ಕ್ಯಾಸನೂರಿ(ಖೇಚರಿಪುರ)ನ ಲಿಂ. ಶ್ರೀ ಗುರುಬಸವ ಶಿವಾಚಾರ್ಯರ ಕ್ರಿಯಾ ಸಮಾಧಿಯ ಜಾಗೃತ ಸ್ಥಳವನ್ನು ನೋಡುವ ಭಾಗ್ಯ ನನಗೊದಿಗೆ ಬಂದದ್ದು ದಿ.೧೪-೧೦-೨೦೨೪ ರಂದು ಕೆಳದಿಯ ಪಂಚಮಠಗಳಲ್ಲೊಂದಾದ ಗೊಗ್ಗಿಹಳ್ಳಿ ಹಿರೇಮಠದ ಕಾರ್ಯಕ್ರಮದಲ್ಲಿ.
ಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಅಕ್ಕಿಆಲೂರು,ಪೂಜ್ಯಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಮೂಲಗದ್ದೆ ಮತ್ತು ಪೂಜ್ಯ ಷ.ಬ್ರ.ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು ಕ್ಯಾಸನೂರು ಅವರುಗಳ ಅಂಥಕರುಣೆಯ ಕರೆ ನನಗೆ ಕ್ಯಾಸನೂರು ಶ್ರೀಮಠದ ದರ್ಶನದ ಭಾಗ್ಯವನ್ನೊದಗಿಸಿಕೊಟ್ಟಿತ್ತು.
ಶ್ರೀಶೈಲ ಪೀಠದ ಶಾಖಾಮಠವಾದ ಕ್ಯಾಸನೂರಿನ ಸಂಸ್ಥಾನ ಹಿರೇಮಠ ಆವರಣವನ್ನು ಪ್ರವೇಶಿಸುತ್ತಿದ್ದಂತೆ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಶ್ರೀ ಮಠದ ಭೂದೃಶ್ಯ ವಿನ್ಯಾಸ ( landscape ).ಕರಾರುವಕ್ಕಾದ ಭೂಮಿಯ ಸದ್ಬಳಕೆ.
ಮುಖ್ಯ ಪ್ರವೇಶ ದ್ವಾರದಿಂದ ಲಿಂ.ಗುರುಬಸವ ಶಿವಾಚಾರ್ಯರರ ಗದ್ದುಗೆಯ ಸುಂದರ ಮಂದಿರ, ಶ್ರೀ ಮೂಕೇಶ್ವರ ಸ್ವಾಮಿಯವರ ಗದ್ದುಗೆ ಮಂದಿರ ಮತ್ತು ಶಕ್ತಿ ದೇವತೆ ಚೌಡೇಶ್ವರಿ ದೇವಿಯ ಮಂದಿರಗಳ ರಚನೆ ಮತ್ತು ಮುಖ್ಯ ದ್ವಾರ ಮತ್ತು ಮಂದಿರಗಳ ಮಧ್ಯದ ವಿಶಾಲ ಜಾಗ ವಿಶೇಷವೆನಿಸಿತು .ಈ ಮಧ್ಯದ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಬಯಲು ಸಭಾ ವೇದಿಕೆ ಮಠದಲ್ಲಿ ಜರಗುವ ಧಾರ್ಮಿಕ ಸತ್ಸಂಗಗಳನ್ನು ಸಾಕ್ಷೀಕರಿಸಿತು.
ಶ್ರೀ ಮಠದ ಅಧ್ಯಾತ್ಮ ಕೇಂದ್ರದ ಭೂದೃಶ್ಯ ವಿನ್ಯಾಸವು (spiritual center landscape design) ಶಾಂತಿ, ಪ್ರಾಕೃತಿಕ ಸೌಂದರ್ಯ, ಮತ್ತು ಅಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಸಾರುವ ಎಲ್ಲ ಅಂಶಗಳನ್ನು ಹೊಂದಿದ್ದು ಸ್ವಚ್ಛ,ನಿರ್ಮಲ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.
೧೮೯೪ ರಲ್ಲಿ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯ ರಾದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನ ಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.
ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನ ದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ. ಶ್ರೀ ಮಠದ ಸದ್ಯದ ಪೀಠಾಧಿಪತಿ ಗಳಾದ ಪೂಜ್ಯ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತತ್ವ ಶಕ್ತಿಯ ಪ್ರತಿಫಲವಾಗಿ ಶ್ರೀ ಮಠದ ಪರಿಸರ ವಿಶೇಷ ವಾಗಿ ವಿನ್ಯಾಸ ಗೊಂಡಿದೆ. ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಅನುಷ್ಠಾನ ದ ಸ್ಥಳವಂತೂ ಕೆಂಪು ಚಿರಿ ಕಲ್ಲುಗಳಿಂದ ( ಲ್ಯಾಟರೈಟ್ ಸ್ಟೋನ್)ಆಶ್ರಮ ವಿನ್ಯಾಸ ದಲ್ಲಿ ರೂಪಗೊಂಡಿದ್ದು ನೋಡುಗರನ್ನು 18ನೆಯ ಶತಮಾನದ ಅಂತಿಮ ವರ್ಷಗಳ ಚಿತ್ರಣವನ್ನು ಕಟ್ಟಿಕೊಡುವ ದರ ಜೊತೆಗೆ ಅಲ್ಲಿನ ನಿರ್ಮಲ ಮತ್ತು ಪ್ರಶಾಂತ ವಾತಾವರಣ – ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ “ಇರುವು”ವನ್ನು ಸಾಕ್ಷೀಕರಿಸುತ್ತದೆ.

ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಜೊತೆಗೆ ಅವರ ಶಿಷ್ಯರಾದ ಪೂಜ್ಯ ಹಾಲಯ್ಯ ( ಹಾನಗಲ್ಲ ಶ್ರೀ ಕುಮಾರೇಶ್ವರರ ಪೂರ್ವಾಶ್ರಮದ ಹೆಸರು ) ಲೋಕಸಂಚಾರ ಮಾಡುತ್ತ ಅಣ್ಣಿಗೇರಿಯ ತೊಂಟದಾರ್ಯ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳವರಿಗೆ ದೇಹಲಾಸ್ಯಯುಂಟಾಗುತ್ತದೆ.ದೇಹಾಲಸ್ಯ ಉಲ್ಭಣಿಸಿ ಅನೀರಿಕ್ಷಿತವಾಗಿ ಶ್ರೀ ಬಸವಲಿಂಗ ಶಿವಯೋಗಿಗಳು ಶಾಲಿವಾಹನ ಶಖೆ ೧೮೧೫ ಮತ್ತು ವಿಕ್ರಮ ಸಂವಸ್ಥರ ೧೯೫೦ ಪುಷ್ಯ ಶು.೫ ( 12-01-1894) ರಂದು ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾಗುತ್ತಾರೆ. ಕ್ರಿಯಾ ಸಮಾಧಿಯ ವಿಧಿ ವಿಧಾನಗಳನ್ನು ಮುಗಿಸಿದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.
ನನಗೊಂದು ಕೂತೂಹಲವಿತ್ತು ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ತಮ್ಮ ಗುರುಗಳನ್ನು ಕಳೆದುಕೊಂಡಿದ್ದು ಬಯಲುಸೀಮೆಯ ಗದಗ ಜಿಲ್ಲೆಯ ಅಣ್ಣಿಗೇರಿ ಎಂಬ ಪುಟ್ಟ ಪಟ್ಟಣದಲ್ಲಿ, ಗುರುಗಳ ಅಗಲಿಕೆಯ ನೋವು ಮರೆಯಲು ಅನುಷ್ಠಾನಕ್ಕೆ ಹೋಗಿದ್ದು ಮಲೆನಾಡು ಪ್ರದೇಶಕ್ಕೆ ೧೬೦ ಕಿ.ಮಿ. ದೂರದ ಸೊರಬ ತಾಳೂಕಿನ ಕ್ಯಾಸನೂರು ಎಂಬ ಗ್ರಾಮಕ್ಕೆ. ಏಕೆ ಮತ್ತು ಯಾವ ಕಾರಣಕ್ಕಾಗಿ ? ಎಂದು.
ಆ ಸನ್ನಿವೇಷವನ್ನು ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ” ಯಲ್ಲಿ ಹೀಗೆ ವರ್ಣಿಸಿದ್ದಾರೆ,
“….ಆ ತುರ್ಯಾತೀತ ಸಮಾಧಿಯಲ್ಲಿ ತಮ್ಮ ಪರಮಾರಾಧ್ಯ ಶ್ರೀಗುರು ಮೂರ್ತಿಯನ್ನು ದರ್ಶಿಸುತ್ತ ಪರಮಾನಂದದೊಳಗೆ ಮುಳುಗಿದ್ದ ಹಾಲಸ್ವಾಮಿ ದೇಶಿಕರು ರೆಪ್ಪೆಯಲುಗಿಸಿ ಬಹಿರ್ಮುಖರಾದಾಗ ಮೂಡಣ ದಿಶೆಯಲ್ಲಿ ಮುಂಜಾವದ ಬೆಳಗು ಸೂಸಿ ಹರಡಿತ್ತು . ಶ್ರೀ ಬಸವಲಿಂಗಸ್ವಾಮಿಗಳ ಗದ್ದುಗೆಗೆ ಮಣಿದು ಪೂಜೆ-ಪ್ರಸಾದ ಪೂರೈಸಿಕೊಂಡ ಹಾಲಸ್ವಾಮಿ ದೇಶಿಕರು ಅಣ್ಣಿಗೇರಿಯಿಂದ ಮಲೆನಾಡ ಪ್ರಾಂತ್ಯದತ್ತ ಹೆಜ್ಜೆಗಳನ್ನಿರಿಸಿದ್ದರು.
