ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-30

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

Related Posts