ಇಷ್ಟಲಿಂಗ : ಪರಿಕಲ್ಪನೆ

• ಡಾ. ಎಂ. ಶಿವಕುಮಾರಸ್ವಾಮಿ

ವೀರಶೈವರ ಧಾರ್ಮಿಕ ಪರಿವೇಶದಲ್ಲಿ ಇಷ್ಟಲಿಂಗಕ್ಕೆ ಇರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಅವರಿಗೆ ಇಷ್ಟತಮವಾದುದು ಇಷ್ಟಲಿಂಗ. ‘ಇಷ್ಟ’ ಎಂದರೆ ಪ್ರಿಯ, ಮನೋಹರ, ಹೃದಯಂಗಮ- (ನೋಡಿ-ʼʼಇಷ್ಟಾರ್ಥ ವ್ಯವಚ್ಛಿನ್ನಾ ಪದಾವಲೀ” -ದಂಡಿ, ಇಷ್ಟಾರ್ಥವೆಂದರೆ ರಮಣೀಯವಾದ ಅರ್ಥ). ವೀರಶೈವರಿಗೆ ಅತ್ಯಂತ ಪ್ರಿಯವಾದುದು, ರಮಣೀಯವಾದುದು ಇಷ್ಟಲಿಂಗ, ಅವರ ದೃಷ್ಟಿಯಲ್ಲಿ ಅದಕ್ಕೆ ಇರುವ ಅನಂತ ಶಕ್ತಿಗಳಲ್ಲಿ ಎರಡು ಶಕ್ತಿಗಳು ಮುಖ್ಯ : ಒಂದು, ಇಷ್ಟಾವಾಪ್ತಿಕರತ್ವ ಮತ್ತು ಎರಡು,

ಅನಿಷ್ಟಪರಿಹಾರಕತ್ವ; ಇಷ್ಟವಾದುದನ್ನು ಪಡೆಯುವಂತೆ ಮಾಡುವುದು ಮತ್ತು ಇಷ್ಟವಲ್ಲದುದನ್ನು ಪರಿಹರಿಸುವುದು. ಇಷ್ಟವಾದುದು ಎಂದರೆ ಯಾವುದು ? ಯಾವುದಾದರೂ ಆಗಿರಬಹುದು.  ಆದರೆ ಯಾವುದೇ ಆದರೂ ಅದು ಸುಖವನ್ನು ಕೊಡುವುದಾಗಿರಬೇಕು ಎಂಬುದು ಸಾಮಾನ್ಯ ಇಚ್ಛೆ, ಸುಖ ಎರಡು ವಿಧ-ಲೌಕಿಕ ಸುಖ ಮತ್ತು ಅಲೌಕಿಕ ಅಥವಾ ಪಾರಮಾರ್ಥಿಕ ಸುಖ ಎಂದು.

ಪ್ರೇಯಸ್ ಮತ್ತು ಶ್ರೇಯಸ್ :

ಇವುಗಳನ್ನು ಕಠೋಪನಿಷತ್ತು ಪ್ರೇಯಸ್’ ಮತ್ತು ‘ಶ್ರೇಯಸ್’ ಎಂದು ಕರೆಯುತ್ತದೆ. ‘ಪ್ರೇಯಸ್’ ಎಂದರೆ ಸಾಮಾನ್ಯವಾಗಿ ಪ್ರಿಯವಾದುದು. ಅದು ಶುದ್ಧ ಅಥವಾ ಕೇವಲ ಸುಖವಲ್ಲ, ದುಃಖ ಅಥವಾ ಅಪ್ರಿಯವಾದುದರೊಂದಿಗೆ ಕೂಡಿಕೊಂಡ ಸುಖ, ತಾತ್ಕಾಲಿಕ ಸುಖ. ಅದೇ ಲೌಕಿಕ ಸುಖ. ಇನ್ನು ‘ಶ್ರೇಯಸ್’ ಎಂಬುದು ಶ್ರೇಯಸ್ಕರ, ಅಂದರೆ ಕೇವಲ ಸುಖಪರ್ಯವಸಾಯಿ, ಪರಮಾನಂದ, ಶಿವಾನಂದ. ಅದೇ ಅಲೌಕಿಕ ಅಥವಾ ಪಾರಮಾರ್ಥಿಕ ಸುಖ. ಇವರೆಡರಲ್ಲಿ ಯಾರು ಯಾವುದನ್ನೂ ಆಯ್ದುಕೊಳ್ಳಬಹುದು ? ಜ್ಞಾನಿಯು ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಅಜ್ಞಾನಿಯು ಯೋಗ ಕ್ಷೇಮದ

ದೃಷ್ಟಿಯಿಂದ ಪ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಈ ಪ್ರಶ್ನೆಗೆ ಕಠೋಪನಿಷತ್ತು ನೀಡುವ ಉತ್ತರ, ನೋಡಿ

ಅನ್ಯಚ್ಛ್ರೆಯೋ ನ್ಯದುತೈವ ಪ್ರೇಯಃ, ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ|

