ಶ್ರೀ ಚನ್ನಬಸವಣ್ಣನವರು

ಶ್ರೀಮ. ನಿ.ಪ್ರ. ಶ್ರೀ ಶಿವಬಸವಸ್ವಾಮಿಗಳು ಹೊಸಮಠ,

ಅಕ್ಕಿಹೊಂಡ, ಹುಬ್ಬಳ್ಳಿ

ಹನ್ನೆರಡನೆಯ ಶತಮಾನವು ವೀರಶೈವರ ಕ್ರಾಂತಿಯ ಕಾಲ. ವೀರಶೈವವನ್ನು ಅಂಗೀಕರಿಸಿದ ಅನೇಕರು ಈ ಕಾಲದಲ್ಲಿ ಈ ಮಾರ್ಗವನ್ನು ಹಿಡಿದು ಮಹಾಮಹಿಮರೆನಿಸಿದ್ದಾರೆ. ಅವರು ಶರಣರೆಂದು ಪ್ರಮಥರೆಂದೂ ಪ್ರಸಿದ್ಧಿ ಪಡೆದಿರುವರು. ಪ್ರಮಥ ಎಂಬುದು ಅಲೌಕಿಕ ಪದವಿ. ಈ ಪದವಿಯನ್ನು ಪಡೆದವರಿಗೆಲ್ಲ ಶ್ರೀ ಬಸವೇಶ್ವರರು ಪ್ರಮುಖರು. ಅಂತೆಯೇ ಬಸವಾದಿ ಪ್ರಮಥರು ಎಂದು ಕರೆಯುವ ರೂಢಿ ಬಂದಿದೆ.

ಶ್ರೀ ಚನ್ನಬಸವೇಶ್ವರರೂ ಪ್ರಮಥರಲ್ಲಿ ಮುಂದುವರೆದವರೇ ಆಗಿದ್ದರು. ಬಸವೇಶ್ವರರು ದಂಡನಾಯಕರೆನಿಸಿದ್ದರೆ, ಚನ್ನಬಸವೇಶ್ವರರು ಚಿಕ್ಕದಂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರು ಷಟ್‌ಸ್ಥಲ ಚಕ್ರವರ್ತಿಗಳೂ ಆಗಿದ್ದಾರೆ. ಆದುದರಿಂದಲೆ ಅನುಭವ ಮಂಟಪದ ಮಹಾಸಭೆಯಲ್ಲಿ ಚನ್ನಬಸವೇಶ್ವರರ ಸ್ಥಾನ ಇನ್ನೂ ಹಿರಿದು. ಇವರು ಅನೇಕ-ಸಲ ಬಸವೇಶ್ವರರಿಗೂ ಹಿತನುಡಿಗಳನ್ನು ತಿಳಿಸಿ ಎಚ್ಚರಿಸಿದ್ದಾರೆ. ಅಂತೆಯೇ ಇವರು ಲೌಕಿಕ-ಪಾರಮಾರ್ಥಿಕಗಳೆರಡರಲ್ಲಿಯೂ ಮುಂದುವರೆದು ಮಹಾಮುತ್ಸದ್ದಿಗಳೂ, ಮೇಧಾವಿಗಳೂ, ಆಗಿದ್ದಾರೆ. ಈ ಚನ್ನಬಸವೇಶ್ವರರು ಜನನದ ಬಗ್ಗೆ ಈಗೀಗ ಅಪಸ್ವರಗಳು ಕೇಳಿಬರಹತ್ತಿದೆ. ಈ ಅಪಸ್ವರಗಳು ಸಮಾಜದಲ್ಲಿಯ ಜನರ ಮನಸ್ಸುಗಳನ್ನು ಕದಡಿವೆ.

ಚನ್ನಬಸವೇಶ್ವರರು ಪ್ರಸಾದದಿಂದ ಜನಿಸಿದರು ಎಂದು ಒಬ್ಬ ಕವಿಗಳು ತಿಳಿಸಿದ್ದರೆ, ಕಕ್ಕಯ್ಯನವರ ಪ್ರಸಾದದಿಂದ ಜನಿಸಿದರೆಂದು ಇನ್ನು ಕೆಲವರು ತಿಳಿಸುತ್ತಾರೆ. ಶಿವಪ್ರಸಾದದಿಂದ ಜನಿಸಿದರೆಂದು ವಿರೂಪಾಕ್ಷ ಪಂಡಿತರು ತಿಳಿಸುತ್ತಾರೆ. ಅಂತು

ಇವರೆಲ್ಲರ ಅಭಿಪ್ರಾಯಗಳೂ ಚನ್ನಬಸವೇಶ್ವರರ ಜನನವು ಪ್ರಸಾದದಿಂದ ಆಯಿತೆಂದು ಇರುತ್ತವೆ. ಆದರೆ ಸಿಂಗಿರಾಜನು ಮಾತ್ರ ಚನ್ನ ಬಸವೇಶ್ವರರು ಶಿವದೇವನ ಮಗನೆಂದು ತಿಳಿಸಿದ್ದಾರೆ. ಕರ್ನಾಟಕ ಕವಿಚರಿತೆಯ ಅಭಿಪ್ರಾಯದ ಪ್ರಕಾರ ಇವರೆಲ್ಲ ಹದಿನೈದು, ಹದಿನಾರು, ಹದಿನೇಳನೆಯ ಶತಮಾನದವರಾಗಿದ್ದಾರೆ. ಹನ್ನೆರಡನೆಯ ಶತಮಾನದ  ಸ೦ಗತಿಯನ್ನು ಮೂರ್ನಾಲ್ಕೈದು ನೂರು ವರ್ಷಗಳ ನಂತರ ತಿಳಿಸುವಾಗ ನಾಲಿಗೆಯಿಂದ ನಾಲಿಗೆಗೆ ಸೇರಿ ಕಿವಿಯಿಂದ ಕಿವಿಗಳಿಗೆ ತಲ್ಪುವಾಗ ಅನೇಕ ವ್ಯತ್ಯಾಸಗಳು ಆಗುವ ಸಂಭವವು ಸಹಜವಾದುದು.

