ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ಸಂಸ್ಕೃತಿ ಮತ್ತು ನಾಗರಿಕತೆ ಇವುಗಳ ಮುಖ್ಯ ಉದ್ದೇಶ ಮನುಷ್ಯನಿಗೆ ಸುಖ ಸಂತೋಷವನ್ನುಂಟು ಮಾಡುವುದು. ಮೇಲ್ನೋಟಕ್ಕೆ ಇವು ಒಂದೇ ಎಂಬಂತೆ ಕಂಡು ಬಂದರೂ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಿದಾಗ ಇವೆರಡರ ವ್ಯತ್ಯಾಸ ಕಂಡು ಬರುತ್ತದೆ. ಆದರೆ ಒಂದು ಇನ್ನೊಂದಕ್ಕೆ ಪೂರಕ ಎಂಬುದನ್ನು ಮಾತ್ರ ಮರೆಯಲಾಗದು. ಸಂಸ್ಕಾರ ಸಂಪನ್ನ ಜೀವನಕ್ಕೆ ನಾವು ಸಂಸ್ಕೃತಿ ಎಂದು ಕರೆಯುತ್ತೇವೆ. ಒಳ್ಳೆಯದನ್ನು ಬಯಸುವುದು, ಒಳ್ಳೆಯದನ್ನು ಪ್ರೀತಿಸುವುದು, ನುಡಿದಂತೆ ನಡೆಯುವುದು, ಶೀಲ ಚಾರಿತ್ರ್ಯಗಳನ್ನು ಹೊಂದುವುದು ಇವೇ ಮುಂತಾದ ಸಂಸ್ಕಾರಗಳು ಸಂಸ್ಕೃತಿಯ ಹೆಗ್ಗುರುತುಗಳು. ಇವು ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಉನ್ನತಿಗೆ ಸಹಕಾರಿಯಾಗಿವೆ. ತನ್ಮೂಲಕ ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗುತ್ತವೆ.

ಸಂಸ್ಕೃತಿ ಯಾವುದೇ ಜನಾಂಗ ಅಥವಾ ದೇಶದ ಆತ್ಮ, ಜನರ ಊಟ- ಉಪಚಾರ, ಉಡುಗೆ-ತೊಡುಗೆ, ಆಟ-ಪಾಠ, ನಡೆ-ನುಡಿ, ಧರ್ಮ-ಆತ್ಮಜ್ಞಾನ ಇವು ಅವರ ಬದುಕಿನ ಸಾರಸರ್ವಸ್ವ. ಅನೇಕ ಶತಮಾನಗಳಿಂದ ಆ ಜನಜೀವನ ನಡೆದು ಬಂದುದರ ಫಲಶೃತಿ ಇದು. ಇದನ್ನೇ ನಾವು ಸಂಸ್ಕೃತಿ ಎನ್ನುತ್ತೇವೆ. ಇದು ವ್ಯಕ್ತಿಗೆ ಸಂಸ್ಕಾರವನ್ನು ಕೊಡುವ ಶಕ್ತಿ. ಸಂಸ್ಕಾರ ಸಂಪನ್ನ ವ್ಯಕ್ತಿಗಳ ವಿಚಾರ, ಮಾತು ಮತ್ತು ಕೃತಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತದೆ. ವ್ಯಕ್ತಿಯ ಅಂತರಂಗದ ಜೀವರಸವಾಗಿರುವ ಸಂಸ್ಕೃತಿಯು ಅವನ ಧರ್ಮ, ದರ್ಶನ, ಸಾಹಿತ್ಯ, ಸಂಗೀತ, ಕಲೆ, ಶಿಲ್ಪ, ನೃತ್ಯ ಮುಂತಾದವುಗಳಲ್ಲಿ ನಿರಂತರ ಪ್ರವಹಿಸುತ್ತಿರುತ್ತದೆ.

 ನಾಗರಿಕತೆ ವ್ಯಕ್ತಿಯ ಬಹಿರಂಗ ಜೀವನಕ್ಕೆ ಸಂಬಂಧಿಸಿದೆ. ವಿಜ್ಞಾನ-ತಂತ್ರಜ್ಞಾನಗಳ ಪರಿಣಾಮವಾಗಿ ವ್ಯಕ್ತಿಯ ಜೀವನ ಇಂದು ಎಚ್ಚು ಸುಖಮಯವಾಗಿದೆ. ಲೌಕಿಕ ಸುಖ ಸೌಲಭ್ಯಗಳನ್ನು ಪಡೆಯುವ ಸಾಧನೆಗಳೆಲ್ಲವೂ ನಾಗರಿಕತೆಯ ಅಂಗ ಪ್ರತ್ಯಂಗಗಳು. ನಾಗರಿಕತೆ ಮುಖ್ಯತಃ ಪ್ರಯೋಜನಾತ್ಮಕವಾದುದು. ಅದು ವ್ಯಕ್ತಿಯ ಬಾಹ್ಯ ಹಾಗೂ ಭೌತಿಕ ವಿಕಾಸಕ್ಕೆ ಸಹಕಾರಿಯಾದುದು. ಆದರೆ ಸಂಸ್ಕೃತಿ ವ್ಯಕ್ತಿಯ ಆಂತರಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಾರಣವಾಗಿದೆ. ಅಂತೆಯೇ ಅದು ಆನಂದಾತ್ಮಕವಾದುದು.

 ಸಂಸ್ಕೃತಿ ಮತ್ತು ನಾಗರಿಕತೆಗಳೆರಡಕ್ಕೂ ವಿಶೇಷ ಸಂಬಂಧವಿದೆ. ಅದು ತುಪ್ಪದಲ್ಲಿರುವ ಕಂಪು, ಹೂವಿನಲ್ಲಿರುವ ಸುವಾಸನೆಯಂತಹ ಸಂಬಂಧ, ಸಂಸ್ಕೃತಿ ಆತ್ಮವೆನಿಸಿದರೆ ನಾಗರಿಕತೆ ದೇಹದಂತಿದೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು, ಪರಸ್ಪರ ಪ್ರಭಾವ ಬೀರುತ್ತ ಮುನ್ನಡೆಯುತ್ತವೆ. ನಾಗರಿಕತೆಗೆ ಬೆಲೆ ಬರುವುದು ಸಂಸ್ಕೃತಿಯ ಸ್ಪರ್ಶದಿಂದ, ಯಾವುದೇ ಜನಾಂಗ ಅಥವಾ ದೇಶ ಸಂಸ್ಕೃತಿಯ ಸ್ಪರ್ಶವಿಲ್ಲದೇ ನಾಗರಿಕತೆಯ ಬಗ್ಗೆ ಹೆಮ್ಮೆ ಪಡಲಾರದು. ಅಂಥ ಸಂಸ್ಕೃತಿಯನ್ನು ಅರಿತು ಆಚರಿಸುವ, ಸಮೃದ್ಧವಾಗಿ ಬೆಳೆಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಗ್ರಂಥಾಲಯ, ವಸ್ತುಸಂಗ್ರಹಾಲಯ, ಆರ್ಟ್‌ಗ್ಯಾಲರಿ ಮುಂತಾದವುಗಳನ್ನು ನಿರ್ಮಿಸಬೇಕು. ಸಂಸ್ಕೃತಿಯ ಸೊಬಗನ್ನು ಜನಗಳಿಗೆ ತಿಳಿಸುವ ನಿರಂತರ ಪ್ರಯತ್ನವೇ ಆಯಾ ಜನಾಂಗದ ಅಭಿವೃದ್ಧಿಯ ಹಾಗು ಚಲನಶೀಲತೆಯ ಪ್ರತೀಕ.

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು, ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇ ನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ  ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು. ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣ್ಮೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು. ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯು ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಚ-ನೀಚ, ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ಜ್ಞಾನಾಮೃತವನ್ನು ನೀಡಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ. ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣವಾಗಿ ಕಂಡದ್ದೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ಒಳಬೇನೆಯನ್ನರಿತು, ಅದರ ನಿವಾರಣೆಗೆ ಗುರು

ಜಂಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು; ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು. ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೂ ಅವರ ಲಕ್ಷ್ಯ ಹರಿದಿತ್ತು. ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮುಂದಿಡೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಫಲವಕ್ಕು ಸ್ವಾಮಿ ಕಾರ್ಯಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು. ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ! ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಸೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭಾವಿಸುತ್ತಿದ್ದರು. ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಏಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳುದೂ ಆಗಿದೆ. ಅವುಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು. ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ. ಇವೆರಡೂ ನಾಣ್ಯದ ಎರಡು ಮಗ್ಗುಲದಂತೆ ಇವೆ. ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು. ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಶ್ರೀಗಳವರ ಬುದ್ದಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ. ಅವರ ಪ್ರಬುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪುಟವಾಗಿ ನಿಲ್ಲುವುದು. ಲಿಂಗಾಯತ ಸಂಸ್ಕೃತಿಯ ಸಂಸ್ಥೆಗಳಲ್ಲಿ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ದಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ

ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ, ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನು ತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು; ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ಧಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ  ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

ಡಾ. ಎಸ್. ವಿ. ಅಯ್ಯನಗೌಡರ.

ಪೀಠಿಕೆ

ಕನ್ನಡ ಸಾಹಿತ್ಯದಲ್ಲಿ ವಿನೂತನ ಹಾಗೂ ಪ್ರಯೋಗ ಯುಗ ನಿರ್ಮಿಸಿದ ನಿರ್ಮಾತೃಗಳಲ್ಲಿ ಶಿವಶರಣರ ಹಿರಿಮೆ-ಅವರಿಂದ ರಚಿತವಾದ ಸಾಹಿತ್ಯದ ಹಿರಿಮೆ- ಮಹೋನ್ನತವಾದುದು. ಮನುಕುಲವು ಹೊಂದಬಹುದಾದ ಅತ್ಯುನ್ನತ ನಿಲುವನ್ನು ಹೊಂದಿದ ಶರಣರು ಮತ, ಕುಲ, ವರ್ಣ, ಜಾತಿ, ವಯಸ್ಸು ಅಂತಸ್ತುಗಳಲ್ಲಿ ಮೇಲು ಕೀಳೆನ್ನದೆ ಸರ್ವರೂ ಸಮಾನರು ಎಂಬ ಧೋರಣೆಯಿಂದ ಬದುಕಿ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವವನ್ನು ಎತ್ತಿ ಹಿಡಿದು, ಅದರಂತೆ ಮುಂದಿನವರು ಬದುಕಲೆಂಬಮಾರ್ಗ ನಿರ್ಮಿಸಿದವರು; ಅವರ ಮಾರ್ಗವೇ ಶರಣ ಮಾರ್ಗ- ಅನುಭಾವಮಾರ್ಗ- ಶಿವಮಾರ್ಗ-ಪ್ರಸಾದಮಾರ್ಗ. ಬಸವಾದಿ ಪ್ರಮಥರಿಂದ ಉದ್ದಂಡವಾಗಿ ಮುನ್ನಡೆಯುತ್ತಿರುವ ಈ ಪರಂಪರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪ್ರಶಿಷ್ಯರಲ್ಲಿ, ಷಣ್ಮುಖ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ ಮೊದಲಾದ ಕೈವಲ್ಯಕಾರರಲ್ಲಿ ಸಾಗಿ ಮೈಲಾರ ಶಿವಯೋಗಿ-ಮುಂತಾದವರ ಭಾವನೆಗಳಲ್ಲಿ ಪಸರಿಸಿ, ಇಂದಿನವರೆಗೂ ಹೆಜ್ಜೆಹಾಕುತ್ತಲಿದೆ. ಇಂಥ ಶರಣ-ಅನುಭಾವಿಗಳಿಂದ ರಚಿತವಾದ ಸಾಹಿತ್ಯ ಮೂರು ವಿಧದಲ್ಲಿ ಲಭ್ಯವಾಗುವುದು.

( ೧. ವಚನ ೨. ಸ್ವರವಚನ ೩. ಇತರ ಸಾಹಿತ್ಯ

೧. ವಚನ:

‘ವಚ’ (To speak) ಎಂಬ ಶಬ್ದದಿಂದ ನಿಷ್ಪನ್ನಗೊಂಡ ಈ ಪದ ಅನೇಕ ಸಂದರ್ಭಜನ್ಯವಾದ ಅರ್ಥವ್ಯಾಪ್ತಿ ಪಡೆದ ರಚನೆಯಾಗಿದೆ. ಭಾಷೆ-ರೂಪ- ಅನುಭಾವ-ನಡೆನುಡಿ, ಅಭಿವ್ಯಕ್ತಿ-ಆಣೆ (Oath), ಸೂಳ್ನುಡಿ ಮುಂತಾದ ಅರ್ಥವ್ಯಾಪ್ತಿಯಲ್ಲಿ ಬಳಕೆಗೊಂಡಿದೆ. ಚನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ವಚನ-ರಚನೆ-ಅನುಭಾವ ಕುರಿತು ವ್ಯಾಖ್ಯೆ ನೀಡಿದ್ದಾರೆ. ವಚನ ಎಂದರೆ ʼʼಆತ್ಮತೃಪ್ತಿಯ ನರಿಯ ಬಲ್ಲಡೆ ವಚನʼʼ ಎಂದು ಅರ್ಥೈಸಿದ್ದುಂಟು. ಕೆಲ ವಿದ್ವಾಂಸರು ಗುರುತಿಸಿದಂತೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಒಂದು ವಿಶಿಷ್ಟ ರೂಪ (Form) ಎಂದು ಹೇಳಿದ್ದಾರೆ. ಇನ್ನು ಕೆಲವೆಡೆ “ಶುದ್ಧ ನಡತೆಯವನ ನೇರ ನುಡಿʼʼ – ವಚನ ಎಂದು ಗುರುತಿಸಿರುವರು. ವಚನವನ್ನು ತ್ರಿಪದಿ, ಗೀತೆಗಳಿಗೂ ಅನ್ವಯಿಸಿ ʼʼಸರ್ವಜ್ಞನ ವಚನ (ತ್ರಿಪದಿ), ಷಡಕ್ಷರಿಯ ವಚನ, ಕೋಡೆಕಲ್ಲು ಬಸವಣ್ಣನ ವಚನ, ಗುರುಕರುಣ ತ್ರಿಪದಿ ವಚನ ಪ್ರಾರಂಭʼʼ ಎಂಬ ಪ್ರಯೋಗಗಳು ನಡೆ-ನುಡಿಯನ್ನೇ ಅತಿಕರಿಸಿಕೊಂಡವರ ಬದುಕು ಮತ್ತು ಅದರಿಂದ  ಅಭಿವ್ಯಕ್ತಗೊಂಡ ಸಾಹಿತ್ಯ ಎಂಬರ್ಥದಲ್ಲಿ ಬಳಸಿದುದು ಲಭ್ಯವಾಗುತ್ತದೆ. ‘ವಚನʼ ಎಂಬುದು ಗದ್ಯ ಪದ್ಯ ಮಾದರಿಗೆ, ನಡೆ-ನುಡಿಗೆ ಅಭಿವ್ಯಕ್ತಿಗೆ, ಸಾಹಿತ್ಯದ ಭಾಷೆ-ರೂಪಗಳಿಗೆ, ಚಳುವಳಿಗೆ ಅನ್ವಯವಾಗುವುದು. ವಿವಿಧ ಶಿವಶರಣ-ಶರಣೆಯರು ಬಿಡಿಬಿಡಿಯಾದ ಮುಕ್ತಕಗಳನ್ನು ತಮ್ಮ ತಮ್ಮ ಆರಾಧ್ಯ ದೈವದ ಅಂಕಿತದೊಂದಿಗೆ ಮುಕ್ತ ಛಂದಸ್ಸಿನಲ್ಲಿ ರಚಿಸಿದ ಕೃತಿಗಳೇ ಈ ವಚನಗಳು. ಅವರ ಆತ್ಮ ಮಥನದಿಂದ ಅನುಭಾವದಿಂದ ಹೊರಹೊಮ್ಮಿದ ಸಾಹಿತ್ಯವಿದು. ಆರಂಭದ ಜೇಡರ ದಾಸಿಮಯ್ಯನ ವಚನಗಳು ಕಿರಿದಾಗಿದ್ದು ತ್ರಿಪದಿಯಂತಿರುವುದನ್ನು ವಿದ್ವಾಂಸರು ಗುರುತಿಸಿದುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ವಚನಗಳು ಸರಳ-ಬೆಡಗು ಶಾಸ್ತ್ರವಚನಗಳನ್ನು ಪ್ರತಿನಿಧಿಸುವ ವಿವಿಧ ಪ್ರಕಾರಗಳಾಗಿ ಗುರುತಿಸಲ್ಪಡುತ್ತವೆ.

೨. ಸ್ವರವಚನ

ಕನ್ನಡ ಸಾಹಿತ್ಯವು ಅನೇಕ ಹೊಸ ಪರಿಭಾಷೆಗಳನ್ನು ಹೊತ್ತು ಬಂದಿದೆ, ಬರುತ್ತಲಿದೆ. ಅಂಥವುಗಳಲ್ಲಿ ‘ಸ್ವರವಚನ ಪರಿಭಾಷೆ ಒಂದಾಗಿದೆ. ಕನ್ನಡ ಸಾಹಿತ್ಯದ ಅಪ್ರಕಟಿತ-ಪ್ರಕಟಿತ ಸಾಹಿತ್ಯದ ಹುಲುಸಾದ ಜನಪದ ಸಾಹಿತ್ಯಪ್ರಕಾರ ಸ್ವರವಚನ ಸಾಹಿತ್ಯ. ಇದು ‘ಗೀತ’ ‘ಹಾಡು’ ‘ಪದ’ ಎಂಬ ಪದಗಳಿಗೆ ಪರ್ಯಾಯವಾಚಿಯಾಗಿ ಬಳಕೆಗೊಳ್ಳುತ್ತ ಆಯಾ ಕಾಲಘಟ್ಟದ ಸಂದರ್ಭಗಳಲ್ಲಿ ನಾಮ ನಿರ್ದೇಶನದಿಂದ ಬಳಕೆಗೊಂಡಿದೆ. ‘ಸ್ವರವಚನ’ ‘ಸ್ವರಪದ’ ‘ಪದ ವಚನ’ ‘ವಚನದ ಪದಂಗಳು ʼಬೆಡಗಿನ ಸ್ವರ ಪದಂಗಳು’, ‘ಸ್ಥಲ ನಿರ್ದೇಶನ ಪದ’- ಎಂಬಂಥ ಸಂದರ್ಭ ಜನ್ಯ ಪದಗಳು ವಿವಿಧ ಸಂದರ್ಭಗಳಲ್ಲಿ, ವಿವಿಧ ಸ್ವರವಚನಕಾರರಿಂದ ಅಭಿವ್ಯಕ್ತಗೊಂಡು ಜನಪ್ರಿಯ ಸಾಹಿತ್ಯಪ್ರಕಾರವಾಗಿ ಬೆಳೆದು ನಿಂತಿದೆ. ಭಾಷೆ ಮತ್ತು ಗೇಯ ಮಾಧ್ಯಮಗಳೇ ಪ್ರಮುಖ ಗುರಿಯಾದ ಇವನ್ನು ಶರಣರು -ದಾಸರು (ಕೀರ್ತನೆ) ಕೈವಲ್ಯಕಾರರು-ಅನುಭಾವಿಗಳು-ಮುಂತಾದ ವಾಗ್ಮೇಯಕಾರರು ಇವುಗಳ ವಾಹಕರಾಗಿ ನಿಂತಿದ್ದಾರೆ. ಮುಂದೆ ಬಂದ ಸಂಕಲನ ಸಂಪಾದನಾಕಾರರು ವಿವಿಧ ಸ್ವರವಚನಕಾರರ ಪದಗಳನ್ನು ಬಳಸಿಕೊಂಡಿದ್ದಾರೆ; ಟೀಕೆ ಬರೆದು ಅರ್ಥೈಸಿದ್ದಾರೆ. ತತ್ವಪದಕಾರರು- ಕೈವಲ್ಯಕಾರರು- ವಾಗ್ಮೇಯಕಾರರು -ಸ್ವರವಚನಕಾರರು-ಕೀರ್ತನಕಾರರು ಅವರನ್ನು ಗುರುತಿಸಿ, ಶತಮಾನಗಳಡಿಯಲ್ಲಿ ವಿಭಜಿಸಿ ಅಧ್ಯಯನ ನಡೆಸಿದ್ದು ನಡೆಸುತ್ತಿರುವುದು ಗಮನಾರ್ಹ ಸಂಗತಿಗಳಾಗಿವೆ. ಇಂಥ ಸ್ವರವಚನ ಸಾಹಿತ್ಯದ ಲಕ್ಷಣ-ಸ್ವರೂಪ- ಉದ್ದೇಶ-ಆಶಯಗಳನ್ನು ಹೀಗೆ ಗುರುತಿಸಬಹುದು:

  1. ʼಸ್ವರವಚನ’ ಎಂದರೆ ನಾಲ್ಕಡಿಗಳಿಂದ ಒಪ್ಪಲ್ಪಟ್ಟ ವಚನಂಗಳು ಎಂದು ನೂರೊಂದು ಸ್ಥಲ ಟೀಕೆಯಲ್ಲಿ ಟೀಕಾರ್ಥ ಬರೆಯುತ್ತಾನೆ- ಶ್ರೀ ಗಿರೀಂದ್ರ. ಪ್ರತಿಯೊಂದು ಪದಗಳ ತಲೆಬರಹದಡಿಯಲ್ಲಿ ರಾಗ-ತಾಳಗಳ ನಿರ್ದೇಶನಗಳಿವೆ (ಕೆಲವು ಹಾಡುಗಳಿಗೆ ವಿರಳವಾಗಿ ತಾಳ ನಿರ್ದೇಶನ ಉಂಟು) ಪ್ರಾದೇಶಿಕ ವಿಭಿನ್ನತೆಯಲ್ಲಿ ವಿವಿಧ ತಾಳ ನಿರ್ದೇಶನಗಳು ಒಂದೇ ಹಾಡಿಗೆ ಲಭ್ಯ . ಉದಾಹರಣೆಗೆ ತಾಳ-ರೂಪಕ-ಎಂದಿದ್ದ ಒಂದೇ ಹಾಡಿಗೆ ಪರಾಯವಾಗಿ ಝಂಪೆ, ಅಟ್ಟಹಾಸ ಎಂದು ಸೂಚಿಸಿದ ಉದಾಹರಣೆಗಳಿವೆ.
  2. ಸ್ವರವಚನಗಳು ಪಲ್ಲವಿ ಅನುಪಲ್ಲವಿಯಿಂದ ಕೂಡಿವೆ. ಶ್ರೀ ಗಿರೀಂದ್ರ ‘ಪಲ್ಲವಿ’ ಎಂಬ ಪದಕ್ಕೆ ʼʼಮುಂದೆ ಬಹ ಪದಗಳ ಅರ್ಥಾಭಿಪ್ರಾಯಂಗಳನ್ನು ಪದಾಂತ್ಯ ಪರಿಯಂತರ ಸೂಚನಾರ್ಥವಾಗಿ ವೊಳಕೊಂಡೊಪ್ಪುವದೀಗ ಪಲ್ಲವ’ ಎಂದು ಅರ್ಥೈಸಿದ್ದುಂಟು. ಈ ‘ಪಲ್ಲವಿ’ ಗಳಿಗೆ ಒಂದು ಸಾಲಿನಿಂದ ನಾಲೈದು ಸಾಲುಗಳವರೆಗೆ ವ್ಯಾಪ್ತಿ ಇದೆ. ಎರಡು ಚರಣಗಳ ಪಲ್ಲವಿ ಬೆಳೆವ ವೃಕ್ಷವನ್ನು ಗರ್ಭಿಕರಿಸಿಕೊಂಡಿರುವಂತೆ ಸಮಗ್ರ ಪದ್ಯದ ಭಾವವನ್ನು ಹುದುಗಿಸಿಕೊಂಡಿದೆ.
  • ಹಾಡಿನ ಕೊನೆಯಲ್ಲಿ ಅಂಕಿತ ರೂಪದ ಮುದ್ರಿಕೆ ಇರುವುದು ಉದಾ: ಸೋಮನಾಥ, ಗುಹೇಶ್ವರ, ಚನ್ನಮಲ್ಲಿಕಾರ್ಜುನ-ಚೆನ್ನವೀರ ಇತ್ಯಾದಿ ೫ ಕನಿಷ್ಟ ಮೂರು ನುಡಿಯಿಂದ ೩೦-೩೫ ನುಡಿಗಳವರೆಗೆ (ಕೆಲವೆಡೆ ಮಿಕ್ಕಿ) ಒಂದೊಂದು ಪದ್ಯದ ವ್ಯಾಪ್ತಿ ಇದೆ.
  • ಪ್ರಾಚೀನ ಸ್ವರವಚನವಾದ (ಲಭ್ಯ) ಸಕಳೇಶ ಮಾದರಸನ ಸ್ವರ ವಚನ ರಾಗ-ಶಂಕರಾಭರಣದಿಂದ ಕೂಡಿದ್ದು ಅದರಲ್ಲಿ ʼʼಕೈವಲ್ಯಕ್ಕೆ ದೃಷ್ಟವಾದ ಹೆಮ್ಮರನೇ..ʼ’ ಎಂಬ ಪದ ಪ್ರಯೋಗಗೊಂಡಿದ್ದು ಕೈವಲ್ಯ ಸಾಹಿತ್ಯದ ಮೂಲಕ್ಕೆ ಇದು ಪ್ರಚೋದನೆ ನೀಡಿದಂತಿದೆ.
  • ಷಟ್ಪದಿಯಲ್ಲಿ ರಚನೆಗೊಂಡ ಸ್ವರವಚನಗಳ ಆರಂಭದಲ್ಲಿ ಪಲ್ಲವಿಯ ಬದಲಾಗಿ ʼʼಸೂಚನೆʼʼ ಎಂಬ ಪ್ರಯೋಗ ಬಳಕೆಗೊಂಡಿದೆ.
  • .ಶಿವದಾಸರ ಗೀತೆಗಳು-ಹರಿದಾಸರ ಕೀರ್ತನೆಗಳು-ಕೈವಲ್ಯಕಾರರ ಪದಗಳು ಸ್ವರವಚನದ ಬೆಳವಣಿಗೆಯ ಘಟ್ಟದ ವಿವಿಧ ಮುಖಗಳಾಗಿವೆ.
  • ಶರಣರ ಪದಗಳು ಕನ್ನಡದ ಮೊದಲ ಕೀರ್ತನೆಗಳು,
  • ಸ್ವರವಚನಗಳಲ್ಲಿ ಅನುಕರಣೆ ಕಂಡುಬರುವುದು.
  • .ಮಾತ್ರಾ ಛಂದಸ್ಸು ಅಂಶಛಂದಸ್ಸುಗಳ ಮಿಶ್ರಣದಿಂದ ಕೂಡಿದ ಇವು ದೇಸಿ ಸಾಹಿತ್ಯದ ಛಂದೋರೂಪಗಳಾದ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ, ಕಿರುಸೀಸ-ಬಳಸಿಕೊಂಡಿವೆ. ಉತ್ಸಾಹ-ಮಂದಾನಿಲ-ಲಲಿತ ಲಯಗಳನ್ನು ದುಡಿಸಿಕೊಂಡುದುಂಟು.
  • ವೃತ್ತಶ್ಲೋಕ-ಕಂದ ಮಾದರಿಗಳು ಚೌಪದಿಯಲ್ಲಿದ್ದು ಗಣಪರಿವೃತ್ತಿ ಅವುಗಳಲ್ಲಿ ಕಾಣುವುದು.
  •  ಬೆಡಗಿನ ಸ್ವರಪದಗಳು, ಕಾಲಜ್ಞಾನ, ಕಾರಣಿಕ, ಕಣಿ ಸ್ವರೂಪಗಳಲ್ಲಿಯೂ ಲಭ್ಯ,
  •  ಕೆಲವು ಸ್ವರವಚನ ಕೃತಿಗಳು ವಿವಿಧ ಸ್ಥಲಗಳಡಿಯಲ್ಲಿ ವಿಭಜನೆಗೊಂಡಿವೆ.
  •  ಸಾಹಿತ್ಯ- ಸಂಗೀತ-ತತ್ತ್ವಗಳ ಮುಪ್ಪರಿಯಿಂದ ಕೂಡಿಕೊಂಡಿವೆ.
  • ಅನೇಕ ಜಾನಪದ ಸಾಹಿತ್ಯ ಪ್ರಕಾರಗಳು, ಸ್ವರವಚನಗಳ ಮೂಲಕ ಸಾಹಿತ್ಯ ವೇದಿಕೆಯನ್ನೇರಿವೆ. ಉದಾ:- ಪರಾಕು, ಲಾಲಿಕಣಿ ಚಂದಮಾಮ, ಕೋಲುಪದ, ಹೋಳಿಪದ, ದುಂದುಮೆ, ಬುಡಬುಡಕ್ಯಾ ಮುಂತಾದವು.
  •  ಸ್ವರವಚನಗಳನ್ನು ಸ್ತುತಿ-ಪೂಜೆ-ಗೋಷ್ಠಿ ಸಂದರ್ಭಗಳಲ್ಲಿ ಹಾಡುತ್ತಲಿದ್ದ ಉಲ್ಲೇಖವಿದೆ.
  • ಭಜನೆ-ಸಭೆ-ಸಮಾರಂಭಗಳಲ್ಲಿ-ಮಠಮಾನ್ಯಗಳಲ್ಲಿ ಇವು ಜನಸಮೂಹದಲ್ಲಿ ಹೆಚ್ಚು ಪ್ರಚುರತೆ ಪಡೆದಿವೆ.
  •  ಪ್ರಾಸ, ಅನುಪ್ರಾಸಗಳ ಜೋಡಣೆ ಇವುಗಳಲ್ಲಿದೆ.
  • .ಕೀರ್ತನೆ, ಸ್ವರಪದ, ಸ್ವರವಚನಗಳು ಕರ್ನಾಟಕ ಸಂಗೀತದ ಪ್ರತಿನಿಧಿಗಳಾಗಿವೆ; ಗಮಕ ಮತ್ತು ಪ್ರವಚನಕ್ಕೆ ಸಹಕಾರಿಗಳು.
  1.  ನೀತಿಬೋಧೆ-ತತ್ವನಿರೂಪಣೆ ಇವುಗಳ ಪ್ರಮುಖ ಗುರಿ.
  2.  ಹಾಡುಗಬ್ಬಗಳೆಂದು ಪ್ರಸಿದ್ಧಿಪಡೆದ ಇವು ಜಾತಿ-ಭೇದವಿಲ್ಲದೆ ಜನಸಾಮಾನ್ಯರನ್ನೂ ವ್ಯಾಪಿಸಿದ ಸಾಹಿತ್ಯ ಪ್ರಕಾರಗಳಾಗಿವೆ.
  3. ಗಾಯಕ- ಶ್ರಾವಕರ ಚಿತ್ಛಲಕದಲ್ಲಿ ವಸ್ತು ತತ್ವ್ತಾರ್ಥ ಚಿರಸ್ಥಾಯಿಗೊಳ್ಳುವವು.

