ಜ.ಚ.ನಿ

 ನೀರಿಂಗೆ ನೈದಿಲೆಯೆ ಶೃಂಗಾರ

ಸಮುದ್ರಕ್ಕೆ ತೆರೆಯೆ ಶೃಂಗಾರ

ಗಗನಕ್ಕೆ ಚಂದ್ರಮನೆ ಶೃಂಗಾರ

ನಾರಿಗೆ ಗುಣವೆ ಶೃಂಗಾರ….”

 ಕುಮಾರ ಸ್ವಾಮಿಗಳವರು ಸ್ತ್ರೀಯರ ಮುಖಗಳನ್ನು ಈ ಕಣ್ಣುಗಳಿಂದ ನೋಡದಿದ್ದರು ಅವರ ಜೀವನ ಮುಖವನ್ನು ತಮ್ಮ ಜ್ಞಾನನೇತ್ರದಿಂದ ನಿರೀಕ್ಷಿಸುತ್ತಿದ್ದರು. ಬರೀ ನಿರೀಕ್ಷಣೆ ಮಾತ್ರವಲ್ಲ ಸುಧಾರಣೆಗಾಗಿ ಸರ್ವತೋಮುಖದಲ್ಲಿ ಪರೋಕ್ಷವಾಗಿ ಪರಿಶ್ರಮಿಸುತ್ತಿದ್ದರು.

ಪ್ರತಿವರ್ಷ ಶಿವಯೋಗಮಂದಿರ ಜಾತ್ರೆಯ ಸಮಯದಲ್ಲಿ ಮಹಿಳಾ ಸಭೆಯನ್ನು ಕರೆಯುತ್ತಿದ್ದರು. ಮಹಿಳೆಯರನ್ನೆ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದರು. ಭಾಷಣಕರ್ತರನ್ನಾಗಿ ಏರ್ಪಡಿಸುತ್ತಿದ್ದರು. ಸುಧಾರಣೆಯ ಜೀವಂತ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಹಚ್ಚುತ್ತಿದ್ದರು.

ಸ್ವಾಮಿಗಳವರ ವ್ಯಕ್ತಿತ್ವಕ್ಕೆ ಹೆಣ್ಣಿನ ಅಗತ್ಯವಿಲ್ಲದಿದ್ದರು ಸಮಾಜಕ್ಕೆ ಹೆಚ್ಚು ಅಗತ್ಯವಿದೆಯೆಂಬುದನ್ನು ಚೆನ್ನಾಗಿ ಗ್ರಹಿಸಿದ್ದರು. ಸಮಾಜ ರಥಕ್ಕೆ ಹೆಣ್ಣು ಗಂಡು ಎರಡು ಚಕ್ರಗಳೆಂದು ಸಮಾಜ ಪುರುಷನ ಒಳಮ್ಮೆ, ಹೊರಮೈ ಎಂದು ಇವುಗಳಲ್ಲಿ ಯಾವುದಾದರೊಂದು ಊನವಾದಲ್ಲಿ ಸಮಾಜ ಸುಸೂತ್ರವಾಗಿ ಸಾಗದೆ ಕುಂಟುತ್ತದೆಯೆಂದು  ಒಮ್ಮಿಲ್ಲೊಮ್ಮೆ ಪ್ಪಪಾತಕ್ಕೆ ಬೀಳುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು. ಪುರುಷರ ಸುದಾರಣೆಯಂತೆ ಸ್ತ್ರೀ ಯರ ಸುಧಾರಣೆಯು ಅತ್ಯಗತ್ಯ ಅನಿವಾರ್ಯ.

ಸ್ವಾಮಿಗಳವರು ಪ್ರಯಾಣದಲ್ಲಿರುವಾಗ ತಂಗಿದ ಹಳ್ಳಿಯಲ್ಲಿ ಯಾರಾದರು ತಮ್ಮ ಮನೆ ಹೆಂಗಸರನ್ನು  ಚನ್ನಾಗಿ ಹೊಡೆದದ್ದು ಅವರ ಕಿವಿಗೆ ಬದ್ದರೆ ಅವರನ್ನು ಕರೆಯಿಸಿ ಏನಪ್ಪ ಯಾತಕ್ಕೆ ಹೆಂಡತಿಯನ್ನು ಹೊಡೆದೆ ? ತಪ್ಪು ಮಾಡದ ಮನುಷ್ಯನಿರುವನೆ ? ತಪ್ಪಿಗೆ ತಕ್ಕ ಶಿಕ್ಷೆ ಇದೆಯೆ ? ನೀನು ತಪ್ಪು ಮಾಡಿದರೆ ನಿನ್ನನ್ನು ಯಾರು ಹೊಡೆಯಬೇಕು ? ಬುದ್ಧಿವಾದವನ್ನು ಹೇಳಿ ತಪ್ಪನ್ನು ತಿದ್ದಬೇಕು. ಹೆಂಡತಿಯೆ ಮನೆಯ ಭಾಗ್ಯದೇವತೆ ! ಮನೆ ಮ್ಕಳ ಪಾಲನೆ ಅವಳ ಪಾಲಿನದು. ಹೆಂಡತಿಯನ್ನು ಹಿಂಸಿಸುವರಿಗೆ ಹರನು ಮೆಚ್ಚಲಾರ.ಘೋರ ನರಕ ತಪ್ಪದು. ನೀನು ನಿನ್ನ ಹೆಂಡತಿಯು ಪರಸ್ಪರ ಪ್ರೇಮ ಸಂತೋಷಗಳಿಂದ ಇದ್ದರೆ ಸುಖ ಸಿಗುತ್ತದೆ. ಸಂಸಾರ ಸುಸೂತ್ರ  ಸಾಗುತ್ತದೆ. ಒಂದು ಕಾಲು ಕುಂಟಾದರೆ ಚೆನ್ನಾಗಿರುತ್ತದೆಯೊ, ಹೇಳು ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶಿವಶರಣರು ಅಪ್ಪಣೆಕೊಡಿಸಿದ್ದಾರೆ. ನಿಮ್ಮಿಬ್ಬರ ದೇಹಗಳು ಎರಡಾಗಿದ್ದರು ಮನಸ್ಸು ಒಂದಾಗಿರಬೇಕು. ಹೃದಯ ಒಂದಾಗಿರಬೇಕು. ತಿಳಿಯಿತೆ ? ಇನ್ನು ಮೇಲೆ ಹೀಗೆಲ್ಲ ಹುಚ್ಚುಹುಚ್ಚಾಗಿ ಹೊಡೆಯಬೇಡ ಎಂದು ಹೇಳಿ ಕಳಿಸುತ್ತಿದ್ದರು. ಆದರೂ ಸ್ವಾಮಿಗಳ ಮನಸ್ಸು ಸ್ತ್ರೀಯರ ಅಜ್ಞಾನ ಅನಾಚಾರಗಳಿಗಾಗಿ ತುಂಬಾ ನೋಯುತ್ತಿತ್ತು. ಅವುಗಳ ನಿವಾರಣೆಗಾಗಿ ಸದಾ ಆಲೋಚಿಸುತ್ತಿತ್ತು.

ಸ್ವಾಮಿಗಳವರು ಸಿದ್ಧರಾಗಿಯು ಸ್ತ್ರೀಯರ ಮುಖಾವಲೋಕನ ಮಾಡದಿರಲು ಕಾರಣವೇನು ಎಂದು ಕೆಲವರು ಕೇಳದಿರಲಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದಲ್ಲಿ ನಿರ್ವಾಣೆಯಾಗಿ ಅನುಭವ ಮಂಟಪಕ್ಕೆ ಬಂದ ಮಹಾದೇವಿಯಕ್ಕಗಳನ್ನು ‘ಕೇಶದ ಮರೆಯೇಕೆ’ ? ಎಂದು ಕೇಳಿದ ಅಲ್ಲಮಪ್ರಭುವಿಗೆ ‘ನಿಮ್ಮ ಶರಣರಿಗೆ ನೋವಾದೀತೆಂದು’ ಅಕ್ಕಗಳು ಉತ್ತರಿಸಿದಂತೆಯೆ ಇಲ್ಲಿ ಉತ್ತರಿಸಬೇಕಾಗಿದೆ. ಸ್ವಾಮಿಗಳವರಿಗೆ ನಿಜವಾಗಿಯೂ ಮನೋವಿಕಾರವಿರಲಿಲ್ಲ. ಅದರಲ್ಲಿ ಅವರು

ಸಂಪೂರ್ಣ ಸಿದ್ಧಿಯನ್ನು ಪಡೆದಿದ್ದರು. ಆದರೂ ಅವರು ತಮ್ಮ ಅಪರ ವಯಸ್ಸಿನಲ್ಲಿಯು ಆ ವ್ರತವನ್ನು ನಡೆಸಿದರು. ಕಾರಣ ಹಿರಿಯರ ಅನುಕರಣ ಕಿರಿಯರು ಮಾಡಿಯಾರು. ಅದರಲ್ಲಿಯು ಇಂತಹ ವಿಷಯಗಳಲ್ಲಿ ಅನುಕರಣ ಮಾಡುವುದು ವಿಶೇಷ. ನಾವೇ ನೋಡತೊಡಗಿದರೆ ಶಿವಯೋಗ ಮಂದಿರ ಸಾಧಕರು ನೋಡತೊಡಗುವರು. ನಮ್ಮಂತೆ ಅವರ ಮನಸ್ಸಿರುವದಿಲ್ಲ. ಮನಸ್ಸಿನ ಸೆಳೆತಕ್ಕೆ ಮಾರುಹೋದಾರು ಎಂಬುದೇ ಅವರ ಉದ್ದೇಶ. ಹೀಗೆ ಸಾಧಕರ ಶಿಕ್ಷಣಕ್ಕಾಗಿ ಇನ್ನೂ ಅನೇಕ ವ್ರತಗಳನ್ನು ಕೈಬಿಡದೆ ಅವರು ಆಚರಿಸುತ್ತಿದ್ದರು ಅವರಿಗಾಗಿ ಅವರಿದ್ದಿಲ್ಲ.

ಒಂದು ದಿನ ಗಚ್ಚಿನಮಠದಲ್ಲಿ ಎಲ್ಲ ಸಾಧಕರಿದ್ದರು. ಕಲ್ಲುಮಠದ ಮುಂಭಾಗದಲ್ಲಿ ಸ್ವಾಮಿಗಳೊಬ್ಬರೆ ಮೂಹೂರ್ತ ಮಾಡಿದ್ದರು. ಬೆಳಗಿನ ಒಂಭತ್ತು ಗಂಟೆಯ ಸಮಯ. ಯಾರೋ ಪ್ರಯಾಣಿಕರಾದ ಹೆಂಗಸರು ದ್ವಾರದಿಂದ ಸ್ತ್ರೀ ಸಹಜವಾದ ಗಲಾಟೆಯೊಡನೆ ಒಳನುಗ್ಗಿದರು. ಸ್ವಾಮಿಗಳವರು ಸುಮ್ಮನೆ ಇದ್ದರು. ಹೆಂಗಸರು ಎದುರಿಗಿರುವ ಸ್ವಾಮಿಗಳವರನ್ನು ನೋಡಿದ ಮೇಲೆಯು ಹಿಂದಿರುಗಲಿಲ್ಲ. ಬಳಸಿಕೊಂಡು ಗಚ್ಚಿನಮಠದತ್ತ ಹೋಗಹತ್ತಿದರು. ಆಗ ಸ್ವಾಮಿಗಳವರು ತಾವೇ ಎದ್ದು ಅವರನ್ನು ತಾಯಿಗಳೆ, ಎಂದು ನಯವಾಗಿ ಕರೆದು ಅಲ್ಲಿ ಶಿವಯೋಗಿಗಳಿದ್ದಾರೆ. ಅವರು ನಿಮ್ಮನ್ನು ನೋಡುವದಿಲ್ಲ. ನಿಮ್ಮೊಡನೆ ಮಾತೂ ಆಡುವದಿಲ್ಲ. ಅಷ್ಟಕ್ಕು ನೀವು ಅಲ್ಲಿ ನೋಡತಕ್ಕದು ಏನೂ ಇಲ್ಲ. ನೀವು ಹೀಗೆಯೆ ಹೊರಟು ಹೋಗಿರೆಂದು ಹೇಳಿಕಳುಹಿಸಿದರು. ಇದನ್ನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಹೀಗಿರುವಾಗ ಅವರ ಉದ್ದೇಶ ಅವರ ಪ್ರತಾಚರಣೆ ಸಾಧಕರ ನಿಮಿತ್ತವಾಗಿ ಇತ್ತೆಂಬುದು ಸ್ಪಷ್ಟವಾಗುವುದಿಲ್ಲವೆ ?

ವ್ಯಷ್ಟಿ ಜೀವನದ ಸಾಧನ ಕ್ಷೇತ್ರ, ಸಣ್ಣ ಕುಟುಂಬವಾಗಿದ್ದರೆ ಸಮಷ್ಟಿ ಜೀವನದ ಸಾಧನಕ್ಷೇತ್ರ, ವಿಶಾಲವಾದ ವಿಶ್ವಕುಟುಂಬವಾಗಿದೆ. ಈ ವಿಶ್ವಕುಟುಂಬವನ್ನು ಮೀರಿ ಯಾವನೂ ವಿಶ್ವವ್ಯಕ್ತಿಯಾಗಲಾರನು, ವಿಶ್ವಶಾಂತಿ ಕಾರಣನಾಗನು. ಹಾಲಾದರು ಮಧುರ ಪಾಕವಾಗಬೇಕಾದರೆ ಸಕ್ಕರೆಯ ಬೆರಕೆ ಬೇಕೇ ಬೇಕು. ಪ್ರೇಮವೆ ಹಾಲು ಸದ್ಗುಣಗಳೆ ಸಕ್ಕರೆ. ಪ್ರೇಮ ಐಂದ್ರಿಕವಾಗಬಾರದು. ಆಧ್ಯಾತ್ಮಿಕವಾಗಬೇಕು. ಅದರ್ಶಾಕಾಂಕ್ಷೆಯಾಗಬೇಕು. ಸದ್ಗುಣ ಸಂವರ್ಧಿಯಾಗಬೇಕು.

ಬೌದ್ಧಿಕ ಆಧ್ಯಾತ್ಮಿಕ ಜೀವನೋನ್ನತಿಗೆ ಹೆಣಗುವ ವ್ಯಕ್ತಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಬುದ್ಧಿ ಆತ್ಮಗಳು ಉಭಯ ವ್ಯಕ್ತಿತ್ವದಲ್ಲಿ ಸರಿಸಮಾನವಾದವುಗಳು. ಏರುಪೇರುಗಳ ಕವಲಿಲ್ಲ. ಕೊಂಕಿಲ್ಲ. ಆದರು ಸ್ತ್ರೀ ಸಮಾಜೋನ್ನತಿಗೆ ಹೆಣಗಿ ಮುಖದ ಮೇಲೆ ಕಪ್ಪುಕಲೆಯನ್ನು ತಂದುಕೊಳ್ಳದ ವ್ಯಕ್ತಿ ಇತಿಹಾಸದಲ್ಲಿ ಕಾಣುವುದು ವಿರಳ. ಸ್ವಾಮಿಗಳವರು ಈ ವಿಷಯದಲ್ಲಿ ನಿಷ್ಕಳಂಕ ಚರಿತರಾಗಿ ಹುಣ್ಣಿಮೆಯ ಚಂದ್ರನಂತೆ ಬೆಳಗಿದರು. ಉತ್ತರಾಯಣದ ಪ್ರಭಾಕರನಂತೆ ಪ್ರಜ್ವಲಿಸಿದರು.

ಸ್ವಾಮಿಗಳವರು ಹೆಂಗಸರ ಮುಖವನ್ನು ನೋಡದೆ ಇದ್ದುದು ಹೇಳನ ಭಾವದಿಂದಲ್ಲ. ಸತೀತ್ವ ಸ್ವಾಮಿತ್ವ ಧರ್ಮಗಳೆರಡರ ಪರಿಪಾಲನದ ಹೆಚ್ಚಳಿಕೆಯಿಂದ, ಸಾಂಸಾರಿಕ ಜೀವನದಲ್ಲಿದ್ದು ಉರಿಯ ನಾಲಗೆಗಂಜೆ, ಸುರಿಗೆಯ ಮೊನೆಗಂಜೆ ಪರಸ್ತ್ರೀ ಪರಧನವೆಂಬ ಜೂಜಿಂಗಂಜುವೆ” ಎಂದು ಉಸುರಿದ ಬಸವಣ್ಣನ ಬಂಧುರೋಕ್ತಿಯನ್ನು ಸನ್ಯಾಸಜೀವಿಯು ಅದೆಷ್ಟು ಎಚ್ಚರದಿಂದ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಾಗಿ ತಿಳಿದು ಆಚರಣೆಯಲ್ಲಿ ತಂದು ಆ ಉಕ್ತಿಯನ್ನು  ಸಾರ್ಥಕಪಡಿಸಿದ ಸನ್ಮಾನ್ಯರು ಸ್ವಾಮಿಗಳವರು, ಆವ್ರತಶೀಲರಾಗಿಯೇ ಸ್ತ್ರೀ ಸುಧಾರಣೆಯ ಕಾರ್ಯವನೆಸಗಿದ ಕಾರಣಿಕರು ಕುಮಾರಯೋಗಿಗಳವರು.

ಸ್ತ್ರೀಯರಲ್ಲೆ ಬೋಧಕ ವರ್ಗ ತಯಾರಾಗಬೇಕೆಂಬ ಹೆಬ್ಬಯಕೆ  ಸ್ವಾಮಿಗಳವರದಾಗಿತ್ತು. ಅಕ್ಕ ಲಕ್ಕಮ್ಮ, ನೀಲಾಂಬೆ ಮುಂತಾದ ಶರಣೆಯರಂತೆ ಆತ್ಮವೀರರಾಗಿ ಬಾಳಬೇಕೆಂಬ ಮೈತ್ರೇಯಿಯಂತೆ ಪತಿವ್ರತೆಯರಾಗಿ ಪರವಸ್ತು ಪ್ರೇಮಿಗಳಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆ ಸ್ವಾಮಿಗಳವರಲ್ಲಿ ಬಲವಾಗಿ ಬೇರೂರಿತ್ತು. ಚಿಗುರು ಹಾಕಿತ್ತು. ಫಲ ನೋಡುವ ಅನುಭವಿಸುವ ಅವಕಾಶ ಅವರಿಗಿಲ್ಲದೆ ಹೋಯಿತು.

