ಸದಾಶಿವ ಲೀಲೆ

ಕವಿರತ್ನ ದ್ಯಾಂಪುರ ಚನ್ನಕವಿಗಳು

ಶಾರ್ದೂಲ ವಿಕ್ರೀಡಿತ :

ಶ್ರೀಮನ್ನಿತ್ಯ ನಿರಂಜನ ಪ್ರಭು ಕುಲಾಂಭೋರಾಶಿ ರಾಕಾಸುಧಾ

ಧಾಮಂ ಧರ್ಮಸುಧಾರಕವ್ರಜಲಲಾಮಂ ದಿವ್ಯ ಶೀಲಾನ್ವಿತಂ

ಕಾಮಕ್ಲೇಶ ವಿಭಂಗನೂರ್ಜಿತ ಕೃಪಾಪಾಂಗಂ ಪ್ರಬೋಧಾಕರಂ

ಪ್ರೇಮಂದಾಳ್ಧೆನಗೀಗೆ ಭಕ್ತಿ ಪದಮಂ ನಿಚ್ಚಂ ಕುಮಾರೇಶ್ವರಂ    ||೧||

ಚಂಪಕಮಾಲಾ :

ಅನುಪಮ ಜಂಗಮಾಶ್ರಮಕೆ ಸಲ್ಲುವ ಲಾಂಛನವಾ ಪವಿತ್ರ ಲಾಂ

ಛನಕೊರೆಯಪ್ಪ ವರ್ತನಮದಕ್ಕೆಣೆಯಾಗುವ ಚಿತ್ತ ವೃತ್ತಿಯಾ

ಮನಸಿಗೆ ತಕ್ಕ ದಿವ್ಯ ಶಿವಲಿಂಗದ ಪೂಜೆಯದಕ್ಕೆ ಸಲ್ವ ಚಿ –

ದ್ಘನತರ ಶಾಂತಿ ನಿನ್ನೊಳೊಡಮೂಡಿದುದೈ ಜಗದೇಕನಾಯಕಾ     ||೨||

ಮತ್ತೇಭವಿಕ್ರೀಡಿತ :

