ಕರಣ ಹಸಿಗೆ ಅರ್ಥಾತ್‌ ದೇಹಾತ್ಮವಿಜ್ಞಾನ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

೧. ಪ್ರಸ್ತಾವನೆ

ಎಂಬತ್ತು ನಾಲ್ಕು ಲಕ್ಷ ಜೀವ ರಾಶಿಗಳಲ್ಲಿ ಮಾನವ ಜೀವಿ ಶ್ರೇಷ್ಠ. ಮಾನವನಿಗೆ ಮಹಾದೇವನು ತನು-ಮನ-ಭಾವಗಳನ್ನು ದಯಪಾಲಿಸಿದ್ದಾನೆ. ಉಳಿದೆಲ್ಲ ಪ್ರಾಣಿಗಳಿಗೆ ತನುವನ್ನು ಮಾತ್ರ ನೀಡಿದ್ದಾನೆ. ಮಾನವನಿಗೆ ತನುವಿನಲ್ಲಿ ವಾಕ್‌ಶಕ್ತಿಯನ್ನು ಧೀಶಕ್ತಿಯನ್ನು ಮತ್ತು ಕೃತು ಶಕ್ತಿಯನ್ನು ಕರುಣಿಸಿದ್ದಾನೆ. ಈ ತ್ರಿವಿಧ ಶಕ್ತಿಗಳಿಂದ ಮಾನವ ಶ್ರೇಷ್ಠತೆಯನ್ನು ಮೆರೆಯುತ್ತಾನೆ. ವಾಕ್‌ಶಕ್ತಿಯ ಪ್ರಭಾವದಿಂದ ಭಾವನೆಗಳನ್ನು ವ್ಯಕ್ತ ಮಾಡುವನು. ಧೀಶಕ್ತಿಯಿಂದ ಜಾಣ್ಮೆಯನ್ನು ತೋರುವನು. ಕೃತುಶಕ್ತಿಯಿಂದ ಧೀಶಕ್ತಿಯ ಪ್ರಭಾವವನ್ನು ಬೀರಬಲ್ಲನು.

ಮನುಷ್ಯನ ದೇಹವು ಯಂತ್ರವಿದ್ದಂತಿದೆ. ಬ್ರಹ್ಮಾಂಡವು ಬೃಹತ್ತಾದ ವಿಜ್ಞಾನವಾಗಿದೆ. ಪಿಂಡಾಂಡವು ಬ್ರಹ್ಮಾಂಡದ ಪ್ರತಿರೂಪವೇ ಆಗಿದೆ. ಪಿಂಡಾಂಡವೆಂದರೇನೆ ದೇಹ, ತನು, ಶರೀರ, ಕಾಯ ಇತ್ಯಾದಿ ಅನೇಕ ನಾಮಗಳಿವೆ. ನಿಜಗುಣರು – ‘ತನುವಿದನುಳಿದಿಂದ್ರ ಜಾಲವದುಂಟೆ ?’ ಎಂದಿರುವುದು ಯಥಾರ್ಥವಾಗಿದೆ. ಇಂದ್ರಜಾಲ ಮನುಷ್ಯನನ್ನು ಆಶ್ಚರ್ಯಗೊಳಿಸುವಂತೆ, ತನುವನ್ನು ಕುರಿತು ಚಿಂತಿಸಿದರೆ ಅತ್ಯಾಶ್ಚರ್ಯವೇ ಉಂಟಾಗುವದು. ಆದರೆ ಅದರ ಚಿಂತನ ಮಾಡುವವರು ವಿರಳ.

ತನ್ನ ತನು ಸುಂದರವಾಗಿರಬೇಕು; ಗಟ್ಟಿಯಾಗಿರಬೇಕು. ದಷ್ಟ ಪುಷ್ಟವಾಗಿರಬೇಕೆನ್ನುವವರು ಬಹಳ. ಶರೀರ ಬೆಳವಣಿಗೆಯತ್ತ ಗಮನ ಹರಿಸುವವರೆ ಹೆಚ್ಚು. ಕವಿರತ್ನ ಕಾಲಿದಾಸನು-ʼʼಶರೀರಮಾದ್ಯಂ ಖಲು ಧರ್ಮಸಾಧನʼʼ ಧರ್ಮಾಚರಣೆಗೆ ಶರೀರವೆ ಮೊದಲಿನ ಸಾಧನ ವಾಗಿದೆಯೆಂದಿದ್ದಾನೆ. ಶರೀರವಿಲ್ಲದೆ ಯಾವ ಧರ್ಮಕಾರ್ಯಗಳು ಘಟಿಸುವುದಿಲ್ಲ. ಆದರೆ ತನುವಿನಲ್ಲಿ ನೆಣವಿದ್ದಾಗ ಮಾತ್ರ ಧರ್ಮಕಾರ್ಯಗಳಾಗಲಿ, ಪರೋಪಕಾರ್ಯಗಳಾಗಲಿ ನಡೆಯಬಲ್ಲವು. ಶರೀರವಿದ್ದು ರೋಗಗ್ರಸ್ಥವಾದರೆ ಏನನ್ನು ಮಾಡಲಾಗದು. ಅದಕ್ಕಾಗಿ ದೇಹ ಸ್ವಸ್ಥವಿರುವಾಗಲೆ ಭಗವಚ್ಛಿಂತನೆ, ಆತ್ಮಚಿಂತನೆ; ಪರೋಪಕಾರ ಮಾಡಬೇಕು. ಅಂತೆಯೇ ಬಸವ   ಮಹಾನುಭಾವರು ”ಕೂಡಲ ಸಂಗಮದೇವರನೊಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು” ಎಂದು ಹಿತನುಡಿದಿರುವರು. ಕಾಯ ಪ್ರಸಾದಕಾಯವಾಗಬೇಕು, ಧರ್ಮಕಾರ್ಯಕ್ಕೆ ಸಾಧನವಾಗಿರಬೇಕು. ಪರೋಪಕಾರಕ್ಕೆ ಮುಂದಾಗಬೇಕಲ್ಲದೆ ಪರಪೀಡನೆಗೆ ಕಾರಣವಾಗಬಾರದು.

