ಶ್ರೀಗುರು ಅನ್ನದಾನ ಮಹಾಸ್ವಾಮಿಗಳು ಮತ್ತು ಶಿಕ್ಷಣ

• ಸದಾಶಿವ ಒಡೆಯರ, ಧಾರವಾಡ

(ಶಿಕ್ಷಣ  ಕ್ಷೇತ್ರದ ದಕ್ಷ, ಪ್ರಾಮಾಣಿಕ ಆಡಳಿತಾಕಾರಿ, ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ, ಸದಾಶಿವ ಒಡೆಯರರವರು ಹುಟ್ಟಿದ್ದು ಧಾರವಾಡದ ಮರೇವಾಡ ಗ್ರಾಮದಲ್ಲಿ. ತಂದೆ ಶಿವದೇವ ಒಡೆಯರ, ತಾಯಿ ಗಿರಿಜಾದೇವಿ. ಪ್ರಾರಂಭಿಕ ಶಿಕ್ಷಣ ಹಾವೇರಿ. ಆಟದಲ್ಲಿ ಸದಾಮುಂದು. ಬ್ಯಾಡಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳು. ಕಾಲೇಜು ವಿದ್ಯಾಭ್ಯಾಸ ಧಾರವಾಡ. ೧೯೪೫ರಲ್ಲಿ ಬಿ.ಎ. (ಆನರ್ಸ್) ಪದವಿ. ೧೯೪೭ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ. ೧೯೪೮ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಎರಡು ವರ್ಷ ಸೇವೆ. ೧೯೪೯ರಲ್ಲಿ ಸ್ಥಾಪಿತವಾದ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರರ್ ಆಗಿ ನೇಮಕ. ೧೯೫೧ರಲ್ಲಿ ಸಹಾಯಕ ಕುಲಸಚಿವ, ೧೯೫೭ರಲ್ಲಿ ಕುಲಸಚಿವರ ಹುದ್ದೆ. ೧೯೬೭-೬೮ರಲ್ಲಿ ಉಪಕುಲಪತಿಗಳಾಗಿ ಕಾರ‍್ಯನಿರ್ವಹಣೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಮೇಲೆ ಅಮೆರಿಕಾ ಸರಕಾರದ ಆಹ್ವಾನದ ಮೇರೆಗೆ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳ ಭೇಟಿ. ಬ್ರಿಟಿಷ್ ಕೌನ್ಸಿಲ್ ಆಹ್ವಾನದ ಮೇರೆಗೆ ಇಂಗ್ಲೆಂಡ್ ಭೇಟಿ. ಇದಲ್ಲದೆ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಈಜಿಪ್ಟ್ ದೇಶಗಳಿಗೂ ಭೇಟಿ. ಅಲ್ಲಿನ ಆಡಳಿತ ಪದ್ಧತಿ, ವಿಧಾನಗಳ ಅಳವಡಿಕೆ. ವಿಶ್ವವಿದ್ಯಾಲಯದ ಉನ್ನತಿಗೆ ಪಟ್ಟ ಶ್ರಮ. ಆಡಳಿತ ಮಧ್ಯೆ ರಚಿಸಿದ ಕೆಲವು ಕೃತಿಗಳು. ‘ಜೀವನ ಕಲೆ’ ಪ್ರಬಂಧ ಸಂಕಲನ, ರವೀಂದ್ರ ದರ್ಶನ, ಇದು ಜೀವನ ಮತ್ತೆರಡು ಚಿಂತನ ಶೀಲ ಸಂಕಲನಗಳಿಂದ ಬರವಣಿಗೆಗೆ ತಂದ ಕಾಂತಿ. ನಾಟಕಗಳು-ಜೋನ್ ಆಫ್ ಆರ್ಕ್ ಮತ್ತು ಇತರ ನಾಟಕಗಳು. ಇಂಗ್ಲಿಷ್‌ನಲ್ಲಿ THE LIGHT OF OTHER DAYS, TRAILING CLOUD. ಸಂಪಾದಿತ- BASAVESHWARA COMMEMORATION VOLUME. ರವೀಂದ್ರ ದರ್ಶನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಐವತ್ತನೇ ಹುಟ್ಟುಹಬ್ಬಕ್ಕೆ ಹಿತೈಷಿಗಳು ಅರ್ಪಿಸಿದ ಗೌರವಗ್ರಂಥ ‘ಸವಿಸಂಚಯ.’)

