ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಹರನಾಮವನು ಬಿಡದೆ ಜಪಿಸಬಲ್ಲವರ ಭವ

ಮರಣಮಾಯಾಕರ್ಮಮಲಪಾಶಬಂಧಬಹು

ದುರಿತಸಂಸಾರಸಂತಾಪಸಂಚಯವಳಿದು ವರಭೋಗ  ಮೋಕ್ಷವಹುದು   |ಪ||

 

ಶಿವ ಮಹಾದೇವ ಶಂಕರ ಶರ್ವ ಪಾರ್ವತೀ

ಧವ ನಂದಿವಾಹ ದೇವೇಶಾನುದಕ್ಷ ವಾ

ಸವನತಪದಾಂಭೋಜ ನಗಚಾಪ ನಿರ್ಮಲ  ನಿರಾತಂಕ ನೀಲಕಂಠ

 

ಭುವನೇಶ ವಿಜಯ ವೇದಾಂಗ ವೈಶ್ರವಣಸಖ

ಪವಮಾನ ಪಂಚಮುಖ ಪಶುಪತಿ ಸಹಸ್ರಾಕ್ಷ

ಭವ ಭರ್ಗ ಭಾಳಲೋಚನ ಮೇರುಕಾರ್ಮುಕ  ಕಪರ್ದಿಯೆಂದು   ||1||

 

ಸೋಮ ಶಾಂತಾಭಯ ವಿರೂಪಾಕ್ಷ ವಿಶ್ವಾಭಿ

ರಾಮ ಗಂಭೀರ ಕಾಲಾರಿ ಕೂಟಸ್ಥ ವಿಭು

ವಾಮದೇವಾಘೋರ ಪಂಚಾಕ್ಷರೋಂಕಾರ  ತತ್ಪುರುಷ ರುದ್ರ ಭದ್ರ

 

ಭೀಮ ಸದ್ಯೋಜಾತ ಮೃಡ ಮಹಾಕಾಲ ಜಿತ

ಕಾಮ ಮೃತ್ಯುಂಜಯ ಪುರಾತನ ಪರಾತ್ಪರ ನಿ-

ರಾಮಾಯಾನಂತತೇಜೋರಾಶಿ ಸರ್ವಜ್ಞ ಶಾಶ್ವತ  ಕಪಾಲಿಯೆಂದು    ||2||

 

ಶೂಲಿ ಸುಜನೈಕೆಬಾಂಧವ ಸದಾಶಿವ ಚಂದ್ರ

 ಮೌಳಿ  ಮಹಿಮೋಗ್ರಚರ್ಮಾಂಬರಾಸುರಶಿರೋ

ಮಾಲಿ ಮಂದಾಕಿನೀಧರ ಮಹೇಶ್ವರ ಮೇಘವಾಹ ಮಂದಾರನಿವಾಸ

 

 

 ನೀಲಲೋಹಿತ ಪಾರಿಜಾತ ಪಾವನ ಲೋಕ

ಪಾಲ ಕೈಲಾಸಮಂದಿರ ಮಂತ್ರಮಯ ಭಕ್ತಿ

ಲೋಲ ಪಂಚಬ್ರಹ್ಮ ಪರನಾದ ಬಿಂದು ಪರಮಾತ್ಮ ಪುರವೈರಿಯೆಂದು   |3||

 

ವರದ ವಾಗೀಶ ವರ್ಣಾತೀತ ವಂದ್ಯ ಜಯ

ಪರಮ ಪರತರ ಪರಂಜ್ಯೋತಿ ಪರಮಾನಂದ

ನಿರಪಾಯ ನಿರುಪಮ ನಿರಾವರಣ ನಿರ್ಲೇಪ  ನಿರವಯವ ನಿತ್ಯತೃಪ್ತ

 

ಉರಗಕಂಕಣ ವಿಶ್ವತೋಬಾಹು ವಿಶ್ವಾತ್ಮ

ಸುರಗಣಾರ್ಚಿತ ಸನಾತನ ಸದಾಗತಿ ಹಂಸ

ಗಿರಿಶ ಗಾಂಗೇಯಪಿತ ಗಣನಾಥ ಜಗದೀಶ ವಿಷಧರ ಪಿನಾಕಿಯೆಂದು  || 4 ||

 

ಉದಯಾಸ್ತಮಾನದೊಳು ನೂರೆಂಟು ನಾಮವನು

ಪದುಳದಿಂದೋದಿಕೇಳಿದವರ್ಗೆ ಶಂಭುಲಿಂಗದ

ಕರುಣದಿಂದಿನಿತು ಕೊರತೆಯಿಲ್ಲದ ಸಕಲ ಸಂಪದದೊಳೊಂದುಗೂಡಿ

 

ಸದಮಲಜ್ಞಾನ ಸದ್ಭಕ್ತಿಗಳು ಮೇಲೆ ಮೇ-

 ಲೊದವಿ ಕೈಸಾರುತಿಹವಿಲ್ಲಿ ಪರದೊಳೊಂ-

ದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆವುದಿದು ಸತ್ಯವೆಂದು    ||೫||

 

 

 

 

                               

ಲೇಖಕ: ಶ್ರೀಕಂಠ.ಚೌಕೀಮಠ

 

ಕಾರಣಿಕ ಯುಗಪುರುಷ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಾಗೂ ಗದುಗಿನ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಯಡೆಯೂರು ಪಾದಯಾತ್ರೆಯು ಕನ್ನಡಿಗರ ಮತ್ತು ವೀರಶೈವ/ಲಿಂಗಾಯತ ಧರ್ಮೀಯರ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ಬರೆದಿತ್ತು. ಬರುವ ಡಿಸೆಂಬರ್ 6, 2024ರಂದು, ಈ ಐತಿಹಾಸಿಕ ಪಾದಯಾತ್ರೆಗೆ 107 ವರ್ಷಗಳು ತುಂಬುತ್ತವೆ.(6 ಡಿಸೆಂಬರ್ 1917 )

ಈ ಪಾದಯಾತ್ರೆಯು ಆ ಕಾಲದಲ್ಲಿ ಚಾರಿತ್ರಿಕ ಸಂಚಲನವನ್ನು ಮೂಡಿಸಿತ್ತು.

ಈ ಪಾದಯಾತ್ರೆಯು ಕೇವಲ ಧಾರ್ಮಿಕ ಉತ್ಸವವಾಗಲಿಲ್ಲ.

ಇದು ಸಮಾಜದ ವೈಚಾರಿಕ ಚೇತನವನ್ನು ತೋರುವ ಸಂಚಾರವಾಗಿತ್ತು.

ಇದು ಭಕ್ತಿಯೊಂದಿಗೆ ತಪಸ್ಸಿನ ಅನುಭಾವವನ್ನು ಬೆಸೆದು ಸಾಮಾನ್ಯ ಜನರ ಬದುಕಿಗೆ ಅಧ್ಯಾತ್ಮಿಕ ಸಂಕೇತಗಳನ್ನೂ ಬೆಸೆಯಿತು.

ಶ್ರೀ ಕುಮಾರ ಶಿವಯೋಗಿಗಳ ಈ ಪಾದಯಾತ್ರೆ, ಜನರಲ್ಲಿ ಸಮಾನತೆ, ತ್ಯಾಗ, ತಾಳ್ಮೆ, ಸಹನೆ ಹಾಗೂ ಭಕ್ತಿ ಇಂತಹ ಗುಣಗಳನ್ನು ಪ್ರೇರಣೆಗೊಳಿಸಿತು. ಪಾದಯಾತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟುಮಾಡಿತು ಮತ್ತು ಜನರ ಹೃದಯದಲ್ಲಿ ಅಧ್ಯಾತ್ಮಿಕತೆಯ ಬೆಂಕಿಯನ್ನು ಹೊತ್ತಿಸಿ ಅವರ ನೈತಿಕ ಮತ್ತು ಸಾಂಸ್ಕೃತಿಕ ಆಳವನ್ನು ವೃದ್ಧಿಸಿತು.

ಈ ಹಿನ್ನಲೆಯಲ್ಲಿ, ಯಡೆಯೂರು ಪಾದಯಾತ್ರೆಯ 107ನೇ ವರ್ಷವನ್ನು ಸ್ಮರಿಸುವುದು ಕೇವಲ ಒಂದು ಸಾಂಕೇತಿಕವಲ್ಲ; ಇದು ನಮ್ಮ ಸಂಸ್ಕೃತಿಯ ಒಂದು ಅಂಶವಾಗಿ, ಭಕ್ತಿ ಮತ್ತು ತ್ಯಾಗದ ಮಹತ್ವವನ್ನು ಮನಗಾಣಿಸುವ ಧಾರ್ಮಿಕ ಚಳುವಳಿಯೇ ಆಗಿದೆ.

ಯಡೆಯೂರು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಅನುಭವಗಳನ್ನು ಸಂಗ್ರಹಿಸಿದ ಮತ್ತು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಅತೀ ಹತ್ತಿರ ದಿಂದ ಕಂಡಿದ್ದ ಕವಿರತ್ನ ದ್ಯಾಂಪುರ ಚನ್ನಕವಿಗಳು ತಮ್ಮ  ಶ್ರೀಕುಮಾರೇಶ್ವರ ಪುರಾಣದಲ್ಲಿ ಅತ್ಯಂತ ಹೃದಯ ಸ್ಪರ್ಷಿಯಾಗಿ ಹೀಗೆ ವರ್ಣಿಸಿದ್ದಾರೆ ( ಭಾವಾರ್ಥ ಸೌಜನ್ಯ : ಪೂಜ್ಯ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು)

ಎಡೆಯೂರ ಶ್ರೀಸಿದ್ಧಲಿಂಗಸುಕ್ಷೇತ್ರಕ್ಕೆ

ಸಡಗರದೊಳಾ ಜಗದ್ಗುರು ತೋಂಟದಾರ್ಯರೀ

ಮೃಡಯೋಗಿವರ ಕುಮಾರೇಶನಂ ಶಿವಯೋಗಮಂದಿರದ ಸಾಧಕರನು

ಒಡಗೊಂಡು ದಯಮಾಡಿಸಿದರೊಮ್ಮೆ ಭಕ್ತಿಯಿಂ

ನಡೆದವರೊಡನೆ ಕೆಲ ಭಕ್ತಮಾಹೇಶ್ವರರು

ಪೊಡವಿಯೊಳು ಪೆಸರಾಗುವಂತೆ ಮೆರೆದುದು ಪಯಣವದು ಬಣ್ಣಿಸಲ್ಸಾಲ್ಗುಮೇ

ಭಾವಾರ್ಥ : ಎಡೆಯೂರ ಶ್ರೀ ಸಿದ್ಧಲಿಂಗೇಶ್ವರ ಸುಕ್ಷೇತ್ರಕ್ಕೆ ಸಂಭ್ರಮದಲ್ಲಿ ಆ ಜಗದ್ಗುರು ತೋಂಟದ ಸಿದ್ಧೇಶ್ವರ ಮಹಾಸ್ವಾಮಿಗಳು ಈ ಶಿವಯೋಗಿವರನಾದ ಕುಮಾರೇಶನು ಶಿವಯೋಗ ಮಂದಿರದ ಸಾಧಕರನ್ನು ಕೂಡಿಕೊಂಡು, ಭಕ್ತಿಯಿಂದ ಮಹಾತ್ಮರೊಡನೆ ಕೆಲವು ಭಕ್ತರು ಜಂಗಮರು ಪಾದಯಾತ್ರೆ ಹೊರಟರು. ಭೂಲೋಕದಲ್ಲಿ ಹೆಸರಾಗುವಂತೆ ಪ್ರಸಿದ್ಧವಾದ ಆ ಪಾದಯಾತ್ರೆಯನ್ನು ನನಗೆ ವರ್ಣಿಸಲು ಅಸಾಧ್ಯ.

 

ಮೊಳಗುತಿರೆ ವಿವಿಧವಾದ್ಯಂಗಳುಂ ಸದ್ವಂದಿ-

ಗಳು ಪೊಗಳುತಿರೆ ಪಥದೊಳಲ್ಲಲ್ಲಿ ಭಕ್ತಸಂ-

ಕುಳವೈದಿ ಪೂಜೋಪಚಾರದಿಂ ಗಣಸಮಾರಾಧನೆಯನೆಯಸಗುತಿರಲು

ಉಳಿದೆಡೆಗಳಲ್ಲಿ ವ್ಯಾಖ್ಯಾನಕೀರ್ತನಗಳುಂ

ಹಲವು ವಿಷಯಪ್ರವಚನಂಗಳುಂ ಜರಗುತಿರ

ಲೆಳಸಿ ದರ್ಶನಕಾಗಿ ಬಂದ ಭಕ್ತರಿಗೆ ಶುಭವಾದನಂಗೈವುತಿರಲು

ಭಾವಾರ್ಥ : ವಿವಿಧ ವಾಧ್ಯಗಳು ನುಡಿಯುತ್ತಿರುವವು, ಜಯಘೋಷದವರು ಸ್ತುತಿಸುತ್ತಿರುವರು, ಅಲ್ಲಲ್ಲಿ ಭಕ್ತ ಸಮೂಹವು ಬಂದು ಪೂಜೆ ಸೇವಾದಿಗಳಿಂದ ಜಂಗಮ ತೃಪ್ತಿಯನ್ನು ಮಾಡುತ್ತಿರಲು, ಇನ್ನುಳಿದ ಕಡೆಗಳಲ್ಲಿ ಉಪನ್ಯಾಸ ಶಿವಕೀರ್ತನಗಳು ಹಲವು ವಿಷಯಕವಾಗಿ ಪ್ರವಚನಗಳು ನಡೆಯುತ್ತಿದ್ದವು. ದರ್ಶನ ಆಶೆಯಿಂದ ಬಂದ ಭಕ್ತರಿಗೆ ಮಂಗಲಾಶೀರ್ವಾದಗಳನ್ನು ಮಾಡುತ್ತಿದ್ದರು.

 

ಶಿವಯೋಗ ಪರಂಪರೆಯ ನಿಗೂಢತೆ ತುಂಬಾ ಆಕರ್ಷಕ ಮತ್ತು ಆಳವಾದದ್ದು, ಇದರ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರತಿಯೊಂದು ಪ್ರಯತ್ನವೂ ಹೊಸತನವನ್ನು ನೀಡುತ್ತಲೇ ಹೋದಂತೆ. ವೀರಶೈವ/ಲಿಂಗಾಯತ ಪರಂಪರೆಯ ಪುನರುಜ್ಜೀವನ ಮತ್ತು ಶರಣರ ಕಾರ್ಯವನ್ನು ಪುನಃ ಜೀವಂತಗೊಳಿಸಿದ ಮಹಾನುಭಾವರಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಪಾತ್ರ ಅತಿ ಮಹತ್ವದ್ದಾಗಿದೆ. ತಮ್ಮ ಏಳುನೂರು ವಿರಕ್ತ ಶಿಷ್ಯರೊಂದಿಗೆ ನಾಡಿನ ಮೂಲೆ ಮೂಲೆಗೂ ಹಾಸುಹೊಕ್ಕು ವೀರಶೈವ/ಲಿಂಗಾಯತ ಮತದ ಬೋಧನೆ, ಶರಣರ ಸಾಹಿತ್ಯ ಮತ್ತು ಷಟ್‌ಸ್ಥಲ ತತ್ತ್ವದ ವೈಚಾರಿಕತೆಯನ್ನು ಜನರ ಮನಸ್ಸಿನಲ್ಲಿ ನೆಲೆಗೊಳಿಸಿದರು.

 

ಶ್ರೀ ಸಿದ್ಧಲಿಂಗೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಪ್ರಭಾವ

ಶ್ರೀ ಸಿದ್ಧಲಿಂಗೇಶ್ವರರು ಪುರಾತನ ವೀರಶೈವ/ಲಿಂಗಾಯತ ಶರಣರ ಸಾಹಿತ್ಯವನ್ನು ಸಮಗ್ರವಾಗಿ ಸಂಗ್ರಹಿಸುವಲ್ಲಿ, ಅದಕ್ಕೆ ಹೊಸ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. “ಷಟ್‌ಸ್ಥಲ ಜ್ಞಾನ ಸಾರಾಮೃತ” ಎಂಬ ಮಹತ್ವದ ಕೃತಿ ರಚನೆ ಮೂಲಕ ಷಟ್‌ಸ್ಥಲ ತತ್ತ್ವಕ್ಕೆ ನಿರ್ದಿಷ್ಟರೂಪವನ್ನು ನೀಡಿದರು. ಇದರಿಂದ ವಚನ ಸಾಹಿತ್ಯವು ಹೊಸ ಸೃಜನಶೀಲತೆಯನ್ನು ಹೊಂದಿ ಪುನರುಜ್ಜೀವಿತವಾಯಿತು. ಈ ಕೃತಿಗಳ ಪ್ರೇರಣೆಯಿಂದ, ಶರಣರ ಆದರ್ಶಗಳು, ತತ್ವಗಳು ಮತ್ತು ಜೀವನದ ಮಾರ್ಗದರ್ಶನಗಳು ಜನಸಾಮಾನ್ಯರ ನಡುವೆ ಸ್ಪಷ್ಟವಾಗಿ ಪ್ರಚಾರಕ್ಕೆ ಬಂದವು.

ಸಮಾಜದ ಅಧ್ಯಾತ್ಮಿಕ ನೆಲೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಾಧನೆ

ವೀರಶೈವ/ಲಿಂಗಾಯತ ಮತದ ಆಳವಾದ ಸಂಸ್ಕಾರಗಳನ್ನು ಜೀವಂತವಾಗಿರಿಸಲು ಶ್ರೀ ಸಿದ್ಧಲಿಂಗೇಶ್ವರರು ನಾಡಿನಾದ್ಯಂತ ವಿವಿಧ ಮಠಗಳನ್ನು ಸ್ಥಾಪಿಸಿದರು. ಜಂಗಮರನ್ನು ಮಠಾಧಿಪತಿಗಳಾಗಿ ನೇಮಕ ಮಾಡಿದ್ದು, ವೀರಶೈವ/ಲಿಂಗಾಯತ ತತ್ವಗಳ ಆಚರಣೆ ಮತ್ತು ಅಭ್ಯಾಸವನ್ನು ಹೆಚ್ಚು ಶಕ್ತಿಶಾಲಿಯಾಗಿ ಮಾಡಿಕೊಂಡು ಹೋದರು. ಈ ಮೂಲಕ ಅವರು ವೀರಶೈವ/ಲಿಂಗಾಯತ ಧರ್ಮದ ಭಕ್ತ ವಲಯದಲ್ಲಿ ನಂಬಿಕೆ ಮತ್ತು ಆಚರಣೆಗಳನ್ನು ಬಲಗೊಳಿಸಿದರು.

