ಷಟ್‌ಸ್ಥಲ ಚಕ್ರವರ್ತಿ ಶ್ರೀ ಚನ್ನಬಸವರಾಜ ದೇವರು ನಿರೂಪಿಸಿದ

ಕರಣ ಹಸಿಗೆ ಅರ್ಥಾತ್ ದೇಹಾತ್ಮ ವಿಜ್ಞಾನ

ಲೇಖಕರು ಡಾ.ಸ. ಜ. ನಾಗಲೋಟಿಮಠ

MBBS.DCP.MD.FIC Path.

President Karnataka Rajya Vijnan Parishat.

Chairman Indian College of Pathologists

ಇದರಲ್ಲಿ ಚೆನ್ನಬಸವಣ್ಣನವರು ಹಲವಾರು ಸಂಗತಿಗಳನ್ನು ವಿವರಿಸಿದ್ದಾರೆ. ಜಗತ್ತಿನಲ್ಲಿ ಮೊಟ್ಟ ಮೊದಲು ಹುಟ್ಟಿದ್ದು ಪ್ರಣವ; ಅದು ಓಂಕಾರ. ಓಂಕಾರದಿಂದ ಜನ್ಮತಾಳಿದ್ದು ಎಂದರೆ ಪಂಚಮಹಾಭೂತಗಳು ಭಾರತೀಯರಾದ ನಾವು ಇದನ್ನು ನಂಬುತ್ತೇವೆ. ಪಂಚಮಹಾಭೂತಗಳೆಂದರೆ ಪೃಥ್ವಿ, ಅಪ್, ತೇಜ, ವಾಯು ಹಾಗೂ ಆಕಾಶ, ಈ ಪಂಚಭೂತಗಳನ್ನು ಬೇರೆ ದೇಶದವರು, ಸಂಸ್ಕೃತಿಯವರು ಮಾನ್ಯ ಮಾಡಿದಂತಿಲ್ಲ. ಈ ಸಂಗತಿಯನ್ನು ಭಾರತೀಯ ವಿಜ್ಞಾನಿಗಳು ಒರೆಗೆ ಹಚ್ಚಿ ಸ್ಪಷ್ಟ ಪಡಿಸಬೇಕು. ಜೀವ ಜಗತ್ತು ಹುಟ್ಟಿದುದು ಪಂಚಮಹಾಭೂತಗಳಿಂದ ಎಂದು ವರ್ಣಿಸುತ್ತೇವೆ. ಇದನ್ನೂ ಸಹ ಸಂಶೋಧಿಸಿ ಜಗತ್ತಿನ ವಿಜ್ಞಾನಿಗಳಿಗೆ ವಿವರಿಸಬೇಕು. ಓಂಕಾರವಾಗಲಿ, ಪಂಚ ಮಹಾಭೂತಗಳಾಗಿ ಸುಳ್ಳು ಎಂದು ಹೇಳಲು ಬರುವದಿಲ್ಲ. ಯಾಕಂದರೆ ಮುಂದೆ ವರ್ಣಿಸಲ್ಪಡುವ ಪಿಂಡಸ್ಥಲದಲ್ಲಿಯ ವಿವರಣೆ ಎಷ್ಟು ಖಚಿತವಾಗಿದೆ ಎಂದರೆ ಅಚ್ಚರಿ ಎನಿಸುತ್ತದೆ. ಬರಿಗಣ್ಣಿಗೆ ಕಾಣಲು ಸಾಧ್ಯವಿರದ ವಸ್ತುಗಳನ್ನು ಕರಾರುವಕ್ಕಾಗಿ ವರ್ಣಿಸಿದ್ದಾರೆ. ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಬೆಳವಣಿಗೆಯನ್ನು ದಿನದಿನಕ್ಕೆ ವಾರದಿಂದ ವಾರಕ್ಕೆ ವಿವರಿಸಿದ್ದಾರೆ. ಪ್ರಥಮ ದಿನದಿಂದ ಪ್ರಾರಂಭಿಸಿ ಪ್ರಸವವಾಗುವವರೆಗೆ ಸರಿಯಾಗಿ ವರ್ಣನೆ ಬರುತ್ತದೆ. ಇಂದಿನ ವೈದ್ಯಶಾಸ್ತ್ರದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. (ಈ ವಿವರಗಳು ನಮಗೆ ದೊರೆಯುವದು ವಿರುಪಾಕ್ಷ ಪಂಡಿತರು ಬರೆದ ಚೆನ್ನಬಸವ ಪುರಾಣದಲ್ಲಿ )ಈ ಸಂಗತಿಗಳು ನಮ್ಮ ಜನರಿಗೆ ತಿಳಿಯಲೆಂದು  ನಾನು ಕೆಲವು ಮೆಡಿಕಲ್ ಕಾಲೇಜುಗಳ ಪ್ರಸವ ವಿಭಾಗಗಳಲ್ಲಿ ಇವನ್ನು ಬರೆಸಿ ತೂಗುಬಿಟ್ಟಿದ್ದೆ.  ಗ್ರಂಥದಲ್ಲಿ ಹೇಳಲ್ಪಡುವ ವಿಷ್ಣುವಾಯು ಹಾಗೂ ಸೂತಿಕಾವಾಯುಗಳು ಸತ್ಯವೇ ? ಎಂಬುದು ಚರ್ಚಿಸಲ್ಪಡಬೇಕು. ಇದಾಗಿಲ್ಲ, ಇದೆಲ್ಲ ಜರುಗಬೇಕಾಗಿದೆ. ನಮ್ಮ ವೈದ್ಯವಿಜ್ಞಾನಿಗಳು ಸಂಶೋಧಿಸಬೇಕು. ಇನ್ನೂ ಮುಂದೆ ಹೋಗಿ ಕರಣ ಹಸಿಗೆಯಲ್ಲಿ ಸಂಭೋಗದ ವೇಳೆ ದಿನಗಳ ಆಧಾರದ ಮೇಲೆ ಹುಟ್ಟುವ ಕೂಸಿನಲ್ಲಿ ಗುಣಗಳು ಮೂಡುತ್ತವೆ ಎನ್ನುತ್ತಾ, ಹುಟ್ಟುವ ಮಗುವಿನ ಲಿಂಗ ನಿರ್ಣಯಿಸಲ್ಪಡುತ್ತದೆ ಎನ್ನುತ್ತಾರೆ. ಇಂಥ ಸಂಗತಿಗಳನ್ನು ನಾವು ವಿಚಾರಿಸಬೇಕು. ಗರ್ಭದಲ್ಲಿಯ ಕೂಸಿಗೆ ಕಿವಿ ಕೇಳುವದು ಎಂದಿನಿಂದ ಎಂಬ ಪ್ರಶ್ನೆಗೆ ಇಲ್ಲಿ ಸೂಚನೆ ಇದೆ. ನಾವು ಅದನ್ನು ನಿರ್ಲಕ್ಷಿಸಿ ಬಿಟ್ಟೆವು. ಈ ಸಂಗತಿಯನ್ನು ಖಚಿತಗೊಳಿಸಲು ಬ್ರಿಟೀಷ ವೈದ್ಯ ವಿಜ್ಞಾನಿಗಳು ಮಾನವ ಪ್ರಯೋಗಗಳನ್ನು ನಡೆಸಿದರು. ಆರು ತಿಂಗಳ ಗರ್ಭವಾದಾಗ ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳಿಸುತ್ತದೆ ಎಂದು ಜಗತ್ತಿಗೆ ತೋರಿಸಿದರು.    ಇಂಥ ಘಟನೆಗಳು ನಮ್ಮನ್ನು ಬಡಿದೆಬ್ಬಿಸಬೇಕಾಗಿದೆ. ಮೂಲ ಕರಣ ಹಸಿಗೆ ಓದಲು ಸುಲಭವೆನಿಸುತ್ತಿರಲಿಲ್ಲ. ಮುಂಡರಗಿಯ ಸನ್ನಿಧಿಯವರು ಈ  ಗ್ರಂಥವನ್ನು ಬರೆದು ವಿಜ್ಞಾನಿಗಳಿಗೆ ಸಂಶೋಧನೆಯ ಮಹಾದ್ವಾರವನ್ನೇ ತೆರೆದಿದ್ದಾರೆ. ಮುಂದಿನ ಕಾರ್ಯವನ್ನು ವೈದ್ಯರೂ ವಿಜ್ಞಾನಿಗಳೂ ಎತ್ತಿಕೊಳ್ಳಬೇಕು.

