ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯನ್ನು ಹೊಸರೂಪದಲ್ಲಿ ತಮಗೆ ಅರ್ಪಿಸಲು  ಅತ್ಯಂತ ಹರ್ಷವೆನಿಸುತ್ತದೆ.

೨೦೨೧ ಬಸವ ಜಯಂತಿ ಯಂದು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತದಿಂದ ಆರಂಭಗೊಂಡ ಶ್ರೀಕುಮಾರ ತರಂಗಿಣಿ  ಬ್ಲಾಗ ಇಂದು ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಅಮೃತಹಸ್ತದಿಂದ ಹೊಸ ರೂಪ ದೊಂದಿಗೆ ಅನಾವರಣಗೊಳ್ಳುತ್ತಿದೆ.

ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

 ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ.

ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ.  ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ.

ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ  ಚೇತನಕಾರಿಯಾಗಿ ತೂರಿ ಬರುತ್ತದೆ.

2023 ಸಪ್ಟಂಬರ ಮತ್ತು ಅಕ್ಟೊಬರ ತಿಂಗುಳಗಳಲ್ಲಿ ಕರ್ನಾಟಕ,ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳ ಗಡಿಪ್ರದೇಶಗಳಲ್ಲಿ ನಡೆದ ಶ್ರೀಕುಮಾರೇಶ್ವರರ ೧೫೬ನೆಯ ಜಯಂತಿ ಮಹೋತ್ಸವದ ಚಿತ್ರಸಂಪುಟ “ಶ್ರೀಕುಮಾರೇಶ್ವರ ವೈಭವ”

ಚಿತ್ರಸಂಪುಟದ ಸಂಗ್ರಹಕ್ಕೆ ಸಹಕರಿಸಿದ ಸಮಸ್ತ ಶ್ರೀಕುಮಾರೇಶ್ವರರ ಅಭಿಮಾನಿ ಭಕ್ತರಿಗೆ ತುಂಬುಹೃದಯದ ಕೃತಜ್ಞತೆಗಳು

 

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ರೇವಣಸಿದ್ಧ ಗುರುದೇವ ಭಾವಜ ಹರಜೀವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ವೇದಾಂತಾಭ್ಯಾಸ-ಸಿದ್ಧಾಂತ ಹವ್ಯಾಸ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ನರಜನ್ಮ-ಹರಜನ್ಮ ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

(ರಾಗ – ಕಾಪಿ)

ರೇವಣಸಿದ್ಧ ಗುರುದೇವ | ಭಾವಜ ಹರಜೀವ |

ಓವಿನೀ ಕೊಡು ಮಂಗಲವ | || ಪ ||

ಕಾಮವೆನ್ನನು ಕೂಡಿ ಕಾಡಿ |

ನೇಮ ಸೀಮೆಯ ಕೆಡಿಸದಾಡಿ |

ಪ್ರೇಮದಪ್ಪಿಯು ಭವದೊಳು ನೂಂಕುವ

ನೀ ಮನಸಿಜನನು ಬಿಡಿಸು ಬೇಗ || 1 ||

ದುಷ್ಟ ವಾಸನೆಗಳ ಬಲದಿಂದ |

ಭ್ರಷ್ಟ ಕಾಮನತಾಚ್ಚಲದಿಂದ |

ಮುಟ್ಟಿ ಕೊರಗಿಪೆ ದುರ್ವಾಸನೆಯ |

ಕುಟ್ಟಿ ವರಸುಖವ ಕೊಡು ಜವದಿ || 2 ||

ಅಂಗಹೀನನ ಸೇವೆಯ ಬಿಡಿಸಿ |

ಲಿಂಗದೇವನ ಪೂಜೆಯ ಹಿಡಿಸಿ |

ಕಂಗಳಾಲಯನೀಕ್ಷಿಸು ಭಾವದಿ |

ಮಂಗಲಮಯನೆನಿಸೋ ಯತಿವರ || 3

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು  ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.

 

ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.

 

ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.

 

ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.

 

ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.

 

ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.

 

ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.

 

ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.

 

ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.

 

ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.

ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ     ||ಪ||

ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ

 

ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ

ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ

ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ

ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ           ||೧||

 

ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ

ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ

ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ

ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ                ||೨||

 

ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ

ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ

ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ

ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ       ||೩||

 

ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ

ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ

ಸುಜನ ಜನದ ಕೈವಾರವೆ ಮಂಗಳಪಾಠವಮ್ಮ

ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ            ||೪||

 

ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ

ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ

ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ

ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ                ||೫||

 

ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಮಠ ಗದಗ

 

ಜಂತೂನಾಂ ನರಜನ್ಮ ದುರ್ಲಭಂ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು

ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .

 

ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ

ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.

ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ

ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.