ಶ್ರೀ ಕುಮಾರ ಶಿವಯೋಗಿಗಳ ಪಾದಯಾತ್ರೆಯ ಹಿನ್ನೆಲೆ

ಶಿವಯೋಗ ಪರಂಪರೆಯಲ್ಲಿನ ವ್ಯತ್ಯಾಸ ಮತ್ತು ಸಮಯಾಚಾರ ಭಿನ್ನತೆಗಳ ಬಗ್ಗೆ ಸ್ವತಃ ಶ್ರೀ ಕುಮಾರ ಶಿವಯೋಗಿಗಳು ಸ್ಪಷ್ಠವಾಗಿ ಅರಿತುಕೊಳ್ಳಲು ಇಚ್ಛಿಸಿ, ಮಲ್ಲನಕೆರೆ ಶ್ರೀ ಚೆನ್ನಬಸವ ಸ್ವಾಮಿಗಳ ಸಲಹೆ ಮೇರೆಗೆ 1917ರಲ್ಲಿ ಯಡೆಯೂರಿಗೆ ಪಾದಯಾತ್ರೆ ಕೈಗೊಂಡರು. ಅವರ ಈ ಯಾತ್ರೆ, ವೀರಶೈವ/ಲಿಂಗಾಯತ ಧರ್ಮದ ಬೃಹತ್ ಪರಂಪರೆಯ ಆಚರಣೆ ಮತ್ತು ಅಂತರಂಗವನ್ನು ಅರಿಯಲು ನಡೆಸಿದ ಒಗ್ಗಟ್ಟಿನ ಪ್ರಯತ್ನವಾಗಿತ್ತು. ಶಿವಯೋಗ ಮಂದಿರದ ಸಾಧಕರು, ,ಗುರು ವಿರಕ್ತರನ್ನೊಳಗೊಂಡ ಮತ್ತು ಐದು(ಕುಮಾರ,ಮುರುಘ,ಸಂಪಾದನೆ,ಕೆಂಪಿನ ಮತ್ತು ಚಿಲ್ಲಾಳ)  ಸಮಯಗಳ ಪರಂಪರೆಯ ಯತಿಗಳನ್ನೊಡಗೂಡಿ ತೋಂಟದಾರ್ಯ ಮಠದ ಶ್ರೀ ಸಿದ್ಧೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭಗೊಂಡಿತು.

ಈ ಪಾದಯಾತ್ರೆಯು ಶಿವಯೋಗದ ಪರಂಪರೆ, ವೈಚಾರಿಕತೆ ಮತ್ತು ತಾತ್ವಿಕತೆಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಶ್ರೀ ಕುಮಾರ ಸ್ವಾಮಿಗಳು ಯಡೆಯೂರಿನಲ್ಲಿ ಕಂಡುಹಿಡಿದ ಈ ಅಂಶಗಳು ಅವರ ಧಾರ್ಮಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗೆ ಹೊಸ ಆಳವನ್ನು ತಂದುಕೊಟ್ಟವು.

ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಲ್ಲಿ ಅಪ್ರತಿಮ ಸಂಚಲನ ಉಂಟುಮಾಡಿದ ಈ ಪಾದಯಾತ್ರೆಯು ಎರಡು ಪ್ರಮುಖ ಕೊಡುಗೆಗಳನ್ನು ಕರ್ನಾಟಕದ ಭಕ್ತಸಮೂಹಕ್ಕೆ ನೀಡಿತು:

  1. ಯಡೆಯೂರು ಕ್ಷೇತ್ರದ ಪರಿಚಯ ಮತ್ತು ಉತ್ತರ ಕರ್ನಾಟಕದ ಭಕ್ತರೊಂದಿಗೆ ಅವಿನಾಭಾವಸಂಬಂಧ:
    ಈ ಪಾದಯಾತ್ರೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದರೆ ಉತ್ತರ ಕರ್ನಾಟಕದ ಭಕ್ತರು ಯಡೆಯೂರು ಕ್ಷೇತ್ರದ ಮಹತ್ವವನ್ನು ಅರಿತುಕೊಂಡು, ಆ ಸ್ಥಳದೊಂದಿಗೆ ಅಧ್ಯಾತ್ಮಿಕವಾಗಿ ಪ್ರೇರಣೆ ಸಿಕ್ಕಿತು. ಇದರಿಂದ ಭಕ್ತರು ಯಡೆಯೂರು ಕ್ಷೇತ್ರವನ್ನು ಕೇವಲ ತೀರ್ಥಕ್ಷೇತ್ರವಲ್ಲ, ಒಂದು ಜೀವನ ಶೈಲಿಯಾಗಿ, ಅಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿದರು. ಈ ಸಂಬಂಧವು ಜನರ ನಿತ್ಯ ಜೀವನದಲ್ಲೂ ಪ್ರಭಾವ ಬೀರಿತು, ಹಾಗೂ ತಾತ್ವಿಕ ಶ್ರದ್ಧೆಯ ಬಲವರ್ಧನೆಗೆ ಸಹಾಯ ಮಾಡಿತು.
  2. ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯ ಆರಂಭ:
    ಈ ಪಾದಯಾತ್ರೆಯು ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕೃತಿಕ ಪ್ರವೃತ್ತಿಗಳಿಗೆ ಹೊಸ ಕಿರಣ ನೀಡಲು ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿತು. ಈ ಪಾಠ ಶಾಲೆಯು ವೇದ, ಶಾಸ್ತ್ರ, ವಚನ ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸಿತು ಮತ್ತು ನವಯುಗದ ವೀರಶೈವ/ಲಿಂಗಾಯತ ಧರ್ಮದ ತತ್ವಜ್ಞಾನವನ್ನು ಪೋಷಿಸಲು ಅಧ್ಯಾತ್ಮಿಕ ಕೇಂದ್ರವಾಯಿತು. ಇದರಿಂದ ಪೀಳಿಗೆಯ ನಂತರ ಪೀಳಿಗೆಗೆ ಶರಣರ ಸಾಹಿತ್ಯ, ಷಟ್‌ಸ್ಥಲ ತತ್ತ್ವ ಮತ್ತು ವಚನಗಳ ತಾತ್ವಿಕ ವಿವರಣೆಗಳು ತಿಳಿಯುವಂತಾದವು.

ಈ ಪಾದಯಾತ್ರೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಪೋಷಣೆಗಾಗಿ ನಿಂತ ಒಂದು ದೀರ್ಘಕಾಲೀನ ಪರಂಪರೆಯನ್ನು ಬೆಳೆಸಿದ್ದು, ಯಡೆಯೂರಿನ ಮಹತ್ವವನ್ನು ಕರ್ನಾಟಕದ ದಾರ್ಶನಿಕ ಭೂಮಿಯಲ್ಲಿ ಸ್ಥಾಪಿತಗೊಳಿಸಿತು.

ಪಾದಯಾತ್ರೆಯ ಫಲಶೃತಿಯಾಗಿ ೧೯೧೭ರಲ್ಲಿ ಯಡೆಯೂರಿನಲ್ಲಿ ಪೂಜ್ಯ ಚಿಕ್ಕತೊಟ್ಟಲಕೆರೆಯ ಅಟವಿ ಸಿದ್ಧೇಶ್ವರ ಶಿವಯೋಗಿಗಳು ಸ್ಥಾಪಿಸಿದ್ದ ಮತ್ತು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ  ಸಂಸ್ಕೃತ ಪಾಠಶಾಲೆ ಪುನರಾಂಭಗೊಂಡಿತು, ಆ ಕಾಲದಲ್ಲಿ ಮಹತ್ವದ ಧಾರ್ಮಿಕ ಮತ್ತು ಶಿಕ್ಷಣಾತ್ಮಕ ಸಾಧನೆಯಾಗಿತ್ತು. ಈ ಪಾಠಶಾಲೆಗೆ ಆರ್ಥಿಕ ಬೆಂಬಲವು ವಿವಿಧ ಮೂಲಗಳಿಂದ ಸಿಕ್ಕಿತ್ತು:

  • ಗದಗ  ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ: ೫,೦೦೦ ರೂ.
  • ಶಿವಯೋಗ ಮಂದಿರ ಸಂಸ್ಥೆ: ೧,೦೦೦ ರೂ.
  • ಬೀರೂರ ಪತ್ರಿ ಚನ್ನವೀರಯ್ಯನವರು: ೧,೦೦೦ ರೂ.
  • ಗದುಗಿನ ಶ್ರೀಮಂತ ಭಕ್ತರು: ೩,೦೦೦ ರೂ.

ಈ ಎಲ್ಲಾ ದಾನಗಳನ್ನು ಸೇರಿಸಿ, ಒಟ್ಟು ೧೦,೦೦೦ ರೂ. ಮೂಲಧನವನ್ನಾಗಿ ಉಪಯೋಗಿಸಿ, ಈ ಪಾಠಶಾಲೆ  ಆರಂಭಗೊಂಡು , ಭಾರತೀಯ ಶಾಸ್ತ್ರಗಳ, ವಿಶೇಷವಾಗಿ ಸಂಸ್ಕೃತ ಮತ್ತು ವೈದಿಕ ಪಾಠಶಾಲೆಯ ಶಿಕ್ಷಣದ ಮೂಲಶಕ್ತಿಯಾಯಿತು.

ಈ ಪಾಠಶಾಲೆಯ  ಮರುಸ್ಥಾಪನೆ ಮತ್ತು ನಿರ್ವಹಣೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಾಧನೆ ಮತ್ತು ಅವರ ಕಾರ್ಯಕ್ಷಮತೆ, ಧಾರ್ಮಿಕ ಅಂಕಿತತೆ ಹಾಗೂ ಶ್ರದ್ಧೆಯ ಉದಾಹರಣೆಯಾಯಿತು. ಪಾಠಶಾಲೆಯು ಹಲವಾರು ಪೀಳಿಗೆಗಳ ವಿದ್ಯಾರ್ಥಿಗಳಿಗೆ ಸಂಸ್ಕೃತ, ಶಾಸ್ತ್ರ ಮತ್ತು ಧಾರ್ಮಿಕ ತತ್ವದ ವಿದ್ಯೆಯನ್ನು ಒದಗಿಸಿ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪೋಷಿಸಲು ಪ್ರೇರಣೆ ನೀಡಿತು.

ಇಂದಿಗೂ ಸಂಸ್ಕೃತ ವೈದಿಕ ಪಾಠಶಾಲೆ ಯಶಸ್ವಿಯಾಗಿ ನಡೆದುಕೊಂಡು ಬರುವುದಂತೆಯೇ ಅದು ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಸ್ಥಿತ್ವದ ಪ್ರಬಲ ಸಂಕೇತವಾಗಿದೆ. ಪಾಠಶಾಲೆಯು ಮೂಲಧಾರ್ಮಿಕ ವಿದ್ಯೆಯನ್ನು ಪೀಳಿಗೆಗಿಂತ ಪೀಳಿಗೆಗೆ ಸತತವಾಗಿ ಪೋಷಿಸುತ್ತಾ ಬಂದು, ಸಮಾಜದಲ್ಲಿ ಭಾರತೀಯ ಸಂಸ್ಕೃತಿಯನ್ನೂ ಉಳಿಸಿದೆ.

ಸಂಸ್ಕೃತ ಪಾಠಶಾಲೆಯು ವೇದ-ಶಾಸ್ತ್ರಗಳ ಅಧ್ಯಯನ, ಧಾರ್ಮಿಕ ಗ್ರಂಥಗಳ ಪರಿಶೀಲನೆ ಮತ್ತು ವೈದಿಕ ಪಾಠದ ಸಾಂಪ್ರದಾಯಿಕ ತರಬೇತಿಯನ್ನು ಮುಂದುವರಿಸುತ್ತಿರುವುದು ನಮ್ಮ ಪರಂಪರೆಯು ಸದೃಢವಾಗಿ ಉಳಿಯಲು ಸಾಕ್ಷಿಯಾಗಿದೆ. ಶ್ರೀ ಕುಮಾರ ಶಿವಯೋಗಿಗಳ ನಿಕಟ ನೇತೃತ್ವದಲ್ಲಿ ಸ್ಥಾಪಿತಗೊಂಡ ಈ ಸಂಸ್ಥೆಯು, ಅದರ ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಧಾರ್ಮಿಕ ಅಭ್ಯಾಸಗಳಲ್ಲಿ ಆದ್ಯತೆ ನೀಡುತ್ತಾ ಭಾರತೀಯ ತತ್ವಜ್ಞಾನವನ್ನು ಸಾರುತ್ತಿದೆ.

ಈ ಪಾಠಶಾಲೆಯ ಸತತ ಯಶಸ್ಸು ಆ ಪಾಠಶಾಲೆಗೆ ಬೆಂಬಲ ನೀಡಿದವರ ತ್ಯಾಗ, ಸಹಕಾರ ಮತ್ತು ಶ್ರೀ ಸಿದ್ಧಲಿಂಗೇಶ್ವರರ ಆಶೀರ್ವಾದದ ಫಲವೆಂದು ಹೇಳಬಹುದು.

೧೯೧೭ ರ ಐತಿಹಾಸಿಕ ಯಡೆಯೂರು  ಪಾದಯಾತ್ರೆಯಲ್ಲಿ ಭಾಗವಹಿದ ಪೂಜ್ಯರು.

      1. ಶ್ರೀ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಗದಗ
      2. ಶ್ರೀ ಮ.ನಿ.ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು,
      3. ಶ್ರೀ ಮ.ನಿ.ಪ್ರ. ಶಿವಬಸವಮಹಾಸ್ವಾಮಿಗಳು ಹಾವೇರಿ,
      4. ಶ್ರೀ ನಿ. ಪ್ರ. ಶಿವ ಮೂರ್ತಿಸ್ವಾಮಿಗಳು ಚರಂತಿಮಠ, ಬಾಗಲಕೋಟೆ,
      5. ಶ್ರೀ ನಿ. ಪ್ರ. ಅಪ್ಪಯ್ಯಸ್ವಾಮಿಗಳು ಬಿದರಿ ಸವದತ್ತಿ,
      6. ಶ್ರೀ ಷ. ಬ್ರ, ವ್ಯಾಕರಣಾಳ ಪಟ್ಟಾಧ್ಯಕ್ಷರು,
      7. ಶ್ರೀ ನಿ. ಪ್ರ. ಗವಿಮಠದ ಬಸವಲಿಂಗಸ್ವಾಮಿಗಳು ನವಲಗುಂದ,
      8. ಶ್ರೀ ನಿ. ಪ್ರ ಕೊಪ್ಪದ ಮಹಾಂತಸ್ವಾಮಿಗಳು ಇಲಕಲ್,
      9. ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ನಿರಡಗಂಬ,
      10. ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ,
      11. ಶ್ರೀ ಷ. ಬ್ರ, ಶಿರೂರ ಪಟ್ಟಾಧ್ಯಕ್ಷರು ಬಾಗಲಕೋಟೆ,
      12. ಶ್ರೀ ನಿ. ಪ್ರ. ಮಹೇಶ್ವರಸ್ವಾಮಿಗಳು ಹಾನಗಲ್,
      13. ಶ್ರೀ ಷ. ಬ್ರ. ಬಿದರಿ ಪಟ್ಟದ್ದೇವರು,
      14. ಶ್ರೀ ನಿ. ಪ್ರ ಚರಂತಪ್ಪನವರು ಸಂಪಗಾವ,
      15. ಶ್ರೀ ಸೊನ್ನದ ಮರಿದೇವರು,
      16. ಶ್ರೀ ರೇಣುಕದೇವರು ಹಾನಗಲ್ (ಲಿಂ. ಸದಾಶಿವಸ್ವಾಮಿಗಳು),
      17. ಶ್ರೀ ಷ. ಬ್ರ. ಕೆಂಚಬಸವ ಪಟ್ಟದ್ದೇವರು ಗುಲಬರ್ಗಾ,
      18. ಶ್ರೀ ನಿ. ಪ್ರ. ಓಲಿಮಠದ ಸ್ವಾಮಿಗಳು ಜಮಖಂಡಿ,
      19. ಶ್ರೀ ಘನಲಿಂಗ ದೇವರು ಶಿಶಂಬರ,
      20. ಅನಂತರಪುರದ ಶ್ರೀ ಸಚ್ಚಿದಾನಂದದೇವರು.
      21. ಶ್ರೀ ಆದಿನಾಥದೇವರು ಖೇಳಗಿ,
      22. ಶ್ರೀ ಸಿದ್ಧವೀರದೇವರು ನವಲಗುಂದ,
      23. ಶ್ರೀ ನಿ. ಪ್ರ ರಾಮಗಡ್ಡಿ ಸ್ವಾಮಿಗಳು,
      24. ಶ್ರೀ ಗುರುಲಿಂಗ ದೇವರು, ಹಾರನಹಳ್ಳಿ,
      25. ಶ್ರೀ ಚಿದ್ಘನಾರ್ಯರು ಅನಂತಪುರ,
      26. ಶ್ರೀ ಷ. ಬ್ರ. ರೇವಣಸಿದ್ಧ ಪಟ್ಟದ್ದೇವರು ಕೆಳದಿ,
      27. ಶ್ರೀ ಹಾರನಹಳ್ಳಿ ಮರಿದೇವರು,
      28. ಶ್ರೀ ಕೆಂಪಯ್ಯ ದೇವರು ಮರಡಿಮಠ, ಕೊಣ್ಣೂರ,
      29. ಶ್ರೀ ಷ. ಬ್ರ. ಸಖರಾಯಪಟ್ಟದ್ದೇವರು,
      30. ಶ್ರೀ ನಿ. ಪ್ರ ನೊಣವಿನಕೆರೆ ಶ್ರೀಗಳು,
      31. ಶ್ರೀ ನಿ. ಪ್ರ ತುರುವಿನಕೆರೆ ಸ್ವಾಮಿಗಳು,
      32. ಶ್ರೀ ನಿ. ಪ್ರ ತರೀಕೆರೆ ಶ್ರೀಗಳು,
      33. ಶ್ರೀ ನಿ. ಪ್ರ ನಂದಗಡ ಶ್ರೀಗಳು,
      34. ಶ್ರೀ ನಿ. ಪ್ರ ಗುರುಪಾದಸ್ವಾಮಿಗಳು ಗುಲಗಂಜಿಮಠ, ರೋಣ,
      35. ಶ್ರೀ ಷ. ಬ್ರ ಶಿಗ್ಗಾಂವಿ ಪಟ್ಟದ್ದೇವರು,
      36. ಶ್ರೀ ಷ. ಬ್ರ ಸವಡಿಪಟ್ಟದ್ದೇವರು,
      37. ಶ್ರೀ ಷ. ಬ್ರ, ಸತ್ತಿಗೇರಿ ಪಟ್ಟದ್ದೇವರು,
      38. ಶ್ರೀ ಷ. ಬ್ರ, ಅಬ್ಬಿಗೇರಿ ಪಟ್ಟದ್ದೇವರು
      39. ಶ್ರೀ ಷ. ಬ್ರ. ಮಂಗಳೂರು ಪಟ್ಟದ್ದೇವರೇ ಮುಂತಾದವರು ಮತ್ತು ಭಕ್ತ ವೃಂದ

ಪೂಜ್ಯ ಜಗದ್ಗುರು ತೋಂಟದ ಸಿದ್ದೇಶ್ವರ ಮಹಾಸ್ವಾಮಿಗಳವರ ಸಂಸ್ಥಾನ ಮಠದ ವಾಹನಗಳು ಮತ್ತು ರಕ್ಷಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಗಳ ವಿವರ.