ಘನದುಃಖಾನಲನಿಂದ ಬೇವ ಜನರಂ ಕಂಡಾತ್ಮದೊಳ್ಕಂದಿ ಸು-

ಮ್ಮನೆ ಗೋಳಾಡುವದೇತಕೆ ನೀವು ಶಿವಲಿಂಗಾರಾಧನಂ ಗೈಯಿರೈ

ಮನಮಂ ನೋಯಿಪ  ಕಷ್ಟಗಳ್ತೊಲಗಿ ತಾನೇ ಸೌಖ್ಯವೈತರ್ಪುದೆಂ –

ದನುವಿಂ ಬೋಧಿಸಿ ಕಾಯ್ದೆ ಕಕ್ಕುಲತೆಯಿಂ ಶ್ರೀಮತ್ಕುಮಾರೇಶ್ವರಾ     ||೩||

ಶಿವಲಿಂಗಾರ್ಚನೆಗೈದೆ ಮಾಣದೆ ಚಿದಾನಂದಾರ್ಥಮಿ ಪೂಜೆಯೇ

ಶಿವಯೋಗೋತ್ಸವಮೆಂದು ನಂಬಿ ಶಿವಭಾವಂ ಬೆತ್ತು ನೀನಾವಗಂ

ಕವಿದೀ ಕ್ಷುತ್ತೃಷೆಯಂ ನಿವಾರಿಪ ನಿಮಿತ್ತಂ ಪೂಜೆಯಂ ಮಾಡದೆ

ಶಿವಯೋಗೀಶ್ವರನೆಂದು ಕೀರ್ತಿವಡೆದೈ ಶ್ರೀಮತ್ಕುಮಾರೇಶ್ವರಾ    ||೪||

ಶಿವಲಿಂಗಾರ್ಚನೆ ರೋಗಕೌಷಧಮಿದೇ ಚಿಂತಾಲತಾಛೇದಕಂ

ಶಿವಲಿಂಗಾರ್ಚನೆ ಸರ್ವಸಿದ್ಧಿದಮಿದೇ ಸಾಯುಜ್ಯಭಾಗ್ಯಾಯನಂ

ಶಿವಲಿಂಗಾರ್ಚನೆ ಸತ್ಕೃತಾರ್ಥತೆಯಿದೇ ಸಂತೋಷ ಜನ್ಮಾಲಯಂ

ಶಿವಲಿಂಗಾರ್ಚನೆ ಗೈವುದಾಗಳೆನುತಂ ಪೇಳ್ದೈ ಕುಮಾರೇಶ್ವರಾ   ||೫||

 ನಿನ್ನಂತೆಮ್ಮಯ ಧರ್ಮದುನ್ನತಿಗೆ ಯತ್ನ೦ಗೈದರಾರ್ನ್ಯಾಯದಿಂ

ನಿನ್ನಂತೆಮ್ಮಭಿಮಾನದಗ್ಗಳಿಕೆಯಿಂದಾತ್ಮಾರ್ಪಣಂ ಗೈದರಾರ್

ನಿನ್ನಂ ಪೋಲ್ವ ಶಿವಾನುಭಾವಿಗಳದಾರ್ನೀನೇ ವಿರಕ್ತೋತ್ತಮಂ

ನಿನ್ನಿಂದಾದುದು ಮಂಗಲೋದಯಮೆಲೈ ಶ್ರೀಮತ್ಕುಮಾರೇಶ್ವರಾ     ||೬||

ಅನುರಾಗಂಮಿಗೆ ಚಿತ್ಕಲಾತ್ಮಕ ಮಹಾಲಿಂಗಾನುಸಂಧಾನದಿಂ

ದನಿಶಂ ಭಾಸುರಲಿಂಗವಾಗಿ ಪೊರೆದೈ ಸದ್ಧರ್ಮಮಂ ಯತ್ನದಿಂ

ನಿನಗಿನ್ನೆತ್ತಣ ಹುಟ್ಟು ಸಾವು ಮಲಮಾಯಾಮುಖ್ಯಪಾಶವ್ರಜಂ

ಘನಯೋಗಾಭ್ಯುದಯ ಪ್ರಭಾವವಿದು ಕೇಳ್ ಶ್ರೀಮತ್ಕುಮಾರೇಶ್ವರಾ    ||೭||

ಬೇಡುವದಲ್ಲ ಮಂದಿಯನು ಧರ್ಮಸುಧಾರಣೆಗಾಗಿ ದೇವರಂ

ಬೇಡುವದೊಳ್ಳಿತಾವನಿತು ಶಕ್ತಿ ಸಮನ್ವಿತರಲ್ಲ ಮಾಳ್ಪುದೇಂ

ನೀಡುವ ಜಂಗಮರ್ನರರ ಬೇಡುವದೆತ್ತಣ ಸುದ್ದಿಯೆಂದು ನೀ-

ನಾಡುತಲಿರ್ದೆ ಮುಚ್ಚಿಕೊಳದಾತ್ಮ ನಿರೀಕ್ಷಣೆಯಿಂ ಚರಾಧಿಪ    ||೮||

