ಲಿ ಎಡಗಡೆ, ಬಲಗಡೆ ಮತ್ತೆ ಮೇಲುಗಡೆ ಇದ್ದ ಜಾಗೆಯಲ್ಲೆಲ್ಲ ಗುಡಾರ ಹೊಡೆದುಕೊಂಡಿದ್ದ ಅಂಗಡಿಗಳ ಸಾಲು, ಚುರುಮುರಿ ಅಂಗಡಿಗಳು ಸಾಲುಗಟ್ಟಿ ಮಿಠಾಯಿ ಅಂಗಡಿಗಳು. ಆಟಿಕೆ ಸಾಮಾನುಗಳು, ಅಲ್ಲಲ್ಲಿ ಮಣೆ, ಪೀಪಿ, ಕನ್ನಡಿ, ಬಾಚಣಿಗೆ, ಸೂಜಿ – ದಾರ ಸುಣ್ಣದ ಡಬ್ಬೆ ಮುಂತಾದ ಜೋಗೇರ ಅಂಗಡಿಗಳು. ಒಂದು ಹೆಣ್ಣುಮಕ್ಕಳಿಗೆ ಪ್ರಾಧಾನ್ಯವಿದ್ದ ಈ ಜಾತ್ರೆಯಲ್ಲಿ ಬಳೆಯ ಅಂಗಡಿಗಳು ಸಾಕಷ್ಟು ಬಳೆಗಳ ಬಣ್ಣ. ಆಕಾರಗಳು ಅಳತೆಗೆಟ್ಟು ಅಂದು ಎಲ್ಲ ಬಳೆ ಕಾಜಿನ ಬಳೆ ಬಹುಮಟ್ಟಿಗೆ ಹೆಣ್ಣುಮಕ್ಕಳ ಜಾತ್ರೆ ಈ ಬಳೆಯ ಆಂಗಡಿಗಳಲ್ಲಿ, ಗಂಡುಮಕ್ಕಳದು ಮಿಠಾಯಿ ಫಳಾರದ ಅಂಗಡಿಗಳಲ್ಲಿ ಇನ್ನು ಕೆಲವರದು ಕಾಯಿ-ಕರ್ಪೂರ, ಊದಿನಕಡ್ಡಿ, ಕುಂಕುಮ ಮುಂತಾದ ಕಡೆ, ತೆಂಗಿನಕಾಯಿ- ಬಾಳೆಹಣ್ಣಿನ ಅಂಗಡಿ ಕುರ್ಚಿಗೆ, ಕೊಡಲಿ, ಚುಚುಗ, ಒನಕೆ, ಕುಡಗೋಲು, ಕುಡ, ಬಾರಕೋಲು ಮುಂತಾದ ಒಕ್ಕಲುತನದ ಮನೆತನಕ್ಕೆ ಬೇಕಾದ ಉಪಕರಣಗಳು ಬೇರೆ ಬೇರೆ ಕಡೆಯಿಂದ ಜಾತ್ರೆಗೆ ಬಂದು ಅವಶ್ಯಕ ವಸ್ತುಗಳ ಮೆರಗನ್ನು ತಂದುಕೊಡುತ್ತಿದವು. ಊರು ಹೊರಗಡೆ ಸರ್ಕಸ್ಸು ಮತ್ತು ಬಯಲಾಟಗಳು. ಅಲ್ಲದೇ ಅಂದಿನ ಆಕರ್ಷಣೆಗಳಾದ ಹಾವಾಡಿಗರು, ಡೊಂಬರು, ಮಂಗಗಳನ್ನು ಆಡಿಸುವವರು, ಮೇಲಿಂದ ಕೆಳಗೆ ಸುತ್ತು ತಿರುಗುವ ಗ್ರಹಗಳಂತಿರುವ ತೊಟ್ಟಿಲು ಆಟ, ಕುಸ್ತಿಯ ಕಣಗಳು, ಇನ್ನೇನೋ; ಇನ್ನೇನೋ ! ಹಲವಾರು ಬಗೆಯ ವಿಚಿತ್ರ ದೃಶ್ಯಮಾನ ಸಂಗತಿಗಳು. ನನಗನಿಸುವಂತೆ ಅಂದಿನ ಕಾಲದಲ್ಲಿ ನೂರಾರು ಕಡೆಗೆ ಬೆಳೆದು ಬಂದಿರುವ ಕಲಾ ಕೌಶಲ ಅಂದಿನ ಜೀವನಕ್ಕೆ ಬೇಕಾದ ಅನೇಕ ಹೊಸ ಹೊಸ ಸಾಧನ ಸಾಮಗ್ರಿಗಳು, ಮೋಜು ಮಜಲುಗಳು ಇಂತಿವೇ ಮೊದಲಾದ ನೂತನ ಪ್ರಪಂಚದ ವರ್ಧಮಾನ ನಾಗರಿಕತೆಯ ಪ್ರಸಂಗಗಳನ್ನು ಕಂಡು, ತಮ್ಮ ತಮ್ಮ ಜೀವನವನ್ನು ವಿಸ್ತಾರಗೊಳಿಸುವ ಮಹಾಸಾಧನವೆನಿಸುವ ಇಂಥ ಜಾತ್ರೆಗಳು ಇಲ್ಲದಿದ್ದರೆ ಹಳ್ಳಿ, ಪಟ್ಟಣಗಳು ತಮ್ಮ ತಮ್ಮ ಊರಿನಲ್ಲಿಯೇ ಇದ್ದು ಮುಳುಗಿ ಬಾಳುತ್ತಿರುವ ಸಂಕೋಚ ಜೀವನಕ್ಕೆ ಗುರಿಯಾಗಿ, ಹೋಗುತ್ತಿದ್ದವು. ಅಂದಿನ ಮಾನವ ಜೀವನದ ಉದಿತೋದಿತಕ್ಕೆ ಮೂಲ ಕಾರಣವೇನು ? ದೊಡ್ಡ ಪ್ರಮಾಣದಲ್ಲಿ ವರ್ಷಕ್ಕೊಮ್ಮೆ ನಡೆವ ಸ್ವಾಮಿಗಳ ದೇವರ ಜಾತ್ರೆಗಳು ಪುಣ್ಯಪ್ರಮಾಣದಲ್ಲಿ ಅಲ್ಲೊಂದು ಇಲ್ಲೊಂದು ಸಾಮಾನ್ಯವಾಗಿ ವಾರಕ್ಕೊಮ್ಮೆ ಸಂತೆಗಳು,
ಇಂದು ನನಗೆ ಅರ್ಥಹೀನವಾಗಿ ಕಾಣುವ ಈ ಪ್ರಪಂಚದಲ್ಲಿ ಅಂದಿನ ನನ್ನ ಬಾಲ್ಯದ ಭಕ್ತಿಭಾವದ ಈ ಸ್ವಪ್ನ ಪ್ರಪಂಚ ಎಂದಿಗೂ ಮರೆಯಲಾಗದ ನನ್ನ ಹಿಂದಿನ ಸಾಮ್ರಾಜ್ಯ. ಸಾಮ್ರಾಜ್ಯವಿಲ್ಲದಿದ್ದರೆ ಮನುಷ್ಯ ತನ್ನಷ್ಟೇ ಸಣ್ಣವನಾಗಿ ಬದುಕಿ ಬಾಳ ಬೇಕಾಗುತ್ತದೆ. ಇದು ಒಂದು ರೀತಿಯ ಮಾನವ ದುರ್ದೈವ. ಇದು ಸುಳ್ಳು ಎಂದು ಹೇಳಿದರೆ ನನ್ನ ಮನಸ್ಸಿಗೆ ಯಾವ ನೋವೂ ಇಲ್ಲ.
ಹಾಳಕೇರಿಯ ಶ್ರೀಮಠದ ಇನ್ನೂ ಒಂದೆರಡು ವಿಶೇಷಗಳೆಂದರೆ ಮಠದ ಆವರಣದಲ್ಲಿ ಒಂದು ಸಂಸ್ಕೃತ ಪಾಠಶಾಲೆ ಇತ್ತು. ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ ಈ ಪಾಠಶಾಲೆಯ ಅಧ್ಯಾಪಕ ಉಪ್ಪಿನ ಬೆಟಗೇರಿಯ ಪಂಡಿತ ವಿಶ್ವೇಶ್ವರ ಶಾಸ್ತ್ರಿಗಳು. ಅಲ್ಲಿ ಹತ್ತು-ಹದಿನೈದು ಜನ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳು. ಅವರ ಊಟ ಮಠದಲ್ಲಿ ಅಥವಾ ವಾರದ ಮನೆಗಳಲ್ಲಿ ಮತ್ತು ಸಣ್ಣಪ್ರಮಾಣದಲ್ಲಿ ಪ್ರತಿನಿತ್ಯ ಅಲ್ಲಿಗೆ ಬಂದ ಭಕ್ತರಿಗೆ ದಾಸೋಹ ನಡೆಯುತ್ತಿತ್ತು ವೀರಶೈವ ಮಠಗಳಲ್ಲಿ ಅಂದು ಧರ್ಮದ ಪ್ರಚಾರಕ್ಕಾಗಿ ಪುರಾಣ, ಕೀರ್ತನ, ಪ್ರವಚನ ಮುಂತಾದವು ನಡೆಯುವುದನ್ನು ನಾನು ಪ್ರತ್ಯಕ್ಷ ಹಾಳಕೇರಿಯಲ್ಲಿ ಕಂಡಿದ್ದೆ. ಸಂಗೀತ ಪಾಠಶಾಲೆಯ ಹತ್ತಿರವೇ ಇದ್ದ ಒಂದು ಮನೆಯಲ್ಲಿ ಕೆಲದಿನ ಸಂಗೀತ ಪಾಠಶಾಲೆಯು ಇತ್ತು. ಒಂದೆರಡು ತಿಂಗಳು ನಾನೇ ಹೋಗಿ ಅಲ್ಲಿ ಸಂಗೀತದ ಅಭ್ಯಾಸ ಮಾಡಿದೆ. ಈ ಅವಧಿಯಲ್ಲಿಯೇ ಮಠದ ಕಟ್ಟೆಯಮೇಲೆ ಸ್ಕಾಂದ ಇಲ್ಲವೇ ಲೈಂಗ್ಯ ಪುರಾಣದ ಪ್ರವಚನ ನಡೆದುದು ನನಗೆ ಗೊತ್ತಿದೆ. ಅದು ಸಾಯಂಕಾಲದಲ್ಲಿ ನಡೆಯುತ್ತಿದ್ದು. ಪ್ರವಚನಕಾರರು ಪಂಡಿತ ವಿಶ್ವೇಶ್ವರ ಶಾಸ್ತ್ರಿಗಳು ;ಕೊಪ್ಪಳ ತಾಲೂಕಿನ ಬೆಟಗೇರಿಯವರು. ಅವರ ಮುಖದಲ್ಲಿ ಪಾಂಡಿತ್ಯದ ತೇಜ, ಕಂಠದಲ್ಲಿ ಗಂಭೀರವಾದ, ಸ್ಫುಟವಾದ ವೀಣಾ ತಂತಿಯ ಅಸ್ಖಲಿತ ವಾಣಿ. ಪಂಡಿತರ ಈ ಪ್ರವಚನ ನಡೆವಾಗಲಷ್ಟೇ ಮಹಾಸ್ವಾಮಿಗಳ ದರ್ಶನ ಮುಕ್ತವಾಗಿತೆಂದು ಹೇಳಬಹುದು.
ಈ ಮಠದಲ್ಲಿ ಮತ್ತೊಮ್ಮೆ ನಡೆದ ಒಂದು ವೀರಶೈವ ಧಾರ್ಮಿಕ ಭಾಷಣದ ಅವಿಸ್ಮರಣೀಯ ಪ್ರಸಂಗ, ಈ ಭಾಷಣ ನಡೆದುದು ಮಠದ ಆವರಣದಲ್ಲಿಯೇ ಸಾಯಂಕಾಲ ಸುಮಾರು ನಾಲ್ಕು ಇಲ್ಲವೇ ಐದು ಗಂಟೆಯ ಸಮಯ. ಭಾಷಣಕಾರರು ಇಂದಿನ ಮುಧೋಳ ಗವಿಮಠದ ಮತ್ತು ಸೊಲ್ಲಾಪುರದಲ್ಲಿರುವ ಕಿರೀಟಮಠದ ಅಧಿಪತಿಗಳಾದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು. ಅದೇ ಆಗ ಕಾಶಿಯಲ್ಲಿ ತಮ್ಮ ಸಂಸ್ಕೃತ ಅಭ್ಯಾಸವನ್ನು ಮುಗಿಸಿಕೊಂಡು ವೇದಾಂತಾಚಾರ್ಯ ಪದವಿ ಪಡೆದು ಮರಳಿ ಬಂದವರು; ಈ ಸ್ವಾಮಿಗಳು, ವಯಸ್ಸು ಸುಮಾರು ಇಪ್ಪತ್ತೈದರಿಂದ ಇಪ್ಪತ್ತೆಂಟು ಇರಬಹುದು. ‘ದಷ್ಟ-ಪುಷ್ಟ’ ದೇಹ ಸರ್ವಾಂಗದಲ್ಲಿ ಉಕ್ಕುವ ಯೌವನದ ಕಾಂತಿ, ಮುಖದಲ್ಲಿ ಪಾಂಡಿತ್ಯದ ಕಳೆ, ಅಂದು ಅವರು ಮಠದ ಕಟ್ಟೆಯ (ವೇದಿಕೆಯ) ಮೇಲೆ ನಿಂತು ನಿರರ್ಗಳವಾಗಿ, ಪಾಂಡಿತ್ಯಪೂರ್ಣವಾಗಿ ಸುಮಾರು ಒಂದೂವರೆ ತಾಸು ಮಾತಾಡಿದರು. ಅವರ ವಾಣಿ ಗಂಭೀರ, ಶಕ್ತಿಯುತ, ಸ್ಪಷ್ಟ ಮತ್ತು ಸ್ಪುಟ, ನೇರವಾಗಿ ಬುದ್ದಿ-ಹೃದಯವನ್ನು ತಟ್ಟಿ ಎಬ್ಬಿಸುವ ಸಾಮರ್ಥ್ಯ ಅವರ ಭಾಷಣದಲ್ಲಿ ಮಾತಾಡಿದ ವಿಷಯವೇನು ? ಪ್ರತಿಪಾದನೆ ಮಾಡಿದ್ದು ಹೇಗೆ ? ವಿಷಯದ ವ್ಯಾಪ್ತಿ ಎಷ್ಟು ? ಇವೇ ಮುಂತಾದ ಪ್ರಶ್ನೆಗಳನ್ನು ನೀವು ಕೇಳಿದರೆ ನಿಮಗೆ ಕೊಡಬಲ್ಲ ಉತ್ತರ ಇಂದು ನನ್ನಲ್ಲಿ ಉಳಿದಿಲ್ಲ. ಆದರೆ ಇಷ್ಟೇ- ಆ ಭಾಷಣದ ಗಂಭೀರ ಮುದ್ರೆ ನನ್ನ ತಲೆಯಲ್ಲಿ ಇನ್ನೂ ಉಳಿದಿದೆ.
ಸುಮಾರು ಹದಿನಾಲ್ಕು ಹದಿನೈದು ವರ್ಷದಲ್ಲಿ ನಾನಿರುವಾಗ ಮಠದಲ್ಲಿ ಸಮ ವಯಸ್ಕರಾದ ಗಂಗಾಧರದೇವರು ಮತ್ತು ನನಗಿಂತ ಚಿಕ್ಕವರಾದ ಪ್ರಭುದೇವರು ಮಠದ ಮರಿದೇವರು. ನನಗೆ ಒಂದು ರೀತಿಯ ಸಖ್ಯ ಇವರೊಡನೆ, ಎಷ್ಟೋಸಾರೆ ಇವರು ಮತ್ತು ನಾನು ನಿಡಗುಂದಿ ಮತ್ತು ಹಾಳಕೇರಿಯ ನಡುವಿರುವ ಪರಮಣ್ಣವರ ಕೆರೆಯಲ್ಲಿ ಭೋಜನ ವಿಹಾರ’ ನಡೆಸುತ್ತಿದ್ದವು. ಗಂಗಾಧರ ಮರಿದೇವರು ಈಗ ಇಲ್ಲ. ಅಮೀನಗಡಾದ ಪ್ರಭುಶಂಕರ ಮಹಾಮಠದಲ್ಲಿ ಸ್ವಾಮಿಗಳಾಗಿದ್ದ ಪ್ರಭುದೇವರು ಲಿಂಗೈಕ್ಯ ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳ ತರುವಾಯ ಹಾಳಕೇರಿಯ ಪೀಠಕ್ಕೆ ಸುಮಾರು ಹತ್ತು ವರ್ಷ ಅಧಿಪತಿಗಳಾಗಿದ್ದರು. ಇಂದಿನ ‘ಅಭಿನವ ಅನ್ನದಾನೀಶ್ವರ ಮಹಾಸ್ವಾಮಿಗಳಿಗೆ ಪಟ್ಟಾಧಿಕಾರವನ್ನು ಕೊಟ್ಟು ಈಗ ಮತ್ತೆ ಅವರು ತಮ್ಮ ಪ್ರಭುಶಂಕರ ಮಠದಲ್ಲಿಯೇ ಇದ್ದಾರೆ.
