ಶ್ರೀ ಕುಮಾರ ಶಿವಯೋಗಿಗಳಂಥ ಚಿದ್ಬೆಳಕು

ಲೇಖಕರು ಶ್ರೀ ಮ.ನಿ.ಪ್ರ. ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು .ಓಲೆಮಠ.ಜಮಖಂಡಿ

ಕನ್ನಡ ನಾಡಿನ ಪುಣ್ಯ ವಿಶೇಷವೆಂದರೆ, ಕುಮಾರ ಶಿವಯೋಗಿಗಳಂಥ ಮಹಿಮಾಶಾಲಿಗಳು ಉದಯರಾದದ್ದು. ಲೋಕಬೆಳಗಲು ರವಿಬೇಕು; ಆಧ್ಯಾತ್ಮಲೋಕ ಬೆಳಗಲು ಶ್ರೀ ಕುಮಾರ ಶಿವಯೋಗಿಗಳಂಥ ಚಿದ್ಬೆಳಕು ಬೇಕು. ಬಸವಾದಿ ಶಿವಶರಣರ ತರುವಾಯು ಆ ಆಧ್ಯಾತ್ಮ ಬೆಳಕನ್ನು ಬೆಳಗಿಸಿದವರು ಲಿಂಗೈಕ್ಯ ಹಾನಗಲ್ಲ ಪರಮಪೂಜ್ಯ ಶ್ರೀ ಕುಮಾರ ಶಿವಯೋಗಿಗಳು.

ಶರಣರು ಸಮಷ್ಟಿಗಾಗಿ ದುಡಿದಂತೆ ; ಕುಮಾರ ಶಿವಯೋಗಿಗಳು ವ್ಯಷ್ಟಿಯಾಗಿ ಸಮಷ್ಟಿಯನ್ನು ಕಟ್ಟಿ; ಸಮಷ್ಟಿಯ ಶ್ರೇಷ್ಠತೆಯನ್ನು ಸಮಷ್ಟಿಗೆ ಅರುಹಿ ಶ್ರೇಷ್ಠತೆಯ ಶಿಖರ ಕಟ್ಟಲು ಆಗ ಅವರಿಗೆ ಅವರ ಅರಿವೇ, ಒಂಟಿ ಸಲಗ. ವಿಶೇಷ ಸವಲತ್ತುಗಳೇ ಇಲ್ಲದ ಹಳ್ಳಿಯಲ್ಲಿ ಉದಿಸಿದರು. ಯಾರೂ ಕೇಳುವವರೇ ಇಲ್ಲ ಎಂಬಂತಹ ವಾತಾವರಣದಲ್ಲಿ ಬೆಳೆದರು. ಜ್ಞಾನಭ್ರಮರದ ಕುಕ್ಕಾರಿಯಲ್ಲಿ ಜ್ಞಾನಹಸಿವಿನ ಕಸಿವಿಸಿಯುಸಿರಿಗೆ ಕಿವಿಯೇ ಇರದ ಬಡತನದ ಭದ್ರಕೋಟೆಯಲ್ಲಿ ನಲುಗಿದ ಆ ಅವಸ್ಥೆ ಅದು.

ಅಕ್ಕ ಹೇಳುವ ಹಾಗೆ ಅನಂತಕಾಲ ತಪಿಸಿದ ಫಲಪಕ್ವವಾದಾಗ ವೈರಾಗ್ಯದಿಂದ ಬಂದ ಬಣ್ಣ ಅವರಿಗೆ ಕಾಣಹತ್ತಿತು ; ಹಣ್ಣು ಹಣ್ಣಾದ ಸಿಪ್ಪೆ ಕಳಚಲು ಕಳಿಯಲು ಲಿಂಗ ನೈವೇದ್ಯವಾಗಲು ಅರ್ಹವಾಗುವಂತೆ ಜೋಯಿಸರ ಹರಳಳ್ಳಿ ಎಂಬ ತಳಿಗೆ ಸಾಲೀಮಠಕ್ಕೆಂದೇ ಮೀಸಲಾಗಿಬಿಟ್ಟಿತ್ತು. ಹೃದಯಶ್ರೀಮಂತಿಕೆ ಭಾವಶ್ರೀಮಂತಿಕೆ ಭೂಮವಾದ ಸಾಂಸ್ಕೃತಿಕ ಆಧ್ಯಾತ್ಮಿಕ ದೈವಾವಲಂಬಿಕ ಶ್ರೀಮಂತಿಕೆ ಮನದ ತುಂಬ ; ಮನೆಯತುಂಬ ಇಂಬಿಲ್ಲದಂತೆ ತುಂಬಿತುಳುಕಿತ್ತು ; ಅರ್ಥ ದತ್ತೂರಿಯನೊಂದು ಬಿಟ್ಟು.