ಕ್ರಿ. ಶ. ೧೨ನೇ ಶತಮಾನದಲ್ಲಿ ಕನ್ನಡನಾಡು ಒಂದು ಅಭೂತಪೂರ್ವ ಕ್ರಾಂತಿಯ ಬೆಳಕನ್ನು ಕಂಡಿತು. ಮಹಾತ್ಮಾ ಬಸವೇಶ್ವರ, ಪ್ರಭುದೇವ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ದರಾಮರಂಥ ಮಹಾಶರಣ ಶರಣೆಯರು ಈ ನಾಡಿನಲ್ಲಿ ಬದುಕಿದ ಕಾಲ ಅದು. ಸಕಲ ಜೀವಿಗಳ ಕಲ್ಯಾಣಕ್ಕಾಗಿ ಅನವರತ ಚಿಂತಿಸಿದ ಈ ಧರ್ಮ ಜಿಜ್ಞಾಸುಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಚರ್ಚಿಸಿ ನಿಷ್ಕರ್ಷಿಸಲು ಅನುಭವಮಂಟಪದಂಥ ಮಹಾಸಂಸ್ಥೆಯನ್ನು ಕಟ್ಟಿ, ತಮ್ಮ ಅನುಭವಜನ್ಯವಾದ ಅನಿಸಿಕೆಗಳನ್ನು ಸುಲಭ ಹಾಗೂ ಲಲಿತವಾದ ಕನ್ನಡದಲ್ಲಿ ವಚನರೂಪದಲ್ಲಿ ಬರೆದಿಟ್ಟು, ಮುಂದಿನ ಜನಾಂಗಗಳಿಗೆ ದಾರಿದೀಪವಾಗುವಂಥ ಸೂತ್ರಗಳನ್ನು ಒದಗಿಸಿದ ಪುಣ್ಯಜೀವಿಗಳು ಬದುಕಿದ ಕಾಲವದು. ಆ ಉದಾತ್ತ ಪರಂಪರೆಯಲ್ಲಿ ನಾಡಿನಾದ್ಯಂತ ಅನೇಕ ಮಠಮಾನ್ಯಗಳು ಕಾರ್ಯಮಾಡಲು ಆರಂಭಿಸಿದವು. ಇದೇ ಪರಂಪರೆಯ ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗದ ಈ ಪರಂಪರೆ ವಿಜಯಮಹಾಂತೇಶ ನಿಂದ ಮುಂದುವರಿದು ಅನ್ನದಾನೇಶ, ಕೊಟ್ಟೂರೇಶ ಎಂಬ ಶಿಷ್ಯರ ಮೂಲಕ ಪ್ರವಹಿಸಿ ಬಂದಿತು. ಅವರಲ್ಲಿ ಶ್ರೀ ಅನ್ನದಾನೇಶರು ಹಾಲಕೆರೆಯಲ್ಲಿ ನೆಲೆನಿಂತು ಧರ್ಮಪ್ರಸಾರದ ಕಾರ್ಯಕೈಕೊಂಡರು. ಇವರಿಂದ ಮುಂದೆ ಕರಿಸಿದ್ಧಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿ, ಅನ್ನದಾನ ಸ್ವಾಮಿ, ಕಿರಿಯ ಮುಪ್ಪಿನ ಬಸವಲಿಂಗಸ್ವಾಮಿ, ಹಿರಿಯ ಅನ್ನದಾನೀಶ್ವರ, ಗುರು ಅನ್ನದಾನೀಶ್ವರಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿಗಳು ಇವರುಗಳ ಮುಖಾಂತರ ಈ ಪರಂಪರೆ ಹರಿದುಬಂದಿತು. ಮುಪ್ಪಿನ ಬಸವಲಿಂಗಸ್ವಾಮಿಗಳ ಕರಸಂಜಾತರಾಗಿ ಮೂಡಿಬಂದವರು ೧ನೇ ಶ್ರೀ ಅನ್ನದಾನ ಮಹಾಸ್ವಾಮಿಗಳವರು. ಈ ಶ್ರೀಗಳವರು ದೀರ್ಘವೂ ಪರಿಪೂರ್ಣವೂ ಆದ ೧೦೨ ವರ್ಷಗಳ ಆಯುಷ್ಯವನ್ನು ಕಳೆದು ಕ್ರಿ.ಶ.೧೯೧೨ರಲ್ಲಿ ಹಾಲಕೆರೆಯಲ್ಲಿ ಲಿಂಗೈಕ್ಯರಾದರು. ಬರ ಕಾಲದಲ್ಲಿಯೇ ಮಠದ ಕೀರ್ತಿ ಬಹುದೂರದವರೆಗೆ ಹರಡಿತ್ತು

