ಕುಮಾರನು ಕ್ರಿಯಾಶಿಲ್ಪಿ

ಜ.ಚ.ನಿ

 

ಶಿಲ್ಪಿಗಳಲ್ಲಿ ಶಿಲಾಶಿಲ್ಪಿಯೆ ಪ್ರಸಿದ್ದ. ಈತನು ಜಾತಿಯ ಶಿಲೆಯನ್ನು ತೆಗೆದುಕೊಂಡು ತನ್ನ ಅಂತಸ್ಥವಾದ ಕಲೆಯನ್ನು ಅದರಲ್ಲಿರಿಸಿ ಅದನ್ನು ಕಲಾಮೂರ್ತಿಯನ್ನಾಗಿ ಮಾಡಬಲ್ಲನು, ಮಾಡುತ್ತಾನೆ.

ಕ್ರಿಯಾಶಿಲ್ಪಿಯಾದ ಕುಮಾರಯೋಗಿಯು ಅನೇಕ ಶಿಲಾವರ್ಗದ ಮನುಷ್ಯರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದ ಕಡೆದು ಕಡೆದು ಮೂರ್ತಿಗಳನ್ನಾಗಿ ಮಾಡಿದನು. ಶಿಲಾಶಿಲ್ಪಿಗಿಂತಲು ಕ್ರಿಯಾಶಿಲ್ಪಿಯ ಕೌಶಲ್ಯ ಹೆಚ್ಚಿನದು; ಕಷ್ಟ ಹೆಚ್ಚಿನದು, ಶಿಲಾಶಿಲ್ಪಿಗೆ ಶಿಲೆಯು ವಶಂಗತವಾಗಿರುತ್ತದೆ. ಅದರಂತೆ ಕ್ರಿಯಾಶಿಲ್ಪಿಗೆ ಶಿಲಾವರ್ಗದ ಮನುಷ್ಯರ ಮನಸ್ಸು ವಶವರ್ತಿಯಾಗುವುದು ತೀರ ಕಷ್ಟದ ಮಾತು. ಕ್ರಿಯಾಶಿಲ್ಪಿಯು ತಾನೊಂದು ನೆನೆದರೆ ಶಿಷ್ಯನು ಮತ್ತೊಂದನ್ನು ನೆನೆಯುತ್ತಿರುತ್ತಾನೆ. ಅಂಥವರ ಮನಸ್ಸನ್ನು ಪರಿಪಾಲಿಸುವುದೆ ಪರಮ ಸಾಹಸದ ಕೆಲಸ, ಶಿಲಾಶಿಲ್ಪಿಯ ಉಳಿಯ ಹೊಡೆತ ಶಿಲೆಯಲ್ಲಿ ನೇರವಾಗಿ ಮೂಡುತ್ತದೆ. ಕ್ರಿಯಾಶಿಲ್ಪಿಯ ಹಿತನುಡಿಯ ಪರಿಣಾಮ ಶಿಷ್ಯನ ಮನಸ್ಸಿನ ಮೇಲೆ ಒಮ್ಮಿಗೆ ಮೂಡಲರಿಯದು.

ಶಿಲಾವರ್ಗದ ಮನುಷ್ಯರನ್ನು ಮಾನವತ್ವದ ಮಟ್ಟಕ್ಕೆ ತಂದು  ಮೂರ್ತಿವಂತರನ್ನಾಗಿ ಮಾಡುವುದು ಇದೂ ಒಂದು ಶಿಲ್ಪಕಲೆ. ದುಸ್ವಭಾವಗಳನ್ನು ದೂರೀಕರಿಸಿ ಸುಸ್ವಭಾವ-ಸ್ವಾನುಭಾವಗಳನ್ನು ಬೋಧಿಸಿ ಶಾಂತಿ-ಸೌಹಾರ್ದ್ರ ಕಳೆಗಳನ್ನು ತುಂಬಿ ತೋರುವಂತೆ ಎಸಗುವುದು ಒಂದು ಸಜೀವ ಸೋಜ್ವಲ ಶಿಲ್ಪಕಲೆ; ಪ್ರವಾಹಿ ಕಲೆ. ಇದರಲ್ಲಿ ಹಸ್ತ ನೈಪುಣ್ಯಕ್ಕಿಂತ ಭಾವ ನೈಪುಣ್ಯ ಪ್ರಧಾನವಾದುದು; ಪ್ರಯುಕ್ತವಾದುದು.