      1. ಆನೆ-೧
      2. ಒಂಟೆಗಳು-೪,
      3. ಕುದುರೆಗಳು-೨೫
      4. ಮೇಣೆ,-೧
      5. ಮೋಟಾರಕಾರ ಗಳು-೨,
      6. ಡಮಣಿಗಾಡಿ ಗಳು-೧೦,
      7. ಕುದುರೆ ಗಾಡಿಗಳು-೮,
      8. ಎತ್ತಿನಗಾಡಿಗಳು-೧೦೦,
      9. ಲಾಂಡಾ ಗಾಡಿ ಗಳು-೨,
      10. ಬಂದೂಕಗಳು-೧೦,
      11. ರಿವಾಲ್ವರ ಗಳು-೨,
      12. ಖಡ್ಗಗಳು-೧೦,
      13. ಭಲ್ಲೆಗಳು -೪ ಇವುಗಳ ಜತೆ
      14. ಸಂಸಾನ ಮಠದ ಬೆಳ್ಳಿ ಬಂಗಾರದ ಉತ್ಸವದ ಸಾಮಾನುಗಳು ಒಯ್ಯಲ್ಪಟ್ಟವು.
      15. ಇದಕ್ಕೆ ಸರಿಯಾಗಿ ೫೦೦ ಸಿಬ್ಬಂದಿ ಜನರು ಇದ್ದರು.

ದಾಖಲೆಯಾಗಿ ದೊರಕಿರುವ ಕಪ್ಪು ಬಿಳುಪಿನ  ಭಾವಚಿತ್ರದ ಆಧಾರದ ಮೇಲೆ  ೬-೧೨-೧೯೧೭ ರಂದು  ಪಾದಯಾತ್ರೆಯ ತಂಡ ಯಡೆಯೂರು ತಲುಪಿರುತ್ತದೆ. ಈ ಪಾದಯಾತ್ರೆ ಗದುಗಿನಿಂದ ೩೮೦ ಕಿ.ಮಿ. ಗಳನ್ನು ಕ್ರಮಿಸಿದೆ. ಸರಾಸರಿ ದಿನಕ್ಕೆ ೨೫ ಕಿಮಿ ಗಳ ಸಾಮರ್ಥ್ಯದಿಂದ  ನೋಡಿದರೆ ಬಹುಷಃ ಈ ಪಾದಯಾತ್ರೆಗೆ ೧೬ ದಿನಗಳು ತಗುಲಿರಬಹುದು ಅಂದರೆ ನವಂಬರ ೨೦ ೧೯೧೭ ರಂದು ಈ ಪಾದಯಾತ್ರೆ ಆರಂಭಗೊಂಡಿರಬಹುದು ಎಂಬ ಊಹೆ.

ಕ್ರಮಿಸಿದ ಮಾರ್ಗ ಸೂಚಿ ಹೀಗಿದೆ ( ಶ್ರೀ ಸಿದ್ದೇಶ್ವರ ಪುರಾಣ ಪುಸ್ತಕದಲ್ಲಿ ಪಂಡಿತ ವೈ .ನಾಗಭೂಷಣ ಶಾಸ್ತ್ರಿಗಳು ದಾಖಲಿಸಿದಂತೆ)

 

ಕ್ರ.ಸಂ. ಸ್ಥಳಗಳು ಕಿ.ಮಿ ವಿಶೇಷತೆಗಳು
ಗದಗ
ಡಂಬಳ ೧೮.೨
ಮುಂಡರಗಿ ೧೬.೩ ಕರ್ತೃ ಸ್ಥಾನಗಳ ಸಂದರ್ಶನ ಮಾಡಿಕೊಂಡ ಈ ಮಹಾಯಾತ್ರಿಕರು ಮುಂಡರಗಿ ಸಮೀಪದ ತುಂಗಭದ್ರಾ ತೀರದಲ್ಲಿ ಬೀಡುಬಿಟ್ಟರು
ಹಂಪಸಾಗರ ೭.೮ ಹಂಪಸಾಗರದ ಆಗರ್ಭ ಶ್ರೀಮಂತರಾದ ಶ್ರೀ ಮರ್ತೂರ ಸಂಗಪ್ಪನವರು ಮತ್ತು ಶ್ರೀ ಮಸಗಿ ಗುರುಬಸಪ್ಪನವರೇ ಮುಂತಾದ ಪ್ರಮುಖ ಭಕ್ತಾಗ್ರೇಸರರು ಶ್ರೀ ಜಗದ್ಗುರು ಸನ್ನಿಧಿಯವರನ್ನು ಹಾಗು ಸನ್ನಿಧಿಯೊಡನೆ ಆಗಮಿಸಿದ ಹರ-ಗುರು- ಚರ ಸಮೂಹವನ್ನು ಹಾನಗಲ್ಲ ಶ್ರೀಗಳೊಡನೆ ಆಗಮಿಸಿದ ಶಿವಯೋಗ ಮಂದಿರದ ಸಾಧಕರು ಹಾಗು ವಟುಗಳನ್ನು ಕ್ರಮೋಪಚಾರಗಳಿಂದ ಸತ್ಕರಿಸಿ ಮಹಾಗಣಾರಾಧನೆ ಯನ್ನೆಸಗಿದರು
ಹೂವಿನ ಹಡಗಲಿ ೧೫.೮ ಭಕ್ತರಾದ ಸರ್ವಶ್ರೀ ಮುಂಡರಗಿ ರುದ್ರಪ್ಪನವರು, ಡಂಬಳದ ಬಂಗಾರಶೆಟ್ಟಿ ಬಂಗಾರೆಪ್ಪನವರು ಮತ್ತು ಷಣ್ಮುಖಪ್ಪನವರೇ ಮೊದಲಾದವರು ವಾದ್ಯ ವೈಭವದಿಂದ ಪಾದಯಾತ್ರಾ ನಿಯೋಗವನ್ನು ಬರಮಾಡಿಕೊಂಡು ತಮ್ಮ ಸೇವೆ ಸಲ್ಲಿಸಿದರು.
ಹರಪನಹಳ್ಳಿ ೨೮.೨೨ ಇಲ್ಲಿಯ ವೇ ಶಿವರುದ್ರಶಾಸ್ತ್ರಿಗಳು ತಮ್ಮ ಪಾಠಾಶಾಲಾ ವಿದ್ಯಾರ್ಥಿಗಳೊಡನೆ ವೇದಘೋಷದಿಂದ ಶ್ರೀ ಗಳವರನ್ನು ಬರಮಾಡಿಕೊಂಡ ಮೇಲೆ ಆ ಊರಿನ ಪ್ರಮುಖ ಮುಂದಾಳುಗಳಿಂದ ಅತಿಥಿಗಳಿಗೆಲ್ಲ ಪ್ರಸಾದ ಸಂತರ್ಪಣೆಯಾಯಿತು. ಅದೇ ಸಮಯದಲ್ಲಿ ಶ್ರೀ ಶಾಸ್ತ್ರಿಗಳವರ ಕೋರಿಕೆಯ ಮೇರೆಗೆ ಮದ್ರಾಸಿನಲ್ಲಿ ಬಿ. ಎ. ತರಗತಿಯಲ್ಲಿರುವ ಅವರ ಮಗನಿಗೆ ಮಾಸಿಕ ಸಹಾಯ ಮಾಡುವ ಕುರಿತು ಶ್ರೀಗಳಿಂದ ಆಶೀರ್ವಾದವಾಯಿತು.

 

ದಾವಣಗೇರೆ ೩೬.೯ ಮೈಸೂರ ಸರಕಾರದವರು ಶ್ರೀ ಗಳವರ ಸವಾರಿಯೊಂದಿಗೆ ಇರಬೇಕಾದ ರಕ್ಷಣಾ ಸಿಬ್ಬಂದಿ ಮೊದಲಾದವುಗಳ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಡಾವಣಗೇರಿಯ ಪುರಪ್ರಮುಖರು ಊರಲ್ಲೆಲ್ಲ ತಳಿರು ತೋರಣಗಳನ್ನು ಕಟ್ಟಿಸಿ ಮಹಾಸನ್ನಿಧಿಯನ್ನು ಅಭೂತಪೂರ್ವ ಉತ್ಸವದಿಂದ ಸ್ವಾತಿಸಿದರು. ಶಿವಯೋಗ ಮಂದಿರದ ಸಾಧಕರು, ವಟುಗಳು ಹಾಗು ಇನ್ನುಳಿದ ಹರ-ಗುರು-ಚರಮೂರ್ತಿಗಳಿಂದ

ಅಲ್ಲಿಯ ಸಭೆ ಪರಶಿವನ ಒಡೋಲಗದಂತೆ ಕಂಗೊಳಿಸಿತು. ಸಭೆಯಲ್ಲಿ ವಿದ್ವಜ್ಜನರ ಭಾಷಣಗಳಾದವು. ಕನ್ನಡ-ಸಂಸ್ಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪಂಡಿತ ಪ್ರಭಪ್ಪನವರು ಸ್ವರಚಿತ ಜಗದ್ಗುರುಗಳವರ ‘ಸ್ತೋತ್ರ ಪಂಚಕ’ವನ್ನು ಪ್ರಸ್ತಾಪಿಸಿ ಶ್ರೀ ಸನ್ನಿಧಿಗೆ ಅದನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.

ಮಾರನೆಯ ದಿನ ಪ್ರಾತಃಕಾಲ ಡಾವಣಗೇರಿಯ ಸದ್ಭಕ್ತರಾದ ಬಾಗಿಲಮನೆಯ ಶ್ರೀ ಷಡಕ್ಷರಪ್ಪನವರು ಶ್ರೀಗಳವರ ಪಾದಧೂಳಿ ತಮ್ಮ ಮನೆಯಲ್ಲಿ ಬೀಳಲೆಂದು ಅಪೇಕ್ಷಿಸಿದ್ದರಿಂದ ಶ್ರೀ ಮಹಾಸನ್ನಿಧಿಯವರು ಅವರ ಮನೆಗೂ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀ ಷಡಕ್ಷರಪ್ಪನವರು ೨೧ ತೋಪುಗಳನ್ನು ಹಾರಿಸಿ ಶ್ರೀಗಳನ್ನು ಸ್ವಾಗತಿಸಿದರು

 

ಹೊಳಲಕೆರೆ ೫೪.೩೮ ಪಾದಪೂಜೆ
ಹೊಸದುರ್ಗ ೨೯.೭೪ ಪಾದಪೂಜೆ
೧೦ ಅಜ್ಜಂಪುರ ೩೦.೨೪ ಪಾದಪೂಜೆ
೧೧ ಬೀರೂರು ೧೭.೩೫ ಬೀರೂರಲ್ಲಿ ವೇ. ಪತ್ರಿ ಚನ್ನವೀರಯ್ಯನವರು ತಮ್ಮ ಇನ್ನುಳಿದ ಪ್ರತಿಷ್ಠಿತರೊಡನೆ ಸಲ್ಲಿಸಿದ ಸೇವೆ ಅವಿಸ್ಮರಣೀಯ, ಶ್ರೀ ಪತ್ರಿ ಚನ್ನವೀರಯ್ಯನವರ ಉದ್ಯಾನದಲ್ಲಿಯೇ ಅಂದಿನ ರಾತ್ರಿ ಶ್ರೀ ಗಳವರ ಬಿಡಾರವಾಯಿತು. ಮಾರನೆಯ ದಿನ ಪ್ರಾತಃಕಾಲ ಶ್ರೀ ಚನ್ನವೀರಯ್ಯನವರ ಮನೆಯಲ್ಲಿ ಶ್ರೀ ಗಳವರ ಪಾದಪೂಜೆ ಜರುಗಿತು. ಶ್ರೀ ಪತ್ರಿಯವರ ಮನೆಯವರಿಗೆ ಮತ್ತು ಬೀರೂರ ಸದ್ಭಕ್ತರಿಗೆ ಆಶೀರ್ವಾದ ಅನುಗ್ರಹಿಸಿ ಅವರೆಲ್ಲರಿಗೂ ತಮ್ಮೊಡನೆ ಶ್ರೀ ಎಡೆಯೂರ ಕ್ಷೇತ್ರಕ್ಕೆ ಬರಲು ಅಪ್ಪಣೆ ಮಾಡಿ ಪ್ರಯಾಣ ಮುಂದುವರಿಸಿದರು
೧೨ ಬಾಣಾವರ ೩೧.೫೮ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೩ ಅರಸಿಕೇರೆ ೧೫.೩೦ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೪ ತಿಪಟೂರು ೨೩.೩೦ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೫ ನೊಣವಿನಕೆರೆ ೧೩.೧೭ ನೊಣವಿನಕೆರೆಯ ಶಿವಾನುಭವ ಚರವರ್ಯರಾದ ಸೋಮಕಟ್ಟಿ, ಶ್ರೀ ಕರಿವೃಷಭೇಂದ್ರಸ್ವಾಮಿಗಳವರ ಮಠದಲ್ಲಿ ಅಂದು ವಾಸ್ತವ್ಯಮಾಡಿ ಅಲ್ಲಿ ಭಕ್ತಾದಿಗಳ ಸೇವೆಯನ್ನು ಸ್ವೀಕರಿಸಿ ಮುಂದೆ ಪ್ರಯಾಣ ಬೆಳೆಯಿಸಲಾಯಿತು.
೧೬ ತುರುವಕೆರೆ ೧೩.೨೪ ತುರುವೆಕೆರೆಯ ಭಕ್ತರು ಶ್ರೀ ಸನ್ನಿಧಿಯವರು ವಿಶ್ರಾಂತಿ ತೆಗೆದುಕೊಳ್ಳಲು ಸುಂದರವಾದ ಮಂಟಪ ರಚಿಸಿದ್ದರು. ಅಲ್ಲಿ ಆ ಭಕ್ತಾದಿಗಳ ಕೋರಿಕೆಯ ಮೇರೆಗೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ಅಲ್ಲಿಯ ಭಕ್ತರೆಲ್ಲರಿಗೆ ಆಶೀರ್ವದಿಸಿ ಮುಂದೆ ಎಲ್ಲಿಯೂ ನಿಲ್ಲದೆ ಶ್ರೀ ಯಡೆಯೂರ ಕ್ಷೇತ್ರವನ್ನು ಪ್ರವೇಶಿಸಿದರು
೧೭ ಯಡೆಯೂರು ೨೪.೩೭

 

ಶ್ರೀ ಕ್ಷೇತ್ರದ ಅದ್ಭುತ ದರ್ಶನವೊಡನೆ, ಶ್ರೀ ಜಗದ್ಗುರುಗಳು ಹಾನಗಲ್ಲ ಶ್ರೀಗಳ ಪವಿತ್ರ ಹಸ್ತದಲ್ಲಿ ತಮ್ಮ ಹಸ್ತವನ್ನಿಟ್ಟು, ಪಾದಯಾತ್ರಿ ಯಾಗಿ ನಡೆದರು. ಅವರ ಜೊತೆಯಲ್ಲಿ, ಎಲ್ಲಾ ಹರ-ಗುರು-ಚರಮೂರ್ತಿಗಳು ಶ್ರದ್ಧೆಯ ಪ್ರತಿಬಿಂಬವಾಗಿ ಹಿಂಬಾಲಿಸುತ್ತಿದ್ದರು.

ಈ ಪಾದಯಾತ್ರೆಯು ಕೇವಲ ಒಂದು ಸಮಾರಂಭವಲ್ಲ, ಇದು ಶ್ರೀ ಕ್ಷೇತ್ರದ ದರ್ಶನಕ್ಕೆ ಶ್ರೀಗಳಿಗೆ ಸಲ್ಲಿಸುವ ಅಧ್ಯಾತ್ಮಿಕ ಸಮರ್ಪಣೆ, ಗೌರವ ಹಾಗೂ ಭಕ್ತಿಯ ಸಂಕೇತವಾಗಿತ್ತು. ಶ್ರೀಗಳಿಗೆ ಪೂರ್ವಭಾವಿಯಿಂದ, ಹಿಂದಿನಿಂದ ಗಮಕಿ, ಗಾಯಕರ ಕಲಾನೈಪುಣ್ಯವು ಪುರಾತನ ಪರಂಪರೆಯ ಸ್ಮರಣೆ ಬಯಸುವಂತೆ ಪ್ರತಿಫಲಿಸುತ್ತಿತ್ತು. ಶಾಸ್ತ್ರಜ್ಞರು ಹಾಗೂ ಅಪಾರ ಭಕ್ತಸಮೂಹವು ಕ್ರಮಿಸಿದ ದಾರಿ ಹಾಗು ಹೃದಯದಲ್ಲಿ ಭಕ್ತಿ ತುಂಬಿಕೊಂಡು, ಮಂಗಳಕಾರವಾದ ಮೇಳ-ತಾಳಗಳ ಭೋರ್ಗರೆತದೊಂದಿಗೆ ಸಾಗುತ್ತಿದ್ದದು.

ಛತ್ರ – ಚಾಮರಗಳ ಅಲಂಕಾರಗಳೊಂದಿಗೆ ಸರ್ವಪೂಜಿತ ಶ್ರೀಗಳು ಶ್ರೀ ಕ್ಷೇತ್ರವನ್ನು ಸಮೀಪಿಸುತ್ತಿದ್ದಂತೆ, ಧರ್ಮದರ್ಶಿಗಳು ಹಾಗೂ ಅರ್ಚಕರು ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರು. ವೇದಘೋಷದ ಮಹತ್ವದಿಂದ, ದೇವಸ್ಥಾನದ ಪವಿತ್ರ ವಾತಾವರಣವು ಭಕ್ತಿಯಲ್ಲೂ ಶ್ರದ್ಧೆಯಲ್ಲೂ ಪರಿಪೂರ್ಣವಾಯಿತು. ಶ್ರೀಗಳಿಗೆ ಅರ್ಪಿಸಲಾದ ಮಂಗಳಸ್ವಾಗತವು, ಪವಿತ್ರ ಕ್ಷೇತ್ರದ ಅಧ್ಯಾತ್ಮಿಕ ಭವ್ಯತೆಯನ್ನು ಬೆಳಗಿಸಿತು.

ಕಾರ್ತಿಕ ಬಹುಳ ಪಂಚಮಿಯ ಪವಿತ್ರ ದಿನ, ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಮಹತ್ವದ ಸಭೆಯು ಭಕ್ತರ ಹೃದಯದಲ್ಲಿ ಭಕ್ತಿ ಮತ್ತು ಭಾವನೆಯನ್ನು ತುಂಬಿತು.

