ಲೇಖಕ:-ಶ್ರೀಕಂಠ ಚೌಕೀಮಠ

೨೪ ಅಕ್ಟೋಬರ್ ೨೦೨೫ರಂದು, ಧರ್ಮಸ್ಥಳದ ಧರ್ಮಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ, ಡಾ. ಎಸ್.ಆರ್. ವಿಘ್ನರಾಜ ಮತ್ತು ಡಾ. ಪವನ್ ಅವರ ಸಂಪಾದಕತ್ವದಲ್ಲಿ ಪ್ರಕಟಿತವಾದ, ಶ್ರೀ ಕಂಚಿ ಶಂಕರಾರಾಧ್ಯರ ಶ್ರೀ ವೃಷಭೇಶ್ವರ ಪುರಾಣಂ — ಅಂದರೆ ಬಸವ ಪುರಾಣ — ಎಂಬ ಸಹಸ್ರಪುಟಗಳ ಬೃಹತ್ ಗ್ರಂಥವನ್ನು ನಾನು  ಓದುತ್ತಿದ್ದೇನೆ. ಈ ಮಹಾಗ್ರಂಥದಲ್ಲಿ ಶ್ರೀ ಗುರುಪಾದ ದೇವರ ಕನ್ನಡ ಟೀಕೆಯು ಸಹ ಮುದ್ರಣಗೊಂಡಿರುವುದು ವಿಶೇಷ; ಅದು ಈ ಕೃತಿಗೆ ಹೊಸ ಉಜ್ವಲತೆ ನೀಡಿದೆ.

ಈ ಗ್ರಂಥದೊಡನೆ ನನ್ನ ಹೃದಯಕ್ಕೆ ಆಳವಾದ ಭಾವನಾತ್ಮಕ ನಂಟಿದೆ. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿತವಾಗಿರುವ ಈ ಹಸ್ತಪ್ರತಿ, ನಿಜಕ್ಕೂ ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತುಎಂದರೆ ತಪ್ಪಾಗದು.

ಈ ಹಸ್ತಪ್ರತಿಯು ಅಂದಿನ ಪ್ರತಿಷ್ಠಾನದ ನಿರ್ದೇಶಕರಾಗಿದ್ದ ದಿವಂಗತ ಗೌ. ಮ. ಉಮಾಪತಿ ಶಾಸ್ತ್ರಿಯವರ ಅಮೂಲ್ಯ ಸಂಗ್ರಹದಿಂದ ದೊರೆತದ್ದು. ಅವರ ಅಚ್ಚುಕಟ್ಟಾದ ಶ್ರದ್ಧೆ ಮತ್ತು ಸಂಶೋಧನಾ ಮನೋಭಾವದಿಂದ ತಾಡೋಲೆ ಹಸ್ತಪ್ರತಿಗಳ ೪೮೬ ಮತ್ತು ಕಾಗದ ಹಸ್ತಪ್ರತಿಗಳ ೪೦೦ — ಒಟ್ಟು ೮೮೬ ಹಸ್ತಪ್ರತಿಗಳನ್ನು ಅವರು ಪ್ರತಿಷ್ಠಾನಕ್ಕೆ ದಾನವಾಗಿ ನೀಡಿದ್ದರು. ಅವುಗಳಲ್ಲಿ ಈ ವೃಷಭೇಶ್ವರ ಪುರಾಣ ಒಂದು ಅಮೃತಮಣಿಯಂತಿದೆ.

 

ದಿ. ಗೌ. ಮ. ಉಮಾಪತಿ ಶಾಸ್ತ್ರಿಯವರು ಪೂಜ್ಯ ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಸಾಧಕ ವಟುಗಳಾಗಿ ತಮ್ಮ ಜೀವನವನ್ನೇ ಸಾಹಿತ್ಯ ಸಂಶೋಧನೆಗೆ ಸಮರ್ಪಿಸಿದ ಮಹನೀಯರು.ಅವರು ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಗ್ರಹಿಸಿದ  ಸಾವಿರಾರು ತಾಡೋಲೆ ಕಟ್ಟುಗಳು ಹಾಗೂ ಕಾಗದ ಹಸ್ತಪ್ರತಿಗಳಿಂದ ಕೂಡಿದ ಅಪರೂಪದ ಗ್ರಂಥಾಲಯದ ಉಸ್ತುವಾರಿಯಾಗಿ ನೇಮಿಸಲ್ಪಟ್ಟು, ಅದನ್ನು ಜೀವಂತ ಪಾರಂಪರ್ಯದಂತೆ ಕಾಯ್ದುಕೊಂಡು ದೀರ್ಘಕಾಲ ಸೇವೆ ಸಲ್ಲಿಸಿದರು. ಅವರ ಈ ನಿರಂತರ ತಪಸ್ಸೇ ಇಂದು ನಾವು ಓದುತ್ತಿರುವ ಈ ವೃಷಭೇಶ್ವರ ಪುರಾಣದ ಜೀವಂತ ಮೂಲವಾಗಿದೆ.

ಗ್ರಂಥ ಬಿಡುಗಡೆಗಿಂತ ಮುನ್ನ, ನನ್ನ ಹಿರಿಯ ಮಿತ್ರರಾದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರು ನನಗೆ ಸಂದೇಶ ಕಳುಹಿಸಿದ್ದರು. ಆ ಸಂದೇಶದಲ್ಲಿ ಅವರು ಹೀಗೆ ಬರೆದಿದ್ದರು —

“ಲಿಂಗಾಯತರು ಮಾಡದ ಬಸವ ಸೇವೆಯನ್ನು ಧರ್ಮಸ್ಥಳದ ಡಾ. ಹೆಗ್ಗಡೆ ಮಾಡಿದ್ದಾರೆ.”

೧೨ನೇ ಶತಮಾನದಲ್ಲಿ ಸಮಾಜೋದ್ದಾರಕ ಕ್ರಾಂತಿಯನ್ನು ಎಳೆದುಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಕುರಿತು ಮೊಟ್ಟಮೊದಲು ಆಂಧ್ರಪ್ರದೇಶದ ಪಾಲ್ಕುರಿಕೆ ಸೋಮನಾಥ ಕವಿ ತೆಲುಗು ಬಸವಪುರಾಣ ರಚಿಸಿದರು. ಅದನ್ನು ಭೀಮಕವಿ ಕನ್ನಡಕ್ಕೆ ಅನುವಾದಿಸಿದರು. ಹರಿಹರ, ಷಡಕ್ಷರಿ ಮುಂತಾದ ಕವಿಗಳು ಬಸವಣ್ಣನವರ ಕುರಿತು ಮಹಾಕಾವ್ಯಗಳನ್ನು ರಚಿಸಿದರು. ಬಸವಣ್ಣನವರ ಪ್ರಭಾವದಿಂದ ತಪ್ಪಿಸಿಕೊಂಡ ಕವಿಯೇ ಇಲ್ಲ ಎನ್ನಬಹುದು. ಹೀಗಾಗಿ, ಕಂಚಿಯ ಪ್ರಾಚೀನ ಶೈವ ಕ್ಷೇತ್ರದಲ್ಲಿ ವಾಸಿಸಿದ ಶೈವಮಹಾಕವಿ ಕಂಚಿ ಶಂಕರಾರಾಧ್ಯರು ಸಂಸ್ಕೃತ ಭಾಷೆಯಲ್ಲಿ ಬಸವ ಪುರಾಣ ರಚನೆ ಮಾಡಿದುದು ಅಪರೂಪದ ಮತ್ತು ಮಹತ್ವದ ಸಾಧನೆ. ಈ ಪುರಾಣದ ಮಹತ್ವವನ್ನು ಮೊಟ್ಟಮೊದಲು ಗುರುತಿಸಿದವರು ಡಾ. ಶಿ.ಚೆ. ನಂದೀಮಠ. ಅವರು ಇದರ ಕುರಿತು ಪ್ರಥಮವಾಗಿ ಲೇಖನ ಬರೆದಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾ. ಪರಡ್ಡಿ ಮಲ್ಲಿಕಾರ್ಜುನ ಅವರ ಸಂಪಾದಕತ್ವದಲ್ಲಿ ಈ ಕೃತಿಯು ದೇವನಾಗರಿ ಲಿಪಿಯಲ್ಲಿ, ಕನ್ನಡ ಅನುವಾದದೊಂದಿಗೆ ಪ್ರಕಟಿತವಾಯಿತು. ಸಹಸ್ರಪುಟಗಳ ಈ ಬೃಹತ್ ಗ್ರಂಥವನ್ನು ಪ್ರಕಟಿಸುವ ಕಾರ್ಯವನ್ನು ಲಿಂಗಾಯತ ಮಠಗಳು ಅಥವಾ ಸಂಘ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕಾಗಿತ್ತು. “

ಯಾರೂ ಕೈಹಾಕದ ಈ ಮಹಾಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.

ಆದರೆ, ಗ್ರಂಥಕ್ಕೆ ಕಳಶಪ್ರಾಯವಾಗಬೇಕಿದ್ದ ಮುನ್ನುಡಿಯ ಕೆಲವು ಸಾಲುಗಳು ಈ ಮಹಾಗ್ರಂಥದ ಗಾಂಭೀರ್ಯಕ್ಕೆ ನೆರಳಿಟ್ಟಿದೆ.

ಶಾಸ್ತ್ರೀಯ ಸಂಪಾದನೆಯ ನಿರೀಕ್ಷಿತ ನಿಷ್ಪಕ್ಷಪಾತತೆಯನ್ನು ಕದಡುವಂತಹ ಈ ಉಲ್ಲೇಖಗಳು ಪಠ್ಯದ ಮೌಲ್ಯಮಟ್ಟವನ್ನು ಕ್ಷೀಣಗೊಳಿಸಿದಂತಿವೆ.

ಇಂತಹ ಸಂದರ್ಭಗಳಲ್ಲಿ ಪವಿತ್ರ ಗ್ರಂಥದ ಪಾರಂಪರಿಕ ಸೌಂದರ್ಯ ಉಳಿಯಲು ಮುನ್ನುಡಿಕಾರರಿಂದ ಇನ್ನಷ್ಟು ನಿಷ್ಪಕ್ಷಪಾತ ನಿಲುವು ಅಪೇಕ್ಷಿತವಾಗಿತ್ತು.

ಶುಭ್ರವಾದ ಶ್ವೇತವಸ್ತ್ರದ ಮೇಲೊಂದು ಕಪ್ಪು ಚುಕ್ಕೆ ಬಿದ್ದಂತೆ — ಪವಿತ್ರ ಗ್ರಂಥದ ಶುದ್ಧತೆಯಲ್ಲಿ ಅಪ್ರಯೋಜಕ ಕಲ್ಮಷದ ಛಾಪು ಮೂಡಿದೆ.

ಅಚ್ಯುತವಾದ ಪವಿತ್ರ್ಯ ಹೂವಿನ ಮೇಲೆ ಅನಿರೀಕ್ಷಿತ ಮತಾಂಧತೆಯ ಸ್ಪರ್ಶ.

ಅಧ್ಯಯನದ ಪಾವಿತ್ರ್ಯದಲ್ಲಿ ಸಂಶಯದ ಕಣ ಬಿದ್ದಾಗ, ಗ್ರಂಥದ ತಾತ್ವಿಕ ಚಿಂತನೆಗಳು ಮೌನವಾಗುವುದು ಸಹಜ.

ಮುನ್ನುಡಿ ಎಂಬುದು ಗ್ರಂಥದ ಓದುಗರಿಗೆ ಕೃತಿಯ ಹಿನ್ನೆಲೆ, ಪ್ರಾಮುಖ್ಯತೆ ಮತ್ತು ಸಂಪಾದಕನ ಕಾರ್ಯವಿಧಾನವನ್ನು ಪರಿಚಯಿಸುವ ಪೂರ್ವಕಥನಾತ್ಮಕ ವಿವರಣೆ. ಅದು ಕೇವಲ ಆರಂಭವಾಕ್ಯವಲ್ಲ — ಗ್ರಂಥದ ಶಾಸ್ತ್ರೀಯ ಮೌಲ್ಯ, ಪಠ್ಯವಿಮರ್ಶೆಯ ಕ್ರಮ, ಹಾಗೂ ಆಧ್ಯಾತ್ಮಿಕ–ಸಾಂಸ್ಕೃತಿಕ ಹಿನ್ನೆಲೆಯನ್ನು ವಿಶದಗೊಳಿಸುವ ಪ್ರಸ್ತಾವನೆಯಾಗಿದೆ.

ಅಂತಹ ಗೌರವಪೂರ್ಣ ಅವಕಾಶವನ್ನು ಪಡೆದಿರುವ ಮುನ್ನುಡಿಕಾರರಾದ ಡಾ. ವೀರಣ್ಣ ರಾಜೂರ ಅವರು ಸಾಹಿತ್ಯ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಶ್ರೇಷ್ಠ ಪಂಡಿತರಲ್ಲಿ ಒಬ್ಬರು. ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಂಶೋಧಕರಾಗಿ ಪ್ರಾರಂಭಿಸಿ, ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗಾಧ್ಯಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ದೀರ್ಘಾವಧಿಯ ಸೇವೆ ಸಲ್ಲಿಸಿದವರು. ಅನೇಕ ವಿಚಾರಸಂಕಿರಣಗಳು, ಉಪನ್ಯಾಸಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಅವರ ಹಾಜರಾತಿ ಸದಾ ಚೇತನಮಯವಾಗಿತ್ತು. ಸರಳತೆ, ಸೌಜನ್ಯತೆ ಮತ್ತು ಪಾಂಡಿತ್ಯದ ಪ್ರತಿರೂಪರಾದ ರಾಜೂರ ಅವರು ಮಹಾನ್ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಆಪ್ತ ಶಿಷ್ಯರಾಗಿದ್ದರು. ನಡುಗನ್ನಡ ಸಾಹಿತ್ಯದಲ್ಲಿ, ವಿಶೇಷವಾಗಿ ವಚನಸಾಹಿತ್ಯ ಹಾಗೂ ಬಸವೋತ್ತರಯುಗದ ವಚನಕಾರರ ಕುರಿತು ಅವರ ಅಧ್ಯಯನ ವಿಶ್ಲೇಷಣೆಯು ಆಳವಾದ ಒಳನೋಟ ನೀಡುತ್ತದೆ.

ಆದರೆ, ಇಂತಹ ಪಾಂಡಿತ್ಯಪೂರ್ಣ ವ್ಯಕ್ತಿಯೇ “ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಪುರಾಣಕೃತಿಗೆ ನೇರ ಸಂಬಂಧವಿಲ್ಲದ, ಇತ್ತೀಚಿನ (ಕ್ರಿ.ಶ. ೨೦೧೭ರ) ವೀರಶೈವ–ಲಿಂಗಾಯತ ಧರ್ಮಭೇದದ ವಿವಾದವನ್ನು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವುದು ವಿಷಾದನೀಯ ಸಂಗತಿ.

ಅವರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • “ಒಂದು ಕಾಲಕ್ಕೆ ಪರ್ಯಾಯ ಪದಗಳಂತೆ ಬಳಸುತ್ತ ಬಂದ ‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು ಇಂದು ತಾತ್ವಿಕವಾಗಿ ಭಿನ್ನವೆಂದು ಗಣಿಸಲಾಗಿದೆ.
  • ‘ಲಿಂಗ’ ಪದದ ಇತಿಹಾಸ ಪ್ರಾಚೀನವಾಗಿದ್ದರೂ, ದೇಹದ ಮೇಲೆ ಧರಿಸುವ ‘ಇಷ್ಟಲಿಂಗ’ ಪರಿಕಲ್ಪನೆ ಬಸವಣ್ಣನವರ ಕಾಲದಿಂದ — ಅಂದರೆ ೧೨ನೆಯ ಶತಮಾನದಿಂದ — ಜಾರಿಗೊಂಡುದಾಗಿದೆ.
  • “ಶಿವಶರಣರುಒಪ್ಪಿಕೊಂಡದ್ದುವೀರಶೈವ ಧರ್ಮವನ್ನಲ್ಲ;‘ಲಿಂಗಾಯತಧರ್ಮ’ವನ್ನೇ.
  • ಬಸವಣ್ಣನವರು ವೀರಶೈವಧರ್ಮವನ್ನು ಅಂಗೀಕರಿಸಲಿಲ್ಲ, ಊರ್ಜಿತಗೊಳಿಸಲಿಲ್ಲ; ಅವರು ಇಷ್ಟಲಿಂಗಾಧಾರಿತ ‘ಲಿಂಗಾಯತ’ ಎಂಬ ಹೊಸ ಸ್ವತಂತ್ರ ಧರ್ಮವನ್ನೇ ಸ್ಥಾಪಿಸಿದರು.”

ಈ ಹೇಳಿಕೆಗಳು ೧೪ನೆಯ ಶತಮಾನದ ಶ್ರೀ ವೃಷಭೇಶ್ವರ ಪುರಾಣಂ ಎಂಬ ಕೃತಿಯ ಮೂಲತತ್ತ್ವಕ್ಕೆ ನೇರವಾಗಿ ಹೊಂದುವಂತಿಲ್ಲ. ಈ ಪುರಾಣವು ಸ್ಪಷ್ಟವಾಗಿ ವೀರಶೈವ ಪರಂಪರೆಯ ತತ್ತ್ವಶ್ರೇಣಿಯಲ್ಲಿ ಬರೆಯಲ್ಪಟ್ಟ ಪೌರಾಣಿಕ ಗ್ರಂಥ. ಆದ್ದರಿಂದ ಇಂತಹ ಇತ್ತೀಚಿನ ಮತವೈಚಾರಿಕ ವಿವಾದಗಳನ್ನು ಮುನ್ನುಡಿಯಲ್ಲಿ ಒಳಪಡಿಸುವುದು ಕೃತಿಯ ತಾತ್ವಿಕ ಸೌಂದರ್ಯಕ್ಕೂ, ಪಠ್ಯಮೌಲ್ಯಕ್ಕೂ ಅಸಂಬಂಧಿತ.

ಇದು ಗ್ರಂಥಸಂಪಾದನೆಯ ನಿಷ್ಪಕ್ಷಪಾತ ಉದ್ದೇಶವನ್ನೇ ಬದಲಾಗಿಸುವಂತಾಗಿದೆ. ಮುನ್ನುಡಿಕಾರನ ಕರ್ತವ್ಯವೆಂದರೆ ಗ್ರಂಥದ ಪಠ್ಯಪರಿಷ್ಕರಣೆ, ಶೈಲಿಶೋಧನೆ, ಮತ್ತು ತತ್ತ್ವಸಂದರ್ಭಗಳ ವಿಶ್ಲೇಷಣೆ — ಪರಂಪರೆಯ ವಿವಾದಾತ್ಮಕ ವ್ಯಾಖ್ಯಾನವಲ್ಲ.

ಪರಮಾಶ್ಚರ್ಯವೆಂದರೆ ಸ್ವತಃ ಡಾ. ವೀರಣ್ಣ ರಾಜೂರ ಅವರೇ ತಮ್ಮ ಸಂಪಾದಿತ ಗ್ರಂಥ “ವೀರಶೈವದರ್ಶನ : ತೌಲನಿಕ ವಿವೇಚನೆ” (ಪ್ರಕಟನೆ: ಕ್ರಿ.ಶ. ೨೦೦೦) ಯ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ

  • ಪ್ರಸ್ತುತ ಕೃತಿ ‘ವೀರಶೈವದರ್ಶನ : ತೌಲನಿಕ ವಿವೇಚನೆ’ ಬಸವಜಯಂತಿಯ ೧೧ನೆಯ ಉಪನ್ಯಾಸ ಮಾಲಿಕೆಯಡಿಯಲ್ಲಿ, ದಿನಾಂಕ ೨೦೨೧ ಮಾರ್ಚ್ ೧೯೯೫ ರಂದು ನಡೆದ ವಿಚಾರಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವಾಗಿದೆ.
  • ವೀರಶೈವದ ಹಾಗೂ ವೀರಶೈವ ನಿರ್ಣಯ ಪರಮಾವತಾರನೆನಿಸಿದ ಬಸವಣ್ಣನವರ ಲೋಕೋತ್ತರ ವಿಚಾರಗಳಿಗೆ ಲೋಕವಿಸ್ತಾರವಾದ ಕ್ಷಿತಿಜವನ್ನು ಕಲ್ಪಿಸುವುದು ಅಂದರೆ ಬಸವತತ್ತ್ವಗಳನ್ನು ಕರ್ನಾಟಕದಿಂದ ಭಾರತಕ್ಕೆ, ಭಾರತದಿಂದ ವಿಶ್ವಕ್ಕೆ ವಿಸ್ತರಿಸುವ ಉನ್ನತ ಧ್ಯೇಯದರ್ಶನವನ್ನು ಶ್ರೀ ಬಸವೇಶ್ವರಪೀಠ ಹೊಂದಿದೆ. ಈ ಉದ್ದೇಶ ಸಾಧನೆಗಾಗಿ ಸಂಶೋಧನೆ, ಸಂಪಾದನೆ, ಸೃಜನ, ವಿಮರ್ಶೆ, ಅನುವಾದ ಇತ್ಯಾದಿ ರೂಪದ ಅಧ್ಯಯನಗಳನ್ನು ದೇಶವಿದೇಶದ ಭಾಷೆಗಳ ಮೂಲಕ ಈ ವೇದಿಕೆ ನಡೆಸುತ್ತ ಬಂದಿದೆ.
  • ವೀರಶೈವವನ್ನು ಉಳಿದ ಧರ್ಮತತ್ತ್ವದರ್ಶನಗಳೊಂದಿಗೆ ತೌಲನಿಕವಾಗಿ ವಿವೇಚಿಸುವ ಮೂಲಕ ಅದರ ಸರಿಯಾದ ಮೌಲ್ಯಮಾಪನ ಮಾಡಿ ಅದರ ವಿಶಿಷ್ಟತೆಯನ್ನು ಎತ್ತಿ ತೋರಿಸುವ ಕಾರ್ಯ ಇಲ್ಲಿ ಸಮರ್ಥವಾಗಿ ನಡೆದಿದೆ. ವಿಚಾರಸಂಕಿರಣದಲ್ಲಿ ಪ್ರೀತಿಯಿಂದ ಭಾಗವಹಿಸಿ ಪ್ರಬಂಧ ಮಂಡಿಸಿದುದಲ್ಲದೆ, ಪರಿಶ್ರಮವಹಿಸಿ ಲೇಖನ ರೂಪದಲ್ಲಿ ಬರೆದು ಕೊಟ್ಟು ಗ್ರಂಥಪ್ರಕಟನೆಯನ್ನು ಸಾಧ್ಯಮಾಡಿದ ಎಲ್ಲ ವಿದ್ವಾಂಸರಿಗೆ ಅನಂತ ಕೃತಜ್ಞತೆಗಳು.”