ತಯೋಃ ಶ್ರೇಯ ಆದದಾನಾಯ ಸಾಧು ಭವತಿ, ಹಿಯತೇಽರ್ಥಾದ ಉ ಪ್ರೇಯೋ ವೃಣೀತೇ ||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ, ತೌ ಸಂಪರೀತ್ಯ ವಿವಿನಕ್ತಿ ಧೀರಃ |

ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ, ಪ್ರೇಯೋ ಹಿ ಮಂದೋ

ಯೋಗಕ್ಷೇಮಾದ್ ವೃಣೀತೇ || (ಕಠ., ೨.೧-೨)

ʼʼಒಂದು ಶ್ರೇಯಸ್ಸು ಮತ್ತೊಂದು ಪ್ರೇಯಸ್ಸು, ಅವೆರಡೂ ಮನುಷ್ಯನನ್ನು ಬೇರೆ ಬೇರೆ ಉದ್ದೇಶಗಳೊಂದಿಗೆ ಜೋಡಿಸುತ್ತವೆ. ಅವೆರಡರಲ್ಲಿ ಶ್ರೇಯಸ್ಸನ್ನು ಆಯ್ದುಕೊಳ್ಳುವವನಿಗೆ ಒಳ್ಳೆಯದಾಗುತ್ತದೆ. ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೋ ಅವನು ನಿಜವಾದ ಗುರಿಯಿಂದ ವಂಚಿತನಾಗುತ್ತಾನೆ. ಶ್ರೇಯಸ್ ಮತ್ತು ಪ್ರೇಯಸ್ ಎರಡೂ ಮನುಷ್ಯನೆಡೆಗೆ ಹೋಗುತ್ತವೆ. ಅವೆರಡನ್ನು ಪರೀಕ್ಷಿಸಿ ಜ್ಞಾನಿಯು (ಧೀರನು) ಪ್ರೇಯಸ್ಸಿಗೆ ಬದಲಾಗಿ ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಮಂದಬುದ್ಧಿಯವನು ಯೋಗಕ್ಷೇಮದ ದೃಷ್ಟಿಯಿಂದ ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ.

ಇಷ್ಟ’ ವೆಂದರೆ ಶ್ರೇಯಸ್ :

ಈ ಹಿನ್ನೆಲೆಯಲ್ಲಿ ವಿಚಾರ ಮಾಡುವುದಾದರೆ ಇಲ್ಲಿ ‘ಇಷ್ಟ’ ವೆಂದರೆ ಶ್ರೇಯಸ್ ಎಂದೇ ತಿಳಿದುಕೊಳ್ಳಬೇಕು. ಶ್ರೇಯಸ್ಸೆಂದರೆ ಪಾರಮಾರ್ಥಿಕ ಆನಂದವನ್ನು ಹೊಂದುವುದು. ಅಂತಹ ಇಷ್ಟವನ್ನು ತಂದುಕೊಡುವುದರಿಂದ ಅದು ಇಷ್ಟಲಿಂಗ, ಅನಿಷ್ಟವಾದುದು ಎಂದರೆ ಯಾವುದು ನಮ್ಮ ನಿಜವಾದ ಹಿತಕ್ಕೆ ಧಕ್ಕೆ ತರುವುದೋ ಅದು. ಪರಮಾರ್ಥಕ್ಕೆ ಯಾವುದು ಪ್ರತಿಬಂಧಕವೋ ಅದನ್ನು ನಿವಾರಿಸುತ್ತದೆ ಎಂದು ಅದು ಇಷ್ಟಲಿಂಗ. ಇದು ಹೆಸರಿನ ದೃಷ್ಟಿಯಿಂದ ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅಡಗಿದ ಅರ್ಥಗಾಂಭೀರ್ಯ. ಅದನ್ನು ಗರ್ಭೀಕರಿಸಿ ಮೊಗ್ಗೆಯ ಮಾಯಿದೇವರು ಹೀಗೆ ಹೇಳಿದ್ದಾರೆ:

ಇಷ್ಟಾವಾಪ್ತಿಕರು ಸಾಕ್ಷಾದನಿಷ್ಟಪರಿಹಾರಕಮ್ |

ಷ್ಟಿಃ ಪೂಜಾ ತಯಾ ನಿತ್ಯಮಿಷ್ಟಂ ಪೂಜಿತಮಾದರಾತ್ ||

ಇಪ್ಪಲಿಂಗಮಿತಿ ಪ್ರೋಕ್ತಮಾಚಾರ್ಯೈರ್ಲಿಂಗಪೂಜಕೈಃ |

ಇಷ್ಟಮರ್ಥ೦ ಸ್ವಭಕ್ತಾನಾಮನುಯಚ್ಛತಿ ಸರ್ವದಾ |

(ಅನು.ಸೂ., ೩.೯-೧೦)

ʼʼಅನಿಷ್ಟಗಳನ್ನು ನಿವಾರಿಸಿ ಇಷ್ಟಫಲವನ್ನು ನೀಡುವ ‘ಇಷ್ಟಿಃ ಪೂಜಾ’ ಎಂಬ ಅರ್ಥದಂತೆ ನಿತ್ಯವೂ ಆದರದಿಂದ ಪೂಜಿಸಲ್ಪಡುವ, ಭಕ್ತರ ಅಭೀಷ್ಟಗಳನ್ನು ಸದಾ ನೆರವೇರಿಸುವ ಪೂಜ್ಯವಸ್ತುವನ್ನು ಲಿಂಗಪೂಜಾನಿಷ್ಠ ಆಚಾರ್ಯರು ಇಷ್ಟಲಿಂಗವೆಂದು ಕರೆಯುತ್ತಾರೆ”.