ಹಸಿದೇ ಬಂದ ಸದಾ ಹಸಿದೇ ನಿಂತ ಹಸಿವಿನಿಂದಲೇ ಹೋಗಿ ಬರುವವರು ಕಣ್ಣರಳಿಸಿ ಜೊಲ್ಲು ಸುರಿಸಿ ಮನೆ ತುಂಬ ನಿಂತ ಹಸುಗಳು ಹಸಿವಿಗೆ ಸಂಕೇತವಾದಂತಾಗಿದ್ದವು. ಇಂದೋ ನಾಳೆಯೋ ಬಿದ್ದೇ ತೀರುವೆ ಎಂಬಂತಹ ಟೊಂಕುಮುರಿದವರಂತೆ ನಿಂತ ಹಾಳು ಬೀಳು ಬಣ್ಣ ಕಳೆದಕೊಂಡ ಮಣ್ಣು ಮನೆ.  ಉಳಿದ ಬಳೆದ ಅನ್ನಕ್ಕೆ ತಾನೇ ಅಧಿಕಾರಿಯೆಂಬ ಉಂಡು ಓಡಾಡಿ ಕರಗಿಸಿಯೇನು

ಎಂಬಂತಹ ಹಳ್ಳಿಯ ಹೈದ ಅಣ್ಣ ಶಿವಬಸಯ್ಯ. ಹಾಲಯ್ಯ ದಟ್ಟಡಿಯನಿಡುವಾಗಲೇ ತಂದೆ ಪಿತೃಪರ್ವತ ಸದೃಶ ಬಸವಯ್ಯ ಅಸ್ತಂಗತ.

ಬಡತನದ ಒಳಹೊರ ಭಾರಕ್ಕೆ ವೃದ್ಧಾಪ್ಯದಿಂದ ಮಗನ ಮರಣದಿಂದ ಮುಗಿಲೇ ಹರಿದು ಮೈಮೇಲೆ ಬಿದ್ದಂತೆ ಚಿಂತಿತ ಮನೆಗೆ ಹಿರಿತನಕ್ಕುಳಿದ ಅಜ್ಜ ಕೊಟ್ರಯ್ಯಾ ಕಂಗಾಲಾದ ಕಾಲಘಟ್ಟದಲ್ಲಿ ಅಲೆದಾಡುವುದು. ಅನಿವಾರ್ಯವಾಯಿತು ಜೋಳಿಗೆ ಸಾತ್ವಿಕ ಶಿಖಾಮಣಿಯಾದ ಬಾಲ ಹಾಲಯ್ಯನವರ ಕೊರಳಿಗೆ ಆರು ವರುಷದ ಬಾಲಕ ಹಾಲಯ್ಯ ಮನೆಗೂ ಓಡಾಡಿ ನೀಲಮ್ಮರ ಕೊರಳು ಕಕ್ಕುಲಾತಿಗೆ ಮಿಡಿದ ಮನೆಯಿಂದ ಮನೆಗೆ ಜೋಳಿಗೆ ಹೊತ್ತು ಅರ್ಧ ದಿನ ಶ್ಯಾಲೆಯನ್ನು ತಪ್ಪಿಸಿ ; ಅಂದಿನ ಮನೆಯ ಹಸಿವೆಯನ್ನು ಪೂರೈಸಲು ಅಲೆದಾಡಿದ.

ಒಂದು ದಿನ ಲಿಂಗನಾಯಕನೆಂಬ ಹಳ್ಳಿಯ ವೃದ್ಧ ಈತನ ಜೋಳಿಗೆ ಕಂಡು ಕಿಡಿನುಡಿದ : “ಏನೋ, ನಿನ್ನ ವಯಸ್ಸಿನಲ್ಲಿ ಭಿಕ್ಷೆ ಬೇಡುವುದಾ ? ಯಾಕಾಗಿ ನೀನು ದುಡಿಬಾರದು ? “ಆ ನುಡಿ ಹಾಲಯ್ಯನವರಿಗೆ ಸಿಡಿಲಾಗಿ ಬಡಿಯಿತು. ಬದುಕೆ ತಿರುಮುರುವಾಗಿ ಕಂಡಿತು. ಕೋಮಲ ಮನಸ್ಸು ಕಮರಿದಂತೆನಿಸಿತು. ಬಾರವಾದ ಹೃದಯ ಮತ್ತು ಬರಿದಾದ ಜೋಳಿಗೆ ಹೊತ್ತು ಮನೆಗೆ ಬಂದ. ಊಟ ನಿದ್ರೆ ಬೇಡವಾದವು.