ಈ ಉಲ್ಲೇಖಗಳಲ್ಲೇ ಅವರ ಸಂಶೋಧನಾ ನಿಲುವಿನ ಆಳ ಮತ್ತು ವಿಶಾಲತೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ವೀರಶೈವಧರ್ಮವನ್ನು ಉಳಿದ ಧರ್ಮತತ್ತ್ವ–ದರ್ಶನಗಳ ಜೊತೆ ತೌಲನಿಕವಾಗಿ ವಿಮರ್ಶಿಸುವ ದೃಷ್ಟಿ ಇದ್ದು, ಅದು ತತ್ತ್ವಸಾಮರಸ್ಯ ಮತ್ತು ವಿಶ್ವಮಾನವೀಯ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ.

ಆದರೆ, ಈ ಹಿನ್ನಲೆಯಲ್ಲಿ ಅವರ ಇತ್ತೀಚಿನ ಅಭಿಪ್ರಾಯವು ತಾವು ಸ್ವತಃ ಹಿಂದಿನ ಸಂಶೋಧನೆಯಲ್ಲಿ ಪ್ರತಿಪಾದಿಸಿದ ತತ್ತ್ವಸಾಮರಸ್ಯದಿಂದ ವಿಭಿನ್ನವಾಗಿ ಕಾಣುತ್ತದೆ — ಇದು ಪಂಡಿತನಾಗಿ ಅವರ ನಿಷ್ಪಕ್ಷಪಾತ ಸಂಶೋಧನಾ ನಿಲುವಿನ ವಿರುದ್ಧದ ವ್ಯತಿರೇಕದಂತಾಗಿದೆ.

ಸಂಶೋಧಕ ಅಥವಾ ಸಾಹಿತಿ ಎಂದರೆ ತತ್ವನಿಷ್ಠೆಯ ಮಾರ್ಗದಲ್ಲಿ ನಡೆಯುವ ಯಾತ್ರಿ.ಅವನ ಮಾತು, ಗ್ರಂಥ ಮತ್ತು ನಿಲುವುಗಳು ಕಾಲದ ಸತ್ಯದ ಸಾಕ್ಷಿಯಾಗಿರಬೇಕು.

ಆದರೆ ತಾನು ನಿಂತ ಬಣ್ಣವನ್ನು ಬದಲಿಸಿ ಮತ್ತೊಂದು ಬಣ್ಣ ಧರಿಸುವ ಧಿರಿಸಿನಂತೆ ನಿಲುವು ಬದಲಿಸಿದರೆ — ಅದು ಸಂಶೋಧಕನ ಪ್ರಾಮಾಣಿಕತೆಯ ಮೇಲಿನ ನೆರಳಾಗಿ ಬೀಳುತ್ತದೆ.

ಊಸುರವಳ್ಳಿಯಂತೆ ತಾತ್ವಿಕ ನಿಲುವು ಬದಲಿಸುವ ಪಂಡಿತನು ಕ್ಷಣಿಕ ಮೆಚ್ಚುಗೆಯನ್ನು ಗಳಿಸಬಹುದು, ಆದರೆ ಶಾಶ್ವತ ಗೌರವ ಕಳೆದುಕೊಳ್ಳುತ್ತಾನೆ.

ಸಾಹಿತ್ಯದ ಮೌಲ್ಯ ಶಾಶ್ವತವಾಗಿರುತ್ತದೆ — ಅದನ್ನು ರಕ್ಷಿಸುವವರು ಬದಲಾಗಬಾರದು..

“ವೀರಶೈವ” ಮತ್ತು “ಲಿಂಗಾಯತ” ಎಂಬ ಪದಗಳು ಭಾರತೀಯ ಶೈವಧರ್ಮದ ಇತಿಹಾಸದಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಅರ್ಥಸಂದರ್ಭಗಳಲ್ಲಿ ಉಪಯೋಗಿಸಲ್ಪಟ್ಟಿವೆ. ಇವುಗಳ ಉತ್ಪತ್ತಿ, ಮತ್ತು ಸಾಮಾಜಿಕ ವಿಕಾಸದ ಕುರಿತು ಪಂಡಿತರ ಮಧ್ಯೆ ಅಭಿಪ್ರಾಯಭೇದಗಳಿದ್ದರೂ, ಬಹುತೇಕ ಸಂಶೋಧನಾ ಗ್ರಂಥಗಳು ಇವೆರಡನ್ನೂ ಪರಸ್ಪರ ವಿರೋಧಿ ಧರ್ಮಗಳೆಂದು ಪರಿಗಣಿಸುವುದಿಲ್ಲ.

ಅಷ್ಟೇ ಅಲ್ಲ, ಈ ಮಹಾಗ್ರಂಥದೊಂದಿಗೆ ಪ್ರಕಟಿತವಾದ ಡಾ. ವೀರೇಂದ್ರ ಹೆಗ್ಗಡೆ ಅವರ ಶುಭನುಡಿಯಲ್ಲಾಗಲಿ, ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಾಗಲಿ ಇಂತಹ ವಿಭೇದದ ಯಾವುದೇ ಉಲ್ಲೇಖವಿಲ್ಲ. ಕೃತಿಕಾರರಾದ ಕಂಚಿ ಶಂಕರಾರಾಧ್ಯರು ೧೪ನೆಯ ಶತಮಾನದ ಕವಿಗಳು — ಇತ್ತೀಚಿನ ರಾಜಕೀಯ ವಿವಾದಗಳ ಶಬ್ದವೂ ಅವರ ಕಾಲದ ಅವಕಾಶವಾದಿ ಆಕಾಶವನ್ನು ಮುಟ್ಟಿರಲಿಲ್ಲ; ಅವರು ಅವುಗಳಿಂದ ಬಹುದೂರದವರಾಗಿದ್ದರು.

ಡಾ. ಎಸ್.ಆರ್. ವಿಘ್ನರಾಜ ಅವರ ದೀರ್ಘ ಪ್ರಸ್ತಾವನೆಯಲ್ಲಿ ಆರಂಭವಾಗುವ ಸಾಲುಗಳು ಹೀಗಿವೆ

“”ಭಗವದನುಭಾವವನ್ನು ಜನಸಾಮಾನ್ಯರಿಗೆ ಸರಳವಾದ ಮಾತುಗಳಲ್ಲಿ ನೀಡಿದ ಶಿವಶರಣರು ಒಪ್ಪಿಕೊಂಡ ಧರ್ಮ ‘ವೀರಶೈವ ಧರ್ಮ’. ಈ ಧರ್ಮವನ್ನು ಒಪ್ಪಿಕೊಂಡವರನ್ನು, ಅದನ್ನು ಆಚರಣೆಗೆ ತಂದವರನ್ನು ವೀರಶೈವರು, ಲಿಂಗವಂತರು, ಲಿಂಗಾಯತರು ಎಂಬ ಹೆಸರುಗಳಿಂದ ಕರೆದಿದ್ದಾರೆ. ವೀರಶೈವ ಧರ್ಮದಲ್ಲಿ ವಿಶಿಷ್ಟವಾಗಿರುವ ಎರಡು ಪ್ರಮುಖ ಅಂಶಗಳೆಂದರೆ ಷಟ್‌ ಸ್ಥಲ ಮತ್ತು ಲಿಂಗಧಾರಣೆ. ಶಿವನನ್ನು ಲಿಂಗದಲ್ಲಿ ಪೂಜಿಸುವುದು ಎಷ್ಟು ಪ್ರಾಚೀನವೊ, ಲಿಂಗವನ್ನು ದೇಹದ ಮೇಲೆ ಧರಿಸುತ್ತಿದ್ದುದೂ ಬಹುಶಃ ಅಷ್ಟೇ ಪ್ರಾಚೀನವೆನ್ನಬಹುದು. ಒಟ್ಟಿನಲ್ಲಿ ಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿ ಯಾರೊಬ್ಬರಿಂದಲೂ ಪ್ರವರ್ತಿತವಾದುದಲ್ಲ. ಶೈವಧರ್ಮದ ವಿಕಾಸದಲ್ಲಿ ಅಳವಟ್ಟ ಸಹಜಕ್ರಿಯೆ. ರೇಣುಕಾಚಾರ್ಯರು, ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ಮರುಳಾರಾಧ್ಯರು, ವಿಶ್ವಾರಾಧ್ಯರು ಎಂಬ ರೇಣುಕಾದಿ ಪಂಚಾಚಾರ್ಯರು ಅದರ ಬೆಳವಣಿಗೆಗೆ ಕಾರಣರಾಗಿರಬಹುದು. ಇತರ ಆಚಾರ್ಯರು ಪ್ರಭೋದಕರಾಗಿರಬಹುದು. ಪಾಶುಪತ ಶೈವ, ಕಾಶ್ಮೀರ ಶೈವ, ತಮಿಳು ಶೈವ, ಈ ವಿವಿಧ ಶಾಖೆಗಳಲ್ಲಿನ ಉದಾತ್ತ ಅಂಶಗಳನ್ನು ಅಳವಡಿಸಿಕೊಳ್ಳುವ ಮಾರ್ಗದಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ರೂಪುಗೊಂಡಿರಬೇಕು. ಬಸವಣ್ಣನವರು ಬರುವ ಹೊತ್ತಿಗೆ ಕರ್ನಾಟಕದಲ್ಲಿದ್ದ ಲಾಕುಲರು, ಕಾಳಾಮುಖರು ಮೊದಲಾದ ವಿವಿಧ ಶೈವ ಶಾಖೆಗಳಲ್ಲಿ ಕೆಲವಕ್ಕಾದರೂ ದೀಕ್ಷೆ ಮೊದಲಾದ ವೀರಶೈವ ಸಂಸ್ಕಾರಗಳು ಒದಗಿದ್ದಿರಬೇಕು. ಏಕಾಂತ ರಾಮಯ್ಯ, ದೇವರದಾಸಿಮಯ್ಯ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಈ ಧರ್ಮದಲ್ಲಿ ಸುಪ್ತವಾಗಿದ್ದ ಸರ್ವಸಮಾನತೆಯ ಅಂಶಗಳನ್ನು ಗ್ರಹಿಸಿದ ಬಸವಣ್ಣನವರು ಈ ಮತವನ್ನು ಅಂಗೀಕರಿಸಿ, ಅದರ ಉದಾತ್ತ ತತ್ವಗಳ ಬೆಂಬಲದಿಂದ ಜನತೆಯ ಸಾಮೂಹಿಕ ಉದ್ಧಾರಕ್ಕೆ ನಿರ್ಧರಿಸಿದರು. ಇದರಿಂದ ವೀರಶೈವಧರ್ಮ ಹೊಸದಾಗಿ ಸ್ಥಾಪಿತವಾದಷ್ಟೇ, ಪ್ರಸಿದ್ಧಿಯನ್ನೂ, ಹೊಸಕ್ರಾಂತಿಯನ್ನೂ, ಹೊಸ ಸ್ವರೂಪವನ್ನೂ ಪಡೆಯಿತು. ತತ್ಪರಿಣಾಮವಾಗಿ ಬಸವಣ್ಣನವರು ಸ್ಥಾಪಕರೂ ಆಗಿ ಪರಿಣಮಿಸಿದರು.

ಬಸವಣ್ಣನವರ ವ್ಯಕ್ತಿತ್ವದಿಂದ ಆಕರ್ಷಿತವಾಗಿ ನಾಡಿನ ನಾನಾಭಾಗಗಳಿಂದ ಸಾಧಕರು ಬಂದು ಕಲ್ಯಾಣದಲ್ಲಿ ಸೇರಿದರು. ಅಲ್ಲಮ ಪ್ರಭುವಿನಂತಹ ಮೇರು ಸದೃಶವ್ಯಕ್ತಿಯೂ ಕಲ್ಯಾಣಕ್ಕೆ ಬಂದನೆಂದರೆ ಬಸವಣ್ಣನವರ ಕಾರ್ಯಕ್ಷೇತ್ರದ ಹಿರಿಮೆಯನ್ನು ಊಹಿಸಿಕೊಳ್ಳಬಹುದು. ಅನುಭವ ಮಂಟಪದ ಮಥನದಿಂದ ವೀರಶೈವ ಧರ್ಮದ ತಾತ್ವಿಕ ವಿವೇಚನೆ ಆಳವಾಗಿ ಬೇರುಬಿಟ್ಟಿತು. ಆಚಾರಮಾರ್ಗಗಳಾದ ಅಷ್ಟಾವರಣಾದಿಗಳು ಇನ್ನೂ ಎತ್ತರಕ್ಕೆ ಬೆಳೆದವು. ಹೀಗೆ ಪ್ರಾಚೀನ ವೀರಶೈವ ಧರ್ಮ ತನ್ನ ಸನಾತನ ತತ್ವಗಳನ್ನು ನಿತ್ಯನೂತನವಾದ ಮಾನವೀಯ ಮಟ್ಟಕ್ಕೇರಿಸಿ ವಿಶ್ವಧರ್ಮವಾಗಿ ಬೆಳಗಿತು.

ಅದೊಂದು ಅಸದೃಶ ಅದ್ಭುತ ಪ್ರವಾಹ ಬಿದ್ದವರನ್ನು ಮುಳುಗಿಸಿ ತೇಲಿಸುವ ಹುಚ್ಚು. ನದಿಯ ಭೌತಿಕ ಪ್ರವಾಹವಲ್ಲ. ಎಚ್ಚರಿಸುವ ಮೌಡ್ಯರಹಿತ ಭಕ್ತಿ ಪ್ರವಾಹ. ಅಲ್ಲಿ ಮೀನು, ಚಿಪ್ಪು, ಗೊರಟೆಗಳಿಲ್ಲ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತ್ವದ ಮುತ್ತು ರತ್ನಗಳಿವೆ. ಎಂಟು ಶತಮಾನಗಳೇ ಕಳೆದರೂ ಅದು ಬತ್ತುವ, ಚಿತ್ತ ಕದಲಿಸುವ, ಉನ್ಮತ್ತದ, ಉದ್ವೇಗದ ಝರಿಯಲ್ಲ. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ, ಅವುಗಳ ಹೃದಯಾಂತರಂಗಕ್ಕೆ ಶಾಶ್ವತ ಆನಂದಕೊಟ್ಟು, ಪಾವನ ಮಾಡುವ ಪ್ರಶಾಂತ ಸಾಗರ…….””

ಈ ಹಿನ್ನೆಲೆಯಲ್ಲಿ, ಇಂತಹ ಇತ್ತೀಚಿನ ಮತಾಂಧ ವಿವಾದಗಳನ್ನು ಈ ಪುರಾಣದ ಮುನ್ನುಡಿಯಲ್ಲಿ ಸೇರಿಸುವುದು ಶಾಸ್ತ್ರೀಯ ಗ್ರಂಥಸಂಪಾದನೆಯ ಪ್ರಾಮಾಣಿಕತೆಗೂ ಶೈಕ್ಷಣಿಕ ನಿಷ್ಪಕ್ಷಪಾತತೆಗೂ ವಿರುದ್ಧವಾಗಿದೆ. ಇದು ಪುರಾತನ ಗ್ರಂಥದ ಪವಿತ್ರತೆಗೆ ಕಲುಷಿತ ಮಸುಕನ್ನು ತರುವಂತಾಗಿದೆ — ಪರಂಪರೆಯ ಅರ್ಥಸಂಪನ್ನತೆ ಕಾವ್ಯಸೌಂದರ್ಯದಿಂದ ಪಠ್ಯ ವಿವಾದಕ್ಕೆ ಕುಸಿಯುವ ಅಪಾಯ ಇಲ್ಲಿಯೇ ಪ್ರಾರಂಭವಾಗುತ್ತದೆ.

ದ್ವೇಷ ವ್ಯಕ್ತಪಡಿಸಲು ಅನೇಕ ವೇದಿಕೆಗಳಿವೆ — ಸಾಮಾಜಿಕ ಜಾಲತಾಣಗಳಿವೆ, ಪತ್ರಿಕೆಗಳಿವೆ, ದೃಶ್ಯಮಾಧ್ಯಮಗಳಿವೆ. ಆದರೆ ಇಂಥ ಪವಿತ್ರ ಗ್ರಂಥಪ್ರಕಟನೆಯ ಅಂಗಳ, ಅಂತಹ ಘೋಷಣೆಗಳಿಗಾಗಿ ಸೂಕ್ತ ಸ್ಥಳವಲ್ಲ.

ಒಬ್ಬ ಅಧ್ಯಯನಾರ್ಥಿ ಕಂಚಿ ಶಂಕರಾರಾಧ್ಯರ ಹೆಸರು ನೋಡಿ ಸಾವಿರ ಪುಟಗಳ ಈ ಬೃಹತ್ ಗ್ರಂಥ ಖರೀದಿಸಿ, ಅದರಲ್ಲಿರುವ ಕೇವಲ ಆರು ಸಾಲುಗಳಲ್ಲಿ “ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ವಾಕ್ಯಗಳನ್ನು ಓದಿದಾಗ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಗುವುದು ಸಹಜ.

ಹಾಲಿನ ಕೊಡಾಯಿಗೆ ಒಂದು ತೊಟ್ಟು ಹುಳಿಹಾಲು ಬಿದ್ದಂತೆ — ಆ ಆರು ಸಾಲುಗಳು, ಅವುಗಳಿಗೆ ಸಂಬಂಧವಿಲ್ಲದ ಪ್ರಾಚೀನ ಬಸವ ಪುರಾಣದ ಪಾವಿತ್ರ್ಯವನ್ನೇ ಕಲುಷಿತಗೊಳಿಸುತ್ತವೆ.

ಶುದ್ಧ ಹಾಲಿನ ಕೊಡಾಯಿಗೆ ಬಿದ್ದ ಹುಳಿಹಾಲು, ಅಸಮಾನತೆಯ ವಿಷಬೀಜದಂತಾಗಿದೆ. ಸಮಾಜವೆಂಬ ಕೊಡಾಯಿಯು ಮನುಷ್ಯರ ಸೌಹಾರ್ದ, ಸಹಭಾವ ಮತ್ತು ಪರಸ್ಪರ ಗೌರವದಿಂದ ತುಂಬಿರಬೇಕು. ಆದರೆ ಅದರೊಳಗೆ ಬಿದ್ದ ಧರ್ಮ, ವರ್ಣ, ಜಾತಿ ಅಥವಾ ಆರ್ಥಿಕ ಅಹಂಕಾರದ ಒಂದು ತೊಟ್ಟು ಹುಳಿ, ಆ ಪವಿತ್ರ ಮಿಶ್ರಣವನ್ನು ಹುಳಿ ಹಾಲಾಗಿಸುತ್ತದೆ. ಸಮಾನತೆಯ ಹಾಲು ಹುಳಿ ಹೋದಾಗ ಅದರ ಸುವಾಸನೆ ನಶಿಸಿಹೋಗುತ್ತದೆ; ಉಳಿಯುವುದೆಂದರೆ ಕಟುವಾದ ವಾಸನೆ, ವಿಭಜನೆಯ ಕಹಿ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ನೋಡಬಾರದದ್ದನ್ನು ನೋಡಿ, ಕೇಳಬಾರದದ್ದನ್ನು ಕೇಳಿ, ಸಮಾಜದ ಅನ್ಯಾಯ ಮತ್ತು ಅಸಮಾನತೆಯ ನೇರ ಅನುಭವದಿಂದ ಈ ವಚನವನ್ನು ಬರೆದಿರಬಹುದು:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.

