ಸಂಪಾದಕೀಯ: ಪಥಿಕನ ಟಿಪ್ಪಣೆಗಳು

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಯೌವನಾವಸ್ಥೆಯಲ್ಲಿರುವ  ಒಂದು ಅಪರೂಪದ ಚಿತ್ರವನ್ನು  ಶ್ರೀಧರಗಡ್ಡಿ ಶ್ರೀ ಕೊಟ್ಟೂರೇಶ್ವರಮಠದ ಉತ್ತರಾಧಿಕಾರಿಗಳಾದ ಪೂಜ್ಯ ಮರಿಕೊಟ್ಟೂರ ಸ್ವಾಮಿಗಳು (ವಾಗೀಶ್ವರ ದೇವರು ) ಇತ್ತೀಚಿಗಷ್ಟೆ ಹುಡುಕಿರುವರು. ಈ ಚಿತ್ರವನ್ನು  ಮದ್ರಾಸಿನ ಗುರು ಬಸವ ಪ್ರಿಂಟರ್ಸ ನವರು ಮುದ್ರಿಸಿರುವರು.ಬಹುಶಃ ಈ ಚಿತ್ರವನ್ನು  ಗುರುಗಳ ೨೮-೨೯ ರ ವಯಸ್ಸಿನಲ್ಲಿ ತಗೆದುಕೊಂಡಿರಬಹುದು.(ಹಾನಗಲ್ಲ ಮಠದ ಅಧಿಕಾರ ಪಡೆದ ಸಮಯದಲ್ಲಿ ೧೮೯೬) ಪುಷ್ಠಿಯಾಗಿ ಹಾನಗಲ್ಲ ಮಠದಲ್ಲಿ ಈ ಚಿತ್ರದ ಬ್ರಹತ್‌ ತೈಲ ಚಿತ್ರವಿದೆ.ಗಂಭೀರ ಮುಖಭಾವ ಮತ್ತು ಚೈತನ್ಯಯುಕ್ತ ತೇಜಸ್ಸುಗಳನ್ನು  ನೋಡುತ್ತ ,ನೋಡುತ್ತ ಜ.ಚ.ನಿ ಯವರ  ಪುಸ್ತಕ “ಕಾರುಣಿಕ ಕುಮಾರಯೋಗಿ” ಯ “ನಾನು ಕಂಡ ಕುಮಾರ ಯೋಗಿ” ಯ ವರ್ಣನೆಯ ಶಬ್ಧಗಳು ಮಾರ್ಧನಿಸಿದವು .

ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು . ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತ ಮಾಡಿತ್ತು ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು . ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು . ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ . ಅದು ಯೋಗ ಠೀವಿ , ಅರ್ಜವ ದೇಹ ಅಜಾನುಬಾಹು , ವಿಶಾಲವಾದ ಹಣೆ , ಎವೆಯಿಕ್ಕದ ಕಣ್ಣು , ಜಗತ್ತನ್ನೇ ಜರಿದಿದ್ದರು ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು . ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು . ಯೋಗ ಬಲ್ಲಿದರಾಗಿದ್ದರೂ ಯೋಗದ ಏಳೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು . ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿಆಸೇಚನವಾಗಿತ್ತು . ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು . ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ ಸತ್ಕರ್ಮ – ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು . ನಿಷ್ಕಾಮಿ ಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ ಕೌಶಲ್ಯವಿತ್ತು . ವಿರಕ್ತ ಶಿಖಾಮಣಿ ಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು . ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ – ಪ್ರಯೋಗಗಳ ಸಂಭ್ರಮ ಸೂರೆ ಗೊಂಡಿತ್ತು . ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು . ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು . ಬರಿ ದಯೆ – ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು . ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು . ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ,  ಅವರೆ ನಾ ಕಂಡ ಕಾರಣಿಕ ಕುಮಾರ ಯೋಗಿಗಳು ,

ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನು ನೀಡಿ ಜ್ಞಾನ ಬೆಳಗನು ಹರಡಿ ಜಗಚ್ಚಕ್ಷುವಿನಂತೆ ಜಗಜಗಿಸಿದ್ದರು . ಅಂದು ಆ ಬಿಂಬವ ಕಂಡೆ ನಾನು ಕಂಡ ಕುಮಾರ ಯೋಗಿ ಕಂಡೆನ್ನ ಕಂಗಳು ಧನ್ಯವಾದವು . ಜನ್ಮ ಸಾರ್ಥಕವಾಯಿತು . ಆಟ ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು , ಬೇಸರ ಬಾರದು .

ನಿಮ್ಮ ನೋಟವನಂತ ಸುಖ ,

ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ ಕುಮಾರ ಯೋಗೀಶ್ವರ ನಿಮ್ಮ ನೋಡಿ ನೋಡಿ

 ಮನದಲ್ಲಿ ರತಿಹುಟ್ಟಿ ನಿಮಿರ್ದವೆನ್ನ ಕಂಗಳು

ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ ನೆಟ್ಟ ನೋಟದಿಂದ ನೋಡಿ ನಲಿಯಲು ಮುಂದುವರಿಯಲಾಗಿದೆ , ಉಲಿಯಲು ಮೊದಲು ಮಾಡಲಾಗಿದೆ .

.

ಈ ಸಂಚಿಕೆಯ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಪೂರ್ವ ಲೇಖನಗಳ ವಿವರ

  1. ಕಾವ್ಯ :” ಶಿವಮಂಗಲವನು ಕೊಡು ಬೇಗ  | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಕಾವ್ಯ : “ಮತ್ತೆ ಬರುವನೆಂದು ಹೇಳಿ ಪೋದೆಯ್ಯ .ಮತ್ತೇಕೆ ಬರಲಿಲ್ಲಿ ಪೇಳೋ ಹಾಲಯ್ಯ ? : ಶ್ರೀ ಚನ್ನವೀರದೇವರು ಕಲ್ಯಾಣಮಠ , ಹುಬ್ಬಳ್ಳಿ
  • ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ವಿಶೇಷ ಲೇಖನಗಳು:

  • ಶ್ರೀ ಅನ್ನದಾನ ಶ್ರೀಗಳವರು ಹಾಗೂ ಶಿವಯೋಗಮಂದಿರ : ಡಾ ಶಿವಬಸವ ಮಹಾಸ್ವಾಮಿಗಳು ನಾಗನೂರ – ಬೆಳಗಾವಿ
  • ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು.: ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  • ಶ್ರೀಗುರು ಅನ್ನದಾನಿ ಮಹಾಸ್ವಾಮಿಗಳವರ  ದರ್ಶನ ದೂರ-ಸಮೀಪ : • ಪ್ರೊ. ಎಸ್. ಎಸ್. ಭೂಸನೂರಮಠ
  • ಶ್ರೀಗುರು ಅನ್ನದಾನ ಮಹಾಸ್ವಾಮಿಗಳು ಮತ್ತು ಶಿಕ್ಷಣ: ಸದಾಶಿವ ಒಡೆಯರ, ಧಾರವಾಡ
  • ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು : ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)
  • ಪೂಜ್ಯಶ್ರೀ ಡಾ. ಶಿವಬಸವ ಸ್ವಾಮಿಗಳು: ಪ್ರಕಾಶ ಗಿರಿಮಲ್ಲನವರ
  • ವೈರಾಗ್ಯದ ಮಲ್ಲಣಾರ‍್ಯರು : ಸಂಗ್ರಹ : ಎ. ಎಸ್. ಪಾವಟೆ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟ
  • ಶ್ರೀ ಗುರು ಕುಮಾರೇಶ್ವರರ ಕಾಣಿಕೆಗಳು : ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ,

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

Related Posts