ಪ್ರಳಯ, ಭೂಕಂಪ ಹಾಗು ಜ್ವಾಲಾಮುಖಿಗಳ ಸಂಭವವು ; ಒಂದು ದಿನದ ಪರಿತಾಪವಲ್ಲ. ಬಹುಕಾಲದಿಂದ ನಡೆದ ಬಿರುಬಿಗಿತ ಶಾಕೋತ್ಪಾದನ ರಸವಿರಸ ಸಂಘರ್ಷ ಸಂಘಾತ ಮಂಥನ ಸಿಡಿತ ರೌದ್ರಭೀಕರನೋಟ ಅವು.

ಪ್ರಾಪಂಚಿಕ ಅಡತಡೆಗಳನ್ನು ನಿಜಗುಣರು ತಮ್ಮ ಶಾಸ್ತ್ರದಲ್ಲಿ ಬಹಳ ಮಾರ್ಮಿಕವಾಗಿ ಚರ್ಚಿಸುತ್ತಾರೆ. ಪ್ರಾಪಂಚಿಕ ಒತ್ತಡದಲ್ಲಿರುವ ಪ್ರಪಂಚ ಹೊತ್ತು ವಿಲಿವಿಲಿ ಒದ್ದಾಡಿದ ಆಸಾಮಿಗಳೇ ನಿಜಗುಣ ಶಾಸ್ತ್ರದಲ್ಲಿ ಹೆಚ್ಚು ಬಲ್ಲವಾಗಿರುತ್ತಾರೆ. ಅಂಥ ಅತ್ಯಂತಿಕ ಸತಿ ಸುತ ತಾಪತ್ರಯದ ಅಡಚಣೆ ಹಾಲಯ್ಯನವರಿಗೆಲ್ಲಿತ್ತು ? ಆಧ್ಯಾತ್ಮಿಕ ರಹಸ್ಯದತ್ತ ಅವರ ಒಲವು ಅವರ ವಯೋಮಾನಕ್ಕೆ ಮೀರಿದವರೊಂದಿಗಿನ ಒಡನಾಟ ಹೆಚ್ಚಾಗಿ ಹೋಗಿತ್ತು. ಸಂಸಾರದ ಹೇಯತೆಯ ಬಗ್ಗೆ ಹಗಲೂ ರಾತ್ರಿ ಚರ್ಚಿಸಿ ಸಂಸಾರದ ಸುತ್ತ ತಿರುಗುವವರ ನೋಡಿ ಅವರಲ್ಲಿ ನಗುವು ಹುಟ್ಟಿತು. ಬುದ್ಧ ಹಾಗು ನಿಜಗುಣರ ಎಚ್ಚರದ ಊರಿಗೆ ಅವರು ಅರಗಾಗಿ ಕರಗಿಹೋದರು. ಅಣ್ಣ ತೊಳೆದು ತರಲೆಂದೆಸೆದ ಬಟ್ಟಿ ಹೊಸಬಾಳಬಟ್ಟೆಗೆ ದಾರಿ ಮಾಡಿಕೊಟ್ಟಿತು. ಎಲ್ಲ ಇದ್ದೂ ಮಧ್ಯರಾತ್ರಿ ಎದ್ದ ಬುದ್ಧ ಅವರಿಗೆ ಆದರ್ಶವಾಗಿಬಿಟ್ಟ. ಅವರಿವರ ಬಾಯಿಂದ ಕುತೂಹಲದಿಂದ ತಿಳಿದು ಕೇಳಿದ ನಿಜಗುಣರ ಶಾಸ್ತ್ರದೊಲವು ನಿರಂತರ ಅವರನ್ನು ಕೈಮಾಡಿ ಕರೆಯುತ್ತಿತ್ತು. ಊರುಕೇರಿ ಮನೆ ಮಾರು  ಓದು ಕಟ್ಟಿದ ಮುಲಕೀ ಪರೀಕ್ಷೆ ಕಲಕು ಮಲಕಾಗಿ ಹೊರಳಿ ಬಿದ್ದವು. ʼಭಿಕ್ಷೆಯೆತ್ತಿ ತಂದದ್ದನ್ನು ತಿಂದು ಮಲಗಿದ್ದಾನೆ’ ಎಂಬ ಅಣ್ಣನ ಸಣ್ಣ ಮಾತು ಆ ಮುದುಕನ ಮಾಹಿಗಿಂತ ದೊಡ್ಡದೆನ್ನಿಸಲಿಲ್ಲ. ಹಾಲಯ್ಯನವರಿಗೆ.