`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಶ್ರೀ ಬಸವಲಿಂಗ ಸ್ವಾಮಿಗಳು ಅಂತರಂಗದೊಳಗೆ ತಮಗೆ ನೀಡಿದ ನಿರ್ದೇಶನದಲ್ಲಿ ತಮ್ಮ ಶ್ರೀ ಗುರುವೀಗ ಆಂತರ್ಯದಲ್ಲಿ ನೆಲೆಗೊಂಡಿದ್ದಾರೆ ಎಂಬ ಭಾವದಲ್ಲಿ ಹಾಲಸ್ವಾಮಿ ದೇಶಿಕರು ದೃಢ ಹೆಜ್ಜೆಗಳನ್ನಿರಿಸುತ್ತ ಹೊರಟಿದ್ದರು. `ಹಿಂದೊಂದು ಕಾಲದಲ್ಲಿ ಶಿವಯೋಗಿಗಳು ಈ ನಾಡಲ್ಲೆಲ್ಲ ತುಂಬಿದ್ದರು. ಮಲೆನಾಡ ಪ್ರಾಂತ್ಯದಲ್ಲಿ ವಿಶೇಷ ಪ್ರಭಾವ ಬೀರಿದ್ದರು.’ ಶ್ರೀ ಬಸವಲಿಂಗಸ್ವಾಮಿಗಳು ಒಮ್ಮೆ ಹೇಳಿದ್ದ ನುಡಿ ಹಾಲಸ್ವಾಮಿ ದೇಶಿಕರ ಸ್ನೃತಿಯಲ್ಲಿ ಹಾದುಹೋಗಿತ್ತು”
27 ವರ್ಷದ ಹಾಲಯ್ಯನವರು ಅಣ್ಣಿಗೇರಿಯಿಂದ ಕ್ಯಾಸನೂರಿಗೆ ಕಾಲ್ನಡಿಗೆಯಿಂದ ಸಂಚರಿಸಿದ ೧೬೦ ಕಿ.ಮಿ. ಮಾರ್ಗ (ಊಹೆ)

(ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ”ಯ ಮುಂದುವರೆದ ಭಾಗ)
“…..ಶ್ರೀಗುರುಬಸವ ಸ್ವಾಮಿಗಳ ಗದ್ದುಗೆಯಲ್ಲಿ ಅನುಷ್ಠಾನ ನಡೆಸಬೇಕು ಎಂಬ ಹಾಲಸ್ವಾಮಿ ದೇಶಿಕರ ಸದಾಶಯಕ್ಕೆ ಒಡಂಬಟ್ಟಿದ್ದ ಉಳವಿಮಠದ ಗುರುಬಸವಯ್ಯ ಹಾಗೂ ಮಳಗುದ್ದಿ ಕೆಂಡಪ್ಪಗೌಡ ಎಂಬ ಈ ಭಾಗದ ಪ್ರಮುಖರು ಅನುಷ್ಠಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು.
ಶ್ರೀ ಹಾಲಸ್ವಾಮಿ ದೇಶಿಕರು ನಡೆಸಬೇಕೆಂದಿದ್ದ ಅನುಷ್ಠಾನ ವಿಶಿಷ್ಟವಾಗಿತ್ತು . ಉಪ್ಪು, ಹುಳಿ, ಕಾರ ಸಕ್ಕರೆಯಂಥ ಪದಾರ್ಥಗಳನ್ನು ಸೇವಿಸದೆ ಹಸುವಿನ ಹಾಲು- ಅನ್ನವನ್ನು ಪ್ರಸಾದವಾಗಿ ಅರ್ಪಿತಗೊಳಿಸಿ ಮೌನಾಚರಣೆಯೊಂದಿಗೆ ಮೂರುವರುಷ ಗಳವರೆಗೆ ಅಖಂಡ ಅನುಷ್ಠಾನ ನಡೆಸಬೇಕು ಎಂಬ ಸದುದ್ದೇಶ ಇರಿಸಿಕೊಂಡಿದ್ದರು. ಇಂಥ ಅನುಷ್ಠಾನ ನಡೆಸುವ ಮೊದಲು ಹಿರಿಯ ಶಿವಯೋಗಿಗಳ ಅನುಗ್ರಹ ಪಡೆಯುವುದು ಸೂಕ್ತ ಎಂಬ ಸಲಹೆಯನ್ನು ಕೆಂಡಪ್ಪಗೌಡರು ನೀಡಿದ್ದರು. ಕೆಂಡಪ್ಪಗೌಡರು ಪರಮಗುರುಭಕ್ತರು. ಗುರುಸೇವಾ ಕಾರ್ಯಗಳಿಗೆ ಸದಾ ಮುಂದಾಗುವ ಗುಣವಂತರು. ಇವರು ಆಗಾಗ ಹಾನಗಲ್ಲಿನ ಕುಮಾರಸ್ವಾಮಿಗಳ ಮಠಕ್ಕೆ ಹೋಗಿಬರುತ್ತಿದ್ದರು. ಈ ವಿರಕ್ತಮಠದಲ್ಲಿ ಆಗ ಶ್ರೀ ಫಕೀರೇಶ್ವರ ಸ್ವಾಮಿಗಳು ಪೀಠಾಧಿಪತಿಗಳಾಗಿದ್ದರು. ತಮ್ಮ ವೈರಾಗ್ಯ ತಪೋನಿಷ್ಠೆಯಿಂದ ಶಿವಯೋಗ ಸಾಧನೆಯಲ್ಲಿ ಪಂಚಪರುಷ ಸಿದ್ಧಿಗೊಂಡ ಶ್ರೀ ಫಕೀರಸ್ವಾಮಿಗಳು ಹಸ್ತಮುಟ್ಟಿ ಕೊಟ್ಟದ್ದು ಫಲದಾಯಕವಾಗುತ್ತಿತ್ತು . ನುಡಿದ ವಾಣಿ ಅನುಗ್ರಹವಾಗುತ್ತಿತ್ತು . ಮುಪ್ಪಿನಲ್ಲಿದ್ದ ಶ್ರೀ ಫಕೀರ ಸ್ವಾಮಿಗಳು ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನೋಡಿ ಎಂದು ಭಕ್ತರಿಗೆ ಆಗಾಗ ಹೇಳುತ್ತಿದ್ದರು. ಹಾಲಸ್ವಾಮಿ ದೇಶಿಕರು ಹಾನಗಲ್ಲ ವಿರಕ್ತಮಠಕ್ಕೆ ಸೂಕ್ತ ಉತ್ತರಾಧಿಕಾರಿ ಎಂದು ಕಂಡುಕೊಂಡಿದ್ದ ಕೆಂಡಪ್ಪಗೌಡರು ತಾವು ಈ ವಿಷಯವನ್ನು ಪ್ರಸ್ತಾಪಿಸಿದರೆ ಒಪ್ಪುವರೋ ಇಲ್ಲವೇ ಎಂಬ ಅನುಮಾನದಲ್ಲಿಯೇ, ಅನುಷ್ಠಾನಕ್ಕೆ ಮೊದಲು ಶ್ರೀ ಫಕೀರೇಶ್ವರ ಸ್ವಾಮಿಗಳಂಥ ಶಿವಯೋಗಿಗಳ ಅನುಗ್ರಹ ಪಡೆಯುವುದು ಒಳ್ಳೆಯದು ಎಂದು ಸೂಚಿಸಿ ಹಾನಗಲ್ಲಿಗೆ ಹಾಲಸ್ವಾಮಿ ದೇಶಿಕರನ್ನು ಕರೆದುಕೊಂಡು ಹೋಗುವ ಸನ್ನಾಹ ನಡೆಸಿದ್ದರು. ಶ್ರೀ ಫಕೀರೇಶ್ವರ ಸ್ವಾಮಿಗಳ ಬಗೆಗೆ ಹೇಳಿದ ಸಂಗತಿಗಳನ್ನೆಲ್ಲ ಕೇಳಿ ಅಂಥ ಹಿರಿಯ ಶಿವಯೋಗಿಗಳ ಅನುಗ್ರಹ ತಮ್ಮ ಅನುಷ್ಠಾನಕ್ಕೆ ಅವಶ್ಯ ಎಂದುಕೊಂಡು ಹಾಲಸ್ವಾಮಿ ದೇಶಿಕರು ಹಾನಗಲ್ಲಿಗೆ ಹೋಗಲು ಸಮ್ಮತಿಸಿದ್ದರು; ಉಳವಿಮಠದ ಗುರುಬಸಯ್ಯ ಹಾಗೂ ಕೆಂಡಪ್ಪಗೌಡರೊಂದಿಗೆ ಹಾನಗಲ್ಲಿನತ್ತ ಹೊರಟಿದ್ದರು.
ಹಾನಗಲ್ಲು ತಲುಪಿ ಕುಮಾರ ಮಠದಲ್ಲಿ ಶ್ರೀ ಫಕೀರೇಶ್ವರ ಸ್ವಾಮಿಗಳ ದರ್ಶನ ಮಾಡಿದಾಗ ಶಿವಯೋಗಿವರ್ಯರ ಬಗೆಗೆ ತಾವು ಕೇಳಿದ್ದು ದಿಟವೆಂಬುದು ಹಾಲಸ್ವಾಮಿ ದೇಶಿಕರಿಗೆ ಪ್ರತ್ಯಕ್ಷವಾಗಿ ಕಂಡಿತ್ತು. ಶಿವಯೋಗದ ಮಹತಿಯನ್ನು ಕಣ್ಣೆದುರೇ ತೋರುವ ಇಂಥ ಶಿವಯೋಗಿಗಳು ಎಲ್ಲ ಕಾಲದಲ್ಲೂ ಯಾವುದೋ ಒಂದೆಡೆ ಗುಪ್ತವಾಗಿ ಇರುತ್ತಾರೆ ಎನಿಸಿತ್ತು . ಹಾಲಸ್ವಾಮಿ ದೇಶಿಕರು ಹೃದಯದುಂಬಿ ಶ್ರೀ ಫಕೀರಸ್ವಾಮಿಗಳ ಶ್ರೀ ಚರಣಗಳಿಗೆ ಮಣಿದಿದ್ದರು. ಸ್ನಾನ-ಪೂಜಾರ್ಚನೆಗಳು ಸಾಂಗವಾಗಿ ಪೂರೈಸಿದ್ದವು. ತಮ್ಮ ಪೀಠಕ್ಕೆ ಯೋಗ್ಯ ಉತ್ತರಾಧಿಕಾರಿ ಕೊನೆಗೂ ತಮ್ಮೆದುರು ಬಂದನೆಂಬುದನ್ನು ಶ್ರೀ ಫಕೀರೇಶ್ವರ ಸ್ವಾಮಿಗಳು ತಮ್ಮ ಲಿಂಗಪೂಜೆಯಲ್ಲಿ ಕಂಡಿದ್ದರು……”
ಮುಂದೆ ನಡೆದಿದ್ದು ಒಂದು ಅಪೂರ್ವ ಇತಿಹಾಸ.ಮನೋವ್ಯಾಕುಲತೆಯ ನಿಗ್ರಹಕ್ಕೆ ಬಂದು ಪೂಜ್ಯ ಗುರುಬಸವ ಶಿವಾಚಾರ್ಯರ ಗದ್ದುಗೆ ಬಳಿಬಂದು ಅನುಷ್ಠಾನಕ್ಕೆ ಕುಳಿತರೆ ಆ ಅಮೋಘಶಕ್ತಿಯ ಶಿವಯೋಗಿಯ ಜಾಗೃತ ಸ್ಥಳ ಹಾಲಯ್ಯ ದೇಶಿಕರನ್ನು ಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವ ಕುಮಾರ ಸ್ವಾಮಿಗಳನ್ನಾಗಿಸಿ, ಸತ್ತ ಸಮಾಜದ ಮರು ಹುಟ್ಟಿಗಾಗಿ ಸಮಾಜ ಸಂಜೀವಿನಿಯನ್ನಾಗಿ ನೀಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು.
ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ.
`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಎಂದು ಯಳಂದೂರು ಬಸವಲಿಂಗ ಶಿವಯೋಗಿಗಳು ಶ್ರೀಕುಮಾರೇಶ್ವರರಿಗೆ ಹೇಳಿದ ಆ ನುಡಿಗಳು ನನ್ನನ್ನು ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಪ್ರೇರಣೆ ನೀಡಿದವು.

- ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಸಂಗ್ರಹಿಸಿದ ಮಾಹಿತಿಗಳು
ವಿಜಯನಗರ ಪ್ರೌಡದೇವರಾಯನ ಸಮಕಾಲೀನರಾದ (೧೪೧೯-೧೪೫೦) ಕನ್ನಡದಲ್ಲಿ ಸಪ್ತಕಾವ್ಯಗಳ ಕರ್ತೃ; ಸಪ್ತ ಕಾವ್ಯಗಳ ಗುರುಬಸವ ಎಂದು ಖ್ಯಾತರಾದ ಮತ್ತು ನೂರೊಂದು ವಿರಕ್ತರಲ್ಲಿ ಒಬ್ಬರಾದ ಶ್ರೀ ಗುರುಬಸವ ಶಿವಾಚಾರ್ಯರು ಮೂಲತಃ ಸೊರಬ ತಾಲೂಕಿನ ಕ್ಯಾಸನೂರು (ಖೇಚರಿಪುರ) ಸಂಸ್ಥಾನ ಹಿರೇಮಠದವರು. ಪೂಜ್ಯರ ಕ್ರಿಯಾಸಮಾಧಿ ಶ್ರೀಮಠದಲ್ಲಿರುವದು.ಮತ್ತು ಶ್ರೀ ಮಠವು ಕೆಳದಿ ಸಂಸ್ಥಾನದ ಪಂಚಮಠಗಳ ಪೈಕಿ ಒಂದು ಶ್ರೀಮಠ ವಾಗಿರುತ್ತದೆ.
ಶ್ರೀಗುರುಬಸವ ರಿಂದ ರಚಿಸಲ್ಪಟ್ಟ ಸಪ್ತ ಕಾವ್ಯಗಳು ಹೀಗಿವೆ.
- ಶಿವಯೋಗಾಂಗ ವಿಭೂಷಣ,
- ಸದ್ಗುರು ರಹಸ್ಯ,
- ಕಲ್ಯಾಣೇಶ್ವರ,
- ಸ್ವರೂಪಾಮೃತ,
- ವೃಷಭಗೀತೆ,
- ಅವಧೂತಗೀತೆ ಮತ್ತು
- ಮನೋವಿಜಯ
ಶ್ರೀ ಗುರು ಬಸವರಿಂದ ಕೆಲವು ಸ್ವರವಚನಗಳು ರಚಿತವಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಗುರುಬಸವ ರಿಗೆ
- ಭಕ್ತಜನಮನೋಮಂದಿರ,
- ಶಿವಯೋಗಜನಸೇವಿತಚರಣಾರವಿಂದ,
- ಷಟ್ಸ್ಥಲಜ್ಞಾನ ಪ್ರಭಾಪುಂಜರಂಜಿತಾಂತರಂಗ,
- ವೀರಶೈವಮತಸ್ಥಾಪನಾಚಾರ್ಯ
ಮುಂತಾದ ಬಿರುದುಗಳಿದ್ದವೆಂದು ಮನೋವಿಜಯಕ್ಕೆ ತಾತ್ಪರ್ಯವನ್ನು ಬರೆದ ವಿರಕ್ತ ತೋಂಟದಾರ್ಯರು ತಿಳಿಸಿದ್ದಾರೆ. ಆದರೆ ಸ್ವವಿಷಯವಾಗಿ ಕವಿ ಏನನ್ನೂ ಹೇಳಿಕೊಂಡಿಲ್ಲ. ಕವಿ ವಿರಕ್ತರಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು.
ವಿಜಯನಗರ ಸಾಮ್ರಾಜ್ಯವನ್ನು ಸ್ಥಿರಗೊಳಿಸಿದ ಪ್ರೌಢದೇವರಾಯನ (ಕ್ರಿ.ಶ. 1419-1446) ಕಾಲದಲ್ಲಿ ಶ್ರೀ ಗುರುಬಸವರಿದ್ದರೆಂದು ಚೆನ್ನಬಸವಪುರಾಣದಿಂದ ತಿಳಿದುಬರುತ್ತವೆ. ಪ್ರೌಢದೇವರಾಯ ವೀರಶೈವನಾಗಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ತುಂಬ ನೆರವಾದುದು ಇತಿಹಾಸಾವಲೋಕನದಿಂದ ಶ್ರುತವಾಗಿದೆ. ಆತನ ಕಾಲದಲ್ಲಿ ನೂರೊಂದು ವಿರಕ್ತರು ಉದಿಸಿ, ಹಂಪೆಯಲ್ಲಿ ನೆರೆದು ವೀರಶೈವಧರ್ಮವನ್ನು ಪ್ರಚುರಗೊಳಿಸಿದುದೂ ಅಷ್ಟೇ ಪ್ರಸಿದ್ಧವಾದ ವಿಷಯ. ಈ ವಿರಕ್ತರ ತಪಃಭಾವ ನಿಜವಾಗಿಯೂ ಅವರ್ಣನೀಯವಾದುದು. ಅವರು ಸಂಸಾರದ ಅಸಾರತೆಯನ್ನು ಕಂಡುಕೊಂಡು, ಜಂಗಮಸ್ಥಲವನ್ನಾಶ್ರಯಿಸಿ ಪರಮವೈರಾಗ್ಯಶೀಲರಾಗಿ ಮೆರೆದಿದ್ದಾರೆ. ಅವರಲ್ಲಿ ಕರಸ್ಥಲದ ನಾಗಿದೇವರಿಗೂ ಗುರುಬಸವರಿಗೂ ಮಹತ್ತ್ವದ ಸ್ಥಾನವಿದೆ. ಇವರಿಬ್ಬರ ಒಡನಾಟವನ್ನು ಚೆನ್ನಬಸಪುರಾಣದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಮಾತುಗಳು ಸ್ಪಷ್ಟವಾಗುತ್ತವೆ. ಗುರುಬಸವರ ಅರಮನೆ (ಮಠ) ವಿಜಯನಗರದಲ್ಲಿತ್ತು. ಕರಸ್ಥಲದ ನಾಗಿದೇವ ಆ ಮಠಕ್ಕೆ ಒಮ್ಮೆ ಬಂದು ಗುರುಬಸವರನ್ನು ಕಂಡಿದ್ದ. ಗುರುಬಸವರು ವೇದ, ವೇದಾಂತ, ಪುರಾಣಾಗಮ, ಇತಿಹಾಸಾದಿಗಳಲ್ಲಿ ಬಲ್ಲಿದವರಾಗಿದ್ದು ಯೋಗಶಕ್ತಿಯಿಂದ ಅನೇಕ ಪವಾಡಗಳನ್ನು ಮೆರೆದರೆಂದೂ ಪ್ರೌಢದೇವರಾಯನ ಸಮ್ಮುಖದಲ್ಲಿ ಪರವಾದಿಗಳನ್ನು ಗೆದ್ದು ಶಾರದೆಯ ಪೀಠವನ್ನು ಅಲಂಕರಿಸಿದರೆಂದೂ ಖೇಚರಶಕ್ತಿಯನ್ನು ಪ್ರದರ್ಶಿಸಿ, ಗಗನದಲ್ಲಿ ಈಜುತ್ತ ಸಕಲ ರಾಗಗಳನ್ನು ಹಾಡಿ, ಬಯಲಿನೊಳಗೆ ಬಯಲಾದರೆಂದೂ ಅದೇ ಪುರಾಣದಿಂದ ತಿಳಿದುಬರುತ್ತದೆ.
ಗುರುಬಸವರು ವಿಜಯನಗರಕ್ಕೆ ಬರುವ ಪೂರ್ವದಲ್ಲಿ ಎಲ್ಲಿದ್ದರು?, ಅವರ ಮೂಲ ಮಠ ಯಾವುದು?, -ಎಂಬ ಪ್ರಶ್ನೆಗಳಿಗೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಕೊಡುವ ಪರಿಹಾರಗಳನ್ನು ಗಮನಿಸಬಹುದು. ಕವಿ ಗುರುಬಸವರು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಮಠಾಧ್ಯಕ್ಷರಾಗಿದ್ದರೆಂದೂ ವಿಜಯನಗರದ ರಾಯರ ಕಾಲದಲ್ಲಿಯೂ ಕೆಳದಿಯ ದೊರೆಗಳ ಕಾಲದಲ್ಲಿಯೂ ಕ್ಯಾಸನೂರು ಎಂಬುದಕ್ಕೆ ಸಂಸ್ಕೃತದಲ್ಲಿ ಖೇಚರಿಪುರ ಎಂದು ಹೇಳುವರೆಂದೂ ಶಿವಯೋಗಿಯಾದ ಗುರುಬಸವರು ತಮ್ಮ ಯೋಗ ಸಾಮಥ್ರ್ಯದಿಂದ ಆಕಾಶದಲ್ಲಿ ಸಂಚರಿಸುತ್ತ ಇದ್ದುದರಿಂದ ಅವರಿದ್ದ ಊರಿಗೆ ಖೇಚರಪುರ ಎಂದು ಹೆಸರಾಯಿತೆಂದೂ ಐತಿಹ್ಯವುಂಟು. ಖೇಚರಿಪುರ ಎಂಬುದರ ಅಪಭ್ರಂಶವೇ ಕ್ಯಾಸನೂರು-ಎಂಬುದು ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳ ಅಭಿಮತವಾಗಿದೆ.
ಗುರುಬಸವರು ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದನೆಂಬುದರ ಮೇಲೆ ಇವರ ಕಾಲ ಕ್ರಿ.ಶ. 1430ರ ಸುಮಾರು ಎಂದು ಖಚಿತವಾಗಿ ಹೇಳಬಹುದು. ಇವರ ಸಪ್ತ ಕಾವ್ಯಗಳು ವೇದಾಂತವನ್ನು ಬೋಧಿಸುತ್ತವೆ; ಲಿಂಗಾಂಗಸಾಮರಸ್ಯಕ್ಕೆ ಯೋಗವೇ ಮೂಲವೆಂದು ಸಾರುತ್ತವೆ. ವಚನಾಗಮ, ವೇದೋಪನಿಷತ್ತುಗಳ ಸಾರವನ್ನು ಹೀರಿ, ನಿತ್ಯಸಾಧನೆಯನ್ನು ಬೋಧನೆಯ ರೂಪದಲ್ಲಿ ಕವಿ ನೀಡಿದ್ದಾರೆ.
ಗುರುಬಸವರ ಕೃತಿಗಳಲ್ಲಿ
- ಸದ್ಗುರು ರಹಸ್ಯ ನಿಜತತ್ತ್ವವನ್ನು ಬೋಧಿಸುತ್ತದೆ. ಈ ಕೃತಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ.
- ಕಲ್ಯಾಣೇಶ್ವರ ಪರಿವರ್ಧಿನಿಯ ವಿವಿಧ ರಾಗಗಳಲ್ಲಿ ಮೂಡಿಬಂದು ಷಟ್ಸ್ಥಲ ವಿವರಣೆ ಮಾಡುತ್ತದೆ.
- ಸ್ವರೂಪಾಮೃತ ಜೀವಪರಮರ ಸ್ವರೂಪವನ್ನು ತಿಳಿಸಿ, ಅವರ ಪರಸ್ಪರ ಮಿಲನವೇ ಮುಕ್ತಿಯೆಂಬುದನ್ನು ಹೇಳುತ್ತದೆ.
