ಶ್ರೀ ಶಿವಯೋಗಮಂದಿರ ಸೃಷ್ಟಿ – ದೃಷ್ಟಿ

ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)

ವ್ಯಕ್ತಿವಿಕಾಸದ ಮುಖದಿಂದ ಸಾಮಾಜಿಕ ವಿಕಾಸ ಕ್ಷೇತ್ರದಲ್ಲಿ ಸಾಹಿತ್ಯ ಪ್ರಕಾಶ ಪ್ರಪಂಚದಲ್ಲಿ ಸಂಸ್ಥೆಗಳ ಸ್ಥಾನ ಬಹು ಎತ್ತರದೆಂಬುದಕ್ಕೆ ಸತ್ಯ ಸಾಕ್ಷಿಯಾಗಿ ನಿತ್ಯದೀಕ್ಷೆಗೊಂಡು ನಿಂತಿದೆ ಶಿವಯೋಗಮಂದಿರ, ವ್ಯಕ್ತಿವಿಕಾಸ ಸಾಧನಗಳು ಅನಂತ. ಅವುಗಳಲ್ಲಿ ಮುಖ್ಯವಾಗಿ ಎರಡು ಬಗೆ: ಒಂದು ಭೌತಿಕ, ಇನ್ನೊಂದು ಆಧ್ಯಾತ್ಮಿಕ. ಮೊದಲಿನದು ಗೌಣ, ಸಹಕಾರಿ. ಎರಡನೆಯದು ಮುಖ್ಯ ಫಲಕಾರಿ. ಇದನ್ನು ಚೆನ್ನಾಗಿ ನಿಟ್ಟಿಸಿ ಮಿಗಿಲಾಗಿ ಅಧ್ಯಾತ್ಮಿಕ ಸಾಧನೆಗಾಗಿಯೆ ಮೀಸಲಾಗಿ ಮೈಯ್ವೆತ್ತಿದೆ ಶಿವಯೋಗಮಂದಿರ.

ಶಿವಯೋಗಮಂದಿರ ಮೈದಾಳಿ ಇಂದಿಗೆ ಐವತ್ತು (೧೯೫೯) ವರುಷಗಳಾದವು. ವ್ಯಕ್ತಿ ಅಥವಾ ಸಂಸ್ಥೆಗಳ ಜೀವನದಲ್ಲಿ ಈ  ಮಧ್ಯಬಿಂದುವಿನ ವಯಸ್ಸು ವಿಶೇಷ ವರ್ಚಸ್ಸುಳ್ಳದ್ದು; ಸುವರ್ಣ ವರ್ಣವುಳ್ಳದ್ದು. ಸ್ವಾನುಭವ ಸುಮಧುರ ಫಲಭರಿತವಾದುದು.

ಶಿವಯೋಗಮಂದಿರ ಸಂಸ್ಥೆಯ ಗುರಿ ಅದರ ಹೆಸರಿನಲ್ಲಿಯೇ ಹೆಪ್ಪುಗಟ್ಟಿದೆ. ಶಿವಯೋಗಸಂಪತ್ತನ್ನು ತನ್ನ ಈ ಐವತ್ತು (೧೯೫೯) ವಯಸ್ಸಿನಲ್ಲಿ ಹಲವಾರು ವ್ಯಕ್ತಿಗಳಲ್ಲಿ ತುಂಬಿ ತುಳುಕಿಸಿದೆ; ಸಾಹಿತ್ಯ ಸಂಪತ್ತನ್ನು ಸೂರೆಗೊಂಡಿದೆ; ಸಂಗೀತರಸ ಗಂಗೆಯನ್ನು ಹರಿಯಿಸಿದೆ; ಸಾಮಾಜಿಕ ಸುಧಾರಣೆಗಳನ್ನು ಎಸಗಿದೆ.

ಮಾನವನ ಮುನ್ನಡೆಗೆ ಮನೋವಿಕಾಸವೆ ಮೂಲ. ಆ ಮನೋವಿಕಾಸಕ್ಕೆ ಮನೋನಿರೋಧವೆ ಮೂಲ. ಈ ಮೂಲವನ್ನರಿತು ಈ ಸಂಸ್ಥೆ ಇದಕ್ಕಾಗಿ ಹೆಣಗಿತು.; ಹೆಣಗುತ್ತಿದೆ. ಚಿತ್ತಚಾಂಚಲ್ಯವನ್ನು ಅಡಗಿಸಿ ಆ ನಿಶ್ಚಲಚಿತ್ತದಲ್ಲಿ ಮಂಗಳ ನೆನಹು ನಿಲ್ಲುವುದೆ ಶಿವಯೋಗ; ಆ ನೆನಹು ಮಣಿಹದಲ್ಲಿ ಮೂಡಿ ಬರುವುದೆ ಮಂದಿರ, ಅಂತಹ ಶಿವಯೋಗದ ಮಂಗಳ ಪ್ರಭಾವದಿಂದ ಪ್ರಜ್ವಲಿಸುವ ಅಚ್ಚಳಿಯದ ಜಂಗಮ ಮಂದಿರಗಳನ್ನು ಜನಾಂಗಕ್ಕೆ ತೋರುವುದೆ- ಒಳಿತಾದ ವಾತಾವರಣವನ್ನು ಬೀರುವುದೆ ‘ಶಿವಯೋಗಮಂದಿರ’ ಹೃದಯ ಧ್ಯೇಯ. ಆ ‘ಶಿವಯೋಗದ ಮಂದಿರ’ದಲ್ಲಿ ಅಂತಹ ಅನೇಕ ದಿವ್ಯ ವ್ಯಕ್ತಿಗಳು ತಯಾರಾದರು.