ಇನ್ನು ಮೇಲೆ ಹಾಳಕೇರಿಯನ್ನು ಬಿಟ್ಟು ನಿಡಗುಂದಿಯಲ್ಲಿ ನನಗಾದ ಮಹಾಸ್ವಾಮಿಗಳವರ ದೂರ ಮತ್ತು ಸಮೀಪ ದರ್ಶನದ ಅನುಭವ, ಮಹಾಸ್ವಾಮಿಗಳು ಇಂದು ರೋಣ ತಾಲೂಕಿಗೆ ಸೇರಿರುವ ಇಟಗಿಯ ಮಠಕ್ಕೆ ಸುಮಾರು ಎರಡು-ಮೂರು ತಿಂಗಳಿಗೊಮ್ಮೆ ಹೋಗಿ ಬರುವ ವಹಿವಾಟು ಇತ್ತು. ನಾನು ಸಣ್ಣವನಿದ್ದಾಗ ಆದಷ್ಟು ಡಮಣಿ ಗಾಡಿಯಲ್ಲಿ ಅಥವಾ ಕೊಲ್ಲಾರಿ ಚಕ್ಕಡಿಯಲ್ಲಿ ಅಂದರೆ, ಹಿಂದು ಮತ್ತು ಮುಂದು ಹಾಗೂ ಮೇಲುಗಡೆ ಬಹುಮಟ್ಟಿಗೆ ಮುಚ್ಚಿಕೊಂಡಿರುವ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದ ಮಹಾಸ್ವಾಮಿಗಳವರಿಗೆ ನಾನು ಮತ್ತು ಹಲವರು ಕೂಡಿಕೊಂಡು ಹೋಗಿ ಕೆಳಗೇ ದೀರ್ಘದಂಡ ನಮಸ್ಕಾರ ಮಾಡಿ, ಸ್ವಾಮಿಗಳ ಪ್ರತ್ಯಕ್ಷ ಆಶೀರ್ವಾದ ಪಡೆದವರ ಧನ್ಯತೆಯ ಮನೋಭಾವದಿಂದ ಮನೆಗೆ ಬರುತ್ತಿದ್ದೆವು. ಊರ ಹೊರಗೇ ಹಾಯ್ದು ಹೋಗುತ್ತಿದ ಈ ಗಾಡಿ ಒಮ್ಮೊಮ್ಮೆ ನಮ್ಮ ಮನೆಯ ಮುಂದೆಯೇ ಹಾಯ್ದು ಹೋಗುತ್ತಿತ್ತು. ಸ್ವಲ್ಪ ದೊಡ್ಡವನಾದ ನನ್ನನ್ನು ಒಮ್ಮೊಮ್ಮೆ ಮಹಾಸ್ವಾಮಿಗಳವರು ಮಾತಾಡಿಸಿ ಆಶೀರ್ವಾದವನ್ನು ಮಾಡಿದುದೂ ಉಂಟು. ಆಗ ಆದ ಆನಂದ ಎಷ್ಟು ? ಅದು ಶಬ್ದಕ್ಕೆ ಅಳತೆಯಲ್ಲ, ಸಮೀಪಕ್ಕೆ ಕರೆದು ಒಂದು ಮಾತಾಡಿ, ಮನೆತನದ ಯೋಗಕ್ಷೇಮ ಕೇಳಿ, ಒಂದು ಬಗೆಯ ದಿವ್ಯ-ವಾತ್ಸಲ್ಯಭಾವದಿಂದ ಆಶೀರ್ವದಿಸಿದ ಪ್ರಸಂಗಗಳೂ ಉಂಟು. ಈ ಭಾವಕ್ಕೆ ಕಾರಣವೇನು ? ಏನೋ ಒಂದು ಬಗೆಯ ಸಂಬಂಧ, ಮಹಾಸ್ವಾಮಿಗಳವರ ಮಠವಿರುವ ಇಟಗಿಯೇ ನಮ್ಮ ತಾಯಿಯ ತವರು ಮನೆ. ಈ ಮಾತು ನನಗೆ ಗೊತ್ತಿತ್ತು, ಆದರೆ ಮಹಾಸ್ವಾಮಿಗಳ ಬಾಯಿಯಿಂದಲೇ ಈ ಮಾತು ಪ್ರಕಟವಾದ ರೀತಿ ಇದು ‘ನಿಮ್ಮ ತಾಯಿ ನಮಗಿಂತ ನಾಲೈದು ವರ್ಷ ಹಿರಿಯರು’. ಈ ಆಪ್ತ ವಾಕ್ಯ ಮಹಾಸ್ವಾಮಿಗಳಲ್ಲಿರುವ ನನ್ನ ಭಕ್ತಿಯ ಗಾಢತೆಯನ್ನು ಗಾಢತಮಗೊಳಿಸಿತು.
ಇನ್ನೂ ಒಂದು ವಿಷಯ. ನನ್ನ ಅಸ್ಪಷ್ಟವಾದ ಸ್ಮರಣ ಬುದ್ದಿಯಲ್ಲಿ ಇನ್ನೂ ತೋರಿ ಅಡಗುವಂತಿದೆ ಈ ಪ್ರಸಂಗ. ನಾನು ಸುಮಾರು ಎಂಟು-ಒಂಭತ್ತು ವರ್ಷದವನಿದ್ದಾಗ ನನ್ನ ದೀಕ್ಷೆ (ಅಯ್ಯಾಚಾರ) ಆಯಿತು. ಅದೇ ಕಾಲಕ್ಕೆ ನಮ್ಮ ಲಿಂಗೈಕ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಹಾವೇರಿಯ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಶಿವಯೋಗ ಮಂದಿರದ ಭಿಕ್ಷೆಗಾಗಿ ಬಂದು ನಮ್ಮ ಮನೆಗೆ ಹತ್ತಿ ಎಡಗಡೆಗೆ ಇರುವ ಅಗಸಿಯವರ ದೊಡ್ಡ ಮನೆಯಲ್ಲಿ ಇವರ ಪೂಜೆ, ಪ್ರಸಾದ ನಡೆಯುತ್ತಿತ್ತು. ಆಗ ದೀಕ್ಷೆಯಾದ ಮರುದಿನ ಅಥವಾ ಮಳ್ಳಾಮರುದಿನ ಈ ಮಹಾಸ್ವಾಮಿಗಳವರಿಗೆ ನಮ್ಮ ತಂದೆಯವರು ಮಾಡಿಕೊಂಡ ಬಿನ್ನಹದ ಮೇರೆಗೆ ಈ ಮಹಾಸ್ವಾಮಿತ್ರಯರ ಪೂಜೆ ಮತ್ತು ಪ್ರಸಾದ ನಮ್ಮ ಮನೆಯಲ್ಲಿಯೇ ನಡೆದು ಅವರಿಂದ ಪಾದೋದಕ. ಪ್ರಸಾದವನ್ನು ಪಡೆದುಕೊಂಡ ನೆನಪು ನನಗಿದೆ.
ಮಹಾಸ್ವಾಮಿಗಳವರ ಪ್ರತ್ಯಕ್ಷ ಸನ್ನಿಧಿಯ ಸಮೀಪದಲ್ಲಿ ಭಕ್ತಿಯಿಂದ ಕುಳಿತು ಅವರೊಡನೆ ಮಾತಾಡಿದ ಮತ್ತೊಂದು ಮಹತ್ವದ ಪ್ರಸಂಗ, ಶಿವಯೋಗಮಂದಿರದ ಭಿಕ್ಷೆಗಾಗಿ ಸ್ವಾಮಿಗಳು ನಿಡಗುಂದಿಗೆ ಬಂದು ಸಂಗಮೇಶ್ವರ ಗುಡಿಯಲ್ಲಿ ಮೂರು ನಾಲ್ಕು ದಿನವಿದ್ದು ಶಿವಪೂಜೆ-ಪ್ರಸಾದವನ್ನು ಮಾಡಿಕೊಂಡಿರುವಾಗ ನಡೆದ ಘಟನೆ ಈಗ ನಾನು ಹೇಳಬೇಕೆಂದಿರುವುದು. ನಮ್ಮೂರಿಂದ ಸುಮಾರು ಇಪ್ಪತ್ತು ಮೈಲು ದೂರವಿರುವ ಶಿವಯೋಗ ಮಂದಿರಕ್ಕೆಂದು ಭಿಕ್ಷೆಮಾಡುವ ಪ್ರಸಂಗ ಏಕೆ ಬಂತು ? ಇದಕ್ಕೆ ಹಿನ್ನೆಲೆಯಾಗಿ ಶಿವಯೋಗ ಮಂದಿರದಲ್ಲಿ ನಡೆದ ಒಂದು ಕಠಿಣ ಪ್ರಸಂಗದ ವಿಷಮ ಚಿತ್ರವನ್ನು ಇಲ್ಲಿ ವಿವರಿಸಬೇಕಾಗುತ್ತದೆ.
ಹಾನಗಲ್ಲ ಪರಮಪೂಜ್ಯ ಕುಮಾರ ಸ್ವಾಮಿಗಳವರು ೧೯೩೦ರಲ್ಲಿ ಲಿಂಗೈಕ್ಯರಾದ ತರುವಾಯ ಹತ್ತು ಹನ್ನೊಂದು ವರ್ಷಗಳ ನಂತರ ಒಂದು ಸಭೆ ನಡೆಯಿತು. ಅಂದಿನ ಶಿವಯೋಗ ಈ ಮಂದಿರವೆಂದರೆ ನನ್ನ ಭಾವಾರ್ಥ ಶಿವಯೋಗದ ಮಂದಿರ. ಈ ಮಂದಿರವು ಶಿವನಲ್ಲಿ ಯೋಗವಾಗುವ ವಾತಾವರಣವನ್ನೇ ನಿರ್ಮಾಣಮಾಡುವಂತಿತ್ತು ಅಂದರೆ ಮಂದಿರದ ಉಸಿರು ಶಿವಯೋಗ. ಮಂದಿರದ ಸುತ್ತಮುತ್ತಣ ಪ್ರಕೃತಿಯ ಸಂಪದ್ಭರಿತ ಸೌಂದರ್ಯವನ್ನು ಒಂದುನಿಮಿಷ ನಿಂತು ನೋಡಿದರೆ ಯಾರಿಗಾದರೂ ಶಿವಯೋಗದ ಸೋಂಕು ಆಗುವಂತಿತ್ತು ಮಂದಿರದ ಸಮೀಪದಲ್ಲಿ ಪರದೇಶದ ಪ್ರವಾಸಿಗರ ಮನವನ್ನೂ ಸೆಳೆವ ಮಹಾಕೂಟ, ಬಾದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು ಮುಂತಾದ ಪವಿತ್ರ ಕ್ಷೇತ್ರಗಳು, ಮಂದಿರದ ಎಡಗಡೆ ಎದ್ದುನಿಂತಿರುವ ಗುಡ್ಡ-ಬೆಟ್ಟಗಳು, ಅನೇಕ ಬಗೆಯ ಲತೆ-ಗುಲ್ಮ-ಕಂಟಿಗಳು; ಸಣ್ಣ ದೊಡ್ಡ ಗಿಡಮರಗಳು, ಅಲ್ಲಲ್ಲಿ ತಲೆ ಎತ್ತಿರುವ ಕಲ್ಲುಬಂಡೆ ಗುಂಡುಗಳು, ಈ ವನ ಸೌಂದರ್ಯದ ಸಂಪತ್ತಿನಲ್ಲಿ ಮೃಗ, ಪಶು, ಪಕ್ಷಿಗಳ ನಾನಾ ಕಂಠದಿಂದ ಹರಿದುಬಂದ ವನ್ಯ ಸಂಗೀತ, ಮಂದಿರದ ಬಲಗಡೆ ನಿರಂತರ ಹರಿವ ಮಲಪ್ರಭಾ ನದಿ. ನದಿಯಲ್ಲಿ ಹಗಲು ರಾತ್ರಿ ನದಿಯೇ ಗುಡುಗುವಂತಿರುವ ದಿಡುಗು-ಅಂದರೆ ಸಣ್ಣ ಜಲಪ್ರಪಾತ. ಶಿವಯೋಗ ಮಂದಿರದ ಹೃದಯದಲ್ಲಿ ನೂರಾರು ವಟುಗಳಿಗಾಗಿ ಕಟ್ಟಿರುವ ಸಣ್ಣ ಸಣ್ಣ ಕುಟೀರಗಳು, ಅಂದರೆ ಝೋಂಪಡಿಗಳು ಪತ್ತೆ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಅನೇಕ ಸಂಗೀತ ಸಾಧಕರ ತರಂಗ ಸಂಗೀತ. ಝೋಂಪಡಿಯ ಬಳಿಯಲ್ಲಿರುವ ಅತ್ಯಂತ ರಮಣೀಯವಾದ ಲತಾಮಂಟಪ ಮತ್ತು ಸ್ವಾಮಿಗಳಿಗಾಗಿ ಕೊಟ್ಟಿರುವ ಮೇಲುಮಠ ಹಾಗೂ ಕೆಳಗಿನ ಮಠಗಳು. ಮಠದ ಸಮೀಪದಲ್ಲಿಯೇ ದಾಸೋಹದ ಮನೆ ಇನ್ನೂರು ಮುನ್ನೂರು ಆಕಳುಗಳ ಹಟ್ಟಿ. ಬದಿಯಲ್ಲಿಯೇ ವಿಧಿವತ್ತಾಗಿ ಭಸ್ಮವನ್ನು ತಯಾರಿಸುವ ಶಾಲೆ. ಮಂದಿರದ ಮುಂದೆಯೇ ಅನತಿದೂರದಲ್ಲಿ ಗುಂಪಾಗಿ, ಸಮೃದ್ಧವಾಗಿ ನಿಂತಿರುವ ಪತ್ರಿಯ ಬನ. ಅಂದು ಹೇಳುವವರು ಹೇಳುತ್ತಿದ್ದರು ಶಿವಯೋಗ ಮಂದಿರದಂಥ ಸಂಸ್ಥೆ ಇಡೀ ದೇಶದಲ್ಲಿಯೇ ಇಲ್ಲವೆಂದು ನನಗನಿಸುವಂತೆ ಇದಕ್ಕೆ ಮುಖ್ಯ ಕಾರಣ-ಮಾನವನನ್ನು ದೇವನನ್ನಾಗಿ ಕಟ್ಟುವ ಮಹಾಸಂಸ್ಥೆ ಇದು. ಈ ಮಂದಿರದಲ್ಲಿ ಎಲ್ಲಾ ವಿಧ್ಯೆಗಳಿಗಿಂತ ಅಧ್ಯಾತ್ಮ ಯೋಗವಿಧ್ಯೆಗೆ ಪ್ರಮುಖ ಸ್ಥಾನ.ಶಿವಯೋಗಮಂದಿರವೆಂದೊಡನೆ ಅನಿರ್ಬಂಧವಾಗಿ ಏಳುವ ಈ ಭಾವನೆಗಳನ್ನು ಇಲ್ಲಿ ಹೇಳುವುದು ಅಪ್ರಸ್ತುತ.ಆದರೂ ಮಣಿದಿದ್ದೇನೆ ನನ್ನ ಭಾವನೆಗಳ ವೈಖರಿಗೆ.
ಇಲ್ಲಿ ನಾನು ಹೇಳಬಾಕಾಗಿದ್ದ ಪ್ರಸ್ತುತ ವಿಷಯವೆಂದರೆ ಲಿಂಗಕ್ಕೆ ಹಾನಗಲ್ಲ ಮಹಾಸ್ವಾಮಿಗಳ ಪುಣ್ಯತಿಥಿಯ ಸಪ್ತಾಹ ಮುಗಿಯುತ್ತ ಬಂದ ಮಹಾಶಿವರಾತ್ರಿಯ ಮುನ್ನಾ ದಿನ ಸಾಯಂಕಾಲ ಏಳು ಗಂಟೆಗೆ ನಡೆಯಿತು. ಒಂದು ಗಂಭೀರ ವಿಷಯವನ್ನು ಕುರಿತ ಸಭೆ. ಆ ಸಭೆಗೆ ಬಾಗಲಕೋಟೆ, ಬದಾಮಿ, ನಂದಿಕೇಶ್ವರ, ಮತ್ತೆ ಬೇರೆ ಕಡೆಯಿಂದ ಬಂದ ಭಕ್ತ ಮಹೇಶ್ವರ ಗಣ. ನನಗೆ ನೆನಪಿದ್ದಂತೆ ಬಾಗಿಲುಕೋಟೆಯ ಶಾಬಾದಿ ಶಂಭುಲಿಂಗಪ್ಪನವರು, ಮಿಣಜಿಗಿ ವಕೀಲರು ಮತ್ತು ಅನೇಕ ಪ್ರಮುಖರು ಕೂಡಿದ್ದರು. ಮಂದಿರದ ಬಗ್ಗೆ ನಿಷ್ಠೆಯುಳ್ಳ ಮತ್ತು ಸಮಾಜದಲ್ಲಿ ಅಂದು ಅಗ್ರಗಣ್ಯರೆನಿಸಿದ್ದ ದೇವೀ ಹೊಸೂರು ಶೆಟ್ಟರು ಬಂದಿದ್ದರೇನೋ? ಇವರಲ್ಲದೆ ಬೇರೆ ಬೇರೆ ಮಠಗಳಿಂದ ಬಂದ ಇಪ್ಪತ್ತು-ಮೂವತ್ತು ಮಂದಿ ಮಹಾಸ್ವಾಮಿಗಳು. ಅವರಲ್ಲಿ ಪ್ರಮುಖರೆಂದರೆ ಹಾವೇರಿ ಹುಕ್ಕೇರಿಮಠದ ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು, ಹಾಳಕೇರಿಯ ಲಿಂಗೈಕ್ಯ ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು, ಇಂದಿಗೂ ಶತಾಯುಷ್ಯದ ಅಂಚಿನಲ್ಲಿರುವ ನಾಗನೂರು ಶಿವಬಸವ ಮಹಾಸ್ವಾಮಿಗಳು, ಹಾನಗಲ್ಲ ಲಿಂಗೈಕ್ಯ ಸದಾಶಿವ ಮಹಾಸ್ವಾಮಿಗಳು, ನವಲಗುಂದ ಗವಿಮಠದ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳು. ಇನ್ನುಳಿದವರ ಹೆಸರು ನನಗೆ ಗೊತ್ತಿಲ್ಲ ಮತ್ತು ನೆನಪು ಮಸುಮಸುಕಾಗಿದೆ.