ಇಷ್ಟಲಿಂಗ-ಸಂಕೇತವೋ ? ಸ್ವರೂಪವೋ ?

ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅದು ಶಿವನ ಸಂಕೇತವೋ ? ಸ್ವರೂಪವೋ ? ಎಂಬುದು ಬಹುಮುಖ್ಯವಾದ ಪ್ರಶ್ನೆ. ಸಾಮಾನ್ಯ ಕಲ್ಪನೆಯೆಂದರೆ ಇಷ್ಟಲಿಂಗವು ಶಿವನ ಸಂಕೇತ; ಬಾಹ್ಯ ಅರ್ಚನೆಗೆ ಬೇಕಾದ ಒಂದು ಸಾಕಾರ ವಸ್ತು. ಅದನ್ನು ‘ಸಕಲ’ ಎಂದು ಕರೆದಿರುವುದು ಈ ಕಲ್ಪನೆಗೆ ಪೂರಕವಾಗಿರಬಹುದು. ಅದು ‘ದೃಕ್ಕಲಾಗ್ರಾಹ್ಯ’ (ಕಣ್ಣುಗಳ ಕಿರಣಾಂಶಗಳಿಂದ ಕಾಣಬಹುದಾದುದು) ಎಂಬ ಕಾರಣದಿಂದ ಸಾಕಾರವೆಂದು ಹೇಳಲ್ಪಟ್ಟಿರಬಹುದು. “ಸಕಲಂ ದೃಕ್ಕಲಾಗ್ರಾಹ್ಯಮಿಷ್ಟಲಿಂಗಸ್ಥಲಂ ಮಹತ್” (ಅನು.ಸೂ ೩.೬)ಎಂದು ಹೇಳುವ ಮೂಲಕ ಮಾಯಿದೇವರು ಇದನ್ನು ಸೂಚಿಸಿದ್ದಾರೆ ಎಂದುಕೊಳ್ಳಬಹುದು. ಆದರೆ ಇದು ಕೇವಲ ಭ್ರಮಾತ್ಮಕ ಕಲ್ಪನೆ ಮತ್ತು ಅವು ಅದನ್ನು ಸಮರ್ಥಿಸಲು ಭಾವಿಸಿಕೊಂಡ ಕೆಲವು ಯುಕ್ತಿಗಳು, ಏಕೆಂದರೆ ಇಷ್ಟಲಿಂಗವು ಪರಮಾತ್ಮನ ಸಂಕೇತ ಅಥವಾ ಚಿಹ್ನೆಯಲ್ಲ ಎಂಬುದನ್ನು ಮಾಯಿದೇವರ ಈ ಮಾತು ಸ್ಪಷ್ಟವಾಗಿ ತಿಳಿಸುತ್ತದೆ :

ಶಿವ ಏವ ಸ್ವಯಂ ಲಿಂಗಮಿತಿ ಲಿಂಗಸ್ಯ ವೈಭವಮ್ |

ನಾನ್ಯಚಿಹ್ನಾದಿಕಂ ಲಿಂಗಂ ತತ್ಸರ್ವಂ ಕೃತಕಂ ಚ ಯತ್ II (ಅನು. ಸೂ. ೩.೧)

“ಸ್ವಯಂ ಪರಮಾತ್ಮನೇ ಲಿಂಗ, ಹಾಗೆಂದೇ ಲಿಂಗಕ್ಕೆ ಮಹತ್ವ, ಬೇರೆ ಯಾವುದೇ ಚಿಹ್ನೆ ಮುಂತಾದುದು ಲಿಂಗವಲ್ಲ. ಅದೆಲ್ಲಾ ಕೃತಕ’ ಇಷ್ಟಲಿಂಗವು ಸಾಕಾರವೇ ನಿರಾಕಾರವೇ ಎಂಬುದನ್ನು ಪರೀಕ್ಷಿಸಲು ದೃಷ್ಟಿಯೋಗಕ್ಕೆ ಮೊರೆಹೋಗಬೇಕು. ಇಷ್ಟಲಿಂಗದಲ್ಲಿ ದೃಷ್ಟಿಯೋಗವನ್ನು ಸಾಧಿಸಿ ಅಂತರ್ಮುಖನಾದಾಗ ಯಾವ ಆಕಾರವೂ ಇರದು.

