ಯೋಗಪರಂಪರೆಯ ಇತಿಹಾಸ

ಸಂಗನಬಸವದೇವರು, ಎಂ.ಎ.ವಾರಣಾಸಿ

(  ಲಿಂ :ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ವಾರಣಾಸಿಯಲ್ಲಿ ವ್ಯಾಸಂಗ ಸಮಯದಲ್ಲಿ ಬರೆದ ಲೇಖನ)

ಸಂಗ್ರಹ ಸೌಜನ್ಯ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಯೋಗವೆಂದರೇನು ? ಈ ಪ್ರಶ್ನೆಗೆ ಸರ್ವಸಮ್ಮತ ಉತ್ತರವನ್ನೀಯುವದು ಅಸಂಭವ. ನಮ್ಮ ಆಚಾರ್ಯರು ಯೋಗ ಶಬ್ದದ ವ್ಯಾಖ್ಯೆಯನ್ನು ನಾನಾ ಪ್ರಕಾರವಾಗಿ ಮಾಡಿದ್ದಾರೆ, ಭಾಷಾವಿಜ್ಞಾನಿಗಳ ಪ್ರಕಾರ ಭಾರತದ ಅತ್ಯಂತ ಪ್ರಾಚೀನಗ್ರಂಥವಾದ ಋಗ್ವೇದದಲ್ಲಿ ರಥಕ್ಕೆ ಹೂಡುವ ಪಶುಗಳ ಬಂಧನಕ್ಕೆ ಯೋಗ ವೆಂದು ಹೇಳಲಾಗಿದೆ. ಇದು ಯೋಗ ಶಬ್ದದ ಪ್ರಾಚೀನವಾದ ಅರ್ಥ, ಯದ್ಯಪಿ ಋಕ್‌ಸಂಹಿತೆಯ ಕೆಲವು ಕಡೆ ಯೋಗ, ಯೋಗಕ್ಷೇಮ ಶಬ್ದಗಳು ಬಂದಿವೆ. ಆದರೆ ಅವುಗಳ ಅರ್ಥ ಯೋಗಸೂತ್ರ, ಉಪನಿಷತ್ತು, ಹಾಗೂ ಮಹಾಭಾರತಗಳಲ್ಲಿ ಕೊಡುವ ಅರ್ಥಕ್ಕಿಂತ ಅತ್ಯಂತ ಭಿನ್ನವಾಗಿದೆ.

ಪ್ರಾಚೀನ ವೈದಿಕಗ್ರಂಥಗಳಲ್ಲಿ ಯೋಗಶಬ್ದದ ಘನಿಷ್ಠ ಸಂಬಂಧವು ತಪಸ್ಸು, ಯಜ್ಞ, ಜಾದು, ತಂತ್ರ, ಮಂತ್ರ ಶಬ್ದಗಳ ಜೊತೆಗೆ ಇತ್ತೆಂದು ವೇದ್ಯವಾಗುತ್ತದೆ. ಇದಲ್ಲದೇ ಐತಿಹಾಸಿಕ ಯುಗದಲ್ಲಿ ತಪಸ್ಸಿನಿಂದ ಪ್ರಾಪ್ತವಾಗುವ ಶಕ್ತಿಗಳ ಮತ್ತು ಧ್ಯಾನದಿಂದ ಸಿದ್ಧಿಸಿದ ಸಿದ್ಧಿಗಳ ಅರ್ಥದಲ್ಲಿ ಯೋಗಶಬ್ದದ ಪ್ರಯೋಗವು ಕಂಡು ಬರುತ್ತದೆ.