ಅವರೇ ಆ ಮಂದಿರದ ದೇವ ಮೂರ್ತಿಗಳು, ದಿವ್ಯ ಮೂರ್ತಿಗಳು.

ಶಿವಯೋಗಮಂದಿರದ ಹೆಗ್ಗುರಿಯು ಅದರ ಹೆಸರಿನಲ್ಲಿಯೆ ಹೆಪ್ಪುಗಟ್ಟಿರುವಂತೆ ಅದರ ಹೆಚ್ಚಳಿಕೆಯು ಅದರಲ್ಲಿಯೇ ಇದೆ. ಶಿವಯೋಗಕ್ಕಿಂತ ಶ್ರೇಷ್ಠ ಯೋಗವಿಲ್ಲ. ಉಳಿದ ನಾಲ್ಕು ಯೋಗಗಳು ಮಾನವನ ಉಪಾಂಗ ಸಾಧಕಗಳೇ ಹೊರತು  ಮುಖ್ಯಾಂಗ ಸಾಧಕಗಳಲ್ಲ. ಈ ಅರ್ಥ ಈ ಅಭಿಪ್ರಾಯ ಅವುಗಳ ಹೆಸರುಗಳಲ್ಲಿಯೆ ಹೆಚ್ಚು ನಿಚ್ಚಳವಾಗಿದೆ. ಹಠಯೋಗ  ಶರೀರಶುದ್ದಿಗೆ, ಶುದ್ಧ ಶರೀರಪ್ರಾಪ್ತಿಗೆ ಮೀಸಲು. ಮಂತ್ರಯೋಗ ಮಾತಿನ ಶುದ್ದಿಗೆ, ಶುದ್ಧ ಮಾತಿನ ಪ್ರಾಪ್ತಿಗೆ ಮೀಸಲು.  ಲಯಯೋಗ ಉಸುರಿನ ಶುದ್ಧಿಗೆ, ಆ ಶುದ್ಧ ಉಸಿರಿನ ಪ್ರಾಪ್ತಿಗೆ ಮೀಸಲು. ರಾಜಯೋಗ ಮೈ-ಮಾತು-ಉಸಿರುಗಳಿಗೆ  ರಾಜನಾದ ‘ಜೀವ’ನ ಶುದ್ಧಿಗೆ, ಶುದ್ಧ ಜೀವಪ್ರಾಪ್ತಿಗೆ ತವರು. ಆ ಶುದ್ಧಾತ್ಮನು ಪರಮಾತ್ಮನಾಗುವುದೆ ಶಿವಯೋಗ, ಇಂತಹ  ಅಗ್ಗಳದ ಶಿವಯೋಗಕ್ಕೆ ಮಂದಿರ ಮಂಗಳಸ್ಥಾನ ಶಿವಯೋಗಮಂದಿರ. ಹೆಸರಿನಲ್ಲಿ ಹಿರಿಮೆಗೆ ಇದಕ್ಕಿಂತ ಹೆಚ್ಚಿನ ಮಾತು ಬೇಕಿಲ್ಲ.

ಶಿವ ಅಂದರೆ ಮಂಗಳ ಮತ್ತು ಮಹಾದೇವ. ಆ ಮಂಗಳ ಪ್ರಾಪ್ತಿಗೆ ಮಂದಿರ ಶಿವಯೋಗಮಂದಿರ. ಎರಡನೆಯ ಅರ್ಥ ಪರಮಾತ್ಮ ಆ ಪರಮಾತ್ಮನ ಸತ್ಯ; ನಿತ್ಯ ಚಿದಾನಂದರೂಪ; ಪರಿಪೂರ್ಣಸ್ವರೂಪ. ಆ ಸಚ್ಚಿದಾನಂದ ನಿತ್ಯ ಪರಿಪೂರ್ಣರೂಪ ಶಿವನ ಸಂಪ್ರಾಪ್ತಿಯೆ ಸಾಮರಸ್ಯವೆ ಯೋಗ, ಆ ಶಿವಸಾಮರಸ್ಯ ಸಾಧನೆಯನ್ನು ಸಂಪಾದಿಸಿ ಕೊಡುವುದೆ ಶಿವಯೋಗ. ಅಂತಹ ಮಹತ್ತಿನ ಶಿವಯೋಗಕ್ಕೆ ಮಂಗಳಸ್ಥಾನ “ಶಿವಯೋಗಮಂದಿರ.”