ಹೀಗೆ ಲಿಂಗವು ಅ೦ದರೆ ಇಷ್ಟಲಿಂಗವು ಶಿವನೇ. ಅದು ಅವನ ಸ್ವರೂಪವೇ ಹೊರತು ಬೇರಲ್ಲ ಈ ಪರಿಕಲ್ಪನೆಯ ಮೂಲ ಸ್ಫೂರ್ತಿಯು ಇಲ್ಲಿದೆ :

ಅಪರಿಚ್ಛಿನ್ನಮವ್ಯಕ್ತಂ ಲಿಂಗಂ ಬ್ರಹ್ಮ ಸನಾತನಮ್ |

ಉಪಾಸನಾರ್ಥಮಂತಃಸ್ಥಂ ಪರಿಚ್ಛಿನ್ನಂ ಸ್ವಮಾಯಯಾ || (ಸಿ.ಶಿ., ೬.೨೬)

ʼʼಅಖಂಡವೂ ಅವ್ಯಕ್ತವೂ ಆದ ಸನಾತನ ಬ್ರಹ್ಮವೇ ಆದ ಒಳಗಿನ ಲಿಂಗವು ಭಕ್ತರ ಉಪಾಸನೆಗಾಗಿ ತನ್ನ ಮಾಯೆಯಿಂದ ತಾನೇ ಬೇರೆ ಬೇರೆಯಾಯಿತುʼʼ, ಬೇರೆ ಬೇರೆಯಾಯಿತು ಎಂದರೆ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗವೆಂದು ಮೂರು ರೂಪಗಳನ್ನು ಧರಿಸಿತು ಎಂದರ್ಥ. ವೀರಶೈವ ಪರಿಭಾಷೆಯಲ್ಲಿ ಲಿಂಗ ಶಬ್ದದ ನಿಷ್ಪತ್ತಿ ಮತ್ತು ಲಿಂಗತ್ರಯ ಧಾರಣ ಪರ್ಯವಸಾಯಿ ದೀಕ್ಷಾತ್ರಯ ಇಲ್ಲಿ ಪ್ರಸ್ತುತ.

ಲಿಂಗ ಶಬ್ದ ನಿಷ್ಪತ್ತಿ:

ʼಲೀಯತೇ ಗಮ್ಯತೇ ಜಗದ್ ಯತ್ರ ಯಸ್ಮಾತ್ ತತ್ ಲಿಂಗಮ್’- ಯಾವುದರಲ್ಲಿ ಪ್ರಪಂಚವು ಮೊದಲು ಅಡಗಿತ್ತೋ, ಯಾವುದರಿಂದ ಹೊರ ಹೊಮ್ಮುವುದೋ ಅದು ಲಿಂಗ, ಎಂಬ ನಿಷ್ಪತ್ತಿಯಂತೆ ಲಿಂಗವು ಪರಬ್ರಹ್ಮ ಪರಶಿವ

ರೇ ಲೀಯತೇ ಸರ್ವಂ ಜಗತ್ ಸ್ಥಾವರಜಂಗಮಮ್ |

ಪುನರುತ್ಪದ್ಯತೇ ಯಸ್ಮಾತ್ ತದ್ ಬ್ರಹ್ಮಲಿಂಗಸಂಜ್ಞಕಮ್ ||  (ಚಂ. ಆ., ಕ್ರಿ.ಪಾ. ೩.೮)  

“ಯಾವುದರ ಉದರದಲ್ಲಿ ಚರಾಚರಾತ್ಮಕ ಜಗತ್ತು ಅಡಗಿರುವುದೋ ಎಲ್ಲಿಂದ ಮತ್ತೆ ಅದು ಉತ್ಪನ್ನವಾಗುವುದೋ ಅದು ಲಿಂಗಸಂಜ್ಞೆಯುಳ್ಳ ಬ್ರಹ್ಮʼʼ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲೂ ಇದರ ಪ್ರತಿಧ್ವನಿಯಿದೆ :

ಲಯಂ ಗಚ್ಛತಿ ಯತ್ರೈವ ಜಗದೇತಚ್ಚರಾಚರಮ್ |

ಪುನಃ ಪುನಃ ಸಮುತ್ಪತ್ತಿಂ ತಲ್ಲಿಂಗಂ ಬ್ರಹ್ಮ ಶಾಶ್ವತಮ್ |

(ಸಿ.ಶಿ., ೬.೩೭)

ಉಪನಿಷತ್ತುಗಳು ಅದನ್ನೇ ಬ್ರಹ್ಮವೆಂದು ಕರೆಯುತ್ತಾರೆ :ʼʼಸರ್ವಂ ಖಲ್ವಿದಂ ಬ್ರಹ್ಮತಜ್ಜಲಾನ್ ಇತಿ ಶಾಂತ ಉಪಾಸೀತ’ (ಛಾಂ. ಉ., ೩.೧೪.೧)-ಇದೆಲ್ಲವೂ ಬ್ರಹ್ಮವಲ್ಲದೆ ಬೇರಲ್ಲ; ಎಲ್ಲವೂ ಅದರಿಂದ ಹುಟ್ಟುತ್ತದೆ (ತಜ್ಜಃ), ಎಲ್ಲವೂ ಅದರಲ್ಲಿ ಲೀನವಾಗುತ್ತದೆ (ತಲ್ಲಃ) ಮತ್ತು ಅದರಿಂದ ಉಸಿರಾಡುತ್ತದೆ. (ತದನ್) ಎಂದು ಶಾಂತವಾಗಿ ಇರುತ್ತಾನೆ. (ತೈ.ಉ., ೨.೧ ನ್ನೂ ನೋಡಿರಿ), ತ್ರಿವಿಧ ದೀಕ್ಷೆಗಳ ಮೂಲಕ  ಗುರುವು ಶಿಷ್ಯನಿಗೆ ಲಿಂಗತ್ರಯವನ್ನು ಅನುಗ್ರಹಿಸುತ್ತಾನೆ.