ಹರಪ್ಪಾ ಮೊಹಂಜೋದಾರೊ ಸಂಸ್ಕೃತಿಯ ಸಮಯದಲ್ಲಿ ಯೋಗ ಮತ್ತು ಧ್ಯಾನ ಶಬ್ದಗಳ ಪ್ರಯೋಗದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆ ಕಾಲದಲ್ಲಿ ದೊರೆತ ಕೆಲವು ನಾಣ್ಯಗಳ ಮೇಲೆ ಮತ್ತು ಪಾಷಾಣಖಂಡಗಳ ಮೇಲೆ ಕೆತ್ತಿದ ಧ್ಯಾನಸ್ಥ ಪುರುಷರನ್ನು ತಪಸ್ವಿಗಳನ್ನು ನೋಡಬಹುದು. ಅತಃ ಯೋಗ ಪರಂಪರೆಯು ಐದುಸಾವಿರ ವರ್ಷಗಳ ಪೂರ್ವದಲ್ಲಿ ಊರ್ಜಿತಾವಸ್ಥೆಯಲ್ಲಿ ಇತ್ತೆಂದು ಖಚಿತವಾಗಿ ಹೇಳಬಹುದು.

ವೈದಿಕಮಧ್ಯಕಾಲವು ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ಸಂಗಮ ಕಾಲವು. ಈ ಸಂಗಮದ ಪ್ರಭಾವವು ಜೈನ, ಬೌದ್ಧ, ಸಾಂಖ್ಯ, ಆಜೀವಿಕ ಮತ್ತು ಪ್ರಾಚೀನ ಉಪನಿಷತ್ತುಗಳ ಮೇಲೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಮೋಕ್ಷಪಾಯವಾದ ಯೋಗಮಾರ್ಗದಲ್ಲಿ ಸರ್ವಜಾತೀಯ ಮುಮುಕ್ಷಗಳಿಗೆ ಪ್ರವೇಶ ಸಿಗಬೇಕಾದರೆ ಈ ಎರಡೂ ಸಂಸ್ಕೃತಿಗಳ ಸಂಗಮದ (ಸಮ್ಮಿಶ್ರಣ) ಪರಿಣಾಮವೆಂದೇ ಹೇಳಬಹುದು. ಆದರೆ ಈ ಉದಾರತೆಯು ವೀರಶೈವ, ಜೈನ, ಬೌದ್ಧ ಧರ್ಮಗಳಲ್ಲಿ ಮೊದಲಿನಿಂದಲೂ ವಿದ್ಯಮಾನವಾಗಿತ್ತು, ಬ್ರಾಹ್ಮಣಪರಂಪರೆಯಲ್ಲಿ ಮಾತ್ರ ಈ ಪ್ರಗತಿಶೀಲ ವಿಚಾರವು ಕಾಲಾಂತರದಲ್ಲಿ ಪ್ರವೇಶ ಮಾಡಿತು.

ಐತಿಹಾಸಿಕ ಹಾಗೂ ಸೈದ್ಧಾಂತಿಕ ದೃಷ್ಟಿಯಿಂದ ಯೋಗವು ಶ್ರಮಣಯೋಗ ಬ್ರಾಹ್ಮಣಯೋಗವೆಂದು ಎರಡು ಪ್ರಕಾರ, ಶ್ರಮಣಯೋಗವು ಅನೇಶ್ವರವಾದಿಯಾದರೆ, ಬ್ರಾಹ್ಮಣಯೋಗವು ಬ್ರಹ್ಮಾತ್ಮವಾದಿಯು, ಈಶ್ವರವಾದಿಯು ಮತ್ತು ಪುರುಷವಾದಿಯೂ ಆಗಿದೆ. ವೈದಿಕಮಧ್ಯಕಾಲದಲ್ಲಿ ಸಾಂಖ್ಯ ಮತ್ತು ಯೋಗದ ಮೇಲೆ ಸೇಶ್ವರಿವಾಖ್ಯೆಗಳ ರಚನೆಯ ನಂತರ ಇವೆರಡುಗಳ ಗಣನೆಯು ಷಡ್‌ದರ್ಶನ ಗಳಲ್ಲಿ ಪ್ರಾರಂಭವಾಯಿತು.