ಕ್ರಿ.ಶ. ೧೯೪೦ರ ಎಡಬಲದ ವರ್ಷ, ಆ ಸಭೆಗೆ ಏನು ಕಾರಣ ನನಗೆ ಗೊತ್ತಿಲ್ಲ – ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಿದ್ದರು. ಈ ಸಭೆಯಲ್ಲಿ ಮುಖ್ಯವಾಗಿ ನಡೆಯಬೇಕಿದ್ದ ವಿಷಯದ ಚರ್ಚೆ- ಶಿವಯೋಗಮಂದಿರ ಮಹಾಸಂಸ್ಥೆಗೆ ಬಂದೊದಗಿದ ಒಂದು ವಿಪತ್ಕಾಲ, ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಇರುವಾಗ ಸಂಸ್ಕೃತ ಕನ್ನಡ-ವೈದ್ಯ-ವೈದಿಕ-ಸಂಗೀತ-ಪುರಾಣ-ಕೀರ್ತನ- ಭಾಷಣ ಮುಂತಾದ ಕಲೆಗಳ ಶಿಕ್ಷಣದೊಡನೆ ಮುಖ್ಯವಾಗಿ ಅಲ್ಲಿ ನಡೆಯುತ್ತಿದ್ದ ಯೋಗಸಾಧನೆ, ತತ್ವ-ಧರ್ಮ-ಸಿದ್ದಾಂತ-ನೀತಿ-ಆಚಾರ ಮುಂತಾದ ವಿದ್ಯೆ, ಶಾಸ್ತ್ರಗಳ ಬಗ್ಗೆ ಅಲ್ಲಿ ತರಬೇತಿ, ಒಳ್ಳೆಯ ಉತ್ಕೃಷ್ಟವಾಗಿ ಸಾಂಗವಾಗಿ ನಡೆದವು. ಶಿವಯೋಗ ಮಂದಿರದಲ್ಲಿ, ಕರ್ನಾಟಕದ ವೀರಶೈವರ ಮತ್ತಿತರರ ಲಕ್ಷ್ಯವನ್ನು ಸೆಳೆದುಕೊಂಡಿತ್ತು ಶಿವಯೋಗಮಂದಿರ. ಕರ್ನಾಟಕದ ವೀರಶೈವರ ಮಹಾಸಭೆಯ ಆದ್ಯ ಪ್ರವರ್ತಕರಾದ ಮತ್ತು ಶಿರಸಂಗಿ ಲಿಂಗರಾಜರಿಗೆ ತಮ್ಮ ಇಡೀ ದೇಶ ಗತಿಯ ಸಂಪತ್ತನ್ನು ಸಮಾಜದ ಮಕ್ಕಳಿಗೆ ದತ್ತಿಯನ್ನಾಗಿ ಕೊಡಲು ಪ್ರೇರಣೆ ಮಾಡಿದ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗಮಂದಿರ ಸಂಸ್ಥೆಯನ್ನು ಹಲವಂದವಾಗಿ ಬೆಳೆಸಿ ಉಜ್ವಲಗೊಳಿಸಿದರು. ಆದರೆ ಮುಂದೆ ಅವರ ತರುವಾಯ ಅಂದರೆ ೧೯೩೦ರ ನಂತರ ಕೆಲವರ್ಷಗಳಾದಮೇಲೆ ಏನೋ ಒಂದು ಗ್ರಹಣ ಬಂದೊದಗಿದಂತೆ ಸಂಸ್ಥೆಯ ಪ್ರಗತಿ ಕುಂಠಿತವಾಯಿತು. ನನಗನಿಸುವಂತೆ ಇದಕ್ಕೆ ಕಾರಣ, ಮಂದಿರಕ್ಕೆ ಸಂಬಂಧಿಸಿದ ಮಹಾಸ್ವಾಮಿಗಳಲ್ಲಿ ಒಂದಾಗಿರುವ ಹೊಂದಾಣಿಕೆ ತಪ್ಪಿ ಈ ತಪ್ಪು ಸಂಸ್ಥೆಯ ಏಳಿಗೆಗೆ ಒಂದು ಕುತ್ತಾಗಿ ಪರಿಣಮಿಸಿತು. ಆಗ ತಿಳಿದುಬಂದಂತೆ ಸಂಸ್ಥೆಗೆ ಸುಮಾರು ೪೫ (ನಾಲ್ಪತೈದು) ಸಾವಿರ ರೂಪಾಯಿ ಸಾಲ. ಇದೇನು ಮಹಾ ಎಂದು ನೀವು ಕೇಳಬಹುದು. ಆದರೆ ಅಂದಿನ ಸಾವಿರಗಳು ಅವು. ಇಂದಿನ ಲಕ್ಷಗಳೆಂದೇ ಹೇಳಬಹುದು. ಈಗ ನೀವು ನೆನೆಸಿಕೊಳ್ಳಬಹುದು. ನಾನು ಹಾಲಕೆರೆ ಜಾತ್ರೆಗೆ ನಮ್ಮ ತಂದೆಯವರಿಂದ ಪಡೆಯುತ್ತಿದ್ದ ನಾಲ್ಕು ಆಣೆ !
ಇಂದಿನ ಸಭೆಗಳೆಂದರೆ ಒಂದು ರೀತಿಯ ಸಂತೆಗಳೆಂದು ಹೇಳಬಹುದು. ಗೊತ್ತಿರಲಿ ಬಿಡಲಿ ಸಭೆಗೆ ಬಂದವರಿಗೆ ಮಾತಾಡುವ ಚಪಲ. ಆದರೆ ಅಂದಿನ ಶಿವಯೋಗ ಮಂದಿರದ ಸಭೆ ಒಂದು ಗಂಭೀರ ಚಿಂತನೆಯ ಆವರಣದಲ್ಲಿ ಮುಳುಗಿದಂತಿತ್ತು. ಅಂದು ಕೂಡಿದ ಸುಮಾರು ಎರಡು-ಮೂರುನೂರು ಜನ ಸಭಿಕರ ಮನಸ್ಸಿನಲ್ಲಿ ಒಂದೇ ಒಂದು ಯೋಚನೆ ಮಂದಿರದ ಸಾಲ ತೀರುವುದು ಎಂತು ! ಒಂದು ರೀತಿಯ ಉದ್ವಿಗ್ನತೆ, ಉಗ್ರತೆ ಕಂಡುಬರುತ್ತಿತ್ತು ಅನೇಕ ಪ್ರಮುಖರ ಮಾತುಗಳಲ್ಲಿ ಕೆಲವರಲ್ಲಿ ಕೆಲವೊಮ್ಮೆ ಭಾವಾವೇಶ, ಕೋಪೋದ್ರೇಕ ಕಂಡುಬಂದರೂ ಈ ಎಲ್ಲ ಅವೇಶಕ್ಕೆ ಮಂದಿರ ಋಣಮುಕ್ತವಾಗಲೇಬೇಕೆಂಬ ಖಂಡಿತವಾದ ಗುರಿ. ಭಕ್ತರಲ್ಲಿ ಸಿಡಿದೇಳುತ್ತಿದ್ದ ಈ ಭಾವಕ್ಕೆ ಈ ಕಡೆ ಪ್ರತಿಯಾಗಿ ಅಂದು ನೆರೆದ ಮಹಾಸ್ವಾಮಿಗಳವರ ಚಿಂತೋದ್ರೇಕ. ಈ ಸ್ವಾಮಿಗಳು ಹೆಚ್ಚಾಗಿ ಮಾತಾಡದಿದ್ದರೂ ಅವರ ಮುಖಗಳೇ ಹೇಳುತ್ತಿದವು ಅವರ ಚಿಂತೆಯ ಭಾರವನ್ನು. ಹಾಳಕೇರಿ ಮಹಾಸ್ವಾಮಿಗಳು ಎಂದಿಗೂ ಹೆಚ್ಚು ಮಾತಾಡುವವರಲ್ಲ ಮತ್ತು ಯಾವ ಭಾವನೆಯ ಉದ್ರೇಕಕ್ಕೂ ಒಳಗಾದವರಲ್ಲ. ಮಾತಿಲ್ಲದ ಅವರ ಮುಖದಲ್ಲಿ ಒಂದು ಗಂಭೀರ ಮೌನ. ಆದರೆ ಮಹಾಸ್ವಾಮಿಗಳವರಲ್ಲಿ ಎಲ್ಲರಿಗಿಂತ ಹಿರಿಯರಾದ ಹಾವೇರಿ ಮಹಾಸ್ವಾಮಿಗಳವರ ಹೃದಯದಲ್ಲಿ ಚಿಂತೆ ತುಂಬಿ ಕಣ್ಣಲ್ಲಿ ಕಂಬನಿಯಾಗಿ ಒತ್ತರಿಸುವಂತೆ ಭಾಸವಾಯಿತು. ನನಗೆ ಸಮಾಜದಲ್ಲಿ ಪರಮಪೂಜ್ಯರಾಗಿದ್ದ ಇವರ ಸ್ಥಿತಿಯನ್ನು ಕಂಡು ಸಭೆಯಲ್ಲಿ ಕೂಡಿದವರಿಗೆಲ್ಲ ಒಂದು ಕಷ್ಟ ನಿಷ್ಠುರದ ಆದೇಶ ಬಂದಂತಾಯಿತು. ಈ ಆದೇಶಕ್ಕೆ ಎಲ್ಲರೂ ಮಣಿದು ಚರ್ಚೆಯ ತಾಸೆರಡು ತಾಸುಗಳ ನಂತರ ಈ ಆಕಾಶ ಭಾಷಿತಕ್ಕೆ ಎಲ್ಲರೂ ತಲೆಬಾಗಿದರು. ಸಾಲತೀರಲೇಬೇಕು. ತೀರಿಸುವಲ್ಲಿ ಎಲ್ಲರ ಭಾಗವೂ ಅದರಲ್ಲಿ ಸೇರಲೇಬೇಕು. ತಮ್ಮ ತಮ್ಮ ಶಕ್ತಿಗನುಗುಣವಾಗಿ ತಮ್ಮ ಸೇವೆ ಸಲ್ಲಿಸುವುದಲ್ಲದೇ ಹಣವನ್ನು ಸಮಾಜದ ತಮ್ಮ ತಮ್ಮ ಭಾಗದಲ್ಲಿ ಕೂಡಿಸಿಕೊಡಬೇಕು. ಇದರಲ್ಲಿ ಪ್ರಧಾನ ಪಾತ್ರವನ್ನು ಮಹಾಸ್ವಾಮಿಗಳ ಮಂಡಳಿಯೇ ವಹಿಸಬೇಕು ಎಂದು ಒಂದು ರೀತಿಯ ಪ್ರತಿಜ್ಞೆ ಮಾಡಿದಂತಾಯಿತು. ಅಂದಿನ ಸಭೆ ಹಾಲಕೆರೆಯ ಮಹಾಸ್ವಾಮಿಗಳನ್ನೊಳಗೊಂಡು ಎಲ್ಲ ಸ್ವಾಮಿಗಳೂ ಮನಃಪೂರ್ವಕವಾದ ತಮ್ಮ ಒಪ್ಪಿಗೆಯನ್ನು ಕೊಟ್ಟರು. ಆಗ ನನ್ನ ವಯಸ್ಸು ಚಿಕ್ಕದಾದರೂ ಮನಸ್ಸು ನಿರ್ಧರಿಸಿತು ಮಂದಿರದ ಈ ಮಹಾ ಸಮಸ್ಯೆ ಪರಿಹಾರವಾಗಲೇಬೇಕೆಂದು. ಮರುದಿನ ಶಿವರಾತ್ರಿ, ಶಿವಯೋಗ ಮಂದಿರದಲ್ಲಿದ್ದು ಶಿವಪುರಾಣ-ಕೀರ್ತನೆ-ಭಾಷಣ-ಕೆಲಮಟ್ಟಿಗೆ ಜಾಗರಣೆಮಾಡಿ, ಕೇಳಿ ಮರುದಿನ ರಥೋತ್ಸವ ಮುಗಿಸಿಕೊಂಡು ನಮ್ಮೂರಿಗೆ ಬಂದೆ.
ಇದೋ ಈ ಸಂದರ್ಭವನ್ನು ಹೇಳಬೇಗಾಗಿತ್ತು ನನಗೆ. ಹಾಳಕೇರಿ ಮಹಾ ಸ್ವಾಮಿಗಳು ನಿಡಗುಂದಿಗೆ ಬಂದು ಸಂಗಮೇಶ್ವರ ಗುಡಿಯಲ್ಲಿದ್ದು ಶಿವಯೋಗ ಮಂದಿರದ ಭಿಕ್ಷೆಗಾಗಿ ಬಂದ ಕಾರಣವೇ ಮೇಲೆ ಹೇಳಿದ ವಿಷಯ ವಿಸ್ತಾರಕ್ಕೆ ಕಾರಣ. ಆಗ ಬೇಸಿಗೆಯ ರಜೆ. ನಾನು ಊರಲ್ಲಿದ್ದೆ. ಮಹಾಸ್ವಾಮಿಗಳವರ ದರ್ಶನ ತೆಗೆದುಕೊಂಡು ಬಂದೆ. ಅಂದು ನಮ್ಮೂರಲ್ಲಿ ಹಿರಿಯರು ಡಂಗುರ ಸಾರಿಸಿದರು, ಜೀರರ ನಾಗರಾಶಿಯಿಂದ- ಊರ ಪ್ರಮುಖರೆಲ್ಲ ಸಂಗಮೇಶ್ವರ ಗುಡಿಗೆ ಹಾಳಕೇರಿ ಮಹಾಸ್ವಾಮಿಗಳವರ ಸನ್ನಿಧಿಗೆ ಬರಬೇಕೆಂದು. ನಮ್ಮ ತಂದೆಯವರು ತೀರಿಕೊಂಡು ಏಳೆಂಟು ವರ್ಷಗಳು ಸಂದಿದ್ದವು. ಮನೆಯಲ್ಲಿ ಹಿರಿಯ ನಾನು. ಅದಕ್ಕೆ ನಾನು ಗುಡಿಗೆ ಹೋದೆ ನನ್ನೊಡನೆ ಹಲಕೆಲವು ಗೆಳೆಯರೂ, ಹಿರಿಯರೂ ಇದ್ದರು. ಗುಡಿಯಲ್ಲಿ ಸೇರಿದ ಹಿರಿಯರು, ಶ್ರೀಮಂತರು, ವತನದಾರರು ಮತ್ತು ದೊಡ್ಡ ಒಕ್ಕಲುಗಳು. ಈ ಸಂಗಮೇಶ್ವರ ಗುಡಿಯನ್ನು ತಾವೇ ಕಟ್ಟಿಸಿದ ಕೊಪ್ಪದ ಧರ್ಮಪ್ಪನವರು, ಮತ್ತೆ ದೊಡ್ಡ ವತನದಾರರಾದ ಅಂದಾನಗೌಡರು, ಅಣ್ಣಗೌಡರ ಪವಾಡೆಪ್ಪ, ರೊಟ್ಟಿ ಎಲ್ಲಪ್ಪನವರು, ಮುಧೋಳ ಫಕೀರಪ್ಪನವರು ಮುಂತಾದ ನಮ್ಮೂರ ಪ್ರಮುಖರು ಸೇರಿ ಸುಮಾರು ನೂರು ಜನ ಕೂಡಿರಬಹುದು ಗುಡಿಯಲ್ಲಿ ಸಮಯ ರಾತ್ರಿ ಸುಮಾರು ಏಳು-ಎಂಟು ಗಂಟೆ. ಮಹಾಸ್ವಾಮಿಗಳವರು ಮಂಚದಮೇಲೆ ಮಂಡಿಸಿದರು ಬಂದ ಬಂದವರೆಲ್ಲ ಸಾಷ್ಟಾಂಗ ಹಾಕಿ ಕುಳಿತುಕೊಂಡರು. ಮಂಚದ ಕೆಳಗೆ ಮಹಾಸ್ವಾಮೀಗಳ ಅಪ್ಪಣೆಯ ಮೇರೆಗೆ ಸಮೀಪ ಸನ್ನಿಧಿಯಲ್ಲಿಯೇ ನಾನು ಕುಳಿತೆ. ಹಿರಿಯರೆಲ್ಲಾ ನೆರೆದಮೇಲೆ ಮಹಾ ಸ್ವಾಮಿಗಳು “ಪ್ರಸ್ತಾಪ ಮಾಡಿದರು. ಭಕ್ತರನ್ನು ಕರೆಸಿಕೊಂಡ ಕಾರಣವನ್ನು ಶಿವಯೋಗಮಂದಿರದ ಸಾಲ ತೀರಿಸಲು ಊರ ಭಕ್ತರೆಲ್ಲ ತಮ್ಮೂರಿನ ಗೌರವಕ್ಕೆ ತಕ್ಕಂತೆ ತಾವು ತಮ್ಮ ಪಟ್ಟಿ ಕೊಟ್ಟು ಉಳಿದವರಿಂದಲೂ ಊರಲ್ಲೆಲ್ಲ ಪಟ್ಟಿ ಮಾಡಿ ಆ ಹಣ ಸಂಗ್ರಹಿಸಿ ಕೊಡಬೇಕು ಇದು ಸ್ವಾಮಿಗಳ ಅಪ್ಪಣೆ. ಇಂಥ ವಿಷಯ ನಮ್ಮೂರಿಗೇನೂ ಹೊಸದಲ್ಲ. ಪುರಾಣ, ಪುಣ್ಯ ಕಥೆ, ಕೀರ್ತನ, ಭಾಷಣ ಮುಂತಾದವು . ಮೇಲಿಂದ ಮೇಲೆ ನಡೆದು ಒಂದು ವಿಶೇಷ ಭಕ್ತಿಯಲ್ಲಿ ಬೆಳೆದುಬಂದ ನಮ್ಮೂರಿಗೆ ಇಂಥ ಪಟ್ಟಿ ಒಂದು ಸಂತೋಷದ ಸುದ್ದಿ, ಊರಲ್ಲಿ ಪಕ್ಷ ಪಂಗಡಗಳಿದ್ದುದು ನಿಜ. ಆಗೀಗ ಹೊಡೆದಾಟ, ಬಡೆದಾಟ ಆಗುತ್ತಿದ್ದುದೂ ಸತ್ಯ. ಆದರೆ ಯಾವ ಪಕ್ಷ ಪಂಗಡಗಳಲ್ಲಿ ಭಕ್ತಿಗೆ ಬರ ಇದ್ದಿಲ್ಲ, ಕೊಡುವ ಕೈಗೆ ಹಿಡಿತ ಇರಲಿಲ್ಲ. ಸಾಮಾನ್ಯವಾಗಿ ಬಹುಜನರಲ್ಲಿ ಉದಾರಭಾವ, ಸ್ವಾಮಿಗಳೆಂದರೆ ಭಯ-ಭಕ್ತಿ.
