ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-24

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ-

ದೊಲಿದು ಲಿಂಗಾಂಗ-ಸುಲಭಯೋಗವನೊಡನೆ

ಕಲಿಸಿದಾ ಗುರುವೆ ಕೃಪೆಯಾಗು     I ೧೦ II

 ಯೋಗಮಾರ್ಗದ ವಿಚಾರಕ್ಕೆ ವಿರಾಮವಿತ್ತು ಅವುಗಳಿಗಿಂತಲೂ ಮಿಗಿಲಾದ ಲಿಂಗಾಂಗಯೋಗದ ಸುಲಭತೆಯನ್ನು ಮತ್ತು ಸಾರ್ಥಕತೆಯನ್ನು ಸರಳವಾಗಿ ಸಾರುತ್ತಾನೆ ಶಿವಕವಿಯು.  

ಯೋಗ ಮಾರ್ಗದಲ್ಲಿ ಮಂತ್ರ, ಲಯ, ಹಠ, ರಾಜಯೋಗಳು ಮುಖ್ಯವಾದ ನಾಲ್ಕು ಯೋಗಗಳಾದರೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಯೋಗಗಳು ಹಲವಾರು ಇವೆ. ಗೀತೆಯಲ್ಲಿ ಪ್ರತಿಯೊಂದು ಅಧ್ಯಾಯದ ಒಂದೊಂದು ವಿಷಯವೂ ಒಂದೊಂದು ಯೋಗವೆಂಬುದಾಗಿಯೇ ಪ್ರತಿಪಾದಿತವಾಗಿದೆ. ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಜ್ಞಾನ-ವಿಜ್ಞಾನ ಯೋಗ, ರಾಜವಿದ್ಯಾ-ರಾಜಗುಹ್ಯಯೋಗ, ವಿಭೂತಿಯೋಗ, ಭಕ್ತಿಯೋಗ ಮೊದ ಲಾದವುಗಳು ವಿವರಿಸಲ್ಪಟ್ಟಿವೆ. ಸ್ವಾಮಿ ವಿವೇಕಾನಂದರು ಕರ್ಮಯೋಗ, ಜ್ಞಾನ ಯೋಗ, ರಾಜಯೋಗ, ಭಕ್ತಿಯೋಗಗಳನ್ನು ವಿಶ್ಲೇಷಿಸಿದ್ದಾರೆ. ಇವೆಲ್ಲ ಹಲವಾರು ಯೋಗಗಳನ್ನು ಸಾಧನೆ ಮಾಡಿದರೆ ಏಕೈಕ ಫಲವು ಸಿಕ್ಕಬಹುದು. ಆದರೆ ಸಂಪೂರ್ಣ ಫಲ ಸಿಕ್ಕಲಾರದೆಂಬ ಅಭಿಪ್ರಾಯ ಈ ಕೃತಿಕರ್ತರದು. ಅಲ್ಲದೆ ಶರಣ ಸಿದ್ಧಾಂತವೂ ಇದನ್ನೇ ಅನುಮೋದಿಸಿದೆ.

ಹರಭಕ್ತನಾದ ಹರದ ಶರಣನು ತನ್ನ ಸ್ವಾನುಭಾವವನ್ನು ವಿವರಿಸುತ್ತ ಅಷ್ಟಾಂಗ ಯೋಗಗಳಿಗಿಂತ ತಾಂತ್ರಿಕ ಮುದ್ರೆಗಳಿಗಿಂತ ಈ ಲಿಂಗಾಂಗ ಯೋಗದ ಸಹಜತೆಯನ್ನು ತಾತ್ವಿಕತೆನ್ನು ಬಿತ್ತರಿಸುತ್ತಾನೆ. ಕರುಣಾಳು ಗುರುರಾಯನು ಒಲುಮೆಯಿಂದ ಎನಗೆ ಲಿಂಗಾಂಗ ಯೋಗವನ್ನು ಬೋಧಿಸಿದನು. ಇದು ಸುಲಭ ಹಾಗೂ ಸಹಜ ಯೋಗವು. ಎಲ್ಲ ಯೋಗಗಳಲ್ಲಿ ರಾಜಯೋಗವು ಮಿಗಿಲೆನಿಸಿದರೆ  ಅವೆಲ್ಲವುಗಳಿಗೂ ರಾರಾಜಿಸುವ ಈ ಲಿಂಗಯೋಗ, ಅಥವಾ ಶಿವಯೋಗವಾಗಿದೆ. ಇದರಲ್ಲಿ ಎಲ್ಲ ಯೋಗಗಳ ಸಾರ ಅಡಕವಾಗಿದೆ. ಅಂತೆಯೇ ಶಿವಯೋಗವನ್ನು ಯೋಗರಾಜವೆಂದು ಬಣ್ಣಿಸಿದ್ದಾರೆ.  

ಒಂದೊಂದು ಪದಾರ್ಥಗಳಲ್ಲಿ ಒಂದೊಂದು ಗುಣವಿರುವಂತೆ ಒಂದೊಂದು ಯೋಗ ಸಾಧನೆಯಿಂದ ಏಕೈಕ ಫಲ ಲಭ್ಯವಾಗಬಹುದು. ಅನೇಕ ಸಾರವತ್ತಾದ ವಸ್ತುಗಳಿಂದ ತಯಾರಿಸಿದ ‘ಸಾರು’ (ಸಾಂಬಾರ) ವನ್ನು ಊಟದ ಕೊನಗೆ ಸುರಿದು

ಸಂತೃಪ್ತರಾಗುತ್ತಾರೆ. ಹಾಗೇ ಈ ಶಿವಯೋಗದಲ್ಲಿ ಮಂತ್ರಾದಿ ನಾಲ್ಕು ಯೋಗಗಳು, ಕರ್ಮ, ಭಕ್ತಿ, ಜ್ಞಾನ ಯೋಗಗಳು ಮುಪ್ಪುರಿಗೊಂಡು ಶೋಭಿಸುವ ಶಿವಯೋಗವು ಶಿವಭಕ್ತನನ್ನು ಮುಕ್ತನನ್ನಾಗಿಸುವದು. ಶಿವಯೋಗ ಸಾಧಿಸಿದ ಮೇಲೆ ಪುನರ್ಜನ್ಮವಿಲ್ಲ ಕರ್ಮದ ತೊಡಕಿಲ್ಲ. ಭವ-ಬಂಧನದ ಸೋಂಕಿಲ್ಲ.

ಶಿವಲಿಂಗಭಕ್ತನು ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳನ್ನು ಮೈಗೂಡಿಸಿಕೊಳ್ಳುತ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಸ್ಥಲಗಳಲ್ಲಿ ನಿಲ್ಲುತ್ತ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಗಳನ್ನು ಆರಾಧಿಸುತ್ತ ಅವುಗಳಲ್ಲಿ ಬೆರೆಯುವನು. ಗಂಧ, ರಸ, ರೂಪ, ಸ್ಪರ್ಶ ಶಬ್ದ ಹಾಗೂ ಇವುಗಳಿಂದ ದೊರೆಯುವ ತೃಪ್ತಿಯೆಂಬ ಪದಾರ್ಥಗಳನ್ನು ಸುಚಿತ್ತ, ಸುಬುದ್ದಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವಗಳೆಂಬ ಹಸ್ತದಿಂದ ಸುಗಂಧ, ಸುರಸ, ಸುರೂಪ, ಸುಸ್ಪರ್ಶ, ಸುಶಬ್ದ, ಸಂತೃಪ್ತಿಗಳೆಂಬ ಪ್ರಸಾದಗಳನ್ನಾಗಿ

ಉದಾತ್ತೀಕರಿಸಿ ಕೊಂಡು ಆಯಾ ಲಿಂಗ ಮುಖಕ್ಕೆ ಸಮರ್ಪಿಸಿ ಪರಮಾನಂದದಲ್ಲಿ ಲೀನನಾಗಿ ಲೋಲಾಡುವನು. ಇದಲ್ಲದೆ ಲಿಂಗಗತ ಶಕ್ತಿಗಳನ್ನು, ಪ್ರಣವಗಳನ್ನು ಕಲೆಗಳನ್ನು ಸಾದಾಖ್ಯಗಳನ್ನು, ಅಧಿದೇವತೆಗಳನ್ನು ಮತ್ತು ಲಕ್ಷಣಗಳನ್ನು ಅಳವಡಿಸಿ

ಕೊಳ್ಳುವನು. ನೂರೊಂದು ಸ್ಥಲವನ್ನರಿತು ಇನ್ನೂರಾ ಹದಿನಾರು (೨೧೬) ಸಕೀಲುಗಳಲ್ಲಿ ಆಚರಿಸುವನು. ಇಂಥ ಅಸದೃಶವಾದ ಆತ್ಮವಿಜ್ಞಾನಿಯಾಗಿ ಶಿವಯೋಗಿಯೆನಿಸುವನು.

 ಪರಮ ಗುರುವು ಹರಸುವ ಈ ಸರಳವಾದ ಶಿವಯೋಗದಲ್ಲಿ ಯಮಾ ದ್ಯಷ್ಟಾಂಗ ಯೋಗಗಳೂ, ಕ್ರಿಯಾ-ಜ್ಞಾನ-ಭಕ್ತಿ ಸಮನ್ವಯವೂ ಹಾಸುಹೊಕ್ಕಾಗಿದೆ. ಅದು ಕಾರಣ ಈ ಲಿಂಗಾಂಗ ಯೋಗಕ್ಕೆ ಇತರ ಯೋಗಗಳು ಸರಿಬಾರವು.

ಓ ನಿರಂಜನ ನಿರಾಭಾರಿ ಗುರುವೆ ! ಇಂಥ ಸುಲಭ ಸಹಜವಾದ ಲಿಂಗಾಂಗ ಯೋಗವನ್ನು ಮೈಗೂಡಿಸಿಕೊಳ್ಳುವ ಅನುವನ್ನು ಆಚರಿಸಿ ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿ ಕಾಪಾಡು. ನಿನ್ನ ಕೃಪೆಯಿಲ್ಲದೆ, ಮಾರ್ಗದರ್ಶನವಿಲ್ಲದೆ ಈ ಶಿವಯೋಗ ಅರಿವಿಗೆ ಬರಲಾರದು.

ಈ ಲಿಂಗ ನಿನ್ನಂಗ | ಕಾಲಿಂಗನವಾಗಲ್ಕೆ

ನೀ ಲಿಂಗ ನಿನ್ನ-ಮೈಲಿಂಗವೆಂದೆನ್ನೊಳ್

ಕೀಲಿಸಿದ ಗುರುವೆ ಕೃಪೆಯಾಗು     ||೧೦೭||

 ಲಿಂಗಾಂಗಯೋಗದ ಮಹತ್ವವನ್ನು ಪುನಃ ಪುನಃ ವರ್ಣಿಸಿದ್ದಾನೆ. ಶಿವಕವಿಯು. ಗುರುಕರುಣಿಸುವ ಇಷ್ಟಲಿಂಗ ಪ್ರತ್ಯಕ್ಷ ಕಾಣುವದು. ಈ ಲಿಂಗವು ಶಿಷ್ಯನಂಗವನ್ನು ಆಲಿಂಗಿಸುತ್ತಲೇ ಅಂಗವನ್ನು ಲಿಂಗಮಯವನ್ನಾಗಿಸುವದು. ಒಳಗಿರುವ ಚೈತನ್ಯವು