ಪೂಜ್ಯ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೊಂದು ಪವಿತ್ರ ಬಂಧನ. ವಿವಾಹೇತರ ಸಂಬಂಧಗಳು ಧರ್ಮಬಾಹಿರವಾಗಿದ್ದು, ಸಮಾಜದ ಮನ್ನಣೆಗೆ ಪಾತ್ರವಾಗುವುದಿಲ್ಲ. ಇಂಥ ಸಂಬಂಧಗಳಿಗೆ ನೆಮ್ಮದಿ, ಸುಖ ಶಾಂತಿಗಳು ಗಗನಕುಸುಮವಾಗಿರುವುದರಿಂದ ನೆಮ್ಮದಿಯ ಜೀವನಕ್ಕೆ ವಿವಾಹ ಅನಿವಾರ್ಯ. ವಿವಾಹದಲ್ಲಿ ಬಂಧಿತರಾದ ಸತಿ- ಪತಿಗಳು ಸಮರಸದಿಂದ ಕೂಡಿ ಬಾಳಿದರೆ ನೆಮ್ಮದಿಯೆಂಬುದು ಅಂಗೈಫಲ. ಸರಸ ದಾಂಪತ್ಯವೆಂಬುದು ಸತಿಪತಿಗಳ ಜೀವನಕ್ಕೆ ಸೀಮಿತವಾಗಿರದೆ ಅದು ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ವಿರಸ ದಾಂಪತ್ಯ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಜೀವನ ಮೃತ್ಯುವಿಗೆ ಸಮವಾಗುತ್ತದೆ.

ಸತಿಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ರಥವನ್ನು ಮುನ್ನಡೆಸಬೇಕು. ಸುಖ-ದುಃಖ, ನೋವು-ನಲಿವು, ಸೋಲು-ಗೆಲವುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಆಚಾರ-ವಿಚಾರ, ಬೇಕು-ಬೇಡ, ನೋಟ-ಮಾಟಗಳಲ್ಲಿ ಇಬ್ಬರೂ ಒಂದಾಗಿರಬೇಕು. ಆಗ ಆ ದಾಂಪತ್ಯದಲ್ಲಿ ಯೋಗದ ಕಳೆ ಬೆಳಗುತ್ತದೆ. ಅದೊಂದು ಅನುಪಮ ಆದರ್ಶದ ಬಾಳೆನಿಸುತ್ತದೆ. ಇಂಥ ಬಾಳನ್ನು ಕಂಡ ನಿಜಗುಣರು- ‘ಸತಿಪತಿಗಳಿವರ ಸಮರತಿಯ ಬಾಳುವೆಗೆ ಪ್ರತಿಯುಂಟೆ ಲೋಕದೊಳು’ ಎಂದು ಉದ್ಗರಿಸುತ್ತಾರೆ.

ಆದರ್ಶ ಕುಟುಂಬದ ಸತಿಪತಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಪರಸ್ಪರ ತಿದ್ದಿಕೊಳ್ಳುವ ಮತ್ತು ಕ್ಷಮಿಸುವ ಔದಾರ್ಯ ಹೊಂದಿರುತ್ತಾರೆ. ಅವರಲ್ಲಿ ಪರಿಶುದ್ಧವಾದ ನಿಷ್ಕಾಮ ಪ್ರೀತಿಯೊಂದು ಮನೆಮಾಡಿಕೊಂಡಿರುತ್ತದೆ. ಬಡತನ-ಸಿರಿತನಗಳಿಗೆ ಅಲ್ಲಿ ಸ್ಥಾನವಿಲ್ಲ. ಬಡವಿಯಾದ ಸತಿಯೂ ನಿಷ್ಕಾಮ ಮತ್ತು ನಿರ್ವ್ಯಾಜ ಪ್ರೀತಿಯಲ್ಲಿ ಸ್ವರ್ಗವನ್ನು ಕಾಣುತ್ತಾಳೆ. ‘ನಾನು ಬಡವಿ ಆತ ಬಡವ; ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ಕವಿವಾಣಿಯಿಂದ

ಪ್ರೀತಿಯ ಹರವು, ಶ್ರೀಮಂತಿಕೆ ನಮ್ಮರಿವಿಗೆ ಬರುತ್ತದೆ.

ಜೇಡರದಾಸಿಮಾರ್ಯ ಒಬ್ಬ ಶರಣ. ದುಗ್ಗಳೆ ಅವನ ಆದರ್ಶ ಸತಿ. ವ್ಯಕ್ತಿಯೊಬ್ಬ ಸನ್ಯಾಸ ಶ್ರೇಷ್ಠವೋ? ಸಂಸಾರ ಶ್ರೇಷ್ಠವೋ? ಎಂದು ಪ್ರಶ್ನಿಸಿದಾಗ ದಾಸಿಮಾರ್ಯರು ಸಾಕಷ್ಟು ಬೆಳಕಿದ್ದರೂ ‘ನಾನೀಗ ಓದಬೇಕು ದೀಪ ತಗೆದುಕೊಂಡು ಬಾ’ ಎಂದು ಸತಿ ದುಗ್ಗಳೆಗೆ ಹೇಳಿದರೆ ದೀಪ ತಂದು ಮುಂದಿರಿಸುತ್ತಾಳೆ. ಊಟದ ಸಮಯದಲ್ಲಿ ಬಟ್ಟಲಿನಲ್ಲಿರುವ ಅಂಬಲಿ ಆರಿ ತಣ್ಣಗಾಗಿದ್ದರೂ ಬೀಸಣಿಕೆಯ ಗಾಳಿಯಿಂದ ಅಂಬಲಿಯನ್ನು ಆರಿಸಲು ಹೇಳುತ್ತಾರೆ. ದುಗ್ಗಳೆ ಅನ್ಯಮಾತಿಲ್ಲದೆ ಆರಿದ ಅಂಬಲಿಗೆ  ಗಾಳಿ ಬೀಸುತ್ತಾಳೆ. ಆಗ ಪ್ರಶ್ನಿಸಿದ ವ್ಯಕ್ತಿಯು ಇಂಥ ಸತಿ ಸಿಕ್ಕರೆ ಸಂಸಾರ ಶ್ರೇಷ್ಠ, ಸಿಗದಿದ್ದರೆ ಸನ್ಯಾಸ ಶ್ರೇಷ್ಠವೆಂದು ಅರಿಯುತ್ತಾನೆ. ಸಾದ್ವಿಯೂ, ಪ್ರಿಯವಾದಿನಿಯೂ ಆದ ಸತಿ ತನ್ನ ಪ್ರೀತಿ, ತ್ಯಾಗ, ಸಹನೆಗಳಿಂದ ಸದಾ ಪತಿಯ ಮನಸ್ಸನ್ನು ಗೆಲ್ಲುತ್ತಾಳೆ. ಸತಿಪತಿಗಳ ದಾಂಪತ್ಯ ಜೀವನ ಶಾರೀರಿಕ ಸಂಬಂಧವನ್ನು ಮೀರಿ ಆಧ್ಯಾತ್ಮಿಕ ಹಂತಕ್ಕೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಫಲ ಪುರುಷಾರ್ಥಗಳ ಪ್ರಾಪ್ತಿಗೆ ಕಾರಣವಾಗಬೇಕು. ಪರಸ್ಪರ ಅರಿತು ಬಾಳಬೇಕು. ಬಾಳು ಬೆಳಗಬೇಕು. ಇಂಥ ಸತಿಪತಿಗಳು ಕೂಡಿ ಮಾಡುವ ಭಕ್ತಿ, ಏಕೋಭಾವ ಶಿವನಿಗೂ ಪ್ರಿಯವಾಗುತ್ತದೆ.

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಪರಮೇಶ್ವರಿಯ ಪುಣ್ಯನಾಮವನು ಪಗಲಿರುಳು

ಸರಸಾನುರಾದಿಂದೋದಿ ಕೇಳಿದವರ್ಗೆ

ದುರಿತಕಂಟಕವಳಿದು ಕೈಸಾರುತಿಹವಮಳತರ ಭೋಗಮೋಕ್ಷಂಗಳು ||ಪ||

 

ಹ್ರೀಂಕಾರಿ ವಾಣಿ ಕಲ್ಯಾಣಿ ರುದ್ರಾಣಿ ರಮೆ

ಓಂಕಾರರೂಪಿಣಿ ಗಣಾನಿ ಗಾನಪ್ರೀತೆ

ಹ್ರೈಂಕಿಲಾಮಾಲಿನಿ ಮಹಾಮಾಯೆ ಮಾತಂಗಿ ಕ್ಲಿಂಕಲೇ ವರವರೇಣ್ಯೆ

 

ಸೌಂಕಾರಸದನೆ  ಶರ್ವಾಣಿ ಶಾರದೆ ಸತ್ಯೆ

ಕ್ರೌಂಕವಚಮುಖ್ಯೆ   ಮಂತ್ರಾಧಿದೇವತೆ ದೇವಿ

ಶ್ರೀಂಕಿಲಾಕಾರೆ  ವಿದ್ಯಾಂಗಿ ಮಾತೃಕೆ ಮಾನ್ಯೆ ಶಾಂಕರೀಶಾನಿಯೆಂದು         ||೧|

 

ಗಿರಿಜೆ ಗೀರ್ವಾಣಪೂಜಿತೆ ಗೌರಿ ಗುಹಜನನಿ

ಪರನಾದಬಿಂದುಮಂದಿರೆ ಮನೋಂಬುಜಹಂಸೆ

ವರದೆ ವೈಭವೆ ನಿತ್ಯಮುಕ್ತೆ  ನಿರ್ಮಲೆ ನಿರಾವರಣೆ ಶಿವೆ ಶಾಂತೆ ಕಾಂತೆ

 

ಧರಣಿ ಧರ್ಮಾನುಗತೆ ಸಾವಿತ್ರಿ ಗಾಯತ್ರಿ  

ವಿರಜೆ ವಿಶ್ವಾತ್ಮಕೆ  ವಿಧೂತಪಾಪವ್ರಾತೆ

 ಶರಣಹಿತೆ ಸರ್ವಮಂಗಳೆ ಸಚ್ಚಿದಾನಂದೆ ಪರಸುಧಾಕಾರಿಯೆಂದು          ||೨||

 

ಚಂಡೆ ಚಂಡೇಶ್ವರಿ ಚತುರೆ ಕಾಳಿ ಕೌಮಾರಿ

 ಕುಂಡಲೆ ಕುಟಿಲೆ ಬಾಲೆ ಭೈರವಿ ಭವಾನಿ ಚಾ-

ಮುಂಡಿ ಮೂಲಾಧಾರೆ ಮನುವಂದೆ ಮುನಿಪೂಜ್ಯೆ ಪಿಂಡಾಂಡಮಯೆ ಚಂಡಿಕೆ

 

 

ಮಂಡಲತ್ರಯನಿಲಯೆ ದಂಡಿ ಜಯೆ  ದುರ್ಗಿ ಫಣಿ

 ಕುಂಡಲೆ ಮಹೇಶ್ವರಿ ಮನೋನ್ಮನಿ ಜಗನ್ಮಾತೆ

ಖಂಡಶಶಿಮಂಡನೆ ಮೃಡಾಣಿ ಪಾರ್ವತಿ ಪರಮ ಚಂಡಕರಮೂರ್ತಿಯೆಂದು      ||೩||

 

ವಿಮಲೆ ವಿಖ್ಯಾತೆ ಮಧುಮತಿಮುಖ್ಯೆ  ಮಹನೀಯೆ

 ಸುಮತಿ ಸುಲಲಿತ ಹೈಮವ ಭಾವೆ ಭೋಗಾರ್ಥಿ

ಕಮಲೆ ಕಾತ್ಯಾಯನಿ ಕರಾಳೆ ತ್ರಿಪುರವಿಜಯೆ ದಮೆ ದಯಾರಸಪೂರಿತೆ

 

ಅಮೃತೆ ಅಂಬಿಕೆ ಅನ್ನಪೂರ್ಣೆ ಅಶ್ವಾರೂಢೆ

ಶಮೆ ಶುದ್ಧ ಸಿಂಹವಾಹಿನಿ ಶುಭಕಲಾಪೆ ಸು

ಪ್ರಮದೆ ಪಾವನೆ ಪದ್ಯೆ ಪಾಶದೆ ಪರಬ್ರಹ್ಮ ಉಮೆ ಸಹಜ ಸುಮುಖಿಯೆಂದು     ||೪||

 

ಇಂತು ಗುರು ಶಂಭುಲಿಂಗದ ಶಕ್ತಿ ಸೌಭಾಗ್ಯ

ಸಂತತಶರೀರಸಮ್ಯಜ್ಞಾನಸತ್ಕ್ರಿಯೆ

ಸಮಂತು ಕರುಣಾಸನಾಭರಣಾಯುಧಾದಿ  ಸುಗುಣಾಂತರಾದಿಗಳಾಗುತ

 

ಸಂತಸವನೀವ ಶಾಂಭವಿಯ ನೂರೆಂಟು ಶುಭ

ವಾಂತ ನಾಮಂಗಳು ಜಪಿಸಿದೊಡೆ ಸತಿಪುತ್ರ

ಸಂತಾನಸಕಲಸಂಪದಸಿದ್ದಿಯಪ್ಪುದೋರಂತೆ ನಿಶ್ಚಯಮಿದೆಂದು      ||೫|

ಲೇಖಕ: ಶ್ರೀಕಂಠ.ಚೌಕೀಮಠ

(ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಮಹಾ ಸ್ವಾಮಿಗಳ ೧೫೭ ನೆಯ ಜಯಂತಿ ಮಹೋತ್ಸವದ ನಿಮಿತ್ತ ಸ್ಮರಣೆ)

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.

ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಳೆದ ತಿಂಗಳನಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಓದಿದ್ದು ಕೇವಲ ಏಳನೆಯ ತರಗತಿ.ಅವರು ಏಳನೆಯ ತರಗತಿಯ ಮುಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.ಅವರು ಅನುತ್ತೀರ್ಣರಾಗಿದ್ದು- ಅವರು ದಡ್ಡರೆಂದು ಅಲ್ಲ.

ಅವರು ಅನುತ್ತೀರ್ಣರಾದ ಕಾರಣ, ಪರೀಕ್ಷೆಯ ಹಿಂದಿನ ನಾಲ್ಕೈದು ದಿನಗಳ ಕಾಲ  120 ಕಿ.ಮಿ. ದೂರದ ಕಾಲ್ನೆಡಿಗೆಯ ಪ್ರವಾಸ.  ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದು ಮುಲ್ಕಿ (ಏಳನೆಯ ತರಗತಿ) ಪರೀಕ್ಷಾ ಕೇಂದ್ರಕ್ಕೆ ಬಂದು ಜ್ವರ ದಿಂದ ಬಳಲಿದ್ದು ಹೊರತು ಅವರು ಅನುತ್ತೀರ್ಣರಾಗುವಂತಹ ದಡ್ಡರಲ್ಲ. ಅವರೊಬ್ಬ ಸ್ವಾಭಿಮಾನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಅನುತ್ತೀರ್ಣರಾದರೂ ಮರಳಿ ತಮ್ಮ ತಾಯಿಯ ತೌರುಮನೆಯ ಊರು ಲಿಂಗದಹಳ್ಳಿಗೆ ಬಂದು ಗಾವಟಿ ಶಾಲೆ ತೆರೆದು ಊರ ಮಕ್ಕಳಿಗೆ ಪಾಠ ಹೇಳಿದ ಮಹಾನುಭಾವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು (ತ್ರಿವಿಧ ಜಂಗಮಲಿಂಗಸ್ಥಲಗಳು: ಸ್ವಯ, ಚರ, ಪರ)

(ಸೌಜನ್ಯ :ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ : ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳಗದಗ ಲೇಖನದ ಆಯ್ದ ಭಾಗ)

ವೀರಶೈವ-ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ .

  1. ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು .
  2. ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು. ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮ.

ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು .

 

  1. ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಎಂಬುದಕ್ಕೆ ಸಾಕ್ಷಿಯಾಗಿ  ಅವರು ತಮ್ಮ ಜೀವಿತಾವಧಿಯಲ್ಲಿ ಕಾರ್ಯಗತಗೊಳಿಸಿದ ಎಲ್ಲ ಯೋಜನೆಗಳ ಯಶೋಗಾಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮುಂದಾಲೋಚನೆ, ಯೋಜನೆ,ಸಂಪಲ್ಮೂನಗಳ ಕ್ರೋಢಿಕರಣ ಮತ್ತು ದೃಡ ಸಂಕಲ್ಪಗಳು ಮಹಾಶಕ್ತಿಗಳಾಗಿ ಅತ್ಯಧ್ಬುತವಾಗಿ ಗೋಚರಿಸುತ್ತವೆ.

ಅವುಗಳಲ್ಲಿ ಅತ್ಯಂತ ಮಹತ್ವವಾದ ಕೊಡುಗೆಗಳು ಹೀಗಿವೆ

  1. ೧೮೮೧-೮೩ ಪೂಜ್ಯರ ೧೪ನೆಯ ವರ್ಷದಲ್ಲಿಯೇ ಲಿಂಗದಹಳ್ಳಿಯಲ್ಲಿ ಗಾವಟಿ ಶಾಲೆ ಸ್ಥಾಪನೆ
  2. ೧೮೯೭ ನಾಡಿನಲ್ಲಿ ಬರಗಾಲ ಹಾನಗಲ್ಲಿನಲ್ಲಿ ಬರಪೀಡಿತರಿಗೆ ದಾಸೋಹ ಕೇಂದ್ರ ಸ್ಥಾಪನೆ.
  3. ೧೮೯೮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ಆರಂಭ.
  4. ೧೯೦೧ ಕಾಡಶೆಟ್ಟಿಹಳ್ಳಿಯಲ್ಲಿ ಗದಿಗೆಯ್ಯ ನೆಂಬ ಅಂಧ ಬಾಲಕನನ್ನು ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಮುಂದೆ ಅದೇ ಬಾಲಕ ಪಂಚಾಕ್ಷರಿ ಗವಾಯಿಗಳಾಗಿ ಪ್ರಸಿದ್ದಿ ಹೊಂದಿದ್ದು
  5. ೧೯೦೪ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ. ಇಲ್ಲಿಯವರೆಗೆ ೨೫ ಅಧ್ಯಕ್ಷರುಗಳ ಸೇವೆ ಪಡೆದು ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮಹಾಸಭೆ ತನ್ನದೇ ಆದ ಗೌರವಾದರಗಳನ್ನು ಹೊಂದಿದೆ.
  6. ೧೯೦೯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಅಭ್ಯುದಯಕ್ಕೆ ಶ್ರೀ ಶಿವಯೋಗಮಂದಿರ ಸ್ಥಾಪನೆ ಶ್ರೀ ಶಿವಯೋಗಮಂದಿರದ ಮೂಲಕ ಸಹಸ್ರಾರು ಸ್ವಾಮಿಗಳು ಅಧ್ಯಾತ್ಮಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣ ಪಡೆದು ಶಿವಯೋಗ ಸಂಪನ್ನರಾಗಿ ನಾಡಿನಾದ್ಯಂತ ಸಮಾಜ ಸೇವೆ ಯನ್ನು ವಿವಿಧ ರಂಗಗಳಲ್ಲಿ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು.