 

ಆ ವಚನವು ಆ ಕಾಲದ ಅನಾಚಾರಕ್ಕೆ ವಿರೋಧವಾಗಿ ತಾತ್ಸಾರದ ಧ್ವನಿಯಾಗಿ ಮೊಳಗಿತ್ತು.

ಆದರೆ ಇಂದಿನ ಶತಮಾನದಲ್ಲಿ, ಕುರುಡತನ, ಕಿವುಡತನ ಅಥವಾ ಹೆಳವುತನದ ಹತಾಶೆಗಾಗಿ ಕಾಲವಿಲ್ಲ. ಇದು ಮನಸ್ಸು ಮುಚ್ಚಿಕೊಳ್ಳುವ ಯುಗವಲ್ಲ ಮನಸ್ಸು ತೆರೆಯುವ ಯುಗ.

ನಾವು ನೋಡಬೇಕು, ಕೇಳಬೇಕು, ಹೇಳಬೇಕು — ಆದರೆ ಸತ್ಯವನ್ನು, ಸಾಮರಸ್ಯವನ್ನು ಮತ್ತು ನ್ಯಾಯವನ್ನು.

ಇದು ನಿಂದನೆಗೆ, ವಿಭಜನೆಗೆ ಅಥವಾ ಮತಾಂಧತೆಗೆ ಕಾಲವಲ್ಲ;

ಇದು ವಿಚಾರಕ್ಕೆ, ವಿವೇಕಕ್ಕೆ ಮತ್ತು ಸಹಬಾಳ್ವೆಯ ಸಂವಾದಕ್ಕೆ ಕಾಲ.

ಆದುದರಿಂದ ಹಿರಿಯರಾದ ಡಾ. ವೀರಣ್ಣ ರಾಜೂರ ಅವರಿಗೆ ವಿನಮ್ರ ಮನವಿ —

“ವೀರಶೈವ ಬೇರೆ, ಲಿಂಗಾಯತ ಬೇರೆ” ಎಂಬ ಮತಾಂಧತೆಯ ಘೋಷವಾಕ್ಯಗಳನ್ನು ದಯವಿಟ್ಟು ಎಲ್ಲಂದರಲ್ಲಿ ,ಅಲ್ಲಿ ಬಳಸಬೇಡಿ.ಅದಕ್ಕಾಗಿ ವೇದಿಕೆಗಳಿವೆ, ಅಭಿಯಾನಗಳಿವೆ , ಸಭಾಮಂಟಪಗಳಿವೆ, ಮತ್ತು ಮತಪ್ರಚಾರದ ಕ್ಷೇತ್ರಗಳಿವೆ —

ಆ ಪಾವನ ಗ್ರಂಥಗಳ ಪುಟಗಳು ಅಂತಹ ಘೋಷಣೆಗಳಿಗಾಗಿ ಅಲ್ಲ; ಅವುಗಳು ಜ್ಞಾನ, ಭಕ್ತಿ ಮತ್ತು ಸಾಮರಸ್ಯದ ಶಬ್ದಗಳನ್ನು ಮಾತ್ರ ಸಹಿಸುತ್ತವೆ.

ಬಸವಣ್ಣನವರು ಪಾಲಿಸಿದ  ಧರ್ಮಶಾಸ್ತ್ರವೇ ಸಾಮರಸ್ಯದ ಧರ್ಮ — ವಿಭಜನೆಯಲ್ಲ, ವಿನಾಶದ ದಾರಿ ಅಲ್ಲ, ಸಂಗಮದ ಮಾರ್ಗ.

“ಶ್ರೀ ವೃಷಭೇಶ್ವರ ಪುರಾಣಂ” ಎಂಬ ೧೪ನೆಯ ಶತಮಾನದ ಈ ಕೃತಿ ಕೂಡ ಅದೇ ಸಂಗಮದ ತತ್ವವನ್ನು ಪ್ರತಿಪಾದಿಸುತ್ತದೆ.

ಅದು ದೇವ–ಭಕ್ತಿ, ಶರಣರ ನಿಷ್ಠೆ ಮತ್ತು ತತ್ತ್ವಪರಂಪರೆಯ ಶುದ್ಧ ನಿರೂಪಣೆ.

ಈ ಪವಿತ್ರ ಗ್ರಂಥದ ಪಠ್ಯಶುದ್ಧಿ ಮತ್ತು ಪ್ರಕಟಣೆಗೆ ಶ್ರಮಿಸಿದ ಸಂಪಾದಕರು, ಪ್ರಕಾಶಕರು, ಸಹಾಯಕರ ಎಲ್ಲರ ಸೇವೆ ಪ್ರಶಂಸನೀಯ.

ಆದರೆ ಇಂತಹ ದಿವ್ಯ ಗ್ರಂಥಗಳಿಗೆ ನಾವು ನೀಡಬೇಕಾದ ನಿಜವಾದ ಗೌರವವೆಂದರೆ —

ಅದರ ಪುಟಗಳಲ್ಲಿ ವಿವಾದವಲ್ಲ, ವಿವೇಕದ ಬೆಳಕು ತುಂಬುವುದು.

ಬಸವಣ್ಣನವರು ಬರೆದ ದಾರಿ ನಿಂದನೆಯಲ್ಲ, ವಿನಯದ ದಾರಿ;

ಅವರ ಧರ್ಮ ತ್ಯಾಗದ ಧರ್ಮ — ವಿಭೇದದ ಧರ್ಮವಲ್ಲ.

ಆದ್ದರಿಂದ ನಾವು ಅವರ ಸಂದೇಶವನ್ನು ಓದುವಾಗ,

ಅವರ ನಿಶ್ಶಬ್ದ ಪ್ರಾರ್ಥನೆಯನ್ನೂ ಕೇಳಬೇಕು —” ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವನೆಂದೆನಿಸಯ್ಯಾ”

ಈ ಯುಗದಲ್ಲಿ ಅಗತ್ಯವಿರುವುದು ಹೊಸ ಘೋಷಣೆಗಳಲ್ಲ,

ಹೊಸ ಮನಸ್ಸುಗಳೇ.

ಅವು ನೋಡಲಿ, ಕೇಳಲಿ, ಹೇಳಲಿ —

ಸತ್ಯಕ್ಕಾಗಿ, ಸಾಮರಸ್ಯಕ್ಕಾಗಿ, ಶರಣರ ಹಾದಿಯ ಶುದ್ಧತೆಯಿಗಾಗಿ.

 

*******ಶ್ರೀಕಂಠ.ಚೌಕೀಮಠ

 

ಪರಮಾಶ್ಚರ್ಯ!

ಕೊಡಗು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ  (೨೨-೦೯-೨೦೨೫ ) ಸಭಾ ಸಜ್ಜಿಕೆಯ ಪರದೆಯಲ್ಲಿ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಪ್ರತ್ಯಕ್ಷವಾದುದು !

ಅಭಿಯಾನದ ಹಲವು ಜಿಲ್ಲೆಗಳ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀಗಳು ತಮ್ಮ ಗುರುಗಳ ಬಗ್ಗೆ ಮಾತನಾಡಿದರು ಮತ್ತು ಅವರ ಪುಣ್ಯ ತಿಥಿಯ ಪ್ರಚಾರ ಮಾಡಿದರು.

ಮಾತೆ ಮಹಾದೇವಿಯವರ ಶಿ಼ಷ್ಯ ಬಳಗ ತಮ್ಮ ಗುರುಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದರು.ಎಲ್ಲ ಅಭಿಯಾನ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಆದರೆ ಎಲ್ಲಿಯೂ, ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಹೆಸರು ಪ್ರಸ್ಥಾಪವಾಗದಂತೆ ಎಚ್ಚರಿಕೆ ವಹಿಸಿತು ಲಿಂಗಾಯತ ಮಠಾಧಿಶರ ಒಕ್ಕೂಟ,

ವಚನಕಟ್ಟುಗಳನ್ನು ಸಂಗ್ರಹಿಸಿದ, ವಚನ ಪಿತಾಮಹ ಹಳಕಟ್ಟಿಯವರಿಗೆ ಸಹಾಯ ಸಹಕಾರ ಸಲ್ಲಿಸಿದ, ಶರಣರ ವಚನಗಳನ್ನು ಸಂಗೀತದ ಮೂಲಕ ಪಂಚಾಕ್ಷರಿ ಗವಾಯಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮತ್ತು ಶಿವಯೋಗಮಂದಿರದ ವಟು ಸಾಧಕರಿಗೆ ವಚನಗಳನ್ನು ಅರ್ಚನ,ಅರ್ಪಣ,ಅನುಭಾವಗಳಲ್ಲಿ ರೂಢಿಗೆ ತಂದ ಕಾರುಣಿಕ ಯುಗಪುರುಷ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಸ್ಮರಿಸುವುದು   ಒತ್ತಟ್ಟಿಗಿರಲಿ,

ಅವರನ್ನು ಖಳನಾಯಕನಂತೆ ಬಿಂಬಿಸಿ  ,ಬಸವ ಭಾರತ ಪತ್ರಿಕೆಯಲ್ಲಿ  ಪೂರ್ವನಿಯೋಜಿತವಾಗಿ ಮುದ್ರಿಸಿದ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರು,ಆ ಪತ್ರಿಕೆ ಆ ಪುಟಗಳನ್ನು ಮುದ್ರಿಸಿ ಅಭಿಯಾನದಲ್ಲಿ ಉಚಿತವಾಗಿ ಹಂಚಿದ ಜಾಗತಿಕ ಲಿಂಗಾಯತ ಮಹಾಸಭೆಯ ಅತೃಪ್ತ ಸದಸ್ಯರ ಮಧ್ಯದಲ್ಲಿ ,ಅಭಿಯಾನ ಆರಂಭವಾಗಿ ಬರೊಬ್ಬರಿ ೨೧ ದಿವಸಗಳ ನಂತರ ಘಟಸ್ಥಾಪನೆಯ ದಿನದಂದು  “ಮಠದಿಂದ ಘಟವಲ್ಲ-ಘಟದಿಂದ ಮಠ “ ವೆಂದ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚಿತ್ರ ಮೌನವಾಗಿ ಕೊಡಗಿನ ವೀರರ ನಾಡಿನಲ್ಲಿ ಉದ್ಭವಾಗಿರುವುದು ಆಶ್ಚರ್ಯವೆನಿಸಿತು.

ಅದರ ಜೊತೆ ಪೂಜ್ಯರು ಸ್ಥಾಪಿಸಿದ  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡುಗು  ಜಿಲ್ಲಾ ಘಟಕದ ಹೆಸರು ರಾರಾಜಿಸುತ್ತಿತ್ತು.

ಸಂತೋಷವೆನಿಸಲಿಲ್ಲ!

ಒಂದು ಕ್ಷಣ ವಿಷಾದವೆನಿಸಿತು. ನೋವೆನಿಸಿತು ಅಕ್ರೋಶದ ಕಟ್ಟೆಯೊಡಿಯಿತು .ಹಲವು ಕ್ರೂರ ಮುಖಗಳು ಕಣ್ಣು ಮುಂದೆ ಬಂದವು.

“ವೀರಶೈವರು” ನಿಮ್ಮ ಲಿಂಗಾಯತ ಧರ್ಮಕ್ಕೆ ಬಂದರೆ ಸೇರಿಸಿಕೊಳ್ಳುವಿರಾ ಎಂದು ಮಾಧ್ಯಮದವರು ಕೇಳಿದಾಗ “ವೀರಶೈವರಷ್ಟೇ ಅಲ್ಲ ವೇಶ್ಯೇಯರೂ ಬಂದರೆ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗವಾಗಿ ,ತುಚ್ಛವಾಗಿ ವೀರಶೈವ ಎಂದು ಒಪ್ಪಿಕೊಂಡವರನ್ನು ವೇಶ್ಯೆಯರಿಕ್ಕಿಂತಲೂ ಕೀಳು ಮಟ್ಟದಲ್ಲಿ ಕಂಡ ನಿಜಗುಣಾನಂದ ಸ್ವಾಮಿಗಳು,

ಅಖಿಲ ಭಾರತ ವೀರಶೈವ ಮಹಾಸಭೆಗೆ ವೀರಶೈವ ಎಂದು ಹೆಸರು ಬರಲು  ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳೇ ಕಾರಣ ವೆಂದು  ಸುಳ್ಳುಗಳ ಪುಸ್ತಕವನ್ನು ಬರೆದ ಡಾ. ಎಸ್.ಎಂ. ಜಾಮದಾರ್‌ ಅವರು,

ಪಂಚಾಚಾರ ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ ಮಾಡಿದರೆ ಪಾಪ ಕೆಲವರಿಗೆ ನೋವಾಗುತ್ತದೆ,ಅದನ್ನು ಜೆ.ಎಲ್‌ .ಎಮ್‌ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಕ್ಲಿಯರ್‌ ಮಾಡಲಿ ಎಂದು ಭಯೋತ್ಪಾಕ ಭಾಷೆಯಲ್ಲಿ ಮಾತನಾಡಿದ ಮತ್ತು ಈ ಕಾರ್ಯಕ್ರಮದ ಲೈವ ಚೀತ್ರಿಕರಣ ಮಾಡುವ ವಚನ ಟಿವಿ ಮುಖ್ಯಸ್ಥ  ಸಿದ್ದು ಯಾಪಲಪರ್ವಿಯವರು,

ಅಭಿಯಾನ ಆರಂಭಗೊಳ್ಳುವ ಎರಡು ದಿನ ಮೊದಲು ಬಸವ ಭಾರತ ಎಂಬ ಮಾಸಪತ್ರಿಕೆ ಲಿಂಗಾಯತ ಮಠಾಧಿಶರ ಒಕ್ಕೂಟದ ಗೌರವ ಸಂಪಾದಕರ ನೇತೃತ್ವದಲ್ಲಿ  ಶಶಿಕಾಂತ ಪಟ್ಟಣ ಎಂಬುವವರಿಂದ ಶ್ರೀ ಕುಮಾರ ಶಿವಯೋಗಿಗಳ ಮೇಲೆ ಅವಹೇಳನದ ಲೇಖನ ಬರೆಯಿಸಿ,ಮುದ್ರಿಸಿದಾಗ ಎದ್ದ ಪ್ರತಿಭಟನೆಗೆ ಶಶಿಕಾಂತ ಪಟ್ಟಣ ಅವರು ಕ್ಷಮೆ ಯಾಚಿಸಿದರು.ಅವರ ಕ್ಷಮೆ ಯಾಚಿಸಿದ್ದಕ್ಕೆ ಆಕ್ಷೇಪಣೆ ಮಾಡಿ ಬಸವ ಸಂಸ್ಕೃತಿ ಅಭಿಯಾನ ಮುಗಿಯುವವರೆಗೆ  ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಅವಹೇಳನದ ಲೇಖನ ಜೀವಂತವಾಗಿರ ಬೇಕೆಂಬ ಫರ್ಮಾನು ಹೊರಡಿಸಿದ ಅನಾಮಧೇಯ ಹಲವರು,

ಜಾಗತಿಕ ಲಿಂಗಾಯತ ಮಹಾಸಭಾದ ಕೃಪಾ ಪೋಷಿತ ೨೪x ೭  ಸಾಮಾಜಿಕ ಜಾಲತಾಣಗಳ ಸಕ್ರೀಯ ಕಾರ್ಯಕರ್ತರಾದ, ಅಶ್ಲೀಲ ಸಾಹಿತ್ಯದ  ನಿಜಗುಣ ಮೂರ್ತಿ ಮತ್ತು ಸಿ.ಜಿ.ಸಿದ್ದಲಿಂಗಸ್ವಾಮಿಗಳು,

ಈ ಎಲ್ಲ ಮಹಾತ್ಮರು ಮತ್ತು ಮಹಾನುಭಾವರು  ಅದು ಹೇಗೆ   ಕೊಡಗಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರದ ಬಳಕೆ ಯನ್ನು  ಗಮನಿಸಲಿಲ್ಲ ?.

ಬಹುಷಃ ಕೊಡಗಿನ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಅಲ್ಲಿನ ಅಖಿಲ ಭಾರತ ವೀರಶೈವ ಮಹಾಸಭೆ ವಹಿಸಿಕೊಂಡಿರಬಹುದಾದರೂ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಘಟಕಗಳು ಕೈ ಜೋಡಿಸಿದ್ದರೂ ಎಲ್ಲಿಯೂ ಚಿತ್ರ ಬಿಡಿ ಹೆಸರನ್ನೂ ಎತ್ತದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಅಭಿಯಾನದ ಸೂತ್ರದಾರರು ಕೊಡಗು ಜಿಲ್ಲೆಯಲ್ಲಿ ಮರೆತು ಬಿಟ್ಟಿದ್ದು ಸಖೇದಾಶ್ಚರ್ಯ!.

೨೦ನೆಯ ಶತಮಾನದ ಆರಂಬದಲ್ಲಿ ನೂರಾರು ಒಳಪಂಗಡಗಳನ್ನು ಒಟ್ಟುಗೂಡಿಸಿ ಅಖಂಡ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಮಹಾಪುರುಷನ ಚಿತ್ರದ ಎದುರು ವೀರಶೈವ ಬೇರೆ ,ಲಿಂಗಾಯತ ಬೇರೆ ಎಂದು ಹೇಳುವುದೇ ಬಸವ ಸಂಸ್ಕೃತಿ ಎಂದು ಬಿಂಭಿಸಿದ ರೀತಿ , ಒಬ್ಬ ರಾಜಕಾರಣಿಯ ಅಧಿಕಾರದ ದಾಹಕ್ಕೆ ಬಲಿ ಕೊಟ್ಟಂತೆಯಿತ್ತು.

ಒಂದು  ತೋರಣದ ಎಲೆ ಬಸವಣ್ಣನವರ ಭಾವ ಚಿತ್ರ ಸರಕಾರಿ ಕಛೇರಿಯಲ್ಲಿ ತೂಗು ಹಾಕಿದ್ದು,

ಎರಡನೆಯ ತೋರಣದ ಎಲೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು,

ಮೂರನೆಯ ತೋರಣದ ಎಲೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ತುರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿದ್ದು

ನಾಲ್ಕನೆಯ ತೋರಣ ವಿಜಯಪುರದ ವಿ.ವಿ.ಗೆ ಅಕ್ಕ ಮಹಾದೇವಿಯವರ ಹೆಸರು ಇಟ್ಟಿದ್ದು..

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು;

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!

ಅದಂದೇ ಹುಟ್ಟಿತ್ತು,

ಅದಂದೇ ಹೊಂದಿತ್ತು;

ಕೊಂದವರುಳಿದರೇ ,ಕೂಡಲಸಂಗಮದೇವಾ??”. 

ಈ ತೋರಣಗಳು ಹೊರಗೆ ಕಂಡರೆ,

 ಒಳಗೆ ವೀರಶೈವ ಲಿಂಗಾಯತರ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಎಳೆಹೂಟೆ ಕಾರ್ಯ ಅವ್ಯಾಹತ.

ಮುಂದೊಂದು ದಿನ ಕೊಂದವರು ಉಳಿಯದಿರಬಹುದು ಆದರೆ ಇಂದು ಅಖಂಡ ವೀರಶೈವ ಲಿಂಗಾಯತವನ್ನು ಛಿದ್ರ ಛಿದ್ರ ಮಾಡಿ ಅವರವರಲ್ಲಿ ವಿಷವನ್ನು ತುಂಬಿ  ಭೇಧವನ್ನು ಅನುಷ್ಠಾನಗೊಳಿಸುವಲ್ಲಿ   ಸಿದ್ದರಾಮಯ್ಯ ಯಶಸ್ವಿಯಾಗಿರುವರು.

ತೋರಣಗಳನ್ನು ಮೇಯ್ದ ಕುರಿಗಳು ,

ಸರಕಾರದ ಪ್ರಶಸ್ತಿ ಅನುದಾನ ಪಡೆದ ನರಿಗಳು

ಇಂದು ವ್ಯಾಘ್ರಗಳು.

ಈ   ಫಲಾನುಭವಿ ಗೋಮುಖ  ವ್ಯಾಘ್ರಗಳ ಆರ್ಭಟಗಳಲ್ಲಿ  “ವೀರಶೈವ ಲಿಂಗಾಯತ “ ದುರ್ಬಲಗೊಂಡಿದೆ .