ಇತರ ಸಾಹಿತ್ಯ:

ವಚನ- ಸ್ವರವಚನಗಳಲ್ಲದೆ ಮಂತ್ರಗೋಪ್ಯ, ದಂಡಕ, ಬೊಲ್ಲಿ ಅಷ್ಟಕ, ತಾರಾವಳಿ, ಮಿಶ್ರಾರ್ಪಣ, ಕರಣಹಸಿಗೆ, ಉಯ್ಯಾಲೆ, ಶತಕ, ತ್ರಿಪದಿ, ಪೀಠಿಕೆ, ನಾಂದ್ಯ- ಮೊದಲಾದ ಪರಿಭಾಷೆಗಳು ಶರಣರ ಕೃತಿಗಳಲ್ಲಿ ಬಳಕೆಗೊಂಡು ಶರಣ ಸಾಹಿತ್ಯದ

ವೈಶಾಲ್ಯತೆಗೆ ವೈವಿಧ್ಯತೆಗೆ ಕಾರಣಗಳಾಗಿವೆ.

ಹೀಗೆ ವಚನ- ಸ್ವರವಚನ- ಇತರ ಸಾಹಿತ್ಯ ಪ್ರಕಾರದಲ್ಲಿ ಮೈದೋರಿದ ಶರಣ ಸಾಹಿತ್ಯ ಅನುಭಾವ ಗೋಷ್ಠಿಗಳ ಮೂಲಕ ಹೊರಹೊಮ್ಮಿದೆ. ಭಾವೈಕ್ಯತೆಗೆ ಸಹಕಾರಿಯಾಗಿ ನಿಂತ ಈ ಸಾಹಿತ್ಯದ ಹರವು ಹಲವಾರು ಮಹಾಪ್ರಬಂಧಗಳ ಅಧ್ಯಯನಕ್ಕೆ ಸ್ವರವಚನ ಪರಿಭಾಷಾ ಕೋಶಗಳ ಸಿದ್ಧತೆಗೆ ವಸ್ತುವಾಗಬಲ್ಲ ಸಾಮರ್ಥ್ಯ ಹೊಂದಿದೆ. ಸ್ವರವಚನ ಸಾಹಿತ್ಯವು ಬಿಡಿಬಿಡಿ ಸ್ವರವಚನಗಳಲ್ಲಿ ಸ್ವತಂತ್ರ ಕೃತಿಗಳಲ್ಲಿ ಸಂಪಾದನಾ- ಸಂಕಲನ ಕೃತಿಗಳಲ್ಲಿ ಲಭ್ಯವಾಗುತ್ತವೆ.

೧೨ನೆಯ ಶತಮಾನದಲ್ಲಿ ಸಕಲೇಶ ಮಾದರಸ, ಸೊಡ್ಡಳ ಬಾಚರಸ, ಬಸವ, ಅಲ್ಲಮ, ಚನ್ನಬಸವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ಆದಯ್ಯ, ಅಕ್ಕಮಹಾದೇವಿ, ನೀಲಮ್ಮ ಮೊದಲಾದವರ ಸ್ವರವಚನ ಲಭ್ಯವಾದರೆ, ಹರಿಹರ-ರಾಘವಾಂಕರಲ್ಲಿ ಅವುಗಳನ್ನು ಹಾಡುತ್ತಿದ್ದ ಸಂದರ್ಭಜನ್ಯವಾಗಿ ಬಳಸುತ್ತಿದ್ದ ಕ್ರಮವನ್ನು ಸೂಚಿಸಿರುವುದುಂಟು. ೧೫ನೆಯ ಶತಮಾನದಿಂದ ಮುಂದೆ ಕರಸ್ಥಲದ ನಾಗಿದೇವ-ಗುರುಬಸವ ಗುರುಪುರದ ಮಲ್ಲಯ್ಯ-ನಿಜಗುಣ ಶಿವಯೋಗಿ ಕೆಸ್ತೂರದೇವ ಮುಪ್ಪಿನ ಷಡಕ್ಷರಿ- ಸರ್ಪಭೂಷಣ ಶಿವಯೋಗಿ- ಬಾಲಲೀಲಾ ಮಹಂತ ಶಿವಯೋಗಿ- ಘನಮಠಾರ್ಯ- ರಥೋದ್ಧರಣೆಯ ಸಂಗನ ಬಸವೇಶ್ವರ- ಮೈಲಾರ ಬಸವಲಿಂಗ ಶರಣ- ಮುಂತಾದವರಲ್ಲಿ ಸ್ಥಲ ನಿರ್ದೆಶನ, ಸ್ಥಲ ನಿರ್ದೇಶನವಿಲ್ಲದೆ ಒಂದೊಂದು ಕೃತಿಯಲ್ಲಿ ಲಭ್ಯವಾಗಿ ಸ್ವರವಚನ ಸಾಹಿತ್ಯದ ಸುಗ್ಗಿಯ ಹಿಗ್ಗನ್ನೇ ಒದಗಿಸಿ, ಅದರ ಹುಲುಸಿಗೆ ಸಾಕ್ಷಿಗಳಾಗುತ್ತವೆ. ಮುಂದೆ ಬಂದ ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳಪ್ಪ ಶಿವಯೋಗಿ, ಕರಿವೃಷಭೇಂದ್ರರು, ಶಿಶುನಾಳ ಶರೀಫ ಶಿವಯೋಗಿ, ಮುಂತಾದ ಅನುಭಾವಿಗಳಲ್ಲಿ ಸ್ಪಂದಿಸಿ ಹೊರಹೊಮ್ಮಿದೆ. ಜೊತೆ ಜೊತೆಯಲ್ಲಿ ಹರಿದಾಸರ ಕೀರ್ತನೆಗಳಿಗೆ ಪ್ರಚೋದನೆ ನೀಡಿದೆ. ಸ್ವರ ಏಕೋತ್ತರ ಶತಸ್ಥಲ, ಶೂನ್ಯಸಂಪಾದನೆ ಗ್ರಂಥದ ಸಂಕಲನಕಾರರಿಗೆ ಆಕರ ಸಾಮಗ್ರಿಯಾಗಿ ನಿಂತಿದೆ. ವಚನ ಸ್ವರವಚನ-ಇತರ ಸಾಹಿತ್ಯ ರಚನೆಯ ಮೈಲಾರ ಬಸವಲಿಂಗ ಶರಣರಿಗೆ ವೀರಶೈವ ತತ್ವ್ತಾಚರಣೆಯನ್ನು ಪರಿಶುದ್ಧವಾಗಿ ನಿರೂಪಿಸುವ ಅವರ ಜೀವನ ಕೃತಿಗಳ ಅವಲೋಕನವನ್ನು ಲಭ್ಯ ಸಾಹಿತ್ಯದ ಆಧಾರದಲ್ಲಿ ಹಿಂದೆ ಸೂಚಿಸಿದ ವಚನ- ಸ್ವರವಚನ- ಇವರ ಸಾಹಿತ್ಯ ಪ್ರಕಾರಗಳ ಹಿನ್ನೆಲೆಯಲ್ಲಿ ಅವಲೋಕಿಸುತ್ತ ಅವರ ಕೊಡುಗೆ ಏನೆಂಬುದನ್ನು ಬೆಲೆಕಟ್ಟಬಹುದು.

ಮೈಲಾರ ಬಸವಲಿಂಗ ಶರಣರು ಎಂದ ಕೂಡಲೇ ನಮ್ಮೆದುರು ಬಂದು ನಿಲ್ಲುವುದು. ಅವರು ಶರಣರಾಗಲು ಅವರಿಗಿದ್ದ ಪರಿಸರ ಎಂಥದು? ಯಾವ ಶಿವಾನುಭವ ಗರಡಿಯಲ್ಲಿ ಗುರುಗಳಲ್ಲಿ ತಯಾರಾದವರು ಎಂಬುದು. ಆ ಗರಡಿಯೇ (ಕೇಂದ್ರವೇ) ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಪರಿಸರದಲ್ಲಿ ಮೈವೆತ್ತು ನಿಂತ. ಹಾಲವರ್ತಿ ಚೆನ್ನವೀರರ ಗುರುಕುಲದ ಶಿವಾನುಭವ ಕೇಂದ್ರದ ದೃಶ್ಯ. ಈ ಕೇಂದ್ರದ ಚಾಲಕರಾದ ಗುರು ಚೆನ್ನವೀರರು ʼʼಪರತತ್ತ್ವಮೂರ್ತಿ ನಿಜದಿರವೆ ರೂಪಾಗಿ ಧರೆಯೊಳಗೆ ಚರಿಸಿ, ಮೆಟ್ಟಿದ ಧರೆ ಸುಕ್ಷೇತ್ರವೆನಿಸಿ,  ಜಲವ ಪಾವನ ತೀರ್ಥವಾಗಿಸಿ, ಜೀವಚರಗಳೊಳಗೆ ಆವನಾದೊಡೆ ಅವನ ಕೈವಿಡಿದು ಪಾವನಾತ್ಮಕವಾಗಿಸುವ ಉದ್ದೇಶ ಹೊತ್ತು ಬಂದವರು. ಲಿಂಗನಾಯಕನಹಳ್ಳಿಯ ಶಿವಾನುಭವ ಕೇಂದ್ರದ ರೂವಾರಿಗಳಾಗಿದ್ದ ಚೆನ್ನವೀರರು ಸೋಮಶೇಖರ ದೊರೆ ಅವನರಸಿ ಬಸವಮ್ಮಾಜಿಯರನ್ನು, ಹರವಿ ಪುಂಗ ಪುರಾಣ ಮಠದಯ್ಯನಂಥವರನ್ನು, ಹರಚರ ಗುರು ಮೂರ್ತಿಗಳನ್ನು ಮೂರ್ತಗೊಳಿಸಿದ ಚಿತ್ರ. ಹಾಗೆಯೇ ಅವರಿಂದ ದೀಕ್ಷಿತರಾಗಿ ಲಿಂಗಮೂರ್ತಿಗಳಾಗಿ ಹೊರಬಂದ- ಬಾಲಲೀಲಾ ಮಹಾಂತ ಶಿವಯೋಗಿಗಳು, ಹೊಳಲು ಲಿಂಗಪ್ಪ ಶರಣರು, ಬನ್ನಿಮಟ್ಟಿ ಚೆನ್ನಪ್ಪನವರು, ಶಾಂತವೀರರು, ರಾಚೋಟಿ ಸ್ವಾಮಿಗಳು-ಇನ್ನೂ ಅನೇಕರು ಇವರ ಪರುಷ ಸದೃಶ   ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಕೃಪಾವಲಯದಲ್ಲಿ ಬೆಳೆದು ನಾಡಿನುದ್ದಗಲಕ್ಕೂ ಅವರ ಪ್ರಭಾವ ಬೀರಿದವರು. ಇವರಲ್ಲಿ ಮೈಲಾರ ಬಸವಲಿಂಗ ಶರಣರೂ ಒಬ್ಬರೆಂಬುದನ್ನು ಮರೆಯುವಂತಿಲ್ಲ.  

ಬಸವಲಿಂಗ ಶರಣರು -ಬದುಕು:

ಕನ್ನಡ ನಾಡಿಗೆ ಮಬ್ಬುಕವಿದು ಕತ್ತಲಾವರಿಸಿದ ೧೮-೧೯ನೆಯ ಶತಮಾನಗಳ ಅಂತ್ಯ ಹಾಗೂ ಆದಿ ಭಾಗಗಳಲ್ಲಿ ಉದಯಿಸಿ ದಿವ್ಯ ಕಿರಣದಿಂದ ಪ್ರಕಾಶಿಸಿದ ಮಹಾತ್ಮರಲ್ಲಿ ಒಬ್ಬರು ಮೈಲಾರ ಶರಣರು. ಕ್ರಿಯಾ-ಜ್ಞಾನ ಸಮಾಯುಕ್ತ ಸಮತೋಲನದ ವೀರಶೈವವೇ ಅವರ ಬದುಕು ಬರಹಗಳು. ಬಸವ ಜ್ಯೋತಿಯ ದಿವ್ಯ ಕಿರಣ ಜ್ಯೋತಿಯಾದ ಮೈಲಾರ ಬಸವಲಿಂಗ ಶರಣರು ಏತಿಹಾಸಿಕ ಪ್ರಸಿದ್ಧಿ ಪಡೆದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಶೆಟ್ರ ಮನೆತನದ ಬಸವಪ್ಪನೆಂಬಭಿದಾನದಿಂದ ಜನ್ಮ ತಳೆದವರು. ಮನೆಕೊಂಡು ಬದುಕಿದವರು. ಅವರ ಮನೆ ಚಿಕ್ಕದಾದರೂ ಘನಮನದಿಂದ ಬೆಳೆವ ಪ್ರವೃತ್ತಿಯವರೆಂಬುದು, ಅವರ ಜೀವನ ಸಾಧನೆಗಳ ಬೆಳವಣಿಗೆಯಿಂದ ತಿಳಿದು ಬರುವುದು. ಶರಣತ್ವ ಸಿದ್ಧಿ ಪಡೆದ ಬಸವಪ್ಪನವರು ತಮ್ಮ ಬಾಲ್ಯದ ಬಗೆಗಾಗಲಿ ತಂದೆ ತಾಯಿಗಳ ಬಗೆಗಾಗಲಿ, ಹೇಳಿಕೊಳ್ಳದಿರುವುದು, ಗುರುವನ್ನು ಗುರು ಪರಂಪರೆಯನ್ನು ಹೇಳಿಕೊಂಡುದು ವೀರಶೈವ ತತ್ತ್ವಕ್ಕನುಗುಣವಾಗಿಯೇ ಇರುವುದು. ಹೀಗಾಗಿ ಗುರುದರ್ಶನದ ನಂತರದ ಬದುಕಿನ ಜೀವನ ಸಾಧನೆಯನ್ನು ಅವರ ಕೃತಿಗಳ ಮೂಲಕ ಗುರುತಿಸಿದಂತೆ ಬಾಲ್ಯದ ಬದುಕಿನ ಚಿತ್ರಣ ಮಸುಕು-ಮಸುಕು. ಆದರೂ ಜನತೆಯಲ್ಲಿ ಬಾಯಿಂದ ಬಾಯಿಗೆ ಕೊಡುತ್ತ ಜನ ಮನದಲ್ಲಿ ಅಚ್ಚಳಿಯದೆ ನಿಂತುಕೊಂಡು ಬಂದ ಅವರ ಬಾಲ್ಯ ಜೀವನವೂ ಮೈಲಾರದಲ್ಲಿಯೇ ಕಳೆದುದು ವಿದಿತವಾಗುತ್ತದೆ. ಅಯ್ಯನವರ ಪಾಠಶಾಲೆಯಲ್ಲಿ ಓದಿದ ಓದು ಅವರ ಜ್ಞಾನದಾಹ ತೀರಿಸದಾದಾಗ ನೆರೆಹೊರೆಯ ಊರುಗಳಲ್ಲಿಯ ಕೀರ್ತನೆ ಪ್ರವಚನಗಳಲ್ಲಿ ಭಾಗಿಗಳಾಗಿ ಕೇಳುವುದು, ಅದರಿಂದ ಪ್ರಚೋದನೆಗೊಂಡು ಶರಣರ ಜೀವನ ತತ್ತ್ವಗಳ ಬಗೆಗೆ ಅವರ ಕೃತಿಗಳತ್ತ ಗಮನಹರಿಸಿ ಸ್ವಾಧ್ಯಾಯ ಸಿದ್ಧರಾಗಿ ಓದಿಕೊಂಡು ದಿನನಿತ್ಯದ ವ್ಯಾಪಾರದ ಕಾಯಕದಲ್ಲಿ ತೊಡಗುವುದು ಅವರ ದಿನನಿತ್ಯದ ಬದುಕಾಗಿದ್ದಿತು.

ವಿವೇಕದಿಂದೆಚ್ಚತ್ತು ಸಂಸಾರ ಜಂಜಡವನ್ನು ಬಿಡಿಸುವ ಅನುಭಾವವನ್ನು ಬೋಧಿಸುವ ಗುರು ತಂದೆಯನ್ನು ನೆನೆಯುತ್ತ ‘ನಗುರೋರಧಿಕಂ ನಗುರೋರುಧಿಕಂ’’ ಪಥವನರಿವೊಡೆ ಗುರು ಪಥವೇದ ಮೊದಲು’’ ಎಂಬ ವಾಕ್ಯಗಳನ್ನು ಮೆಲುಕು ಹಾಕುತ್ತ ಶಿವಾನುಭವದ ನಿಲವನ್ನರಿಯಬೇಕೆಂಬ ಹೃದಯದ ಭೂಮಿಯನ್ನು ಹದಗೊಳಿಸಿಕೊಂಡು ಗುರುದರ್ಶನದ ಕಾತರದ ಕಳವಳದಲ್ಲಿ ಮಗ್ನರಾದವರು. ಹೀಗಿರುವಾಗಲೇ ವ್ಯಾಪಾರ ಕಾಯಕದಲ್ಲಿ ಜಾಣ್ಮೆಯನ್ನು ಮೆರೆದ ಬಸವಪ್ಪನವರು ಸಮೀಪದ ಅನೇಕ ಕುಹಕಿಗಳಿಂದ ಪರೀಕ್ಷೆಗೊಳಪಡುವರು. ಮೈಲಾರಕ್ಕೆ ಬಂದ ಅಧಿಕಾರಿಗಳಿಗೆ ‘ವಿಷ್ಣು ನಿಂದಕʼನೆಂಬ ಆಪಾದನೆ ಹೊರಿಸಿ ಅವರಿಂದ ಪ್ರಶ್ನೆಗಳಿಗೊಳಪಟ್ಟು ಪರೀಕ್ಷಿಸಿ ವಿಷ್ಣುನಿಂದಕನಲ್ಲನೆಂಬ ತಮ್ಮ ಅಭಿಪ್ರಾಯವನ್ನು ಪದಮೂಲಕ ಸ್ಪಷ್ಟಪಡಿಸಿದರು.

 ಹರಿಯ ಬ್ರಹ್ಮಾಂಡ ಪಿಂಡಾಂಡ ದಶದಿಗ್‌ಭರಿತ

 ಮರಿಯೆ ತ್ರೈಭುವನಮಟ್ಟುಂಬ ಸಕಲಕ್ಕಾದಿ

ಹರಿಯ ಬಿಟ್ಟರಗಳಿಗೆ ಜೀವಿಸುವರಾರಿಲ್ಲ. ಲೋಕದೊಳಗದು ಕಾರಣಂ

 ಹರಿಭಕ್ತನಹುದು ಹರಭಕ್ತನಲ್ಲ ನಾನೂಂ

ನರಸಿಂಹ ಮಧುಸೂದನಂ ಮತ್ತಮಾ

 ಸಿರಿಯರಸ ವಾಸುದೇವ ಯದುಪತಿಯಾದಿ ಪ್ರಣವ ಸ್ಮರಣೆಯೊಳಗಿರ್ಪೆಂಸದಾ||

ಈ ಪದ್ಯದಲ್ಲಿ ಬರುವ ‘ಹರಿ’ ಪದವನ್ನು ‘ವಾಯು’ ಎಂಬರ್ಥದ ಶ್ಲೇಷೆಯಿಂದ ಬಳಸಿ ಕುಹಕಿಗಳ ಮುಖಭಂಗ ಮಾಡಿದವರು. ಮತ್ತೊಂದು ಸನ್ನಿವೇಶದ ಸಂದರ್ಭಕ್ಕಾಗಿ ಕಾಯ್ದು ಬಸವಪ್ಪನವರನ್ನು ಪರೀಕ್ಷೆಗೊಳಪಡಿಸಿದಾಗ

ಗೋವಿಂದನಾದಿ ಗೋವಿಂದ ನಮ್ಮ

ಗೋವಿಂದಲಾವ ಪಾವನ ಪಾಂಡುರಂಗ ||ಪಲ್ಲ||

ಶ್ರೀ ವಿಭೂತಿಯ ಪಂಚ ಗೋವಿಂದ | ವೀರ

ಶೈವಾಗಮೋಕ್ತವು ಗೋವಿಂದ

ಪೀವ ಪಂಚಾಮೃತ ಗೋವಿಂದ| ಜಗ

ಜ್ಜೀವ ಸಂತೃಪ್ತಿಯು ಗೋವಿಂದ….

ವಿಭೂತಿಯಿಂದಾಗುವ ವಿಭೂತಿಯ ಮಹತಿಯನ್ನು ಎತ್ತಿ ಹೇಳಿ ಗೋವಿಂದ ‘ಪಡೆದ ಶ್ಲೇಷೆಯ ಮೂಲಕ ಅವರ ಮನವನ್ನು ಸಂತೃಪ್ತಪಡಿಸಿದವರು; ಅಗ್ನಿ ದಿವ್ಯ ಗೆದ್ದು ತಮ್ಮ ಸಾಹಿತ್ಯ ನಿರ್ಮಾಣದ ಮೊದಲ ಹಾದಿ ತುಳಿದವರು; ಗುರು ನಿರೀಕ್ಷೆಗಾಗಿ

ಕಾಯ್ದು ಕುಳಿತವರು.

ಮೊದಲೇ ಸೂಚಿಸಿದಂತೆ ಲಿಂಗನಾಯಕನಹಳ್ಳಿಯಲ್ಲಿ ಶಿವಾನುಭವ ಕೇಂದ್ರದ, ರೂವಾರಿಗಳಾದ ಗುರು ಚೆನ್ನವೀರರ ತಪಃಪ್ರಭಾವದ ಸುದ್ದಿ ಪವನ ವೇಗದಿಂದ ಹರಡಿ ತಿಳಿದು ಸರ್ವರನ್ನೂ ಆಕರ್ಷಿಸಿದಂತೆ ಬಸವಪ್ಪನವರನ್ನೂ ಆಕರ್ಷಿಸಿ ಶಿವಯೋಗ ಸಂಪದದ ಹಬ್ಬದೂಟದ ವಾರ್ತೆ ಮಾತಾಯಿತು. ಅರಸುವ ಬಳ್ಳಿ ಕಾಲ್ ತೊಡಕಿದಂತಾಗಿ ಮುಂದೆ ಗುರು ಚೆನ್ನವೀರರನ್ನು ಬಸವಪ್ಪನವರು-

 ಪರಮ ಪಾವನ ಪರಬ್ರಹ್ಮ ಸ್ವರೂಪನೆ, ಚೆನ್ನವೀರ

ನಿರುಪಮ, ನಿರಘ ನಿರ್ದ್ವಂದ್ವ ನಿರ್‌ಲೇಪನೆ| ಚೆನ್ನವೀರ ||ಪಲ್ಲ||

ಶರಣ ಮಂದಿರಧಿಕಾರನೆ ಚನ್ನವೀರ…

ವಿನಮಿತ ಜನರ ಭವದ ಬೇರ ಕೀಳ್ವೆನೆ |

ಎಂದು ಭಾವ ತುಂಬಿ ಹಾಡುತ್ತ ʼʼಈತನುನ್ನತವ ತನ್ನ ಪೊಗಳುವಡಾರು ಬಲ್ಲ ಚತುರಾಸ್ಯ ಬ್ರಹ್ಮಗಳವಲ್ಲʼʼ ಎಂದು ತಮ್ಮ ವಿನಯ ಮೆರೆದವರು. ಗುರು ದರ್ಶನ ಪಡೆದು ʼʼಎಲ್ಲ ದೈವಕೆ ನಿಮ್ಮ ಮೆಲ್ಲಡಿಯೆ ಘನವೆಂದು.. ಭಾವಿಸಿದ ಅವರು ಮಾಯೆಯ ಬಲೆಯಿಂದ, ಆಶೆ-ರೋಷಗಳ, ಹಮ್ಮು ಬಿಮ್ಮುಗಳ ಕಾಟದಿಂದ, ಮರ್ಕಟ ಮನದಿಂದ, ಮೂರರ ಮಲಗಳಿಂದ, ಅರಿಷಡ್ವರ್ಗಗಳ ಉಪಟಳದಿಂದ, ಕಾಯಕರ್ಮಗಳೆಂಬ ಮಾಯಾ ಸಂಸಾರದಿಂದ ಹೇಯವ ಮಾಡಿ ಪ್ರಿಯದಿಂದ ಪಾಲಿಸು ತಂದೆಯೆಂದು

ಬಿನ್ನವಿಸಿದವರು.

ಶಿಷ್ಯನ ಮೊರೆ ಕೇಳಿದ ಚನ್ನವೀರನು, ನೀನು ನರನಲ್ಲ ಪರವಸ್ತುವೆಂದು, ಲಿಂಗ ಸಜ್ಜೀವಿಯೆಂದು, ಚತುರ್ವಿಧ ಸಾರಾಯನೆಂದು ಬೋಧಿಸಿ

ಭವಿತನವ ಕಳೆದು ಭಕ್ತನ ಮಾಡಿ ತನುತ್ರಯಕೆ

ತ್ರಿವಿಧ ದೀಕ್ಷೆಯನ್ನಿತ್ತು ತ್ರಿವಿಧ ಗುಣಗಳ ಕಳೆದು

ತ್ರಿವಿಧ ತನುವಿಗೆ ತ್ರಿವಿಧ ಲಿಂಗಮಂ ನೆಲೆಗೊಳಿಸಿ ತ್ರಿವಿಧಿವಾಚಾರವರುಹಿ

ತ್ರಿವಿಧ ಪೂಜೆಯ ಪೇಳಿ ತ್ರಿವಿಧಾರ್ಪಣವ ತಿಳುಹಿ

ತ್ರಿವಿಧ ಶೇಷವೆಂಬ ತ್ರಿವಿಧಸುಖ ಸಮರತಿಯ

ನವಿರತಂ ದೆಯೆಗೆಯ್ದು… ಗುರುವಿಗೆ ಶರಣೆಂದು….

ಪೊರೆಮಡುವರು. ಹಾಗೆಯೇ ಲಿಂಗ ದೀಕ್ಷಿತರಾದ ಗುರುಕರೋದ್ಭವರಾದ ವಿವರವನ್ನು

ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು

ದೇವ ಕರವಾಂತು ಸಾಸಿರದಳದ ಚಿತ್ಕಳೆಯ

ಭ್ರಾವದಿಂ ಮನ ಮನದಿನೇತ್ರ ನೇತ್ರಗಳಿಂ ತೆಗೆದಿಷ್ಟರೂಪುಗೊಳಿಸಿ

ತೀವಿ ತಚ್ಚಿಷ್ಯನಂಗದ ಮೇಲೆ ಧರಿಸಿ ಸಂ

ಜೀವಷಣ್ ಮಂತ್ರಲಿಂಗವಿದೆಂದು ತಿಳುಹೆ…..”

ಎಂದು ಹೇಳಿಕೊಂಡಿರುವರು.

ಗುರುಸೇವೆ- ಲಿಂಗಪೂಜೆ- ಜಂಗಮ ದಾಸೋಹ-ಜಲತೀರ್ಥ ಸೇವನೆ- ಪ್ರಸಾದ ಭೋಗದಿಂದ ಅಖಂಡ ಭಕ್ತಿಯುಳ್ಳ ಭಕ್ತಕಾಯನಾಗೆಂದು ಷಟ್‌ಸ್ಥಲ – ಪಂಚಾಚಾರಗಳ ಬೋಧೆ ನೀಡಿ ಅಷ್ಟಾವರಣಾಂಗಿಯಾಗಿ ಪರಿಪೂರ್ಣ ಮಂತ್ರಶರೀರಿಯಾಗೆಂದು ನಡೆಸಿದವರು.

 ಹರಣ ಹೋಗದ ಮುನ್ನ ಶರಣನಾಗಬೇಕೆಂಬ, ವೀರಶೈವವೆನಿಸುವ ಚರ್ತುರ್ವಿಧ ಸಾರಾಯ ಸಂಪತ್ತಿನ ಪರಿಪೂರ್ಣ (ಅಖಂಡ) ಭಕ್ತನೆನಿಸಬೇಕೆಂಬ ಹಂಬಲದಿಂದ ಗುರು ಬೋಧಿಸಿದ ಮಾರ್ಗದಲ್ಲಿ ನಡೆದು ಅಹಂಮಮತೆ-ಅಹಂಕಾರ ತ್ಯಜಿಸಿ, ಪರವಸ್ತುವಾಗಿ “ಶರಣಸತಿ – ಲಿಂಗಪತಿ”ಯಾಗಿ ನರಸುಮನಾಗದೆ ಗುರುಸುತನಾಗಿ, ಭವಿಯಾಗದೆ-ಭಕ್ತನಾಗಿ, ಅವಶೈವನಾಗದೆ-ಜಪದರ್ಥವೆನಿಸಿಪ ಶಿವನಾಗಿ ಬದುಕಲು ಸಾಧನೆಗೈದವರು.

 “ಭಕ್ತಿಯೇ ಮುಕ್ತಿಯ ಜನನಿ” ಎಂದರಿತ ಬಸವಪ್ಪನವರು ಷಟ್‌ಸ್ಥಲ ಮೂಲಕ ಭಕ್ತಿಶಕ್ತಿಯಿಂದೊಡಗೂಡಿ ಅಂಗ-ಲಿಂಗ-ಶಕ್ತಿ-ಭಕ್ತಿ, ಕರ-ಮುಖ, ಪದಾರ್ಥ-ಪ್ರಸಾದಗಳ ಸಕೀಲವಿಡಿದು, ಅರ್ಚಿನ -ಅರ್ಪಣ ಅನುಭವದಿಂದ ಅಷ್ಟಾಂಗ ಯೋಗ ತ್ಯಜಿಸಿ  ಶಿವಯೋಗದಲ್ಲಿ ಧ್ಯಾನದಿಂದ ಮನದ ಲಿಂಗವಾಗಿಸಿ ತನುವನು ಲಿಂಗವಾಗಿಸಿ ಧಾರಣ ಮಾಡಿ ಅನಿಮಿಷದೆ ಸಮಾಧಿಯಲ್ಲಿ ಲಿಂಗಲೋಲುಪರಾದವರು.

ನಯನವ ನಂದಾದೀವಿಗೆ, ಭಯಭಕ್ತಿ ಭೃತ್ಯ ಕಿಂಕರ

ಚೌಮಣಿ ಮಂಚವಾಗಿಸಿ, ತನ್ನ ತಾನೆನಿಪಲಿಂಗಮಂ

ಭಿನ್ನವಿಲ್ಲದೆ ಪೂಜಿಸಿ ಷಣ್ಮಂತ್ರ ಮೂರ್ತಿಸ್ವರೂಪರಾಗಿ

ಸಾರಾಯದಿಂದ ಪ್ರಸಾದಕಾಯರಾದವರು ಭಕ್ತರಾದವರು.

ಗುರುವೇ ಪರಬ್ರಹ್ಮವಾಗಿ, ಗುರುವಿನ ವಿಗ್ರಹವೇ ಲಿಂಗವಾಗಿ, ಹರಣ ಜಂಗಮವಾಗಿ, ಆನಂದ ಪದಜಲವಾಗಿ, ಪ್ರಸನ್ನತೆ ಪ್ರಸಾದವಾಗಿ, ಶಾಂತಿ ಭಸಿತವಾಗಿ, ಚಿದ್ಘನ ರುದ್ರಾಕ್ಷಿಯಾಗಿ, ಅಭಿದಾನವೇ ಮಂತ್ರವಾಗಿ, ಭಕ್ತಿಯ ಸ್ಪರ್ಶದಿಂದ ಬಾಹ್ಯದೈವಂಗಳಿಗೆರಗದೆ ಏಕಲಿಂಗ ನಿಷ್ಠಾಪರರಾಗಿ ʼʼಅನುಭಾವವೆಂಬುದೈವಾಚಾರದಿರವು’ ಎಂದರಿತು ಆತ್ಮ ಸಾಕ್ಷಾತ್ಕಾರ ಪಡೆದವರು, ನಡೆ- ನುಡಿಯನೇಕೀಕರಿಸಿಕೊಂಡವರು.