ಮಹಾಭಾರತದ ಶಾಂತಿಪರ್ವದಲ್ಲಿ ಸಂಕಲಿತ ಯೋಗ ವಿಷಯಕ ಸಾಮಗ್ರಿಯು ಪ್ರಾಚೀನಕಾಲದಿಂದ ಕೇಳುತ್ತ ಬಂದಿರುವ ವಿವಿಧ ಕಥನಗಳನ್ನು ಆಶ್ರಯಿಸಿದೆ. ಕಾರಣ ಕ್ರಿ.ಶ. ಪೂರ್ವ ೬ ಅಥವಾ ೫ ನೆಯ ಶತಮಾನದ ಯೋಗಪರಂಪರೆಯನ್ನು ತಿಳಿಯ ಬೇಕಾದರೆ ಪ್ರಾಚೀನ ಪಾಲೀಸೂತ್ರಗಳನ್ನು ಉಪನಿಷತ್ತುಗಳನ್ನು ಹಾಗೂ ಜೈನಸೂತ್ರ ಗಳನ್ನು ಆಶ್ರಯಿಸಬೇಕು. ಪ್ರಾಚೀನ ಪಾಲೀಸಾಹಿತ್ಯವು ಮೂರು ಭಾಗಗಳಲ್ಲಿ ವಿಭಕ್ತವಾಗಿದೆ. ಆ ಮೂರು ಭಾಗಗಳು ವಿನಯಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕಗಳೆಂದು ಕರೆಯಲ್ಪಡುತ್ತಿವೆ. ಅಶೋಕನ ಸಮಯದಲ್ಲಿ ರಚಿತ ಸುತ್ತಪಿಟಕದ ಖುದ್ದಕನಿಕಾಯಗಳಲ್ಲಿ ಬೌದ್ಧ ಯೋಗ ವಿಷಯಕ ಸಾಮಗ್ರಿಯು ಪರ್ಯಾಪ್ತವಾಗಿ ದೊರೆಯುತ್ತದೆ. ಭಗವಾನ ಗೌತಮಬುದ್ದನು ಪೂರ್ವಾಶ್ರಮದಲ್ಲಿ ಅತ್ಯಂತ ಕಠೋರವಾದ ಯೋಗಸಾಧನೆಯನ್ನು ಮಾಡಿದನೆಂದು ಪ್ರತೀತಿ ಇದೆ. ಇಷ್ಟೆ ಅಲ್ಲ, ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ ಕೇವಲ ಅಸ್ಥಿ ಪಂಜರವೂ ಆದ ಆತನ ಶಿಲಾಪ್ರತಿಮೆಗಳು ಇನ್ನೂ ಅನೇಕ ಕಡೆಗೆ ದೊರೆಯುವವು. ಆ ಕಾಲದಲ್ಲಿ ಅವನು ಸರ್ವಶ್ರೇಷ್ಠಯೋಗಿ ಮತ್ತು ಧ್ಯಾನಮಾರ್ಗದ ಸರ್ವಶ್ರೇಷ್ಟ ಉಪದೇಶಕನೆಂದು ಪಾಲಿಸಾಹಿತ್ಯವು ಘೋಷಿಸುತ್ತದೆ.

ನಿರ್ವಾಣಧಾತು(ಧರ್ಮ ಧಾತುವಿನ ಪ್ರಾಪ್ತಿಯೇ ಬೌದ್ಧಯೋಗದ ಪರಮೋದ್ದೇಶ. ಈ ಯೋಗದಲ್ಲಿ ಸ್ಮೃತಿ, ಧ್ಯಾನ ಸಮಾಧಿ, ಶಮಥ, ವಿಪಶ್ಯನಾ ಮೊದಲಾದವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಬೌದ್ಧಯೋಗದ ಅಷ್ಟಾಂಗಗಳಲ್ಲಿ ೪ ಸಮ್ಯಕ್ ದೃಷ್ಟಿಗೆ ಪ್ರಥಮಸ್ಥಾನವಿದೆ, ಹಾಗೂ ಬೌದ್ಧರ ದಾರ್ಶನಿಕ ಪಕ್ಷವು ಸಮಾವೇಶಗೊಂಡಿದೆ. ಬೌದ್ಧರ ಅನೇಕ ಗ್ರಂಥಗಳಲ್ಲಿ ನಾನಾ ಪ್ರಕಾರದ ಧ್ಯಾನ-ಸಮಾಧಿಗಳ ವರ್ಣನೆಯು ಮತ್ತು ಅನೇಕ ಯೋಗಿಗಳ ಉಲ್ಲೇಖವು ಆ ಕಾಲದ ಭವ್ಯಯೋಗಪರಂಪರೆಯನ್ನು ಸೂಚಿಸುತ್ತದೆ.