ತ್ರಿವಿಧ ದೀಕ್ಷೆ-ಲಿಂಗತ್ರಯ ಪ್ರಧಾನ :

ವೇಧಾದೀಕ್ಷಾ, ಮಾಂತ್ರಿದೀಕ್ಷಾ (ಮನುದೀಕ್ಷಾ) ಮತ್ತು ಕ್ರಿಯಾದೀಕ್ಷಾ ಎಂದು ದೀಕ್ಷೆ ಮೂರು ವಿಧ. ಇವುಗಳಲ್ಲಿ ಶಿಷ್ಯನ ಮಸ್ತಕದ ಮೇಲೆ ಇರಿಸಿದ ಶ್ರೀ ಗುರುವಿನ ಹಸ್ತದಿಂದ ಮತ್ತು ಏಕಾಗ್ರ ದೃಷ್ಟಿಯಿಂದ ಶಿಷ್ಯನಲ್ಲಿ ಆಗುವ ಶಿವಭಾವದ ವಿನಿವೇಶವು ವೇಧಾದೀಕ್ಷೆ, ಶ್ರೀಗುರುವಿನಿಂದ ಶಿವಪಂಚಾಕ್ಷರಿ ಮಂತ್ರೋಪದೇಶವು ಮಾಂತ್ತೀ ದೀಕ್ಷೆ  ಕೂಡಿದುದು, ಕ್ರಿಯಾ ಪ್ರಾಧಾನ್ಯವುಳ್ಳದ್ದು ಮಂಡಲ ರಚನೆ, ಕುಂಡ ಸ್ಥಾಪನೆ ಮುಂತಾದ ಕ್ರಿಯೆಗಳೊಂದಿಗೆ ಕ್ರಿಯಾದೀಕ್ಷೆ,  

ಗುರೋರಾಲೋಕಮಾತ್ರೇಣ ಹಸ್ತ ಮಸ್ತಕಯೋಗತಃ |

ಯಃ ಶಿವತ್ವಸಮಾವೇಶೋ ವೇಧಾದೀಕ್ಷೇತಿ ಸಾ ಮತಾ||

ಮಾಂತ್ರೀದೀಕ್ಷೇತಿ ಸಾ ಪ್ರೋಕ್ತಾ ಮಂತ್ರಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ ||

(ಸಿ.ಶಿ., ೬.೧೩-೧೪) (ಕಾ.., ಕ್ರಿ.ಪಾ., ೧.೧೩-೧೪ನ್ನೂ ನೋಡಿ)

ಈ ಮೂರು ದೀಕ್ಷೆಗಳ ಮೂಲಕ ಶ್ರೀಗುರುವು ಕ್ರಮವಾಗಿ ಕಾರಣ, ಸೂಕ್ಷ್ಮ ಮತ್ತು ಸ್ಥೂಲ ಶರೀರಗಳಲ್ಲಿನ ಆಣವ, ಮಾಯೀಯ ಮತ್ತು ಕಾರ್ಮಿಕವೆಂಬ ಮೂರು ಮಲಗಳನ್ನು ನಾಶಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗಗಳನ್ನು ಅನುಗ್ರಹಿಸುತ್ತಾನೆ. ಇದು ಈ ಮೂರು ದೀಕ್ಷೆಗಳ ಉದ್ದೇಶ ಮತ್ತು ಫಲ :

ತನುತ್ರಯಗತಾನಾದಿಮಲತ್ರಯಮಸೌ ಗುರುಃ |

ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||

(ಕಾ.ಆ., ಕ್ರಿ.ಪಾ. ೧.೧೦)

ಇಡೀ ದೀಕ್ಷಾ ಸಂಸ್ಕಾರದ ಉದ್ದೇಶವೆಂದರೆ ಕಾರಣ ಶರೀರದಲ್ಲಿ ಭಾವಲಿಂಗವನ್ನೂ, ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗವನ್ನೂ, ಸ್ಥೂಲ ಶರೀರದಲ್ಲಿ ಇಷ್ಟಲಿಂಗವನ್ನೂ ಅನುಗ್ರಹಿಸಿ, ಅವುಗಳ ಅನುಸಂಧಾನವನ್ನು (ಸೂಕ್ಷ್ಮವಾದ ಸಂಬಂಧವನ್ನು) ಏರ್ಪಡಿಸುವುದು.ʼʼಇಷ್ಟಪ್ರಾಣಭಾವೇಷು ಲಿಂಗಧಾರಣಂ ವದಂತಿʼ’ (ಲಿಂ.ಉ., ಅಪ್ರಕಟಿತ ಉಪನಿಷತ್ತುಗಳು, ಪು. ೩೧೧), ”ಸರ್ವದೇಹೇಷು ಲಿಂಗಧಾರಣಂ ಭವತಿ” (ಅದೇ), ಎಂಬ ಶ್ರುತಿ-ಸೂಕ್ತಿಗಳು.