ಬಸವಪ್ಪ ಬಸವಲಿಂಗ ಶರಣರಾದುದು:

ಗುರು ಚೆನ್ನವೀರರಡಿಯಲ್ಲಿದ್ದ ಬಸವಲಿಂಗ ಶರಣರು ಲಿಂಗನಾಯಕನ ಹಳ್ಳಿಮಠದ ಉತ್ತರಾಧಿಕಾರಿಯನ್ನು ನಿಯಮಿಸುವ ಸಂದರ್ಭದಲ್ಲಿ ಅಂಗಹೀನ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಬಾರದೆಂಬ ಶರಣರ ಆಕ್ಷೇಪಣೆಯಿಂದಾಗಿ ಗುರುವಿನ

ಅವಕೃಪೆಗೆ ತುತ್ತಾಗಿ ‘ಮುಸವಪ್ಪ’ ನಾದರು. “ಹರ ಮುನಿದರೆ ಗುರು ಕಾಯ್ವ ಗುರು ಮುನಿದರೆ ಹರ ಕಾಯ’ನೆಂಬುದಕ್ಕೆ ಸಾಕ್ಷಿಯಾಯಿತು. ಈ ಘಟನೆ ಈ ಘಟನೆಯಿಂದ ನೊಂದು ಬೆಂದು ಬಸವಪ್ಪನವರು ಸಹಪಾಠಿಗಳಲ್ಲೊಬ್ಬರಾದ ಬಾಲಲೀಲಾ ಮಹಾಂತ ಶಿವಯೋಗಿಗಳ ಸಲಹೆಯಂತೆ ಗುರುಸ್ತುತಿಸಿ “ಗುರು ಕರುಣ ತ್ರಿವಿಧಿ” ರಚಿಸಿ ಗುರು ಕೃಪಾ ಪೋಷಕರಾಗಿ ಬಸವಲಿಂಗರಾದರು. ಅದನ್ನೇ ಅವರು

 ಬಸವ ಬಾರೆಂದನೆಗೆ ಅಸಮಲಿಂಗವೇ ನೀನೆಂ

ದುಸುರಿದ ಬಳಿಕ ಬಸವಲಿಂಗನೆಂದು

ಪೆಸರಿಟ್ಟ ಗುರುವೆ ಕೃಪೆಯಾಗುʼʼ ಎಂದು ಹಾಡಿಕೊಂಡಿದ್ದಾರೆ.

ಪರೀಕ್ಷೆಗಾಗಿ ಬೋಧಕರಾಗಿ:

ಲಿಂಗನಾಯಕನ ಹಳ್ಳಿಯ ಶಿವಾನುಭವ ಕೇಂದ್ರದಲ್ಲಿ ಗುರು ಮತದಂತೆ ಪರೀಕ್ಷಕರಾಗಿ, ಬೋಧಕರಾಗಿ ಹುಸಿಲಾಂಛನ ಖಂಡಿಸಿದ ಶರಣರುʼʼ ಛೀ ಹೆಡ್ಡ ನೀವೆಂಥ ಶಿವಭಕ್ತರು, ಶಿವಯೋಗಿಗಳುʼʼ ಎಂದು ಅವರ ಕಪಟ ವೇಷಗಳನ್ನು ತೆಗೆಸಿ, ವೀರಶೈವ ತತ್ತ್ವಾಚರಣೆಗಳನ್ನು ನಿರೂಪಿಸಿ, “ತೂಗಿರೇ ಶರಣ ಸತಿಯರು ಶಿವಯೋಗ ಸಂಪದದೊಳು” ಎಂದು ಬೋಧಿಸಿದವರು ಪುನಃ ಅವರನ್ನು ಪರೀಕ್ಷೆಗೊಳಪಡಿಸಿ, ಪರೀಕ್ಷಿಸಿ, ಈಗ ನೀವು ಮಠಾಧಿಕಾರಿಗಳಾಗಲಿ, ಬೋಧಕರಾಗಲು ಸಿದ್ಧರಾದಿರಿ, ಹೋಗಿ ಬನ್ನಿʼ’ ಎಂದು ನಮಸ್ಕರಿಸಿ ಕಳಿಸಿಕೊಡುವಲ್ಲಿ ಅವರಿಗೆ ತತ್ವಬೋಧಕರನ್ನು ಸಿದ್ಧಪಡಿಸುವ, ಅವರ ಮೂಲಕ ಸಮಾಜವನ್ನು ತಿದ್ದಬೇಕೆಂಬ ಹಂಬಲದ ಕಳಕಳಿಯನ್ನು ಹೊಂದಿದವರಾಗಿದ್ದರು.

 ಹಲವು ವರ್ಷಗಳವರೆಗೆ ಕಾರ್ಯತತ್ಪರರಾದ ಬಸವಲಿಂಗ ಶರಣರು ಒಂದು ಕಡೆಗೆ ಸಾಧಕರನ್ನು ಸಾಧನೆಗೊಳಪಡಿಸುವುದು, ಇನ್ನೊಂದೆಡೆಗೆ ದಿನ ನಿತ್ಯ ೫ ಆಣೆ ದುಡ್ಡನ್ನು ಸಂಪಾದಿಸುವ ವ್ಯಾಪಾರ ಕಾಯಕದೊಂದಿಗೆ ದಾಸೋಹಂಭಾವ ಎಂದು ವಸ್ತು ತೂಗುವದರ ಜೊತೆ ತತ್ತ್ವ ತೂಗಿ ಕೊಡುವುದು ಇವರ ಇನ್ನೊಂದು ಮುಖದ ಸಾಧನವಾಗಿ ಬೆಳೆದವರು; ಶರಣ ತತ್ತ್ವವನ್ನು ಕೃತಿಗಳ ಮೂಲಕ ಉಳಿಸಿದವರು.

 ಇವರು ರಚಿಸಿದ ಕೃತಿಗಳ ‘ವಸ್ತು’ ವೀರಶೈವ ತತ್ತ್ವಾಚರಣೆ ಒಂದೇ ಆದರೂ ಜನತೆಗೆ ಮುಟ್ಟಬೇಕೆಂಬ ಅವರ ಕಳಕಳಿ ಹಲವಾರು ಕೃತಿ ರಚನೆಗೆ ಪ್ರಚೋದನೆ ನೀಡಿರುವುದು. ೧) ಗುರುಕರುಣ ತ್ರಿವಿಧಿ ೨). ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ ೩). ಷಟ್‌ಸ್ಥಲ ಜ್ಞಾನಾನುಭವ ೪). ಶಿವಾನುಭವ ದರ್ಪಣ ೫). ಲಿಂಗಪೂಜಾ ವಿಧಾನ ೬). ಭಕ್ತಿ ಬಿನ್ನಹ ದಂಡಕ- ಹೀಗೆ ಆರು ಕೃತಿಗಳ ಮೂಲಕ ತತ್ತ್ವಾಚರಣೆಯ ಸೌಗಂಧವನ್ನು ಸೂಸಿ ಸಾಹಿತ್ಯಕ್ಕೆ ತಮ್ಮ ಭಕ್ತಿಮಣಿ ಸಲ್ಲಿಸಿದವರು.

 ಒಟ್ಟಿನಲ್ಲಿ ಸಂಸಾರಿಗಳಾಗಿ ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ಭಕ್ತರಾಗಿ-ಕಾಯಕ ಯೋಗಿಗಳಾಗಿ, ಶಿವಾನುಭವ ಬೋಧಕರಾಗಿ ಮಾಹೇಶ ನಿಷ್ಠೆಯುಳ್ಳವರಾಗಿ ಕೃತಿ ರಚನಕಾರರಾಗಿ ಅನುಭಾವಿಗಳಾಗಿ ಹೀಗೆ ಹಲವಾರು ಸಾಧನೆಯ ಹಂತಗಳಿಂದ ವ್ಯಕ್ತಿತ್ವವನ್ನರಳಿಸಿಕೊಂಡವರು. ಮೈಲಾರ ಶರಣರು. ಗುರು ಚೆನ್ನವೀರರ ವಿಯೋಗದ ನಂತರ ಮೈಲಾರದಲ್ಲಿಯೇ ಲಿಂಗದೊಳಗಾದರೆಂದು ತಿಳಿದುಬರುವುದು.

 ಇನ್ನು ಅವರಿಂದ ರಚಿತವಾದ ಕೃತಿಗಳನ್ನು ಅವು ಒಳಗೊಳ್ಳುವ ವಿಷಯವನ್ನು ನೋಡಬಹುದು. ಸ್ವರವಚನ ಸಂಪುಟ ಕೃತಿ ʼʼಶಿವಾನುಭವದರ್ಪಣವನ್ನುʼʼ ದೀರ್ಘವಾಗಿ ಅವಲೋಕಿಸುತ್ತ ಸ್ವರವಚನ ಸಂಪುಟಗಳಲ್ಲಿ ಕೈವಲ್ಯಕಾರರಲ್ಲಿ ಅದಕ್ಕಿರುವ ಮಹತಿಯನ್ನು ನೋಡಬಹುದು.

೧. ಗುರುಕರುಣ ತ್ರಿವಿಧಿ:

ಕನ್ನಡ ಸಾಹಿತ್ಯದಲ್ಲಿ ತ್ರಿಪದಿ ಸಾಹಿತ್ಯಕ್ಕೆ ತನ್ನದೇ ಆದ ಹಾಸುಬೀಸು ಇದೆ. ಆಕಾರದಲ್ಲಿ ವಾಮನನಂತಿದ್ದ ತ್ರಿಪದಿ ಅರ್ಥದಲ್ಲಿ ತ್ರಿವಿಕ್ರಮನಂತಿದೆ. ಜನಪದರ ಪ್ರಾಣವಾದ ಈ ಪ್ರಕಾರ ಅನುಭಾವಿಗಳ ಕೈಯಲ್ಲಿ ದುಡಿದು ಇನ್ನೂ ವ್ಯಾಪಕ ನಿಲುವು ಪಡೆದಿದೆ.

ಪಂಡಿತರ ಪಾಮರರ ಬದುಕನ್ನು ಎತ್ತಿಕಟ್ಟಲು ಉಪಯುಕ್ತಗೊಂಡ ಈ ತ್ರಿಪದಿ ಮಾಧ್ಯಮ ೧೨ನೆಯ ಶತಮಾನದ ಶರಣ-ಶರಣೆಯರಲ್ಲಿ ತ್ರಿವಿಧಿಯಾಗಿ ಬಳಕೆಗೊಂಡಂತೆ ಮೈಲಾರ ಬಸವಲಿಂಗ ಶರಣರಲ್ಲಿ “ಗುರುಕರುಣ ತ್ರಿವಿಧಿ” ಹೆಸರು ಪಡೆದು ಮುಂದಿನ ಪೀಳಿಗೆಯ ಶರಣರಿಗೆ ಪಾರಾಯಣ ಗ್ರಂಥವಾಗಿದೆ. “ವಚನ” ಪದ ಪ್ರಯೋಗಾರ್ಥದಲ್ಲಿ ʼʼಗುರುಕರುಣ ತ್ರಿವಿಧಿ ವಚನ ಬರೆಯುವುದಕ್ಕೆ ಪ್ರಾರಂಭ” ಎಂಬ ವಾಕ್ಯ ಕೃತಿ ಆರಂಭದಲ್ಲಿ ಬಳಕೆಗೊಂಡು ಮೈಲಾರ ಶರಣರ ನಡೆ -ನುಡಿಯನ್ನೇಕೀಕರಿಸಿ ಕೊಂಡ ಬದುಕು-ಅವರು ಗುರುವಿನಿಂದ ಪಡೆದ ಅನುಭವ ತ್ರಿಪದಿರೂಪದ ವಚನ ತೊಟ್ಟು ಹೊರಹೊಮ್ಮಿದೆ ಸಾರ್ಥಕತೆ ಪಡೆದಿದೆ. ೩೩೩ ತ್ರಿಪದಿಯಿಂದ ಕೂಡಿದ ಇದು ಗುರು ಸ್ತೋತ್ರ ರೂಪದಲ್ಲಿ ಗುರು ಮಹತ್ವಪೂರ್ಣ ಮಹಿಮೆ ಪಡೆದಿದೆ. ತೋರಿಸಿದ ವೀರಶೈವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ಪರಿಚಯಿಸಿಕೊಡುವ

ಎಲ್ಲ ಕೈವದೈ ನಿಮ್ಮ ಮೆಲ್ಲಡಿಯ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೆ ನಾಂ ಗುರುರಾಯ

ಸಲ್ಲೀಲೆಯಿಂದೆನಗೆ ಕೃಪೆಯಾಗುʼʼ

ಎಂಬ ಶರಣ ಶಿಷ್ಯರ ಮೇಲೆ ಗುರುಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತದ ಅನುಭವದ ವಿವಿಧ ಮುಖಗಳನ್ನು ಹೊತ್ತು ಸರಳವಾಗಿ ಶಾಸ್ತ್ರ ವಿಷಯವನ್ನು ಪರಿಚಯಿಸಿಕೊಡುವಲ್ಲಿ ಅದಕ್ಕೆ ವಿಶೇಷತೆಯಿದೆ; ಮನ್ನಣೆಯಿದೆ.

‘ತ್ರಿವಿಧ’ವೆಂದರೆ ಮೂರುವಿಧವೆಂದರ್ಥ. ಸೃಷ್ಟಿಯಲ್ಲಿ ಮೂಲೋಕ, ಸೃಷ್ಟಿ ತತ್ತ್ವ ಮೂರು ಬಗೆ, ತನು ತ್ರಿವಿಧ, ಚೇತನ ತತ್ತ್ವ- ತ್ರಿವಿಧ, ಅಂಗಮೂರು, ಲಿಂಗಮೂರು, ಜಂಗಮ ಮೂರು, ಗುರು ಮೂರು, ಭಕ್ತಿ ಮೂರು, ಶಕ್ತಿಮೂರು, ಪಾದೋದಕ-ಪ್ರಸಾದ ಮೂರು ಹಾಗೆಯೇ ವಿಭೂತಿ ರುದ್ರಾಕ್ಷಿ-ಮಂತ್ರ-ಮೂರು, ಮೂರು. ಕೃತಿ ಎತ್ತಿಕೊಂಡ ತತ್ತ್ವಗಳಾದರೂ ಅಷ್ಟಾವರಣ-ಪಂಚಾಚಾರ- ಷಟ್‌ಸ್ಥಲ ಮೂರೇ ಮೂರು. ಹೀಗೆ ಸಮಗ್ರ ಕೃತಿ ತನ್ನ ಸಕಲ ಅವಯುವ, ಸಕಲಾರ್ಥಂಗಳಲ್ಲಿ ತ್ರಿವಿಧಕ್ಕೆ ಸಂದು, ತ್ರಿವಿಧವನ್ನು ಧರಿಸಿ, ತ್ರಿವಿಧಕ್ಕೆ ಕೈಚಾಚಿದ್ದು ಮೂರು ಮೂರು ಚರಣಗಳ ೩೩೩ ನುಡಿಗಳನ್ನೊಳಗೊಂಡಿರುವುದರಿಂದ ಈ ಕೃತಿಗೆ ʼʼಗುರು ಕರುಣ ತ್ರಿವಿಧಿʼ’ಯೆಂದು ಕರೆದುದು ಅರ್ಥಪೂರ್ಣವಾಗಿದೆ. ಮಾತ್ರಾಗಣ-ಅಂಶಗಣಗಳ ಸಮ್ಮಿಶ್ರದಿಂದ ಪರಿಣಾಮ ತೀವ್ರತೆ ತಂದ ಕೃತಿಯಾಗಿದೆ.

 “ಸರ್ವಜ್ಞನ ವಚನಗಳು” ಎಂದಂತೆ ಈ ಕೃತಿಯ ಆರಂಭದಲ್ಲಿ “ಶ್ರೀಗುರು ಪ್ರಸನ್ನ! ಗುರುಕರುಣ ತ್ರಿವಿಧಿ ವಚನ ಪ್ರಾರಂಭ’ ಎಂಬ ತ್ರಿಪದಿ ರೂಪದ ಇದನ್ನು “ವಚನ” ಎಂಬರ್ಥದಲ್ಲಿ ಗ್ರಹಿಸಿ ನಡೆನುಡಿಯ ನೇಕೀಕರಿಸಿಕೊಂಡ ಬದುಕು, ಅವರಿಂದ ಅಭಿವ್ಯಕ್ತವಾದ ಸಾಹಿತ್ಯ ಎಂಬರ್ಥ ಇಲ್ಲಿ ಪ್ರಮುಖವಾಗುತ್ತದೆಂಬುದನ್ನು ಮರೆಯುವಂತಿಲ್ಲ.

೨. ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ:  

ವೀರಶೈವವು ಶೈವದ ಪರಿಪಕ್ವ ಫಲ. “ಲಿಂಗವಂತ, ವೀರಶೈವ, ನಿರಾಭಾರ ವೀರಶೈವ -ಅಜಾತ ಶೈವ’ ಎಂಬ ಪ್ರಯೋಗಗಳು ವಚನಕಾರರಲ್ಲಿ ಬಳಕೆಗೊಂಡಿದೆ.

೧ ಚತುರ್ವರ್ಣತಿತನೆ ವೀರಶೈವ ನೋಡಾ’ʼ, ಕುಲದಲ್ಲಿ ಶೂದ್ರನಾದಡೇನು ? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾʼʼ ʼʼತಿಳಿದನುಭಾವಿಯೇ, ಸಂಸ್ಕಾರಿಯೇ ಪರಮ ವೀರಶೈವ ನೋಡಾ”, ತನ್ನ ತಾ ತಿಳಿದವ ವೀರಶೈವ

“ಶಿವಯೋಗದಲ್ಲಿರುವಾತ ಲಿಂಗವಂತನೆಂಬೆನಯ್ಯಾ? ಎಂಬಂಥ ಪ್ರಯೋಗಗಳು ವಚನಕಾರರಲ್ಲಿ ಸ್ಪಷ್ಟತೆ ಪಡೆದಿವೆ. ಅಕ್ಕಮಹಾದೇವಿಯು “ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದವರು ನೋಡಾʼʼ, ಅಜಾತಿ ಶೈವರು ಗುರುಲಿಂಗ ಜಂಗಮಕ್ಕೆ ತನುಮನಧನವ ನಿವೇದಿಸಿ

 ಸರ್ವಸೂತಕರಹಿತರಾಗಿಹರಯ್ಯಾ”-ಎಂಬಂಥ ಪದಗಳ ಒಟ್ಟು ಧೋರಣೆಗಳು ಮಥನವನ್ನೇ ಮಥಿಸಿ ಮೈಲಾರ ಬಸವಲಿಂಗ ಶರಣರು ʼʼಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼವನ್ನು ರಚಿಸಿದ್ದಾರೆ. ವೀರಶೈವಾಚರಣೆಯ ಒಟ್ಟು ನೋಟವನ್ನು ಅಷ್ಟಾವರಣ ಪಂಚಾಚಾರ ಧರ್ಮಾಚಾರ ಎಂಬ ೩ ಪ್ರಕರಣಗಳಲ್ಲಿ ೧೨೧ ವಾರ್ಧಕ ಷಟ್ಪದಿಯಲ್ಲಿ ರಚಿಸಿರುವರು.

ಮೈಲಾರ ಶರಣರು ಸ್ವರವಚನದಲ್ಲಿ ಬರುವ ‘ಪಲ್ಲವಿ’ಯಂತೆ ಒಂದೊಂದು ಪ್ರಕರಣದ ಆದಿಯ ‘ಸೂಚನಾ’ ಪದ್ಯದಲ್ಲಿ ಸಂಕ್ಷೇಪಿಸಿ ವಿವರಿಸಿದುದು ಅವರ ‘ಗಣಾಚಾರ’ ನಿಷ್ಠೆಗೆ ಸಾಕ್ಷಿಯಾಗಿದೆ. ಆದಯ್ಯ, ಬಸವ, ಚೆನ್ನಬಸವ, ಅಲ್ಲಮ ಮುಂತಾದವರ ಸಿದ್ಧರಾಮ ಅಕ್ಕಮಹಾದೇವಿ ಸಾಹಿತ್ಯದಿಂದ ಮಥಿಸಿ ಬಂದ ವೀರಶೈವ ಹೂರಣ ಈ ಕೃತಿ. ಮೂರೂ ಪ್ರಕರಣಗಳನ್ನು ಷಟ್‌ಸ್ಥಲಾತ್ಮಕವಾಗಿ ಎತ್ತಿ ಕಟ್ಟಿದುದು “ಧರ್ಮಾಚಾರ” ಎಂಬ ಪುಟ್ಟ ಪ್ರಕರಣದ ಮೂಲಕ ನಿಜ ವೀರಶೈವ ಸಿದ್ಧಾಂತದ ನಿಲುಮೆಯನ್ನು ಸಂಗ್ರಹಿಸಿ-ಸಂಕ್ಷೇಪಿಸಿದುದು ಈ ಕೃತಿಗಿರುವ ಮಹತಿಯಾಗಿದೆ.

ಆಷ್ಟಾವರಣ ಪಂಚಾಚಾರ ಪ್ರಕರಣಗಳು ಷಟ್‌ಸ್ಥಲಾತ್ಮಕ ಧೋರಣೆಯ ಶಿವಯೋಗದ ಹಿನ್ನೆಲೆಯಲ್ಲಿ ನಿರೂಪಿತಗೊಂಡ ಕೃತಿಗಳು. ಪಂಚಾಚಾರಗಳನ್ನು ಷಟ್‌ಸ್ಥಲಾತ್ಮಕವಾಗಿ ಸಮನ್ವಯೀಕರಿಸಿರುವ ವಿಶೇಷತೆ ಮೈಲಾರ ಶರಣರದು. ‘ಧರ್ಮಾಚಾರ’ ಪ್ರಕರಣದಲ್ಲಿ ಭಕ್ತನ ಧರ್ಮಾಚಾರ, ಮಾಹೇಶನ ಧರ್ಮಾಚಾರ, ಪ್ರಸಾದಿಯ ಧರ್ಮಾಚಾರ, ಪ್ರಾಣಲಿಂಗಿಯ ಧರ್ಮಾಚಾರ, ಶರಣನ ಧರ್ಮಾಚಾರ, ಐಕ್ಯನ ಧರ್ಮಾಚಾರ.

 ಧರೆ ಕೈಲಾಸ, ಭಕ್ತಿಯ ಮಹತಿ, ಭವಿ-ಭಕ್ತ, ಅಧಃಸೃಷ್ಟಿ-ಊರ್ಧೃ ಸೃಷ್ಟಿ ಅಷ್ಟಾಂಗಯೋಗ-ಶಿವಯೋಗಗಳ ನಿಲುವನ್ನು ಚರ್ಚಿಸಿ ವೀರಶೈವದ ಕೇಂದ್ರ ತತ್ತ್ವಾಚರಣೆಗಳನ್ನೇ ಬಿತ್ತರಿಸಿದ ಕೃತಿ.

ಯೋಗವೆಂಬುದು ಶಿವಶಕ್ತಿ ಸಂಪುಟ. ಶಿವಯೋಗವು ಅಷ್ಟಾಂಗಯೋಗಗಳಲ್ಲಿ ಧಾರಣ-ಧ್ಯಾನ ಸಮಾಧಿಗಳನ್ನು ಮಾತ್ರ ಸ್ವೀಕರಿಸಿರುವುದನ್ನು ಖಚಿತಪಡಿಸಿ ವಿವರ ನೀಡಿ “ಅಷ್ಟಾಂಗ ಯೋಗ ಶರಣನಿಗೆ ಸಲ್ಲ’ ಎನ್ನುವರು. ಷಟ್‌ಸ್ಥಲಯೋಗ ಲಿಂಗಾಂಗಯೋಗ, ಪರಮಾನಂದಯೋಗ, ಅಳಿಯದೆ ಕೂಡುವ ಯೋಗ, ಹಠಯೋಗ, ಆನಂದಯೋಗ, ನಿಷ್ಕಲಯೋಗ, ಶಾಂಭವೀಯೋಗ, ಪರಿಣಾಮಯೋಗ, ಮಹಾಯೋಗ, ದಿವ್ಯಯೋಗ, ಶಿವಶಕ್ತಿ ಸಂಪುಟ ಯೋಗ, ಪರಮಾತ್ಮ ಯೋಗ, ಅನಿಮಿಷ ಯೋಗ-ಮುಂತಾದ ಪರಿಭಾಷೆಗಳಲ್ಲಿ ಬಳಕೆಗೊಂಡುದು ಶಿವಯೋಗ. ಶಿವಯೋಗ ಸಾಧನೆಯೇ ಷಟ್‌ಸ್ಥಲ ನಿರಾಭಾರ ಸಿದ್ಧಾಂತದ ನಿಲುವೆಂಬುದನ್ನು ಶೈವ ವೀರಶೈವಗಳಿಗಿರುವ ಭಿನ್ನತೆಯನ್ನು ಎತ್ತಿ ತೋರಿಸಿದ ಮಹತ್ವಪೂರ್ಣ ಕೃತಿಯಿದು.

 ೩. ಷಟ್‌ಸ್ಥಲ ಜ್ಞಾನಾಮೃತ:

“ಸದ್ಧರ್ಮ ದೀಪಿಕೆʼʼ ಸಂಪಾದಕರಾದ ಚೆನ್ನಮಲ್ಲಿಕಾರ್ಜುನವರಿಂದ “ಶಿವಾನುಭಾವ ದೀಪಿಕೆ “ಯೆಂಬ ಭಿನ್ನ ಹೆಸರಿನಲ್ಲಿ ತಲೆಬರಹದಲ್ಲಿ ಪ್ರಕಟಗೊಂಡ ಈ ಕೃತಿ ಅನ್ಯ ಕೃತವಾದುದಲ್ಲ. ಈ ಕೃತಿಯ ತಲೆಬರಹ ‘ಶಿವಾನುಭವ ದೀಪಿಕೆ’ ಎಂದಿರದೆ “ಷಟ್‌ಸ್ಥಲ ಜ್ಞಾನಾನುಭವ” ಅಥವಾ “ಷಟ್‌ಸ್ಥಲ ಜ್ಞಾನಾಮೃತ” ಎಂದಿದ್ದು ೩೦೩ ಕಂದ ಪದ್ಯಗಳು ಇಲ್ಲಿವೆ. ಪ್ರತಿಯೊಂದು ಕಂದ ಪದ್ಯಗಳು, ಬಸವಲಿಂಗ ಪ್ರಭುವೆ ಎಂದು ಮುಕ್ತಾಯಗೊಳ್ಳುವವು. ಕೊನೆಗೆ ಎಲ್ಲ ಕೃತಿಗಳಿರುವಂತೆ ʼʼಗುರು ಚನ್ನವೀರಾʼʼ ಎಂಬ ಅಂಕಿತ ಇದಕ್ಕಿದೆ. ಕೃತಿಯ ಆರಂಭದಲ್ಲಿ ಮೈಲಾರ ಬಸವಪ್ಪನವರು ವಿರಚಿಸದ ʼಷಟ್‌ಸ್ಥಲ ಜ್ಞಾನಾನುಭಾವ’ ಎಂಬ ವಾಕ್ಯ ಕರ್ತೃ-ಕೃತಿನಾಮಗಳ ಸ್ಪಷ್ಟತೆ ಕೊಡುವುದು.

 ಶಿವನಾರು !ಜೀವಿಯಾರು! ವೀರಶೈವವೆಂದರೇನು! ಕರಣಹಸಿಗೆಗಳ ವೈವಿಧ್ಯಗಳೇನು ? ಕೃತಿ ತತ್ತ್ವಗಳಾವವು! ಪಂಚಾಕ್ಷರದ ಸಂಚುಗಳ ನಿಲುವೇನು ?  ಮಿಶ್ರಾರ್ಪಣವೆಂದರೇನು! ಮುಂತಾದ ಮೂಲಭೂತ ತತ್ತ್ವಗಳನ್ನು ಕೊಂಡುಗುಳಿ  ಕೇಶಿರಾಜ ಬಳಸಿದ ಕಂದ ಛಂದೋಲಯದಲ್ಲಿ ಸರಳವಾಗಿ ಬಿಗಿಯಾದ ಶಾಸ್ತ್ರರೂಪದ ತತ್ತ್ವಗಳನ್ನು ಸರ್ವಜನತೆಗೆ ತಿಳಿಸಿಕೊಡುವ ಈ ಕೃತಿಗೆ ವೀರಶೈವ ಸಾಹಿತ್ಯ ಧರ್ಮ ತತ್ತ್ವಗಳ ಅಧ್ಯಯನದಲ್ಲಿ ಮಹತ್ತರವಾದ ಸ್ಥಾನವಿದೆ.

ವೀರಶೈವ ತತ್ತ್ವಗಳನ್ನರಿವ ಕೈಪಿಡಿಯಂತಿರುವ ಈ ಕೃತಿ

ಶೈವ ಸುಮಾರ್ಗದೊಳೆಲ್ಲಂ

ಶ್ರೀ ವೀರಶೈವ ಷಟ್‌ಸ್ಥಲ ಮಾರ್ಗವಿದಧಿಕಂ

ಈ ವೀರಶೈವವೊಂದನೆ ನೀವರುಹಿ ಪಾಲಿಸೆನ್ನಂ ಬಸವ ಪ್ರಭುವೆʼʼ

 ಎಂದು ಹೇಳುವಲ್ಲಿ ಸ್ಪಷ್ಟವಾಗುತ್ತ ಶಿವ ಶಕ್ತಿ, ಶಿವನೇ ಬಸವ ಬಸವನೇ ಶಿವ, ಮಾಯಾ ಸಂಸಾರ ನಿರಸನ, ಪಂಚವಿಷಯ, ಅಷ್ಟಮದ, ಅರಿಷಡ್ವರ್ಗ ನಿರಸನ, ನವಪ್ರಣವ, ಜಗತ್ ಸೃಷ್ಟಿಕ್ರಮ, ಪಂಚಭೂತಗಳ ಪಂಚೀಕರಣ, ಮಿಶ್ರಪಂಚೀಕರಣ, ಪಂಚವಿಂಶತಿ ತತ್ತ್ವ, ಪಂಚಾಕ್ಷರದ ಸ್ವರೂಪ, ಭಕ್ತನ ಅಂಗ ಲಿಂಗಮಯ, ಮಿಶ್ರಅಂಗ-ಲಿಂಗ ಸಂಗ, ಎಂಟಹ ಸಕೀಲ ಆರಕ್ಷರದ ರೂಪ, ಷಣ್ಮಂತ್ರದ ೪೮ ವಿಧ, ಎಂಟಹ ಆವರಣವೇ ಷಣ್ಮಂತ್ರ, -ಇದಕ್ಕಿರುವ ಅಧಿಕಾರ, ಅನಧಿಕಾರ, ಶಿವಸರ್ವಗತ-ನಿರಸನ ಷಟ್‌ಸ್ಥಲದಿರವೇ ಮಹಾದೇವ, ಜೀವನದ ಸದುಪಯೋಗ-ತತ್ತ್ವಮಸಿ ಪದಕ್ರಮ, ಲಿಂಗಾಂಗ ಕೂಟ, ನಾದಬಿಂದು ಕಲೆ ಹೀಗೆ ಅನೇಕ ವಿಷಯಗಳನ್ನು ಈ ಕೃತಿ ನಿರೂಪಿಸುವುದು.