ಈ ಮಾತನ್ನು ನಾನು ಹೇಳುತ್ತಿರುವುದು ನಮ್ಮ ನೆರೆಯೂರುಗಳಾದ ಹಾಳಕೇರಿ, ಕೊಪ್ಪ, ನರೇಗಲ್ಲು ಮುಂತಾದ ಊರುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಭಕ್ತಿಯ ಭಾವಕ್ಕೆ ಔದಾರ್ಯಕ್ಕೆ ನಮ್ಮೂರು ಹೆಸರು. ಗುಡಿಯಲ್ಲಿ ಕೂಡಿದ ಹಿರಿಯರೆಲ್ಲ ಭಿಕ್ಷೆ ಕೊಡಲು ಒಪ್ಪಿದರು ನಿರರ್ಗಳ ಮನಸ್ಸಿನಿಂದ.
ಆಗ ಹುಟ್ಟಿದ ಪ್ರಶ್ನೆ – ಯಾರು, ಎಷ್ಟು ಕೊಡಬೇಕು, ಕೂಡಿಸಿಕೊಡಬೇಕು ಎಂಬುದು. ಹಾಳಿ ಲೆಕ್ಕಣಿಕೆ ತರಿಸಿದ್ದಾಯಿತು. ತಾವು ಕೊಡಬೇಕಾದ ಮೊತ್ತವನ್ನು ಬರೆಯಲು ಅಪ್ಪಣೆಯಾಯಿತು. ಹಿರಿಯ ಕುಳಗಳು ಅಂದಾನಿಗೌಡರು, ಕೊಪ್ಪದ ಧರ್ಮಪ್ಪನವರು ಮುಂತಾದವರು ಮೊದಲು ತಮ್ಮ ಸಂಖ್ಯೆ ಒಡೆಯಬೇಕು. ಆದರೆ ಅವರೇಕೋ ಹಿಂದೆಗೆದು ನನಗೇ ನನ್ನ ಅಂಕಿಯನ್ನು ಬರೆಯಲು ಆಗ್ರಹಪಡಿಸಿದರು. ಬೇಡವೆಂದರೂ ಕೇಳಲಿಲ್ಲ. ಮತ್ತುಳಿದವರಿಂದಲೂ ಅದೇ ಒತ್ತಾಯ, ಮೂವತ್ತರಿಂದ ಅರವತ್ತು ಕೂರಿಗೆ ಜಮೀನು ಇದ್ದ ಅವರ ಮುಂದೆ ನಾನೇನು ಬರೆಯಬೇಕು ? ಕರ್ನಾಟಕ ಕಾಲೇಜಿನಲ್ಲಿ ನಾನು ಅಧ್ಯಾಪಕ, ಬರುವ ಸಂಬಳ ಬಹಳ ಕಡಿಮೆ. ನಮಗಿದ್ದ ಜಮೀನು ಕೇವಲ ಹನ್ನೊಂದು ಎಕರೆ ! ಈ ಆರ್ಥಿಕ ಪರಿಸ್ಥಿತಿಯಲ್ಲಿ ನಾನು ಪಟ್ಟಿ ಎಷ್ಟು ಕೊಡಬೇಕು ? ನನಗನಿಸುವಂತೆ ನನ್ನ ಗರಿಷ್ಠಮಿತಿ ಐದು ರೂಪಾಯಿ. ಸಾಮಾನ್ಯ ಲೆಕ್ಕಾಚಾರದಲ್ಲಿ ಬರಿ ಎರಡು, ಮುಂದೆ ? ಆಗ ಹೊಳೆಯಿತು ಒಂದು ವಿಚಾರ ನನಗೆ ನಾನು ಐದು ರೂಪಾಯಿ ಕೊಟ್ಟರೆ ಉಳಿದ ಹಿರಿಯ ಕುಳಗಳೆಲ್ಲ ಎಂಟು ಹತ್ತು ರೂಪಾಯಿ ತಮ್ಮ ಗರಿಷ್ಠ ಎಂದು ಲೆಕ್ಕಹಾಕಿ ಕೊಡಬಹುದು. ಹೀಗಾದರೆ ಊರಿನ ಒಟ್ಟು ಭಿಕ್ಷೆ ಮೂರು-ನಾಲ್ಕು ನೂರರ ಒಳಗೆ ಆಗಬಹುದು. ಕನಿಷ್ಠ ಒಂದು ಸಾವಿರವನ್ನಾದರೂ ಮೀರಬೇಕು ನಮ್ಮೂರ ಭಿಕ್ಷೆ. ನನಗೆ ಇದ್ದ ತೊಂದರೆ ನನಗಿರಲಿ ಎಂದುಕೊಂಡು ನನ್ನ ಹೆಸರಿಗೆ ಇಪ್ಪತ್ತೈದು ರೂಪಾಯಿ ಬರೆದೆ. ಒಮ್ಮೆಲೇ ಬರೆದುದಕ್ಕಾಗಿ ಮಹಾಸ್ವಾಮಿಗಳಿಗೆ ಸ್ವಲ್ಪ ಸಂಶಯ ಬಂದಂತೆ ಕಂಡಿತು,
ನಾನು ಒಂದು ಎರಡು ಬರೆದರೆ ಪಟ್ಟಿ ಹೆಚ್ಚು ಏಳುವ ಸಂಭವವೇ ಇದ್ದಿರಲಿಲ್ಲ. ಅದಕ್ಕೆ ಮಹಾಸ್ವಾಮಿಗಳು ಒಮ್ಮೆಲೇ “ತತಾ ಇಲ್ಲೆ’ ಎಂದು ನನ್ನಿಂದ ಪಟ್ಟಿಯ ಕಾಗದವನ್ನು ಇಸಿದುಕೊಂಡರು. ನನ್ನ ಅಂಕಿ ಅವರಿಗೆ ಆಶ್ಚರ್ಯವಾಯಿತು;ಆನಂದವು ಆಯಿತು. ತಿರುಗಿ ನನ್ನ ಕೈಗೇ ಕೊಟ್ಟರು ಆ ಕಾಗದವನ್ನು ಉಳಿದವರಿಗೂ ಗೊತ್ತಾಯಿತು ನನ್ನ ಸಂಖ್ಯೆ. ಮುಧೋಳಫಕ್ಕಿರಪ್ಪ ನವರು ಮುಂತಾದ ಹಿರಿಯರು ಈ ಅಂಕಿಯನ್ನು ನೋಡಿ”ಇವರದೇನು ಯಾವಾಗಲೂ ಹೀಂಗ .ಇವರ್ನ ನಮ್ಮ ಲೇಕ್ಕಕ ತೊಗಾಳ್ಳಾಕ ಬರೂದಿಲ್ಲ” ಅಂದರೆ ಇವರ ಪ್ರಮಾಣದ ಪ್ರಕಾರ ತಾವು ಕೊಡಲು ಅಸಮ್ಮತಿ ವ್ಯಕ್ತಪಡಿಸಿದರು. ಏನೇ ಇರಲಿ ಆ ಸಂಖ್ಯೆ ಒಂದು ‘ಮೋಡಿ’ ಆಯಿತು. ಏಕೆ? ಮೇಲೆ ಹೇಳಿದ ಹಿರಿಯರು, ಶ್ರೀಮಂತರು,ವತನದಾರರು, ದೊಡ್ಡ ಕುಳಗಳು ಇಪ್ಪತ್ತೈದುಕಿಂತ ಕಡಿಮೆ ಹೇಗೆ ಕೊಡಬೇಕು? ಅವರು ಮುವತ್ತರಿಂದ ಐವತ್ತರವರೆಗೆ ತಮ್ಮ ಸಮ್ಮತಿ ವ್ಯಕ್ತಪಡಿಸಿ ಮತ್ತೆ ಹಣ ಸಂಗ್ರಹಿಸಿ ಕೊಡಲು ಒಪ್ಪಿಕೊಂಡರು. ಇನ್ನುಳಿದವರು, ಅಂದರೆ ಒಂದು-ಎರಡು ಕೊಡುವವರು ಕನಿಷ್ಠ ಹತ್ತು ರೂಪಾಯಿ ಕೊಡಬೇಕಾಯಿತು; ಕೊಟ್ಟರು. ಮಹಾಸ್ವಾಮಿಗಳವರಿಗೆ ಬಹಳ ಆನಂದವಾಯಿತು. ಆನಂದದಲ್ಲಿಯೇ ಸಭೆ ವಿಸರ್ಜನವಾಯಿತು. ಮುಂದೆ ನನಗೆ ನೆನಪಿದ್ದಂತೆ ಮೂರುನಾಲ್ಕು ದಿನಗಳಲ್ಲಿ ನಮ್ಮೂರ ಭಿಕ್ಷೆ ೧೮೦೦ಕ್ಕೆ (ಒಂದು ಸಾವಿರದ ಎಂಟು ನೂರಕ್ಕೆ) ಏರಿತು. ಈ ಹಣ ಉದ್ದೇಶಿತ ಹಣವಿಲ್ಲ, ರೋಖ ಮೊತ್ತ.ಊರಲೆಲ್ಲ ಕೂಡಿದುದು,ಇದರಲ್ಲಿ ಆಶ್ಚರ್ಯವೆನೆಂದು ನೀವು ಕೇಳಿದರೆ, ಆಗ ನಮ್ಮೂರಲ್ಲಿ ಸುಮಾರು ಏಳು ನೂರು ಮನೆ, ನಾಲ್ಕು ಸಾವಿರ ಒಟ್ಟು ಜನಸಂಖ್ಯೆ.ಇವರ ಕೊಟ್ಟ ಪಟ್ಟಿಯ ಹಣ ಅಂದಿನ ೧೮೦೦ (ಒಂದು ಸಾವಿರದ ಎಂಟು ನೂರು) ರೂಪಾಯಿಗಳು.
ಮಹಾಸ್ವಾಮಿಗಳವರು ನಿಡಗುಂದಿಯಿಂದ ನಿರ್ಭರ ಸಂತೋಷದಿಂದ ಪೂಜೆ ಪ್ರಸಾದ ಮುಗಿಸಿಕೊಂಡು ನಮ್ಮೂರಿಗೆ ಆಶೀರ್ವಾದಿಸಿ ಹೋದರು.
ಈ ಮಹಾಸ್ವಾಮಿಗಳವರು ಒಟ್ಟು ಎಷ್ಟು ಹಣ ಕೂಡಿಸಿದರು ನನಗೆ ಕಲ್ಪನೆ ಇಲ್ಲ. ಆದರೂ ಹೆಚ್ಚು ಕಡಿಮೆ ಹನ್ನೆರಡು ಸಾವಿರ ಇರಬಹುದು. ಇದರಂತೆ ಉಳಿದ ಸ್ವಾಮಿಗಳು, ಶಿವಯೋಗ ಮಂದಿರದ ಅಭಿಮಾನಿಗಳಾದ ಸಮಾಜದ ಮುಖಂಡರು ಕೂಡಿಸಿದ ಹಣದಿಂದ ಶಿವಯೋಗ ಮಂದಿರದ ಎಲ್ಲಾ ಸಾಲ ತೀರಿತೆಂದು ತೋರುತ್ತದೆ.
ಈ ಮೇಲಿನ ಮಾತಿನಲ್ಲಿ ತಪ್ಪು ಒಪ್ಪಿಕೊಳ್ಳುವ ಒಂದು ಪ್ರಸಂಗವಿದೆ. ನೆನಪಿನ ಸ್ಖಾಲಿತ್ಯ ಅಥವಾ ಸತ್ಯ ಸಂಗತಿಗಳ ಅರಿವಿನ ಕೊರತೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುತ್ತದೆ. ನಾನು ಮೇಲೆ ಹೇಳುವ ಇದೆ ‘ನಿರಾಧಾರ’ ವೇ ಕಾರಣ. ಏಕೆಂದರೆ- ಈ ಲೇಖನ ಬರೆಯುವಾಗ ಮಧ್ಯದಲ್ಲಿ ೧-೪-೧೯೮೯ ರಂದು ನಾನು ಬೆಳಗಾಂವಿಗೆ ಹೋದಾಗ ನಾಗನೂರ ಶಿವಬಸವ ಮಹಾಸ್ವಾಮಿಗಳಿಂದ ಖಚಿತವಾಗಿ ತಿಳಿದುಬಂದಂತೆ ಶಿವಯೋಗ ಮಂದಿರದ ಸುಮಾರು ೪೫ (ನಾಲ್ವತ್ತೈದು) ಸಾವಿರ ರೂಪಾಯಿಗಳ ಸಾಲವನ್ನೆಲ್ಲ-ಇದಲ್ಲದೇ ಮತ್ತೂ ತಿಳಿದುಬರುವಂತೆ ಶಿವಯೋಗಮಂದಿರಕ್ಕಾಗಿ ಮಹಾಸ್ವಾಮಿಗಳವರು ಮುವತ್ತು-ಮುವತ್ತೈದುಸಾವಿರ ರೂಪಾಯಿಗಳನ್ನು ಕೂಡಿಸಿ ಕೊಟ್ಟ ಸಂಗತಿ ತಿಳಿದುಬಂದಿದೆ.
ಇದಲ್ಲದೆ ಶಿವಯೋಗ ಮಂದಿರದ ಉಪಯೋಗಕ್ಕಾಗಿ ಕಾಳು-ಕಡಿಯನ್ನು ಕೂಡಿಸಿ ಕಳಿಸಿಕೊಡುತ್ತಿದ್ದರು. ಇದಕ್ಕೆ ಉದಾಹರಣೆ ಎಂದರೆ, ಒಮ್ಮೆ ಶಿವಯೋಗ ಮಂದಿರಕ್ಕೆ ಕಾಳಿನ ಕೊರತೆಯಾದಾಗ ನಮ್ಮೂರು ನಿಡಗುಂದಿ ಯವರೆಗೆ ಮೂರು-ನಾಲ್ಕು ದಿನಗಳಲ್ಲಿ ಸುಮಾರು ೬೫ ಚೀಲ ಜೋಳ ಹಾಗೂ ಗೋಧಿಯನ್ನು ಕೂಡಿಸಿ ಕೊಟ್ಟಿದ್ದು ನನಗೆ ಗೊತ್ತಿದೆ, ಮತ್ತೂ ಈ ಬಗ್ಗೆ ನನಗೆ ಗೊತ್ತಿರುವ ಸಂಗತಿ ಎಂದರೆ, ಈ ಕಾಳನ್ನು ಶಿವಯೋಗ ಮಂದಿರಕ್ಕೆ ಸಾಗಿಸಿಕೊಂಡು ಹೋಗುವುದೇ ಮಂದಿರದವರೆಗೆ ಆಗಲಿಲ್ಲ. ಅದಕ್ಕಾಗಿ ನಮ್ಮ ಊರವರೇ ತಾವೇ ಬಂಡಿಯನ್ನು ಕಟ್ಟಿಕೊಂಡು ಕಾಳನ್ನು ಮಂದಿರಕ್ಕೆ ಮುಟ್ಟಿಸಿ ಬಂದರು. ಶಿವಯೋಗಮಂದಿರ ಪುಣ್ಯಕ್ಷೇತ್ರದ ಪ್ರಭಾವ, ಅದಕ್ಕೂ ಮುಖ್ಯವಾಗಿ ಪೂಜ್ಯ ಶ್ರೀಗಳವರ ಬಗ್ಗೆ ನಮ್ಮೂರಿನ ಜನರಿಗಿದ್ದ ಅಪಾರ ಭಕ್ತಿ ಇವೇ ಅದಕ್ಕೆ ಕಾರಣ.
ಬೆಳಗಾವಿಂಯಲ್ಲಿ ನನಗೆ ತಿಳಿದುಬಂದ ಮತ್ತೊಂದು ಮಹತ್ವದ ವಿಷಯವೆಂದರೆ ಬೆಳಗಾಂವ ಜಿಲ್ಲೆಯ ನಾಗನೂರು ಶಿವಬಸವ ಸ್ವಾಮಿಗಳವರೆಗೆ ಅನುಗ್ರಹ ಮಾಡಿ ಅಲ್ಲಿರುವ ರುದ್ರಾಕ್ಷಿ ಮಠಕ್ಕೆ ಅಧಿಕಾರ ಕೊಟ್ಟವರು ಹಾಳಕೇರಿಯ ಅನ್ನದಾನ ಮಹಾಸ್ವಾಮಿಗಳವರೇ. ಈ ಸಂದರ್ಭದಲ್ಲಿ ಒಡೆದು ಮೂಡುವ ಒಂದು ಉಜ್ವಲ ಸಂಗತಿಯೆಂದರೆ ಅನ್ನದಾನಿ ಮಹಾಸ್ವಾಮಿಗಳವರಿಂದ ಅನುಗ್ರಹೀತರಾಗಿರುವ ಶಿವಬಸವ ಮಹಾಸ್ವಾಮಿಗಳು ಬೆಳಗಾಂವಿಯ ಭಾಗವಾದ ಶಹಾಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಮುವತ್ತು ಮುವತ್ತೈದು ಹುಡುಗರಿಗೆ ಪ್ರಸಾದ ಕೊಟ್ಟು ಅವರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರು ಇಂದಿಗೆ ಸುಮಾರು ಐವತ್ತು ವರ್ಷಗಳ ಹಿಂದೆ. ಈಗ ಈ ಪ್ರಸಾದ ನಿಲಯ ಈ ಅರ್ಧ ಶತಮಾನದಲ್ಲಿ ಬೃಹದಾಕಾರವನ್ನು ತಾಳಿ ಈಗ ಸುಮಾರು ನಾಲ್ಕೈದು ನೂರು ವಿದ್ಯಾರ್ಥಿಗಳಿಗೆ ಪ್ರಸಾದ ಕೊಡುತ್ತಿರುವರಲ್ಲದೆ ಬೇರೆ ಬೇರೆ ಕಡೆ ಶಿಕ್ಷಣ ಸಂಸ್ಥೆಗಳನ್ನೂ ಮತ್ತು ಬೆಳಗಾವಿಯ ವಸತಿ ಪ್ರೌಢಶಾಲೆ (ರೆಸಿಡೆನ್ಸಿಯಲ್ ಹೈಸ್ಕೂಲ್)ಯನ್ನು ತೆಗೆದು ಒಂದು ಆದರ್ಶವನ್ನು ಕಟ್ಟಿದ್ದಾರೆ. ಸಮಾಜದ ಸ್ವಾಮಿಗಳ ಕಣ್ಣಮುಂದೆ ಇಂದು ತೊಂಭತ್ತೊಂಭತ್ತನೆಯ ವಯಸ್ಸಿನಲ್ಲಿರುವ ಶೀಲ ವ್ರತ ಪೂಜೆ ಮತ್ತು ವ್ಯವಹಾರ ಕುಶಲತೆ ನೋಡಿ ಕಲಿತುಕೊಳ್ಳುವಂತಿವೆ, ಈ ಶತಸಾಮೀಪಾಯುಷ್ಯದ ತಪಸ್ವಿಗಳಲ್ಲಿ ನನಗೆ ತಿಳಿದುಬರುವಂತೆ ಇವರ ಶತಮಾನೋತ್ಸವವೂ ಉತ್ತರ ಕರ್ನಾಟಕದ ವೀರಶೈವ ಸಮಾಜ ಬಾಂಧವರಿಂದ ಅತ್ಯಂತ ವ್ಯಾಪಕವಾಗಿ ವಿಜೃಂಭಣೆಯಿಂದ ಮುಂದಿನ ವರ್ಷ ನೆರವೇರುವ ಭರಭರಾಟೆಯಲ್ಲಿದ್ದಂತಿದೆ ನಡೆಯಲಿ. ಸಮಾಜದ ನವ್ಯ ನವ ಜಾಗೃತಿ ಮೂಡಿಬರಲಿ. ಈ ಕಲ್ಯಾಣ ಪ್ರಸಂಗವನ್ನು ಅನ್ನದಾನಿ ಸ್ವಾಮಿಗಳವರೇ ಕಣ್ಣಾರೆ ಕಾಣುವಂತಿದ್ದರೆ ಅವರಿಗೆ ಆಗಬಹುದಾದ ಆನಂದ ಯಾವ ಕೋಟಿ!