ಇಷ್ಟಂ ಸ್ಥೂಲತನೋ ಪ್ರೋಕ್ತಂ ಪ್ರಾಣಂ ಸೂಕ್ಷ್ಮತನೋಃ ಸ್ಮೃತಮ್ |

ಭಾವಾಖ್ಯಂ ಕಾರಣಸ್ಯೈವಂ ತನುತ್ರಯಗತಂ ತ್ರಯಮ್ ||

(ಚಂ.ಆ., ಕ್ರಿ.ಪಾ., ೩.೪೫)

ಹಾಗೆಯೇ ʼʼಭಾವಪ್ರಾಣೇಷ್ಟ ಲಿಂಗಾನಿ ಪೂಜಯೇದೇಕ ಭಾವತಃ’ʼ (ಸೂ.ಆ., ಕ್ರಿ.ಪಾ., ೬.೪೪) ಮುಂತಾದ ಆಗಮವಾಕ್ಯಗಳ ಆಶಯದಂತೆ, ಲಿಂಗವೆಂದರೆ ಇಷ್ಟಲಿಂಗವಷ್ಟೇ ಅಲ್ಲ, ಇಷ್ಟ- ಪ್ರಾಣ- ಭಾವಲಿಂಗ-ಸಮನ್ವಯ. (Synthesis of Ista-Prana-Bhavalingas) ಹೀಗೆ ಒಂದೇ ಮೂರಾಯಿತು. ಮೂರೂ ಪೂಜೆಯ ಏಕಭಾವದಲ್ಲಿ ಒಂದಾಯಿತು. ಅಂತಹ ಶ್ರೀಗುರು ಕೊಟ್ಟ ಪರವಸ್ತುವು ಪರಶಿವ ಸ್ವರೂಪವೇ ಹೊರತು ಸಂಕೇತವಲ್ಲ.

ಇಷ್ಟಲಿಂಗ-ಚಿತ್ಕಲಾಸಮಾವೇಶ :

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಅದು ಸಾಧಕನ ಚಿತ್ಕಲಾ ಸ್ವರೂಪವೇ ಆಗಿದೆ. ಹೇಗೆಂದರೆ, ಶ್ರೀಗುರುವು ಇಷ್ಟಲಿಂಗ ಸಂಸ್ಕಾರವನ್ನು ಮಾಡಿ ಹಸ್ತದಲ್ಲಿ ಅದನ್ನು ಸ್ಥಾಪಿಸಿ, ಶಿಷ್ಯನ ಮಸ್ತಕದಲ್ಲಿನ ಚಿತ್ಕಲೆಯನ್ನು (ಚಿತ್=ಜ್ಞಾನ, ಅರಿವು; ಅದರ ಕಲೆಯೆಂದರೆ, ಅಂಶ; ಅವನ ಅರಿವಿನ ಅಂಶವನ್ನು) ತನ್ನ ದೃಷ್ಟಿಯಿಂದ ಆಕರ್ಷಿಸಿ ಆ ಲಿಂಗದಲ್ಲಿ ಸಮಾವೇಶಗೊಳಿಸುತ್ತಾನೆ. ಆಮೇಲೆ ಅದನ್ನು ಶಿಷ್ಯನ ಹಸ್ತದಲ್ಲಿ ಇರಿಸುತ್ತಾನೆ. ಆ ಚಿತ್ಕಲೆಗೆ ಶಿವಕಲೆಯೆಂದೂ ಹೆಸರು

 ಜಲಕುಂಭಾಗ್ರಸದ್ ವ್ಯಾಪ್ತತೈಲಬಿಂದುರ್ಯಥಾ ತಥಾ |

ದೇಹ ಪ್ರಾಣಾತ್ಮಸುವ್ಯಾಪ್ತ ಸಂಸ್ಥಿತಾ ಶಾಂಭವೀ ಕಲಾ

ಜ್ವಲತ್ ಕಾಲಾನಲಾಭಾಸಾ ತಟಿತ್‌ ಕೋಟಿಸಮಪ್ರಭಾ |

ಸ್ಯೋರ್ಧ್ವೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ

ಯಾ ಕಲಾ ಪರಮಾ ಸೂಕ್ಷ್ಮಾತತ್ವಾನಾಂ ಬೋಧೀನೀ ಪರಾ |

ತಾಮಾಕೃಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್ ||

(ಕಾ.., ಕ್ರಿ.ಪಾ., ೧. ೧೨೨-೧೨೪)

