ಹರನಾಮವನು ಬಿಡದೆ ಜಪಿಸಬಲ್ಲವರ ಭವ

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಹರನಾಮವನು ಬಿಡದೆ ಜಪಿಸಬಲ್ಲವರ ಭವ

ಮರಣಮಾಯಾಕರ್ಮಮಲಪಾಶಬಂಧಬಹು

ದುರಿತಸಂಸಾರಸಂತಾಪಸಂಚಯವಳಿದು ವರಭೋಗ  ಮೋಕ್ಷವಹುದು   |ಪ||

 

ಶಿವ ಮಹಾದೇವ ಶಂಕರ ಶರ್ವ ಪಾರ್ವತೀ

ಧವ ನಂದಿವಾಹ ದೇವೇಶಾನುದಕ್ಷ ವಾ

ಸವನತಪದಾಂಭೋಜ ನಗಚಾಪ ನಿರ್ಮಲ  ನಿರಾತಂಕ ನೀಲಕಂಠ

 

ಭುವನೇಶ ವಿಜಯ ವೇದಾಂಗ ವೈಶ್ರವಣಸಖ

ಪವಮಾನ ಪಂಚಮುಖ ಪಶುಪತಿ ಸಹಸ್ರಾಕ್ಷ

ಭವ ಭರ್ಗ ಭಾಳಲೋಚನ ಮೇರುಕಾರ್ಮುಕ  ಕಪರ್ದಿಯೆಂದು   ||1||

 

ಸೋಮ ಶಾಂತಾಭಯ ವಿರೂಪಾಕ್ಷ ವಿಶ್ವಾಭಿ

ರಾಮ ಗಂಭೀರ ಕಾಲಾರಿ ಕೂಟಸ್ಥ ವಿಭು

ವಾಮದೇವಾಘೋರ ಪಂಚಾಕ್ಷರೋಂಕಾರ  ತತ್ಪುರುಷ ರುದ್ರ ಭದ್ರ

 

ಭೀಮ ಸದ್ಯೋಜಾತ ಮೃಡ ಮಹಾಕಾಲ ಜಿತ

ಕಾಮ ಮೃತ್ಯುಂಜಯ ಪುರಾತನ ಪರಾತ್ಪರ ನಿ-

ರಾಮಾಯಾನಂತತೇಜೋರಾಶಿ ಸರ್ವಜ್ಞ ಶಾಶ್ವತ  ಕಪಾಲಿಯೆಂದು    ||2||

 

ಶೂಲಿ ಸುಜನೈಕೆಬಾಂಧವ ಸದಾಶಿವ ಚಂದ್ರ

 ಮೌಳಿ  ಮಹಿಮೋಗ್ರಚರ್ಮಾಂಬರಾಸುರಶಿರೋ

ಮಾಲಿ ಮಂದಾಕಿನೀಧರ ಮಹೇಶ್ವರ ಮೇಘವಾಹ ಮಂದಾರನಿವಾಸ

 

 

 ನೀಲಲೋಹಿತ ಪಾರಿಜಾತ ಪಾವನ ಲೋಕ

ಪಾಲ ಕೈಲಾಸಮಂದಿರ ಮಂತ್ರಮಯ ಭಕ್ತಿ

ಲೋಲ ಪಂಚಬ್ರಹ್ಮ ಪರನಾದ ಬಿಂದು ಪರಮಾತ್ಮ ಪುರವೈರಿಯೆಂದು   |3||

 

ವರದ ವಾಗೀಶ ವರ್ಣಾತೀತ ವಂದ್ಯ ಜಯ

ಪರಮ ಪರತರ ಪರಂಜ್ಯೋತಿ ಪರಮಾನಂದ

ನಿರಪಾಯ ನಿರುಪಮ ನಿರಾವರಣ ನಿರ್ಲೇಪ  ನಿರವಯವ ನಿತ್ಯತೃಪ್ತ

 

ಉರಗಕಂಕಣ ವಿಶ್ವತೋಬಾಹು ವಿಶ್ವಾತ್ಮ

ಸುರಗಣಾರ್ಚಿತ ಸನಾತನ ಸದಾಗತಿ ಹಂಸ

ಗಿರಿಶ ಗಾಂಗೇಯಪಿತ ಗಣನಾಥ ಜಗದೀಶ ವಿಷಧರ ಪಿನಾಕಿಯೆಂದು  || 4 ||

 

ಉದಯಾಸ್ತಮಾನದೊಳು ನೂರೆಂಟು ನಾಮವನು

ಪದುಳದಿಂದೋದಿಕೇಳಿದವರ್ಗೆ ಶಂಭುಲಿಂಗದ

ಕರುಣದಿಂದಿನಿತು ಕೊರತೆಯಿಲ್ಲದ ಸಕಲ ಸಂಪದದೊಳೊಂದುಗೂಡಿ

 

ಸದಮಲಜ್ಞಾನ ಸದ್ಭಕ್ತಿಗಳು ಮೇಲೆ ಮೇ-

 ಲೊದವಿ ಕೈಸಾರುತಿಹವಿಲ್ಲಿ ಪರದೊಳೊಂ-

ದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆವುದಿದು ಸತ್ಯವೆಂದು    ||೫||

 

 

 

 

                               

Related Posts