- ಅವಧೂತಗೀತೆ ನೂರೊಂದು ಚೌಪದಿಗಳಲ್ಲಿ ಮೂಡಿ ಬಂದಿದೆ. ಜ್ಞಾನೋತ್ತರ ಮಾರ್ಗದ ವಿಧವಿಧಗಳನ್ನು ಅನುಭವಿಸುವವನೇ ಅವಧೂತನೆಂದು ಕವಿಯ ಮತವಾಗಿದೆ.
- ಮನೋವಿಜಯ ಕುಸುಮಷಟ್ಪದಿಯಲ್ಲಿದ್ದು ಮನೋನಿಗ್ರಹವನ್ನು ತಿಳಿಸುವ ಶ್ರೇಷ್ಠ ಕೃತಿ.
- ಶಿವಯೋಗಾಂಗ ವಿಭೂಷಣ ಯೋಗಗಳ ಅಂಗಗಳನ್ನು ವಿವರಿಸುತ್ತ ಶಿವಯೋಗದ ಮೇಲ್ಮೈಯನ್ನು ಹೇಳುತ್ತದೆ.
- ವೃಷಭಗೀತೆ ಭೋಗಷಟ್ಪದಿಯಲ್ಲಿದ್ದು ಒಂದು ಶತಕಕೃತಿ ಎನಿಸಿಕೊಂಡಿದೆ.
ಗುರುಬಸವರ ಸಪ್ತಕಾವ್ಯಗಳಲ್ಲಿ ವೈವಿಧ್ಯವಿದೆ; ವೈಶಿಷ್ಟ್ಯವಿದೆ. ಈ ಕೃತಿಗಳು ಗುರು ಶಿಷ್ಯರ ಸಂವಾದರೂಪದಲ್ಲಿ ರಚಿತವಾಗಿವೆ. ಸುವಿವೇಕನೆಂಬ ಶಿಷ್ಯನಿಗೆ ದೇಶಿಕರು ಬೋಧೆ ಮಾಡುತ್ತಾರೆ. ವಿಷಯ ಸುಖದಲ್ಲಿ ಲೀನವಾದ ಶಿಷ್ಯನ ಮನಸ್ಸನ್ನು ಶಿವಯೋಗಾನಂದ ಸಾಗರಕ್ಕೆ ಸಾಗಿಸಬೇಕೆಂಬುದೇ ಸದ್ಗುರುವಿನ ಸಾಹಸ.
ಗುರುಬಸವರ ಸಂಗೀತಜ್ಞಾನ ಅಗಾಧವಾದ್ದು. ಶಾಸ್ತ್ರಕ್ಕೆ ಸಂಗೀತದ ಒಪ್ಪವಿದ್ದರೆ ಮೃದುಮಧುರವಾಗುವುದೆಂದು ಕವಿ ಅರಿತಿದ್ದಾರೆ. ಕನ್ನಡ ಛಂದೋಮಟ್ಟುಗಳಲ್ಲಿ ರಾಗಬದ್ಧವಾಗಿ ಹಾಡಲು ಕವಿಗೆ ಹೆಚ್ಚಿನ ಉತ್ಸಾಹವಿದೆ. ಸಂಸ್ಕೃತ ಛಂದಸ್ಸನ್ನು ಅಲ್ಲಗಳೆದು ಕನ್ನಡ ಷಟ್ಪದಿಯನ್ನು ಅಪ್ಪಿಕೊಂಡುದು ಕವಿಯ ಶೈಲಿಯ ವೈಶಿಷ್ಟ್ಯವೆನ್ನಬಹುದು. ಕವಿಯ ವಾಣಿಯಲ್ಲಿ ಪ್ರಾಸದ ಗುಣವಿದೆ; ಭಾಷೆಯಲ್ಲಿ ಹದವಿದೆ. ಒಟ್ಟಿನಲ್ಲಿ, ಈ ಕವಿ ತತ್ತ್ವನಿರೂಪಣೆಗಾಗಿ ಬಳಸಿಕೊಂಡಿರುವ ನಿರ್ವಿಕಾರ ಮಾರ್ಗ, ತತ್ತ್ವಸಮನ್ವಯ ರೀತಿ, ಸಂಗೀತದ ಸೊಗಸು ಮನೋಹರವಾಗಿವೆ. ಸಪ್ತಕಾವ್ಯಗಳು ಶಾಸ್ತ್ರನಿರೂಪಣೆ ಮಾಡುವ ಕೃತಿಗಳಾದುದರಿಂದ ಮೋಕ್ಷಾಪೇಕ್ಷಿಗಳ ಮನಸ್ಸನ್ನು ಸೆಳೆಯಬಲ್ಲವು.
(ಸೌಜನ್ಯ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)
೧೯೭೧ರಲ್ಲಿ ಶ್ರೀ ಶಿವಾನಂದ ವಿರಕ್ತಮಠ ಅವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಬೃಹತ್ ಮಹಾಪ್ರಬಂಧವನ್ನು ಅರ್ಪಿಸಿ, ಪಿಎಚ್.ಡಿ. ಪದವಿ ಪಡೆದರು. ಈ ಕೃತಿ ೧೯೭೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮಾರ್ಗವನ್ನೇ ತೋರಿಸಿಕೊಟ್ಟಿತು.
ಮಹಾಪ್ರಬಂಧದ ಹೃದಯ ಭಾಗ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಎರಡನೆಯ ಭಾಗ. ಈ ಕಾಲದ ವೀರಶೈವ/ಲಿಂಗಾಯತ ಸಾಹಿತ್ಯ, ಈ ಕಾಲದ ಬ್ರಾಹ್ಮಣ ಸಾಹಿತ್ಯ, ಈ ಕಾಲದ ಜೈನ ಸಾಹಿತ್ಯ, ಈ ಕಾಲದ ಇತರ ಸಾಹಿತ್ಯ ಎಂಬ ವಿಭಾಗದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅದರಲ್ಲೂ ಈ ಕಾಲದ ವೀರಶೈವ/ಲಿಂಗಾಯತ ಸಾಹಿತ್ಯ ವಿಭಾಗದಲ್ಲಿ ಮುಖ್ಯವಾಗಿ ನೂರೊಂದು ವಿರಕ್ತರ ವಿಷಯವಾಗಿ ಮೊದಲ ಬಾರಿಗೆ ಇಲ್ಲಿ ತುಂಬ ಗಂಭೀರವಾಗಿ ಚರ್ಚಿಸಿದ್ದಾರೆ. ನೂರೊಂದು ವಿರಕ್ತರು ಯಾರು, ಅವರ ಸಂಖ್ಯಾ ನಿರ್ಣಯ, ಹೆಸರಿನ ಬಗೆಗಿರುವ ಗೊಂದಲಗಳು, ನೂರೊಂದು ವಿರಕ್ತರ ಸಾಹಿತ್ಯ ಸೃಷ್ಟಿ ಕುರಿತು ಅತ್ಯಂತ ಸ್ಪಷ್ಟವಾಗಿ ದಾಖಲೆಗಳನ್ನು ಪರಿಶೀಲಿಸಿ, ಹೊಸ ಹೊಳವುಗಳನ್ನು ಕೊಟ್ಟಿದ್ದಾರೆ. ‘ನೂರೊಂದು ವಿರಕ್ತರು ಇದ್ದರೆಂಬುದು ತ್ರಿಕಾಲ ಸತ್ಯ, ಆದರೆ ಇದು ಅವರ ಅಭಿಧಾನಗಳನ್ನು ಕುರಿತ ಸಮಸ್ಯೆ ಅಷ್ಟೆ’ (ಪು.೯೩) ಎಂದು ಕೊನೆಯಲ್ಲಿ ಹೇಳುವ ಮೂಲಕ ನೂರೊಂದು ವಿರಕ್ತರು ಚಾರಿತ್ರಿಕವಾಗಿ ಇದ್ದರೆಂಬುದನ್ನು ಸಿದ್ಧಪಡಿಸಿದ್ದಾರೆ.
ನೂರೊಂದು ವಿರಕ್ತರಲ್ಲಿ ‘ಗುರುಬಸವ’ ವೆನ್ನುವವರು ಏಳು ಕೃತಿಗಳನ್ನು ರಚಿಸಿ, ಸಪ್ತಕಾವ್ಯದ ಗುರುಬಸವ ಎಂಬ ಕೀರ್ತಿಗೆ ಪಾತ್ರನಾದವರು. ಅಷ್ಟೇ ಅಲ್ಲ, ಅವರು ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಅವಧೂತರೂ, ವೇದಾಂತಿಗಳೂ ಆಗಿದ್ದವರು. ಕೊನೆಗೆ ಶರಣರಾಗಿ ವೀರಶೈವ/ಲಿಂಗಾಯತ ಧರ್ಮದ ಮಹಿಮೆಯನ್ನು ಸಾರಿದವರು. ಇನ್ನೂ ವಿಶೇಷವೆಂದರೆ ಆ ಕಾಲಘಟ್ಟದಲ್ಲಿ ತಮ್ಮ ಮತವೇ ಶ್ರೇಷ್ಠವೆಂಬ ವಿಷಯವಾಗಿ ಅನೇಕ ಧರ್ಮದವರೊಡನೆ ವಾದ-ಸಂವಾದಗಳು ನಡೆಯುತ್ತಿದ್ದವು. ಈ ವಾದದಲ್ಲಿ ಗೆದ್ದವರು ಸೋತವರ ಸ್ವತ್ತಿಗೆ ಹಕ್ಕುದಾರರಾಗುತ್ತಿದ್ದರು. ಈ ಸಪ್ತಕಾವ್ಯದ ಗುರುಬಸವರು ಶೃಂಗೇರಿ ಶಾರದಾ ಪೀಠವನ್ನು ವಾದದಲ್ಲಿ ಗೆದ್ದು, ಆ ಶಾರದಾ ಪೀಠವನ್ನು ಆರೋಹಣ ಮಾಡಿ, ಅದರಲ್ಲೂ ವೈರಾಗ್ಯ ತಾಳಿ, ಅದನ್ನು ಮರಳಿ ಶೃಂಗೇರಿ ವೇದಾಂತಿಗಳಿಗೆ ಮರಳಿ ಕೊಟ್ಟು ಬಂದರೆಂದು ವಿರೂಪಾಕ್ಷ ಪಂಡಿತ ತನ್ನ ಚನ್ನಬಸವ ಪುರಾಣದಲ್ಲಿ ಹೇಳುತ್ತಾನೆ. ಈ ವಿಷಯ ಕುರಿತು ವೀರಶೈವ/ಲಿಂಗಾಯತರು ಹೆಮ್ಮೆ ಪಡಬೇಕು. ಅದ್ವೈತಮಠವೊಂದರ ಶ್ರೇಷ್ಠ ಪೀಠವೊಂದನ್ನು ವೀರಶೈವ/ಲಿಂಗಾಯತನೊಬ್ಬ ಏರಿದ ಘಟನೆ ನಿಜಕ್ಕೂ ಅಭಿಮಾನ ಪಡುವ ಸಂಗತಿ. ಈ ವಿಷಯ ಕುರಿತು ಡಾ. ಶಿವಾನಂದರ ಮಾತುಗಳಲ್ಲಿಯೇ ಕೇಳಬೇಕು.