”ನಿನ್ನರಿಕೆಯ ನರಕವೇ ಸುಖ ಕಂಡಯ್ಯ’ ಎಂದು ಉಡತಡಿ ಬಿಟ್ಟು ಕಲ್ಯಾಣ ಕಂಡು ಜಗನ್ಮಾತೆ ಅಕ್ಕಮಹಾದೇವಿಯವರು ‘ನೆಟ್ಟನೆ ಭವಗೆಟ್ಟೆನು’ ಎಂದು ನಡೆದ ಕಠಿಣ ಪಥ ಹಾಲಯ್ಯನವರಿಗೂ ಸತ್ಪಥವಾಗಿಬಿಟ್ಟಿತು. ಆರೂಢ ಪಥವೇ ಪಥವು ; ಅದವರಿಗೆ ಎದೆಂದಿಗೂ ಇಳಿಯದ ಆವೇಶ ತಂದಿತ್ತು.

ದೋಣಿಯನ್ನಲ್ಲ ಸಾಗುವ ದಿಕ್ಕನ್ನು ಬದಲಿಸಿದ ಅವರಿಗೆ ನಿಷ್ಪಲವಾದ ಮುಲಕಿ ಪರೀಕ್ಷೆಯು ಇನ್ನಿಷ್ಟು ನಿಖರವಾಗಿ ಬ್ರಹ್ಮಪ್ರಜ್ಞಾನಕ್ಕೆ ಪ್ರಖರ ನಂದದ ದೀಪಸ್ಥಂಬವಾಗಿ ಮಹಾಮಾರ್ಗತೋರಿಸಿತು. ಗಾಂವಟಿ ಶ್ಯಾಲಾ ಮಾಸ್ತರಕೀಯಿಂದ ಕೂಡಿಟ್ಟ ಹಣವು ; ಹೆತ್ತವ್ವ ಹೊತ್ತು ಹೊರೆದ ಋಣ ತೀರಿಸುವುದೋ ಎಂಬ ಅಳುಕು ; ಆದಿಶಂಕರರ ಇಂಗಿತ ಅರಿತ ಅವರ ತಾಯಿ ಯತಿಯಾಗಲು ಅನುಮತಿ ದೊರೆತು ಐತಿಹಾಸಿಕ ಗೆಲವು ಹಾಲಯ್ಯನವರ ಬಾಳಬಟ್ಟೆಗೂ ಚಾಚಿಕೊಂಡಿತ್ತು . ಸದಾ ಉನ್ಮುಖಿಯಾಗಿ ಸಂಸಾರ ಸಾಗರದ ಉರದುದ್ದ ಸಿರದುದ್ದ ಕಷ್ಟವ ತೆರೆ ಎದುರಿಸಿದ್ದ ನೀಲಮ್ಮ ಮಗನ ಸಂತೋಷಕ್ಕೆ ಪಡೆದ ಆ ಧನ ತಾಯಿಗೆ ತವನಿಧಿಯಾಗಿ ಬಿಟ್ಟಿತು. ಹಿಂದಿದ್ದ ತಾಪತ್ರಯಗಳು ಲುಪ್ತವಾಗಿ ಹೋದವು.

ಹಾಲಯ್ಯರ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣಬೇಕೆಂಬ ಕನಸಿಗೆ ಮಗನ ತೀವ್ರ ವೈರಾಗ್ಯದ ಅರುಹಿನ ರವಿಕಿರಣಗಳು ಕನಿಸಿನ ನಿದ್ರೆಗೆ ಆಸ್ಪದವನ್ನೇ ಕೊಡದೆ ಹಾಗೆ ನೋಡಿಕೊಂಡವು. ಏನನ್ನೋ ಕೇಳಲೆಂದು ಬಂದಮಾತೆಗೆ ರಾಮಕೃಷ್ಣ ಪರಮಹಂಸರ ಕಾಳಿಕೆಯ ಎದುರು ನಿಂತ ನಿರಾಪೇಕ್ಷಾವಸ್ಥೆಯ ನರೇಂದ್ರನಂತಾಗಿತ್ತು ನೀಲಮ್ಮ ತಾಯಿಯದು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಡರು ; ಎಮ್ಮಿಗನೂರಿನ ಶ್ರೀ ಜಡೆಯ ಸಿದ್ದರು; ಎಳಂದೂರ ಶ್ರೀ ಬಸವಲಿಂಗಶಿವಯೋಗಿಗಳು; ಜ್ಞಾನ-ಕ್ರಿಯೆ-ಭಕ್ತಿಯೋಗದ ಸಾಗರ ಸಂಗಮ ಈ ತ್ರಿವಿಧರು. ಆ ಸಂಗಮ ರಾಮೇಶ್ವರದಲ್ಲಿ ಕಾಣುವುದು; ಭಕ್ತಿ-ಜ್ಞಾನ-ವೈರಾಗ್ಯ ಸಂಗಮ ಕುಮಾರಶಿವಯೋಗಿಗಳ ವ್ಯಕ್ತಿತ್ವದಲ್ಲಿ ಕಂಡುಬರುವುದು.