 ಶರೀರ ಆರೋಗ್ಯಪೂರ್ಣವಾಗಿದ್ದರೇನೆ ಮನಸ್ಸು ಬುದ್ಧಿಗಳು ಸ್ವಸ್ಥವಾಗಿರಬಲ್ಲವು.ಶರೀರದ ಆರೋಗ್ಯವನ್ನು, ಮಾನಸಿಕ ಸ್ವಾಸ್ಥ್ಯವನ್ನು ಬುದ್ಧಿಯ ವಿಕಾಸವನ್ನು, ಆತ್ಮದ ಚಿಂತನವನ್ನು ಕಾಪಾಡಿಕೊಳ್ಳಲು ಮಾನವ ಪ್ರಯತ್ನಿಸಬೇಕಾಗುವದು. ಈ ದಿಶೆಯಲ್ಲಿ ಯಾವುದನ್ನು ಅಲಕ್ಷಿಸುವಂತಿಲ್ಲ. ಶಾರೀರಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ವಿಕಾಸ, ಆತ್ಮದ ಚಿಂತನಗಳೊಂದಿಗೆ ಭೌತಿಕ ಜಗತ್ತಿನ ಸಂಬಂಧ ಹಾಗೂ ಜಗತ್‌ಸೃಷ್ಟಿಗೆ ಕಾರಣಕರ್ತನಾದ ಪರಮಾತ್ಮನನ್ನು ಅರಿಯುವ ಕಾರ್ಯ ಬಹುಕಾಲದಿಂದ ಬೆಳೆದುಬಂದಿತು. ಭೌತಿಕ ಜಗತ್ತಿನ ಬೆಳವಣಿಗೆಯ ಬಗೆಗೆ ಅನೇಕ ಅನುಮಾನಗಳು, ಪ್ರಶ್ನೆಗಳು ಉಂಟಾದರೆ, ವಿಜ್ಞಾನ ಪರಿಹಾರಗಳನ್ನು ಒದಗಿಸಿರಲು ಸಾಕು. ದೈಹಿಕ ಬೆಳವಣಿಗೆಯನ್ನು ಸಹ ವಿಜ್ಞಾನ ವಿಶ್ಲೇಷಿಸಬಹುದು. ಆದರೆ ದೇಹಾತೀತ ಅನುಭವಗಳನ್ನು ವಿಜ್ಞಾನ ತಿಳಿಸಲಾರದು. ವಿಜ್ಞಾನ ತಿಳಿಸದುದನ್ನು ಅಧ್ಯಾತ್ಮತಿಳಿಸಬಲ್ಲುದು. ಅಧ್ಯಾತ್ಮಿಕ ವಿಜ್ಞಾನ ಅನುಭವ- ಅನುಭೂತಿ-ಆತ್ಮಾನಂದವನ್ನು ತಿಳಿಸುವದು. ಇವೆಲ್ಲದಕ್ಕೂ ಸ್ವಸ್ಥ ಶರೀರವೇ ಸಾಧನ ಮಾತ್ರ.

 ಆತ್ಮಜ್ಞಾನದ ಅರಿವು ಉಂಟಾಗಲು, ಆನಂದಮಯ ಜೀವನ ಸಾಗಿಸಲು ಶಾರೀರಿಕ ಆರೋಗ್ಯ ಅವಶ್ಯ. ಅದಕ್ಕಾಗಿ ಶರೀರ ವಿಜ್ಞಾನವನ್ನು ತಿಳಿದುಕೊಳ್ಳಬೇಕಾಗುವದು. ಅಧಿ+ಆತ್ಮಪದಗಳೇ ಅಧ್ಯಾತ್ಮವೆನಿಸುವದು. ಕೇವಲ ದೈಹಿಕವಾಗಿ ವಿಚಾರಿಸದೆ ದೇಹಕ್ಕೆ ಚೈತನ್ಯ ನೀಡುವ ಆತ್ಮನ ಬಗೆಗೆ ಚಿಂತಿಸುವುದು ಅಧ್ಯಾತ್ಮವೆನಿಸುವದು. ಕೇವಲ ಪರಚಿಂತೆಯನ್ನು ಮಾಡದೆ ನಮ್ಮ ಚಿಂತೆಯನ್ನು ಮಾಡುವುದು ಅಧ್ಯಾತ್ಮವೆನಿಸುವುದು. ನಮ್ಮ ಚಿಂತೆಯೆಂದರೆ ನಮ್ಮ ಹೊಟ್ಟೆಪಾಡಿನ, ಹೆಂಡರು ಮಕ್ಕಳ ಚಿಂತನೆಯಲ್ಲ. ನಾನಾರು ? ನಾನು ಏಕೆ ಹುಟ್ಟಿದೆ ? ಹುಟ್ಟಿಗೆ ಕಾರಣವೇನು ? ಹುಟ್ಟಿದವನು ಸಾಯುವುದೇಕೆ ? ಸಾವು ಎಂದರೇನು ? ಏಕೆ ? ಸತ್ತನಂತರ ಎಲ್ಲಿಗೆ ಹೋಗುತ್ತೇವೆ ? ಶರೀರ ಮತ್ತು ಆತ್ಮನಿಗಿರುವ ಸಂಬಂಧವೇನು ? ಸತ್ತನಂತರ ಮತ್ತೆ ಹುಟ್ಟುತ್ತದೆಯೋ ? ಸಾವಿಗೂ ಮರು ಹುಟ್ಟಿಗೂ ಮಧ್ಯದಲ್ಲಿ ಎಲ್ಲಿರುತ್ತೇವೆ ? ಹೋಗುವುದೆಲ್ಲಿಗೆ ? ಬರುವುದಾದರೂ ಎಲ್ಲಿಂದ ? ಮತ್ತೆ ಮತ್ತೆ ಹುಟ್ಟಲೇಬೇಕೆ ? ಹುಟ್ಟದಂತಾಗಲು ಸಾಧ್ಯವೇ ? ಹುಟ್ಟದಂತಾಗಲು ನಾವೇನು ಮಾಡಬೇಕು ? ಹುಟ್ಟು-ಸಾವಿನ ನಡುವೆ ಸಾಗಿಸುವ ಜೀವನ, ಜೀವನದಲ್ಲಿ ಬರುವ ಸುಖ- ದುಃಖ, ನೋವು-ನಲಿವು, ಆಟ-ಪಾಠ, ಸೋಲು – ಗೆಲುವು, ಸಿರಿತನ – ಬಡತನ, ರೋಗ – ರುಜಿನಗಳು ಏಕೆ ? ಕೆಲವರೇಕೆ ಬಡವರು ? ಹಲವರು ಸಿರಿವಂತರೇಕೆ ? ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೂ ಬರುವ ಯಾತನೆಗಳೇಕೆ ? ಜೀವನದಲ್ಲಿ ನಡೆಯುವ ಘಟನೆಗಳಿಗೂ,  ವಿಜ್ಞಾನ ಉತ್ತರಿಸದು.  

 ಸಾಮಾನ್ಯ ವಿಜ್ಞಾನ ಉತ್ತರಿಸಲಾಗದ ವಿಷಯಗಳನ್ನು ತಿಳಿಸಬಲ್ಲುದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ವಿವರಿಸಲಾಗದ ನಿಗೂಢ ವಿಶ್ವ ಸತ್ಯಗಳನ್ನು ವಿವರಿಸಬಲ್ಲದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ನಿಯಂತ್ರಿಸಲಾಗದ ಚೈತನ್ಯದ ಸ್ತರಗಳೇ ಅಧ್ಯಾತ್ಮ. ಮಾನವನ ಬುದ್ಧಿವಂತಿಕೆಯ ಜಾಣ್ಮೆಯನ್ನು ಮೀರಿದ ವಿಚಾರಗಳನ್ನು ನಿರೂಪಿಸುವುದು ಅಧ್ಯಾತ್ಮ ಮಾನವನ ದೇಹಾತೀತ ಅನುಭವಗಳೇ ಅಧ್ಯಾತ್ಮ. ಮಾನವನ ಅತೀಂದ್ರಿಯ ಅನುಭವಗಳೇ ಆಧ್ಯಾತ್ಮ. ಸಾಮಾನ್ಯ ವಿಜ್ಞಾನವನ್ನು ಮೀರಿದ ಜ್ಞಾನವೇ ಅಧ್ಯಾತ್ಮಿಕ ವಿಜ್ಞಾನ. ಇಂಥ ಅಧ್ಯಾತ್ಮ ಜ್ಞಾನದಿಂದ ಮೇಲಿನ ಪ್ರಶ್ನೆಗಳಿಗೆ ಪರಿಹಾರ ದೊರೆಯುವದು. ಶಾಂತಿ-ಸಮಾಧಾನಗಳು ಲಭಿಸುವವು.