.ಕ್ರಿ.ಶ.೧೯೧೦ರಲ್ಲಿ ನಡೆದ ಇವರ ಪಟ್ಟಾಭಿಷೇಕಕ್ಕೆ ಆಗಮಿಸಿದ ಅನೇಕ ಹರ ಗುರು ಚರಮೂರ್ತಿಗಳಲ್ಲಿ, ವೀರಶೈವರಿಗೆಲ್ಲ ಪ್ರಾತಃಸ್ಮರಣೀಯರಾದ ಹಾನಗಲ್ಲ ಕುಮಾರಸ್ವಾಮಿಗಳೂ ಹಾಗೂ ಹಾವೇರಿಯ ಶಿವಬಸವಸ್ವಾಮಿಗಳೂ ಪ್ರಮುಖರು. ಹಾನಗಲ್ಲ ಕುಮಾರಸ್ವಾಮಿಗಳ ಒಡನಾಟದ ಕಾರಣದಿಂದ, ಅನ್ನದಾನಸ್ವಾಮಿಗಳು ಅವರ ಉದಾತ್ತ ವಿಚಾರ, ದೂರದೃಷ್ಟಿ ಹಾಗೂ ಸಮಾಜಕಲ್ಯಾಣ ಕಾರ್ಯಗಳಿಂದ ಅತ್ಯಂತ ಪ್ರಭಾವಿತರಾದರು. ಅವರು ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ನೆರವಾಗತೊಡಗಿದರು. ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗಮಂದಿರ ಇವರಿಗೆ ಅತಿ ಮೆಚ್ಚಿನ ಸಂಸ್ಥೆಯಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಮಾಡಿದ ಅನೇಕ ಸಮಾಜಕಲ್ಯಾಣ ಕಾರ್ಯಗಳಲ್ಲಿ ಅತ್ಯಂತ ಮಹತ್ವವಾದದ್ದು ಶಿವಯೋಗ ಮಂದಿರದ ಸ್ಥಾಪನೆ. ಎಂದಿನಿಂದಲೂ ವೀರಶೈವ ಧರ್ಮವನ್ನು ರಕ್ಷಿಸುತ್ತ, ಸಮಾಜದ ಜನತೆಯಲ್ಲಿ ದೈವಭಕ್ತಿ, ಧರ್ಮಪ್ರಜ್ಞೆ ಹಾಗೂ ನೀತಿಯುತ ನಡೆ-ನುಡಿಗಳನ್ನು ಪೋಷಿಸಿಕೊಂಡು ಬಂದ ಸಂಸ್ಥೆಗಳೆಂದರೆ ಮಠಗಳು. ಈ ಮಠಗಳಿಗೆ ಯೋಗ್ಯ ಮರಿಗಳನ್ನು ಆರಿಸಿ ಅವರಿಗೆ ಅವಶ್ಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಹಿತ್ಯಕ ತರಬೇತಿಯನ್ನು ಪವಿತ್ರವಾದ ಪರಿಸರದಲ್ಲಿ ಒದಗಿಸಿ, ಅವರನ್ನು ಒಳ್ಳೆ ಸ್ವಾಮಿಗಳಾಗು ವಂತೆ ತರಬೇತಿಗೊಳಿಸಲು ಅವಶ್ಯವಾದ ಸೂಕ್ತಶಿಕ್ಷಣ ಕೊಡುವಂಥ ಸಂಸ್ಥೆ ಸಮಾಜಕ್ಕೆ ಅವಶ್ಯವಾಗಿ ಬೇಕಾಗಿತ್ತು ಇದರ ಬಗ್ಗೆ ಬಹಳ ಮುಂದಾಲೋಚನೆಯಿಂದ ವಿಚಾರ ಮಾಡಿ, ಅತ್ಯಂತ ಪರಿಶ್ರಮದಿಂದ ಅದಕ್ಕೆ ಸೂಕ್ತವಾದ ನದಿಯ ದಂಡೆಯಲ್ಲಿಯ ಸುಂದರ ನಿವೇಶನವನ್ನು ಆರಿಸಿ, ಶಿವಯೋಗಮಂದಿರವೆಂಬ ಮಹಾಸಂಸ್ಥೆಯನ್ನು ಹಾನಗಲ್ಲ ಕುಮಾರಸ್ವಾಮಿಗಳು ಆರಂಭಿಸಿ ಸಮಾಜಕ್ಕೆ ಮಹದುಪಕಾರ ಮಾಡಿದರು. ಕ್ರಿ.ಶ.೧೯೪೨ರಲ್ಲಿ ಈ ಭಾಗದಲ್ಲಿ ವ್ಯಾಪಿಸಿದ ಭೀಕರ ಕ್ಷಾಮದ ಪರಿಣಾಮ ಒದಗಿದ ಆರ್ಥಿಕ ತೊಂದರೆಯಿಂದಾಗಿ ಶಿವಯೋಗಮಂದಿರವು ಮುಂದುವರೆಯದ ಸಂಧಿಗ್ಧ ಪರಿಸ್ಥಿತಿಯಲ್ಲಿತ್ತು. ಆಗ ಅನ್ನದಾನಸ್ವಾಮಿಗಳು ಅದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡು, ೫-೬ ವರ್ಷಗಳಲ್ಲಿ ಸುಮಾರು ೮೦ ಸಾವಿರ ರೂಪಾಯಿಗಳ ವಿನಿಯೋಗದಿಂದ ಬಂದಂತಹ ಆರ್ಥಿಕ ಸಂಕಷ್ಟವನ್ನು ದೂರಿಕರಿಸಿ ಮುಂದುವರೆಸಿದರು. ಶಿವಯೋಗ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೭ನೇ ಅಧಿವೇಶನ ಜರುಗಿದಾಗ ಅನ್ನದಾನಸ್ವಾಮಿಗಳು ೪೦೦ ಚೀಲ ಅಕ್ಕಿಯನ್ನು ಮಂದಿರದ ದಾಸೋಹಕ್ಕೆ  ಸಲ್ಲಿಸಿದ್ದಲ್ಲದೇ  ಪ್ರಸಾದ ವಿನಿಯೋಗ ಕಾರ್ಯವನ್ನು ಶ್ರೀಗಳು ಒಬ್ಬರೇ ವಹಿಸಿಕೊಂಡಿದ್ದರು. ಈ ಕಾರ್ಯ ಲಕ್ಷಾಂತರ ಜನರನ್ನು ಬೆರಗುಗೊಳಿಸುವಂತೆ ಮಾಡಿತು.