ಆದರೆ ಆಗಿರುವ ದುರಂತ  , ಮತ್ತು ಆಗುವ  ನಷ್ಠ- ಊಹೆಗೂ ನಿಲಕಲಾರದ್ದು.

ಮುಂದೊಂದು ದಿನ ಮೈ ಕೊಡವಿ ,ಧೂಳುಗಳ ಮಧ್ಯದಲ್ಲಿ ಫಿನಿಕ್ಸ ಪಕ್ಷಿಯಂತೆ ಮರು ಜನ್ಮ ಪಡೆದುಕೊಳ್ಳುವುದು ಶತ ಸಿದ್ಧ.

ಫಿನಿಕ್ಸ್ (Phoenix) ಎಂಬುದು ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾದ ಅದ್ಭುತ ಪಕ್ಷಿ.
ಇದು ಒಂದು ಅಮರ ಪಕ್ಷಿ, ತನ್ನ ದೇಹವೇ ಅಗ್ನಿಯಾಗಿ ಭಸ್ಮವಾದ ಬಳಿಕ, ಆ ಭಸ್ಮದಿಂದಲೇ ಮತ್ತೆ ಪುನರ್ಜನ್ಮ ಪಡೆಯುತ್ತದೆ ಎಂದು ನಂಬಿಕೆ.

 

-ಶ್ರೀಕಂಠ.ಚೌಕೀಮಠ

 

ಇಂದು ೧೩-೦೯-೨೦೨೫ ಮುಂಜಾನೆ  ದಿನಪತ್ರಿಕೆ ತೆರೆದಾಗ ನನಗೊಂದು ಆಘಾತಕಾರಿ ಸುದ್ದಿ ಅತ್ಯಂತ ನೋವನ್ನುಂಟು ಮಾಡಿತು. “ಹಾನಗಲ್ಲ ಶ್ರೀ ಕುಮಾರೇಶ್ವರ ಮಠ ಕ್ಕೆ ಹುಸಿ ಬಾಂಬ್ ಕರೆ ” ಎಂಬ ತಲೆಬರಹದಡಿ ಪ್ರಕಟವಾದ ಸುದ್ದಿ.

೧೯೦೦ ರ ಅವಧಿಯಲ್ಲಿ ಹಾನಗಲ್ಲ ಸುತ್ತಮುತ್ತಲ ಗುರುಳೇ ರೋಗ ಮತ್ತು ಬರಗಾಲ ಅಪ್ಪಳಿಸಿದಾಗ ಇಡೀ ಹಾನಗಲ್ಲ ಮಠ ಆಶ್ರಯ ತಾಣವಾಗಿಸಿ , ಆಸ್ಪತ್ರೆಯಾಗಿ  ,ಶಿಕ್ಷಣ ಕೇಂದ್ರವಾಗಿ  ಜೀವನಾಡಿಯಾದ ಶ್ರೀ ಮಠದ ಪವಿತ್ರ ನೆಲಕ್ಕೆ  , ಛಿದ್ರ ಛಿದ್ರ ವಾಗಿ ಹೋಗಿದ್ದ ಸಮಾಜವನ್ನು ಒಂದು ಗೂಡಿಸಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮ ಇಡೀ ಜೀವಮಾನವನ್ನೇ ತ್ಯಾಗ ಮಾಡಿದ ಮಹಾ ಪುರುಷ ಹಾನಗಲ್ಲ ಶ್ರೀಕುಮಾರೇಶ್ವರರ ಮಠಕ್ಕೇ ಬಾಂಬ್‌ ಇಟ್ಟಿದ್ದೇನೆ ಎಂದು ಬೆಂಗಳೂರಿನಿಂದ ಹಾನಗಲ್ಲಿಗೆ ಬಂದು ಪೋಲಿಸ ಗಸ್ತು ವಾಹನದ ೧೧೨ ಕ್ಕೆ ದೂರವಾಣಿ ಕರೆ ಮಾಡಿದ ಆರೋಪಿ ಹರೀಶ ಚವ್ವಾಣನ ಹೇಳಿಕೆ ,ಹಲವು ಸಂಶಯಗಳಿಗೆ ಕಾರಣವಾಯಿತು.

ಸುದ್ದಿ ಮಾಡಿದವ ಮಾನಸಿಕ ಅಸ್ವಸ್ಥ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಮಠವನ್ನೇ ಏಕೆ ಆಯ್ದುಕೊಂಡ ?.

ಆಶ್ಚರ್ಯವೆನಿಸುತ್ತದೆ.!

ಒಂದು ಕ್ಷಣ ಪ್ರಸ್ತುತ ಕರ್ನಾಟಕದಲ್ಲಿ ಜರಗುತ್ತಿರುವ  ವೀರಶೈವ ಲಿಂಗಾಯತ ಒಳ ಜಗಳಗಳು ,ತಾರಕಕ್ಕೇರುತ್ತಿರುವ ಪರ ವಿರೋಧದ ಭಾಷಣಗಳು ,ಅದರಲ್ಲೂ ವೀರಶೈವ ಎಂಬ ಶಬ್ಧಕ್ಕೆ ಉಗ್ರವಾಗಿ ವಿರೋಧಿಸುತ್ತಲೇ ಹುಟ್ಟಿಕೊಂಡ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಹಾನಗಲ್ಲಿನ ಜಿಲ್ಲೆ ಮತ್ತು ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜನ್ಮ ಸ್ಥಳ ಜೋಯಿಸರಹರಳಹಳ್ಳಿಯ ಜಿಲ್ಲೆ  ಹಾವೇರಿಯನ್ನು ಪ್ರವೇಶ ಮಾಡುತ್ತಿರುವದು ನಾಳೆ ೧೪-೦೯-೨೦೨೫ ಕಾಕತಾಳಿಯ !.

ಹಲವು ಸುಂದರ  ಸ್ವಸ್ಥ ಮುಖಗಳು ಮತ್ತು ಅವರು ಉದುರಿಸಿದ ಸುಂದರ ಮುತ್ತುಗಳು ಕಣ್ಣೆದರು ಬಂದವು.

ಅವುಗಳಲ್ಲಿ…..

ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಹಾಸಭೆ ಎಂದು ಹೆಸರಿಡದೇ ವೀರಶೈವ ಮಹಾಸಭೆ ಎಂದು ಹೆಸರಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಎಂದು ಹಲವು ಅವಹೇಳನಕರ ವಿಷಯಗಳ ಪುಸ್ತಕವನ್ನು ಬರೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸೂತ್ರದಾರಿಗಳಾದ ,ಚಾಣಾಕ್ಷರೂ,ಚಾಣುಕ್ಯರೂ ಮತ್ತು ಮಹಾ ಮೇಧಾವಿಗಳಾದ ಡಾ.ಎಸ್.ಎಮ್.ಜಾಮದಾರ ಅವರು,

೨೨-೦೪-೨೦೨೫ ರಂದು ಬೆಳಗಾವಿಯಲ್ಲಿ ಜರುಗಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕದ ಕುರಿತಾದ ಕಾರ್ಯಕ್ರಮದಲ್ಲಿ ಗದುಗಿನ ಕೆ.ವಿ.ಎಸ್.ಆರ್‌ ಪದವಿ ಪೂರ್ವ ಕಾಲೇಜಿನ ನಿವೃತ್‌ ಇಂಗ್ಲಿಷ್‌ ಭಾಷೆಯ ಪ್ರಾದ್ಯಾಪಕ ಮತ್ತು ವಚನ ಟಿ,ವಿಯ ಮುಖ್ಯಸ್ಥ ಸಿದ್ದು .ಬ. ಯಾಪಲಪರ್ವಿ ಎನ್ನುವವರು, ಕಾರ್ಯಕ್ರಮ “ವಚನ ದರ್ಶನ ಮಿಥ್ಯ VS ಸತ್ಯ” ಪುಸ್ತಕಕ್ಕೆ ಸೀಮಿತವಾಗಿದ್ದರೂ ಅನಾವಶ್ಯಕವಾಗಿ ಪುಸ್ತಕಕ್ಕೂ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ  ಪರಮಪೂಜ್ಯರ ಹೆಸರನ್ನು ಪ್ರಸ್ಥಾಪಿಸಿ : “ಪಂಚಾಚಾರ, ಗಣಾಚಾರದ ಹೆಸರಿನಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಮೇಲೆ ಅಟ್ಯಾಕ್ ಮಾಡಿದ ಕೂಡಲೇ ‘ಪಾಪ’ ಕೆಲವರಿಗೆ ನೋವಾಗುತ್ತದೆ, ಅದನ್ನ ಜೆಎಲ್‌ಎಂ ಮತ್ತು ಮಠಾಧೀಶರ ಒಕ್ಕೂಟ ಕ್ಲಿಯರ್ ಮಾಡಲಿ.” ಎಂದು ಪ್ರವಾಚಿಸಿದ್ದರಲ್ಲಿ  “ಅಟ್ಯಾಕ” ಅನ್ನುವ ಭಯೋತ್ಪಾದಕ ಶಬ್ಧ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಖೃತಿ ಅಭಿಯಾನ ಆರಂಭಗೊಳ್ಳುವ ಒಂದು ವಾರದ ಹಿಂದೆ “ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನ.

ಲೇಖನಕ್ಕೆ ತೀವೃ ವಿರೋಧವುಂಟಾದಾಗ ಕ್ಷಮೆ ಯಾಚಿಸಿದ ಡಾ,ಶಶಿಕಾಂತ ಪಟ್ಟಣ ಅವರ 29-08-2025ರಂದು ನಡೆದ ಕಾನ್ಫರೆನ್ಸ್ ಕರೆಯಲ್ಲಿ ವ್ಯಕ್ತವಾದ ಮಾತುಗಳು ಸಂಶಯದ ದಿಕ್ಕನ್ನು ಬದಲಾಯಿಸುವಂತಹದ್ದು- ವಚನ ಟಿ.ವಿಯಲ್ಲಿ ಸಂದರ್ಶನ ಕೊಡುವ.,ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಸದಸ್ಯರಾದ ಶ್ರೀ ಅಶೋಕ ಬರಗುಂಡಿ (ನಿವೃತ್ತ ಎಂಜಿನಿಯರ್) ಬಸವತತ್ವ ಪ್ರತಿಪಾದಕರು ಅವರು ಲಿಂಗಾಯತ ಮಠಾಧೀಶರ ಬಸವತತ್ವ ಅಭಿಯಾನ ಆರಂಭವಾಗುತ್ತಿರುವದರಿಂದ- ಪ್ರಕಟಗೊಂಡ ಪೂಜ್ಯ ಹಾನಗಲ್ಲ ಶ್ರೀಗಳ ಕುರಿತು ಅವಹೇಳನ ದ ಲೇಖನಕ್ಕೆ ಕ್ಷಮೆ ಕೇಳಿದ ಡಾ,ಶಶಿಕಾಂತ ಪಟ್ಟಣ  ಅವರಿಗೆ ತಾಕೀತು ಮಾಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ಜೊತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರುಗಳಾದ ಶ್ರೀ ನಿಜಗುಣಮೂರ್ತಿ ಮತ್ತು ಶ್ರೀ ಸಿದ್ದಲಿಂಗಸ್ವಾಮಿ.ಸಿ.ಜಿ. ಅವರ ಮುಂದುವರೆದ ಜಾಲತಾಣಗಳಲ್ಲಿನ  ನಿರಂತರ ಅವಹೇಳನಗಳು ಡಾ,ಶಶಿಕಾಂತ ಪಟ್ಟಣ ಅವರ ಲೇಖನದ ಪ್ರಕಟಣೆ ಉದ್ದೇಶ ಪೂರ್ವಕ ಹಿನ್ನಲೆಯನ್ನು ಸಾಬೀತು ಪಡಿಸುತ್ತದೆ.

ಕೆಲವು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಪೂಜ್ಯ ಶ್ರೀ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅವಹೇಳನದ ಲೇಖನದ ಪುಟಗಳನ್ನಷ್ಟೇ ಸಾವಿರಾರು ಪ್ರತಿ ಮುದ್ರಿಸಿ  ಇಲ್ಲವೇ ಝರಾಕ್ಸ ಪ್ರತಿ ಮಾಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ ಆರಂಭಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಹಂಚಲು ಮತ್ತು ಅದಕ್ಕೆ ಉಂಟಾಗುವ ಖರ್ಚು ವೆಚ್ಚಗಳನ್ನು ಭರಿಸುವದಾಗಿಯೂ ಹೇಳಿದ ಸಂಗತಿಗಳು ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರ  ಮತ್ತು ಲೇಖಕ ಡಾ. ಶಶಿಕಾಂತ ಪಟ್ಟಣ  ಕಾನಫರೆನ್ಸ ಕಾಲ್‌ ನಲ್ಲಿ  ವಿಚಾರ ವಿನಿಮಯದಲ್ಲಿ ವ್ಯಕ್ತ ವಾದುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಎಲ್ಲದರ ಜೊತೆಗೆ ನಾನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣುವ ಇಬ್ಬರ  ಶ್ರೀಗಳ “ಮೌನ” ನನಗೆ ಅತ್ಯಂತ ನೋವನ್ನುಂಟುಮಾಡಿದೆ.

“ ಬಸವ ಭಾರತ “ ಪತ್ರಿಕೆಯಲ್ಲಿ ಪ್ರಕಟಗೊಂಡ ಡಾ,ಶಶಿಕಾಂತ ಪಟ್ಟಣ ಅವರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಕುರಿತು ಬರೆದ ಅವಹೇಳನದ ಲೇಖನದ ಸಂಚಿಕೆಯ ಗೌರವ ಸಂಪಾದಕರಾದ  ಇಲಕಲ್ಲಿನ ಪೂಜ್ಯ ಗುರು ಮಹಾಂತಸ್ವಾಮಿಗಳು ಮತ್ತು ಸಹಿಯಿಲ್ಲದ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ “ ಬಸವ ಭಾರತ “ ಪತ್ರಿಕೆಯ ಸಂಪಾದಕರ ಪತ್ರದಲ್ಲಿ  ಹಠಾತ್ತಾಗಿ ಕಾಣಿಸಿಕೊಂಡ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟಾಧ್ಯಕ್ಷರ ಹೆಸರು , ಅವರಿಬ್ಬರ ಗಮನಕ್ಕೆ ತಂದರೂ  ಅವರು  ಲಿಖಿತ ಸ್ಪಷ್ಠೀಕರಣ ಕೊಡದೇ ಇರುವುದು.

ಸುಂದರವಾಗಿದ್ದ ಬಂಧುರವಾಗಿದ್ದ ವೀರಶೈವ ಲಿಂಗಾಯತ ಸಮುದಾಯ ೨೦೧೭ ರಿಂದ ಇಲ್ಲಿಯವರೆಗೆ ರಾಜಕೀಯ ಬಲಿಪಶುವಾಗಿದ್ದು. ಎಡಗೈ ತನ್ನ ಬಲಗೈಯನ್ನೇ ಸಂಶಯದಿಂದ ನೋಡುವ ಸ್ಥಿತಿಯನ್ನು ತಲುಪಿದ್ದು ಶೋಚನೀಯ.

ಮೇಲ್ನೋಟಕ್ಕೆ ಬಸವಣ್ಣನವರ ಭಾವಚಿತ್ರ ಸರಕಾರಿ ಕಛೇರಿಯಲ್ಲಿ ಹಾಕಿಸಿ ,ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಳನೋಟದಲ್ಲಿ ಕರಳುಬಳ್ಳಿಗಳಿಗೆ ಕೊಳ್ಳಿಯನಿಕ್ಕಿದವರು ಒಳ ಒಳಗೆ  ನಗುತ್ತಿರುವ  ಮುಸಿ ಮುಸಿ ನಗು ಹೊರ ಹೊರಗೆ ಕರಳುಬಳ್ಳಿಗಳು ಕತ್ತಿ ಮಸಿಯುತ್ತಿರುವುದು ವೀರಶೈವ ಲಿಂಗಾಯತರ ದುರಂತ ಮತ್ತು ಅವರು  ಹಗಲು ಕಂಡ ಬಾವಿಗೆ ರಾತ್ರಿ ಹಾರಿಕೊಳ್ಳುತ್ತಿರುವುದು ಶೋಚನೀಯ.

ಲಿಂಗಾಯತ ಎಂದು ವಾದಿಸುವವರು ಲಿಂಗಾಯತ ರಾಗಿ ಬದುಕಲಿ

ವೀರಶೈವರು ಎಂದು ವಾದಿಸುವವರು ವೀರಶೈವರಾಗಿ ಬದುಕಲಿ

ವೀರಶೈವ ಲಿಂಗಾಯತರು ಎಂದು ಸಮರಸದ ಬದುಕನ್ನು ಕಾಣಲಿಚ್ಚುಸುವವರು ವೀರಶೈವ ಲಿಂಗಾಯತರಾಗಿ ಬದುಕಲಿ.

ಆದರೆ ನಾ ಹೆಚ್ಚು ನೀ ಹೆಚ್ಚು ಎನ್ನುವ ಹಗ್ಗ ಜಗ್ಗಾಟದ ಪ್ರತಿ ಹಂತದಲ್ಲೂ  ಸಮಾಜದ ಉನ್ನತಿಗೆ ಹಗಲಿರಳು ಶ್ರಮಪಟ್ಟ ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು  ಅನಾವಶ್ಯಕವಾಗಿ ಎಳೆದುತರುವ ಪಾಪದ ಕೆಲಸ ಅಕ್ಷಮ್ಯ ಅಪರಾಧ.

ಈ ವಿಷಯದ ಸೂಕ್ಷ್ಮತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ತೀವೃವಾಗಿ ಮನಗಾಣಬೇಕು.

ಪರಮಪೂಜ್ಯ  ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಕುರಿತು ಅವಹೇಳಕಾರಿ ಪುಸ್ತಕ ಪ್ರಕಟಿಸುವುದು ,ಸಾರ್ವಜನಿಕ ಸಭೆಯಲ್ಲಿ ಪೂಜ್ಯರ ಮೇಲೆ “ಅಟ್ಯಾಕ” ಎಂಬ ಭಯೋತ್ಪಾದಕ ಶಬ್ಧವನ್ನು ಕೇಳಿಯೂ ಕೇಳದಂತೆ ಕುಳಿತುಕೊಳ್ಳುವುದು ,ಜಾಣ ಮೌನವನ್ನು ವಹಿಸುವುದು  ಇಂದು ಸಂಬಂಧಪಟ್ಟವರ ಆತ್ಮಗಳಿಗೆ ಸಂತೋಷವನ್ನು ನೀಡುತ್ತಿರಬಹುದು.

ನ್ಯಾಯಾಂಗ, ರಾಜ್ಯಾಂಗ ಮತ್ತು ಕಾರ್ಯಾಂಗಗಳು  ಸಂಬಂಧಪಟ್ಟವರ ಆತ್ಮಗಳಿಗೆ ಪೂರಕ ಸಹಕಾರ ನೀಡುತ್ತಿರಬಹುದು,ಆದರೆ  ಮುಂದೊಂದು ದಿನ ನಿಸರ್ಗ ಈ ಎಲ್ಲ ನೀಚ ಕಾರ್ಯಗಳಿಗೆ  ತಕ್ಕ ಉತ್ತರ ನೀಡುತ್ತದೆ ಎಂಬ ಅಚಲ ನಂಬಿಕೆ ನನ್ನದು.

-ಶ್ರೀಕಂಠ.ಚೌಕೀಮಠ

 

 

 

 

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

ಆದಿ ಶ್ರೋತ್ರಂದ್ರಿಯ ನಿ |ರ್ಭೇದ ಶಬ್ದವ ಕೇಳ್ವ

ಮೋದವದು ಸುಪ್ರ- ಸಾದ ಲಿಂಗವು ಎಂದು

ಬೋಧಿಸಿದ ಗುರುದೆ ಕೃಷಿಯಾಗ   ||೧೬೩||

ಐದನೆಯ ಜ್ಞಾನೇಂದ್ರಿಯ ಶ್ರೋತ್ರ, ಅರ್ಥಾತ್ ಕಿವಿ, ಆಕಾಶ ತತ್ವ ಪ್ರಧಾನವಾದುದು ಈ ಶ್ರೋತ್ರೇಂದ್ರಿಯ, ಆಕಾಶವು ಶಬ್ದ ಗುಣಕವಾಗಿರುವದರಿಂದ ಶ್ರೋತ್ರಕ್ಕೂ ಶಬ್ದದ ಅನುಭವವಾಗುತ್ತದೆ. “ಆತ್ಮನಃ ಆಕಾಶ ಸಂಭೂತಃʼʼ ಆತ್ಮನಿಂದ ಆಕಾಶವು ಮೊಟ್ಟಮೊದಲು ಹುಟ್ಟಿದ್ದರಿಂದ ಶಿವಕವಿಯು “ಆದಿ ಶ್ರೋತ್ರೇಂದಿ” ಎಂದು ಪ್ರಯೋಗಿಸಿದ್ದಾರೆ. ಶ್ರೋತ್ರೇಂದಿಯಕ್ಕೆ ಆದಿಪಟ್ಟ  ಬಂದಿದೆ. ಮತ್ತು ಶಿವನು ನಾದ – ಬಿಂದು ಕಲಾಸ್ವರೂಪನು. ಅವರ ಮೊದಲನೇ  ತತ್ವ ”ನಾದ”ವು ಕಿವಿಗೆ ತಾನೇ ವೇದ್ಯವಾಗುವದಿಲ್ಲವೆ !