ವೇದಾಂತಿಗಳು ಶರೀರದ ಅನಿತ್ಯತೆಯನ್ನು, ಕ್ಷಣಭಂಗುರತೆಯನ್ನು ಹೇಳಿದರೆ, ಶರಣರು ದೇಹ ದೇಗುಲವೆಂದರು, ಪ್ರಸಾದಕಾಯವೆಂದು ಕೊಂಡಾಡಿದರು. ವಸ್ತುತಃ ಶರೀರವು ಷದ್ಭಾವವಿಕಾರವುಳ್ಳುದು. ಬಾಲ್ಯ- ಯೌವ್ವನ ವಾರ್ಧಕ್ಯಾದಿಗಳಿಂದ ವಿಕಾರಗೊಳ್ಳುವದು. ಕೆನ್ನೆಯ ಕೂದಲು ನೆರೆಯೊಡೆದು, ಗಲ್ಲಗಳು ಒಳಸೇರಿ ಹಲ್ಲು ಹೋಗಿ, ಬೆನ್ನುಬಾಗಿ, ಕಾಲ ಮೇಲೆ ಕೈಯೂರಿ ಅನ್ಯರ ಹಂಗಿನಲ್ಲಿ ಬಾಳಬೇಕಾದ ಶರೀರದ ಯಥಾರ್ಥತೆಯನ್ನರಿತು ಸಾರ್ಥಕ ಬದುಕಿಗಾಗಿ ಬಳಸಿಕೊಳ್ಳಬೇಕು. ಪಾರಮಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಹುಟ್ಟಿದವನುಸಾಯಲೇಬೇಕು; ಶರೀರ ಗಟ್ಟಿಯಾಗಿರುವಾಗಲೇ ಸದುಪಯೋಗವಾಗಬೇಕು.

ತನುವೆಂಬುದೊಂದು ಇಂದ್ರಜಾಲವೆಂದು ಬಣ್ಣಿಸಿದಂತೆ ಈ ಶರೀರದಲ್ಲಿ ಅದೆಷ್ಟು ಇಂದ್ರಿಯಗಳು, ಅದೆಷ್ಟು ವಾಯುಗಳು, ಅದೆಷ್ಟು ಕರಣಗಳು, ಅದೆಷ್ಟು ತತ್ವಗಳು, ಅದೆಷ್ಟು ನಾಡಿಗಳು, ಅದೆಷ್ಟು ಆತ್ಮಗಳು ಇವೆಯೆಂಬುದನ್ನು ಆಲೋಚಿಸಬೇಕು. ಕಾಣುವ ಶರೀರವೊಂದೆನಿಸಿದರೂ ಅದರೊಳಗೆ ಮತ್ತೆಷ್ಟು ತನುಗಳಡಗಿವೆಯೆಂಬುದು ವಿಚಾರಣೀಯ. ಈ ಶರೀರದಲ್ಲಿ ಅದೆಷ್ಟು ಮದಗಳು, ಅದೆಷ್ಟು ಅನಿಮಿತ್ತ ವೈರಿಗಳು, ಅದೆಷ್ಟು ಧಾತುಗಳು, ಅದೆಷ್ಟು ವ್ಯಸನಗಳು, ಅದೆಷ್ಟು ತೆರೆಗಳು, ಅದೆಷ್ಟು ಭ್ರಮೆಗಳು, ಅದೆಷ್ಟು ಕೋಶಗಳು, ಅದೆಷ್ಟು ಕ್ಲೇಶಗಳು, ಅದೆಷ್ಟು ಗುಣಗಳು, ಅದೆಷ್ಟು ಅಹಂಕಾರಗಳು, ಅದೆಷ್ಟು ತಾಪತ್ರಯಗಳು, ಅದೆಷ್ಟು ಜೀವಗಳು, ಅದೆಷ್ಟು ಅವಸ್ಥೆಗಳು,ಅದೆಷ್ಟು ಭಾವಗಳು, ಅದೆಷ್ಟು ಮನಗಳು, ಅದೆಷ್ಟು ಅಗ್ನಿಗಳು ಅಡಿಗಿವೆಯೆಂಬುದನ್ನು ತಿಳಿದರೆ ಅಬ್ಬಬ್ಬಾ ಶರೀರವೆಂಬುದೊಂದು ಅದ್ಭುತವಾದ ಆಶ್ಚರ್ಯಕಾರಕ ಯಂತ್ರವೆಂಬುದರ ಅರಿವಾಗದಿರದು. ಇವೆಲ್ಲವುಗಳ ವಿಶ್ಲೇಷಣೆಯನ್ನು ಮಹಾಜ್ಞಾನಿ ಕಿರಿವಯದ ಹಿರಿಯ ಅನುಭಾವಿ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರವಾಗಿ ನಿರೂಪಿಸಿರುವರು.

ಭಾರತೀಯ ದರ್ಶನಗಳಲ್ಲಿ ಆಸ್ತಿಕ ದಾರ್ಶನಿಕರಿಗಿಂತ ನಾಸ್ತಿಕ ದಾರ್ಶನಿಕರಾದ ಲೋಕಾಯತ ಸಂಪ್ರದಾಯದವರು, ಅರ್ಥಾತ್ ಚಾರ್ವಾಕರು ದೇಹದ ಯಥಾರ್ಥತೆಯನ್ನು ಅರಿತಿದ್ದಾರೆ. ದೇಹಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದವರು. ‘ಋಣಂ ಕೃತ್ವಾ ಘೃತಂ ಪಿಬೇತ್ ʼ ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. ಅ೦ದರೆ ಸಾಲವಾದರೂ ಸರಿ, ಸುಖವಾಗಿ ಇರಬೇಕೆನ್ನುವರು. ಕಾಣದ ಆತ್ಮವನ್ನು ಮನ್ನಿಸದೆ, ಕಾಣುವ ಕಾಯಕ್ಕೆ ಪ್ರಾಶಸ್ತ್ಯ ಕೊಟ್ಟರು.ʼ ‘ಚೈತನ್ಯ ವಿಶಿಷ್ಟ ಕಾಯಃ ಪುರುಷಃ ʼʼ ಎಂಬ ಸೂತ್ರವನ್ನು ಲೋಕಾಯತ ಮತದ ಮೂಲ ದಾರ್ಶನಿಕನಾದ ಬೃಹಸ್ಪತಿಯ ಪ್ರತಿಪಾದಿಸಿದರು. ಆದರೆ ಆಸ್ತಿಕ ದಾರ್ಶನಿಕರು ಶರೀರ ಅನಿತ್ಯವೆಂದು ಹೇಳಿದರೂ “ಮುಕ್ತಿಗೆ ಪರಮೋಪಾಯವೆನಿಸಿದ ಆತ್ಮ ಜ್ಞಾನವು ದೇಹವಿರುವಾಗಲೇ ಸಾಧ್ಯವಾಗುವದೆಂದೂ’ ನಿರೂಪಿಸಿದರು.