ಶತಮಾನದಿಂದ ಹಲವು ಶಾಸ್ತ್ರಿಗಳು ,ಕೀರ್ತನಕಾರರು,ಪುರಾಣಿಕರು,ಸಾಹಿತಿಗಳು ,ಶಿಕ್ಷಣ ತಜ್ಞರು , ಸಂಗೀತಗಾರರು ಶ್ರೀ ಶಿವಯೋಗಮಂದಿರದಿಂದ ಶಿಕ್ಷಣ ಕಲಿತು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು

  1. ೧೯೦೯ ನಾಡಿನ ಪ್ರಪ್ರಥಮ ಗೋಶಾಲೆ ಆರಂಭ
  2. ೧೯೧೦ಪ್ರಪ್ರಥಮ ಶಾಸ್ತ್ರೋಕ್ತ ವಿಭೂತಿ ನಿರ್ಮಾಣ ಕೇಂದ್ರ ಆರಂಭ
  3. ೧೯೧೧ ಯೋಗ ಪಾಠ ಶಾಲೆ ಆರಂಭ
  4. ೧೯೧೨ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭ
  5. ಪ್ರಪ್ರಥಮ ಮಹಿಳಾ ವಿದ್ಯಾಲಯ ಆರಂಭ
  6. ೧೯೧೦ ಗ್ರಂಥಾಲಯ ಸ್ಥಾಪನೆ .ವಚನಕಟ್ಟುಗಳ ಸಂಗ್ರಹ ,ತಾಳೆಯೋಲೆಗಳ ಸಂಗ್ರಹ
  7. ೧೯೧೦ ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಸ್ಥೆ ಸ್ಥಾಪನೆಗೆ ಚಾಲನೆ
  8. ೧೯೧೧ ಬಾಗಲಕೋಟೆ ಯಲ್ಲಿ ಶಿವಾನಂದ ಜಿನ್ನಿಂಗ ಮಿಲ್ಲ ಸ್ಥಾಪನೆ
  9. ೧೯೧೧ ಗದುಗಿನ ವೀರೇಶ್ವರ ಪುಣ್ಯಾಶ್ರಮ-ಸರ್ವ ಧರ್ಮ ಗಳ ಅಂಧ-ಅನಾಥ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಪಂ.ಪಂಚಾಕ್ಷರಿ ಗವಾಯಿಗಳ ಮೂಲಕ ಚಾಲನೆ.ಪಂ. ಮಲ್ಲಿಕಾರ್ಜುನ ಮನಸೂರ,ಪಂ. ಬಸವರಾಜ ರಾಜಗುರು ಅವರಿಂದ ಹಿಡಿದು ಪಂ. ವೆಂಕಟೇಶ್‌ ಕುಮಾರ ಅವರವರೆಗೂ ಸಹಸ್ರಾರು ಖ್ಯಾತನಾಮ ಸಂಗೀತ ಗಾರರ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ್ದು.

ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೇವಲ ಸಂಗೀತ ಕ್ಷೇತ್ರಕ್ಕೆ ಮೀಸಲಾಗಲಿಲ್ಲ. ನಾಟಕ ರಂಗಕ್ಕೂ ಪ್ರೋತ್ಸಾಹ ನೀಡಿ .ನಾಡಕ ಸಂಘಗಳನ್ನೂ ಸ್ಥಾಪಿಸಿತು.

  1. ೧೯೧೨ ಬಾಗಿಲಕೋಟೆಯಲ್ಲಿ ಶ್ರೀಗುರುಸಿದ್ದೇಶ್ವರ ಚಿತ್ರಮಂದಿರ ಸ್ಥಾಪನೆ.ಉತ್ತರ ಕರ್ನಾಟಕದ ಪ್ರಪ್ರಥಮ ಚಲನಚಿತ್ರ ಮಂದಿರ ಮೂಲಕ ಆಧುನಿಕ ಕಲೆಗೆ ಪ್ರೋತ್ಸಾಹ.
  2. ೧೯೧೩ ರಲ್ಲಿ ಅಸ್ಪೃಶ್ಯರು ಎಂಬ ಭೇದಭಾವ ಸವರ್ಣಿಯರಿಂದ ಉಂಟಾದಾಗ ಸ್ವಾಭಿಮಾನದ ಪ್ರಕ್ರಿಯೆಯಾಗಿ ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರಿಗಾಗಿಯೇ ಶಿವಯೋಗಮಂದಿರದ ಸಮೀಫ ಮಂಗಳೂರು ಎಂಬ ಗ್ರಾಮದಲ್ಲಿ ಶಾಲೆಯನ್ನು ತೆರೆದಿದ್ದು
  3. ೧೯೧೪ ನಿಡುಗುಂದಿಕೊಪ್ಪ ಸೇರಿ ನಾಲ್ಕು ಶಾಖಾ ಶಿವಯೋಗಮಂದಿರಗಳ  ಸ್ಥಾಪನೆ
  4. ೧೯೧೫ ಶಿರಸಂಗಿ ಲಿಂಗರಾಜರ ಆಸ್ತಿ ಸಮಾಜಕ್ಕೇ ಸಲ್ಲಲು ಮುಂಬೈ ಹೈಕೋರ್ಟನಲ್ಲಿ ಸಾಂಘಿಕ ಕಾನೂನು ಹೋರಾಟಕ್ಕೆ ಹಣಕಾಸು ಸಹಾಯ ಮತ್ತು ಗೆಲವು.ಈ ಗೆಲವು ಬೆಳಗಾವಿಯ ಕೆ.ಎಲ್.ಇ ಸೋಸೈಟಿಯ ಅಭಿವೃದ್ಧಿಗೆ ಸುಭದ್ರ ಅಡಿಪಾಯವಾಯಿತು
  5. ೧೯೧೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಾಳೇನಹಳ್ಳಿನಲ್ಲಿ ಶಾಖಾ ಶಿವಯೋಗ ಮಂದಿರ ಸ್ಥಾಪನೆ
  6. ೧೯೧೭ ಕಾಳೇನಹಳ್ಳಿ ಯ ನಾಲ್ಕು ನೂರು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿಗೆ ಚಾಲನೆ ಪ್ರಪ್ರಥಮ ಬಾರಿಗೆ ಟ್ರಾಕ್ಟರ ಖರೀಧಿ ಕೃಷಿಗೆ ಉತ್ತೇಜನೆ
  7. ೧೯೧೭ ಗದುಗಿನಿಂದ ಯಡೆಯೂರು ಕ್ಷೇತ್ರ ಪಾದಯಾತ್ರೆ ಮಾಡಿ ಧಾರ್ಮಿಕ ಸಂಚಲನೆಯನ್ನುಂಟು ಮಾಡಿದ್ದು.
  8. ೧೯೨೦ ವಚನಪಿತಾಮಹ ಫ.ಗು.ಹಳಕಟ್ಟಿಯವರಿಗೆ ವಚನ ಸಂಗ್ರಹಕ್ಕೆ ಆರ್ಥಿಕ ಸಹಾಯ ಮಾಡಿಸಿ ಶಿವಯೋಗಮಂದಿರದಲ್ಲಿ ಸಂಗ್ರಹವಾಗಿದ್ದ ವಚನ ಕಟ್ಟುಗಳನ್ನು ನೀಡಿ ಪ್ರೋತ್ಸಾಹಿಸಿದ್ದು. ಕೃತಜ್ಞತೆ-ಗೌರವಕ್ಕೆ ಶ್ರೀ ಫ.ಗು.ಹಳಕಟ್ಟಿಯವರು ತಮ್ಮ ಗ್ರಂಥ ”ವಚನಶಾಸ್ತ್ರಸಾರ”ದ ಮೊದಲ ಭಾಗವನ್ನು ಬೆಳಗಾವಿಯಲ್ಲಿ ಮುದ್ರಿಸಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಅರ್ಪಿಸಿದ್ದು
  9. ೧೯೨೯ ಮಹಾರಾಷ್ಟ್ರದ ಪರಳಿ ದೇಗುಲದ ಪ್ರವೇಶ ಕುರಿತು ಹೈದ್ರಾಬಾದ ನಿಜಾಮ ಕೋರ್ಟನಲ್ಲಿ ವೀರಶೈವರಿಗೂ ಹಕ್ಕು ಎಂದು ಸತತ ಐದು ವರ್ಷಗಳ ಕಾನೂನು ಹೋರಾಟ ನಡೆಯಿಸಿ  ಜಯಗಳಿಸಿದ್ದು
  10. ೧೯೦೪ ರಿಂದ ೧೯೩೦ ರ ವರೆಗೆ ಕರ್ನಾಟಕ-ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಒಟ್ಟು ೧೦ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನಗಳ ಆಯೋಜನೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ವೀರಶೈವ ಮಹಾಸಭೆಯ ಅಧಿವೇಶನಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದವು
  11. ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಟ್ಟಿತು

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

ಲೇಖಕ: ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ.

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಸಪ್ಟಂಬರ ತಿಂಗಳು ಪರಮಪೂಜ್ಯ ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಜಯಂತಿಯ ಪವಿತ್ರ ಮಾಸ.

ಕಾರಣಿಕ ಯುಗ ಪುರುಷರ ಹುಟ್ಟು ಈ ಯುಗದ ಸಮಾಜೋತ್ಸಾಹ ! ಶ್ರೀಕುಮಾರೇಶ ಚರಿತ ದ ಸಾಹಿತಿ ಪೂಜ್ಯ ಗುರುಕಂದ ಅವರ ಸುಂದರ ಈ  ಸಾಲುಗಳು ಓದಿದಷ್ಟು ಮತ್ತೊಮ್ಮೆ ಓದಿಸಿಕೊಳ್ಳುವ ಸಾಲುಗಳು…..

“ತಾಯಿ ನೀಲಮ್ಮನವರ ಗರ್ಭದ ಕೂಸು ಶಿವಾಂಶಿಕನೆಂಬುದು ಹೀಗೆ ಮತ್ತೆ ಕುರುಹಿಟ್ಟಿತ್ತು . ಏಳನೂರೆಪ್ಪತ್ತು ಅಮರಗಣರೊಂದಿಗೆ ಮತ್ರ್ಯದಲ್ಲಿ ಅವತರಿಸಿದ್ದ ದ್ವಿತೀಯ ಶಂಭುವೆನಿಸಿದ ನಂದಿ ಅಂದು ಕಲ್ಯಾಣದಲ್ಲಿ ಬಸವಣ್ಣನಾಗಿ ಚರಿತ್ರೆ ನಿರ್ಮಿಸಿದ್ದ . ಬಾಗೇವಾಡಿಯ ನಂದೀಶ್ವರನ ಅನುಗ್ರಹದಿಂದ ಆ ಮಾದಲಾಂಬಿಕಾ ತಾಯಿ ಬಸವಣ್ಣನವರನ್ನು ಪಡೆದು ಶಿವಶರಣಧರ್ಮ ಮೆರೆಸಲು ಕೂಡಲ ಸಂಗನ ಅಡಿಗಳಿಗೆ ನೀಡಿದ್ದರು. ಆ ಶಿವಶರಣರ ಕಾರ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಆ ನಂದಿಯೇ ಮತ್ತೆ ತಾಯಿ ನೀಲಮ್ಮನವರ ಗರ್ಭದಿಂದ ಅವತರಣಗೊಳ್ಳುವ ಕುರುಹನ್ನು ಹೀಗೆ ನಂದಿಕೇಶ್ವರ ಜಾತ್ರೆಯಲ್ಲಿ ಆ ಸಾದ್ವಿ ನೀಲಮ್ಮನವರಿಗೆ ಕುರುಹಿತ್ತಿದ್ದ. ಆ ಶಿವಪ್ರಸಾದ ಉತ್ತತ್ತಿಯನ್ನು ಜತನವಾಗಿ ಇರಿಸಿಕೊಂಡು ಮನೆಗೆ ಮರಳಿದ ನೀಲಮ್ಮನವರು ಲಿಂಗಪೂಜೆ ಮುಗಿಸಿ ಅರ್ಪಿತಗೊಳಿಸಿ ಸೇವಿಸಿದ್ದರು. ದಿನಗಳು ಉರುಳುತ್ತಿದ್ದವು. ಕೂತರೂ ನಿಂತರೂ, ಮಲಗಿದರೂ ಶಿವಧ್ಯಾನಕ್ಕೆಳಸುವ ಅಂತರಂಗದ ಸೆಳೆತ ಗರ್ಭದ ನೋವನ್ನು ಕ್ಷಣಾರ್ಧದಲ್ಲೇ ಮರೆಮಾಚುವ ಶಿವಮಂತ್ರದ ಶಕ್ತಿಗೆ ನೀಲಮ್ಮ ಬೆರಗಾಗಿದ್ದರು. ತನ್ನೊಳಗೇ ಯಾರೋ ಆ ಮಹಾಮಂತ್ರವನ್ನು ಎಡೆಬಿಡದೆ ಮೆಲ್ಲಗೆ ಉಸುರುತ್ತಿರು ವಂತಾಗಿತ್ತು ಆ ತಾಯಿಗೆ.

ಮುಂಗಾರಮಳೆಗೆ ಭೂಮಿ ಹಸನಾಗಿ ಸುತ್ತಣ ಸೀಮೆಯ ಹೊಲಗಳಲ್ಲಿ ಬಿತ್ತನೆ ಕೆಲಸಗಳೆಲ್ಲ ಮುಗಿದು ಹಸಿರ ಪೈರು ಕಂಗೊಳಿಸುತ್ತ ಪ್ರಕೃತಿ ಸಸ್ಯಶ್ಯಾಮಲೆಯಾಗಿ ನಳನಳಿಸುತ್ತ ಶ್ರಾವಣ ಉರುಳಿ ಭಾದ್ರಪದ ಮಾಸ ಅಡಿಯಿರಿಸಿತ್ತು . ಗೌರಿ-ಗಣೇಶ ಹಬ್ಬ ಸಂಭ್ರಮದಿಂದ ಜರುಗಿತ್ತು. ದಿನ ತುಂಬಿ ಜನನ ಕಾಲ ಸಮೀಪಿಸಿದೆ ಎಂದು ಮನೆಯವರೆಲ್ಲ ನೀಲಮ್ಮನವರತ್ತ ಸದಾ ಒಂದು ಕಣ್ಣಿರಿಸಿದ್ದರು. ಅಂದು ಮಂಗಳವಾರ ರಾತ್ರಿ ಮನೆಯವರೆಲ್ಲರೂ ಪ್ರಸಾದ ಮುಗಿಸಿ ಎಂದಿನಂತೆ ಮಲಗಿದ್ದರು. ನಡು ಇರುಳು ಹಿಂದೆ ಸರಿದಿತ್ತು. ನೀಲಮ್ಮ ನೋವಿನಿಂದ ಒಮ್ಮೆ ಹೊರಳಿದ್ದರು. ಕಾತರಿಸುವ ಜನನ ಕಾಲ ಸಮೀಪಿಸಿತೆಂದು ದೀಪ ಹೊತ್ತಿಸಿ ಮನೆಯ ಹೆಂಗಳೆಯರು ನೀಲಮ್ಮನವರ ಸುತ್ತ ನೆರೆದಿದ್ದರು. ಒಂದು ಮಗುವಿನ ಪ್ರಸವವೆಂದರೆ ಗರ್ಭ ಧರಿಸಿದ ಹೆಣ್ಣಿಗೆ ಹೋದ ಜೀವ ಮತ್ತೆ ಮರಳಿದಂತೆ. ಪ್ರಸವದ ನೋವಿಗೆ ನೀಲಮ್ಮನವರನ್ನು ಸಾಂತ್ವನ ಗೊಳಿಸಲು ನೆರೆದ ಹೆಂಗಸರಿಗೆ ಅಚ್ಚರಿಯಾಗಿತ್ತು. ತಾಯಿ ನೀಲಮ್ಮ ಹೆಚ್ಚು ನೋವಿಲ್ಲದೆ ಗರ್ಭದ ಕೂಸನ್ನು ಹೆತ್ತಿದ್ದರು. ಗರ್ಭ ಹೊತ್ತ ತಾಯಿಗೆ ನೋವು ನೀಡದೆಯೇ ಕೂಸು ಜನಿಸಿತ್ತು. `ಗಂಡು ಕೂಸು’ ! ಹೊರಗಿನವರಿಗೆ ಕೇಳುವಂತೆ ಹೆಂಗಳೆಯರು ಉದ್ಗರಿಸಿದ್ದರು. ಮೂಡಣ ದಿಶೆಯಲ್ಲಿ ನಸುಕು ಕುಡಿದೋರಲು ಅಣಿಯಾಗಿತ್ತು. ಅದು ಬುಧವಾರದ ಮುಂಜಾವ ಬ್ರಾಹ್ಮೀಕಾಲ. ಕೂಸು ಜನಿಸಿದ ಕಾಲಕ್ಕೆ ಶ್ರವಣ ನಕ್ಷತ್ರ ಮೂರನೇ ಪಾದವಿತ್ತು. ಭಾರತೀಯ ಕಾಲಮಾನದಂತೆ ಶಾಲಿವಾಹನ ಶಕೆ 1789ರ ಪ್ರಭವ ಸಂವತ್ಸರ ಭಾದ್ರಪದ ಶುಕ್ಲ ತ್ರಯೋದಶಿ ಬುಧವಾರ ಶ್ರವಣ ನಕ್ಷತ್ರದಲ್ಲಿ ಕಾರಣಿಕ ಕೂಸು ಜನಿಸಿತ್ತು. ಕ್ರಿಸ್ತ ಶಕೆಯಂತೆ ಅದು 1867 ನೇ ಇಸವಿ.”

“ ಶ್ರೀ ಕುಮಾರೇಶರು ಅವತರಿಸಿದ್ದು ಧರ್ಮದ ಬುನಾದಿ ಸಡಿಲಗೊಂಡು ಸಮಾಜ ಇಬ್ಬಂದಿತನದಲ್ಲಿ ಮುಳುಗಿದ್ದ ಅತಂತ್ರ ಸ್ಥಿತಿಯನ್ನು ದೂರ ಮಾಡಲೆಂದು. ಒಬ್ಬೊಬ್ಬ ಸಂತ ಮಹನೀಯರ ಜೀವಿತವೂ ಒಂದೊಂದು ವೈಚಿತ್ರವನ್ನು ತೋರುವಂಥಹುದು. ಎಲ್ಲ ಯೋಗಿ ಮಹಾತ್ಮರೂ ಬೆಳಕಿನತ್ತ ಮುಖ ಮಾಡಿರುವಂಥವರೇ. ತನ್ನ ಮೋಕ್ಷವನ್ನಷ್ಟೇ ಗುರಿಯಾಗಿಸಿಕೊಂಡ ಸಾಧಕ ಜಗತ್ತಿಗೆ ಬೆಳಕು ತೋರಲಾರ; ಅಲ್ಲಿ ಸ್ವಾರ್ಥವೇ ಅಂತಿಮಗುರಿ. ಶ್ರೀ ಕುಮಾರೇಶರಂಥ ಶಿವಯೋಗಿವರ್ಯ ಅಂಥ ಸ್ವಾರ್ಥಕ್ಕೆ ದೂರರಾಗಿ ತನ್ನ ಬಳಿಗೆ ಬಂದವರಿಗೆ ಮಹಾಬೆಳಗಿನ ಹಾದಿ ಎಂಥಹುದೆಂಬುದನ್ನು ತೋರುತ್ತ ಆ ಪರಾತ್‍ಪರ ಪರಮನಿರಂಜನ ವಸ್ತುವಿನ ಕಾಣ್ಕೆಗೆ ಕಾರಣಿಕನಾಗಿ ಮೆರೆದ ಜ್ಯೋತಿಪುಂಗವ, ಈ ಜಂಗಮಜ್ಯೋತಿ ಲೋಕಕ್ಕೆ ಅವತರಿಸಿದ್ದು ಒಂದು ಬಡ ಕುಟುಂಬದಲ್ಲಿ .”