ಯೋಗಪರಂಪರೆಯ ಇತಿಹಾಸದಲ್ಲಿ ಪತಂಜಲಿ ಮಹರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ಅವನ ಕಾಲ ೩ನೆಯ ಶತಮಾನ, ಅವನ ಕಾಲದಲ್ಲಿಯೇ ಯೋಗವು ವ್ಯಾವಹಾರಿಕ ಮಾರ್ಗದಿಂದ ಐಶ್ವರೀಯ ದಾರ್ಶನಿಕ ಸ್ವರೂಪವನ್ನು ಮೈದಾಳಿತು * ಯೋಗಸೂತ್ರ”ದಲ್ಲಿ ಉಪನಿಷದ್‌ದಾಂತ, ಸಾಂಖ್ಯ ಮತ್ತು ಪ್ರಾಚೀನಯೋಗ ಪದ್ಧತಿಯ ಸಮನ್ವಿತ ರೂಪವನ್ನು ನಿರೂಪಿಸಲು ಪ್ರಯಾಸಮಾಡಲಾಯಿತು. “ಯೋಗಶ್ಚಿತ್ತವೃತ್ತಿ ನಿರೋಧಃ ” ವೆಂಬ ವ್ಯಾಖ್ಯೆಯು ಸರ್ವತ್ರ ಪ್ರಾಸಾರವಾಯಿತು.

ಪಾತಂಜಲಯೋಗದ ಪರಮಲಕ್ಷ್ಯವು ವಿವೇಕಖ್ಯಾತಿ, ಭೇದಜ್ಞಾನವೇ ವಿವೇಕ ಖ್ಯಾತಿ. ಇದರ ಪ್ರಾಪ್ತಿಗಾಗಿ ಏಕಾಗ್ರಭೂಮಿಯ ಅನುಸಂಧಾನ ಪರಮಾವಶ್ಯಕ ವಾಗಿದೆ. ಸಾಧಕನು ಏಕಾಗ್ರಭೂಮಿಯ ಅನುಸಂಧಾನದಿಂದ ನಿರೋಧಭೂಮಿಯಲ್ಲಿ ಪ್ರವೇಶಮಾಡುವನು, ಅಲ್ಲಿ ಅವನಿಗೆ ಪ್ರಕೃತಿ ಪುರುಷರ ವಿಯೋಗಾವಸ್ಥೆಯ ಅನುಭವವು ಆಗುವದು. ಈ ಅನುಭವವು ನಿರ್ಮಲ ಪುರುಷನ ಅನುಭವವು ಇದುವೇ ಸಮಾಧಿ. ಪಾತಂಜಲ ಯೋಗಾನುಸಂಧಾನದಲ್ಲಿ ವ್ಯಷ್ಟಿಗತ ಮತ್ತು ಸಮಷ್ಟಿಗತ ರೂಪದ ಅಸ್ತಿತ್ವಕ್ಕೆ ಸ್ಥಾನವಿಲ್ಲ. ಕಾರಣ ಪ್ರಭುದೇವರು ಇದಕ್ಕೆ ಅಳಿದುಕೊಡುವ ಯೋಗವೆಂದು ಕರೆದಿದ್ದಾರೆ.