ಶಿವಯೋಗಮಂದಿರವು ಸದುದ್ದೇಶದಿಂದ ಸ್ಥಾಪಿತವಾದ ಸಂಸ್ಥೆ .ಸದ್ಧರ್ಮ ಪ್ರಸಾರಕ್ಕಾಗಿ ಸಂಸ್ಥಾಪಿತವಾದ ಸಂಸ್ಥೆ, ಸಂಘ ಜೀವಿಗಳ-ಸಜ್ಜನ ಜೀವನವುಳ್ಳವರ ಮುಖಾಂತರ ಸಮಾಜ ಸುಧಾರಣೆಗಾಗಿ ಸೃಷ್ಟಿಸಲ್ಪಟ್ಟ ಸಂಸ್ಥೆ .ನಿರ್ದಿಷ್ಟವೂ ನಿರ್ದುಷ್ಟವೂ ಆದ ಧ್ಯೇಯ ಸಾಧನೆಗಾಗಿ ಸಂವೃದ್ಧಿಗೊಳಿಸಿದ ಸಂಸ್ಥೆ .ಕುಮಾರ ಯೋಗಿಯ ಕಾರಣಿಕತೆಯ ಕುರುಹಾಗಿ ರೂಪುಗೊಂಡ ಸಂಸ್ಥೆ ಸಮಾಜ ಮಂದಿರದ ಸುವರ್ಣ ಕಳಸವಾಗಿ ಕಂಗೊಳಿಸಿದ ಸಂಸ್ಥೆ . ಶಿವಯೋಗಮಂದಿರವು ಶಿವಯೋಗಕ್ಕೆ ಮಂದಿರವಾದಂತೆ ಸಮಾಜವೆಂಬ ಶಿವನಿಗೂ ಸಾಧಕರೆಂಬ ಶಿವಪ್ರಮಥರಿಗೂ ಮಂದಿರವಾಗಿ ಸೃಷ್ಟಿಯಾದ ಸಂಸ್ಥೆ .ಆಶ್ರಮಗಳ ಧ್ಯೇಯ ಕ್ಕಿಂತಲೂ

ವಿಶಾಲವಾದ ಧ್ಯೇಯ ವುಳ್ಳ ಏಕೈಕ ಸಂಸ್ಥೆ  .ಇದನ್ನು ಹೋಲುವ ಸಂಸ್ಥೆ ಸಮಾಜದಲ್ಲಿ ಹಿಂದಿಲ್ಲ, ಇಂದಿಲ್ಲ, ಮುಂದೆ ಹೇಗೋ ! ಕ್ರೈಸ್ತರ ಚರ್ಚುಗಳಿಗಿಂತ, ಬೌದ್ಧರ ವಿಹಾರಗಳಿಗಿಂತ ವಿಲಕ್ಷಣವಾದ ಸಂಸ್ಥೆಯಿದೆಂದರೆ ಅಲ್ಲಗಳೆಯುವಂತಿಲ್ಲ,

ಎಳೆ ಮಕ್ಕಳ ತಿಳಿ ಮನಸ್ಸನ್ನು ಶಿವಯೋಗದಲ್ಲಿ ಎರಕಹೊಯ್ದು ಮುದ್ದುರೂಹಿನ ಮಂಗಳ ಮೂರ್ತಿ – ಗಳನ್ನಾಗಿ ತಯಾರಿಸುವ ಪಡಿಯಚ್ಚು ಈ ಸಂಸ್ಥೆ . ಪರಿಶುದ್ಧ ಆಹಾರ, ಪರಿಶುದ್ಧ ವಿಹಾರ, ಪರಿಶುದ್ಧ ವಿಚಾರ, ಪರಿಶುದ್ಧ ಆಚಾರಗಳನ್ನು ಅಲ್ಲಿನ ಸಾಧಕರಿಗೆ ಸಣ್ಣ ವಟುಗಳಿಗೆ ಪ್ರಸಾದಿಸಿತು ಈ ಸಂಸ್ಥೆ . ಪ್ರಾಪಂಚಿಕ ವಾತಾವರಣಕ್ಕೆ ಅಲ್ಲಿ ತೃಣವಾದರೂ ಅನುವಿಲ್ಲ, ಶಿವಭಜನೆ,  ಶಿವಪೂಜೆ, ಸ್ವಾಧ್ಯಾಯ, ಸುಶ್ರವಣ, ಯೋಗ ಸಾಧನೆಗಳಲ್ಲಿ ಎಲ್ಲರೂ ಎಲ್ಲ ಕಾಲದಲ್ಲಿ ತಲ್ಲೀನರಾಗಿರುವರು. ಸಾಧನೆಯು ಸಿದ್ದಿಗೇರಿದ ಮೇಲೆ, ಸಾಧಕರು ಶಿವಯೋಗಿಗಳಾದ ಮೇಲೆ ಮಠಾಧಿಪತಿಗಳಾಗಿಯೋ ಆಗದೆಯೋ ಸಾಮಾಜಿಕ ಸುಧಾರಣೆಗೆ ಕಂಕಣಬದ್ಧರಾಗಬೇಕು. ಸಾಂಸ್ಕೃತಿಕ ಆವಿಷ್ಕರಣಕ್ಕೆ ಸಂಸಿದ್ದರಾಗಬೇಕು.