“ನಿರ್ಭೇದ’ ಶಬ್ದದ ಅರ್ಥ ವಿಧವಿಧವಾಗಿದೆ, (೧) ಎರಡುಮಾಡು ೨) ಒಡೆ ೩) ಬೈಲಿಗೆ ಹಾಕು ೪) ಸ್ಪಷ್ಟಭಾಷಣ ) ೫)ನಾಷ ೬) ಪ್ರಲಯ ಮುಂತಾದವುಗಳು ನಿರ್ಭೇದ ಪದದ ಪರ್ಯಾಯನಾಮಗಳು. ಪ್ರಸ್ತುತ ತ್ರಿಪದಿಯಲ್ಲಿ ನಿರ್ಭೇದಕ್ಕೆ ಸ್ಪಷ್ಟವಾದ ಶಬ್ದವೆಂದೇ ಹೇಳಬೇಕು. ಯಾಕಂದರೆ ಶಬ್ದಗಳು – ಭಿನ್ನ ಭಿನ್ನವಾಗಿರುವದರಿಂದ ಕೇಳುವಿಕೆಯಲ್ಲಿ ಸ್ಪಷ್ಟತೆಯಿರಬೇಕಾಗುವದು. ಮುಖ್ಯವಾಗಿ ಶಬ್ದವನ್ನು ಐದು ತೆರನಾಗಿ ವಿಭಾಗಿಸಬಹುದು. ೧) ತಾಳವಾದ್ಯ ಕಂಸಾಳಾದಿಗಳಿಂದ ಜನ್ಯಶಬ್ದ ೨) ತಂತೀವಾದ್ಯದಿಂದ ಹೊರಡುವ ಶಬ್ದ.೩) ಕುಡುಹು (ಚರ್ಮವಾದ್ಯ) ವಿಡಿದು ಬರುವ ಶಬ್ದ ೪) ಕೊಳಲು, ವಾಸುಗಿ, ನಾಗಸರ, ಶಂಖ ಮೊದಲಾದವುಗಳಿಂದ ಹುಟ್ಟುವ ಶಬ್ದ. ೫) ವಚನ, ಗೀತರೂಪವಾದ ಶಬ್ದ. ಈ ಶಬ್ದಗಳನ್ನು ಪ್ರತ್ಯೇಕವಾಗಿ ಗ್ರಹಿಸುವ ಆನಂದವೇನಿದೆಯೋ ಅದು ಪ್ರಸಾದಲಿಂಗಕ್ಕೆ ಸಲ್ಲುವದೆಂದು ಗುರು ಬೋಧಿಸುತ್ತಾನೆ.

ಸಾಮಾನ್ಯ ಶಬ್ದವು ಪ್ರಸಾದಲಿಂಗಕ್ಕೆ ಸಲ್ಲುತ್ತಿದ್ದರೆ, ವಿಭಾಗಿಸಲ್ಪಡುವ ವಿವಿಧ ಶಬ್ದಗಳು ಪ್ರಸಾದಲಿಂಗದೊಳಗಿನ ಷದ್ವಿಧ ಲಿಂಗಗಳಿಗೆ ಸಮರ್ಪಣವಾಗುವಂತಾಗಬೇಕು. ಅರ್ಥಾತ್ ಸುಜ್ಞಾನದಿಂದ ವಿಭಿನ್ನ ಶಬ್ದಗಳನ್ನು ಗುರುತಿಸಿ ಆಯಾಲಿಂಗಕ್ಕೆ ಶಬ್ದ ಪ್ರಸಾದವನ್ನಾಗಿ ಸಮರ್ಪಿಸುವದು ಶರಣನ ಮಣಿಹವಾಗಿದೆ. ಪ್ರಸಾದಲಿಂಗವು ಶರಣನಿಂದ ಪೂಜೆಗೊಂಬುವಂಥಹದು. ಶರಣಸ್ಥಲಕ್ಕೆ ಏರಿ ನಿಂತವನು ನಿರ್ಭೇದ ಶಬ್ದವನ್ನು ಅರಿಯುತ್ತಾನೆ. ಅಂದರೆ ದೇಹಾವಸಾನದ, ಅರ್ಥಾತ್ ಅಂತಿಮಾವವಸ್ಥೆಯ ಸಾಗರಘೋಷದಂತಹ ಶಬ್ದವನ್ನು ಸಹ ತಿಳಿಯಲು ಸಮರ್ಥನಾಗುತ್ತಾನೆಂದು ಹೇಳಬಹುದು. ಈ ಶರಣನು ತನ್ನ ಶರೀರಾವಸಾನದ ಸೂಚನೆಯನ್ನು ತಿಳಿದು ಕೊಳ್ಳುವನು. ಅಂತೆಯೇ ‘ಶರಣನ ಗುಣ ಮರಣದಲ್ಲಿ ಕಾಣು” ಎಂದು ಅನುಭವಿಗಳು ನುಡಿದುದುಂಟು.

ಚನ್ನ ಬಸವಣ್ಣನವರ ಪ್ರಸಾದಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣ ಕೆಳಗಿನಂತಿದೆ. ”ತಾಳ-ಕಂಸಾಳವಿಡಿದು ಹುಟ್ಟಿದ ಶಬ್ದವನರಿವುದು ಆಚಾರಲಿಂಗದಲ್ಲಿ ,ತಂತಿವಿಡಿದು ಹುಟ್ಟಿದ ಶಬ್ದವನರಿವುದು ಗುರುಲಿಂಗದಲ್ಲಿ; ಕುಡುಹುವಿಡಿದು ಹುಟ್ಟಿದ ಶಬ್ದವನರಿವುದು ಶಿವಲಿಂಗದಲ್ಲಿ; ಕೊಳಲು, ವಾಸುಗಿ, ನಾಗಸರ; ಶಂಖದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಜಂಗಮಲಿಂಗದಲ್ಲಿ: ವಚನಗೀತದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಪ್ರಸಾದಲಿಂಗದಲ್ಲಿ ; ಇಂತಿವೆಲ್ಲದರಲ್ಲಿಯ ಹುಟ್ಟಿದ ಶಬ್ದವನರಿವುದು ಮಹಾಲಿಂಗದಲ್ಲಿ”

ಈ ರೀತಿಯಾಗಿ ಹುಟ್ಟಿದ ಶಬ್ದಗಳನ್ನು ಪ್ರಸಾದಲಿಂಗದೊಳಗಿನ ಆಚಾರಾದಿ ಲಿಂಗದಲ್ಲಿ ಮನನಮಾಡಿಕೊಳ್ಳಬೇಕು. ಶಬ್ದ ಪ್ರಸಾದವನ್ನು ಆಯಾಲಿಂಗಗಳಿಗೆ ಸಮರ್ಪಿಸುವ ಸಾವಧಾನತೆಯನ್ನರಿಯಬೇಕು. ಶಬ್ದವು ನಿಃಶಬ್ದವಾಗಿ ಮಂತ್ರವಾಗ ಬೇಕು. ಆಗ ಸದಾಕಾಲವೂ ಕಿವಿಯಲ್ಲಿ ಪ್ರಸಾದಲಿಂಗದ ಸಾಕ್ಷಾತ್ಕಾರವಾಗುವದು. ಗುರುವೆ ! ಎನ್ನ ಶ್ರೋತ್ರವನ್ನು ಪ್ರಸಾದಲಿಂಗವನ್ನಾಗಿಸುವಂತೆ ಕರುಣಿಸು.

*ಹೃದಯೇಂದ್ರಿಯದಿ ಪಂಚ | ವಿಧ ವಿಷಯ ಸುಖ ಮಿಶ್ರ

ಮುದದಿ ಭೋಗಿಪುದು-ಸದಮಲ ಮಹಲಿಂಗವೆಂ

ಬುದ ಪೇಳ್ದ ಗುರುವೆ ಕೃಪೆಯಾಗು  ||೧೬೪||

ಐದು ಜ್ಞಾನೇಂದ್ರಿಯಗಳ ವಿಷಯಗಳ ತೃಪ್ತಿಯನ್ನು ಪಡೆಯುವದು ಹೃದಯೇಂದ್ರಿಯವು. ಇದು ಆತ್ಮತತ್ವದಿಂದ ಬಂದುದು. ಈ ಹೃದಯದಲ್ಲಿ ಮಹಾಲಿಂಗನ ವಾಸವಿರುವದು. ಘ್ರಾಣದೊಳಗಿನ ಆಚಾರಲಿಂಗಕ್ಕೆ ಗಂಧವು, ಜಿಹ್ವೆಯೊಳಗಿನ ಗುರುಲಿಂಗಕ್ಕೆ ರಸವು, ನೇತ್ರದೊಳಗಿನ ಶಿವಲಿಂಗಕ್ಕೆ ರೂಪವು ,ತ್ವಕ್ಕಿನೊಳಗಿನ ಜಂಗಮಲಿಂಗಕ್ಕೆ ಸ್ಪರ್ಶನವು, ಶ್ರೋತ್ರದೊಳಗಿನ ಪ್ರಸಾದಲಿಂಗಕ್ಕೆ ಶಬ್ದವು ಸಮರ್ಪಿಸಲ್ಪಡುತ್ತಿದ್ದರೆ ಈ ಪಂಚಜ್ಞಾನೇಂದ್ರಿಯಗಳೊಳಗಿನ ಪಂಚಲಿಂಗಗಳಿಗೆ ಸಲ್ಲುವ ಪಂಚಪ್ರಸಾದದ ಮಿಶ್ರತೃಪ್ತಿಯು ಹೃದಯದೊಳಗಣ ಮಹಾಲಿಂಗಕ್ಕೇನೆ ಆನಂದಗೊಳಿಸುವದು. ಇಂದ್ರಿಯಗಳು ಲಿಂಗಮುಖವಾಗಿ ವಿಷಯಗಳನ್ನು ಪ್ರಸಿದ ಗೊಳಿಸಿ ಭೋಗಿಸುವದರಿಂದ ಆತ್ಮನು ಆನಂದಗೊಳ್ಳುವನು. ಇಂಥ ಸುಜ್ಞಾನಿಯಾದ ಶಿವಭಕ್ತನು ಸದಾಕಾಲವೂ ಆನಂದತುಂದಿಲನಾಗಿರುವನು. ಅವನ ಪ್ರಾಣಲಿಂಗಕ್ಕೆ ಸಂತೃಪ್ತಿಯಾಗುವದು. ಪಂಚಜ್ಞಾನೇಂದ್ರಿಯಗಳಲ್ಲಿ ಪಂಚಲಿಂಗಗಳನ್ನು ಸ್ಮರಿಸಿ ಸುಜ್ಞಾನದಿಂದ ಪಂಚ ವಿಷಯಗಳನ್ನು ಪಂಚಪ್ರಸಾದಗಳನ್ನಾಗಿಸಿ ಸ್ವೀಕರಿಸುವದರಿಂದ ಯಾವಾಗಲೂ ಪವಿತ್ರವಾದ ಮಹಾಲಿಂಗವು ಆನಂದ ಹೊಂದುವದು. ಈ ತೆರನಾಗಿ ಭೋಗಿಸುವ ಕಲೆಯನ್ನು ಕರಗತಮಾಡಿಕೊಂಡರೆ ವಿಷಯಗಳ ಪೂರ್ವಾಶ್ರಯವು ಅಳಿಯುವದು. ಅಲ್ಲದೆ ಜ್ಞಾನೇಂದ್ರಿಯಗಳ ಪ್ರಾಕೃತಿಕ ಧರ್ಮವೂ ಬಯಲಾಗಿ ಲಿಂಗಸಂಬಂಧವನ್ನು ಪಡೆಯಬಲ್ಲವು. ಆಗ ಲಿಂಗಭಕ್ತನು ಪ್ರಸಾದಕಾಯನಾಗಿ ಪ್ರಸನ್ನಚಿತ್ತನಾಗುವದರಲ್ಲಿ ಸಂಶಯವಿಲ್ಲವೆಂದು ಗುರುನಾಥನು ಉಪದೇಶಿಸುತ್ತಾನೆ.

ಮಿಶ್ರಾರ್ಪಣದಲ್ಲಿ ಮಹಾಲಿಂಗದ ಮಿಶ್ರಷಡ್ವಿಧ ಲಿಂಗಾರ್ಪಣವನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗಂಧದ ತೃಪ್ತಿಯನರಿಯುವದು ಆಚಾರಲಿಂಗದಲ್ಲಿ, ರಸದತೃಪ್ತಿಯನರಿವುದು ಗುರುಲಿಂಗದಲ್ಲಿ; ರೂಪಿನ ತೃಪ್ತಿಯನರಿವುದು ಶಿವಲಿಂಗದಲ್ಲಿ; ಸ್ಪರ್ಶನತೃಪ್ತಿಯನರಿವುದು ಜಂಗಮಲಿಂಗದಲ್ಲಿ, ಶಬ್ದದ ತೃಪ್ತಿಯನರಿವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ತೃಪ್ತಿಯನರಿವುದು ಮಹಾಲಿಂಗದಲ್ಲಿ’ ಮಹಾಲಿಂಗದೊಳಗಿನ ಆಚಾರ ಲಿಂಗವು ಗಂಧಪ್ರಸಾದದ ತೃಪ್ತಿಯನ್ನು, ಗುರುಲಿಂಗವು ರಸಪ್ರಸಾದದ ತೃಪ್ತಿಯನ್ನು, ಶಿವಲಿಂಗವು ರೂಪುಪ್ರಸಾದ ತೃಪ್ತಿಯನ್ನು, ಜಂಗಮಲಿಂಗವು ಸ್ಪರ್ಶಪ್ರಸಾದ ತೃಪ್ತಿಯನ್ನು, ಪ್ರಸಾದಲಿಂಗವು ಶಬ್ದಪ್ರಸಾದ ತೃಪ್ತಿಯನ್ನು ಅನುಭವಿಸುತ್ತವೆ. ಇವೆಲ್ಲವುಗಳ ಸಂತೃಪ್ತಿಯು ಮಹಾಲಿಂಗದೊಳಗಿನ ಮಹಾಲಿಂಗಕ್ಕೆ ಸಲ್ಲುವದು. ಓ ಗುರುವೆ ಇಂಥ ಮಹದಾನಂದವನ್ನು ಹೊಂದುವ ಸೌಭಾಗ್ಯವನ್ನು ಸಮನಿಸುವಂತೆ ಹರಸು

ಜ.ಚ.ನಿ

 

ಶಿಲ್ಪಿಗಳಲ್ಲಿ ಶಿಲಾಶಿಲ್ಪಿಯೆ ಪ್ರಸಿದ್ದ. ಈತನು ಜಾತಿಯ ಶಿಲೆಯನ್ನು ತೆಗೆದುಕೊಂಡು ತನ್ನ ಅಂತಸ್ಥವಾದ ಕಲೆಯನ್ನು ಅದರಲ್ಲಿರಿಸಿ ಅದನ್ನು ಕಲಾಮೂರ್ತಿಯನ್ನಾಗಿ ಮಾಡಬಲ್ಲನು, ಮಾಡುತ್ತಾನೆ.

ಕ್ರಿಯಾಶಿಲ್ಪಿಯಾದ ಕುಮಾರಯೋಗಿಯು ಅನೇಕ ಶಿಲಾವರ್ಗದ ಮನುಷ್ಯರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದ ಕಡೆದು ಕಡೆದು ಮೂರ್ತಿಗಳನ್ನಾಗಿ ಮಾಡಿದನು. ಶಿಲಾಶಿಲ್ಪಿಗಿಂತಲು ಕ್ರಿಯಾಶಿಲ್ಪಿಯ ಕೌಶಲ್ಯ ಹೆಚ್ಚಿನದು; ಕಷ್ಟ ಹೆಚ್ಚಿನದು, ಶಿಲಾಶಿಲ್ಪಿಗೆ ಶಿಲೆಯು ವಶಂಗತವಾಗಿರುತ್ತದೆ. ಅದರಂತೆ ಕ್ರಿಯಾಶಿಲ್ಪಿಗೆ ಶಿಲಾವರ್ಗದ ಮನುಷ್ಯರ ಮನಸ್ಸು ವಶವರ್ತಿಯಾಗುವುದು ತೀರ ಕಷ್ಟದ ಮಾತು. ಕ್ರಿಯಾಶಿಲ್ಪಿಯು ತಾನೊಂದು ನೆನೆದರೆ ಶಿಷ್ಯನು ಮತ್ತೊಂದನ್ನು ನೆನೆಯುತ್ತಿರುತ್ತಾನೆ. ಅಂಥವರ ಮನಸ್ಸನ್ನು ಪರಿಪಾಲಿಸುವುದೆ ಪರಮ ಸಾಹಸದ ಕೆಲಸ, ಶಿಲಾಶಿಲ್ಪಿಯ ಉಳಿಯ ಹೊಡೆತ ಶಿಲೆಯಲ್ಲಿ ನೇರವಾಗಿ ಮೂಡುತ್ತದೆ. ಕ್ರಿಯಾಶಿಲ್ಪಿಯ ಹಿತನುಡಿಯ ಪರಿಣಾಮ ಶಿಷ್ಯನ ಮನಸ್ಸಿನ ಮೇಲೆ ಒಮ್ಮಿಗೆ ಮೂಡಲರಿಯದು.

ಶಿಲಾವರ್ಗದ ಮನುಷ್ಯರನ್ನು ಮಾನವತ್ವದ ಮಟ್ಟಕ್ಕೆ ತಂದು  ಮೂರ್ತಿವಂತರನ್ನಾಗಿ ಮಾಡುವುದು ಇದೂ ಒಂದು ಶಿಲ್ಪಕಲೆ. ದುಸ್ವಭಾವಗಳನ್ನು ದೂರೀಕರಿಸಿ ಸುಸ್ವಭಾವ-ಸ್ವಾನುಭಾವಗಳನ್ನು ಬೋಧಿಸಿ ಶಾಂತಿ-ಸೌಹಾರ್ದ್ರ ಕಳೆಗಳನ್ನು ತುಂಬಿ ತೋರುವಂತೆ ಎಸಗುವುದು ಒಂದು ಸಜೀವ ಸೋಜ್ವಲ ಶಿಲ್ಪಕಲೆ; ಪ್ರವಾಹಿ ಕಲೆ. ಇದರಲ್ಲಿ ಹಸ್ತ ನೈಪುಣ್ಯಕ್ಕಿಂತ ಭಾವ ನೈಪುಣ್ಯ ಪ್ರಧಾನವಾದುದು; ಪ್ರಯುಕ್ತವಾದುದು.

ಶಿಲಾಶಿಲ್ಪಿಯು ಬಹಿರಂಗಗಳನ್ನು ನಿರ್ಮಿಸಬಲ್ಲನು. ಮಾನವೋನ್ನತಿ ಗೈಯುವ ಶಿಷ್ಟ ಶಿಲ್ಪಿಯು ಅಂತರಂಗವನ್ನು ಅಲಂಕರಿಸಬಲ್ಲನು ; ತಿದ್ದಿ ಶುದ್ಧಗೊಳಿಸಬಲ್ಲನು. ಎರಡನೆಯದಾಗಿ ವಸನಾಭರಣಗಳನ್ನು ಉಡಿಸಿ ತೊಡಿಸುವುದರಲ್ಲಿ ಶಿಲಾಶಿಲ್ಪಿಯ ನೈಪುಣ್ಯವಿದ್ದರೆ, ಗುಣಾಭರಣಗಳನ್ನು ತೊಡಿಸುವುದರಲ್ಲಿ ಶಿಷ್ಟಶಿಲ್ಪಿಯ ಪುಣ್ಯಪ್ರಭೆ ಕಾರಣವಾಗಿರುತ್ತದೆ. ಉಡಿಗೆಯಿಲ್ಲದೆ ಬರೀತೊಡಿಗೆಗಳಿಂದ ಅಲಂಕರಿಸಿದ ಶಿಲ್ಪಕಲೆಗಳಿಗೇನು ಕೊರತೆಯಿಲ್ಲ. ಬೇಲೂರು, ಹಳೆಬೀಡುಗಳನ್ನು ನೋಡಿದವರಿಗೆ ಬೇರೆ ನಿದರ್ಶನಬೇಕಿಲ್ಲ. ಈ ಸಂವಿಧಾನವು ಶಿಷ್ಟಶಿಲ್ಪಿಯ ಕಲೆಗೆ ಸಾದೃಶ್ಯವಾಗಿದೆ;  ಸಂಗ್ರಾಹ್ಯವಾಗಿದೆ. ಏಕೆಂದರೆ ಅಂತರಂಗದ ಆತ್ಮನಿಗೆ ಗುಣಾಭರಣದ ವಿನಹ ವಸನಾಭರಣದ ಹಂಗೆಲ್ಲಿ, ಏತಕ್ಕೆ ?