“ಶರಣ ಜನರ ಹೃದಯ ನಳಿನದೊಳು ಪರಿಶೋಭಿಸುತ್ತಿಹುದು ಗುರುಶಂಭುಲಿಂಗ ನಿನ್ನ ದಿವ್ಯ ಪಾದ” ಎಂಬ ನಿಜಗುಣರ ಈ ಪದ್ಯವು ಕಲ್ಯಾಣದ ಶರಣರನ್ನೇ ಅಧಿಕೃತವಾಗಿ ಗಮನದಲ್ಲಿಟ್ಟುಕೊಂಡಿರುವುದು ತುಂಬ ಔಚಿತ್ಯ ; “ಬಿಡಬೇಕು ಬಲು ಹಿಂದೆ ಬರಿದೆ ತನ್ನಿರವನು’ ಸಗುಣ ಸಂತತಿಯನು ನಿಗಮಾದಿ ವಿಧಿಯನು ! ಮಿಗೆ ತಪವನು ತನಗಹ ಸಿದ್ಧಿಗಳನ್ನು! ಎಂಬುದಾಗಿ ನುಡಿದ ನಿಜಗುಣರಿಗೆ ಈ ಇದಕ್ಕೆ ಪರ್ಯಾಯ ಎಂಬಂತೆ ಬಾಳಿ ಬದುಕಿದ ಕುಮಾರ ಶಿವಯೋಗಿಗಳು ನಿಜಗುಣರ ಷಟ್ ಶಾಸ್ತ್ರಕ್ಕೆ ಗೌರವ ಹೆಚ್ಚಿಸಿದರು. ಜ್ಞಾನಿ-ಯೋಗಿ-ಜಿಜ್ಞಾಸು -ಉನ್ಮತ್ತ – ಪಿಶಾಚಿ-ವ್ಯಾಕರಣಿ ಎಂಬ ವರ್ಗಿಕರಣದಲ್ಲಿ ಶುದ್ಧಯೋಗಿಯಾಗಿದ್ದರಿಂದಲೇ ಶಿವಯೋಗ ಮಂದಿರದಂಥ ಸಂಸ್ಥೆ ಕಟ್ಟಲು ಅವರಿಗೆ ಸಾಧ್ಯವಾಯಿತು. “ತನಗೆ ಮುಂದೊದಗುವ ಮುನಿದೇವ ಗಣಪದ !ವನು ರುದ್ರೇಶ್ವರ ಸದಾಶಿವ ಭಾವನೆಯನು ! ಘನಶಂಭುಲಿಂಗವಾಗಿ ಮುಕ್ತಿ ಸುಖವನು ! ಜನಿಸಿದೀ ಕಾಮವಿಲ್ಲೆನಿಪುರಿಂದ ! ಎಂದು ಮುಂದುವರಿದ ಪದ್ಯ ಕುಮಾರಶಿವಯೋಗಿಗಳನ್ನು ಕುರಿತೇ ಹಾಡಿದಂತಿದೆ.

