ನಾಡ ಸಂಚಾರ, ಧರ್ಮ ಪ್ರಚಾರ (ಕಾರುಣಿಕ ಕುಮಾರಯೋಗಿ ಧಾರವಾಹಿ)

ಜ.ಚ.ನಿ

 

ಕುಮಾರ ಯೋಗಿಗಳು ಕನ್ನಡ ನಾಡಿನ ಬಹುಭಾಗವನ್ನು ಸುತ್ತಿಸುಳಿದರು. ಹೋದಹೋದಲ್ಲಿ ಸಭೆಗಳನ್ನು ಸೇರಿಸುತ್ತಿದ್ದರು. ಪ್ರತಿದಿನ ಸಾಯಂಕಾಲ ತಪ್ಪದೆ

ಹಿತಬೋಧೆಯನ್ನು ಮಾಡುತ್ತಿದ್ದರು. ತಾಪತ್ರಯದಿಂದ ತೊಳಲಿ ಬಂದ ಅನೇಕರು ಅವರ ಬೋಧೆಯ ಪರಿಣಾಮದಿಂದ ತಿಳಿಮನಸ್ಸಿನವರಾಗಿ ಹಿಂದಿರುಗುತ್ತಿದ್ದರು. ಅತಿಯಾಶೆಯ ಪಿಶಾಚಿ ಹೊಡೆದವರು ಅದರಿಂದ ಮುಕ್ತರಾಗುತ್ತಿದ್ದರು. ವಿಷಯಾಸಕ್ತರು ವಿಹ್ವಲರಹಿತವಾಗಿ ಹೋಗುತ್ತಿದ್ದರು. ಕೃಪಣರು ಉದಾರಿಗಳಾಗಿ ಮಾರ್ಪಡುತ್ತಿದ್ದರು. ಅನೇಕ ನೀತಿ ಮಾರ್ಗಗಳನ್ನು ಬೋಧಿಸಿ ನಿದ್ರಿತ ಜನಾಂಗವನ್ನು ನಿಜಜೀವನದತ್ತ ಸಾಗುವಂತೆ ಮಾಡಿದರು. ಮದಾಂಧರ ಮದವನ್ನು ತಗ್ಗಿಸಿದರು. ಮತ್ಸರವುಳ್ಳವರಲ್ಲಿ ಮೈತ್ರಿ ಭಾವ ಮೂಡಿಸಿದರು. ರೋಷಾವೇಶವುಳ್ಳವರನ್ನು ಶಾಂತರನ್ನಾಗಿ ಸಮಾಧಾನಿಗಳನ್ನಾಗಿ

ಕುದುರಿಸಿದರು.

 

ಇದರ ಫಲವಾಗಿ ಜನಾಂಗದ ಮನಸ್ಸು ಕುಮಾರ ಯೋಗಿಗಳ ಕಡೆಗೆ ಹೊರಳಿತು. ಧನಿಕರು ದರಿದ್ರರು ಶಿಷ್ಯರಾದರು. ಮಾಸ್ತರರು, ಶಾಸ್ತ್ರಿಗಳು, ಭಕ್ತಿಯಿಟ್ಟರು. ರಾಜಾಧಿಕಾರಿಗಳು, ರೈತರು ಅತ್ಯಂತ ಅನುರಾಗಿಗಳಾದರು. ಆಜ್ಞೆಯನ್ನು ಮೀರದವರಾದರು.

 

ಕುಮಾರ ಯೋಗಿಗಳ ಬೋಧೆ, ಕಾರ್ಯತತ್ಪರತೆ, ಸಾಮಾಜಿಕ ಕಳಕಳಿ, ಸಾಹಿತ್ಯ, ಸಂಸ್ಕೃತಿ ಪ್ರೇಮ ಎಲ್ಲರನ್ನು ಆಕರ್ಷಿಸಿತು. ಅನೇಕ ಬ್ರಾಹ್ಮಣರು ಸಹ ಸ್ವಾಮಿಗಳವರ ಕಾರ್ಯಕ್ಷೇತ್ರದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು. ಹೀಗೆ ಸ್ವಾಮಿಗಳವರ ಶಿಷ್ಯವೃಂದವು ಅಪಾರವಾಗಿ ಬೆಳೆಯಿತು.

 

ಇದರಿಂದಾಗಿ ಅವರ ನಾಡ ಸಂಚಾರ-ಧರ್ಮ ಪ್ರಚಾರ ಯಾವ ತಡೆಯಿಲ್ಲದೆ ಭರದಿಂದ ಸಾಗಿತು. ಜನರಲ್ಲಿ ಜಾಗ್ರತಿ ವಿದ್ಯುದ್ವೇಗದಿಂದ ಹರಿಯಿತು; ಹರಡಿತು. ಮೂಢತನ ಮೂಲೆಗೆ ಬಿದ್ದಿತು. ತಮ್ಮ ಜೀವನದ ಗುರಿಯನ್ನು ಸಮಾಜದ ಹೊಣೆಯನ್ನು ಬಹುಜನರು ತಿಳಿದುಕೊಂಡರು; ತೀರಿಸಿದರು. ಸಾಹಿತ್ಯಕ್ಕೆ ಸಂಸ್ಕೃತಿಗೆ ವಿದ್ಯೆಗೆ ವಿಶೇಷ ಸಹಾಯ ನೀಡಿದರು. ಸ್ವಾಮಿಗಳವರ ನಾಡ ಸಂಚಾರದಿಂದ ಧಾರ್ಮಿಕ ಪ್ರಚಾರವು ಸಾಕಷ್ಟು ಜರುಗಿತು. ಮುಚ್ಚಿಹೋಗಿದ್ದ ಧರ್ಮದ ಕಣ್ಣು ಮರಳಿ ತೆರೆಯಿತು.

Related Posts