ಇನ್ನು ಮುಂದೆ ನಾವು ಬರಬೇಕು ಜಾಲಿಹಾಳ-ಬೇಲೂರಿಗೆ, ಅನ್ನದಾನಿ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ನಡೆಸಿದ ಧಾರ್ಮಿಕ ಕಾರ್ಯದ ಚೈತನ್ಯಮಯ ಚಟುವಟಿಕೆಗಳನ್ನು ನಿರೀಕ್ಷಿಸಲಿಕ್ಕೆ. ಮಹಾಸ್ವಾಮಿಗಳಿಗಿದ್ದ ಸುಮಾರು ಇಪ್ಪತ್ತೇಳು ಮಠಗಳಲ್ಲಿ ಇದು ಒಂದು ಮಠ. ಬೇಲೂರು ಮತ್ತು ಜಾಲಿಹಾಳಗಳನ್ನು ಒಂದೆರಡು ಹೊಲಗಳ ಪಟ್ಟಿ ವಿಭಾಗಿಸುವ ಒಂದು ಕೂಡುಹಳ್ಳಿಯ ಪಟ್ಟಣವಾದರೂ ಈ ಮಠಕ್ಕೆ ಜಾಲಿಹಾಳಮಠವೆಂದೇ ಪ್ರಸಿದ್ಧಿ ಇದೆ. ಇಲ್ಲಿ ನಾವು ಬಂದುದಕ್ಕೆ? ಕಾರಣ ಹೇಳುತ್ತೇನೆ.
ಇಂದಿಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಮಹಾಸ್ವಾಮಿಗಳವರು ಈ ಭಾಗದ ಧರ್ಮ ಭಕ್ತಿ ಆಚಾರ ಹಾಗೂ ಸಂಸ್ಕೃತಿಯ ಬರಗಾಲವನ್ನು ಹೋಗಿಸಲೆಂದೇನೋ ಈ ಕಡೆ ದೃಷ್ಟಿ ಹರಿಸಿದರು. ತಮ್ಮ ಜಾಲಿಹಾಳಮಠದಲ್ಲಿ ಪುರಾಣ ಪ್ರವಚನ ಮುಂತಾದುವನ್ನು ನಡೆಸಿ, ಆ ಭಾಗದ ಜನತೆಯಲ್ಲಿ ಒಂದು ಜಾಗೃತಿಯನ್ನು ತಂದುಕೊಟ್ಟು ಆ ಭಾಗದ ಮುಖವನ್ನು ಅಜ್ಞಾನದಿಂದ ತಿರುಗಿಸಿ ಶಿವಸಂಸ್ಕೃತಿಯತ್ತ ಸಾಗಿಸಬೇಕೆಂದು ಹವಣಿಗೆ ಹಾಡಿದರು. ಆಗ ಪುರಾಣ ಪ್ರವಚನ ಮಾಡುವಲ್ಲಿ’ ದಿಗ್ವಿಜಯ ಪಟು’ವೆಂದುನಿಸಿಕೊಳ್ಳಬಲ್ಲ ಬಿಜಾಪುರದ ಶಂಭುಲಿಂಗ ಪಟ್ಟದ ದೇವರನ್ನು ಜಾಲಿಹಾಳಮಠದಲ್ಲಿ ಪ್ರವಚನ ಮಾಡಲು ಆಮಂತ್ರಣ ಕಳಿಸಿದರು. ಕೆಲವರು ಪ್ರಮುಖರು ಈ ಪಟ್ಟದ್ದೇವರು ಠೀವಿಯ ಪಟ್ಟದ್ದೇವರು ಪಂಚಾಚಾರ್ಯ ಪಕ್ಷದವರು. ಅಂದರೆ ವಿರಕ್ತರಾದ ಅನ್ನದಾನಿ ಮಹಾಸ್ವಾಮಿಗಳವರಿಗೆ ಪ್ರತಿಪಕ್ಷದವರೆನಿಸಿಕೊಳ್ಳುವಂತೆ ಇದ್ದವರು. ತಮ್ಮನ್ನು ಆಮಂತ್ರಿಸಬಂದ ಪ್ರಮುಖರಿಗೆ ಖಂಡ ತುಂಡವಾಗಿ ಹೇಳಿದರು ಈ ಶಂಭುಲಿಂಗ ಸ್ವಾಮಿಗಳು. ಮೊದಲೇ ಕರಾರು ಹಾಕಿದರು ‘ನಮ್ಮ ಪೂಜೆ ಪ್ರಸಾದ ಅನ್ನದಾನಿ ಸ್ವಾಮಿಗಳ ಸಂಗಡ ನಡೆಯಬಾರದು. ನಮ್ಮ ವ್ಯವಸ್ಥೆ ಬೇರೆ ಕಡೆಯೇ ನಡೆಯಬೇಕು ಮತ್ತು ಆ ಸ್ವಾಮಿಗಳ ಬಗ್ಗೆ ನಮಗೆ ಗೌರವ ಇದೆಯಾದರೂ ನಾವು ಅವರಿಗೆ ನಮಸ್ಕಾರ ಮಾಡುವವರಲ್ಲ. ಈ ಕರಾರು ಒಪ್ಪಿದರೆ ನಾವು ಬರಬಹುದು’. ಬಿಜಾಪುರದಿಂದ ಈ ಕರಾರು ಮತ್ತು ಒಪ್ಪಿಗೆಯನ್ನು ಹೊತ್ತುಕೊಂಡು ಪ್ರಮುಖರು ಜಾಲಿಹಾಳಿಗೆ ತಿರುಗಿ ಬಂದರು. ಪಟ್ಟದ ಸ್ವಾಮಿಗಳ ಒಪ್ಪಿಗೆಗೆ ಕರಾರಿನ ಈ ಮುಂಗಥೆಯನ್ನು ವಿವರಿಸಿದರು ಅನ್ನದಾನಿ ಸ್ವಾಮಿಗಳ ಮುಂದೆ. ಎಂದಿಗೂ ಗಂಭೀರ ಮುದ್ರೆಯ ಮಹಾಸ್ವಾಮಿಗಳು ನಸುನಗೆ ನಕ್ಕರು.”ಅವರು ಹೇಳಿದಂತೆ ಅವರ ಪೂಜೆಯ ವ್ಯವಸ್ಥೆ ಬೇರೆ ಮಾಡಿರಿ. ಮತ್ತು ಅವರಿಂದ ನಮಸ್ಕಾರವನ್ನು ನಾವೆಂದು ಅಪೇಕ್ಷಿಸುವುದಿಲ್ಲ. ಅವರನ್ನು ಕರೆದುಕೊಂಡು ಬರ್ರಿ”ಎಂದು ಪ್ರಮುಖರನ್ನು ಕಳುಹಿಸಿಕೊಟ್ಟರು.
ಶಂಭುಲಿಂಗ ಮಹಾಸ್ವಾಮಿಗಳು ಜಾಲಿಹಾಳಿಗೆ ಬಂದು ಪ್ರವಚನ ಪ್ರಾರಂಭ ಮಾಡಿದರು. ಯಾವ ಪುರಾಣ? ನನಗೆ ಗೊತ್ತಿಲ್ಲ. ಅಥವಾ ನೆನಪಿಲ್ಲ. ಆಗ ನಾನು ಹದಿನೈದು ಹದಿನಾರರ ವಯಸ್ಸಿನಲ್ಲಿರಬಹುದು. ಪುರಾಣ ಪ್ರವಚನಕ್ಕೆ ಪೂರ್ವರಂಗ ಪುರಾಣಿಕರು ಬಂದು ತಮ್ಮ ವ್ಯಾಸ ಪೀಠದ ಮೇಲೆ ಕುಳಿತು, ಮುಂದೆ ನಾಲ್ಕು ಕಾಲಿನ ಮಣೆಯ ಮೇಲೆ ಪುರಾಣವನ್ನಿಟ್ಟು ಎಡಗಡೆ ಬಲಗಡೆ ಬೆಳಗುವ ಸಮೆ; ಸಂಗೀತ ವಾದ್ಯಗಳು ತಬಲಾ, ಪಿಯಾನೋ. ಪ್ರವಚನ ಪ್ರಾರಂಭವಾಗುವ ಮುನ್ನ ಅನ್ನದಾನ ಮಹಾಸ್ವಾಮಿಗಳು ಪುರಾಣ ಮಂಟಪಕ್ಕೆ ದಯಮಾಡಿಸುವುದು. ಮಹಾಸ್ವಾಮಿಗಳವರ ತತ್ವ ‘ಲಾಂಛನಕ್ಕೆ ಶರಣೆಂಬೆ’ ಎಂಬುದು. ಬಂದವರು ಶಂಭುಲಿಂಗ ಸ್ವಾಮಿಗಳಿಗೆ ನಮಸ್ಕಾರ ಮಾಡಿ ತಮ್ಮ ಆಸನದ ಮೇಲೆ ಕುಳಿತುಕೊಳ್ಳುವುದು.
ಹಾಳಕೇರೆಯ ಅಜ್ಜನವರು ತಾವಾಗಿಯೇ ಮಣಿದುದ್ದನ್ನು ಕಂಡು ಶಂಭುಲಿಂಗ ಸ್ವಾಮಿಗಳ ಠೀವಿಯ ಮನಸ್ಸು ಮೇಣವಾಗಿರಬಹುದು. ಆಮೇಲೆ ಪ್ರಾರಂಭ ಪ್ರವಚನ, ಶಂಭುಲಿಂಗ ಸ್ವಾಮಿಗಳು ಸಂಸ್ಕೃತದಲ್ಲಿ ಘನವಿದ್ವಾಂಸರು. ಕನ್ನಡ ಹಿಂದೀ ಮುಂತಾದ ನಾಲ್ಕೈದು ಭಾಷೆಗಳಲ್ಲಿ ಪ್ರಭುತ್ವವಿದ್ದವರು. ಸಂಗೀತ ವಿದ್ಯೆಯಲ್ಲಿ ಬಲ್ಲಿದರು. ಮಂಗಲ ಪಾಠಮಾಡಲು ದನಿ ತೆಗೆದರೆ ಅವರ ಮಧುರ ಗಂಭೀರನಾದ ಅತ್ಯಂತ ಆಕರ್ಷಣೀಯ. ಎಂಥ ಹೃದಯವನ್ನಾದರೂ ತಲೆದೂಗಿಸುವ ಅವರ ಸಂಗೀತ ಕಲಾ ಪ್ರತಿಭೆ. ಇಂಥ ಪುರಾಣಿಕರನ್ನು ಆ ಭಾಗದ ಕಿವಿ ಎಂದೂ ಕೇಳಿರಲಿಲ್ಲ. ಕಣ್ಣು ಇಂಥ ಹೇಳುವವರನ್ನು ಎಂದು ನೋಡಿರಲಿಲ್ಲ. ಭರ್ತಿ ನಡೆಯುವುದು ಪುರಾಣ. ಈ ಪುರಾಣದ ಸುದ್ದಿ ಸುತ್ತಮುತ್ತಲಿನ ಹಳ್ಳಿ-ಪಟ್ಟಣಗಳಿಗೆ ಹಬ್ಬಿ ಶ್ರೋತೃಗಳ ಸಂದಣಿ ದಿನೇ ದಿನೇ ಬೆಳೆಯುತ್ತಾ ಸುಮಾರು ಐದುಸಾವಿರದಿಂದ ಹತ್ತು ಸಾವಿರ ಜನರವರೆಗೆ ಸಾವಿರ ಸಂಖ್ಯೆಯಲ್ಲಿ ಬೆಳೆಯುತ್ತ ನಡೆಯಿತು. ನಾನು ನಮ್ಮ ಸೋದರ ಮಾವನ ಊರಾದ ಜಾಲಿಹಾಳನಲ್ಲಿ ಇದ್ದಾಗ ಪುರಾಣ ಕೇಳಲು ಹೋಗಿದ್ದೆ. ಮಠದ ಮುಂದಿರುವ ಅತ್ಯಂತ ವಿಶಾಲವಾದ ಬಯಲಿನಲ್ಲಿ ಜನ ತುಂಬಿದ್ದರೆ ಹೊರಗಡೆ ನೂರಾರು ಚಕ್ಕಡಿಗಳು.ಈ ಚಕ್ಕಡಿ ಗಳಲ್ಲಿ ಬಂದವರಲ್ಲದೇ ಹಳ್ಳಿ-ಪಟ್ಟಣಗಳಿಂದ ನಡೆದುಬಂದ ಸಂಖ್ಯೆ ಅದೆಷ್ಟೋ ಇರಬಹುದು.ಮತ್ತೆ ಇಲ್ಲಿ ಒಂದು ಎಚ್ಚರ. ನಾನು ಹೇಳುವ ಅಂಕಿ ಸಂಖ್ಯೆ ಬೆರಳೆಣಿಕೆಯಲ್ಲ ಕಣ್ಣೆಣಿಕೆ ಪುರಾಣ ಕೆಳಗೆ ಕಳೆ ಏರಿ ಭರ್ತಿ ನಡೆದಾಗ ಪಿಯಾನೋ ಬಾರಿಸುವವರಿಗಾಗಲಿ ಅಥವಾ ತಬಲಾ ನುಡಿಸುವವರಿಗಾಗಲಿ ರಾಗ-ತಾಳಗಳನ್ನು ಸರಿಯಾಗಿ ನಡೆಸಲು ನಡುನಡುವೆ ಒಂದು ನಿಷ್ಠುರದ ಆದೇಶ. ಸ್ವಾಮಿಗಳ ಸಂಗೀತ ಶಕ್ತಿಯ ಬಹಿರಂಗ ಪ್ರದರ್ಶನ ಇದು. ನನಗೆ ನೆನಪಿದ್ದಂತೆ ಅಂದೇ ಹರಕುಣಿಯ ಪಟ್ಟದೇವರು ಬಂದಿದ್ದರು ಪುರಾಣ ಹೇಳುವ ಪದ್ಧತಿಯನ್ನು ಕಲಿಯಲು. ಆಗ ನಾನು ಕಂಡ ಒಂದು ನಿಷ್ಠುರ ಪ್ರಸಂಗ. ಅದೇನು? ಪಂಚಾಚಾರ್ಯರ ಪಕ್ಷದಲ್ಲಿದ್ದ ಕುಂದಗೋಳ ತಾಲೂಕಿನ ಹರಕುಣಿ ಪಟ್ಟದೇವರ ಕಡೆ ಮುಖಮಾಡಿ ಎಷ್ಟೋ ಸಾರಿ ಆಚಾರ್ಯ ಪಕ್ಷದ ಅವರಿಗೆ ಒಂದು ಎಚ್ಚರಿಕೆ ನೀಡಿ, ಆ ಪಕ್ಷದಲ್ಲಿ ಅರ್ಥ ಉಳಿದಿಲ್ಲ ವೆಂಬಂತೆ ಬಹಿರಂಗ ಸೂಚನೆಯನ್ನು ಕೊಡುವಂತಿತ್ತು. ಇದರ ಅರ್ಥವೇನು? ಬಿಜಾಪುರದಿಂದ ಆಚಾರ್ಯ ಪಕ್ಷದವರಾಗಿ ಬಂದ ಶಂಭುಲಿಂಗ ಸ್ವಾಮಿಗಳು, ಹಾಲಕೆರೆಯ ಅನ್ನದಾನಿ ಸ್ವಾಮಿಗಳ ಮಹೋನ್ನತ ವಿನಯ ಭಾವಕ್ಕೆ ಆಗಲೇ ಮಾರು ಹೋಗಿ ‘ಮತಾಂತರ’ವಾದಂತಿತ್ತು.. ಅಂದರೆ ವಿರಕ್ತ ಸಂಪ್ರದಾಯದ ಸತ್ವಪೂರ್ಣ ಗಂಭೀರೋನ್ನತಿಗೆ ಮಾರುಹೋಗಿದ್ದರು.
