ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೂ ಪ್ರಾಣಿದಯೆಯೂ

• ಶ್ರೀ ಆನೆಕೊಂಡದ ಮುಪ್ಪಣ್ಣನವರು, ಡಾವಣಗೆರೆ

ಜಗತ್ತಿನಲ್ಲಿ ಅನೇಕ ವಿಧವಾದ ಸತ್ಕಾರ್ಯಗಳನ್ನು ಮಾಡುತ್ತಿರುವರಾದಾಗ್ಯೂ ಭೂತ ದಯಾ ಪರರೂ, ಅಹಿಂಸಾಭಿಮಾನಿಗಳು ಆಗಿರುವುದು ಬಹು ಅಪರೂಪ ವಾಗಿದೆ. ಹೀಗೆಂದ ಮಾತ್ರಕ್ಕೆ ಪ್ರಾಣಿಗಳನ್ನು ಕೊಲ್ಲಲು ಅಥವಾ ಕೊಲ್ಲಿಸಲು ಸಹಾಯಕರಾಗಿರುವರೆಂದು ನನ್ನ ಅಭಿಪ್ರಾಯವಲ್ಲ. ಆದರೆ ಪ್ರಾಣಿಗಳಿಗೊದಗಿರುವ ಸಂಕಟವನ್ನು ಪರಿಹರಿಸಲು ಯತ್ನಿಸುವುದಿಲ್ಲ. ಈ ಕಾರಣದಿಂದಲೇ ವ್ಯವಸಾಯವೇ ಪ್ರಾಧಾನ್ಯವಾಗಿರುವ ಈ ನಮ್ಮ ಭರತಖಂಡದಲ್ಲಿ ವ್ಯವಸಾಯಕ್ಕೆ ಮುಖ್ಯಾಧಾರದ ಹೋರಿ, ಗೋವು ಮೊದಲಾದವುಗಳು ಬಹಳ ಕಡಿಮೆಯಾಗಿ ನಮ್ಮ ವ್ಯವಸಾಯವು ಕೇವಲ ನಿಕೃಷ್ಟ ಸ್ಥಿತಿಗೆ ಬಂದಿದೆ. ಇನ್ನೂ ಕೆಲವು ಕಾಲದವರೆಗೂ ದೇಶದಲ್ಲಿ ಗೋವಧೆಯು ನಿರ್ವಿಘ್ನವಾಗಿ ನಡೆದಲ್ಲಿ ಈಗಿರುವ ಅಲ್ಪಸ್ವಲ್ಪ ಪ್ರಾಣಿಗಳೂ ಸಹಕಟುಗರ ಪಾಲಾಗಿ ನಮ್ಮ ವ್ಯವಸಾಯಕ್ಕೆ ಬಹುತೊಂದರೆ ಬರುವ ಪ್ರಸಂಗವಿದೆ.

