ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜೂನ ೨೦೨೧ ರ ಸಂಚಿಕೆ

೨. ಸದ್ಗುರುವಿನ ಸ್ವರೂಪ

ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜ ಭಕ್ತಿ – ಜ್ಞಾನ ವೈರಾಗ್ಯ ಮಂ

ದಿರವೆ ಮದ್ಗುರವೆ ಕೃಪೆಯಾಗು || ||

ಶಿವಕವಿಯು ಇಲ್ಲಿಂದ ನಾಲ್ಕು ನುಡಿಗಳಲ್ಲಿ ಅಷ್ಟಾವರಣದಲ್ಲಿ ಮೊದಲನೆಯ ದೇವರೆನಿಸಿದ ಸದ್ಗುರು ಸ್ವರೂಪವನ್ನು ಬಣ್ಣಿಸಿದ್ದಾನೆ . ಶಿಷ್ಯನ ಹೃತ್ತಾಪವನ್ನು ಹರಣಮಾಡಿ ಬೇಡಿದ ಬಯಕೆಗಳನ್ನು ಪೂರ್ಣಗೊಳಿಸಬಲ್ಲವನೇ ಸದ್ಗುರು . ಈ ಲೋಕದಲ್ಲಿ ಅನಂತ ಗುರುಗಳಿದ್ದಾರೆ . ಅವರೆಲ್ಲರೂ ಸದ್ಗುರುಗಳಲ್ಲ . ಎಲ್ಲರೂ ಶಿಷ್ಯನ ಹೃತ್ತಾಪವನ್ನು ಕಳೆಯಲು ಸಮರ್ಥರಲ್ಲ .