ನಾನು ಕೇಳುವಂತೆ ಅನ್ನದಾನಿ ಸ್ವಾಮಿಗಳನ್ನು ಕಂಡಾಗ ತಾವೇ ಮೊದಲು ಮಣಿದು ನಮಸ್ಕಾರ ಮಾಡತೊಡಗಿದರು. ಬೇಲೂರಿನಲ್ಲಿ ನಡೆದ ಈ ಪುರಾಣದ ಪ್ರಸಂಗದಲ್ಲಿ ಅನೇಕ ಭಕ್ತರು ತಾವು ತಾವಾಗಿಯೇ ಪುರಾಣ ಕೇಳಲು ಬಂದ ಸಾವಿರಾರು ಭಕ್ತರ ದಾಸೋಹಕ್ಕಾಗಿ ದವಸ ಧಾನ್ಯಗಳನ್ನು ತಂದು ಮಠವನ್ನು ತುಂಬುತ್ತಿದ್ದರು. ಏಕೆಂದರೆ ಪುರಾಣ ರಾತ್ರಿ ೧೦ ಗಂಟೆಗೆ ಅಥವಾ ಮೀರಿ ನಡೆಯುತ್ತಿದ್ದು ಬಂದ ಜನ ಸಂದಣಿ ಅಲ್ಲಿಯೇ ಪ್ರಸಾದ ತೀರಿಸಿಕೊಂಡು ತಮ್ಮ ನೆರೆಯ ಹಳ್ಳಿಗೆ ಹೋಗುತಿದ್ದರು. ಈ ಪುರಾಣ ಸಂಭ್ರಮದ ಮಹಾಚಿತ್ರ ನನ್ನ ಹೃದಯದ ಕಣ್ಣಿನಲ್ಲಿ ಅಚ್ಚೊತ್ತಿದಂತಿದೆ. ಆ ಪುರಾಣವನ್ನು ಸಾಕ್ಷಾತ್ತಾಗಿ ಕೇಳುವಂತಿವೆ. ಇನ್ನೇನು? ಇಂಥ ಪುರಾಣವನ್ನು ನಾನು ನನ್ನ ಆಯುಷ್ಯ ಮಾನದಲ್ಲಿ ಕೇಳಿಲ್ಲ ಕಂಡಿಲ್ಲ. ಸುಮಾರು ನೂರಾರು ಪುರಾಣಿಕರನ್ನು ನಾನು ನೋಡಿರಬಹುದು; ಕೇಳಿರಬಹುದು. ಆದರೆ ಇದಕ್ಕೆ ಸರಿ ದೊರೆಯಾದ ಪ್ರವಚನ ನನ್ನ ಅನುಭವಕ್ಕೆ ಎಂದೂ ಬಂದಿಲ್ಲ. ಆ ಮಟ್ಟ ಅಲ್ಲಿ, ಈ ಮಟ್ಟ ಇಲ್ಲಿ! ಮತ್ತೊಂದು ಮಾತು. ಅನ್ನದಾನಿ ಮಹಾಸ್ವಾಮಿಗಳವರು ನೆರವೇರಿಸಿದ ಪುರಾಣ ಪ್ರವಚನ ಪ್ರಸಂಗಗಳಲ್ಲಿ ಇಂಥದ್ದು ಏಕೈಕ ಪ್ರಸಂಗ ಆಗಿರಬಹುದೆಂದು ನನ್ನ ಲೆಕ್ಕ. ಮಾಡುವಲ್ಲಿ (ಬಬಲಾದಿಯ ಹತ್ತಿರ ಇರುವ) ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳು! ಭಾಷಣ ಮಾಡುವಲ್ಲಿ ಕೊಪ್ಪದ ಅಥವಾ ಇಳಕಲ್ಲಿನ ಮಹಾಂತಸ್ವಾಮಿಗಳನ್ನು. ಧಾರ್ಮಿಕ ಶ್ರಾವಣಮಾಸದಲ್ಲಿ ಇವರೇ ನನ್ನ ಮನವನ್ನು ಮಾರಿಗೊಂಡ ಮಹಾವ್ಯಕ್ತಗಳು. ಇನ್ನು ಮುಂದೆ ಮಾತಿಲ್ಲ.
ಮೊದಲು ಕಟ್ಟಾ ಪಂಚಾಚಾರ್ಯ ಪಕ್ಷದವರಾಗಿದ್ದ ಶಂಭುಲಿಂಗ ಪಟ್ಟದ ದೇವರು ಜಾಲಿಹಾಳಿಗೆ(ಬೇಲೂರಿಗೆ) ಪುರಾಣ ಹೇಳಲಿಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬಂದದ್ದು ಸತ್ಯ. ಆದರೆ ಅನ್ನದಾನೀಶ್ವರ ಮಹಾಸ್ವಾಮಿಗಳವರ ಗಂಭೀರ ವ್ಯಕ್ತಿತ್ವದ ಪ್ರಭಾವದಿಂದ ಅವರ ಹೃದಯದಲ್ಲಿ ಒಂದು ಪರಿವರ್ತನೆ ತಲೆದೋರಿ ಅದು ಚಿರಸ್ಥಾಯಿಯಾಗಿ ನೆಲೆಯೂರಿತು. ಏಕೆಂದರೆ ಅವರಲ್ಲಿ ಲೋಕ ಅಲೌಕಿಕದ ಬಗೆಗೆ ಒಂದು ತರಹದ ವಿರಕ್ತಿ ಒಡಮೂಡಿ ಅವರು ತಮ್ಮ ವಾಸಸ್ಥಳವಾದ ಬಿಜಾಪುರವನ್ನು ಬಿಟ್ಟು ಹುಲ್ಯಾಳಲ್ಲಿ (ತಾಲೂಕ ಜಮಖಂಡಿ. ಜಿಲ್ಲಾ ಬಿಜಾಪುರ) ಆಶ್ರಮ ಕಟ್ಟಿಕೊಂಡು ಒಳ್ಳೆಯ ತಪಸ್ವಿಗಳಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಭಾವಲಯವನ್ನು ವಿಸ್ತರಿಸಿದರು. ಅವರು ಈ ತಪೋಭೂಮಿಯಲ್ಲಿ ಹೆಚ್ಚುಕಡಿಮೆ ನೂರು ವರ್ಷ ಬದುಕಿ ಲಿಂಗೈಕ್ಯರಾದರು. ಅಲ್ಲಿ ಇವರ ಗದ್ದುಗೆ, ನಿತ್ಯಾಭಿಷೇಕ, ಪ್ರತಿವರ್ಷ ಮಹೋತ್ಸವ ಇಂದೂ ಜರುಗುತ್ತಿದೆ ಎಂಬುದು ನಾನು ಕೇಳುತ್ತಿರುವ ವಿಷಯ.
ಜಾಲಿಹಾಳದಲ್ಲಿ ಅನ್ನದಾನಿ ಮಹಾಸ್ವಾಮಿಗಳ ದರ್ಶನ ಪಡೆದು ತನ್ನ ಬಾಲ್ಯಾವಸ್ಥೆಯಲ್ಲಿ. ಈ ಘಟನೆ ನಡೆದ ಮೇಲೆ ಮುಂದೆ ಹತ್ತು-ಹದಿನೈದು ವರ್ಷಗಳ ನಂತರ ೧೯೪೦ರ ಎಡ-ಬಲ ನಡೆದ ಮತ್ತೊಂದು ಮಹತ್ವದ ಪ್ರಸಂಗ. ನಮ್ಮ ತಾಯಿಯ ತಮ್ಮ, ಅಂದರೆ ನಮ್ಮ ಸೋದರ ಮಾವ ಗುರುಪಾದಯ್ಯನವರು ಇಟಗಿಯಲ್ಲಿದ್ದ ತನ್ನ ಎಂಟು ಹತ್ತು ಎಕರೆ ಜಮೀನನ್ನು ಬಿಟ್ಟು ಗಂಡನನ್ನು ಕಳೆದುಕೊಂಡಿದ್ದ ತಂಗಿ ಬಸಮ್ಮನಿಗೆ ದತ್ತಕ ಮಗನಾಗಿ ಜಾಲಿಹಾಳಿಗೆ ಹೋದ. ಅವರ ಅಲ್ಲಿಯ ಆ ಆಸ್ತಿಯನ್ನು ಎತ್ತಿ ಹಾಕಬೇಕೆಂದು ಜೋಗಿಮಠದ ಗುರಯ್ಯ ನವರ ಎರಡನೆಯ ಅಣ್ಣ ತಮ್ಮಂದಿರು ಪ್ರಯತ್ನ ನಡೆಸಿದರು. ನ್ಯಾಯ ನಡೆಯಿತು ಬದಾಮಿ ಕೋರ್ಟಿನಲ್ಲಿ. ನಮ್ಮಕ್ಕನನ್ನು ಈ ಗುರುಪಾದಯ್ಯ ನವರಿಗೆ ಮದುವೆ ಮಾಡಿ ಕೊಟ್ಟದ್ದರಿಂದ ನಮ್ಮ ತಂದೆಯವರು ಆ ನ್ಯಾಯದಲ್ಲಿ ಭಾಗವಹಿಸಲೇ ಬೇಕಾಯಿತು. ಪ್ರತಿಪಕ್ಷದ ಹೊನ್ನೂರು ಸಿದ್ದಲಿಂಗಯ್ಯನವರ ನಮ್ಮ ತಂದೆಯವರಿಗೆ ಮಣಿಯುವಂತಿರಲಿಲ್ಲ. ಆದ್ದರಿಂದ ಜಾಲಿಹಾಳ ಪೊಲೀಸ್ ಗೌಡರಾದ ಹೊನ್ನಪ್ಪ ಗೌಡರಿಗೆ ಆ ನ್ಯಾಯ ಗೆದ್ದು ಕೊಡಲು ಒಪ್ಪಿಗೆ ಮಾಡಿಕೊಂಡರು. ಕರಾರು; ಊರಿಗೆ ಹತ್ತಿ ದೊಡ್ಡ ಹಳ್ಳದ ದಂಡೆಗೆ ಇರುವ ಸುಮಾರು ಹದಿನೆಂಟು ಎಕರೆ ಒಳ್ಳೆಯ ಫಲವತ್ತಾದ ಹೊಲವನ್ನು ಹತ್ತು ವರ್ಷ ಉಣ್ಣಬೇಕು ಮತ್ತು ಮೇಲೆ ಐದು ನೂರು ರೂಪಾಯಿ ಕೊಡಬೇಕು. ಹೊಲದ ಕಬ್ಜಾದ ಸಲುವಾಗಿ ಮಾರಾಮಾರಿಯಾಗಿ ಹೊನ್ನಪ್ಪ ಗೌಡರು ಕಾಲು ಮುರಿಸಿಕೊಂಡರು. ಆದರೂ ನ್ಯಾಯ ಗೆದ್ದು ಕೊಟ್ಟರು. ಅವರು ತೀರಿಹೋದ ಮೇಲೆ ಅವರ ಮಕ್ಕಳಾದ ಶಿವನ ಗೌಡರು (ಹಿರಿಯ ಮಗ), ಲಿಂಗನಗೌಡ ರು (ಚಿಕ್ಕಮಗ) ಹೊಲವನ್ನು ಹತ್ತು ವರ್ಷ ಭೋಗಿಸಿದರು. ಹಣ ಮಾತ್ರ ಸಂದಾಯ ವಾಗಲಿಲ್ಲ. ಹತ್ತು ಹನ್ನೆರಡು ವರ್ಷಗಳಾದರೂ ಸಹಿತ ವರ್ಷವರ್ಷಕ್ಕೆ ಬಡ್ಡಿ ಬೆಳೆಯುತ್ತ ನಡೆಯಿತು. ಅಸಲು ಮತ್ತು ಐದುನೂರು ರೂಪಾಯಿ, ಬಡ್ಡಿ ಸೇರಿ ಒಂದು ಸಾವಿರ ಐದುನೂರಕ್ಕೂ ಹೆಚ್ಚಿರಬಹುದು. ಸರಾಸರಿ ಆ ಹೊಲವನ್ನು ಖರೀದಿಗೆ ಕೊಳ್ಳಬಲ್ಲ ಮೊತ್ತ ಅದು. ಸ್ವಾಭಿಮಾನದ ಸ್ವಭಾವವುಳ್ಳ ನಮ್ಮ ಮಾವನವರು ಆ ಸಾಲತೀರುವವರಿಗೆ ಬೆಲ್ಲವನ್ನು ತಿನ್ನಲಿಕ್ಕೆಲ್ಲವೆಂದು ತಮಗೆ ತಾವೇ ಆಣೆ ಹಾಕಿಕೊಂಡರು. ಈ ಪ್ರತಿಜ್ಞ ಮುಂದುವರೆಯಿತು ವರ್ಷ, ದೀಡುವರ್ಷ. ಈ ಸಂಗತಿ ಮೊದಲು ನನಗೆ ಗೊತ್ತಿರಲಿಲ್ಲ ಮಾವನವರು ನಮ್ಮೂರಿಗೆ ಬಂದರು. ರಾತ್ರಿ ಊಟಕ್ಕೆ ಕುಳಿತಾಗ ನಮಗೆ ಮಾಡಿದ್ದ ಬೆಲ್ಲದ ಅಡಿಗೆಯನ್ನು ಉಣ್ಣಲಿಲ್ಲ. ಕಾರಣವೇನು? ನಮ್ಮ ತಾಯಿ ಹೇಳಿದರು-ನನ್ನ ತಮ್ಮನ ಪ್ರತಿಜ್ಞೆಯ ಪ್ರಸಂಗವನ್ನು, ಅಂತೂ ಊಟ ಮುಗಿಸುವುದರೊಳಗೆ ನಮ್ಮ ತಾಯಿ ಗಟ್ಟಿಯಾಗಿ ಹೇಳಿದರೂ ನನಗೆ. ಸಾಮಾನ್ಯವಾಗಿ ನಮ್ಮ ತಾಯಿಯವರ ಮಾತನ್ನು ಕಟ್ಟಪ್ಪನಂತೆಯೇ ನಡೆಸಿಕೊಂಡು ಬಂದಿದ್ದ ನಾನು ಮಾವನ ಸಾಲವನ್ನು ತೀರಿಸಲೇಬೇಕೆಂದು ನಿರ್ಧರಿಸಿದೆ. ಆಗ ಅನ್ನದಾನಿ ಮಹಾಸ್ವಾಮಿಗಳು ಜಾಲಿಹಾಳದಲ್ಲೆ ಇರುವುದು ತಿಳಿಯಿತು. ಗುರುಪಾದಯ್ಯ ಮಾವನವರು ಜಾಲಿಹಾಳಿಗೆ ಹೋದರು. ಮೂರು ನಾಲ್ಕು ದಿನಗಳಲ್ಲಿ ನಾನು ಕೆಲವರೊಡನೆ ಜಾಲಿಹಾಳಿಗೆ ಬಂದು ಮಹಾ ಸ್ವಾಮಿಗಳ ದರ್ಶನ ಪಡೆಯುತ್ತೇನೆ ಎಂಬ ಬಿನ್ನಹವನ್ನು ಕಳಿಸಿದೆ ಅವರೊಡನೆ.
ನಮ್ಮೂರ ಪ್ರಮುಖ ವ್ಯಕ್ತಿಗಳ ಒಡನಾಟ ನನಗೆ ಹೆಚ್ಚು. ಅವರಲ್ಲಿ ಕೊಪ್ಪದ ಶಿವನ ಗೌಡರು (ಹಿಂದೆ ಹೇಳಿದ ಕೊಪ್ಪದ ಧರ್ಮಪ್ಪನವರ ಅಳಿಯಂದಿರು) ಮುಧೋಳ ಫಕೀರಪ್ಪನವರು, ಅಣ್ಣಗೌಡರ ಪವಾಡೆಪ್ಪ, ಡುಮ್ಮವೀರಪ್ಪ ಮತ್ತು ನಮ್ಮ ಮಾವ ನಾರಾಯಣಪುರದ ಅಂಗಡಿ ಚನ್ನಬಸಯ್ಯನವರು ಇವರನ್ನು ಕರೆದುಕೊಂಡು ನಮ್ಮ ಚಕ್ಕಡಿಯನ್ನು ಕಟ್ಟಿಸಿಕೊಂಡು ಜಾಲಿಹಾಳಿಗೆ ಹೊರಟೆವು. ನಾವೆಲ್ಲ ಕೂಡಿಕೊಂಡು ಬಂದುದೇಕೆ ಎಂಬ ಸಂಗತಿಯನ್ನು ಅರಿಕೆ ಮಾಡಿಕೊಂಡೆವು, ಬೇಲೂರಿನಲ್ಲಿರುವ ಅನ್ನದಾನಿ ಮಹಾಸ್ವಾಮಿಗಳವರಲ್ಲಿ. ಈ ಮೊದಲೇ ನಾನು ತಿಳಿಸಿರುವಂತೆ ಮಹಾಸ್ವಾಮಿಗಳವರ ಪ್ರೇಮ, ವಾತ್ಸಲ್ಯ, ಅಭಿಮಾನ, ನನ್ನ ಬಗ್ಗೆ ಒಂದು ವಿಶೇಷ ಆಸಕ್ತಿ ಎಂದಿಗೂ ಹೆಚ್ಚು. ಪೂಜೆಯ ನಂತರ ಮಹಾಸ್ವಾಮಿಗಳವರು ಬೇಲೂರು ಮತ್ತು ಜಾಲಿಹಾಳದ ಪ್ರಮುಖರನ್ನು ತಮ್ಮ ಮಠಕ್ಕೆ ಕರೆಸಿಕೊಂಡಿದ್ದರು; ಅವರಲ್ಲಿ ಗುರುಬಸಪ್ಪನವರು, ತೆಂಗಿನಕಾಯಿಯವರು ಮತ್ತು ಕಂಬಾಳಿಮಠದ ಶಾಂತವೀರಯ್ಯನವರು ಇವರೇ ಮುಂತಾದವರು ನ್ಯಾಯ ತೀರಿಸಲು ಸಹಾಯವಾಗಲೆಂದು, ಜಾಲಿಹಾಳ ಶ್ರೀ ಶಿವನ ಗೌಡರಿಗೂ ಬರಹೇಳಿದ್ದರು. ನಾವು ಜಾಲಿಹಾಳದಿಂದ ಬೇಲೂರು ಮಠಕ್ಕೆ ಹೋದೆವು.