 ಆತ್ಮಜ್ಞಾನಕ್ಕೆ ಆಶ್ರಯವಾದುದು ಕಾಯ. ಅದರಂತೆ ಪ್ರಾಣಕ್ಕಾಶ್ರಯವೆನಿಸಿದ್ದು ಕಾಯ, ಧರ್ಮಸಾಧನಗಳಿಗೆ ಪ್ರೇರಣೆ ನೀಡುವದು ಕಾಯ. ಅವಿರಳಜ್ಞಾನಿ ಚನ್ನಬಸವಣ್ಣನವರು-““ತಿಳಿಯುವದೇ ಜ್ಞಾನ, ತಿಳಿದಂತೆ ನಡೆಯುವದೇ ಕ್ರಿಯೆ. ಅರಿತು ನಡೆಯದಿದ್ದರೆ ಅದೇ ಅಜ್ಞಾನ’ ವೆಂದು ಜ್ಞಾನ ಕ್ರಿಯೆಗಳ ಸ್ವರೂಪವನ್ನು ಮಾರ್ಮಿಕವಾಗಿಯೇ ಹೇಳಿದ್ದು ದಾರ್ಶನಿಕರಿಗೂ ಅಚ್ಚರಿಯಾಗಿರಲು ಸಾಕು. “ದೇಹವಿಲ್ಲದಿದ್ದೊಡೆ ಪ್ರಾಣಕ್ಕಾಶ್ರಯವುಂಟೆ ?” ಎಂದೂ ಪ್ರಶ್ನಿಸಿದ್ದರಲ್ಲಿ ದೇಹದ ಅವಶ್ಯಕತೆ ವ್ಯಕ್ತವಾಗುತ್ತದೆ. ಜ್ಞಾನವನ್ನು ಸಂಪಾದಿಸಲು ಸ್ವಸ್ಥಕಾಯಬೇಕು. ಜ್ಞಾನದ ಸಾಕಾರರೂಪ ವ್ಯಕ್ತವಾಗಲು ಕ್ರಿಯೆಬೇಕು. ತಿಳಿದಂತೆ ಕಾರ್ಯಗೈದಾಗ ಜ್ಞಾನ ಪ್ರತ್ಯಕ್ಷವಾಗುವದು. ಪರಸ್ತ್ರೀಯನ್ನು ಭೋಗಿಸಬಾರದೆಂಬ ಜ್ಞಾನ. ಅದರಂತೆ ನಡೆದಾಗ ಆ ಜ್ಞಾನಕ್ಕೆ ಬೆಲೆಯಿದೆ. ಇಲ್ಲದಿದ್ದರೆ ಅದೇ ಅಜ್ಞಾನವೆಂಬ ನುಡಿಯಲ್ಲಿ ಔಚಿತ್ಯವಿದೆ. ದೇಹವನ್ನು ಹೇಯವೆಂದವರಿಗೆ ಶರಣರು ಎಚ್ಚರಿಕೆ ಕೊಟ್ಟರು. ದೇವರ ನೊಲಿಸಬಂದ ಪ್ರಸಾದಕಾಯವನ್ನು ಕೆಡಿಸಲಾಗದೆಂದರು. ಬೀಜವು ಚೆನ್ನಾಗಿ ಫಲಿಸಬೇಕಾದರೆ ಉತ್ತಮವಾದ ಭೂಮಿಯ ಅವಶ್ಯಕತೆಯಿರುವಂತೆ; ಜಲ, ಬೆಳಕು ಹಾಗೂ ಗಾಳಿಗಳೂ ಬೇಕು. ಅದರಂತೆ ಮಾನವನ ಆತ್ಮಶಕ್ತಿಯು ವಿಕಾಸಗೊಳ್ಳಬೇಕಾದರೆ ದೇಹ ಮತ್ತು ಅದಕ್ಕೆ ಪೋಷಕವಾದ ಅನ್ನ-ನೀರು- ಪರಿಸರಗಳು ಮುಖ್ಯ, ದೇಹ ಸದೃಢವಾಗಿರದಿದ್ದರೆ ಯಾವುದನ್ನೂ ಸಾಧಿಸಲಾಗದು. ಅಂತೆಯೇ ಅನುಭಾವಿ ಚನ್ನಬಸವಣ್ಣನವರು-

ಕಾಯದಿಂದ ಲಿಂಗ ದರುಶನ,

 ಕಾಯದಿಂದ ಜಂಗಮ ದರುಶನ,

 ಕಾಯದಿಂದ ಪ್ರಸಾದ ಸಂಪತ್ತು,

 ಕೂಡಲ ಚನ್ನಸಂಗಯ್ಯಾ ಈ ಕಾಯದಿಂದ

 ನಿಮ್ಮವನು ಕಂಡೆನಯ್ಯಾ.

 ಕಾಯದ ಮಹತ್ವವನ್ನು ಬಿತ್ತರಿಸಿರುವರು. ಮಾನವನು ಕಾಯದಿಂದ ಕಾಯಕ ಮಾಡಿ ಸಕಲ ಪದಾರ್ಥಗಳನ್ನು ಪಡೆಯುವನು, ಗುರುಸೇವೆ ಮಾಡಿ ಲಿಂಗವನ್ನು ಹೊಂದುವನು. ನಿತ್ಯ ಲಿಂಗದರ್ಶನವಾಗುವದು. ಲಿಂಗ ಪೂಜೆಯ ಫಲ ಜಂಗಮ ದರುಶನ. ಜಂಗಮನ ಅನುಗ್ರಹದಿಂದ ಪ್ರಸಾದ ಸಂಪತ್ತು ಲಭಿಸುವದು. ಅಷ್ಟೇ ಅಲ್ಲ,  ಲಿಂಗವನ್ನು ಪೂಜಿಸಿ ಲಿಂಗಗಳನ್ನು ಸರ್ವಾಂಗದಲ್ಲಿ ಸಂಬಂಧಗೊಳಿಸಿ ಸರ್ವಾಂಗಲಿಂಗ ಮಯನೆನಿಸುವ ಸಾಮರ್ಥ್ಯ ಲಭಿಸುವುದು ಸಂಸ್ಕಾರಗೊಂಡ ಕಾಯದಿಂದ.