 ೩೦೩ ಕಂದ ಪದ್ಯಗಳ ಈ ಕೃತಿಯ ವಿವರಣೆಯಲ್ಲಿ ಒಂದು ಕ್ರಮಬದ್ಧತೆ ಇದೆ. ವೀರಶೈವರಿಗೆ ಬೇಕಾಗುವ ಅನುಭವದ ಜ್ಞಾನಾಮೃತವನ್ನು ಒದಗಿಸುವ ಕೃತಿ “ಷಟ್‌ಸ್ಥಲ ಜ್ಞಾನಾನುಭವ” ಎಂಬ ತಲೆಬರೆಹ ಸಾರ್ಥಕತೆಗೆ ಸಮರ್ಥತೆ ಒದಗಿಸುವುದು, ಬಸವ ಅಲ್ಲಮ ಚೆನ್ನಬಸವಣ್ಣನವರ ಕೃತಿಗಳ ಆಳವಾದ ಜ್ಞಾನ ಇವರಿಗಿತ್ತೆಂಬುದಕ್ಕೆ ನಿದರ್ಶನ ಈ ಕೃತಿ.

 , ಲಿಂಗಪೂಜಾ ವಿಧಾನ :

೫೭. ಕಂದ ಪದ್ಯಗಳ ಚಿಕ್ಕ ಕೃತಿಯಿದು, ಮಾನವನ ಜೀವನವು ಕೇವಲ ಇಂದ್ರಿಯ ಲಾಲಸೆಗಳ ಪೂರೈಕೆಯ ಯತ್ನವಲ್ಲ., ಜನನ ಮರಣಗಳ ಮಧ್ಯದ ಅನುಭವವೂ ಅಲ್ಲ. ಈ ಹುಟ್ಟು ಸಾವುಗಳ ಎಲ್ಲೆ ಮೀರಿ ಮಾನವನು ಅಮೃತತ್ತ್ವ ಪಡೆಯಬಹುದು. ಪ್ರಪಂಚದ ವಿಶಿಷ್ಟ ಆಗು ಹೋಗುಗಳಲ್ಲಿ ಮಾನವನಿಗೆ ಮೀರಿದ ಇನ್ನೊಂದು ಶಕ್ತಿ ಇದೆ. ಅದು ಎಲ್ಲವನ್ನೂ ನಡೆಸುತ್ತದೆ. ಅದೇ ಪರಮ ಸತ್ಯ. ಅದನ್ನೇ ನಾವು ದೇವರೆಂದು ‘ಪರವಸ್ತುʼ ಎಂದು, ಪರಮಾತ್ಮವೆಂದು, ಪರಬ್ರಹ್ಮವೆಂದು ಕರೆಯುತ್ತೇವೆ. ಅಂಥ ಪರವಸ್ತುವನ್ನು ವೀರಶೈವರು ತಮ್ಮ ಪರಿಭಾಷೆಯಲ್ಲಿ ‘ಲಿಂಗ’ ವೆಂದು ಕರೆದರು. ‘ಲಿಂಗ’ ಪದಕ್ಕೆ ಸ್ಥಲ, ದೇವರು, ಪರಶಿವ, ಪರಬ್ರಹ್ಮ ಶೂನ್ಯ, ಪರವಸ್ತು, ಅನು, ಘನ, ಮುಂತಾದ ಪರ್ಯಾಯ ಪದಗಳನ್ನುಪಯೋಗಿಸಿರುವರು. ಜಗದುತ್ಪತ್ತಿ-ಸ್ಥಿತಿ- ಲಯಗಳಿಗೆ ಕಾರಣೀಭೂತವಾದುದು ಯಾವುದೋ ಅದೇ ಲಿಂಗ, “ಲಿಂಗ ಮಧ್ಯೆ ಜಗತ್ ಸರ್ವಂʼ’ ಇಂಥ ವ್ಯಾಪಕವಾದ ಲಿಂಗದ ಆರಾಧನೆ, ಅರ್ಚನೆ, ಅರ್ಪಣ, ಅನುಭವಗಳಿಂದ ಪ್ರಕಟಿಸಬೇಕು. ಅದಕ್ಕಾಗಿ ಲಿಂಗಪೂಜೆ ಅಗತ್ಯ ಸಾಧನ. “ಪಶುಭಾವದ ನಿಮ್ಮ ಸ್ಥಿತಿಯಿಂದ ದೇವಭಾವದ ಸರ್ವೋತ್ಕೃಷ್ಟ ಸ್ಥಿತಿಗೇರಿ ನಿಂತುಕೊಳ್ಳಲು ಬಯಸುವರು ಅನುಸರಿಸಬೇಕಾದ ಸಾಧನಗಳಲ್ಲಿ ಲಿಂಗಪೂಜೆ ಮಹತ್ವದ್ದು.

ಮುನ್ನನಾದಿಯ ಪರಾತ್ಪರ ನಿರಂಜನ ಶರಣ

ತನ್ನ ಹೃತ್ಕಮಲದ ಪರಜ್ಯೋತಿ ಲಿಂಗವನ್ನು

ಭಿನ್ನವಿಲ್ಲದೆ ವಾಮ ಕರಕಂಜದೊಳು ಪಿಡಿದು

ತನ್ನ ತಾನರ್ಚಿಸುತಿಹ…ʼʼ

ಇದರ ಆರಾಧಕನು ಅಷ್ಟವಿಧಾರ್ಚನೆ-ಷೋಡಷೋಪಚಾರಗಳ ಮೂಲಕ ಆರಾಧಿಸಿ ಲಿಂಗಾಂಗಿಯಾಗುವ ನಿಲುವನ್ನು ೫೭ ಕಂದ ಪದ್ಯಗಳಲ್ಲಿ ಸುಲಭವಾಗಿ ನಿರೂಪಿಸಿದ ಕೃತಿ “ಲಿಂಗಪೂಜಾ ವಿಧಾನ”. ಆಹ್ವಾನ-ಆಸನ-ಧ್ಯಾನ-ಅರ್ಘ್ಯ-ಪಾದ್ಯ, ಅಚಮನ,

ಮಿಶ್ರಪಂಚಾಮೃತ, ಸಾಲಭಿಷೇಕ, ವಸ್ತ್ರ-ಪುಷ್ಪ-ಪತ್ರಿ -ನೈವೇದ್ಯ, ಘಂಟಾನಾದ, ಪ್ರದಕ್ಷಿಣೆ, ನಿರಾಜನ ಮುಂತಾದ ಆಚರಣೆಗಳಲ್ಲಿ ಈ ಕೃತಿ ವೀರಶೈವ ಪರಿಭಾಷೆಯ ಅರ್ಥದಲ್ಲಿ ಅದ್ದಿ ತೆಗೆದ ವೀರಶೈವಾಚರಣೆಯ ನಿಲುವನ್ನೇ ಪ್ರತಿಪಾದಿಸುವ ಶಕ್ತಿ ಪಡೆದಿದೆ.

೫. ಭಕ್ತಿ ಬಿನ್ನಹ ದಂಡಕ:

“ದಂಡಕ” ವಿಶಿಷ್ಟ ಸಾಹಿತ್ಯ ಪ್ರಕಾರ. “ಭಕ್ತ ಬಿನ್ನಹ ದಂಡಕʼʼವು ಮೈಲಾರ ಶರಣರಿಂದ ಅಗಲಿ ನಿಂತ ಕುಸುಮ. ೫-೫ ಮಾತ್ರೆಗಳಂತೆ ಮುನ್ನಡೆವ ಈ ದಂಡಕವ ಪಾದವಿಭಾಗವಿಲ್ಲದೆ ನಿಯತವಾದ ಗಣಗಳಿಂದ ಕೂಡಿ ದಂಡಕವು ಸ್ವರೂಪದಲ್ಲಿ ಬೆಳೆದು ನಿಂತ ಕೃತಿ. ಶರಣರು ಗುರು ಚೆನ್ನವೀರರಲ್ಲಿ ಭಕ್ತಿ ಬಿನ್ನಹದ ವಿಜ್ಞಾಪನೆಗೈದು ಅವರ ಕೃಪಾನುಗ್ರಹಕ್ಕೆ ಸಿಲುಕಿ ದೀಕ್ಷೆಪಡೆದು ಶುದ್ಧಾಂತಃಕರಣರಾಗಿ, ಲಿಂಗ ಭಕ್ತರಾಗಿ ನಿಂತ ನಿಲವೇ ಇಲ್ಲಿಯ ವಸ್ತು. ಶಿಷ್ಯನ ನಿರ್ಮಲಾಂತಃಕರಣದ ಭಕ್ತಿಯ

ಹೊನಲೇ  ಮೂಲ ಪ್ರೇರಕಶಕ್ತಿಯಾಗಿ ಕೃತಿರೂಪ ತಾಳಿದೆ. ಜನತೆಯಲ್ಲಿ ಪ್ರಮುಖಜ್ಞಾನವನ್ನರಳಿಸುವುದೇ ಬಸವಲಿಂಗ ಶರಣರ ಕೃತಿಗಳ ಗುರಿ ಆಗಿರುವುದರಿಂದ ಚಿಕ್ಕದಾದ ಈ ಕೃತಿ ಅಂಥ ಕ್ರಿಯಾಚರಣೆಯಲ್ಲಿ ಮಗ್ನರಾಗಬೇಕೆಂದು ಪ್ರೇರೇಪಿಸುವ ದಂಡಕ ಕೃತಿ, ದಂಡಕ ಸಾಹಿತ್ಯಕ್ಕೆ ಒಂದು ಕೊಡುಗೆ, ನಿದರ್ಶನ ಗದ್ಯದ ಮಾದರಿಗೆ ನಿದರ್ಶನ ಕೃತಿ.

೬. ಶಿವಾನುಭವ ದರ್ಪಣ:

ವೈವಿಧ್ಯಮಯವಾದ ವ್ಯಾಪಕವಾದ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ವೃತ್ತಗಳಲ್ಲಿ ರಚನೆಗೊಂಡು ಪ್ರೌಢಭಾಷೆಯಿಂದೊಡಗೂಡಿದುದನ್ನು ʼಓದುಗಬ್ಬ’ ಎಂದೂ ಸುಲಭವಾದ ಸರಳಗನ್ನಡದ ದೇಸಿ ಮಟ್ಟುಗಳಲ್ಲಿ ರಾಗ-ತಾಳ-ನಿರ್ದೆಶನದೊಂದಿಗೆ ಹಾಡಲು ಬರುವಂಥವುಗಳನ್ನು ಹಾಡುಗಬ್ಬ’ – ಸ್ವರವಚನಗಳೆಂದು ವಿಭಜಿಸಬಹುದು. ಇದರಲ್ಲಿ ೨ನೆಯದಾದ ಸ್ವರವಚನಗಳು, ಶಿವಶರಣರಲ್ಲಿ ಹರಿದಾಸರಲ್ಲಿ, ಕೈವಲ್ಯಕಾರರಲ್ಲಿ, ಅನುಭಾವಿ ಕವಿಗಳಲ್ಲಿ ಕಾಲಕಾಲಕ್ಕೆ ರಚನೆಗೊಂಡು ಒಂದೊಂದು ಪರಪರೆಯನ್ನೇ ನಿರ್ಮಿಸಿದೆ. ಶಿವದಾಸ-ಹರಿದಾಸರಿಂದ ಹೊರಹೊಮ್ಮಿದ ಇದು ಮುಂದೆ ಕೈವಲ್ಯಕಾರರಲ್ಲಿ ಸಂಗೀತದ ಸ್ಪರ್ಶದಿಂದ ವ್ಯಾಪ್ತಿಗೊಂಡಿದೆ. “ಕೈವಲ್ಯ ಪದ್ಧತಿ” ಯೆಂಬ ಹೆಸರನಲ್ಲಿಯೂ ರಚನೆಗೊಂಡಿದೆ.

 ಸ್ವರವಚನ-ಕೀರ್ತನ-ಕೈವಲ್ಯ ಸಾಹಿತ್ಯವಾಹಿನಿಯಲ್ಲಿ ಮಿಂದು ತಮ್ಮದೇ ಆದ ಸ್ವತಂತ್ರ ಪ್ರತಿಭೆಯಲ್ಲಿ ಮೆರೆದ ಮೈಲಾರ ಬಸವಲಿಂಗ ಶರಣರ ಆತ್ಮಾನುಭವದಿಂದ ಹೃದಯ ತುಂಬಿ ಹೊರಹೊಮ್ಮಿದ ಹಾಡುಗಳನ್ನು ಸಂಗ್ರಹಿಸಿ-ಸಂಕಲಿಸಿ “ಶಿವಾನುಭವದರ್ಪಣ” ವೆಂಬ ಅಭಿದಾನದಿಂದ ಸಂಪಾದಿಸಿದ ಗೀತೆಗಳ ಪುಂಜವೇ ಈ ಕೃತಿ. ಸಾಹಿತ್ಯ-ತತ್ತ್ವ ಸಂಗೀತಗಳಿಂದ ಮುಪ್ಪುರಿಗೊಂಡ ಈ ಕೃತಿಯಲ್ಲಿಯ ಹಾಡುಗಳ ರಾಗ ವೈವಿಧ್ಯ ವಿಷಯ ವೈವಿಧ್ಯಗಳ ಮಜಲುಗಳು ಮೈಲಾರ ಶರಣರ ವೈದುಷ್ಯ ಮತ್ತು ಅನುಭಾವಗಳಿಗೆ ಸಾಕ್ಷಿಗಳಾಗಿವೆ.

 ಭಕ್ತಿ-ಜ್ಞಾನ-ಕ್ರಿಯೆಗಳ ತ್ರಿವೇಣಿ ಸಂಗಮವೇ ಶಿವಾನುಭವದ ಕೇಂದ್ರ. ಇವುಗಳ ನಿಜವಾದ ಅನುಭವವೇ ಶಿವಾನುಭವ. ಈ ಶಿವಾನುಭವ ಸಂಪಾದನೆಯೇ ಶೂನ್ಯಸಂಪಾದನೆ. ಇದನ್ನು ಸಾಧಿಸುವುದೇ ವೀರಶೈವರ ಪರಮ ಗುರಿ. ಇದರ ಸಾಧನೆಗೆ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳೇ ಮೂಲ ತಳಹದಿ. ಸಾಧಕನು ಇವುಗಳನ್ನು ನಿಜಾಚರಣೆಗೆ ತಂದಾಗ ಅನುಭವಿಯೆನಿಸುವನು; ಈ ಅನುಭವ ಉಳ್ಳವನೇ ಶಿವಾನುಭವಿ. ಶಿವಾನುಭವಿಯಾಗಬೇಕಾದ ತತ್ತ್ವಾಚರಣೆಗಳನ್ನು ಪರಿಚಯಿಸಿಕೊಡುವ ಗ್ರಂಥ “ಶಿವಾನುಭವದರ್ಪಣ”.

ಶಿವಾನುಭವ ದರ್ಪಣವು ಮಹದರಿವಿನ ಕುರುಹು. ಶಿವಾನುಭವ ಪಡೆಯಲು ಅರಿವು ಸತ್ಯಸಾಧನ. ದರ್ಪಣವಿಲ್ಲದೆ ತನ್ನ ನಿಲುವನ್ನು ಕಾಣಲು ಹೇಗೆ ಅಸಾಧ್ಯವೋ ಹಾಗೆ ಶಿವಾನುಭವದ ಮಹದರಿವಿಲ್ಲದೆ ಸ್ವಸ್ವರೂಪದ ಪರಿಪೂರ್ಣತೆ ಅಳವಡುವಂತಿಲ್ಲ. ಪರಿಪೂರ್ಣತೆ ಅಳವಡಲು ‘ಶಿವಾನುಭವ ದರ್ಪಣ ʼಕೃತಿ ಮಾರ್ಗದರ್ಶಕ.

ಡಾ.ಫ.ಗು.ಹಳಕಟ್ಟಿ, ಪ್ರೊ.ಶಿ.ಶಿ.ಬಸವನಾಳ ಅವರಿಂದ ಸಂಪಾದಿತ ಈ ಕೃತಿ ಈಗ ನನ್ನಿಂದ “ಮೈಲಾರ ಬಸವಲಿಂಗ ಶರಣರ ಸಮಗ್ರ ಸಾಹಿತ್ಯ’ ಎಂಬ ಗ್ರಂಥದಡಿಯಲ್ಲಿ ಹೆಚ್ಚು ಪದ್ಯಗಳು ಸೇರಿ ೭೫ ಪದ್ಯಗಳ ಸಂಕಲನ ಸಂಗ್ರಹದಲ್ಲಿ ಪ್ರಕಟಗೊಂಡಿದೆ.

ಫ.ಗು.ಹಳಕಟ್ಟಿ, ಶಿ.ಶಿ. ಬಸವನಾಳ ಅವರಲ್ಲಿ ವಿಭಜನೆಗೊಳಪಡಿಸದೆ ಸಂಪಾದಿಸಿದರೆ, ನಾನು ಸಂಪಾದಿಸಿದ ಕೃತಿಯಲ್ಲಿ ೮ ವಿಭಜನೆಗಳನ್ನು ಸಂಕಲಿಸಿ ಪ್ರಕಯಿಸಿದೆ. ಅವು- 

೧. ಅಷ್ಟಾವರಣ-| ೨. ಅಷ್ಟಾವಣ – ೩. ಪಂಚಾಚಾರ ೪. ಷಟ್‌ಸ್ಥಲ ೫, ನರಸುತ – ಗುರುಸುತ, ಭವಿ-ಭಕ್ತ ಇತ್ಯಾದಿ ೬. ಬೆಡಗಿನ ಪದಗಳು ೭. ಚರಿತ್ರೆ ೮. ಮಂಗಳಾರತಿ.

ಅಷ್ಟಾವರಣ ಭಾಗ -೧ ರಲ್ಲಿ ಗುರು-ಲಿಂಗ- ಜಂಗಮ- ಪಾದೋದಕ-ಪ್ರಸಾದ- ವಿಭೂತಿ-ರುದ್ರಾಕ್ಷಿ-ಮಂತ್ರಗಳನ್ನು ಕುರಿತಂತೆ ೮ ವಿಧಗಳಿಗೆ ಅನ್ವಯಿಸಿ ಪದ್ಯಗಳನ್ನು ಮೀಸಲಾಗಿರಿಸಿ ಪದ್ಯ ೧ರಿಂದ ೩೮ರವರೆಗೆ ವಿವಿಧ ರಾಗ-ತಾಳ-ನಿರ್ದೇಶನದಡಿಯಲ್ಲಿ

“ಗುರು ಚೆನ್ನವೀರ” ಅಂಕಿತದಿಂದ ಪಲ್ಲವಿ-ಅನುಪಲ್ಲವಿಗಳ ಮೂಲಕ ೩ ನುಡಿಯಿಂದ ೧೫-೨೦ ನುಡಿಗಳವರೆಗೆ ಒಂದೊಂದು ತತ್ತ್ವದ ವಿವರಣೆ ನೀಡಿದ್ದಾರೆ, ಮೈಲಾರ ಬಸವಲಿಂಗ ಶರಣರು.

ಮೈಲಾರ ಬಸವಲಿಂಗ ಶರಣರು ಅಷ್ಟಾವರಣ ಭಾಗ-೨ರಲ್ಲಿ ಪದ್ಯ ೩೯ರಿಂದ ಪದ್ಯ ೪೮ರವರೆಗೆ ಒಂದೊಂದು ಪದ್ಯಾಂತರ್ಗತದಲ್ಲಿ ಒಂದೊಂದು ನುಡಿಯಲ್ಲಿ ಒಂದೊಂದು ಅಷ್ಟಾವರಣ ಪರಿಕಲ್ಪನೆಗಳ ವಿವರ ನೀಡಿದ್ದಾರೆ. ಪದ್ಯ ೨೬, ಮಲ್ಲಿಕಾಮಾಲಾವೃತ್ತ ಪದ್ಯ ೪೪ ಚಿತ್ರಪದವೃತ್ತ, ಪದ ೪೫ ವಜ್ರನಾಮವೃತ್ತ ಪದ್ಯ ೪೬ ಸುಲಭ ನಾಮವೃತ್ತ (೨ ಸಾಲು), ಪದ್ಯ ೪೭ ವಿದ್ಯುನ್ಮಾಲಾವೃತ್ತ (೪ ಸಾಲು)ಗಳಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ತಿರುಗಿಸಿ ಪರಿವರ್ತಿಸಿದ ಕ್ರಿಯೆ ಇಲ್ಲಿದೆ. ಕೆಲವೊಂದು ಪದ್ಯಗಳಲ್ಲಿ ತತ್ತ್ವ ಮತ್ತು ಛಂದೋರೂಪಗಳ ಸಮನ್ವಯದೊಂದಿಗೆ ಪದ್ಯ ಕಟ್ಟಿ ರಚಿಸಿದುದು ಅವರ ವಿಶೇಷತೆಯನ್ನು ಸೂಚಿಸುವುದು. ಉದಾ:- (ಪದ) ಅಷ್ಟಾವರಣ ವಾರ್ಧಕ (ಪರತತ್ತ್ವಮೂರ್ತಿಯಷ್ಟಾವರಣ) (ಪಲ್ಲವಿ) ಇಂಥ ವಾರ್ಧಕ ಷಟ್ಪದಿಯ ಆರಂಭದ ಪದ್ಯಗಳು ‘ಸೂಚನೆ’ ಎಂಬ ಸ್ವರೂಪದ ಪಲ್ಲವಿಯನ್ನು ಹೊಂದಿ ಷಟ್ಪದಿಗಿರುವ ಮಾತ್ರಾ ಅಂಥ ಛಂದಗಳೆರಡರ ಮಿಶ್ರಣವನ್ನು ಕಾಣುತ್ತೇವೆ. ಕೆಲವೆಡೆ ಶೈವನಿರಸನ ಸ್ಥಲ, ಗುರುಕರುಣ ಸ್ಥಲ, ವಿಭೂತಿ ಸ್ಥಲ(ಪದ್ಯ೩೩), ರುದ್ರಾಕ್ಷಿ ಸ್ಥಲ (ಪದ್ಯ -೩೭) ಪಂಚಾಕ್ಷರಿ ಸ್ಥಲ (ಪದ್ಯ ೩೮) ಎಂಬ ತಲೆಬರಹದಡಿಯಲ್ಲಿ ಅಷ್ಟಾವರಣ ವಿವರಣೆ ನೀಡಿದ್ದಾರೆ.

“ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ’ ಎಂಬುದು ವೀರಶೈವಾನುಭವಿಗಳ ನುಡಿ.ಅಂಗಸ್ವರೂಪವಾದ ಅಷ್ಟಾವರಣಗಳಿಗೆ ಪ್ರಾಣಸ್ವರೂಪವಾದ ಪಂಚಾಚಾರಗಳು ಮುಖ್ಯ. ಅವುಗಳಿಗಿರುವ ಅವಿನಾಭಾವ ಸಂಬಂಧವನ್ನರಿತ ಮೈಲಾರ ಬಸವಲಿಂಗ ಶರಣರು ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರಗಳ ನಿಲುವನ್ನು ೨ ಪದ್ಯಗಳಲ್ಲಿ ಹುದುಗಿಸಿದ್ದಾರೆ. ಆದರೆ ಒಂದು ಪದ್ಯದಲ್ಲಿ ಪಂಚಾಚಾರಗಳ ಜೊತೆ “ಧರ್ಮಾಚಾರ ಸೇರಿಸಿ ವೀರಶೈವಾಚರಣೆಯ ಕೇಂದ್ರಬಿಂದುವನ್ನು ಧರ್ಮಾಚಾರ ಎಂಬ ಆಚಾರದಲ್ಲಿ ವಿವರ ನೀಡಿದುದು ಅವರಿಗಿರುವ ವಿಶೇಷತೆಯೂ ಆಗಿದೆ. ಅದು   ಹೀಗಿದೆ:

ಗುರುಭಕ್ತಿ ಲಿಂಗಪೂಜೆಯು ಜಂಗಮ ದಾಸೋಹ

ತೀರ್ಥ ಸೇವನೆ ಪ್ರಸಾದ ಭೋಗ

ನಿರುಪಮಖಂಡ ಭಕ್ತಿಯನುಳ್ಳ ಭಕ್ತಿಗೆ

ಹರಣ ಕಿರಣವಾಗೊಪ್ಪುವುದೆ ಧರ್ಮಾಚಾರʼʼ

“ಪಂಚಾಚಾರ ಸುಮಾರ್ಗದೊಳು” ಎಂಬ ಪದ್ಯದಲ್ಲಿ ೫ ಆಚಾರ ಲಿಂಗಸಂಬಂಧಗಳೊಂದಿಗೆ ವಿವರಿಸಿ ಪರಿಶುದ್ಧ ಆಚರಣೆಯಿಂದಾಗುವ ಶರಣ ಬದುಕನ್ನು ಕಾಯಕ ದಾಸೋಹ, ನಿರಹಂಕಾರ, ಕಿಂಕರತ್ವ, ವ್ಯಷ್ಟಿ- ಸಮುಷ್ಟಿಗಳ ನಿಲುವನ್ನು

ಪ್ರದರ್ಶಿಸಿ ಮಾರ್ಗ ತೋರಿಸಿದ್ದಾರೆ.

೪. ಷಟ್ ಸ್ಥಲಗಳು: ಧರ್ಮ-ನೀತಿ-ತತ್ತ್ವಗಳ ಪ್ರತಿನಿಧಿಗಳಾದ ಅಂಗ, ಪ್ರಾಣ, ಆತ್ಮ ಸ್ವರೂಪಗಳಾದ ಅಷ್ಟಾವರಣ-ಪಂಚಾಚಾರ-ಷಟ್‌ಸ್ಥಲಗಳು ವೀರಶೈವ ಸಿದ್ಧಾಂತದ ಕೇಂದ್ರಬಿಂದುಗಳು. ಇವುಗಳಲ್ಲಿ ಷಟ್‌ಸ್ಥಲಗಳ ಭಾಗ ಒಂದು. ವೀರಶೈವ ಸಿದ್ಧಾಂತವಾದ “ಷಟ್‌ಸ್ಥಲ ಸಿದ್ಧಾಂತ” ವನ್ನು ಶಿವಯೋಗದ ಮೂಲಕ ಹೇಗೆ ಸಾಧನಾಕ್ರಮ ಕೈಗೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ. ಸಾಧಕ ಅಷ್ಟಾವರಣವನ್ನು ಅಂಗವಾಗಿಸಿ, ಪಂಚಾಚಾರವನ್ನೇ ಪ್ರಾಣವಾಗಿಸಿ, ಷಟ್‌ಸ್ಥಲವನ್ನೇ ಆತ್ಮವಾಗಿಸಿ ನಡೆವುದು ಮುಖ್ಯ. ಚಕ್ರದಳ-ಮುಖಲಿಂಗ-ಪ್ರಸಾದ-ಜಪಾಂತರ್ಗತ ಷಟ್‌ಸ್ಥಲವನ್ನು ತತ್ತ್ವ ಹಾಗೂ ಛಂದಸ್ಸಿನ ಅವಿನಾಭಾವದಿಂದ ಪರಿವರ್ಧಿನಿ ಷಟ್ಪದಿಯಲ್ಲಿ ರಚನೆಗೊಂಡ “ಸಾಲು ಚಕ್ರದಳ ಕುಳದ ಸುಹಂಸನ” ಎಂಬುದು “ಷಟ್‌ಚಕ್ರ ಪರಾಗ ಪರಿವರ್ಧಿನಿ” ಅಥವಾ ‘ಷಟ್ ಸ್ಥಲ ನಿರ್ಣಯ ಪದ” ಎಂಬ ಅಭಿದಾನದಿಂದ ಸೂಚಿಸಿದುದು ಶರಣರ ಆಧ್ಯಾತ್ಮವಿದ್ಯೆಯ

ಚಮತ್ಕಾರಕ್ಕೆ ನಿದರ್ಶನ.

ವೀರಶೈವ ಸಿದ್ಧಾಂತವನ್ನು ಶಿವಶರಣರು ʼಷಟ್‌ಸ್ಥಲ ನಿರಾಭಾರಿ ವೀರಶೈವʼʼ ಎಂದು ಕರೆದಂತೆ ಇವರುʼʼ ಷಟ್‌ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತʼʼದ ಮೂಲಭೂತ ತತ್ತ್ವಗಳನ್ನು ಚಿಕ್ಕ ಚಿಕ್ಕ ಪದ್ಯಗಳಲ್ಲಿ ರಚಿಸಿದ್ದಾರೆ. ಎರಡು ಕೃತಿಗಳನ್ನೂ ಮೀಸಲಾಗಿರಿಸಿ ವೀರಶೈವ ವೆಂದರೇನು ? ಶಿವನಾರು ಜೀವನಾರು ? ಅವನ ಕೊನೆಯ ನಿಲುವೇನು ? ಎಂಬಂಥ ಮೂಲಭೂತ – ಪ್ರಶ್ನೆಗಳನ್ನೊಡ್ಡಿ ಅರ್ಥೈಸುತ್ತ ಹೋದುದು “ವೀರಶೈವ ದ ಸ್ಪಷ್ಟ ಹೆಜ್ಜೆಗಳನ್ನು ನಿಚ್ಚಳವಾಗಿ ಶೈವ ಮಿಶ್ರಮಾಡದೆ ನಿರೂಪಿಸುತ್ತಾರೆ. ʼʼಖಚಿತತೆ ಸಂಕ್ಷಿಪ್ತತೆ-ಸ್ಪಷ್ಟತೆʼʼ ಇವರ ಕೃತಿಗಳ ಒಟ್ಟು ಸಾರವಾಗಿದೆ. ವಿಜ್ಞಾನ ಧೋರಣೆಯ ಬುದ್ಧಿ ಇವರಿಗಿರುವುದು ಇವರ ಕೃತಿಗಳ ಅವಲೋಕನದಿಂದ ಸಾಧ್ಯವಾಗುತ್ತದೆ.

ವೀರಶೈವದಲ್ಲಿ ತುಂಬಾ ಪ್ರಚುರತೆ ಪಡೆದ ಮೈಲಾರ ಬಸವಲಿಂಗ ಶರಣರ ಕೃತಿಗಳು ಶಿವಾನುಭವ ಬೋಧಕ ಪಠ್ಯಗಳಂತೆ, ಕೀರ್ತನೆಕಾರರಿಗೆ ಮಂಗಲಪದ್ಯಗಳಂತೆ ಪಾರಾಯಣ, ಮಾಡುವವರಿಗೆ ಕೈಪಿಡಿಗಳಂತೆ ಉಪಯುಕ್ತವಾಗಿದೆ. ಮಠಗಳಲ್ಲಿ ಪ್ರಾರ್ಥನಾಗೀತೆಗಳಾಗಿ, ಭಜನೆಪದಗಳಾಗಿ, ವೀರಶೈವದ ಖಚಿತ ವಿವರ ನೀಡುವ ವಿದ್ವಾಂಸರಿಗೆ ಉಲ್ಲೇಖನೀಯ ಪದ್ಯಗಳಾಗಿ ನಿಂತಿರುವುದು ಅವರ ಕೃತಿಗಳಿಗಿರುವ ನೆಲೆ-ಬೆಲೆಯನ್ನು ಅವರಿಗಿರುವ ಸ್ಥಾನವನ್ನು ಸೂಚಿಸುವಂತಿವೆ. ಒಟ್ಟು ಶರಣ ಸಾಹಿತ್ಯ

ಮುಂದೆ ರಚಿತವಾದ ಸರ್ವಮತಧರ್ಮದವರ ಮೇಲೆ, ಸಾಹಿತ್ಯದ ಮೇಲೆಪ್ರಭಾವ ಬೀರಿದ್ದನ್ನು ಮರೆಯುವಂತಿಲ್ಲ.

.- ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಭಾರತ ಅನ್ನುವುದು ಕೇವಲ ಒಂದು ಹೆಸರಲ್ಲ, ಅದು ಕೇವಲ ಒಂದು ದೇಶ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಸತ್ಯದ ಪ್ರತೀಕವಾಗಿ, ತ್ಯಾಗಕ್ಕೆ ಪೂರಕವಾಗಿ, ಅಹಿಂಸೆಯ ಮುಖವಾಗಿ, ಆಧ್ಯಾತ್ಮದ ನೆಲೆಯಾಗಿ ಸನಾತನ ಸತ್ಯದ ಮೌಲ್ಯಗಳನ್ನು ಒಳಗೊಂಡು, ಜೀವನ ಸಿದ್ಧಾಂತವನ್ನು ತಿಳಿಸುವುದೇ ಭಾರತ.

ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭಾರತದ ಅಂತರಾತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿನ ಆಧ್ಯಾತ್ಮವನ್ನು, ಭಾರತದಲ್ಲಿನ ಸಂಸ್ಕೃತಿಯನ್ನು, ಭಾರತದ ಜೀವನ ಮೌಲ್ಯಗಳನ್ನು ಹಾಗೂ ಭಾರತದ ಆದರ್ಶ ಇತಿಹಾಸವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತದ ಪರಿಚಯ ನಮಗಾಗುತ್ತದೆ. ಭಾರತವೆಂದರೆ ಕೇವಲ ಭವ್ಯವಾದ ದೇವಾಲಯಗಳು, ಹಿಮಾಲಯ, ಗೌರಿಶಂಕರ ಶಿಖರ, ತಾಜ್ ಮಹಲ್, ಕೆಂಪುಕೋಟೆ, ಕಾಶಿ, ರಾಮೇಶ್ವರ, ಶ್ರೀಶೈಲ, ಗಂಗಾ ನದಿ ಇವು ನಿಜವಾದ ಭಾರತವಲ್ಲ. ನಿಜವಾಗಿಯು ಭಾರತ ಅರ್ಥವಾಗುವುದು ಇಲ್ಲಿರುವ ಸನಾತನವಾಗಿ ಉಳಿದು, ನಡೆದುಕೊಂಡು ಬಂದಿರುವ “ವಸುಧೈವ ಕುಟುಂಬಕಂʼʼ ಎಂಬ ಉದಾತ್ತವಾದ, ವಿಶಾಲವಾದ ಸಿದ್ಧಾಂತದಿಂದಾಗಿ ಎಂದರೆ ತಪ್ಪಾಗಲಾರದು. ʼʼತಿರಕೊಂಡ ತಂದು ಕರಕೊಂಡು ಉಣಬೇಕು” ಎಂಬ ಸಂಸ್ಕೃತಿಯಿಂದಾಗಿ ನಮ್ಮ ಭಾರತವನ್ನು ಪೂಜಿಸಲಾಗುತ್ತಿದೆ. ಇಲ್ಲಿರುವ ಮಾನವೀಯ

ಮೌಲ್ಯಗಳ ಪಾಲನೆಯಿಂದಾಗಿ ಹಾಗೂ ತಾನು ಯಾರು? ಎಂಬುದನ್ನು ತಿಳಿದುಕೊಳ್ಳುವ ಕಲೆಯನ್ನು ತಿಳಿಸಿಕೊಡುವುದೆ ಭಾರತ.

ಧರ್ಮ-ಆಧ್ಯಾತ್ಮದ ತಾಯೊಡಲು

 ಯೋಗ-ಶಿವಯೋಗದ ಮೇಲೊಡಲು

 ತತ್ತ್ವ-ಸಿದ್ಧಾಂತಗಳ ಹಾಲ್ಗಡಲು

ಸಂತ-ಶರಣರ ಸಿರಿಗಡಲು

 ಜಗಕೆ ಜಗದ್ಗುರುವಾದ ಪುಣ್ಯಭೂಮಿ

ಚೆನ್ನನ ಅಭಿಮಾನ, ಸ್ವಾಭಿಮಾನದ ಭರತಭೂಮಿ

ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿ ಅನೇಕ ಧರ್ಮಗಳು ಸಹಬಾಳ್ವೆಯಿಂದ ಇವೆ. ‘ಅನೇಕತೆಯಲ್ಲಿ ಏಕತೆ’ ಎಂಬುದು ಭಾರತದ ಹೆಮ್ಮೆಯಾಗಿದೆ. ಧರ್ಮ ಮತ್ತು ಆಧ್ಯಾತ್ಮ ಭಾರತದ ನಿಜವಾದ ಮೂಲ ಸತ್ವವಾಗಿದೆ. ಭಾರತದಲ್ಲಿ ಹುಟ್ಟಿರುವ ಸಂತರು, ಮಹಾಂತರು, ಮಹಾಪುರುಷರು, ಋಷಿಗಳು ಈ ಭೂಮಂಡಲದ ಬೇರೆ ಯಾವ ಪ್ರದೇಶದಲ್ಲ ಅವತರಿಸಿರುವುದಿಲ್ಲ. ಇಲ್ಲಿ ಕೃಷ್ಣ-ರಾಮ, ಬುದ್ಧ-ಬಸವ, ನಾನಕ-ಮಹಾವೀರ- ವಿವೇಕಾನಂದರಂತಹ ಅನೇಕ ವಿಭೂತಿ ಪುರುಷರು ಅವತರಿಸಿದ್ದಾರೆ. ಅದಕ್ಕಾಗಿಯೇ  ಇದನ್ನು ಎಲ್ಲರೂ ‘ಭಾರತ ಮಾತೆ’ ಎಂದು ಗೌರವಿಸುತ್ತಾರೆ. ವಿವೇಕಾನಂದರು ವಿದೇಶ ಪ್ರವಾಸವನ್ನು ಮುಗಿಸಿ ಭಾರತದ ನೆಲದಲ್ಲಿ ಕಾಲಿಡುವ ಮೊದಲು ಈ ತಾಯ್ ನೆಲವನ್ನು ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಇದೊಂದು ಘಟನೆ ಸಾಕು ಭಾರತ ಪವಿತ್ರ ಭೂಮಿ ಎಂದು ತಿಳಿಯಲು. ಈ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.

• ಡಾ. ಎಂ. ಶಿವಕುಮಾರಸ್ವಾಮಿ

ವೀರಶೈವರ ಧಾರ್ಮಿಕ ಪರಿವೇಶದಲ್ಲಿ ಇಷ್ಟಲಿಂಗಕ್ಕೆ ಇರುವ ಸ್ಥಾನ ಬೇರೆ ಯಾವುದಕ್ಕೂ ಇಲ್ಲ. ಅವರಿಗೆ ಇಷ್ಟತಮವಾದುದು ಇಷ್ಟಲಿಂಗ. ‘ಇಷ್ಟ’ ಎಂದರೆ ಪ್ರಿಯ, ಮನೋಹರ, ಹೃದಯಂಗಮ- (ನೋಡಿ-ʼʼಇಷ್ಟಾರ್ಥ ವ್ಯವಚ್ಛಿನ್ನಾ ಪದಾವಲೀ” -ದಂಡಿ, ಇಷ್ಟಾರ್ಥವೆಂದರೆ ರಮಣೀಯವಾದ ಅರ್ಥ). ವೀರಶೈವರಿಗೆ ಅತ್ಯಂತ ಪ್ರಿಯವಾದುದು, ರಮಣೀಯವಾದುದು ಇಷ್ಟಲಿಂಗ, ಅವರ ದೃಷ್ಟಿಯಲ್ಲಿ ಅದಕ್ಕೆ ಇರುವ ಅನಂತ ಶಕ್ತಿಗಳಲ್ಲಿ ಎರಡು ಶಕ್ತಿಗಳು ಮುಖ್ಯ : ಒಂದು, ಇಷ್ಟಾವಾಪ್ತಿಕರತ್ವ ಮತ್ತು ಎರಡು,

ಅನಿಷ್ಟಪರಿಹಾರಕತ್ವ; ಇಷ್ಟವಾದುದನ್ನು ಪಡೆಯುವಂತೆ ಮಾಡುವುದು ಮತ್ತು ಇಷ್ಟವಲ್ಲದುದನ್ನು ಪರಿಹರಿಸುವುದು. ಇಷ್ಟವಾದುದು ಎಂದರೆ ಯಾವುದು ? ಯಾವುದಾದರೂ ಆಗಿರಬಹುದು.  ಆದರೆ ಯಾವುದೇ ಆದರೂ ಅದು ಸುಖವನ್ನು ಕೊಡುವುದಾಗಿರಬೇಕು ಎಂಬುದು ಸಾಮಾನ್ಯ ಇಚ್ಛೆ, ಸುಖ ಎರಡು ವಿಧ-ಲೌಕಿಕ ಸುಖ ಮತ್ತು ಅಲೌಕಿಕ ಅಥವಾ ಪಾರಮಾರ್ಥಿಕ ಸುಖ ಎಂದು.

ಪ್ರೇಯಸ್ ಮತ್ತು ಶ್ರೇಯಸ್ :

ಇವುಗಳನ್ನು ಕಠೋಪನಿಷತ್ತು ಪ್ರೇಯಸ್’ ಮತ್ತು ‘ಶ್ರೇಯಸ್’ ಎಂದು ಕರೆಯುತ್ತದೆ. ‘ಪ್ರೇಯಸ್’ ಎಂದರೆ ಸಾಮಾನ್ಯವಾಗಿ ಪ್ರಿಯವಾದುದು. ಅದು ಶುದ್ಧ ಅಥವಾ ಕೇವಲ ಸುಖವಲ್ಲ, ದುಃಖ ಅಥವಾ ಅಪ್ರಿಯವಾದುದರೊಂದಿಗೆ ಕೂಡಿಕೊಂಡ ಸುಖ, ತಾತ್ಕಾಲಿಕ ಸುಖ. ಅದೇ ಲೌಕಿಕ ಸುಖ. ಇನ್ನು ‘ಶ್ರೇಯಸ್’ ಎಂಬುದು ಶ್ರೇಯಸ್ಕರ, ಅಂದರೆ ಕೇವಲ ಸುಖಪರ್ಯವಸಾಯಿ, ಪರಮಾನಂದ, ಶಿವಾನಂದ. ಅದೇ ಅಲೌಕಿಕ ಅಥವಾ ಪಾರಮಾರ್ಥಿಕ ಸುಖ. ಇವರೆಡರಲ್ಲಿ ಯಾರು ಯಾವುದನ್ನೂ ಆಯ್ದುಕೊಳ್ಳಬಹುದು ? ಜ್ಞಾನಿಯು ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಅಜ್ಞಾನಿಯು ಯೋಗ ಕ್ಷೇಮದ

ದೃಷ್ಟಿಯಿಂದ ಪ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಈ ಪ್ರಶ್ನೆಗೆ ಕಠೋಪನಿಷತ್ತು ನೀಡುವ ಉತ್ತರ, ನೋಡಿ

ಅನ್ಯಚ್ಛ್ರೆಯೋ ನ್ಯದುತೈವ ಪ್ರೇಯಃ, ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ|

ತಯೋಃ ಶ್ರೇಯ ಆದದಾನಾಯ ಸಾಧು ಭವತಿ, ಹಿಯತೇಽರ್ಥಾದ ಉ ಪ್ರೇಯೋ ವೃಣೀತೇ ||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ, ತೌ ಸಂಪರೀತ್ಯ ವಿವಿನಕ್ತಿ ಧೀರಃ |

ಶ್ರೇಯೋ ಹಿ ಧೀರೋಽಭಿ ಪ್ರೇಯಸೋ ವೃಣೀತೇ, ಪ್ರೇಯೋ ಹಿ ಮಂದೋ

ಯೋಗಕ್ಷೇಮಾದ್ ವೃಣೀತೇ || (ಕಠ., ೨.೧-೨)

ʼʼಒಂದು ಶ್ರೇಯಸ್ಸು ಮತ್ತೊಂದು ಪ್ರೇಯಸ್ಸು, ಅವೆರಡೂ ಮನುಷ್ಯನನ್ನು ಬೇರೆ ಬೇರೆ ಉದ್ದೇಶಗಳೊಂದಿಗೆ ಜೋಡಿಸುತ್ತವೆ. ಅವೆರಡರಲ್ಲಿ ಶ್ರೇಯಸ್ಸನ್ನು ಆಯ್ದುಕೊಳ್ಳುವವನಿಗೆ ಒಳ್ಳೆಯದಾಗುತ್ತದೆ. ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೋ ಅವನು ನಿಜವಾದ ಗುರಿಯಿಂದ ವಂಚಿತನಾಗುತ್ತಾನೆ. ಶ್ರೇಯಸ್ ಮತ್ತು ಪ್ರೇಯಸ್ ಎರಡೂ ಮನುಷ್ಯನೆಡೆಗೆ ಹೋಗುತ್ತವೆ. ಅವೆರಡನ್ನು ಪರೀಕ್ಷಿಸಿ ಜ್ಞಾನಿಯು (ಧೀರನು) ಪ್ರೇಯಸ್ಸಿಗೆ ಬದಲಾಗಿ ಶ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ. ಮಂದಬುದ್ಧಿಯವನು ಯೋಗಕ್ಷೇಮದ ದೃಷ್ಟಿಯಿಂದ ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾನೆ.

ಇಷ್ಟ’ ವೆಂದರೆ ಶ್ರೇಯಸ್ :

ಈ ಹಿನ್ನೆಲೆಯಲ್ಲಿ ವಿಚಾರ ಮಾಡುವುದಾದರೆ ಇಲ್ಲಿ ‘ಇಷ್ಟ’ ವೆಂದರೆ ಶ್ರೇಯಸ್ ಎಂದೇ ತಿಳಿದುಕೊಳ್ಳಬೇಕು. ಶ್ರೇಯಸ್ಸೆಂದರೆ ಪಾರಮಾರ್ಥಿಕ ಆನಂದವನ್ನು ಹೊಂದುವುದು. ಅಂತಹ ಇಷ್ಟವನ್ನು ತಂದುಕೊಡುವುದರಿಂದ ಅದು ಇಷ್ಟಲಿಂಗ, ಅನಿಷ್ಟವಾದುದು ಎಂದರೆ ಯಾವುದು ನಮ್ಮ ನಿಜವಾದ ಹಿತಕ್ಕೆ ಧಕ್ಕೆ ತರುವುದೋ ಅದು. ಪರಮಾರ್ಥಕ್ಕೆ ಯಾವುದು ಪ್ರತಿಬಂಧಕವೋ ಅದನ್ನು ನಿವಾರಿಸುತ್ತದೆ ಎಂದು ಅದು ಇಷ್ಟಲಿಂಗ. ಇದು ಹೆಸರಿನ ದೃಷ್ಟಿಯಿಂದ ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅಡಗಿದ ಅರ್ಥಗಾಂಭೀರ್ಯ. ಅದನ್ನು ಗರ್ಭೀಕರಿಸಿ ಮೊಗ್ಗೆಯ ಮಾಯಿದೇವರು ಹೀಗೆ ಹೇಳಿದ್ದಾರೆ:

ಇಷ್ಟಾವಾಪ್ತಿಕರು ಸಾಕ್ಷಾದನಿಷ್ಟಪರಿಹಾರಕಮ್ |

ಷ್ಟಿಃ ಪೂಜಾ ತಯಾ ನಿತ್ಯಮಿಷ್ಟಂ ಪೂಜಿತಮಾದರಾತ್ ||

ಇಪ್ಪಲಿಂಗಮಿತಿ ಪ್ರೋಕ್ತಮಾಚಾರ್ಯೈರ್ಲಿಂಗಪೂಜಕೈಃ |

ಇಷ್ಟಮರ್ಥ೦ ಸ್ವಭಕ್ತಾನಾಮನುಯಚ್ಛತಿ ಸರ್ವದಾ |

(ಅನು.ಸೂ., ೩.೯-೧೦)

ʼʼಅನಿಷ್ಟಗಳನ್ನು ನಿವಾರಿಸಿ ಇಷ್ಟಫಲವನ್ನು ನೀಡುವ ‘ಇಷ್ಟಿಃ ಪೂಜಾ’ ಎಂಬ ಅರ್ಥದಂತೆ ನಿತ್ಯವೂ ಆದರದಿಂದ ಪೂಜಿಸಲ್ಪಡುವ, ಭಕ್ತರ ಅಭೀಷ್ಟಗಳನ್ನು ಸದಾ ನೆರವೇರಿಸುವ ಪೂಜ್ಯವಸ್ತುವನ್ನು ಲಿಂಗಪೂಜಾನಿಷ್ಠ ಆಚಾರ್ಯರು ಇಷ್ಟಲಿಂಗವೆಂದು ಕರೆಯುತ್ತಾರೆ”.

ಇಷ್ಟಲಿಂಗ-ಸಂಕೇತವೋ ? ಸ್ವರೂಪವೋ ?

ಇಷ್ಟಲಿಂಗ ಪರಿಕಲ್ಪನೆಯಲ್ಲಿ ಅದು ಶಿವನ ಸಂಕೇತವೋ ? ಸ್ವರೂಪವೋ ? ಎಂಬುದು ಬಹುಮುಖ್ಯವಾದ ಪ್ರಶ್ನೆ. ಸಾಮಾನ್ಯ ಕಲ್ಪನೆಯೆಂದರೆ ಇಷ್ಟಲಿಂಗವು ಶಿವನ ಸಂಕೇತ; ಬಾಹ್ಯ ಅರ್ಚನೆಗೆ ಬೇಕಾದ ಒಂದು ಸಾಕಾರ ವಸ್ತು. ಅದನ್ನು ‘ಸಕಲ’ ಎಂದು ಕರೆದಿರುವುದು ಈ ಕಲ್ಪನೆಗೆ ಪೂರಕವಾಗಿರಬಹುದು. ಅದು ‘ದೃಕ್ಕಲಾಗ್ರಾಹ್ಯ’ (ಕಣ್ಣುಗಳ ಕಿರಣಾಂಶಗಳಿಂದ ಕಾಣಬಹುದಾದುದು) ಎಂಬ ಕಾರಣದಿಂದ ಸಾಕಾರವೆಂದು ಹೇಳಲ್ಪಟ್ಟಿರಬಹುದು. “ಸಕಲಂ ದೃಕ್ಕಲಾಗ್ರಾಹ್ಯಮಿಷ್ಟಲಿಂಗಸ್ಥಲಂ ಮಹತ್” (ಅನು.ಸೂ ೩.೬)ಎಂದು ಹೇಳುವ ಮೂಲಕ ಮಾಯಿದೇವರು ಇದನ್ನು ಸೂಚಿಸಿದ್ದಾರೆ ಎಂದುಕೊಳ್ಳಬಹುದು. ಆದರೆ ಇದು ಕೇವಲ ಭ್ರಮಾತ್ಮಕ ಕಲ್ಪನೆ ಮತ್ತು ಅವು ಅದನ್ನು ಸಮರ್ಥಿಸಲು ಭಾವಿಸಿಕೊಂಡ ಕೆಲವು ಯುಕ್ತಿಗಳು, ಏಕೆಂದರೆ ಇಷ್ಟಲಿಂಗವು ಪರಮಾತ್ಮನ ಸಂಕೇತ ಅಥವಾ ಚಿಹ್ನೆಯಲ್ಲ ಎಂಬುದನ್ನು ಮಾಯಿದೇವರ ಈ ಮಾತು ಸ್ಪಷ್ಟವಾಗಿ ತಿಳಿಸುತ್ತದೆ :

ಶಿವ ಏವ ಸ್ವಯಂ ಲಿಂಗಮಿತಿ ಲಿಂಗಸ್ಯ ವೈಭವಮ್ |

ನಾನ್ಯಚಿಹ್ನಾದಿಕಂ ಲಿಂಗಂ ತತ್ಸರ್ವಂ ಕೃತಕಂ ಚ ಯತ್ II (ಅನು. ಸೂ. ೩.೧)

“ಸ್ವಯಂ ಪರಮಾತ್ಮನೇ ಲಿಂಗ, ಹಾಗೆಂದೇ ಲಿಂಗಕ್ಕೆ ಮಹತ್ವ, ಬೇರೆ ಯಾವುದೇ ಚಿಹ್ನೆ ಮುಂತಾದುದು ಲಿಂಗವಲ್ಲ. ಅದೆಲ್ಲಾ ಕೃತಕ’ ಇಷ್ಟಲಿಂಗವು ಸಾಕಾರವೇ ನಿರಾಕಾರವೇ ಎಂಬುದನ್ನು ಪರೀಕ್ಷಿಸಲು ದೃಷ್ಟಿಯೋಗಕ್ಕೆ ಮೊರೆಹೋಗಬೇಕು. ಇಷ್ಟಲಿಂಗದಲ್ಲಿ ದೃಷ್ಟಿಯೋಗವನ್ನು ಸಾಧಿಸಿ ಅಂತರ್ಮುಖನಾದಾಗ ಯಾವ ಆಕಾರವೂ ಇರದು.

ಹೀಗೆ ಲಿಂಗವು ಅ೦ದರೆ ಇಷ್ಟಲಿಂಗವು ಶಿವನೇ. ಅದು ಅವನ ಸ್ವರೂಪವೇ ಹೊರತು ಬೇರಲ್ಲ ಈ ಪರಿಕಲ್ಪನೆಯ ಮೂಲ ಸ್ಫೂರ್ತಿಯು ಇಲ್ಲಿದೆ :

ಅಪರಿಚ್ಛಿನ್ನಮವ್ಯಕ್ತಂ ಲಿಂಗಂ ಬ್ರಹ್ಮ ಸನಾತನಮ್ |

ಉಪಾಸನಾರ್ಥಮಂತಃಸ್ಥಂ ಪರಿಚ್ಛಿನ್ನಂ ಸ್ವಮಾಯಯಾ || (ಸಿ.ಶಿ., ೬.೨೬)

ʼʼಅಖಂಡವೂ ಅವ್ಯಕ್ತವೂ ಆದ ಸನಾತನ ಬ್ರಹ್ಮವೇ ಆದ ಒಳಗಿನ ಲಿಂಗವು ಭಕ್ತರ ಉಪಾಸನೆಗಾಗಿ ತನ್ನ ಮಾಯೆಯಿಂದ ತಾನೇ ಬೇರೆ ಬೇರೆಯಾಯಿತುʼʼ, ಬೇರೆ ಬೇರೆಯಾಯಿತು ಎಂದರೆ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗವೆಂದು ಮೂರು ರೂಪಗಳನ್ನು ಧರಿಸಿತು ಎಂದರ್ಥ. ವೀರಶೈವ ಪರಿಭಾಷೆಯಲ್ಲಿ ಲಿಂಗ ಶಬ್ದದ ನಿಷ್ಪತ್ತಿ ಮತ್ತು ಲಿಂಗತ್ರಯ ಧಾರಣ ಪರ್ಯವಸಾಯಿ ದೀಕ್ಷಾತ್ರಯ ಇಲ್ಲಿ ಪ್ರಸ್ತುತ.

ಲಿಂಗ ಶಬ್ದ ನಿಷ್ಪತ್ತಿ:

ʼಲೀಯತೇ ಗಮ್ಯತೇ ಜಗದ್ ಯತ್ರ ಯಸ್ಮಾತ್ ತತ್ ಲಿಂಗಮ್’- ಯಾವುದರಲ್ಲಿ ಪ್ರಪಂಚವು ಮೊದಲು ಅಡಗಿತ್ತೋ, ಯಾವುದರಿಂದ ಹೊರ ಹೊಮ್ಮುವುದೋ ಅದು ಲಿಂಗ, ಎಂಬ ನಿಷ್ಪತ್ತಿಯಂತೆ ಲಿಂಗವು ಪರಬ್ರಹ್ಮ ಪರಶಿವ

ರೇ ಲೀಯತೇ ಸರ್ವಂ ಜಗತ್ ಸ್ಥಾವರಜಂಗಮಮ್ |

ಪುನರುತ್ಪದ್ಯತೇ ಯಸ್ಮಾತ್ ತದ್ ಬ್ರಹ್ಮಲಿಂಗಸಂಜ್ಞಕಮ್ ||  (ಚಂ. ಆ., ಕ್ರಿ.ಪಾ. ೩.೮)  

“ಯಾವುದರ ಉದರದಲ್ಲಿ ಚರಾಚರಾತ್ಮಕ ಜಗತ್ತು ಅಡಗಿರುವುದೋ ಎಲ್ಲಿಂದ ಮತ್ತೆ ಅದು ಉತ್ಪನ್ನವಾಗುವುದೋ ಅದು ಲಿಂಗಸಂಜ್ಞೆಯುಳ್ಳ ಬ್ರಹ್ಮʼʼ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲೂ ಇದರ ಪ್ರತಿಧ್ವನಿಯಿದೆ :

ಲಯಂ ಗಚ್ಛತಿ ಯತ್ರೈವ ಜಗದೇತಚ್ಚರಾಚರಮ್ |

ಪುನಃ ಪುನಃ ಸಮುತ್ಪತ್ತಿಂ ತಲ್ಲಿಂಗಂ ಬ್ರಹ್ಮ ಶಾಶ್ವತಮ್ |

(ಸಿ.ಶಿ., ೬.೩೭)

ಉಪನಿಷತ್ತುಗಳು ಅದನ್ನೇ ಬ್ರಹ್ಮವೆಂದು ಕರೆಯುತ್ತಾರೆ :ʼʼಸರ್ವಂ ಖಲ್ವಿದಂ ಬ್ರಹ್ಮತಜ್ಜಲಾನ್ ಇತಿ ಶಾಂತ ಉಪಾಸೀತ’ (ಛಾಂ. ಉ., ೩.೧೪.೧)-ಇದೆಲ್ಲವೂ ಬ್ರಹ್ಮವಲ್ಲದೆ ಬೇರಲ್ಲ; ಎಲ್ಲವೂ ಅದರಿಂದ ಹುಟ್ಟುತ್ತದೆ (ತಜ್ಜಃ), ಎಲ್ಲವೂ ಅದರಲ್ಲಿ ಲೀನವಾಗುತ್ತದೆ (ತಲ್ಲಃ) ಮತ್ತು ಅದರಿಂದ ಉಸಿರಾಡುತ್ತದೆ. (ತದನ್) ಎಂದು ಶಾಂತವಾಗಿ ಇರುತ್ತಾನೆ. (ತೈ.ಉ., ೨.೧ ನ್ನೂ ನೋಡಿರಿ), ತ್ರಿವಿಧ ದೀಕ್ಷೆಗಳ ಮೂಲಕ  ಗುರುವು ಶಿಷ್ಯನಿಗೆ ಲಿಂಗತ್ರಯವನ್ನು ಅನುಗ್ರಹಿಸುತ್ತಾನೆ.

ತ್ರಿವಿಧ ದೀಕ್ಷೆ-ಲಿಂಗತ್ರಯ ಪ್ರಧಾನ :

ವೇಧಾದೀಕ್ಷಾ, ಮಾಂತ್ರಿದೀಕ್ಷಾ (ಮನುದೀಕ್ಷಾ) ಮತ್ತು ಕ್ರಿಯಾದೀಕ್ಷಾ ಎಂದು ದೀಕ್ಷೆ ಮೂರು ವಿಧ. ಇವುಗಳಲ್ಲಿ ಶಿಷ್ಯನ ಮಸ್ತಕದ ಮೇಲೆ ಇರಿಸಿದ ಶ್ರೀ ಗುರುವಿನ ಹಸ್ತದಿಂದ ಮತ್ತು ಏಕಾಗ್ರ ದೃಷ್ಟಿಯಿಂದ ಶಿಷ್ಯನಲ್ಲಿ ಆಗುವ ಶಿವಭಾವದ ವಿನಿವೇಶವು ವೇಧಾದೀಕ್ಷೆ, ಶ್ರೀಗುರುವಿನಿಂದ ಶಿವಪಂಚಾಕ್ಷರಿ ಮಂತ್ರೋಪದೇಶವು ಮಾಂತ್ತೀ ದೀಕ್ಷೆ  ಕೂಡಿದುದು, ಕ್ರಿಯಾ ಪ್ರಾಧಾನ್ಯವುಳ್ಳದ್ದು ಮಂಡಲ ರಚನೆ, ಕುಂಡ ಸ್ಥಾಪನೆ ಮುಂತಾದ ಕ್ರಿಯೆಗಳೊಂದಿಗೆ ಕ್ರಿಯಾದೀಕ್ಷೆ,  

ಗುರೋರಾಲೋಕಮಾತ್ರೇಣ ಹಸ್ತ ಮಸ್ತಕಯೋಗತಃ |

ಯಃ ಶಿವತ್ವಸಮಾವೇಶೋ ವೇಧಾದೀಕ್ಷೇತಿ ಸಾ ಮತಾ||

ಮಾಂತ್ರೀದೀಕ್ಷೇತಿ ಸಾ ಪ್ರೋಕ್ತಾ ಮಂತ್ರಮಾತ್ರೋಪದೇಶಿನೀ |

ಕುಂಡಮಂಡಲಿಕೋಪೇತಾ ಕ್ರಿಯಾದೀಕ್ಷಾ ಕ್ರಿಯೋತ್ತರಾ ||

(ಸಿ.ಶಿ., ೬.೧೩-೧೪) (ಕಾ.., ಕ್ರಿ.ಪಾ., ೧.೧೩-೧೪ನ್ನೂ ನೋಡಿ)

ಈ ಮೂರು ದೀಕ್ಷೆಗಳ ಮೂಲಕ ಶ್ರೀಗುರುವು ಕ್ರಮವಾಗಿ ಕಾರಣ, ಸೂಕ್ಷ್ಮ ಮತ್ತು ಸ್ಥೂಲ ಶರೀರಗಳಲ್ಲಿನ ಆಣವ, ಮಾಯೀಯ ಮತ್ತು ಕಾರ್ಮಿಕವೆಂಬ ಮೂರು ಮಲಗಳನ್ನು ನಾಶಮಾಡಿ ಭಾವಲಿಂಗ, ಪ್ರಾಣಲಿಂಗ ಮತ್ತು ಇಷ್ಟಲಿಂಗಗಳನ್ನು ಅನುಗ್ರಹಿಸುತ್ತಾನೆ. ಇದು ಈ ಮೂರು ದೀಕ್ಷೆಗಳ ಉದ್ದೇಶ ಮತ್ತು ಫಲ :

ತನುತ್ರಯಗತಾನಾದಿಮಲತ್ರಯಮಸೌ ಗುರುಃ |

ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||

(ಕಾ.ಆ., ಕ್ರಿ.ಪಾ. ೧.೧೦)

ಇಡೀ ದೀಕ್ಷಾ ಸಂಸ್ಕಾರದ ಉದ್ದೇಶವೆಂದರೆ ಕಾರಣ ಶರೀರದಲ್ಲಿ ಭಾವಲಿಂಗವನ್ನೂ, ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗವನ್ನೂ, ಸ್ಥೂಲ ಶರೀರದಲ್ಲಿ ಇಷ್ಟಲಿಂಗವನ್ನೂ ಅನುಗ್ರಹಿಸಿ, ಅವುಗಳ ಅನುಸಂಧಾನವನ್ನು (ಸೂಕ್ಷ್ಮವಾದ ಸಂಬಂಧವನ್ನು) ಏರ್ಪಡಿಸುವುದು.ʼʼಇಷ್ಟಪ್ರಾಣಭಾವೇಷು ಲಿಂಗಧಾರಣಂ ವದಂತಿʼ’ (ಲಿಂ.ಉ., ಅಪ್ರಕಟಿತ ಉಪನಿಷತ್ತುಗಳು, ಪು. ೩೧೧), ”ಸರ್ವದೇಹೇಷು ಲಿಂಗಧಾರಣಂ ಭವತಿ” (ಅದೇ), ಎಂಬ ಶ್ರುತಿ-ಸೂಕ್ತಿಗಳು.

