ಮಂಗಳಾರತಿ ದೇವಗೆ ಶಿವಯೋಗಿಗೆ
ಕಂಗಳಾಲಯ ಸಂಗಗೆ .
ಜಂಗಮ ಲಿಂಗ ಭೇದದ ಸ್ವಯಚರಪರ
ದಿಂಗಿತವರುಪಿದಂತಾಚರಿಸಿದ ಮಹಿಮಗೆ ॥ ಪ ॥
ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ
ಬಂದ ಬಂದವರನು ಬೋಧಿಸಿ
ನಿಂದು ಏಕಾಂತದಾನಂದದ ಯೋಗದ
ಚೆಂದವನರಿದನುಷ್ಠಾನಿಪ ಶಿವಸ್ವಯಗೆ ॥ ೧ ॥
ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ
ಭರದಿ ಪರತರ ಬೋಧೆಯ
ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ
ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ ॥ ೨ ॥
ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ
ಕೋಪಾದಿ ಗುಣವ ತೂರಿ .
ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ
ಕಾಪಟ್ಯವಳಿದು ಶಿವ ತಾನಹ ಪರತರಗೆ ॥ ೩ ॥
ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ
ಶಿಷ್ಟ ಚರವರನೆನಿಸಿ
ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ
ಕಷ್ಟತರದ ಮಾಯೆಯನು ಗೆಲಿದ ಯತಿವರಗೆ ॥ ೪ ॥
ಸಚ್ಚಿದಾನಂದವೆನಿಪ ಅಥಣೀಪುರಿ
ಗಚ್ಚಿನಮಠ ಮಂಟಪ
ಅಚ್ಚರಿಗೊಳಿಪ ಷಟ್ಸ್ಥಲ ಬ್ರಹ್ಮಿವಾಸದಿಂ
ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ ॥ ೫ ॥