ಇಂಗಳೇಶ್ವರ ಬಾಗೇವಾಡಿಯ ನಾಡಿನ ಮಾದರಸ ಮಾದಲಾಂಬಿಕೆ ಎಂಬ ದಂಪತಿಗಳಿಗೆ ಅನೇಕ ವರುಷಗಳ ವರೆಗೆ ಮಕ್ಕಳಾಗದಿರಲು ಇವರು ಕಂದನನ್ನು ಪಡೆಯಲು ನಂದೀಶ್ವರ ವ್ರತವನ್ನಾಚರಿಸಿದರು. ಈ ಸಮಯದಲ್ಲಿ ವೀರಶೈವದ ಮೇಲೆ

ಬೇರೆಯವರ ಅಘಾತದಿಂದ ಕೆಟ್ಟ ಪರಿಣಾಮವು ಆಗುತ್ತಲಿತ್ತು ಇದನ್ನು ಸರಿಪಡಿಸುವ ಸಲುವಾಗಿ ಒಬ್ಬ ಮಹಾವಿಭೂತಿಯ ಉದಯವು ಆಗಬೇಕಾದ ಅವಶ್ಯಕತೆಯೂ ಬಹಳವಾಗಿತ್ತು. ಅಂತೆಯೇ ಶಿವಮತದ ಮೇಲೆ ಆಗುತ್ತಿರುವ ಅಘಾತವನ್ನು ನಿವಾರಣೆಮಾಡಲು ಈ ದಂಪತಿಗಳು ನಡೆಸುತ್ತಿರುವ ನಂದಿ ವ್ರತದ ಫಲವಾಗಿ ಶಿವನ ಅಪ್ಪಣೆಯಿಂದ ನಂದಿಕೇಶ್ವರನು ಇವರ ಮಗುವಾಗಿ ಜನಿಸಿದನು. ಮುಂದೆ ಈ ಮಗುವಿಗೆ ಬಸವೇಶ್ವರ ಎಂಬ ಹೆಸರು ಬಂದಿದೆ. ಈ ಬಸವೇಶ್ವರರಿಗೆ ನಾಗಮ್ಮ ಎಂಬ ಅಕ್ಕನೂ ಇದ್ದಾಳೆ. ಇವಳಿಗೆ ಅಕ್ಕನಾಗಮ್ಮ ಎಂಬ ಹೆಸರು ರೂಢವಾಗಿ ಬಂದಿದೆ.

 ಬಸವೇಶ್ವರರು ಎಂಟನೆಯ ವರ್ಷದವರಾದರು. ಆಗ ಅವರ ತಂದೆ ಅವರ ವಂಶಪರಂಪರೆಯ ಸಾಂಪ್ರದಾಯಕ-ಧಾರ್ಮಿಕ-ಸಂಸ್ಕಾರವಾದ ಉಪನಯನವನ್ನು ಮಾಡಿಸಬೇಕಾಯಿತು. ಬಸವೇಶ್ವರರಿಗೆ ಇದು ಒಪ್ಪಿತವಾಗಲಿಲ್ಲ ಕೇವಲ ಬ್ರಾಹ್ಮಣ್ಯವನ್ನುಂಟು ಮಾಡುವ ಈ ಸಂಸ್ಕಾರಕ್ಕಿಂತ ಮಾನವನನ್ನು ಮಾನವ ಧರ್ಮದ ಕಡೆಗೆ ಕರೆದೊಯ್ಯುವ ವಿಧಾಯಕ ಕ್ರಿಯೆಗಳನ್ನು ಹೊಂದಿದ ಯಾವುದಾದರೂ ಹೆದ್ದಾರಿಯಿರುವುದೇ ? ಎಂಬ ವಿಚಾರಮಾಡಿ ಈ ಹೆದ್ದಾರಿಯನ್ನು ಹಿಡಿಯಬೇಕೆಂಬ ಯೋಚನೆಯನ್ನು ಮಾಡಿದರು. ಈ ಬಗ್ಗೆ ತಂದೆ ಮಕ್ಕಳ ನಡುವೆ ವಿವಾದವೂ ಆಯಿತು. ಕೊನೆಗೆ ಬಸವೇಶ್ವರರು ತತ್ವದ ಸಲುವಾಗಿ ತಂದೆಯನ್ನಗಲುವ ಪ್ರಸಂಗವೂ ಪ್ರಾಪ್ತವಾಯಿತು. ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿರುವಾಗ ತಮ್ಮ ಸಮೀಪದಲ್ಲಿಯೇ ಪ್ರಸಿದ್ಧಿ ಪಡೆದ ಕೂಡಲಸಂಗಮ ಕ್ಷೇತ್ರದಲ್ಲಿರುವ ಅಧ್ಯಾತ್ಮಿಕ ಕೇಂದ್ರಕ್ಕೆ ಹೊರಡುವ ನಿರ್ಧಾರಮಾಡಿದರು. ಈ ನಿರ್ಧಾರವನ್ನು ತನ್ನ ಅಕ್ಕನಾದ ನಾಗಮ್ಮನಿಗೂ ತಿಳಿಸಿದರು. ನಾಗಮ್ಮನವರು ಇದಕ್ಕೊಪ್ಪಿದರಲ್ಲದೆ ತಾವು ಸಹ ತಮ್ಮನ ಸಂಗಡ ಹೊರಡಲು ತಯಾರಾದರು. ಮಾನವನು ಬ್ರಾಹ್ಮಣನಾಗಿ ಬ್ರಹ್ಮಜ್ಞಾನಮಾಡಿಕೊಳ್ಳುವದಷ್ಟೇ ಮಾನವಧರ್ಮವಲ್ಲ, ಆ ಜ್ಞಾನವನ್ನು ಕ್ರಿಯೆಯಲ್ಲಿ ತಂದು ದೇವರ ಲೋಕಕ್ಕೆ ಹೋಗಬೇಕು. ದೇವರ ಬಳಿಯಲ್ಲಿರಬೇಕು. ದೇವರ ರೂಪವನ್ನು ಹೊಂದಬೇಕು, ದೇವರೊಡನೆ ಹೊಂದಿಕೊಳ್ಳಬೇಕು, ಕೊನೆಗೆ ದೇವನೇ ತಾನಾಗಬೇಕು. ಇದುವೆ ಮಾನವಧರ್ಮ ಎಂದು ಪ್ರತಿಪಾದಿಸುತ್ತ ಲಿಂಗಭೇದವಿಲ್ಲದೆ ಸ್ತ್ರೀಯರೂ ಈ ದಾರಿಯನ್ನು ಹಿಡಿಯಲು ಬರುತ್ತದೆ. ಎಂದು ತಿಳಿಸುತ್ತಿರುವ ತಮ್ಮನ ಪ್ರತಿಪಾದನೆಯಿಂದ ಅಕ್ಕನು ಪ್ರಭಾವಿತಳಾದುದು ಸಹಜವೇ ಆಗಿದೆ. ಅಂತೆಯೇ ಅವಳು ತಂದೆ ತಾಯಿಗಳನ್ನಗಲುವ  ಸಾಹಸಕ್ಕೆ ಮುಂದಾದಳು. ಅಲ್ಲದೆ ಅವಳು ಇವರಲ್ಲಿಯೇ ಮದುವೆಯಾಗಿ ಕೂಸುಳ್ಳವಳಾಗಲಿ ಗರ್ಭವತಿಯಾಗಲಿ ಇರಬಹುದಾಗಿದೆ. ಸಂಸಾರ ಭ್ರಾಂತಿಯಿಲ್ಲದ ಪತಿದೇವನಾದ ಶಿವಸ್ವಾಮಿ ಇದ್ದುದರಿಂದಲೂ ಅವಳ ಅಧ್ಯಾತ್ಮಜೀವನವನ್ನು ಸಾಗಿಸಲು  ಪ್ರೇರಕವಾಗಿದೆಯೆನ್ನುಬಹುದು.