ಇಷ್ಟಂ ಸ್ಥೂಲತನೋ ಪ್ರೋಕ್ತಂ ಪ್ರಾಣಂ ಸೂಕ್ಷ್ಮತನೋಃ ಸ್ಮೃತಮ್ |

ಭಾವಾಖ್ಯಂ ಕಾರಣಸ್ಯೈವಂ ತನುತ್ರಯಗತಂ ತ್ರಯಮ್ ||

(ಚಂ.ಆ., ಕ್ರಿ.ಪಾ., ೩.೪೫)

ಹಾಗೆಯೇ ʼʼಭಾವಪ್ರಾಣೇಷ್ಟ ಲಿಂಗಾನಿ ಪೂಜಯೇದೇಕ ಭಾವತಃ’ʼ (ಸೂ.ಆ., ಕ್ರಿ.ಪಾ., ೬.೪೪) ಮುಂತಾದ ಆಗಮವಾಕ್ಯಗಳ ಆಶಯದಂತೆ, ಲಿಂಗವೆಂದರೆ ಇಷ್ಟಲಿಂಗವಷ್ಟೇ ಅಲ್ಲ, ಇಷ್ಟ- ಪ್ರಾಣ- ಭಾವಲಿಂಗ-ಸಮನ್ವಯ. (Synthesis of Ista-Prana-Bhavalingas) ಹೀಗೆ ಒಂದೇ ಮೂರಾಯಿತು. ಮೂರೂ ಪೂಜೆಯ ಏಕಭಾವದಲ್ಲಿ ಒಂದಾಯಿತು. ಅಂತಹ ಶ್ರೀಗುರು ಕೊಟ್ಟ ಪರವಸ್ತುವು ಪರಶಿವ ಸ್ವರೂಪವೇ ಹೊರತು ಸಂಕೇತವಲ್ಲ.

ಇಷ್ಟಲಿಂಗ-ಚಿತ್ಕಲಾಸಮಾವೇಶ :

ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಅದು ಸಾಧಕನ ಚಿತ್ಕಲಾ ಸ್ವರೂಪವೇ ಆಗಿದೆ. ಹೇಗೆಂದರೆ, ಶ್ರೀಗುರುವು ಇಷ್ಟಲಿಂಗ ಸಂಸ್ಕಾರವನ್ನು ಮಾಡಿ ಹಸ್ತದಲ್ಲಿ ಅದನ್ನು ಸ್ಥಾಪಿಸಿ, ಶಿಷ್ಯನ ಮಸ್ತಕದಲ್ಲಿನ ಚಿತ್ಕಲೆಯನ್ನು (ಚಿತ್=ಜ್ಞಾನ, ಅರಿವು; ಅದರ ಕಲೆಯೆಂದರೆ, ಅಂಶ; ಅವನ ಅರಿವಿನ ಅಂಶವನ್ನು) ತನ್ನ ದೃಷ್ಟಿಯಿಂದ ಆಕರ್ಷಿಸಿ ಆ ಲಿಂಗದಲ್ಲಿ ಸಮಾವೇಶಗೊಳಿಸುತ್ತಾನೆ. ಆಮೇಲೆ ಅದನ್ನು ಶಿಷ್ಯನ ಹಸ್ತದಲ್ಲಿ ಇರಿಸುತ್ತಾನೆ. ಆ ಚಿತ್ಕಲೆಗೆ ಶಿವಕಲೆಯೆಂದೂ ಹೆಸರು

 ಜಲಕುಂಭಾಗ್ರಸದ್ ವ್ಯಾಪ್ತತೈಲಬಿಂದುರ್ಯಥಾ ತಥಾ |

ದೇಹ ಪ್ರಾಣಾತ್ಮಸುವ್ಯಾಪ್ತ ಸಂಸ್ಥಿತಾ ಶಾಂಭವೀ ಕಲಾ

ಜ್ವಲತ್ ಕಾಲಾನಲಾಭಾಸಾ ತಟಿತ್‌ ಕೋಟಿಸಮಪ್ರಭಾ |

ಸ್ಯೋರ್ಧ್ವೇ ತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಲಾ

ಯಾ ಕಲಾ ಪರಮಾ ಸೂಕ್ಷ್ಮಾತತ್ವಾನಾಂ ಬೋಧೀನೀ ಪರಾ |

ತಾಮಾಕೃಷ್ಯ ಯಥಾನ್ಯಾಯಂ ಲಿಂಗೇ ಸಮುಪವೇಶಯೇತ್ ||

(ಕಾ.., ಕ್ರಿ.ಪಾ., ೧. ೧೨೨-೧೨೪)

“ನೀರಿನ ಕುಂಭದ ಮೇಲಿನ ಭಾಗವನ್ನು ಎಣ್ಣೆಯ ಹನಿಗಳು ವ್ಯಾಪಿಸಿದಂತೆ ದೇಹ ಪ್ರಾಣ ಆತ್ಮಗಳನ್ನು ವ್ಯಾಪಿಸಿ ನಿಂತಿದೆ ಶಿವಕಲೆ. ಅದು ಉರಿಯುವ ಕಾಲಾಗ್ನಿಯ ಹೊಳಪುಳ್ಳದ್ದು, ಕೋಟಿ ಮಿಂಚಿನ ಪ್ರಕಾಶವುಳ್ಳದ್ದು. ಅದರ ಮೇಲಿನ ಭಾಗದಲ್ಲಿ ಸೂಕ್ಷ್ಮಶಿಖೆ, ಚಿತ್‌ ಸ್ವರೂಪದ ಶ್ರೇಷ್ಠ ಕಲೆಯಿದೆ. ಆ ಶ್ರೇಷ್ಠ ಸೂಕ್ಷ್ಮ ಕಲೆಯು ತತ್ತ್ವಗಳ ಜ್ಞಾನದಾಯಿನಿ. ಅದನ್ನು ಸರಿಯಾದ ರೀತಿಯಲ್ಲಿ ಆಕರ್ಷಿಸಿ ಲಿಂಗದಲ್ಲಿ ಲಯಗೊಳಿಸಬೇಕು”. ಹಿಂದೆ ಹೇಳಿದ ಕ್ರಮವನ್ನು ಅದೇ ಶೈವಾಗಮವು ಮೊದಲೇ ಸ್ಪಷ್ಟಪಡಿಸಿದೆ :

ಶೈವೀಂ ಕಲಾಂ ಸ್ವಮನಸಾ ವಿಭಾವ್ಯ ಚ ತತಃಪರಮ್ |

ದೃಷ್ಟಾವಾನೀಯ ಚ ತಯಾ ಶಿಷ್ಯವಾಮಕರಸ್ಥಿತೇ |

ಲಿಂಗೇ ನಿವೇಶಯೇತ್ ಕ್ಷಿಪ್ರಂ ಮೂಲಮಂತ್ರಮನುಸ್ಮರನ್ ||

(ಕಾ.ಅ., ಕ್ರಿ.ಪಾ. ೧.೧೨೦)

“ಆ ಶಿವಕಲೆಯನ್ನು (ಶ್ರೀಗುರುವು) ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡು ಆನಂತರ ತನ್ನ ದೃಷ್ಟಿಯಲ್ಲಿ ಸೆಳೆದುಕೊಂಡು ಅದರಿಂದ (ದೃಷ್ಟಿಯ ಮೂಲಕ) ಶಿಷ್ಯನ ಎಡಗೈಯಲ್ಲಿರಿಸಿದ ಲಿಂಗದಲ್ಲಿ ಅದನ್ನು ಶಿವಕಲೆಯನ್ನು, ಚಿತ್ಕಲೆಯನ್ನು ಕ್ಷಿಪ್ರವಾಗಿ ಮೂಲಮಂತ್ರವನ್ನು (ಶಿವಪಂಚಾಕ್ಷರಿಯನ್ನು) ಸ್ಮರಿಸುತ್ತಾ ಸಮಾವೇಶಗೊಳಿಸಬೇಕುʼ’. ಅಂತಹ ಲಿಂಗವನ್ನು ಪ್ರಾಣಲಿಂಗವೆಂದು ಭಾವಿಸಿ ಪ್ರಾಣಕ್ಕಿಂತಲೂ ಹೆಚ್ಚು ಎಂಬಂತೆ ರಕ್ಷಿಸಿಕೊಂಡು ಪೂಜಿಸಬೇಕು. ತನ್ನ ಚಿತ್ಕಲಾಯುಕ್ತಲಿಂಗವನ್ನು ಶಿಷ್ಯನು ಸರ್ವದಾ ತನ್ನ ದೇಹದ ಮೇಲೆ ಧರಿಸಿಕೊಳ್ಳಬೇಕು ಎಂಬುದು ಶ್ರೀಗುರುವಿನ ಕಟ್ಟಳೆ. (ನೋಡಿ-ಸಿ.ಶಿ., ೬.೨೬), ಹಾಗೆ ಚಿತ್ಕಲಾಯುಕ್ತ ಶಿವಕಲಾಯುಕ್ತ ತನ್ನ ಇಷ್ಟಲಿಂಗವನ್ನು ಸಾಧಕನು ಶಿವನ ಸ್ವರೂಪವೇ ಎಂದು ತಿಳಿಯದೆ, ಕೇವಲ ಸಂಕೇತವೆಂದು ತಿಳಿಯುವುದು ಹೇಗೆ ಸಾಧ್ಯ ?

ಚಿತ್ಕಲೆ-ಶಿವಕಲೆ :

ಶಿಷ್ಯನ ಮಸ್ತಕಸ್ಥಿತ ಚಿತ್ಕಲೆಯನ್ನು ಶಿವಕಲೆಯೆಂದು ಕರೆಯುವುದರ ಹಿನ್ನೆಲೆಯನ್ನು ತಿಳಿದರೆ ಇಷ್ಟಲಿಂಗ ಪರಿಕಲ್ಪನೆಯ ಮೂಲಭೂತ ವಿಚಾರವನ್ನು ತಿಳಿದಂತಾಗುತ್ತದೆ. ಇಲ್ಲಿ ಮತ್ತೆ ಸ್ಮರಿಸಿಕೊಳ್ಳೋಣ. ಪರಮಾತ್ಮನ ಅಂಶ ಜೀವಾತ್ಮವೆಂದು ಹಿಂದೆ ಹೇಳಿದ್ದನ್ನು ಈ ವಿಚಾರದ ಸುಂದರ ನಿರೂಪಣೆಯನ್ನು ಇಲ್ಲಿ ಕಾಣಬಹುದು :

ಚಂದ್ರಕಾಂತೇ ಯಥಾ ತೋಯಂ ಸೂರ್ಯಕಾಂತೇ ಯಥಾ Sನಲಃ |

ಬೀಜೇ ಯಥಾಂಕರಃ ಸಿದ್ಧಸ್ತಥಾತ್ಮನಿ ಶಿವಃ ಸ್ಥಿತಃ ||

(ಸಿ.ಶಿ., ೫.೩೬)

“ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಮೊಳಕೆ ಇದ್ದಂತೆ, ಆತ್ಮದಲ್ಲಿ ಶಿವನು ಇದ್ದಾನೆ”. ಶಿವನು ಇದ್ದಾನೆ ಶಿವನ ಅಂಶವಿದೆ. ಆತ್ಮವೇ ಶಿವನ ಅಂಶ. ಅದೇ ಶಿವಕಲೆ. ಅದನ್ನು ಆವಾಹಿಸಿ ಇಷ್ಟಲಿಂಗದಲ್ಲಿ ನೆಲೆಗೊಳಿಸಿದಾಗ ಅದು ಕಲ್ಲಿನ ಲಿಂಗವಾಗಿ ಉಳಿಯದೆ  ಚಿಲ್ಲಿಂಗವಾಗುತ್ತದೆ. ಅದನ್ನು (ಲಿಂಗತ್ರಯ ಸಮನ್ವಯವನ್ನು) ಪೂಜಿಸುತ್ತಾ ಭಕ್ತಿಯ ವಿಕಾಸವನ್ನು ಸಾಧಿಸಿಕೊಂಡರೆ ಸಾಧಕ ತನ್ನಾತ್ಮವನ್ನೇ ಲಿಂಗವೆಂದು ಅರಿತು ಬೆರೆತು ಬೇರಾಗದಂತಿರುತ್ತಾನೆ. ತನ್ನಾತ್ಮವನ್ನು ಬಿಟ್ಟು ಹೊರಗೆಲ್ಲಿದ್ದಾನೆ ಶಿವ, ಹೊರಗೆಲ್ಲಿದೆ ಲಿಂಗ ? ಕಠೋಪನಿಷತ್ತು ಹೇಳುವಂತೆ (ಯಥಾದರ್ಶೇ ತಥಾತ್ಮನಿ’) ಆತ್ಮನಲ್ಲಿ ಪರಮಾತ್ಮನ ದರ್ಶನ ಎಂದರೆ ಆತ್ಮನೇ ಪರಮಾತ್ಮನೆಂಬ ಸಾಕ್ಷಾತ್ಕಾರ, ಕನ್ನಡಿಯಲ್ಲಿ ಹೇಗೋ ಹಾಗೆ ಸ್ಪಷ್ಟ. ಆದ್ದರಿಂದ ಈ ದೇಹ ಬಿದ್ದು ಹೋಗುವ ಮೊದಲೇ ಆತ್ಮದರ್ಶನ ಮಾಡಿಕೊಳ್ಳಿ. “ಹೊತ್ತು ಹೋದ ಬಳಿಕ ನಿಮ್ಮನ್ನಾರು ಬಲ್ಲರು ??”

ಸಂಕೇತ ಸೂಚಿ

ಅನು. ಸೂ……. ಅನುಭವಸೂತ್ರ

ಕಠ….. ಕಠೋಪನಿಷತ್

ಕಾ.ಆ……. ಕಾರಣಾಗಮ

 ಕ್ರಿ.ಪಾ……. ಕ್ರಿಯಾಪಾದ

ಚಂ.ಅ……… ಚ೦ದ್ರಜ್ಞಾನಾಗಮ

ಛಾಂ.ಉ……. ಛಾಂದೋಗ್ಯೋಪನಿಷತ್

ತೈ. ಉ……. ತೈತ್ತಿರೀಯೋಪನಿಷತ್

ಲಿಂ. ಉ…… ಲಿಂಗೋಪನಿಷತ್

ಸಿ.ಶಿ…. ಶ್ರೀ ಸಿದ್ಧಾಂತ ಶಿಖಾಮಣಿ

ಸೂ.ಆ….. ಸೂಕ್ಷ್ಮಾ ಗಮ

ಶ್ರೀ ವೇ.ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು ಸೋ.ಹಿರೇಮಠ

ರಾಗ: ಕಾಫಿ      ತಾಳ: ತ್ರಿತಾಳ

ಚಾಲ: ಮಗುವೆ ವಿಮಲ ಕುಲಬಾಲ ರವಿಯೇ ಪೋಗು ಪರಾಕ್ರಮಿಯೆ ಎಂಬಂತೆ

 

 

ಗುರುವೇ ಸುಜನಕುಲ ಕಲ್ಪತರುವೆ      ||ಪ||

ಪಾಡುವೆ ಮಂಗಲವ ಗುರುವರಾ

ಯತಿಕುಲ ರಾಜಾ ನುತಸುರ ಭೂಜ      ||೧||

ಜಿತದಿನ ಕರತೇ ಜಾ   ||

ಧೃತರಕ್ತಾಂಬರ| ವರ ಪುಣ್ಯಾಂಕುರ

ಪರತರ ಅವತಾರ | ಭಾಸುರಾ||

ಕುಮತ ಕುಠಾರಾ ಸ್ವಮತೋದ್ಧಾರಾ    ||೨||

ಕರುಣಾವನ ವಿಹರಾ

ಪ್ರಣವಾಕಾರ ಸದ್ಗುಣ ನಿಕರ|

ತ್ರಿಣಯನ ಸಮಸಾರಾ ಸುಧೀರ

ಘೋರತರ ದುಸ್ತಾರ ಭವಾಭ್ದಿಯಿಂ   ||೩||

ಪಾರು ಗೊಳಿಸು ಪಿತನೆ

ಪರತರ ಮುಕ್ತನೆ ಪರಮ ವಿರಕ್ತನೆ

ಚರನುತ ಗುರುವರನೇ sss ಕುಮಾರನೆ

ಪೂಜ್ಯ ಕೇದಾರನಾಥ ದೇವರು ಯಾಳವಾರ

ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ||ಪ||

ತ್ಯಾಗಯೋಗ ಶಿವಯೋಗದ ಯೋಗಿಗೆ

ಯೋಗದ ನೆಲೆ ತೋರಿದ ಮಹಾಮಹಿಮಗೆ ಶಿವಯೋಗಿಗೆ

ವಂದಿಸುವೆ ,ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೧॥

ನೊಂದಬೆಂದ ಜೀವಕೆ ನೀ ತಂದೆಯಾದವ

ಕುಂದುವಡೆದ ಮನಸನು ಒಂದು ಗೈದವ, ಆಪದ್ಭಾಂದವ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ವಂದಿಸುವೆ ||೨||

ಗಾನಜ್ಞಾನ ಅಭಿಯಾನದ ಯೋಗಿಗೆ

ಅನುಪಮ ನಿರಂಜನ ಶಿವಯೋಗಿಗೆ, ಮಹಾತ್ಯಾಗಿಗೆ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೩॥

ಜಯ ವಿಜಯ ಅಜಯಾಜಯ ಧೀರಗೆ

ಜಯ ಜಯ ಜಯ ಜಯ ಕುಮಾರಗೆ, ಸುಕುಮಾರಗೆ,

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೆ,

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ||೪||

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ವಿರಾಟಪುರ ವಿರಾಗಿ” ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಚರಿತ್ರೆ ಆಧಾರಿತ ಚಿತ್ರ ಬಿಡುಗಡೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತ,

ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು , ಶ್ರೀ ಗುರುದೇವ ಸೇವಾ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಿದ ,ಶ್ರೀ ಬಿ.ಎಸ್.ಲಿಂಗದೇವರು ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ “ವಿರಾಟಪುರ ವಿರಾಗಿ” ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಚರಿತ್ರೆ ಆಧಾರಿತ ಚಿತ್ರ ಬಿಡುಗಡೆಯ ದಿನಾಂಕ ೧೩ ಜನೆವರಿ ೨೦೨೩ ಎಂದು ಘೋಷಣೆಯಾಗಿರುವದು ಅತ್ಯಂತ ಸಂತೋಷದ ಸಂಗತಿ.

ಪ್ರಸ್ತುತ ಚಿತ್ರದ ಕಾರ್ಯಕಾರಿ ನಿರ್ಮಾಪಕತ್ವ ಹೊಣೆಹೊತ್ತು ಸತತ ಮೂರುವರ್ಷಗಳ ನಿರಂತರ ಪರಿಶ್ರಮದಿಂದ ನವದೆಹಲಿಯ ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ್)   ಕಾರ್ಯಕಾರಿ ನಿರ್ಮಾಪಕತ್ವದ ಎಲ್ಲ ಜವಾಬ್ದಾರಿಗಳನ್ನು ಭಕ್ತಿ ಶ್ರದ್ಧೆಯಿಂದ ಪೂರೈಸಿ ದಿ. 1 ಡಿಸೆಂಬರ್ 2022 ರಂದು ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ಹಸ್ತಾಂತರಿಸಿದ ವಿಷಯವನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.

ದಿ.29 ಫೆಬ್ರವರಿ 2020 ರಂದು ದೆಹಲಿಗೆ ದಯಮಾಡಿಸಿದ್ದ ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ,ನಮ್ಮ ಸೇವಾ ಸಮಿತಿಯು ವಾರಣಾಸಿಯಲ್ಲಿ ಲೋಕಾರ್ಪಣೆ ಮಾಡಿದ್ದ ಶ್ರೀಕುಮಾರೇಶ್ವರರ ಆಂಗ್ಲ ಭಾಷೆಯ ಸಾಕ್ಷ್ಯಚಿತ್ರ “ಯುಗಪುರುಷ”ವನ್ನು ಗಮನಿಸಿ ,ಕನ್ನಡ ಬೆಳ್ಳಿತೆರೆಗೆ ಶ್ರೀ ಕುಮಾರೇಶ್ವರರ ಚಿತ್ರ ನಿರ್ಮಿಸುವ ಜವಾಬ್ದಾರಿಯನ್ನು ನೀಡಿದ್ದರು.

30 ಸೆಪ್ಟೆಂಬರ್ 2020 ರಂದು ಚಲನಚಿತ್ರದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಾರ್ಯಾರಂಭ ಮಾಡಿದ  ದೆಹಲಿಯ ಸೇವಾ ಸಮಿತಿ, ಚಿತ್ರದ ಕಥಾಹಂದರ ,ಚೌಕಟ್ಟುಗಳನ್ನು ಯೋಜಿಸಿ  ಬೇಕಾದ ಎಲ್ಲ ಸಾಹಿತ್ಯಗಳನ್ನು ಮತ್ತು ಸಾಹಿತ್ಯಕೃತಿಗಳ ಅನುಮತಿ ಪತ್ರಗಳನ್ನು ಪಡೆದು   ಚಿತ್ರ ನಿರ್ದೇಶಕರಿಗೆ ಸಲ್ಲಿಸಿ, ಹಲವು ಬಾರಿ ದೆಹಲಿಯಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಿ  ಚಿತ್ರ ನಿರ್ದೇಶಕರು ರಚಿಸಿ ಕೊಟ್ಟ ಕರಡುಪ್ರತಿ (ಸ್ಕ್ರಿಪ್ಟ) ಗೆ ಹಲವು  ಚಾರಿತ್ರಿಕ ವಿಷಯಗಳ ತಿದ್ದುಪಡಿಗಳನ್ನು ಮಾಡಿ , ಹಿರಿಯ ಸ್ವಾಮೀಜಿಗಳ ಮುಂದೆ ಗಮನಕ್ಕೆ ತಂದು ಅನುಮತಿ ಪಡೆದು , 2021 ನವಂಬರ ದಂದು ಹೊರಾಂಗಣ ಚಿತ್ರೀಕರಣವನ್ನು ಆರಂಭಿಸಿ  ಆಗಸ್ಟ್ ತಿಂಗಳು 2022ಕ್ಕೆ ಸಂಪೂರ್ಣ  ಹೊರಾಂಗಣ ಚಿತ್ರೀಕರಣವನ್ನು ಮುಕ್ತಾಯ ಕನ್ನಡ ಚಲನಚಿತ್ರ ಮಂಡಳಿಯ ನಿಯಮಾವಳಿಗಳಂತೆ  ಹೊರಾಂಗಣ ಚಿತ್ರೀಕರಣ ನಡೆಯಿಸಲಾದ ಎಲ್ಲ ಸ್ಥಳಗಳಲ್ಲಿ ಜಿಲ್ಲಾಡಳಿತ,ಪೊಲೀಸ ಠಾಣಾಧಿಕಾರಿಗಳ ಪೂರ್ವಾನುಮತಿ ,ಪುರಸಭೆಗಳ ಅನುಮತಿ, ಮಠಗಳ,ವಿಶ್ವವಿದ್ಯಾಲಯದ,   ಹಳೆಯ ಮನೆಗಳ ವಾಡೆಗಳ ಮಾಲೀಕರ ಪೂರ್ವಾನುಮತಿಗಳನ್ನು ಪಡೆದು ನಿರ್ವಹಿಸಿದ ಕಾರ್ಯ  ನಮ್ಮ ಸೇವಾ ಸಮಿತಿಗೆ  ದೊಡ್ಡ ಸವಾಲನ್ನೇ ಸೃಷ್ಠಿಸಿತು. ಚಿಕ್ಕಪುಟ್ಟ ಒಂದೆರಡು ತೊಂದರೆಗಳನ್ನು ಬಿಟ್ಟರೆ ,ಯಾವ ತೊಂದರೆಯೂ ಇಲ್ಲದೇ ಚಿತ್ರ ನಿರ್ಮಾಣವಾಗಿದ್ದು  ನಮ್ಮ ಸುದೈವವೇ ಸರಿ.

ಯಾವುದೇ  ಸಂಭಾವನೆ ಮತ್ತು ಹಣಕಾಸು ವ್ಯವಹಾರಗಳ  ಒಪ್ಪಂದವಿಲ್ಲದ ಪ್ರಾಂಜಲ ಸೇವೆಯ ನವದೆಹಲಿಯ ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿಯ  ಶ್ರಮ, ಮಾನವ ಸಹಜ  ಮತ್ತು   ಚಾಣುಕ್ಯ   ಪ್ರವಾಹಕ್ಕೆ ಸಿಲುಕಿ,  ಇತಿಹಾಸದ ಕಾಲಗರ್ಭದಲ್ಲಿ ಅನಾಮಧೇಯವಾಗಿ ಲೀನವಾಗುವ ಲೌಕಿಕ ಲೀಲೆಯ ಇಳಿಹೊತ್ತಿನಲ್ಲಿ ಹೇಳಿ ಹೋಗುವ ಕೃತಜ್ಞತಾ ಸಂಸ್ಕೃತಿಯಂತೆ,  ನಾಡಿನ ಹಲವಾರು ಪೂಜ್ಯ ಜಗದ್ಗುರುಗಳು, ಮಹಾಸ್ವಾಮಿಗಳು, ಭಕ್ತಾದಿಗಳು  , ಕರ್ನಾಟಕ ಸರಕಾರದ ಮಂತ್ರಿ ಮಹೋದಯರು ಮತ್ತು ರಾಜಕೀಯ ಧುರಿಣರು ಪರಮಪೂಜ್ಯ ಶ್ರೀಕುಮಾರ ಶಿವಯೋಗಿಗಳ ಮೇಲಿಟ್ಟಿರುವ ಅನುಪಮ ಭಕ್ತಿ ಗೌರವಗಳಿಂದ ,ಕೆಲವೊಂದು ಪ್ರದೇಶಗಳಲ್ಲಿ ನಾವು ಅಪರಿಚಿತರಾದರೂ ನಮಗೆ ತೋರಿದ ಪ್ರೀತಿ ಅಂಥಕರುಣೆ ಮತ್ತು  ಸಹಾಯಗಳನ್ನು , ನೆನೆದು ಕೃತಾರ್ಥರಾಗಲು ಬಯಸುತ್ತೇವೆ..

ಜನೆವರಿ ೨೦೨೩  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “  ಪಾಹಿ ಶಿವ ನೀ ಪಾಹಿ ಶಿವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. : ನಿಜಗುಣ ಶಿವಯೋಗಿಕೃತ ಕೈವಲ್ಯ ಪದ್ಧತಿಯಲ್ಲಿಯ ‘ʼಜ್ಞಾನಪ್ರತಿಪಾದನ ಸ್ಥಲʼ’ಸ. ಸ. ಮಾಳವಾಡ
  4.  ದ್ಯಾಂಪುರದ ಚನ್ನಕವಿಗಳ ಮಂತ್ರ ರಹಸ್ಯ-ಕೃತಿ ಕುರಿತು  ಡಾ|| ಎಸ್. ಎಂ. ಹಿರೇಮಠ
  5. ಶೈವ-ವೀರಶೈವ : ಪರಿಕಲ್ಪನೆ • ಡಾ. ಬಿ. ವ್ಹಿ. ಶಿರೂರ
  6. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

  • ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ
  • ಅರ್ಪಿಸುವ
  • “ ನೀನೇಕೆ ಮರೆಯಾದೆ ಗುರು ಸದಾಶಿವ”

ರಚನೆ: ಪೂಜ್ಯ ಶ್ರೀ ಕುಮಾರದೇವರು ಅಂತೂರುಬೆಂತೂರು

ಗಾಯನ: ಶ್ರೀಮತಿ ಉಷಾ ಪ್ರಭು ಹುನಗುಂದ್ ಕ್ಯಾಲಿಫೋರ್ನಿಯ.ಅಮೇರಿಕಾ

  • ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ
  • ಅರ್ಪಿಸುವ
  • “ಜಯ..ಜಯ.. ಶ್ರೀಕುಮಾರೇಶ”

ಸಂಗೀತ -ಗಾಯನ : ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ರಾಗ – ಪಹಡಿ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಪಾಹಿ ಶಿವ | ನೀ ಪಾಹಿ ಶಿವ

ನಾ ಮೊರೆಹೊಕ್ಕೆ ದೇವ || ಪ ||

ಪುರಹರ ನಿನ್ನಯ ಕರುಣವಿಲ್ಲದೆ |

ಮರಳಿ ಮರಳಿ ಭವದೊಳು ತಿರುಗಿ ||

ಘೋರ ಕಷ್ಟದೊಳು ಪಾರುಗಾಣೆ ನಾ |

ಪರಮೇಶ | ಪರಿತೋಷ || ವರಕೋಶ | || 1 ||

ಮಲ ಮಾಯಾದಿ ಬಲು ಕಳವಳಗೊಳ್ಳುವೆ |

ಬಲವಂತನೆ ಸಲಹುವದೆನ್ನಂ ||

ಬಲುಮೆಯುಳ್ಳ ಬಹು ಕಲುಷದ ಕಾಟವು |

ಬಲುಶಾಂತ | ಕಲೆಯಾಂತ || ಛಲವಂತ | || 2 ||

ಶಿವನರ್ಚನೆಯೊಳು ತನು, ಮನ, ಧನವನು |

ಸವೆಸುವ ತವೆ ಸಾಧನವಿರಿಸಿ ||

ಜೀವಭಾವವನು ಕಳೆಯುತ ಕೃಪೆಯಿಂ

ಶಿವಯೋಗಿ | ಸುವಿರಾಗಿ || ಭವತ್ಯಾಗಿ | || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಭ್ರೂಮಧ್ಯಾಜ್ಞೇಯ ನಿ | ಸ್ಸೀಮ ಪರಬ್ರಹ್ಮವನು

ನೇಮಿಸುತಲೆನ್ನವಾಮ ಹಸ್ತದೊಳಿತ್ತ

ಸ್ವಾಮಿ ಶ್ರೀಗುರುವೆ ಕೃಪೆಯಾಗು    ||೮೬||

ಎರಡು ಹುಬ್ಬುಗಳ ಮಧ್ಯಸ್ಥಾನವೇ ಭ್ರೂಮಧ್ಯ. ಹಿಂದೆ ಅದಕ್ಕೆ ಹುಬ್ಬಳ್ಳಿ ಪೇಟೆಯೆಂಬುದಾಗಿ ತಾತ್ತ್ವಿಕವಾಗಿ ವರ್ಣಿಸಲಾಗಿದೆ. ಈ ಭ್ರೂಮಧ್ಯದಲ್ಲಿರುವದು ಆಜ್ಞೇಯಚಕ್ರ. ಇದಕ್ಕೆ ಆಜ್ಞಾಚಕ್ರವೆಂತಲೂ ಹೆಸರು. ಭ್ರೂಮಧ್ಯಕ್ಕೆ ತ್ರಿಕೂಟವೆಂತಲೂ ಇನ್ನೊಂದು ನಾಮವುಂಟು. ಇಲ್ಲಿ ಈಡಾ ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಕೂಟವಿರುವದರಿಂದ ತ್ರಿಕೂಟವೆನಿಸಿದೆ. ʼʼಶಿವಯೋಗ ಪ್ರದೀಪಿಕೆʼ’ಯ ಟೀಕಾಕಾರರು

ಇಡಾ ವಹತಿ ವಾಮೇ ಚ ಪಿಂಗಳಾ ಯಾತಿ ದಕ್ಷಿಣೇ

ಇಡಾ ಪಿಂಗಳಯೋರ್ಮ ಧ್ಯೆ ಸುಷುಮ್ನಾ ಸುಖರೂಪಿಣೀ ||”

ಎಂದು ಪ್ರತಿಪಾದಿಸಿದ್ದಾರೆ. ಇಂಥ ಭ್ರೂಮಧ್ಯದ ಆಜ್ಞಾಚಕ್ರದಲ್ಲಿರುವ ಬ್ರಹ್ಮನು ನಿಸ್ಸೀಮನು. ಇವನಿಗೆ ಸೀಮೆಯೆಂಬುದಿಲ್ಲ. ಅವನು ಅತ್ಯತಿಷ್ಠದ್ದಶಾಂಗುಲ” ನೆನಿಸಿದ್ದಾನೆ. ಇಲ್ಲಿ ಐಕ್ಯನೇ ಅಂಗನು. ನಿಸ್ಸೀಮಬ್ರಹ್ಮನೇ ಮಹಾಲಿಂಗನು. ಭಕ್ತನು ಆಧಾರಾದಿ ಚಕ್ರಗಳಿಂದ ಮೇಲೆರುತ್ತ ಆಜ್ಞಾಚಕ್ರದಲ್ಲಿ ಮಹಾಲಿಂಗವನ್ನು ಕಂಡು ಮಹಾಲಿಂಗವೇ ತಾನಾಗಿ ಬ್ರಹ್ಮರಂದ್ರದ ನಿಷ್ಕಳಬ್ರಹ್ಮನಲ್ಲಿ ಆನಂದಿಸುವ ಸ್ಥಿತಿಯೇ ಸಮಾಧಿಸ್ಥಿತಿಯೆನಿಸುವದು. ಈ ಭ್ರೂಮಧ್ಯದ ಆಜ್ಞಾಚಕ್ರದ ಸ್ಪಷ್ಟವಾದ ವಿವರವನ್ನು “ಉದ್ಧರಣೆಯ ವಾಚ್ಯ”ದಲ್ಲಿ ಅವಲೋಕಿಸಿ –

ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,

ಆ ಭೂತತಮಂಧಕಾರ, ದ್ವಿದಳಪದ್ಮ, ಆ ಪದ್ಮ ಅನಂತೆಳೆ

ಮಿಂಚಿನವರ್ಣ, ಆ ದಳದಲ್ಲಿ ‘ಹಂಸ’ (ಹಂಕ್ಷಂ) ಎಂಬೆರಡಕ್ಷರ

ಆ ಕರ್ಣಿಕಾಮಧ್ಯದಲ್ಲಿ ಓಂಕಾರವೆಂಬ ಬೀಜಾಕ್ಷರ

ಆ ಓಂಕಾರ ಅನಂತ ಬೀಜಾಕ್ಷರಂಗಳನೊಳಕೊಂಡಿಹುದು

ನಾದಬಿಂದು-ಕಲೆಗಳಿಗೆ ಆಶ್ರಯವಾಗಿಹುದು

ತತ್ಪದ, ತ್ವಂಪದ, ಅಸಿಪದವೆಂಬಿವನೊಳಕೊಂಡು

ಭ್ರೂಮಧ್ಯದಲ್ಲಿ ಉತ್ತುಂಗ ಕಿರಣರಾಶಿಯೆಂಬ

ತೇಜೋವರ್ಧನಕ್ಕೆ ತಾನೆಯಾಗಿಹುದು.