 ಯಾವ ನಮ್ಮ ಪೂರ್ವಿಕರು ಹಾಲು, ಮೊಸರು ಮತ್ತು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳ ಸೇವನೆಯಿಂದ ದೃಢಾಂಗರಾಗಿ ಹೆಚ್ಚು ಕಾಲ ಬದುಕುತ್ತಿದ್ದರೋ ಅದೇ ವಂಶದವರಾದ ನಾವು ಹಾಲು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳಿಲ್ಲದೆ ಸಚಿವ ಹೆಣಗಳಂತಾಗಿ ಅಕಾಲ ಮರಣವನ್ನು ಹೊಂದುತ್ತಿರುವವು, ಶಿಶುಗಳ ಮರಣ ಸಂಖ್ಯೆಯಂತೂ ಮಿತಿಮೀರಿತು. ಈಗ ದೊರೆಯುವ ಹಾಲೆಂದರೆ ಕಾಲುವಾಸಿ ಹಾಲಿಗೆ ಮುಕ್ಕಾಲುವಾಸಿ ನೀರನ್ನು ಬೆರೆಯಿಸಿದ ಹಾಲೇ! ದನಗಳು ಯಥೇಚ್ಛವಾಗಿದ್ದಾಗ ಹಾಲು ತುಪ್ಪಗಳಿಂದ ಕೈ ತೊಳೆಯುತ್ತಿದ್ದವರು ಈಗ ಎಳೆ ಮಕ್ಕಳಿಗೆ ಅಥವಾ ರೋಗಿಗಳಿಗೆ ಸ್ವಲ್ಪ ಹಾಲು ಬೇಕೆಂದರೂ ದೊರೆಯುವುದೇ ದುರ್ಲಭವಾಗಿದೆ. ಈಗ ನಮಗೆ ಹಾಲು ತುಪ್ಪಗಳೆಂದರೆ ಪರದೇಶಗಳಿಂದ ಪೆಟ್ಟಿಗೆಗಳಲ್ಲಿ ಪ್ಯಾಕಾಗಿ ಬರುವ Condensed milk (ಕಂಡೆನ್ಸ್ಡ ಹಾಲು) Vegetable ghee (ಸಸ್ಯಗಳಿಂದ ತಯಾರಿಸಿದ ತುಪ್ಪ) ಇವುಗಳೇ ಗತಿಯಾಗಿವೆ. ಇಂತಹ ದುಸ್ಥಿತಿಯು ನಮಗೆ ಬರಲು ಕಾರಣವೆಂದರೆ ನಾವು ದನಗಳ ವಿಷಯದಲ್ಲಿ ನಿರ್ದಯರಾಗಿ ಅವುಗಳನ್ನು ಕಟುಗರಿಗೆ ಕೊಡುವದ ಕಾರಣವಾಗಿದೆ.

