ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು.
ಚಾಲ: ʼʼನೋಡಿರಿಲ್ಲಿದೆ. ಶಿವನ ಮಂದಿರʼʼ ಎಂಬಂತೆ,
ಬೇವು ಬೆಲ್ಲದ ಬೆರಕ ಸರಿಸಮ | ಮಾಡಿರೆನುವ ಯುಗಾದಿಯು ||
ʼʼಜೀವಿ ತಾ೦ ಸುಖ ದುಃಖ ಸಹಿಸಲಿ” ಎಂಬುದಿದುವೆ ಯುಗಾದಿಯು ||
ಯುಗ-ಯುಗಾಂತರ, ಕಾಲ ಗಣನೆಗೆ | ಯುಗದ ಆದಿ-ಯುಗಾದಿಯು ||
ನಗು.ವಸಂತದ ಚೈತ್ರಶುದ್ಧದ | ಮೊದಲ ದಿನವೆ ಯುಗಾದಿಯು ||
ಆ ಪರಮನವತಾರದೆಣಿಕೆಗೆ | ನಾಮವಿಹ ಯುಗ ನಾಲ್ಕಿವೆ ||
ದ್ವಾಪರ.ತ್ರೇತಾ.ಕೃತ.ಕಲಿಯು | ಎಂಬ ಯುಗಗಳು ನಾಲ್ಕಿವೆ | |
” ಕಲಿ. ಯುಗೇ…. ವೈವಶ್ವತಾಭಿಧ | ಮನು “ವಿನದಿದು ಯುಗಾದಿಯು ||
ಕಲಿತ, ಕಲಿಯುವ, ಕಲಿಸಬಯಸುವ | ಸರ್ವ ಜನರ ಯುಗಾದಿಯು | |
ನೂರು ವರ್ಷದ ಜೀವಿ : ಮನುಜಗೆ | ಯುಗದ ಅರ್ಥವು ವರ್ಷವು ||
ಆರು ಋತುಗಳ ಮೊದಲ ಋತುವಿನ | ಮೊದಲ ದಿನ ಚಿರ ಹರ್ಷವು ||
ಶಾಲಿ.ವಾಹನ.ಶಕದ ಮೊದಲಿನ | ಮೊದಲ ದಿನವೆ ಯುಗಾದಿಯು ||
ಬಾಲಿಕಾ. ಸಮ.ಮನದ ನಿರ್ಮಲ | ಚಿಗುರ ಚಲುವೆ ಯುಗಾದಿಯು ||
ಭುವಿಯ ಮಧ್ಯದ ರೇಖೆ ಮೇಲ್ಗಡೆ | ಸೂರ್ಯ ಬರಲು ಯುಗಾದಿಯು ||
ನವ.ನವೀನತೆ ಬಿಸಿಯ ಬೀಸುವ |ಸೂರ್ಯನಿಂದ ಯುಗಾದಿಯು ||
ಚೈತ್ರದಾದಿಯು : ಫಾಲ್ಗುಣಾ೦ತ್ಯವು | ಮಧ್ಯ ಕಾಲ ಯುಗಾದಿಯು ||
ಜಾತ್ರೆ.ರಥಕಿಹ ಧ್ವಜಗಳಂತೆಯೆ | ಚಿಗಿತ ಗಿಡದ ಯುಗಾದಿಯು ||
ಧರ್ಮ.ಶಾಸ್ತ್ರವು, ಕಾಲ.ಧರ್ಮವು | ತಿಳಿಪುದೊಂದೇ ಕಾಲವು ||
ಕರ್ಮ-ಗತಿ-ಮತಿ.ಸಿದ್ದಿ ಬಯಸಲು | ಯುಗದ ಆದಿ ಸುಕಾಲವು ||
ರಾಮಚಂದ್ರನು ಪಟ್ಟ ಕೇರಿದ್ದ | ಪರ್ವ ದಿನವೆ ಯುಗಾದಿಯು ||
ಭೂಮಿ,ಪಾಲಕ : ಶಾಲಿ.ವಾಹನ | ಮೆಚ್ಚಿ ಪೇಳ್ದ ಯುಗಾದಿಯು ||
ಹಾನುಗಲ್ಲ ಕುಮಾರ ಯೋಗಿಯು | ಯೋಗ ತಿಳಿಪ ಯುಗಾದಿಯು ||
ಜ್ಞಾನ ಕರ್ಮದ ಸಮ.ಸಮುಚ್ಚಯ | ಸಾರುತಿರುವ ಯುಗಾದಿಯು ||
* ಮೂರುವರೆ ಶುಭ ದಿನ ‘ದ ವರ್ಷಕೆ | ಮೊದಲ ಹಬ್ಬ ಯುಗಾದಿಯು ||
ಚಾರು.ಲತೆ ಗಿಡ ಪಲ್ಲವಿಪ ತೆರ | ಮಾಡುವುದಿದೆ ಯುಗಾದಿಯು ||
ಆ ಶಿಲಾ.ಯುಗ, ಈ ಕಲಾ.ಯುಗ | ಹಸಿರು ಗಿಡದ ಯುಗಾದಿಯು ||
ಈಶ.ರವಿ.ಶಶಿ. ಕೃಪೆಯಿರುವನಕ | ಮುಂದುವರೆವ ಯುಗಾದಿಯು ||
ಯುಗ.ಯುಗಾಂತರ. ಸೌಖ್ಯ.ದಾಯಕ | ಯುಗದ ಆದಿ=ಯುಗಾದಿಯು ||
ಜಗಕೆ ಶಿವ=ʼʼಗುರುಮೂರ್ತಿ ʼʼಕರುಣಿಪ | ಕೃಪೆಯ ಚಿಹ್ನ ಯುಗಾದಿಯು ||
ಡಾ|| – ʼಗುರುಸಿದ್ದ ದೇವ’ ಕೆಳದಿ