ಈ ರೀತಿ ವ್ಯಷ್ಟಿ-ಸಮಷ್ಟಿ ಜೀವನೋನ್ನತಿಯ ಗುರಿಗೆ ಗಮನವಿತ್ತು ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟವರಿಗೆ ಮಾತ್ರ ಅಲ್ಲಿನ ವಾಸಕ್ಕೆ ಪ್ರವೇಶ; ಅಲ್ಲಿನ ಸಾಧನೆಗೆ ಅವಕಾಶ. ಅಲ್ಲಿ ಪ್ರವೇಶ ಪಡೆದವರೆಲ್ಲರೂ ತಂತಮ್ಮ ಮನೆ ಮಾರುಗಳ-ಆಸ್ತಿಪಾಸ್ತಿಗಳ-ಬಂಧುಬಳಗದ-ತಂದೆತಾಯಿಗಳ ಮೋಹ ಮಮಕಾರಗಳನ್ನು ಸಂಪೂರ್ಣ ಮುರಿದಿಕ್ಕಿರಬೇಕು; ಇಲ್ಲವೆ ಮರೆ ಮಾಡಿರಬೇಕು. ಶಿವಯೋಗಮಂದಿರವೆ ತನ್ನ ಜನ್ಮಭೂಮಿ ಹಾನಗಲ್ಲ ಶ್ರೀ ಕುಮಾರಯೋಗಿಯೇ ತನ್ನ ಸ್ವಾಮಿ, ತನಗೆ ಬೇರಿನ್ನು ಯಾವ ಪೂರ್ವಾಶ್ರಮ ಸಂಬಂಧವಿಲ್ಲೆಂದು ದೃಢವಾಗಿ ನಂಬಿರಬೇಕು.

ಇಂದಿಗೆ ಐವತ್ತು (೧೯೫೯)  ವರುಷಗಳ ಹಿಂದೆ ವೀರಶೈವ ಸಮಾಜವು ನಟ್ಟಿರುಳಿನಲ್ಲಿತ್ತು . ಅದರ ನೈತಿಕ ತಾತ್ವಿಕ ರಕ್ತನಾಳಗಳ ಹರಿದಾಟವೆ ಕಮ್ಮಿಯಾಗಿತ್ತು  .ಅಷ್ಟಾವರಣಗಳಲ್ಲಿ ನಿಷ್ಠೆಯಿಲ್ಲದಾಗಿತ್ತು  .ಪಂಚಾಚಾರಗಳ ಪರಿಚಯವಿಲ್ಲದಾಗಿತ್ತು  .ಷಟಸ್ಥಲ ಸುವಾಸನೆಯಂತೂ ತೀರ ಶೂನ್ಯವಾಗುತ್ತ ಬಂದಿತ್ತು  .ವಿದ್ಯಾವ್ಯಾಸಂಗವಿರಲಿಲ್ಲ, ಕಲಾಪ್ರೇಮ ಕಣ್ಮುಚ್ಚಿತ್ತು. ಇವೆಲ್ಲವುಗಳ ಪ್ರಕಾಶಕ್ಕಾಗಿ ಪುನರುದ್ಧಾರಕ್ಕಾಗಿ ಈ ಸಂಸ್ಥೆ ಜನ್ಮ ಕೊಟ್ಟಿತು. ಈ ನಿಟ್ಟಿನಲ್ಲಿ ಇಡೀ ಸಮಾಜಕ್ಕೆ ಇದೊಂದೇ ಒಂದು ಸಂಸ್ಥೆ! ಆದರೂ ಜನನ ರೋಗಗಳಿಗೇನು ಕಡಿಮೆಯಿರಲಿಲ್ಲ ಅವನ್ನೆಲ್ಲ ಎದುರಿಸಿ ಏರಿ ಬರುವಂತೆ ತನ್ನ ಈ ಮಗುವನ್ನು ಸಾಕಿ ಸಲಹುವ ಸಾಮರ್ಥ್ಯ ಆ ಕಾರಣಿಕ ಕುಮಾರ ಯೋಗಿಯಲ್ಲಿತ್ತು ಅದರಿಂದಾಗಿ ಇನಿತು ದೀರ್ಘಕಾಲ ಈ ಸಂಸ್ಥೆ ಬಾಳಿ ಬೆಳಗಿತು; ಬೆಳಗಲಿದೆ.