ಶರಣರೇ ಮಹತ್ ಸಂಕಲ್ಪಹೊತ್ತು ೨೦ನೇ ಶತಮಾನದಲ್ಲಿ  ಶಿವಯೋಗಿಗಳಾದರು : ಅಷ್ಟೇ ಅಲ್ಲ ಅವರ ಆದರ್ಶಗಳನ್ನು ಮನನವಾಗಿಸಿಕೊಂಡು ಸಮಾಜಮುಖಿಯಾಗಿ ಬದುಕಿ “ಸಮಾಜ ಸೇವೆಯೇ ಲಿಂಗಪೂಜೆ’ ಎಂಬುದನ್ನು ನಡೆದು ನುಡಿದು ಬದುಕಿದರು. ಸರ್ವರ ಏಳ್ಗೆ ಅವರ ಗುರಿಯಾಗಿತ್ತು. ಗುಪ್ತವಾಗಿ ಅಲ್ಲಲ್ಲಿ ಮುಸುಕಿನಲ್ಲಿದ್ದ ವಚನಸಾಹಿತ್ಯವನ್ನು ಹೊರತಂದು ಅದರ ಪ್ರಚಾರಕ್ಕೆ ವಿದ್ವತ್ ಬಳಗ ಗುರುತಿಸಿ ಗೌರವಿಸಿ ಅವರಿಂದ ಸಾಹಿತ್ಯ ರಕ್ಷಣೆ ಮಾಡಿ, ಒಂದು ಶಿಸ್ತಿಗೆ ಅಳವಡಿಸಿ ಇಂದಿನ ಎಲ್ಲ ಓದುವ ವೇದಿಕೆಗೆ ನೆರವಾದರು.

೧೮೬೭ರಲ್ಲಿ ಜನಿಸಿದ ತರುಣ ವೇದಾಂತ ಜಿಜ್ಞಾಸುವಿಗೆ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಒಂದು ಗ್ರಾಮವಾದ ಜೋಯಿಸರ ಹಳ್ಳಿಯ ಸಂಬಂಧವೆಲ್ಲ ಪೂರ್ವಾಶ್ರಮದ ನೆನಹಾಗಿ ಬಿಟ್ಟತಷ್ಟೇ. ಹುಟ್ಟಿದೂರಬಿಟ್ಟು ಕಜ್ಜರಗಿಯ ಹಿರೇಮಠದ ರಾಚಯ್ಯನವರ ಕಣ್ಣಿಗೆ ಬಿದ್ದು ನಾಲ್ಕು ವರ್ಷ ಓದಿ ಧಾರವಾಡಕ್ಕೆ ಕಾಲ್ನಡಿಗೆಯಲ್ಲೇ ನಡೆದ ನಡಿಗೆ, ಹುಬ್ಬಳ್ಳಿಯ ಸಿದ್ಧಾರೂಢಮಠದ ಆಧ್ಯಾತ್ಮ ಶಾಲೆಗೆ ನಡೆದ ಅಂದಿನ ನಡಿಗೆಯು ವಿಲಕ್ಷಣವಾಗಿತ್ತು.

ಅನಿರೀಕ್ಷಿತವಾಗಿ ಪರೀಕ್ಷೆಯಲ್ಲಿ ಅನುತೀರ್ಣರಾದ ನಿರಾಶೆಯು ತಾಯಿಯ ತವರಾದ ಲಿಂಗದಹಳ್ಳಿಯಲ್ಲಿ ಸಮಾಳದ ಬಸವಪ್ಪಯ್ಯನವರ ಷಟ್‌ಶಾಸ್ತ್ರ ಶೈಲಿ ಮನಸೊರೆಗೊಂಡುದೇ ಕಾರಣವಾಗಿ ಸಿದ್ಧಾರೂಢರ ಸಾಮಿಪ್ಯ ಸಾಧ್ಯವಾಯಿತು. ಅಲ್ಲಿ ಕೆಲವರು ಇಷ್ಟಲಿಂಗ ಧರಿಸುವದರ ವಿರುದ್ಧದ ವಿಚಾರದಲ್ಲಿ ಸಂದೇಹವೆದ್ದು ಹುಬ್ಬಳ್ಳಿಯ ರುದ್ರಾಕ್ಷಿಮಠದ ಶ್ರೀಗಳು ಜಡೆಯಸಿದ್ದರಲ್ಲಿಗೆ ಕಳುಹಿಸಬೇಕಾಯಿತು. ಇವರು ಕೇಳುವ ಮುನ್ನವೇ ಅವರು ಧರಿಸಲೇಬೇಕೆಂಬ ಕುರುಹು ತೋರಿದರು. “ಎಲ್ಲಿಗೆ ಹೋಗಲಿನ್ನು ಮುಂದೆ ? ‘ಎಂಬ ವಿಚಾರ ಜಡೆಸಿದ್ಧರಿಗೆ ಗೊತ್ತಾಗಿ’ ಎಲ್ಲಿಂದ

