ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೬

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಅಕ್ಟೋಬರ  ೨೦೨೧ ರ ಸಂಚಿಕೆ

ಶ್ರೀಗುರುವೆ ಸಕಲ ಬಂಧು-ಬಳಗ

ಎರವು ಮಾಡದೆ ನಿಮ್ಮ | ಗುರುಪುತ್ರರೊಳಗೆನ್ನ

ಕಿರಿಯ ಮಗನೆಂದು – ಗುರುವೆ ನೀ ಕರವಿಡಿದು

ಹರುಷದಿಂದೆನಗೆ ಕೃಪೆಯಾಗು || ೨೭ ||

ಶಿವಕವಿಯು ಗುರುವಿನಲ್ಲಿ ತಂದೆ-ತಾಯಿ, ಅಪ್ಪ-ಅಜ್ಜ, ಬಂಧು-ಬಳಗದ ಆರೋಪವನ್ನು ಮಾಡುತ್ತ ಸದ್ಗುರುವನ್ನು ಅತ್ಯಂತ ಆತ್ಮೀಯವಾಗಿ ಕಾಣುತ್ತಾನೆ. ಸುಮಾರು ಹದಿನಾಲ್ಕು ನುಡಿಗಳಲ್ಲಿ ಗುರುವೇ ಸಕಲ ಬಂಧು-ಬಳಗವೆಂಬುದನ್ನು ವ್ಯಕ್ತಗೊಳಿಸಿದ್ದಾನೆ. ಆತ್ಮೀಯರಲ್ಲಿ ತನ್ನ ಮನದಳಲನ್ನು ದೂರ ಮಾಡಿಕೊಳ್ಳುವಂತೆ ಈ ಶರಣ ಕವಿಯು ತನ್ನ ದುಗುಡದುಮ್ಮಾನವನ್ನು ಗುರುಬಂಧುವಿನಲ್ಲಿ ಬಿಡಿಸಿಕೊಂಡಿದ್ದಾನೆ.

ಎರವು ಮಾಡು= ಭೇದಭಾವ ಮಾಡು, ಭಿನ್ನವಾಗಿ ತಿಳಿ, ಗುರುವೆ ! ನಿಮ್ಮಹಿರಿಯರಾದ ಅನೇಕ ಗುರುಪುತ್ರರೊಳಗೆ ಎನ್ನನ್ನು ಭಿನ್ನವಾಗಿ ತಿಳಿಯಬೇಡ. ನನ್ನಲ್ಲಿಭೇದ ಭಾವವನ್ನು ಮಾಡಬೇಡ. ನಿನ್ನದು ವಿಶಾಲ ಮನೋಭಾವ.

“ಅಯಂ ನಿಜ: ಪರೋ ವೇತ್ತಿ ಗಣನಾ ಲಘುಚೇತಸಾಮ್ |

ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ||

ಇವನು ನನ್ನವನು, ಅನ್ಯನೆಂದು ಭಾವಿಸುವದು ಸಣ್ಣ ಮನಸ್ಸಿನವನ ವ್ಯವಹಾರ.ಆದರೆ ಉದಾರ ಚರಿತ್ರವುಳ್ಳ, ವಿಶಾಲ ಹೃದಯವುಳ್ಳ ತಮಗೆ ಜಗತ್ತೇ ಕುಟುಂಬವಾಗಿದೆ. ನನ್ನನ್ನು ಎಲ್ಲರೊಳಗೆ ಚಿಕ್ಕಮಗನೆಂದು ಎಣಿಸು. ಚಿಕ್ಕವನು ಏನೇ ತಪ್ಪುಮಾಡಿದರೂ ಅದು ಕ್ಷಮ್ಯವಲ್ಲವೆ ? ಕ್ಷಮಿಸುವದು ತಂದೆಯ ಧರ್ಮ. ನನ್ನ ಕೈಹಿಡಿದು ಭವಸಾಗರದಿಂದ ಮೇಲೆತ್ತು. ಚಿಕ್ಕವನು ಕೈಹಿಡಿಯದೆ ನಡೆಗಲಿಯಲಾರ. ಬೀಳುತ್ತಿದ್ದರೂ ಹಿಡಿದೆತ್ತುವದು ಸದ್ಗುರುವಿನ ಕಾರ್ಯ. ನೀ ಕೈ ಬಿಟ್ಟರೆ ನಾನು ಭವಸಾಗರದಲ್ಲಿಮುಳುಗಿ ಹೋಗುವೆ. ಬೇಸರ ತಾಳದೆ ನನ್ನನ್ನು ಉದ್ಧರಿಸು. ಸಂತೋಷದಿಂದ ಕೃಪೆಮಾಡು.