ನಿನ್ನಯ ಜನ್ಮವೇ ಜಗದೊಳಿಲ್ಲದನರ್ಘ್ಯ ಪವಿತ್ರ ಜನ್ಮವೈ

ನಿನ್ನಯ ಪುಣ್ಯ ಜೀವನವೆ ಧರ್ಮಸುಧಾರಣ ಭಾಗ್ಯ ಜೀವನಂ

ನಿನ್ನಮಲಪ್ರಯತ್ನವೆ ಮಹೇಶ ಮತೋತನ್ನತಿಯುತ್ ಪ್ರಯತ್ನವೈ

ನಿನ್ನಯ ಪೇರ್ಮೆಯಂ ಪಡೆವರಾರು ಧರಾತಲದೊಳ್ಚರಾಧಿಪ        ||೯||

ಎಮ್ಮ ಸಮಾಜವೆಂದಿಗೆ ಸುಧಾರಿಪುದಾವ ಮಹಾತ್ಮನಳ್ಕರಿಂ

ದೆಮ್ಮ ಸಮಾಜದೇಳ್ಗೆಯನು ಮಾಡುವನೈ ಸಿರಿವಿದ್ಯೆಯುದ್ಯಮಂ

ಎಮ್ಮ ಸಮಾಜದೊಳ್ಬೆಳೆಯಲಾವುದುಪಾಯಮದೆಂತು ಕಾಣ್ಬುದೋ   

ಎಮ್ಮ ಸಮಾಜಸೇವೆ ಕೃತಕೃತ್ಯತೆಯೆಂದು ನೆಗಳ್ದೆ ಜಂಗಮಾ    ||೧೦||

ನೀನೆ ದಯಾಳು ನಿನ್ನ ವಚನಂ ನಿಗಮಾಗಮದರ್ಥಸಾರವೈ

ನೀನೆ ವಿರಾಗಿ ನಿನ್ನತುಲ ಶೀಲವೆ ಸತ್ಪ್ರಮಥೇಂದ್ರ ಸಮ್ಮತಂ

ನೀನೆ ಗುಣಾಬ್ಧಿ ನಿನ್ನ ಮಲವೃತ್ತಿಯೆ ಲೋಕವಿತಾನಪಾವನಂ

ನೀನೆ ವಿಚಾರಿ ನಿನ್ನ ಸರಿಯಾರು ವಿರಾಟ್ಪುರದೀಶಯೋಗಿಯೆ     ||೧೧||

ಚಂಪಕಮಾಲಾ :

ಬೆಳಿಸುವಳೂಡಿ ಮಾತೆ ಮಗನಾವಗನಾತಗೆ ಪೇಳ್ದು ಬುದ್ಧಿಯಂ

ಕಲಿಸುವನಯ್ಯನೊಲ್ದು ಮಗನೆಂಬ ಮರುಂಕದೊಳನ್ಯ ಪುತ್ರರಂ

ಬಳೆಯಿಸಿ ಬುದ್ಧಿಗೊಟ್ಟು ಶಿವಯೋಗ ಸುಧಾರಸ ಪಾನದಿಂ ಕರಂ

ಸಲಹಿದೆ ನೀನೆ ಮಾತೆ ಪಿತರೈ ವಟು ವರ್ಗಕೆ ಯೋಗಿವಲ್ಲಭ     ||೧೨||

ವಿತತ ಶಿವಾನುಭವ ಸುಖಚರ್ಚೆಯ ನಿನ್ನಯ ವೃತ್ತಿಯಾಗಿ ಸ-

ನ್ನುತ ಶಿವಲಿಂಗದರ್ಚನೆಯ ಸುವ್ರತಮಾಗಿರುತಿರ್ದುಮೊಳ್ಪಿನಿಂ

ಮತಹಿತ ಕಾರ್ಯಮಂ ಬಿಡದೆ ನೀನದರೊಳ್ನೆರೆನೋಡಿ ಮಾಡಿದೈ

ಕ್ಷಿತಿಯೊಳು ನಿನ್ನ ಜಾಣ್ಮೆಯಿದು ಚಿದ್ಘನರೂಪ ಸದಾಶಿವಪ್ರಭು     ||೧೩||

ತ್ಪಲ ಮಾಲಾ :

ಕಾಯವಿಕಾರವಿಲ್ಲ ಮನದುಲ್ಬಣವಿಲ್ಲ ಮದಾಳಿಯಿಲ್ಲವಾ

ವಾಯುಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲವಾವಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ-