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |

ಗುರವೋ ವಿರಲಾಃ ಸಂತಿ ಶಿಷ್ಯ ಹೃತಾಪಹಾರಕಾಃ ||

ಶಿಷ್ಯರ ಧನವನ್ನು ಸೂರೆಮಾಡುವ ಗುರುಗಳೇ ಬಹಳ . ಭಕ್ತರ ತಾಪತ್ರಯ ಗಳನ್ನು ದೂರಮಾಡಿ ಸದ್ಗತಿಯನ್ನು ದಯಪಾಲಿಸಬಲ್ಲ ಸದ್ಗುರುಗಳು ವಿರಳವಾಗಿದ್ದಾರೆ . ಅಂತೆಯೇ ಶರಣಕವಿಯು ಪ್ರಥಮತಃ ಸದ್ಗುರುವಿನ ಸ್ವರೂಪವನ್ನು ಕಂಡುಕೊಂಡಿದ್ದಾನೆ . ಸಾಧಕರಿಗೆ ಮಾರ್ಗದರ್ಶನವನ್ನು ಮಾಡಿದ್ದಾನೆ . ಸದ್ಗುರುವಾದವನು ಸಾಮಾನ್ಯನಲ್ಲ , ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿಸುವ ಮಹಾಕಾಂಕ್ಷೆ ಮನೆ ಮಾಡಿಕೊಂಡಿರುತ್ತದೆ . ಭಕ್ತರನ್ನು ಲೌಕಿಕ ಹಾಗೂ ಪಾರಮಾರ್ಥಿಕ ಸಿರಿಸಮನ್ವಿತರನ್ನಾಗಿ ಮಾಡಬಲ್ಲನು . ತನಗಾಗಿ ಯಾವುದನ್ನೂ ಬಯಸದ ಮಹಾತ್ಯಾಗಿ ಯಾಗಿರುತ್ತಾನೆ . ಅದಕ್ಕಾಗಿ ಗುರುವರನು ಭಕ್ತ ಸಮುದಾಯಕ್ಕೆ ಕಲ್ಪತರುವಾಗಿದ್ದಾನೆ . ಸಾಮಾನ್ಯ ತರು ಕಟ್ಟಿಗೆಯ ಕೊರತೆಯನ್ನು ಮಾತ್ರ ನೀಗಿಸಬಲ್ಲುದು ಕಲ್ಪತರು ಬೇಡಿದ ಬಯಕೆಯನ್ನೆಲ್ಲ ನಿವಾರಿಸುತ್ತದೆ . ಸದ್ಗುರುವು ಭಕ್ತನಿಗೆ ಸತ್ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ದಯಪಾಲಿಸುತ್ತಾನೆ . ಸುಜ್ಞಾನವನ್ನು ಉಪದೇಶಿತ ಲಿಂಗಾಂಗಸಮರಸಾನಂದದ ಸವಿಯನ್ನು ಕರುಣಿಸುತ್ತಾನೆ . ಇಂಥ ಸದ್ಗುರುದೇವನೇ ಸದ್ಭಕ್ತರ ಮನವನ್ನು ಆಕರ್ಷಿಸುವಲ್ಲಿ ಸಮರ್ಥನಾಗುತ್ತಾನೆ . ಸದ್ಗುರುವು ಬಾಹ್ಯ ಮತ್ತು ಆಂತರಿಕವಾಗಿಯೂ ಮನೋಹರನಾಗಿರುತ್ತಾನೆ . ಸೌಂದರ್ಯಕ್ಕೆ ತಕ್ಕ ಶಿವತ್ವವೂ ತುಂಬಿ ತುಳುಕುತ್ತದೆ . ಮಂಗಲ ಮಯವಾದ ಸುಂದರತೆಯಲ್ಲಿ ಅವಶ್ಯವಾಗಿ ಸತ್ಯವಿರುತ್ತದೆ . “ ಸತ್ಯಂ ಶಿವಂ ಸುಂದರಂ ‘ ತತ್ತ್ವ ಓತಪ್ರೋತವಾಗಿರುತ್ತದೆ . ಅದುಕಾರಣ ಸದ್ಗುರುನಾಥನು ನೈಜವಾದ ಭಕ್ತಿ – ಜ್ಞಾನ – ವೈರಾಗ್ಯಗಳಿಗೆ ಆಶ್ರಯ ಸ್ವರೂಪನಾಗಿರುತ್ತಾನೆ . ಸದ್ಗುರುವಿನ ಭಕ್ತಿ – ಜ್ಞಾನ – ವೈರಾಗ್ಯಗಳಲ್ಲಿ ಅಸಹಜತೆಯಿರುವದಿಲ್ಲ . ಮೂರೂ ಸತ್ಯ ಸ್ವರೂಪವಾಗಿರುತ್ತವೆ . ಯಥಾರ್ಥವಾಗಿ ಸದ್ಗುಣಭರಿತನಾದವನೇ ಇನ್ನಿತರರಿಗೆ ಸದ್ಗುಣಗಳನ್ನು ಕಲಿಸಬಲ್ಲನು . ಡಾಂಭಿಕ ಮನೋಭಾವದವನಿಂದ ನೈಜ ಭಕ್ತಿ – ಜ್ಞಾನವೈರಾಗ್ಯಗಳು ಹರಿದು ಬರಲಾರವು . ಭಕ್ತರ ಮನೋಭೂಮಿಕೆಯಲ್ಲಿ ಬೆಳೆದು ಫಲ ನೀಡಲಾರವು . ಸದ್ಗುರುವು ನಿರ್ವಂಚನೆಯಿಲ್ಲದೆ ಭಕ್ತಿಯಿಂದ ಬಂದ ಭಕ್ತರಿಗೆ ಕಲ್ಪತರುವಿನಂತೆ ಭಕ್ತಿ – ಜ್ಞಾನ ವೈರಾಗ್ಯಗಳನ್ನು ನೀಡುತ್ತಿದ್ದರೆ ಆತ್ಮೀಯತೆ ಬೆಳೆದು ಬರುತ್ತದೆ . ಬಸವಲಿಂಗ ಶರಣರಿಗೆ ಇಂಥ ಸದ್ಗುರುಗಳು ದೊರೆತಿದ್ದರೆಂಬುದು ಸ್ಪಷ್ಟವಾಗುತ್ತದೆ . ಅವರು ಆತ್ಮೀಯವಾಗಿ ಮದ್ಗುರುವೆ ! ಕೃಪೆಯಾಗಬೇಕೆಂದು ಪ್ರಾರ್ಥಿಸಿದ್ದಾರೆ . ಶಿಷ್ಯನು ಗುರುವನ್ನು ತನ್ನವನನ್ನಾಗಿ ಮಾಡಿಕೊಂಡರೆ ಗುರುವು ತನ್ನವರ್ಗೆ ತಾನು ಅವಶ್ಯವಾಗಿ ಸುಖವನ್ನು ಕರುಣಿಸುತ್ತಾನೆ .