ಕಾಯಕ್ಕೆ ದೇಹ, ತನು, ಶರೀರ, ಭೋಗಾಯತನ ಇತ್ಯಾದಿ ಹಲವು ನಾಮಗಳಿದ್ದರೆ ವೀರಶೈವರು ಅಂಗವೆಂದು ಕರೆದಿರುವರು. ಕಾಯ ಕಷ್ಟಗಳನ್ನು ಮಾಡಬಲ್ಲುದು ಕಾಯವೆನಿಸಿದರೆ, ಸಾಂಸಾರಿಕ ಚಿಂತಾಗ್ನಿಯಲ್ಲಿ ಸುಡಲ್ಪಡುವುದರಿಂದ ಇದು ದೇಹವೆನಿಸಿತು. ಶಿವನ ಶಕ್ತಿಗಳು ಸಂಕೋಚಗೊಂಡು ಜೀವನಾಗುತ್ತಾನೆ. ಮತ್ತು ಜೀವಾತ್ಮನು ತನುವೆನಿಸುವನು. ತನುವೆಂದರೆ ಚಿಕ್ಕದು, ಜೀವಿಯ ಶಕ್ತಿ ಚಿಕ್ಕದು. ಕಾರ್ಯಕ್ಷಮತೆ ಸಣ್ಣದು. ಮನಸ್ಸು ಅಲ್ಪ; ಭಾವ ಸಹ ಸಂಕೋಚಗೊಂಡುದು. ಅದಕ್ಕಾಗಿ ಇದು ತನುವೆನಿಸಿದೆ. ಶರೀರವೆಂದರೆ ಸಣ್ಣಾಗುವದು, ಸೊರಗುವದು. ಬಾಲ್ಯದಿಂದ ಯೌವನಾವಸ್ಥೆಯಲ್ಲಿ ದೊಡ್ಡದಾದ ಶರೀರವು ವಾರ್ಧಕ್ಯಕ್ಕೆ ಸೊರಗುತ್ತ ಹೋಗುವುದಿಲ್ಲವೇ? ಲೋಕಾಯತರು ಶಾರೀರಿಕ ಭೋಗಕ್ಕೇನೆ ಮಹತ್ವ ನೀಡಿದ ಕಾರಣ ಇದಕ್ಕೆ ಭೋಗಾಯತನವೆಂದು ಕರೆದರು. ಶರೀರವು ಎಲ್ಲ ಭೋಗಗಳಿಗೆ ಆಶ್ರಯ ಸ್ಥಾನವಾಗಿದೆ. ಜ್ಞಾನ-ಕ್ರಿಯೆಗಳಲ್ಲಿ ಸಮಸಮುಚ್ಚಯವನ್ನು ಪ್ರತಿಪಾದಿಸುವ ವೀರಶೈವರು ತನುವಿಗೆ ಅಂಗವೆಂದು ಕರೆದರು. ‘ಅಂ’ ಎಂದರೆ ಪರಮಾತ್ಮ, ಆ ಪರಶಿವನನ್ನು ಕೂಡುವ ಕಾಯವು ಅಂಗವೆನಿಸಿತು. ಭಾರತೀಯ ಎಲ್ಲ ದಾರ್ಶನಿಕರು- ʼʼಜನ್ಮನಾ ಜಾಯತೇ ಶೂದ್ರಃ, ಕರ್ಮಣಾ ದ್ವಿಜ ಉಚ್ಯತೇ”  ಪ್ರಾಕೃತಿಕವಾಗಿ ಹುಟ್ಟವ ಜೀವಿಗಳು ಶೂದ್ರರಾಗಿಯೇ ಜನಿಸಿ ಉಪನಯನ ಸಂಸ್ಕಾರದಿಂದ ದ್ವಿಜರೆನಿಸುವರು, ಅರ್ಥಾತ್ ಸಂಸ್ಕಾರ ಹೊಂದಿ ಬ್ರಾಹ್ಮಣತ್ವವನ್ನು ಹೊಂದುವರು. ಆದರೆ ವೀರಶೈವರು ತಾಯಿಯ ಗರ್ಭದಲ್ಲಿರುವ ಶಿಶುವಿಗೆ ೮ನೇ ತಿಂಗಳಲ್ಲಿ ಲಿಂಗಸಂಸ್ಕಾರ ಮಾಡುವದರಿಂದ ಈ ಮಗು ಶೂದ್ರನಾಗದೆ ಲಿಂಗ ಸಂಬಂಧವುಳ್ಳದಾಗಿ ಜನಿಸುವದು. ಲಿಂಗೋದ್ಭವನಾಗಿಯೇ ಮರ್ತ್ಯಕ್ಕೆ ಬರುವದು. ಲಿಂಗಧಾರಿಯಾಗಿ ಲಿಂಗವನ್ನೇ ಪ್ರಾಣವಾಗಿಸಿಕೊಳ್ಳುವನು. ಪ್ರಾಣಲಿಂಗಿಯೆನಿಸುವನು. ವೀರಶೈವರು ಜಗತ್ತನ್ನು ಮಿಥ್ಯವೆಂದು ಭಾವಿಸಲಿಲ್ಲ. ಎಲ್ಲವೂ ಶಿವಮಯವೆಂದು ಭಾವಿಸಿ ಶಿವನಿತ್ತ ಪದಾರ್ಥಗಳನ್ನು ಲಿಂಗಮುಖವಾಗಿ ಭೋಗಿಸುವರು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರವು ಭೋಗಾಂಗವೆನಿಸುವದು. ಲಿಂಗಭೋಗೋಪಭೋಗಿಗಳಾಗಿ, ಲಿಂಗದಲ್ಲಿ ಬೆರೆಯುವ ಯೋಗವನ್ನು ಸಾಧಿಸುವರು. ಅದಕ್ಕಾಗಿ ಕೊನೆಯದು ಯೋಗಾಂಗವೆನಿಸಿತು. ತ್ಯಾಗಾಂಗದಲ್ಲಿ ಜೀವಗುಣಗಳ ತ್ಯಾಗವಿದೆ. ಸಾಂಸಾರಿಕ ವ್ಯಾಮೋಹದ ತ್ಯಾಗವಿದೆ. ಜಡಗುಣಗಳ ತ್ಯಾಗವಿದೆ. ತನುಗುಣಗಳ ತ್ಯಾಗವಿದೆ. ಲಿಂಗಭೋಗೋಪಭೋಗಿಯಾಗಿ ಎಲ್ಲ ಭೋಗಗಳನ್ನು ಭೋಗಿಸಿ ಲಿಂಗದೊಡನೆ ಬೆರೆಯುವ ಶಿವಯೋಗ ಸಾಧನೆಯಿರುವುದರಿಂದ ಯೋಗಾಂಗವೆನಿಸುವದು. ಲಿಂಗವೆ ತಾನಾಗುವ ಯೋಗವನ್ನು ಹೊಂದುವನು.

ಇಂಥ ಕಾಯದ ಅರಿವನ್ನು ಯಥಾರ್ಥವಾಗಿ ನಿರೂಪಿಸಿದ ‘ಕರಣ ಹಸಿಗೆ’ ಯು ಶಿವಾನುಭವಿಗಳ ಪಠ್ಯವೇ ಆಗಿರುವದು. ಚಿನ್ಮಯಾನುಗ್ರಹವನ್ನು ಹೊಂದುವವರು ಅವಶ್ಯವಾಗಿ ಕರಣಹಸಿಗೆಯನ್ನು ಅಧ್ಯಯನ ಮಾಡಲೇಬೇಕು. ಅನುಗ್ರಹ ಮಾಡುವ  ಪೂರ್ವದಲ್ಲಿ ಕರಣ ಹಸಿಗೆಯನ್ನು ಕುರಿತು ಚಿಂತನ ಮಾಡುತ್ತಿದ್ದರು. ನಂತರ ಧಾರ್ಮಿಕ ಸಂಸ್ಕಾರ ಸಂಪನ್ನವಾಗುತ್ತಿತ್ತು, ಸಂಸ್ಕಾರಕ್ಕೆ ಪೂರಕವಾಗಿ ಅಧ್ಯಾತ್ಮದ ಚಿಂತನ ನಡೆಯಬೇಕು. ಶರೀರವಿಜ್ಞಾನದ ವಿವೇಚನೆಗೈಯ್ಯುವದರಿಂದ ಆತ್ಮಜ್ಞಾನಕ್ಕೆ ಅನುವಾಗುವದು. ಅಧ್ಯಾತ್ಮಸಿದ್ಧಿ ಲಭಿಸುವುದು.