ಕೂಡಲಸಂಗಮಕ್ಷೇತ್ರಕ್ಕೆ ತಲುಪಿದ ಈ ಅಕ್ಕತಮ್ಮಂದಿರು ಆಗ ಅಲ್ಲಿ ಪ್ರಸಿದ್ಧವಾಗಿರುವ ಮಠಕ್ಕೆ ಬಂದರು. ಅಲ್ಲಿ ಜಾತವೇದರೆಂಬ ಗುರುಗಳು ಇದ್ದರು. ಇವರು ಮುಮುಕ್ಷುಗಳಿಗೆ ಮಾನವಧರ್ಮವನ್ನು ಬೋಧಿಸುತ್ತಿದ್ದರು. ಅನೇಕ ಜನ್ಮಗಳನ್ನು ಕಳೆದು ಅವುಗಳಲ್ಲಿ ಮಾಡಿದ ಪುಣ್ಯವಿಶೇಷದಿಂದ ಈಗ ಮಾನವನಾದವನು ಕೇವಲ ಮಾನವನಾಗಿಯೇ ಉಳಿಯಬಾರದು. ಹೀಗೆ ಉಳಿದರೆ ಇವನಿಗೆ ಈ ಜನನ ಮರಣರೂಪವಾದ ಭವರೋಗವು ತಪ್ಪುವುದಿಲ್ಲ. ಮಾನವನು ತನಗೆ ದೊರೆತ ಈ ಶರೀರವನ್ನು ಲಿಂಗವನ್ನಾಗಿ ಮಾಡಿಕೊಳ್ಳಬೇಕು. ಈ ಅಂಗವು ಸಾಧನೆಯಿಂದ ಲಿಂಗವಾಗುವದು. ಹೀಗೆ ಲಿಂಗವಾಗುವುದೇ ಮೋಕ್ಷ ಎಂದು ಅವರು ಮುಮುಕ್ಷುಗಳಾದ ಭಕ್ತಿ-ಭಾವುಕರಿಗೆ ಬೋಧಿಸುತ್ತಿದ್ದರು. ಲಿಂಗವೆಂದರೇ ಶಿವ. ಈ ಶಿವನನ್ನು ಅನುಭವದಿಂದ ಅರಿಯುವದೇ ಶಿವಾನುಭವ. ಈ ಶಿವಾನುಭವ ಸಾಧನೆಯಿಂದಲೇ ಮೋಕ್ಷ ಸಾಧ್ಯ ಇಲ್ಲವಾದರೆ ಇಲ್ಲ. ಇದನ್ನು ಸಾಧಿಸಿದವರಿಗೆ ಪುನರ್ಜನ್ಮವೆಂಬ ಭವರೋಗವು ಸೋಂಕುವುದಿಲ್ಲ ಎಂದು ಶಿವಾನುಭವವನ್ನು ಗುರುಗಳು ಅವರಿಗೆಲ್ಲ ತಿಳಿಸುತ್ತಿದ್ದರು.

 ಬಸವೇಶ್ವರರು ಕುಶಾಗ್ರಮತಿಗಳು, ಶ್ರೀಗುರುಗಳು ಬೋಧಿಸುತ್ತಿರುವ ಸಂಗತಿಗಳನ್ನೆಲ್ಲ ಗ್ರಹಿಸಿದರು. ಶರೀರವು ಸ್ಥೂಲವಾಗಲಿ, ಸೂಕ್ಷ್ಮವಾಗಲಿ, ಕಾರಣವೇ ಆಗಲಿ; ಅದು ಶರೀರವೇ. ಶರೀರವೆಂದರೆ ಹಳೆಯ ಅ೦ಗಿಯಂತೆ ಹರಿದುಹೋಗುವದೇ ಆಗ ಹೊಸ

ಅಂಗಿಯನ್ನು ತರಿಸಿ ತೊಡುವಂತೆ ಮತ್ತೊಂದು ಶರೀರವು ಬರಲೇಬೇಕು. ಮತ್ತೆ ಕಳೆಯಬೇಕು. ಮತ್ತೆ ಹೊಸದನ್ನು ತರಬೇಕು. ಈ ಕ್ರಮದಿಂದ ಶರೀರವು ಇರುವವರೆಗೂ ಅದಕ್ಕೆ ಜನನ ಮರಣಗಳು ತಪ್ಪಲಾರವು. ಆದುದರಿಂದ ಈ ಶರೀರಗಳನ್ನು ಲಿಂಗ