**********

  ದೇಶಿಕನೆ ಅನುಭಾವೋ | ಲ್ಲಾಸಕನೆ ಸಂಕಲ್ಪ

 ನಾಶಕನೆ ಣವಾದಿ  ತ್ರೈಮಲದೊಳ್ನಿ

 ರಾಶಕನೆ ಎನಗೆ ಕೃಪೆಯಾಗು || ||

“ಆಣವಾದಿ  ತ್ರೈಮಲಮಂ ನಿರಾಶಕನೆ “ ಎನ್ನುವ ಪಾಠಾಂತರವೂ ಇದೆ . ಗೋವು ಅಡವಿಯಲ್ಲಿ ಚೆನ್ನಾಗಿ ಹುಲ್ಲು ಮೇಯ್ದು ತೃಪ್ತವಾಗಿ ತನ್ನ ಕರುವಿಗೆ ಹಾಲುಣಿಸಲು ಹಾತೊರೆಯುವಂತೆ ; ಸದ್ಗುರುವಾದವನು ಸದ್ಭಕ್ತ ಶಿಶುಗಳಿಗೆ ಅನುಭವಾಮೃತವನ್ನು ನೀಡಿ ತಣಿಸುತ್ತಿರಬೇಕು . ಇದು ಸದ್ಗುರುವಿನ ಕರ್ತವ್ಯವನ್ನು ಸೂಚಿಸುತ್ತದೆ . ಅದಕ್ಕಾಗಿ ಶಿವಕವಿಯು ದೇಶಿಕನೇ ಎಂಬ ಸಂಬೋಧನೆಯನ್ನು ಮಾಡಿದ್ದಾನೆ .

ನಿತ್ಯಲಿಂಗಾರ್ಚನೆಯನ್ನು ಮಾಡಿ ಭಕ್ತರ ಕಲ್ಯಾಣಕ್ಕಾಗಿ ದೇಶವನ್ನು ಸಂಚರಿಸುವ ಗುರುವರನೇ ದೇಶಿಕನೆನಿಸಿಕೊಳ್ಳುವನು . ಅವನು ಶಿವಾನುಭವಾನಂದದಲ್ಲಿ ತಲ್ಲೀನನಾಗಿ ತನ್ನ ಅನುಭವೋಪದೇಶದಿಂದ ಶಿಷ್ಯರನ್ನು ಉಲ್ಲಾಸಗೊಳಿಸುವನು . ಮನಸ್ಸಿನ ಸಂಕಲ್ಪ – ವಿಕಲ್ಪಗಳನ್ನು ನಾಶಮಾಡುವನು . ಫಲಾಪೇಕ್ಷೆಯಿಂದ ಮಾಡುವ ಕಾರ್ಯ ಗಳು ಸಂಕಲ್ಪಿತಗಳೆನಿಸುವವು . ಅಂಥ ಸಂಕಲ್ಪಗಳನ್ನು ನಾಶಮಾಡಿ ನಿಷ್ಕಾಮಭಕ್ತಿ ಯನ್ನು ಬೆಳೆಸುವನು . ನಿಷ್ಕಾಮ ಭಕ್ತಿಯು ಅಳವಡಲೆಂದು ಶಿಷ್ಯನ ಆಣವಮಲ , ಮಾಯಾಮಲ , ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು – ಮನ – ಧನ ಗಳನ್ನು ಪರಿಶುದ್ಧಗೊಳಿಸುವನು . ಸ್ವತಃ ತಾನು ಹೊನ್ನು ಹೆಣ್ಣು – ಮಣ್ಣುಗಳೆಂಬ . ತ್ರಿಮಲಗಳನ್ನು ನಿರಾಕರಿಸುವಲ್ಲಿ ಯೋಗ್ಯತೆಯುಳ್ಳವನಾಗಿರುವನೆಂಬುದು ಶರಣ ಕವಿಯ ಆಶಯವಾಗಿದೆ . ಯಾರು ಹೊನ್ನು – ಹೆಣ್ಣು – ಮಣ್ಣುಗಳಲ್ಲಿ ನಿರಾಶೆಯುಳ್ಳವರಾಗಿ ಮಲತ್ರಯ ವನ್ನು ದೂರಮಾಡಿಕೊಂಡಿರುತ್ತಾರೆಯೋ ಅಂಥವರು ಮಾತ್ರ ಭಕ್ತರ ಸಂಕಲ್ಪ ವಿಕಲ್ಪಗಳನ್ನು ದೂರಮಾಡಿ ಮಲತ್ರಯಗಳಿಂದ ಮುಕ್ತರನ್ನಾಗಿ ಮಾಡಬಲ್ಲರು . ಓ ಗುರುವೇ ! ನೀನು ಸಮರ್ಥನಾಗಿರುವಿ . ಕಾರಣ ನನ್ನ ತ್ರಿಮಲಗಳನ್ನು ನಿವಾರಿಸಿ ಕೃಪೆದೋರು