ಗುರು-ಲಿಂಗ-ಜಂಗಮ ಕೃಪೆಯಿಂದ ಹೊರಗೆ, ವ್ಯಾಪಿಸಿ ಒಳಹೊರಗು ಬೆಳಗುವದು. ಲಿಂಗಚೈತನ್ಯವು ಜಾಗೃತಗೊಂಡು ಅಜ್ಞಾನ-ದುರ್ಭಾವನೆಗಳನ್ನು ದೂರಗೊಳಿಸುವದು. ಸೂರ್ಯನ ಸನ್ನಿಧಿಯಲ್ಲಿ ಕತ್ತಲಿರಲು ಸಾಧ್ಯವೆ ! ಶ್ರೀಗುರುವು ಶಿಷ್ಯನ ಮಸ್ತಕದ ಚಿಚೈತನ್ಯವನ್ನು ತನ್ನ ಭಾವದಲ್ಲಿ ಭಾವಿಸಿ  ಆತನ ಹೃದಯ ಕಮಲವನ್ನು ಅರಳಿಸಿ ಮಹಾಲಿಂಗವನ್ನು ಕರಕಮಲದಲ್ಲಿ ಕಾಣಿಸು ವಂತೆ ಕರುಣಿಸುವಾಗ ತನು-ಮನ-ಭಾವಗಳನ್ನು ಹಿಂದೆ ವಿವರಿಸಿದಂತೆ ಸಂಸ್ಕರಿಸಿ ಪರಿಶುದ್ಧಗೊಳಿಸುವನು “ಲಿಂಗವನ್ನು ಧರಿಸಿಕೊಂಡ ನೀನು ಸದಾ ಶುದ್ಧ’ ನೆಂದು ಬೋಧಿಸುವನು. ಸಂಚಿತ-ಪ್ರಾರಬ್ಧ-ಆಗಾಮಿಕರ್ಮಗಳಿಂದ ಮುಕ್ತನನ್ನಾಗಿಸುವನು. ತ್ರಿಮಲಗಳ ನಾಶ ಮಾಡುವನು. ಅಗ್ನಿಯನ್ನು ಆವರಿಸಿದ (ಸಂಪರ್ಕಿಸಿದ) ಕಟ್ಟಿಗೆಯು ಅಗ್ನಿಯೇ ಆಗುವಂತೆ; ಲಿಂಗವನ್ನು ಧರಿಸಿದವನು ಲಿಂಗಮಯನೇ ಆಗುವನು. ಆಗಮದಲ್ಲಿ ಉಕ್ತವಾದ ಉತ್ತಮ ಉದಾಹರಣೆ ಉದಾಹರಿಸಲು ಯೋಗ್ಯವಾಗಿದೆ. ಈ ಮಾತನ್ನು ಶ್ರೀಪತಿಪಂಡಿತರು ಶ್ರೀಕರಭಾಷ್ಯದಲ್ಲಿ ಒತ್ತಿ ಹೇಳಿದ್ದಾರೆ-

“ಮಾನವಃ ಶಿವಯೋಗೇನ ಶಿವೋ ಭವತಿ ನಾನ್ಯಥಾ |

ಭ್ರಮಮರಚಿಂತಾಯಾಂ ಕೀಟೋಪಿ ಭ್ರಮರಾಯತೇ”

ಮನೆಗಳಲ್ಲಿ ಇದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಆದರೆ ಆ ವಿಷಯವನ್ನು ಅನುಭವದಲ್ಲಿ ತಂದುಕೊಳ್ಳುವದಿಲ್ಲ, ಕುಡೀಕುಕಾರವೆಂಬ ಭ್ರಮರವು ಬಾಯಲ್ಲಿ ಮಣ್ಣನ್ನು ತಂದು ಬಾಗಿಲು ಕಿಡಿಕಿಗಳ ಸಂಧಿಯಲ್ಲಿ ಮನೆಮಾಡುತ್ತದೆ. ಅದರಲ್ಲಿ ಸಣ್ಣ

ಕೀಡೆಯನ್ನು ತಂದು ತನ್ನ ಭಾವವನ್ನು ನಿತ್ಯವೂ ಭಾವಿಸುತ್ತದೆ. (ತುಂಬುತ್ತದೆ) ಕ್ರಮೇಣ ಕೆಲವು ದಿನಗಳಲ್ಲಿ ಕ್ರೀಡೆಯೂ ಆ ಭ್ರಮರದಂತಾಗುವದು. ಅಂದಮೇಲೆ ಮಾನವನು ಶಿವಲಿಂಗದ ಸಂಪರ್ಕದಿಂದ ಶಿವಮಯನಾಗುವದರಲ್ಲಿ ಯಾವ ಸಂದೇಹವಿಲ್ಲ. ಶಿವನು ತನ್ನ ಸೃಷ್ಟಿಯಲ್ಲಿ ಅನಂತ ಉಪದೇಶವನ್ನು ತುಂಬಿರಿಸಿದ್ದಾನೆ. ಅದನ್ನು ತಿಳಿದುಕೊಳ್ಳುವ ಅಂತರ್ದೃಷ್ಟಿಯು ನಮ್ಮಲ್ಲಿ ಬೆಳೆದು ಬಂದರೆ ನಾವು ನಿಜವಾಗಿಯೂ ಸುಜ್ಞಾನಿಗಳಾಗುತ್ತೇವೆ. ಅರಿವನ್ನು ಕುರುಹನ್ನಾಗಿ ಕರುಣಿಸಿ

ಇಂಥ ಅಂರ್ತದರ್ಶನ ಮಾಡಿಸುವವನೇ ಗುರುವು. ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡರೆ ಅರಿವುಳ್ಳವನನ್ನಾಗಿಸುವನು. ಲಿಂಗವೇ ತಾನಾಗುವದರಲ್ಲಿ ಯಾವ ನ್ಯೂನತೆಯೂ ಇರದು.

 ಓ ಗುರುವೆ ! ಲಿಂಗವನ್ನು ಕರುಣಿಸಿ ಲಿಂಗ ಗುಣಗಳನ್ನು ಎನ್ನಂಗದಲ್ಲಿ ಕೀಲಿಸಿ ಲಿಂಗಮಯನನ್ನಾಗಿ ಮಾಡಿದ ನಿನಗೆ ನಾನು ಚಿರಋಣಿ, ನಿನ್ನ ಋಣ ಎಂದೆಂದಿಗೂ ತೀರದು.  ಮನುಷ್ಯನಾಗಿ ಬಾಳಿ ಬದುಕಿದ ಮೇಲೆ ಮಾತೃಋಣ, ಪಿತೃಋಣ, ಸಮಾಜ

ಋಣಗಳನ್ನು ತೀರಿಸಲೇಬೇಕು. ಅವರವರ ಉಪಕೃತಿಯನ್ನು ಸ್ಮರಿಸಿ ತಕ್ಕ ಕರ್ತವ್ಯ ನಿಷ್ಠನಾದರೆ ಆ ಋಣಗಳು ತೀರಿದಂತಾಗುವವು.

ಈ ಲಿಂಗವೆ ಸತ್ಕ್ರಿ| ಮೂಲ ಸಮ್ಯಕ್ ಜ್ಞಾನ

ದಾಲಯ ನೀ ತ್ರೈ-ಕಾಲ ಪೂಜಿಪುದೆಂದು

ಪಾಲಿಸಿದ ಗುರುವೆ ಕೃಪೆಯಾಗು         | ೧೦೮ |

ಲಿಂಗಭಕ್ತನು ಸರ್ವಾಂಗಲಿಂಗಮಯನಾಗಲು ಲಿಂಗಪೂಜೆಯೇ ಸಾಧನವು. ಲಿಂಗಪೂಜೆಯೇ ಶಿವಯೋಗವು, ಬಾಲಲೀಲಾ ಮಹಾಂತೇಶ್ವರ ಪುರಾಣದಲ್ಲಿ ಕವಿರತ್ನ ಚನ್ನಕವಿಗಳು-

ಶಿವಪೂಜೆಯೇ ಮುಖ್ಯ ಶಿವಯೋಗಮೆನಿಸುವದು |

ಶಿವಪೂಜೆಯಿಲ್ಲದಗೆ ಮುಕ್ತಿ ಘಟಿಸದು ಮತ್ತೆ ʼ’|

ಶಿವಪೂಜೆಗೆಣೆಯುಂಟೆ ಮೂಜಗದೊಳು‘ʼ (ನಾಲ್ಕನೆಯ ಸಂಧಿ)

ಶಿವಪೂಜೆಯೇ ಮುಖ್ಯ ಶಿವಯೋಗವೆಂತಲೂ ಅದಿಲ್ಲದೆ ಮುಕ್ತಿ ದೊರಕದೆಂದೂ ಆ ಶಿವಯೋಗದ ಮಹತ್ವವನ್ನು ತಿಳಿಸಿದ್ದಾರೆ. ಈ ಶಿವಯೋಗದಲ್ಲಿ ಸತ್ಕ್ರಿಯೆಗಳು ಸಮ್ಯಕ್ ಜ್ಞಾನವು ಸಮನ್ವಯವಾಗಿರುತ್ತವೆ. ಅಂತೆಯೇ ಶಿವಯೋಗವು ಜ್ಞಾನ ಕ್ರಿಯೆಗಳ ಸಮನ್ವಯ ಮಾರ್ಗವಾಗಿದೆ. ಇಂಥ ಶಿವಯೋಗವನ್ನು ಸಾಧಿಸುವ ಮೂಲವೇ ಲಿಂಗವು.  ಅದುಕಾರಣ ಈ ಲಿಂಗವು ಸತ್ಕ್ರಿಯಾ ಮೂಲವೂ, ಸಮ್ಯಕ್ ಜ್ಞಾನಕ್ಕೆ ಆಲಯವೂ ಆಗಿದೆ. ಲಿಂಗವಿಲ್ಲದೆ ಮಾಡುವ ಕ್ರಿಯೆಗಳು ಜಡಕರ್ಮಗಳಾಗುತ್ತವೆ. ಜ್ಞಾನಪರಿಪೂರ್ಣವಾಗುವದಿಲ್ಲ. ಗುರುಕರಜಾತನಾದ ಮೇಲೆಯೇ ಲಿಂಗಕ್ರಿಯೆಗಳು ಲಿಂಗಜ್ಞಾನವು ಸಮನಿಸುತ್ತವೆ. ಲಿಂಗವು ಸಮರಸದ ಸ್ರೋತವೆನಿಸುವದು.

ಲಿಂಗಪೂಜೆಯಲ್ಲಿ ಸಮ್ಯಕ್ ಜ್ಞಾನವುಳ್ಳವನಾಗಿ ಸತ್ಕ್ರಿಯೆಗಳನ್ನು ಮಾಡುತ್ತಿರುವದರಿಂದ ಕರ್ಮವು ಜಡವಾಗಲಿ, ಬಂಧನಕಾರಿಯಾಗಲಿ ಆಗುವದಿಲ್ಲ. ಇಲ್ಲಿ ಯಾವ ಫಲಾಪೇಕ್ಷೆಯಾಗಲಿ ಇರುವದಿಲ್ಲ. ಆದರೂ ಅಷ್ಟಾವರಣದ ಪ್ರತ್ಯಕ್ಷ ಫಲಗಳೆನಿಸಿದ ಪಾದೋದಕ-ಪ್ರಸಾದಗಳು ಕೈ ಮೇಲೆಯೇ ದೊರೆಯುವವು. ಭಗವದ್ಗೀತೆಯಲ್ಲಿಯೂ ಯಾವುದೇ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ಮಾಡು, ಆದರೆ ಅ ಫಲದಲ್ಲಿ ಮಾತ್ರ ನಿನಗೆ ಅಧಿಕಾರವಿಲ್ಲವೆಂದು ತಿಳಿಸಿದೆ. ಆದರೆ ನಮ್ಮ ಶರಣ ಸಿದ್ಧಾಂತವು

 ʼʼಕೂಡಲ ಸಂಗಮದೇವರನ್ನು ಪೂಜಿಸಿದ ಫಲ ಕೈಮೇಲೆʼ’

 ಎಂದು ಬಣ್ಣಿಸಿದೆ. ಗುರುವು ಶಿಷ್ಯನ ಅಂಗದಲ್ಲಿ ಕೀಲಿಸಿದ ಲಿಂಗ ಕಲೆಗಳನ್ನು ಅರುವಿನಲ್ಲಿ ತರುವದೇ ಸತ್ಕ್ರಿಯೆಯಾಗುವದು. ಈ ಕಾರ್ಯ ಶಿವಪೂಜೆಯಲ್ಲಿ ಸಾಂಗವಾಗುವದು. ಆಗಬೇಕು. ಅಂತೆಯೇ ಗುರುವು ಈ ನಿನ್ನ ಲಿಂಗವು ಸತ್ಕ್ರಿಯಾ ಜ್ಞಾನಗಳ ಸ್ವರೂಪವಾಗಿದೆ. ಅದನ್ನು ನೀನು ಪೂಜಿಸಿ ಲಿಂಗವೇ ನೀನಾಗೆಂದು ಉಪದೇಶಿಸಿದ್ದಾನೆ. ಗುರೂಪದೇಶವನ್ನು ಅನುಸಂಧಾನ ಮಾಡಿಕೊಳ್ಳುವದೇ ಶಿವಯೋಗವು.