ಶಿಕ್ಷಣದಲ್ಲಿ ಶ್ರೀಗಳಿಗೆ ಎಂದಿನಿಂದಲೂ ವಿಶೇಷ ಆಸಕ್ತಿಇದ್ದಿತ್ತು. ಹಾಗಾಗಿ ಹಾಲಕೆರೆಗೆ ಸಮೀಪದ ನಗರವಾದ ನರೇಗಲ್ಲಿನಲ್ಲಿ ಒಳ್ಳೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ಗಂಡುಮಕ್ಕಳ ಮಾಧ್ಯಮಿಕ ಶಾಲೆ’ಯು ಈ ಭಾಗದ ವಿದ್ಯಾಸಂಸ್ಥೆಗಳಲ್ಲಿ ಮಾತೃಸ್ಥಾನದಲ್ಲಿರುವ ಸಂಸ್ಥೆಯಾಗಿದೆ. ಕ್ರಿ.ಶ.೧೯೧೯ರಲ್ಲಿ  ಸ್ಥಾಪನೆಗೊಂಡ ಈ ಶಾಲೆ ಕ್ರಿ.ಶ.೧೯೪೬ರಲ್ಲಿ ಸರಕಾರದಿಂದ ಮನ್ನಣೆ ಪಡೆಯಿತು. ಮೊದಮೊದಲು ಗ್ರಾಮಸ್ಥರ ಆಡಳಿತದಲ್ಲಿದ್ದ ಈ ಶಾಲೆ ಕೆಲವೊಂದು ತಾಪತ್ರಯಗಳಿಂದ ಕ್ರಿ.ಶ.೧೯೫೫ ರಲ್ಲಿ ಶ್ರೀಗಳವರ ಕೈಸೇರಿತು. ಶ್ರೀಗಳ ಪರುಷ ಹಸ್ತಸ್ಪರ್ಶದಿಂದ  ಈ ಸಂಸ್ಥೆಯು ಮುಂದೆ ಉಜ್ವಲವಾಗಿ ಬೆಳೆಯಿತು. ಈಗ ಈ ಸಂಸ್ಥೆ ಅತ್ಯಂತ ಗುನಮಟ್ಟದ ಶಿಕ್ಷಣ ನೀಡುವಲ್ಲಿ ನಾಡಿನ ಪ್ರಮುಖ ವಿದ್ಯಾಸಂಸ್ಥೆಯಾಗಿ ಕಾರ್ಯಮಾಡುತ್ತಿದೆ. ಸುಮಾರು ಮೂರುಲಕ್ಷ ರೂ.ಗಳ ಖರ್ಚಿನಿಂದ ಕಟ್ಟಿಸಿದ ಕಟ್ಟಡವನ್ನು ಶಾಲೆ ಪಡೆದುಕೊಂಡಿದೆ.

ಸಂಸ್ಕೃತ ಭಾಷೆ ಭಾರತದ ಜ್ಞಾನನಿಧಿಯ ಅಕ್ಷಯ ಭಾಂಡಾರ. ಅದು ನಮ್ಮ ಸಂಸ್ಕ್ರತಿಯ ಉಗಮದ ಸೆಲೆಯಾಗಿದೆ.. ನಮ್ಮ ತತ್ವಜ್ಞಾನ, ಧರ್ಮದ ವಿಚಾರಗಳನ್ನು ಅರಿಯಬೇಕಾದರೆ ಅದರ ಜ್ಞಾನ ನಮಗೆ ಅತ್ಯಂತ ಅವಶ್ಯವಾದದ್ದೆಂದು  ಅರಿತ ಶ್ರೀಗಳವರು ಕ್ರಿ.ಶ.೧೯೬೨ನೇ ಇಸ್ವಿಯಲ್ಲಿಯೇ ನರೇಗಲ್ಲಿನಲ್ಲಿ ‘ಮಲ್ಹಣಾರ್ಯ ಸಂಸ್ಕೃತ ಪಾಠಶಾಲೆ’ ಯನ್ನು ಆರಂಭಿಸಿದರು. ಇಲ್ಲಿ ಅನೇಕ ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸಮಾಡಿ ನಾಡಿನ ತುಂಬೆಲ್ಲ ತಮ್ಮ ವಿದ್ವತ್‌ ಪ್ರದರ್ಶನ ಮಾಡುತ್ತ ಖ್ಯಾತರಾಗಿದ್ದಾರೆ.