ಶಿಲಾಶಿಲ್ಪಿಯದು ಜಡವಾದ ಕಲೆ, ಕ್ರಿಯಾಶಿಲ್ಪಿಯದು ಅಜಡವಾದ ಕಲೆ. ಶಿಲಾಶಿಲ್ಪಿಯು ಶಿಲೆಯಲ್ಲಿ ಬರೀ ಲಾವಣ್ಯವನ್ನು ಕುದುರಿಸುತ್ತಾನೆ. ಶಿಷ್ಟಶಿಲ್ಪಿಯು ಮಾನವನಲ್ಲಿ ಪುಣ್ಯಲಾವಣ್ಯವನ್ನು ಕೆತ್ತುತ್ತಾನೆ. ಶಿಲಾಶಿಲ್ಪಿಯ ಕಲೆ ಕಾಲಕ್ಕೊಳಗಾಗುತ್ತದೆ. ಕ್ರಿಯಾಶಿಲ್ಪಿಯ ಕಲೆ ಕಾಲಾತೀತವಾಗಿರುತ್ತದೆ.

ಕುಮಾರೇಶನ ಕ್ರಿಯಾಶಕ್ತಿನಿಶಿತವಾದುದು; ನಿತಾಂತವಾದುದು ಅದುದರಿಂದಲೆ ಯಾರಿಂದಲು ಸುಧಾರಿಸಲು ಶಕ್ಯವಿಲ್ಲದ ಅನೇಕರು ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕು ಮುದ್ದಾದ ಮೂರ್ತಿವಂತರಾದರು; ಕೊನೆಯಿಲ್ಲದ ಕೀರ್ತಿವಂತರಾದರು.

ಸರಿಯಾಗಿ ಓದು ಬಾರದವರು ಅವರ ಕೈಯಲ್ಲಿ ಶ್ರೇಷ್ಟ ಶಿವಾನುಭವಿಗಳಾದರು. ಬರೆಯಬಾರದವರು ಪ್ರಸಿದ್ಧ ಲೇಖಕರಾದರು. ಚನ್ನಾಗಿ ಮಾತನಾಡಲು ಬಾರದವರು ವಾಗ್ಮಿಗಳಾದರು; ವ್ಯಾಖ್ಯಾತೃಗಳಾದರು; ಕೀರ್ತನ ಕಲಾವಿದರಾದರು. ಸಂಗೀತದ ಗಂಧವನರಿಯದವರು ‘ಸಂಗೀತ ಸಾಗರ’ವಾದರು. ಸಂಸಾರಿಗಳಾಗಬೇಕಾದವರು ಸನ್ಯಾಸಿಗಳಾದರು. ಪಶುಗಾಯಿಗಳಾಗಬೇಕಾದವರು ಪಾಠಶಾಲಾಧ್ಯಾಪಕರಾದರು. ರಾಗಿಗಳು ವಿರಾಗಿಗಳಾದರು. ಕೃಪಣರು ತ್ಯಾಗಿಗಳಾದರು.  ರೋಗಿಗಳು ನಿರೋಗಿಗಳಾದರು. ಭವಿಗಳು ಭಕ್ತರಾದರು. ಗುಣಹೀನರು ಗುಣಿಗಳಾದರು.

ಸುಳಿವು ಸರಿಯಾಗಿಲ್ಲದ ಶಿಲೆಗಳು ಶಿಲ್ಪಿಯ ಕೈಗೆ ಸೇರಿದರು ಮೂರ್ತಿಗಳಾಗುವ ಭಾಗ್ಯವಿಲ್ಲದೆ ಒಡೆದು ಹೋಗುವಂತೆ, ಸ್ವಾಮಿಗಳವರ ಕ್ರಿಯಾಶಿಲ್ಪಕ್ಕೆ ಸಿಕ್ಕಿದ ಕೆಲವರು ಕರ್ಮಬಲದಿಂದ ಕಲಾಹೀನರಾದರು. ಕನಿಷ್ಠ ಬಾಳು ಬಾಳಿದರು. ಯಾವುದನ್ನು ಪುಣ್ಯ ಬೇಕು; ಭಾಗ್ಯ ಬೇಕು.

ಅಂಥವರ ವಿಷಯದಲ್ಲಿ ಸ್ವಾಮಿಗಳವರು ಒಮ್ಮೊಮ್ಮೆ ನೆನೆದು ಮನಸಾರೆ ಮರುಗುತ್ತಿದ್ದರು. ಮತ್ತೊಮ್ಮೆ “ಸಗಣಿಯ ಬೆನಕಂಗೆ ಸಂಪಿಗೆಯ ಅರಳಲ್ಲಿ ಪೂಜಿಸಿದರೆ ರಂಜನೆ ಅಹುದಲ್ಲದೆ ಅದರ ಗಂಜಳ ಬಿಡದಣ್ಣ… ಎಂಬ ಬಸವೇಶ್ವರನ ವಚನವನ್ನು ನೆನೆದು ಸುಮ್ಮನಾಗುತ್ತಿದ್ದರು; ನೆಮ್ಮದಿಗೊಳ್ಳುತ್ತಿದ್ದರು.

ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ  ಗದಗ

 

ವ್ಯಕ್ತಿಯ ಜೀವನದಲ್ಲಿ ಹರಕೆ-ಹಾರೈಕೆಗಳೆರಡಕ್ಕೂ ವಿಶೇಷ ಮಹತ್ವವಿದೆ. ‘ಹರಕೆ ಇದರ ಶಾಬ್ದಿಕ ಅರ್ಥ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆ, ಸಂಕಲ್ಪ  ಅಥವಾ ಅಭೀಷ್ಟ ಸಿದ್ದಿಸಿದ ಮೇಲೆ ದೇವರಿಗೆ ಅರ್ಪಿಸುವ ವಸ್ತು ಎಂದಿದ್ದರೂ ದೇವರಲ್ಲಿ ಬೇಡಿಕೊಳ್ಳುವುದು (ಉದಾಹರಣೆಗೆ ಹರಕೆ ಹೊರುವುದು) ಎಂಬ  ಅರ್ಥದಲ್ಲಿಯೂ ಈ ಶಬ್ದವನ್ನು ಬಳಸಿಕೊಳ್ಳುತ್ತೇವೆ. ದೇವರಲ್ಲಿ ಬೇಡಿಕೊಳ್ಳುವ, ಮೊರೆ ಇಡುವ ಕ್ರಿಯೆಗೆ ನಾವು ಪ್ರಾರ್ಥನೆ ಎನ್ನುತ್ತೇವೆ. ಆಗ ಹರಕೆಯ ಅರ್ಥ ಪ್ರಾರ್ಥನೆ ಎಂದಾಗುತ್ತದೆ. ನಾವು ಪರಮಾತ್ಮನ ಕೃಪೆಗಾಗಿ, ಮನಸ್ಸನ್ನು ನಿರ್ಮಲಗೊಳಿಸುವುದಕ್ಕಾಗಿ, ಹೃದಯಶುದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತೇವೆ. ಬದುಕುವುದಕ್ಕೆ ಆಧಾರಭೂತವಾದ ಅನ್ನ, ನೀರು, ಭೂಮಿ, ಗಾಳಿ ಇತ್ಯಾದಿ ಸರ್ವಸ್ವವನ್ನು ದಯಪಾಲಿಸಿದ ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯೂ ಪ್ರಾರ್ಥನೆ ಎನಿಸುವುದು. ಸರ್ವಶಕ್ತನಾದ ಸರ್ವವ್ಯಾಪಿಯಾದ ಭಗವಂತನಲ್ಲಿ ನಮ್ಮ ದೋಷ ದೌರ್ಬಲ್ಯಗಳನ್ನು ಸಮರ್ಪಿಸಿ, ಸದ್ಗುಣ ಸಂಪನ್ನರಾಗಿ ಬದುಕುವುದಕ್ಕೆ ಹಾಗೆಯೇ ಕ್ಷಣಿಕ ಸುಖಭೋಗಗಳನ್ನು ತ್ಯಾಗ ಮಾಡಿ ಆತ್ಮೋನ್ನತಿಯನ್ನು ಹೊಂದುವುದಕ್ಕೆ ನಾವು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲೇಬೇಕು. ಸತ್ಸಂಕಲ್ಪದ ಸಾಧನೆಗಾಗಿ ನಾವು ಮಾಡುವ ಪ್ರಾರ್ಥನೆಯಲ್ಲಿ ಅಚಲ ಶ್ರದ್ಧೆ ಹಾಗೂ ವಿಶ್ವಾಸಗಳು ಇರಬೇಕಾದುದು ಅತ್ಯವಶ್ಯ. ಅಚಲ ಶ್ರದ್ಧೆಯುಳ್ಳ ಉಪನಿಷತ್ಕಾಲದ ಗುರುಶಿಷ್ಯರು ಭಗವಂತನನ್ನು ಪ್ರಾರ್ಥಿಸುವ ಮಾದರಿಯೊಂದು ಹೀಗಿದೆ:

 ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ

ಸ್ಥಿರೈರಂಗೈಸ್ತು಼ಷ್ಟುವಾಂಸಸ್ತನೂಬಿಃ

ವ್ಯಶೇಮ ದೇವಹಿತಂ ಯದಾಯುಃ (ಪ್ರಶೋಪನಿಷತ್)

‘ದೇವತೆಗಳೇ! ನಾವು ನಮ್ಮ ಕಿವಿಗಳಿಂದ ಕಲ್ಯಾಣಕಾರಕ ವಚನಗಳನ್ನೇ ಕೇಳುವಂತಾಗಲಿ, ಕಣ್ಣುಗಳಿಂದ ಮಂಗಳಕರವಾದುದನ್ನೇ ನೋಡುವಂತಾಗಲಿ. ನಮ್ಮ ಶರೀರದ ಪ್ರತಿಯೊಂದು ಅವಯವವೂ ಸದೃಢವಾಗಿರಲಿ, ಅವುಗಳ ಸಹಾಯದಿಂದ ನಮ್ಮ ಆಯುಷ್ಯದುದ್ದಕ್ಕೂ ಭಗವಂತನ ನಾಮಸ್ಮರಣೆ ಮಾಡುವಂತಾಗಲಿ’ ಇದೊಂದು ಪ್ರಾರ್ಥನೆ (ಹರಕೆ)ಯ ಅತ್ಯುತ್ತಮ ಮಾದರಿ. ಇಲ್ಲಿ ನಿಂದೆ, ಚಾಡಿ, ಬೈಗುಳ ಅಥವಾ ಪಾಪದ ಮಾತುಗಳನ್ನು ಕೇಳಬಾರದೆಂಬ, ಅಮಂಗಲಕಾರಿ ಮತ್ತು ಪತನಕ್ಕೆ ಕಾರಣವಾಗುವ ದೃಶ್ಯಗಳನ್ನು ನೋಡಬಾರದೆಂಬ ಗುರು-ಶಿಷ್ಯರ ಆಶಯವನ್ನು ಗುರುತಿಸಬೇಕು. ನಮ್ಮ ಹರಕೆ ಅಥವಾ ಪ್ರಾರ್ಥನೆಯೂ ಹೀಗಿದ್ದರೆ ಒಳ್ಳೆಯದಲ್ಲವೆ?   ʼಹಾರೈಕೆ’ಯೂ ಕೋರಿಕೆ, ಬಯಕೆ ಇತ್ಯಾದಿ ಅರ್ಥಗಳನ್ನು ಹೊಂದಿದ ಸುಂದರ ಶಬ್ದ. ಒಳ್ಳೆಯದನ್ನು ಬಯಸುವುದಕ್ಕೆ, ಶುಭವನ್ನು ಕೋರುವುದಕ್ಕೆ ನಾವು ‘ಹಾರೈಕೆ’ ಎಂಬ ಪದಪ್ರಯೋಗ ಮಾಡುತ್ತೇವೆ. ನಮ್ಮ ಹಾರೈಕೆಯೂ ಪರಿಶುದ್ಧ ಅಂತಃಕರಣದಿಂದ, ಮಾನವ ಕಲ್ಯಾಣದ ಆಶಯದಿಂದ ಬಂದುದಾಗಿರಬೇಕು. ಉಪನಿಷತ್ಕಾಲದ ಋಷಿಗಳು ವ್ಯಕ್ತಗೊಳಿಸಿದ ಹಾರೈಕೆಯಲ್ಲಿ ನಾವು ಅಂತಹ ಆಶಯವನ್ನು ಕಾಣಬಹುದಾಗಿದೆ-

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ

ಏವಂ ತ್ವಯಿ ನಾನ್ಯಥೇತೋsಸ್ತಿ ನಕರ್ಮ ಲಿಪ್ಯತೇ ನರೇ ! (ಈಶೋಪನಿಷತ್)

ಈ ಜಗತ್ತಿನಲ್ಲಿ ಸರ್ವಶಕ್ತ ಪರಮಾತ್ಮನ ಧ್ಯಾನ ಮಾಡುತ್ತ ಅರ್ಥಾತ್ ಎಲ್ಲವೂ ಅವನದೇ ಎಂದು ಪರಿಭಾವಿಸಿ, ಅವನ ಸೇವೆ(ಪೂಜೆ)ಗಾಗಿ ಶಾಸ್ತ್ರನಿಯತವಾದ ಕರ್ಮ(ಕರ್ತವ್ಯ)ಗಳನ್ನು ನಿರ್ವಹಿಸುತ್ತ, ನೂರು ವರ್ಷಗಳವರೆಗೆ ಬದುಕುವ ಇಚ್ಛೆಯುಳ್ಳವನಾಗು. ಕರ್ಮಗಳನ್ನು ಮಾಡುತ್ತ ಕರ್ಮಗಳಿಗಂಟಿಕೊಳ್ಳದೆ ಭವಬಂಧನದಿಂದ ಮುಕ್ತನಾಗುವ ಮಾರ್ಗ ಇದಕ್ಕಿಂತ ಬೇರೊಂದಿಲ್ಲ. ಇಲ್ಲಿ ಶಾಸ್ತ್ರನಿಯತ ಕರ್ಮಗಳನ್ನು ಮಾಡುತ್ತ ಜೀವನ ನಿರ್ವಹಣೆ ಮಾಡುವುದು ಯಾವುದೇ ಸ್ವಾರ್ಥಕ್ಕಾಗಿ ಅಥವಾ ವಿಷಯ ಭೋಗಕ್ಕಾಗಿ ಅಲ್ಲ; ತಾಪತ್ರಯಗಳಿಂದ ಭವಬಂಧನದಿಂದ ಮುಕ್ತನಾಗುವುದಕ್ಕಾಗಿ. ಈ ಕಾರಣಕ್ಕಾಗಿಯೇ ಪೂರ್ಣ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಬೇಕೆನ್ನುವ ಆಶಯ ಹೊಂದಿದ ಋಷಿಗಳ ಮಾನವೀಯ ಕಳಕಳಿ ನಮಗೆ ಮುಖ್ಯವಾಗುತ್ತದೆ.

 

ಲೇಖಕರು ಶ್ರೀ ಮ.ನಿ.ಪ್ರ. ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು .ಓಲೆಮಠ.ಜಮಖಂಡಿ

ಕನ್ನಡ ನಾಡಿನ ಪುಣ್ಯ ವಿಶೇಷವೆಂದರೆ, ಕುಮಾರ ಶಿವಯೋಗಿಗಳಂಥ ಮಹಿಮಾಶಾಲಿಗಳು ಉದಯರಾದದ್ದು. ಲೋಕಬೆಳಗಲು ರವಿಬೇಕು; ಆಧ್ಯಾತ್ಮಲೋಕ ಬೆಳಗಲು ಶ್ರೀ ಕುಮಾರ ಶಿವಯೋಗಿಗಳಂಥ ಚಿದ್ಬೆಳಕು ಬೇಕು. ಬಸವಾದಿ ಶಿವಶರಣರ ತರುವಾಯು ಆ ಆಧ್ಯಾತ್ಮ ಬೆಳಕನ್ನು ಬೆಳಗಿಸಿದವರು ಲಿಂಗೈಕ್ಯ ಹಾನಗಲ್ಲ ಪರಮಪೂಜ್ಯ ಶ್ರೀ ಕುಮಾರ ಶಿವಯೋಗಿಗಳು.

ಶರಣರು ಸಮಷ್ಟಿಗಾಗಿ ದುಡಿದಂತೆ ; ಕುಮಾರ ಶಿವಯೋಗಿಗಳು ವ್ಯಷ್ಟಿಯಾಗಿ ಸಮಷ್ಟಿಯನ್ನು ಕಟ್ಟಿ; ಸಮಷ್ಟಿಯ ಶ್ರೇಷ್ಠತೆಯನ್ನು ಸಮಷ್ಟಿಗೆ ಅರುಹಿ ಶ್ರೇಷ್ಠತೆಯ ಶಿಖರ ಕಟ್ಟಲು ಆಗ ಅವರಿಗೆ ಅವರ ಅರಿವೇ, ಒಂಟಿ ಸಲಗ. ವಿಶೇಷ ಸವಲತ್ತುಗಳೇ ಇಲ್ಲದ ಹಳ್ಳಿಯಲ್ಲಿ ಉದಿಸಿದರು. ಯಾರೂ ಕೇಳುವವರೇ ಇಲ್ಲ ಎಂಬಂತಹ ವಾತಾವರಣದಲ್ಲಿ ಬೆಳೆದರು. ಜ್ಞಾನಭ್ರಮರದ ಕುಕ್ಕಾರಿಯಲ್ಲಿ ಜ್ಞಾನಹಸಿವಿನ ಕಸಿವಿಸಿಯುಸಿರಿಗೆ ಕಿವಿಯೇ ಇರದ ಬಡತನದ ಭದ್ರಕೋಟೆಯಲ್ಲಿ ನಲುಗಿದ ಆ ಅವಸ್ಥೆ ಅದು.

ಅಕ್ಕ ಹೇಳುವ ಹಾಗೆ ಅನಂತಕಾಲ ತಪಿಸಿದ ಫಲಪಕ್ವವಾದಾಗ ವೈರಾಗ್ಯದಿಂದ ಬಂದ ಬಣ್ಣ ಅವರಿಗೆ ಕಾಣಹತ್ತಿತು ; ಹಣ್ಣು ಹಣ್ಣಾದ ಸಿಪ್ಪೆ ಕಳಚಲು ಕಳಿಯಲು ಲಿಂಗ ನೈವೇದ್ಯವಾಗಲು ಅರ್ಹವಾಗುವಂತೆ ಜೋಯಿಸರ ಹರಳಳ್ಳಿ ಎಂಬ ತಳಿಗೆ ಸಾಲೀಮಠಕ್ಕೆಂದೇ ಮೀಸಲಾಗಿಬಿಟ್ಟಿತ್ತು. ಹೃದಯಶ್ರೀಮಂತಿಕೆ ಭಾವಶ್ರೀಮಂತಿಕೆ ಭೂಮವಾದ ಸಾಂಸ್ಕೃತಿಕ ಆಧ್ಯಾತ್ಮಿಕ ದೈವಾವಲಂಬಿಕ ಶ್ರೀಮಂತಿಕೆ ಮನದ ತುಂಬ ; ಮನೆಯತುಂಬ ಇಂಬಿಲ್ಲದಂತೆ ತುಂಬಿತುಳುಕಿತ್ತು ; ಅರ್ಥ ದತ್ತೂರಿಯನೊಂದು ಬಿಟ್ಟು.

ಹಸಿದೇ ಬಂದ ಸದಾ ಹಸಿದೇ ನಿಂತ ಹಸಿವಿನಿಂದಲೇ ಹೋಗಿ ಬರುವವರು ಕಣ್ಣರಳಿಸಿ ಜೊಲ್ಲು ಸುರಿಸಿ ಮನೆ ತುಂಬ ನಿಂತ ಹಸುಗಳು ಹಸಿವಿಗೆ ಸಂಕೇತವಾದಂತಾಗಿದ್ದವು. ಇಂದೋ ನಾಳೆಯೋ ಬಿದ್ದೇ ತೀರುವೆ ಎಂಬಂತಹ ಟೊಂಕುಮುರಿದವರಂತೆ ನಿಂತ ಹಾಳು ಬೀಳು ಬಣ್ಣ ಕಳೆದಕೊಂಡ ಮಣ್ಣು ಮನೆ.  ಉಳಿದ ಬಳೆದ ಅನ್ನಕ್ಕೆ ತಾನೇ ಅಧಿಕಾರಿಯೆಂಬ ಉಂಡು ಓಡಾಡಿ ಕರಗಿಸಿಯೇನು

ಎಂಬಂತಹ ಹಳ್ಳಿಯ ಹೈದ ಅಣ್ಣ ಶಿವಬಸಯ್ಯ. ಹಾಲಯ್ಯ ದಟ್ಟಡಿಯನಿಡುವಾಗಲೇ ತಂದೆ ಪಿತೃಪರ್ವತ ಸದೃಶ ಬಸವಯ್ಯ ಅಸ್ತಂಗತ.