ಮಾಯಾ ಪಾಶವ ಹರಿದು | ಕಾಯೋ ನೀನೆನ್ನುವನು.

ತಾಯಿ ಜನ್ಮದೊಳು-ಬೇಡಿದುದೀವ ಗುರು-

ತಾಯಿ ನೀನೆಗೆ ಕೃಪೆಯಾಗು || ೨೮ ||

ಜಗತ್ತಿನಲ್ಲಿ ತಾಯಿಗೆ ಅಗ್ರಸ್ಥಾನವಿದೆ. ‘ಮಾತೃ ದೇವೋಭವ’ವೆಂದು ವೇದವು ತಾಯಿಯನ್ನು ಗೌರವಿಸಿದೆ. ತಾಯಿ ಮೊದಲನೆಯ ದೇವರೆಂದು ಎಲ್ಲರೂ ಅದರ ಮಾಡಿದ್ದಾರೆ. ‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲವೆಂಬ ನಾಣ್ಣುಡಿಯನ್ನು ಬಲ್ಲ ಶಿವ ಕವಿಯು ಗುರುವಿನಲ್ಲಿ ಮೊದಲು ತಾಯಿತನವನ್ನು ಕಾಣುತ್ತಾನೆ.

ಮಾಯಾಕೋಲಾಹಲಿಗಳೆನಿಸಿದ ಅಲ್ಲಮ ಪ್ರಭುಗಳು ಮಾಯೆಯ ವ್ಯಾಖ್ಯೆ ಯನ್ನು ಮಾರ್ಮಿಕವಾಗಿ ಮಾಡಿದ್ದಾರೆ.

ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ.

ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ.

ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.

ಹೊನ್ನು, ಹೆಣ್ಣು, ಮಣ್ಣುಗಳನ್ನು ವೇದಾಂತಿಗಳು ಮಾಯೆಯೆಂದು ಭಾವಿಸು ತ್ತಾರೆ. ಆದರೆ ಅವು ನಿಜವಾದ ಮಾಯೆಯಲ್ಲ. ಅವುಗಳೆಲ್ಲ ತನಗೇ ಬೇಕೆಂಬ ಮನದ ಅತಿಯಾಸೆಯೇ ಮಾಯೆಯಾಗಿದೆ. ಮನಸ್ಸಿನ ಕಾಮನೆಗಳೇ ಮಾಯೆಯಾಗಿ ಪರಿಣಮಿಸುತ್ತವೆ. ಮನ ಸುಮನವಾದರೆ ಆಶೆ ನಿರಾಶೆಯಾಗುವದು. ಮಾಯಾಪಾಶಹರಿಯುವದು. ಅಕ್ಕಮಹಾದೇವಿಯೂ ಕೂಡ ತೆರಣಿಯ ಹುಳದ ಉದಹಾರಣೆಯನ್ನು ಕೊಟ್ಟು ಮಾನವನು ಆಶಾ ಪಾಶದಿಂದ ಬಂಧಿತನಾಗಿ ಮನಬಂದಂತೆ ನಡೆಯುವನು. ಈ ಆಶೆಯನ್ನು ದೂರು ಮಾಡೆಂದು ಶ್ರೀ ಗುರುದೇವ ಚನ್ನಮಲ್ಲಿಕಾರ್ಜುನನಲ್ಲಿ ಬೇಡಿ ಕೊಂಡಿದ್ದಾಳೆ.