 

ಈ ಸಂದರ್ಭದಲ್ಲಿ, ಶ್ರೀ ಹಾನಗಲ್ಲ ಶ್ರೀಗಳ ಅಪ್ಪಣೆಯಂತೆ, ಆದರ್ಶ ಶಿಕ್ಷಕರೂ, ಪ್ರಸಿದ್ಧ ಕವಿಯೂ ಹಾಗೂ ವಾಗ್ಮಿಗಳೂ ಆದ ಶ್ರೀ ಜಿಗಳೂರ ಲಿಂಗಪ್ಪ ಮಾಸ್ತರರು, ಅನಾದಿ ಸಿದ್ಧಲಿಂಗೇಶ್ವರರಿಂದ  ಹಿಡಿದು ತೋಂಟದಾರ್ಯ ಪರಂಪರೆಯ ಶ್ರೀ ಜಗದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ವರೆಗಿನ ಅದ್ಭುತ ಚರಿತ್ರೆಯನ್ನು ನಿರೂಪಿಸಿದರು. ಅವರ ಚರಿತ್ರೆ ಮತ್ತು ತತ್ವಜ್ಞಾನವನ್ನು ಶ್ರದ್ಧೆಯಿಂದ ಶ್ರವಣಿಸಿದ ಭಕ್ತರು ಮತ್ತು ವಿದ್ವಾಂಸರು ಆ ನೈಜ ಪರಂಪರೆಯ ಮಹತ್ವವನ್ನು ಅರ್ಥಮಾಡಿಕೊಂಡರು. ಅದರೊಂದಿಗೆ ಶ್ರೀ ಕೊಪ್ಪದ ಮಹಾಂತದೇಶಿಕರು ಅವರ ವಿಶಿಷ್ಟ ಉಪನ್ಯಾಸದ ಮೂಲಕ ಸಭೆಗೆ ಮತ್ತಷ್ಟು ಆಳವನ್ನು ತಂದುಕೊಟ್ಟರು.

ಮಾರನೆಯ ದಿನವೂ ವಿದ್ವಜ್ಜನರ ಉಪನ್ಯಾಸಗಳು ನಡೆಯುತ್ತಾ, ಮಹಾಸ್ವಾಮಿಗಳಿಗೆ ತ್ರಿಕಾಲ ರುದ್ರಾಭಿಷೇಕದಂತೆ ವಿಭಿನ್ನ ಧಾರ್ಮಿಕ ಸೇವೆಗಳು ನಡೆಯಿತು. ಸಂಜೆ ದೀಪೋತ್ಸವಾದಿ ಸೇವೆಗಳು ಕ್ಷೇತ್ರವನ್ನು ಪ್ರಕಾಶಮಯಗೊಳಿಸಿದವು, ಭಕ್ತರ ಹೃದಯಗಳಲ್ಲಿ ಅಧ್ಯಾತ್ಮಿಕ ಶಾಂತಿ ಮತ್ತು ಆನಂದ ತುಂಬಿದವು.

ಈ ಧಾರ್ಮಿಕ ಉತ್ಸವದ ಇನ್ನೊಂದು ಮುಖ್ಯ ಅಂಶವಾಗಿ ಗಜ-ಅಶ್ವಗಳ ಮೆರವಣಿಗೆಯೊಂದಿಗೆ, ಭಕ್ತಾದಿಗಳ ಶ್ರದ್ಧಾ ಸಮರ್ಪಣೆಯೊಂದಿಗೆ ಬಿರುದಾವಳಿಗಳ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಮಹಾಸ್ವಾಮಿಯವರಿಗೆ ಸಲ್ಲಿಸಿದ ಭಕ್ತಿಯ ಸಂಕೇತವಾಗಿ, ಬೆಟಗೇರಿ ಕಣವಿ ಶ್ರೀ ಮಲ್ಲೇಶಪ್ಪನವರು ಮತ್ತು ನರೇಗಲ್ಲ ಕಣವಿ ಶ್ರೀ ಗುರಪ್ಪಜನವರು ಮಹಾಸ್ವಾಮಿಯ ನಿತ್ಯ ನೈವೇದ್ಯಕ್ಕೆ ಒಂದು ಹೊಲವನ್ನು ಖರೀದಿಸಿ, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಮುಂಡರಗಿಯ ಶೆಟ್ಟರ ಸಂಗಪ್ಪಯ್ಯನವರು ಮಹಾಸ್ವಾಮಿಯ ದೀಪಾರಾಧನೆಗಾಗಿ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿ ಒಂದು ಹೊಲವನ್ನು ದಾನವಾಗಿ ಸಲ್ಲಿಸಿದರು.

ಜಕ್ಕಲಿಯ ಸದ್ಭಕ್ತರಾದ ಕಡಗದ ತೋಟಪ್ಪನವರು ಮಹಾಸ್ವಾಮಿಯ ರಥೋತ್ಸವ ಸಂದರ್ಭದಲ್ಲಿ, ಆ ರಥಕ್ಕೆ ತಗಲುವ ಎಣ್ಣೆ ಖರ್ಚನ್ನು ನೋಡಿಕೊಂಡು ತಮ್ಮ ಶ್ರದ್ಧೆಯ ಮೂಲಕ ಮತ್ತಷ್ಟು ಸಮರ್ಪಣೆಯನ್ನು ತೋರಿಸಿದರು.

ಶ್ರೀ ಕ್ಷೇತ್ರ ಎಡೆಯೂರ ಕಾರ್ಯಕ್ರಮದ ಯಶಸ್ವಿ ಪೂರ್ಣತೆಗೆ ಮುಂದಿನ ಹಂತವಾಗಿ, ಅನಾದಿ ಸಿದ್ಧಲಿಂಗೇಶ್ವರರ ತಪೋಭೂಮಿಯಾದ ಶ್ರೀ ಕಗ್ಗೆರೆ ಕ್ಷೇತ್ರಕ್ಕೆ ಪ್ರಯಾಣವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ, ಖರ್ಚಿನ ಭಾಗವನ್ನು ಹೊಂಬಳ ಗ್ರಾಮದ ಸದ್ಭಕರಾದ ಶ್ರೀ ಮೈಲಾರ ಶಂಕರಪ್ಪನವರು ತಗೆದುಕೊಂಡರು,

ಶ್ರೀ ಜಗದ್ಗುರುಗಳೊಡನೆ ಪ್ರಯಾಣಿಸಿದವರ ಸಂಖ್ಯೆ ಕನಿಷ್ಠ ೧,೦೦೦ ಜನರಷ್ಟು ಇದ್ದಾಗ, ಕಗ್ಗೆರೆ ಗ್ರಾಮದ ಸುತ್ತಲಿನ ಊರುಗಳಿಂದ ೮-೧೦ ಸಾವಿರ ಜನರು ಶ್ರೀಗಳ ಅವರ ದರ್ಶನಕ್ಕೆ ಧಾವಿಸಿದರು. ಈ ಪೂರಕ ಜನಸಂಖ್ಯೆಗೆ ಪ್ರಸಾದವನ್ನು ವ್ಯವಸ್ಥೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿತು , ಏಕೆಂದರೆ ಕಗ್ಗೆರೆಯಲ್ಲಿ ಮಾಡಿದ  ವ್ಯವಸ್ಥೆಯಂತೆ ಕೇವಲ ೧೦೦೦ ಜನರಿಗೆ ಮಾತ್ರ ಪ್ರಸಾದ ನೀಡಲು ಅವಕಾಶವಿತ್ತು.

“ಎಲ್ಲರಿಗೂ ಒಂದು ಮುಷ್ಟಿ ಪ್ರಸಾದ ಕೊಡುವುದಾದರೆ, ಊಟದ ಎಲೆಗಳು ಕೂಡ ದೊರಕುತ್ತವೆ,” ಎಂದು ಯೋಚನೆಯಾಯಿತು. ಹೊತ್ತೊಯ್ಯುವ ಸಾಮಾನುಗಳು ಶ್ರೀ ಕ್ಷೇತ್ರ ಎಡೆಯೂರಿನಲ್ಲಿ ಮಾತ್ರವಿದ್ದು, ಅದು ೮-೧೦ ಮೈಲು ದೂರದಲ್ಲಿತ್ತು. ಸಮೀಪದ ಹಳ್ಳಿಗಳು ಕೂಡ ಕಡಿಮೆ ಜನಸಂಖ್ಯೆ ಇರುವ ಸಣ್ಣ ಸಣ್ಣ ಕೊಂಪೆಗಳು.

ಈ ಧರ್ಮ ಸಂಕಟದಲ್ಲಿ ಏನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲದಾಗ, ಶ್ರೀ ಹಾನಗಲ್ಲ ಮಹಾಸ್ವಾಮಿಗಳವರು ಧೈರ್ಯದಿಂದ ಸ್ಥಳಕ್ಕೆ ಬಂದು ಹೇಳಿದರು, “ಬುದ್ಧಿ! ಆಲೋಚನೆ ಏಕೆ? ಯಾವ ಮಹಾತ್ಮನು ಒಂದು ಭಾಂಡ ಅನ್ನದಿಂದ ೫೦೦ ಜನರನ್ನು ತಣಿಸಿದನೋ ಆತನು ಈಗಲೂ ಇರುವನು. ಇದು ಆತನದೇ ಪವಿತ್ರ ಕ್ಷೇತ್ರ” ಎಂದು ಧೈರ್ಯ ಹೇಳಿ ಶ್ರೀ ಜಗದ್ಗುರುಗಳವರನ್ನು ಪ್ರಸಾದ ವ್ಯವಸ್ಥೆ ಇದ್ದಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಪ್ರಸಾದಕ್ಕೆ ಜಗದ್ಗುರುಗಳವರ ಹಸ್ತವನ್ನು ಸ್ಪರ್ಶಿಸಿದರು..

ಅಷ್ಟರಲ್ಲಿ, ಒಬ್ಬ ಹಳ್ಳಿಕಾರನು ಧಾವಿಸಿ ಬಂದು, “ಊಟದ ಎಲೆಗಳಿಂದ ತುಂಬಿದ ಗಾಡಿ ಹಳ್ಳದಲ್ಲಿ ನಿಂತಿದೆ, ಸಹಾಯಕ್ಕೆ ಬನ್ನಿ” ಎಂದು ಹೇಳಿದರು. ಯಾತ್ರಿಕರು ಗಾಡಿಯನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದರು. ಯಾತ್ರಿಕರೆಲ್ಲರಿಗೂ ಎಲೆಗಳನ್ನು ಹಂಚಿ, ಸಮಾನವಾಗಿ ಪ್ರಸಾದ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಯಿತು. ವಿಚಿತ್ರವೆಂದರೆ, ಎಲ್ಲರಿಗೂ ಎಲೆಗಳು ತಲುಪಿದವು, ಪ್ರಸಾದ ಯಾರಿಗೂ ಕಡಿಮೆ ಯಾಗಲಿಲ್ಲ.!

ಮಾರನೆಯ ದಿನ, ಶ್ರೀ ಜಗದ್ಗುರುಗಳು, ಅರ್ಚಕರು, ಧರ್ಮದರ್ಶಿಗಳು ಮತ್ತು ಸೇವಕರಿಗೆ ಸಂಸ್ಥಾನಮಠದಿಂದ ಆಶೀರ್ವಾದ ನೀಡಿದ ಬಳಿಕ, ತುರುವೇಕೆರೆ ಮಾರ್ಗವಾಗಿ ಮರುಪ್ರಯಾಣವನ್ನು ಆರಂಭಿಸಿದರು.

ಮಾರ್ಗ ಮಧ್ಯದಲ್ಲಿ ಶ್ರೀ ಕೊಟ್ಟೂರು ಕ್ಷೇತ್ರವನ್ನು ಭೇಟಿ ಮಾಡಲಾಯಿತು. ವೀರಶೈವ/ಲಿಂಗಾಯತ  ಕ್ಷೇತ್ರಗಳಲ್ಲಿ ಕೊಟ್ಟೂರಿಗೂ ಮಹತ್ವವಿದೆ, ಏಕೆಂದರೆ ಇಲ್ಲಿ ಶ್ರೀ ಕೊಟ್ಟೂರ ಬಸವೇಶ್ವರರು ಲೋಕೋದ್ಧಾರಕ್ಕಾಗಿ ಅಭಿವ್ಯಕ್ತವಾದ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಜೀವಂತ ಸಮಾಧಿ ಇದೆ, ಮತ್ತು ಅವರಿಗೆ ಸಲ್ಲಿಸಲಾದ ಪೂಜೆಗಳ ಮೂಲಕ ಅವರುಗಳ ಅಪಾರ ಮಹಿಮೆ ಸಂದರ್ಶನವಾಯಿತು.

ಅಲ್ಲಿಂದ, ಶ್ರೀ ಗಳು ಬಾಚಗೊಂಡನಹಳ್ಳಿ, ಹಿರೇಹಡಗಲಿ ಮತ್ತು ಹಂಪಸಾಗರಗಳನ್ನು ಭೇಟಿಯಾಗಿ ಅಲ್ಲಿನ ತಮ್ಮ ಪೀಠದ ಗುರುಗಳಿಗೆ ಪೂಜೋಪಚಾರಗಳನ್ನು ಸಲ್ಲಿಸಿದರು. ಇದರಿಂದ ಗಣಾರಾಧನೆಯ ಪರಂಪರೆ ಬೆಳೆಯಿತು. ನಂತರ, ಅವರು ಮುಂಡರಗಿಗೆ ಬಂದರು, ಅಲ್ಲಿ ಸದ್ಭಕ್ತರಿಗೆ ನಿರೂಪಣೆ ನೀಡಿದರು ಮತ್ತು ನಂತರ ಡಂಬಳ ಸಂಸ್ಥಾನ ಮಠಕ್ಕೆ ಸಾಗಿದರು. ಅಲ್ಲಿಯೂ ಗಣಾರಾಧನೆ ನಡೆಸಿದ ನಂತರ, ಅಣ್ಣಿಗೇರಿಯತ್ತ ಅವರ ಪ್ರಯಾಣ ಮುಂದುವರಿಯಿತು.

ಅಣ್ಣಿಗೇರಿಗೆ ಬರುವಾಗ, ಅಲ್ಲಿಯ ಪರಮ ಭಕ್ತರಾದ ಶ್ರೀ ಶಂಕರಪ್ಪ ದೇಸಾಯಿಯವರ ಸೇವೆಯನ್ನು ಸ್ವೀಕರಿಸಿದರು. ಅವರು ಅಲ್ಲಿಯ ಭಕ್ತರಿಗೆ ಆಶೀರ್ವದಿಸಿದರು ಮತ್ತು ನಂತರ ಗದುಗಿನ ಕಡೆಗೆ ತಮ್ಮ ಯಾತ್ರೆ ಮುಂದುವರಿಸಿದರು.

ಗಡಿಪರ್ವ: ಶ್ರೀ ಮಹಾಸನ್ನಿಧಿಯು ಗದುಗಿನ ಹೊರವಲಯದಲ್ಲಿರುವ ಮಾನ್ವಿ ಮಲ್ಲೇಶಪ್ಪನವರ ತೋಟದಲ್ಲಿ ವಾಸ್ತವ್ಯ ಮಾಡಿದರು. ಈ ಸಂದರ್ಭದಲ್ಲಿ, ಗದಗ-ಬೆಟಗೇರಿ-ಶಹಪೂರಪೇಟೆಯ ಸದ್ಭಕ್ತರು ನಾನಾವಿಧದ ಪಕ್ವಾನ್ನಗಳನ್ನು ಸಿದ್ಧಪಡಿಸಿ, ಶ್ರೀ ಜಗದ್ಗುರುಗಳ ಸನ್ನಿಧಿಯಲ್ಲಿ ಗಡಿಪರ್ವವನ್ನು ವಿಜೃಂಭಣೆಯಿಂದ ಆಚರಿಸಿದರು.

 

 

ಮೇಲ್ಕಾಣಿಸಿದ ಎಲ್ಲಾ ವಿವರಗಳಿಗೆ ಮಿಗಿಲಾಗಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರ ಶಿವಯೋಗದ ಬದುಕಿನಲ್ಲಿ ೧೯೧೭ರ ಡಿಸೆಂಬರ್ ೬ರಂದು ಒಂದು ವಿಶೇಷ ಸಂಗತಿ ನಡೆಯಿತು.  ಯಡೆಯೂರಿನಲ್ಲಿ ಸಿದ್ಧಲಿಂಗೇಶ್ವರರ ಕ್ರಿಯಾ ಸಮಾಧಿಯ ದರ್ಶನವಾದ ನಂತರ, ಶ್ರೀ ಕುಮಾರ ಸ್ವಾಮಿಗಳು ದೇವಾಲಯದ ಎಡಭಾಗದ ಪ್ರಾಕಾರದ ಕೆಳ ಅಂತಸ್ತಿನಲ್ಲಿ ಪೂಜಾದಿಗಳಿಗೆ ಪೂರ್ಣಿಸಿ, ಸಂಜೆಯ ಮೇಲೆ ಪವಡಿಸಿದರು.

ನಡುರಾತ್ರಿ, ಅವರಿಗೆ ಒಂದು ಸ್ಫೂರ್ತಿದಾಯಕ ಕನಸು ಕಾಣಿಸಿತು. ಕನಸಿನಲ್ಲಿ, ಶ್ರೀ ಸಿದ್ಧಲಿಂಗೇಶ್ವರರು ಗದ್ದುಗೆಯಲ್ಲಿ ಲಿಂಗಪೂಜೆಯಲ್ಲಿ ಮುಳುಗಿದ್ದಾಗ, ಶಿವಯೋಗಿಗಳು ಅವರಿಂದ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದರು. ಶ್ರೀ ಸಿದ್ಧಲಿಂಗೇಶ್ವರರು ಭಸ್ಮ ಧಾರಣೆಯೊಂದಿಗೆ, ರುದ್ರಾಕ್ಷಿ ಮಾಲೆಗಳ ಶೋಭೆಯಲ್ಲಿ ಬಿಂಬಿತವಾಗಿದ್ದರು. ಜಂಗಮಮೂರ್ತಿಗಳು ಒಬ್ಬೊಬ್ಬರಾಗಿ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದಾಗ, ಅವರು ಕೇವಲ ತಾವು ಮಾತ್ರ ನೋಡುತ್ತ ನಿಂತಂತೆ, ಶ್ರೀ ಕುಮಾರ ಸ್ವಾಮಿಗಳಿಗೆ ತಮ್ಮ ಗುರುಗಳು, ಬಿದರಿ ಶ್ರೀ ಕುಮಾರ ಸ್ವಾಮಿಗಳು, ತಮ್ಮತ್ತ ನೋಡುತ್ತಿದ್ದಂತೆ ಭಾಸವಾಯಿತು.