ಬಡತನದ ಒಳಹೊರ ಭಾರಕ್ಕೆ ವೃದ್ಧಾಪ್ಯದಿಂದ ಮಗನ ಮರಣದಿಂದ ಮುಗಿಲೇ ಹರಿದು ಮೈಮೇಲೆ ಬಿದ್ದಂತೆ ಚಿಂತಿತ ಮನೆಗೆ ಹಿರಿತನಕ್ಕುಳಿದ ಅಜ್ಜ ಕೊಟ್ರಯ್ಯಾ ಕಂಗಾಲಾದ ಕಾಲಘಟ್ಟದಲ್ಲಿ ಅಲೆದಾಡುವುದು. ಅನಿವಾರ್ಯವಾಯಿತು ಜೋಳಿಗೆ ಸಾತ್ವಿಕ ಶಿಖಾಮಣಿಯಾದ ಬಾಲ ಹಾಲಯ್ಯನವರ ಕೊರಳಿಗೆ ಆರು ವರುಷದ ಬಾಲಕ ಹಾಲಯ್ಯ ಮನೆಗೂ ಓಡಾಡಿ ನೀಲಮ್ಮರ ಕೊರಳು ಕಕ್ಕುಲಾತಿಗೆ ಮಿಡಿದ ಮನೆಯಿಂದ ಮನೆಗೆ ಜೋಳಿಗೆ ಹೊತ್ತು ಅರ್ಧ ದಿನ ಶ್ಯಾಲೆಯನ್ನು ತಪ್ಪಿಸಿ ; ಅಂದಿನ ಮನೆಯ ಹಸಿವೆಯನ್ನು ಪೂರೈಸಲು ಅಲೆದಾಡಿದ.

ಒಂದು ದಿನ ಲಿಂಗನಾಯಕನೆಂಬ ಹಳ್ಳಿಯ ವೃದ್ಧ ಈತನ ಜೋಳಿಗೆ ಕಂಡು ಕಿಡಿನುಡಿದ : “ಏನೋ, ನಿನ್ನ ವಯಸ್ಸಿನಲ್ಲಿ ಭಿಕ್ಷೆ ಬೇಡುವುದಾ ? ಯಾಕಾಗಿ ನೀನು ದುಡಿಬಾರದು ? “ಆ ನುಡಿ ಹಾಲಯ್ಯನವರಿಗೆ ಸಿಡಿಲಾಗಿ ಬಡಿಯಿತು. ಬದುಕೆ ತಿರುಮುರುವಾಗಿ ಕಂಡಿತು. ಕೋಮಲ ಮನಸ್ಸು ಕಮರಿದಂತೆನಿಸಿತು. ಬಾರವಾದ ಹೃದಯ ಮತ್ತು ಬರಿದಾದ ಜೋಳಿಗೆ ಹೊತ್ತು ಮನೆಗೆ ಬಂದ. ಊಟ ನಿದ್ರೆ ಬೇಡವಾದವು.

ಪ್ರಳಯ, ಭೂಕಂಪ ಹಾಗು ಜ್ವಾಲಾಮುಖಿಗಳ ಸಂಭವವು ; ಒಂದು ದಿನದ ಪರಿತಾಪವಲ್ಲ. ಬಹುಕಾಲದಿಂದ ನಡೆದ ಬಿರುಬಿಗಿತ ಶಾಕೋತ್ಪಾದನ ರಸವಿರಸ ಸಂಘರ್ಷ ಸಂಘಾತ ಮಂಥನ ಸಿಡಿತ ರೌದ್ರಭೀಕರನೋಟ ಅವು.

ಪ್ರಾಪಂಚಿಕ ಅಡತಡೆಗಳನ್ನು ನಿಜಗುಣರು ತಮ್ಮ ಶಾಸ್ತ್ರದಲ್ಲಿ ಬಹಳ ಮಾರ್ಮಿಕವಾಗಿ ಚರ್ಚಿಸುತ್ತಾರೆ. ಪ್ರಾಪಂಚಿಕ ಒತ್ತಡದಲ್ಲಿರುವ ಪ್ರಪಂಚ ಹೊತ್ತು ವಿಲಿವಿಲಿ ಒದ್ದಾಡಿದ ಆಸಾಮಿಗಳೇ ನಿಜಗುಣ ಶಾಸ್ತ್ರದಲ್ಲಿ ಹೆಚ್ಚು ಬಲ್ಲವಾಗಿರುತ್ತಾರೆ. ಅಂಥ ಅತ್ಯಂತಿಕ ಸತಿ ಸುತ ತಾಪತ್ರಯದ ಅಡಚಣೆ ಹಾಲಯ್ಯನವರಿಗೆಲ್ಲಿತ್ತು ? ಆಧ್ಯಾತ್ಮಿಕ ರಹಸ್ಯದತ್ತ ಅವರ ಒಲವು ಅವರ ವಯೋಮಾನಕ್ಕೆ ಮೀರಿದವರೊಂದಿಗಿನ ಒಡನಾಟ ಹೆಚ್ಚಾಗಿ ಹೋಗಿತ್ತು. ಸಂಸಾರದ ಹೇಯತೆಯ ಬಗ್ಗೆ ಹಗಲೂ ರಾತ್ರಿ ಚರ್ಚಿಸಿ ಸಂಸಾರದ ಸುತ್ತ ತಿರುಗುವವರ ನೋಡಿ ಅವರಲ್ಲಿ ನಗುವು ಹುಟ್ಟಿತು. ಬುದ್ಧ ಹಾಗು ನಿಜಗುಣರ ಎಚ್ಚರದ ಊರಿಗೆ ಅವರು ಅರಗಾಗಿ ಕರಗಿಹೋದರು. ಅಣ್ಣ ತೊಳೆದು ತರಲೆಂದೆಸೆದ ಬಟ್ಟಿ ಹೊಸಬಾಳಬಟ್ಟೆಗೆ ದಾರಿ ಮಾಡಿಕೊಟ್ಟಿತು. ಎಲ್ಲ ಇದ್ದೂ ಮಧ್ಯರಾತ್ರಿ ಎದ್ದ ಬುದ್ಧ ಅವರಿಗೆ ಆದರ್ಶವಾಗಿಬಿಟ್ಟ. ಅವರಿವರ ಬಾಯಿಂದ ಕುತೂಹಲದಿಂದ ತಿಳಿದು ಕೇಳಿದ ನಿಜಗುಣರ ಶಾಸ್ತ್ರದೊಲವು ನಿರಂತರ ಅವರನ್ನು ಕೈಮಾಡಿ ಕರೆಯುತ್ತಿತ್ತು. ಊರುಕೇರಿ ಮನೆ ಮಾರು  ಓದು ಕಟ್ಟಿದ ಮುಲಕೀ ಪರೀಕ್ಷೆ ಕಲಕು ಮಲಕಾಗಿ ಹೊರಳಿ ಬಿದ್ದವು. ʼಭಿಕ್ಷೆಯೆತ್ತಿ ತಂದದ್ದನ್ನು ತಿಂದು ಮಲಗಿದ್ದಾನೆ’ ಎಂಬ ಅಣ್ಣನ ಸಣ್ಣ ಮಾತು ಆ ಮುದುಕನ ಮಾಹಿಗಿಂತ ದೊಡ್ಡದೆನ್ನಿಸಲಿಲ್ಲ. ಹಾಲಯ್ಯನವರಿಗೆ.

”ನಿನ್ನರಿಕೆಯ ನರಕವೇ ಸುಖ ಕಂಡಯ್ಯ’ ಎಂದು ಉಡತಡಿ ಬಿಟ್ಟು ಕಲ್ಯಾಣ ಕಂಡು ಜಗನ್ಮಾತೆ ಅಕ್ಕಮಹಾದೇವಿಯವರು ‘ನೆಟ್ಟನೆ ಭವಗೆಟ್ಟೆನು’ ಎಂದು ನಡೆದ ಕಠಿಣ ಪಥ ಹಾಲಯ್ಯನವರಿಗೂ ಸತ್ಪಥವಾಗಿಬಿಟ್ಟಿತು. ಆರೂಢ ಪಥವೇ ಪಥವು ; ಅದವರಿಗೆ ಎದೆಂದಿಗೂ ಇಳಿಯದ ಆವೇಶ ತಂದಿತ್ತು.

ದೋಣಿಯನ್ನಲ್ಲ ಸಾಗುವ ದಿಕ್ಕನ್ನು ಬದಲಿಸಿದ ಅವರಿಗೆ ನಿಷ್ಪಲವಾದ ಮುಲಕಿ ಪರೀಕ್ಷೆಯು ಇನ್ನಿಷ್ಟು ನಿಖರವಾಗಿ ಬ್ರಹ್ಮಪ್ರಜ್ಞಾನಕ್ಕೆ ಪ್ರಖರ ನಂದದ ದೀಪಸ್ಥಂಬವಾಗಿ ಮಹಾಮಾರ್ಗತೋರಿಸಿತು. ಗಾಂವಟಿ ಶ್ಯಾಲಾ ಮಾಸ್ತರಕೀಯಿಂದ ಕೂಡಿಟ್ಟ ಹಣವು ; ಹೆತ್ತವ್ವ ಹೊತ್ತು ಹೊರೆದ ಋಣ ತೀರಿಸುವುದೋ ಎಂಬ ಅಳುಕು ; ಆದಿಶಂಕರರ ಇಂಗಿತ ಅರಿತ ಅವರ ತಾಯಿ ಯತಿಯಾಗಲು ಅನುಮತಿ ದೊರೆತು ಐತಿಹಾಸಿಕ ಗೆಲವು ಹಾಲಯ್ಯನವರ ಬಾಳಬಟ್ಟೆಗೂ ಚಾಚಿಕೊಂಡಿತ್ತು . ಸದಾ ಉನ್ಮುಖಿಯಾಗಿ ಸಂಸಾರ ಸಾಗರದ ಉರದುದ್ದ ಸಿರದುದ್ದ ಕಷ್ಟವ ತೆರೆ ಎದುರಿಸಿದ್ದ ನೀಲಮ್ಮ ಮಗನ ಸಂತೋಷಕ್ಕೆ ಪಡೆದ ಆ ಧನ ತಾಯಿಗೆ ತವನಿಧಿಯಾಗಿ ಬಿಟ್ಟಿತು. ಹಿಂದಿದ್ದ ತಾಪತ್ರಯಗಳು ಲುಪ್ತವಾಗಿ ಹೋದವು.

ಹಾಲಯ್ಯರ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣಬೇಕೆಂಬ ಕನಸಿಗೆ ಮಗನ ತೀವ್ರ ವೈರಾಗ್ಯದ ಅರುಹಿನ ರವಿಕಿರಣಗಳು ಕನಿಸಿನ ನಿದ್ರೆಗೆ ಆಸ್ಪದವನ್ನೇ ಕೊಡದೆ ಹಾಗೆ ನೋಡಿಕೊಂಡವು. ಏನನ್ನೋ ಕೇಳಲೆಂದು ಬಂದಮಾತೆಗೆ ರಾಮಕೃಷ್ಣ ಪರಮಹಂಸರ ಕಾಳಿಕೆಯ ಎದುರು ನಿಂತ ನಿರಾಪೇಕ್ಷಾವಸ್ಥೆಯ ನರೇಂದ್ರನಂತಾಗಿತ್ತು ನೀಲಮ್ಮ ತಾಯಿಯದು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಡರು ; ಎಮ್ಮಿಗನೂರಿನ ಶ್ರೀ ಜಡೆಯ ಸಿದ್ದರು; ಎಳಂದೂರ ಶ್ರೀ ಬಸವಲಿಂಗಶಿವಯೋಗಿಗಳು; ಜ್ಞಾನ-ಕ್ರಿಯೆ-ಭಕ್ತಿಯೋಗದ ಸಾಗರ ಸಂಗಮ ಈ ತ್ರಿವಿಧರು. ಆ ಸಂಗಮ ರಾಮೇಶ್ವರದಲ್ಲಿ ಕಾಣುವುದು; ಭಕ್ತಿ-ಜ್ಞಾನ-ವೈರಾಗ್ಯ ಸಂಗಮ ಕುಮಾರಶಿವಯೋಗಿಗಳ ವ್ಯಕ್ತಿತ್ವದಲ್ಲಿ ಕಂಡುಬರುವುದು.

“ಶರಣ ಜನರ ಹೃದಯ ನಳಿನದೊಳು ಪರಿಶೋಭಿಸುತ್ತಿಹುದು ಗುರುಶಂಭುಲಿಂಗ ನಿನ್ನ ದಿವ್ಯ ಪಾದ” ಎಂಬ ನಿಜಗುಣರ ಈ ಪದ್ಯವು ಕಲ್ಯಾಣದ ಶರಣರನ್ನೇ ಅಧಿಕೃತವಾಗಿ ಗಮನದಲ್ಲಿಟ್ಟುಕೊಂಡಿರುವುದು ತುಂಬ ಔಚಿತ್ಯ ; “ಬಿಡಬೇಕು ಬಲು ಹಿಂದೆ ಬರಿದೆ ತನ್ನಿರವನು’ ಸಗುಣ ಸಂತತಿಯನು ನಿಗಮಾದಿ ವಿಧಿಯನು ! ಮಿಗೆ ತಪವನು ತನಗಹ ಸಿದ್ಧಿಗಳನ್ನು! ಎಂಬುದಾಗಿ ನುಡಿದ ನಿಜಗುಣರಿಗೆ ಈ ಇದಕ್ಕೆ ಪರ್ಯಾಯ ಎಂಬಂತೆ ಬಾಳಿ ಬದುಕಿದ ಕುಮಾರ ಶಿವಯೋಗಿಗಳು ನಿಜಗುಣರ ಷಟ್ ಶಾಸ್ತ್ರಕ್ಕೆ ಗೌರವ ಹೆಚ್ಚಿಸಿದರು. ಜ್ಞಾನಿ-ಯೋಗಿ-ಜಿಜ್ಞಾಸು -ಉನ್ಮತ್ತ – ಪಿಶಾಚಿ-ವ್ಯಾಕರಣಿ ಎಂಬ ವರ್ಗಿಕರಣದಲ್ಲಿ ಶುದ್ಧಯೋಗಿಯಾಗಿದ್ದರಿಂದಲೇ ಶಿವಯೋಗ ಮಂದಿರದಂಥ ಸಂಸ್ಥೆ ಕಟ್ಟಲು ಅವರಿಗೆ ಸಾಧ್ಯವಾಯಿತು. “ತನಗೆ ಮುಂದೊದಗುವ ಮುನಿದೇವ ಗಣಪದ !ವನು ರುದ್ರೇಶ್ವರ ಸದಾಶಿವ ಭಾವನೆಯನು ! ಘನಶಂಭುಲಿಂಗವಾಗಿ ಮುಕ್ತಿ ಸುಖವನು ! ಜನಿಸಿದೀ ಕಾಮವಿಲ್ಲೆನಿಪುರಿಂದ ! ಎಂದು ಮುಂದುವರಿದ ಪದ್ಯ ಕುಮಾರಶಿವಯೋಗಿಗಳನ್ನು ಕುರಿತೇ ಹಾಡಿದಂತಿದೆ.

ಶರಣರೇ ಮಹತ್ ಸಂಕಲ್ಪಹೊತ್ತು ೨೦ನೇ ಶತಮಾನದಲ್ಲಿ  ಶಿವಯೋಗಿಗಳಾದರು : ಅಷ್ಟೇ ಅಲ್ಲ ಅವರ ಆದರ್ಶಗಳನ್ನು ಮನನವಾಗಿಸಿಕೊಂಡು ಸಮಾಜಮುಖಿಯಾಗಿ ಬದುಕಿ “ಸಮಾಜ ಸೇವೆಯೇ ಲಿಂಗಪೂಜೆ’ ಎಂಬುದನ್ನು ನಡೆದು ನುಡಿದು ಬದುಕಿದರು. ಸರ್ವರ ಏಳ್ಗೆ ಅವರ ಗುರಿಯಾಗಿತ್ತು. ಗುಪ್ತವಾಗಿ ಅಲ್ಲಲ್ಲಿ ಮುಸುಕಿನಲ್ಲಿದ್ದ ವಚನಸಾಹಿತ್ಯವನ್ನು ಹೊರತಂದು ಅದರ ಪ್ರಚಾರಕ್ಕೆ ವಿದ್ವತ್ ಬಳಗ ಗುರುತಿಸಿ ಗೌರವಿಸಿ ಅವರಿಂದ ಸಾಹಿತ್ಯ ರಕ್ಷಣೆ ಮಾಡಿ, ಒಂದು ಶಿಸ್ತಿಗೆ ಅಳವಡಿಸಿ ಇಂದಿನ ಎಲ್ಲ ಓದುವ ವೇದಿಕೆಗೆ ನೆರವಾದರು.

೧೮೬೭ರಲ್ಲಿ ಜನಿಸಿದ ತರುಣ ವೇದಾಂತ ಜಿಜ್ಞಾಸುವಿಗೆ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಒಂದು ಗ್ರಾಮವಾದ ಜೋಯಿಸರ ಹಳ್ಳಿಯ ಸಂಬಂಧವೆಲ್ಲ ಪೂರ್ವಾಶ್ರಮದ ನೆನಹಾಗಿ ಬಿಟ್ಟತಷ್ಟೇ. ಹುಟ್ಟಿದೂರಬಿಟ್ಟು ಕಜ್ಜರಗಿಯ ಹಿರೇಮಠದ ರಾಚಯ್ಯನವರ ಕಣ್ಣಿಗೆ ಬಿದ್ದು ನಾಲ್ಕು ವರ್ಷ ಓದಿ ಧಾರವಾಡಕ್ಕೆ ಕಾಲ್ನಡಿಗೆಯಲ್ಲೇ ನಡೆದ ನಡಿಗೆ, ಹುಬ್ಬಳ್ಳಿಯ ಸಿದ್ಧಾರೂಢಮಠದ ಆಧ್ಯಾತ್ಮ ಶಾಲೆಗೆ ನಡೆದ ಅಂದಿನ ನಡಿಗೆಯು ವಿಲಕ್ಷಣವಾಗಿತ್ತು.