 ‘ಕರಣ ಹಸಿಗೆ’ಯ ವಿಷಯಗಳನ್ನು ಪರಶೀಲಿಸಿದರೆ ಇದು ವೀರಶೈವರಿಗೇನೇ ಮೀಸಲಾದ ಕೃತಿಯಲ್ಲ. ಮಾನವ ಮಾತ್ರರಿಗೇನೇ ಸಂಬಂಧಿಸಿದ ಮಹತ್ವದ ಕೃತಿಯಾಗಿದೆ. ಮಾನವ ಶರೀರವನ್ನು ವಿಶ್ಲೇಷಿಸುವ ಗ್ರಂಥವಾಗಿರುವದರಿಂದ ಸಕಲ ಮಾನವರು ಇದನ್ನು ಓದಿ ಅರ್ಥೈಸಿಕೊಳ್ಳ ಬಹುದು. ಶರೀರದ ರಚನೆಯ ಸಿದ್ದಾಂತ ಇದಾಗಿರುವುದರಿಂದ ಇದರ ವಿಶೇಷತೆಯನ್ನು ಸಕಲರೂ ಅರಿಯಬೇಕು. ವೀರಶೈವರ ಸಿದ್ಧಾಂತವು ತತ್ವ ತ್ರಯಗಳಲ್ಲಿ ಅಡಗಿರುವದರಿಂದ ಆ ವಿಚಾರ ಇದರಲಿಲ್ಲ. ಇದು ವಾದ- ವಿವಾದಗಳಿಗೂ ಕಾರಣವಾಗಿಲ್ಲ. ಮತ ಧರ್ಮದ ಚರ್ಚೆ ಇದರಲ್ಲಿಲ್ಲ. ಭಾರತೀಯ ಸನಾತನ ಧರ್ಮದ ಅರಿವನ್ನು ಮಾಡಿಕೊಳ್ಳಬಹುದಾದ ವಿಶಿಷ್ಟ ಕೃತಿಯಿದು. ವೇದಾಂತಿಗಳು ಚಿಂತಿಸಿದ ಪಂಚೀಕರಣದ ವಿಚಾರ ಇಲ್ಲಿದೆ. ಪಂಚಭೂತಗಳ ಗುಣ-ಕರ್ಮ-ವರ್ಣ-ಧರ್ಮಗಳ ಅಧಿದೇವತೆ ಚಿಂತನ ಇಲ್ಲಿದೆ. ಇಂದ್ರಿಯಗಳ ವಿಶ್ಲೇಷಣೆಯೊಂದಿಗೆ ಹಲವಾರು ವಿಷಯಗಳ ವಿವೇಚನೆಯಿದೆ.

 ಆಧುನಿಕ ಶರೀರ ವಿಜ್ಞಾನಿಗಳು ಚಿಂತಿಸಿರುವುದಕ್ಕಿಂತಲೂ ಹೆಚ್ಚಿನ ವಿಷಯ ವಿವೇಚನೆ ಇಲ್ಲಿ ಲಭಿಸುವುದು. ಆದರೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಾರೀರಿಕ ಕ್ರಿಯೆಗಳ ಬಗೆಗೆ, ಶಾರೀರಿಕ ರೋಗಗಳ ಬಗೆಗೆ, ಮತ್ತು ರೋಗ ಚಿಕಿತ್ಸೆ ಬಗೆಗೆ ಬಹಳಷ್ಟು ಸಂಶೋಧನೆ, ಚಿಂತನಗಳು ಬೆಳೆದು ಬಂದಿವೆ. ಯಾಂತ್ರೀಕರಣಗಳ ಆವಿಷ್ಕಾರವೂ ಆಗಿದೆ. ಹಲವಾರು ಮುಖ್ಯ ಅವಯವಗಳ ಜೋಡಣೆಯೂ ಆಗುತ್ತಿದೆ. ಇದೂ ಇಂದಿನ ಅದ್ಭುತ ಸಾಧನೆಯೇ ಎನ್ನಬೇಕು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಶರೀರ ರಚನೆಯನ್ನು ತಿಳಿಸಿ ಕೊಡಲು ಶರೀರ ವಿಜ್ಞಾನ ಶಾಸ್ತ್ರ (Anatomy) ವನ್ನು ಆಮೂಲಾಗ್ರವಾಗಿ ಕಲಿಸುತ್ತಾರೆ. ಶರೀರ ಉತ್ಪತ್ತಿಗೆ ಸ್ತ್ರೀಯಳ ಅಂಡಾಣು ಪುರುಷನ ವೀರ್ಯಾಣು ಕಾರಣ. ಅದನ್ನೇ ಬಸವಣ್ಣನವರೂ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ʼ ಎಂದು ವಚನಿಸಿದ್ದುಂಟು. ಗರ್ಭಧಾರಣೆಯಾಗಬೇಕಾದರೆ ಸ್ತ್ರೀಯಳು ರಜಸ್ವಲೆಯಾದಾಗ ಪುರುಷನ ಸಂಯೋಗವೂ ಅವಶ್ಯವೆಂಬುದನ್ನು ಸ್ಪಷ್ಟಪಡಿಸಿರುವರು. ಗರ್ಭಧಾರಣೆಯಾದಂದಿನಿಂದ ಮಗು ಜನನವಾಗುವ ವರೆಗಿನ ವಿವರವನ್ನು ಕರಣ ಹಸಿಗೆ ಪ್ರತಿಪಾದಿಸಿದ್ದಕ್ಕಿಂತ ಮಿಗಿಲಾಗಿ ವೈದ್ಯಕೀಯ ವಿಜ್ಞಾನ ಅವಗತ ಮಾಡಿಸುತ್ತದೆ. ಗರ್ಭಧರಿಸಿ ಶರೀರದ ಅಂಗಗಳು ಬೆಳೆದ ೨೮೦ನೆ ದಿನ ಮಗು ಈ ಮರ್ತ್ಯಲೋಕಕ್ಕೆ ತಲೆಕೆಳಗಾಗಿ ಬರುವದು. ಜೀವಿಯ ಆರೋಗ್ಯ ರಕ್ಷಣೆ ಕಾಪಾಡಲು ರೋಗಕಾರಣ ಹಾಗೂ ರೋಗ ನಿಧಾನವನ್ನು ಹುಡುಕಲು ಸೂಕ್ಷ್ಮವಾದ ಅಧ್ಯಯನ  ನಡೆದಿರುವುದು. ಮಾನವನ ಕೈಕಾಲುಗಳ ಬಗೆಗೆ ಆರು ತಿಂಗಳ ಚಿಂತನ ನಡೆದರೆ; ಕುತ್ತಿಗೆಯಿಂದ ಮೇಲೆ ಕಿವಿ, ಮೂಗು, ತಲೆ ಬರುಡೆಗಳ ಬಗೆಗೆ ಅಧ್ಯಯನ ಮುಂದುವರೆವುದು. ಹೀಗೆ ಚಿಂತನ ಮಂಥನ ನಡೆದಂತೆ, ಹೊಟ್ಟೆಯಲ್ಲಿಯ ಅಂಗಾಂಗಗಳ ಸಂಶೋಧನೆಯೂ ಮುಖ್ಯವಾಗುವದು. ದೇಹದ ಬಿಡಿಭಾಗಗಳನ್ನು ಕುರಿತು ಸೂಕ್ಷ್ಮವಾದ ಅನ್ವೇಷಣೆ ಜರುಗುತ್ತದೆ. ಶರೀರದಲ್ಲಿಯ ಕೈಕಾಲುಗಳ, ಹೊಟ್ಟೆಯಲ್ಲಿ ಪುಪ್ಪಸ, ಯಕೃತ್ತು ಮೊದಲಾದವುಗಳನ್ನು ಚನ್ನಾಗಿ ಪರಿಶೀಲಿಸುತ್ತಾರೆ. ನರನಾಡಿಗಳ-ಅಸ್ಥಿಗಳ ಬೆಳವಣಿಗೆ, ರಕ್ತ ಪ್ರಸರಣ ರಕ್ತಶುದ್ದೀಕರಣ ಇವೆಲ್ಲವುಗಳ ವ್ಯವಸ್ಥಿತ ಅಧ್ಯಯನ ಇಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.