ಸರ್ವರಿಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೭ ನೆಯ ಜಯಂತಿ ಮಹೋತ್ಸವದ ಹಾರ್ದಿಕ ಶುಭ ವಂದನೆಗಳು

 

ಮುಖಪುಟ

ಶ್ರೀಕುಮಾರ ತರಂಗಿಣಿ  ಸಪ್ಟಂಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಂಕರ ಕಾಯೊ ಸದಾ ಕಿಂಕರನು |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಪರಳಿ ವ್ಯಾಜ್ಯದಲ್ಲಿ ಪ್ರಯತ್ನ-ಲೇಖಕರು-ಜ.ಚ.ನಿ
  4. ಮಹಾನುಭಾವಿ ಮೈಲಾರ ಬಸವಲಿಂಗ ಶರಣರು : ಶಾಪಗ್ರಸ್ಥರಲ್ಲ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  5. ನಡೆ-ನುಡಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಸಮಾಜದ ಕಣ್ಣುಗಳು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು :ಲೇಖಕ: ಶ್ರೀಕಂಠ.ಚೌಕೀಮಠ.

  1. ಹಾನಗಲ್ಲ ಕುಮಾರಸ್ವಾಮಿಗಳಿಗೆ ಪಾದಪೂಜೆ : ಕವಿ : ..ಡಾ. ಕಿರಣ ಪೇಟಕರ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

 

 

 

ಶಂಕರ ಕಾಯೊ ಸದಾ  ಕಿಂಕರನು |

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

  

ಶಂಕರ ಕಾಯೊ ಸದಾ  ಕಿಂಕರನು |

ಸಂಕಟವನು ದೂರಿಕರಿಸುತ   || ||

 

ಭೋಂಕನೆ ಮನದ , ಬಿಂಕವ ಬಿಡಿಸಿ |

ಅಂಕಿತದೊಳಗಿರಿಸಿ  ಕಿಂಕರರನು || ||

 

 ಪರತರ ಶಿವನೀ , ಗುರುಚರವೆನಿಸಿ |

 ನಿರುತದಿ ಸಂಚರಿಸಿ ಪರಿಪಾಲಿಸಿ  || ||

 

ಸಾಭಾರಿ ನಿರಾಭಾರಿ , ಗುರು ನೀನೆ |

ಲೋಭಾದಿಗಳನಳಿದು  ಲಾಭದಿಸುಳಿದು || ||

 

 ದೀಕ್ಷ  ಶಿಕ್ಷ ಮೋಕ್ಷ ಗುರು ನೀ ।

ದಕ್ಷನೆ ಮುಮ್ಮಲವ ಈಕ್ಷಿಸಿ ಕಳೆವ || ||

 

 ಕಾಮಕಾಲ ಮಾಯ , ಸೀಮೆಯ ಬಿಡಿಸಿ |

ಕಾಮಾರಿ ಗುರುವರನೆ  ಪ್ರೇಮದಿ ನೀನೆ || ||

 

 ಇಷ್ಟ ಪ್ರಾಣ , ಶ್ರೇಷ್ಠ ಭಾವದಿ ।

ಕಷ್ಟವನತಿಗಳೆದು  ಶಿಷ್ಟತನದಿ || ||

  

ತನು ಮೂರರಲಿ ಜನಿಪದೋಷವನು |

ಸನುಮತದಿಂದ ಕಳೆದು ತನುವಳಿದು || ||

  

ಸ್ವಯಚರಪರವು , ಭಯಲಯದಿರವು |

ಪಯಶೇಷಕರವಾಗಿ ದಯಯುತನಾಗಿ || ||

 

 ಶಿವಯೋಗಾಲಯ , ಭುವನದಿ ಮೆರೆಯುವ |

ತವೆ ಸಾಧನವಿರಿಸಿ  ನಿವಾಸಿಸಿ  || ||

 

 

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

  ಪರರ ಸಂಗವೆ ಕೆಟ್ಟ | ದುರಿತವೆಂದದ ಬಿಟ್ಟ

ವರ ಗುಹ್ಯ ದಿಟ್ಟ – ಗುರುಲಿಂಗವೆಂಬುದೆ-

ಚ್ಚರಗೊಟ್ಟ ಗುರುವೆ ಕೃಪೆಯಾಗು   ||೧೫೨||

ಎರಡನೆಯ ಕರ್ಮೇಂದ್ರಿಯ ಗುಹ್ಯ. ಇದಕ್ಕೆ ಗುಪ್ತಾಂಗವೆಂತಲೂ ಹೆಸರು, ಜೀವಾತ್ಮರ ಉತ್ಪತ್ತಿಗೆ ಕಾರಣವಾದುದು ಗುಹೇಂದ್ರಿಯವೇ. ಸಂಗಸುಖಕ್ಕೂ ಇದುವೇ ಮೂಲ. ಸಂಗವು ಸ್ವಸ್ತ್ರೀಯೊಡನಾದರೆ ದೋಷವಿಲ್ಲ. ಪರಸ್ತ್ರೀ ಸಂಗವು ದುರಿತಕ್ಕೆ ದಾರಿಮಾಡುವದು. ಪರಸ್ತ್ರೀಸಂಗವನ್ನು ಶರಣಬಳಗವು ಅತ್ಯಂತ ಕಟುವಾಗಿ ಖಂಡಿಸಿರುವದನ್ನು ೧೩೦ ನೆಯ ತ್ರಿಪದಿಯ ವಿವರಣೆಯಲ್ಲಿಯೂ ನೋಡಬಹುದು. ಪ್ರಾಸಂಗಿಕವಾಗಿ ಮತ್ತೆ ಕೆಲವು ವಚನಗಳನ್ನು ಉದಾಹರಿಸುವದು ಅಪ್ರಸ್ತುತವೇನಲ್ಲ.   ಪರಶಿವನಿಂದ ತವನಿಧಿ ಪಡೆದ ದೇವರದಾಸಿಮಯ್ಯನವರು –

ವೇಶಿಯ ಎಂಜಲ ತಿಂದು, ಈಶ್ವರ ಪ್ರಸಾದವ

ಭುಂಜಿಸಿದೊಡೆ ಓಸರಿಸಿತ್ತಯ್ಯ ಲಿಂಗವು

ಆತ ದ್ರೋಹಿ, ಭಾಷೆ ತಪ್ಪುಕನವನು

ಭವದಲ್ಲಿ ಬಳಲುವನು, ಅಂತಹನ ಕಂಡು

ಹೇಸಿ, ಕಡೆಗೆ ತೊಲಗಿದೆ ಕಾಣಾ ರಾಮನಾಥ |

ಭಕ್ತಿ ಭಾಂಡಾರಿ ಬಸವಣ್ಣನವರ ಆಪ್ತಕಾರ್ಯದರ್ಶಿ ಹಡಪದಪ್ಪಣ್ಣನವರು

ದಾಸಿಯಸಂಗ ಎರಡನೆಯ ಪಾತಕ

ವೇಶಿಯ ಸಂಗ ಮೂರನೆಯ ಪಾತಕ

ಮೀಸಲಳಿದ ಪರಸ್ತ್ರೀಯರ ಸಂಗ ಪಂಚ ಮಹಾಪಾತಕ,

ಇನಿಸು ಶಿವಭಕ್ತರಿಗೆ ಸಲ್ಲವು

ಇವನರಿದರಿದು ಮಾಡಿದನಾದರೆ ಯಮ ಪಟ್ಟಣವೆ ವಾಸವಾಗಿಪ್ಪರಲ್ಲದೆ

ಈ ದೇಶಕ್ಕೆ ಮರಳಿ ಬರಲಿಲ್ಲ. ನೋಡಾ

ಬಸವಪ್ರಿಯ ಕೂಡಲ ಚನ್ನಬಸವಣ್ಣ

 

ಭಕ್ತನಿಗೆ ವೇಶಿಯ ಸಂಗ, ದಾಸಿಯ ಸಂಗ, ಪರಸ್ತ್ರೀಯರ ಸಂಗ ಯಾವುದೂ ಉಚಿತವಲ್ಲ. ಈ ಸಂಗದಿಂದ ಪಂಚಮಹಾಪಾತಕವೇ ಪ್ರಾಪ್ತವಾಗುವದೆಂದು ಶರಣರು ಎಚ್ಚರಕೊಟ್ಟಿದ್ದಾರೆ. ಅದುಕಾರಣ ಪರಸ್ತ್ರೀಸಂಗವು ಬಹುಕೆಟ್ಟದ್ದು ಮತ್ತು

ದುರಿತಕಾರಕವೆಂದು ಅರಿತು ಅದರಿಂದ ದೂರವಾಗಿರಬೇಕು. ಇಲ್ಲವಾದರೆ ಇಂಥವರಿಗೆ ಯಮಪುರದ ವಾಸವೇ ಸ್ಥಿರವಾಗುವದು. ರೌರವನರಕದಲ್ಲಿ ಬಿದ್ದು ದುಃಖಿಯಾಗಬೇಕಾಗುವದು. ಪರಸ್ತ್ರೀ ಸಂಗದಿಂದ ದೂರಾದವರ ಗುಹ್ಯವೇ ಶ್ರೇಷ್ಠವೆನಿ

ಸುವದು. ಅದುವೆ ದಿಟ್ಟತನದ ಪ್ರತೀಕ. ಯಾಕಂದರೆ ರಾಷ್ಟ್ರಕವಿ ಕು.ವೆಂ.ಪು. ಇವರು

‘ರಾಮಾಯಣ ದರ್ಶನ’ದಲ್ಲಿ “

ಇಂದ್ರ ವಿಜಯಿಗಿಂ ನೂರ್ಮಡಿ ವೀರವಿಕ್ರಮಿಯಲ್ತೆ ಇಂದ್ರಿಯ ವಿಜಯಿ”

 

ಅರಣ್ಯವಾಸದಲ್ಲಿ ಬ್ರಹ್ಮಚಾರಿಯಾದ ಲಕ್ಷ್ಮಣನು ಇಂದ್ರ ವಿಜಯಿಯಾದ. ಇಂದ್ರಜಿತ್ (ರಾವಣನ ಮಗ) ನನ್ನು ಜಯಿಸಿದಾಗ ಅವನನ್ನು ಪ್ರಶಂಸಿಸುತ್ತ ಬರೆದ ಮಹಾಕಾವ್ಯವಿದಾಗಿದೆ. ಇಂದ್ರಿಯ ವಿಜಯಿಯಾದವನೇ ಮಹಾವೀರ. ಅಂತೆಯೇ ಶಿವಕವಿಯ ದಿಟ್ಟ ಗುರುಲಿಂಗ’ ವೆಂದು ಉದಾಹರಿಸಿದ್ದು ಅತ್ಯಂತ ಮನನೀಯವಾಗಿದೆ.

ಇಂಥ ವೀರತ್ವವನ್ನೇ ಸಾಧಿಸಬಲ್ಲ ಗುಹೇಂದ್ರಿಯದಲ್ಲಿ ಗುರುಲಿಂಗವನ್ನು ಸಾಧಿಸಬೇಕು. ಅಳವಡಿಸಿಕೊಳ್ಳಬೇಕು ಎಂದು ಗುರುನಾಥನು ಶಿಷ್ಯನಿಗೆ ಎಚ್ಚರ ಕೊಡುತ್ತಾನೆ. ಸಮಯೋಚಿತ ಎಚ್ಚರಿಕೆಯನ್ನು ನೀಡುವ ಆತ್ಮೀಯ ಗುರುವೆ ! ಕೃಪೆದೋರು.

 

ಬಿಡದೆ ಸತ್ಪಥಮಾರ್ಗ | ನಿಡಿದು ತಾ ನುಡಿದಂತೆ

ನಡೆವ ಪಾದವು ತಾ-ಮೃಡನು ಶಿವಲಿಂಗವೆಂದು

ನುಡಿದ ಶ್ರೀಗುರುವೆ ಕೃಪೆಯಾಗು   ||೧೫೩||

 

ಪಾದಗಳೆರಡು ಮೂರನೆಯ ಕರ್ಮೇದ್ರಿಯಗಳು. ಪಾದಗಳಿಂದ ಚಲನ- ವಲನ ನಡೆಯುವದು. ನಡೆಯುವದು ಪಾದಗಳ ಕರ್ಮವಾದರೂ ಅದು ಸತ್ಕರ್ಮವಾಗಬೇಕು. ಸಾರ್ಥಕವಾಗಬೇಕು. ವ್ಯರ್ಥವಾದ ನಡೆಯಾಗಬಾರದು. ನಡೆಯ ಅರ್ಥ ನುಡಿಯಲ್ಲಿದೆ.

ಪಾದಗಳು ಕ್ರಿಯಾದ್ಯೋತಕವೆಂದು ಅರಿತಿದ್ದೇವೆ. ಪಾದಗಳಿಂದಲೇ ಗಮನಾಗಮನಗಳನ್ನು ಸಾಧಿಸಲು ಬರುವದು. ಓಟಗಳ ಪಂದ್ಯಗಳಲ್ಲಿ ಪಾದಗಳ ಪಾತ್ರ ಬಹು ಮುಖ್ಯವಾದುದು. ಬಂಧುರ ಕಾಲುಗಳುಳ್ಳ ಪ್ರಾಣಿಗಳು ಅತ್ಯಂತ ವೇಗದಲ್ಲಿ ಓಡುತ್ತವೆ. ಅವುಗಳಲ್ಲಿ ಕುದುರೆ ಮತ್ತು ಜಿಂಕೆಗಳು ಮುಖ್ಯ ಪ್ರಾಣಿಗಳು. ಓಟಗಳ ಸ್ಪರ್ಧೆ ಜಾಗತಿಕವಾಗಿ ನಡೆಯುತ್ತದೆ. ಓಲಿಂಪಿಕ್ ಸ್ಪರ್ಧೆಗಳಲ್ಲಿ ೨೬ ಮೈಲು (ಮ್ಯಾ ರೇಥಾನ) ಇತಿಹಾಸವಿದೆ. ಇದುವೆ ಅತ್ಯಂತ ಕಠಿಣ ಪಂದ್ಯವೆನಿಸುವದೆಂದು ಕ್ರೀಡಾಪಟುಗಳ ಅಭಿಪ್ರಾಯ .

ಓಟದ  ಸ್ಪರ್ಧೆಗಳು ಜೀವನ ಶ್ರೇಯಸ್ಸಿಗೆ ಕಾರಣವಾಗಬಹುದು. ಆದರೆ ಆತ್ಮೋನ್ನತಿಯತ್ತ ತಿರುಗಿದರೆ ಅದನ್ನು ಸಾಧಿಸಬಹುದು. ಆತ್ಮೋನ್ನತಿಗೆ ನಡೆ-ನುಡಿಗಳ ಹೊಂದಾಣಿಕೆಯೇ ಮುಖ್ಯ. ಅದ ಕಾರಣ ನಡೆಗೆ ಕಾರಣವೆನಿಸಿದ ಪಾದಗಳು ಸತ್ಪಥವನ್ನು ಬಿಡದಂತೆ ಸನ್ಮಾರ್ಗದಲ್ಲಿ ನಡೆಯಬೇಕು. ಮಹಾತ್ಮರ ನಡೆಯನ್ನು ಅನುಸರಿಸಿ ನಡೆಯಬೇಕು. ಸಜ್ಜನರ ನಡೆಯಲ್ಲಿ ಶಿವನಿರುತ್ತಾನೆಂಬ ಸರ್ವಜ್ಞನ ಈ ಮಾತು ಮನೋಜ್ಞವಾಗಿದೆ –

 

ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ

ಸಜ್ಜೆಯಲ್ಲಿ ಶಿವನ ಧರಿಸಿಪ್ಪ ಶರಣರ

ಹೆಜ್ಜೆಯಲಿ ನಡೆಯೋ ಸರ್ವಜ್ಞ

 

ಸಜ್ಜನರ ನಡೆಯನ್ನು ಅನುಸರಿಸುವಲ್ಲಿ ನಾಚಿಕೆಯನ್ನು ತೊರೆದು ಮುನ್ನಡೆಯಬೇಕು ನಿಜಗುಣರು ಶಿವನಲ್ಲಿ –

 

“ಶಾಂತರೊಸೆದಹುದೆಂದು ಬಣ್ಣಿಸುವ ವರ್ತನವನ್ನೇ ಬೇಡಿದ್ದಾರೆ.

ಇದುವೆ ನಿಜವಾದ ನಡೆಯಾಗಿದೆ. ಆಗ “ನುಡಿದಂತೆ ನಡೆ ಇದೇ ಜನ್ಮಕಡೆ” ಎಂಬ ಶರಣವಾಣಿ ಯಥಾರ್ಥವಾಗಿ ತೋರುವದು. ಮಹಾತ್ಮರ ನಡೆಯನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೂ ಸ್ವಲ್ಪಾದರು ಆಚರಿಸಲು ಪ್ರಯತ್ನಿಸುವವನಿಗೂ ಕೇಡಿಲ್ಲ. ಅದುಕಾರಣ ಮಹಾನುಭಾವರು ತೋರಿಸಿದ ಸನ್ಮಾರ್ಗವನ್ನು ಚಾಚೂ ತಪ್ಪದಂತೆ ನಡೆಯಬೇಕು. ಇಂಥ ನಡೆಯಲ್ಲಿ ಶಿವನು ಮನೆ ಮಾಡಿಕೊಂಡಿರುವನಲ್ಲದೆ ಶಿವಲಿಂಗದ ಸಾಕ್ಷಾತ್ಕಾರವಾಗುವದೆಂದು  ಶ್ರೀಗುರುರಾಯನು ಮನೋಜ್ಞವಾಗಿ ನುಡಿಯುತ್ತಾನೆ. ಶ್ರೀಗುರುವಿನ ತೇಜೋಮಯ ಶಿವಲಿಂಗದ ದರ್ಶನವಾಗಬಲ್ಲದು. ಓ ಗುರುವೆ ! ಎನ್ನ ಪಾದಂಗಳಲ್ಲಿ ಶಿವಲಿಂಗವನ್ನು ಕಾಣುವ ಒಳ್ನಡೆಯನ್ನು ಕರುಣಿಸು.