ಕನಸಿನಿಂದ, ಶ್ರೀ ಕುಮಾರ ಸ್ವಾಮಿಗಳು ಎಚ್ಚರಗೊಳ್ಳಲು. “ಇದು ಶ್ರೀ ಸಿದ್ಧಲಿಂಗೇಶ್ವರನ ವಿಲಾಸ,” ಎಂದು ಅವರು ಯೋಚಿಸಿದರು. ” ಈ ಕ್ಷೇತ್ರವು ಶಿವಯೋಗ ಪರಂಪರೆಯ ಅನಾದಿ ನಿರಂಜನ ಜಗದ್ಗುರುಗಳ ಸ್ಥಳ.” ಈ ದೃಷ್ಟಿಯಿಂದ, ಅವರು ತಮ್ಮಲ್ಲಿದ್ದ ಸಂದೇಹಗಳನ್ನು ಬದಗಿರಿಸಿ,ಭಕ್ತಿಯಿಂದ, ಅವರು ತಮ್ಮ ಕನಸಿನ ವೃತ್ತಾಂತವನ್ನು ಶ್ರೀ ಸಿದ್ಧೇಶ್ವರ ಜಗದ್ಗುರುಗಳಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರರ ಸನ್ನಿಧಾನದಲ್ಲಿ ಮಂಗಳಾರತಿ ನೆರವೇರಿಸಿ, ಶ್ರೀ ಕುಮಾರ ಸ್ವಾಮಿಗಳು ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮ ಮಾಡಿದರು. ಅವರ ಕಂಗಳಲ್ಲಿ ಆನಂದಭಾಷ್ಪ ಹರಿಯುತ್ತಿತ್ತು, ಭಾವನೆಯಲ್ಲಿ ಉಕ್ಕಿದ ಶ್ರೀ ಸಿದ್ಧಲಿಂಗೇಶ್ವರನ ಸ್ತುತಿ.

ಶ್ರೀ ಜಗದ್ಗುರು ವರತೋಂಟದಾರ್ಯ
ಸುಜನಮನವಾಸ ಘನಸಾರ ಶೌರ್ಯ

ಮಾಯಾ ಮೋಹ ಹೇಯಗೊಳಿಸಿ ಬಿಡದು
ಕಾಯಜ ಮದಹರ ಜಯವೀಯೋ ಪೊರೆದು

ಜನನ ದೂರನೆನಿಸಿ ನೋಡಿ ದಯದಿ
ಗಣಸಮೂಹದಿ ಗಣಿಸೋ ನೀ ಮುದದಿ

ಸಿದ್ಧಲಿಂಗ ಶುದ್ಧ ಕ್ಷೇತ್ರಾಧೀಶ
ತಿದ್ದುತೆ ಮನವನು ಬದ್ಧನೆನಿಸದೆ ತೋಷ

ಎಡೆಯೂರು ಯಾತ್ರೆ ಫಲಿಸಿತು, ಹೃದಯವು ಪ್ರಫುಲ್ಲಗೊಂಡಿತು. ಶ್ರೀ ಕುಮಾರ ಸ್ವಾಮಿಗಳಲ್ಲಿದ್ದ ಸಮಯಭೇದದ ಸಂದೇಹಗಳು ಅಳಿದವು.

ಶಿಷ್ಯ ಪರಂಪರೆ ಮೂಲಕ ಬಾಚನಹಳ್ಳಿ ಕೌದಿ ಶ್ರೀ ಮಹಾಂತ ಸ್ವಾಮಿಗಳಿಂದ ಶ್ರೀ ಅರ್ಧನಾರೀಶ್ವರರಿಗೆ ಅನುಗ್ರಹವಿತ್ತದ್ದು, ಮುಂದೆ ಇವರ ಶಿಷ್ಯ ಪರಂಪರೆಯ ಚರಮೂರ್ತಿಗಳಿಂದ ಸಮಯಭೇದಗಳಾಗಿವೆಯೇ ಹೊರತು ತಾತ್ತ್ವಿಕವಾಗಿ ಈ ಎಲ್ಲವೂ ಶಿವಯೋಗ ಪರಂಪರೆಯವೇ ಎನ್ನುವುದು ನಿಚ್ಚಳವಾಗಿತ್ತು .

ಸಮಯಾಚಾರ ಎನ್ನುವುದು ವೀರಶೈವ ಆಚರಣೆಯನ್ನೇ ಆಧರಿಸಿರುವಂಥಹುದು. ಶಿಷ್ಯ ಪರಂಪರೆಯನ್ನು ಗುರುತಿಸಿಕೊಳ್ಳಲು ಇದು ಹುಟ್ಟಿದೆ. ಅಷ್ಟೇ ಎಂದು ಅರಿವಾಗಿತ್ತು.

೧೯೧೭ರಲ್ಲಿ  ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಆಯೋಜಿಸಿದ ಯಡೆಯೂರು ಪಾದಯಾತ್ರೆ , ಹರಿದು ಹಂಚಿಹೋಗಿದ್ದ ವೀರಶೈವ/ಲಿಂಗಾಯತ ಧರ್ಮೀಯರ ಒಗ್ಗೂಡುವಿಕೆಯ ಚಳುವಳಿಯ ಫಲಶೃತಿಯಾಗಿ ಸ್ಥಾಪನೆಗೊಂಡ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರ ಗಳ ಕೊಡುಗೆಗಳಿಗಿಂತ ವಿಭಿನ್ನವಾಗಿ ಹೊರಹೊಮ್ಮಿದ್ದು ಒಂದು ವಿಶೇಷ ಮತ್ತು ವಿಸ್ಮಯ !!.

ಸ್ವಾತಂತ್ರ್ಯದ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರು ಜಾರಿಗೆ ತಂದ ಚಳುವಳಿಯ ಮಾರ್ಗೋಪಾಯಗಳಾದ  ಪಾದಯಾತ್ರೆ,ಉಪವಾಸ ಮತ್ತು ಸ್ವದೇಶಿ ಖಾದಿ ಕಡ್ಡಾಯಗಳನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು ಗಾಂಧೀಜಿಯವರಕ್ಕಿಂತಲೂ ಮುಂಚೆಯೇ ಜಾರಿಗೆ ತಂದುಕೊಂಡಿದ್ದರು.

ಪೂಜ್ಯ ಕುಮಾರ ಶಿವಯೋಗಿಗಳು ೩ ದಿವಸ ಉಪವಾಸ ಸತ್ಯಾಗ್ರಹ ಮಾಡಿದ್ದು ಬಳ್ಳಾರಿಯ ೫ನೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಷನದಲ್ಲಿ ಸಮಾಜ ನಾಲ್ಕು ಚೂರಾಗುವದನ್ನು ನಿಲ್ಲಿಸಲು ಮತ್ತು ಅದರಲ್ಲಿ ಯಶಸ್ವಿಯಾಗಿದ್ದು (ಗಾಂಧೀಜಿಯ ಮೊದಲ ಉಪವಾಸ ಸತ್ಯಾಗ್ರಹ ೧೯೧೭ ಅಹಮದಾಬಾದ ನಲ್ಲಿ).

ಪೂಜ್ಯ ಕುಮಾರ ಶಿವಯೋಗಿಗಳು ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ೧೯೦೯ ರಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆ ಮಾಡಿದ ವರ್ಷ ( ಗಾಂಧೀಜಿ ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ಸಬರಮತಿ ಆಶ್ರಮದಲ್ಲಿ ೧೯೧೮-೧೯ ರಲ್ಲಿ)

ಪೂಜ್ಯ ಕುಮಾರ ಶಿವಯೋಗಿಗಳು ಯಡೆಯೂರು ಪಾದಯಾತ್ರೆ ಸಂಘಟಿಸಿದ್ದು ೧೯೧೭ ರಲ್ಲಿ (ಗಾಂಧೀಜಿ  ಉಪ್ಪಿನ ಸತ್ಯಾಗ್ರಹ ಕ್ಕೆ ಮೊದಲ ಪಾದಯಾತ್ರೆ  ಮಾಡಿದ್ದು ೧೯೩೦ ರಲ್ಲಿ)

.

ಗ್ರಂಥ ಋಣ:

  1. ಶ್ರೀಕುಮಾರೇಶ್ವರ ಪುರಾಣ: ಕವಿರತ್ನ ದ್ಯಾಂಪುರ ಚನ್ನಕವಿಗಳು
  2. ಶ್ರೀಕುಮಾರೇಶ ಚರಿತೆ .ಲೇಖಕರು ಶ್ರೀ ಗುರುಕಂದ
  3. ಶ್ರೀ ವಿರಕ್ತ ತೋಂಟದಾರ್ಯ ವಿರಚಿತ “ ಶ್ರೀ ಸಿದ್ದೇಶ್ವರ ಮಹಾಪುರಾಣ ಪ್ರಕಾಶಕರು ಡಾ. ಸಿದ್ದಲಿಂಗಯ್ಯಾ ರಾಚಯ್ಯಾ ಹಿರೇಮಠ ಗದಗ
  4. ನಿರಂಜನ (೧೯೭೪ -ಪ್ರಕಾಶನ ತೋಂಟದಾರ್ಯ ಮಠ ಗದಗ ಪ್ರಕಾಶನ)

 

 

 

ರಚನೆ. ಶಶಿಧರ ಜಿಗಜಿನ್ನಿ ಬಾಗಲಕೋಟೆ

 

ಕರುಣಿಸಿ ಎನ್ನ ಕರೆದುಕೊ ನಿನ್ನಲಿ

ಶಿರವ ಬಾಗಿಸಿ ಮುಗಿಯುವೆ ಕೈ

 

ಎನ್ನ ತಂದೆ ಗುರುಕುಮಾರ

ನಿನ್ನ ಸೇವೆಗೆ ನಾ ಬಂದೆ ಓಡಿ

ಸೇವೆಯ ಭಾಗ್ಯವ ನೀ ನೀಡಿ

ಕರುಣಿಸಿ ಕಂದನ ಕರೆದುಕೊ ಮಡಿಲಲಿ

 

ಎನ್ನ ಗುರುವೆ ಹಾನಗಲ್ ಸ್ವಾಮಿ

ನಮಿಸುವೆ ನಾನು ಶಿರವ ಬಾಗಿ

ಪೂಜಿಸುವೆ ನಿನ್ನ ಪಾದಕೆ ಎರಗಿ

ಕರುಣಿಸಿ ಕಂದನ ಕರೆದುಕೊ ಒಡಲಲಿ

 

ಎನ್ನ ದೇವನೇ ಮಂದಿರದ ಯೋಗಿ

ಸಂಗೀತ ಕಲೆಯ ಕೋರಿ ನಿಂದೆ

ನಿನ್ನಯ ನಂಬಿ ನಿನ್ನಲಿ ಬಂದೆ

ಕರುಣಿಸಿ ಕಂದನ ಕರೆದುಕೊ ನಿನ್ನಲಿ

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ ,

ಕಳೆದ ತಿಂಗಳು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ೧೫೭ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮ ನಾಡಿನಾದ್ಯಂತ,ದೇಶದ ವಿವಿಧ ಭಾಗಗಳಲ್ಲಷ್ಟೆ ಅಲ್ಲ ಚಿಕ್ಯಾಗೋ ಮತ್ತು ಜರ್ಮನಿಯಲ್ಲೂ  ಸಡಗರ ಸಂಭ್ರಮ ಗಳಿಂದ ನೆರವೇರಿದವು

ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು,ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಶ್ರೀಕುಮಾರ ತರಂಗಿಣಿ  ಅಕ್ಟೋಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ ! ನೀನಾರೋ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಸ್ತ್ರೀಸುಧಾರಣೆ -ಲೇಖಕರು-ಜ.ಚ.ನಿ
  4. ಸತಿ-ಪತಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು. ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಕಾವ್ಯ: ಪರಮೇಶ್ವರಿಯ ಪುಣ್ಯನಾಮವನು ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು
  6. ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು:ಲೇಖಕ: ಶ್ರೀಕಂಠ.ಚೌಕೀಮಠ.

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

ರಾಗ-ದರ್ಬಾರಿ ಕಾನಡಾ)

 

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

 ಜಡಸಂಸಾರದ ತೆಕ್ಕೆ| ಸಡಲಿ ಲಿಂಗವ ದೃಢದಿ

ಪಿಡಿವ ಪಾಣಿಯು ತಾ ಒಡೆಯ ಜಂಗಮಲಿಂಗ

ದೊಡಲೆಂದ ಗುರುವೆ ಕೃಪೆಯಾಗು   ||೧೫೪||

 ನಾಲ್ಕನೆಯ ಕರ್ಮೇಂದ್ರಿಯ ಪಾಣಿ, ಪಾಣಿಗೆ ಕರ, ಕೈ, ಹಸ್ತಗಳೆಂದು ಪರ್ಯಾಯಪದಗಳು.  ವಸ್ತುಗಳ ಆದಾನ ಪ್ರದಾನ ಕಾರ್ಯಗಳನ್ನು ಮಾಡುವದು ಕೈಯ ಕೆಲಸ. ಅರ್ಥಾತ್  ತಕ್ಕೊಳ್ಳುವದು (ಗೃಹಿಸುವದು) ಮತ್ತು ಕೊಡುವದನ್ನು ಕರದಿಂದಲೇ ಮಾಡುತ್ತೇವೆ. ಕಾಯಕಕ್ಕೆ ಕರವೇ ಮೂಲವಾಗಿದೆ. ದುಡಿದ ಕೈಗಳಿಂದ ಫಲವನ್ನು ಗ್ರಹಿಸುತ್ತೇವೆ. ಇನ್ನಿತರರಿಗೆ ದಾನವನ್ನು ಕೊಡುತ್ತೇವೆ. ಆದರೆ ಕೊಡುವ ಕೈಗಳಿಂದ ಭಿಕ್ಷೆ ಬೇಡಬಾರದು.

ಶಿವನು ಅನಂತ ಕರಗಳಿಂದ ಕೊಟ್ಟ ಇಳೆ-ಮಳೆ ಬೆಳೆಗಳನ್ನು ಅನುಭವಿಸುವ ಮಾನವನು ಅಹಂಕಾರಿಯಾಗಿ ನಾನು ಮಾಡುತ್ತೇನೆ. ನಾನು ನೀಡುತ್ತೇನೆ. ನಾನೇ ಕೊಡುತ್ತೇನೆಂದು ಅಭಿಮಾನ ಪಡುತ್ತಾನೆ. ನಾನೆಂಬ ಗರ್ವದಿಂದ ಜಡವಾದ ಸಂಸಾರ ಬಂಧನದಲ್ಲಿ ಸಿಲುಕುತ್ತಾನೆ. ಅಜ್ಞಾನದಿಂದ ಸಂಸಾರವು ಜಡವಾಗುವದು. ಈ ಅಜ್ಞಾನದಿಂದಲೇ ಮಹಾದಾನಿ ಮಹದೇವನನ್ನು ಮರೆತು ಅಭಿಮಾನಿಸಿ ಅಹಂಕಾರಪಡುತ್ತಾನೆ.

ಶರಣನಾದವನು ಅಹಂಕರ್ತೃತ್ವವನ್ನು ಸಂಪೂರ್ಣವಾಗಿ ಮರೆತು ಶಿವಕರ್ತೃತ್ವವನ್ನು ನೆನೆಯುತ್ತಾನೆ. ಎಲ್ಲವೂ ಶಿವ (ಲಿಂಗದೇವ) ನ ಪ್ರೇರಣೆಯಿಂದಲೇ ಘಟಿಸುತ್ತದೆಂದು ಭಾವಿಸುತ್ತಾನೆ. ಅದರಂತೆ ಆಚರಿಸುತ್ತಾನೆ. ಸದ್ಗುರೂಪದೇಶದಿಂದ ಜಡಸಂಸಾರದ ತೆಕ್ಕೆಯನ್ನು ಸಡಲಿಸಿ ಬಿಟ್ಟುಬಿಡುತ್ತಾನೆ. ಅರ್ಥಾತ್ ಸಂಸಾರದಲ್ಲಿ ಇದ್ದೂ ಇಲ್ಲದಂತೆ ಶಿವ ಸಂಸಾರದಲ್ಲಿ ಬಾಳುತ್ತಾನೆ. ಗುರುವಿತ್ತ ಇಷ್ಟಲಿಂಗವನ್ನು ಘಟ್ಟಿಯಾಗಿ ಹಿಡಿದುಕೊಳ್ಳುವನು. ಅಂದರೆ ದೃಢಮನಸ್ಸಿನಿಂದ ಲಿಂಗದೇವನನ್ನು ನೆನೆಯಬೇಕು. ನೆರೆನಂಬಬೇಕು. ದೃಢನಂಬಿಗೆಯಿಂದ ಲಿಂಗವನ್ನು ಆರಾಧಿಸುವ

ಮತ್ತು ಗುರು-ಲಿಂಗ-ಜಂಗಮಕ್ಕಾಗಿ ಕಾಯಕ ಮಾಡುವ ಕೈಗಳೇ ”ಗುರುವಿನ ಗುರು ಜಂಗಮವಿಂತೆಂಬುದು ಕೂಡಲ ಸಂಗಯ್ಯನ ವಚನ”ವೆಂದ ಅಣ್ಣನ ವಾಣಿಯಂತೆ ಮೃಡ ಜಂಗಮ ಸ್ವರೂಪಿಗಳಾಗುತ್ತವೆ. ಕರಗಳು ಜಂಗಮಲಿಂಗದ ಒಡಲಾಗುತ್ತವೆ.   ತನುಸೇವೆ ಗುರುವಿಗೆ, ಮನಸೇವೆ ಲಿಂಗಕ್ಕೆ ಸಲ್ಲುವಂತೆ, ಧನಸೇವೆ ಜಂಗಮಕ್ಕೆ ಸಲ್ಲಬೇಕು. ಅರ್ಥಾತ್ ಕೈಗಳಿಂದ ಜಂಗಮಕ್ಕೆ ವಂಚನೆಯಿಲ್ಲದೆ ನೀಡಿದರೆ ಕರಗಳು ಜಂಗಮ ಲಿಂಗದ ಒಡಲಾಗುವವು. ದಾನವೇ ಹಸ್ತಕ್ಕೆ ಭೂಷಣವೆಂದು ಅನುಭವಿಗಳೂ ನುಡಿದಿದ್ದಾರೆ. ಕರದ ಯಥಾರ್ಥತೆಯನ್ನು ೧೨೮ನೆಯ ತ್ರಿಪದಿಯಲ್ಲಿಯೂ ನೋಡ ಬಹುದು.

ಹೇ ಗುರುದೇವ ! ಸಂಸಾರದ ತೆಕ್ಕೆಯನ್ನು ಬಿಡಿಸಿ ಎಂದೆಂದಿಗೂ ಲಿಂಗವನ್ನು ಪಿಡಿಯುವ ಶಕ್ತಿಯನ್ನು ಕರಗಳಿಗೆ ಕೊಡು. ಅಂದರೆ ಈ ಕೈಗಳು ಜಂಗಮಲಿಂಗ ವಾಗಬಲ್ಲವು.