ಆಧುನಿಕ ವೈದ್ಯ ವಿಜ್ಞಾನಿಗಳು ಮಾನವರ ಗುಣಾವಗುಣಗಳ ರೋಗಾದಿಗಳನ್ನು ಅರಿಯಲು ವಂಶವಾಹಿನಿ (ಜೀನ್ಸ)ಯ ಅಧ್ಯಯನಕ್ಕೆ ಮಹತ್ವ ಕೊಟ್ಟಿರುವರು. ಆದರೆ ಸೃಷ್ಟಿಕರ್ತನಾದ ಜಗನ್ನಿಯಾಮಕತ್ವದ ವ್ಯವಸ್ಥೆ ಕುರಿತು ಇಂದಿಗೂ ಉತ್ತರಿಸಿಲ್ಲವೆಂಬುದನ್ನು ಸಂಶೋಧಕರೂ ಒಪ್ಪುತ್ತಾರೆ. ೮೫೦ ವರುಷಗಳ ಹಿಂದೆಯೇ ಶಿವಶರಣರ ಅನುಭಾವ ಅನುಭೂತಿಗಳು ಬಹು ಎತ್ತರಕ್ಕೆ ತಲುಪಿವೆ. ಆತ್ಮನನ್ನು ಕುರಿತು ಚಿಂತಿಸಿದ್ದಾರೆ. ಅಲ್ಲದೆ ಮಾನವನ ಹುಟ್ಟು ಬೆಳವಣಿಗೆಯ ಬಗೆಗೂ ಆಲೋಚಿಸಿದ್ದಾರೆ. ಇಂದು ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಗುರುತಿಸಬಹುದಾದ ಸಂಗತಿಗಳನ್ನು ಸಾಧನ-ಸಾಮಗ್ರಿಗಳಿಲ್ಲದ ಪೂರ್ವದಲ್ಲೂ ಹಿಂದಿನವರು ಸಾಧಿಸಿದ ಸಾಧನೆಯೂ ಅಲ್ಪವಲ್ಲ. ಗರ್ಭ ಬೆಳವಣಿಗೆ ಶರೀರದಲ್ಲಿ ಅವಯವಗಳ ಕ್ರಿಯೆಗಳೊಂದಿಗೆ ಆಂತರಿಕ ಗುಣಾವಗುಣಗಳ ವಿಚಾರವನ್ನು ನಿರೂಪಿಸಿದ್ದು ಮಹತ್ವದ ಅಂಶಗಳಲ್ಲವೇ ?

ಕರಣಹಸಿಗೆಯ ವ್ಯಾಖ್ಯಾನಗಳು ಸಾಕಷ್ಟು ಕಾಣಬರುವುದಿಲ್ಲ. ಒಂದೆರಡು ವೇದ್ಯವಾದರೂ ಅರ್ಥೈಸುವುದು ಸುಲಭವೆನಿಸವು. ಇನ್ನು ಬೇರೆ ಬೇರೆ ರೀತಿಯ ಮೂಲ ಪ್ರಕಟನೆಗಳು ಮಾತ್ರ ಕೆಲಮಟ್ಟಿಗೆ ಆಗಿವೆ. ಇತ್ತೀಚೆಗೆ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಸಂಪಾದಿಸಿದ ಚನ್ನಬಸವಣ್ಣನವರ ಕರಣ ಹಸಿಗೆಯು ಸುಂದರ ಆವೃತ್ತಿಯಲ್ಲಿ ಬೆಳಕು ಕಂಡಿದೆ. ಅನೇಕ ನ್ಯೂನ್ಯತೆಗಳನ್ನು ಸರಿಪಡಿಸಿ ಪ್ರಕಟಿಸಿದ್ದಾರೆ. ಆದರೂ ಮೂಲ  ಕೃತಿಗಿಂತಲೂ ಟೀಕಾಕಾರನ ವಿವರಣೆ ಸರಳವೆನಿಸುವುದಿಲ್ಲ. ಭಾಷೆ ಶಬ್ದಗಳು ಸುಲಭ ಗ್ರಾಹ್ಯವೆನಿಸುವುದಿಲ್ಲ, ಸಂವಾದ ರೂಪದಲ್ಲಿ ದೀರ್ಘವಾದ ಟೀಕೆ ಬಂದಿದ್ದರೂ ಇಂದಿನ ದಿನಮಾನಗಳಲ್ಲಿ ಕಾಲಾವಕಾಶಕ್ಕೆ ಅನುಗುಣವಾಗಿ ಅರ್ಥೈಸಿಕೊಳ್ಳಲು ಸುಲಭವಾಗಲೆಂದು ಈ ಕೃತಿಯ ವ್ಯಾಖ್ಯಾನವನ್ನು ಕೈಕೊಳ್ಳ ಬೇಕಾಯಿತು.

 “ಕರಣ ಹಸಿಗೆ’ ಇಲ್ಲಿ ಎರಡು ಪದಗಳಿವೆ. ಕರಣ ಮತ್ತು ಹಸಿಗೆ; ಕರಣವೆಂದರೆ ಸಾಧನ, ಇಲ್ಲಿ ಕರಣ ಪದಕ್ಕೆ ತತ್ತ್ವಂಗಳು ಎಂದು, ಹಸಿಗೆ ಯೆಂದರೆ ವಿಭಾಗ; ಶರೀರದಲ್ಲಿ ಬರುವ ತತ್ತ್ವಗಳನ್ನು ಬೇರೆ ಬೇರೆಯಾಗಿ ವಿಭಾಗಿಸಿ ತೋರುವುದೇ ಈ ಕರಣ ಹಸಿಗೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೊಂದು ದೃಷ್ಟಾಂತವನ್ನು ಸಹ ನೀಡಿರುವರು.