ಲೇಖಕರು: ಜ.ಚ.ನಿ

 

“ ತಮಗಡಸಿದೆಡರ ನೀಕ್ಷಿಸ

ದೆ ಮಹಾಂತರ್ ಪೆರರ ಸಂಕಟಮನಪಹರಿಪರ್

ಹಿಮರುಚಿ ತನ್ನಯ ಮರ್ಬಂ

ತೆಮರದೆ ತಿರೆಯೊಳ್‌ ತಗುಳ್ದ ತಮಮಂ ತವಿಪಂ”

– ನೀತಿ ಮಂಜು

ಸ್ವಾಮಿಗಳವರು ಸಮಾಜ ಜೀವಿಗಳು. ಸತ್ಯಪ್ರೇಮಿಗಳು. ಸಮಾಜಕ್ಕೆ ಎಲ್ಲಿ ಯಾವ ಮೂಲೆಯಲ್ಲಿ ಪರಾಕ್ರಮಣ ನಡೆದರೂ ಅದನ್ನು ಸಹಿಸುತ್ತಿರಲಿಲ್ಲ. ಇನ್ನು ದುರಾಕ್ರಮಣ ನಡೆದರೆ ಕೇಳಬೇಕೆ ? ತಮಗಿರುವ ತೊಡರುಗಳನ್ನು ನೋಡುತ್ತಿರಲಿಲ್ಲ. ಶ್ರಮವಿಭಾಗವನ್ನೂ ಲೆಕ್ಕಿಸುತ್ತಿರಲಿಲ್ಲ. ವಾಯುವೇಗದಿಂದ ಅಲ್ಲಿಗೆ ಹೋಗಿ ಅದನ್ನು ತಡೆಗಟ್ಟುತ್ತಿದ್ದರು.

ಒಮ್ಮೆ ಹೈದರಾಬಾದ ಪ್ರಾಂತ್ಯದಲ್ಲಿದ್ದ ಪರಳೀ ವೈದ್ಯನಾಥ ಲಿಂಗದ ಪೂಜಾಧಿಕಾರದ ವ್ಯಾಜ್ಯ ಪ್ರಾರಂಭವಾಯಿತು. ಪರಕೀಯರು ಪೂಜಾಧಿಕಾರವನ್ನು ಆಕ್ರಮಿಸುವ ಸಾಹಸ ಮಾಡಿದರು. ಈ ಸಂಗತಿ ಎಲ್ಲೆಲ್ಲಿಯು ಹಬ್ಬಿತ್ತು. ಇದನ್ನು ಕೇಳಿ ‘ಸ್ವಾಮಿಗಳವರಿಗೆ ಸಮಾಧಾನವಾಗಲಿಲ್ಲ. ಶರೀರದಲ್ಲಿ ಸ್ವಾಸ್ಥ್ಯವಿಲ್ಲದಿದ್ದರು ಆ ಕ್ಷಣದಲ್ಲಿಯ ಅನೇಕ ಧರ್ಮಗ್ರಂಥಗಳನ್ನು ತೆಗೆದುಕೊಂಡು ಹತ್ತು ಹನ್ನೆರಡು ಮಂದಿ ಪಂಡಿತರನ್ನು ಕರೆದುಕೊಂಡು ಹೋಗಿ ವಾದ ಕ್ಷೇತ್ರಕ್ಕೆ ನೆರವಾದರು.

ಬರೀ ವೈದ್ಯನಾಥಲಿಂಗ ಪೂಜಾ  ವಿಷಯ ಒಂದಾಗಿದ್ದರೆ ಹೇಗೋ ಆಗಬಹುದಿತ್ತು.  ಜೊತೆಗೆ ಜಾತಿವಾದ ಮುಂದೆ ಬಂದಿತ್ತು. ಅಂತ್ಯಜ ಅಗ್ರಜ ಎಂಬ ಕೀಳು  ಭಾವ ಬಲಿತಿತ್ತು. ವೀರಶೈವರು ಅಂತ್ಯಜ (ಶೂದ್ರ)ರೆಂಬ ವಾದ ವಿಪರೀತಕ್ಕೇರಿತ್ತು. ಸ್ವಾಮಿಗಳವರಿಗೆ ಇದು ಸಹಿಸಲಿಲ್ಲ. ಇದಕ್ಕಾಗಿಯೆ ಈ ಹೊಲಸು ಕಳೆಯಲಿಕ್ಕಾಗಿ ಆವೇಗದಿಂದ ಆವೇಶದಿಂದ ಹೊರಟು ಹೋಗಿ ವಾದದಲ್ಲಿ  ಬಾಗಿಗಳಾದರು.

ವಾದ ಬೇಗ  ಹರಿಯಲಿಲ್ಲ. ೩-೪ ತಿಂಗಳ ಕಾಲ ಮುಂದುವರೆಯಿತು. ವಾದ ಕೇಳುವ ವ್ಯಾಜ್ಯನೋಡುವ ಕುತೂಹಲದಿಂದ ಅನೇಕ ಸಾವಿರ ಜನರು ಸೇರಿದ್ದರು. ಅವರೆಲ್ಲರ ಊಟೋಪಚಾರ ವೆಚ್ಚವನ್ನು ಶ್ರೀಗಳವರ ನಿರ್ವಹಿಸಬೇಕಾಯಿತು.  ತಂದ ಹಣ ತೀರಿಹೋಗಿತ್ತು. ಕೈಯಲ್ಲಿ ಕಾಸಿರಲಿಲ್ಲ. ಹೇಗೆ ಮಾಡುವದು, ಯೋಚಿಸಲಿಲ್ಲ. ತಕ್ಷಣದಲ್ಲಿಯೆ ಸುತ್ತು ಮುತ್ತಹೋಗಿ ಭಿಕ್ಷೆಯಿಂದ ಬೇಕಾದಷ್ಟು ಹಣ ತಂದರು. ಕೊನೆಯವರೆವಿಗು ಬಂದವರ ಯೋಗಕ್ಷೇಮವನ್ನು ನಿತ್ತರಿಸಿದರು. ಸ್ವಾಮಿಗಳವರದು ಅಕ್ಷಯ ಪಾತ್ರೆ; ಅಮೃತ ಹಸ್ತ ಅಂದ ಮೇಲೆ ಕೊರತೆಯ ಮಾತೇಕೆ?

ಈ ವ್ಯಾಜ್ಯದಲ್ಲಿ ಉಂಟಾದ ಸ್ವಾಮಿಗಳವರ ಕಷ್ಟ-ನಷ್ಟ ಅಪಾರವಾದದ್ದು. ಆದರೂ ಯೋಚನೆ ಸ್ವಾಮಿಗಳವರಲ್ಲಿ ಇರಲಿಲ್ಲ. ನಿರ್ಣಯವು ಸಮಾಜದಂತಾದ ಸಂಗತಿಯು ತಿಳಿದೊಡನೆ ಸ್ವಾಮಿಗಳವರಿಗೆ ಸಂತೋಷವುಂಟಾಯಿತು. ಆ ಕಷ್ಟ ನಷ್ಟಗಳು ತುಂಬಿ ಬಂದವು. ಅನೇಕ ಕಡೆಗಳಿಂದ ಪ್ರಶಂಸಾ ಪತ್ರಗಳು ಸ್ವಾಮಿಗಳವರಿಗೆ ಬಂದವು. ವ್ಯಾಜ್ಯದ ಸಮಯದಲ್ಲಿ ಮುಕ್ತ ಹಸ್ತದಿಂದ ಸಹಾಯಮಾಡಿದವರಿಗೆ ಪ್ರಶಸ್ತಿ ಪ್ರದಾನದಿಂದ ಸಂತೋಷ ಪಡಿಸಿದರು. ಶುಭಾಶೀರ್ವಾದ ಮಾಡಿದರು.

ಕುಮಾರಯೋಗಿಯು ಪರಳೀ ವ್ಯಾಜ್ಯದ ಪ್ರಭಾಕರ ! ಅಹುದು. ಪರಮ ಪೂಜ್ಯರು ಆ ಭಗೀರಥ ಪ್ರಯತ್ನ ಪಡದಿದ್ದರೆ ಆ ವಿಜಯದ ಬೆಳಕು ಸಮಾಜಕ್ಕೆಲ್ಲಿ ಹೇಗೆ ದೊರಕುತ್ತಿತ್ತು? ಕುಮಾರಯೋಗಿಗಳಂತಹ ಸಾಹಸಿಗಳನ್ನು ಸಹಾಯಕಾರಿಗಳನ್ನು ಪಡೆದ ಸಮಾಜವೆ ಧನ್ಯ. ಅದುವೆ ಮಾನ್ಯ. ಅವರೆ ಅದಕೊಂದು ಭವ್ಯಭಾಗ್ಯ; ದಿವ್ಯ ಸಂಪತ್ತಿ.

ಲೇಖಕರು: : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

 

ಅನುಭಾವ ಅನುಭಾವವೆಂದೆಂಬಿರಿ

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿಭೋ  !

ಅನುಭಾವವೆಂಬುದು ಶಿಶು ಕಂಡ ಕನಸು ಕಾಣಿಭೋ  !

ಅನುಭಾವವೆಂಬುದು ಅಂತರಂಗದ ರತ್ನ ಕಾಣಿಬೋ  !

ಮತ್ತು – ಭಕ್ತಿಗೆ ಅನುಭಾವವೆ ಬೀಜ ಕಾಣಿರೋ ;

ಭಕ್ತಿಗೆ ಅನುಭಾವವೆಚಾರ ಕಾಣಿರೋ

 

ಚನ್ನಬಸವಣ್ಣನವರ ಈ ನುಡಿಗಡಣ ಅನುಭಾವದ ನಿಲವನ್ನು ಹಾಗೂ ಅನುಭಾವವೇ ಭಕ್ತಿಗೆ ಮೂಲವೆಂಬುದನ್ನು ಪ್ರತಿಪಾದಿಸಿದೆ. ಅನುಭವಜನ್ಯವಾದ ಅನುಭಾವ, ನೆಲದ ಮರೆಯ ನಿಧಾನ, ಅತು ಕಂಡ ಕನಸು, ಅದು ಅಂತರಂಗದ ರತ್ನ, ಇಂಥ ಅನುಭಾವದ ನಿಲವಿನಲ್ಲಿ ಹಾಡುಗಬ್ಬಗಳನ್ನು ರಚಿಸಿದ ನಿಜಗುಣರು, ಸರ್ಪಭೂಷಣರು, ಮುಪ್ಪಿನ ಷಡಕ್ಷರಿಗಳು ಮತ್ತು ಬಾಲಲೀಲಾ ಮಹಾಂತರು ಪ್ರಸಿದ್ಧಿಯನ್ನು ಪಡೆದಿರುವಂತೆ ಮೈಲಾರಂಗವಲಿಂಗ ಶರಣರೂ ಪ್ರಖ್ಯಾತರು. ಕೇವಲ ಭಕ್ತಿಯ ಉದ್ರೇಕ ಹಾಗೂ ತಾತ್ಕಾಲಿಕ ಸ್ಫೂರ್ತಿಯ ಪ್ರಭಾವದಿಂದ ಪದ್ಯಗಳನ್ನು ರಚಿಸಿದವರು ಪಡಕ್ಷರಿಗಳು ; ಬಾಲಲೀಲಾ ಮಹಾಂತರು ಮತ್ತು ಘನಮಠದಾರ್ಯರು. ಆದರೆ ನಿಜಗುಣರಾಗಲಿ, ವಲಿಂಗ ಶರಣರಾಗಲಿ ಹಾಗಲ್ಲ. ತಮ್ಮ, ಸಾಸ್ತ್ರ, ಆಚಾರ, ಅನುಭವ ಇವೆಲ್ಲವು ಗಳನ್ನು ತಾವು ಮೈಗೂಡಿಸಿಕೊಂಡು ಇತರರಿಗೆ ಅಧಿಕಾರವಾಣಿಯಿಂದ ತಿಳಿಯು ವರತೆ ಪದ ಶ್ರೀಯನ್ನು ಇವರಿಬ್ಬರದು, ಅದರಲ್ಲೂ ಬಸವಲಿಂಗ ಶರಣರು ವೀರಶೈವ ತತ್ತ್ವಸಿದ್ಧಾಂತವನ್ನು ಸುಂದರವಾಗಿ, ಸುಬಂಧುರವಾಗಿ ಹಾಡುಗಬ್ಬಗಳಲ್ಲಿ ಕಟ್‌ಪದಿಗಳಲ್ಲಿ ಹೆಣೆದವರು.

 

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹೆಸರಾಂತ ಹಳ್ಳಿ ಮೈಲಾರ. ಇಲ್ಲಿ ಶಿವಭಕ್ತಮನೆತನಕ್ಕೆ ಸೇರಿದ ಹರದ ವೃತ್ತಿಯ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಚೆನ್ನವೀರ ಶಿವಯೋಗಿಗಳಿಂದ ಅನುಗ್ರಹೀತರಾದವರು. ಅನುಭಾವವನ್ನು ಪಡೆದವರು. ಪೂಜ್ಯ ಮಹಾಸ್ವಾಮಿಗಳು ಹಳ್ಳಿಯಲ್ಲಿ ವೀರಶೈವ ವಿದ್ಯಾಕೇಂದ್ರವನ್ನು ತೆರೆದು ತಾವೊ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವುಳ್ಳ ತತ್ತ್ವಪುರುಷರಾಗಿದ್ದವರು. ಬಸವಲಿಂಗ ಶರಣರ ವಾಣಿಯಲ್ಲಿ ಗುರು ಗರಿಮೆ ಪ್ರತಿಮಿಸಿದೆ; ವ್ಯಕ್ತಿತ್ವ ಪ್ರತಿಬಿಂಬಿಸಿದೆ..

 

ಸೃಷ್ಟಿಯೊಳಗುದಿಸಿದ ಶರಣರಿ

ಗಿಷ್ಟ ಸಿದ್ಧಿಯನ್ನು ಪಾಲಿಸು

ವಷ್ಟವರುಣ ಸ್ವರೂಪ ಚನ್ನವೀರ ನಮೋ  (ಶಿ, ದರ್ಪಣ ೬೯)

ಮತ್ತು – ನೂರೊಂದು ಸ್ಥಲದ ವಿಚಾರ ವಿಗ್ರಹ ಚನ್ನ

ವೀರ ಮದ್‌ಗುರು ಲಿಂಗ ಜಂಗಮದಂಘ್ರಿಗಳೆನ್ನ ಸಲುಹಲಿ

ತಾನೆ ಒಲಿಯಲಿ (ಶಿ. ದ. ೨೧)

 

ಅಚ್ಚವೀರಶೈವ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಸವಲಿಂಗ ಶರಣರು ಗುರು-ಲಿಂಗ-ಜಂಗಮರ ಹೊರತಾಗಿ ಅನ್ಯದೈವದ ಹೆಸರನ್ನು ಸಹ ಉಚ್ಚರಿಸದಷ್ಟು ನಿಷ್ಠಾವಂತರಾಗಿದ್ದರು. ಅಷ್ಟೇ ಏಕೆ ? ಈ ಪೂಜ್ಯತ್ರಯರಿಗಿಂತಲೂ ಶಿವನು ಅಧಿಕನಲ್ಲ ವೆಂಬುದನ್ನು ನಿರಾಭಾರಿ ವೀರಶೈವ ಸಿದ್ಧಾಂತ” ಕೃತಿಯಲ್ಲಿ ನಿರ್ಭಯವಾಗಿ ಹಾಗೂ ತಾತ್ವಿಕವಾಗಿಯೂ ಪ್ರತಿಪಾದಿಸಿದ್ದಾರೆ. ಶರಣರ ತಾತ್ವಿಕ ಹಿನ್ನೆಲೆಯಲ್ಲಿ ವಿಮರ್ಶಾ ಶಕ್ತಿಯೂ ಅಪಾರವಿದೆ. ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು.

 

೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಬಸವಲಿಂಗ ಶರಣರು ಮೈಲಾರದ ಮೈಲಾರಲಿಂಗ ದೇವಸ್ಥಾನದ ಮುಂಭಾಗದಲ್ಲಿಯೇ ವ್ಯಾಪಾರವನ್ನು ಅರ್ಧಗಾಣಿಯ ಸೋಲು-ಗೆಲುವುಗಳಿಲ್ಲದೆ, ಆಶೆ-ಆಮಿಷಕ್ಕೆ ಒಳಗಾಗದೆ ಸತ್ಯ ಶುದ್ಧ ಕಾಯಕ ನಡೆಸುತ್ತಿದ್ದರು. ಆಗಾಗ ನಾಡಿನ ಪ್ರಸಿದ್ಧ ವ್ಯಾಪಾರಿ ಕೇಂದ್ರಗಳೆನಿಸಿದ ಸವಣೂರು, ಹುಬ್ಬಳ್ಳಿ, ಇಕ್ಕೇರಿ ಮೊದಲಾದ ಪಡಿಮೂಲೆ ಸ್ಥಳಗಳಲ್ಲಿ ಸರಕುಗಳನ್ನು ತರುತ್ತಿದ್ದುದು ಅವರ ಕೃತಿಗಳಿಂದ ಧ್ವನಿತವಾಗುತ್ತದೆ. ಗಿರಾಕಿಗಳೆಷ್ಟೇ ಇದ್ದರೂ ನಿರ್ದಿಷ್ಟ ವ್ಯಾಪಾರವಾದ ಬಳಿಕ ಆಧ್ಯಾತ್ಮ ವ್ಯವಹಾರದಲ್ಲಿ ತೊಡಗುತ್ತಿದ್ದರು. ಲಿಂಗಾರ್ಚನೆಗೈದು ಜಂಗಮ ತೃಪ್ತಿಗೊಳಿಸುತ್ತಿದ್ದರು. ತಾತ್ವಿಕ ಅನುಭಾವ ಚಿಂತನೆಯಲ್ಲಿ ಕಾಲ ಕಳೆಯುವರು. ಆರ್ಚನ ಅರ್ಪಣ ಅನುಭಾವ ಮಾಡುವದೆ ಶರಣ ಧರ್ಮ, ವೀರಶೈವನ ನಿಜಾಚರಣೆ.

ಮೈಲಾರಲಿಂಗ ದೇವಸ್ಥಾನಕ್ಕೆ ಬರುವ ಗೊರಪ್ಪಗಳ ವಿಚಿತ್ರ ವೇಷ-ಭಾಷೆ ಆಚರಣೆಗಳಿಂದ ಬಸಪ್ಪನಿಗೆ ಅನುಕಂಪ, ಏಕೆಂದರೆ, ವೀರಶೈವ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದು ಬಂದ ಈತನಿಗೆ ಗೊರಪ್ಪಗಳ ಸಂಗ ಹಿಡಿಸಲಿಲ್ಲ. ಈ ಸಂಗತಿ ಇವರ ಅನುಭಾವ ಜೀವನದ ಶಿವಾನುಭವದರ್ಪಣದ ಪದ್ಯಗಳಿಂದ ವೇದ್ಯವಾಗದೆ ಇರದು. ಗೊರಪ್ಪಗಳ ಪವಾಡ ಕಾರಣೀಕ ಮೊದಲಾದ ಅಸಹಜ ಜೀವನಕ್ಕೆ ಮನಸೋಲಲಿಲ್ಲ. ತನ್ನ ಅನುಭಾವದಿಂದ ನಿಜವಾದ ಮೈಲಾರ ಲಿಂಗನಾರು ? ತೇರಾವುದು ? ಕಾರಣೀಕವಾವುದು ? ಎಂಬುದನ್ನು ಈ ಪದ್ಯಗಳಿಂದ ತಿಳಿಸುತ್ತಾರೆ. ನೋಡಿ.