ಅದು ಪ್ರಣವನಾದ, ಅಲ್ಲಿ ಮಹಾಲಿಂಗ

ಅದಕ್ಕೆ ಪಾತಾಳದಿಕ್ಕನುಳ್ಳ ಹೃದಯವೆಂಬ ಮುಖ

ಶಾಂತ್ಯತೀತೋತ್ತರ ಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ.

ಆ ಶಕ್ತಿಗೆ ಮಹಾಘನ ಬೆಳಗಿನ ಜ್ಯೋತಿವರ್ಣ

ಅಲ್ಲಿ ನಿರ್ಮುಕ್ತ ಸಾದಾಖ್ಯ ನಿರಾಳವೆಂಬ ಸಂಜ್ಞೆ ಗಂಭೀರದಿಕ್ಕು

ಅಲ್ಲಿ ಅಜಪೇಯನುಚ್ಚರಿಸುತ್ತ ಸದ್ಭಾವವೆಂಬ ಹಸ್ತದಿಂ

ಸುತೃಪ್ತಿದ್ರವ್ಯವನು ಹೃದಯವೆಂಬ ಮುಖಕ್ಕೆ

ಸಮರಸ ಭಕ್ತಿಯಿಂದರ್ಪಿಸುವಳಾ ಶಕ್ತಿ.

ಪರಶಿವ ಪೂಜಾರಿ, ಶಕ್ತಿಡಾಕಿನಿ, ಮಹಾಶ್ರೀಗುರು ಅಧಿದೇವತೆ

ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಓಂಕಾರವೆಂಬಬೀಜಾಕ್ಷರ

ಅದು ಪ್ರಣವದ ಜ್ಯೋತಿರಾಕೃತಿಯೊಳಿಹುದು

ಓಂ ಓಂ ಓಂ ಓಂ ಓಂ ಓಂ ಎಂಬ ಬ್ರಹ್ಮಾನಾದಮಂತ್ರ ಮೂರ್ತಿ

ಪ್ರಣವಕ್ಕೆ ನಮಸ್ಕಾರವು.

ಸದ್ಗುರುವು ಈ ಅಜ್ಞಾಚಕ್ರದ ನಿಸ್ಸೀಮಬ್ರಹ್ಮನನ್ನು ಮಹಾಲಿಂಗವನ್ನಾಗಿ ಕರದಿಷ್ಟಲಿಂಗದಲ್ಲಿ ಎರಕಗೊಳಿಸುವನು. ಮಹಾಲಿಂಗವನ್ನು ಆರಾಧಿಸುವ ಐಕ್ಯನು ಸಕಲ ಪದಾರ್ಥಗಳ ತೃಪ್ತಿಯನ್ನು ಸಂತೃಪ್ತಿ ಪ್ರಸಾದವನ್ನಾಗಿಸಿ ಮಹಾಲಿಂಗದ ಸಮರಸದಲ್ಲಿ ಸವಿದು ಬೆರೆದೇಕಮಯನಾಗುವನು. ಇಂಥ ಸಂತೃಪ್ತಿಗೆ ಕಾರಣವಾದ ನಿಸ್ಸೀಮಬ್ರಹ್ಮವನ್ನು ಅಜ್ಞಾಚಕ್ರದಿಂದ ಹೊರತೆಗೆದು ಇಷ್ಟಲಿಂಗದಲ್ಲಿಯೇ ಮಹಾಲಿಂಗವನ್ನಾಗಿ ಕರುಣಿಸಿದ ಶ್ರೀಗುರು ಎನ್ನ ಮಹಾಸ್ವಾಮಿಯೆನಿಸಿದ್ದಾನೆ. ಸರ್ವತಂತ್ರ ಸ್ವತಂತ್ರ ಸ್ವಾಮಿತ್ವ ಅಥವಾ ಪ್ರಭುತ್ವವನ್ನು ಪಡೆದ ನಿರಾಭಾರಿ ಗುರುಪುಂಗವನೆನಿಸಿದ್ದಾನೆ.

ಮಾನಿತ ಶ್ರೀಕಂಠ | ಸ್ಥಾನ ವಿಶುದ್ಧಿಯ ವಿ

ಜ್ಞಾನ ಬ್ರಹ್ಮವನುನೀನೊಲಿದು ಕರಕೆ ಕೊ

ಟ್ಟಾನೈಜ ಗುರುವೆ ಕೃಪೆಯಾಗು   ||೮೭ ||

ಮಾನವನ ದೇಹದಲ್ಲಿ ಕಂಠವು ಸುಂದರವಾದ ಅವಯವಾಬಗಿದೆ. ಇದಕ್ಕೆ ಎಲುವಿನ ಆಸರವಿಲ್ಲ. ಕೇವಲ ಸ್ನಾಯುಗಳಿಂದ ಸಂಯೋಜಿತವಾಗಿದೆ. ಶರೀರದ ರುಂಡ-ಮುಂಡಗಳನ್ನು ಒಂದುಗೂಡಿಸಿದೆ ಕಂಠ, ಈ ಕಂಠವು ಜ್ಞಾನೇಂದ್ರಿಗಳ ಕಾರ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಅದರ ಶ್ರೇಷ್ಠತೆಯನ್ನರಿತ ಶಿವಕವಿಯು ಕಂಠಕ್ಕೆ ಶ್ರೀಕಂಠವೆಂದು ಕರೆದಿದ್ದಾನೆ. ಕಂಠವು ಶರೀರದಲ್ಲಿ ಸುಂದರಾಂಗವೆನಿಸಿದಂತೆ ಮಹತ್ವಯುತವೂ ಆಗಿದೆ. ಬ್ರಹ್ಮರಚನೆಯ ಸೊಬಗು ಕಂಠದಿಂದ ಮೇಲೆಯೇ ವ್ಯಕ್ತವಾಗುತ್ತದೆ. ಪಂಚಜ್ಞಾನೇಂದ್ರಿಯಗಳು, ಮೂಲಬ್ರಹ್ಮಸ್ಥಾನವೆನಿಸಿದ ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮರಂಧ ಹಾಗೂ ಆಜ್ಞಾಚಕ್ರಗಳು ಕಂಠದ ಮೇಲ್ಬಾಗದಲ್ಲಿಯೇ ಇವೆ.

 ವೈಖರೀವಾಣಿಯ ಉಗಮಸ್ಥಾನವೂ ಕಂಠವಾಗಿದೆ. ಈ ಕಂಠದಲ್ಲಿರುವದು ವಿಶುದ್ಧಿ ಚಕ್ರವು. ಕಂಠವು ಸ್ವರಗಳ ಹಾಗೂ ಧ್ವನಿಗಳ ಪೆಟ್ಟಿಗೆಯೆಂದು ಭಾಷಾ ವಿಜ್ಞಾನಿಗಳು ಬರೆದಿದ್ದಾರೆ. ಕಂಠವಿದು ನಾದಬ್ರಹ್ಮನ ವ್ಯಕ್ತಸ್ಥಾನ. ನಾದವನ್ನು ಸುನಾದವನ್ನಾಗಿ ತೋರುವ ಸ್ಥಾನವೂ ಇದುವೆ. ಸಂಗೀತಸರಸ್ವತಿಗೆ ಆಶ್ರಯಸ್ಥಾನ, ಮತ್ತು ಕಂಠವು ಜೀವನದ ಬೇವು-ಬೆಲ್ಲ (ಕಹಿ-ಸಿಹಿ)ಗಳನ್ನು ನುಂಗವ ಸ್ಥಾನ. ಜೀವನದಲ್ಲಿ ಸುಖ-ದುಃಖಗಳನ್ನು ಸಹಿಸುವದು ಕಂಠ. ಸಮುದ್ರ ಮಂಥನದ ಕಾಲಕ್ಕೆ ಪ್ರಾದುರ್ಭವಿಸಿದ ಘೋರ ವಿಷವನ್ನು ಕಂಠದಲ್ಲಿರಿಸಿಕೊಂಡು ಶಿವನು ನೀಲಕಂಠ ನಾದನು. ಜೀವನದಲ್ಲಿ ಸಂಸಾರದ ಎಂಥ ಸಮಸ್ಯೆಗಳನ್ನಾದರೂ ತಾಳಿಕೊಂಡಿರೆಂತಲೂ ಪತಿಯ ಸೌಭಾಗ್ಯದ ಚಿನ್ಹವೆನಿಸಿದ ತಾಳಿಯನ್ನು ಸತಿಗೆ ಕಟ್ಟುವದು ಕಂಠಕ್ಕಲ್ಲವೆ!

 ಜೀವನಾವಶ್ಯಕವಾದ ಲಾಲಾರಸ (ದುಗ್ದರಸ) ಗ್ರಂಥಿಗಳು ಕಂಠದಲ್ಲಿಯೇ ಇರುತ್ತವೆ. ಈ ಗ್ರಂಥಿಗಳಿಗೆ ʼʼಪಿಟ್ಯುಟರಿ ಥೈರಾಯಿಡ್” ಮತ್ತು ‘ಪ್ಯಾರಾಥೈರಾಯಿಡ್ʼ ಎಂದೂ ಕರೆಯುತ್ತಾರೆ. ಸರ್ವಗ್ರಂಥಿ ನಿಯಂತ್ರಕವೆನಿಸಿಕೊಂಡಿರುವ ಪಿಟ್ಯುಟ ಗ್ರಂಥಿಯು ಎಲ್ಲ ಗ್ರಂಥಿಗಳ ಕ್ರಿಯೆಗಳ ಮೇಲೆ ಹತೋಟಿಯಿದೆʼ’ ಮತ್ತು ಮನುಷ್ಯನ ವ್ಯಕ್ತಿತ್ವ ನಿರ್ಧರಿಸುವದು ನಿರ್ನಾಳ (ಪಿಟ್ಯುಟರಿ) ಗ್ರಂಥಿಗಳೆಂಬುದು ಆಶ್ಚರ್ಯವೆನಿಸಿದರೂ ಸತ್ಯ”ವೆ೦ದು ವೈದ್ಯರು ಅನುಭವದಿಂದ ಈ ಮಾತನ್ನು ಬರೆದಿದ್ದಾರೆ. ಅಂದಮೇಲೆ ವಿವಿಧ ರೀತಿಯಲ್ಲಿ ಮಹತ್ವವೆನಿಸಿದ ಈ ಕಂಠವು ಶ್ರೀಕಂಠವಲ್ಲವೆ ! ಇಂಥ ಮನ್ನಣೆವೆತ್ತ ಶ್ರೀಕಂಠದಲ್ಲಿರುವುದು ವಿಶುದ್ಧಿ ಚಕ್ರವು, ಈ ಚಕ್ರ ಪರಿಶುದ್ಧವಾಗಿರುವದರಿಂದಲೆ ವಿಶುದ್ಧಿಯೆನಿಸಿದೆ.

ಶ್ರೀಕಂಠದಲ್ಲಿಯ ವಿಶುದ್ಧಿ ಚಕ್ರದಲ್ಲಿರುವ ಬ್ರಹ್ಮವಸ್ತವು ವಿಜ್ಞಾನಬ್ರಹ್ಮನೆನಿಸಿದ್ದಾನೆ. ವಿಶುದ್ಧತೆಯಲ್ಲಿರುವುದು ವಿಜ್ಞಾನ, ವಿಶುದ್ಧಿಗೆ ಆಧಾರವಾದ ಕಂಠವು ಪರಿಶುದ್ಧವಾಗಿದ್ದರೆ ನಾದವಿಜ್ಞಾನ ಯಥಾರ್ಥವಾಗುವದು. ಕಂಠವು ಅಶುದ್ಧವಾದರೆ ಸ್ವರ ಸಂಯೋಗ ವಿಕೃತವಾಗುವದು. ನಾದವು ಕಠೋರ-ಕರ್ಕಶವೆನಿಸುವದು. ಕಾರಣ ವಿಶುದ್ಧವಾದ ಪದ್ಮದಲ್ಲಿರುವ ಪರಶಿವನು ವಿಜ್ಞಾನಮಯನು. ಇವೆರಡರಲ್ಲಿ ಅದೆಂತಹ ಸಾಮ್ಯ ! ತತ್ತ್ವಜ್ಞಾನಿಗಳ ಪರಿಶೋಧನೆ ಅದ್ಭುತವಾದುದು ಅನುಪಮವಾದುದು.  ಇಂಥ ವಿಜ್ಞಾನಬ್ರಹ್ಮವನ್ನು ಗುರುವು ಪ್ರಸಾದಲಿಂಗವನ್ನಾಗಿ ಕರದಿಷ್ಟ ಲಿಂಗದಲ್ಲಿಯೇ ಬೆರೆಯಿಸುತ್ತಾನೆ.

ಸಿಹಿಕಹಿಗಳ ಅನುಭವವನ್ನು ಕಂಠಸ್ಥಾನದ ಶಬ್ದ ದ್ರವ್ಯಗಳನ್ನು ಪ್ರಸಾದಗೊಳಿಸಿ ಪ್ರಸಾದಲಿಂಗಕ್ಕರ್ಪಿಸುವ ಮಹಾನುಭಾವನು ಶರಣನಾಗಿದ್ದಾನೆ. ಶ್ರೀಕಂಠದ ಮುಖಾಂತರ ಕಾರ್ಯವನ್ನು ಪ್ರವೇಶಿಸುವ ಪಡಿಪದಾರ್ಥಗಳಲ್ಲಿ ಪ್ರಾಸಾದಿಕ ಶಕ್ತಿಯನ್ನು ತುಂಬಬಲ್ಲವನೇ ಶರಣನು. ಕಾಯವನ್ನೇ ಪ್ರಸಾದಮಯನಾಗಿಸುವನು ಶರಣನು. ಈ ವಿಶುದ್ಧಿ ಚಕ್ರದ ವಿಶೇಷ ವಿಚಾರವನ್ನು ʼʼಉದ್ಧರಣೆಯ ವಾಚ್ಯʼʼ ದಿಂದ ಅಳವಡಿಸಿಕೊಳ್ಳಿ –

ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ ಆಕಾಶವೆಂಬ ಮಹಾಭೂತ.

ಆ ಭೂತ ಕೃಷ್ಣ (ನೀಲ) ವರ್ಣ, ವರ್ತುಳಾಕಾರ.

ಷೋಡಶದಳ ಪದ್ಮ, ಆ ಪದ್ಮ ನೀಲವರ್ಣ.

ಆ ದಳದಲ್ಲಿ ಅ, ಆ, ಇ, ಈ, ಉ, ಊ, ಋ, ಋ, ಲೈ

ಲೈ, ಏ, ಐ, ಓ, ಔ, ಅಂ, ಅ ಎಂಬ ಹದಿನಾರಕ್ಷರ,

ಆ ಕರ್ಣಿಕಾ ಮಧ್ಯದಲ್ಲಿಯ ಕಾರವೆಂಬ ಬೀಜಾಕ್ಷರ

ಆ ಯಕಾರ ನೀಲವರ್ಣ. ಅದು ಮೇಘಧ್ವನಿ.

ಅಲ್ಲಿ ಪ್ರಸಾದಲಿಂಗ, ಅದಕ್ಕೆ ನೀಲವರ್ಣವನುಳ್ಳ ಈಶಾನ್ಯಮುಖ.

ಶಾಂತ್ಯತೀತ ಕಲಾಪರ್ಯಾಯ ನಾಮವನುಳ್ಳ ಪರಾಶಕ್ತಿ,

ಆ ಶಕ್ತಿ ನೀಲವರ್ಣ, ಅಲ್ಲಿ ಶಿವಸಾದಾಖ್ಯಪರವೆಂಬ ಸಂಜ್ಞೆ.

ಊರ್ಧ್ವದಿಕ್ಕು. ಶಿವಗಾಯತ್ರಿವೇದವನುಚ್ಚರಿಸುತ್ತ

ಸುಜ್ಞಾನಹಸ್ತದಿಂ ಸುಶಬ್ದದ್ರವ್ಯವನ್ನು ಶ್ರೋತ್ರವೆಂಬ

ಮುಖಕ್ಕೆ ಆನಂದ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ.

 ಸದಾಶಿವ ಪೂಜಾರಿ. ಆ ಶಕ್ತಿ ತಾಕಿನಿ.

ಮಹಾದೇವ (ಸದಾಶಿವ) ನದಿ ದೇವತೆ. ಇಂತಿವೆಲ್ಲಕ್ಕೂ

ಮಾತೃಸ್ಥಾನವಾಗಿಹುದು ಯ ಕಾರವೆಂಬ ಬೀಜಾಕ್ಷರ

ಅದು ಪ್ರಣವದರ್ಪಣಾಕೃತಿಯಲ್ಲಿಹುದು.

ಓಂ ಓಂ ಓಂ ಯಾಂ ಯಾಂ ಎಂಬ ಬ್ರಹ್ಮನಾದ

ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.

ಇದು ವಿಶುದ್ಧಿಚಕ್ರ, ಶರಣಸ್ಥಲ.

ಈ ವ್ಯಾಖ್ಯೆಯಿಂದ ವಿಜ್ಞಾನಬ್ರಹ್ಮ ಹಾಗೂ ವಿಶುದ್ಧಿ ಚಕ್ರದ ಸ್ವರೂಪವು ವೇದ್ಯವಾಗುವದು. ಇಂಥ ವಿಜ್ಞಾನಬ್ರಹ್ಮವನ್ನು ನೈಜವಾಗಿ ಪ್ರಸಾದಲಿಂಗವನ್ನಾಗಿ ಕರುಣಿಸುವವನು ಶ್ರೀಗುರುವು. ಅವನಿಗೆ ಇದರಲ್ಲಿ ಅಸ್ವಾಭಾವಿಕತೆಯೆಂಬುದು ಇಲ್ಲವೇ ಇಲ್ಲ.

ಕುಂದದಾ ಸದುಹೃದಯ | ಮಂದಿರದನಾಹತಾ-

ನಂದಬ್ರಹ್ಮವನು-ತಂದೆನ್ನ ಕರಕಿತ್ತ

ತಂದೆ ಶ್ರೀಗುರುವೆ ಕೃಪೆಯಾಗು    ೮೮ |

ನ್ಯೂನತೆಯಿಲ್ಲದ, ಸಂಕುಚಿತವಾಗದ, ಕುಂದಿಲ್ಲದ, ಕುಂದದ, ವಿಶಾಲವೂ ದಯಾಪೂರಿತವೂ ಆದ ಹೃದಯ ಮಂದಿರವೇ ಅನಾಹತ ಚಕ್ರಕ್ಕೆ ಆಧಾರ. ಹೃದಯ ವೈಶಾಲ್ಯತೆಯೇ ಮುಖದ ಕನ್ನಡಿ.

ಹೃದಯ ಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ

ಆ ಭೂತ ಮಾಂಜಿಷ್ಠವರ್ಣ, ಟ್ಕೋಣ ದ್ವಾದಶದಳಪದ್ಮ

ಆ ಪದ್ಮ ಕುಂಕುಮ (ಮಾಂಜಿಷ್ಣ) ವರ್ಣ

ಆ ದಳಗಳಲ್ಲಿ-ಕ, ಖ, ಗ, ಘ, ಙ, ಚ, ಛ,ಜ,ಝ,ಞ,ಟ,ಠ

 ಎಂಬ ಹನ್ನೆರಡಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ವಾ ಕಾರವೆಂಬ ಬೀಜಾಕ್ಷರ.

ಆ ವಾ ಕಾರ ಶ್ವೇತ (ಶುಭ್ರ) ವರ್ಣ. ಅದು ಭೇರಿನಾದ.

ಅಲ್ಲಿ ಜಂಗಮಲಿಂಗ ಅದಕ್ಕೆ ಕೆಂಪು ವರ್ಣವನುಳ್ಳ ತತ್ಪುರುಷ ಮುಖ.

ಶಾಂತಿಕಲಾಪರ್ಯಾಯ ನಾಮವನುಳ್ಳ ಆದಿಶಕ್ತಿ

ಆ ಶಕ್ತಿ ಮಾಂಜಿಷ್ಠವರ್ಣ ಅಲ್ಲಿ ಅಮೂರ್ತಸಾದಾಖ್ಯ

ಗೂಢ (ಲಿಂಗಕ್ಷೇತ್ರ)ವೆಂಬ ಸಂಜ್ಞೆ ಉತ್ತರದಿಕ್ಕು

ಅಥರ್ವಣವೇದವನುಚ್ಚರಿಸುತ್ತ ಸುಮನವೆಂಬ ಹಸ್ತದಿಂ

 ಸುಸ್ಪರ್ಶನ ದ್ರವ್ಯವನು ತ್ವಕ್ಕು ಎಂಬ ಮುಖಕ್ಕೆ

ಅನುಭವ ಭಕ್ತಿಯಿಂದರ್ಪಿಸುವಳಾ ಶಕ್ತಿ . ಈಶ್ವರ ಪೂಜಾರಿ.

ಶಕ್ತಿ ಕಂಕಾಳಿ ಭೀಮ (ಈಶ್ವರ) ನಧಿದೇವತೆ.

ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಾ ಕಾರವೆಂಬ ಬೀಜಾಕ್ಷರ.

ಅದು ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹುದು.

ಓಂ ಓಂ ಓಂ ವಾಂ ವಾಂ ವಾಂ ಎಂಬ ಬ್ರಹ್ಮನಾದ

ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.

ಇದು ಅನಾಹತ ಚಕ್ರ, “ಪ್ರಾಣಲಿಂಗಸ್ಥಲ’ವು (ಉ. ವಾಚ್ಯ)

ಹೀಗೆ ಪ್ರಾಣ ಲಿಂಗಿಯು ಹೃದಯಮಂದಿರದ ಅನಾಹತಚಕ್ರದ ಆನಂದ ಬ್ರಹ್ಮವನ್ನು ಜಂಗಮ ಲಿಂಗವನ್ನಾಗಿ ಅಳವಡಿಸಿಕೊಳ್ಳುತ್ತಾನೆ. ಈ ಕಲೆಯನ್ನು ಕರಕಿತ್ತ ತಂದೆಯು ಶ್ರೀಗುರುವು.

ಜೀವನದಲ್ಲಿ ಸದುಹೃದಯವುಳ್ಳವನು ಆನಂದವನ್ನು ಅನುಭವಿಸುತ್ತಾನೆ. ಅಂಥವನ ಹೃದಯಭೂಮಿಕೆಯನ್ನು ದುಃಖ-ದುಮ್ಮಾನಗಳು ಪ್ರವೇಶಿಸಲಾರವು. ಅವನ ಆನಂದಕ್ಕೂ ಕುಂದು ಕೊರತೆ ಬಾರದು. ಆನಂದಬ್ರಹ್ಮವೇ ಅನಾಹತ ಚಕ್ರದಿಂದ ಹೊರಹೊಮ್ಮಿ ಕರದಿಷ್ಟಲಿಂಗದಲ್ಲಿ ಜಂಗಮಲಿಂಗವಾಗಿ ರೂಪುಗೊಳ್ಳು ವದು. ಜಂಗಮನು ಜ್ಞಾನಮೂರ್ತಿಯು, ಜ್ಞಾನಿಯಾದವನ ಆನಂದಕ್ಕೆ ಕುಂದೆಂಬುದು ತೋರುವದಿಲ್ಲ. ತಂದೆಯು ಮಗನಿಗೆ ಸದಾ ಆನಂದವನ್ನು ಉಂಟುಮಾಡಲು ಬಯಸಿದಂತೆ ಗುರುತಂದೆಯು ಆನಂದಬ್ರಹ್ಮವನ್ನು ತೋರಿಸಿಕೊಟ್ಟ ಮೇಲೆ ನಾನು ಆನಂದ ಭರಿತನಲ್ಲವೆ ! ಚನ್ನ ಸದಾಶಿವಯೋಗಿಯ ‘ʼಶಿವಯೋಗ ಪ್ರದೀಪಿಕೆ” ಯಲ್ಲಿ.

ಅಧೋಮುಖಾಷ್ಟ-ಪತ್ರಾಬ್ಜ

ಯುಕ್ತಂ ಹೃಚ್ಚಕ್ರಮಿಷ್ಟದಂ |

ತನ್ಮಧ್ಯ ಕರ್ಣಿಕಾಂ ಜ್ಯೋತಿ-

ಲಿಂಗಾಕಾರಮಿಮಾಂ ಸ್ಮರೇತ್ ||

ಎಂದು ಅನಾಹತ ಚಕ್ರದ ವಿವರಣೆಯನ್ನು ಪ್ರತಿಪಾದಿಸಿದರೆ ಅದಕ್ಕೆ ನಿಜಗುಣರು ತಮ್ಮ ಪಾರಮಾರ್ಥ ಪ್ರಕಾಶಿಕೆಯ ತೃತೀಯ ಪರಿಚ್ಛೇದದಲ್ಲಿ ‘ʼಹೃದಯ ಸ್ಥಾನದಲ್ಲಿಯ ಅನಾಹತನಾದಕ್ಕೆ ಕಾರಣಮಪ್ಪುದರಿಂದನಾಹತ ಸಂಜ್ಞೆಯುಳ್ಳ ʼʼಹೃದಯಚಕ್ರವು ಕದಳೀ ಕುಸುಮದಂತಧೋಮುಖವಾಗಿ ವಿಕಾಸಮಾದ ಬಾಹ್ಯದಳಂಗಳೆಂಟರ ಮಧ್ಯದಲ್ಲಿ ಗೋಪ್ಯಮಾದ ನಾಲ್ಕು ದಳಂಗಳುಳ್ಳುದಾ ಕಮಲಕರ್ಣಿಕೆಯನೆ ಜ್ಯೋತಿರ್ಮಯ ಲಿಂಗಾಕಾರ ಮಾಗಿ ಧ್ಯಾನಿಸಲ್ವೇಳ್ಕುಂ |” ಎಂಬ ಅರ್ಥವಿಸ್ತಾರವನ್ನು ಗೈದಿರುವರು.

ಹೃದಯದ ದ್ವಾದಶದಳದ ಅನಾಹತಪದ್ಮವು ಬಾಳೆಯ ಗೊನೆಯಂತೆ (ಹೂವಿನಗೊನೆ) ಕೆಳಮುಖವಾದ ಎಂಟುದಳಗಳಿಂದ ಕೂಡಿದ್ದು ಒಳಭಾಗದಲ್ಲಿ ಗೋಪ್ಯವೆನಿಸಿದ ನಾಲ್ಕು ದಳಗಳು ಮೇಲ್ಮುಖವಾಗಿ ಶೋಭಿಸುತ್ತವೆ. ಕುಂಕುಮವರ್ಣದ ಕಮಲದಲ್ಲಿರುವ ಆನಂದಬ್ರಹ್ಮವೇ ಕರದಿಷ್ಟಲಿಂಗದಲ್ಲಿ ಜಂಗಮಲಿಂಗ ವಾಗಿರುವದು.