ಶಿಲಾಶಿಲ್ಪಿಯು ಬಹಿರಂಗಗಳನ್ನು ನಿರ್ಮಿಸಬಲ್ಲನು. ಮಾನವೋನ್ನತಿ ಗೈಯುವ ಶಿಷ್ಟ ಶಿಲ್ಪಿಯು ಅಂತರಂಗವನ್ನು ಅಲಂಕರಿಸಬಲ್ಲನು ; ತಿದ್ದಿ ಶುದ್ಧಗೊಳಿಸಬಲ್ಲನು. ಎರಡನೆಯದಾಗಿ ವಸನಾಭರಣಗಳನ್ನು ಉಡಿಸಿ ತೊಡಿಸುವುದರಲ್ಲಿ ಶಿಲಾಶಿಲ್ಪಿಯ ನೈಪುಣ್ಯವಿದ್ದರೆ, ಗುಣಾಭರಣಗಳನ್ನು ತೊಡಿಸುವುದರಲ್ಲಿ ಶಿಷ್ಟಶಿಲ್ಪಿಯ ಪುಣ್ಯಪ್ರಭೆ ಕಾರಣವಾಗಿರುತ್ತದೆ. ಉಡಿಗೆಯಿಲ್ಲದೆ ಬರೀತೊಡಿಗೆಗಳಿಂದ ಅಲಂಕರಿಸಿದ ಶಿಲ್ಪಕಲೆಗಳಿಗೇನು ಕೊರತೆಯಿಲ್ಲ. ಬೇಲೂರು, ಹಳೆಬೀಡುಗಳನ್ನು ನೋಡಿದವರಿಗೆ ಬೇರೆ ನಿದರ್ಶನಬೇಕಿಲ್ಲ. ಈ ಸಂವಿಧಾನವು ಶಿಷ್ಟಶಿಲ್ಪಿಯ ಕಲೆಗೆ ಸಾದೃಶ್ಯವಾಗಿದೆ;  ಸಂಗ್ರಾಹ್ಯವಾಗಿದೆ. ಏಕೆಂದರೆ ಅಂತರಂಗದ ಆತ್ಮನಿಗೆ ಗುಣಾಭರಣದ ವಿನಹ ವಸನಾಭರಣದ ಹಂಗೆಲ್ಲಿ, ಏತಕ್ಕೆ ?

ಶಿಲಾಶಿಲ್ಪಿಯದು ಜಡವಾದ ಕಲೆ, ಕ್ರಿಯಾಶಿಲ್ಪಿಯದು ಅಜಡವಾದ ಕಲೆ. ಶಿಲಾಶಿಲ್ಪಿಯು ಶಿಲೆಯಲ್ಲಿ ಬರೀ ಲಾವಣ್ಯವನ್ನು ಕುದುರಿಸುತ್ತಾನೆ. ಶಿಷ್ಟಶಿಲ್ಪಿಯು ಮಾನವನಲ್ಲಿ ಪುಣ್ಯಲಾವಣ್ಯವನ್ನು ಕೆತ್ತುತ್ತಾನೆ. ಶಿಲಾಶಿಲ್ಪಿಯ ಕಲೆ ಕಾಲಕ್ಕೊಳಗಾಗುತ್ತದೆ. ಕ್ರಿಯಾಶಿಲ್ಪಿಯ ಕಲೆ ಕಾಲಾತೀತವಾಗಿರುತ್ತದೆ.