ಈ ಭಾಗದಲ್ಲಿ ಉಚ್ಚ ಶಿಕ್ಷಣ ಸಂಸ್ಥೆಗಳ ಅಭಾವವು ಶ್ರೀಗಳನ್ನು ವಿವಂಚನೆಗೆ ಈಡು ಮಾಡಿದ್ದಿತು. ಅದಕ್ಕಾಗಿ ಈ ಭಾಗದ ಜನತೆಯಲ್ಲಿ ಇಂಥ ಸಂಸ್ಥೆಗಳ ಅವಶ್ಯಕತೆಯ ಬಗ್ಗೆ ಜಾಗೃತಿಯನ್ನುಂಟುಮಾಡಿ ಗಜೇಂದ್ರಗಡ, ರೋಣ, ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಸಂಚಾರ ಕೈಕೊಂಡು, ಹಣ ಸಂಗ್ರಹಿಸಿ ನರೇಗಲ್ಲಿನಲ್ಲಿ ಕಾಲೇಜನ್ನು ಆರಂಭಿಸಿದರು. ‘ಅನ್ನದಾನೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ’ ಎಂಬ ಅಭಿದಾನವನ್ನು ಪಡೆದ ಈ ಕಾಲೇಜು, ದಿನಾಂಕ ೨೦-೯-೧೯೬೭ ರಂದು ಆರಂಭ ವಾಯಿತು. ಇದರ ಪ್ರಾರಂಭೋತ್ಸವವು ಅಂದಿನ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಹಳ್ಳಿಕೇರಿ ಗುದ್ದೆಪ್ಪನವರ ಅಧ್ಯಕ್ಷತೆಯಲ್ಲಿ, ಕರ್ನಾಟಕವಿಶ್ವವಿದ್ಯಾಲಯದ ಅಂದಿನ ಧೀಮಂತ ಕುಲಪತಿಗಳಾಗಿದ್ದ ಮಹಾಮೇಧಾವಿ ಡಾ.ಡಿ.ಸಿ. ಪಾವಟೆ ಯವರಿಂದ ನೆರವೇರಿಸಲ್ಪಟ್ಟಿತು. ಹಳ್ಳಿಗಾಡಿನ ಜನರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ದೊಡ್ಡ ಊರುಗಳಿಗೆ ವಲಸೆಹೋಗುತ್ತಿದ್ದರು. ಮತ್ತು ಅನೇಕ ಅನಾನುಕೂಲತೆಗಳನ್ನು ಮತ್ತು ತೊಂದರೆಗಳನ್ನು ಅನುಭವಿಸಿ ಮಕ್ಕಳನ್ನು ದೊಡ್ಡ ಊರಿನಲ್ಲಿ ಇಟ್ಟು ವಿದ್ಯಾಭ್ಯಾಸಮಾಡಿಸುತ್ತಿದ್ದರು. ಇವುಗಳನ್ನು ಕಂಡ ಶ್ರೀಗಳು ಹಳ್ಳಿಗಾಡಿನಲ್ಲಿಯೇ ಇಂಥ ಸಂಸ್ಥೆಯನ್ನು ನಿರ್ಮಿಸಬೇಕೆಂದು ಶ್ರಮಿಸಿದರು. ಇಂದು ಈ ಕಾಲೇಜು ಸುಮಾರು ನಾಲ್ಕುಲಕ್ಷ ರೂಪಾಯಿ ಖರ್ಚಿನಿಂದ ಕಟ್ಟಿಸಲ್ಪಟ್ಟ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ನಕ್ಷೆಯನ್ನು ಪೂಜ್ಯ ಶ್ರೀಗಳೇ ಸ್ವತಃ ತಮ್ಮ ಬೆತ್ತದಿಂದ ತಯಾರಿಸಿದರು. ಶಿಲ್ಪಶಾಸ್ತ್ರದಲ್ಲಿ ಅವರಿಗೆ ವಿಶೇಷವಾದ ಗತಿಯಿದ್ದಿತು. ಲಕ್ಷಣವಾದ ವಿನ್ಯಾಸವನ್ನು ಹೊಂದಿದ ಕಟ್ಟಡವನ್ನು ನೋಡಿದಾಗ ಶ್ರೀಗಳ ಶಿಲ್ಪಶಾಸ್ತ್ರಜ್ಞಾನ ಹಾಗೂ ಸೌಂದರ್ಯಪ್ರಜೆಯ ಕಲ್ಪನೆಯು ನಮ್ಮೆದುರಿಗೆ ಮೂಡುತ್ತದೆ. ಈ ಕಾಲೇಜು ಸುಮಾರು ೩ ಲಕ್ಷ ಕಿಮ್ಮತ್ತಿನ ವಸತಿಗೃಹವನ್ನೂ ಹೊಂದಿವೆ. ಈ ಕಾಲೇಜು ಶ್ರೀ ಟಿ.ಕೆ.ಪಾಟೀಲ, ಎಂ.ಎ (ಲಂಡನ್) ಹಾಗೂ ಡಾ.ಡಿ.ಎಸ್. ಕರ್ಕಿಯವರಂಥ ಅನುಭವಿ ಹಾಗೂ ಸಮರ್ಥ ಹಾಲಕೆರೆ ಸನ್ನಿಧಾನ ಪ್ರಿನ್ಸಿಪಾಲರನ್ನು ಪಡೆದುಕೊಂಡಿತ್ತು. ಶ್ರೀ.ಟಿ.ಕೆ.ಪಾಟೀಲರು ಪ್ರಿನ್ಸಿಪಾಲರಾಗಿದ್ದಾಗ, ಕರ್ನಾಟಕ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಗಣನೀಯ ಸೇವೆ ಸಲ್ಲಿಸಿದರು. ಡಾ.ಕರ್ಕಿಯವರು ಉದ್ಧಾಮ ಕವಿಗಳೂ ಭಾಷಾವಿಜ್ಞಾನ ಪಂಡಿತರೂ ಆಗಿದ್ದರು. ಕಾಲೇಜಿನ ಆರಂಭದ ದಿನಮಾನಗಳಲ್ಲಿ ಅವರು ಉತ್ತಮ ಕಕ್ಷೆಯಲ್ಲಿಯ ಪರಂಪರೆಗಳನ್ನು ಹಾಕಿಕೊಟ್ಟರು. ಇಂದು ನರೇಗಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ ಗ್ರಾಮೀಣಮಟ್ಟದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಶ್ರೀಗಳು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು. ಆದ್ದರಿಂದಲೇ ಅವರು ಕ್ರಿ.ಶ.೧೯೭೧ರಲ್ಲಿ ನರೇಗಲ್ಲಿನಲ್ಲಿ ಶ್ರೀ ಅನ್ನದಾನ ವಿಜಯ ಮಾಧ್ಯಮಿಕ ಬಾಲಿಕೆಯರ ಶಾಲೆ’ಯನ್ನು ಆರಂಭಿಸಿದರು. ಈ ಶಾಲೆಯಲ್ಲಿ ಈಗ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾದ್ಯಯನ ಮಾಡಿ ಸುಶಿಕ್ಷಿತೆಯರಾಗಿದ್ದಾರೆ.