 

ನೋಡಿರಮ್ಮ ಮೈಲಾರಲಿಂಗನ ಜಾತ್ರೆಯಾಗುತ್ತಿದೆ

ನಾಡ ಜನರಿಗೆ ತಿಳಿಯದು ಇದರ ಗೋಪ್ಯ ಬೇರಿದೆ   ||ಪಲ್ಲವಿ  ||

ತವೆ ಏಳ್ಕೋಟಿಗೆಮಿಗೆ ಮಂತ್ರವನುವ ಗೊರವರೊಪ್ಪುತಾರೆ

ಶಿವನಿಂದಕರೆದೆ ದಲ್ಲಣ ಕಡುಗಲಿ ವೀರರೆಸೆವುತಾರೆ

ಇವರೊಳಧಿಕ ಗುರುಚನ್ನವೀರ ಮೈಲಾರ ಲಿಂಗವಹರೆ  (ಪದ್ಯ ೫೧)

 

ಮತ್ತು – ನಂಬುವುದೆಮ್ಮ ಮೈಲಾರಲಿಂಗನ ಸೊಲ್ಲ ಕೇಳಿ ಕೇಳಿ,

ಢಂಭಕ ಮಾತಲ್ಲ ಕಾರಣಿಕನೆ ಬಲ್ಲ ಕೇಳಿ ಕೇಳಿ     ||ಪಲ್ಲವಿ)

ಪರತತ್ವದಿರವೆಮ್ಮ ಗೊರವನ ಶೌರ್ಯ ನವ ಕೇಳಿ ಕೇಳಿ   (ಪದ್ಯ ೫೨)

 

ನಿಜವಾದ ಮೈಲಾರಲಿಂಗನ ಜಾತ್ರೆಯ ಅರಿವು ಜನಸಾಮಾನ್ಯರಿಗೆ ಆಗುವದಿಲ್ಲ. ಏಳುಕೋಟಿ ಮಂತ್ರಗಳಿಗೆ ಮಂತ್ರರಾಜನೆನಿಸಿದ ಷಡಕ್ಷರ ಮಹಾಮಂತ್ರವನ್ನು ಬೋಧಿಸಬಲ್ಲ ಸದ್ಗುರುನಾಥನೇ ಮೈಲಾರಲಿಂಗ. ಮಲತ್ರಯಗಳನ್ನು ಕಳೆದು ತಾಪತ್ರಯಗಳನ್ನು ನಿವಾರಿಸಬಲ್ಲ ವೀರನೇ ಗುರು ಚನ್ನವೀರರು. ಇವರೇ ಹರ ನಿಂದಧಿಕರೆಂದು ಭಾವಿಸಿ ಪ್ರತಿದಿನವೂ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಯ ಗುರುಕುಲಕ್ಕೆ ತಪ್ಪದೆ ಆಗಮಿಸಿ ಶಿವಾನುಭವ ಗೋಷ್ಠಿಯಲ್ಲಿ ಕಾಲ ಕಳೆಯ ಹತ್ತುವರು. ಈ ಆಶ್ರಮ ಆ ಕಾಲದಲ್ಲಿ ಆಧ್ಯಾತ್ಮಿಕ ಮಹಾಕೇಂದ್ರವಾಗಿತ್ತು. ನಾಡಿನ ಅನೇಕ ಸಾಧಕರು ಇಲ್ಲಿಗೆ ಆಗಮಿಸಿ ತಮ್ಮ ಸಾಧನೆಯನ್ನು ಸದ್ಗುರು ಸನ್ನಿಧಿಯಲ್ಲಿ ಸಾರ್ಥಕಗೊಳಿಸುತ್ತಿದ್ದರು.

 

ಅರಸುತಿಹ ಲತೆ ಕಾಲ್ದೊಡಗಿದಂತೆ, ಬಡವರ ಮನೆಗೆ ಭಾಗ್ಯನಿಧಿ ದೊರೆತಂತೆ ಜಂಗಮ ಪುಂಗವರಾದ ಚನ್ನವೀರ ಮಹಾಶಿವಯೋಗಿಗಳ ಆಗಮನದಿಂದ ಶರಣರಿಗೆ ಅತ್ಯಾನಂದವನ್ನುಂಟು ಮಾಡಿತ್ತು. ವೀರಶೈವ ಸಂಸ್ಕೃತಿಯೇ, ಸಿದ್ಧಾಂತವೇ ಮೂರ್ತಿ ಮತ್ತಾದ ಈ ಪರಮ ಪೂಜ್ಯರಿಂದ ಅನುಗ್ರಹೀತರಾಗಿ ಪಾವನಾಂಗರೆನಿಸಿದರು ಶರಣರು, ಗುರುಸೇವೆಯಲ್ಲಿ ನಿರತರಾಗಿ ಕಿಂಕರತ್ವವನ್ನು ಅಳವಡಿಸಿಕೊಂಡು ಕಾಯಕ ಗೈಯುತ್ತ ಮಹಾದಾಸೋಹಿಯಾದರು.

 

ಹೀಗೆ ಹಿರಿಯ ಸಾಧಕರಾದ ಬಸವಲಿಂಗ ಶರಣರು ಹೊಸದಾಗಿ ಗುರುಕುಲಕ್ಕೆ ಆಗಮಿಸುತ್ತಿದ್ದ ಸಾಧಕವಟುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಚರಣೆಗೆ ತಕ್ಕ ನಡೆಯನ್ನು ಕಲಿಸುತ್ತಿದ್ದರು. ನಡೆಯಿಲ್ಲದ ಡಂಭಾಚಾರದ ವೇಷವನ್ನು ತೆಗೆಯಿಸಿ ನಡೆ-ನುಡಿ ಸಮನ್ವಯಗೊಂಡ ಮೇಲೆ ಗುರುಗಳಿಂದ ಕಾಷಾಯಾಂಬರವನ್ನು ಕೊಡಿಸುತ್ತಿದ್ದರು. ಕುಶಾಗ್ರಮತಿಗಳಾದ ಶರಣರು ಸುಮ್ಮನೆ ಕಾಲ ಕಳೆಯದೆ ಶರಣ ಸಾಹಿತ್ಯವನ್ನು, ಸಂಸ್ಕೃತ ವಾಙ್ಮಯವನ್ನು ಮತ್ತು ಕನ್ನಡ ಕಾವ್ಯಗಳನ್ನು ಅಭ್ಯಸಿಸು ತಿದ್ದರು. ಪೂಜ್ಯ ಗುರುಗಳ ಅನುಭಾವಪೂರ್ಣ ಪ್ರವಚನಗಳನ್ನು ಮನವಿಟ್ಟು ಆಲಿಸುತ್ತಿದ್ದರು. ನಡೆ ನುಡಿಯಲ್ಲಿ ಚನ್ನರಾದ ಚನ್ನವೀರರ ನಡೆಯೇ ಶರಣರಿಗೆ ಮಾರ್ಗದರ್ಶಿಯಾಗಿತ್ತು. ಶ್ರೀಗಳ ಹಿರಿಯ ಶಿಷ್ಯರಾದ ಗವಿಯ ಶಾಂತವೀರ ಸ್ವಾಮಿಗಳಿಂದಲೂ ಶರಣರು ಅನುಭಾವ ಪಡೆದಿದ್ದರು, ಈ ಮಾತನ್ನು ಅವರ ಪದ್ಯದಲ್ಲಿ ಕಾಣಬಹುದು.

 

ಬಸವಲಿಂಗ ಶರಣರು ಅಚ್ಚಗಣಾಚಾರಿಗಳಾಗಿದ್ದರು. ಹಾಗೆಯೇ ಲಿಂಗಾಚಾರಗಳೂ ಹೌದು. ಇವರ ಘನವಾದ ನಿಷ್ಠೆಯನ್ನು ಸಹಿಸದ ಕೆಲವು ಸಾಂಪ್ರದಾಯ ವಾದಿಗಳು ಇವರಿಗೆ ಕಿರುಕುಳವನ್ನು ಕೊಡುತ್ತಿದ್ದರು. ಸಮಯ ಸಾಧಿಸಿ ಹೊಸದಾಗಿ ಬಂದ ಹಡಗಲಿಯ ಕಟ್ಟಾವೈಷ್ಣವ ತಹಶೀಲದಾರನಿಗೆ ಶರಣರ ವಿರುದ್ಧ ಜಾಡಿಯನ್ನು ಹೇಳಿದರೂ ಶರಣರು ಅಂಜದೆ ಅಳುಕದೆ ತಮ್ಮ ನಿಷ್ಠೆಯನ್ನೇ ಮೆರೆದರು. ಅಧಿಕಾರಿಯು ವಿಷ್ಣುವಿನ ನಾಮಗಳನ್ನು ಕೊಂಡಾಡಲು ತಿಳಿಸಿದಾಗ ಶರಣರು ಒಪ್ಪಿ ಸುಂದರ ಪದ್ಯಗಳನ್ನೇ ರಚಿಸುತ್ತಾರೆ. ನ್ಯಾಯನಿಷ್ಠುರ; ದಾಕ್ಷಿಣ್ಯಪರರಾಗದೆ ಪವಿತ್ರ ಪ್ರಾಣಿಯಾದ ಗೋವಿನ ಮಹತ್ವವನ್ನು ತಿಳಿಸಿ ಅದರಿಂದ ತಯಾರಾಗುವ ಪಾವನ ಪಾಂಡುವರ್ಣದ ಶ್ರೀ ವಿಭೂತಿಯ ಘನತೆಯನ್ನು ವ್ಯಕ್ತಗೊಳಿಸುವ-

 

“ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾದ ಪಾವನ ಪಾಂಡುರಂಗ

ಶ್ರೀ ವಿಭೂತಿಯು ಪಂಚಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ | ಜಗ

ಜೀವ ಸಂತೃಪ್ತಿಯು ಗೋವಿಂದ

 

ಎನ್ನುವ ಐದು ನುಡಿಯ ಪದ್ಯವನ್ನು ರಚಿಸಿದರಲ್ಲದೆ ಮತ್ತೆ

 

“ಹರಿಯೆ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

ಹರಿಯೆ ತ್ರೈಭುವನ ಅಟ್ಟುಂಬ ಸಕಲ ಜೀವಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ ಲೋಕದೊಳಗದು ಕಾರಣ |

ಹರಿಭಕ್ತನಹುದು, ಹರಭಕ್ತನಲ್ಲ ನಾಂ

ನರಸಿಂಹ ಮಧುಸೂದನ ಶಿರಿಯರಸ ವಾ

ಸರ ಯಂಕಟಾಚಲಾದಿ ಪ್ರಣವ ಸ್ಮರಣೆಯೊಳಗಿರ್ಪೆಂ ಸದಾ ||

 

ಎಂಬ ನಾನಾರ್ಥ ವೈಚಿತ್ರ್ಯದಿಂದ ಅರ್ಥ ವಿಸ್ತಾರ ತೋರಿಸಿ ನರಸಿಂಹಾದಿ ಶಬ್ದಗಳ ಆದಿ ಅಕ್ಷರ ಜೋಡಿಸುವ ಷಡಕ್ಷರ ಮಂತ್ರದ ಸ್ಮರಣೆ ಮಾಡಿದ್ದನ್ನು ಈ ಪದ್ಯದಲ್ಲಿ ಬರೆದು ಅಧಿಕಾರಿಯನ್ನು ಬೆರಗುಗೊಳಿಸುತ್ತಾರೆ. ಹಾಗೆ ಕೇಡಿಗಳೂ ತಣ್ಣಗಾಗುತ್ತಾರೆ.

 

ಪ್ರತ್ಯುತ್ಪನ್ನ ಮತಿಯವರಾದ ಬಸವಲಿಂಗ ಶರಣರು ಭಕ್ತಿಯ ಉದ್ರೇಕದಿಂದಾಗಲಿ, ತಾತ್ಕಾಲಿಕ ಸ್ಫೂರ್ತಿಯಿಂದಾಗಲಿ ಕೃತಿಗಳನ್ನು ರಚಿಸಲಿಲ್ಲ. ತತ್ತ್ವ, ಶಾಸ್ತ್ರ ,ಆಚಾರ, ಅನುಭಾವಗಳ ಸಂಗಮದಲ್ಲಿ ಕ್ರಿಯಾಜ್ಞಾನಗಳ ಸಮುಚ್ಚಯದಲ್ಲಿ ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ನಾಲ್ಕು ೧)ಶಿವಾನುಭವ ದರ್ಪಣ (ಹಾಡುಗಬ್ಬಗಳು) ೨) ನಿರಾಭಾರಿ ವೀರಶೈವ ಸಿದ್ಧಾಂತ (ಷಟ್‌ಪದಿಯಲ್ಲಿ ಬರೆದ ವೀರಶೈವ ಸೈದ್ಧಾಂತಿಕ ವಿಚಾರಗಳು) ೩) ಗುರು ಕರುಣ ತ್ರಿವಿಧಿ (ತ್ರಿಪದಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮವಾಗಿ ತಿಳಿಸಿದ ಕೃತಿ) ೪) ಲಿಂಗಪೂಜಾ ವಿಧಾನ (ಚೌಪದಿಯಲ್ಲಿ ಬರೆದದ್ದು) ಡಾ. ಎಸ್. ವ್ಹಿ, ಅಯ್ಯನಗೌಡ ಇವರು ಗದಗ “ವೀರಶೈವ ಅಧ್ಯಯನ ಸಂಸ್ಥೆ ʼʼ ಯಿಂದ ಪ್ರಕಟಿಸಿದ ಬಸವಲಿಂಗ ಶರಣರು ಸಮಗ್ರ ಕೃತಿಗಳು’ʼ ಇದರಲ್ಲಿ ಚನ್ನವೀರ ಸ್ವಾಮಿಗಳ ಇನ್ನೊಬ್ಬ ಶಿ಼ಷ್ಯರಾದ ಬನ್ನಿಮಟ್ಟಿ ಚನ್ನಪ್ಪನವರು ರಚಿಸಿದ “ಶಿವಾನುಭವ ದೀಪಿಕೆ ಯೆಂಬ ಗ್ರಂಥವನ್ನು  “ಷಟ್ ಸ್ಥಲ, ಜ್ಞಾನಾನುಭಾವ’ ಎಂಬ  ಹೆಸರಿಟ್ಟು ಹಸ್ತಪ್ರತಿಯ ಆಧಾರದಿಂದಲೋ, ತಮ್ಮ ಜಾಣೆಯಿಂದಲೋ ಬಸವಲಿಂಗ ಶರಣರಿಗೆ ಸೇರಿಸಿ, ಆ ಕೃತಿಕಾರರನ್ನು ಲುಪ್ತಗೊಳಿಸಿದ್ದು ಸಮಂಜಸವಲ್ಲ. ಶ್ರೀಯುತರು ಕನ್ನಡ ಅಧ್ಯಯನ ಪೀಠದ ಹಸ್ತ ಪ್ರತಿಭಾಂಡಾರದ ಕ್ರಮಾಂಕ ೧೦೬೧ ರಿಂದ ಸಂಗ್ರಹಿಸಿದ “ ಭಕ್ತಿ ಭಿನ್ನಹ ದಂಡಕ”ವು ಶರಣರೆಂದು ಖಚಿತಪಡಿಸಿದುದರಲ್ಲಿ ಔಚಿತ್ಯವಿದೆ.  “ಭಕ್ತಿ ಬಿನ್ನಹ ದಂಡಕ’ ವು ಶರಣರ ಐದನೆಯ ಕೃತಿಯೆನ್ನಬಹುದು. ಶರಣರ ಹೆಸರಿಗೆ ಸೇರಿಸಿದ “ಶಿವಾನುಭವ ದೀಪಿಕೆʼ’ ಯನ್ನು ಕುರಿತು ವಿಮರ್ಶಿಸಲು ಅವಕಾಶವಿಲ್ಲದಿದ್ದರೂ ಕೆಲವು ಮಾತುಗಳನ್ನು ಹೇಳುವದು ಅವಶ್ಯವಿದೆ; ಹಾಗೂ ಅನಿವಾರ್ಯವಿದೆ, ಅದರ ಕವಿ ಚಿನ್ನಪ್ಪನವರು “ಶಿವಾನುಭವ ದೀಪಿಕೆ’ಯ ಕೊನೆಯ ಕಂದ (೩೦೩)ದಲ್ಲಿ-

 

“ಪಾಹಿ ಗುರು ಚನ್ನವೀರಾ ಬಸವಪ್ರಭುವೆ’ʼ ಗುರು ಚನ್ನವೀರಾ ಎಂಬ ಅಂಕಿತವಿರುವುದರಿಂದ ಬಸವಲಿಂಗ ಶರಣರ ಕೃತಿಯೆಂದು ಭಾವಿಸುವುದು ಸರಿಯಲ್ಲ. ಎಲ್ಲ ಪದಗಳಲ್ಲಿ ಕೇವಲ ಬಸವಪ್ರಭುವೇ ಎಂದಿದೆ. ಬಸವಲಿಂಗ ಶರಣರಿಗೆ ಪ್ರೀತಿಯ ಪ್ರಭು (ಸ್ವಾಮಿ) ಅಥವಾ ಗುರುವಾದ ಚನ್ನವೀರರೆಂದು ಚನ್ನಪ್ಪನವರು ಅಂಕಿತ ಬಳಸಿರಲು ಸಾಕು. ಬವಣ್ಣನವರು ಕೂಡಲ ಸಂಗಮದೇವಾ ಎಂದು ವಚನಾಂಕಿತ ಹಾಕಿದರೆ; ಚನ್ನಬಸವಣ್ಣನವರೂ ಆದನ್ನೇ ಬಳಸಿ ಕೇವಲ ಚನ್ನ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಹಾಗೆ ಇಲ್ಲಿಯೂ ಅಂಕಿತದ ಭಿನ್ನತೆಯಿದೆ. ಬವಲಿಂಗ ಶರಣರು ಪದಪದ್ಯಗಳಲ್ಲಿ ಚನ್ನವೀರ’ ನಾಮವನ್ನು ಬಳಸಿಕೊಂಡಿರುವುದಾದರೂ ಬಸವಪ್ರಭುವೆಂಬ ನಾಮಾಂಕಿತವನ್ನು ಬಳಸಿಲ್ಲ. ಅಲ್ಲದೆ ಸಮಗ್ರ ಕೃತಿಯಲ್ಲಿ ಬರುವ ವಿಷಯ ಜೋಡಣೆಯ ವ್ಯತ್ಯಾಸ ಅನುಭಾವದ ಆಳವನ್ನು ಅಳೆಯಬಹುದು. ಶಿವಾನುಭವ ದೀಪಿಕೆಯಲ್ಲಿ ಅನುಭಾವದ ಕೊರತೆಯನ್ನು ಕಾಣಬಹುದು. ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯನ್ನು ಅದಕ್ಕೆ ತುಲನೆ ಮಾಡಿದರೆ ಬಹಳ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಿದೆ. ಹಲವಾರು ಕಾರಣಗಳಿಂದ “ಶಿವಾನುಭವ ದೀಪಿಕೆ’ ಬಸವಲಿಂಗ ಶರಣರದಂತೂ ಅಲ್ಲ. ಸಂಶೋಧನೆಯ ಹೆಸರಿನಲ್ಲಿ ಒಬ್ಬ ಕವಿಯನ್ನು ಲುಪ್ತಗೊಳಿಸುವ ಕಾರ್ಯ ಸರಿಯಲ್ಲ. ಸಂಶೋಧಕರು ಇನ್ನೂ ವಿಚಾರಿಸಬೇಕು. ಈ ಗ್ರಂಥ ಬಸವಲಿಂಗ ಶರಣರದು ಅಲ್ಲವೆಂದು ಸಿದ್ಧಮಾಡಲು ಸಾಕಷ್ಟು ಅಂಶಗಳಿವೆ.