ನಮ್ಮ ದೇಶಕ್ಕೊದಗಿರುವ ದನಗಳ ಸಂಹಾರವೆಂಬ ಮಹಾಮಾರಿಯನ್ನು ತಪ್ಪಿಸದ ಹೊರ್ತು ನಮ್ಮಗಳ ಏಳ್ಗೆಗಾಗಿ ದೇಶಾಭ್ಯುದಯಕ್ಕಾಗಲೀ ಮಾರ್ಗವೇ  ಇಲ್ಲದಂತಾಗಿದೆ. ದೇಶದಲ್ಲಿ ನಡೆದಿರುವ ಇಂತಹ ಅನ್ಯಾಯವನ್ನು   ನೋಡಿಯೂ ನೋಡದವರಂತೆ ಸುಮ್ಮನಿರುವುದೆಂದರೆ ನಮ್ಮ ಕಾಲಮೇಲೆ ನಾವೇ ಕಲ್ಲು ಹಾಕಿಕೊಂಡಂತೆಯೇ ಸರಿ. ದೇಶಾಭ್ಯುದಯಕ್ಕೆ ಮಹಾ ಅನರ್ಥಕಾರಿಯಾದ ಮೇಲ್ಕಂಡ ದುರಭ್ಯಾಸವನ್ನು ನಿಲ್ಲಿಸುವುದು ಪರಮ ಕರ್ತವ್ಯವಾಗಿದ್ದರೂ ಅನೇಕರು ಆ ಕಡೆಗೆ ಲಕ್ಷಕೊಡದಿರುವುದು ವಿಷಾದಕರವಾದ ಸಂಗತಿಯಾಗಿದೆ. ಕಾಯಿದೆ ಕೌನ್ಸಿಲ್‌ ಮೆಂಬರಗಳೂ ಸಭ್ಯ ಗೃಹಸ್ಥರೂ ಕೊಂಚ ಪ್ರಯತ್ನಪಟ್ಟು ಈ ಅನರ್ಥವನ್ನು ತಪ್ಪಿಸುವುದು ಅತ್ಯಾವಶ್ಯಕ. ಗುರುಗಳೆಂಬುವರೂ ಸಹ ಈ ವಿಷಯದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದಂತ್ತೆ ಭಕ್ತರಲ್ಲಿ ಜಾಗೃತಿಯನ್ನು ಉತ್ಪನ್ನ ಮಾಡಬೇಕು.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಭೂತ ದಯಾಪರರಾಗಿದ್ದರಲ್ಲದೆ ತಮ್ಮ ನಿತ್ಯ ಕರ್ಮಗಳ ಜೊತೆಗೆ ಪ್ರಾಣಿಗಳ ಸಂಕಟ ನಿವಾರಣೆ ಮಾಡುವ ವೃತ್ತಿಯನ್ನು ಕೈಕೊಂಡಿದ್ದರು. ಆಗಾಗ್ಗೆ ಶಿಷ್ಯರಿಗೆ ಪ್ರಾಣಿದಯೆಯ ವಿಷಯವಾಗಿ ಉಪದೇಶಿಸಿ ಯಾವ ಪ್ರಾಣಿಯೇ ಆಗಲಿ ಸಂಕಟದಿಂದ ಪರಿತಪಿಸುತ್ತಿದ್ದರೆ ಅದರ ಕಷ್ಟವನ್ನು ತಪ್ಪಿಸದೆ ಮುಂದಿನ ಕಾರ್ಯದಲ್ಲಿ ಉದ್ಯುಕ್ತರಾಗುತ್ತಿರಲಿಲ್ಲ. ಮೂಕ ಪ್ರಾಣಿಗಳ ವಿಷಯದಲ್ಲಿ ಬಹು ಕನಿಕರವುಳ್ಳವರಾಗಿದ್ದರು. ಅವುಗಳ ರಕ್ಷಣೆಗಾಗಿ ತಮ್ಮ ಕೈಯಿಂದ ಸಹಾಯವನ್ನೆಲ್ಲಾ ಮಾಡುತ್ತಿದ್ದರು. ಇವರು ಆಗಾಗ್ಗೆ ಅಹಿಂಸಾ ಬೋಧಕರನ್ನು ಕರೆಯಿಸಿ ಅವರಿಂದ ಜನಗಳಿಗೆ ಉಪದೇಶಿಸುತ್ತಿದ್ದರು. ಎಲ್ಲಿಯಾದರೂ ಅಹಿಂಸಾ ಬೋಧಕರು ಬಂದರೆ ಅವರನ್ನು ಕರೆಯಿಸಿ ಅವರಿಗೆ ಪ್ರೋತ್ಸಾಹಿಸುತ್ತಿದ್ದರು.