***********

ಕಾರ್ಯ ಕಾರಣ ಭಕ್ತಿ | ತುರ್ಯ ತಾಮಸದ ಚಿತ್

ಸೂರ್ಯ ಎಡರಿಂಗೆ ಧೈರ್ಯವಾಗಿಹ ಗುರು

ರ್ಯ ನೀನೆನಗೆ ಕೃಪೆಯಾಗು  || ||

 ಗುರುದೇವರು ಗುರುವರನಾಗಬೇಕಾದರೆ ಗುರುತ್ವದ ಗರಿಮೆಯನ್ನು ಹೊಂದಿರಬೇಕಾಗುವುದು . ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ ಮತ್ತು ಧೈರ್ಯಗಳಿಗೆ ಆಶ್ರಯನಾದವನೇ ಗುರುವರನು .

 ಸಕಲ ಶುಭಕಾರ್ಯಗಳಿಗೆ ಗುರುವರನೇ ಕಾರಣ . ಗುರುವಿಲ್ಲದೆ ಸಂಸ್ಕಾರ ಕಾರ್ಯಗಳು ಘಟಿಸಲಾರವು . ಶಿಷ್ಯನಲ್ಲಿಯ ತ್ರಿಮಲಗಳನ್ನು ಕಳೆದು ತ್ರಿವಿಧಾಂಗಗಳಲ್ಲಿ ಲಿಂಗಗಳ ಸಂಬಂಧವೆಂಬ ಶುಭಕಾರ್ಯಗಳಿಗೆ ಗುರುವೇ ಮೊದಲಿಗನು , ವಿವಾಹಾದಿ ಲೌಕಿಕ ಕಾರ್ಯಗಳಿಗೂ ಗುರು ಬೇಕು . ಗುರುವಿಲ್ಲದೆ ಅವು ಫಲಿಸಲಾರವು . ಗುರುವಾದರೂ ಭಕ್ತಿಯಲ್ಲಿ ಮಿಗಿಲಾಗಿರಬೇಕು . ಭಕ್ತಿಯೇ ಮುಕ್ತಿಯ ಸಾಧನ . ಭಕ್ತಿಯೇ ಷಟ್‌ಸ್ಥಲಾಚರಣೆಯ ಕೀಲು , ಭಕ್ತಿಯ ಪರಾಕಾಷ್ಠತೆಯನ್ನು ಸಾಧಿಸಿದ ಸದ್ಗುರು ಭಕ್ತರಿಗೆ ಕಿಂಕರತನವನ್ನು ಕಲಿಸಬಲ್ಲನು . ಅಂದರೆ ಅಹಂಕಾರವು ಎಳ್ಳಿನ ಮೊನೆಯಷ್ಟಾದರೂ ಇರಕೂಡದು ಅಹಂಕಾರವು ನಾಶವಾದರೇನೇ ಭಕ್ತಿಯು ನೆಲೆಸುವದು , ಭಕ್ತಿಯ ಸೌಜನ್ಯತೆಯಿಂದಲೇ ಸದ್ಗುರುನಾಥನು ಉನ್ನತ ಸ್ಥಾನದಲ್ಲಿರು ತಾನೆ , ಮತ್ತು ಭಕ್ತಿಯುಳ್ಳ ಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವಲ್ಲಿ ಜ್ಞಾನ ಸೂರ್ಯನಾಗಿರುತ್ತಾನೆ . ಅದಕ್ಕಾಗಿ ಅನುಭವಿಗಳು,