 

ಇನ್ನು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯನ್ನು ಗುರುಗಳಿಂದ ಶಾಪಗ್ರಸ್ಥರಾಗಿ ಬರೆದರೆಂದು ಹೇಳುವ ದಂತಕಥೆ ಬೆಳೆದುದೂ ದುರದೃಷ್ಟಕರವೆ ! ಕವಿರತ್ನ ಚನ್ನಕವಿಗಳು ಮುಳುಗುಂದ ಬಾಲಲಿಲಾ ಮಹಾಂತ ಸ್ವಾಮಿಗಳ  ಪುರಾಣದಲ್ಲಿ ಈ ಸಂಗತಿಯನ್ನು ಬಳಸಿಕೊಂಡಿದ್ದಾರೆ. ಬಹುಶಃ ಅವರು ತ್ರಿವಿಧಿಯನ್ನಾಗಲಿ ಅವರ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿರಲಿಲ್ಲ. ಎಲ್ಲಿಯೂ ಈ ಸಂಗತಿ ತಿಳಿದು ಬರುವದಿಲ್ಲ. ಬಸವಲಿಂಗ ಶರಣರು ತಮ್ಮ “ನಿರಾಭಾರಿ ವೀರಶೈವ ಸಿದ್ಧಾಂತ”ದಲ್ಲಿ ಅಷ್ಟಾವರಣ ಮಹತ್ವ, ಪಂಚಾಚಾರಗಳ ವಿಶ್ಲೇಷಣೆ, ಧರ್ಮಾಚಾರಗಳೆಂಬ ತ್ರಿವಿಧ ಪ್ರಕರಣಗಳನ್ನು ವಿವರಿಸಿದರು.  ಶಿವಾನುಭವ ದರ್ಪಣ’ದಲ್ಲೂ ಬಿಡಿಬಿಡಿಯಾಗಿ ಅನೇಕ ತಾತ್ವಿಕ ವಿಷಯವಾಗಿ ಪದ್ಯಗಳನ್ನು ರಚಿಸಿದ್ದರೆ, ಗುರುಕರುಣ ತ್ರಿವಿಧಿಯು ಅಷ್ಟಾವರಣವೇ ಲಿಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಕ್ರಮಬದ್ಧವಾಗಿ ಹಾಗೂ ಸಮಗ್ರವಾಗಿ ಬೋಧಿಸುವ ಏಕೈಕ ಕೃತಿಯೆಂದರೆ ತಪ್ಪಾಗದು. ಇಲ್ಲಿ ಶಿವಕವಿಯ ಆಳವಾದ ಅನುಭವ, ತರ್ಕಬದ್ಧವಾದ ವಿಚಾರ, ವಿಮರ್ಶೆ ಹಾಗೂ ಶಾಸ್ತ್ರೀಯ ಸಿದ್ಧಾಂತಗಳು ಮುಪ್ಪುರಿಗೊಂಡಿವೆ. ವೀರಶೈವನು ನಿಜಾಚರಣೆಯಿಂದ ತತ್ತ್ವಪುರುಷನಾಗುವ ಬಗೆ ಈ ತ್ರಿವಿಧಿಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ಈ ಕೃತಿ ಶಿವಕವಿಯ ಅತ್ಯುತ್ತಮ ಗ್ರಂಥವೆಂದೇ ಹೇಳಬೇಕು. ವೀರಶೈವರ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದಾರೆ. ಇದರಿಂದ ಶಿವ ಕವಿಯ ಸ್ವಾನುಭಾವ ಮತ್ತು ವಿಚಕ್ಷಣಮತಿಯ ಪರಿಚಯವಾಗುವದು. ತ್ರಿವಿಧಿಯಲ್ಲಿ ೩೩೩ ತ್ರಿಪದಿಗಳಿದ್ದು ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿದ ಸಾಹಸ ಶರಣರದು.

 

ಆಲದ (ಮರ) ಬೀಜ ಅತಿ ಚಿಕ್ಕದಾಗಿದ್ದರೂ ವಿಶಾಲ ಗಿಡವನ್ನು ಒಳಗೊಂಡಿರುವಂತೆ ಈ ಗುರುಕರುಣ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನು ಮಾಡಬಹುದು. ಬಹುಶಃ ಇದು ಗುರುಸ್ತುತಿಗೈವ ಪಾರಾಯಣ ತ್ರಿವಿಧಿಯೆಂಬುದಾಗಿ ಬಹುಜನರ ತಿಳುವಳಿಕೆಯಾಗಿತ್ತು; ಅಲ್ಲದೆ ಬಸವಲಿಂಗ ಶರಣರು ಶಾಪಗ್ರಸ್ಥರಾಗಿ ಗುರುಸ್ತುತಿಯನ್ನು ಮಾಡಿದ್ದೆಂಬುದಾಗಿಯೇ ಅನೇಕರು ಹೇಳುತ್ತಾರೆ. ಇದು ಸರಿಯಲ್ಲ. ಶಿವಕವಿ ಬಸವಲಿಂಗ ಶರಣರ ಸಮಗ್ರ ಕೃತಿಗಳನ್ನು ಅವಲೋಕಿಸಿದರೆ ಎಲ್ಲಿಯೂ ಶಾಪದ ಪ್ರಸಂಗ ಬರುವುದಿಲ್ಲ. ಬಸಪ್ಪ-ಮುಸಪ್ಪ ಎಂಬ ಶಬ್ದ ಸಾಮ್ಯದಿಂದ ಬೆಳೆದ ಕಥೆಯಿರಬೇಕು. ಮತ್ತು ಶಾಪಗ್ರಸ್ಥನಾಗಿ ಇಂಥ ತಾತ್ವಿಕ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಗುರುಕರುಣೆಯನ್ನು ಕಳೆದುಕೊಂಡ ವ್ಯಕ್ತಿ ಮತಿಮಂದನಾಗಿ ಉತ್ತಮ ಕೃತಿಯನ್ನು ರಚಿಸಲಾರನು. ಗುರುಕರುಣೆಯಿಂದಲೇ ಇಂಥ ಉತ್ತಮ ಕೃತಿರತ್ನಗಳು ಮೂಡಿಬರುತ್ತವೆ. ಗುರುವಿಗೆ ಪ್ರತಿಮಾತನ್ನು ಆಡುವದೂ ಶರಣ ಜೀವನದಲ್ಲಿ ಸಲ್ಲದು. ಸದ್ಗುರುವಿನ ಮೌನ ನಿರ್ದೇಶನಗಳೂ ಶರಣನಿಗೆ ಮಾರ್ಗದರ್ಶಕವಾಗಬೇಕು. ಅರಿವುಳ್ಳವನೇ ಶರಣ. ಅಂಥ ಅರಿತ ಶರಣ ಮರೆತರೆ ಮತಿ ಅಮಂಗಲವಾಗಬಾರದೆಂದೆ ಶಿವಕವಿಗಳು ಸದ್ಗುರುವಿನಲ್ಲಿ ಮತಿಗೆ ಮಂಗಲ ಬೇಡುತ್ತ ಗುರುಕರುಣೆಯ ಹಿನ್ನೆಲೆಯಲ್ಲಿ ತ್ರಿವಿಧಿಯನ್ನು  ರಚಿಸಿರುವರು.

 

“ ಗುರುಕರುಣ ತ್ರಿವಿಧಿ’ಯು ಶ್ರೀ ಗುರು ಪ್ರಾರ್ಥನೆಯಿಂದ ಪ್ರಾರಂಭ ವಾಗುತ್ತದೆ. ತ್ರಿವಿಧಿಯಲ್ಲಿ ಶಿವಕವಿಗಳು ಅಷ್ಟಾವರಣವನ್ನು ಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ. ಏಕೆಂದರೆ ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ ಅಷ್ಟಾವರಣವು ಸ್ಪುಟವಾಗಿದೆ. ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ ಪಂಚಾಚಾರಗಳು ಅಳವಟ್ಟಿವೆ. ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ. ಪ್ರಥಮದಲ್ಲಿ ಸ್ತುತಿಗೈದ ಶ್ರೀಗುರು ನಿರಾಭಾರಿ ಜಂಗಮನೇ ಆಗಿದ್ದಾನೆ. ಬಸವಲಿಂಗ ಶರಣರು ಚಿನ್ಮಯಾನುಗ್ರಹ ಪಡೆದವರು. ನಿರಾಭಾರಿ ಗುರುವಿನ ಸುತ್ತಿಗೈದರೂ ಸಾಭಾರಿ ಸದ್ಗುರುವಿನ ಸ್ವರೂಪವನ್ನು, ಮಹತ್ವವನ್ನು ತಿಳಿಸುತ್ತಾರೆ. ಇದರಿಂದ ಈ ಗುರುವಿನ ಅವಶ್ಯಕತೆಯೇನೆಂಬುದು ಗೋಚರಿಸುತ್ತದೆ. ಅವಶ್ಯಕತೆಯ ಅರಿವಾಗುತಿದ್ದಂತೆ ಸದ್ಗುರುವನ್ನು ಹೃದಯತುಂಬಿ ಹಾಡುತ್ತಾರೆ ಕವಿಗಳು. ಗುರುದೀಕ್ಷೆ ಪಡೆದ ಭಕ್ತನು ಲೌಕಿಕ ತಂದೆ-ತಾಯಿ ಬಂಧು-ಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು. ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರುಕೃಪೆ ತೀವ್ರ ಲಭಿಸುವುದು.

 

ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ. ಆಗ ತ್ರಿವಿಧಿಯ ಮೂಲ ಬೀಜವೇ ವ್ಯಕ್ತವಾಗುತ್ತದೆ. ಶರಣರು ತ್ರಿವಿಧಿಯನ್ನು ರಚಿಸುವಲ್ಲಿ ಬಹಳ ಸುಂದರ ಕ್ರಮವನ್ನು ಅನುಸರಿಸಿದ್ದಾರೆ. ಶಾಸ್ತ್ರದ ಪದ್ಧತಿಯಂತೆ ವಿಷಯದ ಉಪಕ್ರಮ ಮಾಡುತ್ತ ಅದನ್ನು ಪ್ರತಿಪಾದಿಸಿ ಕೊನೆಗೆ ಉಪಸಂಹಾರ ಮಾಡುತ್ತ ಮುಂದಿನ ವಿಷಯಕ್ಕೆ ಕೊಂಡಿಯಂತೆ ಜೋಡಿಸುತ್ತ ಸಂಪೂರ್ಣವಾಗಿ ೩೩೩ ತ್ರಿಪದಿಗಳನ್ನು ರಚಿಸಿರುವರು.

 

ಗುರುವಿನ ಸಂವೇದನೆಯ ನಗುವೇ ಈ ಗುರುಕರುಣ ತ್ರಿವಿಧಿಯ ದಾರ್ಶನಿಕ ಸಿದ್ಧಾಂತದ ಬೀಜಾರೋಪಣವಾಗುತ್ತದೆ. ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿ ಸದ್ಗುರುವಿಗೆ ನೆಮ್ಮದಿಯಾದೀತು ? ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಗಳು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾರೆ. ಕಾಮಕೇಳಿಯಲ್ಲಿ ಮೈ-ಮರೆತ ಮಾನವನು ಮಾಯಾಬಂಧನದಲ್ಲಿ ಸಿಲುಕುತ್ತಾನೆ. ಶರಣ ಸಿದ್ಧಾಂತದಂತೆ ಮಾಯೆ ಹೊರಗಿನದಲ್ಲ. ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ. ಕಾಮನ ಉರುವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಪಂಚಭೂತಗಳ ಭಯಾನಕತೆಯನ್ನು ವಿವರಿಸುತ್ತ ಪಂಚಭೂತಗಳ ಪಂಚೀಕರಣದ ಪಂಚಭೂತಮಯವಾದ ಕಾರಣದಿಂದಲೇ ಶರೀರವಾಯಿತೆಂದು ಪ್ರತಿಪಾದಿಸುತ್ತಾರೆ. ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾರೆ. ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾರೆ. ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಗಳ ಐತಿಹಾಸಿಕ ಪ್ರಜ್ಞೆ, ತೀರ್ಥ ಕ್ಷೇತ್ರಗಳ ಪರಿಚಯ, ವ್ಯಾವಹಾರಿಕ ಜ್ಞಾನ, ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ.

 

ಶಬ್ದಾದಿ ಪಂಚ ವಿಷಯಗಳ ಪ್ರಸ್ತಾಪದ ನಂತರ ಅಂತಃಕರುಣ ಚತುಷ್ಟಯ ಹಾಗೂ ಗುಣತ್ರಯದ ನಿರೂಪ ಬಂದಿದೆ. ಹೀಗೆ ಶರೀರ ವಿಜ್ಞಾನ, ಶರೀರಿಗೆ ಅಂಟಿದ ಅಜ್ಞಾನ, ವಿಷಯ ವಾಸನೆ ಇತ್ಯಾದಿಗಳ ವಿಚಾರವು ನೇರವಾಗಿ ತಿಳಿದಂತೆ ಸಂಸಾರ ಹೇಯವೆನಿಸುವುದು ಸಹಜ. ಎಲ್ಲ ವಿಷಯಗಳನ್ನು ಶರಣರು ಸ್ವಾರಸ್ಯವಾಗಿ ಪ್ರತಿಪಾದಿಸಿದ್ದಾರೆ. ವಿಷಯದ ಮನವರಿಕೆಯಾಗಲು ಬೆಡಗಿನ ನುಡಿಯನ್ನು, ಶೇಷಾರ್ಥದ ಪರಿಯನ್ನು ಉಪಯೋಗಿಸಿದ್ದಾರೆ. ಕವಿಗಳ ಜಾಣ್ಮೆ ಅನುಭಾವಗಳು ಒಡಮೂಡಿವೆ. ಶಿಷ್ಯನು ಸಂಸಾರ ಬಂಧನದಿಂದ ತನುತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸುತ್ತಾನೆ. ಹೀಗೆ ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ. ತ್ರಿಪದಿಯ ಪ್ರತಿಪದಗಳು ವೈಶಿಷ್ಟ್ಯವನ್ನು ಪಡೆದಿವೆ. ಸಂಸಾರ ಹೇಯಸ್ಥಲದ ಕೆಲವು ತ್ರಿಪದಿಗಳು ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ. ೫೦ನೇಯ

 

ಬೇರಾಗಸಕೆ ಬೆಳೆದ | ನಾರಿಕೇಳದ ಕುಜವ

ನಾರ ಹಂಗಿಲ್ಲ ದೇರಿದೆ ನಾನಿಳಿಯ

ಲಾರನೈ ಗುರುವೆ ಕೃಪೆಯಾಗು ||

 

ಈ ತ್ರಿಪದಿಯಂತೂ ವೀರಶೈವ ಸಿದ್ಧಾಂತವನ್ನು ಬೋಧಿಸುವ ಪರಿಣತ ಪ್ರಜ್ಞೆಯ ದ್ಯೋತಕವಾಗಿದೆ. ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಸತ್ವ ಪ್ರಕಟವಾಗುತ್ತದೆ.

 

ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಇಷ್ಟಲಿಂಗ, ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುತ್ತದೆ. ಈ ಲಿಂಗ ಹೊರಗಿನದಲ್ಲ. ಶಿಷ್ಯನ ಚಿಚ್ಚೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಶಿಷ್ಯನ ಭಕ್ತಿಗಾಗಿ ಅರುಹಿನ ಕುರುಹೆ ಮೂರ್ತಗೊಂಡು ಇಷ್ಟಲಿಂಗವಾಗುತ್ತದೆ. ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಪ್ರವೃತ್ತಿಕ್ರಮದಿಂದ ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು. ಮುಕ್ತಿಮಾರ್ಗಕ್ಕೆ ಯೋಗಮಾರ್ಗ, ಷಣ್ಮುಖೀ, ಖೇಚರೀ ಮುದ್ರೆಗಳು ಇರುತ್ತಿದ್ದರೂ ಅವು ಸುಲಭ ಸಾಧ್ಯವಲ್ಲವೆಂದು ಯುಕ್ತಿ ಯುಕ್ತವಾಗಿ ಶಿವಕವಿಗಳು ನಿರಸನಮಾಡಿ ಲಿಂಗಾಂಗಯೋಗದ ಸರಳತೆಯನ್ನು ತಿಳಿಸುತ್ತಾರೆ. ಅದಕ್ಕೆ ಸಹಕಾರಿಯೆಂಬಂತೆ ಲಿಂಗಲಕ್ಷಣ ಲಿಂಗವ್ಯಾಪ್ತಿಯನ್ನು ಹೇಳುತ್ತ ಈ ಲಿಂಗವು ಪ್ರಣವದಿರವೆಂಬುದನ್ನು ತಿಳಿಸುತ್ತಾರೆ. ಲಿಂಗ ಷಟ್‌ಸ್ಥಾನಗಳಲ್ಲಿ ಷಡಕ್ಷರ ಮಂತ್ರ ಸಂಬಂಧವನ್ನು ಬೋಧಿಸುತ್ತಾರೆ. ಇಂಥ ಅಸಾಧಾರಣ ಲಿಂಗವನ್ನು ಅಂತರಂಗಗಳಲ್ಲಿ ಧರಿಸಿಕೊಳ್ಳುವ ಯೋಗ್ಯತೆಯನ್ನು ವಿವರಿಸಿ ಲಿಂಗಾಂಗ ಸಾಮರಸ್ಯದ ರಹಸ್ಯವು ನಿವೃತ್ತಿಕ್ರಮದಿಂದ ಆಧಾರಾದಿ ಚಕ್ರಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಯ ಮೂಲಕ ಬೋಧಿಸಲ್ಪಟ್ಟಿದೆ. ಸಾಧಕನು ಸರ್ವಾಂಗ-ಲಿಂಗಿಯಾಗಲು ಕರ್ಮೇಂದ್ರಿಯಗಳಲ್ಲಿ ಇಷ್ಟಲಿಂಗದ,  ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗದ, ಕರಣಂಗಳಲ್ಲಿ ಭಾವಲಿಂಗದ ಸಂಬಂಧವನ್ನು ಕ್ರಮವಾಗಿ ಅರಹುತ್ತಾರೆ. ಪುನಃ ಲಿಂಗದ ಅವಶ್ಯಕತೆ ಅರ್ಥಾತ್ ಪ್ರಾಣಲಿಂಗಪೂಜೆ, ಭಾವಲಿಂಗ ಪೂಜೆಯ ಪರಿಯನ್ನು ಪ್ರಸ್ತಾಪಿಸಿದ್ದಾರೆ. ಮೂರು ವಿಧದಲ್ಲಿ ತ್ರಿವಿಧ ಲಿಂಗಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಗಳು ಲಿಂಗತತ್ತ್ವದ ವ್ಯಾಪಕತೆಯನ್ನು ಅವರ್ಣನೀಯವಾಗಿ ಪ್ರತಿಪಾದಿಸುತ್ತಾರೆ. ಈ ವಿಚಾರ ವಚನ ಸಾಹಿತ್ಯದಲ್ಲೂ ಹೆಚ್ಚು ಕಾಣುತ್ತಿಲ್ಲ.