ʼ’ಜ್ಞಾನಂ ಶಿವಮಯಂ, ಭಕ್ತಿಃ ಶೈವೀ, ಧ್ಯಾನಂ ಶಿವಾತ್ಮಕಂ |

ಶಿವವ್ರತಂ ಶಿವಾರ್ಚೇತಿ ಶಿವಯೋಗೋ ಹಿ ಪಂಚಧಾ ||

ಶಿವಯೋಗವು ಶಿವಜ್ಞಾನ ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನ ಎಂದು ಐದು ತೆರನಾಗುತ್ತದೆ. ಸದ್ಗುರು ಕೃಪೆಯಿಂದ ಇಷ್ಟಲಿಂಗದ ಸ್ವರೂಪ ಜ್ಞಾನವು ಅಳವಡವದು. ಲಿಂಗಜ್ಞಾನವಿಲ್ಲದೆ ಭಕ್ತಿಧ್ಯಾನಾದಿಗಳು ಸಾಧ್ಯವಾಗುವದಿಲ್ಲ. ಗುರು ಕರುಣೆಯಿಂದ ಶಿವಜ್ಞಾನೋದಯವಾಗುವದು. ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರಗತ ಮಹಾಚೈತನ್ಯವನ್ನು ಕರದಿಷ್ಟ ಲಿಂಗವನ್ನಾಗಿ ಕಂಡು ಶಿಷ್ಯನು ಭಯ ಕ೦ಪಿತನಾಗುವದೇ ಭಕ್ತಿಯ ಬೀಜವು ಮೈದೋರುವದು. ಚಿಚ್ಚೈತನವೇ ಪ್ರತ್ಯಕ್ಷವಾದ ಮೇಲೆ ತನ್ಮಯತೆಯುಂಟಾಗುವದೇ ಧ್ಯಾನಕ್ಕೆ ಮೂಲವಾಗುವದು. ಇಂಥ ಪರವಸ್ತುವೇ ಲಿಂಗವೆಂದರಿದ ಬಳಿಕ ಎಲ್ಲವೂ ಶಿವಮಯವೆಂತಲೂ ಶಿವಲಿಂಗಕ್ಕಿಂತ ಭಿನ್ನ ದೇವರಿಲ್ಲವೆಂಬ ದೃಢ ನಿಶ್ಚಯವೇ ಶಿವವೃತವಾಗುವದು. ಶಿವವ್ರತಿಯಾದ ಲಿಂಗಭಕ್ತನು ಗುರು ಪೇಳಿದಂತೆ ಇಷ್ಟಲಿಂಗವನ್ನು ಪೂಜಿಸಿ ಪೂರ್ಣಲಿಂಗನಾಗುವದೇ ಶಿವಾರ್ಚನೆ. ಈ ಐದು ಸತ್ಕ್ರಿಯೆಗಳ ಸಾಕ್ಷತ್ಕಾರವೇ ಶಿವಯೋಗವಾಗಿರುವದು.  

ಅಷ್ಟಾವರಣ ಸಂಪನ್ನನೂ ಪಂಚಾಚಾರ ಪರಾಣಯನೂ ಆದ ಸದ್ಭಕ್ತನು ಮೆಲ್ಲ ಮೆಲ್ಲನೆ ಷಟ್‌ಸ್ಥಲಗಳನ್ನು ಮೈಗೂಡಿಸಿಕೊಳ್ಳುತ್ತ ಐಕ್ಯನೆನಿಸಿ ಮಹಾಲಿಂಗ ದೊಡನೆ ಮಹವ ಸಾಧಿಸುವದೇ ಷಟ್‌ಸ್ಥಲ ಸಿದ್ಧಾಂತದ ಶಿವಪೂಜೆಯು. ಶಿವಪೂಜೆಯಲ್ಲಿ ಮಾಡುವ ಪ್ರತಿಯೊಂದು ವಿಧಾನಗಳು ಸತ್ಕ್ರಿಯೆಗಳೆನಿಸಿವೆ. ಅವುಗಳ ಅರಿವು ಸಮ್ಯಕ್ ಜ್ಞಾನವಾಗಿದೆ. ಈ ಶಿವಾದ್ವೈತ ಸಿದ್ಧಾಂತ (ಶರಣತತ್ತ್ವ) ದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ವೈಜ್ಞಾನಿಕತೆ, ತಾತ್ವಿಕತೆ ಮನೆಮಾಡಿಕೊಂಡಿವೆ. ಪರಿಶುದ್ಧಗೊಂಡ ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಂದುಗೂಡಿಸುತ್ತಾ ಹೋಗ ಬೇಕಾಗುವದು. ಇಷ್ಟಲಿಂಗಾರ್ಚನೆಯು ಜೀವನದ ಅಮೃತ ಸಮಯವೆನಿಸಿದೆ. ಅಂತೆಯೇ ಕೇವಲ ಹದಿನಾರು ವರ್ಷ ವಯೋಮಿತಿಯುಳ್ಳ ಮಾರ್ಕಂಡೇಯನು ಸ್ಥಾವರಲಿಂಗವನ್ನು ಪೂಜಿಸಿ ಚಿರಂಜೀವಿಯಾದನು. ಅದಕ್ಕಿಂತಲೂ ಮಿಗಿಲಾದ ಶಿವಪೂಜೆಯ ಪರಿಯನ್ನು ಅರಿತು ಆಚರಿಸುವ ಸಮ್ಯಕ್ ಜ್ಞಾನವುಳ್ಳವನಾಗುವದು ಅತಿಮುಖ್ಯ.

ಶಿವಪೂಜೆಗೈಯ್ಯುವ ಪರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶಿವಪೂಜೆ (ಶಿವಯೋಗವು)ಯು ಸತ್ಕ್ರಿಯಾ ಸಮ್ಯಕ್ ಜ್ಞಾನಗಳ ಸಮರಸವೆಂಬುದು ಅರಿವಾಗದೇ ಇರದು. ಲಿಂಗವಂತನು ಲಿಂಗತಂದೆಯನ್ನು ಧ್ಯಾನಿಸಿ ನಮಿಸಿ ನಿದ್ದೆಗೈದರೆ ಸ್ವಪ್ನಾವಸ್ಥೆಯ ದೋಷಗಳಿಂದ ದೂರವಾಗುವನು. ಬ್ರಾಹೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ  ಗೈಯುತ್ತ ಜಾಗ್ರತ (ಎದ್ದು) ನಾಗಿ ಲಿಂಗವನ್ನು ಲಿಂಗಯೋಗಿಗಳ ಭಾವಚಿತ್ರಗಳನ್ನು ಸಂದರ್ಶಿಸಿ ಲಿಂಗಬಿಂದವನ್ನು ಭ್ರೂಮಧ್ಯದಲ್ಲಿ ಧ್ಯಾನಿಸಬೇಕು. ಲಿಂಗದೇವನಿಗೆ ಕೇವಲ ಶರಣೆಂದರೂ ಸಾಕು, ‘ಹೊತ್ತಾರೆ ಎದ್ದು ಲಿಂಗವ ನೆನೆದರೆ ಅಪಮೃತ್ಯುಗಳು, ಕಾಲಕರ್ಮಂಗಳು ತಪ್ಪುವವು’ ಎಂದಿದ್ದಾರೆ ನಮ್ಮ ಪ್ರಮಥರು. ಪ್ರಾತಃಕಾಲದ ಶಿವನಾಮಸ್ಮರಣೆ ಅನಂತ ಸಮಸ್ಯೆಗಳನ್ನು ಪರಿಹರಿಸುವದಲ್ಲದೆ ಭವ-ಭಯವನ್ನೇ ನಿವಾರಿಸುವದು. ಅನಂತರ ತನ್ನ ತಂದೆ-ತಾಯಿಗಳಿಗೆ, ಗುರು ಹಿರಿಯರ ಪಾದಕ್ಕೆ ಮಣಿಯಬೇಕು. ಜೀವನದಲ್ಲಿ ಬಾಗಿದವನ ಬಾಳು ಬಂಗಾರ ವಾಗುವದು.

ಸೂರ್ಯೋದಯಕ್ಕೆ ಮುಂಚೆ ಶಿವನಾಮಗಳನ್ನು ಗುರು-ಲಿಂಗ-ಜಂಗಮ ಸ್ತೋತ್ರಗಳನ್ನು ಮನದಲ್ಲಿಯೂ, ಸ್ಪಷ್ಟವಾಗಿಯೂ ಉಚ್ಚರಿಸುತ್ತ ಬಹಿರ್ದೆಶಕ್ಕೆ ಹೋಗಿ ಬಂದು ಕೈಗಳಿಗೆ ಶುದ್ಧವಾದ ಮಣ್ಣನ್ನು ಹಚ್ಚಿ ತೊಳೆದುಕೊಳ್ಳಬೇಕು. ನಂತರ ತಂಬಿಗೆಯನ್ನು

ಬೆಳಗಬೇಕು. ಶೌಚ ಕ್ರಿಯೆಯನ್ನು ಮುಗಿಸಿ ಬರುವಾಗ್ಗೆ ಎಡಗೈಯಲ್ಲಿ ತಂಬಿಗೆಯನ್ನು ಹಿಡಿದು ತರಬಾರದು. ಮಣ್ಣಿನಿಂದ ಕೈ ತೊಳೆಯುವದರಿಂದ ಅದರ ಅಗಾಧವಾದ ಶಕ್ತಿ ಉಗುರಿನ ಮುಖಾಂತರ ಶರೀರದಲ್ಲಿ ಸಂಚಾರವಾಗುವದು. ನೈಸರ್ಗಿಕ ಚಿಕಿತ್ಸಕರು ಈ ಮಾತನ್ನು ಧಾರಳವಾಗಿ ಒಪ್ಪುತ್ತಾರೆ. ಮಣ್ಣಿನ ಪಟ್ಟಿಯ ಉಪಚಾರವನ್ನು ವಿಶೇಷವಾಗಿ ಮಾಡುತ್ತಾರೆ. ಆರೋಗ್ಯ ಭಾಗ್ಯ ಆಚಾರದಲ್ಲಿ ಪೂರ್ಣವಿದೆ. ಮೊಳಕೈ ಮೊಣಕಾಲಿನ ವರೆಗೆ ಸ್ವಚ್ಛವಾಗಿ ತೊಳೆದು ಮುಖವನ್ನು ಬಾಯಿಯನ್ನು ಸ್ವಚ್ಛಗೊಳಿಸಬೇಕು. ಕನಿಷ್ಟ ೩ ಸಲುವಾದರೂ ಮುಕ್ಕುಳಿಸಬೇಕು. ಹನ್ನೆರಡಂಗುಲ ಪ್ರಮಾಣದ ಮಾವು, ಬೇವು, ಜಾಲಿ, ನೆಲ್ಲಿ, ಉತ್ತರಾಣಿ, ಹುಲಗಲಿ, ಮೊದಲಾದ ರಸವುಳ್ಳ ವನಸ್ಪತಿ (ಗಿಡ)ಗಳ ಕಡ್ಡಿಯಿಂದ ಹಲ್ಲುಗಳನ್ನು ತಿಕ್ಕಬೇಕು. ಗಿಡಗಳ ರಸ ಹಲ್ಲಿನಲ್ಲಿ ಹಾಗೂ ವಸಡೆಗಳಲ್ಲಿ ಸಂಬಂಧವಾಗಿ ದೀರ್ಘಕಾಲ ಹಲ್ಲುಗಳ ಶಕ್ತಿ ಹೀನವಾಗುವದಿಲ್ಲ. ಹಲ್ಲುಕಡ್ಡಿಯನ್ನು ಮುಖದಲ್ಲಿರಿಸುವಾಗಲೂ ಉರದ ಲಿಂಗದೇವನಿಗೆ ತೋರಿಸಿದರೆ ಆ ಕರ್ಮವೂ ಸತ್ಕ್ರಿಯೆಯೆನಿಸುವದು. ವೀರಶೈವರು ಮುಖ ತೊಳೆಯುವದಕ್ಕಾಗಲಿ, ಸ್ನಾನ ಮಾಡುವದಕ್ಕಾಗಿಯಾಗಲಿ ಅಡಿಗೆ ಮಾಡುವದಕ್ಕಾಗಲಿ ಅಥವಾ ಕುಡಿಯುವದಕ್ಕಾಗಲಿ ಯಾವದೇ ಕೆಲಸಕ್ಕೆ ಬೇಕಾದ ನೀರಿನಲ್ಲಿ ಧೂಳ ಪಾದೋದಕವನ್ನು ಬೆರೆಸಬೇಕು.