ಕುಮಾರೇಶನ ಕ್ರಿಯಾಶಕ್ತಿನಿಶಿತವಾದುದು; ನಿತಾಂತವಾದುದು ಅದುದರಿಂದಲೆ ಯಾರಿಂದಲು ಸುಧಾರಿಸಲು ಶಕ್ಯವಿಲ್ಲದ ಅನೇಕರು ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕು ಮುದ್ದಾದ ಮೂರ್ತಿವಂತರಾದರು; ಕೊನೆಯಿಲ್ಲದ ಕೀರ್ತಿವಂತರಾದರು.

ಸರಿಯಾಗಿ ಓದು ಬಾರದವರು ಅವರ ಕೈಯಲ್ಲಿ ಶ್ರೇಷ್ಟ ಶಿವಾನುಭವಿಗಳಾದರು. ಬರೆಯಬಾರದವರು ಪ್ರಸಿದ್ಧ ಲೇಖಕರಾದರು. ಚನ್ನಾಗಿ ಮಾತನಾಡಲು ಬಾರದವರು ವಾಗ್ಮಿಗಳಾದರು; ವ್ಯಾಖ್ಯಾತೃಗಳಾದರು; ಕೀರ್ತನ ಕಲಾವಿದರಾದರು. ಸಂಗೀತದ ಗಂಧವನರಿಯದವರು ‘ಸಂಗೀತ ಸಾಗರ’ವಾದರು. ಸಂಸಾರಿಗಳಾಗಬೇಕಾದವರು ಸನ್ಯಾಸಿಗಳಾದರು. ಪಶುಗಾಯಿಗಳಾಗಬೇಕಾದವರು ಪಾಠಶಾಲಾಧ್ಯಾಪಕರಾದರು. ರಾಗಿಗಳು ವಿರಾಗಿಗಳಾದರು. ಕೃಪಣರು ತ್ಯಾಗಿಗಳಾದರು.  ರೋಗಿಗಳು ನಿರೋಗಿಗಳಾದರು. ಭವಿಗಳು ಭಕ್ತರಾದರು. ಗುಣಹೀನರು ಗುಣಿಗಳಾದರು.

ಸುಳಿವು ಸರಿಯಾಗಿಲ್ಲದ ಶಿಲೆಗಳು ಶಿಲ್ಪಿಯ ಕೈಗೆ ಸೇರಿದರು ಮೂರ್ತಿಗಳಾಗುವ ಭಾಗ್ಯವಿಲ್ಲದೆ ಒಡೆದು ಹೋಗುವಂತೆ, ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕಿದ ಕೆಲವರು ಕರ್ಮಬಲದಿಂದ ಕಲಾಹೀನರಾದರು. ಕನಿಷ್ಠ ಬಾಳು ಬಾಳಿದರು. ಯಾವುದನ್ನು ಪುಣ್ಯ ಬೇಕು; ಭಾಗ್ಯ ಬೇಕು.

ಅಂಥವರ ವಿಷಯದಲ್ಲಿ ಸ್ವಾಮಿಗಳವರು ಒಮ್ಮೊಮ್ಮೆ ನೆನೆದು ಮನಸಾರೆ ಮರುಗುತ್ತಿದ್ದರು. ಮತ್ತೊಮ್ಮೆ “ಸಗಣಿಯ ಬೆನಕಂಗೆ ಸಂಪಿಗೆಯ ಅರಳಲ್ಲಿ ಪೂಜಿಸಿದರೆ ರಂಜನೆ ಅಹುದಲ್ಲದೆ ಅದರ ಗಂಜಳ ಬಿಡದಣ್ಣ… ಎಂಬ ಬಸವೇಶ್ವರನ ವಚನವನ್ನು ನೆನೆದು ಸುಮ್ಮನಾಗುತ್ತಿದ್ದರು; ನೆಮ್ಮದಿಗೊಳ್ಳುತ್ತಿದ್ದರು.

Related Posts