“ಶೃಂಗೇರಿ ಪೀಠವು ಅಂದು ಅದ್ವೈತ ಮತ ಪ್ರಸಾರ ಕೇಂದ್ರವಾಗಿತ್ತು. ಗುರುಬಸವರ ಕಾಲಕ್ಕೆ ಅಲ್ಲಿ ಅನೇಕ ಪಂಡಿತರು ಅದ್ವೈತ ತತ್ವಗಳನ್ನು ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ತನ್ನ ಕಾವ್ಯಗಳಲ್ಲಿ ಅದ್ವೈತ ತತ್ವದ ಸುರಿಮಳೆಗರೆದ ಗುರುಬಸವ ಅಂದಿನ ಪ್ರಕಾಂಡ ಪಂಡಿತರನ್ನು ಸೋಲಿಸಿ ಪೀಠಾರೋಹಣ ಮಾಡಿ ಅದ್ವೈತಾಚಾರ್ಯ ಪ್ರಶಸ್ತಿಗೆ ಕಾರಣವಾಗಿರಬೇಕು. ವಿರೂಪಾಕ್ಷ ಪಂಡಿತನು ‘ಶಾರದೆಯ ಪೀಠವನ್ನೇರಿ ಮರಳಿ ಬಂದು ಪ್ರೌಢನರಮನೆಯಲ್ಲಿದ್ದ ಯೋಗಿಯನ್ನು ಸೋಲಿಸಿದನೆಂದು’ ಸ್ಪಷ್ಟವಾಗಿ ಹೇಳಿರವುದರಿಂದ, ಈ ಪೀಠವು ನಾರಾಯಣ ಶಾಸ್ತ್ರಿಗಳು ಹೇಳುವಂತೆ ಹಂಪೆಯಲ್ಲಿರದೆ ಶೃಂಗೇರಿಯದೇ ಆಗಿರಬೇಕು. ಅಲ್ಲಿಂದ ಅವನು ‘ಮರಳಿ’ ಬಂದಿರಬೇಕು. ಗುರುಬಸವನವರ ಓಲಗವು ಸಕಲ ವೇದಾಂತಿಗಳ ಬೀಡಾಗಿತ್ತೆಂದು ಹೇಳುವುದರಿಂದ ವೇದಾಂತಕ್ಕೆ ಒಲಿದ ಗುರುಬಸವರ ಅದ್ವೈತ ಸಿದ್ಧಾಂತದ ಶ್ರೀರೋಹಣ ಗಿರಿಯಾದ ಶೃಂಗೇರಿಯ ಶಾರದಾಪೀಠವನ್ನೇ ಏರಿರುವುದು ಖಂಡಿತ. ಅದು ವೀರಶೈವ/ಲಿಂಗಾಯತ ಯೋಗಿಗಳ ಅಂದಿನ ವಿದ್ಯೆ, ಅನುಭಾವ, ಪ್ರಭಾವಗಳ ಪ್ರತೀಕ.” (ಪು. ೧೩೭)
ಗುರುಬಸವವರಂತಹ ಸಾಧಕರು ತಮ್ಮ ಸಾಧನೆಯಿಂದ ವೀರಶೈವ/ಲಿಂಗಾಯತದ ಹಿರಿಮೆ ಗರಿಮೆಗಳನ್ನು ಎತ್ತರೆತ್ತರಕ್ಕೆ ಬೆಳೆಸಿದರೆಂಬ ಸಂಗತಿಯನ್ನು ಮೊದಲ ಬಾರಿಗೆ ಡಾ. ಶಿವಾನಂದ ಅವರು ಅನೇಕ ಆಧಾರಗಳಿಂದ ಸಿದ್ಧಪಡಿಸಿ ತೋರಿಸಿರುವುದು ಅವರ ಸಂಶೋಧನಾ ವಿಚಕ್ಷಣತೆಗೆ ಸಾಕ್ಷಿಯಾಗಿದೆ.
(ಸೌಜನ್ಯ ಪುಸ್ತಕ ವಿಮರ್ಶಾಲೇಖನ: ಶ್ರೀ ಪ್ರಕಾಶ.ಗಿರಿಮಲ್ಲನವರ)
ಶ್ರೀ ಗುರುಬಸವ ರ ಬಾಲ್ಯದ ಮಾಹಿತಿ
ತಂದೆಯ ಹೆಸರು ವೆ. ಸದಾಶಿವಯ್ಯ ಮತ್ತು ತಾಯಿಯ ಹೆಸರು ಶಿವಲಿಂಗಮ್ಮ.
ವಿದ್ಯಾಭ್ಯಾಸ: ಶ್ರೀಶೈಲ ಜಗದ್ಗುರು ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ಭಗವತ್ಪಾದರ ಆಶ್ರಯದಲ್ಲಿ.
ಪೂರ್ವಾಶ್ರಮದ ಹೆಸರು : ಬಸವಾರ್ಯ
ಶ್ರೀಶೈಲ ಜಗದ್ಗುರುಗಳಿಂದ ಬಸವಾರ್ಯರು ವಿಶೇಷವಾಗಿ ಕಲಿತುಕೊಂಡಿದ್ದು ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”
(ಸೌಜನ್ಯ: “ಖೇಚರಯೋಗಿ” ಲೇಖಕಿ:ವಿದ್ಯಾ.ಡಿ.ಪಾಟೀಲ್ ವಡಗೇರಿ)
“ಕರ್ನಾಟಕದ ಕವಿ ಚರಿತೆ”” ಸಂಪುಟ–೨ ಯಲ್ಲಿ ದಾಖಲಾದ ಮಾಹಿತಿಗಳು
೧೯೧೯ ರಲ್ಲಿ ರಾವ್ ಬಹದ್ದೂರು ಆರ್.ನರಸಿಂಹಾಚಾರ್ಯ ಅವರು ಬರೆದ “ಕರ್ನಾಟಕದ ಕವಿ ಚರಿತೆ”” ಸಂಪುಟ-೨ ರಲ್ಲಿ ಶ್ರೀ ಗುರುಬಸವ ಅವರ ಕುರಿತು ಮತ್ತು ಅವರ ಕೃತಿಗಳ ಕುರಿತು ವಿಶೇಷ ಬೆಳಕು ಚಲ್ಲುತ್ತದೆ. ಆ ಪುಸ್ತಕದ ಪುಟ ಸಂಖ್ಯೆ ೭೪ ರಿಂದ ೮೦ ರವರೆಗೆ ವಿಸ್ತೃತ ಲೇಖನದ ಪೂರ್ಣ ಪಾಠ ಹೀಗಿದೆ.
ಗುರುಬಸವ, ಸು 1430
ಈತನು ಶಿವಯೋಗಾಂಗಭೂಷಣ, ಸದ್ಗುರುರಹಸ್ಯ, ಕಲ್ಯಾಣೇಶ್ವರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ, ಮನೋವಿಜಯಕಾವ್ಯ ಈ ಗ್ರಂಥಗಳನ್ನು ಬರೆದಿದ್ದಾನೆ. ಗುರುಬಸವಾರ್ಯರ ವಚನ ಎಂಬ ಹಾಡಿನ ರೂಪವಾದ ಒಂದು ಗಂಥವು ದೊರೆಯುತ್ತದೆ. ಇದೂ ಏತತ್ಕವಿಕೃತವಾಗಿರಬಹುದೋ ಏನೋ ತಿಳಿಯದು.
ಇವನು ವೀರಶೈವ ಕವಿ . ಮನೋವಿಜಯಕಾವ್ಯದ ಕೊನಯ ಗದ್ಯದಲ್ಲಿ “ಶಿವಯೋಗಜನಸೇವಿತಚರಣಾರವಿಂದ ಷಟ್ ಸ್ಥಲ ಜ್ಞಾನಪ್ರಭಾಪುಂಜರಂಜಿತಾಂತರಂಗ ವೀರಶೈಮತ ಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರು ಬಸವೇಶ್ವರಂ “ಎಂಬ ಹೇಳಿರುವದರಿಂದ ಈತನು ಬಹಳಾ ಪ್ರಸಿದ್ಧನಾದ ವೀರಶೈವಗುರುವಾಗಿದ್ದಂತೆ ತಿಳಿಯುತ್ತದೆ. ಚನ್ನಬಸವ ಪುರಾಣದ ೬೩ ನೆಯ ಸಂಧಿಯ ೧೫,೧೬,೩೫ ನೆಯ ಪದ್ಯಗಳಿಂದ ಇವನು ವಿಜಯನಗರದ ರಾಜನಾದ ೨ ನೆಯ ಪ್ರೌಢದೇವರಾಯನ (1419-1446) ಕಾಲದಲ್ಲಿ ಇದ್ದಂತೆ ತಿಳಿಯಬರುತ್ತದೆ. ಇವನ ಕಾಲವು ಸುಮಾರು ೧೪೩೦ ಆಗ ಬಹುದು.
ಇವನ 7 ಗ್ರಂಥಗಳು ಸಪ್ತಕಾವ್ಯವೆಂದು ಪ್ರಸಿದ್ಧವಾಗಿವೆ. ಎಲ್ಲವೂ ವೀರಶೈವವೇದಾಂತ ಪ್ರತಿಪಾದಕವಾಗಿಯೂ ಗುರುಶಿಷ್ಯಸಂವಾದರೂಪವಾಗಿಯೂ ಇವೆ. ಒಟ್ಟು 1243 ಪದ್ಯಗಳಿವೆ.