ನಡುವೆ ಒಂದು ಮಾತು. ಹೊಲದ ಸಲುವಾಗಿ ನ್ಯಾಯ ನಡೆದ ಕಾಲಾವಧಿಯಲ್ಲಿದ್ದ ಜಾಲಿಹಾಳ ಅಥವಾ ಬೇಲೂರು ಭಕ್ತಿ, ನೀತಿ,, ಸಂಸ್ಕೃತಿ ಸಾಕಷ್ಟಿಲ್ಲದ ಒಂದು ನರವಿಂಧ್ಯಾ. ಆದರೆ ಮಹಾಸ್ವಾಮಿಗಳು ಬೇಲೂರು ಮಠದಲ್ಲಿ ಬಂದು, ಪುರಾಣ, ಪ್ರವಚನ, ಪ್ರಸಾದ, ಆರೋಗಣೆ ಮುಂತಾದವು ನಡೆದು ಆ ಭಾಗದ ವಾತಾವರಣ ಒಂದು ಪ್ರಕಾರದ ದೀಕ್ಷೆಯನ್ನು ಪಡೆದಂತಾಗಿತ್ತು. ಹಿಂದಿನ ವಾತಾವರಣದಲ್ಲಿ ಈ ಶಿವನಗೌಡರು ಮಠಕ್ಕೆ ದರ್ಶನಕ್ಕೆ ಬರುತ್ತಿದ್ದರೆಂದು ಹೇಳುವುದು ಕಷ್ಟ. ಆದರೆ ಭಕ್ತಿಯ ವಾತಾವರಣ ಹರಡಿಕೊಂಡಿದ್ದ ಇಂದು ಗೌಡರ ಮನಸ್ಸು ಮಾರ್ಪಾಟಾಗಿ, ಹೃದಯ ಸ್ವಲ್ಪ ಮಿದುವಾಗಿ, ಅವರ ಭಾವನೆಯಲ್ಲಿ ಸ್ವಾಮಿಗಳ ಒಂದು ಪ್ರಭಾವ ಅಚ್ಚುಹಾಕಿದಂತಿತ್ತು. ಅಂತೆಯೇ ನಮ್ಮ ಮಾವನವರ ಸಾಲದ ವಿಷಯ ನಿರ್ಣಯ ವಾಗಲು ಬಹಳ ಹೊತ್ತು ಹಿಡಿಯಲಿಲ್ಲ. ತಾಸೆರಡು ತಾಸು ಗಳಲ್ಲಿ ಮಹಾಸ್ವಾಮಿಗಳ ಅಪ್ಪಣೆಯ ಪ್ರಕಾರ ಏಳುನೂರು ಐವತ್ತು ರೂಪಾಯಿ ಕೊಟ್ಟು ಸಾಲ ತೀರಿಸಬೇಕೆಂದು ತೀರ್ಮಾಣವಾಯಿತು. ಅಂದು ನನಗೆ, ನಮ್ಮ ಮಾವನಿಗೆ ಮತ್ತು ಬಂದ ಹಿರಿಯರಿಗೆ ಎಂಥಾ ಆನಂದ, ಎಷ್ಟು ಆನಂದ ವಾಗಿರಬಹುದು?
ಮಹಾಸ್ವಾಮಿಗಳ ಅಪ್ಪಣೆಯಂತೆ ಸಾಲದ ಹಣವನ್ನು ನಾನೇ ಕೊಟ್ಟೆ. ನಮ್ಮ ಮಾವನ ಕಣ್ಣಲ್ಲಿ ನೀರು! ಮುಖದಲ್ಲಿ ದೈನ್ಯ! ಬಿಚ್ಚಿ ಹೇಳಬೇಕೆಂದರೆ ನನ್ನ ಕಾಲಿಗೆ ಬಿದ್ದು ದುಃಖ, ಆನಂದ ತುಂಬಿದ ಧ್ವನಿಯಲ್ಲೇ”ನೀನು ಮಾಡಿದ ಉಪಕಾರ,,,,, ಈ ನನ್ನ ಹೊಲ ನಿನ್ನ ಹೆಸರಿಗೇ ಮಾಡಿಸಿಕೊಂಡು ಬಿಡು,,,,”ಆ ಹೊಲವನ್ನು ನನ್ನ ಹೆಸರಿಗೆ ಖರೀದಿ ಮಾಡಿಸಿಕೊಳ್ಳಬೇಕೆಂದು ನಾನು ಸಾಲ ತೀರಿಸಲಿಲ್ಲ. ಆದರೆ ನಮ್ಮ ಮಾವ ಸಕ್ಕರೆ-ಬೆಲ್ಲ ಉಂಡು ಜಮೀನು ಮಾಡಿಸಿಕೊಂಡು ಸುಖವಾಗಿರಲೆಂದು. ನಮ್ಮ ತಾಯಿಯವರ ಅಣತಿ ಪೂರ್ತಿಯಾಯಿತು. ನಮ್ಮ ತಾಯಿಯವರ ತೃಪ್ತಿ ಇಂದಿಗೂ ನನ್ನನ್ನು ಆ ತೃಪ್ತಿಯ ಮನೋಭಾವದಲ್ಲಿ ಇಟ್ಟಿದೆ.
ಇಲ್ಲಿ ನಡೆದ ಒಂದು ಸಂಗತಿಯನ್ನು ನಿಮಗೆ ಹೇಳಬೇಕೆಂಬ ಮನದ ಹುಚ್ಚು, ಚಪ್ಪಲ, ಅದೇನು? ಎಂದು ನೀವು ಕೇಳಿದರೆ, ಜಾಲಿಹಾಳ ದಲ್ಲಿ ಮಹಾಸ್ವಾಮಿಗಳ ಅಪ್ಪಣೆಯಂತೆ ಸಾಲದ ನ್ಯಾಯ ನಿಖಾಲಿ ಆದ ದಿನ ಸಾಯಂಕಾಲ ಸುಮಾರು ೫ ಗಂಟೆಗೆ ಜಾಲಿಹಾಳನ್ನು ಬಿಟ್ಟು ನಮ್ಮೂರ ಹಿರಿಯರೊಡನೆ ನಮ್ಮ ಚಕ್ಕಡಿಯಲ್ಲಿ ಇಟಗಿ (ಶಾಂತಗೇರಿ) ಗೆ ಈ ಸಂಗತಿಯನ್ನು ಇಟಗಿ ಯಲ್ಲಿದ್ದ ನಮ್ಮ ಮಾವಂದಿರು ಅಂದರೆ ನಮ್ಮ ಬಳಕೆ ಮಾತಿನಲ್ಲಿ ಉಪಯೋಗಿಸುವ ರಕ್ತ ಬಾಂಧವ್ಯವನ್ನು ಸೂಚಿಸುವ ಶಬ್ದ ಅಷ್ಟೇ, ಶ್ರೀ ಅಂದಾನಿಗೌಡರಿಗೆ ಜಾಲಿಹಾಳ ನ್ಯಾಯ ನಿಖಾಲಿ ಆದ ಸಂಗತಿಯನ್ನು ತಿಳಿಸಿಯೇ ಹೋಗಬೇಕೆಂದು ಹಾದಿಯಲ್ಲಿ ಬಂಡೆಯನ್ನು ತರುಬಿ ಒಬ್ಬಿಬ್ಬರೊಡನೆ ಗೌಡರ ಮನೆಗೆ ಹೋಗಿ ಜಾಲಿಹಾಳ ಸುದ್ದಿಯನ್ನು ತಿಳಿಸಿದೆ. ಬಹಳ ಸಂತೋಷ ಪಟ್ಟವರು ನಿಡಗುಂದಿ ಗೆ ನಮ್ಮನ್ನು ಹೋಗಲು ಬಿಡಲಿಲ್ಲ. ತಮ್ಮ ಮನೆಯಲ್ಲಿ ಪ್ರಸಾದ ತೆಗೆದುಕೊಂಡು ಹೋಗಲೇಬೇಕೆಂದು ಒಂದು ಬಗೆಯ ಕಟ್ಟಪ್ಪಣೆಯನ್ನೇ ಮಾಡಿದರು.
ಇಟಗಿಯ ಪೋಲೀಸಗೌಡರಾದ ಅವರ ಜಾಯಮಾನವೇ ಅಂಥದಾಗಿತ್ತು. ಎಲರೂ ಆದಷ್ಟು ತೀವ್ರ ಸ್ನಾನ ಮಾಡಿಕೊಂಡು ಫಲಾಹಾರ ತೀರಿಸಿಕೊಂಡು ಹೋಗಬೇಕೆಂದು ಹೇಳಿ ಸುಮಾರು ಮುಂಜಾನೆ ೮ ರಿಂದ ೮-೩೦ ಗಂಟೆಯೊಳಗೆ ಬೇಸನ್ ಉಂಡಿ ಮತ್ತು ಒಗ್ಗರಣೆ ಅವಲಕ್ಕಿ ಮುಂತಾದವನ್ನು ಯಥೇಚ್ಛ ತಿನಿಸಿ ಆದಮೇಲೆ ಹೊರಡಬಹುದು ಎಂದು ಸಮ್ಮತಿಕೊಟ್ಟರು ಗೌಡರು. ನಮ್ಮ ಆನಂದದಲ್ಲಿ ಗೌಡರ ಭಾವ ವೈಶಾಲ್ಯ ತುಂಬಿ ಇಟಗಿಯಿಂದ ನಿಡಗುಂದಿಗೆ ಅಗಲವಾಗಿ ಬಂದೆವು. ಈ ಸಂಗತಿಯ ನೆನಪು ಇಂದಿಗೂ ನನ್ನಲ್ಲಿ ಹಸಿರಾಗಿ ಉಳಿದಿದೆ.
ಹಾಳಕೆರೆ ಮಹಾಸ್ವಾಮಿಗಳವರ ಪ್ರಭಾವಲಯದಲ್ಲಿ ಸಿಕ್ಕು ಪ್ರಭಾವಶಾಲಿಗಳಾಗಿ ಬೆಳೆದು ತಮ್ಮ ಬಾಳುವೆಯನ್ನು ಉತ್ತಮ ಶೀಲ, ಉದಾತ್ತ ಚರಿತ, ಉದಾರಭಾವವನ್ನು ಜೀವಿಸಿಕೊಂಡಿದ್ದ ಈ ಗೌಡರು ಮಹಾಸ್ವಾಮಿಗಳ ಪರಮ ಭಕ್ತರು. ಇಂಥ ಮಹೋನ್ನತಿಯ ಭಕ್ತ ಗಣವನ್ನು ಪಡೆದ ಅನ್ನದಾನಿ ಮಹಾಸ್ವಾಮಿಗಳವರ ಘನತೆ ಎಂಥದು ! ಗಣಿತದ ಲೆಖ್ಖವಲ್ಲ ಇದು. ಅಂತೆಯೇ ಇಟಗಿ ಎಂಬ ಹೆಸರು ನೆನಪಿಗೆ ಬಂದಾಗಲೆಲ್ಲ ಆ ಹೆಸರಿನ ಸುತ್ತು ಒಂದು ಬಗೆಯ ಪವಿತ್ರ ಭಾವನೆಯ ಪ್ರಭಾವಲಯ ಬೆಳಗುವಂತಾಗುತ್ತದೆ.
ಇನ್ನು ಮುಂದೆ ಇಟಗಿ ಜಾಳಿಹಾಳನ್ನು ಬಿಟ್ಟು ರೋಣ ತಾಲೂಕ ನರೇಗಲ್ಲಿನಿಂದ ಸುಮಾರು ಎರಡು-ಮೂರು ಮೈಲಿ ದೂರದಲ್ಲಿರುವ ಕೋಡಿಕೊಪ್ಪದ ಮಠದಲ್ಲಿರುವ ಅನ್ನದಾನಿ ಮಹಾಸ್ವಾಮಿಗಳವರ ಆಶ್ರಮಕ್ಕೆ ಬರಬೇಕು ನಾವು. ಏಕೆ? ಮಹಾಸ್ವಾಮಿಗಳು ಆಗ ಕೋಡಿ ಕೊಪ್ಪದ ಆಶ್ರಮದಲ್ಲಿ ಅನುಷ್ಠಾನ ಮಾಡುವ ಸಂಗತಿ ನಮ್ಮ ಭಾಗದ ಸಮೀಪ ಮತ್ತು ದೂರದವರೆಗೆ ಹಬ್ಬಿತ್ತು. ನನಗೆ ಆಗ ಸುಮಾರು ಹತ್ತು ವರ್ಷ ಆಗಿರಬಹುದು, ಈ ಕಾಲದಲ್ಲಿ ಅಂದರೆ ಸುಮಾರು ೧೯೨೦-೨೧ರಲ್ಲಿ ಪ್ರವಾಸಕ್ಕೆ ಬಸ್ಸು, ಕಾರು ಮುಂತಾದ ಯಂತ್ರವಾಹನಗಳ ಮಾತು ಇರಲಿಲ್ಲ. ಉಗಿ ಬಂಡೆಗಳ ಆಗ ಇದ್ದರೂ ಅವುಗಳ ಹರಿದಾಟ ದ ಕ್ಷೇತ್ರ ನಮ್ಮೂರಿಂದ ಬಹಳ ದೂರ. ನಮ್ಮೂರಿಂದ ಬರಬೇಕಾದರೆ ಕೋಡಿ ಕೊಪ್ಪಕ್ಕೆ ನಾವು ಬಂಡಿಯಲ್ಲಿಯೇ ಬರಬೇಕು. ನಮ್ಮದು ಬಯಲುಸೀಮೆ, ಮರ-ಗಿಡಗಳ ಸಂಖ್ಯೆ ಬಹಳ ಕಡಿಮೆ, ನರೇಗಲ್ಲವರಿಗೆ ಲೈನದ ಎರಡು ಕಡೆ ಗಿಡಮರಗಳು ಇದ್ದದ್ದು ನಿಜ. ಆದರೆ ಎಡಬಲದ ಹೊಲಗಳಲ್ಲಿ ಗಿಡ ಮರಗಳ ಸಂಖ್ಯೆ ಅತಿ ಕಡಿಮೆ. ಹಾದಿಯಲ್ಲಿ ಒಂದೆರಡು ಸಣ್ಣ ದೊಡ್ಡ ಹಳ್ಳಗಳನ್ನು ಮತ್ತು ಅಲ್ಲಲ್ಲಿ ಕೆರೆಗಳನ್ನು ಬಿಟ್ಟರೆ ಹೊಳೆಗಳ ಮಾತು ಇಲ್ಲ. ಸಮುದ್ರದ ಮಾತಂತೂ ಕನಸಿನಲ್ಲಿಯೂ ಇಲ್ಲ. ಬಂಡಿಯಲ್ಲಿ ಪ್ರವಾಸ, ಪ್ರತಿ ಅಮವಾಸ್ಯೆಗೆ ಕೋಡಿಕೊಪ್ಪಕ್ಕೆ ಬರಬೇಕಾದರೆ, ಕೋಡಿಕೊಪ್ಪ ಮತ್ತು ಸಮೀಪದಲ್ಲಿರುವ ತೋಟಗಂಟಿಯ ಭಾಗದ ವಿಶೇಷವೆಂದರೆ ತೋಟಗಳ ಸಂಖ್ಯೆ ಹೆಚ್ಚು ಮತ್ತು ಗಿಡಮರಗಳು ಕೆಲಮಟ್ಟಿಗೆ ಸಮೃದ್ಧ.
ಹಿಂದಿನ ಕಾಲದಲ್ಲಿ ಅರಣ್ಯದ ಆಶ್ರಮದಗಳಲ್ಲಿ ಋಷಿಗಳು ತಪಸ್ಸು ಮಾಡುತ್ತಿದ್ದುದು ಹೇಗೋ ಹಾಗೇ ನನ್ನ ಬಾಲ್ಯದ ಕಾಲದಲ್ಲಿ ಸ್ವಾಮಿಗಳು ಅನುಷ್ಠಾನ ಮಾಡುವುದು ಒಂದು ಮಹಾಪುಣ್ಯ ನಾಡಿನದು. ಆದ್ದರಿಂದ ನನಗೆ ನೆನಪಿದ್ದಂತೆ ಆಶ್ರಮ ಹಿಂದಿನ ತಪೋಭೂಮಿಯನ್ನು ನೆನೆಸಿಕೊಡುವಂತಿತ್ತು. ನನ್ನ ಬಾಲ್ಯದ ಆ ದಿನಗಳಲ್ಲಿ ತೋಟಪಟ್ಟಿ, ಗಿಡಮರ, ಹರಿವ ಹಳ್ಳ, ಹೊಳೆ, ಹಾಡುವ ವಿಧವಿಧ ನಿನಾದ, ಆಗೀಗ ಅಡವಿಯಲ್ಲಿ ಓಡಾಡುವ ಗಂಡೆರೆಳೆಯಿಂದ ಕೂಡಿದ ಚಿಗರೆ ಗಳ ಹಿಂಡು. ಮೇಲೆ ಹರವಿದ ಆಕಾಶ. ಕೆಳಗೆ ನೆರಳಿನಿಂದ ತಂಪಾದ ನೆಲೆ. ಇವೆಲ್ಲ ಕೊಡುತ್ತಿದ್ದ ಆನಂದ-ಆ ಆನಂದ ಭಾವಕ್ಕೆ ಗೊತ್ತು. ಬಯಲುಸೀಮೆಯ ನನಗೆ ಕೋಡಿ ಕೊಪ್ಪದ ಸಮೃದ್ಧ ದೃಶ್ಯ ನಂದನವನ. ಅದರಲ್ಲಿ ಸುತ್ತು ಮುತ್ತಿರುವ ಇಂಥ ವಾತಾವರಣದ ಮಧ್ಯದಲ್ಲಿ ಮಹಾಸ್ವಾಮಿಗಳವರ ಆಶ್ರಮ. ಈ ಆಶ್ರಮ ಪರ್ಣಕುಟಿ ಅಥವಾ ಕುಟೀರವೆಂದು ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ಬಹು ಮಟ್ಟಿಗೆ ಅದು ಸಣ್ಣ-ದೊಡ್ಡ ಗಿಡ ಮರದ ಎಲೆಗಳಿಂದ ಮಾಡಿ ಹುಲ್ಲಿನ ಹೊದಿಕೆಯಿಂದ ಅಚ್ಛಾದಿತವಾಗಿರುವ ಈ ಆಶ್ರಮ ಹೃದಯಕ್ಕೆ ತಂದುಕೊಟ್ಟ ಪವಿತ್ರ ಭಾವನೆಯ ವಿಸ್ತಾರವೇ. ಹಸಿರು ಸಂಪತ್ತಿನಿಂದ ತುಂಬಿದ ಈ ಪ್ರದೇಶದ ಹರಿವಿನಲ್ಲಿ ಬೆಳೆಯದೆ ಬೆಳೆದು ನಿಂತಿದ್ದ ಕಲಮಿ ಮಾವಿನ ನಾಲ್ಕೈದು ಅಡಿಯ ಮರಗಳು. ಆಶ್ರಮದ ಮುಂದಿನ ಭಾಗದ ಮೂರುನಾಲ್ಕುಎಕರೆಯ ಕೆಂಪು ಭೂಮಿಯಲ್ಲಿ ಹಸಿರು ಸೌಂದರ್ಯದ ಗುಚ್ಛ ಗಳಂತೆ ಸಮೃದ್ಧವಾಗಿರುವ ನನ್ನ ಕಣ್ಣ ಮುಂದೆ ಕಣ್ಣ ಒಳಗೆ ಇಂದು ಎದ್ದು ನಿಂತಂತಿದೆ. ಅಲ್ಲಲ್ಲಿ ತುಂಬಿರುವ ಬಾವಿಗಳು, ಮೇಲೆ ಹೇಳಿದ ಸಮೃದ್ಧ ಸಂಪತ್ತಿನಿಂದ ಮಹಾಸ್ವಾಮಿಗಳವರ ಆಶ್ರಮದಲ್ಲಿ ಅನುಷ್ಠಾನದ ಪವಿತ್ರ ಸೌಂದರ್ಯ ತುಂಬಿ ತುಳುಕಿದ ಮಠದ ವಾತಾವರಣ ಇಂದಿಗೂ ನನ್ನೊಳಗೆ ಗೊತ್ತಿಲ್ಲದಂತೆ ತುಂಬಿ ತುಳುಕುವಂತಿದೆ.