ಸಂಬಂಧದಿಂದ ಅಂಗಗಳನ್ನಾಗಿ ಮಾರ್ಪಡಿಸಬೇಕು. ಈ ಅಂಗಗಳು ಅಂಗತನವನ್ನು ಮೀರಿ ಲಿಂಗತನವನ್ನು ಸಂಪಾದಿಸಬೇಕು. ಮುಂದೆ ಈ ಅಂಗಲಿಂಗವೆಂಬ ಜ್ಞಾನವು ಸಹ ಶೂನ್ಯವಾಗಬೇಕು. ಎಂಬ ಉಪದೇಶವನ್ನು ಸಾಧನ ಮಾರ್ಗದಿಂದ ಸಿದ್ಧಿಯನ್ನು ಪಡೆದರು. ಈ ಬಗೆಯ ಶಿವಾನುಭವದ ಅಭ್ಯಾಸವನ್ನು ಮಾಡಿಮುಗಿಸಲು ಅವರಿಗೆ ಹನ್ನೆರಡು ವರ್ಷಗಳೂ ನಂತರ ಅದರ ಸಿದ್ಧಿಯನ್ನು ಪಡೆಯಲು ಆರು ವರ್ಷಗಳೂ ಕಳೆದಿರಬೇಕು. ಉಪನಯನವನ್ನು ತೊರೆದು ಬಂದ ಇವರಿಗೆ ಇಷ್ಟು ಅವಧಿಯನ್ನು ಕಳೆದ ಮೇಲೆ ಶ್ರೀ ಬಸವೇಶ್ವರರಿಗೆ ಇಪ್ಪತ್ತೈದು ವರ್ಷಗಳು ಆಗಿರಬೇಕಾಗುತ್ತದೆ. ಕೂಡಲ ಸಂಗಮ ಕ್ಷೇತ್ರದಲ್ಲಿ ಅವರು ತಮ್ಮ ಸಾಧನೆಯನ್ನು ಸಾಗಿಸಿ ಸಿದ್ಧಿ ಪಡೆದ ಸಲುವಾಗಿ ತಮ್ಮ ಅಂಗಯ್ಯಲ್ಲಿಯ ಲಿಂಗದೇವನಿಗೆ ಕೂಡಲಸಂಗಯ್ಯನೆಂದು ಕರೆದಿರುವದನ್ನು ಅವರ ವಚನಗಳಲ್ಲಿರುವ ಮುದ್ರಿಕೆಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದೇವೆ.

 ಅಕ್ಕನಾಗಮ್ಮ ಶಿವದೇವ ದಂಪತಿಗಳ ಮಗುವಾದ ಚನ್ನಬಸವೇಶ್ವರರು ಸಹ ಈಗ ಈ ಮಹಾನುಭಾವಿಗಳಾದ ಬಸವೇಶ್ವರರ ಜೊತೆಗೆ ಇರಬೇಕು. ಅಂತೆಯೇ ಚನ್ನಬಸವೇಶ್ವರರು ಸಹ ಈ ಕೂಡಲ ಸಂಗಮನಾಥನ ಹೆಸರನ್ನೇ ನಡುವೆ ಚನ್ನ’ ಎಂದು ಸೇರಿಸಿ ‘ಕೂಡಲಚನ್ನಸಂಗಮದೇವ’ ಎಂದು ತಮ್ಮ ಲಿಂಗದೇವನಿಗೆ ಹೆಸರಿಸಿದ್ದಾರೆ. ಸಂಗಮನಾಥನ ಸ್ಥಲದ ಪ್ರಭಾವವು ಬಸವೇಶ್ವರರ ಮೇಲೆ ಪರಿಣಮಿಸಿದಂತೆ ಚನ್ನಬಸವೇಶ್ವರರ ಮೇಲೆಯೂ ಪರಿಣಮಿಸಿರಬೇಕು ಎಂಬುದನ್ನು ಇವರ ಈ ವಚನ ಮುದ್ರಿಕೆಗಳು ತಿಳಿಸುತ್ತವೆ.   

 ಬಸವೇಶ್ವರರು ಹಾಗೂ ಚನ್ನಬಸವೇಶ್ವರರು ಇಬ್ಬರೂ ಕೂಡಲ ಸಂಗಮದ ಪರಿಸರದಲ್ಲಿ ವ್ಯಾಸಂಗ ಮಾಡುತ್ತ ಸಾಧನೆಯ ಮಾರ್ಗದಲ್ಲಿದ್ದರೆಂಬುದನ್ನು ನಾವು ಗ್ರಹಿಸಿದ ಬಳಿಕ ಕಲ್ಯಾಣದಲ್ಲಿ ನಡೆಯಿತೆಂದು ತಿಳಿಸುವ ಕಕ್ಕಯ್ಯನವರ ಪ್ರಸಾದದಿಂದ ಆದ

ಚನ್ನಬಸವೇಶ್ವರರ ಜನನಕ್ಕೂ ಈ ಕೂಡಲ ಸಂಗಮದಲ್ಲಿ ಇವರು ವಾಸ ಮಾಡಿದ ಸಂಗತಿಗೂ ಸಂಬಂಧವು ಬರುವುದೇ ಇಲ್ಲ, ಏಕೆಂದರೆ ಕೂಡಲಸಂಗಮದಲ್ಲಿ ವಾಸ ಮಾಡಿ ಪ್ರಸಿದ್ಧಿಯನ್ನು ಪಡೆದ ನಂತರವೇ ಇವರು ಕಲ್ಯಾಣದ ಕಡೆಗೆ ಹೋದರು ಎಂಬುದು ಎಲ್ಲರೂ ಅರಿತ ಸಂಗತಿಯಾಗಿದೆ. ಅಂದ ಬಳಿಕ ಕಕ್ಕಯ್ಯನವರ ಪ್ರಸಾದದಿಂದ ಚನ್ನಬಸವೇಶ್ವರರ ಜನನವಾಯಿತೆಂಬ ಮಾತಿಗೆ ಪುಷ್ಟಿ ದೊರೆಯಲಾರದು.