ಕೇವಲ ಬಾಯಿ (ವಾಣಿ) ಯಿಂದ ಅನಂತ ನದಿಗಳ-ತೀರ್ಥಗಳ ಸ್ಮರಣೆ ಮಾಡುವದಕ್ಕಿಂತ ಅಷ್ಟಷಷ್ಠಿ (೬೮) ತೀರ್ಥಗಳ ಫಲಕ್ಕಿಂತ ಮಿಗಿಲೆನಿಸಿದ ಧೂಳ ಪಾದೋದಕವನ್ನು ಉಪಯೋಗಿಸುವದರಿಂದ ಜಲದ ಜಡತ್ವವು ಬಯಲಾಗುವದು. ಧೂಳಪಾದೋದಕವನ್ನು ಸ್ನಾನಾದಿ ಕ್ರಿಯೆಗಳಿಗೆ ಉಪಯೋಗಿಸುವದರಿಂದ ಸ್ಥೂಲ ತನು ಪವಿತ್ರವಾಗುವದು. ಅಪ್ಯಾಯನ ಮಾಡಿದ ಮನ ತಣಿಯುವದು. ಸ್ನಾನ ಮಾಡಿ ಮಡಿಬಟ್ಟೆಯನ್ನು ಉಟ್ಟುಕೊಂಡು ಶಿವನಾಮಗಳನ್ನು ನುಡಿಯುತ್ತ ಶಿವಪೂಜಾ ಗೃಹವನ್ನು ‘ಇದು ಶಿವನ ಸದನವೆಂದು ಭಾವಿಸುತ್ತ ಪ್ರವೇಶಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಬಿಳೇ ಕಂಬಳಿ ಅಥವಾ ಹುಲ್ಲಿನ (ದರ್ಭೆಯ) ಚಾಪೆಯ ಮೇಲೆ ಮುಹೂರ್ತ ಮಾಡಬೇಕು. ನೆಲ-ಕಲ್ಲುಗಳ ಮೇಲೆ ಕುಳಿತುಕೊಂಡು  ಪೂಜಿಸಬಾರದು. ಯಾಕೆಂದರೆ ಕಟ್ಟಿಗೆಗೆ ವಿದ್ಯುತ್ ಪ್ರವಾಹ ಹರಿಯದಿರುವಂತೆ ಆಸನಗಳ ಮೇಲೆ ಕೂಡುವದರಿಂದ ಲಿಂಗತೇಜಃ ಪ್ರವಾಹವು ಶರೀರವನ್ನು ಬಿಟ್ಟು ಚಲಿಸುವದಿಲ್ಲ, ಮತ್ತು ಭೌತಿಕ ಬಾಧೆಯೂ ತಗಲುವದಿಲ್ಲ.

ಸಿದ್ಧಾಸನ, ಪದ್ಮಾಸನ, ವೀರಾಸನ ಅಥವಾ ಸುಖಾಸನಗಳಲ್ಲಿ ಯಾವುದೊಂದು ಆಸನಯುಕ್ತನಾಗಿ  ಋಜುಕಾಯನಾಗಿ ಶುದ್ಧೋದಕದಲ್ಲಿ ಪ್ರಣವವನ್ನು ಬರೆದು ಲಿಂಗಾಭಿಷೇಕ ಮಾಡಿ ಸಂಕ್ಷಿಪ್ತ ಪೂಜೆಯನ್ನು ಮುಗಿಸಬೇಕು. ಗುರುಪಾದೋದಕ ಮಾಡಿಕೊಂಡೇ ಶಿವಪೂಜೆ ಮಾಡುವದು. ಕ್ರಿಯಸ್ತರಿಗೆ ಯೋಗ್ಯವಾದುದು. ಮೊದಲು ಗುರು-ಲಿಂಗ-ಜಂಗಮ ಧ್ಯಾನಮಾಡಿ ಲಿಂಗ ಪೂಜೆಯನ್ನು ಪಾದೋದಕ-ಪ್ರಸಾದ ಸಿದ್ಧಿಗಾಗಿ ಪೂರೈಸುವೆನೆಂದು ಸಂಕಲ್ಪಿಸಬೇಕು. ಈ ಸಂಕಲ್ಪ ಜಡವಾದುದಲ್ಲ. ಜ್ಞಾನೇಂದ್ರಿಯಗಳಿಗೆ ಷಡಕ್ಷರ ಪ್ರಣವಗಳ ಸಂಬಂಧ ಅಥವಾ ಸ್ಪರ್ಶಮಾಡುವದು. ಮತ್ತು ಶರೀರದೊಳಗಿನ ಅಶುದ್ಧ ವಾಯುವನ್ನು ಪ್ರಾಣಾಯಾಮದಿಂದ ಪರಿಶುದ್ಧಗೊಳಿಸುವದಾದ ಮೇಲೆ ಭಕ್ತಸ್ಥಲದ ಆಚರಣೆಯು ಪ್ರಾರಂಭವಾಗುವದು. ಇಲ್ಲಿಯವರೆಗೆ ವಿವರಿಸಿದ ವಿಧಾನವು ಅಷ್ಟಾಂಗ ಯೋಗದ ಪೂರ್ವಭಾಗವನ್ನು ಕೆಲಮಟ್ಟಿಗೆ ಪೂರೈಸುವದು. ಈ ರೀತಿ ಸಹಜವಾದ ಆ ಯೋಗ ಇಲ್ಲಿ ಸಂಗತವಾಗುವದು.

 ಭಕ್ತಸ್ಥಲದಲ್ಲಿ ಆಚಾರಲಿಂಗದ ಅರಿವು ವೇದ್ಯವಾಗುವದು. ಅಷ್ಟಾವರಣದಲ್ಲಿ ಪೂಜಾ ಸಾಧನೆಯ ಮೊದಲನೆಯ ಸಾಮಗ್ರಿ ಭಸ್ಮವಾಗಿದೆ. ಭಸ್ಮದಿಂದ ತನು-ಮನ- ಇ೦ದ್ರಿಯಗಳ ಪೂರ್ವಭಾವವು ಭಸ್ಮವಾಗುತ್ತದೆ. ಭಸ್ಮವನ್ನು ಪೂಜಿಸಿ ಪಂಚಬ್ರಹ್ಮ ಮಂತ್ರೋಚ್ಛಾರಣೆಯಿಂದ ಸಿಂಪರಣೆ ಮಾಡಿಕೊಳ್ಳುವದು ಭಸ್ಮಸ್ನಾನವು. ಜಲಸ್ನಾನವಾದ ಮೇಲೆ ಭಸ್ಮಸ್ನಾನದಿಂದ ಅಂತರಂಗದ ಜಳಕವು ನೈರ್ಮಲ್ಯವು ಮುಗಿದಂತಾಗುವದು. ಎರಡೂ ಕೈಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಮಂತ್ರ ಸಂಬಂಧಮಾಡಿ ಶರೀರದ ಅಂಗಾಂಗಗಳಿಗೆ ಸವರಿಕೊಳ್ಳಬೇಕು. ಭಸ್ಮ ಸ್ನಾನ ಹಾಗೂ ಲೇಪನಗಳಿಂದ ಶರೀರದ ಶೈತ್ಯಾಂಶವು ನಾಶವಾಗುವದು. ಚರ್ಮದ ಪರಿಶುದ್ಧತೆ ಯುಂಟಾಗುವದು. ನಂತರ ತೋರ ಬೆರಳು, ನಡುವಿನ ಬೆರಳು, ಮತ್ತು ಉಂಗುರ ಬೆರಳು ಈ ಮೂರು ಅಂಗುಲಿಗಳಿಂದ ತ್ರಿಪುಂಡ್ರವನ್ನು ಧರಿಸಬೇಕು. ಗುರುವಿನ ಅಪ್ಪಣೆಯಂತೆ ಆಯಾ ಅವಯವಗಳಲ್ಲಿ ಸ್ಪಷ್ಟವಾಗಿ ಧರಿಸಬೇಕು. ಭಸ್ಮಧರಿಸುವಾಗ ಸಂಕೋಚಗೊಳ್ಳುವದು ಸರಿಯಲ್ಲ. ಭಸ್ಮದಿಂದ ಶರೀರವು ಪವಿತ್ರ ಹಾಗೂ ಶಾಂತ   ವಾಗುವುದು. ಇನ್ನು ರುದ್ರಾಕ್ಷಧಾರಣೆಯಿಂದ ಶರೀರದ ಹೆಚ್ಚಿನ ಉಷ್ಣತೆಯೂ ದೂರವಾಗುವದು.

ಮಾಹೇಶ್ವರ ಸ್ಥಲದಲ್ಲಿ ಮಂತ್ರನ್ಯಾಸಗಳು ದಿಗ್ಭಂಧನ, ಧ್ಯಾನ ಹಾಗೂ ಜಪ ವಿಧಾನಗಳು ಸೇರುವವು. ಶರೀರದಲ್ಲಿ ಶಿವನ ಷಟ್‌ಶಕ್ತಿಗಳನ್ನು ಮಂತ್ರಪೂರೈಕ ಸಂಬಂಧ ಮಾಡಿಕೊಳ್ಳುವದೇ ಮಂತ್ರನ್ಯಾಸವು.

 ಸರ್ವಜ್ಞತಾ ತೃಪ್ತಿರನಾದಿಬೋಧಃ |

ಸ್ವತಂತ್ರತಾ ನಿತ್ಯಮಲುಪ್ತ ಶಕ್ತಿಃ |

ಅನಂತಶಕ್ತಿಶ್ಚ ವಿಭೋರ್ವಿಧಿಜ್ಞಾ

ಷಡಾಹುರಂಗಾನಿ ಮಹೇಶ್ವರಸ್ಯ || ಪಾರಮೇಶ್ವರ ತಂತ್ರ ||

ಮಹಾಪರಶಿವನ ಆರುಶಕ್ತಿಗಳೆನಿಸಿದ ೧) ಸರ್ವಜ್ಞ ಶಕ್ತಿ ೨) ನಿತ್ಯತೃಪಶಕ್ತಿ ೩) ಅನಾದಿ ಬೋಧಶಕ್ತಿ ೪) ಸ್ವತಂತ್ರಶಕ್ತಿ ೫) ಅಲುಪಶಕ್ತಿ, ೬) ಅನಂತಶಕ್ತಿಗಳನ್ನು ಕರಗಳಲ್ಲಿ ದೇಹದಲ್ಲಿ ಮತ್ತು ಅಂಗಾಂಗಗಳಲ್ಲಿ ವಿಧಾನಪೂರ್ವಕ ನ್ಯಾಸ (ಸಂಬಂಧ) ಮಾಡಿಕೊಳ್ಳುವದರಿಂದ ಅಂಥ ಶಕ್ತಿಗಳನ್ನು ತಾನೂ ಧರಿಸಿಕೊಂಡಂತಾಗುವದು. ಅಂತೆಯೇ ಶಿವಯೋಗಿಯ ಸರ್ವಾಂಗವೂ ಲಿಂಗಮಯವಾಗುತ್ತದೆ. ಪರುಷಮಯವೆನಿಸುತ್ತದೆ. ಇಂಥ ಪೂಜ್ಯರು ಮುಟ್ಟಿದ ಪದಾರ್ಥ ಪ್ರಸಾದವಾಗಿ ಪರಿಣಮಿಸುತ್ತದೆ. ಈ

ಷಟ್‌ಶಕ್ತಿಗಳನ್ನು ನ್ಯಾಸಮಾಡಿಕೊಳ್ಳುವದರಿಂದ ಶಿವಯೋಗಿಯು ಸಾಕ್ಷಾತ್ ಶಿವನಾಗುವನು. ಪಂಚಪರುಷಗಳೂ ಅವನಲ್ಲಿ ಗುಪ್ತವಾಗಿ ಪ್ರಭಾವ ಬೀರುವವು.