ಮಾಯೆಯೆಂದರೆ ಅಜ್ಞಾನವೆಂತಲೂ ಅರ್ಥ ಮಾಡಬಹುದು. ಅಜ್ಞಾನದಿಂದ ಪಾರಮಾರ್ಥವನ್ನು ಮರೆತು ಲೌಕಿಕ ವ್ಯವಹಾರದಲ್ಲಿ ಜೀವಾತ್ಮನು ಬಂಧಿತನಾಗುವನು. ಭವಚಕ್ರದಲ್ಲಿ ಸಿಲುಕುವನು.ಈ ಮಾಯಾಪಾಶದಿಂದ ಬಿಡುಗಡೆಯಾಗಬೇಕಾದರೆ ಗುರು ಕೃಪೆ ಮೂಲವಾಗಿದೆ. ಮಾನವನ ತಾಯಿಯ ಗರ್ಭದಲ್ಲಿರುವಾಗ ಈ ತಿಂಗಳಿಗೆ ಪೂರ್ವಜನ್ಮದ ಸ್ಮರಣೆಯಾಗುತ್ತದೆ. ಆಗ ಜೀವನು ತನ್ನ ತಪ್ಪಿನ ಅರಿವಾಗಿ ದೇವರಲ್ಲಿ ಪ್ರಾರ್ಥಿಸುತ್ತಾ… ದೇವಾ ! ಎನ್ನ ತಪ್ಪು ಅನಂತ ನಿನ್ನ  ಸ್ಯೆರಣೆಗೆ ಲೆಕ್ಕವಿಲ್ಲ.

ಇನ್ನು ಮೇಲೆ  ತಪ್ಪದಂತೆ ಇರಿಸು,ನಿನ್ನ ಸ್ಮರಣೆಯನ್ನು ಬಿಡುವುದಿಲ್ಲ. ಈ ಭವ ಬಂಧನವನ್ನು ಸಾಕುಮಾಡು  ಮುಕ್ತನನ್ನಾಗಿಸು  ಲಿಂಗವನ್ನು ಮರೆತ  ಕಾರಣ ಪುನಪುನಃ ಹುಟ್ಟಬೇಕಾಯಿತು ಜಂಗಮನನ್ನು ಜರಿದವಾಗಿ ಮಾಯಾಪಾಶದಿಂದ ಬಂಧಿತನಾದೆ ಶಿವ ಶಿವಾ! ಶರಣ ಮಾರ್ಗವನ್ನು ಕರುಣಿಸಿ ಭವಬಂಧನದಿಂದ ದೂರ ಮಾಡೆಂದು ಬೇಡಿಕೂಳ್ಳುತ್ತಾರೆ.ಆದರೆ ಪ್ರಸೂತವಾಯು ತಾಯಿ ಗರ್ಭಕೋಶದಿಂದ ಹೊರನೂಕಿದಾಗ ಆ ಬೇಡಿಕೆ ,ಆ ಪ್ರಾರ್ಥನೆ ,ಆ ಪೂರ್ವಜನ್ಮದ  ಸ್ಮರಣೆ ಮರೆತು ಬಿಡುತ್ತದೆ . ಜೀವಾತ್ಮನು ಮರೆತರೂ ಸುದ್ಗುರುನಾಥನು ಅದನ್ನೆಲ್ಲ ಕರುಣಿಸುತ್ತಾನೆ.ಜೀವದಾತೆಯಾದ ತಾಯಿಯು ಶಿಶುವಿಗೆ ಬೇಡಿದ್ದನ್ನ ಕೊಟ್ಟು ಸಂತೈಸುತ್ತಾಳೆ. ತಾಯಿ ಕೊಡುವದು ಶಕ್ತ್ಯಾನುಸಾರ ಅದು ಭೌತಿಕ ಬೇಡಿಕೆಗಳನ್ನು  ಮಾತ್ರ .ಗುರು ತಾಯಿ ಕೊಡುವುದು ಅಲೌಕಿಕವಾದುದನ್ನು. ಗುರು ತಾಯಿ ಕೊಡುಗೆಗೆ ಯಾವುದೂ ಸಮಾನವಲ್ಲ.