ಕರಣಹಸಿಗೆ ಕೇವಲ ಧರ್ಮ ಗ್ರಂಥವಲ್ಲ ಅದು ವೀರಶೈವರಿಗೆ ಅವರ ತತ್ವಗಳನ್ನು ತಿಳಿಸುವ ಗ್ರಂಥವಲ್ಲ. ಇದು ವೈಜ್ಞಾನಿಕ ಗ್ರಂಥ. ಇಡೀ ಜಗತ್ತಿನ ಜನರು ಪಠಣ ಮಾಡುವ ಗ್ರಂಥ ಸಂಶೋಧನೆಗಳ ಬೀಜಗಳಿಂದ ಕೂಡಿ ಇಟ್ಟಿರುವ ಕಣಜವಾಗಿದೆ.

ಈ ಪುಸ್ತಕವನ್ನು ವಿರಕ್ತಸ್ವಾಮಿಗಳ ಬೆನ್ನಿಗೆ ಕಟ್ಟುವ ಪದ್ಧತಿ ಇದೆ. ಅದನ್ನು ಮುಂದುವರೆಸುವದಲ್ಲದೆ ವೈದ್ಯವಿಜ್ಞಾನಿಗಳ ಬೆನ್ನಿಗೆ ಕಟ್ಟಬೇಕೆಂಬುದು ನನ್ನ ಅನಿಸಿಕೆ.

Related Posts