ನ್ಯಾಸಗಳು ಪೂರೈಸಿದ ಮೇಲೆ ದಿಗ್ಭಂಧನ ಮಾಡಿ ಜಪಮಾಡಬೇಕು. ಜಪ ವಿಧಾನದಿಂದ ನಿಷ್ಠಾಭಕ್ತಿಯು ಬೆಳೆದು ಗುರುಲಿಂಗದ ಪೂಜೆ ಬಲಗೊಳ್ಳುವದು. ನಂತರ ವಾಮಕರವನ್ನು ಪೂಜಿಸಿ ಪಶ್ಚಿಮ ಶಿಖಾಚಕ್ರದಲ್ಲಿರಿಸಿ ಭಾವಲಿಂಗವನ್ನು ಭಾವಿಸಿ ಭ್ರೂಮಧ್ಯದಲ್ಲಿ ಪ್ರಾಣಲಿಂಗವನ್ನು ಕಲ್ಪಿಸಿ ಉರದ ಇಷ್ಟಲಿಂಗವನ್ನು ಕರ ಕಮಲಕ್ಕೆ ಬಿಜಯಂಗೈಸಿಕೊಂಡು ಷೋಡಶೋಪಚಾರ ಅಷ್ಟವಿಧಾರ್ಚನಗಳಿಂದ ಪೂಜಿಸುವದು ಪ್ರಸಾದಿ-ಪ್ರಾಣಲಿಂಗಿಸ್ಥಲದ ಪೂಜೆಯಾಗುವದು. ಜಲ, ಗಂಧ, ಅಕ್ಷತೆ, ಪತ್ರಿ, ಪುಷ್ಪ, ಧೂಪ, ದೀಪ, ನೈವೇದ್ಯ ಇವುಗಳಿಂದ ಮಾಡಿದ ಪೂಜೆ ಅಷ್ಟವಿಧಾರ್ಚನೆಯೆನಿಸುವದು. ಇನ್ನು ಅರ್ಘ್ಯ, ಪಾದ್ಯ, ಅಚಮನ, ಪತ್ರಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಇವು ಷೋಡಶೋಪವಿಚಾರಗಳು, ಈ ಉಪಚಾರಗಳು ಎಲ್ಲರಿಗೆ ಸಾಧ್ಯವಾಗದಿದ್ದರೂ ಅಷ್ಟ ವಿಧಾರ್ಚನೆಯನ್ನು ಮಾಡ ಬಹುದು.

 ಪೂಜೆಯ ಒಂದೊಂದು ಉಪಚಾರವೂ ಒಂದೊಂದು ಅಮೋಘ ಫಲವನ್ನು ಕರುಣಿಸುತ್ತದೆ. ಜಲವು ಶಾಂತಿಯನ್ನು ಗಂಧವು ಪುಷ್ಟಿಯನ್ನು ಮತ್ತು ಆಯುಷ್ಯವನ್ನು ಬೆಳೆಸುವದು. ಅಕ್ಷತೆಯು ಕ್ಷತಿ (ದುಃಖ) ಯನ್ನು ಕಳೆಯವದು. ಪತ್ರ-ಪುಷ್ಪಗಳು ಶಮ-ದಮಾದಿ ದೈವೀ ಸಂಪತ್ತನ್ನು, ಧೂಪವು ಪಾಪವನ್ನು ನಿವಾರಿಸಿ ಪವಿತ್ರತೆಯನ್ನು ಕೊಡುವದು. ದೀಪನೀರಾಜನವು ಅಪಮೃತ್ಯುವನ್ನು  ಹರಣ ಮಾಡುವದು. ನೈವೇದ್ಯವು ಸರ್ವಸಂಪತ್ತನ್ನು ಕೊಡುವದು. ವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಈ ಫಲವನ್ನು ಪ್ರತಿಪಾದಿಸಿದ್ದಾರೆ.

 ಉಪಚಾರಯುಕ್ತವಾದ ಅರ್ಚನೆಯನ್ನು ಪೂರೈಸಿ ತನ್ನ ನಾಶಿಕಾಗ್ರದಿಂದ ಹನ್ನೆರಡು ಅಂಗಲ ಪರಿಮಿತಿಯಲ್ಲಿ ಅಂಗೈಯೊಳಗಣ ಲಿಂಗವನ್ನು ಕಂಗಳಿಂದ ನಿರೀಕ್ಷಣ ಮಾಡುತ್ತ ಗುರೂಪದಿಷ್ಟ ಷಡಕ್ಷರ ಮಹಾಮಂತ್ರವನ್ನು ನೂರೆಂಟು ಸಲಕ್ಕೆ ಕಮ್ಮಿಯಾಗದಂತೆ ಜಪಿಸಬೇಕು. ಈ ಲಿಂಗ ನಿರೀಕ್ಷಣವು ಪ್ರಾಣಲಿಂಗಿಯ ಅನುಸಂಧಾನವಾಗುವದು. ಪ್ರಸಾದಿಯಾಗಿ ಶಿವಲಿಂಗಕ್ಕೆ ಉಪಚಾರಗಳನ್ನು ಸಮರ್ಪಿಸಿ ಪ್ರಾಣಲಿಂಗಿಯಾಗಿ ಜಂಗಮ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳನ್ನು ಬೆರೆಯಿಸಬೇಕು. ಪುನಃ ಜಪಿಸಿ ಅರ್ಘ್ಯಕೊಟ್ಟು ಮಂಗಲ ಸ್ತೋತ್ರವನ್ನು ಪಾಡುವ ಶರಣನು ಪತಿಯಾದ ಪ್ರಸಾದಲಿಂಗನ ಪ್ರಸನ್ನತೆಯನ್ನು ಪಡೆಯುವನು. ಅನುಭವದ ಆನಂದವನ್ನು ಸವಿಯುವದು.

ಪೂಜೆಯನ್ನು ಪೂರೈಸಿ ಐಕ್ಯಸ್ಥಲದಲ್ಲಿ ನಿಂದ ಶರಣನು ಗುರು-ಲಿಂಗ- ಜಂಗಮದ ಪಾದೋದಕ-ಪ್ರಸಾದದಲ್ಲಿ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ಸಮರಸವಾಗುವನು. ಮಹದಾನಂದಭರಿತನಾಗುವನು. ಇವೆಲ್ಲವುಗಳೂ ಶಿವಪೂಜೆಯ ಸತ್ಕ್ರಿಯೆಗಳಲ್ಲದೆ ಮತ್ತೇನು ? ಈ ಸತ್ಕ್ರಿಯೆಗಳಲ್ಲಿ ಸಮ್ಯಕ್ ಜ್ಞಾನ ಅವಶ್ಯ ಬೇಕಾಗುವದು. ಸುಜ್ಞಾನವಿಲ್ಲದ ಕ್ರಿಯೆ ಸತ್ಕ್ರಿಯೆಯೆನಿಸದು. ಸುಜ್ಞಾನ-ಸತ್ಕ್ರಿಯೆಗಳ ಸಂಗಮವೇ ಶಿವಯೋಗಸಿದ್ಧಿಗೆ ಕಾರಣವಾಗುವದು. ಶಿವಯೋಗದಿಂದ ಪದಾರ್ಥ ಕಾರ್ಯವು ಪ್ರಸಾದ ಕಾಯವೆನಿಸುವದು. ಪರಿಪೂರ್ಣವೆನಿಸುವದು.

ಶ್ರೀ ಗುರುನಾಥನು ಇಂಥ ಮಂಗಲಮಯ ಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಲು ಬೋಧಿಸುವನು. ಅನಾನುಕೂಲವಾದಲ್ಲಿ ದ್ವಿಕಾಲದಲ್ಲಿ ಅಥವಾ ಏಕಕಾಲದಲ್ಲಿ ಯಾಗಲಿ ಸ್ವಸ್ವರೂಪಾನುಸಂಧಾನವುಳ್ಳ ಈ ಸ್ವಯಂ ಲಿಂಗವನ್ನು ಪೂಜಿಸಿ ಪುನೀತ ನಾಗಬೇಕೆಂಬ ಪಾಲನೆಯನ್ನು ಗುರುವು ಬೋಧಿಸುತ್ತಾನೆ. ಲಿಂಗಪೂಜೆಯಿಂದಲೇ ಲಿಂಗಭಕ್ತನ ಪಾಲನ-ಪೋಷಣವಾಗುತ್ತದೆ. ಅಂತೆಯೇ ಶಿವಕವಿಯು ಪ್ರಯೋಗಿಸಿದ ಹಾಗೂ ಮುಂದೆಯೂ ಉಪಯೋಗಿಸುವ ‘ಪಾಲಿಸಿದ’ ಪದ ಅರ್ಥಪೂರ್ಣವಾಗಿದೆ.

ತ್ಮಿಕವಾಗಿದೆ. ಇಲ್ಲಿ ಪೂಜೆಯ ಪಾಲನೆ ಮತ್ತು ಈ ನಿಯಮವನ್ನು ಪಾಲಿಸುವದರಿಂದ ತನ್ನ ಪಾಲನೆಯೂ ಅವಶ್ಯವಾಗುವದು. ನಂಬಿದರಿಗೆ ಶಂಭು ಇಂಬಾಗಿರುವನು.

ಈ ಲಿಂಗವನು ಭಕ್ತಿ | ಶೀಲನೇಮಗಳಿಂದ

ಓಲೈಸು ನಿನಗೆ-ಮೇಲುಪದವಹುದೆಂದು

ಪಾಲಿಸಿದ ಗುರುವೆ ಕೃಪೆಯಾಗು   ||೧೦೯ ||

ದೃಷ್ಟವಾದ ಇಷ್ಟಲಿಂಗವನ್ನು ಪೂಜಿಸಲು ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಸಾಧನಗಳಾದರೆ ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯು ಅವುಗಳಿಂದ ಆಗಲಾರದು. ಅಲ್ಲಿ ಭಕ್ತಿ, ಶೀಲ, ನೇಮಗಳು ಮುಖ್ಯವಾಗಿವೆ. ಯಾಕೆಂದರೆ ಭಂಡಾರಿ ಬಸವಣ್ಣನವರು-

ಅಳಿಯೆರಗದ ಅನಿಲನಲುಗದ ರವಿಕರಂಪುಗದ

ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ

 ಸುರುಚಿರಮೆನಿಪ್ಪ ಮೂಸಲಮೊಗ್ಗೆಯಂ ಕೊಂಡು

ತಂದು ಕೂಡಲಸಂಗಮನಾಥನನ್ನು ಭಕ್ತಿಯಿಂದ ಪೂಜಿಸಿದರೂ ತೃಪ್ತಿಯಾಗಲಿಲ್ಲ. ಭಯಕಂಪಿತರಾಗಿ ಭಗವಂತನನ್ನು ಬೇಡುತ್ತಾರೆ.

 ಹಾಲೆಂಜಲು ಪಯ್ಯನ, ಉದಕವೆಂಜಲು ಮತ್ಸ್ಯದ

ಪುಷ್ಪವೆಂಜಲು ತುಂಬಿಯು,

ಎಂತು ಪೂಜಿಸುವೆನಯ್ಯಾ,

ಶಿವ, ಶಿವಾ ! ಎಂತು ಪೂಜಿಸುವೆ ?

ಈ ಎಂಜಲವನತಿಗಳೆವಡೆ ಎನ್ನಳವಲ್ಲ

ಬಂದುದ ಕೈಕೋ ಕೂಡಲ ಸಂಗಮದೇವಾ

ವಿಚಾರಿಸಿದಲ್ಲಿ ಯಾವುದೂ ಶುದ್ಧವಾದುದಲ್ಲ, ಹಾಲುಕರುವಿನ ಎಂಜಲು, ನೀರು ಜಲಚರ ಪ್ರಾಣಿಗಳ ಎಂಜಲು, ಹೂಪತ್ರೆಗಳು ಕೀಟಗಳ ಎಂಜಲು, ಯಾವ ಪದಾರ್ಥವೂ ಮಿಸಲವಲ್ಲ, ಯಾವುದನ್ನೂ ಶುದ್ಧ ಮಾಡುವ ಶಕ್ತಿಯು ನಮ್ಮಲ್ಲಿಲ್ಲ. ದೇವಾ ! ಭಕ್ತಿಯ

ಮನದಿಂದ ಬಂದುದನ್ನು ಸ್ವೀಕರಿಸು. ಅದು ನಿನ್ನ ಪೂಜೆಯಾದೀತು. ಕೃಷ್ಣನಾದರೂ-

ಪತ್ರಂ ಪುಷ್ಪಂ ಫಲಂ ತೋಯಂ

ಯೋ ಮೇ ಭಕ್ತ್ಯಾ ಪ್ರಯಚ್ಛತಿ ।। ಗೀತೆ ||

ಯಾವ ಭಕ್ತನು ಪತ್ರಿಯನ್ನಾಗಲಿ, ಪುಷ್ಪವನ್ನಾಗಲಿ, ಫಲವನ್ನಾಗಲಿ, ನೀರನ್ನಾಗಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಮಾತ್ರ ನನಗೆ ಸಲ್ಲುವದು ಎಂದಿದ್ದಾನೆ. ನಾವು ಕೊಡುವ ಯಾವ ದ್ರವ್ಯವು ನಮ್ಮದಿದೆ ? ಎಲ್ಲವೂ ಶಿವನದೇ ಶಿವನಿಂದ ಬಂದಂಥವುಗಳು. ಅಂತೆಯೇ ಜ್ಞಾನನಿಧಿ ಚನ್ನಬಸವಣ್ಣನವರು ವೈಚಾರಿಕವಾದ ಸುಜ್ಞಾನ ಬೆಳಕನ್ನು ಬೀರಿದ್ದಾರೆ.