 ಗಂಡು-ಹೆಣ್ಣುಗಳೆರಡೂ ಸೇರಿದಾಗ ಈ ಎರಡು ಶಕ್ತಿಗಳಿಂದ ಮಗುವು ಜನಿಸುತ್ತಿದೆ ಎಂಬ ಸಂಗತಿಯನ್ನು ಜಗತ್ತಿನಲ್ಲಿರುವ ಸಾಮಾನ್ಯರೂ ಅರಿತಿದ್ದಾರೆ. ಈ ಮಾತನ್ನು ನಮ್ಮ ಶರಣರು ಸಹ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ” ಎಂದು ತಿಳಿಸಿದ್ದಾರೆ. ಹೀಗಿದ್ದು ಚನ್ನಬಸವೇಶ್ವರರು ಜನನವಾದ ಬಗ್ಗೆ ತಿಳಿಸುತ್ತಿರುವ ಈ ಸಂಗತಿಗಳು ವ್ಯತ್ಯಾಸಗೊಂಡಿರಬಹುದೆಂದು ಸ್ಪಷ್ಟವೇ ಇದೆ. ಚನ್ನಬಸವೇಶ್ವರರು ಕಲ್ಯಾಣದಲ್ಲಿ ಶರಣರೊಳಗೆಲ್ಲ ಜ್ಞಾನನಿಧಿಯಾದ ಮಹಿಮಾ ಶಾಲಿಗಳಾಗಿದ್ದಾರೆ. ತಂದೆಯು ಚಿಕ್ಕಂದಿನಲ್ಲಿ ತೀರಿ ಹೋದುದರಿಂದ ಅವರ ಹೆಸರು ಪ್ರಸಿದ್ಧವಾಗಿಲ್ಲವಾದುದರಿಂದಲೂ ಚನ್ನಬಸವೇಶ್ವರರ ಮಹಿಮೆ ಘನವಾಗಿ ಕಂಡ ಕಾರಣದಿಂದಲೂ ಈ ಸಂಗತಿಯು ನಡೆದ ಮೂರುನೂರು ವರ್ಷಗಳ ನಂತರ ಇವರ ಚರಿತ್ರೆಗಳು ರಚನೆಗೊಂಡುದರಿಂದಲೂ ಇವರು ಚನ್ನಬಸವೇಶ್ವರ ಅಯೋನಿಜತನವನ್ನು ಮುಂದು ಮಾಡಿ ಅವರ ಹಿರಿಮೆ ಗರಿಮೆಗಳನ್ನು ತಿಳಿಸಲು ಮಾಡಿದ ಪ್ರಯತ್ನವಾಗಿರಬಹುದೆಂದು ಈ ಚರಿತೆಗಳಿಂದ ಅನಿಸದೆ ಇರಲಾರದು. ಆದರೆ ಶಿವಸ್ವಾಮಿಯೆಂಬ ತಂದೆಯು ಇವರಿಗಿದ್ದನೆ೦ಬ ಸಂಗತಿಯು ಎಲ್ಲರೂ ಒಪ್ಪುವ ಸಂಗತಿಯಾಗಿದೆ.

 ಚಿಕ್ಕದಣ್ಣಾಯಕರೆನಿಸಿಕೊಂಡ ಚನ್ನಬಸವೇಶ್ವರರು ಅನುಭವ ಮಂಟಪದಲ್ಲಿ ಮಹಾಜ್ಞಾನಿಗಳೆನಿಸಿ ಷಟ್‌ಸ್ಥಲಗಳ ಅರಿವನ್ನು ಸರ್ವಾತ್ಮನಾ ಹೊಂದಿದವರಾಗಿದ್ದರು. ಅಂತೆಯೇ ಅವರು ಅಲ್ಲಮಪ್ರಭುದೇವರ ತರುವಾಯ ಶೂನ್ಯ ಸಿಂಹಾಸನವನ್ನಲಂಕರಿಸಿದ ಪೀಠಾಧಿಕಾರಿಗಳಾಗಿ ಜಗದ್ಗುರು ಎಂಬ ಅತ್ಯುಚ್ಚ ಪದವಿಯನ್ನು ಪಡೆದು ಷಟ್‌ಸ್ಥಲ  ಚಕ್ರವರ್ತಿಗಳು ಎನಿಸಿದ ಸಂಗತಿಯೂ ಪ್ರಸಿದ್ಧವೆ ಇದೆ. ಹೀಗೆ ಷಟ್ ಸ್ಥಲ ಚಕ್ರವರ್ತಿಗಳಾದ ಇವರು ಗುರುಕರಸಂಜಾತರಾದುದರಿಂದಲೂ ಪೂರ್ವಾಶ್ರಯದ ನಿರಸನವಾದುದರಿಂದಲೂ, ತಂದೆಯ ಹೆಸರು ಪ್ರಸಿದ್ಧವಿಲ್ಲದುದರಿಂದಲೂ, ಚರಿತೆಕಾರರು ಇವರ ಅಯೋನಿಜತನವನ್ನು ಮೂರುನೂರು ವರ್ಷಗಳ ನಂತರ ತಿಳಿಸಿರುವದು ಒಂದು ಬಗೆಯಿಂದ ಯುಕ್ತವಾಗುತ್ತದೆ. ಈಗ ಇವರು ಗುರುಪ್ರಸಾದ, ಶಿವಪ್ರಸಾದ, ಶರಣರ ಪ್ರಸಾದ ಅ೦ದರೆ ಕಾರುಣ್ಯದಿಂದ ಈ ಬಗೆಯಾಗಿ ಷಟ್‌ಸ್ಥಲ ಚಕ್ರವರ್ತಿಗಳಾದರೆಂದು ತಿಳಿಸುವದೂ ಜನತೆ ತಿಳಿದುಕೊಳ್ಳುತ್ತಿರುವುದೂ ಸಮಂಜಸವಾಗಿದೆ.