ಈ ಗ್ರಂಥಗಳಲ್ಲಿ
1 ಶಿವಯೋಗಾಂಗಭೂಷಣ
ಇದು ಪರಿವರ್ಧಿನೀ ಷಟ್ಪದಿಯಲ್ಲಿ ಬರೆದಿದೆ. ಸಂಧಿ 6, ಪದ 278. ಈ ಗ್ರಂಥದಲ್ಲಿ ಯೋಗಾಭ್ಯಾಸಕ್ರಮ, ಯೋಗಾಸನ, ಮುಂತಾದ ವಿಷಯಗಳು ಹೇಳಿವೆ. ಇದರ ಉತೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ:
ಶ್ರುತಿವನಿತೆಯ ಮುಖಗನ್ನಡಿ ಶಾಸ್ತ್ರ |
ಪ್ರತತಿಯ ನಿಲುಕಡೆ ತರ್ಕಂಗಳ ಸ |
ನ್ಮತ ನಿಖಿಲಾಗಮತತ್ವರಹಸ್ಯಂಗಳ ಘನಚೇತನವು ||
ಸ್ಮೃತಿಗಳ ಮುದ ಪೌರಾಣಂಗಳ ನಿಜ |
ಮತಿಯಖಿಲಾದ್ಯರ ವಚನಂಗಳ ನಿ |
ಶ್ಚಿತಮತವೀಯೋಗಾಂಗವಿಭೂಷಣವೆಂದನು ದೇಶಿಕನು |
ಈ ಗ್ರಂಥಕ್ಕೆ ಶಿವಯೋಗಾಂಗಭೂಷಣ ಎಂಬ ಹೆಸರು ಬರಲಿಕ್ಕೆ ಕಾರಣವು ಈ ಪದ್ಯದಲ್ಲಿ ಹೇಳಿದೆ-
ಸತ್ಯ ವಿರತಿ ಗುತಲಾಲಸನಿಶ್ಚಲ |
ಯುಕ್ತಿ ಮನೋಮತನಿರಸನವೆಚ್ಚ |
ನಿತ್ಯಸ್ವ ಪ್ರತ್ಯಕ್ಷತೆಸಂತೃಪ್ತಿಗಳೆ ಯಮಾದಿಗಳು ||
ಅತ್ಯುತ್ಸಾಹದೊಳಿವನನುದಿನ ನಿಜ |
ಭಕ್ತಿಸಹಿತ ಭೂಷಿಸಿ ಶಿವನೊಳು ಸಂ |
ವ್ಯಕ್ತದಲೇ ಬೆರಸುವ ಕಾರಣವಿದು ಯೋಗಾಂಗವಿಭೂಷಣವು ||
ಪದ್ಯಗಳು ಪ್ರಾಯಿಕವಾಗಿ ಎಂದನು ದೇಶಿಕನು, ಪೇಳಿದ ದೇಶಿಕನು, ಎಂದು ಮುಗಿಯುತ್ತವೆ. ಗ್ರಂಥಾಂತ್ಯದಲ್ಲಿ ಕೆಲವು ಅನುಷ್ಟುಪ್ಶ್ಲೋಕಗಳೂ ಇವೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-
ಇದುಹೆಯ ಕೋಶವನಬುಜಭವಾಂಡವ|
ನರಣಿಯ ಮೇರುಗಿರಿಯ ದಿಕ್ಪುಂಜವ |
ಕರಸಂಪುಟಿಕೆಯನಂಬುನಿಧಿಯ ಚುಲುಕೋದಕಮಾತ್ರಕವಂ ||
ತರಣಿಯ ಖದ್ಯೋತನ ಗೋಷ್ಪದಮಂ|
ಧರಣಿಯ ಸಮವೆಂದೆನಿಸುವಮಹಿಮೆಯ |
ಹರವರಿಯಿಂ ಸು ದಾಡುವನಿಳೆಯೊಳಗೆಂದನು ದೇಶಿಕನು ||
ಹಸಿಯದೆ ಹುಸಿಯದೆ ಕುಸಿಯದೆ ನೆಸೆಯದೆ |
ಹಸಗೆಡದಖಿಳರೊಳಗೆ ಕಾರುಣ್ಯಂ |
ಮಸುಳಿಸದುದ್ರೇಕಿಸದೆ ವೃಧಾ ದೈನ್ಯದಿ ವಿಷಯಂಗಳೊಳು ||
ಪಸರಿಸಿ ಹರಿದಾಡದೆ ಲೌಕಿಕರಿಂ |
ವಸನಾಗಿರದೆ ಮನಸ್ಸಂಸಾರದ |
ಬೆಸುಗೆಯದು ಸುಯುತ್ತಿಹನಿಳೆಯೊಳಗೆಂದನು ದೇಶಿಕನು |
2 ಸದ್ಗುರುರಹಸ್ಯ
ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಉಪದೇಶ 9, ಪದ್ಯ 237. ಈ ಗ್ರಂಥದ ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ-
ವೇದದಂತುಟಿದಲ್ಲ ಶಾಸ್ತ್ರದ |
ಹೋದ ಹೋಲಬಲ್ಲೆಲೆ ಪುರಾಣದ |
ಗಾದೆಗಳ ಜಂಜಡದ ಜಾಡ್ಯದ ಜಿನುಗು ತಾನಲ್ಲ ||
ಆದರಿಸಿ ಕೇಳುವಡೆ ಪರಮಸ |
ಮಾಧಿಶಾಂಭವಸತ್ಯ ಸಮ್ಯ |
ಗ್ಬೋಧಲೀಲಾಲೋಲಶೀಲಾನ್ವಯರಹಸ್ಯವಿದು ||
ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
ಬಸವಸ್ತುತಿ
ಘಟವನದಾಕಾಶದಂತುಟು |
ಪಟವನದಿಹ ಚಿತ್ರದಂತುಟು |
ಸಟೆಯನದುರುಸತ್ಯದಂತುಟುಪಾಧಿಯಂ ಪದು ||
ನಟಿಸಿ ತೋರುವ ದೀಪದಂತುಟು |
ಕುಟಿಲಮಾಯೆಯನದು ನಿಜದೊಳ್ |
ಘಟಿಸಿದಮಲಬ್ರಹ್ಮಗುರುಬಸವಂಗೆ ಶರಣೆಂಬೆ ||
ಶಿಷ್ಯನಿಗೆ ಉವದೇಶ
ನೊಂದು ತಾಪತ್ರಯಗಳಿಂದ |
ಮುಂದುಗೆಟ್ಟಹ ಜಗವ ಕಾಣುತ |
ಹಂದೆಯಂ ಹಾವಡರಿದಂತವಿವೇಕದಿಂ ತನ್ನ ||
ಬೆಂದ ತುಂದನಿಮಿತ್ತ ಪೆರಂ |
ಕೊಂದು ಕೂಗಿ ನಿರರ್ಧ ನಿರಯದೊ |
ಳೊಂದಬೇಡೆಂದೈದೆ ಪೇಳಿದ ದೇಶಿಕೋತ್ತಮನು ||
ಕರ್ಮ ಪಟವ ನಂಬಿ ಪರಮನ |
ವರ್ಮವಯದೆ ವಾಗ್ವಿಲಾಸದಿ |
ಬೊಮ್ಮವಾರ್ತೆಯ ನುಡಿದು ಶಿಶ್ನೋದರಪರಾಯಣದ ||
ಧರ್ಮದಲಿ ನೀ ನಡೆದು ಹಮ್ಮಿನ |
ಬಿಮ್ಮು ಮಿಗೆ ತಲೆಗೇ ಮಗನೇ |
ಗಮ್ಮ ನಿಯಲ್ಬೇಡ ನಿರಯದೊಳೆಂದ ದೇಶಿಕನು |
- ಕಲ್ಯಾಣೇಶ್ವರ
ಇದು ಪರಿವರ್ಧಿನೀಪಟ್ಪದಿಯಲ್ಲಿದೆ ; ಪದ್ಯ 102 “ಕಲ್ಯಾಣೇಶ್ವರನೆನಿಸುವ ಬಸವನ ಕಾರುಣ್ಯದಿಂ ಭಾವಿಸುತಿಹುದೆಂದನು ದೇಶಿಕನು” ಎಂಬುದರಿಂದ ಈ ಗ್ರಂಥದ ಕಲ್ಯಾಣೇಶ್ವರ ಎಂಬ ಹೆಸರಿಗೆ ಕಾರಣವು ಊಹಿಸಬಹುದಾಗಿದೆ. ಇದರಲ್ಲಿ- ಬಸವನ ಸಹಚರಿಯಾದ ನಂದಿನಿ ತನ್ನ ಕಿಂಕರ ನಾದ ವಿಚಿತ್ರಕನೆಂಬ ಗಣೇಶ್ವರನು ಸುಜ್ಞಾನಚರಿತ್ರನಾಗಲು ಮಾಡಿದ ಜ್ಞಾನಬೋಧೆಯನ್ನು ದೇಶಿಕನು ಶಿಷ್ಯನಿಗೆ ನಿರೂಪಿಸಿದಂತೆ ಹೇಳಿದೆ. ಗ್ರಂಥಾವತಾರದಲ್ಲಿ ಬಸವಸ್ತುತಿಯೂ ಬಸವಸಹಚರಿಯಾದ ನಂದಿನಿಯ ಸ್ತುತಿಯೂ ಇವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ.