ಒಂದು ಸಂಸ್ಥೆಯ ಪ್ರಗತಿಗೆ-ಪುಷ್ಟಾಂಗಕ್ಕೆ ಜನ-ಧನಗಳ ಬೆಂಬಲ ಅತ್ಯವಶ್ಯ. ಅವಿಲ್ಲದ ಸಂಸ್ಥೆ ಅದೆಂದಿಗೂ ಮುಂದುವರಿಯದು. ಅದರ ಅರುಣೋದಯದೊಡನೆ ಅಂಧಕಾರೋದಯವೂ ಕಟ್ಟಿಟ್ಟ ಬುತ್ತಿ. ಆದರೆ ಈ ಸಂಸ್ಥೆಗೆ ಹಾಗಾಗಲಿಲ್ಲ. ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಯ ಕೃಪಾಬಲದಿಂದ ಜನತೆಯ ಬೆಂಬಲವಿತ್ತು ಆತನ ಅಮೋಘ ಕರ್ತವ್ಯ ಶಕ್ತಿಯಿಂದ ಬರಬರುತ್ತ ಆರ್ಥಿಕ ಬಲವೂ ಬೆಂಗೂಡಿ ಬಂತು. ಸಂಸ್ಥೆ ಇನಿತೊಂದು ಕಾಲ ತಲೆಯೆತ್ತಿ ನಿಂತಿತು.

ಯಾವ ಸಂಸ್ಥೆಯೇ ಆಗಲಿ ಅದರ ಚಿರಾಯುತನಕ್ಕೆ ಬರೀ ಭೌತಿಕ ಶಕ್ತಿಯೇ ಸಾಧನವಲ್ಲ, ಭೌತಿಕ ಶಕ್ತಿ ಬರೀ ಭೂಷಣ, ಬರೀ ಥಳಕು ಮಾತ್ರ. ಅದು ಚೇತನವಾಗಲಾರದು; ಅದು ಚಿರಕಾಲವಿರದು. ಚಿರಕಾಲ ಬಾಳಿಸಬಲ್ಲುದು ಅಧ್ಯಾತ್ಮಿಕ ಚೇತನ. ಆ ಚೇತನವನ್ನು ಚೆನ್ನಾಗಿ ತನ್ನೊಳಗೆ ತುಂಬಿಕೊಂಡು ಪರಿಣಮಿಸಿಕೊಂಡಿದೆ ಈ ಶಿವಯೋಗಮಂದಿರ ಸಂಸ್ಥೆ !

ಜಗತ್ತು ಜಡ ದ್ರವ್ಯಗಳಿಂದ ತುಂಬಿರುವಂತೆ ಜನತೆಯೂ ಜಡಜೀವನದತ್ತ ಹೆಚ್ಚಾಗಿ ಹೆಚ್ಚು ಆಸಕ್ತಿ ಯಿಂದ ಸಾಗುತ್ತಿದೆ; ಸಾಯುತ್ತಿದೆ. ದಿಟವಾಗಿ ದಿಟ್ಟಿಸಿದರೆ ಮಾನವನ ಧ್ಯೇಯ ಅದಲ್ಲ, ಮಾನವನು ಚೇತನ ಸ್ವರೂಪಿ, ಚಿನ್ಮಯ ರೂಪಿ. ಜಡ ಪ್ರಕೃತಿಯು ತನ್ನ ಚಿನ್ಮಯರೂಪದ ಸಾಕ್ಷಾತ್ಕಾರ ಪಡೆಯಲಿಕ್ಕಾಗಿ ತನಗೆ ಸಾಧನವಾಗಿ ಸೇರಿದೆ. ಬರೀ ಸಾಧನೆಯಲ್ಲಿಯೆ ನಿಲ್ಲುವುದು ಪುರುಷಾರ್ಥವಲ್ಲ, ತ್ಯಾಗದಿಂದ ಭೋಗದಿಂದ ಸಚ್ಚಿದಾನಂದ ಯೋಗವನ್ನು ಪಡೆವ ಮಧುರ ಸುಂದರ ರಹಸ್ಯವನ್ನು ಮಾನವನು ಮನಗಾಣಬೇಕು. ಅದನ್ನು ಮನಗಾಣಿಸಲು ಈ ಶಿವಯೋಗಮಂದಿರ’ ಸಂಸ್ಥೆಯ ಸೃಷ್ಟಿ ಮತ್ತು ಸ್ಥಿತಿ.