 ಈ ಬಗೆಯಾಗಿ ಶ್ರೀ ಚನ್ನಬಸವವೇಶ್ವರರ ಚರಿತೆಯು ಸ್ಪಷ್ಟವಾಗಿರುವಾಗ ಇತಿಹಾಸ ಸಂಶೋಧನೆಯ ಬಗೆಗೆ ವ್ಯಾಸಂಗ ಮಾಡಿ ಶಾಸನಗಳ ಸಂಶೋಧಕರಾಗಿ ಮಹಾಪಾಂಡಿತ್ಯವನ್ನು ಸಂಪಾದಿಸಿದ ಮಹಾನುಭಾವರೊಬ್ಬರು ಒಂದು ತರ್ಕಬದ್ಧಊಹೆಯನ್ನೂ ಮಾಡಬಹುದು’ ಎಂಬ ಸಂಶಯದ ಕಡೆಗೇಕೆ ಕೈ ಚಾಚಿದರೋ ತಿಳಿಯದು. ಶರಣ ಮಾರ್ಗದಲ್ಲಿ ವಿಜಾತೀಯ ವಿವಾಹದಷ್ಟೇ ಏಕೆ ಬಳಿಕೆಗಳು ಇರುವದಿಲ್ಲ. ಅವರ ಬಳಕೆ ಭಕ್ತರೊಡನೆ ಅಲ್ಲದೆ ಭವಿಗಳ ಸಂಗಡ ಅಲ್ಲ, ಯಾರೇ ಇರಲಿ ಲಿಂಗವಂತಿಕೆಯನ್ನು ಪಡೆದು ಶಿವಭಕ್ತನಾದ ಮೇಲೆ ಅವರ ಪೂರ್ವಾಶ್ರಮವು ಕಳೆದು ಹೋಗುವದೆಂಬುದನ್ನು ಶರಣ ಮಾರ್ಗಾವಲಂಬಿಗಳು ಒಪ್ಪುತ್ತಿರುವಾಗ “ಅಕ್ಕನಾಗಮ್ಮನನ್ನು ಡೋಹರ ಕಕ್ಕಯ್ಯನಿಗೆ ಮದುವೆ ಮಾಡಿಸಿರುವದು ಹೆಚ್ಚು ಸಂಭವನೀಯವಾಗಿ ತೋರುತ್ತದೆ’ ಎಂಬ ಮಾತು ಅಪಸ್ವರವಾಗಿ ಪರಿಣಮಿಸುತ್ತದೆ.

ಕಕ್ಕಯ್ಯನವರು ಜಾತಿಯಿಂದ ಡೋಹರರೋ ? ಅಥವಾ ಶರಣ ಮಾರ್ಗದಲ್ಲಿ ಡೋಹರರ ಕಾಯಕವನ್ನು ಕೈಕೊಂಡು ಡೋಹರರೆನಿಸಿದರೋ? ಎಂಬ ಅಂಶವು ಸಹ ವಿಚಾರಣೀಯವಾಗಿದೆ. ಕಾಶ್ಮೀರದ ಅರಸು ಮಹಾದೇವ ಭೂಪಾಲನು ಆಗ ತನ್ನ ಕಾಯಕದಿ೦ದ ಮೋಳಿಗೆ ಮಾರುವ ಸಲುವಾಗಿ ಮೋಳಿಗೆಯ ಮಾರಯ್ಯನೇ  ಆಗಿರುವದನ್ನು ಶರಣರ ಚರಿತೆಯಲ್ಲಿ ನಾವು ಕಾಣುತ್ತೇವೆ. ಇದರಂತೆ ಶರಣರಿಗಾಗಿ ಆಯಾ ಕಾಯಕಗಳಲ್ಲಿ ನಿರತರಾದವರಿಗೆ ಆಯಾ ಹೆಸರು ಬಂದಿರುವುದೇನೂ ಅಸಂಭವನೀಯವಲ್ಲ. ಬಸವೇಶ್ವರರು ಒಂದು ವಚನದಲ್ಲಿ ಕಕ್ಕಯ್ಯನವರಿಗೆ ಡೋಹರ ಎಂದು ಪ್ರಯೋಗಿಸಿರುವದನ್ನು ಡೋಹರನೆಂಬೆನೆ ಕಕ್ಕಯ್ಯನ ಎಂಬ ಮಾತಿನಿಂದ ಉದ್ಧರಿಸಿದ್ದಾರೆ. ಇದರಿಂದ ಅವರು ಕಕ್ಕಯ್ಯನವರ ಡೋಹರತನವನ್ನು ಆ ಕಾಲದಲ್ಲಿಯೇ ಅಲ್ಲಗಳೆದಿರುವಾಗ ಈಗಲೂ ನಾವು ಅವರಿಗೆ ಜಾತೀಯಭಾವನೆಯಿಂದ ಆ ಮಾತನ್ನು ಬಳಿಸಿ ಅವರ ಪವಿತ್ರ ಕಾಯಕಕ್ಕೆ ಜಾತೀಯ ಕಲಂಕವನ್ನು ಬಳಿದಂತಾದೀತು.

 ಬಸವೇಶ್ವರರು ಕಕ್ಕಯ್ಯನವರೊಡನೆ ನಡೆದುಕೊಂಡ ರೀತಿಯನ್ನು ನೋಡಿದರೆ ಕಕ್ಕಯ್ಯನವರು ಬಸವೇಶ್ವರರಿಗಿಂತ ಎಷ್ಟೋ ಹಿರಿಯ ವಯಸ್ಸಿನವರಾಗಿ ತೋರುತ್ತಿದೆ. ಬಸವೇಶ್ವರರು ಒಂದು ವಚನದಲ್ಲಿ ಅಪ್ಪ ನಮ್ಮ ಮಾದರ ಚನ್ನಯ್ಯ ಬೊಪ್ಪನು ನಮ್ಮ

ಡೋಹರ ಕಕ್ಕಯ್ಯ’ ಎಂದು ನುಡಿವಲ್ಲಿ ಕಕ್ಕಯ್ಯನವರು ಬಸವೇಶ್ವರರ ಅಜ್ಜನ ಸ್ಥಾನವನ್ನು ಹೊಂದುವ ವಯಸ್ಸಿನಲ್ಲಿದ್ದಾರೆ. ಅಲ್ಲದೆ ಬಸವಾದಿಗಳಿಗಿಂತಲೂ ಹಿಂದಿನವರಾದ ದೇವರ ದಾಸಿಮಯ್ಯನವರು ಸಹ ತಮ್ಮ ವಚನದಲ್ಲಿ ‘ಕೀಳು ಮಾದರ ಚೆನ್ನಯ್ಯ, ಕೀಳು