“ನೀರಿನ ಕುಂಭದ ಮೇಲಿನ ಭಾಗವನ್ನು ಎಣ್ಣೆಯ ಹನಿಗಳು ವ್ಯಾಪಿಸಿದಂತೆ ದೇಹ ಪ್ರಾಣ ಆತ್ಮಗಳನ್ನು ವ್ಯಾಪಿಸಿ ನಿಂತಿದೆ ಶಿವಕಲೆ. ಅದು ಉರಿಯುವ ಕಾಲಾಗ್ನಿಯ ಹೊಳಪುಳ್ಳದ್ದು, ಕೋಟಿ ಮಿಂಚಿನ ಪ್ರಕಾಶವುಳ್ಳದ್ದು. ಅದರ ಮೇಲಿನ ಭಾಗದಲ್ಲಿ ಸೂಕ್ಷ್ಮಶಿಖೆ, ಚಿತ್‌ ಸ್ವರೂಪದ ಶ್ರೇಷ್ಠ ಕಲೆಯಿದೆ. ಆ ಶ್ರೇಷ್ಠ ಸೂಕ್ಷ್ಮ ಕಲೆಯು ತತ್ತ್ವಗಳ ಜ್ಞಾನದಾಯಿನಿ. ಅದನ್ನು ಸರಿಯಾದ ರೀತಿಯಲ್ಲಿ ಆಕರ್ಷಿಸಿ ಲಿಂಗದಲ್ಲಿ ಲಯಗೊಳಿಸಬೇಕು”. ಹಿಂದೆ ಹೇಳಿದ ಕ್ರಮವನ್ನು ಅದೇ ಶೈವಾಗಮವು ಮೊದಲೇ ಸ್ಪಷ್ಟಪಡಿಸಿದೆ :

ಶೈವೀಂ ಕಲಾಂ ಸ್ವಮನಸಾ ವಿಭಾವ್ಯ ಚ ತತಃಪರಮ್ |

ದೃಷ್ಟಾವಾನೀಯ ಚ ತಯಾ ಶಿಷ್ಯವಾಮಕರಸ್ಥಿತೇ |

ಲಿಂಗೇ ನಿವೇಶಯೇತ್ ಕ್ಷಿಪ್ರಂ ಮೂಲಮಂತ್ರಮನುಸ್ಮರನ್ ||

(ಕಾ.ಅ., ಕ್ರಿ.ಪಾ. ೧.೧೨೦)

“ಆ ಶಿವಕಲೆಯನ್ನು (ಶ್ರೀಗುರುವು) ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡು ಆನಂತರ ತನ್ನ ದೃಷ್ಟಿಯಲ್ಲಿ ಸೆಳೆದುಕೊಂಡು ಅದರಿಂದ (ದೃಷ್ಟಿಯ ಮೂಲಕ) ಶಿಷ್ಯನ ಎಡಗೈಯಲ್ಲಿರಿಸಿದ ಲಿಂಗದಲ್ಲಿ ಅದನ್ನು ಶಿವಕಲೆಯನ್ನು, ಚಿತ್ಕಲೆಯನ್ನು ಕ್ಷಿಪ್ರವಾಗಿ ಮೂಲಮಂತ್ರವನ್ನು (ಶಿವಪಂಚಾಕ್ಷರಿಯನ್ನು) ಸ್ಮರಿಸುತ್ತಾ ಸಮಾವೇಶಗೊಳಿಸಬೇಕುʼ’. ಅಂತಹ ಲಿಂಗವನ್ನು ಪ್ರಾಣಲಿಂಗವೆಂದು ಭಾವಿಸಿ ಪ್ರಾಣಕ್ಕಿಂತಲೂ ಹೆಚ್ಚು ಎಂಬಂತೆ ರಕ್ಷಿಸಿಕೊಂಡು ಪೂಜಿಸಬೇಕು. ತನ್ನ ಚಿತ್ಕಲಾಯುಕ್ತಲಿಂಗವನ್ನು ಶಿಷ್ಯನು ಸರ್ವದಾ ತನ್ನ ದೇಹದ ಮೇಲೆ ಧರಿಸಿಕೊಳ್ಳಬೇಕು ಎಂಬುದು ಶ್ರೀಗುರುವಿನ ಕಟ್ಟಳೆ. (ನೋಡಿ-ಸಿ.ಶಿ., ೬.೨೬), ಹಾಗೆ ಚಿತ್ಕಲಾಯುಕ್ತ ಶಿವಕಲಾಯುಕ್ತ ತನ್ನ ಇಷ್ಟಲಿಂಗವನ್ನು ಸಾಧಕನು ಶಿವನ ಸ್ವರೂಪವೇ ಎಂದು ತಿಳಿಯದೆ, ಕೇವಲ ಸಂಕೇತವೆಂದು ತಿಳಿಯುವುದು ಹೇಗೆ ಸಾಧ್ಯ ?