ಬಂದಿದ್ಧಿಯೋ ಅಲ್ಲಿಗೆ ಹೋಗು” ಎಂಬುದನ್ನು ಸೂಚ್ಯವಾಗಿಸಿದರು. ಸಿದ್ಧಾರೂಢರಲ್ಲಿಗೆ ಎಳಂದೂರ ಶ್ರೀಗಳು ಆಗಮವಾಯಿತು. ಅವರಿಂದ ಆಕರ್ಷಿತರಾದ ಹಾಲಯ್ಯ ಅವರೊಂದಿಗೆ ನಾಡನಲೆದರು.ಅಣ್ಣಿಗೇರಿಯ ಶಾಖಾಮಠದಲ್ಲಿ ವಿಷಮಜ್ವರ ನೆಪವಾಗಿ ಎಳಂದೂರ ಶ್ರೀಗಳು ಲಿಂಗೈಕ್ಯರಾದರು. ಗುರೂಪದೇಶವಿಶೇಷವಾಗಿತ್ತು : ‘ವ್ಯಕ್ತಿಗಿಂತ ಸಮಾಜ ದೊಡ್ಡದು. ಇಂದಿನಿಂದ

ಸಮಾಜಸೇವೆಗೆ  ಬದ್ಧನಾಗು’ ಎಂಬುದಾಗಿ ಶ್ರೀಗಳು ಇಹದಿಂದ ನಿರ್ಗಮಿಸುವದಕ್ಕಿಂತ ಮೊದಲು ನುಡಿದುದರ ಫಲವಾಗಿ ಅತಿ ಶೀಘ್ರದಲ್ಲಿ ಶ್ರೀಮದ್‌ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಮುನ್ನವೇ ಅಖಿಲಭಾರತ ವೀರಶೈವ ಮಹಾಸಭೆ ಸ್ಥಾಪನೆ ಆಯಿತು

ಮನೋ ಶುದ್ದಿಗೆ ಆತ್ಮಸಿದ್ಧಿಗೆ ಶಂಭುಲಿಂಗ ಬೆಟ್ಟದಲ್ಲಿ ೧೨ ವರ್ಷ ತಪೋಲಿಂಗಧ್ಯಾನ ಸೇವಾತತ್ಪರರಾಗಿ ಕಳೆದದಿನಗಳು ಸತ್ಪ್ರೇರಣೆ ಕೊಟ್ಟವು; ಅದರ ಅರುಹು ನೆರವಾಗಿ ಜನರ ಮಧ್ಯೆ ಹೋದರು. ದಾನ, ಧರ್ಮ, ನೀತಿ, ನಿಯಮ ಕಾಯಕ, ದಾಸೋಹತತ್ವವನು ಬೋಧಿಸಿದರು. ಅಲ್ಲಮನಂತೆಯೇ ನಾಡನೆಲ್ಲ ಅಲೆದರು. ಅವರ ನಡೆಯಲ್ಲಿ ಗಾಂಭೀರ್ಯವಿತ್ತು; ನುಡಿಯಲ್ಲಿ ಹೊಳಪಿತ್ತು ಮಾತುಗಳಲ್ಲಿ ಮಾರ್ಧವತೆ ಇತ್ತು. ದೇವರು ಧರ್ಮ ಸನ್ಮಾರ್ಗಪರವಿಚಾರ ವಿವರಿಸುತ್ತ ಸ್ವಾಮಿಪಾದರು ಸ್ವರಬದ ಬೆಟ್ಟದ ಮಠದಲ್ಲಿ ಬಹುಕಾಲದಿಂದ ಅನುಷ್ಠಾನಮಾಡಿ ಆ ಭಾಗದಲ್ಲಿ ಜನಾನುರಾಗಿಯಾದರು.