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನ ಕತ್ತಲೆಯಿಂದ ಕುರುಡನಾದವನ ಕಣ್ಣುಗಳು ಜ್ಞಾನವೆಂಬ ಕುಂಚಿನಿಂದ ಯಾವಾತನಿಂದ ತಗೆಯಲ್ಪಡುವವೋ ಅವನೇ ಸದ್ಗುರು . ಅಂಥ ಸದ್ಗುರುವಿಗೆ ಶರಣು ಮಾಡಿರುವರು , ಗುರುವರನು ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಧೈರ್ಯದ ಮೂರ್ತಿಯೇ ಆಗಿರುತ್ತಾನೆ . ಎಲ್ಲ ಭೀತಿಗಳಲ್ಲಿ ಭವಭೀತಿ ಬಲುದೊಡ್ಡದು . ಇದನ್ನು ನಿವಾರಿಸುವವನೇ ಸದ್ಗುರುವು . ಗುರುಕೃಪೆಯಿಂದಲೇ ಭಕ್ತನಲ್ಲಿ ಧೃತಿ ದೃಢವಾಗುತ್ತದೆ . ಧೈರ್ಯ ವಂತನಿಗೆ ಸಕಲಕಾರ್ಯಗಳಲ್ಲಿ ಜಯ ಖಂಡಿತ ಸಿಕ್ಕುವದು , ಗುರುಕೃಪೆಯಿಂದ ಧೃತಿವಂತ ನಾಗಿ ಶಿವಸಂಸ್ಕಾರಗಳನ್ನು ಪಡೆದು ಭಕ್ತಿಯಿಂದ ಸುಜ್ಞಾನವನ್ನು ಪಡೆಯಬೇಕು . ಇದೆಲ್ಲವೂ ಸದ್ಗುರುಕೃಪೆಯಿಂದ ಸಾಧ್ಯ , ಓ ಗುರುವೇ !

ಅಸತೋ ಮಾ ಸದ್ಗಮಯ

ತಮಸೋ ಮಾ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂ ಗಮಯ

ಅಸತ್ಯದಿಂದ ಸತ್ಯದೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ , ಮೃತ್ಯುವಿನಿಂದ ಅಮೃತತ್ವದೆಡೆಗೆ ಕರೆದೊಯ್ದು ಕಾಪಾಡು . ಅಮರತ್ವವನ್ನು ಸಾಧಿಸಬಲ್ಲ ಶಕ್ತಿಯನ್ನು ದಯಪಾಲಿಸು .

***********

ಸಾಧ್ಯ ಸದ್ಭಕ್ತರ್ಗೆ | ವೇದ್ಯ ಲಿಂಗೈಕ್ಯರ್ಗೆ

ಭೇದ್ಯ ಸತ್ಪ್ರಮಥ ಗಣನಿಕರವೆಲ್ಲಕ್ಕಾ

ರಾಧ್ಯ ನೀನೆನಗೆ ಕೃಪೆಯಾಗು || ||

ಮೇಲಿನ ಮೂರು ನುಡಿಗಳಲ್ಲಿ ಸದ್ಗುರುವಿನ ಸ್ವರೂಪವನ್ನು ವರ್ಣಿಸಿ ಅಂಥ ಗುರುವನ್ನು ಅರಿಯಲು ಯೋಗ್ಯರಾದ ಶಿಷ್ಯರನ್ನೂ ನಿರೂಪಿಸಿದ್ದಾನೆ . ಇಲ್ಲಿ ಭಕ್ತನ ಯಥಾರ್ಥತೆಯ ಅರಿವೂ ಕಾಣಬರುತ್ತದೆ . ಸದ್ಗುರುನಾಥನು ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ , ಧೈರ್ಯತ್ವಗಳನ್ನು ಸಾಕ್ಷಾತ್ಕರಿಸಿಕೊಂಡಂತೆ , ಶಿಷ್ಯನು ಸದ್ಭಕ್ತನೂ , ಲಿಂಗೈಕ್ಯ ಸ್ಥಿತಿಗೇರಿದವನೂ ಸತ್ಪ್ರ ಮಥರಿಗೆ ಮಾನ್ಯನೂ ಆಗಬೇಕಾಗುತ್ತದೆ . ನೈಜಭಕ್ತಿಯುಳ್ಳ ಸದ್ಭಕ್ತರಿಗೆ ಮಾತ್ರ ಗುರುವು ಸಾಧಿಸಲು ಯೋಗ್ಯನಾಗುವನು . ಅಂದರೆ ನಿಜವಾದ ಭಕ್ತಿಯಿಂದ ಮಾತ್ರ ಗುರು ಸಾಕ್ಷಾತ್ಕಾರವಾಗುವದು .