ಡೋಹರಕಕ್ಕಯ್ಯ ಎಂದು’ ಪ್ರಯೋಗಿಸಿರುವದನ್ನು ಕಾಣುತ್ತೇವೆ. ಇದರಿಂದ ಕಕ್ಕಯ್ಯನವರು ವಯಸ್ಸಿನಿಂದ ಬಹಳ ಹಿರಿಯರು ಎಂಬುದು ತೋರುತ್ತದೆ. ಅಲ್ಲದೆ ವಿಜಾತಿಯ ವಿವಾಹಕ್ಕೆ ಬಸವೇಶ್ವರರ ಕ್ರಾಂತಿಗಿಂತ ಹಿಂದೆ ನಡೆದ ಸಂಗತಿಯು ಚರಿತೆಗಳಲ್ಲಿ

ತೋರುವದಿಲ್ಲ. ಆದುದರಿಂದ ಈ ವಿಜಾತೀಯ ವಿವಾಹವು ಅದರಲ್ಲಿಯೂ ವಯೋಮಾನದಿ೦ದ ತೀರ ಹಿರಿಯರಾದವರೊಡನೆ ನಡೆದ ವಿಷಮ ವಿವಾಹವು ನಡೆಯಿತೆಂದು ಹೇಳುವದು ಕೂಡ ವ್ಯವಹಾರಿಕವಾಗಿ ಒಪ್ಪದ ಸಂಗತಿಯಾಗಿಲ್ಲ.

 ಕಕ್ಕಯ್ಯನವರಿಗೆ ಮದುವೆಯಾದ ಸಂಗತಿಯು ಬೇರೆ ಕಡೆಗೆ ದೊರೆಯುತ್ತದೆ. ಅವರ ಧರ್ಮಪತ್ನಿ ನಲಿನಿದೇವಿ ಮಗ ಧೂರಯ್ಯ ಎಂಬುವರಿದ್ದರೆಂದೂ, ಮಲ್ಲದೇವಿಯೆಂಬ ಸತಿಯು ಕಕ್ಕಯ್ಯನವರಿಗಿದ್ದಳೆಂದೂ ತಿಳಿಯುತ್ತದೆ. ಹೀಗೆ ಅವರ ದಾಂಪತ್ಯ ಜೀವನವು

ಸಕಲವಾಗಿ ಸಾಗಿರುವಾಗ ಅಕ್ಕನಾಮ್ಮನ ಸಂಗಡ ಡೋಹರ ಕಕ್ಕಯ್ಯನವರ ಮದುವೆ ಮಾಡಿಸಿದ ಸಂಗತಿಯು ಹೆಚ್ಚು ಸಂಭವನೀಯವು ಹೇಗೆ ಆದೀತು ? ಆದುದರಿಂದ ಮದುವೆಯ ವಿಚಾರದಲ್ಲಿ ಅಕ್ಕನಾಗಮ್ಮ ಹಾಗೂ ಕಕ್ಕಯ್ಯನವರ ನಡುವೆ ಯಾವದೇ ಬಗೆಯ ಸಂಬಂಧ ಉಳಿಯುವದಿಲ್ಲ ಎಂಬುದು ಚರಿತೆಯಿಂದಲೇ ಸ್ಪುಟವಾಗಿ ಕಾಣುತ್ತಿದೆ.

ಕಕ್ಕಯ್ಯನವರು ಜಾತಿ ಡೋಹರರಾಗಿದ್ದು ಮಹಾನುಭಾವರೊಬ್ಬರು ಕಲ್ಪಿಸಿದ ಮದುವೆಯು ಅಕ್ಕನಾಗಮ್ಮನ ಸಂಗಡ ಆದುದೇ ನಿಜವಾಗಿದ್ದರೆ,-ಹರಳಯ್ಯ ಮಧುವರಸರ ಮಕ್ಕಳ ಮದುವೆ ನಡೆದಾಗ ಆ ಕೂಡಲೇ ನಡೆಯಿತೆಂದು ತಿಳಿಯುವ ಘನಘೋರ ಪ್ರಸ೦ಗವು ಆಗಲೇ ನಡೆದು ಹೋಗುತ್ತಿತ್ತು. ಅಲ್ಲದೆ ಅಂತಹ ಸಂಕರವನ್ನು ಒಪ್ಪದ ಆಗಿನ ರಾಜಕೀಯವು ಇದಕ್ಕೆ ಕಾರಣವಾದ ಬಸವೇಶ್ವರರನ್ನು ದಂಡನಾಯಕ ಪದವಿಗೆ ತರುತ್ತಲೇ ಇದ್ದಿಲ್ಲ. ಹೀಗೆ ಜನಿಸಿದ ಚನ್ನಬಸವೇಶ್ವರರನ್ನು ಚಿಕ್ಕದಂಡನಾಯಕರನ್ನಾಗಿ ಮಾಡುತ್ತಲೇ ಇರಲಿಲ್ಲ. ಇಷ್ಟೇ ಅಲ್ಲ ಕಲ್ಯಾಣದ ಶರಣರ ಕ್ರಾಂತಿಯೇ ಆಗುತ್ತಿರಲಿಲ್ಲವಾಗಿ ಈಗ ದೊರೆಯುವ ಇತಿಹಾಸವೂ ದೊರೆಯದೆ ಬೇರೆ ಸ್ವರೂಪದಲ್ಲಿ ಬರುತ್ತಿತ್ತು.