 ಹೃದಯದ ಕಮಲವು ಎಂಟುದಳಗಳಿಂದ ಸ್ಫುಟವಾಗಿಯೂ ಅದರಲ್ಲಿ ನಾಲ್ಕು ದಳಗಳು ಗೋಪ್ಯವಾಗಿರುವದರಿಂದ ಅನೇಕರು ಹೃನ್ಮಾನಸ-ಸರೋವರದಲ್ಲಿ ಅಷ್ಟದಳ ಕಮಲವೆಂದೇ ವರ್ಣಿಸಿರುವರು. ಈ ಕಮಲದ ಮಧ್ಯಭಾಗದ ಚತುರ್ದಳಗಳ ಮಧ್ಯದಲ್ಲಿಯೇ ಶಿವನಿರುವನು ಪರಶಿವನು ಹೃದಯ, ಭ್ರೂಮಧ್ಯ ಮತ್ತು ಬ್ರಹ್ಮ ರಂಧ್ರಗಳೆಂಬ ಈ ಮೂರು ಸ್ಥಾನಗಳಲ್ಲಿರುವನೆಂಬ ಮಾತನ್ನು ಅನುಭವಿಗಳು ಪ್ರತಿಪಾದಿಸಿದ್ದುಂಟು. ಅಜ್ಞಾನಾವೃತವಾದ ಚೈತನ್ಯವು ಜೀವವೆನಿಸುವದು. ಜೀವಾತ್ಮನು ಅಷ್ಟದಳಕಮಲದಲ್ಲಿ ಸಂಚಾರಮಾಡುತ್ತಿದ್ದು ಗೋಪ್ಯಮುಖದ ಚತುರ್ದಳಗಳಲ್ಲಿಯ ಈಶ್ವರ ಚೈತನ್ಯವನ್ನು ಅರಿಯದೆ ದಳಗತವಾದ ವೃತ್ತಿಯನ್ನು ಅನುಭವಿಸುತ್ತಿರುವನು. ಚನ್ನಬಸವಣ್ಣನವರು ಅಷ್ಟದಳ ಕಮಲದ ವಿವರವನ್ನು ಈ ರೀತಿಯಾಗಿ ವಿವರಿಸಿರುವರು –

 ಇಂದ್ರದಳವೇರಲು ಗುಣಿಯಾಗಿಹನು.

ಅಗ್ನಿದಳವೇರಲು ಹಸಿವನು.

 ಯಮದಳವನೇರಲು ದುರಿತಚೇಷ್ಟಿತನಾಗಿಹನು.

ನೈಋತ್ಯದಳವೇರಲು ಕೋಪಿಸುತ್ತಿಹನು.

ವರುಣದಳವೇರಲು ನಿದ್ರೆಗೈವನು

ವಾಯವ್ಯದಳವೇರಲು ಸಂಚಲನಾಗಿಹನು

ಕುಬೇರದಳವೇರಲು-ಧರ್ಮಬುದ್ಧಿಯಾಗಿಹನು

ಈಶಾನ್ಯದಳವೇರಲು ವಿಷಯಾತುರನಾಗಿಹನು

ಮಧ್ಯಸ್ಥಾನಕ್ಕೆ ಬಂದಲ್ಲಿ ಸದ್ಭಾವಿಯಾಗಿ

ಮೋಕ್ಷವ ಬಯಸುತ್ತಿಹನು

ಇಂತೀ ಅಷ್ಟದಳಂಗಳಲ್ಲಿ ತಿರುಗುವ ಹಂಸನ

ನೆಲೆಯ ಕೆಡಿಸಿ ಸದ್ಭಾವಿಯಾಗಿರಬಲ್ಲ

ಕೂಡಲಚನ್ನಸಂಗಾ ! ನಿಮ್ಮ ಶರಣ.

ಮಾನಸಸರೋವರ ಮಧ್ಯದ ಹಂಸನಾದ ಜೀವಾತ್ಮನು ಪೂರ್ವದಿಕ್ಕಿನ ಇಂದ್ರದಳಕ್ಕೆ ಬರಲು ಸದ್ಗುಣಿಯಾಗುವನು. ಆಗ್ನೀಯದಿಕ್ಕಿನ ಅಗ್ನಿದಳದಲ್ಲಿ ಹಸಿವುಳ್ಳವನೂ, ದಕ್ಷಿಣ ದಿಕ್ಕಿನ ಯಮದಳದಲ್ಲಿ ದುರಿತಕರ್ಮಸ್ವಭಾವವುಳ್ಳವನೂ, ನೈಋತ್ಯ ದಿಕ್ಕಿನ ನೈಋತ್ಯ ದಳದಲ್ಲಿ ಕೋಪವುಳ್ಳವನೂ, ಪಶ್ಚಿಮ ದಿಕ್ಕಿನ ವರುಣನ ದಳದಲ್ಲಿ ನಿದ್ರಾಪರನೂ, ವಾಯವ್ಯದಿಕ್ಕಿನ ವಾಯವ್ಯದಳದಲ್ಲಿ ಚಂಚಲನೂ, ಉತ್ತರ ದಿಕ್ಕಿನ ಕುಬೇರನ ದಳದಲ್ಲಿ ಧರ್ಮ ಬುದ್ಧಿಯುಳ್ಳವನೂ, ಈಶಾನ್ಯದಿಕ್ಕಿನ ಈಶಾನ್ಯದಳದಲ್ಲಿ ವಿಷಯಾತುರನೂ ಆಗುವನು. ಆಯಾ ದಳಗಳನ್ನು ಆಶ್ರಯಿಸುತ್ತಿರಲು ಆಯಾಗುಣವುಳ್ಳ ಜೀವನು ಧರ್ಮಬುದ್ಧಿಯಿಂದ ಮಧ್ಯಸ್ಥಾನಕ್ಕೆ ಬರಲು ಮಹಾ ಚೈತನ್ಯನ ಸನ್ನಿಧಿಯಲ್ಲಿ ಸದ್ಭಾವಿ ಯಾಗಿ ಮೋಕ್ಷಾಪೇಕ್ಷಿಯಾಗುವನು. ಶರಣರು ಈ ಅಷ್ಟದಳಂಗಳಲ್ಲಿ ಸಂಚರಿಸುವ ಜೀವಾತ್ಮನಾದ ಹಂಸನ ನೆಲೆಯನ್ನು ಬದಲಿಸಿ ಆಧಾರಾದಿ ಚಕ್ರಗಳಲ್ಲಿ ಭಕ್ತಾದಿ ಸ್ಥಲಕ್ಕನುಗುಣವಾಗಿ ಆಚಾರಾದಿ ಲಿಂಗಗಳನ್ನು ಅರ್ಚಿಸುತ್ತ ಭ್ರೂಮಧ್ಯದ ಮಹಾಲಿಂಗದಲ್ಲಿ ಐಕ್ಯಸ್ಥಿತಿಯನ್ನು ಹೊಂದುವ ಶಕ್ತಿಯನ್ನು ಪಡೆದಿರುತ್ತಾರೆ. ಸದ್ಗುರುವು ಶರಣನಿಗೆ ನವಚಕ್ರಗತಬ್ರಹ್ಮನನ್ನು ನವಲಿಂಗಗಳನ್ನಾಗಿ ಸಂಸ್ಕರಿಸುತ್ತಾನೆ; ಕರುಣಿಸುತ್ತಾನೆ.

ಸಾಮಾನ್ಯವಾಗಿ ಆತ್ಮನ ವಿಚಾರಬರಲು ಹೃದಯವನ್ನೇ ಪ್ರತಿಯೊಬ್ಬನು ಮುಟ್ಟಿಕೊಳ್ಳುತ್ತಾನೆ. ಅಂತೆಯೇ ಆತ್ಮನನ್ನು ಅರಿಯುವ ಶಾಸ್ತ್ರಕ್ಕೆ ಅಧ್ಯಾತ್ಮ ಅಥವಾ ಆಧ್ಯಾತ್ಮ ಶಾಸ್ತ್ರವೆಂಬ ಹೆಸರು ಸಾರ್ಥಕವಾಗಿದೆ. ಉಪನಿಷದಾಗಮಗಳೂ ಸಹ ಆತ್ಮನನ್ನು ಹೃದಯದಲ್ಲಿಯೇ ವರ್ಣಿಸಿವೆ ‘ಶ್ವೇತಾಶ್ವತರೋಪನಿಷತ್ತಿ’ನಲ್ಲಿ-  

ಅಂಗುಷ್ಠ ಮಾತ್ರಃ ಪುರುಷಃ

ಅಂತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಠಃ |ʼʼ

ಅಂಗುಷ್ಠ ಪ್ರಮಾಣದ ಪುರುಷನು ಜನರ ಹೃದಯ ಮಂದಿರದಲ್ಲಿರುತ್ತಾನೆಂದು ಹೇಳಿದೆ ಭಗವದ್ಗೀತೆಯಲ್ಲಿ

ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ ।”

ಸಕಲ ಪ್ರಾಣಿಗಳ ಹೃದಯಸ್ಥಾನದಲ್ಲಿ ಈಶ್ವರನಿದ್ದಾನೆಂದು ಅರ್ಜುನನಿಗೆ ಕೃಷ್ಣನು ಬೋಧಿಸಿದ್ದಾನೆ. ಹೃದಯ ಕಮಲ ಕರ್ಣಿಕಾ ವಾಸದಲ್ಲಿರುವ ಹಂಸನನ್ನು ಅರಿಯ ಬೇಕೆನ್ನುವ ಅನೇಕ ಪ್ರಮಾಣಗಳು ಕಾಣಬರುತ್ತವೆ.

ಪಶ್ಯಾಮಿ ತಂ ಸರ್ವಜನಾಂತರಸ್ಥಂ

ನಮಾಮಿ ಹಂಸಂ ಪರಮಾತ್ಮರೂಪಮ್ ।।’

ಯೋಗ ಶಿಖೋಪನಿಷತ್ಕಾರರು ಸಕಲರ ಹೃದಯಾಂತರಾಳದಲ್ಲಿ ನೆಲಸಿದ ಪರಮಾತ್ಮನಿಗೆ ವಂದಿಸಿದ್ದಾರೆ. ಮತ್ತು –

 “ಹಂಸ ಏವ ಪರೋ ರುದ್ರಃ ಹಂಸ ಏವ ಪರಾತ್ಪರಃ |

ಸರ್ವದೇವಸ್ಯ ಮಧ್ಯಸ್ಥೋ ಹಂಸ ಏವ ಮಹೇಶ್ವರಃ |’

ಸರ್ವರ ದೇಹ ಮಧ್ಯಸ್ಥನಾದ ಹಂಸನೇ ರುದ್ರರೂಪನು. ಪರಾತ್ಪರ ಪರಮೇಶ್ವರ ನೆನಿಸಿದ್ದಾನೆ. ಅಂತೆಯೇ ಕನ್ನಡ ಜಾನಪದಕವಿಯೆಂದು ಕೀರ್ತಿವೆತ್ತ ಸರ್ವಜ್ಞನು ತನ್ನಂತೆ ಪರರ ಬಗೆದೊಡೆ ಕೈಲಾಸಬಿನ್ನಾಣವಕ್ಕು” ಯೆಂದು ಸಾರಿದ್ದಾನೆ. ಜ್ಞಾನಿಗಳು ಇಂಥ ಹಂಸನನ್ನು ಅರಿತು ಸಮದೃಷ್ಟಿಯನ್ನು ಸಂಪಾದಿಸಿ ಪರಮಹಂಸರೆನಿಸುತ್ತಾರೆ.

 ‘ಹಂಸ’ ಮಂತ್ರಕ್ಕೆ ಹಂಸ-ವಿದ್ಯೆ” ”ಯೆಂತಲೂ ಕರೆಯುತ್ತಾರೆ. ಹಂಸಜಪವನ್ನು ಜಪಿಸದಿರುವ ಜಂತುಗಳು ಇರುವದಿಲ್ಲ. ಉಸಿರಾಡಿಸುವ ಪ್ರತಿಯೊಂದು ಪ್ರಾಣಿಯು ಹಂಸವನ್ನು ಉಚ್ಚರಿಸುತ್ತದೆ. ಆದರೆ ಅದಕ್ಕೆ ಅದರ ಅರಿವಿರುವದಿಲ್ಲ. ಶ್ವಾಸವು  ಹೊರಬರುವಾಗ ‘ಹ’ಕಾರದಿಂದಲೂ ಒಳಗೆ ಹೋಗುವಾಗ ‘ಸʼ ಕಾರವಾಗಿಯೂ ಅಭಾಸವಾಗುತ್ತದೆ. ಹಿಂದೆ ತಿಳಿಸಿದಂತೆ ಪ್ರತಿನಿತ್ಯ ಜೀವಾತ್ಮನು ೨೧,೬೦೦ ಸಲ ಉಸಿರಾಡಿಸುತ್ತಾನೆ. ಅದನ್ನು ಕ್ರಮಗೊಳಿಸಿ ಜ್ಞಾನಪೂರ್ವಕ ಪ್ರಣವದೊಡನೆ ಉಸಿರಾಡಿಸಿದರೆ ಅದುವೆ ಹಂಸಮಂತ್ರವಾಗುವದು. “ಸಿದ್ಧಾಂತ ಶಿಖಾಮಣಿ’ಯಲ್ಲಿ

ಹಂಸರೂಪಂ ಪರಾತ್ಮಾನಂ

ಸೋಽಹಂಭಾವೇನ ಭಾವಯೇತ್ ||

ಹಂಸರೂಪ ಪರಮಾತ್ಮನನ್ನು ‘ಸೋಹಂ’ ಭಾವದಿಂದ ಭಾವಿಸಬೇಕೆಂದು ಪ್ರತಿಪಾದಿ ಸಲ್ಪಟ್ಟಿದೆ. ಹಂಸ’ ಮಂತ್ರವು ವೈಕೃತ ಪ್ರಾಣಾಯಾಮವಾಗಿ ಸೋಹಂ’ ಎಂದೆನಿಸುವದು.  ವೈಕೃತಪ್ರಾಣಾಯಾಮವೆಂದರೆ ರೇಚಕ-ಪೂರಕ-ಕುಂಭಕಗಳಿಂದ ಪ್ರಾಣ ನಿರೋಧಿಸಲ್ಪಡುವಂಥಹದು. ಈ ವಿಚಾರಗಳು ಜ. ಚ. ನಿ.ಯವರ ‘ಪರಮ ಹಂಸ’ ಪುಸ್ತಿಕೆಯಲ್ಲಿ ಅವಗತವೆನಿಸುವವು.

 ಹಂಸ ಅಥವಾ ಸೋಹಂ ಸಾಧನೆಗಿಂತ ಶರಣರ ಷಟ್‌ಸ್ಥಲ ಸಿದ್ಧಾಂತ ಮಿಗಿಲಾಗಿದೆ. ಪರಮಹಂಸವೆನಿಸುವವನು ಕೇವಲ ಜ್ಞಾನ ಮಾರ್ಗಾವಲಂಬಿಯಾಗಿರುತ್ತಾನೆ. ಶರಣನು ಅಷ್ಟದಳಂಗಳಲ್ಲಿ ತಿರುಗುವ ಹಂಸನ ನೆಲೆಯನ್ನು ಕೆಡಿಸಿ ಜ್ಞಾನಕ್ರಿಯೆಗಳಿಂದ ಸದ್ಭಾವಿಯಾಗಿ ಅನಾಹತ ಚಕ್ರದ ಅರಿವುಳ್ಳವನಾಗಿ ಆನಂದ  ಬ್ರಹ್ಮವನ್ನು ಜಂಗಮಲಿಂಗವನ್ನಾಗಿ ಅರ್ಚಿಸಿ ಅನುಭವಿಯಾಗುತ್ತಾನೆ. ಹೃದಯ ಕಮಲದಿಂದ ಮೇಲೇರಿ ಭ್ರೂಮಧ್ಯಕ್ಕೆ ಬಂದು ಮಹಾಲಿಂಗನ ದರ್ಶನ ಪಡೆಯುತ್ತಾನೆ. ಬಾಲಲೀಲಾ ಮಹಾಂತರ

ಅಷ್ಟದಳದ ಕಮಲ ತೊಟ್ಟಿಲೊಳಗೆ ಮಲಗಿ |

ಶ್ರೇಷ್ಠ ಸದ್ಗುಣ ಹಸ್ತ ಪದಗಳನಾಡುತ |

ನೆಟ್ಟನೆ ನಿಟಲಭ್ರೂಮಧ್ಯದ ಜ್ಯೋತಿಯ |

ದೃಷ್ಟಿಸಿ ನೋಡುತ ಕುಲುಕುಲು ನಗುತಿಹ

ಎನ್ನುವ ಈ ನುಡಿ ಸುಂದರ ಪ್ರಮಾಣವಾಗಿದೆ. ಅದು ಕಾರಣ ಹೃದಯಕಮಲದ ಆನಂದ ಬ್ರಹ್ಮವನ್ನು ತಿಳಿದು ಆನಂದಿಸಬೇಕು. ಆನಂದಿಸಿ ಕುಂದಿಲ್ಲದಂತಿರಬೇಕು. ಸಕಲ ವಸ್ತುವಿನಲ್ಲಿಯೂ ಶಿವಭಾವಿಯಾಗಿ ಬಾಳಬೇಕು.

ಎಲಸಿತದ ನಾಭಿಮಂ | ಡಲದ ಮಣಿಪೂರಕ ಸತ್

ಕಲೆಯ ಬ್ರಹ್ಮವನು-ಒಲಿದೆನ್ನ ಕರಕಿತ್ತು

ಸಲಹಿದೈ ಗುರುವೆ ಕೃಪೆಯಾಗು

॥ ೮೯ ||

 ನವಚಕ್ರಗಳಲ್ಲಿ ಆರನ್ನು ಪ್ರವೃತ್ತಿಕ್ರಮದಲ್ಲಿ ಪ್ರತಿಪಾದಿಸಿ ಏಳನೆಯದಾದ

ಮಣಿಪೂರಕ ಚಕ್ರದ ವಿವರವನ್ನು ಇಲ್ಲಿ ಹೇಳಿದ್ದಾನೆ. ಮಣಿಪೂರಕ ಚಕ್ರವು ನೆಲಸಿದ್ದು

ವಿಲಸಿತವಾದ ನಾಭಿಮಂಡಳದಲ್ಲಿ ನಾಭಿಮಂಡಲಕ್ಕೆ ಹೊಕ್ಕಳೆಂತಲೂ ಕರೆಯುತ್ತಾರೆ.

ನಾಭಿಯು ಕರುಳಿಗೆ ಸಂಬಂಧವುಳ್ಳದು. ಗರ್ಭಾವಸ್ಥೆಯಲ್ಲಿ ಶಿಶುವು ನಾಭಿಯ

ಮುಂಖಾಂತರವಾಗಿಯೇ ತಾಯಿಯ ಆಹಾರಾದಿ ಅನ್ನರಸವನ್ನು ಗ್ರಹಿಸುತ್ತದೆ. ಇದು

ಶರೀರದ ಸಮತೋಲನವನ್ನು ಕಾಯುವ ಮಧ್ಯಸ್ಥಾನವೂ ಹೌದು. ಇಲ್ಲಿರುವ

ಕರದಿಷ್ಟ ಲಿಂಗದಲ್ಲಿ ಶಿವಲಿಂಗವಾಗಿ ಪರಿಣಮಿಸುವನು.

ಮಣಿಪೂರಕ ಕಮಲದಲ್ಲಿ ಸತ್ಕಲಾಬ್ರಹ್ಮನು ವಾಸವಾಗಿರುತ್ತಾನೆ. ಈ ಸತ್ಕಲಾ ಬ್ರಹ್ಮನೇ

ಜ್ಞಾನೇಂದ್ರಿಯಗಳಲ್ಲಿ ಪ್ರಧಾನವಾದ ಕಣೇ ಶಿವಲಿಂಗಕ್ಕೆ ಮೂಲವಾಗಿದೆ.

ಕಣ್ಣಿಗೆ ಕಾಂತಿಯ (ತೇಜನ್ನು ಕೊಡುವ ಶಿವಲಿಂಗವು ಕಳಾಮಯವಾಗಿರುತ್ತದೆ.

ಅದರಂತೆ ನಾಭಿಮಂಡಲದ ಮಣಿಪೂರಕ ಚಕ್ರದ ಬ್ರಹ್ಮವೂ ಸತ್ಕಲಾ ಬ್ರಹ್ಮನಾಗಿದ್ದಾನೆ.

ನಾಭಿಸ್ಥಾನದಲ್ಲಿ ಜಠರಾಗ್ನಿಯ ತೇಜವೂ ತುಂಬಿದೆ. ಆದ್ದರಿಂದಲೇ ನಾಭಿಯಲ್ಲಿಯ

ಬ್ರಹ್ಮನು ಕಳಾಪೂರ್ಣನಾಗಿದ್ದಾನೆ. ಇಂಥ ಅನುಭವ ವೇದ್ಯವಾದ ಕಲಾಬ್ರಹ್ಮದ

ಅರಿವು ಸದ್ಗುರು ಕೃಪೆಯಿಲ್ಲದೆ ಆಗದು. ಗುರುನಾಥನು ಕೃಪೆ ಗೈದು ನಾಭಿಯ ಸತ್ಕಲೆಯ

ಬ್ರಹ್ಮವನ್ನು ಎನ್ನ ಕರದಿಷ್ಟಲಿಂಗದಲ್ಲಿ ಶಿವಲಿಂಗವನ್ನಾಗಿ ಸಂಯೋಜಿಸಿದ್ದಾನೆ.

ಶಿವಲಿಂಗವನ್ನು ಅರ್ಚಿಸುವ ಅಂಗನು ಪ್ರಸಾದಿಯಾಗಿದ್ದಾನೆ.

ಈ ನಾಭಿಯ ಮಣಿಪೂರಕ ಚಕ್ರದ ವಿಶೇಷವಾದ ಅನುಭವವನ್ನು

ಅನುಭವಿಗಳು ಕೆಳಗಿನಂತೆ ತಿಳಿಪಡಿಸಿದ್ದಾರೆ –

ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ, ಅಗ್ನಿಯೆಂಬ ಮಹಾಭೂತ,

ಆ ಭೂತ ರಕ್ತವರ್ಣ ಇ; ತ್ರಿಕೋಣ ಅಲ್ಲಿ ದಶದಳ ಪದ್ಮ

ಆ ಪದ್ಮ ರಕ್ತವರ್ಣ, ಆ ದಳದಲ್ಲಿ ಡ, ಢ, ಣ. ತ. ಥ. ದ. ಧ. ನ.

ಪ. ಫ. ಎಂಬ ಹತ್ತಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ಶಿ ಕಾರವೆಂಬ ಬೀಜಾಕ್ಷರ

ಆ ಶಿಕಾರ ರಕ್ತವರ್ಣ, ಅದು ಘಂಟಾನಾದ, ಅಲ್ಲಿ ಶಿವಲಿಂಗ ;

ಅದಕ್ಕೆ ರಕ್ತವರ್ಣವುಳ್ಳ ಅಘೋರ ಮುಖ.

ವಿದ್ಯಾಕಲಾಪರ್ಯಾಯ ನಾಮವನುಳ್ಳ ಇಚ್ಛಾಶಕ್ತಿ

ಆ ಶಕ್ತಿ ಕೆಂಪು ವರ್ಣ, ಅಲ್ಲಿ ಮೂರ್ತಿ ಸಾದಾಖ್ಯ

ಶರೀರವೆಂಬ ಸಂಜ್ಞೆ ದಕ್ಷಿಣದಿಕ್ಕು, ಅಲ್ಲಿ ಸಾಮವೇದವ-

ನುಚ್ಚರಿಸುತ್ತ ನಿರಹಂಕಾರವೆಂಬ ಹಸ್ತದಿಂದ ಸುರೂಪದ್ರವ್ಯವನು

ನೇತ್ರವೆಂಬ ಮುಖಕ್ಕೆ ಸಾವಧಾನ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ರುದ್ರ ಪೂಜಾರಿ ಶಕ್ತಿ ಲಾಕಿನಿ ರುದ್ರ (ಹರ) ನಧಿದೇವತೆ.

ಇಂತಿವೆಲ್ಲಕ್ಕು ಮಾತೃಸ್ಥಾನ ವಾಗಿಹುದು ಶಿಕಾರವೆಂಬ ಬೀಜಾಕ್ಷರ

[15:58, 11/28/2022] Mangala Choukimath: ಓಂ ಓಂ ಓಂ ಶೀಂ ಶ್ರೀಂ ಶೀಂ ಎಂಬ

ಅದು ಪ್ರಣವದ ಕುಂಡಲಾಕೃತಿಯಲ್ಲಿ ಹುದು

ಬ್ರಹ್ಮನಾದ ಮಂತ್ರ-

ಮೂರ್ತಿ ಪ್ರಣವಕ್ಕೆ ನಮಸ್ಕಾರವು,

ಇದು ಪ್ರಸಾದಿಸ್ಥಲ ಇಲ್ಲಿ ಶಿವಲಿಂಗ ಇದಿರುವದು ಮಣಿಪೂರಕದಲ್ಲಿ

೮. ಸ್ವಾಧಿಷ್ಟಾನಚಕ್ರ-ಪಿಂಡಬ್ರಹ್ಮ (ಗುರುಲಿಂಗ)

|| ೯೦ ||

ಅಂಡಜದ ಅಗ್ರದ ಅ | ಖಂಡ ಸ್ವಾಧಿಷ್ಠಾನ

ಪಿಂಡಬ್ರಹ್ಮವನು-ಕಂಡೆನ್ನ ಕರಕಿತ್ತು-

ದಂಡ ಶ್ರೀಗುರುವೆ ಕೃಪೆಯಾಗು

“ಆತ್ರೋದ್ಧರಣೆ ವಾಚ್ಯ’ದಲ್ಲಿ ಸ್ವಾಧಿಷ್ಠಾನ ಚಕ್ರದ ವಿವರಣೆ ಕೆಳಗಿನಂತಿದೆ-

ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ ಅಪ್ಪುವೆಂಬ ಮಹಾಭೂತ

ಆ ಭೂತ ಶ್ವೇತವರ್ಣ; ಧನುರ್ಗತಿ ಅಲ್ಲಿ ಷಡ್‌ಳಪದ್ಮ,

ಆ ಪದ್ಮಪಚ್ಛಿಯ ವರ್ಣ, ಆ ದಳದಲ್ಲಿ ಬ, ಭ, ಮ, ಯ, ರ, ಲ, ಎಂಬ ಆರಕ್ಷರ

ಆ ಕರ್ಣಿಕಾ ಮಧ್ಯದಲ್ಲಿ ಮಕಾರವೆಂಬ ಬೀಜಾಕ್ಷರ.

ಆ ಮಕಾರ ಶ್ವೇತವರ್ಣ ಅದು ವೇಣುನಾದ.

ಅಲ್ಲಿ ಗುರುಲಿಂಗ, ಅದಕ್ಕೆ ಶ್ವೇತವರ್ಣವನುಳ್ಳ ವಾಮದೇವಮುಖ

ಪ್ರತಿಷ್ಠಾಕಲಾ ಪರ್ಯಾಯ ನಾಮವನುಳ್ಳ ಜ್ಞಾನಶಕ್ತಿ

ಆ ಶಕ್ತಿ ಶ್ವೇತವರ್ಣ ಅಲ್ಲಿ ಕರ್ತೃ ಸಾದಾಖ್ಯ

ಗೂಢವೆಂಬ ಸಂಜ್ಞೆ ಪಶ್ಚಿಮ ದಿಕ್ಕು.

900

ಅಲ್ಲಿ ಯಜುರ್ವೇದವನುಚ್ಚರಿಸುತ್ತ ಸುಬುದ್ಧಿಯೆಂಬ ಹಸ್ತದಿಂ

ಸುರಸ ದ್ರವ್ಯವನು ಜಿಹ್ನೆಯೆಂಬ ಮುಖಕ್ಕೆ

ನೈಷ್ಠಿಕಾ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ

ವಿಷ್ಣು ಪೂಜಾರಿ ಶಕ್ತಿರಾಕಿನಿ ವಿಷ್ಣು (ಮೃಡ) ಅಧಿದೇವತೆ

ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು ಮ ಕಾರವೆಂಬ ಬೀಜಾಕ್ಷರ

ಅದು ಪ್ರಣವದ ದಂಡಕಾಕೃತಿಯಲ್ಲಿಹುದು

“ಓಂ ಓಂ ಓಂ ಮಾಂ ಮಾಂ ಮಾಂ’ ಎಂಬ ಬ್ರಹ್ಮನಾದ

ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು

ಇದು ಮಾಹೇಶ್ವರಸ್ಥಲವು

ಈ ರೀತಿಯಾದ ಸ್ವಾದಿಷ್ಠಾನ ಚಕ್ರದ ವಿವರಣೆಯಿಂದ ಸದ್ಗುರುವಿನ ಸತ್ಸಂಸ್ಕಾರದ

ಅರಿವಾಗುವದು. ಜೀವಾತ್ಮನ ಅಂಡಕೋಶದ ಮೇಲ್ಬಾಗದಲ್ಲಿ (ಗುಹ್ಯ) ಖಂಡವಾಗದೇ

[15:58, 11/28/2022] Mangala Choukimath: ಇರುವ ಅಂದರೆ ಅಖಂಡ ಅಥವಾ ಪರಿಪೂರ್ಣವಾದ ಚಕ್ರ ಸ್ವಾಧಿಷ್ಠಾನ. ಇಲ್ಲಿರುವ

ಬ್ರಹ್ಮನು ಪಿಂಡಬ್ರಹ್ಮನು. ಅಂಡ (ತತ್ತಿ) ದಲ್ಲಿರುವ ಪಿಂಡ (ಮರಿ)ವು ವ್ಯಕ್ತವಾಗಿ

ಜೀವಿಯಾಗುವಂತೆ ಅಂಡದಗ್ರದಲ್ಲಿರುವ ಪಿಂಡಬ್ರಹ್ಮನನ್ನು ಗುರುವು ಗಟ್ಟಿಗತನದಿಂದ

ಹಾಗೂ ಚಾಣಾಕ್ಷತನದಿಂದ ಎನ್ನ ಕರಕಮಲದಲ್ಲಿ ಗುರುಲಿಂಗವನ್ನಾಗಿ ಕರುಣಿಸುವನು.

ಗುಹ್ಯಸ್ಥಾನದ ಅಂಡಕೋಶವು ಮೂತ್ರ ಸಂಗ್ರಹಕ್ಕೂ, ರೇತಸ್ಸಿನ ಆಶ್ರಯಕ್ಕೂ

ಕಾರಣವಾಗಿದೆ. ಇಲ್ಲಿರುವ ಪಿಂಡಬ್ರಹ್ಮನು ರಸಪದಾರ್ಥವನ್ನು ಗ್ರಹಿಸುವಂತೆ

ಜ್ಞಾನೇಂದ್ರಿಯದ ಗುರುಲಿಂಗವು ರಸಪ್ರಸಾದವನ್ನು ಸ್ವೀಕರಿಸುವದು. ಜ್ಞಾನೇಂದ್ರಿಯ

ಶೋಧಿಸಿರುವರೆಂಬುದು ಅಗಾಧವಾಗಿದೆ. ಅಸದೃಶವಾಗಿದೆ. ಪಿಂಡಬ್ರಹ್ಮನಿಂದಲೇ

ಗಳಿಗೂ ಅಂತರದಲ್ಲಿಯ ಚಕ್ರಗಳಿಗೂ ಎಂಥಹ ಸಾಮಂಜಸ್ಯವನ್ನು ಶಿವಾನುಭವಿಗಳು

ಜಗದುತ್ಪತ್ತಿಯಾಗುವಂತೆ ಅಂಡ (ಗುಹ್ಯ) ಕೋಶದಿಂದಲೇ ಜೀವಿಗಳ ಪ್ರಾದುರ್ಭಾ

ವವನ್ನು ಕಾಣುತ್ತೇವೆ.