 

ಇಷ್ಟ ಪ್ರಾಣ ಭಾವಲಿಂಗಗಳ ಅನುಸಂಧಾನ ಮಾಡುವ ಭಕ್ತನು ಲಿಂಗದ ಪ್ರಾಣ ಜಂಗಮನನ್ನು ಆರಾಧಿಸಬೇಕೆಂಬುದನ್ನು ತಿಳಿಸುತ್ತ ಜಂಗಮನ ನಿಲವು, ಭೇದ ಹಾಗೂ ಜಂಗಮನ ಕರ್ತವ್ಯವನ್ನು ಬಿತ್ತರಿಸಿದ್ದಾರೆ. ನುಡಿದಂತೆ ನಡೆವ ಮಾರ್ಗ ಷಟ್‌ಸ್ಥಲ. ಇದನ್ನು ಅನುಗ್ರಹಿಸುವವನು ಜಂಗಮನೆಂಬುದನ್ನು ಶರಣರು ಸ್ಪಷ್ಟಗೊಳಿಸಿರುವರು.   ಗುರು ಧರ್ಮಕರ್ತೃವಾದರೆ ಜಂಗಮ ಧರ್ಮ ಸಂಶೋಧಕನೆಂಬುದನ್ನು ಶರಣರು ವ್ಯಕ್ತಗೊಳಿಸಿರುವರು.

 

ಬಾಹ್ಯ ಜಂಗಮನ ಸೇವೆಗೈಯುತ್ತ ಅಂತರಂಗದಲ್ಲಿ ಜಂಗಮನ ಸಾಕ್ಷಾತ್ಕಾರದ ಸ್ವರೂಪವನ್ನು ಅರಿಯಬೇಕು. ಜಂಗಮ ಪುಂಗವನಿಂದ ಪ್ರಾಪ್ತವಾಗುವದು ಪರಬ್ರಹ್ಮರೂಪಿ ಪಾದೋದಕ ಪ್ರಸಾದಗಳು. ಪಾದೋದಕವನ್ನು ಪಡೆವ ವಿಧಾನ ಹಾಗೂ ಮಹಿಮೆಯನ್ನು ತಿಳಿಸಿ ಅದರ ಪರಿಣಾಮವನ್ನು ವಿವರಿಸುತ್ತಾರೆ. ಭಕ್ತರನ್ನು ಪೊರೆವ ಮಹಾತಾಯಿ ಪ್ರಸಾದವೆನಿಸಿದ್ದರಿಂದ ಅದನ್ನು ಒಳಹೊರಗೂ ಪರಿಣಾಮಿಸಿಕೊಳ್ಳಬೇಕು. ಏಕೆಂದರೆ ಪ್ರಸಾದ ಸದ್ಭಾವವೇ ವೀರಶೈವರ ಆತ್ಯಂತಿಕ ಸಿದ್ಧಿಯೆನಿಸಿದೆ. ಇದುವೆ ನಿತ್ಯ ಮುಕ್ತತ್ವವೆನಿಸಿದೆ.

 

ಪ್ರಸಾದ ಸದ್ಭಾವಿಯಾದ ಶರಣು ನಿಜೈಕ್ಯ ಸ್ಥಿತಿಯಲ್ಲಿರುವಾಗ ಮತ್ತೆ ಸಾಧನಗಳ ಅವಶ್ಯಕತೆಯೆನಿಸದು. ಅದಕ್ಕಾಗಿ ಶಿವಕವಿಗಳು ಸಾಧನಗಳಿಂದ ಸಾಧ್ಯವೆನಿಸಿದ ಚಿದ್ಭಸಿತ, ಚಿದ್ರುದ್ರಾಕ್ಷಗಳ ಮಹತ್ವವನ್ನು ವಿವರಿಸಿ ಮನ ಚಿದ್ಘನವಾಗುವ ನಿಜಮಂತ್ರದ ಸ್ವರೂಪವನ್ನು ನಿರೂಪಿಸುತ್ತಾರೆ. ಕಾಯದಲ್ಲಿ ಗುರುಲಿಂಗ ಜಂಗಮರ ಆಯತವನ್ನು ಅರಿಯಲು ಬಾಹ್ಯಾಚರಣೆಯ ವಿವರವನ್ನು ತಿಳಿಸಿ ಆಂತರಿಕ ಅಷ್ಟಾವರಣದ ಅಳವಡಿಕೆಯನ್ನು ಸಾಧಿಸಿದಾಗ ನೈಜ ಶೂನ್ಯ ಸಂಪಾದನೆಯಾಗುವುದೆಂಬುದನ್ನು ಈ ತ್ರಿವಿಧಿಯಲ್ಲಿ ಅವಲೋಕಿಸಬಹುದು. ‘ಶೂನ್ಯ ಸಂಪಾದನೆ” ಉಕ್ಕಿನ ಕಡಲೆಯಾಗಿರುವಾಗ ಅದನ್ನು ಸಾಧಿಸುವ, ಆಚರಿಸುವ ದಾರ್ಶನಿಕ ಸಿದ್ಧಾಂತವನ್ನು ಸಾಕ್ಷಾತ್ಕರಿಸಿಕೊಳ್ಳಲು ಮಹಾನುಭಾವಿ ಮೈಲಾರ ಭಸವಲಿಂಗ ಶರಣರ ಈ ಗುರುಕರುಣ ಶ್ರಿವಿಧಿಯು ಅಧ್ಯಾತ್ಮದ ಕೈಮರವೆನಿಸಿದೆ. ವೀರಶೈವ  ಸಿದ್ಧಾಂತದ ರಸಘಟ್ಟಿ ಗುರುಕರಣ ತ್ರಿವಿಧಿಯೆಂದರೆ ತಪ್ಪಲ್ಲ.ಶೂನ್ಯ ಸಂಪಾದನೆಯನ್ನು ಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನ ಗುರುಕರಣ ತ್ರಿವಿಧಿಯೆಂಬುದನ್ನು ಬೇರೆ ಹೇಳಬೇಕಿಲ್ಲ.

 

ಬಸವಲಿಂಗ ಶರಣರು ʼ’ಶಿವಾನುಭಾವ ದರ್ಪಣ’ʼದಲ್ಲಿ ೭೦ ಪದ್ಯಗಳನ್ನು ರಚಿಸಿದ್ದು ವಿವಿಧ ರಾಗ ಮಾಲಿಕೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಪ್ರಾರ್ಥನೆ, ನೀತಿ, ತತ್ವಗಳನ್ನು ಹೃದಯಂಗಮವಾಗಿ ಹಾಡಿದ್ದಾರೆ. ಸದ್ಗುರು ಚನ್ನವೀರರ ವ್ಯಕ್ತಿತ್ವವನ್ನು ಹಲವಾರು ಪದ್ಯಗಳಲ್ಲಿ ಸ್ತುತಿಸಿದ್ದನ್ನು ನೋಡಬಹುದು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ವಿಚಾರಗಳನ್ನು ದ್ವಿಪದಿ, ಚೌಪದಿ, ಷಟ್‌ ಪದಿಗಳಲ್ಲಿ ವ್ಯಕ್ತ ಮಾಡಿದ್ದಾರೆ. ಅನೇಕ ಪದ್ಯಗಳು ಅತ್ಯಂತ ಮನನೀಯವಾಗಿವೆ. ಗೇಯಯೋಗ್ಯವಾಗಿವೆ. ಇನ್ನು ನಾಲ್ಕನೆ ಕೃತಿಯನಿಸಿದ ‘ಲಿಂಗ ಪೂಜಾ ವಿಧಾನ’ ದಲ್ಲಿ ಸಂಕಲ್ಪದಿಂದ ಪ್ರಾರಂಭಿಸಿ ಉಪಚಾರಗಳ ಅರ್ಥ ವಿವರಣೆಯೊಂದಿಗೆ ವಿಶೇಷವಾಗಿ ವಿಧಾನವನ್ನು ಬೆಳೆಸಿದ್ದಾರೆ. ಪಾದ್ಯಾದಿ ಅಭಿಷೇಕಗಳನ್ನು ಇಷ್ಟಲಿಂಗಕ್ಕೆ ಸಮರ್ಪಿಸುವಲ್ಲಿ ಅನಂದವಾಗಿ ನೆರವೇರಿಸಲು ವಿವರಿಸಿದ್ದಾರೆ. ೫೨ ಚೌಪದಿಗಳಲ್ಲಿ ಈ ವಿಧಾನ ಪರಿಸಮಾಪ್ತಿಗೊಂಡಿದೆ. ರಾಜೋಪಚಾರಗಳನ್ನು ಹೇಳುವಲ್ಲಿ ಶರಣರಿಗೆ ಸಂತೃಪ್ತಿಯೆನಿಸಿದೆ.

 

ಶಿವಕವಿ ಬಸವಲಿಂಗ ಶರಣರ ಅನುಭಾವವನ್ನು ಅಳೆಯುವದು, ಅಳವಡಿಸಿ ಕೊಳ್ಳುವದು ಆಚಾರ ಮತ್ತು ಅನುಭಾವಗಳಿಂದ ಮಾತ್ರ ಸಾಧ್ಯ. ಅದನ್ನು ಸಾಧಿಸಿಕೊಂಡರೆ ಆಗುವ ಆನಂದ ಅಪಾರ. ಇಂಥ ಅನುಭಾವ ತೊರೆಯಲ್ಲಿ ಮಿಂದು ಮಡಿಯಾಗಿ ಪರಿಪೂರ್ಣತೆಯನ್ನು ಪಡೆಯಲು ಬಸವಲಿಂಗ ಶರಣರ ಸಮಗ್ರ ಸಾಹಿತ್ಯ, ಶರಣತತ್ವ ಜಿಜ್ಞಾಸುಗಳಿಗೆ ಅತ್ಯುತ್ತಮ ಮೌಲಿಕ ಸಾಧನವಾಗಿದೆ. ಇದರಿಂದ ಮಹಾನುಭಾವಿಗಳಾದ ಮೈಲಾರ ಬಸವಲಿಂಗ ಶರಣರು ಶಾಪಗ್ರಸ್ಥರಲ್ಲವೆಂಬುದು ಸ್ಪಷ್ಟವಾಗದೇ ಇರದು.

ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ವ್ಯಕ್ತಿಯ ಬದುಕಿನಲ್ಲಿ ನಡೆನುಡಿಗಳಿಗೆ ಅಗ್ರಸ್ಥಾನ. ಅವೆರಡೂ ಪರಸ್ಪರ ಪೂರಕ. ನಡೆಯೊಳಗೆ ನುಡಿ ನುಡಿಯೊಳಗೆ ನಡೆ ತುಂಬಿದುದೇ ನಿಜವಾದ ಬದುಕು. ಅದು ಸಮಾಜಕ್ಕೂ ದೇವನಿಗೂ ಒಪ್ಪಿತವಾದ ಬದುಕು ನುಡಿಯಂತೆ ನಡೆ, ಮಾತಿನಂತೆ ಕೃತಿ ಇಲ್ಲದ ಬದುಕಿಗೆ ಯಾವ ಬೆಲೆಯೂ ಇಲ್ಲ.

 

ಜೀವಿಗಳಲ್ಲಿ ಮನುಷ್ಯನು ಶ್ರೇಷ್ಠ ಮಾತನಾಡುವ ವಿಶೇಷ ಶಕ್ತಿ ಅವನಿಗಿದೆ. ಮಾತೆಂಬುದು ಜ್ಯೋತಿರ್ಲಿಂಗ, ಕಾರಣ ಮಾತು ಪವಿತ್ರವಾಗಿರಬೇಕಾದುದು ಅತ್ಯಂತ ಅಪೇಕ್ಷಣೀಯ. ನಮ್ಮ ಮಾತು ಮೃದು ಮಧುರವಾಗಿದ್ದು, ಕೇಳುಗರ ಮನ ನೋಯದಂತಾದಾಗ ಸಹಜವಾಗಿಯೇ ಶ್ರೇಷ್ಠತ್ವವನ್ನು ಪಡೆಯುತ್ತದೆ.

 

ನಮ್ಮ ನುಡಿ(ಮಾತು) ಮುತ್ತಿನಹಾರದಂತೆ ಆಕರ್ಷಕವಾಗಿರಬೇಕು. ಮಾಣಿಕ್ಯದ ದೀಪ್ತಿಯಂತೆ ಕೇಳುಗರ ಮನ ಬೆಳಗಬೇಕು. ಸ್ಪಟಿಕದ ಶಲಾಕೆಯಂತೆ ನೇರವೂ ಪಾರದರ್ಶಕವೂ ಆಗಿರಬೇಕೆಂದು ಹೇಳುವ ಬಸವಣ್ಣ ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪವಾಗುತ್ತದೆ’ ಎಂದು ನಮ್ಮನ್ನು ಎಚ್ಚರಿಸುತ್ತಾನೆ. ಹಾಗೆಯೇ ‘ನುಡಿಯೊಳಗಾಗಿ ನಡೆಯದಿದ್ದರೆ   ಕೂಡಲಸಂಗಮದೇವನೆಂತೊಲಿವನಯ್ಯ’ ಎಂದು ಕೇಳುತ್ತಾನೆ. ‘ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂದರಿತ ಬಸವಣ್ಣನವರು ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಕೂದಲೆಳೆಯಷ್ಟು ವ್ಯತ್ಯಾಸ ಬಂದರೂ ಸಂಸಾರದೊಳಗೆ ನನ್ನನ್ನು ಮುಳುಗಿಸಿ ನೀನೆದ್ದು ಹೋಗು’ ಎಂದು ಆರಾಧ್ಯದೇವನಿಗೆ ದೃಢವಾಗಿ ಹೇಳುತ್ತಾರೆ.

ಬಸವಣ್ಣನವರು ಒಂದು ಸಾಮಾಜಿಕ ಚಳುವಳಿಯ ನಾಯಕರು, ಕಲ್ಯಾಣ ರಾಜ್ಯಕಟ್ಟಬೇಕೆಂದು ಬಯಸಿದವರು. ಅವರಲ್ಲಿ ಇಂಥ ದೃಢತೆ ಇರಬೇಕಾದುದು ಅತ್ಯವಶ್ಯ. ಏಕೆಂದರೆ ಸಾಮಾನ್ಯ ಜನರು ತಮ್ಮ ನಾಯಕನ ನಡೆನುಡಿಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ.

 

ಬೋಧಿಸುವವನು ಮೊದಲು ಸಾಧಿಸಬೇಕು, ನುಡಿದವನು ಮೊದಲು ನಡೆಯಬೇಕು. ಬೋಧೆ ಪರಿಣಾಮಕಾರಿಯಾಗುವುದು ಮತ್ತು ಬೋಧಕನಿಗೆ ಬೋಧಿಸುವ ನೈತಿಕ ಹಕ್ಕು ದೊರೆಯುವುದು ಆಚರಣೆಯಲ್ಲಿದ್ದಾಗ ಮಾತ್ರ ರಾಮಕೃಷ್ಣ ಪರಮಹಂಸರಲ್ಲಿಗೆ ಹಣ್ಣಾದ ಮುದುಕಿಯೊಬ್ಬಳು ಬಂದು ತನ್ನ ಮೊಮ್ಮಗ ಬಹಳಷ್ಟು ಬೆಲ್ಲ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದನ್ನು ಬಿಡಿಸಬೇಕೆಂದು ಪಾರ್ಥಿಸುತ್ತಾಳೆ. ರಾಮಕೃಷ್ಣರು ಎಂಟು ದಿನ ಬಿಟ್ಟು ಮೊಮ್ಮಗನನ್ನು ಕರೆದುಕೊಂಡು  ಬರಲು ಹೇಳುತ್ತಾರೆ. ಹಾಗೆಯೇ ಮುದುಕಿಯು ಎಂಟು ದಿನಗಳ ನಂತರ ಮೊಮ್ಮಗನನ್ನು ಅವರಲ್ಲಿಗೆ ಕರೆತರುತ್ತಾಳೆ. ರಾಮಕೃಷ್ಣರು ಆ ಹುಡುಗನಿಗೆ ಅತಿಯಾಗಿ ಬೆಲ್ಲ ತಿನ್ನಬಾರದೆಂದೂ, ಅದರಿಂದ ಆರೋಗ್ಯ ಕೆಡುವುದೆಂದೂ ಬೋಧಿಸುತ್ತಾರೆ. ಆಶ್ಚರ್ಯಚಕಿತಳಾದ ಮುದುಕಿ ಈ ಮಾತನ್ನು ಎಂಟು ದಿನಗಳ ಹಿಂದೆಯೇ ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ರಾಮಕೃಷ್ಣರು ‘ತಾಯಿ ಆಗ ನಾನೇ ಹೆಚ್ಚಾಗಿ ಬೆಲ್ಲ ತಿನ್ನುತ್ತಿದ್ದೆ. ಆ ಹುಡುಗನಿಗೆ ಹೇಳುವ ನೈತಿಕ ಹಕ್ಕು ನನಗೆಲ್ಲಿತ್ತು? ಈ ಎಂಟು ದಿನಗಳ ಅವಧಿಯಲ್ಲಿ ನಾನು ಸಂಪೂರ್ಣವಾಗಿ ಬೆಲ್ಲ ತಿನ್ನುವುದನ್ನು ತ್ಯಜಿಸಿರುವೆ’ ಎನ್ನುತ್ತಾರೆ. ಅಂತೆಯೇ ನಡೆದು ನುಡಿಯುವುದು ಶ್ರೇಯಸ್ಕರ. ಅದುವೇ ಶ್ರೇಷ್ಠ ಜನರ ಆದರ್ಶ.