ಸಿಂಗಿರಾಜರು ತಿಳಿಸಿದಂತೆ ನಾಗಮ್ಮನವರಿಗೆ ಶಿವಸ್ವಾಮಿ ಎಂಬ ಪತಿಯಿದ್ದನೆಂಬುದನ್ನು ಒಪ್ಪಿಕೊಳ್ಳಬೇಕು. ಇವರು ಆರಾಧ್ಯ ಬ್ರಾಹ್ಮಣರಾಗಿದ್ದರು. ಜನಾಂಗವು ವೀರಶೈವರಾಗಿದ್ದ ಬ್ರಾಹ್ಮಣರ ಜೋಕಾಲಿಯೊಳಗೆ ಕುಳಿತು ಜನಿವಾರವನ್ನು ಹೊಂದಿದ್ದರು. ಇಂತಹ ಪವಿತ್ರ ದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರೆಂಬುದು ಸ್ಪಷ್ಟವೇ ಇದೆ. ಇದರಂತೆಯೇ ಕಕ್ಕಯ್ಯನವರು ಸಹ ತಮ್ಮ ಧರ್ಮಪತ್ನಿಯೊಡನೆ ದಾಂಪತ್ಯ ಜೀವನವನ್ನು ಸಾಗಿಸಿ ಮಗುವನ್ನು ಪಡೆದಿದ್ದರೆಂಬುದು ಸಹ ಚರಿತೆಯಲ್ಲಿ ತಿಳಿಯುತ್ತದೆ. ಹೀಗಿದ್ದೂ ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಮಹಾ ಪಾಂಡಿತ್ಯವನ್ನು ಪ್ರಕಟಿಸಿದ ಮಹಾನುಭಾವರೊಬ್ಬರು ‘ಸಂಭವನೀಯ ನಿರ್ಣಯಗಳನ್ನು ಭಾವಿಸಬೇಕು’ ಎಂಬ ಭಾವನಾ ಪ್ರಪಂಚಕ್ಕೆ ಏಕೆ ಮರಳಿದರೋ ? ಎಂಬುದು ತಿಳಿಯದಂತಿದೆ.

ಎಂಟನೂರು ವರ್ಷಗಳ ಹಿಂದಿನ ಸಂಗತಿಯನ್ನು ಇಂದು ವಿಚಾರಿಸುವಾಗ ಲಭ್ಯವಿರುವ ಸಂಗತಿಗಳನ್ನು ಆಧರಿಸಿ ಅವುಗಳಿಗೆ ಹೊಂದಿಕೆಯಾಗುವ ಒಳ್ಳೆಯ ರೂಪವನ್ನೂ ಕೊಡುವದು ವಿಹಿತವಲ್ಲದೆ, ಕಲ್ಪನಾ ಪ್ರಪಂಚಕ್ಕೆ ಮರುಳಾಗಿ ಸಾಮಾಜಿಕರ ಒಳ್ಳೆಯ ಭಾವನೆಯ ಮೇಲೆ ಗೆರೆಯೆಳೆಯುವದು ಪಂಡಿತರಾದವರಿಗೆ ವಿಹಿತವಲ್ಲ.

ಇವರು ಮಹಾ ಪ೦ಡಿತರೆಂದು ಗ್ರಹಿಸಿ ಇವರು ನುಡಿದ ನುಡಿಯನ್ನು ಪ್ರಮಾಣಿಸಿಕೊಂಡು ಕೊಟ್ಟ ಹೇಳಿಕೆಯೊಂದರಿಂದ ಸಾಮಾಜಿಕರ ಚಿತ್ತ ಭಿತ್ತಿಯ ಮೇಲೆ ವಿರೂಪದ ಚಿತ್ರವನ್ನು ಮೂಡುವಂತೆ ಮಾಡಿದುದು ಸಹ ಈ ಮಹಾಪಂಡಿತರೇ ಹೊಣೆಯಾಗಬಹುದಾದ ಅನ್ಯಾಯವಾಗಿದೆ. ಏನೇ ಆಗಲಿ ಆ ಮಾತನ್ನು ಈಗ ಮರೆತು ಬಿಡೋಣ.

ಶಿವಸ್ವಾಮಿ ಅಕ್ಕನಾಗಮ್ಮ ಎಂಬ ದಂಪತಿಗಳ ಪವಿತ್ರದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರು. ತೀರ ಎಳೆತನದಲ್ಲಿಯೇ ಶಿವಸ್ವಾಮಿಯು ತೀರಿಹೋದನು. ಆದುದರಿಂದ ಅವರ ಹೆಸರು ಜನತೆಗೆ ಹೆಚ್ಚಾಗಿ ಪರಿಚಯವಾಗಲಿಲ್ಲ. ಚನ್ನಬಸವೇಶ್ವರರು ಮುಂದೆ ತಮ್ಮ ಅಧ್ಯಾತ್ಮಿಕ ತೇಜದಿಂದ ಶೂನ್ಯಪೀಠದ ಅಧಿಕಾರಿಗಳಾಗಿ ಷಟ್‌ಸ್ಥಲ ಚಕ್ರವರ್ತಿಗಳೂ ಆದರು. ಈ ಪ್ರಸಂಗದಲ್ಲಿ ಪ್ರಮಥ ಪುಂಗವರಾದ ಬಸವೇಶ್ವರರ ಅನುಭವ ಮಂಟಪದ ಮಹಾಶರಣರ ಹಾಗೂ ಶಿವನ ಕಾರುಣ್ಯದ ಕಂದರಾದುದರಿಂದ ಈ ಸಂಗತಿಯು ಮೂರುನೂರು ವರ್ಷಗಳ ನಂತರ ಚರಿತೆಯನ್ನು ಬರೆಯುವ ಕವಿಗಳಿಗೆ ನಾಲಿಗೆಯಿಂದ ನಾಲಿಗೆಯ ಮೇಲೆ ಬಂದು ಕಿವಿಯಿಂದ ಕಿವಿಗೆ ತಲ್ಪುತ್ತ ವ್ಯತ್ಯಾಸಗೊಂಡು ದೊರಕಿದೆ. ಆದ್ದರಿಂದ ಅವರೆಲ್ಲ ಪವಿತ್ರಭಾವನೆಗಳಿಗಾಗಿ ಪ್ರಸಾದದಿಂದ ಜನಿಸಿದರೆಂದು ತಿಳಿಸಿರಬಹುದಾಗಿದೆ. ಈ ಪವಿತ್ರ ಭಾವನೆಯು ಈಗಲೂ ಜನತೆಯಲ್ಲಿರುವಾಗ ಅವನ್ನು ಕೆಡಿಸದಂತೆ ಉಳಿಸುವುದೇ ಸರಿಯಾಗುವದು.

Related Posts