ಶೈವಶಾಸ್ತ್ರಗಳು ಮೊದಲಿನಿಂದಲೂ ಯೋಗಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿವೆ. ಪಾಶುಪತಸೂತ್ರದಲ್ಲಿ ಯೋಗವು ಐದು ತತ್ವಗಳಲ್ಲಿ ಒಂದಾಗಿದೆ ಎಂದು ಉಕ್ತವಾಗಿದೆ. ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ, ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಇರುತ್ತದೆ. ಇದರಿಂದ ಆಗಮ ವಾಙ್ಮಯದಲ್ಲಿ ಯೋಗಕ್ಕಿದ್ದ ಮಹತ್ವವು ಸ್ಪಷ್ಟವಾಗುವದು. ಸುಪ್ರಭೇದಾಗಮ ಮತ್ತು ಈಶಾನ ಶಿವಯೋಗಿಗಳ * ಈಶಾನ ಶಿವ ಗುರುದೇವ ಪದ್ಧತಿ “ಗಳಲ್ಲಿ ವರ್ಣಿತವಾದ ಯೋಗವು ಯೋಗ ದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ. ಆದರೂ ಕಿಂಚಿತ್‌ ವ್ಯತ್ಯಾಸ ಇಲ್ಲದೇ ಇಲ್ಲ. ಈಶ್ವರನ ಪ್ರತಿಬಿಂಬವನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ, ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರೀಕರಿಸಿ ಧ್ಯಾನವನ್ನು ಬರಿಸಿ ಸಮಾಧಿ ಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುತ್ತದೆ. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿ ಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವದೊಂದು ಅದರ

ವೈಶಿಷ್ಟ್ಯ.

ಶಿವಯೋಗ ಪ್ರದೀಪಕಾರರು ಯೋಗವನ್ನು ಮಂತ್ರಯೋಗ, ಲಯಯೋಗ. ಹಠಯೋಗ, ರಾಜಯೋಗ ಶಿವಯೋಗವೆಂದು ಐದುವಿಧವಾಗಿ ಹೇಳುವರು. ಓಂಕಾರ ಮೊದಲಾದ ಮಂತ್ರಗಳನ್ನು ಜಪಿಸುವವರು ಮಂತ್ರ ಯೋಗಿಗಳೆಂದೂ, ಮನೋಮಾರುತನೊಡನೆ ಕೂಡುವ ಚಿತ್ರವನ್ನು ಆತ್ಮಧೇಯದಲ್ಲಾಗಲಿ ಅಥವಾ ನಾದದಲ್ಲಾಗಲಿ ತಲ್ಲೀನವನ್ನಾಗಿ ಮಾಡುವವರು ಲಯಯೋಗಿಗಳೆಂದೂ ಅಷ್ಟಾಂಗ ಮಾರ್ಗಗಳಿಂದಲೂ ಮುದ್ರಾಕರಣ ಬಂಧಗಳಿಂದಲೂ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿಗಳೆಂದೂ, ಮನೋವೃತ್ತಿ ಯಿಲ್ಲದವರೂ, ಜ್ಞಾನದಿಂದ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದವರೂ, ರಾಜ ಯೋಗಿಗಳೆಂದೂ, ೧೦ ಶಿವಜ್ಞಾನ, ಶಿವಭಕ್ತಿ ಮತ್ತು ಶಿವಧ್ಯಾನದಿಂದ ಕೂಡಿದ ಶಿವಾರ್ಚನೆಯನ್ನು ಮಾಡುವವರು ಶಿವಯೋಗಿಗಳೆಂದೂ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ಶಿವಯೋಗವೇ ಮಿಗಿಲಾದುದು. ಯದೃಪಿ ರಾಜ ಯೋಗಕ್ಕೂ ಶಿವಯೋಗಕ್ಕೂ, ನಿಜವಾಗಿ ಭೇದವಿಲ್ಲವೆಂದು ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಯ ಸಲುವಾಗಿ ಭೇದವು ಹೇಳಲ್ಪಟ್ಟಿದೆ ಎಂದು ಶಿವಯೋಗ ಪ್ರದೀಪಕಾರ ಮತ. ಆದರೆ ಪ್ರಭುದೇವರು ಕೆಳಗಿನ ವಚನದಿಂದ ಎರಡೂ ಯೋಗಗಳಲ್ಲಿ ಮಹದಂತರವಿದೆಯೆಂದು ವ್ಯಕ್ತವಾಗದೇ ಇರಲಾರದು,

ಅಷ್ಟಾಂಗಯೋಗದಲ್ಲಿ ಯಮನಿಯಮಾ ಆಸನ ಪ್ರಾಣಾಯಾನು ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂದು ಎರಡು ಯೋಗ ಉಂಟು,

ಅಲ್ಲಿ ಅಳಿದು ಕೂಡುವದೊಂದು ಯೋಗ, ಅಳಿಯದೇ ಕೂಡುವದೊಂದು ಯೋಗ,

ಈ ಎರಡೂ ಯೋಗದೊಳಗೆ ಅಳಿಯದೇ ಕೂಡುವ ಯೋಗವರಿದು ಕಾಣಾ ಗುಹೇಶ್ವರಾ?”