ಶಿವಕವಿಯು ಇಲ್ಲಿ ವೀರಶೈವ ಸಿದ್ಧಾಂತವನ್ನೇ ತುಂಬಿದ್ದಾನೆ. ಲಿಂಗಭಕ್ತನಾದವನು ಲಿಂಗಪೂಜೆಯನ್ನು ಮಾಡುವದು, ಜಂಗಮನ ಬರುವಿಗಾಗಿ ಹಾರೈಸುವದು, ಮತ್ತು ಲಿಂಗದ ಮುಖ ಜಂಗಮವೆಂದು ಅರಿತು ಆತನ ಸಂತೃಪ್ತಿಗೊಳಿಸಬೇಕೆಂಬುದನ್ನು ಮನನ ಮಾಡಿಕೊಳ್ಳಬೇಕು. ನಾನು ಕಾಯಕ ಮಾಡುವದೆಲ್ಲ ಜಂಗಮನ ಸೊತ್ತೆಂದು ಭಾವಿಸಬೇಕು. ಅರ್ಥಾತ್ ಕಾಯಕ ಮಾಡಿದ ಫಲವೆಲ್ಲ ಜಂಗಮನದೆಂದು ನಂಬಬೇಕು. ಯಾಕಂದರೆ ದಾಸೋಹಂಭಾವದಿಂದ ದೊರೆತ ಶೇಷವೇ

ಪ್ರಸಾದವಾಗುವದು. ತ್ಯಾಗಪೂರಿತವಾದ ಭೋಗವೇ ಲಿಂಗಭೋಗೋಪವೆನಿಸುವದು. ಅದಕ್ಕಾಗಿಯೇ ಕೈಗಳು ಜಂಗಮಲಿಂಗವನ್ನು ತೃಪ್ತಿಪಡಿಸಬಲ್ಲವುಗಳೆಂದು ನಿರೂಪಿಸಲ್ಪಟ್ಟಿವೆ.

ಕಾಕು ಸಟೆ ಮಾತುಗಳ | ನಿಃಕರಿಸಿ ನಿಜ ಸತ್ಯ

ವಾಕ್ಕೇ ಸುಪ್ರಸಾ-ದಾಖ್ಯ ಲಿಂಗವಿದು ಬಹು

ಜೋಕೆಂದ ಗುರುವೆ ಕೃಪೆಯಾಗು   ||೧೫೫||

ಐದನೆಯ ಕರ್ಮೇಂದ್ರಿಯ ವಾಣಿಯು, ಐದು ಕರ್ಮೇಂದ್ರಿಯಗಳಲ್ಲಿ ಇದು ಬಹು ಮುಖ್ಯವಾದುದು. ಇದಕ್ಕೆ ಮುಖವೆಂತಲೂ ಹೇಳಬಹುದು. ಬಾಯಿಯಿಂದಲೇ ಮಾತು ವ್ಯಕ್ತವಾಗುವದಲ್ಲದೆ; ಗುರುಲಿಂಗಕ್ಕೂ ಪೋಷಕವಾಗಿದೆ. ಮತ್ತು ಬಾಯಿಯೇ ದೇಹವನ್ನು ಸಂರಕ್ಷಿಸುವ ಪ್ರಮುಖ ಸಾಧನವೂ ಹೌದು. ವಾಣಿಯಿಂದ ತನ್ನ ಭಾವಾಭಿವ್ಯಕ್ತಿಯನ್ನು ಇತರರಿಗೆ ತಿಳಿಸಲು ಸಾಧ್ಯವಾಗುವದು.

ಮಾತು ಯಥಾರ್ಥವಾಗಿರಬೇಕು. ಮಾತಿನಲ್ಲಿ ಕಾಕುತನ, ಸಟೆಗಳಿರಬಾರದು. ಅನ್ಯರಿಗೆ ಕೊಂಕುನುಡಿಯುವದು ಸುಳ್ಳು ಹೇಳುವದು ದೊಡ್ಡ ಅಪರಾಧ. ಶರಣರು ಸುಳ್ಳುನುಡಿಗೆ ಸೇರುವದಿಲ್ಲ. ಸುಳ್ಳುನುಡಿ ಪಾಪಕಾರಕವೆಂದು ನುಡಿದಿರುವರು. ಸತ್ಯಾಸತ್ಯತೆಯ ವಿಚಾರವನ್ನು ಈಗಾಗಲೇ ೧೩೨ನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಮಾಡಲಾಗಿದೆ. ಮಾತಿನಲ್ಲಿ ಪಾವಿತ್ರ್ಯತೆ ಇರಬೇಕು. ನಿಜವಾದ ಸತ್ಯವಿರಬೇಕು. ಆ ಮಾತು ಸಾರ್ಥಕವಾಗುವದು. ಅಣ್ಣ ಬಸವಣ್ಣನವರು –

ನುಡಿದರೆ ಮುತ್ತಿನ ಹಾರದಂತಿರಬೇಕು,

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು,

ನುಡಿಯೊಳಗಾಗಿ ನಡೆಯದಿದ್ದರೆ,

ಕೂಡಲ ಸಂಗಮದೇವನೆಂತೊಲಿವನಯ್ಯಾ.

ಮಹಾಜ್ಞಾನಿ ಅಲ್ಲಮ ಪ್ರಭುಗಳು –

ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೋಷ್ಟ್ರ ಸಂಪುಟವೆಂಬುದೇ ನಾದಬಿಂದುಕಳಾತೀತ

ಗುಹೇಶ್ವರನ ಶರಣರು ನುಡಿದು

ಸೂತಕಿಗಳಲ್ಲ ಕೇಳಾ ಮರುಳೆ !

ಮಾತು ಮುತ್ತಿನಹಾರದಂತೆ, ಸ್ಪಟಿಕದಂತೆ, ಮಾಣಿಕ್ಯದ ಪ್ರಭೆಯಂತೆ ಮಹತ್ವವುಳ್ಳದ್ದಾಗ ಬೇಕು. ಮಾತಿಗೆ ಮಹಾಲಿಂಗನೂ ತಲೆದೂಗಬೇಕು. ಇಂಥ ಮಾತೇ ಜ್ಯೋತಿರ್ಲಿಂಗ ವಾಗುವದು. ಜ್ಯೋತಿರ್ಲಿಂಗದ ದರ್ಶನ ಮಾಡಿಸಬಲ್ಲ ಶರಣರು ಸೂತಕಿಗಳಲ್ಲ. ಶಿವಶರಣರ ಸೂಳ್ನುಡಿಗಳಲ್ಲಿ ಶಿವಸಾಕ್ಷಾತ್ಕಾರ ನಿಚ್ಚಳವಾಗಿ ತೋರುವದು. “ಕೂಡಲಸಂಗನ ಶರಣರು ಮನದರದು ಮಾತನಾಡಿದರೆ ಲಿಂಗವ ಕಾಣಬಹುದು” ಎಂಬ ಅಣ್ಣನ ವಾಣಿಯಲ್ಲಿ ಅಮೃತ ತೊಟ್ಟು ಧಾರೆಗಟ್ಟಿದೆ. ಅಂತೆಯೇ ಮಹಾನುಭಾವಿಗಳು ನುಡಿದುದು ಪ್ರಸಾದವಾಣಿ, ನಡೆದುದು ಲಿಂಗನಡೆ, ಪ್ರಸಾದವಾಣಿಯಲ್ಲಿಯೇ ಪ್ರಸಾದಲಿಂಗದ ಸಾನಿಧ್ಯ ವೇದ್ಯವಾಗುವದು.

ಪ್ರಸಾದಲಿಂಗನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾದ ಮುಖದಿಂದ ವ್ಯರ್ಥನುಡಿಗಳನ್ನು ಆಡಬಾರದು. ಜೊಳ್ಳು ಮಾತಿಗೆ ಮನವೆಳಸಬಾರದು. ಗೊಳ್ಳು ಹರಟೆಗೆ ಕಾಲಹರಣ ಮಾಡಬಾರದು. ಅದಕ್ಕಾಗಿ ಬಹು ಜೋಕೆ (ಎಚ್ಚರಿಕೆ) ಯಿಂದ ಮಾತನಾಡಬೇಕೆಂದು ಗುರುರಾಯನು ಎಚ್ಚರಿಕೆಯಿತ್ತಿದ್ದಾನೆ. ಒಳ್ನುಡಿ ಒಳಿತನ್ನೇ ಮಾಡಬಲ್ಲುದು. ಗೊಳ್ಳು ಮಾತು ಜಗಳಕ್ಕೆ ಅವಕಾಶವಾಗುವದು. “ಮಾತು ಬಲ್ಲವ ಮಾಣಿಕ ತಂದ, ಮಾತನರಿಯದವ ಜಗಳವ ತಂದ’ ಎಂಬ ಲೋಕವಾಣಿ ಪ್ರಸಿದ್ಧವಿದೆ. ಕಾರಣ ಮಾತನ್ನು ಎಚ್ಚರಿಕೆಯಿಂದಲೇ ಬಳಸಬೇಕು. ವೈಖರಿಯ ಶಕ್ತಿಯನ್ನು ಸಂಪಾದಿಸಲು ಮೌನವೇ ಉತ್ತಮ ಸಾಧನ. ಅಂತೆಯೇ ಮಾತಿಗಿಂತಲೂ ಮೌನಶ್ರೇಷ್ಠವೆಂದು ಅನುಭವಿಗಳು ಅನುಭವದ ನುಡಿಯನ್ನು ನುಡಿದಿರುವರು.

ಗಾಂಧಿಜಿಯವರು  ಆತ್ಮಶಕ್ತಿಯನ್ನು ಹಾಗೂ ವಾಣಿಶಕ್ತಿಯನ್ನು ಬೆಳೆಸಿಕೊಳ್ಳಲು ಆಗಾಗ್ಗೆ ಮೌನಿಗಳಾಗುತ್ತಿದ್ದುದು ಅವರ ಆತ್ಮಚರಿತೆಯಿಂದ ತಿಳಿದುಬರುತ್ತದೆ. ಜ್ಞಾನಿಗಳು ಬಹುಶಃ ಮೌನಿಗಳಾಗಿಯೇ ಇರುತ್ತಾರೆ. ‘ಮಾತು ಬೆಳ್ಳಿ, ಮೌನ ಬಂಗಾರ”ವೆಂಬುದು ಸತ್ಯವಾಗಿದೆ. ಓ ಗುರುವೇ ! ಎನ್ನ ಮಾತು ಮಂತ್ರವಾಗಿಸಲು ಕೃಪೆಮಾಡು. ಶಿವ ನಾಮವನ್ನು ನೆನೆಯುವ ವಾಣಿಯಲ್ಲಿ ಪ್ರಸಾದಲಿಂಗದ ಪ್ರಸನ್ನತೆಯುಂಟಾಗುವಂತೆ ಹರಸು.

 

ಜ.ಚ.ನಿ

 ನೀರಿಂಗೆ ನೈದಿಲೆಯೆ ಶೃಂಗಾರ

ಸಮುದ್ರಕ್ಕೆ ತೆರೆಯೆ ಶೃಂಗಾರ

ಗಗನಕ್ಕೆ ಚಂದ್ರಮನೆ ಶೃಂಗಾರ

ನಾರಿಗೆ ಗುಣವೆ ಶೃಂಗಾರ….”

 ಕುಮಾರ ಸ್ವಾಮಿಗಳವರು ಸ್ತ್ರೀಯರ ಮುಖಗಳನ್ನು ಈ ಕಣ್ಣುಗಳಿಂದ ನೋಡದಿದ್ದರು ಅವರ ಜೀವನ ಮುಖವನ್ನು ತಮ್ಮ ಜ್ಞಾನನೇತ್ರದಿಂದ ನಿರೀಕ್ಷಿಸುತ್ತಿದ್ದರು. ಬರೀ ನಿರೀಕ್ಷಣೆ ಮಾತ್ರವಲ್ಲ ಸುಧಾರಣೆಗಾಗಿ ಸರ್ವತೋಮುಖದಲ್ಲಿ ಪರೋಕ್ಷವಾಗಿ ಪರಿಶ್ರಮಿಸುತ್ತಿದ್ದರು.

ಪ್ರತಿವರ್ಷ ಶಿವಯೋಗಮಂದಿರ ಜಾತ್ರೆಯ ಸಮಯದಲ್ಲಿ ಮಹಿಳಾ ಸಭೆಯನ್ನು ಕರೆಯುತ್ತಿದ್ದರು. ಮಹಿಳೆಯರನ್ನೆ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದರು. ಭಾಷಣಕರ್ತರನ್ನಾಗಿ ಏರ್ಪಡಿಸುತ್ತಿದ್ದರು. ಸುಧಾರಣೆಯ ಜೀವಂತ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಹಚ್ಚುತ್ತಿದ್ದರು.

ಸ್ವಾಮಿಗಳವರ ವ್ಯಕ್ತಿತ್ವಕ್ಕೆ ಹೆಣ್ಣಿನ ಅಗತ್ಯವಿಲ್ಲದಿದ್ದರು ಸಮಾಜಕ್ಕೆ ಹೆಚ್ಚು ಅಗತ್ಯವಿದೆಯೆಂಬುದನ್ನು ಚೆನ್ನಾಗಿ ಗ್ರಹಿಸಿದ್ದರು. ಸಮಾಜ ರಥಕ್ಕೆ ಹೆಣ್ಣು ಗಂಡು ಎರಡು ಚಕ್ರಗಳೆಂದು ಸಮಾಜ ಪುರುಷನ ಒಳಮ್ಮೆ, ಹೊರಮೈ ಎಂದು ಇವುಗಳಲ್ಲಿ ಯಾವುದಾದರೊಂದು ಊನವಾದಲ್ಲಿ ಸಮಾಜ ಸುಸೂತ್ರವಾಗಿ ಸಾಗದೆ ಕುಂಟುತ್ತದೆಯೆಂದು  ಒಮ್ಮಿಲ್ಲೊಮ್ಮೆ ಪ್ಪಪಾತಕ್ಕೆ ಬೀಳುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು. ಪುರುಷರ ಸುದಾರಣೆಯಂತೆ ಸ್ತ್ರೀ ಯರ ಸುಧಾರಣೆಯು ಅತ್ಯಗತ್ಯ ಅನಿವಾರ್ಯ.

ಸ್ವಾಮಿಗಳವರು ಪ್ರಯಾಣದಲ್ಲಿರುವಾಗ ತಂಗಿದ ಹಳ್ಳಿಯಲ್ಲಿ ಯಾರಾದರು ತಮ್ಮ ಮನೆ ಹೆಂಗಸರನ್ನು  ಚನ್ನಾಗಿ ಹೊಡೆದದ್ದು ಅವರ ಕಿವಿಗೆ ಬದ್ದರೆ ಅವರನ್ನು ಕರೆಯಿಸಿ ಏನಪ್ಪ ಯಾತಕ್ಕೆ ಹೆಂಡತಿಯನ್ನು ಹೊಡೆದೆ ? ತಪ್ಪು ಮಾಡದ ಮನುಷ್ಯನಿರುವನೆ ? ತಪ್ಪಿಗೆ ತಕ್ಕ ಶಿಕ್ಷೆ ಇದೆಯೆ ? ನೀನು ತಪ್ಪು ಮಾಡಿದರೆ ನಿನ್ನನ್ನು ಯಾರು ಹೊಡೆಯಬೇಕು ? ಬುದ್ಧಿವಾದವನ್ನು ಹೇಳಿ ತಪ್ಪನ್ನು ತಿದ್ದಬೇಕು. ಹೆಂಡತಿಯೆ ಮನೆಯ ಭಾಗ್ಯದೇವತೆ ! ಮನೆ ಮ್ಕಳ ಪಾಲನೆ ಅವಳ ಪಾಲಿನದು. ಹೆಂಡತಿಯನ್ನು ಹಿಂಸಿಸುವರಿಗೆ ಹರನು ಮೆಚ್ಚಲಾರ.ಘೋರ ನರಕ ತಪ್ಪದು. ನೀನು ನಿನ್ನ ಹೆಂಡತಿಯು ಪರಸ್ಪರ ಪ್ರೇಮ ಸಂತೋಷಗಳಿಂದ ಇದ್ದರೆ ಸುಖ ಸಿಗುತ್ತದೆ. ಸಂಸಾರ ಸುಸೂತ್ರ  ಸಾಗುತ್ತದೆ. ಒಂದು ಕಾಲು ಕುಂಟಾದರೆ ಚೆನ್ನಾಗಿರುತ್ತದೆಯೊ, ಹೇಳು ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶಿವಶರಣರು ಅಪ್ಪಣೆಕೊಡಿಸಿದ್ದಾರೆ. ನಿಮ್ಮಿಬ್ಬರ ದೇಹಗಳು ಎರಡಾಗಿದ್ದರು ಮನಸ್ಸು ಒಂದಾಗಿರಬೇಕು. ಹೃದಯ ಒಂದಾಗಿರಬೇಕು. ತಿಳಿಯಿತೆ ? ಇನ್ನು ಮೇಲೆ ಹೀಗೆಲ್ಲ ಹುಚ್ಚುಹುಚ್ಚಾಗಿ ಹೊಡೆಯಬೇಡ ಎಂದು ಹೇಳಿ ಕಳಿಸುತ್ತಿದ್ದರು. ಆದರೂ ಸ್ವಾಮಿಗಳ ಮನಸ್ಸು ಸ್ತ್ರೀಯರ ಅಜ್ಞಾನ ಅನಾಚಾರಗಳಿಗಾಗಿ ತುಂಬಾ ನೋಯುತ್ತಿತ್ತು. ಅವುಗಳ ನಿವಾರಣೆಗಾಗಿ ಸದಾ ಆಲೋಚಿಸುತ್ತಿತ್ತು.

ಸ್ವಾಮಿಗಳವರು ಸಿದ್ಧರಾಗಿಯು ಸ್ತ್ರೀಯರ ಮುಖಾವಲೋಕನ ಮಾಡದಿರಲು ಕಾರಣವೇನು ಎಂದು ಕೆಲವರು ಕೇಳದಿರಲಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದಲ್ಲಿ ನಿರ್ವಾಣೆಯಾಗಿ ಅನುಭವ ಮಂಟಪಕ್ಕೆ ಬಂದ ಮಹಾದೇವಿಯಕ್ಕಗಳನ್ನು ‘ಕೇಶದ ಮರೆಯೇಕೆ’ ? ಎಂದು ಕೇಳಿದ ಅಲ್ಲಮಪ್ರಭುವಿಗೆ ‘ನಿಮ್ಮ ಶರಣರಿಗೆ ನೋವಾದೀತೆಂದು’ ಅಕ್ಕಗಳು ಉತ್ತರಿಸಿದಂತೆಯೆ ಇಲ್ಲಿ ಉತ್ತರಿಸಬೇಕಾಗಿದೆ. ಸ್ವಾಮಿಗಳವರಿಗೆ ನಿಜವಾಗಿಯೂ ಮನೋವಿಕಾರವಿರಲಿಲ್ಲ. ಅದರಲ್ಲಿ ಅವರು

ಸಂಪೂರ್ಣ ಸಿದ್ಧಿಯನ್ನು ಪಡೆದಿದ್ದರು. ಆದರೂ ಅವರು ತಮ್ಮ ಅಪರ ವಯಸ್ಸಿನಲ್ಲಿಯು ಆ ವ್ರತವನ್ನು ನಡೆಸಿದರು. ಕಾರಣ ಹಿರಿಯರ ಅನುಕರಣ ಕಿರಿಯರು ಮಾಡಿಯಾರು. ಅದರಲ್ಲಿಯು ಇಂತಹ ವಿಷಯಗಳಲ್ಲಿ ಅನುಕರಣ ಮಾಡುವುದು ವಿಶೇಷ. ನಾವೇ ನೋಡತೊಡಗಿದರೆ ಶಿವಯೋಗ ಮಂದಿರ ಸಾಧಕರು ನೋಡತೊಡಗುವರು. ನಮ್ಮಂತೆ ಅವರ ಮನಸ್ಸಿರುವದಿಲ್ಲ. ಮನಸ್ಸಿನ ಸೆಳೆತಕ್ಕೆ ಮಾರುಹೋದಾರು ಎಂಬುದೇ ಅವರ ಉದ್ದೇಶ. ಹೀಗೆ ಸಾಧಕರ ಶಿಕ್ಷಣಕ್ಕಾಗಿ ಇನ್ನೂ ಅನೇಕ ವ್ರತಗಳನ್ನು ಕೈಬಿಡದೆ ಅವರು ಆಚರಿಸುತ್ತಿದ್ದರು ಅವರಿಗಾಗಿ ಅವರಿದ್ದಿಲ್ಲ.