ಓ ಗುರುವೆ! ಗುರು ತಾಯಿಯೆ !  ನೀ ಕರುಣಿಸು  ನಾನು ನಿನ್ನ ಕಿರಿಯ ಕುವರ  ಚಿಕ್ಕಮಗನು  ತಾಯಿಗೆ ಬಲು ಪ್ರೀತಿಯಲ್ಲವೆ? ಕರುಣೆದೋರಿ ನನ್ನ ಮಾಯಾಪಾಶವನ್ನು ಹರಿದು ಹಾಕು. ಭೌತಿಕ ಬಯಕೆಯನ್ನು  ಕಳೆದು ತಾಯಿಯ ಗರ್ಭದಲ್ಲಿ ಬೇಡಿದ ಬಯಕೆಗಳನ್ನು ಕೈಗೂಡಿಸು.  ನಿನ್ನ ಕರಗರ್ಭದಲ್ಲಿ ನನ್ನನ್ನು  ಪುನರ್ಜಾತನನ್ನಾಗಿ ಮಾಡು. ನಿನ್ನ ಕರಗರ್ಭದಲ್ಲಿ ಉದಯವಾಗುವದರಿಂದ ಸಂಸಾರ ಬಂಧನ ಬಿಡುವದು. ನನ್ನ ಮಲತ್ರಯಗಳನ್ನು ಕಳೆದು ಕರುಣಿಸು . ಮಗುಬೇಡಿದ್ದನೆಲ್ಲಾ ತಾಯಿ ಕೊಡುವಂತೆ ನನ್ನ ಈ ಬೇಡಿಕೆಯನ್ನು ಪೂರೈಸಿ ಗುರುತಾಯಿಯಾಗು . ನಿನ್ನ ಹೃದಯ ವಿಶಾಲವಾದುದು.ಅನುಪಮವಾದುದು. ಈ ಬಳಲುವ ಕಂದನ ಬಂಧನ ಬಿಡಿಸು .ಇದು ನಿಮ್ಮ ಧರ್ಮ.

ಶಿವಕವಿಯು ಹಿಂದೆ ತನ್ನನ್ನು ಕಿರಿಯ ಮಗನೆಂದು ಹೇಳಿಕೊಂಡು ಇಲ್ಲಿ ಗುರು ತಾಯಿಯ ಪ್ರಸ್ತಾಪ ಮಾಡುವದು ಅತ್ಯಂತ ಮಾರ್ಮಿಕವಾಗಿದೆ. ತಾಯಿಗೆ  ಚಿಕ್ಕಮಗನ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ಇದು  ಲೌಕಿಕ ಅನುಭವ . ಕವಿಯಲ್ಲಿ  ಲೌಕಿಕ  ಮತ್ತು ಪಾರಮಾರ್ಥಿಕ ಅನುಭವ ಸಾಕಷ್ಟಿತ್ತೆಂಬುದು ವ್ಯಕ್ತವಾಗುತ್ತದೆ. ಮತ್ತು ಸದ್ಗುರು ನಾಥನು ತೀವ್ರವಾಗಿ ಕೃಪೆಯನ್ನುಂಟು ಮಾಡಲೆಂಬ ಜಾಣ್ಮೆಯೂ  ಸ್ಪಷ್ಟವಾಗುತ್ತದ.

Related Posts