ಇಲ್ಲಿ ಅಳಿದುಕೂಡುವ ಯೋಗ ಮತ್ತು ಉಳಿದು ಕೊಡುವ ಯೋಗದ ಬಗ್ಗೆ ಸಂಕ್ಷಿಪ್ತವಾಗಿ ವಿವೇಚಿಸೋಣ. ಪತಂಜಲಿಯ ರಾಜಯೋಗವೇ ಅಳಿದು ಕೊಡುವ ಯೋಗ. ಅಲ್ಲಿದು ಕೂಡುವ ಯೋಗದಲ್ಲಿ ಬ್ರಹ್ಮಸಾಕ್ಷಾತ್‌ಕಾರವಾದ ನಂತರ ಜೀವದ ಅಸ್ತಿತ್ವವೇ ಉಳಿಯಲಾರದು. ಅರ್ಥಾತ್ ಮುಕ್ತಾವಸ್ಥೆಯಲ್ಲಿ ಜೀವನಿಗೆ ತನ್ನ ಸ್ವರೂಪದ ಬೋಧವು ಆಗಲಾರದು. ತನ್ನ ಸ್ವರೂಪದ ಬೋಧವಿಲ್ಲದ ಪರಬ್ರಹ್ಮ ಸಾಕ್ಷಾತ್ಕಾಕಾರ ಸಾಧನವಾದ ರಾಜಯೋಗವು- ಸರ್ವಶ್ರೇಷ್ಠಯೋಗವು ಆಗಬಹುದೆ ! ಕಾರಣ ಅಲ್ಲಮಪ್ರಭುದೇವರು ಈ ಯೋಗವನ್ನು ಖಂಡಿಸಿದ್ದಾರೆ.

ಉಳಿದು ಕೂಡುವ ಯೋಗವೇ ಶಿವಯೋಗ, ಶಿವಯೋಗದಲ್ಲಿ ಅಂಗನಿಗೆ ತನ್ನ ಸ್ವರೂಪದ ಬೋಧವು ಇರುತ್ತದೆ. ಕಾರಣ ಪ್ರಭುದೇವರು ಇದಕ್ಕೆ ಉಳಿದುಕೂಡುವ ಯೋಗವೆಂದು ಕರೆದಿದ್ದಾರೆ. ಶಿವಯೋಗದಲ್ಲಿ ಸಾಮರಸ್ಯಕ್ಕೆ ಅತಿಮಹತ್ವವಿದೆ. ಸಮಾನ ಅಸ್ತಿತ್ವಗಳಾದ ಎರಡರ (ಅಂಗ ಲಿಂಗ) ಹೊಂದಾಣಿಕೆಯೇ ಸಾಮರಸ್ಯ, ಸಾಮರಸ್ಯವು ಭಾವಗತ ಸಾಮರಸ್ಯ, ಜ್ಞಾನಗಳ ಸಾಮರಸ್ಯ, ಸ್ವರೂಪಗತ ಸಾಮರಸ್ಯ ವೆಂದು ಮೂರು ಪ್ರಕಾರವಾಗಿವೆ. ಹಲವಾರು ತಾಂತ್ರಿಕಯೋಗಗಳು ಜ್ಞಾನಗತ ಮತ್ತು ಭಾವಗತ ಸಾಮರಸ್ಯದಲ್ಲಿ ಇತಿಶ್ರೀಯನ್ನು ಹೊಂದಿದರೆ ಕೆಲವು ಶೈವಯೋಗ ಗಳು ಸ್ವರೂಪಗತ ಸಾಮರಸ್ಯದಲ್ಲಿ ಮುಕ್ತಾಯಗೊಳ್ಳುತ್ತವೆ. ಈ ಎಲ್ಲ ಯೋಗಗಳು ಅಪೂರ್ಣಗಳಾಗಿವೆ. ಉಪರೋಕ್ತ ಮೂರು ಪ್ರಕಾರದ ಸಾಮರಸ್ಯಗಳು ಶಿವಯೋಗ ದಲ್ಲಿ ಪ್ರಾಪ್ತವಾಗುತ್ತವೆ. ಈ ತ್ರಿವೇಣಿ ಸಂಗಮವು ಶಿವಯೋಗವನ್ನು ಬಿಟ್ಟು ಇನ್ನುಳಿದ ಯಾವ ಯೋಗದಲ್ಲಿಯೂ ಆಗಲು ಸಾಧ್ಯವಿಲ್ಲ, ಜೀವಸ್ವರೂಪದ ಕೇಂದ್ರಬಿಂದುವಿನಿಂದ ಸತ್ಯಾನ್ವೇಷಣ ಪ್ರಾರಂಭವಾಗಿ ಮನಃ ಅದೇ ಬಿಂದುವಿನಲ್ಲಿ ಸಮ ಸ್ವರೂಪ ವನ್ನು ಕಾಣುವದೇ ಪೂರ್ಣತತ್ವವೆನಿಸಿಕೊಳ್ಳುತ್ತದೆ, ಅಂಗಭವದಿಂದ ಲಿಂಗದ ಕಲೆಗಳನ್ನು ಭಕ್ತಗಳನ್ನು ಅಳವಡಿಸಿಕೊಂಡು ಅಂಗಗತಸ್ವರೂಪವನ್ನೇ ಲಿಂಗಗಳಸ್ವರೂಪವೆಂದು ಭಾವಿಸುವುದೇ ಪೂರ್ಣತ್ವ, ಇದುವೇ ಶಿವಯೋಗ ಇದುವೇ ಪರಮಯೋಗ.