ಇದಲ್ಲದೆ ನಿಡಗುಂದಿಯಲ್ಲಿ ‘ಶ್ರೀ ಅನ್ನದಾನೇಶ್ವರ ಮಾಧ್ಯಮಿಕ ಶಾಲೆ ನಿಡಗುಂದಿ’ ಎಂಬ ಹೆಸರಿನ ಶಾಲೆಯನ್ನು ಶ್ರೀಗಳು ಕ್ರಿ.ಶ.೧೯೬೭ರಲ್ಲಿ ಆರಂಭಿಸಿದರು. ಈಗ ಈ ಶಾಲೆಯಲ್ಲಿ ಸುಮಾರು ೧೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿ ಪ್ರಸಾದನಿಲಯದ ಏರ್ಪಾಟನ್ನೂ ಮಾಡಿದ್ದಾರೆ. ಇದರ ಬೃಹತ್ ಕಟ್ಟಡವೂ ನಿರ್ಮಾಣ ಹಂತದಲ್ಲಿದೆ.

ಹಾಗೆಯೇ ಅಬ್ಬಿಗೇರಿಯಲ್ಲಿ ಶ್ರೀ ಅನ್ನದಾನೀಶ್ವರ ಮಾಧ್ಯಮಿಕ ಶಾಲೆ, ಅಬ್ಬಿಗೇರಿ’, ಎಂಬ ಹೆಸರಿನ ಶಾಲೆಯನ್ನು ಕ್ರಿ.ಶ.೧೯೭೨ರಲ್ಲಿ ಆರಂಭಿಸಿದರು. ಇಲ್ಲಿ ಈಗ ಸುಮಾರು ೧೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮಠದ ಉಚ್ಚ ಪರಂಪರೆಯನ್ವಯ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜೊತೆಗೆ ವಸತಿ ಹಾಗೂ ಅನ್ನದಾನದ ವ್ಯವಸ್ಥೆಯಾಗಬೇಕೆಂಬುದನ್ನು ಸ್ವಾಮಿಗಳು ಚೆನ್ನಾಗಿ ಅರಿತಿದ್ದರು. ಅದಕ್ಕಾಗಿಯೇ ನರೇಗಲ್ಲಿನಲ್ಲಿ ೫೨ ಕೋಣೆಗಳುಳ್ಳ ಶ್ರೀ ಅನ್ನದಾನ ವಿಜಯ ವಿದ್ಯಾರ್ಥಿಗಳ ವಸತಿಗೃಹ’ ವನ್ನು ಶ್ರೀಗಳು ಕ್ರಿ.ಶ.೧೯೬೫ರಲ್ಲಿ ನರೇಗಲ್ಲಿನಲ್ಲಿ ಸ್ಥಾಪಿಸಿದರು. ಈ ವಸತಿಗೃಹದ ಉದ್ಘಾಟನೆಯನ್ನು ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರು ೩೦-೬-೧೯೬೫ರಂದು ನೆರವೇರಿಸಿದರು.