 ತನು-ಮನ-ಧನ ಮುಂತಾದವೆಲ್ಲವು

ಶಿವನೊಡವೆಯೆಂದು ಮಾಡುವ ಭಕ್ತಂಗೆ

 ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?

ಮಾಡಬೇಕೆಂಬರಿವಿನ ಕಂದೆರೆದವರಾರು ?

ಮಾಡುವೆನೆಂದು ನೆನೆದ ಚೇತನದ ಪ್ರಾಣವ ತಂದಿರಿಸಿದವರಾರು ?

ಅವರಿಂದಾದ ಒಡವೆಯ ಅವರಿಗೀವುತ್ತ ಉಪಚರಿಯವೆ ?

ನದಿಯ ಉದಕವ ನದಿಗರ್ಪಿಸುವಂತೆ

ಒಡೆಯರಿಗೆ ಒಡವೆಯನರ್ಪಿಸಿ

ತಾ ಶುದ್ಧವಾಗಿ ನಡೆನುಡಿಯಲ್ಲಿ ಕವಲುದೋರದೆ

ತನ್ನಲ್ಲಿ ತಾನೆ ತಿಳಿದು ಘನವೆಡೆಗೊಂಡ ಮಹಾನುಭಾವಿಗಳು   (, ಬ. ವ-೬೨)

ಶಿವಭಕ್ತನು ತನ್ನ ತನು-ಮನ-ಧನಗಳು ಶಿವನವುಗಳೆಂದು ಅರಿಯಬೇಕು. ಗುರು-ಲಿಂಗ-ಜಂಗಮಕ್ಕೆ ಸಮರ್ಪಣೆ ಮಾಡುವ ದ್ರವ್ಯವನ್ನು ಸತ್ಕ್ರಿಯೆಯನ್ನು ಆಚರಿಸುವ ಮನಸ್ಸನ್ನು ಹಾಗೂ ಚೇತನವನ್ನು ಶಿವನೇ ಕೊಟ್ಟಿದ್ದಾನೆ. ನದಿಯನ್ನು ಪೂಜಿಸುವವರು ನದಿಯ ನೀರಿನಿಂದಲೇ ಅರ್ಚಿಸುವಂತೆ ಜಗದೊಡೆಯನಾದ ಪರಶಿವನ ಸೊತ್ತುಗಳನ್ನು ಆ ಶಿವನಿಗೆ ಸಮರ್ಪಿಸುವಂತೆ ಅದಾವ ದೊಡ್ಡಸ್ತನವಿದೆ. ? ನಡೆ-ನುಡಿ ಭಿನ್ನವಾಗದೆ ಎರಡೊಂದಾಗಿ ತನ್ನಲ್ಲಿ ತಾನು ಅರಿತು ಆಚರಿಸಿದರೆ; ಅರ್ಚಿಸಿದರೆ ಮಹಾನುಭಾವಿಯಾಗುವನು. ಜ್ಞಾನಯುತವಾದ ಸತ್ಕ್ರಿಯಾಭರಿತ ಭಕ್ತಿಯು ಶಿವನಿಗರ್ಪಿತವಾಗುತ್ತದೆ. ಆಂತರಿಕ ಅಷ್ಟವಿಧಾರ್ಚನೆಯಲ್ಲಿ ಅಂಗಸುಖಕ್ಕೆ ಅವಕಾಶವಿರಬಾರದು. ಅರಿಷಡ್‌ವರ್ಗಗಳು ಇಲ್ಲದಾಗಬೇಕು. ಅ೦ದರೆ ಭಕ್ತಿಯೊಡನೆ ಶೀಲವು ಸಮನಿಸುವದು.

 ಚಿತ್ತರಗಿ ಸಂಸ್ಥಾನಮಠದ ಮಹಾಂತಸ್ವಾಮಿಗಳವರು ತಮ್ಮ ಲಿಂಗತತ್ತ್ವ ಪರಾಮರ್ಶೆ” ಯಲ್ಲಿ – ಲಿಂಗಪೂಜೆ ಒಂದು ಸಿದಾಂತವೂ ಹೌದು; ವಿಜ್ಞಾನವೂ ಹೌದು, ಅರ್ಚನೆ, ಅಭಿಷೇಕ ಉಪಚಾರ ಉಪಾಸನೆಗಳು ಸ್ಥಾವರ ಲಿಂಗಮೂರ್ತಿ ಪೂಜೆಗಳ ವಿಧಾನ. ಲಿಂಗಪೂಜೆ ಮಾತ್ರ ಇವುಗಳನ್ನು ಬಳಸಿಯೂ ಅತೀತವಾಗಿ ನಿಂತ ಒಂದು ತಂತ್ರ. ಒಂದು ಪದ್ದತಿ, ಒಂದು ವಿಕಾಸಯಾತ್ರೆ, ಇದೊಂದು ಭಾರತೀಯ ಯೋಗಸಮನ್ವಯವೆಂದೂ, ಪೌರ್ವಾತ್ಯ ಸಿದಾಂತದ ತುಟ್ಟತುದಿಯ ಹೂಗೊಂಚಲೆಂದೂ ಹೇಳಲಾಗುತ್ತಿದೆ. ದ್ವೈ, ದ್ವೈ, ದ್ವೈತಾದ್ವೈ, ಶಕ್ತಿವಿಶಿಷ್ಟಾದ್ವೈತ ಕರ್ಮ-ಭಕ್ತಿ- ಜ್ಞಾನ-ಲಯ-ರಾಜಯೋಗಗಳಿಗೆ ಇದೊಂದು ಏಕೈಕ ಮಣಿಮಂಚ; ಯಾವುದೂ ಇದರಲ್ಲಿ ತ್ಯಾಜ್ಯವಿಲ್ಲ. ಎಲ್ಲವೂ ಆಂಶಿಕವಾಗಿ ಬಂದು ಪೂರ್ಣತ್ವವನ್ನು ವ್ಯವಸ್ಥೆಗೊಳಿಸುತ್ತವೆ”, ಎಂದು ಲಿಂಗಪೂಜೆಯ ಸೂಕ್ಷ್ಮತೆಯನ್ನು ಪರಾಮರ್ಶಿಸಿದ್ದಾರೆ.

ಲಿಂಗಭಕ್ತನು ಶೀಲವನ್ನು ಸಂಪಾದಿಸುವ ಪರಿ ಬಹುಸೂಕ್ಷ್ಮವಾಗಿದೆ. ಅರ್ಥ ಪೂರ್ಣವಾಗಿದೆ ಭಕ್ತನು ಆಚಾರಾದಿ ಲಿಂಗಗಳನ್ನು ಅರುವಿನಿಂದ ಅರ್ಚಿಸಬೇಕಗುವದು. ಆಚಾರಲಿಂಗದಲ್ಲಿ ಆಸಕ್ತಿಯುಳ್ಳ ಶಿವಭಕ್ತನು ಸಖೀ-ಸಹೋದರ ಮೋಹವ ಮರೆಯಬೇಕು. ಪೂರ್ವಾಚಾರವನ್ನು ಬಿಡಬೇಕು. ಅನ್ಯದೇವತಾ ಪೂಜೆಯ ಮಾಡಬಾರದು. ಹಿಡಿದ ನೇಮವ ಬಿಡಬಾರದು. ಅಶುಚಿಯಾಗದೇ, ಭಕ್ತನಿಂದೆಯ ಕೇಳದೇ ಇರಬೇಕು. ಗುರುಲಿಂಗ ಪೂಜಕನಾದರೆ ಮಾತಾ-ಪಿತರ ಮೋಹವನ್ನು ತ್ಯಜಿಸಬೇಕು. ಗುರ್ವಾಜ್ಞೆಯ ಮಿರದೆ ಗುರುಮಾರ್ಗಾಚಾರದಲ್ಲಿ ಮುನ್ನಡೆಯಬೇಕು. ಮಾನವರ ಸೇವೆ ಮಾಡಬಾರದು. ಶಿವಲಿಂಗ ಭಕ್ತನಾದರೆ ಅನ್ಯಮೋಹ, ಅನ್ಯದೈವ ಭಜನೆ ಪೂಜೆಗಳನ್ನು ಪೂರ್ಣವಾಗಿ ಪರಿಹರಿಸಬೇಕು. ಪುಣ್ಯಕ್ಷೇತ್ರಗಳನ್ನು ಕುರಿತು ಹೋಗಬಾರದು. ಅಂಗಭೋಗ, ಸತಿಸಂಗವನ್ನು ದೂರೀಕರಿಸಬೇಕು ಜಂಗಮಲಿಂಗಾರಾಧಕನೆನಿಸಿದರೆ ಪೂರ್ವಕುಲಗೋತ್ರವನ್ನು ಮರೆಯಬೇಕು. ಮತ್ತೆ ಅವರೊಡನೆ ಬೆರೆಸಬಾರದು. ಆಸೆಯಿಂದ ಅರ್ಥ ಸಂಗ್ರಹವನ್ನು ಮಾಡಬಾರದು. ಬೇಡಿದಡೆ ಇಲ್ಲೆನ್ನಬಾರದು. ಶಿವಲಾಂಛನದ ನಿಂದೆಯನ್ನು ಕೇಳಬಾರದು. ಪ್ರಸಾದಲಿಂಗದಲ್ಲಿ ಪ್ರಸನ್ನ ಮನವುಳ್ಳವನಾದರೆ ಅಂಗರುಚಿಯನ್ನು ಕಳೆದುಕೊಳ್ಳಬೇಕು. ಅನ್ಯರಿಗೆ ಕೈಯೊಡ್ಡಬಾರದು. ಜೀವ ಹಿಂಸೆಯನ್ನು ಮಾಡದೇ ಆತ್ಮನಿಗ್ರಹವನ್ನು ಸಾಧಿಸಬೇಕು. ಮಹಾಲಿಂಗ ಭಕ್ತನಾದರೆ ಲೋಕದ ಮೋಹವನ್ನು ಮರೆತು ಅಜ್ಞಾನಿಗಳ ಸಂಗವನ್ನು ಪರಿಹರಿಸಬೇಕು. ಮರಣಕ್ಕಂಜದೆ ಸಮತೆ ಸಮಾಧಾನಗಳು ನೆಲೆಗೊಳ್ಳಬೇಕು. ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗದಂತಿರಬೇಕು. ಇದು ನಿಜವಾದ ಲಿಂಗಭಕ್ತನ ಭಕ್ತಿಯ ಶೀಲವೆಂದು ಶರಣರು ಸಾರಿದ್ದಾರೆ.

ಅಚ್ಚಶೀಲತನದ ಹಾಗೂ ಶೀಲವಂತನ ವ್ಯಾಖ್ಯೆಯನ್ನು ಚನ್ನಬಸವಣ್ಣನವರು ಸುಂದರವಾಗಿ, ಸರಳವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ-

 ಚಿತ್ತದ ಕಳವಳವಳಿದು ಮನವು ಮಹಾ ಘನದಲ್ಲಿ ನೆಲೆಗೊಂಡುದೆ ಶೀಲ

 ಪರಮ ಪರಿಣಾಮ ನೆಲೆಗೊಂಡುದೆ ಶೀಲ

ಮತ್ತು

 ಭಕ್ತರು ಮತಕ್ಕೆ ಬಂದು ಒಳಹೊರಗೆಂಬುದು ಶೀಲವೆ ?

ಎನ್ನ ಲಿಂಗಕ್ಕೆ ಒಳ್ಳೆಯ ಅಗ್ಗವಣಿಯ ತನ್ನಿ,

ಒಳ್ಳೆಯ ಪುಷ್ಪವ ತನ್ನಿ, ಒಳ್ಳೆಯ ಓಗರವ ಮಾಡಿ

 ಎಂಬುದು ಶೀಲವೆ ? ಅಲ್ಲ

ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ,

ಅಷ್ಟಮದಂಗಳ ಕೊಂದಾತನೆ ಶೀಲವಂತ

ಕೂಡಲಚನ್ನಸಂಗಮದೇವಾ    II ೧೦೮೩ II

ಶೀಲವಾದಡೆ ಪ್ರಪಂಚುನಾಸ್ತಿಯಾಗಿರಬೇಕು.

 ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು

ಇಂತಪ್ಪ ಶೀಲಕ್ಕೆ ಭವನಾಸ್ತಿ, ಸೀಮೆಗೆ ಭವನಾಸ್ತಿ,

 ಈ ದ್ವಿವಿಧ ನಾಸ್ತಿಯಾದಲ್ಲದೆ

ಕೂಡಲ ಚನ್ನಸಂಗಯ್ಯನಲ್ಲಿ ಶೀಲವಂತನೆನಿಸಬಾರದು. || ೧೦೮೪ |

ಭಕ್ತನಾದವನು ಶಿವಭಕ್ತರೊಡನೆ ಆತ್ಮೀಯವಾಗಿ ಸಹಕರಿಸಬೇಕು. ಭಿನ್ನತೆ ಯನ್ನೆಣಿಸಬಾರದು. ಪಂಚೇಂದ್ರಿಯಗುಣ, ಸಪ್ತಧಾತು, ಅರಿಷಡ್‌ವರ್ಗ ಹಾಗೂ ಅಷ್ಟಮದಗಳನ್ನು ಜಯಿಸಿದವನೇ ನಿಜವಾದ ಶೀಲವಂತನೆನಿಸುವನು. ಅಂತರಂಗದ ಸಾಧಿಸುವಲ್ಲಿಯೇ ಲಿಂಗವಂತಿಕೆ ವ್ಯಕ್ತವಾಗುವದು. ಜಡಗುಣಗಳು ದೂರವಾದಲ್ಲದೆ ಶೀಲ ಸದ್ಗುಣಗಳು ಸಮನಿಸಲಾರವು. ಸಚ್ಛೀಲವನ್ನು ಸಾಧಿಸುಚಲ್ಲಿಯೆ ಲಿಂಗವಂತಿಕೆ ವ್ಯಕ್ತವಾಗುವದು.

  ಶೀಲತನದೊಂದಿಗೆ ನಿಯಮಿತತನವು ಶಿವಭಕ್ತನನ್ನು ಸುಂದರಗೊಳಿಸುವದು. ಭಕ್ತಿಯ ಸತ್ಯತೆಯೊಂದಿಗೆ ಶೀಲದ ಶಿವಭಾವನೆಯನ್ನು ಸಂಪಾದಿಸಿದರೆ ನಿಯಮದ ಸೌಂದರ್ಯ ಶೋಭಾಯಮಾನವಾಗುವದು. ಶಿವನ ‘ಸತ್ಯಂ ಶಿವಂ ಸುಂದರಂ’ ತತ್ತ್ವ ಮೈಗೂಡಿಸಿಕೊಳ್ಳುವದು. ನೇಮದ ನಿಜವನ್ನು ಅಣ್ಣನ ಮಾತಿನಲ್ಲಿ ನೋಡಿ-

ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !

ತನುವುದ್ದೇಶ, ಮನವುದ್ದೇಶವಾಗಿ,-

ಮಾಡುವ ನೇಮ ಸಲ್ಲವು ! ಸಲ್ಲವು !

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !

ಕೂಡಲ ಸಂಗಮದೇವಯ್ಯ ಇವು ನಿಮ್ಮ-

ನಿಜದೊಳಗೆ ನಿಲ್ಲವು; ನಿಲ್ಲವು; (ಬ. ಷ. ವ. ೭೧)

ಮತ್ತು

ಬಂದುದ ಕೈಕೊಳಬಲ್ಲಡೆ ನೇಮ,

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ

ನಡೆದು ತಪ್ಪದಿದ್ದಡೆ ನೇಮ

ನುಡಿದು ಹುಸಿಯದಿದ್ದಡೆ ನೇಮ

ನಮ್ಮ ಕೂಡಲ ಸಂಗನ ಶರಣರು ಬಂದಡೆ

ಒಡೆಯರಿಗೊಡವೆಯನೊಪ್ಪಿಸುವುದೇ ನೇಮ (೨೩೧ ಬ.ಷ.ವ.)

ಮತ್ತು

ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ,

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? || ೧೮೩||

 ಶಿವಭಕ್ತನು ಮಾಡುವ ಕ್ರಿಯೆಗಳೆಲ್ಲ ಲಿಂಗದಕ್ರಿಯೆಗಳು, ಲಿಂಗದ ನೇಮಗಳಾದುದರಿಂದ ತನು-ಮನಕ್ಕೆ ಅವಕಾಶ, ಅಲ್ಲಲ್ಲಿ, ಗುರುವಚನದಂತೆ ನಡೆಯುವದು, ನುಡಿಯುವದು ನೀಜನೇಮ. ಬಂದುದನ್ನು ಪ್ರಸಾದವೆಂದು ಕೈಕೊಳ್ಳಬೇಕು. ತನ್ನಲ್ಲಿದುದ್ದನ್ನು ಶಿವಭಕ್ತರಿಗೆ ಇಲ್ಲೊಂದು ವಂಚಿಸಬಾರದು. ನಡೆದು ತಪ್ಪದೆ, ನುಡಿದು ಹುಸಿಯಾಗದಿದ್ದಡೆ ಅದುವೆ ಶಿವನ ನೇಮವಾಗುವದು. ಶಿವನಿಗೆ ಸಮರ್ಪಿಸುವ ಸಾಮಗ್ರಿಗಳನ್ನು ಸ್ವತಃ ಸಂಪಾದಿಸಿ ಪೂರೈಸಬೇಕು. ಅಂದರೆ ಶಿವಲಿಂಗಕ್ಕೆ ತೃಪ್ತಿ ಇಂಥ ಭಕ್ತಿ ಶೀಲ-ನೇಮಗಳಿಂದ ಕೈಗೊಳ್ಳುವ ಶಿವಪೂಜೆಗೆ ಸಮನಾದ ಮೇಲುಪದವಿಲ್ಲ.

ಶಿವಪೂಜೆಗೈಯ್ಯುವ, ಶಿವಯೋಗಾನಂದದಲ್ಲಿ ತುಂದಿಲರಾಗುವ ಶರಣರು ಶಿವನ ಕೈಲಾಸವನ್ನು ಬಯಸಲಿಲ್ಲ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಿಗೆ ಆಶಿಸಲಿಲ್ಲ.  ಅವರಿದ್ದ ಠಾವು, ಅವರಂಗಳ ವಾರಾಣಿಸಿ, ಕಾಯವೇ ಕೈಲಾಸ, ಅವರ ನುಡಿಯೊಳಗೆ ಚಿಂತಾಮಣಿ, ಅವರಂಗಳ ಮುಂದಣ ಗೋವೇ ಕಾಮಧೇನು. ವೃಕ್ಷವೇ ಕಲ್ಪವೃಕ್ಷವಾಗಿರುತ್ತದೆ. ಇದನ್ನರಿತ ಶಿವಭಕ್ತರು ಬ್ರಹ್ಮಪದವಿ, ವಿಷ್ಣು ಪದವಿ, ರುದ್ರ ಪದವಿಗೆ ಹಾತೊರೆಯದೇ ಶಿವಶರಣರ ತೊತ್ತಾಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿರುವರು. ಶರಣ ಪದವಿಯೇ ಘನವಾದುದು. ಲಿಂಗಭಕ್ತತನವೇ ಮಿಗಿಲಾದುದು. ಅನುಪಮವಾದುದು. ಗುರುನಾಥನು ಭಕ್ತಿ-ಶೀಲ-ನೇಮಗಳಿಗಾ ಶ್ರಯವಾದ ಇಷ್ಟಲಿಂಗವನ್ನು ಕರುಣಿಸಿ ಮೇಲು ಪದವಿಯನ್ನು ಪಡೆಯಲು ಶಿವಯೋಗ ಪಾಲನೆಯನ್ನು ದಯಪಾಲಿಸಿದ್ದಾನೆ. ಅಂಥ ಆತನ ಸತ್ಕೃಪೆಗೆ ಅದಾವುದು ಸರಿಯಾದೀತು !

ಸಾಲೋಕ್ಯ ಮೊದಲಾದ | ಮೇಲಾದ ಪದನಾಲ್ಕು

ಈ ಲಿಂಗ ಪದಕೆ-ಕೀಳಾಗುತಿಹವೆಂದು

ಪೇಳಿದೈ ಗುರುವೆ ಕೃಪೆಯಾಗು   ||೧೧೦||

ಮೇಲಾದ ಪದ ಅಥವಾ ಪದವಿ, ಕೈವಲ್ಯ, ಮುಕ್ತಿ, ನಿರ್ವಾಣ, ಮೋಕ್ಷ ವೆಂಬುದಾಗಿ ಧರ್ಮ ಗ್ರಂಥಗಳು ಸಾರುತ್ತವೆ. ಜಗತ್ತಿನಲ್ಲಿ ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬೇಕು. ಅಂದರೆ ಮಾನವ ಜೀವನ ಸಾರ್ಥಕವಾಗುವದು. ಪುರುಷಾರ್ಥಗಳಲ್ಲಿ ಪ್ರಧಾನವಾದುದು ಮೋಕ್ಷ, ಮೋಕ್ಷವನ್ನು ಹೊಂದುವದೇ ಜೀವಾತ್ಮರ ಮಹಾಮಣಿಹ. ಈ ಮೋಕ್ಷವು ನಾಲ್ಕು ತೆರನೆಂದು ಪ್ರತಿಪಾದಿಸುತ್ತಾರೆ -ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂದು. ಈ ನಾಲ್ಕು ಮುಕ್ತಿ-ಪದಗಳು ಲಿಂಗೈಕ್ಯನ ಸಮರಸ ಅಥವಾ ಲಿಂಗಾಂಗಸಮರಸ ಪದವಿಗೆ ಸರಿಬರುವುದಿಲ್ಲವೆಂಬುದು ಸದ್ಗುರುವಿನ ಅಪ್ಪಣೆ.

ಲಿಂಗಪದವಿಗೆ ಅವು ಕೀಳೆಂದು ಹೇಳುವ ಧೈರ್ಯ ಶರಣದು. ಇನ್ನಾವ ಸಿದ್ಧಾಂತ ಇದನ್ನು ಪ್ರತಿಪಾದಿಸುವ ಸಾಹಸ ಮಾಡಿರುವದಿಲ್ಲ.

 ಸದ್ಧರ್ಮದಿಂದ ದುಡ್ಡನ್ನು ಸಂಗ್ರಹಿಸಿ ಸತ್ಕಾಮನೆಗಳನ್ನು ಪೂರೈಸಿದರೆ ಮೋಕ್ಷದ ಒಂದೊಂದು ಮೆಟ್ಟಿಲೂ ಸಾಧಕನಿಗೆ ಸಿಕ್ಕುವದು. ಪುಣ್ಯಫಲದಿಂದ ಜೀವನು ಶಿವಸಾಕ್ಷಾತ್ಕಾರ ಮಾಡಿಕೊಂಡು ಆತನ ಲೋಕದಲ್ಲಿ ವಾಸಿಸಿ ಆ ಪರಶಿವನ

ಆಲೋಕನೆಯಲ್ಲಿರುವುದೇ ಸಾಲೋಕ್ಯ ಪದವಿಯೆನಿಸುವದು. ಅಪರಿಚಿತ ವ್ಯಕ್ತಿಯು ಮೊದಮೊದಲು ದೂರಿಂದ ಅಲೋಕಿಸುವದು ಸಹಜ. ಪರಿಚಯವಾದಂತೆ ಸಮೀಪ ಸಂಬಂಧವನ್ನು ಹೊಂದುವನು. ಅದರಂತೆ ಶಿವಕೃಪೆ ಪಡೆದು ಅವನ ಸಾಮಿಪ್ಯವನ್ನು

ಪಡೆಯುವದೇ ಸಾಮಿಪ್ಯ ಮುಕ್ತಿಯೆನಿಸುವದು. ಸಾಮಿಪ್ಯ-ಸಂಬಂಧ ಸಂಸ್ಕಾರಗಳಿಂದ ಜೀವನು ಶಿವರೂಪವನ್ನು ಸಾಧಿಸುವುದೇ  ಸಾರೂಪ್ಯ ಮುಕ್ತಿಯಾಗುವದು. ಕೊನೆಗೆ ಶಿವನೊಡನೆ ಸಮರಸವಾಗಿ ಬೆರೆಯುವಿಕೆಯು ಸಾಯುಜ್ಯವೆನಿಸುವದು. ಇದುವೇ ಶ್ರೇಷ್ಠವಾದ ಮುಕ್ತಿಯೆನಿಸುವದು. ಉಪಾಸಕರ ಇಚ್ಛೆ ಮತ್ತು ಯೋಗ್ಯತೆಗಳಿಗನುಗುಣವಾಗಿ ಪರಮಾತ್ಮನು ತಕ್ಕ ಫಲವನ್ನು ಕೊಡುತ್ತಾನೆ. ಆದರೆ ಶಿವಶರಣರು ಶಿವನ ಹಂಗನ್ನೇ ಹರಿದಿರುತ್ತಾರೆ. ನಿನ್ನನ್ನು ನಾವು ಏನನ್ನೂ ಬೇಡುವದಿಲ್ಲವೆನ್ನುತ್ತಾರೆ..