ಶಿವಯೋಗದ ಪ್ರಾಚೀನತೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಗಮ ವಾಙ್ಮಯದಲ್ಲಿ ಶಿವಯೋಗ ಶಬ್ದದ ಪ್ರಯೋಗವು ಕಂಡುಬರುತ್ತದೆ. ಪ್ರಾಚೀನ ಶೈವಾಚಾರ್ಯರು ತಮ್ಮನ್ನು ಶಿವಯೋಗಿಗಳೆಂದು ಕರೆದುಕೊಂಡಿದ್ದಾರೆ. ಸೋಮಾ ನಂದನು ನಿರಂತರ ಶಿವಸಮಾವೇಶ ಭಾವದಲ್ಲಿ ಇರುವೆನೆಂದು ಹೇಳಿಕೊಂಡಿರುತ್ತಾನೆ. ಹಾಗೆ ಶಿವಯೋಗವು ಬಹುಪ್ರಾಚೀನದವರೆಗೆ ಹೋಗುತ್ತದೆ. ಆದರೆ ಮೊಟ್ಟಮೊದಲು ಅದರ ನಿಶ್ಚಿತ ರೂಪವನ್ನು ಸಿದ್ಧಾಂತಶಿಖಾಮಣಿ ಮತ್ತು ಶಿವಯೋಗ ಪ್ರದೀಪಿಕೆಯಲ್ಲಿ ಕಾಣುತ್ತೇವೆ.

ಯೋಗ ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ನಿರೂಪಿಸಲಾಯಿತು. ಇಂದು ಶಾಂತಮಯ ಜೀವನಕ್ಕಾಗಿ ಯೋಗವು ಅತ್ಯಾವಶ್ಯಕವಾಗಿವೆ. ಕೇವಲ ಭೌತಿಕ ಉನ್ನತಿಯಿಂದ ಜೀವನದಲ್ಲಿ ಪರಮಶಾಂತಿಯು ಸಿಗಲಾರದು. ಕಾರಣ ಯೋಗ ಕಲಿಸುವ ಶಾಲೆಗಳನ್ನು ನಮ್ಮ ಸಮಾಜದ ಧರ್ಮಗುರುಗಳು ಸ್ಥಾಪಿಸಬೇಕಾಗಿ ಸವಿನಯಪ್ರಾರ್ಥನೆ:

Related Posts