ಅನ್ನದಾಸೋಹಕ್ಕಾಗಿ ನರೇಗಲ್ಲಿನಲ್ಲಿ ಶ್ರೀ ಕೋಡೀಕೊಪ್ಪದ ವೀರಪ್ಪಜ್ಜನವರ ಬಾಗಲಕೋಟ ಶ್ರೀ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯ’ವೆಂಬ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ, ಸುಮಾರು ೫೦೦ ವಿದ್ಯಾರ್ಥಿಗಳಿಗೆ ಪ್ರಸಾದದ ಅನುಕೂಲತೆಯನ್ನು ಶ್ರೀಗಳು ಒದಗಿಸಿದರು. ಮರಣ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಶೋಧನೆಗಾಗಿ ಬಸವರಾಜಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯಂತೆ ಧರ್ಮಗ್ರಂಥಗಳ ಪರಿಷ್ಕರಣ ಹಾಗೂ ಅವುಗಳಿಗೆ ಸಂಬಂಧಿಸಿದ ಆಕರಗಳ ಅನುಕೂಲತೆಗಳನ್ನು ಒದಗಿಸಿದರು.

ಧರ್ಮಗ್ರಂಥಗಳ ಪರಿಶೋಧನೆಗಾಗಿ ಪಂಡಿತರನ್ನು ಬೇರೆ ಬೇರೆ ಸ್ಥಳಗಳಿಗೆ ಕಳಿಸಿ ಪರಿಷ್ಕರಿಸಲ್ಪಟ್ಟು ಹಲವಾರು ಗ್ರಂಥಗಳನ್ನು ಶ್ರೀಮಠವು ಪ್ರಕಾಶನ ಗೊಳಿಸಿದೆ  6-1-1925  ರಂದು ಪಂಡಿತ್ ಬಸವರಾಜ ಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯ ಮೇರೆಗೆ ಮದ್ರಾಸಿಗೆ ಹೋಗಿ ಅಲ್ಲಿ 5 ತಿಂಗಳವರೆಗೆ ಇದ್ದು ಕೆಲವು ಧರ್ಮಗ್ರಂಥಗಳನ್ನು ಶೋಧಿಸಿ ಹಾಲಕೆರೆ ಮಠದಲ್ಲಿ ಅವುಗಳ ಪರಿಷ್ಕಾರ ಕಾರ್ಯವನ್ನು ಕೈಕೊಂಡರು ಸ್ವಾಮಿಗಳ ಆಶ್ರಯದಲ್ಲಿ ಇಂಥ ಬೇರೆಬೇರೆ ಪಂಡಿತರಿಂದ ಬೆಳಕು ಕಂಡ ಕೃತಿಗಳೆಂದರೆ 1) ಶಂಕರಲಿಂಗ ಶತಕ