ಇಂತಹ ಸಂಸ್ಥೆಗಳ ಬಾಳೇ ಸಾಮಾಜಿಕ ಬಾಳು ಮತ್ತು ಬೆಳಗು. ಇಂತಹ ಸಂಸ್ಥೆಗಳು ಬಾಳಿದಷ್ಟೂ ಸಮಾಜಗಳು ಸರ್ವಾಂಗ ಸುಂದರವಾಗಿ ಸಂಸ್ಕೃತಿ ಚಂದಿರವಾಗಿ ಬಾಳಬಲ್ಲವು, ಬೆಳಗಬಲ್ಲವು.

ಸಂಸ್ಥೆಗಳ ಅಸ್ತಿತ್ವಕ್ಕೆ ಸ್ಥಾನ ಮಹತ್ವವೂ ಒಂದು ಮುಖ್ಯಾಂಗ, ಶಿವಯೋಗಮಂದಿರ ಸ್ಥಳವು ಮಹತ್ತಿನಿಂದ ಮೆರೆಯುತ್ತಿದೆ. ಅದರ ಸುತ್ತು ಐತಿಹಾಸಿಕ ಸ್ಥಳಗಳಿವೆ; ಗ್ರಾಮಗಳಿವೆ. ಋಷ್ಯಾಶ್ರಮಗಳೂ ದೇವಸ್ಥಾನಗಳೂ ಇವೆ. ಇವಲ್ಲದೆ ಪುರಾಣ ಪ್ರಸಿದ್ದವಾದ ಮಹಾಕೂಟಾದಿ ತೀರ್ಥ ಕ್ಷೇತ್ರಗಳೂ ಇವೆ. ನಿಸರ್ಗ ಸೌಂದರ್ಯಕ್ಕೆ ಕೊರತೆಯಿಲ್ಲ, ಶಿವಯೋಗಮಂದಿರದ ಸುತ್ತೂ ಬೆಟ್ಟಗಳ ಸಾಲು, ಬಲಕ್ಕೆ ಹರಿವ ಹೊನಲು. ತರತರದ ತರುಗಳ ಗುಂಪು ತರುಲತೆಗಳ ಹೂಗಳ ಕಂಪು. ಕೋಗಿಲೆಗಳ ಕಲರವದಿಂಪು, ನವಿಲುಗಳ ನರ್ತನದ ಸೊಂಪು, ಇವೆಲ್ಲವೂ ‘ಶಿವಯೋಗಮಂದಿರ’ ಸಂಸ್ಥೆಗೆ ಮಿಗಿಲಾದ ಕಳೆಯನ್ನು ತಂದಿವೆ. ಸುರುಚಿರವಾದ ಸ್ಥಿತಿಯನ್ನುಂಟುಮಾಡಿವೆ.

ಧಾರ್ಮಿಕಾಚರಣೆಗಳಿಲ್ಲದೆ ಒಣಗಿ ನಿಂತ ಧಾರ್ಮಿಕ ಮರುಭೂಮಿಯ ಮೇಲೆ ಅಧ್ಯಾತ್ಮಿಕ ರಸದ ಹೊನಲನ್ನು ಹರಿಸಿತು ಶಿವಯೋಗಮಂದಿರ. ಸಾಮಾಜಿಕರ ಮೇಲೆ ದಟ್ಟಾಗಿ ಬಿದ್ದ ಅವಿದ್ಯೆಯೆಂಬ ನೆರಳನ್ನು ನಿವಾರಿಸಿ ವಿದ್ಯಾ ಕಿರಣಗಳನ್ನು ಹರಡಿ ಬೆಳಕ ನೀಡಿತು ಶಿವಯೋಗಮಂದಿರ, ನೈತಿಕ, ಸಾಂಸ್ಕೃತಿಕ ಮುಂತಾದ ಹುಲುಸಾದ ಬೆಳೆ ಬೆಳೆಯಿತು ಶಿವಯೋಗಮಂದಿರ, ಮಠಗಳಿಗೆ ಮೂರ್ತಿಗಳನ್ನು ಮೇಲ್ಮಟ್ಟದಲ್ಲಿ ಸಂಸ್ಕರಿಸಿ ತಯಾರಿಸುವ ಅತ್ಯುಚ್ಚ ಆದರ್ಶ ಸಂಸ್ಥೆ ಶಿವಯೋಗಮಂದಿರ. ವ್ಯಷ್ಟಿ ಸುಧಾರಣೆಯಿಂದ ಸಮಷ್ಟಿ ಸುಧಾರಣೆ ಯನ್ನು ಸಾಧಿಸಿತು ಶಿವಯೋಗಮಂದಿರ, ಅನೇಕರನ್ನು ಅನಾರ್ಯ ಜೀವನದಿಂದ ಆರ್ಯ ಜೀವನಕ್ಕೇರಿಸಿತು ಶಿವಯೋಗಮಂದಿರ, ದಾನವ ಜೀವಿಗಳನ್ನು ದೇವ ಜೀವಿಗಳನ್ನಾಗಿಸಿತು. ಶಿವಯೋಗಮಂದಿರ . ಮಾನವ ಹೃದಯರನ್ನು ಮಹಾದೇವ ಹೃದಯರನ್ನಾಗಿ ಮಾಡಿತು ಶಿವಯೋಗಮಂದಿರ.