ಅನಿರೀಕ್ಷಿತವಾಗಿ ಪರೀಕ್ಷೆಯಲ್ಲಿ ಅನುತೀರ್ಣರಾದ ನಿರಾಶೆಯು ತಾಯಿಯ ತವರಾದ ಲಿಂಗದಹಳ್ಳಿಯಲ್ಲಿ ಸಮಾಳದ ಬಸವಪ್ಪಯ್ಯನವರ ಷಟ್‌ಶಾಸ್ತ್ರ ಶೈಲಿ ಮನಸೊರೆಗೊಂಡುದೇ ಕಾರಣವಾಗಿ ಸಿದ್ಧಾರೂಢರ ಸಾಮಿಪ್ಯ ಸಾಧ್ಯವಾಯಿತು. ಅಲ್ಲಿ ಕೆಲವರು ಇಷ್ಟಲಿಂಗ ಧರಿಸುವದರ ವಿರುದ್ಧದ ವಿಚಾರದಲ್ಲಿ ಸಂದೇಹವೆದ್ದು ಹುಬ್ಬಳ್ಳಿಯ ರುದ್ರಾಕ್ಷಿಮಠದ ಶ್ರೀಗಳು ಜಡೆಯಸಿದ್ದರಲ್ಲಿಗೆ ಕಳುಹಿಸಬೇಕಾಯಿತು. ಇವರು ಕೇಳುವ ಮುನ್ನವೇ ಅವರು ಧರಿಸಲೇಬೇಕೆಂಬ ಕುರುಹು ತೋರಿದರು. “ಎಲ್ಲಿಗೆ ಹೋಗಲಿನ್ನು ಮುಂದೆ ? ‘ಎಂಬ ವಿಚಾರ ಜಡೆಸಿದ್ಧರಿಗೆ ಗೊತ್ತಾಗಿ’ ಎಲ್ಲಿಂದ

ಬಂದಿದ್ಧಿಯೋ ಅಲ್ಲಿಗೆ ಹೋಗು” ಎಂಬುದನ್ನು ಸೂಚ್ಯವಾಗಿಸಿದರು. ಸಿದ್ಧಾರೂಢರಲ್ಲಿಗೆ ಎಳಂದೂರ ಶ್ರೀಗಳು ಆಗಮವಾಯಿತು. ಅವರಿಂದ ಆಕರ್ಷಿತರಾದ ಹಾಲಯ್ಯ ಅವರೊಂದಿಗೆ ನಾಡನಲೆದರು.ಅಣ್ಣಿಗೇರಿಯ ಶಾಖಾಮಠದಲ್ಲಿ ವಿಷಮಜ್ವರ ನೆಪವಾಗಿ ಎಳಂದೂರ ಶ್ರೀಗಳು ಲಿಂಗೈಕ್ಯರಾದರು. ಗುರೂಪದೇಶವಿಶೇಷವಾಗಿತ್ತು : ‘ವ್ಯಕ್ತಿಗಿಂತ ಸಮಾಜ ದೊಡ್ಡದು. ಇಂದಿನಿಂದ

ಸಮಾಜಸೇವೆಗೆ  ಬದ್ಧನಾಗು’ ಎಂಬುದಾಗಿ ಶ್ರೀಗಳು ಇಹದಿಂದ ನಿರ್ಗಮಿಸುವದಕ್ಕಿಂತ ಮೊದಲು ನುಡಿದುದರ ಫಲವಾಗಿ ಅತಿ ಶೀಘ್ರದಲ್ಲಿ ಶ್ರೀಮದ್‌ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಮುನ್ನವೇ ಅಖಿಲಭಾರತ ವೀರಶೈವ ಮಹಾಸಭೆ ಸ್ಥಾಪನೆ ಆಯಿತು

ಮನೋ ಶುದ್ದಿಗೆ ಆತ್ಮಸಿದ್ಧಿಗೆ ಶಂಭುಲಿಂಗ ಬೆಟ್ಟದಲ್ಲಿ ೧೨ ವರ್ಷ ತಪೋಲಿಂಗಧ್ಯಾನ ಸೇವಾತತ್ಪರರಾಗಿ ಕಳೆದದಿನಗಳು ಸತ್ಪ್ರೇರಣೆ ಕೊಟ್ಟವು; ಅದರ ಅರುಹು ನೆರವಾಗಿ ಜನರ ಮಧ್ಯೆ ಹೋದರು. ದಾನ, ಧರ್ಮ, ನೀತಿ, ನಿಯಮ ಕಾಯಕ, ದಾಸೋಹತತ್ವವನು ಬೋಧಿಸಿದರು. ಅಲ್ಲಮನಂತೆಯೇ ನಾಡನೆಲ್ಲ ಅಲೆದರು. ಅವರ ನಡೆಯಲ್ಲಿ ಗಾಂಭೀರ್ಯವಿತ್ತು; ನುಡಿಯಲ್ಲಿ ಹೊಳಪಿತ್ತು ಮಾತುಗಳಲ್ಲಿ ಮಾರ್ಧವತೆ ಇತ್ತು. ದೇವರು ಧರ್ಮ ಸನ್ಮಾರ್ಗಪರವಿಚಾರ ವಿವರಿಸುತ್ತ ಸ್ವಾಮಿಪಾದರು ಸ್ವರಬದ ಬೆಟ್ಟದ ಮಠದಲ್ಲಿ ಬಹುಕಾಲದಿಂದ ಅನುಷ್ಠಾನಮಾಡಿ ಆ ಭಾಗದಲ್ಲಿ ಜನಾನುರಾಗಿಯಾದರು.

ಆ ಸಮಯದಲ್ಲಿ ಕರ್ನಾಟಕ ಆದ್ಯಮಠಗಳಲ್ಲಿ ಒಂದಾದ ಚಿತ್ರದುರ್ಗ ಮಠಕ್ಕೆ ಅಧಿಪತಿಗಳಿರಲಿಲ್ಲ. ಮಠದ ಭಕ್ತರು ಹಾಲಯ್ಯನವರನ್ನು ಕಂಡುಪೀಠಾಧಿಪತಿಗಳಾಗಿ ಬರಬೇಕೆಂದು ಅರಿಕೆಯಿಟ್ಟರು. ಇನ್ನೊಬ್ಬರಾಗಿದ್ದರೆ ಕುಣಿದಾಡುತ್ತಿದ್ದರು. ಆದರೆ ಹಾಲಯ್ಯನವರನ್ನು ಯಾವುದೊಂದು ಸ್ಥಳಕ್ಕೆ ಬಂಧಿತರಾಗಬಯಸಿರಲಿಲ್ಲ.” (ಲಿ.ಮ.ಸ.ಪು:೭೭), ಮತ್ತೊಮ್ಮೆ ಇಂಥದೇ ಸನ್ನಿವೇಶ ಆದರಿದು ವಿಭಿನ್ನ, ಆ ಮಠದ ಫಕೀರ ಸ್ವಾಮಿಗಳಿಗೆ ವೃದ್ಧಾಪ್ಯ, ಹಾಲಯ್ಯನವರನ್ನು ಹಾನಗಲ್ಲಿಗೆ ಕೆರೆ ತರಲು ಭಕ್ತರಿಗೆ ಆಜ್ಞೆಯಾಯಿತು.  ಸರ್ವವು ಹಾಲಯ್ಯನವರ ಮುಂದೆ ಪ್ರಸ್ತಾಪವಾಯಿತು. ಹಾಲಯ್ಯನವರು ವಿನಮ್ರರಾಗಿ ನುಡಿದರು, ನಾನೊಬ್ಬ ಸಮಾಜ ಸೇವಕನ ನನಗೆ ದೊಡ್ಡ ಮಠವೊಂದರ ಹೊಣೆಗಾರಿಕೆ ಬೇಡ; ಮಠ ಹಾಗೂ ಸಮಾಜ ಸೇವೆ ಎರಡು ವ್ಯವಸ್ಥೆಗಳನ್ನು ತೂಗಿಸಿಕೊಂಡು ಹೋಗುವುದು ಅಸಾಧ್ಯವೆಂದು ತಿಳಿದವ ನಾನು; ನನ್ನನ್ನು ದಯವಿಟ್ಟು ಬಿಟ್ಟಬಿಡಿ ಎಂಬುದಾಗಿ ವಾದಿಸಿದರು. ಹಾಸಿಗೆಯಿಂದ ಬೇಸರಗೊಂಡು ಫಕೀರಸ್ವಾಮಿಗಳು ಸ್ವಾನುಭವದ ಅಧಿಕಾರಬೆರೆಸಿದ ಆಗ್ರಹದ ಮಾತುಗಳು ಎಂಬಂತೆ ಉಪದೇಶ ಮಾಡಿದರು, ನೀನಿನ್ನೂ ಚಿಕ್ಕವ ವೈಯಕ್ತಿಕವಾಗಿ ದೊಡ್ಡದಾಗಿ ಸಮಾಜಸೇವೆ ಮಾಡಲಾಗದೆಂದು ನಿನಗೆ ತಿಳಿಯದು, ಅದಕ್ಕೆ ಧಾರ್ಮಿಕ ಸಂಸ್ಥೆಯೊಂದರ ಬೆಂಗಾವಲು  ಬೇಕು .ಮಠದ ಆದಿಪತ್ಯ ಸ್ವೀಕರಣೆ ಸ್ವಾರ್ಥ ಬಯಕೆಗಾಗಿ ಅಲ್ಲ. ನಿಷ್ಕಾಮ ಸೇವೆಗೆ ಎಂಬ ಮಂತ್ರ ಸದೃಶಮಾತುಗಳು ಅವರನ್ನು ಮಂತ್ರಮುಗ್ದಗೊಳಿಸಿದವು. ಹಾಲಯ್ಯನವರು  ಹಾನಗಲ್ಲ  ಕುಮಾರ ಸ್ವಾಮಿಗಳೆಂದೇ ಪ್ರಸಿದ್ಧಿಯಾದರು.

ಬಸವ ಸಾಮಾಜಿಕ ಕ್ರಾಂತಿಯನ್ನವರು  ಪುನರಜ್ಜೀವನಗೊಳಿಸಿದರು. ಧರ್ಮ, ಶಿಕ್ಷಣ, ಕಲೆ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜೋನ್ನತಿಯ ಹೊಂಗನಸು ಅವರದು  ಕೃಷಿಗೆ ಸಂಗೀತಕ್ಕೆ ಅಪಾರ ಕೊಡುಗೆ ಅವರದು, ಅಚಾರವೇ ವೀರಶೈವ ಲಿಂಗಾಯತ ಧರ್ಮದ ತಿರುಳು; ಅದನ್ನು ಶಿವಯೋಗಮಂದಿರದ ಮೂಲಕ ಉಳಿಸಿ ಬೆಳೆಸಿದರು. ಅಂಧರ ಉಪಜೀವನಕ್ಕೆ ತಳಪಾಯ ಹಾಕಿ ಅಲ್ಲಿ ಗುರು ಶಿಷ್ಯ ಪರಂಪರೆಗೆ ಶ್ರೀಕಾರ ಹಾಕಿದರು.

ಶ್ರೀ ಗುರು ಕುಮಾರಂ ವಂದೇ

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

 

ವಚನ ಪಿತಾಮಹ, ಹೆಸರಾಂತ ಲೇಖಕ ಶ್ರೀ ಫ.ಗು. ಹಳಕಟ್ಟಿ (ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ) ಅವರ ಜನ್ಮದಿನದ ಗೌರವ ನಮನಗಳು. ⁣

ಫ.ಗು.ಹಳಕಟ್ಟಿ  1880ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ದಾನಾದೇವಿ.  ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಶಿಕ್ಷಕರಾಗಿದ್ದ ತಂದೆ ಸಾಹಿತಿಗಳಾಗಿ ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ  ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ “ವಾಗ್ಭೂಷಣ”ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು 1920ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ “ವಚನ ಸಾಹಿತ್ಯ ಸಾರ”ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923 ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ  ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.   ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ….. ಮುಂತಾದವುಗಳು ಇವರ ಪ್ರಮುಖ ಕೃತಿಗಳು..

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ಶ್ರೀ ಫ.ಗು.ಹಳಕಟ್ಟಿಯವರ ಸಂಬಂಧಗಳು  ಹೇಗಿದ್ದವು ಎನ್ನುವದಕ್ಕೆ ಸಾಕ್ಷಿ ಅವರ ಲೇಖನದ ಒಂದು ಭಾಗ

ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.      ಸಂಗ್ರಹ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,  ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.

“ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್‌ಸ್ಥಲ ಶಾಸ್ತçದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ.

ವಚನ ಶಾಸ್ತçದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ, ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು.

ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು. ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ.

ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.””

ಇನ್ನೊಂದು ಲೇಖನ “ಕೆಲವು ನೆನಪುಗಳು” ಎಂಬ ತಲೆ ಬರಹದಲ್ಲಿ ಶ್ರೀ ಹಳಕಟ್ಟಿಯವರು ಶ್ರೀ ಕುಮಾರ ಶಿವಯೋಗಿಗಳ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ “ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರು ಹೇಗೆ ಧನ ಸಂಚಯ ಮಾಡುತ್ತ ಬಂದರೋ ಹಾಗೆಯೇ ಅವರು ಗ್ರಂಥ ಸಂಚಯವನ್ನು ಸಹ ಮಾಡುತ್ತ ಬಂದರು. ಅವರ ಈ ಕಾರ್ಯವು ಅತ್ಯಂತ ಮಹತ್ತರವಾದುದು . ಶ್ರೀ ಸ್ವಾಮಿಗಳವರ ದರ್ಶನ ಹೊಂದಲು ಎಲ್ಲ ಕಡೆಯಿಂದಲೂ ಪ್ರಮುಖ ವ್ಯಕ್ತಿಗಳು ಈ ಮಂದಿರಕ್ಕೆ ಬರುವದು ರೂಢಿಯಾಗಿತ್ತು . ಅವರನ್ನು ಶ್ರೀ ಸ್ವಾಮಿಗಳು ಕಂಡು ಅವರ ಗ್ರಾಮದಲ್ಲಿ ತಾಡವೋಲೆಯ ಗ್ರಂಥಗಳು ಇವೆಯೋ ಹೇಗೆ ಎಂಬುದನ್ನು ಪ್ರಶ್ನೆ ಮಾಡದೇ ಬಿಡುತ್ತಿದ್ದಿಲ್ಲ . ಯಾರಾದರೂ ತಮ್ಮಲ್ಲಿ ಇಂಥ ಗ್ರಂಥಗಳು ಇವೆ ಎಂದು ಉತ್ತರ ಕೊಟ್ಟಲ್ಲಿ ಅವುಗಳನ್ನು ಮಂದಿರಕ್ಕೆ ಕಳಿಸಬೇಕೆಂದು ಶ್ರೀ ಸ್ವಾಮಿಗಳು ತಪ್ಪದೆ ಹೇಳುವರು ಅವರನ್ನು ಕಾಣ ಬಂದವರಲ್ಲಿ ಯಾರೂ ತಾವು ಕಳಿಸುವದಿಲ್ಲ ಎಂದು ಅನ್ನುತ್ತಿದ್ದಿಲ್ಲ . ಎಲ್ಲರೂ ಭಕ್ತಿಯಿಂದ ತಮ್ಮಲ್ಲಿಯ ಗ್ರಂಥಗಳನ್ನು ಅವರ ಕಡೆಗೆ ಸಮರ್ಪಿಸುತ್ತಿದ್ದರು . ಈ ಪ್ರಕಾರ ಮಂದಿರದಲ್ಲಿ ವೀರಶೈವ ಗ್ರಂಥಗಳ ಒಂದು ದೊಡ್ಡ ಸಂಗ್ರಹವು ಸ್ವಲ್ಪ ದಿವಸಗಳಲ್ಲಿ ಉಂಟಾಯಿತು .

ಶ್ರೀ ಸ್ವಾಮಿಗಳವರು ಮಂದಿರದ ಒಂದು ದೊಡ್ಡ ನಿಧಿಯನ್ನು ಕೂಡಿಸಿದ್ದೂ , ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೂ ಮಹತ್ವದ ಕಾರ್ಯಗಳೆಂಬುದು ನಿಃಸಂದೇಹವಾದದ್ದು, ಆದರೆ ಹಣಕ್ಕಿಂತಲೂ ಮಹತ್ವವೆನಿಸಿಕೊಳ್ಳುವ ಗ್ರಂಥಗಳ ಸಂಗ್ರಹ ಮಾಡುವದು ಅಷ್ಟೇ ಶ್ರೇಯಸ್ಕರವಾದದ್ದು ಇರುತ್ತದೆ . ಇಂಥ ಗ್ರಂಥಗಳು ಸಮಾಜದಲ್ಲಿ ಇರದಿದ್ದರೆ ಸಂಸ್ಕೃತಿಯು ಬಾಳುವ ಸಂಭವವೇ ಇಲ್ಲ .

ಇದೇ ಕಾಲದಲ್ಲಿ ನಾನು ವಚನಶಾಸ್ತ್ರದ ಉಕ್ತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆನು . ಈ ಸಂಗತಿಯನ್ನು ನಾನು ಸ್ವಾಮಿಗಳವರ ನಿದರ್ಶನಕ್ಕೆ ಆಗಿಂದಾಗ್ಗೆ ತರುತ್ತಿದ್ದೆನು . ಅವರು ಇದನ್ನು ನೋಡಿ ಬಹಳ ಸಂತೋಷಿಸುತ್ತಿದ್ದರು ಮತ್ತು ನನಗೆ ಅದರಲ್ಲಿ ಪ್ರೋತ್ಸಾಹವನ್ನೂ ಕೊಡುತ್ತಿದ್ದರು .

ಮುಂದೆ ನಾನು ‘ವಚನಶಾಸ್ತ್ರಸಾರ ‘ ಎಂಬ ಗ್ರಂಥವನ್ನು ನಿರ್ಮಾಣ ಮಾಡಿ ಅದರಲ್ಲಿ ನಾಲ್ಕು ಭಾಗಗಳನ್ನು ತಯಾರಿಸಿದ್ದೆನು . ಮೊದಲನೆಯ ಭಾಗವು ಪೂರ್ಣವಾದುದನ್ನು ಬಾಗಲಕೋಟೆಯ ಕೆಲ ಮಹನೀಯರು ಸ್ವಾಮಿಯವರಿಗೆ ಹೇಳಲು ಅವರು ಖುದ್ದಾಗಿ ನಾನಿದ್ದ ಮನೆಯ ಸಮೀಪದಲ್ಲಿ ಸೊನ್ನದ ಶ್ರೀಮಂತ ಗಂಗಪ್ಪ ದೇಸಾಯಿಯವರ ಕಟ್ಟಡವು ಪ್ರಾರಂಭವಾಗಿದ್ದು ಅದೇ ಮನೆಯಲ್ಲಿ ಅವರು ಇಳಿದರು. ಆಗ ನಾನು ವಿಷಮಜ್ವರ ಪೀಡಿತನಾಗಿದ್ದೆ ; ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ , ಆದರೂ ಶ್ರೀ ಸ್ವಾಮಿಗಳು ನನ್ನ ಅನುಕೂಲತೆಗಾಗಿ ಈ ಗೃಹದಲ್ಲಿ ಇಳಿದು ಕೆಲವು ದಿವಸಗಳವರೆಗೆ ನಾನು ಸಂಗ್ರಹಿಸಿದ ಉಕ್ತಿಗಳನ್ನು ನನ್ನ ಕಡೆಯಿಂದ ಓದಿಸಿಕೊಳ್ಳುತ್ತಿದ್ದರು . ಅವುಗಳಲ್ಲಿರುವ ವಚನಗಳಲ್ಲಿಯ ಉಚ್ಛ ವಿಚಾರ ಮತ್ತು ಸುಂದರ ನುಡಿಗಳನ್ನು ಕೇಳಿ ಅವರು ಹರ್ಷಿಸುತ್ತಿದ್ದರು ಮತ್ತು ನನಗೆ ಈ ಗ್ರಂಥವನ್ನು ಅಚ್ಚು ಹಾಕಲಿಕ್ಕೆ ಪ್ರೋತ್ಸಾಹಿಸಿದರು . ಈ ಅಚ್ಚು ಹಾಕುವ ಕಾವ್ಯದಲ್ಲಿ ನನಗೆ ಶ್ರೀಮಂತ ಗಂಗಪ್ಪ ದೇಸಾಯಿಯವರು ಧನ ಸಹಾಯವನ್ನು ಮಾಡಲು ಒಪ್ಪಿದರು . ಶ್ರೀ ಸ್ವಾಮಿಗಳು ಅದನ್ನು ಕೇಳಿ ಸಂತೋಷ ಪ್ರದರ್ಶನವನ್ನು ಮಾಡಿದರು. ಗ್ರಂಥದ ಮುದ್ರಣವನ್ನು ಬೆಳಗಾವಿಯಲ್ಲಿ ಮುಗಿದ ಬಳಿಕ ನಾನು ಅದನ್ನು ಅವರಿಗೆ ಅರ್ಪಿಸಿದೆನು .

ಸ್ವಾಮಿಗಳವರ ಹಸ್ತದಲ್ಲಿ ಈ ಗ್ರಂಥವು ಬಂದ ಬಳಿಕ ಅವರು ತಮ್ಮ ಭೋಜನೋತ್ತರ ಕಾಲದಲ್ಲಿ ಅದರಲ್ಲಿಯ ಶ್ರೇಷ್ಠ ಉಕ್ತಿಗಳನ್ನು ತಮ್ಮನ್ನು ಕಾಣಲಿಕ್ಕೆ ಬಂದ ಜನರಿಗೆ ತಿಳಿಸಿ ಹೇಳುವರು . ಈ ಕಾರ್ಯವನ್ನು ಅವರು ಬಹುದಿನ ಮಾಡುತ್ತ ಬಂದರು . ಹೀಗೆ ತಾವಷ್ಟೇ ಅಲ್ಲ, ಮಂದಿರಕ್ಕೆ ಬಂದ ಮಠಾಧಿಕಾರಿಗಳಿಗೂ ಶಾಸ್ತಿçಗಳಿಗೂ ‘ಶಿವಶರಣರು ಎಂಥ ಮಹತ್ವದ ಕಾರ್ಯವನ್ನು ಮಾಡಿದ್ದಾರೆ, ನೋಡಿರಿ ‘ ಎಂದು ತಿಳಿಸಿ ಹೇಳುವರು .

 

ಶ್ರೀಕುಮಾರ ತರಂಗಿಣಿ  ಜುಲೈ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಿವಮೂರ್ತಿಯೆ | ತವೆ ಪೂಜಿಸುವೆ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೨ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿಷ್ಯ ಸಂಪತ್ತು -ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. ಕರ್ತವ್ಯಪ್ರಜ್ಞೆಯೆ ಧರ್ಮ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಬಾಲಲೀಲಾ ಮಹಾಂತ ಶಿವಯೋಗಿಗಳವರ ಕೈವಲ್ಯ ದರ್ಪಣ ಲೇಖಕರು:ಕೆ. ವಿ. ಬಾಳಿಕಾಯಿ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