ಒಂದು ದಿನ ಗಚ್ಚಿನಮಠದಲ್ಲಿ ಎಲ್ಲ ಸಾಧಕರಿದ್ದರು. ಕಲ್ಲುಮಠದ ಮುಂಭಾಗದಲ್ಲಿ ಸ್ವಾಮಿಗಳೊಬ್ಬರೆ ಮೂಹೂರ್ತ ಮಾಡಿದ್ದರು. ಬೆಳಗಿನ ಒಂಭತ್ತು ಗಂಟೆಯ ಸಮಯ. ಯಾರೋ ಪ್ರಯಾಣಿಕರಾದ ಹೆಂಗಸರು ದ್ವಾರದಿಂದ ಸ್ತ್ರೀ ಸಹಜವಾದ ಗಲಾಟೆಯೊಡನೆ ಒಳನುಗ್ಗಿದರು. ಸ್ವಾಮಿಗಳವರು ಸುಮ್ಮನೆ ಇದ್ದರು. ಹೆಂಗಸರು ಎದುರಿಗಿರುವ ಸ್ವಾಮಿಗಳವರನ್ನು ನೋಡಿದ ಮೇಲೆಯು ಹಿಂದಿರುಗಲಿಲ್ಲ. ಬಳಸಿಕೊಂಡು ಗಚ್ಚಿನಮಠದತ್ತ ಹೋಗಹತ್ತಿದರು. ಆಗ ಸ್ವಾಮಿಗಳವರು ತಾವೇ ಎದ್ದು ಅವರನ್ನು ತಾಯಿಗಳೆ, ಎಂದು ನಯವಾಗಿ ಕರೆದು ಅಲ್ಲಿ ಶಿವಯೋಗಿಗಳಿದ್ದಾರೆ. ಅವರು ನಿಮ್ಮನ್ನು ನೋಡುವದಿಲ್ಲ. ನಿಮ್ಮೊಡನೆ ಮಾತೂ ಆಡುವದಿಲ್ಲ. ಅಷ್ಟಕ್ಕು ನೀವು ಅಲ್ಲಿ ನೋಡತಕ್ಕದು ಏನೂ ಇಲ್ಲ. ನೀವು ಹೀಗೆಯೆ ಹೊರಟು ಹೋಗಿರೆಂದು ಹೇಳಿಕಳುಹಿಸಿದರು. ಇದನ್ನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಹೀಗಿರುವಾಗ ಅವರ ಉದ್ದೇಶ ಅವರ ಪ್ರತಾಚರಣೆ ಸಾಧಕರ ನಿಮಿತ್ತವಾಗಿ ಇತ್ತೆಂಬುದು ಸ್ಪಷ್ಟವಾಗುವುದಿಲ್ಲವೆ ?

ವ್ಯಷ್ಟಿ ಜೀವನದ ಸಾಧನ ಕ್ಷೇತ್ರ, ಸಣ್ಣ ಕುಟುಂಬವಾಗಿದ್ದರೆ ಸಮಷ್ಟಿ ಜೀವನದ ಸಾಧನಕ್ಷೇತ್ರ, ವಿಶಾಲವಾದ ವಿಶ್ವಕುಟುಂಬವಾಗಿದೆ. ಈ ವಿಶ್ವಕುಟುಂಬವನ್ನು ಮೀರಿ ಯಾವನೂ ವಿಶ್ವವ್ಯಕ್ತಿಯಾಗಲಾರನು, ವಿಶ್ವಶಾಂತಿ ಕಾರಣನಾಗನು. ಹಾಲಾದರು ಮಧುರ ಪಾಕವಾಗಬೇಕಾದರೆ ಸಕ್ಕರೆಯ ಬೆರಕೆ ಬೇಕೇ ಬೇಕು. ಪ್ರೇಮವೆ ಹಾಲು ಸದ್ಗುಣಗಳೆ ಸಕ್ಕರೆ. ಪ್ರೇಮ ಐಂದ್ರಿಕವಾಗಬಾರದು. ಆಧ್ಯಾತ್ಮಿಕವಾಗಬೇಕು. ಅದರ್ಶಾಕಾಂಕ್ಷೆಯಾಗಬೇಕು. ಸದ್ಗುಣ ಸಂವರ್ಧಿಯಾಗಬೇಕು.

ಬೌದ್ಧಿಕ ಆಧ್ಯಾತ್ಮಿಕ ಜೀವನೋನ್ನತಿಗೆ ಹೆಣಗುವ ವ್ಯಕ್ತಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಬುದ್ಧಿ ಆತ್ಮಗಳು ಉಭಯ ವ್ಯಕ್ತಿತ್ವದಲ್ಲಿ ಸರಿಸಮಾನವಾದವುಗಳು. ಏರುಪೇರುಗಳ ಕವಲಿಲ್ಲ. ಕೊಂಕಿಲ್ಲ. ಆದರು ಸ್ತ್ರೀ ಸಮಾಜೋನ್ನತಿಗೆ ಹೆಣಗಿ ಮುಖದ ಮೇಲೆ ಕಪ್ಪುಕಲೆಯನ್ನು ತಂದುಕೊಳ್ಳದ ವ್ಯಕ್ತಿ ಇತಿಹಾಸದಲ್ಲಿ ಕಾಣುವುದು ವಿರಳ. ಸ್ವಾಮಿಗಳವರು ಈ ವಿಷಯದಲ್ಲಿ ನಿಷ್ಕಳಂಕ ಚರಿತರಾಗಿ ಹುಣ್ಣಿಮೆಯ ಚಂದ್ರನಂತೆ ಬೆಳಗಿದರು. ಉತ್ತರಾಯಣದ ಪ್ರಭಾಕರನಂತೆ ಪ್ರಜ್ವಲಿಸಿದರು.

ಸ್ವಾಮಿಗಳವರು ಹೆಂಗಸರ ಮುಖವನ್ನು ನೋಡದೆ ಇದ್ದುದು ಹೇಳನ ಭಾವದಿಂದಲ್ಲ. ಸತೀತ್ವ ಸ್ವಾಮಿತ್ವ ಧರ್ಮಗಳೆರಡರ ಪರಿಪಾಲನದ ಹೆಚ್ಚಳಿಕೆಯಿಂದ, ಸಾಂಸಾರಿಕ ಜೀವನದಲ್ಲಿದ್ದು ಉರಿಯ ನಾಲಗೆಗಂಜೆ, ಸುರಿಗೆಯ ಮೊನೆಗಂಜೆ ಪರಸ್ತ್ರೀ ಪರಧನವೆಂಬ ಜೂಜಿಂಗಂಜುವೆ” ಎಂದು ಉಸುರಿದ ಬಸವಣ್ಣನ ಬಂಧುರೋಕ್ತಿಯನ್ನು ಸನ್ಯಾಸಜೀವಿಯು ಅದೆಷ್ಟು ಎಚ್ಚರದಿಂದ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಾಗಿ ತಿಳಿದು ಆಚರಣೆಯಲ್ಲಿ ತಂದು ಆ ಉಕ್ತಿಯನ್ನು  ಸಾರ್ಥಕಪಡಿಸಿದ ಸನ್ಮಾನ್ಯರು ಸ್ವಾಮಿಗಳವರು, ಆವ್ರತಶೀಲರಾಗಿಯೇ ಸ್ತ್ರೀ ಸುಧಾರಣೆಯ ಕಾರ್ಯವನೆಸಗಿದ ಕಾರಣಿಕರು ಕುಮಾರಯೋಗಿಗಳವರು.

ಸ್ತ್ರೀಯರಲ್ಲೆ ಬೋಧಕ ವರ್ಗ ತಯಾರಾಗಬೇಕೆಂಬ ಹೆಬ್ಬಯಕೆ  ಸ್ವಾಮಿಗಳವರದಾಗಿತ್ತು. ಅಕ್ಕ ಲಕ್ಕಮ್ಮ, ನೀಲಾಂಬೆ ಮುಂತಾದ ಶರಣೆಯರಂತೆ ಆತ್ಮವೀರರಾಗಿ ಬಾಳಬೇಕೆಂಬ ಮೈತ್ರೇಯಿಯಂತೆ ಪತಿವ್ರತೆಯರಾಗಿ ಪರವಸ್ತು ಪ್ರೇಮಿಗಳಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆ ಸ್ವಾಮಿಗಳವರಲ್ಲಿ ಬಲವಾಗಿ ಬೇರೂರಿತ್ತು. ಚಿಗುರು ಹಾಕಿತ್ತು. ಫಲ ನೋಡುವ ಅನುಭವಿಸುವ ಅವಕಾಶ ಅವರಿಗಿಲ್ಲದೆ ಹೋಯಿತು.

ಪೂಜ್ಯ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೊಂದು ಪವಿತ್ರ ಬಂಧನ. ವಿವಾಹೇತರ ಸಂಬಂಧಗಳು ಧರ್ಮಬಾಹಿರವಾಗಿದ್ದು, ಸಮಾಜದ ಮನ್ನಣೆಗೆ ಪಾತ್ರವಾಗುವುದಿಲ್ಲ. ಇಂಥ ಸಂಬಂಧಗಳಿಗೆ ನೆಮ್ಮದಿ, ಸುಖ ಶಾಂತಿಗಳು ಗಗನಕುಸುಮವಾಗಿರುವುದರಿಂದ ನೆಮ್ಮದಿಯ ಜೀವನಕ್ಕೆ ವಿವಾಹ ಅನಿವಾರ್ಯ. ವಿವಾಹದಲ್ಲಿ ಬಂಧಿತರಾದ ಸತಿ- ಪತಿಗಳು ಸಮರಸದಿಂದ ಕೂಡಿ ಬಾಳಿದರೆ ನೆಮ್ಮದಿಯೆಂಬುದು ಅಂಗೈಫಲ. ಸರಸ ದಾಂಪತ್ಯವೆಂಬುದು ಸತಿಪತಿಗಳ ಜೀವನಕ್ಕೆ ಸೀಮಿತವಾಗಿರದೆ ಅದು ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ವಿರಸ ದಾಂಪತ್ಯ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಜೀವನ ಮೃತ್ಯುವಿಗೆ ಸಮವಾಗುತ್ತದೆ.

ಸತಿಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ರಥವನ್ನು ಮುನ್ನಡೆಸಬೇಕು. ಸುಖ-ದುಃಖ, ನೋವು-ನಲಿವು, ಸೋಲು-ಗೆಲವುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಆಚಾರ-ವಿಚಾರ, ಬೇಕು-ಬೇಡ, ನೋಟ-ಮಾಟಗಳಲ್ಲಿ ಇಬ್ಬರೂ ಒಂದಾಗಿರಬೇಕು. ಆಗ ಆ ದಾಂಪತ್ಯದಲ್ಲಿ ಯೋಗದ ಕಳೆ ಬೆಳಗುತ್ತದೆ. ಅದೊಂದು ಅನುಪಮ ಆದರ್ಶದ ಬಾಳೆನಿಸುತ್ತದೆ. ಇಂಥ ಬಾಳನ್ನು ಕಂಡ ನಿಜಗುಣರು- ‘ಸತಿಪತಿಗಳಿವರ ಸಮರತಿಯ ಬಾಳುವೆಗೆ ಪ್ರತಿಯುಂಟೆ ಲೋಕದೊಳು’ ಎಂದು ಉದ್ಗರಿಸುತ್ತಾರೆ.

ಆದರ್ಶ ಕುಟುಂಬದ ಸತಿಪತಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಪರಸ್ಪರ ತಿದ್ದಿಕೊಳ್ಳುವ ಮತ್ತು ಕ್ಷಮಿಸುವ ಔದಾರ್ಯ ಹೊಂದಿರುತ್ತಾರೆ. ಅವರಲ್ಲಿ ಪರಿಶುದ್ಧವಾದ ನಿಷ್ಕಾಮ ಪ್ರೀತಿಯೊಂದು ಮನೆಮಾಡಿಕೊಂಡಿರುತ್ತದೆ. ಬಡತನ-ಸಿರಿತನಗಳಿಗೆ ಅಲ್ಲಿ ಸ್ಥಾನವಿಲ್ಲ. ಬಡವಿಯಾದ ಸತಿಯೂ ನಿಷ್ಕಾಮ ಮತ್ತು ನಿರ್ವ್ಯಾಜ ಪ್ರೀತಿಯಲ್ಲಿ ಸ್ವರ್ಗವನ್ನು ಕಾಣುತ್ತಾಳೆ. ‘ನಾನು ಬಡವಿ ಆತ ಬಡವ; ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ಕವಿವಾಣಿಯಿಂದ

ಪ್ರೀತಿಯ ಹರವು, ಶ್ರೀಮಂತಿಕೆ ನಮ್ಮರಿವಿಗೆ ಬರುತ್ತದೆ.

ಜೇಡರದಾಸಿಮಾರ್ಯ ಒಬ್ಬ ಶರಣ. ದುಗ್ಗಳೆ ಅವನ ಆದರ್ಶ ಸತಿ. ವ್ಯಕ್ತಿಯೊಬ್ಬ ಸನ್ಯಾಸ ಶ್ರೇಷ್ಠವೋ? ಸಂಸಾರ ಶ್ರೇಷ್ಠವೋ? ಎಂದು ಪ್ರಶ್ನಿಸಿದಾಗ ದಾಸಿಮಾರ್ಯರು ಸಾಕಷ್ಟು ಬೆಳಕಿದ್ದರೂ ‘ನಾನೀಗ ಓದಬೇಕು ದೀಪ ತಗೆದುಕೊಂಡು ಬಾ’ ಎಂದು ಸತಿ ದುಗ್ಗಳೆಗೆ ಹೇಳಿದರೆ ದೀಪ ತಂದು ಮುಂದಿರಿಸುತ್ತಾಳೆ. ಊಟದ ಸಮಯದಲ್ಲಿ ಬಟ್ಟಲಿನಲ್ಲಿರುವ ಅಂಬಲಿ ಆರಿ ತಣ್ಣಗಾಗಿದ್ದರೂ ಬೀಸಣಿಕೆಯ ಗಾಳಿಯಿಂದ ಅಂಬಲಿಯನ್ನು ಆರಿಸಲು ಹೇಳುತ್ತಾರೆ. ದುಗ್ಗಳೆ ಅನ್ಯಮಾತಿಲ್ಲದೆ ಆರಿದ ಅಂಬಲಿಗೆ  ಗಾಳಿ ಬೀಸುತ್ತಾಳೆ. ಆಗ ಪ್ರಶ್ನಿಸಿದ ವ್ಯಕ್ತಿಯು ಇಂಥ ಸತಿ ಸಿಕ್ಕರೆ ಸಂಸಾರ ಶ್ರೇಷ್ಠ, ಸಿಗದಿದ್ದರೆ ಸನ್ಯಾಸ ಶ್ರೇಷ್ಠವೆಂದು ಅರಿಯುತ್ತಾನೆ. ಸಾದ್ವಿಯೂ, ಪ್ರಿಯವಾದಿನಿಯೂ ಆದ ಸತಿ ತನ್ನ ಪ್ರೀತಿ, ತ್ಯಾಗ, ಸಹನೆಗಳಿಂದ ಸದಾ ಪತಿಯ ಮನಸ್ಸನ್ನು ಗೆಲ್ಲುತ್ತಾಳೆ. ಸತಿಪತಿಗಳ ದಾಂಪತ್ಯ ಜೀವನ ಶಾರೀರಿಕ ಸಂಬಂಧವನ್ನು ಮೀರಿ ಆಧ್ಯಾತ್ಮಿಕ ಹಂತಕ್ಕೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಫಲ ಪುರುಷಾರ್ಥಗಳ ಪ್ರಾಪ್ತಿಗೆ ಕಾರಣವಾಗಬೇಕು. ಪರಸ್ಪರ ಅರಿತು ಬಾಳಬೇಕು. ಬಾಳು ಬೆಳಗಬೇಕು. ಇಂಥ ಸತಿಪತಿಗಳು ಕೂಡಿ ಮಾಡುವ ಭಕ್ತಿ, ಏಕೋಭಾವ ಶಿವನಿಗೂ ಪ್ರಿಯವಾಗುತ್ತದೆ.