ಆ ಸಮಯದಲ್ಲಿ ಕರ್ನಾಟಕ ಆದ್ಯಮಠಗಳಲ್ಲಿ ಒಂದಾದ ಚಿತ್ರದುರ್ಗ ಮಠಕ್ಕೆ ಅಧಿಪತಿಗಳಿರಲಿಲ್ಲ. ಮಠದ ಭಕ್ತರು ಹಾಲಯ್ಯನವರನ್ನು ಕಂಡುಪೀಠಾಧಿಪತಿಗಳಾಗಿ ಬರಬೇಕೆಂದು ಅರಿಕೆಯಿಟ್ಟರು. ಇನ್ನೊಬ್ಬರಾಗಿದ್ದರೆ ಕುಣಿದಾಡುತ್ತಿದ್ದರು. ಆದರೆ ಹಾಲಯ್ಯನವರನ್ನು ಯಾವುದೊಂದು ಸ್ಥಳಕ್ಕೆ ಬಂಧಿತರಾಗಬಯಸಿರಲಿಲ್ಲ.” (ಲಿ.ಮ.ಸ.ಪು:೭೭), ಮತ್ತೊಮ್ಮೆ ಇಂಥದೇ ಸನ್ನಿವೇಶ ಆದರಿದು ವಿಭಿನ್ನ, ಆ ಮಠದ ಫಕೀರ ಸ್ವಾಮಿಗಳಿಗೆ ವೃದ್ಧಾಪ್ಯ, ಹಾಲಯ್ಯನವರನ್ನು ಹಾನಗಲ್ಲಿಗೆ ಕೆರೆ ತರಲು ಭಕ್ತರಿಗೆ ಆಜ್ಞೆಯಾಯಿತು.  ಸರ್ವವು ಹಾಲಯ್ಯನವರ ಮುಂದೆ ಪ್ರಸ್ತಾಪವಾಯಿತು. ಹಾಲಯ್ಯನವರು ವಿನಮ್ರರಾಗಿ ನುಡಿದರು, ನಾನೊಬ್ಬ ಸಮಾಜ ಸೇವಕನ ನನಗೆ ದೊಡ್ಡ ಮಠವೊಂದರ ಹೊಣೆಗಾರಿಕೆ ಬೇಡ; ಮಠ ಹಾಗೂ ಸಮಾಜ ಸೇವೆ ಎರಡು ವ್ಯವಸ್ಥೆಗಳನ್ನು ತೂಗಿಸಿಕೊಂಡು ಹೋಗುವುದು ಅಸಾಧ್ಯವೆಂದು ತಿಳಿದವ ನಾನು; ನನ್ನನ್ನು ದಯವಿಟ್ಟು ಬಿಟ್ಟಬಿಡಿ ಎಂಬುದಾಗಿ ವಾದಿಸಿದರು. ಹಾಸಿಗೆಯಿಂದ ಬೇಸರಗೊಂಡು ಫಕೀರಸ್ವಾಮಿಗಳು ಸ್ವಾನುಭವದ ಅಧಿಕಾರಬೆರೆಸಿದ ಆಗ್ರಹದ ಮಾತುಗಳು ಎಂಬಂತೆ ಉಪದೇಶ ಮಾಡಿದರು, ನೀನಿನ್ನೂ ಚಿಕ್ಕವ ವೈಯಕ್ತಿಕವಾಗಿ ದೊಡ್ಡದಾಗಿ ಸಮಾಜಸೇವೆ ಮಾಡಲಾಗದೆಂದು ನಿನಗೆ ತಿಳಿಯದು, ಅದಕ್ಕೆ ಧಾರ್ಮಿಕ ಸಂಸ್ಥೆಯೊಂದರ ಬೆಂಗಾವಲು  ಬೇಕು .ಮಠದ ಆದಿಪತ್ಯ ಸ್ವೀಕರಣೆ ಸ್ವಾರ್ಥ ಬಯಕೆಗಾಗಿ ಅಲ್ಲ. ನಿಷ್ಕಾಮ ಸೇವೆಗೆ ಎಂಬ ಮಂತ್ರ ಸದೃಶಮಾತುಗಳು ಅವರನ್ನು ಮಂತ್ರಮುಗ್ದಗೊಳಿಸಿದವು. ಹಾಲಯ್ಯನವರು  ಹಾನಗಲ್ಲ  ಕುಮಾರ ಸ್ವಾಮಿಗಳೆಂದೇ ಪ್ರಸಿದ್ಧಿಯಾದರು.

ಬಸವ ಸಾಮಾಜಿಕ ಕ್ರಾಂತಿಯನ್ನವರು  ಪುನರಜ್ಜೀವನಗೊಳಿಸಿದರು. ಧರ್ಮ, ಶಿಕ್ಷಣ, ಕಲೆ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜೋನ್ನತಿಯ ಹೊಂಗನಸು ಅವರದು  ಕೃಷಿಗೆ ಸಂಗೀತಕ್ಕೆ ಅಪಾರ ಕೊಡುಗೆ ಅವರದು, ಅಚಾರವೇ ವೀರಶೈವ ಲಿಂಗಾಯತ ಧರ್ಮದ ತಿರುಳು; ಅದನ್ನು ಶಿವಯೋಗಮಂದಿರದ ಮೂಲಕ ಉಳಿಸಿ ಬೆಳೆಸಿದರು. ಅಂಧರ ಉಪಜೀವನಕ್ಕೆ ತಳಪಾಯ ಹಾಕಿ ಅಲ್ಲಿ ಗುರು ಶಿಷ್ಯ ಪರಂಪರೆಗೆ ಶ್ರೀಕಾರ ಹಾಕಿದರು.

ಶ್ರೀ ಗುರು ಕುಮಾರಂ ವಂದೇ

Related Posts