ನಮ್ಮ ಸಂಘದ ಪ್ರಚಾರಕರು ಯಮನೂರು ದೇವಿ ಜಾತ್ರೆಗೆ ಪ್ರಚಾರಕ್ಕೆ ಹೋದಾಗ ಅವರನ್ನು ಬರಮಾಡಿಕೊಂಡು ಅಹಿಂಸೆಯ ವಿಷಯವಾಗಿ ವ್ಯಾಖ್ಯಾನ ಮಾಡಿಸಿ ಪ್ರೋತ್ಸಾಹಾರ್ಥವಾಗಿ  ಧನಸಹಾಯ ಮಾಡಿದವರೂ ಈ ಮಹಾಸ್ವಾಮಿಗಳೇ. ಅನೇಕ ಕಡೆಯಲ್ಲಿ ನಡೆಯುತ್ತಿದ್ದ ಹಿಂಸಾಯುಕ್ತವಾದ ದೇವಿ ಜಾತ್ರೆಗಳಲ್ಲಿ ಹಿಂಸೆಯನ್ನು ತಪ್ಪಿಸಲು ಸಹಾಯಕಾರಿಗಳಾಗಿದ್ದರು. ಇವರು ತಮ್ಮ ಆಧಿಪತ್ಯದಲ್ಲಿ ಜರುಗುತ್ತಿದ್ದ ಮುದೇನೂರ ಜಾತ್ರೆಗೆ ನಮ್ಮ ಸಂಘದ ಪ್ರಚಾರಕರನ್ನು ಕರೆಯಿಸಿಕೊಂಡು ಜನಗಳಲ್ಲೆಲ್ಲಾ ಅಹಿಂಸಾ ತತ್ವವನ್ನು ಹರಡಲು ಏರ್ಪಾಟು ಮಾಡಿದ್ದರು. ಅಲ್ಲದೆ ಮುದೇನೂರಲ್ಲಿ ಸೇರುತ್ತಿದ್ದ ಜಾತ್ರೆಯಲ್ಲಿ ಉತ್ತಮವಾದ ಹೋರಿಗಳ ವಿನಹ ಕಟುಗರಿಗೆ ದೊರೆಯ ಬಹುದಾದ ಬಡಕು ಪ್ರಾಣಿಗಳು ಬಹಳ ಮಟ್ಟಿಗೂ ಬರದಂತೆ ಏರ್ಪಾಟು ಮಾಡಿದ್ದರು. ತಾವು ಶಿವೈಕ್ಯರಾಗುವ ೮-೧೦ ದಿವಸ ಮುಂಚಿತವಾಗಿ ಡಾವಣಗೆರೆಗೆ ದಯಮಾಡಿಸಿ, ಮುದೇನೂರಲ್ಲಿ ಸೇರುವ ದನದ ಜಾತ್ರೆಯಲ್ಲಿ ಪ್ರಚಾರದ ಕೆಲಸವನ್ನು ನಡೆಯಿಸಲು ನಮ್ಮ ಪ್ರಚಾರಕರನ್ನು ಸಂಗೀತ, ವ್ಯಾಖ್ಯಾನ, ಮ್ಯಾಜಿಕ್ ಲ್ಯಾಂಟರ್ನ ಮೊದಲಾದವುಗಳ ಮೂಲಕ ಅಹಿಂಸಾ ತತ್ವವನ್ನು ಪ್ರಸಾರಪಡಿಸಲು ವ್ಯವಸ್ಥೆ ಕರೆದುಕೊಂಡು ಹೋಗಿ ಮಾಡಿದವರೂ ಈ ಮಹಾಸ್ವಾಮಿಗಳೇ.

ಈ ಪ್ರಕಾರ ಈ ಮಹಾಸ್ವಾಮಿಗಳು ಅನೇಕ ರೀತಿಗಳಿಂದ ಪ್ರಾಣಿದಯೆ ವಿಷಯದಲ್ಲಿ ಸಹಾಯಕರಾಗಿದ್ದರಲ್ಲದೆ ಕೇವಲ ಭೂತ ದಯಾಪರರಾಗಿ ”ಅಹಿಂಸಾ ಪರಮೋಧರ್ಮ’ ಎಂಬ ತತ್ವವನ್ನು ಜನಸಾಮಾನ್ಯರಲ್ಲೆಲ್ಲಾ ಪ್ರಸಾರಗೊಳಿಸಿದರು. ಇವರ ಅಗಲುವಿಕೆಯಿಂದ ಮೂಕ ಪ್ರಾಣಿಗಳು ತಾಯಿಯನ್ನು ಕಳೆದುಕೊಂಡ ಕರುವಿನಂತೆ ವ್ಯಸನ ಪಡುತ್ತಿರುವುವು. ದಯಾಮಯನಾದ ಭಗವಂತನು ಸರ್ವರಿಗೂ ಸರ್ವ ಪ್ರಾಣಿಗಳನ್ನು ರಕ್ಷಿಸುವ ಸದ್ಭುದ್ಧಿಯನ್ನು ಕೊಟ್ಟು ಮಹಾಸ್ವಾಮಿಗಳವರು ಕೈಕೊಂಡಿದ್ದ ಕಾರ್ಯವು ಜಯಪ್ರದವಾಗುವಂತೆ ಕರುಣಿಸಲಿ !

* * *

Related Posts