 ಒಬ್ಬ ಒಕ್ಕಲಿಗನು ತನ್ನ ಹೊಲದಲ್ಲಿ ಹದವಾದ ಮಳೆಯಾದರೆ ಎತ್ತುಗಳ ಸಹಾಯದಿಂದ ಉಪಕರಣಗಳನ್ನು ಉಪಯೋಗಿಸಿ ಹೊಲವನ್ನು ಹಸನುಮಾಡಿ ಹಲವಾರು ರೀತಿಯ ಬೀಜಗಳನ್ನು ಬಿತ್ತುತ್ತಾನೆ. ಕಾಲಕಾಲಕ್ಕೆ ಕಳೆ ಕಸಗಳನ್ನು ತೆಗೆದು ಬೆಳೆಯನ್ನು ಬೆಳೆಸುವನು. ಬೆಳೆ ಮಾಗಿದ ಬಳಿಕ, ಅದನ್ನು ಕಟಾವು ಮಾಡಿ ಕೂಡಿ ಹಾಕುತ್ತಾನೆ. ಶುಭಮುಹೂರ್ತದಲ್ಲಿ ಕಣಮಾಡಿ ಒಕ್ಕೂವನು. ಒಕ್ಕಿ ತೂರಿ ರಾಶಿಯನ್ನು ಸಿದ್ಧಗೊಳಿಸುವನು. ಪೂಜಿಸಿ ಗೋಣಿಚೀಲಗಳಲ್ಲಿ ಸಂಗ್ರಹಿಸುವನು. ಚಕ್ಕಡಿಯಲ್ಲಿ ಮನೆಗೆ ಒಯ್ದು ವ್ಯವಸ್ಥೆಗೊಳಿಸುವನು. ಎಲ್ಲ ಧಾನ್ಯಗಳ ಲೆಕ್ಕಾಚಾರ ಮಾಡುವನು. ಜೋಳ ಇಷ್ಟಾ ಯಿತು. ಹೆಸರು, ಮಡಕೆ, ತೊಗರಿ, ಉದ್ದು, ಅಲಸಂದಿ ಇಷಿಷ್ಟಾದವು. ಭತ್ತ, ಗೋದಿ, ಕಡಲೆ ವಗೈರೆ ಕಾಳುಗಳು ಇಷ್ಟಿಷ್ಟಾದವು ಎಂದು ಎಲ್ಲವನ್ನು ಅಳೆದಳೆದು ಭಾಗ

ಮಾಡುವನು. ಇದುವೆ ಹಸಿಗೆಯೆನಿಸುವದು.

ಇದರಂತೆ ಬ್ರಹ್ಮಾಂಡವೆಂಬ ಜಗತ್ತಿನ ಕ್ಷೇತ್ರಕ್ಕೆ ಒಡೆಯನಾದ ಪರಶಿವನೆಂಬ ಮಹಾ ಒಕ್ಕಲಿಗನು- ಜಗತ್ತಿನ ನಿರ್ಮಾಣ ಮಾಡಿದನು. ಮೊಟ್ಟ ಮೊದಲು ತನ್ನ ಪಂಚಮುಖಗಳಿಂದ ಪಂಚಭೂತಗಳನ್ನು ನಿರ್ಮಿಸಿದನು. ಅವುಗಳ ತಾರತಮ್ಯದಿಂದ ಇಪ್ಪತ್ತೈದು ತತ್ತ್ವಗಳನ್ನು ಹುಟ್ಟಿಸಿ ಶರೀರ ರಚನೆಯೊಂದಿಗೆ ತನ್ನ ಗೋಪ್ಯಮುಖದಲ್ಲಿ ಆತ್ಮನನ್ನು ಸೃಜಿಸಿದನು. ಆ ಆತ್ಮನು ದೇಹವೆ ನಾನೆಂಬ ಭಾವದಿಂದ ತನ್ನ ನಿಜದರಿವನ್ನು ಮರೆಯುವನು. ಅಜ್ಞಾನಿಯಾಗಿ ಅನೇಕ ಜನ್ಮ-ಜನ್ಮಾಂತರಗಳನ್ನು ಹೊಂದುತ್ತಲಿರುವನು. ಪುಣ್ಯವಶದಿಂದ ದೇವತಾ ಜನ್ಮವನ್ನು, ಪಾಪದಿಂದ ಸ್ಥಾವರ ಜನ್ಮವನ್ನು ಪುಣ್ಯ-ಪಾಪಗಳ ಸಮ್ಮಿಶ್ರಣದಿಂದ ಮಾನವ ಜನ್ಮವನ್ನು ಪಡೆಯುವನೆಂದು ಅನುಭಾವಿಗಳು ನಿರೂಪಿಸುವುದುಂಟು. ಈ ಮಾನವ ಶರೀರದಲ್ಲಿಯೂ ಶಾರೀರಿಕ ಹಸಿಗೆಯನ್ನು ವಿವರಿಸುವದೇ ಈ ಕೃತಿಯ ಮೂಲ ಗುರಿಯಾಗಿದೆ.

 ಶಿವಶರಣರು ವೇದ-ಉಪನಿಷತ್ತುಗಳನ್ನು, ಆಗಮ-ತಂತ್ರಗಳನ್ನು, ಯೋಗ-ಪುರಾಣಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಅವರಲ್ಲಿ ಚನ್ನಬಸವಣ್ಣನವರು ಸಂಸ್ಕೃತ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಭ್ಯಾಸ ಮಾಡಿದವರು. ಈ ”ಕರಣ ಹಸಿಗೆ’ ಕೃತಿಯಲ್ಲಿ ವಿಜಯ ಭೈರವಾಗಮ’ದ ಉಲ್ಲೇಖ ಮಾಡಿದ್ದಾರೆ. ಈ ಆಗಮವು ಪಾರಮೇಶ್ವರಾಗಮದ ಶಾಖಾಗಮ ವಿಜಯ ಭೈರವಿ ಆಗಮ. ತಂತ್ರ ಸಂಗ್ರಹ ಹಾಗೂ ವಾತುಲ ಶುದ್ಧಾಗಮಬಗಳೂ ಈ ಕೃತಿಗೆ ಸಹಕಾರಿಯೆನ್ನಬಹುದು. ವೇದದ ಅಂತಿಮ ಭಾಗವಾದ ಉಪನಿಷತ್ ಪ್ರತಿಪಾದ್ಯ ವಿಷಯವೇ ವೇದಾಂತವೆನಿಸಿದೆ. ವೇದಾಂತದಲ್ಲಿಯೂ ಪಂಚೀಕರಣದ ವಿಚಾರ ಮಾಡಲಾಗಿದೆ. ದೇಹೋತ್ಪತ್ತಿಗೆ ಪಂಚೀ ಕರಣವೇ ಮುಖ್ಯ.  ಸಾ೦ಖ್ಯರು ಮೊಟ್ಟ ಮೊದಲು ತತ್ತ್ವಗಳನ್ನು ಪರಿಗಣಿಸಿದವರು. ೨೫ ತತ್ತ್ವಗಳನ್ನು ಪ್ರತಿಪಾದಿಸಿದವರು ಸಾಂಖ್ಯರು. ಅಹಂಕಾರ, ದಶನಾಡಿ, ದಶವಾಯು, ಪಂಚೀಕರಣ,ತ್ರಿಗುಣಗಳು,ತಾಪತ್ರಯ ಮುಂತಾದವುಗಳನ್ನು ವಿವರಿಸುವಲ್ಲಿ ಅತ್ಯಂತ ಪ್ರಾಚೀನ ಪರಂಪರೆ ಸಾಂಖ್ಯರಲ್ಲಿದೆ. ಆದರೆ ಸಾಂಖ್ಯರ ಪದ್ದತಿಗಿಂತ ʼಕರಣಹಸಿಗೆʼಯು ಭಿನ್ನವಾಗಿದೆಯೆಂಬುದನ್ನು ನೋ

Related Posts