2) ಕ್ಷಮಾಪರಾಧ ಸ್ತೋತ್ರ 3) ಯೋಗಿರಾಜ ವಿಜಯ 4) ಶ್ರೀ ಅನ್ನಧಾನ ಮಹಾಸ್ವಾಮಿಗಳ ಪುರಾಣ

, ಹೀಗೆ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಸಾದ ನಿಲಯಗಳನ್ನು ನಡೆಯಿಸುವದು, ಇಂಥ ಉಳಿದ ಸಂಸ್ಥೆಗಳಿಗೆ ನೆರವಾಗುವುದು, ಸಂಶೋಧನೆ ಹಾಗೂ ಧರ್ಮ ಗ್ರಂಥಗಳ ಪ್ರಕಟನೆ ಕೈಕೊಳ್ಳುವುದರ ಮುಖಾಂತರ ಶ್ರೀಗಳು ವಿದ್ಯಾಕ್ಷೇತ್ರದಲ್ಲಿ ಬಹಳ ಉಪಯುಕ್ತವಾದ ಸೇವೆ ಸಲ್ಲಿಸಿದರು. ಹಲವಾರು ಪ್ರಸಂಗಗಳಲ್ಲಿ ನಾನು ಶ್ರೀಗಳ ದರ್ಶನ ಪಡೆಯುವ ಅವಕಾಶ ದೊರೆಯಿತು. ಆಗ ಅವರಿಗೆ ಆಗಲೇ ಬಹಳ ವಯಸ್ಸಾಗಿತ್ತು ಮೈತುಂಬ ಕ್ಯಾವಿಯ ಬಟ್ಟೆ, ದೊಡ್ಡ ಕೋಲು, ಮೈಮೇಲೆ ದೊಡ್ಡ ದೊಡ್ಡ ರುದ್ರಾಕ್ಷಿಗಳ ದೊಡ್ಡ ಸರ, ವಿಶಾಲವಾದ ಮುಖದ ಹಣೆಯ ತುಂಬ ಢಾಳವಾಗಿ ಧರಿಸಿದ ವಿಭೂತಿ ಇವುಗಳು ಅವರ ದರ್ಶನವನ್ನು ಅವಿಸ್ಮರಣೀಯವಾಗಿ ಮಾಡುತ್ತಿದ್ದವು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಎಸಗಿದ ಕಾರ್ಯ ಎಷ್ಟು ಮಹತ್ತರವಾಗಿತ್ತೋ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಷ್ಟೇ ಮಹತ್ವದ್ದಾಗಿತ್ತು ಶಿಕ್ಷಣ ಕ್ಷೇತ್ರದಲ್ಲಿ ಪೂಜ್ಯ ಶ್ರೀಗಳು ಮಾಡಿದ ಪ್ರಮುಖ ಕಾರ್ಯಗಳನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಅವುಗಳನ್ನು ಹೀಗೆ ವಿಂಗಡಿಸಿ ಎತ್ತಿ ಹೇಳಬಹುದು : ೧)ಹಳ್ಳಿಗಾಡಿನಲ್ಲಿ ಅಲ್ಲಿಯ ಜನತೆಯ ಸಲುವಾಗಿ, ಅದರಲ್ಲಿಯೂ ಬಡವರ ಅನುಕೂಲಕ್ಕಾಗಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಅವರಲ್ಲಿ ವಿದ್ಯಾಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದು. ೨) ಹಳ್ಳಿಗಾಡಿನ ಹಾಗೂ ದೀನದಲಿತರ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿ ಅವರಿಗೆ ಬಿಸಿಊಟದ ಅನುಕೂಲತೆಗಳನ್ನು ಒದಗಿಸಿದ್ದು, ೩) ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಅಭ್ಯಾಸದ ಮಹತಿಯನ್ನು ಗುರುತಿಸಿ ಅದರ ಅಗತ್ಯ ಜ್ಞಾನವನ್ನುಪ್ರಸುರಪಡಿಸಿದ್ದು, ೪) ಹೆಣ್ಣು ಮಕ್ಕಳ ಶಿಕ್ಷಣ ಅವಶ್ಯಕತೆಯನ್ನು ಮನಗಂಡು ಅವರಿಗಾಗಿ ವಿದ್ಯಾಸಂಸ್ಥೆ ಆರಂಭಿಸಿದ್ದು, ೫) ಧರ್ಮ ಗ್ರಂಥಗಳ ಪರಿಷ್ಕರಣೆ, ಸಂಶೋಧನೆ ಹಾಗೂ ಅವುಗಳ  ಪ್ರಕಟನೆಗೆ ಅವಕಾಶ ಕಲ್ಪಿಸಿದ್ದು. ೬) ವ್ಯಾಸ ಕ್ರಮದಲ್ಲಿ ಯೋಗ ಶಿಕ್ಷಣದ ಮಹತಿಯನ್ನರಿತು ಅದನ್ನು  ವಿದ್ಯಾಭ್ಯಾಸ ಕ್ರಮದಲ್ಲಿ  ಸೇರಿಸಿ ಅದರ ಅಭ್ಯಾಸದ ಅನುಕೂಲತೆಗಳನ್ನು ಎಡೆಮಾಡಿಕೊಟ್ಟಿದ್ದು. ೬)ಇವೆಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಉಳಿವಿಗೆ ಅತಿ ಅವಶ್ಯವಾದ ಶಿವಯೋಗ ಮಂದಿರದಂಥ ಉದಾತ್ತ ವಿದ್ಯಾಸಂಸ್ಥೆಗೆ ಅನೇಕ ರೀತಿಯಿಂದ ನೆರವಾದದ್ದು. ಇವೆಲ್ಲವುಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಅನ್ನದಾನ ಸ್ವಾಮಿಗಳು ಶಿಕ್ಷಣ ಕ್ಷೇತ್ರಕ್ಕೆ ಅಮೋಘವಾದ ಸೇವೆ ಸಲ್ಲಿಸಿದರೆಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು.

 ಆಧಾರ ಗ್ರಂಥಗಳು : ೧. ‘ಶ್ರೀ ಗುರು ಅನ್ನದಾನೇಶ್ವರ ಚರಿತಾಮೃತ” – ವೇ.ಪಂ.ಜಿ.ಎಂ.ಚಂದ್ರಶೇಖರ

ಶಾಸ್ತ್ರಿಗಳು ಇಜಾರಿ ಲಕಮಾಪುರ (ಹಾವೇರಿ). ೨. “ಹಾಲಕೆರೆಯ ಶ್ರೀ ಅನ್ನದಾನ ಮಹಾಸ್ವಾಮಿದ್ವಯರು ” – ಡಾ. ಬಿ. ವಿ.

ಶಿರೂರ.

Related Posts