ಪ್ರಳಯಾರ್ಕನ ದೀಪ್ತಿಯನೊಳಕೊಂಡು|
ಜ್ಜ್ವಲಿಸುವ ಲಿಂಗದ್ಯುತಿ ಸರ್ವಾಂಗವ ಬಳಸಿ ಮಹಾತೇಜಃಪುಂಜೀಕೃತವಾಗಿ ಬಹಿಷ್ಕರಿಸಿ ||
ಮಲೆಯುತ ದಳವೇತ ಧಳಧಳಿಸುತ |
ಘುಳುಘುಳಿಸುತಷೂರ್ಮಿಸುತ ಸಮಸ್ತವ ಸುಸುಗೊಳುತಿಹುದೀಗ ಮಹಾಸಿದ್ಧಿಗೆ ಕುಹಯೆಂದ ||
ಆಡುತಲನುಭವದೊಳು ಗುರುವಚನವ ಪಾಡುತ ಸುಮನೋದೃಷ್ಟಿಯೊಳೊಲವಿಂ |
ನೋಡುತ ಲಿಂಗವ ಚಿತ್ತಾಂತರ್ಗತವಹ ಬಹುಬಾಧೆಗಳಂ ||
ಝೂಡಿಸಿ ಸತ್ಯಾನಂದಾಂಬುಧಿತುಳು |
ಕಾಡುತ ನಿಜವಿಶ್ರಾಂತಿಯೊಳೀ ಪರಿ | ರೂಢಿಯೊಳಗೆ ನಿರುಪಮಸುಖದಿಂದಿಹುದೆಂದನು ದೇಶಿಕನು ||
4 ಸ್ವರೂಪಾಮೃತ
ಇದು ಭಾಮಿನೀಪಟ್ಪದಿಯಲ್ಲಿದೆ; ಪರಿಚ್ಛೇದ 3, ಪದ್ಯ 77. ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ಪದಗಳನ್ನುಗದ್ಧರಿಸಿ ಬರೆಯುತ್ತೇವೆ
ತೆಗೆದು ವಾಯುಗಳಂ ಸದಾತ್ಮನು |
ಬಿಗಿದು ಧಾತುಗಳಂ ಶರೀರವ |
ನಗಲದಿರುತಿರಲಿಹುದದಲ್ಲದಿರಲ್ ಕ್ಷಣಾರ್ಧದೊಳು ||
ಹಗಲು ನಾಯ್ನರಿನೋಣಗಳೀ ಕಾ |
ಗೆಗಳು ನೊರಜುಗಳೀ ಶರೀರವ |
ಸೊಗಸದೊಗಡಿಸದೆಳಸುವುವೆ ನೀಂ ತಿಳಿದು ನೋಡೆಂದ ||
ವಿಷಯತಳಿರಿಂ ತಳಿತು ಕೊರ್ವಿದ |
ದಶವಿಧೇಂದ್ರಿಯಶಾಖೆಗಳನೆ |
ಣ್ದೆಸೆಯೊಳಿಟ್ಟುದ್ದಾನವಾಗಿ ಶರೀರ ಭೂರುಹವು ||
ವ್ಯಸನಪುಷ್ಪದಿ ಕರ್ಮಫಲದಿಂ |
ದೆಸೆದಿರಲು ತತ್ಪಲವನುಲ್ಲಾ |
ಲಸದಿ ಮಾನಸವಕ್ಕಿ ಎಸಟಂಬರಿದು ತಿನುತಿಹುದು ||
- ವೃಷಭಗೀತೆ
ಇದು ಭೋಗಪಟ್ಪದಿಯಲ್ಲಿ ಬರೆದಿದೆ; ಪದ್ಯ 101, ಪದ್ಯಗಳು ಪ್ರಾಯಿಕವಾಗಿ ಬಾಲ್ವನವ ಕೃತಾರ್ಥನು, ತಿಳಿವನವ ಕೃರ್ತಾಥನು ಎಂದು ಮುಗಿಯುತ್ತವೆ. ಈ ಗ್ರಂಥವು ಬಸವಸ್ತುತಿರೂಪವಾಗಿಯೂ ವೀರಶೈವವೇ ದಾಂತಪ್ರತಿಪಾದಕವಾಗಿಯೂ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ~
ಪಯದಿಹುದೆ ಧರ್ಮ ತನುವ |
ಕೆಳೆಯದಿಹುದೆ ಸಿದ್ಧಿ ಚಿತ್ತ |
ವಲುಗದಿಹುದೆ ಮುಕ್ತಿ ಮದು ನುಡಿದ ವಕ್ಕಣೆ ||
ಹೊಳೆಯದಿಹುದೆ ಸತ್ಯ ರೋಷ |
ದಳೆಯದಿಹುದೆ ಶಾಂತಿ ಕಪಟ |
ಮೊಳೆಯದಿಹುದೆ ಸೌಖ್ಯವಿದನು ತಿಳಿಯಲವ ಕೃತಾರ್ಧನು ||
ಶಮದಮಾದಿಗುಣವಿಶಿಷ್ಟ |
ವಿಮಲಚಿತ್ರಪುಷ್ಪನಷ್ಟ |
ಮಮತೆಹೀನ ದುಃಖಸುಖಸಮಾನವಾಗಿಯೇ ||
ಭ್ರಮಣಭವವಿಕಾರನಾಟ್ಯ |
ವಿಮುಖನಾಗಿ ತನ್ನ ತಾನೆ |
ಸಮವನದ ನನ್ಯಸುಖದೊಳಿರ್ಪನವ ಕೃತಾರ್ಧನು ||
- ಅವಧೂತಗೀತೆ
ಇದು ವಿರಕ್ತಿ ಬೋಧಕವಾದ ಹಾಡಿನ ರೂಪದಲ್ಲಿದೆ; ಹಾಡು 101. ಅಂತ್ಯದಲ್ಲಿ ಅವಧೂತಲಕ್ಷಣವು ಹೇಳಿದೆ ಗ್ರಂಧಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ
ಹಸುಗಯದೆ ಸೊಣಗನು ಮತಿಗೆಟ್ಟು |
ಮುಸುರೆಯ ಮಡಕೆಯೊಳಗೆಮೊಗವಿಟ್ಟು |
ದೆಸೆಗಾಣದೆ ಬಾಧೆಗೆ ತನುಗೊಟ್ಟು |
ಪೆಸರ್ಗೊಳಲಿದು ಸಂಸಾರದ ಗುಟ್ಟು ||
ವಡಬ ಜಡಂ ಗುಣಮಹಿಸಂತಾನ |
ಸುಡುವ ವಿಷಂ ಪೀಯೂಷಸಮಾನ I
ಪೊಡೆವ ಸಿಡಿಲ್ ಮಂಜುಳವರಗಾನ |
ಮೃಡಗುರುಕರುಣಕಟಾಕ್ಷದ ಭಾನ ||
- ಮನೋವಿಜಯಕಾವ್ಯ
ಇದು ಕುಸುಮಪಟ್ಪದಿಯಲ್ಲಿ ಬರೆದಿದೆ; ಪ್ರಕರಣ 9; ಪದ್ಯ 355, ಈ ಗ್ರಂಥದಲ್ಲಿ ಸುವಿವೇಕನೆಂಬ ಜ್ಞಾನಿ ಸಂಸಾರಕಲಸಿ ಗುರುವಿಡಿದು ತನ್ನ ನಿಜ ತಾನಾದ ಸಂಗತಿ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-
ಸದುಗುರುಕಟಾಕ್ಷದಿಂ |
ದುದಿಸಿದ ನಿಜಾನುಭವ |
ದುದಯದಿಂದಖಿಲಾದ್ಯರನುಮತದೊಳು ||
ವಿದಿತವೇದಾಗಮೋ |
ಕ್ತ ದೊಳುಪನಿಷತ್ತುಗಳೊ |
ಳೊದವಿಸಿದ ಸಮ್ಮ ತಿಯ ಸಂಗ್ರಹವಿದು ||
ಇದು ಶ್ರುತಿಸ್ಮೃತಿಯ ಸೌ |
ಖ್ಯದ ಸುಖಂ ವೇದಾಂತ |
ದೊದವು ನಿಜಶೈವಸಿದ್ದಾಂತಮತದ ||
ಹೃದಯವಾದ್ಯರ ಕರುಣ |
ದುದಯದನುಭವಸಿದ್ಧ |
ವಿದನವರೀಸುವಿಧದವವರು ||
ಗ್ರಂಥಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಅಲ್ಲಮ, ಚನ್ನಬಸವ, ಮಡಿವಾಳ, ಸಿದ್ಧರಾಮ, ಇವರುಗಳನ್ನೂ ನೂತನಪುರಾತನರನ್ನೂ ಸ್ತುತಿಸಿದ್ದಾನೆ. ಗ್ರಂಥಾತ್ಯದಲ್ಲಿ ಈ ಗದ್ಯವಿದೆ—
ಶ್ರೀಮತ್ಪರಮಪರಮಾನಂದನಿತ್ಯ ನಿರ್ಮಲನಿರಘನಿರ್ಗುಣನಿರಾವರಣಸಕಲಜಗದ್ಧ
ರಿತಭಕ್ತ ಜನಮನೋ…………ವಯೋಗಿಜನಸೇವಿತಚರಣಾರವಿಂದ ಷಟ್ತ್ಸಲಜ್ಞಾನಪ್ರ ಭಾಪುಂಜರಂಜಿತಾಂತರಂಗ ವೀರಶೈವಮತಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರುಬಸವೇಶ್ವರಂ ಸಕಲಭಕ್ತ ಜನಹಿತಾರ್ಧವಾಗಿ ಸುಜ್ಞಾನಿಗಳಿಗಾನಂದನಪ್ಪ….ಸ್ತುಶಿವಯೋಗೀಶ್ವರರದಾಚರಿಸಲೆಂದು ವೇದಾಗಮೋಪನಿಷತ್ಸಮ್ಮತಿಯಿಂ ನಿರೂಪಿಸಿದ ಮನೋ ವಿಜಯವೆಂಬ ಪ್ರಕರಣಂ ಪರಿಸಮಾಪ್ತಂ.
ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ –
ಹಿಸುಣತೆಗೆ ಹಿಗ್ಗಿ ಮಿಗೆ |
ಕಿಸುಕುಳದೊಳೊಗ್ಗಿ ಸಂ |
ತಸವಟ್ಟು ಕಳವುಹಾದರಹಿಂಸೆಗೆ ||
ಬೆಸಗೆಯ್ದು ನಿಂದೆತಾ |
ಮಸಕುಟಿಲಕುಹಕದೊಳ |
ಗೆಸೆದು ಮನವಿನಿಸಳ್ ಬೆಸೆದಿರ್ಪುದು ||
ಚಿಪ್ಪಿನೊಡಕಂ ಬೆಳ್ಳಿ |
ಯಪ್ಪುದೆಂದದ ಪಿಡಿಯ |
ಲಪ್ಪದೇ ಭ್ರಾಂತಿಯಾಪುತ್ತಿನೆಡೆಯೊಳ್ ||
ಇರ್ಪ ಸರವಿಯೆ ಸರ್ಪ |
ನಪ್ಪುದೆಂದಂಜಿಯಿಂ |
ತಿರ್ಪುದೇ ಸಂಶಯವಿದೆಂದವುದು ||
ನಳಿನಮಿತ್ರನ ಕಿರಣ |
ತಳಿಗೆಯೊಳ್ ಬೆಳಗಲದು |
ತೊಳಗದೇ ಶತಗುಣೋತ್ತರಮದಾಗಿ ||
ಹವುಂಟೆ ರವಿಗ ಸಂ |
ಚಳ ತಳಿಗೆಯಿಂದೈಸೆ |
ತಿಳಿವುದಾಪರಿಯ ಪರಮಾತ್ಮನಿರವಂ ||
ಆವುಮವೆಗಳೆರಡ |
ರತದಿಂ ಹುಸಿದಿಟಗ |
೪ಬಸಿ೦ ನಾನು ನೀನೆಂಬುಭಯದ ||
ಸ ಕಿನಿಂ ಮನವೆಂಬು | ದ ಕುವರ ನೀ ಜಾಗ್ರ |
ದು ಸುಪ್ತಿ ಮಧ್ಯದೊಳ್ ಕನಸಿನಂತೆ ||
- ಏನಿರಬಹುದು ಈ ಖೇಚರೀ ಮುದ್ರೆಯ ಯೋಗದಲ್ಲಿ ?
ಖೇಚರಯೋಗಿ ಎನ್ನುವ ವಿಶೇಷ ಶಬ್ಧಕ್ಕೆ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಅಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅತ್ಯಂತ ಸುಂದರವಾಗಿ ಹೀಗೆ ವಿವರಿಸಿದ್ದಾರೆ.
ಸಂಸ್ಕೃತದಲ್ಲಿ “ಖ” ಎಂದರೆ ಆಕಾಶ ಎಂದರ್ಥ,ಅದರ ಸಪ್ತಮಿ ವಿಭಕ್ತಿ ರೂಪ “ಖೇ”. ಚರ ಎಂದರೆ ಸಂಚರಿಸು ಎಂದರ್ಥ.
“ಖೇ ಚರತೇತಿಖೇಚರ” ಎಂಬ ವ್ಯುತ್ಪತ್ತೀಯ ಆಧಾರದ ಮೇರೆಗೆ “ ಖೇಚರಯೋಗಿ” ಎಂದರೆ ತನ್ನ ಯೋಗ ಬಲದಿಂದ ಆಕಾಶಮಾರ್ಗದಲ್ಲಿಯೂ ಕೂಡ ಸಂಚರಿಸಬಲ್ಲ ಶಕ್ತಿಯನ್ನು ಸಂಪಾದಿಸಿಕೊಂಡ ಸಿದ್ಧಪುರುಷರು ಎಂದರ್ಥ.

ಅಂತಹ ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”ಯ ಸಿದ್ದಪುರುಷರಾಗಿದ್ದವರು ಶ್ರೀ ಗುರುಬಸವ ಅವರು.ಅವರ “ಖೇಚರೀ ಮುದ್ರೆ”ಯ ಯೋಗ ಸಾಧನೆಯ ಪ್ರಸಿದ್ಧಿಯಿಂದಲೆ ಕ್ಯಾಸನೂರಿನ ಮೂಲ ಹೆಸರು ಖೇಚರಿಪುರ !.