 ಲಿಂಗದ ನೆಲೆಕಲೆಗಳನ್ನು ಗುರುಮುಖದಿಂದ ಅರಿತು ತನ್ನ ಅಂಗಾಂಗಗಳಲ್ಲಿ ಅಳವಡಿಸಿಕೊಂಡಾಗ ಲಿಂಗಮಯನಾಗುವನು . ಲಿಂಗೈಕ್ಯನೆನಿಸುವನು . ಇಂಥವನು ಮಾತ್ರ ಗುರುಮಹತಿಯನ್ನು ಗುರುತಿಸಬಲ್ಲನು . ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸಬಲ್ಲ ಪ್ರಮಥ ಪುಂಗವರು ಗುರುತತ್ವದ ಆಳವನ್ನು ಅಳೆಯಬಲ್ಲರು . ಮಹಿಮಾಶೀಲನಾದ ಸದ್ಗುರು ಯೋಗ್ಯತೆಯುಳ್ಳ ಎಲ್ಲರಿಂದಲೂ ಪೂಜೆಗೊಳ್ಳಲು ಇಲ್ಲಿ ಸಾಧಕ , ಸಿದ್ಧ , ಪರಿಪೂರ್ಣ ( ಸ್ವತಃಸಿದ್ದ ) ಈ ಮೂವರ ಅರಿವಾಗುತ್ತದೆ . ಸಾಧಕನಾದ ಭಕ್ತನಿಗೆ ಗುರು ಲಿಂಗವನ್ನು ಕರುಣಿಸುತ್ತಾನೆ . ಭಕ್ತನಾಗಿ ಲಿಂಗವನ್ನು ಆಯತ ಮಾಡಿಕೊಳ್ಳುವವನೇ ಸಾಧಕನು , ಲಿಂಗ ಗುಣಗಳನ್ನು ಸ್ವಾಯತ್ತೀಕರಿಸಿ ಕೊಂಡವನೇ ಲಿಂಗೈಕ್ಯನು . ಅವನೇ ಸಿದ್ಧನು . ಲಿಂಗವನ್ನು ಸನ್ನಿಹಿತಮಾಡಿ ಕೊಂಡು ತಾನೇ ಲಿಂಗನಾದವನು ; ಪರಿಪೂರ್ಣನು ಅಥವಾ ಸ್ವತಃಸಿದ್ಧನೆನ್ನಬಹುದು . ಅವನೇ ಪ್ರಮಥ ಪುಂಗವ , ಲಿಂಗ ಪರಿಪೂರ್ಣ , ಶಿವಪಥವನರಿಯಲು ಗುರುಪಥ ಮುಮ್ಮೊದಲು ಶಿವಪಥವನರಿಯಲು ಶಿವಶರಣರ ಸಂಗ ಮುಖ್ಯವಾಗಿದೆ .

 ಶ್ರೀ ಚನ್ನಬಸವೇಶ್ವರ ದೇವರು ತಮ್ಮ ಮಂತ್ರಗೋಪ್ಯದಲ್ಲಿ ಶಿವನ ಸಾಕಾರ ಮೂರ್ತಿಯೇ ಸದ್ಗುರುವೆಂದು ಗುರುಸ್ತೋತ್ರವನ್ನು ಮಾಡಿದ್ದಾರೆ .

 ಗುರುವೆ ಪರಶಿವನೆ | ಸಕಲಾಗಮಂಗಳ ಮೂರ್ತಿ

 ಗುರುವೆ ಅಜ್ಞಾನ ತಿಮಿರಕ್ಕಂಜನ

ಗುರುವಿಗೂ ಪರಶಿವನಿಗೂ ಭಿನ್ನತೆಯಿಲ್ಲ . ಶಿವನ ಸಾಕಾರ ಮೂರ್ತಿಯೇ ಸದ್ಗುರುವು . ಗುರುಸಾಕ್ಷಾತ್ಕಾರವೇ ಶಿವಸಾಕ್ಷಾತ್ಕಾರವಾಗಿದೆ . ಅದುಕಾರಣ ಗುರು ದೇವನು ಸದ್ಭಕ್ತರ್ಗೆ ಸಾಧ್ಯನಾಗುತ್ತಾನೆ . ಲಿಂಗೈಕ್ಯರ್ಗೆ ವೇದ್ಯನಾಗುತ್ತಾನೆ . ಸತ್ಪ್ರಮಥರಿಗೆ ಭೇದ್ಯನೂ , ಬೋಧ್ಯನೂ ಆಗುತ್ತಾನೆ . ಅಂಥ ಸದ್ಗುರು ಸರ್ವರಿಗೆ ಆರಾಧ್ಯನಾಗುವದ ರಲ್ಲಿ ಸಂಶಯವೇನಿದೆ ? ಭೋ ಗುರುವೆ ! ನಿನ್ನ ಕೃಪೆ ಬಯಸಿ ಬಂದ ನನಗೂ ಆಶ್ರಯನೀಡೆಂದು ಪ್ರಾರ್ಥಿಸಿದ್ದಾರೆ .

Related Posts