ಚಿತ್ಕಲೆ-ಶಿವಕಲೆ :

ಶಿಷ್ಯನ ಮಸ್ತಕಸ್ಥಿತ ಚಿತ್ಕಲೆಯನ್ನು ಶಿವಕಲೆಯೆಂದು ಕರೆಯುವುದರ ಹಿನ್ನೆಲೆಯನ್ನು ತಿಳಿದರೆ ಇಷ್ಟಲಿಂಗ ಪರಿಕಲ್ಪನೆಯ ಮೂಲಭೂತ ವಿಚಾರವನ್ನು ತಿಳಿದಂತಾಗುತ್ತದೆ. ಇಲ್ಲಿ ಮತ್ತೆ ಸ್ಮರಿಸಿಕೊಳ್ಳೋಣ. ಪರಮಾತ್ಮನ ಅಂಶ ಜೀವಾತ್ಮವೆಂದು ಹಿಂದೆ ಹೇಳಿದ್ದನ್ನು ಈ ವಿಚಾರದ ಸುಂದರ ನಿರೂಪಣೆಯನ್ನು ಇಲ್ಲಿ ಕಾಣಬಹುದು :

ಚಂದ್ರಕಾಂತೇ ಯಥಾ ತೋಯಂ ಸೂರ್ಯಕಾಂತೇ ಯಥಾ Sನಲಃ |

ಬೀಜೇ ಯಥಾಂಕರಃ ಸಿದ್ಧಸ್ತಥಾತ್ಮನಿ ಶಿವಃ ಸ್ಥಿತಃ ||

(ಸಿ.ಶಿ., ೫.೩೬)

“ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಮೊಳಕೆ ಇದ್ದಂತೆ, ಆತ್ಮದಲ್ಲಿ ಶಿವನು ಇದ್ದಾನೆ”. ಶಿವನು ಇದ್ದಾನೆ ಶಿವನ ಅಂಶವಿದೆ. ಆತ್ಮವೇ ಶಿವನ ಅಂಶ. ಅದೇ ಶಿವಕಲೆ. ಅದನ್ನು ಆವಾಹಿಸಿ ಇಷ್ಟಲಿಂಗದಲ್ಲಿ ನೆಲೆಗೊಳಿಸಿದಾಗ ಅದು ಕಲ್ಲಿನ ಲಿಂಗವಾಗಿ ಉಳಿಯದೆ  ಚಿಲ್ಲಿಂಗವಾಗುತ್ತದೆ. ಅದನ್ನು (ಲಿಂಗತ್ರಯ ಸಮನ್ವಯವನ್ನು) ಪೂಜಿಸುತ್ತಾ ಭಕ್ತಿಯ ವಿಕಾಸವನ್ನು ಸಾಧಿಸಿಕೊಂಡರೆ ಸಾಧಕ ತನ್ನಾತ್ಮವನ್ನೇ ಲಿಂಗವೆಂದು ಅರಿತು ಬೆರೆತು ಬೇರಾಗದಂತಿರುತ್ತಾನೆ. ತನ್ನಾತ್ಮವನ್ನು ಬಿಟ್ಟು ಹೊರಗೆಲ್ಲಿದ್ದಾನೆ ಶಿವ, ಹೊರಗೆಲ್ಲಿದೆ ಲಿಂಗ ? ಕಠೋಪನಿಷತ್ತು ಹೇಳುವಂತೆ (ಯಥಾದರ್ಶೇ ತಥಾತ್ಮನಿ’) ಆತ್ಮನಲ್ಲಿ ಪರಮಾತ್ಮನ ದರ್ಶನ ಎಂದರೆ ಆತ್ಮನೇ ಪರಮಾತ್ಮನೆಂಬ ಸಾಕ್ಷಾತ್ಕಾರ, ಕನ್ನಡಿಯಲ್ಲಿ ಹೇಗೋ ಹಾಗೆ ಸ್ಪಷ್ಟ. ಆದ್ದರಿಂದ ಈ ದೇಹ ಬಿದ್ದು ಹೋಗುವ ಮೊದಲೇ ಆತ್ಮದರ್ಶನ ಮಾಡಿಕೊಳ್ಳಿ. “ಹೊತ್ತು ಹೋದ ಬಳಿಕ ನಿಮ್ಮನ್ನಾರು ಬಲ್ಲರು ??”

ಸಂಕೇತ ಸೂಚಿ

ಅನು. ಸೂ……. ಅನುಭವಸೂತ್ರ

ಕಠ….. ಕಠೋಪನಿಷತ್

ಕಾ.ಆ……. ಕಾರಣಾಗಮ

 ಕ್ರಿ.ಪಾ……. ಕ್ರಿಯಾಪಾದ

ಚಂ.ಅ……… ಚ೦ದ್ರಜ್ಞಾನಾಗಮ

ಛಾಂ.ಉ……. ಛಾಂದೋಗ್ಯೋಪನಿಷತ್

ತೈ. ಉ……. ತೈತ್ತಿರೀಯೋಪನಿಷತ್

ಲಿಂ. ಉ…… ಲಿಂಗೋಪನಿಷತ್

ಸಿ.ಶಿ…. ಶ್ರೀ ಸಿದ್ಧಾಂತ ಶಿಖಾಮಣಿ

ಸೂ.ಆ….. ಸೂಕ್ಷ್ಮಾ ಗಮ

Related Posts