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಪರಮೇಶ್ವರಿಯ ಪುಣ್ಯನಾಮವನು ಪಗಲಿರುಳು

ಸರಸಾನುರಾದಿಂದೋದಿ ಕೇಳಿದವರ್ಗೆ

ದುರಿತಕಂಟಕವಳಿದು ಕೈಸಾರುತಿಹವಮಳತರ ಭೋಗಮೋಕ್ಷಂಗಳು ||ಪ||

 

ಹ್ರೀಂಕಾರಿ ವಾಣಿ ಕಲ್ಯಾಣಿ ರುದ್ರಾಣಿ ರಮೆ

ಓಂಕಾರರೂಪಿಣಿ ಗಣಾನಿ ಗಾನಪ್ರೀತೆ

ಹ್ರೈಂಕಿಲಾಮಾಲಿನಿ ಮಹಾಮಾಯೆ ಮಾತಂಗಿ ಕ್ಲಿಂಕಲೇ ವರವರೇಣ್ಯೆ

 

ಸೌಂಕಾರಸದನೆ  ಶರ್ವಾಣಿ ಶಾರದೆ ಸತ್ಯೆ

ಕ್ರೌಂಕವಚಮುಖ್ಯೆ   ಮಂತ್ರಾಧಿದೇವತೆ ದೇವಿ

ಶ್ರೀಂಕಿಲಾಕಾರೆ  ವಿದ್ಯಾಂಗಿ ಮಾತೃಕೆ ಮಾನ್ಯೆ ಶಾಂಕರೀಶಾನಿಯೆಂದು         ||೧|

 

ಗಿರಿಜೆ ಗೀರ್ವಾಣಪೂಜಿತೆ ಗೌರಿ ಗುಹಜನನಿ

ಪರನಾದಬಿಂದುಮಂದಿರೆ ಮನೋಂಬುಜಹಂಸೆ

ವರದೆ ವೈಭವೆ ನಿತ್ಯಮುಕ್ತೆ  ನಿರ್ಮಲೆ ನಿರಾವರಣೆ ಶಿವೆ ಶಾಂತೆ ಕಾಂತೆ

 

ಧರಣಿ ಧರ್ಮಾನುಗತೆ ಸಾವಿತ್ರಿ ಗಾಯತ್ರಿ  

ವಿರಜೆ ವಿಶ್ವಾತ್ಮಕೆ  ವಿಧೂತಪಾಪವ್ರಾತೆ

 ಶರಣಹಿತೆ ಸರ್ವಮಂಗಳೆ ಸಚ್ಚಿದಾನಂದೆ ಪರಸುಧಾಕಾರಿಯೆಂದು          ||೨||

 

ಚಂಡೆ ಚಂಡೇಶ್ವರಿ ಚತುರೆ ಕಾಳಿ ಕೌಮಾರಿ

 ಕುಂಡಲೆ ಕುಟಿಲೆ ಬಾಲೆ ಭೈರವಿ ಭವಾನಿ ಚಾ-

ಮುಂಡಿ ಮೂಲಾಧಾರೆ ಮನುವಂದೆ ಮುನಿಪೂಜ್ಯೆ ಪಿಂಡಾಂಡಮಯೆ ಚಂಡಿಕೆ

 

 

ಮಂಡಲತ್ರಯನಿಲಯೆ ದಂಡಿ ಜಯೆ  ದುರ್ಗಿ ಫಣಿ

 ಕುಂಡಲೆ ಮಹೇಶ್ವರಿ ಮನೋನ್ಮನಿ ಜಗನ್ಮಾತೆ

ಖಂಡಶಶಿಮಂಡನೆ ಮೃಡಾಣಿ ಪಾರ್ವತಿ ಪರಮ ಚಂಡಕರಮೂರ್ತಿಯೆಂದು      ||೩||

 

ವಿಮಲೆ ವಿಖ್ಯಾತೆ ಮಧುಮತಿಮುಖ್ಯೆ  ಮಹನೀಯೆ

 ಸುಮತಿ ಸುಲಲಿತ ಹೈಮವ ಭಾವೆ ಭೋಗಾರ್ಥಿ

ಕಮಲೆ ಕಾತ್ಯಾಯನಿ ಕರಾಳೆ ತ್ರಿಪುರವಿಜಯೆ ದಮೆ ದಯಾರಸಪೂರಿತೆ

 

ಅಮೃತೆ ಅಂಬಿಕೆ ಅನ್ನಪೂರ್ಣೆ ಅಶ್ವಾರೂಢೆ

ಶಮೆ ಶುದ್ಧ ಸಿಂಹವಾಹಿನಿ ಶುಭಕಲಾಪೆ ಸು

ಪ್ರಮದೆ ಪಾವನೆ ಪದ್ಯೆ ಪಾಶದೆ ಪರಬ್ರಹ್ಮ ಉಮೆ ಸಹಜ ಸುಮುಖಿಯೆಂದು     ||೪||

 

ಇಂತು ಗುರು ಶಂಭುಲಿಂಗದ ಶಕ್ತಿ ಸೌಭಾಗ್ಯ

ಸಂತತಶರೀರಸಮ್ಯಜ್ಞಾನಸತ್ಕ್ರಿಯೆ

ಸಮಂತು ಕರುಣಾಸನಾಭರಣಾಯುಧಾದಿ  ಸುಗುಣಾಂತರಾದಿಗಳಾಗುತ

 

ಸಂತಸವನೀವ ಶಾಂಭವಿಯ ನೂರೆಂಟು ಶುಭ

ವಾಂತ ನಾಮಂಗಳು ಜಪಿಸಿದೊಡೆ ಸತಿಪುತ್ರ

ಸಂತಾನಸಕಲಸಂಪದಸಿದ್ದಿಯಪ್ಪುದೋರಂತೆ ನಿಶ್ಚಯಮಿದೆಂದು      ||೫|

ಲೇಖಕ: ಶ್ರೀಕಂಠ.ಚೌಕೀಮಠ

(ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಮಹಾ ಸ್ವಾಮಿಗಳ ೧೫೭ ನೆಯ ಜಯಂತಿ ಮಹೋತ್ಸವದ ನಿಮಿತ್ತ ಸ್ಮರಣೆ)

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.

ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಳೆದ ತಿಂಗಳನಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಓದಿದ್ದು ಕೇವಲ ಏಳನೆಯ ತರಗತಿ.ಅವರು ಏಳನೆಯ ತರಗತಿಯ ಮುಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.ಅವರು ಅನುತ್ತೀರ್ಣರಾಗಿದ್ದು- ಅವರು ದಡ್ಡರೆಂದು ಅಲ್ಲ.

ಅವರು ಅನುತ್ತೀರ್ಣರಾದ ಕಾರಣ, ಪರೀಕ್ಷೆಯ ಹಿಂದಿನ ನಾಲ್ಕೈದು ದಿನಗಳ ಕಾಲ  120 ಕಿ.ಮಿ. ದೂರದ ಕಾಲ್ನೆಡಿಗೆಯ ಪ್ರವಾಸ.  ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದು ಮುಲ್ಕಿ (ಏಳನೆಯ ತರಗತಿ) ಪರೀಕ್ಷಾ ಕೇಂದ್ರಕ್ಕೆ ಬಂದು ಜ್ವರ ದಿಂದ ಬಳಲಿದ್ದು ಹೊರತು ಅವರು ಅನುತ್ತೀರ್ಣರಾಗುವಂತಹ ದಡ್ಡರಲ್ಲ. ಅವರೊಬ್ಬ ಸ್ವಾಭಿಮಾನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಅನುತ್ತೀರ್ಣರಾದರೂ ಮರಳಿ ತಮ್ಮ ತಾಯಿಯ ತೌರುಮನೆಯ ಊರು ಲಿಂಗದಹಳ್ಳಿಗೆ ಬಂದು ಗಾವಟಿ ಶಾಲೆ ತೆರೆದು ಊರ ಮಕ್ಕಳಿಗೆ ಪಾಠ ಹೇಳಿದ ಮಹಾನುಭಾವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು (ತ್ರಿವಿಧ ಜಂಗಮಲಿಂಗಸ್ಥಲಗಳು: ಸ್ವಯ, ಚರ, ಪರ)

(ಸೌಜನ್ಯ :ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ : ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳಗದಗ ಲೇಖನದ ಆಯ್ದ ಭಾಗ)

ವೀರಶೈವ-ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ .

  1. ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು .
  2. ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು. ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮ.

ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು .

 

  1. ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಎಂಬುದಕ್ಕೆ ಸಾಕ್ಷಿಯಾಗಿ  ಅವರು ತಮ್ಮ ಜೀವಿತಾವಧಿಯಲ್ಲಿ ಕಾರ್ಯಗತಗೊಳಿಸಿದ ಎಲ್ಲ ಯೋಜನೆಗಳ ಯಶೋಗಾಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮುಂದಾಲೋಚನೆ, ಯೋಜನೆ,ಸಂಪಲ್ಮೂನಗಳ ಕ್ರೋಢಿಕರಣ ಮತ್ತು ದೃಡ ಸಂಕಲ್ಪಗಳು ಮಹಾಶಕ್ತಿಗಳಾಗಿ ಅತ್ಯಧ್ಬುತವಾಗಿ ಗೋಚರಿಸುತ್ತವೆ.

ಅವುಗಳಲ್ಲಿ ಅತ್ಯಂತ ಮಹತ್ವವಾದ ಕೊಡುಗೆಗಳು ಹೀಗಿವೆ

  1. ೧೮೮೧-೮೩ ಪೂಜ್ಯರ ೧೪ನೆಯ ವರ್ಷದಲ್ಲಿಯೇ ಲಿಂಗದಹಳ್ಳಿಯಲ್ಲಿ ಗಾವಟಿ ಶಾಲೆ ಸ್ಥಾಪನೆ
  2. ೧೮೯೭ ನಾಡಿನಲ್ಲಿ ಬರಗಾಲ ಹಾನಗಲ್ಲಿನಲ್ಲಿ ಬರಪೀಡಿತರಿಗೆ ದಾಸೋಹ ಕೇಂದ್ರ ಸ್ಥಾಪನೆ.
  3. ೧೮೯೮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ಆರಂಭ.
  4. ೧೯೦೧ ಕಾಡಶೆಟ್ಟಿಹಳ್ಳಿಯಲ್ಲಿ ಗದಿಗೆಯ್ಯ ನೆಂಬ ಅಂಧ ಬಾಲಕನನ್ನು ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಮುಂದೆ ಅದೇ ಬಾಲಕ ಪಂಚಾಕ್ಷರಿ ಗವಾಯಿಗಳಾಗಿ ಪ್ರಸಿದ್ದಿ ಹೊಂದಿದ್ದು
  5. ೧೯೦೪ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ. ಇಲ್ಲಿಯವರೆಗೆ ೨೫ ಅಧ್ಯಕ್ಷರುಗಳ ಸೇವೆ ಪಡೆದು ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮಹಾಸಭೆ ತನ್ನದೇ ಆದ ಗೌರವಾದರಗಳನ್ನು ಹೊಂದಿದೆ.
  6. ೧೯೦೯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಅಭ್ಯುದಯಕ್ಕೆ ಶ್ರೀ ಶಿವಯೋಗಮಂದಿರ ಸ್ಥಾಪನೆ ಶ್ರೀ ಶಿವಯೋಗಮಂದಿರದ ಮೂಲಕ ಸಹಸ್ರಾರು ಸ್ವಾಮಿಗಳು ಅಧ್ಯಾತ್ಮಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣ ಪಡೆದು ಶಿವಯೋಗ ಸಂಪನ್ನರಾಗಿ ನಾಡಿನಾದ್ಯಂತ ಸಮಾಜ ಸೇವೆ ಯನ್ನು ವಿವಿಧ ರಂಗಗಳಲ್ಲಿ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು.

ಶತಮಾನದಿಂದ ಹಲವು ಶಾಸ್ತ್ರಿಗಳು ,ಕೀರ್ತನಕಾರರು,ಪುರಾಣಿಕರು,ಸಾಹಿತಿಗಳು ,ಶಿಕ್ಷಣ ತಜ್ಞರು , ಸಂಗೀತಗಾರರು ಶ್ರೀ ಶಿವಯೋಗಮಂದಿರದಿಂದ ಶಿಕ್ಷಣ ಕಲಿತು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು

  1. ೧೯೦೯ ನಾಡಿನ ಪ್ರಪ್ರಥಮ ಗೋಶಾಲೆ ಆರಂಭ
  2. ೧೯೧೦ಪ್ರಪ್ರಥಮ ಶಾಸ್ತ್ರೋಕ್ತ ವಿಭೂತಿ ನಿರ್ಮಾಣ ಕೇಂದ್ರ ಆರಂಭ
  3. ೧೯೧೧ ಯೋಗ ಪಾಠ ಶಾಲೆ ಆರಂಭ
  4. ೧೯೧೨ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭ
  5. ಪ್ರಪ್ರಥಮ ಮಹಿಳಾ ವಿದ್ಯಾಲಯ ಆರಂಭ
  6. ೧೯೧೦ ಗ್ರಂಥಾಲಯ ಸ್ಥಾಪನೆ .ವಚನಕಟ್ಟುಗಳ ಸಂಗ್ರಹ ,ತಾಳೆಯೋಲೆಗಳ ಸಂಗ್ರಹ
  7. ೧೯೧೦ ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಸ್ಥೆ ಸ್ಥಾಪನೆಗೆ ಚಾಲನೆ
  8. ೧೯೧೧ ಬಾಗಲಕೋಟೆ ಯಲ್ಲಿ ಶಿವಾನಂದ ಜಿನ್ನಿಂಗ ಮಿಲ್ಲ ಸ್ಥಾಪನೆ
  9. ೧೯೧೧ ಗದುಗಿನ ವೀರೇಶ್ವರ ಪುಣ್ಯಾಶ್ರಮ-ಸರ್ವ ಧರ್ಮ ಗಳ ಅಂಧ-ಅನಾಥ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಪಂ.ಪಂಚಾಕ್ಷರಿ ಗವಾಯಿಗಳ ಮೂಲಕ ಚಾಲನೆ.ಪಂ. ಮಲ್ಲಿಕಾರ್ಜುನ ಮನಸೂರ,ಪಂ. ಬಸವರಾಜ ರಾಜಗುರು ಅವರಿಂದ ಹಿಡಿದು ಪಂ. ವೆಂಕಟೇಶ್‌ ಕುಮಾರ ಅವರವರೆಗೂ ಸಹಸ್ರಾರು ಖ್ಯಾತನಾಮ ಸಂಗೀತ ಗಾರರ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ್ದು.

ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೇವಲ ಸಂಗೀತ ಕ್ಷೇತ್ರಕ್ಕೆ ಮೀಸಲಾಗಲಿಲ್ಲ. ನಾಟಕ ರಂಗಕ್ಕೂ ಪ್ರೋತ್ಸಾಹ ನೀಡಿ .ನಾಡಕ ಸಂಘಗಳನ್ನೂ ಸ್ಥಾಪಿಸಿತು.

  1. ೧೯೧೨ ಬಾಗಿಲಕೋಟೆಯಲ್ಲಿ ಶ್ರೀಗುರುಸಿದ್ದೇಶ್ವರ ಚಿತ್ರಮಂದಿರ ಸ್ಥಾಪನೆ.ಉತ್ತರ ಕರ್ನಾಟಕದ ಪ್ರಪ್ರಥಮ ಚಲನಚಿತ್ರ ಮಂದಿರ ಮೂಲಕ ಆಧುನಿಕ ಕಲೆಗೆ ಪ್ರೋತ್ಸಾಹ.
  2. ೧೯೧೩ ರಲ್ಲಿ ಅಸ್ಪೃಶ್ಯರು ಎಂಬ ಭೇದಭಾವ ಸವರ್ಣಿಯರಿಂದ ಉಂಟಾದಾಗ ಸ್ವಾಭಿಮಾನದ ಪ್ರಕ್ರಿಯೆಯಾಗಿ ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರಿಗಾಗಿಯೇ ಶಿವಯೋಗಮಂದಿರದ ಸಮೀಫ ಮಂಗಳೂರು ಎಂಬ ಗ್ರಾಮದಲ್ಲಿ ಶಾಲೆಯನ್ನು ತೆರೆದಿದ್ದು
  3. ೧೯೧೪ ನಿಡುಗುಂದಿಕೊಪ್ಪ ಸೇರಿ ನಾಲ್ಕು ಶಾಖಾ ಶಿವಯೋಗಮಂದಿರಗಳ  ಸ್ಥಾಪನೆ
  4. ೧೯೧೫ ಶಿರಸಂಗಿ ಲಿಂಗರಾಜರ ಆಸ್ತಿ ಸಮಾಜಕ್ಕೇ ಸಲ್ಲಲು ಮುಂಬೈ ಹೈಕೋರ್ಟನಲ್ಲಿ ಸಾಂಘಿಕ ಕಾನೂನು ಹೋರಾಟಕ್ಕೆ ಹಣಕಾಸು ಸಹಾಯ ಮತ್ತು ಗೆಲವು.ಈ ಗೆಲವು ಬೆಳಗಾವಿಯ ಕೆ.ಎಲ್.ಇ ಸೋಸೈಟಿಯ ಅಭಿವೃದ್ಧಿಗೆ ಸುಭದ್ರ ಅಡಿಪಾಯವಾಯಿತು
  5. ೧೯೧೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಾಳೇನಹಳ್ಳಿನಲ್ಲಿ ಶಾಖಾ ಶಿವಯೋಗ ಮಂದಿರ ಸ್ಥಾಪನೆ
  6. ೧೯೧೭ ಕಾಳೇನಹಳ್ಳಿ ಯ ನಾಲ್ಕು ನೂರು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿಗೆ ಚಾಲನೆ ಪ್ರಪ್ರಥಮ ಬಾರಿಗೆ ಟ್ರಾಕ್ಟರ ಖರೀಧಿ ಕೃಷಿಗೆ ಉತ್ತೇಜನೆ
  7. ೧೯೧೭ ಗದುಗಿನಿಂದ ಯಡೆಯೂರು ಕ್ಷೇತ್ರ ಪಾದಯಾತ್ರೆ ಮಾಡಿ ಧಾರ್ಮಿಕ ಸಂಚಲನೆಯನ್ನುಂಟು ಮಾಡಿದ್ದು.
  8. ೧೯೨೦ ವಚನಪಿತಾಮಹ ಫ.ಗು.ಹಳಕಟ್ಟಿಯವರಿಗೆ ವಚನ ಸಂಗ್ರಹಕ್ಕೆ ಆರ್ಥಿಕ ಸಹಾಯ ಮಾಡಿಸಿ ಶಿವಯೋಗಮಂದಿರದಲ್ಲಿ ಸಂಗ್ರಹವಾಗಿದ್ದ ವಚನ ಕಟ್ಟುಗಳನ್ನು ನೀಡಿ ಪ್ರೋತ್ಸಾಹಿಸಿದ್ದು. ಕೃತಜ್ಞತೆ-ಗೌರವಕ್ಕೆ ಶ್ರೀ ಫ.ಗು.ಹಳಕಟ್ಟಿಯವರು ತಮ್ಮ ಗ್ರಂಥ ”ವಚನಶಾಸ್ತ್ರಸಾರ”ದ ಮೊದಲ ಭಾಗವನ್ನು ಬೆಳಗಾವಿಯಲ್ಲಿ ಮುದ್ರಿಸಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಅರ್ಪಿಸಿದ್ದು
  9. ೧೯೨೯ ಮಹಾರಾಷ್ಟ್ರದ ಪರಳಿ ದೇಗುಲದ ಪ್ರವೇಶ ಕುರಿತು ಹೈದ್ರಾಬಾದ ನಿಜಾಮ ಕೋರ್ಟನಲ್ಲಿ ವೀರಶೈವರಿಗೂ ಹಕ್ಕು ಎಂದು ಸತತ ಐದು ವರ್ಷಗಳ ಕಾನೂನು ಹೋರಾಟ ನಡೆಯಿಸಿ  ಜಯಗಳಿಸಿದ್ದು
  10. ೧೯೦೪ ರಿಂದ ೧೯೩೦ ರ ವರೆಗೆ ಕರ್ನಾಟಕ-ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಒಟ್ಟು ೧೦ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನಗಳ ಆಯೋಜನೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ವೀರಶೈವ ಮಹಾಸಭೆಯ ಅಧಿವೇಶನಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದವು
  11. ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಟ್ಟಿತು

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

ಲೇಖಕ: ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ.

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