ಸಾಲೋಕ್ಯಬೇಕೆಂದು ಪೂಜಿಸಿ ಸಾಲೋಕ್ಯವರವ ಪಡೆದರು.

ಸಾಮೀಪ್ಯ ಬೇಕೆಂದು ಪೂಜಿಸಿ ಸಾಮಿಪ್ಯವರವ ಪಡೆದರು.

ಸಾರೂಪ್ಯಬೇಕೆಂದು ಪೂಜಿಸಿ ಸಾರೂಪ್ಯವರವ ಪಡೆದರು.

ಸಾಯುಜ್ಯಬೇಕೆಂದು ಪೂಜಿಸಿ ಸಾಯುಜ್ಯವರವ ಪಡೆದರು.

ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ

ಈ ನಾಲ್ಕು ಪದವಿಗಳ ಪಡೆದು ಇತ್ತಿತ್ತಲಾದವರೆಲ್ಲಾ

ಅವರು ನಿಮ್ಮ ವೇದಿಸಲರಿವರೆ ?

ಇಂತಿಪ್ಪವ ಕೊಟ್ಟು ಕೊಂಡಾಡುವ

ಕೈಕೂಲಿಕಾರರೆಲ್ಲಾ ನಿಮ್ಮ ಬಲ್ಲರೆ ?

ಕೂಡಲ ಚನ್ನ ಸಂಗಯ್ಯ

 ನಿಮ್ಮ ಶರಣಂಗೆ ಚತುರ್ವಿಧ ಬಯಕೆಯಿಲ್ಲ ಭವಕಲ್ಪಿತವಿಲ್ಲ  (ಚ.ಬ.ವ. ೯೩೯)

ಈ ನಾಲ್ಕು ಪದವಿಗಳನ್ನು ಬೇಕೆಂದು ಬಯಸಿ ಶಿವನನ್ನು ಕೊಂಡಾಡಿ ಪಡೆದ ಸಾಧಕನು ಶಿವನ ನಿಜವನ್ನು ಅರಿಯಲಾರನು. ಪುಣ್ಯವನ್ನು ಕೊಟ್ಟು ಕೊಂಡುಕೊಂಡ – (ಖರೀದಿಸಿದ) ಪದವಿ ಈ ವೇಷ. ಇಂಥದನ್ನು ನಮ್ಮ ಶರಣರು ಬಯಸುವದಿಲ್ಲವೆಂದು ಚನ್ನಬಸವಣ್ಣನವರು ನಿರ್ಧಾರವಾಗಿ ನಿರ್ವಚಿಸಿದ್ದಾರೆ.

ಲಿಂಗವನ್ನು ಸದಾ ಅಂಗದಲ್ಲಿ ಧರಿಸಿ ಇಂದ್ರಿಯಂಗಳಿಗೂ ಲಿಂಗಗಳನ್ನು ಸಂಬಂಧಿಸಿಕೊಂಡ ಲಿಂಗಭಕ್ತನಿಗೆ ಲಿಂಗಾಂಗಯೋಗದಲ್ಲಿ ಈ ಚತುರ್ವಿಧ ಫಲಗಳು ಸಹಜವಾಗಿ ಪ್ರಾಪ್ತವಾಗುತ್ತದೆ. ಶಿವನ (ಶಿವಲಿಂಗದ) ಆರಾಧನೆಯಲ್ಲಿ ಈ ನಾಲ್ಕೂ ಪದವಿಗಳು ಲಭ್ಯವಾಗುವವೆಂಬ ಮಾತನ್ನು ಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ (ಪದ್ಯ-೨೮)

ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ |

ಸಾಮೀಪ್ಯಂ ಶಿವಭಕ್ತಿಧುರ್ಯಜನತಾ ಸಾಂಗತ್ಯ ಸಂಭಾಷಣೇ |

ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ |

ಸಾಯುಜ್ಯಂ ಮಮ ಸಿದ್ಧಮತ್ರಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್ ||

ಹೇ ಭವಾನೀಪತಿಯೇ | ನಿನ್ನ ಪೂಜೆಯಿಂದ ಸಾರೂಪ್ಯಮುಕ್ತಿಯು; ಶಿವ ಮಹಾ ದೇವ ಎಂಬ ನಾಮ ಸಂಕೀರ್ತನದಿಂದ ಸಾಮೀಪ್ಯ-ಮುಕ್ತಿಯು; ಶಿವಭಕ್ತಿಯಲ್ಲಿ ಶ್ರೇಷ್ಠರಾದ ಶರಣರೊಡನೆ ಸಹವಾಸ-ಸಂಭಾಷಣೆಗಳಿಂದ ಸಾಲೋಕ್ಯ ಮುಕ್ತಿಯು;

ನಿನ್ನ ಚರಾಚರಾತ್ಮಕರೂಪದ ಧ್ಯಾನದಿಂದ ಸಾಯುಜ್ಯ ಮುಕ್ತಿಯು ನನಗೆ ಇಲ್ಲಿ ಭೂಲೋಕದಲ್ಲಿಯೇ ಸಿದ್ಧವಾಗಿರುತ್ತವೆ. ಆದ್ದರಿಂದ ಹೇ ಸ್ವಾಮಿನ್ ನಾನು ಧನ್ಯನು” ಎಂದು ವರ್ಣಿಸಿರುವರು.

 ಇದರಂತೆ ಮಹಾಶರಣ ಉರಿಲಿಂಗ ಪೆದ್ದಿಗಳು ಚತುರ್ವಿಧ ಮುಕ್ತಿಗಳು ಶರಣನಿಗೆ ಸುಲಭ ಸಾಧ್ಯವೆಂದು ವಿಶ್ಲೇಷಿಸುತ್ತಾರೆ.

 ಸಾಲೋಕ್ಯ ವೆಂದೇನು

ಅಂಗದ ಮೇಲೆ ಲಿಂಗ ಸಂಬಂಧಿಯಾಗಿರುತ್ತಿರಲು !

ಸಾಮೀಪ್ಯವೆಂದೇನು |

ಗುರು-ಲಿಂಗ-ಜಂಗಮದ ದಾಸೋಹದ ಸನ್ನಿಧಿಯೊಳಿರುತ್ತಿರಲು

ಸಾರೂಪ್ಯವೆಂದೇನು ?

ಅನವರತ ಅರ್ಚನೆಯೊಳಿರುತ್ತಿರಲು !

ಸಾಯುಜ್ಯವೆಂದೇನು ?

ಚತುರ್ದಶಭುವನವ ಒಳಕೊಂಡ ಮಹಾಘನವ

ಮನವನಂಗವಿಸಿ ನೆನೆಯುತ್ತಿರಲು !

ಇಂತೀ ಚತುರ್ವಿಧ ಪದವೆಂದೇನು ?

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ |

ವಸತ

ನಾಲ್ಕೂ ಮುಕ್ತಿಗಳು ಶಿವಶರಣರಿಗೆ ನಿತ್ಯ ಸನ್ನಿಹಿತವಾಗಿರುತ್ತವೆ. ಅನವರತ ಅಂಗದ ಮೇಲೆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಸಾಲೋಕ್ಯ ಸಿದ್ಧಿ ಸುಲಭ ವಾಗುವದು. ಅಂಗದ ಲಿಂಗವನ್ನು ಅಂಗೈಯಲ್ಲಿ ಕಂಗಳಿಂದ ಕಾಣುವ ಲಿಂಗಭಕ್ತನಿಗೆ ಬೇರಾರು ಸರಿಸಾಟಿಯಾಗರು. ವಿಭೂತಿ ರುದ್ರಾಕ್ಷಧಾರಣ ಮಾಡಿಕೊಂಡು ‘ರುದ್ರೋ ಭೂತ್ವಾ, ರುದ್ರಂ ಯಜೇತ್’ ಶಿವನಾಗಿ ಶಿವಲಿಂಗವನ್ನು ಪೂಜಿಸೆಂಬ ಶ್ರುತಿಮಾತಿನಂತೆ ಶಿವನ ಸ್ವರೂಪ (ಸಾರೂಪ್ಯ) ವನ್ನು ಪಡೆಯುತ್ತಾನೆ. ಶಿವನ ಷಟ್‌ಶಕ್ತಿಗಳನ್ನು ಶರೀರದಲ್ಲಿ ನ್ಯಾಸ ಮಾಡಿಕೊಳ್ಳುತ್ತಾನೆ. ಷಡಕ್ಷರ ಮಹಾಮಂತ್ರ ಜಪದಿಂದ ಶಿವಲಿಂಗದಲ್ಲಿ ಬೆರೆಯುವವನಾದ್ದರಿಂದ ಲಿಂಗಸಾಮಿಪ್ಯ ಅತ್ಯಂತ ಸಮೀಪವಾಗುತ್ತದೆ. ಶರಣರ ಸಂಗಮಾಡಿ ಶಿವನನ್ನು ಪ್ರತ್ಯಕ್ಷ ಕಾಣುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಗುರು-ಲಿಂಗ- ಜಂಗಮರೇ ಪ್ರತ್ಯಕ್ಷ ಶಿವನಲ್ಲವೇ ? ವೀರಶೈವರು ಪಾದೋದಕ ಪ್ರಸಾದಲ್ಲಿ ಸಮರಸವನ್ನು ಹೊಂದಿ ಸಾಯುಜ್ಯವನ್ನು ಪಡೆಯುತ್ತಾರೆ. ಪ್ರತಿನಿತ್ಯದಲ್ಲೂ ಚತುರ್ವಿಧಮುಕ್ತಿ ಸುಖದಲ್ಲಿರುವ ಶರಣನಿಗೆ ಕಾಣದ ಪದವಿಗಳಿಗಾಗಿ ಅದೆಂತು ಆಶೆಯೊಡ ಮೂಡೀತು.

ಕೇವಲ ಪುಣ್ಯ ವಿಶೇಷದಿಂದ ಲಭ್ಯವಾಗುವ ಮೋಕ್ಷವು ದೇಹ ತ್ಯಾಗದ ನಂತರ ಪ್ರಾಪ್ತವಾದರೂ ಪ್ರಯೋಜನವಿಲ್ಲ. ಅಂದರೆ ಶರಣನು ದೇಹವಿರುವಾಗಲೇ ಪ್ರತಿ ನಿತ್ಯ ಮುಕ್ತನಾಗುವನು. ಅದುಕಾರಣ ಈ ಲಿಂಗ ಪದವಿಗೆ ಸಾಲೋಕ್ಯ ಮೊದಲಾದ ಮೇಲಾದ ಪದನಾಲ್ಕು ಕೀಳಾಗುತ್ತವೆಯೆಂದು ಶ್ರೀಗುರುವು ಬೋಧಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ನದಿಗಳೆಲ್ಲ ಸಮುದ್ರವನ್ನು ಸೇರಿ ಸಮುದ್ರವೇ ಆಗುವಂತೆ ಶಿವನನ್ನು ರೋಮ ರೋಮಂಗಳಲ್ಲಿ ಧರಿಸಿಕೊಂಡ ಶಿವಭಕ್ತನು ತನ್ನ ಇಂದ್ರಿಯಗಳನ್ನೆಲ್ಲ ಲಿಂಗಗಳನ್ನಾಗಿ ಮಾಡಿಕೊಳ್ಳುತ್ತಾನೆ. ಹೃದಯದೊಳಡಗಿದ ಪ್ರಾಪಂಚಿಕ ಆಶೆ-ಆಮಿಷಗಳು ಶಿವ ಮಯವಾಗಿ ಶಿವಪ್ರಸಾದವಾದ ಮೇಲೆ ಇನ್ನಿತರ ಬಯಕೆಗಳು ಉತ್ಪನ್ನವಾಗುವದಿಲ್ಲ. ಶಿವಶರಣರ ಪ್ರಸಾದ ರುಚಿಯನ್ನುಂಡ ಶಿವನು ಕೈಲಾಸಕ್ಕೇ ಹೋಗಲಿಲ್ಲವಂತೆ ! ಅಂದಮೇಲೆ ಗುರು ಕರುಣಿಸುವ ಲಿಂಗ ಪದವಿ ಮಹತ್ತರವಾದುದಲ್ಲವೆ

Related Posts