ಪಾಯಮದಿಲ್ಲ ನಿನ್ನೊಳೆ ಮಹಾಪ್ರಭುಲಿಂಗ ಕುಮಾರಯೋಗಿಯೆ     ||೧೪||

ನಿನ್ನಯ ಮೂರ್ತಿಯನ್ನೆರಡು ಕಣ್ಣೊಳು ಕಟ್ಟಿಹುದಾರ್ಯ ಚೆಲ್ವಿನಿಂ

ನಿನ್ನಯ ತತ್ವಪೂರಿತ ಮೃದೂಕ್ತಿಗಳೆನ್ನ ವಿಚಾರಭಾವದೊಳ್

ಸನ್ನುತ ಶಾಂತಿಯಂ ಕುಡುತಲಿರ್ಪುವು ನಿನ್ನಯ ರೀತಿನೀತಿಗಳ್

ನನ್ನಿಯೊಳೆನ್ನನೆಚ್ಚರಿಪವಾತ್ಮದೆ ನಿಂದು ಕುಮಾರಯೋಗಿಯೆ    ||೧೫||

ನಿನ್ನನು ಪಾಡುವೀರಸನೆ ನಿನ್ನದು ದೇವ ಮಹಾನುಭಾವ ಕೇ-

ಳ್ನಿನ್ನನು ಜಾನಿಪೀ ಮನವೆ ನಿನ್ನದು ನೋಡು ತ್ರಿತಾಪಲೋಪಕ

ನಿನ್ನಯ ರೂಪಮಂ ತಿಳಿವ ಮನ್ಮತಿ ನಿನ್ನದು ಲಿಂಗಭಾವವೇ

ನಿನ್ನದು ನಿನ್ನದಯ್ಯ ಕರುಣಾಳು ಕುಮಾರ ಮಹಾಯತೀಶ್ವರಾ    ||೧೬||

ಕಂದ :

ಪೂಜಾರ್ಪಣಾನುಭವಮಂ

ರಾಜಿತಶಿವಭಾವ ಪೂರ್ಣಮೆನೆ ಮಾಡುತ್ತಂ

ಓಜೆಮಿಗೆ ಬಾಳ್ದಯತಿಕುಲ

ರಾಜಂ ನೀನಲ್ತೆ ಯೋಗನಿಷ್ಠ ಕುಮಾರಾ    ||೧೭||

ಚರದೇವ ನಿನ್ನ ನಾಮಂ

ವರಮಂತ್ರಂ ನಿನ್ನ ರೂಪವೀಶ್ವರರೂಪಂ

ಪುರುಷಾರ್ಥಕಾರಣಂ ನಿ-

ನ್ನುರುತರ ಕರುಣಾಕಟಾಕ್ಷದೀಧಿತಿ ಯತಿಪ    ||೧೮||

ಚಂಪಕ ಮಾಲಾ

ಘನತರಮುಕ್ತಿಗಿಂದ ಸ್ವಸಮಾಜದ ಸೇವೆಯೆ ಶ್ರೇಷ್ಠವೆಂದು ನೀ-

ನನವರತಂ ಸಮರ್ಪಿಸಿದೆ ನಿನ್ನ ಸಮಾಜಕೆ ಸರ್ವ ವಸ್ತುವಂ

ಕೊನೆಯೊಳು ನಮ್ಮ ಧರ್ಮ ಸುಸಮಾಜ ಸಮಾಜ ಸಮಾಜವೆಂದು ಬ-

ಲ್ಕನವರಿಸುತ್ತಲಿರ್ದೆ ಶಿವಧರ್ಮ ಸಮಾಜದ ನೇಹಮೆಂತುಟೊ    ||೧೯||

 ಕಂದ :

ಜಯ ಪರತರಚಿತ್ಸುಖಮಯ

ಜಯಜಯ ನೀರಂಜನಾಲಮಾನ್ವದೇವ

ಜಯ ವೀರಶೈವ ಬಾಂಧವ

ಜಯಜಯ ಲಿಂಗಾಂಗ ಸಾಮರಸ್ಯ ರಸಜ್ಞ

ಶ್ರೀ ಚೆನ್ನಕವಿ

Related Posts