1926 ರಲ್ಲಿ ಪ್ರಕಟವಾದ ಯೋಗಾನಂದ ಅವರ ಹೋಮ್ ಸ್ಟಡಿ ಕೋರ್ಸ್ನ ಆರಂಭಿಕ ಆವೃತ್ತಿಯಲ್ಲಿ ಯೋಗಾನಂದರು ಖೇಚರಿ ಬಗ್ಗೆ ಬರೆದಿದ್ದಾರೆ. ಅವರು ಕೆಳಗೆ ಉಲ್ಲೇಖಿಸಿರುವ “ಪುಟ್ಟ ನಾಲಿಗೆ” ಎಂದರೆ ಉವುಲಾ , ಬಾಯಿಯ ಛಾವಣಿಯಿಂದ ಗಂಟಲಿನ ಹಿಂಭಾಗದಲ್ಲಿ ನೇತಾಡುವ ಮೃದು ಅಂಗಾಂಶ:
ಈ ಕುಂಡಲಿನಿಯು ಮೆದುಳಿನ ಕಡೆಗೆ ಚಲಿಸುತ್ತದೆ ಮತ್ತು ನಾಲಿಗೆಯ ತುದಿಯಲ್ಲಿರುವ ನರಗಳ ಒಕ್ಕೂಟ ಮತ್ತು “ಚಿಕ್ಕ ನಾಲಿಗೆ” ಮತ್ತು ಮೂಗಿನ ಕುಹರದ ಕೆಲವು ಕೇಂದ್ರಗಳಿಂದ ಸಹಾಯ ಮಾಡುತ್ತದೆ, ಜೀವ ಶಕ್ತಿ ಮತ್ತು ಕಾಸ್ಮಿಕ್ ಶಕ್ತಿಯ ಒಕ್ಕೂಟದೊಂದಿಗೆ ದ್ರವದ ಸ್ರವಿಸುವಿಕೆಯನ್ನು ತರುತ್ತದೆ.
ಮಕರಂದ ಮತ್ತು ಶಕ್ತಿಗಳ ಒಕ್ಕೂಟದ ಈ ಸ್ರವಿಸುವಿಕೆಯು ಯಾವುದೇ ನಷ್ಟವನ್ನು ಒಳಗೊಳ್ಳುವುದಿಲ್ಲ, ಆದರೆ ಅಪಾರ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಅರ್ಥೈಸುತ್ತದೆ.

ಯೋಗದಲ್ಲಿ ಖೇಚರಿ ಮುದ್ರೆ ಎಂದು ಕರೆಯಲ್ಪಡುವ ಮೂಲಕ ಈ ಒಕ್ಕೂಟವನ್ನು ಭೌತಿಕವಾಗಿಯೂ ಸಾಧಿಸಬಹುದು – ನಾಲಿಗೆಯ ತುದಿಯನ್ನು ಮೂಗಿನ ಮಾರ್ಗದಲ್ಲಿರುವ ನರಗಳಿಗೆ ಅಥವಾ ಬಾಯಿಯ ಹಿಂಭಾಗದಲ್ಲಿರುವ ಉವುಲಾಕ್ಕೆ ಸ್ಪರ್ಶಿಸುವುದು.
– ಸ್ವಾಮಿ ಕ್ರಿಯಾಾನಂದರಿಂದ ಯೋಗಾನಂದರೊಂದಿಗಿನ ಸಂಭಾಷಣೆಗಳು

ಆರಂಭಿಕ ಲೇಖನದಲ್ಲಿ ಯೋಗಾನಂದರು ಖೇಚರಿ ಮುದ್ರೆಯನ್ನು ಅಭ್ಯಾಸ ಮಾಡುವ ಪ್ರಯೋಜನಗಳಲ್ಲಿ ಒಂದನ್ನು ವಿವರಿಸಿದ್ದಾರೆ:
ಇದು ದೊಡ್ಡ ನಾಲಿಗೆಯ ತುದಿಯನ್ನು ಚಿಕ್ಕ ನಾಲಿಗೆಯೊಂದಿಗೆ (ಉವುಲಾ) ಸಂಪರ್ಕಿಸುವ ಮೂಲಕ ಸೆರೆಬ್ರಮ್ ಮತ್ತು ಮೆಡುಲ್ಲಾದಿಂದ ಶಕ್ತಿಯನ್ನು ಸೆಳೆಯುತ್ತದೆ.
ಅವರು 1935-6 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪನ್ಯಾಸವೊಂದರಲ್ಲಿ ಹೆಚ್ಚು ನಿಗೂಢ ವಿವರಣೆಯನ್ನು ನೀಡಿದರು:
ಕ್ರಿಯಾವನ್ನು ಅಭ್ಯಾಸ ಮಾಡುವಾಗ… ಸಹಸ್ರಾರದಿಂದ (ಚಕ್ರ, ಅಥವಾ ಬೆನ್ನುಮೂಳೆಯ ಕೇಂದ್ರ, ತಲೆಯ ಮೇಲ್ಭಾಗದಲ್ಲಿ) ದೈವಿಕ ಮಕರಂದದಂತಹ ಪ್ರವಾಹವು ಹರಿಯುತ್ತದೆ .
ಖೇಚರಿ ಮುದ್ರೆಯ ಪ್ರದರ್ಶನದ ಮೂಲಕ, ನಾಲಿಗೆಯ ತುದಿಯನ್ನು ಉವುಲಾಕ್ಕೆ ಸ್ಪರ್ಶಿಸುವುದು, ಅಥವಾ “ಪುಟ್ಟ ನಾಲಿಗೆ” (ಅಥವಾ ಉವುಲಾದ ಹಿಂದೆ ಮೂಗಿನ ಕುಳಿಯಲ್ಲಿ ಇಡುವುದು), ಆ ದೈವಿಕ ಜೀವನ-ಪ್ರವಾಹವು ಪ್ರಾಣವನ್ನು ಇಂದ್ರಿಯಗಳಿಂದ ಬೆನ್ನುಮೂಳೆಯೊಳಗೆ ಸೆಳೆಯುತ್ತದೆ. ಮತ್ತು ಅದನ್ನು ಚಕ್ರಗಳ ಮೂಲಕ ವೈಷ್ಣವರಕ್ಕೆ (ಯುನಿವರ್ಸಲ್ ಸ್ಪಿರಿಟ್ ) ಸೆಳೆಯುತ್ತದೆ , ಪ್ರಜ್ಞೆಯನ್ನು ಚೈತನ್ಯದೊಂದಿಗೆ ಒಂದುಗೂಡಿಸುತ್ತದೆ.

ಇಡೀ ದೇಹವು ಆ ಮೂಲಕ ಆಧ್ಯಾತ್ಮಿಕ ಮತ್ತು ಶಕ್ತಿಯುತವಾಗಿರುತ್ತದೆ. ಪರಿಣಾಮವಾಗಿ, ದೇಹದಿಂದ ಗ್ರಹಿಸಬಹುದಾದ ಹೊಳಪು ಹೊರಹೊಮ್ಮಬಹುದು.
-ಮೆಜ್ದಾ: ದಿ ಫ್ಯಾಮಿಲಿ ಅಂಡ್ ದಿ ಅರ್ಲಿ ಲೈಫ್ ಆಫ್ ಪರಮಹಂಸ ಯೋಗಾನಂದರಿಂದ ಸಾನಂದ ಲಾಲ್ ಘೋಷ್, ಪುಟಗಳು 279-28
ಪ್ರಯೋಜನಗಳು
- ಇದು ಬಾಯಾರಿಕೆ, ಹಸಿವು ಮತ್ತು ಸೋಮಾರಿತನವನ್ನು ಜಯಿಸಲು ಸಹಾಯ ಮಾಡುತ್ತದೆ
- ಸಾಧಕರು / ಯೋಗಿ ಯಾವುದೇ ರೋಗ, ಕೊಳೆತ ಅಥವಾ ಸಾವಿನಿಂದ ಬಳಲುವದಿಲ್ಲ.
- ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ ಮತ್ತು ದೇಹವನ್ನು ದೈವಿಕವಾಗಿಸುತ್ತದೆ
- ಘೇರಾಂಡ ಸಂಹಿತಾ ಮತ್ತು ಹಠಯೋಗ ಪ್ರದೀಪಿಕಾ ಪ್ರಕಾರ, ಯೋಗಿ ವಿಷ ಮತ್ತು ಹಾವು ಕಡಿತದಿಂದ ರೋಗನಿರೋಧಕವಾಗುತ್ತಾನೆ.
- ಸಾಧಕನಿಗೆ ಅಂದರೆ ಅತಿಮಹತ್ವದ ಪ್ರಜ್ಞೆಯ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ
- ಸ್ರವಿಸುವಿಕೆಯು ಅಂದರೆ ಮಕರಂದವು ವಯಸ್ಸಾದ ವಿರೋಧಿ ಪರಿಣಾಮವನ್ನು ಹೊಂದಿದೆ ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ
- ಇದು ಎಲ್ಲಾ ಚಕ್ರಗಳನ್ನು ಉತ್ತೇಜಿಸುತ್ತದೆ ಮತ್ತು ದೇಹದಾದ್ಯಂತ ಶಕ್ತಿಯುತ ಮಾರ್ಗಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ದೇವತೆಗಳ ಅಮೃತವು ಬಿಡುಗಡೆಯಾಗುತ್ತದೆ ಮತ್ತು ದೇಹದಾದ್ಯಂತ ಮೂರನೇ ಕಣ್ಣಿನ ಚಕ್ರದಿಂದ ಹರಿಯುವುದರಿಂದ ಸಾಧಕನ ಸಂಪೂರ್ಣ ದೇಹವು ಪುನರುಜ್ಜೀವನಗೊಳ್ಳುತ್ತದೆ.
- ಇದು ಕುಂಡಲಿನಿ ಶಕ್ತಿಯನ್ನು ಹೆಚ್ಚಿಸಲು ಮತ್ತು ತಲೆಯಲ್ಲಿ ಅಮೃತದ ವಿವಿಧ ಮಳಿಗೆಗಳನ್ನು ಪ್ರವೇಶಿಸಲು ಶಕ್ತಗೊಳಿಸುತ್ತದೆ. ಇದು ತರುವಾಯ ದೇಹವನ್ನು ಪ್ರವಾಹ ಮಾಡುತ್ತದೆ. (ಖೇಚರಿವಿದ್ಯಾ – ಹಠಯೋಗ ಪಠ್ಯ)
- ಇದು ಭಕ್ತ/ಯೋಗಿಯನ್ನು ದೇವರ ಸಾರ್ವತ್ರಿಕ ಅರಿವಿನ ಸ್ಥಿತಿಗೆ ತಳ್ಳುತ್ತದೆ
- ಇದು ಮಾತಿನ ಮೇಲೆ ನಿಯಂತ್ರಣವನ್ನು ನೀಡುತ್ತದೆ
*****************************************************************************************