ಇಲ್ಲಿ ಬಳಸಿದ ‘ಆರ್ಯ’ ಪದಕ್ಕೆ ಜಾತಿ, ಪಂಥ, ಪಂಗಡ- ಈ ಯಾವ ಅರ್ಥವಲ್ಲ, ಸಾಂಸ್ಕೃತಿಕ ಸ್ವಾನುಭಾವಿಕ ಜೀವನದ ಸಂಕೇತವದು. ‘ದಾನವ’ ಪದಕ್ಕೂ ಇಲ್ಲಿ ಜಾತಿಗೀತಿಗಳ ಸೋಂಕಿಲ್ಲ  .ಅನೈತಿಕತೆ, ಅನುದಾರತೆ, ಕಪಟ, ಕ್ರೌರ್ಯ, ಕ್ಷುದ್ರಭಾವ, ಅಸತ್ಯ, ಮೋಸ ಮುಂತಾದ ದುರ್ಗುಣ ಸೂಚಕವದು. ಶಿವಯೋಗಮಂದಿರವು ಐವತ್ತು ವರುಷಗಳಿಂದ ಧಾರ್ಮಿಕ,  ಅಧ್ಯಾತ್ಮಿಕ, ಸಂಗೀತ, ಸತ್ಕೃತಿ ಸಂಗ್ರಹ, ಸಾಮಾಜಿಕ ಮುಂತಾದ ಕ್ಷೇತ್ರಗಳ ಪಯಣಿಗರಿಗಾಗಿ ತನ್ನದೇ ಆದ ದಾರಿದೀಪಗಳನ್ನು ಇತ್ತಿದೆ. ಶಿವಯೋಗಮಂದಿರವು ಸಮಾಜ ಪುರುಷನಿಗಾಗಿ ಬೆಳೆದ ಆಧ್ಯಾತ್ಮಿಕದ ಒಂದು ಪರಮಾಮೃತ ಫಲ, ಸಾಹಿತ್ಯದ ಸುಗಂಧ ಸೂಸುವ ಸುಂದರ ಕಮಲ, ಸಂಗೀತದ ಸುಮಧುರ ಜಲ, ಶಿವಯೋಗಮಂದಿರ ಶಕ್ತಿ ಅಪಾರವಾದುದು, ಜೀವಂತ ಶಕ್ತಿಗಳು ವ್ಯಕ್ತಿರೂಪದಲ್ಲಿ ನಾಡಿನ ತುಂಬ ನಾಲ್ಕು ನಿಟ್ಟಿನಲ್ಲಿ ವಿರಾಜಿಸುತ್ತಿವೆ; ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಆಧ್ಯಾತ್ಮಿಕ, ಸಂಗೀತ ಮುಂತಾದ ಸತ್ಕಾರ್ಯಗಳನ್ನು ಕೈಕೊಂಡು ಸಾಗಿಸುತ್ತಿವೆ. ಶಿವಯೋಗಮಂದಿರದ ಮೂರ್ತಿಕೀರ್ತಿಗಳಾಗಿ ಕಂಗೊಳಿಸುತ್ತಿವೆ. ಅವರೇ ಮಠಾಧಿಪತಿಗಳು ಅವರ ಮುಖಾಂತರ ಶಿವಯೋಗಮಂದಿರವು ಸಾಮಾಜಿಕರನ್ನು ನಾಡಿಗರನ್ನು ಸಂಸ್ಕರಿಸುತ್ತಿದೆ; ಶಾಂತಿಪ್ರದಾಯಕ ವಾಗಿ ನಿಂತಿದೆ. ಮಠಾಧಿಪತಿಗಳ ಮುಖಾಂತರ ತನ್ನ ಮರ್ತ್ಯದ ಮಣಿಹವನ್ನು ಮುಂದುವರಿಸುತ್ತಿದೆ. ನಾನಾ ಬಗೆಗಳಲ್ಲಿ ಜನತೆಯ ಬಾಳು ಬದುಕುಗಳನ್ನು ಹಸನಗೊಳಿಸುತ್ತಿದೆ. ನಡೆ-ನುಡಿಗಳನ್ನು ನಯಗೊಳಿಸುತ್ತಿದೆ. ಜನತೆಯ ಸೇವೆಯನ್ನು ಸತತ ಸಲ್ಲಿಸುತ್ತಿದೆ. ಬಾಳಿನ ಬೇಸರಿಕೆಯನ್ನು ಕಡಿಮೆ ಮಾಡುತ್ತಿದೆ. ಬದುಕಿನ ಸಾರ್ಥಕತೆಯನ್ನು ಕೈಗೂಡಿಸುತ್ತಿದೆ. ಒಟ್ಟಿನಲ್ಲಿ ತನ್ನ ಮಠಾಧಿಪತಿಗಳ ಮುಖಾಂತರ ಜ್ಞಾನ-ಕ್ರಿಯೆಗಳ ಪ್ರಸಾರ ದಾಸೋಹ ಸೇವೆ ಸಾಧ್ಯವಾದ ಮಟ್ಟಿಗೆ ಸಾಂಗವಾಗಿ ಸಾಗುವಂತಾಗಿದೆ.