ಅಮಾವಾಸ್ಯೆಗೆಂದು ಬಂದ ನಾವು ಮಹಾಸ್ವಾಮಿಗಳವರ ದರ್ಶನ ಪಡೆದ ನೆನಪು ನನಗಿಲ್ಲ; ಅಥವಾ ಮೂರು ವರ್ಷಗಳವರೆಗೆ ಅನುಷ್ಠಾನ ನಿರತರಾಗಿದ್ದ ಮಹಾಸ್ವಾಮಿಗಳು ಯಾರಿಗಾದರೂ ದರ್ಶನ ಕೊಡುತ್ತಿದ್ದರೋ ಇಲ್ಲವೋ ಅದು ನನಗೆ ಗೊತ್ತಿಲ್ಲ. ಅಂತೂ ನಿಡಗುಂದಿಯಿಂದ ಬರುವುದು, ಇಂತಹ ಪರಮಪುಣ್ಯಾಶ್ರಮದಲ್ಲಿ ಊದಿನಕಡ್ಡಿ ಹಚ್ಚಿ ತೆಂಗಿನಕಾಯಿಯ ಮೇಲೆ ಕರ್ಪೂರವನ್ನು ಹಚ್ಚಿ ಮಂಗಳಾರತಿ ಮಾಡಿ ಕಾಯಿ ಒಡೆಸಿಕೊಂಡು ಆಶ್ರಮದ ಹೊರಭಾಗದಲ್ಲಿ ಇಟ್ಟಿದ್ದ ಅಂಗಾರವನ್ನು ತೆಗೆದುಕೊಂಡು, ಮತ್ತೊಮ್ಮೆ ಸ್ವಾಮಿಗಳಿದ್ದ ಕಡೆ ದೀರ್ಘದಂಡ ನಮಸ್ಕಾರ ಮಾಡಿ ಪಾವನ ತುಂಬಿದ ಭಾವನೆಯಲ್ಲಿ, ಎದ್ದು ಮತ್ತೆ ಕೈಮುಗಿದು ಬಂದು ಊರಕಡೆ ಹೊರಡುತ್ತಿದ್ದೆವು. ಹೊರಡುವ ಮುನ್ನ ಅಲ್ಲಿಯೇ ಸಮೀಪದಲ್ಲಿದ್ದ ಹೊಕ್ಕು ತುಂಬುವ ಬಾವಿಯ ದಂಡೆಯ ಮೇಲೆ ಕುಳಿತು ಊರಿಂದ ತಂದ ಬುತ್ತಿಯನ್ನು ಉಂಡು, ಮರಳಿ ನಮ್ಮೂರಿಗೆ ನಮ್ಮ ಬಂಡಿಯಲ್ಲಿ ಬರುವುದು. ಇಂತಹ ತಿಂಗಳುಗಳು ಎಷ್ಟು? ನನಗೆ ನೆನಪಿಲ್ಲ. ಆದರೆ ನಾವು ಹೋದಾಗಲೆಲ್ಲ ಅನೇಕ ಊರುಗಳಿಂದ ಕಾಲುನಡಿಗೆಯಿಂದ ಅಥವಾ ಬಂಡಿಯಿಂದ ಕೋಡಿಕೊಪ್ಪದ ಆಶ್ರಮಕ್ಕೆ ಬಂದು ಅಪ್ರತ್ಯಕ್ಷವಾಗಿ ಆಶೀರ್ವಾದ ಪಡೆದು ಹೋಗುವುದು ಎಷ್ಟೋ ಜನ.
ಮತ್ತೆ ಮುಂದೆ ಸುಮಾರು ನಾಲ್ವತ್ತೈದು ವರ್ಷಗಳ ನಂತರ ಕೋಡಿಕೊಪ್ಪದ ಮಠಕ್ಕೆ ಬರುವ ಪ್ರಸಂಗ ಬಂತು. ಆಗ ನಾನು ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ಕೆಲಸ ಮಾಡುತ್ತಿದೆ. ಶೂನ್ಯ ಸಂಪಾದನೆಯು ಪ್ರಕಟವಾದ ಮೇಲೆ, ಶೂನ್ಯ ಸಂಪಾದನೆಯನ್ನು ಕುರಿತ ಪರಾಮರ್ಶೆ ಮುದ್ರಣಕ್ಕೆ ಹೋಗಬೇಕಿತ್ತು. ಎಕ್ಸರ್ಸಾಯಿಟ್ ಬುಕ್ಕಿನಲ್ಲಿ ಸುಮಾರು ೧೬೦೦ ಪುಟಗಳ ಗಾತ್ರದ ಪರಾಮರ್ಶೆ ಮಂಗಳೂರು ಶಾರದಾ ಮುದ್ರಣಾಲಯದಲ್ಲಿ ಮುದ್ರಿಸಬೇಕೆಂಬ ಸಂಕಲ್ಪ ನನ್ನದು. ಅದನ್ನು ಪ್ರಕಾಶಪಡಿಸಲಿದ್ದ ಗುಲಬರ್ಗಾ ಜಿಲ್ಲೆಯಲ್ಲಿರುವ ರಾವೂರು ಸಿದ್ದಲಿಂಗೇಶ್ವರಮಠದ ಸಿದ್ದಲಿಂಗಸ್ವಾಮಿಗಳಿಗೆ ಮುದ್ರಣದ ವೆಚ್ಚವನ್ನೆಲ್ಲಾ ವಹಿಸಿಕೊಳ್ಳುವ ದುಡ್ಡಿನ ಶಕ್ತಿ ಇದ್ದಿರಲಿಲ್ಲ. ಮುದ್ರಣಕ್ಕೆ ಲಿಂ. ಸದಾಶಿವಸ್ವಾಮಿಗಳು, ನಾಗನೂರು ಶಿವಬಸವ ಮಹಾಸ್ವಾಮಿಗಳು ಮುಂತಾದವರು ಧನಸಹಾಯ ಮಾಡಿದರು. ಆದರೂ ಅಂದಿನ ಕಾಲದಲ್ಲಿ ಸುಮಾರು ೨೧ ಸಾವಿರ ರೂಪಾಯಿ ಮುದ್ರಣಕ್ಕೆ ಬೇಕಾಗುವ ಹಣದ ಕೊರತೆ ಇನ್ನೂ ಉಳಿದಂತಾಯಿತು. ಅಂದೇ ರಾವೂರು ಮಹಾಸ್ವಾಮಿಗಳು ಮತ್ತು ನಾನು ವಿಚಾರಮಾಡಿ ಕೋಡಿಕೊಪ್ಪದಲ್ಲಿ ಮಠಕ್ಕೆ ಬಂದೆವು. ಹಿಂದಿನ ಆಶ್ರಮದ ಸಮೀಪದಲ್ಲಿಯೇ ಮುಂದೆ ನಿರ್ಮಾಣವಾಗಿದ್ದ ಸಣ್ಣ ಕಲ್ಮಠ. ಮುಂಜಾನೆ ಸುಮಾರು ಹತ್ತುಗಂಟೆಯ ಸಮಯ. ಅನ್ನದಾನಿ ಮಹಾಸ್ವಾಮಿಗಳು ಪೂಜೆ ಪ್ರಸಾದ ತೀರಿಸಿಕೊಂಡು ಕುಳಿತಿದ್ದರು. ರಾವೂರು ಸ್ವಾಮಿಗಳು ಶಿವಯೋಗ ಮಂದಿರದಲ್ಲಿ. ಸಾಧಕರಾಗಿದ್ದುದರಿಂದ ಹಾಳಕೇರಿಯ ಮಹಾಸ್ವಾಮಿಗಳವರ ಎದುರಿಗೆ ನಿಂತು ಅಥವಾ ಕುಳಿತು ಮಾತಾಡುವ ಶಕ್ತಿ ಸಂಕುಚಿತವಾಗಿತ್ತು. ಏಕೆಂದರೆ ಶಿವಯೋಗ ಮಂದಿರಕ್ಕೆ ಅನ್ನದಾನಿ ಮಹಾಸ್ವಾಮಿಗಳ ಸಂಬಂಧ ಎಷ್ಟಿತ್ತೆಂಬುದರ ಅರಿವು ನಮಗಿದೆ. ಆದ್ದರಿಂದ ರಾವೂರು ಸ್ವಾಮಿಗಳು ಬಾಯಿಬಿಚ್ಚಿ ಮಾತಾಡಿ ಪರಾಮರ್ಶೆಯ ಮುದ್ರಣದ ವೆಚ್ಚಕ್ಕಾಗಿ ಹಣ ಕೇಳುವ ಶಕ್ತಿ ಅವರಿಗಿರಲಿಲ್ಲವೆಂದೇ ಹೇಳಬಹುದು. ಆದರೆ ನನಗೆ ಏನೋ ಯಾಕೋ ಅವರೊಡನೆ ಸರಳವಾಗಿ ನಡೆದು ನುಡಿದುಕೊಳ್ಳುವ ಒಂದು ಸಲಿಗೆ. ಬಾಯಿಬಿಟ್ಟು ಕೇಳಿದೆ ನಾನು- ಪರಾಮರ್ಶೆಯ ಮುದ್ರಣಕ್ಕೆ ಧನಸಹಾಯ ಮಾಡಬೇಕೆಂದು. ಪರಾಮರ್ಶೆಯ ವಿವರಗಳನ್ನೆಲ್ಲ ಸಾವಧಾನವಾಗಿ ಕೇಳಿ ಒಂದು ಸಾವಿರ ರೂಪಾಯಿ ಕೊಡುವುದಾಗಿ ಅಪ್ಪಣೆ ಮಾಡಿದರು. ಮಠದಲ್ಲಿ ಪ್ರಸಾದವನ್ನು ಪಡೆದು. ತಿರುಗಿ ಪ್ರಯಾಣಿಸುವಾಗ ರಾವೂರು ಸ್ವಾಮಿಗಳು ಅನ್ನದಾನಿ ಮಹಾಸ್ವಾಮಿಗಳ ನನ್ನ ಬಿಚ್ಚುವರ್ತನೆಗೆ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ನನ್ನ ನಡತೆ ವಿಸ್ಮಯಕಾರಿ. ಆದರೆ ಅದು ನನಗೆ ಸಹಜಶೀಲ.
ಮಹಾಸ್ವಾಮಿಗಳವರು ಮಾತು ಕೊಟ್ಟರೆ ಮಾತಿನಲ್ಲಿ ತುಂಬ ಸತ್ಯಾರ್ಥ ಮೂರು-ನಾಲ್ಕು ದಿವಸಗಳಲ್ಲಿ ಒಂದುಸಾವಿರ ರೂಪಾಯಿ ಹಣ ಬಂತು ರಾವೂರ ಸ್ವಾಮಿಗಳ ಕೈಗೆ, ಮಹಾಸ್ವಾಮಿಗಳವರ ಮಾತು ಎಂದಿಗೂ ‘ಸತ್ಯಶಾಸನ’,
ಕೊನೆಗೆ ಮತ್ತೊಂದು ಮಹತ್ವದ ಸಂದರ್ಭ. ನಮ್ಮ ಹಿರಿಯ ಮಗ ಚಿ| ರಾಜಶೇಖರನು ಬನಾರಸ ಹಿಂದೂ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಬೆಳಗಾಂವಿಗೆ ಬಂದಬಳಿಕ ಆತನನ್ನು ಪರದೇಶಕ್ಕೆ ಕಳಿಸಿ ಅಲ್ಲಿ ಶಿಕ್ಷಣವನ್ನು ಪಡೆಯಲೆಂಬ ನನ್ನ ಅಭಿಲಾಷೆ ತೀವ್ರವಾಗಿತ್ತು ಈ ನನ್ನ ಇಂಗಿತವನು ನಾಗನೂರು ಶಿವಬಸವ ಮಹಾಸ್ವಾಮಿಗಳಲ್ಲಿ ಅರಿಕೆಮಾಡಿಕೊಂಡೆ. ಆಗಿನ ಕಾಲದಲ್ಲಿ ೧೯೫೮ರ ಸುಮಾರಿನಲ್ಲಿ ಪರದೇಶದಲ್ಲಿ ಶಿಕ್ಷಣ ಪಡೆಯಬೇಕಾದರೆ ಏಳೆಂಟುಸಾವಿರ ರೂಪಾಯಿ ಬೇಕಾಗುತ್ತಿದೆ ಎಂದು ನಾನು ಕೇಳಿದ್ದೆ. ನನ್ನ ಪ್ರಬಲವಾದ ಆಕಾಂಕ್ಷೆಯನ್ನು ತಿಳಿದ ಮಹಾಸ್ವಾಮಿಗಳವರು ಸೂಚನೆ ಕೊಟ್ಟರು : ಸ್ವಲ್ಪ ಹೆಚ್ಚು ಕಡಿಮೆ ಇಷ್ಟು ಹಣವನ್ನು ಕೊಡಬಲ್ಲವರು ಹಾಳಕೇರಿಯ ಮಹಾಸ್ವಾಮಿಗಳವರು ಎಂದು. ಒಂದೆರಡು ದಿನಗಳಲ್ಲಿಯೇ ಕೋಡೀಕೊಪ್ಪದ ಮುಕ್ಕಾಮಿನಲ್ಲಿದ್ದ ಅನ್ನದಾನಿ ಮಹಾಸ್ವಾಮಿಗಳನ್ನು ಕಾಣಲು ನಾಗನೂರು ಸ್ವಾಮಿಗಳೊಡನೆ ನಾನೂ ಬಂದು ಅವರಲ್ಲಿ ಈ ಬಿನ್ನಹ ಮಾಡಬೇಕೆಂದು ನಿರ್ಧರಿಸಿದೆವು. ಅವರು ಕೊಡುವ ಹಣ ಸ್ವಲ್ಪ ಕಡಿಮೆ ಆದರೂ ಸುಮಾರು ಒಂದು ಕೂರಿಗೆ ಹೊಲವನ್ನಾದರೂ ಮಾರಿ ಹಣ ಭರ್ತಿ ಮಾಡಿ ಪರದೇಶದಲ್ಲಿ (ಬಹುಮಟ್ಟಿಗೆ ಇಂಗ್ಲೀಷಿನಲ್ಲಿ) ಶಿಕ್ಷಣ ಕೊಡಿಸಬೇಕೆಂದು ನಿರ್ಧಾರ ಮಾಡಿದೆವು. ಆದರೆ ಮುಂದೆ ಈ ಮಾತು ಕೈಬಿಟ್ಟೆವು. ಏಕೆ? ಕಾರಣ ನನಗೆ ನೆನಪಿಲ್ಲ. ಬಹುಮಟ್ಟಿಗೆ ನಮ್ಮ ರಾಜಶೇಖರನು ಪರದೇಶಕ್ಕೆ ಹೋಗಲು ಅಷ್ಟೊಂದು ಒಲವು ತೋರಿಸಿರಲಿಕ್ಕಿಲ್ಲ ನೆನಪಿನ ಮಾತು ಏನೇ ಇರಲಿ ಹಾಳಕೇರಿ ಮಹಾಸ್ವಾಮಿಗಳವರು ವಿದ್ಯಾಭಿಮಾನಿಗಳ ಸಮಾಜವನ್ನು ಮೇಲಕ್ಕೆತ್ತುವ ಕುತೂಹಲದಲ್ಲಿ ಎಂದಿಗೂ ನಿರತರಾಗಿದ್ದರೆಂಬ ಮಾತು ನಾಗನೂರು ಮಹಾಸ್ವಾಮಿಗಳಿಗೆ ಗೊತ್ತು, ನನಗೆ ಗೊತ್ತು, ಸಾಮಾನ್ಯವಾಗಿ ಸಮಾಜಕ್ಕೆಲ್ಲ ಗೊತ್ತು.
ಸಮಾಜದಲ್ಲಿ ಇಂಥ ಮಹೋನ್ನತ ಸ್ಥಾನಕ್ಕೆ ಏರಿ ಆ ಸ್ಥಾನಕ್ಕೆ ತಕ್ಕ ಮಾನವನು ತಂದುಕೊಟ್ಟ ಈ ಮಹಿಮಾಶೀಲರನ್ನು ನೆನೆವುದೇ ನನ್ನ ಮಹಾಭಾಗ್ಯ. ಇಂಥ ಘನ ಗಂಭೀರ ಮಹಾಸ್ವಾಮಿಗಳವರ ಸ್ಥಾನಕ್ಕೆ ಬಂದಿರುವ ಇಂದಿನ ಅಭಿನವ ಅನ್ನದಾನಿ ಮಹಾಸ್ವಾಮಿಗಳವರು ಆ ಸ್ಥಾನದ ಗಂಭೀರವನ್ನು ಗಂಭೀರತರಗೊಳಿಸಿ ಅದರ ಉನ್ನತಿಯನ್ನು ಉನ್ನತತರಗೊಳಿಸಿ ಕರ್ನಾಟಕದ ಸೀಮೆಯನ್ನು ದಾಟಿ ಉಜ್ವಲವಾಗಿ ಬೆಳಗಲೆಂಬುದು ಹೃತ್ಪೂರ್ವಕವಾದ ಹಾರೈಕೆ ನಮ್ಮದು.