ಶಿವಯೋಗಮಂದಿರ ಸಂಸ್ಥೆಯ ಈ ಅರ್ಧಶತಮಾನದ ಪ್ರಗತಿಪಥದಲ್ಲಿ ಚಕ್ರನೇಮಿಕ್ರಮದಂತೆ ಏರಿಳಿತಗಳಿಲ್ಲದಿಲ್ಲ: ಹಗಲಿರುಳುಗಳು ಬಾರದಿಲ್ಲ, ಮುನ್ನಡೆ-ಹಿನ್ನಡೆಗಳು ಸಂಭವಿಸದಿಲ್ಲ, ಕಷ್ಟ-ಸುಖಗಳು ಕಾಣದಿಲ್ಲ, ಆದರೂ ಅವೆಲ್ಲವನ್ನು ಜೀರ್ಣಿಸಿಕೊಂಡು ಜಾಗ್ರತವಾಗಿದೆ; ಇನಿತೊಂದು ಕಾಲ ಬಾಳಿದೆ; ಬದುಕಿದೆ.

ಇಂದಿನದು ವಿಜ್ಞಾನಯುಗ, ಇಂದಿನ ಜಗತ್ತು ಮತ್ತು ಜನತೆ ವಿಶಾಲ ವಿಚಾರದತ್ತ ಮುನ್ನಡೆಯುತ್ತಿದೆ. ಈ ಅರ್ಧಶತಕದಲ್ಲಿ ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಸಂಪಾದಿಸಿಕೊಂಡ ಈ ಸಂಸ್ಥೆ ಇನ್ನು ಮುಂದೆ ಇದರೊಡನೆ ಬೌದ್ಧಿಕ ಭೌತಿಕ ಶಕ್ತಿ ಸಂಪದಗಳನ್ನು ಸಂಪಾದಿಸಿಕೊಳ್ಳಬೇಕಾಗಿದೆ. ವ್ಯಕ್ತಿಗಳ ಆತ್ಮೀಕ ಹಾರ್ದಿಕ ಶಕ್ತಿಯನ್ನು ಸಮೃದ್ಧಿಗೊಳಿಸಿದಂತೆ ಇನ್ನು ಮುಂದೆ ಭೌತಿಕ ವೈಜ್ಞಾನಿಕ ಶಕ್ತಿಗೆ ಸಂಚಲನೆಯನ್ನು ಸಂಚಯಿಸಬೇಕಾಗಿದೆ. ಆಧುನಿಕ ವಿಶಾಲ ಸಾಂಸ್ಕೃತಿಕ ನಾಗರಿಕ ನಿಟ್ಟಿನತ್ತ ಸಾಗಬೇಕಾಗಿದೆ. ಸಾಮ್ಯ ಶಾಂತಿ ಸಾಮ್ರಾಜ್ಯ ಸಂಸ್ಥಾಪಿಸ ಬೇಕಾಗಿದೆ; ಸಮರಸಭಾವವನ್ನು ಸಕಲರಲ್ಲಿ ಸಮೃದ್ಧಿಗೊಳಿಸಬೇಕಾಗಿದೆ. ಸರ್ವಧರ್ಮ ಸಮನ್ವಯವನ್ನು ಸಂವೃದ್ಧಿಗೊಳಿಸಬೇಕಾಗಿದೆ.

ಶ್ರೀ ವೀರಶೈವರಿಗೆ ಕೊಲ್ಲಿಪಾಕಿ, ಶ್ರೀಶೈಲ, ಹಿಮವತ್ಕೇದಾರ, ಉಜ್ಜಯಿನಿ, ಕಾಶಿ, ಕಲ್ಯಾಣ, ಕೂಡಲ ಸಂಗಮ, ಬಾಗೇವಾಡಿ ಮುಂತಾದವುಗಳು ಹೇಗೆ ಮಾನ್ಯ ಮತ್ತು ಪೂಜ್ಯ ಸ್ಥಾನಗಳಾಗಿವೆಯೊ ಹಾಗೆ ಶಿವಯೋಗ ಮಂದಿರವೂ ಇಂದು ಮಾನ್ಯ ಸ್ಥಾನವಾಗಿದೆ; ಪುಣ್ಯಸ್ಥಾನವಾಗಿದೆ.

Related Posts